ಕನ್ನಡ ಚಿತ್ರರಂಗದ ಬಗ್ಗೆ ಯುಗಾದಿ ಅನಿಸಿಕೆಗಳು

‘ಯುಗಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ’

ಈ ಗೀತೆ ಪ್ರತಿವರ್ಷವೂ ಚಿತ್ರರಂಗದಲ್ಲಿ ಕೇಳಿಬರುತ್ತಿದೆ. ಚಿತ್ರರಂಗದ ಅನವಶ್ಯಕವಾದ ವಿವಾದಗಳನ್ನು, ಬಾರದ ಟೀಕೆ ಟಿಪ್ಪಣಿಗಳನ್ನು ಕೇಳಿ ಕೇಳಿ ಸಾಕಾಗಿದೆ.

ವಾದ ಬೆಳಸಿ ಯಾವ ಲಾಭ
ಸಾಕು ನಿಲ್ಲಿಸು ಮಾತನು
ಒಡೆದ ಮುತ್ತು ಕೊಡಬಹುದೆ?
ಒಲಿದು ಒಲಿಸಿ ಸೋತೆನು

ಯಾರು ಯಾವುದೇ ಬಗೆಯ ಚಿತ್ರ ತೆಗೆಯಲಿ, ಅದು ಸದಭಿರುಚಿಯಿಂದ ಕೂಡಿದ್ದು ಮನೆಮಂದಿ ಎಲ್ಲ ಒಟ್ಟಿಗೆ ನೋಡುವಂತಿದ್ದರೆ ಅದಕ್ಕಿಂತ ಹೆಚ್ಚಿನ ಸಂತೋಷ ಮತ್ತೇನು ಬೇಕು? ಇದು ವ್ಯಾಪಾರೀ ಚಿತ್ರ – ಅದು ಕಲಾತ್ಮಕ ಚಿತ್ರ ಇನ್ನೊಂದು ಎಡಬಿಡಂಗಿ ಚಿತ್ರ ಎಂದು ವಾದ – ಪ್ರತಿವಾದ ಹೂಡುವುದರಲ್ಲೇ ಜೀವ ಸವೆಸುವುದರಲ್ಲಿ ಅರ್ಥವಿದೆಯೆ?

ಹೊಸ ಮುಖಗಳು ಬರುತಲಿವೆ
ಚಿತ್ರರಂಗದಲ್ಲಿ
ಅವರ ಮೆಚ್ಚೊ ಅಭಿಮಾನಿಗಳು
ಬೇಕು ಹೆಚ್ಚು ಸಂಖ್ಯೆಯಲ್ಲಿ

ನಿಜ….ಕನ್ನಡ ಚಿತ್ರರಂಗದಲ್ಲಿ ಈಗೊಂದಷ್ಟು ಹೊಸ ಮುಖಗಳು ಬರುತ್ತಿವೆ. ಸುದೀಪ್ ಸಂಜೀವ್, ರೇಖಾ, ಪ್ರಭುದೇವ ಸೋದರ ಪ್ರಸಾದ್, ಮತ್ತೊಬ್ಬಳು ರೇಖಾ, ಬಿ.ಸಿ.ಪಾಟೀಲ್, ಎಸ್. ಮಹೇಂದರ್‍, ಹೇಮಂತ್ ಹೆಗಡೆ, ಮುಂತಾದವರು ಚಿತ್ರ ನಟರಾಗಿ ತೆರೆಯ ಮೇಲೆ ಬಂದರೆ, ಮುನ್ನುಡಿ ಶೇಷಾದ್ರಿ, ಕವಿತಾ ಲಂಕೇಶ್, ಟಿ.ಎನ್. ಸೀತಾರಾಂ, ರಾಮದಾಸ ನಾಯಿಡು, ಅಶೋಕ್ ಪಾಟೀಲ್ ಮುಂತಾದವರು ನಿರ್ದೇಶನದಲ್ಲಿ ಹೊಸತನ ಚುಮುಕಿಸುತ್ತಿದ್ದಾರೆ. ವ್ಯಾಪಾರಿ ಚಿತ್ರಗಳಲ್ಲಿ ಅನೇಕ ನಟನಟಿಯರು ಮಿಂಚಿ ಅನುಪ್ರಭಾಕರ್‍ ಜನಪ್ರಿಯ ನಟಿ ಎನಿಸಿ, ಪ್ರೇಮಾ, ಶೃತಿ ಮುಂತಾದವರ ಪಕ್ಕಾ ಬಂದು ನಿಲ್ಲುತ್ತಿದ್ದಾಳೆ. ಹೊಸ ಪ್ರತಿಭೆಗಳು ಹೆಚ್ಚಬೇಕಿದ್ದಲ್ಲಿ ಚಿತ್ರರಸಿಕರು ಹೆಚ್ಚಿನ ಸಂಖ್ಯೆಯಲ್ಲಿ ಪ್ರೋತ್ಸಾಹ ನೀಡಬೇಕು. ಟಿ.ವಿ. ಮುಂದೆ ಕೂರುವುದು ಬಿಟ್ಟು ಚಿತ್ರಮಂದಿರಗಳತ್ತ ಟಿಕೇಟ್ ಕೊಳ್ಳಲು ತೆರಳಬೇಕು.

ಚಿತ್ರರಂಗದವರಿಗೀಗ
ಆಲ್ ಇನ್ ಆಲ್ ಹುಚ್ಚು
ಶ್ರದ್ಧೆ-ಭಕ್ತಿ-ಇದ್ದರೆ ಮಾತ್ರ
ಚಿತ್ರ ಅಚ್ಚುಮೆಚ್ಚು

ಯುಗಾದಿ ಅನಿಸಿಕೆಯೂ ತುಂಬಾ ಅರ್ಥಪೂರ್ಣ. ರವಿಚಂದ್ರನ್ ನಿರ್ಮಾಪಕರಾಗಿ ನಟರಾಗಿ ನಿರ್ದೇಶಕರಾಗಿ ಹೆಸರಾಗಿ ಕನ್ನಡ ಚಿತ್ರರಂಗಕ್ಕೆ ಗ್ರಾಂಜರ್‍ ತಂದರು. ಅನಂತರ ಅವರೇ ಸಂಗೀತ ನಿರ್ದೇಶಕರೂ ಆಗಿ ಹಾಡುಗಳನ್ನು ಬರೆಯ ಹೊರಟರು. ಸ್ಟುಡಿಯೋ ಓನರ್‍ ಆಗಿ ಎಲ್ಲ ಇಲ್ಲೇ ಬರಬೇಕೆಂದು ಒತ್ತಾಯವೂ ಹಾಕಿ ಆಲ್ ‘ಇನ್ ಆಲ್’ ಆಗಲು ಯತ್ನಿಸಿದರು. ನಟ ನಿರ್ಮಾಪಕರಾಗಿದ್ದ ಬಿ.ಸಿ.ಪಾಟೀಲ್ ನಿರ್ದೇಶಕನೂ ಆಗಲೂ ಮುಂದಾದರು. ಎಸ್.ಮಹೇಂದರ್‍ ನಿರ್ದೇಶಕನಾದ ನಾನು ಹೀರೋ ಕೂಡ ಆಗಬಲ್ಲೆ ಎಂದು ಗಟ್ಟಿಮೇಳ ತೆರೆಗಿತ್ತರು. ನಟರಾಗಿ ಜನಪ್ರಿಯರಾದ ವಿಷ್ಣು ಹೀರೋ ಪಾತ್ರದ ಜತೆ ವೃದ್ಧನ ಪಾತ್ರವೂ ಇರಲೆಂದು ಡಬ್ಬಲ್ ರೋಲ್ ಕಥೆಗಳನ್ನೇ ಆರಿಸತೊಡಗಿದ್ದರು. ದಿನೇಶ್ ಬಾಬು ಕಥೆ ಚಿತ್ರಕಥೆ-ಸಂಭಾಷಣೆ. ಕ್ಯಾಮರಾ ನಿರ್ದೇಶನ ಎಲ್ಲಕ್ಕೂ ಕೈಚಾಚಿದರು. ನಟ-ನಿರ್ಮಾಪಕ ಎಸ್. ನಾರಾಯಣ್ ಹೀರೋ ಆಗಿ ಮಿಂಚುತ್ತಾ ಟಿ.ವಿ. ಸೀರಿಯಲ್ ಮೆಗಾ ಧಾರವಾಹಿ ನಿರ್ದೇಶಕರಾಗಿ ಮುಂದುವರೆಯುತ್ತಾ ಟಿ.ವಿ. ಸೀರಿಯಲ್ ಮಾತ್ರ ಸಬ್‌ಕಾಂಟ್ರಾಕ್ಟ್ ಕೊಡತೊಡಗಿದರು.

ನಾಗಾಭರಣ, ಡಿ.ರಾಜೇಂದ್ರಬಾಬು, ನಾಗತಿಹಳ್ಳಿ ಸಹಾ ಹಿರಿ ಮತ್ತು ಕಿರುತೆರೆಯಲ್ಲಿ ‘ಆಲ್ ಇನ್ ಆಲ್’ ಆಗಲು ಹೊರಟಿದ್ದಾರೆ. ಜಗ್ಗೇಶ್ ನಟರಾದರು – ನಿರ್ಮಾಪಕರಾದರು, ಗಾಯಕರಾದರು ಈಗ ಅವರಿಗೆ ನಿರ್ದೇಶಕರಾಗುವ ಹುಚ್ಚು. ಚಿತ್ರ ಜನರಿಗೆ ಅಚ್ಚುಮೆಚ್ಚು ಎನಿಸುವುದು ‘ಸಿನ್ಸಿಯಾರಿಟಿ’ ಇದ್ದಾಗ ಮಾತ್ರ.

ಗೆಲ್ಲುವ ಕುದುರೆ ಬಾಲಕ್ಕೇ
ಎಲ್ಲ ಹಣವನು ಕಟ್ಟುವರು
ಸೋತ ಕುದುರೆಯನ್ನು
ಎಲ್ಲ ಕಸದ ತೊಟ್ಟಿಗೆ ತಳ್ಳುವರು

ಚಿತ್ರರಂಗಕ್ಕಂತೂ ಈ ಸಾಲುಗಳು ತುಂಬಾ ಸೂಕ್ತ. ಓಂ ಪ್ರಕಾಶ್‌ರಾವ್ ಎ.ಕೆ.೪೭ ನಿರ್ದೇಶಿಸಿದಾಗ ಎಲ್ಲ ‘ಆಹಾ’ ಎಂದರು. ‘ವಂದೆ ಮಾತರಂ’ ಅಡ್ರೆಸ್‌ಗಿಲ್ಲದೆ ಮಲಗಿದಾಗ ‘ಛೀ-ಥೂ’ ಎಂದರು. ಆಗಲೇ ಓಂ ಪ್ರಕಾಶ್ ‘ಪೊಲೀಸ್ ಡೈರಿ’ ಸೀರಿಯಲ್ ಮಾಡ ಹೊರಟಿದ್ದು, ಹೇಗೋ ಏನೋ ‘ಸೇತು’ ಅವರ ಕೈಸೇರಿ ‘ಹುಚ್ಚ’ ಆಯಿತು. ‘ಹುಚ್ಚ’ ನಂತರ ಭವ್ಯ ಪಮ್ಮೆಯ್ಯಳೊಂದಿಗೆ ೨ನೇ ಮದುವೆಯೂ ಆಯಿತು. ಈಗ ಹುಚ್ಚನ ಕಥೆ ಮುಗಿದಿದೆ ‘ಜಿಲ್ಲಾಧಿಕಾರಿ’ ಎನ್ನುತ್ತಿದ್ದಾರೆ ರಾಮು.

‘ಹಾಲಿವುಡ್’ ನಿರ್ದೇಶನದ್ದು ಹಲವು ಹಗರಣಗಳಾದುವು. ಧನರಾಜ್ ಚಿತ್ರದಲ್ಲಿ ಉಪೇಂದ್ರ ಪ್ರಭುದೇವ ಅಭಿನಯಿಸುವ ಸಂದರ್ಭ ಬಂದಾಗ ಹೊಸ ನಿರ್ದೇಶಕರಿಬ್ಬರು ಬಂದರು. ಯಜಮಾನ ಅದ್ಭುತ ಯಶಸ್ಸು ಗಳಿಸಿತು. ಆದರೆ ಪಾಪ! ನಿರ್ದೇಶಕ ಶೇಷಾದ್ರಿ ತೀರಿಕೊಂಡರು. ಅದೃಷ್ಟ ಕಾಲನೊಡನೆ ಪೈಪೋಟಿಗಿಳಿದಾಗ ಯಾರು ಯಾರ ಮೇಲೆ ಯಾವಾಗ ಸವಾರಿ ಮಾಡುತ್ತಾರೆ ಎಂದು ಹೇಳುವುದೂ ಕಷ್ಟ.

ಕತೆ, ಕಾದಂಬರಿ ಮರೆತಿಹರೆಲ್ಲ
ಕ್ಯಾಸೆಟ್ ಸಂಸ್ಕೃತಿ ಹೆಚ್ಚಿದೆಯಲ್ಲ
ಕನ್ನಡದಾ ಕಂಪು
ಮಾಯವಾಯಿತಲ್ಲ.

ನಿಜ. ಈಗ ೨೦ಕ್ಕೂ ಹೆಚ್ಚು ರೀಮೇಕ್ ಚಿತ್ರಗಳು ಬರಲಿವೆ. ಕ್ಯಾಸೆಟ್ ಸಂಸ್ಕೃತಿಯದೇ ರಾಜ್ಯಭಾರವಾದಾಗ ಕನ್ನಡ ನೆಲ-ಜಲ-ಸಂಸ್ಕೃತಿ ಮಣ್ಣುಪಾಲಾದಂತೆಯೇ!

‘ಮಕ್ಕಿಕಾ ಮಕ್ಕಿ, ಜೆರಾಕ್ಸ್ ಕಾಪಿ ಆದಾಗ ಸೃಜನಶೀಲತೆ ಎಲ್ಲಿ ಸಾಧ್ಯ?’ ಅಂದರು ಸುನೀಲ್ ಕುಮಾರ್‍ ದೇಸಾಯಿ. ಎಂಥ ಸತ್ಯದ ಮಾತು.

ಮೂಢನಂಬಿಕೆ ಬಿತ್ತುವರೆಲ್ಲ
ಪವಾಡ ಪ್ರಿಯರೆ ಆಗಿಹರೆಲ್ಲ
ಗ್ರಾಫಿಕ್ಸ್ ಹೆಸರಲಿ ಗೆಲ್ಲುವ ಕನಸು
ಮೋಸದ ಆಟ ಎಲ್ಲೆಲ್ಲು ಹುಲುಸು

‘ದುರ್ಗಾಶಕ್ತಿ, ನಾಗದೇವತೆ, ಗ್ರಾಮದೇವತೆಯಂಥ ಚಿತ್ರಗಳೇ ಈ ಮಾತಿಗೆ ಸಾಕ್ಷಿ. ನೀಲಾಂಬರಿಯೂ ಈ ದಿಕ್ಕಿನಲ್ಲೇ ಚಲಿಸೀತೇನೋ ಎಂಬ ಗುಮಾನಿ ಇದೆ. ನಿರ್ಮಾಪಕ, ನಟ, ನಿರ್ದೇಶಕರಿಗೂ ಒಂದು ಸಾಮಾಜಿಕ ಜವಾಬ್ದಾರಿ ಇಲ್ಲದಿದ್ದಲ್ಲಿ ಚಿತ್ರಗಳು ಹಣ ಕಸಿಯುವುದನ್ನೇ ಗುರಿ ಮಾಡಿಕೊಳ್ಳುವುದರಲ್ಲಿ ಸಂಶಯವಿಲ್ಲ.

ಫೈಟಿಂಗ್ ಹೆಸರಲಿ ಮಾರಣ ಹೋಮ
ಭ್ರಷ್ಟಾಚಾರದ ಬಗೆ ಬಗೆ ಡ್ರಾಮ
ಆದರ್ಶ ಮೌಲ್ಯಕ್ಕೆ ಎಳ್ಳುನೀರು
ಎಲ್ಲಿದೆ ಪ್ರೀತಿ-ಪ್ರೇಮಗಳ ಸ್ನೇಹದ ಖೀರು

ಆಕ್ಷನ್ ಫಿಲಂ ಹೆಸರುಗಳಲ್ಲಿ ಬರುವ ರಾಷ್ಟ್ರಗೀತೆಯಂಥ ಚಿತ್ರವನ್ನು, ಪೊಲೀಸ್‌ನವರು ಭ್ರಷ್ಟಾತಿಭ್ರಷ್ಟರೆಂದು ಸಾರುವ ಚಿತ್ರಗಳು ಯುವ ಜನಾಂಗಕ್ಕೆ ಯಾವ ಆದರ್ಶ ಮೌಲ್ಯಗಳನ್ನು ಸಾರೀತು.

ಅವನನ್ನು ಇವನು ತುಳಿದು
ಇವನನ್ನು ಅವನು ತುಳಿದು
ತಾನು ಮಾತ್ರ ಮಿಂಚುವಂಥ
ವೀರಾಗ್ರಣಿಗಳೆ ಎಲ್ಲೆಲ್ಲೂ

ಚಿತ್ರರಂಗದವರೆಲ್ಲ ಮೈಕ್ ಮುಂದೆ ‘ನಾವೆಲ್ಲ ಒಂದು ಕುಟುಂಬದವರು’ ಎನ್ನುತ್ತಾರೆ. ಚಿತ್ರ ಬಿಡುಗಡೆ ಸಮಯದಲ್ಲಿ ಪೈಪೋಟಿ ಪ್ರಾರಂಭ. ಚಿತ್ರ ಮಂದಿರದ ಮಾಲೀಕರ ಮರ್ಜಿಗನುಗುಣವಾಗಿ ಈ ಚಿತ್ರವನ್ನು ಆ ಚಿತ್ರ, ಆ ಚಿತ್ರವನ್ನು ಈ ಚಿತ್ರ, ಕಡೆಗೆ ನಾಯಕ-ನಾಯಕಿಯರ ಅವರವರದೇ ಚಿತ್ರ ಫೈಟಿಂಗ್‌ಗಿಳಿವ ದಿನಗಳಿವು. ಮುಂದಿನ ಯುಗಾದಿಯ ಹೊತ್ತಿಗೆ ಚಿತ್ರ ಬದಲಾಗಿ-ಬ್ರೈಟ್ ಫ್ಯೂಚರ್‍ ಬೆಳಗಲಿ ಎಂಬುದು ಈ ಯುಗಾದಿ ಅಂಬೋಣ.
*****
(೨೩-೩-೨೦೦೧)