ಕಿತ್ತೂರಿನ ಕಿಡಿಗಳು

ಗುಣದಲ್ಲಿ ಗೌರಿ, ಕೆಚ್ಚೆದೆಯಲ್ಲಿ ಚಾಮುಂಡಿ,

ಕ್ರೂರ ದಬ್ಬಾಳಿಕೆಗೆ ಬಿಚ್ಚುಗತ್ತಿಯ ಹಿಡಿದು
ಕಿತ್ತೂರ ರಾಣಿ, ಬಜ್ಜರದ ಕಿಡಿ! ಮಾರ್ಪೊಳೆದು

ಭೀರು ಭೀರುಗಳೆದೆಗೆ ಬೀರ ಚೇತನೆಯೂಡಿ
ಉಬ್ಬರಂಬರಿದು ಬಡಿದೆಬ್ಬಿಸಿದ ಕಾವಿನಲಿ

ಮೈದುಂಬಿ ಮೇಲೆದ್ದ ಯೋಧಪಡೆ, – ಸಂಗೊಳ್ಳಿ
ರಾಯಣ್ಣ ನಾಯಕಂ! ಇಕ್ಕಿದರು ಕಂಗೊಳ್ಳಿ

ಆಕ್ರಮಣಶೀಲರ್ಗೆ! ಕೌಟಿಲ್ಯ ಜಾಲದಲಿ
ಸೆರೆಯಾಗಿ, ಸಾವಿಗೀಡಾಗಿ, ಶೂಲಕ್ಕೇರಿ

ನಗುನಗುತ ಹರಣಮಂ ತೊರೆವ ಕೊನೆ ನಿಮಿಷದಲಿ
ಅವರ ತೇಜದ ಬೀಜ ಕನ್ನಡದ ಮಣ್ಣಿನಲಿ
ಮೊಟ್ಟ ಮೊದಲಿಗೆ ಮೊಳೆಯಿತೈ ಬಾವುಟವನೂರಿ!

ಮೊದಲು ನೆನೆಯಿರಿ ಅವರನಾ ಪರಾಕ್ರಮಿಗಳಂ
ನಾಡಗುಡಿ ಕೀರ್ತಿ ದುಂದುಭಿ ನಿನದ ಪಾತ್ರರಂ.
*****