ಅವಸ್ಥೆ – ೪

“ನಾಗೇಶಾ – ನಾಗೇಶಾ”

ಹೊರಗೆ ಪೇಪರ್ ಓದುತ್ತ ಕೂತ ನಾಗೇಶ ಅವಸರವಾಗೆದ್ದು ಕೃಷ್ಣಪ್ಪ ಮಲಗಿದ ಕೋಣೆಗೆ ಬರುತ್ತಾನೆ. ತಾನು ಕರೆದರೇ ಖುಷಿಯಾಗುವ ನಾಗೇಶನನ್ನು ಕಂಡು ಕೃಷ್ಣಪ್ಪನಿಗೆ ಗೆಲುವಾಗುತ್ತದೆ. ಕಿಶೋರ ಕುಮಾರ ಹಾಸ್ಟೆಲಲ್ಲಿ ಹೀಗೇ ತನ್ನ ಸೇವೆ ಮಾಡಿದ್ದ -ಈಗ ಎಂಜಿನಿಯರ್ ಆಗಿದ್ದಾನೆ -ವರ್ಗ ಮಾಡಿಸಿಕೊಡಿರೆಂದು ಕೇಳಲು ಬಂದಿದ್ದ. ನಾಗೇಶ ಬಂದು ನಿಂತಾಗ ಯಾಕೆ ಕರೆದದ್ದು ಎಂಬುದೇ ಮರೆತುಹೋಗುತ್ತದೆ. ಅವನೇ ಕೇಳುತ್ತಾನೆ;

“ಪೇಪರ್ ಓದಬೇಕ ಗೌಡರೆ? ಇವತ್ತೇನೂ ಮುಖ್ಯ ಸುದ್ದಿ ಇರುವಂತಿಲ್ಲ”

“ಈ ದೇಶದಲ್ಲಿ ಅದೇನು ಸುದ್ದಿ ಇರುತ್ತೊ?”

ಕೃಷ್ಣಪ್ಪ ಕಿಟಕಿಯಾಚೆ ನೋಡುತ್ತ ಹೇಳಿದ. ತನ್ನಿಂದ ಪ್ರತಿಕ್ರಿಯೆ ಬಯಸಿ ಗೌಡರು ಮಾತಾಡಿಲ್ಲವೆಂದು ಅರಿತ ನಾಗೇಶ ಸುಮ್ಮನೆ ನಿಂತ. ಮಾತಿನ ಅಗತ್ಯ ಯಾವಾಗ ಇಲ್ಲವೆಂದು ತಿಳಿದ ಈ ನಾಗೇಶನಂಥವರು ರಾಜಕೀಯ ಕ್ಷೇತ್ರದಲ್ಲಿ ದುರ್ಲಭವೆಂದು ಕೃಷ್ಣಪ್ಪನಿಗೆ ಅವನೆಂದರೆ ಇಷ್ಟ.

“ಸೀತ ಬ್ಯಾಂಕಿಗೆ ಹೋದಲೇನೊ?”

“ಹೋದರು ಗೌಡರೆ, ವೀರಣ್ಣನವರು ಅವರಿಗೆ ಕಾರ್ ಕಳಿಸಿದ್ದರು. ಗೌರೀನೂ ನರ್ಸರಿಗೆ ಹೋದಳು.”

“ಬೆಳಗಾತ ಅದೇನೊ ರಂಪ ಹಿಡಿದಿತ್ತು….”

“ಸ್ಕೂಲಿಗೆ ಹೋಗಲ್ಲ ಅಂತ -”

ಕೃಷ್ಣಪ್ಪನ ಮುಖ ಮೃದುವಾಯಿತು!

“ನಂಗೂ ಅವಳ ವಯಸ್ಸಲ್ಲಿ ಸ್ಕೂಲಿಗೆ ಹೋಗಕ್ಕೆ ಇಷ್ಟವಿರಲಿಲ್ಲ ಮಾರಾಯ. ಜೋಯಿಸರು ಭಾರತ ಓತ್ತೀನಿ ಕಣೊ ಅಂತ ಪುಸಲಾಯಿಸಿ ಕರಕೊಂಡು ಹೋಗ್ತಿದ್ದರು.”

ನಾಗೇಶ ಕುರ್ಚಿಯನ್ನೆಳೆದು ಕೂತುಕೊಂದ.

“ಹೇಳ್ತೀರ. ಬರಕೋತೀನಿ” ಎಂದು ಒತ್ತಾಯವಿಲ್ಲದ ಧ್ವನಿಯಲ್ಲಿ ಕೇಳಿದ.

“ಬರಕೊಳ್ಳುವಿಯಂತೆ. ಇವತ್ತೇನೂ ಹೇಳಬೇಕೂಂತಲೆ ಅನ್ನಿಸಲ್ಲೊ ನಾಗೇಶ. ಕಾಲನ್ನ ಇನ್ನಷ್ಟು ಎತ್ತಬಹುದು ಅನ್ನಿಸ್ತು. ಪ್ರಯತ್ನ ಮಾಡಿದೆ. ಆಗತ್ತೆ ಅನ್ನೋದು ಭ್ರಮೆಯೋ ನಿಜವೋ ಅಂತ ನಿನ್ನ ಕೇಳಾಣ ಅಂತ ಕರೆದೆ -ನೋಡು.”

ಕೃಷ್ಣಪ್ಪ ಪಾದವನ್ನು ಎಳೆದುಕೊಳ್ಳಲು ಪ್ರಯತ್ನಿಸುತ್ತ ಏಕಾಗ್ರನಾದ.

“ನಿನ್ನೆಗಿಂತ ಹೆಚ್ಚು ಎಳಕೋತಿದೀನ ನಾಗೇಶ?”

ಸುಳ್ಳು ಹೇಳಿದರೆ ಕೃಷ್ಣಪ್ಪನಿಗೆ ಪ್ರಿಯವಾಗುವುದಿಲ್ಲವೆಂದು ತಿಳಿದ ನಾಗೇಶ -“ನನಗೆ ಹಾಗನ್ನಿಸಲ್ಲ ಗೌಡರೆ, ಕೈ ಹೇಗಿದೆ?” ಎಂದ.

“ಕೈಯಿ” ಎಂದು ಕೃಷ್ಣಪ್ಪ ನಾಗೇಶ ಕೊಟ್ಟ ರಬ್ಬರ್ ಬಾಲಿನ ಸುತ್ತ ಬೆರಳುಗಳನ್ನೆಲ್ಲ ಮಡಿಸಲು ಪ್ರಯತ್ನಿಸಿದ. ತನ್ನ ಪ್ರಾಣವನ್ನೆಲ್ಲ ತೀವ್ರವಾಗಿ ಬೆರಳುಗಳಲ್ಲಿ ನೂಕುತ್ತ ಅವಡುಕಚ್ಚಿದ. ಬಾಲಿನ ತಂಪಾದ ನುಣುಪಾದ ಹೊರಮೈ ಸುತ್ತ ಬೆರಳುಗಳು ಮಡಚಿಕೊಂಡವು. ಮೃದುವಾಗಿ ಬಾಲನ್ನು ಅಮುಕುವ ಅಪೇಕ್ಷೆ ದೇಹದಲ್ಲೆಲ್ಲ ಹುರಿಯಾಗಿ ಬೆರಳುಗಳಿಗೆ ಇಳಿಯಿತು. ಬಾಲು ಮುಷ್ಟಿಗೆ ದಕ್ಕುತ್ತಿದೆ ಎನ್ನಿಸಿ ಗೆಲುವಾಯಿತು. ಈ ಗೆಲುವು ನಾಗೇಶನ ಕಣ್ಣುಗಳಲ್ಲೂ ಮಿಂಚಿದ್ದರಿಂದ ಕೃಷ್ಣಪ್ಪನಿಗೆ ಹರ್ಷವಾಯಿತು. ಹಾಗೆ ಬಾಲನ್ನು ಹಿಡಿದು ತನ್ನ ಹಠಕ್ಕೆ ಅದರ ಮೃದುವಾದ ವಿರೋಧವನ್ನೂ ಒಪ್ಪಿಗೆಯನ್ನೂ ಸವಿಯುತ್ತ,

“ನಾನು ತುಂಬ ಚನ್ನಾಗಿ ಬುಗುರಿ ಬಿಡುತ್ತಿದ್ದೆ ಕಣೊ” ಎಂದ. ವಾರಂಗಲ್‌ನಿಂದ ಹಿಂದಿರುಗಿದ ಮೇಲೆ ಗದ್ದೆಯ ಕೆಸರಿನಲ್ಲಿ ಕೈಗಳನ್ನು ಹುಗಿದು ನೆಟ್ಟಿಯ ಸಮಯದಲ್ಲಿ ಭತ್ತದ ಸಸಿಯನ್ನು ನೆಡುತ್ತಿದ್ದುದು ನೆನಪಾಯಿತು. ಹಳ್ಳಿಗೆ ಹೋಗುವ ಮುಂಚೆ ಮಹೇಶ್ವರಯ್ಯನ ಜೊತೆ ಗೌರಿ ದೇಶಪಾಂಡೆಯನ್ನು ನೋಡಲು ಹೋಗಿದ್ದ. ಪರೀಕ್ಷೆಗೆಂದು ಓದುತ್ತಿದ್ದವಳು ಹೊರಗೆ ಬಂದು ಸ್ವಾಗತಿಸಿದ್ದಳು. ಅವಳ ತಲೆ ಬಾಚದೆ ಕೆದರಿಕೊಂಡಿತ್ತು. ಓದುತ್ತಿದ್ದುದರಿಂದ ಮುಖ ಬಾಡಿತ್ತು. ನಿಸ್ಸಹಾಯಕಳಾಗಿ ಸುಂದರಳಾಗಿ ಕಂಡಿದ್ದಳು. ನರಕದಿಂದ ಬಂದಿದ್ದ ಕೃಷ್ಣಪ್ಪ ಏನೂ ಮಾತಾಡಲಾರದೆ ಅವಳನ್ನು ನೋಡುತ್ತ ನಿಂತ. ತನ್ನ ಈಗಿನ ಅನುಭವಗಳಿಂದಾಗಿ ಅವಳಿಗೆ ಭಾರವಾಗುತ್ತೇನೆಂದು ಅನ್ನಿಸಿ ಮನಸ್ಸು ಕಲ್ಲಾಯಿತು.

“ಇವರು ಮಹೇಶ್ವರಯ್ಯ. ಹಳ್ಳಿಗೆ ಹೋಗೋ ಮುಂಚೆ ನಿಮ್ಮನ್ನು ಬಂದು ನೋಡಾಣ ಅನ್ನಿಸ್ತು” ಎಂದ.

ಅನಸೂಯಾಬಾಯಿ ಕಾಫ಼ಿಯನ್ನು ತಂದು ಉಪಚರಿಸಿದಳು. ಕೃಷ್ಣಪ್ಪ ಇಳಿದು ಕಂದಿದ್ದರ ಕಾರಣ ಕೇಳಿದರು. ಮಹೇಶ್ವರಯ್ಯನೇ ಕೃಷ್ಣಪ್ಪನಿಗೆ ಮುಜುಗರವಾಗದ ರೀತಿಯಲ್ಲಿ ಸೂಕ್ಷ್ಮವಾಗಿ ಆದದ್ದನ್ನು ವಿವರಿಸಿದರು. ತೇವವಾದ ಕಾತರವಾದ ಕಣ್ಣುಗಳಿಂದ ಗೌರಿ ತನ್ನನ್ನು ಆಗ ನೋಡುತ್ತ ಕೂತಿದ್ದಳಲ್ಲವೆ?

“ಪರೀಕ್ಷೆ ಮುಗಿಸಿ ನಮ್ಮ ಹಳ್ಳಿಗೆ ಬಂದು ಹೋಗಿ”

ಕೃಷ್ಣಪ್ಪ ಉಪಚಾರದ ಧ್ವನಿಯಲ್ಲಿ ಹೇಳಿದ್ದ. ಯಾಕೆ ಒತ್ತಾಯಪೂರ್ವಕವಾಗಿ ಹೇಳಲಾಗಲಿಲ್ಲ ತನಗೆ? ಗೌರಿ ತನ್ನ ಹಗುರಾದ ಮಾತಿನಿಂದ ನಿರಾಶಳಾದಂತೆ ಕಂಡಳು ಅಲ್ಲವೆ? ಈ ಸೂಕ್ಷ್ಮಗಳೆಲ್ಲ ಈಗ ಕೃಷ್ಣಪ್ಪನನ್ನು ಬಾಧಿಸುತ್ತವೆ. ನನ್ನ ಜೀವನ ಹೊರಳಿಕೊಳ್ಳುವ ಸಮಯದಲ್ಲಿ ಎಲ್ಲ ಸಾಧ್ಯತೆಗಳಿಗೂ ತಾನು ಪೂರ್ಣ ಎಚ್ಚರದಿಂದ ತೆರೆದುಕೊಂಡಿದ್ದೆನೋ ಇಲ್ಲವೋ ಎಂದು ಅನುಮಾನವಾಗುತ್ತದೆ. ಯಾವ ಕಾರಣದಿಂದ ತಾನು ಆಗ ಆಡಬೇಕಾದ್ದನ್ನು ಆಡಲಾರದೆ ಹೋದೆ? ನೀನು ಬೇಕು ಎಂದು ಹೇಳಿಕೊಳ್ಳಲಾಗದ ಗರ್ವವೆ? ಒಡನಾಡಿಗಾಗಿ ಹಾತೊರೆಯಬಾರದೆಂಬ ತನ್ನ ನಿಷ್ಠುರ ವ್ರತವೆ ಅಥವಾ ವಾರಂಗಲ್‌ನ ಪೋಲೀಸ್ ಠಾಣೆಯ ನರಕದಿಂದ ಎದ್ದು ಬಂದ ತಾನು ಪ್ರೇತದಂತಿದ್ದೆ ಎಂದು ಅನ್ನಿಸಿದ್ದೆ? ಹೌದು -ತನ್ನ ದೇಹ ಮಲಿನವಾಗಿದೆ ಎನ್ನಿಸಿತ್ತು -ಶುಭ್ರವಾದ ಕಾಂತಿಯ ಕೆದರಿದ ತಲೆಯ ಗೌರಿಯನ್ನು ನೋಡುತ್ತ ನಿಂತಂತೆ. ಅವಳು ಮೂಕವಾಗಿ ನಿಂತದ್ದು ನೋಡಿ,

“ನೀವೇನು ಮುಂದೆ ಮಾಡ್ತೀರಿ?”

ಎಂದು ಕೃಷ್ಣಪ್ಪ ಕೇಳಿದ್ದ. ಪ್ರಾಯಶಃ ತನ್ನ ಪ್ರಶ್ನೆಯ ಗತ್ತು ಲೋಕಾಭಿರಾಮವಾಗಿತ್ತೆಂದು ಗೌರಿಗೆ ದುಃಖವಾಗಿರಬೇಕು. ಅವಳೇನೂ ಅದಕ್ಕೆ ಉತ್ತರಕೊಡಲಿಲ್ಲ.

“ಯಾಕೋ ನಾಗೇಶ, ನಾವು ತೀವ್ರವಾಗಿ ಪ್ರೀತಿಸಿದ್ದನ್ನು ಪಡೆಯೋ ಧೈರ್ಯ ಮಾಡಲ್ಲ? ಪಡೆದ ಮೇಲೆ ಅದು ಅಷ್ಟೇ ಅಮೂಲ್ಯವಾಗಿ ಉಳಿಯಲ್ಲ ಅಂತ ಭಯವ?”

ನಾಗೇಶನ ಅಳವಿಗೆ ಈ ಪ್ರಶ್ನೆ ಮೀರಿತ್ತು. ಆದರೆ ಕೃಷ್ಣಪ್ಪ ಏನು ಯೋಚಿಸುತ್ತಿರಬಹುದೆಂದು ಊಹಿಸಿ ಹೇಳಿದ.

“ಗೌರಿ ದೇಶಪಾಡೆಯವರಿಗೆ ಬರಲಿಕ್ಕೆ ಬರ್ದಿದೀನಿ ದೆಹಲಿ ವಿಳಾಸಕ್ಕೆ”

ಕೃಷ್ಣಪ್ಪ ಕಾತರವಾದ ಕಣ್ಣುಗಳಿಂದ ನಾಗೇಶನನ್ನೇ ನೋಡಿ ದೀರ್ಘವಾಗಿ ಉಸಿರಾಡಿದ. ಅವಳು ಬರುವ ಮುಂಚೆ ಕಾಲು ಕೈಗಳು ಇನ್ನಷ್ಟು ಚಲಿಸುವಂತಾದರೆ ಎಂದು ಆಸೆಯಾಯಿತು. ಚಲಿಸುವಂತಾದರೆ ಮತ್ತೆ ಹಳ್ಳಿಗೆ ಹೋಗುವೆ. ಕೆಸರಿನಲ್ಲಿ ಕಾಲನ್ನ ಹುಗಿದು ಮತ್ತೆ ಭತ್ತದ ಸಸಿಗಳನ್ನ ನಡುವೆ. ದನ ಮೇಯಿಸುತ್ತ ಕೂತಿರುತ್ತಿದ್ದ ಅಶ್ವತ್ಥದ ಮರದ ಬುಡದಲ್ಲಿ ಮತ್ತೆ ಕೂರುವೆ. ಎದುರಿನ ಪೇರಳೆ ಗಿಡಕ್ಕೆ ಮತ್ತೆ ಪಂಚವರ್ಣದ ಗಿಣಿಗಳು ಬರುವುದಕ್ಕಾಗಿ ಕಾಯುವೆ.

“ಮಹೇಶ್ವರಯ್ಯನು ಬಂದಿದ್ರೆ ಚೆನ್ನಾಗಿರ್ತಿತ್ತೊ”

“ಬರೆಯೋಣ ಅಂದ್ರೆ ಅವರ ವಿಳಾಸವೇ ಇಲ್ವಲ್ಲ.”

“ಅವರು ಹಾಗೇನೇ. ಇದಕಿದ್ದಂತೆ ಬಂದುಬಿಡ್ತಾರೆ. ಮಾರಾಯ್ರಿಗೆ ಈಗ ರೇಸಿನ ಹುಚ್ಚು ಹಿಡಿದುಬಿಟ್ಟಿದೆ. ಬೆಂಗಳೂರಲ್ಲಿ ನಾಳೇಂದ ಸೀಸನ್ ಅಲ್ವ -ಬಂದರೂ ಬಂದರೆ…..” ಎಂದು ಕೃಷ್ಣಪ್ಪ ಮಗ್ಗುಲಾಗಲು ಇಚ್ಛಿಸುತ್ತ ಮಲಗಿದ. ಯಾವತ್ತು ಹೊರಳುವಷ್ಟು ಶಕ್ತಿ ಈ ದೇಹಕ್ಕೆ ಬರುತ್ತದೊ? ಅಷ್ಟರಲ್ಲಿ ಇನ್ನೊಂದು ಸ್ಟ್ರೋಕ್ ಹೊಡೆದು ಸಾಯಲೂ ಬಹುದು. ಎಲ್ಲೋ ಒಂದು ರಕ್ತದ ಬಿಂದು ಸಿಕ್ಕಿಬಿದ್ದಿದೆ. ಅದು ತಾನಾಗಿಯೇ ಚಲಿಸಲೂ ಬಹುದು, ಚಲಿಸದೆ ಅಲ್ಲೆ ನಿಂತುಬಿಡಲೂ ಬಹುದು. ಪ್ರತಿಕ್ಷಣ ಪ್ರಜ್ಞಾಪೂರ್ವಕವಾಗಿ ಬದುಕುವುದಷ್ಟೇ ಈಗ ನನಗೆ ಉಳಿದದ್ದು. ಅನಾಮತ್ತಾಗಿ ಈ ದೇಹ ಈ ಸ್ಥಿತಿಗೆ ಬಂದಿದೆ. ಹೇಳದೆ ಕೇಳದೆ ಎಚ್ಚರಿಕೆ ಕೊಡದೆ.

ಕೃಷ್ಣಪ್ಪನ ಜೀವನದಲ್ಲಿ ಪ್ರವೇಶಿಸಿದ ಯಾರು ಇಡಿಯಾಗಿ ಉಳಿದಿದ್ದಾರೆ, ಯಾರು ಇಲ್ಲ -ಅವನಿಗೆ ತಿಳಿಯುವುದಿಲ್ಲ. ಬಾಹ್ಯದಲ್ಲಿ ನೋಡಿ ಯಾರು ಹೇಗೆ ಎಂದು ಹೇಳುವುದು ಶಕ್ಯವಲ್ಲ. ಉದಾಹರಣೆಗೆ ಉಮೆ? ಅಣ್ಣಾಜಿಯ ಸಾವಿನಿಂದ ಅವಳಿಗೆ ಆದ ಆಘಾತ ಕೃಷ್ಣಪ್ಪನಿಗೆ ಮಾತ್ರ ಗೊತ್ತು. ಅವಳು ಯಾರಿಗೂ ಹೇಳಿಕೊಳ್ಳಲಾರದೆ ಆರೋಗ್ಯವಿಲ್ಲೆಂಬ ನೆವ ಹೂಡಿ ತವರಿಗೆ ಹೋಗಿದ್ದಳು. ಆಗ ಅವಳು ಬಸುರಿ. ಅಂದರೆ ಅಣ್ಣಾಜಿಯ ಮಗ ಈಗ ಬೆಳೆದಿದ್ದಾನೆ. ಮೋಟಾರ್ ಸೈಕಲ್ ಮೇಲೆ ಹಿಪ್ಪಿಯ ಹಾಗೆ ಕೂದಲು ಬಿಟ್ಟು ಅವನು ವಿಜೃಂಭಿಸುವುದನ್ನು ಕೃಷ್ಣಪ್ಪ ಕಂಡಿದ್ದಾನೆ. ಅವನಾದ ಮೇಲೆ ಉಮೆಗೆ ಇನ್ನೆರಡು ಮಕ್ಕಳಾಗಿದ್ದಾವಂತೆ. ಅವಳ ಗುಟ್ಟನ್ನು ಇಷ್ಟು ದಿನ ಕೃಷ್ಣಪ್ಪ ಮುಚ್ಚಿಟ್ಟುಕೊಂಡಿದ್ದಾನೆ. ತನ್ನ ಜೀವನಚರಿತ್ರೆ ಬರೆಸುವಾಗ ಈ ಘಟನೆಯನ್ನು ನಾಗೇಶನಿಗೂ ಅವನು ಹೇಳಿಲ್ಲ. ಪ್ರಾಯಶಃ ಅಣ್ಣಾಜಿಯ ಮನಸ್ಸು ರಾಜಕೀಯದಿಂದ ವಿಮುಖವಾಗಿ ದಾಂಪತ್ಯದ ನೆಮ್ಮದಿಯನ್ನು ಬಯಸಿದ್ದಾಗ ಅವನನ್ನು ಕೊಂದರು. ಅವನ ಆಯ್ಕೆಯಾದರೂ ಪ್ರಜ್ಞಾಪೂರ್ವಕವಾಗಿತ್ತೆ ಎಂದು ಅನುಮಾನವಾಗುತ್ತದೆ. ಆದರೆ ಸತ್ತಿದ್ದರಿಂದ ಅವನು ತನ್ನ ಪ್ರಶ್ನೆ ಅನುಮಾನಗಳಿಗೆ ಅತೀತನಾಗಿ ನಿಂತಂತೆಯೂ ಅನ್ನಿಸುತ್ತದೆ. ತಾನು ಕಂಡ ಒಬ್ಬ ದ್ರಷ್ಟಾರನೆಂದರೆ ಅವನೇ. ಎಷ್ಟೊಂದು ಕ್ಷುಲ್ಲಕತೆಗೆ ಒಳಗಾಗಿದ್ದರೂ ಅವನ ಬುದ್ಧಿ ಮಾತ್ರ ಪ್ರಖರವಾಗಿ ಬೆಳಕು ಬೀರುತ್ತಿತ್ತು. ಅವನು ಬದುಕಿದ್ದಾಗ ಪ್ರಾಮಾಣಿಕತೆಯ ಪ್ರಶ್ನೆ ಕೃಷ್ಣಪ್ಪನನ್ನು ಬಾಧಿಸಿದ್ದರೂ ಈಗ ಅಣ್ಣಾಜಿ ತನಗೆ ಮೀರಿದ್ದಕ್ಕಾಗಿ ದುಡಿದು ಸತ್ತವನಂತೆ ಕಾಣುತ್ತಾನೆ. ಉಮೆ? ಅವಳು ತನಗೆ ಎದುರಾದ್ದನ್ನು ಒಪ್ಪಿಕೊಂಡು ಬದುಕಿದಂತಿದೆ.

ಇನ್ನು ಆ ಬೈರಾಗಿ. ಅವನ ಬಗ್ಗೆ ಮಾತ್ರ ಕೃಷ್ಣಪ್ಪನಿಗೆ ಈಗಲೂ ಅರ್ಥವಾಗುವುದಿಲ್ಲ. ಅವನ ಒಳಬಾಳು ಉಜ್ವಲವಾಗಿ ಉರಿಯುತ್ತಿತ್ತೋ, ಅಥವಾ ಅವನೊಂದು ಠೊಳ್ಳು ತಿರುಳಿನ ತರಕಾರಿಯಂತವನೋ ಹೇಳುವುದು ಹೇಗೆ? ಜನ ಮಾತ್ರ ಅವನನ್ನು ಬಿಡಲಿಲ್ಲ. ಅವನು ಇದ್ದಲ್ಲಿ ಒಂದು ದೇವಸ್ಥಾನ ಕಟ್ಟಿದ್ದಾರೆ. ಕನಸಿನಲ್ಲಿ ಅವನು ಬಂದು ಪ್ರಶ್ನೆಗಳಿಗೆ ಉತ್ತರ ಹೇಳುವನೆಂದು ಪ್ರತೀತಿ ಹಬ್ಬಿ ಎಲ್ಲೆಲ್ಲಿಂದಲೋ ಜನರು ಬರತೊಡಗಿದ್ದಾರೆ. ಅವನು ಮಾತ್ರ ಯಾರ ಹತ್ತಿರವೂ ಮಾತಾಡುವುದಿಲ್ಲ. ನಿತ್ಯ ವಿಧಿಯಂತೆ ಬೆಳಿಗ್ಗೆ ಎದ್ದು ಅವನು ಬೀದಿ ತುದಿ ನಿಂತು ಭಗವದ್ಗೀತೆ ಹಾಡುತ್ತಾನೆ. ತನ್ನ ಆಹಾರ ಸಂಪಾದಿಸಿ ಬೇಯಿಸಿಕೊಂಡು ತಿನ್ನುತ್ತಾನೆ. ಇದು ನಿಂತಿಲ್ಲ. ಆದರೆ ಇದು ಹಿಂದಿನಂತೆ ಸರಳವಾಗಿ ಉಳಿದಿಲ್ಲ. ಅವನು ಹೋಗುವ ಬೀದಿಗೆ ತೋರಣ ಕಟ್ಟಿರುತ್ತದೆ. ಅವನು ಗೀತೆಯನ್ನು ಓದಲು ನಿಲ್ಲುವ ಜಾಗದಲ್ಲಿ ಪ್ಲಾಟ್‌ಫ಼ಾರಮ್ ಹಾಕಿ ಮೈಕನ್ನು ಇಟ್ಟಿರುತ್ತಾರೆ. ಬೈರಾಗಿಯನ್ನು ಸಿದ್ಧೇಶ್ವರ ಎಂದು ಕರೆಯುತ್ತಾರೆ. ಏನನ್ನೂ ಬೈರಾಗಿ ನಿರಾಕರಿಸುವುದಿಲ್ಲ. ಬೇಕೆಂದು ಕೇಳುವುದೂ ಇಲ್ಲ. ಆದರೆ ಜನರ ಅಗತ್ಯ ತನ್ನಿಂದ ಹೀಗೆ ಪೂರೈಕೆಯಾಗುತ್ತಿರುವುದಕ್ಕಾಗಿ ಅವನು ಸಂತೋಷ ಪಡುವಂತೆ ಕಾಣುತ್ತದಲ್ಲವೆ? ಅವನು ಮೈ ಕೈ ತುಂಬಿಕೊಳ್ಳುತ್ತ ಹೋದದ್ದನ್ನು ನೋಡಿದರೆ. ಇಕ್ಕಿದ್ದನ್ನು ಸ್ವೀಕರಿಸುವೆನೆಂಬ ಅವನ ವ್ರತವೇ ವಿಶೇಷವಾದ ಪೌಷ್ಟಿಕ ಆಹಾರ ಅವನಿಗೆ ದೊರೆಯುವಂತೆಯೂ ಮಾಡಿರಬೇಕು.

ಅವನಿಗೆ ಉತ್ತರ ಕೊಡಬೇಕೆನ್ನಿಸುವಂಥ ಪ್ರಶ್ನೆಯನ್ನು ಕೇಳಲು ತನಗೆ ಹೊಳೆಯಲೇ ಇಲ್ಲವೆಂದು ಬಹಳ ಸಾರಿ ಕೃಷ್ಣಪ್ಪ ತನ್ನ ಆಗಿನ ಮನಸ್ಥಿತಿಯ ಬಗೆ ಸಂಶಯಪಡುವುದುಂಟು. ಆಗ ವ್ಯಗ್ರನಾಗಿದ್ದದ್ದು ನಿಜ. ಆದರೆ ಅದಕ್ಕೆ ಕಾರಣವೆಂದು ತನಗೆ ಹೊಳೆಯುತ್ತಿದ್ದುದೆಲ್ಲ ಪೊಳ್ಳಿರಬಹುದು. ಆದ್ದರಿಂದಲೇ ಬೈರಾಗಿ ಹತ್ತಿರ ಪ್ರಶ್ನೆ ಕೇಳಲಾರದೆ ಹೋದೆ ಎಂದುಕೊಳ್ಳುತ್ತಾನೆ. ಬೈರಾಗಿ ಒಂದು ಬಗೆಯಲ್ಲಿ ಕೃಷ್ಣಪ್ಪನಿಗೆ ಹೀಗೆ ತನ್ನನ್ನು ಅಳೆಯುವ ಮಾನದಂಡವಾಗಿ ಕಂಡರೆ ಸರ್ಪ ಅವನ ಗುಹೆಯನ್ನು ಹೊಕ್ಕಾಗ ಅವನಿಗೆದುರಾದ ಹಿಂಸೆಯನ್ನು ಅವನು ತಾಳಲಾರದೆ ಹೋದ ಎಂಬುದು ಕೂರ್ಮರೂಪದ ಅವನ ತಪಸ್ಸಿನ ಬಗ್ಗೆ ಆಳವಾದ ಅನುಮಾನವನ್ನು ಹುಟ್ಟಿಸುತ್ತದೆ. ಎಲ್ಲ ಸಾಧ್ಯತೆಗಳಿಗೂ ಚುರುಕಾಗಿ ಸ್ಪಂದಿಸುತ್ತ ಬದುಕಬೇಕೆನ್ನುವ ಕೃಷ್ಣಪ್ಪನ ಆದರ್ಶಕ್ಕೆ ಅವನು ಕಂಡಿದ್ದರಲ್ಲಿ ಯಾವುದೂ ಸರಿಸಾಟಿಯಿಲ್ಲವೆನಿಸುತ್ತದೆ.

ತನ್ನಲ್ಲಿ ಬಿರುಕು ಎಲ್ಲಿ, ಹೇಗೆ ಕಾಣಿಸಿಕೊಂಡಿತು? ಸಾಯುವ ಮುಂಚೆ ಇದನ್ನು ತಿಳಿಯಬೇಕು. ಅಷ್ಟೇ ಉಳಿದದ್ದು ತನ್ನ ಪಾಲಿಗೆಂದು ಯೋಚಿಸುತ್ತಲೇ ತನ್ನ ಪಾರ್ಶ್ವಕ್ಕೆ ಪ್ರಾಣ ಶಕ್ತಿಯನ್ನು ಹರಿಸಲು ಉದ್ಯುಕ್ತನಾಗುತ್ತಾನೆ.

“ನಾಗೇಶ ನನ್ನ ಅಮ್ಮನನ್ನು ಕರಕೊಂಡು ಬರಕ್ಕೆ ಯಾರನ್ನಾದರೂ ಕಳಿಸಬೇಕಲ್ಲೊ -”

“ನಾನೇ ಹೋಗಿ ಬರಲ ಗೌಡರೆ?”

“ಬೇಡ ನೀನಿಲ್ಲಿ ಇರೋದು ಅಗತ್ಯ. ನಿನ್ನ ಸ್ನೇಹಿತರಲ್ಲಿ ಯಾರನ್ನಾದರೂ ಕಳಿಸು.”
*
*
*
ಮನೆಯ ಹೊರಗೆ ಕಾರು ಬಂದು ನಿಂತಿತು. ಅದರಿಂದ ವೀರಣ್ಣ ಇಳಿದ. ಖಾದಿ ಸಿಲ್ಕಿನ ಕ್ಲೋಸ್ ಕಾಲರ್ ಕೋಟು ಪ್ಯಾಂಟು ತೊಟ್ಟ ವೀರಣ್ಣನಿಗೆ ಸುಮಾರು ಅರವತ್ತು ವರ್ಷಗಳಿರಬಹುದು. ಬೆಂಗಳೂರಿನ ಎರಡು ದೊಡ್ಡ ಹೋಟೆಲುಗಳ, ಮೂರು ಥಿಯೇಟರುಗಳ ಮಾಲಿಕ ಈ ವೀರಣ್ಣ. ಅವನ ತಂದೆ ಒಬ್ಬ ಸಣ್ಣ ಕಂಟ್ರಾಕ್ಟರ್ ಆಗಿದ್ದವನು. ವೀರಣ್ಣ ತನ್ನ ಚಾಕಚಕ್ಯತೆಯಿಂದ ಲಕ್ಷಾಧೀಶನಾಗಿ ಬೆಳೆದಿದ್ದ. ತಿರುಪತಿಯ ವೆಂಕಟರಮಣನ ಪರಮಭಕ್ತನಾದ ವೀರಣ್ಣ ದೇಶವಿದೇಶಗಳಲ್ಲಿ ಅವನ ದೇವಾಲಯಗಳನ್ನು ಕಟ್ಟಿಸುವುದಕ್ಕೆ ಮುಂದಾಗಿದ್ದ. ಸೋಷಲಿಸ್ಟ್ ನಾಯಕನೆಂದೂ, ಶ್ರೀಮಂತವರ್ಗದ ವಿರೋಧಿಯೆಂದೂ ಹೆಸರಾದ ಕೃಷ್ಣಪ್ಪನನ್ನು ಈ ವೀರಣ್ಣ ಆರಾಧಿಸುವುದನ್ನು ಕಂಡು ಎಲ್ಲರೂ ಬೆರಗಾಗಿದ್ದರು. ಎಂಥೆಂಥ ಮಂತ್ರಿಗಳೂ ವೀರಣ್ಣನ ಕೃಪೆಗೆ ಕೈಯೊಡ್ಡುವಾಗ, ಯಾವುದನ್ನೂ ಯಾರ ಹತ್ತಿರವೂ ಬೇಡದ ಗರ್ವಿಷ್ಠ, ಕೃಷ್ಣಪ್ಪನ ಬಳಿ ಮಾತ್ರ ವೀರಣ್ಣ ಅತ್ಯಂತ ವಿನಯದಿಂದ ನಡೆದುಕೊಳ್ಳುವನು. ಕೃಷ್ಣಪ್ಪನಿಗೆ ಸ್ಟ್ರೋಕ್ ಹೊಡೆದಾಗ ಅವನು ವಾಸವಾಗಿದ್ದುದು ಗಾಂಧೀ ಬಜ಼ಾರಿನ ಹತ್ತಿರವಿದ್ದ ಒಂದು ಹಳೆಯ ಮನೆಯಲ್ಲಿ. ರೆಂಟ್ ಕಂಟ್ರೋಲಿಂದ ಪಡೆದಿದ್ದ ಮನೆ ಅದು. ತಿಂಗಳಿಗೆ ಒಂದು ನೂರು ರೂಪಾಯಿ ಬಾಡಿಗೆ. ಮನೆಯಿಂದ ಹೊರಕ್ಕೆ ಕಕ್ಕಸು. ಕೃಷ್ಣಪ್ಪನಿಗೆ ಇದು ತೀರಾ ಅನಾನುಕೂಲವೆಂದು ವೀರಣ್ಣ ಸದಾಶಿವನಗರದಲ್ಲಿರುವ ತಾನು ಬಾಡಿಗೆಗೆ ಕೊಟ್ಟಿರುವ ಫ಼್ಲಾಟುಗಳಲ್ಲಿ ಒಂದನ್ನು ತೆಗೆದುಕೊಳ್ಳುವಂತೆ ಬೇಡಿಕೊಂಡ. ಕೃಷ್ಣಪ್ಪನ ಹೆಂಡತಿ ಸೀತೆಯೂ ಅದು ತನ್ನ ಬ್ಯಾಂಕಿಗೆ ಹತ್ತಿರವೆಂದು ವಾದಿಸಿದಳು. ಆದರೆ ತನಗೆ ಎಂ.ಎಲ್.ಎ ಆಗಿ ಬರುವ ಸಂಬಳದಲ್ಲಿ ನೂರು ರೂಪಾಯಿಗಿಂತ ಹೆಚ್ಚಿನ ಬಾಡಿಗೆಯ ಮನೆಯಲ್ಲಿ ಇರುವುದು ಸಾಧ್ಯವೇ ಇಲ್ಲವೆಂದು ಕೃಷ್ಣಪ್ಪ ನಿರಾಕರಿಸಿದಾಗ –

“ಹಾಗಾದರೆ ನೂರೇ ನನಗೆ ಬಾಡಿಗೆ ಕೊಡಿ -ಸಾಕು”

ಎಂದು ವೀರಣ್ಣ ಪ್ರಾರ್ಥಿಸಿದ.

“ಆದರೆ ಅದಕ್ಕೆಷ್ಟು ಬಾಡಿಗೆ? ಏಳುನೂರು ಅಲ್ವ ವೀರಣ್ಣ?”

“ನಾನೇನು ಮಾಡ್ಬೇಕಾಗಿದೆ ಅಷ್ಟು ದುಡ್ಡು ತಗೊಂಡು? ನಾನೇನು ನಿಮಗೆ ಪುಗಸಟ್ಟೆಗೆ ಕೊಡ್ತ ಇಲ್ವಲ್ಲ?”

ಕೃಷ್ಣಪ್ಪ ತಾನಿದ್ದ ಅಸಹಾಯಕ ದೈಹಿಕ ಪರಿಸ್ಥಿತೀಲಿ ಫ಼್ಲಾಟಿಗೆ ಒಲ್ಲದ ಮನಸ್ಸಿಂದ ಬಂದಿದ್ದ. ಸೀತೆ ಪ್ರತಿನಿತ್ಯ ರಗಳೆ ಮಾಡುವುದು ತಪ್ಪುವುದಲ್ಲ ಎಂಬುದೂ ಹೀಗೆ ಬರಲು ಕಾರಣವಾಗಿತ್ತು. ಗೌರಿಗೆ ಹತ್ತಿರದಲ್ಲೇ ಇಂಗ್ಲಿಷ್ ನರ್ಸರಿ ಬೇರೆ ಇತ್ತೆಂದು ಸೀತೆಗೆ ಸಂತೋಷವಾಗಿತ್ತು.

ಕೃಷ್ಣಪ್ಪನಿಗೆ ಸ್ಟ್ರೋಕ್ ಹೊಡೆದಾಗ ದೇಶದಲ್ಲಿ ಅವನೆಷ್ಟು ದೊಡ್ಡ ಮನುಷ್ಯನೆಂಬುದು ಎಲ್ಲರಿಗೂ ಪ್ರತ್ಯಕ್ಷವಾಗಿ ಗೊತ್ತಾಗಿತ್ತು. ರಾಜ್ಯಪಾಲರೇ ಸ್ವತಃ ಹಾಸ್ಪಿಟಲ್‌ಗೆ ಬಂದು ಅವನನ್ನು ನೋಡಿದ್ದರು. ಕೃಷ್ಣಪ್ಪ ಅತ್ಯಂತ ಕಟುವಾಗಿ ಟೀಕಿಸುತ್ತಿದ್ದ ಮುಖ್ಯಮಂತ್ರಿ ಬೊಂಬಾಯಿಂದ ಒಬ್ಬ ಸ್ಪೆಶಲಿಸ್ಟನ್ನು ಕರೆಸಿದ್ದ. ದೇಶದ ಎಲ್ಲ ವಿ.ಐ.ಪಿಗಳೂ ಆಸ್ಪತ್ರೆಗೆ ಬಂದು ಅವನನ್ನು ನೋಡಿದ್ದರು.

ತಾನು ಏನನ್ನೂ ಬೇಡದೆ ಎಲ್ಲವೂ ತನಗೆ ದಕ್ಕುತ್ತಿರುವುದನ್ನು ಕಂಡು ಕೃಷ್ಣಪ್ಪನೇ ಬೆರಗಾಗಿದ್ದ. ಯಾವ ಫಲಾಪೇಕ್ಷೆಯೂ ಇಲ್ಲದೆ ವೀರಣ್ಣ ತನ್ನ ಸೇವೆ ಮಾಡುತ್ತಿದ್ದಾನೆಂದು ಕೃಷ್ಣಪ್ಪ ತಿಳಿದ. ಅವನಿಗೆ ತಾನೇನು ಹೆಚ್ಚು ಮಾಡಬಲ್ಲೆ? ಅಲ್ಲದೆ ಕೃಷ್ಣಪ್ಪ ವಿರೋಧಿಸುತ್ತಿದ್ದುದು ವ್ಯವಸ್ಥೆಯನ್ನೇ ಹೊರತಾಗಿ ವ್ಯಕ್ತಿಗಳನ್ನಲ್ಲವಲ್ಲ. ವೀರಣ್ಣ ಕೂಡ ಈ ವ್ಯವಸ್ಥೆಯಲ್ಲಿ ಎಲ್ಲರಂತೆ ಒಬ್ಬನಲ್ಲವೆ?

ಆದರೆ ಹೀಗೆಲ್ಲ ತರ್ಕ ಹೂಡಿಕೊಂಡು ತಾನು ವೀರಣ್ಣನನ್ನು ಒಪ್ಪಿಕೊಳ್ಳತೊಡಗಿದ್ದೆ ಎಂಬುದೇ ಕೃಷ್ಣಪ್ಪನನ್ನು ಆಗೀಗ ಬಾಧಿಸುವುದುಂಟು. ಅವನ ವಿನಯ ಧೂರ್ತಲಕ್ಷಣ ಎಂದು ಅನುಮಾನಿಸುವನು. ಅವನ ಕ್ಷೌರ ಮಾಡಿದ ನುಣುಪಾದ ಮುಖ, ಕಿವಿಯ ಮೇಲಿನ ಕೂದಲು, ಮೂಗಿನ ಮೇಲೆ ಕೂಡಿಕೊಂಡ ಪೊದೆ ಹುಬ್ಬು, ದಪ್ಪವಾದ ಕತ್ತು, ಹತ್ತಿರ ಹತ್ತಿರ ಹೆಜ್ಜೆಯಿಡುತ್ತ ತನ್ನ ಸುತ್ತಲೂ ಅವನು ನಡೆದಾಡುವ ರೀತಿ, ’ಅಮ್ಮ’ ’ಅಮ್ಮ’ ಎಂದು ಸೀತೆಯನ್ನು ಕರೆದು ಅವಳಿಗೆ ತಾನು ಮಾರ್ಕೆಟ್ಟಿಂದ ಕಟ್ಟಿಸಿ ತಂದ ತರಕಾರಿ ಬುಟ್ಟಿಯನ್ನು ಕೊಡುತ್ತ ಅವಳ ಮೆಚ್ಚುಗೆ ಪಡೆಯುವ ಮಾತಿನ ಸೇಳೆ -ಎಲ್ಲವೂ ಕೃಷ್ಣಪ್ಪನಿಗೆ ಕಿರಿಕಿರಿಯನ್ನುಂಟುಮಾಡುವುದು. ತನ್ನ ಕ್ರಾಂತಿಕಾರೀ ವ್ಯಕ್ತಿತ್ವಕ್ಕೆ ಒಲಿದ ನಾಗೇಶನಂಥ ಯುವಕರು ತನ್ನ ಬಳಿ ಇದ್ದಾಗ ಪರಮಾಪ್ತನಂತೆ ಬಂದು ವೀರಣ್ಣ ನಡೆದುಕೊಳ್ಳುವುದು ಕೃಷ್ಣಪ್ಪನಿಗೆ ತುಂಬ ಮುಜುಗರವಾಗಿಬಿಡುವುದು.

“ಹೇಗಿದೀರಿ ಗೌಡರೆ” ಎನ್ನುತ್ತ ವೀರಣ್ಣ ಒಳಗೆ ಬಂದು “ದಿನೇ ದಿನೇ ಇಂಪ್ರೂವ್ ಆಗ್ತಿದೀರಿ ನಮ್ಮ ದೇಶದ ಪುಣ್ಯ” ಎಂದು ಕುರ್ಚಿಯನ್ನೆಳೆದುಕೊಂಡು ಕೂತ. ತನ್ನ ದೇಹಸ್ಥಿತಿ ಬಗ್ಗೆ ಬಂದವರೆಲ್ಲ ಸಾಮಾನ್ಯವಾಗಿ ಸುಳ್ಳನ್ನೇ ಹೇಳುತ್ತಿದ್ದರು. ಕೃಷ್ಣಪ್ಪ ಇಂಥ ಔಪಚಾರಿಕ ಮಾತಿಗೆ ಉತ್ತರ ಕೊಡುವುದಿಲ್ಲ.

“ಸುಮ್ಮನೇ ನೋಡಿ ಹೋಗೋಣ ಅಂತ ಬಂದೆ ಗೌಡರೆ, ಇವತ್ತು ಮಧ್ಯಾಹ್ನ ದೆಹಲೀಂದ ಒಬ್ಬರು ಸ್ಪೆಶಲಿಸ್ಟ್ ಬಂದಿದಾರೆ -ಅವರನ್ನ ಕರ್ಕೊಂಡು ಬಂದು ನಿಮ್ಮನ್ನ ತೋರಿಸ್ತಿದೀನಿ -ಎಕ್ಸ್‌ಪರ್ಟ್ ಒಪೀನಿಯನ್‌ಗೆ. ಅಮ್ಮಾವರೀಗೆ ಕಷ್ಟವಾಗ್ತಿದೇಂತ ನಾಳೇಂದ ಒಬ್ಬರು ನರ್ಸಮ್ಮ ಬಂದು ನಿಮ್ಮನ್ನು ನೋಡ್ಕೊಂಡು ಹೋಗ್ತಾರೆ. ಈಗ ನಾನು ಹೋಗಲ?”

ವೀರಣ್ಣ ಎದ್ದು ನಿಂತು ಹೊರಟ. ರೂಮಿಂದ ಹೊರಗೆ ಹೋದವನು ಏನೋ ನೆನೆಸಿಕೊಂಡು ಹಿಂದಕ್ಕೆ ಬಂದ.

“ಮರೆತೇ ಬಿಟ್ಟೆ ಗೌಡರೆ. ನಿಮಗೊಂದು ಕಾರು ಬೇಕೇ ಬೇಕು. ಅಮ್ಮಾವ್ರಿಗೆ ಮನೆಕೆಲಸಮುಗಿಸಿ ಬ್ಯಾಂಕಿಗೆ ಹೋಗಬೇಕು. ಅಸೆಂಬ್ಲಿ ಶುರುವಾದ ಮೇಲೆ ನಿಮ್ಮನ್ನ ಕರ್ಕೊಂಡು ಹೋಗ್ಲಿಕ್ಕೆ ಬೇಕು. ಟ್ಯಾಕ್ಸಿಗೆ ತುಂಬ ಖರ್ಚಾಗತ್ತೆ. ನನ್ನ ಕಾರಿದೆ ಅನ್ನಿ. ಆದರೆ ಸಮಯಕ್ಕದು ಇರಬೇಕಲ್ಲ? ಆದ್ರಿಂದ ಈ ಫ಼ಾರಂಗೆ ಒಂದು ಸೈನ್ ಮಾಡಿ. ನಿಮಗೊಂದು ಫ಼ಿಯಟ್ಟನ್ನ ಸರ್ಕಾರ ಕೂಡ್ಲೆ ಮಂಜೂರು ಮಾಡಬೇಕು. ಎಂ.ಎಲ್.ಎ ಆಗಿ ನಿಮ್ಮ ಹಕ್ಕು ಅದು…..”

ವೀರಣ್ಣ ಭರ್ತಿ ಮಾಡಿದ್ದ ಅಪ್ಲಿಕೇಶನ್ನನ್ನು ಪೆನ್ನನ್ನು ರೆಡಿಮಾಡಿಕೊಂಡು ಕೃಷ್ಣಪ್ಪನ ಸಹಿ ತೆಗೆದುಕೊಳ್ಲಲು ಅವನ ಮಂಚದ ಮೇಲ್ಭಾಗವನ್ನು ಎತ್ತಲು ಹೋದ.

“ಬೇಡ ವೀರಣ್ಣನೋರೆ. ಕಾರು ತೆಗೆದುಕೊಳ್ಳುವಷ್ಟು ದುಡ್ಡು ನನ್ನ ಹತ್ರ ಇಲ್ಲ.”

“ಅಯ್ಯೋ ದುಡ್ಡು ದುಡ್ಡು. ಯಾಕೆ ಯಾವಾಗ್ಲೂ ದುಡ್ಡಿನ ವಿಷ್ಯ ಮಾತಾಡ್ತೀರಿ? ಅದನ್ನ ನನಗೆ ಬಿಡಿ.”

“ಅದೆಲ್ಲ ಸಾಧ್ಯವಿಲ್ಲ. ಸಾಲ ಮಾಡೋಕೆ ನನಗೆ ಇಷ್ಟವಿಲ್ಲ.”

“ಬ್ಯಾಡ. ಸಾಲ ಮಾಡೋದು ಬ್ಯಾಡ. ನಿಮ್ಮ ಕಾರನ್ನ ನಾನೇ ಕೊಂಡಿಟ್ಟುಕೋತೇನೆ. ನನ್ನ ಮಗನೂ ಒಂದು ಫ಼ಿಯಟ್ಟು ಬೇಕೂಂತ ಸತಾಯಿಸ್ತ ಇದಾನೆ. ಅಷ್ಟುಪಕಾರ ನೀವು ಮಾಡಿದ್ದಕ್ಕೆ ನಾನು ಬೇಕಾದಾಗ ನಿಮಗೆ ಉಪಯೋಗಿಸಿಕೊಳ್ಳಕ್ಕೆ ಕಾರನ್ನ ಕೊಡಬಹುದಲ್ಲ……”

ನಾಗೇಶ ರೂಮಿಂದ ಎದ್ದು ಹೋದ. ತನ್ನ ಮನಸ್ಸು ಈ ವೀರಣ್ಣನ ಉಪಕಾರಕ್ಕೆ ಕೃತಜ್ಞತೆಯಲ್ಲಿ ದುರ್ಬಲವಾಗೋದನ್ನ ಅವನು ಗಮನಿಸಿದ್ದಾನೆ. ತನಗೆ ಸುಲಭವಾಗಲೆಂದು ಅವನು ಹೊರಗೆ ಹೋಗಿದ್ದಾನೆ.

ಕೃಷ್ಣಪ್ಪ ಬೇಡವೇ ಬೇಡ ಎಂದು ತಲೆಯಲ್ಲಾಡಿಸುತ್ತ ವೀರಣ್ಣನಿಗೆ ಹೇಳಿದ.

“ಹೋಗ್ಲಿ ನಿಮಗೆ ಬೇಡ. ಆದರೆ ನನಗೊಂದು ಉಪಕಾರ ಮಾಡಬಹುದಲ್ಲ ನೀವು?”

ಲಕ್ಷಾಧೀಶನಾದ ವೀರಣ್ಣನಿಗೆ ಹತ್ತೋ ಹನ್ನೆರಡೊ ಸಾವಿರ ಕೊಟ್ಟು ಒಂದು ಫ಼ಿಯಟ್ಟನ್ನ ಕೊಳ್ಳುವುದು ಕಷ್ಟವೆ? ಅಷ್ಟಕ್ಕಾಗಿ ಅವನು ತನಗೆ ಕೈಯೊಡ್ಡುವ ಮನುಷ್ಯನೆ? ಆದರೂ ಉಪಕಾರ ಮಾಡಿ ಅನ್ನುವ ರೀತಿಯಲ್ಲಿ ಬೇಡುತ್ತಿದ್ದಾನೆ ಎಂದು ಕೃಷ್ಣಪ್ಪ, ಮೃದುವಾಗಿ ಫ಼ಾರಂಗೆ ಸೈನ್ ಮಾಡಿದ. ವೀರಣ್ಣ ಹೊರಟುಹೋದ ಮೇಲೆ ನಾಗೇಶ ಒಳಗೆ ಬಂದ.

“ಇದೂ ಕೂಡ ಕರಪ್ಶನ್ ಕಣೋ ನಾಗೇಶ. ವೀರಣ್ಣ ಹತ್ತು ಸಾವಿರವಾದ್ರೂ ಈ ಕಾರಿಂದ ಲಾಭ ಮಾಡಿಕೋತಿದಾನೆ. ನನಗೋಸ್ಕರ ಕೊಳ್ತಿದೀನಿ ಅಂತಾನೆ. ನಿಜವಿದ್ರೂ ಇರಬಹುದು……”

“ಬಿಡಿ ಗೌಡರೆ. ಆ ಕಾರೇನು ಅವನಿಗೆ ದೊಡ್ಡದ? ನಿಮ್ಮ ಅಗತ್ಯಕ್ಕೇಂತ ಕೊಳ್ತಿದಾನೆ. ಅಂಥವರು ಮಾಡಬೇಕಾದ ಡ್ಯೂಟಿ ಅದು.”

ನಾಗೇಶನ ಮಾತಿನಿಂದ ಕೃಷ್ಣಪ್ಪನಿಗೆ ಸಮಾಧಾನವಾಯಿತು. ಆದ್ದರಿಂದಲೇ ಕಟುವಾಗಿ ಮಾತಾಡುವುದು ಅವನಿಗೆ ಸುಲಭವಾಯಿತು.

“ನಿಂಗಿನ್ನೂ ಅನುಭವ ಸಾಲದು ನಾಗೇಶ. ನಾನು ಮೆತ್ತಗಾಗ್ತ ಆಗ್ತ ಬಂದಿದೀನಿ. ಒಳಗಿಂದ ಕೊಳೀತ ಇದೀನಿ. ಹತ್ತು ವರ್ಷಗಳ ಹಿಂದೆ ಇಂಥವರ ನೆರಳೂ ನನ್ನ ಹತ್ರ ಸುಳೀತ ಇರ್ಲಿಲ್ಲ”

ಈ ಮಾತಿಂದ ನಾಗೇಶನ ಮೆಚ್ಚುಗೆ ಇನ್ನಷ್ಟು ಹೆಚ್ಚಿದ್ದು ಕಂಡು ತನ್ನ ಬಗ್ಗೆ ಹೇಸಿಗೆ ಪಡುತ್ತ ಕೃಷ್ಣಪ್ಪ ಕಣ್ಣು ಮುಚ್ಚಿ –

“ನನ್ನ ವೀಲ್‌ಚೇರಿನ ಮೇಲೆ ಕೂರಿಸ್ತೀಯ ನಾಗೇಶ. ಹೊರಗ್ಯಾರೋ ಇದಾರೆ ಅವರನ್ನೂ ಕರಕೊ ಸಹಾಯಕ್ಕೆ” ಎಂದ.
*
*
*

ಅಕ್ಟೋಬರ್ ತಿಂಗಳಿನ ಹವೆ ಬೆಂಗಳೂರಿನಲ್ಲಿ ಹಿತವಾಗಿತ್ತು. ಸಿಮೆಂಟಿನ ಅಂಗಳದ ಬಿಸಿಲಲ್ಲಿ ಬರಿದಾದ ಕಾಲನ್ನೂ ಕೈಗಳನ್ನೂ ಕಾಯಿಸಿಕೊಳ್ಳುತ್ತ ಅವುಗಳಲ್ಲಿ ರಕ್ತ ಹರಿಯುವುದನ್ನು ಕಲ್ಪನೆಯಲ್ಲಿ ಅನುಭವಿಸಲು ಯತ್ನಿಸುತ್ತ ಕೃಷ್ಣಪ್ಪ ಕೂತ.

ವಾರಂಗಲ್‌ನಿಂದ ಹಳ್ಳಿಗೆ ಹಿಂದಕ್ಕೆ ಬಂದ ಮೇಲೆ ಸಣ್ಣದೊಂದು ಗುಡಿಸಲು ಕಟ್ಟಿಕೊಂಡು ಮಾವನಿಂದ ತನ್ನ ತಂದೆಗೆ ಸೇರಿದ್ದ ಗದ್ದೆಗಳನ್ನು ಬಿಡಿಸಿಕೊಂಡು ತಾಯಿಯ ಜೊತೆ ಸಂಸಾರ ಹೂಡಿದ್ದ. ಕೊಟ್ಟಿಗೆಯಲ್ಲಿ ಹಾಲು ಕರೆಯುವ ಎರಡು ದನಗಳಿದ್ದವು. ಹೊತ್ತಾರೆ ಎದ್ದು ಕೃಷ್ಣಪ್ಪನೇ ಹಾಲು ಕರೆಯುವುದು. ಈಗ ಜೀವವಿಲ್ಲದಂತಿರುವ ಬೆರಳುಗಳು ಆಗ ದನದ ಮೊಲೆಗಳನ್ನು ಪುಸಲಾಯಿಸಿ ಹಾಲಿಳಿಸಿಕೊಂಡು, ಮೇಲಿನಿಂದ ಕೆಳಕ್ಕೆ ಎರಡೂ ಕೈಗಳಲ್ಲೂ ಎರಡು ಮೊಲೆಗಳನ್ನೂ ಲಯಬದ್ಧವಾಗಿ ಒತ್ತಾಯಪೂರ್ವಕವಾಗಿ, ಆದರೆ ಮೃದುವಾಗಿ ಜಗ್ಗುತ್ತಿದ್ದುದು, ಮೊದಮೊದಲು ಕೈ ಬೇಗ ಬತ್ತುತ್ತಿತ್ತು. ಕ್ರಮೇಣ ಕಪ್ಪು ಬಿಳಿ ಚುಕ್ಕೆಗಳ ಕಾವೇರಿ ಹಿಂಗಾಲನ್ನು ಅಗಲಿಸಿ ನಿಂತು ತನ್ನ ಕೆಚ್ಚಲಿನ ಭಾರ ಕೃಷ್ಣಪ್ಪನ ಲಯಬದ್ಧವಾದ ಎಳೆತಕ್ಕೆ ಧಾರೆಧಾರೆ ಇಳಿಯುವುದನ್ನು ಸುಖಿಸುತ್ತ ದೀರ್ಘವಾಗಿ ಉಸಿರಾಡುತ್ತಿತ್ತು. ಒತ್ತುವಾಗ ಕ್ರಮೇಣ ಮೃದುವಾಗುತ್ತ ಹಾಲಿನಿಂದ ಸೆಟೆದೂ ತರಿತರಿಯಾಗಿಯೂ ಇರುತ್ತಿದ್ದ ಕೆಚ್ಚಲು. ತಾಯಿ ಕಾಯಿಸಿಕೊಟ್ಟ ಹಾಲು ಕುಡಿದು ಕೃಷ್ಣಪ್ಪ ಗದ್ದೆಗೆ ಹೋಗುವನು. ಬೇಸಗೆಯಲ್ಲಿ ಬಾವಿ ಬತ್ತಿ ಕಾಲು ಮುಳುಗುವಷ್ಟು ಮಾತ್ರ ನೀರಿದ್ದಾಗ ಬಾವಿಗೆ ಇಳಿಯುವನು. ಕೆಸರನ್ನು ಬಾಚಿ ಬಾಚಿ ಬಕೆಟ್ಟಿನಲ್ಲಿ ತುಂಬಿದರೆ ಮೇಲಿನಿಂದ ಶೇಷಪ್ಪ ಹಗ್ಗದಲ್ಲದನ್ನು ಎತ್ತಿಕೊಳ್ಳುವನು. ಉಸಿರು ಕಟ್ಟಿದ ಚಿಲುಮೆಗಳನ್ನು ಮುಟ್ಟಿ ಎಬ್ಬಿಸಲು ಕೈಗಳು ಕೆಸರು ಬಾಚುತ್ತ ಬಾಚುತ್ತ ಹಾತೊರೆಯುವುವು. ಮೊರಿಗೆಯಿಂದ ಹೀಗೆ ಕೆಸರು ನೀರು ಎತ್ತುವಾಗ ತಣ್ಣನೆಯ ನೀರಿನ ಚಿಲುಮೆ ಥಟ್ಟನೆ ಪುಟಿದು ಬೆರಳ ತುದಿಗಳಿಗೆ ತಾಕಿ ಇಡೀ ದೇಹವನ್ನು ರೋಮಾಂಚಗೊಳಿಸುವುದು.

“ಯಾಕ್ರೋ ಈ ಕಲ್ಕುಟುಕನ ಪೂಜೆ ಮಾಡ್ಕೊಂಡು ಮಂಕಾಗಿ ಕೂತಿದೀರಿ. ಅದೊಂದು ಕಲ್ಲು ಅಲ್ವ? ಎತ್ತಿ ಬಿಸಾಕಿ. ನಿಮ್ಮನ್ನು ಕಾಡೋ ದೆವ್ವ ಮಠದ ಏಜೆಂಟ್ ನರಸಿಂಹಭಟ್ಟ. ನೀವು ಗೆಯ್ದಿದ್ದನ್ನೆಲ್ಲ ಬಂದು ತಗೊಂಡು ಹೋಗ್ತಾನೆ -”

ಕೃಷ್ಣಪ್ಪ ತನ್ನ ಸುತ್ತಲಿನ ರೈತರಿಗೆ ಹೇಳುವನು. ಇದು ಜೋಯಿಸರ ಕಿವಿ ಮುಟ್ಟುವುದು.

“ಕಿಟ್ಟಪ್ಪ” ಎಂದು ಬಾಳೆಲೆ ಕೇಳುವ ನೆಪದಲ್ಲಿ ಜೋಯಿಸರು ಬಂದು ಚಾವಡಿಯ ಮೇಲೆ ಕೂತು, ಕೃಷ್ಣಪ್ಪ ಕೊಟ್ಟ ಹಾಲು ಕುಡಿದು ಅದೂ ಇದೂ ಮಾತಾಡುತ್ತ, “ಏನೋ ಕಿಟ್ಟಪ್ಪ? ಕಲ್ಕುಟಕ ಬರೀ ಕಲ್ಲು, ಎಸೀರಿ ಅಂದಿಯಂತೆ ಹೌದ?” ಎನ್ನುವರು.

ಜೋಯಿಸರ ಕೃಶವಾದ ಮೈಯನ್ನೂ, ಅವರ ಕುರುಚಲು ಬಿಳಿಗಡ್ಡ ದೊಡ್ಡ ಜುಟ್ಟುಗಳ ಮುಖದಲ್ಲಿ ಯಾವಾಗಲೂ ಸೌಮ್ಯವಾಗಿರುವ ಕಣ್ಣುಗಳನ್ನೂ ನೋಡುತ್ತ ಕೃಷ್ಣಪ್ಪ ನಿಧಾನವಾಗಿ ಹೇಳುವನು. ಜೋಯಿಸರು ಬಂದರೆಂದು ಎಲೆಯಡಿಕೆ ಮೆಲ್ಲುತ್ತ ತಾಯಿಯೂ ಚಾವಡಿಯಲ್ಲಿ ಕೂತಿರುವಳು.

“ನೀವೂ ನರಸಿಂಹ ದೇವರ ಒಕ್ಕಲಾಗಿದ್ದಿರಿ ಅಲ್ವ? ಅದು ಹೇಗೆ ನಿಮ್ಮ ತೋಟ ಕಳಕೊಂಡಿರಿ ಹೇಳಿ, ಯಾರು ಅದಕ್ಕೆ ಕಾರಣ?”

“ಇರೋದು ನಾನು ನನ್ನ ಹೆಂಡತಿ. ಒಂದಷ್ಟು ಪೆನ್ಶನ್ ಸಿಗುತ್ತೆ. ನಿನ್ನ ಮಾವ ಮತ್ತು ನಾಲ್ಕೈದು ಗೌಡರ ಮನೇವ್ರು ಏನೋ ಜ್ಯೋತಿಷ್ಯ ಹೇಳ್ತಾನಲ್ಲ, ಊರಲ್ಲೊಬ್ಬ ಬ್ರಾಹ್ಮಣ ಇರಲಿ ಅಂತ ಮನೇಗೆ ಬೇಕಾದ ಸೌದೆ, ಅಕ್ಕಿ, ತರಕಾರಿ, ಬಾಳೆಲೆ, ಹಣ್ಣು ಹಂಪಲು ಒದಗಿಸ್ತೀರಿ. ನಂಗೆ ಯಾಕೆ ತೋಟ ಬೇಕು ಹೇಳು?”

“ಸರಿ ಜೋಯಿಸ್ರೆ. ನರಸಿಂಹ ದೇವರ ಮಠದ ಏಜೆಂಟ್ ಭಟ್ಟ ಇದಾನಲ್ಲ ಅವ ಅಲ್ವ ನಿಮ್ಮನ್ನ ತೋಟದಿಂದ ಬಿಡಿಸಿ ತನ್ನ ಸ್ವಂತ ಸಾಗುವಳೀಂತ ಇಟ್ಟುಕೊಂಡದ್ದು?”

“ಗೇಣಿ ಸಂದಾಯ ಆಗ್ಲಿಲ್ಲಾಂತ ಇಟ್ಕೊಂಡ. ಸರಿ. ಅದನ್ನ ತಪ್ಪಿಸಕ್ಕಾಗತ್ತ?”

“ಆಗತ್ತೆ ಜೋಯಿಸ್ರೆ.”

“ಈಗಿನ ಕಾನೂನುಗಳು ನನಗೆ ಗೊತ್ತಿಲ್ಲಪ್ಪ. ಆದರೆ ಕೋರ್ಟು ಮೆಟ್ಟಿಲು ಹತ್ತಿ ಉದ್ಧಾರವಾದವ್ರನ್ನ ನಾನು ಕಾಣೆ. ನಾನು ಕೇಳಿದ ಪ್ರಶ್ನೆಗೂ ನಿನ್ನ ಈ ಪಾಟೀಸವಾಲಿಗೂ ಯಾಕೋ ನನಗೆ ಸಂಬಂಧಾನೇ ಹೊಳೀಲಿಲ್ಲ.”

“ಸಂಬಂಧ ಇದೆ -”

“ಹಾಗಾದರೆ ಹೇಳು ಮಾರಾಯ. ಶಿಷ್ಯಾದಿಚ್ಛೇತ್‌ಪರಾಜಯಂ ಅಂತಾರೆ”

“ಹೇಗೇಂದ್ರೆ ಜೋಯಿಸರೆ -ಇಗ ನೋಡಿ ಕಲ್ಕುಟಕನ್ನ ನಂಬಿಕೊಂಡು ಈ ನಮ್ಮ ಮೂರ್ಖ ಶೂದ್ರ ಜನ ಆ ನರಸಿಂಹ ಭಟ್ಟನಿಗೆ ಹೆದರ್ತಾರೆ. ತಮ್ಮ ಐಹಿಕ ಪಾಡಿನಲ್ಲಿ ಏನೂ ಮಾರ್ಪಾಟಾಗಲಿಕ್ಕೆ ಸಾಧ್ಯವಿಲ್ಲ ಅಂದುಕೋತಾರೆ. ಆ ಕುರಿ ಕೋಳೀ ತಿನ್ನೊ ಕಲ್ಕುಟಕನೇ ತಮ್ಮನ್ನ ಉದ್ಧಾರ ಮಾಡಬೇಕೂಂತ ತಿಳೀತಾರೆ.”

“ನಿಮ್ಮ ಜನಾನೂ ನಿರಾಕಾರ ನಿರ್ಗುಣ ಬ್ರಹ್ಮನನ್ನು ಅರಿಯೋ ಮಟ್ಟಕ್ಕೆ ಬರಬೇಕೂಂತ ಅನ್ನೋದನ್ನ ನಾನೂ ಒಪ್ತೀನೋ ಕಿಟ್ಟಣ್ಣ. ಧರ್ಮಕರ್ಮಗಳ ಮುಖೇನ ಅವರು ಮೇಲಕ್ಕೆ ಬರಬೇಕೇ ವಿನಹ -”

“ಅದಲ್ಲ ನಾನು ಹೇಳ್ತಿರೋದು ಜೋಯಿಸ್ರೆ -ಕೇಳಿ. ನರಸಿಂಹಭಟ್ರನ್ನ ಎದುರಿಸಿ ಅವರು ತಮ್ಮ ಐಹಿಕ ಬದುಕನ್ನ ಊರ್ಜಿತಗೊಳಿಸಿಕೊಂಡರೆ ಕ್ರಮೇಣ ಈ ಕುರಿಕೋಳಿ ತಿನ್ನೊ ದೆವ್ವಗಳ ಪೂಜೇಂದ ಮುಕ್ತರಾಗ್ತಾರೆ. ಆದರೆ ನರಸಿಂಹಭಟ್ಟನನ್ನ ಧಿಕ್ಕರಿಸಿ ನಡಕೊಳ್ಳೋಕೆ ಈ ಕಲ್ಕುಟಕನಲ್ಲಿರೋ ನಂಬಿಕೆ ಅಡ್ಡ ಬರತ್ತಲ್ಲ ಹೇಳಿ. ಆದ್ರಿಂದ ನಂಗೆ ಎದ್ದಿರೋ ಪ್ರಶ್ನೆ ಕಲ್ಕುಟಕನನ್ನ ಅವರು ಕಿತ್ತೆಸೆದು, ಅದ್ರಿಂದ ಬಂದ ಧೈರ್ಯದಿಂದ ನರಸಿಂಹ ಭಟ್ಟನ ಡೊಳ್ಳು ಹೊಟ್ಟೆಯನ್ನು ಕರಗಿಸಬೇಕೋ, ಅಥವಾ ಎರಡನೇದನ್ನ ಮೊದಲು ಮಾಡಿ ಕಲ್ಕುಟಕನ್ನ ಪೂಜಿಸೋ ಸ್ಥಿತೀಂದ ಮೇಲೇಳಬೇಕೋ….”

ನರಸಿಂಹಭಟ್ಟನನ್ನ ಏಕವಚನದಲ್ಲಿ ತಾನು ಹೀಯಾಳಿಸಿದ್ದರಿಂದ ಬ್ರಾಹ್ಮಣರಾದ ಜೋಯಿಸರಿಗೆ ಖೇದವಾದದ್ದನ್ನ ಕೃಷ್ಣಪ್ಪ ಗಮನಿಸುತ್ತಾನೆ. ಜೋಯಿಸರೇ ಸ್ವತಃ ನರಸಿಂಹಭಟ್ಟನ ಲೋಭವನ್ನ ಬೇಸರದಿಂದ ಜರೆಯುತ್ತ ಮಠವೇ ಧರ್ಮದ ದಾರಿ ಬಿಟ್ಟ ಮೇಲೆ ಏನು ಗತಿಯೆಂದು ಕೃಷ್ಣಪ್ಪನ ಎದುರು ನಿಟ್ಟುಸಿರಿಟ್ಟದ್ದಿದೆ. ಮಠದ ಸ್ವಾಮಿ ಸೂಳೆಯನ್ನಿಟ್ಟುಕೊಂಡು, ವ್ಯವಹಾರವನ್ನು ತನ್ನ ತಮ್ಮನಾದ ಈ ಭಟ್ಟನ ಕೈಯಲ್ಲಿ ಕೊಟ್ಟು ಜೋಯಿಸರಂಥ ಧರ್ಮಭೀರುಗಳಿಗೆ ಅಸಹ್ಯವಾಗುವಂತೆ ಮಾಡಿದ್ದ. ಅಣ್ಣಾಜಿ ತನ್ನಲ್ಲಿ ಬಿತ್ತಿದ ವಿಚಾರಗಳನ್ನಾಗಲೀ, ಅಥವಾ ತಾನು ವಾರಂಗಲ್ ಠಾಣೆಯಲ್ಲಿ ಕಂಡಿದ್ದ ನರಕವನ್ನಾಗಲೀ ಈ ಬ್ರಾಹ್ಮಣನೆದುರು ಹೇಳಿ ಅವರಿಗೆ ಮನದಟ್ಟು ಮಾಡುವುದು ಅಸಾಧ್ಯವೆಂದು ಕೃಷ್ಣಪ್ಪ ಕೈಬಿಟ್ಟಿದ್ದ. ಆದರೂ ಜೋಯಿಸರು ಮತ್ತು ಅವರ ಹೆಂಡತಿ ಕೃಷ್ಣಪ್ಪನಲ್ಲಿ ತನ್ನವರು ಎಂಬ ಭಾವನೆ ಹುಟ್ಟಿಸುವರು. ಹಳ್ಳಿಗೆ ಬಂದ ಪ್ರಾರಂಭದಲ್ಲಿ ಜೋಯಿಸರು ಚಳಿಯಲ್ಲಿ ಬರೀ ಪಂಚೆಯುಟ್ಟು ಧೋತ್ರ ಹೊದ್ದಿರುವುದನ್ನು ಕಂಡು ಕೃಷ್ಣಪ್ಪ ಅವರಿಗೊಂದು ಉಣ್ಣೆಯ ಶಾಲು ತಂದುಕೊಟ್ಟು ರುಕ್ಮಿಣಿಯಮ್ಮನ ಕಣ್ಣುಗಳಲ್ಲಿ ಬೆಳಕನ್ನೂ ನೀರನ್ನೂ ಉಕ್ಕುವಂತೆ ಮಾಡಿದ್ದ.

ಮಾಂಸ ತಿನ್ನದ್ದರಿಂದ ಕೃಷ್ಣಪ್ಪ ಜೋಯಿಸರಿಗೆ ಇನ್ನಷ್ಟು ಆತ್ಮೀಯನಾಗಿದ್ದ. ಈ ಲೋಕದಲ್ಲಿ ಈಗಲೂ ಮಳೆ ಬೆಳಯಾಗುತ್ತಿರುವುದು ಕೆಲವೇ ಕೆಲವು ಬ್ರಾಹ್ಮಣರಾದರೂ ತ್ರಿಕಾಲ ಸಂಧ್ಯಾವಂದನೆ ಮಾಡುತ್ತಿರುವುದರಿಂದ ಎಂಬ ಜೋಯಿಸರ ತಿಳುವಳಿಕೆಯನ್ನು ಪ್ರೀತಿಯಿಂದ ಕೃಷ್ಣಪ್ಪ ಸಹಿಸಿಕೊಳ್ಳುವನು. ತನ್ನ ಜಪತಪಾದಿಗಳಿಂದ ಕೃಷ್ಣಪ್ಪ ಶ್ರೇಯೋವಂತನಾಗುತ್ತಿದ್ದಾನೆ ಎಂದು ಜೋಯಿಸರು ತಿಳಿದಿದ್ದಾರೆಂದು ಕೃಷ್ಣಪ್ಪನಿಗೆ ಗೊತ್ತು. ಅದನ್ನೂ ಅವನು ಸಹಿಸಿಕೊಳ್ಳುವನು. ಅವರ ಜಪತಪದ ಫಲವಾದ ಈ ತಾನು ನರಸಿಂಹ ಭಟ್ಟ ಎಷ್ಟೇ ಕೊಳಕನಾದರೂ ಅವನಿಗೆ ಪೂರ್ವಜನ್ಮದ ಪುಣ್ಯದಿಂದ ಲಭಿಸಿದ ಬ್ರಾಹ್ಮಣ್ಯಕ್ಕೆ ಚೂರೂ ಮರ್ಯಾದೆ ಕೊಡದೇ ಇರುವುದು ಜೋಯಿಸರಿಗೆ ಸಮಸ್ಯೆಯಾಗಿದೆ ಎಂದೂ ಅವನಿಗೆ ಗೊತ್ತಿದೆ.

ವಸೂಲಿಯ ಕಾಲ ಬಂತೆಂದರೆ ನರಸಿಂಹಭಟ್ಟ, ಅವನ ಕಡೆ ಅಮೀನ, ಅವನ ಶಾನುಭೋಗ ಹಳ್ಳಿಯ ರೈತರಿಗೆ ಸಿಂಹಸ್ವಪ್ನವಾಗಿಬಿಡುವರು. ಈ ಸಾರಿ ಒಂದು ಘಟನೆ ನಡೆಯಿತು. ಸಂದಾಯವಾಗಬೇಕಿದ್ದ ಗೇಣಿಯನ್ನು ಕೊಡಲಿಲ್ಲೆಂದು ಬೀರೇಗೌಡ ಎಂಬ ರೈತನ ಮನೆಯನ್ನು ನರಸಿಂಹಭಟ್ಟ ತನ್ನ ಜವಾನರ ಜೊತೆಗೆ ಸ್ವತಃ ನುಗ್ಗಿದ. ಬೀರೇಗೌಡನ ಮಗುವಿಗೆ ಜ್ವರ ಬಂದಿತ್ತು. ಅವನ ಹೆಂಡತಿ ಮಗುವಿಗೆಂದು ಕಂಚಿನ ಪಾತ್ರೆಯಲ್ಲಿ ಹಾಲನ್ನು ಕಾಯಿಸುತ್ತಿದ್ದಳು. ಒಳಗೆಲ್ಲೋ ಅಡಿಕೆಯನ್ನು ಬೀರೇಗೌಡ ಬಚ್ಚಿಟ್ಟಿದ್ದಾನೆ ಎಂಬ ಗುಮಾನಿಯಿಂದ ಒಳಗೆ ನುಗ್ಗಿದ ಭಟ್ಟನಿಗೆ ಬರಿದಾದ ಮನೆ ಕಂಡು ಕಡುಕೋಪ ಬಂತು. ಇನ್ನೆಲ್ಲೊ ಅಡಿಕೆಯನ್ನು ಈ ಗೌಡ ಸಾಗಿಸಿದ್ದಾನೆ ಎಂದು ಕಟಕಟನೆ ಹಲ್ಲುಕಡಿಯುತ್ತ ಭಟ್ಟ ಒಳಗಿದ್ದುದನ್ನೆಲ್ಲ ಅಂಗಳಕ್ಕೆ ಎಸೆಯಲು ಜವಾನರಿಗೆ ಹೇಳಿ, ಗೌಡನ ಹೆಂಡತಿ ಕಾಲು ಹಿಡಿದುಕೊಂಡರೂ ಕರಗದೆ, ಒಲೆಯ ಮೇಲಿದ್ದ ಹಾಲನ್ನೂ ಎತ್ತಿಸಿ ಅಂಗಳದಲ್ಲಿ ಚೆಲ್ಲಿಸಿದ್ದ. ಈ ಘಟನೆ ಹಳ್ಳಿಯ ಜನರನ್ನು ಅವಾಕ್ಕಾಗಿಸಿತ್ತು. ಕಿವಿಯಲ್ಲಿ ಒಂಟಿ ತೊಟ್ಟು, ಹಣೆಗೆ ವಿಭೂತಿಯಿಟ್ಟು, ಕಚ್ಚೆಪಂಚೆಯ ಮೇಲೆ ಕರಿಯ ಸರ್ಜ್‌ಕೋಟನ್ನು ಹಾಕಿಕೊಂಡು ಕೈಯಲ್ಲಿ ದೊಣ್ಣೆ ಹಿಡಿದು ನಿಂತ ಉಬ್ಬು ಹಲ್ಲಿನ ಕಡುಕಪ್ಪು ಬಣ್ಣದ ಈ ಭಟ್ಟ ಬೀರೇಗೌಡನಿಗೆ ಯಮನಂತೆ ಕಂಡಿದ್ದ. ಅವತ್ತು ಸಂಜೆಯೇ ಜ್ವರ ಬಂದಿದ್ದ ಮಗು ಸತ್ತಿತು ಬೇರೆ.

ವಾರಂಗಲ್ ಠಾಣೆಯ ಹಿಂಸೆಯ ಬೇರುಗಳನ್ನು ತನ್ನ ಸುತ್ತಮುತ್ತಲೆಲ್ಲ ಕಂಡಿದ್ದ ಕೃಷ್ಣಪ್ಪ ಬೀರೇಗೌಡನ ಮಗುವನ್ನು ಹೂಳಲು ತಾನೇ ಹೋದ. ಅಲ್ಲಿ ನೆರೆದಿದ್ದ ರೈತರಿಗೆ ಹೇಳಿದ: ಮಠದ ಭಟ್ಟ ಪ್ರತಿ ವರ್ಷ ಹೆಚ್ಚು ಹೆಚ್ಚು ಗೇಣಿಯನ್ನು ಪಡೆಯುತ್ತಿದ್ದಾನೆ. ಅವನು ಗೇಣಿಯನ್ನು ಅಳೆಯಲು ತರುತ್ತಿರುವ ಕೊಳಗ ವರ್ಷೇ ವರ್ಷೇ ದೊಡ್ಡದಾಗುತ್ತ ಹೋಗಿದೆ. ಹಿಂದಿನ ಕೊಳಗದಲ್ಲಿ ಮಾತ್ರ ನೀವು ಗೇಣಿ ಅಳೆಯುತ್ತೀರೆಂದು ಹಠ ಮಾಡಿ. ಅವನು ಹಿಂಸೆ ಮಾಡಲು ಬರುತ್ತಾನೆ. ಮೊದಲೇ ನಿಮ್ಮ ಮನೆ ಹೆಂಗಸರಿಗೆ ಒಂದು ಪಾತ್ರೆ ಸಗಣಿ ನೀರನ್ನು ಬೆರೆಸಿ ಅದರಲ್ಲಿ ಪೊರಕೆ ಅದ್ದಿಡಲು ಹೇಳಿ. ಭಟ್ಟ ಒಳನುಗ್ಗಿದರೆ ಪೊರಕೆಯಲ್ಲಿ ಅವನಿಗೆ ಹೊಡೆಯಿರಿ. ಬ್ರಾಹ್ಮಣ ಇದರಿಂದ ಕಂಗಾಲಾಗುತ್ತಾನೆ.

ಮಾರನೇ ದಿನವೇ ಒಬ್ಬ ಬಡಗೌಡನ ಮನೆಯಲ್ಲಿ ಭಟ್ಟನ ಬಿಳಿ ಅಂಗಿ ಸರ್ಜ್‌ಕೋಟಿನ ಮೇಲೆ ಸಗಣಿ ನೀರದ್ದಿದ ಪೊರಕೆಯ ಪ್ರಕ್ಷಾಳನ ನಡೆಯಿತು. ಈ ಸುದ್ದಿ ತಾಲ್ಲೂಕಿನಲ್ಲೆಲ್ಲಾ ಹಬ್ಬಿತು. ಈ ಘಟನೆಯಿಂದ ಅನೇಕ ಬೆಳವಣಿಗೆಗಳಾದುವು.

ಪೋಲೀಸ್ ಸಹಾಯ ಪಡೆದು ಭಟ್ಟ ಒಕ್ಕಲೆಬ್ಬಿಸಲು ಶುರು ಮಾಡಿದ. ರೈತರು ಸಂಘಟಿತರಾಗಿ ತಮ್ಮ ಹೊಲವನ್ನು ಉಳಲು ಹೋದರು. ಅವರನ್ನು ಕಾನೂನಿನ ಪ್ರಕಾರ ಬಂಧಿಸಲಾಯಿತು. ಈ ಸುದ್ದಿ ಹರಡಿ ದೇಶದ ಅನೇಕ ಕಡೆಗಳಿಂದ ಸಮಾಜವಾದಿಗಳು ಬಂದು ಕೃಷ್ಣಪ್ಪನ ಹುಲಿಯೂರಲ್ಲಿ ದಸ್ತಗಿರಿಯಾಗತೊಡಗಿದರು. ಹುಲಿಯೂರು ಇಂಡಿಯಾದಲ್ಲೆಲ್ಲ ಈ ಘಟನೆಯಿಂದ ಕರ್ನಾಟಕದ ತೆಲಂಗಾಣವೆಂದು ಪ್ರಸಿದ್ಧವಾಯಿತು.

ರೈತರು ತಮ್ಮ ಹೋರಾಟದಲ್ಲಿ ಸಂಪೂರ್ಣ ಗೆಲ್ಲದಿದ್ದರೂ ಮಠ ಸ್ವಲ್ಪ ತಣ್ಣಗಾಯಿತು. ಕೊಳಗದ ಗಾತ್ರ ಹಿಗ್ಗುವುದು ನಿಂತು ಐದು ವರ್ಷಗಳ ಹಿಂದಿನ ತನ್ನ ಗಾತ್ರಕ್ಕೆ ಮರಳಿತು. ಈ ಘಟನೆ ಮೂಲಕ ರೈತರೆಲ್ಲರೂ ಸಂಘಟಿತರಾದರು. ಜನರ ಒತ್ತಾಯಕ್ಕೆ ಸಿಕ್ಕಿಬಿದ್ದು ಕೃಷ್ಣಪ್ಪ ಚುನಾವಣೆಗೆ ನಿಂತು ಗೆದ್ದು ಬಂದ. ಇದು ಮೂರನೇ ಬಾರಿ ಅವನು ಅಸೆಂಬ್ಲಿಗೆ ಆಯ್ಕೆಯಾಗಿರುವುದು. ಇಷ್ಟಿಷ್ಟೇ ರೈತರ ಸಮಸ್ಯೆಗಳು ಬಗೆ ಹರಿಯುತ್ತ ಬಂದಿದ್ದರಲ್ಲಿ ಅವನ ಪಾತ್ರ ಮಹತ್ವದ್ದೆಂದು ದೇಶದಲ್ಲಿ ಎಲ್ಲರೂ ಒಪ್ಪಿಕೊಳ್ಳುತ್ತಾರೆ. ಮೊದಲು ಬ್ರಾಹ್ಮಣರ ವಿರುದ್ಧವಿದ್ದ ಸರ್ಕಾರ ಇನಾಂದಾರಿಯನ್ನು ರದ್ದು ಮಾಡಿತು. ಆದರೆ ಜಮೀಂದಾರ ವರ್ಗವಾದ ಒಕ್ಕಲಿಗ ಲಿಂಗಾಯತರು ಅಧಿಕಾರದಲ್ಲಿದ್ದುದರಿಂದ ಭೂ ಹಿಡುವಳಿಗೆ ಸೀಲಿಂಗ್ ಹಾಕುವ ಹೋರಾಟ ಉಗ್ರವಾಗುತ್ತ ಹೋಗಬೇಕಾಯಿತು. ಉಳುವವನೇ ಹೊಲದೊಡೆಯ ಎಂಬ ಸ್ಲೋಗನನ್ನು ಮಾತಿನ ಮಟ್ಟದಲ್ಲಾದರೂ ಸರ್ಕಾರ ಈಗ ಒಪ್ಪಿಕೊಳ್ಳುತ್ತಿದೆ. ಆದರೆ ಎಲ್ಲಾ ಉಳುವವರೂ ಹೊಲದೊಡೆಯರಾಗಿಲ್ಲ. ಈಚೀಚೆಗೆ ಆದವರು ಉಳಿದವರು ಆಗುವುದನ್ನು ಇಷ್ಟಪಡುವುದಿಲ್ಲ.

ಮನುಷ್ಯನ ಸ್ವಾಭಿಮಾನ ಬೆಳೆಯಲು ಈ ಆಸ್ತಿಯ ಹೋರಾಟ ಅಗತ್ಯವೆಂದು ಅಣ್ಣಾಜಿ ಹೇಳಿದ್ದು ಕೃಷ್ಣಪ್ಪ ಗೌಡನ ಅನುಭವಕ್ಕೆ ಬಂದಿದೆ. ಆದರೆ ತಾನು ಮುಳುಗಿರುವ ರಾಜಕೀಯ ಹೋರಾಟ ಕ್ರಮೇಣವಾಗಿ ಮನುಷ್ಯನನ್ನು ಕ್ಷುಲ್ಲಕವಾದ್ದರಿಂದ ಬಿಡುಗಡೆ ಮಾಡುತ್ತದೆನ್ನುವುದರಲ್ಲಿ ಅವನಿಗಿನ್ನೂ ಅನುಮಾನ ಉಳಿದಿದೆ. ಮೂರು ಹೊತ್ತೂ ಜನರ ಮಧ್ಯವಿದ್ದು ಅವರ ಉಪದ್ವ್ಯಾಪಗಳನ್ನು ಕೇಳಿಸಿಕೊಳ್ಳುತ್ತಲೇ ಇರುವುದರಿಂದ ಅವನಿಗೆ ಸುಸ್ತಾಗುತ್ತದೆ. ಒಂಟಿಯಾಗಿರಬೇಕೆಂಬ ಆಸೆ ಮೊಳೆಯುತ್ತದೆ. ಸದಾ ಹೋರಾಟದಲ್ಲಿ ಮಗ್ನನಾಗಿರುವ ತನಗೆ ಪ್ರತಿಕ್ಷಣವೂ ಎಲ್ಲೆಲ್ಲೊ ಸದಾ ಫಲಿಸುತ್ತಲೇ ಇರುವ ಜೀವನದ ಸಣ್ಣ ಖುಷಿಗಳು ಕಾಣದೇ ಹೋಗುತ್ತಿವೆ ಎಂದು ಆತಂಕವಾಗುತ್ತದೆ. ಅವನು ಬಾಡಿಗೆಗಿದ್ದ ಗಾಂಧೀ ಬಜ಼ಾರಿನ ಬಡಾವಣೆಯಲ್ಲಿ ಯಾವತ್ತಾದರೂ ಸಂಜೆ ಒಂಟಿಯಾಗಿರುವುದು ಸಾಧ್ಯವಾದಾಗ ಹೊರಗೆ ಕಾಂಪೌಂಡಿನಲ್ಲಿ ಕೂತು ನೋಡುತ್ತಾನೆ. ಉದ್ದೇಶರಹಿತ ಸಂಭ್ರಮದಲ್ಲಿ ಉದ್ದ ಲಂಗ ತೊಟ್ಟ ಹುಡುಗಿಯರು ಓಡಾಡುವುದು ಕಂಡು ಅಸೂಯೆಯಾಗುತ್ತದೆ. ಜೀವನದಲ್ಲಿ ಮುಂದೆ ಬರುವ ಸಂದಿಗ್ಧಗಳು, ಮಧ್ಯಮವರ್ಗದ ತಾಯಿತಂದೆಯರ ಆತಂಕಗಳು ಅವರನ್ನು ಬಾಧಿಸುವಂತೆ ಕಾಣುವುದಿಲ್ಲ. ಜಡೆಗಳಿಗೆ ಮಲ್ಲಿಗೆ ಮುಡಿದು ಗುಂಪಾಗಿ ಗಲಿಬಿಲಿ ಮಾಡುತ್ತ ದೀಪಗಳ ಕೆಳಗೆ ಮರಗಳ ಕೆಳಗೆ ಅವರ ಒಯ್ಯಾರದ ಅರ್ಧ ತಾಸನ್ನು ಕೃಷ್ಣಪ್ಪ ಅಕ್ಕರೆಯಿಂದ ಗಮನಿಸುತ್ತಾನೆ. ಹುಡುಗರನ್ನು ಕಂಡರೆ ನಾಚುವ ಹುಡುಗಿಯರು ಹಲವರಾದರೆ, ಅವರನ್ನು ಚುಡಾಯಿಸುವವರೂ ಕೆಲವರು. ಕೃಷ್ಣಪ್ಪನನ್ನೆ ಅವನ ಜೊತೆ ಹುಡುಗಿಯರು ಆಫ಼್ರಿಕನ್ ಪ್ರಿನ್ಸ್ ಎನ್ನುತ್ತಿರಲಿಲ್ಲವೆ? ಆದರೆ ಯಾವತ್ತೂ ತಾನು ಮಾತ್ರ ಬಿಗಿ.

ಗೌರಿ ದೇಶಪಾಂಡೆ ಫ಼ಿಲಡೆಲ್ಫಿಯಾದಲ್ಲಿ ಏನು ಮಾಡುತ್ತಿರಬಹುದೆಂದು ಯೋಚಿಸುತ್ತಾನೆ. ಅವಳಿಂದ ಕಾಗದವಿಲ್ಲದೆ, ತಾನು ಬರೆಯದೆ ಬಹಳ ದಿನಗಳಾದವು. ಅವಳೂ ಈಚೆಗೆ ರಾಜಕೀಯದಲ್ಲಿ ಆಸಕ್ತಳಾಗಿದ್ದಾಳಂತೆ. ಅವಳ ಜೊತೆಗಾರ ಮಾರ್ಕ್ಸ್‌ವಾದಿ ಸೋಶಿಯಾಲಜಿಸ್ಟ್ ಅಂತೆ. ಪಾರ್ಲಿಮೆಂಟರಿ ರಾಜಕೀಯದಿಂದ ಇಂಡಿಯಾಕ್ಕೆ ಸುಖವಿಲ್ಲವೆಂದು ಅವಳು ವಾದಿಸುತ್ತಾಳೆ. ಗೌರಿ ಹಿಂದೆ ಹೀಗಿರಲಿಲ್ಲ. ಈಗಿನ ನಿಲುವು ಅವಳು ಕಡ ಪಡೆದದ್ದೋ -ಅಥವಾ ನಿಜವೋ ತಿಳಿಯುವುದಿಲ್ಲ. ಅಂತೂ ಅವಳನ್ನು ಮದುವೆಯಾಗೆಂದು ತಾನು ಕೇಳಲೇ ಇಲ್ಲ ಎಂದು ನೋವಾಗುತ್ತದೆ. ತಾನು ಮದುವೆಯಾಗೆಂದು ಕೇಳಿದ ಲೂಸಿನಾ ಅದನ್ನು ಗಂಭೀರವಾಗಿ ಮನಸ್ಸಿಗೆ ತಂದುಕೊಳ್ಳಲೇ ಇಲ್ಲ. ಆದರೆ ಈ ನೋವುಗಳೂ ಈಗ ತೀವ್ರವಾಗಿ ಉಳಿದಿಲ್ಲ. ಖಾಸಗಿ ವ್ಯಕ್ತಿಯಾಗಿ ತಾನು ಖಾಲಿಯಾಗುತ್ತ ಹೋಗುತ್ತಿದ್ದೇನೆಂದು ಭಯವಾಗುತ್ತದೆ. ಇಲ್ಲವಾದಲ್ಲಿ ನನಗೊಂದು ಒಳಬಾಳು ಇದೆ ಎಂಬುದನ್ನೂ ಚೂರೂ ಅರಿಯಲಾರದ ಸೀತೆಯನ್ನು ಮದುವೆ ಮಾಡಿಕೊಳ್ಳುತ್ತಿದ್ದೆನೆ ಎಂದು ಕಸಿವಿಸಿಯಾಗುತ್ತದೆ. ಗೋಪಾಲ ರೆಡ್ಡಿ ಸತ್ತ ಮೇಲೆ ಒಂಟಿಯಾಗಿರುವುದು ಅಸಾಧ್ಯವೆನ್ನಿಸಿ ಮದುವೆ ಆದದ್ದಲ್ಲವೆ? ಅವನ ಹಿತೈಷಿಗಳು ಊಟ ಉಪಚಾರಗಳನ್ನು ನೋಡಿಕೊಳ್ಳಬಲ್ಲ ಹೆಣ್ಣೆಂದು ಸೀತೆಯನ್ನು ಮದುವೆ ಮಾಡಿಕೊ ಎಂದಾಗ ಅಷ್ಟಕ್ಕೇ ಲಾಯಕ್ಕಾದವಳನ್ನು ಮಾಡಿಕೊಳ್ಳುವುದನ್ನು ಅವನು ಕೂಡ ಬಯಸಿದ್ದ. ಅಂದರೆ ಹೆಣ್ಣಿನ ಸಂಗದಲ್ಲಿ ತೀವ್ರತೆಗೆ ಹೆದರಿ ಸೀತೆಯಂಥವಳನ್ನು ಮದುವೆಯಾಗಿ, ಆಮೇಲೆ ತೀವ್ರತೆ ಬೇಕೆಂದು ಬಯಸುವ ತನ್ನ ವ್ಯಕ್ತಿತ್ವದಲ್ಲಿ ಎಲ್ಲೋ ಕೊರತೆಯಿರಲೇಬೇಕು. ಪ್ರಾಯಶಃ ಅಣ್ಣಾಜಿ ಹೇಳಿದಂತೆ ನಾನು ಫ಼್ಯೂಡಲ್, ಮದುವೆಯ ಅಗತ್ಯವಿಲ್ಲೆಂದು ಕಂಡದ್ದರಿಂದಲೇ ಲೂಸಿನಾ ಜೊತೆ ತೀವ್ರವಾದ ಪ್ರಣಯ ತನಗೆ ಸಾಧ್ಯವಾಗಿದ್ದಿರಬಹುದು. ಮದುವೆಯಲ್ಲಿ ತೊತ್ತನ್ನು ಬಯಸಿದೆನೇ ವಿನಹ ಸಖಿಯನ್ನಲ್ಲ. ಆದ್ದರಿಂದಲೇ ಬಹುಶಃ ಗೌರಿಯನ್ನು ಕಳಕೊಂಡೆ ಎಂದು ಸಿಗರೇಟ್ ಹತ್ತಿಸುತ್ತಾನೆ. ಹುಡುಗರು ಹುಡುಗಿಯರೆಲ್ಲ ಬೀದಿಯಿಂದ ಮರೆಯಾಗುತ್ತಾರೆ. ಪಕ್ಕದ ಮನೆಯಲ್ಲಿ ಮಗು ಮಗ್ಗಿ ಕಲಿಯುತ್ತಿದೆ. ಒಳಗೆ ಸೀತೆ ಏನೋ ಪರಚಿಕೊಳ್ಳುತ್ತಿದ್ದಾಳೆ. ಗಂಡ ಒಂಟಿಯಾಗಿ ಸಿಗೋದೇ ದುರ್ಲಭವಾದ್ದರಿಂದ ಸಿಕ್ಕಿದ ಈ ಸಮಯದಲ್ಲಿ ತನ್ನ ಸಿಟ್ಟನ್ನೆಲ್ಲ ಅವನ ಕಿವಿಗೆ ತಲ್ಪಿಸುತ್ತಿದ್ದಾಳೆ. ಕೃಷ್ಣಪ್ಪ ಒಳಗೆ ಹೋಗಿ ಪ್ರತಿ ಸಂಜೆ ತಾನು ಕುಡಿಯುವ ಕ್ವಾರ್ಟರ್ ವ್ಹಿಸ್ಕಿಯನ್ನು ಎದುರಿಗಿಟ್ಟುಕೊಂಡು ಮೇಜಿನ ಎದುರು ಕೂರುತ್ತಾನೆ.

ಇವತ್ತಾದ್ದು ನಾಳೆ ನೆನಪಿರುವುದಿಲ್ಲ. ದಿನಗಳ ಮೇಲೆ ದಿನಗಳು ಉರುಳುತ್ತವೆ. ಅಸೆಂಬ್ಲಿಯಲ್ಲಿ ಉಗ್ರಭಾಷಣ, ಹೊರಗೆ ಉಗ್ರಭಾಷಣ, ಅದರ ವಿರುದ್ಧ ಇದರ ವಿರುದ್ಧ ಪ್ರತಿಭಟನೆ, ಬೆಳಗಾದರೆ ಅದು ಬೇಕು ಇದು ಬೇಕು ಎಂದು ಬರುವ ಜನ, ಅದನ್ನು ಖಂಡಿಸಿ ಸಹಿ, ಇದನ್ನು ಸಮರ್ಥಿಸಿ ಸಹಿ -ತೇಯುತ್ತಾ ಹೋಗುತ್ತಾನೆ. ಈ ಮಧ್ಯೆ ಕೃಷ್ಣಪ್ಪನಿಗೆ ಆಗರ್ಭ ಶ್ರೀಮಂತನೊಬ್ಬ ಸ್ನೇಹಿತನಾಗಿದ್ದ. ಕೋಲಾರದ ಕಡೆಯಿಂದ ಆಯ್ಕೆಯಾದ ಈ ಗೋಪಾಲರೆಡ್ಡಿ ಶ್ರೀಮಂತನಾದರೂ ಮಾರ್ಕ್ಸ್‌ವಾದಿ. ಶುಭ್ರವಾದ ಬಿಳಿಪಂಚೆಯನ್ನು ಕಚ್ಚೆ ಹಾಕಿ ಉಟ್ಟು, ತೆಳುವಾದ ಜುಬ್ಬ ತೊಟ್ಟು ಬೆನ್ಸ್ ಕಾರಲ್ಲಿ ಓಡಾಡಿಕೊಂಡಿದ್ದ ಸಪುರ ಮೈ ನೀಳವಾದ ಮುಖಗಳ ಈ ಮಾರ್ಕ್ಸ್‌ವಾದಿ ತನ್ನ ವರ್ಗದ ನಾಶವನ್ನು ಬಯಸುವ ಉತ್ಕಟತೆಗೆ ಕೃಷ್ಣಪ್ಪ ಮಾರುಹೋಗಿದ್ದ. ಗೋಪಾಲರೆಡ್ಡಿ ಒಮ್ಮೆ ತನ್ನ ಸಂಗಡ ಜೈಲಿನಲ್ಲಿದ್ದಾಗ ಅವನ ಲವಲವಿಕೆ ಕಷ್ಟಸಹಿಷ್ಣುತೆ ಗಮನಿಸಿ ಚಕಿತನಾಗಿದ್ದ. ಹಣ, ಆಸ್ತಿ, ಸ್ಥಾನಗಳನ್ನು ಅಸಡ್ಡೆಯಿಂದ ಕಾಣುವ ಗೋಪಾಲರೆಡ್ಡಿ ಸಿನಿಮಾ, ಸಂಗೀತ, ಸಾಹಿತ್ಯ ಎಲ್ಲದರಲ್ಲೂ ಅತ್ಯುತ್ಕೃಷ್ಟವಾದದ್ದನ್ನು ಬೆನ್ನು ಹತ್ತಿದವ. ಕಲ್ಕತ್ತದಲ್ಲಿ ಅಲಿ ಅಕ್ಬರನ ಕಛೇರಿಯಿದೆ ಎಂದು ಪೇಪರಿನಲ್ಲಿ ಓದಿ ಕೃಷ್ಣಪ್ಪನನ್ನು ವಿಮಾನದಲ್ಲಿ ಕಲ್ಕತ್ತೆಗೆ ಕರೆದುಕೊಂಡು ಹೋದಂಥ ಹುಚ್ಚು ಅವನದು. ಬೊಂಬಾಯಿಯ ತಾಜ್‌ನಲ್ಲಿರುವಷ್ಟೇ ಸಲೀಸಾಗಿ ಸುಖವಾಗಿ ಗುಡಿಸಲಲ್ಲೂ, ಜೈಲಲ್ಲೂ ಅವನು ಇರಬಲ್ಲ. ಹಚ್ಚಿಕೊಳ್ಳದಂತೆ ಭೋಗಿಸಬಲ್ಲ. ಬೈನೆ ಮರದ ಹೆಂಡ ಮೆಣಸಿನಕಾಯಿ ಬೋಂಡಗಳು ಸ್ಕಾಚ್ ಮತ್ತು ಚೀಸಿನಷ್ಟೇ ಅವನಿಗೆ ಪ್ರಿಯ. ಅಪಾರವಾದ ಐಶ್ವರ್ಯ ಬದುಕಿಗಷ್ಟು ಮೆರುಗು ಮಾತ್ರ ತರುತ್ತದೆ ಎಂಬ ಕೃಷ್ಣಪ್ಪನ ಅಭಿಪ್ರಾಯ ಗೋಪಾಲರೆಡ್ಡಿಯ ಸಹವಾಸದಲ್ಲಿ ಬದಲಾಯ್ತು -ಐಶ್ವರ್ಯವಿದ್ದಲ್ಲಿ ಜೀವನದ ಗುಣಲಕ್ಷಣಗಳೇ ಭಿನ್ನವಾಗಿರುತ್ತವೆ ಎಂಬುದನ್ನು ಕಂಡ. ಕೃಷ್ಣಪ್ಪನ ಚುನಾವಣೆಗೆ ಹುಲಿಯೂರಿಗೆ ಬಂದು ಯಾವ ರೈತನ ಚಾವಡಿಯಲ್ಲಾದರೂ ಮಲಗಿ ಬೆಳಿಗ್ಗೆ ಬಾಳೆಲೆ ಮೇಲೆ ಬಡಿಸಿದ ಗಂಜಿಗೆ ಮಾವಿನ ಮಿಡಿ ಉಪ್ಪಿನಕಾಯನ್ನು ಬಡಿಸಿಕೊಂಡು ಅತ್ಯಂತ ರುಚಿಯಿಂದ ತಿನ್ನಬಲ್ಲ ಕೌಶಲ ಅವನದು. ಹುಲ್ಲಿನ ಚಾಪೆ, ಹಾಳೆಯ ಟೊಪ್ಪಿ, ಗೊರಬು, ಹಲಸಿನ ಹಣ್ಣಿನ ಕಡುಬು, ಬಿದಿರಿನ ಉಣಗೋಲು -ದೈನಿಕದಲ್ಲಿ ನಿಕೃಷ್ಟವೆನ್ನಿದ್ದೆಲ್ಲವೂ ಅವನ ನಿರ್ಲಿಪ್ತ ಮೆಚ್ಚುಗೆಯಲ್ಲಿ ಹಾಡುತ್ತಿದ್ದವು -ಅವನು ಭೋಗಿಸುವ ಹೆಣ್ಣಿನ ದೇಹ ಹಾಡಿದಂತೆ.

ಗೋಪಾಲ ರೆಡ್ಡಿಯ ಊರಿಗೇ ಹೋದಾಗ ಮಾತ್ರ ಕೃಷ್ಣಪ್ಪ ತನ್ನ ಗೆಳೆಯನ ಮಿತಿಯನ್ನು ಅರಿತದ್ದು. ಅಲ್ಲಿ ಅವನು ಧಣಿ. ಅವನ ಅಪ್ಪ ಟೈರೆಂಟ್. ಜವಾನರು ಬೆನ್ನು ತೋರಿಸಿ ನಡೆಯುವುದಿಲ್ಲ. ಅರಮನೆಯಂಥ ಅವನ ಮನೆಯಲ್ಲಿ ಮಕ್ಕಳು ಅಳುವುದು ಕೇಳುವುದಿಲ್ಲ. ಹೆಂಗಸರು ನಗುವುದು ಕೇಳುವುದಿಲ್ಲ. ರೆಡ್ಡಿಯ ಅಪ್ಪ ನಿಂತಲ್ಲಿ ಕೂತಲ್ಲಿ ಎಲ್ಲವೂ ಸ್ತಬ್ಧವಾಗಿರುತ್ತಿತ್ತು. ಗೋಪಾಲರೆಡ್ಡಿ ತುಂಬ ಮುಜುಗರದಿಂದ ಕೃಷ್ಣಪ್ಪನನ್ನು ಒಂದು ದಿನ ಮಾತ್ರ ಅಲ್ಲಿರಿಸಿಕೊಂಡಿದ್ದ -ಅಷ್ಟೆ. ತನ್ನ ಶ್ರೀಮಂತಿಕೆಯಿಂದ ಕೃಷ್ಣಪ್ಪ ಹೇಸಿದ್ದು ಕಂಡು ಗೋಪಾಲರೆಡ್ಡಿಗೆ ಅವನ ಮೇಲೆ ಅಭಿಮಾನ ಹೆಚ್ಚಿತು. ಇಂಥದನ್ನು ರಕ್ಷಿಸಲೆಂದೇ ವಾರಂಗಲ್‌ನಲ್ಲಿ ಕಂಡಂಥ ಪೋಲೀಸ್ ಠಾಣೆಗಳು ಇದ್ದಾವೆಂಬುದು ಗೋಪಾಲರೆಡ್ಡಿಗೆ ತಿಳಿಯದ ವಿಚಾರವೆ?

ಗೋಪಾಲರೆಡ್ಡಿಯ ವ್ಯಾಪಕವಾದ ಅಭಿಮಾನದಲ್ಲಿ ಕೃಷ್ಣಪ್ಪ ಸಡಿಲವಾದ, ಹಿಗ್ಗಿದ, ತೇಲಿದ, ಕುಡಿಯುವುದನ್ನು ಕಲಿತ. ಹುಡುಗಿಯರ ಜೊತೆ ಮಲಗಿದ. ದೇಹದ ಬೆವರಿನಂತೆ ವ್ಯಕ್ತವಾಗುತ್ತಿದ್ದ ಕೃಷ್ಣಪ್ಪನ ವ್ಯವಸ್ಥೆಯ ವಿರುದ್ಧದ ಕೋಪ, ಅದರ ಮೊದಲಿನ ತೀವ್ರತೆ, ಮಿತಿಗಳನ್ನು ಕಳೆದುಕೊಂಡು ಇಡಿಯಾಗಿ ಕಾಣಬಲ್ಲ ವಿಚಾರಗಳಾದವು. ಗೋಪಾಲರೆಡ್ಡಿ ಸದಾ ಕೃಷ್ಣಪ್ಪನ ವಿಪ್ಲವಕಾರಕ ಆರ್ತತೆಗೆ ತನ್ನ ಚುರುಕಾದ ವಿಚಾರವನ್ನೂ ಬೆಸೆಯುತ್ತಿದ್ದುದರಿಂದ, ಒಂದು ಇನ್ನೊಂದರಿಂದ ಕುಮ್ಮಕ್ಕು ಪಡೆದು ಬೆಳೆಯುತ್ತ ಹೋಗುತ್ತಿದ್ದುದರಿಂದ ಹೆಣ್ಣು, ವ್ಹಿಸ್ಕಿ, ಸಂಗೀತ ಕಛೇರಿಗಳು, ವಿಮಾನ ಸಂಚಾರಗಳು ಕೃಷ್ಣಪ್ಪನನ್ನು ನೈತಿಕವಾಗಿ ಬಾಧಿಸಲಿಲ್ಲ. ಕ್ಷುಲ್ಲಕ ವಿಷಯಗಳಿಂದ ಅಬಾಧಿತನಾಗಿರುವುದು, ಹಣಕ್ಕಾಗಿ ಪರಿದಾಡದಿರುವುದು, ನಿಷ್ಠುರವಾಗಿ ಮಾತಾಡುವುದು, ದೇಹವನ್ನು ಹೆಣ್ಣು ಊಟ ವ್ಹಿಸ್ಕಿಗಳಿಂದ ತಣಿಸಿಕೊಳ್ಳುವುದು, ಹಾತೊರೆಯದೆ ಬೇಕೆನಿಸಿದ್ದನ್ನ ಪಡೆಯುವುದು -ಎಲ್ಲವೂ ಒಟ್ಟಿಗೆ ಏಕಕಾಲದಲ್ಲೆ ಸಿಕ್ಕಿದ್ದರಿಂದ ಕೃಷ್ಣಪ್ಪ ತೇಲಿದ. ತಾನು ಅತ್ಯುನ್ನತ ಶಿಖರದಲ್ಲಿದ್ದೇನೆಂದು ಭಾವಿಸಿದ. ನಿನ್ನೆ ಯಾವ ಹುಡುಗಿಯ ಜೊತೆ ರಮಿಸಿದ್ದು ಎಂಬುದು ಇವತ್ತು ಮರೆಯುವುದೂ ಇತ್ತು. ಅಚ್ಚಳಿಯದೆ ಉಳಿದಿರುವುದೆಂದರೆ ಚಿರತೆಯ ಸೌಂದರ್ಯವನ್ನು ನೆನಪಿಗೆ ತರುವ ಲೂಸಿನಾ ಮಾತ್ರ. ಈಗೀಗ ವಾರಂಗಲ್ ಠಾಣೆಯಲ್ಲಿ ಕಳೆದ ಹಗಲು ರಾತ್ರೆಗಳು ನೆನಪಾಗುವುದಿತ್ತು. ಆದರೆ ಜೀವನವನ್ನು ಕಳೆಗುಂದಿಸುವ ಕ್ಷುಲ್ಲಕ ವಿಷಯಗಳನ್ನು ಅಪಾರವಾದ ಐಶ್ವರ್ಯ ಮತ್ತು ಔದಾರ್ಯಗಳ ಸಹಾಯದಿಂದ ಸುಡಬಲ್ಲ ಕೌಶಲ ಗೋಪಾಲರೆಡ್ಡಿಗೆ ಸಾಧಿಸಿತ್ತಲ್ಲವೆ? ಆಸ್ತಿಪಾಸ್ತಿಗಳಿಂದ ಅಬಾಧಿತವಾದ ತನ್ನ ಕನಸಿನ ಭವಿಷ್ಯದ ಹೊಸ ಬದುಕು ಅದರ ದೈನಿಕ ಸ್ವರೂಪದಲ್ಲಿ ಹೀಗೆ ನಿರಂಬಳವಾಗಿರುತ್ತದೆಂದು ಕೃಷ್ಣಪ್ಪ ಭಾವಿಸಿದ.

ಮಹೇಶ್ವರಯ್ಯ ಒಮ್ಮೆ ಬಂದವರು ಇಬ್ಬರನ್ನು ಒಟ್ಟಿಗೇ ಕಂಡು ಏನನ್ನೊ ನುಂಗಿಕೊಂಡಂತೆ ಅನ್ನಿಸಿತು. ಹೆಣ್ಣೆಂದರೆ ಲಂಪಟಪಡುವ ಅವರು ತಾನು ಪಡುತ್ತಿದ್ದ ಸುಖವನ್ನು ಜರೆದಿರಲಾರರು. ಹಾಗಾದರೆ ಮತ್ತೇನೆಂದು ಅವರನ್ನು ಪೀಡಿಸಲು “ಕೃಷ್ಣಪ್ಪ ಇದು ಬಹಳ ಕಾಲ ಉಳಿಯಲ್ಲೊ -ನಿನಗೆ ಮತ್ತೆ ಅಶ್ವತ್ಥಮರದ ಕೆಳಗೆ ದನಗಳನ್ನು ಕಾಯುತ್ತ ಕೂರಬೇಕೆನ್ನಿಸುತ್ತೊ” ಎಂದಿದ್ದರು. ಹೌದು ಅವರೆಂದಂತೆ ಇದು ಉಳಿಯಲಿಲ್ಲ. ಗೋಪಾಲರೆಡ್ಡಿ ಕ್ಯಾನ್ಸರ್ ಆಗಿ ಸತ್ತ. ಆಮೇಲೆ ಕೃಷ್ಣಪ್ಪ ಬಹಳ ದಿನ ಮಂಕಾಗಿದ್ದು ಹಿತೈಷಿಗಳ ಒತ್ತಾಯಕ್ಕೆ ಒಪ್ಪಿ ಸೀತೆಯನ್ನು ಮದುವೆಯಾದದ್ದು.

ಗೋಪಾಲರೆಡ್ಡಿಯಿಂದ ಪಡೆದ ಸಖ್ಯ ಈಗ ಭ್ರಮೆಯೆನ್ನಿಸುತ್ತದೆ. ತನಗಿಂದ ಹೆಚ್ಚು ಓದಿದ್ದ ಜ್ಞಾನಿ ಅವನು. ಒಳ್ಳೆಯ ಆಟಗಾರ. ಸಂಗೀತದಲ್ಲಿ ಸೂಕ್ಷ್ಮವಾದ ಅಭಿರುಚಿಯಿದ್ದವ. ಜೊತೆಗಿರುವ ಹೆಣ್ಣು ದುಡ್ಡುಕೊಟ್ಟು ಪಡೆದವಳು ಎಂಬುದು ಹೆಣ್ಣಿಗೇ ಮರೆಯುವಂತೆ ಮಾಡಬಲ್ಲ ಕೌಶಲಿ. ಅವನ ಶ್ರೀಮಂತಿಕೆಗೆ ತಾನು ಅವಾಕ್ಕಾಗುವಂಥವನಲ್ಲೆಂದು ಗೊತ್ತಾದ್ದರಿಂದಲೇ ಅವನು ತನ್ನ ಸಖ್ಯ ಬಯಸಿದ್ದಿರಬೇಕು. ತನ್ನಂಥವನ ಸಾಕ್ಷಿಯಲ್ಲಿ ಅವನಿಗೆ ಹಣವನ್ನು ಯಃಕಶ್ಚಿತ್ ಆಗಿ ಸುಡುವುದರಲ್ಲಿ ತೀವ್ರವಾದ ಬಿಡುಗಡೆಯ ಸುಖ ಸಿಕ್ಕಿರಬೇಕು. ಸಖನಾಗಿದ್ದೂ ತನ್ನನ್ನು ಅವನು ಒಂದು ಬಗೆಯ ಆರಾಧನಾಭಾವದಿಂದ ಕಾಣುತ್ತಿದ್ದ. ತನ್ನ ಬಿಗಿಗಳು ಸಡಿಲವಾಗಲು ಅಂಥ ಕಣ್ಣುಗಳು ಅಗತ್ಯವಾಗಿದ್ದವು. ಮಹೇಶ್ವರಯ್ಯ, ಅಣ್ಣಾಜಿ, ಗೌರಿಗಳಂತೆಯೇ ಇವನೂ ತನ್ನಲ್ಲಿ ಏನೋ ದಿವ್ಯವಾದ್ದಿದೆ ಎಂದು ಕಂಡಿದ್ದ. ಒಳಗೇ ಉಜ್ಜಿ ತನ್ನಲ್ಲಿ ಉರಿಯುತ್ತಿದುದರಲ್ಲಿ ಅವನು ಮೈಕಾಯಿಸಿಕೊಂಡಿದ್ದ. ಅಮುಕುತ್ತಿದ್ದ ತನ್ನ ತೀವ್ರತೆಯ ಬಾಧೆಗಳನ್ನು ಅವನ ಸಖ್ಯದಲ್ಲಿ ಹಾಡುವಂತೆ ಮಾಡಿದ್ದ. ಇದರಿಂದ ಕೃಷ್ಣಪ್ಪನಿಗೆ ತನ್ನ ಒಳಬಾಳಿನಲ್ಲಿ ತನಗೇ ಹೊಮ್ಮುತ್ತಿದ್ದ ಚೊಗರಿನಂಥ ಒಂದು ವಿಶೇಷವಾದ ರುಚಿ -ಅದರ ಅಸಹನೀಯ ಉತ್ಕಟ ರುಚಿ -ಕಡಿಮೆಯಾಗುತ್ತ ಹೋಯಿತು. ಗೋಪಾಲರೆಡ್ಡಿ ಸತ್ತಿದ್ದೇ ತಾನು ತಬ್ಬಲಿಯಾದೆನೆನ್ನಿಸಿತು.

“ನಾಗೇಶಾ”

ತನ್ನನ್ನು ಬಿಸಿಲಿನಲ್ಲಿ ಬಿಟ್ಟು ಒಳಗೆ ಕೂತಿದ್ದ ನಾಗೇಶ ಬಂದು ನಿಂತ.

“ಒಳಗೆ ಹೋಗೋಣ ಬಿಸಿಲು ಹೆಚ್ಚಾಯ್ತು”

ನಾಗೇಶ ತಳ್ಳಿಕೊಂಡು ರೂಮಿಗೆ ಕರೆದುಕೊಂಡು ಹೋದ.

“ಡ್ರಾನಲ್ಲಿ ಪರ್ಸಿದೆ ಕೊಡು”

ನಾಗೇಶ ಎತ್ತಿಕೊಟ್ಟ ಪರ್ಸಿಂದ ಇನ್ನೂರು ರೂಪಾಯಿಗಳನ್ನು ತೆಗೆದು ಅವನಿಗೆ ಕೊಟ್ಟ. ನಾಗೇಶ ಅರ್ಥವಾಗದೆ ಕೃಷ್ಣಪ್ಪನ ಮುಖ ನೋಡಲು,

“ನಿನ್ನ ಹತ್ತಿರ ಇನ್ನೊಂದು ಜೊತೆ ಬಟ್ಟೆ ಇರೋ ಹಾಗೆ ಕಾಣಿಸಲ್ಲ. ಹೊಲಿಸಿಕೊ” ಎಂದ.

“ಬೇಡ ಗೌಡರೆ -”

“ತಗೊಳ್ಳೊ. ನನ್ನ ಹತ್ತಿರ ಬಡಿವಾರ ಮಾಡಬೇಡ.”

“ನಿಮ್ಮ ಪರ್ಸಲ್ಲಿ ಇಷ್ಟೇ ಇರೋದು.”

“ನೋಡು ನಾಗೇಶ, ಬಲಗೈ ಇನ್ನೂ ಚಲಿಸ್ತ ಇದೆ. ಅದಕ್ಕೂ ಸ್ಟ್ರೋಕ್ ಹೊಡಿಯೋ ಮುಂಚೆ….”

ತಾನು ನಗುತ್ತ ಹೇಳಿದ ಈ ಮಾತಿನಿಂದ ನಾಗೇಶ ಖಿನ್ನನಾದ್ದು ಕಂಡು –

“ಹುಚ್ಚಪ್ಪ -ನಿಂಗೊತ್ತಿಲ್ಲ. ನನ್ನ ಹೆಂಡತಿ ಇದಾಳಲ್ಲ, ಮಹಾ ಜಿಪುಣಿ, ನನ್ನ ಸಂಬಳದಲ್ಲಿ ಉಳಿಸೀ ಉಳಿಸೀ ಬ್ಯಾಂಕಲ್ಲಿ ಹತ್ತು ಸಾವಿರ ಕೂಡಿಟ್ಟಿದ್ದಾಳೆ. ತಗೋ ಈ ಹಣಾನ್ನ ನೀನು ಬಾಯಿ ಮುಚ್ಚಿಕೊಂಡು -” ಎಂದ.

ಕೃಷ್ಣಪ್ಪನಿಗೆ ನಾಗೇಶನ ಹಿನ್ನೆಲೆ ಗೊತ್ತಿತ್ತು. ಬಡ ಬ್ರಾಹ್ಮಣ ಕುಟುಂಬ. ಅಪ್ಪ ಸದಾ ವ್ಯಗ್ರನಾಗಿರುತ್ತಿದ್ದ ಗುಮಾಸ್ತ. ಅಣ್ಣನೊಬ್ಬ ಇಂಜಿನಿಯರ್. ಅವನ ಹೆಂಡತಿ ಜಿಪುಣಿಯಾದ್ದರಿಂದ ಅವನಿಂದಾಗುವ ಸಹಾಯ ಅಷ್ಟಕ್ಕಷ್ಟೇ. ಆರು ಮದುವೆಯಾಗದ ಅಕ್ಕತಂಗಿಯರು. ಮಗ ಅರ್ಧಕ್ಕೆ ಓದು ನಿಲ್ಲಿಸಿ, ಮೆರವಣಿಗೆ ಮಣ್ಣು ಮಸೀ ಅಂತ ರಾಜಕೀಯದಲ್ಲಿ ಕಾಲ ಕಳೀತಾನೇಂತ ತಾಯಿಗೆ ದುಗುಡ. ನಾಗೇಶ ಮಲಗೋದು ಪಾರ್ಟಿ ಆಫ಼ೀಸಲ್ಲಿ. ಉಣ್ಣೋದು ಅಲ್ಲಿ ಇಲ್ಲಿ. ಕಾಫ಼ಿಗೆ ಸಿಗರೇಟಿಗೆ ಕಾಸಾದರೆ ಸಾಕು ಅವನಿಗೆ. ಬರಲಿರುವ ಸಮತಾ ವ್ಯವಸ್ಥೇಲಿ ತನ್ನ ಪಾಡು ಸುಧಾರಿಸುತ್ತದೆ ಎಂದು ಅವನು ಕನಸು ಕಟ್ಟುತ್ತಾನೆ. ಕಾಲಹರಣ ಮಾಡೋದು ಅವನಿಗೆ ಒಗ್ಗಿಹೋಗಿದೆ. ಎಚ್.ಎಂ.ಟೀಲಿ ಕೆಲಸ ಕೊಡಿಸಲೇನಯ್ಯ ಎಂದು ಕೇಳಿದರೆ ಬೇಡವೆನ್ನುತ್ತಾನೆ. ಹಾಗೆ ಕೇಳಿದ್ದರಿಂದ ಅವಮಾನವಾಗಿ ಸಿಟ್ಟಾಗುತ್ತಾನೆ; ಎಲ್ಲರಂತೆ ಉದ್ಯೋಗಿಯಾಗಿ ಬದುಕೋದು ಕಳಪೇಂತ ಅವನ ಅಭಿಪ್ರಾಯ. ಅಂಥ ಪ್ರತಿಭಾಶಾಲಿಯೂ ಅಲ್ಲ. ಆದರೆ ಕೃಷ್ಣಪ್ಪನ ವ್ಯಕ್ತಿತ್ವದ ಪ್ರಭೆಗೆ ಮರುಳಾದ ಯುವಕರಲ್ಲಿ ಇವನೂ ಒಬ್ಬ. ತನ್ನ ರಾಜಕೀಯ ವಿಚಾರ, ಜೀವನ ಕ್ರಮ ಇಂಥ ಮೋಡಿಯಲ್ಲಿ ಹಲವು ಯುವಕರನ್ನು ಸಿಕ್ಕಿಸಿದೆ ಎಂದು ಕೃಷ್ಣಪ್ಪನಿಗೆ ಪಶ್ಚಾತ್ತಾಪವಾಗುತ್ತದೆ. ಇಂಥವರಿಗೆ ವಯಸ್ಸಾಗುವುದನ್ನು ನೆನೆದರೆ ಹೆದರಿಕೆಯಾಗುತ್ತದೆ.

“ನಾಗೇಶ ನಿಂಗೊಂದು ಕಥೆ ಹೇಳ್ತೇನೆ” ಎಂದು ಜೋಯಿಸರ ವಿಷಯ ಥಟ್ಟನೆ ನೆನಪಿಗೆ ಬಂದು ಕೃಷ್ಣಪ್ಪ ಶುರು ಮಾಡುತ್ತಾನೆ. ನಾಗೇಶ ನೋಟ್‌ಬುಕ್ ಇಟ್ಟುಕೊಂಡು ಇವನ್ನೆಲ್ಲ ಗುರುತು ಮಾಡಿಕೊಳ್ಳುತ್ತ ಹೋಗುತ್ತಾನೆ.

ಹುಲಿಯೂರಿನ ರೈತರು ಪೊರಕೇನ್ನ ಸಗಣಿಯಲ್ಲದ್ದಿ ಭಟ್ಟನನ್ನು ಅಟ್ಟಲು ಶುರು ಮಾಡಿದಾಗ ಪ್ರತಿದಿನ ಅವನು ಜನಿವಾರ ಬದಲಾಯಿಸಬೇಕಾಗಿ ಬಂತು. ಬ್ರಾಹ್ಮಣನ ಮೇಲೆ ಇಂಥ ಹಲ್ಲೆ ಮಾಡುವುದನ್ನು ತಾಳಲಾರದೆ ದುಃಖಿತರಾದ ಜೋಯಿಸರಿಗೆ, “ನೀವು ಮಾಡೊ ಜನಿವಾರ ಈಗ ಹೆಚ್ಚು ಮಾರಾಟವಾಗ್ತಾ ಇದೆಯಲ್ಲ -ನೀವು ಯಾಕೆ ದುಃಖಪಡಬೇಕು” ಎಂದು ಗೇಲಿ ಮಾಡಬೇಕೆನ್ನಿಸಿದ್ದನ್ನು ಕೃಷ್ಣಪ್ಪ ತಡೆದುಕೊಂಡ. ಕೃಷ್ಣಪ್ಪನ ತಾಯಿಯೂ ಇದರಿಂದ ಭಯಪಟ್ಟಿದ್ದರಿಂದ ಕೃಷ್ಣಪ್ಪ ನಿಧಾನವಾಗಿ ಕೇಳಿದ.

“ನಾನು ನಿಮ್ಮ ಮಗ ಇದ್ದ ಹಾಗೆ ಅಂತ ನೀವು ತಿಳಿದಿದ್ದೀರಿ ಅಲ್ಲವ ಜೋಯಿಸ್ರೆ -”

“ಅದೆಂಥ ಪ್ರಶ್ನೆ ನೀನು ಕೇಳೋದು? ಇಲ್ದಿದ್ರೆ ನಾನು ನಿನಗೆ ಬುದ್ಧಿವಾದ ಹೇಳಕ್ಕೆ ಬರ್ತಿದ್ನ?”

“ಸಾಯ್ತಾ ಇರೋ ಮಗೂಗೇಂತ ಇಟ್ಟ ಹಾಲನ್ನ ಎಸೆಯೋದು ಹೆಚ್ಚು ತಪ್ಪೋ, ಅಥವಾ ಅಂಥ ಬ್ರಾಹ್ಮಣನ್ನ ಪೊರಕೇಲಿ ಹೊಡೆಯೋದೊ?”

“ಎರಡೂ ತಪ್ಪು. ಭಟ್ಟ ಅವನು ಮಾಡಿದ ಪಾಪಕ್ಕೆ ನರಕಕ್ಕೆ ಹೋಗ್ತಾನೆ. ಆದರೆ ಅದು ಬ್ರಾಹ್ಮಣ ಜನ್ಮವಲ್ವ? ಅವನನ್ನ ಪೊರಕೇಲಿ ಹೊಡೆಸಿ ನೀನು ಯಾಕೆ ಪಾಪ ಕಟ್ಟಿಕೋಬೇಕು?”

ಕೃಷ್ಣಪ್ಪನ ತಾಯಿಯೂ ಜೋಯಿಸರ ಮಾತು ಕೇಳಿಸಿಕೊಳ್ಳುತ್ತ ಹೊಗೆಸೊಪ್ಪಿಗೆ ಸುಣ್ಣ ಹಚ್ಚಿ ಬಾಯಿಗೆ ಹಾಕಿಕೊಂಡು ಆತಂಕದಿಂದ ತನ್ನ ಒಪ್ಪಿಗೆ ಸೂಚಿಸಿದಳು. ಇವರ ಹತ್ತಿರ ಮಾತು ಅಸಾಧ್ಯವೆನ್ನಿಸಿತ್ತು. ಉಪನಿಷತ್ತುಗಳನ್ನೆಲ್ಲ ಓದಿದ್ದ ಈ ಕಡು ಬಡವ ಬ್ರಾಹ್ಮಣನೂ ಎಷ್ಟು ಮೂರ್ಖನಾಗಬಲ್ಲನೆಂದು ಕೃಷ್ಣಪ್ಪನಿಗೆ ದುಃಖವಾಗಿತ್ತು.

“ನೀವೂನೂ ಜಾತಿ ಅನ್ನೊ ಕಾರಣಕ್ಕೆ ಭಟ್ಟನ ಪರವಾಗಿ ಮಾತಾಡೋದು ಕಂಡ್ರೆ ದುಃಖವಾಗತ್ತೆ ಜೋಯಿಸ್ರೆ -”

ಕೃಷ್ಣಪ್ಪ ನಿಜವಾಗಿ ವ್ಯಥೆಯಿಂದ ಮಾತಾಡಿದ್ದು ಕೇಳಿ ಜೋಯಿಸರು ತಬ್ಬಿಬ್ಬಾಗಿದ್ದರು.

“ಈ ಮಾಯಾಪ್ರಪಂಚದಲ್ಲಿ ಸಿಕ್ಕಿರೋ ತನಕ ಜಾತಿ ಗೀತಿ ಎಲ್ಲ ನಿಜವೇ ಅಲ್ವೇನಪ್ಪ?”

“ಹಾಗಾದ್ರೆ ನಾನೇನು ಪಾಪ ಮಾಡಿ ಶೂದ್ರನಾಗಿ ಹುಟ್ಟಿದೇಂತ ನಿಮ್ಮ ಭಾವನೆಯೋ? ನನ್ನ ಕಂಡರೆ ನಿಮಗೂ ದೊಡ್ಡವ್ವನಿಗೂ ಯಾಕೆ ಹಾಗಾರೆ ಮಗಾಂತ ಅನ್ನಿಸತ್ತೆ ಹೇಳಿ -”

ರುಕ್ಮಿಣಿಯಮ್ಮನನ್ನ ಕೃಷ್ಣಪ್ಪ ದೊಡ್ಡವ್ವ ಅನ್ನೋದು.

“ಭಟ್ಟನಂಥ ಪಾಷಂಡಿಗಳಿಂದ ನಮ್ಮ ಪೂರ್ವಜರು ಮಾಡಿದ ಪುಣ್ಯವೆಲ್ಲ ನೀರಲ್ಲಿ ಹೋಮಮಾಡಿದಂತಾಯ್ತು. ನಿನ್ನ ಅಂದೇನು ಪ್ರಯೋಜನ ಹೇಳು? ಸ್ವತಃ ಆದಿಶಂಕರರೇ ಕಾಲಟಿಯಿಂದ ಬದರಿಗೆ ಹೋಗೋ ಮಾರ್ಗದಲ್ಲಿ ದಿವ್ಯವಾದ್ದೊಂದು ಪ್ರಭೆಯನ್ನು ಕಂಡು ಈ ನರಸಿಂಹದೇವರನ್ನ ಸ್ಥಾಪಿಸಿದರು ಅಂತ ಐತಿಹ್ಯ ಇದೆ. ಹೇಗಿದ್ದ ಮಠ ಈಗ ಹೇಗಾಗಿಬಿಡ್ತು? ಮೂಕ ಪಶು ಪಕ್ಷಿಗಳನ್ನೂ ಹಿಂಸೆ ಮಾಡಬಾರ್ದು ಅಂತ ವೈದಿಕ ಧರ್ಮ ಹೇಳುತ್ತೆ….”

ಜೋಯಿಸರ ಕಣ್ಣುಗಳು ಒದ್ದೆಯಾದುವು. ಅವರು ರುದ್ರಾಕ್ಷಿ ಧರಿಸಿದ ಎಲುಬುಗಳು ಕಾಣುವ ಎದೆಯನ್ನು ನೋಡುತ್ತ ಕೃಷ್ಣಪ್ಪನ ಮನಸ್ಸು ಕರಗಿತು.

“ದೂರದಿಂದ ನೋಡಿದಾಗ ಹಿಂಸೆಯಷ್ಟೇ ಪ್ರತಿಹಿಂಸೆಯೂ ಕೊಳಕಾಗಿ ಕಾಣತ್ತೆ ಜೋಯಿಸರೆ. ಆದರೆ ಪೊರಕೇಲಿ ಹೊಡೆಯೋದಕ್ಕೂ ತಯಾರಾದಾಗ ಅವರಲ್ಲೆಷ್ಟು ಸ್ವಾಭಿಮಾನ ಬೆಳೆದಿರತ್ತೆ ನಿಮಗೆ ಕಾಣಿಸ್ತ ಇಲ್ಲ. ಅವರೆಲ್ಲ ಹುಳಗಳಂತೆ ಸಹಿಸ್ತ ಇದ್ದಿದ್ರಿಂದೇನೇ ಮಠಾನೂ ಕೊಳೀತ ಬಂತು. ನಿಮ್ಮ ಭಟ್ಟಾನೂ ಸಣ್ಣ ಹುಳಾನ ತಿನ್ನೋ ದೊಡ್ಡ ಹುಳ ಆಗೋದು ಸಾಧ್ಯ ಆಯ್ತು”

ಜೋಯಿಸರು ಮಂಕಾಗಿ ಎದ್ದು ನಿಂತರು. ಕೃಷ್ಣಪ್ಪ ಹಾಸ್ಯದ ಧಾಟಿಯಲ್ಲಿ ಅವರನ್ನು ಒಲಿಸಲು ಪ್ರಯತ್ನಿಸಿದ.

“ಬ್ರಾಹ್ಮಣರು ಅಂದ್ರೆ ನಮ್ಮ ಜನಕ್ಕೆ ಇನ್ನೂ ಗೌರವ ಉಳಿದಿದೆ ಜೋಯಿಸ್ರೆ. ಪೊರಕೇಲಿ ಹೊಡೀತಾರೆ ನಿಜ. ಆದ್ರೆ ಒಳಗೆ ಮನಸ್ಸಲ್ಲೆ ಕಲ್ಕುಟಕನಿಗೆ ತಪ್ಪು ಕಾಣಿಕೇನೂ ಕಟ್ತಾರೆ…..”

“ನೀನು ಧರ್ಮಿಷ್ಠಾಂತ ನನಗೆ ಗೊತ್ತಪ್ಪ. ಆ ಭಟ್ಟ ಎಲ್ಲಿ -ನೀನೆಲ್ಲಿ? ಆದರೆ………”

ಜೋಯಿಸರಿಗೆ ಮಾತು ಹೊಳೆಯದೆ ಎದ್ದು ಹೋಗಿದ್ದರು. ಕೃಷ್ಣಪ್ಪ ಈ ಘಟನೆಯನ್ನು ಮರೆಯಲಾರ. ತನ್ನ ಆರೋಗ್ಯಕ್ಕಾಗಿ ಊರಿನ ಜನ ಕಲ್ಕುಟಕನಿಗೆ ಕೋಲ ಕಟ್ಟಿಸುವ ಹರಕೆ ಹೊತ್ತ ಸುದ್ದಿ ಕೇಳಿ ಪ್ರಾಯಶಃ ತನಗೆ ಇವತ್ತು ಎಲ್ಲ ನೆನಪಾಗುತ್ತಿರಬಹುದು.

ನಾಗೇಶ ಹೇಳಿದ:

“ಇನ್ನಷ್ಟು ಒದೀಬೇಕು ಗೌಡರೆ ಬ್ರಾಹ್ಮಣರನ್ನ. ಆಗಲೇ ಈ ಜಾತಿವ್ಯವಸ್ಥೇನ್ನ ನಾಶ ಮಾಡೋದು ಸಾಧ್ಯ.”

ಕೃಷ್ಣಪ್ಪ ನಗತೊಡಗಿದ. ನಾಗೇಶ ತಬ್ಬಿಬ್ಬಾಗಿ ಯಾಕೆಂದು ಕೇಳಿದ:

“ಹಂದಿ ಕುರಿ ತಿನ್ನೋ ನಮ್ಮ ಗೌಡರು ನಿನ್ನಂಥ ಒಬ್ಬ ಪುಳಚಾರು ತಿನ್ನೊ ಬಡಪಾಯಿಯನ್ನು ಒದೀಬೇಕು ಅಂತೀಯಲ್ಲ -ಅದನ್ನು ಕಲ್ಪಿಸಿಕೊಂಡು ನಗು ಬಂತು. ನಮ್ಮ ಜಾತಿ ಜಮೀಂದಾರರೇನು ಯೋಗ್ಯರು ಅಂತ ನೀನು ತಿಳ್ದಿರೋದ?”

*
*
*

“ಏ ನಾಗೇಶ -ಈ ಸಾರಿಯ ಇಲಸ್ಟ್ರೇಟೆಡ್ ವೀಕ್ಲಿ ಆಫ಼್ ಇಂಡಿಯಾ ಓದಿದ್ದಿಯ?”

ಕೃಷ್ಣಪ್ಪ ಸಂಭ್ರಮದಿಂದ ಕೇಳುತ್ತಾನೆ. ಸಾಯಂಕಾಲದ ಹೊತ್ತಲ್ಲಿ ಕೃಷ್ಣಪ್ಪನನ್ನು ನೋಡಲೆಂದು ಬಂದ ಅವನ ಪಕ್ಷದ ಇಪ್ಪತ್ತು ಎಂ.ಎಲ್.ಎಗಳ ಮಾತುಗಳನ್ನು ಕೇಳಿಸಿಕೊಳ್ಳುತ್ತ ವರಾಂಡದಲ್ಲಿ ಕೂತ ನಾಗೇಶ “ಯಾಕೆ ಗೌಡರೆ” ಎಂದು ಕೋಣೆಯೊಳಗೆ ಬರುತ್ತಾನೆ.

“ನೋಡು” ಎಂದು ಮಡಿಸಿದ ವೀಕ್ಲಿಯನ್ನು ಕೊಡುತ್ತಾನೆ. ಕೃಷ್ಣಪ್ಪನ ಮುಖ ಮೋಜಿನಿಂದ ಹಿಗ್ಗಿದ್ದನ್ನು ನಾಗೇಶ ಗಮನಿಸಿ ಓದಲು ಶುರುಮಾಡುತ್ತಾನೆ.

ಕೌಪೀನಧಾರಿಯಾದ ಬೈರಾಗಿಯ ದೊಡ್ಡದೊಂದು ಚಿತ್ರದ ಕೆಳಗೆ ಸರ್ಪಸಿದ್ಧೇಶ್ವರಾನಂದನೆಂದು ಬರೆದಿತ್ತು. ಬೈರಾಗಿಗೆ ಉದ್ದವಾದ ಬಿಳಿ ಗಡ್ಡ ಜಟೆಗಳು ಬೆಳೆದಿದ್ದವು. ಅವನು ಈ ಚಿತ್ರದಲ್ಲಿ ನಗುತ್ತಿದ್ದ. ಇನ್ನೊಂದು ಚಿತ್ರವಿತ್ತು -ಅದರಲ್ಲಿ ಬೈರಾಗಿ ಮರದ ಕೊಂಬೆಯೊಂದರ ಮೇಲೆ ಕೂತು ಮೈ ಕೆರೆದುಕೊಳ್ಳುತ್ತಿದ್ದ ಕಪಿಯಂತಿದ್ದ. ಹಲ್ಲು ಬಿದ್ದ ಬಾಯನ್ನು ಇಷ್ಟಗಲ ತೆಗೆದು ಪರಮ ಸುಖಿಯಂತೆ ಕಾಣುತ್ತಿದ್ದ.

“ನಾನು ಹೇಳ್ತ ಇದ್ದನಲ್ಲ -ನಮ್ಮ ಜಿಲ್ಲೆಯ ಬೈರಾಗಿ, ಮೌನಿ ಇವನೇ. ಗಟ್ಟಿಯಾಗಿ ಓದು”

ಬರೆದವನು ಉಪ್ಪು ಖಾರ ಬೆರೆಸಿರಬಹುದೆಂದು ಸಂಶಯವಾದರೂ ಲೇಖನ ಕೃಷ್ಣಪ್ಪನನ್ನು ಆಕರ್ಷಿಸಿತು. ಗೀತಾ ಪಠನಕ್ಕಾಗಿ ಮಾತ್ರ ತನ್ನ ಮೌನವನ್ನು ಮುರಿಯುತ್ತಿದ್ದ ಬೈರಾಗಿ ಕ್ರಮೇಣ ಪ್ರಸಿದ್ಧನಾದ ಕಥೆ ಲೇಖನದಲ್ಲಿತ್ತು. ಭಕ್ತರ ಮನಸ್ಸಿನಲ್ಲಿ ಕಾಣಿಸಿಕೊಂಡು ಮಾತಾಡುವನೆಂಬ ಪ್ರತೀತಿ ಹುಟ್ಟಿ ಜನ ಜಮಾಯಿಸುವುದು ಹೆಚ್ಚಾದಂತೆ ಒಂದು ದಿನ ಬೈರಾಗಿ ಗುಹೆ ಸೇರಿಬಿಟ್ಟ. ಹೊರಕ್ಕೆ ಬರಲೇ ಇಲ್ಲ. ಎರಡು ಮೂರು ದಿನಗಳಾದ ಮೇಲೆ ಬೆಟ್ಟದಲ್ಲಿ ನೆರೆದಿದ್ದ ಜನಸಮೂಹದಲ್ಲಿ ಒಬ್ಬಾತ ಈ ಮಹಿಮರೇನು ಮಾಡುತ್ತಿದ್ದಾರೆಂದು ನೋಡಲು ಗುಹೆಯಲ್ಲಿ ಇಣುಕಿದ. ಸರ್ಪದೋಪಾದಿಯಲ್ಲಿ ಬುಸ್ಸೆನ್ನುವ ಶಬ್ದ ಗುಹೆಯಿಂದ ಕೇಳಿಸಿತು. ಮಹಾತ್ಮರು ಈಶ್ವರನ ಶಿರಸ್ಸಿನ ಮೇಲೆ ಸರ್ಪದ ಭಾವ ತಾಳಿ ತಪಸ್ಸಿನಲ್ಲಿದ್ದಾರೆಂದು ಅವನು ನೆರೆದಿದ್ದ ಜನರಿಗೆ ಸಾರಿದ. ಪ್ರತಿ ದಿನ ಅವರು ನೈವೇದ್ಯವನ್ನು ಗುಹೆಯ ಬಾಯಲ್ಲಿ ತಳ್ಳಿ ಕಾಯುವರು. ಒಂದಷ್ಟನ್ನು ತಿಂದು ಉಳಿದದ್ದನ್ನು ಬೈರಾಗಿ ಹೊರಗೆಸೆಯುವನು. ಆ ಪ್ರಸಾದವನ್ನು ಭಕ್ತರೆಲ್ಲ ಒಂದೊಂದು ಅಗಳಾಗಿ ಹಂಚಿಕೊಳ್ಳುವರು. ಕೆಲವು ದಿನ ನೈವೇದ್ಯವನ್ನು ಬೈರಾಗಿ ಸ್ವೀಕರಿಸುತ್ತಿಲ್ಲವೆಂಬುದನ್ನು ಕಂಡ ಜನ ಗುಹೆಯ ಬಾಯಿಗೆ ಹೋಗಿ ಇಣುಕಿದರು. ಕತ್ತಲಲ್ಲಿ ಏನೂ ಕಾಣಲಿಲ್ಲ. ಆದರೆ ಬುಸ್ಸೆಂಬ ಶಬ್ದ ಜೋರಾಗಿ ಬಂತು -ಸಿಟ್ಟಿನಲ್ಲಿ ಇಣುಕಿದವರನ್ನು ಅಟ್ಟುವ ಥರ. ಮಹಾತ್ಮರು ಈಗ ಸರ್ಪವೇ ಆಗುದ್ದಾರೆಂದು ಭಕ್ತಾದಿಗಳೆಲ್ಲ ತಿಳಿದರು. ಆಮೇಲಿಂದ ಹಾಲನ್ನಿಡಲು ಶುರು ಮಾಡಿದರು.

ಹೀಗೆ ಮೂರು ಪಕ್ಷಗಳು ಕಳೆದ ಮೇಲೆ ಗುಹೆಯಿಂದ ಉಜ್ವಲವಾದ ಪ್ರಕಾಶದ ಮಹಿಮರು ಹೊರಗೆ ಬಂದರು. ಈಗವರು ಗೀತೆಯನ್ನು ಓದುವುದಿಲ್ಲ. ಮಾತೂ ಆಡುವುದಿಲ್ಲ. ಒಮ್ಮೊಮ್ಮೆ ಗಹಗಹಿಸಿ ನಗುವುದುಂಟು. ಅಥವಾ ಮರಹತ್ತಿ ಕೂತಿರುತ್ತಾರೆ.

ಸಹಸ್ರ ಸಂಖ್ಯೆಯಲ್ಲಿ ಪ್ರತಿನಿತ್ಯ ಈ ಸರ್ಪಸಿದ್ಧೇಶ್ವರಾನಂದರ ದರ್ಶನ ಪಡೆಯಲು ದೇಶಾದ್ಯಂತ ಜನ ನೆರೆಯುತ್ತಿದ್ದಾರೆ. ಇಲ್ಲಿ ಅನೇಕ ಪವಾಡಗಳು ನಡೆಯುತ್ತಾವೆಂಬ ಕಥೆಗಳಿವೆ. ಕೆಲವು ಸಾರಿ ಸರ್ಪಸಿದ್ಧೇಶ್ವರಾನಂದರು ಮತ್ತೆ ಗುಹೆ ಸೇರಿಬಿಡುತ್ತಾರೆ -ತಮ್ಮ ಸರ್ಪಸ್ವರೂಪಕ್ಕೆ ಮರಳಲೆಂದು. ಸರ್ಪರೂಪದಲ್ಲಿರುವ ಅವರನ್ನು ನೋಡಕೂಡದೆಂದೂ ನೋಡಿದರೆ ಸಾವು ಖಂಡಿತವೆಂದೂ ಜನರ ತಿಳುವಳಿಕೆ. ಕೆಲವು ದಿನ ಕಳೆದ ಮೇಲೆ ಮಹಿಮರೇ ಹೊರಬರುತ್ತಾರೆ -ನಗುತ್ತಾರೆ. ಮರ ಹತ್ತಿ ಕೂತಿರುತ್ತಾರೆ.

“ಏನನ್ನಿಸತ್ತೊ ನಿಂಗೆ?”

ಕೃಷ್ಣಪ್ಪ ಕುತೂಹಲದಿಂದ ಕೇಳುತ್ತಾನೆ.

“ಮೂಢನಂಬಿಕೆ ಅಷ್ಟೆ”

“ಈ ಬೈರಾಗಿ ಹುಚ್ಚನೂ ಇರಬಹುದು, ದೊಡ್ಡ ದ್ರಷ್ಟಾರನೂ ಇರಬಹುದು ಅಂತ ಅನುಮಾನ ನಿನಗಾಗಲ್ವ, ನಾಗೇಶ?”

“ಇಂಥದನ್ನು ನಂಬಿಕೊಂಡೇ ನಮ್ಮ ದೇಶ ಹೀಗಾಗಿದ್ದು”

“ಸರಿ”

“ನಮಗೆ ಬೇಕಾಗಿರೋದು ಅನ್ನ -ಅಧ್ಯಾತ್ಮ ಅಲ್ಲ”

ಕೃಷ್ಣಪ್ಪ ಸುಮ್ಮನಾದ್ದು ಕಂಡು ನಾಗೇಶ ಅವನನ್ನು ಹಾಸ್ಯ ಮಾಡುವ ಧೈರ್ಯ ತೋರಿಸುವನು!

“ಯಾಕೋ ಇತ್ತೀಚೆಗೆ ಗೌಡರು ಹಾಸಿಗೆ ಹಿಡಿದ ಮೇಲೆ ಈ ಮುಟ್ಠಾಳ ಢಾಂಬಿಕರನ್ನು ನಂಬೋ ಹಾಗೆ ಕಾಣುತ್ತೆ”

“ಅಣ್ಣಾಜೀನೂ ಹಾಗೆ ಹೇಳ್ತ ಇದ್ದ ಕಣಯ್ಯ”

ಕೃಷ್ಣಪ್ಪ ಆಲೋಚನೆಯಲ್ಲಿ ಮಗ್ನನಾಗಿದ್ದು, ಮೆಲ್ಲಗೆ ಹೇಳುವನು:

“ನೋಡು ನಾಗೇಶ, ದೇವರು ಇದ್ದೇ ಇದಾನೆ ಅಂತ ಒಬ್ಬನಿಗೆ ಗೊತ್ತು ಅನ್ನು. ನಂಬಿಕೆಯಲ್ಲ ನಾನು ಹೇಳೋದು -ನಿಶ್ಚಯವಾಗಿ ಗೊತ್ತು ಅನ್ನು. ಹಾಗೆ ಗೊತ್ತಿರೋದು ಸಾಧ್ಯವಿದ್ದರೆ ಅಂಥವನು ರಿಲಿಜಸ್ ಆಗೋದು ದೊಡ್ಡ ವಿಷಯ ಅಲ್ಲವೋ. ಬ್ಯಾಂಕಲ್ಲಿ ದುಡ್ಡಿಟ್ಟ ಹಾಗೆ ಅದು -ಬಡ್ಡಿ ಗ್ಯಾರಂಟಿ. ಆದರೆ ದೇವರು ಇದಾನೊ ಇಲ್ವೊ ಅನ್ನುವ ಆತಂಕದಲ್ಲೂ ದೇವರನ್ನ ನಂಬೋ ನಿರ್ಧಾರ ಮಾಡೋದಿದೆ ನೋಡು -ಅದು ನಿಜವಾದ ಶೌರ್ಯ. ಹಾಗೇನೇ ರಾಜಕೀಯದಲ್ಲಿ ನಮ್ಮ ಹೋರಾಟದಿಂದ ಪ್ರಗತಿಯಾಗತ್ತೆ, ಈ ಪ್ರಗತೀಂದ ಎಲ್ಲ ಒಳ್ಳೆದೇನೆ ಸಲೀಸಾಗಿ ಆಗ್ತ ಆಗ್ತ ಹೋಗತ್ತೆ ಅಂತ ತಿಳಿದು ಬಡವರ ಪರ ನಿಂತು ಕ್ರಾಂತಿಗೆ ಕೆಲಸ ಮಾಡೋದು ಒಂದು ವಿಧ. ಬಹಳ ಜನರ ಮಾರ್ಗ ಅದು. ಆದರೆ ನಾನು ವಾರಂಗಲ್‌ನಿಂದ ಹಿಂದೆ ಬಂದ ಮೇಲೆ ರಾಜಕೀಯಕ್ಕೆ ಧುಮುಕೋ ಮುಂಚೆ ನಾವು ತರೋ ಪ್ರಗತಿಯೆಲ್ಲ ಒಳ್ಳೇದನ್ನೆ ಮಾಡ್ತಾ ಹೋಗತ್ತೆ ಅಂತ ನಿಶ್ಚಯವಾಗಿ ತಿಳಿಯೋದು ನನಗೆ ಸಾಧ್ಯವಾಗ್ತಿರ್ಲಿಲ್ಲ. ಈಗಲೂ ಸಾಧ್ಯವಾಗ್ತಿಲ್ಲ. ಆದರೆ ಸುತ್ತಮುತ್ತಲಿನ ಕ್ಷುದ್ರತೆ, ದುಃಖ ಕಂಡಾಗ ಇದರ ವಿರುದ್ಧ ಹೋರಾಡೋದು ಅಗತ್ಯ ಅನ್ನೋದು ಮಾತ್ರ ನನಗೆ ಸ್ವಯಂಸಿದ್ಧ. ದೈನಿಕ ಜೀವನವೇ ಹೊಳೀಬೇಕು ಅಂತ ನನಗಿದ್ದ ಆಸೆ ಮಾತ್ರ ಸಫಲವಾಗಿಲ್ಲ. ನನ್ನ ಪ್ರಯತ್ನದಿಂದ ಅವತ್ತು ಒದೆಸಿಕೋತಿದ್ದ ಬೀರೇಗೌಡ ಇವತ್ತು ಇನ್ನೊಬ್ಬನನ್ನ ಒದೀತಿದಾನೆ. ಆದರೆ ಈ ಮಾತನ್ನು ಹೇಳೋವಾಗ ಸಮಾಜ ಚಲಿಸೋದರಲ್ಲಿ ಏನೂ ಅರ್ಥವಿಲ್ಲ ಅನ್ನೋ ಧ್ವನಿ ಹೊರಟರೆ ಅದೂ ಕೂಡ ಬಹಳ ಸುಲಭವಾದ ಸಲೀಸಾದ ಮಾತಾಗಿಬಿಡತ್ತೆ. ಏನನ್ನೂ ಮಾಡಲಾರದ ಮುಟ್ಠಾಳನೂ, ಏನೂ ಮಾಡಕೂಡದು ಅಂತ ವ್ಯವಸ್ಥೇನ್ನ ಕಾಪಾಡೋ ಕ್ರೂರಿಯೂ ಇದೇ ಮಾತಾಡ್ತಾನೆ ಅಲ್ವ? ಅಂದ್ರೆ ನಾನು ಹೇಳಬೇಕೂಂತಿರೋದು ನಾಗೇಶ……….”

ನಾಗೇಶ ಅರ್ಥವಾಗದೆ ಕೃಷ್ಣಪ್ಪನನ್ನು ನೋಡುತ್ತಾನೆ. ಬರಕೊಳ್ಳಲು ಪೆನ್ಸಿಲ್ ಎತ್ತಿಕೊಂಡದ್ದು ನೋಡಿ ಕೃಷ್ಣಪ್ಪ ಕಣ್ಣಿಂದ ಅದನ್ನು ತಡೆದು ಹೇಳುತ್ತಾನೆ:

“ಅಪಾರ್ಥಕ್ಕೆ ಎಡೆಗೊಡದೆ ನಾನು ಹೇಳಬೇಕೂಂತ ಇರೋದನ್ನ ಹೇಳಕ್ಕೆ ಆಗಲ್ವೊ ನಾಗೇಶ. ಹುಟ್ಟಿದ ಮೇಲೆ ಕರ್ಮದಲ್ಲಿ ತೊಡಗಲೇಬೇಕು, ಹೋರಾಡಲೇ ಬೇಕು. ಜೀವನಾನ ಕ್ಷುದ್ರಗೊಳಿಸೋ ತಮಸ್ಸನ್ನ ನೂಕತಾನೇ ಇರಬೇಕು. ಅಂದರೆ ನಮ್ಮ ಕ್ರಿಯೆಗಳ ಪರಿಣಾಮ ಹೀಗೂ ಆಗಬಹುದು ಹಾಗೂ ಆಗಬಹುದು ಅನ್ನೋ ಆತಂಕಾನ ಕಳಕೊಳ್ಳದಂತೆ…..”

ಕೃಷ್ಣಪ್ಪ ಮಾತು ಮುಗಿಸದೆ ಮುಖ ತಿರುಗಿಸಿ,

“ಹೊರಕೂತವರನ್ನ ಬರಹೇಳು” ಅನ್ನುತ್ತಾನೆ.

ಸದ್ಯದಲ್ಲೇ ಆಗಬಹುದಾದ ಪಕ್ಷಾಂತರದ ಗಲಿಬಿಲಿಯಲ್ಲಿ ತಾವು ಯಾವ ಪಾತ್ರ ವಹಿಸಬೇಕೆಂದು ಚರ್ಚಿಸಲು ಅವನ ಪಕ್ಷದ ಎಂ.ಎಲ್.ಎಗಳು ಬಂದಿದ್ದರು. ಅವರಲ್ಲಿ ಕೆಲವರು ಆಳುವ ಪಕ್ಷದಲ್ಲಿರುವ ಒಡಕು ತಮಗೆ ಅಸಂಬದ್ಧವೆಂದೂ ತಮ್ಮ ಕ್ರಾಂತಿಯ ಹಾದಿಯಲ್ಲಿ ಯಾರನ್ನೂ ಜೊತೆಗೆ ಕಟ್ಟಿಕೊಳ್ಳದೆ ಸಾಗಬೇಕೆಂದೂ ವಾದಿಸುವ ಉಗ್ರಧೋರಣೆಯವರು. ಹಲವರು ಆಳುವ ಪಕ್ಷದ ಒಡಕನ್ನು ಉಪಯೋಗಿಸಿಕೊಂಡು ಬೇರೊಂದು ಮಂತ್ರಿಮಂಡಲದ ರಚನೆಗೆ ತಾವು ಬೆಂಬಲ ಕೊಡಬೇಕೆಂದೂ ಹೀಗೆ ಬೆಂಬಲಿಸುವಾಗ ಒಂದು ಟೈಮ್ ಬೌಂಡ್ ಮಿನಿಮಮ್ ಪ್ರೋಗ್ರಾಂ ಗೆ ಬದ್ಧರಾಗಬೇಕೆಂದೂ ವಾದಿಸುವವರು. ಇವರಲ್ಲೂ ಈಗಿರುವ ಮುಖ್ಯಮಂತ್ರಿಗೇ ಬೆಂಬಲ ಕೊಡಬೇಕೆಂದು ಕೆಲವರ ವಾದ. ಮುಖ್ಯಮಂತ್ರಿಯ ಪ್ರತಿಸ್ಪರ್ಧಿಗೇ ಬೆಂಬಲ ಕೊಡಬೇಕೆಂದು ಉಳಿದವರ ವಾದ. ಮುಖ್ಯಮಂತ್ರಿಯ ಜೊತೆ ಈಗಾಗಲೇ ಮಾತಾಡಿರಬೇಕೆಂದು ’ಆ’ ಗುಂಪಿನ ಮೇಲೆ ’ಈ’ ಗುಂಪಿಗೆ ಸಂಶವಾದರೆ, ಭಯಂಕರ ದುಡ್ಡು ಚೆಲ್ಲುತ್ತಿರುವ ಪ್ರತಿಸ್ಪರ್ಧಿಯ ಜೊತೆ ಒಪ್ಪಂದವಾಗಿರಬೇಕೆಂದು ’ಈ’ ಗುಂಪಿನ ಮೇಲೆ ’ಆ’ ಗುಂಪಿನ ಸಂಶಯ. ವೀರಣ್ಣ ಕೃಷ್ಣಪ್ಪನ ಮೇಲೆ ತನಗಿರುವ ಪ್ರಭಾವ ಉಪಯೋಗಿಸಿ ’ಆ’ ಗುಂಪಿಗೆ ಬೆಂಬಲ ಕೊಡುವಂತೆ ಮಾಡಲು ಪ್ರಯತ್ನಿಸುತ್ತಿದ್ದ. ಈ ರಾಜಕೀಯವೇ ಅಸಂಬದ್ಧ ಎನ್ನುವ ಉಗ್ರರು ಹೆಚ್ಚಾಗಿ ಮಾತಿನ ಚಟದವರು. ಅಪಕ್ವ ಯುವಕರು, ಆದರೆ ಆದರ್ಶವಾದಿಗಳು; ಉಳಿದವರು ಜನಹಿತಕ್ಕಾಗಿ ನಿಜವಾಗಿ ದುಡಿದವರು, ದುಡಿದು ಸುಸ್ತಾದವರು; ಖದೀಮರು. ಕ್ರಾಂತಿಯ ಆಸ್ಫೋಟದಲ್ಲಿ ಮಾತ್ರ ಬದಲಾವಣೆ ಸಾಧ್ಯವೆಂದು ಒಬ್ಬರ ವಾದವಾದರೆ, ಆಡಳಿತದಲ್ಲಿ ಭಾಗವಹಿಸುವುದರ ಮೂಲಕ ಜನರನ್ನು ಕ್ರಾಂತಿಯ ದಿಕ್ಕಲ್ಲಿ ಹಚ್ಚಬಹುದೆಂದು ಇನ್ನೊಬ್ಬರ ವಾದ.

ಇವತ್ತು ಕೃಷ್ಣಪ್ಪನಲ್ಲಿ ಈ ವಾದ ವಿವಾದದಲ್ಲಿ ಭಾಗವಹಿಸುವ ಉಮೇದಿಲ್ಲದಿದ್ದರೂ ಅವರ ಜೊತೆ ಚರ್ಚಿಸಲು ಸನ್ನದ್ಧನಾದ.

*
*
*

ಸಹೋದ್ಯೋಗಿಗಳಲ್ಲಿ ಎಷ್ಟೇ ಭಿನ್ನಾಭಿಪ್ರಾಯಗಳಿದ್ದರೂ ತನ್ನ ಮಾತು ಅವರು ಮೀರುವುದಿಲ್ಲೆಂದು ಕೃಷ್ಣಪ್ಪನಿಗೆ ಸಮಾಧಾನವಾಗಿತ್ತು. ಬದುಕು ಮತ್ತು ಸಾವಿನ ಹೊಸ್ತಿಲಲ್ಲಿದ್ದೂ ತನ್ನ ವರ್ಚಸ್ಸು ಕುಗ್ಗಿರಲಿಲ್ಲ. ದೆಹಲಿಯ ಡಾಕ್ಟರ್ ಪರೀಕ್ಷೆ ಮಾಡಿ ಎಕ್ಸ್‌ಟೆಂನ್ಸಿವ್ ಡ್ಯಾಮೇಜ್ ಆಗಿಲ್ಲ -ಫ಼ಿಸಿಯೋಥೆರಪಿ ಈಗ ಮುಖ್ಯ ಎಂದಿದ್ದರು. ಕೃಷ್ಣಪ್ಪ ಒಟ್ಟಿನಲ್ಲಿ ಈ ಎಲ್ಲದರಿಂದ ಗೆಲುವಾಗಿದ್ದಾಗ ರಾತ್ರೆ ಗೌರಿ ದೇಶಪಾಂಡೆಯ ಟೆಲಿಗ್ರಾಂ ಬಂತು -ನಾಡಿದ್ದು ಭಾನುವಾರ ಸಂಜೆ ವಿಮಾನದಲ್ಲಿ ಬರುತ್ತಿದ್ದೇನೆಂದು. ಅವಳು ದೆಹಲಿಗೆ ಅಮೆರಿಕಾದಿಂದ ಬಂದು ಆರು ತಿಂಗಳು ಮೇಲಾಗಿತ್ತು. ಅವಳನ್ನು ನೋಡಿ ಎಷ್ಟೋ ವರ್ಷಗಳಾಗಿಬಿಟ್ಟಿದ್ದುವು. ಈಗ ಹೇಗೆ ಕಾಣುವಳೊ. ದೆಹಲಿಗೆ ಬಂದವಳೇ ತನ್ನನ್ನು ನೋಡುವಳೆಂದು ಆಸೆಪಟ್ಟಿದ್ದ. ಬರಲಿಲ್ಲವಾದ್ದರಿಂದ ಅವಳು ತನ್ನ ಬಗ್ಗೆ ತಣ್ಣಗಾಗಿರಬಹುದೆಂದು ಭಾವಿಸಿದ್ದ. ಈಗ ಬರುತ್ತಿದ್ದಾಳೆ; ಎರಡು ದಿನ ಕಳೆದು. ಅಂದರೆ ಅವಸರಪಡದೆ, ಖಾಯಿಲೆ ಹಿಡಿದು ಮಲಗಿದ ಮೇಲೆ ತನ್ನ ಆತ್ಮರತಿ ಉಲ್ಬಣವಾಗಿದ್ದರಿಂದ ಹೀಗೆ ಯೋಚಿಸುತ್ತಿದ್ದೀನಲ್ಲವೆ ಎಂದು ಹೇಸಿಗೆಪಟ್ಟ.

ಸೀತೆ ತಂದಿಟ್ಟ ಪ್ಯಾನ್‌ನಲ್ಲಿ ಬೆಳಗಿನ ತನ್ನ ವಿಸರ್ಜನೆಗಳಲ್ಲಿ ತೊಡಗಿದ್ದಾಗ ಮಹೇಶ್ವರಯ್ಯ ಬಂದುಬಿಟ್ಟರು. ಕೃಷ್ಣಪ್ಪ ಆವೇಗದಿಂದ ಉಸಿರಾಡುತ್ತ ಹೊರಗೆ ಅವರು ಮಾತಾಡುವುದನ್ನು ಕೇಳಿಸಿಕೊಂಡ. ನಾಗೇಶ ಖಾಹಿಲೆ ವಿಷಯ ಹೇಳುತ್ತಿದ್ದಾನೆ. ಮಹೇಶ್ವರಯ್ಯ ಮಾತಾಡುವುದೇ ಇಲ್ಲ. ತನ್ನ ಭಾವವನ್ನು ತೋರಿಸಿಕೊಳ್ಳುವ ಮನುಷ್ಯನೂ ಅಲ್ಲ ಅವರು, ಅವರಿಗಾಗಿರುವ ಆಘಾತ ಊಹಿಸುತ್ತ ಕೃಷ್ಣಪ್ಪನಿಗೆ ಸಂಕಟವಾಯಿತು. ಎಪ್ಪತ್ತರ ಅವರ ವಯಸ್ಸಲ್ಲಿ ತನ್ನಿಂದ ಈ ದುಃಖ ಅವರಿಗಾಗಬಾರದಾಗಿತ್ತು.

ಬಿಸಿನೀರಿನಲ್ಲಿ ಒದ್ದೆ ಮಾಡಿದ ಬಟ್ಟೆಯಿಂದ ಸೀತೆ ಕೃಷ್ಣಪ್ಪನ ಮೈಯನ್ನು ಒರೆಸುತ್ತಿದ್ದಳು. ನಾಳೆಯಿಂದ ಈ ಕೆಲಸ ಮಾಡಲು ನರ್ಸ್ ಬರುತ್ತಾಳೆ. ಕಿರಿಕಿರಿಪಡುತ್ತ ಬ್ಯಾಂಕಿಗೆ ಹೋಗುವ ಅವಸರದಲ್ಲಿ ಸೀತೆ ಮಾಡುವ ಸೇವೆ ಕೃಷ್ಣಪ್ಪನಿಗೆ ಇಷ್ಟವಾಗುವುದಿಲ್ಲ. ಇವತ್ತು ಅವಳ ಮುಖದಲ್ಲಿ ಉರಿಯುವಂತೆ ಕಂಡ ದುಗುಡಕ್ಕೆ ಬೇರೆ ಕಾರಣವಿದೆ. ತನಗೆ ತುಂಬ ಪ್ರಿಯರಾದವರು ಯಾರು ಮನೆಗೆ ಬಂದರೂ ಅವಳಿಗೆ ಕರೆಕರೆ -ಅಭದ್ರ ಭಾವನೆ.

“ಕುದುರೆ ಬಾಲಾನ ಅಟ್ಟಿಕೊಂಡು ಬಂದಿರ್ಬೇಕು. ಈವಯ್ಯನ ಮುಖ ಕಂಡು ವರ್ಷದ ಮೇಲಾಯ್ತು” ಬೆನ್ನನ್ನು ಒರೆಸುತ್ತ ಸೀತೆ ಹೇಳುತ್ತಾಳೆ.

ಕೃಷ್ಣಪ್ಪನಿಗೆ ರುಮ್ಮನೆ ಸಿಟ್ಟು ಬಂತು. ತಾನೇನೆಂದು ಮಾಡುತ್ತಿದ್ದೇನೆಂದು ತಿಳಿಯೋದರ ಒಳಗೆ ಇನ್ನೂ ಶಕ್ತಿಯಿದ್ದ ತನ್ನ ಬಲಗೈಯಿಂದ ಅವಳನ್ನು ಗುದ್ದಿದ. ಅವಳು ಆದ ನೋವಿಗಿಂತ ಹೆಚ್ಚು ಸಂಕಟಪಡುತ್ತ “ಅಯ್ಯೋ” ಎಂದು ಕೂತು ಅಳತೊಡಗಿದಳು. ಕೃಷ್ಣಪ್ಪನಿಗೆ ತನ್ನ ಬಗ್ಗೆ ಅವಳ ಬಗ್ಗೆ ಹೇಸಿಗೆಯಾಗಿ ಸತ್ತುಬಿಡಬೇಕೆನ್ನಿಸಿತು. “ಹೆಣ್ಣುಹೆಂಗಸಿನ ಮೇಲೆ ಕೈ ಮಾಡೋ ಇವರು ಕ್ರಾಂತಿ ಮಾಡ್ತಾರಂತೆ-” ಶುರುವಾಯಿತು ಸೀತೆಯ ಗೊಣಗಾಟ. ಹೊಡೆದ ಮೇಲೆ ಅವನಿಗೆ ಕೂಡ ಹಾಗೆನ್ನಿಸುವುದರಿಂದ ಮಂಕಾಗಿ ಕೂತು ಕಾದ. ಅವಳೇ ಬಟ್ಟೆ ತೊಡಿಸಬೇಕು ಇನ್ನು. ಅವನ ಒಂದು ತಿಂಗಳ ಬಿಳಿಕಪ್ಪು ಮಿಶ್ರವಾದ ಗಡ್ಡದಲ್ಲಿ ಬಲಗೈಯ ಬೆರಳಾಡಿಸುತ್ತ ಸುಮ್ಮನೆ ಕೂರುತ್ತಾನೆ. ಸ್ಟ್ರೋಕ್ ಹೊಡೆದ ಮೇಲೆ ಬೆಳೆದ ಗಡ್ಡ ಇದು. ಈ ಗಡ್ಡ ಮೆಚ್ಚಿಗೆಯಾಗಿರೋದು ತನ್ನನ್ನು ಲೆನಿನ್ನಾಗಿ ನೋಡಲು ಬಯಸುವ ನಾಗೇಶನೊಬ್ಬನಿಗೇ. ಹೀಗೆ ಏನೇನೋ ಯೋಚಿಸುತ್ತ ಮೂಗನ್ನು ಸೀನಿಕೊಂಡು ಅಳುತ್ತ ಕೂತ ಸೀತೆಯನ್ನು ಮರೆಯಲು ಪ್ರಯತ್ನಿಸುತ್ತಾನೆ. ಆಗಲ್ಲ, ಅವಳು ಗೊಣಗುತ್ತ ಪಂಚೆಯುಡಿಸಿ ಜುಬ್ಬ ಹಾಕಿ ತಲೆ ಬಾಚಿಕೊಳ್ಳಲು ಬಾಚಣಿಗೆಯನ್ನು ಬಲಗೈಯಲ್ಲಿ ಇಡುತ್ತಾಳೆ. ಅವನು ಕೂತಿದ್ದ ವೀಲ್‌ಚೇರನ್ನು ರೂಮಿಗೆ ತಳ್ಳಿ ಗೊಣಗುತ್ತಲೇ ಅಡಿಗೆ ಮನೆಗೆ ಹೋಗುತ್ತಾಳೆ. ಅಡಿಗೆ ಮನೆಯಲ್ಲಿ ಮಗಳು ಗೌರಿ ವರಾತ ಹಿಡಿದಿದ್ದಾಳೆ. ಈಗ ಅವಳಿಗೆ ದಬದಬನೆ ಏಟು ಬೀಳುವುದಿದೆ.

ಮಹೇಶ್ವರಯ್ಯ ಒಳಗೆ ಬಂದು ಕೂತರು. ಮಾತಾಡಲಿಲ್ಲ. ಒಂದು ವರ್ಷದಲ್ಲೇ ಎಷ್ಟು ಮುದಿಯಾಗಿಬಿಟ್ಟಿದ್ದಾರೆಂದು ಅವರ ಮುಖವನ್ನೆ ದಿಟ್ಟಿಸಿದ. ಅವರ ನಡಿಗೆಯಲ್ಲಿ ಮುಖದಲ್ಲಿ ಹಿಂದಿದ್ದ ಧೃಡತೆ ಇರಲಿಲ್ಲ. ಕಣ್ಣಿಗೆ ಕೆಳಗೆ ಗಲ್ಲದ ಬಳಿ ಚರ್ಮ ಜೋತು ಬಿದ್ದಿತ್ತು. ಉಟ್ಟಬಟ್ಟೆಯಲ್ಲಿ ಹಿಂದಿನ ಶುಚಿ ಇರಲಿಲ್ಲ. ಹಣೆಯ ಮೇಲೆ ಕುಂಕುಮವಿರಲಿಲ್ಲ.

“ಎಲ್ಲಿ ಉಳ್ಕೊಂಡಿದೀರಿ?”

“ಅದೇ ನಿನ್ನ ಹಿಂದಿನ ಮನೆ -ಗಾಂಧೀ ಬಜ಼ಾರಿನಲ್ಲಿ ಇದ್ದದ್ದು -ಅಲ್ಲಿಗೆ ಹೋದೆ. ಅಲ್ಲಿಂದ ನೀನೇ ಬಿಟ್ಟದ್ದು ತಿಳಿದು ದಾರೀಲಿ ಸಿಕ್ಕ ಒಂದು ಹೋಟೆಲಲ್ಲಿ ಟ್ರಂಕನ್ನಿಟ್ಟು ಸ್ನಾನ ಮಾಡಿ ಬಂದೆ” ಎಂದು ಕೃಷ್ಣಪ್ಪನನ್ನು ಅಕ್ಕರೆಯಿಂದ ನೋಡಿದರು.

“ಆದರೆ ಅಲ್ಲಿ ಬರ್ತಿದ್ದವರು ಯಾರೂ ಇಲ್ಲಿಗೆ ಬರಲ್ಲ. ರೈತಾಪಿ ಜನಕ್ಕೆ ಇಲ್ಲಿಗೆ ಬರೋದಕ್ಕೆ ಬಸ್ಸಿನ ಸೌಕರ್ಯ ಸಾಲದು. ದೊಡ್ಡ ಜನರಿರೋ ಜಾಗವಲ್ವ? ಬಂದರೂ ದಂಗು ಬಡಿದು ನಿಲ್ಲುತ್ತಾರೆ. ಹಿಂದಿನಂತೆ ನೆಲದ ಮೇಲೆ ಕೂತು ಮಾತಾಡಲ್ಲ….”

ಕೃಷ್ಣಪ್ಪ ಕೊರಗುತ್ತ ಮಾತಾಡಿದ್ದನ್ನು ಕೇಳಿಸಿಕೊಳ್ಳುತ್ತ ಮಹೇಶ್ವರಯ್ಯ

“ಈಗ ನಿನಗೆ ಇಷ್ಟಾದರೂ ಸೌಕರ್ಯ ಬೇಡವೆ?” ಎಂದು ಅವನ ಮಾತನ್ನು ತಳ್ಳಿಹಾಕಿದರು. ಮತ್ತೆ ಇಬ್ಬರೂ ಮೌನವಾಗಿ ಕೂತರು. ಗೌರಿ ದೊಡ್ಡದಾಗಿ ಅಳುತ್ತ ಕೋಣೆಗೆ ಓಡಿಬಂದು ಅಲ್ಲಿ ಮಹೇಶ್ವರಯ್ಯನನ್ನು ಕಂಡು ಅಳು ನಿಲ್ಲಿಸಿ ಅಪ್ಪನ ಪಕ್ಕದಲ್ಲಿ ನಿಂತು ಬಿಕ್ಕಿದಳು: ಮಹೇಶ್ವರಯ್ಯ ಕೈಚೀಲದಿಂದ ದೊಡ್ಡದೊಂದು ಚಾಕಲೇಟುಗಳನ್ನು ಕಟ್ಟಿದ ಪೊಟ್ಟಣವನ್ನು ಅವಳ ಕೈಯಲ್ಲಿತ್ತು, “ಅಮ್ಮನ ಹತ್ತಿರ ಕೊಡು. ಈಗ ನೀನೊಂದು ತಿನ್ನು” ಎಂದು ಒಂದು ಚಾಕಲೇಟನ್ನು ಸುಲಿದು ಅವಳ ಬಾಯಲ್ಲಿಟ್ಟರು.

ಮಹೇಶ್ವರಯ್ಯ ಏನನ್ನೋ ಹೇಳಲು ಪ್ರಯತ್ನಿಸುತ್ತಿರುವಂತೆ ಕಂಡಿತು. ಅವರು ನಿಶ್ಚಲರಾಗಿ ಕೂತು ಯಾವುದಾದರೊಂದು ವಸ್ತುವನ್ನು ದುರುಗುಟ್ಟಿ ನೋಡತೊಡಗಿದರೆ ಏನನ್ನೋ ಹೇಳಲು ಸಿದ್ಧರಾಗುತ್ತಿದ್ದಾರೆ ಎಂದು ಅರ್ಥ. ಈಗ ಏನನ್ನಾದರೂ ಹೇಳಬೇಕಾದ ತನ್ನ ಒತ್ತಾಯ ಅವರ ಮೇಲಿಲ್ಲವೆಂದು ಸೂಚಿಸಲು ಕೃಷ್ಣಪ್ಪ ಬೇಳಗಿನ ಪತ್ರಿಕೆಯನ್ನು ಓದುತ್ತ ಕೂತ. ಕೈಕಾಲುಗಳನ್ನು ಎತ್ತಲು ಪ್ರಯತ್ನಿಸುವ ವ್ಯಾಯಾಮ ಕೂಡ ಅವರ ಏಕಾಗ್ರತೆಗೆ ಭಂಗ ತರುವಂತೆ ವಾತಾವರಣದಲ್ಲಿ ಒತ್ತಡವನ್ನುಂಟು ಮಾಡೀತು.

ಮೈಯೆಲ್ಲ ಕಿವಿ ಕಣ್ಣುಗಳಾಗಿ ಕೂರುವ ಹಕ್ಕಿಯನ್ನು ತೋರಿಸಿ ಮಹೇಶ್ವರಯ್ಯ ಅನ್ನುತ್ತಿದ್ದರು -“ಹಾಗಿರಬೇಕು ನಾವು” “ಪ್ರಪಂಚ ಸದಾ ನಮ್ಮ ಕಣ್ಣೆದುರಿಗಿರುತ್ತೆ. ಆದರೆ ಏನನ್ನೂ ನೋಡಲ್ವೊ ನಾವು. ನೋಡೋದೂಂದ್ರೆ ಪ್ರವೇಶ – ಹಿಡಿಯೋದು -ಗಪ್ಪಂತ ಹಿಡಿಯೋದು.” ಪೇಪರ್ ಓದುತ್ತ ಮಹೇಶ್ವರಯ್ಯ ಅಂದಿದ್ದ ಮಾತುಗಳನ್ನು ನೆನೆಯುತ್ತಿದ್ದಂತೆ ಯಾರೋ ಕೋಣೆಯೊಳಗೆ “ನಮಸ್ಕಾರ ಗೌಡರೆ” ಎಂದು ದೊಡ್ಡದಾಗಿ ಮಾತಾಡುತ್ತ ವಕ್ಕರಿಸಿದರು. ಮಹೇಶ್ವರಯ್ಯ ಕೃಷ್ಣಪ್ಪ ಬೆಚ್ಚಿ ನೋಡಲು ಎದುರು ಪಂಚಲಿಂಗಯ್ಯ ನಿಂತಿದ್ದರು. ಚಿಕ್ಕಮಗಳೂರಲ್ಲಿ ಕಾಫ಼ಿ ತೋಟದ ಮಾಲೀಕರು.

“ಏನು ಗೌಡರೆ -ಛೇ ಛೇ ಇದೇನು ನಿಮಗಾಗಿದ್ದು? ಎಷ್ಟು ಗಟ್ಟಿಮುಟ್ಟಾಗಿದ್ದಿರಿ?”

ಕೃಷ್ಣಪ್ಪ ಕುಗ್ಗುತ್ತ ಕೂತ.

“ಇಲ್ಲೊಬ್ರು ಸ್ಪೆಶಲಿಸ್ಟ್ ನಂಗೆ ಗುರ್ತಿದಾರೆ. ಕಾರಲ್ಲಿ ಹೋಗಿ ಕರ್ಕೊಂಬರ್ತೀನಿ.”

ಪಂಚಲಿಂಗಯ್ಯನ ಒತ್ತಾಯವನ್ನು ತಳ್ಳುತ್ತ, “ಬೇಡಿ -ಪರೀಕ್ಷೆ ಮಾಡಿಸಿಕೊಂಡಿದೀನಿ. ಏನು ಬಂದರಲ್ಲ?” ಎಂದು ಕೃಷ್ಣಪ್ಪ ಕೇಳಿದ.

“ಉಡುಪೀಲೊಂದು ಮೆಡಿಕಲ್ ಕಾಲೇಜಿದೆಯಲ್ಲ -ಅದನ್ನ ನಡೆಸೋವ್ರಿಗೆ ನೀವೂಂದ್ರೆ ಭಾರಿ ಗೌರವವಂತೆ. ಎಷ್ಟು ಡೊನೇಶನ್ ಕೇಳಿದರೂ ಕೊಡ್ತೀನಿ ಮಾರಾಯ್ರೆ -ಆದ್ರೂ ನಿಮ್ದೂ ಒಂದು ಮಾತು ಬೇಕು ನೋಡಿ ನನ್ನ ಮಗನಿಗೆ ಸೀಟ್ ಸಿಗಾಕೆ. ಎಲ್ಲ ಹೇಳ್ತಾರೆ -ಗೌಡರು ಜಪ್ಪಯ್ಯಾಂದ್ರೂ ಹೇಳಲ್ಲ ಅಂತ. ಅದಕ್ಕೇ ನಿಮ್ಮ ಮಾತಿಗಷ್ಟು ಬೆಲೆ ನೋಡಿ………ಹೌದ? ಒಂದು ಸುದ್ದಿ ಕೇಳಿ ಬಾಳ ಸಂತೋಷ ಆತು. ಆದರೆ ನೀವು ಹೀಗೆ ಮಲಗಿಬಿಟ್ಟಿದ್ದೀರಲ್ಲ?”

ಕೃಷ್ಣಪ್ಪ ಅವರ ಮಾತು ತನಗರ್ಥವಾಗಲಿಲ್ಲೆಂದು ಪ್ರಶ್ನಾರ್ಥಕವಾಗಿ ನೋಡಿದ. ಪಂಚಲಿಂಗಯ್ಯ ನಕ್ಕರು. ತಮ್ಮ ಹಿಂದೆ ನಿಂತ ಮಗನನ್ನು ತೋರಿಸಿ -“ಇವನೇ ಫ಼ಸ್ಟ್ ಅಟೆಂಪ್ಟಲ್ಲೇ ಪಾಸಾಗಿದಾನೆ. ಪರೀಕ್ಷೇಲಿ ಸ್ವಲ್ಪ ಮೈ ಸರಿಯಿರಲಿಲ್ಲ. ಇಲ್ದಿದ್ರೆ ಫ಼ಸ್ಟ್ ಕ್ಲಾಸ್ ತೊಗೋತಿದ್ದ. ನನ್ನ ಹತ್ತಿರ ಇರೋ ದುಡ್ಡನ್ನ ಕಟ್ಟಿಕೊಂಡು ಸಾಯಲಾ ನಾನು? ಇರೋನು ಒಬ್ಬನೇ ಮಗ. ಫ಼ಾರಿನ್‌ಗೆ ಹೋಗಬೇಕೂಂತ ಆಸೆ. ಮೆಡಿಕಲ್ ಮೆಡಿಕಲ್ ಅಂತ ದುಂಬಾಲು ಬಿದ್ದಿದ್ದಾನೆ. ಏನು ಮಾಡಬೇಕು ಹೇಳಿ ದುಡ್ಡನ್ನ? ನಿಮ್ಮಂಥೋರು ಮಾಡೋ ಒಳ್ಳೆ ಕೆಲಸಕ್ಕೋ ವಿದ್ಯೆಗೋ ಅದನ್ನೆಲ್ಲ ಚೆಲ್ಲೋದೂಂತ ಮನಸ್ಸು ಮಾಡಿದೀನಿ……..ಹೌದ? ನಿಮಗೆ ಗೊತ್ತೇ ಇಲ್ಲವ? ಇಡೀ ಬೆಂಗಳೂರೇ ಮಾತಾಡ್ಕೋತಿದೆ. ನಿನ್ನೆ ಗಾಲ್ಫ್ ಕ್ಲಬ್ಬಲ್ಲಿ ಅದೇ ಮಾತು. ನಿಮಗೇ ಗೊತ್ತಿಲ್ಲಾಂದ್ರೆ ಆಶ್ಚರ್ಯ ಮಾರಾಯ್ರ. ನೀವೇ ಮುಖ್ಯಮಂತ್ರಿ ಆಗ್ತೀರೀಂತ ಸುದ್ದಿ ಇದೆ. ಸಂತೋಷ. ಆದರೆ ನಿಮ್ಮನ್ನ ಆಮೇಲೆ ಹಿಂಗೆ ಮಾತಾಡಿಸಾಕೆ ಸಾಧ್ಯವೇ ಇಲ್ಲ….ಏನೋ ಮಾತಾಡ್ತ ಇದ್ರಿ. ಸಾಯಂಕಾಲ ಬಂದು ನೋಡ್ತೀನಿ. ಈಗ ನೀವು ಹೂಂತ್ಲೂ ಅನ್ನಬೇಡಿ ಉಹೂಂತ್ಲೂ ಅನ್ನಬೇಡಿ. ನೀವೇ ಖುದ್ದು ಹೇಳೋದೂ ಕೂಡದು. ಚೀಪಾಗಿ ಬಿಡ್ತದೆ -ನಂಗೊತ್ತು. ಅದಕ್ಕೊಂದು ಬೇರೆ ಮಾರ್ಗ ಇದೆ. ವೀರಣ್ಣನ ಹತ್ರ ಮಾತಾಡ್ತೀನಿ -ಸಾಯಂಕಾಲ ನೋಡಾನ…..ಬಾಳ ಒಳ್ಳೆ ಡಾಕ್ಟ್ರು ಅವರು ಮಾರಾಯ್ರ. ಸಾಯಂಕಾಲ ಕರ್ಕೊಂಬರ್ತೀನ್ರಿ…….” ಎಂದು ಪಂಚಲಿಂಗಯ್ಯ ನಮಸ್ಕಾರ ಮಾಡಿ ನಗುತ್ತ ಮಗನ ಜೊತೆ ಕೋಣೆಯಿಂದ ಹೊರಬಿದ್ದರು.

“ನೋಡಿ ಇಂಥವ್ರೆ ನನ್ನ ಹತ್ರ ಬರೋದು ಈಗ”

ಕೃಷ್ಣಪ್ಪ ದುಃಖದಿಂದ ಮಾತಾಡಿದ್ದು ಕೇಳಿ ಮಹೇಶ್ವರಯ್ಯ

“ನನಗೆ ಈಚೆಗೆ ಮನಸ್ಸನ್ನ ಒಂದು ಕಡೆ ನಿಲ್ಲಿಸೋಕೇ ಸಾಧ್ಯ ಆಗ್ತಾ ಇಲ್ಲ ಕಣಯ್ಯ. ಕಚ್ಚೆ ಹರಕನಂತೆ ಸುಮ್ಮನೆ ಅಲೆಯುತ್ತೆ ದರಿದ್ರದ್ದು” ಎಂದು ನಕ್ಕರು. ಕ್ಷಣ ಮೌನವಾಗಿದ್ದು,

“ನಿಂಗೆ ಮತ್ತೆ ಆ ಮರದ ಕೆಳಗೆ ಕೂತಿರಬೇಕೂಂತ ಅನ್ನಿಸತ್ತೆ ಕಣಯ್ಯ. ಪೇರಳೇ ಗಿಡದ ಮೇಲೆ ಬರೋ ಹಕ್ಕಿಗಳಿಗಾಗಿ ಕಾಯ್ತಾ ಕೂತಿರಬೇಕೂಂತ ಹಂಬಲಿಸಲಿಕ್ಕೆ ಶುರು ಮಾಡ್ತಿ ನೀನು. ಅದೇನು ಹೇಳಬೇಕೂಂತ ಇದ್ದೆ ಗೊತ್ತಾ? ಹೀಗೇ ನಾನು ಯೋಚಿಸ್ತಾ ಇದ್ದೆ! ನಿನಗೆ ಸ್ಟ್ರೋಕ್ ಆದಾಗ ನನಗೆ ಏನಾದರೂ ಅನ್ನಿಸಬೇಕಿತ್ತಲ್ಲ ಅಂತ. ಆದರೆ ನೋಡು ಈಗ ನನ್ನ ಮನಸ್ಸಿಗೆ ಕುದುರೆ ಚಪಲ ಹತ್ತಿಕೊಂಡಿದೆ. ಯಾವಾಗಲೂ ಏನಾದರೂ ಉದ್ರೇಕ ಬೇಕು ಅನ್ನಿಸತ್ತೆ. ಕುಡೀಲಿಕ್ಕೆ ಶುರು ಮಾಡಿದ್ರೆ ದಿನವಿಡೀ ಕುಡೀತ ಕೂತಿರ್ತೀನಿ. ಇಲ್ಲ ಹೀಗೆ ಅಲೀಲಿಕ್ಕೆ ಶುರುಮಾಡ್ತೀನಿ. ನೋಡು -ಈಗ್ಲೇ ನೋಡು ನನ್ನ -ಹೇಗೆ ಮನಸ್ಸು ಅಲೀತಿದೆ ಅಂತ. ಈಗ ಯೋಚಿಸ್ತ ಯೋಚಿಸ್ತ ಏನೋ ಹೇಳಬೇಕೂಂತಿದ್ದಾಗ ಆ ನಾಲ್ಕು ಬೆರಳಿಗೂ ಉಂಗುರ ಹಾಕ್ಕೊಂಡವರು ಬಂದು ಬಿಟ್ರು……ಅದೇನಿಲ್ಲ -ನೀನು ಹುಷಾರಾಗ್ತಿ ಅಂತ ಕಾಣಿಸುತ್ತೆ ನಂಗೆ -ಅದನ್ನೇ ಹೇಳಲಿಕ್ಕೆ ಹೋಗಿದ್ದೆ.”

ಕೊನೆಯ ವಾಕ್ಯವನ್ನು ಸಪ್ಪೆಯಾದ ಧ್ವನಿಯಲ್ಲಿ ಹೇಳಿದರು.

“ನನ್ನ ಸಮಾಧಾನಕ್ಕಲ್ಲವಲ್ಲ ನೀವು ಹೇಳೋದು?”

ಮಹೇಶ್ವರಯ್ಯ ಕೃಷ್ಣಪ್ಪನನ್ನು ನೋಡುತ್ತ ಗಂಭೀರವಾಗಿ “ಅಲ್ಲ” ಎಂದರು. ಸ್ವಲ್ಪ ತಡೆದು ಗೆಲುವಾಗಿ “ನೋಡಯ್ಯ ಈ ಕುದುರೆ ವ್ಯವಹಾರದಲ್ಲಿ ಮಾತ್ರ ನಂದೇ ನನಗೆ ಕಾಣಿಸಲ್ಲ: ಏನೂಂದ್ರೆ ಏನೂ ಕಾಣಿಸಲ್ಲ. ಒಟ್ಟಿನಲ್ಲಿ ಬುದ್ಧಿ ತೆಳ್ಳಗಾಗಿಬಿಟ್ಟಿದೆ. ಈಗ ಆದ್ದು ಮುಂದಿನ ಕ್ಷಣ ಮರೆತು ಹೋಗಿರುತ್ತೆ”

“ನೀವು ಇಲ್ಲೆ ಬಂದಿರಿ -”

“ನಿನ್ನ ಹೆಂಡತಿಗೆ ತೊಂದರೆಯಾಗಬಹುದು ಕಣೊ -”

“ಬನ್ನಿ”

ಆಗಲೆಂದು ಮಹೇಶ್ವರಯ್ಯ ಎದ್ದು ನಿಂತು –

“ಇವತ್ತು ನನ್ನ ಅದೃಷ್ಟ ಪರೀಕ್ಷೆ ಮಾಡಿಕೋತೀನಿ. ರಾತ್ರೆ ಬರ್ತೀನಿ” ಎಂದು ಹೋದರು.

ಕೃಷ್ಣಪ್ಪನಲ್ಲಿ ತುಂಬ ಲವಲವಿಕೆ ಮೂಡಿತು. ಖುಷಿಯಿಂದ “ನಾಗೇಶಾ” ಎಂದು ಕರೆದ. ನಾಗೇಶ ಸಪ್ಪಗಿರೋದು ಕಂಡು “ಯಾಕೋ” ಎಂದ. “ಯಾಕಿಲ್ಲ ಗೌಡರೆ” ಎಂದದ್ದಕ್ಕೆ “ಹೇಳೋ” ಎಂದು ಒತ್ತಾಯ ಮಾಡಿದ.

“ಅದೇ ನನ್ನ ಅಕ್ಕ ಕ್ಲಾರ್ಕ್ ಆಗಿದ್ದಳಲ್ಲ ಅವಳ ಕೆಲಸ ಹೋಯ್ತಂತೆ”

“ಅದಕ್ಯಾಕೆ ಯೋಚಿಸ್ತಿ. ವೀರಣ್ಣನಿಗೆ ಹೇಳಿ ಅವರ ಥಿಯೇಟರಿನಲ್ಲಿ ಕೊಡಿಸ್ತೀನಿ”

“ನಿಮ್ಮ ಹತ್ರ ಇಂಥ ಕೆಲಸ ಮಾಡಿಸೋಕೆ ಇಷ್ಟವಿಲ್ಲ ನಂಗೆ ಗೌಡ್ರೆ”

“ಭೇಷ್ ನಿಂಗೊಬ್ಬನಿಗಾದ್ರೂ ಹಾಗನ್ನಿಸತ್ತಲ್ಲ. ಗೌರಿ ದೇಶಪಾಂಡೆ ನಾಳೆ ರಾತ್ರೆ ಬರೋದು ಅಲ್ವೇನೊ?”

“ಹೌದು”

“ಅವಳನ್ನೆಲ್ಲಿ ಇಳಿಸುವುದೆಂದು ಚಿಂತೆಯಾಯ್ತು. ಮನೆಯಲ್ಲೆ ಇಳಿಸಬಹುದು. ಆದರೆ ಸೀತೆ ರಂಪ ಮಾಡಿಯಾಳು. ಹೋಟಲಲ್ಲಿ ಒಬ್ಬಳೇ ಇರೂಂತ ಹೇಗೆ ಹೇಳೋದು? ಎಲ್ಲಿ ಇಳಿಸೋದೋ ಅವಳನ್ನ?”

“ವೀರಣ್ಣನೋರ ಗೆಸ್ಟ್ ಹೌಸ್ ಇದೆಯಲ್ಲ ಗೌಡರೆ”

“ನೋಡಿದೆಯಾ ಹೇಗೆ ಕ್ರಮೇಣ ನಾನು ವೀರಣ್ಣನೋರ ಬಲೇಲಿ ಸಿಕ್ಕಿ ಹಾಕಿಕೋತಿದೀನಿ ಅಂತ.”

“ನಿಮ್ಮನ್ನ ಯಾರಿಗೆ ಕಟ್ಟಿಹಾಕಲಿಕ್ಕೆ ಸಾಧ್ಯ?”

“ನಿಂಗೊತ್ತಿಲ್ಲ ಅಷ್ಟೆ -ಇವೆಲ್ಲ ನನ್ನ ಅವನತಿಯ ಚಿಹ್ನೆಗಳು”

ನರ್ಸ್ ಬಂದಳು. ವೀರಣ್ಣ ಒಬ್ಬಳು ಮೃದುವಾದ ಕಣ್ಣುಗಳ ಹುಡುಗಿಯನ್ನೆ ಗೊತ್ತು ಮಾಡಿದ್ದ. ಅವಳು ಸದ್ದುಗದ್ದಲವಿಲ್ಲದೆ ಕ್ಯಾನ್‌ವಾಸ್ ಶೂಸಿನ ಮೇಲೆ ಓಡಾಡುತ್ತ ಕೃಷ್ಣಪ್ಪನ ಎಡಗೈ ಎಡಗಾಲುಗಳನ್ನು ನಾನಾ ವಿಧಗಳಲ್ಲಿ ತಿಕ್ಕಿದಳು. ಪೆಟ್ಟಾಗದಂತೆ ಮೇಲಿಂದ ಕೆಳಕ್ಕೆ ಕೆಳಗಿನಿಂದ ಮೇಲಕ್ಕೆ ತಾಡನ ಮಾಡಿದಳು. ವೀಲ್‌ಚೇರನ್ನು ತಳ್ಳುತ್ತ ಎಷ್ಟು ಬೇಕೋ ಅಷ್ಟು ಮಾತಾಡಿ ನೆಮ್ಮದಿಯಾಗುವಂತೆ ಮಾಡಿದಳು.

ಕೃಷ್ಣಪ್ಪನಿಗೆ ಗೋಪಾಲರೆಡ್ಡಿಯ ಸಖ್ಯದಲ್ಲಿ ತನಗೆ ಒಂದಿಡೀ ವರ್ಷ ಜೊತೆಗಾತಿಯಾಗಿದ್ದ ಲೂಸಿನಾಳ ನೆನಪಾಗುತ್ತದೆ -ಮತ್ತೆ, ಮತ್ತೆ. ಲೂಸಿನಾ ದೆಹಲಿಯಲ್ಲಿ ನರ್ಸ್ ಶಿಕ್ಷಣ ಪಡೆಯುತ್ತಿದ್ದಳು. ಅವಳ ಕಥೆ ದಾರುಣವಾಗಿತ್ತು. ಮಧ್ಯಮವರ್ಗದ ಮನೆ ಹುಡುಗಿ ಅವಳು. ವರ್ತಕನ ಮಗನೊಬ್ಬ ಅವಳನ್ನು ನಂಬಿಸಿ ಕಲ್ಕತ್ತದಿಂದ ದೆಹಲಿಗೆ ಕರೆದುಕೊಂಡು ಬಂದು ಮದುವೆಯಾಗುವೆನೆಂದು ಮೋಸ ಮಾಡಿ ತನ್ನ ಗೆಳೆಯರಲ್ಲಿ ಅವಳನ್ನು ಹಂಚಿಕೊಳ್ಳಲು ಪ್ರಯತ್ನಿಸಿದ್ದ. ಇದನ್ನು ಕೆಲವು ದಿನ ಸಹಿಸಿ, ಅದು ಅತಿರೇಕಕ್ಕೆ ಹೋದಾಗ ಅವನ ಬಂಧನದಲ್ಲಿದ್ದ ಲೂಸಿನಾ ಒಂದು ರಾತ್ರಿ ತಪ್ಪಿಸಿಕೊಂಡು ಎಲ್ಲಿ ಹೋಗುವುದೆಂದು ತಿಳಿಯದೆ ಪಾರ್ಲಿಮೆಂಟ್ ಸದಸ್ಯರ ನಿವಾಸದಲ್ಲಿ ಇಳಿದುಕೊಂಡಿದ್ದ ಗೋಪಾಲರೆಡ್ಡಿ ಕೃಷ್ಣಪ್ಪರ ಬಾಗಿಲು ತಟ್ಟಿದಳು. ಭೀತಳಾಗಿ ನಿಂತ ಹುಡುಗಿಯನ್ನು ರೆಡ್ಡಿ ಸಮಾಧಾನಪಡಿಸಿ ತಾವಿದ್ದ ಬಂಗಲೆಯ ರೂಮೊಂದರಲ್ಲಿ ಮಲಗುವಂತೆ ಹೇಳಿದ. ಲೂಸಿನಾ ಇಡೀ ರಾತ್ರೆ ಇಬ್ಬರಲ್ಲಿ ಒಬ್ಬ ತನ್ನ ಕೋಣೆಗೆ ಬರಬಹುದೆಂದು ಹೆದರಿಕೊಂಡು ಕಾದಿದ್ದಳು. ಬೆಳಗಾಯಿತು. ಅವಳು ಕೃತಜ್ಞಳಾಗಿ ಇವರನ್ನು ಹುಡುಕಿಕೊಂಡು ಡೈನಿಂಗ್ ಹಾಲಿಗೆ ಬಂದು ಅತ್ತಳು. ರೆಡ್ಡಿ ಅವಳನ್ನು ನರ್ಸಿಂಗ್ ಕಾಲೇಜಿಗೆ ಸೇರಿಸಿದ. ಕ್ರಮೇಣ ಅವಳಿಗೆ ಕೃಷ್ಣಪ್ಪನ ಮೇಲೆ ಮನಸ್ಸಾಯಿತು. ಕೃಷ್ಣಪ್ಪನಿಗೂ ಅವಳೆಂದರೆ ಇಷ್ಟವಾಯಿತು. ಆದರೆ ರೆಡ್ಡಿಯ ಋಣದಲ್ಲಿದ್ದೇನೆಂಬ ಕಾರಣಕ್ಕಾಗಿ ಅವಳು ತನ್ನನ್ನು ಇಷ್ಟಪಡುವುದೊ ಎಂದು ಸಂಕೋಚವಾಗಿ ಅವನು ಆಕೆಯನ್ನು ದೂರವಿರಿಸುತ್ತಲೇ ಇದ್ದ. ರಜೆಯಲ್ಲಿ ಒಮ್ಮೆ ಅವಳು ಅವನಿಗೆ ಬರೆದು ಬೆಂಗಳೂರಿಗೆ ಬಂದಳು. ರೆಡ್ಡಿಯ ಬಂಗಲೆಯಲ್ಲಿ ಆಗ ಕೃಷ್ಣಪ್ಪ ವಾಸವಾಗಿದ್ದುದು. ಒಂದು ರಾತ್ರೆ ಲೂಸಿನಾ ಬಾಗಿಲನ್ನು ಮೆತ್ತಗೆ ತೆರೆದು ಕೃಷ್ಣಪ್ಪನ ಮಗ್ಗುಲಲ್ಲಿ ಬಂದು ಮಲಗಿದಳು.

“ಯಾಕಿದನ್ನ ನೀನು ಮಾಡ್ತಿದಿ?” ಎಂದು ಕೇಳಿದ.

“ನಿನ್ನ ಮೇಲೆ ಇಷ್ಟ ನನಗೆ. ಅಷ್ಟೂ ನಿಂಗೆ ಗೊತ್ತಾಗಲ್ವಲ್ಲ?”

“ನನ್ನ ಮದುವೆಯಾಗ್ತೀಯೇನು ಹಾಗಾರೆ?”

“ಮುಂದೆ ಓದಕ್ಕೆ ಇಂಗ್ಲೆಂಡಿಗೆ ಹೋಗೋ ಆಸೆ ನನಗೆ. ನೀನು ಒತ್ತಾಯ ಮಾಡಿದ್ರೆ ಆಗ್ತೀನಿ.”

ಅವಳನ್ನು ತಬ್ಬಿಕೊಂಡ ಕೃಷ್ಣಪ್ಪನಿಗೆ ನಗು ಬಂತು.

“ಬೇರೆ ಹುಡುಗಿಯರ ಜೊತೆ ನಾನು ಮಲಗ್ತೀನೀಂತ ನಿನಗೆ ಗೊತ್ತಲ್ವ?”

“ಗೊತ್ತು. ಆದ್ರೆ ನಿನ್ನೆ ಬಂದಿದ್ದಳಲ್ಲ -ಅವಳೇನು ಚೆನ್ನಾಗಿದಾಳೇಂತ ನೀನು ಅವಳ ಜೊತೆ ಮಲಗಿದ್ದು?” ಮುನಿಸಿನಿಂದ ಲೂಸಿನಾ ಅವನ ಕೆನ್ನೆಗೆ ಹೊಡೆದಳು.

“ನೀನು ಮಹಡಿ ಮೇಲೆ ಮಲಗಿದ್ದೀಯಲ್ಲ -ನಿಂಗೆ ಗೊತ್ತಿರಲಿಲ್ಲ ಅಂತ ತಿಳ್ಕೊಂಡಿದ್ದೆ.” ಇಷ್ಟು ಸಲಿಗೆಯಿಂದ ಯಾವ ಹುಡುಗಿಯೂ ಅವನನ್ನು ಮಾತಾಡಿಸಿದ್ದಿಲ್ಲ.

“ನಾನೇನೂ ಪೆದ್ದಲ್ಲ. ಈಗ ನಾನಿಲ್ಲಿ ಇರೋ ತನಕ ನೀನು ಯಾರನ್ನೂ ಹತ್ತಿರ ಸೇರಿಸ್ಬಾರ್ದು. ನಾನು ನರ್ಸಿಂಗ್ ಸೇರಿದ ಮೇಲೆ ನಿನ್ನ ಮೇಲೆ ಆಸೆಯಾದ ದಿನದಿಂದ ಯಾರನ್ನೂ ನನ್ನ ಹತ್ತಿರ ಸೇರಿಸಿಲ್ಲ. ಗೊತ್ತ?”

“ಗೊತ್ತು”

ಅವಳೂ ತನ್ನಿಂದ ಸುಖಪಡುವುದನ್ನು ಕಂಡಿದ್ದರಿಂದ ಅವನನ್ನು ಪಾಪಭಾವನೆ ಕಾಡಿಸಲಿಲ್ಲ. ಹಿಂದೆ ಹೆಣ್ಣಿನ ಸಂಗಕ್ಕೆ ಮುಂಚೆ ಅವನು ಚೆನ್ನಾಗಿ ಕುಡಿದಿರುತ್ತಿದ್ದ. ಮತ್ತಿನಲ್ಲಿ ತನ್ನ ದೇಹದ ಬಯಕೆಯನ್ನು ಕಳೆದುಕೊಂಡು ಬೆಳಿಗ್ಗೆ ರಾತ್ರಿಯ ವ್ಯಭಿಚಾರಗಳನ್ನು ಮರೆಯಲೆಂದೇ ತೀವ್ರವಾಗಿ ರೆಡ್ಡಿಯ ಜೊತೆ ಏನೇನೋ ಅಮೂರ್ತ ವಿಷಯಗಳನ್ನು ಚರ್ಚಿಸಲು ಪ್ರಯತ್ನಿಸುತ್ತಿದ್ದ. ಆದರೆ ಲೂಸಿನಾ ಬರಿ ಇರುವುದೇ ಸುಖವೆನ್ನಿಸಿದ್ದಳು. ತನ್ನ ಗಾಂಭೀರ್ಯವನ್ನು ಸಂಭೋಗದಲ್ಲೂ ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದ ಹಿಂದಿನ ತಾನು ಎಂಥ ಹಾಸ್ಯಾಸ್ಪದ ವ್ಯಕ್ತಿಯೆಂದು ಈಗ ತಿಳಿಯತೊಡಗಿತು. ಅವಳ ಮೃದುವಾದ ಬೆಚ್ಚಗಿನ ಯೋನಿ, ಪುಟ್ಟಗಿದ್ದರೂ ದೃಢವಾದ ಮೊಲೆಗಳು, ಸ್ವಲ್ಪ ದಪ್ಪವಾದ ತುಟಿಗಳು, ಎಣ್ಣೆಗೆಂಪು ಬಣ್ಣದ ಚರ್ಮ, ಅವಳ ಅಂಡಿನ ಮೇಲಿದ್ದ ಮಚ್ಚೆ, ಅವಳ ಪ್ರಶಾಂತ ಕಣ್ಣುಗಳು, ಬೆನ್ನಿಡೀ ಚೆಲ್ಲುವಷ್ಟು ಉದ್ದದ ಅವಳ ಕಪ್ಪು ಕೂದಲು -ಎಲ್ಲವನ್ನೂ ವಾರಂಗಲ್ ಠಾಣೆಯಲ್ಲಿ ಅವನು ಧ್ಯಾನ ಮಾಡುತ್ತಿದ್ದ ದೇವಿಯ ನಖಶಿಖಾಂತದ ವರ್ಣನೆಯ ಜೊತೆ ಹೋಲಿಸುವನು. ಸಂಸ್ಕೃತದ ಆ ಶ್ಲೋಕಗಳನ್ನು ಮೃದುವಾಗಿ ಹಾಡಿ ಅವಳಿಗೆ ಮೋಜೆನ್ನಿಸುವಂತೆ ಮಾಡುವನು. ಸಂಭೋಗವೆಂದರೆ ಅವಸರದ ವಿಸರ್ಜನೆಯೆಂದು ತಿಳಿದಿದ್ದ ಕೃಷ್ಣಪ್ಪನಿಗೆ ದೇಹದ ಎಲ್ಲ ಭಾಗಗಳು ಅಪೇಕ್ಷೆ, ಉದ್ರೇಕ, ತಣಿವುಗಳ ಬುಗ್ಗೆಯೆಂಬುದನ್ನು ಲೂಸಿನಾ ಕಲಿಸಿದಳು. ಸಂಭೋಗ ಮೈಥುನವಾಯಿತು. ಎಷ್ಟೆಂದರೆ ಅಷ್ಟು ವಿಸ್ತರಿಸುವ ಹಾಡಾಯಿತು.

ಆದರೆ ಕ್ರಮೇಣ ಅವಳನ್ನು ತಾನು ಬಿಟ್ಟಿರಲಾರೆ ಎಂಬ ವ್ಯಾಮೋಹ ಹುಟ್ಟಿಕೊಂಡಿತು. ಅದರಿಂದ ಅವನ ಹಿಗ್ಗಿನ ತೀವ್ರತೆಯೂ ಇಳಿಯುತ್ತ ಬಂತು. ಅವಳು ಯಾಕೆ ತನ್ನ ತಂದೆಯನ್ನು ದ್ವೇಷಿಸುತ್ತಾಳೆಂದು ಅವನ ಕುತೂಹಲ ಬೆಳೆಯುತ್ತ ಹೋದಂತೆ ಇದರಿಂದ ಅವಳಿಗೆ ಕರೆಕರೆಯಾಗುವುದನ್ನು ಗಮನಿಸಿದ. ಒಂದು ದಿನ ಅವಳು ತನ್ನ ತಂದೆಯೇ ತನ್ನನ್ನು ಬಯಸುತ್ತಿದ್ದ ಅದರಿಂದಾಗಿ ತಾಯಿ ತನ್ನನ್ನು ದ್ವೇಷಿಸುತ್ತಿದ್ದಳು -ಮನೆ ನರಕವಾಗತೊಡಗಿತ್ತು ತನಗೆ ಎಂದು ಹೇಳಿದಳು. ಅವಳ ತಂದೆ ಹಾಗಾದರೆ ಅವಳ ಜೊತೆ ಮಲಗಿದ್ದನೊ? ಅದನ್ನು ಕೇಳುವುದು ಹೇಗೆ? ಈ ಬಗೆಯಲ್ಲಿ ಕೃಷ್ಣಪ್ಪ ಕೊರಗುವುದು ಕಂಡು ಲೂಸಿನಾ,

“ನೀನು ಬೇರೆ ಥರದ ಗಂಡಸೂಂತ ತಿಳಿದಿದ್ದೆ” ಎಂದು ನಿರಾಶೆಯಲ್ಲಿ ಒಮ್ಮೆ ಹೇಳಿದಳು.

“ಬೇರೆ ಥರಾ ಅಂದ್ರೆ……”

“ಈ ಕ್ಷಣ ನಿನಗೆ ಸಾಲದ? ನನ್ನ ಭೂತ ಯಾಕೆ ನಿನಗೆ?”

“ನಿನ್ನ ನಾನು ಮದುವೆಯಾಗಬೇಕು -ಅದಕ್ಕೇ”

“ನಾನು ಮದುವೇಂದ್ರೆ ದ್ವೇಷಿಸ್ತೇನೆ”

“ಗೌರಿನೂ ಹೀಗೇ ಹೇಳ್ತ ಇದ್ದಳು,” ಕೃಷ್ಣಪ್ಪ ಚಿಂತಾಕ್ರಾಂತನಾಗಿ ಮಾತಾಡಿದರೆ ಲೂಸಿನಾ ಇನ್ನೇನೋ ಭಾವಿಸುವಳು.

“ಅವಳಿಗೆ ಹೀಗೆಲ್ಲಾ ನಿನ್ನ ಜೊತೆ ಮಾಡ್ಲಿಕ್ಕೆ ಬರ್ತಿತ್ತ?”

ಲೂಸಿನಾಳ ಮೊಗ್ಗಿನಂತಹ ಮೊಲೆಗಳಿಗೆ ಮುತ್ತಿಡುತ್ತ ಕೃಷ್ಣಪ್ಪ ಅವಳ ಮಾತಿನ ಧಾಟಿಯಲ್ಲಿದ್ದ ತುಂಟತನವನ್ನು ಕಂಡು,

“ನೀನು ಗೌರಿ ಹಾಗೇನೇ. ಆದರೆ ಅವಳು ಸೀರಿಯಸ್ಸಾಗಿಯೂ ಇರ್ತ ಇದ್ದಳು. ನೀನು ಮಾತ್ರ ಚೆಲ್ಲು ಹುಡುಗಿ” ತನಗಾಗಿದ್ದ ನಿರಾಸೆಯನ್ನು ಮರೆಯಲು ಕೃಷ್ಣಪ್ಪ ಪ್ರಯತ್ನಿಸುತ್ತಿದ್ದ.

“ಇದನ್ನೆಲ್ಲ ಮಾಡ್ತಾ ರಾಜಕೀಯಾನ್ನೂ ಚರ್ಚಿಸೋ ಹುಡುಗಿ ನಿನಗೆ ಬೇಕ?”

“ನಾನು ಹೇಳೋದು ನಿನಗೆ ಅರ್ಥವಾಗಲ್ಲ.”

ಈ ಲೂಸಿನಾ ಇವನ್ನೆಲ್ಲ ಎಲ್ಲಿ ಕಲಿತಳೆಂದು ಕೃಷ್ಣಪ್ಪನಿಗೆ ಅಸೂಯೆಯಾಗುತ್ತದೆ. ಯಾವ ಗಂಡು ಇವಳಿಗಿದನ್ನು ಕಲಿಸಿದ?

“ಮದುವೆ ಮಾತು ನೀನು ಶುರು ಮಾಡಿದ ಮೇಲೆ ನಿನ್ನ ದೇಹದಲ್ಲಿದ್ದ ಪುಳಕವೆಲ್ಲ ಬತ್ತಿ ಹೋಯ್ತು. ನಂದೂ ಹೋಯ್ತು.”

ಲೂಸಿನಾ ಎದ್ದು ಶವರ್ ತೆಗೆದುಕೊಳ್ಳಲು ಹೋಗುವಳು. ಕೃಷ್ಣಪ್ಪನೂ ಅವಳ ಹಿಂದೆ ಹೋಗಿ ಅವಳ ಜೊತೆ ಶವರ್‍ನ ತಂಪಾದ ನೀರಲ್ಲಿ ನಿಂತು ಅವಳ ಮೈಗೆ ಸೋಪನ್ನು ಬಳಿಯುವನು. ಮತ್ತೆ ಚುರುಕಾಗುವನು. ಇವಳ ನಿಸ್ಸಹಾಯಕತೆಯನ್ನು ತಾನು ದುರುಪಯೋಗಪಡಿಸಿಕೊಳ್ಳುತ್ತಿದ್ದೇನೆಯೇ ಎಂಬ ಸಂಶಯವನ್ನು ತಳ್ಳಲು ಅವಳನ್ನು ಮುತ್ತಿಡುತ್ತ ಆರಾಧಿಸುವನು. ಈ ಹೆಣ್ಣು ಗಂಡಿನ ಸಂಬಂಧದಲ್ಲಿ ಸಮತೋಲ ಸಾಧ್ಯವೇ ಇಲ್ಲವೆ ಎಂದು ಯೋಚಿಸುತ್ತ ಅಣ್ಣಾಜಿಯ ವಿವರಣೆಯನ್ನು ನೆನೆಯುವನು. ತನ್ನನ್ನು ಪ್ರವೇಶಿಸಿದ ಕೃಷ್ಣಪ್ಪ ಬೇರೇನೋ ಯೋಚಿಸುತ್ತಿರುವುದು ಕಂಡು ಲೂಸಿನಾ ಸಿಟ್ಟಾಗುವಳು. ಈ ಪ್ರೀತಿಯನ್ನು ಮೀರಿದ್ದು ತನ್ನಲ್ಲಿದೆ ಎಂದು ಲೂಸಿನಾಗೆ ತಿಳಿಯುವಂತೆ ಮಾಡುವ ದಾರಿ ಕಾಣದೆ ಕೃಷ್ಣಪ್ಪ ತಬ್ಬಿಬ್ಬಾಗುವನು.

ನಾನು ಅಣ್ಣಾಜಿಗೆ ಈಗ ನಿಜವಾಗಿ ಹತ್ತಿರವಾದೆ ಎಂದು ಕೃಷ್ಣಪ್ಪನಿಗೆ ಈ ದಿನಗಳಲ್ಲಿ ಖುಷಿಯೂ ಇತ್ತು. ಆದರೆ ಲೂಸಿನಾ ಎಷ್ಟು ಸಂಭ್ರಮದಲ್ಲಿ ತನ್ನ ದೇಹವನ್ನು ಹಾಡಿಸಿದ್ದಳೊ ಅಷ್ಟೇ ಸಂಭ್ರಮದಲ್ಲಿ ಇಂಗ್ಲೆಂಡಿಗೆ ಹೋದಳು. ಒಂದು ವರ್ಷದ ನಂತರ ತಾನು ಮದುವೆಯಾಗಿರುವುದಾಗಿ ಬರೆದು ತಮ್ಮಿಬ್ಬರ ಸಂಬಂಧ ಗೊತ್ತಿದ್ದ ತಾನು ಮದುವೆಯಾದ ಡಾಕ್ಟರ್ ಎಡ್ಡಿ ಗ್ರೀನೊ ಎಷ್ಟು ಉದಾರಿಯೆಂದು ಹೊಗಳಿದಳು. ಕೃಷ್ಣಪ್ಪ ಇದನ್ನೆಲ್ಲ ನೆನೆಯುತ್ತ ಚಕಿತನಾಗಿ ಶುದ್ಧ ಪತಿವ್ರತೆಯಾದ ಸೀತೆ ಎಷ್ಟು ಬರಡೆಂದು ಕೊರಗುತ್ತಾನೆ. ಪ್ರಾಯಶಃ ಮದುವೆಯಾಗಿದ್ದರೆ ಲೂಸಿನಾಳೂ ಹೀಗೆ ಆಗುತ್ತಿದ್ದಳೊ ಏನೊ -ಹೇಳುವುದು ಹೇಗೆ?

ನರ್ಸಿನ ಕಡೆ ನೋಡುತ್ತ “ನಿಮ್ಮ ಹೆಸರು? ಮರೆತೇ ಬಿಟ್ಟೆ” ಎನ್ನುತ್ತಾನೆ.

“ಜ್ಯೋತಿ” -ಅವಳು ಮುಗುಳ್ನಗುತ್ತ ಹೇಳುತ್ತಾಳೆ.

“ನಿಮಗೆ ಮದುವೆಯಾಗಿದೆಯಾ? ನನ್ನ ಕುತೂಹಲವನ್ನ ಕ್ಷಮಿಸಿ”

ಹೀಗೆ ಹೆಣ್ಣಿನ ಹತ್ತಿರ ಸಭ್ಯವಾಗಿ ಮಾತಾಡುವ ಕಲೆಯನ್ನು ಕೃಷ್ಣಪ್ಪ ಗೋಪಾಲರೆಡ್ಡಿಯಿಂದ ಕಲಿತದ್ದು. ಸಭ್ಯತನದಲ್ಲಿ ತೀವ್ರತೆ ಕುಗ್ಗುತ್ತದೆ ಎಂಬ ಅವನ ಭಾವನೆಯನ್ನು ಹಾಸ್ಯಮಾಡಿ ಮಾಡಿ ಗೋಪಾಲರೆಡ್ಡಿ ಹೆಚ್ಚು ಕಮ್ಮಿ ಹೋಗಲಾಡಿಸಿದ್ದ.

“ಇಲ್ಲ ಆಗಬೇಕೂಂತ ಇದೀನಿ. ನನ್ನ ಬಾಯ್‌ಫ಼್ರೆಂಡ್ ಎಂಜಿನಿಯರ್ ಪರೀಕ್ಷೆ ಮುಗಿಸಿ ಎರಡು ವರ್ಷಗಳಿಂದ ಕೆಲಸಕ್ಕಾಗಿ ಅಲೀತ ಇದಾನೆ. ಐದು ವರ್ಷಗಳಿಂದ ನಾವು ಕಾದಿದೇವೆ. ಕೆಲಸ ಸಿಕ್ಕದೆ ಮದುವೆಯಾಗಲ್ಲ ಅಂತಾನೆ ಅವನು.”

ಹೆಣ್ಣು ಎಷ್ಟೊಂದು ಬೇರೆ ಬೇರೆ ರೀತಿಯಲ್ಲಿ ಈ ದೇಹಕ್ಕೆ ಜೀವಸಂಚಾರ ತರುತ್ತಾಳೆಂದು ಆಶ್ಚರ್ಯಪಡುತ್ತ ಕೃಷ್ಣಪ್ಪ ಜ್ಯೋತಿಯ ಚಿಕಿತ್ಸಕ ಸ್ಪರ್ಶಕ್ಕೆ ಮೈಯನ್ನು ಒಡ್ಡುತ್ತಾನೆ.

“ನಾನು ಅವನಿಗೆ ಕೆಲಸ ಕೊಡಿಸಲಿಕ್ಕೆ ಪ್ರಯತ್ನ ಮಾಡಲ?”

ಬೆರಳುಗಳನ್ನು ಮೃದುವಾಗಿ ಮಡಿಸಲು ಕಲಿಸುತ್ತಿದ್ದ ಜ್ಯೋತಿಯ ಮುಖ ಖುಷಿಯಿಂದ ಅರಳಿದ್ದನ್ನು ಕಂಡು ಕೃಷ್ಣಪ್ಪನಿಗೆ ಅವಳ ಬಗ್ಗೆ ತೀವ್ರವಾದ ವಾತ್ಸಲ್ಯ ಮೂಡುತ್ತದೆ.

“ವೀರಣ್ಣ ಅಂತ ಒಬ್ಬ ದೊಡ್ಡ ಕಾಂಟ್ರಾಕ್ಟರ್ ನನ್ನ ಸ್ನೇಹಿತರಿದ್ದಾರೆ. ಅವರೇ ನಿಮ್ಮನ್ನ ಗೊತ್ತು ಮಾಡಿದ್ದು. ಅವರ ಹತ್ರಾನೇ ನಿಮ್ಮ ಬಾಯ್‌ಫ಼್ರೆಂಡಿಗೆ ಕೆಲಸ ಕೊಡಿಸ್ತೇನೆ -ಆಗಬಹುದ”

ಜ್ಯೋತಿಯ ಕಣ್ಣುಗಳು ಒದ್ದೆಯಾಗುತ್ತವೆ!

“ಅವನ ಕಾನ್ಫಿಡೆನ್ಸೇ ಹೊರಟು ಹೋಗಿದೆ ಗೊತ್ತ ಕೆಲಸ ಸಿಗ್ದೆ? ತಿಂಗಳಿಗೆ ಮುನ್ನೂರಾದರೂ ಸಾಕು ನಮಗೆ. ದಯವಿಟ್ಟು………”

ಕೃಷ್ಣಪ್ಪ ಅವಳ ಮುಂದಿನ ಮಾತನ್ನು ತಡೆಯುತ್ತಾನೆ.

*
*
*

ನಿನ್ನ ಸಂಗದಲ್ಲಿ ಅವನ ದೇಹ ಅರಳುವಂತಾಗಲಿ ಎಂದು ಮನಸ್ಸಲ್ಲೆ ಹಾರೈಸುತ್ತಾನೆ. ಕಾಮದ ಸಂದರ್ಭದಲ್ಲಿ ಇನ್ನೊಬ್ಬ ಗಂಡೂ ಸುಖಪಡಬೇಕೆಂದು ತನಗೀಗ ಹಠಾತ್ತನೆ ಅನಿಸಿದ್ದಕ್ಕಾಗಿ ಚಕಿತನಾಗುತ್ತಾನೆ. ಈ ತನಕ ಅವನು ಬೇರೊಬ್ಬ ಕಾಮದಲ್ಲಿ ಸಾರ್ಥಕವಾಗಬೇಕೆಂಬ ಆಸೆ ಮೂಡಲಾರದಂಥ ಅಸೂಯೆ ತನ್ನಲ್ಲಿನ್ನೂ ಉಳಿದಿರಬಹುದೆಂದು ಎಂದು‌ಒಕ್ಂಡಿದ್ದ. ಆದರೆ ಈಗ ತನ್ನ ಎದುರು ಸುಂದರವಾಗಿ ನಿಂತ ಹೆಣ್ಣು ಇನ್ನೊಬ್ಬನಿಂದ ಸುಖಪಡಲೆಂಬ ಆಸೆ ತನ್ನಲ್ಲಿ ಉಕ್ಕಿತೆಂದು ಸಂತೋಷಪಟ್ಟ.

*
*
*

ಅವತ್ತು ರಾತ್ರೆ ಮಹೇಶ್ವರಯ್ಯ ಮನೆಗೆ ಬಂದವರು ಊಟ ಬೇಡವೆಂದು ಮುಸುಕು ಹೊದ್ದು ಮಲಗಿದ್ದರು. ನಾಗೇಶನಿಂದ ವೀಲ್‌ಚೇರನ್ನು ತಳ್ಳಿಸಿಕೊಂಡು ಅವರ ರೂಮಿಗೆ ಹೋಗಿ, ನಾಗೇಶನನ್ನು ಹೊರಗೆ ಕಳಿಸಿ ಬಾಗಿಲು ಹಾಕಿಸಿಕೊಂಡು ಅವರನ್ನು ಎಬ್ಬಿಸಿದ. ಮಹೇಶ್ವರಯ್ಯ ಕುಡಿದಿದ್ದರು. ಅವರ ಕಣ್ಣುಗಳು ಕೆಂಪಾಗಿದ್ದವು. ಮುಖ ಕಳೆಗುಂದಿತ್ತು. ಬೆಳಿಗ್ಗೆಯೇ ಅವರ ಕೈಗಳು ನಡುಗುವುದನ್ನು ಕೃಷ್ಣಪ್ಪ ಗಮನಿಸಿದ್ದ.

“ಏನು ವಿಷಯ? ಯಾಕೆ ಹೀಗಾಗಿದೀರಿ ನೀವು?” ಎಂದ.

ಅವರಿಗೆ ಕೇಳಿದ ಪ್ರಶ್ನೆ ತಾನೇ ಕೇಳಿಕೊಂಡ ಪ್ರಶ್ನೆ ಎನ್ನಿಸುವಂಥ ಧಾಟಿಯಲ್ಲಿ ಕೃಷ್ಣಪ್ಪ ಮಾತಾಡಿದ್ದ. ಸಹಾನುಭೂತಿ ಕನಿಕರಗಳ ಧಾಟಿಯಲ್ಲಿ ಅವರ ಜೊತೆ ಮಾತಾಡುವುದು ಕೃಷ್ಣಪ್ಪನಿಗೆ ಸಾಧ್ಯವೇ ಇರಲಿಲ್ಲ. ಅಂಥ ಭಾವನೆಗಳನ್ನು ತನ್ನಲ್ಲಿ ಉಂಟುಮಾಡುತ್ತಿದ್ದೇನೆಂದು ಮಹೇಶ್ವರಯ್ಯ ತಿಳಿದರೆ ಅವರಿಗೆ ನೋವಾಗುತ್ತದೆಂದು ಕೃಷ್ಣಪ್ಪನಿಗೆ ಗೊತ್ತು. ತನ್ನೆದುರು ಅವರು ಇದರಿಂದ ಸಣ್ಣವರಾದಂತೆ ಎಂಬುದೂ ಅಲ್ಲ ಇದಕ್ಕೆ ಕಾರಣ. ತನಗಿರುವಂತೆ ಮಹೇಶ್ವರಯ್ಯನಿಗೆ ತಾನು ಯಾವಾಗಲೂ ಗಟ್ಟಿ ದೃಢ ಎಂದು ತೋರಿಸಿಕೊಳ್ಳುವ ಅಗತ್ಯವಿರಲಿಲ್ಲ. “ಬೆಟ್ಟದಡಿ ಹುಲ್ಲಾಗು” ಎಂಬ ಮಂಕುತಿಮ್ಮನ ಕಗ್ಗದ ಸಾಲು ಅವರಿಗೆ ತುಂಬ ಪ್ರಿಯೆವೆಂದು ಕೃಷ್ಣಪ್ಪನಿಗೆ ಗೊತ್ತು. ಯಾರ ಕಣ್ಣಿಗೂ ಬೀಳದಂತೆ ಪುಟ್ಟಗೆ, ಸಣ್ಣಗೆ, ಯಾವ ಸ್ಪಷ್ಟ ಬಣ್ಣವೂ ಇಲ್ಲದೆ ತನ್ನೊಳಗೇ ಹಾಡಿಕೊಳ್ಳುತ್ತ ಇರುವ ಹಕ್ಕಿಯಂತೆ ಇರಬೇಕೆಂಬುದು ಅವರ ನಿಲುವು. ಯಕ್ಷಗಾನದ ಕೋಡಂಗಿಯಂತೆ ಬಳುಕುತ್ತ, ಬಾಗುತ್ತ, ಲಾಗ ಹಾಕಿ ನಗಿಸುತ್ತ ಕೊಬ್ಬಿದವನ ಎದುರು ಕಣ್ ಕಣ್ ಬಿಡುತ್ತ ತನ್ನ ಒಳಗನ್ನು ರಕ್ಷಿಸಿಕೊಳ್ಳಬೇಕೆಂಬ ಜೀವನ ಕಲೆಯ ತತ್ತ್ವ ಅವರದ್ದು. ವಾರಂಗಲ್ ಠಾಣೆಯಲ್ಲಿ ದಪ್ಪ ಮೋರೆಯ ಅಧಿಕಾರಿ ಕೃಷ್ಣಪ್ಪನ ಬಿಡುಗಡೆಯನ್ನು ಮುಂದೂಡಲು ನೆವಗಳನ್ನೊಡ್ಡಿದಾಗ ಅವನಿಗೆ ಹ್ಯಾಪಮೋರೆಯಲ್ಲಿ ಕೈಮುಗಿದು ತಾನೊಬ್ಬ ಕ್ಷುದ್ರ ಜಂತು ಎಂಬ ಭಾವನೆ ಹುಟ್ಟಿಸಿ ಅವನನ್ನಿಷ್ಟು ಕೊಬ್ಬಿಸಿ ತೃಪ್ತಿಪಡಿಸಿ ಕೃಷ್ಣಪ್ಪನನ್ನು ಬಿಡಿಸಿಕೊಂಡಿದ್ದರಂತೆ. ಠಾಣೆಯ ಅನುಭವ ಕೃಷ್ಣಪ್ಪನನ್ನು ಮಂಕಾಗಿಸಿದ್ದ ದಿನಗಳಲ್ಲಿ ದಪ್ಪಮೋರೆಯ ಅಧಿಕಾರಿಯನ್ನು ರಾಕ್ಷಸನನ್ನಾಗಿಯೂ, ತನ್ನನ್ನು ವಿದೂಷಕನನ್ನಾಗಿಯೂ ಮಾಡಿಕೊಂಡು ತಾನು ಉಪಾಯದಲ್ಲಿ ಅವನನ್ನು ಗೆದ್ದುದನ್ನು ಯಕ್ಷಗಾನದ ರೀತಿಯಲ್ಲಿ ಅಭಿನಯಿಸಿ ತೋರಿಸಿ ಕೃಷ್ಣಪ್ಪನನ್ನು ನಗಿಸಿದ್ದರು. ಕೃಷ್ಣಪ್ಪನ ಮೂಲದಲ್ಲಿದ್ದ ಆತ್ಮಾಭಿಮಾನವನ್ನು ನಾಶ ಮಾಡಲು ಪ್ರಯತ್ನಿಸಿದ್ದ ಕ್ರೌರ್ಯ ಮಹೇಶ್ವರಯ್ಯನ ಅಭಿಪ್ರಾಯದಲ್ಲಿ ಕಾಲಾನುಕಾಲದಿಂದಲೂ ಉಬ್ಬುತ್ತ ಹೋಗುವುದರಿಂದಲೇ ಒಡೆಯುವ ಒಂದು ರಾಕ್ಷಸ ಬಣ್ಣದ ವೇಷವಾಗಿ ಮಾತ್ರ ಕಂಡು, ಕೃಷ್ಣಪ್ಪ ತನ್ನ ಜೀವದ ಸೂಕ್ಷ್ಮ ಬೇರುಗಳಿಗಾಗಿದ್ದ ಆಘಾತದಿಂದ ಚೇತರಿಸಿಕೊಂಡಿದ್ದ. ಮಹೇಶ್ವರಯ್ಯ ಉಮೇದು ಬಂದಾಗ ಮಾಡುವ ಈ ವಿದೂಷಕ ಅಭಿನಯ ಕಂಡು ಗೋಪಾಲರೆಡ್ಡಿ ಕೃಷ್ಣಪ್ಪನಿಗೆ ಹೇಳಿದ್ದ: “ಕೋಡಂಗಿ ನೋಡು -ಹೇಗೆ ನೀನು ಹೇಳೋ ಒಳಗೆ ಉರಿಯೋ ದೀಪಾನ ಉಳಿಸಿಕೋತಾನೆ! ಅಂದ ಹಾಗೆ ನಮ್ಮೂರಿನ ರೈತರಲ್ಲೂ ಈ ಗುಣ ಕಂಡಿದೀನಿ ನಾನು. ನನ್ನ ಅಪ್ಪನ ಕಣ್ಣಿಗೇ ಬೀಳದಂತೆ ಇದ್ದುಬಿಡ್ತಾರೆ. ಬಿದ್ದರೂ ತಾವು ಅಲ್ಪರು ಅನ್ನೋ ಹಾಗೆ ನಟಿಸ್ತಾರೆ……” ಕೃಷ್ಣಪ್ಪ ಈ ವಿಧಾನವನ್ನು ಒಪ್ಪುವುದಿಲ್ಲ. ಅವನ ಮನೋಧರ್ಮಕ್ಕೆ ಅದು ವಿರುದ್ಧವಾದದ್ದು.

ಮಹೇಶ್ವರಯ್ಯ ಸೋಲುವರಲ್ಲ ಎಂದು ಕೃಷ್ಣಪ್ಪ ತಿಳಿದಿದ್ದ. ಖಾಹಿಲೆಯಿಂದ ಮಲಗಿದ ಮೇಲೆ ತನ್ನ ಹಾದಿ ದುರ್ಗಮವೆನ್ನಿಸತೊಡಗಿದ್ದರಿಂದ ಮಹೇಶ್ವರಯ್ಯನೂ ಹಿಗೆ ಕಳೆಗುಂದಿರುವುದು ಅವನಿಗೆ ಸಮಸ್ಯೆಯಾಗಿತ್ತು. ಆದ್ದರಿಂದ ಮಹೇಶ್ವರಯ್ಯನನ್ನು ಅವನು ಪ್ರಶ್ನಿಸಿದಾಗ ಅವರಿಗೆ ತಮ್ಮ ಸ್ಥಿತಿಯ ಮೇಲೆ ಇನ್ನೂ ಪೂರ್ಣ ಸ್ವಾಮ್ಯವಿದೆಯೆಂದು ತಿಳಿದಿದ್ದ.

ಮಹೇಶ್ವರಯ್ಯ ಎದ್ದು ಕೂತು ಸ್ವಲ್ಪ ಆಲೋಚಿಸಿ ಹೇಳಿದರು:

“ಬೇಡ ನಿನಗೆ ಹೇಳಬಾರದು ನಾನು. ನಿನಗದರಿಂದ ತೊಂದರೆಯುಂಟು.”

ಕೃಷ್ಣಪ್ಪನಿಗೆ ಥಟ್ಟನೇ ಮಹೇಶ್ವರಯ್ಯ ಅಸಹಾಯಕರಾಗಿದ್ದಾರೆಂದು ಗೊತ್ತಾಯಿತು. ತನ್ನ ಸಹಾಯ ಅವರಿಗೆ ಅಗತ್ಯವಿದ್ದರೂ ಕೇಳುತ್ತಿಲ್ಲ. ಇದರಿಂದ ಅವನಿಗೆ ಅವಮಾನವಾದಂತೆ ಅನ್ನಿಸಿತು. ಸಿಟ್ಟುಬಂತು.

“ನನಗೆ ಅವಮಾನವಾಗುವಂತೆ ಮಾಡ್ತಿದೀರಿ ನೀವು”

ಮಹೇಶ್ವರಯ್ಯ ತಲೆಯಲ್ಲಾಡಿಸುತ್ತ ಕನಿಕರದಿಂದ ಅವನನ್ನು ನೋಡುತ್ತ ಹೇಳಿಕೊಂಡರು.

ಈಚೀಚೆಗೆ ಅವರಿಗೆ ಜೂಜಿನ ಉದ್ರೇಕವಿಲ್ಲದೆ ಬದುಕುವುದೇ ಸಾಧ್ಯವಾಗುತ್ತಿರಲಿಲ್ಲ. ದೇವಿಯ ಪೂಜೆಗೆ ಎಷ್ಟೋ ಬಾರಿ ಕೂತು ನೋಡಿದರು. ಓಡುವ ಕುದುರೆಯೇ ಅವರಿಗೆ ಕಾಣುವುದು. ತಮಗಿದ್ದ ಆಸ್ತಿಯೆಲ್ಲ ಇದರಿಂದ ಕರಗಿತು. ಜೀವನ ದುಸ್ತರವಾಗುತ್ತ ಹೋಯಿತು. ಮೊನ್ನೆ ಯಾರ್ಯಾರೋ ಮಿತ್ರರಿಂದ ಹತ್ತು ಸಾವಿರ ರೂಪಾಯಿ ಸಾಲ ಪಡೆದು ಬಂದರು. ತಾನು ಕಳಕೊಂಡದ್ದನ್ನೆಲ್ಲ ಗೆಲ್ಲುವೆನೆಂದು ಖಾತ್ರಿಯಾಗಿ ನಂಬಿ ಜೂಜಾಡಲು ಬಂದಿದ್ದರು. ಆದರೆ ತಂದಿದ್ದ ಹಣವನ್ನೆಲ್ಲ ಕಳೆದುಕೊಂಡರು.

“ಅಷ್ಟೇನಾ? ನಿಮಗೆ ಆ ಹತ್ತು ಸಾವಿರ ನಾನು ಕೊಡ್ತೇನೆ.”

ಕೃಷ್ಣಪ್ಪನಿಗೆ ತಾನಿಷ್ಟು ಮಾಡಬಹುದೆಂದು ತುಂಬ ಖುಷಿಯಾಗಿತ್ತು. ಮಹೇಶ್ವರಯ್ಯ ತನ್ನ ಮೇಲೆ ಸುರಿದ ಹಣಕ್ಕೆ ಲೆಕ್ಕವಿರಲಿಲ್ಲ. ಅವನು ಈ ತನಕ ಅವರಿಗೆ ಒಂದೇ ಒಂದು ಕಾಸು ಕೊಟ್ಟಿರಲಿಲ್ಲ.

“ಕೊಡ್ತೀಯಾಂತ ನನಗೆ ಗೊತ್ತು. ಆದರೆ ಆ ಹಣಾನ್ನೂ ನಾನು ನಾಳೆ ಜೂಜಾಡ್ತೀನಲ್ಲ?”

“ಆಡಿ. ನೀವು ಗೆಲ್ಲಲೂಬಹುದಲ್ಲ?”

ಮಹೇಶ್ವರಯ್ಯನ ಕಣ್ಣುಗಳು ಭರವಸೆಯಲ್ಲಿ ಹೊಳೆದವು!

“ಹೌದು. ಆದರೆ ಸೋಲಲೂಬಹುದು -”

“ಸೋಲಿ -” ಕೃಷ್ಣಪ್ಪ ನಗುತ್ತ ಹೇಳಿದ.

“ಇಲ್ಲ -ಧಾರವಾಡದ ಹತ್ತಿರ ಒಂದು ಹಳ್ಳೀಲಿ ನನಗೆ ಸ್ವಲ್ಪ ತೋಟವಿದೆ. ಒಂದು ಗುಡಿಸಿಲಿದೆ. ಅಲ್ಲಿ ನನ್ನ ಉಳಿದ ಕಾಲವನ್ನು ಕಳೆಯೋಣ, ಈ ಜೂಜನ್ನ ಬಿಟ್ಟುಬಿಡೋಣ ಅಂತಿದ್ದೆ -”

“ನಾಳೆ ಸೋತರೆ ಹಾಗೇ ಮಾಡಿ -”

ಮಹೇಶ್ವರಯ್ಯ ತುಂಬ ಗೆಲುವಾಗಿಬಿಟ್ಟದ್ದು ಕಂಡು ಕೃಷ್ಣಪ್ಪನಿಗೆ ಸಂತೋಷವಾಯಿತು. ಇಬ್ಬರೂ ಹಿಂದಿನಂತೆಯೇ ಪರಸ್ಪರ ನೋಡಿ ನಕ್ಕರು. ಆದರೆ ಕ್ಷಣ ಕಳೆದು ಮಹೇಶ್ವರಯ್ಯ ಚಿಂತಾಕ್ರಾಂತರಾಗಿ “ಭೋ” ಎಂದು

“ನಿನಗೆ ಇದರಿಂದ ತೊಂದರೆಯುಂಟು” ಎಂದು ಎದುರಿಗಿದ್ದ ಬಾಗಿಲನ್ನು ದುರುಗುಟ್ಟಿದರು.

“ಇರಲಿ ಬಿಡಿ” ಎಂದು ಕೃಷ್ಣಪ್ಪ ನಾಗೇಶಾ ಎಂದು ಕರೆದು ತನ್ನ ವೀಲ್‌ಚೇರನ್ನು ರೂಮಿಗೆ ತಳ್ಳಿಸಿಕೊಂಡು ಹೋಗಿ ಹೆಂಡತಿಯನ್ನು ಬರಹೇಳಿದ. ಬಾಗಿಲು ಮುಚ್ಚುವಂತೆ ಹೇಳಿ,

“ಸೀತ ಬ್ಯಾಂಕಲ್ಲಿ ನಿನ್ನ ಹೆಸರಲ್ಲಿ ಹತ್ತು ಸಾವಿರ ಇದೆಯಲ್ಲ -ಅದು ನಾಳೆ ಬೆಳಗ್ಗೆ ನನಗೆ ಬೇಕು”

ಹೆಂಡತಿಯನ್ನು ಹೆಸರು ಹಿಡಿದು ಕೃಷ್ಣಪ್ಪ ಕರೆಯುವವನಲ್ಲ. ಅವಳಿಗೆ ಆಶ್ಚರ್ಯವಾಗಿತ್ತು.

“ಯಾಕೆ?” ಎಂದಳು.

“ಮಹೇಶ್ವರಯ್ಯನಿಗೆ ಕೊಡಬೇಕಿತ್ತು.”

“ನೀವು ಸೋಷಲಿಸ್ಟ್ ಆಗಿ ಕುದುರೆಯ ಬಾಲಕ್ಕೆ ಹಣ ಕಟ್ಟೋದನ್ನ …”

“ಅದೆಲ್ಲ ಬೇಡ ಕೊಡು” ಕೃಷ್ಣಪ್ಪ ಗುಡುಗಿದ.

“ಇಲ್ಲ -ಕೊಡೋಕೆ ದುಡ್ಡಿಲ್ಲ -”

ಕೃಷ್ಣಪ್ಪ ಕೈ ಎತ್ತಿದ್ದು ನೋಡಿ ದೂರ ಸರಿದಳು.

“ಇದೆ -ಕೊಡು”

ಅವನ ಮನಸ್ಸು ನೆಗೆದು ಅವಳ ಕೈ ಹಿಡಿದು ಜಗ್ಗುವ ಸನ್ನಾಹ ಮಾಡಿತು. ಆದರೆ ದೇಹ ಹಂದಲಿಲ್ಲ. ಕೃಷ್ಣಪ್ಪನ ಕಣ್ಣುಗಳಲ್ಲಿ ನೀರು ಉಕ್ಕಿ ತುಟಿಗಳು ಅದುರತೊಡಗಿದುವು.

ಸೀತೆ ಮೆತ್ತಗಾಗಿ ಹೇಳಿದಳು:

“ಜಯಮಹಲ್ ಬಡಾವಣೆಯಲ್ಲಿ ಟ್ರಸ್ಟ್ ಬೋರ್ಡು ನನಗೊಂದು ಸೈಟ್ ಸ್ಯಾಂಕ್ಷನ್ ಮಾಡಿದೆ. ಅದನ್ನ ಕೊಳ್ಳೋಕೆ ಆ ಹಣ ಇಟ್ಟಿದೀನಿ….”

ಕೃಷ್ಣಪ್ಪನ ಕಣ್ಣುಗಳಲ್ಲಿ ನೀರಿಳಿದುವು . ಬಲಗೈಯಿಂದ ಒರೆಸಿಕೊಳ್ಳುತ್ತ –

“ಯಾವ ಸೈಟು” ಎಂದು ಬಿಕ್ಕಿದ.

“ವೀರಣ್ಣ ಅಪ್ಲಿಕೇಶನ್ ಹಾಕ್ಸಿದ್ರು. ಸ್ಯಾಂಕ್ಷನ್ ಆಯ್ತು”

ಸೀತೆ ಮೃದುವಾಗಿ ಹೇಳಿ ತಲೆ ತಗ್ಗಿಸಿದಳು. ಈ ಜಯಮಹಲ್ ಸೈಟುಗಳ ಬಗ್ಗೆ ಅಸೆಂಬ್ಲಿಯಲ್ಲಿ ಕೃಷ್ಣಪ್ಪ ಗಲಾಟೆ ಮಾಡಿದ್ದ. ಓಪನ್ ಮಾರ್ಕೆಟ್ಟುಗಳಲ್ಲಿ ನಲವತ್ತು ಐವತ್ತು ಸಾವಿರ ಬೆಲೆಬಾಳುವ ಸೈಟುಗಳನ್ನು ಏಳೆಂಟು ಸಾವಿರಕ್ಕೆ ನಿಗದಿ ಮಾಡಿ ಪೇಪರಿನಲ್ಲಿ ಪ್ರಕಟವಾದ್ದು ಕಂಡು ಕೃಷ್ಣಪ್ಪ ಈ ಸೈಟುಗಳನ್ನು ಮಂತ್ರಿಗಳು ತಮ್ಮಲ್ಲಿ ತಮ್ಮ ಬಳಗದವರಲ್ಲಿ ಹಂಚಿಕೊಳ್ಳಬಹುದೆಂದು ಗುಮಾನಿಪಟ್ಟಿದ್ದ. ಈಗ ಮಂತ್ರಿಮಂಡಳ ತನ್ನ ಹೆಂಡತಿಗೂ ಒಂದು ಸೈಟ್ ಕೊಟ್ಟು ತನ್ನ ಬಾಯಿ ಮುಚ್ಚಿಸಲು ಪ್ರಯತ್ನಿಸಿದೆ. ತನ್ನ ಉಮ್ಮಳವನ್ನು ಹತ್ತಿಕ್ಕಿಕೊಂಡು ಕೃಷ್ಣಪ್ಪ ಹೇಳಿದ, “ಸೀತ -ನೀನು ಈ ಸೈಟನ್ನು ಕೊಂಡುಕೋಬಾರದು.”

“ಯಾಕೆ? ನೀವೇನೂ ನನಗೆ ಮಾಡಬೇಡಿ. ಆದರೆ ಸೈಟ್ ಕೊಳ್ಳೋದು ನನ್ನ ಹಕ್ಕು. ಅದಕ್ಕೆ ಅಡ್ಡ ಬರಬೇಡಿ.”

“ಸೀತ, ಈ ಸೈಟು ನಮಗೆ ಬೇಡ. ನಾನು ಬೇರೆ ನಿನಗೆ ಕೊಂಡುಕೊಡ್ತೀನಿ” ಕೃಷ್ಣಪ್ಪ ಸಮಾಧಾನದಿಂದ ಹೇಳಿದ.

“ಕೊಡ್ತೀರಿ. ಕೊಡ್ತೀರಿ. ನಾಳೆ ನಿಮಗೆ ಏನಾದರೂ ಆದರೆ ನಾನು ನಿಮ್ಮ ಮಗಳು ಬಾಯಿಗೆ ಮಣ್ಣು ಹಾಕಿಕೋಬೇಕ?”

ಕೃಷ್ಣಪ್ಪ ಕಣ್ಣುಗಳನ್ನು ಮುಚ್ಚಿದ.

“ಹೋಗು. ಹೋಗು. ನನ್ನ ಹತಿರ ಸುಳೀಬೇಡ ಹೋಗು” ಎಂದು ಸಣ್ಣದನಿಯಲ್ಲಿ ಕರ್ಕಶವಾಗಿ ಕಿರುಚಿದ.

ಅವಳು ಹೋದ ಮೇಲೆ “ನಾಗೇಶ ” ಎಂದು ಕೂಗಿದ. ಕಣ್ಣುಗಳನ್ನು ಮುಚ್ಚಿದ್ದೇ ಹೇಳಿದ.

“ಈಗಲೇ ಹೋಗಿ ವೀರಣ್ಣನ ಹತ್ತಿರ ಹತ್ತು ಸಾವಿರ ಬೇಕೂಂತ ಕೇಳಿ ತಗೊಂಬಾ. ಆಟೋ ಮಾಡಿಕೊಂಡು ಹೋಗು. ಪರ್ಸಲ್ಲಿ ದುಡ್ಡೀರಬೇಕು ತಗೋ”

ನಾಗೇಶ ತನ್ನಲ್ಲಿ ಹಣವಿದೆಯೆಂದು ಹೋದ. ಮುಕ್ಕಾಲು ಗಂಟೆಯಲ್ಲಿ ಹಿಂದಕ್ಕೆ ಬಂದು ದೊಡ್ಡದೊಂದು ಕವರನ್ನು ಕೃಷ್ಣಪ್ಪನಿಗೆ ಕೊಟ್ಟ. ವೀರಣ್ಣ ದುಡ್ಡಿನ ಜೊತೆ ಒಂದು ಚೀಟಿಯನ್ನಿಟ್ಟಿದ್ದ.

“ಇದರಲಿ ಹದಿನೈದು ಸಾವಿರವಿದೆ. ಹೆಚ್ಚು ಬೇಕಾದರೆ ನಾಳೆ ಹೇಳಿಕಳಿಸಿ. ತಮ್ಮ ವಿಧೇಯ, ವೀರಣ್ಣ.”

“ತಳ್ಳು” ಎಂದು ಮಹೇಶ್ವರಯ್ಯನ ಕೋಣೆಗೆ ಹೋದ. ಅವರು ಎದ್ದು ಕೂತು ತಾನು ಬರುವ ಮುಂಚೆ ಧ್ಯಾನದಲ್ಲಿದ್ದಂತೆ ಕಂಡಿತು.

“ಹದಿನೈದು ಸಾವಿರ ಇದೆ. ನಾಳೆ ಬೇಕಾದರೆ ಇನ್ನಷ್ಟು ಕೊಡ್ತೇನೆ” ಎಂದು ಅವರ ಉತ್ತರಕ್ಕೆ ಕಾಯದೆ ನಾಗೇಶನಿಂದ ತಳ್ಳಿಸಿಕೊಂಡು ರೂಮಿಗೆ ಹೋಗಿ ಮಲಗಿದ.

*
*
*

ಕೃಷ್ಣಪ್ಪ ಸೀತೆಯ ಜೊತೆಗೆ ಜಗಳವಾಡಿದಾಗ್ಗೆಲ್ಲ ಮಗುವಿಗೆ ಹೇಗೋ ಅದು ಗೊತ್ತಾಗಿಬಿಡುವುದು. ಮಗಳು ತುಟಿಪಿಟಕ್ಕೆನ್ನದೆ ಕೊಟ್ಟದ್ದನ್ನು ತಿಂದು, ತಾಯಿ ತಲೆಯ ಸಿಕ್ಕು ಬಿಡಿಸುತ್ತ ಬಾಚಣಿಗೆಯಿಂದ ಅವಸರದಲ್ಲಿ ಜಗ್ಗುವಾಗ ಚೂರೂ ಪ್ರತಿಭಟಿಸದೆ ಮಂಕಾಗಿ ಕೂತಿದ್ದನ್ನು ಕಂಡು ಕೃಷ್ಣಪ್ಪನಿಗೆ ದುಃಖವಾಯಿತು. ನೀಟಾಗಿ, ಎರಡು ಜಡೆ ಹಾಕಿಕೊಂಡು ಯೂನಿಫ಼ಾರಂ ಧರಿಸಿ ಸ್ಕೂಲಿಗೆ ಹೊರಟ ಗೌರಿಯನ್ನು “ಗೌರಾ” ಎಂದು ಕರೆದ. ತನ್ನ ಹತಿರ ಬರಲು ಮಗಳು ಅಂಜುತ್ತಿದ್ದಾಳೆಂದು ಅನುಮಾನವಾಯಿತು. ಇನ್ನೊಮ್ಮೆ ಕರೆದ. ಹತ್ತಿರ ಬಂದು ನಿಂತಳು. ಅವಳ ಬೆನ್ನಿನ ಮೇಲೆ ಕೈಯಿಟ್ಟು ತಡವಿದ. ತಿರುಗಿಸಿ ನಿಲ್ಲಿಸಿಕೊಂಡು ಅವಳ ಮುಖ ನೋಡಿದ. ತನ್ನ ಕಣ್ಣುಗಳು -ಆದರೆ ತಾಯಿಯ ಗುಜ್ಜು ಮೂಗು. ತಾಯಿ ಕೋಪದಲ್ಲಿ ಹರಿದು ಬಾತುಕೊಂಡಿದ್ದ ತುಟಿ ಈಗ ಸರಿಹೋಗಿದೆ. ಮೂಗಿನಲ್ಲಿ ಸಿಂಬಳ ಸುರಿಯುತ್ತಿಲ್ಲ. ನಿರ್ಭಾವದಲ್ಲಿ ನಿಂತ ಎಳೆ ಮಗುವಿನ ಮುಖದಲ್ಲಿ ವಯಸ್ಸಿಗೆ ಮೀರಿದ ಪ್ರಬುದ್ಧತೆ ಮೂಡಿದಂತೆ ಕಂಡು ಅವನಿಗೆ ಕಸಿವಿಸಿಯಾಯಿತು. ಮಗು ಒಂಟಿಕಾಲಿನಲ್ಲಿ ಕುಣಿಯುತ್ತಲೋ ಬೀರುವಿನಲ್ಲಿದ್ದುದನ್ನು ಎಳೆದು ಬೀಳಿಸಿ ತಾಯಿಯಿಂದ ಬೈಸಿಕೊಂಡು ಎಗ್ಗಿಲ್ಲದೆ ಓಡುತ್ತಲೋ ಇರುವುದನ್ನು ಕಂಡು ಬಹಳ ದಿನಗಳಾದುವು ಎನ್ನಿಸಿತು.

ಗೌರಿ ಸ್ಕೂಲಿಗೆ ಹೋದ ಮೇಲೆ ಶುಭ್ರವಾದ ಸಿಲ್ಕ್ ಜುಬ್ಬ ಧರಿಸಿ ಹಣೆಗೆ ವಿಭೂತಿಯಿಟ್ಟು ಬಂದ ವೀರಣ್ಣ ಅದೊಂದು ಸಾಮಾನ್ಯ ಪ್ರಶ್ನೆ ಎನ್ನುವಂತೆ

“ಇನ್ನಷ್ಟು ಬೇಕ?” ಎಂದ.

ಬೇಡವೆಂದ ಕೃಷ್ಣಪ್ಪ, ಅವತ್ತು ರಾತ್ರೆ ಬರುವ ಗೌರಿ ದೇಶಪಾಂಡೆಯನ್ನು ನಿಲ್ದಾಣದಿಂದ ಕರೆತಂದು ಅವರ ಗೆಸ್ಟ್‌ಹೌಸಿನಲ್ಲಿ ಇಳಿಸಬೇಕೆಂದೂ, ಜ್ಯೋತಿಯ ಬಾಯ್‌ಫ಼್ರೆಂಡಿಗೂ ನಾಗೇಶನ ಅಕ್ಕನಿಗೂ ಕೆಲಸದ ವ್ಯವಸ್ಥೆ ಮಾಡಬೇಕೆಂದೂ ಹೇಳಿದ. ಅದೇನು ಮಹತ್ವದ ವಿಷಯವಲ್ಲವೆನ್ನುವಂತೆ “ಆಗಲಿ” ಎಂದ ವೀರಣ್ಣ. ಪಂಚಲಿಂಗಯ್ಯ ಬಂದಿದ್ದರೆಂದೂ ಗೌಡರ ಹತ್ತಿರ ಅಂಥ ಕೆಲಸ ಮಾಡಿಸಕೂಡದೆಂದೂ ಹೇಳಿ ತಾನೇ ಸೀಟಿಗೆ ವ್ಯವಸ್ಥೆ ಮಾಡುತ್ತೇನೆಂದು ಹೇಳಿದ್ದಾಗಿಯೂ ತಿಳಿಸಿ,

“ನೀವು ಬೇಗ ಗುಣವಾಗಬೇಕು”

ಎಂದ. ಹೇಳಿದ ಮಾತು ಸಾಮಾನ್ಯವಾದರೂ ಹೇಳಿದ ರೀತಿ ಅರ್ಥಗರ್ಭಿತವಾಗಿತ್ತು. ಕೃಷ್ಣಪ್ಪ ಕೇಳಿದ:

“ನಿಮ್ಮ ಮನಸ್ಸಲ್ಲೇನೋ ವಿಶೇಷವಿದೆ. ಹೇಳಿ”

“ನಿಮ್ಮ ತಲೆ ಕೆಡಿಸಬಾರದೆಂದು ನಿಮ್ಮ ಹತ್ತಿರ ಹೇಳ್ತಾ ಇಲ್ಲ. ನೀವು ತುಂಬ ದೊಡ್ಡ ಜವಾಬ್ದಾರಿ ಹೊರೋ ಕಾಲ ಬಹಳ ದೂರವೇನೂ ಇಲ್ಲ.”

“ನಾನೂ ಅದನ್ನ ಕೇಳಿಸಿಕೊಂಡೆ. ಆದರೆ ಪಕ್ಷಾಂತರ ಮಾಡೋವ್ರ ಜೊತೆ ನಾನು ಸೇರಲ್ವಲ್ಲ”

“ಸೇರಬೇಡಿ. ನೀವೇ ಮಂತ್ರಿಮಂಡಳ ರಚಿಸಿ. ನಿಮಗೆ ಹೊಸ ಗೇಣಿ ಶಾಸನ ತರಲಿಕ್ಕೆ ಇಷ್ಟ ಅಲ್ವ? ತನ್ನಿ. ಬೆಂಬಲ ಕೋಡೋವರು ಕೊಡ್ತಾರೆ. ಬೆಂಬಲ ಸಿಗಲಿಲ್ಲ ಅನ್ನಿ. ರಾಜೀನಾಮೆ ಕೊಟ್ಟರಾಯ್ತು….ಏನೇನೋ ತಮಗೆ ಬುದ್ಧಿವಾದ ಹೇಳೋ ಹಾಗೆ ಮಾತಾಡ್ತಿದೀನಿ. ಕ್ಷಮಿಸಬೇಕು”

“ವೀರಣ್ಣ -ಒಂದು ಮಾತು. ಅದು ಯಾಕೆ ಸೀತೆ ಹತ್ತಿರ ನೀವು ಸೈಟಿಗೆ ಅಪ್ಲೈ ಮಾಡಿಸಿದ್ರಿ?”

“ಒಳ್ಳೆ ತಮಾಷೆಯಾಯ್ತು ನೀವು ಹೇಳೋದು, ಆಕೆಯೇನು ಈ ದೇಶದ ಪ್ರಜೆ ಅಲ್ವ?”

ವೀರಣ್ಣ ನಕ್ಕು ಕೃಷ್ಣಪ್ಪನ ಮುಖ ಗಂಭೀರವಾಗಿರುವುದನ್ನು ಕಂಡು ಅವನೂ ಗಂಭೀರನಾಗಿ ಹೇಳಿದ:

“ಗೌಡರೆ ನೀವು ಎಷ್ಟೇ ದೊಡ್ಡವರಾಗಿರಿ ಹೆಂಗಸರಿಗೆ ಅದು ಗೊತ್ತಾಗೋದು ಇಂಥದೇನಾದ್ರೂ ಸಿಕ್ಕಾಗ. ಅವರನ್ನ ದೂರಿ ಏನು ಪ್ರಯೋಜನ ಹೇಳಿ? ಅವರಿಗಾಗಿ ಅದನ್ನವರು ಬಯಸ್ತಾರ? ಹೆಣ್ಣಿನ ಮೇಲೆ ಗೂಡುಕಟ್ಟೋ ಜವಾಬ್ದಾರಿ. ನಿಮಗೆ ವಿಶಾಲ ಆಕಾಶದಲ್ಲಿ ಹಾರಾಡೋ ಕೆಲಸ -ಇದು ಧರ್ಮ ಅಲ್ಲವ?”

“ಏನೇ ಹೇಳಿ -ಇದು ಕೂಡ ಕರಪ್ಷನ್”

“ಶಿವನೇ ನಿಮ್ಮ ಮಾತು ಚೆನ್ನಾಯ್ತು. ನಿಮ್ಮ ಹೆಂಡ್ತಿ ಕಷ್ಟಪಟ್ಟು ದುಡಿದ ಹಣದಲ್ಲೊಂದು ಸೈಟ್ ತಗೊಂಡರೆ ಕರಪ್ಷನ್ ಆದರೆ, ಸ್ಪೀಡ್‌ಮನಿ ಮಣ್ಣು ಮಶಿ ಅಂತ ಕೊಟ್ಕೊಂಡು ನಮ್ಮಂಥೋರು ಬಿಸಿನೆಸ್ ಮಾಡಬೇಕಲ್ಲ ಅದಕ್ಕೇನು ಅಂತೀರಿ ನೀವು. ಅವರವರಿಗೆ ಅವರವರ ಧರ್ಮ ಸರಿ ಅಲ್ಲವ?”

“ಇಲ್ಲ ನೀವು ಮಾಡ್ತಿರೋದೂ ತಪ್ಪೂಂತ ನಾನು ಅನ್ನೋದು”

“ತಪ್ಪಾದರೆ ತಪ್ಪು ಬಿಡಿ. ಅದು ಸರಿಹೋಗೋದು ಹೇಗೆ? ನಾನು ಸರಿಯಾದಾಗ್ಲ? ಅಥವಾ ದೇಶ ಸರಿಯಾದಾಗ್ಲ? ಈಗ ಪಿ.ಡಬ್ಲ್ಯು.ಡಿ ಇದೆ -ಅದು ಸರಿಹೋಗ್ದೆ ನಾನು ಸರಿಹೋಗೋದು ಸಾಧ್ಯಾನ? ಹೇಳಿ ನೀವೆ. ಯಾರು ಇದನ್ನೆಲ್ಲ ಕೂಲಂಕುಶ ಸರಿ ಮಾಡೋವ್ರು? -ನಿಮ್ಮಂಥವರು. ಅದಕ್ಕೇ ನಾನು ಹೇಳಿದ್ದು -ನೀವು ನಾಯಕರಾಗಬೇಕು, ಮಂತ್ರಿಮಂಡಳ ರಚಿಸಬೇಕೂಂತ. ಥಿಯೇಟರ್ ಹತ್ರ ಕೆಲಸವಿದೆ. ಹೋಗಬೇಕು ಬರ್ಲ ನಾನು?”

ವೀರಣ್ಣ ಹೊರಟು ಹೋದ. ತನ್ನನ್ನು ಹೊಗಳುವಾಗಲೂ, ಕೈಕಟ್ಟಿ ವಿನಯದಿಂದ ನಿಂತಾಗಲೂ ವೀರಣ್ಣ ತನ್ನನ್ನು ಸಂಪೂರ್ಣ ವಹಿಸಿಕೊಂಡವನಂತೆ ಕಾಣುತ್ತಿದ್ದ. ತನ್ನ ನಿರಾಕರಣೆಗೆ, ಅಸಹನೆಗೆ, ಕೋಪಕ್ಕೆ ಕೂಡ ಅವಕಾಶ ಕೊಟ್ಟು, ಆ ಮೂಲಕ ಉಬ್ಬಿಸಿ, ಅದನ್ನೇ ಹೊಗಳಿ ಕೊನೆಗೆ ಗೆಲ್ಲುವ ಸನ್ನಾಹ ಮಾಡಿದ್ದ. ಅವನ ಸ್ವಂತಕ್ಕಾಗಿ ಮಾತ್ರ ಇದನ್ನೆಲ್ಲ ಮಾಡುತ್ತಿದ್ದಾನೆಂದು ಹೇಳುವುದೂ ಕೃಷ್ಣಪ್ಪನಿಗೆ ಸಾಧ್ಯವಿರಲಿಲ್ಲ; ಈಗಿರುವ ಮುಖ್ಯಮಂತ್ರಿಯಿಂದಲೇ ಅವನು ಜಲಾಶಯ ಯೋಜನೆಯೊಂದರ ಕಾಂಟ್ರ್ಯಾಕ್ಟ್ ಪಡೆದಿದ್ದನಲ್ಲವೆ? ವೀರಣ್ಣನಲ್ಲದಿದ್ದರೆ ಇನ್ನೊಬ್ಬ ಪಡೆಯಬಹುದಾಗಿದ್ದ ಕಾಂಟ್ರ್ಯಾಕ್ಟ್ ಅದು.

ಕೃಷ್ಣಪ್ಪನಿಗೆ ವೀರಣ್ಣನ ಆಳ ಅಗಲ ತಿಳಿಯಲಾರದೆ ತಬ್ಬಿಬ್ಬಾಗಿ ವೀಲ್‌ಚೇರಿನ ಮೇಲೆ ಕೂತಿದ್ದಾಗ ಜ್ಯೋತಿ ಬಂದಳು. ಸದ್ದಿಲ್ಲದೆ ಅವನ ಸುತ್ತ ಸುಳಿದಾಡುತ್ತ ಹಾಸಿಗೆಗೆ ಹೊಸ ಶೀಟ್ ಹೊದೆಸಿ, ತಾನು ತಂದ ಗುಲಾಬಿ ಹೂಗಳನ್ನು ಕುಂಡದಲ್ಲಿ ಸುಂದರವಾಗಿ ಜೋಡಿಸಿ ಕೃಷ್ಣಪ್ಪನನ್ನು ತುಂಬ ಕೌಶಲದಿಂದ ಎಬ್ಬಿಸಿ ಮಲಗಿಸಿದಳು. ದೇಹವನ್ನು ಮಸಾಜ್ ಮಾಡುತ್ತ ಗೆಲುವಾಗಿ ತಾನು ರಾತ್ರಿ ನೋಡಿದ ಸಿನಿಮಾದ ಕಥೆ ಹೇಳತೊಡಗಿದಳು. ಸಿನಿಮಾ ನಾಯಕರ ವಿರಹದ ಕಥೆಯನ್ನು ಹೇಳುವ ಕ್ರಮದಲ್ಲೆ, ತನ್ನ ಒಳಗನ್ನೂ ಅಲ್ಲಿ ಸೊರಗುತ್ತಿದ್ದ ತನ್ನ ಸುಖದ ಅಪೇಕ್ಷೆಯನ್ನೂ ಸೂಚಿಸಿದಳು. ಕೆಲಸ ಸಿಗುವ ತನಕ ತನ್ನ ನಾಯಕನಿಗೆ ಅರಳದ ಮೊಗ್ಗಾಗಿ ಉಳಿದಿದ್ದನ್ನು ಹೇಗೆ ಸಮರ್ಥಿಸಿಕೊಳ್ಳುತ್ತಿದ್ದಾಳೆಂದು ಚಕಿತನಾದ. ಬಾಯ್‌ಫ಼್ರೆಂಡಿಗೆ ಕೆಲಸ ಸಿಗುತ್ತಿದೆಯೆಂದು ಅವಳು ಇವತ್ತು ಖುಷಿಯಾಗಿದ್ದಳು. ಪ್ರಾಯಶಃ ಇವತ್ತು ರಾತ್ರಿ ಅವನಿಗೆ ಅರಳುತ್ತಾಳೆ. ಅವಳ ಸಂಭ್ರಮ ಅವಳ ಮೃದುವಾದ ಕೈಗಳಿಂದ ತನ್ನ ಬಡವಾದ ಭುಜ, ತೋಳು, ಪಕ್ಕೆ, ಸೊಂಟ, ತೊಡೆ, ಕಾಲು, ಬೆರಳುಗಳಿಗೆ ಲಯಬದ್ಧವಾಗಿ ಇಳಿಯುತ್ತಿತ್ತು. ತನ್ನ ಸುತ್ತಮುತ್ತಲಿನ ಆರೋಗ್ಯವನ್ನೆಲ್ಲ ತಾನು ಹೀರುತ್ತಿದ್ದೇನೆಂದು ಕೃಷ್ಣಪ್ಪನಿಗೆ ಅನ್ನಿಸಿತು.

ಕುಂಡದಲ್ಲಿ ಸೊಕ್ಕಿ ಉಳಿದವಕ್ಕಿಂತ ಮೇಲೆ ನಿಂತ ಅರಳುತ್ತಿದ್ದ ಗುಲಾಬಿ ಹೂವೊಂದು ಅವನ ಕಣ್ಣು ಸೆಳೆಯಿತು. ಒದ್ದೆ ಆದ್ದರಿಂದ ಹೊಳೆಯುವ ದಳಗಳ ಕಟುವಾದ ಕೆಂಪು; ದೃಷ್ಟಿಯನ್ನು ಒಳಕ್ಕೆಳೆದುಕೊಳ್ಳುವಂತೆ ಅಂಚಿನಲ್ಲಿ ಮುರಿಯುತ್ತ, ತಿರುವಿಕೊಳ್ಳುತ್ತ ಸಣ್ಣದಾಗುತ್ತ, ಕೇಂದ್ರವನ್ನು ಬಚ್ಚಿಟ್ಟುಕೊಳ್ಳುವ ಈ ದಳಗಳ ಮೃದು ಮತ್ತು ಬಿಗಿ; ಆಹ್ವಾನ ಮತ್ತು ರಹಸ್ಯ; ಈ ಬಣ್ಣ ಈ ಬೆಡಗಿಗೂ ಒರಟಾದ ಎಲೆ, ಚೂಪು ಮುಳ್ಳುಗಳ ಹುರಿಯಾದ ಕಾಂಡ -ಹೀಗೇ ಏಕಾಗ್ರವಾಗಿ ಗುಲಾಬಿಯನ್ನು ನೋಡುತ್ತ ಜ್ಯೋತಿಯ ಇಂಪಾದ ಹರಟೆಗೆ ಕಿವಿಯನ್ನು ಒಡ್ಡಿದ, ತಣ್ಣಗೆ ಉರಿಯುವ ಜ್ವಾಲೆಯಂತಿತ್ತು ಗುಲಾಬಿ. ಏನೋ ಹೇಳುತ್ತ ಏನೋ ಬಚ್ಚಿಡುತ್ತ ಇರುವಂತೆ ಅದು ಇದ್ದುದರಿಂದ ಕೃಷ್ಣಪ್ಪನಿಗೆ ಅದನ್ನು ನೋಡುವುದು ಕಷ್ಟವಾಗತೊಡಗಿತು. ಜ್ಯೋತಿಯ ಮುಖವನ್ನು ನೋಡಿದ. ಆಯಾಸ ಪಡದೆ ಅವಳು ತನ್ನನ್ನು ಒತ್ತುತ್ತ ತೀಡುತ್ತ ತನ್ನ ಮಾತಿಗೆ ತಾನೇ ಹಸನ್ಮುಖಿಯಾಗಿರುವಂತೆ ಕಂಡಳು. ಅನಾಯಾಸೇನ ಮರಣಂ ಎಂದು ತಾನು ಆಗೀಗ ಬಯಸಿದ್ದನ್ನು ನೆನೆದ. ಇಲ್ಲ -ಈಗ ಜಡವಾಗಿದ್ದ ದೇಹವನ್ನು ಹುರಿದುಂಬಿಸಬೇಕೆನ್ನಿಸುತ್ತದೆ. ಮರ ಹತ್ತಬೇಕು, ಬಾವಿಯಲ್ಲಿಳಿದು ಕೆಸರು ತೋಡಬೇಕು, ಈಜಬೇಕು, ಗದ್ದೆಯಲ್ಲಿ ಸಸಿ ನೆಡಬೇಕು, ಹೂವಿನಂಥ ಪುಟ್ಟ ಕೋಳಿಮರಿಗಳನ್ನು ಅಂಗೈ ಮೇಲೆ ಇರಿಸಿಕೊಳ್ಳಬೇಕು -ಹೀಗೆ ಏನೇನೋ ಚಪಲಗಳು ಮೂಡುತ್ತವೆ. ವೀರಣ್ಣ ಹೇಳಿದ್ದನ್ನು ತಾನು ಕಿವಿಗೆ ಹಚ್ಚಿಕೊಳ್ಳದಂತೆ ಇದ್ದದ್ದು ಬರಿ ನಟನೆಯಲ್ಲವೆ? ಅಧಿಕಾರದಲ್ಲಿ ಈ ಜಡವಾದ ದೇಹ ಮತ್ತೆ ಚೈತನ್ಯದ ಬುಗ್ಗೆಯಾದೀತೆಂದು ಆಸೆಯಾಗುತ್ತದೆ. ತಾಯಿ ಅವಳ ಮಡಿಲಲ್ಲಿ ಹಲಸಿನ ಹಣ್ಣಿನ ಕಡುಬನ್ನು ಕದ್ದು ತಂದು ಕೊಡುತ್ತಿದ್ದುದು ನೆನಪಾಗುತ್ತದೆ.

ನಾಗೇಶ ವಿಷಣ್ಣನಾಗಿ ತನ್ನೆದುರು ಸುಳಿದದ್ದನ್ನು ಕಂಡು “ಅದೇನೋ ನಾಗೇಶ” ಎಂದ. ಜ್ಯೋತಿ ಸಂಜೆ ಬರ್ತೇನೆ ಎಂದು ಹೊರಟಳು. ನಾಗೇಶ ಉತ್ತರ ಕೊಡಲಿಲ್ಲ. ತನ್ನ ಕಣ್ಣು ತಪ್ಪಿಸಿಕೊಳ್ಳುವ ಅವನ ಹವಣಿಕೆಯಿಂದ ಕಿರಿಕಿರಿಯಾಗಿ ಮತ್ತೆ ಕರೆದ. ನಾಗೇಶ ದುಗುಡದಿಂದ ಕೃಷ್ಣಪ್ಪನಿಗೆ ಅವನು ಜೇಬಿನಲ್ಲಿ ಮಡಿಸಿಟ್ಟಿದ್ದ ಹತ್ತು ಪೈಸದ ಕಿಡಿ ಎಂಬ ಪತ್ರಿಕೆಯನ್ನು ಕೊಡುತ್ತ “ನಾಯಿ ಸೂಳೇಮಕ್ಕಳು. ಏನೋ ಬರೆದಿದ್ದಾವೆ. ಮನಸ್ಸಿಗೆ ಹಚ್ಚಿಕೋಬೇಡಿ” ಎಂದ.

ಕೃಷ್ಣಪ್ಪ ಓದಿದ: ಇಂಥ ಆಪಾದನೆಯನ್ನು ಯಾರೂ ಈವರೆಗೆ ಅವನ ಮೇಲೆ ಹೊರಿಸಿದ್ದಿಲ್ಲ. ’ಮುಖ್ಯಮಂತ್ರಿಯಾಗಲು ಕೃಷ್ಣಪ್ಪಗೌಡರ ಸಂಚು’ ಎಂಬ ಶಿರೋನಾಮೆಯಲ್ಲಿ ಆಪಾದನೆಗಳ ಪಟ್ಟಿಯಿತ್ತು. ಹೆಂಡತಿಯ ಹೆಸರಿನಲ್ಲಿ ಜಯಮಹಲ್ ಬಡಾವಣೆಯಲ್ಲಿ ಸೈಟ್ ಪಡೆದದ್ದು; ವೀರಣ್ಣನೆಂಬ ಕಂಟ್ರ್ಯಾಕ್ಟರ್‍ಗೆ ಪ್ರಸ್ತುತ ಸರ್ಕಾರ ಕೋಟಿಗಟ್ಟಲೆ ಲಾಭವಿರುವ ಜಲಾಶಯದ ಕಾಮಗಾರಿಯನ್ನು ಟೆಂಡರ್ ತಿದ್ದಿಕೊಟ್ಟಿದ್ದರೂ ಆ ಬಗ್ಗೆ ಗೌಡರು ಯಾಕೆ ಸೊಲ್ಲೆತ್ತಿಲ್ಲ? ಗತಿಸಿದ ಭಾರೀ ಜಮೀಂದಾರ ಗೋಪಾಲರೆಡ್ಡಿ, ದುಡ್ಡಿನ ಚೀಲದ ವೀರಣ್ಣ ಇಂಥವರೇ ಯಾಕೆ ಗೌಡರಿಗೆ ಆಪ್ತರು? ತನ್ನ ಹೆಸರಿನಲ್ಲಿ ಫ಼ಿಯೆಟ್ ಪಡೆದು ಅದನ್ನು ವೀರಣ್ಣನ ವ್ಯಭಿಚಾರೀ ಪುತ್ರನ ನಿಶಾಚರ ವೃತ್ತಿಗಳಿಗೆ ಕೊಟ್ಟಿರುವುದು ನಿಜವೆ? ಗೌಡರ ಹೆಂಡತಿ ಬ್ಯಾಂಕೊಂದರಲ್ಲಿ ಗುಮಾಸ್ತೆಯಾಗಿದ್ದವರು ಮ್ಯಾನೇಜರ್ ಸ್ಥಾನಕ್ಕೇರುತ್ತಿರುವುದು ಬರೀ ಗುಸುಗುಸು ಸುದ್ದಿಯೆ? ಆಳುವ ಪಕ್ಷ ಒಡೆಯುತ್ತಿರುವಾಗ ಸದ್ಯದ ಮುಖ್ಯಮಂತ್ರಿಯ ಗುಂಪು ಕ್ರಾಂತಿಕಾರನೆಂದು ಪ್ರತೀತಿ ಪಡೆದ ಗೌಡರನ್ನು ನಾಯಕನನ್ನಾಗಿ ಆರಿಸಿ ತಮ್ಮ ಸರ್ಕಾರ ಉಳಿಸಿಕೊಳ್ಳಲು ನಡೆಯುತ್ತಿರುವ ನಾಟಕದ ಹಿನ್ನೆಲೆಯಲ್ಲಿ ವೀರಣ್ಣ ಎಂ.ಎಲ್.ಎ ಗಳನ್ನು ಎಷ್ಟೆಷ್ಟು ಹಣ ಕೊಟ್ಟು ಕೊಳ್ಳುತ್ತಿದ್ದಾನೆ; ಮುಖ್ಯಮಂತ್ರಿಗೆ ವಿರೋಧವಾದ ಎಡಪಂಥೀಯರ ಜೊತೆ ಸೇರಬೇಕೆನ್ನುವ ಗೌಡರ ಪಕ್ಷದ ಗುಂಪನ್ನೂ ಹೆಚ್ಚು ದುಡ್ಡು ಕೊಟ್ಟು ವೀರಣ್ಣ ಕೊಳ್ಳುತ್ತಿರುವುದು ನಿಜವೆ? ವಿಚಾರವಾದಿಯೆಂದು ಖ್ಯಾತರಾದ ಗೌಡರು ರಹಸ್ಯದಲ್ಲಿ ಮಹೇಶ್ವರಯ್ಯ ಎಂಬ ಶಾಕ್ತ ಸಂಪ್ರದಾಯದವನ ಮೂಲಕ ವಾಮಾಚಾರದ ಪೂಜೆಗಳನ್ನು ಮಾಡಿಸಿ ಮುಖ್ಯಮಂತ್ರಿತ್ವ ಗಿಟ್ಟಿಸಿಕೊಳ್ಳಲು ಪ್ರಯತ್ನಿಸುತ್ತಿರುವುದು ನಿಜವೆ? ಹೆಂಡತಿಗೆ ಹೊಡೆಯುವುದು, ಆರ್ತರಾದ ಹೆಣ್ಣುಮಕ್ಕಳನ್ನು ಭೋಗಿಸುವುದು, ಕುಡಿಯುವುದು, ಕೋಪಾವೇಶದ ಭಂಗಿಗಳಲ್ಲಿ ಜನಪ್ರಿಯತೆ ಗಿಟ್ಟಿಸಿಕೊಂಡು ಅದನ್ನು ಕರಪ್ಟ್ ವ್ಯವಸ್ಥೆಯನ್ನು ಎತ್ತಿ ಹಿಡಿಯಲು ಬಳಸುವುದು -ಇವೆಲ್ಲ ಕ್ರಾಂತಿಕಾರನ ಲಕ್ಷಣಗಳೆ? ಒಂದಾನೊಂದು ಕಾಲದಲ್ಲಿ ನಿಜವಾಗಿಯೂ ಗೇಣಿದಾರರಾಗಿ ಶ್ರಮಿಸಿದ ರೈತ ಕುಟುಂಬದಲ್ಲಿ ಹುಟ್ಟಿದವನೊಬ್ಬ ಹೀಗೆ ಭ್ರಷ್ಟಾಚಾರಿಗಳ ಕೈಗೊಂಬೆ ಆದದ್ದಾದರೂ ಹೇಗೆ? -ಲೇಖನ ಕೊನೆಯಲ್ಲಿ ತುಂಬ ವ್ಯಥೆಯಿಂದ ಕೊನೆಯಾಗಿತ್ತು. ಕೊನೆಯ ವಾಕ್ಯ ಮಾರ್ಮಿಕವಾಗಿ ಗೌಡರ ಅನಾರೋಗ್ಯವೇ ಹೇಗೆ ಜನ ಶತ್ರುಗಳಿಗೂ ಗೌಡರಿಗೂ ಜನರ ಭಾವನೆಯನ್ನು ದೋಚುವ ಸಾಧನವಾಗಿದೆ ಎಂಬುದನ್ನು ದಪ್ಪಕ್ಷರದಲ್ಲಿ ವಿವರಿಸಿತ್ತು.

ಕೃಷ್ಣಪ್ಪನ ಮುಖ ಲೇಖನವನ್ನು ಓದುತ್ತ ಕಾಂತಿಹೀನವಾದ್ದನ್ನು ಕಂಡು ನಾಗೇಶ ಅವನಿಗೆ ಹುರುಪು ತುಂಬಲು ಪ್ರಯತ್ನಿಸಿದ:

“ನಾಗರಾಜ್ ಇದನ್ನು ಬರೆಸಿದ್ದು ಗೌಡರೆ.”

“ನಾಗರಾಜ್ ನನ್ನ ವಿರೋಧಿಸ್ತಾನೆ ನಿಜ. ಆದರೆ ಹೆಸರು ಹಾಕದೇ ಬರೆಯುವ ವ್ಯಕ್ತಿಯಲ್ಲ”

ಕೃಷ್ಣಪ್ಪ ಗಂಭೀರವಾಗಿ ಹೇಳಿದ.

“ಅವನೇ ಬರೆದದ್ದು. ಬೆಳ್ಳಗಿರೋದೆಲ್ಲ ಹಾಲೂಂತ ನೀವು ತಿಳೀತೀರಿ….”

“ಅವರನ್ನು ಬರಹೇಳು. ಹೋಗೋಕೆ ಮುಂಚೆ ಪ್ಯಾಡು ಪೆನ್ನು ಕೊಡು”

ನಾಗರಾಜ್ ತನ್ನ ಹರೆಯದ ದಿನಗಳನ್ನು ನೆನಪು ಮಾಡುವಂತಿದ್ದ -ಅವನ ಉಗ್ರವಾದ ನಿಷ್ಠುರವಾದ ನಿಲುವಿನಲ್ಲಿ. ಅವನ ಅಸಹನೆಯಲ್ಲಿ. ವ್ಯತ್ಯಾಸವೆಂದರೆ, ತಾನು ರಾಜಕೀಯಕ್ಕೆ ಇಷ್ಟವಿಲ್ಲದೇ ಬಂದಿದ್ದೆ, ಜೀವನ ಸಫಲವಾಗಲು ಬೇರೆ ದಿಕ್ಕು ಕಾಣದೆ. ನಾಗರಾಜ್‌ಗೆ ರಾಜಕೀಯವಲ್ಲದೆ ಬೇರೇನೂ ಕಾಣಿಸುವುದೇ ಇಲ್ಲ. ಕ್ರಾಂತಿಯಲ್ಲಲ್ಲದೇ ಜೀವನ ಸಫಲವಾಗುವ ಬೇರೆ ಮಾರ್ಗಗಳೇ ಇಲ್ಲವೆಂದು ತಿಳಿದಿದ್ದಾನೆ. ಒಂದರ ಮೇಲೆ ಒಂದು ಚಾರ್ಮಿನಾರ್ ಸೇದುತ್ತ ಎಲ್ಲರೂ ತನ್ನ ಮೇಲೆ ಉರಿದು ಬೀಳುವಂತೆ ಮಾತಾಡುತ್ತಾನೆ. ತಾನು ಅದೇ ಮಾತನ್ನು ಅದೇ ಧಾಟಿ ತೀವ್ರತೆಗಳಲ್ಲಿ ಮಾತಾಡಿದಾಗ ಸಹಿಸಿಕೊಳ್ಳುವ ಸಹೋದ್ಯೋಗಿಗಳು ನಾಗರಾಜ್ ಬಾಯಿ ತೆರೆದದ್ದೇ ಆದರೆ ಅವನ ಮೇಲೆ ಬೀಳುತ್ತಾರೆ. ಅವನು ಒಬ್ಬ ಶ್ರೀಮಂತ ಕ್ರಿಮಿನಲ್ ವಕೀಲರ ಮಗ -ಡೆಲ್ಲಿ ಸ್ಕೂಲ್ ಅಫ಼್ ಎಕನಾಮಿಕ್ಸ್ ನಲ್ಲಿ ಓದುತ್ತ ಮಾರ್ಕ್ಸಿಸ್ಟ್ ಆಗಿ, ಕಮ್ಯುನಿಸ್ಟ್ ಪಕ್ಷದ ರಷ್ಯಾ ಪರ ನೀತಿಗೆ ವಿರೋಧಿಯಾಗಿ ಬೇರೆ ಮಾರ್ಗ ಕಾಣದೆ -ಸೋಷಲಿಸ್ಟ್ ಬಣವನ್ನು ಸೇರಿದವ. ಸೋಷಲಿಸ್ಟರೆಂದರೂ ಅವನಿಗೆ ಅಲರ್ಜಿ. ತಾನು ಸದ್ಯಕ್ಕೆ ಮಾತ್ರ ಇಲ್ಲಿದ್ದೇನೆ ಎಂದು ಮುಚ್ಚುಮರೆ ಮಾಡದೆ ಹೇಳುತ್ತಿದ್ದ. ತುಮಕೂರಿನ ರೈತರ ಕ್ಷೇತ್ರದಿಂದ ಭಾರಿ ಬೆಂಬಲ ಪಡೆದು ಗೆದ್ದು ಬಂದಿದ್ದನೆಂದು ಉಳಿದವರು ಅವನನ್ನು ಸಹಿಸುತ್ತಾರೆ. ಕೃಷ್ಣಪ್ಪನ ನಾಯಕ ಸ್ಥಾನಕ್ಕೆ ಆತ ಪ್ರತಿಸ್ಪರ್ಧಿಯೆಂದು ಉಳಿದವರು ಯಾವಾಗಲೂ ಕೃಷ್ಣಪ್ಪನಿಗೆ ಚಾಡಿ ತರುತ್ತಾರೆ. ತನಗೆ ಯಾರೂ ಸಮವಲ್ಲವೆನ್ನುವಂತೆ ಕೃಷ್ಣಪ್ಪ ನಡೆದುಕೊಳ್ಳುವ ಠೀವಿಯನ್ನು ನಾಗರಾಜ್ ಸಹಿಸುವುದಿಲ್ಲ. ಪಕ್ಷದ ಸಭೆಯಲ್ಲಿ ಅವನು ಕೃಷ್ಣಪ್ಪನನ್ನು ಫ಼್ಯೂಡಲ್ ಎಂದು ಜರೆದದ್ದಿದೆ. ಆಡಳಿತದ ಜೊತೆ ಯಾವ ಒಪ್ಪಂದಕ್ಕೂ ತಯಾರಿಲ್ಲದ ಅವನಿಗೆ ಕೃಷ್ಣಪ್ಪ ಹೇಳುವುದುಂಟು: “ಆಕಾಶ ಹಂಚಿಕೊಳ್ಳೋ ತನಕ ಭೂಮಿ ಹಂಚಿಕೊಂಡೇನು ಪ್ರಯೋಜನ ಅಂದ ಹಾಗಾಗತ್ತೆ -ನಿಮ್ಮ ವಾದದ ಕ್ರಮದಲ್ಲಿ.” ನಾಗರಾಜ್ ಕಟುವಾಗಿ ಹಂಗಿಸುತ್ತಾನೆ; “ಮಾವೋ ಹೇಳೋದು ನಿಜ; ಎನಿಮಿಗಿಂತ ರಿವಿಷನಿಸ್ಟ್ ಹೆಚ್ಚು ಅಪಾಯಕಾರಿ.” ಈ ನಾಗರಾಜ್ ಕ್ರಮೇಣ ಮೆದುವಾಗಿ ಒಪ್ಪಂದದ ದಾರಿ ಹಿಡಿದು ತಪ್ಪುಗಳನ್ನು ಮಾಡಿಯಾನೆಂದು ಗುಪ್ತವಾಗಿ ಕೃಷ್ಣಪ್ಪ ಬಯಸಿದ್ದಿದೆ. ಆದರೆ ಸುಖ, ಸವಲತ್ತು, ದಾಕ್ಷಿಣ್ಯಗಳಿಂದ ಸಂಪೂರ್ಣ ವಿಮುಖನಾಗಿ ಈ ವರೆಗೆ ನಾಗರಾಜ್ ಬದುಕಿದ್ದ, ಒಂಟಿ ಪಿಶಾಚಿಯಂತೆ. ತನ್ನ ತತ್ವಗಳಿಗೆ ಆತುಕೊಂಡು, ತನ್ನ ವ್ಯಕ್ತಿತ್ವವನ್ನು ತೀವ್ರವಾಗಿ ಒಂದೇ ಗುರಿಗೆ ಮಿತಗೊಳಿಸಿ, ಕೆಂಪಗೆ ಕಾದ ಕಬ್ಬಿಣದ ಸಲಾಕೆಯಂತೆ. ಕೃಷ್ಣಪ್ಪನಿಗೆ ಅವನನ್ನು ಕಂಡು ಅಸೂಯೆಯಾಗುತ್ತಿತ್ತು; ಅವನ ಅಪಕ್ವತೆ ಕಂಡು ಗೊಂದಲವಾಗುತ್ತಿತ್ತು.

ಕೃಷ್ಣಪ್ಪ ಬರೆದದ್ದನ್ನು ಇನ್ನೊಮ್ಮೆ ಓದಿ, ಅದರ ಮೇಲೆ ಪ್ಯಾಡಿಟ್ಟು ನಾಗರಾಜ್‌ಗೆ ಕಾದ. ಇಸ್ತ್ರಿಯಿಲ್ಲದ ಜುಬ್ಬ ತೊಟ್ಟು ಪ್ಯಾಂಟ್ ಹಾಕಿದ ನಾಗರಾಜ್ ಕೆದರಿದ ತಲೆಯನ್ನು ತುಸು ತಗ್ಗಿಸಿ, ಕೆಂಪುಕಣ್ಣುಗಳಲ್ಲಿ ದುರುಗುಡುತ್ತ, ಒಳಗೆ ಬಂದು, ಕುರ್ಚಿ ಎಳೆದು ಕೂತ. ನಾಗೇಶನಿಗೆ ಬಾಗಿಲು ಹಾಕಿಕೊಂಡು ಹೋಗುವಂತೆ ಕೃಷ್ಣಪ್ಪ ಕಣ್ಸನ್ನೆ ಮಾಡಿದ.

“ನಿಮ್ಮ ಆರೋಗ್ಯ ಹೇಗಿದೆ?” ಎಂದು ಕೂಡ ನಾಗರಾಜ್ ಕೇಳಲಿಲ್ಲ. ನಿಜವಾಗಿಯೂ ಇವನು ತನ್ನ ಹರೆಯದ ವ್ಯಂಗ್ಯ ಚಿತ್ರವೇ. ಕೃಷ್ಣಪ್ಪ ತನ್ನ ಮೇಲೆ ಬಂದ ಲೇಖನವನ್ನು ನಾಗರಾಜ್‌ಗೆ ಕೊಟ್ಟ.

“ನೋಡಿದ್ದೇನೆ” ಎಂದ ನಾಗರಾಜ್.

“ನೀವೇ ಇದನ್ನು ಬರೆಸಿದ್ದು ಅಂತ ಉಳಿದವರು ನನಗೆ ಹೇಳಿಯಾರು.”

“ನೀವದನ್ನ ನಂಬದಿದ್ದರೆ ಸಾಕು”

ನಾಗರಾಜ್ ಬಹು ಸರಳವಾಗಿ ನೇರವಾಗಿ ಮಾತಾಡಿದ್ದ. ಅವತ್ತಿನ ರಾತ್ರೆಯ ಮೀಟಿಂಗಲ್ಲೂ ಕೊನೆಯ ತನಕ ಸುಮ್ಮನಿದ್ದು,

“ಪಾರ್ಲಿಮೆಂಟರಿ ರಾಜಕೀಯದ ಗತಿಯೇ ಇದು. ಯಾವ ಗುಂಪಿಗೆ ಸೇರಿ ನಾವು ಸರ್ಕಾರ ರಚಿಸಿದರೂ ಏನನ್ನೂ ಸಾಧಿಸೋದು ಸಾಧ್ಯವಲ್ಲ. ಈ ಸ್ಟೇಟ್ ಆಳುವ ವರ್ಗಗಳ ಸಾಧನ. ಬೇರೆ ಥರ ಅದನ್ನ ಬಳಸೋದು ಪಾರ್ಲಿಮೆಂಟ್ ರಾಜಕೀಯದಲ್ಲಿ ಸಾಧ್ಯವಿಲ್ಲ” ಎಂದಿದ್ದ. ಅದರಿಂದ ರೇಗಿದ ಉಳಿದವರು

“ನೀವೇನು ಮಾಡುತ್ತಿದ್ದೀರಿ ಹಾಗಾದರೆ?” ಎಂದು ಮೇಲೆ ಬಿದ್ದಿದ್ದರು.

“ನಾನಾ? ನಮ್ಮ ಪಕ್ಷ ಸರ್ಕಾರ ರಚಿಸುವಾಗ ನಾನು ಅದರಿಂದ ಹೊರಗುಳಿತೇನೆ. ಪ್ರಾಯಶಃ ಅಸೆಂಬ್ಲಿ ಸದಸ್ಯತ್ವಕ್ಕೂ ರಾಜೀನಾಮೆ ಕೊಡ್ತೇನೆ. ಆ ಬಗ್ಗೆ ಇನ್ನೂ ನನ್ನ ಧೋರಣೆ ಸ್ಪಷ್ಟವಾಗಿಲ್ಲ” ಎಂದಿದ್ದ.

“ಪಾರ್ಲಿಮೆಂಟರಿ ರಾಜಕೀಯದ ಬಗ್ಗೆ ನಿಮ್ಮ ಧೋರಣೆ ಹಾಗಿದ್ದರೆ ಹೀಗೆ ಹೊಂಚು ಹಾಕ್ಕೊಂಡು ಇರೋದು ನೈತಿಕವಾಗಿ ಸರಿಯಲ್ಲ. ನಿಮ್ಮನ್ನೆ ನೀವು ಮೋಸ ಮಾಡ್ಕೋತಿದೀರಿ” ಎಂದು ಕೃಷ್ಣಪ್ಪ ಆಗ ಕೆಣಕಿದ್ದ.

“ನೀವು ಹೇಳ್ತಿರೋದ್ರಲ್ಲಿ ನಿಜವಿದೆ. ನನ್ನ ವರ್ಗದ ಭ್ರಾಂತಿಗಳಿಂದ ಇನ್ನೂ ನಾನು ಬಿಡುಗಡೆ ಪಡೆದಿಲ್ಲ” ಎಂದು ನಾಗರಾಜ್ ಸರಳವಾಗಿ ಹೇಳಿದಾಗ ಉಳಿದವರು ನಕ್ಕಿದ್ದರು. ಆದರೆ ಕೃಷ್ಣಪ್ಪನನ್ನ ಒಳಗಿನಿಂದ ಆ ಮಾತು ಮುಟ್ಟಿತ್ತು. ಮತ್ತೆ ಮತ್ತೆ ನೆನಪಾಗಿತ್ತು.

ಈಗಲೂ ಅದನ್ನು ನೆನೆದು ಕೃಷ್ಣಪ್ಪ ಉದ್ರೇಕಗೊಳ್ಳದೆ ಹೇಳಿದ:

“ನಾಗರಾಜ್ ಈ ಲೇಖನ ಓದಿದ ಮೇಲೆ ನಿಮ್ಮನ್ನು ಕೇಳಬೇಕೂಂತ ಅನ್ನಿಸ್ತು. ನನ್ನ ಬಗ್ಗೆ ನಿಮಗೂ ಹೀಗನ್ನಿಸತ್ತ? ನನಗೇ ಗೊಂದಲವಾದ್ರಿಂದ ಕೇಳ್ತಾ ಇದೀನಿ.”

“ವ್ಯಕ್ತಿಗಳ ಪ್ರಶ್ನೆ ಇಲ್ಲಿ ಮುಖ್ಯವಲ್ಲ. ಈ ವ್ಯವಸ್ಥೇಲಿ ಯಾರು ಎಷ್ಟು ಪ್ರಾಮಾಣಿಕರೂಂತ ಅನ್ನೋದು ರಿಲೇಟಿವ್ ಅಷ್ಟೆ. ನಿಮ್ಮನ್ನು ಈ ವ್ಯವಸ್ಥೆ ತನ್ನ ಬಲೇಲಿ ಸಿಕ್ಕಿಸ್ತ ಇದೇಂತ ನನಗೂ ಅನ್ನಿಸತ್ತೆ. ನಿಮಗೊಂದು ಇಮೇಜ್ ಇದೆ. ಆ ಇಮೇಜ್ ಈ ವ್ಯವಸ್ಥೇಲಿ ಈಗ ಅಗತ್ಯವಾಗಿದೆ -ತನ್ನನ್ನ ಕಾಪಾಡಿಕೊಳ್ಳೋಕೆ.”

“ಹಾಗಾದರೆ ಏನು ಮಾಡಬೇಕು ನಾನು ನಿಮ್ಮ ಪ್ರಕಾರ? ನಿಮ್ಮ ವಿಚಾರಾನ್ನ ನಾನು ಒಪ್ಪಲ್ಲ. ಆದರೆ ನಿಜವಾಗಿಯೂ ನಿಮ್ಮ ಅಡ್ವೈಸ್ ನನಗೆ ಬೇಕಾಗಿದೆ.”

“ನಮ್ಮ ಪಕ್ಷದ ರಾಜಕೀಯದ ಮಾರ್ಗ ಈವರೆಗೆ ಸರಿಯಾಗಿ ಇದ್ದಿದ್ರೆ ನಿಮ್ಮನ್ನ ಸೀಕ್ ಮಾಡಬೇಕೂಂತ್ಲೇ ವೀರಣ್ಣನಂಥೋರಿಗೆ ಅನ್ನಿಸ್ತ ಇರಲಿಲ್ಲ -ಅಲ್ಲವ?”

ಕೃಷ್ಣಪ್ಪನಿಗೆ ಥಟ್ಟನೆ ಸಿಟ್ಟು ಬಂತು:

“ನಾಗರಾಜ್ -ವೀರಣ್ಣ ನನಗೆ ಸಹಾಯ ಮಾಡಿರೋದು ನಿಜ, ಆದರೆ ಅದಕ್ಕೆ ನಾನು ಕೈಯೊಡ್ಡಲಿಲ್ಲ. ನೀವು ಶ್ರೀಮಂತರ ಮನೇಲಿ ಹುಟ್ಟಿದವ್ರು. ನನ್ನ ಹಾಗೆ ಹುಟ್ಟಿ ಬೆಳೆದಿದ್ರೆ ನೀವು ನನ್ನಷ್ಟು ಪ್ರಾಮಾಣಿಕರಾಗಿ ಉಳೀತಿದ್ರೋ ನೋಡ್ತಿದ್ದೆ.”

ನಾಗರಾಜ್ ಸಿಟ್ಟಾಗಲಿಲ್ಲ:

“ನೀವು ವ್ಯಕ್ತಿವಾದಿಯಾಗಿ ಮಾತಾಡ್ತೀರಿ. ನಿಮಗೆ ತಾತ್ವಿಕ ಕ್ಲಾರಿಟಿ ಇಲ್ಲ. ನಾನು ಆ ಪ್ರಶ್ನೇನ್ನ ಎತ್ತಲೇ ಇಲ್ಲ. ನಾನು ಪ್ರಾಮಾಣಿಕನಾಗಿದ್ರೆ ಇಲ್ಲಿ ಇರ್ತಿದ್ನ ಹೇಳಿ?”

“ದೇಶದ ಪ್ರಧಾನಿ ಡಿಕ್ಟೇಟರ್ ಆಗಲಿಕ್ಕೆ ನೋಡ್ತಿದಾರೆ, ಪ್ರಧಾನಿ ಗುಂಪಿನವರು ಇಲ್ಲಿ ಅಧಿಕಾರಕ್ಕೆ ಬಂದರೆ ಜನರಿಗೆ ಈಗಿರೋ ಸಿವಿಲ್ ರೈಟ್‌ಗಳೂ ನಾಶವಾಗ್ತಾವೆ. ಈಗಿರೋ ಮುಖ್ಯಮಂತ್ರಿ ರಿಯಾಕ್ಷನರಿ ನಿಜ. ಆದರೆ ಅವನ ಬೆಂಬಲದಲ್ಲಿ ನಾವು ಮಿನಿಮಮ್ ಟೈಮ್ ಬೌಂಡ್ ಕಾರ್ಯಕ್ರಮ ಹಾಕ್ಕೊಂಡು ಸರ್ಕಾರ ರಚಿಸಿದ್ರೆ ಅಲ್ಪಸ್ವಲ್ಪವಾದರೂ ಸಾಧಿಸಬಹುದು ಅನ್ನೋದರಲ್ಲಿ ತಿರುಳೇ ಇಲ್ಲವೇನು ಹಾಗಾದ್ರೆ…..”

“ಇಲ್ಲ. ದೇಶದ ಸ್ಥಿತಿ ಇನ್ನಷ್ಟು ಹದಗೆಟ್ಟಾಗಲೇ ಪಾರ್ಲಿಮೆಂಟರಿ ಸಿಸ್ಟಮ್ ಬಗ್ಗೆ ಇರೋ ಭ್ರಾಂತಿ ಜನರಲ್ಲಿ ನಾಶವಾಗತ್ತೆ. ತೇಪೆ ಹಾಕೋ ಕೆಲಸ ನನಗಿಷ್ಟವಿಲ್ಲ.”

ಕೃಷ್ಣಪ್ಪ ಒಂದು ನಿಮಿಷ ಸುಮ್ಮನಿದ್ದು ಹೇಳಿದ:

“ನಿಮ್ಮ ವಿಚಾರ ನಾನು ಒಪ್ಪಲ್ಲ. ಇರೋ ಮನೆಗೆ ಬೆಂಕಿ ಇಕ್ಕಿ ಮೈಕಾಯಿಸಿಕೊಳ್ಳೋ ಅಪಕ್ವ ಧೋರಣೆ ನಿಮ್ಮದು. ಆದರೆ ವೈಯಕ್ತಿಕವಾಗಿ ನನಗೆ ಕೆಲವು ಸಮಸ್ಯೆಗಳಿವೆ -ಅವು ನನ್ನ ಪ್ರಾಮಾಣಿಕತೆಗೆ ಸಂಬಂಧಪಟ್ಟದ್ದು. ಅದಕ್ಕಾಗಿ ನಿಮಗೆ ಹೇಳಿಕಳಿಸಿದೆ. ನಾನು ಯಾರದೋ ಬಲೇಲಿ ಸಿಕ್ಕಿಹಾಕಿಕೋತಿದೀನಿ ಅಂತ ನಿಮಗೂ ಅನ್ನಿಸಿದ್ರೆ ಇಕೊಳ್ಳಿ ಈ ಕಾಗದಕ್ಕೆ ಅಸೆಂಬ್ಲಿ ಸದಸ್ಯತ್ವಕ್ಕೇ ನನ್ನ ರಾಜೀನಾಮೆ ಬರ್ದಿದೀನಿ. ಇದನ್ನ ತಗೊಂಡು ಹೋಗಿ. ಒಂದು ಗಂಟೆ ನೀವೇ ಕೂಲಾಗಿ ವಿಚಾರ ಮಾಡಿ. ನಿಮಗೂ ಹಾಗನ್ನಿಸಿದರೆ ಈ ಕಾಗದಾನ್ನ ಸ್ಪೀಕರ್‍ಗೆ ಪೋಸ್ಟ್ ಮಾಡಿ.”

ಎಂದು ಕಾಗದ ಕೊಟ್ಟ. ನಾಗರಾಜ್ ಎದ್ದು ನಿಂತು ಯಾವ ಭಾವನೆಯನ್ನೂ ತೋರಿಸಿಕೊಳ್ಳದೆ ಹೇಳಿದ:

“ನೀವು ವ್ಯಕ್ತಿವಾದಿಯಾದ್ರಿಂದ ಪ್ರಾಮಾಣಿಕತೆ ಅಂತ ವಿಪರೀತ ಬಾದರ್ ಮಾಡ್ಕೋತೀರಿ. ಇದೊಂದು ಥರದ ಸಿಕ್ಲಿ ಇಂಡಲ್‌ಜನ್ಸ್….ಪ್ರಾಮಾಣಿಕತೆ ಪ್ರಶ್ನೆ ಬಂದರೆ…ನೀವು ನನಗಿಂತ ದೊಡ್ಡವರು….ಜನರಿಗೆ ನೀವೇ ನನಗಿಂತ ಹತ್ತಿರ. ಅದಕ್ಕೇ ನಿಮ್ಮ ವ್ಯಕ್ತಿತ್ವ ಮುಖ್ಯ ನನಗೆ. ಆದ್ದರಿಂದ ನೀವು ಶುದ್ಧವಾಗಿ ಉಳ್ದಿದೀರೋ ಇಲ್ಲವೋ ಅನ್ನೋ ಕಾರಣಕ್ಕಾಗಿ ರಾಜೀನಾಮೆ ಕೊಡೋದು ನನ್ನ ದೃಷ್ಟಿಯಲ್ಲಿ ಇರ್ರೆಲವೆಂಟ್. ಬೂರ್ಶ್ವಾ ಸಮಾಜದಲ್ಲಿ ಶುದ್ಧವಾಗಿರೋಕೆ ಎಲ್ಲಿ ಸಾಧ್ಯ? ಪಾರ್ಲಿಮೆಂಟರಿ ಹಾದಿ ಸರಿಯೋ ಅಲ್ವೋ ಅನ್ನುವ ವಿಚಾರದಲ್ಲಿ ನಮಗೀಗ ಕ್ಲಾರಿಟಿ ಬೇಕು.”

ನಾಗರಾಜ್ ಕೃಷ್ಣಪ್ಪ ಕೊಟ್ಟ ಕಾಗದವನ್ನು ಹಿಂದಕ್ಕೆ ಕೊಡುತ್ತ ಸಪ್ಪೆಯಾದ ಧಾಟಿಯಲ್ಲಿ ಮುಂದುವರಿಸಿದ:

“ನಿಮ್ಮ ಅನುಭವ ಅದಕ್ಕೇ ಮುಖ್ಯ. ನಾನಿನ್ನೂ ಹಸಿ ಮನುಷ್ಯ. ನೀವು ಈ ವಿಚಾರದಲ್ಲಿ ಒಂದು ನಿರ್ಧಾರಕ್ಕೆ ಬಂದಾಗ ನನಗೆ ಹೇಳಿಕಳಿಸಿ. ತಾತ್ಕಾಲಿಕವಾಗಿ ಫ಼್ಯಾಸಿಸ್ಟರನ್ನು ತಡೆಯೋಕೆ ಪಾರ್ಲಿಮೆಂಟರಿ ಮಾರ್ಗ ಅಗತ್ಯ ಅಂತ ನಿಜವಾಗಿ ನಿಮಗನ್ನಿಸುತ್ತ? ಯಾಕೇಂದ್ರೆ ನನ್ನ ಅಸಹನೆ ಕೂಡ ಅಡ್‌ವೆಂಚರಿಸ್ಟ್ ಇಂಡಲ್‌ಜನ್ಸ್ ಇರಬಹುದು. ಆದ್ದರಿಂದ ಜನರೊಡನೆ ಒಡನಾಡಿದ ನಿಮ್ಮ ನಿರ್ದೇಶನ ಈಗ ಬೇಕು.”

ನಾಗರಾಜ್ ಮಾತಾಡುತ್ತ ಗೊಂದಲಕ್ಕೆ ಸಿಕ್ಕಿಹಾಕಿಕೊಂಡಂತೆ ಅನ್ನಿಸಿತು. ಹಾಗೇ ನಿಂತಿದ್ದು, ಹೋಗುತ್ತೇನೆಂದೂ ಹೇಳದೆ ಅವನು ಹೊರಟು ಹೋದ.

ನಾಗರಾಜ್‌ನ ಮಾತುಗಳು ಕೃಷ್ಣಪ್ಪನನ್ನು ತೀವ್ರವಾಗಿ ಬಾಧಿಸಿದುವು. ಸಾವು ಬದುಕಿನ ಹೊಸ್ತಿಲಲಿರುವ ತಾನೀಗ ನಿಶ್ಚಯ ಮಾಡಬೇಕು; ತಾನು ದೇಶದ ಮುಖ್ಯಮಂತ್ರಿಯಾಗುವುದು ಫ಼್ಯಾಸಿಸ್ಟರ ಸಂಚನ್ನು ಮುರಿಯಲು ಅಗತ್ಯವೆ? ಅಂಥ ಬಯಕೆ ತನ್ನಲ್ಲಿ ಈಗ ಹುಟ್ಟಿದ್ದಕ್ಕೆ ಅದಕ್ಕೆ ಕಾರಣ ಸಾಯುತ್ತಿರುವ ತನಗೆ ಅಧಿಕಾರದ ಮೂಲಕ ಚೈತನ್ಯವನ್ನು ಪಡೆಯಬೇಕೆಂಬ ಇಚ್ಛೆಯೆ? ಅಥವಾ ವಾರಂಗಲ್ ಠಾಣೆಯಲ್ಲಿ ಕಂಡ ಅಧಿಕಾರದ ಕ್ರೂರ ಸ್ವರೂಪವನ್ನು ನಾಶಮಾಡಬೇಕೆಂಬ ಆಸೆಯೆ? ವೀರಣ್ಣನ ವರ್ಗ ಹಿತದ ಮೂಲಕವೂ ಫ಼್ಯಾಸಿಸ್ಟರನ್ನು ವಿರೋಧಿಸುವುದು ಸಾಧ್ಯವೆ? ಹೀಗೆ ತಾನು ಪ್ರಶ್ನೆ ಕೇಳುವಾಗ ತನ್ನ ವೈಯಕ್ತಿಕ ಹಿತಕ್ಕೆ ವೈಚಾರಿಕ ಕುಮ್ಮಕ್ಕು ಕೊಡುತ್ತಿದ್ದೇನೆಯೆ?

“ನಾಗರಾಜ್ -ನೀನು ಮೂರ್ಖ; ದೊಡ್ಡ ಮೂರ್ಖ; ನಿನಗೆ ಬದುಕಿನ ಸಂಕೀರ್ಣ ರೂಪವೇ ತಿಳಿಯದು; ಇವತ್ತು ರಾತ್ರೆ ಜ್ಯೋತಿ ಮತ್ತು ಅವಳ ಗೆಳೆಯ ತಮ್ಮ ದೇಹಗಳ ರಹಸ್ಯ ಸುಖಗಳನ್ನು ಅನುಭವಿಸಲಿ ಎಂದೇ ನಾನು ವೀರಣ್ಣನ ’ವರ್ಗಹಿತ’ಗಳನ್ನು ಅಲಕ್ಷ್ಯದಿಂದ ಕಂಡೇನು” ಎಂದೆಲ್ಲ ಕಿರುಚಿಕೊಳ್ಳಬೇಕೆನ್ನಿಸಿತು. “ಉಣ್ಣುವುದು, ನಿದ್ದೆ ಮಾಡುವುದು, ಸಂಭೋಗದಲ್ಲಿ ಮೈಗಳನ್ನು ಬೆಸೆಯುವುದು, ದೇವಿಯೋ ದಿಂಡೆಯೋ ಯಾವುದೋ ನೆವದಲ್ಲಿ ಅವ್ಯಕ್ತಕ್ಕೆ ಲಗ್ಗೆ ಹಾಕುವುದು, ಈ ಕ್ಷಣಿಕವಾದ ಬದುಕಿನಲ್ಲಿ ಸೊಂಟದಲ್ಲಿರುವ ಅಯ್ಯ ಮೆತ್ತಗಾದಾಗ ಕುದುರೆಬಾಲ ಹಿಡಿದು ಅಲೆಯುತ್ತ ಉದ್ರೇಕಗೊಳ್ಳುವುದು -ಇವನ್ನೆಲ್ಲ ಬಿಟ್ಟು ಇನ್ನೇನು ಇದೆಯೋ ಮೂರ್ಖ?” -ಜ್ಯೋತಿ ತೀಡಿದ್ದ ಕಾಲನ್ನು ಎತ್ತಲು ಪ್ರಯತ್ನಿಸುತ್ತ ಕೃಷ್ಣಪ್ಪ ಉಸಿರು ಕಟ್ಟಿದ.

*
*
*

ಈಗ ಐದೂವರೆ. ಆರು ಗಂಟೆಗೆ ವಿಮಾನದಿಂದ ಗೌರಿ ಇಳಿದಿರುತ್ತಾಳೆ. ನಾಗೇಶ ಅವಳು ಬಿಳಿಸೀರೆಯುಟ್ಟಿದ್ದ ಚಿತ್ರ ನೋಡಿದ್ದಾನೆ.
*****
ಮುಗಿಯಿತು

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

This site uses Akismet to reduce spam. Learn how your comment data is processed.