ನನ್ನ ಲೇಖನೋದ್ಯೋಗ

(ಜ್ಞಾನಪೀಠ ಪ್ರಶಸ್ತಿ ಭಾಷಣ)

ಶ್ರೀಕೃಷ್ಣ ಒಮ್ಮೆ ಭೀಮಸೇನನನ್ನು ಅವಮಾನಗೊಳಿಸಿದನಂತೆ. ಇದರಿಂದ ಭೀಮಸೇನನಿಗೆ ತುಂಬ ನೋವಾಗಿ ಕೃಷ್ಣನಿಗೆ ತಿರುಗಿ ಮಾತಾಡುವಷ್ಟು ಧೈರ್ಯಬಂದು ಹೇಳಿದನಂತೆ: “ಭಗವಂತ ಇಕೊ ಕೇಳು. ನೀನು ಆಳವಾದ ನೀರಿನ ಮೇಲೆ ತೇಲುತ್ತಿರುವ ಒಂದು ದೋಣಿಯಿದ್ದಂತೆ. ತನ್ನನ್ನು ಮೇಲಕ್ಕೆ ಎತ್ತಿ ತೇಲಿಸುವ ನೀರಿನ ಆಳದ ಗುಣ ದೋಣಿಗೆ ಎಂದಾದರೂ ಗೊತ್ತಿರುತ್ತದೆಯೇ? ನಮ್ಮ ಆಳವಾದ ಅಭಿಮಾನದ ಮೇಲೆ ನೀನು ತೋರುವಂತೆ ತೇಲುತ್ತಿದ್ದೀಯ ಎನ್ನುವುದನ್ನು ಮರೆಯಬೇಡ….”

ಈ ಕಥೆಯನ್ನು ಹೇಳಿದವರು ಕನ್ನಡದ ಹಿರಿಯ ಕವಿಗಳಾದ ಶ್ರೀ ಪು.ತಿ.ನರಸಿಂಹ ಆಚಾರ್ಯರು. ಅವರಿಗೆ ೯೦ ವರ್ಷ ವಯಸ್ಸು. ಇಂತಹ ಕಥೆಗಳೆಲ್ಲವನ್ನೂ ನಾವು ನಮ್ಮ ಹಿರಿಯರಿಂದ ಕೇಳಿಸಿಕೊಂಡು ತಿಳಿಯುವುದೇ ಹೊರತಾಗಿ ಓದಿ ತಿಳಿಯುವುದಲ್ಲ. ಎ.ಕೆ.ರಾಮಾನುಜನ್ನರು ಒಮ್ಮೆ ಅಂದಿದ್ದರು: ನಾವು ಯಾರೂ ಪ್ರಥಮ ಬಾರಿಗೆ ಮಹಾಭಾರತವನ್ನಾಗಲಿ, ರಾಮಾಯಣವನ್ನಾಗಲಿ ಓದಿರುವುದಿಲ್ಲ. ಇಂಥ ಕಥೆಗಳನ್ನು ನಾವು ಕೇಳಿಸಿಕೊಳ್ಳುತ್ತಿರುವಾಗ ಅದಕ್ಕೆ ಒಂದು ಸಂದರ್ಭ ಇದ್ದೇ ಇರುತ್ತದೆ. ಪು.ತಿ.ನ.ರವರಿಗೂ ನನಗೂ ನಡುವೆ ಅಂತಹ ಒಂದು ಸಂದರ್ಭ ಇತ್ತು. ನನ್ನ ಈ ಹಿರಿಯರಿಗೆ ನಮ್ಮ ಜನಾಂಗದ ಒಬ್ಬ ಕವಿಯನ್ನು ಕುಶಾಲಿನಲ್ಲಿ ಗೇಲಿಮಾಡುವ ಅಗತ್ಯವಿತ್ತು. ಆ ಕವಿಯ ಮುಖೇನ ನನ್ನನ್ನು ಛೇಡಿಸುವ ಆಸೆಯೂ ಈ ಹಿರಿಯರಿಗೆ ಇದ್ದಿರಬಹುದು. ಯಾಕೆಂದರೆ ನನ್ನ ವಾರಿಗೆಯವರು ಈ ಹಿರಿಯರ ಕಾವ್ಯಮಾರ್ಗದಿಂದ ಹೊರಳಿಕೊಂಡು ಅವರನ್ನು ಟೀಕಿಸುತ್ತ ನಮ್ಮದೇ ಒಂದು ನವ್ಯ ಮಾರ್ಗವನ್ನು ಸ್ಥಾಪಿಸಿದ್ದೆವು. ಅಡಿಗರಿಂದ ಸ್ಫೂರ್ತಿಪಡೆದ ಈ ನವ್ಯ ಮಾರ್ಗ ಹಿರಿಯರ ದಾರಿಯಲ್ಲಿ ಕೊರತೆಯನ್ನು ಕಂಡು ಹೊಸದನ್ನು ಅನ್ವೇಷಿಸಿತ್ತು. ತನ್ನ ಕಾಲಕ್ಕೆ ನಿಜವಾಗಿ ಸ್ಪಂದಿಸುವಾಗ ಹೀಗೆ ಹಿಂದಿನವರಿಗಿಂತ ಬೇರೆಯಾಗುವ ಅಗತ್ಯವೂ ಆ ಕಾಲದಲ್ಲಿ ಇತ್ತು. ಆದರೆ ಆಗ ತೀರ ಹೊಸದು ಎಂದು ನಾವು ಭಾವಿಸಿದ್ದ ಸಾಹಿತ್ಯದ ಮಾರ್ಗವು ಈಗ, ಹಿನ್ನೋಟದಲ್ಲಿ ನಮ್ಮ ಹಿಂದಿನವರಿಂದ ಸೂಕ್ಷ್ಮವಾಗಿ ಕಲಿತದ್ದೆಂದೂ, ಪರಂಪರೆಯಿಂದ ಅಷ್ಟೇನೂ ಭಿನ್ನವಲ್ಲವೆಂದೂ ತೋರುತ್ತದೆ.

ಪು.ತಿ.ನ.ರವರು ಹೇಳಿದ ಈ ಕಥೆ ಪರಂಪರೆಗೂ ಆಧುನಿಕತೆಗೂ ಇರುವ ಸಂಬಂಧವನ್ನು ಕುರಿತಾದ ಬಹು ಸ್ವಾರಸ್ಯದ ರೂಪಕವೆಂದು ನಾನು ತಿಳಿಯುತ್ತೇನೆ. ಪೂರ್ವಸೂರಿಗಳು ನಮ್ಮನ್ನು ತೇಲುತ್ತಾ ತೋರುವಂತೆ ಎತ್ತಿಹಿಡಿದಿದ್ದಾರೆ. ಇದು ಅವರ ಕೃಪೆ. ಅವರ ಕೃಪೆಯಲ್ಲಿ ನಾವು ಅನ್ಯಮನಸ್ಕರಾಗಿ ನಮ್ಮನ್ನು ತೇಲುವಂತೆ ಎತ್ತಿಹಿಡಿದಿರುವ ಹಿರಿಯರ ಶಕ್ತಿಯನ್ನು ಮರೆಯಬಹುದು. ಹೀಗೆ ಮರೆಯದೆ ಸೃಜನಶೀಲತೆ ಕೂಡ ಇಲ್ಲ. ಈ ಕಥೆಯ ಸ್ವಾರಸ್ಯವೆಂದರೆ ನಮ್ಮ ಹಿಂದಿನವರನ್ನು ಛೇಡಿಸಲು ಕೂಡ ಈ ರೂಪಕವನ್ನು ಬಳಸಬಹುದು. ವ್ಯಾಸ, ವಾಲ್ಮೀಕಿಗಳು ಇಲ್ಲದೆ ಕಾಳಿದಾಸನೆಲ್ಲಿ? ಕಾಳಿದಾಸನಿಲ್ಲದೆ ಪಂಪನೆಲ್ಲಿ? ಪಂಪ, ಕುಮಾರವ್ಯಾಸರಿಲ್ಲದೆ ಕುವೆಂಪು, ಪು.ತಿ.ನ.ರವರೆಲ್ಲಿ?

ಆದರೆ ಇಷ್ಟು ನಿಜ: ಪರಂಪರೆಯ ಜೊತೆ ಜಗಳವಿಲ್ಲದೇ ಪ್ರಸ್ತುತದಲ್ಲಿ ಸೃಜನಶೀಲತೆ ಹುಟ್ಟಲಾರದು. ಮತ್ತು ಈ ಜಗಳ ನಮ್ಮ ಜೊತೆಗೂ ನಾವು ಆಡಿಕೊಳ್ಳುವ ಜಗಳ. ನಿಜವಾಗಿ ಹುಟ್ಟುವುದೆಲ್ಲ ಸತ್ತೇ ಹುಟ್ಟುವುದು. ನಾವು ನಮ್ಮ ಪೂರ್ವಸೂರಿಗಳಿಗೆ ಕೊಡುವ ಗೌರವವೆಂದರೆ ಹೀಗೆ ಸತ್ತು ಹುಟ್ಟಿ ನಾವು ಪಡೆದದ್ದನ್ನು ಪರಂಪರೆಗೆ ಹಿಂದಿರುಗಿಸುವುದು. ಈ ಸೃಜನಶೀಲತೆಯನ್ನು ಸಾಧ್ಯಮಾಡುವ ಭಾಷೆ ಲೇಖಕನ ಸ್ವಯಂಸೃಷ್ಟಿಯಲ್ಲ ಎನ್ನುವುದರಲ್ಲೇ ಸಾಹಿತ್ಯದ ವಿನಯ ಇರುವುದು. ಎಲ್ಲ ಭಾಷೆಯೂ ನಮ್ಮ ಹಿಂದಿನವರು ಬೆಳೆಸಿದ್ದು; ಮತ್ತು ನಮ್ಮ ಸಮಕಾಲೀನರು ಜೀವಂತವಾಗಿ ಉಳಿಸಿರುವುದು. ಹೀಗೆ ಭಾಷೆಯ ಮೂಲಕ ನೆನಪು ಸತತವಾಗಿ ಉಳಿಯುತ್ತದೆ. ನಮ್ಮ ಬೆಳವಣಿಗೆಯ ಕಷ್ಟಗಳು, ಜೀವನದ ಸಂದಿಗ್ಧಗಳು, ನಮ್ಮ ನಮ್ಮ ಸಾವನ್ನೂ ನಮಗೆ ಪ್ರಿಯರಾದವರ ಸಾವನ್ನೂ ಎದುರಿಸುವುದರಲ್ಲಿ ಇರುವ ದುಃಖ – ಇವೆಲ್ಲವೂ ಎಷ್ಟು ನಮಗೆ ಎದುರಾಗುವ ಸದ್ಯದ್ದೋ ಅಷ್ಟೇ ನಮ್ಮ ಭಾಷೆಗಳಲ್ಲಿ ನಮ್ಮ ಸದ್ಯಕ್ಕೆ ಒದಗಿಬರುವಂತೆ ದಾಖಲಾದದ್ದು. ನಮ್ಮ ಅತ್ಯಂತ ಏಕಾಕಿತನದ ಭಾವನೆಯ ಹೊತ್ತಿನಲ್ಲಿ ನಾವು ಸಮಷ್ಟಿಯ ಒಂದು ಅಂಗವೂ ಎನ್ನಿಸುವುದನ್ನು ಸಾಧ್ಯ ಮಾಡುವುದು ಒಂದು ಭಾಷೆಯ ಸಾಹಿತ್ಯದ ಪರಂಪರೆ.

ನನ್ನ ಪಾಲಿಗೆ ಇದು ಕನ್ನಡ. ಈ ಕನ್ನಡದಲ್ಲಿ ಜಾನಪದ ನೆನಪುಗಳು ಜೀವಂತವಾಗಿ ಉಳಿದಿವೆ. ಸಂಸ್ಕೃತ ಸಾಹಿತ್ಯದ ಆದರ್ಶಗಳು ಈ ಕನ್ನಡ ಭಾಷೆಯೊಳಗೆ ಈಗಲೂ ಚುರುಕಾಗಿ ಉಳಿದಿವೆ. ಹಾಗೆಯೇ ಈ ಭಾಷೆ ಯುರೋಪಿನ ಬಹು ಶಕ್ತಿಯುತವಾದ ಪ್ರಭಾವವನ್ನು ಅರಗಿಸಿಕೊಂಡು ಪಳಗಿಸಿಕೊಳ್ಳುವ ಉಪಾಯವನ್ನು ನಮಗೆ ಕೊಟ್ಟಿದೆ. ಆದ್ದರಿಂದ ಬ್ಲೇಕ್ ಅನ್ನುವಂತೆ ನಾನು ನನ್ನ ಪರಂಪರೆಗೆ ಸೇರಿಸಿರಬಹುದಾದ ಕಿಂಚಿತ್ತನ್ನು ’ಇದು ನನ್ನದು, ಆದರೆ ನನ್ನದು ಮಾತ್ರವಲ್ಲ’ ಎನ್ನುವುದು ಸಾಧ್ಯವಾಗಿದೆ. ನಾನು ಪ್ರಸ್ತುತದಲ್ಲಿ ತೇಲಿ, ಲೋಕಕ್ಕೆ ತೋರುವಂತೆ ಮಾಡಿರುವ ಶಕ್ತಿಯ ಹಿಂದೆ ಈ ಕಾಲದ ನನ್ನ ಸರೀಕರೂ ಪೂರ್ವಸೂರಿಗಳೂ ಇದ್ದಾರೆ ಎಂಬುದನ್ನು ಕೃತಜ್ಞತೆಯಿಂದ ಸ್ಮರಿಸಿ, ಜ್ಞಾನಪೀಠ ಪಡೆದ ಭಾರತದ ಮಹಾಶಯರ ನಡುವೆ ಒಬ್ಬನಾಗುವುದನ್ನು ಅತ್ಯಂತ ವಿನಯದಿಂದ ಒಪ್ಪಿಕೊಳ್ಳುತ್ತೇನೆ.

ಒಂದು ಸಾವಿರ ವರ್ಷದಷ್ಟಾದರೂ ಜೀವಂತ ಸಾಹಿತ್ಯಪರಂಪರೆಯಿರುವ ಕನ್ನಡದಲ್ಲಿ ನಾನು ಬರೆಯುವುದು. ಭಾರತೀಯ ಸಾಹಿತ್ಯದ ಮುಖ್ಯ ಪ್ರವಾಹದಲ್ಲಿ ತಾನು ಇದ್ದೇನೋ, ಇಲ್ಲವೋ ಎನ್ನುವ ಸಂಶಯ ಈ ಕಾಲದಲ್ಲಾಗಲಿ ಹಿಂದಿನ ಕಾಲದಲ್ಲಾಗಲಿ ನನ್ನ ಭಾಷೆಯಲ್ಲಿ ಯಾವ ಲೇಖಕನಿಗೂ ಬಂದದ್ದಿಲ್ಲ. ಮಗುವಾಗಿ ನಾನು ಓದಲು ಕಲಿಯುತ್ತಿದ್ದಾಗ ನನ್ನ ಕಣ್ಣಿನಲ್ಲಿ ನೀರನ್ನು ತಂದ ಒಂದು ಪದ್ಯ ಧರಣಿಮಂಡಲದ ಮಧ್ಯದೊಳಗೆ ಕರ್ನಾಟ ದೇಶ ಇದೆ ಎಂದು ಹೇಳುತ್ತದೆ. ಒಂದು ಹುಲಿಯ ಕ್ರೂರ ಹೃದಯವನ್ನು ತನ್ನ ಪ್ರಾಮಾಣಿಕತೆಯಿಂದ ಮತ್ತು ಸತ್ಯಸಂಧತೆಯಿಂದ ಗೆದ್ದ ಹಸುವಿನ ಕತೆ ಈ ಹಾಡು. ಹೃದಯ ಪರಿವರ್ತನೆಯ ಈ ಹಾಡು ನಿಜವಾಗಿಯೂ ಗಾಂಧಿ ತತ್ತ್ವವನ್ನು ಪ್ರತಿಪಾದಿಸುವಂತಿದೆ. ಈ ಅನಾಮಿಕ ಕವಿಗೆ ಪ್ರಪಂಚದ ಕೇಂದ್ರ ಕರ್ನಾಟಕ. ಅಂತಹ ಒಂದು ದೇಶದಲ್ಲಿ ಒಬ್ಬ ಗೊಲ್ಲನಿದ್ದಾನೆ. ಅವನ ಹೆಸರು ಕಾಳಿಂಗ. ಹೀಗೆ ಈ ಹಾಡು ಒಂದು ಲಾಂಗ್ ಶಾಟ್‌ನಿಂದ ಶುರುವಾಗಿ ಒಬ್ಬ ಗೊಲ್ಲನಲ್ಲಿ ನಮಗೆ ಕ್ಲೋಸಪ್ ಕೊಡುತ್ತದೆ. ಅವನು ಕರೆಯುವ ಹಸುಗಳಿಗೆ ಭಾರತದ ಮುಖ್ಯ ನದಿಗಳ ಹೆಸರಿವೆ. ಸಹ್ಯಾದ್ರಿ ಪರ್ವತ ಶ್ರೇಣಿಯ ನಿಬಿಡ ಅರಣ್ಯದ ಮಧ್ಯದ ಒಂದು ಮನೆಯಲ್ಲಿ ನಾನು ಈ ಪದ್ಯವನ್ನು ಕಲಿತದ್ದು. ನಮ್ಮ ರಾಷ್ಟ್ರದ ನದಿಗಳ ಹೆಸರುಗಳನ್ನು ನನಗೆ ತಿಳಿಸಲು ಪ್ರಾರಂಭಿಸಿದ್ದು ಈ ಪದ್ಯದ ಹಸುಗಳು. ಇಲ್ಲಿ ಪುಣ್ಯಕೋಟಿ ಎನ್ನುವ ಹಸು ತನ್ನ ಪ್ರೀತಿಯ ಕರುವನ್ನು ಬೀಳ್ಕೊಟ್ಟು ಹುಲಿಗೆ ತನ್ನ ಇಡೀ ದೇಹವನ್ನು ಅರ್ಪಿಸುವ ಸಂದರ್ಭ ಬಂದಾಗ ನನ್ನ ತಂದೆ ಅತ್ತಿದ್ದರು. ನನ್ನ ತಂದೆ ಹೀಗೆ ಅತ್ತಿದ್ದನ್ನು ನಾನು ಎಂದೂ ನೋಡಿದ್ದಿಲ್ಲ.ಇವು ನನ್ನ ತುಂಬ ಹಿಂದಿನ ನೆನಪುಗಳು. ಆದರೆ ನಮ್ಮ ಸಂಸ್ಕೃತಿ ಮತ್ತು ನಮ್ಮ ಸಮಾಜದ ಕೆಲವು ಕ್ರೂರ ಸತ್ಯಗಳನ್ನು ಕಂಡು ನನ್ನ ಮುಗ್ಧತೆಯನ್ನು ಕಳೆದುಕೊಳ್ಳಲು ಇನ್ನಷ್ಟು ವರ್ಷಗಳು ಕಾಯಬೇಕಾಯಿತು. ಒಂದು ಸುಂದರವಾದ ಸಣ್ಣ ಪಟ್ಟಣದಲ್ಲಿ (ತೀರ್ಥಹಳ್ಳಿ) ನಾನು ಹೈಸ್ಕೂಲು ಕಲಿಯಲು ಅಗ್ರಹಾರದಿಂದ ನಡೆದು ಹೋಗುತ್ತಿದ್ದೆ. ಕಾಲೇಜಿನಲ್ಲಿ ಶಿಕ್ಷಣ ಪಡೆದ ನನ್ನ ಅಧ್ಯಾಪಕರೊಬ್ಬರು ಅಲ್ಲಿ ಭಗವದ್ಗೀತೆಯನ್ನು ಕುರಿತು, ಒಂದು ಯುದ್ಧದ ಸಂದರ್ಭದಲ್ಲಿ ಅಷ್ಟು ಗಂಟೆಗಳ ಕಾಲ ಬೋಧಿಸುವುದು ಸಾಧ್ಯವೇ ಎನ್ನುವ ಪ್ರಶ್ನೆಯನ್ನು ಎತ್ತಿದ್ದು ನೆನಪಿದೆ. ಮಡಿವಂತ ಕುಟುಂಬದಿಂದ ಬಂದ ಒಬ್ಬ ಬ್ರಾಹ್ಮಣ ಹುಡುಗನನ್ನು ಈ ಪ್ರಶ್ನೆ ಎಷ್ಟು ಬಾಧಿಸಿರಬಹುದು ಊಹಿಸಿಕೊಳ್ಳಿ. ಅಗ್ರಹಾರಕ್ಕೆ ಹಿಂದಿರುಗುವಾಗ ದಾರಿಯಲ್ಲಿ ಡಾ|ಚಾರ್ಲ್ ಎಂಬ ಒಬ್ಬ ಡಾಕ್ಟರರ ಶಾಪಿಗೆ ಹೋಗಬೇಕಾಗಿ ಬರುತ್ತಿತ್ತು. ನನ್ನ ಸ್ಕೂಲು ಬ್ಯಾಗಿನಲ್ಲಿ ಬೇರೆ ಬೇರೆ ಬಣ್ಣಗಳ ಔಷಧಿ ಬಾಟಲಿಗಳನ್ನು ನನ್ನ ಅಕ್ಕಪಕ್ಕದವರಿಗಾಗಿ ನಾನು ಯಾವತ್ತೂ ಕೊಂಡೊಯ್ಯುತ್ತಿದ್ದೆ. ಈ ಶಾಪಿನಲ್ಲಿ ನನಗೆ ಅತ್ಯಂತ ಆಕರ್ಷಕರಾದ ಒಬ್ಬ ವ್ಯಕ್ತಿ – ಸಿನ್ಹಾ ಎಂದು ತನ್ನ ಹೆಸರನ್ನು ಆಧುನಿಕಗೊಳಿಸಿಕೊಂಡ ಶ್ರೀನಿವಾಸ ಜೋಯಿಸ್ ಎಂಬವರು – ಆರಾಮಾಗಿ ಕೂತಿರುತ್ತಿದ್ದರು. ವಿದ್ಯುತ್‌ಚ್ಛಕ್ತಿ ಇರದ ನಮ್ಮ ಊರಿನಲ್ಲಿ ಇವರು ಡೈನಮೋದಿಂದ ನಡೆಸುವ ಒಂದು ರೇಡಿಯೋದಿಂದ ಇಂಗ್ಲಿಷ್ ಭಾಷೆಯನ್ನು ಶುದ್ಧವಾಗಿ ಕಲಿತವರಾಗಿದ್ದರು. ಶಾಪಿನಲ್ಲಿ ಔಷಧಿಗಾಗಿ ಕಾಯುತ್ತಿದ್ದಾಗ ನನಗೆ ಜಾರ್ಜ್ ಬರ್ನಾಡ್ ಷಾ ಬಗ್ಗೆ ಮತ್ತು ಆ ಕಾಲದ ಪ್ರಸಿದ್ಧ ನಿರೀಶ್ವರವಾದಿ ಇಂಗರ್ ಸಾಲ್ ಬಗ್ಗೆ ಅವರು ಏನೇನೋ ಹೇಳಿ ವಿವರಿಸುತ್ತಿದ್ದರು. ಅಗ್ರಹಾರಕ್ಕೆ ಹಿಂದಿರುಗಿದವನು ಅಲ್ಲಿದ್ದ ಮಠಕ್ಕೆ ಹೋದರೆ, ಅಲ್ಲಿ ದ್ವೈತ ಮತ್ತು ಅದ್ವೈತದ ನಡುವಿನ ವಾದಗಳನ್ನು ಕೇಳಿಸಿಕೊಳ್ಳುತ್ತಿದ್ದೆ. ಈ ಭೂಮಿ ಗುಂಡಗಿದೆಯೇ ಅಥವಾ ಚಪ್ಪಟೆಯಾಗಿದೆಯೇ ಎನ್ನುವ ವಾಗ್ವಾದ ಅಲ್ಲಿಗೆ ಬರುತ್ತಿದ್ದ ಒಬ್ಬ ಆರ್ಯ ಸಮಾಜಿಗೂ ಮಡಿವಂತ ಪಂಡಿತರಿಗೂ ನಡುವೆ ನಡೆದದ್ದು ಕೇಳಿದ್ದೇನೆ. ನನ್ನ ಅಗ್ರಹಾರದಲ್ಲಿ ನಾನು ಗೆಲಿಲಿಯೋನ ಸಮಕಾಲೀನ ಆಗಿರಬಹುದಿತ್ತು. ನನ್ನ ತಂದೆಯ ತಲೆಯ ಮೇಲಿನ ಕೂದಲು ಕೆಲವೊಮ್ಮೆ ಮಡಿವಂತರದಂತೆಯೂ, ಕೆಲವೊಮ್ಮೆ ಆಧುನಿಕರದಂತೆಯೂ, ಶೈಲಿಯಲ್ಲಿ ಬದಲಾಗುತ್ತಿತ್ತು. ಅವರು ಮಹಾತ್ಮ ಗಾಂಧಿಯ ’ಹರಿಜನ’ವನ್ನು ಮನೆಗೆ ತರಿಸಿಕೊಂಡು ವಾರಿಗೆಯವರಿಗೆ ಓದಿ ಹೇಳುತ್ತಿದ್ದರು.

ಮಹಾತ್ಮ ಗಾಂಧಿ ಅಗ್ರಹಾರದ ನಮ್ಮನ್ನು ಗೊಂದಲಗೊಳಿಸಿದ್ದರು. ಕೆಲವರಿಗೆ ಅವರು ದೈವಿಕ ಸಂತರಂತೆ ಕಂಡರೆ, ಹರಿಜನರನ್ನು ದೇವಾಲಯದೊಳಗೆ ಪ್ರವೇಶಿಸುವಂತೆ ಮಾಡಿ ವರ್ಣಸಂಕರಕ್ಕೆ ಕಾರಣನಾದ ಕಾಪುರುಷನಂತೆಯೂ ಕಾಣುತ್ತಿದ್ದರು. ಒಮ್ಮೆ ಊರಿನಲ್ಲಿ ಪ್ಲೇಗ್ ಕಾಣಿಸಿಕೊಂಡಿತ್ತು. ಇನಾಕ್ಯುಲೇಟ್ ಮಾಡಲು ಬಂದ ಡಾಕ್ಟರು ಅಗ್ರಹಾರದ ಹೊರಗಿದ್ದ ಅಸ್ಪೃಶ್ಯರ ಕೇರಿಗೆ ಹೋಗಲಿಲ್ಲ. ಹರಿಜನರು ಪ್ಲೇಗಿನಿಂದ ಸಾಯಲು ಪ್ರಾರಂಭಿಸಿದಾಗ ನಮ್ಮಲ್ಲಿ ಕೆಲವು ಮೂಢರು, ಎಲ್ಲೋ ದೂರದ ಗಾಂಧಿಯ ಮಾತು ಕೇಳಿ ದೇವಾಲಯ ಪ್ರವೇಶಿಸಿದ್ದರಿಂದ ನಮ್ಮೂರಿನ ಹರಿಜನರು ಶಿಕ್ಷಿತರಾಗುತ್ತಿದ್ದಾರೆ ಎಂದು ವಾದಿಸುತ್ತಿದ್ದರು. ಆಗ ನಾನು ಅಗ್ರಹಾರದಲ್ಲಿ ಕೈಬರಹದ ಪತ್ರಿಕೆಯೊಂದನ್ನು ಗೆಳೆಯರೊಡನೆ ಕೂಡಿ ಹೊರತರಲು ಪ್ರಾರಂಭಿಸಿದ್ದೆ. ಸಂಸ್ಕೃತ ಇಂಗ್ಲಿಷ್ ಮತ್ತು ಕನ್ನಡ – ಮೂರೂ ಭಾಷೆಗಳಲ್ಲಿ ಅಗ್ರಹಾರದ ಹುಡುಗರ ಈ ಮಾಸಪತ್ರಿಕೆ ಹೊರಬರುತ್ತಿತ್ತು! ಅದರಲ್ಲಿ ನಾನೊಂದು ಕತೆ ಬರೆದಿದ್ದೆನೆಂದು ನೆನಪು. ಈ ಕಥೆ ಕ್ಲಿಷ್ಟ ರೂಪಕಗಳಲ್ಲಿ ಬರೆದುದಾಗಿತ್ತು. ಯಾಕೆಂದರೆ ನೇರವಾಗಿ ನನ್ನ ಮನಸ್ಸಿನಲ್ಲಿ ಇರುವುದನ್ನು ಬರೆದು ಹಿರಿಯರ ಕೋಪಕ್ಕೆ ತುತ್ತಾಗುವಷ್ಟು ಧೈರ್ಯ ನನ್ನಲ್ಲಿರಲಿಲ್ಲ. ಕತೆಯ ಪ್ರೇರಣೆ ಇದಾಗಿತ್ತು: ಹರಿಜನರು ಸಾಯಲು ತೊಡಗಿದಾಗ ಸುಂದರಳಾದ ಒಬ್ಬಳು ’ಅಸ್ಪೃಶ್ಯ’ ಹುಡುಗಿ ಕೇರಿಯನ್ನು ತೊರೆದು ಓಡಿ ಹೋಗಿದ್ದಳು. ಯಾಕೆಂದು ಅದರ ರಹಸ್ಯ ನನಗೆ ಮಾತ್ರ ಗೊತ್ತಿತ್ತು. ಸೈನ್ಯದಲ್ಲಿ ಕೆಲಸಮಾಡಿದ್ದ ಅಗ್ರಹಾರದ ಯುವಕನೊಬ್ಬ ಊರಿಗೆ ಮರಳಿ ಬಂದವನು ಆಕೆಯ ಜೊತೆ ಗುಪ್ತ ಸಂಬಂಧವನ್ನು ಇಟ್ಟುಕೊಂಡಿದ್ದ. ಆದ್ದರಿಂದ ಮತ್ಸ್ಯಗಂಧಿಯಂತೆ ಕಾಣುತ್ತಿದ್ದ ಈ ಕಪ್ಪು ಸುಂದರಿ, ಎಲ್ಲರಂತೆ ತನ್ನ ಪಾಡೆಂದು ಸಾಯಲು ಒಲ್ಲದೆ ಓಡಿಹೋಗಿದ್ದಕ್ಕೆ ಕಾರಣ, ಅವಳು ಸ್ಪರ್ಶಿತಳಾದದ್ದು ಮತ್ತು ಇಂತಹ ಸ್ಪರ್ಶದಿಂದ ಅವಳು ಜಾಗೃತಗೊಂಡದ್ದು ಎಂದು ಭಾವಿಸಿ ಕತೆ ಹೆಣೆದಿದ್ದೆ. ನನಗೆ ಮೂವತ್ತು ವರ್ಷವಾಗಿದ್ದಾಗ ಇಂಗ್ಲೆಂಡಿನಲ್ಲಿ ಸ್ನಾತಕೋತ್ತರ ಪದವಿಗೆ ಓದುತ್ತಿದ್ದ ನಾನು ನನ್ನ ಅಧ್ಯಾಪಕರ ಜೊತೆ ಬರ್ಗ್‌ಮನ್‌ನ ಒಂದು ಸಿನೆಮಾ ’ದಿಥಿಟ ಛಿ’ ನೋಡಲು ಹೋಗಿದ್ದೆ. ಈ ಚಿತ್ರದಲ್ಲಿ ಸಬ್‌ಟೈಟಲ್ ಇರಲಿಲ್ಲವಾದ್ದರಿಂದ ನಾನದನ್ನು ಮಸುಕು ಮಸುಕಾಗಿ ಅರ್ಥಮಾಡಿಕೊಂಡಿದ್ದೆ. ಕೆಲವೊಮ್ಮೆ ಸರಿಯಾಗಿ ಅರ್ಥಮಾಡಿಕೊಳ್ಳದಿರುವುದು ಸೃಜನಶೀಲತೆಗೆ ಕಾರಣವಾಗಬಹುದು. ನನ್ನ ಅಧ್ಯಾಪಕರಿಗೆ ಸಿನೆಮಾ ನೋಡಿದ ಅನಂತರ ಹೀಗೆ ಹೇಳಿದೆ: “ಐರೋಪ್ಯನೊಬ್ಬ ತನ್ನ ಮಧ್ಯಯುಗವನ್ನು ಪುಸ್ತಕಗಳ ಮುಖೇನ ತಿಳಿದುಕೊಳ್ಳಬೇಕಾಗುತ್ತದೆ. ಐರೋಪ್ಯರ ಐತಿಹಾಸಿಕ ಕಾಲ ಸರಳರೇಖಾತ್ಮಕವಾಗಿ ಬೆಳೆದದ್ದು. ಆದರೆ ಭಾರತೀಯನಾದ ನನಗಾದರೋ ಎಲ್ಲ ಕಾಲವೂ ಒಂದೇ ಕಾಲದಲ್ಲಿ ಸಹಬಾಳ್ವೆ ಮಾಡುತ್ತವೆ”. ಹೀಗೆ ನನಗೆ ಹೊಳೆದದ್ದೇ, ಹೈಸ್ಕೂಲು ದಿನಗಳಲ್ಲಿ ನಾನು ಬರೆದ ಕತೆಯನ್ನು ಮತ್ತೊಮ್ಮೆ ಬರೆಯುವಂತೆ ಮಾಡಿತು. ಅದೇ, ನನ್ನ ’ಸಂಸ್ಕಾರ’ ಕಾದಂಬರಿ. ಹೀಗೆ ನಾನು ವಿವರಿಸಿ ಹೇಳಲು ಕಾರಣ ನನ್ನ ಪರಂಪರೆಯ ಜೊತೆಗೆ ನನಗಿರುವ ಜಗಳವನ್ನು ಸ್ಪಷ್ಟಪಡಿಸಲು. ನಾನು ಪರಂಪರೆಯ ಜೊತೆ ಜಗಳಮಾಡುವುದು ಹೊರಗಿನವನಾಗಿ ಅಲ್ಲ, ಒಳಗಿನವನಾಗಿ. ಹೀಗಾಗಿ ನನ್ನನ್ನು ನಾನು ಒಬ್ಬ ಒಳ ವಿಮರ್ಶಕನೆಂದು ತಿಳಿದುಕೊಂಡಿದ್ದೇನೆ. ಇದರಲ್ಲಿ ನಾನು ಮಾರ್ಗದರ್ಶನ ಪಡೆದದ್ದು ಕನ್ನಡ ಪರಂಪರೆಯಿಂದಲೇ. ನಮ್ಮ ಮೊದಲ ಕವಿ ಪಂಪ ಮತಪರಿವರ್ತನೆ ಹೊಂದಿದ ಜೈನವರನು. ಅವನ ದೊರೆ ಹಿಂದೂ ಮತ್ತು ಅವನು ಬರೆದದ್ದು ಮಹಾಭಾರತ. ಇಡೀ ಮನುಜಕುಲ ಒಂದು ಎಂದು ತಿಳಿದಿದ್ದ ಅವನ ನಿಜವಾದ ನಾಯಕ ಕರ್ಣ; ಜಾತಿ ವ್ಯವಸ್ಥೆಯಿಂದಾಗಿ ನೊಂದವನು. ಹನ್ನೆರಡನೆ ಶತಮಾನದ ವಚನಕಾರರಾದರೋ ಇಡೀ ವರ್ಣವ್ಯವಸ್ಥೆಯನ್ನು ಪ್ರಶ್ನಿಸಿ ಮನುಷ್ಯರೆಲ್ಲರೂ ಸಮಾನರೆಂದು ಶಿವನಿಗೆ ತಮ್ಮನ್ನು ಅರ್ಪಿಸಿಕೊಂಡವರು. ಆ ಕಾಲದ ಬಸವ ಒಬ್ಬ ಅಸ್ಪೃಶ್ಯನಿಗೆ ಬ್ರಾಹ್ಮಣ ಹುಡುಗಿಯನ್ನು ಮದುವೆಯಾಗಲು ನೆರವಾದವನು.ಅಗ್ರಹಾರದಲ್ಲಿ ಬೆಳೆಯುತ್ತಿದ್ದಾಗ ನಾನು ನನ್ನ ಅಸ್ತಿತ್ವವನ್ನು ರೂಪಿಸುತ್ತಿದ್ದ ಸಾಮಾಜಿಕ ಸಾಂಸ್ಕೃತಿಕ ನಂಬಿಕೆಗಳನ್ನು ಪ್ರಶ್ನಿಸುವಂತೆ ಎಚ್ಚರವಾದೆ ಎಂದು ಹೇಳಿದೆ; ಅದಕ್ಕೆ ಕಾರಣ ಸ್ವಾತಂತ್ರ್ಯಪೂರ್ವ ಕಾಲದಲ್ಲಿ ನಮ್ಮೆಲ್ಲರ ಮೇಲೂ ಆದ ಮಹಾತ್ಮ ಗಾಂಧಿಯ ಪ್ರಭಾವ. ಅಲ್ಲದೆ ಆಗ ನಾನು ಕನ್ನಡದ ಹಿರಿಯ ಲೇಖಕರ ಕಾದಂಬರಿಗಳನ್ನೂ ಓದಿದ್ದೆ. ಕುವೆಂಪುರವರ ’ಕಾನೂರು ಹೆಗ್ಗಡತಿ’ ಮತ್ತು ಶಿವರಾಮ ಕಾರಂತರ ’ಚೋಮನ ದುಡಿ’ಯಿಂದ ನಾನು ಕಂಡದ್ದು ಎಲ್ಲ ಮನುಷ್ಯರಿಗೂ ಒಂದು ತೀವ್ರವಾದ ಒಳಬದುಕು ಇರುತ್ತದೆ ಎಂಬುದು. ಅಂದರೆ ನಾವು ನಿಕೃಷ್ಟರೆಂದು ಕಾಣುವ ಜನರಲ್ಲಿ ಹೊರಗೆ ಕಾಣದ ಈ ಒಳಬದುಕು ಇದೆ ಎನ್ನುವುದು ನನ್ನನ್ನು ದಂಗುಬಡಿಸಿತ್ತು. ಜೊತೆಗೆ ನಾನು ನಿತ್ಯ ಕಾಣುತ್ತಿದ್ದ ಸಾಮಾನ್ಯ ಪ್ರಪಂಚ ತೇಜೋಮಯವೆಂದು ನನಗೆ ಅನ್ನಿಸಿತ್ತು. ನಿನ್ನ ಸುತ್ತಲಿನ ಪರಿಸರವನ್ನು ನಿನ್ನ ಕಣ್ಣನ್ನು ಉಜ್ಜಿ ಮತ್ತೆ ನೋಡಬೇಕು ಅಷ್ಟೆ. ಪೌರಾಣಿಕ ಪ್ರಪಂಚ ಮತ್ತು ವಾಸ್ತವಿಕ ಪ್ರಪಂಚ ಹೀಗೆ ಅನ್ಯೋನ್ಯವಾಗಿ ಏಕಗೊಳ್ಳುತ್ತಿದ್ದಂತೆಯೇ, ಇನ್ನೂ ಅಪಕ್ವ ಕ್ರಾಂತಿಕಾರನಾದ ನಾನು, ಪುರಾಣ ಪ್ರಪಂಚದ ಶೋಭೆಯಲ್ಲಿ ಉಜ್ವಲವೆಂದುಕೊಂಡ ನನ್ನ ಸುತ್ತಮುತ್ತಲಿನ ಭೂತಗಳನ್ನು ಅಪವಿತ್ರಗೊಳಿಸಲು ಪ್ರಾರಂಭಿಸಿದ್ದೆ. ಇಂತಹ ಘಟನೆಗಳಿಂದಲೇ ನಾನು ನನ್ನ ಪರಿಸರದಿಂದ ಒಡೆದುಕೊಂಡು ಲೇಖಕನಾದೆ. ನಾನೊಬ್ಬ ಗಣಿತಶಾಸ್ತಜ್ಞನಾಗಿ ನೆಮ್ಮದಿಯ ಧ್ಯಾನಶೀಲತೆಯಲ್ಲಿ ಬದುಕಬೇಕೆನ್ನುವುದು ನನ್ನ ತಂದೆಯ ಇಚ್ಛೆಯಾಗಿತ್ತು. ಆದರೆ ಡಾಕ್ಟರ್ ರಾಮಮನೋಹರ ಲೋಹಿಯಾರ ಅನುಯಾಯಿಗಳ ಪ್ರಭಾವಕ್ಕೆ ಒಳಗಾಗಿ ನನ್ನ ಹಸಿ ತಾರುಣ್ಯದಲ್ಲಿ ಒಂದು ರೈತ ಸತ್ಯಾಗ್ರಹದಲ್ಲಿ ಭಾಗಿಯಾದದ್ದು (ಕಾಗೋಡು ರೈತ ಸತ್ಯಾಗ್ರಹ) ನನ್ನ ಜೀವನದ ದಿಕ್ಕನ್ನೆ ಬದಲಿಸಿಬಿಟ್ಟಿತು. ಹೀಗೆ ನಾನು ಬರಹಗಾರನಾದದ್ದು. ನಾನು ಪಾಶ್ಚಾತ್ಯ ವಿಚಾರಗಳ ಕುರುಡು ಅನುಯಾಯಿಯಾಗಿ ಹೋಗದಂತೆ ನನ್ನನ್ನು ಕಾಪಾಡಿದ ಡಾಕ್ಟರ್ ಲೋಹಿಯಾರ ಕ್ರಾಂತಿಕಾರಕ ವೈಚಾರಿಕತೆಗೆ ಈಗಲೂ ನಾನು ಋಣಿಯಾಗಿದ್ದೇನೆ. ನಮ್ಮ ಕಾಲದ ಅತ್ಯಂತ ಉಜ್ವಲ, ಧೀಮಂತ ದೃಷ್ಟಾರ ಗಾಂಧೀಜಿಯನ್ನು ನಾನು ಪಡೆದದ್ದು ಲೋಹಿಯಾ ಮುಖೇನ. ಆ ಕಾಲದ ನನ್ನ ಎಲ್ಲ ನೆನಪುಗಳನ್ನು ಒಂದು ರೂಪಕಗಳ ಉಗ್ರಾಣವಾಗಿ ಪಡೆದು ನಾನು ಈಗಲೂ ಬದುಕಿ ಬರೆಯುತ್ತೇನೆ. ಮಠದ ಪರಿಸರದಲ್ಲಿ ನಡೆಯುತ್ತಿದ್ದ ಸಂಜೆಯ ದೀರ್ಘವಾದ ಪೂಜಾವಿಧಿಗಳು, ಕಾರ್ತಿಕ ಮಾಸದ ಹಬ್ಬಗಳು, ಹರಿಕಥೆಗಳು, ಪಾಂಡಿತ್ಯಪೂರ್ಣ ಪಾರಮಾರ್ಥಿಕ ಚರ್ಚೆಗಳು, ನನ್ನ ಕೆಲವು ನೆರೆಹೊರೆಯವರ ಸರಳವಾದ ಧಾರ್ಮಿಕ ಜೀವನ, ಜೊತೆಯಲ್ಲೇ ಜಾತಿ ಹೆಮ್ಮೆಯ ಉಸಿರುಗಟ್ಟಿಸುವ ವಾತಾವರಣ, ನಮ್ಮವರಲ್ಲದವರ ಬಗ್ಗೆ ನಮಗಿದ್ದ ತಿರಸ್ಕಾರ ದೃಷ್ಟಿ, ಬಡ ಗೇಣಿದಾರರ ಜೊತೆ ಮಠದವರು ನಡೆಸುತ್ತಿದ್ದ ಕೊನೆ ಇಲ್ಲದ ಕೋರ್ಟು ವ್ಯಾಜ್ಯಗಳು – ಇವೆಲ್ಲವೂ ಒಟ್ಟಾಗಿ ನನ್ನ ಸ್ಮೃತಿಯ ಉಗ್ರಾಣದ ರೂಪಕಗಳಾಗಿವೆ.ನನ್ನ ಈ ಬಾಲ್ಯದ ನೆನಪುಗಳು ನನ್ನಲ್ಲಿ ದ್ವಂದ್ವ ಭಾವನೆಗಳನ್ನು ಯಾವತ್ತೂ ಉಂಟುಮಾಡುತ್ತವೆ. ಮಡಿವಂತ ವಾತಾವರಣದಲ್ಲಿ ಬದುಕುವುದು ಕೇವಲ ಉಸಿರುಗಟ್ಟಿಸುವ ಅನುಭವ ಮಾತ್ರ ಕೊಟ್ಟಿತೆಂದು ಹೇಳಿದರೆ ಅದು ಸುಳ್ಳಾಗುತ್ತದೆ. ಈ ಪುಟ್ಟ ಪ್ರಪಂಚದಲ್ಲಿ ನಾನು ಪಡೆದ ಕೆಲವು ಅನುಭವಗಳು ಇವತ್ತಿಗೂ ನನಗೆ ರಹಸ್ಯಾತ್ಮಕವೆಂದೂ, ಪಾರಮಾರ್ಥಿಕವೆಂದೂ ಅನ್ನಿಸುತ್ತವೆ. ಅಪರಿಗ್ರಹದ ನಿಷ್ಠ ಸಾಧಕರೊಬ್ಬರು ಮಠದಲ್ಲಿದ್ದರು. ಒಂದು ಬಟ್ಟಲಿನಲ್ಲಿ ತನ್ನ ಭಿಕ್ಷೆಯನ್ನು ಅವರು ದಿನದ ಒಂದೇ ಸಾರಿ ಪಡೆದು ಊಟಮಾಡಿ ಬದುಕುತ್ತಿದ್ದರು; ಇಡೀ ವರ್ಷಕ್ಕೆ ಒಂದು ಜೊತೆ ವಸ್ತವನ್ನು ಮಾತ್ರ ಬೇಡಿ ಪಡೆದು ಉಡುತ್ತಿದ್ದರು; ದೇವಾಲಯದ ಗೋಡೆಯ ಪುಟ್ಟ ಗೂಡಿನಲ್ಲಿ ಉರಿಯುತ್ತಿದ್ದ ಹಣತೆಯ ಬೆಳಕಿನಲ್ಲಿ ನಿಂತು ಇಡೀ ರಾತ್ರಿ ಓದುತ್ತಿದ್ದರು. ಹಣತೆ ತಾನಾಗಿ ಆರುವ ತನಕ ಓದುತ್ತಿದ್ದ ಅವರು ಹೆಚ್ಚು ಬೆಳಕಿಗಾಗಿ ಬತ್ತಿಯನ್ನು ಒಂದು ಚೂರಾದರೂ ಮುಂದಕ್ಕೆ ತಳ್ಳದವರು. ಅಂಥವರು ನನ್ನ ಸಂಸ್ಕೃತದ ಅಧ್ಯಾಪಕರು. ಇಷ್ಟೊಂದು ಕಠೋರ ನಿಷ್ಠೆಯ ಇಂತಹ ಬ್ರಹ್ಮಚಾರಿ ’ಶಾಕುಂತಳ’ದ ಶೃಂಗಾರಮಯವಾದ ಭಾಗಗಳನ್ನು ಪಾಠಮಾಡುವಾಗ ಅವರಿಗೇನು ಅನ್ನಿಸುತ್ತಿತ್ತು ಅನ್ನುವುದೇ ನನಗೆ ಸೋಜಿಗ. ಒಮ್ಮೆ ತಲೆಕೆಟ್ಟವನೊಬ್ಬ ಅವರ ಬಳಿ ಬಂದು, ಹೊದ್ದ ಅಂಗವಸ್ತವನ್ನು ಕೊಡು ಎಂದು ಕೇಳಿದ. ಕೇಳಿದವನಿಗೆ ಒಲ್ಲೆ ಎನ್ನಬಾರದು ಎನ್ನುವ ವ್ರತದ ಅವರು ಅಂಗವಸ್ತವನ್ನು ಅವನಿಗೆ ಕೊಟ್ಟುಬಿಟ್ಟು, ಇಡೀ ಚಳಿಗಾಲ ಬರಿಮೈಯಲ್ಲಿ ಕಳೆದರು. ಮುಂದಿನ ವರ್ಷ ಮಾತ್ರ ಅವರು ವಸ್ತವನ್ನು ಬೇಡಿ ಪಡೆಯಬಹುದಾಗಿತ್ತು.

ತನಗೆ ಕರೆ ಬಂದಿದೆ ಎಂದು ಒಮ್ಮೆ ಅವರಿಗೆ ಅನ್ನಿಸಿತು. ಅಶ್ವತ್ಥದ ಒಂದು ಎಲೆಯನ್ನು ಹಿಡಿದು ಕಣ್ಣು ಮುಚ್ಚಿ ಪ್ರಾರ್ಥಿಸಿ ಅದನ್ನು ಕೆಳಗೆ ಬೀಳಲು ಬಿಟ್ಟರು. ಅದು ಅಂಗಾತ್ತನೆ ಬಿದ್ದರೆ, ನೀನು ಎಲ್ಲವನ್ನೂ ತ್ಯಜಿಸಿ ಹೊರಟುಹೋಗು ಎಂದು ಅಪ್ಪಣೆಯಾದಂತೆ ಎಂದುಕೊಂಡು ಕಣ್ಣುಬಿಟ್ಟರು. ಅಶ್ವತ್ಥದ ಎಲೆ ಹೋಗೆಂದು ಅವರಿಗೆ ಅಪ್ಪಣೆ ಕೊಟ್ಟಿತು. ಅವರು ಹೊರಟುಹೋದರು. ನಾವು ಮತ್ತೆ ಅವರನ್ನು ನೋಡಲಿಲ್ಲ. ಇನ್ನೊಂದು ಸಂದರ್ಭದಲ್ಲಿ ನಾನು ಈಗಾಗಲೇ ಹೇಳಿದ್ದನ್ನು ಮತ್ತೆ ಹೇಳಲು ಬಯಸುತ್ತೇನೆ. ಕುರುಡು ಪಾಶ್ಚಾತ್ಯೀಕರಣ ಮತ್ತು ಅಂತರಾಷ್ಟ್ರೀಯತೆಯ ಈ ಕೆಟ್ಟ ದಿನಗಳಲ್ಲಿ, ಸಾರ್ವಜನಿಕ ಘಟನೆಗಳು ಮುಟ್ಟಲಾರದ ಒಂದು ಖಾಸಗಿ ಬದುಕಿದೆ ಎಂದು ತಿಳಿಯುವುದೇ ಸಾಧ್ಯವಿಲ್ಲವಾಗಿದೆ. ಆದ್ದರಿಂದ ನಾವು ಲೇಖಕರು ವಿಶೇಷವಾದ ವ್ಯಕ್ತಿಗಳೆಂದೂ, ನಮ್ಮ ಏಕಾಕಿತನದಲ್ಲಿ ನಮ್ಮ ಕಲೆಯನ್ನು ಉಜ್ವಲಗೊಳಿಸಿಕೊಳ್ಳಬಲ್ಲವರೆಂದೂ ನಾವು ನಂಬಿಕೊಂಡವರಾದರೆ ನಾವು ಜುಜುಬಿ ಕಲಾರಾಧಕರಾಗಿ ಕೊಳೆಯುವುದೇ ಸರಿ. ಬದುಕುವುದೆಂದರೆ ತೊಡಗಿಸಿಕೊಳ್ಳುವುದು. ನಮ್ಮ ಕೈಮೀರಿದ ಘಟನೆಗಳಿಗೂ ತುತ್ತಾಗುವುದು. ಆದರೆ ಬರೆಯುವ ಕ್ರಿಯೆಗೆ ದೂರನಿಂತು ನೋಡುವ ಅಗತ್ಯವಿದೆ. ಆದರೆ ಹೀಗೆ ದೂರದಿಂದಲೋ ಮೇಲಿನಿಂದಲೋ ನೋಡುವುದು ಕಷ್ಟಮಾತ್ರವಲ್ಲದೆ ನೈತಿಕವಾಗಿಯೂ ತಪ್ಪು ಎಂದು ಕೆಲವೊಮ್ಮೆ ಅನ್ನಿಸುತ್ತದೆ. ಇಂಥ ದ್ವಂದ್ವಗಳಲ್ಲಿ ಗೂಢವಾಗುತ್ತ ಬೆಳೆದ ಯೇಟ್ಸ್ ಕವಿ ಐರ್‌ಲ್ಯಾಂಡಿನ ಉದ್ವೇಗಯುಕ್ತ ರಾಜಕಾರಣದಲ್ಲಿ ಮನಸ್ಸು ತಾಳದೆ ಒಳಗಾದವನಾಗಿ ಹೀಗೆ ಬರೆಯುತ್ತಾನೆ:”ಏನೇ ಆದರೂ ನಮ್ಮ ಆತ್ಮವನ್ನು ನಮ್ಮೊಡನೆ ನಾವು ಒಯ್ಯುವಂತೆ ನೋಡಿಕೊಳ್ಲಬೇಕು…. ನಮ್ಮ ಕಲ್ಪನೆಗೆ ಸಂತೆಯ ಬಂಡಿಯೇ ಸರಿ ಅನ್ನಿಸಿದರೆ ನಮ್ಮ ಶರೀರದೊಳಗೆ ನಮ್ಮ ಆತ್ಮವನ್ನು ಗಟ್ಟಿಯಾಗಿ ಹಿಡಿದಿಟ್ಟು ಕಾಯಬೇಕು. ಯಾಕೆಂದರೆ ಹಲವು ಸೂಕ್ಷ್ಮ ಜನಾಂಗಗಳ ದೀರ್ಘ ಇತಿಹಾಸದಲ್ಲಿ ನಾವು ಆತ್ಮನಿಷ್ಠ ಸೌಂದರ್ಯದ ರುಚಿಗೆ ಮನಸೋತವರಾಗಿಬಿಟ್ಟಿರುವುದರಿಂದ, ಕೇವಲ ಶಕ್ತಿಯ ಆರಾಧನೆಗೆ, ಕೇವಲ ವೈಯಕ್ತಿಕತೆಯ ವಿಜೃಭಣೆಗೆ, ಆವೇಶದ ರಕ್ತದ ತುಮುಲಕ್ಕೆ ಒಳಗಾಗುವುದನ್ನು ನಮ್ಮಲ್ಲಿ ಅಂತರ್ಗತವಾಗಿರುವ ಅಲೌಕಿಕದ ರುಚಿ ಅಸಹನೆಯಿಂದ ಕಾಣುತ್ತದೆ.” ಮೇಲೇರುವ ಪಕ್ಷಿಯ ಮಾರ್ಗ ಈ ಕಾಲಕ್ಕೆ ಸಲ್ಲದ್ದು ಎನ್ನಿಸಿ ಸಾರ್ವಜನಿಕ ಜಂಜಾಟಗಳ ಸಂತೆಯ ಬಂಡಿಯನ್ನು ನಾವು ಆಯ್ದವರಾದರೆ, ಇದನ್ನು ನೆನಪಿಡಬೇಕು: ಅರ್ಥಶಾಸ್ತಜ್ಞರಿಗೂ, ಸಮಾಜ ವಿಜ್ಞಾನಿಗಳಿಗೂ ಇರುವ ವಸ್ತುನಿಷ್ಠ ವಿಶ್ಲೇಷಣೆಯ ಸಾಮಗ್ರಿ ನಮ್ಮದಲ್ಲ. ಜೊತೆಗೆ ರಾಜಕೀಯದ ಉಪಾಯಗಾರರಿಗೆ ಗೊತ್ತಿರುವ, ತಮ್ಮ ಇಚ್ಛಾಶಕ್ತಿಗೆ ಬೇಕಾದಂತೆ ಜನರನ್ನು ಉಪಯೋಗಿಸುವ ಕಲೆ ನಮ್ಮದಲ್ಲ. ನಮ್ಮನ್ನು ಮೆಚ್ಚಿದವರು ಬಯಸುವ ಸಾರ್ವಜನಿಕ ವ್ಯಕ್ತಿಗಳಾಗಿ ನಾವು ಆಗಿಬಿಡಬಾರದು. ತನ್ನ ಪ್ರತಿಯೊಂದು ಹೊಸ ಕೃತಿಯಲ್ಲೂ ತನ್ನನ್ನು ಮೆಚ್ಚಿಕೊಂಡ ಮಂದಿಯಲ್ಲಿ ಕೆಲವರನ್ನಾದರೂ ಕಳೆದುಕೊಳ್ಳದ ಲೇಖಕ ಎಲ್ಲೋ ಸುಳ್ಳಾಗುತ್ತಿದ್ದಾನೆ ಎನ್ನುವ ಅನುಮಾನ ನಮಗಿರಬೇಕು. ಯಾಕೆಂದರೆ ನಾವು ನಮ್ಮನ್ನೇ ಅನುಕರಿಸಿಕೊಳ್ಳುತ್ತಿರಬಹುದು ಅಥವಾ ಸಾರ್ವಜನಿಕರ ಕಣ್ಣಿಗೆ ಇಷ್ಟವಾಗುವಂತೆ ನಮ್ಮನ್ನು ನಾವು ರೂಪಿಸಿಕೊಳ್ಳುತ್ತಿರಬಹುದು. ವಾಗ್‌ವೈಭವ ಅಪಾಯಕಾರಿ. ಅದು ಸಮೂಹವನ್ನು ಉದ್ರೇಕಗೊಳಿಸುವುದಕ್ಕಾಗಿ ರೂಪಿತವಾದದ್ದು. ಸುಳ್ಳುಗಳನ್ನು ಕೇಳಿಸಿಕೊಳ್ಳುತ್ತ ಬದುಕುವುದು ಸಾಮಾನ್ಯವಾಗಿ ಎಲ್ಲರಿಗೂ ಕ್ಷೇಮವೆನ್ನಿಸುತ್ತದೆ, ಹಿತವೆನ್ನಿಸುತ್ತದೆ. ಆದರೂ ಜನರ ಆತ್ಮ ಸತ್ಯಕ್ಕಾಗಿ ಹಸಿದಿರುತ್ತವೆ. ಆದ್ದರಿಂದ ನಾವು ನಮ್ಮ ಅತ್ಯಂತ ಏಕಾಂಗಿತನದಲ್ಲಿ ನಾವೇ ನಂಬಿದ್ದನ್ನು ಹೇಳುವ ಧೈರ್ಯ ಮಾಡಬೇಕು. ನಮಗೇ ನಾವು ಸುಳ್ಳು ಹೇಳಿಕೊಂಡು ಬದುಕುವ ಯಾವುದಾದರೂ ಶೈಲಿಗೆ ಬದ್ಧರಾಗಿ ಬಿಟ್ಟರೆ ಯಾರೂ ನಮ್ಮನ್ನು ಪಾರುಮಾಡುವಂತಿಲ್ಲ. ಆಳುವ ವರ್ಗದ ರಾಷ್ಟ್ರಕವಿಯಾಗುವುದಾಗಲಿ, ರಾಜಕೀಯ ಪಕ್ಷಗಳ ವಕ್ತಾರರಾಗುವುದಾಗಲಿ ಈ ಕಾರಣದಿಂದ ಲೇಖಕನಿಗೆ ಅಪಾಯಕಾರಿಯಾದದ್ದು. ಇವತ್ತಿಗೂ ಕಲೆ ನಾವು ಅಡಗಿಕೊಳ್ಳಬಹುದಾದ ಜಾಗವಾಗಿಯೇ ಉಳಿದಿದೆ. ಸೋವಿಯತ್ ದೇಶದ ಸೆಕ್ಯುಲರ್ ಅಬ್ಬರದಲ್ಲಿ ಸೋಲ್ಝೆನಿಟ್ಸಿನ್‌ನಿಗೆ ಆಸ್ತಿಕನಾಗಿ ಉಳಿಯುವುದು ಹೀಗೆ ಸಾಧ್ಯವಾಯಿತು. ಅಂತೆಯೇ ತಾವು ದೇವರನ್ನು ನಂಬಿದವರೆಂದು ಬೀಗುವವರ ಮತೀಯ ಅಸಹನೆ ಮತ್ತು ಕ್ರೌರ್ಯದ ಜಗತ್ತಿನಲ್ಲಿ, ಅನುಮಾನಿಗಳಾಗಿ ಇರುವುದು ನಮ್ಮ ಕಾಲದ ಹಲವರಿಗೆ ಸಾಧ್ಯವಾಗಿದೆ. ಇಂತಹ ಸಾಂಸ್ಕೃತಿಕ ಬಿಕಟ್ಟುಗಳ ಕಾಲದಲ್ಲಿ ಕಲಾವಿದ ತನ್ನ ಶಕ್ತಿಯನ್ನು ಹೇಗೆ ರಕ್ಷಿಸಿಕೊಳ್ಳುತ್ತಾನೆನ್ನುವುದನ್ನು ಜಾಯ್ಸ್ ಹೇಳುತ್ತಾನೆ. ಕಲಾವಿದ ಇಂತಹ ಕಾಲದಲ್ಲಿ ಆಯಬೇಕಾದ್ದು, ಜಾಯ್ಸ್ ಪ್ರಕಾರ ಮೌನ, ಅಜ್ಞಾತವಾಸ ಮತ್ತು ಉಪಾಯ. ಆದರೆ ರಾಜಕೀಯವಾಗಿ ಆರೋಗ್ಯವೆನ್ನಿಸುವ ಕಾಲದಲ್ಲೂ ಲೇಖಕ ಬೇರೆ ರೀತಿಯ ಉಪಾಯಗಳನ್ನು ಆಶ್ರಯಿಸಬಹುದು. ಯಾಕೆಂದರೆ ತನ್ನ ಅಂತರಾತ್ಮದ ಕಿರುದನಿಗೆ ಓಗೊಟ್ಟು ಅವನು ಅಗತ್ಯಬಿದ್ದಲ್ಲಿ ಜನಾದರವನ್ನು ನಿರ್ಲಕ್ಷಿಸುವ ಅಪ್ರಿಯ ಲೇಖಕನೂ ಆಗಬೇಕಾಗಬಹುದು. ನಿಜವಾದ ಪ್ರಜಾತಾಂತ್ರಿಕ ಸಮಾಜದಲ್ಲಿ ಲೇಖಕನ ಪಾತ್ರ ಇಂತಹದ್ದಾಗಿರುತ್ತದೆ. ಇಂತಹ ಒಂದು ಶೀಲವಂತ ಸಮಾಜ, ಪರಂಪರೆಯ ಸ್ಮೃತಿ ಸಾತತ್ಯವನ್ನು ಪ್ರೀತಿಸುವುದರ ಜೊತೆಗೇ, ಜನರ ಭಾವುಕತೆಯನ್ನು ದೋಚುವ ಸಮೂಹಸನ್ನಿಯನ್ನು ಆದರಿಸುವುದಿಲ್ಲ ಎಂದು ನಾವು ಭರವಸೆ ಇಟ್ಟುಕೊಂಡಿರಬೇಕಾಗುತ್ತದೆ. ಈ ಬಗೆಯ ಅಪ್ಪಟ ಪ್ರಜಾತಾಂತ್ರಿಕ ಸಮಾಜದಲ್ಲಿ ಮಾತ್ರ ಲೇಖಕನಿಗೆ ತಾನು ಕೋಮಲವಾದ ಅಂತಃಕರಣದ, ಧ್ಯಾನಶೀಲನಾದ ಸಹನಾಗರಿಕನಾಗಿ ಬದುಕುತ್ತ, ತನ್ನ ಮಾತುಗಳಿಗೆ ಇತರರನ್ನು ಒಲಿಸಿಕೊಳ್ಳುವ ಸಾಮರ್ಥ್ಯವಿದೆಯೆಂದು ತಿಳಿಯಲು ಸಾಧ್ಯವಾಗಿರುತ್ತದೆ. ಹೀಗೆ, ಒಂದು ಗತಿಶೀಲವಾದ ನಾಗರಿಕ ಸಮಾಜದ ಸೃಷ್ಟಿಗೆ ನಾವೆಲ್ಲರೂ ಬದ್ಧರಾಗಲು ಸಾಧ್ಯವಾಗಲಿ ಎಂದು ಪ್ರಾರ್ಥಿಸುತ್ತೇನೆ. ಇಂತಹ ಒಂದು ಸಮಾಜದಲ್ಲಿ ಮಾತ್ರ ಸಂಸ್ಕೃತಿಗಳ ಬಹುತ್ವದಲ್ಲಿ ಸಂತೋಷವಿರುತ್ತದೆ. ನಮ್ಮದಲ್ಲದ ದನಿಗಳಿಗೆ ಕಿವಿಗೊಡಬೇಕೆಂಬ ಆಸೆಯಿರುತ್ತದೆ. ಇಂಥಲ್ಲಿ ಮಾತ್ರ ಸಾಹಿತ್ಯ ವರ್ಧಿಸುತ್ತದೆ. ಮಾತಿಗೆ ಒಲಿಸಿಕೊಳ್ಳುವ ಶಕ್ತಿಯಿದೆ ಎಂಬ ನಂಬಿಕೆಯನ್ನು ಇಟ್ಟುಕೊಂಡಿರುವುದು ಸಾಧ್ಯವಾದಾಗ ಮಾತ್ರ ಸಾಹಿತ್ಯಕ್ಕೆ ಶಕ್ತಿಯಿರುತ್ತದೆ.
*****
೨೫ ಮಾರ್ಚ್ ೧೯೯೫

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

This site uses Akismet to reduce spam. Learn how your comment data is processed.