ಶಾಮಣ್ಣ – ೧

‘ಪ್ರಥಮಾಶ್ವಾಸಂ’

ಸಹಸ್ರಪರಮಾಂ ದೇವೀ ಶತ ವಂಧ್ಯಾ ದಶವರಾಂ
ಗಾಯತ್ರೀಂ ಸಂಜಪೇನ್ನಿತ್ಯಂ ಯತವಾಕ್ಕಾಯ ಮಾನಸಃ |

ವೇದ ಮಾತೆಯನ್ನು ವರ್ಣಿಸುವ ಶ್ಲೋಕ ಗಚ್ಚಿನ ಮನೆಯ ನವರಂಧ್ರಗಳಿಂದ ಸೋರಿ ಅಷ್ಟದಿಕ್ಕುಗಳಿಗೆ ಪಯಣಿಸತೊಡಗಿದಾಗ ಕೇರಿಯ ಅನೇಕರಿನ್ನೂ ಮಲಗಿಕೊಂಡಿದ್ದರು. ಅವರಲ್ಲಿ ಅನೇಕರಿಗೆ ಅನ್ನದ ಕನಸು: ಹಲವರಿಗೆ ಬಾಡುಬುರ್ರದ ಕನಸು. ಸುತ್ತ ನಾಲ್ಕು ಕಡೆಗಿದ್ದ ತಿಪ್ಪೆಗಳಿಗೆ ಅನಿರೀಕ್ಷೀತ ಬೆಟ್ಟಿ ನೀಡಿ ಇನ್ಸೆಪೆಕ್ಷನ್ ನಡೆಸಿ ಅದೇ ತಾನೆ ಕೋಳಿಗಳು ಆ ವೇದಾಲಾಪನೆ ಕೇಳಿಸಿಕೊಂಡು ಗಚ್ಚಿನ ಮನೆಕಡೆ ಕುತೋಹಲದಿಂದ ನೋಡತೊಡಗಿದವು.

ಆ ಪೋಹಿಷ್ಠೇತಿ ನವರೃಸ್ಯ ಸೂಕ್ತಸ್ಯ ಅಂಬರೀಷ ಸಿಂದೂದ್ವೀಪ ಋಷಿಃ
ಆಪೋ ದೇವಾತ ಎಂದು ಹೇಳಿ ಬಂದ ದ್ವನಿಯನ್ನು ಅದೇತಾನೆ ಶೌಚೋಪಚಾರ ಮುಗಿಸಿಕೊಂಡು ಬಂದು ಸಂತೃಪ್ತ ಸೂಚಕವಾಗಿ ನಾಲಿಗೆಯನ್ನು ಝಳಪಿಸುತ್ತ ಬಂದ ಅರ್ಜುನ, ಭೀಮ, ರಾಮ ಜರಾಸಂಧವೇ ಮೊದಲಾದ ಶುನಕಾದಿ ಸಜ್ಜನರು ಕೇಳಿಸಿಕೊಂಡು ರೋಮಾಂಚನಗೊಂಡವು. ಕಾರಣ ಕೆಲ ದಿನಗಳ ಹಿಂದೆ ಆರತಿಯನ್ನು ಚುಡಾಯಿಸುವ ಅಂಬರೀಸನ ನಾಗರಹಾವು ಚಿತ್ರದ ಭಿತ್ತಿಚಿತ್ರ ನೋಡಿದ್ದವು.

ಋಗ್ವೇದಿಯ ಪ್ರಾತಃ ಸಂಧ್ಯಾವಂದನದ ಸದ್ದು ಕೇಳಿಸಿಕೊಂಡು ಗಂಡ ಹೆಂಡತಿಯನ್ನು; ಹೆಂಡತಿ ಗಂಡನನ್ನೂ; ಗಂಡ ಹೆಂಡರಿಬ್ಬರು ತಂತಮ್ಮ ಮಕ್ಕಳನ್ನು ಎಬ್ಬಿಸುತ್ತಿದ್ದರು. ಗಚ್ಚಿನ ಮನೆಯಿಂದ ತ್ರಿಕಾಲ ಅಭಾಧಿತವಾಗಿ ಹೊರಡುತ್ತಿದ್ದ ಮಂತ್ರೊಚಾರಣೆ ಇಡೀ ಕೇರಿಗೆ ಅಲಾರಂ ರೀತಿಯಲ್ಲಿ ಕೆಲಸ ಮಾಡುತ್ತಿತ್ತು.

ಭರ್ಗೋದೇವಸ್ಯ ರುದ್ರಾತ್ಮನೇ… ಎಂಬುದನ್ನು ಕೇಳಿಸಿಕೊಂಡು ಪಂಚವಿಂಶತಿ ಬೇತಾಳಚಕ್ರವರ್ತಿಯಾದ ರುದ್ರನಾಯಕ ಮೂರನೇ ಬಾರಿಗೆ ಶೌಚಕ್ಕೆ ಹೊರಟಿರುತ್ತಿದ್ದ. ಮಂತ್ರ ತಾಪತ್ರಯಗಳಿತ್ಯಾದಿಗೆಲ್ಲ ತಾನೇ ಚಕ್ರವರ್ತಿ ಎಂದು ಎದೆಗಿಂತ ಹೊಟ್ಟೆಯನ್ನೇ ಹೆಚ್ಚು ಉಬ್ಬಿಸಿಕೊಂಡು, ಹೊಟ್ಟೆಗಿಂತ ಮೀಸೆಯನ್ನೇ ಅತಿ ಹೆಚ್ಚು ಉಬ್ಬಿಸಿಕೊಂಡು, ಮೀಸೆಗಿಂತ ಕಣ್ಣುಹುಬ್ಬುಗಳನ್ನೇ ಅತಿ ಹೆಚ್ಚು ಉಬ್ಬಿಸಿಕೊಂಡು; ಕಣ್ಣ್ಣುಹುಬ್ಬುಗಳಿಗಿಂತ ಕಣ್ರೆಪ್ಪೆಗಳನ್ನೇ ಅತಿ ಹೆಚ್ಚು ಉಬ್ಬಿಸಿಕೊಂಡು; ಕಣ್ರೆಪ್ಪೆಗಳಿಗಿಂತ ಕಣ್ಣುಗುಡ್ಡೆಯನ್ನು ಉಬ್ಬಿಸಿಕೊಂಡು ಮಾರಗಲದ ಬೀದಿಗೆ ಇಡಿಯಾಗಿ ನಡೆಯುತ್ತಿದ್ದ ಅವನು ರೋಮಾಂಚನಗೊಳ್ಳುವುದೆಂದರೇನು? ಆತನ ಮನೆಯಲ್ಲಿ ಪ್ರಾತಃಸಂದ್ಯಾಂಗ ಅರ್ಘ್ಯ ಪ್ರಧಾನಗಳೇ ಮೊದಲಾದುವುಗಳಿಗೆ ಬೆಲೆಕೊಡುತ್ತಿದ್ದವರೆಂದರೆ ಮಂತ್ರವಾದಿಯ ಧರ್ಮಪತ್ನಿ ರುಕ್ಮಣಿ ಮತ್ತು ತಂತ್ರವಾದಿಯ ಮಗಳು ಅನಸೂಯ ಮಾತ್ರ. ಆಚಮನ; ಚಮನ ಮಂತ್ರಗಳು ಪದೇ ಪದೇ ಕಿವಿಗೆ ಬೀಳುವುದರಿಂದ ತಾವು ಪವಿತ್ರರಾಗುತ್ತಿದೆವು ಎಂದುಕೊಳ್ಳುತ್ತಿದ್ದರು. ಮುಂದೊಂದಿನ ಸನಾತನ ಧರ್ಮ ತಾಂಡವಾಡುತ್ತಿರುವ ಗಚ್ಚಿನ ಮನೆಗೆ ಸೊಸೆಯಾಗಿ ಪ್ರವೇಶಿಸುವ ಉದ್ದೇಶದಿಂದ ಅನಸೂಯ ಎಂಬ ಕನ್ಯಾಮಣಿ ಎಷ್ಟೋ ಮಂತ್ರಗಳನ್ನು; ಶ್ಲೊಕಗಳನ್ನು ಬಾಯಿಪಾಠ ಮಾಡಿಬಿಟ್ಟಿದ್ದಳು. ಶ್ರೀ ಪರಮೇಶರ ಪ್ರೀತ್ಯರ್ಥಂ ಎಂಬಂತೆ ಅವುಗಳನ್ನು ತನ್ನ ತನ್ನ ಪ್ರಾಣಪದವಾದಕ ಗಚ್ಚಿನ ಮನೆಯಲ್ಲಿ ಮಾಣಿಕ್ಯ ದೀಪ್ತಿಯಂತೆ ಹೋಳೆಯುತ್ತಿದ್ದ ಶಾಮಾಶಾಸ್ತ್ರಿ ಬೆಟ್ಟಿಯಾದಾಗಲೆಲ್ಲ ಹೇಳಿ ದಿಗ್ಬ್ರಮೆಗೊಳಿಸುತ್ತಿದ್ದಳು. ಅವನ್ನು ಕೇಳಿಸಿಕೊಂಡು ವೇದಮಾತೆಯೂ; ಜ್ಞಾನದಾತೆಯೂ; ಸುರಾಸುರ; ಕಿನ್ನರ ಕಿಂಪುರುಷ; ಋಷಿ ಗಿಷಿಗಳಿಂದ ವಂದಿತೆಯೂ; ಪೂಜಿತೆಯೂ ಆದ ಗಾಯತ್ರಿಯೇ, ರುದ್ರನಾಯಕ ಮತ್ತು ರುಕ್ಮಿಣಿ ಎಂಬ ನಾಮಾಂಕಿತ ನಿಮ್ನ ಜಾತಿ ದಂಪತಿಯರ ಉದರದಲ್ಲಿ ಅನಸೂಯಾ ಎಂಬಭಿದಾನದಿಂದ ಜನಿಸಿದವಳೆಂದು ಭಾವಿಸಿ ಶಾಮಾಶಾಸ್ತ್ರಿಯು ತನ್ನ ಸಹಪಾಟಿ ಅನಸೂಯಳ ಬಗ್ಗೆ ಗೌರವ ಪ್ರೀತಿ ತಳೆಯತೊಡಗಿದ್ದರು. ಗರುಡ ಪುರಾಣ, ಭಗದ್ಗೀತೆ, ಋಗ್ವೇದ; ನಿತ್ಯಕರ್ಮವೇ ಮೊದಲಾದ ಗ್ರಂಥಗಳಲ್ಲಿ ಅನಸೂಯಳಿಂದ ಆಗಮಿಸಿರುತ್ತಿದ್ದ ಪ್ರೇಮಪತ್ರಗಳನ್ನೊ ಅಡಗಿಸಿಟ್ಟುರುತ್ತಿದ್ದನು. ಓ ಕೇಶವಾಯ ಸ್ವಾಹಾ ಎಂದವನು ನೆಪಮಾತ್ರಕ್ಕೆ ಅನ್ನುತ್ತಿದ್ದನಾದರೂ ಅವನ ಹೃದಯದ ಸಾವಿರಕೋಣೆಗಳಿಂದ ’ಓ ಅನಸೂಯಾ ಸ್ವಾಹಾ’ ಎಂಬ ದ್ವನಿ ತರಂಗಗಳು ಹೊರಡುತ್ತಿದ್ದವು.

ಅಂಗೈಯಲ್ಲಿ ಅಭಿಮಂತ್ರಿಸಿದ ನೀರನ್ನು ಮೂಸಿ ನೋಡುವ ಕ್ಷಣದಲ್ಲಿ ವೇದಾಂತ ಶಿಖಾಮಣಿ ಪರಮೇಶ್ವರ ಶಾಸ್ತ್ರಿಗಳು ತಮ್ಮ ಮೊಮ್ಮಗನ್ನು ನೆನೆಸಿಕೊಂಡುಬಿಟ್ಟರು. ಕ್ರಾಪಿನೊಳಗೆ ಜುಟ್ಟು ಮರೆಮಾಚಿಕೊಂಡಿರುತ್ತಿದ್ದ ಶಾಮು; ಉತ್ತರೀಯದೊಳಗೆ ಯಜ್ಞೋಪವೀತ ಮರೆಮಾಚಿಕೊಂಡಿರುತ್ತಿದ್ದ ಶಾಮು; ಮೀಸೆಯ ಚಿಗುರು ರೋಮಗಳ ಬುಡದಲ್ಲಿ ಬೆವರನ್ನು ಮರೆಮಾಚಿಕೊಂಡಿರುತ್ತಿದ್ದ ಶಾಮು ಸದ್ಯೋಜಾತ ಪ್ರಪದ್ಯಾಮಿ ಸದ್ಯೋಜಾತಾಯ ವೈ ನಮೋ ನಮಃ ಎಂಬ ಪುರುಷಸೂಕ್ತದ ಜೊತೆಗೇನೆ ತರ್ಕ ಶಾಸ್ತ್ರದ ಭಾವಾತ್ಮಕ; ನಿಷೇದಾತ್ಮಕ ಸೂತ್ರಗಳನ್ನೋ; ಬೀಜಗಣಿತದ ಪ್ರಮೇಯಗಳನ್ನೋ ಉಚ್ಚರಿಸಿಬಿಡುತ್ತಿದ್ದನು.

’ಮಗು ಶಾಮೂ… ಪುರುಷ ಸೂಕ್ತಕ್ಕೆ ಅಪಚಾರಮಾಡ್ತಿರುವೆಯಲ್ಲೋ….’ ಎಂದು ವಯೋವೃದ್ಧರೂ ಆದ ಪರಮೇಶ್ವರ ಶಾಸ್ತ್ರಿಗಳು ಎಚ್ಚರಿಸದೆ ಇರುತ್ತಿರಲಿಲ್ಲ. ಇನ್ನೂ ತಮ್ಮ ಮೊಮ್ಮಗ ಅಥಾಂಗ ಪೂಜಾಂಕರಿಷ್ಯೆಯನ್ನೂ ಸ್ಪಷ್ಟವಾಗಿ ಉಚ್ಚರಿಸುತ್ತಿಲ್ಲವಲ್ಲ. ವೈದಿಕಕ್ಕೆ ಪುರೋಹಿತರ ರೀತಿಯಲ್ಲಿ ಹೆಜ್ಜೆ ಇಡದೆ ವಿಟ ಪುರುಷರಂತೆ ಹೆಜ್ಜೆ ಇರಿಸುವನಲ್ಲ ಇಷ್ಟು ವಯಸ್ಸಾದರೂ ತಮ್ಮ ಮೊಮ್ಮಗ ಸ್ವತಂತ್ರವಾಗಿ ಸತ್ಯನಾರಾಯಣ ವ್ರತ ಮಾಡಿಸಲಿಕ್ಕಾಗುತ್ತಿಲ್ಲವಲ್ಲ… ಕ್ರಾಪಿನೊಳಗೆ ಪುರೋಹಿತ್ವದ ಪವಿತ್ರ ಲಾಂಛನವಾದ ಜುಟ್ಟನ್ನು ಗಿಡ್ಡದಾಗಿರಿಸಿ ಮರೆಮಾಚಿಕೊಂಡು ಬಿಡುತ್ತಿರುವನಲ್ಲ ಗಾಂಧಾರ ದೇಶದ ಶಲಾತುರ ಗ್ರಾಮದ ಪಾಣಿನಿಯ ಅಷ್ಟಾಧಾಯಿನಿಯ ಪ್ರಥಮಾಧ್ಯಾಯಕ್ಕೆ ಆತ್ಮನೇ ಕ್ರಿಯೆ ಬರೆಯಬೇಕಾಗಿದ್ದ ತಮ್ಮ ಮೊಮ್ಮಗ ಹುಡುಗಿಯರಿಗೆ ಪ್ರೇಮಪತ್ರ ಬರೆಯುವ ಅಭ್ಯಾಸ ಮಾಡುತ್ತಿರುವನಲ್ಲಾ ರಾಮ ರಾಮಾ ಧೋತರ ನಾರುಮಡಿ ಮೇಲೊಂದು ಉತ್ತರೀಯ ಧರಿಸಿ, ಸನಾತನ ಧರ್ಮ ಪ್ರೇಮಿಗಳನ್ನು ಸೂಜಿಗಲ್ಲಿನಂತೆ ಸೆಳೆದು ನಾಲ್ಕು ಕಾಸು ಸಂಪಾದಿಸಬೇಕಾಗಿದ್ದ ತಮ್ಮ ಮೊಮ್ಮಗ ಟೌಜರು ಮೇಲೊಂದು ಬುಷ್ ಶರಟು ಧರಿಸಿ ಆಧುನಿಕಂಕ್ಷಿಗಳ ಗಮನ ಸೆಳೆಯುತ್ತಿರುವನಲ್ಲಾ ಶಿವ ಶಿವಾ

ಪರಮೇಶ್ವರ ಶಾಸ್ತ್ರಿಗಳು ತಮ್ಮ ಮೊಮ್ಮಗನ ನಡವಳಿಕೆ ಗಮನಿಸುತ್ತಿದ್ದರು. ಈ ಇಳಿವಯಸ್ಸಿನಲ್ಲಿ ನಿಟ್ಟುಸಿರು ಬಿಡುವುದು ಆರೋಗ್ಯಕ್ಕೆ ಒಳ್ಳೆಯದಲ್ಲ ಮಾಮನವರೇ’ ಎಂದು ವಿಧವಾ ಸೊಸೆ ಅಲುಮೇಲಮ್ಮ ತೋರುತ್ತಿದ್ದ ಕಾಳಜಿ ಅಲಕ್ಷಿಸಿ ಕೂತರೊಂದು ಬಿಸಿಯುಸಿರು; ನಿಂತರೊಂದು ಬಿಸಿಯುಸಿರು ಬಿಡುತ್ತಿದ್ದರು. ತಮ್ಮ ವಂಶ ಎಂಥಾದ್ದು? ಏನ್ಕಥೆ? ರಾಜಮಹಾರಜನ್ನು ಏಕವಚನದಿಂದ ಸಂಭೋಧಿಸುತ್ತಿದ್ದಂಥವರು ತಮ್ಮ ಹಿರಿಯರು….. ಪಾಣಿನಿ; ಪತಂಜಲಿ, ಪರಾಶರ, ನಾಗೋಜಿ ಭಟ್ಟ, ಜಮೂರ ನಂದಿ ಮೊದಲಾದ ಶಾಸ್ತ್ರಕೋವಿದರ ಸಾಲಿನಲ್ಲಿ ನಿಲ್ಲುವಂಥವರು ತಮ್ಮ ಹಿರಿಯರು, ದತ್ತಕ ಮೀಮಾಂಸಾ; ಚಿತ್ತಸೂತ್ರ, ಚಿಕಿತ್ಸಾಸಾರ ಸಂಗ್ರಹ, ಗೋಲ ದೀಪಿಕಾ ಚತುರ್ವರ್ಗ ಚಿಂತಾಮಣಿ, ಜೋತಿಷ ವೇದಾಂಗವೇ ಮೊದಲಾದ ಶಾಸ್ತ್ರಾಗಮಗಳನ್ನು ಅರಗಿಸಿಕೊಂಡಂತವರು ತಮ್ಮ ಹಿರಿಯರು. ಜೋತಿಷ ಸಾರೋದ್ಧಾರ, ಸಂಗೀತೋಪನಿಷತ್ಸಾರೋದ್ಧಾರ, ಸಾಂಖ್ಯಪ್ರವಚನೋದಯ, ಸಾರಸ್ವತ ವ್ಯಾಕರಣ ತೀರ್ಥ, ವೀರ ಮಿತ್ರೋದಯ, ಲಘು ಶಬ್ದೇಂದು, ಶೇಖರ, ಸಂಸ್ಕೃತ ಭಾಷಾ ವಾರಿಧಿಯೇ ಮೊದಲಾದ ಬಿರುದು ಬಾವಲಿ ಧರಿಸಿದ್ದವರು ತಮ್ಮ ಹಿರಿಯರು, ಅವರು ಇಟ್ಟರೆ ಶಾಪ; ಕೊಟ್ಟರೆ ವರ ಅಂಥವರ ವಂಶದ ಕುಡಿಯಾದ ಶಾಮ ಆಧುನಿಕತೆಯ, ನಾಗರೀಕತೆಯ ಮೋಹ ಪಾಶಕ್ಕೆ ತುಡಿಯುತ್ತಿರುವುದೆಂದರೇನು?

ತಮ್ಮ ಮಗ ಅಶ್ವಥ್ ನಾರಾಯಣ ಶಾಸ್ತ್ರ ಕೋವಿದನಾಗುವ ಬದಲು ಕೋವಿ ಹಿಡಿದಿದ್ದರಿಂದಲ್ಲವೇ ಅವನ ಮಗ ಹೀಗೆ ವರ್ತಿಸುತ್ತಿರುವುದು! ಅವನು ಮ್ಲೇಚ್ಛರ ಸಹವಾಸ ಮಾಡದಿದ್ದರೆಲ್ಲಿ ಇವನು ಹೀಗೆ ವರ್ತಿಸುತ್ತಿದ್ದ; ಸರಸ್ವತ ವ್ಯಾಕರಣ ತೀರ್ಥ ಶಾಮಾ ಶಾಸ್ತ್ರಿಗಳ ಮಗಂದಿರಾದ ತಾವು ಸಕಾಲದಲ್ಲಿ ಮಗ ಅಶ್ವತ್ಥನಿಗೆ ಉಪನಯನ ಮಾಡಿ ಗಾಯತ್ರಿ ಪ್ರಾಣಾಯಾಮಗಳನ್ನು ಶಾಸ್ತ್ರೊಕ್ತವಾಗಿ ಕಲಿಸಿ; ಕಂದ ಮೂಲ ತೀರ್ಥಗಳಿಗೆ ಅವನ ಜೀರ್ಣವ್ಯವಸ್ಥೆಯನ್ನು ಒಗ್ಗಿಸಿ, “ಜುಟ್ಟಿಗಿರೋ ಸ್ಥಾನಮಾನವನ್ನು ಕ್ರಾಪಿಗೆ ಕೊಟ್ಟೆಯಾದರೆ ಹೆಳವನ್ನಾಗಿ ಮಾಡುತ್ತೇನೆ” ಎಂಬುದಾಗಿ ಎಚ್ಚರಿಸಿದ್ದರೆ ಅವನು ಸಂಪ್ರದಾಯಕ್ಕೆ ತಿಲಾಂಜಲಿ ನೀಡುತ್ತಿರಲಿಲ್ಲ… ಆ ಮುದುಕಿಂದಲೇ ಇವನು ಕೆಟ್ಟಿದ್ದು…. ಸನಾತನ ಧರ್ಮದ ಸ್ಥಾನದಲ್ಲಿ ಕರುಳನ್ನು ಪ್ರತಿಷ್ಟಾಪಿಸಿ ಮಗನನ್ನು ಬಲಿಕೊಡಬೇಡವೆಂದು ತಾವು ಕೇಳಿದ್ದುಂಟು; ಪೀಡಿಸಿದ್ದುಂಟು. ಆದರೆ ಕೇಳಬೇಕಲ್ಲ ಹೆತ್ತ ಕರುಳು? ತಮ್ಮ ಸೊಸೆಗೆ ಸನಾತನ ಧರ್ಮಕ್ಕಿರುವ ನಿಯತ್ತಿನ ಪೈಕಿ ಕಾಲುಭಾಗವಾದರೂ ಈ ಮುದುಕಿಗಿತ್ತೇನು?

ಅವನೂ ಕೆಟ್ಟ, ತನ್ನ ಮಗನನ್ನೂ ಕೆಡೆಸಿದ. ಯಥಾ ಪಿತ ತಥಾ ಸುತಾ, ಮಗನಿಗೆ ಮ್ಲೇಚ್ಚ ಸಂಸೃತಿಯ ಬುನಾದಿ ಹಾಕಿಕೊಟ್ಟು ಸತ್ತುಹೋದ. ಸಾವು ಎಂದರೆ ಎಂಥಾದ್ದು? ಶಿವ… ಶಿವಾ…ಯಾವ ಶತ್ರುವಿಗೂ ಅಂಥಾ ಸಾವು ಬರಬಾರದು. ತಮ್ಮ ವಂಶದ ಹಿರಿಯರು ಯಾರೊಬ್ಬರೂ ಅಂಥ ಕೆಟ್ಟ ಸಾವನ್ನು ಕನಸುಮಸಿನಲ್ಲೂ ಊಹಿಸಿದುದುಂಟೇನು? ಗಿರಿಮುತ್ತಾತ ವಿದ್ಯಾವಾಚಸ್ಪತಿ ಶಿವರಾಮಮೋಹನ ಶರ್ಮರಾದರು ಎಂಥವರು? ಸತ್ತವರನ್ನು ಬದುಕಿಸಿದಂತವರು, ಹಸುವಿನ ಕಳೇಬರದ ಕೆಚ್ಚಲಿನಿಂದ ಹಾಲು ಕರೆದಂತವರು, ತಲಕಾಡಿನ ಶ್ರೀರಂಗ ರಾಜರಿಗೆ ದೃಷ್ಟಿದಾನ ಮಾಡಿದಂತವರು. ನೂರೈದು ವರ್ಷ ದೀರ್ಘಕಾಲ ಬದುಕು ಬದುಕಿ, ಸಾಕಪ್ಪ ಈ ಇಹಲೋಕ ವ್ಯಾಪಾರ, ಸ್ವರ್ಗ ಲೋಕಕ್ಕೆ ಹೋಗಿ ಶಿವನ ಸಾನ್ನಿಧ್ಯದಲ್ಲಿ ಶಾಶ್ವತ ಸಂತೋಷದಿಂದ ಇದ್ದು ಬಿಡುವುದಾಗಿ ಜೀವ ಸಮಾಧಿಯಾದಂಥವರು. ತಮ್ಮ ಮುತ್ತಜ್ಜ ರಸರತ್ನಾಕರ ರಾಧಾರಮಣ ಶಾಸ್ತ್ರಿಗಳಾದರೂ ಎಂಥವರು? ಶಂಕರಾಚಾರ್ಯ ಭಗವತ್ಪಾದರ‌ಆತ್ಮದೊಡನೆ ಷಡ್ದರ್ಶನ ಸಮುಚ್ಚಯದ ಬಗ್ಗೆ ಸಾರ್ವಜನಿಕವಾಗಿ ಸಂಭಾಷಿದಂಥವರು, ತಮ್ಮ ನಾಲಿಗೆಯನ್ನೇ ಸರಸ್ವತಿಗೆ ಪಲ್ಲಂಗ

ಮಾಡಿಸಿಕೊಟ್ಟಂಥವರು. ಯಜ್ಞ ಯಾಗಾದಿಗಳಿಂದ ಪೆನುಗೊಂಡೆಯ ರಾಮರಾಜರಿಗೆ ಪುರುಷ ಶಕ್ತಿ ದಯಪಾಲಿಸಿದಂಥವರು, ಚಿನ್ನದ ಪಲ್ಲಕ್ಕಿಯಲ್ಲಿ ಒಂದುಕಡೆಯಿಂದ ಇನ್ನೊಂದು ಕಡೆಗೆ ಚಲಿಸುತ್ತಿದ್ದ ಅವರು ಬದುಕಿದ್ದು ನೂರರ ಮೇಲೆ ಮೂರು ತುಂಬುವವರೆಗೆ. ಸಾಕಪ್ಪಾ ಸಾಕು ಈ ಕಲಿಯುಗದ ಸಹವಾಸ… “ವೈಕುಂಟಕ್ಕೆ ಹೋಗಿ ಮಹಾವಿಷ್ಣು ದಂಪತಿಗಳ ಶಯನ ಗೃಹ ಗುಡಿಸುವ ಸೇವೆ ಮಾಡಿ ಪಾವನರಾಗುತ್ತೇವೆಂಬುದಾಗಿ” ನುಡಿದು ಕಣ್ಣು ಮುಚ್ಚಿಕೊಂಡಂಥವರು. ತಮ್ಮ ತಾತನವರಾದ ಸರ್ವದರ್ಶನತೀರ್ಥ ಸಕಲೇಶ್ವರ ಶಾಸ್ತ್ರಿಗಳಾದರೋ ಎಂಥವರು? ಅವರಿಗೆ ಸಾಹಿತಿ ಸಮರಾಂಗಣ ಎಂಬ ಬಿರಿದಿತ್ತು. ಅಷ್ತದಿಗ್ಗಜಗಳಿದ್ದ ಶಕ್ತಿ ಅವರೊಬ್ಬರಿಗೇ ಇತ್ತು. ಸಕಲ ಶಾಸ್ತ್ರಗಳನ್ನು ಅರಗಿಸಿಕೊಂಡಿದ್ದಂಥವರು. ಶತಾಯುಷ್ಯದ ನಂತರ ಕದಳೀವನ ಹೊಕ್ಕವರು ವಪಸು ಬರಲೇ ಇಲ್ಲ… ಇಂಥವರ ವಂಶದವರಾದ ಪಮೇಶ್ವರ ಶಾಸ್ತ್ರಿಗಳೆಂಬಭಿದಾನ, ಧರಿಸಿರುವರು ತಾವಾದರು ಎಂಥವರು? ಆಚಾರ ವಿಚಾರದಲ್ಲಿ ಅದೆಷ್ಟು ಕಟ್ಟುನಿಟ್ಟು?

ಸುಮಾರು ಎಂಬತ್ತು ವರ್ಷದ ಅವರಿಗೆ ಹಲ್ಲು ಉಚ್ಚಿರಲಿಲ್ಲ. ಸೊಂಟ ಬಾಗಿರಲಿಲ್ಲ. ಎಂದೂ ಒಂದು ಮಾತ್ರೆ ನುಂಗಿರಲಿಲ್ಲ. ಸೂಜಿ ಮಾಡಿಸಿಕೊಂಡು ದೇಹ ಅಪವಿತ್ರ ಮಾಡಿಸಿಕೊಂಡವರಲ್ಲ. ತಮ್ಮ ತಂದೆ ದಿವಾನರ ಬಳಿ ಆಸ್ಥಾನ ಪುರೋಹಿತರಾಗಿದ್ದರು, ತಮ್ಮ ತಾತ ಮಹಾರಾಜರ ಕುಟುಂಬದ ಮುಖ್ಯ ಅರ್ಚಕರಾಗಿದ್ದರು. ತಮ್ಮ ತಾತ ಕುಂಡಲಿ, ಜಾತಕ ಪರಿಶೀಲಿಸಿದ ನಂತರವೇ ಗುಡೀಕೋಟೆ ರಾಜ ಯುದ್ಧಕ್ಕೆ ಹೊರಡುತ್ತಿದ್ದ. ಎಂದೆಲ್ಲ ತಮ್ಮ ವಂಶಾವಳಿ ಬಗ್ಗೆ ಬೀಗುತ್ತಿದ್ದ ಅವರು ತಮ್ಮ ಏಕಮಾತ್ರ ಪುತ್ರನಾದರೂ ಸಂಸೃತದಲ್ಲಿ ಮಹಾಪಂಡಿತನಾಗಿ ವಂಶದ ಕೀರ್ತಿ ಉಳಿಸಲಿ ಎಂದು ಬೆಂಗಳೂರಿನ ಸಂಸೃತ ಪಾಠಶಾಲೆಯೊಂದಕ್ಕೆ ಸೇರಿಸಿದ್ದರು. ಆದರೆ ಆತ ಜುಟ್ಟು ಬೋಳಿಸಿಕೊಂಡು ಮತಭ್ರಷ್ಠನಾದ, ನಗರದ ಬೀದಿಗಳಲ್ಲಿ ಪೋಲಿ ಪೋಲಿಯಾಗಿ ಅಲೆದಾಡಿದ; ತನ್ನ ಹದಿನೆಂಟನೇ ವಯಸ್ಸಿಗೆ ಎರಡು ಮೂರು ಗುಹ್ಯ ರೋಗಗಳಿಗೆ ಬಲಿಯಾಗಿ ಅಡ್ಡಾಡಲಸಾಧ್ಯವಾದ ವೇದನೆಯಿಂದ ನರಳತೊಡಗಿದ. ಪಾಠಶಾಲೆಯ ಪ್ರಾಚಾರ್ಯರಿಂದ ಹೀಗೆ ಅಂತ ಪತ್ರ ಹೋಯಿತು. ಶಾಸ್ತ್ರಿಗಳು ಬಂದರು. ಮಗನ ದೇಹ ಸ್ಪರ್ಶಿಸಲು ಹಿಂಜರಿದರು. ಮುಮ್ಮುಡಿ ಕೃಷ್ಣರಾಜರಿಂದ ಬಳುವಳಿಯಾಗಿ ಬಂದಿದ್ದ ಬೆತ್ತ ಎತ್ತಿ ಬಾರಿಸಿದರು. “ಕೊಂದು ಹಾಕಿಬಿಡ್ತೀನಿ ಮುಂಡೇ ಗಂಡ” ಎಂದು ಬೆದರಿಸಿ ಗುಹ್ಯರೋಗ ತಜ್ಞರಿಂದ ಇಲಾಜು ಮಾಡಿಸಿದರು. ಮಗನ ಭವಿಷ್ಯ ಹೇಗೆ ರೂಪಿಸಬೇಕು ಎಂಬ ಚಿಂತೆಯಲ್ಲಿ ಅವರಿದ್ದಾಗ ಮಗ ಅಶ್ವಥ್ ನಾರಾಯಣ ತಾನು ಮಲಗಿದ್ದ ಶಯನ ಗೃಹದಿಂದ ಪರಾರಿಯಾದ. ಶಾಸ್ತ್ರಿಗಳು ತಮಗೆ ಬಹುಮಾನವಾಗಿ ಬಂದಿದ್ದಂಥ ತೋಳು ಬಂದಿ, ಕಡಗ, ಪದಕಗಳನ್ನು ಮಾರಿ ಐದು ವರ್ಷ ದಿನಮಾನ ಹುಡುಕಿಸಿದರು. ಧರ್ಮಪತ್ನಿ “ಅಶ್ವತ್ಥಾಽ ಅಶ್ವತ್ಥಾಽ” ಅಂತ ಕೊನೆಯುಸಿರೆಳೆದಳು. ಶಾಸ್ತ್ರಿಗಳು ಅಲ್ಲಲ್ಲಿ ವೈದಿಕ ಮಾಡಿಕೊಂಡು ಮಗನನ್ನು ಮರೆತರು. ಆದರೆ ಒಂದು ದಿನ ಅವರು ಸಂಧ್ಯಾವಂದನೆಮಾಡುತ್ತಿದ್ದಾಗ ಯುವಕನೋರ್ವ ಮನೆಬಾಗಿಲು ತಟ್ಟಿದ. ಹುಲಿಯೇ ಮನುಷ್ಯರೂಪ ಧರಿಸಿದಂತಿದ್ದ. ಆಧುನಿಕ ವೇಶಭೂಷಣದವನಾಗಿದ್ದ. ದೇಹದ ಎಲ್ಲ ಕಡೆ ಊದಿಕೊಂಡಿತ್ತು. ಆ ವ್ಯಕ್ತಿ ಶಾಸ್ತ್ರಿಗಳ ಏಕಮಾತ್ರ ಪುತ್ರ ಅಶ್ವಥ್ ನಾರಾಯಣನಾಗಿದ್ದ. ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದ. ಆತ ಸೇವೆ ಸಲ್ಲಿಸಿದ್ದುದು ಉತ್ತರ ಭಾರತದ ಪೂಂಚ್ ಗಡಿಯಲ್ಲಿ. ನೂರಾರು ಮಂದಿ ಶತ್ರು ಸೈನಿಕರನ್ನು ಕೊಂದಿದ್ದ. ಕೋಳಿ ಕುರಿ ತಿಂದರೆ ಅದೊಂದು ಥರ, ಆದರೆ ಆತ ಗೋಮಾಂಸ, ದನದ ಮಾಂಸ ತಿನ್ನುತ್ತಿದ್ದ. ಎಳನೀರು, ಕಾಫಿ ಟೀ ಕುಡಿದರೆ ಅದೊಂದು ಥರ. ಆತ

ಮಿಲಿಟರಿ ರಮ್ ಕುಡಿಯದೆ ನಿದ್ದೆ ಮಾಡುತ್ತಿರಲ್ಲಿಲ್ಲ. ಇದನ್ನೆಲ್ಲ ಕೇಳಿ ಶಾಸ್ತ್ರಿಗಳು ಅರ್ಧ ಇಳಿದುಹೋದರು. ಆತ ತಮ್ಮ ವಂಶದ ಮಡಿವಂತಿಕೆಯನ್ನು ತೂರಿರಬಹುದು. ಆತ ಎಷ್ಟಿದ್ದರೂ ಎರಡು ಪತ್ತ ಮೀರಿದ ನಂತರ ಹುಟ್ಟಿದ ಮಗ. ಹೆಂಡತಿ ಪ್ರಾಣಾಂತಿಕ ಪ್ರಸವ ವೇದನೆಯನ್ನು ಅನುಭವಿಸಿ ಅಂತೂ ಕೊನೆಗೆ ಹೆತ್ತು ತಾನೂ ಬದುಕಿ ಉಳಿದಿದ್ದಳು. “ದಿನಕ್ಕೊಂದು ಸಾರಿಯಾದರೂ ಗಾಯತ್ರಿ ಜಪಿಸುತ್ತೀದೀಯಾ” ಎಂದಿ ಶಾಸ್ತ್ರಿಗಳು ಪ್ರಶ್ನಿಸುತ್ತಿದ್ದರು. ’ಭೂರ್ಬವಸ್ವಃ ಎನ್ನುವುದನ್ನೇ ಮರೆತುಬಿಟ್ಟಿದ್ದ. ಗಾಯತ್ರಿ ಮೈಖೇಲ್ ಎಂಬ ಹುಡುಗಿಜತೆಗೆ ನಿರಂತರವಾಗಿ ದೈಹಿಕ ಸಂಭಂದ ಇಟ್ಟುಕೊಂಡಿರುವುದಾಗಿ ಹೇಳಿ ಹೆತ್ತ ತಂದೆ ಮುಖಕ್ಕೆ ಬೆರಣಿ ತಟ್ಟಿದ. ಶಾಸ್ತ್ರಿಗಳಿಗೆ ಇದನ್ನೆಲ್ಲಾ ಕೇಳಿ ಗಂಗೆಯಲ್ಲಿ ದೇಹ ತ್ಯಾಗ ಮಾಡಿಕೊಳ್ಳಬೇಕೆನಿಸಿತು. ಅಗ್ರಹಾರದ ಸಹಜೀವಿಗಳು ಬುದ್ಧಿ ಹೇಳಿದರು. ಒಂದು ಹಂತಕ್ಕೆ ತಂದರು. ’ಮಗ ಮ್ಲೇಚ್ಚ ಜಾತಿಯವಳನ್ನು ಮದುವೆಯಾಗಿ ವಂಶವನ್ನು ಮೈಲಿಗೆ ಮಾಡುವ ಮೊದಲೇ ಶಾಸ್ತ್ರೋಕ್ತವಾಗಿ ಸ್ವಜಾತಿ ಸ್ವಗೋತ್ರದ ಹುಡುಗಿಯೋರ್ವಳನ್ನು ಕಟ್ಟಿಹಾಕಿ ಬಿಡುವಂತೆ ಶಾಸ್ತ್ರಿಗಳಿಗೆ ಸೂಚಿಸಿದರು. ಮೊದಮೊದಲು ಅಶ್ವಥ್ ಇದಕ್ಕೆ ಒಪ್ಪಲ್ಲಿಲ್ಲ. ಕಣ್ಣೆದುರಿಗೇ ಆತ್ಮಹತ್ಯೆಯ ಬೆದರಿಕೆ ಹಾಕಿದಾಗಲೂ ಜಗ್ಗಲಿಲ್ಲ.

ಕೊನೆಗೆ ಅಗ್ರಹಾರಕ್ಕೆ ಅಗ್ರಹಾರವೇ ಸಂಪು ಮಾಡಿದಾಗ ಸ್ವಜಾತಿ ಕನ್ಯೆ ನೋಡಲು ಒಪ್ಪಿದ. ಏನು ಬಿಟ್ಟರೂ ಜಾತಿ ಬಿಡಬಾರದು ಎಂದು ತಂದೆಯ ಸಹಪಾಠಿ ಹೇಳಿದ್ದಕ್ಕೆ ತಲೆ ಅಲ್ಲಾಡಿಸಿದ. ಮಗನನ್ನು ತಮ್ಮ ಜುಟ್ಟಿಗೆ ಕಟ್ಟಿಕೊಂಡು ಶಾಸ್ತ್ರಿಗಳು ಛಪ್ಪನ್ನಾರು ದೇಶಗಳನ್ನು ಅಲೆದರು. ತಾನು ಸಂಭೋಗಿಸಿದ ಹುಡುಗಿಯರಂತೆ ಇವರಾರು ಇಲ್ಲವೆಂದು ಅಶ್ವಥ್ ತಿರಸ್ಕರಿಸಿದ. ನೂರಾರು ಮಂದಿಯನ್ನು ಕೊಂದವನಿಗೆ ಮಗಳನ್ನು ಹೇಗೆ ಕೊಡುವುದು ಎಂದು ಶಾಸ್ತ್ರಿಗಳಿಗೆ ಹೇಳಿದರು. ಮತ್ತೆ ಕೆಲವರು “ಮಿಲಿಟರಿ ಸೇವೆ ಅಂದ ಮೇಲೆ ಅಮೇಧ್ಯ ಮದ್ಯ ಸೇವನೆ ಮಾಡದೆ ಇರುವುದುಂಟೆ” ಎಂಬ ಅನುಮಾನ ವ್ಯಕ್ತಪಡಿಸಿದರು. ಕೊನೆಗೆ ಗುಣ ಸಾಗರದ ಅದ್ವಿತೀಯ ಪಂಡಿತೋತ್ತಮರಾದ ಶ್ರೀನಿವಾಸರಾಯರು ತಮ್ಮ ಮಗಳನ್ನು ಕೊಡಲು ಒಪ್ಪಿದರು. ಆ ಹುಡುಗಿ ಹೆಸರು ಅಲಮೇಲು, ಶ್ರೀಮದ್ ವೆಂಕಟೇಶನ ಧರ್ಮಪತ್ನಿಯ ಹೆಸರು. ಆಕೆ ಆಚಾರವಂತೆ, ವಿಚಾರವಂತೆ ಎನ್ನುವುದರಲ್ಲಿ ಎರಡು ಮಾತಿಲ್ಲ.

ತನಗೆ ವಾರದೊಳಗೆ ಮದುವೆ ಮಾಡದಿದ್ದರೆ ಕನ್ನೀರವ್ವನ ಭಾವಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ತಂದೆಯನ್ನು ಹೆದರಿಸಿದ ಧೀಮಂತೆ, ಯೌವನ ಕಾಲಿರಿಸಿದಾಗ ನಿದ್ರಾ ನಡಿಗೆಯ ಚಾಳಿ ಇತ್ತಂತೆ, ಆಕೆ ರೂಪವತಿ ಮತ್ತು ಬಲಶಾಲಿಯಾಗಿದ್ದುದರಿಂದಲೇ ಮಿಲಿಟರಿ ಅಶ್ವತ್ಥ್ ಒಪ್ಪಿಕೊಂಡದ್ದು. ಆಕೆಯ ದೇಹದಲ್ಲಿ ಸ್ಪಂದಿಸುವ ಗುಣ ಕಂಡುಕೊಂಡ ನಂತರವೇ ಕಾಯಾವಾಚಾಮನಸಾ ಮಾಂಗಲ್ಯಧಾರಣೆ ಮಾಡಿದ, ಒಂದು ತಿಂಗಳ ಪರ್ಯಂತರ ಹಾಸಿಗೆ ಪ್ರಸ್ಥ ನಿರ್ವಿಘ್ನವಾಗಿ ನೆರವೇರಿತು. ಮದುವೆಯಾದ ಮೂವತ್ತೈದನೆ ದಿನ ಮಿಲಿಟರಿ ಹೆಡ್ ಕ್ವಾರ್ಟಸ್ಸಿನಿಂದ ಬುಲಾವ್ ಬಂತು. ಮಿಲಿಟರಿ ಉಡುಪು ಧರಿಸಿ ಹೊರಟು ನಿಂತ. ಪತಿಭಕ್ತೆಯಾದ ಅಲಮೇಲು ಕಣ್ಣುಗಳಿಂದ ಅಶ್ರುಧಾರೆ ಹರಿಯಿತು. “ವಾಪಸು ಬರುವುದರೊಳಗೆ ನಮ್ಮಿಬ್ಬರ ಹಾಗೆಯೇ ಗಂಡುಮಗುವನ್ನು ಹೆತ್ತು, ಮೈಗೆ ಎಣ್ಣೆ ನೀರು ಹಾಕ್ಕೊಂಡು ರೆಡಿಯಾಗಿರು” ಎಂದು ಹೇಳಿ ಹೊರಟುಹೋದ.

ಪತಿವಾಕ್ಯ ಪರಿಪಾಲನಾರ್ಥವಾಗಿ ಅಲುಮೇಲು ಮದುವೆಯಾದ ಇನ್ನೂರ ಎಂಬತ್ತೆಂಟನೆ ದಿನದಂದು ಗಂಡುಮಗುವಿಗೆ ಜನ್ಮ ನೀಡಿದಳು. ಆಮಗು ನೋಡಲು ಮುದ್ದಾಗಿತ್ತು. ಸ್ವತಃ

ಜ್ಯೋತಿಷ್ಯ ಮಾರ್ತಾಂಡರಾದ ಶಾಸ್ರಿಗಳು ಗುಣಿಸಿ ಭಾಗಿಸಿ ನಕ್ಶತ್ರ ನೋಡಿದರು. ಸ್ವಾತಿ ನಕ್ಷತ್ರ, ರಾಜಯೋಗ, ನೂರು ವರ್ಷ ತುಂಬಿದ ಬದುಕು ಅನುಭವಿಸುತ್ತನೆ; ಶಾಸ್ತ್ರ ಕೋವಿದನಾಗುತ್ತಾನೆ, ಜ್ಯೊತಿಷ್ಯದಲ್ಲೂ ಕೈಯಾಡಿಸಿ ಭವಿಷ್ಯ ಹೇಳಿ ನಾಲ್ಕಾರು ಮಂದಿ ಶ್ರೀಮಂತರ ಸಖ್ಯ ಸಂಪಾದಿಸುತ್ತಾನೆ, ಸತ್ಯನಾರಾಯಣ ವ್ರತವೇ ಮೊದಲಾದ ವ್ರತಗಳನ್ನು ಆಚರಿಸಿ ಹಣ ಸಂಪಾದಿಸಿ ಹೆಂಡತಿ ಮಕ್ಕಳನ್ನು ಸುಖವಾಗಿಡುತ್ತಾನೆ, ಪತಿಯೇ ದೇವರೆಂದು ಭಾವಿಸುವ ಹೆಂಡತಿ ದೊರಕುತ್ತಾಳೆ, ಹೀಗೆ ಏನೇನೋ ವಿವರಗಳುಳ್ಳ ಜಾತಕ ಬರೆದು ಮುಗಿಸಿದರು ಶಾಸ್ತ್ರಿಗಳು.

ಅಂಗಾತ ಮಲಗಿ ಆಡುವ ಮೊಮ್ಮಗನ ಕಿವಿಯಲ್ಲಿ ಆರು ಮಂತ್ರ ಗೊಣಗಿದರು. ಬೋರಲು ಮಲಗಿ ಇಸ್ಸಿ ಮಾಡುವ ಮೊಮ್ಮಗನ ಕಿವಿಯಲ್ಲಿ ಏಳು ಮಂತ್ರ ಬೋದಿಸಿದರು. ಹೀಗೆ ಕುಂತರೊಂದು ಮಂತ್ರ, ನಿಂತರೊಂದು ಮಂತ್ರ. ತಮ್ಮ ಯಂದೆಯ ಹೆಸರನ್ನು ಇಟ್ಟರೆಂದರೆ ಸಾಮಾನ್ಯವೇನು? ವಾಗ್ವಾದ ತೀರ್ಥ ನವರಸ ನಿಷ್ಣಾತ, ಮುಂತಾದ ಬಿರುದಾಂಕಿತ ಶಾಮಾ ಶಾಸ್ತ್ರಿಗಳು ಬಂದರೆಂದರೆ ಸಾಕ್ಷಾತ್ ಮಹಾರಾಜರೇ ಎದ್ದು ನಿಂದು ಸೂಚಿಸುತ್ತಿದ್ದರು. ಹಿಂದೂ ಮತದ ಎದುರು ಯಾವ ಧರ್ಮಗಳು ಏನೂ ಅಲ್ಲ ಎಂದು ಎಲ್ಲಾ ಧರ್ಮದ ಪಂಡಿತರನ್ನು ಸೋಲಿಸಿ. ಮಹಾರಾಜರಿಂದ ಚಿನ್ನದ ಮುಂಗೈ ಕಡ್ಗ ಪಡೆದಿದ್ದಂಥವರು. ಆ ಕಡಗಕ್ಕೆ ಒಂದು ಪುಟ್ಟ ಘಂಟೆ ಇತ್ತು. ಅವರನ್ನು ಎಲ್ಲರೂ ಘಂಟಾ ಶಾಮಾ ಶಾಸ್ತ್ರಿಗಳೆಂದೇ ಕರೆಯುತ್ತಿದ್ದರು. ಹೊತ್ತೆ ಕಿಚ್ಚಿನಿಂದ ಕುದಿಯುತ್ತಿದ್ದ ಅಗ್ರಹಾರದ ಪಡಪೋಸಿ ಪಂಡಿತರುಶಾಸ್ತ್ರಿಗಳ ಮುಂಗೈಯಿಂದ ಕದಿಯಲು ಪ್ರಯತ್ನಿಸಿದ್ದೂ ಉಂಟು; ಸಿಕ್ಕಿ ಬಿದ್ದಿದ್ದೂ ಉಂಟು. ಶಾಸ್ತ್ರಿಗಳು ಕ್ಷಮಿಸಿದ್ದೂ ಉಂಟು. ಕ್ಷಮಿಸದಿದ್ದರೆ ಅವರು ಅಗ್ರಹಾರದಲ್ಲಿ ಕುಟುಂಬ ಸಹಿತ ವಾಸಿಸುವುದೇ ಕಷ್ಟವಿತ್ತು. ಅದೂ ಅಲ್ಲದೆ ಈ ದೇಶಕ್ಕೆ ದರಿದ್ರ ಸ್ವತಂತ್ರ ಬಂದು ರಾಜರುಗಳೆಲ್ಲಾ ಬೀದಿ ಪಾಲಾಗಿದ್ದರು. ರಾಜರೇ ಬೀದಿ ಪಲಾದರೆಂದ ಮೇಲೆ ಪಂಡಿತರು, ವಿದ್ವಾಂಸರು ತಂತಮ್ಮ ಅಸ್ತಿತ್ವ ಕಾಪಾಡಿಕೊಳ್ಳಲು ತಂತಮ್ಮ ಪವಿತ್ರ ಜುಟ್ಟುಗಳ ಕಡೆಗೆ ವಿಶೇಷ ಗಮನ ಹರಿಸಿದರು. ಜುಟ್ಟು ಎಮ್ದರೆ ಸಾಮಾನ್ಯ ಸಂಗತಿ ಏನು? ಅದು ಸ್ವರ್ಗದಿಂದ ಮಾಹಿತಿ ಸಂಗ್ರಹಿಸಿ ಮೆದುಳಿಗೆ ವರ್ಗಾಯಿಸುವ ಪರಿಣಮಕಾರಿ ರಿಸೀವರ್, ~ಆಂಟೆನ ಇದ್ದಂತೆ. ಶಾಸ್ತ್ರಿಗಳು ತಮ್ಮ ದೇಹಕ್ಕೆ ಎಷ್ಟು ಬೆಲೆ ಕೊಡುತ್ತಿದ್ದರೋ; ಅಷ್ಟೇ ಬೆಲೆಯನ್ನು ತಮ್ಮ ಜುಟ್ಟಿಗೂ ಕೊಡುತ್ತಿದ್ದರು. ಆ ಜುಟ್ಟಿಗಿದ್ದ ಒಂದೊಂದು ಗಂಟುಗಳಲ್ಲಿ ಅವರು ಒಂದೊಂದು ಲೋಕದ ಗುಟ್ಟನ್ನು ಅಡಗಿಸಿಟ್ಟಿದ್ದರು. ಕ್ರಮೇಣ ಅವರ ದೇಹ ಹಣ್ಣಾಯಿತೇ ಹೊರತು ಅವರ ಜುಟ್ಟಿಗೆ ವೃದ್ದಾಪ್ಯ ಬರಲಿಲ್ಲ. ಪ್ರಜಾಪ್ರಭುತ್ವದ ಬಗ್ಗೆ; ಸಾಮಾಜಿಕ ಸಮಾನತೆ ಬಗ್ಗೆ ಅವರಿಗೆ ಕೆಟ್ಟ ಅಸಮಾಧಾನವಿತ್ತು. ಸನಾತನ ನಂಬಿಕೆಗಳನ್ನು ಮೂಡನಂಬಿಕೆಗಳೆಂದು ಕರೆದು ಅವುಗಳ ವಿರುದ್ದ ಎತ್ತರಿಸಿ ಮಾತಾಡುತ್ತಿದ್ದ ಜವಹರಲಾಲ ನೆಹುರೂರವರೆಂದರೆ ಅವರಿಗೆ ಭಯಂಕರ ಕೋಪವಿತ್ತು. ಶೂದ್ರರು; ದಲಿತರಿಗೆ ಸಮಾಜದಲ್ಲಿ ವಿಶೇಷ ಸವಲತ್ತುಗಳನ್ನು ಕಲ್ಪಿಸಲು ಪ್ರಯತ್ನಿಸುತ್ತಿರುವ ಸರಕಾರಗಳ ವಿರುದ್ಧ ಅವರು ಹಿಡಿ ಶಾಪ ಹಾಕುತ್ತಿದ್ದರು. ಆದ್ದರಿಂದ ಅವರು ಎಂದೂ ಮತಗಟ್ಟೆಗಳಿಗೆ ಹೋಗಿರಲಿಲ್ಲ. ಮತ ಚಲಾಯಿಸಲೂ ಇಲ್ಲ. ಸನಾತನ ಧರ್ಮದ ಪುನರುತ್ಠಾನ ಮಾಡಲು ಕಂಕಣ ಬದ್ಧನಾಗುವಂತೆ ಮಗ ಪರಮೇಶ್ವರ ಶಾಸ್ತ್ರಿಗಳಿಂದ ವಚನ ಪಡೆದರು. ತಮ್ಮ ಪವಿತ್ರ ಕಳೇಬರದೊಂದಿಗೆ ಮಹಾರಾಜರ ಪ್ರಸಾದವಾದ ಮುಂಗೈ ಕಡಗವನ್ನೂ ಇರಿಸಿ ಸಂಸ್ಕಾರ ಮಾಡುವಂತೆ ಮಗನಿಗೆ ಹೇಳಿ ಪ್ರಾಣ ತ್ಯಜಿಸಿದರು.

ಅವರ ಶವವನ್ನು ಕಡಗದೊಂದಿಗೆ ಸಿಂಗರಿಸಿ ಭಕ್ತಾದಿಗಳ ದರ್ಶನಕ್ಕಾಗಿ‌ಒಂದು ದಿನದ ಮಟ್ಟಿಗೆ ಇಡಲಾಯಿತು. ಹೆಣ ನೋಡುವುದಕ್ಕಿಂತ ಕಡಗ ನೋಡಲು ಬಂದವರೇ ಅಧಿಕ. ಕಣ್ಣೀರು ಸುರಿಸಿದ್ದಕ್ಕಿಂತ ಹೆಚ್ಚಾಗಿ ಬಾಯಿಯಿಂದ ಜೊಲ್ಲು ಸುರಿಸಿದುದೇ ಹೆಚ್ಚು. ಅತ್ತು ಕರೆದೂ ಸುಸ್ತಾಗಿ ಎಲ್ಲರೂ ಗಾಢ ನಿದ್ರೆಯಲ್ಲಿದ್ದಾಗ ಶಾಸ್ತಿಗಳ ಶವ ಕಾಣೆಯಾಯಿತು. ಶಾಸ್ತ್ರಿಗಳ ಆತ್ಮವೇ ತಮ್ಮ ಪವಿತ್ರ ಕಳೆಬರವನ್ನು ಕಾಶಿಯ ಪವಿತ್ರ ಮಣಿಕರ್ಣಿಕಾ ಘಾಟಿಗೆ ಸಾಗಿಸಿರಬಹುದೆಂದು ಅನೇಕರು ಸಂದೇಹಿಸಿದರು. ಕಾಶಿ ವಿಶ್ವನಾಥನ ಸನ್ನಿಧಿಯಲ್ಲೇ ಅಸು ನೀಗುವ ಆಸೆಯನ್ನು ಅವರು ಬದುಕಿದ್ದಾಗ ಹಲವುಕಡೆ ಪ್ರಸ್ತಾಪಿಸಿದ್ದುಂಟು. ಸಾಕ್ಷಾತ್ ಆದಿಶಕ್ತಿಯ ರೂಪವಾದ ದಾಕ್ಷಾಣಿಯ ಶವವನ್ನು ಆಕೆಯ ಪತಿ ಪರಮೇಶ್ವರ ಅಗ್ನಿಗಾಹುತಿ ಮಾಡಿದಂಥಾ ಪರಮಪವಿತ್ರ ಸ್ಥಳವದು. ಅಲ್ಲಿ ದೇಹ ತ್ಯಾಗ ಮಾಡುವುದೆಂದರೇನು? ಅದಕ್ಕೆ ಸಾವಿರಾರು ರುಪಾಯಿಗಳನ್ನು ಜೋಡಿಸುವುದು ಹೇಗೆ? ಅಂಥ ಅಂತ್ಯ ಸಂಸ್ಕಾರಗಳಿಗೆ ಬೇಕಾದ ಎಲ್ಲಾ ಖರ್ಚುಗಳನ್ನು ಧರಿಸಲು ಸ್ವತಂತ್ರೋತ್ತರ ಪ್ರಜಾಪ್ರಭುತ್ವ ಸರಕಾರಗಳು ಸರ್ವಥಾ ಹಿಂದೇಟು ಹಾಕುವವು. ಅಲ್ಲದೆ, ಈ ಸರಕಾರಗಳಿಗೆ ಸನಾತನ ಧರ್ಮಾವಲಂಬೀ ಮೇಲ್ಜಾತಿ ಸಂಜಾತರ ಬಗ್ಗೆ ಲವಲೇಶ ಗೌರವವಿಲ್ಲ. ಕಾಶ್ಮೀರಿ ಬ್ರಾಹ್ಮಣ ಜಾತಿಯಲ್ಲಿ ಹುಟ್ಟಿರುವ ನೆಹರೂರವರು ಪ್ರಧಾನಿಗಳಾಗಿದ್ದಾಗ ಅವರಿಂದ ಬ್ರಾಹ್ಮಣ ಪರ ನಿಲುವನ್ನು ನಿರೀಕ್ಷಿಸಲಾಗಿತ್ತು. ಆದರೆ ನಿರೀಕ್ಷೆ ತಲೆಕೆಳಗಾಯಿತು. ಬ್ರಾಹ್ಮಣ ವಿರೋಧಿ ಸರಕಾರಗಳು ಇದ್ದರೆಷ್ಟು? ಬಿದ್ದರೆಷ್ಟು? ಆದರೆ ಅದೇ ರಾಜ ಮಹಾರಾಜರಿದ್ದಿದ್ದರೆ ಹೀಗಾಗುತ್ತಿತ್ತೇನು? ಪಂಡಿತೋತ್ತಮರ ಕಳೆಬರವನ್ನು ನವರತ್ನ ಖಚಿತ ಡೋಲಿಯಲ್ಲಿ ಅಲಂಕರಿಸಿ ಕಾಶಿಗೋ ಕೇದಾರಕ್ಕೋ, ಹೃಷೀಕೇಶಕ್ಕೋ ಸಾಗಿಸುತ್ತಿದ್ದರು. ಅಂತ್ಯ ಸಂಸ್ಕಾರದ ಸಕಲ ಖರ್ಚುಗಳನ್ನೂ ಖಂಡಿತ ಭರಿಸುತ್ತಿದ್ದರು. ಇದನ್ನು ಮನಗಂಡೇ ಶಾಮಾ ಶಾಸ್ತ್ರಿಗಳು ತಮ್ಮ ಆತ್ಮಬಲದಿಂದ ಇಚ್ಛಾಶಕ್ತಿಯಿಂದ ತಮ್ಮ ಶವವನ್ನು ಕಾಶಿಯ ಮಣಿಕರ್ಣಿಕಾ ಘಾಟ್ ಅಂತರಿಕ್ಷ ಮಾರ್ಗವಾಗಿ ಸಾಗಿಸಿರಬಹುದೆಂದು ಸಂದೇಹಿಸಲಾಯಿತು. ಅದನ್ನು ಪುಷ್ಟೀಕರಿಸುವಂತೆ ಕೆಲವರು ತಾವು ಮಟಮ ಟ ಮಧ್ಯ ರಾತ್ರಿ ಸಮಯಯಲ್ಲಿ ಉದ್ದನೆ ವಸ್ತುವೊಂದು ಆಕಾಶ ಮಾರ್ಗವಾಗಿ ಉತ್ತರಾಭಿಮುಖವಾಗಿ ಹೋದದ್ದನ್ನು ಕಂಡೆವೆಂದು ಹೇಳಿದರು. ಅವರ ಆ ವಾದವನ್ನು ಸತ್ಯವೆಂದು ನಿರೂಪಿಸಲು ಗಣಪಥಿ ಭಟ್ಟರು ಆ ವಸ್ತುವಿಂದ ಉದುರಿತ್ತೆಂದು ಹೇಳುತ್ತ, ಸೀದ ತಮ್ಮ ತಲೆಗೇ ಸುರಿದ ಕೆಲವು ಹೂವುಗಳನ್ನು ತೋರಿಸಿದರು. ಅಂದರೆ ಶವ ಈಗಾಗಲೇ ಮಣಿಕರ್ಣಿಕ ಘಾಟ್ ತಲುಪಿದೆ ಎನ್ನುವುದರಲ್ಲಿ ಸಂದೇಹವಿಲ್ಲ. ಅಗ್ನಿ ಸಂಸ್ಕಾರಕ್ಕೆ ಹೆತ್ತ ಮಗನಿಲ್ಲದಿದ್ದರಾಯಿತೇನು? ಶಾಸ್ತ್ರೀಯ ಸಂಸ್ಕಾರವಾಗದಿದ್ದಲ್ಲಿ ಆತ್ಮ ಮೋಕ್ಷ ದೊರಕದೆ ಅತಂತ್ರ ಸ್ಥಿತಿಯಲ್ಲಿ ತಿರುಗಾಡೀತು. ಆ ಪಟ್ಟಣದ ಶ್ರಿಮಂತ ವಣಿಕರಾದ ವೆಂಕಟರಮಣಶ್ರೇಷ್ಠಿಗಳು ಕಾಶಿಗೆ ಹೋಗಿಬರುವ ವೆಚ್ಚವನ್ನು ತಾವು ಧರಿಸುವುದಾಗಿ ಹೇಳಿದರು. ಕೆಲವರು ಟೆಲಿಫೊನ್ ಆಫೀಸಿಗೆ ಹೋಗಿ ಕಾಶಿಯ ಸಂಸೃತ ಪಾಠಶಾಲೆಯ ಉದ್ದಾಮ ಪಂಡಿತರಿಗೆ ಕಾಲ್ ಬುಕ್ ಮಾಡಿದರು. ಇಂಥ ಪವಿತ್ರ ಲಕ್ಷಣಗಳ ಕಳೇಬರ ಮಣಿಕರ್ಣಿಕ್ ಅ ಘಾಟ್ ತಲುಪಿರುವುದರ ಬಗ್ಗೆ ಮಾಹಿತಿ ದಯಪಾಲಿಸಬೇಕೆಂದು ವಿನಂತಿಸಿಕೊಂಡರು. ಅಂಥ ಲಕ್ಶಣಗಳ ನೂರಾರು ಹೆಣಗಳು ಮಣಿಕರ್ಣಿಕಾ ಘಾಟ್‌ನಲ್ಲಿ ಅನಾಥವಾಗಿ ಬಿದ್ದಿರುವವೆಂದು, ಬಂದು ಹುಡುಕಿಕೊಳ್ಳಿ ಎಂಬ ಸಂದೇಶ ಕಾಶಿಯಿಂದ ಬಂತು. ಅಗ್ರಹಾರಕ್ಕೆಲ್ಲಾ ಅಹಾರಧಾನ್ಯ ಸಪಲ್ಯಾ ಮಾಡುವ ಶ್ರೇಷ್ಠಿಗಳು ಹೋಗಿಯೇ ಬಂದು ಬಿಡಿ ಎಂದು ಹೇಳಿದರು. ಪರಮೇಶ್ವರ ಶಾಸ್ತ್ರಿಗಳನ್ನು ಬಸ್ ನಿಲ್ದಾನದಲ್ಲಿರಿಸಿ

ದುಡ್ಡು ತರಲೆಂದು ಮನೆಗೆ ಹೋಗಿದ್ದೇನೋ ನಿಜ. ತಮ್ಮ ಬೊಜ್ಜಿನ ಕಣಿವೆಯಲ್ಲಿದ್ದ ಬೆಳ್ಳಿ ಉಡುದಾರಕ್ಕಿಂತ ಕರ್ರಗೆ ತೂಗಾಡುತ್ತಿದ್ದ ಬೀಗದ ಕೈಯನ್ನು ಕೈಯಲ್ಲಿ ಹಿಡಿದುಕೊಂಡಿದ್ದೂ ನಿಜ. ಅಷ್ಠೇ ಕರ್ರಗಿದ್ದ ತಿಜೋರಿಯ ತೂತಿನಲ್ಲಿ ತುರುಕಿದ್ದೂ ನಿಜ. ಅವಸರದಲ್ಲಿ ತುರುಕುವವರಿಗೆ ತೂರುವುದಾದರೂ ಹೇಗೆ? ಅದು ಎಷ್ಟಿದ್ದರೂ ಬೀಗರು ಕೊಟ್ಟಿದ್ದು. ಎಲ್ಲ ಮಾಹಿತಿ ಸಂಗ್ರಹಿಸಿದ್ದ ಶ್ರೀಮತಿ ರಿಂದಮ್ಮ ಕುಪ್ಪಳಿಸಿ ಗಂಡನೆದುರು ನಿಂತು ತನ್ನ ಸುಗಾತ್ರದ ಎದೆ ಝಳಪಿದಳು. ಯವನೋ ಬ್ರಾಹ್ಮಣ ಸತ್ತರೆ ತನ್ನ ಗಂಡ ತಿಜೋರಿ ಹಣ ಕೊಡುವುದೆಂದರೇನು? ತರಾತೆಗೆ ತೆಗೆದುಕೊಂಡಳು. ಆಕೆಯ ಪವಿತ್ರ ಭಗವತಿ ಕಣಿವೆಯಿಂದ ಹುಟ್ಟಿ ಸಹ್ಯಾದ್ರಿ ಶ್ರೇಣಿಗಳನ್ನು ಈಡಾಡಿ ದಷ್ಟಪುಷ್ಟವಾಗಿ ಬೆಳೆದು ನಿಂತಿದ್ದ ಎಂಟು ಮಂದಿ ಮಕ್ಕಳು ತಮ್ಮ ತಾಯಿಗೆ ಬೇಷರತ್ತಿನ ಬೆಂಬಲ ಸೂಚಿಸಲು ಬೆಕ್ಕು ಮ್ಯಾಂವ್‌ಗುಟ್ಟಿ ಹರ್ಷ ಪ್ರಕಟಿಸಿತು. ಬೊಜ್ಜಿನ ಷ್ಯಾಮಲ ವರ್ಣದ ಸಂದಿಯಲ್ಲಿ ಕಪ್ಪುಕೀ ತೆಪ್ಪನೆ ಉಡುಗಿ ಅಡಗಿ ಕೊಂಡಿತು. ಷವ ಸಂಸ್ಕಾರ ಮುಗಿಯುವವರೆಗೆ ಮುಖಕಮಲವನ್ನು ಸಾರ್ವಜನಿಕವಾಗಿ ತೋರಕೂಡದೆಂದು ಕಟ್ಟಪ್ಪಣೆ ಮಾದಿ, ಅವರೆಲ್ಲ ಸೇರಿ ಶ್ರೆಷ್ಠಿಯನ್ನು ಉಗ್ರಣದ ಕೋಣೆಯಲ್ಲಿ ಬಚ್ಚಿಟ್ಟುಬಿಟ್ಟರು. ಅಷ್ಟೇ ಅಲ್ಲ್ದೆ ಚಿಲಕ ಸರಿಸಿ ಬೀಗ ಕೂಡ ಜಡಿದರು. ಸರ್ವ ಪಾಪ ಪರಿಹಾರ್ಥವಾಗಿ ಬ್ರಾಹ್ಮಣರಿಗೆ ಸಹಾಯಮಾಡಬೇಕೆಂಬ ಸದುದ್ದೇಶದಿಂದ ಉಗ್ರಾಣದ ಪಾಲಾಗಿದ್ದ ಶ್ರೇಷ್ಥಿಯನ್ನು ನೋಡುತ್ತಲೇ ಉಗ್ರಣವನ್ನು ತಮ್ಮ ಕರ್ಯಕ್ಷೇತ್ರ ಮಾಡಿಕೊಂಡಿದ್ದ ಹೆಗ್ಗಣ ಇಲಿಗಳಿಗೆಲ್ಲ ಹೊಸ ಹುಮ್ಮನಸ್ಸು ಬಂತು. ತಮಗೆ ಬಗೆ ಬಗೆಯಾದ ಹಿಂಸೆ ಕೊಟ್ಟಿರುವ ಮತ್ತು ಕೊಡುತ್ತಿರುವ ಶೆಟ್ಟಿ ಒಂತಿಯಾಗಿ ಸಿಕ್ಕರೆತಾವು ಏನೆಂಬುದನ್ನು ತೋರಿಸಬೇಕೆಂದು ಅವೂ ಬಹಳ ದಿನಗಳಿಂದ ಕಾಯುತ್ತಿದ್ದವು. ಹೇಷಾರವದ ಮಾಡುತ್ತಿದ್ದ ಶೆಟ್ಟಿಯ ಸುತ್ತ ಅವೆಲ್ಲ ವರ್ತುಲಾಕಾರವಾಗಿ ನೆರೆತವು. ತಮ್ಮದೇ ಆದ ಭಾಷೆಯಲ್ಲಿ ಹಿಡಿ ಹಿಡಿ ಶಾಪ ಹಾಕತೊಡಗಿದವು. ಬಗೆಬಗೆಯಾದ ಬಲೆಗಳನ್ನು ಪ್ರಯೋಗಿಸಿ ತಮ್ಮನ್ನು ಹಿಡಿಸಿ ಸಾಯಿಸುತ್ತಿದ್ದವನು ಇದೇ ಶೆಟ್ಟಿ, ಎಂಥ ಮನುಷ್ಯರಿವರು, ಮೂಷಕ ವಾಹನ್ವನ್ನು ಪೂಜಿಸುತ್ತಾರೆ, ಅದರೆ ಲಂಬೋದರನಿಗೆ ವಾಹನಗಳದ ತಮ್ಮನ್ನು ಚಿತ್ರಹಿಂಸೆ ಕೊಟ್ಟು ಕೊಲೆಮಾಡಿಸುತ್ತರೆ, ಎಷೊಂದು ಅನಾಗರೀಕರಿ ನರಹುಳುಗಳು!…. ನಮಗೂ ಅದು ಇದು ತಿಂದು ಬದುಕುವ ಹಕ್ಕಿಲ್ಲವೇನು?

ಹೆಗ್ಗಣಗಳು, ಇಲಿಗಳು ಒಗ್ಗಟ್ಟಿನಲ್ಲಿ ಬಲವಿದೆ ಎಂಬ ನುಡಿಯನ್ನು ಪುಷ್ಠೀಕರಿಸುವಂತೆ ಶ್ರೇಷ್ಠಿಯ ಸುತ್ತ ವರ್ತುಲಾಕಾರದಲ್ಲಿ ನೆರೆದು ಗುರುಗುಟ್ಟಿದವು. ದುರುಗುತ್ತಿದವು. ಕೆಲವು ಘರ್ಜಿಸಿದರೆ, ಇನ್ನು ಕೆಲವು ಘೀಳಿಟ್ಟವು. ಮತ್ತೆ ಕೆಲವು ಗಹಗಹಿಸಿ ನಕ್ಕವು.

ಶ್ರೇಷ್ಥಿ ಉಸ್ಸೆಂದು ಗದರಿದರೂ ಅವು ಕೇರು ಮಾಡಲಿಲ್ಲ. ತಮ್ಮ ಮೂಷಿಕ ಭಾಷೆಯಲ್ಲಿ ಅವಾಚ್ಯ-ಶಬ್ದ ಪ್ರಯೊಗ ಮಾಡಿದವು ಮನದಣಿಯೇ. ಆ ದಡ್ಡಗೆ ಅವುಗಳ ಗೀರ್ವಾಣಿ ಅರ್ಥವಾಗಿದ್ದಲ್ಲಿ ಅವಸಾನವನ್ನು‌ಆ ಕೂಡಲೆ ಆಹ್ವಾನಿಸಿಬಿಡುತ್ತಿದ್ದನು. ಗದಗದ ನಡುಗಲಾರಂಭಿಸಿದನು. ಮಲ ಮೂತ್ರಗಳು ಅಂತಿಮ ಸ್ಥಾನದಲ್ಲಿ ಗುರಿ ಇಟ್ಟು ನಿಂತವು. ಹೆಗ್ಗಣ ಇಲಿಗಳು ಆತನ ಮೇಲೆ ಠಣ್ಣ ಟಣ್ ಎಗರಡಲಾಂಭಿಸಿದ್ದೇ ಮೊದಲಿಗೆ ಮೂತ್ರ ಮೂತ್ರ ವಿಸರ್ಜನೆಮಾಡಿಕೊಂಡನು. ಇಲಿಯೊಂದು ಆತನ ಕಿವಿಕಚ್ಚಿತು. ಸೊಂಡಿಲಿಯೊಂದು ಕೆಳದುಟಿಗೆ ಕಾಲೂರಿನಿಂತು ಆತನ ನಾಲಿಗೆಗಾಗಿ ತಡಕಾಡತೊಡಗಿತು.

“ಏಡುಕೊಂಡಲವಾಡ ಚಚ್ಚಿಪೋತಾನು” ಕಿತಾರನೆ ಕಿರಿಚಿದ. ಮಲ ಗುದದ್ವಾರದಿಂದ ಕಿತ್ತು ಬಂತು.
ಆವನು ಹೀಗೆ ಉಗ್ರಣದಲ್ಲಿ ವಿಲವಿಲ ಒದ್ದಾಡುತ್ತಿರಲು ಇತ್ತ ಬುಸ್ ನಿಲ್ದಾಣದಲ್ಲಿ ಪರಮೇಶ್ವರ ಶಾಸ್ತ್ರಿಗಳು “ಶ್ರೇಷ್ಠಿಗಳ ಆಗಮನದಲ್ಲಿ ವಿಳಂಬವಾಗುತ್ತಿದೆಯಲ್ಲಾ…. ರಾಮಾ ರಾಮಾ” ಎಂದು ಪರಿತಪಿಸಿತ್ತಿದ್ದರು.

ಅಷ್ತರಲ್ಲಿ ಅಮರ ಕೋಶದಲ್ಲಿ ನಿಷ್ಣಾತರಾದ, ಸಿದ್ಧಾಂತ ಶಿಖಾಮಣಿ ಎಂಬ ಬಿರುದನ್ನು ತಮ್ಮ ಹೆಂಡತಿಯಿಂದ ಪದೆದುಕೊಂಡಂಥವರಾದ, ಗುಂಡಾಭಟ್ಟರು ಏಳುತ್ತಾ ಬೀಳುತ್ತ ಸಡಲಿದ್ದ ಧೋತರವನ್ನು ಲೆಕ್ಕಿಸದೆ ಓಡಿಬಂದರು. ಅವರನ್ನು ಬೆನ್ನಟ್ಟಿ ಬಂದ ಎರಡು ನಾಯಿಗಳು ಅಷ್ಟು ದೂರ ಹೇಷಾರವ ಮಾಡುತ್ತ ನಿಂತುಕೊಂಡವು.
“ಶಾಸ್ತ್ರಿಗಳೇ… ಅಪಚಾರವಾಯಿತು… ಅಪಚಾರವಾಯಿತು” ಭಟ್ಟರು ಧೋತರದ ನಿರಿಗೆ ಸರಿಪಡಿಸಿಕೊಂಡು ಕಚ್ಚೆ ಸರಿಯಾಗಿ ಕಟ್ಟಿಕೊಂಡರು. ಅವರ ಗ್ಲೋಬಾಕಾರದ ಹೊಟ್ಟೆಯ ಮೇಲೆ ಬೆವರು ಮೆತ್ತಿಕೊಂದಿತ್ತು.
ಶಾಸ್ತ್ರಿಗಳು ಜೀವಮಾನದಲ್ಲಿ ಪ್ರಥಮಬಾರಿಗೆ ದಿಗ್ಭ್ರಮೆಗೊಂಡರು.
ಪ್ರಶ್ನಾರ್ಥಕವಾಗಿ ನೋಡಿದರು. ಮಾತುಗಳು ಗಂಟಲಲ್ಲಿ ಪದ್ಮಾಸನ ಹಾಕಿದವು. ಮಾತಿಗಿಂತ ಮೌನವನ್ನೇ ಹೆಚ್ಚು ಪ್ರೀತಿಸುತ್ತಿದ್ದ ಶಾಸ್ತ್ರಿಗಳಿಗೆ ಹೇಗೆ ಹೇಳುವುದು? ಹೇಳದೆ ಇರಲಿಕ್ಕಾದೀತೆ? ಉತ್ತರೀಯ ಬಾಯಿಗೆ ಅಡ್ಡ ಇಟ್ಟುಕೊಂಡು ಬಿಕ್ಕಿದರು ಭಟ್ಟರು.
“ನೋಡಿ ಶಾಸ್ತ್ರಿಗಳೇ, ಪ್ರಪಂಚ ತುಂಬಾನೇ ಕೆಟ್ಟು ಹೋಗಿದೆ. ಧನ ಇಶಾಚಿಯ ಮೋಹ ಪಾಶಕ್ಕೆ ಸಿಲುಕಿ ಜನಗಳು ಮಾಡಬಾರದ ನೀಚ ಕೆಲಸ ಮಾಡಿದ್ದಾರೆ. ಮಾನವರು ಸನಾತನ ಧರ್ಮ ಮರೆತು ನರಕಕ್ಕೆ ಹೊಗ್ತಿದಾರಲ್ಲ?” ಗುಂಡಾಭಟ್ಟರು ಬಿಕ್ಕಿ ಬಿಕ್ಕಿ ಅಳತೊಡಗಿದರು.

ಎರಡು ದಿನಗಳಿಂದ ಅನ್ನ ನೀರು ಬಿತ್ತ ಸಲ್ಲೇಖನ ವ್ರತ ಸ್ವೀಕರಿಸಿದವರಂತಿದ್ದ ಶಾಸ್ತ್ರಿಗಳಿಗೆ ಕೋಪ ನೆತ್ತಿಗೇರಿಬಿಟ್ಟಿತು. ಎರಡನೆ ಊಟಕ್ಕೆ ಎಂದೂ ಶ್ರೀಕಾರ ಹೇಳಿದವರಲ್ಲ. ತಂದೆ ವೈಕುಂಟವಾಸಿಗಳಾಗಿರುವುದೊಂದು ಸಿಟ್ಟು, ಪಿತಾಶ್ರೀ ತಮ್ಮ ಕಳೆಬರವನ್ನು ಆಕಾಶಮಾರ್ಗವಾಗಿ ಕಾಶಿಗೆ ಒಯ್ದಿರುವುದೊಂದು ಸಿಟ್ಟು, ಶ್ರೇಷ್ಟಿಗಳು ಹಣದ ಹಸ್ತ ಚಾಚದೆ ನಾಪತ್ತೆಯಾಗಿರುವುದೊಂದು ಸಿಟ್ಟು, ಏ ಎಲ್ಲಾ ಸಿಟ್ಟುಗಳಿಗೆ ಕಿರೀಟಪ್ರಾಯವಾಗಿ ಈ ಸಿದ್ದಾಂತ ಶಿಖಾಮಣಿ ಗುಂಡಾಭಟ್ಟರು ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಮಾತನಾಡುತ್ತಿರುವುದು. ಭಟ್ಟ ನೋಡಲಿಕ್ಕೆ ಕುಳ್ಳಕಿದ್ದರೂ ಸದ್ವಿನಯಶಾಲಿ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ಹೇಳೋದು ಹೇಳಿಬಿಡಬಾರದೆ? ಅಪ್ರಿಯ ಸಂಗತಿ ಕೇಳಿ ಶಾಪ ಕೊಡಲು ತಾನೇನು ಅಗಸ್ಥ್ಯ ಮಹರ್ಷಿಯೇ?
“ಲಕ್ವ ಬಡಿಡವರ ಹಾಗೆ ಮಾತಾಡ್ತೀಯಲ್ಲ ಭಟ್ಟ, ಅದೇನು ಒಡೆದು ಹೇಳಬಾರದೆ?” ಶಾಸ್ತ್ರಿಗಳ ಜಠರ ಲೋಕ ತಳಮಳಿಸಿತು.

ಯಾವ ನಾಲಿಗೆಯಲ್ಲಿ ಹೇಳಲಿ ಶಾಸ್ತ್ರಿಗಳೇ, ನಿಮ್ಮಿಂದ ರುದ್ರ ಚಮಕ ಕಲಿತೋನು ನಾನು” ಭಟ್ಟ ಉಗುಳು ನುಂಗಿ ಮುಂದುವರೆದು ಹೇಳಿದ. “ನಿಮ್ಮ ಪರಮಪೂಜ್ಯ ತಂದೆಯವರ ದೇಹ ಬಸವನ ಬಾವಿ ತೆಗ್ಗಿನಲ್ಲಿ ಅನಾಥವಾಗಿ ಬಿದ್ದಿದೆ. ಅಯ್ಯೋ… ಯಾವುದನ್ನು ಹೇಳಬಾರದೆಂದು ನಿರ್ಧರಿಸಿದ್ದೇನೋ ಅದೇ ಹೇಳಿಬಿಟ್ಟೆನಲ್ಲಾ? ನಾಲಿಗೆ ಮೈಲಿಗೆಯಾಗಿ ಬಿಟ್ಟಿತಲ್ಲಾ… ಅಯ್ಯೋ…. ನನ್ನಂಥ ಪಾಪಿ ಇದ್ದರೆಷ್ಟು, ಬಿದ್ದು ಹೋದರೆಷ್ಟು” ವಾಯು

ಪ್ರಕೋಪಪಿತ್ತ ಇತ್ಯಾದಿ ಕೆರಳಿ ಜೋರಾಗಿ ಅಳತೊಡಗಿದರು.
ಬಸ್ಸಿಗಾಗಿ ಕಾದಿದ್ದ ಜನ ಅವರ ಸುತ್ತ ನೆರೆದು ಏನು ಎಂಥ ವಿಚಾರಿಸತೊಡಗಿದರು. ಅವರೆಲ್ಲರಿಗು ಸಹಾಯಮಾಡಬೇಕೆಂಬಾಸೆ!
ಶಾಸ್ತ್ರಿಗಳು ಅದನ್ನು ಕೇಳಿ ’ಅಯ್ಯೋ’ ಎಂದು ಮೂರ್ಛೆ ಹೋದರು. ಅವರು ಮೂರ್ಛೆ ಹೋದದ್ದು ಅದೇ ಪ್ರಥಮ. ಸಾವಿರದೊಂದು ಗಾಯತಿ ಜಪಿಸಿ ಅರಿಷಡ್ವರ್ಗಗಳ ಮೂಗಿಗೆ ಇಚ್ಛಾಶಕ್ತಿಯ ಮೂಗುದಾರ ಹಾಕಿದಂತವರು, ಪ್ರಾತಃ ಪೂರ್ವದಲ್ಲಿ ಅರ್ಧ ತಾಸು ಶಾಸ್ತ್ರೊಕ್ತ ಪ್ರಾಣಾಯಾಮ ಮಾಡಿ ದೇಹವನ್ನು ಸುಸ್ಥಿತಿಯಲ್ಲಿ ಇಟ್ಟುಕೊಂದಿದ್ದಂಥವರು. ತಾವು ನುಡಿದಂತೆಯೇ ನಡೆಯುತ್ತೇವೆ ಎಂದು ಅವರು ಆಗಾಗ್ಗೆ ಹೇಳುತ್ತಿದ್ದವರು, ಅಂಥವರೇ ಮೂರ್ಛೆ ಹೋದರೆಂದರೇನು? ಕಾಲಮಹಿಮೆ ವರ್ಣಿಸದಳ.

ನೂರಾರು ಜನ ನೂರಾರು ದಿಕ್ಕಿಗೆ ಚದುರಿದರು. ಚರಕ ಸುಶ್ರುತರನ್ನು ಹುಡುಕಿ ಕರೆ ತರಲು ಆ ಗ್ರಾಮದ ಅಸ್ವಿನಿ ಕುಮಾರರು, ಚರಕರು, ಸುಶ್ರುತರು ಅನೇಕ ವಿಧವಾದ ಮನರಂಜನೆಯಲ್ಲಿ ಮಗ್ನರಾಗಿದ್ದರು. ಆ ಗ್ರಮಕ್ಕೆ ಹೊಸದಾಗಿ ವೈನ್ ಶಾಪು ಬಂದಿದ್ದೂ ಒಂದು ಕಾರಣ.

ಕೊನೆಗೆ ಕುರುಬರ ಸೋಮಣ್ಣ ಎಂಬ ಏಳೆಂಪಿ ಸಿಕ್ಕ. ದಿಬ್ಬನ ಸುಪುತ್ರ ಕೊತ್ರಗೆ ಇಲಾಜು ಮಾಡಿ ’ಕೊತ್ರ ಹೈಸ್ಕೂಲಿಗೆ ಸೇರಿದ್ದು’ ಎಂಬ ಕದಂಬರಿಯಲ್ಲಿ ಸೇರ್ಪಡೆಯಾಗಿ ಹೆಸರಾಗಿದ್ದಂಥವನು. ಸದಾ ಕುಡಿದವರಂತಿರುತ್ತಿದ್ದ ಅವನು ಕುಡುಕನಾಗಿರಲ್ಲಿಲ್ಲ.

ಹತ್ತಾರು ಮರಣಾಂತಿಕ ಜಾಡ್ಯಗಳಿಗೆ ಆತ ತನ್ನ ದೇಹವನ್ನು ಲೀಜ್ ಕೊಟ್ಟಿದ್ದಾನೆ ಎಂಬಂತೆ ಹೊರನೋಟಕ್ಕೆ ಗೋಚರವಾಗುತ್ತಿದ್ದರೂ ಆತ ಹಂಡ್ರೆಡ್ ಪರ್ಸೆಂಟ್ ಆರೋಗ್ಯವಂತನಾಗಿಯೇ ಇದ್ದ.

ಡಾ|ಸೋಮಣ್ಣ ತಾನು ಶೂದ್ರಾದಿ ಶೂದ್ರ ಎಂಬ ಕಾರಣಕ್ಕೆ ಶಾಸ್ತ್ರಿಗಳ ಪವಿತ್ರ ಬಾಡಿ ಮುಟ್ಟಲು ಹೆದರಿದ. ಎಲ್ಲಿ ಸುಟ್ಟು ಭಸ್ಮವಾಗಿ ಬಿಡುವೆನೋ ಎಂಬ ಕಾರಣದಿಂದ ಮುಟ್ಟಿ ಮುಟ್ಟಿ ನೋಡದೆ ಕೊನೆಗೂ ಮುತ್ತಿದನು. ಇದಕ್ಕೆ ಮಾತ್ರೆಗಳಗಾಲೀ ಸೂಜಿಗಳಗಲೀ ಬೇಡವೆಂದು ಕೊಂಡನು. ಅಳೋಪಥಿಯನು ಅವರ ದೇಹದೊಳಗಡೆ ಅಲೋ ಮಾಡಿ ನರಕಪ್ರಾಪ್ತಿ ಮಾಡಿಕೊಳ್ಳುವುದಾದರೂ ಯಾಕೆ?

ತನ್ನ ಸೊಂಟದ ಗಂತಿನಿಂದ ನಶ್ಶೆ ದಬ್ಬಿ ತೆಗೆದನು. ಒಂದು ಚಿಟಿಕೆ ನಶ್ಶೆಯನ್ನು ಆ ಶಾಸ್ತ್ರಿಗಳ ದವಳಕಾಂತಿ ಮೂಗಿನ ಹೊಳ್ಳೆಗಳೊಳಭಿತ್ತಿಗೆ ನಯವಾಗಿ ಲೇಪಿಸಿದನು.
ಅದರ ಘಾಟು ಕುಂದಲಿನೀ ಕೇಂದ್ರ ತಲುಪಿದೊಡನೆ ಶಾಸ್ತ್ರಿಗಳು ದಿಗ್ಗನೆ ಎದ್ದು ಕೂತು ’ತಂದೆಯೇ’ ಎಂದು ಹಲುಬಿದರು.
ಪಂಚಭೂತಗಳನ್ನು ಕಾಲುಗಳಿಗೆ ತಂದುಕೊಂಡು ಬಸವನ ಬಾವಿ ತಗ್ಗಿನ ಕಡೆ ಓಡತೊಡಗಿದರು. ಶಾಸ್ತ್ರಿಗಳಿಗೂ ಓಡಲು ಬರುತ್ತದೆ ಎನ್ನುವುದು ಜನರು ಕಂಡುಕೊಂಡ ವಿಶೇಷ ಅವರೂ ಅವರ ಹಿಂದೆ ಓಡತೊಡಗಿದರು.

ಕ್ಷಣಾರ್ಧದಲ್ಲಿ ಇತಿಹಾಸ ಪ್ರಸಿದ್ದ ಬಸವನ ಬಾವಿ ತಲುಪಿದರು. ಅಷ್ಟು ಹೊತ್ತಿಗಾಗಲೇ ಜನರ ಪ್ರವಾಹ ಅಲ್ಲಿ ನೆರೆದಿತ್ತು. ಅವರಲ್ಲಿ ಹಲವರು ವಿವಿದ ದರ್ಜೆಯ ಸರಕಾರಿ ಅಧಿಕಾರಿಗಳಿದ್ದರು. ಅವರೆಲ್ಲ ಲಂಚ ಹೊಡೆಯುವುದರಲ್ಲಿ, ಭ್ರಷ್ಠಾಚಾರ ಮಾಡುವುದರಲ್ಲಿ ಪ್ರಖ್ಯಾತರಾಗಿದ್ದರು. ಚರಾಸ್ತಿ, ಸ್ಥಿರಾಸ್ರಿ ಸಾಕಷ್ಟಿದ್ದರೂ ಪಾಪ ಪ್ರಜ್ಞೆಯಿಂದ ನರಳುತ್ತಿದ್ದರು. ಗತಿಸಿದ ಶಾಸ್ತ್ರಿಗಳನ್ನು ಮನೆಗೆ ಕರೆಸಿಕೋ\ಒಂಡು ವಾರಕ್ಕೊಂದೆರಡದರೂ ವ್ರತೋಪಾಸನೆಗಳನ್ನು ಮಾಡಿ ರಿಯಾಯಿತಿ ಪಡೆದುಕೊಳ್ಳುತ್ತಿದ್ದರು.

ಅವರೆಲ್ಲರಿಗೆ ಶಾಸ್ತ್ರಿಗಳ ದೇಹ ತಿಪ್ಪೆಯ ಮೇಲೆ ಬಿದ್ದಿರುವುದು ದುಃಖದಾಯಕವಾಗಿತ್ತು/ ಅದೆಲ್ಲಕ್ಕಿಂತ ದುಃಖದ ಸಂಗತಿ ಎಂದರೆ ಶಾಸ್ತ್ರಿಗಳ ತಲೆಯಮೇಲೆ ಕಾಗೆಯೊಂದು ಕೂತು ಅವರ ಜುಟ್ಟನ್ನು ಮೂಸಿ ನೋಡುತ್ತಿದ್ದುದು. ಅದೆಲ್ಲಕ್ಕಿಂತ ಮತ್ತಷ್ಟು ದುಃಖಕರ ಸಂಗತಿ ಎಂದರೆ ಯಾರೋ ದುರುಳರು ಶಾಸ್ತ್ರಿಗಳ ಮುಂಗೈಯನ್ನೇ ತುಂಡರಿಸಿ ಗಂಟ್ವುಳ್ಳ ಚಿನ್ನದ ಕಡಗವನ್ನು ಅಪರರಿಸಿದ್ದರು.

ಇದು ಕುಟುಂಬದ ದೊಡ್ಡ ದುರಂತವೇ ಸರಿ. ಚಿನ್ನದ ಆಸೆಗೆ ದುರುಳರು ಪವಿತ್ರ ದೇಹವನ್ನೇ ಅಪಹರಿಸಿದರಲ್ಲ? ಸಮಾಜಕ್ಕೆ ಕಾದಿರುವ ದುರಂತಗಳಿಗೆ ಇದು ಪಾರ್ವಭಾವಿ ಮುನ್ಸೂಚನೆ ಮಾತ್ರ.

ಈ ಭೀಕರ ದೃಷ್ಯ ನೋಡಿ ಕಣ್ಣಲ್ಲಿ ನೀರು ಹಾಕಿಕೊಳ್ಳದವರೇ ಇಲ್ಲ. ಸಕಲ ಜೀವಾತ್ಮರಿಗೆ ಲೇಸನ್ನೇ ಬಯಸುತ್ತಿದ್ದ ಶಾಸ್ತ್ರಿಗಳು ಸಾವಿನ ನಂತರ ಇಂತಹ ದುರಂತಕ್ಕೆ ತುತ್ತಾಗುವುದೆಂದರೇನು?

ಎಲ್ಲರೂ ಮಮ್ಮಲನೆ ಮರುಗಿದರು. ಪರಮೇಶ್ವರ ಶಾಸ್ತ್ರಿಗಳನ್ನು ದುಃಖದ ಕಡಲಿನಿಂದ ಹೊರ ತೆಗೆದರು. ಮುಂದಿನ ಕಾರ್ಯಕ್ರಮ ಸುಗಮವಾಗಿ ಜರುಗಿಸುವಂತೆ ಸಲಹೆ ಸೂಚನೆ ನೀಡಿದರು.

ಅಂಗೈ ವಿಹೀನ ಕಳೆಬರಕ್ಕೆ ಅಗ್ನಿ ಸಂಸ್ಕಾರ ಮಾಡುವುದಾದರೂ ಹೇಗೆ?
ತಮ್ಮ ತಂದೆಯ ಯಜ್ಞದಲ್ಲಿ ದೇಹತ್ಯಾಗ ಮಾಡಿದ ದಾಕ್ಷಾಯಣಿಗೂ ಇಂಥದೇ ಗತಿಯಾಯಿತು. ಬೆಂಕಿಯಲ್ಲಿ ಬೆಂದ ಪತ್ನಿಯ ಕಳೇಬರವನ್ನು ಹೊತ್ತುಕೊಂಡು ಸಾಕ್ಷಾತ್ ಪರಮೇಶ್ವರನೇ ಹುಚ್ಚನಂತೆ ಅಲೆದ. ದಾಕ್ಷಾಯಣಿಯ
ಆಂಗೋಪಾಂಗಗಳೆಲ್ಲ ಎಲ್ಲೆಲ್ಲೋ ಉದುರಿ ಹೋಗಿಬಿಟ್ಟವು. ಅಗ್ನಿ ಸಂಸ್ಕಾರ ಮಾಡಬೇಕೆಂದರೆ ಆಕೆತ ಕೆಲವು ಉಪಾಂಗಗಳು ದೊರಕಲಿಲ್ಲ. ಆದ್ದರಿಂದ ಆಕೆಗೆ ಪುನರ್ಜನ್ಮ ಪ್ರಾಪ್ತವಾಯಿತು.

ಈ ಕಾರಣಕ್ಕಾಗಿ ಬಹಳ ಜನ ಬಹಳ ಹೊತ್ತಿಗೆ ತುಂಡರಿಸಿದ್ದ ಮುಂಗೈಗಾಗಿ ಹುಡುಕೀ ಹುಡುಕೀ ಸುಸ್ತಾದರು. ಮುಂಗೈ ಸಿಕ್ಕದಿದ್ದರೆ ಕುರುಬರ ಸೋಮಣ್ಣನ ಕೂಡ ಬಂದೋಬಸ್ತು ಹೋಲಿಸಿ ಅಗ್ನಿಗಾಹುತಿ ಕೊಡುವುದಿತ್ತು. ತಮ್ಮ ಪೂಜ್ಯ ಪಿತಾಶ್ರೀ ಪುನರ್ಜನ್ಮ ಪಡೆದರೆ ಖಂಡಿತ ಕಲಿಕಾಲ ಸಹಿಸಲಾರರು. ಅಹರ್ನಿಶಿ ಸನಾತನ ಧರ್ಮ ಪ್ರತಿಷ್ಠಾಪನೆಗೆ ಹೋರಾಡದೆ ಇರಲಾರರು? ಎಂದೆಲ್ಲ ಯೊಚಿಸಿದರು ಜೂ. ಶಾಸ್ತ್ರಿಗಳು.

ಮುಂದೊದು ದಿನ ತಮ್ಮ ಧರ್ಮಪತ್ನಿ ಮತ್ತೊಂದು ಗಂಡು ಮಗುವಿಗೆ ಜನ್ಮ ನೀಡುವಳೆಂದು ತಿಳಿದರು. ಆದರೆ ಅವರ ನಿರೀಕ್ಷೆಯಂತೆ ಆಕೆ ಗರ್ಭ ದರಿಸಿದ್ದೇನೋ ನಿಜ. ಆಗರ್ಭಕ್ಕೆ ಒಂಬತ್ತು ತಿಂಗಳು ತುಂಬಿದ್ದೇನೋ ನಿಜ. ಆದರೆ ಆ ಮಗು ಯೋನಿ ಮಾರ್ಗಕ್ಕೆ ಕಾಲು ತೂರಿಸಿ ಹೆರಿಗೆಗೆ ತುಂಬ ತೊಂದರೆ ಕೊಟ್ಟಿತು. ತಾನೂ ಸತ್ತುದಲ್ಲದೆ ತನ್ನ ತಾಯಿಯನ್ನೂ ಬಲಿ ತೆಗೆದುಕೊಂಡಿತು. ಅಲ್ಲಿಯವರೆ ತಾವು ಅಕಾಲ ಮರಣಕ್ಕೆ ತುತ್ತಾಗದ್ದಿದ್ದಲ್ಲಿ ತಮ್ಮ ಜೇಷ್ಠ ಪುತ್ರ ಸಕಲ ಕಲಾಪಾರಂಗತನಾಗಿ ದೊಡ್ಡವನಾದಲ್ಲಿ ಅವನಿಗೆ ಯುಕ್ತ ವಯಸ್ಸಿನಲ್ಲಿ ಕಂಕಣ ಬಲ ಕೂಡಿ ಬಂದಲ್ಲಿ, ಆತನ ಧರ್ಮ ಪತ್ನಿ ಗಂಡು ಮಗುವಿಗೆ ಜನ್ಮ ನೀಡಿದ್ದಲ್ಲಿ, ತಮ್ಮ ತಂದೆಯವರ ಹೆಸರು ಇಡಬೇಕು ಎಂದು ನಿಶ್ಚಯಿಸಿದರು.

ಮಗ ಎಂದರೆ ಮಗನೇ ಸರಿ. ಎಂಥ ಕತೃತ್ವಶಾಲಿ ಅವನು. ಸಂಸಾರ ಮಾಡಿದ ತಿಂಗಳೋಪ್ಪತ್ತಿನಲ್ಲಿ ಗಂಡು ಮಗುವಿಗೆ ಬೀಜ ಬಿತ್ತಿಬಿತ್ತಿದ್ದನಲ್ಲ? ಪ್ರಸ್ಥದ ಮೊದಲನೆ ದಿನ ಆತನ

ಹೆಂಡತಿ ತುಂಬಾ ರಂಪಾಟ ಮಾಡಬಹುದೆಂದು ಎಲ್ಲರು ಭಾವಿಸಿದ್ದರು. ಚಿಲಕ ಹಾಕಿಕೊಳ್ಳುತ್ತಲೇ ಆಕೆ ಲಬೋ ಲಬೋ ಬಾಯಿ ಬಡಿದುಕೊಂಡಿದ್ದೇನೋ ನಿಜ. ನೋವು ನೋವು ಎಮ್ದು ಕಿರುಚಾಡಿದ್ದೂ ನಿಜ. ಆದರೆ ಮಿಲಿಟರಿ ಹ್ಯಾಂಡು ಅಶ್ವಥ್ ನಾರಾಯಣ ಅದಕ್ಕೆ ಸೊಪ್ಪು ಹಾಕಿದ್ದಲ್ಲಿ ಇಂಥದ್ದೊಂದು ಹೊಟ್ಟೆಯ ಮಾಣಿಕ್ಯದ ಹರಳು ಉದುರಿ ಬೀಳುತ್ತಿತ್ತೇನು ಈ ಧರೆಗೆ.

ಸುತ್ತು ನಾಲ್ಕು ಕಡೆಯ ಬೀಗರು ಬಿಜ್ಜರನ್ನು ಕರೆಯಿಸಿ, ಜೊತೆಗೆ ವೇದಪಾರಾಯಣ ಮಾಡಿದವರನ್ನು, ಗಂಗಾದಿ ನದಿ ತೀರ್ಥಗಳಲ್ಲಿ ಸ್ನಾನ ಮಾಡಿ ಫಲ ಪಡೆದವರನ್ನು; ಕೃಚ್ಛಾದಿ ತಪಸ್ಸಿನ ಫಲ ಪದೆದವರನ್ನು ಕರೆಸಿದರು. ನೂರಾರು ತಾಮ್ರದ ತಂಬಿಕೆಗಳು ಕಡಿಮೆ ಬೆಳಕನ್ನು ಹೆಚ್ಚಿಗೆ ಪ್ರತಿಫಲಿಸಿದವು. ಮನೆ ತುಂಬ ಬಾಲಂಗೋಚಿಗಳು ವಿಶೇಷ ಶೋಭೆ ನೀಡಿದವು. ಆ ಶೋಭೆ ಪರಮಾರ್ಥಕ್ಕೆ ಸಮಾನನಾಗಿದ್ದಿತು.

ತಾವು ಸತ್ಯನಾರಾಯಣ ವ್ರತ ಮಾಡಿಸಿದಂಥ ಎಲ್ಲ ಶ್ರೀಮಂತರ ಸಹಾಯ ಪಡೆದು ಚಿರೋಟಿ, ಪಾಯಸ, ಬಾಳೆಕಾಯಿ ಬಾಳಕ, ಕೋಸುಂಬರಿ, ಪುಳಿಯೋಗರೆ, ಘಮಘಮ ಆಂಧ್ರ ಶೈಲಿಯ ’ರಸಂ’ ತನ್ನ ಪರಿಮಳವನ್ನು ಇಡೀ ಓಣಿಗೆ ಬೀರಿತ್ತು.
ವೇದಪುರಾಣ ಅರಗಿಸಿಕೊಂಡವರೆಲ್ಲ ಭಕ್ಷ್ಯ ಭೋಜ್ಯಗಳನ್ನು ಲಗಾಯಿಸುತ್ತ ಕಂಠಪೂರ್ತಿ ಹೊಗಳಿದ್ದೇ ಹೊಗಳಿದ್ದು.
ತಾಂಬೂಲ ಮೆಲ್ಲುವಾಗ್ಗೆ ಶಾಸ್ರಿಗಳ ಮೊಮ್ಮಗನ ಜನ್ಮ ನಕ್ಷತ್ರವನ್ನು ಹೊಗಳಿದ್ದೇ ಹೊಗಳಿದ್ದು. ಪ್ರಧಾನ ಮಂತ್ರಿಗಳಂಥವರಿಗೆ ಕುಟುಂಬದ ಪುರೋಹಿತನಾಗುವನೆಂದು ಒಬ್ಬರು ಹೇಳಿದರು ಮತ್ತೊಬ್ಬರು ವ್ಯಾಕರಣದ ವಿಷಯದಲ್ಲಿ ಪಾಣಿನಿಯನ್ನೇ ಮೀರಿಸುವನೆಂದು ಹೇಳಿದರು. ಮಗದೊಬ್ಬರು ಅಮೇರಿಕದ ಅಧ್ಯಕ್ಷರಂಥವರಿಗೆ ಅಷ್ಟಾಂಗಯೋಗ, ಪ್ರಾಣಾಯಾಮ ಮುಂತಾದಯೋಗಗಳನ್ನು ಅಭ್ಯಾಸ ಮಾಡಿಸಿ ದೇಶಕ್ಕೆ ಕೀರ್ತಿ ತರುವನೆಂದು ಹೇಳಿದರು. ಹೀಗೆ ಒಬ್ಬೊಬ್ಬ ಮಾರ್ತಾಂಡರು ಒಂದೊಂದು ನುಡಿದು ಪರಮೇಶ್ವರ ಶಾಸ್ತ್ರಿಗಳನ್ನು ಸಂತೃಪ್ತಿಗೋಳಿಸಿದರು.

ಎಲ್ಲರನ್ನು ಕಾಡಿದ್ದು ಒಂದೇ ಒಂದು ಪ್ರಶ್ನೆ. ದೇಶ ಸೇವೆಯೇ ಈಶನ ಸೇವೆ ಎಂದು ಭಾವಿಸಿರುವ ಶಾಸ್ತ್ರಿಗಳ ಮಗ ಅಶ್ವಥ್ ನಾರಾಯಣ ತನ್ನ ಮಗನ ನಾಮಕರಣಕ್ಕಾಗಿ ಬರಬಹುದಿತ್ತಲ್ಲ?

ಎಲ್ಲ ಸನಾತನಿಗಳನ್ನು ಕಾಡಿದ ಮತ್ತೊಂದು ಪ್ರಶ್ನೆ ಎಂದರೆ, ಸೇನೆಯಲ್ಲಿರುವ ಮಗ ಸರಿಯಾಗಿ ಸಂಧ್ಯಾವಂದನೆ ಮಾಡಿಕೊಳ್ಳುತ್ತಿರುವನೆ? ಮದ್ಯ ಅಮೇಧ್ಯದಿಂದ ದೂರ ಇರುವನೆ? ದೂರವಿದ್ದರೆ ಎಷ್ಟು ದೂರ ಇರುತ್ತಾನೆ, ಪರಸ್ತ್ರೀಯರನ್ನು ಅಕ್ಕ ತಂಗಿಯರಂತೆ ಭಾವಿಸುವಷ್ಟು ಮನೋದಾರ್ಡ್ಯ ಪಡೆದಿರುವನೇ?
ಪರಮೇಶ್ವರ ಶಾಸ್ತ್ರಿಗಳಿಗೆ ಸಾಕು ಸಾಕಾಗಿ ಹೋಯಿತು ಉತ್ತರ ಕೊಟ್ಟು ಕೊಟ್ಟು.
ಅವರವರ ಘನತೆ ಗಾಂಭೀರ್ಯಕ್ಕೆ ತಕ್ಕಂತೆ ಮಾನ ಮರ್ಯಾದೆ ಮಾಡಿ ಅವರನ್ನು ಅವರವರ ಅಗ್ರಹಾರಗಳಿಗೆ ಸಾಗುಹಾಕಿದರು.
ಮೊಮ್ಮಗನ ಕಿವಿಗೆ ಸದಾ ಸಂಸ್ಕೃತ ಶ್ಲೋಕಗಳೇ ಬೀಳುತ್ತಿರಬೇಕೆಂದು ಮನೆಯಲ್ಲಿ ಎಲ್ಲರಿಗೆ ಹೇಳಿದರು. ವಿಷ್ಣು ಸಹಸ್ರನಾಮ ಹೇಳುವಾಗಲಂತೂ ಮಗು ಇಷ್ಟಗಲ ಬಾಯಿ ತೆರೆಯುತ್ತಿತ್ತು. ರಾಮನಾಮ ಸ್ಮರಣೆ ಕಿವಿಗೆ ಬಿದ್ದಾಗಂತೂ ಅದರ ಮುಖ ಗಾಂಭೀರ್ಯದಿಂದ ಹೊಳೆಯುತ್ತಿತ್ತು.

ತಮ್ಮ ಮೊಮ್ಮಗ ಯುಕ್ತ ವಯಸ್ಸು ತಲುಪುವ ಹೊತ್ತಿಗೆ ನಾಲ್ಕು ವೇದಗಳ ಪೈಕಿ ಮೂರು ವೇದಗಳನ್ನಾದರೂ ಕರತಲಾಮಲಕ ಮಾಡಿಕೊಳ್ಳುತ್ತಾನೆಂದು ಬಗೆದರು. ತಮ್ಮ ಪ್ರತಿಯೊಂದು

ವೈದಿಕ ವಿಧಿಗಳೊಂದಿಗೆ ಮೊಮ್ಮಗನನ್ನು ಕುಳ್ಳರಿಸಿಕೊಳ್ಳುತ್ತಿದ್ದರು.

ಮೊಮ್ಮಗನ ಕಾಳಜಿಯೊಂದಿಗೆ ಸೊಸೆಯ ಪಾವಿತ್ರ್ಯದ ಬಗೆಗೂ ಹೆಚ್ಚು ಗಮನ ಹರಿಸಬೇಕಾಯಿತು ಶಾಸ್ತ್ರಿಗಳಿಗೆ. ಆಕೆ ಯಾಕೆ ಹಗಲೆಲ್ಲ ತೂಕಡಿಸುತ್ತಿದ್ದಳೆಂದರೆ ಆಕೆ ಇಡೀ ರಾತ್ರಿ ನಿದ್ರಾ ನಡಿಗೆ ಮಾಡುತ್ತಿದ್ದಳು. ಅಡಿಗೆ ಮನೆಯನ್ನು ಬಾತ್ರೂಮ್ ಎಂದು ತಿಳಿದುಕೊಳ್ಳುತ್ತಿದ್ದಳು. ಬೆಡ್ರೂಮನ್ನು ಕಿಚನ್ ರೂಮೆಂದು ತಿಳಿದುಕೊಳ್ಳುತ್ತಿದ್ದಳು. ಅಡಿಗೆ ಮಾಡುವಾಗಲೂ ಅಷ್ಟೇ ಸಕ್ಕರೆಯನ್ನು ಉಪ್ಪೆಂದು ಭಾವಿಸುತ್ತಿದ್ದಳು. ಉಪ್ಪನ್ನು ಸಕ್ಕರೆ ಎಂದು ಭಾವಿಸುತ್ತಿದ್ದಳು.

ಸೊಸೆಯ ಈ ವರ್ತನೆ ಶಾಸ್ತ್ರಿಗಳಿಗೆ ವಿಚಿತ್ರವೆನ್ನಿಸಿತು. ಇನ್ನೊಂದು ಅವರಿಗೆ ಅಘಾತಕಾರಿ ಎಂದು ಕಂಡ ಬಂದ ಸಂಗತಿ ಎಂದರೆ, ಒಂದೊಂದು ರಾತ್ರಿ ಆಕೆ ಅವರ ಮಗ್ಗುಲು ಬಂದು ಮಲಗಿಕೊಳ್ಳುತ್ತಿದ್ದುದು. ತಮ್ಮ ಪೃಷ್ಠಭಾಗದ ಮೇಲೆ ಆಕೆ ದಪ್ಪನೆಯ ಕಾಲು ಹೇರಿದಾಗಲೇ ಅವರಿಗೆ ಗೊತ್ತಾಗುತ್ತಿದ್ದುದು.ಈ ಸೊಸೆಯ ಈ ತೆರನ ವಿಚಿತ್ರ ನದವಳಿಕೆಯನ್ನು ಹೇಗೆ ರಿಪೇರಿ ಮಾಡೋದು ಎಂಬ ಚಿಂತೆ ಕಾಡತೊಡಗಿತ್ತು. ಬೇಕಾಗಿಯೇ ಈ ರೀತಿ ಆಕೆ ವರ್ತಿಸುತ್ತಿರಲಿಲ್ಲ. ಆಕೆಯೊಳಗಿನ ಅದು ಹೀಗೆ ಮಾಡಿಸುತ್ತಿತ್ತು.

ಆಕೆ ಸರಿಯಾಗಿ ಗಂಡನ ಮುಖ ನೋಡಿರಲಿಲ್ಲ. ಮದುವೆಯ ಆ ಮೊದಲ ದಿನಗಳಲ್ಲಿ ಎಲ್ಲಾ ನೋಡೊದು ಎಲ್ಲಿ ಸಾಧ್ಯ? ನೋಡೊದು ಎಲ್ಲಿ ಸಾಧ್ಯ? ನೋಡೋದು ನೋಡಿಕೊಂಡರೆ ಸಾಕಾಗಿರುತ್ತದೆ. ಗಂಡನ ಮುಖವನ್ನು ಆಕೆ ನೋಡಲು ಪ್ರಯತ್ನಿಸಿದ್ದುಂಟು. ಅದಕ್ಕೆ ಆ ಮಿಲಿಟರಿ ಹ್ಯಾಟ್ ಆಸ್ಪದ ಕೊಟ್ಟಿರಲ್ಲಿಲ್ಲ.

ಎಂಟೊಂಬತ್ತು ಮಕ್ಕಳಗುವವರೆಗೆ ಗಂಡನ ನೆರಳಿನಂತೆ ಇರಬೇಕೆಂದು ಆಕೆ ವಿವಾಹ ಪೂರ್ವದಲ್ಲಿ ಅಂದರೆ ಕನ್ಯೆಯಾಗಿದ್ದಾಗ ಅಂದುಕೊಂಡಿದ್ದುಂಟು. ಮದುವೆನೋ ಆಯಿತು. ಮೈಕೈತುಂಬಿಕೊಂಡು ಬಲಿಷ್ಠವಾಗಿದ್ದ. ನಿರೀಕ್ಷೆ ಮೀರಿ ಹಿಂಡಿ ಹಿಪ್ಪಿ ಮಾಡಿದ್ದ. ಹಿಡಿದು ಅಮುಕಿ ಬಿಟ್ಟನೆಂದರೆ ಮೈ ಲಟಲಟ ಎಂದು ಬಿಡಬೇಕು. ದಿನದ ಇಪ್ಪತ್ನಾಕು ತಾಸೂ ಅನೇಕ ಆಟ‌ಆಡಿಸಿ ಬಿಟ್ಟ. ರೋಮಾಂಚನದ ತರಂಗಗಳನ್ನೆಬ್ಬಿಸಿ ಬಿಟ್ಟ. ಅಂಗೋಪಾಂಗಗಳನ್ನು ಪುಳಕಗೊಳಿಸಿಬಿಟ್ಟ.

ಇದು ಹೀಗೆ ಮುಂದುವರಿಯುತ್ತದೆ ಎಂದು ಆಕೆ ಭಾವಿಸಿದ್ದಳು. ಆದರೆ ಯಾವುದೋ ತಂತಿ ಬಂತೂಂತ ಇದ್ದಕಿದ್ದಂತೆ ಹೊರಟು ಹೋಗಿ ಬಿಡುವುದೇನು? ಜುಟ್ಟು ಇಲ್ಲದೆ ನೀಟಾದ ಕ್ರಾಪು ಬಿಟ್ಟಿದ್ದ ಅವನು ತನ್ನಿಂದ ಶಿರಸಾಷ್ಠಾಂಗ ಪ್ರಣಾಮವನ್ನಾದರೂ ಮಾಡಿಸಿಕೊಳ್ಳಲ್ಲಿಲ್ಲವಲ್ಲ? ಬಸ್ ನಿಲ್ದಾಣದವರೆಗೆ ತನಗೆ ಬಂದು ಕಳಿಸಿಕೊಡಲು ಹೇಳಿದ. ಆದರೆ ಲಜ್ಜೆ ಬಿಟ್ಟು ಹೇಗೆ ಹೋಗುವುದು? ಜನ ಏನೆಂದುಕೊಂಡರು? ಶ್ರಾದ್ಧಕ್ಕೋ, ತಿಥಿಗೋ, ಮದುವೆಗೋ ಆದರೆ ಹೋಗಬಹುದು? ಅದೂ ಪ್ಯಾಂಟು ಹಾಕಿಕೊಂಡು ಟ್ರಿಮ್ ಆಗಿರೋ ಗಂಡನ ಜೊತೆ, ಓಣಿ ಗಂಡಸರು ತನ್ನ ಕಡೆ ಆಸೆಯಿಂದ ನೋಡದೆ ಇದ್ದಾರೇನು? ಆಕೆ ಸುತರಾಂ ಹೋಗಲ್ಲಿಲ್ಲ. ಬಿಲ್‌ಕುಲ್ ನಿರಾಕರಿಸಿಬಿಟ್ಟಳು. ದುರ್ದಾನ ತೆಗೆದುಕೊಂಡವನಂತೆ ಗಂಡ ಹೋಗಿಬಿಟ್ಟ. ಮಹಾಭಾರತ, ರಾಮಾಯಣ ನಡೆದ ನಾಡಿನ ಆಚೆಕಡೆ.

ಹೋಗಿ ತಿಂಗಳಾದವು. ಗಂಡನಿಂದ ಉಭಂ ಇಲ್ಲ, ದಿಡೀರನೆ ಒಂದು ಗಂಡು ಮಗು ಹೆತ್ತು ಕೊಟ್ತಿದ್ದಕ್ಕೂ ಸಂತೋಷ ಪಡೋದು ಬೇಡವೇನು…. ಬಂದು ನೋಡೋದು ಬೇಡವೇನು? ಒಂದೇ ಒಂದು ಪತ್ರ ಬರೆಯೋದು ಬೇಡವೇನು?

ವೈಕುಂಠ ಏಕಾದಶಿಗೆ ಕರೆಯಲು ಬಂದಿದ್ದ ತಂದೆಗು ದುಃಖ ಹೇಳಿಕೋಂಡಳು. ಅದಕ್ಕೆ ಆತ ನಿನ್ನ ಗಂಡ ಸಾಮಾನ್ಯ ಕೆಲದಲ್ಲಿಮ್ಮಾ, ಈಶನ ಸೇವೆ ಎಂದು ಬಗೆದು ದೇಶ ಸೇವೆ ಮಾದ್ತಿದಾನೆ. ಪುಳಿಚಾರಿಗೆ ಹೆಸರಾಗಿರೋ ನಮ್ಮ ಜನಾಂಗದಲ್ಲೂ ದೇಶ ಸೇವೆ ಮಾಡೋರು ಇನ್ನೂ ಇದ್ದಾರಮ್ಮಾ ಇದ್ದಾರಮ್ಮಾ ಎಂದು ಆತ ತೇಪೆ ಹಚ್ಚಿದ.
“ಶೂಲದೇವರಹಳ್ಳಿ ಶಾನಭೋಗರ ಮಗ್ನೀಗೆ ಕೊಡೋಣ ಎಂದು ಬಡ್ಕೊಂಡೆ ನೀವು ಕೆಳಿದಿರಾ ನನ್ ಮಾತ್ನಾ” ಸಂಗಡ ಬಂದಿದ್ದ ತಾಯಿ ಹೇಳಿದಳು. “ಹುಡುಗ್ನೀಗೆ ಆಸ್ತಮ ಇದ್ದರೇನಾಯಿತು. ಆ ಕಡೇಲೆಲ್ಲಾ ವೈದಿಕದಲ್ಲಿ ಹೆಸರು ಮಾಡಿಲ್ವೇ?”

ಹೌದು. ಶಾನುಭೋಗರು ಪಾದುಕೆ ಸವೆಯುವಂತೆ ಅಡ್ಡಾಡಿದ್ದು ನಿಜ. “ನಿಮ್ ಮಗಳ್ನ ನನ್ ಮಗ ಪ್ರೀತಿಸ್ತಾನೆ. ಕೊಟ್ಟು ಮದುವೆ ಮಾಡಿ” ಎಂದು ಪೀಡಿಸುತ್ತಿದ್ದುದ್ದೂ ನಿಜ.
ರಾಮನವಮಿಗೆ ತಂದೆತಾಯಿಯರೊಂದಿಗೆ ಅಲಮೇಲು ಕೂಡ ಸೂಲದೇವರ ಹಳ್ಳಿಗೆ ಹೋಗಿದ್ದಳು. “ಲೋ ಶೀನಾ, ಹುಡುಗೀ ಬಂದಿದ್ದಾಳೆ ಒಂಟಿಯಾಗಿದ್ದಾಗ ಒಂದು ಕೈ ನೋಡ್ಕೋ” ಎಂದು ಶಾನುಭೋಗರೇ ಮಗನಿಗೆ ಪರವಾನಿಗೆ ನೀಡಿದ್ದರು.

ಶೀನಪ್ಪ ಏದುಸಿರು ಬಿಡುತ್ತ ಹಿಂದೆ ಮುಂದೆ ಅಡ್ಡಾಡಿದ್ದುಂಟು. ಕಣ್ಣು ಹೊಡೆಯಲು ಪ್ರಯತ್ನಿಸಿದ್ದುಂಟು. ಮುಟ್ಟಾಗಿ ಮೂರು ವರ್ಷವಾಗಿದ್ದರೂ ಯಾವುದೇ ಗಂಡಸರಿಂದ ಯಾವ ಕಾರಣಕ್ಕೂ ಸ್ಪರ್ಶಿಸಿಕೊಂಡವಳಲ್ಲ. ಈ ವಿಶಯದಲ್ಲಿ ಆಕೆ ಸ್ವಲ್ಪ ಕಟ್ಟುನಿಟ್ಟು. ಹೆತ್ತವರು ಹಾಗೆ ಬೆಳೆಸಿದ್ದರು. ಆದ್ದರಿಂದ ಆಕೆ ಆತ ಕೆಮ್ಮಿದರೂ ಕೆರ್ ಮಾಡಿರಲಿಲ್ಲ, ದಮ್ಮಿದರೂ ಕೆರ್ ಮಾಡಿರಲಿಲ್ಲ.

ಶೀನಪ್ಪ ಸುಮ್ಮನೆ ಬಿದುವ ಪೈಕಿ ಆಗಿರಲಿಲ್ಲ. ಆಕೆ ಮಲಗಿದ್ದ ಕೋಣೆಗೆ ಕಳ್ಳತನದಿಂದ ಪ್ರವೇಶಿಸಿದ. ಸೊಳ್ಳೆ ಪರದೆಯೊಳಗೆ ತೂರಿ ಅವಕೊಂದು ಬಿತ್ತ. ಆಗ ಅಲುಮೇಲು ಅಂಬರೀಷನ ಮಗಳು ಶ್ರೀಮತಿ ತಾನೆಂದೂ, ತನ್ನನ್ನು ವಿಷ್ಣುಪರಮಾತ್ಮ ಹಾರಿಸಿಕೊಂಡು ಹೋದಂಥ ಕನಸು ಕಾಣುತ್ತಿದ್ದಳು. ಆದರೆ ಸ್ವಲ್ಪ ಹೊತ್ತಿಗೆ ಗೊತ್ತಾಯ್ತು ತನ್ನನ್ನು ಅವುಚಿಕೊಂಡು ಮೊಲೆ ಹಿಚುಕುತ್ತಿವುದು ವಿಷ್ಣು ಪರಮಾತ್ಮನಲ್ಲ ಎಂಬ ಸಂಗತಿ. ಸಾಕಷ್ಟು ಗಟ್ಟಿಮುಟ್ಟಾಗಿದ್ದ ಆಕೆ, ಅವನಿಗಿಂತಲೂ ಬಲಿಷ್ಟವಾಗಿದ್ದ ಜುಟ್ಟನ್ನು ಗಟ್ಟಿಯಾಗಿ ಹಿಡಿದುಕೊಂಡು ಲಬೋಲಬೋ ಬಾಯಿ ಬಡಿದುಕೊಂಡು ಬಿಟ್ಟಳು.

ಅವತ್ತಿಗೇ ಮುಗಿದುಹೋಯಿತು ಸೂಲ ದೇವರ ಹಳ್ಳಿ ಕಡೆ ಮುಖ ಮಾಡಿ ಮಲಗುವುದು.
’ಆ ಮಗುವಿನ್ನೂ ನಿನ್ನ ಚಿಂತೆಯಲ್ಲಿಯೇ ಇರುವುದು ಮಗಳೇ. ಅನ್ನ ನೀರು ಬಿಟ್ಟು ತುಂಬ ಕೃಶವಾಗಿರುವುದಂತೆ!’ ತಾಯಿ ಸ್ವಲ್ಪ ನಾಚಿಕೆ ಬಿಟ್ಟು ಮಾತನಾಡಿದರೆಂದರೂ ಸರಿಯೇ.

ತಮ್ಮ ಮಗಳನ್ನು ತವರಿಗೆ ಕರೆದುಕೊಂಡು ಹೋಗಲೆಂದೇನೋ ಅವರು ಬಂದಿದ್ದರು. “ಹೋಗಿ ಬಾರಮ್ಮಾ” ಎಂದು ಶಾಸ್ತ್ರಿಗಳೂ ದೊಡ್ಡತನ ತೋರಿಸಿದರು. ಆದರೆ ಹೋದರೆ ಇವರನ್ನು ಮನೆಯಲ್ಲಿ ನೋಡಿಕೊಳ್ಳುವವರು ಯಾರು ಎಂಬ ಕಾರಣಕ್ಕೆ ಮಹಾಸಾಧ್ವಿ ಅಲಮೇಲಮ್ಮ ಹೋಗಲಿಲ್ಲ, ಉಣ್ಣಲಿ, ಉಪವಾಸವಿರಲಿ ಗಂಡನ ಮನೆಯೇ ಸರ್ವಸ್ವ ಎಂದು ತಿಳಿದುಕೊಂಡಳು. ಗಂಡ ದೂರವಿದ್ದರೂ ಮಗ ಹತ್ತಿರದಲ್ಲಿದ್ದಾನೆ ಎಂದುಕೊಳ್ಳುವಂತಿಲ್ಲ. ಅದರ ತಾತ ಅದನ್ನು ತಾಯಿಯಾದ ತನ್ನ ಬಳಿ ಬಿಟ್ಟರೆ ತಾನೆ. ಮೊಮ್ಮಗ ಸಂಸ್ಕೃತದಲ್ಲಿ ಮಹಾಪಂಡಿತನಾಗಬೇಕು. ಹಾಗಾಗಬೇಕು, ಹೀಗಾಗಬೇಕು ಎಂದು ಕನಸು ಕಾಣುತ್ತಿರುವ ಮಾಮಾಶ್ರಿ, ಕ್ರಮೇಣ ಈ

ವಿಷಯದಲ್ಲೂ ತರ್ಕ ಶಾಸ್ತ್ರ ಪಾರಂಗತರಾದ ಶಾಸ್ತ್ರಿಗಳಿಗೂ ಅತುಲಮಾತೃವಾತ್ಸಲ್ಯಮಯಿಯಾದ ಅಲುಮೇಲಮ್ಮಗೂ ನಡುವೆ ಮಾತಿನ ಚಕಮಕಿ ನಡೆಯಿತು. ಇಬ್ಬರೂ
ಮಗನನ್ನು ಬಿಟ್ಟಿರಲಾರರು. ಶಾಸ್ತ್ರಿಗಳು ಮೊಮ್ಮಗನಲ್ಲಿ ಮಗನನ್ನು ಕಂಡುಕೊಳ್ಳುವ ಪ್ರಯತ್ನದಲ್ಲಿ ಅಲುಮೇಲಮ್ಮ ಮಗನಲ್ಲಿ ಗಂಡನನ್ನು ಗುರುತಿಸುವ ಸನ್ನಾಹದಲ್ಲಿದ್ದರು.

ಅದು ಅಳುತ್ತಿತ್ತು. ತೊಟ್ಟಿಲಲ್ಲಿ ಮಲಗಿಸಿದ ಅಲಮೇಲು ಆಡಿಬಾ ಎನಕಂದ ಅಂಗಾಲ ತೊಳೆದೇನ್ಯಾಽ ಎಂದು ಪದ ಹಾಡತೊಡಗಿದಳು. ಸಿದ್ಧಾಂತ ಶಿಖಾಮಣಿ ಗುಂಡಾಭಟ್ಟರ ಏಳು ದಿನದ ಕಾರ್ಯಕ್ಕೆ ಹೋಗಿದ್ದ ಶಾಸ್ತ್ರಿಗಳು ಅದೇ ತಾನೆ ಬಂದರು. ಸೊಸೆ ಹಾಡುತ್ತಿದ್ದ ಜೋಗುಳದ ಹಾಡು ಕೇಳಿ ಕಿಡಿಕಿಡಿಯಾದರು. ಸೈರಣೆ ಕಳೆದುಕೊಂಡರು.

“ಛೇ… ಛೇ… ರಾಮಾ ರಾಮಾ… ಕೇಳಲಾರೆ. ಅದ್ವಿತೀ ಪಂಡಿತರ ಸೊಸೆಯಾದವಳು ಹಾಡುವ ಹಾಡೇ ಇದು” ಕಿವಿ ಮುಚ್ಚಿಕೊಂಡರು.
ಅದನ್ನು ಕೇಳಿ ಆಕಾಶವೇ ಕಳಚಿ ಬಿದ್ದಂಥ ಅನುಭವವಾಯಿತು ಅಲುಮೇಲಮ್ಮನಿಗೆ. ಹಾಡಿದ ಹಾಡಿನಲ್ಲಿ ಇರುವ ಅಶ್ಲೀಲವಾದರೂ ಏನು?
ಉತ್ತರ ಕೊಡದೆ ಬಾಯಿ ತೆರದಳು.

“ಅಲ್ಲ ತಾಯಿ, ಹೋಗಿ ಹೋಗಿ ಆ ಜಾನಪದ ಗೀತೆಯನ್ನು ಹಾಡುವುದೇನು? ಅಡೂ ಮಗುವಿನ ಕಿವಿಗೆ ಬೀಳುವಂತೆ, ಸಂಸ್ಕೃತದ ಅಸತೋಮ ಹೇಳಬಹುದಾಗಿತ್ತು. ಹೋಗಲಿ ಪೂರ್ಣಮದಂ ಪೂರ್ಣಮಿದಂ ಹೇಳಬಹುದಾಗಿತ್ತು.” ಶಾಸ್ತ್ರಿಗಳು ಮಗುವಿನ ಎರಡು ಕಿವಿಗಳಲ್ಲಿ ಮಂತ್ರ ಶಕ್ತಿಯಿಂದ ಊದಿದರು.
ಮಗು ಕಿಟಾರನೆ ಕಿರುಚಿತು.
“ಅಲ್ಲ ಮಾವನವರೆ, ಸಂಸ್ಕೃತ ಸಂಸ್ಕೃತ ಅಂತ ಹೇಳ್ತೀರಲ್ಲ.ಮಗು ಬೇರೆ ಭಾಷೆ ಕಲಿಯೋದು ಬೇಡವೇನು?”
“ಖಂಡಿತ ಸಲ್ಲದು. ಜಗತ್ತಿನ ಎಲ್ಲಾ ಭಾಷೆಗಳಿಗೆ ಸಂಸ್ಕೃತವೇ ಮಾತೃಸ್ಥಾನದಲ್ಲಿದೆ. ಅದನ್ನು ಕಲಿತರೆ ಎಲ್ಲ ಬಂದಂತೆಯೇ.”
“ಕನ್ನಡ ಕೂಡ ಸಂಸ್ಕೃತ ಮಾತೆಯ ಮಗಳಲ್ಲವೇ?”
“ಹೌದು ಇಲ್ಲವೆಂದವರಾರು?”
“ಹಾಗಿದ್ದರೆ ನಾನು ಹಾಡಿದ ಹಾಡಿನಲ್ಲಿ ತಪ್ಪೇನಿದೆ?”

“ಪುರಂದರ ದಾಸರಂಥವರ ಕೀರ್ತನೆಗಳದರೆ ಸರಿ. ಆದರೆ ನೀನು ಹಾಡುವ ಹಾಡು ಶ್ರೇಷ್ಠ ಕುಲ ಸಂಜಾತರು ಹಾಡುವಂಥದ್ದಲ್ಲ. ಅದು ಹುಟ್ಟಿದ್ದೇ ಕೀಳುಜಾತಿಯವರಿಂದ, ಅಂಥವರು ಮಾತ್ರ ಹಾಡಲಿಕ್ಕೆ ಯೋಗ್ಯವು” ಶಾಸ್ತ್ರಿಗಳು ಕಡ್ಡಿಮುರಿದಂತೆ ನುಡಿದರು.

ಅಡುಗೆ ಮನೆಯ ನಗಂದಿ ಮೇಲಿದ್ದ ಬೆಕ್ಕು ಮ್ಯಾಂವ್ ಮ್ಯಾಂವ್ ಅಂತ ಕೆಟ್ಟದಾಗಿ ಅರಚತೋಡಗಿತು. ಶಾಸ್ತ್ರಿಗಳು ಕಿವಿ ಮುಚ್ಚಿಕೊಂಡರು. ಅಯ್ಯೋ ಮಾರ್ಜಾಲವೇ ಶಾಪ ಹಾಕಿದರು. ಶೂದ್ರರು ಮಾತ್ರ ಮಾರ್ಜಾಲ ಜನ್ಮ ಪಡೆದಿರುತ್ತಾರೆ ಎಂಬುದಕ್ಕೆ ಶಾಸ್ತ್ರಗಳಲ್ಲಿ ಪುರಾವೆಗಳಿವೆ. ಆದ್ದರಿಂದ ಬೆಕ್ಕುಗಳನ್ನು ಕಂಡರೆ ಅವರಿಗಾಗದು.

ಈ ಪ್ರಕಾರವಾಗಿ ಮಾವ ಸೊಸೆಯರ ನಡುವೆ ಹಸುಳೆಯ ಜ್ಞಾನಾರ್ಜನೆಗೆ ಸಂಭಂದಿಸಿದಂಥ ಭಿನ್ನಾಭಿಪ್ರಯಗಳು ಆಗೊಮ್ಮೆ ಈಗೊಮ್ಮೆ ಏಳುತ್ತಿದ್ದವು. ಮಾತು ಮಾತು

ಮಥನದಿಂದ ಕಿಡಿ ಪಕ್ಕದಲ್ಲಿ ಗಂಡ ಇದ್ದಿದ್ದರೆ ಇನ್ನೊಬ್ಬರು ಹೀಗೆ ಟೀಕಿಸುತ್ತಿರಲ್ಲಿಲ್ಲ. ಸಂಸ್ಕೃತ ಕಲಿಸುವ ಒತ್ತಡದಿಂದಾಗಿಯೇ ಇದ್ದೊಬ್ಬ ಮಗನನ್ನು ಮಿಲಿಟರಿ ಪಾಲು ಮಾಡಿದ ಮಹಾನುಭಾವರಿವರು. ಆತ ಒಮ್ಮೆ ಬಂದು ಹೋದರೆ ಒಳ್ಳೆಯದು.

ಆತನಿಗೆ ಪತ್ರ ಬರೆಯಬೇಕೆಂದರೆ ಹತ್ತಾರು ಸಮಸ್ಯೆಗಳು. ಮೊದಲನೆಯದಾಗಿ ಮ್ಲೇಚ್ಚ ಭಾಷೆಯಲ್ಲಿ ವಿಳಸ ಬರೆಯಬೇಕು. ವಿವರವಾಗಿ ಬರೆಯಬೇಕೆಂದರೆ ತಾನು ಕಲಿತಿರುವುದೆಲ್ಲಾ ಸಂಸ್ಕೃತ. ತಮ್ಮ ತಂದೆ ತಮ್ಮ ಮಗಳು ಹೆಳವನಕಟ್ಟೆ ಗಿರಿಯಮ್ಮಳಂತಾಗಬೇಕೆಂದು ಬಯ್ಸಿದ್ದರು. ಮನೆಯ ಮಾಮಾಶ್ರೀಯವರಿಗೂ ಕನ್ನಡ ಬರುವುದಿಲ್ಲ. ಬಂದರೂ ಬರೆಯುವ ಪೈಕಿ ಅಲ್ಲ. ತಮ್ಮಂಥ ಪ್ರಕಾಂಡ ಪಂಡಿತರು ಶೂದ್ರರ ಭಾಷೆಯಲ್ಲಿ ಬರೆಯುವುದೇ? ಎಂದು ಮೂಗು ಮುರಿಯುತ್ತಿದ್ದರು.

ಪರಿಸ್ಥಿತಿ ಹೀಗಂತ ಕೈಕತ್ತಿ ಕೂಡುವಂತಿಲ್ಲ. ಬತ್ತಿ ಹೊಸೆಯುವುದರ ಜೊತೆಗೆ ಗುಟ್ಟಗಿ ಒಂದು ವರ್ಣಮಾಲೆ ಪುಸ್ತಕ ತರಿಸಿಕೋಂಡಳು. ಅಕ್ಕಿಯಲ್ಲಿ ಅರಲು ಆರಿಸುವಾಗ ಅದರೊಳಗೆ ಅಕ್ಷರ ತಿದ್ದತೊಡಗಿದಳು. ಆಕೆ ತುಂಬ ಜಾಣೆಯಾದ್ದರಿಂದ ಐವತ್ತಾರು ಅಕ್ಷರಗಳನ್ನು ಇಪ್ಪತ್ಮೂರು ದಿನಗಳಲ್ಲಿ ಕಲಿತುಕೊಂಡು ಬಿಟ್ಟಳು. ಹಾಗೆಯೇ ಯಾವುದಕ್ಕೆ ಏನನ್ನು ಜೋಡಿಸಿದರೆ ಏನಾಗುತ್ತದೆ ಎನ್ನುವುದೂ ಸಹ! ಕರ್ತೃ ಕರ್ಮದ ಮಿಲನಕ್ಕೆ ಕ್ರಿಯೆ ಎಂಬುದನ್ನೂ ಸಹ ಈ ಪ್ರಕಾರವಾಗಿ ಅಕ್ಷರ ಸಂಪನ್ನೆಯಾದ ಆಕೆ ಕೆಲವು ಹಗಲು ಕೆಲವು ರಾತ್ರಿ ಪರಿಶ್ರಮ ಪಟ್ಟು ಗಂಡನಿಗೆ ಇನ್‌ಲೆಂಡ್ ಲೆಟರು ಬರೆದು ಒಂದು ಹುಡುಗಿಯ ಕೈಯಿಂದ ಕೆಂಪು ಡಬ್ಬಿಗೆ ಹಾಕಿಸಿದಳು.

ಅಂದಿನಿಂದ ಶುರುವಾಯಿತು ಆಕೆ ಗಂಡನ ಪತ್ರಕ್ಕೆ ಕಾಯುವುದು. ತಾನು ತೋಡಿಕೊಂದಿದ್ದ ನೋವು ನಲಿವುಗಳಿಗೆ ಗಂಡ ಪ್ರತಿಯಿಸುತ್ತಾನೆಂದು ಬಗೆದಳು. ಕೆಲಸ ಬೊಗಸೆ ಮುಗಿಸಿಕೊಂಡು ಬಾಗಿಲ ಬಳಿ ನಿಲ್ಲುವುದು : ಟ್ರಿಣ್ ಟ್ರಿಣ್ ಬೆಲ್ ಬಾರಿಸುತ್ತ ಅಂಚೆಯಣ್ಣ ಬಂದೊದನೆ ಅವನತಮುಖಿಯಾಗಿಯೇ “ಅಣ್ಣಾ ಯಾವುದಾದರೂ ಪತ್ರ ಉಂಟಾ” ಎಂದು ಕೇಳುವುದು, ಆತ “ಇಲ್ಲಮ್ಮ ತಾಯಿ” ಎನ್ನುವುದು ಹೀಗೆ ನಡೆಯಿತು.

ಆಕೆಯ ಬಾಯಿಂದ, ’ಅಣ್ಣಾ’ ಎಂದು ಕರೆಸಿಕೊಳ್ಳುವುದು ಪೋಸ್ಟ್‌ಮ್ಯಾನ್‌ಗೆ ಆಪ್ಯಾಯಮಾನವೆನ್ನಿಸಿತು. ಹಾಗೆ ಕರೆಸಿಕೊಳ್ಳಲಿಕ್ಕೆಂದೇ ಆತ ಅಗ್ರಹಾರಕ್ಕೆ ಬರುತ್ತಿದ್ದ. ಆಕೆಯ ದುಃಖ ಅರ್ಥಮಾಡಿಕೊಳ್ಳಬಲ್ಲ ಬಲ್ಲಿದನಾಗಿದ್ದ. ಅನಧಿಕೃತ ತಂಗಿಯ ದುಃಖ ಪರಿಹರಿಸುವ ಬಗೆ ತನಗೆ ನಿಲುಕದ ಸಂಗತಿಯಾಗಿತ್ತು.

ತಮ್ಮ ಸೊಸೆ ದಿನಂಪ್ರತಿ ಹೊತ್ತಿಗೆ ಸರಿಯಾಗಿ ಬಾಗಿಲ ಬಳಿ ನಿಲ್ಲುವುದು ಶಾಸ್ತ್ರಿಗಳು ದೂರದಿಂದಲೇ ಗಮನಿಸಿದರು. ಸ್ತ್ರೀ ಸ್ವಭಾವತಃ ಚಂಚಲೆ ಎಂದು ಶಾಸ್ತ್ರಗಳೇ ಹೇಳಿದೆ. ಸ್ತ್ರೀ ಬುದ್ದಿ ಪ್ರಳಯಾತಕವೆಂಬುದನ್ನೂ ಸಹ, ಸ್ವಾತಂತ್ರಕ್ಕೆ ಅರ್ಹಳಲ್ಲದ ತಮ್ಮ ಸೊಸೆ ಬಾಗಿಲ ಬಳಿ ನಾಚಿಕೆ ಬಿಟ್ಟು ನಿಲ್ಲುವುದೆಂದರೇನು? ಪೋಸ್ಟ್‌ಮ್ಯಾನ್‌ನಂಥ ಪರಪುರುಷನೊಂದಿಗೆ ಮಾತಾಡುವುದೆಂದರೇನು?
ತಮ್ಮ ಚಿತ್ತಕ್ಕೆ ಹೊಳೆದ ಸಂಗತಿಯನ್ನು ಮುಖಕ್ಕೆ ರಾಚುವಂತೆ ಹೇಳುವ ಧೈರ್ಯ ಅವರಿಗೆಲ್ಲಿಯದು.
ಆ ಹೊತ್ತಿಗೆ ಸರಿಯಾಗಿ ಎದುರು ಕುಂಡ್ರಿಸಿಕೊಳ್ಳತೊಡಗಿದರು. ಆಕೆಯ ಎದುರಿಗೆ

ವ್ಯಾಸಪೀಠವಿತ್ತು. ಅದರ ನಡುವೆ ಪಾರಮಾರ್ಥದ ಗ್ರಂಥ ತೆರೆದಿಟ್ಟು ಇದನ್ನು ನೂರು ಸಾರಿ ಓದು, ಅದನ್ನು ಸಾವಿರ ಸಾರಿ ಓದು ಎಂದು ಪರೋಕ್ಷವಾಗಿ ಒತ್ತಾಯಿಸತೊಡಗಿದರು.
ಆಕೆ ಈ ಪ್ರಕಾರವಾಗಿ ಓದುತ್ತಿರುವಾಗ ಹೊರಗಡೆ ಟ್ರಿಣ್ ಟ್ರಿಣ್ ಬೆಲ್ಲಿನ ಸದ್ದಾಗುತ್ತಿತ್ತು. ಮತ್ತೊಂದು ಘಳಿಗೆ ದಾರಿಗೆ ಸುಂಕವಿಲ್ಲವೆಂಬಂತೆ ವಾಪಸಾಗುತ್ತಿತ್ತು.
ಒಂದು ದಿನ ಅಂಚೆಯಣ್ಣ ಬೆಲ್ ಮಾಡಿದ. ಯಾರೂ ಹೊರಬಾರದಿದ್ದಾಗ ತಾನೇ ಬಾಗಿಲು ಬಳಿಗೆ ಬಂದು ಬಿಟ್ಟ. ಬಾಗಿಲ ತೋಳಿಗೆ ಕೈಹಚ್ಚಿ ಬಾಗಿ ಒಳಗಡೆ ಇದೀಯಾ ತಾಯಿ ಅಂದ. ಇದರಿಂದ ಶಾಸ್ತ್ರಿಗಳಿಗೆ ಕೋಪ ಬಂತು. ಬ್ರಾಹ್ಮಣನಾದವನು ಕೋಪವನ್ನು ಸೂಚ್ಯವಾಗಿ ಪ್ರಕಟಿಸಬೇಕೆಂದು ಶಾಸ್ತ್ರಗಳೇ ಹೇಳಿದೆ.
“ಏನಪ್ಪಾ… ಅಲ್ಲೇ ನಿಂತ್ಕೋ ಪೂಜೆ ಮಾಡ್ತಿರೋ ಹೊಸ್ತಿಲು ದಾಟಬೇಡ… ಬಂದೆ”” ಶಾಸ್ತ್ರಿಗಳೇ ಎದ್ದುಹೋದರು’
“ಇದಾರೆ. ಕೆಲಸ ಕಾರ್ಯಗಳಲ್ಲಿ ಮುಳುಗಿದ್ದಾರೆ ನಾವಿದ್ದೇವಲ್ಲ!” ಎಂದರು.
ಅಂಚೆಯಣ್ಣ ನಿಟ್ತುಸಿರು ಬಿಡುತ್ತ ಬಂದಿದ್ದ ಪತ್ರ ಕೊಟ್ಟು ವಾಪಸಾದ.

ಶಾಸ್ತ್ರಿಗಳು ಓಡೆದರು. ಅದು ತಮ್ಮ ಸುಪುತ್ರನ ಪತ್ರ. ಆದರೆ ಆ ದರಿದ್ರದವನು ಆ ಮೇಚ್ಚರಾಡುವ ಭಾಷೆಯಲ್ಲಿ ಬರೆದಿರುವನಲ್ಲ! ಕುದಿದರು. ಸೊಸೆಗೆ ಹೇಳಿದರು. ಆಕೆ ಸಂತೋಷದಿಂದ ಕಂಪಿಸಿತ್ತಿರುವುದನ್ನು ಕಂಡು ತಾವೂ ಸಂತೋಷಪಟ್ಟರು.
ಹೆಗಲ ಮೇಲೆ ಉತ್ತರೀಯ ಹೊದ್ದು ಹೊರಗಡೆ ಹೋಗಿ ಮ್ಲೇಚ್ಚ ಭಾಷೆ ಬಲ್ಲ ಸುಸಂಸ್ಕೃತರನ್ನು ಹುಡುಕಿ ಪತ್ರ ಓದಿಸಿಕೊಂಡು ಬಂದರು.
“ತಾಯಿ ನಿನ್ನ ಗಂಡ ಇಂಥ ದಿನ ಬರ್ತಿದ್ದೀನಂತ ಬರೆಸಿದ್ದಾನೆ ಕಣಮ್ಮಾ” ವಿವರಿಸಿ ಹೇಳಿದರು.
ಅಲಮೇಲಮ್ಮನ ಸಂತೋಷಕ್ಕೆ ಪಾರವೇ ಇಲ್ಲ. ಆಕೆಗೆ ಸ್ವರ್ಗ ಮೂರೇ ಗೇಣು. ಇನ್ನು ಒಂದು ಪಕ್ಷ ದಿನಮಾನ ಕಾಯಬೇಕಲ್ಲ. ಇದಿನ್ನು ಶುಕ್ಲಪಕ್ಷ. ಆತ ಬರುವುದೆ ಕೃಷ್ಣ ಪಕ್ಷ ಸಮೀಪಿಸಿದಾಗ…

ಒಂದೊಂದು ಲೀಲೆ ನೆನಪಾಗಿ ಆಕೆಯ ಮೈ ರೋಮಾಂಚನಗೊಂಡಿತು. ಗಂಡನಿಗೆ ಪ್ರಿಯವಾದ ತಿಂಡಿಗಳನ್ನು ಲೆಕ್ಕ ಹಾಕಿದಳು. ನಾಗಂದುಗೆಯಲ್ಲಿದ್ದ ಹಣ ಕೊಟ್ಟು ಸಾಮಾನು ತರಿಸಿಕೊಂಡಳು. ದಿನಕ್ಕೊಂದು ತಿಂಡಿ ಮಾಡಿದಳು. ಇವತ್ತು ರವೆ ಉಂಡೆ ಮಾದಿದರೆ ಮರುದಿನ ಕೋಡುಬಳೆ, ಮತ್ತೊಂದು ದಿನ ಮತ್ತೊಂದು.
ಮಗುವನ್ನು ಮಾವನವರಿಂದ ಕಿತ್ತುಕೊಂಡಳು. “ಶಾಮೂ ನಿಮ್ಮಪ್ಪಾಜಿ ಬರ್ತಾರೆ” ಎಂದು ಆಕೆ ಹೇಳುವುದು, ಆಕೆಯಿಂದ ಮಗುವನ್ನೆತ್ತಿಕೊಂಡು, “ಮೊಮ್ಮಗನೇ ನನ್ ಮಗ ಬರ್ತಿದ್ದಾನೆ” ಎಂದು ಶಾಸ್ತ್ರಿಗಳು ಹೇಳುವುದು.
ಹೆಂಡತಿ ಗಂಡನಿಗಾಗ ಹಲುಬುವುದು.
ತಂದೆ ಮಗನಿಗಾಗಿ ಹಲುಬುವುದು.
ಇವೆರಡು ಸಂಬಂಧದ ಎರಡು ಮುಖ್ಯ ನಮೂನೆಗಳು.
ಬರೆದಿದ್ದಕ್ಕಿಂತ ಒಂದೆರಡು ದಿನ ಮುಂಚಿತವಾಗಿ ಅಶ್ವಥ್ ನಾರಾಯಣ ಮನೆ ಬಾಗಿಲು ತಟ್ಟಿಬಿಟ್ಟ. ಬಾಗಿಲು ತೆರೆಯುವ ಮೊದಲು “ಸ್ನಾನಮಾಡಿ ಶುಚಿರ್ಭೂತನಾಗಿ ಒಳಗದೆ ಬರುವಂತಿ” ಎಂದು ಹೇಳಿದಳು. ಆತ ಪ್ರಯಾಣ ಹೊರಡುವ ಮೊದಲು ಅಂದರೆ ವಾರದ ಹಿಂದೆ

ಸ್ನಾನ ಮಾಡಿದ್ದ. ಬಾಗಿಲು ತೆರೆದೊಡನೆ ಬೂಟುಗಾಲಿನೊಂದಿಗೆ ಒಳಗೆ ಪ್ರವೇಶಿಸಿದ.
“ಶೂದ್ರರ ಎಲ್ಲ ಅವಗುಣಗಳನ್ನು ಕಲಿತು ಬಿಟ್ಟಿರುವಿಯಲ್ಲೊ.” ಶಾಸ್ತ್ರಿಗಳು ಮತ್ತೇನನ್ನೋ ನುಡಿವಷ್ತರಲ್ಲಿ ಒಳಗಡೆ ನುಗ್ಗಿಯೇಬಿಟ್ಟ. ಇನ್ನೇನು ತನ್ನನ್ನು ಅವುಚಿಕೊಂಡು ಬೆಡ್‌ರೂಮಿಗೆ ಒಯ್ದೇ ಬಿಡುತ್ತಾರೆಂದು ಹೆದರಿದ ಅಲುಮೇಲಮ್ಮ ಹಂಡೆ ಮರೆಯಲ್ಲಿ ಅವಿತು ಕೂತಂತೆ ನಟಿಸಿದಳು. ಆದರೆ ಆಕೆಯ ಶರೀರದ ಮುಕ್ಕಾಲು ಭಾಗ ಗೋಚರಿಸದೆ ಇರಲಿಲ್ಲ.

ಆದರೆ ಆ ಪತಿ ಪರಮೆಶ್ವನಿಗೆ ಅದೆಲ್ಲ ನೆನಪಿದ್ದರೆ ತಾನೆ? ಸೀದ ತೊಟ್ಟಲಿಗೆ ನುಗ್ಗಿ “ಓ ಮೈ ದಿಯರ್ ಲಿಟ್ಲ್ ಯಾಸ್ಕಲ್” ಎಂದು ಎತ್ತಿ ಹಿಡಿದನೋ ಇಲ್ಲವೋ ಶಾಮು ಡಾರ್ಲಿಂಗ್ ತನ್ನ ಪುಟ್ಟ ಶಿಶ್ನವನ್ನು ಆತನ ಗಲ್ಲ ಮೀಸೆಯ ಬಾಯಿಗೆ ಗುರಿಯಿಟ್ಟು ’ಮಗ್ನೇ ಮಾಡ್ತೀನಿರು. ನಾನು ಭೂಮಿಗೆ ಉದುರಿ ಒಂಭತ್ತು ತಿಂಗಳು ತುಂಬಿದ ಮೇಲೆ ಬಂದಿರುವೆಯಾ’ ಎಂಬರ್ಥ ಬರುವಂತೆ ಅದೇ ತಾನೇ ಮೂಡಿದ್ದ ಎರಡು ಹಲ್ಲು ಪ್ರದರ್ಶಿಸುತ್ತಾ ಕಿಲಕಿಲ ನಗಾಡಿತು.
“ಬಹುತ್ ಸುಂದರ್ ಲಗ್ತಾ ಹೈ ಮೇರಾ ಬೇಟಾ” ಎಂದ. “ಎಲವೋ ಹಿಂದಿಯಲ್ಲಿ ಮಾತಾಡ್ತಿದಿಯಾ” ಎಂದು ಅವುಡುಗಚ್ಚಿ ಪರಿಶುದ್ದ ಗಂಗಾಜಲವನ್ನು ಹೆತ್ತ ತಂದೆಯ ಬಾಯಿಗೆ ಸುರಿದೇ ಬಿಟ್ಟಿತು.

ಅದನ್ನು ನೋಡಿದ ಶಾಸ್ತ್ರಿಗಳ ಸಿಟ್ಟು ಇಳಿದೇ ಹೋಯಿತು. ಮ್ಲೇಚ್ಚರ ಸಹವಾಸದಿಂದ ಕೆಟ್ಟು ಹೋಗಿರುವ ತನ್ನ ತಂದೆಗೆ ಮಗು ಸರಿಯಾದ ಶಾಸ್ತಿ ಮಾಡಿತೆಂದು ಹರ್ಷಚಿತ್ತರಾದರು.

ತನ್ನ ಬಳಿಗೆ ಬರಲೇ ಇಲ್ಲವಲ್ಲ! ಅವಿತಿದ್ದ ಅಲುಮೇಲು ಎದ್ದು ಮೆಲ್ಲಗೆ ಬಂದಳು. ಡಾರ್ಲಿಂಗ್ ಡಾರ್ಲಿಂಗ್ ಅಂತ ಸ್ವಲ್ಪ ಮಾತನಾಡಿದ. ಡ್ಯಾಡಿ ಗೀಡಿ ಅಂತ ಸ್ವಲ್ಪ ತಂದೆಯನ್ನು ಮಾತಾಡಿಸಿದ. ಸಂಸ್ಕೃತ ಸಂಸ್ಕೃತ ಕಲಿಸಿ ನನ್ ಮಗನ್ನ ಎಷ್ಟು ಹಾಳು ಮಾಡಿದ್ದೀರೆಂದು ಲಘು ಪ್ರಶ್ನೆ ಹಾಕಿದ.
ತಮ್ಮ ಪ್ರಕಾಂಡ ಪಂಡಿತರ ವಂಶಸ್ಥನಾಗಿ ಮಗ ಹೀಗೆ ವರ್ತಿಸುತ್ತಿರುವನಲ್ಲಾ! ಶಾಸ್ತ್ರಿಗಳು ಒಂಥರಾ ಮುಖ ಮಾಡಿದರು.
ಅಲುಮೇಲು ಮುತುವರ್ಜಿಯಿಂದ ಗಂಡನಿಗೆ ಅಭ್ಯಂಜನ ಸ್ನಾನ ಮಾಡಿಸಿದಳು. ಬಂಗಾರ ಮುಡಿ ಅಕ್ಕಿ ಅನ್ನ, ಈರುಳ್ಳಿ ಗಾತ್ರದ ತುಪ್ಪ, ಈರುಳ್ಳಿ ಸಾಂಬಾರು ಮಾಡಿ ಬಡಿಸಿದಳು.

ಒಂದೆರಡು ಆಮ್ಲೆಟ್ ಇಲ್ಲದ ಊಟ ಹೇಗೆ ಮಾಡೋದು? ಗೊಣಗುತ್ತ ಊಟ ಮುಗಿಸಿ ಎದ್ದ. ಸ್ವಲ್ಪ ಹೊತ್ತು ಶಾಸ್ತ್ರಿಗಳು ಮಗನೊಂದಿಗೆ ಮನೆ ಮುಂದುಗಡೆ ಕಟ್ಟೆ ಮೇಲೆ ಕೂತು, ಅಗ್ರಹಾರದ ನಾಲ್ಕು ಮಂದಿ ಗಮನಿಸುವಂತೆ ಉಭಯಕುಶಲೋಪರಿ ಮಾತಾಡಿದರು. ಕ್ರಾಪಿನೊಂದಿಗೆ ಜುಟ್ಟನ್ನು ಒಂಚೂರಾದರೂ ಉಳಿಸಿಕೊಳ್ಳಬೇಕಿತ್ತೆಂದು ಬುದ್ಧಿ ಹೇಳಿದರು.
ಅಶ್ವಥ್ ಹೆಂಡತಿಗೆ ನೀಟಾಗಿ ಡ್ರೆಸ್ ಮಾಡಿಕೊಳ್ಳುವಂತೆ ಹೇಳಿದ. ಆಕೆಗೆಂದೇ ತಂದಿದ್ದ ಪಂಜಾಬಿ ಡ್ರೆಸ್ ತೆಗೆದು ಕೊಟ್ಟ.
“ಇದ್ನೆಲ್ಲಾ ಉಟ್ಟುಕೊಳ್ಳೋಕೆ ನಾನೇನು ಕಿರಸ್ತಾನಳೇ?” ಅಲುಮೇಲು ನಿರಾಕರಿಸಿದಳು. ಅದಕ್ಕೆ ಅಶ್ವಥ್ ಕೇರ್ ಮಾಡಲಿಲ್ಲ.? ಅವನೆಷ್ಟಿದ್ದರೂ ನೂರಾರು ಮಂದಿ ಶತ್ರುಗಳನ್ನು ಕೊಂದಂತವನು
ಮಾತೂಂದ್ರೆ ಮಾತು! ಏಕ್‌ಮಾರ್ ದೋ ತುಕುಡಾ!
ವರಾಂಡದಲ್ಲಿ ಶಾಸ್ತ್ರಿಗಳು ಚಿಂತಾಕ್ರಾಂತರಾಗಿ ಕುಳಿತಿದ್ದರು.
ಗಂಡನ ಒತ್ತಾಯಕ್ಕೆ ಮಣಿದು ಅಲುಮೇಲು ಅವನು ಸೂಚಿಸಿದ ಉಡುಪು ತೊಟ್ಟುಕೊಂಡಳು.

ಉಳಿದ ಪ್ರಸಾಧನಗಳನ್ನು ತಾನೇ ಲೇಪಿಸಿದ. ನಖಶಿಖಾಂತ ನೋಡಿ ಮಧುಬಾಲ ಕಂಡಂತೆ ಕಾಣಿಸ್ತಿದೀ ಅಂತ ಮೆಚ್ಚುಗೆ ಸೂಚಿಸಿದ.
“ಹಾಗೇ ವಾಕಿಂಗ್ ಹೋಗಿ ಪಿಕ್ಚರ್ ನೋಡಿಕೊಂಡು ಬರೋಣ” ಎಂದ.
ಅದನ್ನು ಕೇಳಿ ಆಕೆ ಹೌಹಾರಿದಳು.
ತನ್ನ ಪಾತಿವ್ರತ್ಯಕ್ಕೆ ಚ್ಯುತಿ ಬಂದೆಂತುಕೊಂಡಳು.
ಪತಿ ವಾಕ್ಯ ಪರಿಪಲನೆಗೆ ಹೋದರೆ ತಪ್ಪೇನು?
ಹೊರಟಳು. ಇದನ್ನು ನೋಡಿ ಶಾಸ್ತ್ರಿಗಳು ವ್ಯಗ್ರಗೊಂಡರು.
ಅವರ ಕೋಪ ಸಂಸ್ಕೃತ ಮೂಲವಾದದ್ದು, ಬಡವನ ದವಡೆಗೆ ಮೂಲವೆಂಬಂಥಾದ್ದು. ಹೊರಟಿದ್ದನ್ನು ಅಗ್ರಹಾರದ ಆದಿ ದಂಪತಿಗಳೆಲ್ಲ ನೋಡಿ ಬೆಕ್ಕಸ ಬೆರಗಾದರು.
ಈ ವರ್ಷ ಮಳೆ ಬರೋದಿಲ್ಲ.
ಭೂಕಂಪವಾಗದೆ ಇರದು.
ಬಾಯಿಗೆ ಬಂದಂತೆ ಮಾತನಾಡಿಕೊಂಡರು.
ತಮ್ಮ ಗಂಡಂದಿರೂ ತಮ್ಮನ್ನು ಹೀಗೆ ಡ್ರೆಸ್ ಮಾಡಿಸಿ ಹೊರಗೆ ಅಡ್ಡಾಡಿಸಿ ಕೊಂಡು ಬರಬಾರದೆ, ಹದಿನಾರು ಮೊಳದ ಸೀರೆಯ ಪತ್ನಿಯರು ಅಂದುಕೊಂಡರು.
ಪಾರ್ವತಿ ಕುಂಡದ ಪವಿತ್ರ ತೀರ್ಥದಲ್ಲಿ ಮುಳುಗಿದವರಿಗೆ ಗಾಳಿಯ ಭಯವೇನು? ಚಳಿಯ ಭಯವೇನು?
ಸ್ವಲ್ಪ ಹೊತ್ತು ಅಲುಮೇಲುವಿಗೆ ನಡೆಯುವುದಕ್ಕೂ ಕಷ್ಟವಾಯಿತು.
ಪ್ರತಿಯೊಂದು ಹೆಜ್ಜೆ ಇಡುವುದನ್ನು ಅಶ್ವಥ್ ಹೇಳಿಕೊಟ್ಟ. ಗಂದಸರೆಲ್ಲ ತನ್ನ ಕಡೆಗೇ ನೋಡುವುತ್ತಿರುವಂದು ಊಹಿಸಿ ಅಲುಮೇಲು ಖಚಿತಪಡಿಸಿಕೊಂಡಳು.
ಊರ ಹೊರಗಡೆ ಕೈಯಾಡಿಸಿ ಅಶ್ವಥ್ ಖಚಿತಪಡಿಸಿಕೊಂಡ.
ಅದೊಂದು ಬಾದರಾಯಣ ಪಾರ್ಕು. ಅಲ್ಲಿ ಎಷ್ಟೋ ಜೋಡಿಗಳು ರೊಮ್ಯಾಂಟಿಕ್ ಮೂಡಿನಲ್ಲಿದ್ದವು. ಅಶ್ವಥ್‌ನೂ ತನ್ನ ಹೆಂಡತಿಯನ್ನು ಅಪ್ಪಿಕೊಂಡ, ಮುದ್ದಿಸಿದ. ಕ್ರಮೇಣ ಆಕೆ ಮೈ ಚಳಿಬಿಟ್ಟಳು.
ತನ್ನ ಕಷ್ಟ ತೋಡಿಕೊಂಡಳು. ಕರಕೊಂಡು ಹೋಗಿರಿ ಎಂದಳು. ಎಲ್ಲಿಡ್ತೀರೋ ಹೆಂಗಿಡ್ತೀರೋ ಹಂಗಿತೀನಿ ಎಂದಳು. ಅಶ್ವಥ್ ತಲೆ ಅಲ್ಲಾಡಿಸಿದ
ರೇಣುಕಾ ಟಾಕೀಸಿನಲ್ಲಿ ’ಅನ್‌ಪಡ್’ ಸಿನಿಮಾ ನೋಡಲೆಂದು ಹೋದರು. ಅದೊಂದು ಆಕೆಗೆ ಹೊಸ ಅನುಭವ. ಅದುವರೆಗೆ ಆಕೆ ನೋಡಿದ್ದುದು ಕೇವಲ ಒಂದೆರಡು ಮಹಾಪತಿವ್ರತೆಯ ಕಥೆಗಳನ್ನು ಮಾತ್ರ. ಅನ್‌ಪಡ್ ಆಕೆಗೆ ಹೊಸ ಅನುಭವ ನೀಡಿತು. ಪ್ರತಿಯೊಂದು ಡೈಲಾಗನ್ನು ಗಂಡ ಹೆಂಡತಿಗೆ ಬಿಡಿಸಿ ಬಿಡಿಸಿ ಹೇಳಿದ.

ಓದು ಎಂದರೆ ಕೇವಲ ಸಂಸ್ಕೃತ ತಿಳಿದುಕೊಂಡಿರೋದಲ್ಲ. ಸಾಮಾನ್ಯ ಜನರಾಡುವ ಭಾಷೆಯಲ್ಲಿ ವ್ಯವಹರಿಸೋದು ಮುಖ್ಯ. ಶಿಕ್ಷಣ ಪಡೆದಾಗ ಮಾತ್ರ ಹೆಣ್ಣಿಗೆ ಸುಖ-ಸೌಖ್ಯ ಸಿಗುತ್ತದೆ ಎಂದು ಅರ್ಥಮಾಡಿಕೊಂಡಳು.

ಹೀಗೆ ತಾನಿರುವಷ್ಟು ಕಾಲ ಅಶ್ವಥ್ ಹೆಂಡತಿ ಮಗುವನ್ನು ಹೊರಗಡೆ ಕರೆದೊಯ್ದು ಅಡ್ಡಡಿಸಿಕೊಂಡು ಬರುತ್ತಿದ್ದ.
ರಜೆ ಮುಗಿಯುತ್ತಾ ಬಂತು. ತನ್ನ ಮಗುವಿಗೆ ಇಂಗ್ಲಿಷ್ ಕಲಿಸಿ ದೊಡ್ಡ ಅಧಿಕಾರಿಯನ್ನಾಗಿ ಮಾಡಬೇಕೆಂಬುದರ ಬಗ್ಗೆ ತಂದೆಯೊಡನೆ ಚರ್ಚಿಸಿದ.
“ಎಲವೊ ದುರುಳಾತ್ಮ” ಕೆರಳಿದರು ಶಾಸ್ತ್ರಿಗಳು. “ಈ ದೇಹದಲ್ಲಿ ಜೀವ ಇರುವವರೆಗೆ ಅದು ಮಾತ್ರ ಸಾಧ್ಯವಿಲ್ಲ, ಮಗುವಿಗೆ ಶಾಮಾಶಾಸ್ತ್ರಿ ಎಂದು ಹೆಸರಿಟ್ಟಿದ್ದೇನೆ. ಏನೆಂದು ತಿಳಿದಿರುವಿ” ಆ ಕ್ಷಣ ಅವರಿಗೆ ಮಗನ ಬಾಯಿ ಮುಚ್ಚಿಸುವುದು ಸಾಧ್ಯವಾಯಿತು.

ಮುಠ್ಠಾಳ ಮಗನನ್ನು ಸಾಗು ಹಾಕಿ ಮೊಮ್ಮಗನನ್ನು ಒಂದು ಕೈ ನೋಡಿಕೊಂಡು ಬಿಡಬೇಕೆನ್ನಿಸಿತು. ಹಾಗೆ ಆಧುನಿಕ ಉಡುಪು ಧರಿಸಿ ಊರು ತುಂಬ ಗಂಡನೊಂದಿಗೆ ಮೆರೆದಾಡುವ ಸೊಸೆಯನ್ನೂ ಸಹ.
ದವಡೆ ದವಡೆ ಮಸೆಯುವಷ್ಟು ಶಾಸ್ತ್ರಿಗಳ ಹಲ್ಲು ಭದ್ರವಾದವು.
ಅವರು ಅಂದುಕೊಂಡಂತೆ ಅಶ್ವತ್ಥ ಉತ್ತರಾದಿಗೆ ಹೊರಡುವ ಮೊದಲು ತಂದೆಯ ಪಾದಕ್ಕೆರಗಿದ.

“ಅಪ್ಪಾಜಿ ಕಾಲಬದಲಾಗಿದೆ ಎನೊದು ಮರೀಬೇಡಿ. ಆಧುನಿಕ ಮನೋಭಾವ ಬೆಳೆಸಿಕೊಳ್ಳಿ. ಹಾಗೆ ಬೇರೆಯವರಲ್ಲೂ ಬೆಳೆಸಿ. ಸಾವಿರಾರು ವರ್ಷಗಳ ಹಿಂದೆಯೇ ಸತ್ತುಹೋಗಿರುವ ಸಂಸ್ಕೃತಕ್ಕೆ ಜೋತು ಬೀಳಬೇಡಿ. ನನ್‌ಮಗ ದೊಡ್ಡವನಾಗಿ ಡಾಕ್ಟರೋ ಇಂಜಿನಿಯರೋ ಆಗಬೇಕು ಎನ್ನುವುದೇ ನನ್ನ ಆಸೆ” ಎಂದು ತಾನು ಉತ್ತಮ ವಾಗ್ಮಿ ಎಂದು ಸಾಬೀತುಪಡಿಸಿದ.

ತಂದೆ ಎದುರಾಗಿ ಹೆಂಡತಿ ಗಲ್ಲಕ್ಕೆ ಮುದ್ದು ಕೊಟ್ಟ!
“ಮಗೂನ್ನ ಚೆನ್ನಾಗಿ ನೋಡ್ಕೋ ನಮ್ಮಪ್ಪಾಜಿನೂ ಒಂದು ಮಗೂಂತ ತಿಳ್ಕೋ” ಬರಸೆಳೆದು ಅಪ್ಪಿಕೊಂಡ. ಗಂಡಾ ಗಂಡಾ ಅಂತ ತೀರ ಪತಿಭಕ್ತಿ ತೋರಿಸಬೇಡ. ವಾಕಿಂಗೂಂತ ಪಿಚ್ಚರ್ರೂಂತ ಹೋಗ್ತಿರು…” ಮತ್ತೆ ಕಿವಿಯಲ್ಲಿ ಎನೋ ಪಿಸುಗುಟ್ಟಿದ.
ಆಕೆ ಗೋಳೊ ಅಂತ ಅಳ ತೊಡಗಿದಳು. ಕೆನ್ನೆ ಕೆನ್ನೆ ಬಡಿದುಕೊಂಡಳು. ನನ್ನ ಏನೂಂತ ತಿಳ್ಕೊಂಡೀರಿ ಅಂದಳು.
“ಛೀ ಹುಚ್ಚಿ… ನಾನು ಹಾಗೆ ಅಲ್ಲ. ನ್ನ್ಗಲ್ಲಿ ವಾರಕ್ಕೋದು ಹೊಸ ಹುಡುಗಿ ಬೇಕು. ಅದ್ಕೆ ನೀನೆಂತಿಯಾ” ಸಮಾಧಾನ ಪಡಿಸಿದ.
“ವಿಚಿತ್ರ ಮಗ ಹುಟ್ಟಿಬಿತ್ತಿದ್ದನಲ್ಲಾ” ಶಾಸ್ತ್ರಿಗಳು ಕೈ ಕೈ ಹಿಚುಕಿಕೊಂಡರು.
“ಇವ್ನಿಗೆ ಹುಚ್ಚು ಹಿಡಿದಿದೆಯೋ ಹೇಗೆ?”

ಮತ್ತೇನನ್ನೋ ಹೇಳಲು ಪ್ರಯತ್ನಿಸಿದ ಅಶ್ವಥ್
“ನೀನು ಎಷ್ಟು ಬೇಗ ಮನೆ ಬಿಡ್ತೀಯೊ ಅಷ್ಟು ಒಳ್ಳೆಯದು. ಇನ್ನೈದು ಸ್ಥಾನಕ್ಕೆ ಗುರು ಬತಾನೆ. ನೀನು ಮೊದಲೇ ಕುಜನ ಬಲ ಇಲ್ಲದವನು” ಶಾಸ್ತ್ರಿಗಳು ಬಲವಂತದಿಂದ ಹೊರಡಿಸಿದರು.
ಅವರೆಲ್ಲ ಅಂಗಳಕ್ಕೆ ಬಂದಾಗ ಅಮೃತ ವೇಳೆ ಅಂತಿಮ ಸ್ಥಿತಿಯಲ್ಲಿತ್ತು.
ಮಗ ಹೋದ ಮೇಲೆ ಶಾಸ್ತ್ರಿಗಳು ಕೆಲವು ದಿನ ಅನ್ನ ನೀರು ಸರಿಯಾಗಿ ಮುಟ್ಟಲಿಲ್ಲ.

ಪ್ರಾತಃವಿಧಿ. ಸಂಧ್ಯಾವಂದನೆಗಳನ್ನು ಶಾಸ್ತ್ರೋಕ್ತವಾಗಿ ಮಾಡಲಿಲ್ಲ. ಏನು ಮಾಡಿದರೆ ಏನಿದೆ? ಮ್ಲೇಚ್ಚರ ನಾಡಿನಿಂದುದಿಸಿದವಂತೆ ತಾನೊಬ್ಬನೆ ಮೆರೆದಾಡಿದರೆ ಸಾಕಿತ್ತಲ್ಲವೆ? ಸೊಸೆಯನ್ನು ಹಾಗೆ…
“ಶಿವ ಶಿವಾ ರಾಮ ರಾಮಾ”
ಶಾಸ್ತ್ರಿಗಳು ಸೊಸೆ ಕಡೆ ಪ್ರಶ್ನಾರ್ಥಕವ್
ಅಗಿ ನೋಡಿದರು.
ಆಲುಮೇಲು ಮುಖದಲ್ಲಿ ಪ್ರಾಯಶ್ಚಿತ್ತದ ಬೆಂಕಿ ಉರಿಯುತ್ತಿತ್ತು.
ಪಂಜಾಬಿ ದಿರಿಸು ಧರಿಸಿ ಮೆರೆಯಲು ಆಕೆ ಆಶಿಸಿದ್ದಳೇನು?

ಶಾಸ್ತ್ರಿಗಳು ಪೂಜಾ ಮಂದಿರ ಸೇರಿಕೊಂಡರು. ತಾಸುಗಟ್ಟಲೆ, ತಮ್ಮ ಇಚ್ಛಾ ದೈವವನ್ನು ಅರ್ಚಿಸಿದರು, ಪೂಜಿಸಿದರು. ತಮ್ಮ ವಂಶ್ದ ಗೌರವ ಕಾಪಾಡುವ ಬುದ್ದಿಯನ್ನು ತಮ್ಮ ಸುಪುತ್ರನಿಗೆ ದಯಪಾಲಿಸುವಂತೆ ಮೊರೆ ಇಟ್ಟರು.

ಶೃಂಗೇರಿ ಶಾರದಾ ಮಾತೆಯ ಫೋಟೊದ ಎಡಭಾಗದದಿಂದ ಪಾರಿಜಾತ ಪುಷ್ಪ ಉದುರಿತು. ಶಾಸ್ತ್ರಿಗಳು ಸಂತುಷ್ಟಗೊಂಡರು. ಅವನಿಗೆ ಶಾಸ್ತ್ರೊಕ್ತವಾದ ವಿದ್ಯೆ ಕೊಡಲು, ಮಹಾನ್ ಸಂಸ್ಕೃತನ್ನಾಗಿ ಮಾಡಲೆಂದೇ ಅಲ್ಲವೆ ತಾವು ಅವನನ್ನು ಸಂಸ್ಕೃತ ಪಾಠಶಾಲೆಗೆ ಸೇರಿಸಿದ್ದು. ಅವನು ದಾರಿ ತಪ್ಪಿದ್ದಕ್ಕೆ ತಾವು ಭಾಧ್ಯಸ್ಥರೇನು? ತಾವು ಅವನು ಮಿಲಿಟರಿ ನೌಕರಿ ಸೇರಿದ್ದಕ್ಕೆ ಭಾಧ್ಯಸ್ಥರೇನು?

ತಮ್ಮ ವಂಶದ ವೃಕ್ಷ ಪುಣ್ಯಶೇಷದಿಂದಲ್ಲವೇ ಶಾರದಾ ಮಾತೆ ಪ್ರಸಾದ ದಯಪಾಲಿಸಿದ್ದು. ಶಾಸ್ತ್ರಿಗಳು ಹರ್ಷಚಿತ್ತರಾದರು. ಮೋದಲಿನಂತೆ ಹೆಚ್ಚು ಚಟುವಟಿಕೆಯಿಂದ ದಿನಚರಿ ಮುಗಿಸತೊಡಗಿದರು.

ಅಶ್ವಥ್ ವರ್ಷಕ್ಕೊಂಡೆರಡು ಬಾರಿ ಬಂದು ಹೋಗುತ್ತಿದ್ದ. ದಿನಗಳೆಂದಂತೆ ಆತ ಹೆಚ್ಚು ಆಧುನಿಕವಾಗುತ್ತಿದ್ದ. ಇದ್ದ ಕೆಲವು ದಿನಗಳಲ್ಲಿ ಮನೆಯಲ್ಲು ಆಧುನಿಕತೆಯನ್ನು… ಸನತನತೆಯ ಕತ್ತು ಕಿವಿಚುವಂಥ ಗಾಳಿಯನ್ನು ಬೀಸಿ ಹೋಗುತ್ತಿದ್ದ.

ತನ್ನ ಮಗ ಮುಂದೇನಬೇಕೆಂದು ನಿರ್ಧರಿಸುವುದು ತಂದೆಯಾದ ತನ್ನ ಹಕ್ಕು ಎಂದು ವಾದ ಮಾಡುತ್ತಿದ್ದ. ಎಂದೊ ಸತ್ತು ಹೋಗಿರುವ ಸಂಸ್ಕೃತ ಎಂಬ ಶವದೊಂದಿಗೆ ತನ್ನ ಮಗನನ್ನು ಗಂಟು ಹಾಕಿ ಅವನ ಜೀವನವನ್ನು ಹಾಳು ಮಾಡಬೇಡಿರೆಂದು ಪರಿಪರಿಯಾಗಿ ಹೇಳಿದ. ಕನ್ನಡ ಇಂಗ್ಲಿಷ್ ಕಲಿಸಿ ಅವನ ಬಾಳಿಗೆ ಬೆಳಕು ಕೊಡಿರೆಂದು ಅಶ್ವಥ್ ಬಂದಾಗಲೆಲ್ಲ ಕಳಕಳಿಯಿಂದ ಕೇಳಿಕೊಳ್ಳುತ್ತಿದ್ದನು.

ಮಾವನವರ ಹೃದಯಕ್ಕೆ ನೋವಾಗುವಂತೆ ಮಾಡದಿರುವಂತೆ ಮಾತಾಡದಿರಲು ಅಲುಮೇಲು ಗಂಡನಿಗೆ ತಿಳಿಹೇಳುತ್ತಿದ್ದಳು. ಅಶ್ವಥ್ ನಾಗರೀಕತೆಯ ಹಲವು ರೂಪಗಳನ್ನು; ತಾಂತ್ರಿಕ ಜ್ಞಾನ ಪಡೆದು ಅಬಿವೃದ್ದಿ ಹೊಂದಿರುವ ನಗರಗಳ ಬಗ್ಗೆ ವಿವರಿಸುತ್ತಿದ್ದ. ಈ ಆಧುನಿಕ ಯುಗದಲ್ಲಿ ವೈದಿಕ ಅವಲಂಬಿಸಿ ಬದುಕುವುದು ಎಷ್ಟು ಕಷ್ಟಸಾಧ್ಯವೆಂಬ ಬಗ್ಗೆ ಹೇಳುತ್ತಿದ್ದ.
ಕ್ರಮೇಣ ಅಲುಮೆಲುಗೆ ಅರ್ಥವಾಯಿತಾದರೂ ಶಾಸ್ತ್ರಿಗಳ ಇಚ್ಛಾಶಕ್ತಿಯ ವಿರುದ್ಧ ಈಜುವ ಶಕ್ತಿ ಆಕೆಗಿರಲಿಲ್ಲ.

ಶಾಸ್ತ್ರಿಗಳ ಸನಾತನ ಮನಸ್ಸು ಕರುಳುಬಳ್ಳಿಯ ಯಾವ ನುಡಿಗೂ ಕರಗುವ ಪೈಕಿಯಾಗಿರಲಿಲ್ಲ. ಅದು ಕಡಿದಾದ ಕೊಡಚಾದ್ರಿ ಬೆಟ್ಟಕ್ಕಿಂತಲೂ ಗಟ್ಟಿಯಾಗಿತ್ತು ದುರ್ಗಮವಾಗಿತ್ತು.

ಶ್ರಾವಣಕ್ಕೆ ಶಾಮಾಶಾಸ್ತ್ರಿಗಳಿಗೆ ನಾಲ್ಕು ತುಂಬಿ ಐದರಲ್ಲಿ ಬಿತ್ತು. ಅಕ್ಷರಾಭ್ಯಾಸಕ್ಕೆ ಮತ್ತು ಉಪನಯನಕ್ಕೆ ಸೂಕ್ತ ಸಮಯ ಬಂತು. ಅಗ್ರಹಾರದ ಹಿರಿಯರೊಂದಿಗೆ ಈ ಬಗ್ಗೆ ಸಮಾಲೋಚಿಸಿದರು. ಕಂಚಿಯ ಜಗದ್ಗುರು ಚಂದ್ರಶೇಖರ ಸ್ವಾಮಿಗಳ ಅಮೃತ ಹಸ್ತದಿಂದ ’ಓಂ’ ಎಂದು ದೇವನಾಗರಿ ಲಿಪಿ ತಿದ್ದಿಸಿ ಮೊಮ್ಮಗನ ಭವಿಷ್ಯ ಬಂಗಾರವಾಗುವುದೆಂದು ಸೂಚಿಸಿದರು. ಪುಜ್ಯರಿಂದ ಅಕ್ಷರಾಭ್ಯಾಸ ಮಾಡಿಸಿಕೊಂಡ ಅನೇಕರು ದೇಶ ವಿದೇಶಗಳಲ್ಲಿ ತುಂಬ ಹೆಸರು ಮಾಡಿರುವರೆಂದು ವಿವರಿಸಿದರು. ಅದು ಶಾಸ್ತ್ರಿಗಳಿಗೆ ಗೊತ್ತಿರದ ಸಂಗತಿ ಏನಲ್ಲ! ತಮ್ಮ ವಂಶದ ಹಿರಿಯರೆಲ್ಲ ಕಂಚಿಪೀಠದೊಂದಿಗೆ ಒಂದಿಲ್ಲೊಂದು ಅನುಭಾವದ ಸಂಬಂದ ಇತ್ತುಕೊಂಡಂಥವರೇ. ಮಗ ಅಶ್ವಥ್‌ನಿಗೆ ಇಂಥ ಎಚ್ಚರಿಕೆ ತೆಗೆದುಕೊಂಡಿದ್ದರೆ ಅವನು ಹೀಗೆ ಮಿಲಿಟರಿ ಸೆರುತ್ತಿರಲಿಲ್ಲ.
ಸೊಸೆಗೆ ವಿವರಿಸಿದರು. ಅಕೆಗೂ ಅರ್ಥವಾಗಲಿಲ್ಲ. ಪ್ರತಿಯೊಂದಕ್ಕು ಕವಲೆತ್ತಿನಂತೆ ತಲೆ ಅಡ್ಡಾಡಿಸುವುದನ್ನು ರೂಢಿಸಿಕೊಂಡಿದ್ದಳು.

ದೂರದ ಕಂಚಿಗೆಹೊರಡುವ ದಿನ ನಿಗದಿಪಡಿದಿದರು. ಮನೆ ಮುರುಕಟ್ಟಿನಲ್ಲಿದ್ದ ಚೂರು ಪಾರು ಬಂಗಾರ ಮಾರಿ ಹಣ ಜೋಡಿಸಿದರು. ಅದರೊಂದಿಗೆ ಮಗ ಕಳಿಸಿದ್ದ ಹಣವೂ ಇತ್ತು.

ಅವರು ಕಂಚಿಗೆ ಹೊರಟು ನಿಂತದ್ದನ್ನು ಅಗ್ರಹಾರದವರು ಬೆಂಬಲಿಸಿದರು. ರೈಲ್ವೇ ನಿಲ್ದಾಣಕ್ಕೆ ಕೆಲವು ಹಿರಿಯರು ತಮ್ಮ ಬಲಂಗೋಚಿಗಳೊಂದಿಗೆ ಹೋಗಿ ಶಾ‌ಆಸ್ತ್ರಿಗಳನ್ನು, ಅವರ ಕುಟುಂಬದ ಸದಸ್ಯರನ್ನೂ ಬೀಳುಕೊಟ್ಟು ವಾಪಸಾದರು.

ಪ್ರಯಾಣದಲ್ಲಿ ಅಹಿತಕರ ಸಂಘಟನೆಗಳು ಸಂಭವಿಸಲಿಲ್ಲ. ಹೊರಟ ಘಳಿಗೆ ಚೆನ್ನಾಗಿತ್ತು. ಶ್ರೀಗಳು ಅವರ ಪುಣ್ಯಕ್ಕೆ ಶ್ರೀಕ್ಷೇತ್ರದಲ್ಲಿದ್ದರು. ಸೂಕ್ತ ಫ಼ೀಜು ತೆತ್ತು ಮಗನಿಗೆ ಉಪನಯನ ಮಾಡಿಸಿದರು.

ಮಹಾರಝರ ಆಸ್ಥಾನ ವಿದ್ವಾನ್ ಶಾಮಾಶಾಸ್ತ್ರಿಗಳ ಮರಿಮೊಮ್ಮಗನನ್ನು ನೋಡಿ ಶ್ರೀಗಳು ಮೌನದಲ್ಲೂ ಸಂತೊಷ ವ್ಯಕ್ತ ಪಡಿಸಿದರು. ಶ್ರೀಕ್ಷೇತ್ರದಲ್ಲಿ ಎಲ್ಲಾ ಘಳಿಗೆಗಳೂ ಅಮೃತಮಯವೇ. ಮಂಗಲಮಯವೇ. ಶ್ರೀಗಳಿಂದ ಶಿಕ್ಷಣ ಶ್ರೀಕಾರ ಹಾಕಿಸಿಕೊಂಡವರು ಏನು ಆಗಿದ್ದಾರೆ? ಏನು ಕಥೆ?
“ನಿಮಗೆ ಗೊತ್ತಿದೆಯೋ ಇಲ್ಲವೋ, ಜವಹರಲಾಲ ನೆಹರೂ ಸ್ವತಂತ್ರ ಹೋರಾತಕ್ಕೆ ಅಂತ ಮದ್ರಾಸಿಗೆ ಬಂದಿದ್ದಾಗ, ತಮ್ಮ ಏಕಮಾತ್ರ ಪುತ್ರಿ ಇಂದಿರಾ ಪ್ರಿಯದರ್ಶಿನಿಗೆ ಇಲ್ಲಿಯೇ ಅಕ್ಷರಾಭ್ಯಾಸ ಮಾಡಿಸಿದ್ದು” ಜ್ಞಾನ ವೃದ್ಧರೋರ್ವರು ನುಡಿದರು.

ಹುಟ್ಟಿದಾರಭ್ಯ ಕೇವಲ ಪ್ರಾಣಾಯಾಮ, ಗಾಯತ್ರಿ ಮಂತ್ರಗಳಿಮ್ದಲೇ ಪಾರಮಾರ್ಥದ ಬದುಕು ಬದುಕುತ್ತಿರುವ ಶ್ರೀಗಳ ಸನ್ನಿದಿಯಲ್ಲಿ ಮಗುವನ್ನು ಕೂದ್ರಿಸಿದರು,
ದೈವದತ್ತ ಸಾಕಾರಮೂರ್ತಿಯಂಥ ಶ್ರೀಗಳು ಬಂದು ಪವಿತ್ರ್ ಆಸನದಲ್ಲಿ ಸುಖಾಸೀನರಾದರು. ಮಗುವಿನ ಪುತ್ತ ತಲೆಯನ್ನು ಸ್ಪರ್ಶಿಸಿದರು. ಹಾಗೆಯೇ ಶಿಖಿರಪ್ರಾಯವಾಗಿ ಕಂಗೊಳಿಸುತ್ತಿದ್ದ ಅದರ ಜುಟ್ಟನ್ನೂ ಸಹ.
ಕಾಮಾಕ್ಷಿ ದೇವಾಲಯದ ಘಂಟಾನಾದವಾಗುತ್ತಿರುವಾಗಲೇ ಮಗುವಿನ ಕೈಯಿಂದ ’ಓಂ’ ಒಂಬೊಂದು ದೆವನಾಗರಿ ಲಿಪಿಯ ಪವಿತ್ರ ಅಕ್ಷರವನ್ನು ತಿದ್ದಿಸಿದರು.

ಆ ಸನ್ನಿವೇಶದಿಂದ ಶಾಸ್ತ್ರಿಗಳು ಪುಳಕಿತಗೊಂಡರು. ಇನ್ನು ತಮ್ಮ ಮೊಮ್ಮಗನ ಬದುಕಿನ ಭಾಗ್ಯದ ಬಾಗಿಲು ತೆರಿಯಿತೆಂದೇ ಭಾವಿಸಿದರು.
ಕಂಚಿಯಲ್ಲಿ ಎರಡು ದಿನ, ತಿರುಪತಿಯಲ್ಲಿ ವೆಂಕಟೇಶ್ವರ ಸನ್ನಿಧಿಯಲ್ಲಿ ಎರಡು ದಿನ ಹಾಗೆಯೇ ಶ್ರೀಕೃಷ್ಣದೇವರಾಯರ ಪೂರ್ವಾಶ್ರಮವಾದ ಚಂದ್ರಗಿರಿಯಲ್ಲೊಂದು ದಿನವಿದ್ದು ಊರಿಗೆ ವಾಪಸ್ಸಾದರು.
ಆಗ್ರಹಾರದ ಎಲ್ಲರೂ ಬಂದು ಮಗುವಿನ ತಲೆಯ ಜುಟ್ಟನ್ನು ನೋಡಿದ್ದೇ ನೋಡಿದ್ದು. ಸ್ಪಶಿಸಿದ್ದೇ ಸ್ಪರ್ಶಿಸಿದ್ದು. ಹೊಗಳಿದ್ದೇ ಹೊಗಳಿದ್ದು. ತೀರ್ಥ ಪಡೆದದ್ದೇ ಪಡೆದದ್ದು.; ಪ್ರಸಾದ ಸ್ವೀಕರಿಸಿದ್ದೇ ಸ್ವೀಕರಿಸಿದ್ದು.

ಅಗ್ರಹಾರದ ಸಹ ನಿವಾಸಿಗಳು ಕೆಟ್ಟ ಕೈಯಿಂದ ಮುಟ್ಟಿದ್ದಕ್ಕೋ, ಕೆಟ್ಟ ಕಣ್ಣಿಂದ ನೋಡಿದ್ದಕ್ಕೋ ಏನೋ ಮಗು ಶಾಮು ಸಂಜೆ ಜ್ವರದಿಂದ ಹ್ಹಾಂ! ಹ್ಹೂಂ ಅನ್ನ ತೊಡಗಿತು. ಶಾಸ್ತ್ರಿಗಳು ಜ್ವರ ಸ್ಥಂಬನ ಮಂತ್ರ ಹಾಕಿದರು. ಮಗು ಮೆಟ್ತಿ ಬೀಳತೊಡಗಿತು. ತಾಮ್ರದ ತಗಡಿನ ಯಂತ್ರ ಮಂತ್ರಿಸಿ ಅದರ ಉಡಿದಾರಕ್ಕೆ ಕಟ್ಟಿದರು. ಅರುಣೋದಯ ಸಮಯದಲ್ಲಿ ಮಗನ ಹಣೆಗೆ ನೀಲಗಿರಿ ಎಣ್ಣೆ ಲೇಪಿಸುತ್ತಿದ್ದುದನ್ನು ಅದೇ ತಾನೆ ಅರ್ಚನಾ ಕೋಣೆಯಿಂದ ಶಾಸ್ತ್ರಿಗಳು ಕಂಡರು.

“ಮಗುವಿಗೆ ಜ್ವರ ಇಳಿದಿಲ್ಲವೇನಮ್ಮಾ?” ಎಂದು ಉಚ್ಚರಿಸಿದರೋ ಇಲ್ಲವೋ ಅಷ್ಟರಲ್ಲಿ ಈ ಮಗು ಮಾರುದ್ದ ದ ಭೇದಿ ಮಾಡಿಕೊಂಡಿತು. ಹಾಗೆ ಒನ್ನಿಷ್ಟು ಫೈವ್‌ನಂತೆ ವಂತಿಯನ್ನು ಸಹ.
ಮಧ್ಯನ್ನದ ಹೊತ್ತಿಗೆ ಅಲುಮೇಲು ಕಂಗಾಲಾಗಿ ಅಳತೊಡಗಿದಳು.
“ಮಾವನವರೇ ಮಗೂನ ಇಳಿಸಿಕೊಡ್ರಿ” ಎಂದು ಸೆರಗೊಡ್ಡಿದಳು.
“ಅದಕ್ಯಗಿಷ್ಟು ಕಂಗಲಾಗಿರುವಿ ತಾಯಿ. ಯಂತ್ರ ಮಂತ್ರಕ್ಕೂ ಇದು ಜಗ್ಗಲಿಲ್ಲವೆಂದ ಮೇಲೆ ಗ್ರಹದೋಷವಿರಬೇಕು ತಡೆ ನೋಡೋಣ” ಎಂದವರು ಪಂಚಾಂಗದ ಗಂಟು ಬಿಚ್ಚಿದರು.

ಸ್ವತಿ ನಕ್ಶತ್ರಕ್ಕೆ ಸವಾಲೆಸೆದಿರುವ ಗ್ರಹಗಳನ್ನು ತರಾಟೆಗೆ ತೆಗೆದುಕೊಂಡರು. ’ಇದೆಲ್ಲಾ ಮಂಗಳನ ಕೀಟಲೆ’ ಉದ್ಗರಿಸಿದರು.
ಅಗ್ರಹಾರದಲ್ಲಿದ್ದ ತಿರುಚೈಂದೂರು ತುರುಮಲಯಿಂಗಾರರ ಮನೆಗೆ ಹೋದರು. ಅವರು ಹತ್ತಾರು ಮಂದಿ ಬ್ರಿಟಿಷ್ ಉನ್ನತಾಧಿಕಾರಿಗಳಿಗೆ ಅವರವರ ಜಾತಕ ಬರೆದುಕೊಟ್ಟು ವಿಶ್ವವಿಖ್ಯಾತರಾಗಿದ್ದಂಥವರು. ಪಾಪ! ಗ್ರಹ ನಿಹಾರಿಕೆಗೆಗಳ ಮೇಲೆ ಸವಾರಿ ಮಾಡಿದ್ದಂಥ ಆ ಮಹಾನುಭಾವರು ವಾತಪಿತ್ತಕಫಗಳಂಥ ರೋಗ ರುಜಿನಗಳಿಂದ ನರಳುತ್ತಿದ್ದರು. ಕಳೆದ ಅಮಾವಾಸೆ ಸಂಧರ್ಭದಲ್ಲಿ ಊರ ಗೌಡನಿಂದ ಗೋದಾನ ಪಡೆಯುತ್ತಿರುವಾಗ ಜ್ಯೋತಿಷ್ಯ ಮಾರ್ತಾಂಡರ ದೇಹದ ವಾಮಭಾಗಕ್ಕೆ ಪಾರ್ಶ್ವವಾಯು ಬಡಿದುಬಿಡಬೇಕೆ?

ಶಾಸ್ತ್ರಿಗಳು ಹೋಗಿ ಅವರ ಬಲಭಾಗದಲ್ಲಿ ಕೂತು ಪಾನಕ ಸ್ವೀಕರಿಸಿ ಆರೋಗ್ಯ ಭಾಗ್ಯ ವಿಚಾರಿಸಿದರು. ನಂತರ ತಮ್ಮ ಮೊಮ್ಮಗನ ಬಗ್ಗೆ ಮತೆತ್ತಿದರು. ಅದನ್ನೆಲ್ಲ ತಿರುಮಲೈಮ್ಗಾರರ ಬಲಕಿವಿಯಲ್ಲಿ ಗಟ್ಟಿಯಾಗಿ ಹೇಳಬೇಕಾಗಿತ್ತು. ಅವರ ನಾಲಿಗೆಯ ಅರ್ಧ ಭಾಗದಿಂದ ಏನನ್ನೋ ಹೇಳಲು ಪ್ರಯತ್ನಿಸಿದರು. ದೇವನಾಗರಿ ಭಾಷೆ ಕೀರಕ್ ಕೀರಕ್ ಅಂತ ಹೋರಟಿತು. ಹಾಗೆ ಅರ್ಥ ಮಾಡಿಕೊಂಡು ಹೀಗೆ ಹೊರಟುಬಂದರು.

ಕ್ಷುದ್ರ ದೇವತೆಯೊಂದು ಮೊಮ್ಮಗನಿಗೆ ಬಡಿದುಕೊಂಡಿದೆ ಎಂದುಕೊಂಡು ಹೋಮ ಹವನ ಮಾಡಿದರು. ಎಳ್ಳು ಔಡಲ ಶೇಂಗಾ ಇವೇ ಮೊದಲಾದ ಪಂಚ ತೈಲದಲ್ಲಿ ಮಗನ ಪ್ರತಿಬಿಂಬ

ಮಾಡಿಸಿದರು. ಅದು ಮಾಡಿಸಿದ್ದೇ ತಡ ಶಮಣ್ಣ ಮತ್ತೊಮ್ಮೆ ನೀರು ನೀರಾದ ಭೇದಿ ಮಾಡಿಕೊಂಡಿತು. ಜೊತೆಗೆ ಒಂದು ಅದ್ಭುತವಾದ ವಾಂತಿಯನ್ನೂ ಸಹ.
ತನ್ನ ಮಗ ತನ್ನ ಕೈ ಬಿಡುತ್ತಿದ್ದಾನೆಂದು ಅಲುಮೆಲು ಆಕಾಶ ಕಳಚಿ ಬೀಳುವಂತೆ ಅಳತೊಡಗಿದಳು.
“ಮಾವನವರೇ, ಡಕ್ತ ಬಳಿಗೆ ಹೋಗೋಣ” ಅಕೆ ಒಂದೇ ಸಮನೆ ಪೀಡಿಸತೊಡಗಿದಳು.
ಕಾಯಿಲೆ ಕಸಾಲೆಗಳಿಗೆ ಇಂಗ್ಲಿಷ್ ಕಲಿತ ಡಾಕ್ತರ್ ಬಳಿಗೆ ಹೋಗುವುದೆಂದರೇನು? ರಾಮಾ! ರಾಮಾ! ಕಿವಿ ಮುಚ್ಚಿಕೊಂಡರು. ತಮ್ಮ ವಂಶದವಯಾರೂ ಇಂಗ್ಲಿಷ್ ಮಾತ್ರೆ ನೊಂಗಿರುವುದುಂಟೆ, ಸುಜಿ ಮಾಡಿಸಿಕೊಂಡಿರುವುದುಂಟೆ?
ಬೆಳೆಗ್ಗೆ ಬಂದ ಬೀಗರೂ ಸಹ ತಮ್ಮ ಮಗಳ ವಾದವನ್ನು ಸಮರ್ಥಿಸಿದರು. ಕೊನೆಗೂ ಒಪ್ಪಿಕೊಂಡರು ಶಾಸ್ತ್ರಿಗಳು. ಆಚಾರ ವಿಚಾರದಲ್ಲಿ ಪರಿನಿತಿ ಇರುವ ತಮ್ಮ ಗೋತ್ರದವರೇ ಆದ ಡಾಕ್ಟರ್ ಬಳಿಗೆ ಹೋದರು.

ಮಗುವಿನ ದೇಹ ತಪಾಸಣೆ ಮಾಡಿದ ಡಾಕ್ಟಗೆ ಶಾಸ್ತ್ರಿಗಳ ಮೆಲೆ ಸಿಟ್ಟು ಬಂತು. “ಇಷ್ಟೊಂದು ದಿಹೈಡ್ರೇಟಾಗಿ ಮಗು ಫ್ಯಾಟಲ್ ಕಂಡೀಷನ್ ತಲುಪಿದೆ, ಡಾಕ್ಟರ್ ಬಳಿಗೆ ಕರೆದುಕೊಂದು ಬರುವುದು ಬಿಟ್ಟು ಕುಂಡಲಿ ನೋಡ್ಕೊಂಡು ಕೂತಿದ್ದೀರಲ್ಲ ನೀವೇನು ಮನುಷ್ಯರೋ ರಾಕ್ಷಸರೋ” ಹೀಗೆ ಡಾಕ್ಟರ್ ಬಾಯಿಗೆ ತೋಚಿದಂಎ ಮಾತನಾಡಿದರು.

ಆ ಡಾಕ್ಟರ್ ಬೇರೆ‌ಆರೂ ಅಲ್ಲ. ದೂರದವಂತವರೂ ಅಲ್ಲ. ಅವರ ತಂದೆ ನಾಗಭೂಷಣ ಶರ್ಮ ಪಂದಿತರೂ ತಾವೂ ಗಳಸ್ಯ ಕಂಠಸ್ಯ. ಅಲ್ಲದೇ ಈ ಡಾಕ್ಟರನ ಜನ್ಮಕುಂಡಲಿಯನ್ನು ಬರೆದದ್ದು ತಾವೆ? ಇಂಗ್ಲಿಷ್ ಕಲಿತ ಇವರಿಗೆ ಆಧುನಿಕತೆಯ ಗರ ಬಡಿದಿದೆ. ಶಾಸ್ತ್ರಿಗಳು ಮೌನವಹಿಸಿದರು.

ಮಗು ಶಾಮಣ್ಣನ ಚಿಕಿತ್ಸೆ ಆಸ್ಪತ್ರೆಯಲ್ಲಿ ಇಡಿ ವಾರ ನಡೆಯಿತು. ಕ್ರಮೇಣ ವಾಂತಿ ಭೇದಿ ನಿಂತು ಮಗು ಚೇತರಿಸಿಕೊಂಡು ಮುಗುಳ್ನಗತೊಡಗಿತು. ಒಂದು ಒಳ್ಳೆ ಮಹೂರ್ತ ನೋಡಿ ಮಗುವನ್ನು ಮನೆ ತುಂಬಿಸಿಕೊಂಡರು.

ಮಗ ಅಶ್ವಥ್‌ಗೆ ತಂತಿ ಕಳಿಸಿದ್ದೇನೋ ನಿಜ. ಚೀನದವರು ಭಾರತದ ಗಡಿಯನ್ನು ಪ್ರವೇಶಿಸುವುದನ್ನು ತದೆಯಲು ತುಕುಡಿಯ ನೇತೃತ್ವ ವಹಿಸಿದ್ದಾನಾತ. ಶತೃಗಳು ಸಾಕಷ್ಟು ದೂರ ಹಿಮ್ಮೆಟ್ಟಲು ತಿಂಗಳುಗಳೇ ಹಿಡಿದವು. ಚಿಯಾಂಗ್ ಕುಂಯ್ ಎಂಬ ಶತ್ರು ಸೈನಿಕನೋರ್ವ ಗುಟ್ಟಾಗಿ ಗಡಿ ಪ್ರವೇಶಿಸಿ ಬಂದುಬಿಟ್ಟಿದ್ದ. ಆ ಎಕಾಂಗ ವೀರ ಅಶ್ವಥ್ ತುಕುದಿಯ ಮೇಲೆ ಇದ್ದಕ್ಕಿದ್ದಂತೆ ಗ್ರೆನೇಡ್ ಧಾಳಿ ಆರಂಭಿಸಿಬಿಟ್ಟ. ಮಧ್ಯರಾತ್ರಿಯಲ್ಲಿ ಅವನು ಸಾಕಷ್ಟು ಹೋರಾಡಿದ. ಇನ್ನೇನು ತಾನು ಸಾಯುತ್ತಿರುವೆನೆಂದಾಗ ಕೈ ಬಾಬನ್ನು ಬೀಸಿ ಅಶ್ವಥ್ ಕಡೆ ಎಸೆದ. ಅದು ಸೀದ ಬಂದದ್ದೆ ಅಶ್ವಥ್ ತೊಡೆ ಭಾಗಕ್ಕೆ ಬಡಿಯಿತು. ’ಜೈಹಿಂದ್” ಎಂದು ಜೋರ್ಗಿ ಕೂಗಿ ಅಶ್ವಥ್ ಮಾತೃಭೂಮಿಗೆರಗಿದ. ಕೂಡಲೆ ಮೂರ್ಛೆ ಹೋದ ಅವನನ್ನು ಮಿಲಿಟರಿ ಆಸ್ಪತ್ರೆಗೆ ಸೇರಿಸಲಾಯಿತು.

ಅವನ ಇಚ್ಛೆಯಂತೆ ಅವನ ತಂದೆಯವರಾದ ಶಾಸ್ತ್ರಿಗಳಿಗೆ ತಿಳಿಸಲಿಲ್ಲ. ಅವನ ಎಡಗಾಲನ್ನು ವೈದ್ಯರು ಪೂರ್ತಿ ಕೊಯ್ದು ತೆಗೆದುಬಿಟ್ಟಿದ್ದರು. ಪೂರ್ಣ ಗುಣಮುಖನಾಗಲು ಕೆಲವು ತಿಂಗಳುಗಳೇ ಹಿಡಿದವು. ಕೊನೆಗೊಂದು ದಿನ ಅವನಿಗೆ ಕೊಡುವುದೆಲ್ಲವನ್ನು ಕೊಟ್ಟು,

ನಿವೃತ್ತಿ ಮುಂಜೂರು ಮಾಡಿದರು. ದೇಶ ರಕ್ಷಣೆಗಾಗಿ ತನ್ನ ಕಾಲನ್ನೇ ಬಲಿ ಕೊಟ್ಟ ಅಶ್ವಥ್‌ನನ್ನು ಸೇನಾ ಮುಖ್ಯಸ್ಥರೆಲ್ಲಾ ಕೊಂಡಾಡಿದರು. ಎಲ್ಲರ ಕಣ್ಣುಗಳು ನೀರಿನಿಂದ ತುಂಬಿದವು. ಆತ ವೇದಿಕೆಗೆ ಊರುಗೊಲು ಸಹಾಯದಿಂದ ಬಂದ. ಫೀಲ್ಡ್ ಮಾರ್ಷಲ್ ಎಕ್ಸ್‌ವೈಜೆಡ್‌ರವರು ತಮ್ಮ ಕೈಯಾರೆ ಅವನಿಗೆ ಶಾಲು ಹೊದಿಸಿದರಲ್ಲದೆ, ಪುಷ್ಪ ಕರಂಡಕ ನೀಡಿದರು. ಅಶೋಕ ಚಕ್ರ ದಯಪಾಲಿಸುವಂತೆ ರಾಷ್ತ್ರಪತಿಗಳಿಗೆ ಶಿಫಾರಸು ಮಾಡುವುದಾಗಿ ಘೋಷಿಸಿದರು.
ಸೇನೆಯ ಹಲವು ಪ್ರಮುಖರು ಅಶ್ವಥ್‌ನನ್ನು ರೇಲ್ವೆ ನಿಲ್ದಾಣದವರೆಗೆ ಹೋಗಿ ಬೀಳ್ಕೊಟ್ಟು ವಾಪಾಸಾದರು.
ಇತ್ತ ಮನೆಯಲ್ಲಿ ಶಾಸ್ತ್ರಿಗಳು ತಮ್ಮ ಮಗನಿಗಾಗಿ ಅಲುಮೇಲು ತನ್ನ ಗಂಡನಿಗಾಗಿ; ಆಗಲೆ ಪುಟ್ಟ ಪುಟ್ಟ ಹೆಜ್ಜೆ ಇಟ್ಟು ಅಡ್ಡಾಡುತ್ತಿದ್ದ; ಹಾಗೂ ಶುಕ್ಲಾಂಬರದರಂ… ಯಾರೇಂದು ತುಷಾರ ಹಾರದವಳ ತೊದಲು ತೊದಲಾಗಿ ಹೇಳುತ್ತಿದ್ದ ಮಗು ಶಾಮು ತನ್ನ ತಂದೆಗಾಗಿ, ಜಾತಕ ಪಕ್ಷಿಗಳಂತೆ ಕಾಯುತ್ತಿದ್ದರು.

ರೋಮಾಂಚನ ಅಲೆಗಳನ್ನು ಹರಡಿಸುವಂಥ ಅಶ್ವಥ್ ನಾರಾಯಣ ಬರುವನೆಂಬ ಸುದ್ದಿ ಕೇಳಿ ಅಗ್ರಹಾರಕ್ಕೆ ಅಗ್ರಹಾರವೇ ಸ್ವಾಗತಕ್ಕೆ ಸಿದ್ಧವಾಗಿತ್ತು. ಅಗ್ರಹಾರದವರು ತಮ್ಮ ಸಂತೋಷವನ್ನು ದೈರೆಕ್ಟಾಗಿ ಪ್ರಶಂಸಿಸುವಂಥ ಪರಿಸ್ಥಿತಿ ಇರಲಿಲ್ಲ. ಅದೇ ಕೆಲವು ದಿನಗಳ ಹಿಂದೆ ಜ್ಯೋತಿಷ್ಯ ಮಾರ್ತಾಂಡ ತಿರುಚೈಂದೂರು ತಿರುಮಲೈಂಗಾರರು ಇಹಲೋಕ ತ್ಯಜಿಸಿದ್ದರು. ಇನ್ನೂ ಸುತಕದ ಛಾಯೆ ಮಸುಕು ಮಸುಕಾಗಿರುವಾಗಲೇ ಮಿಲಿಟರಿ ಸೇವೆಯಿಂದ ನಿವೃತ್ತಿ ಪಡೆದು ಅಗ್ರಹಾರಕ್ಕೆ ಆಗಮಿಸುತ್ತಿದ್ದಾನೆ.

ಶಾಸ್ತ್ರಿಗಳು ಮಗನನ್ನು ಸ್ವಾಗತಿಸಲು ಹೊರಟರು. ಸೊಸೆಯನ್ನು ಕರೆದರು. ಅಷ್ಟು ಸುಲಭವಾಗಿ ಆಕೆ ಬೀದಿಗೆ ಹೊರಡುವ ಸ್ಥಿತಿಯಲ್ಲಿರಲಿಲ್ಲ. ಆಕೆ ಮುಟ್ಟಾಗಿ ಮೂರು ದಿನ ಹೊರಗೆ ಕುಂಡ್ರಬೇಕಾಗಿತ್ತು. ಅದೂ ಅಲ್ಲದೇ ಅಮರಕೋಶದ ಮೊದಲ ಶ್ಲೋಕ ಬಾಯಿಪಾಠ ಮಾಡದ ಹೊರತು ಅನ್ನ ಹುಳಿ ಕೆನೆ ಮೊಸರು ಉಣ್ಣಕೂಡದೆಂದು ಮೊಮ್ಮಗನಿಗೆ ಕಟ್ಟಪ್ಪಣೆ ವಿಧಿಸಿದ್ದರು.

ಅದರಿಮ್ದ ತಾವೊಬ್ಬರೇ ಹೊರಟರು. ಕಾಲಮೀನ ಖಂಡಗಳು ಯಾಕೋ ನಿನ್ನೆಯಿಂದ ಸೇದುತ್ತಿದ್ದವು. ಆದರೂ ಪಾಣಿನಿಯ ಗತ್ತಿನಿಂದ ಒಮ್ದೊಂದೆ ಹೆಜ್ಜೆ ಹಾಕುತ್ತ ರೇಲ್ವೆ ನಿಲ್ದಾಣ ತಲುಪಿದರು. ಮಗ ಅಶ್ವಥ್ ಅಂತರಾಳದಿಂದ ಕಿತ್ತು ಬರುತ್ತಿದ್ದ. ಅವನನ್ನು ಯಾವಾಗ ನೋಡುವೆವೋ ಎಂಬ ಕಾತರ. ಹಾಳದ ರೈಲು ಬೇರೆ ನಲವತ್ತೈದು ಘಳಿಗೆ ತಡವಾಗಿ ಬರಲಿದೆ.

ಹೇಗೋ ಮಗ ಮಿಲಿಟರಿ ಸೇವೆಯಿಂದ ನಿವೃತ್ತಿ ಪಡೆದಿದ್ದಾನೆ. ದೈವಂಶ ಸಂಭೂತವಾದ ಬ್ರಾಹ್ಮಣ ಕುಲದಲ್ಲಿ ಹುಟ್ಟಿ ಮ್ಲೇಚ್ಛರಂತೆ ವರ್ತಿಸುತ್ತಿದ್ದಾನೆ. ಎಲ್ಲ ಮದ್ಯ ಅಮೇಧ್ಯದ ಫಲ., ಜೊತೆಗೆ ಸಹವಾಸ ದೋಷ. ತಮ್ಮ ಸಾನ್ನಿಧ್ಯದ ಪರಿಣಾಮದಿಂದ ಅವನನ್ನು ಬದಲಿಸಬೇಕು. ಸನಾತನ ಧರ್ಮ ಪರಿಪಾಲಿಸುವಂತೆ ಆಜ್ಞಾಪಿಸಬೇಕು. ನನ್ನ ಮೇಲೆ ಅವನಿಗೆ ಅತುಲ ಗೌರವ ಇಲ್ಲದಿಲ್ಲ.ತಮ್ಮಂತೆ ಅವನೂ ಕೂಡ ವೈದಿಕ ಕಲಿತು ಗುರು ಹಿರಿಯರ ವಿಶ್ವಾಸಕ್ಕೆ ಪಾತ್ರನಾಗಬೇಕು, ತಮ್ಮ ಕೈ ಅಡುಗೆಯನ್ನು ಮಗ ಊಟ ಮಾಡಲಿರುವನೆಂಬುದು ಅವರಿಗೆ ಹೆಮ್ಮೆ ತಂದಿತ್ತು. ಬಲಗೈ ಮೂಸಿಕೊಂಡರು. ಹುಳಿವಾಸನೆ ಹೊಡೆಯಿತು. ಕಾಯಿತುರಿ, ಶುದ್ಧ ಇಂಗು ಹಾಕಿ ಮಾಡಿದ್ದರು.

ಕಲ್ಲು ಬೆಂಚಿನ ಮೇಲೆ ಹಾಗೆ ಸ್ವಲ್ಪ ಹೊತ್ತು ತುಕಡಿಸಿದರು. ಘಂಟೆ ಮಾಡಿದ ಸದ್ದಿಗೆ ದಿಗ್ಗನೆ ಎಚ್ಚರಗೊಂಡರು. ಅವರಂತೆ ಇತರ ಮಂದಿಯೂ ಸಹ ಪ್ರಯಾಣಕ್ಕೆ ಹೊರಟಿರುವರೆಷ್ಟೋ

ಪಯಣಿಸಿ ಬಂದವರನ್ನು ಇದಿರುಗೊಳ್ಳಲು ಬಂದವರೆಷ್ಟೋ. ಪ್ರತಿಯೊಬ್ಬರ ಮನದಲ್ಲೂ ಹೊಯ್ದಾಟಗಳು. ಆತುರ, ಕಾತರಗಳೆಲ್ಲ ಮುಖದಲ್ಲಿ ಪ್ರತಿಬಿಂಬಿತಗೊಂಡಿದ್ದವು. ಎಲ್ಲರ ಗಮನವೂ ಮೂಡಣ ದಿಕ್ಕಿಗೇ.

ಅಂದುಕೊಂಡಿದ್ದಕ್ಕಿಂತ ಐದು ಘಲಿಗೆ ಮೊದಲೇ ಬಂತು ರೈಲು. ಹೆತ್ತ ತಾಯಿಯಂತೆ, ಅದು ಬಂದೊಡನೆ ಗಡಿಬಿಡಿ ಹೆಚ್ಚಿತು. ಏರುವವರೆಷ್ಟೋ? ಇಳಿಯುವವರೆಷ್ಟೋ? ಚಿಕ್ಕ ಪುಟ್ಟ ವ್ಯಾಪಾರಿಗಳ ಕೂಗು ನಿಲ್ದಾಣಕ್ಕೆ ಜೋಗುಳಪ್ರಾಯವಾಯಿತು.

ಶಾಸ್ತ್ರಿಗಳು ತಮ್ಮ ಮಗನಿರುವ ಬೋಗಿಗಾಗಿ ಹುಡುಕಾಟ. ನಡೆಸಿದರು. ಆರ್ಯ ವ್ಯಕ್ತಿತ್ವದ ಎತ್ತರದ ಆಳು ಅವನು. ದೂರದಿಂದಲೇ ತಮ್ಮನ್ನು ಗುರುತಿಸಿ ಅಪ್ಪಾಜಿ ಎಂದು ಕೂಗಬೇಕಾಗಿದ್ದವನು, ಎಲ್ಲರಿಗಿಂತ ಭಿನ್ನವಾಗಿ ಗೋಚರಿಸಬೇಕಾಗಿದ್ದವನು ಪುರುಷಸಿಂಹದಂತೆ ಕಣ್ಣೋಟ ಹರಿಸಬೇಕಾಗಿದ್ದವನು.

ರೈಲು ಎಂದಿಗಿಂತ ಹೆಚ್ಚು ಉದ್ದವಾಗಿತ್ತು. ಎಂದಿಗಿಂತ ಹೆಚ್ಚು ಪ್ರಯಾಣಿಕರನ್ನು ಹೊತ್ತು ತಂದಿತ್ತು. ಬೋಗಿಯಿಂದ ಬೋಗಿಗೆ ಆರ್ತರಾಗಿ ತಿರುಗಿದರು. ಪ್ರತಿಯೊಂದು ಕಿಟಕಿಯಲ್ಲಿ ಮುಖ ತೂರಿಸಿ “ಮಗನೇ ಅಶ್ವತ್ಥಾ ಎಲ್ಲಿದ್ದೀಯಪ್ಪಾ ನಾನು ಕಣೋ ನಿನ್ನ ತಂದೆ ನಿನಗಾಗಿ ಕಾಯುತ್ತಿರುವ ನಿನ್ನ ತಂದೆ ” ಕೂಗಿ ಹೇಳಿದರು. ಆದರೆ ಅವರಿಗೆ ತಮ್ಮ ಮಗ ದೊರಕಲಿಲ್ಲ. “ಪ್ರಯಶಃ ಈ ರೈಲಿಗೆ ಅವನು ಬಂದಿರಲಿಕ್ಕಿಲ್ಲ” ಇನ್ನೊಂದು ಬರಬಹುದೇನೋ! ಅದು ಬರುವುದು ಇನ್ನು ಸಂಜೆಗೇನೇ?

ಇಡೀ ಗ್ರಾಮದ ವಾತಾವರಣವನು ಒಂದು ಕ್ಷಣ ಬದಲಿಸಿದ ರೈಲು ತಾನಿನ್ನೇನು ಹೊರಡಲಿರುವುದಾಗಿ ಸಿಳ್ಳೆ ಹಾಕಿತು. ಹಳೆ ಪ್ರಯಾಣಿಕರೊಂದಿಗೆ ಹೊಸ ಪ್ರಯಾಣಿಕರನ್ನು ತುಂಬಿಕೊಂಡು ಹೊರಟಿತು. ಇದ್ದ ಒಂಭತ್ತು ಭೋಗಿಗಳನ್ನು ತಬ್ಬಿಕೊಂಡು ಹೊರಟ ತಾಯಿಯ್ಂತೆ.

ರೈಲು ಹೊರತು ಹೋದ ಮೇಲೆ ನಿಲ್ದಾಣ ಬಿಕೋ ಎನ್ನತೊಡಗಿತು. ನಿಲ್ದಾಣ ಬಿಕೋ ಎನ್ನ ತೊಡಗಿತು. ನಿಲ್ದಾಣದ ಪ್ರತಿಯೊಂದು ಮೂಲೆ ನಿಟ್ಟುಸಿರಿಡುತ್ತಿರುವಂತೆ ಭಾಸವಾಯಿತು. ಆಗಲೇ ಜನ ಒಬ್ಬೊಬ್ಬರಾಗಿ ಕರಗಿದರು.
ಮಗ ಬರಲಿಲ್ಲ.
ಬರಲೇಬೇಕಾಗಿದ್ದವನು ಬರಲಿಲ್ಲ.
ಶಾಸ್ರಿಗಳು ಭಾರವಾದ ಹೃದಯದಿಂದ ಗೇಟ್ ಕಡೆ ಹೆಜ್ಜೆಗಳನ್ನು ಎಣಿಸತೊಡಗಿದರು.
ಆಷ್ಟರಲ್ಲಿ ಅಪ್ಪಾಜಿ ಎಂಬೊಂದು ಕೂಗು ಕೇಳಿಸಿತು.
ಧ್ವನಿ ಬಂದ ದಿಕ್ಕಿನತ್ತ ತಿರುಗಿ ನೋಡಿದರು.
ಸ್ವಲ್ಪ ದೂರದಲ್ಲಿ ಒಬ್ಬ ವ್ಯಕ್ತಿ ಇದ್ದ. ಮುಖದ ಮೇಲೆ ಸಾಕಷ್ಟು ಗಡ್ಡ ಬೆಳೆದಿತ್ತು. ಮೈತುಂಬ ಶಾಲು ಹೊದ್ದಿದ್ದ.ಕಣ್ಣುಗಳು ಫಳಫಳ ಹೊಳೆಯುತ್ತಿದ್ದುವು. ಐದಾರು ಲಗೇಜುಗಳ ನಡುವೆ ನಿಂತಿದ್ದ. ಎರಡು ನಾಯಿಗಳು ಅವನ ಎರಡೂ ಪಕ್ಕ ನಿಂತು ತಮ್ಮಿಂದ ಏನಾದರೂ ಸಹಾಯ ಬೇಕೆ? ಎಂಬರ್ಥದ ನೋಟ ಬೀರುತ್ತಿದ್ದವು.

ಒಮ್ದು ಘಳಿಗೆ ದಿಟ್ಟಿಸಿ ನೋಡಿದ ನಂತರ ಶಾಸ್ತ್ರಿಗಳಿಗೆ ಅರ್ಥವಾಯಿತು. ಅವನು ತಮ್ಮ ಅಶ್ವಥ್ ನಾರಾಯಣ ಅಂತ. ಓಡಿಬಂದು ಅವನು ತಮ್ಮನ್ನು ತಬ್ಬಿಕೊಳ್ಳಲು ಪ್ರಯಿತ್ನಿಸಬೇಕಾಗಿತ್ತು. ಮ್ಲೇಚ್ಛರ ಸಹವಾಸದಿಂದ ಮೈಲಿಗೆಯಾಗಿತೀಯಾ ಮಗ್ನೆ. ಸ್ನಾನ ಮಾಡಿ ಶುಚಿರ್ಭೂತನಾಗಿ ಹತ್ತಿರ

ಬರುವಿಯಂತೆ ಎಂದು ತಾವು ಹೇಳಬೇಕಿತ್ತು.

ಅವನತ್ತ ಅವರು ಇಡತೊಡಗಿದ. ಒಂದೊಂದು ಹೆಜ್ಜೆ ಕಂಪಿಸತೊಡಗಿದವು. ತಾವು ವೇಗವಾಗಿ ಓಡುತ್ತಿರುವೆನೆಂದುಕೊಂಡರು. ಆದರೆ, ಅವನು ತಮ್ಮ ಕಡೆಗೆ, ತನ್ನ ತಂದೆಗೆ ಕಡೆಗೆ ಓಡಿಬರುತ್ತಿಲ್ಲ! ನಿಂತಲ್ಲಿಯೇ ನಿಂತಿದ್ದಾನೆ.
ಷಾಸ್ತ್ರಿಗಳು ಮಗನ ಸನಿಹದಲ್ಲಿ ನಿಂತರು. ನಖಶಿಖಾಂತ ನೋಡಿದರು.
ಆಪರಿಚರಂತೆ.
ಮುಲ ಸ್ವರೂಪ ಕಳೆದು ಕೊ‌ಓಂಡಿರುವ ಕರುಳನ್ನು ಗುರಿತಿಸುವವರಂತೆ.
“ಅಪ್ಪಾ ಯಾಕೆ ಹಾಗೆ ನೋಡ್ತಿದೀರಿ! ನಾನು ಕಣಪ್ಪಾ ನಿಮ್ಮ ಮಗ ಅಶ್ವತ್ಥ…” ಅಶ್ವತ್ಥ್ ಮೈ ಕವುಚಿದ ಶಾಲು ತೆಗೆದ.
ಒಂದು ಕಾಲಿಲ್ಲ… ಊರುಗೊಲಿದೆ

ಯಾಕೆ! ಹೀಗೆ! ಶಾಸ್ತ್ರಿಗಳಿಗೆ ತಲೆ ಸುತ್ತು ಬಂತು. ಅಶ್ವಥ್ ತಂದೆ ಬೀಳದ ಹಾಗೆ ಹಿಡಿದುಕೊಂಡ. ಅವರ ಕಣ್ಣುಗಳಿಂದ ನೀರು ದುಮ್ಮಿಕ್ಕಿತು. ಯಾರೊಬ್ಬರೂ ಮಾತಾಡಲಿಲ್ಲ. ಮೌನ ಆ ಕೆಲಸ ಮಾಡಿತು. ಗುರುತಿನ ಕೆಲವರು ಸಾಮಾನುಗಳನ್ನು ಟಾಂಗದಲ್ಲಿರಿಸಿ ಸಹಾಯ ಮಾಡಿದರು. ತಂದೆ ತಮ್ಮ ಪಕ್ಕ ಮಗನನ್ನು ಕುಳ್ಳಿರಿಸಿಕೊಂಡರು. ಬಲಗೈಯಿಂದ ಅವನು ಬೀಳದ ಹಾಗೆ ತಬ್ಬಿಕೊಂಡಿದ್ದರು.

ದೇಶಕ್ಕಾಗಿ ಒಂದು ಕಾಲು ಕೊಟ್ಟು ಬಂದಿರುವ ಗಂಡ; ಹೇಗೆ ಪ್ರತಿಕ್ರಿಯೆಸಿಬೇಕೋ ಅಲುಮೇಲಮ್ಮಗೆ ಅರ್ಥವಾಗಲಿಲ್ಲ. ಆಕೆಯ ಹೃದಯ ಕಟ್ಟೆಯೊಡೆಯಿತ್ತು. ಶ್ಲೋಕದ ಎರಡನೆ ಸಾಲನ್ನು ಬಾಯಿಪಾಠ ಮಾಡುತ್ತಿದ್ದ ಮಗನನ್ನು ಅಶ್ವಥ್ ಬರಸೆಳೆದು ಅಪ್ಪಿಕೊಂಡ, ಎತ್ತಿಕೊಂಡ. ಮುದ್ದಿಸಿದ. ” ಟ್ವಿಂಕಲ್ ಲಿಟ್ಲ್ ಸ್ಟಾರ್ ಓದೋದು ಬಿಟ್ಟು , ಹಾಳಾದ ಅಮರಕೋಶ ಓದ್ತಾ ಇದ್ದೀಯಲ್ಲ, ಶಾಮು ಡಾರ್ಲಿಂಗ್” ಎಮ್ದ. ಮಗು ತಾತನ ಕಡೆ ನೋಡಿತು. ದುಃಖದಲ್ಲಿ ಹೃದಯ ಬೇಯುತ್ತಿದ್ದ ಶಾಸ್ತ್ರಿಗಳು ಪ್ರತಿಕ್ರಿಯಿಸಲಿಲ್ಲ.

ಮಿಲಿಟರಿ ಸೇವೆಗೆ ಸೇರಿ ಸನಾತನ ಧರ್ಮಕ್ಕೆ ಅಪಚಾರ ಮಾಡಿ ಕಾಲು ಕಳ್ಕೊಂಡಿದ್ದರೂ ಠೇಂಕಾರದ ಮಾತುಗಳಿಗೇನು ಕಡಿಮೆ ಇಲ್ಲ – ಶಾಸ್ತ್ರಿಗಳು ಮನಸ್ಸಿನಲ್ಲಿ ಸಿಡುಕಿದರು.

ಒಂದು ಕಾಲು ಕಳೆದುಕೊಂಡಿದ್ದರೂ ಅಶ್ವಥ್ ಹೆಚ್ಚಿನ ಲವಲವಿಕೆಯಿಂದಿದ್ದ. ಗೃಹಕೃತ್ಯದ ಬಹುಪಾಲು ಆಗುಹೋಗುಗಳನ್ನು ತಾನೇ ಗಮನಿಸುತ್ತಿದ್ದ. ಹೆಂಡತಿ ಬೇಕು ಬೇಡಗಳನ್ನು ವಿಚಾರಿಸುತ್ತಿದ್ದ.

ತಂದೆಯವರು ತಮ್ಮ ಅರ್ಚನಾ ಸ್ಥಾನದಲ್ಲಿ ಕುಳ್ಳರಿಸಲು ಪ್ರಯತ್ನಿಸಿದ್ದುಂಟು. ವೈದಿಕ ಮಂತ್ರಗಳನ್ನು ಬಾಯಿಪಾಠ ಮಾಡು, ಸತ್ಯನಾರಾಯಣ ವ್ರತ ಮಾಡಿಸುವನ್ನು ಕಲಿತುಕೊಂಡರೆ ಶ್ರೀಮಂತರ ಪರಿಚಯವಾಗುತ್ತದೆ, ನಾಲ್ಕು ಕಾಸು ಸಂಪಾದಿಸಬಹುದು. ಹೆಂಡತಿ ಮಕ್ಕಳನ್ನು ಸುಖವಾಗಿಡಬಹುದೆಂದು ಹೇಳಿದ್ದುಂಟು. ಪವಿತ್ರ ಬ್ರಾಹ್ಮಣ ಕುಲದಲ್ಲಿ ಹುಟ್ಟಿ ಪ್ರಾತಃವಿಧಿ ಸಂಧ್ಯಾವಂದನೆಗಳನ್ನು ಮಾಡದಿದ್ದರೆ ಹೇಗೆ ಎಂದು ಸಿಡುಕಿದ್ದುಂಟು.

ಆದರೆ ಅವನು ತಂದೆಯ ಮಾತಿಗೆ ಮನ್ನಣೆ ಕೊಡಬೇಕಲ್ಲ? ಎಲ್ಲ ಮಾತುಗಳನ್ನು ಎಡಗಿವಿಯಿಂದ ಕೇಳಿ ಬಲಗಿವಿಯಿಂದ ಬಿಟ್ಟ.
ಆವನು ಪ್ರತಿಭಟಿಸುತ್ತಿದ್ದುದು ತನ್ನ ಮಗ ಶಾಮನನ್ನು ತಮ್ಮ ಸಂಸ್ಕೃತೀಕರಣಗೊಂಡ ದಾರಿಗೆ ಎಳೆಯಲು ಅವರು ಪ್ರಯತ್ನಿಸಿದಾಗ,
ಅಪ್ಪಾಜಿ, ಸಂಸ್ಕೃತ ವೈದಿಕ ಇವಲ್ಲ ನಿಮ್ ಕಾಲಕ್ಕೇನೆ ಮುಗಿದು ಹೋಗಲಿ. ಆದರೆ ನನ್ ಮಗನಿಗೆ ವೈದಿಕ ಗೈದಿಕ ಅಂತ ಕಲಿಸಿ ನಿಷ್ಪ್ರಯೋಜಕನನ್ನಾಗಿ ಮಾಡಬೇಕೆ? ಅವನ ಹೆತ್ತ ತಂದೆ ನಾನಿನ್ನೂ ಬದುಕಿದ್ದೀನಿ ಅವನ ಭವಿಷ್ಯ ರೂಪಿಸೋ ಜವಾಬ್ದಾರಿ ನನಗೆ ಬಿಟ್ಟುಬಿಡಿ” ಅಶ್ವಥ್ ಮುಲಾಜಿಲ್ಲದೆ ಮಾತಾಡಿಬಿಡುತ್ತಿದ್ದ.
ಅದನ್ನು ಕೇಳಿ ಶಾಸ್ತ್ರಿಗಳು ಕೆನೆಯುತ್ತಿದ್ದರು.

“ಖಬರ್ದಾರ್… ನನ್ ಮೊಗ್ಗಗ ಏನು ಆಗಬೇಕು? ಏನು ಬಿಡಬೇಕು ಎಂಬುದರ ಬಗ್ಗೆ ಯೋಚಿಸೋ ಅಧಿಕಾರ ನನಗೇ ಸೇರಿದ್ದು. ಶಾಮು ಹುಟ್ಟುವುದಕ್ಕಿಂತ ಮೊದಲೇ ಯೊಚಿಸಿ ನನ್ನ ತಂದೆಯವರ ಹೆಸರಿಟ್ಟಿದ್ದೀನಿ… ಕಂಚಿ ಪೂಜ್ಯರಿಂದ ಅಕ್ಷರಾಭ್ಯಾಸ ಮಾಡಿಸಿದ್ದು ಯಾಕೆ ಗೊತ್ತೇನೋ?”
“ಇದ್ನೆಲ್ಲ ನೀವು ನನ್ ಕೇಳಿ ಮಾಡಲಿಲ್ಲ ನಾನಿಷ್ಟೇ ಹೇಳೋದು, ನೀವು ನಿಮ್ ಪಾಡಿಗೆ ಇರ್ರಿ ಅಷ್ಟೆ”
ಮಾವನವರಿಗೆ ಸಿಟ್ಟು ಬರಿಸಬೇಡಿ. ಆದ್ರಿಂದ ಅವ್ರ ಆರೋಗ್ಯ್ ಕೆಟ್ಟು ಹೋಗುತ್ತೆ. ಅವರಿರೋವಗೂ ಅವರಿಚ್ಛೆಯಂತೆ ನಡೆದ್ರೆ ತಪ್ಪೇನೀಗ? – ಅಲುಮೇಲು ಗಂಡನಿಗೆ ಸಮಾಧಾನ ಹೇಳಲು ಪ್ರಯತ್ನಿಸಿದಳು.

“ಈ ವಿಷಯದಲ್ಲಿ ನೀನು ಮೂಗು ತೂರಿಸಬೇಡ. ನಾನಿಂಥೋರ ಹೊಟ್ಟೆಯಲ್ಲಿ ದೊಡ್ಡ ತಪ್ಪು ಮಾಡಿದ್ದೇನಿ. ಉಪನಯನದ ನೆಪದಿಂದ ನನ್ನನ್ನು ಕುರೂಪಿಯನ್ನಾಗಿ ಮಾಡಲು ನೋಡಿದರು. ಸಂಸ್ಕೃತ ಶಾಲೆಗೆ ಸೇರಿಸಿ ನಿಷ್ಪ್ರಯೋಜಕನನ್ನಾಗಿಸಲು ಪ್ರಯತ್ನಿಸಿದರು. ಇದನ್ನೆಲ್ಲ ಪ್ರತಿಭಟಿಸಬೇಕೆಂದೇ ನಾನು ಡಿಫೆನ್ಸ್‌ಸರ್ವೀಸ್ ಸೇರಿದ್ದು. ಏನೆಲ್ಲ ಕುಡಿದೆ, ಏನೆಲ್ಲ ತಿಂದೆ. ಎಲ್ಲಾ ಜಾತಿ ಹೆಂಗಸರ ಸಹವಾಸ ಮಾಡಿದೆ”

“ನೀವೆಂಥ ಮನುಷ್ಯರು ಕಣ್ರೀ. ಕುಡಿದದ್ದು ಹೇಳ್ತೀರಿ. ತಿಂದದ್ದು ಹೇಳ್ತೀರಿ. ಅದೂ ಅಲ್ಲದೆ ಹೆಂಗಸರ ಸಹವಾಸ ಮಾಡಿದ್ದು ಹೇಳ್ತಿದ್ದೀರ. ನನ್ನಿಂದ ಇದೆಲ್ಲ ಕೇಳೋಕಾಗಲ್ಲ” ಅಲುಮೆಲು ಬಿಕ್ಕಿ ಬಿಕ್ಕಿ ಅಳತೋಡಗಿದಳು.

“ನಿನ್ನ ಹತ್ತಿರ ಅಲ್ಲದೆ ಮತ್ತಾರ ಹತ್ತಿರ ಹೇಳಿಕೊಳ್ಳಲಿ ಅಲು. ದೇಹದ ಮನಸ್ಸಿನ ಅಗತ್ಯ ತೀರಿಸಿಕೊಳ್ಳೋಕೆ ದಾರಿ ಹುಡುಕಿಕೊಳ್ಳದೊದ್ದರೆ ಆಗ್ತದೆಯೇ?” ಹೆಂಡತಿಯ ತಲೆ ನೇವರಿಸಿದ.

“ನೀವೇಳ್ತಿರೋದ್ನೆಲ್ಲ ಮಾವನವರು ಕೇಳ್ಸಿಕೊಂಡಾರು. ಪಕ್ಕದ ಕೋಣೆಯಲ್ಲಿದ್ದಾರೆ. ಮೆಲ್ಲಗೆ ಮಾತಾಡಿ… ಮಾತಾಡದಿದ್ದರೂ ಸರಿಯೇ?”
“ಕೇಳಿಸಿಕೊಳ್ಳಲಿ ಬಿಡು… ಅವರು ಕೇಳಿಸಿಕೊಳ್ಳಲಿ ಅಂತಾನೆ ನಾನು ಗಟ್ಟಿಯಾಗಿ ಮಾತಾಡ್ತಿರೋದು. ಈ ಇಪ್ಪತ್ತನೇ ಶತಮಾನದಲ್ಲೂ ನನ್ನ ಮಗನಿಗೆ ಸಂಸ್ಕೃತ, ವೈದಿಕ ಕಲಿಸಿ ನಿಷ್ಪ್ರಯೋಜಕನನ್ನಾಗಿ ಮಾಡಲು ಹೊರಟಿದ್ದಾರಲ್ಲ… ಇದನ್ನು ಹೇಗೆ ಸಹಿಸಲಿ?”
ಏಹ್ಯಗ್ನೇತಸ್ಯ ಮಂತ್ರಸ್ಯ | ರಹೋ ಗಣ ಪುತ್ರೋ ಗೌತಮ ಋಷಿಃ | ಅಗ್ನಿರ್ದೆವತಾಃ ತ್ರಿಷ್ಟುಪ್

ಛಂದಃ | ಅಗ್ನಿರಾಹ್ವನೇ ವಿನಿಯೋಗಹ|| … ಪಕ್ಕದ ಕೋಣೆಯಲ್ಲಿ ಅಗ್ನಿ ಕಾರ್ಯದ ಮುಂದಿನ ಶಬ್ದ ಹೇಳದೆ ಶಾಸ್ತ್ರಿಗಳು ಒದ್ದಾಡಿದರು.
ಚಂಡಾಲ ಮಗ ಹುಟ್ಟಿ ಬಿಟ್ಟಿರುವನಲ್ಲ… ಹಣೆ ಹಣೆ ಚಚ್ಚಿಕೊಂದರು.
ತಮ್ಮನ್ನು ಬೈದರೆ ಬೈದುಕೊಳ್ಳಲಿ. ಆದರೆ ಸಂಸ್ಕೃತ ಸನಾತನ ಧರ್ಮವನ್ನು ಜರಿಯುವುದೇ… ಅದೂ ತಮ್ಮಂಥ ಪ್ರಕಾಂಡ ಪಂಡಿತರ ವಂಶದಲ್ಲಿ ಹುಟ್ಟಿ….
ತಂಗಾಳಿಯಂಥ ಅವರು ಬಿರುಗಾಳಿಯ ವೇಷ ತೊಟ್ಟರು.
ದಡೀರನೆ ಬಾಗಿಲು ತೆರೆದು ಹೊರಗಡೆ ಬಂದರು. ಪಲ್ಲವರ ವಿರುದ್ಧ ಕೆರಳಿದ ಕದಂಬರ ಮಯೂರ ಶರ್ಮನಂತಾದರು.

“ಏನೋ ಚಂಡಾಲ ಪುತ್ರನೇ… ನೀನು ಮ್ಲೇಚ್ಛರ ಸಹವಾಸ ಮಾಡಿ ಬಾಯಿಗೆ ಬಂದಂತೆ ಆಡುತ್ತಿರುವಿ. ಶೂದ್ರ ನಡುವಳಿಕೆಯಿಂದ ಕಾಲು ಕಳೆದುಕೊಂಡಿರುವುದು ಸಾಲದೇನು? ಹಿರಿಯರ ಪುಣ್ಯ ವಿಶೇಷವಿರದಿದ್ದಲ್ಲಿ ಮತ್ತೇನು ಕಳೆದುಕೊಳ್ಳುತ್ತಿದ್ದೆಯೋ ಏನೋ?” ಬಿಚ್ಚಿದ ಜುಟ್ಟನ್ನು ಕಟ್ಟಿಕೊಳ್ಳುತ್ತ ನುಡಿದರು.

” ನಾನೂ ಅದೇ ಅಂದುಕೊಳ್ತಿದೀನಿ. ಪ್ರಾಣ ಕಳೆದುಕೊಂಡು ನಿಮಗೆ ನೆಮ್ಮದಿ ತರಲಿಲ್ಲಾಂತ” ಊರುಗೋಲಿಗಾಗಿ ತಡಕಾಡಿದ ಗಂಡನ ಬಾಯಿ ಮುಚ್ಚಿದಳು. ಅಲುಮೇಲು. ಇಂಥ ಮಾತು ಕೇಳಬೇಕಾಗಿ ಬಂದಿರೋ ತನಗೆ ಮುತ್ತೈದೆ ಸಾವು ಬರಬಾರದೆ ಎಂದು ಮರುಗಿದಳು.

ಹೆಂಡತಿಯನ್ನೇ ಊರುಗೋಲು ಮಾಡಿಕೊಂಡು ಕೋಣೆಯಿಂದ ಹೊರಗಡೆ ಬಂದ ಅಶ್ವತ್ಥ್. “ಅದೆಷ್ಟು ಕೋಪ ಬಂದುಬಿಟ್ಟಿದೆಯಲ್ಲಪ್ಪಾ ನಿಮ್ಗೆ .. ನಾನು ಹೇಳಿದ್ದರಲ್ಲಿ ತಪ್ಪೇನಿದೇಂತ… ದೇಶದ ರಕ್ಷಣೆ ಮಾಡೋರನ್ನ ಮ್ಲೇಚ್ಛರು ಅಂತ ಅವಹೇಳನ ಮಾಡಿದ್ದೀರಲ್ಲ …ಜನನೀ ಜನ್ಮಭೂಮಿಶ್ಚ ಅಂತ ಹೇಳೋರು ನೀವೇ. ಸ್ವರ್ಗಾದಪಿ ಗರೀಯಸಿ ಅಂತ ಹೇಳೋರು ನೀವೇ?”
“ಅದನ್ನೆಲ್ಲ ಹೇಳಿರೋದು ಶೂದ್ರರಿಗೆ ಕ್ಷತ್ರಿಯರಿಗೆ… ನಮ್ಮಂಥ ಬ್ರಾಹ್ಮಣರಿಗಲ್ಲ”
ಬ್ರಾಹ್ಮಣನಾದವನು ದೇಶವನ್ನು ರಕ್ಷಿಸಬಾರದೆಂತೀರೇನು?”
ಅವನು ರಕ್ಷಿಸದಿದ್ದರೆ ದೇಶಗಳೆಲ್ಲ ಎಲ್ಲಿತಿದ್ದವು. ರಾಜರುಗಳೆಲ್ಲ ಎಲ್ಲಿತಿದ್ದರು? ಬ್ರಾಹ್ಮಣನಾದವನು ಯಜ್ಞ ಯಾಗಾದಿ ನಿತ್ಯ ಕರ್ಮಗಳನ್ನು ಮಾಡುತ್ತ; ದೇವತೆಗಳನ್ನು ಸಂತೃಪ್ತಿ ಪಡಿಸುತ್ತ ದೇಶವನ್ನು ಸುಭಿಕ್ಷವಾಗಿಡಬೇಕು”
ತಂದೆಯಾಡಿದ ಮಾತು ಕೇಳಿ ಅಶ್ವತ್ಥ್‌ಗೆ ನಗುಬಂತು. ನಕ್ಕ.
“ಇಪ್ಪತ್ತನೇ ಶತಮಾನದಲ್ಲೂ ಈ ರೀತಿ ಯೊಚಿಸ್ತಿದ್ದೀರಲ್ಲ… ಇದಕ್ಕೇ ನಗಬೇಕೋ ಅಳಬೇಕೋ… ಆಧುನಿಕತೆಯ, ನಾಗರೀಕತೆಯ ಸಂಶೋಧನೆಯ ಫಲಗಳು, ಸವಲತ್ತುಗಳನ್ನೆಲ್ಲ ಬೇಕಂತೀರ… ಮೇಲೆ ಈ ಮಾತಾಡ್ತೀರಲ್ಲ… ಛೇ…. ಛೇ…”
“ಅದ್ಯಾವ ಸವಲತ್ತುಗಳೋ ನಾವು ಅನುಭವಿಸ್ತಿರೋದು?”
“ಮ್ಲೇಚ್ಛರು ಅಂತ ನಿಮ್ಮಿಂದ ಕರೆಸಿಕೊಳ್ತಿರೋ ಜನ ಕಂಡುಹಿಡಿರೋ ವಿದ್ಯುತ್ ನಿಮ್ಗೆ ಬೇಕು. ಅವರು ನಡೆಸ್ತಿರೋ ಬಸ್ಸು ತುಂಬೆಲ್ಲ ನೀವು ಪ್ರಯಾಣ ಮಾಡಬೇಕು… ಅವರು ಕಟ್ಟಿರೋ ವಾಟರ್ ಟ್ಯಾಂಕುಗಳ ನೀರು ಬೇಕು. ಅವರು ಬೆಳೆಸ್ತಿರೋ ದವಸ ಧಾನ್ಯ ನಿಮ್ಗೆ ಬೇಕು. ತಂದೆಯ ಮುಖ ನೋಡಿದ. ಅದು ಅಗ್ಗಿಷ್ಟಿಕೆಯಂತಾಗಿತ್ತು. ಮತ್ತೆ ಮುಂದುವರೆದು ಹೇಳಿದ. “ಇಪ್ಪತ್ತನೇ ಶತಮಾನದಲ್ಲಿ ಬದುಕುತ್ತಾ ಹತ್ತನೆ ಶತಮಾನದ ಬಗ್ಗೆ ಯೋಚಿಸ್ತಿರಲ್ಲ…

ನಿಮ್ಮಥೋರು ಆಗಿನ ಶೈಲಿಯಲ್ಲೇ ಯಾಕೆ ಬದುಕಬಾರದೂಂತ… ವಿದ್ಯುತ್ ಉಪಯೋಗಿಸಬೇಡಿ. ಅದೂ ಶೂದ್ರರು ಕಂಡು ಹಿಡಿದಿರೋದು. ಓಡಲೆಣ್ಣೆ ದೀಪ ಹಚ್ಚಿಕೊಳ್ಳ್ರಿ… ಶೂದ್ರರು ನಡೆಸೋ ಬಸ್ಸು ರೈಲು ಬಸ್ಸುಗಳಲ್ಲಿ ಪ್ರಯಾಣ ಮಾಡಬೇಡಿ. ಚಕ್ಕಡಿಗಳಲ್ಲಿ ಪಲ್ಲಕ್ಕಿಗಳಲ್ಲಿ ಪ್ರಯಾಣ ಮಾಡಿ…” ಇನ್ನೂ ಏನೇನೋ ಹೇಳಲಿದ್ದ.
“ಬಾಯಿಗೆ ಬಂದಂತೆ ಮಾತಾಡಿದ್ರೆ ರೌರವ ನರಕ ಪ್ರಾಪ್ತವಾದೀತು… ಹುಷಾರ್” ಶಾಸ್ತ್ರಿಗಳು ಕೃದ್ಧರಾಗಿ ಬೆತ್ತ ಝಳಪಿಸಿದರು.” ನೀನು ನಾನು ಎಲ್ಲರೂ ಅಗ್ರಹಾರದಲ್ಲಿ ವಾಸ ಮಾಡ್ತಿದ್ದೀವಿ ಎಂಬುದನ್ನು ಮರೀಮೇಡ. ಅಗ್ರಹಾರದ ರೀತಿ ನೀತಿಗಳನ್ನು ಉಲ್ಲಂಘಿಸಿದರೆ ಪರಿಣಮ ನೆಟ್ಟಗಾಗೋದಿಲ್ಲ…”
“ಕೇಳಿಸಿಕೊಳ್ಳಲಿ ಬಿಡಿ… ಅವರಿಂದ ಆಗೋದೇನಿದೆ?”
“ಎಲ್ಲಾ ತೊರೆದಿರುವ ನಿನಗೆ ಅಗ್ರಹಾರದ ಗೌರವ ಯಾವ ಲೆಕ್ಕ. …ಇದು ನಮ್ಮ ಮನೆ… ಹಿರಿಯರು ಹವನ ಹೋಮ ಯಜ್ಞ ಯಾಗ ಮಾಡಿದಂಥ ಮನೆ. ಈ ಮನೇಲಿ ಇರಬೇಕಾದೋರು ಸನಾತನ ಧರ್ಮ ಪಾಲಿಸಬೇಕು ಎಂಬುದನ್ನು ಮರೆಯಬೇಡ” ಶಾಸ್ತ್ರಿಗಳು ಕಡ್ಡಿ ಮುರಿದಂತೆ ಹೇಳಿದರು.

ಬೆಳಗಾಯಿತು.

ಅರ್ಚನಾ ಕೋಣೆಯಲ್ಲಿ ಎಂದಿನಂತೆ ವಿದ್ಯುದ್ದೀಪದ ಬದಲು ಹರಳೆಣ್ಣೆ ದೀಪ ಉರಿಯುತ್ತಿತ್ತು. ಅದರ ಬೆಳೆಕಿನಲ್ಲಿ ಶಾಸ್ತ್ರಿಗಳು… ಧಿಯೋಯೋನಃ ಪ್ರಚೋದಯಾತ್… ಹೇಳುತ್ತ ಪ್ರಾಣಾಯಾಮ ಮಾಡುವುದರಲ್ಲಿ ಮಗ್ನರಾಗಿದ್ದರು. ಪ್ರಾಯಶ್ಚಿತ್ತಕ್ಕಾಗಿಯೋ ಏನೋ ಶುಕ್ರ ಉದಯಿಸುವಕ್ಕೆ ಪೂರ್ವ ಸಮಯದಿಂದಲೇ ಗಾಯತ್ರಿ ಮಂತ್ರೋಚ್ಚಾರಣೆ ಆರಂಭಿಸಿದ್ದರು. ಅವರ ಕಂಚಿನ ಕಂಠ ಅಲೆ‌ಅಲೆಯಾಗಿ ಅಗ್ರಹಾರದ ನಿರ್ಮಲ ವಾತಾವರಣಕ್ಕೆ ವಿಶೇಷ ಮೆರುಗು ನೀಡಿತು.

ಆಶ್ವತ್ ಕೂಡ ಬೇಗ ಎದ್ದಿದ್ದ. ಸ್ನಾನ ಮಾಡಿ ಹೊರಬಿದ್ದ. ಊರೊಳಗಡೆ ಮಧ್ಯಾನ್ನದವರೆಗೆ ತಿರುಗಾಡಿದ. ಅವರನ್ನು ಕಂಡ, ಇವರನ್ನು ಕಂಡ, ಡಾಬಾದಲ್ಲಿ ಊಟ ಮುಗಿಸಿ ಮನೆಗೆ ಮರಳುವ ಹೊತ್ತಿಗೆ ಸಾಯಂಕಾಲ ಸಮೀಪಿಸಿತು.

ಅಷ್ಟೊತ್ತಿಗಾಗಲೆ ವಂಕದಾರಿ ವೆಂಕಪ್ಪಶೆಟ್ಟರ ಮನೆಯಲ್ಲಿ ಸತ್ಯನಾರಾಯಣ ವ್ರತವನ್ನು ಸಾಂಗೋಪಾಂಗವಾಗಿ ನೆರವೇರಿಸಿ ಪರಮೇಶ್ವರ ಶಾಸ್ತ್ರಿಗಳು ಮನೆಗೆ ಮರಳಿದ್ದರು. “ಏನು ಶಾಸ್ತ್ರಿಗಳೇ, ವೈದಿಕ ನಿಮ್ಮ ತಲೆಗೇ ಮುಗಿದು ಹೋಗುವುದೇನೋ” ಎಂಬ ಶಂಕೆ ಶೆಟ್ಟಿ ವ್ಯಕ್ತ ಪಡಿಸಿದ್ದರು. “ಮೊಮ್ಮಗನಿಗಾದ್ರೂ ನಿಮ್ಮ ದಾರಿಯಲ್ಲಿ ನಡೆಯೋದನ್ನು ಕಲಿಸಿಕೊಡಿ” ಎಂದರು ಶೆಟ್ಟರ ಧರ್ಮಪತ್ನಿ ಲಕ್ಷಮ್ಮ. ಮಗು ಶಾಮನ ತಲೆ ನೇವರಿಸಿ ದರ್ಭೆ ಕೌಪೀನಕ್ಕೆಂದು ಐವತ್ತು ರೂಪಾಯಿ ಬಕ್ಷೀಸು ಕೊಟ್ಟು ಕಳುಹಿದ್ದಳು. ಆ ಶೆಟ್ಟಿ ದಂಪತಿಗಳು ಸಂತಾನ ಪ್ರಾಪ್ತಿಗಾಗಿ ಶೋಬನ ಮುಗಿದ ಎರಡು ವರ್ಷದಿಂದ ಸತ್ಯನಾರಾಯಣ ವ್ರತವೇ ಮೊದಲಾದ ವ್ರತ ನಿಯಮಗಳನ್ನು ಮಾಡುತ್ತಲೇ ಬಂದಿದ್ದರು. ಮುಂದಿನ ವರ್ಷ ವಿದ್ಯಾರಣ್ಯರ ಕಾರ್ಯಕ್ಷೇತ್ರದಲ್ಲಿ ನಡೆಯಲಿರುವ ಪುತ್ರ ಕಾಮೇಷ್ಥಿಯಾಗದಲ್ಲಿ ಫಲಪ್ರಾಪ್ತಿಗಾಗಿ ಭಾಗವಹಿಸುವಂತೆ ಶಾಸ್ತ್ರಿಗಳು ಹಿಂದಿರುಗುವ ಮೊದಲು ಸೂಚಿಸಿದ್ದರು.

ಹಾದಿಯುದ್ದಕ್ಕೂ ಅವರು ಸ್ವೀಕರಿಸುತ್ತಿದ್ದ ನಮಸ್ಕಾರಗಳು ಎಷ್ಟೋ? ಮಾಡುತ್ತಿದ್ದ ಆಶೀರ್ವಾದಗಳು ಎಷ್ಟೋ? ಆಶೀರ್ವಾದಗಳಲ್ಲಿ ಎಷ್ಟೋ ಪರಪಾಟುಗಳಾಗಿ ಬಿಡುತ್ತಿದ್ದವು.

ವಿವಾಹಿತರೊಟ್ಟಿಗಿರಲಿ, ವಯಸ್ಕ ವಿಧವೆಯರಿಗೂ ’ಶೀಘ್ರ ಕಲ್ಯಾಣ ಪ್ರಾಪ್ತಿರಸ್ತು’ ಎಂದು ಆಶಿರ್ವದಿಸಿಬಿಡುತ್ತಿದ್ದರು. ತಪಸ್ಸಿನ ಶಕ್ತಿವುಳ್ಳವರಾದ ತಾವು ತುಟಿ ಜಾರಿ ಆಶಿರ್ವದಿಸಿಬಿಟ್ಟೆವಲ್ಲಾ… ಎಂದವರು ಪೇಚಾಡಿಕೊಳ್ಳುತ್ತಿದ್ದರು. ಅವರು ಮಾಡುತ್ತಿದ್ದ ಆಶಿರ್ವಾದ ಫಲವೋ ಎಂಬಂತೆ ಅವರಿಂದ ಆಶೀರ್ವಾದ ಪೈಕಿ ’ಟ್ವೆಂಟಿಫೈವ್” ಪರ್ಸೆಂಟ್ ವಿಧವೆಯರು ಯಾರನ್ನಾದರೂ ಜೊತೆ ಮಾಡಿಕೊಂಡು ಓಡಿಹೋಗುತ್ತಿದ್ದರು ಮತ್ತು ಕೆಲವರು ನಿತ್ಯ ಸುಮಂಗಲಿಯರಂತೆ ಬಾಳುವೆ ಮಾಡುತ್ತಿದ್ದರು. ಅವರು ಒಂದು ವಯಸ್ಸಿನಲ್ಲಿದ್ದಾಗ ಕೆಲವರು ಅವರ ಮುಂದೆ ಬಿದ್ದು ಹೊರಳಾಡಿದ್ದುಂಟು. ಜಿತೇಂದ್ರಿಯರೆಂದು ಹೆಸರು ಪಡೆದಿದ್ದ ಅವರು ಯಾವಾಗಲೂ ತಮ್ಮ ಪವಿತ್ರ ಮರ್ಮಾಂಗೋಪಾಸನೆಯನ್ನು ತಂಗಲು ಬಟ್ಟೆಯಿಂದ ಮರೆಮಾಚಿಬಿಡುತ್ತಿದ್ದರು. ಅಂದು ಹಾಗಿದ್ದುದರಿಂದಲೇ ಅವರ ಮುಖದಲ್ಲಿ ತೇಜಸ್ಸಿಗೆ ಬರವಿಲ್ಲ. ಕಣ್ಣುಗಳಲ್ಲಿ ಕಾಂತಿಗೆ ಬರವಿಲ್ಲ. ಎಲ್ಲಾ ಬೆಳ್ಳಗಾಗಿದ್ದರೂ ಅವರ ಶಿಖಾಗ್ರದ ಜುಟ್ಟಿ ಮಾತ್ರ ಬೆಳ್ಳಗಾಗಿಲ್ಲ. ಹರವಾದ ವಕ್ಷಸ್ಥಳದ, ಎತ್ತರದ ಆಳು ಅವರು. ಎತ್ತರವಾದ ಅಳಾದ ಅವರು ಕೋಮಟಿಗಳ ಓಣಿಯಿಂದ ಅಗ್ರಹಾರದ ಕಡೆಗೆ ನಡೆಯುತ್ತಿದ್ದರೆ ನೋಡಲಿಕ್ಕೂ ಒಂದು ಚಂದ. ಅದೂ ಅಲ್ಲದೆ ಆ ಗಾಂಭೀರ್ಯಕ್ಕೆ ವಿಶೇಷ ಮೆರುಗು ನೀಡಿದಂತೆ ಅವರ ಪಕ್ಕದಲ್ಲಿ ಮೊಮ್ಮಗ ಶಾಮಾಶಾಸ್ತ್ರಿಯೂ; ಅವನ ತಲೆಯಲ್ಲಿ ವಿರಾಜಮಾನವಾಗಿರುವ ಜುಟ್ಟೇನು? ಭ್ರೂಮಧ್ಯೆ ಕುಂಕುಮಾಂಕಿತ ನಾಮವೇನು? ಹೆಗಲ ಮೇಲೆ ಉತ್ತರೀಯವೇನು? ಹೆಜ್ಜೆ-ಹೆಜ್ಜೆಗೊಂದಾದರೂ ಉಚ್ಚರಿಸುತ್ತಿರುವ ವಿಷ್ಣುನಾಮಾವಳಿ ಏನು?
ಮೊಮ್ಮಗ ತಾತನನ್ನು ನಡೆಸುತ್ತಿದ್ದನೋ?
ತಾತನೇ ಮೊಮ್ಮಗನನ್ನು ನಡೆಸುತ್ತಿದ್ದನೋ?
ಒಟ್ಟಿನಲ್ಲಿ‌ಆ ಹಳೇಬೇರು-ಹೊಸಚಿಗುರು ಬೀದಿಗೊಂದು ಆಭರಣವಿಟ್ಟಂತೆ ನಡೆಡೂ ನಡೆದೂ ಮನೆ ತಲುಪಿದರು.
ಅಷ್ಟು ಹೊತ್ತಿಗಾಗಲೇ ಅಶ್ವತ್ಥ್ ತನ್ನ ಕರುಳಿನ ಕುಡಿಯು ಗೈರು ಹಾಜರಿಯಿಂದ ಕೃದ್ಧನಾಗಿದ್ದ. ಅವನದು ಈಗ ಬೀದಿಮಕ್ಕಳೊಂದಿಗೆ ಬೆರೆತು ಮಣ್ಣಿನಲ್ಲಿ ಆಡುವ ವಯಸ್ಸು. ಆದರೆ ಅವನನ್ನು ವ್ರತ ಗಿತಗಳಿಗೆ ತನ್ನ ತಂದೆ ಕರೆದೊಯ್ದಿರುವುದನ್ನು ಕೇಳಿ ಕೆರಳಿದ್ದ. ತನ್ನ ಹೆಂಡತಿಯ ಮೇಲೂ ಹಾರಾಡಿದ್ದ. ಅದೇ ಹೊತ್ತಿಗೆ ಸರಿಯಾಗಿ ’ತಾತ ಮೊಮ್ಮಗ’ ಬಾಗಿಲ ಬಳಿ ಕಾಣಿಸಿಕೊಂಡರು.

ಬಾಗಿಲು ದಾಟುವ ಮಂತ್ರ ಶಾಸ್ತ್ರಿಗಳು ಬಾಲಕ ಶಾಮುವಿಗೆ ಇನ್ನೇನು ಹೇಳಿ ಕೊಡಬೇಕು. ಅಶ್ವತ್ಥ್‌ಗೆ ಏನು ತಿಳಿಯಿತೋ ಏನೋ ಮಗನ ಜುಟ್ಟಿಗೆ ಕೈಹಚ್ಚಿ ಊರುಗೋಲಿನಿಂದ ನಾಲ್ಕು ಬಾರಿಸಿದ.

ಅಷ್ಟು ಏಟುಗಳನ್ನು ಶಾಮು ಎಂದೂ ತಿಂದಿರಲಿಲ್ಲ. ಮೈಗೆ ಏಟಾಗಿರುವುದರಿಂದ ಅಳಬೇಕಾಗಿರುವುದು ಅನಿವಾರ್ಯ. ಅದರೆ ಸಂಸ್ಕೃತದಲ್ಲಿ ಅಳಬೇಕೋ ಇಂಗ್ಲಿಷಿನಲ್ಲಿ ಅಳಬೇಕೋ? ಸನಾತನತೆಯಲ್ಲಿ ಆಕ್ರಂದಿಸಬೇಕೋ? ಆಧುನಿಕ ಶೈಲಿಯಲ್ಲಿ ಆಲಾಪಿಸಬೇಕೊ? ಒಂದೂ ತಿಳಿಯದೆ ದುಃಖವನ್ನೆಲ್ಲ ಗಂಟಲಿಂದ ಜಠರಕ್ಕೆ ತಳ್ಳಿ ಮೌನವಾಗಿ ಉಳಿದುಬಿಟ್ಟ.

“ಇನ್ನೊಂದು ಸಾರಿ ಏನಾದರೂ ಈ ಬಫೂನ್ ವೇಷ ತೊಟ್ಟು ಕದೋರ ಹಿಂದೆ ಹೋದೀ ಅಂದ್ರೆ ಹುಟ್ಟ್ಲಿಲ್ಲಾ ಅನ್ನಿಸಿಬಿಡ್ತೀನಿ” ಎಂದು ಗುಡುಗುತ್ತಿರುವಾಗಲೇ ಶಾಸ್ತ್ರಿಗಳು ಬಂದು ಮಗನ ಕೆನ್ನೆಗೆ ಛಟಾರನೆ ಒಂದು ಏಟು ಬಿಟ್ಟರು.

“ಅವ್ನು ನನ್ನ ಮೊಮ್ಮಗ. ಅವ್ನು ನನ್ನ ನಿರ್ದೇಶನದಲ್ಲಿಯೇ ಬೆಳೀಬೇಕು” ಎಂದು ಶಾಸ್ತ್ರಿಗಳು.
“ಅವ್ನು ನನ್ನ ಮಗ. ಅವ್ನು ಏನಾಗಬೇಕೆಂದು ನಿರ್ಧರಿಸೋನು ನಾನು” ಎಂದು ಅಶ್ವತ್ಥ್ ನಾರಾಯಣನೂ.
ಅವರಿಬ್ಬರೂ ಸೇರಿಕೊಂದು ಮಗ ಶಾಮುವನ್ನು ಕೊಂದುಹಾಕಿಬಿಡುವರೆಂದೆನ್ನಿಸಿತು ಅಲುಮೇಲಮ್ಮನಿಗೆ. ಒಳಗೆ ಕರೆದೊಯ್ದು ಬಾಸುಂಡೆಗಳಿಗೆ ಲೇಹ್ಯ ಲೇಪಿಸಿದಳು.
ಆಷ್ಟು ಹೊತ್ತಿಗಾಗಲೇ ಬಾಲಕ ಶಾಮುನ ವಿಷಯದಲ್ಲಿ ತಂದೆ ಮಗನ ನಡುವೆ ಜಗಳ ಬೀದಿಪಾಲಾಗಿತ್ತು. ಈಸ್ಟ್ ಮನ್ ಕಲರ್ ಪಡೆದಿತ್ತು.
ಅಗ್ರಹಾರದಲ್ಲಿ ಆಗಲೇ ಎರಡು ಬಣಗಳು ಏರ್ಪಟ್ಟಿದ್ದವು.
ಬಾಲಕ ಶಾಮುವಿನ ಜವಾಬ್ದಾರಿ ತೀರ್ಥರೂಪವಾದ ಶಾಸ್ತ್ರಿಗಳಿಗೆ ಸೇರಿದ್ದು ಎಂಬುದು ಒಂದು ಪಂಗಡದ ವಾದವಾಗಿದ್ದರೆ,
ಇನ್ನೊಂದು ಪಂಗಡ ತಂದೆಯಾದವನೇ ಮಗನಾದವನ ಬದುಕಿನ ರೂವಾರಿ ಎಂದು ವಾದ ಮಂಡಿಸತೊಡಗಿತು.
ಶಾಸ್ತ್ರಿಗಳ ಗುಂಪು ಬಲಿಷ್ಠವಾಯಿತು.
ಆಶ್ವತ್ಥ್ ಕಾಲು ಕಳೆದುಕೊಂಡು ವಾಪಸು ಬರದಿದ್ದಲ್ಲಿ ಶಾಸ್ತ್ರಿಗಳೇ ತಮ್ಮ ಇಚ್ಛೆಗನುಸಾರವಾಗಿ ಸಂಸ್ಕೃತ ವೈದಿಕ ಎರಡೂ ಕಲಿಸುತ್ತಿರಲಿಲ್ಲವೇ?
ಬ್ರಾಹ್ಮ ಕುಲಸಂಜಾತರಿಗೆ ಬಾಲ್ಯದಲ್ಲಿ ಗುರುಕುಲ ಸಂಸ್ಕಾರ ದೊರೆಯಬೇಕೆಂದಲ್ಲವೆ ಶಾಸ್ತ್ರಿಗಳು ಒದ್ದಾಡುತ್ತಿರುವುದು.
ಕಂಚಿ ಕಾಮಕೋಟಿ ಶ್ರೀಗಳಿಂದ ಅಕ್ಷರಾಭ್ಯಾಸಕ್ಕೆ ಶ್ರೀಕಾರ ಹಾಕಿಸಬೇಕಾಗಿತ್ತಾದರೂ ಯಾಕೆ?
ಎಂಬಿತ್ಯಾದಿಯಾಗಿ ವಾದ ಮಂಡಿಸಿದವರೆಲ್ಲ ವಯೋವೃದ್ಧರೂ; ಜ್ಞಾನ ವೃದ್ಧರೂ ಆಗಿದ್ದರು ಎಂಬುದು ವಿಶೇಷ.
ಅಶ್ವತ್ಥ್ ಪರ ಗುಂಪಿನ ಬಹುಪಾಲು ಸದಸ್ಯರೆಲ್ಲ ವಯಸ್ಸಿನಿಂದ ನೋಡಿದರೆ ಕಿರಿಯರೇ? ಆಧುನಿಕತೆ ಎಂಬ ದ್ವೀಪಕ್ಕೆ ಸಿಂಹಲಂಘನ ಮಾಡಬೇಕೆಂಬ ಕನಸು ಕಾಣುತ್ತಿದ್ದವರೇ ಅವರೆಲ್ಲ. ಅವರಲ್ಲಿ ಬಹಳಷ್ಟು ಜನ ಜುಟ್ಟು ಮರೆಮಾಚುವಂತೆ ಕ್ರಾಪು ಬಿಡತೊಡಗಿದ್ದರು. ಶೂದ್ರ ಸ್ತ್ರೀಗಳ ಸಹವಾಸ ಮಾಡಲಿಕ್ಕೆಂದೇ ನಿರೋಧ್ ಬಳಕೆಯ ಬಗ್ಗೆ ಗುಟ್ಟಗಿ ತಾಲೀಮು ನಡೆಸಿದ್ದರು. ಗುಟ್ಟಾಗಿ ತಂಬಾಕು ಸೇವನೆ ಮಾಡುತ್ತಿದ್ದರು. ಮಂತ್ರಗಳನ್ನು ಅರ್ಧಕ್ಕೆ ಬಿಟ್ಟು ಮುಷ್ಟಿ ಮೈಥುನದ ಬಗ್ಗೆ , ಕಾಮದ ಹಲವು ರೂಪಗಳ ಬಗ್ಗೆ ಮೆತ್ತಗೆ ವಿಚಾರ ವಿನಿಮಯ ನಡೆಸುತ್ತಿದ್ದಂಥವರು.

ಆದರೆ ಅವರ ಬಂಡಾಯ ಪ್ರತಿಭಟನೆ ಧಿಡೀರನೆ ಪ್ರಕಟಗೊಳ್ಳುವಂತಿರಲಿಲ್ಲ. ಅವರು ಎಷ್ಟಿದ್ದರೂ ಅವಲಂಬಿತರು.
“ರೆಕ್ಕೆ ಬಲಿಯದ ಮುನ್ನ
ಹಕ್ಕಿ ಹಾರಲು ಹೋಗಿ
ಕಕ್ಕುತಲಿ ನೆತ್ತರನ್ನು
ಮುಕ್ಕದಿರುವುದೇ ಮಣ್ಣು…”
ಇಂಥವರು ಬಾಲಕ ಶಾಮುವಿನ ಸರ್ವ ಜವಾಬ್ದಾರಿ ಅವನ ತಂದೆ ಅಶ್ವತ್ಥ್‌ಗೆ ಸೇರಿದ್ದು ಎಂದು ಸಶಕ್ತವಾಗಿ ಮಾತಾಡಲು ಹೇಗೆ ಸಾಧ್ಯ?

ಶಾಸ್ತ್ರಿಗಳಿರೋವರೆಗೂ ಬಾಲಕ ಶಾಮುವಿನ ಜವಾಬ್ದಾರಿ ಅವರಿಗೇ ಸೇರಿದ್ದು; ಅಂಗವಿಹೀನ ಮಗನಾದವನೂ ಪರಾವಲಂಬಿಯೇ… ? ಅಗ್ರಹಾರದ ಪೂರ್ವಾಪರ ನಿಯಮಾವಳಿಗೆ ಪೂರಕವಾಗಿಯೇ ನಡೆದುಕೊಳ್ಳಬೇಕು ಇತ್ಯಾದಿ ಇತ್ಯಾದಿ ನಿರ್ಣಯಗಳು ಸ್ವೀಕಾರಗೊಂಡವು.
ಶಾಸ್ತ್ರಿಗಳು ಗಂಭೀರ ವದನರಾಗಿ ಜುಟ್ಟು ನೇವರಿಸಿಕೊಂಡರು. ತಮ್ಮ ಉತ್ತರೋತ್ತರ ಗಣ್ಯ ಅಧಿಕಾರಿಯಾದ ಮೊಮ್ಮಗನನ್ನು ಎತ್ತಿ ಮುದ್ದುಕೊಟ್ಟರು.
ರಾತ್ರಿ ಒಂದು ಹೊತ್ತಿನಲ್ಲಿ ಗಂಡನ ಆಜ್ಞೆ ಮೇಲೆ ಅಲುಮೆಲು ಮಗನನ್ನು ಶಾಸ್ತ್ರಿಗಳ ಕೋಣೆಯಿಂದ ಎತ್ತಿತಂದು ಮಗ್ಗುಲಲ್ಲಿ ಮಲಗಿಸಿಕೊಂದರೆ, ಇನ್ನೊಂದು ಹೊತ್ತಿನಲ್ಲಿ ಶಾಸ್ತ್ರಿಗಳೇ ಎದ್ದು ಹೋಗಿ ಮೊಮ್ಮಗನನ್ನು ಹೊತ್ತು ತಂದು ಮಲಗಿಸಿಕೊಂಡರು.

ಮಧ್ಯರಾತ್ರಿಯ ನಂತರ ಅಶ್ವತ್ಥ್ ಮಗನಿಗಾಗಿ ಹಾಸಿಗೆಯಲ್ಲಿ ತಡಕಾಡಿದ. ಹೆಂಡತಿಯ ತೊಡೆಯೇ ತಮ್ಮ ಶಾಮು ಎಂದು ಕ್ಷಣ ಹೊತ್ತು ಭಾವಿಸಿದ್ದುಂಟು. ಅದು ಮಗುವೆಂಬ ಭ್ರಮೆ ಹುಟ್ಟಿಸಿತೆಂದು ಗೊತ್ತಾದಾಗ ನಿದ್ರೆಯೇ ಬಾರದೆ ಒದ್ದಾಡಿದ. ಸಿಗರೇಟು ಮೇಲೆ ಸಿಗರೇಟು ಸುಟ್ಟ.

ಜಮೀನ್ದಾರೀ ವ್ಯವಸ್ಥೆಯ ಇನ್ನೊಂದು ಮಗ್ಗುಲೇ ಪುರೋಹಿತಶಾಹಿ ಎಂದುಕೊಂಡ. ತಾನು ದೈಹಿಕವಾಗಿ ಹೆಳವಗೊಂಡಿರುವುದರಿಂದ ಪಿತೃತ್ವ ನಿರಂಕುಶತ್ವದ ಮೊಟ್ಟೆ ಇಡುತ್ತದೆ ಎಂದುಕೊಂಡ.
ಇಂಥವರಿಂದ ಸಮಾಜದ ಏಳಿಗೆ ಹೇಗೆ ಸಾಧ್ಯವಿಲ್ಲವೋ ಹಾಗೆಯೇ ಇಂಥವರ ಜೊತೆಗಿದ್ದರೆ ತಮ್ಮ ಕುಟುಂಬದ ಏಳಿಗೆಯೂ ಸಾಧ್ಯವಿಲ್ಲವೆಂದು ಆಲೋಚಿಸಿದ.

ಯಾರೊ ಪಂಚಾಯ್ತಿ ಹೇಳಿಬಿಟ್ಟರೂಂತ ಇದನ್ನೆಲ್ಲ ಒಪ್ಪಿಕೊಂಡು ಕೂತರೆ ಆಗದೆಂದೂ; ಈ ವ್ಯವಸ್ಥೆಯ ಪ್ರತಿನಿಧಿಗಳಿಗೆ ಶಾಕ್ ಕೊಡದಿದ್ದರೆ ಅಗ್ರಹಾರವೆಂಬ ಜೀವಂತ ಸಮಾಧಿಯೊಳಗೆ ಬದುಕಬೇಕಾಗುತ್ತದೆ ಎಂದೂ ಯೊಚಿಸಿ ಒಂದು ನಿರ್ಣಯಕ್ಕೆ ಬಂದ.

ಅಪ್ಪಟ ಶೂದ್ರ ಓಣಿಯಲ್ಲಿ ಒಂದು ಮನೆ ಬಾಡಿಗೆ ಹಿಡಿದ. ತಂದೆಯಾದ ಶಾಸ್ತ್ರಿಗಳಿಗೆ ತಿಳಿಸಿದ. ಶಾಸ್ತ್ರಿಗಳಿಗೆ ಏನು ಹೇಳಬೇಕೋ ತಿಳಿಯಲಿಲ್ಲ. ಒಂದು ಕ್ಷಣ ಮೌನವಾದರು. ಕಣ್ಣುಗಳಲ್ಲಿ ನೀರು ತುಂಬಿದವು. ಕಂಠ ಕಟ್ಟಿತು. ನುಡಿಯಲಾಗಲಿಲ್ಲ. ‘ಮೌನಂ ಸಮ್ಮತಿ ಲಕ್ಷಣಮ್’

ಹೊಸ ಮನೆಯ ಮಾಲಿಕ ಶಿರಸ್ತೇದಾರ ದುರುಗಪ್ಪ. ಸಂಬಳದ ಹತ್ತರಷ್ಟು ಗಿಂಬಳ. ಹುಟ್ಟಿದ ಮನೆಯ ಪ್ರೀತಿಯಿಂದ ಹೊಸದಾಗಿ ಕಟ್ಟಿಸಿದ. ಅಡುಗೆ ಕೋಣೆ ಚಿಕ್ಕದುನ್ನುವುದು ಬಿಟ್ಟರೆ ಉಳಿದಂತೆ ಮನೆ ದೊಡ್ಡದಾಗಿತ್ತು. ಮನೆ ಮುಂದುಗಡೆ ಹತ್ತಾರು ಗಿಡಮರಗಳಿದ್ದವು.

ಬಾಡಿಗೆ ಹೆಚ್ಚೇನಿರಲಿಲ್ಲ. ಶೂದ್ರರೊಂದಿಗೆ ವಾಸಿಸಲು ಆತನ ಸುಶಿಕ್ಷಿತ ಮನಸ್ಸು ಒಪ್ಪಿರಲಿಲ್ಲ. ಆದ್ದರಿಂದ ಮೇಲ್ಜಾತಿಯವರು ವಾಸಿಸುವ ಕಡೆ ಹೊಸದೊಂದು ಮನೆ ಕಟ್ಟಿಸಿಕೊಂಡಿದ್ದ. ಆ ಮನೆಗೆ ಹೋಗಿದ್ದ ದುರ್ಗಪ್ಪ ತನ್ನ ಹೆಸರನ್ನು ನೋಟರಿ ಮೂಲಕ ದುರ್ಗಾಪ್ರಸಾದ್ ಎಂದು ಬದಲಾಯಿಸಿಕೊಂಡಿದ್ದ. ಆತನ ಹೆಂಡತಿ ಲಚ್ಚುಮಿ ಅದೇ ನೋಟರಿ ಮೂಲಕ ಝಾನ್ಸಿರಾಣಿ ಲಕ್ಶ್ಮೀಬಾಯಿ ಎಂದು ಬದಲಾಯಿಸಿಕೊಂಡಿದ್ದಳು. ಆರತಿಗಾರು ಕೀರುತಿಗೊಂದು ಪಡೆದುಕೊಂಡಿದ್ದರು. ಅವುಗಳೆಲ್ಲ ಕಾನ್ವ್ಂಟಿನಲ್ಲಿ ಓದುತ್ತಿದ್ದವು. ಝಾನ್ಸಿ ರಾಣಿಗೆ ತುಳಸಿ ಗಿಡದ ಮೇಲೆ ತುಂಬ ಭಕ್ತಿ. ಬಾಗಿಲ ಮುಂದೊಂದು ಬೃಂದಾವನ ಕಟ್ಟೆ. ಅದನ್ನು ಗಂಡನಿಗಿಂತ ಹೆಚ್ಚು

ಪ್ರೀತಿಸುತ್ತಿದ್ದಳು. ಅವರು ವಾರಕ್ಕೊಮ್ಮೆ ಗುಟ್ಟಾಗಿ ಕುರಿ ಕೋಳಿ ಬೇಯಿಸುತ್ತಿದ್ದರು. ಮೇಲೆ ತಾವು ಶುದ್ದ ಸಸ್ಯಾಹಾರಿಗಳೆಂದು ನಟಿಸುತ್ತಿದ್ದರು.

ಪಿ.ಡಿ.ಪ್ರಸಾದ್ ಉರುಫ್ ಪಾತ್ರೊಟ ದುರ್ಗಪ್ಪ ತಾನು ಹುಟ್ಟಿಬೆಳೆದಿರೋ ಮನೆಯನ್ನು ಶೂದ್ರರಿಗೆ ಬಾಡಿಗೆ ಕೊಡುತ್ತಿರಲ್ಲಿಲ್ಲ. ಮೇಲ್ಜಾತಿಯವರಿಗೆ ಬಾಡಿಗೆ ಕಡಿಮೆಯಾದರೂ ಕೊಡಲು ನಿಶ್ಚಯಿಸಿದ. ಆದ್ದರಿಂದ ಪರಮೇಶ್ವರ ಶಾಸ್ತ್ರಿಗಳ ಮಗ ಅಶ್ವತ್ಥ್ ನಾರಾಯಣಗೆ ಬಾಡಿಗೆ ನೀಡಿದ್ದ.

ಅಶ್ವತ್ಥ್ ಮತ್ತು ಅವನ ಹೆಂಡತಿಗೆ ಮನೆ ಇಷ್ಟವಾಯಿತಾದರೂ ಓಣಿ ಇಷ್ಟವಾಗಲಿಲ್ಲ. ಎಡ ಕಿಟಕಿಯಿಂದ ಮೀನು ಬೇಯಿಸುವ ವಾಸನೆ, ಬಲ ಕಿಟಕಿಯಿಂದ ಮಟನ್ ಬೇಯುತ್ತಿರುವ ವಾಸನೆ, ಕೇರಿಯಲ್ಲಿ ದಿನಂಪ್ರತಿ ಕುಡುಕರ ಗಲಾಟೆ. ಪ್ರತೀ ಮನೆಯಲ್ಲೂ ಒಂದಿಲ್ಲ ಒಂದು ಜಾನಪದ ಹಾಡುಗಳು.

ಇದಕ್ಕಿಂತ ಹೆಚ್ಚಾಗಿ ಮಾವನವರ ನೆನಪು ಕಾಡತೊಡಗಿತು. ವೃದ್ದಾಪ್ಯ ಬೇರೆ. ಒಂಟಿ ಬದುಕು. ಏನು ತಿಂದರೋ ಏನು ಬಿಟ್ಟರೋ? ಮೊಮ್ಮಗನನ್ನು ಎಂದೂ ಯಾವ ಕಾರಣಕ್ಕೂ ಬಿಟ್ಟಿದ್ದವರಲ್ಲ.
“ನೋಡಿ… ವೃದ್ಧ ತಂದೆಯ ಯೋಗಕ್ಷೇಮ ನೋಡ್ಕೋಳ್ಳೋದು ಮಕ್ಕಳದವರ ಧರ್ಮ, ಹೊಗಿ ಒಂದು ಮಾತು ಕರೆಯಬಾರದೆ?” ಗಂಡನನ್ನು ಕೇಳಿದಳು.
“ತಂದೆಮೇಲೆ ನನ್ಗೂ ಪ್ರೀತಿ ಇಲ್ಲಾಂತ ತಿಳ್ಕೋಬೇಡ. ಆದರೆ ಅದು ಮೊಂಡು ಹಠದ ಮುದುಕ. ಇಲ್ಲಿಗೆಲ್ಲಾ ಬಂದು ಇರೋ ಪೈಕಿಯಲ್ಲ” ಎಂದು ನಿಟ್ಟುಸಿರು ಬಿಟ್ಟ ಅಶ್ವತ್ಥ್.

ವೃದ್ಧ ತಂದೆಯನ್ನು ಕರೆಯುವುದು ತನ್ನ ಧರ್ಮ. ಬರುವುದು ಬಿಡುವುದು ಅವರಿಗೆ ಸೇರಿದ್ದು. …ಯೋಚಿಸಿ ಒಂದು ನಿರ್ಧಾರಕ್ಕೆ ಬಂದ . ಹೋದ ಕರೆದ. ಬರಲು ನಿರಾಕರಿಸಿದರು ಶಾಸ್ತ್ರಿಗಳು.
“ಮಗನೇ ಅಶ್ವತ್ಥೂ… ನಾನು ನಿನ್ನ ಹತ್ತಿರ ಒಂದು ಬೇಡಿಕೊಳ್ತಿದೀನಿ… ಅದನ್ನು ನಡ್ಸಿಕೊಡ್ತೀಯಾ” ಶಾಸ್ತ್ರಿಗಳು ಮುಖ ಸಪ್ಪಗೆ ಮಾಡಿಕೊಂಡೇ ಕೇಳಿದರು.
“ಅದೇನು ಕೇಳಪ್ಪಾ?” ಎಂದ ಅಶ್ವತ್ಥ್.
“ಅಕಸ್ಮಾತ್ನಾನು ಸತ್ತರೆ ದಯವಿಟ್ಟು ನೀನು ನನ್ನ ಶವಕ್ಕೆ ಅಗ್ನಿ ಸ್ಪರ್ಶ ಮಾಡಬೇಡ.”
“ಮತ್ತಾರು ಮಾಡಬೇಕು?” ಇಂಥ ಮಾತನ್ನು ನಿರೀಕ್ಷಿಸಿದ್ದ.
“ನನ್ ಮೊಮ್ಮಗ ಮಾಡಲಿ”
“ಯಾಕೆ?”
“ಅವನು ನನ್ನ ತಂದೆಯ ಹೆಸರು ಇಟ್ಟುಕೊಂಡಿದ್ದಾನೆ!” ಶಾಸ್ತ್ರಿಗಳು ಅಕ್ಕಿಯಲ್ಲು ಕಲ್ಲು ಆಯತೊಡಗಿದರು.
ತನಗೆ ತಾನೆ ಎಕ್ಕಡದಲ್ಲಿ ಹೊಡೆದುಕೊಂಡು ಪಶ್ಚಾತ್ತಾಪ ಮಾಡಿಕೊಳ್ಳಬೇಕೆನ್ನಿಸಿತು ಅಶ್ವತ್ಥ್‌ಗೆ. ಮನೆಗೆ ಬಂದು ಹೆಂಡತಿಗೆ ನಾಲ್ಕು ಮಾತು ಅಂದ.
ಮನೆ ಮುಂದೆ ತುಳಸಿಕಟ್ಟೆ ಕಟ್ಟಿಸಿಕೊಡಲು ಅಲುಮೇಲು ಗಂಡನನ್ನು ಕೇಳಿಕೊಂಡಳು. ಬಿಲ್‌ಕುಲ್ ನಿರಾಕರಿಸಿದ.
ಶೂದ್ರ ಜೀವನ ಶೈಲಿ ರೂಢಿಸಿಕೊಳ್ಳ ಸೂಚಿಸಿದ.

ಮಗ ಶಾಮುವಿನ ಜುಟ್ಟು ಕಟ್ ಮಾಡಿದ. ಸಮವಸ್ತ್ರ ತೊಡೆಸಿದ. ಎಬಿಸಿಡಿ ಪುಸ್ತಕಗಳನ್ನು ತಂದು ಚೀಲ ತುಂಬಿದ. ಸ್ವಲ್ಪ ದೂರದ ಕಾನ್ವೆಂಟ್ ಸ್ಕೂಲಿಗೆ ಹೋಗಿ ಸೇರಿಸಿದ. ಅದು ಪ್ರತಿದಿನ

ಒಂದೊಂದು ಪಾಠ ಒಪ್ಪಿಸಿ ಹೆತ್ತವರ ಮನಕ್ಕೆ ಮುದ ತಂದಿತು.

ಒಂದು ರಾತ್ರಿ ಶಾಸ್ತ್ರಿಗಳಿಗೆ ಬಿದ್ದ ಕನಸಿನಲ್ಲಿ ಸೀನಿಯರ್ ಶಾಮಾ ಶಾಸ್ತ್ರಿಗಳು ಕಾಣಿಸಿಕೊಂಡರು. ಮುಠ್ಠಾಳ ಎಂದರು. ಬುದ್ಧಿ ಇದೆ ಏನೊ? ಎಂದರು. ಮೊಗಲರ ಹೆಣ್ಣು ಮಕ್ಕಳಿಗೆ ಹೇಗೆ ಮದುವೆ ಯೋಗವಿಲ್ಲವೋ ಹಾಗೆ ಚತುರ್ವೇದಿಗಳಾದ ನಮ್ಮ ವಂಶದಲ್ಲಿ ಹುಟ್ಟಿದವರಿಗೆ ಇಂಗ್ಲಿಷ್ ಕಲಿಸಕೂಡದು. ನಾನೇ ಅಶ್ವತ್ಥ್‌ನ ಹೊಟ್ಟೆಯಲ್ಲಿ ಹುಟ್ಟಿ ಬಂದಿರೋದು ಎಂಬುದನ್ನು ಮರೆಯಬೇಡ” ಎಂದು ಮುಖಕ್ಕೆ ರಾಚಿದಂತೆ ಆಡಿಬಿಟ್ಟರು.

ಶಾಸ್ತ್ರಿಗಳು ದಿಗ್ಗನೆ ಎದ್ದು ಕುಳಿತರು.
ಆಪಃ ಪುನ್ಂಶ್ಚಿತ್ಯಸ್ಯ ಮಂತ್ರಸ್ಯ ಪೂತ ಋಷಿಃ
ಆಪೋ ದೇವತಾ ಅಸ್ವೀಚ್ಛಂದಃ | ಅಪಾಂಪ್ರಾಶನೇ ವಿನಿಯೋಗಃ
ಗೊಣಗಿದರು.
ಘಂಟಾ ಕಡಗವಿಲ್ಲದೆ ಅಂಗ ವಿಹೀನರಾಗಿರುವ ಅವರ ಪವಿತ್ರ ಆತ್ಮ ಅಲೆದಾಡುತ್ತಿರುವುದು. ಅವರ ಇಚ್ಛೆಗೆ ವಿರುದ್ಧ ನಡೆದುಕೊಳ್ಳುವುದು ಪಿತೃದ್ರೋಹವಾದೀತು.
ಓಂ ಕೇಶವಾಯ ಸ್ವಾಹಃ | ನಾರಾಯಣಾ ಸ್ವಾಹಾ |

ಲಗುಬಗೆಯಿಂದ ಪ್ರಾತಃ ವಿಧಿಗಳನ್ನು ಮುಗಿಸಿಕೊಂಡವರೇ ಉತ್ತರೀಯ ಹೆಗಲ ಮೇಲೆ ಹಾಕಿಕೊಂಡು ಹೊರಟರು. ತಮ್ಮ ತಪೋ ಶಕ್ತಿಯಿಂದ ಬಾಲಕ ಶಾಮು ಓದುವ ಕಾನ್ವೆಂಟ್ ಶಾಲೆ ಸಮೀಪಿಸಿದರು. ಪ್ರಣವಸ್ಯ ಪರ ಬ್ರಹ್ಮ ಋಷಿಃ | ಪರಮಾತ್ಮಾ ದೇವತಾ | ಎಂದು ಬಾಗಿಲು ದಾಟಿದರು.
ಸರ್ವ ವರ್ಣೇ ಮಹಾದೇವಿ ಸಂಧ್ಯಾವಿದ್ಯೇ ಸರಸ್ವತೀ ಅಂತ. ಅಚ್ಛಧವಳ ವರ್ಣೇ ಉಡುಪು ಧರಿಸಿದ್ದ ಹೆಡ್‌ಮಿಸ್ಸೆಸ್‌ಳನ್ನು ನೋಡಿದರು.
“ಹೆಲೋ ವೆಲ್‌ಕಂ ಸಾರ್.ವಾಟ್ ಕೆನ್ ಐ ಡು ಫಾರ್ ಯು” ಅಂತ ಆಕೆ ಸ್ವಾಗತಿಸಿ ಮುಕ್ತಾ ವಿದ್ರುಮ ಹೇಮ ನೀಲ ಧವಳ ಎಂದು ಶಕ್ತಿ ಸಂಚಯಮಾಡಿಕೊಂಡರು. ಆ ಮ್ಲೇಚ್ಛೆಗೆ ಇಷ್ಟವಾಗುವಂತೆ ಮಾತನಾಡಿದರು. ಅದೇ ಹೊತ್ತಿಗೆ ಬಾಲಕ ಶಾಮು ತನ್ನ ತಾತನನ್ನು ನೋಡಿತು. ಧಿಯೋಯೋನ ಜ್ಞಾನಾತ್ಮನೇ ಅಂತ ತಾತನ ಬಳಿಗೆ ಓಡಿಬಂತು. ತನ್ನ ಬಾಹುಗಳೆಂಬ ಹಾರವನ್ನು ತಾತನ ಕೊರಳಿಗೆ ಹಾಕಿತು. ತಮ್ಮ ಗಾಳಕ್ಕೆ ಮೊಮ್ಮಗನೆಂಬ ಮೀನು ಬಿತ್ತೆಂದು ಶಾಸ್ತ್ರಿಗಳು ಭಾವಿಸಿದರು. ಬಗೆಬಗೆಯ ಸಂಸ್ಕೃತದ ಟೆಕ್ನಿಕ್ ಉಪಯೋಗಿಸಿ ಅವನನ್ನು ಅಲ್ಲಿಂದ ಬಿಡುಗಡೆ ಮಾಡಿಸಿಕೊಂಡರು.

ಪೃಥ್ವಿರಾಜ ಜಯಚಂದ್ರನ ಪುತ್ರಿ ಸ್ವಯಂವರೆಯನ್ನು ಅಪಹರಿಸಿಕೊಂಡೊಯ್ದ ರೀತಿಯಲ್ಲಿ ಮೊಮ್ಮಗನನ್ನು ತಮ್ಮ ಇಚ್ಛಾಶಕ್ತಿಯೆಂಬ ಚಿಮುಟಿಗೆಯಲ್ಲಿ ಹಿಡಿದು ಸೀದಾ ಸಂಸ್ಕೃತ ಪಾಠ ಶಾಲೆಗೆ ಸೇರಿಸಿಬಿಟ್ಟರು.
ಪ್ರೀತಿಯ ಮೊಮ್ಮಗನೇ ಯಾವ ಕಾರಣಕ್ಕೂ ಈ ವಿಷಯವನ್ನು ಆ ನಿನ್ನ ಕಂತುಪಿತನಿಗೆ ಹೇಳಕೂಡದೆಂದು ಕಟ್ಟಪ್ಪಣೆ ವಿಧಿಸಿದರು.
ಬ್ಯಾ ಬ್ಯಾ ಬ್ಲಾಕ್ ಷೀಪ್ ಎಂದು ಬಾಯಿಪಾಟ ಮಾಡಿದ್ದ ಆದು ಜಯ ನಿಖಿಲ ನಿಲಿಂಪಕೋಟೀರ ಕೋಟಿಪ್ರಭಾ ಪುಂಜ ಎಂದು ಓದತೊಡಗಿತು.
ಮನೆಯಲ್ಲಿ ಅದು ತಲೆ ಓಡಿಸಿತು. ಇಂಗ್ಲಿಷ್ ಪುಸ್ತಕದೊಳಗೆ ಸಂಸ್ಕೃತ ಶ್ಲೋಕಗಳಿದ್ದ ಪುಸ್ತಕ

ಅಡಗಿಸಿಟ್ಟು ಓದುವ ನಾಟಕವಾಡತೊಡಗಿತು. ಅದರ ಆ ತೆರನ ಆಟಕ್ಕೆ ಗೌರವಾನ್ವಿತ ಕಳ್ಳಾಟಕ್ಕೆ ಅನುಕೂಲ ವಾಗುವಂತೆ ಅದರ ಕಂತುಪಿತ ದಾರದ ಮಿಲ್ಲಿನಲ್ಲಿ ಕಾರಖೂನ ಕೆಲಸಕ್ಕೆ ಸೇರಿಕೋಡಿದ್ದ. ಬೆಳೆಗ್ಗೆಯಿಂದ ರಾತ್ರಿವರೆಗೆ ಒಂದೇ ಸಮನೆ ದುಡಿದೂ ದುಡಿದೂ ಸುಸ್ತಾಗಿ ಬಂದು ಸೇರಿದಷ್ಟು ಉಂಡು “ಓದ್ಕೊಂಡೇನೇ ಬರ್ಕೊಂಡೇನೋ” ಎಂದು ವಿಚಾರಿಸುತ್ತಾ ಆಕಳಿಸುತ್ತಿದ್ದ. ಮಗನನ್ನು ಸರ್ಕಲ್ ಇನ್ಸ್‌ಪೆಕ್ಟರನ್ನಾಗಿ ಮಾಡಬೇಕೆಂಬ ಕನಸು ಕಾಣುತ್ತ ಮಲಗಿ ಬಿಡುತ್ತಿದ್ದ.

ಅವನು ಕೆಲಸಕ್ಕೆ ಹೋಗಿದ್ದನ್ನು ಹೊಂಚು ನೋಡಿ ಶಾಸ್ತ್ರಿಗಳು ಮನೆಗೆ ಬಂದರು. ಬಾಗಿಲ ಮುಂದೆ ತುಳಸಿಕಟ್ಟೆ ಇಲ್ಲದಿರುವುದನ್ನು ನೋಡಿ ಖತಿಗೊಂಡರು. ಸೊಸೆ ಎಷ್ಟು ಕೇಳಿಕೊಂಡರೂ ಅವರು ಒಂದು ಹನಿ ನೀರು ಸಹ ಮುಟ್ಟಲಿಲ್ಲ. ಕಿಟಕಿ, ಗವಾಕ್ಷಿ ಮತ್ತಿತರ ನವರಂದ್ರಗಳಿಂದ ನುಸುಳುತ್ತಿರುವ ಅಮೇಧ್ಯದ ವಾಸನೆ ಬಗ್ಗೆ ತಕರಾರೆತ್ತಿದರು. ನವರಂದ್ರಗಳನ್ನು ತಾವೇ ಮುಚ್ಚಿಬಿಟ್ಟರು. ಸೊಸೆಗೆ ಸನಾತನ ಧರ್ಮ ಪಾಲಿಸುವಂತೆ ಪ್ರತಿಜ್ಞಾ ವಿಧಿ ಬೋಧಿಸಿದರು. ಮೊಮ್ಮಗ ಗುಟ್ಟಾಗಿ ಶ್ರದ್ಧೆಯಿಂದ ಸಂಸ್ಕೃತ ಅಭ್ಯಾಸ ಮಾಡುತ್ತಿರುವುದನ್ನು ಖಚಿತಪಡಿಸಿಕೊಂಡು ಸೀದ ಊರಹೊರಗಿದ್ದ ಇಂದ್ರ ಧಾರಾ ತೊರೆಗೆ ಹೋದರು. ಹುಲುಲಿ ಹಳ್ಳಕ್ಕೆ ಅವರು ಇಟ್ಟ ಹೆಸರು.

ಇಂದ್ರಾಣಿ ಇಂದ್ರ ರೂಪಾ ಚ ಇಂದ್ರಶಕ್ತಿಃ ಪರಾಯಿಣೀ… ಎಂದು ಮೂಗು ಮುಚ್ಚಿಕೊಂಡು ಮುಳುಗೆದ್ದರು. ಯಾವುದಾದರು ಶವಸಂಸ್ಕಾರಕ್ಕೆಂದು ಬಂದವರೆಲ್ಲ ಅವರು ಆ ಇಂದ್ರಧಾರ ಉರುಫ್ ಹಾಲುಲಿಹಳ್ಳದಲ್ಲಿ ಮುಳುಗು ಹಾಕದೆ ಊರು ಪ್ರವೇಶಿಸುತ್ತಿರಲ್ಲಿಲ್ಲ. ಅಂದು ಅವರ ಇಚ್ಛಾ ಶಕ್ತಿಗೆ ವಿರುದ್ಧವಾಗಿ ಅನಾಮಧೇಯ ಕಳೇಬರವೊಂದು ಅವರ ಮನಸ್ಸನ್ನು ಆವರಿಸಿ ಮಲಿನ ಮಾಡಿತು.

ಆರು ಮೂರಾಗಲೀ ಮೂರು ಆರಾಗಲೀ… ಮೊಮ್ಮಗ ಶಾಮುವನ್ನು ಅವರ ಮುತ್ತಾತನ ಹಾಗೆ ಪ್ರಕಾಂಡ ಪಂಡಿತನನ್ನಾಗಿ ಮಾಡಬೇಕೆಂದು ಪದೇಪದೆ ಅಂದುಕೊಳ್ಳುತ್ತ ಅಗ್ರಹಾರದ ತಮ್ಮ ಮನೆಗೆ ವಾಪಸಾದರು.

ಅತ್ತ ಬಾಲಕ ಶಾಮು ಕಾನ್ವೆಂಟ್ ದ್ರೆಸ್ಸ್ ಹಾಕಿಕೊಂಡು ಸಂಸ್ಕೃತ ಪಾಠ ಶಾಲೆಯಲ್ಲಿ ಅಮರ ಕೋಶ ಕಲಿಯುತ್ತಿದ್ದಾಗ ಇತ್ತ ಪೋಸ್ಟ್‌ಮ್ಯಾನ್ ಅಶ್ವತ್ಥ್ ನಾರಾಯಣ ಕೈಗೆ ಕಾರ್ಡೊಂದನ್ನು ಕೊಟ್ಟು ತ್ರಿಣ್ ತ್ರಿಣ್ ಅಂತ ವಾಪಸಾದ.
ಅದು ಕಾನ್ವೆಂಟ್ ಸ್ಕೂಲಿನಿಂದ ಬಂದಿತ್ತು. ಓದಿದ ರಕ್ತ ಕುದಿಯಿತು. “ಎಲವೋ ಮಗನೇ” ಎಂದು ಸಿಂಹನಾದ ಮಾಡಿದ. ಮೊಲದಂಥ ಅಲುಮೇಲು ಓಡಿಬಂದಳು.
“ಕೋಪಾವೇಶದಿಂದ ಮಗನಿಗೇನಾದರೂ ಮಾಡೀರಿ?” ಎಂದಳು.
ಅವನು ಸೀದ ಸಂಸ್ಕೃತ ಶಾಲೆಗೆ ಹೋದ. ಕ್ರಾಪಿನ ನಡುವೆ ಹಲೋ ಹಲೋ ಎನ್ನುತ್ತಿದ್ದ ಜುಟ್ಟು ಹಿಡಿದು ಮೇಲೆತ್ತಿದ. ಛಟಾರನೆ ಕೆನ್ನೆಗೆರಡು ಬಿಟ್ಟ.
ಅಲ್ಲಿ ಅದನ್ನು ನೋಡಿದ ಸಂಸ್ಕೃತ ಪಂಡಿತರು ’ಓಂ ನಮೋ ಭಗವತೇ ಜ್ವಲ ಜ್ವಲ ಮಹಾರುದ್ರಾಯ’ ಎಂದು ಕೆನ್ನೆಕೆನ್ನೆ ಬಡಿದುಕೊಂಡರು. ಅವರ ಮೃದು ಪ್ರತಿಭಟಣೆ ಲೆಕ್ಕಿಸದೆ ಕುಯ್ಯೋ ಮರ್ರೋ ಅನ್ನುತಿದ್ದ ಮಗನನ್ನು ಕಂಕುಳಲ್ಲಿ ಅವುಂಚಿಕೊಂಡು ಕಾನ್ವೆಂಟ್ ಸ್ಕೂಲಿಗೆ ಬಿಸಾಕಿದನು.

ಕೆಲವು ದಿನಗಳಲ್ಲಿ ಇದು ಹೇಗೋ ಶಾಸ್ತ್ರಿಗಳಿಗೆ ತಿಳಿಯಿತು. ಜಾರು ಬಂಡೆ ಆಟ ಆಡುತ್ತಿದ್ದ ಮೊಮ್ಮಗನನ್ನು ಅಪಹರಿಸಿ ಒಯ್ದು ಸಂಸ್ಕೃತ ಪಾಠಶಾಲೆಗೆ ಸೇರಿಸಲು ಪ್ರಯತ್ನಿಸಿದರು. ಆದರೆ ಅಲ್ಲಿನ
—————–

ಪಂಡಿತರು ಊರುಭಂಗ ನಾಟಕ ನೆನಪಿಸಿಕೊಂಡು ಗಡಗಡ ನಡುಗುತ್ತ ಧೂಮಕೇತುವಿನಂತೆ ಮೂಡಿ ಬಿಡುವ ಅವರ ಮಗ ಅಶ್ವತ್ಥ್ ಬಗೆಗೆ ಹೇಳಿದರು. ಯಾಕಿದ್ದೀತು ಅಂತ ಶಾಸ್ತ್ರಿಗಳು ಮೊಮ್ಮನನ್ನು ತಮ್ಮ ಮನೆಯಲ್ಲಿಯೇ ಇಟ್ಟುಕೊಂಡರು. ಕಾನ್ವೆಂಟ್ ಸ್ಕೂಲಿನ ಮ್ಲೇಚ್ಛ ಭಾಷೆಯಲ್ಲಿದ್ದ ಪುಸ್ತಕಗಳಿಗೆ ತಾವೇ ಅಗ್ನಿಸ್ಪರ್ಶ ಮಾಡಿದರು. ತಾವೇ ಸಂಸ್ಕೃತಾಭ್ಯಾಸ ಮಾಡಿಸಲು ನಿಶ್ಚಯಿಸಿದರು.

ಅಗ್ರಹಾರದ ಕೆಲ ಹಿರಿಯರು ಬಂದು ತಾತ ಮೊಮ್ಮಗನ ಸಾಮರಸ್ಯ ಕಂಡು ಸಂತಸ ಪಟ್ಟು ಶುಭ ಹಾರೈಸಿ ಹೋದರು.
ಶಾಸ್ತ್ರಿಗಳೂ ಮೊಮ್ಮಗನ ಆಸರೆ ಆಪ್ಯಾಯಮಾನವಾಗಿತ್ತು. ಪ್ರತಿಯೊಂದು ಕ್ಷಣವನ್ನು ಅವನೊಂದಿಗೇ ಕಳೆಯಲು ಪ್ರಯತ್ನಿಸುತ್ತಿದ್ದರು. ಅವನ ಎದೆಯ ಮೇಲಿನ ಎಲುಬುಗಳ ದರ್ಶನದಿಂದ ಮಮ್ಮಲನೆ ಮರುಗಿದರು. ಅವುಗಳನ್ನು ಮುಚ್ಚಲೆಂದೇ ರಾತ್ರಿ ತುಪ್ಪದಲ್ಲಿ ನೆನೆದ ಉತ್ತತ್ತಿಗಳನ್ನು ಮೊಮ್ಮಗನಿಗೆ ತಿನ್ನಿಸತೊಡಗಿದರು. ರುಚಿರುಚಿಯಾದ ತಿಂಡಿ ತೀರ್ಥ ದೊರಕಿತೆಂದ ಮೇಲೆ ಆ ಬಾಲಚಂದ್ರನು ಕೆಲವೇ ದಿನಗಳಲ್ಲಿ ತಂದೆತಾಯಿಯರನ್ನು ತಾತ್ಕಾಲಿಕವಾಗಿ ಮರೆತೇಬಿಟ್ಟನು.

ಆದರೆ ಮಿಲಿಟರಿ ರಿಟರ್ನ್‌ಡ್ ಅಶ್ವತ್ಥ್ ಮಗನನ್ನು ಮರೆಯಬೇಕಲ್ಲ! ಯುದ್ಧ ಘೋಷಿಸಿ ಕರೆದೊಯ್ಯಬೇಕೆಂದು ದಿನಕ್ಕೊಮ್ಮೆ ಹೊತ್ತಿಲ್ಲದ ಹೊತ್ತಿನಲ್ಲಿ ಅಗ್ರಹಾರಕ್ಕೆ ಬರುತ್ತಿದ್ದನು. ಮನೆ ಬಾಗಿಲಿಗೆ ಬೀಗ ರಾರಾಜಿಸುತ್ತಿತ್ತು.

ಸುಮ್ಮನೆ ಕೂತು ಮನೆಯಲ್ಲಿದ್ದರೆ ಹೊಟ್ಟೆಗಾಗಲೀ; ಜುಟ್ಟಿಗಾಗಲಿ ಸುಮ್ಮನೆ ಬರುತ್ತದೆಯೇ?
ಮೊಮ್ಮಗನ ಕಾಲುಗುಣವೇನೋ? ಶಾಸ್ತ್ರಿಗಳಿಗೆ ದಿನಂಪ್ರತಿ ಕನಿಷ್ಠ ಐದಾದರೂ ಎಂಗೇಜ್‌ಮೆಂಟ್‌ಗಳಿರುತ್ತಿದ್ದವು. ಎಲ್ಲವೂ ಪ್ರತಿಷ್ಥರ, ಶ್ರೀಮಂತರ ಮನೆಯ ಆಫರುಗಳು, ಮಗುವಿನ ನಾಮಕರಣದಿಂದ ಹಿಡಿದು ಶವಸಂಸ್ಕಾರವರೆಗೆ. ಯಾವುದೇ ಆತಿಥ್ಯವನ್ನು ಮೊಮ್ಮಗನ ಕಾರಣಕ್ಕಾಗಿ ಶಾಸ್ತ್ರಿಗಳು ನಿರಾಕರಿಸುತ್ತಿರಲಿಲ್ಲ. ದಿನಕ್ಕೆ ಮೂರು ಹೊತ್ತು ಪುಷ್ಕಳವಾದ ಊಟ, ಕೈತುಂಬ ದಕ್ಷಿಣೆ ಜೊತೆಗೆ ಬಟ್ಟೆ ಬರೆ ಅದೂ ಇದೂ… ಹೆಚ್ಚಿಗೆ ಮಿಗಿಲುತ್ತಿದ್ದುದನ್ನು ತಾವೇ ಗುಟ್ಟಾಗಿ ಒಯ್ದು ಸೊಸೆಗೆ ಕೊಟ್ಟು ಬರುತ್ತಿದ್ದರು. ನಿನ್ನ ಗಂಡನಿಗೆ ಅದು ಇಷ್ಟ ಇದು ಇಷ್ಟ ಮಾಡಿಡು ಎಂದೂ; ಅವನ ಆರೋಗ್ಯ ಚೆನ್ನಾಗಿ ನೋಡಿಕೊಳ್ಳಬೇಕೆಂದೂ ಪಿಸಿಪಿಸಿ ಹೇಳಿ ಬರುತ್ತಿದ್ದರು. ಈ ನಶ್ವರದೇಹ ಹೊತ್ತು ತಾವು ದುಡಿಯುವುದಾದರೂ ಯಾರಿಗಾಗಿ… ಮಗ ಸೊಸೆ ಮೊಮ್ಮಗ ಎಲ್ಲರೂ ಸುಖವಾಗಿರಬೇಕು ತಾನೆ?

ಧರ್ಮಾತ್ಮ ರಾವ್ ಬಹದ್ದೂರ್ ಗೋವಿಂದೇಗೌಡರು ತಮಗೆ ಇಳಿವಯಸ್ಸಿನಲ್ಲಿ ಹುಟ್ಟಿರುವ ಮಗನ ನಾಮಕರಣ ಮಾಡಲು ಬರಬೇಕೆಂದು ಶಾಸ್ತ್ರಿಗಳಿಗೆ ಆಮಂತ್ರಣ ನೀಡಿದರು. ನಾಮಕರಣದ ಜೊತೆ ಕುಂಡಲಿ ಜಾತಕ ಇತ್ಯಾದಿ. ಜೊತೆ ಗ್ರಾಮದ ಗಣ್ಯರಿಗೆ ಭಾರಿ ಭೋಜನ, ಶಾಸ್ತ್ರಿಗಳಿಗೂ ಸಂತೋಷವಾಯಿತು. ಕಾರಣ ಮೊಮ್ಮಗನಿಗೆ ವೈದಿಕದ ಎಲ್ಲಾ ವರಸೆ ತೊರಿಸಿದ್ದರು. ಆದರೆ ಮದುವೆಯಾದ ಮೂವತ್ತು ವರ್ಷಗಳ ನಂತರ ಹುಟ್ಟುವ ಮಗುವಿಗೆ ನಾಮಕರಣ ಮಾಡುವ ಬಗ್ಗೆ ತೋರಿಸಿರಲಿಲ್ಲ.

ನಿಗದಿತ ವೇಳಿಗೆ ಮುಂಚಿತವಾಗಿ ಅವರು ಮೊಮ್ಮಗನೊಂದಿಗೆ ಹೊರಟರು. ಗೌಡರ ಹೊಸಮನೆ ಊರ ಹೊರಗಡೆ ಇತ್ತು. ಹತ್ತು ವರ್ಷಗಳಷ್ಟು ಹಳೆಯದಾದ ತೆಂಗಿನ ಮರಗಳು ನೀರಿನ

ಅಭಾವದಿಂದ ಒಣಗಿ ಬೋಳಾಗಿ ಎಲ್ಲಿ ನಿಂತಿದ್ದವೋ, ಅವುಗಳ ನಡುವೆ ಗೌಡರ ಭಾರಿ ಮನೆ ಇತ್ತು.
ಗೌಡರು ಸಾಮಾನ್ಯದವರಲ್ಲ ಗ್ರಾಮದ ಅನೇಕರಿಗೆ ಗೊತ್ತಿರುವಂತೆ ಅವರು ಕೂಲಿ ಮಾಡುತ್ತಿದ್ದರು. ಒಂದು ರೊಟ್ಟಿಯಲ್ಲಿ ಒನ್ ಬೈಟು ಮಾಡಿ ಹೆಂಡತಿಯೊಂದಿಗೆ ಊಟ ಮಾಡುತ್ತಿದ್ದರು. ಶಾಸ್ತ್ರಿಗಳು ಎಂದೋ ಹೇಳಿದ್ದರಂತೆ “ನೀನು ಕೋಟ್ಯಾಧಿಪತಿ ಆಗುವಿ” ಎಂದು ತೆಂಗಿನಕಾಯಿ ಮಂತ್ರಿಸಿಕೊಟ್ಟಿದ್ದರಂತೆ ಅದನ್ನು ಮೂರು ಸಾರಿ ಪೂಜಿಸಲು ಹೇಳಿದ್ದರಂತೆ. ಅವರು ಹೇಳಿದ್ದರಿಂದಲೋ ಏನೋ ಗೌಡರು ಹತ್ತಿಪ್ಪತ್ತು ವರ್ಷಗಳಲ್ಲಿ ಕೋಟ್ಯಾಧೀಶ್ವರ ಆಗಿಯೇ ಬಿಟ್ಟರು. ಯಾವಯಾವುದೇ ಕಾರಣಕ್ಕೆ ಅವರು ಒಂದೊಂದು ಬಾರಿ ಜೈಲಿಗೆ ಹೋಗಬೇಕಾಗಿ ಬಂತು. ಆಗ ಶಾಸ್ತ್ರಿಗಳು “ನಮ್ಮ ಆರಾಧ್ಯದೈವವಾದ ಶ್ರೀಕೃಷ್ಣ ಪರಮಾತ್ಮ ಹುಟ್ಟಿದ್ದು ತುರಂಗದಲ್ಲಲ್ಲವೆ? ಅಲ್ಲಿಗೆ ಹೋಗಿ ಬಂದರೆ ಪರಿಶುದ್ದ ಚಿನ್ನವಾಗುವಿ” ಎಂದು ಹೇಳಿದ್ದಂತೆ ಗೌಡರು ಸವರನ್ನೇ ಸರಿ. ಮನೆ ಮರ್ಯಾದೆನೆಲ್ಲ ಪಣಕ್ಕಿಟ್ಟು ಲಕ್ಷಗಟ್ಟ್ಲೆ ಸಂಪಾದಿಸಿದ್ದಕ್ಕೆ ಉತ್ತರಾಧಿಕಾರಿ ಇಲ್ಲವೆಂದು ಮರುಗುತ್ತಿದ್ದ ಗೌಡರು ಇತ್ತಿಚಿಗೆ ಗಂಡುಮಗುವಿಗೆ ತಂದೆಯೇನೋ ಆದರು. ಆದರೆ ಹುಟ್ತಿರುವ ಮಗುವಿಗೆ ಬಾಯಿ ಇಲ್ಲ, ಎಡಗಣ್ಣೂ ಕುರುಡು… ಬಲಗಾಲುಗಿಡ್ಡು… ಎಂಥದೋ ಒಂದು ಹುಟ್ಟಿತಲ್ಲಾ ಎಂಬುದೇ ಸಂತೋಷ. ಇದಕ್ಕೆಲ್ಲ ಕಾರಣರಾದ ಶಾಸ್ತ್ರಿಗಳನ್ನು ಆಮಂತ್ರಿಸದೇ ಇದ್ದರೆಯೇ ಗೌಡರು?

“ನೋಡು ಮೊಮ್ಮಗನೇ ಶೂದ್ರರು ಹಣ ಸಂಪಾದಿಸಬಹುದು. ಆದರೆ ಜ್ಞಾನ ಸಂಪಾದಿಕೊಳ್ಳಲಾರರು. ಪ್ರತಿಯೊಂದಕ್ಕೂ ಪಂಡಿತರಾದ ನಮ್ಮಂಥ ಜ್ಞಾನಿಗಳನ್ನೇ ಅಶ್ರಯಿಸದೆ ಅವರಿಗೆ ಬೇರೆ ದಾರೀನೆ ಇಲ್ಲ” ಎಂದು ಶಾಸ್ತ್ರಿಘಳು ಶಾಮುಗೆ ದಾರಿಯುದ್ದಕ್ಕೆ ಹೇಳಿದರು.
ಬಾಲಕನಿಗೆ ಅದರ ಮೇಲೆ ಗಮನವಿದ್ದರೆ ತಾನೆ? ಅದರ ಗಮನವೆಲ್ಲ ಗೌಡರು ಉತ್ತಮ ಬ್ರಾಹ್ಮಣ ಬಾಣಸಿಗರಿಂದ ಮಾಡಿಸಿರಬಹುದಾದ ಬಗೆಬಗೆ ಖಾದ್ಯಗಳ ಕಡೆಗೆ ಇತ್ತು. ಮನೆಯ ಹೊರಗಡೆ ಅಡುಗೆಯ ಪರಿಮಳ ನಿರ್ಮಿಸಿದ್ದ ಪರಿಧಿ ಪ್ರವೇಶಿಸಿದರು.

ಗೋವಿಂದೇಗೌಡರು ತಾವು ನಿಜಕ್ಕೂ ಧರ್ಮಾತ್ಮರೇ ಎಂಬುದನ್ನು ಸಾಬೀತುಪಡಿಸಿಲಿಕ್ಕಾಗಿಯೋ ಎಂಬಂತೆ ಬರುತ್ತಿದ್ದ ಶಾಸ್ತ್ರಿಗಳನ್ನು ದಾರಿಯಲ್ಲಿಯೇ ಅಡ್ಡ ತರುಬಿ ಶಿರಸಾಷ್ಟಾಂಗ ಪ್ರಣಾಮ ಸಲ್ಲಿಸಿದರು.

“ಗೌಡರೇ… ಈ ಬಾಲಕ ನಮ್ಗೆ ಮೊಮ್ಮಗರಾಗಬೇಕು. ನಮ್ಮ ತ್ತೀರ್ಥರೂಪರ ಪಡಿ‌ಅಚ್ಚು. ಪೂಜ್ಯ ಕಂಚೀ ಜಗದ್ಗುರುಗಳ ಅಮೃತ ಹಸ್ತದಿಂದ ಇವರ ಅಕ್ಷರಾಭ್ಯಾಸಕ್ಕೆ ಶ್ರೀಕಾರ ಹಾಕಿದ್ದಾರೆ” ಶಾಸ್ತ್ರಿಗಳು ಶಾಮು ಡಾರ್ಲಿಂಗನನ್ನು ಗೌಡರಿಗೆ ಪರಿಚಯಿಸಿದರು. ತಮ್ಮ ಮೊಮ್ಮಗನಿಗೂ ಪಾಪದ ಮೊಟ್ಟೆ ಗೌಡ ಸಾಷ್ಟಾಂಗ ಹಾಕಲೆಂಬ ಉದ್ದೇಶದಿಂದಲೇ ಶಾಸ್ತ್ರಿಗಳು ಹಾಗೆ ನುಡಿದದ್ದು. ಆದರೆ ಗೌಡರು “ಓಹೋ… ಓಹೋ” ಎಂದು ತಲೆ ಅಲ್ಲಾಡಿಸಿ ಬಿಡುವುದೇ? ಶುದ್ದ ಶುದ್ರ ಮುಂಡೆಗಂಡ.. ಸ್ವಲ್ಪವೂ ಸಂಸ್ಕಾರವಿಲ್ಲ.

ನಾಮಕರಣ ಮಹೋತ್ಸವಕ್ಕೆ ಆ ಭಾಗದ ಎಮ್ಮೆಲ್ಲೇ ಮೊದಲಾದ ಗಣ್ಯರು ಬಂದಿದ್ದರು. ಶಾಸ್ತ್ರಿಗಳ ಮಂತ್ರೊಚ್ಚಾರಣೆ ಎಂದಿಗಿಂತ ಸ್ಪುಟವೂ ಸ್ಪಷ್ಟವೂ ಆಗಿತ್ತು. ಅವರ ಆ ಶಾರೀರವನ್ನು ಎಲ್ಲರೂ ಮುಕ್ತ ಕಂಠದಿಂದ ಹೋಗಳಿದರು. ತಮ್ಮ ಮನೆಯಲ್ಲಿ ನಡೆಯುವ ವೈದಿಕ ಕಾರ್ಯಕ್ರಮಗಳಿಗೆ ಆಹ್ವಾನಿಸುವುದಾಗಿ ಶಾಸ್ತ್ರಿಗಳಿಗೆ ಪ್ರತಿಷ್ಥಿತರು ಭರವಸೆ ನೀಡಿದರು.

ಆ ಆನಂದದ ಸಾಗರದಲ್ಲಿ ಓಲಾಡುತ್ತಿದ್ದ ಶಾಸ್ತ್ರಿಗಳಿಗೆ ತಮ್ಮ ಬಿದಿಗೆ ಚಂದ್ರಮನಂಥ ಮೊಮ್ಮಗನನ್ನು ಗಣ್ಯರಿಗೆ ಪರಿಚಯಿಸಬೇಕೆಂಬ ಆಸೆಯಾಯಿತು. ನೊಡಿಕೊಳ್ಳುತ್ತಾರೆ ಪಕ್ಕದಲ್ಲಿರಬೇಕಾದ್ದ ಮೊಮ್ಮಗ ’ಲಾ ಪತಾ’.
” ಓ ಶಾಮಾ ಶಾಸ್ತ್ರಿಗಳೇ ” ಎಂದು ಗಂಭೀರ ಧ್ವನಿ ತೆಗೆದರು.
“ಗ್ರಾಂಡ್ ಪಾ ಐ ಯಾಮ್ ಇಯರ್” ಎಂಬ ಧ್ವನಿ ಕೇಳಿ ಬಂತು.
ತಿರುಗಿ ನೋಡಿದರು. ಮುಖದ ತುಂಬ ರಕ್ತ ನಿಂತಿತು.

ಅವರು ಏನು ನಡೆಯಬಾರದೆಂದು ಎಚ್ಚರವಹಿಸಿದ್ದರೋ? ಅದೇ ನಡೆದು ಹೋಗಿತ್ತು. ಅಶ್ವತ್ಥ್ ಮಗನನ್ನು ಎತ್ತಿಕೊಂಡಿದ್ದ. ತಾನೇ ಅದರ ಬಾಯಿಂದ ಇಂಗ್ಲಿಷ್ ನುಡಿಸಿದ್ದ.
ಅಶ್ವತ್ಥ್ ಇಲ್ಲಿರುವುದೆಂದರೇನು? ಶಾಸ್ತ್ರಿಗಳಿಗೆ ಆಶ್ಚರ್ಯ.
ಗೋವಿಂದೇಗೌಡರ ಸ್ಪಿನ್ನಿಂಗ್ ಮಿಲ್ಲಿನಲ್ಲಿ ಆತ ಅಸಿಸ್ಟೆಂಟ್ ಮೇನೇಜರಾಗಿ ಕೆಲಸ ಮಾಡುತ್ತಿದ್ದ. ಶಾಸ್ತ್ರಿಗಳ ಮೇಲಿನ ಗೌರವಕ್ಕೆ ಕಡಿಮೆ ಸಂಬಳದ ಅಸಿಸ್ಟೆಂಟ್ ಮೇನೇಜರು ಹುದ್ದೆಯನ್ನು ಧರ್ಮಾತ್ಮರು ದಯಪಾಲಿಸಿದ್ದರು.
ಅವರಿಬ್ಬರ ಜಗಳ ಲೋಕವಿಖ್ಯಾತ.
ಇವರಿಗೆ ಅವರೇ ಮಗ ನೋಡು.
ಅವರಿಗೆ ಇವರೇ ತಂದೆ ನೋಡು.
ಅವರಿಬ್ಬರ ಜಗಳದ ಕೇಂದ್ರ ಇದೇ ಹುಡುಗ ನೋಡು…
ಗಣ್ಯರು ತಲಾ ಒಂದೊಂದು ಗೊಣಗಿಕೊಂಡರು.
ಎಲ್ಲರೂ ನೋಡುನೋಡುತ್ತಿರಲು ಬಾಲಕ ಶಾಮು ಕುರಿತು ತಂದೆ ಮಗಗೂ ಕೋಳಿ ಜಗಳ ಆರಂಭವಾಯಿತು. ಅವರಿಬ್ಬರ ಜಗಳ ನಾಮಕರಣಕ್ಕೆ ಬಂದವರಿಗೆ ವಿಶೇಷ ಮನರಂಜನೆ ಒದಗಿಸಿತು.
ಸಂಸ್ಕೃತ ಗಿ/s ಇಂಗ್ಲಿಷೂ
ಇಂಗ್ಲಿಷ್ ಗಿ/s ಸಂಸ್ಕೃತವೂ
ಐದನೇ ಶತಮಾನ ಗಿ/s ಇಪ್ಪತ್ತನೇ ಶತಮಾನವೂ… ಹೀಗೆ…
ಹೇಗೋ ಗಣ್ಯರು ಬಂದಿದ್ದರಲ್ಲವೆ? ಅವರ ಮಾತು ಕೇಳುವುದು ಉಭಯರಿಗೂ ಕ್ಷೇಮವೇ. ಕೇಳದಿದ್ದರೆ ಉಭಯರೀರ್ವರ ಉಂಬಳಕ್ಕೆ ಖೋತಾ ಆಗುವ ಲಕ್ಷಣ ಗೋಚರಿಸಿತು.
ಗಣ್ಯರು ಹೇಳಿದ ರಾಜಿ ಸೂತ್ರದ ಪ್ರಕಾರ
ಬಾಲಕ ಶಾಮಾಶಾಸ್ತ್ರಿಗಳು ಸಂಸ್ಕೃತ ಇಂಗ್ಲಿಷು ಎರಡೂ ಕಲಿಯುವುದು?
ಬಾಲಕ ಶಾಮಾಶಾಸ್ತ್ರಿ ಕ್ರಾಪೂ ಜುಟ್ಟು ಎರಡೂ ಬಿಡುವುದು.
ಬಾಲಕ ಶಾಮಾಶಾಸ್ತ್ರಿ ವಾರದಲ್ಲಿ ಮೊದಲ ಮೂರುವರೆ ದಿನ ತಂದೆ ಮನೆಯಲ್ಲಿರುವುದು ಕೊನೆಯ ಮೂರುವರೆ ದಿನ ತಾತನ ಮನೆಯಲ್ಲಿರುವುದು.
ಬಾಲಕ ಶಾಮಾಶಾಸ್ತ್ರಿ ಶೂದ್ರರೋಣಿಗೂ ಅಗ್ರಹಾರಕ್ಕೂ ನಡುವೆ ಸೇತುವೆಯಾಗುವುದು.
ಅವರಿಬ್ಬರೂ ಒಪ್ಪಿಕೊಂಡರು. ಬೇರೆ ದಾರಿ ಇರಲ್ಲಿಲ್ಲ. ಅವು ವಾರದ ಮೊದಲ ದಿನಗಳಾದ್ದರಿಂದ ಅಶ್ವತ್ಥ ತನ್ನ ಮಗನನ್ನು ಎತ್ತಿಕೊಂಡು ಹೋದನು.

ಬುಧವಾರ ಮಧ್ಯಾಹ್ನ ಶಾಸ್ತ್ರಿಗಳು ತಮ್ಮ ಮೊಮ್ಮಗನನ್ನು ತಮ್ಮ ಜೊತೆ ಕಳುಹಿಸಿ ಕೊಡುವಂತೆ ಹಾಜರಿದ್ದು ಬಿಡುತ್ತಿದ್ದರು.
ಹೀಗೆ ಆ ಬಾಲಕನು ಉಭಯಚರವಾಗಿ ಬೆಳೆಯತೊಡಗಿತು. ಜುಟ್ಟು ಮತ್ತು ಕ್ರಾಪಿನ ವಿಷಯ ಉಭಯ ಬಣಗಳಲ್ಲಿ ಭಿನ್ನಾಭಿಪ್ರಯಗಳು ತಲೆದೋರದೆ ಇರಲ್ಲಿಲ್ಲ. ಒಂದು ವಾರದೊಳಗೆ ಜುಟ್ಟು ಮತ್ತು ಕ್ರಾಪು ಅವೆರಡು ತಮ್ಮ ಗಾತ್ರ ಕಳೆದುಕೊಂಡುಬುಬಿಡುತ್ತಿದ್ದವು. ಬಾಲಕನಿಗೆ ತುಂಬ ಫಜೀತಿಯಾಗತೊಡಗಿತು.
ಹೀಗೆ ದಿನಗಳು ಓಡುತ್ತಿರಲಾಗಿ…
ಪಿ.ಡಿ. ಪ್ರಸಾದ್ ಅಶ್ವತ್ಥ್‌ನನ್ನು ಮನೆಗೆ ಕರೆತಿಸುಕೊಂಡು ಆಹಾರ ಪಾನೀಯ ನೀಡಿ ಪ್ರೀತಿ ಪ್ರಕಟಿಸಿದ. ಉಭಯ ಕುಶಲೋಪರಿ ಕುರಿತಂತೆ ವಿಚಾರ ವಿನಿಮಯವಾಯಿತು.

“ಅಶ್ವತ್ಥ್ ನಾರಾಯಣರವರೇ… ಈಗಿರೋ ಮನೆ ಮಾರಬೇಕೂಂತ ಮಾಡೀವಿ… ನಿಮ್ಗೇನಾದ್ರೂ ತಗೊಳ್ಳೋ ಇಚ್ಛೆ ಐತೆ ಏನು?” ಪಿ.ಡಿ. ಪ್ರಸಾದ್ ಪ್ರಸ್ತಾಪಿಸಿದ.
ಮನೆ ಇಲ್ಲದವರಿಗೆಲ್ಲಿಯದು ಮಾನ!

ಅಶ್ವತ್ಥ್ ಇರೋ ವಿಷಯ ಹೆಂಡತಿ ಅಲುಮೇಲು ಬಳಿ ಪ್ರಸ್ತಾಪಿಸಿದ. ತಮ್ಮದೆನ್ನೋ ಮನೆಗೆ ಒಡೆಯರಾಗಬೇಕೆಂಬುದರ ಆಕೆಗೆ ಭಿನ್ನಾಭಿಪ್ರಾಯವಿರಲ್ಲಿಲ್ಲ. ಆದರೆ ಬ್ರಾಹ್ಮಣರಾದ ತಾವು ಶೂದ್ರಾದಿ ಶೂದ್ರರ ಕೇರಿಯೊಳಗೆ ವಾಸಿಸುವುದು ಎಷ್ಟು ಸಾಧು! ಇದಕ್ಕೆ ಪುಜ್ಯರಾದ ಮಾವನವರು ಒಪ್ಪುವರೇ? ಎಂಬ ಸಮಸ್ಯೆಗಳ ಬಗ್ಗೆ ಅಲುಮೆಲು ಮಾತ್ರ ತಲೆ ಕೆದೆಸಿಕೊಂಡಳು.

ಒಂದು ದಿನ ಅಶ್ವತ್ಥ್ ಹೆಂಡತಿಯನ್ನು ತಾಲ್ಲೂಕು ಕೇಂದ್ರವಾದ ಕೂಡ್ಲಿಗೆ ಕರೆದುಕೊಂಡು ಹೋದ. ಅಲ್ಲಿ ಪಿ.ಡಿ. ಪ್ರಸಾದ್ ಮುಂತಾದವರಿದ್ದರು. ಅವರು ಹೇಳಿದ ಕಡೆ ಸಂಸ್ಕೃತದಲ್ಲಿ ಸಹಿ ಮಾಡಿದಳು. ಗಂಡನ ಸಹಾಯದಿಂದ ಹೆಬ್ಬೆಟ್ಟು ಒತ್ತುವ ಕಡೆ ಒತ್ತಿದಳು.
ಆಕೆಗೆ ಗೊತ್ತದದ್ದು ಊರಿಗೆ ಮರಳಿದ ಮೇಲೆ!
“ನೀವೆಂಥ ಕೆಲಸ ಮಾಡಿ ಬಿಟ್ಟಿರಲ್ಲ… ಹೋಗಿ ಹೋಗಿ ಮನೆಯನ್ನು ನನ್ನ ಹೆಸರಿಗೆ ಮಾಡಿಸುವುದೇನು?” ಗಂಡನ ಎದೆಯಲ್ಲಿ ಮುಖ ಹುದುಗಿಸಿ ಅತ್ತಳು.
ವಾರದ ಎರಡನೆಯ ಪಾಳೆಯಕ್ಕೆ ಬಂದ ಮೊಮ್ಮಗನಿಂದ ಈ ವಿಷಯ ಶಾಸ್ತ್ರಿಗಳು ತಿಳಿದು ಮುಖವನ್ನು ಯಜ್ಞಕುಂಡ ಮಾಡಿಕೊಂಡರು.
“ಅಗ್ರಹಾರದಲ್ಲಿ ಇದಕ್ಕಿಂತ ಕಡಿಮೆ ಬೆಲೆಗೆ ಒಳ್ಳೆಯ ಮನೆ ಸಿಗುತ್ತಿತ್ತಲ್ಲ. ಅಂತೂ ಶೂದ್ರರನಡುವೆ ಶಾಶ್ವತವಾಗಿ ಬದುಕಲು ನಿಶ್ಚಯಿಸಿದಿ ಎಂದಂತಾಯಿತು” ಎಂದು ಮಗನ ಮನೆ ಮುಂದೆಯೂ;

“ಎಲವೋ ದುರುಗಪ್ಪನೆಂಬ ಮಾನವನೇ… ನಮ್ಮ ಮಗನಿಗೆ ಆ ಮನೆ ಮಾರಿರೋ ನಿನಗೆ ರೌರವ ನರಕ ಕಾದಿದೆ ನೆನಪಿಟ್ಟುಕೋ” ಎಂದು ಪಿ.ಡಿ. ಪ್ರಸಾದನ ಮನೆ ಮುಂದೆಯೂ ಆರ್ಭಟಿಸಿದರು.

ಅಗ್ರಹಾರದ ತಮ್ಮ ಮನೆಗೆ ಬಂದವರೆ ಹೊಸಮನೆ ತಮ್ಮ ಮಗನಿಗೂ ಅವನ ಕುಟುಂಬದ ಸರ್ವರಿಗೂ ಸರ್ವ ಮಂಗಳ ಉಂಟಾಗಲಿ ಎಂಬ ಉದ್ದೇಶದಿಂದ ಒಂದು ಹೋಮ ಮಾಡಿದರು.

ಹೀಗೆಯೇ ದಿನಗಳು ಓಡುತ್ತಿರಲಾಗಿ…
ಅಶ್ವತ್ಥ್‌ನ ಕಾಲು ಮುರಿದ ಭಾಗದಲ್ಲಿ ಯಮ ಯತನೆ ಕಾಣಿಸಿಕೊಂಡಿತು. ಅದು ಕ್ರಮೇಣ ಯಾವುದೇ ಇಲಾಜಿಗೆ ಬಗ್ಗದೆ ಇಡೀ ದೇಹಕ್ಕೆ ವ್ಯಾಪಿಸಿತು.
ಈ ಡಾಕ್ಟರಿಂದ ಆ ಡಾಕ್ಟರ ಕಡೆ ಅಲೆದಾಡಿದ. ಹತ್ತಾರು ಡಾಕ್ಟರುಗಳು ಬರೆದುಕೊಟ್ಟ ಮಾತ್ರೆ ನುಂಗಿದ್ದಾಯಿತು. ಔಷದ ಕುಡಿದಿದ್ದಾಯಿತು. ಹತ್ತಾರು ವಿವಿಧ ಸೂಜಿಗಳನ್ನು ಮಾಡಿಸಿಕೊಂಡಿದ್ದಾಯಿತು.

ಆಶ್ವತ್ಥ ಹಾಸಿಗೆಯಲ್ಲಿ ನೋವಿನಿಂದ ಹೊರಳಾಡತೊಡಗಿದ. ಅಲುಮೇಲು ಅನ್ನನೀರು ಬಿಟ್ಟು ಗಂಡನ ಶುಶ್ರೂಷೆಗೆಗೆ ತೊಡಗಿದಳು. ’ದೇವರೇ ಗಂಡನ ನೋವನ್ನು ನನಗೆ ವರ್ಗಾಯಿಸು’ ಎಂದು ಬೇಡಿಕೊಂಡಳು ಸ್ವಲ್ಪವೂ ಬೇಸರ ಮಾಡಿಕೊಳ್ಳದೆ ಗಂಡನ ಮಲಮೂತ್ರ ಬಳಿದು ಹೊರಚಲ್ಲತೊಡಗಿದಳು. ಆಕೆಗೆ ಓಣಿಯ ಜನರೂ ಸಹಕರಿಸತೊಡಗಿದರು. ಅವರ ನೋವು ತಮ್ಮ ನೋವು ಎಂದು ಭಾವಿಸಿದರು.
“ಅಮ್ಮಾ ತಾಯಿ… ಯಜಮ್ನ್ರೀಗೆ ಯ್ಯೋಳಿ ಕಳಿಸ್ರಿ… ಇಂಥ ವತ್ತಿನಾಗ ಯಜಮಾನ್ರಾದೋರು ಮನ್ಯಾಗಿರಬೇಕು” ಎಂದು ಕೇರಿಯ ಯಜಮಾನ ಚವುಡಪ್ಪ ಪರಿಪರಿಯಾಗಿ ಕೇಳಿಕೊಂಡ.

“ಬೇಡ ಕಣೇ ಅವರ್ನ ಕರೆಸೋದು ಬೇಡ ಅವರು ಮನಸ್ಸಿಗೆ ತುಂಬ ನೋವು ಮಾಡಿಕೊಳ್ತಾರೆ..” ಎಂದು ಹೆಂಡತಿಯ ಬೇಡಿಕೆಯನ್ನು ರುಗ್ಣಶಯ್ಯೆಯಲ್ಲಿದ್ದ ಅಶ್ವತ್ಥ್ ನಿರಾಕರಿಸಿದ.
ಅದೇ ಹೊತ್ತಿಗೆ ಹೊರಗಡೆ ಗಲಾಟೆಯಾಯಿತು.
ಶಾಸ್ತ್ರಿಗಳು ಹೌಹಾರಿ ಬಂದುಬಿಟ್ಟಿದ್ದರು.
“ಅಶ್ವತ್ಥಾ… ನಮ್ಮ ಮಗ ಅಶ್ವತ್ಥ್ ನಾರಾಯಣನೇ… ನಾನು ನಿನ್ನ ಪಾಲಿಗೆ ಇಲ್ಲಾಂತ ತಿಳ್ಕೊಂಡಿ ಎನೋ?” ಎಂದು ಒಳಗಡೆ ಬಂದರು.
ಮೂಳೆ ತೇಲಿರುವ ಮಗನನ್ನು ಉತ್ಕಂಠಯಿಂದ ತಬ್ಬಿಕೊಂಡರು.
ಅವರು ಆ ಕ್ಷಣದಿಂದ ಅವರು ಅಲ್ಲಿಯೇ ಉಳಿದುಬಿಟ್ಟರು.
ಡಾಕ್ಟರ್ ರೋಗಿಯನ್ನು ಬೆಂಗಳೂರಿನ ದೊಡ್ಡ ಆಸ್ಪತ್ರೆಗೆ ಕೂಡಲೆ ಕರೆದೊಯ್ಯುವಂತೆ ಖಡಾಖಂಡಿತವಾಗಿ ಸೂಚಿಸಿದರು.

ತಮ್ಮ ಮಗನನ್ನು ಉಳಿಸಿಕೊಳ್ಳುವುದು ತಂದೆಯಾದ ತಮ್ಮ ಕರ್ತವ್ಯವೆಂದು ಬಗೆದರು. ಅಂದು ರಾತ್ರಿಯೇ ಅಗ್ರಹಾರದ ತಮ್ಮ ಪಿತ್ರಾರ್ಜಿತ ಮನೆಯನ್ನು ಕೊಳ್ಳುವಂತೆ ಅಷ್ಟಾವಧಾನಿ ಶ್ರೀನಿವಾಸ ರಾಮಾನುಜರನ್ನು ಕೇಳಿಕೊಂಡರು. ಕಾರಣ ಅವರ ಮಗ ಸರ್ಕಾರದ ದೊಡ್ಡ ಹುದ್ದೆಯಲ್ಲಿದ್ದ. ಸಾಕಷ್ಟು ಸಂಪಾದಿಸಿದ್ದ. ಇಂಥದೊಂದು ಮನೆಯನ್ನು ತಮ್ಮದಾಗಿಸಿಕೊಳ್ಳಲು ಅಷ್ಟಾವಧಾನಿಗಳು ಅನೇಕ ರೀತಿ ತಂತ್ರಗಳನ್ನು ಪ್ರಯೋಗ ಮಾಡಿ ವಿಫಲರಾಗಿದ್ದರು.

ತಮ್ಮಷ್ಟೇ ವಯಸ್ಸಿನವರಾದ ಪಂಡಿತ ಪರಮೇಶ್ವರ ಶಾಸ್ತ್ರಿಗಳು ಮಾಡಿಕೊಂಡ ಮನವಿಯನ್ನು ಸಹಾನುಭೂತಿಯಿಂದ ಕೇಳಿದರು. ಅಶ್ವತ್ಥ್‌ನ ಆರೋಗ್ಯ ಪರಿಸ್ಥಿತಿಯ ಬಗ್ಗೆ ಅವರೂ ಕಳವಳಗೊಂಡರು.
“ಮನೆ ವಿಷಯ ನಂತರ ಯೋಚಿಸೋಣ.. ಈಗ ಹಣ ಎಷ್ಟು ಬೇಕಾಗಿದೆ ಹೇಳಿ” ಸೊಂಟದಿಂದ ಬೀಗದ ಕೀ ಗೊಂಚಲು ತೆಗೆಯುತ್ತ ಕೇಳಿದರು.

ಶಾಸ್ತ್ರಿಗಳು ಎಷ್ಟು ಒತ್ತಾಯಿಸಿದರೂ ಅವರು ಮನೆ ಬರೆಸಿಕೊಳ್ಳಲಿಲ್ಲ. ಹಣಕ್ಕೆ ಸಂಬಂಧಿಸಿದಂತೆ ರಸೀತಿಯನ್ನೂ ಪಡೆಯಲಿಲ್ಲ. ನೋಟಿನ ಎರಡು ಕಂತೆಗಳನ್ನು ನೀಡಿದರು.
“ಅಶ್ವತ್ಥ್ ಕೇವಲ ನಿಮ್ಮೊಬ್ಬರ ಮಗ ಅಲ್ಲ… ಅವನು ನಮ್ಮೆಲ್ಲರ ಹುಡುಗ ಅವನು ಪೂರ್ಣ ಗುಣಮುಖನಾಗೋದು ನಮಗೆಲ್ಲ ಮುಖ್ಯ… ಹಣ ಮುಖ್ಯವಲ್ಲ… ಸಂಕೋಚ ಪಡದೆ ನಮ್ಮಿಂದ ಎಷ್ಟು ಹಣ ಬೇಕಾದರೂ ತಾವು ಒಯ್ಯಬಹುದು ಶಾಸ್ತ್ರಿಗಳೇ?” ಎಂದು ಅವರ ಎರಡೂ ಕೈಗಳನ್ನು ಹಿಡಿದು ಕೇಳಿಕೊಂಡರು.
ಸನಾತನತೆಯ ವಿಷಯದಲ್ಲಿ ಶಾಸ್ತ್ರಿಗಳು ಸಡಿಲಗೊಂಡಿರಿವುದರಿಂದ ಅಗ್ರಹಾರದ ಬಹುತೇಕ ಸದಸ್ಯರು ಸಂತಸಗೊಂಡರು.
ಅಶ್ವತ್ಥನನ್ನು ಬಸ್ಸಿನಲ್ಲಿ ಕರೆದುಕೊಂಡು ಹೋಗುವಂತಿರಲಿಲ್ಲ. ಅದೇ ಹೊತ್ತಿಗೆ ಗೋವಿಂದೇಗೌಡರು ಅಶ್ವತ್ಥ್‌ನನ್ನು ನೋಡಿಕೊಂದು ಹೋಗಲೆಂದು ಕಾರಿನಲ್ಲಿ ಬಂದರು. ತಮ್ಮಿಂದೇನಾಗಬೇಕು ಹೇಳಿ ಎಂದು ಕೇಳಿಕೊಂಡರು. ಹಣದ ಹೊಂದಾಣಿಕೆ ಮಾಡಿಕೊಂಡಿರುವುದು ತಿಳಿದು ಬೇಸರ ವ್ಯಕ್ತಪಡಿಸಿದರು.
“ಅಶ್ವತ್ಥನನ್ನು ಕಾರಿನಲ್ಲಿ ಕರೆದೊಯ್ಯಿರಿ” ಎಂದು ಹೇಳಿ ತಮ್ಮ ಅಂಬಾಸಿಡರ್ ಕಾರನ್ನು ಬಿಟ್ಟು ಹೋದರು.

ಆ ಕಾರಿನಲ್ಲಿ ಹೊರಟರು. ಬೆಂಗಳೂರು ತಲುಪಿದಾಗ ಬೆಳಗಾಗಿತ್ತು. ದೊಡ್ಡಾಸ್ಪತ್ರೆಗೆ ದಾಖಲು ಮಾಡಲಾಯಿತು. ದೊಡ್ಡ ಡಾಕ್ಟರ್ ಪ್ರಭಾಕರ್ ಅಶ್ವತ್ಥ್‌ನನ್ನು ಹುಡುಕಿಕೊಂಡು ಬಂದರು. ಆ ಒಳಗಾಗಿ ಅಷ್ಠಾವಧಾನಿಗಳು ತಮ್ಮ ಮಗ ವೇದವ್ಯಾಸನಿಗೆ ಈ ವಿಷಯ ತಿಳಿಸಿದ್ದರು. ಕೂಡಲೆ ವೇದವ್ಯಾಸ ತನ್ನ ಮಿತ್ರ ಪ್ರಭಾಕರನ್ನು ಸಂಪರ್ಕಿಸಿದ್ದ.

ಅಶ್ವತ್ಥನನ್ನು ಆಸ್ಪತ್ರೆಯ ಸ್ಪೆಷಲ್ ವಾರ್ಡ್ಗೆ ಸೇರಿಸಿಕೊಳ್ಳಲಾಯಿತು. ಪರಿಣಿತ ವೈದ್ಯರೆಲ್ಲ ರೊಗಿಯ ತಪಾಸಣೆ ಮಾಡಿದರು. ನಂಜು ದೇಹದಾದ್ಯಂತ ವ್ಯಾಪಿಸಿರುವುದನ್ನು ತಿಳಿದು ಖೇದಗೊಂಡರು. ಕೂಡಲೆ ಆಸ್ಪತ್ರೆಗೆ ಸೇರಿಸಿದ್ದಲ್ಲಿ ಇಷ್ಟೊಂದು ವಿಷಮಾವಸ್ಥೆ ತಲುಪುತ್ತಿರಲಿಲ್ಲವೆಂದರು. ಆಶ್ವತ್ಥ್ ಬದುಕುವ ಭರವಸೆ ನೀಡಲಿಲ್ಲ.

ಶಾಸ್ತ್ರಿಗಳನ್ನು, ಅಲುಮೇಲಮ್ಮನನ್ನು ವೈದ್ಯರು ಪರಿಪರಿಯಾಗಿ ಸಂತೈಸಿದರು. ಅವರು ಯಾವುದೇ ಶುಲ್ಕ ಪಡೆಯಲಿಲ್ಲ. ವೇದವ್ಯಾಸನ ಕಡೆಯವರೆಂದರೆ ಮುಗಿಯಿತು. ’ದೇವರ ಮೇಲೆ ಭಾರ ಹಾಕಿ ಬಿಡಿ’ ಎಂದು ಹೇಳಿ ಕಳುಹಿಸಿದರು.

ಊರಿಗೆ ಮರಳುವಾಗ ಅಶ್ವಥ್ ಕಾರು ನಿಲ್ಲುವಂತೆ ಸಂಜ್ಞೆ ಮಾಡಿದ. ಹೆಂಡತಿಯ ತೊಡೆ ಮೇಲೆ ತಲೆ ಇಟ್ಟ. ತಂದೆಯನ್ನು ದೂರ ಹೋಗಲು ಹೇಳಿದ. ಅವರು ಅಲ್ಲಿ ಬಿಕ್ಕುತ್ತ ನಿಂತರು.

ಅಶ್ವತ್ಥ್ ಹೆಂಡತಿಯ ತೊಡೆ ಮೇಲೆ ತಲೆ ಇಟ್ಟ, ಇನ್ನೆರಡು ಬೊಗಸೆಯಲ್ಲಿ ಆಕೆಯ ಮುಖ ಹಿಡಿದುಕೊಂಡ. ದಿಟ್ಟಿಸಿದ. ಆಳಕ್ಕಿಳಿದಿದ್ದ ಆಕೆಯ ಕಣ್ಣುಗಳಿಂದ ಬುಳುಬುಳನೆ ಹನಿ ಉದುರಿತು. ಅವನ ಮುಖ ತೊಯ್ದಿತು. ಮುದ್ದು ಕೊಡಲು ಹೇಳಿದ, ಕೊಟ್ಟಳು, ತಾನೂ ಕೊಟ್ಟ.
“ಅಲೂ… ನಂದೊಂದು ಮಾತು ನಡೆಸಿಕೊಡ್ತೀಯಾ? ಆಕೆಯ ತಲೆ ನೇವರಿಸಿದ.
“ಅದೇನು ಕೇಳಿ ಮೊದ್ಲು”
“ನನಗಿನ್ನೂ ಮೂವತ್ತು ದಾಟಿಲ್ಲ…”
“ಏನೀಗ?”

“ನಾನು ಸಾಯೋದಂತು ಖಚಿತ. ನೀನು ಬ್ರಹ್ಮಣ ವಿಧವೆ ಥರ ಬದುಕಬೇಕು. ನಿನ್ನ ತುಂಬ ಪ್ರೀತಿಸೋರನ್ನಾರನ್ನಾರನ್ನಾದ್ರು …” ಮುಂದಿನ ಮಾತು ಹೊರಬರದಂತೆ ಗಂಡನ ಬಾಯಿ ಮುಚ್ಚಿದಳು.

“ನೀವು ಹೀಗೆ ಮಾತಾಡೋದಾ?… ನಿಮ್ಮ ಮುಂದೆ ಕಣ್ಣು ಮುಚ್ಚೋ ಆಸೆ ನನ್ನದು. ಜ್ವರದ ತಾಪದಲ್ಲಿ ತೋಚಿದಂತೆ ಮತಾಡಬೇಡಿ …ಮಾತಾಡಿದ್ರೆ ನನ್ನಾಣೆ!” ಗಟ್ಟಿಯಾಗಿ ಗಂಡನನ್ನು ತಬ್ಬಿಕೊಂಡಳು.
ಕಕ್ಕಸ್ಸಿಗೆ ಹೋಗಿದ್ದ ಚಾಲಕ ಬಂದ. ಹೆಜ್ಜೆಗೊಂದು ನಿಟ್ಟುಸಿರು ಇಡುತ್ತ ಶಾಸ್ತ್ರಿಗಳು ಬಂದರು.

“’ದೇವರೇ’ ತಂದೆಯಾದ ನನ್ನ ಕಣ್ಣ ಮುಂದೆ ನನ್ನ ಮಗ ಸಾವಿನೊಂದಿಗೆ ಹೋರಾಡುತ್ತಿರುವುದನ್ನು ಹೇಗೆ ನೋಡಲಿ… ನಿನ್ನ ಸೇವೆ ಮಾಡಿದ ನಮಗೇ ಇಂಥ ಶಿಕ್ಷೆ ನೀಡಿದ್ದೀಯ… ಸಾವು ಕೊಡೋದಿದ್ದ್ರೆ ಮೊದಲು ಈ ವೃದ್ಧನಿಗೆ ಕೊಡು” ಕಣ್ಣು ಮುಚ್ಚಿದ ಅವರ ಮನಸ್ಸು ಒಂದೇಸಮನೆ ಚೀರುತ್ತಿತ್ತು.
ಊರು ಮುಟ್ಟಿದ ದಿನವೆಲ್ಲ ಅಶ್ವತ್ಥ್ ತುಂಬ ಲವಲವಿಕೆಯಿಂದ ಇದ್ದ. ಮಗನೊಂದಿಗೆ ಏನೆಲ್ಲ ಮಾತಾಡಿದ. ಹೆಂಡತಿಯ ಮುಡಿಯನ್ನು ಪ್ರೀತಿಯಿಂದ ಸವರಿದ. “ಅಪ್ಪಾಜಿ… ನಿನ್ ಜೊತೆ ಮಾತಾಡುವುದಿದೆ” ಎಂದ. ಶಾಸ್ತ್ರಿಗಳು ಹತ್ತಿರ ಕೂತುಕೊಂಡರು. “ಹೀಗೆಲ್ಲ ಮಾತಾಡಿ ಹೊಟ್ಟೆ ಉರಿಸಬೇಡವೋ” ಅಂದರು.
“ಚತುರ್ವೇದಗಳನ್ನು ಅರಗಿಸಿಕೊಂಡಿರೋರ ಹೊಟ್ಟೆ ಉರಿಯೋದೆಂದ್ರೇನು? ನಗಾಡಿದ.
“ಅಪ್ಪಾಜಿ.. ಶಾಮುನ ಬಗ್ಗೆ ನಾವಿಬ್ರು ಎಷ್ಟು ಜಗಳಾಡಿದ್ವಿ ಅಲ್ವಾ?”
“ಹೌದಪ್ಪಾ”
“ಅವನು ಮಾಮೂಲು ಜನರಂತೆ ಬದುಕಬೇಕು. ಅವನು ಸರ್ಕಾರಿ ನೌಕರನಾಗಬೇಕು. ಪ್ರಾಮಾಣಿಕರೆಯಿಂದ, ದಕ್ಷತೆಯಿಂದ ದುಡಿಬೇಕು”
“ಹಾಗೇ ಆಗಲೋ!”
“ಅಪ್ಪಾಜಿ… ನಂಗೆ ಅಂಟಿ ಕೂತ್ಕೊಳ್ಳಿ” ಎಂದ. ತಾನೇ ತಂದೆಯ ತೊಡೆಮೇಲೆ ತಲೆ ಇಟ್ಟು ಮಲಗಿದ.
“ನೀನೊಂದು ಮಾತು ಹೇಳಿದ್ದಿ. ನೆನಪಿದೆಯಾ?
“ಇಲ್ಲ ಕಣಪ್ಪಾ!”
“ನೀವು ಸತ್ರೆ ನಿಮ್ ಕಳೇಬರಕ್ಕೆ ಅಗ್ನಿ ಸಂಸ್ಕಾರ ಮಾಡೋದು ಶಾಮನೆ! ಅಲ್ವೆ!” ಅಶ್ವತ್ಥ್‌ಗೆ ನಗು ಬಂತು. ಜೋರಾಗಿ ನಗತೊಡಗಿದ.
ಶಾಸ್ತ್ರಿಗಳ ಕಣ್ಣಲ್ಲಿ ನೀರು ತುಂಬಿಕೊಂಡರು. ಅಡುಗೆ ಮನೆಯಿಂದ ಮಗನೊಂದಿಗೆ ಅಲುಮೇಲು ಓಡಿಬಂದಳು. ತನ್ನ ಗಂಡ ಎಷ್ಟೊಂದು ಸಂತೋಷವಾಗಿದ್ದಾರಲ್ಲ… ದೇವರೇ ಇವರು ಹೀಗೇ ನಗುತ್ತಿರಲಿ!
ನಗೆ ಆರೋಹಣ ಹಂತದಲ್ಲಿಯೇ ಅಂತರ್ಧಾನವಾಯಿತು.

ಅದುವರೆಗೆ ಎಲ್ಲರ ಕರುಳುಗಳಲ್ಲಿ ದುಖಃ ಇಟ್ಟಿದ್ದ ಮೊಟ್ಟೆಗಳೆಲ್ಲ ಮರಿಮಾಡಿದವು… ಅವು ಹೊರಬಂದದ್ದಾಗಲೀ; ರೆಕ್ಕೆ ಮೂಡಿದ್ದಾಗಲೀ; ಕೊಕ್ಕೆ ಮಸೆದದ್ದಾಗಲೀ’ ಬಿಸಿಬಿಸಿ ಕಣ್ಣೀರಿನಲ್ಲಿ ಈಜಾಡಿದ್ದಾಗಲೀ; ತಡವಾಗಲಿಲ್ಲ.

ಗಂಡ ತೀರಿಕೊಂಡಂದಿನಿಂದ ಕೇಶ ಮುಂಡನ ಮಾಡಿಸಿಕೊಂಡು ನಾರುಮಡಿಯನುಟ್ಟು ಜಪಮಾಲೆ ಹಿಡಿದು ಅಲುಮೇಲು ಕೋಣೆಯಲ್ಲಿ ಕುಳಿತುಬಿಟ್ಟರೆಂದರೆ ಮುಗಿಯಿತು. ಹೊರಬರುತ್ತಿದ್ದುದೇ ಕಡಿಮೆ. ಹೊರಬಂದರೂ ಮುಗುಳ್ನಗೆ ದೂರದ ಮಾತು.
ಆದ್ದರಿಂದ ಪರಮೇಶ್ವರ ಶಾಸ್ತ್ರಿಗಳೇ ಮೊಮ್ಮಗನ ಯವತ್ತೂ ಜವಾಬ್ದಾರಿಯನ್ನು ತಮ್ಮ ಹೆಗಲ ಮೇಲೆ ಹೊತ್ತುಕೊಂಡಿದ್ದರು.
ಆವರ ಜವಾಬ್ದಾರಿಗಳು ಒಂದೇ ಎರಡೇ.
ಮೊಮ್ಮಗ ಶಾಮುವನ್ನು ಭ್ರಷ್ಟಾಚಾರದ ವಾಸನೆ ಇಲ್ಲದ ಪ್ರಾಮಾಣಿಕ ಸರ್ಕಾರಿ ನೌಕರನನ್ನಾಗಿ ಮಾಡಬೇಕಿತ್ತು. ಇದು ತಮ್ಮಿಂದ ಸಾಧ್ಯವಿಲ್ಲದ ಮಾತು.
ಮೊಮ್ಮಗ ಶಾಮು ಎಂದರೆ ಸಾಮಾನ್ಯವೇನು? ಸಾಕ್ಷಾತ್ ತಮ್ಮ ತಂದೆಯವರ ಅಪರಾವತಾರ. ಸಂಸ್ಕೃತ ಕಲಿಸಿ ವೇದೋಪನಿಷತ್ತು; ದ್ವಾದಶ ಪುರಾಣಗಳ ಪರಿಚಯವನ್ನೆಲ್ಲ ಮಾಡಿಕೊಡಬೇಕು.

ಆದ್ದರಿಂದ ತಮ್ಮ ಮೊಮ್ಮಗನ ಕುರಿತಂತೆ ಶಾಸ್ತ್ರಿಗಳಾಗಿದ್ದ ಮಮಕಾರವಾಗಲೀ ಜವಾಬ್ದಾರಿಯಾಗಲೀ ಬಹಳ. ಕ್ರಾಪಿನೊಳಗೆ ಗಂಟಿನ ಮೆಲೆ ಗಂಟು ಹಾಕಿಕೊಂಡು ಜುಟ್ಟು ಯಾವ ಪ್ರಕಾರವಾಗಿ ಕ್ರಾಪಿನಲ್ಲಿ ಅವಿತುಕೊಳ್ಳಲು ಪ್ರಯತ್ನಿಸುತ್ತಿದೆಯೋ ಹಾಗೆ ಶಾಮು ಶಾಸ್ತ್ರಿಗಳ ಕಣ್ಣಿಗೆ ಸಾಧ್ಯವಾದಷ್ಟು ಬೀಳದ ಹಾಗೆ ನೋಡಿಕೊಳ್ಳುತ್ತಿದ್ದನು. ಹೆಜ್ಜೆಯ ಕುಲುಕಿಗೆ ಲಟಕ್ಕನೆ ಕ್ರಾಪಿನಿಂದ ಹೊರಗಡೆ ಜುಟ್ಟು ಕಾಣಿಸಿಕೊಳ್ಳುವ ರೀತಿಯಲ್ಲಿ ಶಾಸ್ತ್ರಿಗಳು ದುತ್ತನೆ ಕಾಣಿಸಿಕೊಂದು ಬಿಡುತ್ತಿದ್ದರು. ಶುಕ್ರೋದಯಕ್ಕೂ ಪೂರ್ವದಲ್ಲಿ ಏಳಿಸುತ್ತಿದ್ದರು. ತಣ್ಣಿರಿನ ಸ್ನಾನ ಮಾಡಿಸುತ್ತಿದ್ದರು. ತಮ್ಮ ಜೊತೆ ಗಾಯತ್ರಿ, ಪ್ರಾಣಾಯಮಕ್ಕೆ ಕೂಡ್ರಿಸಿಕೊಳ್ಳುತ್ತಿದ್ದರು. ಉತ್ತಮಾ ತಾರಕೋಪೇತಾ ಮಧ್ಯಮಾಲುಪ್ತಕಾರಕಾಃ ಎಂದು ಗಟ್ಟಿಯಾಗಿ ಹೇಳಿಸುತ್ತಿದ್ದರು. ತದನಂತರ ಪುರುಷ ಸೂಕ್ತ ಅನಂತರ ಅಮರ ಸಿಂಹ , ಪಾಣಿನಿ, ನಾರದಸ್ಮೃತಿ ಮುಂತಾದುವುಗಳನ್ನು ಒಂದು ರೌಂಡು ಮುಗಿಸಲೇಬೇಕಿತ್ತು. ಅನಂತರ ಇಂಗ್ಲಿಷು ಹಾಳುಮೂಳು ಇತ್ಯಾದಿ. ಅನಂತರ ಅವನು ಸೇವಿಸಲೆಂದೇ ಶಾಸ್ತ್ರಿಗಳು ತಂದು ಕಟ್ಟಿದ್ದ ಗೋಮಾತೆಯ ಉಪಚಾರ, ನಂತರ ಜುಟ್ಟು ಮರೆಮಾಚದಂತೆ ತೋಪಿ ಧರಿಸಬೇಕು. ತದನಂತರ ಮೋಕ್ಷ ಪ್ರಾಪ್ತಿಗೆ ಸಾದಕ ಭಾದಕ ತತ್ವ ವಿಚಾರಗಳನ್ನು ಯೋಚಿಸುತ್ತ ಓಣಿಯ ಹಿಂದಿನಿಂದ ಊರ ಹೊರವಲಯದ ಮೂಲಕ ಗ್ರವಂಡು ಪ್ರವೇಶಿಸಿ ಸ್ಕೂಲು ತಲುಪಬೇಕು. ತರಗತಿಯಲ್ಲಿ ದುಷ್ಟರ ಸಂಗ ಮಾಡಬಾರದು. ಹೆಣ್ಣು ಮಕ್ಕಳ ಕಡೆ ಕಣ್ಣೆತ್ತಿ ನೋಡಬಾರದು, ಪರ ಧನ ಪರ ವಸ್ತುಗಳನ್ನು ಆಸೆ ಪಡಬಾರದು ಇತ್ಯಾದಿ ಇತ್ಯಾದಿ ನೀತಿ ನಿಯಮಗಳನ್ನು ಮೊಮ್ಮಗ ಕಟ್ಟುನಿಟ್ಟಾಗಿ ಪಾಲಿಸುವಂತೆ ಪ್ರಯತ್ನಿಸುತ್ತಿದ್ದರು.

ಪ್ರೌಢ ಶಾಲೆಗೆ ಸೇರಿದ ಪ್ರಥಮದಲ್ಲಿ ಅವನು ತಾತನವರು ರೂಪಿಸಿದ್ದ ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದ ಎಂಬುದರಲ್ಲಿ ಅನುಮಾನವೇ ಇಲ್ಲ. ವಿದ್ಯಾ ವಿನಯ ಹೇತುಂ ಎಂಬಂತಿದ್ದ ಇಂದ್ರಿಯ ಜಯಃ ಕಾಮಕ್ರೊಧ ಲೋಭ ಮಾನ ಮದಹರ್ಷತ್ಯಾಗಾತ್ ಕಾರ್ಯಹ ಮಾಡಿದವನಂತಿದ್ದ. ತಲೆ ತಗ್ಗಿಸಿಕೊಂಡು ಕೂಡ್ರುತ್ತಿದ್ದ. ಮೇಷ್ಟ್ರು ಕೇಳುವ ಪ್ರಶ್ನೆಗೆ ಗಿಳಿಯಂತೆ ಉತ್ತರ ಕೊಡುತ್ತಿದ್ದ. ಆತನಿದ್ದ ತರಗತಿ ಒಣ ಒಣ ಭಣ ಭಣವಿರಲಿಲ್ಲ. ತರಗತಿ ಶಿಖಿರ ಪ್ರಾಯದಂತೆ ಹುಡುಗಿಯರುದ್ದರು. ಹುಡುಗಿಯರಿಗೆ ಕಳಸಪ್ರಾಯವಾದಂಥ ಚಿಗುರುಮೊಲೆ
ಗಳಿದ್ದವು. ತಮ್ಮ ಮೊಲೆಗಳಿಗೆ ಗೌರವ ಕೊಡುವ ನಿಮಿತ್ತ ಅವರಾರೂ ನೆಲ ನೋಡುತ್ತಿರಲಿಲ್ಲ. ಹುಡುಗಿಯರ ಕಡೆ ಹುಡುಗರು ನೋಡುತ್ತಿದ್ದರು. ಕೀಟಲೆ ಮಾಡುತ್ತಿದ್ದರು. ಆದ್ದರಿಂದ ಹುಡುಗಿಯರಿಗೆ ಖುಷಿಯಾಗುತ್ತಿತ್ತು. ಪ್ರತಿಯೊಬ್ಬರೂ ತಾವೇ ತ್ರಿಲೋಕ ಸುಂದರಿಯರೆಂದು ಬೀಗುತ್ತಿದ್ದರು. ಪಿಳ್ಳಂಗೋವಿ ಜುಟ್ಟಿನ ಶಾಮಾಶಾಸ್ತ್ರಿಯ ಗಮನವನ್ನು ಅವರು ತಮ್ಮ ಕಡೆ ಸೆಳೆಯಲು ಪ್ರಯತ್ನಿಸುತ್ತಿದ್ದರು. ಆದರೆ ಅವರು ಕಣ್ಣೆತ್ತಿ ನೋಡುತ್ತಿಲ್ಲ. ನೋಟು ಪುಸ್ತಕ ಮುಖಕ್ಕೆ ಅಡ್ಡ ಇರಿಸಿಕೊಂಡು ಅವರ ಕಾಲುಗಳ ಮೀನ ಖಂಡ ನೋಡುತ್ತಿದ್ದ. ಆಗ ಅವನ ಮೈ ಬಿಸಿಯಾಗುತ್ತಿತ್ತು. ಬಾಯಿ ಒಣಗಿಬಿಡುತ್ತಿತ್ತು. ಮತ್ತೆ ಮತ್ತೆ ನೋಡಬೇಕೆಂಬಾಸೆಯಾಗುತ್ತಿತು. ಹುಡುಗಿಯರ ಕಡೆ ನೋಡುವವರ ಬಗ್ಗೆ; ಅವರ ಕುರಿತು ಮಾತನಾಡುವವರ ಬಗ್ಗೆ ಅವನಿಗೆ ಭಾರಿ ಸಿಟ್ಟು ಬರುತ್ತಿತ್ತು. ಯಾಕೆಂದರೆ ಅವನು ಆ ಸ್ಕೂಲಲ್ಲಿದ್ದ ಎಲ್ಲಾ ತರಗತಿಯ ಹುಡುಗಿಯರನ್ನು ಪ್ರೀತಿಸುತ್ತಿದ್ದ.

ಇಂಥ ಸಭ್ಯಸ್ಥನಾದ ಅವನು ತನಗೆ ಗೊತ್ತಿಲ್ಲದಂತೆ ಒಂದು ಘಟನೆಗೆ ಸಿಲುಕಿಕೊಂಡ. ಒಂದು ಮಟ ಮಟ ಮಧ್ಯಾನ್ಹ ಗಣಿತದ ಮೇಸ್ಟ್ರು ವೆಂಕಣ್ಣಾಚಾರ್‌ರವರ ಮನೆಗೆ ಹೋದ. ಗಣಿತದ ಸಮೀಕರಣ ಅವನ ತಲೆ ತಿನ್ನುತ್ತಿತ್ತು.
ಮನೆ ಏನೋ ತಲುಪಿದ. ಬಾಗಿಲು ಮುಚ್ಚಿತ್ತು. ಹಿತ್ತಲ ಬಾಗಿಲಿಗೆ ಹೋದ. ಅದೂ ಮುಚ್ಚಿತ್ತು. ಕದನ ಕುತೋಹಲಿಯಾದ ಅವನು ಕಿಂಡಿಯಲ್ಲಿ ಇಣಿಕಿ ನೋಡಿದ. ವೆಂಕಣ್ಣ ಮಾಸ್ತರು ಜಲಜಾಕ್ಷಿಯದೇ ಆದ ಸಮೀಕರಣ ಬಿಡಿಸುತ್ತಿದ್ದರು. ಅಂಥ ಸಮೀಕರಣವನ್ನು ತನಗೂ ಬಿಡಿಸಬೇಕೆಂಬಾಸೆ. ಒಂದು ಕ್ಷಣದಲ್ಲಿ ನೀರುನೀರಾಗಿ ಬಿಟ್ಟ. ಮರಳಿದ ನಂತರ ಅವನು ಮಾಡಿದ ಘನ ಕಾರ್ಯವೆಂದರೆ –

ಹಾಸ್ಟೆಲ್‌ಗೆ ಹೋದವನೆ ಇದ್ದಿಲು ಚೂರನ್ನು ತೆಗೆದುಕೊಂಡ ಬಂದ. ಶಾಲೆಯ ಟೀನೋಪಾಲ್‌ನಲ್ಲಿ ಅದ್ದಿದಂಥ ಗೋಡೆಗಳು “ನನ್ನ ಮೇಲೆ ಬರೆ ಬಾ ನನ್ನ ಮೇಲೆ ಬರೆ ಬಾರೋ ಗಂಡಸೇ” ಎಂದು ಆಹ್ವಾನಿಸಿದಂತೆ ಭಾಸವಾಯಿತು. ಅರೆ ಇವರು ಪುರುಷತ್ವಕ್ಕೆ ಸವಾಲು ಎಸೆಯುತ್ತಿರುವವರಲ್ಲ. ಎಂದು ಸವಾಲು ಸ್ವೀಕರಿಸಿದ. ತಾನು ಗುಟ್ಟಗಿ ಪ್ರೀತಿಸುತ್ತಿದ್ದ ಜಲಜಾಕ್ಷಿಯ ಸಮೀಕರಣಕ್ಕೆ ಮೇಸ್ಟ್ರಾದ ವೆಂಕಣ್ಣಾಚಾರ್ ಕೈ ಹಾಕುವುದೆಂದರೇನು? ಮೇಸ್ಟ್ರು ತಂದೆಗೆ ಸಮಾನ; ಹೀಗೆ ಅವನಲ್ಲಿ ವಿದುರ ನೀತಿಗೆ ಬರವಿರಲ್ಲ.

ವೆಂಕಣ್ಣಾಚಾರ್ ಮತ್ತು ಜಲಜಾಕ್ಷಿ ಬಗ್ಗೆ ಗೋಡೆಗಳ ಮೇಲೆಲ್ಲ ಬರೆದುಬಿಟ್ಟ. ಅದು ಮರು ದಿನ ದೊಡ್ಡ ಸುದ್ದಿಯಾಗಿ ಬಿಟ್ಟಿತು. ಎಲ್ಲರ ಬಾಯಲ್ಲೂ ಆ ಪ್ರೇಮ ಪ್ರಕರಣದ ಸುದ್ದಿಯೇ. ವೆಂಕಣ್ಣಾಚಾರ್ ಸಹೋದ್ಯೋಗಿಗಳಂತೂ ಈ ಪ್ರೇಮ ಪ್ರಕರಣದ ದುರ್ಲಾಭ ಪಡೆಯ ತೊಡಗಿದರು.
ಜಲಜಾಕ್ಷಿಯನ್ನು ಸ್ಟಾಫ್ ರೂಮಿಗೆ ಕರೆಸುವುದು, ಕೈಯಿಂದ ಸವರುತ್ತ ಸಮಾಧಾನ ಪಡಿಸುವ ನಾಟಕ ಆಡುವುದು. ಆ ದುರುಳ ವೆಂಕಣ್ಣನ ಭಾರವನ್ನು ಹೂವು ಗಾತ್ರದ ನೀನು ತಡೆದುಕೊಂಡಿದ್ದೇ ಹೆಚ್ಚು ಎಂದು ಲೊಚಗುಟ್ಟುವುದು… ಇತ್ಯಾದಿ… ಇತ್ಯಾದಿ.
ಎಲ್ಲರೂ ವೆಂಕಣ್ಣ ಮೆಡಿಕಲ್ ಲೀವ್ ಗುಜರಾಯಿಸಿ ತಲೆ ಮರೆಸಿಕೊಳ್ಳಬಹುದೆಂದು ಬಗೆದಿದ್ದರು. ಆದರೆ ಅಂದು ಅರ್ಧ ಗಂಟೆ ಮುಂಚಿತವಾಗಿ ಹಾಜರಿ ಪುಸ್ತಕದಲ್ಲಿ ಸಹಿ ಗೀಚಿ ಮೇಸೆ ತಿರುವಿದ.

ನನ್ನ ಶಾಟಕ್ಕೆ ಸಮ… ಬೋಳಿ ಮಕ್ಳು… ಡಾಣಿ ಮಕ್ಳು ಅಂತ ಇಡಿ ಸ್ಟಾಫ್ ಮೇಲೆ ವಾಗ್ ಯುದ್ಧ ಘೋಷಿಸಿಬಿಟ್ಟ… ಪ್ರತಿ ತರಗತಿಗೆ ಹೋಗಿ ’ಯಾವ ಸೂಳ್ಯಾ ಮಕ್ಳು ಬರೆದದ್ದು ಅವರಿಗೇನು ಅಕ್ಕ ತಂಗೇರು ಇಲ್ವೇನು ಹಂಗೆ ಹಿಂಗೆ ಅಂತ ಉಚಿತೋಪನ್ಯಾಸ ನೀಡಿದ.

ಶಾಮ ಎಷ್ಟು ಬುದ್ದಿವಂತನೆಂದರೆ ಸಹಪಾಠಿಗಳು ಉಬ್ಬಿಸಿದ್ದಕ್ಕೆ ಉಬ್ಬಿ ತಾನೇ ಬರೆದದ್ದು ಅಂತ ಹೇಳಿಬಿಡಬೇಕೆ? ಅದೂ ಒಂದು ಸುದ್ದಿಯಾಯಿತು. ಸಂಸ್ಕೃತ ವಿದ್ವಾಂಸರಾದ ಪರಮೇಶ್ವರ ಶಾಸ್ತ್ರಿಗಳ ಏಕಮಾತ್ರ ಮೊಮ್ಮಗ ಇಂಥ ಕೆಲಸ ಮಾಡುತ್ತಾನೆಂದರೆ ನಂಬಲಿಕ್ಕೆ ಹೇಗೆ ಸಾಧ್ಯ! ಮಾಡಿದ್ದರೆ ಗ್ರಹಗತಿಗಳ ಪ್ರಭಾವವಿರಬಹುದು.

ಮರುಳಸಿದ್ದಪ್ಪ ಹುಲಿಕುಂಟಾಚಾರ್ರಂಥ ಸಜ್ಜನಿಕೆ ಹೆಸರಾದವರು ಅಲೋನಾಗಿ ಶಾಮನನ್ನು ಕರೆಸಿಕೊಂಡು, ಯಾರು ಮೇಲಿದ್ದರು! ಯಾರು ಕೆಳಗಿದ್ದರು ಎಂದು ಪೂಸಿ ಹೊಡೆದು ಕೇಳಿದರು. ವರ್ಣಿಸಬೇಕೆಂದು ಅವನ ನಾಲಿಗೆಯೂ ಚುಟಗುಡುತ್ತಿತ್ತು. ನೋಡಿದ ಸಂಗತಿ ಬಗ್ಗೆ ಗುಟ್ಟಾಗಿ ಕವಿತೆ ಕೂಡ ಬರೆದಿದ್ದ. ನೋಡಿದ ಸಂಗತಿಗೆ ಗರಮ್ ಮಸಾಲೆ ಹಚ್ಚಿ ಹೇಳಿಬಿಟ್ಟ. ಕೇಳಿ ಮೇಷ್ಟ್ರುಗಳಿಗೆ ’ವಯಸ್ಕರಿಗೆ ಮಾತ್ರ’ ಸಿನೆಮಾ ನೋಡಿದಷ್ಟು ಸಂತೋಷವಾಯಿತು.

ತರಗತಿಗೆ ಬಿರುಗಾಳಿಯಂತೆ ನುಗ್ಗಿದ ವೆಂಕಣ್ಣ ಶಾಮನ ಕ್ರಾಪಿನಲ್ಲಿ ಜುಟ್ಟು ಹುಡುಕಿ ತೆಗೆದು ಉಡದಂತೆ ಹಿಡಿದು ಅಲ್ಲಾಡಿಸಿಬಿಟ್ಟರು. ನೀನೇನು ಸ್ಕೂಲಿಗೆ ಬರೋದು ಓದೋಕೋ? ಅಥ್ವಾ ಇಂಥ ಹಲ್ಕಾ ಕೆಲಸ ಮಾಡ್ಲಿಕ್ಕೋ” ಎಂದು ಅವನ ಕೆನ್ನೆಗೆ ಪಟಪಟಾಂತ ಎರಡು ಬಾರಿಸಿ ಬಿಟ್ಟರು. ಆ ಏಟಿಗೆ ಅವನ ಮುಖ ಬೋಂಡಾದಂತೆ ಬುರಬುರನೇ ಊದಿಬಿಟ್ಟಿತು. ದುಃಖ, ಸಿಟ್ಟು ಎರಡೂ ಬಂದವು. ತಾತನಿಗೆ ಹೇಳಿ ಶಾಪಕೊಡಿಸಬೇಕೆಂದು ನಿರ್ಧರಿಸಿ ಮನೆಗೆ ಬಂದ, ಅಲ್ಲಿ ನೋಡುತ್ತಾನೆ ಜಲಜಾಕ್ಷಿ ಫಾದರ್ ’ಎನ್ರಿ ಶಾಸ್ತ್ರಿಗಳೇ ನಿಮ್ಮ ಹುಡುಗ ಇಂಥ ಕೆಲಸ ಮಾಡಬಹ್ದಾ’ ಎಂದು ಬಂದು ಬಿಟ್ಟಿರುವನು, ಶಾಸ್ತ್ರಿಗಳಿಗೆ ವಿವರಿಸಿ ಮನದಟ್ಟು ಮಾಡಿಕೊಟ್ಟ. ಕೃದ್ದರಾದ ಶಾಸ್ತ್ರಿಗಳು ತಮ್ಮ ನಾಗ ಬೆತ್ತದಿಂದ ಶಾಮುನ ಮೈಮೇಲೆ ದೇವನಾಗರಿಲಿಪಿ ಬರೆಯಬೇಕೆನ್ನುವಷ್ಟರಲ್ಲಿ ಸಂಸ್ಕೃತ ವಿದ್ವಾನ್ ನಾಗಭೂಷಣ ಶರ್ಮರು ಆಪದ್ಭಾಂದವರಂತೆ ಬಂದವರೆ ಬೆತ್ತ ಕಸಿದುಕೊಂಡರು. ಅವರು ಕಸಿದುಕೊಳ್ಳದಿದ್ದಲ್ಲಿ ಹೀರೋ ಶಾಮನ ಟೊಂಕ ಮುರಿದು ಹೋಗುತ್ತಿತ್ತು.

“ನಮ್ಮ ಸಂಸ್ಕೃತ ಪ್ರತಿಭಾವಂತ ವಿದ್ಯಾರ್ಥಿ ಶಾಮ ಈ ಕೆಲಸ ಮಾಡಿರುವನೆಂಬುವುದಕ್ಕೆ ನಿಮ್ಮ ಬಳಿ ಆಧಾರವಾದರೂ ಏನಿದೆ?” ಎಂದವರಸೆದ ವಾಗ್‌ಬಾಣಕ್ಕೆ ಹೆದರಿ ಎಲ್ಲರೂ ತಂತಮ್ಮ ಅಸ್ತ್ರಗಳನ್ನು ಉಪಸಂಹರಿಸಿಕೊಂಡರು.
ಅವತ್ತಿನಿಂದ ಶಾಮನ ಸ್ಟಾರ್ ವ್ಯಾಲ್ಯೂ ಜಾಸ್ತಿಯಾಯತು.

ಸಂಸ್ಕೃತ ಭಾಷೆಯ ಯಾವುದಾದರೂ ಗ್ರಂಥ ತೆರೆದೊಡನೆ ಸಮೀಕರಣ ಬೇಧಿಸುವ ಕ್ರಿಯೆಯ ದೃಶ್ಯ ಬಿಚ್ಚಿಕೊಳ್ಳಲಾರಂಭಿಸಿತು. ತಾನೂ ಅಂಥದೊಂದು ಕ್ರಿಯೆಯಲ್ಲಿ ಸಕ್ರಿಯಾತ್ಮಕವಾಗಿ ಭಾಗವಹಿಸಬೇಕೆಂಬ ಆಸೆ ಟ್ರವುಜರ್ರು ಧರಿಸಿಕೊಂಡಿತು.
ಜಲಜಾಕ್ಷಿಯ ಕಣ್ಣಿಗೆ ಬೀಳಬಾರದೆಂದು ಅವನು ನಡೆದಾಡಲು ಕೆಲವು ಕಳ್ಳ ಹಾದಿಗಳನ್ನು ಹುಡುಕಿಕೊಂಡಿದ್ದುಂಟು. ವ್ಹಿಸ್ಕಿಕುಡಿಯುವವನು ಚಿಕನ್ ತಿನ್ನದಿರುತ್ತಾನೆಯೇ, ಚಿಕನ್ ತಿಂದವರು ಸಿಗರೇಟು ಸೇದದಿರುತ್ತಾರೆಯೇ, ಸಿಗರೇಟು ಸೇದಿದವರು ತೊಡೆಸಂಧಿ ತುರಿಸಿಕೋಳ್ಳದಿರುತ್ತಾರೆಯೇ?

ಗ್ರವಂಡಿನ ಆಚೆ ತುದಿಯ ಅಶ್ವತ್ಥ್ ಮರದ ಬುಡದಲ್ಲಿ ಕಾವ್ಯಾಲಂಕಾರದ ಮರ್ಮ ಬಿಡಿಸುತ್ತ ಕೂತಿದ್ದ ಶಾಮು. ಕಾವ್ಯವೆಂದರೆ ಕಾಮ, ಕಾಮವೆಂದರೆ ಕಾವ್ಯ. ಒಂದು ಅರ್ಥವಾದರೆ ಇನ್ನೊಂದು ಅರ್ಥವಾದಂತೆಯೇ ಎಂಬ ತರ್ಕಕ್ಕೆ ಬಂದಿದ್ದ. ಎಲ್ಲಿದ್ದಳೋ ಏನೋ? ಜಲಜಾಕ್ಷಿ ದುತ್ತನೆ ಅವನ ಮೇಲೆ ಎರಗಿಬಿಟ್ಟಳು.

“ನನ್ ಮರ್ಯಾದೆ ಕಳೆದೆಯಲ್ಲಾ ನಾನು ನಿನಗೆ ಮಾಡಿದ್ದ ಅನ್ಯಾಯವಾದ್ರೂ ಏನು?” ಎನ್ನುತ್ತ ಅವನೊಂದಿಗೆ ಫೈಟಿಂಗಿಗೆ ಬಿದ್ದಳು. ಅವಳ ಬಲಿಷ್ಟ ಹಿಡಿತಕ್ಕೆ ಸಿಲುಕಿ “ಯಾರಾದರೂ ತನ್ನನ್ನು ರಕ್ಷಿಸಬಾರದೇ?” ಎಂದು ಕೂಗಿಕೊಂಡ. ಜೇನುಪಾತ್ರೆಯೊಳಗೆ ಕಳೆದ ನಾಲಿಗೆಯಂತಾಯಿತು ಅವನ ಪರಿಸ್ಥಿತಿ.
ಅವನದು ಅರಣ್ಯ ರೋದನವಾಗಿತ್ತು.
ಸುತ್ತ ಎರಡು ಫರ್ಲಾಂಗು ಅಂತರದೊಳಗೆ ಯಾರೂ ಇರಲಿಲ್ಲ .
ಘಳಿಗೆಗಳು ಕಳೆದಂತೆ ಆಕೆಯ ಉಡ ಹಿಡಿತ ದ್ವಿಗುಣಗೊಂಡಿತ್ತು. ಮರದ ಮೇಲೆ ರೆಸ್ಟ್ ತೆಗೆದುಕೊಳ್ಳ ತೊಡಗಿದ್ದ ಪಕ್ಷಿಗಳು ಕೀರ್ ಕೀರ್ ಶಬ್ದ ಮಾಡುತ್ತ ಆ ಫೈಟಿಂಗಿಗೆ ಶುಭ ಹಾರೈಸುತ್ತಿದ್ದವು.

“ಏನೋ… ನಿನ್ ಕೈಲೂ ಮಾಡ್ಲಿಕ್ಕಾಗಲ್ಲ, ಮಾಡೋನ ಕಂಡರೆ ಹೊಟ್ಟೆ ಉಸಿಕೊಳ್ತೀಯ… ಇವತ್ತು ಎರಡ್ರಲ್ಲೊಂದು ಫೈಸಲಾಗಬೇಕು… ಇಲ್ಲಾಂದ್ರೆ ನಿನ್ನ ಜುಟ್ಟು ಕಿತ್ತು ಬಾಯಲ್ಲಿಟ್ಟು ಬಿಡ್ತೀನಿ…” ಎಂದು ಅವನ ಚಲ್ಲಿಕಾದೊಳಗೆ ಕೈ ತುರುಕಿ ಮರ್ಮಾಂಗವನ್ನು ಗಟ್ಟಿಯಾಗಿ ಹಿಡಿದುಕೊಂಡಳು.

ಅವನ ಮೂಗಿಗೆ ಬಾಯಿಹಾಕಿ ಜೋರಾಗಿ ಹೊಸಕ ತೊಡಗಿದಳು.
ನೆಲದಂತರಾಳದಿಂದ ಜ್ವಾಲಾಮುಖಿ ನಿಮಿಷಾರ್ಧದಲ್ಲಿ ಡಮಾರೆಂದು ಸ್ಪೋಟಿಸಿಬಿಟ್ಟಿತು. ಅಂತರಂಗ ಬಹಿರಂಗವೆಲ್ಲಾ ಗಲೀಜಾಗಿಬಿಟ್ಟಿತು
“ಥೂ ನಿನ್ನ ಮುಖಕ್ಕೆ” ತೆಕ್ಕೆ ಸಡಲಿಸಿ ಮುಖಕ್ಕೆ ಕ್ಯಾಕರಿಸಿ ಉಗುಳಿದಳು. ” ಈಗ ಸಧ್ಯಕ್ಕೆ ಬಿಡ್ತಿದ್ದೀನಿ… ಕ್ಲಾಸಿನಲ್ಲಿ ನಿನ್ನ ಒಂದು ಕೈ ನೊಡ್ಕೊಳ್ಲಿಲ್ಲ… ನಾನು ಗೊಬ್ಬರದಂಗಡಿ ಗುರುಬಸಪ್ಪನ ಮಗಳು ಬೇಬಿನೇ ಅಲ್ಲ” ಎಂದು ಭಲೆ ಶಪಥ ಮಾಡಿದಳು. ಅವಳು ಕಣ್ಣುಗಳೆಂಬ ವ್ಯಾನಿಟ್ ಬ್ಯಾಗಿನೊಳಗೆ ತನ್ನ ಮರ್ಮಾಂಗವನ್ನು ಅಪಹರಿಸಿ ಒಯ್ದು ಬಿಡುವಳೋ ಎಂದು ಹೆದರಿದ. ಚಡ್ಡಿಯೊಳಗೆ ಮುಖ ಕುಯ್ದು ಬಚ್ಚಿಟ್ಟುಕೊಂಡು ಬಿಟ್ಟ. ಗದಗಡ ನಡುಗುತ್ತ ಬಿರುಗಾಳಿಯಂತೆ ತರಗತಿ ಕಡೆಗೆ ಓಡಿದ ಅವಳ ಕಡೆಗೇ ನೋಡಿದ.

ಜಲಜ ಕೇವಲ ಗಣಿತದಲ್ಲಷ್ಟೇ ಹೆಚ್ಚಿಗೆ ಮಾರ್ಕ್ಸ್ ಪಡೆಯುತ್ತಿರಲಿಲ್ಲ. ತಾಲ್ಲೂಕು ಜಿಲ್ಲಾ ಮಟ್ಟದ ಒಲಂಪಿಕ್ ಕ್ರೀಡೆಗಳಲ್ಲಿ ಹತ್ತಾರು ಪದಕಗಳನ್ನು ದೋಚಿಕೊಂಡಿದ್ದಳು. ಅವಳು ಹೆಜ್ಜೆ ಹಾಕಿದಳೆಂದರೆ ಅವಳ ಬಟಕ್ಸುಗಳು ಆದಿತಾಳ ನುಡಿಸುತ್ತಿದ್ದವು. ಅವನ ಸುಸಂಸ್ಕೃತ ಪಂಚೇಂದ್ರಿಯಗಳೆಲ್ಲ ಅವಳ ಹಿಂದೆ ಅಷ್ಟು ದೂರ ನಡೆದು ವಾಪಸು ಬಂದವು.

ಹೀರೋ ಶಾಮಣ್ಣ ಮನೆಗೆ ಹೊರಟ. ಕುಡಿದಿರುವನೋ ಎಂಬಂತೆ, ಮನೆಗೆ ಹೋದೊಡನೆ ಗಪ್ಪನೆ ಮಲಗಿಬಿಟ್ಟ. ಕುಂತರೂ ನಿಂತರೂ ಗಂಡನು ಆಡುತ್ತಿದ್ದ ಆಟಗಳನ್ನು ನೆನೆಸಿಕೊಂಡು ದುಃಖವನ್ನು ಗಂಟಲಿಗೆ ತಂದುಕೊಂಡು ಮೌನವಾಗಿ ಉಳಿದುಬಿಡುತ್ತಿದ್ದ ಅಲುಮೇಲಮ್ಮನಿಗೆ ದಿಡೀರನೆ ಏಕ ಮಾತ್ರ ಪುತ್ರ ನೆನಪಾದ. ಹೋಗಿ ನೋಡುತ್ತಾಳೆ. ಮೈ ಸುಡುತ್ತಿದೆ. ಮೈ ಮೇಲೆ ಪ್ರಜ್ಞೆ

ಒಂಚೂರೂ ಇಲ್ಲ. ಜಲ… ಜಲ… ಜ್ವಾಲಮಾಲಿನೇ ಅಂತ ಏನೇನೋ ಬಡಬಡಿಸುತ್ತಿದ್ದನು. ಕಣ್ಣಾಲಿಗಳು ಮೇಲೆ ಕೆಳಗೆ ಇಳಿಯುತ್ತಿವೆ. ವಂಶೊದ್ದಾರಕ ಪ್ರೀತಿಯ ಪುತ್ರನ ಸ್ಥಿತಿನೋಡಿ ಆ ಮಹಾಸಾಧ್ವಿ ಹೌಹಾರಿದಳು. “ಮಾವನವರೇ… ಮಾವನವರೇ…” ಎಂದು ಕೂಗಿದಳು… ಗಂಡ ಇಹಲೋಕ ತ್ಯಜಿಸಿದಮೇಲೆ ಆಕೆ ಎಂದೂ ಅಷ್ಟು ಜೋರಾಗಿ ಕೂಗಿರಲಿಲ್ಲ… ಒಳಗಡೆ ನೋಡಿದಳು… ಅಂಗಳಕ್ಕೆ ಹೋಗಿ ಇಣುಕಿದಳು. ಆಕೆ ಅಂದಿನಿಂದೂ ಹಾಗೆ ಹೋಗಿ ಇಣುಕಿ ನೋಡಿರಲಿಲ್ಲ… ಪಾಪ! ಆಕೆಗೇನು ಗೊತ್ತು! ಪರಮೇಶ್ವರ ಶಾಸ್ತ್ರಿಗಳು ಅದ್ಭುತವಾಗಿ ಡ್ರೆಸ್ ಮಾಡಿಕೊಂಡು ವಿಜಯನಗರ ಮೈದಾನಕ್ಕೆ ಹೋಗಿ ಜನಜಂಗುಳಿಯ ನಡುವೆ ಸಿಕ್ಕಿ ಹಾಕಿಕೊಂಡಿರುವುದು?

ಎಲ್ಲಿ ನೋಡಿದರೂ ಜನವೋ ಜನ… ಒಬ್ಬರನ್ನು ಇನ್ನೊಬ್ಬರು ತುಳಿಯುತ್ತಿದ್ದಾರೆ. ಪೋಲೀಸಿನವರು ಸಮವಸ್ತ್ರಧರಿಸಿ ಹಾವುನುಂಗಿದರಂತೆ ಆಡುತ್ತಿದ್ದಾರೆ. ಎತ್ತರವಾದ ವೇದಿಕೆಯನ್ನು ಅದ್ಭುತವಾಗಿ ಸಿಂಗರಿಸಲಾಗಿದೆ. ಲೌಡು ಸ್ಪೀಕರಿನಲ್ಲಿ ಸಣ್ಣ ಪುಟ್ಟ ನಾಯಕ ಮಣಿಗಳು “ಹಲೋ ಹಲೋ” ಎಂದು ಅರಚುತ್ತಿದ್ದಾರೆ. ಇಡೀ ಬಯಲನ್ನು ಆವರಿಸಿರುವ ಕೆಂಧೂಳಿಯಲ್ಲಿ ಮುಳುಗಿರುವ ಜನರು ಬೆಳಗಿನಿಂದ ಏನೂ ತಿಂದಂತಿಲ್ಲ, ಏನೂ ಕುಡಿದಂತಿಲ್ಲ ಒಂದು ರೀತಿಯ ಮಂಕು, ಆತುರ, ಭಯ, ಚಿದ್ವಿಲಾಸಗಳ ಕಲಸು ಏಲೋಗರವದು. ರಸಂ ಒಳಗದೆ ಕರಿಬೇವಿನ ಎಲೆಯಂಥ ಪರಿಸ್ತಿತಿ ಶಾಸ್ತ್ರಿಗಳದ್ದು. ಈ ಕಡೆ ಇದ್ದವರು ಆ ಕಡೆ ತಳ್ಳುವುದು! ಆ ಕಡೆ ಇದ್ದವರು ಈ ಕಡೆ ತಳ್ಳುವುದು, ಮೇಲೆ ಸೂರ್ಯ ಕೋಪದಿಂದ ಒಬ್ಬೊಬ್ಬರ ತಲೆ ಮೇಲೆ ಹಂಡೆ ಹಂಡೆ ಬಿಸಿಲು ಸುರಿಯುತ್ತಿರುವನು. ಶಾಸ್ತ್ರಿಗಳ ಬೋಳು ನೆತ್ತಿಯ ಮೇಲೆ ಎರಡು ಹಂಡೆಯಷ್ಟು, ಉಷ್ಣದ ಆ ಪ್ರಮಾಣದಿಂದ ಇಡೀ ತಲೆಯನ್ನು ರಕ್ಷಿಸುವುದು ಎಂಟು ದಶಕಗಳ ಹಳೆಯದಾದ ಜುಟ್ಟಿನ ಕೈಲಾದೀತೆ?

ಬರುವಾಗ ಸ್ರಕ್ಚಂದನಿತ್ಯಾದಿಗಳಿಂದ ಅಲಂಕರಿಸಿಕೊಂಡು ಮೇಲೆ ಗರಿಗರಿಯಾದ ಉತ್ತರೀಯ ಇಳಿ ಬಿಟ್ಟುಕೊಂಡು ಹೂವಿನ ತೇರಿನಂತೆ ನಡೆಯುತ್ತ ವಿಜಯನಗರ ಮೈದಾನ ಸೇರಿಕೊಂಡಿದ್ದರು. ಹಾಲಿನಲ್ಲಿ ಸಕ್ಕರೆ ಕರಗಿದಂತೆ ತಾವು ಹೀಗೆ ಕರಗಲಾರರೆಂದೇ ಭಾವಿಸಿದ್ದರು. ಗೋವಿಂದೇಗೌಡರು ಕಣ್ಣುಮುಚ್ಚಾಲೆ ಆಟ ಆಡಿಸುತ್ತಿದ್ದರು. ಅವಸರದಿಂದ ಮಾಡಲ್ಪಟ್ಟವರಂತೆ ಅಡ್ಡಾಡುತ್ತಿದ್ದ ಅವರು ಶಾಸ್ತ್ರಿಗಳು ಕಂಡರೂ ಅಂತ ಅಷ್ಟಾಂಗ ಪ್ರಣಾಮ ಸಲ್ಲಿಸಲು ಅದೇನು ಮನೆಯ ಪಡಸಾಲೆಯೇ? ನಿಜ ಹೆಳಬೇಕೆಂದರೆ ಇದನ್ನೆಲ್ಲ ಆ ಕೃಶಾಂಗರಿಗೆ ಹಚ್ಚಿಕೊಟ್ಟಿದ್ದೂ ಅವರೆ, ಇಷ್ಟು ಮಾಡಿಬಿಡಿ ನಿಮ್ಮ ಕೀರ್ತಿ ಪತಾಕೆ ದೇಶ ವಿದೇಶಗಲಲ್ಲಿ ಹರಡುವುದೆಂದು ಹವಾ ತುಂಬಿದ್ದೂ ಅವರೇ, ವಿಜಯನಗರ ಮೈದಾನದಲ್ಲಿ ತಮ್ಮ ಅದೃಷ್ಟವು ಖುಲಾಯಿಸಿ ಎಮ್ಮೆಲ್ಲೆ ಆಗಿಬಿಡಬಹುದು; ಮಂತ್ರಿ ಆಗಿ ಬಿಡಬಹುದು. ಈಗ ಸರಕಾರಕ್ಕೆ ತಾವು ಕಟ್ಟಲೇಬೇಕಾಗಿರುವ ಲಕ್ಷಾಂತರ ರೂಪಾಯಿ ತೆರಿಗೆ ಬಾಕಿಯನ್ನು ಮಾಫಿ ಮಾಡಿಸಿಬಿಡಬಹುದು. ವಂಶದ ನೂರಾರು ಕುಡಿಗಳಿಗೆಲ್ಲ ಬಂಗಾರದ ತಟ್ಟೆಯಲ್ಲಿ ಗೋಡಂಬಿ, ಬಾದಾಮಿ ದ್ರಾಕ್ಷಿಯನ್ನು ಚಿನ್ನ ಚಮಚದಿಂದ ಬಾಯೊಳಗಿಟ್ಟುಕೊಳ್ಳುವ ವ್ಯವಸ್ಥೆಯನ್ನು ಚಿಟಿಕೆ ಹೊಡೆವುದರೊಳಗೆ ಮಾಡಿಬಿಡಬಹುದು ಎಂದೆಲ್ಲ ಲೆಕ್ಕ ಹಕಿ ಮೈದಾನದ ಇಡೀ ಉಸ್ತುವಾರಿಯನ್ನು ತಾವೇ ವಹಿಸಿಕೊಂಡು ಹಣವನ್ನು ನೀರಿನಂತೆ ಖರ್ಚು ಮಾಡುತ್ತಿದ್ದರು. ಅದ್ದರಿಂದ ಅವರ್ ಕಣ್ಣು ಒಂದೇ ಒಂದು ನೋಟ ಹರಿಸುವುದು ಸಾಧ್ಯವಿರಲಿಲ್ಲ. ಎಲ್ಲಾ ಹೇಳಿಬಿಟ್ಟಿದ್ದೀನಿ ಶಾಸ್ತ್ರಿಗಳೇ… ನೀವು ನಿಮ್ ಹೆಸರೊಂದೆ ಹೇಳಿಬಿಟ್ರೆ ಸಾಕು. ನಿಮ್ಮನ್ನು

ಹೆಲಿಕಾಪ್ಟ್ರಿನಲ್ಲಿ ಹತ್ತಿಸಿಕೊಂಡು ಸೀದಾ ಡೆಲ್ಲಿಗೆ ಕರಕ್ಕೊಂಡ್ಹೋಗ್ತಾರೆ. ಎಂದು ಹೇಳಿದ್ದ ಅದೂ ಅರ್ಧ ನಿಮಿಷದಲ್ಲಿ.
ಕಂಕುಳದಲ್ಲಿದ್ದ ಪಂಚಂಗದ ಗಂಟು ತಮ್ಮ ಶತಮಾನದ ದಾಹ ತೀರಿಸಿಕೊಳ್ಳಲು ಅದೇ ದೇಹದಿಂದ ಪುಷ್ಕಳವಾಗಿ ಒಸರುತ್ತಿದ್ದ ಬೆವರನ್ನು ಕುಡಿಯ ತೊಡಗಿದ್ದಿತು. ದೋತರ ಕೂಡ ಬೆವರಿನಿಂದ ನೆನೆದು ಚಪ್ಪೆಗಂಟಿ ಕಾಣಿಸುತ್ತಿತ್ತು.

’ಥೂ ಈ ಪ್ರಧಾನ ಮಂತ್ರಿ ಹಾಳಾಗ’ ಎಂದು ಕೋಪದ ಭರದಲ್ಲಿ ತಾವು ನುಡಿದು ಬಿಡಬಹುದು. ಅಲ್ಲದೆ ತಾವು ನುಡಿದಿದ್ದೇ ವೇದವಾಕ್ಯ. ತಮ್ಮ ನುಡಿದಿದ್ದನ್ನು ಬದಲಿಸುವ ಶಕ್ತಿ ಆ ತ್ರಿಮೂರ್ತಿಗಳಿಗೂ ಮೀರಿದ್ದು. ತಾವು ಯಾರಿಗೆ ಜ್ಯೋತಿಷ್ಯ ಹೇಳಬೇಕೆಂದು ಕಾಯುತ್ತಿರುವೆವೋ ಅವರಿಗೇ ತಾವು ಶಾಪ ಕೊಡುವುದುಂಟೆ?

ಅಷ್ಟರಲ್ಲಿ ಜನರ ದೊಡ್ಡದೊಂದು ಗುಂಪು ಪ್ರಧಾನ ಮಂತ್ರಿಗೆ ಧಿಕ್ಕಾರ. ಇಂಡಿಕೇಟ್ ಕಾಂಗ್ರೆಸ್‌ನ ಇಂದಿರಾಗಾಂಧಿಗೆ ಧಿಕ್ಕಾರ ನಿಜಲಿಂಗಪ್ಪನವರಿಗೆ ಜಯವಾಗಲೀ, ಸಂಜೀವರೆಡ್ಡಿಗೆ ಜಯವಾಗಲೀ ಎಂದು ಜೋರಾಗಿ ಕೂಗತೊಡಗಿತು. ಇದ್ದಕ್ಕಿಂತೆ ಪೋಲಿಸರು ಅವರ ಮೇಲೆರಗಿ ಲಾಠಿಯಿಂದ ಚಚ್ಚತೊಡಗಿದರು. ಮತ್ತೆ ಕೂಗತೊಡಗಿದ ಆ ಸಿಂಡಿಕೇಟ್ ಕಾಂಗ್ರೆಸ್‌ನ ಕಾರ್ಯಕರ್ತರನ್ನು ದನಗಳನ್ನು ತುಂಬಿದಂತೆ ವ್ಯಾನಲ್ಲಿ ತುಂಬಿ ಕರೆದೊಯ್ದರು.
ನಿಜವಾಗಿಯೂ ಶಾಸ್ತ್ರಿಗಳಿಗೆ ಭಯವಾಯಿತು.

ಕಾಂಗ್ರೆಸ್ ಇಬ್ಭಾಗವಾದ ಬಗ್ಗೆ ತಿಳಿದುಕೊಂಡಿದ್ದರು. ಕಂಚಿ ಕಾಮಕೋಟಿ ಶ್ರೀಗಳು, ಶ್ರಿಂಗೇರಿ, ಉಡುಪಿ ಮೊದಲಾದ ಸ್ವಾಮಿಗಳ ಪಾದಗಳಿಗೆ ತಲೆಬಾಗಿ ನಮಸ್ಕರಿಸುತ್ತಾಳೀ ಜವಹರನ ಪುತ್ರಿ ಎಂದೇ ಅಕೆಯನ್ನು ಬೆಂಬಲಿಸಿದ್ದರು.

ತಿರುಪತಿ ವೆಂಕಟರಮಣನಿಗೆ ಇಂದಿರಾಗಾಂಧಿ ತಲೆಗೂದಲು ಕೊಡುವುದನ್ನು ನೋಡಬೇಕೆಂಬ ಅವರ ಹಳೆಯ ಆಸೆ.
ಆಕೆಯ ಮೇಲೆ ಅವರಿಗಿದ್ದ ಒಂದೇ ಒಂದು ಸಿಟ್ಟು ಎಂದರೆ ಆಕೆ ಪಾರ್ಸಿಯವನನ್ನು ಮದುವೆಯಾದದ್ದುದರ ಬಗ್ಗೆ.
ಹೀಗೆ ಪ್ರೀತಿ ಜೊತೆ ಸಿಟ್ಟು ಸೆಡವು ಎಲ್ಲಾ ಇಟ್ಟುಕೊಂಡು ಆಕೆಯ ಹಸ್ತ ಸಾಮುದ್ರಿಕ ನೋಡಿ ತಾವು ಪ್ರಸಿದ್ದರಾಗಬೇಕೆಂದು ಜನ ಜಂಗುಳಿಯಲ್ಲಿ ಸಿಲುಕಿಕೊಂಡಿದ್ದರು. ತುಂಬ ಹಸಿದಿದ್ದರು, ಬಾಯಾರಿದ್ದರು. ಆದರೆ ಸಿಕ್ಕ ಕಡೇಲೆಲ್ಲ ತಿನ್ನಲಿಕ್ಕೆ ಕುದಿಯಲಿಕ್ಕೆ ಅವರೇನು ಮಾಮೂಲು ನರರೇ!
ವೇದನೆಯೊಂದು ಅಂತರಾಳದಿಂದ ಕಿತ್ತು ಬಂತು.

ಅವರ ದೇಹದ ಕರುಳುಗಳಲ್ಲಿ ಸಂಕುಚಿತಗೊಂಡಿರುವ ಮಲವನ್ನು ದೂರದಿಂದಲೇ ಗ್ರಹಿಸಿಕೊಂಡಂತೆ ನಾಯಿಯೊಂದು ಜೋರಾಗಿ ಬೊಗಳತೊಡಗಿತು. ನಾಯಿ ಅಂದರೆ ನಾರಾಯಣ, ನಾರಾಯಣನೆಂದರೆ ನಾಯಿ. ಶ್ರೀಮನ್ನಾರಾಯಣನೇ ನಾಯಿ ಭಾಷೆ ಮೂಲಕ ನೀಡುವ ಸಂದೇಶವನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿದರು. ಯಾಕೋ ಅವರಿಗೆ ಅವರ ಮೊಮ್ಮಗ ನೆನಪಾಗಿ ಇದ್ದಕ್ಕಿದ್ದಂತೆ…

“ತಾತಾ… ತಾತಾ” ಹಾಸಿಗೆ ಮೇಲಿದ್ದ ಶಾಮು ಕಿಟಾರನೆ ಕಿರುಚಿತು. ಅದು ಆ ಐದು ನಿಮಿಷಗಳಲ್ಲಿ ಎಚ್ಚರಗೊಂಡಿದ್ದೆಷ್ಟೋ ಸಾರಿ! ಪ್ರಜ್ಞೆ ಕಳೆದುಕೊಂಡಿದ್ದು ಎಷ್ಟೋ ಸಾರಿ, ಎಚ್ಚರ

ತಪ್ಪಿದಾಗ ಜಲ… ಜಲ… ಜ್ವಾಲಮಾಲಿನಿ… ಬಿಡು… ಬಿಡು… ಕೈ ಹಾಕಬೇಡ… ಮುಟ್ಟಬೇಡ… ಹೀಗೆ ಎನೇನೋ ಕನವರಿಸುತ್ತಿದ್ದನು. ಎಚ್ಚರ ಬಂದಾಗ ಎದುರಿಗಿದ್ದ ಎಲ್ಲರೂ ಜಲಜಾಕ್ಷಿಯರೇ ಎಂದು ಭಾವಿಸಿ, ಅವಾರೆಲ್ಲಾತನ್ನ ಮೇಲೆ ಆಕ್ರಮಣ ನಡೆಸುತ್ತಾರೆ ಎಂದು ಬಗೆದು ತನ್ನ ಸಹಯಕ್ಕಾಗಿ ಸಾಕ್ಷಾತ್ ಚಾಮುಂಡೇಶ್ವರಿಯನ್ನು ಆಮಂತ್ರಿಸಲೋಸುಗ ಅಹಿಗಿರಿ ನಂದಿನಿ ನಂದಿತ ಮೋದಿನಿ ವಿಶ್ವವಿನೋದಿನಿ ನಂದನುತೆ ಎಂಬ ಶಂಕರ ವಿರಚಿತ ಸ್ತೋತ್ರ ಹೇಳುತ್ತಿದ್ದನು. ಮತ್ತೊಮ್ಮೆ ಎಚ್ಚರವಾದಾಗ ಶಂಕ ಚಕ್ರ ಗಧಾನ್ವಿತೆ ಎಂದು ಹೇಳುತ್ತಿದ್ದನು.

ಅಲುಮೇಲಮ್ಮನ ಹೆತ್ತ ಕರುಳು ಹೊತ್ತಿ ಉರಿಯ ತೊಡಗುವುದು… ನನ್ನ ಕಂದನಿಗೇನಾಯಿತೋ… ಯಾರಾದ್ರು ಉಳಿಸಿ ಪುಣ್ಯ ಕಟ್ಟಿಕೊಳ್ಳಬಾರದೇ ಎಂದು ಕಂದನನ್ನು ಅವುಚಿಕೊಂಡು ಚೀರುತ್ತಿದ್ದಳು.

ಆ ಸಾಧ್ವಿಯ ಮನವಿಗೆ ಓಗೊಟ್ಟು ಹತ್ತಾರು ಕಾಗೆಗಳು ಅಷ್ಟಲೋಕದಿಂದ ಆಗಮಿನಿಸಿ ಮನೆಯ ಮಾಳಿಗೆ ಮೇಲೆ ಕೂತು “ತಾಯಿ, ಆದಿಶಕ್ತಿ ಪರಬ್ರಹ್ಮ ಸ್ವರೂಪಿಣಿ ಹೆದರಬೇಡ… ನಾವಿದ್ದೇವೆ” ಎಂಬ ಅರ್ಥ ಬರುವಂತೆ ಕಾಽ ಕಾಽ ಎಂದ ಸಹಾಯ ಹಸ್ತ ಚಾಚತೊಡಗಿದವು.

ನಾವೂ ಪರೊಪಕಾರಾರ್ಥವಾಗಿ ಸದಾ ಸಿದ್ದವೆಂಬಂತೆ ಓಣಿಯ ಒಂದೆರಡು ಶ್ವಾನಕುಲ ಲಲನಾಮಣಿಗಳು ಅಂಗಳಕ್ಕೆ ಆಗಮಿಸಿ ವಿಶಿಷ್ಟವಾದ ಸ್ವರ ತೆಗೆಯಲಾರಂಭಿಸಿದವು.
ಸೊಳ್ಳೆಗಳು; ನೊಣಗಳು ಮುಗಿಬಿದ್ದು ಅಪರೂಪದ ಸೇವೆ ಮಾಡಲಾರಂಭಿಸಿದ್ದವು.
ಯಾರು ಕರೆದರೋ ಎನೋ, ಇಂಗ್ಲಿಷ್ ವರ್ಣಮಲೆಯ ಝಡ್ ಅಕ್ಷರವನ್ನು ಅಕ್ಷರಶಃಹೋಲುವ ಚಿರಂಜೀವಿಯೂ; ಇಚ್ಚಾಮರಣಿಯೂ ಆದ ಸದಾರೆವ್ವ ಬಾಯಲ್ಲಿದ್ದ ತೊಂಬುಲವನ್ನು ಹೆಜ್ಜೆ ಹೆಜ್ಜೆಗೆ ಒಂದೊಂದು ಬಂಡಿ ಉಗುಳುತ್ತ ಯವ್ವೋ… ಆಲವ್ವೋ… ಮೇಲವ್ವೋ… ನಮ್ ವುಡಗ್ನೀಗೆ ಅದ್ಯಾವ ಗಾಳಿ ಬಡಕೊಂಡೈತಿ… ವಂದ್ ಕೈಯಿ ನೋಡ್ಕಂಬ್ತೀನಿ… ಎಂದು ಬಂದಳು.

ಶಾಮು ಕಣ್ ತೆರುದು ನೊಡಿದ,
ಆಕೆ ಚಾಮುಂಡೇಶ್ವರಿಯೊ… ಜಲಜಾಕ್ಷಿಯೋ… ಒಂದು ಕ್ಷಣ ಅನುಮಾನಪಟ್ಟ. ಬಿಟ್ಟ ಕಣ್ ಬಿಟ್ಟಂತೆನೋಡ ತೊಡಗಿದ, ಕಿರಿಚಲಿಕ್ಕೆ ಪ್ರಯತ್ನಿಸುರುವವನಂತೆ ಮುಖ ಮಾಡಿದ.
ಆಕೆ ಲಟ್ಟಿಗೆ ತೆಗೆದಳು. ಒಣಮೆಣಸಿನಕಾಯಿ; ಉಪ್ಪು; ಕಸಬರಿಕೆಯ ಚೂರು ನೀವಾಳಿಸಿ ತೆಗೆದಳು.
ಘಾಟಿಗೆ ಶಾಮು ಕೆಮ್ಮು ತೊಡಗಿದ.
ಕಣ್ಣು ಮೂಗಿನಿಂದ ಹಳ್ಳ ಹರಿಯತೊಡಗಿತು…

’ಯಾರು ಕೊಣ್ಣು ಬುಟ್ಟಿದ್ರೋ ಅವ್ರ ಕೋಣ್ ಸೇದಿವೋಗ’ ಎಂದು ಹಿಡಿಹಿಡಿ ಶಾಪ ಹಾಕಿದಳು. “ತಾಯಿ ಇನ್ನೊಂದು ಜಾವತ್ಗೆ ನಿನ್ ಮೊಗ ಚಂಡು ಪುಟದಂತೆ ಪುಟೀತಾವೋಗ್ಲಿಲ್ಲಾ ನಾನು ಸಾವ್ಕಾರು ಉರುಕುಂದೆಪ್ಪನ ಸೂಳೆನೇ ಅಲ್ಲ” ಎಂದು ಹೇಷಾರವ ಮಾಡಿ ತನ್ನ ಗಿರಿ ಮೊಮ್ಮಗ ಒಬ್ನೇ ಐತೇಮ್ತ ಹೋಗಿ ಬಿಟ್ಟಳು.

ಯಾರೋ ಹೋಗಿ ಸೌಂದರ್ಯಾತಿಶಯಕ್ಕೆ ಹೆಸರಾದ ಉರುಕುಂದೆಪ್ಪನನ್ನ ಕರೆ ತಂದರು. ಅವನು ಇಂಗ್ಲಿಷ್ ವರ್ಣಮಾಲೆಯ ’ಎಸ್’ ಅಕ್ಷರವನ್ನು ಅಕ್ಷರಶಃ ಹೋಲುತ್ತಿದ್ದವನು. ತೊಂಬತ್ತು ವಸಂತಗಳನ್ನು ಎಣಿಸಿ ಜೇಬಿನಲ್ಲಿಟ್ಟುಕೊಂಡಿರುವ ಆತ ಆ ಕೇರಿಗೆಲ್ಲ ವೈದ್ಯಮಾರ್ತಾಂಡನೆಂದೇ ಹೆಸರಾಗಿದ್ದ. ಆತ ಮಾಡುತ್ತಿದ್ದ ವೈದ್ಯ ಎಂದರೆ ಬಳೆ ತುಂಡನ್ನು

ದೀಪದ ಕುದಿಗೆ ಹಿಡಿದು ಕಾಯಿಸಿ ರೋಗಿಯ ದೇಹದ ಅನುಕಟ್ಟಾದ ಭಾಗಕ್ಕೆ ಚುಟುಗಿ ಹಾಕುವುದು…
“ಅದೀ ಏನವ್ವಾ… ತಾಯಿ… ಅಲವ್ವಾ ಮೇಲವ್ವಾ… ನಮ್ ಕೇರಿಗೇ ಬೆಳ್ಳಿ ಚುಕ್ಕೆಯಂಗಿದ್ದ ಚಾಮಣ್ಗೆ ಗಾಳಿ ಸವುಡು ಬಡಕಂಡೈತಂತೆ… ನೋಡೇ ಬುಡ್ತೀನಿ ತಡಿ ಅದ್ನ ಒಂದ್ ಕೈಯಿ…” ಎಮ್ದು ಚಾಮಾಶಾಸ್ತ್ರಿಯ ಪಕ್ಕ ಕುಂತನು.

ಕಣ್ಣುಗಳನ್ನು ಹಾಗೇ ಮೇಲಿಂದ ಕೆಳಗಡೆ ಎರಡು ಸುತ್ತು ಹಾಯಿಸಿ ಮನಸ್ಸನ್ನು ಒಂದು ಹದಕ್ಕೆ ತಂದುಕೊಂಡನು. ಮನದಲ್ಲಿ ಸುಂಕಲಮ್ಮ, ದುರುಗಮ್ಮ, ಚವುಡಮ್ಮ, ದ್ಯಾಮಮ್ಮ ಮೊದಲಾದ ಏಳುನೂರು ಎಂಬತ್ತೆರಡು ಇಚ್ಛಾನು ದೇವತೆಗಳನ್ನು ನೆನೆದನು.

ಹಂಗೇ ಬಕ್ಕನಕ್ಕೆ ಕೈ ಇಟ್ಟನು. ಬಳೆ ಚೂರುಗಳು ಯಾವಾಗಲೂ ಬಕ್ಕಣದಲ್ಲಿ ಸ್ಟಾಕು. ಮುತ್ತೈದುಸಾವುಂಡವರ ಬಳೆ ಚೂರುಗಳವು. ಅವುಗಳ ಪೈಕಿ ಒಂದು ಚೂರು ತೆಗೆದು ದೀಪದ ಬೆಳಕಿಗೆ ಹಿಡಿದು ನೋಡಲಾಗಿ ಅದು ಮದುವೆಯಾದ ಎರಡನೇ ವರ್ಷದಲ್ಲಿ ಅಕಾಲಿಕ ಮರಣಕ್ಕೆ ತುತ್ತಾದ ಶಿವಪೂಜೆ ಕೊಟ್ರಗೌಡರ ಸೊಸೆ ಸುನಂದಮ್ಮಳ ಎಡಗೈಯ ಮೊದಲನೆಯ ಬಳೆಯ ಚೂರದು.

ದೀಪದ ಕುಡಿಗಿಡಿದು ಅದರ ಮೊನೆ ಕಾಯಿಸಿದನು.
ಕಂದನು ಆಲಮ್ಮನ ತೊಡೆ ಮೇಲೆ ಜಲ… ಜಲ… ಮಲಿಕ್ಕಂಡಿತ್ತು. ಹಂಗೇ ಮಲಿಕ್ಕೊಂಡು ಈಸ್ಟ್‌ಮನ್ ಕಲರ್ ಕನಸು ಕಾಣುತ್ತಿದ್ದ ಚಾಮಣ್ಣನ ಕುತ್ತಿಗೆಯ ಹಿಂಭಾಗಕ್ಕೆ ಮೂರು ಸಾರಿ ಚುಟಿಕಿ ಹಾಕುತ್ತಲೇ… ಅದು ದಿಗ್ಗನೆ ಎದ್ದು ಕೂತು‌ಅಯ್ಯೋ ಅಯ್ಯೋ ಅಂತ ರುದ್ರ ಚಮಕ ಹೇಳತೊಡಗಿತು.

ಆ ಕಡೆಯಿಂದ ಈ ಕಡೆಗೆ ಓಡಿತು.
ಈ ಕಡೆಯಿಂದ ಆ ಕಡೆಗೆ ಓಡಿತು.
ಇಂಗ್ಲೀಷು ಸಂಸ್ಕೃತವೆಂಬೆರಡು ಕಾದ ಕೂರ್ದಸಿಗಳಿಂದಲೇ ಬರೆ ಎಳೆಯಲಾಯಿತೆಂದು ಬಗೆದು ಉರುಕುಂದೆಪ್ಪನ ಕಡೆ ದುರುಗುಟ್ಟಿದನು… ಅಪರೂಪಕ್ಕೆ ದುರುಗುಟ್ಟಿ ನೋಡುವವರು ಮೂರ್ಛೆ ಬಂದು ಒರಗದೆ ಇರುವರೇನು?

ಜ್ಞಾನತಪ್ಪಿದ ತನ್ನ ಕರುಳಿನ ಕುಡಿಯನ್ನು ತನ್ನ ವಿಶಾಲವಾದ ತೊಡೆ ಮೇಲೆ ಹಾಕಿಕೊಂಡು ’ಅಯ್ಯೋ ಇನ್ನಾದರೂ ಕಂದಯ್ಯ ಸರಿ ಹೋಗಲಿಲ್ಲವಲ್ಲಾ… ಯಾರಾದರೂ ಹೋಗಿ ನಮ್ಮ ಮಾವನವರಾದ ಇದರ ತಾತನವರನ್ನು ಕರೆತರಬಾರದೆ’ ಎಂದು ಪರಿಪರಿಯಾಗಿ ಕೇಳಿಕೊಳ್ಳುತ್ತಿರುವಾಗ…

…ಶಾಸ್ತ್ರಿಗಳಿಗೆ ನಿಲ್ಲಲು ಶಕ್ತಿ ಉಳಿದಿಲ್ಲ. ತಲೆಸುತ್ತು ಬಂದಂತಾಗುತ್ತಿದೆ. ತನ್ನ ಯೌವನದಲ್ಲಿ ಗಂಡನನ್ನು ಕಳೆದುಕೊಂಡಾಕಿ; ಕಳೆದುಕೋಡು ಬಾಬ್ ಕಟ್ ಬಿಟ್ಟಾಕಿ; ಬಾಬ್ ಕಟ್ ಬಿಟ್ಟು ಅದರ ಮೇಲೊಂದು ಮುಸುಕು ಎಳೆದುಕೊಂಡಾಕಿ ಪ್ರಧಾನಿ ಶ್ರೀಮತಿ ಇಮ್ದಿರಾ ಗಾಂಧಿ ಈಗ ಆ ಊರಲ್ಲಿ ಇಳಿದು ಭಾಷಣ ಮಾಡಿದಳು. ಆಗ ಆ ಊರಲ್ಲಿಳಿದು ಮಾಡಿದಳು ಭಾಷಣ.

“ಭವ್ಯ ಭಾರತದ ಪ್ರಜೆಗಳೇ, ಈ ದೇಶವನ್ನು ಅಪತ್ತಿನಿಂದ ರಕ್ಷಿಸಲೆಂದೇ ಆ ಭಗವಂತನು ಕಳಿಸಿಕೊಟ್ಟಿರುವ ಪ್ರಿಯದರ್ಶಿನಿಯವರು ಇನ್ನು ಕೆಲವೇ ನಿಮಿಷಗಳಲ್ಲಿ ಆಗಮಿಸಲಿದ್ದಾರೆ. ನಿಮ್ಮ ದುಃಖ ಪರಿಹರಿಸಲಿದ್ದಾರೆ. ಬಡತನವನ್ನು ಓಡಿಸಲಿದ್ದಾರೆ. ಶಾಂತಚಿತ್ತರಾಗಿ ಸಹಕರಿಸಿ…

ಬೋಲೋ ಭಾರತ್…”ಒಂದೆರಡು ನೀಲಿ ಬಣ್ಣದ ವ್ಯಾನುಗಳು ಸುಂಯ್ ಅಂತ ಬಂದವು. ಎಲ್ಲರೂ ಗಬ್‌ಚಿಪ್… ವ್ಯಾನೊಂದು ಶಾಸ್ತ್ರಿಗಳ ಎದುರಿಗೆ ಢರ್‌ಡಸಕ್ಕೆಂದು ಡೇಗಿ ನಿಂತುಕೊಂಡಿತು.ಅದರಿಂದ ಮಿಂಚಿನಂತೆ ಒಬ್ಬ ನೆಗದ; ಶಾಸ್ತ್ರಿಗಳು ನಖಶಿಖಾಂತ ದಿಟ್ಟಿಸಿದ. ಅವರ ದೇಹದ ಮಾಂಸ ಖಂಡಗಳ ಆಕುಂಚನ, ಏಕಸನ ಅಳೆದ. ಹಲ್ಲು ಕಡಿದ.

“ಬುಡ್ಡಾ… ಕ್ಯಾ ಹೈ ನಾಮ್ ತೇರಾ? ಇನ್ ಮೆ ಕ್ಯಾ ಹೈ…”ಢಾಂ ಢೂಂ ಅಂತ ಪ್ರಶ್ನೆ ಕೇಳಿದ.
ಶಾಸ್ತ್ರಿಗಳಿಗೆ ಏನು ಹೇಳಬೇಕೋ ತೋಚಲಿಲ್ಲ ಬ್ಯಾ… ಬ್ಯಾ ಅಂದರು. ಛಡೋ ವ್ಯಾನ್ ಛಡೊ ಛಡೋರೇ ಬುಡ್ಡಾ… ” ಎಂದದ್ದೇ ಒಂದಿಬ್ಬರು ಶಾಸ್ತ್ರಿಗಳ ರೆಟ್ಟೆಗೆ ಕೈ ಹಚ್ಚಿ ವ್ಯಾನಿಗೆ ತಳ್ಳಿಬಿಟ್ಟರು.

ವ್ಯಾನ್ ಬುಸ್ ಅಂಥ ಓಡಿತು. ಠಾಣೆ ಮುಂದೆ ನಿಂತು ಕೊಂಡಿತು. ಅದರಿಂದ ಶಾಸ್ತ್ರಿಗಳನ್ನು ಇಳಿಸಿ ಠಾಣೆಗೆ ಕರೆದೊಯ್ದರು. ನಿನ್ನೆಯಿಂದ ಅವರಿಗೊಂದು ಸುಳುವು ಸಿಕ್ಕಿತ್ತು. ಇಷ್ಟು ವಯಸ್ಸಾಗಿರೋ; ಹೀಗಿರೋ ಇಂಥ ವ್ಯಕ್ತಿಯಿಂದ ಪ್ರಧಾನಿಗಳ ಪ್ರಾಣಕ್ಕೆ ಅಪಾಯ ಇದೇ ಅಂಥ.

ಶಾಸ್ತ್ರಿಗಳು ಅದೇ ರೀತಿ ಹೋಲುತ್ತಿದ್ದರು. ಅವರ ಕಂಕುಳಲ್ಲಿ ಕಿಮುಟು ಬಟ್ಟೆಯೊಳಗಿದ್ದ ಪಂಚಾಂಗದ ಗಂಟು ಆ ಮಹಾನ್ ಅಂಗರಕ್ಷಕರ ಅನುಮಾನವನ್ನು ಮತ್ತಷ್ಟು ದೃಢಗೊಳಿಸಿತ್ತು.
“ಅರೆ ಭಾಂಛೋದ್” ಒಬ್ಬ ಲಾಠಿಯಿಂದ ಶಾಸ್ತ್ರಿಗಳ ಜಘನಕ್ಕೊಂದು ಏಟು ಬಿಟ್ಟ.
ಅವರು ಅಂಥದೊಂದು ಏಟನ್ನು ಎಂದೂ ನಿರೀಕ್ಷಿಸಿದವರಲ್ಲ.
ಅಸು ನೀಗುವುದೇ ಮೇಲೆಂದೆನಿಸಿತು.
ದುಃಖ ಮತ್ತು ಕೋಪ ಒನ್ ಇಷ್ಟು ಟೆನ್ ಪ್ರಮಾಣದಲ್ಲಿ ವ್ಯಕ್ತಗೊಂಡವು.

” ನಮ್ಮನ್ನು ಯಾರೂಂತ ತಿಳಿಕೊಂಡಿದ್ದೀರಿ, ನಾವು ಪ್ರಕಾಂಡ ವಿದ್ವಾಂಸ… ” ಇನ್ನು ಅವರ ಬಾಯಿಂದ ಮಾತು ಪೂರ್ಣ ಹೊರ ಬಿದ್ದಿರಲಿಲ್ಲ.
ಅಷ್ಟರಲ್ಲಿ ಮತ್ತೊಂದು ಏಟು ಬಿತ್ತು.
“ವಿಧ್ವಂಸ್ ಕಾರ್ಯ ಕರ್ತಾಕ್ಯಾ… ”
ಮಗದೊಂದು ಏಟು ಬಿತ್ತು.

ಶಾಸ್ತ್ರಿಗಳಿಗೆ ಭೂಮಿ ಬಾಯಿ ಬಾಯ್ತೆರೆದು ತಮ್ಮನ್ನು ನುಂಗಿಬಿಡಬಾರದೆ ಎಂದೆನಿಸಿತು.
” ರೇ ಬುಡ್ಡಾ ಆದ್ಮಿಽಽ… ಇಸ್‌ಮೇ ಆರ್ ಡಿ ಎಕ್ಸ್… ಏಕೆ ಫಾರ್ಟಿಸೆವೆನ್… ಬಾಂಬ್‌ವಗೈರಾ…ಕ್ಯಾ ಕ್ಯಾ ಛುಪಾಹೈ” ಒಬ್ಬ ಲಾಠಿಯಿಂದ ಶಾಸ್ತ್ರಿಗಳ ಕಂಕುಳನ್ನು ಜೋರಾಗಿ ತಿವಿದ.

ಕುಂಡಲಿನೀ ಶಕ್ತಿ ಆಪೋಶನ ತೆಗೆದುಕೊಳ್ಳೂವಂಥ ನೋವಾಯಿತು.
“ಏನ್ರಪಾ… ನೀವು ಏನು ಹೇಳ್ತಿದೀರೋ… ಏನು ಮಾಡ್ತಿದೀರೋ; ನಮ್ಗೆ ಏಕೆ ಚಿತ್ರ ಹಿಂಸೆ ನೀಡುತ್ತಿರುವಿರೋ… ನಮಗೋಂದು ಅರ್ಥ ಆಗ್ತಾ‌ಇಲ್ಲ…ನಮ್ಮಂಥ ಜ್ಞಾನಿಗಲು ಕೈ ಮುಗಿದು ಕೇಳಿಕೊಂಡರೆ ನಿಮಗೆ ಶೇಯಸ್ ಅಲ್ಲ…” ಅಂಥ ಅವರು ಹೇಳಿಕೊಳ್ಳುತ್ತಿದ್ದುದನ್ನು ಆ ಅಂಗರಕ್ಷಕರು ಅರ್ಥ ಮಾಡಿಕೊಂಡಿದ್ದೇ ಬೇರೆ ರೀತಿಯಲ್ಲಿ…

ಪ್ರಧಾನಿ ಪದವಿಯಿಂದ ಇಂದಿರಾಜಿಯವರನ್ನು ಉರುಳಿಸಲು ಸಿಂಡಿಕೇಟ್ನವರು ಈ ಮುದುಕನ ಮೂಲಕ ಸಂಚು ಮಾಡಿವರೆಂದೂ; ಅದರ ಬಗ್ಗೆ ವಿವರ ನೀಡುತ್ತಿರುವನೆಂದೂ ಬಗೆದರು…
ಅದರಲ್ಲೊಬ್ಬ ” ಹ್ಹಾ… ಐಸಾ… ನಿಜಲಿಂಗಪ್ಪಾಜಿ ಕೇ ಬಾರೆ… ಮೆ ಔರ್ ಕುಚ್… ಸಂಜೀವರೆಡ್ಡಿ

ಕೇ ಬಾರೆ ಮೆ ಔರ್ ಥೋಡಾ… ಎಂದು ಶಾಸ್ತ್ರಿಗಳನ್ನು ಮಾತಿನಿಂದ ಚಿಂದಿ ಮಾಡತೊಡಗಿದ.
ಮತ್ತೊಬ್ಬ ಅವರ ಕುಂಕುಳಕ್ಕೆ ಕೈ ಹಚ್ಚಿ ಜಗ್ಗಿದ.
ಗಂಟು ಕಿತ್ತು ಹೊರ ಬಂದು ಬಿತ್ತು. ಅದು ನೆಲಕ್ಕೆ ಬಿದ್ದದ್ದರಲ್ಲಿ ಜಗ್ಗಿದವರ ತಲೆ ಸಹಸ್ರ ಹೋಳಾಗುದೆಂದು ಎಚ್ಚರಗೊಂಡ ಒಂಬ್ಬ ಗಬಕ್ಕನೆ ಕೈಗೆ ಎತ್ತಿಕೊಂಡ… ಅದರೊಳಗಿನ ಒಂದೊಂದು ವಸ್ತು ಎಲ್ಲಿ ಸ್ಪೋಟಿಸಿ ಬಿಡುವವೋ ಎಂಬ ಆತಂಕದಿಂದ ಬಿಚ್ಚಿದ.
ಆಶ್ಚರ್ಯ!
ಅತ್ಯಾಶ್ಚರ್ಯ!
ಪರಮಾಶ್ಚರ್ಯ!
ಒಂದೂ ಮಾರಕಾಯುಧಗಳಿಲ್ಲವಲ್ಲ.!!
ಅವುಗಳ ಬದಲಾಗಿ ನುಜ್ಜು ಗುಜ್ಜಾಗಿರುವ ಪುಸ್ತಕಗಳು…

ಇವುಗಳಲ್ಲಿ ಎಂಥದೋ ನಿಗೂಢ ಸಂಚು ಅಡಗಿಸಿಟ್ಟಿರುವಂತಿದೆ ಈ ಬುಡ್ಡ ಎಂದು ಊಹಿಸಿದವರಾದ ಆ ದೈತ್ಯರು ಶಾಸ್ತ್ರಿಗಳ ದೇಹದ ಹಸಿ ಮಾಂಸ ಭಕ್ಷಿಸಿ ಮುಕ್ತಿಗೆ ಪಾತ್ರರಾಗಬೇಕೆಂದು ಒಂದೊಂದೆ ಹೆಜ್ಜೆ ಮುಂದಿಡಿತ್ತ ಬಂದರು.
“ಸಚ್ ಭೋಲೋ, ಸಚ್ ಭೋಲೋ,” ಎನ್ನ ತೊಡಗಿದರು.

ಇನ್ನೇನು ಇವರು ನನ್ನನ್ನು ಅಕಾಲ ದುರ್ಮರಣಕ್ಕೆ ತುತ್ತು ಮಾಡುತ್ತಾರೆಂದು ಹೌಹಾರಿ ಶಾಸ್ತ್ರಿಗಳು… ಅಪ್ಪಾಜಿ……… ಶಾಮಾಶಾಸ್ತ್ರೀಽಽಽ… ಎಂದು ಜೋರಾಗಿ ಕೂಗಿ ಬಿಡಲು…
ಶಾಮಾಶಾಸ್ತ್ರಿ ಈಗೀಗ ಪ್ರಜ್ಞೆ ಕಳೆದುಕೊಳ್ಳುವುದಾಗಲೀ; ಜಾಗ್ರತಾವಸ್ಥೆಯಲ್ಲಿ ಎಲ್ಲರನ್ನು ಆಕೆಯೇ ಎಂದು ಪರಪಾಟು ಬೀಳುವುದಾಗಲಿ ಇಲ್ಲ.
ಅದೇ ತಾನೆ ಎದ್ದು ಹಾಸಿಗೆಯಲ್ಲಿ ಕೂತಿದ್ದಾನೆ.
ತಾನು ಕವಿಯಾಗುವುದೋ? ಕಥೆಗಾರನಾಗುವುದೋ? ಕಾದಂಬರಿಕಾರನಾಗುವುದೋ? ಎಂಬಂಥ ಕನಸು ಕಾಣುತ್ತಿದ್ದಾನೆ.

ಮಹಾನ್ ಸಾಹಿತಿ ಥರ ಮುಖ ಮಾಡಿಕೊಂಡಿದ್ದಾನೆ. ವಸ್ತುಗಳೊಳಗೆ ಜೀವ ಹುಡುಕುತ್ತಾನೆ. ಜೀವಿಗಳೊಳಗೆ ವಸ್ತು ಹುಡುಕುತ್ತಾನೆ, ಜೀವಿ ಮತ್ತು ವಸ್ತು ಬೇರಲ್ಲ ಕಾಣಿಭೋ? ಜೀವಿ ಎಂದರೆ ವಸ್ತು. ವಸ್ತುವೆಂದರೆ ಜೀವ… ಜೀವವೆಂದರೆ ಸ್ವರ್ಗ, ವಸ್ತು ಎಂದರೆ ನರಕಽಽಽ…
ಹೀಗೆ ಅವನಿಗೆ ಹೊಳೆದದ್ದು ಒಂದೇ ಎರಡೇ,
ತಾನುಕಂಡ ಅನುಭವದಲ್ಲಿ ಏನೋ ಇದೆ ಎಂದುಕೊಂಡ.

ತನ್ನನ್ನು ಮುಗಿಸಲು ಬಂದಿದ್ದ ಜಲಜಾಕ್ಷಿ ತನ್ನ ಕುತ್ತಿಗೆಗೆ ಕೈ ಹಚ್ಚುವ ಬದಲು ಟೊಂಕದ ಕೆಳಗಡೆ ಕೈ ಹಚ್ಚಿದ್ದಾದರೂ ಯಾಕೆ? ಎದೆಗೆ ಮೊಲೆ ಹಚ್ಚಿದಳು, ತಿಕ್ಕಿದಳು. ಬಲವಾಗಿ ಅಪ್ಪಿದಳು, ಆ ಘರ್ಷಣೆಗೆ ಎದೆ ಮೇಲಿದ್ದ ರಾಮಮುದ್ರೆ ಬೆವರಿನ ಸೆಳೆವಿಗೆ ಸಿಕ್ಕು ಹರಿದು ಹೋಯಿತು. ಕಣ್ಣುಗಳಿಂದ ಬೆಂಕಿ ಉಂಡೆ ಉಗುಳುತ್ತ ಬಾಯಿಯನ್ನು ಮೂಗೆಗೆ ಹಾಕಿ ಬಿಟ್ಟಳು. ತಪ್ಪಿಸಿಕೊಂಡ ಸರಿ, ಇಲ್ಲೆಂದರೆ ಶಾಸ್ತ್ರಿಯ ಮೂಗು ಜಲಜಳ ದವಡೆಯಲ್ಲಿರುತ್ತಿತ್ತು.

ಜಜಳ ಆಕ್ರಮಣಕ್ಕೆ ಮತ್ತೊಮ್ಮೆ ತುತ್ತಾಗಬೇಕು
ಸೌಂದರ್ಯ ಲಹರಿ ಹೇಳಿಕೊಡೂಂತ ತಾತನವರನ್ನು ಕೇಳಿಕೊಳ್ಳಬೇಕು!
ತಾನಿಲ್ಲಿ ಇಷ್ಟು ಸಂಕಟಪಡುತ್ತ ನರಳಾಡುತ್ತಿದ್ದರೂ ಮುಖ ತೋರಿಸದೆ ಎಲ್ಲಿ ಮುಖ

ಮರೆಸಿಕೊಂದಿರಬಹುದೀ ತಾತ?
’ತಾತಾಽಽ’ ದುಃಖ ಒತ್ತರಿಸಿ ಬಂದು ಕೂಗಿದ…
ಈ ಮರಣಾಂತಕ ಸನ್ನಿವೇಶದಿಂದ ರಕ್ಷಿಸಲು ಅವತರಿಸಬಾರದೇ ವಿಷ್ಣು ಪರಮಾತ್ಮ ದ್ರೌಪದಿಯ ಮಾನರಕ್ಷಣೆ ಮಾಡಿದ ಪರಮಾತ್ಮನೇ ನನ್ನ ಪ್ರಾಣ ಕಾಪಾಡುವುದು ಕಷ್ಟವೇನು?… “ಭಕ್ತಿಪೂರ್ವಕವಾಗಿ ನಿವೇದಿಸಕೊಳ್ಳತೊಗಿದರು ಶಾಸ್ತ್ರಿಗಳು.

ಅವರಾಡುತ್ತಿದ್ದ ಮಾತುಗಳು ಅಂಗರಕ್ಷಕರಿಗೆ ಬೇರೆ ಬೇರೆ ಅರ್ಥ ಸ್ಪುರಿಸ ತೊಡಗಿದವು. ಪ್ರಧಾನಿ ವಿರುದ್ದ ನಡೆಯಬಹುದಾದ ಸಂಚಿನೊಳಗೆ ಮೂಸಾಳ್, ಗಜೇಂದ್ರ, ವಿಷ್ಣು ಅಗರ್ವಾಲ್ ಮುಂತಾದವರ ಬಗ್ಗೆ ಗೂಡಚಾರಿಗಳು ವಿವರ ಸಂಗ್ರಹಿಸಿ ಕಳಿಸಿದ್ದರು.
“ಬತಾವ್ರೇ ಬುಡ್ಡಾ… ಮುಸಾಳ್, ಗಜೇಂದ್ರ. ವಿಷ್ಣು… ಕಹಾ ಕಹಾ ಹೈ… ಬತಾವ್?” ಬತ್ತಳಿಕೆಯಿಂದ ಲಾಠಿ ಹಿರಿದು ಧಾಳಿ ನಡೆಸಲು ನಿರ್ಧರಿಸಿದರು.
ಆದೌ ಪಿತೌ ಮಾತಾ ಸಾಪತ್ನೀ ಜನನೀ ತಥಾ…
ಕೋಡ್ ಲಾಂಗ್ವೇಜ್ನಲ್ಲಿ ಎನೇನೋ ಮೆಸ್ಸೇಜ್ ಕೊಡ್ತಿದ್ದಾನೀ ಮುದುಕ ಎಂದುಕೊಂಡರು.

ಈ ಓಲ್ಡ್ ಈಜ್ ಗೋಲ್ದ್ ನಮಗೆಲ್ಲಾ ಹೆದರೋದಿಲ್ಲ. ಇದನ್ನು ಕೂಡಲೆ ದಿಲ್ಲಿಯ ಬ್ಲಾಕ್ ಕ್ಯಾಟ್ ಕಮ್ಯಾಂಡೋಸ್ ಹೆಡ್ ಕ್ವಾಟ್ರೆರ್ಸ್‌ಗೆ ಕಳುಹಿಸಬೇಕೆಂದು ನಿಶ್ಚಯಿಸಿದರು. ಪ್ರಧಾನ ಮಂತ್ರಿಗಳು ಬಂದು ಹೋಗುವವರೆಗೆ ತೆಪ್ಪಗೆ ಬಿದ್ದರಬೇಕಾದರೆ ಕ್ಲೋರೋಫಾರಂ ಕೊಡುವುದು ಒಳ್ಳೆಯದೆಂದು ನಿರ್ಧರಿಸಿಕೊಂಡರು.
ಅವರು ಇನ್ನೇನು ಶಾಸ್ತ್ರಿಗಳ ನೀಳ ನಾಸಿಕಕ್ಕೆ ಕ್ಲೋರೋಫಾರಂ ಇಡಬೇಕು ಅಷ್ಟರಲ್ಲಿ ಆ ನರಕದ ಬಾಗಿಲು ತೆರೆಯಿತು.

ಯಾರೋ ಸಿಂಡಿಕೇಟ್‌ನ ಭಯೋತ್ಪಾದಕ ದೊರಕಿರುವನಂತೆ, ಈಗ್ಲೇ ಹೈದರಾಬಾದ್ ಗೋಲಿಯ ರುಚಿ ತೋರಿಸ್ತೀನಿ ಎಂದು ಆರ್ಭಟಿಸುತ್ತಾ ಆ ಠಾಣೆಯ ಮುಖ್ಯಸ್ಥ ಕರುಣಕರ ಒಳ ನುಗ್ಗಿದ.
ಒಂದೊಂದು ಹೆಜ್ಜೆಗೆ ಒಂದೊಂದು ಆಯುಧ ಬಿಚ್ಚಿಕೊಳ್ಳುತ್ತ ನಡೆದ ಅವನಿನ್ನೇನು ಬೆಲ್ಟ್‌ನಿಂದ ಏಟು ಕೊಡಬೇಕು. ಅಷ್ಟರಲ್ಲಿ –
“ಕರುಣಾಕರ ನಾವು ಕಣೋ ಪರಮೇಶ್ವರ ಶಾಸ್ತ್ರಿಗಳು, ನಿನ್ನನ್ನು ನಿನ್ನ ತಾಯಿ ಗರ್ಭದಿಂದ ಬದುಕಿಸಿಕೊಟ್ಟವರು…” ಎಂದು ಪ್ರಾಣವನ್ನು ಗಂಟಲಿಗೆ ತಂದುಕೊಂಡು ನುಡಿದರು.

ಕರುಣಾಕರನಿಗೆ ದಿಗ್‌ಭ್ರಮೆ, ದೂರಕ್ಕೆ ಬೆಲ್ಟ್ ಎಸೆಯುತ್ತಾನೆ. ಮುಖ ಜಲಜಲ ಬೆವರುತ್ತಿದೆ ಬೇರ್ಗೊಯ್ದು ಬಿಸುಟ ಎಳೆಯ ಬಳ್ಳಿಯಂತೆ ಶಾಸ್ತ್ರಿಗಳ ಪಾದದ ಮೇಲೆ ಬೀಳುತ್ತಾನೆ.
ಶಾಸ್ತ್ರಿಗಳು ಅನಾಥ ರಕ್ಷಕ ಎಂದು ಅವನನ್ನು ಅಪ್ಪಿಕೊಳ್ಳುತ್ತಾರೆ.

ಅಂಗರಕ್ಷಕರಿಗೆ ಅವರ ತಪ್ಪಿನ ಅರಿವಾಗುತ್ತದೆ. ಅವರೂ ಕ್ಷಮೆ ಕೇಳಿಕೊಳ್ಳುತ್ತಾರೆ. ಪೋಲೀಸ್ ವ್ಯಾನಿನಲ್ಲಿ ಮನೆಗೆ ಮರುಳಲು ಹಿರಿಯರು ಹಿಂಜರಿಯುತ್ತಾರೆ. ಅಷ್ಟರಲ್ಲಿ ಅಂಗಳದಲ್ಲಿ ರಿಕ್ಷಾ ಬಂದು ನಿಲ್ಲುತ್ತದೆ.

“ಹರಳೆಣ್ಣೆ ಹಚ್ಚಿಕೊಂಡು ಮೈಗೆ ಬಿಸಿನೀರು ಹಾಕಿಕೊಂಡು, ಹೊಟ್ಟೆ ತುಂಬ ಪ್ರಸಾದ ಸ್ವೀಕರಿಸಿ, ಮಲಗಿ ಬಿಡಿ ಒಳ್ಳೆಯ ನಿದ್ದೆ ಬರುತ್ತದೆ” ಎಂದು ಕರುಣಾಕರ ಸಲಹೆ ನೀಡುತ್ತ ಶಾಸ್ತ್ರಿಗಳನ್ನು ರಿಕ್ಷಾದಲ್ಲಿ ಕೂಳ್ಳರಿಸುತ್ತಾನೆ.
ರಿಕ್ಷಾ ಚಲಿಸುತ್ತದೆ.
“ಅಪ್ಪಾ ಶಾಮಾ…” ಚಲಿಸುತ್ತಿರುವ ರಿಕ್ಷಾದಲ್ಲಿ ಶಾಸ್ತ್ರಿಗಳು ಮುಲುಕುತ್ತಿರುವಾಗ…
ಶಾಮಾ ಶಾಸ್ತ್ರಿ ಅದೇ ತಾನೆ ಸ್ನಾನ ಮುಗಿಸಿದ.
ಅದೇ ಕೆಲವು ಕ್ಷಣಗಳ ಹಿಂದೆ ಅಲುಮೇಲಮ್ಮ ರಜಸ್ವಲೆಯಾಗಿ ಮುಂಬಾಗಿಲಿಗೆ ಮೂರು ಮಾರು ದೂರದಲ್ಲಿ ಕೂತಿದಾಳೆ. ಕೂತಲ್ಲಿಂದಲ್ಲಿಂದಲೇ ಮಗನ ನಿತ್ಯಕರ್ಮಕ್ಕೆ ಅಗತ್ಯವಾದ ಮಾರ್ಗದರ್ಶನ ನೀಡುತ್ತಿದ್ದಾಳೆ.
ಅದು ಅಲ್ಲಿದೆ ನೋಡು ಇದು ಇಲ್ಲಿದೆ ನೋಡು
ಇದನ್ನು ಅಷ್ಟು ಹಾಕು, ಅದನ್ನು ಇಷ್ಟು ಹಾಕು

ವೇದ ಪ್ರಮಾಣ ಪಡೆದಿರುವ ತಾಯಿ ಎಂದರೆ ಅವನಿಗೆ ಅತುಲ ಭಕ್ತಿ. ತಾಯಿಯ ನೆರಳೇ ಅವನು. ಅವನೇ ಆಕೆಯ ಹೃದಯಮಿಡಿತ. ಸ್ನಾನ ಮಾಡುವಾಗ ಅವನು ಆಕೆಯ ಬೆನ್ನು ಉಜ್ಜಬೇಕು, ಆಕೆ ಊಟ ಮಾಡುವಾಗ ತಟ್ಟೆಯಲ್ಲಿ ಜೊತೆಗೆ ಉಟ ಮಾಡಬೆಕು, ಆಕೆಯ ಜೊತೆಗೇ ಮಲಗಬೇಕು, ತನ್ನ ಒಂದು ಕಾಲನ್ನು ತಾಯಿಯ ಮೆಲೆ ಹಾಕಿರಬೇಕು. ಇವಿಷ್ಟರಲ್ಲಿ ಒಂದು ಹೆಚ್ಚು ಕಡಿಮೆಯಾದರೂ ಆಕೆ ಸಹಿಸಲಾರಳು. ಯಾಕೋ ಶಾಮೂ ನನ್ನ ಮೆಲೆ ಪ್ರೀತಿ ಕಡಿಮೆ ಮಾಡಿದೆಯಲ್ಲೋ ಎಂದು ಕಣ್ಣಲ್ಲಿ ನೀರು ತಂದುಕೊಂಡು ಬಿಡುವಳು.

ತಾಯಿಯ ಕಣ್ಣಿಂದ ಒಂದು ಹನಿ ನೆಲಕ್ಕುರುಳುವುದನ್ನು ಅವನು ಸಹಿಸುವುದಿಲ್ಲ. ಹಾಗೇನಾದರೂ ಉರುಳಿದರೆ ನೆಲ ಬರಡಾದೀತು. ಆ ಮನೆ ಮಠವಾದೀತು.. ಆದ್ದರಿಂದ ಆ ಸುಪುತ್ರ ತನ್ನ ತಾಯಿಯ ಇಚ್ಛೆಗೆ ಎಂದೂ ವಿರುದ್ಧ ನಡೆಯಲಾರ. ಆಕೆಯನ್ನು ಸದಾ ಸಂತೋಷದಿಂದ ಇಡಲು ಪ್ರಯತ್ನಿಸುತ್ತಾನೆ.

ದೂರದಿಂದ ಆಕೆ ನೀಡಿದ ಮಾರ್ಗದರ್ಶನದಲ್ಲಿ ಅಡುಗೆ ಮನೆಯನ್ನು ಶುಚಿಗೊಳಿಸಿದ. ಮುಸುರೆ ಪಾತ್ರೆಯನ್ನು ತಿಕ್ಕಿ ತೊಳೆದ, ಆಯಾ ಪ್ರಮಾಣದಲ್ಲಿ ದವಸ ಧಾನ್ಯ ಉಪಯೋಗಿಸಿ ಅಡುಗೆ ಮಾಡಿದ.

ಹುಳಿಯ ಪರಿಮಳ ನಾಲ್ದೆಸೆಗೆ ಹಬ್ಬಿತು. ಕೇರಿಯ ಜನರೆಲ್ಲ ಪರಿಮಳ ಆಸ್ವಾದಿಸಿದರು. ಅದೇ ತಾನೆ ನಿಂಬೆ ಹಣ್ಣು ಗಾತ್ರದಷ್ಟು ಮೊಲೆ ಮೂಡಿದ್ದ ಅನಸೂಯ ಹಿತ್ತಲಿಗೆ ಬಂದಳು. ಕಿಟಕಿಯಲ್ಲಿ ಶಾಮನ ಕಡೆ ನೋಡಿದಳು. ಶಾಮೂನ ಕಡೆ ಕಣ್ಣಗಲಿಸಿ ನೋಡುತ್ತಿದ್ದಾನೆ. ಆಕೆ ಅವನ ಸಹಪಾಠಿ. ಅವನ ಕಡೆ ಊಟಾ ಆಯ್ತಾ ಎಂಬಂತೆ ಸಂಜ್ಞೆ ಮಾಡಿದಳು. ಸ್ನಾನ ಆಯ್ತಾ ಎಂಬಂತೆ ಅರ್ಥ ಮಾಡಿಕೊಂಡ ತಲೆ ಅಲ್ಲಾಡಿಸಿದ, ಆಕೆಯ ಎದೆ ಮೇಲಿಂದ ಸೆರಗು ಜಾರಿತು. ಕಣ್ಣು ಕೋರೈಸಿದವು. ಎರಡು ಪುಟ್ಟ ಮೊಲೆಗಳು, ಅವುಗಳ ದರುಶನ ಮಾಡಿಸಲಿರುವೆನೆಂಬಂತೆ ನೋಡಿದಳು. ಕುಬುಸದ ಗುಂಡಿಗೆ ಕೈ ಹಚ್ಚಿದಳು. ಒಂದು ಬಂತು, ಎರಡು ಬಂತು, ಮೂರನೆಯದು ಎಷ್ಟು ಪ್ರಯತ್ನಿಸಿದರೂ ಬರಲಿಲ್ಲ. ಬಿಚ್ಚು ಬಾ ಎಂಬಂತೆ ಸಂಜ್ಞೆ ಮಾಡಿದಳು ಅರ್ಧ ಬೆತ್ತಲೆ ಗೊಂಡಿರುವ ಚಿನ್ನದ ಮೊಲೆಗಳ ಅರ್ಧ ಭಾಗ ಸೂರ್ಯನ ಬೆಳ್ಳಿ ಬೆಳಕಿನಲ್ಲಿ ಥಳಥಳ ಹೊಳೆದವು.

ಪಂಚೇಂದ್ರಿಯಗಳು ಬಚ್ಚಲ ಮೋರಿಗೆ ಪುತಪುತನೆ ಉದುರಿದವು. ಅವುಗಳನ್ನು ಬಗೆಯಿಂದ ಆಯ್ದುಕೊಂಡ. ಆಯಾ ಜಾಗದಲ್ಲಿ ಅವುಗಳನ್ನು ಅಂಟಿಸಿಕೊಂಡ, ತಾಯಿ ಕೂಗಿದಳು. ಹೊರಗೆ ಓಡಿದ.

ತಾಯಿಯ ಬೋಳು ತಲೆ ತುರಿಸಿದ. ಆಕೆಯ ಅಪೇಕ್ಷೆಯಂತೆ ತೊಡೆಮೇಲೆ ತಲೆ ಇಟ್ಟು ಮಲಗಿದ, ಆಕೆಯ ಮುದ್ದು ಕೊಟ್ಟ, ಕಷಾಯ ಕೇಳಿದಳು. ಅಡುಗೆ ಮನೆಗೆ ಹೋಗಿ ಮಾಡಿ ತಂದ. ಆಕೆ ಕುಡಿಯುತ್ತಿರುವ…
“ರ್ರೀ ಯಾರಿದ್ದೀರಿ ಒಳಗಡೆ…” ಧ್ವನಿ ಕೇಳಿಸಿತು ಹೊರಗಡೆ. ಕೋಗಿಲೆಯಂಥ ದ್ವನಿ ಹೋಗಿ ನೋಡಿದ.
ಅರೆ : ಪಕ್ಕದ ಮನೆಯ ಅನಸೂಯ, ನಾಗರಹಾವುಗಳಂತೆ ಎರಡು ಜಡೆಗಳು… ಫುಳಫಳ ಹೊಳೆಯುತ್ತಿರುವ ಕಣ್ಣುಗಳು… ಒದ್ದೆಗೊಂಡಿರುವ ದುಪ್ಪನೆ ತಿಟಿಗಳು.

ಆಕೆಯೇ ತಲಬಾಗಿಲು ಪ್ರವೇಶಿಸಿದಳು. ತೂಗು ಮಂಚದ ಮೇಲೆ ಕುಳಿತು ಕೊಂಡಳು. ಗ್ರಾಮರ್ ಪುಸ್ತಕ ತಂದೀನಿ… ಎಂದು ಕೊಟ್ಟಳು… ತನಗೂ ಯಾವುದೋ ಒಂದು ಪುಸ್ತಕ ಪಡೆದುಕೊಂಡಳು. ಹೋಗುವಾಗ ಜಡೆಯ ಚುಂಗಿನಿಂದ ಅವನ ಮುಖಕ್ಕೆ ಸ್ಪರ್ಶಿಸಿದಳು… ಅವನು ನೀರುನೀರಾಗಿಬಿಟ್ಟ.
ಅವನ ತಾಯಿಯ ಜೊತೆ ಸ್ವಲ್ಪ ಮಾತಾಡಿ ಹೊರಡುವಾಗ ಶಾಮನ ಕಡೆ ನೋಡಿ ಕಣ್ಣು ಮಿಟಿಕಿಸುವುದನ್ನು ಮರೆಯಲಿಲ್ಲ…
ಕೋಣೆಯಲ್ಲಿ ಆಕೆ ಕೊಟ್ಟಿದ್ದ ಗ್ರಾಮರ್ ಎನ್ನಲಾದ ಪುಸ್ತಕ ತೆರೆದ. ಒಳಗಡೆ ಒಂದು ಸುಧೀರ್ಘ ಪ್ರಣಯಪತ್ರ…
ಅಕ್ಕರೆಯ ಶಾಮುಗೆ
ಸಕ್ಕರೆಯ ಸಿಹಿ ಮಾತು

ಹೀಗೆ ಆರಂಭಗೊಂದಿತ್ತು. ಜಲಜಾಕ್ಷಿ ಎಂಬ ಶೂರ್ಪನಖಿ ಗ್ರವ್ಂಡಿನಲ್ಲಿ ತನ್ನನ್ನು ರೇಪ್ ಮಾಡಲು ಪ್ರಯಿತ್ನಿಸಿದ್ದರ ಬಗ್ಗೆ; ಅವಳು ಜಾರಿರುವ ಅನೇಕ ಸಂಬಂದಗಳ ಬಗ್ಗೆ; ನಿಷ್ಕಲ್ಮಷವಾಗಿ ಪ್ರೀತಿಸುತ್ತಿರುವ ತನ್ನ ಬಗ್ಗೆ; ಜೊತೆಗೆ ಪ್ರೇಮ ಉಂಟುಮಾಡಿರುವ ಭಾವನೆಗಳು; ಅದರಿಂದ ಊಟ, ನಿದ್ರೆ ದೂರವಾಗಿರುವ ಬಗ್ಗೆ ಮತ್ತು ದೇಹದ ಯಾವ್ಯಾವ ಅಂಗಗಳು ತನಗೆ ಇಷ್ಟವಾಗಿವೆ ಎಂಬ ಬಗ್ಗೆ; ಹಾಗೆಯೇ ಮನಸ್ಸಿನ ಮತ್ತು ವ್ಯಕ್ತಿತ್ವದ ಯಾವ್ಯಾವ ಅಂಶಗಳು ತನಗೆ ಇಷ್ಟವಾಗಿವೆ ಎಂಬ ಬಗ್ಗೆ ವಿವರವಾಗಿ ಬರೆದಿದ್ದಳು ಆ ಭಾವೀ ಮಹಾಸತಿ!

ತನ್ನೇನಾದರೂ ಪ್ರೀತಿಸದಿದ್ದಲ್ಲಿ ತಾನು ಆತ್ಮಹತ್ಯೆಗೆ ಪ್ರಶಸ್ತ ಸ್ಥಳವಾದ ಕನ್ನೀರವ್ವನ ಬಾವಿಗೆ ಹುಣ್ಣಿಮೆಯ ರಾತ್ರಿ ಬೀಳುವುದಾಗಿ ಮತ್ತು ದೆವ್ವವಾಗಿಬಂದು ಹಿಡಿದುಕೊಳ್ಳುವುದಾಗಿಯೂ ಬರೆದು ಪತ್ರದ ಉಪಸಂಹಾರ ಮಾಡಿದ್ದಳು
ಅದನ್ನು ಓದಿದೊಡನೆ ಭಯವಾಯಿತು. ಯಾರ ಕೈಗೇನಾದರೂ ಸಿಕ್ಕಿದರೆ? ಪತ್ರವನ್ನು ಚೂರು ಚೂರು ಮಾಡಿದ. ಬಾಯಲ್ಲಿ ಇಟ್ಟು ಜಮಡಿ ನುಂಗಿ ಬಿಟ್ಟ, ತಾಮ್ರದ ತಂಬಿಗೆ ಎತ್ತಿ ಗಟಗಟ ನೀರು ಕುಡಿದ
ಅದು ಗ್ರಾಮರ್ ಪುಸ್ತಕವಾಗಿರಲಿಲ್ಲ… ಕಾದಂಬರಿಯಾಗಿತ್ತು. ಲಗು ಬಗೆಯಿಂದ ಒಂದೆರಡು ಪುಟ ಓದಿದ… ಪತ್ರದಲ್ಲಿ ಆಕೆ ಸೂಚಿಸಿದ ಭಾಗದ ಮೇಲೆ ಕಣ್ಣಾಡಿಸಿದ.

ಇಡೀ ದೆಹ ಧಗಧಗ ಹೊತ್ತಿ‌ಉರಿಯತೊಡಗಿತು.
ಲೈಟುಕಂಭದ ತುದಿಗೆ ಸಾವಿರ ಕ್ಯಾಂಡಲ್ ದೀಪ ದಗ್ಗನೆ ಹೊತ್ತಿಕೊಂಡಿತು
ಗಿಬಕ್ಕನೆ ಕಾದಂಬರಿ ಮುಚ್ಚಿ ಹಾಸಿಗೆ ಕೆಳಗಡೆ ಬಚ್ಚಿಟ್ಟ
ದಾಸವಾಳ ಗಿಡದ ಬುಡಕ್ಕೆ ಮೂತ್ರ ವಿಸರ್ಗಿಸಿ ಬಂದ
ಮತ್ತೆ ಒಂದು ಚೂರು ಓದಿ ದೇಹಕ್ಕೆ ಉತ್ತೇಜನ ಪಡೆಯಬೇಕೆನ್ನಿಸಿತು.

ಹಾಸಿಗೆ ಕೆಳಗೆ ಕೈ ತೂರಿಸಿದ, ಪುಸ್ತಕಕ್ಕೆ ಕೈ ಹಚ್ಚಿದ, ಯಾರೋ ಕೆಮ್ಮಿದಂತೆ ಸದ್ದಾಯಿತು. ತಿರುಗಿ ನೋಡಿದ. ಯಾರೂ ಇಲ್ಲ… ಚಿಲಕ ಹಾಕಿರುವ ಬಾಗಿಲು… ಹಲ್ಲಿಗಳಂಥ ಸರೀಸೃಪಗಳು ಶಾಸ್ತ್ರಿಗಳ ಧ್ವನಿಯನ್ನು ನಕಲು ಮಾಡುವುದುಂಟೇನು?

’ಎಚ್ಚರಿಕೆ ಕಾದಂಬರಿ ಪುಸ್ತಕಗಳನ್ನು ಓದಿ ವಂಶಕ್ಕೆ ಕಳಂಕ ತರದಿರು ಮಗುವೆ?’
ಗತಿಸಿದ ಆಸ್ಥಾನ ವಿದ್ವಾನ್, ಕಾವ್ಯಾಲಂಕಾರ ಭೂಷಣ, ಪಾಣಿನಿಯ ಅಪರಾವತಾರ ಮುಂತಾದ ಬಿರುದಾಂಕಿತ ಶಾಮಾ ಶಾಸ್ತ್ರಿಗಳ ಭಾವ ಚಿತ್ರ ಮಾತಾಡುವುದೆಂದರೇನು?
ಭಯ ಸಂತೋಷ ಏಕಕಾಲಕ್ಕೆ ಉಂಟದವು.
ತುಲಸೀರಾಮಾಯಣ ಓದಲು ಪ್ರಯತ್ನದಲ್ಲಿರುವ ಅಮ್ಮನಿಗೆ ಹೇಳುವುದು ಸರಿಯಲ್ಲ.
ತಾತಗೆ ಹೇಳಿದರೆ ಅವರು ಖಂಡಿತ ಸಂತಸ ಪಡದೆ ಇರಲಾರರು!
ತಾತಾ… ಎಂದು ಕೂಗಿದ…
… ರಿಕ್ಷಾ ದಡಕೂ ದಡಕೂ ಓಡುತ್ತಿದೆ. ಅದರಲ್ಲಿ ಕೂತಿದ್ದ ಪಂಡಿತಪರಮೇಶ್ವರ ಶಾಸ್ತ್ರಿಗಳನ್ನು ದೇವರೇ ಕಾಪಾಡಬೇಕು.

ಅವರ ದೇಹದ ಎಲುಬುಗಳು ಒಂದೊಂದಾಗಿ ಸಡಿಲಗೊಳ್ಳುತ್ತಿವೆ. ಮೈ ಮೇಲಿನ ಬಟ್ಟೆ ಬಹು ಪಾಲು ಹರಿದಿರುವುದು. ಜುಟ್ಟು ಕೆದರಿ ಲೂಜುಲೂಜಾಗಿ ಕುತ್ತಿಗೆಯ ಹಿಂಭಾಗದ ಮೇಲೆ ಇಳಿ ಬಿದ್ದಿದೆ. ಕಿವಿಯಲ್ಲಿನ ಕರ್ಣಕುಂಡಲಗಳು ಬೆವರಿನಲ್ಲಿ ಹದವಾಗಿ ನೆನೆದು ಥಳಥಳ ಹೊಳೆಯುತ್ತಿವೆ. ಚಪ್ಪೆ, ಮೊಣಕಾಲು, ಬೆನ್ನಿನ ಮೇಲೆ ಬಾಸುಂಡೆಗಳು ಬೆಂಕಿಯಾಗಿ ಉರಿಯುತ್ತಿವೆ. ಮಾನಸ ಹಂಸದ ರೆಕ್ಕೆಗಳುದುರಿ ಅಸ್ತವ್ಯಸ್ತಗೊಂದಿರುವುದು.

ಇಷ್ಟೊಂದು ದುರವಸ್ಥೆಯಲ್ಲಿ ಶಾಸ್ತ್ರಿಗಳಿದ್ದುದನ್ನು ಆ ಗ್ರಾಮದ ಯಾರೂ ನೋಡಿರಲಾರರು! ಯಾರನ್ನಾದರೂ ರೇಪ್ ಮಾಡಲು ಸಿಕ್ಕಿ ಹಾಕಿಕೊಂದು ಕಡುಬು ತಿಂದಿರಬಹುದೀ ಶಾಸ್ತ್ರಿಗಳು ಎಂದು ಸುಲಭವಾಗಿ ಯಾರಾದರೂ ಊಹಿಸಿ ಬಿಡಬಹುದಿತ್ತು.

ನಾಗರ ಬೆತ್ತ ಕಾಲ ನಡುವೆ ಆಸರೆಯಾಗಿ ಊರಿ ಅದರ ನೆತ್ತಿಗೆ ಊರಿ ಮ್ಲಾನವಾಗಿರುವ ಅವರ ಮುಖ ಅರಳಿಸಲೆಂದೇ ರಿಕ್ಷ ತುಳಿಯುತ್ತಿರುವ ಈರನ್ನ ಹತ್ತಾರು ಪದಗಳ ಪಲ್ಲವಿ ಭಾಗಗಳನ್ನು ಮಾತ್ರ ಹಾಡಿದ ಅದೂ ಇದೂ ಜೋಕು ಹಾರಿಸಿದ. ಮೇಯರ್ ಮುತ್ತಣ್ಣ ನೋಡ್ದೆ ಸ್ವಾಮಿ ಭಲೇ ಭೇಷೈತೆ ಸ್ವಾಮೀ; ರಾಜ್ಕುಮಾರ್ನ ಜುಟ್ನ ದ್ವಾರಕೀಶು ಕತ್ರಿಸಿ ಮಾರಿ ಬಿಡ್ತಾನೆ ಸ್ವಾಮಿ… ಎಂದೆಂದೇನೋ ಹೇಳತೊಡಗಿದ.

ತಾನು ಆಡಿದ ಮಾತಿಗೆ ಶಾಸ್ತ್ರಿಗಳಿಂದ ಒಂದೂ ಪ್ರತಿಕ್ರಿಯೆ ಇಲ್ಲವಲ್ಲ?
ಈ ಪಂಡಿತಪ್ಪನೋರು ಪೋಲೀಸ್ ಠೇಷಣ್ಗೆ ಹೊಗಿದ್ದಾದ್ರೂ ಯಾಕೆ?
ಇದರಾಗೆಂಥದೋ ಗುಟ್ಟುಂತೆಂದು ಅಂದುಕೊಡ ಈರಣ್ಣ.

ಸತ್ಯವಂತರಿಗಿದು ಕಾಲವಲ್ಲ… ಗೊಣಗಿದ…
ಅವನಿಗೂ ದುಃಖ ಆವರಿಸಿತು. ಗಂಟಲಲ್ಲಿ ಶಬ್ದಗಳು ಶಾಬ್ದಿಕ ರೂಪ ಪಡೆಯಲಿಲ್ಲ, ನಿಟ್ಟುಸಿರು ಬಿಟ್ಟ. ಸತ್ವ ಅಡಗಿದ ಕಾಲುಗಳಿಂದ ರಿಕ್ಷ ತುಳಿದೂ ತುಳಿದೂ ಮನೆಯಮುಂದೆ ನಿಲ್ಲಿಸಲು ಒಳಗಿಂದ ಶಾಮಣ್ಣ ಓಡಿ ಬಂದ ತಾತಾ ಅಂದ. ಪ್ರತಿಕ್ರಿಯೆ ಇಲ್ಲ.

ಎಲ್ಲರೂ ಶಾಸ್ತ್ರಿಗಳನ್ನು ರಿಕ್ಷಾದಿಂದ ಕೆಳಕ್ಕಿಳಿಸಿದರು.
ಶಾಸ್ತ್ರಿಗಳು ಕೊಡಲು ಬಂದ ಹಣವನ್ನು ಸ್ವೀಕರಿಸಲು ರಿಕ್ಷಾದ ಈರಣ್ಣ ನಿರಾಕರಿಸಿದ.

ಈ ಘಟನೆ ನಡೆದ ಮೇಲೆ ಶಾಸ್ತ್ರಿಗಳು ದಿನದ ಬಹುಪಾಲನ್ನು ಮನೆಯಲ್ಲಿಯೇ ಕಳೆಯತೊಡಗಿದರು. ಅವರಿಗಾಗದವರು (ತುಂಬ ಕಡಿಮೆ) ಅವರನ್ನು ತಮಾಷೆ ಮಾಡುತ್ತಿದ್ದರು.
ಸಾಮುದ್ರಿಕ ಹೇಳೋ ನೆಪದಲ್ಲಿ ಪ್ರಧಾನಿ ಇಂದಿರಾ ಗಾಂಧಿಯ ಹಸ್ತ ಮುಟ್ಟಲು ಪ್ರಯತ್ನಿಸಿದ್ದು ಸಾಮಾನ್ಯ ಅಪರಾಧವೇನು?
ಗಂಡನ ಕಳಕೊಂದು ಮನೆಯಲ್ಲಿ ಮೂಲೆಹಿಡಿದಿರೋ ಸೊಸೆಯ ಹಸ್ತ ಪರಾಂಬರಿಸಬಹುದಾಗಿತ್ತಲ್ಲ!
ಹುಣುಸೆ ಮರಕ್ಕೂ ವಯಸ್ಸಾಗದೇನು!
ವಯಸ್ಸಾಗೋದಂದ್ರೆ ಹಣ್ಣಿನ ಥರ ಮಾಗೋದು ಕಣಪ್ಪಾ!…
ಇಷ್ಟೊಂದು ಅವಮಾನವಾದ ಮೇಲೂ ಬದುಕೋದೆಂದರೆ ಇವರೊಬ್ಬರೇ!
ಇಂಥ ಮಾತುಗಳನ್ನು ಕೇಳುವುದಾದರೂ ಯಾಕೆ ಅಂಥ ಶಾಸ್ತ್ರಿಗಳು ಸಾಮಾನ್ಯವಾಗಿ ಹೊರಗಡೆ ಹೋಗುತ್ತಿರಲ್ಲಿಲ್ಲ. ತಾವಾಯಿತು ತಮ್ಮ ಕುಟುಂಬದ ಸಮಸ್ಯೆಗಳಾಯಿತು. ತಮ್ಮ ಮೊಮ್ಮಗ ಶಾಮನ ಸಂಸೃತಾಭ್ಯಾಸ ಅಲ್ಲದೆ ಸಂಸೃತದಲ್ಲಿ ಒಂದು ಕಾವ್ಯ ಬರೆಯತೊಡಗಿದರು.
ಸೂರ್ಯ ಎಲ್ಲೂ ಹೊಗದಿರಬಹುದು.
ಆದರೆ ಗ್ರಹಗಳು ಅವನ ಸುತ್ತದೆ ಇರುತ್ತದೆಯೇ?

ಅವರು ಮನೆಯಲ್ಲಿರುತ್ತಿದುದೇ ತಮ್ಮ ಪುಣ್ಯ ವಿಶೇಷವೆಂದು ಕೆಲವರು ಭಾವಿಸದೆ ಇರಲ್ಲಿಲ್ಲ. ಪಶು ಸಮಸ್ಯೆ, ಮನೆ ಮಂದಿಯ ಸಮಸ್ಯೆ, ವ್ಯವಹಾರ ಸಮಸ್ಯೆ, ದಾಯಾದಿ ಸಮಸ್ಯೆ ಇಂಥ ಛಪ್ಪನ್ನಾರು ಸಮಸ್ಯೆಗಳಿಗೆ ಜನ ಶಾಸ್ತ್ರಿಗಳಿಂದ ಪರಿಹಾರ ಕಂಡುಕೊಳ್ಳತೊಡಗಿದರು. ಅವರಾಡುತ್ತಿದ್ದ ಮಾತನ್ನು ಗೌರವಿಸುತ್ತಿದ್ದರು. ಶ್ರದ್ದೆಯಿಂದ ನಡೆಯುತ್ತಿದ್ದರು.

ಪಕ್ಕದ ಮನೆಯ ಅನಸೂಯ ಅಂತ ಹೆಳಿದೆನಲ್ಲ ಅಕೆಯ ಅಪ್ಪ ಪುಟ್ಟ ಬೆಟ್ಟದಂತೆ ಇದ್ದ. ಈ ದೇಶದಲ್ಲಿ ಪ್ರಜಾಪ್ರಭುತ್ವ ಅವತರಿಸಿ ಮೊದಲನೆ ಚುನಾವಣೆಯಲ್ಲಿ ಮತ ಚಲಾಯಿಸಿದೊಡನೆ ನಾಪತ್ತೆಯಾಗಿ ಬಿಟ್ಟ, ಮೊದಲು ಆತನಿಗೆ ಕೆಲವು ಸಾಧುಗಳ ನಿಕಟ ಪರಿಚಯವಿತ್ತು. ದಿನಾ ರಾತ್ರಿ ಗಾಢವಾಗಿ ಚರ್ಚಿಸುತ್ತಿದ್ದ. ಅಮಾವಾಸ್ಯೆ ದಿನ ಬೆತ್ತಲಾಗಿ ಸುಡುಗಾಡಿನಲ್ಲಿ ಇಡೀ ರಾತ್ರಿ ಕಳೆಯುತ್ತಿದ್ದ. ಇಂಥಾತ ದೇಶಕ್ಕೆ ಸ್ವಾತಂತ್ರ ಬರುವುದನ್ನೇ ಕಾಯುತ್ತಿದ್ದ. ಮೊದಲ ಚುನಾವಣೆ ನಡೆಯುವುದನ್ನೇ ಕಾಯುತ್ತಿದ್ದ. ಮತ ಚಲಾಯಿಸಿದೊಡನೆ ಕೆಲವು ಸಾಧುಗಳನ್ನು ಬೆಟ್ಟಿ ಮಾಡಿದ್ದನ್ನು ಕೆಲವರು ನೋಡಿದರು. ನೋಡಿದವರೆಲ್ಲಾ ಮನೆಗೆ ಬಂದು ಹೇಳಿದರು. ಆತನ ಹೆಂಡತಿ ರುಕ್ಮಿಣಿ

ಮೊದಲೇ ತುಂಬು ಗರ್ಭಿಣಿ. ಹೊಟ್ಟೆ ಮತ್ತು ಎದೆಯ ಭಾಗವನ್ನು ಕೈಯಿಂದ ಬಡಿದುಕೊಳ್ಳುತ್ತ ವಾರ ದಿನಮಾನ ಅತ್ತಳು, ಕೂಲಿ ನಾಲಿ ಮಾಡಿ ಬದುಕನ್ನು ದೂಡಿದಳು. ಕೊನೆಗೊಂದು ದಿನ… ಅಂದರೆ ಹುಣ್ಣಿಮೆ ರಾತ್ರಿ ಎಣ್ಣೆಗೆಂಪು ಬಣ್ಣದ ಹೆಣ್ಣು ಕೂಸಿಗೆ ಜನ್ಮ ನೀಡಿದಳು. ಆಕೆ ತಾನು ತುಂಬ ಪ್ರೀತಿಸುತ್ತಿದ್ದ ಆತ್ರೇಯ ಮಹರ್ಷಿಯ ಪತ್ನಿ ಅನಸೂಯಳ ಹೆಸರಿಟ್ಟಳು. ಆ ಮಗು ದಿನಕ್ಕೊಂದು ಚಂದದಲ್ಲಿ ಬೆಳೆಯತೊಡಗಿತು. ಬೆಳೆದೂ ಬೆಳೆದೂ ಹತ್ತು ತುಂಬಿ ಹನ್ನೊಂದಕ್ಕೆ ಬಿದ್ದಾಗ ಋತುಮತಿಯಾಯಿತು. ಋತುಮತಿಯಾದ ವರ್ಷವೇ ಆಕೆ ಅಪ್ಪ ರುದ್ರಪ್ಪ ರುದ್ರನಾಯಕ ಎಂಬ ಹೆಸರು ಧರಿಸಿ ಪ್ರತ್ಯಕ್ಷನಾದ. ಗೇಣುವರೆ ಗಡ್ಡ, ಭೂಮಧ್ಯೆ ಕುಂಕುಮ ರೇಖೆ, ಎದೆ ತುಂಬ ಐವತ್ತಾರು ನಮೂನೆಯ ಸರಗಳಿತ್ಯಾದಿ… ಬೆರಳಿಗೊಂದೊಂದು ತರನ ಉಂಗುರಗಳು… ನೋಡಲಿಕ್ಕೆ ಭಯಾನಕವಿದ್ದ. ಈತನೇ ಗಂಡ ಎಂದು ಗುರುತಿಸಿದಳು. ಮನೆ ತುಂಬಿಸಿಕೊಂಡಳು. ಬಾಳುವೆ ಶುರುವಾಯಿತು. ಆತನ ಮನೆಗೆ ಎಲ್ಲಿಂದಲೋ ಯಾರ್ಯಾರೋ ಬರುತ್ತಿದ್ದರು, ಹೋಗುತ್ತಿದ್ದರು. ಅವರೆಲ್ಲರಿಗೂ ರುದ್ರನಾಯಕನೆಂದರೆ ಭಯ ಮಿಶ್ರಿತ ಗೌರವ… ಓಣಿಯಲ್ಲೊಂದೇ ಅಲ್ಲ… ಇಡೀ ಊರು ತುಂಬ ಆತನ ಬಗ್ಗೆ ನೂರಿಪ್ಪತ್ತಾರು ಕಥೆಗಳು… ಭೂತ ಪ್ರೇತಗಳೆಲ್ಲ ಅವರ ಗುಲಾಮರಂತೆ, ಮಾಟದಿಂದ ಮಾತು ಕಳೆವನಂತೆ, ಮಂತ್ರದಿಂದ ಸೊಂಟ ಮುರಿವನಂತೆ, ಸ್ತ್ರೀವಶೀಕರಣ ಮಾಡುವನಂತೆ, ಕೂತಲ್ಲಿಂದ ಗಾವುದ ದೂರದಲ್ಲಿರುವನ ಪ್ರಾಣ ಕಳೆವನಂತೆ, ಹೆಣಗಳೊಂದಿಗೆ ಮಾತಾಡುವನಂತೆ. ಹೀಗೆ ಯಾವ ಯಾವ ಸುದ್ದಿಗಳೋ ಹಬ್ಬಿದವು. ಎಲ್ಲರೂ ತಿಳಿದಿರುವಂತೆ ರುದ್ರನಾಯಕ ತಾನೂ ಸುಖವಾಗಿದ್ದಾನೆ; ಹೆಂಡತಿ ರುಕ್ಮಿಣಿಯನ್ನು ಮತ್ತು ಪ್ರೀತಿಯ ಏಕಮಾತ್ರ ಪುತ್ರಿ ಅನಸೂಯಳನ್ನು ಸುಖವಾಗಿಟ್ಟಿದ್ದಾನೆ.

ಬಂಗಾರ ತಯಾರು ಮಾಡಬಲ್ಲವರು ಸುಖವಾಗಿರದೇನು ಮಾಡುತ್ತಾರೆ.
ಬಂಗಾರ ತಯಾರಿಸುವುದು ನಿಜವೋ ಸುಳ್ಳೋ! ಆದರೆ ಆತ ಕೆಲವರೊಂದಿಗೆ ದೂರದ ನಗರಕ್ಹೋಗಿ ನಾಲ್ಕರಿಂದ ಏಳು ದಿನಗಳವರೆಗೆ ಅಲ್ಲಿದ್ದು ಬರುತ್ತಾನೆ.
ಯಂತ್ರ; ಜೋತಿಷ್ಯ ವಿಷಯದಲ್ಲಿ ತನ್ನ ಪಕ್ಕದ ಮನೆ ಯ ಯಕಶ್ಚಿತ್ ಬ್ರಾಹ್ಮನನೋರ್ವ ಜನಪ್ರಿಯನಾಗುವುದೆಂದರೇನು? ರುದ್ರನಾಯಕ ಕೆಲವರ ಬಳಿ ತನ್ನ ಅಸಮಾಧಾನ ಪ್ರಕಟಿಸಿದ್ದುಂಟು.

“ಕ್ಷುದ್ರ ವಿದ್ಯೆ ಯಾಕೆ ಬೇಕು ಈ ಬ್ರಹ್ಮಣರಿಗೇಂತ?” ಎಂದು ಹಲವರ ಬಳಿ ಆತ ಗೊಣಗಾದಿದ್ದೂ ಉಂಟು.
ಗೊಣಗಿಸಿಕೊಂಡವರು ಶಾಸ್ತ್ರಿಗಳಿಗೆ ಸುದ್ದಿ ಮುಟ್ಟಿಸಿದರು.
ಅವರಿಗೆ ನಗು ಬಂತು.

ರುದ್ರನಾಯಕನ ಹೆಸರು ಕೇಳಿದ್ದುಂಟು, ಎಂದೂ ನೋಡುವ ಅವಕಾಶ ಸಿಕ್ಕಿರಲಿಲ್ಲ. ಕ್ಷುದ್ರ ಶಕ್ತಿಗಳನ್ನು ಉಪಾಸನೆಯಿಂದ ಎಷ್ಟು ದಿನ ಅಧೀನದಲ್ಲಿಟ್ಟುಕೊಂಡಿರಲು ಸಾಧ್ಯ? ಅದರಿಂದ ಇನ್ನೊಬ್ಬರಿಗೆ ಹಾನಿ ಉಂಟು ಮಾಡಬಹುದೇ ಹೊರತು ಒಳ್ಳೆಯದು ಮಾಡಲಾದೀತೆ? ವೇದೊಪನಿಷತ್ತುಗಳನ್ನೆಲ್ಲ ಅರಗಿಸಿಕೊಂಡಿರೋ ತಮ್ಮನ್ನು; ಗಾಯತ್ರಿಯನ್ನು ನಾಲಿಗೆಯ ಮೇಲೆ ಪ್ರತಿಷಾಪಿಸಿಕೊಂಡಿರುವ ತಮ್ಮನ್ನು; ಪ್ರಾಣಾಯಾಮದಿಂದ ದೇಹದ ಸಮಸ್ತ ಶಕ್ತಿಯನ್ನು ಸಂವರ್ಧಿಸಿಕೊಂಡಿರುವ ತಮ್ಮನ್ನು ರುದ್ರನಾಯಕನಂಥ ಸಂಸ್ಕಾರ ಹೀನ ಏನು ಮಾಡಲು ಸಾಧ್ಯ?
ಅಲ್ಲಿ ಅವನೂ ಅವರಿವರ ಬಳಿ ಅದೇ ಅಂದು ಕೊಳ್ಳುತ್ತಿದ್ದ…

ಒಂದು ದಿನ ಎರಡು ಘಟಾನುಘಟಗಳು ಇಕ್ಕಟ್ಟಾದ ಓಣಿಯಲ್ಲಿ ಪರಸ್ಪರ ಎದುರಾದರು. ಒಂದೆರಡು ಕ್ಷಣ ದೃಷ್ಟಿ ಯುದ್ದ ಮಾಡಿದರು ಮತ್ತೊಂದೆರಡು ಕ್ಷಣ ತುಟಿಚಲನೆಯ; ಬೆನ್ನು ಸಂಚಲದ ಯುದ್ಧ ಮಾಡಿದರು.
ಆತಗೆ ಈತ ದಾರಿ ಬಿಡಲು ತಯಾರಿರಲಿಲ್ಲ.
ಈತಗೆ ಆತ ದಾರಿ ಬಿಡಲು ಸಿದ್ಧನಿರಲಿಲ್ಲ.

ಕೊನೆಗೆ ಆಕಡೆ ಓಣಿಯವರು ಆಕಡೆ ನಿಂತು, ಈಕಡೆ ಓಣಿಯವರು ಈಕಡೆ ನಿಂತು ಆತನನ್ನು ಈಕಡೆ ಕಳುಹಿಸಿದರು, ಈತನನ್ನು ಆಕಡೆ ಕಳುಹಿಸಿದರು. ದುರ್ದಾನ ತೆಗೆದುಕೊಂಡವರಂತೆ ಅವರವರ ಮನೆ ಸೇರಿಕೊಂದನಂತರವೂ ಅವರು ತೆಪ್ಪಗಿದ್ದಲ್ಲಿ ಶಾಮಾಶಾಸ್ತ್ರಿ ಮತ್ತು ಅನಸುಯರ ನಡುವಿನ ಸೇತುವೆ ತುಕ್ಕು ಹಿಡಿದು ಕುಸಿಯುತ್ತಿರಲಿಲ್ಲ.

ಶಾಸ್ತ್ರಿಗಳು ಮೊಮ್ಮಗನ ಜೊತೆಯಲ್ಲಿ ಸೊಸೆಯನ್ನು ಬೃಂದಾವನಕ್ಕೆ ಕಳಿಸಿಕೊಟ್ಟರು. ರಾಘವೇಂದ್ರಸ್ವಾಮಿಗಳು ಕನಸಿನಲ್ಲಿ ಬಂದು ಏನು ಅಪ್ಪಣೆ ಕೊಡಿಸುವರೋ ತಿಳಿದುಕೊಂಡು ಬನ್ನಿರೆಂದು ಹೇಳುವುದು ಮರೆಯಲಿಲ್ಲ, ಅವರು ಅತ್ತ ಹೋಗುತ್ತಲೇ ಇತ್ತ ಮನೆಯಲ್ಲಿ ಶತ್ರು ನಿರ್ಮೂಲನೆಗೆ ಸಂಬಂಧಿಸಿದಂಥ ಒಂದು ಹೋಮ ಮಾಡಿದರು.

ಮಾರನೆಯ ದಿನ ಮೊಮ್ಮಗ ಸೊಸೆ ತಂತಮ್ಮ ಮುಖಗಳನ್ನು ಸಪ್ಪಗೆ ಮಾಡಿಕೊಂಡು ಬಂದರು. ತಮ್ಮ ಹೋಮದ ಪ್ರಭಾವ ಅವರ ಮೇಲಾಗಿದೆ ಎಂದು ಖಿನ್ನರಾದರು. ಆದರೆ ವಸ್ತುಸ್ಥಿತಿ ಏನೆಂದರೆ ಶ್ರೀಕ್ಷೇತ್ರದಲ್ಲಿ ಮಠದ ಒಂದು ಮೂಲೆಯಲ್ಲಿ ರಾಘವೇಂದ್ರ ಸ್ಮರಣೆ ಮಾಡುತ್ತ ಅಲುಮೇಲು ಮಲಗಿದ್ದು ನಿಜ, ಕತ್ತಲಲ್ಲಿ ಯಾರೋ ಕಾಣಿಸಿಕೊಂಡರು, ನಾವೇ ಸ್ವಾಮಿಗಳು ಎಂದು ಹತ್ತಿರ ಬಂದರು, “ಓ ಪ್ರಭು ದರ್ಶನ ನೀಡಿ ಕೃತಾರ್ಥಳನ್ನಾಗಿ ಮಾಡಿದೆಯಾ” ಎಂದು ಭಕ್ತಿಪರವಶಳಾಗಿ ಕಣ್ಮುಚ್ಚಿಕೊಂದು ಮೈಮರೆತದ್ದು ನಿಜ, ಸ್ವಾಮಿಗಳು ಒಮ್ಮೆಗೆ ಕುಪ್ಪಳಿಸಿ ಆಕೆಯ ಮೈಮೇಲೆರಗಿ ಮೊಲೆ ಹಿಚುಕಿದ್ದೂ ನಿಜ, ಓಹ್ ದೇವರ ಚಿತ್ತ ಅಂತ ಆಕೆ ಕೆಲವು ಕ್ಷಣ ಹಿಚುಗಾಟವನ್ನು ಸಹಿಸಿಕೊಂಡದ್ದು ನಿಜ, ಸೆರೆ ವಾಸನೆ ಮೂಗಿಗಡರಿ ಸ್ವಾಮಿಗಳು ಸೆರೆ ಕುಡಿಯುವುದುಂಟೆ ಎಂದು ತನಗೆ ಪ್ರಶ್ನಿಸಿಕೊಂಡದ್ದು ನಿಜ, ಅರೆ ಅವನ್ಯಾರೋ ಪೊಕರಿ ಇರಬೇಕೆಂದು ಎದೆಗೆ ಕಾಲು ಕೊಟ್ಟು ಒದ್ದು ಲಬೋ ಲಬೋ ಬಾಯಿಬಡಿದುಕೊಂಡಿದ್ದು ನಿಜ, ಅಷ್ಟು ದೂರ ಮಲಗಿದ್ದ ಮಗ ಓಡಿ ಬಂದು ಅವನನ್ನು ಹಿಡಿದದ್ದು ನಿಜ, ಜನರೆಲ್ಲ ಸೇರಿ, ಏನೋ ಬುದ್ಧಿ ಇಲ್ದೆ ಇಂಥ ಕೆಲಸ ಮಾಡಿದ್ದಾನೆ ಕ್ಷಮಿಸಿ… ರಾಯರೇ ನೋಡಿಕೊಳ್ತಾರೆ… ಎಂದು ಬಿಡಿಸಿದ್ದು ನಿಜ, ಅವರು ಲಿಂಬರಾಮ್ ಬಿಟ್ಟ ಬಾಣದಂತೆ ಓಡೀ ಓಡಿ ಕತ್ತಲೆಯಲ್ಲಿ ಮರೆಯಾದದ್ದು ನಿಜ.
ಇಷ್ಟೆಲ್ಲ ನಿಜ ಸಂಗತಿಗಳನ್ನು ಹೋಗಿ ಶಾಸ್ತ್ರಿಗಳಿಗೆ ಹೇಳಲಾದೀತೇನು?…

ಅದೇ ಸೂರ್ಯೋದಯಕ್ಕೆ ರುದ್ರನಾಯಕನಿಗೆ ಮೂತ್ರ ಶಂಕೆಯಾಯಿತು. ಎಲ್ಲಾ ವಾಮಾಚಾರಿಗಳಂತೆ ಆತನೂ ಸಹ ಎಲ್ಲಿ ಬೇಕೆಂದರಲ್ಲಿ ಹೇಗೆ ಬೇಕೆಂದರೆ ಹಾಗೆ ಬೇಕಾಬಿಟ್ಟಿ ಮೂತ್ರವನ್ನಾಗಲೀ; ಮಲವನ್ನಾಗಲೀ ವಿಸರ್ಜಿಸುವುದಿಲ್ಲ, ತಮ್ಮ ದೇಹದ ಯಾವುದೇ ಕೂದಲು ಬೋಳಿಸುವಾಗಲೂ ಅಷ್ಟೇ ಮುತುವರ್ಜಿ, ರು.ನಾಯಕ, ಪ್ರತಿಸಾರಿ ಮೂತ್ರವಿಸರ್ಜಿಸುವ ಮೊದಲು ಎರಡುಗೇಣು ಆಳದ ಕುಣಿ ತೋಡಿ ಅದರಲ್ಲಿ ಮೂತ್ರ ವಿಸರ್ಜಿಸಿ, ತದನಂತರ ಅದನ್ನು ಮುಚ್ಚಿ ಬಿಡುವುದು ವಾಡಿಕೆ. ಮಲ ವಿಸರ್ಗಿಸುವಾಗಲೂ ಅಷ್ಟೆ.
ಅದಕ್ಕೆ ಬೇಕಾಗುವ ಹತಾರಗಳನ್ನು ತೆಗೆದುಕೊಂಡು ಅಗಸರ ಭಾವಿ ಹಿಂದಕ್ಕೆ ಹೋದ.

ಹಾರೆಯಿಂದ ತನ್ನ ಕಾಲನ್ನು ತಾನೆ ಜಜ್ಜಿಕೊಂಡ. ರಕ್ತ ಚಿಲ್ಲೆಂದಿತು. ಛುಪ್ ಅಂತ ಮಂತ್ರಿಸಿ ಬಟ್ಟೆ ಕಟ್ಟಿಕೊಂಡ, ಅದೊಂದು ಓಣಿಯಲಿ ದೊಡ್ಡ ಸುದ್ದಿಯಾಗಿಬಿಟ್ಟಿತು.
ಶಾಸ್ತ್ರಿಗಳು ಕಿಂಡಿಯಲ್ಲಿ ಅವಿತು ಕೂತು ರು.ನಾಯಕ ಕುಂಟುತ್ತ ತಿರುಗಾಡುತಿರುವುದನ್ನು ನೋಡಿ ಸಂತಸಪಟ್ಟರು.

ಇದಕ್ಕಾಗಿ ಶಾಸ್ತ್ರಿಗಳು ಹೋಮ ಮಾಡಿದರೆಂಬ ಸಂಗತಿ ರುದ್ರನಾಯಕನಿಗೆ ಹೇಗೋ ತಿಳಿದುಬಿಟ್ಟಿತು. ಶಾಸ್ತ್ರಿಗಳಿಗೆ ಸರಿಯಾದ ಪಾಠ ಕಲಿಸಬೇಕೆಂದು ನಿರ್ಧರಿಸಿದ. ಹೆಂಡತಿ ರುಕ್ಮಿಣಿಯನ್ನು ಮತ್ತು ಅನಸೂಯಳನ್ನು ಬಿಕ್ಕಿಮರಡಿ ಜಾತ್ರೆಗೆ ಕಳಿಸುವ ಏರ್ಪಾಡು ಮಾಡಿದ, ಬಿಕ್ಕಿಮರಡಿ ದುರುಗಮ್ಮ ಆತನ ಮನೆದೇವರು. ಆಕೆಯ ಹಾಳುಗುಡಿಯೊಳಗೇ ತಾನು ಹೆಚ್ಚಿನ ಉಪಾಸನೆ ಮಾಡಿರಿವುದು. ಆಕೆಯ ಪಾಳು ಗುಡಿ ಪಕ್ಕ ಎಂದೋ ಒಂದು ಕಾಡು ಇತ್ತು; ಆಕೆಯ ಗುಡಿ ಆಜುಬಾಜು ಒಂದೋ ಒಂದು ಊರು ಇತ್ತು, ಆಕೆಯ ಗುಡಿ ಮಗ್ಗುಲಲ್ಲಿ ಎಂದೋ ಹರಿದಿದ್ದ ಒಂದು ನದಿಯ ಗುರುತಿರುವುದು, ಇಂಥಾ ಅವಶೇಷಗಳ ನಡುವೆ ಗುಡಿ ಮಾತ್ರ ಉಳಿದುಕೊಂಡು ಬಂದಿದೆ. ಅವಶೇಷಗಳು ಪ್ರಣಯಿಗಳಿಗೆ ಆಶ್ರಯ ನೀಡುತ್ತವೆ.
ಜಾತ್ರೆ ಇರುವುದು ಬರುವ ಶುಕ್ರವಾರ,
ಕುಮಾರಿ ಅನಸೂಯಳಿಗೆ ಹೆಚ್ಚು ಸಂತೋಷವಾಯಿತು,

ಕುಪ್ಪಸದೊಳಗೆ ಪ್ರಣಯ ಪತ್ರ ಬರೆದಿಟ್ಟುಕೊಂಡು ’ರೀ ಅದೀರೆನ್ರೀ’ ಅಂತ ಬಾಗಿಲ ಬಳಿ ನಿಂತಳು. ಮನೆಯೊಳಗೆ ಅಲುಮೇಲಮ್ಮ ದೇವರ ಕೋಣೆಯೊಳಗೆ ತುಲಸಿ ರಾಮಾಯಣದ ಎಂಟನೆ ಅಧ್ಯಾಯದಲ್ಲಿ ಮಗ್ನರಾಗಿದ್ದರು, ಶಾಸ್ತ್ರಿಗಳು ಸಬ್‌ಇನ್ಸ್‌ಪೆಕ್ತರ್ ಕರುಣಾಕರನ ಮಗಳ ಕುಂಡಲಿ ಪರಿಶೀಲನೆಗೆಂದು ದಪ್ಪ ಕನ್ನಡಕದೊಳಗೆ ಹೋಗಿದ್ದರು.

ಶಾಮನ ಎದೆ ಡವದವ ಬಡಿದುಕೊಳ್ಳತೊಡಗಿತು. ಬಾಯಿ ಒಣಗಿತು, ತನ್ನ ಕನಸಿನ ಭಾಗ್ಯ ಬಯ್ಸದೆ ಬಂದು ಬಾಗಿಲಲ್ಲಿ ನಿಂತು ಪಿಳಿಪಿಳಿ ಕಣ್ಣು ಬಿಡುತ್ತಿರುವುದು, ಈ ಪುಳಿಚಾರೇಕೆ ಹಿಂಗ್ಮಾಡುತಿದೆ? ಆಕೆಯೇ ಒಳಗಡೆ ಹೋದಳು. ಶಾಸ್ತ್ರಿಯನ್ನು ಮೂಲೆಯ ಕತ್ತಲಿಗೆ ಗಬಕ್ಕನೆ ಎಳೆದುಕೊಂಡಳು.
ಕುಪ್ಪಸದೊಳಗಿದ್ದ ಪ್ರೇಮಕಾವ್ಯವನ್ನು ಅವನ ಕೈಯೊಳಗೆ ತೂರಿಸಿದಳು. ಹರಿಣಿಯಂತೆ ಹೊರ ಓಡಿದಳು.

ಒದ್ದೆಗೊಂಡ, ಕೋಣೆಗೆ ಹೋಗಿ ಕಾವ್ಯ ಓದಿದ, ತಾನೂ ಒಂದು ದಿಕ್ಕಿನಿಂದ ಚಿಕ್ಕಮರಡಿ ಜಾತ್ರೆ ತಲುಪಬೇಕೆಂದು ನಿರ್ಧರಿಸಿದ, ಅದೇನು ತಾನು ನೋದಿರದ ಜಾತ್ರೆ ಏನಲ್ಲ!.
ಆ ದಿನ ಚತುರ್ಯುಗ ದಾಟಿದ ಮೇಲೆ ಬಂತು. ಅದರೊಂದಿಗೆ ನಾಯಿಯೂ ಬಂತು, “ಏನಯ್ಯಾ ಶಾಸ್ತ್ರಿ ಹೊರಟೆಯಾ ಗುಡಲಕ್” ಎಂಬರ್ಥ ಬರುವಂತೆ ಬಾಲ ಅಲ್ಲಾಡಿಸಿ ಕುಂಯ್ ಕುಂಯ್ ಅಂತು.

ಹಚಾ ಹಚಾ ಅಂತ ಎಷ್ಟು ಗದರಿಸಿದರೂ ಅದು ಕೇರ್ ಮಾಡಲಿಲ್ಲ. ಬಾಡಿಗಾರ್ಡು ಕೆಲಸ ಮಾಡ್ತೀನಿ ಕಣಯ್ಯ ಅಂಥ ಹಿಂಬಾಲಿಸಿತು. ಅವನಿಗೋ ನಾಚಿಕೆ; ಜನಜಂಗುಳಿ ನಡುವೆ ಹೋಗಬೇಕೆಂದರೆ. ಜನರು ಬೇವಿನ ಮರದ ಮಗ್ಗಲು ನಡೆಯುತ್ತಿದ್ದರೆ ಇವನಾದರೋ ಹುಣಸೆ ಮರದ ಮಗ್ಗುಲು ನಡೆಯುತ್ತಿದ್ದನು. ಜೊತೆಯಲ್ಲಿ ಬಾಡಿಗಾರ್ಡಿಂಗ್ ಉಂಟು. ಇನ್ಯಾಕೆ ಭಯ?

ಹಾಗು ಹೀಗೂ ಎರಡು ಕಿಲೋಮೀಟರು ನಡೆದು ಬಿಕ್ಕಿಮರಡಿ ತಲುಪಿದ. ಅಲ್ಲಿ ಇಲ್ಲಿ ಹುಡುಕುವ ಕಣ್ಣುಗಳೊಡನೆ ಅಡ್ಡಾಡಿದ, ಮಿಠಾಯಿ ಗುಡಾರದ ಹಿಂದೆ ಯಾರೋ ಕುಂಡಿ ಚಿವುಟಿದಂತಾಯಿತು. ತಿರುಗಿ ನೋಡಿದ, ಅನಸೂಯಾ.
ಅಗೋ ಅಲ್ಲಿಗೆ ಬಾ ಕಾಯ್ತಿತೀನಿ ಎಂದು ಪಿಸಿ ಪಿಸಿ ನುಡಿದಳು. ಚಂಗ್ ಅಂತ ಮರು ಕ್ಷಣದಲ್ಲಿ ಮಾಯವಾಗಿ ಬಿಟ್ಟಳು.
ಅದನ್ನು ಯಾರು ನೋಡಿದರೋ! ಯಾರು ಬಿಟ್ಟರೋ!
ಶಾಮು ಲಗುಬಗೆಯಿಂದ ಹೆಜ್ಜೆ ಹಾಕತೊಡಗಿದ. ಕ್ರಾಪಿನೊಳಗೆ ಎರಡು ಗಂಟುಗಳಿದ್ದ ಜುಟ್ಟು ತಪ್‌ತಪ್ ಅಂತ ತಬಲದ ಶ್ರುತಿ ಸರಿಪಡಿಸುತ್ತಿತ್ತು.
ಜನರಿಂದ ದೂರವಿದ್ದ ಪಾಳು ಮಂಟಪ ಅದು. ಹಿಂದಿನ ದಿನ ಅಲ್ಲಿ ಕೋಳಿ ಕುರಿ ಬಲಿ ಕೊಟ್ಟು ಅಮ್ಮಗೆ ನೇವೇದ್ಯ ಮಾಡಿರುತ್ತಾರೆ.

ಇನ್ನು ಕೆಲವೇ ಕ್ಷಣಗಲ್ಲಿ ತಮ್ಮ ಪ್ರಣಯದ ಕ್ಲೈಮಾಕ್ಸ್ ಆರಂಭವಾಗಲಿದೆ. ಎಲ್ಲಾರೀತಿಯ ಪಟ್ಟುಗಳನ್ನು ಪ್ರತಿ ಹೆಜ್ಜೆಗೆ ಕಲಿಯ ತೊಡಗಿದ. ಬೆಚ್ಚಗಾಗುವುದು ತಣ್ಣಗಾಗುವುದು ನಡೆದೇ ಇತ್ತು. ನಾಯಿ ವೆಟೆನರಿ ದಾಕ್ಟರ್ ಶೈಲಿಯಲ್ಲಿ ಹಿಂಬಾಲಿಸಿತ್ತು.

ಆತ ಕಣ್ಣು ತೆರೆದಿದ್ದರೂ ಮುಚ್ಚಿದಂತೆ ಇದ್ದ… ಕನಸುಗಳುಬೆಚ್ಚಗೆ ಬಿಚ್ಚಿಕೊಳ್ಳ ತೊಡಗಿದ್ದವು. ಯಾರನ್ನೂ ಗುರುತಿಸುವ ಪೈಕಿ ಅವನಿರಲಿಲ್ಲ. ನೂರೆಂಟು ನಮೂನೆಯ ಭಯಗಳು ಹೃದಯ ಸಿಂಹಾಸನವನ್ನಾಲಂಕರಿಸಲು ಧರ್ಮ ಯುದ್ದ ಮಾಡತೊಡಗಿದ್ದವು.

ವಿ.ಡಿ.(ವೆಟರ್ನರಿಡಾಗ್) ಬೊವ್ ಅಂತು. ಹೆಣ್ಣು ಹುಲಿಯೊಂದು ಒಂದೇ ಏಟಿಗೆ ಕುಪ್ಪಳಿಸಿ ಎದುರಿಗೆ ನಿಂತು ’ಹೆಲೋ’ ಅಂತು, ಕಣ್ಣು ಬಿಟ್ಟು ನೋಡುತ್ತಾನೆ. ಕ್ಳೆದ ತಿಂಗಳು ಬಳ್ಳಾರಿಯಲ್ಲಿ ನಡೆದ ಮ್ಯಾರಥಾನ್‌ನಲ್ಲಿ ಚಿನ್ನದ ಪದಕ ಪಡೆದ ಜಲಜಾಕ್ಷಿ
ಆಕೆ ದರುಶನ ಮಾತ್ರದಿಂದ ಶಾಮನ ಹೊಟ್ಟೆ ರುಮ್ ಅಂತು. ಅರೆನುರಿದ ಗೊಬ್ಬರ ಕರುಳುಗಳಲ್ಲಿ ಮ್ಯಾರಥಾನ್ ಶುರು ಮಾಡಿತು.
ಏನೋ ಮಾತಾಡಲು ಹೋದ… ಬ್ಬೆ ಬ್ಬೆ ಅಂದ.

“ಮರ್ಯಾದೆಯಿಂದ… ನಾನು ಹೇಳಿದ ಕಡೆ ಬರ್ತೀಯೋ ಇಲ್ಲಾ ಹೊತ್ಕೊಂಡು ಹೋಯ್ದು ಬಿಡಲೋ… ” ಎಂದು ಆ ಗೊಬ್ಬರದಂಗಡಿ ಹುಡುಗಿ ತೊಡೆಯ ಮಾಂಸಖಂಡಗಳನ್ನು ಹುರಿ ಮಾಡಿದಳು. ಕಣ್ಣುಗಳಿಮ್ದ ಲೇಸರ್ ಕಿರನಗಳನ್ನು ಬಿಟ್ಟಳು.

ಕೈಗೆ ಸಿಕ್ಕರೆ ನಾಶವಾಗುವುದು ಖಚಿತವೆಮ್ದುಕೊಂಡ, ಹೆತ್ತ ಮಾತೃ ದೇವತೆಗಿಂತಲೂ ತನ್ನನ್ನು ತಾನು ಹೆಚ್ಚು ಪ್ರೀತಿಸುವವನಾದ ಅವನು ’ಸ್ಟಾರ್ಟ್’ ಎಂದು ಹೇಳಿದ. ಹುಲಿ ಲದ್ದಿ ವಾಸನೆಗೆ ಹೆದರಿ ಹರಿಣಿ ಓಡುವುದಲ್ಲಾ ಹಾಗೆ ಓಡಲಾರಂಸಿದ. ತಾನು ಅತ್ಯುತ್ತಮ ಓಟಗಾರನೆಂದು ಸಾಬೀತು ಪಡಿಸಲಿಕ್ಕಾಗಿ ಎಂಬಂತೆ ಓಡತೊಡಗಿದ, ಜಾತ್ರೆಯ ಒಂದು ಭಾಗದ ಜನ ಮೂಗಿನ ಮೇಲೆ ಬೆರಳಿಟ್ಟುಕೊಂಡು ನೋಡಿತು.

“ಒಬ್ಬ ಬ್ರಾಹ್ಮಣರ ಹುಡುಗ ಇಷ್ಟು ವೇಗವಾಗಿ ಓಡಬಲ್ಲನೆಂದರೆ ಈ ದೇಶ ಸರ್ವತೋಮುಖ ಅಭಿವೃದ್ದಿ ಸಾಧಿಸಿದಂತೆಯೇ ಸರಿ” ಸುಸಂಸ್ಕೃತನೊಬ್ಬ ಗೊಣಗಿದ, ಅವನು ತಾನು ಓಡುವ ರೀತಿಗೆ ತಾನೇ ಮೆಚ್ಚಿಕೊಂಡ, ತಾನು ಓಡಿದಮ್ತೆ ಅನಸೂಯಳ ತಂದೆ ಓಡಬಲ್ಲನೇನು? ತಾನು ಆತನ ಮಗಳನ್ನು ಪ್ರೀತಿಸುವುದು, ಹಾಳೂ ಮೂಳೂ ಎಲ್ಲಾ ಅವನಿಗೆ ಗೊತ್ತಾಗಿಬಿಟ್ಟರೆ? ಅವನು

ತನ್ನ ಮೇಲೆ ಮಾಟ ಮಂತ್ರ ಮಾಡಿ ಪುರುಷತ್ವ ನಾಶಪಡಿಸಿಬಿಟ್ಟರೆ? ಅಯ್ಯೋ ರುದ್ರನಾಯಕನೇ…
… ಹ್ರಾಂ ಹ್ರೀಂ… ಹ್ರೂಂ… ರುದ್ರನಾಯಕ ಚಕ್ರಬಂಧದ ನಡುವೆ, ತಲೆ ಬುರುಡೆಯ ಮುಂದಿರುವ ಮಣ್ಣಿನಗೊಂಬೆಯ ಕಡೆ ಒದೊಂದು ಜಾತಿಯ ಮುಳ್ಳನ್ನು ಮಂತ್ರಿಸಿ ಒಂದೊಂದು ರೀತಿಯಲ್ಲಿ ಅರ್ಚಿಸುತ್ತಿದ್ದಾನೆ… ತಲೆ ಬುರುಡೆಯ ಸುತ್ತ ಅದನ್ನು ತಿರಿಗುಸುತ್ತಾನೆ, ಎನೇನೋ ಮಂತ್ರಗಳು… ಎನೇನೋ ತಂತ್ರಗಳು…

ಪೂಜೆ ಮುಕ್ತಾಯವಾಯಿತು. ಎರಡು ಹನಿ ರಕ್ತವನ್ನು ಬೊಂಬೆಯ ಮೇಲೆ ಹನಿಸಿದ. “ಎಲವೋ ಕಾಳಿ” ಎಂದು ಘರ್ಜಿಸಿದ. ಅವನು ಆತನ ಶಿಷ್ಯ, ಹೊಸದಾಗಿ ಕೆಲಸ ಕಲಿಯಲು ಸೇರಿಕೊಂಡಿದ್ದಾನೆ. ಗಿರಿಜಾ ಮೀಸೆ ಬಿಟ್ಟು ಜೊರಾಗಿದ್ದಾನೆ.]
ರು.ನಾಯಕ ಶಿಷ್ಯನ ಕೈಗೆ ಗೊಂಬೆ ಕೊಟ್ಟ
ಈ ಶಾಸ್ಟ್ರಿಗಳನ್ನು ಸುಡುಗಾಡಿನಾಗೆ ತಲೆ ಕೆಳಗೆ ಮಾಡಿ ಹೂಳಿ ಬಾ”
ಕಾಳ ಗೊಂಬೆಯೊಡನೆ ಹೊರಟ. ಶಾಸ್ತ್ರಿಗಳ ಪ್ರಾಣ ಪಕ್ಷಿಯೇ ತನ್ನ ಕೈಲಿದೆ ಎಂಬ ಗತ್ತಿನಿಂದ.

ಶಾಸ್ತ್ರಿಗಳು ಅಮ್ದು ರಾತ್ರಿ ಹತ್ತೂವರೆ ಗಂಟೆ ಸುಮಾರಿಗೆ ಅಂಗಳದ ಲಿಂಗಮುದ್ರೆ ಕಲ್ಲಿಗೆ ಎರಡು ಕೈ‌ಊರಿ ಅಂತರಂಗ ವ್ಯಾಪಿಸಿದ್ದ ವಾಯುದೇವರನ್ನು ಹೊರದುಡಲು ಗಟ್ಟಿಯಾಗಿ ತಿಣುಕಿದರು. ಡರ್ರರ್ರರ್ಽಽ ಎಮ್ಬೊಂದು ಭಯಂಕರ ಸವಂಡು ಇಡೀ ಕೇರಿ ಆದ್ಯಂತ ಮಾರ್ಮಲೆಯಿತು.
ಕೇರಿಯ ನಾಗರೀಕರು ಟೇಮಾತು… ಟೇಮಾತು… ಎಂದು… ಮೈಮೆಲೆ ಕವದಿ ಎಳೆದುಕೊಂಡರು.

ಆದರೆ ಪಂಚತೈಲದ ಬೆಳಕಿನಲ್ಲಿ; ಪಂಚಲೋಹದ ದರ್ಪಣದಲ್ಲಿ ತನ್ನ ಮುಖ ನೊಡುತ್ತಿದ್ದ ರುದ್ರನಾಯಕ ಅಮ್ಥೊಂದು ಸವುಂಡಿಗಾಗಿ ಆ ರಾತ್ರೆಯನ್ನು ಮೀಸಲಿಟ್ಟು ಕೂತಿದ್ದ.

ಇನ್ನೊಂದು ಸ್ವಲ್ಪ ಹೊತ್ತಿಗೆ ನೀರಿನ ವಾಂತಿ, ಅದಾದ ಸ್ವಲ್ಪ ಹೊತ್ತಿಗೆ ರಕ್ತ ಮಿಶ್ರಿತ ಗಂಜಿ ವಾಂತಿ… ಅದಾದ ಸ್ವಲ್ಪ ಹೊತ್ತಿಗೆ ರಕ್ತ ಮತ್ತು ಕಣ್ಣಿ ಕಣ್ಣಿ ಮಾಂಸದ ವಾಂತಿ.
ಸೂರ್ಯೊದಯದ ಹೊತ್ತಿಗೆ ಶಾಸ್ತ್ರಿಗಳ ಶವ ಸಂಸ್ಕಾರದ ಪೂರ್ವ ಸಿದ್ಧತೆ.
“ಲೋ ಕಾಳ ಕಟ್ಟಿಗೆ ಎಣ್ಣೆ ಎಲ್ಲಾ ಜೋಡಿಸಿಕೊಳ್ಳೋಕೆ ಹೇಳಿ ಬಾರ್ಲೇ” ಎಂದು ಗಲ್ಲಿ ಮೀಸೆಯ ಮೇಲೆ ಮೂಸೂಂಬೆ ಹಣ್ಣನ್ನು ಕೂಡ್ರಿಸಿಕೊಂದು ಗಹಗಹಿಸಿ ನಗಾಡಿದ.
ಶುಕ್ರೋದಯಕ್ಕೂ ಮುಂಚೆ ಎದ್ದ… ಶಾಸ್ತ್ರಿಗಳು ಮೃತರಾಗಿರಬಹುದೆಂದು ಭಾವಿಸಿದ. ಅವರು ಎಂದಿಗಿಂತ ಆರೋಗ್ಯದಿಂದಿರುವ ಸಂಗತಿ ಸೂರ್ಯೋದಯದ ನಂತರ ತಿಳಿಯಿತು.

ಏಚಲು ಬರಲಿನಿಂತ ಸುಲಭವಾಗಿ ಕೈಗೆ ಸಿಕ್ಕ ಕಾಳನನ್ನು ಥಳಿಸಲಾರಮ್ಸಿದ. ಅವನೂ ಮನುಷ್ಯ. ಅವನಿಗು ಸಿಟ್ಟು ಬಂತು.
“ನೀನಿ ಗುರೂ ಅಲ್ಲ… ನಾನು ಶಿಷ್ಯನು ಅಲ್ಲ…” ಎಂದು ಸೋಡಾ ಚೀಟಿಕೊಟ್ಟು ಕಾಳ ಸೀದ ಶಾಸ್ತ್ರಿಗಳ ಬಳಿಬಂದ, ಶಾಸ್ತ್ರಿಗಳಿಗೆ ಎಲ್ಲ ವಿವರಿಸಿ ಹೇಳಿ ಹೋಗಿಬಿಟ್ಟ.

ಈ ಘಟನೆಯಿಂದ ಅವರಿಬ್ಬರ ನಡುವೆ ಜಿದ್ದು ಬಲಗೊಂಡಿತು.
ಶಾಸ್ತ್ರಿಗಳು ತಮ್ಮ ಸಾತ್ವಿಕ ಸಿಟ್ಟಿನೆದುರು ಅವನ ತಾಮಸ ಸಿಟ್ಟಿನ ಆಟ ನಡೆಯೋದಿಲ್ಲ ಎಂದು ಗುಡುಗುಡಿಸಿದರೆ

ರುದ್ರನಾಯಕನು ತನ್ನ ತಾಮಸ ಸಿಟ್ಟಿನೆದುರು ಶಾಸ್ತ್ರಿಯ ಸಾತ್ವಿಕ ಸಿಟ್ಟು ಇಂಗು ತಿಂದ ಮಂಗ ಎಂದು ಅಪಹಾಸ್ಯ ಮಾಡಿದನು.
ಶಾಸ್ತ್ರಿಗಳ ಗಿರಾಕಿಗಳು ಶಾಸ್ತ್ರಿಗಳವೆ, ರುದ್ರನಾಯಕನ ಗಿರಾಕಿಗಳು ರುದ್ರನಾಯಕನವೆ, ಯಾಕೆ ಈ ಇಬ್ಬರು ಘಟನುಘಟಿಗಳ ನಡುವೆ ತಿಕ್ಕಾಟ – ಬೆಲ್ಲದ ಶೀನಪ್ಪನಂಥವರು ಅವರ ನಡುವೆ ಬಿಗುವನ್ನು ತಿಳಿಗೊಳಿಸಲು ಪ್ರಯತ್ನಿಸಿದ್ದುಂಟು.
ಆದರೆ ಆ ಟೈಟಾನ್‌ಗಳು ಅಷ್ಟಕ್ಕೆ ತೆಪ್ಪಗಾಗಬೇಕಲ್ಲ, ಒಂದು ದಿನ ರುಕ್ಮಿಣಿ ಮಾಳಿಗೆ ಮೇಲಿಂದ ಒಂದು ಮೆಣಸಿನಕಾಯಿ ತುಂಡು ತಂದು ಗಂಡನಿಗೆ ಕೊಟ್ಟಳು. ಅದನ್ನು ಶಾಸ್ತ್ರಿಯೇ ಮಂತ್ರಿಸಿ ಎಸೆದಿರಬೇಕೆಂದೂಹಿಸಿದ ಆತನು ನಿಂಬೆಹಣ್ಣನ್ನು ಮಂತ್ರಿಸಿ ಶಾಸ್ತ್ರಿಗಳ ಮಾಳಿಗೆ ಮೇಲೆ ಎಸೆದನು. ಹೀಗೆ ಆತ ಒಂದು ಎಸೆಯುವುದು, ಈತ ಒಂದು ಎಸೆಯುವುದು.
ಕ್ರಮೇಣ ಸಣ್ಣ ಸಣ್ಣ ಜಗಳ ಆಡತೊಡಗಿದರು. ರಾಜಕೀಯವಾಗಿಯೂ ಅವರ ಜಗಳ ಮಹತ್ವ ಪಡೆದುಕೊಂಡಿತು. ಇಂಡಿಕೇಟ್ ಕಾಂಗ್ರೆಸ್‌ನ ಇಂದಿರಾ ಗಾಂಧಿಗೆ ಹಸ್ತ ಹಸ್ತ ಸಾಮುದ್ರಿಕ ಹೇಳಲೆಂದು ಹೋಗಿಯಲ್ಲವೇ ತಾವು ಹೀನಾಯವಾಗಿ ಅವಮಾನಗೊಂಡಿದ್ದು, ಎಂಬ ಕಾರಣಕ್ಕಾಗಿ ಶಾಸ್ತ್ರಿಗಳು ಸಿಂಡಿಕೇಟ್ ಕಾಂಗ್ರೆಸ್ ಪರವಾಗಿ ಗ್ರಹತಾರೆ ಎಣಿಸುತ್ತಿದ್ದರು. ನಿಜಲಿಂಗಪ್ಪನವರನ್ನು ಬೆಟ್ಟಿಯಾಗಿ ಬಂದಿದ್ದರು ಕೂಡ.

ಶಾಸ್ತ್ರಿಗಳ ಕಾರಣಕ್ಕಾಗಿ ರುದ್ರನಾಯಕ ಇಂಡಿಕೇಟ್ ಕಾಂಗ್ರೆಸ್ ಪರ ನಿಲುವು ತಳೆದಿರಲಿಲ್ಲ. ಕೆಲವು ವರ್ಷ ಅವನು ’ಲಾ ಪತಾ’ ಆಗಿದ್ದನಲ್ಲ… ಆಗ ಅವನು ಹೃಷೀಕೇಶದಲ್ಲಿ ’ಭಂ ಭೂಂ’ ಎಂಬ ಶಾಕ್ತೇಯರ ಬಳಿ ಶಿಷ್ಯವೃತ್ತಿ ಮಾಡಿಕೊಂಡಿದ್ದನು. ಅವರು ಭೇತಾಳವನ್ನು ನಿಲುವಂಗಿ ಜೋಬಿನೊಳಗೆ ಇಟ್ಟುಕೊಂಡಿದ್ದಂಥವರು. ರುದ್ರನು ಮಾಡುತ್ತಿದ್ದ ಸೇವೆಯಿಂದ ಅವರು ಸಂಪ್ರೀತರಾದರು. ಶಿಷ್ಯನಿಗೆ ಏನಾದರೂ ಕೊಡದೆ ಇರಲಾದೀತೆ? ಅದೇ ಕೆಲವು ದಿನಗಳ ಹಿಂದೆ ದೆಹಲಿ ಮತ್ತು ಕುರುಕ್ಷೇತ್ರದ ನಡುವೆ ಪ್ರಯಾಣಿಕರಿದ್ದ ಒಂದು ರೈಲು ಒಂದು ಘೋರ ಅಪಘಾತಕ್ಕೀಡಾಯಿತು. ಅದರಲ್ಲಿ ಅಸುನೀಗಿದ ಅರವತ್ತು ಮಂದಿ ಪೈಕಿ ಅರವತ್ತು ಮಂದಿಯೂ ಅಸು ನೀಗಿದರು. ಆ ದೆವ್ವಗಳ ಪೈಕಿ ಕೆಲವು ಸತ್ತುದರಿಂದ ಹೇಗೋ ಖರ್ಚುಳಿಯಿತೆಂದುಕೊಂಡು ಹರಿದ್ವಾರ ನೋಡಿಕೊಂಡು ಹೃಷೀಕೇಶಕ್ಕೆ ಬಂದವು. ಅವುಗಳ ಪೈಕಿ ಎರಡು ದೆವ್ವಗಳು ಸಾಮಾನ್ಯದವಲ್ಲ. ಇಂದರಾಗಾಂಧಿಯ ಆಪ್ತೇಷ್ಟರಾದ ಛೋಪ್ರಾರ ಮಗ ಮತ್ತು ಮೆಹರಾರ ಮಗಳು, ಕಳೆದ ತಿಂಗಳಷ್ಟೇ ಹಂದರಕ್ಕೆ ಹತ್ತು ಲಕ್ಷ ಖರ್ಚುಮಾಡಿ ಮಾಡಿದ್ದ ಮದುವೆಗೆ ಇಂದಿರಾಗಾಂಧಿಯ ಸಂಪುಟಕ್ಕೆ ಸಂಪುಟವೇ ಹಾಜರಿತ್ತು. ಕೈಲಾಷ್ ಛೋಪ್ರಾ ಅಲ್ಕಾ ಮೆಹ್ರಾ ಹನಿಮೂನಿಗೆ ಹೊರಟು ಪ್ರಾಣ ಕಳೆದುಕೊಂಡಿದ್ದರು. ಅಪಘಾತದ ನಂತರವೂ ಛೋಪ್ರಾದಂಪತಿಗಳು ತೀರ್ಥಯಾತ್ರೆ ಮುಂದುವರಿಸಿ ಛೋಪ್ರಾವಂಶದವರ ದೈವಭಕ್ತಿಯನ್ನು ಎತ್ತಿಹಿಡಿದವು. ಅವೆರಡು ಸ್ವಾಮಿ ರಾಮರ ವೀರಭದ್ರಾಶ್ರಮ ನೋಡಿಕೊಂಡು ಭಂ ಭೂಂ ಆಶ್ರಮ ಪ್ರವೇಶಿಸಿ ಕಷ್ಟಕ್ಕೆ ಸಿಲುಕೊಂಡು ಬಿಟ್ಟಿದ್ದವು.
ಭಂ ಭೂಂ ಸ್ವಾಮಿಗಳು ತಮ್ಮ ಕ್ಷುದ್ರ ದೃಷ್ಟಿಯಿಂದ ನೋಡಿಬಿಟ್ಟರು. ಅವೆರಡನ್ನು ಬಂಧಿಸಿ ಬಾಟಲಿಯೊಳಗೆ ಹಾಕಿ ಬಿರುಡೆ ಹಾಕಿಬಿಟ್ಟಿದ್ದರು.

ಶಿಷ್ಯನ ಶಿಷ್ಯವೃತ್ತಿಯಿಂದ ಸಂಪ್ರೀತಗೊಂಡ ಅವರು ಆ ಬಾಟಲಿಯನ್ನು ರುದ್ರನ ಕೈಗೆ ಕೊಡುತ್ತ “ಇದು ಪರಮಾತ್ಮನ ಆತ್ಮಲಿಂಗವಿದ್ದಂತೆ. ಇದರೊಳಗೆ ಹೊಸದಾಗಿ ಮದುವೆಯಾಗಿರುವ ಪ್ರತಿಷ್ಟಿತ

ದಂಪತಿಗಳ ಆತ್ಮಗಳಿವೆ. ಉಪಯೋಗಿಸಿಕೋ” ಎಂದು ಹೇಳಿದರು.
ಯಾವ ಕಾರಣಕ್ಕೂ ನೆಲದ ಮೇಲೆ ಇಡಕೂಡದೆಂದು ಎಚ್ಚರಿಕೆ ನೀಡಿದರು. ವಾಪಸು ಮರಳುವಾಗ ರುದ್ರಗೆ ನಿದ್ದೆ ಬಂದು ಬಿಟ್ಟಿತು. ಅವನ ಕಂಕುಳಲ್ಲಿದ್ದ ಬಾಟಳಿ ಉರುಳಿ ಒಬ್ಬ ಮುದುಕನ ಬಳಿ ಹೋಯಿತು. ಆತ ಇದೇನು ಅಂತ ಬಿರುಡೆ ತೆಗೆದು ಬಿಟ್ಟ. ಅದರೊಳಗಿದ್ದ ಅಲ್ಕಾಮೆಹ್ರಾ ಮುದುಕನನ್ನು ಹಿಡಿದುಕೊಂಡು ಬಿಟ್ಟರೆ, ಕೈಲಾಷ್ ಛೋಪ್ರಾ ಮುದುಕಿಯನ್ನು ಹಿಡಿದುಕೊಂಡು ಬಿಟ್ಟಿತು. ಇದ್ದಕ್ಕಿಂತೆ ಮುದುಕ ತರುಣಿಥರ ಮಾತಾಡಲಾರಂಬಿಸಿದರೆ ಮುದುಕಿ ತರುಣನ ಥರ ’ಅರೆ ಮೇರ ಜಾನ್, ಮೇರ ದಿಲ್‌ರುಬಾ’ ಎಂದು ಮಾತಾಡ ತೊಡಗಿತು. ಆ ಮುದುಕಿ ಡಾರ್ಲಿಂಗ್ ಡಾರ್ಲಿಂಗ್ ಅಂತ ಮುದುಕನನ್ನೂ, ಮುದುಕನು ’ಕೈಲೂ ಐ ಲವ್ ಯೂ’ ಎಂದು ಸ್ತ್ರೀಕಂಠದಿಂದ ಮುದುಕಿಯನ್ನೂ ಆಲಿಂಗಿಸಿಕೊಂಡನು.

ಆ ಕಂಪಾಟ್‌ಮೆಂಟೊಳಗೇ ಅವೆರಡು ರೊಮಾನ್ಸಿಗಿಳಿದುಬಿಟ್ಟವು. ಪ್ರಯಾಣಿಕರೆಲ್ಲ ಮನರಂಜನೆಯೋ ಮನರಂಜನೆ, ಚಪ್ಪಾಳೆ ತಟ್ಟಿ, ಸೀಟಿ ಬಜಾಯಿಸಿ ಆ ಜೋಡಿಯನ್ನು ಉತ್ತೇಜಿಸಿದರು. ಆ ಗಲಾಟೆಗೆ ರುದ್ರನಾಯಕ ಎದ್ದ. ಗಾಬರಿಗೊಂಡ, ಕಂಕುಳಲ್ಲಿ ಬಾಟಲಿ ಇಲ್ಲ.ಅದು ಅಷ್ಟು ದೂರ ಉರುಳಿರುವುದೂ, ಅದಕ್ಕೆ ಬಿರಡೆ ಇಲ್ಲದಿರುವುದೂ ಆವೊಳಗಿನ ದೆವ್ವಗಳು ಮುದುಕ ಮುದುಕಿಯರನ್ನು ಹಿಡಿದಿರುವುದೂ ಎಲ್ಲ ಅರ್ಥವಾಯಿತು. ಅವುಗಳನ್ನು ಬಾಟಲಿಯೊಳಗೆ ಬಂಧಿಸುವುದು ಹೇಗೆ?

ರೋಮಾನ್ಸಿನಲ್ಲಿ ಮೈಮರೆತಿದ್ದ ಅವು ಹೇಗೋ ರುದ್ರನಕಡೆ ನೋಡಿ ಬಿಟ್ಟವು. ಅವು ಮೊದಲೆ ಬಾಲ್ಡ್‌ವಿನ್ ಕಾನ್ವೋಟ್ ಸ್ಕೂಲಿನಿಂದ ಬಂದಂಥವುಗಳು, ಅದರೊಂದಿಗೆ ಜಲಂದರ್‌ನ ಸ್ಕೂಲ್ ಆಫ್ ಮಾರ್ಷಲ್ ಆರ್ಟ್‌ನಲ್ಲಿ ತಲಾ ಮೂರು ಮೂರು ವರ್ಷ ಇದ್ದು ಬಂದಂಥವುಗಳು, ತಮ್ಮ ತೀರ್ಥ ಯಾತ್ರೆಯನ್ನು ಹಾಳು ಮಾಡಿದ ರುದ್ರನೆಂಬ ಹುಲುನರನನ್ನು ನೋಡಿ ಅವಕ್ಕೆ ಸಿಟ್ಟು ಬಂತು. ಅವೆರಡು ಇದ್ದಕ್ಕಿಂತೆ ಅವನ ಮೇಲೆ ಆಕ್ರಮಣ ಮಾಡಿದವು. ಅವನ ಅಂಗಿ ಹರಿದುಹಾಕಿಬಿಟ್ಟವು. ಅವನ ಮುಖ, ಮೈ ಪರಚಿಬಿಟ್ಟವು. ಕೈಲಾಷ್ ಎಂಬ ಮುದುಕಿ ಅವನ ಮೂಗಿಗೆ ಬಾಯಿ ಹಾಕಿದರೆ ಅಲ್ಕಾ ಎಂಬ ಮುದುಕ ಅವನ ಪೈಜಾಮದ ಲಾಡಿ ಉಚ್ಚಿ ಬಿಟ್ಟ, ಅಷ್ಟರಲ್ಲಿ ನಾಗಪೂರ್ ಬಂತು. ನಿಲ್ದಾಣದಲ್ಲಿ ರೈಲು ನಿಲ್ಲುತ್ತಲೇ ರುದ್ರ ಅಯ್ಯೋ ಅಯ್ಯೋ ಎಂದರಚುತ್ತ ಓಡತೊಡಗಿದನು.

ಪಾಸ್ಟ್ ಟೆನ್ಸ್ ಈಜ್ ಪಾಸ್ಟ್ ಟೆನ್ಸ್ ಅಲ್ಲವೆ? ಇದರಲ್ಲಿ ಎಷ್ಟು ನಿಜವೋ?
ಭಂ ಭೂಂ ಸಾಧುವಿನ ಪರಿಚಯವನ್ನು ಕಮಲಾಪತಿ ತ್ರಿಪಾಠಿ ತಮ್ಮ ಮುಂದೆ ಬೆಳೆದ ಹುಡುಗಿ ಇಂದಿರಾಗೆ ಮಾಡಿಸಿಕೊಟ್ಟರು. ಆಕೆಗೆ ಗ್ರಹಬಲಗಳ ಆಸರೆ ಪಡೆದು ಇಂದಿರಾ ಎಂದರೆ ಕಾಂಗ್ರೆಸ್, ಕಾಂಗೆಸ್ ಅಂದರೆ ಇಂದಿರಾ ಎಂದು ಹೊಗಳಿಸಿಕೊಳ್ಳುವುದು ಬೇಕಾಗಿತ್ತು. ಭಂ ಭೂಂ ಸಾಧುವನ್ನು ಆಕೆಯೇ ಖುದ್ದು ಸಂದರ್ಶಿಸಿ ಕೆಲ ಪ್ರಶ್ನೆ ಕೇಳಿದಳು. ಉತ್ತರಿಸಿದ. ಪವಾಡ ಮಾಡಿ ತೋರಿಸುವಂತೆ ಕೇಳಿದಳು. ತನ್ನ ಗಡ್ಡದೊಳಗಿಂದ ಉಂಗುರ ಸೃಷ್ಟಿಸಿಕೊಟ್ಟ ತಲೆಗೂದಲೊಳಗಿಂದ ಭಗವದ್ಗೀತೆ ಕಿತ್ತುಕೊಟ್ಟ. ಬರಿಗೈಯಿಂದ ಬೂದಿ ಸುರಿದ
’ತಾಯಿ ತಮಗೆ ತಿರುಪತಿ ವೆಂಕಟೇಶ್ವರನ ಲಡ್ಡಿನ ಮೇಲೆ ತುಂಬ ಭಕ್ತಿ ಎಂದು ಕೇಳಿದ್ದೇವೆ?” ಎಂದು ಗಡ್ಡ ನೀವಿದ.
“ಹೌದು… ಆ ವೆಂಕಟೇಶ್ವರನ ಆಶೀರ್ವಾದದಿಂದಾಗಿಯೇ ನಿಜಲಿಂಗಪ್ಪ, ಸಂಜೀವರೆಡ್ಡಿ

ಮುಂತಾದ ಓಲ್ಡ್ ಈಜ್ ಗೋಲ್ಡ್‌ಗಳೆಲ್ಲ ಅಪ್ಪಟ ಬ್ರಾಸ್‌ಗಳಾಗಿ ಮಾರ್ಪಟ್ಟರು” ಎಂದರು. ಅಲ್ಲೆಯೇ ಇದ್ದ ಆಕೆಯ ಸಹೋದ್ಯೋಗಿಗಳು “ಎಸ್ … ಕರೆಕ್ಟ್ ಮೇಡಂ” ಎಂದು ತಲೆ ಅಲ್ಲಾಡಿಸಿದರು.

ಭಂ ಭೂಂ ಸಾಧು ಎಲ್ಲರ ಕಡೆಗೊಮ್ಮೆ ನೊಡಿ ಮುಗುಳ್ನಕ್ಕ, ನಂತರ ಹ್ರಾಂ ಹ್ರೂಂ ಅಂತ ಮೇಲೆ ನೋಡಿದ, ಬಯಲಲ್ಲಿ ಕೈ ಆಡಿಸಿದ. ಆ ಕ್ಷಣದಲ್ಲಿ ಆತನ ಕೈಯಲ್ಲಿ ಥಳ ಥಳ ಹೊಳೆಯುತ್ತಿದ್ದ ಲಡ್ಡು, ಅಪ್ಪಟ ತುಪ್ಪದಲ್ಲಿ ಮಾಡಿರುವಂಥಾದ್ದು. ಅದರ ಮೇಲೆ ದ್ರಾಕ್ಷಿ, ಗೋಡಂಬಿ, ಬಾದಾಮಿ ಚೂರುಗಳು ಲಕ ಲಕ ಅಂತಿದ್ದವು.

ಪ್ರಧಾನಿ ಇಂದಿರಾ ತಿನ್ನುವರೆಂದು ವೆಂಕಟೇಶ್ವರ ಸ್ಪೆಷಲ್ ಲಡ್ಡು ಕಳುಹಿಸಿದ್ದ. ಬಾಬ್ ಕಟ್ ಪ್ರಿಯದರ್ಶಿನಿ ಭಕ್ತ ಪರವಶಳಾಗಿ ಎದ್ದುನಿಂತುಬಿಟ್ಟರು. ತಾವೇ ಖುದ್ದ ಭಕ್ತಿ ಪೂರ್ವಕವಾಗಿಪ್ರಸಾದ ಸ್ವೀಕರಿಸಿದರು. ತಕ್ಷಣ ಆಕೆಯ ಅಂಗರಕ್ಷಕರು ಎಕ್ಸ್ಕ್ಯೂಜ್ಮಿ ಮೇಡಂ ಅಂತ ಮುನ್ನುಗ್ಗಿ ಬಂದರು. ಅವರು ಆ ಲಡ್ಡನ್ನು ತಲಾ ಒಂಚೂರು ಮುರಿದುಕೊಂಡರು. “ಒಬ್ರು ತಿಂದು ನೋಡ್ರಯ್ಯಾ ಸಾಕು, ನಮ್ಗೂ ನಮ್ಮ ಕೊಲೀಗ್ಸಿಗೂ ಉಳಿಸ್ರಯ್ಯಾ” ಎಂದು ಪ್ರಿಯದರ್ಶಿನಿ ಕೇಳಿಕೊಂಡರು.

ಅಪ್ಪಟ ತುಪ್ಪದಲ್ಲಿ ಮಾಡಿದ್ದು. ಅವರ ಬಿಡುವರೇನು?
“ತಿಂದ ಮೇಲೂ ಬದುಕಿದ್ದೇವೆ, ದೇವರ ದಯೆ… ಮೇಡಮ್ ಇನ್ನು ತಾವು ನಿರ್ಭಯವಾಗಿ ಸ್ವೀಕರಿಸಬಹುದು” ಎಂದು ಕ್ಯಾಪ್ಟನ್ ಸತೀಶ್ ಶರ್ಮ ಹೇಳಿದ.
ಮೇಡಂ ತಾವು ತಿಂದದ್ದು ಕಡಿಮೆ , ಬೇರೆಯವರಿಗೆ ಕೊಟ್ಟದ್ದೆ ಹೆಚ್ಚು.
ಕೊಟ್ಟದ್ದು ತನಗೆ ಅಂಥ ಸರ್ವಜ್ಞ ಹೇಳಿಲ್ಲವೆ?

ಅಂದಿನಿಂದ ಭಂ ಭೂಂ ಸಾಧು ಪ್ರಧಾನಿ ಇಂದಿರಾ ಗಾಂಧಿಯವರ‌ಆಪ್ತ ಕೂಟದ ಪ್ರಮುಖ ಸದಸ್ಯನಾಗಿಬಿಟ್ಟ. ಭಂ ಭೂಂ ಸಾಧು ಅದೆಷ್ಟು ಪವರ್‌ಫುಲೆಂದು ಲೋಕಕ್ಕೆ ಗೊತ್ತಾದದ್ದು ಆತನ ಆಶ್ರಮದ ವಿವರಗಳು ಪತ್ರಿಕೆಯೊಂದರಲ್ಲಿ ಪ್ರಕಟಗೊಂಡಾಗ, ಅದನ್ನು ವರದಿಮಾಡಿದವನು ಪುರುಷತ್ವ ಕಳೆದುಕೊಂಡು ಭಂ ಭೂಂ ಆಶ್ರಮ ಸೇರಿಬಿಟ್ಟ.

ಇದನ್ನು ಓದಿದ ರುದ್ರನಾಯಕ ಭಂ ಭೂಂ ಜೊತೆ ಅಶರೀರವಾಣಿ ಮೂಲಕ ಮಾತಾಡಿದ, ಇದೂಕೂಡ ದೊದ್ದ ಸುದ್ದಿಯೇ. ಜಿಲ್ಲೆಯ ಇಂಡಿಕೇಟ್ ಜನರು ರುದ್ರನಾಯಕನ ಮೂಲಕ ಭಂ ಭೂಂ ಮೂಲಕ ಕಮಲಾಪತಿ ತ್ರಿಪಾಠಿಗೆ; ಕಮಲಾಪತಿ ತ್ರಿಪಾಠಿ ಮೂಲಕ ಇಂದಿರಾಜಿಗೆ ಒಂದು ನಿಚ್ಚಣಿಕೆಯನ್ನು ನಿರ್ಮಿಸಿಕೊಂಡಿರುವರೆಂಬುದು ಸುಳ್ಳು ಸುದ್ದಿಯೇನಲ್ಲ!
ಬಂದವರೆದುರು ರುದ್ರನಾಯಕ ಶಾಸ್ತ್ರಿಗಳ ಮೇಲೆ ಚಾಡಿ ಟೊಂಗು ಟುಸುಕು ಹೇಳಿಕೊಳ್ಳುತ್ತಿದ್ದುದುಂಟು.

’ಚ ಬ್ರಾಹ್ಮಣಂ ನಾವ ಮಾನಿತಂ ವೈ ಭೂಷ್ಣುಃ ಕೃಶಾನಪಿ ಕದಾಚನ’ ಅಂತ ಹೇಳಿದೆಯಪ್ಪಾ, ಹಿ ಪುರುಷಂ ನಿರ್ಧ ಹೇದವ ಮಾನಿತಮ್, ತಸ್ಮಾದೇ ತತ್ತ್ರಯಂ ನಿತ್ಯ ನಾವ ಮನ್ಯೇತ ಬುದ್ಧಿಮಾನ್ ಅಂತ ಹೇಳಿದೆಯಪ್ಪಾ, ಎಷ್ಟೇ ದುರ್ಬಲನಿದ್ದರೂ ಬ್ರಾಹ್ಮಣ ಅವಮಾನಿಸಿದವರನ್ನು ನಾಶ ಮಾಡದೆ ಬಿಡೋದಿಲ್ಲವೆಂದು ಸಾಕ್ಷಾತ್ ಕೌಟಿಲ್ಯನೇ ಹೇಲಿದಾನಪ್ಪಾ!” ಎಂದೊಬ್ಬ ಹಿರಿಯ ಆ ಶಾಸ್ತ್ರಿಗಳ ಗೊಡವೆಗೆ ಹೋಗದಿರುವಂತೆ ರುದ್ರನಾಯಕನಿಗೆ ಬುದ್ಧಿ ಹೇಳಿದನು.
ರುದ್ರನಾಯಕನಿಗೆ ಶಾಸ್ತ್ರಿಗಳು ತುಂಬ ಬಲಿಷ್ಟರಿದ್ದಾರೆಂದೆನಿಸಿತು. ಅವರಿಗಿಂತಲು

ಬಲಿಷ್ಟವಾಗಿರುವುದು ಬ್ರಾಹ್ಮಣ್ಯ. ಬ್ರಾಹ್ಮಣ್ಯಕ್ಕೆ ರೆಕ್ಕೆ ಮೂಡಿಸಿರುವಂಥ ಸಂಸ್ಕೃತ ಬೇರೆ. ಅವರನ್ನೂ, ಅವರ ಬ್ರಾಹ್ಮಣ್ಯವನ್ನೂ, ಅವರ ಸಂಸ್ಕೃತವನ್ನೂ ಸಮಯ ಸಿಕ್ಕಾಗ ವಿಚಾರಿಸಿಕೊಳ್ಳಬೇಕೆಂದು ನಿರ್ಧರಿಸಿದನು.

ಶಾಸ್ತ್ರಿಗಳು ಧ್ವನಿಗೆ ನಿಲುಕದ ರೀತಿಯಲ್ಲಿರುವರೆಂಬುದನ್ನು ತಿಳಿದುಕೊಂಡು ಕೆಮ್ಮುತ್ತಿದ್ದನು. ಶಾಸ್ತ್ರಿಗಳು ಕೇಳಿಸಿಕೊಳ್ಳದವರಂತಿದ್ದಾಗ ಮತ್ತೆ ಜೋರಾಗಿ ಕ್ಯಾಕರಿಸುತ್ತಿದ್ದರು.
ಶಾಸ್ತ್ರಿಗಳಿಗೆ ಇದೆಲ್ಲಾ ತಿಳಿದಿರದೇ ಇರಲಿಲ್ಲ.
ಶಾಸ್ತ್ರಿಗಳು ಇನ್ನೇನು ಮಾಡಲು ಸಾಧ್ಯ? ತಮ್ಮಂಥ ತಾಪಸಿಗಳೆದುರು ರುದ್ರನಂಥ ತಾಮಸಿಗಳು ಸೂರ್ಯನೆದುರಿಗಿಟ್ಟ ಸೊಡರಿನಂತೆ.
ತಮಗೆ ಬಿಡುವಿದ್ದಾಗ ಶಾಸ್ತ್ರಿಗಳು ತಮ್ಮ ಮಾನಸಹಂಸವನ್ನು ತೂರಿಬಿದುತ್ತಿದ್ದರು, ನಿರಾಕಾರ ಸ್ವರೂಪಿಯಾದ ಅದು ನಿಶ್ಶಬ್ದದಿಂದ, ನಿರಾಡಂಬರತೆಯಿಂದ ರುದ್ರನಾಯಕನ ಯಾಂತ್ರಿಕ ಗುಹೆಯನ್ನು ಪ್ರವೇಶಿಸುತ್ತಿತ್ತು. ಕ್ಷುದ್ರ ದೇವತೆಗಳ ಮುಂದೆ ಚೂರು ಚೂರಾದ ಆತ್ಮಗಳ ನಡುವೆ ಧ್ಯಾನಸ್ಥನಾಗಿ ಕೂತಿರುತ್ತಿದ್ದ ಆತನ ದೇಹವನ್ನು ಪ್ರವೇಶಿಸಲು ಪಂಚೇಂದ್ರಿಯಗಳ ಪೈಕಿ ಯಾವುದಾದರೊಂದನ್ನು ಅಥವಾ ನವರಂಧ್ರಗಳ ಪೈಕಿ ಯಾವುದಾದರೊಂದನ್ನು ಆಯ್ದುಕೊಳ್ಳುತ್ತಿತ್ತು, ಒಳಗೆ ಪ್ರವೇಶಿಸಿದ ಅದಕ್ಕೆ ಉಸಿರುಗಟ್ಟಿದ ಅನುಭವವಾಯಿತು.

ಈ ತಾಪಸಿಯ ಮನಸ್ಸು ಒಳಗ್ಡ್ದೆ ಯಾರನ್ನು ಕೇಳಿಬಂತು?
ಅಲ್ಲಿ ಯಾವ ಯಾವುದೋ ಅತಂಕಕಾರಿ ಮೀಟಿಂಗ್ ನಡೆಸಿದ್ದ ತಾಮಸೀಯ ಮನಸ್ಸುಗಳು ಗಲಿಬಿಲಿಗೊಂಡವು. ಅವೆಲ್ಲ ತಲಾ ಒಂದೊಂದು ಆಯುಧ ಹಿಡಿದು ಅದರೆದುರು ನಿಂತು ಮೀಸೆ ತಿರುವಿದವು.

ತಾಪಸಿಯ ಮನಸ್ಸಿಗೂ; ತಾಮಸಿಯ ಮನಸ್ಸುಗಳಿಗೂ ನಡುವೆ ಘೊರ ಕಾಳಗ ನಡೆಯಿತು. ತಾಪಸೀದು ಎಷ್ಟಿದ್ದರೂ ಪುಳಿಚಾರ್ ಮನಸ್ಸು, ಆ ನಾನ್‌ವೆಜ್ ಮನಸ್ಸುಗಳೊಂದಿಗೆ ಅದು ಎಷ್ಟು ಹೊತ್ತು ಹೋರಾಡಲು ಸಾಧ್ಯ?
ಶಿಖಿರಾಗ್ರ ಸರಿಪಡಿಸಿಕೊಳ್ಳುತ್ತ ’ಸಾಕಪ್ಪೋ ಸಾಕು’ ಎಂದು ವಾಪಸಾಯಿತು.

ಮೀಸೆ ಮಣ್ಣು ಮಾಡಿಕೊಂಡು ಹೇಡಿಯೆಂತೆ ವಾಪಸು ಬಂದ ತಮ್ಮ ಮನಸ್ಸಿಗೆ ಮುಖ ತೋರಿಸಬೇಡ ಎಂದು ಶಾಸ್ತ್ರಿಗಳು ಛೀಥೂ ಮಾಡಿದರು.

ರುದ್ರನಾಯಕನೆಂಬ ಮಂತ್ರವಾದಿಯೂ; ಪರಮೇಶ್ವರ ಶಾಸ್ತ್ರಿಗಳೆಂಬ ವೈದಿಕವಾದಿಗಳೂ ದಿನಂಪ್ರತಿ ಒಂದಲ್ಲಾ ಒಂದು ನೆವ ತೆಗೆದು ಮ್ಯಾಂವ್; ಮ್ಯಾಂವ್, ಎಂದೋ ಗವ್ ಗವ್ ಎಂದೋ ಕಚ್ಚಾಡುತ್ತ ತಮ್ಮ ಚಟುವಟಿಕೆಗಳಿಗೆ ಹಸಿರು ನಿಶಾನೆ ತೋರಿಸಿದ್ದುದು ಅನಸೂಯಾ ಎಂಬ ಹುಡುಗಿಗೂ, ಶಾಮಾಶಾಸ್ತ್ರಿ ಎಂಬ ಹುಡುಗನಿಗೂ ತುಂಬ ಒಳ್ಳೆಯದಾಗಿತ್ತು.

ಅನಸೂಯ ಎಂಬ ಚಿಕನ್ ಬಿರ್ಯಾನಿಯನ್ನು ಶಾಮ ಎಂಬ ಹೋರಿಕರು ಲಗಾಯಿಸಲಾದೀತೇನು? ಪೂರ್ತಿ ಕಬಳಿಸಿಯೇ ಬಿಡಬೇಕೆಂದು ಅದು ಹತ್ತಿರ ಬರುತ್ತಿತ್ತು. ಮೂಸುತ್ತಿತ್ತು. ಒಂದೆರಡು ಅಗುಳು ಚಪ್ಪರಿಸುತ್ತಿತ್ತು, ಗರಂ ಮಸಾಲೆ ಮತ್ತು ವನಸ್ಪತಿ ತೈಲ ಹೆಚ್ಚಾಗಿದೆ ಎಂದು ಪಿತುಗಿ ಬಿಡುತ್ತಿತ್ತು. ಮಲಗಿಕೊಂಡರೆ ನಿದ್ದೆ ಬರದೆ ಒದ್ದಾಡುತ್ತಿತ್ತು. ಯಾಕೋ ” ನಿದ್ದೆ ಬರ್ತಾ ಇಲ್ಲ ತಾತ” ಅಂತಿತ್ತು.

” ಮನೊಜವಂ ಮಾರುತ ತುಲ್ಯವೇಗಂ ಜಿತೇಂದ್ರಿಯಮ್ ಬುದ್ಧಿ ವತಾಂವರಿಷ್ಟಂ. ಅಂತ ಆಂಜನೇಯನನ್ನು ಪ್ರಾರ್ಥಿಸಪ್ಪಾ… ನಿದ್ರಾದೇವಿ ತಾನೇ ತಾನಾಗಿ ಒಲಿಯುತ್ತಾಳೆ” ಎಂದು ಶಾಸ್ತ್ರಿಗಳು ಉತ್ಕೃಷ್ಟ ಸಲಹೆ ನೀಡುತ್ತಿದ್ದರು.

ಆದರೆ ಶಾಮು ಅನಸೂಯಳನ್ನು ಕುರಿತು ಶರದೇಂದು ವಿಕಾಸ ಮಂದ ಹಾಸೇ ಅರವಿಂದ ಮಂದ ಸುಂದರೇ; ಸ್ಯಾಮರವಿಂದಾಸನ ಸುಂದರೇ! ಅನಸೂಯಾಂ ಭೋಜೇ ವದನಾ ವದನಾಂಬುಜೇಽಽಽ ಅಂತ ಎನೇನೋ ಹೇಳುತ್ತಿದ್ದನು.

ತಾತ ಮಲಗಿದ್ದು ಖಚಿತಪಡಿಸಿಕೊಂಡು ಆಕೆ ತನಗೆ ಬರೆದ ಪತ್ರಗಳ ಗಂಟು ಬಿಚ್ಚುತ್ತಿದ್ದನು. ಅದಲ್ಲಿನ ಒಂದೊಂದು ಅಕ್ಷರವನ್ನು ಕಣ್ಣಿಂದ ತಿನ್ನುತ್ತಿದ್ದನು. ಹುಚ್ಚನಂತೆ ನೆಕ್ಕುತ್ತಿದ್ದನು. ಸಾಕಾದ ಮೇಲೆ ಮತ್ತೆ ಗಂಟುಕಟ್ಟಿ ಮತ್ತೆ ಹಾಸಿಗೆಯ ಕೆಳಗೆ ಭದ್ರಪಡಿಸುತ್ತಿದ್ದನಾ ಭೂಪನು.

ಅವನಿಗೆ ನಿದ್ದೆ ಬರುತ್ತಿದ್ದುದು ಮಧ್ಯರಾತ್ರಿ ಕಳೆದ ನಂತರವೇ, ಅದು ನಿದ್ದೆ ಅಂದರೆನಿದ್ದೆ, ಕನಸುಗಳ ಮೇಲೆ ಕನಸುಗಳು. ಒಂದು ಕನಸು ಇನ್ನೊಂದರಂತ್ತಿರುತ್ತಿರಲಿಲ್ಲ. ಕಂಡ ಕನಸುಗಳಲ್ಲಿ ಅವನೂ ದೈಹಿಕವಾಗಿ ಪಾಲ್ಗೊಳ್ಳುತ್ತಿದ್ದ. ಅದು ಒಂದು ಹೊತ್ತಿನಲ್ಲಿ ಕೆಟ್ಟ ಅನುಭವವಾಗಿರುತ್ತಿತ್ತು. ನಿದ್ರಾ ಮಂಪರಿನಲ್ಲೂ ಅವನು ತನ್ನ ದೇಹದ ಬಗ್ಗೆ ತಾನೇ ಬೇಸರಪಟ್ಟುಕೊಳ್ಳುತ್ತಿದ್ದನು.

ಈ ದೇಹದಿಂದ ಏನು ಸುಖ? ಇದನ್ನು ಅಗ್ನಿಗೆ ತರ್ಪಣ ನೀಡಬೇಕೆಂದುಕೊಳ್ಳುತ್ತಿರುವಾಗಲೇ ತಾತ ಉತ್ತಿಷ್ಠೋತ್ತಿಷ್ಠ ಗೋವಿಂದ ಉತ್ತಿಷ್ಠ ಗರುಡದ್ವಜ ಎಂದು ಗೊಣಗುತ್ತಿದ್ದರು.

ಏಳೋ ಶೂದ್ರರ ಥರ ಮಲಗಿದ್ದೀಯಲ್ಲ… ಎಂದು ಏಳುವವರೆಗೆ ಅವರು ಬಿಡುತ್ತಿರಲಿಲ್ಲ. ಅವನು ಐದನೇ ಕೂಗಿನವರೆಗೆ ಎಂದೂ ಮಲಗಿದವನಲ್ಲ. ಅವನು ಎದ್ದು ದೇಹದ ಅಗತ್ಯಗಳನ್ನು ಪೂರೈಸಿಕೊಂಡು ತಾತನೆದುರು ಕೂದ್ರುತ್ತಿದ್ದನು. ಧ್ಯಾನಸ್ಥ ಮನಸ್ಸಿನಿಂದ ಅವರ ಮೂಗನ್ನೇ ನಿಟ್ಟಿಸುತ್ತಿದ್ದನು. ಅದು ಥೇಟ್ ಅವಳ ಮೂಗಿನ ಥರ ಇತ್ತು.

” ನನ್ನ ಮೂಗಿನ ಮೇಲೇಕೋ ನಿನಗೆ ಕಣ್ಣು, ಯಾಕೊ ಸಂಧ್ಯಾವಂದನೆ ಕಡೆ ಮೊದಲಿನಹಾಗೆ ಗಮನ ಹರಿಯುತ್ತಿಲ್ಲ. ಅರುಣೋದಯದ ನಂತರ ಎದ್ದರೆ ಸಂಧ್ಯಾವಂದನೆ ಮಾಡಲಿಕ್ಕಾಗುವುದೇ? ಎಂದು ಅವರು ಪ್ರವರ ಪ್ರಾರಂಭಿಸುವುದು ಮಾಮೂಲು…

“ಸಂಧ್ಯಾವಾಸಂಧ್ಯಾ ಅಂತ ಅರ್ವಾಚೀನ ಹೇಳಿದೆ ಕಣಪ್ಪಾ. ಇದರ ಅವಯವಾರ್ಥದ ಪ್ರಕಾರ ಸಂಧಿ ಕಾಲದಲ್ಲಿ ಉತ್ಪನ್ನವಾಗುವ ಪರಮೇಶ್ವರಿ ಶಕ್ತಿಯೇ ಸಂಧ್ಯಾ ಈ ಶಕ್ತಿಯ ಉಪಾಸನೆಯೇ ಸಂಧ್ಯಾವಂದನೆ ಅಂತ ಕರೆದಿರೋದು… ನಿನ್ನ ಮುತ್ತಾತನವರು ಅಂಥ ಪರಮೇಶ್ವರಿ ಶೇಷ್ಠ ಉಪಾಸಕರಾಗಿದ್ದುದರಿಂದಲೇ ನಮ್ಮಂಥವರ ಜನನವಾಗಿದ್ದು… ” ಎಂದು ಅವರ ತಮ್ಮ ಜನ್ಮದ ಬಗ್ಗೆ ಹೆಮ್ಮೆಪಟ್ಟುಕೊಳ್ಳುವುದು ಮಮೂಲು…
ಶಾಮಶಾಸ್ತ್ರಿ ಒಂದು ಕಣ್ಣು ಮುಚ್ಚಿಕೊಳ್ಳುತ್ತಾನೆ.
ಪರಮೇಶ್ವರಿಯ ರೂಪ ಮೈದಾಳುತ್ತಾಳೆ ಮಾನಸ ಗುರುಗುಹದೊಳಗೆ…
ಆಕೆ ಸಾಮಾನ್ಯಳಾಗಿರುವುದಿಲ್ಲ.
ಕರ್ದಮ ಮುನಿಯಿಂದ ದೇವಹೂತಿಯ ಗರ್ಭದಲ್ಲಿ ಬೆಳೆದು ಹೊರಬಂದಾಕೆ.

ಒಂಬತ್ತು ಸಹೋದರಿಯರನ್ನು ಪಡೆದಿದ್ದಳಾಕೆ…
ಮನ್ವಂತರದ ಸಪ್ತರ್ಷಿಗಳಲ್ಲಿ ಒಬ್ಬನಾದ ಬ್ರಹ್ಮಮಾನಸಪುತ್ರನನ್ನು ಮದುವೆ ಮಾಡಿಕೊಂಡಾಕಿ.
ಬ್ರಹ್ಮ ಎಂಬ, ವಿಷ್ಣು ಎಂಬ, ಮಹೇಶ್ವರ ಎಂಬ ತ್ರಿಮೂರ್ತಿಗಳಿಂದ ಪರೀಕ್ಷೆಗೆ ಒಳಪಟ್ಟು ಗೆದ್ದು ಗೋಲ್ಡ್ ಮೆಡಲ್ ಪಡೆದಾಕಿ.
ದತ್ತಾತ್ರೇಯ, ದುರ್ವಾಸ, ಚಂದ್ರ ಅಕಲ‌ಓಕಿತ ಪರಿಶೇ ಪೈಲ್ವಾರಂಥ ಮೂರು ಮಕ್ಕಳನ್ನು ಪಡೆದು ಮೀಸೆ ತಿರುವಿದಾಕಿ.
ಶ್ರೀರಾಮನು ವನವಾಸವೆಂಬ ಹನಿಮೂನಿಗೇಂತ ಬಂದಿದ್ದಾಗ ಹಲೋ; ಹಲೋ ಜಾನಕಿಯನ್ನು ಬರಮಾಡಿಕೊಂಡು ಆಕೆಗೆ ಅನೇಕ ಸ್ರೀ ಧರ್ಮ ರಹಸ್ಯಗಳನ್ನು ಭೋಧಿಸಿ ಆಕೆಯ ಮಾಂಗಲ್ಯ ಶಕ್ತಿಯನ್ನು ಸಮೃದ್ಧಗೊಳಿಸಿದಾಕಿ.
ಇಂಥ ಕತೆಗಳುಳ್ಳವಳಾದ ಆಕೆ ಈ ಜಂಬೂ ದೀಪದ ಛಪ್ಪನ್ನಾರು ಭಾಷೆಗಳಲ್ಲಿ ಸಿನಿಮಾ ತೆಗೆಸಿಕೊಂಡಾಕಿ…
…ಶಾಮಾಶಾಸ್ತ್ರಿಯ ಮನಸ್ಸೆಂಬ ಮಂಗಳಗ್ರಹದಲ್ಲಿ ಅನಸೂಯ ಎಂಬ ಚಂದ್ರ ಬಿಂಬವು ಪಲ್ಲವಿಸುತ್ತಿರಲು

ಶಾಸ್ತ್ರಿಗಳಿಗೆ ತಾವು ಯವಕರಾಗಿದ್ದಾಗ ಪ್ರಸಿದ್ಧ ಇಂಜಿನೀಯರ್ ಓರ್ವರ ಪತ್ನಿ ತ್ರಿಪುರ ಸುಂದರೀ ದೇವಿಯ ಪ್ರೇಮಪಾಶದಲ್ಲಿ ಬಿದ್ದುದನ್ನು ನೆನಪು ಮಾಡಿಕೊಂಡರು.
ಆಕೆಯ ಪ್ರೀಥ್ಯಥವಾಗಿ ಹಾಡಿದ್ದ ಹಾಡೊಂದನ್ನು ನೆನಪು ಮಾಡಿಕೊಂಡರು. ತ್ರಿಪುರ ಸುಂದರೀ ದೇವಿಗೆ ಶಂಕರಾಭರಣ ರಾಗ ಕಿವಿಗೆ ಬಿತ್ತೆಂದರೆ ಪಕ್ಕದಲ್ಲಿನ ಗಂಡನನ್ನೇ ಮರೆತು ಬಿಡುತ್ತಿದ್ದಳು. ಅದಕ್ಕೆ ಪೂರಕವಾಗಿ ಚತುಶ್ರ ಏಕತಾಳವೆಂದರೆ ತೊಟ್ಟಿಲಲ್ಲಿನ ಮಗನನ್ನೇ ಮರೆತು ಬಿಟ್ಟೆದ್ದು ಬರುತ್ತಿದ್ದಳು… ತಂದೆಯವರೊಡನೆ ಸತ್ಯನಾರಾಯಣ ಪೂಜಾ ವ್ರತ ಮಾಡಿಸಲೆಂದು ಅವರ ಮನೆಗೆ ಹೋಗಿದ್ದಾಗ ಪರಿಚಯವಾಗಿದ್ದು.
“ಪರಮೇಶ್ವರಽ ಪುಜೆಗೆ ಒಂದು ಹಾದು ಹೇಳಪ್ಪಾ!” ತಂದೆಯವರು ಹೊದಲ್ಲಿ ಬಂದಲ್ಲಿ ಹೀಗೆ ಅಪ್ಪಣೆ ಕೊಡಿಸುವುದು ಸ್ವಾಭಾವಿಕವಾಗಿತ್ತು.
ಪ್ರತಿಷ್ಠಿತ ವಲಯದಲ್ಲಿ ತಮ್ಮ ಸುಪುತ್ರನನ್ನು ಪ್ರತಿಷ್ಥಾಪಿಸುವ ಸನ್ನಾಹದಲ್ಲಿ ಒಂದು ಮಾತು ಹೆಚ್ಚು ಹೊಗಳುತ್ತಿದ್ದರು.
ಅಷ್ಟರಲ್ಲಿ ಪರಮೇಶ್ವರ ಶಾಸ್ತ್ರಿ ಇಂಜಿನಿಯರವರ ಕಣ್ಣಸೆಳೆವಿಗೆ ಕೊಚ್ಚಿ ಹೋಗಿದ್ದರು. ಆಕೆಯೂ ಶಾಸ್ತ್ರೀಯ ಸಂಗೀತದಲ್ಲಿ ಪರಿಶ್ರಮವುಳ್ಳವಳಾಗಿದ್ದಳೆಂಬುದನ್ನು ಕೇಳಿಬಲ್ಲರು.

ಆ ಸಂದರ್ಭದಲ್ಲಿ ಪಂಚ ಮಾತಂಗ ಮುಖ ಗಣಪತಿನಾ ಹಾಡಬೇಕಿತ್ತು. ಯಾಕೋ ಅವರಿಗೆ ಸತ್ಯನಾರಾಯಣನೇ ಶಂಕರಾಭರಣದ ಸಾಮಗಾನ ಪ್ರಿಯೆ ಹಾಡಲು ಪ್ರೇರಣೆ ನೀಡಿದ, ಎಷ್ತಾದರೂ ಅವನೂ ಒಳ್ಳೆಯ ಪ್ರೇಮಿ ಅಲ್ಲವೇ?
ಸಾಮಗಾನ ಪ್ರೀಯೇ ಕಾಮಕೋಟಿ ನಿಲಯೇ
ಶಂಕರಿ ಸುಂದರಿ ಸರತರ ಲಹರಿ
ಚಂಡಿಕೇ ನಿರ್ಯಜೇ ಕಾಮಿನಿ ಮೋದಿನಿ
ಪಾಹಿ ಗುರುಗುಹ ಜನನಿ ಕಾಮಾಕ್ಷಿ
ಎಂದು ಅದ್ಭುತ ಶಾರಿರದಿಂದ ಹಾಡಿಯೇ ಬಿಟ್ಟರು. ಆರೋಹಣ, ಅವರೊಹಣದಲ್ಲಿ

ತಿಲಮಾತ್ರ ವ್ಯತ್ಯಯವಿರಲಿಲ್ಲ.
ಇಂಜಿನಿಯರ್‌ರವರಂತೂ ನಾದ ಲೋಕದಲ್ಲಿ ಪಯಣಿಸಿದ್ದರು. ರೇಷ್ಮೆ ಉತ್ತರೀಯ ಹೊದಿಸಿ ಸನ್ಮಾನಿಸಿದರು. ಪರಮೇಶ್ವರ ಶಾಸ್ತ್ರಿಗಳ ಮನೆಯಿಂದ ವಾರಕ್ಕೆರಡು ಮೂರು ಬಾರಿಯಾದರೂ ಬುಲಾವ್ ಬರುತ್ತಿತ್ತು.

ಊರಲ್ಲಿದ್ದರೆ ಇಂಜಿನಿಯರ್‌ರವರು ತ್ಯಾಗರಾಜರ್ ಕೀರ್ತನೆಗಳನ್ನು ಅಪೇಕ್ಷಿಸುತ್ತಿದ್ದರು. ಪತಿದೇವರು ನಗರದಿಂದ ಹೊರಗೆ ಹೋಗಿದ್ದಾಗ ಅವರ ಪತ್ನಿ ತ್ರಿಪುರ ಸುಂದರಿ ದೇವಿಯವರಿಂದ…

ಅವರೀರ್ವರ ಸಂಗೀತ ಪ್ರೇಮಪ್ರಣಯಕ್ಕೆ ತಿರುಗಿತು. ಇಂಜಿನಿಯರ್‌ರವರು ಮಹಾರಾಜರಿಗೆ ತುಂಬ ಬೇಕಾಗಿದ್ದವರು, ಅವರಿಗೂ ಇವರ ಸಂಬಂಧೀಯ ವಾಸನೆ ಹತ್ತಿತಾದರೂ ಅದರ ಬಗ್ಗೆ ಪರಿಶೋಧಿಸಿ ನೋಡುವ ಗೋಜಿಗೆ ಹೋಗಿರಲಿಲ್ಲ.

ತ್ರಿಕಾಲ ಜ್ಞಾನಗಳಾದ ಶಾಮಾಶಾಸ್ತ್ರಿಗಳು ಉಪಾಸನ ಕೋಣೆಯಲ್ಲಿ ಮಗನನ್ನು ಕುಳ್ಳರಿಸಿಕೊಂಡು ತ್ರಿನೇತ್ರನಂತೆ ದುರುಗುಟ್ಟಿದರು. ಚಾಮುಂಡಿಯ ಕೈಯಲ್ಲಿದ್ದ ಬಾಣ ತೆಗೆದುಕೊಂಡು ಕೆಂಪಗೆ ಕಾಯಿಸಿದರು.
” ಮುಂದೆ ಎಂದಾದರೂ ನೀನು ಹಾಡಿದೀಯೆಂದರೆ ನಿನ್ನ ನಾಲಿಗೆ ಬಿದ್ದುಹೋಗಲಿ” ಎಂದವರೆ ಮಗನ ಬಾಯೊಳಗಿಂದ ನಾಲಿಗೆ ಜಗ್ಗಿ ಬರೆ ಎಳೆದುಬಿಟ್ಟರು.
ಶಂಕರಾಭರಣದ ಸಾಮಗಾನಪ್ರಿಯೆ ತ್ರಿಪುರ ಸುಂದರಿದೇವಿ ಶಾಸ್ತ್ರಿಗಳ ನೆನಪಿನ ಉಗ್ರಾಣವನ್ನು ಸೂರೆಮಾಡತೊಡಗಿದಳು. ಅವರಿಗೆ ಇಡೀ ಊರಿನ ಅರ್ಧ ಭಾಗಕ್ಕೆ ಕೇಳಿಸುವಂತೆ ಹಾಡುವ ಆಸೆ. ತಂದೆಯವರ ಲಕ್ಷ್ಮಣ ರೇಖೆ ನೆನಪಾಯಿತು. ಆ ಲಕ್ಷ್ಮಣರೇಖೆ ಇರದಿದ್ದಲ್ಲಿ ಶಾಸ್ತ್ರಿಗಳು ವೈದಿಕಕ್ಕಿಂತ ಹೆಚ್ಚು ಮಹತ್ವವನ್ನು ಸಂಗೀತಕ್ಕೆ ಕೊಡುತ್ತಿದ್ದರು. ಪ್ರಸಿದ್ಧ ಸಂಗೀತಗಾರರಾಗುತ್ತಿದ್ದರು. ತಾವು ಎಂದೂ ಯಾವ ಕಾರಣಕ್ಕೂ ಹಾಡುವಂತಿರಲಿಲ್ಲವೆಂಬುದೇನೋ ನಿಜ. ಆದರೆ ಅಷ್ಟಕ್ಕೆ ಸುಮ್ಮನಿರಲಾದೀತೆ?

ನಗರದಲ್ಲಿ ಕೆಲವು ಕಾಲ ಇದ್ದ ನಭೋಮಣಿರಾಗದ ನರಸಿಂಹಾಚಾರ್‌ರವರಿಂದ ಮೊಮ್ಮಗ ಶಾಮುವಿಗೆ ಸಂಗಿತಾಭ್ಯಾಸ ಮಾಡಿಸಿದ್ದರು ಎಂಬುದನ್ನು ಹೇಳಲು ಮರೆತಿದ್ದೆ.
“ಮಗೂ ಶಾಮೂಽಽಽ ಮುತ್ತು ಸ್ವಾಮಿ ದೀಕ್ಷಿತರ ಕೃತಿ ಸಾಮಗಾನ ಪ್ರಿಯೆ ಬತದಾ ಎಂದು ಮಗುವಿನಂತೆ ಕೇಳಿದರು.
ಬರದೆ ಏನು? ಶಾಮು ತಲೆ ಅಲ್ಲಾಡಿಸಿದ.

ಶಾಮು ಸಾಮಗಾನಪ್ರಿಯೆ ಅಂತ ಆರಂಭಿಸಿಯೇ ಬಿಟ್ಟ. ಅವನ ಸೊಗಸಾದ ಶಾರೀರ ಇಡೀ ಓಣಿಯನ್ನು ಪರವಶಗೊಳಿಸಿತು. ಅಡುಗೆ ಮನೆ ಯಲ್ಲಿ ಬತ್ತಿ ಹೊಸೆಯುತ್ತಿದ್ದ ಅಲುಮೇಲಮ್ಮನವರು ಸೀದ ಪೂಜಾಕೋಣೆಗೆ ಹೋಗಿ ದೇವತೆ ಮುಂದೆ ಧೀರ್ಘದಂಡ ಪ್ರಣಾಮ ಸಲ್ಲಿಸಿದರು.
…ಜನನೀ ಕಾಮಾಕ್ಷಿಽಽಽ ಎಂದು ಶಾಮು ಹಾಡುತ್ತ ಸಮ ಪಾತಳಿಗೆ ತಂದೊಡನೆಯೇ ಶಾಸ್ತ್ರಿಗಳ ದುಃಖದ ಕಟ್ಟೆ ಒಡೆಯಿತು. ಚಿಕ್ಕ ಮಗುವಿನಂತೆ ಬಿಕ್ಕಿ ಬಿಕ್ಕಿ ಅಳತೊಡಗಿದರು. ಮೊಮ್ಮಗನ ತೊಡೆ ಮೇಲೆ ತಲೆ ಇರುಸಿ ಗಾಢ ನಿದ್ರೆ ಹೋದರು ಕ್ರಮೇಣ.
ಶಾಮು ತಾತನ ತಲೆ ನೇವರಿಸಿದ. ಅವರನ್ನು ಮೃದುವಾಗಿ ಚುಂಬಿಸಿದ.

ರಥ ಸಪ್ತಮಿ ನಾಳೆ ಇದ್ದುದರಿಂದ ಶಾಮ ಹನ್ನೊಂದು ವಿಧದ ಪತ್ರೆ ಆಯ್ದು ತರಲು ಬೆತ್ತದ ಬುಟ್ತಿಯೊಡನೆ ಹೊರಟ. ಪತ್ರಿ ಮರದ ಬುಡದಲ್ಲಿರುವ ಲಕ್ಷ್ಮಿ ವಿಗ್ರಹದ ಬಗ್ಗೆ ಅಲುಮೇಲಮ್ಮಗೆ ತುಂಬ ಭಕ್ತಿ., ಪೂಜೆಯಿಂದ ವಂಚಿತಗೊಂಡಿರುವ ಅದಕ್ಕೆ ಪೂಜೆ ಆರಂಭಿಸಿದ್ದು ಆಕೆಯೇ.
ಹಾಗೆಯೇ ಪೂಜೆ ಸಲ್ಲಿಸಲು ಮತ್ತು ಆಕೆಯ ಸನ್ನಿಧಿಯಲ್ಲಿ ಆಹಾರ ಭಕ್ಷಿಸಲು ಸಲಹೆ ನೀಡಿ ಪರಿಕರಗಳ ಗಂಟಿನೊಡನೆ ಕಳಿಸಿದ್ದಳು ಮಗನನ್ನು.
ಶಾಮ ತಲುಪಿದ., ಮರದ ಬುಡದಲ್ಲಿರುವ ವಿಗ್ರಹಕ್ಕಾಗಿ ಹುಡುಕುತ್ತಿರುವಾಗ ಹ್ಹಾ! ಹ್ಹಾ! ಎಂದು ಚೀರುತ್ತಿದ್ದ ಸ್ತ್ರೀಕಂಠ ಕೇಳಿಸಿತು. ಅವನು ಬರುವನೆಂದು ಖಚಿತ ಪಡಿಸಿಕೊಂಡು ಅನಸೂಯ ಅಲ್ಲಿಗೆ ಬಂದಿದ್ದಳು. ಕೇದಿಗೆ ಪೊದೆ ಪರಿಮಳಕ್ಕೆ ಹೋಗಿ ಸಿಕ್ಕಿಹಾಕಿಕೊಂಡಿದ್ದಳು.

ಬಿಡಿಸಿ ಕರೆತಂದ. ಜೊತೆಗೆ ಒಂದು ಕೇದಿಗೆ ಹೂವೊಂದನ್ನೂ ಸಹ. ಅದರ ಒಂದು ಎಸಳನ್ನು ಆಕೆಯ ಕಪ್ಪು ಮುಡಿಯೊಳಗಿರಿಸಿದ. ಅನಸೂಯಾಳೆಂಬ ಕರುಣಾರಸಾಲಯ ದೊರಕಿದ ಮೇಲೆ ಆಲಯವಿಲ್ಲದ ಲಕ್ಷ್ಮಿ ವಿಗ್ರಹದ ಗೊಡವೆ ತಮಗೇಕೆ?
ಅಮ್ಮ ಪೂಜೆಗೆಂದು ಕೊಟ್ಟಿದ್ದ ಸಾಮಗ್ರಿ ಬಿಚ್ಚಿದ, ರವೆಯುಂಡೆ, ಹರಳಿಟ್ಟು, ಕೋಡುಬಳೆ, ರಸಬಾಳೆ ಮುಂತಾದವು ಕಾಗೆ ಎಂಜಲು ಮಾಡಿ ಅವೆಲ್ಲವನ್ನೂ ಅವರು ಮುಗಿಸಿದರು.
ಅನೂ ತಮ್ಮ ಭಯಾನಕ ತಂದೆಯ ಬಗ್ಗೆ ಹೇಳಿಕೊಂಡಲು.
ಶಾಮು ತಮ್ಮ ಸಾತ್ವಿಕ ತಾತನ ಬಗ್ಗೆ ಹೇಳಿಕೊಂಡ.
ಸ್ವಲ್ಪ ಹೊತ್ತು ಅನೂ ಶಾಮುನ ತೊಡೆ ಮೇಲೆ ತಲೆ ಇರಿಸಿ ಮಲಗಿದಳು.
ಶಾಮೂ ಕೂಡ ಅನೂಳ ತೊಡೆ ಮೇಲೆ ತಲೆ ಇರಿಸಿ ಮಲಗಿದ.

“ಶಾಮೂ… ನೀನದೆಷ್ಟು ಚನ್ನಾಗಿ ಹಾಡಿದಿ ಗೊತ್ತಾ?” ನೆನಪಿಸಿಕೊಂಡವಲಂತೆ ದಿಗ್ಗನೆ ಕೇಳಿದಳು. ತಾನು ಗಟ್ಟಿಯಾಗಿ ಹಾಡಿದ್ದಕ್ಕೂ ಸಾರ್ಥಕವಾಯಿತೆಂದುಕೊಂಡ.
“ಕಾಲೇಜ್ ಡೇಗೆ ನೀನು ಹಾಡಲೇಬೇಕು!” ಪತ್ತು ಹಿಡಿದಳು ಮೀನಲೋಚನಿ, ಸಭಾ ಕಂಪನಿಯಾದ ಶಾಮನ ಎದೆ ಡವ ಡವ ಗುಟ್ಟತೊಡಗಿತು.
ಬಂಗಾರದ ಮನುಷ್ಯದಲ್ಲಿ ರಾಜಕುಮಾರನ ತೊಡೆ ಮೇಲೆ ಭಾರತಿ ಒರಗಿರುತ್ತಾಳಲ್ಲ; ಹಾಗೆ ಒರಗಿದ್ದ ಅನಸೂಯಳನ್ನು ನೋಡಿ ದರಾನಮತ್ಕಂಧರ ಬಂದ ಮೀಷನ್ನಿಮೀಲಿತ ಸ್ನಿಗ್ಧ ವಿಲೋಚಾಬ್ಜಮ್ ಎಂಬ ಜಗನ್ನಾಥ ಕವಿಯ ಶ್ಲೋಕ ನೆನಪಿಸಿಕೊಂಡ. ರೋಮಾಂಚನಗೊಂಡ. ಆ ಕಮಲನಯನೆಯ ಅಂತರ್ಭಾಗದಂತೆ ಕಂಡ ಪೋರ್ಕುಳ ಶೋಬೆಯನ್ನು ಸವಿದ. ಆ ಚಿಗರೆ ಕಣ್ಣುಗಳು ಪ್ರೇಮ ಕಟಾಕ್ಷವನ್ನು ಬೀರಿದವು.

ಅಂದು ರಥತಿರಥ ಸಂಖ್ಯಾಯನದ ದಿನ ತಾಯಿ ಅಲುಮೇಲಮ್ಮಗೆ ಮಗನ ನೆನಪು ತುಂಬಾ ಕಾಡಿತು. ಕಾಲೇಜು ಡೇ ಸಮಾರಂಭದಲ್ಲಿ ಯಾವ ಹಾಡು ಹಾಡಿ ಅನಸೂಯಾಳ ಇಚ್ಛೆ ಪೂರೈಸಬೇಕೆಂಬ ಚಿಂತೆಯಲ್ಲಿ ಶಾಮು ಮುಳುಗಿದ್ದ. “ಅಮ್ಮಾ ನನ್ಗೆ ನಾಚಿಕೆಯಾಗ್ತದೆ” ಎಂದರೂ ತಾಯಿ ಬಿಡಬೇಕಲ್ಲ? ಹಿತ್ತಲಲ್ಲಿ ಬಟ್ಟೆ ಸೆಳೆವ ಕಲ್ಲ ಮೇಲೆ ಮಗ ಸಂಕೋಚದಿಂದಲೇ ಕೂತ, ತಾಯಿ ಬಲವಂತಕ್ಕೆ ಬನಿಯನ್ ಬಿಚ್ಚಿದ, ತಾಯಿ ಬಲವಂತಕ್ಕೆ ಲುಂಗಿ ಕಳಚಿದ. ಬೆಳ್ಳುಳ್ಳಿ ಬೆಂದಿದ್ದ ಎಣ್ಣೆಯನ್ನು ಆಕೆ ಬೊಗಸೆಗೆ ಸುರುವಿಕೊಂಡಳು. ಎಷ್ಟು ಎತ್ತರ ಎಷ್ಟು ದಪ್ಪ ಆಗಿದ್ದಾನೆ. ತನ್ನ ಮಗ;

ಅವರು ಬದುಕಿದ್ದರೆ ಇಷ್ಟೆತ್ತರ ಬೆಳೆದಿರುವ ಮಗನನ್ನು ನೋಡಿ ಅದೆಷ್ಟು ಸಂತೋಷ ಪಡುತ್ತಿದ್ದರವರು!… ಮೊದಲಿನ ಹಾಗೆ ಈಗವನು ಪೀಚಲ್ಲ, ಮೈಗೆ ಎಣ್ಣೆ ಲೇಪಿಸಿದಳು. ಕೆಲವು ಭಾಗಗಳನ್ನು ಸ್ಪರ್ಶಿಸಲು ತನಗಿವನು ಆಸ್ಪದ ನೀಡುತ್ತಿಲ್ಲವಲ್ಲ! ತುಳಸೀ ರಾಮಾಯಣ ಪಾರಾಯಣ ಮುಗಿಯುವುದರೊಳಗೆ ಒಂದು ಒಳ್ಳೆ ಮನೆತನದ ಹೆಣ್ಣು ನೋಡಬೇಕು. ಒಂದು ಒಳ್ಳೆ ಮುಹೂರ್ತ ನೋಡಿ ಮದುವೆ ಮಾಡಬೇಕು. ಮಗ ಸೊಸೆಯರ ಸಂಸಾರ ನೋಡಿ ಸಂತೋಷಪಡಬೇಕು. ವರ್ಷದೊಳಗೆ ಸೊಸೆ ಹೆತ್ತು ಕೊಡುವ ಮೊಮ್ಮಗನನ್ನು ಎತ್ತಿ ಆಡುತ್ತ ಕಣ್ಣು ಮುಚ್ಚಿ ಬಿಡಬೇಕು.

ಉಸಿರಿನ ಮೇಲೆ ಉಸಿರು ಬಿಡುತ್ತ ಮಗನಿಗೆ ಸ್ನಾನ ಮಾಡಿಸಿದಳು. ತಾನೇ ಹೊಸ ಪಾಯಿಜಾಮ ಜುಬ್ಬ ತೊಡಿಸಿದಳು.ವಿವಿಧ ಕೋನಗಳಲ್ಲಿ ನಿಂತು ಮಗನನ್ನು ನೋಡಿ ಸಂತೋಷ ಅನುಭವಿಸಿದಳು. ಆ ಸಂತೊಷ ಆಕೆಯಲ್ಲಿ ಸಾವಿರಾರು ನೆನಪುಗಳನ್ನು ಉಕ್ಕಿಸಿತು. ಸಾವಿರಾರು ಭಾವನೆಗಳನ್ನು ಹೊರ ಚೆಲ್ಲಾಡಿತು ಆಕೆಯ ವೈಧವ್ಯದ ದುರ್ಬಲ ದೇಹ ಅಷ್ಟೊಂದು ಉದ್ವಿಗ್ನತೆಯನ್ನು ತಡೆದುಕೊಳ್ಳುವುದಾದರೂ ಹೇಗೆ? ಕೋಣೆಗೆ ಹೋಗಿ ಗಂಡನ ಫೋತೋದ ಮುಂದೆ ಬಿದ್ದು ಗೊಳೋ ಎಂದು ಅಳತೊಡಗಿದಳು.

ಆಕೆ ದುಃಖಿಸುತ್ತಿದುದನ್ನು ಶಾಸ್ತ್ರಿಗಳು ಗಾಯತ್ರಿ ಸಂದರ್ಭದಲ್ಲಿ ಕೇಳಿಸಿಕೊಂಡರು. ಶಿವಾಯ ವಿಷ್ಣು ರೂಪಾಯ ಶಿವ ರೂಪಾಯ ವಿಷ್ಣುವೇ ಎಂದರು. ಶಿವ ಸಂಹೃದಯಂ ವಿಷ್ಣುಃ ಅಂದರು. ವಿಷ್ಣೋಶ್ಚ ಹೃದಯಂ ಶಿವಃ ಅಂದರು. ಯಥಾ ಶಿವ ಮಯೋ ವಿಷ್ಣು ಎಂದು ನುಡಿಯಲಾಗಲಿಲ್ಲ. ಅಂತರಾಳದಿಂದ ಮಗನ ನೆನಪು ದೇಹದ ಸಮಸ್ತ ಇಂದ್ರಿಯಗಳನ್ನು ಆಕ್ರಮಿಸಿ ಬಿಟ್ಟಿತ್ತು. ತನ್ನ ಸಾವನ್ನು ತಾನೇ ಆಮಂತ್ರಿಸಿಕೊಂಡಂಥ ಮಗ ಕೇವಲ ತಮಗೆ ಮಾತ್ರ ಇರಲು ಸಾಧ್ಯ.

ಅವನು ಬೆಳೆದದ್ದೂ ತಡವಾಗಲಿಲ್ಲ. ಕದ್ದು ಮಿಲಿಟರಿಗೆ ಓಡಿದ್ದೂ ತಡವಾಗಲಿಲ್ಲ. ವಂಶದ ಗೌರವವನ್ನು ಗಾಳಿಗೆ ತೂರಿ ಮ್ಲೇಚ್ಚರ ಸವವಾಸ ಮಾಡುವುದೂ ತಡವಾಗಲಿಲ್ಲ. ಅಯ್ಯೋ ಅವನಿಗೆ ಹಠ ಹಿಡಿದು ಮದುವೆ ಮಾಡಿದ್ದಲ್ಲಿ ಎಷ್ಟೊಂದು ಕಷ್ಟ ಅನುಭವಿಸಬೇಕಿತ್ತಲ್ಲ! ತಮ್ಮ ಶವ ಸಂಸ್ಕಾರಕ್ಕೆ ಮಗನನ್ನು ಹುಟ್ಟಿಸಿ ಕೊಟ್ಟ ಅವನಿಗೆ ಎಷ್ಟು ಕೃತಜ್ಞತೆ ಹೇಳಿದರೂ ಕಡಿಮೆಯೇ? ಹೌದಲ್ಲವೇ? ಎಷೊಂದು ದೊಡ್ಡವನಾಗಿದ್ದಾನೆ ತನ್ನ ಮೊಮ್ಮಗ! ಅವನು ದೊಡ್ಡವನಾಗಿರುವುದು ತಮ್ಮಿಂದ ಗುರುತಿಸಲಾಗಲಿಲ್ಲವಲ್ಲ… ಇದು ತಮ್ಮ ಅಕ್ಷಮ್ಯ ಅಪರಾಧವೇ ಸರಿ!
“ತಾಯಿ ಅಲುಮೆಲು… ಶಾಮಾ ಶಾಸ್ತ್ರಿ ಒಳಗಡೆ ಇರುವೆಯೇನಮ್ಮಾ?” ದ್ವಿತೀಯ ಮಾರ್ಜನೆ ಮುಗಿಸಿಕೊಂಡು ಕೂಗಿದರು ಶಾಸ್ತ್ರಿಗಳು.
ಕೋನೆಯಲ್ಲಿ ದುಃಖದ ಪರಾಕಾಷ್ಠೆ ತಲುಪಿದ್ದ ಅಲುಮೇಲಮ್ಮ ’ಸಹಸ್ರ ಪರಮಾಂ ದೇವಿ ಎಂದು ಕಣ್ಣು ಮುಚ್ಚಿಕೊಂಡಳು…

ಅದು ಕಿವಿಗೆ ಬಿದ್ದೊಡನೆ ಶಾಸ್ತ್ರಿಗಳಿಗೆ ರೋಮಾಂಚನವಾಯಿತು. ಎಷ್ಟೊಂದು ಸುಸಂಸ್ಕೃತಳಿದ್ದಾದಳ್ಳ ತಮ್ಮ ಸೊಸೆ? ಇಂಥ ಪತ್ನಿಯೊಡನೆ ಸುದೀರ್ಘ ದಾಮ್ಪತ್ಯ ಜೀವನ ನಡೆಸಲು ಮಗ ಅಶ್ವತ್ಥ ಪುಣ್ಯ ಮಾಡಿರಲಿಲ್ಲ. ಇಂಥ ಪ್ರಿಯವಾದ ತಮ್ಮ ಸೊಸೆ ತಮಗೆ ಪ್ರಿಯವಾದ ಶಬ್ದಗಳನ್ನು ನುಡಿದಳು!
ಸಹಸ್ರ ಪರಮಾಂ ದೇವಿ!…. ಮತ್ತೆ ಪುಲಕಿತರಾದರು ಶಾಸ್ತ್ರಿಗಳು.
ತ್ರಿಪುರ ಸುಂದರಿ ದೇವಿಯ ಮುಖ ಕಮಲವನ್ನು ಬೊಗಸೆಯಲ್ಲಿ ಹಿಡಿದು ಅದು ತಾವು ನುಡಿದ ಮಾತದು. ಸಾವಿರ ದಳದ ಪುಷ್ಪದ ರೀತಿಯಲ್ಲಿ ಘಮ್ಮನೆ ಆರಳಿದ್ದಳು ದೇವಿ. ಅವಳಿಗಿಂತ

ಕಿರಿಯನಿದ್ದ ತನ್ನಲ್ಲಿ ಪ್ರವಾಹ ಉಕ್ಕಿಸುತ್ತಿದ್ದ ದೇವಿಯ ಮುಖ ಅದಾಗಿತ್ತು.
ಮುಖದಿಂದ್ರಶ್ಚಾಗ್ನಿಶ್ಚ ಪ್ರಾಣಾದ್ವಾಯು ರಜಾಯತ ಎಂಬೊಂದು ತನ್ನ ಪ್ರಿಯವಾಕ್ಯ ಬರಬಹುದೇನೋ? ಶಾಸ್ತಿಗಳು ಮತ್ತೆ ಮತ್ತೆ ಪುಳಕಿತಗೊಂಡರು. ಯೌವನದ ಕ್ಷಣ ನೆನಪಿಸಿದ ಸಾಕ್ಷಾತ್ ದೇವಿಯೇ ಸರಿ…

ಅಯಾಚಿತವಾಗಿ ಮೇಲೆದ್ದು ನಡೆಯತೊಡಗಿದರು. ಅವರು ಹೋಗುವುದಕ್ಕು ಅವರ ಸೊಸೆ ತಲೆಬಾಗಿಲ ಬಳಿ ಬರುವುದಕ್ಕೂ ಸರಿ ಹೋಯಿತು. ನಖಶಿಖಾಂತ ನೋಡಿದರು. ಕ್ಷೀರೇಣ ಸ್ಥಾಪಿತಾ ದೇವಿ ಚಂದನೇನ ವಿಲೇಪಿತೇ ಅಂದಿತು ಅವರ ಮನಸ್ಸು, ಮೈತುಂಬ ವೈಧವ್ಯ ಲೇಪಿಸಿಕೊಂಡಿರುವ ಸೊಸೆ! ಅಪವಿತ್ರಹ್ ಪವಿತ್ರೊವಾ ವೈಧವ್ಯಕ್ಕೆ ತಾವೆಂದೂ ಒತ್ತಾಯಿಸಿರಲಿಲ್ಲ. ಒತ್ತಾಯಿಸದೇ ಇರಲಿಲ್ಲ ಕೂಡ… ಅವರ ಅಂತರಂಗದಲ್ಲಿ ಅಪರಾಧೀ ಭಾವ ಪ್ರಜ್ವಲಿಸಿತು. ಅದಕ್ಕೆ ತಕ್ಕ ಪ್ರಾಯಶ್ಚಿತ್ತವೆಂದರೆ ಶಂಕರಾಭರಣದ ಸಾಮಗಾನ ಪ್ರಿಯೆ ಕಾಮಕೋಟಿನಿಲಯೇ ಹಾಡಿ ಲೀಲಾಜಾಲವಾಗಿ ಬದುಕಿನಿಂದ ನಿಷ್ಕ್ರಮಿಸುವುದು… ಛೇ! ಛೇ! ಅಲುಮೇಲುಗಾಗಿ ಹಾಡಬಾರದು, ಪಿತ್ರುವಿನ ಏಕ ಪಕ್ಷೀಯ ಲಕ್ಷ್ಮಣ ರೇಖೆಯನ್ನು ಉಲ್ಲಂಘಿಸಿ ನಾಲಿಗೆ ಕಲೆದುಕೊಳ್ಳದೆ ಇರುವುದು.

ಶಾಸ್ತ್ರಿಗಳ ಅವಸ್ಥೆ ಅವಳು ಎಂದೂ ಊಹಿಸಿರಲಿಲ್ಲ. ತನಗೆ ವೈಧವ್ಯ ಮೆತ್ತಿದೆಯಲ್ಲ… ಹಾಗೆ… ಬೆವರು ಮೆತ್ತಿರುವ ಮುಖ, ಕೆದರಿದ ಶಿಖಾಗ್ರ… ಅವರ ಹೃದಯದ ಬಡಿತ ತನಗೆ ಕೇಳಿಸುತ್ತಿದೆ.

ಸ್ವಾಂತನಕ್ಕೆ ಒಂದು ಕಪ್ಪು ಗಜ್ಜರಿ ರಸ ತಂದು ಕೊಟ್ಟಳು. ತೂಗು ಮಂಚದ ಮೇಲೆ ಕೂಡ್ರಿಸಿ ಒಮ್ಮೇ ತೂಗಿದಳು. ನವಿಲು ಗರಿ ಬೀಸಣಿಗೆಯಿಂದ ಗಾಳಿ ಬೀಸಿದಳು.
ಒಂದು ಕ್ಷಣ ಕಣ್ಣು ಮುಚ್ಚಿದರು. ತನ್ನ ತಾಯಿಯೇ ಈಕೆ ಎಂದುಕೊಂಡರು. ಉಬ್ಬರವಿಳಿತ ಆರಿದ ಸಾಗರದಂತೆ ಕಂಗೊಳಿಸಿತು ಅವರ ಮನಸ್ಸು.
“ಮಾವನವರೇ, ತಮ್ಮಲ್ಲಿ ಒಂದು ಕೇಳಬೇಕೆಂದಿರುವೆ”.
“ಅದೇನು ಕೇಳು ತಾಯಿ, ಸಂಕೋಚ ಯಾಕೆ” ಎಂದು ಉದ್ವೇಗಪೂರ್ವಕವಾಗಿ ಸಂಭೋದಿಸಿದರು.
“ಶಾಮು ಈಗ ಬೆಳೆದು ನಿಂತಿದ್ದಾನೆ, ಅವನ ನಡುವಳಿಕೆ ಕೂಡ ಮೊದಲಿನ ಹಾಗಿಲ್ಲ…”
“ಹೌದಲ್ಲಾ… ತಾಯಿ… ಅವನು ಬೆಳೆದಿರೋದು ನಮಗೆ ಗೊತ್ತಾಗಲೇ ಇಲ್ಲ ನೋಡು! ಎಲ್ಲಿದ್ದಾನವನು…?” ಸೊಸೆಯ ಮಾತಿನ ಮರ್ಮ ಅರ್ಥ ಮಾಡಿಕೊಂಡರು.
ಮೊಮ್ಮಗನ ದೇಹದಲ್ಲಿ ಅಂಶವನ್ನು ಹಿರಿಯರಾದ ತಾವು ಗುರುತಿಸಬೇಕಲ್ಲವೇ?… ಆ ಅಂಶವನ್ನು ಗುರುತಿಸಿ ಅದರ ಅಗತ್ಯಗಳನ್ನು ತಾವು ಸಕಾಲದಲ್ಲಿ ಪೂರೈಸದಿರಲಾದೀತೇ…
“ಶಾಮೂ… ಅಪ್ಪಾಜಿ… ಶಾಮಶಾಸ್ತ್ರೀ… ಎಲ್ಲಿರುವೆ ತಂದೆ?”…

ಕಾಲೇಜು ಡೇ ಸಮಾರಂಭಕ್ಕೆ ಅದೇ ಆಗ ಶಾಸಕರಾಗಿ ಆಯ್ಕೆಯಾಗಿದ್ದ ಗೋವಿಂದೇಗೌಡರು ತಮ್ಮ ಆಪ್ತೇಷ್ಟರೊಂದಿಗೆ ಬಂದಿದ್ದರು. ಪ್ರತಿ ವಿದ್ಯಾರ್ಥಿ , ವಿದ್ಯಾರ್ಥಿನಿಯರ ಹೆತ್ತವರು, ಆಪ್ತರಿತ್ಯಾದಿ ಬಂದಿದ್ದರು. ಗಿಜಿ ಗಿಜಿ ಅನ್ನುತ್ತಿರುವ ಪ್ರಾಂಗಣ. ಸಂಜಯಗಾಂಧಿ ಎಂಬ ಹೊಸತು ಕೂಸಿನ ಬಗ್ಗೆ ಹಲವರು ಅಲ್ಲಲ್ಲಿ ಮಾತಾಡುತ್ತಿದ್ದರು. ಕಾಲೇಜಿನ ಮಾರ್ಕ್ಸ್‌ವಾದಿ ಶಿಕ್ಷಕ ಪ್ರಾಂಗಣದ ಒಂದು ಮೂಲೆಯಲ್ಲಿ ವಿದ್ಯಾರ್ಥಿಗಳು ಅಂದಿನ ಕವಿಗೋಷ್ಥಿಗೆಂದೇ ಬರೆದಿದ್ದ ಕವಿತೆಗಳನ್ನು

ಪರಿಶೀಲಿಸುತ್ತಿದ್ದ. ಪ್ರತಿಯೊಂದು ಕವಿತೆಯಲ್ಲಿ ಕುಡುಗೋಲು ಕೋರೈಸುತ್ತಿತ್ತು. ಆ ಕುಡುಗೋಲುಗಳನ್ನು ಮಸೆದು ಮೊನಚು ಮಾಡತೊಡಗಿದ್ದ. ಶಾಮು ತನ್ನ ಒಂದು ನೀಳ್ಗವಿತೆ ನೀಡಿದ, ಯಮುನಾತೀರದಲ್ಲಿ‌ಋಷ್ನನ ನಿರೀಕ್ಷೆಯಲ್ಲಿರುವ ರಾಧೆಯ ಮನಸ್ಥಿತಿಯನ್ನು ಚಿತ್ರಿಸಿದ್ದ. “ಇಂದಿರಾಗಾಂಧಿ ಆಳುತ್ತಿರುವ ಸಂದರ್ಭದಲ್ಲಿ ಪ್ರೇಮ ಕಾಮದ ಬಗ್ಗೆ ಬರೆಯೋದು ಸಾಧುವಲ್ಲವೆಂದು” ಶಿಕ್ಷಕ ಕವಿ ಶಾಮುವಿಗೆ ಬುದ್ಧಿ ಹೇಳಿದ, “ಈ ವಯಸ್ಸಿನಲ್ಲಿ ಕ್ರಾಂತಿ ಬಗ್ಗೆ ಸಮಾಜದಲ್ಲಿ ತಾಂಡವವಾಡುತ್ತಿರುವ ಅಸಮಾನತೆ ಬಗ್ಗೆ ರೊಚ್ಚಿಗೆದ್ದು ಬರೆಯಬೇಕಪ್ಪಾ ಶಾಮಾಶಾಸ್ತ್ರಿ” ಎಂದು ಭಯಂಕರ ಬುದ್ಧಿ ಹೇಳಿದ. ಶಾಮಾಶಾಸ್ತ್ರಿಗೆ ತನ್ನ ಬ್ರಹ್ಮಣ್ಯದ ಬಗ್ಗೆ ಕೀಳರಿಮೆ ಮೂಡಿತು, ಹೊಟ್ಟೆಕಿಚ್ಚು ಮೂಡಿತು, ತಾವು ಶೂದ್ರರಾಗಿ ಹುಟ್ಟಿರುವುದೇ ಅಡ್ವಾಂಟೇಜ್ ಎಂದು ಭಾವಿಸಿದ್ದಾರೆ ಎಂದುಕೊಂಡ.

ತನ್ನ ಕವಿತೆ ಮತ್ತೊಮ್ಮೆ ಓದಿಕೊಂಡ, ಚನ್ನಾಗಿದೆ ಅನ್ನಿಸಿತು., ಪ್ರತಿಯೊಂದು ಅಕ್ಷರವನ್ನು ಸಾಣೆ ಹಿಡಿದಿದ್ದ. ಪ್ರತಿಯೊಂದು ಶಬ್ದವನ್ನು ಪುಟ್ಟ ಪುಟ್ಟ ಆಭರಣದಂತೆ ರೂಪಿಸಿದ್ದ…

ಅದರಲ್ಲಿ ತಾನು ಕೃಷ್ಣನಾಗಿದ್ದ. ಅನಸೂಯ ರಾಧೆಯಾಗಿದ್ದಳು. ಯಮುನಾ ನದಿ ಎಂದರೆ ಹುಲುಲಿ ಹಳ್ಳ. ರಿಜರ್ ಜಾಲಿ ಗಿಡಗಳೇ ತುಳಸಿ ವನ. ಅಗಸರ ಸಾಂಬಿಯಾನ ಕತ್ತೆಗಳು; ಗೌಡರ ಕಾಲಿಲ್ಲದ ಕುದುರೆ ಮುಂತಾದುವೆಲ್ಲ ಗೋವುಗಳು; ಶಿಳ್ಳೆಯೇ ವೇಣು… ಹೀಗೆ ಎನೇನೋ ಸಂಕೇತಗಳನ್ನು ಪ್ರತಿಮೆಗಳನ್ನು ಪೋಣಿಸಿ ಪೋಣಿಸಿ ಕವನ ಹೆಣೆದು ತಂದಿದ್ದ…

ಬಕಪಕ್ಷಿಗಳ ನಡುವೆ ಹಂಸಪಕ್ಷಿ ಯಾವ ಪ್ರಕಾರವಾಗಿ ಶೋಭಾಯಮಾನವಾಗಿ ಗೋಚರಿಸುತ್ತದೋ ಹಾಗೆ ಸಭಸದರ ನಡುವೆ ಅನಸೂಯಾ ದೇದಿಪ್ಯಮಾನವಾಗಿ ಹೊಳೆಯುತ್ತಿದ್ದಳು. ಎಕ್‌ಸ್ಟ್ರಾ ನಟಿಯರ ನಡುವೆ ಹೀರೋಯಿನ್ ಇರುತ್ತಾಳಲ್ಲ ಹಾಗೆ.

ನೀನು ಯಾವುದೇ ಕಾರಣ ಓದದಂತಿರಬೇಡ. ನೀನು ಓದಲೇಬೇಕು…ಎಂದು ಆಕೆ ಬರೆದಿದ್ದ ಚೀಟಿ ತಲುಪಿ ಆತನಲ್ಲಿ ಸಹಸ್ರ ಆನೆಯ ಬಲ ತುಂಬಿತು.
ಕ್ರಾಂತಿಕಾರಿ ಲೆಕ್ಚರರ್ ’ ಮೈಕ್ ಟೆಸ್ಟಿಂಗ್ ತ್ರೀಟುವನ್’ ಅಂದ, ತನ್ನ ಧ್ವನಿ ತಾನೇ ಕೇಳಿ ರೋಮಾಂಚನಗೊಂಡ. ಆತನೇ ಕಾರ್ಯಕ್ರಮ ನಿರ್ವಾಹಕ. ಅದು ಆತನ ನೆಚ್ಚಿನ ಕೆಲಸ. ಪ್ರತಿಯೊಂದಕ್ಕೆ ಕೆಂಪು ವಂದನೆಗಳು ಅಂತ ಹೇಳೋದೆಂದರೆ ಆತಗೆ ತುಂಬ ಇಷ್ಟ. ಅದನ್ನು ಹೇಳಲಿಕ್ಕೆಂದೇ ಹೋಚಿಮಿನ್ ಥರ ಗಡ್ಡ ಬಿಟ್ಟಿದ್ದ, ಮಾವೋನ ರೀತಿಯಲ್ಲಿ ಹುಬ್ಬುಗಳನ್ನು ಟ್ರಿಮ್ ಮಾಡಿದ್ದ. ಕ್ಯಾಸ್ಟ್ರೋ ಥರ ಉದ್ದ ಕಾಣಿಸಬೇಕೂಂತ ’ಹೈ ಹೀಲ್ಡ್’ ಶೂ ಧರಿಸುತ್ತಿದ್ದ. ಬೊಲಿವಿಯ್ದ್ ಕ್ರಾಂತಿಕಾರಿ ಕಾರ್ಮಿಕನ ಥರ ಕಾಣಿಸಬೇಕೂಂತ ಅವರ ಶೈಲಿಯ ಹ್ಯಾಟ್ ಧರಿಸುತ್ತಿದ್ದ. ತನ್ನ ಆರು ಸಾವಿರ ರುಪಾಯಿ ಸಂಬಳದ ಪೈಕಿ ಸುಮಾರು ಐವತ್ತು ರೂಪಾಯಿಗಳನ್ನು ಕ್ರಾಂತಿಕಾರಿ ಚಟುವಟಿಕೆಗಳಿಗೆ ಮೀಸಲಾಗಿರಿಸುತ್ತಿದ್ದ.
ಸ್ವಾಗತದಿಂದ ಹಿಡಿದು ವಂದನಾರ್ಪಣೆವರೆಗೆ ಆತನದೇ ಕೆಂಪು ಕೆಂಪು… ಆತ ಮೈಕೆದುರು ನಿಂತುಕೊಂಡನೆಂದರೆ ಮುಟ್ಟಾಗುತ್ತಿರುವನೆಂದೇ ಅರ್ಥ.
ಕಾಮ್ರೇಡ್ ಗೋವಿಂದೇಗೌಡರಿಗೆ ಎಂದು ಸಂಭೋದಿಸಿ ಕ್ರಾಮೇಡ್ ಶೈಲಿಯಿಂದ ಆ ಶಾಸಕ ಮಹೋದಯರ ಕಡೆಗೆ ನೋಡಿದ.
ಅವರಿಗೆ ’ಕಾಮ್ರೇಡ್’ ಎಂಬ ಪದದ ಅರ್ಥವಾಗಿದ್ದರೆ ತಾನೆ?
ಆತ ನೀಡುತ್ತಿರುವ ಬಿರುದಿರಬೇಕೆಂದು ಅವರು ಭಾವಿಸಿ ಹಸನ್ಮುಖಿಯಾದರು!

ಕೆಲವು ಮಠಗಳವರು ’ಶರಣ” ಎಂಬ ಸ್ಟಿಕ್ಕರ್ ಹಚ್ಚುತ್ತಾರಲ್ಲ ಹಾಗೆ.
ಹೀಗೆ ಎಲ್ಲರಿಗೂ ಅಂಥದೊಂದು ಲೇಬಲ್ಲು ಅಂಟಿಸಿ ಪುನೀತರನ್ನಾಗಿ ಮಾಡಿದ, ಕೆಲವರಿಗೆ ಲೆನಿನ್ ಎಂದೋ, ಏಂಗೆಲ್ಸ್ ಎಂದೋ; ಚಿಗುವೆರಾ ಎಂದೋ ಬಿರುದು ನೀಡಿ ಹಲೋ ಹಲೋ ಅನ್ನಿಸಿಕೊಂಡ.
ಪ್ರಾರ್ಥನೆ ಆತನೇ ಬರೆದ ಹಾಡನ್ನು ಬಿ.ಎ. ದ್ವಿತೀಯ ವರ್ಷದ ವಿದ್ಯಾರ್ಥಿನಿಯರು ಹಾಡಿ ಸಭಾಸದಸ್ಯರ ಅನುಕಂಪಕ್ಕೆ ಪಾತ್ರರಾದರು.
ಕೆಂಪು ವಂದನಾ ಪುಷ್ಪಗಳನ್ನು ನೀಡಿ
ಕೆಂಪು ಸ್ವಾಗತ ಕೋರುವೆವು ನೋಡಿ
ಇಂಥದೊಂದು ಹಾಡು ಅದಾಗಿತ್ತು. ಮುಖ್ಯವಾಗಿ ಜಗದ್ಗುರು ಎಂಟೊಂಭತ್ತು ಸಾವಿರ ಮಠದ ಕಾಲೇಜು ಅದಾಗಿತ್ತಲ್ಲವೆ? ಅದರ ಸಂಸ್ಥಾಪಕರಾದ ಜಗದ್ಗುರು ಶ್ರೀಮನ್ನಿರಂಜನ ಎತ್ತೇಂದ್ರ ಮಹಾಸ್ವಾಮಿಗಳ ಭಾವಚಿತ್ರ ಅನಾವರಣವನ್ನು ಇನ್ನೊಬ್ಬ ಜಗದ್ಗುರು ಬೆಳದಿಂಗಳೇಶವರರು ಮಾಡಬೇಕಿತ್ತು.
ನಮ್ಮ ಈ ಕೆಂಪು ಲೆಕ್ಚರರು ಫೊಟೋದಲ್ಲಿದ್ದ ಜಗದ್ಗುರುವಿಗೂ ಕಾಮ್ರೇಡು ಎಂದೂ ಅದನ್ನು ಅನಾವರಣ ಮಾಡಿದವರಿಗೆ ’ಡಬಲ್ಕಾಮ್ರೇಡು’ ಎಂದು ಸಂಭೋದಿಸಿದ.

ಜಗದ್ಗುರುಗಳು ಪ್ರಿನ್ಸಿಪಾಲರ ಕಿವಿಯಲ್ಲಿ ಬಾಯಿಯಿಟ್ಟು ’ಅಂತೂ ಇವನಾದ್ರು ನಮ್ಗೆ ಕಾಮ್ರೇಡ್ ಎಂದು ಬಿರುದು ಕೊಟ್ಟನಲ್ಲ. ನಾಳೆ ಈತನನ್ನು ನಮ್ಮ ಸನ್ನಿಧಾನಕ್ಕೆ ಕಳುಹಿಸಿ ಕೊಡಿ. ಒಂದಿಷ್ಟು ವಿಚಾರಿಸಿಕೊಳ್ಳೋದಿದೆ’ ಎಂದು ಪಿಸಿಪಿಸಿ ನುಡಿದರು.
ಕವಿಗೋಷ್ಠಿ ಮತ್ತಷ್ಟು ಕೆಂಪುವಿನಿಂದ ಕೂಡಿತ್ತು.

ಒಬ್ಬ ಕವಿ ಮಾಂಸಕ್ಕೆ ರಕ್ತ ಕಲೆಸಿ ಅದಕ್ಕೆ ಎಲುಬು ಬೆರೆಸಿ ಕಾಂಕ್ರೀಟು ಮಾಡಿ ಗುಡಿ ಕಟ್ಟಿ ಅದರಲ್ಲಿ ಭಾರತ ಮಾತೆಯನ್ನು ಪ್ರತಿಷ್ಠಾಪಿಸಿ ಮೆಚ್ಚುಗೆ ಗಳಿಸಿದರೆ, ಮತ್ತೊಬ್ಬ ಕವಿ ’ಹೊಡಿ ಬಡಿ ಕಡಿ’ ಎಂಬೀ ಮೂರು ಶಬ್ದಗಳನ್ನೇ ಉಪಯೋಗಿಸಿ ಸೊಗಸಾದ ಕವನ ವಾಚನ ಮಾಡಿದ. ಮಗದೊಬ್ಬ ಕವಿ ಉಳ್ಳವರ ಪಕ್ಕೆಲುಬುಗಳ ಪಟ್ಟಿ ಮಾಡಿದ. ಕವಯತ್ರಿಯೋರ್ವಳು ಮದುವೆಯಾಗಲಿರುವ ಗಂಡನ ಮೇಲೆ ಪಕ್ಕ ಅಬುದಾಬಿಯ ಎಣ್ಣೆ ಸುರಿದು ಬೆಂಕಿ ಹಚ್ಚಿ ಬಿಟ್ಟಳು. ಹೀಗೆ ಕವಿಗಳು ಒಬ್ಬರ ಹಿಂದೆ ಒಬ್ಬರು ನುಗ್ಗಿ ಕವಿತೆ ವಾಚಿಸಿ ಸಭಾಸದರ ಮುಖಗಳಿಗೆ ಹರಳೆಣ್ಣೆ ಲೇಪಿಸಿದರು.
ದೂರದಿಂದ ’ಓದೋ’ ಎಂದು ಅನಸೂಯ ಕಣ್ಣು ಮಿಟಿಕಿಸುತ್ತಿದ್ದಾಳೆ, ಒಂದು ಹೆಜ್ಜೆ ಮುಂದಕ್ಕೆ ಎರಡು ಹೆಜ್ಜೆ ಹಿಂದಕ್ಕೆ ಸರಿದು ಗೊಂದಲಕ್ಕೀಡಾದನು.
ನಗ್ನೋ ನಿಸ್ಸಂಗ ಶುದ್ಧ ಶ್ರೀಗುಣ ವಿರಹಿತೋ ಧ್ವಸ್ತ ಮೋಹಾಂದಕಾರೋ… ಅಂತ ಎನೇನೋ ಗೊಣಗಿ ಆವೇಶ ತಂದುಕೊಂಡು ಜೈ ಭಜರಂಗ ಬಲಿ ಅಂತ ವೇದಿಕೆಗೆ ನುಗ್ಗಿಬಿಟ್ಟ. ಆತನನ್ನು ಯಾವ ಕಾಮ್ರೇಡುಗಳಿಗೂ ತಡೆಯಲಾಗಲಿಲ್ಲ.

ಸನಾತನ ಹಿಂದೂ ಧರ್ಮ ಪುನರುತ್ಥಾನದ ಬಗ್ಗೆ ಕವಿತೆ ಓದ ಬಹುದೆಂದು ಅವನ ವೇಷ ಭೂಷಣಗಳಿಂದ ಅರ್ಥೈಸಿಕೊಂಡು ಕಾಮ್ರೇಡ್ ಜಗದ್ಗುರು ಓದಲಿ ಬಿಡಿ ಎಂದು ತಮ್ಮ ಮೂಗಿನಿಂದ ಸಂಜ್ಞೆ ಮಾಡಿದರು.

ಶಾಮು ಮೈಕ್‌ನೆದುರು ನಿಂತು ಗಂಟಲು ಸರಿ ಪಡಿಸಿಕೊಂಡ. ಒಮ್ಮೆ ಅನಸೂಯಳ ಕಡೆಗೆ ನೋಡಿದ, ಹಿಂದೆ ಕೂತಿದ್ದ ಒಬ್ಬ ಆಕೆಯ ಜಡೆಗೆ ಏನೋ ಕಟ್ಟುತ್ತಿರುವುದು ನೋಡಿದ. ಸಂಜ್ಞೆಗಳ

ಮೂಲಕ ಆ ಬಗ್ಗೆ ಎಚ್ಚರಿಸಲು ಪ್ರಯತ್ನಿಸಿದ, ಹೋದೆಯಾ ಪಿಶಾಚಿ ಅಂದರೆ ಬಂದೆಯಾ ಗವಾಕ್ಷಿಯೊಳಗೆ ಎಂಬಂತೆ ಗೊಬ್ಬರದಂಗಡಿ ಜಲಜಾಕ್ಷಿ ಸೈಡ್ ವಿಂಗಿನಿಂದ ಹೊರಬಂದು ನಿಂತಳು. ಮೀಸೆ ತಿರುವುತ್ತ ತೊಡೆತಟ್ಟುತ್ತ ಕವಿತೆಯ ಮೂಲ ಎಳೆ ಬಗ್ಗೆ ಸೂಚಿಸಿದಳು.
ಆ ಕಡೆ ಓದು ಎನ್ನುತ್ತಿರುವ ಅನಸುಯ ಈ ಕಡೆ ಓದಿದರೆ ಮುಂಜಿ ಮಾಡಿಸ್ತೀನಿ ಎಂದು ಸೂಚಿಸುತ್ತಿರುವ ಜಲಜಾಕ್ಷಿ ಎಂಬ ತಿಂಥಿಣಿ ದಳ ಸುಲೋಚನೆ…
ಏನಕೇನ ಪ್ರಕಾರೇಣ… ಓದಲೇಬೇಕೆಂದು ನಿರ್ಧರಿಸಿಬಿಟ್ಟ ಗಂಡುಗಲಿ.
ಹುಲುಲಿಹಳ್ಳದ ದಂಡೆ
ನೀರಬರುವುದ ಕಂಡೆ
…ಎಂದು ಓದಿದೊಡನೆ ಪ್ರೇಕ್ಷಕರು ಉಂಡೆ, ಕುಂಡೆ, ಸಂಡೆ, ಮಂಡೆ ಎಂಬಂಥ ಪ್ರಾಸ ರಸಭರಿತ ಶಬ್ದಗಳನ್ನು ಕೂಗಿದರು. ಜಲಜಾಕ್ಷಿ ಸೀಟಿ ಹೊಡೆದರೆ ಅನಸೂಯ ಹಣೆಹಣೆ ಚಚ್ಚಿಕೊಂಡಳು. ಜಗದ್ಗುರುಗಳು ಕೂಡ ನಗುತ್ತಾ ಸಾಕುಬಿಡಪ್ಪಾ ಎಂದರು.
ಸಾವಿಗೆ ಸಮಾನವಾದ ಇಂಥ ಅವಮಾನ ಅನುಭವಿಸುವುದಕ್ಕಿಂತ…
ಶಾಮುಗೆ ಏನು ತೋಚಿತೋ ಎನೋ…
ಸಾಮಗಾನ ಪ್ರಿಯೆ ಕಾಮ ಕೋಟಿ ನಿಲಯೇ

…ಎಂಬ ಮುತ್ತುಸ್ವಾಮಿ ದೀಕ್ಷಿತರ ಕೃತಿ ಸೊಗಸಾಗಿ ಹಾಡಿಬಿಟ್ಟನು. ಕೇಳಿದವರೆಲ್ಲ ಆನಂದ ಸಾಗರದಲ್ಲಿ ಈಜಾಡಿದರು. ಗೊಬ್ಬರದಂಗಡಿ ಟ್ರೇಡ್ಮಾರ್ಕ್ ಅಭಿನಂದಿಸುವ ನೆಪದಲ್ಲಿ ವೇದಿಕೆಗೆ ನುಗ್ಗಿ “ನಾಳೆ ಸೂರ್ಯಾಸ್ತದೊಳಗಾಗಿ ನಿನ್ನ ನಾನು ರೇಪ್ ಮಾಡ್ಲಿಲ್ಲ ನಾನು ಗೊಬ್ಬರದಂಗಡಿ ಗುರುಬಸಪ್ಪನ ಮಗಳೇ ಅಲ್ಲ” ಎಂದು ಪಿಸಿಪಿಸಿ ನುಡಿದಳು. ದಯವಿಟ್ಟು ನನ್ನ ಕೊಲೆ ಮಾಡಬೇಡ ಎಂಬಂತೆ ಆತ ಆಕೆಯ ಕಡೆ ನೋಡು ನೋಡುತ್ತಿದ್ದಂತೆ ಅಳು ಬಂದು ಬಿಟ್ಟಿತು.

ಸ್ವಾಮಿಗಳು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಶಂಕರಾಭರಣರಾಗದ ಬಗ್ಗೆ ಪ್ರಸ್ತಾಪಿಸಿದರು. ಇದರ ಕೃತಿಕಾರ ದೀಕ್ಷಿತರು ತಮ್ಮ ಮಠದಲ್ಲಿದ್ದ ಇತಿಹಾಸ ಬೆದಕಿದರು. ಹಾಗು ಹಾಡಿದ ಶಾಮನ ಬಗ್ಗೆ ಮೆಚ್ಚಿಗೆ ಸೂಚಿಸುತ್ತ ಈ ತರುಣ ಸಂಗೀತ ಕಲಿಯೋದಾದ್ರೆ ಎಲ್ಲ ಖರ್ಚನ್ನು ತಾವು ಭರಿಸುತ್ತೇವೆ ಈಂದು ಹೇಳಿದರು. ಭಾರಿ ಕರತಾಡನವಾಯಿತು.
“ಶಂಕರಾಭರಣದಲ್ಲಿ ಸ್ಟಾಲಿನ್ ಬಗ್ಗೆ ಹಾಡೋದಾದ್ರೆ ಮುಂದಿನ ಕವಿಗೋಷ್ಠಿಯಲ್ಲಿ ಅವಕಾಶ ಮಾಡಿಕೊಡ್ತಿನಿ” ಎಂತ ತನ್ನದೇ ಆದ ಶೈಲಿಯಲ್ಲಿ ಕ್ರಾಂತಿಕಾರ ಲೆಕ್ಚರರ್ ಅಭಿನಂದಿಸಿದ. ನಿನ್ನಂಥ ವಿಧ್ಯಾರ್ಥಿ ಪಡೆದಿರೋದಕ್ಕೆ ನಾವೆಲ್ಲ ತುಂಬ ಹೆಮ್ಮೆ ಪಡ್ತೀವಿ ಶಾಮಶಾಸ್ತ್ರಿ… ಈ ವರ್ಷ ಬಿ.ಎ. ಮುಗೀತದಲ್ಲ… ಮುಂದೇನ್ಮಾಡಬೇಕೆಂದಿರುವಿ… ಎಂದು ಪ್ರಿನ್ಸಿಪಾಲರು ಸಂತೋಷ ವ್ಯಕ್ತಪಡಿಸುತ್ತ ಮುಂದುವರಿದು ಹೇಳಿದರು. “ಅವಿವಾಹಿತ ಪ್ರತಿಭಾವಂತ ತರುಣರೆಂದರೆ ಸ್ವಾಮಿಗಳಿಗೆ ಇಷ್ಟ… ಹಾಗಂತ ಸಂಗೀತದ ಬಗ್ಗೆ ತಲೆ ಕೆಡಿಸಿ ಕೊಂಡಿಯೆ ಜೋಕೆ…”
ಆಫೀಸ್ ಕಡೆ ಹೊರಟಿದ್ದವರು ತಡೆದು ನಿಂತು ಶಾಸ್ತ್ರಿಯನ್ನು ಕರೆದರು.
“ಯಾವಾಗಲಾದ್ರು ಬಿಡುವುಸಿಕ್ಕಾಗ ಮನೆಕಡೆ ಬಂದು ಹೋಗು!” ಎಂದು ಹೇಳಿ ಹೋದರು.

ತನ ನಂತರ ಸಿಕ್ಕ ಅನಸೂಯಗೆ ಜಲಜಾಕ್ಷಿ ಮತ್ತಿ ಪ್ರಿನ್ಸಿಪಾಲರು ಅಭಿನಂದಿಸಿದ ಬಗೆಯನ್ನು ವಿವರಿಸಿದ. ಆಕೆಯ ಹೃದಯದ ಬಡಿತ ಹೆಚ್ಚಿತು.
“ಶಾಮೂ ಯಾಕೋ ಟೈಮು ಚೆನ್ನಾಗಿಲ್ಲ… ನನಗ್ಯಾಕೋ ಭಯ ಆಗ್ತಿದೆ… ಒಂದೆರಡು ದಿನ ಯಾರ ಕಣ್ಣಿಗೂ ಬೀಳದಂತೆ ಮನೇಲಿರು” ಆಕೆಯ ಮಾತು ಪೂರ್ಣಗೊಂದಲದಿಂದ ಕೂಡಿ ಇರಲಿಲ್ಲ.

ಗೊಬ್ಬರದಂಗಡಿ ಜಲಜಾಕ್ಷಿಗೆ ಗ್ಲೋಬಿನಂಥ ವಕ್ಷೋಜಗಳು ಇದ್ದಮಾತ್ರಕ್ಕೆ ಆಕೆ ಪೂರ್ಣ ಮಹಿಳೆ ಅಂತ ಹೇಳಲಿಕ್ಕಾಗದು. ದಿನಕ್ಕೆರಡು ಹೊತ್ತು ಬೀಫ್ ಲಗಾಯಿಸುವ ಆಕೆಯ ಹಿಂದೆ ನಾಕು ಮಂದಿ ಮುಂದೆ ಮೂರು ಮಂದಿ ಗಂಡಸರನ್ನು ಸದಾ ಇಟ್ಟುಕೊಂಡಿರುತ್ತಾಳೆ… ಆಕೆ ಪೋಲಿಸ್ ಸ್ತೇಷನ್ನೆದುರಿಗೆ ಶಾಮುನನ್ನು ಹಿಡಿದೆಳೆದೊಯ್ದು ರೇಪ್ ಮಾಡಿ ಬಿಡಲೂ ಬಹುದು.

ಇನ್ನು ಎರಡನೆಯದಾಗಿ ಪ್ರಿನ್ಚಿಪಾಲ ಶಿವರಾಮರಾಯರ ಧರ್ಮ ಪತ್ನಿ ರಾಜೇಶ್ವರಮ್ಮ ಎರಡಡಿಗೊಂದರಂತೆ ಹೆಣ್ಣು ಹೆತ್ತು ನೆಟ್ಟಿರುವಂಥವಳು… ಸೀರಿಯಲ್ ನಂಬರ್ ಮೂರು ಮತ್ತು ಆರು ಇವೆ, ನಾಲ್ಕನೆ ನಂಬರ್ ವುಮನ್ಸ್ ಕಾಲೇಜಿದುರಿಗೆ ತಳ್ಳೋ ಬಂಡಿಯಲ್ಲಿ ಶೇಂಗಾ ಮಾರುತ್ತಿದ್ದ ರಾಜಾಸಾಬನ ಹಿಂದೆ ಬಂಡಿ ಪುರಕ್ಕೆ ಓಡಿಹೋದಳಂತೆ… ಮೂರು ಮತ್ತು ನಾಲ್ಕು ನಂಬರಿಗಳಿಗೊಂದೊಂದು ಗಂಡು ಹುಡುಕಿ ಮೆಡಿಮಿಕ್ಸ್ ಹಚ್ಚಿ ತೊಳೆದುಕೊಂಡು ಪ್ರಿನ್ಸಿಪಾಲರು ಶ್ರೀಶೈಲದ ಕದಳೀವನ ಪ್ರವೇಶ ಮಾಡಿ ಸಲ್ಲೇಖನ ವ್ರತ ಮಾಡಿ ಪ್ರಾಣ ತ್ಯಾಗ ಮಾಡಬೇಕೆಂದು ನಿಸ್ಚಯಿಸಿರುವರಂತೆ…

ತಮ್ಮ ಪ್ರಾಣ ಪದಕ ಅನಸೂಯ ಹೇಳಿದ್ದರಲ್ಲಿ ನಿಜವಿಲ್ಲದಿರಬಹುದು ಆದರೆ ಸುಳ್ಳಿರಲಿಕ್ಕಿಲ್ಲ. ಇವೆರಡೂ ತನಗೆ ಭಯಾನಕ ಅಂಶಗಳೇ. ಆಕೆ ಹೇಳಿದಂತೆ ಕೋಣೆ ಪ್ರಸ್ತಾಶ್ರಮ ಪ್ರವೇಶಿಸಿದ.

“ನಾನು ನಿನಗೆ ಎಷ್ಟು ಸಾರಿ ಹೇಳಬೇಕೋ ದೀಕ್ಷಿತರ ಆ ಕೃತಿ ಹಾಡಕೂಡದಂತ…” ಶಾಸ್ತ್ರಿಗಳು ಖೇದದಿಂದ ನುಡಿದರು ಅವರು ದೂರನಿಂತು ಕೇಳುತ್ತಿದ್ದರು. ಪ್ರತಿ ಧ್ವನಿ ವಿಲಾಸಕ್ಕೆ ಕಣ್ಣು ತೇವ ಮಾಡಿಕೊಂಡಿದ್ದರು. ಯೌವನದ ನೆನಪುಗಳು ಒಮ್ಮೆಗೆ ಧಾಳಿ ಮಾಡಿ ಘಾಸಿಗೊಳಿಸಿಬಿಟ್ಟವು.
ಇಪ್ಪತ್ತೈದರ ಹರೆಯದ ನೆನಪುಗಳನ್ನು ಸಹಿಸುವ ಶಕ್ತಿ ಅವರ ತೊಂಬತ್ತೆರಡರ ವಯಸ್ಸಿನ ದೇಹಕ್ಕೆ ಹೇಗೆ ಸಾಧ್ಯ!?
ಆ ವಯಸ್ಸಿನಲ್ಲಿ ಆ ಚಟುವಟಿಕೆ ತಪ್ಪೋ ಸರಿಯೋ; ಅದೊಂದು ವಿಧಿ ನಿಯಮ – ಋಣಾನುಬಂಧೇ ರೂಪೇಣಾಂ…
ಕನ್ನಡಿಯಲ್ಲಿ ತಮ್ಮನ್ನು ಅಣಕಿಸುತ್ತಿರುವ ಪ್ರತಿಬಿಂಬ. ನಿಡಿದಾದ ಉಸಿರುಬಿಟ್ಟರು.
ಶಾಮಾಶಾಸ್ತ್ರಿಗೆ ನೋವಾಯಿತು.
“ನಿಮಗೆ ದುಃಖ ಆಗೋದಾದ್ರೆ… ನಾನು ದೀಕ್ಷಿತರ ಕೃತಿ ಹಾಡುವುದಿಲ್ಲ ತಾತ!”
ಮೊಮ್ಮಗನನ್ನು ಬರಸೆಳೆದು ಅಪ್ಪಿಕೊಂಡರು.

“ನಿನಗೆ ಸೊಗಸಾದ ಶಾರೀರವಿದೆ ಶಾಮೂ; ನೀನು ಹಾಡುತ್ತಲೇ ಇರಬೇಕು. ನನ್ನ ಎದೆಯಾಳದಲ್ಲಿ ಸತ್ತು ಹೋಗಿರುವ ನೆನಪುಗಳಿಗೆ ನೀನು ಜೀವ ತುಂಬಬೇಕು, ಆ ನೆನಪುಗಳ ಸಹಾಯದಿಂದ ನಾನಿನ್ನೂ ಬದುಕಬೇಕಿದೆ ಮಗೂ”

ಈ ನಡುವೆ ಕುಮಾರಿ ಅನಸೂಯಾ ಎಂಬ ಕನ್ಯಾಮಣಿಯ ಕುಟುಂಬಕ್ಕೆ ಸಂಬಂಧಿಸಿದಂತೆ ನಡೆದ ಕೆಲವು ದಾರುಣ ಘಟನೆಗಳು ಹೇಳುವುದು ಕೈಬಿಟ್ಟಿದ್ದೆ. ಶ್ರೇಣೀಕೃತ ಸಮಾಜದಲ್ಲಿ ಹುಟ್ಟಿ ಬೆಳೆದಿರುವ ಯಾವ ವರ್ಗದ ಪರವಾಗಿ ತಾತ್ವಿಕ ನಿಲ್ಲುವುದು ಎಂಬ ಕನ್‌ಫ್ಯೂಷನ್‌ನಲ್ಲಿದ್ದೆ ಮತ್ತು ಈಗಲೂ ಇರುವೆ. ಬದುಕುವ ಕ್ರಮ ಯಾರಿಗೆ ಸುಲಭ ಮತ್ತು ಯರಿಗೆ ಕಷ್ಟ ಎಂಬುವುದು ಲೇಖಕನಾಗಿ ಅರ್ಥಮಾಡಿಕೊಳ್ಳುವುದು ನನ್ನ ಜವಾಬ್ದಾರಿ, ನೀಚಸ್ಥಾನದಲ್ಲಿರುವ ಮನುಷ್ಯನ ಬಗ್ಗೆ ತೀರ ಎತ್ತರದ ದ್ವನಿಯಲ್ಲಿ ಮಾತಾಡುತ್ತಿದ್ದ ನಾನು ಪರಮೇಶ್ವರ ಶಾಸ್ತ್ರಿಗಳ ಪರವಾಗಿ ನಿಂತು ವಕಾಲತ್ತು ವಹಿಸಿರುವೆನೆಂದು ಗೊತ್ತು. ಬುದ್ಧಿ ಪೂರ್ವಕವಾಗಿಯೇ ಈ ಕೆಲಸ ಮಾಡಿರುವೆ ಮತ್ತು ಮಾಡುತ್ತಿರುವೆ ಸನಾತನೆಗೆ ಶಾಕ್ ಕೊಡದ ಹೊರತು ಶೂದ್ರ ವರ್ಗದೊಳಗಿನ ಸ್ಪಂದನಗಳು, ಜೀವನೋತ್ಸಾಹಗಳು ಫಳಫಳ ಹೊಳೆಯಲಾರವು.

ರುದ್ರನಾಯಕನಂಥ ಶೂದ್ರನಿಗೆ ಶಿಷ್ಟವರ್ಣಿಯ ನಂಬಿಕೆಗಳು: ದೇವರು ದಿಂಡರುಗಳು ಬೆಲೆ ಕೊಡೋದಿಲ್ಲ ಅವನ ಹತ್ತಿರವೂ ಸುಳಿಯುವುದಿಲ್ಲ: ರುದ್ರನಾಯಕನಿಗೆ ಬೇಕಾಗಿದ್ದುದು ಕಂಚಿಕಾಮಕೋಟಿ ಶ್ರೀಗಳಲ್ಲ ಮೈಗೆಲ್ಲ ಬೂದಿಬಳಕೊಂಡು ಸುಡುಗಾಡಲ್ಲಿ ವಾಸಮಾಡೋ ಸಾಧುಗಳು, ಅವಧೂತರು. ಮಾಟ ಮಂತ್ರ ಮಾಡಬೇಕು, ಉಳ್ಳವರನ್ನು ಮರಳು ಮಾಡಬೇಕು. ಹೀಗೆ ಮಾಡಿ ಮಾಡಿ ತಾನು ಉಳ್ಳವನಾಗಬೇಕು, ತಾನೂ ಚುಕ್ ಚುಕ್ ಮೋಟಾರು ಗಾಡಿಯಲ್ಲಿ ತಿರುಗಾಡಬೇಕು, ಹೆಂಡತಿ ರುಕ್ಮಿಣಿ ತನ್ನ ಕೈಹಿಡಿದು ಪಡಬಾರದ ಕಷ್ಟ ಪಟ್ಟು ತನ್ನ ಏಳ್ಗೆಗಾಗಿ ಸವೆದ ಶ್ರೀಗಂಧದ ಕೊರಡು, ಆಕೆಯ ಜೀವನವನ್ನು ಸುಖದ ಸುಪ್ಪತ್ತಿಗೆ ಮೇಲಿಟ್ಟು ಮೆರಸಬೇಕು. ಏಕಮಾತ್ರ ಪುತ್ರಿ ಅನಸೂಯ ತುಂಬ ಜಾಣೆ, ಚುರುಕು. ತಮಗೆ ಒಂದಿಷ್ಟು ಕಡಿಮೆ ಮಾಡಿಕೊಂಡು ಶಕ್ತಿ ಮೀರಿ ಓದಿಸಿದ್ದಾಯಿತು. ಸರಕಾರಿ ಸಂಬಳ ತಿಂಬೋ ವರನನ್ನು ಹುಡುಕಿ ಮದುವೆ ಮಾಡಬೇಕು, ವರದಕ್ಷಿಣೆ ಎಷ್ಟಾದರೂ ಸರಿಯೇ. ಮಗಳು ಸುಖವಾಗಿರಬೇಕು. ತಾನು ಗಳಿಸಿರುವ ಆಸ್ತಿಯಾದರೂ ಏನು? ಹಾಳಾದ ಭೂತಗಳು ಬಾಟಿಲಿಯಿಂದ ತಪ್ಪಿಸಿಕೊಳ್ಳದಿದ್ದರೆ ಚೆನ್ನಾಗಿತ್ತು. ಅವುಗಳನ್ನು ಹುಣಸೆ ಮರದ ಕೊಂಬೆಗೆ ಬಂಧಿಸಿಟ್ಟು, ಅವುಗಳಿಂದ ಎಲ್ಲೋ ಕೆಲಸ ಮಾಡಿಸಬಹುದಿತ್ತು. ಹಾಳಾದ ಶಾಸ್ತ್ರಿ ತನ್ನ ದುಡಿಮೆಗೆ ಕಲ್ಲು ಹಾಕಿರುವನಲ್ಲ! ಅಗ್ರಹಾರದಲ್ಲಿರುವವರು ಶೂದ್ರಕೇರಿಗೆ ಬಂದುಬಿಟ್ಟರೆ ಹೀಗೇ ಆಗುವುದು, ಮದ್ಯ ಅಮೇಧ್ಯದಿಂದ ಜಾತಿ ಬ್ರಷ್ಟನಾಗಿದ್ದ ಅಶ್ವತ್ಥಗೆ ತಾನೇ ಅಲ್ಲವೆ ಪ್ರಸಾದನನ್ನು ಪರಿಚಯಿಸಿದ್ದು, ಏನೋ ಪಾಪ ಸನಾತನ ತಂದೆಯನ್ನು ದೂರ ಮಾಡಿಕೊಂಡು ಬಂದಿದ್ದಾನಂತ, ಸತಿಸಾವಿತ್ರಿಯಂಥ ಹೆಂಡತಿಯನ್ನು; ಲೋಹಿತಾಶ್ವನಂಥ ಮಗನನ್ನು ಕಟ್ಟಿಕೊಂಡು ಅದೆಷ್ಟು ಒದ್ದಾಡುತ್ತಿದ್ದ. ಮಗನ ಮೇಲೆ ಕಕ್ಕುಲಾತಿಯಿಂದ ಶಾಸ್ತ್ರಿ ಅಗ್ರಹಾರವನ್ನು ತೊರೆದು ಬಿಡುವುದೇನು! ಕರುಳು ಎಲ್ಲಾ ಶಾಸ್ರ ಸಂಹಿತೆ, ಧರ್ಮ ಜಾತಿ ಮೀರಿ ಬೆಳೆಯುತ್ತದೆ., ಮನುಷ್ಯ ಸಂಬಂಧಗಳನ್ನು ಬೆಸೆಯುತ್ತದೆ., ಶಾಸ್ತ್ರಿ ಇಡೀ ಊರಿಗೆ ಅದ್ಯಾವ ಗಾಳಿ ಹಾಕಿರುವನೋ? ಗ್ರಹ, ನಕ್ಷತ್ರಗಳಿಗೆಲ್ಲ ತಾನೇ ವರಸುದಾರನೆಂಬಂತೆ ವರ್ತಿಸುತ್ತಿದ್ದಾನೆ. ಇಷ್ಟು ವಯಸ್ಸಾದರೂ ಹೇಗಿದ್ದಾನಲ್ಲ? ಹಲ್ಲು ಉದುರಿಲ್ಲ, ಜುಟ್ಟು ಮಾಸಿಲ್ಲ, ಬೆನ್ನೆಲುಬು ಬಾಗಿಲ್ಲ. ಮೈಖಂಡಗಳು ಎಲ್ಲೆಲ್ಲಿ ಎಷ್ಟೆಷ್ಟಿರಬೇಕೋ ಅಷ್ಟಷ್ಟೇ ಇವೆ, ಕಣ್ಣುಗಳು ಮಂಕಾಗಿಲ್ಲ.

ದೆವ್ವ ಪಿಶಾಚಿಗಳನ್ನು ವಾಕಿಂಗ್ ಹೋಗುವುದನ್ನು ವಾಕಿಂಗಿಗೆ; ಹನಿಮೂನಿಗೆ ಹೋಗುವುದನ್ನು ಹನಿಮೂನಿಗೆ ಕಳಿಸಿ ಬಿಡುವು ದೊರತಾಗಲೆಲ್ಲ ತನ್ನ ಅರ್ಥಿಕ ಸ್ಥಿತಿಗೆ ಶಾಸ್ತ್ರಿಯೇ

ಕಾರಣವೆಂದು ಅಶಾಸ್ತ್ರೀಯವಾಗಿ ಯೋಚಿಸಿದ್ದ ರುದ್ರನಾಯಕನಿಗೆ ಅಲುಮೇಲಮ್ಮನ ಮೇಲೆ ಅಪಾರಗೌರವ ಇತ್ತು. ಅದು ಹೇಳಿ ಕೇಳಿ ಮುಠ್ಠಾಳರು ವಾಸಿಸುತ್ತಿದ್ದ ಓಣಿ… ಎಲ್ಲರೂ ಸಜ್ಜನರೆಂದು ಹೇಳಳಿಕ್ಕಾಗದು, ಕೆಲವರು ಕುಡಿದ ಅಮಲಿನಲ್ಲಿ ಅಲುಮೇಲಮ್ಮನನ್ನು ಚುಡಾಯಿಸಿದ್ದಿದುಂಟು., ಕೆಲವರು ಎಳೆದಳಿರ ಮೃದುತಲ್ಪಕ್ಕೆ ಕಣ್ಸನ್ನೆಯಿಂದ ಆಮಂತ್ರಿಸುದ್ದಿದುಂಟು. ಅಂಥವರ ಪೈಕಿ ಕೆಲವರನ್ನು ಪತ್ತೆ ಮಾಡಿ ರುದ್ರನಾಯಕ ಮಗ್ಗುಲು ಮುರಿದು ಬುದ್ಧಿ ಕಲಿಸಿದ್ದ. ಒಂದಿಬ್ಬರಿಗೆ ಆತ ಮಾಟ ಮಾಡಿದನೋ! ಮಂತ್ರ ಹಾಕಿದನೋ! ಒಟ್ಟಿನಲ್ಲಿ ಅವರು ಹೆಳವರಾಗಿ ಬಸ್‌ನಿಲ್ದಾಣವನ್ನು ತಮ್ಮ ಖಾಯಂ ನಿವಾಸ ಸ್ಥಾನವನ್ನಾಗಿ ಮಾಡಿಕೊಂಡಿರುವರು. ಆದ್ದರಿಂದ ಅಲುಮೇಲಮ್ಮ ಇರೊ ಮನೆ ಕಡೆ ಯಾರೊಬ್ಬರೂ ಕೆಟ್ಟಕಣ್ಣಿನಿಂದ ನೋಡುವ ಸಾಹಸ ಮಾಡುವುದಿಲ್ಲ. ಅವರ ಮಗ ಶಾಮನಿಗೆ ಕೂಡ ರುದ್ರನಾಯಕ ಅಪ್ರತ್ಯಕ್ಷವಾಗಿ ನೆರವು ನೀಡಿರುವುದುಂಟು. ಇಲ್ಲದಿದ್ದರೆ ಗೊಬ್ಬರದಂಗಡಿಯ ಜಲಜಾಕ್ಷಿಯ ಗರಡಿ ಮನೆಯ ಪಡ್ಡೆಗಳು ಅಟಕಾಯಿಸಿ ತೊಂದರೆ ಮಾಡುತ್ತಿದ್ದರು. ಆದರೆ “ನಾನೇ ಮಾಡ್ದೆ” ಎಂದು ರುದ್ರನಾಯಕ ದನಿ ಎತ್ತರಿಸಿ ಹೇಳುವ ಜಾಯಿಮಾನದವನಲ್ಲ.

ಆತ ಮೇಲ್ನೋಟಕ್ಕೆ ಭಯಾನಕವೆಂಬಂತೆ ಇದ್ದರೂ ಒಳಗಡೆ ಎಲ್ಲೋ ಒಂದು ಕಡೆ ಮಗುವಿನ ಮನಸ್ಸು ಇತ್ತು. ಅದು ಅವನನ್ನು ಮನುಷ್ಯನನ್ನಾಗಿ ಮಾಡಿತ್ತು. ಸ್ವಭಾವತಃ ಒಳ್ಳೆಯ ಮನಸ್ಸಿನವನಾದ ಆತ ಅದನ್ನು ಸಹಜವಾಗಿ ಎಲ್ಲೂ ಪ್ರಕಟಿಸುತ್ತಿರಲಿಲ್ಲ. ಮೇಲೆ ಮೇಲೆ ತನಗೆ ಎಲ್ಲರೂ ಹೆದರಬೇಕೆಂದು ಬಯಸುತ್ತಿದ್ದ. ಯಾರಲ್ಲೂ ಇಲ್ಲದ ಅತೀಂದ್ರಿಯ ಶಕ್ತಿ ತನಗಿರುವುದೆಂದು ತಿಳಿದುಕೊಡಿದ್ದ. ದೆಹಲಿಯ ಭಂಭೂಂ ಸಾಧುಗೆ ಅವರಿಂದ ಪತ್ರ ಬರೆಸುತ್ತಲೇ ಇದ್ದ. ಪ್ರಧಾನ ಮಂತ್ರಿಗೆ ಪ್ರಿಯವಾಗಿರುವ ಆತನಿಂದ ಒಂದಾದರೂ ಪತ್ರ ಬರಬಹುದೆಂದು ಕಾಯುತ್ತಿದ್ದ. ಆ ಅಂಥ ಪತ್ರವೇನಾದರೂ ಬಂದರೆ ಅದನ್ನೇ ಒಂದು ಅಸ್ತ್ರವನ್ನಾಗಿ ಬಳಸಿಕೊಳ್ಳಬಹುದೆಂದು ಯೋಚಿಸಿದ.

ಆತ ಬರೆಯುತ್ತಿದ್ದುದು ಅನೇಕರಿಗೆ ಗೊತ್ತು.
“ಏನ್ರೀ ರುದ್ರನಾಯಕರೇ ದೆಹಲಿಯಿಂದ ಪತ್ರ ಬಂತೋ?’ ಎಂದು ವ್ಯಂಗ ಮಿಶ್ರಿತ ಧ್ವನಿ ಆಲಾಪಿಸುತ್ತಿದ್ದ ಹಿತೈಷಿಗಳಿಗೆ ಕೊರತೆ ಇರಲಿಲ್ಲ.
ಅವನೇನಾದರೂ ಸ್ವಲ್ಪ ಸಂತೋಷದಲ್ಲಿದ್ದನೆಂದರೆ –
“ಏನ್ರಿ ಸ್ವಾಮಿ, ಭಂಭೂಂ ಸಾಧು ಮಹಾರಾಜರಿಂದ ಸಂದೇಶ ಬಂದಂತಿದೆ” ಎಂದು ತಮ್ಮಷ್ಟಕ್ಕೆ ತಾವೇ ನಗೆಯಾಡುತ್ತಿದ್ದರು.
ಪ್ರತಿದಿನ ಇಂಥಾ ಒಂದಲ್ಲಾ ಒಂದು ಪ್ರಶ್ನೆಗಳನ್ನು ಆತ ನಿಭಾಯಿಸಬೇಕಾಗಿತ್ತು. ಈ ಇಂಥ ನಿಭಾಯಿಸುವಿಕೆಯಿಂದಾಗಿ ರಸ ವಿದ್ಯೆಯೂ ಅವನಿಗೆ ಕೈಕೊಟ್ಟಿತ್ತು. ಆ ಪಟ್ಟಣದಲ್ಲಿ ಆತನ ಬಗ್ಗೆ ಅನೇಕರು ಗುಸುಗುಸು ಮಾತಾಡುತ್ತಿದ್ದರು. ಯಾರಿಗಾದರೂ ಕಾಲಿನಲ್ಲಿ ಸೆಳವುಕಾಣಿಸಿಕೊಂಡು ಅದು ಬಿದ್ದು ಹೋಯಿತೆಂದಿಟ್ಟುಕೊಳ್ಳಿ. ಹಾಗೆ ಕಾಲು ಕಳೆದುಕೊಂಡವರು ರುದ್ರನಾಯಕನು ಮಾಡಿರಬಹುದಾದ ಮಾಟವೇ ಕಾರಣವಿರಬಹುದೆಂದು ಮಾತಾಡಿಬಿಡಲಾರಂಭಿಸುವರು. ಇನ್ನೊಬ್ಬ ತನ್ನ ಹೆಂಡತಿಯ ಗರ್ಭಪಾತಕ್ಕೆ ಕಾರಣ ಹುಡುಕಲು ಸೀದ ಮಾಳಿಗೆ ಮೇಲೆ ಹೋಗುವನು. ಅಲ್ಲಿ ಅವನಿಗೆ ಬಾಡಿದ ಲಿಂಬೆ ಹಣ್ಣು ಸಿಗುವುದು; ಅದನ್ನು ರುದ್ರನಾಯಕನೇ ತನ್ನ ಕಡೆಯವರಿಂದ ಎಸೆಸಿರಬಹುದೆಂದು ಮಾತಾಡಿಕೊಳ್ಳುವನು. ಇನ್ನೊಬ್ಬನ

ದೈತ್ಯಗಾತ್ರದ ಹಸು ಇದ್ದಕ್ಕಿದ್ದಂತೆ ಸತ್ತುಹೋದುದಕ್ಕೂ ಕಾರಣ ರುದ್ರನಾಯಕನೇ; ಮತ್ತೊನ್ನನ ಮಗಳು ಪ್ರೇಮ ಪ್ರಕರಣಕ್ಕೆ ಸಿಲುಕಿ ನಿಮ್ನ ಜಾತಿಯವನೊಂದಿಗೆ ಓಡಿಹೋದದ್ದಕ್ಕೂ ಕಾರಣ ರುದ್ರನಾಯಕನೇ, ಹೀಗೆ ಎಲ್ಲಾ ಅನಾಹುತಗಳಿಗೂ ಕಾರಣ ರುದ್ರನಾಯಕನೇ ಇರಬಹುದೆಂದು ಪಟ್ಟಣದ ಸಭ್ಯ ನಾಗರೀಕರು ಗುಸುಗುಸು ಮಾತಾಡಿಕೊಳ್ಳರಾರಂಭಿಸಿದರು. ಆದರೆ ಅವರಾರಿಗೂ ಅವನ ಕೊರಳಪಟ್ಟಿ ಹಿಡಿದು ಕೇಳುವ ಧೈರ್ಯವಂತೂ ಇರಲಿಲ್ಲ. ಕೆಲವರು ಕೇಳಿಯೇ ಬಿಡುವುದೆಂದೇನೋ ಮೀಸೆ ಮೇಲೇರಿಸಿಕೊಂಡು ಹೋಗೇನೋ ಹೋಗುತ್ತಿದ್ದರು. ಆದರೆ ನಾಯಕನ ಗಿರಿಜಾ ಮೀಸೆ , ಪೊದೆ ಹುಬ್ಬು, ಗುಳಾಪು ಕಣ್ಣು ನೋಡಿದೊಡನೆ ಧೋತರ ತಣ್ಣಿಗೆ ಮಾಡಿಕೊಂಡು ಮರಳಿ ಬಿಡುತ್ತಿದ್ದರು. ಅದರ ಪೈಕಿ ಒಂದಿಬ್ಬರು ರುದ್ರನಾಯಕನು ತನ್ನ ಕಣ್ನೋಟ ಮಾತ್ರದಿಂದ ತಮ್ಮ ಪುರುಷತ್ವ ನಾಶ ಮಾಡಿದನೆಂದು ತಂತಮ್ಮ ಹೆಂಡಂದಿರೆದುರುಲಬೋ ಲಬೋ ಬಾಯಿ ಬಡಿದುಕೊಂಡಿದ್ದು ಹೇಗೋ ಪಟ್ಟಣದ ತುಂಬ ದೊಡ್ಡ ಗುಲ್ಲಾಗಿಬಿಟ್ಟಿತು. ಚರಾಸ್ತಿನೂ ಕಳಕೊಂಡಾರು; ಸ್ಥಿರಾಸ್ತಿನೂ ಕಳಕೊಂಡಾರು; ಆದರೆ ಪುರುಷತ್ವವನ್ನು ಕಳಕೊಂಡು ಬದುಕಲು ಯಾರು ತಾನೆ ಸಿದ್ದ?

ಪಟ್ಟಣದಲ್ಲಿ ನಡೆಯುವ ಕಳ್ಳ ಸಾಗಾಣಿಕೆದಾರರ ಗುಂಪಿಗೂ; ರುದ್ರ ನಾಯಕನಿಗೂ ರಹಸ್ಯ ಒಪ್ಪಂದ ಏರ್ಪಟ್ಟಿದೆ ಎಂಬ ಸುದ್ದಿ ಕಿಯಿಯಿಂದ ಕಿವಿಗೆ ಹರಡಿತು. ಪೋಲೀಸ್ ಮೇಲಾಧಿಕಾರಿಗಳೂ ಈ ಕುರಿತು ತನಿಖೆ ನಡೆಸಿ ತಕ್ಕ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯ ಠಾಣೆಗೆ ರಹಸ್ಯ ಸಂದೇಶ ಕಳುಹಿಸಿದರು. ಸ್ಥಳೀಯ ಠಾಣೆಯ ಇನ್ಸ್ಪೆಕ್ಟರ್ ದಮ್ಮಡಿ ಈರಪ್ಪ ಮಹಾನಾಸ್ತಿಕ ವಾದಿ, ದೇವರು ದಿಂಡರುಗಳೆಲ್ಲ ತನ್ನ ಹಾಸಿಗೆ ಕೆಳಗೆ ಎಂಬಂತೆ; ದೆವ್ವ ಪಿಶಾಚಿಗಳೆಲ್ಲ ತಲೆದಿಂಬಿನೊಳಗೆ ಎಂಬಂತೆ ಮಾತಾಡುತ್ತಿದ್ದ, ದಡಿಯನಾಗಿದ್ದ. ತಮ್ಮ ಪೋಲೀಸ್ ಇಲಾಖೆಯ ಮಹಾನಾಸ್ತಿ ಈಕಮೇವ ಮಹಾನಾಸ್ತಿಕನೆಂದರೆ ಕೊಟ್ಟೂರು ಪಟ್ಟಣದ ಠಾಣೆಯ ದಮ್ಮಡಿ ಈರಪ್ಪ ಮಾತ್ರನೆಂದು ರಾಜಧಾನಿಯ ಐಜಿಪಿ, ಡಿ‌ಐಜಿ ಕೇಡರಿನ ಅಧಿಕಾರಿಗಳೇ ಮಾತಾಡಿಕೊಳ್ಳುತ್ತಿದ್ದರು. ಅಂಥವರೇ ರುದ್ರನಾಯಕನಂಥ ವಾಮಾಚಾರಿಯನ್ನು ವಿಚಾರಿಸಿಕೋ ಎಂದು ಗ್ರೀನ್ ಸಿಗ್ನಲ್ ತೋರಿಸಿದರೆಂದರೆ ಏನಾಗಬೇಡ? ಹೇಗ್ಹಾಡಬೇಡ?

ಎಲೈ ಮಾನ್ನವಾ… ನಿನ್ನ ದೇಹದ ಸಮಸ್ತ ರೋಮಗಳನ್ನು ಬೋಳಿಸಿ ನಿನ್ನ ಹೊಟ್ಟೆಗೆ ಕಳಿಸದಿದ್ದರೆ ನಾನು ಕ್ಯಾಪ್ಟನ್ ದಮ್ಮಡಿ ಈರಪ್ಪನೇ ಅಲ್ಲ.ವೆಂದು ತಿಳಿಯಲೈಸಾರಥಿ ಅತಿಜಾಗ್ರತಿ” ಮಿಲಿಟರಿಯಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿ ಕ್ಷಿಪ್ರ ವೇಗದಲ್ಲಿ ಕ್ಯಾಪ್ಟನ್ ಪದವಿ ಅಲಂಕರಿಸಿ; ಅಷ್ಟೇ ಕ್ಷಿಪ್ರವೇಗದಲ್ಲಿ ನಿವೃತ್ತಿ ಪಡೆದು ಅಷ್ಟೇ ಕ್ಷಿಪ್ರ ವೇಗದಲ್ಲಿ ಸಬ್‌ಇನ್ಸ್ಪೆಕ್ತರನೆಂಬ ರಾಜ್ಯ ಸರಕಾರಿ ನವುಕರಿ ಪಡೆದದ್ದೂ ಒಂದು ಇತಿಹಾಸವೇ!

ಭಾರತಿಯ ಕಾಲಮಾನದ ಪ್ರಕಾರ ಯಾರಾದಾರೂ ಹಂತಹಂತವಾಗಿ ಮೇಲೇರಿದಂತೆ ಅಪ್ಪಟ ಆಸ್ತಿಕರಾಗಿ ದೈವಭಕ್ತರಾಗಿ ಪರಿವರ್ತನೆಗೊಳ್ಳುವುದು ಸಾಮಾನ್ಯ; ಆದರೆ ಈ ಮಿಲಿಟರಿ ರಿಟರ್ನ್ಡ್‌ದು ತದ್ವಿರುದ್ಧ.

ಅವನನ್ನು ಎಳೆದುತರುವಂತೆ ಪ್ಯಾದೆಗಳಿಗೆ ಆಜ್ಞಾಪಿಸಿದ. ಅವು ’ನಾವು ಹೋಗೋದಿಲ್ಲ ನಮಗೆ ಡ್ಯೂಟಿಗಿಂತ ಪುರುಷತ್ವ ಮುಖ್ಯ’ ಎಂದುಬಿಡುವುದೇ.
ದಮ್ಮಡಿ ಈರಪ್ಪನೇ ರಿವಲ್ವಾರನ್ನು ಲೋಡು ಮಾಡಿಕೊಂಡು ಹೊರಟು ಬಿಟ್ಟ.
“ಬೇಡಿ ಸಾರ್ ದಯವಿಟ್ಟು ಬೇಡ… ನಿಮ್ಗಿನ್ನೂ ಮಕ್ಕಳಗಿಲ್ಲ… ಮರಿ ಆಗಿಲ್ಲ… ವಂಶೋದ್ಧಾರ

ಆಗೋದು ಬೇಡವೇ” ಎಂದು ಪ್ಯಾದೆಗಳು ಪರಿಪರಿಯಿಂದ ಕೇಳಿಕೊಂಡವು.
’ವಂಶ ಸೈ… ಸೊಂಟ ಸೈ… ಎಂದವನೆ ದಪ್ ದಪ್ ಹೆಜ್ಜೆ ಹಾಕುತ್ತ… ಇಕ್ಕೆಲದ ಮನೆಗಳನ್ನು ಗಡ ಗಡ ನಡುಗಿಸುತ್ತ ಹುಣಸೆ ಮರದ ತಣ್ಣೆಳನಲ್ಲಿದ್ದ ಆ ಮನೆ ಮುಂದು ನಿಂತು “ಎಲವೋ” ಎಂದು ಗರ್ಜಿಸಿದ.

ದೇವಿ ಉಪಾಸನೆಯಲ್ಲಿದ್ದ ನಾಯಕ. ತಾನೇ ಒಳಗಡೆ ಹೋದ, ರುಕ್ಮಿಣಿ ಮಾಂಗಲ್ಯವನ್ನು ಕಣ್ಣಿಗೆ ಒತ್ತಿಕೊಂಡಳು. ಏಕಮಾತ್ರ ಪುತ್ರಿ ಅನಸೂಯಾ ತನ್ನ ಪ್ರಿಯಕರ ಶಾಮಾಶಾಸ್ತ್ರಿಯನ್ನು ಸಂಧಿಸಿ ತಮ್ಮ ಪ್ರಣಯಕ್ಕೆ ವಿವಾಹ ರೂಪ; ಪೂರ್ವವಿಧಿಗಳ ಕುರಿತು ಚರ್ಚಿಸಲು ಕಡಲೇರ ತೋಪಿಗೆ ಹೋಗಿದ್ದಳು.
ಹೊರಗಡೆ ಅಂಗಳದಲ್ಲಿ ಓಣಿಯ ಕೆಲವು ಗಣ್ಯರು ನೆರೆದು ಉಸಿರು ಬಿಗಿಹಿಡಿದು ನಿಂತಿದ್ದರು.

ಒಂದು ಗಂಟೆ ಕಳೆಯಿತು, ಕಳೆದವು ಎರಡು ಗಂಟೆ, ರುದ್ರನ್ ನಾಯಕ ಮತ್ತು ಕ್ಯಾಪ್ಟನ್ ದಮ್ಮಡಿ ಈರಪ್ಪ ಪರಸ್ಪರ ಹೆಗಲಮೇಲೆ ಕೈಹಾಕಿಕೊಂಡು ಹೊರಬಂದು ಎಲ್ಲರನ್ನು ಆಶ್ಚರ್ಯದ ಕಡಲಲಿನಲ್ಲಿ ನೂಕಿದರು.
ಆಕ್ಷಣದಿಂದ ದಮ್ಮಡಿ ಈರಪ್ಪನಲ್ಲಿ ಅನೇಕ ಬದಲಾವಣೆಗಳಾದವು. ಆತನು ಅಪ್ಪಟ ದೈವಭಕ್ತನಾದ ಬಗ್ಗೆ; ಹೆಂಡತಿಯನ್ನು ತೊರೆದುದರ ಬಗ್ಗೆ; ಕಾಷಾಯಂಬರ ಧರಿಸಿದುದರ ಬಗ್ಗೆ; ವಾಯವ್ಯ ದಿಕ್ಕಿನ ಕಡೆ ಹೆಜ್ಜೆ ಹಾಕುತ್ತ ನಡೆದೂ ನಡೆದು ಕಣ್ಮರೆಯಾದುದರ ಬಗ್ಗೆ ಹೆಚ್ಚಿಗೆ ಹೇಳುವ ಅಗತ್ಯವಿಲ್ಲ.

ಇದೊಂದು ಕೊಟ್ಟೂರು ಪಟ್ಟಣದ ಇತಿಹಾಸದಲ್ಲಿ ನಡೆದ ಕಂಡರಿಯದ; ಕೇಳದ ಅದ್ಭುತ ಪವಾಡವೇ ಸರಿ ಎಂದು ಜನ ಮಾತಾಡಿಕೊಂಡರು.
ಒಂದು ದಿನ ಬೆಳೆಗ್ಗೆ ರುದ್ರನಾಯಕ ಅದ್ಭುತವಾದ ಡ್ರೆಸ್ ಮಾಡಿಕೊಂಡು ಮನೆಯಿಂದ ಹೊರಗಡೆ ಬಂದ. ತಮ್ಮ ಗುರು ಭಂ ಭೂಂ ಸಾಧು ಕನಸಿನಲ್ಲಿ ಕಾಣಿಸಿಕೊಂಡು ದೆಹಲಿಯ ಕಡೆ ಪಯಣಿಸುವಂತೆ ಅಪ್ಪಣೆ ನೀಡಿದನೆಂದು ಹೇಳಿಕೊಂಡ.

ಮಾಗಳನ್ನು ಸರಿಯಾಗಿ ನೋಡಿಕೊಳ್ಳುವಂತೆ ಮತ್ತು ಅನುರೂಪನಾದ ವರ ನೋಡಿ ಮದುವೆ ಮಾಡಿ ಬಿಡುವಂತೆ ಮತ್ತೆ ತಾನು ಮೂರು ತಿಂಗಳೊಳಗೆ ವಾಪಸ್ಸು ಬಾರದಿದ್ದಲ್ಲಿ ತವರು ಮನೆಗೆ ಹೋಗಿ ಆಶ್ರಯಪಡೆಯುವಂತೆ ಮತ್ತು ಸಂಬಂಧದ ಬಗ್ಗೆ ಹೆಚ್ಚಿಗೆ ಕುರಿತು ರೋಧಿಸದಿರುವಂತೆ ಹೇಳಿದ.

ಅಷ್ಟೇನೂ ದೊಡ್ಡದಲ್ಲದ ಒಂದು ಗಂಟಿನೊಡನೆ ರೇಲ್ವೇ ನಿಲ್ದಾಣದ ಕಡೆ ಹೆಜ್ಜೆ ಹಾಕಿದ. ಆತ ಏರಿದ ರೈಲು ಚಕ್‌ಬುಷ್ ಶಬ್ದ ಮಾಡುತ್ತ ಕಣ್ಮರೆಯಾಗುವ ತನಕ ತಾವು ನೋಡಿದ್ದಾಗಿ ಕೆಲವರು ಮಾತಾಡಿದರು.
ಪಟ್ಟಣದ ಬಹುಪಾಲು ನಾಗರೀಕರು ಸಮಾಧಾನದ ನಿಟ್ಟುಸಿರು ಬಿಟ್ಟರು ಎಂದ ಮಾತ್ರಕ್ಕೆ ರುಕ್ಮಿಣಿ ಅಂಡ್ ಕಂಪನಿ ಸಮಾಧಾನದಿಂದಿದ್ದರು ಎಂದು ಹೇಳುವಂತಿರಲಿಲ್ಲ.

ಪುರುಷ ಪ್ರಧಾನ ಸಮಾಜದಲ್ಲಿ ವಯಸ್ಸಿಗೆ ಬಂದಿರುವ ಮಗಳನ್ನು ಕಟ್ಟಿಕೊಂಡು ಏಗುವುದೆಂದರೆ ತಮಾಷೆಯ ಮಾತೇನು? ಸಮಾಜದ ಗೌರವ ಕಾಪಾಡಲಿಕ್ಕಾಗಿಯೇ ಗಳಿಗೆಗೊಂದು ಕಂಟಕಗಳು ಎದುರಾಗ ತೊಡಗಿದವು.
ಕಷ್ಟಗಳು ಮನುಷ್ಯಗೆ ಬರದೆ ಮರಕ್ಕೆ ಬರುವುದೇನಮ್ಮಾ ಎಂದೆನ್ನುತ್ತಿದ್ದವರೆಷ್ಟೋ? ಸ್ವಲ್ಪ

ಬದುಕುವ ಧೈರ್ಯ ಪ್ರಕಟಿಸಿದ್ದರೆ ಹೆಣ್ಣಿನ ಬುದ್ಧಿ ಮೊಣಕಾಲ ಕೆಳಗೆ ಎಂಬಂಥ ಗಾದೆ ಮಾತುಗಳನ್ನು ಜ್ಞಾಪಿಸುತ್ತಿದ್ದವರೆಷ್ಟೋ? ಮೂರು ತಿಂಗಳು ಅಂತ ಹೇಳಿದ್ದಾನಲ್ಲ… ಮೂರು ತಿಂಗಳು ನೋಡು ನಂತರ ನಿನ್ನ ದಾರಿ ನೀನು ನೋಡಿಕೋ ಎಂದು ಹೇಳುತ್ತಿದ್ದವರೆಷ್ಟೋ? ಆಕೆ ಕುಂತರೊಂದು ತಪ್ಪು ನಿಂತರೊಂದು ತಪ್ಪು ಕಂಡು ಹಿಡಿಯುತ್ತಿದ್ದವರೆಷ್ಟೋ? ಆಕೆಯ ಕಿವಿಗೆ ಬೀಳುವಂತೆ ಮಾತಿನಿಂದ ಕುಟುಕೀ ಕುಟುಕೀ ತಾವೂ ವೃಶ್ಚಿಕ ರಾಶಿಗೆ ಸೇರಿದವರೆಂದು ಸಾಬೀತು ಮಾಡುತ್ತಿದ್ದವರೆಷ್ಟೊ?

ರುಕ್ಮಿಣಿ ನಿಮ್ನ ಜಾತಿಯಲ್ಲಿ ಹುಟ್ಟಿರಬಹುದು. ಆದರೆ ಸೂಕ್ಷ್ಮ ಪ್ರವೃತ್ತಿಯ ಹೆಂಗಸು. ಆಕೆ ಬಡತನ ಅನುಭವಿಸಿರಬಹುದು. ಆದರೆ ಹೃದಯ ಶ್ರೀಮಂತಿಕೆಗೆ ಕೊರತೆ ಇರಲಿಲ್ಲ. ಆಕೆಗೆ ಸರಿಸುಮಾರು ಐವತ್ತರಷ್ಟು ವಯಸ್ಸಾಗಿರಬಹುದು. ಆದರೆ ಮೂವತ್ತೈದರ ಹರೆಯದವಳಂತಿದ್ದಳು. ಆಕೆ ಸುಶಿಕ್ಷಿತಳಲ್ಲದಿರಬಹುದು. ಆದರೆ ಯಾವುದೇ ಸುಶಿಕ್ಷಿತರಿಗಿಂತ ಕಡಿಮೆ ಇರಲಿಲ್ಲ. ಆಕೆ ಗಂಡನ ಮುಖ ಸರಿಯಾಗಿ ನೋಡಿರದೆ ಇರಬಹುದು. ಆದರೆ ತನ್ನ ಕಾಲ ಹೆಬ್ಬೆರಳಿನ ಉಗುರಿನಲ್ಲಿ ಗಂಡನ ಪ್ರತಿಬಿಂಬವನ್ನು ನೋಡದೆ ಇರಲಿಲ್ಲ. ಅಕೆ ಸಾರ್ವತ್ರಿಕವಾಗಿ ಅಳದೆ ಇರಬಹುದು. ಆದರೆ ಆಕೆಯ ಹೃದಯವೆಂಬ ಪೌಲ್ಟ್ರಿಯಲ್ಲಿ ದುಃಖದ ಮೊಟ್ಟೆಗಳಿಗೆ ಬರವಿರಲಿಲ್ಲ.

ತನ್ನ ಪತಿಪರಮೇಶ್ವರನಿಂದ ಪತ್ರ ಇಂದು ಬಂದೀತು, ನಾಳೆ ಬಂದೀತು; ಬಂದೀತು ನಾಡಿದ್ದು ಎಂದು ರುಕ್ಮೀಣಿ ಕಾದಳು. ಪತ್ರ ಇಲ್ಲ ಗಿತ್ರ ಇಲ್ಲ ಶುಭಂ ಇಲ್ಲ. ದಿನಗಳೆದಂತೆ ಆಕೆಯ ಬದುಕಿನ ಬೇರುಗಳು ನಿತ್ರಾಣವಾಗ ತೊಡಗಿದವು. ಕ್ರಮೇಣ ಬದುಕೆಂಬ ಗಿಡ ಸೊರಗ ತೊಡಗಿತು. ಅದು ಇನ್ನಷ್ಟು ಒಣಗುವಂತೆ ಪಟ್ಟಣದ ಕೆಲವರು ಆಕೆಯ ಮನೆಗೆ ಎಡತಾಕ ತೊಡಗಿದರು. ನಿನ್ನ ಗಂಡ ನಮ್ಮ ಹತ್ತಿರ ಇಷ್ಟು ಸಾಲ ಮಾಡಿದ್ದಾನೆ; ಅಷ್ಟು ಸಾಲ ಮಾಡಿದ್ದಾನೆ, ಇಷ್ಟು ಅಂತ ಪೀಡಿಸತೊಡಗಿದರು. ಕೆಲವರು ಸಾಲಮುಟ್ಟಿಸಬಹುದಾದ, ಪ್ರಾಂಸರಿ ನೋಟುಗಳನ್ನು ಚೂರುಚೂರು ಮಾಡಿ ಮಾನ್ಸೂನಿಗೆ ತೂರಬಹುದಾದ ಸುಲಭ ಹಾದಿಯನ್ನು ಹೇಳತೊಡಗಿದರು.

ಶಾಸ್ತ್ರಿಯ ಮೊಮ್ಮಗ ಶಾಮು ದಿನದ ಬಹುಪಾಲು ವೇಳೆಯನ್ನು ಅಲ್ಲಿ ಕಳೆಯುತ್ತಾನೆ ಸರೆ! ಇಲ್ಲವಾದರೆ ಗತಿ ಏನು! ಅವನಲ್ಲಿ ಟೈಂಬಾಂಬುಥರ ಇರುತ್ತಿದ್ದುದು ಕೆಲವರಿಗೆ ಭಯ ಮೂಡಿಸಿತ್ತು.
ಆಡುವ ಮಾತಿನಲ್ಲಿ ಸೌಜನ್ಯದ ಕೊರತೆಯನ್ನು ಅವನು ಕೂಡಲೆ ಗುರುತಿಸಿ ಬಿಡುತ್ತಿದ್ದ. ಅದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿಬಿಡುತ್ತಿದ್ದ.
ತನ್ನ ಕಣ್ಣಿನೆದುರಿಗೆ ಅನಸೂಯಳ ಕುಟುಂಬದ ಪತನವನ್ನು ಸಹಿಸುವುದಾದರು ಹೇಗೆ?

’ಸಣ್ಣ ತಮ್ಮ ಇದ್ದಿದ್ದರೆ ಅವನೀ ಹೊತ್ಗೆ ನಿನ್ನಷ್ಟೆತ್ತರ ಇತಿದ್ದ’ ಅಂತ ಒಮ್ಮೆ ರುಕ್ಮಿಣಿ ಹೇಳಿದ್ದಳು. ಹೌದು ರುಕ್ಮಿಣಿಗೆ ಒಬ್ಬ ಎಂಟನೆ ನಂಬರಿನ ತಮ್ಮ ಇಲ್ಲದಿರಲಿಲ್ಲ ಶಾಮನಂಥದೇ ಮೂಗು ಅವನಿಗೂ ಇತ್ತು. ಅವನ ಕೈಕಾಲು ಬೆರಳು ನೋಡಿದ ಯಾರಿಗಾದರೂ ಅವನು ತುಂಬ ಎತ್ತರಕ್ಕೆ ಬೆಳೆಯುತ್ತಾನೆ ಎಂದು ನುಡಿಯದೆ ಇರಲಿಲ್ಲ. ಆದರೆ ಅವನು ಅಮೃತಾಪುರದ ಮಾರೆಮ್ಮನ ಕೊಳ್ಳದಲ್ಲಿ ಉರುಳಿ ಕಾಣೆಯಾಗಿದ್ದ.
ರುಕ್ಮಿಣಿ ಶಾಮನಲ್ಲಿ ತಮ್ಮನನ್ನು ಕಂಡುಕೊಡಿದ್ದಳು, ಅವನು ಅಕ್ಕಾ ಎಂದು ಕರೆದೊಡನೆ ಪುಳಕಿತಗೊಳ್ಳುತ್ತಿದ್ದಳು.
ಶಾಮ ತನ್ನ ಅನಸೂಯಳೊಂದಿಗೆ ಮಾತಾಡುವುದು ತಿರುಗಾಡುವುದು ಅವಳಿಗೆ ತುಂಬ ಪ್ರಿಯವಾಗಿತ್ತು. ಅದಕ್ಕೆ ಅವಕಾಶ ತಾನೇ ಕಲ್ಪಿಸಿಕೊಡುತ್ತಿದ್ದುದೂ ಉಂಟು. ತಮ್ಮ ಪತಿದೇವನಿಂದ
ಒದಗಬಹುದಾದ ಅಪಾಯಗಳನ್ನು ಕೇರಿಯ ಆರ್ಯನ್ ಶಾಸ್ತ್ರಿಗಳಿಂದುದ್ಭವಿಸಬಹುದಾದ ಅಪಾಯಗಳನ್ನು ತಾನೇ ಉಪಾಯಾಂತರದಿಂದ ಪರಿಹರಿಸಿತ್ತಿದ್ದುದುಂಟು.

ಮೊದ ಮೊದಲು ಶಾಮು ಅವರ ಮನೆಗೆ ಶುಕ್ಲ ಪಕ್ಷಕ್ಕೊಮ್ಮೆ ಕೃಷ್ಣ ಪಕ್ಷಕ್ಕೊಮ್ಮೆ ಬರುತ್ತಿದ್ದ. ಶುಕ್ಲ ಪಕ್ಷಕ್ಕೆ ಬಂದ ಶಾಮುನಿಗೆ ಒಣ ಕೊಬ್ಬರಿ ಕಲ್ಲು ಸಕ್ಕರೆ ಸಿಕ್ಕರೆ, ಕೃಷ್ಣ ಪಕ್ಷಕ್ಕೆ ತುಪ್ಪದಲ್ಲಿ ನೆನೆದ ಉತ್ತುತ್ತಿ ಹಣ್ಣು ಸಿಗುತ್ತಿತ್ತು. ದಕ್ಷಿಣ ದಿಕ್ಕಿನಿಂದ ಬಂದು ಮನೆಯ ನೈರುತ್ಯ ದಿಕ್ಕಿನ ಮೂಲೆಯಲ್ಲಿ ಕೂತುಸದ್ದಾಗದಂತೆ ತಿಂದು ಈಶಾನ್ಯ ಭಾಗದ ಮೂಲಕ ಹೊರ ಪುಸಗಿ ಬಿಡುತ್ತಿದ್ದ. ಒಮ್ಮೊಮ್ಮೆ ಅವನು ಬರಲಿಲ್ಲವೆಂದರೆ ಅನಸೂಯ ಯಾವುದಾದರೊಂದು ವಸ್ತುವಿನೊಳಗೆ ತಿನ್ನುವ ವಸ್ತುವನ್ನು ಅಡಗಿಸಿಟ್ಟುಕೊಂಡು ಅವನಿರುವಲ್ಲಿ ಹೋಗಿ ಕೊಡುತ್ತಿದ್ದಳು. ಅವನು ದಿಗಿಲಿನಿಂದ ತಿನ್ನುವುದನ್ನು ನೋಡಿ ಸಂತೋಷಪಡುತ್ತಿದ್ದಳು.

“ಶೂದ್ರರಿರೋ ಕಡೆ ಗಾಳಿ ಸೇವನೆ ಕೂಡ ವರ್ಜ್ಯ ಕಣೋ , ನಾಲಿಗೆ ಚಟಕ್ಕೆ ಬಿದ್ದು ಆಚಾರಕ್ಕೆ ಅಪಚಾರ ಮಾಡೀಯೆ ಜೋಕೆ?” ಶಾಸ್ತ್ರಿಗಳು ಮೊಮ್ಮಗನನ್ನು ಎಚ್ಚರಿಸದ ದಿನ ಯಾವುದು?
ಕದ್ದು ತಿನ್ನುವುದರಲ್ಲಿ, ಮಡಿವಂತಿಕೆಯ ಉಲ್ಲಂಘನೆಯಲ್ಲಿ ಸಿಗುವ ರೋಮಾಂಚನ ಆ ಯಯೊವೃದ್ಧರಿಗೆ ಅದು ಹೇಗೆ ತಿಳಿದೀತು?

ಐದು ಸಹಸ್ರ ವರ್ಷಗಳಿಂದ ಸ್ಪರ್ಷಕ್ಕೆ ಅನರ್ಹವೆಂದು ಭಾವಿಸುವ ಜಾತಿಯಿಂದ ಬಂದವನಾದ ತಾನು ನಿಮ್ನ ಜಾತಿಯ ಗೌರವ ವರ್ಣದ ಸುಕೋಮಲ ಕಾಯ ಸ್ಪರ್ಶಿಸಿ ಪಡೆಯುತ್ತಿರುವ ಆನಂದ ಆ ಜ್ಞಾನ ವೃದ್ಧರಿಗೆ ಅರ್ಥವಾದೀತಾದರೂ ಹೇಗೆ?
ಇಂಥ ಸ್ವೀಕಾರಕ್ಕೆ ಅರ್ಹವಲ್ಲದ ಸ್ಪರ್ಶದ ಸೆಳೆವಿಲ್ಲದಿದ್ದರೆಲ್ಲಿ ಶಾಕುಂತಳೆ ಹುಟ್ಟುತ್ತಿದ್ದಳು? ರುದ್ರನಾಯಕನ ಅಗಲುವಿಕೆಯಿಂದಾಗಿ ಸ್ಪರ್ಶ ಮಮಕಾರದ ರೂಪ ಪಡೆದಿತ್ತು. ರೋಮಾಂಚನ ವಿರುವ ಕಡೆ ಅಂತಃಕರಣ ಕರಗುತ್ತಿತ್ತು.

“ಅಯ್ಯೋ ಪಾಪ!… ವಾಮಾಚಾರ ಅವಲಂಸಿದವರಿಗೆ ಹೆಂಡತಿ ಏಕೆ? ಮಕ್ಕಳು ಏಕೆ? ತಾವೇನಾದರೂ ಆಗಲಿ… ವಯಸ್ಕ ಮಗಳೊಂದಿಗೆ ಆ ಸಾಧ್ವಿ ಈ ಸಮಾಜದಲ್ಲಿ ಈಜುವಳಾದರೂ ಹೇಗೆ?” ಶಾಸ್ತ್ರಿಗಳು ಅನುಕಂಪ ವ್ಯಕ್ತ ಪಡಿಸದ ದಿನವೇ ಇಲ್ಲ.
ಶಾಸ್ತ್ರಿಗಳಂತೆ ಅವರ ಸೊಸೆಯೂ ಅಷ್ಟೆ,
ಅದನ್ನು ಕೊಟ್ಟು ಬಾ ಇದನ್ನು ಕೊಟ್ಟು ಬಾ ಎಂದು ಮಗನ ಕೈಲಿ ಏನಾದರೊಂದು ಕೊಟ್ಟು ಕಳಿಸುತ್ತಿದ್ದಳು ಅಲುಮೇಲು…

ಇದು ತನ್ನ ಬದುಕಿನ ಸುವರ್ಣ ಅಧ್ಯಾಯವೆಂದೇ ಶಾಮಶಾಸ್ತ್ರಿ ಭಾವಿಸಿದ. ದಿನದ ಬಹುಪಾಲು ಸಮಯವನ್ನು ಅವರ ಮನೆಯಲ್ಲಿಯೇ ಕಳೆಯುತ್ತಿದ್ದ. ರುದ್ರನಾಯಕನಿಂದ ಬರಬಹುದಾದ ಪತ್ರವನ್ನು ತಾನೇ ಒಡೆದು ಓದಿ ಅವರಿಗೆ ಹೆಚ್ಚಿನ ಸಂತೋಷ ಉಂಟು ಮಾಡಬೇಕೆಂದುಕೊಂಡಿದ್ದ.
ಮೂರು ತಿಂಗಳು ಏಕೆ ಆರು ತಿಂಗಳು ಕಳೆದವು.
ರೈಲಿನಲ್ಲಿ ಪಯಣಿಸಿದ ಆತನ ಪತ್ರ ಬರಲೇ ಇಲ್ಲ. ಬರುವಖಾತ್ರಿಯೂ ಇರಲಿಲ್ಲ.

“ಮನಸ್ಸು ಕಲ್ಲು ಮಾಡಿಕೊಂಡು ಬದುಕಬೇಕಮ್ಮಾ” ನಾಯಕ ಮಾಡಿರುವ ಸಾಲ ನೆನೆಪಿಸುವ ನೆಪದಲ್ಲಿ ಮನೆಗೆ ಬಂದಿದ್ದ ಬಡ್ಡಿಲೇವಾದೇವಿಗಾರ ಮೂಲಿಮಣಿ ಚಂದ್ರಪ್ಪ ಸಂತೈಸಿದ. “ಎಷ್ಟು ಬೇಡವೆಂದರೂ ಕೇಳದೆ ಮನೆ ಒತ್ತೆ ಇಟ್ಟು ಐದು ಸಾವಿರ ರುಪಾಯಿ ಸಾಲವನ್ನು ಪಡೆದು ಐದು ವರ್ಷಗಳೇ ಆದವು ತಾಯಿ” ಮೊದಲೇ ಆತ ಆಸ್ತಮಾ ರೋಗಿ. ಕೊಕ್‌ಕೊಕ್ ಕೆಮ್ಮುತ್ತ ಹೇಳಿದ. ಯಾವ

ಪುರುಷಾರ್ಥಕ್ಕೆ ಯಾವ ಸುಖ ಸಂತೋಷಕ್ಕೆ ತಾನಿಷ್ಟೊಂದು ಸಂಪಾಸಿದೆನಮ್ಮಾ? ಎಂದು ಮರುಗಿದ. ಅನಸೂಯ ತಂದುಕೊಟ್ಟ ಚಹ ನಿರಾಕರಿಸಿದ್ದಕ್ಕೆ ತನ್ನ ದೇಹದೊಳಗೆ ವಾಸಮಾಡಿಕೊಂಡಿರುವ ವಾಸಿಯಾಗದ ಖಾಯಿಲೆಗ ಬಗ್ಗೆ ವಿವರಿಸಿದ. ಯಾವ ಯಾವ ಖಾಯಿಲೆ ಯಾವ ಯಾವ ವಯಸ್ಸಿನಲ್ಲಿ ಬಂತೆಂಬುದನ್ನೂ ಬಿಡದೆ ಹೇಳಿದ.

ತನ್ನ ಗಂಡ ಯಾವ ಕಾರಣಕ್ಕಾಗಿ ಐದು ಸಾವಿರ ಸಾಲ ಮಾಡಿರುವನೆಂಬುದು ರುಕ್ಮಿಣಿಗೆ ಅರ್ಥವಾಗಲಿಲ್ಲ. ಗಂಡಸರ ವ್ಯವಹಾರದಲ್ಲಿ ತಾನೆಂದಾದರೂ ಮೂಗು ತೂರಿಸಿರುವುದುಂಟೆ?

“ಸಾವ್ಕಾರ್ರೆ ಹಣಕಾಸಿನ ವ್ಯವಹಾರ ನನ್ಗೊಂದು ಅರ್ಥ ಆಗೋದಿಲ್ಲ… ಅವರು ಬಂದೇ ಬರ್ತಾರೆ. ಬರೋವಗೂ…” ಬಾಗಿಲ ಮರೆಯಲ್ಲಿ ಬಾಯಿಗೆ ಸೆರಗು ಅಡ್ಡ ಇಟ್ಟು ಹೇಳಿದಳು.

“ತಾಯಿ… ಇದೆಂಥ ಮಾತು ಆಡ್ತಿದ್ದೀಯಮ್ಮಾ… ನನ್ನೆಪ್ಪತ್ತು ವರ್ಷದ ಜೀವಮಾನದಲ್ಲಿ ನಾನೆಂದಾದ್ರೂ ದುಡ್ಡಿಗೆ ಆಸೆ ಪಟ್ಟಿದ್ದೇನಮ್ಮಾ… ಬಡ್ಡಿ ವ್ಯಾಪಾರ ಮಾಡ್ತಿರೋದೇ ನಾಕು ಮಂದೀಗೆ ಒಳ್ಳೇದಾಗ್ಲೀ ಅಂತ… ಬಂದ ಲಾಭದಲ್ಲಿ ನಗರೇಶ್ವರ ದೇವಾಲಯ ಕಟ್ಟೋದಕ್ಕೆ ಹತ್ತು ಸಾವ್ರ ಕೊಟ್ಟಿಡ್ಡೀನಮ್ಮಾ ಹತ್ತು ಸಾವ್ರ… ನೀನೆಂದಾದ್ರು ದೇವಸ್ತಾನಕ್ಕೆ ಕಲ್ಲಲ್ಲಿ ಕೆತ್ತಿರೋ ನನ್ನ ಹೆಸರು ಓದ್ಕೋ… ಅರ್ಥ ಆಗ್ತದೆ… ಹಸಿವು ಅಂತ ಬಂದೋರ್ಗೆ ಒಂದ್ತುತ್ತು ಹಾಕ್ದೆ ಎಂದೂ ವಾಪಸ್ ಕಳಿಸಿದ ವಂಶ ಅಲ್ಲಮ್ಮಾ ನಮ್ದು!…” ಚಂದ್ರಪ್ಪ ನಿಟ್ಟುಸಿರು ಬಿಟ್ಟು ಮುಂದುವರೆದು ಹೇಳಿದ “ನಾನೇಂದೂ ತೊಂದರೆಲ್ಲಿರೋಗೆ ಕಾಟ ಕೊಟ್ಟೋನಲ್ಲ… ಇಷ್ಟೊಂದು ವಯಸ್ಸಾಗದಿದ್ದಲ್ಲಿ ಅನುಕೂಲವಾದಾಗ ಕೊಡಿ ಅಂತ ಸುಮ್ನಿದ್ದು ಬಿಡ್ತಿದ್ದೆ… ಆದ್ರೆ ವಯಸ್ಸು ಬೇರೆ ಅಗಿಬಿಟ್ಟಿದೆಯಲ್ಲ… ಮನೇಲಿ ನನ್ಗಿಂತ ಎತ್ರ ಬೆಳ್ದಿರೋ ಮಕ್ಳು ಬೇರೆ ಮನೇಲಿದ್ದಾರೆ. ಅವರೂ ನನ್ನಂತೆ ತುಂಬ ಒಳ್ಳೆವರೆಂದ್ರೇ ಇಟ್ಕೋ… ಆದ್ರ್ ಅವ್ರ ಹೆಂಡ್ರು ಸುಮ್ಕಿರಬೇಕಲ್ಲ. ಆ ನನ್ ಸೊಸೆಯಂದಿರೂ ಒಳ್ಳೆಯವರಂತ ಇಟ್ಕೋ… ಆದ್ರೆ ಅವ್ರು ಹಡೆದಿರೋ ಮಕ್ಕಳು ಸುಮ್ಕಿರಬೇಕಲ್ಲ. ಆ ನನ್ ಮೊಮ್ಮಕ್ಳೂನಿ ಒಳ್ಳೆಯವ್ರುಂತ ಇಟ್ಕೋ. ಆದ್ರೆ ಅವರ ಮುಂದಿನ ಭವಿಷ್ಯ ಸುಮ್ಕಿರಬೇಕಲ್ಲ… ಆ ಅವ್ರ ಭವಿಷ್ಯ ಒಳ್ಳೆಯದೆಂದಿಟ್ಕೋ… ಆದ್ರೆ ” ಚಂದ್ರಪ್ಪ ಇನ್ನೂ ಮಾತಾಡಬೇಕೆಂದಿದ್ದ… ಅಷ್ಟರಲ್ಲಿ ರುಕ್ಮಿಣಿ ಪೆಟಾರಿಯಲ್ಲಿ ಅಡಗಿಸಿಟ್ಟಿದ್ದ ಒಂಚೂರು ಬಂಗಾರದ ಒಡವೆ ತಂದು ಆತನ ಮುಂದಿಟ್ಟಳು.

ಚಂದ್ರಪ್ಪ ತನ್ನ ಕಣ್ಣುಗಳೆಂಬ ಪಗಡಿಗಳಲ್ಲಿ ಚಿನ್ನ ತಿಕ್ಕಿ ನೋಡಿದ. ತನ್ನ ನೆತ್ತಿ ಮೇಲಿನ ತುಪ್ಪಳದ ತೂಕವೂ ಅದಕ್ಕಿಲ್ಲವೆಂದುಕೊಂಡ.
ಚಂದ್ರಪ್ಪ ತನ್ನ ಕಣ್ಣುಗಳೆಂಬ ಒರೆಗಲ್ಲಿಗೆ ಚಿನ್ನ ತಿಕ್ಕಿ ನೋಡಿದ. ಅವುಗಳಲ್ಲಿ ಚಿನ್ನಕ್ಕಿಂತ ಬೇರೆ ಲೋಹಗಳ ಪ್ರಭಾವೇ ಹೆಚ್ಚು . ತನ್ನ ಎಂಟನೇ ಮೊಮ್ಮಗನ ಅಂಗಾಲಿಗಿರುವ ಕಳೆ ಕೂಡ ಅವಕ್ಕಿಲ್ಲವೆಂದುಕೊಂಡ.

ಅನಧಿಕೃತ ಸಂಬಂಧೀ ಫಲವಾಗಿ ಹುಟ್ಟಿರುವ ಹೆಣ್ಣು ಕೂಸನ್ನು ವಿಶ್ವಾಮಿತ್ರ ನಿರಾಕರಿಸಿದ ಭಂಗಿಯಲ್ಲಿಯೇ ನವರಸಾಭಿನಯ ಪರಿಣಿತನಾದ ಚಂದ್ರಪ್ಪ ಭಗವದ್ಗೀತೆಯಂತೆ ಮುಖ ಮಾಡಿಕೊಂಡ.

“ಛೇ ಛೇ… ನಿನ್ನಂಥ ಪತಿವ್ರತೆಯ ಬಂಗಾರ ತಗೊಂಡು ನಾನ್ಯಾವ ನರಕಕ್ಕೋಗ್ಲಿ ತಾಯಿ… ಶಿವ ಶಿವಾ, ನಾನು ನಿನ್ಗೆ ಏನು ಅಪಚಾರ ಮಾಡಿದ್ದೀನಮ್ಮಾ… ನಿನ್ನ ಪರಮ ಭಕ್ಟನಾದ ನನ್ನನ್ನು ಇಂಥ ಅಗ್ನಿ ಪರೀಕ್ಷೆಗೆ ಯಾಕೆ ಗುರಿ ಮಾಡ್ತಿದ್ದೀ… ಶಿವ ಶಿವಾ…” ಚಂದ್ರಪ್ಪ ಗದ್ಗದಿತನಾದ. ಕಣ್ಣಲ್ಲಿ ನೀರು
ಮಿಂಚಿದವು. ಜೋಲು ಬಿದ್ದ ಗಲ್ಲದ ಮಾಂಸಖಂಡಗಳು ಕಂಪಿಸತೊಡಗಿದವು. ಇನ್ನೇನು ಈ ಭೂಮಿ ಬಯ್ಬಿರಿದು ತನ್ನನ್ನು ನುಂಗೇ ಬಿಡುತ್ತದೆ ಎನ್ನುವಂತೆ ಅಭಿನಯಿಸಿದ.

ರುಕ್ಮಿಣಿಗೆ ಒಂಥರಾ ಆಯಿತು. ಇಂಥಾ ಸಜ್ಜನರೂ ಭೂಮಿ ಮೇಲೆ ಇದ್ದಾರಲ್ಲ!… ಅದಕ್ಕೆ ಮಳೆ ಬೆಳೆ ಚೆನ್ನಾಗಿ ಆಗುತ್ತಿರುವುದು ಎಂದುಕೊಂಡಳು. ಮಾತಾಡುವ ಶಕ್ತಿ ಆಕೆ ಕಳೆದುಕೊಂಡಳು. ಆತನ ಸೌಜನ್ಯಕ್ಕೆ ಅಕೆಯ ಅಂತಃಕರಣ ಕರಗಿ ನೀರಾಗಿ ಹರಿಯಲಾರಂಭಿಸಿತು.

ಇಂಥ ಒಳ್ಳೆ ವ್ಯಕ್ತಿಯನ್ನು ನೋಡೋಕೆ ಮಗಳು ಬೇರೆ ಮನೆಯಲ್ಲಿ ಇಲ್ಲವಲ್ಲಾ… ಬರೀ ಬೇಟೆಗಾರರಿಂದ; ಸಂಚುಗಾರರಿಂದ ಪ್ರಪಂಚ ತುಂಬಿ ಹೋಗಿದೆ ಎನ್ನುತ್ತಿದ್ದ ಮಗಳು ಬೇರೆ ಮನೆಯಲ್ಲಿ ಇಲ್ಲವಲ್ಲಾ!…
ಅನಸೂಯಾಽಽ…

ಅಷ್ಟೊತ್ತಿಗಾಗಲೇ ಒಂದೆರಡು ಕಡೆ ನೌಕರಿಗೆ ಪ್ರಯತ್ನಿಸಿ. ಒಂಥರಾ ಇರುಸು ಮುರುಸಾಗಿ ಟಿಫಿನ್ ಬಾಕ್ಸ್‌ನಲ್ಲಿದ್ದ ಚಿತ್ರಾನ್ನದೊಡನೆ ಗವಿಮಠದ ಕಡೆ ಸೈಕಲ್ ಮೇಲೆ ಹೊರಟಿದ್ದ ಅನಸೂಯಾಳಿಗೆ ತಾಯಿಯ ಕೂಗು ಕೇಳಿಸಿತಾದರೂ ಹೇಗೆ?…

“ಮಗಳ ಹೆಸರೇನಮ್ಮಾ ಅದು! ಈಗಾಗ್ಲೆ ಆಕೆ ಸಾಕಷ್ಟು ಬೆಳೆದು ಮದುವೆ ವಯಸ್ಸಿಗೆ ಬಂದಿರಬಹುದಲ್ವೇ? ಅಂತೂ ನೀನೇ ಪುಣ್ಯವಂತೆಯಮ್ಮಾ… ನೀನು ಯಾವ ಜನ್ಮದಲ್ಲಿ ಪುಣ್ಯ ಮಾಡಿದ್ದೆಯೋ… ಅಂತೂ ಆ ದೇವ್ರು ಮಗಳೊಬ್ಬಳನ್ನು ನಿನಗೆ ಕೊಟ್ಟಿದ್ದಾನೆ… ನನಗೆ ಆ ದೇವ್ರು ಒಂದೇ ಒಂದು ಹೆಣ್ಣು ಸಂತಾನ ಕೊಡ್ಲಿಲ್ಲ ನೋಡು…” ನಿಟ್ಟುಸಿರು ಬಿಟ್ಟ ಚಂದ್ರಪ್ಪ ಹೆಣ್ಣು ಹಡೆದೀ ಅಂದ್ರೆ ಕುತ್ತಿಗೆ ಹಿಚುಗಿ ಸಾಯಿಸ್ತೀನಿ ಹುಷಾರ್ ಎಂದು ಪ್ರತಿಗರ್ಭ ಧರಿಸಿದಾಗಲೂ ತನ್ನ ಧರ್ಮಪತ್ನಿಯನ್ನು ತಪ್ಪದೆ ಬೆದರಿಸುತ್ತಿದ್ದ. ಅಂತೂ ಆಕೆಯ ಪುಣ್ಯ ಆಯುಷ್ಯ ಗಟ್ಟಿ, ಒಂದರ ಹಿಂದೆ ಒಂದರಂತೆ ಸಾಲಾಗಿ ಒಂಬತ್ತು ಗಂಡು ಮಕ್ಕಳನ್ನು ಹಡೆದು ಕೊಟ್ಟಳು. ಹತ್ತನೆಯದನ್ನು ಹಡೆಯುವಾಗ ಸತ್ತು ಸ್ವರ್ಗಕ್ಕೆ ಹೋದಳೋ ನರಕಕ್ಕೆ ಹೊದಳೋ! ಹೆತ್ತು ಕೊಟ್ಟ ಸಂತಾನದ ಪೈಕಿ ಎರಡು ಅಕಾಲ ಮರಣಕ್ಕೆ ತುತ್ತಾಗಿದ್ದವು. ಮೂರು ಕೈಕಾಲು ಸೊಟ್ಟ ಬಟ್ಟ ಒಂಥರಾ ಇದ್ದವು. ಎರಡರ ಪೈಕಿ ಒಂದು ಕಿವುಡು, ಇನ್ನೊಂದು ಮೂಕು, ಇನ್ನೊಂದರ ತಲೆ ಲೂಜು, ಇನ್ನೊಂದರ ದೇಹದ ಮೇಲೆ ಎಲ್ಲೂ ಒಂದು ರೋಮ ಇಲ್ಲವೇ ಇಲ್ಲ… ಅಂದರೆ ಚಂದ್ರಪ್ಪ ಗಂಡು ಸಂತಾನದ ನೇತಾರನೆಂದು ಹೆಮ್ಮೆಯಿಂದ ಕೊಕ್ ಕೊಕ್ ಕೆಮ್ಮಿ ಒಂದೊಂದು ಕಪ್ಪು ಕಫ ಕಕ್ಕುತ್ತಿದ್ದ. ಸಾಕಷ್ಟು ದೂರದೃಷ್ಟಿಯಿಂದ ಕೆಲವಕ್ಕೆ ವರೋಪಚಾರ ಪಡೆಯದೆ ಒಂದೇ ಒಂದು ಹೆಣ್ಣು ಸಂತಾನವಿರುವ ಶ್ರೀಮಂತರ ಹೆಣ್ಣು ತೆಗೆದಿದ್ದ… ಕೆಲವಕ್ಕೆ ಬೀಗರಿಂದ ಒಂದೆರಡು ಪುಟ್ಟ ವರದಕ್ಷಿಣೆ ಕಕ್ಕಿಸಿದ್ದ. ಹೀಗಾಗಿ ಆತನ ಮನೆ ಎಂಬೋ ಮನೆ ಗಿಜಿಗಿಜಿ ಅನ್ನುತ್ತಿರುವುದು ಲೋಕವಿದಿತ.

“ನನ್ಗೂ ಆ ದೇವ್ರು ಹೆಣ್ಣು ಕೊಟ್ಟಿದ್ರೆ ಅನಸೂಯ ಅಂತಾನೆ ಹೆಸರಿಡುತ್ತಿದ್ದೆನಮ್ಮಾ!” ಮತ್ತೊಂದು ನಿಟ್ಟುಸಿರು ದೂಡಿದನಾ ಮೆತ್ತನ್ನ ಮೆದಿಗಳ್ಳ. “ಅಲ್ಲಮ್ಮಾ ತಾಯಿ ಮಗ್ಳು ಓದ್ಕೊಂಡಿದ್ದಾಳಂತ ಕೇಳಿದ್ದೀನಿ… ಇದ್ನೆಲ್ಲಾ ಯಾಕೆ ಹೇಳ್ದೆ ಅಂದ್ರೆ… ಗಂಡು ನೋಡಿ ಮದುವೆ ಮಾಡಿ ಕೈ ತೊಳ್ಕೋ ಬಹುದಿತ್ತಲ್ಲಾಂತ. ಮನೇಲಿ ಕೈಗೆ ಬಂದಿರೋ ಮಗಳಿರೋದು ಅಂದ್ರೆ ಉಡೀಲಿ ಕೆಂಡ ಇಟ್ಕೊಂಡಂತೆಯೇ ಸರಿ… ಆ ದೇವರೇನಾದ್ರು ನನ್ಗೂ ಒಂದು ಹೆಣ್ಣು ಕೂಸು ಕೊಟ್ಟಿದ್ದ ಅಂದ್ರೆ
ಮೈನೆರೆಯೋಕೂ ಮೊದ್ಲೆ ಮದ್ವೆ ಮಾಡಿ ಮೈ ನೆರೆಯುತ್ಲೆ ಮದ್ವೆ ಮಾಡಿ ಗಂಡನ ಮನೆಗೆ ಕಳಿಸಿಬಿಡುತ್ತಿದ್ದೆ ಕಣಮ್ಮಾ…”ಚಂದ್ರಪ್ಪ ನಿಟ್ಟುಸಿರು ಬಿಟ್ಟ.

ಚಂದ್ರಪ್ಪ ಶೆಟ್ಟಿಯ (ಗ್ರಾಮದ ದೈವಸ್ಥರ ಪೈಕಿ ಒಂದಾದ ಕಶೆಟ್ಟರ ಗುಂಪಿಗೆ ಸೇರಿದ ಶಿವಪೂಜೆ ಶೆಟ್ರು ಕೊಟ್ರ ಬಸಪ್ಪನ ಮೊಮ್ಮಗನೀ ಚಂದ್ರಪ್ಪನು) ಮಾತುಗಳ ಮೊನೆಯಲ್ಲಿದ್ದ ಚೂರಿಗಳು ರುಕ್ಮಿಣಿಯನ್ನು ಅಣಕಿಸಿದವು.

“ನಮ್ಮಂಥ ಬಡವ್ರ ಮಗಳನ್ನು ತಂದುಕೊಳ್ಳೋ ದೊಡ್ಡ ಮನಸ್ಸು ಯಾರ್ಗಿದೇ ಸಾವ್ಕಾರ್ರೇ” ತನ್ನ ಕಣ್ಣ ಕೊನೆಗೆ ಇಣುಕಿ ಹಲೋ ಹಲೊ ಎಂದು ವಿಷ್ ಮಾಡುತ್ತಿದ್ದ ನೀರಿನ ಹನಿಯನ್ನು ಒರೆಸಿಕೊಂಡಳು.ರುಕ್ಮಿಣಿ ಅಲಿಯಾಸ್ ರುಕ್ಕಮ್ಮ. “ನೀವೇ ಗಂಡು ಹುಡುಕಿ ಪುಣ್ಯ ಕಟ್ಟಿಕೊಳ್ಳಬಾರದೇ?”

“ಎನಮ್ಮಾ ತಾಯಿ, ಎಂಥ ಮಾತಾಡ್ತಿದ್ದೀ… ಮೈನೆರದು ಒಂಬತತ್ತು ವರ್ಷ ಆಗಿರೋ ಹುಡುಗಿ ಗಂಡು ಹುಡ್ಕೊಂಡಿರೋದಿಲ್ಲೇನು. ಮೇಲಾಗಿ ವಿದ್ಯಾವಂತೆ” ಚಂದ್ರಪ್ಪ ತನ್ನ ಮೋಹಕ ಸಂಭಾಷಣೆಗೆ ತಾನೇ ಪರವಶನಾದ, ನಗು ಬಂತು ನಕ್ಕ. “ಇದ್ಕೆ ಸೂಕ್ತವಾದ ವ್ಯಕ್ತಿ ಎಂದರೆ ಪರಮೇಶ್ವರ ಶಾಸ್ತ್ರಿಗಳು ಕಣಮ್ಮಾ, ಅವನ ಒಂದು ಕೇಳಿದಿ ಅಂದ್ರೆ…”

“ಹ್ಹಾಂ… ಪರಮೇಶ್ವರ ಶಾಸ್ತ್ರಿಗಳೇ… ಅವ್ರೆಲ್ಲಿ ನಾವೆಲ್ಲಿ?”. ರುಕ್ಕಮ್ಮ ದಿಗ್ಭಾಂತಳಾದಳು. ಆಕೆಗೇನು ಗೊತ್ತು ತನ್ನ ಮಗಳು ಅನಸೂಯ ಶಾಮಾಶಾಸ್ತ್ರಿಯ ಮೈಗೆ ಮೈ ಅಂಟಿಸಿ ಕೂತು ಇದೇ ವಿಷಯ ಚರ್ಚಿಸುತ್ತಿರುವ ಸಂಗತಿ
“ಅನೂ… ನಮ್ಮಿಬ್ಬರ ಮದುವೆಗೆ ಈ ಹಾಳಾದ ಜಾತಿ ಬೇರೆ ಅಡ್ಡ ಬತಿದೆಯಲ್ಲಾ…” ಶಾಮು ಆಕೆಯ ಮುಂಗುರುಳು ನೇವರಿಸಿದ , ಮೂಗನ್ನು ಮೃದುವಾಗಿ ಹಿಂಡಿದ.
“ಹಾಗಾದ್ರೆ ನನ್ಗಿಂತ ನಿನ್ ಜಾತೀನೆ ನಿನ್ಗೆ ಇಷ್ಟ ಏನು?” ಕೊಂಚ ದೂರ ಸರಿದು ಕೂತಳು… ಕಾದ ಬಾಣಿಲೆಯಿಂದ ಆಚೆ ಕಡೆಗೆ ಕುಪ್ಪಳಿಸಿದ ಹಕ್ಕಿಯಂತೆ.
“ಹಾಗೇನಿಲ್ಲ… ತಾತ ತನ್ನ ಬೇಕಾದ್ರೆ ಬಿಟ್ಟಾರು ಬ್ರಾಹ್ಮಣ್ಯಕ್ಕೆ ಅಪಚಾರ ಮಾಡೋರಲ್ಲ”
“ನಿಮ್ತಾಯಿ!!”
“ಆಕೆ ಬ್ರಾಹ್ಮಣ್ಯದ ಅವತಾರ ಕಣೇ!”

ಪಾಪ! ಶಾಮನಿಗೇನು ಗೊತ್ತು, ತಮ್ಮ ತಾತನವರಾದ ಶಾಸ್ತ್ರಿಗಳು ತಮ್ಮ ಮನೆಯ ತೂಗು ಮಂಚದಮೇಲೆ ಕೂತಿರುವುದು! ಕೆಳಗೆ ಅಂದರೆ ನರಸಿಂಹದೇವರು ದರ್ಶನ ಕೊಟ್ಟಿರುವನೆನ್ನಲಾದ ಕಂಭಕ್ಕಾತು ಅಮ್ಮ ಕೂತಿರುವುದು! ಅವರೀರ್ವರು ತಮ್ಮ ಕಣ್ಮಣಿಯಂತಿರುವ ಶಾಮನ ಮದುವೆ ಕುರಿತು ಚರ್ಚಿಸುತ್ತಿರುವುದು.

ಶಾಸ್ತ್ರಿಗಳು ತಮ್ಮ ಮುಂದೆ ಛಪ್ಪನ್ನಾರು ಕುಟುಂಬಗಳಿಂದ ಬಂದಿದ್ದ ಜಾತಕಗಳನ್ನು ಹರಡಿ ಕೂತಿದ್ದರು. ಪ್ರತಿಯೊಂದು ಜಾತಕದ ಗ್ರಹ ತಾರೆ ನೀಹಾರಿಕೆಗಳನ್ನು ಅಷ್ಟೊತ್ತಿಗಾಗಲೇ ವಿವರಿಸಿ ಹೇಳಿದ್ದರು. ಪ್ರತಿಯೊಂದು ಕುಟುಂಬದ ಆರ್ಥಿಕ ಸ್ಥಿತಿಗತಿ ಬಗ್ಗೆ ತಾವು ನಿಗೂಢ ವಲಯಗಳಿಂದ ಸಂಗ್ರಹಿಸಿದ್ದ ವಿವರಗಳನ್ನು ಹೇಳಿದ್ದರು. ಆಷ್ಟೊತ್ತಿಗೆ ಪ್ರತಿಯೊಂದು ಕುಟುಂಬದ ಆಯಾ ಸದಸ್ಯರು ಪಡೆದಿರೋ ಸಂಸ್ಕೃತ ಮೂಲದ ಶಿಕ್ಷಣದ ಬಗ್ಗೆ; ಆಯಾ ಸದಸ್ಯರ ಆಚಾರ ವಿಚಾರದ ಬಗ್ಗೆ; ಆಯಾ ಕುಟುಂಬದ ಹಿರಿಯರು ಪ್ರಾಣಾಯಾಮಕ್ಕೆ ತೆಗೆದುಕೊಳ್ಳುವ ಸಮಯದ ಬಗ್ಗೆ, ಗಾಯತ್ರಿ ಪಠನೆಗೆ ತೆಗೆದುಕೊಳ್ಳುವ ಏಕಾಗ್ರತೆ ಬಗ್ಗೆ; ಪ್ರತಿಯೊಂದು ಕುಟುಂಬ

ವಾಸಿಸುವ ಮನೆ ಮುಂದೆ ಇರುವ ತುಳಸೀ ಕಟ್ಟೆಯ ಒಳ, ಹೊರ ವಿನ್ಯಾಸದ ಬಗ್ಗೆ ಕೂಲಂಕುಷವಾಗಿ ಚರ್ಚಿಸಿದ್ದರು ಅಷ್ಟೊತ್ತಿಗೆ.
“ಅಮ್ಮಾ ನಾನಿರುವಾಗ ನೀನೇಕೆ ಚಿಂತೆ ಮಾಡುತ್ತಿರುವಿ ತಾಯಿ. ಪ್ರಾಚೀನ ಕಾಲದಲ್ಲಿ ಗಂಡನ ಚಿತೆಯೊಳಗೆ ಸಹಗಮನ ಮಾಡುತ್ತಿದ್ದರು. ಅಂಥ ಹೇಣ್ಣನ್ನು ತಂದು ಮದುವೆ ಮಾಡ್ತೀನಿ, ನೋಡ್ತಿರು”. ಒಂದು ಚಿಟಕೆ ನಶ್ಯವನ್ನು ಬೆಳ್ಳಿ ಭರಣಿಯಿಂದ ತೆಗೆದು ಚಿನ್ನದ ಭರಣಿಯಂಥ ಮೂಗಿನೊಳಗೆ ಲೇಪಿಸಿಕೊಂಡರು. (ಮೂಗು ಕಟ್ಟುವ ಸಮಸ್ಯೆ ನಿವಾರಣೆಗೆ ಕೆಂಜನಗೂಡು ಕೆಂಪ ಹನುಮಂತರಾಯರಿಂದ ಇತ್ತೀಚಿಗೆ ರೂಡಿಸಿಕೊಂಡಿದ್ದರು ಆ ಚಟವನ್ನು)
ಶುಭಸುಚಕವಾಗಿ ಎರಡು ಸೀನುಗಳು ಹೊರಬಂದವು.
ಯಾವತ್ತು ಹೊರಡ್ತೀರಿ… ಗುಣಸಾಗರದ ಅಗ್ರಹಾರಕ್ಕೆ… ದಶಾವಧಾನಿ ಶಿವರಾಮಯ್ಯನೋರು ಹಾಸಿಗೆ ಹಿಡಿದಿದ್ದಾರಂತೆ. ಮಗಳ ಮದುವೆ ಮಾಡಿ ವೈಕುಂಟ ಸೇರಬೇಕಂದೇ ಜೀವ ಹಿಡಿದಿರುವರಂತೆ”. ಇತ್ತೀಚೆಗೆ ಅಲುಮೇಲಮ್ಮ ಪ್ರತಿಯೊಂದು ಮಾತಿಗೂ ಅಂತೆ ಕಂತೆ ಸೇರಿಸುವುದನ್ನು ಅಭ್ಯಾಸ ಮಾಡಿಕೊಂಡಿದ್ದಳು.

“ಮುಂದಿನ ಗುರುವಾರದ ಹೊತ್ತಿಗೆ ಶತತಾರ ನಕ್ಷತ್ರ ದ್ವಾದಶ ತಿಥಿಗೆ ಬರುತ್ತಲಿದೆ… ಅದಿರಲಿ ತಾಯಿ, ಅಗ್ರಹಾರದ ಶಿವರಾಮಯ್ಯನವರೇನೋ ದಶಾವಧಾನಿಗಳೆಂದು ನಾನೂ ಒಪ್ಪಿಕೊಳ್ಳುತ್ತೇನೆ. ಅವರ ಜಾತಕ ಕುಂಡಲಿ ಪ್ರಶಸ್ತವಾಗಿದೆ ಎಂದು ನಾನೂ ಒಪ್ಪಿಕೊಳ್ತೇನೆ… ಆದರೆ ಆ ಮಹಾನುಭಾವರು ತಮ್ಮ ಮಗಳು ಋತುಮತಿಯಾದ ತಿಥಿ ವಾರ ನಕ್ಷತ್ರಗಳನ್ನು ವಿವರ ಕಳಿಸಿಲ್ಲವಲ್ಲ… ಅದಕ್ಕೆ ಏನು ಮಾಡುವುದಮ್ಮಾ?” ಶಾಸ್ತ್ರಿಗಳು ಇನ್ನೊಂದು ಚಿಟಿಕೆ ನಶ್ಯೆ ಏರಿಸಿದರು. ತಮ್ಮ ಹೃದಯವೇ ಮೂಗಿನ ಮೂಲಕ ಹೊರ ಬಿದ್ದಿತೇನೋ ಎಂಬಂತೆ ಒಂಟಿ ಸೀನಿ ಸೀತರು. ಅದು ಅಶುಭ ಸೂಚಕ. ಅದರ ಆಯುರ್ವೇದಯುಕ್ತ ಪರಿಮಳ ಮನೆತುಂಬ ಹರಡಿತು.

ತಾನು ಶ್ರಾವಣ ಮಾಸದಲ್ಲಿ, ಶುಕ್ಲಪಕ್ಷದ ಐದನೇ ದಿನದಲ್ಲಿ, ಅಂದರೆ ಶುಕ್ರವಾರ ಪ್ರಾತಃಕಾಲ ಪುನರ್ವಸು ನಕ್ಷತ್ರದಲ್ಲಿ ಋತುಮತಿಯಾಗಿದ್ದನ್ನು ಪರಿಶೀಲಿಸಿದ ಮೇಲಲ್ಲವೆ ಶಾಸ್ತ್ರಿಗಳು ಮಗನಿಗೆ ತಂದುಕೊಂಡದ್ದು.
ಈ ಶಾಸ್ತ್ರ ಫಲದಿಂದಲೇ ತಾನು ಚೊಚ್ಚಲು ಗಂಡು ಮಗುವನ್ನು ಹೆತ್ತಿಂದಂತೆ.
ಲುಮೇಲಮ್ಮ ನಿಡಿದಾದ ಉಸಿರು ಬಿಟ್ಟಳು.
ಆಕೆಗೆ ಏನು ಉತ್ತರಿಸಬೇಕೋ ಅರ್ಥವಾಗಲಿಲ್ಲ.

“ನೀನೇನು ಯೋಚಿಸಬೇಡ ತಾಯಿ ನಾನೀಗಲೇ ಗುಣಸಾಗರಕ್ಕೆ ಹೋಗಿ ಬರುವೆನು. ಹಾಗೆ ಗುಟ್ಟಾಗಿ ಆಕೆ ಪುಷ್ಪವತಿಯಾದ ಕಾಲ ತಿಳಿದುಕೊಂಡು ಉಳಿದಿದ್ದನ್ನು ಆಮೇಲೆ ನಿರ್ಧರಿಸಿದರಾಯಿತು. ಒಟ್ಟಿನಲ್ಲಿ ಕುಂಭರಾಶಿಯವನಾದ ನಮ್ಮ ಶಾಮುವಿಗೆ ಮಾರ್ಗಶಿರ ಮಾಸದ ಅಭಿಜಿನ್ ಮುಹೂರ್ತದಲ್ಲಿ ಮದುವೆ ಮುಗಿಸುವ ಜವಾಬ್ದಾರಿ ನನಗೆ ಬಿಟ್ಟು ನೀನು ನಿಶ್ಚಿಂತೆಯಿಂದಿರು” ಎಂದು ಶಾಸ್ತ್ರಿಗಳು ಸ್ವಲ್ಪ ನರಳುತ್ತಿರುವಂತೆ ಕಂಡುಬಂದರು. ಮಾತಾಡಿ ಮಾತಾಡಿ ದವಡೆಯ ಎಡಭಾಗದಲ್ಲಿ ನೋವು ಕಾಣಿಸಿಕೊಂಡಿತ್ತು.

“ಮಧ್ಯಾನ್ನದ ಊಟಕ್ಕೆ ಸ್ವಲ್ಪ ಉಪ್ಪು ಹಾಕಿ ಗಂಜಿ ಮಾಡಿಬಿಡಮ್ಮಾ…… ನಿನ್ನೆ ಸಾಹುಕಾರ ಗೋವಿಂದೇಗೌಡರ ಶ್ರಾದ್ಧ ಮಾಡಿದ ಸುಸ್ತು ಇನ್ನೂ ಕಡಿಮೆಯಾಗಿಲ್ಲ. ಪುಳಿಯೋಗರೆ, ವಾಸನೆ ತಲೆ ಆವರಿಸಿಬಿಟ್ಟಿದೆ”. ತೂಗು ಮಂಚದ ಮೇಲೆ ’ವಿದ್ಯಾದಾನಂತು ದೇಹಿ ಮೇ’ ಎಂದು

ಗೊಣಗುತ್ತ ಕಣ್ಣು ಮುಚ್ಚಿದರು. ಅವರ ಕಮರುಡೇಗನ್ನು ಗುರುತಿಸಿ ಅಲುಮೇಲಮ್ಮ ಗಂಜಿ ಮಾಡಿಟ್ಟಿದ್ದಳು. ಎರಡು ಅಗುಳು ಉಪ್ಪುಹಾಕಿ ಕದಡಿದಳು.
ಗಲ್ಲ ಮತ್ತು ಮೂಗಿನ ಮೇಲೆ ನವೆ. ಅಲ್ಲಿ ಪುಟ್ಟ ಗುಳ್ಳೆಗಳು, ಮಾಸಿಕ ಮೈಲಿಗೆ ಮುನ್ಸೂಚಕವಾಗಿ ಮೂಡಿವೆ ರಾಯಭಾರಿಗಳಂತೆ. ಇನ್ನು ಇಷ್ಟು ಹೀಗೆ ಎಷ್ಟು ಕಾಲ ಮೈಲಿಗೆಯಾಗುತ್ತಿರಬೇಕೋ! ಮುಟ್ಟು ನಿಂತು ಹಲ್ಲು ಉದುರಿ, ಸೊಂಟ ಬಾಗಿ ಚರ್ಮ ಸುಕ್ಕು ಗಟ್ಟಿ ಕುರೂಪಿಯಾಗಿ ರಾಮ ರಾಮಾ ಅಂತ ಮೂಲೆ ಹಿಡಿದು ಕೂಡ್ರುವ ಕಾಲ ಇನ್ನೆಷ್ಟು ದೂರವಿರುವುದೋ.

ಹೊರಗಡೆ ಹೆಜ್ಜೆ ಇಟ್ಟರೆ ಸಾಕು, ಜೊಲ್ಲು ಸುರಿಸುವ ಆ ಗಂಡಸರ ಕಣ್ಣುಗಳ ದೃಷ್ಟಿ ಇಂಗಿ ಬಿಡಬಾರದೆ! ತನ್ನಮ್ಥ ಬೋಳಾದ ಮುಂಡೆಯಲ್ಲೂ ಸೌಂದರ್ಯ ಹುಡುಕೋ ಈ ಗಂಡಸರನ್ನು ಏನೆಂತ ಶಪಿಸುವುದು ದೇವರೇ!

ಇದ್ದಕ್ಕಿದ್ದಂತೆ ಅಲುಮೇಲಮ್ಮಗೆ ಮಗ ನೆನಪಾಗಿ ಬಿಟ್ಟ. ಅವನ ಸಮಕ್ಷಮದಲ್ಲಿ ಸ್ನಾನ ಮಾಡದೆ ಅವನಿಂದ ಬೆನ್ನು ಉಜ್ಜಿಸಿಕೊಳ್ಳದೆ ಎಷ್ಟೊಂದು ದಿನಗಳದವಲ್ಲ! ಅವನನ್ನು ತಬ್ಬಿಕೊಂಡು ಮಲಗದೆ ಎಷ್ಟೊಂದು ದಿನಗಳದವಲ್ಲ! ಅವನಿಗೆ ಕೈ ತುತ್ತು ಮಾಡಿ ಉಣಿಸದೆ ಎಷ್ಟೊಂದು ದಿನಗಳದವಲ್ಲ! ತನ್ನ ಮಗನನ್ನು ಬಚ್ಚಲಲ್ಲಿ ಪೂರ್ತಿ ಬತ್ತಲೆ ಮಾಡಿ ಸ್ನಾನ ಮಾಡಿಸದೆ ಎಷ್ಟೊಂದು ದಿನಗಳಾದವಲ್ಲ!

ಅಯ್ಯೋ ದೇವರೆ, ಅವನನ್ನು ಏಕೆ ದೊಡ್ಡವನನ್ನಾಗಿ ಮಾಡಿದೆ! ಎಂದೂ ಇಲ್ಲದ ನಾಚಿಕೆ ಸಂಕೋಚ ಅವನಿಗೆ ಯಾಕೆ ಕೊಟ್ಟೆ? ಅವನು ಎಷ್ಟೇ ದೊಡ್ಡವನಾಗಲಿ; ಅವನು ನನ್ನ ಮಗ ನನಗೆ ಎಂದೆಂದೂ ಅವನು ಅಂಗೆಗಾಲಿಟ್ಟಾಡುವ ಮಗುವೆ, ಅವನನ್ನು ನನ್ನಿಂದ ದೂರ ಮಾಡಬೇಡ ತಂದೆಯೇ!
ಆಕೆಯ ಕಣ್ಣುಗಳಿಂದ ನೀರು ಇದ್ದಕ್ಕಿಂತೆ ದುಮ್ಮಿಕ್ಕ ತೊಡಗಿತು. ಆಕೆಯ ಸ್ತನಗಳು ಒದ್ದೆಯಾದವು. ಎದೆಯೊಳಗೆ ಉದ್ವೇಗಕ್ಕೆ ಸಿಲುಕಿ ಆಕೆಯ ವಕ್ಷ ಒಂದೇಸಮನೆ ಏರಿಳಿಯ ತೊಡಗಿದವು. ಆ ಸ್ತನಗಳೊಂದಿ ಆಟವಾಡಿದ ಗಂಡ ಮತ್ತು ಮಗ ಒಟ್ಟಿಗೆ ನೆನಪಾದರು.
ಗಂಡನಂತೂ ಇಲ್ಲ. ನಡು ನೀರಿನಲ್ಲಿ ಕೈ ಬಿಟ್ಟ, ಬಯಲಲ್ಲಿ ಬಯಲಾಗಿಬಿಟ್ಟ.

ಮಗನಿರುವನಲ್ಲ ಅವನು ಆ ಹಾಳಾದ ಹುಡುಗಿ ಜೊತೆ ಎಲ್ಲೆಲ್ಲಿ ಸುತ್ತುತ್ತಿರುವನೋ ಏನೋ ಛೇ!… ಛೇ!… ಅವನೂ ಅಷ್ಟೇ! ಅವಳು ಅಷ್ಟೇ! ಎಂದೂ ಸಭ್ಯತೆ ಮೀರಿ ವರ್ತಿಸುವವ್ವರಲ್ಲ.

“ಅಮ್ಮಾ ದ್ವಿವೇದುಲರವರ ಸಂಸ್ಕೃತ ಗ್ರಂಥಾಲಯಕ್ಕೆ ಹೋಗಿ ಕೌಟಿಲ್ಯನ ಅರ್ಥಶಾಸ್ತ್ರದ ಹದಿನೆಂಟನೆ ಅಧ್ಯಾಯ ನೋಡಿಕೊಂಡು ಬತೇನೆ… ಪತ್ರಿಕೆಯೊಂದರ ದೀಪಾವಳಿ ವಿಶೇಷಾಂಕಕ್ಕೆ ಕೌಟಿಲ್ಯನ ಬಗ್ಗೆ ಲೇಖನ ಕೇಳಿದ್ದಾರೆ” ಮಗ ಹೊರಡುವ ಮುನ್ನ ಮೊದಲು ಆಡಿದ್ದ ಮಾತುಗಳು.

ಈಗವನು ಲೈಬ್ರರಿಯಲ್ಲಿರಬಹುದು. ಮುಂದೆ ಹತ್ತಾರು ಗ್ರಂಥಗಳನ್ನು ಹರಡಿಕೊಂಡಿರ ಬಹುದು; ಟಿಪ್ಪಣಿ ಮಾಡಿಕೊಳ್ಳುವುದರಲ್ಲಿ ಮಗ್ನನಾಗಿರಬಹುದು… ಎಂದೆಲ್ಲ ಊಹಿಸಿ ಸಮಾಧಾನದ ಉಸಿರನ್ನು ಬಿಡುತ್ತಿದ್ದ ಆ ಸಾಧ್ವಿಗೇನು ಗೊತ್ತು… ಶಾಮು ಮತ್ತು ಅನಸೂಯ ಶ್ರೀ ಶ್ರೀ ಗಣಪತಿ ಸಚ್ಚಿದಾನಂದ ಮಹಾಸ್ವಾಮಿಗಳ ಅಮೃತ ಶಿಲೆಯಿಂದ ಕಟ್ಟಿದ ಸಮಾದಿ ಮರೆಗೆ ಸರಿದು ಸರಿಸಮಾನವಾಗಿ ಬಿಕ್ಕುತ್ತಿದ್ದುದು.
“ನನ್ನ ನೀನೆ ಮದುವೆಯಾಗಬೇಕು ಕಣೋ ಶಾಮು… ನೀನಿಲ್ದೆ ಬದುಕೋ ಶಕ್ತಿ

ನನಗಿಲ್ಲ… ಯಾರೇ ಎದುರು ಬಿದ್ರೂ ಸರಿಯೆ ನಾವಿಬ್ರು ಜೊತೆಗೂಡಿ ಬಾಳಬೇಕು” ಅನಸೂಯ ಅವನ ಎದೆಮೇಲೆ ಮುಖವಿರಿಸಿ ಒಂದೇ ಸಮನೆ ಬಿಕ್ಕುತ್ತಿದ್ದಳು.
“ನನಗೂ ನಿನ್ ಜೊತೆ ಬಾಳಬೇಕೂಂತ ಆಸೆ ಇಲ್ಲಂತ ತಿಳಿಕೊಂಡಿದ್ದೀಯೇನೆ? ನಾನೋ ಅಥ್ವಾ ನೀನೋ… ಇಬ್ಬ್ರೂ ಒಂದೇ ಜಾತೀಲಿ ಹುಟಿಬಿಟ್ಟಿದ್ವೀ ಅಂದ್ರೆ ಇಷ್ಟೆಲ್ಲ ಸಮಸ್ಯೆ ಇತಿರಲಿಲ್ಲ…”

“ಈಗ ಹುಟ್ಟಿಬಿಟ್ಟಿದ್ದೀವಲ್ಲ. ಸಾಹಿತ್ಯದ ಬಗ್ಗೆ ಪ್ರೀತಿ ಇಟ್ಟುಕೊಂಡಿರೋನು ಯಾವಾಗ್ಲೂ ಮನುಷ್ಯನ ಬಗ್ಗೆ ಪ್ರೀತಿ ಇಟ್ಕೊಂಡಿತಾನೆ ಎಂಬ ಮಾತನ್ನು ನಿನ್ನಂಥೋರು ನಿಜ ಮಾಡ್ಬೇಕೋ ಶಾಮು. ನನ್ಗೆ ನೀನು ಮುಖ್ಯ ಆಗಬೇಕು ನಿನ್ಗೆ ನಾನು ಮುಖ್ಯ ಆಗ ಬೇಕು ಅಷ್ಟೇ. ನಮ್ಮಂಥೋಗೆ ಜಾತಿ ಕಂದಾಚಾರ ಮುಖ್ಯ ಆಗಬಾದು… ”
“ಈಗ ನಾನೇನು ಮಾಡ್ಬೇಕಂತ ಬಿಡಿಸಿಹೇಳು… ನಾನು ಸಾಹಿತಿಯಾಗಿರಬಹ್ದು. ಆದ್ರೆ ನನ್ಗೆ ಸಾಹಿತ್ಯದ ಪರಿಭಾಷೆ ಅರ್ಥ ಆಗೊದಿಲ್ಲ”
ನಾವು ಜಾತಿ ವ್ಯವಸ್ಥೆಯನ್ನು ಉಲ್ಲಂಗಿಸಬೇಕು. ಅದ್ಕೆ ನಾವಿಬ್ರು ಪರಸ್ಪರ ಮದುವೆಯಾಗಬೇಕು”
“ಇದ್ಕೆ ನಿಮ್ ತಾಯಿ ಒಪ್ತಾರೇನು?”
“ಅವರನ್ನು ಒಪ್ಸೋ ಜವಾಬ್ದಾರಿ ನನ್ಗೆ ಬಿಡು… ನಿಮ್ಮ ಮನೇಲಿ ನಿನ್ತಾತನವನ ಮತ್ತು ನಿನ್ತಾಯಿಯವರ್ನ ಒಪ್ಪಿಸಬೇಕು”.
“ಅವ್ರು ಒಪ್ಪದಿದ್ರೆ?”
“ಒಪ್ಪದಿದ್ರೇನಾಯ್ತು ನಾವಿಬ್ರು ಎಲ್ಲೋ ಒಂದು ಕಡೆ ಹೋಗೋಣ, ಮದುವೆಯಾಗೋಣ, ಇಬ್ರೂ ನೌಕರಿ ಸೇರೋಣ. ಜೀವನ ಸಾಗಿಸೋಣ. ಏನಂತಿ!”
“ನನ್ಗೊಂದ್ ಅರ್ಥ ಆಗ್ತಾ ಇಲ್ಲ!”
“ನೀನು ಹೀಗೆಯೋಚ್ನೆ ಮಾಡಿದ್ರೆ ಹೆಣ್ಣಾದ ನನ್ನ ಗತಿ ಏನು!”
“ಆಗ್ಲಿ ಅಮ್ಮನ್ನ ಒಂದು ಮಾತು ಕೇಳಿ ನೋಡ್ತೀನಿ’
“ಬರೀ ಕೇಳೊದಲ್ಲ… ಒತ್ತಾಯಿಸಬೇಕು!”
“…” ನಿಟ್ಟುಸಿರು ಬಿಟ್ಟ. ಅದನ್ನು ಕೇಳಿಸಿಕೊಂಡ ಗುಬ್ಬಿಯೊಂದು ಪುರ್ರನೆ ಸೀದ ಅವರ ಮನೆಗೆ ಹಾರಿತು.
“ನಿನ್ನ ಒಡಹುಟ್ಟಿದವಯಾರೂ ಇಲ್ವೇನಮ್ಮಾ… ” ಎಂದು ಪ್ರಶ್ನಿಸುತ್ತಿದ್ದ ಕಶೆಟ್ಟಿ ಚಂದ್ರಪ್ಪನ ತಲೆ ಮೇಲೆ ಒಂದು ಸುತ್ತು ಗಸ್ತು ಹಾಕಿತು. ಹಾಗೆಯೇ ರುಕ್ಕಮ್ಮನ ತಲೆಯ ಮೇಲೂ, ಅಯ್ಯೋ, ಈ ಹಾಳಾದ ಹುಲು ನರರು ನಾನು ಹೇಳೋದನ್ನು ಅರ್ಥ ಮಾಡಿಕೊಳ್ಳುತ್ತಿಲ್ಲವಲ್ಲ ಎಂದು ನೆಲುವಿನ ಮೇಲೆ ಕೂತು ಒಂದೇ ಸಮನೆ ಚೀವ್ ಚೀವ್ ಅಂತು. ಅವರದ್ದು ಅವರಿಗಾಗಿದೆ ನಿನ್ನದೇನು ವರಾತ ಎಂದು ಒಲೆಯ ಮೇಲಿದ್ದ ಬೆಕ್ಕು ವರಾತ ತೆಗೆಯಿತು.
ರುಕ್ಕಮ್ಮ ಗುಬ್ಬಿ ಮತ್ತು ಬೆಕ್ಕನ್ನು ಗದರಿಸಲು ಪ್ರಯತ್ನಿಸಿ ಹೇಳಿದಳು,
“ಇದ್ದಾರೆ ಚಂದ್ರಪ್ಪನವ್ರೆ, ನನ್ಗೆ ಒಡಹುಟ್ಟಿದ ತಮ್ಮನೊಬ್ಬ ಇದ್ದಾನೆ. ಅವನು ಬೆಂಗಳೂರಲ್ಲೋ ಮೈಸೂರಲ್ಲೋ ಸಣ್ಣ ಪುಟ್ಟ ದಂಧೆ ಮಾಡ್ಕೊಂಡಿದ್ದಾನೆ”.
“ಅವನ ಮದ್ವೆ ಇನ್ನೂ ಆಗಿಲ್ಲ ತಾನೆ!” ಎಂದು ನುಡಿದ ಚಂದ್ರಪ್ಪನನೇ ಮ್ಯಾವ್ ಗುಟ್ಟುತ್ತ ದಿಟ್ಟಿಸಿತು ಬೆಕ್ಕು.

ಒಳ್ಳೆ ಮಾತಿನಿಂದ ಎದ್ದು ಹೋಗ್ತೀಯೋ… ಇಲ್ಲಾಂದ್ರೆ ಪರಚಿ ಬಿಡ್ಲೋ ಎಂಬರ್ಥದ ನೋಟ ಬೀರಿತು.
“ಆಗಿಲ್ಲ ಸಾಹುಕಾರ್ರೆ…”
“ಮತ್ತಿನ್ನೇನು ಪತ್ರ ಬರೆಸಿಬಿಡು… ಬಂದು ಬಿಡ್ಲಿ”
“ಮಗಳು ಒಪ್ಪಬೇಕಲ್ಲ!”
“ಯಾರಾದ್ರು ಕುರಿ ಕೇಳಿ ಮಸಾಲೆ ಅರಿತಾರೇನಮ್ಮಾ…” ಚಂದ್ರಪ್ಪ ಅಷ್ಟು ಹೊತ್ತು ಒಂಟಿ ಹೆಂಗಸೆದುರು ಕೂತು ಮಾತಾಡಿದ ಅನುಭವದವನಲ್ಲ. ಗಂಡನನ್ನು ದೂರ ಕಳಿಸಿ ಕೈಗೆ ಬಂದಿರೋ ಮಗ್ಳೊಡನೆ ಬದುಕುತ್ತಿರುವ ಹೆಣ್ಣು. ಸಾಲವನ್ನೇ ಕೊಟ್ಟಿರುವ ತಮಗೆ ಕರುಳು ಇಲ್ಲದೀತೆ! ಸಾಲ ಪಡೆದೋರು ಸುಖವಾಗಿದ್ದರೆ ಮಾತ್ರ ಸಾಲ ಕೊಟ್ಟವರುಸುಖವಾಗಿರುವರು ಎಂದು ನಂಬಿದಂಥ ಕಶೆಟ್ಟಿ ವಂಶ ತಮ್ಮದು. “ಏನೋ ತಾಯಿ ವಯಸ್ನಲ್ಲಿ ಹಿರಿಯ ಅಂತ ನಾಕು ಮಾತಾಡ್ದೆ… ನಿನ್ ಮಗ್ಳು ನಿಮ್ಮಾತು… ಕರೆದಾಗ ಬಂದು ಕೈಲಾದಷ್ಟು ಕೊಟ್ಟು ಅಕ್ಷತೆ ಹಾಕೋರು ನಾವು… ಅಂದ ಹಾಗೆ… ಮನೆ ಒತ್ತೆ ಇಟ್ಟು ಪಡೆದಿರೋ ಸಾಲದ ಬಗ್ಗೆ ಮತ್ತೊಮ್ಮೆ ನೆನಪಿಸ್ತಿದ್ದೀನಿ… ಕೊಟ್ಟಿರೋ ಸಾಲ ವಸೂಲಿ ಮಾಡ್ಕೊಂಡು ಬಂದ್ರೆ ಮಾತ್ರ ಈ ಮುದುಕ್ನೀಗೆ ಒಂದ್ತುತ್ತು ಅನ್ನ ಸಿಕ್ಕೋದು ಕಣಮ್ಮಾ… ಏನು ಮಾಡೋದು ಹೇಳು… ಕಾಲ ಹಂಗಿದೆ. ನಾನು ಬರ್ತೀನಿ ತಾಯಿ…” ಎಂದು ಎದ್ದು ಹೊರಟ. ದಾಟುವಾಗ ಬಾಗಿಲಿಗೆ ತಲೆ ಬಡಿಯಿತು. ಅಮ್ಮಾ ಅಂದರು. ಮನಸ್ಸು ಸಂತೆಯಾಗಿತ್ತು. ಆದ್ದರಿಂದ ನೋವಿನ ಅನುಭವ ಆಗಲಿಲ್ಲ.
ಓಂದೊಂದು ರೀತಿಯ ಹೆಜ್ಜೆ ಇಡುತ್ತ… ನಡೆದೂ ನಡೆದೂ ಆತನೇನೋ ಮರೆಯಾದ. ಆದರೆ ಆತ ತಮ್ಮನನ್ನು ನೆನಪಿಸಿದ್ದು ಮಾತ್ರ ಮರೆಯಾಗಲಿಲ್ಲ.

ಚಂದ್ರಪ್ಪ ತನ್ನ ಒಂದೇ ಮಾತಿನಲ್ಲಿ ಅಕ್ಕನ ಹೃದಯದೊಳಗೆ ತಮ್ಮನನ್ನು ಕೆತ್ತಿ ನಿಲ್ಲಿಸಿಬಿಟ್ಟಿದ್ದ. ಅಪ್ಪ ಸತ್ತಾಗ ಬಂದಿರಲಿಲ್ಲ. ಪತ್ರ ತಂತಿ ಸಕಾಲಕ್ಕೆ ಮುಟ್ಟಲಿಲ್ಲವಂತೆ ತಿಥಿ ದಿನ ಬಂದಿದ್ದ. ಊಟ ಮಾಡುತ್ತಿದ್ದವರು ಆತನನ್ನು ಸಿನಿಮಾ ನಟನಿಗೆ ಹೋಲಿಸಿದರು. ಅವನು ಹಾಗಿದ್ದ. ಹಾಗೆ ಬೆಳೆದಿದ್ದ.

“ಭಿಕ್ಷೆ ಬೇಡೋಗೆ ಮಗಳ್ನ ಕೊಟ್ಟು ಮದ್ವೆ ಮಾಡೇನು! ಆದ್ರೆ ಆ ನಿನ್ನ ತಮ್ಮನಿಗೆ ಮಾತ್ರ ನನ್ಮಗಳ್ನ ಕೊಡೋದಿಲ್ಲ” ರುದ್ರನಾಯಕ ಮಾತಿಗೆ ಮಾತು ಬಂದಾಗ ಹೇಳುತ್ತಲೇ ಇದ್ದ. ಮೊದಲಿಂದಲೂ ಅಷ್ಟೆ, ಅವರಿಬ್ಬರು ಪರಸ್ಪರ ಹಾವು ಮುಂಗುಸಿಯಂತೆ ಬುಸುಗುಟ್ಟುತ್ತಿದ್ದರು.

ಆದರೆ ಈಗ ಬುಸುಗುಟ್ಟುವವರು ಇಲ್ಲವಲ್ಲ. ಅವನೇನು ಕಡೇಲಲ್ಲ… ಒಡ ಹುಟ್ಟಿದ ತಮ್ಮಂದಿರ ಪೈಕಿ ಅವನೂ ಒಬ್ಬ . ಬಂಧು ಬಳಗ, ತಂದೆ ತಾಯಿ, ಒಡಹುಟ್ಟಿದವರು…ಎಲ್ಲರಿಂದ ಸಿಡಿದು ಸ್ವತಂತ್ರ ರೀತಿಯಲ್ಲಿ ಬದುಕುತ್ತಿರುವ ತಮ್ಮನವನು. ಅವನಿಗ್ರ್ ಮಗಳನ್ನು ಕಟ್ಟಿಹಾಕಿ ಕೈ ತೊಳೆದುಕೊಂಡರಾಯಿತು. ಹೀಗೆ ನಿರ್ಧರಿಸಿದ ಆಕೆಗೆ ಗುಬ್ಬಿ ಏನೋ ಸಲಹೆ ನೀಡಲು ಪ್ರಯತ್ನಿಸಿತು. ಬೆಕ್ಕು ಏನೋ ಸೂಚಿಸಲು ಎಚ್ಚರಿಸಲು ಪ್ರಯತ್ನಿಸಿತು.

ಅವನ ವಿಳಾಸ ಎಲ್ಲಿರುವುದೋ ಏನೋ? ಯಾವುದೇ ಸಾಮಾನು ಇಟ್ಟಲ್ಲಿ ಇರುತ್ತಿರಲಿಲ್ಲ. ನಗಂದಿ ಮೇಲೆ; ಟ್ರಂಕುಗಳೊಳಗೆ, ಸ್ಟಾಂಡಿನ ಮೇಲೆ; ಬೀರುವಾಗಳೊಳಗೆ ವಿಳಾಸಕ್ಕಾಗಿ ಬೆದಕಾಡತೊಡಗಿದಳು. ಸಾಮಾನುಗಳೆಲ್ಲ ಆಕೆಗೆ ಅರಿವಿಲ್ಲದಂತೆ ನೆಲದ ಮೇಲಲ್ಲ ಚಲ್ಲಾಪಿಲ್ಲಿಯಾಗಿದ್ದವು
“ಏನಮ್ಮಾ ಏನು ಮಾಡ್ತಿದ್ದಿ?” ಅದೇ ತಾನೆ ಬಂದ ಅನುಗೆ ಆಶ್ಚರ್ಯ. “ಅದೇನು

ಹುಡುಕುತ್ತಿದ್ದೀ ಹೇಳು… ನಾನೂ ಸಹಾಯ ಮಾಡ್ತೀನಿ” ಎಂದು ಆಕೆ ಒಂದೊಂದು ವಸ್ತುವನ್ನು ನೀಟಾಗಿ ಜೋಡಿಸಿದ ತೊಡಗಿದಳು.
“ಅದು ನೀನು ಹುಡುಕಿದ್ರೆ ಸಿಗುವಂಥ ವಸ್ತು ಅಲ್ಲ ಬಿಡಮ್ಮಾ… ” ರುಕ್ಕಮ್ಮ ಅಷ್ಟು ಸುಲಭವಾಗಿ ಗುಟ್ಟು ಬಿಟ್ಟುಕೊಡವ ಪೈಕಿ ಅಲ್ಲ.
ಆದರೆ ಗುಟ್ಟನ್ನು ಎಷ್ಟುಹೊತ್ತು ಹೊಟ್ಟೆಯಲ್ಲಿಟ್ಟುಕೊಳ್ಳಬಳ್ಳಳು! ಹಾಗೆ ನೋಡಿದರೆ ಯಾವ ಗುಟ್ಟೂ ಆಕೆಯ ಹೊಟ್ಟೆಯಲ್ಲಿರಲಿಲ್ಲ… ಅದನ್ನು ಹೊರಹಾಕದೆ ಆಕೆ ನಿದ್ರೆ ಮಾಡಲಾರಳು.
“ನಿನ್ನ ರಘೂ ಮಾವನ ಅಡ್ರಸ್ಸು ಹುಡುಕ್ತಿದೀನಮ್ಮಾ”
ತಾಯಿ ಮಾತು ಕೇಳಿ ಅನಸುಯ ಬೆಚ್ಚಿದಳು.
ಅವನನ್ನು ಚಿಕ್ಕವಳಿದ್ದಾಗ ನೋಡಿದ ನೆನಪು. ಆತನ ಸಾಹಸಗಳನ್ನು ಆಕೆ ಕೇಳಿಬಲ್ಲಳು. ತಾಯಿ ಮಗಳು ತಂತಮ್ಮ ಹೊಟ್ಟೆಯಲ್ಲಿದ್ದನ್ನು ಹೊರಹಾಕಿ ಮಾತಾಡಿದರು. ಹೆಣ್ಣಿಗೊಂದು ಗಂಡಿನ ಅಗತ್ಯದ ಬಗ್ಗೆ ಅವರೀರ್ವರಿಗೂ ಒಮ್ಮತ ಇತ್ತು.

“ಶಾಮುನ ಅಭಿಪ್ರಾಯ ಏನೂಂತ ತಿಳ್ಕೊಂಡ ನಂತರ ನೀನು ನಿನ್ನ ತಮ್ಮನ ಬಗ್ಗೆ ಯೋಚ್ನೆ ಮಾಡುವಿಯಂತೆ… ” ಅನಸೂಯ ಕುಂಬಳಕಾಯಿ ಕುಡುಗೋಲು ಎರಡನ್ನೂ ತಾಯಿಗೆ ಒಪ್ಪಿಸಿ ನಿಡಿದಾದ ಉಸಿರುಬಿಟ್ಟಳು.
“ಅವ್ನೇನೋ ಒಳ್ಳೆ ಹುಡುಗ, ಆದ್ರೆ ಅವನ ಮಾತ್ನ ಅವನ ತಾಯಿ ತಾತ ಕೇಳ್ತಾರಂತ ಏನು ಖಾತ್ರಿ?” ರುಕ್ಕಮ್ಮ ಸಮಸ್ಯೆ ಮುಂದಿಟ್ಟಳು.

“ಯಾರು ಒಳ್ಳೆಯವ್ರೋ ಯಾರು ಕೆಟ್ಟೋರೋ… ಒಂದೂ ಅರ್ಥ ಆಗೋದಿಲ್ಲಮ್ಮಾ… ನನ್ನ ಹಣೇಯಲ್ಲಿ ವಿಧಿ ಏನು ಬರೆದಿದೆಯೋ ಅದರಂತೆ ಬದುಕಬೇಕು ತಾನೆ… ” ಇನ್ನೊಂದು ನಿಟ್ಟುಸಿರು ಬಿಟ್ಟು ತಾಯಿಗೆ ಹತ್ತಿರ ಸರಿದುಕೂತಳು. “ಅಮ್ಮಾ… ನನಗೆ ತಾನೆ ಯಾರಿದ್ದಾರೆ ಮಗ ಅಂದ್ರೂ ನಾನೆ ಮಗ್ಳೂ ಅಂದ್ರೆ ನಾನೆ… ನಾನೆ ಎಲ್ಲಾದರೂ ನೌಕರಿ ಸೇರಿ ನಿನ್ನ ನೋಡ್ಕೊಳ್ತೀನಿ, ನನ್ನ ಮದುವೆ ಆಗು ಅಂತ ಮಾತ್ರ ಒತ್ತಾಯಿಸಬೇಡ.”
“ಅಂದ್ರೆ ನಿನಗೆ ಮದ್ವೆ ಮಕ್ಳು ಬೇಡವೇನು?”
ಮನಸ್ಸ ಯಾರ್ಗೋ ಕೊಟ್ಟು ದೇಹಾನ ಯಾರ್ಗೋ ಒಪ್ಪಿಸುವಂಥ ಮದುವೆ ನನಗೆ ಬೇಡಮ್ಮಾ ತೀಟೆಗೆ ಹುಟ್ಟೋ ಮಕ್ಳು ಮೊದಲೇ ಬೇಡ”.
ಮಗಳು ಎಂದೂ ನೊಂದು ಮಾತಾಡಿರಲಿಲ್ಲ
ಆಕೆ ಸಮಾಧಾನ ಇದ್ದಾಗ ಪ್ರಸ್ತಾಪಿಸಿದರಾಯಿತೆಂದು ರುಕ್ಕಮ್ಮ ಸುಮ್ಮನಾದಳು.

ಶಾಮು ಕೊಟ್ಟಿದ್ದ ಪತ್ರಿಕೆ ಎದುರಿಗಿತ್ತು. ಅದರಲ್ಲಿ ಅವನದೊಂದು ಕಥೆ ಪ್ರಕಟವಾಗಿತ್ತು. ಆ ಇಡೀ ಕಥೆ ಒಂದೇ ವಾಕ್ಯದಿಂದ ಹೆಣೆಯಲ್ಪಟ್ಟಿತ್ತು. ಯಾವುದೇ ಪ್ಯಾರಾಗಳಿರಲಿಲ್ಲ. ಫೂರ್ಣ ಪ್ರಮಾಣದ ಪಾತ್ರಗಳಿರಲಿಲ್ಲ. ಯಾವ ಪಾತ್ರಕ್ಕೂ ಖಚಿತ ಉದ್ದೇಶವಿರಲಿಲ್ಲ. ಅಕ್ಷರ ಶಬ್ದವಾಗುವಂತಿರಲಿಲ್ಲ. ಶಬ್ದ ವಾಕ್ಯವಾಗುವಂತಿರಲಿಲ್ಲ. ಆದರೂ ವಿಲಕ್ಷಣವಾದ ಆಕರ್ಷಣೆ ಆ ಕಥೆಯೊಳಗಿತ್ತು. ಆ ಕಥೆ ಕಥೆಗಾರನ ಅರಿವಿಗೂ ದಕ್ಕುವಂತಿರಲಿಲ್ಲ. ಕಥೆಗಾರನೊಳಗೆ ಕಥೆ ಇತ್ತೋ; ಕಥೆಯೊಳಗೆ ಕಥೆಗಾರನಿದ್ದನೋ;

ಕಿಟಕಿಯಿಂದ ಗಾಳಿಗೆ ಪತ್ರಿಯ ಪುಟಗಳು ಕದಲತೊಡಗಿದವು. ಎರಡನೆ ಪುಟದಲ್ಲಿ ಶಾಮನ ಭಾವಚಿತ್ರವಿತ್ತು. ಅಳುಕುತ್ತಲೇ ಅವನು ತೆಗೆಸಿಕೊಂಡಿದ್ದ ಛಾಯಾಚಿತ್ರ

ಅದಾಗಿತ್ತು. ತಾನು ಮಹಾನ್ ಕಥೆಗಾರನೆಂಬ ಅಹಂ ಅವನ ಕಣ್ಣುಗಳಲ್ಲಿತ್ತು. ಯಾರೋ ಫೋಟೋದಲ್ಲಿ ಶಾಮು ಸುಂದರವಾಗಿ ಬೀಳುವುದಿಲ್ಲ. ಅವನದು ಫೋಟೋಝನಿಕ್ ಫೇಸ್ ಅಲ್ಲವೇ ಅಲ್ಲ…

ಅನಸೂಯಳಿಗೆ ಕೂತಲ್ಲಿ ಕೂಡ್ರಲಾಗಲಿಲ್ಲ… ನಿಂತಲ್ಲಿ ನಿಲ್ಲಲಾಗಲಿಲ್ಲ. ಒಂಥರಾ ಚಡಪಡಿಕೆ. ಅವನ ಮನ ಗೆಲ್ಲಲು ತಾನು ಎಷ್ಟೊಂದು ಪೋಲಿ ಪೋಲಿಯಾಗಿ ವರ್ತಿಸುತ್ತಿದುದು ಸಭ್ಯತೆ ಮೀರಿ ಪ್ರವರ್ತಿಸುತ್ತಿದ್ದುದು ಎಲ್ಲವನ್ನು ನೆನಪು ಮಾಡಿಕೊಂಡಳು. ತನ್ನ ಬಗ್ಗೆ ತನಗೇ ಹೇಸಿಗೆ ಅನ್ನಿಸಿತು ಒಂದು ಕ್ಷಣ. ಸೂರ್ಯನ ಕಿರಣಗಳಿಗೆ ಹೊಗೆ ಮಂಜು ಕರಗಿದಂತೆ ಚೆಲ್ಲುತನವೆಲ್ಲ ಕರಗಿ ತನ್ನಲ್ಲಿ ವಿಶಿಷ್ಟ ಗಾಂಭೀರ್ಯ ಮೂಡಿದೆ.

ಬೇಟೆಗಾರನ ಗುರಿಯ ನೇರದಲ್ಲಿ ಬಂಧಿತವಾಗಿರುವ ಬಣ್ಣಬಣ್ಣದ ರೆಕ್ಕೆ ತೊಯ್ದ ಹಕ್ಕಿ ಯಂತೆ ಚಡಪಡಿಸ ತೊಡಗಿದಳು.
ಹಿತ್ತಲಿಗೆ ಹೋದಳು. ಕಿಟಕಿ ತೆರದೇನೋ ಇತ್ತು. ಆದರೆ ಅದರಾಚೆ ಶಾಮನ ಛಾಯೆ ಮಾತ್ರ ಇರಲಿಲ್ಲ ಈಗವನು ಮನೆಯಲ್ಲಿರುವುದೇನೊ ಖಚಿತ. ಹೆಂಗರುಳಿನ ಅವನೀಗ ಏನು ಮಾಡುತ್ತಿರಬಹುದು? ತಾಯಿಯ ಸೆರಗಿನಲ್ಲಿ ಮುದುಡುವ ಬದಲು ಅವನು ತಾತಗೆ ತಾಯಿಗೆ ಪ್ರಶ್ನೆ ಕೇಳಿರಬಹುದೇ???…
…ಅವನ ಚಡಪಡಿಕೆ ಏನೂ ಕಡಿಮೆಯದ್ದಾಗಿರಲಿಲ್ಲ. ಮನೆ ಪ್ರವೇಶಿಸುವಾಗಲೆ ಅವನು ಇಟ್ಟ ಒಂದೊಂದು ಹೆಜ್ಜೆ ಕಂಪಿಸುತ್ತಿತ್ತು. ತಾತನೆಲ್ಲಿ ಎದುರಾಗಿ ಬಿಡುವನೋ ಎಂಬ ಆತಂಕ ಅವನ ಪುಣ್ಯಕ್ಕೆ ಅವರು ಮನೆಯಲ್ಲಿರಲಿಲ್ಲ. ತನಗೆಂದೇ ಕನ್ಯಾನ್ವೇಷಣೆಗಾಗಿ ಗುಣಸಾಗರದ ಅಗ್ರಹಾರಕ್ಕೆ ಅವರು ಹೋಗಿರುವ ಸಂಗತಿ ಹೇಳಲೆಂದೇ ಗೋಡೆ ಮೇಲಿದ್ದ ಹಲ್ಲಿ ಲೊಚಗುಟ್ಟಿತು.

ಹತ್ತು ಹೆಜ್ಜೆ ಕ್ರಮಿಸಿ ಪಡಸಾಲೆ ಪ್ರವೇಶಿಸುವಷ್ಟರಲ್ಲಿ ಬೆವರಿಂದ ನೆನೆದು ಬನಿಯನ್ನು ಮೈಗೆ ಅಂಟಿಬಿಟ್ಟಿತ್ತು. ಬಾಯಿ ಒಣಗಿತ್ತು. ನಾಲಿಗೆ ನೀರಿಂದ ಹೊರ ಉಳಿದ ಮೀನಿನಂತಾಗಿತ್ತು. ಅಮ್ಮಾಽಽ ಎಂದು ಕೂಗಲೆಂದೇನೋ ಬಾಯಿ ತೆರೆದ, ಶಬ್ದ ಹೊರಡಲಿಲ್ಲ.

ಅಷ್ಟರಲ್ಲಿ ಅವನ ಹೆಜ್ಜೆ ಸದ್ದು ಕೇಳಿಸಿಕೊಂದು, ಅದು ತನ್ನ ಮಗನದೇ ಎಂದು ಕರುಳಿನಿಂದ ಗುರಿತಿಸಿಕೊಂಡು ಅಳುಮೆಲಮ್ಮ ಓಡಿ ಬಂದಳು. ಆಕೆ ಅಡುಗೆ ಮನೆಯಲ್ಲಿದ್ದಳೋ; ದೇವರ ಕೋಣೆಯಲ್ಲಿದ್ದಳೋ! ಕೈಲಿದ್ದುದು ಲತ್ತುಡಿಯೋ; ಬತ್ತಿ ಹೊಸೆದ ಅರಳೆಯೋ ಕಿಮುಟು ಹಿಡಿದ ರಾಮಾಯಣದ ಕಟ್ಟೋ…
ತನ್ನ ಕರುಳಿನ ಕುಡಿ ಗಂಟೆಗಟ್ಟಲೆ ಹೋಗಿಬಿಡುವುದೇನು? ನತದೃಷ್ಟ ತಾಯಿ ಮನೆಯಲ್ಲಿ ಒಂಟಿಯಾಗಿರುವಳೆಂಬ ಜ್ಞಾನವಾದರೂ ಇರಬಾರದೇನು?
ಮಗೂ; ಶಾಮೂ; ಎಷ್ಟು ಹೊತ್ತೋ ನೀನು ಹೋಗುವುದು. ನನ್ನ ಹಾಳಾದ ಬಲಗಣ್ಣು ಬೇರೆ ಒಂದೇ ಸಮನೆ ಬಡ್ಕೊಳ್ತಿತ್ತು ತಂದೆಯೇ… ಮತ್ತೆ ಬಂದು ಮುಖ ತೋರಿಸಿ ಹೋಗಿದ್ರೆ ನಾನು ಇಷ್ಟೊಂದು ಹೆದತಿರಲಿಲ್ಲ… ಅಲುಮೇಲಮ್ಮ ಓಡಿಬಂದವಳೇ ಮಗನನ್ನು ಗಟ್ಟಿಯಾಗಿ ಅಪ್ಪಿಕೊಂಡು ಬಿಟ್ಟಳು. ಅವನ ಗಲ್ಲಕ್ಕೆ ಮುದ್ದಿಸಿದಾಗ ಗೊತ್ತಾಯಿತಾಕೆಗೆ ಗಡ್ಡ ಬಿಟ್ಟಿರುವ ಸಂಗತಿ… ಛೇ! ಎಷ್ಟೊಂದು ಸೊರಗಿರುವನಲ್ಲ ತನ್ನ ಮಗ…
ಆಕೆಯ ಕಣ್ಣುಗಳಿಂದ ಒಂದೇ ಸಮನೆ ನೀರು ಹರಿಯಿತು.
ತಾಯಿಯ ಉದ್ವಿಗ್ನತೆಗೆ ಅವನು ಏನೆಂದು ಪ್ರತಿಕ್ರಿಯಿಸಿಯಾನು? ಆ ವಾತ್ಸಲ್ಯಪೂರ್ಣ

ಭಾವನೆಗಳು ಅಕ್ಷರದ ಚಿಮುಟಿಗೆ ಸಿಕ್ಕುವಂತಹುಗಳಲ್ಲ…
“ಕೇಳಿಬಿಡೋ ಶಾಮು… ಅಂಜಬೇಡ” ಮನದ ಮೂಲೆಯಿಂದ ಅನಸೂಯ ಕೂಗಿ ಎಚ್ಚರಿಸಿದಳು. ಆಕೆಯ ನೆನಪು ನಾಲಗೆಗೆ ಶಕ್ತಿ ನೀಡಿತು.
“ಅಮ್ಮಾ ನಿನ್ಗೆ ನಾನು ಸಂತೋಷವಾಗಿರೋದು ಬೇಕು ತಾನೆ?” ಪೀಠಿಕೆ ಹಾಕಿದ.
“ಹೌದಪ್ಪಾ… ನಿನ್ನಂಥ ಮಗ ಸಂತೋಷವಾಗಿರಬೇಕೆಂದೇ ಅಲ್ವೆ ನಾವಿನ್ನೂ ಬದುಕಿರೋದು?”
“ಹಾಗಿದ್ರೆ ಒಂದು ಕೇಳಲೇನು!”

“ಕೇಳೋ ಅದಕ್ಯಾಕೆ ಹಿಂಜರಿಕೆ!” ಎಂದು ಮಾತಾಡುತ್ತಲೆ ನೀರಿನ ಒಲೆಯಿಂದ ಬೆಂಕಿ ಹಿಡಿದಳು. ನಿಗಿ ನಿಗಿ ಉರಿಯುತ್ತಿದ್ದ ಕೆಂಡದುಂಡೆಗಳಿಗೆ ನೀರು ಸುರಿದಳು. ಅವು ಸುಯ್ ಎಂದು ಕಪ್ಪು ಬಣ್ಣಕ್ಕೆ ತಿರುಗಿ ಇದ್ದಿಲಿನ ರೂಪ ಧರಿಸಿದವು.
ನುಡಿಯಲೆಂದು ಅವನು ಬಾಯಿತೆರೆದ. ಆದರೆ ಕ್ಷೀಣ ಸ್ವರ ಬಚ್ಚಲಿನಲ್ಲಿ ಬತ್ತಲೆ ಕೂತಿದ್ದ ತಾಯಿಗೆ ಕೇಳಿಸೀತಾದರೂ ಹೇಗೆ!
“ಮಗೂ… ಯಾಕೆ ಅಲ್ಲೇ ನಿಂತಿದ್ದೀಯಾ; ನಿನ್ನ ಕೈಯಿಂದ ಬೆನ್ನು ಉಜ್ಜಿಸಿಕೊಳ್ಳದೆ ಎಷ್ಟು ದಿನಗಳಾದ್ವೋ! ಕೂಗಿದಳು ತಾಯಿ ಬಚ್ಚಲೊಳಗಿಂದ
ಶಾಮುಗೆ ಸಂಕಟ ಸುರುವಾಯಿತು.
“ಅಮ್ಮಾ ನಾನೀಗ ಬೆಳೆದು ನಿಂತಿದ್ದೀನಿ!”

“ನನ್ನ ಶವಕ್ಕೆ ಚಿತೆ ಅಂಟಿಸುವ ಕ್ಷಣದಿಂದ ನೀನು ದೊಡ್ಡವನಾಗುವಿ ಮಗು, ಅಲ್ಲಿಯವರೆಗೆ ನೀನು ನನಗೆ ಮಗುವೆ” ತಾಯಿಯ ಆತುರಕ್ಕೆ ಕೊನೆ ಎಂಬುದಿರಲಿಲ್ಲ.
ಹೋಗದಿದ್ದಲ್ಲಿ ತಾಯಿ ತನ್ನನ್ನು ಎಲ್ಲಿ ಒಳಗೆ ಎಳೆದೊಯ್ಯುವಳೋ! ಅಳುಕಿದ.
ವಾತ್ಸಲ್ಯದ ಮಹಾಪೂರಕ್ಕೆ ಸಿಲುಕಿದ ಅದು ಅವನನ್ನು ಕೊಚ್ಚಿ ಕೊಂಡೊಯ್ಯಿತು ಸ್ನಾನದ ಕೋಣೆಗೆ; ಜ್ಞಾನದ ಸ್ನಾನದ ಕೋಣೆಗೆ, ಧ್ಯಾನ ಸ್ನಾನದ ಕೋಣೆಗೆ.
ಅವನು ಎಂದೂ ಅಷ್ಟು ವೇಗವಾಗಿ ಹೋದವನಲ್ಲ… ಹೋದ, ಹೋಗಿ ನೋಡಿದ, ಸಕಲ ತೀರ್ಥಗಳಿಂದ ತುಂಬಿ ತುಳುಕಾಡುತ್ತಿರುವ ಬಕೆಟ್.
ಎಷ್ಟು ಚಂದ ಕೂತಿರುವಳು ತಾಯಿ?

ಮೈಮೇಲೆ ಒಂಚೂರು ಬಟ್ಟೆ ಬರೆ ಇಲ್ಲವಲ್ಲ ವೇದ ಶಾಸ್ತ್ರಾದಿ ಸ್ಫೂರ್ಥೆಯ ಮೈಮೇಲೆ, ನಾಚಿಕೆ ಸಂಕೋಚದ ಬಂಧನದ ಬಿಡುಗಡೆ… ಈಕೆ ಸಾಮಾನ್ಯಳಲ್ಲ. ಮಾಧವ ಸೋದರಿ! ಮಹಿಷಾಸುರಾದಿ ಮರ್ಧಿನಿ! ಮಹಾ ಕೈಲಾಸ ವಾಸ ಪ್ರಿಯಕರಿ! ಮಹಾ ಕಾಮೇಶ್ವರಿ ಸಂಪತ್ಕರೀ!
ಕಾಮನೆಗಳನ್ನು; ಇಷ್ಟಾರ್ಥಗಳನ್ನು ಪೂರೈಸುವ ಸಾಕ್ಷಾತ್ ಅನ್ನಪೂರ್ಣೇಶ್ವರಿಯೇ ನಗ್ನಳಾಗಿದ್ದಾಳೆನ್ನಿಸಿತು. ವಾತ್ಸಲ್ಯಪೂರ್ಣೆಯಾದ ಆದಿಶಕ್ತಿಯೇ ಬಚ್ಚಲಲ್ಲಿ ಬೆತ್ತಲೆಯಾಗಿದ್ದಾಳೆನ್ನಿಸಿತು. ಶುಂಭ ನಿಶುಂಭ ರಕ್ತಾಸುರ ಮಹಿಷಾಸುರರೇ ಮೊದಲಾದ ರಕ್ಕಸರನ್ನು ಸಂಹರಿಸುವ ಮೊದಲು ಶ್ರೀಗೌರಿ ಪವಿತ್ರ ಸ್ನಾನ ಮುಗಿಸಿದಳಲ್ಲ ಹಾಗೆ;
ಏಷ್ಟೊಂದು ಸುಂದರಿ ನನ್ನ ತಾಯಿ!
ತಾಯಿ ಅಗ್ನಿಯಿಂದ ಮಾಡಲ್ಪಟ್ಟವಳು. ಮುಟ್ಟಿದರೆ ಭಸ್ಮವಾದೀಯೆ ಜೋಕೆ! ಹೃತ್ಕರ್ಣದ

ಕವಾಟ ಡಭಾರನೆ ಬಾಗಿಲು ಮುಚ್ಚಿಕೊಂಡಿತು.
ತಾಯಿ ಸ್ವರ್ಣಪುತ್ಥಳಿಯಂಥವಳೇನೋ! ಅಪವಿತ್ರಗೊಳಿಸಿದೆ ಎಂದರೆ ರೌರವ ನರಕ ಪ್ರಾಪ್ತವಾದೀತು ಜೋಕೆ! ಹೃತ್ಕಾಟದ ಕಿಟಕಿ ಪಟಾರನೆ ಮುಚ್ಚಿಕೊಂಡಿತು.
ತನ್ನನ್ನೀ ಸ್ಥಿತಿಯಲ್ಲಿ ನೋಡಿ ಅದೆಷ್ಟು ದಿಗ್ಭ್ರಮೆ ಗೊಂಡಿರುವನಲ್ಲ ತನ್ನ ಮಗ . ಹೀಗೆ ಅವನೆಂದೂ ತನ್ನ ದೇಹವನ್ನು ನೋಡಿರಲಿಲ್ಲ. ದೇಹದ ನರನಾಡಿಯಲ್ಲಿ ರೋಮಾಂಚನ ಹರಿದಾಡಿತು. ಶ್ವೇತ ರಂದ್ರಗಳು ನಾಚಿಕೆಯ ಚಿಲುಮೆಯನ್ನು ಅರಳಿಸಿದವು. ದೇಹದ ಸಮಸ್ತ ರಕ್ತ ಸ್ತನಗಳಿಗೆ ಮತ್ತು ಕೆನ್ನೆಗಳಿಗೆ ನುಗ್ಗಿ ತುಂಬಿಕೊಂದಿತು. ಅಲುಮೇಲಮ್ಮ ಆ ವಿಚಿತ್ರ ಮನಸ್ಥಿತಿಯಲ್ಲೂ ಮಗನ ಮುಖ ನೋಡಲು ಪ್ರಯತ್ನಿಸಿದಳು. ಅರೆ! ಅವನು ಮಗನಲ್ಲ ಮಗನ ಮುಖವಾಡ ಧರಿಸಿರುವ ಧರಿಸಿ ನಿಂತಿರುವ ತನ್ನ ಗಂಡ. ಅದೇ ಕಣ್ಣು, ಅದೇ ಗಡುಸು ಮುಖ, ಅವೇ ಭಾವನೆಗಳು; ಒಂದು ಕ್ಷಣ ವಿಚಲಿತಳಾದಳು. ಪರವಶಳಾದಳು ಮೂರ್ಚೆಹೋದಂತಾಗಿ ಮತ್ತೆ ಚೇತರಿಸಿಕೊಂಡಳು.

“ಅಮ್ಮಾ!ಽಽ…” ಶಾಮು ತಾಯಿಯ ಅಂತಃಕರಣವನ್ನು ಮಾತಿನಿಂದ ಸ್ಪರ್ಶಿಸಿದ. ವಾಸ್ತವಕ್ಕೆ ಜರಿದಳು ತಾಯಿ. ನಾಚಿಕೆ, ಸಂಕೋಚ ಪಲ್ಲವಿಸಿದವು.
“ಮಗೂ ಶಾಮೂ…” ಸ್ತನಗಳನ್ನು ತನ್ನೆರಡು ಕೈಗಳಿಂದ ಬಿಗಿ ಹಿಡಿದು ಮರೆಮಾಚಿದಳು. ಮೊಣಕಾಲ ಚಿಪ್ಪಿನಲ್ಲಿ ಮುಖ ಹುದುಗಿಸಿದಳು… “ಬೇಡ… ಬೇಡ… ನೀನಿಲ್ಲಿ ನಿಲ್ಲಬೇಡ… ಹೊರಟು ಹೋಗು… ನೀನು ನನ್ನ ಶಾಮನಲ್ಲ… ನೀನು ದೊಡ್ಡವನಂತೆ ನೋಡುತ್ತಿರುವಿ… ನೀನಿಲ್ಲಿ ಇನ್ನೊಂದು ಕ್ಷಣ ನಿಂತಿದ್ದೇ ಆದರೆ ನಾನು ನಾಚಿಕೆಯಿಂದ ಸತ್ತೇ ಹೋಗ್ತೀನೆ…” ಮಾತೇನೋ ಆಡಿದಳು… ಮಾತುಗಳನ್ನು ಒರೆಹಚ್ಚಿದಳು… ಹೋಗಲಿದ್ದ ಮಗನನ್ನು ಮತ್ತೆ ತಡೆದಳು.

“ಇಲ್ಲ… ಮಗು… ಇಲ್ಲ… ನೀನು ಬೆಳೆದು ನಿಂತವನಲ್ಲ… ನೀನೊಬ್ಬ ಪುಟ್ಟ ಮಗುವೆ ನಿನ್ನೆರಡು ಪುಟ್ಟ ಕೈಗಳಿಂದ ಬೆನ್ನು ಉಜ್ಜು… ತಾಯ್ತನವ ಸ್ಪರ್ಶಿಸು, ತಾಯ್ತನವನೆಚ್ಚರಿಸು… ” ಆಜ್ಞಾಪಿಸಿದಳು ತಾಯಿ.
ತಾಯಿ ಎಳೆದ ಗೆರೆದಾಟುವುದುಂಟೆ ತಾನು!… ಸ್ಪರ್ಶಿಸುವ ಆಸೆಗೆ ಸಾವಿರ ರೆಕ್ಕೆಗಳು ಮೂಡಿದವು. ಎಷ್ಟೊಂದು ಬಣ್ಣ ತಳೆದಂತಿದೆ!
ಮುಟ್ಟಿದ, ಮಹಾಕಾವ್ಯ ಮುಟ್ಟುತ್ತಿರುವಂಥ ಅನುಭವವಾಯಿತವನಿಗೆ.
ಸೌಂದರ್ಯಾರಾಧನೆ, ಸೌಂದರ್ಯಾನುಭವ, ರಮಣೀಯತೆ, ಮಾಮವೀಯತೆ , ಲಾವಣ್ಯೀಯತೆಗಳ ಸಂಗಮದಾಳದಲ್ಲಿ ಮುಳುಗಿದ.
ಓo ಜoubಣ ಣhe meಣಚಿಟ is sಣಡಿoಟಿgeಡಿ ಣhಚಿಟಿ ಣhe ಠಿeಣಚಿಟ
ಃuಣ ಚಿಣ ಣimes ಣhe ಠಿeಣಚಿಟ is sಣಡಿoಟಿgeಡಿ ಣhಚಿಟಿ ಣhe meಣಚಿಟ
ವಿಗ್ರಹದ ಕಾಠಿಣ್ಯದೊಳಗಿಂದ ಪುಷ್ಪದೊಳಗಿಂದ ಕೋಮಲತೆ ಆವಿರ್ಭವಿಸುತ್ತದೆ. ಪುಷ್ಪದಳದ ಮೇಲೆ ತುಷಾರ ಧವಳ ಹರಿದಾಡುತ್ತಿರುವ ಅನುಭವ.

ಶನೈಃ ಶನೈಃ ಯನ್ನಾವತಾ ಮುಪೈತಿ
ತದೇವ ರೂಪಂ ಲಾವಣ್ಯತಾಂ…

ಕೋಮಲ ಭಾವನೆಗಳನ್ನು ಪಲ್ಲವಿಸುತ್ತಿರುವ ಮಾತೃಸ್ವರುಪ ಎಷ್ಟೊಂದು ಸುಂದರ? ಆ ಸೌಂದರ್ಯ ಅವನ ಮನಸ್ಸಿನೊಳಗೆ ನಂದನವನವನ್ನು ಸೃಷ್ಟಿಸಿತು. ಆ ನಂದನವನವದ ಮರ, ಗಿಡ, ಲತೆ ಹರಿದ್ವರ್ಣದೊಡಲಿಂದ ಸಕಲರಾಗಗಳು ತಾಳಲಯ ಶೃತಿ ಮೀರಿ ನುಡಿಯ ತೊಡಗಿದವು. ವ್ಯಕ್ತ ಜಗತ್ತು; ಅವ್ಯಕ್ತ ಜಗತ್ತು ಎರಡೂ ಒಂದಾಗುತ್ತಿರುವಂಥ ಅನುಭೂತಿ. ಸಕಲ ಪವಿತ್ರ ನದಿಗಳ ಮಹಾಪೂರದಲ್ಲಿ ಕೊಚ್ಚಿಹೋಗುತ್ತಿರುವಂಥ ರಸಾನುಭೂತಿ…

ಸ್ಪರ್ಶದ ಉತ್ತುಂಗದ ಮೇಲೆ ವಿರಾಜಮಾನಳಾಗಿರುವ ತಾಯಿ ಸಸ್ಯಶಾಮಲತೆಯ ತಪ್ಪಲಿನಲ್ಲಿ ಅಂಬೆಗಾಲಿಟ್ಟು ಅಡ್ಡಾಡುತ್ತ ತಂಗಾಳಿಯೊಡನೆ ಸಂಭಾಷಿಸುತ್ತಿರುವ ಮಗ, ಮೂಕ ಪ್ರೇಕ್ಷಕನಂತಾಗಿತುವ ಅಲಕಾಪುರಿಯಂಥ ಸ್ನಾನದ ಕೋಣೆ…
“ಮಗೂ… ಎಚ್ಚರಾಗು ಮಗು ನನ್ನ ದೇಹ ಹಂಚಿಕೊಂಡು ರೂಪ ಪಡೆದಿರುವ ನಿನ್ನೊಳಗೆ ನಾನಿದ್ದೇನೆ ಕಣಪ್ಪಾ… ನಿನ್ನ ಬಾಲ್ಯ ಲೀಲೆಗಲಿಗೆ ಮೈದಾನವಾಗಿದ್ದ ಈ ದೇಹ ನಿನ್ನ ಪ್ರೌಡ ಸ್ಪರ್ಶದಿಂದ ಎಷ್ಟೊಂದು ಹಸನಾಯಿತಲ್ಲ!…” ತಾಯಿ ಎದ್ದು ನಿಂತಳು. ಮಳೆ ಬಿಲ್ಲು ನೆಲ ಮುಗಿಲೇಕವಾಗಿ ನಿಂತಂತೆ. ಅಸುರರ ರಕ್ತ ತರ್ಪಣದಿಂದ ಭೂಮಿಯನ್ನು ಫಲವತ್ತು ಮಾಡಿದ ಅಂಬೆಯಂತೆ. ಪರಿಮಳ ಪಲ್ಲವಿಸುವ ಶ್ರೀಗಂದ ವೃಕ್ಷದಂತೆ, ದೇವಲೋಕದ ಪಾರಿಜಾತದ ತರುವಿನಂತೆ…

“ಮಗು ಅದೇನೋ ಕೇಳಬೇಕೆಂದುಕೊಂಡಿದ್ದೆಯಲ್ಲ…” ಬಟ್ಟೆ ಧರಿಸಿದಳು ತಾಯಿ. ಸಹ್ಯಾದ್ರಿ ಹಸಿರು ಧರಿಸಿದಂತೆ, ಸಪ್ತವರ್ಣ ಸಮ್ಮಿಳಿತಧವಳಕಾಂತಿಯಂತೆ “ಯಾಕೆ ಸಂಕೋಚ ಮಗು ಕೇಳು…”
ಏನು ಕೇಳಬೇಕೆಂದಿದ್ದವನು ತಾನು! ನೆನಪಿನ ಕತ್ತು ಹಿಚುಕಿದ ಶಕ್ತಿಯ ಪ್ರಶ್ನೆಗೆ ಉತ್ತರವೆಲ್ಲಿದೆ ತನ್ನಲ್ಲಿ? ತಡಕಾಡಿದ ಶಾಮು…

“ನೆನಪು ಮಾಡಿಕೋ ಮಗು… ನೆನಪು ಮಾಡಿಕೋ… ನೆನಪು ಮಾಡಿಕೊಳ್ಳದಿದ್ದರೆ ನನ್ನ ಮೇಲಾಣೆ” ರವಿಕೆ ಧರಿಸಿದಳು ತಾಯಿ, ಅಯ್ಯೋ ತಾಯಿ ರವಿಕೆ ಧರಿಸಿದಳು…
ಪ್ರಶ್ನೆಯನ್ನು ಕೊಲ್ಲುವ ಶಕ್ತಿಯೇ ಪ್ರಶ್ನಿಸುವಂತೆ ಒತ್ತಾಯಿಸುತ್ತಿದೆಯಲ್ಲ!
ಆಸೆಯ ಮೇಲೆ ಗದಾ ಪ್ರಹಾರ ಮಾಡಿದ ತಾಯಿಯೇ ಆಕಾಂಕ್ಷೆಯ ಬಿಸಿಲುಗುದುರೆಯನ್ನೇರಿ ದಿಕ್ಕುಗಳಿಗೆ ಕಾಲೂರಿ ಪಯಣಿಸುತ್ತಿರುವಳಲ್ಲ…
ಭದ್ರ ಕೋಟೆಯಂತೆ ಹರಡಿರುವ ತಾಯ್ತನದ ರೆಕ್ಕೆ ಭೇದಿಸಿಕೊಂಡು ಹೊರ ಪ್ರಪಂಚಕ್ಕೆ ಪ್ರವೇಶ ಪದೆಯುವುದು ಹೇಗೆ? ತಾಯ್ತನದ ಪ್ರವಾಹದ ಮೇಲೆ ವೈಯಕ್ತಿಕ ಪ್ರೇಮದ ಕಾಗದದ ನಾವೆ ಹರಿಬಿಟ್ಟ ನನ್ನಂಥ ಮೂರ್ಖ ಇನ್ನೊಬ್ಬನುಂಟೆ!
ಆ ನಾವೆಯನ್ನೇ ಸುರಕ್ಷಿತ ಪಲ್ಲಕ್ಕಿ ಎಂದು ಭಾವಿಸಿ ಕೂತಿರುವ ಅನಸೂಯಾ ಈಜು ಬಾರದ ನಾನು ನಿನ್ನನ್ನು ಹೇಗೆ ರಕ್ಷಿಸಿಕೋಳ್ಳಲಿ!…

ಶಾಮನ ಹೃದಯದ ಶಿಥಿಲ ಬಿತ್ತಿಗಳ ಬಿರುಕುಗಳಿಂದ ಸಾವಿರ ಸಾವಿರ ಪಕ್ಷಿಗಳು ತಂತಮ್ಮ ಕರುಳ ಗೂಡುಗಳನ್ನು ಮರೆತು ನಿರಾಕಾರ ಮುಗುಲಿಗೆ ಚಿಮ್ಮಿದವು ಏಕಕಾಲಕ್ಕೆ…

ರಾಶಿಗಳಿಗೆ ಆಧಿಪತ್ಯ ಹಂಚಿರುವ ರೀತಿ ಯಾವ ಪ್ರಕಾರವಾಗಿ ಸ್ವೇಚ್ಛಾನು

ಸಾರಿಯಾಗಿಲ್ಲವೋ ಹಾಗೆ ಅನಸೂಯಳ ಗ್ರಹಗತಿ ಕೂಡ ಇಚ್ಛಾನುವರ್ತಿಯಾಗಿಲ್ಲ. ಭೂಮಿಯ ಸಮೀಪ ಚಂದ್ರಗ್ರಹದಂತಿದ್ದ ಶಾಮಾಶಾಸ್ತ್ರಿ ಭೂಮಿಯ ಅತ್ಯಂತ ದೂರವಿರುವ ಶನಿಯಂತಾಗಿಬಿಡಬೇಕೆ!

ಯಾವುದೇ ರಾಶಿಯಲ್ಲಿ ಗ್ರಹವು ತನ್ನ ಸಾಧಾರಣ ಅವಧಿಗಿಂತ ಹೆಚ್ಚು ಕಾಲ ಉಳಿದರೆ ಅದು ಸ್ತಂಭನ ಎನಿಸುತ್ತದೆಯೋ ಹಾಗೆಯೇ ಅನಸೂಯ ಉಚ್ಚವಸ್ಥೆಯಿಂದ ನೀಚಾವಸ್ಥೆಗಿಳಿಯುವ ಕ್ರಮದ ಗ್ರಹವಾಗಿಬಿಟ್ಟಳು.

ತನ್ನ ಮಿಥುನ ರಾಶಿ ರಾತ್ರಿ ಹೊತ್ತು ಪ್ರಬಲವಾಗಿರುತ್ತದೆ ಎಂದು ಖಚಿತಪಡಿಸಿಕೊಂಡೇ ಶಾಮು ಒಂದು ಶುಭ ರಾತ್ರಿಗಾಗಿ ತಡಕಾಡಿದ. ಇಂದಿರಾಗಾಂಧಿಯವರ ದುರಾಡಳಿತದ ಬಗ್ಗೆ ಭಾಷಣ ಮಾಡಿ ಕೊಟ್ಟೂರು ಪಟ್ಟಣದ ಮಹಾನ್ ಪ್ರಜೆಗಳನ್ನು ಎಚ್ಚರಿಸುವ ನಿಮಿತ್ತ ಜಾರ್ಜ್ ಫರ್ನಾಂಡಿಸರು ಸಮಾಜವಾದಿ ನಾಯಕ ಕಿಷನ್ ಪಟ್ನಾಯಕರ ಜೊತೆಗೂಡಿ ಇಂಥ ದಿನ ಇಂಥ ರಾತ್ರಿ ಆಗಮಿಸಲಿರುವರೆಂಬ ಸುದ್ದಿ ಅನಧಿಕವಾಗಿ ತಿಳಿದು ಸಂತೋಷಪಟ್ಟ. ಅನೇಕ ದ್ವಂದ್ವಗಳ ನಡುವೆಯೂ, ಆತ ವಿಚಾರ ಪ್ರಚೋದಕ ಭಾಷಣಗಳನ್ನು ಕೇಳಲು ಒಂಭತ್ತನೇ ಸ್ಥಾನದಲ್ಲಿರುವ ಚಂದ್ರನಂತೆ ತಹತಹಿಸುತ್ತಿದ್ದ. ಕ್ಷುದ್ರ ಗ್ರಹಗಳ ನಡುವೆ ಇರುವ ತಾರೆ ಎಷ್ಟು ಪ್ರಬಲವಾಗಿದ್ದರೂ ಕಾಂತಿಹೀನವಾಗುವಂತೆಯೇ ಪ್ರಧಾನಿ ಇಂದಿರಾಜೀಯೂ ಸಹ. ತಾರೆಯ ಶಕ್ತಿಯನ್ನು ಲಪಟಯಿಸುತ್ತಲೇ ಕ್ಷುದ್ರಗ್ರಹಗಳು ಬಲಿಷ್ಟಗೊಳ್ಳುತ್ತವೆ. ಕ್ಷುದ್ರಗ್ರಹಗಳ ಬೆಂಬಲವಿಲ್ಲದೆ ಯಾವುದೇ ತಾರೆಯಾವುದೇ ಬಲಿಷ್ಟವಾಗುವುದು. ಹಾಗೆಯೇ ಇಂದಿರಾಜಿ ಕ್ಯಾಬಿನೆಟ್ಟು, ಆಕೆ ತುಂಬ ಒಳ್ಳೆಯವಳು. ಷೋಡಷಿಯಾಗಿದ್ದಾಗ ಆಕೆಗೆ ಕೆಂಡದಿಂದ ಮಾಡಲ್ಪಟ್ಟ ನೀಳ ನಾಸಿಕವಿತ್ತು ಎನ್ನುವುದೇ ಭರತ ಖಂಡದ ಪುಣ್ಯ. ಕಾಶ್ಮೀರಿ ಬ್ರಾಹ್ಮಣರಿಗೆ ಮಾತ್ರ ಅಂಥ ಸುಂದರವಾದ ಮೂಗು; ಸಮುದ್ರ ಮಥನದ ಸಂದರ್ಭದಲ್ಲಿ ಲಕ್ಷ್ಮಿಗಿಂತ ಮೊದಲು ಜನಿಸಿದ ಜೇಷ್ಠೆಯ ಅಪರಾವತಾರವೇ ಸರಿ! ಮೃತ್ಯ ದೇವತೆಯನ್ನು ಪತಿಯನ್ನಾಗಿ ಪಡೆದ ಜೇಷ್ಠ ಸಾಮಾನ್ಯಳೇನು! ಆಕೆಯ ಅಧರ್ಮವನ್ನು ಹೆತ್ತಾಕಿ. ಎಷ್ಟೊಂದು ಸಾಮ್ಯವಿದೆ ಪ್ರಧಾನಿ ಇಂದಿರಾಜಿ ಮತ್ತು ಜೇಷ್ಠೆಯರ ನಡುವೆ! ಇಂದಿರಾಜಿಯ ಮಗ ಸಂಜಯಗಾಂಧಿ ಜೇಷ್ಠೆಯ ಮಗ ಅಧರ್ಮನಿಗಿಂತ ಯಾವುದರಲ್ಲಿ ಕಡಿಮೆ!

ಇಂಥ ಆಲೋಚನೆಗಳಿಂದ ಉದಯೋನ್ಮುಖ ಬರಹಗಾರನಾದ ಶಾಮಾ ಶಾಸ್ತ್ರಿ ಸ್ವಜಾತಿ ಪ್ರೇಮದಿಂದಾಗಿ ಇಂದಿರಾಜಿ ಪಾಳೆಯವನ್ನು ಬೆಂಬಲಿಸುವುದೋ, ವಿರೋದಿ ಪಾಳೆಯ ಬೆಂಬಲಿಸುವುದೋ ಎಂಬ ಗೊಂದಲದಲ್ಲಿ ಬಿದ್ದು ವಿಲಿವಿಲಿ ಒದ್ದಾಡುತ್ತಿದ್ದನು. ಅದರೆ ಯಾವುದೇ ತಾತ್ವಿಕ ಬಿಕ್ಕಟ್ಟು, ವೈಚಾರಿಕ ನೆಲೆಗಟ್ಟು ಅವನಿಗೆ ಇರಲಿಲ್ಲ. ನಿರಾಕರಣೆಯೇ ಅವನ ಮನಸ್ಸಿನ ಪ್ರಮುಖ ಬದಲಾವಣೆಯಾಗಿತ್ತು. ನೆನ್ನೆ ಮಾರ್ಕ್ಸ್‌ವಾದವನ್ನು ಪ್ರಸ್ತಾಪಿಸಿದ. ಇವತ್ತು ಲೋಹಿಯವಾದ ಪ್ರೀತಿಸುವನು. ನಾಳೆ ರಾಷ್ಟ್ರೀಯ ಸ್ವಯಂಸೇವಕ ಸಂಸ್ಥೆಯ ಹಿಂದೂ ಸದ್ಧರ್ಮ ಸಿಂಹಾಸನವನ್ನು ಪ್ರೀತಿಸಬಹುದಾಗಿದ್ದನು. ಗಾಳಿಬೀಸುವ ಕಡೆ ಕೊಡೆ ಹಿಡಿಯುವುದರಲ್ಲಿ ಕಳೆದುಕೊಳ್ಳುವ ಗಂಟಾದರೂ ಏನು!

ಜಾರ್ಜ್ ಫೆರ್ನಾಂಡಿಸರ ಬಗ್ಗೆ, ಕಿಷನ್ ಪಾಟ್ನಾಯಕರ ಬಗ್ಗೆ ಅಲ್ಲಲ್ಲಿ ಚೌಚೌ ಓದಿಕೊಂಡಿದ್ದ ಅವನು ಅವರು ಸಿಂಪಲ್ಲಾಗಿ ಬದುಕುತ್ತಿದ್ದಾರೆನ್ನುವುದೇ ಅವನಿಗೆ ಇಷ್ಟವಾಗಿತ್ತು. ಡೌಲಾಗಿರುವವರ
ಬಗೆಗಿನ ಹೊಟ್ಟೆ ಕಿಚ್ಚಿಗಾಗಿಯೇ ಸಿಂಪಲ್ ಆಗಿಗಿರುವವರು ಸಿಂಪಲ್ಲಾಗಿರುವವರನ್ನು ಬೆಂಬಲಿಸುತ್ತಾರೆ. ಇದು ಈ ಖಂಡದ ಹಣೆಬರಹ.

ಇಂಥ ದಿನ, ಇಂಥ ರಾತ್ರಿ ಇಂಥ ಕಡೆ ಆಗಮಿಸಿ ಬದುಕಿನ ಉತ್ತರೋತ್ತರ ಚರ್ಚೆಯಲ್ಲಿ ಪಾಲ್ಗೊಳ್ಳಲು ಬಾ ಎಂದು ಅನಸೂಯಳಿಗೆ ತಿಳಿಸುವುದ ಹಾಗೆ ಎಂಬ ಸಮಸ್ಯೆ ಪ್ರಧಾನವಾಗಿ ಕಾಡತೊಡಗಿತು. ಶೌಚವೊಂದನ್ನು ಹೊರತು ಪಡಿಸಿ ಉಳಿದೆಲ್ಲ ಚಟುವಟಿಕೆಗಳಿಗೆ ಅನಸೂಯಳ ಮನೆಯನ್ನೇ ಅಶ್ರಯಿಸುತ್ತಿದ್ದ ಆ ಭೂಪತಿ ರಂಗ ಭಯೋತ್ಪಾದಕನಂತೆ ಮನೆಯೊಳಗೇ ಅಡಗಿ ಕೂತಿರುತ್ತಿದ್ದ. ಹೊರಗೆ ಹೋದ ಪಕ್ಷದಲ್ಲಿ ಅನಸೂಯ ತನ್ನ ಸ್ರಕ್ಚಂದನಲೇಪಿತ ಮುಖವನ್ನು ನೋಡಿಬಿಟ್ಟರೆ ಹೇಗೆ? ಭಗದತ್ತನಂಥ ಆಕೆ ತನ್ನ ಕಣ್ಣುಗಳಿಂದ ನಾರಾಯಣಾಸ್ತ್ರ ಪ್ರಯೊಗಿಸಿದರೆ ಹೇಗೆ? ಆ ಮಹಾಸ್ತ್ರವನ್ನು ತನ್ನ ಕೈಯಿಂದ ಸೆಳೆದು ಹೂಮಾಲೆಯನ್ನು ಧರಿಸಲು ತಾನೇನು ಶ್ರೀಕೃಷ್ಣ ಪರಮಾತ್ಮನಲ್ಲ.

ಊಹಾಸುರನಾದ ಶಾಮನಂಥವಳಲ್ಲ ಅನಸೂಯ… ಸ್ತ್ರೀ ಚಂಚಲ ಸ್ವಭಾವದವಳಲ್ಲ; ಸ್ತ್ರೀಯರ ಬುದ್ಧಿ ಮೊಣಕಾಲ ಕೆಳಗಲ್ಲ. ಅದೇನಿದ್ದರೂ ಗಂಡಸರಿಗೆ ಸಂಬಂಧಪಟ್ಟವುಗಳು ಎಂಬುದನ್ನು ಪ್ರೂವ್ ಮಾಡಲೋಸುಗವೇ ತಾನು ಅವತರಿಸಿರುವುದು ಎಂಬಂತಿದ್ದಳು ಆಕೆ… ಊರ್ಮಿಳೆಯಂತೆ ಆಕೆ ಪ್ರತಿಕ್ಷಣ ಶಾಮುವಿನಿಂದ ಬರಬಹುದಾದ ಮೇಘ ಸಂದೇಶಕ್ಕೆ ಕಾಯುತ್ತಿದ್ದಳು…

“ನಿಮ್ಮಾವ ರಾಘೂಗೆ ಪತ್ರಬರೆಯೋಣವೇನೇ… ಆ ಬ್ರಾಹ್ಮಣ ಹುಡುಗ ನಿನ್ನ ಮದ್ವೆಮಾಡ್ಕೊಳ್ತಾನೆ ಎಂಬ ಭ್ರಮೆಯಲ್ಲಿ ವಯಸ್ಸು ಕಳೀಬೇಡ… ” ರುಕ್ಕಮ್ಮ ತನ್ನ ತಮ್ಮನ ವಿಳಾಸವನ್ನು ಅಂಗೈಯಲ್ಲಿಟ್ಟುಕೊಂಡು ಮಗಳನ್ನು ಕೇಳುತ್ತಿದ್ದಳು…

ತನ್ನನ್ನು ತಾನೆ ಅಲಕ್ಷಿಸಿಕೊಂಡು ಕಾದ ಕಾವಲಿ ಮೇಲಿನ ನೀರ ಹನಿಯಂತೆ ತಳಮಳಿಸುತ್ತಿರುವ ಮಗಳನ್ನು ನೋಡಿ ಕರುಳನ್ನು ಕತ್ತರಿಸಿಕೊಳ್ಳುತ್ತಿದ್ದಳು.

“ನನ್ನ ಶಾಮು ಅಂದ್ರೆ ಏನ್ತಿಳ್ಕೊಂಡೀಯಮ್ಮಾಽಽ… ಇಂದಲ್ಲ ನಾಳೆ ಬಂದು ನನ್ನ ಕೈಹಿಡ್ದೇ ಹಿಡೀತಾನೆ” ಅನಸೂಯ ಗಂಟಲಿಂದೀಚೆಗೆ ಹೇಳುತ್ತಿದ್ದಳು
“ತಾಯೀನೆ ಸರ್ವಸ್ವ ಅಂತ ತಿಳಿಕೊಂಡಿರೋ ಅವ್ನು ನಿನ್ನ ಹೇಗೆ ಮದ್ವೆ ಆಗ್ತಾನಮ್ಮ?” ಕಣ್ಣಿನತುದಿಯಿಂದ ತುಷಾರ ಹಾರವನ್ನು ಚಿಮ್ಮುತ್ತ ತಾಯಿ ಹೇಳಿದಳು. “ಅದೂ ಅಲ್ದೆ ನಾವು ಕಪ್ಪು ಕುಲದೋರು. ಮಗಳ ಮದ್ವೆ ಧಾಂ ಧೂಂ ಅಂತ ಮಾಡಬೇಕಾದವ್ರೆ ದೇಶಾಂತರ ಬೇರೆ ಹೋಗಿದ್ದಾರೆ” ಮತ್ತೊಂದು ತುಶಾರದ ಹನಿ ಹೊಳೆಯಿತು. ನಿನ್ನ ರಾಘುಮಾಮಗೆ ಪತ್ರ ಬರೆದ್ರೆ ಎಲ್ಲಾ ಸರಿಹೋಗ್ತದೆ”.
“ಶಾಮುನಿಂದ ಸ್ಪಷ್ಟ ನಿರ್ಧಾರ ತಿಳ್ಕೊಂಡ ಮೇಲೆ ನೀನು ನನ್ನ ಕೋಡುಗಲ್ಲಿಗೆ ಕಟ್ಟಿಹಾಕಿದ್ರೂ ಸರಿಯೇ… ಕಾಲ ಮಿಂಚಿಲ್ಲ… ಕಾಯೋಣ.”
ಮರ್ಯಾದಾ ಪುರುಷೋತ್ತಮನ ಎಡಪಾದದ ತುದಿ ಬೆರಳುಗಳು ಎಂದು ಸೋಕುವುವೋ! ಕಾರ್ಗಲ್ಲು ಎಂದು ಸ್ತ್ರೀ ರೂಪ ಪಡೆಯಿತೋ!
ಆ ಶ್ರೀಪಾದದ ಸುದ್ದಿಲ್ಲ, ಸುಳಿವಿಲ್ಲ. ಹೀಗೆ ಎಷ್ಟು ದಿನಾಂತ ಕಾಯುವುದು! ಮಕರಂದ ಹಿಂಗಿ ಹೋಗುವ ಮೊದಲೆ ಕಾಣಿಸಿಕೊಳ್ಳಬಾರದೆ ತನ್ನ ಪ್ರೀತಿಯ ದುಂಬಿ!
ಅನಸೂಯ ಕೈಕಟ್ಟಿ ಕುಳಿತುಕೊಂಡುದುದಿಲ್ಲ…

ಬಾಡುವ ಕ್ಷಣ ಮನಗಂಡ ಪುಷ್ಪ ಇದ್ದುದರಲ್ಲಿಯೇ ಅಲ್ಪಸ್ವಲ್ಪ ಅಲಂಕರಿಸಿಕೊಂಡು ಚಲಿಸತೊಡಗಿದಂತೆ ಅನಸೂಯಾ ಯಾವುದಾದರೊಂದು ಪುಸ್ತಕ ಕೊಡುವ ನೆಪದಲ್ಲಿ ಶಾಸ್ತ್ರಿಗಳ ಮನೆಕಡೆ ನಡೆದಳು.
ಪ್ರತಿ ಹೆಜ್ಜೆ ಅಳುಕಿತು. ಎದೆಯ ದವದವ ಹೇಳತೀರದು. ಕಟ್ಟೆಯ ಬಂಧನದಲ್ಲಿದ್ದ ತುಳಸೀಗಿಡ ಮಿಸುಕಿ ಬಂದೆಯಾ ತಾಯಿ ಬಾ ಬಾ ಎಂದು ಸ್ವಾಗತಿಸಿತು…
ಆಕೆ ಹೋಗುವುದಕೂ ವಿಧವೆ ಹೊರಬರುವುದಕ್ಕೂ ಸರಿಹೋಯಿತು.
“ಶಾಮನಿರುವನೇನಮ್ಮಾಽಽ…” ಅನಸೂಯಳ ದ್ವನಿಯಲ್ಲಿ ಶಕ್ತಿ ಇರಲಿಲ್ಲ.

ಆ ಹುಡುಗಿ ತನ್ನ ಪ್ರಾಣಪದಕವನ್ನು ಎಲ್ಲಿ ಅಪಹರಿಸಿಕೊಂಡು ಹೋಗಿಬಿಡುವಳೋ! ರಾಮ ರಾಮಾಽ… ಮನೆಗೇ ಬಂದುಬಿಟ್ಟಿರುವಳಲ್ಲಾ! ಹಾಳಾದವಳು… ಅಲುಮೇಲಮ್ಮ ಹೌಹಾರಿದ್ದು ತಡವಾಗಲಿಲ್ಲ… ಚೇತರಿಸಿ ಕೊಂಡದ್ದೂ ತಡವಾಗಲಿಲ್ಲ…

“ನಮ್ಮ ಮನೆಗೆ ಬರಲು ನಿನ್ನ ಮನಸ್ಸು ಹೇಗೆ ಒಪ್ಪಿತಮ್ಮಾ… ಅನಸೂಯಾಽ… ಇದ್ದೊಬ್ಬ ಮಾಗನನ್ನು ನಿನ್ನ ಪಾಲುಮಾಡಿ ಹೇಗೆ ಬದುಕಲೇ ತಾಯಿ… ಕೌಟಿಲ್ಯನ ಅರ್ಥಶಾಸ್ತ್ರ ಓದುವ ನೆಪದಲ್ಲಿ ನಿನ್ನ ಅವನು ಗುಟ್ಟಾಗಿ ಕಾಣುವುದು… ನನ್ನ ಮರೆಯುವುದು… ಎಲ್ಲಾ ನನಗೆ ಗೊತ್ತು. ಮಗಳೇ… ಮಗ ತನ್ನ ತಾಯಿಯನ್ನು ಪ್ರೀತಿಸುವುದು ಸುಶಿಕ್ಷಿತೆಯಾದ ನೀನೆ ಅರ್ಥಮಾಡಿಕೊಳ್ಳದಿದ್ದರೆ ಹೇಗಮ್ಮಾ? ಅವನಿಂದ ದೂರ ಇರೋಕೆ ಇನ್ನಾದರೂ ಪ್ರಯತ್ನಿಸಿ ಪುಣ್ಯಕಟ್ಟಿಕೊಳ್ಳಬಾರದೇನೆ?” ತಾಯಿ ನಾಲಿಗೆ ಮೇಲೆ ಕರುಳು ತಂದುಕೊಂಡಳು ಕಣ್ಣುಗಳಲ್ಲಿ ಸೆರಗೊಡ್ಡಿದಳು.

ಹೃದಯ ವಿದ್ರಾವಕ ಕಾದಂಬರಿಯೆ ಮಾತಾಡುತ್ತಿರುವಂಥ ಅನುಭವವಾಯಿತು ಅನಸೂಯಾಳಿಗೆ.
“ಅಮ್ಮಾ, ಪರಸ್ಪರ ಪ್ರೀತಿಸಿದವರ ಸಂಕಟ ನಿಮಗೆ ಅರ್ಥವಾಗುವುದಿಲ್ಲವೇನು?”

“ಅದೆಲ್ಲ ಅರ್ಥವಾಗಿದ್ದರೆ ನಾನೇಕೆ ಹೀಗೆ ಅನಾಥಳಂತೆ ಮಾತಾಡ್ತಿದ್ದೆ… ನನಗೆ ಅರ್ಥ ಆಗೋದು ಒಂದೆ… ಅದು ನನ್ನ ಮಗನ ಬದುಕು ಮಾತ್ರ… ”

“ಆದರೆ, ನೀವು ಆತ್ಮಹತ್ಯ ಮಾಡ್ಕೋ ಅಂತ ಹೇಳಲಿಲ್ಲವಲ್ಲ… ಅದೇ ನನ್ನ ಪುಣ್ಯ”

“ನಮ್ಮಂಥವರ ಕುಟುಂಬದ ಸನಾತನ ಧರ್ಮ ಉಳಿಸೋಕೆ ನೀನು ಆತ್ಮಹತ್ಯೆ ಮಾಡಿಕೊಂಡ್ರೂ ತಪ್ಪಲ್ಲ ಮಗಳೇ… ಅದೆಲ್ಲ ಯಾಕೆ… ನೀನು ಶಾಮೂನ ಮರೆತು ಬೇರೊಬ್ಬ ಗಂಡನ್ನು ಮದುವೆಯಾಗಿ ಸುಖವಾಗಿರಬಹುದಲ್ಲವೇ?”

“ಬೇರೊಂದು ಮದುವೆಯಾಗೋಕು ಆತ್ಮಹತ್ಯೆ ಮಾಡಿಕೊಳ್ಳೋಕು ನಡುವೆ ಅಂಥ ವ್ಯತ್ಯಾಸವೇನಿದೆ ಹೇಳಿ”
“ಅದು ನಿನಗೆ ಬಿಟ್ಟಿದ್ದು ಮಗಳೆ ಬಾಯಿಂದ ನುಡಿದು ನಾನ್ಯಾವ ನರಕಕ್ಕೋಗ್ಲಿ…? ನಿನ್ಗೆ ಹೇಗೆ ತಿಳಿವುದೋ ಹಾಗೆ ಮಾಡು… ಆದರೆ ನಿನ್ನ ನೆರಳು ಬೀಳಿಸಿ ನಮ್ಮ ಮನೇನ ಅಪವಿತ್ರ ಮಾಡಬೇಡಾಂತ ಬೇಡಿಕೊಳ್ತಿದೀನಿ” ಅಲುಮೇಲಮ್ಮ ತನ್ನ ನಾಲಿಗೆ ಮೊನಚಿನ ಬಗ್ಗೆ ತಾನೇ ದಿಗ್ಭ್ರಮೆಗೊಂಡಳು… ಇನ್ನೊಂದು ಮನಸನ್ನು ಎಲ್ನೋಯಿಸಿದೆನೋ! ಇನ್ನೊಂದು ಹೆಣ್ಣಿನ ನಿಟ್ಟುಸಿರಿಂದ ತನ್ನ ವೈಧವ್ಯಕ್ಕೆ ಎಂಥ ಕಲಂಕ ಬಂದೀತೋ! ಆ ಸಾಧ್ವಿ ಅಳುಕಿದಳು… ಅಳುಕುತ್ತ ಅಳುಕುತ್ತ ಒಳಗೆ ಎರಡು ಹೆಜ್ಜೆ ಇಟ್ಟಳು… ಒಂದು ಹೆಜ್ಜೆ ಮುಂದಿಟ್ಟು ಬಾಗಿಲು ಮುಂದಕ್ಕೆ ಎಳೆದಳು….

ಮುಚ್ಚುವ ತೆರೆಯುವ ನೋವಿನ ಪರಿಚಯವುಳ್ಳ ಬಾಗಿಲು ನಿಶ್ಶಬ್ದವಾಗಿ ಮುಚ್ಚಿಕೊಂಡಿತು…
ಆನಸೂಯಳ ಸ್ತ್ರೀತನಕ್ಕೆ ಅವಮಾನವಾಯಿತು. ನಿರ್ಬಂಡೆಯಂತೆ ಹೊಯ್ದಾಡುತ್ತಿದ ಹೃದಯ ಹೂವಿನಂತೆ ಅರಳಿತು. ಮತ್ತೊಂದು ಕ್ಷಣ ಕಲ್ಲಾಯಿತು.

ಥೂ ಸ್ತ್ರೀ ಜನ್ಮಕ್ಕಿಷ್ಟು ಬೆಂಕಿ ಬೀಳಲಿ. ಈ ಸಮಾಜದಲ್ಲಿ ಒಂದು ಹೆಣ್ಣು ಇನ್ನೊಂದು ಹೆಣ್ಣನ್ನು ಅರ್ಥಮಾಡಿಕೊಳ್ಳಲ್ಲಿಕ್ಕೆ ಆಸ್ಪದವಿಲ್ಲ… ಅರ್ಥ ಮಾಡಿಕೋ ಅಂಥ ಗಂಡಸಿಗೆ ಒತ್ತಾಯಿಸುವ ಹಕ್ಕು ತನಗೆಲ್ಲಿಯದು!…

ಶಾಮಾ ನೀನೆಂಥವನೆಂದು ನನಗೆ ಗೊತ್ತಾಗಿದ್ದರೆ ನಿನ್ನ ಸ್ಪರ್ಶದಿಂದ ಈ ದೇಹವನ್ನು ಅಪವಿತ್ರ ಮಾಡಿಕೊಳ್ಳುತ್ತಿದ್ದನೇನೋ? ನಿನ್ನ ಉದ್ದುದ್ದ ಮಾತುಗಳಿಗೆ ಮರುಳಾಗುತ್ತಿದ್ದೆನೇನು! ರಾಘು ಮಾಮನೇ ತನಗೆ ಸರಿಯಾದ ದಿಕ್ಕೆಂದು ಭಾವಿಸಿದಳು.

ಆಕೆಯ ದುರದೃಷ್ಟವೆಂಬಂತೆ ರಾಘು ಮಾಮನ ವಿಳಾಸ ಮತ್ತೆ ತಪ್ಪಿಸಿಕೊಂಡು ಬಿಡಬೇಕೇ! ಅದರ ಹುಡುಕಾಟದಲ್ಲಿ ಇನ್ನೇನು ತಾಯಿ ಮಗಳೀರ್ವರು ಮುಳುಗೇಬಿಟ್ಟರು ಎನ್ನುವಾಗ ಪಕ್ಕದ ಮನೆ ಹುಡುಗ ಸಾಂಬ ಅಬ್ದುಲ್‌ರಝಾಕ್‌ನಂತೆ ಕಾಣಿಸಿಕೊಂಡ.
“ಅಕ್ಕಾ… ನಿನ್ಗೊಂದು ಸೀ ಸುದ್ದಿ ತಂದೀನಿ” ಎಂದನಾ ಪೋರ.
“ಅದೇನದು ಹೇಳೋ” ಎಂದಳು.
“ಈಗಲಾದ್ರು ನನಗೊಂದೆಲ್ಡು ಪಪ್ಪಿ ಕೊಟ್ರೆ ಅದೇನೆಂದು ತಿಳಿಸೇಸೈ ಸಾರಥಿ. ಪಪ್ಪಿ ಕೊಡು ಅತಿ ಜಾಗ್ರತಿ” ಸಂಬನಿಗೊಂದು ಪ್ರಾಚೀನ ಆಸೆಯಿತ್ತು. ಅದೇನೆಂದರೆ ಓಣಿಯ ಪ್ರಸಿದ್ಧ ಸುಂದರಿಯಾದ ಆಕೆಯಿಂದ ಮುದ್ದಿಸಿಕೊಳ್ಳಬೇಕು! ತನ್ನ ಸಿಂಬಳಾಕೃತ ಕಪ್ಪನೆಯ ಮೂತಿಗೆ ಆಕೆಯಿಂದ ಮುದ್ದುಕೊಡಿಸಿಕೊಂಡು ಕೃತಾರ್ಥನಾಗಬೇಕೆಂಬುದು.

ಶ್ರೀರಾಮಚಂದ್ರನ ಮುದ್ರೆಯುಂಗುರ ಮುಷ್ಟಿಯಲ್ಲಿ ಹಿಡಿದುಕೊಂಡು ಬಾಲಾಂಜನೇಯನಂತೆ ನಿಂತಿರುವ ಸಾಂಬನಿಗೆ ಕೊಡೋ ಎಂದು ಪರಿಪರಿಯಾಗಿ ಪೀಡಿಸಿದಳು. ಆದರೆ ಆ ಮನುಷ್ಯಕುಲದ ತಾತಾಶ್ರೀಯು ಮುಷ್ಟಿ ಬಿಚ್ಚಿದರೆ ತಾನೆ! ತಾನು ಕೇಳಿದ್ದನ್ನು ಕೊಡದಿದ್ದರೆ ಕೊಡುವ ಪೈಕಿಯಲ್ಲ ಎಂದುಕೊಂಡಳು. ತಾನಾದರೋ ಸೊಸೈಟಿ ಮೂಲಕ ಸಕ್ಕರೆ ಕೊಡುವಂತೆ ಕಂಟ್ರೋಲಾಗಿ ಮುದ್ದು ಕೊಟ್ಟು ಪಡೆದ ಅನುಭವ ಉಳ್ಳವಳು. ತನ್ನ ಸೊಸೈಟಿಯ ಏಕಮಾತ್ರ ಗಿರಾಕಿ ಎಂದರೆ ಶಾಮನೊಬ್ಬನೆ. ಈ ಪೋರನಿಗೆ ಕೊಟ್ಟರೆ ತಾನು ಶಾಮಸುಂದರನಿಗೆ ಅನ್ಯಾಯ ಮಾಡಿದಂತಾಗುವುದಿಲ್ಲವೇ? ಧರ್ಮ ಸಂಕಟಕ್ಕಿಟ್ಟುಕೊಂಡಿತು. ಪೋರನ ಮೂತಿ ಎಂಬ ಪಾರಿಜಾತ ಪುಷ್ಪ ನೋಡಿದಳು. ಜಗತ್ತಿನ ಎಲ್ಲಾ ಜನಾಂಗಗಳಿಂದ ಪಡೆದ ಹತ್ತಾರು ಶಾಂಪಲ್‌ಗಳಿಂದ ಮಾಡಲ್ಪಟ್ಟಂತಿರುವ ಪರ್ಸನಾಲಿಟಿವುಳ್ಳವನು. ದೇಹದ ಒಂದೊಂದು ಅಂಗ ಒಂದೊಂದು ಮಾದರಿಯೇ ಸರಿ!

“ಸಿಂಬಳ ಒರೆಸಿಕೊಂಡರೆ ಕೊಡುವೆನೈ ಮುದ್ದು ಸಾರಥಿ; ಒರೆಸಿಕೋ ಅತಿ ಜಾಗ್ರತಿ” ಎಂದು ನಾಟಕೀಯವಾಗಿ ನುಡಿದಳು.

“ಯಾಕಾಗಬಾರದು ಕನ್ಯಾಮಣಿ ನನ್ನ ಅರಗಿಣಿ” ಎಂದು ಅವನು ಅಷ್ಟೇ ನಾಟಕೀಯವಾಗಿ ನುಡಿದನು. ಬಲಗೈಯಿಂದ ಎಡ ಹೊಳ್ಳೆಯ ಸಿಂಬಳವನ್ನು ಎಡ ಗಲ್ಲಕ್ಕೂ ಬಲಹೋಳ್ಳೆಯ ಸಿಂಬಳವನ್ನು ಎಡಗೈಯಿಂದ ಬಲಗಲ್ಲಕ್ಕೂ ಲೇಪಿಸಿ ಅದ್ಭುತವಾಗಿ ಕಂಗೊಳಿಸಿದನು.

ಅದನ್ನು ನೋಡಿ ರುಕ್ಕಮ್ಮನಿಗೆ ನಗು ಬಂತಾದರೂ ನಗಲಿಲ್ಲ. ಆಕೆ ಎಂದೋ ನಗುವ ಹಕ್ಕನ್ನು ಕಳೆದುಕೊಂಡಿದ್ದಳು. ಯಾವ ಸೌಭಾಗ್ಯಕ್ಕೆ ತಾನು ನಗಬೇಕು!

ಅನಸೂಯಾಳಿಗೆ ನಗಬೇಕೋ ಅಳಬೇಕೋ ತಿಳಿಯಲಿಲ್ಲ. ಜೀವಮಾನದಲ್ಲಿ ತಾನೇಂದೂ ಅಳಲೇಕೂಡದೆಂದು ಪೂರ್ವಭಾವಿಯಾಗಿ ನಿರ್ಧರಿಸಿದ್ದಳು. ಯಾವನೋ ತನಗೆ ಮೋಸ ಮಾಡುವುದೆಂದರೇನು? ತನಗೆ ತಾನೇ ಮೋಸ ಮಾಡಿಕೊಂಡಂತಯೇ ಲೆಕ್ಕ. ಈ ದೇಶದಲ್ಲಿ ಹೆಣ್ಣು ತನ್ನ ಹೃದಯ ಕಲ್ಲು ಮಾಡಿಕೊಂಡೇ ಬದುಕಬೇಕು.
“ಮೂಗಿನೊಳಗಿನ ಸಂಪತ್ತಿನಿಂದ ಮೂತಿ ಅಲಂಕರಿಸಿಕೊಂಡಿರುವ ಸಾಂಬ ನೀನು ಕೇರಿಗೆಲ್ಲ ಹುಂಬ” ಎಂದಳು ಕಾವ್ಯಾತ್ಮಕವಾಗಿ. ಎಷ್ಟಿದ್ದರೂ ಆಕೆ ಶಾಮುವಿಗೆ ಕಾವ್ಯ ಗುರು ಅಲ್ಲದೆ, ಆಲಹಳ್ಳಿಗೆ ಶಿವತೀರ್ಥನ್ ಇದ್ದಂತೆ; ಕುಂವೀಗೆ ಮಲ್ಲೇಪುರಂ ಇದ್ದಂತೆ.

ತುಂಬಿದ ಕೊಡ ನೀರಿನಿಂದ ಅವನ ಮೂತಿ ತೊಳೆದು ತನ್ನ ಸೆರಗಿನಿಂದ ಒರೆಸಿ ಅದರ ಮೇಲೊಂದಿಷ್ಟು ಪಾಂಡ್ಸು ಪೌಡರು ಲೇಪಿಸಿ ಲಕಲಕ ಹೊಳೆಯುವಂತೆ ಮಾಡಿ ಬಲಗಲ್ಲಕ್ಕೊಂದು ಎಡಗಲ್ಲಕ್ಕೊಂದು ಲೊಚ್ ಲೊಚ್ ಮುದ್ದು ಕೊಟ್ಟು ಕೃತಾರ್ಥಳಾದಳು. ಆ ಪೋರನಿಗಿಂಥ ಎಷ್ಟೋ ಚಂದ ಇರುವ ತಮಗೂ ಮುದ್ದು ಕೊಡು ಅಂತ ಮೂತಿ ಮೂರುಕುಟ್ಟಗಳಲ್ಲಿದ್ದ ಮೂಷಕಗಳು ಇದ್ದಕ್ಕಿದ್ದಂತೆ ಸರಸರ ಹರಿದಾಡಿ ಮಣ್ಣು ಉದುರಿಸಿದವು.

“ಜಗದೇಕ ಸುಂದರಿಯಾದ ನಿನ್ನಿಂದ ಮುದ್ದು ಪಡೆದು ಅತಿಲೋಕಸುಂದರನಾದ ನಾನು ಪಾವನನಾದೆನೈ ಕಾಂತೆ! ತಗೋ ಶಾಮು ಮಾಮ ಕೊಟ್ಟಿರುವ ಈ ಚೀಟಿಯನ್ನು ಅತಿ ಗುಣವಂತೆ” ತನ್ನ ಮುಷ್ಟಿ ಎಂಬ ಓಪಿಡಿ ಜನರಲ್ ವಾರ್ಡಿನಲ್ಲಿ ಮರಣೋನ್ಮುಖನಾಗಿದ್ದ ಚೀಟಿಯನ್ನು ಅದರ ವಾರಸುದಾರಳಾದ ಅನಸೂಯಾ ಎಂಬ ವಾಸವದತ್ತೆಗೆ ಒಪ್ಪಿಸಿ ರುಕ್ಕಮ್ಮ ಕೂಡ ಮಾಡಿದ ಬೆಲ್ಲದ ಉಂಡೆಯನ್ನು ಶಿವಲಿಂಗೋಪಾದಿಯಲ್ಲಿ ದವಡೆಯ ಶೂನ್ಯಸಿಂಹಾಸನದಲ್ಲಿ ಪ್ರತಿಷ್ಠಾಪಿಸಿಕೊಂಡು ರೆವ್ವನೆ ಹೊರ ಓಡಲು ದೇವತೆಗಳು ಆಗಸದಿಂದ ಪುಷ್ಪ ಮಳೆ ಕರೆವಂತೆ ತೊಲೆ ಜಂತಿ ಸಂದುಗಳಿಂದ ಮೂಷಕ ರೂಪಿ ಯಕ್ಷ ಗಂಧರ್ವರು ಮತ್ತೆ ಮತ್ತೆ ಮಣ್ಣು ಉದುರಿಸುತ್ತಿದ್ದರು.

ಮೂಲ ಸ್ವರೂಪವನ್ನೇ ಕಳೆದುಕೊಂಡಿದ್ದ ಚೀಟಿಯಲ್ಲಿ ಅಕ್ಷರಗಳನ್ನು ಅನುಕ್ರಮವಾಗಿ ಜೋಡಿಸಿ, ಡಾ. ಎಂ. ಎಂ. ಕಲಬುರ್ಗಿಯವರು ಕದಂಬರ ಕಾಲದ ಶಾಸನ ಓದುವಂತೆ ಓದಿದಳು. ಅನಸೂಯ…

ಕ್ರಾಪಿಗಿಂತ ಜುಟ್ಟಿಗೇ ಪ್ರಥಮ ಪೂಜೆ ಸಲ್ಲಿಸಲಾರಂಭಿಸಿರುವ ಶಾಮನೆಂಬ ವರರತ್ನ ಅದರಲ್ಲಿ ಕೆತ್ತಿರುವ ಅಕ್ಷರಗಳನ್ನು ತಾಯಿಗೆ ವಿವರಿಸಿದಳು. ಹೆತ್ತ ಮಹಾಮಾತೆಯನ್ನು ಸದಾ ಅಂಟರು ಪುಳುಕಿಯಂತೆ ಅಂಟಿರುವಂಥ ಆ ಉದಯೋನ್ಮುಖ ಕವಿ ಪತ್ರ ಬರೆಯುವಾಗಿನ ಮನಸ್ಥಿತಿಯನ್ನು ಸೂಕ್ಷ್ಮವಾಗಿ ವಿವರಿಸಿದಳು. ನಾಡಿನ ಮುಖ್ಯ ಪತ್ರಿಕೆಯಲ್ಲಿ ಮೊಟ್ಟ ಮೊದಲ ಬಾರಿಗೆ ಬೆಳಕು ಕಂಡ ಕವಿತೆಯನ್ನು ಅಭಿನಂದಿಸಿ ತಾನು ಕೊಟ್ಟ ’ಮೇಡಿನ್ ಚೈನಾ’ದ ಹೀರೋ ಪೆನ್ನಿನಿಂದಲೇ ಪತ್ರದ ಮೊದಲಿನ ನಾಲ್ಕು ಸಾಲುಗಳನ್ನು; ವಾಕ್ಯಂ ರಸಾತ್ಮಕಂ ಕಾವ್ಯಂ ಎಂದು ವಿವರಿಸಿದ್ದಕ್ಕೆ ಖುಷಿಗೊಂಡು ಅವರ ತಾನ ಖುಷಿಯಿಂದ ಕೊಟ್ಟಿದ್ಧಂಥ ಫೋರ್ಟ್ ಪೆನ್ನಿನಿಂದ ಕೊನೆಯ ಎರಡು ಸಾಲುಗಳನ್ನು ಅದು ಹೇಗೆ ಬರೆದಿರುವನು ನೋಡು ಎಂದು ವಿವರಿಸಿದಳು.
ರುಕ್ಕಮ್ಮ ಪತ್ರವನ್ನು ಎಲ್ಲ ದೃಷ್ಟಿಕೋನಗಳಿಂದ ನೋಡಿದಳು. ಬರಹಕ್ಕೆ ಬಳಸಿರುವ ಇಂಕು ಒಂದೇ ಆಗಿದ್ದರೂ ವಾಕ್ಯಗಳ ನಡುವೆ ಅಂತರಂಗದ ಅಗಾಧತನವನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾದ ಮಗಳನ್ನು ಯಾವ ಭಾವನೆಗಳಿಂದ ಅಭಿನಂದಿಸುವುದು! ಇಷ್ಟೊಂದು ಜಾಣ ಮಗಳು ತಾನು ಪ್ರೀತಿಸಿದವನನ್ನು ಕೈಹಿಡಿದರೆ ಅದಕ್ಕಿಂತ ಮಿಗಿಲಾದ ಸಂತೋಷ ಯಾವುದು!. ಆ ದೇವರೇ ಮದ್ಯಸ್ಥಿಕೆ ವಹಿಸಿ ಈಕೆ ಮತ್ತು ಆತನ ನಡುವೆ ಇರುವ ಅಂತರದ ಅಗಾಧತೆಯನ್ನು ಕಡಿಮೆ ಮಾಡಬಾರದೇಕೆ? ಹೀಗೆ ಯೋಚಿಸುತ್ತ ಹನಿಗೂಡಿದ ರುಕ್ಕಮ್ಮನ ಕಣ್ಣುಗಳಾದರೂ ಎಂಥವು? ಆ ಕಣ್ಣುಗಳ ಬೆಳಕಿನಲ್ಲಿ ರುದ್ರನಾಯಕ ದೇವಿಯ ಉಪಾಸನೆ ಮಾಡುತ್ತಿದ್ದ. ಆ ಕಣ್ಣುಗಳ ಬೆಳಕಿನಲ್ಲಿ ಸ್ನಾನಮಾಡಿ ರುದ್ರ ನಾಯಕ ಕುಜಗ್ರಹದ ಶಕ್ತಿಯನ್ನು ಆವಾಹಿಸಿಕೊಳ್ಳುತ್ತಿದ್ದ.

ರುಕ್ಕೂ ಸದಾ ನಿನ್ನ ಕಣ್ಣುಗಳು ಹೀಗೇ ಮಿನುಗುತ್ತಿರಬೇಕೆಂದು ಗದ್ಗದಿತನಾಗಿದ್ದ. ಅಂಥ ಕಣ್ಣುಗಳಲ್ನೀರು ತುಂಬುವುದೆಂದರೇನು?

ಅಂಥ ಕಣ್ಣುಗಳಿಂದ ಒಂದು ಹನಿ ನೆಲಕ್ಕುರುಳಿದರೆಲ್ಲಿ ಸಚರಾಚರಗಳು ದುಃಖದ ಕಡಲಲ್ಲಿ ಮುಳುಗುವುವೋ ಎಂದು ಹೆದರಿದ ಅನಸೂಯ ಸೆರಗಿನ ಚುಂಗನ್ನು ತಾಯಿಯ ಕಣ್ಣುಗಳಿಗೆ ಅಂಟಿಸಿದಳು.

“ಯಾಕಮ್ಮಾ ಕಣ್ಣಲ್ಲಿ ನೀರು ತಂದ್ಕೊಂಡಿ? ನೀನು ಬೇಡಾಂದ್ರೆ ನಾನ್ ಹೋಗದಿಲ್ಲ ಬಿಡು” ಕೈಯಲ್ಲಿದ್ದ ಚೀಟಿಯನ್ನು ಹರಿದು ಚೂರು ಚೂರು ಮಾಡಲೆಂದು ಮಡಿಚಿದಳು. ಆಕೆ ಹರಿಯದಿದ್ದಾಗ ತೊಲೆ ಸಂದಿಯಲ್ಲಿ ಪಿಳಿಪಿಳಿ ಕಣ್ಣು ಬಿಡುತ್ತ ನೋಡುತ್ತಿದ್ದ ಮೂಷಕಕಕ್ಕೆ ನಿರಾಸೆಯಾಯಿತು.

ಶಾಮು ಆಕೆಗೆ ಬರೆಯುತ್ತಿದ್ದ ಎಷ್ಟೋ ಪ್ರೇಮಪತ್ರಗಳು ಉಪಾಯದಿಂದ ಅಪಹರಿಸಿ ಒಯ್ದು ತನ್ನ ಪ್ರಿಯತಮೆಗೆ ಒಪ್ಪಿಸಿ ಸಂತೋಷಪಡುವ ಪರಿಪಾಟ ಇಟ್ಟುಕೊಂಡಿತ್ತು. ಪ್ರತಿಯೊಂದು ಪ್ರೇಮಪತ್ರವನ್ನು ಮೊದಲದಿನ ಓದಿದ ನಂತರ ಅದನ್ನು ತನ್ನ ಸುಂದರ ವಕ್ಷಸ್ಥಳದಲ್ಲಿ ಭದ್ರಪಡಿಸುತ್ತಿದ್ದಳು ಅನಸೂಯ. ಆಕೆಯ ಬೆವರಿನಿಂದ ತೊಯ್ದು ಅದರಲ್ಲಿನ ಅಕ್ಷರಗಳ ಮೌಲ್ಯ ಹೆಚ್ಚುತ್ತಿತ್ತು. ಜೊತೆಗೆ ರುಚಿಯೂ ಕೂಡ.

ಇಲಿಯ ನಿರೀಕ್ಷೆಯಂತೆ ಚೀಟಿಯನ್ನು ಬ್ಲೌಜಿನೊಳಗೆ ಇರಿಸದೆ ಮುಷ್ಟಿಯಲ್ಲಿ ಭದ್ರಪಡಿಸಿದಳು.
“ನಾನ್ಯಾಕೆ ಕಣ್ಣಲ್ಲಿ ನೀತಂದ್ಕೊಳ್ಲೇ ಮಗಳೇ ನಿಮ್ಮಪ್ಪ ಇಷ್ಟೊತ್ಗೆ ವಾಪಸು ಬಂದಿದ್ರೆ ನಾನು ಇಷ್ಟೊಂದು ಚಿಂತೆ ಮಾಡಬೇಕಾಗಿಲಿಲ್ಲ ಕಣಮ್ಮಾ… ನಿನ್ನ ಚಿನ್ನದಂಥ ಮನಸ್ಸನ್ನು ಅರ್ಥ ಮಾಡ್ಕೊಂಡು ಮದ್ವೆ ಆಗೋಕೂ ಶಾಮಾ ಶಾಸ್ತ್ರಿ ಪುಣ್ಯ ಮಾಡಿಬೇಕು” ಒಂದು ನಿಟ್ಟುಸಿರು ಬಿಟ್ಟು ಮಗಳ ಮುಡಿ ನೇವರಿಸಿ ಮುಂದುವರೆದು ಹೇಳಿದಳು.

“ನೀನು ಹೋಗು… ಅವನ ಜೊತೆ ಮಾತಾಡಿ ನಿರ್ಧಾರ ಮಾಡ್ಕೊಂಡು ಬಾ… ತಾಯೀನ ತುಂಬ ಹಚ್ಕೊಂಡಿರೋ ಅವನ್ ಮನಸ್ಸಿಗೆ ನೋವಾಗುವಂತೆ ಮಾತಾಡಿ ಬಿಡಬೇಡ… ಹಣೆಯಲ್ಲಿ ಬರೆದಂತಾಗ್ತದೆ’

ಆ ಕ್ಷಣ ಹೊರಡುವ ಉತ್ಸಾಹ ಕೂಡಲೆ ಪ್ರಕಟಿಸಲಿಲ್ಲ. ನಿಟ್ಟುಸಿರು, ಬೇಸರಗಳಿಂದ ಅಲಂಕೃತಗೊಂಡಿರುವ ಮುಖಕ್ಕೆ ಏನು ಹಚ್ಚಿಕೊಂಡರೆ ಏನು? ಕನ್ನಡಿ ಎದುರು ನಿಂತು ಮುಷ್ಠಿ ತೆರೆದಳು. ಪತ್ರ ಬೆವರಿನಿಂದ ಸಂಪೂರ್ಣ ನೆನೆದಿತ್ತು. ಅದರಲ್ಲಿನ ಯಾವೊಂದು ಅಕ್ಷರವೂ ಅರ್ಥವಾಗಿರುವ ಸ್ಥಿತಿಯಲ್ಲಿರಲಿಲ್ಲ. ಒಂಚೂರು ಅನ್ನದ ಉಂಡೆಯಂತಿದ್ದ ಅದನ್ನು ನಗಂದಿ ಮೇಲಿಡುತ್ತಲೆ ಮೂಷಕಕ್ಕೆ ಹೋದ ಜೀವ ಮರಳಿ ಬಂದಿತು.

“ಒಬ್ಬರ ಪ್ರೇಮಪತ್ರಾನ ಇನ್ನೊಬ್ರು ಓದಬಾರದೆಂಬ ಸಾಮಾನ್ಯ ತಿಳುವಳಿಕೆಯೂ ಈ ಇಲಿಗಳಿಗೆ ಇಲ್ಲವಾಯಿತಲ್ಲಾ” ಎಂಬರ್ಥ ಬರುವಂತೆ ಸಂದೂಕದ ಮರೆಯಲ್ಲಿದ್ದ ಬೆಕ್ಕು ಮ್ಯಾಂವ್ ಗುಟ್ಟಿ ಎಚ್ಚರಿಸಿತು.

“ಇನ್ನೊಬ್ರು ಓದಿದಾಗ್ಲೇ ಪ್ರೇಮ ಪತ್ರಗಳಿಗೆ ಹೆಚ್ಚಿನ ಬೆಲೆ ಬರೋದೂಂತ ಮಾರ್ಜಾಲ ಜಾತಿಗೆ ಅರ್ಥವಾಗುವುದಾದರೂ ಹೇಗೆ!. ನಮ್ಮ ಪರಮ ಶತ್ರುವಾದ ಮಾರ್ಜಾಲ ಕುಲಕ್ಕೆ ಧಿಕ್ಕಾರ ಅವುಗಳ ಬುದ್ಧಿವಾದಕ್ಕೆ ಧಿಕ್ಕಾರ” ಎಂದು ಚೀಂವ್ ಚೀಂವ್ ಭಾಷೆಯಲ್ಲಿ ಪ್ರತಿಭಟನೆ ವ್ಯಕ್ತಪಡಿಸುತ್ತ ಮೂಷಕ ಪ್ರೇಮ ಪತ್ರದಕಡೆ ಕಳ್ಳ ಹೆಜ್ಜೆ ಇಡತೊಡಗಿತು.

ಆದರೆ ಜಂತಿಯ ಸಂದಿಯಲ್ಲಿದ್ದ ಅದರ ಪ್ರಿಯತಮೆಗೋ ಭಯ ಅಂದರೆ ಭಯ, ನೋಟದ ಗುರಿಯ ಗಾಳ ಎಸೆದು ಕೂತಿರುವ ಮಾರ್ಜಾಲಕ್ಕೋ ಸಿಟ್ಟು, ತನ್ನ ಅಪ್ಪಣೆ ಮೀರಿ ಮೂಷಕ ಪ್ರೇಮಪತ್ರ ಲಪಟಾಯಿಸುವುದೆಂದರೇನು!…

“ಅಕ್ಕಾ ತಕ್ಕೊಳ್ಳೀ… ನಿನ್ ಪ್ರೇಮ ಪತ್ರಾನ ಆ ದರಿದ್ರ ಇಲಿ ಲಪಟಾಯಿಸುತ್ತಾ ಇದೆ. ಪ್ರೇಮದ ಗುಟ್ಟನ್ನು ಇಲಿಗಳು ಕಾಪಾಡೊಲ್ಲ ಕಣಮ್ಮಾ” ಎಂದು ತನ್ನ ಭಾಷೆಯಲ್ಲಿ ಹೆಲನ್ ಪರಿಪರಿಯಾಗಿ ಹೇಳಿತು. (ತೀಸ್ರಿಮಂಜಿಲ್‌ನಲ್ಲಿ ನರ್ತಕಿ ಹೆಲನ್ ಅಮೋಘ ಅಭಿನಯಕ್ಕೆ ಮನಸೋತು ಶಾಮು ಅದಕ್ಕೆ ಆ ಹೆಸರು ಇಟ್ಟಿದ್ದನು.)
ಎದೆ ತುಂಬ ಮುಡಿ ಹರಡಿಕೊಂಡಿದ್ದ ಅನಸೂಯ ಬೇರೆ ಸಂದರ್ಭದಲ್ಲಾಗಿದ್ದರೆ ಹೆಲೆನ್ನಳ ಭಾಷೆಯನ್ನು ಶತಾಯ ಗತಾಯ ಅರ್ಥಮಾಡಿಕೊಳ್ಳುತ್ತಿದ್ದಳು.

“ಹೆಲನ್ ಹಸ್ಕೊಂಡು ಅರಚ್ತಿದೆ. ಅಮ್ಮಾ ಅದ್ಕೆ ಅನ್ನ ಹಾಲು ಕಲೆಸಿಡೇ” ಬಾಚಿಕೊಳ್ಳುತ್ತ ಆಕೆ ಕೂಗಿದ್ದು ಕೇಳಿಸಿಕೊಂಡು ಬೆಕ್ಕಿಗೋ ಪ್ರಾಣಸಂಕಟ ಇಲಿಗೋ ಚಿನ್ನಾಟ.

ಆ ದರಿದ್ರ ಶಾಮಾಶಾಸ್ತ್ರಿಯ ಸಹವಾಸದಿಂದಾಗಿ ಅಪ್ಪಟ ವೆಜಿಟೇರಿಯನ್ನಾಗಿರುವ ಈ ಲಲನಾಮಣಿ ಗಂಡಸಾದ ತನಗೆ ಹೆಲನ್ ಎಂಬ ಹೆಸರಿಟ್ಟು ತಪ್ಪು ಮಾಡಿರೋದಲ್ದೆ ತನ್ನ ಭಾಷೆ ಅರ್ಥಮಾಡಿಕೊಳ್ಳಲಾಗದೆ ಪ್ರೇಮವನ್ನು ಜಗಜ್ಜಾಹಿರು ಮಾಡುತ್ತಿರುವಳಲ್ಲಾ ಎಂದು ಹೆಲನ್ ಮಮ್ಮಲನೆ ಮರುಗಿತು.

“ಲವ್ ಅಂದರೇನೆಂದು ಗೊತ್ತಿಲ್ಲದ ವಕ್ರತುಂಡ ಮಹಾಕಾಯ ಸೂರ್ಯಕೋಟಿ ಸಮಪ್ರಭನಿಗೆ ವಾಹನವಾಗಿರುವ ನಿಮಗೆ ಪ್ರೇಮಪತ್ರ ಲಪಟಾಯಿಸುವ ಹಕ್ಕು ಯಾವ ಬೋಳಿಮಗ ಕೊಟ್ಟ… ಒಳ್ಳೆ ಮಾತಿಂದ ಹೇಳ್ತಿದೀನಿ… ಚೀಟಿ ಬಳಿಗೆ ಬರಬೇಡ… ಹುಷಾರ್” ಹೆಲೆನ್ ಬೆದೆಗೆ ಬಂದಾಗ ಉಪಯೋಗಿಸುವ ಭಾಷೆ ಬಳಸಿ ಎಚ್ಚರಿಕೆ ನೀಡಿತು. ಅದರ ರೂಕ್ಷ ಸ್ವರಕ್ಕೆ ಬೇಸತ್ತು ಅನಸೂಯ ಬಾಚಣಿಕೆಯನ್ನು ಅದರತ್ತ ಎಸೆದಳು. ಅದನ್ನೇ ಪಾಶುಪತಾಶ್ತ್ರವೆಂದು ಭಾವಿಸಿ ಹೆಲೆನ್ ಹಿಡಿಹಿಡಿ ಶಾಪ ಹಾಕುತ್ತ ಅಲ್ಲಿಂದ ಓಡಿತು.

ಅದು ಓಡಿದ್ದು ನೋಡಿ ಮೂಷಕಕ್ಕೆ ಖುಷಿಯೋ ಖುಷಿ. ತನ್ನ ಪ್ರಿಯತಮೆಯ ಕಡೆಗೆ ನೋಡಿ ಕಣ್ಣು ಮಿಟುಕಿಸಿತು. ಬಿಚ್ಚುಗತ್ತಿ ಭರಮಣ್ಣ ನಾಯಕನಂತೆ ಭಲೆ ಠೀವಿಯಿಂದ ಹೆಜ್ಜೆ ಹಾಕುತ್ತ ಪ್ರೇಮಪತ್ರ ಸಮೀಪಿಸಿತು. ತನ್ನ ಮೂತಿಯನ್ನು ಇಷ್ಟಗಲ ತೆರೆದು ಅದನ್ನು ಕಚ್ಚಿಕೊಂಡು ರೋಮಾಂಚನಗೊಂಡಿತು. ಎಂಥ ರೋಚಕ ಅನುಭವ ಪ್ರೇಮಪತ್ರ ಮುಟ್ಟುವುದೆಂದರೆ!. ಬರಿ ನೆನೆದರೇನುಂಟು ಪ್ರೇಮಪತ್ರದ ರುಚಿಯ… ಜೋಹನ್ಸ್‌ಬರ್ಗ್ನಲ್ಲಿ ಅಧಿಕಾರ ವಹಿಸಿಕೊಳ್ಳುವ ತನ್ನ ಗಂಡನ ಕಡೆ ವಿನ್ನಿಮಂಡೇಲಾ ನೋಡುತ್ತಿದ್ದಳಲ್ಲ… ಹಾಗೆ… ಅಂಥ ನೋಟ ಬೀರುತ್ತಿದ್ದ
ಪತ್ನಿಯ ಕಡೆ ಗಂಭೀರವಾದ ಹೆಜ್ಜೆ ಹಾಕತೋಡಗಿತು.

“ಸ್ವಾಗತಂಽಽ ಸುಸ್ವಾಗತಂಽಽ ದೊರಾ” ಅದರ ಪ್ರಿಯತಮೆ ಮಾಲಕೌಂಸ್ ಆಲಾಪನೆ ಮಾಡಿತು. ಜಂತಿಯ ಸಂದಿಯಿಂದ ಹಿಡಿಬಯಲನ್ನೇ ಸ್ಯಾಂಕಿ ಕೆರೆಯ) ಡಾ. ಜೀವರಾಜ್ ಆಳ್ವರ ಮನೆ ಎದುಗಿರುವ) ಪಾರ್ಕ್ ಎಂದೇ ಭಾವಿಸಿ ಅವೆರಡು ಭಲೆ ರೊಮಾಂಟಿಚ್ ಮೂಡಿನಲ್ಲಿ ಎದುರುಬದುರು ಕೂತುಕೊಂಡವು. ಪ್ರಿಯಕರ ತನ್ನ ಪ್ರಿಯತಮೆಯ ಎದುರಿಗೆ ಪ್ರೇಮಪತ್ರ ಹರಡಿತು. ಕೋಮಲಕಾಯದ ಹೆಣ್ಣು ಇಲಿ ಲವ್ ಲೆಟರಿನೊಳಗೆ ಬಗ್ಗಿ ಬಗ್ಗಿ ನೋಡಿತು. ಬೆವರಿಗೆ ಅಳಿಸಿಹೋಗಿದ್ದ ಅಕ್ಷರಗಳನ್ನು ನೋಡಿ ಮನನೊಂದಿತು. ನಿಲುಗನ್ನಡಿ ಎದುರು ಮ್ಲಾನವದನಳಾಗಿ ಕೂತಿದ್ದ ತರುಣಿ ಕಡೆ ನೋಡಿ ’ಅಯ್ಯೋ ಪಾಪ’ ಎಂದಿತು.

“ಪ್ರಿಯತಮೆ ತನ್ನ ಪ್ರಿಯತಮನ ಪತ್ರ ಬಂದ ನಂತರವೂ ಆಕೆ ಇಷ್ಟು ಮಂಕಾಗಿರುವಳಲ್ಲ… ಅಯ್ಯೋ ಪಾಪ” ಹೆಣ್ಣು ಸ್ತ್ರೀಸಹಜ ಮನೋಭಾವದಿಂದ ಖೇದ ವ್ಯಕ್ತಪಡಿಸಿತು.

“ಹೆಣ್ಣಿನ ಮನೋವೇದನೆಗೆ ಹೆಣ್ಣಾದ ನಿನಗೆ ಅರ್ಥವಾಗದಿದ್ದರೆ ಹೇಗೆ ಚಿನ್ನಾ… ಆ ಶಾಮಾಶಾಸ್ತ್ರಿ ಪ್ರೇಮವೆಂಬ ತುಪ್ಪವನ್ನು ಈ ಹುಡುಗಿಯ ನೀಳ ನಾಸಿಕದ ಮೇಲೆ ಹಚ್ಚಿ ಮಾಡಿರುವ ದೊಡ್ಡ ತಪ್ಪು ಕಣೆ. ಮೊದಲೇ ಅವನು ಹುಟ್ಟಿರುವುದ ಸಂಸ್ಕೃತ ಭೂಯಿಷ್ಠ ವಂಶದಲ್ಲಿ… ಸಂಸ್ಕೃತ ತಾಂಡವವಾಡುವ ಸ್ಥಳದಲ್ಲಿ ಪ್ರೇಮ ಸಾಯುಜ್ಯ ಜಾಗವಿರುವುದಿಲ್ಲ. ನೆನ್ನೆ ಕೋಡುಬಳೆ ವಾಸನೆ ಹಿಡಿದು ಶಾಸ್ತ್ರಿಗಳ ಮನೆಗೆ ಹೋಗಿದ್ದೆ.”

“ಓಹೋ ಕೋಡುಬಳೆ ತತೀನೆಂದು ಹೋಗಿದ್ದೆಯಲ್ಲ… ಕೋಡುಬಳೆ ಸಂಗತಿ ಹಾಳಾಗಲಿ… ಅಲ್ಲಿ ಏನೇನು ಮಾತುಕಥೆ ನಡೀತು ಎಂಬುದರ ಬಗ್ಗೆ ಹೇಳು. ಕೇಳಲು ಉತ್ಸುಕಳಾಗಿದ್ದೇನೆ” ಹೆಣ್ಣಿಲಿ ತನ್ನ ನಿರಾಭರಣದ ಕರ್ಣವನ್ನು ತನ್ನ ಪ್ರಿಯತಮನ ಬಾಯಿ ಬಳಿ ಇಟ್ಟಿತು.

“ಅದನ್ನೆಲ್ಲ ಹೇಳಿ ನಾನ್ಯಾವ ನರಕಕ್ಕೆ ಹೋಗಲಿ ಬಂಗಾರ… ಉತ್ತಮ ನಕ್ಷತ್ರದಲ್ಲಿ ಋತುಮತಿಯಾದ ಕನ್ಯಾನ್ವೇಷಣೆಗೆ ಆ ವೃದ್ಧ ಶಾಸ್ತ್ರಿಗಳು ಯಾವುದೋ ಊರಿಗೆ ಹೋಗಿದ್ದರು. ಅರೆ ಬೆತ್ತಳಾಗಿದ್ದ ತಾಯಿ ಅಲುಮೇಲಮ್ಮಳ ತೊಡೆಮೇಲೆ ಶಾಮಾಶಾಸ್ತ್ರಿ ತಲೆ ಇಟ್ಟು ಮಲಗಿದ್ದ. ಅವನ ಕಣ್ಣುಗಳಿಂದ ನೀರು ಧಾರಾಕಾರವಾಗಿ ಹರಿದು ತೊಡೆಯಸೀಳಿನಲ್ಲಿ ಇಂಗಿಹೋಗುತ್ತಿತ್ತು. “ಆ ಶೂದ್ರ ಹುಡುಗಿಯನ್ನು ಮದುವೆಯಾಗುವುದಾದರೆ ಮೊದಲು ನನಗೆ ವಿಷ ಕೊಡು” ಎಂದು ಆ ಮಹಿಳೆ ಖಡಾಖಂಡಿತವಾಗಿ ಕಣ್ಣೀರು ತೆಗೆದು ಮಾತಾಡುತ್ತಿದ್ದಳು. “ಅಮ್ಮಾ ಈ ಪ್ರಪಂಚದಲ್ಲಿ ತಾಯಿಯಾದ ನಿನಗಿಂತ ಬೆಲೆಬಾಳುವ ಹೆಣ್ಣು ಯಾರೂ ಇಲ್ಲ” ಎಂದು ಹೇಳುತ್ತಿದ್ದ. “ಮತ್ತೇಕೆ ಕಣ್ಣೀರು ತೆಗೆಯುತ್ತಿರುವಿ” ಎಂದು ತಾಯಿ ಪ್ರಶ್ನಿಸಿದಳು. “ಇಷ್ಟು ವರ್ಷಗಳ ಕಾಲ ನನ್ನನ್ನು ಪ್ರೀತಿಸಿದವಳನ್ನು, ನನಗೆ ಸೃಜನಾತ್ಮಕವಾಗಿ ದೇಹ ಮತ್ತು ಮನಸ್ಸು ಎರಡನ್ನು ಹಂಚಿಕೊಂಡವಳನ್ನು ಮರೆಯುವ ಕಷ್ಟ ನಿನಗೆ ಅರ್ಥವಾಗುವುದಿಲ್ಲ ತಾಯಿ” ಎಂದವನು ಗದ್ಗದಿತನಾಗಿ ಚಿನ್ನಾ”ಗಿ ಎಂದನು.

“ಅಂದರೆ ಅವನು ತಾನು ಮದುವೆಯಾಗುವುದಿಲ್ಲ ಎಂದು ಹೇಳಲಿಕ್ಕಾಗಿಯೇ ಅನಸೂಯಳಿಗೆ ಚೀಟಿ ಕಳಿಸಿದ್ದಾನೆಂದಾಯಿತು.”
“ಹೌದು. ಖಂಡಿತ ಅದಕ್ಕೇನೆ.”
“ಹಾಗಿದ್ದರೆ ಆಕೆಯನ್ನು ಅಲ್ಲಿಗೆ ಹೋಗದಂತೆ ತಡೆಯಬೇಕಲ್ಲ.”
“ತಡೆಯೋದಾದ್ರೂ ಯಾಕೆ ಚಿನ್ನಾಽಽ ಆಕೆಗೀಗಾಗ್ಲೇ ಎಲ್ಲಾ ಅರ್ಥವಾಗಿದೆ. ಆಕೆ ನೀಚ

ಕುಲದಲ್ಲಿ ಹುಟ್ಟಿರಬಹುದು. ಆದರೆ ಆಕೆ ಉಚ್ಚಕುಲ ಸಂಜಾತನಾದ ಶ್ಜಾಮಾಶಾಸ್ತ್ರಿಗಿಂತಲೂ ಬುದ್ಧಿವಂತೆ. ವಸ್ತುಸ್ಥಿತಿಯನ್ನು ಅರ್ಥಮಾಡಿಕೊಂಡು ಬದುಕನ್ನು ರೂಪಿಸಿಕೊಳ್ಳಬಲ್ಲ ಮನೋದಾರ್ಡ್ಯ ಆಕೆಗುಂಟು.”
“ಮುಂದೇನಾಗಬಹುದು?”
“ಮಾತೆಂಬ ಚಿಮಣಿಯನ್ನು ಅಡ್ಡಗೋಡೆ ಮೇಲಿರಿಸುವುದಷ್ಟೆ ಶಾಮಾಶಾಸ್ತ್ರಿಗೆ ಗೊತ್ತು. ಮುಟ್ಟು ನಿಲ್ಲುವವರೆಗೆ ಕಾಯಬೇಕೆಂದು ಅವನು ಹೇಳಬಹುದು, ಅಥವಾ ಬ್ರಹ್ಮಕುಮಾರಿ ವಿಶ್ವವಿದ್ಯಾಲಯ ಸೇರಿ ಆಧ್ಯಾತ್ಮ ಕಲಿತು ಕಾಮವೇ ಮೊದಲಾದ ಮನೋವಾಂಛೆಗಳನ್ನು ನಿಗ್ರಹಿಸಿಕೊಂಡು ಮೋಕ್ಷ ಪಡೆ ಎಂದು ಸಲಹೆ ಮಾಡಬಹುದು.”

“ಅಲ್ಲಾ ಎಷ್ಟೊಂದು ಸ್ವಾರ್ಥಿಗಳೇ ಗಂಡಸರು. ನನಗ್ಯಾಕೋ ನಿನ್ ಬಗ್ಗೆ ಅನುಮಾನ ಡಾರ್ಲಿಂಗ್ಽಽ ಅವರಿಬ್ಬರ ಬಗ್ಗೆ ನೀನಿಷ್ಟೊಂದು ಆಸಕ್ತಿ ವಹಿಸಿರುವೆ ಅಂತ” ಹೆಣ್ಣಿಲಿ ಕುಡಿಗಣ್ಣಿಂದ ನೋಡಿತು.
ಪ್ರಿಯ ಸಖಿ ಮಾತು ಕೇಳಿ ಗಂಡಿಲಿ ತಿಕ ಬಡಕೊಂದು ನಗಾಡಿತು.
“ಈಸ್ತ್ರೀ ಜಾತಿಯೇ ಇಷ್ಟು ನೋಡು. ಆದ್ರೆ ಅನಸೂಯ ಮಾತ್ರ ಅಪವಾದ!”
“ಆಕೆ ಪರ ವಕಾಲತ್ತು ವಹಿಸ್ತಿರೋದು ಯಾಕೇಂತ!?”
“ಆಕೆ ಸ್ತ್ರೀ ಜಾತಿಗೇ ಒಂದು ಮುಕುಟಪ್ರಾಯವೆಂದು ಹೇಳಬಹುದು. ರೂಪದಲ್ಲೂ ಅಷ್ಟೇ ಗುಣದಲ್ಲೂ ಅಷ್ಟೇ. ಆಕೆ ಶಾಮಾಶಾಸ್ತ್ರಿಗೆ ಬೆಂಬಲವಾಗಿ ನಿಲ್ಲದಿದ್ದಲ್ಲಿ ಬಾಡಿ ಬಿಲ್ಡರ್ ಜಲಜಾಕ್ಷಿ ಕೈಯಲ್ಲಿ ಆ ಶಾಸ್ತ್ರಿ ಏನಾಗ್ತಿದ್ದನೋ ಏನೋ! ಜಲಜಾಕ್ಷಿ ರೇಪ್ ಮಾಡಲು ಪ್ರಯತ್ನಿಸಿದ್ದು; ಮೊಲೆ ಮುಟ್ಟು ಎಂದು ಶತ್ತಾಯಿಸಿದ್ದು; ಹುಸಿ ಬೆದರಿಕೆ ಹಾಕಿ ಪ್ರೇಮದ ಬಗ್ಗೆ ವಿಲಕ್ಷಣವಾದ ಒತ್ತಡ ತಂದದ್ದು ಎಲ್ಲ ಅನಸೂಯಳಿಗೆ ಗೊತ್ತಿಲ್ಲದಿಲ್ಲ. ಆಕೆ ಎಂದಾದ್ರೂ ಈ ಬಗ್ಗೆ ಮುಖ ಸಿಡರಿಸಿಕೊಂಡದ್ದುಂಟಾ?!” ಸಹಜವಾಗಿ ಗಂಡಿಲಿ ಹೇಳಿತು.

ಆದರೆ ಹೆಣ್ಣಿಲಿ ಒಂದೊಂದು ಮಾತಿಗೆ ಸಾವಿರ ಸಾವಿರ ಅರ್ಥ ಕಲ್ಪಿಸಿಕೊಂಡು ತನ್ನ ಪ್ರಿಯಕರನೂ ಆಕೆಯನ್ನು ಒಳಗೊಳಗೇ ಲವ್ ಮಾಡುತ್ತಿರಬಹುದೇ ಎಂಬ ಸಂದೇಹ ಕಾಡಿತು. ಮೂಷಕ ಸಹಜ ವಿಧ್ವಂಸಕ ಸ್ವಭಾವದಿಂದ ತಿಂಡಿ ತಿನಿಸುಗಳಿರೋ ಕಡೆ; ಉಗ್ರಾಣದ ಕಡೆ ಸುಳಿಯಬೇಕಾದ ತನ್ನ ಕಾಂತ ಹಗಲಿರುಳು ಅನಸೂಯಾಳ ಡ್ರಾಯಿಂಗ್ ರೂಂ; ಬೆಡ್ ರೂಂಗಳಲ್ಲಿ ಬಿಡಾರ ಹೂಡುತ್ತಿದ್ದುದು ನೆನಪಿಗೆ ತಂದುಕೊಂಡಿತು. ಆ ಕ್ಷಣ ಕಣ್ಣುಗಳು ಹನಿಗೂಡಿದವು. ಬಿಕ್ಕಿ ಬಿಕ್ಕಿ ಅಳತೊಡಗಿತು.

ಅಯ್ಯೋ ತನ್ನ ಕಾಂತೆಯ ಕಣ್ಣಲ್ಲಿ ನೀರೆ! ಗಂಡಿಲಿ ಗಾಬರಿಗೊಂಡಿತು. ಮೂಷಕ ಭಾಷೆಯಲ್ಲಿ ಪರಿಪರಿಯಾಗಿ ರಮಿಸಲು ಪ್ರಯತ್ನಿಸಿತು. ತಾನು ಗುಟ್ಟಾಗಿ ಅನಸೂಯಳನ್ನು ಪ್ರೀತಿಸುತ್ತಿರುವುದು; ಕದ್ದು ಮುಚ್ಚಿ ಆಕೆಯ ಕುಪ್ಪಸದ ಕಂಕುಳ ಭಾಗವನ್ನು; ಬ್ರಾದ ತುದಿಯನ್ನು; ಲಂಗದ ಆಯಕಟಿನ ಭಾಗವನ್ನು ಕಚ್ಚಿ ಕಚ್ಚಿ ಕಿಂಡಿ ಮಾಡಿರುವುದಾಗಲೀ; ಎಷ್ಟೋ ರಾತ್ರಿ ಆಕೆಯ ಹಾಸಿಗೆ ಏರಿ ಆಕೆ ಹೊದ್ದಿರುವ ಹೂವಿನ ಹಚ್ಚಡದೊಳಗೆ ಸುಳಿದಾಡಿ ಕಚಗುಳಿ ಇಡುತ್ತಿದ್ದುದಾಗಲೀ; ಶಾಸ್ತ್ರಿಮೇಲಿನ ಹೊಟ್ಟೆಕಿಚ್ಚಿನಿಂದ ಅವನು ಬರೆಯುತ್ತಿದ್ದ ಪ್ರೇಮ ಪತ್ರಗಳನ್ನು ಅಪಹರಿಸಿ ವಿರೂಪಗೊಳಿಸುತ್ತಿರುವುದಾಗಲೀ; ಇದಕ್ಕಿಂದ್ದಂತೆ ಆಕೆ ಎದುರಿಗೆ ದುತ್ತನೆ ಪ್ರತ್ಯಕ್ಷವಾಗಿ ಕಣ್ಣು ಮಿಟುಕಿಸಿ ರತಿಕ್ರೀಡೆಗೆ ಆಮಂತಿಸುತ್ತಿದ್ದುದಾಗಲೀ; ಈ ಎಲ್ಲ ಹೃದಯ ವಿಹಂಗಮ ಚೇಷ್ಟೆಗಳನ್ನು

ತನ್ನ ಪ್ರಾಣವಲ್ಲಭೆ ಸೂಕ್ಷ್ಮವಾಗಿ ಗಮನಿಸಿರಬಹುದೆಂಬ ಅನುಮಾನ ಮೂಡಿತು.

ಈಗಿನಿಂದಲೇ ಈಕೆಯ ದುಃಖವನ್ನು ಶಮನಗೋಳಿಸದಿದ್ದಲ್ಲಿ ತಮ್ಮ ಮಾನಸ ಸರೋವರದಂಥಹ ಸುಖಸಂಸಾರ ಉರಗಪತಾಕನು ಹೊಕ್ಕ ವೈಶಂಪಾಯನ ಸರೋವರವಾಗುವುದರಲ್ಲಿ ಸಂದೇಹವಿಲ್ಲವೆಂದೂಹಿಸಿತು.

“ಇಲ್ಲ ಕಣೇ ನೀನು ಹುಲು ಮಾನವರಂತೆ ಅಪಾರ್ಥ ಕಲ್ಪಿಸಿಕೊಂಡಿದ್ದೀಯಾ; ನಿನ್ನಾಣೆಯಾಗೂ, ನಮ್ಮ ಕುಲದೇವತೆಯಾದ ವಿನಾಯಕನ ಆಣೆಯಾಗೂ ನಾನು ನಿನ್ನ ಹೊರತು ಇನ್ನೊಂದು ಹೆಣ್ಣನ್ನು ಪ್ರೀತಿಸಿಲ್ಲ! ಕನಸು ಮನಸಲೂ ನಿನೆ ನಿನ್ನಾಣೆ ಶಾಮಾ ಶಾಸ್ತ್ರಿ ಮನೆಯಾಗಲಿ; ಅನಸೂಯಳ ಮನೆಯಾಗಲೀ ನನಗೆ ಬೇರೆ ಅಲ್ಲವೇ ಅಲ್ಲ. ನಗರದ ಪ್ರಸಿದ್ಧ ವಣಿಕರಾಗಿದ್ದ ಕುಪ್ಪಂ ವೆಂಕಟರಮಣ ಶ್ರೇಷ್ಟಿಗಳ ಬಗ್ಗೆ ನಿನಗೆ ಹಿಂದೊಮ್ಮೆ ವಿವರವಾಗಿ ಹೇಳಿದ್ದೆ. ಹೊಟ್ಟೆ ಹುಣ್ಣಾಗುವಂತೆ ನಗಾಡಿದ್ದಿ. ಘಂಟಾ ಶಾಮಾಶಾಸ್ತ್ರಿಗಳು ನಿಧನರಾದಾಗ ಕಾಶಿಗೆ ಹೋಗಿಬರುವ ವೆಚ್ಚ ಧರಿಸುವುದಾಗಿ ಹೇಳಿ ಹಣ ತರಲೆಂದು ಮನೆ ತಲುಪಿದ ಅವರನ್ನು ಅವರ ಹೆಂಡತಿ ಮಕ್ಕಳು ಉಗ್ರಾಣದ ಕೋಣೆಯಲ್ಲಿ ಬಂಧಿಸಿಟ್ಟಿದ್ದು; ತಮ್ಮ ಪೂರ್ವಿಕನಂತಿದ್ದ ಶ್ರೇಷ್ಠಿಯನ್ನು; ನಮ್ಮ ಪೂರ್ವಿಕರೆಲ್ಲ ಸೇರಿಕೊಂಡು ಬಗೆ ಬಗೆ ಹಿಂಸಿಸಿದ ಬಗ್ಗೆ ಹೇಳಿದ್ದೆ. ಹಾಗೆ ಅವತ್ತು ಆಕ್ರಮಣ ನಡೆಸಿದ ಗುಂಪಿನಲ್ಲಿ ನನ್ನ ಗಿರಿಗಿರಿ ಮುತ್ತಾತನಿದ್ದ, ಶವ ಸಂಸ್ಕಾರಕ್ಕೆ ಸಹಾಯಹಸ್ತ ಚಾಚಿದವನ ಮರ್ಮಾಂಗದ ತುದಿ ಕಚ್ಚಿದ್ದರ ಬಗ್ಗೆ ಪಶ್ಚಾತ್ತಾಪಪಟ್ಟಿದ್ದ. ವೇದಾಂತಿ ಪರಮೇಶ್ವರ ಶಾಸ್ತ್ರಿಗಳ ಸೇವೆ ಮಾಡಿ ಪಾಪದಿಂದ ಮುಕ್ತಿ ಪಡೆಯಬೇಕೆಂದು ನಿರ್ಧರಿಸಿ ನಮ್ಮ ಗಿರಿಗಿರಿ ಮುತ್ತಾತ ತನ್ನ ಯಾವತ್ತೂ ಬಂಧು ಬಳಗದೊಂದಿಗೆ ಅಗ್ರಹಾರದ ಶಾಸ್ತ್ರಿಗಳ ಮನೆಗೆ ರಾತ್ರೋರಾತ್ರಿ ಸೇರಿಕೊಂಡುಬಿಟ್ಟ. ಬಾತ್ರೂಮಿನಲ್ಲಿ; ಅಡುಗೆಮನೆಯಲ್ಲಿ; ಉಗ್ರಾಣದ ಮನೆಯಲ್ಲಿ; ಶಯನ ಗೃಹದಲ್ಲಿ ಹೀಗೆ ಎಲ್ಲಿ ನೋಡಿದರೂ ನಮ್ಮ ಪೂರ್ವಿಕರೇ ಪೂರ್ವಿಕರು. ಚಿಂವ್ ಚಿಂವ್ ಗುಟ್ಟುತ್ತ ಬಗೆಬಗೆಯಾದ ಸೇವೆ ಮಾಡಿದ್ದೇ ಮಾಡಿದ್ದು. ಶಾಸ್ತ್ರಿಗಳು ಅರ್ಚನೆ ಮಾಡುವ ಕಡೆ; ವೈದಿಕ ಮಾಡುವ ಕಡೇಲೆಲ್ಲಾ ಹೋಗಿ ಮಂತ್ರೋಚ್ಚಾರಣೆಗೆ ಸರಿಯಾದ ಹಿನ್ನೆಲೆ

ಸಂಗೀತ ಒದಗಿಸಿದ್ದೇ ಒದಗಿಸಿದ್ದು. ಆದರೆ ನಮ್ಮ ಸೇವಾಕೈಂಕರ್ಯ ಶಾಸ್ತ್ರಿಗಳಿಗೆ ಅರ್ಥವಾಗಬೇಕಲ್ಲ? ಶಾಸ್ತ್ರಿಗಳು ತಮ್ಮ ಧರ್ಮಪತ್ನಿಯವರೊಡನೆ ಸಮಾಲೋಚಿಸಿ ನಮ್ಮ ಪರಮ ಶತ್ರುವಾದ ಮಾರ್ಜಾಲದ ಮರಿಯನ್ನು ಸಾಕಿಬಿಟ್ಟರು. ಅದಕ್ಕೆ ಹಾಲು ಹೈನದ ವ್ಯವಸ್ಥೆಗೆಂದು ದಿವಾನ್ ಗೋಪಾಲಯ್ಯ ಶಾಸ್ತ್ರಿಗಳಿಗೆ ಗೋದಾನ ಮಾಡಿ ಪುಣ್ಯ ಕಟ್ಟಿಕೊಂಡರು. ದಾನವಾಗಿ ಬಂದ ಹಸುವಾಗಿದ್ದರೂ ಹೇಗಿತ್ತು ಅಂತಿಯಾ? ಪ್ರಾಥಮಿಕ ಶಾಲಾ ಬಾಲಕ ಅದರ ಮೈ ಎಲುಬುಗಳನ್ನು ಸುಲಭವಾಗಿ ಎಣಿಸಿಬಿಡುವಂತಿತ್ತು ಅದರ ಫಿಸಿಕ್ಕು. ಸರಕಾರಿ ಪಾಠಶಾಲೆಯ ವಿಜ್ಞಾನ ಶಿಕ್ಷಕರು ಅನಾಟಮಿ ಪಾಠ ಮಾಡುವಾಗೆಲ್ಲ ತಮ್ಮ ತರಗತಿಯ ಮಕ್ಕಳನ್ನು ಶಾಸ್ತ್ರಿಗಳ ಮನೆಗೆ ಕರೆದುಕೊಂಡು ಬಂದು: ಇದು ಇಂಥ ಎಲುಬು: ಅದು ಅಂಥ ಎಲುಬು ಎಂದು ಪರಿಚಯ ಮಾಡಿಸಿಕೊಂಡು ಹೋಗುತ್ತಿದ್ದರು, ಪರಿಚಿಯಕೊಂಡ ಹಿಂಸೆಗೆ ಹಸು ನೆಲಕಚ್ಚಿಬಿಟ್ಟಿತೆಂದರೆ ಮುಗಿಯಿತು, ಅದನ್ನು ಮೇಲೆಬ್ಬಿಸಲು ಶಾಸ್ತ್ರೀ ದಂಪತಿಗಳು ತಿಣುಕಿ ಟಿಣುಕಿ ಪ್ರಯತ್ನಿಸುತ್ತಿದ್ದರು. ಆ ಪ್ರಯತ್ನದ ಫಲವಾಗಿ ಹಸು ಎದ್ದು ನಿಂತುಕೊಂಡು ಮರು ಗಳಿಗೆಯಲ್ಲಿಯೇ ಆ ಆದಿದಂಪತಿಗಳು ಉಸ್ಸಪ್ಪೋ ಅಂತ ನೆಲಕಚ್ಚಿ ಬಿಡುತ್ತಿದ್ದರು. ಎಷ್ಟೋ ಮೇವು ಹಾಕಿ ಉಪಚಾರ
ಮಾಡಿದರೂ ಅಷ್ಟೆ.

ಮದ್ರಾಸ್‌ನ ರೋಗ ಪೀಡಿತ ಕಣ್ಣುಗಳಿಗೆ ಎರಡೆರಡು ಹಾಲುದುರಿಸುತ್ತಿದುದು ಬಿಟ್ಟರೆ ಮೂರನೆ ಹನಿ ಉದುರಿಸುತ್ತಿರಲಿಲ್ಲ. ಆ ಕೃಪಣ ಬಡಕಲು ಹಸು ಕೇವಲ ಪೂಜೆಗೇಂತ ಹಸು ಯಾಕಾದರೂ ಇರಬೇಕು, ದಾನ ಕೊಟ್ಟ ದಿವಾನರ ಮನೆಗೇ ಅದನ್ನು ಸಾಗಿಸಲು ಪ್ರಯತ್ನಿಸಿದ್ದುಂಟು. ಆದರೆ ಅದನ್ನು ಮರಳಿ ಪಡೆಯಲು ದಿವಾನರೇನು ದಡ್ಡರೇ! “’ಬೇಡ ಸ್ವಾಮಿ ಗೋ ಸಾವಿನ ಸುತಕದಿಂದ ನಮ್ಮ ಆಳಿ ಬಾಳುವ ಮನೆ ಹಾಳಾದೀತು. ಅದರ ಮರಣ ಅಗ್ರಹಾರದಲ್ಲೇ ಸಂಭವಿಸಲೆಂದೇ ತಮಗೆ ದಾನರೂಪದಲ್ಲಿ ಕೊಟ್ಟಿರುವುದು. ವೇದೋತ್ತಮ ಪಂಡಿತರಿರುವ ಅಗ್ರಹಾರದಲ್ಲಿ ಯಾವ ಸಾವು ಸಂಭವಿಸಿದರೂ ಸೂತಕವಾಗಲಾರದು’ ಎಂದು ಬಿಲ್‌ಕುಲ್ ನಿರಾಕರಿಸಿ ದಾನದ ಮರ್ಮ ತೋರಿಸಿಕೊಟ್ಟರು. ಅದರಿಂದ ಶಾಸ್ತ್ರಿದಂಪತಿಗಳು ನಿರಾಶರಾಗಲಿಲ್ಲ. ಗೋಮಾತೆಯನ್ನು ದೂರ ದೂರದಲ್ಲಿ ಬಿಟ್ಟು ಬರಲು ಪ್ರಯತ್ನಿಸಿದರು. ಎಲ್ಲೇ ಬಿಡಲಿ ಗೋಮಾತೆ ಮಾತ್ರ ಹಾಜರಾಗಿ ಬಿಟ್ಟು ’ಅಂಬಾಽಽಽ’ ಎಂದು ಕರುಳು ಕತ್ತರಿಸುವಂತೆ ಕೂಗುತ್ತಿತ್ತು. ಮತ್ತೆ ಅದನ್ನು ಪ್ರೀತಿಯಿಂದ ಬರಮಾಡಿಕೊಳ್ಳುತ್ತಿದ್ದರು. ಅದು ಪುನಃ ಗರ್ಭ ಧರಿಸಿದರೆ ಅದರ ಮೈಮಾಟ ಸುಧಾರಿಸಬಹುದೆಂದು ಸಮರ್ಥ ಗೂಳಿಗಳ ಬಳಿಗೆ; ದಷ್ಟಪುಷ್ಟಹೋರಿಗಳ ಬಳಿಗೆ ಅದನ್ನು ಕರೆದೊಯ್ದು ರತಿಕ್ರೀಡೆಗೆ ಸಹಕರಿಸು ಎಂದು ತಿಳಿಹೇಳಿ ದೂರ ನಿಲ್ಲುತ್ತಿದ್ದರು. ಅಲ್ಲದೆ ಹೋರಿ/ಗೂಳಿಗಳ ಬಳಿಗೆ ಹೋಗಿ ತಮ್ಮ ಹಸು ದೈಹಿಕವಾಗಿ ದುರ್ಬಲಳು ಕಣಪ್ಪಾ, ನಿನ್ನ ಭಾರ ಹೊರುವಷ್ಟು ಸಾಮರ್ಥ್ಯ ಇವಳಿಗಿಲ್ಲ, ಪೂರ್ತಿ ಭಾರ ಬಿಡದಂತೆ ರತಿಕಾರ್ಯ ಜರುಗಿಸಿ ಗರ್ಭದಾನ ಮಾಡಿ ಪುಣ್ಯ ಕಟ್ಟಿಕೋ’ ಂದು ಪರಿಪರಿಯಿಂದಲಿ ಬೇಡಿಕೊಳ್ಳದಿರುತ್ತಿರಲಿಲ್ಲ.

ಅದಕ್ಕೆ ಅಂಗೀಕಾರ ಮುದ್ರೆ ಒತ್ತುವಂತೆ ಬ್ರುಸ್ ಬ್ರುಸ್ ಎಂದು ಮೂಗಿನಿಂದಲೂ ಬಾಯಿಂದಲೂ ಅವು ಸವಂಡು ಹೊರಡಿಸುತ್ತಿದ್ದವು. ಆದರೆ ಶಾಸ್ತ್ರಿಗಳು ಗೋಮಾತೆಗೆ ಸಂತಾನಭಾಗ್ಯವಿಲ್ಲವೆಂದು ನಿಟ್ಟುಸಿರಿಡುತ್ತಿದ್ದರೇ ಹೊರತು ಆ ಬಡಪಾಯಿ ಚತುಷ್ಪಾದಿ ಮೇಲೆ ಕೋಪಿಸಿಕೊಳ್ಳುತ್ತಿರಲಿಲ್ಲ. ಆದರೆ, ಆ ಶಾಸ್ತ್ರಕೋವಿದರ ಕ್ಷಮಾದಾನದಿಂದ ಗೋಮಾತೆ ನಿಜಕ್ಕೂ ದುಃಖಕ್ಕೀಡಾಗುತ್ತಿದ್ದಳು. ತನ್ನನ್ನು ಯಾರಾದರೂ ಅಪಹರಿಸಿಕೊಂಡೊಯ್ದು ಕಗ್ಗೊಲೆ ಮಾಡಬಾರದೆ ಎಂದು ಪ್ರತಿಕ್ಷಣ ಚಿಂತಿಸುತ್ತಿದ್ದಳು. ಒಂದು ದಿನ ಆಕೆಯೇ ಸ್ವ ಇಚ್ಛೆಯಿಂದ ಕಟುಕರ ಮನೆ ಬಾಗಿಲು ತಟ್ಟಿದಳು. ಕಟುಕರ ದಯಾನಂದನನ್ನು ತನ್ನನ್ನು ದಯವಿಟ್ಟು ಕಡಿದು ತುಂಡರಿಸಿ ಪುಣ್ಯ ಕಟ್ಟಿಕೊಳ್ಳುವಂತೆ ಪ್ರಾರ್ಥಿಸಿದಳು. ಅವನು ಆಕೆಯ ಕೋರಿಕೆಯನ್ನು ಮನ್ನಿಸಿದ.

ಗೋಮಾತೆಯ ಅವಸಾನ ಈ ಬಗೆಯದಾದರೆ ಕಾಂಬೋಜಿರಾಗದ ಲಕ್ಷ್ಮಿಕಾಂತರಾಯ ದೇಣಿಗೆ ರೂಪದಲ್ಲಿ ನೀಡಿದ ಮಾರ್ಜಾಲ ಕಥೆಯೇ ಇನ್ನೊಂದು ರೀತಿಯದಾಗಿತ್ತು. ಅದು ಜನ್ಮ ತಳೆದಿದ್ದು ಪುಳಿಯೋಗರೆಯವರ ಮನೆಯಲ್ಲಿ; ಸೇರಿಕೊಂಡಿರುವುದು ತಿಳಿಸಾರಿನವರ ಮನೆಯಲ್ಲಿ. ಹುಟ್ಟಿದ ಮತ್ತು ಸೇರಿಕೊಂಡ ಕೆಲ ದಿನಗಳಲ್ಲಿ ಆ ಮಾರ್ಜಾಲ ತನ್ನ ಬೇಟೆಗುಣವನ್ನು ಸಂಪೂರ್ಣ ಬಿಟ್ಟುಬಿಟ್ಟಿತ್ತು. ಆ ಸನಾತನೀಯ ವಾತಾವರನವೂ ಅದಕ್ಕೆ ಕಾರಣ. ನಮ್ಮ ಪೂರ್ವಿಕರಿಗಂತೂ ಉಲ್ಲಾಸವೇ ಉಲ್ಲಾಸ. ಒಂದು ದಿನ ಸೊಂಪಾಗಿ ನಿದ್ದೆ ಹೋಗಿದ್ದ ಆ ಮಾರ್ಜಾಲದ ಕೊರಳಿಗೆ ನಮ್ಮ ಪೂರ್ವಿಕರು ಘಂಟೆ ಕಟ್ಟಿ ಲೋಕಾರೂಡಿ ಮಾತನ್ನು ಸುಳ್ಳುಮಾಡಿಬಿಟ್ಟರು. ನಮ್ಮ ಪೂರ್ವಿಕರು
ನೀಡುತ್ತಿದ್ದ ಕಿರುಕುಳ ಉಪಟಳ ತಾಳಲಾರದೆ ಮಾರ್ಜಾಲ ತಿರುಪತಿಗೋ, ರಾಮೇಶ್ವರಕ್ಕೋ ಹೋಯಿತು.

ಹೀಗಾಗಿ ನಮ್ಮ ಪೂರ್ವಿಕರು ಎರಡು ಮೂರು ತಲೆಮಾರುಗಳವರೆಗೆ ಶಾಸ್ತ್ರಿಗಳ ಗೃಹಕೃತ್ಯದ ಸೇವೆಯನ್ನು ನಿರ್ವಿರಾಮವಾಗಿ ಮಾಡಿ ಸಾಯುಜ್ಯ ಹೊಂದಿದರು. ಅವರ ಶ್ರೇಷ್ಟ ವಂಶದವನಾದ ನಾನು ಶಾಮಾ ಶಾಸ್ತ್ರಿಗಳ ಯೋಗಕ್ಷೇಮ ವಿಚಾರಿಸಿಕೊಳ್ಳದಿದ್ದರಾದೀತೇನು? ವೇದಾಗಮ ಅಲಂಕಾರ ಗ್ರಂಥಗಳ ಮೇಲೆಲ್ಲ ಹಿಕ್ಕಿ ಉದುರಿಸುವ ಸೇವೆ ಮಾಡುತ್ತ; ನಾನೂ ಪರಮೇಶ್ವರ ಶಾಸ್ತ್ರಿಗಳಂತೆ ಮಹಾಪಂಡಿತನಾಗಬೇಕೆಂಬ ಸತ್‌ಸಂಕಲ್ಪದಿಂದ ತಾಳೆಗರಿ ಕಟ್ಟುಗಳನ್ನು; ವೇದಾಗಮ ಶಾಸ್ತ್ರ ಗ್ರಂಥಗಳ ಶ್ಲೋಕ ಭಾಗಗಳನ್ನು ಸಾಧ್ಯವಾದಷ್ಟು ತಿಂದುಂಡು ಸುಖವಾಗಿದ್ದೆ. ಈ ಸಂದರ್ಭದಲ್ಲಿಯೇ ಶಾಮಾ ಶಾಸ್ತ್ರಿ ಮನಸ್ಸನ್ನು ಗೆದ್ದ ಸುಂದರಿಯನ್ನು ನೋಡುವ ಆತಂಕದಿಂದ ಹ್ರಾಂ ಹ್ರೀಂ ಹ್ರೂಂ ರುದ್ರನಾಯಕನ ಮನೆಯನ್ನು ಪ್ರವೇಶಿಸಿದ್ದು. ಅನಸೂಯಳಾನ್ನು ನೋಡಿದ್ದು, ಬೆಕ್ಕಸ ಬೆರಗಾಗಿದ್ದು. ಪರವಾ ಇಲ್ಲ, ಶ್ರೀಕೃಷ್ಣನ ಕೊಳಲನ್ನು ಹೋಲುವ ಜುಟ್ಟಿನ; ಆ ಜುಟ್ಟಿನ ಮೂಲಕ ಅನೇಕ ರಾಗಗಳನ್ನು ಹೊರಡಿಸಿ ಶಾಮಾ ಶಾಸ್ತ್ರಿ ತನಗೆ ಅನುರೂಪಳಾದ ಕನ್ಯೆಯನ್ನು ಆಯ್ಕೆ ಮಾಡಿಕೊಂಡಿದ್ದಾನೆಂದು ಹೆಮ್ಮೆ ಪಟ್ಟಿದ್ದು. ಆ ಸಂದರ್ಭದಲ್ಲಿಯೇ ಶಾಮಲ ಸುಂದರಿಯಾದ ನೀನು ಕಿಲಕಿಲಗುಟ್ಟುತ್ತ ಎದುರಾಗಿದ್ದು. ಬಿನ್ನಾಣ, ವೈಯಾರದಿಂದ ನನ್ನ ಮನ ಸೂರೆಗೊಂಡಿದ್ದು, ನಾನು ಆ ಕ್ಷಣದಿಂದ ನಿನ್ನನ್ನು ತ್ರಿಕರಣಪೂರ್ವಕವಾಗಿ ಪ್ರೀತಿಸತೊಡಗಿದ್ದು. ನಿನ್ನ ಇಚ್ಛೆಯಂತೆಯೇ ನಾನು ನಿನ್ನ ಮನೆಯೊಳಗೆ ಠಿಕಾಣಿ ಹೂಡಿದ್ದು… ಇಂಥ ಅದ್ಭುತ ಪ್ರೇಮಿಯಾದ ನನ್ನ ಮೇಲೆ ಅನುಮಾನ ವ್ಯಕ್ತಪಡಿಸುತ್ತ ದುಃಖಿಸುತ್ತಿರುವೆಯಲ್ಲ!… ಇದು ನ್ಯಾಯವೇನೆ ಬಂಗಾರ’ ಎಂದು ನಿರರ್ಗಳವಾಗಿ ಮಾತಾಡಿ ಉದ್ವಿಗ್ನಗೊಂಡಿತು ಗಂಡಿಲಿ.

ತನ್ನ ಪ್ರಿಯತಮನ ವಾಗ್ ವೈಖರಿಗೆ ಹೆಣ್ಣಿಲಿಯ ಮನದೊಳಗಿನ ಸಮಸ್ತ ಅನುಮಾನವು ವೈಶಾಖದ ಸೂರ್ಯನಿಗೆ ಹಿಡಿದ ಮಂಜುಗಡ್ಡೆಯಂತೆ ಕರಗಿಹೋಯಿತು.
’ಅನುಮಾನವೂ ಪ್ರೀತಿಯ ಒಂದು ಭಾಗವೆಂದು ತಿಳಿಯಲೈ ಕಾಂತಾ ಅತಿಗುಣವಂತ.” ಎಂದು ಹೆಣ್ಣಿಲಿ ತನ್ನ ಪ್ರಿಯಕರನನ್ನು ಉತ್ಕಟವಾಗಿ ಚುಂಬಿಸಿತು.
ಆ ಅಪರೂಪದ ಚುಂಬನದಿಂದ ಗಂಡಿಲಿಗೆ ಆನೆ ಬಲ ಸಂದಿತು.
“ನಮ್ಮೆಲ್ಲರ ಪ್ರೀತಿಯ ಕನ್ಯಾಮಣಿಯನ್ನು ಶಾಮಾಶಾಸ್ತ್ರಿ ವರಿಸುವಂತಾಗಲು ನಾವು ನಮ್ಮ ಕುಲದೇವತೆಯಾದ ಗಣನಾಯಕನನ್ನು ಸ್ತುತಿಸೋಣ” ಎಂದು ಚರ್ಚೆಗೆ ಶ್ರೀಕಾರ ಹಾಕಿತು ಗಂಡಿಲಿ.
ಪಾರ್ವತಿ ಪುತ್ರನೇ ಸಿದ್ಧಿ ವಿನಾಯಕ
ಕೊಡು ಸುದ್ಭುದ್ಧಿಯನು ಶಾಮಾಶಾಸ್ತ್ರಿಗೆ ಕೊನೆಯ ತನಕ
ಅವರಿಬ್ಬರನು ದೂರ ಮಾಡದಿರು ಆನೆ ಮುಖದವನೆ
ಅಲುಮೇಲಮ್ಮ ಬರದಿರಲಿ ಇವರ ಪ್ರೀತಿಗೆ ಅಡ್ಡ
ಹಾಕಲಿ ಅವರವರ ಮನೆ ಮುಂದೆ ಹಂದರ ಬಹು ದೊಡ್ಡ
ಹಾಕಲಿ ಅಕ್ಷತೆ ಹಿರಿಕಿರಿಯರೆಲ್ಲರು
ಉಂಡುಂಡು ಡೇಗಲು ಹಾಲು ಕೀರು
ಮೂಶಕ ದಂಪತಿಗಳು ತಮ್ಮ ಬಾಲಗಣೇಶನನ್ನು ಸ್ತುತಿಸಿ ಹಾಡುತ್ತಿರಲು ಶಾಸ್ತ್ರಿಗಳ ಮನೆ ಹಿತ್ತಲ

ಕಡೆಯಿಂದ ಯಾವುದೋ ಒಂದು ಸಂದೇಶ ಹೊತ್ತು ತಂದಿದ್ದ ಬಣ್ಣಬಣ್ಣದ ರೆಕ್ಕೆಯ ಪತಂಗವೊಂದು ಆ ಡ್ರಾಯಿಂಗ್ ರೂಮನ್ನು ಒಂದು ಕಡೆಯಿಂದ ಸರ್ವೆ ಮಾಡಿ ಅನಸೂಯಳ ಮುಡಿಮೇಲೆ ರತ್ನಾಭರಣೋಪಾದಿಯಲ್ಲಿ ಅಲಂಕೃತವಾಗಿ ಕೂತುಕೊಂಡಿತು.

ರೂಪು ತೇರಾ ಮಸ್ತಾನ ಪ್ಯಾರ್ ಮೇರಾ ದಿವಾನ ಎಂದು ರಿಕಾಟು ಸೊಸೂಟಿ ಬಯಲಿಂದ ಕೇಳಿ ಬರುತ್ತಿತ್ತು. ನಡುನಡುವೆ ಹಲೋ ಹಲೋ ಮೈಕ್ ಟೆಸ್ಟಿಂಗ್ ಒನ್ಟೂತ್ರೀ ಎಂದು ಪೋಣಿಸುತ್ತಿದ್ದುದು ಸಿನಿಮಾ ಹಾಡಿಗಿಂತ ಬೊಂಬಾಟಾಗಿತ್ತು.

ಮಾಳಿಗೆ ಮೇಲೆ ನಿಂತವರಿಗೆಲ್ಲ ಅದು ಸಲೀಸಾಗಿ ಕಾಣುತ್ತಿತ್ತು. ಆ ಧೂಳು, ಆ ಜನ, ಸದರಿ ಗ್ರಾಮಕ್ಕೆ ಹೊಸದು. ಎಲ್ಲಿ ಭಾಷಣ ಮಾಡುವುದೋ? ಅಲ್ಲಿ ಇಂದಿರಾ ಗಾಂಧಿಯನ್ನು ಬಯ್ಯುವರೆಂದೇ ಜನ ಸ್ವಾಭಾವಿಕವಾಗಿ ಅರ್ಥಮಾಡಿಕೊಂಡು ಬಿಡುತ್ತಿದ್ದರು.

ಆಕೆ ಅಂಥಾಕಿಯಲ್ಲ… ಆಕಿ ಹಡಕೊಂಡಿರೋದೈತಲ್ಲ… ಅದೇ ಹಂಗ ಮಾಡಿಸಾಕ್ಕತ್ತೈತಿ ಕೆಲವರು. ಹುಟ್ಟಿರೋದು ಸೆಗಣಿ ತಿನ್ನಂತತಿ, ತಾಯಿಯಾದಾಕಿ ತಿಂದ ಬಿಡೋದೇನು! ಅಂತಕೆಲವರು. ತಾಯಿ ಮಗ ಇಬ್ರೂ ಸೇಕೊಂಡು ಮಾಡಬಾರ್ದೆಲ್ಲ ಮಾಡ್ಯಾರಂತೆ… ಸಾವಿರಾರು ಮನೆ ಕೆಡವಿಸ್ಯಾರಂತೆ… ಲಕ್ಷಾಂತರ ಮಂದಿ ಮುದಕ ನರ ಕುಯ್ದರಂತೆ… ಇಡೀ ದೇಸದ ಮೂಗಿಗೆ ಮೂಗುದಾರ ಪೋಣಿಸಿ ತಮಗಿಷ್ಟ ಬಂದಂಗ ಕುಣಿಸಾಗಹತ್ಯಾರಂತೆ ಎಂದು ಕೆಲವರು ಮಾತಾಡಿಕೊಳ್ಳುತ್ತಿದ್ದರು. ಇದಕ್ಕಿಂತ ಮುಖ್ಯವಾಗಿ ತನ್ನ ವಿರುದ್ಧವಾಗಲಿ ತನ್ ಮಗನ ವಿರುದ್ಧಾಗ್ಲಿ ಮಾತಾಡಿದ್ದವರನ್ನು ಪೋಲಿಸರು ಹಿಡಕೊಂಡುಹೋಗ್ತಾರಂತೆ… ಕನಸಿನಾಗ ಮಾತಾಡಿದ್ರೂ ಬಿಡೋದಿಲ್ಲವಂತೆ… ಎಬ ಸುದ್ದಿಯನ್ನು ರುಕ್ಕಮ್ಮ ಲೆಟ್ರಿನ್ನಿಗೆ ಹೋದಾಗ ಕೇಳಿಸಿಕೊಂಡದ್ದು ಆಕೆಯ ಗಾಬರಿಗೆ ಕಾರಣವಾಗಿತ್ತು. ಅದನ್ನೆಲ್ಲ ನೆನಪಿಸಿಕೊಂಡು ಮನಸ್ಸಿನಲ್ಲಿ ಇಂದರಾ ಗಾಂಧಿಗೆ ಕೋರೆ ಹಲ್ಲು ಕೆದರು ಜಡೆ; ಗುಳಾಪು ಕಣ್ಣು; ಸೀಳು ನಾಲಿಗೆ ಇತ್ಯಾದಿ ಮೇಕಪ್ಪು ಮಾಡುತ್ತ ರುಕ್ಕಮ್ಮ ಪಡಸಾಲೆಯ ಕಂಭಕ್ಕಾತು ಕೂತು ನಿಟ್ಟುಸಿರುಬಿಟ್ಟಳು.

“ಮಗಳೇ ಅನಸೂಯ” ಎಂದು ಕೂಗಿದಳು.
“ಹ್ಹಾಂ!” ಅನಸೂಯಾ ಸೆರಗನ್ನು ಹಲ್ಲಲ್ಲಿ ಕಚ್ಚಿ ಹಿಡಿದು ಬ್ರಾಗಾಗಿ ಹುಡುಕಾಟ ನಡೆಸಿದ್ದಳು.
“ಅಂಥ ಕಡೆ ನೀ ಹೋಗ್ಲೇಬೇಕೇನವ್ವಾ?”
“ಹೂನವ್ವಾ! ಎರಡಲೊಂದು ಪೈಸಲ್ ಮಾಡ್ಕೊಂಡು ಬರೋಕೆ ಹೋಗ್ಲೇಬೇಕು” ಭಗೀರಥ ಪ್ರಯತ್ನದಿಂದ ನಗಂದಿ ಗುಂಟ ನೇತಾಡುತ್ತಿದ್ದ ಬ್ರಾ ಪತ್ತೆ ಹಚ್ಚಿ ಬಿಟ್ಟಳು. ಅದರ ಆಯಕಟ್ಟಾದಭಾಗವನ್ನು ಕಡಿದು ತೂತು ಮಾಡಿದ್ದ ಗಂಡಿಲಿಯನ್ನು ಶಪಿಸಿದಳು. ಅಯ್ಯೋ ನನ್ನ ಗಂಡನನ್ನು ಬೈತಿದಾಳಲ್ಲ… ನಮ್ಮನ್ನು ಉಂಡು ನಮ್ಮ ಬಟ್ಟೆ ತೊಟ್ಟು ಅವಿವಾಹಿತೆ ಕೈಲಿ ನನ್ನ ಗಂಡ ಬಯ್ಯಿಸಿಕೊಳ್ಳುವಂತಾಯಿತಲ್ಲ… ಅಯ್ಯೋ ಸಿವನೇ ನನ್ನ ಗಂಡನನ್ನು ಬಯ್ದು ಪಾಪ ಕಟ್ಟಿಕೊಳ್ತೀರೋ ನೀನು ಯಾರನ್ನು ಹುಡುಕಿಕೊಂಡು ಹೋಗುತ್ತಿರುವೆಯೋ ಅವನು ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಮಾತಾಡಿ ನಿರಾಸೆಗೊಳಿಸಲಿ’ ಎಂದು ಒಂದು ಹಿಡಿ ಶಾಪ ಕೊಟ್ಟಿತು. ಶಾಪ ಕೊಡುವಾಗ ಅದು ಒದ್ದಾಡಿದ ಕಾರಣಕ್ಕೆ ಜಂತಿ ಸಂದಿಯಿಂದ ಗುಲಗಂಜಿ ಗಾತ್ರದಷ್ಟು ಮಣ್ಣು ಆಕೆಯ ಮುಡಿ ಮೇಲುದುರಿ ಅಲ್ಲಿದ್ದ ಪತಂಗಕ್ಕೆ ತೊಂದರೆ ಕೊಟ್ಟಿತು. ಎಲಾ ಕ್ಷುದ್ರ ಮೂಷಕವೇ ಅಂತ ಪತಂಗ ತೆರೆಯಲೆತ್ನಿಸಿದ ಮೂರನೆ ಕಣ್ಣಿಗೂ ಮಣ್ಣು ಬಿತ್ತು. ಅದು ಲಂಗದ ಮೇಲೆ ಕೂತು

ಕಣ್ಣುಜ್ಜಿಕೊಳ್ಳುತ್ತಿರುವಾಗ ಅನಸೂಯಾ ಬೇಕು ಬೇಕೋ; ಬೇಡಬೇಡವೋ ಎಂಬಂತೆ ಉಡುವುದನ್ನೆಲ್ಲ ಉಟ್ಟು, ತೊಡುವುದನ್ನೆಲ್ಲ ತೊಟ್ಟು; ಬಡಿಯುವುದನ್ನೆಲ್ಲ ಬಡಿದುಕೊಂಡು ರೆಡಿಯಾಗಿ ಹುತ್ತದೊಳಗಿಂದ ವಾಲ್ಮೀಕಿ ಮಹರ್ಷಿ ಹೊರಬರುವಂತೆ; ಮಜ್ಜಿಗೆ ಆಳದಿಂದ ಬೆಣ್ಣೆ ತೇಲಿದಂತೆ ಕೋಣೆಯಿಂದ ಹೊರಗಡೆ ಬಂದಳು
“ಏನವ್ವಾ ಹೀಗ್ಯಾಕ ಕೂತುಕೊಂಡಿದ್ದೀ?” ಮೇವಾಡದ ರಾಜನಂತೆ ಯುದ್ಧಕ್ಕೆ ಹೊರಟಿರುವ ತನ್ನನ್ನು ನಗುಮುಖದಿಂದ ಬೀಳ್ಕೊಡುವುದು ಬಿಟ್ಟು ರುದ್ರನಾಯಕನ ವೀರವನಿತೆ ಮ್ಲಾನವದನಳಾಗಿ ಕುಳಿತಿರುವುದರೆಂದರೇನು? ಅನಸೂಯ ತಾಯಿ ಕಡೆ ನೋಡಿದಳು.

“ನಿನ್ನ ಗಂಡು ಮಗನಂತೆ ಬೆಳೆಸಿದ್ದೀವಿ ಮಗಳೇ. ನೀನು ಓದಿಕೊಂಡಿರೋಕೆ, ನಿನ್ಗೆ ಬುದ್ಧಿಹೇಳೋ ಶಕ್ತಿ ಆ ದೇವ್ರು ನನಗೆ ಕೊಟ್ಟಿಲ್ಲ… ಆ ಬ್ರಾಂಬ್ರು ಹುಡುಗನತ್ತ ನಿಷ್ಠುರವಾಗಿ ಕೇಳಿ ಬಂದುಬಿಡು… ಆದ್ರೆ ಹತ್ತು ಆಗದಿದ್ರೆ ಇಪ್ಪತ್ತು” ಆಕೆ ಇಷ್ಟೊಂದು ವೀರಾವೇಶದಿಂದ ಮಾತಾಡಿದ್ದು ಅದೇ ಮೊದಲು.
“ಹೌದವ್ವಾ ಕಡ್ಡಿ ಮುರುದಾಂಗ ಮಾತಾಡಿ ಬತೀನಿ… ನನ್ ಹಣೇಲಿ ಯಾರು ಗಂಡ ಅಂತ ಐತೋ ಅವನಿಂದ ನನ್ ಕುತ್ತಿಗೀಗೆ ತಾಳೀ ಬೀಳೋದಂತೂ ಗ್ಯಾರಂಟಿ. ಅದನ್ಯಾರು ತಪ್ಪಿಸೋಕಾಗಲ್ಲ…”
“ನಮ್ಮಂಥ ಕಪ್ಪುಜನ ಎಷ್ಟು ಅಂಗಲಾಚಿದರೂ ಬ್ರಾಂಬ್ರು ಮನ್ಸು ಕರಗೋದಿಲ್ಲಾಂತ ನಿಮ್ಮಪ್ಪ ಹೇಳಿದ್ರು. ಕಾಡೋದು ಬ್ಯಾಡ, ಬೇಡೋದು ಬ್ಯಾಡ… ಹ್ಹೂಂ ಅಂದ್ರೂ ಸರೆ; ಹೂಂ ಅನದಿದ್ರೂ ಸರೆ”
“ಹೌದವ್ವಾ… ನಾನೂ ಹಂಗೇ ಅಂದ್ಕೊಂಡಿರೋದು ನನ್ಗೂ ಅನುಮಾನ. ಆದ್ರೂ ಹೋಗ್ತಿದೀನಿ. ನೀನು ಯಾವುದ್ಕೂ ಧೈರ್ಯವಾಗಿರು.”
“ನಾನೂ ಅಷ್ಟು ದೂರ ಬರಲೇನವ್ವಾ… ಅಲ್ಲಿ ಪೋಲಿಸರು ಬಾಳ ಮಂದಿ ಇತಾರಂತೆ” ಎಷ್ಟದರೂ ತಾಯಿ ದುಗುಡ ಪ್ರಕಟಿಸಿದಳು.
“ನಮ್ಮ ಶಾಮೂನೇ ಏನು ಮಾಡೋದಿಲ್ಲ. ಅಂದ ಮ್ಯಾಲ ಪೋಲಿಸರೇನು ಮಾಡ್ಯಾರು ಬಿಡೆವ್ವ… ಅವ್ರೂ ನಮ್ಮಂಗೆ ಮನುಷ್ಯರು. ನೀನು ಚಿಂತೆ ಮಾಡದೆ ಮನೇಲಿರು. ನಾನು ಸರ್ರಂತ ಹೋಗಿ ಬರ್ರಂತ ಬತೀನಿ.”

ಅನಸೂಯಾ ತಾಯಿಯ ತಲೆ ನೇವರಿಸಿ, ಪಾದಗಳಿಗೆ ಮಾಮೂಲು ಚಪ್ಪಲಿ ಧರಿಸಿಕೊಂಡು ಮಂತ್ರಿಸಿದ್ದ ತೆಂಗಿನಕಾಯಿ ಕೆಳಗಿನಿಂದ ಹಾಯ್ದು ವಿಕ್ಟೋರಿಯಾ ಮುಖಗಳಿದ್ದ ನಾಣ್ಯಗಳನ್ನು ಅಂಗುಲಂಗುಲಕ್ಕೊಂದೊಂದರಂತೆ ಜಡೆದಿದ್ದ ಹೊಸ್ತಿಲು ದಾಟಿದಳು.
ಇದನ್ನೆಲ್ಲ ನೋಡಿ ಒಣ ನಿಷ್ಟುರ ಕಟ್ಟಿಕೊಳ್ಳುವುದು ಯಾಕೇಂತ ಮುಳುಗುವ ಅವಸರದಲ್ಲಿದ್ದ ಸೂರ್ಯ ತನ್ನ ಕಿರಣಗಳನ್ನು ಉಪಸಂಹರಿಸಿಕೊಳ್ಳತೊಡಗಿದ್ದ. ಜನರ ಪದಾಘಾತದಿಂದಾಗಿ ಎದ್ದಿದ್ದ ಧೂಳು ಬಹುಪಾಲು ಕಿರಣಗಳನ್ನು ಮಂಕುಗೊಳಿಸಿತ್ತು. ಹೀಗಾಗಿ ಸಂಜೆ ಸಮಯ ಹೋಗಲು, ಬರಲು ಒಂಥರಾ ಮಜವಾಗಿತ್ತು. ಮನುಷ್ಯ ಮನುಷ್ಯನ ನಡುವೆ ಒಂದು ರೀತಿ ತೆರೆ ಎಳೆದಂತಿತ್ತು. ಆದ್ದರಿಂದ ಇವರು ಇಂಥವರೇ ಎಂದು ಎಂಟು ಫೂಟು ದೂರದಿಂದಲೂ ಗುರುತಿಸುವುದು ಸಾಧ್ಯವಿರಲಿಲ್ಲ.
ಕಾದಂಬರಿಯೊಳಗೆ ಕಥೆಯೇ ನಡೆಯುತ್ತಿರುವಂತೆ; ವಾಕ್ಯದೊಳಗಿನ

ವ್ಯಾಕರಣವೇ ನಡೆಯುತ್ತಿರುವಂತೆ ಅನಸೂಯಾ ಹೆಜ್ಜೆಗೊಮ್ಮೊಮ್ಮೆ ಚೀಟಿಯ ಸಾರಾಂಶ ನೆನಪು ಮಾಡಿಕೊಳ್ಳುತ್ತ ನಡೆಯತೊಡಗಿದ್ದಳು. ಅವನು ತನ್ನ ತಲೆಯೊಳಗಿನ ಕವಿತೆಗಳನ್ನು ಒಂದೊಂದಾಗಿ ತೆಗೆದು ಖಾಲಿಮಾಡಿರುವನೆನೆಸಿತು. ಅವನು ತನ್ನ ತಲೆಯೊಳಗಿನ ಛಂದಸ್ಸು, ಅಲಂಕಾರ ಬೆಟ್ಟಿಯಾದಾಗರೊಂದೊಂದರಂತೆ ಲಪಟಾಯಿಸಿ ಬಿಟ್ಟಿರುವನೆನ್ನಿಸಿತು. ಈಗ ತನ್ನಲ್ಲಿ ಉಳಿದಿರುವುದು ಅರ್ಥವಿಲ್ಲದ ಅಕ್ಷರಗಳು ಮಾತ್ರ. ವಾಕ್ಯದ ಸುತ್ರ ಕಳೆದುಕೊಂಡ ಶಬ್ದಗಳು ಮಾತ್ರ, ಪ್ರತಿಯೊಂದು ಶಬ್ದಗಳು ಖಚಿತ ಆಕಾರ ಪಡೆಯದೆ ಗುರುತ್ವಾಕರ್ಷಣೆ ಯಿಲ್ಲದ ಉಪಗ್ರಹದ ಮೇಲೆ ತೇಲಾಡುತ್ತಿರುವ ಘನವಸ್ತುಗಳು ಮಾತ್ರ.

ನೆನಪುಗಳನ್ನು ಒಂದರ ಹಿಂದೆ ಒಂದರಂತೆ ನೆನಪು ಮಾಡಿಕೊಳ್ಳುತ್ತ ಸೊಸೂಟಿಯ ಬಯಲು ಅಷ್ಟು ದೂರ ಇದೆ ಅನ್ನುವಷ್ಟಲ್ಲಿ ನಿಂತುಕೊಂಡಳು. ಆಕೆಯ ಚಂಚಲ ನೇತ್ರಗಳು ಗಾಳಿಗಿಟ್ಟ ಸೊಡರ ಕುಡಿಯಂತೆ ಸುತ್ತ ಹೊಯ್ದಾಡಿದವು. ಮೈತುಂಬ ಧೂಳು ಮೆತ್ತಿಕೊಂಡು ಕಾದಕಾವಲಿ ಮೇಲಿನ ಕೋಳಿಮರಿಗಳಂತೆ ಚಡಪಡಿಸುತ್ತಿರುವ ಸಾವಿರಾರು ಜನ ನಿಂತಲ್ಲಿ ನಿಲ್ಲುತ್ತಿಲ್ಲ. ಕೂತಲ್ಲಿ ಕೂಡುತ್ತಿಲ್ಲ. ಸಾಧಾರಣ ವೇದಿಕೆ ಮೇಲೆ ಬಲಿಪಶುವಿನಂತಿದ್ದ ಮೈಕು. ಪ್ರಧಾನ ಮಂತ್ರಿ ಕುರ್ಚಿಯೊಂದಿಗೇ ಅಲಹಾಬಾದಿನ ಆನಂದಭವನದಲ್ಲಿ ಹುಟ್ಟಿರುವಂಥ ಇಂದಿರಾಗಾಂಧಿ ಬಗ್ಗೆ ಏನೇನೋ ಹೇಳಲಿರುವ ಜಾರ್ಜ್ ಫರ್ನಾಂಡಿಸ್, ಕಿಶನ್ ಪತ್ನಾಯಕ ಈಗ ಬಂದಾರು? ಆಗ ಬಂದಾರು? ಎಂದು ಕಾಯುತ್ತಿರುವ ಮಂದಿ ನಡುವೆ ಗೊಬ್ಬರದಂಗಡಿಯ ಜಲಜಾಕ್ಷಿ ದುತ್ತನೆ ಕಾಣಿಸಿಕೊಂಡಳು. ಬಿಳಿ ಸೀರೆ; ಹಸಿರು ಕುಪ್ಪಸ ತೊಟ್ಟು; ಎಡ ಸ್ತನದ ಮೇಲೆ ಪಾರಿಜಾತದ ಹೂವಿನಂತ ಬ್ಯಾಡ್ಜು ಸಿಕ್ಕಿಸಿಕೊಂಡಿದ್ದ ಆಕೆಗೆ ಕಣ್ಣಿಗೆ ಬೀಳಬಾರದೆಂದು ಅನಸೂಯ ಪ್ರಯತ್ನಿಸಿದ್ದು ವಿಫಲವಾಯಿತು. ಅಶ್ವತ್ಥಾಮ ಪ್ರಯೋಗಿಸಿದ ನಾರಾಯಣಾಸ್ತ್ರದಂತೆ ಆಕೆ ಒಮ್ಮೆ ಎಡಗೈಯನ್ನೂ, ಇನ್ನೊಮ್ಮೆ ಬಲಗೈಯನ್ನೂ ಅಭಯ ನೀಡುತ್ತಿರುವ ರೀತಿಯಲ್ಲಿ ಮೇಲಕ್ಕೆತ್ತಿ ಅಲುಗಾಡಿಸುತ್ತ, ಪುರುಷ ಪ್ರೇಮಿಗಿಂತ ತಾನೇನು ಕಡಿಮೆ ಇಲ್ಲವೆಂಬಂತೆ ಬಂದು ಎದುರಿಗೆ ನಿಂತುಕೊಂಡೇಬಿಟ್ಟಳು.

“ಅನಸೂಯಾ! ಬಾ ಬಂದು ಕೂತ್ಕೋ… ರಾಜಕೀಯ ಅರ್ಥ ಮಾಡ್ಕೊಂಡ್ರೆ ಎಲ್ಲಾ ಪುಳಿಚಾರು ಅರ್ಥವಾಗ್ತದೆ” ಎಂದು ಕೂಡ್ರಲು ಸೋಡಾ ಸಿದ್ದಲಿಂಗಪ್ಪನ ಬಾಡಿಗೆಯ ಮೂರುಕಾಲಿನ ಕುರ್ಚಿ ತೋರಿಸಿದಳು.
“ಬೇಡ ಬಿಡೆ… ಅದಿಲಿ… ಏನಿದು ನಿನ್ನವತಾರ?” ಜಡ ಒನಕೆಯ ಗೊಂಬೆಯಂಥ ಮನಸ್ಸಿನ ಅನಸೂಯ ಕೇಳಿದಳು.
“ಒಲಂಪಿಕ್ಸ್‌ನಲ್ಲಿ ಹಂಡ್ರೆಡ್ ಮೀಟರ್ಸ್ ಹರ್ಡಲ್ಸ್‌ನಲ್ಲಿ ಭಾಗವಹಿಸಿ ಒಂದು ಚಿನ್ನದ ಪದಕ ತೊಗುಳ್ಳಿಕ್ಕಾಗಿಲ್ಲ. ರಾಜಕೀಯ ರಂಗದಲ್ಲಾದ್ರು ಧುಮುಕಿ ಕನಿಷ್ಟ ಲೊಕಲ್ ಮಟ್ಟದಲ್ಲಾದ್ರು ಮಿಂಚಬೇಕೆಂದು ನಿರ್ಧಾರ ಮಾಡ್ದೆ ಅನಸೂಯಾ; ಇಂದಿರಗಾಂಧಿ ವಿರುದ್ಧದ ನವನಿರ್ಮಾಣ ಚಳುವಳಿಗೆ ಒಳ್ಳೆ ಫ್ಯೂಚರಿದೆ, ಏನಾದ್ರು ಮಾತಾಡಿ ಕೆಲ ದಿನದ ಮಟ್ಟಿಗಾದ್ರು ಜೈಲಿಗೆ ಹೋಗಿ ಬಂದುಬಿಟ್ರೆ ಪೊಲಿಟಿಕಲ್ ಐಡೆಂಡಿಟಿ ಸಿಗೋದಂತೂ ಗ್ಯಾರಂಟಿ… ಮುಂದೊಂದಿನ ನಾನು ಮಿನಿಷ್ರಾದ್ರೂ ಆಶ್ಚರ್ಯಪಡಬೇಕಿಲ್ಲ. ಇವತ್ತಿನ ಪಾಲಿಟಿಕ್ಸಿಗೆ ನನ್ನಂಥ ಸದೃಡ ಮಹಿಳೆಯರ ಅಗತ್ಯ ತುಂಬಾ ಇದೆ. ಅದು ಅಲ್ಲದೆ ನನ್ನಂಥ ಬಾಡಿ ಬಿಲ್ಡಸು ಭಾಗವಹಿಸಿದಾಗ ಮಾತ್ರ ಯಾವುದೇ ಚಳುವಳಿಗೆ ಅರ್ಥ ಬರೋದು… ಒಂದು ದುರ್ದೈವದ ಸಂಗತಿ ಎಂದರೆ ಇಂದಿರಾಗಂಧಿಯಂಥ

ಉಕ್ಕಿನ ಮಹಿಳೆ ವಿರುದ್ಧ ನನ್ನಂಥ ಮಹಿಳೆಯರು ಹೋರಾಡಬೇಕಾಗಿ ಬಂದಿರೋದು… ಈಗ ನೀನೇನು ಮಾಡ್ತಿದೀಯಾ? ಪ್ರೇಮ ಪ್ರೀತಿ ಅಂತ ತಲೆಕೆಡಿಸಿಕೊಂಡು ಆ ಅರೆಹುಚ್ಚ ಶಾಮಾ ಶಾಸ್ತ್ರಿಯ ಹಿಂದೆ ಇನ್ನೂ ತಿರುಗಿತ್ತಿದೀಯಾ ಹೇಗೆ? ನಿನ್ನ ಮದುವೆ ಆಗೋ ಧೈರ್ಯ ಆ ಪುಳಿಯೋಗರೆಗಿಲ್ಲ. ಅಂಥೋರೆಲ್ಲ ಮುಷ್ಠಿ ಮೈಥುನ ಮಾಡಿಕೊಳ್ಲಿಕ್ಕಷ್ಟೆ ಲಾಯಕ್. ಆ ಪ್ರಾಕ್ರುತ ಜಾನುವಾರು ಮತ್ತು ನೀನೂ ನನ್ನಂಗೆ ಪಾಲಿಟಿಕ್ಸ್‌ಗೆ ಇಳ್ದುಬಿಡು. ಪಾಲಿಟಿಕ್ಸ್‌ಗೆ ನಿನ್ನಂಥ ಬ್ಯಾಕ್ವರ್ಡ್ ಕ್ಲಾಸ್ ಬ್ರಿಲಿಯಂಟ್ ಹುಡುಗೀರ ಅಗತ್ಯ ತುಂಬ ಇದೆ” ಭಾಷಣದ ತಾಲೀಮು ಮಾಡುತ್ತಿರುವಂತೆ ಜಲಜಾಕ್ಷಿ ಪಟಪಟಾಂತ ಮಾತಾಡಿದಳು.
ಅದನ್ನೆಲ್ಲಾ ಕೇಳಿ ಅನಸೂಯಾಗೆ ಆಶ್ಚರ್ಯವೋ ಅಶ್ಚರ್ಯ. ಎಷ್ಟೊಂದು ಚೆನ್ನಾಗಿ ಮಾತಾಡುವುದನ್ನು ಕಲಿತಿರುವಳಲ್ಲ ನನ್ನ ಗೆಳತಿ! ಕೆಳಗೂ ಮೇಲೂ ನೋಡಿದಳು.
“ನಾನು ಪಾಲಿಟಿಕ್ಸಿಗಿಳಿದು ಸಮಾಜ ಉದ್ಧಾರ ಮಾಡೋದು ಒತ್ತಟ್ಟಿಗಿಲಿ… ಇದ್ನ್ನೆಲ್ಲ ನಿನ ತಲೆಗೆ ತುಂಬ್ದೋರು ಯಾರೂಂತ?” ಎಂದು ಕೇಳಲು
ಬಾಡಿಬಿಲ್ಡರು ಕೆಮ್ಮಿ ಗಂಟಲು ಸರಿಪಡಿಸಿಕೊಂಡು, ಒಂದಿನ ತಮ್ಮ ಮನೆಗೆ ಕಾಫಿ ಪುಡಿ ಬಣ್ಣದ ಮಸಾಲೆ ಮಾಯಣ್ಣ ತನ್ನ ಮೂರಡಿ ಕಾಯವನ್ನು ಆರಡಿ ಮಾಡಿಕೊಂಡು ಬಂದದ್ದು, ಉಪ್ಪಿಟ್ಟು ತಿಂದ ಕೈಯನ್ನು ತೊಳೆದುಕೊಳ್ಳಲೆಂದು ಹಿತ್ತಲಿಗೆ ಹೋಗಿದ್ದಾಗ ಡಂಬಲ್ಸು; ಬುಲ್‌ವರ್ಕರ್ ಮುಂತಾದ ವ್ಯಾಯಾಮದ ಪರಿಕರಗಳನ್ನು ನೋಡಿದ್ದೂ; ಈ ಹುಡುಗಿ ಇಷ್ಟೆಲ್ಲಾ ಮಾಡ್ತಾಳ ಎಂದು ಆಶ್ಚರ್ಯಪಟ್ಟಿದ್ದು; ಆ ನಂತರ ’ಅಲ್ಲೋ ಗುರುಬಸ್ವಾ… ನಿನ್ ಕೈಲಂತೂ ಪಾಲಿಟಿಕ್ಸಿಗೆ ಬರೋದಾಗ್ಲಿಲ್ಲ, ನಿನ್ ಮಗಳನ್ಯಾಕ ಪಾಲಿಟಿಕ್ಸಿಗೆ ಇಳಿಸಬಾರ್ದು! ಇಂಥ ಪರ್ಸನಾಲಿಟಿ ಇರೋರಿದ್ರೇನೆ ಇಂದಿರಾ ವಿರೋದಿ ಚಳುವಳಿಗೆ ಶಕ್ತಿ ಬರೋದು, ನಾನು ಕಾಂಗ್ರೆಸ್ನೋನು ಅಂತ ಅನುಮಾನ ಪಡಬೇಡ, ಲೈಸನ್ಸೂ ಹಾಳೂ ಮೂಳೂ ಬೇಳೆ ಬೆಂದ ಕೂಡ್ಲೆ ಪ್ರಧಾನಿಯ ಸರ್ವಾಧಿಕಾರಿ ಮನೋಭಾವ ಪ್ರತಿಭಟಿಸಿ ನಾನೂ ಪಕ್ಷಾಂತರ ಮಾಡಿಬಿಡ್ತಿನಿ” ಎಂದು ಹೇಷಾರವ ಮಾಡಿದ್ದು; ಎರಡು ಸಾರಿ ಎಮ್ಮೆಲ್ಲೆಯಾಗಿ ಸಾಕಷ್ಟು ಆಸ್ತಿ ಮಾಡ್ಕೊಂಡಿರೋ ಮಾಯಣ್ಣನಿಗೆ ಮಗಳನ್ನು ಕಟ್ಟಿಬಿಡುವುದೆಂದು ಗುರುಬಸಪ್ಪಾ ದಂಪತಿಗಳು ಸಮಾಲೋಚಿಸಿ, ಒಪ್ಪಿಗೆ ಕೊಟ್ಟಿದ್ದೂ ಎಲ್ಲವನ್ನೂ ಕೂಲಂಕುಷವಾಗಿ ವಿವರಿಸಿದಳು ಜಲಜಾಕ್ಷಿ.
ಅದನ್ನೆಲ್ಲ ಕೇಳಿ ಅನಸೂಯ ದಿಗ್ಭ್ರಮೆಗೊಂಡಳು.

ಬೆಸ್ಟ್ ಆಫ್ ಲಕ್ ಎಂದು ಹೇಳಬೇಕೆನ್ನುವಷ್ಟರಲ್ಲಿ ಬುರ್ರ್ ಅಂತ ಕಪ್ಪು ಕಾರೊಂದು ಬಂದು ನಿಂತಿದ್ದು, ಅದರಿಂದ ಆವಿರ್ಭವಿಸುತ್ತಿರುವ ರೀತಿಯಲ್ಲಿ ನೆಸ್ ಕೆಫೆ ಬಣ್ಣದ ಕುಳ್ಳು ವ್ಯಕ್ತಿ ಭಲೆ ಸ್ಟೈಲಿನಿಂದ ನಡೆದು ಬಂದದ್ದು… ಹಾಯ್ ಎಂದು ಕೂಗಿದ್ದು ಎಲ್ಲಾ ಸರಿಹೋಯ್ತು.
“ಹಲೋ ಮಯೂ ಡಾರ್ಲಿಂಗ್ ಇಷ್ಟೊತ್ತು ಎಲ್ಲಿ ಹೋಗಿದ್ದೆ? ಒನ್‌ಮಿನಿಟ್ ಬಾ ಇಲ್ಲಿ” ಎಂದಳು. ಆತ ತನ್ನ ಕೈಯ ಸಮಸ್ತ ಬೆರಳುಗಳಿಗಿದ್ದ ಉಂಗುರಗಳನ್ನು ಝಳಪಿಸುತ್ತ ಹತ್ತಿರ ಬಂದ.
“ಅನಸೂಯಾ! ನಾನ್ ಹೇಳ್ತಿದ್ನಲ್ಲ! ಇವ್ರೆ ನನ್ನ ಉಡ್ಬೀ… ಸಿಂಗಟ್ಲೂರ್ ಕ್ಷೇತ್ರದಿಂದ ಎರಡು ಸಾರಿ ಎಮ್ಮೆಲ್ಲೆಯಾಗಿ ಎಲೆಕ್ಟಾಗಿದಾರೆ” ಎಂದು ಜಲಜಾಕ್ಷಿ ಹತ್ತಿರ ನಿಂತು ಪರಿಚಯಿಸಿದಳು.
“ಹಲೋ! ತುಂಬ ಸಂತೋಷವಾಯ್ತು. ನಿಮ್ಮನ್ನು ನೋಡಿ” ಕೈಮುಗಿದಳು. ಅಕ್ಕಿರೊಟ್ಟಿ ಮೇಲೆ ಹುಚ್ಚೆಳ್ಳು ಚಟ್ನಿ ನೆನಪಿಸಿಕೊಂಡಳು.
ಆ ಇಬ್ಬರು ಭವಿಷ್ಯತ್ ಕಾಲದ ದಂಪತಿಗಳು ಅಷ್ಟುದೂರ ಸರಿದು (ಅವರ ಉಸಿರು ಇವರಿಗೆ

ಬಡಿಸಿ ಇವರ ಉಸಿರು ಅವರಿಗೆ ಬಡಿಸಿ) ರಾಜಕೀಯ ಪರಿಭಾಷೆಯಲ್ಲಿ ರಾಜಕೀಯ ವಿದ್ಯಮಾನಗಳ ಬಗ್ಗೆ ಟುಸ್ಸಾ ಪುಸ್ಸಾ ಮಾತಾಡಿಕೊಂಡರು. ಮಸಾಲೆ ಮಾಯಣ್ಣನೆಂಬ ಆಗಸದಲ್ಲಿ ಫಳಫಳ ಹೊಳೆಯುವ ಬೆಳ್ಳಿಚುಕ್ಕಿಯಂಥ ಜಲಜಾಕ್ಷಿ ತನ್ನ ಜೀವನದ ಗೆಳತಿಯ ಬಳಿಗೆ ಓಡಿಬಂದಳು.

“ಜಾರ್ಜ್ ಫರ್ನಾಂಡಿಸ್ಸಿಗೆ ಗಾರ್ಲೆಂಡಾಕೋದ್ಕೆ ನನ್ನೇ ಆಯ್ಕೆ ಮಾಡಿದ್ದಾರೆ ಕಣೆ. ಕಣ್ತುಂಬ ನೋಡ್ವಂತಿ, ಆ ಶಾಮು ಇದ್ರೆ ಜೊತೆಗೆ ಕರೆದೊಯ್ಯಬೌದಿತ್ತು. ನೀನು ಬತೀ ಏನು? ಕಾನಲ್ಲಿ ಹೋಗೋಣ.’ ಚಟಪಟ ನುಡಿದಳು.
“ಇಲ್ಲ… ನನಗದೆಲ್ಲ ಆಗೋದಿಲ್ಲ… ನೀನು ಹೋಗಿ ಬಾ… ಬೆಸ್ಟ್ ಆಫ್ ಲಕ್”ಎಂದಳು ಅನಸೂಯ.
“ಆಗ್ಲಿ ನಿನ್ನಿಷ್ಟ. ಇಂದಿರಾಗಾಂಧಿ ವಿರೋಧಿ ಕವಿತೆ ಬರೆಯೋದ್ಕೆ ಆ ನಿನ್ನ ಶಾಮುಗೆಮ್ ಹೇಳು; ಇದ್ಕೆಲ್ಲ ಸಾಹಿತ್ಯದ ಅಗತ್ಯ ತುಂಬ ಇದೆ… ಬತೀನಿ” ಜಲಜಾಕ್ಷಿ ಬುಡುಬುಡು ಓಡಿ ಕಾರೊಳಗೆ ಮುಖ ಯಾರಿಗು ಕಾಣಬಾರದೂಂತ ಮರೆಮಾಚಿ ಸ್ಟೇರಿಂಗ್ ಮುಂದೆ ಕೂತಿದ್ದ ತನ್ನ ವುಡ್‌ಬೀ ಪಕ್ಕ ಕೂತುಕೊಂಡಳು. ಕಾರು ಬುರ್ರಂತ ಓಡಿಹೋಯಿತು.

ಒಂದು ಕ್ಷಣ ಭಯಂಕರ ಸುಂಟರಗಾಳಿಯಲ್ಲಿ ಸಿಕ್ಕು ಬಿಡುಗಡೆಗೊಂಡ ಅನಿರ್ವಚನೀಯ ಅನುಭವವಾಯಿತು ಅನಸೂಯಳಿಗೆ.
ಜನ ಎಷ್ಟು ವೇಗವಾಗಿ ಬದಲಾಗುತ್ತಿರುವರಲ್ಲ ಎಂದೆನಿಸಿತು. ರಾಜಕೀಯ ರಂಗವೆಂಬ ಅಖಾಡದೊಳಗೆ ಧೈರ್ಯವಾಗಿ ನುಗ್ಗಿರುವ ತನ್ನ ಗೆಳತಿ ಬಗ್ಗೆ ಹೆಮ್ಮೆ ತಾಳಿದಳು.

ಎಲ್ಲಿ ಹೋದನೀ ಶಾಮ ಎಂದು ಸುತ್ತ ಕಣ್ಣಾಡಿಸಿದ ಆಕೆಗೇನು ಗೊತ್ತು – ಶಾಮಾಶಾಸ್ತ್ರಿ ರಸ್ತೆ ಪಕ್ಕ ಅರಳಿ ಮರದ ದೊಡ್ಡೆ ಬಂಡೆಹಿಂದೆ ಜಲಜಾಕ್ಷಿಗೆ ಹೆದರಿ ಅವಿತುಕೊಂಡಿದ್ದುದು. ತಾನು ಕಣ್ಣಿಗೆ ಬಿದ್ದರೆಲ್ಲಿ ಬಾಡಿಬಿಲ್ಡರ್ ಅಪ್ಪಚ್ಚಿ ಮಾಡಿಬಿಡುವಳೋ ಎಂದು ಅವನು ಪ್ರತಿವಿದ್ಯಮಾನದವನ್ನು ಭಯದಿಮ್ದ ಇಣುಕಿ ನೋಡತೊಡಗಿದ್ದ. ಕಾರು ಅತ್ತ ಹೋದ ಕೂಡಲೆ ಇತ್ತ ಅವನು ಧೈರ್ಯವಾಗಿ ಅನಸೂಯಳಿಗೆ ಕಾಣಿಸಿಕೊಳ್ಳಬೇಕೆಂದು ನೆಲಕ್ಕೆ ಬಲವಾಗಿ ಅಂಟಿಕೊಂಡಿದ್ದ ಕಾಲನ್ನು ಕಿತ್ತೀಚೆ ಇಡಬೇಕೆಂದು ಪ್ರಯತ್ನಿಸಿದ. ಸರ್ಪಾಸ್ತ್ರ ಹೇಗೆ ಕರ್ಣನ ಬತ್ತಳಿಕೆ ಸೇರಿಕೊಂಡು ಬಿಟ್ಟಿತ್ತೋ ಹಾಗೆ ಕೆಂಪನೆಯ ವೃಶ್ಚಿಕವೊಂದು ಕುಡುತಿನಿ ಮಗ್ಗಿಯಿಂದ ಒಂಟಿಕಣ್ಣು ರಾಮನ ಬಂಡಿ ಈರಿ ಬಂದು ಅಲ್ಲಿ ಕಾಂಡದ ಮೇಲೆ ಕೂಂತುಬಿಟ್ಟಿತ್ತು. ಏನೋ ಆಪ್ಯಾಯಮಾನವಾದ ವಾಸನೆ ಶಾಮನ ಪುಷ್ಠಭಾಗದಿಂದ ಮೂಗಿಗೆ ಬಡಿದು ಅದು ಕೊಂಡು ನಿಗರಿಸಿ ಅಲರ್ಟಾಗಿ ಬಿಟ್ಟಿತ್ತು. ಆ ವಾಸನೆ ಯಾವುದಪ್ಪಾ ಎಂದರೆ; ತನ್ನ ತಾಯಿಯ ಮೈಲಿಗೆಯಾಗಿದ್ದ ಒಳ ಉಡುಪುಗಳೊಂದಿಗಿದ್ದ ಡ್ರಾಯರನ್ನು ಉಟ್ಟುಕೊಂಡಿಡು ಬಂದಿದ್ದುದು. ಅದರ ವಾಸನೆ ಹೆಂಗೆಂಗೆ ಬರುವುದೋ ಆ ಕೆಂಜೇಳು ಹಂಗಂಗೆ ಆಡತೊಡಗಿತು. ಅಲ್ಲಿಂದ ಬಹಿರಂಗವಾಗಿ ಕಾಣಿಸಿಕೊಳ್ಳಲು ಭೂಗತ ಹೋರಾಟಗಾರನಂತೆ ಅವನು ಕಾಂಡಕ್ಕೆ ಹೊಕ್ಕಳು ಭಾಗವನ್ನು ಅಂಟಿಸಿದ. ತಾನೆಲ್ಲಿ ಸತ್ತುಹೋಗಿಬಿಡುವೆನೋ ಎಂಬ ಪ್ರಾಣ ಭಯದಿಂದ ಅದು ಅವನ ಶಿಶ್ನದ ತುದಿಯನ್ನು ಕುಟುಕ್ಕನೆ ಕುಟಿಕಿಬಿಟ್ಟಿತು. ಆ ಕೂಡಲೆ ತನ್ನ ತೊಡೆ ಸಂದಿಯ ಆಯಕಟ್ಟಾದ ಭಾಗಕ್ಕೆ ಯಾರೋ ಸುಡುಸುಡುವ ಕೆಂಡದುಂಡೆಗಳನ್ನು ಎಸೆದು ಬಿಟ್ಟಂತೆ ಅನುಭವವಾಯಿತು. ಭೀಮಸೇನಂ ಗದಾಘಾತದೋಳೂರು ಭಗಮಂ ಮಾಡಿದೊಡನೆ ಅಭಿಮಾನಧನಂ ಚೀರಿಕೊಂಡಂತೆ ಶಾಮ

’ಮಾತೋಶ್ರೀ ಪಾಹಿಮಾಂ’ ಎಂದು ಗಟ್ಟಿಯಾಗಿ ಚೀರಿಕೊಂಡುಬಿಟ್ಟನು. ಅದು ಅಲ್ಲೆಲ್ಲ ಪ್ರತಿಧ್ವನಿಸಿತು. ಆ ರೌರವಕ್ಕೆ ಹೆದರಿ ಪಕ್ಷಿಗಳೆಲ್ಲ ಮರದಿಂದ ಪುರ್ರನೆ ಆಗಸಕ್ಕೆ ಹಾರಿದವು. ಯವುದೋ ಅಶರೀರವಾಣಿ ಕೇಳಿಸಿಕೊಂಡಂತೆ ಜನ ಕಂಗಾಲಾಗಿ ಜನ ಸುತ್ತಮುತ್ತ ನೋಡಿದರು.
ಅರಳೀ ಮರವೇ ಮಾತಾಡಿತೆಂದು ಅಪಾರ್ಥ ಮಾಡಿಕೊಂಡು ಆ ರಾಜಕೀಯ ಕಾರ್ಯಕರ್ತರು ಅಪ್ಪಿಕೊಳ್ಳಲೆಂದು ಮರದ ಕಡೆ ಉರವಣಿಸಿದರು. ಕೆಲವರು ಬೊಡ್ಡೆಗೆ ಕಿವಿಯಾನಿಸಿ ಸಂಸ್ಕೃತ ಭಾಷೆಯನ್ನು ಕೇಳುವ ಪ್ರಯತ್ನ ನಡೆಸಿದರು. ಕೆಲವರು ಮರಕ್ಕೆ ದೆವ್ವ ಬಡಕೊಂದೈತಿ ಎಂದು ಕಾಲಿಗೆ ಬುದ್ಧಿ ಹೇಳಿದರು. “ಪಾಪ! ದೇವ್ರಂಥಾಕಿ ನಮ್ ಇಂದ್ರಾ ಗಾಂಧೀನ ಬಯ್ದ್ರೆ, ಮರ ಮಾತಾಡದಂಗಿತದೇನು?” ಎಂದು ದೂರ ನಿಂತು ಚುಟ್ಟ ಸೇದತೊಡಗಿದರು.

ಆದ್ರೆ ನಮ್ಮ ಕಥಾನಾಯಕ ಶಾಮಾಶಾಸ್ತ್ರಿ ಅವರೆಲ್ಲ ತನ್ನನ್ನು ಒದೆಯಲಿಕ್ಕೇ ಬಂದರೆಂದೇ ಭಾವಿಸಿ ತೊಡೆ ಸಂದಿಯ ಅಗ್ಗಿಷ್ಟಿಕೆಯನ್ನು ಮೌನವಾಗಿ ಸಹಿಸಿಕೊಂಡನು. ಬಟ್ಟೆಯಿಂದ ದಾರ ಹೊರಬರುವಂತೆ ಹೊರಬಂದನು. ಅದೇ ಹೊತ್ತಿಗೆ ಶಾಮೂ ಎಂಬ ಧ್ವನಿ ಕೇಳಿಸಿ ಆ ಕಡೆ ತಿರುಗಿದನು. ಅನಸೂಯ ಕಂಡಳು. ಅಗ್ನಿ ಪ್ರವೇಶ ಮಾಡಿ ವೀರ ಸ್ವರ್ಗ ಸೇರಲುತ್ಸುಕದ ಸತಿಯಂತೆ ಗೋಚರಿಸಿದಳು. ಅನೂಽಽ ಎಂದು ಬಳಿಸಾರ್ದನು. ಆಕೆ ಕಿಮಕ್ಕೆನ್ನದಿರುವುದು ಕಂಡ ಆತನಿಗೆ ಆಶ್ಚರ್ಯ ಮತ್ತು ದುಃಖವಾಯಿತು. ಅವನು ತೊಡೆ ನಡುವೆ ಯಾಕೆ ತನ್ನೆರಡೂ ಕೈಗಳನ್ನಿರಿಸಿಕೊಂಡಿರುವನೆನ್ನುವುದೇ ಆಕೆ ಕಿಮಖ್ ಎನ್ನದಿರುವುದಕ್ಕೆ ಕಾರಣ.

ಆಕೆ ಶಾಮಾಽಽ ಎಂದಳು. ಅನೂ ಅಂದ. ಯಾಕೆ? ಏನಾಯ್ತು ಅಂದಳು ಚೇಳು ಕುಟುಕ್ತೂ ಅಂದ. ಎಲ್ಲಿ ಕುಟುಕ್ತೂ ಅಂದಳು. ಏನೋ ಒಂದು ನೆವ ಹುಡುಕಿಕೊಂಡಿರುವನೆಂದೇ ಆಕೆಗೆ ಅನುಮಾನ. ಕುಟಿಕಿರುವ ಜಾಗದ ಬಗ್ಗೆ ಅವನು ಏನು ಹೇಳಿಯಾನು! ಅವನ ಕಣ್ಣಲ್ಲಿದ್ದ ನೀರನ್ನು ಆಕೆ ಗಮನಿಸಲಿಲ್ಲ.

ಅವರಿಬ್ಬರು ಹಾಗೆ ನಡಕೋತ ಬಯಲ ಕೊನೆಗೆ ಹೋದರು. ಆ ಜಾಗ ಪ್ರಾಯಶಃ ನಿರ್ಮಾನುಷವಾಗಿತ್ತು. ಅಲ್ಲೊಂದು ಹಾಳುಗುಡಿ ಇತ್ತು. ದುರ್ಗದ ಪಾಲೇಗಾರ ಮೂರನೆ ಮುದ್ದು ಮದಕರಿ ನಾಯಕ ಗುಡೇಕೋಟೆಯ ವಿಜಯಶಾಲಿಯಾದ ನೆನಪಿಗೆ ಕಟ್ಟಿಸಿದ್ದಂತೆ. ಗುಡೆಕೋಟೆ ಮತ್ತು ದುರ್ಗದವರ ನಡುವೆ ಘೋರ ಯುದ್ಧ ನಡೆದು ಹತ್ತಾರು ಮಂದಿ ಸತ್ತು; ನೂರಾರು ಮಂದಿ ಕೈಕಾಲು ಕಳೆದುಕೊಂಡಿದ್ದು ಅದೇ ಬಯಲಿನಲ್ಲಂತೆ. ನಾಯಕ ತಾನು ಕಟ್ಟಿಸಿದ ಗುಡಿಯಲ್ಲಿ ಪ್ರಾಣ ಪ್ರತಿಷ್ಠಾಪನೆ ಮಾಡಿದ್ದು ಹೆಣ್ಣು ದೇವರಿಗೋ; ಗಂಡು ದೇವರಿಗೋ ಒಂದೂ ತಿಳಿಯದು. ರಜಸ್ವಲೆಯಾದವರಿಂದ ಹಿಡಿದು ಮುಟ್ಟುನಿಲ್ಲುವವರೆಗೆ ಸ್ತ್ರೀಯರೂ; ಗಡ್ಡ ಮೂಡಿದಂದಿನಿಂದ ಹಿಡಿದು ಗುದ್ದಿನ ಹಾದಿ ಹಿಡಿಯುವವರೆಗೆ ಗಂಡಸರೂ ಏಕಪ್ರಕಾರವಾಗಿ ನೂರಾರು ವರ್ಷಗಳಿಂದ ಖಾದ್ಯ ತೈಲ ಎರೆದೂ ಎರೆದೂ ಆ ಶಿಲ್ಪ ಬೋಡಾಗಿ ಬಿಟ್ಟಿರುವುದು. ಅಲ್ಲಿ ದೀಪ ಮುಡಿಸಲು ಆಳುವ ಸರಕಾರದಿಂದ ಪ್ರತಿ ತಿಂಗಳು ರುಷುವತ್ತು ಪಡೆಯುತ್ತಿರುವ ಅಧಿಕೃತ ಪೂಜಾರಿ ದಾಸರಿ ತಿಮ್ಮಪ್ಪ ಯುಕ್ತ ವಯಸ್ಸಿನಲ್ಲಿ ಹೆಂಡತಿ ಕಳೆಕೊಂಡ ಲಾಗಾಯ್ತು ಸಮಾನ್ಯವಾಗಿ ಅಲ್ಲಿಯೇ ಮಲಗಿಕೊಂಡಿರುತ್ತಿದ್ದ. ವಾರಕ್ಕೊಮ್ಮೆ ಹದಿನೈದು ದಿನಕ್ಕೊಮ್ಮೆ ಟೆಂಪ್ಟೇಷನ್ ಹೆಚ್ಚಾದಾಗ ಚಲವಾದಿ ರಂಗಮ್ಮ ಎಂಬ ಅರವತ್ತು ವರ್ಷದ ಅಪ್ಸರೆ ಬಳಿಗೆ ಹೋಗಿ ಅವತ್ತಿನವರೆಗಿನ ದುಡಿಮೇನೆಲ್ಲ ಸುರಿದು ಏದುಸಿರು ಬಿಡುತ್ತ ಸಿನೆಮಾ ಟಾಕೀಸಿನ ಬಳಿಗೆ ಬಂದು ಅರ್ಧ ಚಾ ಉದ್ರಿ ಕುಡಿದು, ಎರಡು ಬೀಡಿ ಬಿಟ್ಟಿ ಸೇದಿ ಗುಡಿ ಕಡೆ ಸಾಷ್ಟಾಂಗ ಹಾಕುತ್ತಾ ಬರುತ್ತಿದ್ದ.

ಅವರ ಪುಣ್ಯಕ್ಕೆ ಅವನು ಅಂಥದೊಂದು ಕಾರ್ಯಕ್ರಮ ಹಮ್ಮಿಕೊಂಡಿದ್ದ.
“ಶಾಮೂ… ಅದೇನು ಮನಸ್ನಲೈತೋ ಹೇಳಿಬಿಡು” ಅನಸೂಯ ಮೊಟ್ಟಮೂದಲ ಬಾರಿಗೆ ಗದ್ಗದಿತಳಾಗಿದ್ದಳು. ಎಷ್ಟು ತಡೆದರೂ ಕಣ್ಣುಗಳು ಒದ್ದೆಯಾದವು. “ಮೂಗಿಗೆ ತುಪ್ಪ ಹಚ್ಚೋ ಮಾತು ಮಾತ್ರ ಆಡಬೇಡ” ಎಂದು ಕಡ್ಡಿ ಮುರಿದಂತೆ ನುಡಿದಳು.

ಈ ಭಾರತೀಯ ತರುಣಿ ಹೀಗೆ ನುಡಿಯುತ್ತಿರುವಳಲ್ಲ! ಗಂಟಲಲ್ಲಿರುವ ಬಿಸಿ ತುಪ್ಪವನ್ನು ನುಂಗುವುದು ಹೇಗೆ! ಉಗುಳುವುದು ಹೇಗೆ! ಶಾಮುಗೆ ಪಜೀತಿಗಿಟ್ಟುಕೊಂಡಿತು. ತನ್ನ ಇಷ್ಟದೇವತೆಗಳಾದ ಪಿತಾಮಹಾಶ್ರೀ; ಮಾತಾಶ್ರೀ ಒಟ್ಟಿಗೆ ಚಿಕ್ಕ ಮೆದುಳಿನಲ್ಲಿ ಪ್ರತ್ಯಕ್ಷರಾಗಿ “ಎಲೈ ವಂಶ ಜ್ಯೋತಿಯೆಽಽ ಯಾವುದೇ ಕಾರಣಕ್ಕೂ ನನಗೆ ಆತ್ಮಹತ್ಯೆಗೆ ಕಾರನವಾಗುವಂಥ ಮಾತುಗಳನ್ನು ಆಡಬೇಡ. ಕೆಲವು ಕಠಿಣ ಸಂಸ್ಕೃತ ಶಬ್ದಗಳಿಂದ ಕರ್ಣ ಕಠೋರವಾದ ವಾಕ್ಯ ಮಾಡಿ ನಾಲಿಗೆ ತುದಿಯಿಂದ ಚಿಮ್ಮಿ ಬಿಡು. ಇದರಿಂದ ಲೋಕ ಕಲ್ಯಾಣವಾಗುತ್ತದೆ” ಎಂದು ಅಪ್ಪಣೆ ಕೊಡಿಸಿದರು.
ಹಾಗೆ ಮಾಡುವುದರಲ್ಲಿ ನಾನು ನಿಸ್ಸೀಮನೇ. ಆದರೆ ತೊಡೆ ಸಂದಿಯ ಉರಿ ಮಾತಾಡದಂತೆ ಮಾಡಿರುವುದಲ್ಲ!
“ಅನಸೂಯಾ… ಚೇಳಿನಿಂದ ಕಟಿಕಿಸ್ಕೊಂಡಿರೋದೆ ಸಾಕಾಗಿದೆ. ಸ್ವಲ್ಪ ಶಮನವಾದ ಮೇಲೆ ಯಾವುದಾದರೊಂದು ಹೇಳುವುದೇನು! ಅಲ್ಲಿವರೆಗೆ ತಾಳ್ಮೆಯಿಂದಿರಲಾರೆಯಾ!” ನಾಟಕದ ಪಾತ್ರಧಾರಿಯಂತೆ ತಡೆದು ತಡೆದು ನುಡಿದ.
“ನನಗಾಗಿರೋ ನೋವು ಕಡಿಮೆ ಆಗಬೇಕೂಂದ್ರೆ ನೀನು ಹೇಳ್ಲೇಬೇಕು… ಇನ್ನೊಂದು ಗಳಿಗೆ ಕಾಯ್ಲಿಕ್ಕೂ ನಾನು ಸಿದ್ಧಳಿಲ್ಲ” ಅನಸೂಯಳಿಗೆ ಅನುವುಮಾಡಿಕೊಡಲೆಂದು ಗಾಳಿ ದೂರಹೋಗಿ ನಿಶ್ಶಬ್ದ ಆವರಿಸಿತು.

ಶಾಮುಗೆ ದಿಕ್ಕುಗಳು ಅದುಲುಬದಲುಗೊಂಡವೆಂದೆನಿಸಿತು. ತೊಡೆ ಸಂದಿಯಲ್ಲಿ ಮರಣಾಂತಿಕ ವೇದನೆಯನ್ನುಂಟುಮಾಡುತ್ತಿರುವ ನೋವು; ಎದೆಯ ತ್ರಾಸಿನೆರಡೂ ಪಗಡಿಗಳಲ್ಲಿ ತಾಯಿ ಮತ್ತು ಅನಸೂಯಾ; ತಾಯಿ ಇರುವ ಪಗಡೆ ನೆಲಕ್ಕೆ ತಾಕಿರುವುದೆಂದು ಹೇಗೆ ಹೇಳುವುದು? ಏನಾದರೂ ಹೆಚ್ಚುಕಡಿಮೆಯಾದರೆ ತಾಯಿ ಶಾಪಕೊಡದಿರುತ್ತಾಳೆಯೆ? ತಾತ ಕೂಡಲೆ ಆತ್ಮಹತ್ಯೆ ಮಾಡಿಕೊಂಡು ಬ್ರಹ್ಮ ಪಿಶಾಚಿಯಾಗಿ ಹೋದಲ್ಲಿ ಬಂದಲ್ಲಿ ಕಾಡದಿರುತ್ತಾನೆಯೇ? ಒಂದೊಂದು ನಿಟ್ಟುಸಿರು ಬಿಡುತ್ತ ಒಂದು ಕ್ಷಣ ಆಗಸದ ಕಡೆಗೂ ಮತ್ತೊಂದು ಕ್ಷಣ ನೆಲದ ಕಡೆಗೂ ನೋಡುತ್ತ ನಿಂತಿದ್ದ ಅವನು ಅಪ್ಪಿತಪ್ಪಿ ಅನಸೂಯಳ ಕಡೆಗೆ ನೋಡುವ ಧೈರ್ಯ ಮಾಡಲಿಲ್ಲ. ಅದಕ್ಕೆಲ್ಲ ಪ್ರಾಯಶ್ಚಿತ್ತಾರ್ಥವಾಗಿ ಚೇಳು ಕುಟುಕಿರುವುದು ಬೇರೆ? ಆದರೂ ಧೈರ್ಯ ಆವಹಿಸಿಕೊಂದು ಆಕೆಯ ಕಡೆಗೆ ತಿರುಗಿದ.

“ಸಂಪ್ರದಾಯಸ್ಥ ಕುಟುಂಬದಲ್ಲಿ ಹುಟ್ಟಿರೋ ನನ್ನ ಸಮಸ್ಯೆ ನಿನ್ಗೆ ಅರ್ಥ ಆಗಿರಬೌದೆಂದು ತಿಳ್ಕೊಂಡಿದೀನಿ. ನನಗ್ಯಾಕೋ ಹೆಜ್ಜೆ ಹೆಜ್ಜೆಗೆ ಮನುಸ್ಮೃತಿ ಗರುಡ ಪುರಾಣಗಳನ್ನೆಲ್ಲ ಎದುರಾಕಿಸಿಕೊಂಡೇನು. ಆದ್ರೆ ನನ್ತಾಯೀನ ಮಾತ್ರ ಎದುರಾಕ್ಕೊಳ್ಳೋ ಧೈರ್ಯನ ಆ ದೇವರು ನನಗೆ ಕೊಟ್ಟಿಲ್ಲ… ಏನು ಮಾಡೋದು? ನೀನೇ ಒಂದು ಪರಿಹಾರಾನ ಸೂಚಿಸಲಾರೆಯೇನು?” ತನ್ನ ಮುತ್ತಾತನ ಗಿರಿಮುತ್ತಾತರ ತಪೋಬಲದಿಂದಲೇ ಅವನಿಗೆ ಇಷ್ಟು ನಿರರ್ಗಳವಾಗಿ ಮಾತಾಡಲು

ಸಾಧ್ಯವಾಯಿತು. ಮರ್ಮಸ್ಥಾನ ಎಲ್ಲಿ ಉದುರಿಬಿಡುವುದೋ ಎಂಬ ಭಯದಿಂದ ಒಂದು ಕೈಯನ್ನು ಮಾತ್ರ ತೆಗೆದು ಮುಖದ ಬೆವರೊರಸಿಕೊಂಡ. ಬೆಳಗಿನಿಂದ ಭಾವಗೀತೆಯೊಂದನ್ನು ಬರೆಯುವ ಪ್ರಯತ್ನದಲ್ಲಿದ್ದಾಗ ಪೆನ್ನು ಕಾರಿಕೊಂಡ ಮಸಿಯನ್ನು ಸಮಯ ಸ್ಪೂರ್ತಿಯಿಂದ ಲುಂಗಿಯ ತುದಿಗೆ ಒರಸಿಕೊಂಡಿದ್ದ. ಅದರ ಇಂಕು ಮುಖದ ಹಲವು ಕಡೆ ಹತ್ತಿ ಬಿಟ್ಟಿತು.

“ಹುಚ್ಚಪ್ಪ ಇಷ್ಟು ಹೇಳೋಕ್ಯಾಕೆ ಕೊಂಕಣ ಸುತ್ತಿ ಮೈಲಾರಕ್ಕೆ ಬಂದಿ, ನೀನು ನನ್ನ ಮದ್ವೆ ಆಗದಿದ್ರೆ ಪ್ರಪಂಚ ಪ್ರಳಯ ಆಗೋದಿಲ್ಲ. ನಾನೂ ಭಗ್ನಪ್ರೇಮಿಯಂತೆ ಆತ್ಮಹತ್ಯೆ ಮಾಡ್ಕೊಳ್ಳೋದಿಲ್ಲ. ಅಥವಾ ನಿನ್ನ ನೆನಪಿನಲ್ಲಿ ಚಿರವಿರಹಿಯಾಗಿ ಕಾಲ ಕಳೆಯೋದಿಲ್ಲ. ಒಂದು ಮಾತು ಕೇಳೋಣ ಅಂತ ಬಂದೆ ಅಷ್ಟೆ” ಕಟ್ಟೆಯಿಂದ ಕೆಳಗಿಳಿದು ಚಪ್ಪಲಿಗಳಿಗೆ ಪಾದ ಪೋಣಿಸಿದಳು. ನನ್ನ ನಿರಾಸೆ ಅಂತ ಭಾವಿಸಿ ಬದುಕಿನ ಬಗ್ಗೆ ಉತ್ಸಾಹ ಕಳ್ಕೋಬೇಡ. ಇರೋವಷ್ಟು ಕಾಲ ಸ್ವಂತ ವ್ಯಕ್ತಿದಿಂದ ಬದುಕೋದನ್ನು ಕಲ್ತುಕೋ ಬರ್ತೀನಿ ತುಂಬ ಹೋತ್ತಾಯ್ತು” ಎಂದು ಹೊರಡಲುವಾದಳು.
“ಅನೂ ನಿಂತ್ಕೋ” ಶತಪದಿಯಂತೆ ನಡೆಯುತ್ತ ಬಂದ ಶಾಮು.
“ಮತ್ತೇನಿದೆ?” ಹಿಂತಿರುಗದೆ ಕೇಳಿದಳು.
“ಹೀಗೆ ಮಾಡಿದ್ರೆ ಹೇಗೆ?” ಉಗುಳು ನುಂಗಿದ.
“ಕೇಳೋದೇನಿದ್ರು ನೇರವಾಗಿ ಕೇಳೂಂತ ಎಷ್ಟು ಸಾರಿ ಹೇಳೋದು?”
“ನಾನು ಮದ್ವೆ ಆಗೋವಗೂ… ”
“ಹ್ಹಾಂ”
“ನಾನು ಮದ್ವೆಯಾದ್ಮೇಲೆ ಇಬ್ರೂ‌ಒಟ್ಟಿಗೆ…” ಮುಂದಿನ ಮಾತು ಹೇಳುವ ಮೊದಲೆ ಅನಸೂಯ ಕೆರಳಿದಳು. ಆಕೆಯ ಕಣ್ಣುಗಳು ಬೆಂಕಿಯ ಎರಡು ನಮೂನೆಗಳಂತೆ ಪ್ರಜ್ವಲಿಸಿದವು.
“ಇದೇ ಮಾತ್ನ ಬೇರೆ ಯಾರಾದ್ರು ಹೇಳಿದ್ರೆ ಕಪಾಳಕ್ಕೆರಡು ಬಿಡ್ತಿದ್ದೆ ಆಷ್ಟೆ… ಹುಷಾರ್… ಬರ್ತೀನಿ” ಅನಸೂಯ ದುರ್ದಾನ ತೆಗೆದುಕೊಂಡವಳಂತೆ ಹೊರಟುಹೋದಳು.

ಶಾಮಾಶಾಸ್ತ್ರಿ ಆಕಾಶ ತಲೆ ಮೇಲೆ ಹೊತ್ತುಕೊಂಡವನಂತೆ ಬಹಳ ಹೊತ್ತಿನವರೆಗೆ ಅಲ್ಲಿಯೇ ಕುಸಿದು ಕೂತಿದ್ದ. ಜಾರ್ಜ್ ಫರ್ನಾಂಡಿಸ್ ಮಾಡುತ್ತಿದ್ದ ಭಾಷಣ ಅಲೆ‌ಅಲೆಯಾಗಿ ಕೇಳಿಬರುತ್ತಿತ್ತು. ಆ ಭಾಷಣ ಕೇಳಿಸಿಕೊಳ್ಳುತ್ತ ಬರುವ ಚುನಾವಣೆಯಲ್ಲಿ ಇಂದಿರಾಗಾಂಧಿ ಪರ ಮತ ಚಲಾಯಿಸುವುದೋ? ವಿರುದ್ಧ ಚಲಾಯಿಸುವುದೋ? ಎಂದು ಯೋಚಿಸುತ್ತ ಬರುತ್ತಿದ್ದ ದಾಸರಿ ತಿಮ್ಮಪ್ಪ ತೀರ ಹತ್ತಿರ ಬಂದು ನೋಡಿದಾಗಲೇ ಗೊತ್ತಾದದ್ದು. ಚಲವಾದಿ ರಂಗಮ್ಮನೆದುರು ತಾನು ಅಸಹಾಯಕತೆಯಿಂದ ಕೂತಿದ್ದಂತೆಯೇ ಯಾರೋ ಕೂತಿರುವರೆಂಬುದು.
“ಯಾರದೂ” ಕಣ್ಣುಜ್ಜಿಕೋಳ್ಳುತ್ತ ಕೇಳಿದ.

’ಮಾತೋಶ್ರೀ ಪಾಹಿಮಾಂ’
ತುಪ್ಪದ ದೀಪದ ಮಂಗಳಮಯ ಬೆಳಕಿನಲ್ಲಿ ಸ್ವಲ್ಪ ಹೊತ್ತಿನ ಹಿಂದೆ ವಿರಹೇನ ವಿಕಲ ಹೃದಯದ ಅಲಮೇಲಮ್ಮ ಮಲಗಿದ್ದಳು. ಎದೆಯ ವಕ್ಷಸ್ಥಳದ ಮೇಲೆ ಕೃಷ್ಣ ಯಜುರ್ವೇದದ ಮೈತ್ರಾಯಿಣಿ ಶಾಖೆಗೆ ಸೇರಿದ ಗ್ರಂಥವನ್ನು ತೆಗೆದಿಟ್ಟುಕೊಂಡಿದ್ದಳು. ಅತ್ತೈವ ಚ ಪಶುಂ ಹಿಂಸ್ಯಾನ್ನಾನ್ಯಥೇತ್ಯಬ್ರವೀನ್ಮನುಃ ಎಂಬ ವಾಕ್ಯವನ್ನು ಬಾಯಿಪಾಠ ಮಾಡುತ್ತಲೇ ಮಂಪರು ಹತ್ತಿತ್ತು.

ವ್ಯಾಸಪೀಠಕ್ಕೆ ತಲೆ ಕೊಟ್ಟಿದ್ದರಿಂದ ಅಪರೂಪದ ನಿದ್ದೆ ಒಲಿದಿತ್ತು. ಸಿಂದಾಮಣಿ ಕೋಮಟಿಗರ ಮನೆಯಲ್ಲಿ ಗರುಡ ಪುರಾಣ ಪ್ರವಚನಾರ್ಥವಾಗಿ ಪರಮೇಶ್ವರ ಶಾಸ್ತ್ರಿಗಳು ಕೆಲಹೊತ್ತಿನ ಹಿಂದೆ ವಿಶೇಷ ಸಂಧ್ಯಾವಂದನೆ ಮುಗಿಸಿ ಹೋಗಿದ್ದರು. ಮನುಸ್ಮೃತಿಯ ಐದನೇ ಅಧ್ಯಾಯದಲ್ಲಿ ಗುರ್ತಿಗೆ ನವಿಲು ಗರಿ ಇಟ್ಟಂತೆ ಪ್ರೀತಿಯ ಬೆಕ್ಕು ನಗಂದಿ ಮೇಲೆ ಹಿಂಗಾಲು ಮುಂಗಾಲುಗಳನ್ನುದ್ದವಾಗಿ ಚಾಚಿ ನಿದ್ದೆ ಹೋಗಿತ್ತು. ಹೀಗಾಗಿ ಯಾವ ಅಡೆ ತಡೆ ಇಲ್ಲದೆ ನಿದ್ದೆ ಒಲಿದಿತ್ತು.
’ಮಾತೋಶ್ರೀ ಪಾಹಿಮಾಂಽಽಽ’

ಸೂರ್ಯಪುತ್ರನಾದ ವೈವಸ್ವತ ಮನು ತನ್ನ ತಪಸ್ಸಿಗೆ ಆಯ್ದುಕೊಂಡ ಬದರಿಕಾಶ್ರಮದ ಪಕ್ಕದಲ್ಲಿ ಚಾರಿಣಿ ಜುಳುಜುಳು ಹರಿದಂತೆ ಮನಸ್ಸಿನ ಘನಘೋರ ಮೂತಿಯಿಂದ ಯಾರೋ ಕೂಗಿದಂತೆ ಭಾಸವಾಯಿತು.
ಯಾರದಿರಬಹುದೀ ಧ್ವನಿ?

ತನಗಿನ್ನೊಂದು ಹುಟ್ಟಬಹುದಿದ್ದ ಮಗುವಿನ ದ್ವನಿ ಇದಾಗಿರಬಹುದೇ? ಹರೆಯದಲ್ಲಿ ಗಂಡನನ್ನು ಕಳೆದುಕೊಂಡಿರುವ ಮಾತ್ರಕ್ಕೆ ತನಗೆ ಮಾನವ ರೂಪ ಕೊಡಲಿಲ್ಲವೆಂದು ಅದು ರೋದಿಸುತ್ತಿರಬಹುದೇ?
ಮಾತೋಶ್ರೀ ಪಾಹಿಮಾಂ

ವ್ಯಾಧನ ಬಾಣದಿಂದ ಗಾಯಗೊಂಡ ಕ್ರೌಂಚ ಪಕ್ಷಿಯ ಆರ್ತರವದಂತೆ ಕೇಳಿ ಬರುತ್ತಿರುವ ಧ್ವನಿ ಯಾರದಿರಬಹುದು? ಪ್ರಶ್ನಿಯ ಗರ್ಭದಲ್ಲಿ ಶ್ರೀಮನ್ನಾರಾಯಣ ಮಿಸುಕಾಡಿದಂತೆ ಸುಪ್ತಾವಸ್ಥೆಯಿಂದ ಜಾಗೃತಾವಸ್ಥೆಗೆ ಬರುವ ಕಂಪನಕ್ಕೆ ಸಿಕ್ಕು ಮಗ್ಗುಲು ಬದಲಾಯಿಸಿದಳು ವ್ಯಾಸಪೀಠ ಕೀರ್‌ಕು, ಕೀರ್‌ಕು ಎಂದು ಸದ್ದು ಮಾಡಿತು. ಎದೆ ಮೇಲಿದ್ದ ಪ್ರಾಚೀನ ಗ್ರಂಥ ಪಕ್ಕಕ್ಕುರುಳಿ ಸ್ತನಕ್ಕೊತ್ತಿತು.
ಮಾತೋಶ್ರೀ ಪಾಹಿಮಾಂ…

ಪುಷ್ಪದ ಮೇಲೆ ಪತಂಗದ ಕಾಲುಗಳು ಗಾಯಮಾಡಿದಂತೆ; ಎಸಳು ಮುಲುಕಿದಂತೆ… ತಾಯಿ ಅಲುಮೇಲಮ್ಮ ಓಹ್ ಇದು ತೀರ ಪರಿಚಿತ ಧ್ವನಿ ಎಂದು ಗುರುತಿಸಿದಳು. ಇದು ಖಂಡಿತ ತನ್ನ ಕರುಳ ಕುಡಿಯದೆಂಬುದರಲ್ಲಿ ಸಂದೇಹವಿಲ್ಲ.
ಒಮ್ಮೆಗೆ ಸಾವಿರಾರು ನೆನಪುಗಳು ನುಗ್ಗಿಬಂದವು.
ತನ್ನ ಮಗ ಅದ್ಯಾರದೋ ಭಾಷಣ ಕೇಳಲೆಂದು ಹೋಗಿರುವುದು ನೆನಪಾಯಿತು. ಆ ಜನಜಂಗುಳಿ ನಡುವೆ ನಸು ಕೋಮಲ ಕಾಯದ ತನ್ನ ಮಗ ಏನಾದನೋ?

ಬಡಿದೆಬ್ಬಿಸಿದಂತೆ ಎದ್ದು ಕೂತಳು. ಮುಖದ ಮೇಲಿಂದ ಸುರಿದ ಬೆವರು ಪಕ್ಕದ ಅಣೆಕಟ್ಟಿನಲ್ಲಿ ನೆಲೆ ನಿಂತಿತು. ದೀರ್ಘವಾಗಿ ಉಸಿರಾಡತೊಡಗಿದಳು. ಅಕೆಯ ದುಗುಡಕ್ಕೆ ಬೆಂಬಲಾರ್ಥವಾಗಿ ಇಡೀ ಮನೆಗೆ ಮನೆಯೇ ಉಸಿರಾಡತೊಡಗಿತು. ಸಾವಿರಾರು ಮಂದಿ ಅದೃಶ್ಯ ರೀತಿಯಲ್ಲಿ ಮನೆಯ ಅಂಗುಲಂಗುಲದಲ್ಲಿ ಅಡಗಿ ಕೂತಿರುವಂತೆ ಭಾಸವಾಯಿತು. ಅದಕ್ಕೆ ಹಲೋ ಹಲೋ ಎನ್ನುತ್ತಿರುವ ರೀತಿಯಲ್ಲಿ ಹೃದಯ ಲಬ್‌ಡಬ್ ಅಂತ ಜೋರಾಗಿ ಬಡಿದುಕೊಳ್ಳತೊಡಗಿತು.
ಮಗೂ ಶಾಮೂ… ಶಾಮೂ… ಎಲ್ಲಿದ್ದೀಯಪ್ಪಾ?… ಏನಾಗಿದೆಯೋ?… ತಂದೆ ನಿನಗೆ… ನೀನು ಕ್ಷೇಮವಾಗಿರುವಿ ತಾನೆ…? ಮಾಡಿನ ಕಡೆ ಮುಖ ಮಾಡಿ ಜೋರಾಗಿ ಕೂಗಿದಳು… ಅದು ಅಲೆ ಅಲೆಯಾಗಿ ಹರಡಲು…

ದಾಸರಿ ತಿಮ್ಮಪ್ಪನಿಂದ ಬಿಡಿಸಿಕೊಳ್ಳಲು ಭಗೀರಥ ಪ್ರಯತ್ನ ನಡೆಸಿದ್ದ ಶಾಮನಿಗೆ ತಾಯಿಯ ಆತಂಕದ ಕರೆ ಕೇಳಿಸಿದಂತಾಯಿತು. ’ಬಿಡೋ ಬಿಡೋ’ ಎಂದು ಎಷ್ಟು ಹೇಳಿದರೂ ದಾಸರಿ ಬಿಡಲೊಲ್ಲನು.

“ನನ್ನಾಸೆ ಪೂರೈಸದಿದ್ರೆ ಅದೆಂಗ ಬಿಟ್ಟೇನು!… ಏನೂ ಆಗಕ್ಕಿಲ್ಲ… ನೀನೊಂದೆ ನಾನ್ಹೋಳಂದೆ ಕೇಳು…” ಎಂದು ಕೆವುಕೊಂಡು ಬಿದ್ದಿದ್ದ ದಾಸರಿ ಜೋಲು ಎದೆಗೆ ತನ್ನೆರಡು ಕಾಲುಗಳನ್ನು ಕೊಟ್ಟು ಝಾಡಿಸಿ ತಳ್ಳಲು ಅವನು ಅಷ್ಟು ದೂರ ಬಿದ್ದು ಗೋವಿಂದಾ ಎಂದನು.

ಏಕಬಾಕ ಲುಂಗಿ ಸರಿಪಡಿಸಿಕೊಂಡು ನಿಟಾರನೆ ನಿಂತನು. ತೊಡೆ ಸಂದಿನಲ್ಲಿ ಮತ್ತೊಮ್ಮೆ ದಗ್ ಅಂತು. ಒಂದು ಹೆಜ್ಜೆ ಮುಂದಿಡಕ್ಕಾಗಲೊಲ್ಲದು. ಇನ್ನೊಂದು ಕ್ಷಣ ಹಾಗೇ ನಿಂತುಬಿಟ್ಟಲ್ಲಿ ದಾಸರಿ ಪುನರ್ ಚೇತಿಸಿಕೊಂಡು ತನ್ನ ಪಾಕ್ಷಿಕದ ವಿಶೇಷಾಂಕವನ್ನು ಪೂರ್ಣಗೊಳಿಸದೆ ಬಿಡನು. ದೇಹದ ಸಮಸ್ತ ಜಂಘಾಬಲವನ್ನು ಕಾಲುಗಳಿಗೆ ತಂದುಕೊಂಡನು. ಸೂರ್ಯ ಶ್ವೇತಸ್ವ ಮಂತ್ರಸ್ಯ ಎಂದು ಶಕ್ತಿ ಸಂಚಯಿಸಿಕೊಂಡನು. ಶ್ರೀ ಪರಮೇಶ್ವರ ಪ್ರಿತ್ಯರ್ಥ ಎಂದೆನ್ನುವಷ್ಟರಲ್ಲಿ ದಾಸರಿ ತಿಮ್ಮ ಫಿನಿಕ್ಸ್ ಪಕ್ಷಿಯಂತೆ, ಯಗ್ನಕುಂಡದಲ್ಲಿ ಅಗ್ನಿ ಪ್ರಜ್ವಲಿಸಿದಂತೆ, ತ್ರಿವಿಕ್ರಮನಂತೆ ಎದ್ದು ನಿಂತು ’ಏಯ್ ಬ್ರಾಂಬ್ರ ಹುಡ್ಗಾ… ನನ್ಗೆ ನಿರಾಸೆ ಮಾಡಿ ಹ್ವಾದಿ ಅಂದ್ರೆ ನಿಂಗೆ ಒಳ್ಳೇದಾಗಕ್ಕಿಲ್ಲ ನೋಡು… ನಿಂತ್ಗ… ಒಂದೈದು ಮಿನಿಟ್ನಾಗ ಮುಗ್ಸಿ ಜ್ವಾಪಾನವಾಗಿ ಮನಿ ಮುಟ್ಟುಸ್ತೀನಿ’ ಎಂದು ತುಂಬ ದೈನ್ಯದಿಂದ ಬೇಡಿಕೊಳ್ಳುತ್ತ ಒಂದೊಂದು ಹೆಜ್ಜೆ ಇಡುತ್ತ ಮುಂದೆ ಬರತೊಡಗಿದನು. ಆ ಮಸುಕು ಬೆಳಕಿನಲ್ಲಿ ಆ ನಗ್ನಾಕೃತಿ ಘನ ಭೀಕರವಾಗಿದ್ದಿತು. ಅವನು ಇನ್ನೇನು ಹಿಡಿದೇ ಬಿಟ್ಟನೆನ್ನುವಷ್ಟರಲ್ಲಿ ಶಾಮನಿಗೆ ಅದೇನು ಸಕುತಿ ಬಂತೇನೋ ಕಿರ್ಧಬಲ ಓಡತೊಡಗಿದನು. ಓಡಲಾಗದಿದ್ದರೂ ದಾಸರಿ ಸುಮ್ಮನಿರುವನೇನು! ತನ್ನಾಜ್ಞೆಗಾಗಿ ಮೌನ ವ್ರತದಲ್ಲಿದ್ದ ನಾರಾನಿಗೆ ’ಛೂ’ ಎಂದನು. ಒಡನೆಯೇ ಅದು ಬೌ ಬೌ ಎಂದು ಅಪ್ಪಟ ಕನ್ನಡದಲ್ಲಿ ಬೊಗಳುತ್ತ ಹಿಂಬಾಲತ್ತಿತು. ಮುಂದೆ ಮುಂದೆ ಓಡುತ್ತಿರುವ ಅವನು, ಹಿಂದೆ ಹಿಂದೆ ಓಡುತ್ತಿರುವ ನಾರಾಣಿ, ಆ ಓಣಿ ದಾಟಿ ಈ ಓಣಿಗೆ ಬಂದಾಗ ಜಗದ್ರಕ್ಷಕ ಪಿಸಿ ತ್ರೀನಟ್ಟೂ ಒಂದು ವಾರದಿಂದ ಯಾರನ್ನೂ ಹೊಡೆದಿಲ್ಲವಲ್ಲ ಎಂದು ಕುದಿಯುತ್ತಿದ್ದನು ಅದು ಅಲ್ಲದೆ ಅವನು ಚಿಕ್ಕಂದಿನಿಂದ ನಾಯಿ ಹೊಡ್ದೂ ಹೊಡ್ದೂ ಸಾಕಷ್ಟು ಹೆಸರು ಸಂಪಾದಿಸಿದ್ದನು. ’ನೀನು ಪೋಲೀಸ್ ನೌಕರಿ ಸೇರಿದ್ದರೆ ಸರಿಹೋಗೋದು” ಎಂದು ಮನೆಯಲ್ಲಿ ತಂದೆತಾಯಿ ಶಾಲೆಯಲ್ಲಿ ಮಾಸ್ತರುಗಳು ಜೀವ ತಿನ್ನುತ್ತಿದ್ದರು. ಹೀಗಾಗಿ ಆತ ಪೋಲಿಸ್ ನೌಕರಿ ಸೇರೋದಕ್ಕೂ ಮೊದಲೆ ತನ್ನ ಹೆಸರಿನ ಉತ್ತರಾರ್ಧದಲ್ಲಿ ಪೋಲಿಸ್ ಎಂಬ ಪದದ ’ಕ್ಳಿಮ್ಮು’ಗೆ ಫೆವಿಕಾಲ್ ಲೇಪಿಸಿ ಅಂಟಿಸಿಕೊಂಡು ಬಿಟ್ಟಿದ್ದನು. ಅಂಥಾತ ಸಾರ್ವಜನಿಕರಿಗೆ ತೊಂದರೆ ಕೊಡುವ ನರಾಣಿಯನ್ನು ಸುಮ್ಮನೆ ಬಿಡುತ್ತಾನೇನು? ಜೋರಾಗಿ ಸೀಟಿ ಊದತೊಡಗಿದನು. ಪ್ರಧಾನಿ ವಿರೋಧಿ ಅಂತ ತಮ್ಮನ್ನು ಹೀಡಿದಾನು ಅಂತ ಜನ ಕ್ಳಿಮ್ಮುನಲ್ಲಿ ಬಾಲ ಇಟ್ಟುಕೊಂಡು ಪಿತುಗಲಾರಂಭಿಸಿದರು. ಇದೇ ಒಂಥರಾ ಮಜಾ ಅನ್ನಿಸಿತು ಪೀಸಿಗೆ. ಮತ್ತಷ್ಟು ಜೋರಾಗಿ ಊದುತ್ತ ಓಡೋಡಿ ಕೈಲಿದ್ದ ಲಾಠಿ ಕೋಲನ್ನು ಅಶ್ವತ್ಥಾಮ ’ಉತ್ತರ ಗರ್ಭಕ್ಕೆ ಪ್ರಳಯ’ ಎಂದು ಅಭಿಮಂತ್ರಿಸಿ ದರ್ಭೆಯನ್ನು ಪ್ರಯೋಗಿಸಿದಂತೆ ಪ್ರಯೊಗಿಸಲು ಅದು ಸೀದ ಹೋಗಿ ನಾರಾಣಿಯ ಹಿಂಗಾಲುಗಾಲಿಗೆ ಬಿದ್ದಿತು. ನಾರಾಣಿ ತೊಂಕ ಕಳೆದುಕೊಂಡು ಮುಗಿಲ ಕಡೆ ಮುಖಮಾಡಿ ಏಕಕಾಲಕ್ಕೆ ಸಮಸ್ತ ಶ್ಲೋಕಗಳನ್ನು ಲೋಕ

ವಿದ್ರಾವಕವಾಗಿ ಬೊಗಳತೊಡಗಿತು. ನಂತರ ಅವನು ಅದನ್ನು ಹಿಗ್ಗಾಮುಗ್ಗಾ ಥಳಿಸುತ್ತಿರುವುದನ್ನು ನೋಡಿ ಕಣ್ಣಿನ ಮೂಲಕ ಪಾಪ ಕಟ್ಟಿಕೊಳ್ಳಬಾರದೆಂದು ಶಾಮಾ ಶಾಸ್ತ್ರಿ ಓಡಿ ಮುಖ್ಯ ರಸ್ತೆ ತಲುಪಿದನು.
ಅವನ ಆ ಅವಸ್ಥೆ ನೋಡಿ ನಗಬಹುದಾಗಿದ್ದವರೆಲ್ಲರೂ ಇಂದಿರಾ ವಿರೋಧಿ ಭಾಷಣ ಕೇಳಲು ಹೋಗಿದ್ದರು. ಅದು ಅವನ ಪುಣ್ಯ… ಓಂ ಕೇಶವಾಯ ಸ್ವಾಹ ಒಂದು ಆಚಮನ ಮಂತ್ರಗಳನ್ನು ಮನಸ್ಸಿನಲ್ಲಿ ಪಠಿಸುತ್ತ ಮನೆ ಕಡೆ ಹೆಜ್ಜೆ ಹಾಕಿದನು. ಪ್ರತಿ ಹೆಜ್ಜೆ ಇಡುವಾಗಲೂ ಅವನ ನಾಲಿಗೆ ಅಮ್ಮಾ… ಅಮ್ಮಾ ಎಂದು ನುಡಿಯುತ್ತಿದ್ದಿತು.

ಇತ್ತ ಕಡೆ ಅಲುಮೆಲಮ್ಮನ ಕರುಳು ಅಡಿಗಡಿಗೆ ಕಿತ್ತು ಬಾಯಿಗೆ ಬರತೊಡಗಿತ್ತು. ಆಕೆಯ ಹೃದಯ ಕವಾಟಗಳು ಶಾಮೂ ಶಾಮೂ ಎಂದು ಬಡಿದುಕೊಳ್ಳತೊಡಗಿದ್ದವು. ಬೋರಲು ಬಿದ್ದಿದ್ದ ವ್ಯಾಸಪೀಠಕ್ಕಿಂತ ಮಗನ ನೆನಪು ಹೆಚ್ಚಿನದು. ಮನು ಸ್ಮೃತಿಗಿಂತ ಮಾತೃತ್ವ ಹೆಚ್ಚಿನದು. ಆದ್ದರಿಂದ ಆಕೆ ಅವ್ಯಾವುದನ್ನೂ ಸರಿಪಡಿಸುವ ಗೋಜಿಗೆ ಹೋಗಲಿಲ್ಲ.

“ಯಾಕೆ ಇಷ್ಟೊಂದು ಗಾಬರಿಯಾಗಿರಿವಿ? ಏನಾಯ್ತು ಹೇಳಬಾರ್ದೇ ತಾಯೀ?” ಎಂದು ಬೆಕ್ಕು ನಗಂದಿ ಮೇಲಿಂದ ಜಿಗಿದು ಮ್ಯಾವ್ಗುಟ್ಟುತ್ತ ಆಕೆಯ ಕಾಲು ಸಂದಿಯಲ್ಲಿ ನುಸಿಯತೊಡಗಿತ್ತು. ಅದನ್ನು ಅಪಶಕುನವೆಂದು ಆಕೆ ಅದನ್ನು ಕಾಲಿನಿಂದ ಝಾಡಿಸಿ ತಳ್ಳಿದಳು. ಏನಾದ್ರು ಹೆಲ್ಪು ಮಾಡೋಣಾಂತ ಬಂದ್ರೆ ಇದ್ಯಾಕೆ ಹಿಂಗ್ ಮಾಡ್ತಾಳೆ ಒಟ್ಟಿನಲ್ಲಿ ನನಗೆ ಬುದ್ಧಿ ಇಲ್ಲವಷ್ಟೆ ಎಂದು ಬೆಕ್ಕು ಮುಖ ಕಮಲ ಸಿಂಡರಿಸಿಕೊಂಡು ಈ ಮನೆಗೂ ತನ್ನ ಋಣ ಸಂಬಂಧ ತೀರಿತೆಂಬಂತೆ ಮನೆ ಬಿಟ್ಟು ಹೊರಟುಹೋಯಿತು. ದುರ್ಯೋಧನಾಸ್ಥಾನದಲ್ಲಿ ಧನುವ ಬಿಸುಟು ತೊತ್ತಿನ ಮಗ ವಿದುರ ಹೊರಟು ಹೋದನಲ್ಲ ಹಾಗೆ. ಸಂಪ್ರದಾಯಸ್ಥರ ಮನೆಯಲ್ಲಿ ಬೆಕ್ಕು ಕ್ಷೇಮದಿಂದಿರುವುದಿಲ್ಲ ಕೂಡ. ಹಾಗೆಯೇ ಸಮ್ಪ್ರದಾಯಸ್ಥರಾದರೂ ಅಷ್ಟೆಯೇ.

“ಎಲ್ಲಿ ಹೋದನು? ಏನಾದನು?” ಅಲಮೇಲಮ್ಮ ತನ್ನ ಮಾವ ಮನೇಲಿ ಇಲ್ಲದಿರುವುದರಿಂದ ಮತ್ತಷ್ಟು ಬೇಸರಗೊಂಡಳು. ಪರಮೇಶ್ವರ ಶಾಸ್ತ್ರಿಗಳು ಬೆಳಗ್ಗೇನೇ ತಮ್ಮ ನಿವಾಸದ ತೊಲೆ ಜಂತಿಗೆಲ್ಲ ಕೇಳಿಸುವಂತೆ “ರಾಜಖಿಯ ಭಾಷಣ ಕೇಳೋಕೆ ಹೋಗೋದು ವೇದ ಪ್ರಾಮಾಣ್ಯವಲ್ಲ… ಹೋಗಿ ನಾನು ಕಾಲು ಊನ ಮಾಡಿಕೊಂಡಿದ್ದು ಸಾಕು. ಈ ದುರವಸ್ಥೆ ಮತ್ತಾರಿಗೂ ಬಾರದಿರಲಿ” ಎಂದು ಸೂಚ್ಯವಾಗಿ ಶಾಮುವನ್ನುದ್ದೇಶಿಸಿ ಹೇಳಿದ್ದರು. ಶಾಮು ತಿಳುವಳಿಕಸ್ಥ, ವಿದ್ಯಾವಂತ, ಸುಮ್ಮನಿದ್ದಾನು. ಆದರೆ ಅವನ ಮೈಯೊಳಗೆ ಹರೀತಿರೋ ಬಿಸಿ ರಕ್ತ ಸುಮ್ಮನಿರಬೇಕಲ್ಲ!… ಮೊದಮೊದಲು ಹೋಗುವುದಿಲ್ಲವೆಂದು ತನ್ನ ತೊಡೆ ಮೇಲೆ ಮಲಗಿಕೊಂಡಿದ್ದ. ಆತಂಕಗೊಂಡಿರುವಂತಿದ್ದ. ಕೆಲ ಸಮಯದ ನಂತರ ದಿಡೀರನೆ ಎದು “ಅಮ್ಮಾ ನನಗೇಕೋ ಜಾರ್ಜ್ ಫರ್ನಾಂಡಿಸನ ನೋಡೊ ಆಸೆಯಾಗಿದೆ! ಹೋಗಿ ಬತೀನಿ” ಅಂದ. ಅದಕ್ಕೆ ತಾನು, “ಅದೆಂಥ ಹೆಸರೋ; ನಾಲಿಗೇನೇ ಹೊರಳುವಲ್ದೂ! ಅವರೂ ನಮ್ಮಂತೆ ಬ್ರಾಹ್ಮಣ್ರಾ!” ಎಂದು ಪ್ರಶ್ನೆ ಹಾಕಿದ್ದಳು. ತಾಯಿಯ ಸಂತೋಷಕ್ಕಿಂತ ದೊಡ್ಡದೊಂದಿದೆ! ಲುಂಗಿಯನ್ನೇ ಸುತ್ತಿಕೊಳ್ಳುತ್ತ ಹ್ಹೂಂ ಅಂದಿದ್ದ. ಹೆಸ್ರಿನ ಕೊನೆಗೆ ಶರ್ಮನೋ ರಾವ್ ಅಂತ್ಲೋ ಇಟ್ಕೋಬಹುದಿತ್ತಲ್ಲ” ಎಂದು ತಾನು ಮುಗ್ದತೆಯಿಂದ ಕೇಳಿದ್ದಳು. ಅದಕ್ಕೆ ನಿರುತ್ತರವಾಗಿ ಶಾಮು ಗೋಧೂಳೀ ಸಮಯದಲ್ಲಿ ಹೋಗಿದ್ದ. ಅಷ್ಟರೊಳಗೆ ಇಷ್ಟೊಂದು ಹಳಹಳಿಕೆ.

ಅಲುಮೇಲಮ್ಮ ಓಣಿಯ ನಂಬಿಕಸ್ಥರನ್ನು ಕರೆದು ಹಿಂಗಿಂಗೇಂತ ಹೇಳಿ ಕಳಿಸಬೇಕೆಂದು ತಲೆಬಾಗಿಲಿಗೆ ಬಂದಳು. ಇನ್ನೇನು ಆಕೆ ಒಂದು ಹೆಜ್ಜೆ ಇಡಬೇಕೆನ್ನುವಷ್ಟರಲ್ಲಿ ತುಳಸೀ ಕಟ್ಟೆಯ ಹಿಂದೆ ಮಾನವಾಕೃತಿ ಕಾಣಿಸಿಕೊಂಡು ಅದು ಮರುಕ್ಷಣದಲ್ಲಿಯೇ ಅಪ್ಪಿಕೊಂಡುಬಿಟ್ಟಳು.
“ಶ್ಯಾಮಾ!!” ಒಮ್ಮೆಗೆ ಜಿಗಿದು ಮಗನನ್ನು ಬಲವಾಗಿ ಅಪ್ಪಿಕೊಂಡುಬಿಟ್ಟಳು.
ಬದುಕಿನ ಸುರಕ್ಷಿತ ವಲಯ ತಲುಪಿದ ಉದ್ವೇಗದ ಸೆಳವಿಗೆ ಸಿಲುಕಿ ಅವನು “ಅಮ್ಮಾ” ಎಂದ ಯುದ್ಧದಿಂದ ಮರಳಿ ಬಂದವನಂತೆ.
“ಅಯ್ಯೋ… ಶಿವಶಿವಾ… ನಾರಾಯಣ… ನನ್ನ ಶಾಮು ಯಾಕೆ ಹಿಂಗೆ ನಡೀತಾ ಇದ್ದಾನೆ. ತಾತನವ್ರ ಮಾತು ಕೇಳಿ ಮನೆಲಿದ್ದಿದ್ರೆ…” ತಾಯಿ ಮಗನನ್ನು ಎತ್ತಿ ಕೊಂಡೊಯ್ಯುತ್ತಿರುವಳೆಂಬಂತೆ ಒಳಗಡೆ ಕರೆದುಕೊಂಡು ಹೋದಳು.
“ಏನಾಯ್ತೂಂತ ಹೇಳಬಾರ್ದೇನೋ?” ಮುಖದಲ್ಲಿ ಮುಖ ಇಟ್ಟು ಕೇಳಿದಳು.
“ಏನಂತ ಹೇಳ್ಲಿ ಅಮ್ಮಾ!” ಎಷ್ಟು ಚಂದ ಅಮ್ಮಾ ಎಂದು ನುಡಿಯುತ್ತಿರುವುದಲ್ಲ ತನ್ನ ಕಂದ. ಯಾಕೆ ಮುಖ ತಗ್ಗಿಸಿಬಿಡ್ತಿದೆ. ಏನಾದರೂ ಗ್ರಹ ಪೀಡೆಗಳು ಕಾಟವೋ? ಯಾರಾದರೂ ಲಲನಾಮಣಿಯರು ಕಣ್ಣುಬಿಟ್ಟಿರಬಹುದೋ? ಹೇಳುವುದೇನಿದೆ? ಕೇಳುವುದೇನಿದೆ? ಮಾಡೋದ ಮಾಡಿದರಾಯ್ತು.

ಅಲುಮೇಲಮ್ಮ ವಿಳಂಬ ಮಾಡಲಿಲ್ಲ. ತಾಮ್ರದ ಬೋಗುಣಿಯಲ್ಲಿ ಪಂಚತೈಲ ಸುರಿದುಕೊಂಡು ಬಂದು ಅದರಲ್ಲಿ ಅವನ ಪ್ರತಿಬಿಂಬ ನೋಡಿಸಿದಳು. ಮೆನಸಿನಕಾಯಿ, ಉಪ್ಪು ಪೊರಕೆಯೇ ಮೊದಲಾದ ವಸ್ತುಗಳಿಂದ ನೀವಳಿಸಿ ಲಟಿಗೆ ತೆಗೆದಳು. ಅವನು ಹ್ಹಾ ಅನ್ನಲಿಲ್ಲ. ಉಸಿರು ಬಿಡಲಿಲ್ಲ. ಕಂಚಿಯಿಂದ ತಂದಿದ್ದ ಲೋಭಾನ ಹಾಕಿದಳು. ಇಷ್ಟೆಲ್ಲ ಮಾಡಿದ ಮೇಲೆ ಅವನ ಮುಖ ತಿಳಿಗೊಂಡಂತೆ ಕಂಡಿತು.
ಅವನ ಮುಖವನ್ನು ತನ್ನೆರಡು ಬೊಗಸೆಯಲ್ಲಿ ಹಿಡಿದುಕೊಂಡು, ಮೂಗಿಗೆ ಮೂಗು ತಾಕಿಸಿ (ಥೇಟ್ ಅವರಪ್ಪನದೇ ಮೂಗು, ಮೂಗಿನಲ್ಲಿ ಅವಿತುಕುಳಿತಿರುವರೋ ಹೇಗೆ? ಸ್ಪರ್ಶದ ಮಾತ್ರದಿಂದಲೇ ಯಾಕೆ ರೋಮಾಂಚನವಾಗಬೇಕು?) “ಮಗೂ ಏನಾಯ್ತೂ ಅಂತ ಈಗ್ಲಾದ್ರೂ ಬಾಯ್ಬಿಟ್ಟು ಹೇಳೋ? ಇಲ್ಲಾಂದ್ರೆ ಎದೆ ಒಡೆದ್ಹೊಗ್ತದೆ!” ಎಂದು ಅಂಗಲಾಚಿದಳು.

ತಾಯಿಯ ಪ್ರೀತಿಗೆ ಸಮನಾದುದುಂಟೇನು ಲೋಕದಲಿ.
ರಂಗೋಲಿಗಿಂತ ಮಿಗಿಲಾದುದುಂಟಯ್ಯಾ ಈ ಜಗದ ಬಾಗಿಲಲಿ.
ಇದ್ದಕ್ಕಿದ್ದಂತೆ ಶಾಮನ ಎದೆಯಲ್ಲಿ ಮೂಡಿದ ಪದ್ಯ ಮಿದುಳಿಗೆ ಫೋನ್ ಮಾಡಿತು. ಮಿದುಳು ’ಬರೆದು ಎಸೆದುಬಿಡು’ ಎಂದು ಆಜ್ಞೆ ವಿದಿಸಿತು. ಕೈಗೆ ನಿಲುಕುವಂತೆ ಪೆನ್ನು ಪುಸ್ತಕ ಇಲ್ವಲ್ಲ! ಸಿಡುಕಿದನು.
ತಾಯಿ ಹೇಳೋ ಅಂದಳು. ಮಗ ಹೊಳೆದ ಪದ್ಯ ಹೇಳಿದ. ಅದಲ್ವೋ ನೀನು ಸೊಟ್ ಸೊಟ್ಟ ನಡೀತಿರೋದು. ಹೊಲದಲ್ಲಿ ದುಡ್ಯೋ ಶೂದ್ರರ ಥರ ಅಸ್ತವ್ಯಸ್ತವಾಗಿರೋದ್ಯಾಕೋ… ಹೇಳೋ!” ಕೊರಳಪಟ್ಟಿ ಹಿಡಿದು ಜಗ್ಗಿದಳು.
“ಅಮ್ಮಾ…” ಉಗುಳು ನುಂಗಿದ.
“ಏನಪ್ಪಾ”
“ಹೇಗೆ ಹೇಳ್ಲಮ್ಮಾ!”

“ಹೇಳೋ ಮಗ್ನೇ ಮಗುವಿನ್ತರ ಹಠಮಾಡ್ಬೇಡಪ್ಪಾ!”
“ನನ್ಗೆ ನಾಚ್ಕೆಯಾಗ್ತದೆ!”
“ಈ ತಾಯಿಹತ್ರ ಅದೆಂಥದೋ ನಾಚ್ಕೆ!”
“ಮತ್ತೆ… ಮತ್ತೆ!!!”
“ಹೇಳೋ ಕಂದಾ!”
“ನನಗೆ ಚೇಳು ಕುಟುಕ್ತಮ್ಮಾ” ಗಂಟಲ ಅಣೆಕಟ್ಟು ಢಮಾರನೆ ಸ್ಪೋಟಿಸಿಬಿಟ್ಟಿತು. ಹೋ ಎಂದು ಅಳತೊಡಗಿದ. ಚೇಳು ಕುಟುಕಿದ್ದು ಕಾಲು ಭಾಗವಾಗಿದ್ದರೆ, ಅನಸೂಯ ಮುಖಕ್ಕೆ ರಾಚಿದಂತೆ ಮಾತಾಡಿದ್ದೂ; ದಾಸರಿ ತಿಮ್ಮ ರೇಪ್ ಮಾಡಲು ಪ್ರಯತ್ನಿಸಿದ್ದೂ; ನಂತರ ಅವನು ನಾಯಿ ’ಛೂ’ ಬಿಟ್ತಿದ್ದೂ ಇದೆಲ್ಲ ಒಂದರ ಮೇಲೆಂದು ಸೇರಿಕೊಂಡು ದುಃಖವನ್ನು ನೂಮಡಿಗೊಳಿಸಿಬಿಟ್ಟಿತು. ಪ್ರಪಂಚದ ಸಮಸ್ತ ದುರಂತ ಕಾವ್ಯ ನಾಟಕವೇ ಮೊದಲಾದ ಸಾಹಿತ್ಯ ಗಂಥಗಳಲ್ಲಿ ಅಭಿವ್ಯಕ್ತಗೊಂಡಿರುವ ದುಃಖವನ್ನು ಮೈತುಂಬ ಪಂಚೇದ್ರಿಯಗಳ ತುಂಬ ತುಂಬಿಕೊಂಡುಬಿಟ್ಟನು. ಗಂಟಲಿ ಮರು ನುಡಿಯಲರಿಯದೆ ಮತ್ತೆ ಕಟ್ಟಿ ಬಿಟ್ಟಿತು. ಮೂಗಿನ ಎರಡು ಹೊಳ್ಳೆಗಳಿಂದ ಹಾಲು ಜೇನಿನ ಹಳ್ಳ ಹರಿಯತೊಡಗಿತು. ಕಣ್ಣುಗಳೆರಡು ನಯಾಗರ ಜೋಗದ ಪಾತ್ರಗಳನ್ನು ಅಭಿನಯಿಸತೊಡಗಿದವು.
ತಾಯಿಯ ವಕ್ಷದ ಮೇಲೆ ತನ್ನ ಮುಖಾರವಂದವನ್ನಿರಿಸಿ ’ಅಮ್ಮಾ’ ಎಂದು ಮತ್ತೆ ಮತ್ತೆ ಬಿಕ್ಕಿದ. ಕಣ್ಣೀರು ವಕ್ಷದ ಕಣಿವೆಗುಂಟ ಅಗ್ನಿ ದಿವ್ಯದಂತೆ ಹರಿಯಿತು.
ತನ್ನ ಪ್ರಾಣಪದಕಕ್ಕೆ ಚೇಳು ಕುಟುಕುವುದೆಂದರೇನು! ಋತುಮತಿಯಾದಾಗ ಮೈಲಿಗೆ ಲಂಗದ ಮೇಲೆ ಉಭಯ ಕುಶಲೋಪರಿಯಲ್ಲಿ ತೊಡಗಿದ್ದ ಐದಾರು ಚೇಳುಗಳನ್ನು ನೋಡಿದ ಮಾತ್ರಕ್ಕೆ ಏಳರ ಜ್ವರ ಏಳು ದಿನಗಳ ಪರ್ಯಂತರ ಕಾಡಿದ್ದವು. ಚೇಳು ಕುಟುಕಿದವರ ಸಂದರ್ಶನ ಮಾಡಿ ಹೌಹಾರಿದ್ದಳು ಎಷ್ಟೋ ಸಲ.
“ಶಿವ! ಶಿವಾ!” ಕಣ್ಣು ಮುಚ್ಚಿಕೊಂಡಳು ತಾಯಿ
“ನನ ಕಂದಾ ಏನು ಹೇಳ್ತಿರುವೆಯೋ?” ಏನು ಮಾಡುವುದೀಗ? ಮಾವನವರಿದ್ದಿದ್ರೆ ಮಂತ್ರಿಸುತ್ತಿದ್ದರು… ”
ಕಂದ ಚೇಳು ಕುಟಿಕಿಸಿಕೊಂಡ ಸಂಕಟದಲ್ಲಿ ಇಷ್ಟು ದೂರ ನಡೆದು ಬಂದಿರುವನಲ್ಲ ಎಷ್ಟೊಂದು ತಾಕತ್ತಿರುವುದಿವನ ಮೈಯೊಳಗೆ! ಎಷ್ಟಾದರೂ ಇವನು ಸರ್ವಶಾಸ್ತ್ರಪಾರಂಗತನಾದ ಗಂಡಸಲ್ಲವೆ?
ಮಗುವನ್ನು ಎತ್ತಿಕೊಳ್ಳಲು ಪ್ರಯತ್ನಿಸಿದಳು. ಆಗಲಿಲ್ಲ. ಹಾಗೇ ಜೋಪಾನವಾಗಿ ನಡೆಸಿಕೊಂಡು ಶಯನಗೃಹಕ್ಕೆ ನಡೆಸಿಕೊಂಡು ಹೋದಳು. ಮುಲುಕುತ್ತ, ನರಳುತ್ತ; ಅಡಿಗಡಿಗೆ ಅಮ್ಮಾ ಅಮ್ಮಾ ಅನ್ನುತ್ತ ನಡೆದನಾ ಗಂಡುಗಲಿ ಕುಮಾರ ರಾಮನು.
ಅರ್ಜುನನ ಹಸ್ತಲಾಘವದ ಶರಪಂಜರದ ಮೇಲೆ ಕುರುಪಿತಾಮಹ ಪವಡಿಸೋಪಾದಿಯಲ್ಲಿ ಶಾಮು ಮಲಗಿಕೊಂಡನು.
“ಕಂದಾ… ಚೇಳು ಕುಟಿಕಿದ ಜಾಗವನ್ನಾದರೂ ತೋಸೋ?” ದುಃಖಿತಳಾಗಿ ಕೇಳಿದಳು ವಾತ್ಸಲ್ಯ ಮೂರ್ತಿ.
ಇಂಥದೊಂದು ಪ್ರಶ್ನೆ ತಾಯಿಯ ಬಾಯಿಂದ ಉದುರುತ್ತಲೆ ಶಾಮು ಹೌಹಾರಿದ.

“ಹೋಗಮ್ಮ… ಎಲ್ಲೋ ಒಂದ್ಕಡೆ ಕುಟುಕ್ತು” ದುಃಖದ ವಲ್ಮೀಕದೊಡಲಿಂದ ನಾಚಿಕೆ ಒಡಮೂಡಿತು.
“ಹಾಗಂದ್ರೆ ಹೆಂಗಪ್ಪಾ” ಕಂದನ ದೇಹದ ಪ್ರತಿಯೊಂದು ಭಾಗವನ್ನು ಪರಾಮರ್ಶಿಸುತ್ತಾ ಕೇಳಿದಳು ತಾಯಿ.” “ನೀನು ಹೇಳದಿದ್ರೆ ಇಗೋ ನೋಡು ಮತ್ತೆ!”
“ಅಮ್ಮಾ ನನ್ಗೆ ನಾಚ್ಕೆ ಆಗ್ತದೆ” ವಧುವಿನಂತೆ ನಾಚುತ್ತಿರುವ ಮಗ.
ತಾಯಿಯಾದ ನನ್ನ ಬಳಿ ಅದೆಂಥದದೋ ನಾಚ್ಕೆ!”
“ಕುಟುಕಿರೋ ಜಾಗ!”
“ಜಾಗ!”
“ನಿನಗೆ ತೋರಿಸುವಂಥದಲ್ಲ!”
“ಅಂದ್ರೆ”
“ಥೂ! ಹೋಗಮ್ಮಾ!”
“ಛೀ ಹುಚ್ಚಪ್ಪ… ನಾನು ನೋಡ ಬಾರದಂಥ ಜಾಗ ಯಾವುದೋ ಇದೆ ನಿನ್ನ ದೇಹದಲ್ಲಿ?”
“ಇದೆ ಅದನ್ಕಟ್ಕೊಂಡೇನೀಗ?”
“ನಾನು ನಿನ್ನ ತಾಯಿ. ನನ್ನ ಏಕ ಮಾತ್ರ ಪುತ್ರ ನೀನು, ನಿನ್ನ ದೇಹ ನನ್ನ ಹಕ್ಕು.”
“ಅಮ್ಮಾ ದಯವಿಟ್ಟು… ಸ್ವಲ್ಪ ಹೊತ್ತು ಆಚೆ ಹೋಗ್ತೀಯಾ?”
“ಇಂಥ ಸಂಕಟದ ಸಮಯದಲ್ಲಿ ನಿನ್ನೊಬ್ನೆ ಬಿಟ್ಟು ಅದ್ಹೇಗೆ ಹೋಗ್ಲೋ?”
ಶಾಮನಿಗೆ ಫಜೀತಿಗಿಟ್ಟುಕೊಂಡಿತು. ಹೇಗೆ ಹೇಳೋದು! ಹೇಳಲಾಗದೆ ಹೇಗೆ ಇರೋದು? ಪಂಚವಿಂಶತಿ ನಾಚಿಕೆಯ ತ್ರಯೋದಶಿ ಹೊಂಡದಲ್ಲಿ ಲಿಬಿಲಿಬಿ ಒದ್ದಾಡತೊಡಗಿದ. ಯಾಕಾದರೂ ಮನೆಗೆ ಮರಳಿದೆನೋ? ನೋವು ಶಮನವಾಗುವವರೆಗೆ ಅಲ್ಲೆಲ್ಲೊ ಒಂದುಕಡೆ ಬಿದ್ದಿರಬಹುದಿತ್ತು.
ಹೇಳಪ್ಪಾ… ಹೆತ್ತಕರುಳು ಚೂರುಚೂರಾಗ್ತಿದೆ” ಅಲುಮೇಲಮ್ಮ ಚಂಡಿಹಿಡಿದವಳಂತೆ ಕೇಳಿದಳು.
“ನನ್ಗೆ ನಾಚಿಕೆ ಆಗ್ತದಮ್ಮಾಽಽ” ಗೋಗರಿದ.
“ನಾನು ಬದುಕಿರೋವಗೂ ನನ್ನೆದುರಿಗೆ ನಾಚ್ಕೆ ಪಡಬೇಡ… ನಾನು ನಿನ್ನ ತಾಯಿ. ತಾಯಿ ಎದುರು ಅದೆಂಥದೋ ನಾಚಿಕೆ.”
“ನಾನೀಗ ಮಗು ಅಲ್ಲ… ಬೆಳ್ದು ದೊಡ್ಡವನಾಗಿದ್ದೀನಿ.”
“ನಾನು ಸತ್ತ ಮೇಲೆ ಮೇಲೆಯೇ ನೀನು ದೊಡ್ಡವನಾಗೋದು.”
“ನೀನು ಸಾಯೋ ಮಾತಾಡಬೇಡಮ್ಮಾ ನನ್ಗೆ ದುಃಖವಾಗ್ತದೆ.”
“ಹಾಗಾದ್ರೆ ಹೇಳು ಮತ್ತೆ… ಇಲ್ಲಿ ಕುಟುಕ್ತಾ… ಇಲ್ಲಿ ಕುಟುಕ್ತಾ” ಅಲುಮೇಲಮ್ಮ ಮಗನ ದೇಹದ ಬಹುಪಾಲು ಭಾಗವನ್ನು ಮುಟ್ಟಿ ಮುಟ್ಟಿ ಕೇಳಿದಳು.
“ಅಲ್ಲೆಲ್ಲೂ ಅಲ್ಲ.”
“ಹಾಗಿದ್ರೆ ಎಲ್ಲಿ?”
“ಹೇಳೋಕೆ ನನ್ ಮನ್ಸು ಒಪ್ಪುತ್ತಿಲ್ಲ.”
“ಹೆತ್ತ ತಾಯಿಗಿಂತ ನಿನ್ಗೆ ನಿನ್ ಮನಸೇ ಹೆಚ್ಚಾಯ್ತೇನೋ?”
“ತಾತ ಬಂದ ಮೇಲೆ ಹೇಳ್ತೀನಿ”
“ನಿನಗೆ ಜನ್ಮ ಕೊಟ್ಟಿರೋದು ತಾತನಲ್ಲ.
“ಹೌದಮ್ಮಾ ನೀನೆ ನನ್ನ ಜನ್ಮದಾತೆ”
“ಹಾಗಿದ್ರೆ ನಿಸ್ಸಂಕೋಚವಾಗಿ ಹೇಳು ಮತ್ತೆ!”
ತತ್ಸರ್ವಂ ಶ್ರೀವಾಸುದೇವಾರ್ಪಣಮಸ್ತು… ಶಾಮು ಸರ್ವಸ್ವವನ್ನೂ ತನ್ನಿಷ್ಟ ದೈವಕ್ಕರ್ಪಿಸಿಬಿಟ್ಟ. ಯಾಕೆ ಹಠ ಮಾಡುತ್ತಿರುವಳೀ ತಾಯಿ; ತಂದೆ ಬದುಕಿದ್ದರೆ ತಾನೀ ಪರಿಯಾಗಿ ಮಾತೃತ್ವದ ಸಂಕೋಲೆಗೆ ಸಿಲುಕುವ ಸಂಧಿಗ್ದಕ್ಕೆ ಬಲಿಯಾಗುತ್ತಿರಲಿಲ್ಲ.
ಮಾತೃತ್ವ ಪಿತೃ ರೂಪಾಯಾ | ಪಿತೃತ್ವ ರೂಪಾಯ ಮಾತೃವೇ
ಮಾತೃತ್ವಸ್ಯ ಹೃದಯ್ಂ ಪಿತೃಃ | ಪಿತೃಶ್ಚ ಹೃದಯಂ ಮಾತೃಃ
ಎಂದು ಗೊಣಗಿಕೊಂಡ. ಪಾಲಕ ಮತ್ತು ಪೋಷಕ ಶಕ್ತಿಗಳ ತ್ರಿವೇಣಿ ಸಂಗಮದಂತಿರುವ ತನ್ನ ತಾಯಿ ಈ ಪರಿ ಮಾತೃತ್ವದ ಪಾರಾಕಾಷ್ಠೆ ತಲುಪಬಹುದೆಂದು ಗೊತ್ತಿದ್ದರೆ ತಾನು ಆ ಕಡೆ ಹೋಗುತ್ತಲೇ ಇರಲಿಲ್ಲ.
“…” ಶಾಮು ಹೇಳಲೆಂದು ಬಾಯಿ ಏನೋ ತೆರೆದ. ಶಬ್ದ ಹೊರಡಲಿಲ್ಲ. ಮುಚ್ಚಿದ.
“ಹೇಳೋ” ಅಲುಮೇಲಮ್ಮನ ಕಂಠ ಬಿಗಿಯಿತು. “ನೀನು ಹೇಳ್ಲಿಲ್ಲಾಂದ್ರೆ ನನ್ನಾಣೆ ನೋಡು.”
“ಆಣೆ!” ಬರಸಿಡಿಲಿನಂತೆ ಎರಗಿತು. ಶಿವಶಿವಾ, ಕಿವಿ ಮುಚ್ಚಿಕೊಂಡ.
ಚಿಕ್ಕಪುಟ್ಟ ಸಂಗತಿಗಳಿಗೆಲ್ಲ ಆಣೆ ಪ್ರಮಾಣ ಮಾಡುವ ತಾಯಿ ಈ ಪ್ರಪಂಚದಲ್ಲಿ ತನಗೊಂದೆ ಇರುವಳೋ ಮತ್ತಾರಿಗಾದರೂ ಇರುವಳೋ?
ಮಾತೃಸನ್ನಿಧಿಯ ಒಂದೊಂದು ಗಳಿಗೆಯೂ ಎಷ್ಟೊಂದು ಆತಂಕಕಾರಿಯಾಗಿರುವುದಲ್ಲ!
ಹೋಗಿ ಹೋಗಿ ಆ ಚೇಳು ತನ್ನನ್ನೇ ಕುಟುಕುವುದೇನು? ಹೋಗಿ ಹೋಗಿ ಅತ್ಯತಿಷ್ಟದ್ದಶಾಂಗುಲಂಗೇ ಕುಟುಕಬೇಕೇನು? ಒಟ್ಟಿನಲ್ಲಿ ನನ್ನ ಕರ್ಮ! ಪ್ರಭಾತಸಮಯ ಪ್ರಭಾಂ ಸಮಯದಲ್ಲಿ ಸೂರ್ಯನಿಗೆ ಅಶ್ರುತರ್ಪಣ ಮಾಡುತ್ತಿದ್ದ ಹಜಾಮರ ವೆಂಕೋಬಿಯ ಹೆಂಡತಿ ಇಠೋಬಿಯನ್ನು ನೋಡಿದ್ದು; ಸದರಿ ದಿನ ಏನಾದರೂ ಸಂಭವಿಸಬಹುದೆಂದು ಆ ಕ್ಷಣವೇ ಅಂದುಕೊಂಡು ಶೌಚ ಕಾರ್ಯಕ್ಕೆ ಹೋಗಿದ್ದ. ಅಬ್ಬಬ್ಬಾ ಅಂದರೆ ಅನಸೂಯಾ ತನ್ನ ಕಪಾಳಕ್ಕೆ ಎರಡು ಬಿಡಬಹುದು! ಇಲ್ಲವೆ ಇತ್ತೀಚಿಗೆ ರಾಜಕೀಯ ಸೇರಿರುವ ಬಾಡಿ ಬಿಲ್ದರ್ ತನ್ನನ್ನಟ್ಟಿಸಿಕೊಂಡು ಬರಬಹುದೆಂದುಕೊಳ್ಳುತ್ತ ಪ್ರಾತರ್ವಿಧಿಗಳನ್ನು ಮುಗಿಸಿದ್ದ. ಸೂರ್ಯಾಸ್ತದ ನಂತರ ಕಂಟಕದ ಸರಮಾಲೆಯೇ ಆರಂಭವಾಗಿರುವುದು ದುರದೃಷ್ಟಕರ ಸಂಗತಿ.

ತಾಯಿ ಮುಖ ಬಳ್ಳಾರಿ ಬಿಸಲಿಗೆ ತತ್ತರಿಸಿದ ಎಳೆಲತೆಯಂತಾಗಿರುವುದನ್ನು ಕಂಡ. ಮಮ್ಮಲನೆ ಮರುಗಿದ. ಹೇಳಿದರೆ ಅಶ್ಲೀಲದ ಪಾಪ ಸಂಚಯಕ್ಕೆ ತಾನು‌ಒಳ್ಳೆಯ ಚೀಲ… ಹೇಳಿಯೇ ಬಿಡಬೇಕೆಂದು ನಿರ್ಧರಿಸಿದ. ಸ್ವಧಾ ಸಮರ್ಪಯಾಮಿ… ತನಗೆ ತಾನು ತರ್ಪಣಕೊಟ್ಟುಕೊಂಡು ಬಾಯನ್ನು ಮೆಲ್ಲಗೆ ತೆರೆದ.

“ಅಮ್ಮಾಽಽ… ಆಣೆ‌ಇಟ್ಟು ನನ್ನನ್ನು ಧರ್ಮಸಂಕಟಕ್ಕೆಸಿಲುಕಿಸಿದ ನನ್ನಪ್ರೀತಿಯ ತಾಯೇ… ಇದೋ ಇಲ್ಲಿ ಚೇ…ಳು… ” ಎಂದು ಆ ಚಂದ್ರೋಪರಾಗ ಪರ್ವಣಿ ಪುಣ್ಯಕಾಲದಲ್ಲಿ ಶಾಮನು
ಕೈಯಿಂದ ಸಂಜ್ಞೆ ಮಾಡಿ ತೋರಿಸಿಬಿಟ್ಟನು.
ಸಕಲಗತನುಗತಂ ಶಂಕರಂ ಅಂತ ತನ್ನೆರಡು ಕೈಗಳಿಂದ ಮುಖವನ್ನು ಮುಚ್ಚಿಕೊಂಡುಬಿಟ್ಟ.
ಪ್ರೌಡೋಽಹಂ ಯೌವನಸ್ಥೋ ವಿಷಯ ವಿಷಧರೈಃ ಅಂತ ನಾಚಿ ಕೆಂಪಗಾಗಿದ್ದ ಮುಖವನ್ನು ಬೆಳಕಿನಿಂದ ಮರೆಮಾಚಿದ.
ಅದನ್ನು ಕೇಳಿದ ತಾಯಿ ಗುರುತ್ವಾಕರ್ಷಣೆ ಕಳೆದುಕೊಂಡಂತಾದಳು. ಅರ್ಧ ನಿಮೀಲಿತ ನೋಟದಿಂದ ಆ ಭಾಗ ನೋಡಿದಳು. ಆ ಭಾಗದ ಬಗ್ಗೆ ಆಕೆಗೆ ಸಿಟ್ಟು, ದುಃಖ, ಸಂತೋಷ ಒಟ್ಟೊಟ್ಟಿಗೆ ಬಂದವು.

“ಸಿಟ್ಟು!… ತನ್ನನ್ನು ತನ್ನ ಮಗನಿಂದ ದೂರ ಮಾಡುತ್ತಿರುವ ಕಂಕಲಾಡಿತನದ ಜಾಗವದು. ದಿನೇ ದಿನೇ ಮಗ ಆ ಕಡೆ ಧ್ಯಾನಸ್ಥನಾಗುತ್ತಿರುವನು, ತನ್ನಿಂದ ದ್ವಿದಳ ಧಾನ್ಯದಂತೆ ಬೇರ್ಪಡುತ್ತಿರುವನು. ಎಲ್ಲಾ ವಿಷಯಾಸಕ್ತಿಗಳ ಕೇಂದ್ರದಂತಿರುವ ಆ ಜಾಗವನ್ನು ತಾನಿದುವರೆಗೆ ನೋಡಿಯೇ ಇಲ್ಲ. ಮಾತೃತ್ವದ ಪರಮಾಧಿಕಾರದ ಮೇಲೆ ಧಾಳಿ ಮಾಡುವ ಆ ಸ್ವಯಂ ಚಾಲಿತ ಶಕ್ತಿಗೆ ದಿಕ್ಕಾರ!

’ದುಃಖ’ ಎಂಥ ಹುಚ್ಚಪ್ಪನಿದ್ದಾನೆ ತನ್ನ ಪ್ರೀತಿಯ ಮಗ! ಅದನ್ನೂ ತನ್ನಿಂದ ಮರೆಮಾಚುವಷ್ಟು ಸ್ವಾರ್ಥಿಯಾಗಿರುವನಲ್ಲ! ಅದವನಿಗೆ ಗುಣ, ತಾನು ಗೌಣ ಯಾಕೆ ಹೀಗಾಗ್ತಿದೆ! ತನನೆ ತನ್ನ ಮಗನ ತ್ರಿಕಾಲ ಸತ್ಯಗಳ ಮೇಲೆ, ದೈಹಿಕ ವಿಘಟನೆಗಳ ಮೂಲ ಸೆಲೆಯ ಬಗ್ಗೆ ತಾಯಿಯಾದ ತನಗೆ ಅಧಿಕಾರವಿಲ್ಲವೇನು?

’ಸಂತೋಷ’ ಅರೆ! ಮೊನ್ನೆ ಮೊನ್ನೆ ತಾನು ಎತ್ತಿ ಆಡಿಸಿ; ಮೊಲೆಯೂಡಿಸಿ; ಶೌಚವೇ ಮೊದಲಾದ ಸಹಜ ಕ್ರಿಯೆಗಳನ್ನು ಮಾಡಿಸಿ; ಸಂಬಂದ ವಾಚಕ ಪದ ವಿಶೇಷಣಗಳನ್ನು ಕಲಿಸಿ ಮಾತೃ ಮುಗ್ಧತೆಯ ಋಷ್ಯ ಶೃಂಗ ತುದಿಯ ಮೇಲೆ ನಿಂತಿದ್ದ ತನಗೆ ಅವನಿಷ್ಟೊಂದು ಬೆಳೆದು ದೊಡ್ಡವನಾಗಿರುವುದರಿಂದಲ್ಲವೇ ಈ ನಾಚಿಕೆ ಬಿಗುಮಾನಗಳಿತ್ಯಾದಿ! ತಾನು ಗಮನಿಸದಂಥ; ತನ್ನ ಮಾತ್ರುತ್ವದ ಅರಿವಿಗೆ ಬಾರದಿರುವಂಥ ಬೆಳವಣಿಗೆ ಅವನ ದೇಹದಲ್ಲಿ ಇರುವುದಾದರೂ ಯಾವುದು? ಅದರ ಪೂರ್ವೋತ್ತರ ಅಗತ್ಯಗಳನ್ನು ಪೂರೈಸುವ ಅಧಿಕಾರ ತನಗಿನ್ನಷ್ಟು ಬೇಗನೆ ದೊರಕುತ್ತಿರುವುದಲ್ಲವೆ!
ಎಷ್ಟೊಂದು ನಾಚಿಕೊಡಿರುವನಲ್ಲ ತನ್ನ ಮಗ, ತಾಯಿಯ ಸಾನ್ನಿಧ್ಯದಲ್ಲೂ ನಾಚಿಕೆ ಏನು?
“ಮಗೂ… ಮುಖವನ್ಯಾಕೆ ಹಾಗೆ ಮುಚ್ಕೊಂಡಿದ್ದೀಯೋ ಹುಚ್ಚಪ್ಪಾ… ಕೈ ತೆಗೆ… ನಿನ್ ಮುಖದ ಹೊಸ ಭಾವನೆಯನ್ನು ನೋಡೋ ಆಸೆಯಾಗಿದೆ…” ಅಲುಮೇಲಮ್ಮ ಬಲವಂತದಿಂದ ಮುಖದ ಮೇಲಿದ್ದ ಕೈಗಳನ್ನು ತೆಗೆದಳು.
ಅವನಲ್ಲಿ ಒಂದೆರಡು ಕ್ಷಣ ಹಿಂದಿದ್ದ ಗೊಂದಲವಿರಲಿಲ್ಲ. ಮಾತೃತ್ವದ ಗರಿಷ್ಠತೆಗೆ ಅರ್ಪಿಸಿಕೊಂಡಿದ್ದ ಅವನು ಅವನತಮುಖನಾದ…
ತಾಯಿ ತನ್ನ ಕೈಗಳನ್ನು ಮೇಲಿರಿಸಿದಳು…
ಮೆಲ್ಲಗೆ ನಿಧಾನವಾಗಿ ಕೆಳಗೆ ಸರಿಸಿದಳು.
ಸೃಷ್ಟಿ ಕಲೆಗೆ ಪ್ರಧಾನ ಸ್ವಯಂಚಾಲಿತ ಕೇಂದ್ರಕ್ಕೆ ಕುಟುಕಿರುವ ಚೇಳೇ ನಿನಗೆ ಧಿಕ್ಕಾರ!… ಏನೇನೋ ಗೊಣಗುತ್ತ ಕಣ್ಣು ಮುಚ್ಚಿದಳು ಅವನು ನಿರಾಕರಿಸಿದರೂ ಕೇಳದೆ ಕೈಗಳನ್ನು ಮತ್ತಷ್ಟು ಕೆಳಗೆ ಸರಿಸಿದಳು.
ಆ ದರಿದ್ರದ ಹುಡುಗಿ ಅನಸೂಯಳ ಸ್ಪರ್ಶ ಮೈಲಿಗೆಯ ಕಲ್ಪನೆ ಪ್ರಾಯಶ್ಚಿತ್ತವಾಗಿಯೇ ಚೇಳು ಕುಟುಕಿರಬಹುದೆಂದು ಆ ತಾಯಿ ಗೊಣಗುತ್ತಿರಲು…

ಬೆಂಗಳೂರಿನಲ್ಲಿದ್ದ ರಾಘೂ ಮಾಮನಿಗೆ ಪತ್ರಬರೆಯೋದಕ್ಕೂ ಮೂರು ದಿನ ಮೊಡಲು ಅನಸೂಯಾ ಮಾತಿನಿಂದ ಸಂಬಂಧ ಹರಕೊಂಡು ಬರೋದೇನೋ ಬಂದುಬಿಟ್ಟಳು. ಅದರ ಸಮಾಧಾನ ಎಂಬುದು ಪುರ್ರನೆ ಹಾರಿ ಹೋಗ ಬಿಡಬೇಕೇ ಹಾಳಾದ್ದು! ಬದು ಬಿಡೇ ಕಾಲ ಹಿಂಗೇ ಇರೋದಿಲ್ಲ. ಯಾವ ಘಳಿಗೇಲಿ ಏನಾಗ್ತದೋ ಬಲ್ಲೋಯಾರು? ನಾವು ಹೇಳಿ ಕೇಳಿ ಹೆಣ್ಣು ಮೂಳಗಳು, ಮೂರಾಗೋ ಕಡೆ ಆರಾಗಿ ಬಿಟ್ರೆ ಕನ್ನೀರವ್ವನ ಬಾವೀನೆ ಗತಿ. ಅದೂ ಅಲ್ದೆ ನಿಮ್ಮಪ್ಪನಿಂದ ಪತ್ರ ಇಲ್ಲ ಸುದ್ದಿ ಇಲ್ಲ… ಅವರೆಲ್ಲಿದ್ದಾರೋ? ಏನು ಮಾಡ್ತಿದಾರೋ? ಹಿಡಿದ ಕೆಲಸ ಮುಗಿಸ್ಕೊಂಡೇ ಬರುವ ಜಾಯಿಮಾನದವರು. ಹೆಂಡ್ತಿ ಮಕ್ಳು ಗ್ಯಾನ ಬ್ಯಾಡ್ವೇ? ಅವಯಾವಾಗಾದ್ರೂ ಬರ್ಲಿ… ನಿನ್ ತಲೆ ಮೇಲೆ ನಾಲ್ಕು ಅಕ್ಷತೆ ಕಾಳು ಹಾಕಿ ನಾನು ನನ್ ದಾರಿ ನೋಡ್ಕೋತೀನಿ ನನ್ನ ಮಾತು ನೀನು ಕೇಳಿದ್ರೆ ತಾನೆ, ಆ ಬಾಂಬ್ರು ಹುಡುಗನ ಚಿಂತೆ ಹಚ್ಚಿಕೊಂಡು ದಿನ ನೂಕಬೇಡಾಂತ ಎಷ್ಟು ಹೇಳಿದೆ. ನೀನು ಕೇಳಿದ್ಯಾ? ಅಗಿದ್ದು ಆಗಿಹೋಯ್ತು. ಈಗಲಾದ್ರು ಪತ್ರ ಬರೆಯೋದು ಬ್ಯಾಡವೇನು ಎಂದು ರುಕ್ಕಮ್ಮ ಮಗಿ ಮಳೆ ಅಂಟಿಕೊಂಡಂತೆ ಒಂದೇ ಸಮನೆ ಎರಡು ದಿನಮಾನ ಅಂಟಿಕೊಂಡು ಬಿಟ್ಟಿದ್ದಳು. ಆಕೆಯ ಮಾತುಗಳಿಗೆಲ್ಲ ಅನಸೂಯ ತಲೆಕೆಡಿಸಿಕೊಳ್ಳಲಿಲ್ಲ.

“ಏನವ್ವಾ ಹಿಂಗಾಡ್ತಿಯಲ್ಲ… ಈಗ ನಿನ್ಗೆ ಕಡಿಮೆ ಅಗಿರೋದಾದ್ರು ಏನು? ನಿಮ್ಗೆ ಮಗ ಅಂದ್ರು ನಾನೆ ಮಗ್ಳು ಅಂದ್ರೂ ನಾನೇ. ನನ್ನನ್ಯಾಗೋ ಮದ್ವೆ ಮಾಡ್ಕೊಟ್ಟು ನೀನೇನು ಮಾಡಬೇಕೆಂಡಿರುವಿ? ಇಷ್ಟೊಂದು ಓಡ್ಕೊಂಡಿದ್ದೀನಿ. ಪ್ರಪಂಚಾನು ಅರ್ಥ ಮಾಡ್ಕೊಡದೀನಿ. ನಮ್ ಸಂಸಾರಾನೂ ಅರ್ಥ ಮಾಡ್ಕೊಡದೀನಿ… ಅಪ್ಪ ಅನ್ನಿಸ್ಕೊಂಡೋನು ಹೇಳ್ದೆ ಕೇಳ್ದೆ ಮನೆಬಿಟ್ಟು ಹೋಗಿದ್ದಾನೆ… ಅಪ್ಪ ಬಂದೇ ಬತಾನೆ… ಬಲಿ ಬಂದ ಮೇಲೆ ಆತನೇ ನಿಂತು ಮದ್ವೆ ಮಾಡ್ತಾನೆ…” ಎಂದು ಶಾಮನ ಪತ್ರಗಳನ್ನು ಅಡುಗೆ ಮನೆಯ ಯಜ್ಞ ಕುಂಡಕ್ಕೆ ’ಸಮರ್ಪಯಾಮಿ’ ಮಾಡುತ್ತಾ ಹೇಳಿದಳು.

“ಅಲ್ಲಿವಗೂ?” ಸ್ವಾತಿ ಸ್ಟೋರಿಗೆ ಕೊಡಬೇಕಿದ್ದ ವಯರ್ ಬುಟ್ಟಿಗಳ ಪೈಕಿ ಇಪ್ಪತ್ತನೆಯದು ಮತ್ತು ಕೊನೆಯದು ಹೆಣೆಯುತ್ತ ಪ್ರಶ್ನಾತ್ಮಕ ಚಿನ್ಹೆ ಇಟ್ಟಳು ರುಕ್ಕಮ್ಮ.
“ನನ್ಯಾವುದಾದರೊಂದು ನೌಕರಿ ನೋಡ್ಕೋತೀನಿ” ಎಂದು ಕೊನೆ ಪತ್ರವನ್ನು ಬೆಂಕಿಗೆಸೆದು ನಿಟ್ಟುಸಿರುಬಿಟ್ಟಳು ಅನಸೂಯಾ. ವರಲಕ್ಶ್ಮಿ ಫೈನಾನ್ಸ್ ಕಾರ್ಪೊರೇಷನ್ನಿನ ವೆಂಕಟರಾಮು ಬರೊ ತಿಂಗಳು ಒಂದರಿಂದ ಬಂದು ಹಾಜರಾಗಬಹುದೆಂದು ಹೇಳಿದ್ದ”
“ನೀನು ನೌಕರಿ ಸೇರುವುದು ಬ್ಯಾಡ. ನೀನು ದುಡಿದು ತಂದಿದ್ನ ನಾನು ತಿಂದು ಬದ್ಕೋದೂ ಬ್ಯಾಡ. ನಿನ್ ಮದ್ವೆ ಮಾಡಿ ಮುಗಿಸಿ ನಾನು ನನ್ನ ತವರ್ಮನೆಗೆ ಹೋಗ್ತೀನಿ” ಎಂದು ಕಡ್ಡಿ ಮುರಿದಂತೆ ಹೇಳಿದ್ದಳು. ತವರೂರಿಗೆ ಬರೋದಾದ್ರೆ ಎಂಟೆಕರೆ ಹೊಲ ಮಾಡಿಸಿ ಕೊಡುವುದಾಗಿ ಚಿಕ್ಕಪ್ಪ ಕಳೆದ ತಿಂಗಳು ಬಂದಿದ್ದಾದ ಹೇಳಿ ಹೊಗಿದ್ದ.
“ಹಾಗಾದ್ರೆ ಅಪ್ಪ ಬರೋವಗೂ ಕಾಯೋದು ಬ್ಯಾಡಾಂತಿ ಏನು?” ಒಂದು ಕೈಲಿ ಪತ್ರ ಮತ್ತೊಂದು ಕೈಲಿ ಪೆನ್ನು ಹಿಡಿದು ಕೇಳಿದಳು.
“ಅವು ಅಷ್ಟು ಬೇಗ ಬರಬೌದೆಂದ್ಕೊಂಡಿಲ್ಲ. ಬರೋದು ವರ್ಷಗಟ್ಲೆ ಆಗ್ತದಂತ ಹೇಳೇ ಹೋಗ್ಯಾರ… ನಿನ್ ಮದ್ವೆ ಮಾಡಿ ಮುಗಿಸಿದ್ರೆ ಅವ್ರೂ ಸಂತೋಷ ಪಡ್ತಾರೆ.”
ತಾಯಿ ಮಗಳಿಬ್ಬರೂ ಒಂದೇ ಸಲಕ್ಕೆ ನಿಟ್ಟುಸಿರುಬಿಟ್ಟರು.

ಅನಸೂಯಾ ತಾಯಿ ಹೆಸರಿನಲ್ಲಿಯೇ ರಾಘುಗೆ ಪತ್ರ ಬರೆದು ಮುಗಿಸಿದಳು. ಅದನ್ನು ದಬ್ಬಿಗೆ ಹಾಕುವಾಗ ಶಾಮುಗೆ ಚೇಳು ಕುಟುಕಿದ್ದು ಮರುಕಳಿಸಿತು. ಅದು ತನಗಾದರೂ ಕುಟುಕಬಾರದಾಗಿತ್ತ ಅಂದುಕೊಂಡಳು. ಕವಿ ಹೃದಯದ ಅವನಿಗೆ ಚೇಳು ಹೊಸ ಅನುಭವ ನೀಡಿರಬಹುದು. ಬರೀ ಇರುವೆಯಿಂದ ಕಚ್ಚಿಸಿಕೊಳ್ಳುತ್ತಾ ಕೂತಿದ್ದರೆ ಕವಿತೆ ಅರ್ಥವಾಗುವುದಾದರೂ ಹೇಗೆ? ಅವನು ಇರುವೆಯಿಂದಲೂ ಕಚ್ಚಿಸಿಕೊಂಡಿರಲಿಕ್ಕಿಲ್ಲ… ಜಲಜಾಕ್ಷಿ ನೀಡಿರುವಂಥ ಅನುಭವವನ್ನು ತನ್ನಿಂದ ನೀಡಲಾಗಲಿಲ್ಲ… ಆಕೆಯ ಜಾಯಮಾನ ಆಕೆಯದು; ತನ್ನ ಜಾಯಮಾನ ತನ್ನದು…

ಶತಪದಿಯಂತೆ ನಡೆಯುತ್ತಿದ್ದ ಶಾಮು ಮತ್ತೆ ಮತ್ತೆ ನೆನಪಾದ. ಅವನ ತಾಯಿ ತನ್ನ ಮಗನನ್ನು ಎತ್ತಿಕೊಂಡೇ ಓಡಾಡುತ್ತಿರಬಹುದು ಮನೆತುಂಬ. ವೃಶ್ಚಿಕ ಕುಟುಕಿದ್ದರಿಂದ ದೊಡ್ಡದೊಂದು ಕಂಟಕವೇ ಪರಿಹಾರವಾಗಿದೆ ಎಂದು ಶಾಸ್ತ್ರಿಗಾಳು ಭಾಗಿಸಿ ಗುಣಿಸಿ ಅಭಿಪ್ರಾಯಪಟ್ಟಿರಬಹುದು. ಆದರೆ ಶಾಮು ಎಂಬ ಆದಿಮಾನವನಿಗೆ ಅದಾವುದೂ ಅರ್ಥವಾಗಲಿಕ್ಕಿಲ್ಲ. ಅಲುಮೇಲಮ್ಮ ಮತ್ತು ಶಾಸ್ತ್ರಿಗಳ ಅಭಿಪ್ರಯಗಳ ಉಡಾವಣೆಯ ಸ್ತಳ ಮಾತ್ರ ಅವನು. ಡೋಲಾಯ ಮನಸ್ಸಿನ ಅವನನ್ನು ತಿದ್ದು ತಿಳುವಳಿಕೆ ತನಗೆ ಮಾತ್ರ ಇತ್ತು. ಕೈ ಹಿಡಿಯುವ ಯಾವ ವಧುವೂ ಅವನನ್ನು ತಿದ್ದುವುದು ಸಾಧ್ಯವಿಲ್ಲ… ಹೀಗೆ ಏನೇನೋ ಯೋಚಿಸುತ್ತ ಬೀದಿಯ ಕೊನೆಯಲ್ಲಿ… ಆರು ಬೆರಳು ವಂಶದ ಶೆಟ್ಟಿ ಅಂಗಡಿಯ ಕಂಭಕಿದ್ದ ಅಂಚೆ ಡಬ್ಬಿಯಲ್ಲಿ ಪತ್ರ ಹಾಕಿ ಬರುವಾಗ ಕೆಲವು ಪಡ್ಡೆಗಳು ತನ್ನ ಕಡೆಗೇ ಪಿಳಿಪಿಳಿ ನೋಡುತ್ತಿರುವುದನ್ನು ಗಮನಿಸಿದಳು.

ಒಂದಿಷ್ಟು ತರಕಾರಿ ಕೊಂಡುಕೊಂಡು ಹೋದರಾಯಿತು‌ಅಂತ ಎಡರಳ್ಳಿ ಸಣ್ಣೀರವ್ವನ ಬಳಿಗೆ ಹೋಗುತ್ತಿರುವಾಗ ಶಾಮು ತನ್ನ ತಾತನ ಜೊತೆ ಎಲ್ಲಿಗೋ ಹೊರಟಿರುವುದು ಕಂಡಿತು. ಅವರಿಬ್ಬರು ವಿಶೇಷ ಉಡುಪಿನಲ್ಲಿದ್ದರು. ಬಹುಶಃ ಯಾವುದಾದರೂ ವೈದಿಕಕ್ಕೊ, ಶ್ರಾದ್ಧಕ್ಕೋ ಹೊರಟಂತಿತ್ತು. ವೈದಿಕದ ಉಡುಪಿನಲ್ಲಿ ಶಾಮು ಶ್ರೀಕೃಷ್ನ ದೇವರಾಯನ ಅಪ್ಪಾಜಿ ತಿಮ್ಮರಸನಂತೆ ಕಾಣುತ್ತಿದ್ದ. ನೋವು ಕಡಿಮೆಯಾದಂತಿಲ್ಲ. ಕಾಲು ಸ್ವಲ್ಪ ಕಿಸಿದು ಹಾಕುತ್ತಿರುವನು.
ಅನಸೂಯಳನ್ನು ನೋಡಿದ ಕೂಡಲೆ ಮುಂಗುಸಿ ಕಂಡ ಹಾವಿನಂತೆ ತನ್ನ ತಾತನ ನೆರಳಿನಲ್ಲಿ ಅವಿತುಕೊಂಡನು.
ಅವನ ಆ ಅವಸ್ಥೆ ನೋಡಿ ಅನಸೂಯಾಳಿಗೆ ನಗು ಬಂತು.

ಆಕೆ ಕಾಯಿಪಲ್ಯೆ ಖರೀದಿಸಿದ ಸಣ್ಣಿರವ್ವನೂ ಹನ್ನೊಂದಕ್ಕೆ ಮದುವೆಯಾಗಿ ಹನ್ನೆರಡಕ್ಕೆ ಮೈನೆರತು ಹದಿನಾಲ್ಕನೇ ವಯಸ್ಸಿಗೊಂದು, ಹದಿನೈದನೇ ವಯಸ್ಸಿಗೊಂದರಂತೆ ಮಡಿಲು ತುಂಬಿಕೊಂಡು ಹದಿನಾರಕ್ಕೆ ರಂಡೆ ಪದವಿ ಪಡೆದಂಥಾಕೆಯೇ. ಸುಮಾರು ಐವತ್ತು ವರ್ಷ ಆಕೆಗೆ. ಅನಸೂಯಳ ಮೇಲೆ ಪ್ರೀತಿ. ಒಳ್ಳೇದು ಕೆಟ್ಟದ್ದು ವಿಚಾರಿಸಿ ವಿಚಾರಿಸದೆ ಎಂದೂ ಕಳಿಸಿದಾಕೆಯಲ್ಲ.
ಆಗಲೂ ಸಹ ವೀರವನಿತೆಯಂತೆ ಮಾತಾಡಿಸಿದಳು.
ಇಂಥವರಿಂದಲೇ ಜೀವನೋತ್ಸಾಹ ಪಡೆಯುವುದರಲ್ಲಿರುವ ದೈನ್ಯತೆಯನ್ನು ಅರ್ಥ
ಮಾಡಿಕೊಳ್ಳುತ್ತ ಅನಸೂಯ ಮನೆಗೆ ಮರಳಿದಳು.

“ಬಾ ತಾಯೀ… ಬಾರಮ್ಮಾ… ಕಾಯಿಪಲ್ಯೆ ತರಾಕ ಹೋಗಿದ್ದೇನಮ್ಮಾ; ಏನು ಕಾಲ ಬಂದೈತೇನೋ? ಏನು ತಗೊಂಡ್ರು ದುಬಾರಿ, ಕೊಳ್ಳಂಗಿಲ್ಲ ಬಿಡಂಗಿಲ್ಲ… ಹೇಗೋ ಒಂದ್ರೀತಿ ಬದುಕಬೇಕಲ್ಲ… ಉಪಾಸಯಿಲಿಕ್ಕಾಗ್ತದೇನು? ನಾನು ನೋಡಮ್ಮಾ ಬೀಡಿ, ಚಾ, ಕಾಫಿ ಎಲ್ಲ ಬಿಟ್‌ಬಿಟ್ಟೀನಿ. ಮನೇಲಿ ಯಾರಾದ್ರು ಬಂದ್ರೆ ಅವ್ರಿಗೆ ಮಾತ್ರ ಚಾ ಮಾಡ್ತೀನಿ ಅಷ್ಟೆ. ಹಾಸ್ಗೆ ಇದ್ದಷ್ಟು ಕಾಲು ಚಾಚಬೇಕು ನೋಡು. ಕಾಲ ಧರ್ಮ” ಮನೆ ಮುಂದುಗಡೆ ವರಾಂಡದಲ್ಲಿ ಹಾಕಿದ್ದ ಕುರ್ಚಿ ಮೇಲೆ ಕೂತು ತಲೆಬಾಗಿಲ ಮೇಲೆ ಕಣ್ಣು ಕೋರೈಸುತ್ತಿದ್ದ ಬಳ್ಳಾರಿ ಕನಕದುರ್ಗಾ, ಹುಲಿಗೆಮ್ಮ, ಸವದತ್ತಿ ಎಲ್ಲಮ್ಮ, ಮೈಸೂರಿನ ಚಾಮುಂಡಿ ಇವೇ ಮೊದಲಾದ ಎದ್ದು ಬರುತ್ತಾರೆನ್ನುವಂತಿದ್ದ ಶಕ್ತಿ ದೇವತೆಗಳ ಫೋಟೋಗಳ ಕಡೆಗೊಮ್ಮೆ, ಆತಂಕವನ್ನು ಮುಖದಲ್ಲಿ ಪ್ರಕಟಿಸುತ್ತಿದ್ದ ರುಕ್ಕಮ್ಮನ ಕಡೆಗೊಮ್ಮೆ ನೋಡುತ್ತ ಮಾತುಮಾತಿಗೊಮ್ಮೆ ನಿಟ್ಟುಸಿರು ಬಿಡುತ್ತ ತನ್ನ ಪಾಡಿಗೆ ತಾನು ಪ್ರಪಂಚವನ್ನೇ ತಲೆಮೇಲೆ ಹೊತ್ತುಕೊಂಡವನಂತೆ ಮಾತಾಡುತ್ತಿದ್ದ ಕಸೆಟ್ಟಿ ಚಂದ್ರಪ್ಪನ ಕಡೆಗೊಮ್ಮೆ ತೀಕ್ಷಣವಾಗಿ ನೋಡುತ್ತ ಮನೆ ಒಳಗಡೆ ಹೋದಳು ಅನಸೂಯಾ.
ಗಂಡ ರುದ್ರನಯಕನಿಂದ ಪತ್ರ ಬಂತೇ ಎನ್ನುವುದರ ಬಗ್ಗೆ; ಮಗಳು ಅನಸುಯಳ ಮದುವೆ ಬಗ್ಗೆ; ಒಂಟಿ ಹೆಂಗಸು ಹೇಗೆ ಜೀವನ ಸಾಗಿಸುವಿ ಎಂಬುದರ ಬಗ್ಗೆ; ಪುರುಷ ಪ್ರಧಾನ ಸಮಾಜದಲ್ಲಿ ಕಾಲ ಸೂಕ್ಷ್ಮವಾಗಿದೆ ಎನ್ನುವುದರ ಬಗ್ಗೆ; ತಾನು ದಿನಪತ್ರಿಗೆಗಳಲ್ಲಿ ಓದಿರುವ ಅಹಿತಕರ ಘಟನೆಗಳ ಬಗ್ಗೆ; ಬದಲಾಗುತ್ತಿರುವ ಹೊಸ ರಾಜಕೀಯ ವಾತಾವರಣದ ಬಗ್ಗೆ; ಋತುಮಾನಗಳು ಅದುಲುಬದಲಾಗಿರುವ ಬಗ್ಗೆ; ಋತುಮಾನಗಳು ಹೊತ್ತು ಗೊತ್ತಿಲ್ಲದೆ ಒಂದೇ ಸಮನೆ ಬೀಸುತ್ತಿರುವಬಗ್ಗೆ; ಹೊಸದಾಗಿ ರಾಜಕೀಯ ಪ್ರವೇಶ ಮಾಡಿ ಖಾದಿ ಸೀರೆ ಉಟ್ಟುಕೊಂಡು ಮಿಂಚುತ್ತಿರುವ ಗೊಬ್ಬರದಂಗಡಿ ಗುರುಬಸಪ್ಪನ ಮಗಳು ಜಲಜಾಕ್ಷಿ ಬಗ್ಗೆ; ದೇಶವನ್ನೇ ಗಡಗಡ ನಡುಗಿಸುತ್ತಿರುವ ಇಂದಿರಾಗಾಂಧಿ ಬಗ್ಗೆ ಚಂದ್ರಪ್ಪ ತನ್ನ ಪಾಡಿಗೆ ತಾನು ಮಾತಾಡುತ್ತಿದ್ದುದು; ಪ್ರತಿಯೊಂದು ಮಾತಿಗೆ ಅನ್ಯಮನಸ್ಕಳಾಗಿ ತಾಯಿ ರುಕ್ಕಮ್ಮ ಹೂಂಗುಟ್ಟುತ್ತಿದ್ದುದೆಲ್ಲವನ್ನು ಕೇಳಿಸಿಕೊಳ್ಳುತ್ತ ಅಡುಗೆಮನೆಯೊಳಗೆ ಅಡುಗೆ ಮಾಡತೊಡಗಿದ್ದಳು ಅನಸೂಯ.

ತಮ್ಮ ಮನೆಯ ಮಾಲಿಕಿನ್‌ರವರ ಜೀವ ತಿನ್ನುತ್ತಿರುವ ಈ ಖಳನಿಗೆ ತಕ್ಕ ಶಾಸ್ತಿ ಮಾಡಬೇಕೆಂಬ ಉದ್ದೇಶದಿಂದ ಮೂಷಕ ದಂಪತಿಗಳು ಕಿರ್‌ಕಿರ್ ಸದ್ದು ಮಾಡುತ್ತ ಅವನ ನೆತ್ತಿ ಮೇಲಿದ್ದ ಜಂತಿ ಮೇಲೆ ಕೂತು ಆ ಚಕ್ರಬಡ್ಡಿ ಚಂಡಾಲ ಕಿಂಕರನ ಕಡೆ ತೀಕ್ಷ್ಣವಾಗಿ ನೋಡಿದವು. ಅವನು ಆಕಳಿಕೆ ಬಂದು ಮುಖ ಎತ್ತಿ ಬಾಯಿ ತೆರೆದೊಡನೆ ಅವು ತಮ್ಮ ಎಂಟು ಕಾಲುಗಳಿಂದ ಪುತಪುತನೆ ನುಸಿಮಣ್ಣನ್ನುದುರಿಸಿದವು. ಅದು ಸೀದ ಅವನ ಕಣ್ಣು, ಬಾಯಿಗೆ ಬಿತ್ತು. ಅವನು ಕಂಗಾಲಾಗಿ ಕಣ್ಣುಜ್ಜಿಕೊಳ್ಳುತ್ತ ಕೊಕ್‌ಕೊಕ್ ಕೆಮ್ಮುತ್ತ ಇಲಿಗಳನ್ನು ಶಪಿಸುತ್ತ ಎದ್ದು ನಿಂತನು.

“ತಂಗೀ… ರುಕ್ಕಮ್ಮಾ ನಿನ್ ಕಷ್ಟ ನೋಡಿ ಒತ್ತಾಯ ಮಾಡೋಕೆ ಮನ್ಸು ಒಪ್ತಿಲ್ಲಮ್ಮಾ ಬಾಡಿಗೆ ಬಾಕಿ ಹಾಳೂಮೂಳೂ ವಸೂಲುಮಾಡ್ಕೊಂಡ್ ಹೋದ್ರೇನೇ ಸೊಸಿ ಕೂಳು ಹಾಕೋದಮ್ಮಾ. ಬಂಗಾದಂತ ಮಗ್ನಿಗೆ ಅಂಥೋಳ್ನ ತಂದಿರೋದು ನನ್ ಕರ್ಮ ಈಗ ಹೋಗಿ ಏನೋ ಒಂದು ಹೇಳಿ ಸರಿ ಮಾಡ್ತೀನಿ. ಮುಂದಿನ್ತಿಂಗ್ಳು ನನ್ಗೊಂದು ದಾರಿ ತೋಸಿಬಿಡಮ್ಮಾ ಇನ್ನೂ ನಾನು ಚಪ್ರದಳ್ಳೀಗೆ ನಡ್ಕೋತ ಹೋಗಿ ಕುದಿರೆ ಕಾಲಿನ ಕಾಳಿಂಗಾಚಾರಿಯ ಕಾಲು ಹಿಡಕೋಳ್ಳೋದೈತಿ…” ಎಂದು ಕಸೆಟ್ಟಿ ಚಂದ್ರಪ್ಪ ಸಂಸಾರವೆಂಬ ಗೂಲಿ

ಗುಡ್ಡವನ್ನು ಬೆನ್ನ ಮೇಲಿಟ್ಟುಕೊಂಡಿರುವವನಂತೆ ಭಾರವಾದ ಹೆಜ್ಜೆ ಹಾಕುತ್ತ ಹೋದ ಕೂಡಲೆ ತಾಯಿ ರುಕ್ಕಮ್ಮ ನಿಡಿದಾದ ಉಸಿರು ಬಿಟ್ಟಿದ್ದು ಹಿತ್ತಲಲ್ಲಿ ರಾಶಿರಾಶಿ ಪಾತ್ರೆಗಳನ್ನು ಹಾಕಿಕೊಂಡು ಕೂತಿದ್ದ ಅನಸೂಯಳಿಗೆ ಕೇಳಿಸಿತು.
ರಾತ್ರಿ ತಾಯಿ ಮಕ್ಕಳಿಬ್ಬರೂ ನಿದ್ದೆ ಬಾರದೆ ತುಂಬ ಹೊತ್ತಿನವರೆಗೆ ಒದ್ದಾಡಿದರು. ಪರಸ್ಪರ ಹೇಳಿಕೊಳ್ಳುವಷ್ಟು ಸಾವಿರಾರು ಸಂಗತಿಗಳು ಅವರಿಬ್ಬರ ಹೃದಯಗಳಲ್ಲಿ ಕತಕತನೆ ಕುದಿಯುತ್ತಿದ್ದವು. ಹೇಳಿಕೊಲ್ಲುವುದಕ್ಕಿಂತ ಮೌನವೇ ಹೆಚ್ಚು ಸೂಕ್ತವೆಂದುಕೊಂಡರು. ಮಾತಾಡಿಕೊಂಡಲ್ಲಿ ಲಘು ಜಗಳವಾಗುವ ಸಾಧ್ಯತೆ ಇತ್ತು. ತಾಯಿಗೆ ಬೆನ್ನು ಮಾಡಿ ಮಗಳು ಬಲಗಡೆ ಕಿಟಕಿ ಕಡೆ ಮುಖ ಮಾಡಿ ಪಿಳಿಪಿಳಿ ಕಣ್ಣು ಬಿಡುತ್ತಿದ್ದುದಕ್ಕೆ ಕಾರಣ ಇಲ್ಲದಿಲ್ಲ.

ಆ ಕಿಟಕಿಗೆ ಕೆಲವು ಫೂಟುಗಳ ದೂರದಲ್ಲಿಯೇ ಶಾಸ್ತ್ರಿಗಳ ಮನೆ ಇರುವುದಷ್ಟೆ. ಆ ಕಡೆಯಿಂದ ಹೌದೋ ಅಲ್ಲವೋ ಅನ್ನುವಂತೆ ಶಾಸ್ತ್ರಿಗಳ ಮನೆ ಕಡೆಯಿಂದ ಮಾತಾಡುತ್ತಿರುವ ಧ್ವನಿಯನ್ನು ಕರಾರುವಾಕ್ಕಾಗಿ ಊಹಿಸುವುದು ಕಷ್ಟಸಾಧ್ಯವಾಗಿತ್ತು. ಅಲ್ಲಿ ಮಾತಾಡುತ್ತಿರುವವರು ಯಾರು? ಅವರೇನು ಮಾತಾಡುತ್ತಿರಬಹುದು? ಯಾವುದರ ಬಗ್ಗೆ ಮಾತಾಡುತ್ತಿರಬಹುದು? ಎಂಬಂಥ ಕೆಲವು ಸಂದೇಹಗಳೇ ಆಕೆಯನ್ನು ನಿದ್ದೆ ಮಾಡಲು ಬಿಡಲಿಲ್ಲ.

ಎಲೈ ಸಂದೇಹಗಳೇ… ಇತ್ತ ಕಡೆ ಗಮನ ಕೊಡಿ. ಇದು ರುದ್ರನಾಯಕನ ಮಗಳು ಅನಸುಯಾ ಎಂಬ ಕನ್ಯಾಮಣಿ ಮಾಡುತ್ತಿರುವ ಪ್ರಾಚಾರ, ನೀವ್ಯಾಕೆ ಹೀಗೆ ಹೊತ್ತು ಗೊತ್ತಿಲ್ಲದೆ ಬಂದು ಪೀಡಿಸುತ್ತಿರುವಿರಿ. ಮಾಡಲಿಕ್ಕೆ ಬೇರೆ ಕೆಲಸವಿಲ್ಲವೇನು ನಿಮಗೆ? ಕೆಲವು ತಾಸುಗಳ ಹಿಂದೆಯಷ್ಟೇ ನಮ್ಮ ನಾಯಕಿ ಶಾಮನೆಂಬ ಲಂಗೋಟಿಯ ಪ್ರತಿಯೊಂದು ಅವಶೇಷಗಳನ್ನು ಅಗ್ನಿಗೆ ತರ್ಪಣ ಕೊಟ್ಟಾಕ್ಷಣವೇ ಕುಂ. ವೀರಭದ್ರಪ್ಪನೆಂಬ ಲಿಪಿಕಾರ ಬರೆಯುತ್ತಿರುವ “ಶಾಮಣ್ಣ” ಎಂಬ ಕಾದಂಬರಿಯ ಒಂದು ಪ್ರಮುಖ ಭಾಗ ಮುಗಿದಂತೆಯೇ ಲೆಕ್ಕ… ಆದ್ದರಿಂದ ನೀವು ಸಮಯ ಪ್ರಜ್ಞೆ ಇಲ್ಲದೆ ಟೊಂಗುಟುಸುಕು ಅಂತ ಏನೆಲ್ಲ ನೆನಪು ಮಾಡಿ ನಮ್ಮ ಕಥಾ ನಾಯಕಿಗೆ ತೊಂದರೆ ಕೊಡೋದ್ಯಾಕೆ?… ನಿಮ್ಮಿಂದಾಗಿಯೇ ಈಕೆ ಸರಿಯಾಗಿ ನಿದ್ದೆ ಮಾಡುತ್ತಿಲ್ಲ, ಹೊಟ್ಟೆ ತುಂಬ ಊಟ ಮಾಡುತ್ತಿಲ್ಲ. ತನ್ನ ಬಗ್ಗೆಯೇ ತನಗೆ ಖಬರಿಲ್ಲ… ಈ ಯುಕ್ತ ವಯಸ್ಸಿನಲ್ಲಿ ಹೊತ್ತಿಗೆ ಸರಿಯಾಗಿ ಊಟ ನಿದ್ರೆ ಮಾಡುತ್ತಿದ್ದರೇನೆ ಮೈಕೈ ತುಂಬಿಕೊಂಡು ಚೆನ್ನಾಗಿರ್ತಾರೆ, ಇಲ್ಲಾಂದ್ರೆ ಇಲ್ಲ… ದಯವಿಟ್ಟು ನೀವೆಲ್ಲ ಹೀಗೆ ತೊಂದರೆ ಕೊಡದೆ ಆಕೆ ಪಾಡಿಗೆ ಆಕೆಯನ್ನು ಬಿಟ್ಟುಬಿಡಿ…

ತನ್ನನ್ನು ಹಿತವಾಗಿ ನೇವರಿಸುತ್ತಿದ್ದ ಕೈಯನ್ನು ಮೃದವಾಗಿ ನೆಕ್ಕುತ್ತ ಬೆಕ್ಕು ಒಳಗೊಳಗೇ ಗೊರಗೊರ ಸದ್ದು ಮಾಡುತ್ತ ಸಂದೇಹಗಳಿಗೆ ವಿನಂತಿಸಿಕೊಂಡಿತು. “ಎಲೈ ಮಾರ್ಜಾಲವೇ ಆಕೆ ಅಲ್ಲೇ ಸ್ವಲ್ಪ ಸ್ಪರ್ಶಿಸಿದಾಕ್ಷಣ ಹಿಂದು ಮುಂದೆ ನೋಡದೆ ಆಕೆ ಪರ ವಕಾಲತ್ತು ವಹಿಸಿ ಮಾತನಾಡುತ್ತಿರುವೆಯಲ್ಲ!… ಆಕೆ ಸ್ವಲ್ಪ ಮುಟ್ಟಿದ್ರೇನೆ ನೀನು ರೋಮಾಂಚನ ಪಡುತ್ತಿರಬೇಕಾದರೆ ಮುಟ್ಟುತ್ತ ಮುಟ್ಟಿಸಿಕೊಳ್ಳುತ್ತಲೇ ಬೆಳವಣಿಗೆಯ ಒಂದು ಹಂತ ತಲುಪಿರುವ ಆ ಶಾಮನ ಸ್ಥಿತಿ ಹೇಗಿರಬೇಡ? ಈ ನಿನ್ನ ಕಥಾ ನಾಯಕಿಯ ಪರಿಸ್ಥಿತಿ ಹೇಗಿರಬೇಡ! ಸ್ತ್ರೀಯ ಸಮಸ್ತ ರೂಪ ವೈವಿಧ್ಯತೆಯನ್ನು ಶಾಮು ತನ್ನ ತಾಯಿಯಲ್ಲಿ

ಕಂಡುಕೊಳ್ಳುತ್ತಿರುವುದರಿಂದಾಗಿಯೇ ಸಂದರ್ಭ ಬಿಗಡಾಯಿಸಿರುವುದು. ಅವನು ಪರಿಸ್ಥಿತಿಯ ಕೂಸು ಮಾತ್ರ. ಅವನೂ ಈಗ ತಮ್ಮ ಮನೆಯಲ್ಲಿ ಗಾಢ ನಿದ್ದೆ ಮಾಡುತ್ತಿಲ್ಲ… ಅವನೂ ತನ್ನ ಕಣ್ಣುಗಳನ್ನು ಪಿಳಿಪಿಳಿ ತೆರೆದು ಈ ಕಡೆ ನೋಡುತ್ತಿದ್ದಾನೆ. ಅಡಿಗಡಿಗೆ ನಿಟ್ಟುಸಿರು ಬಿಡ್ತಿದಾನೆ. ಒಂದು ನಿಮಿಷದಲ್ಲಿ ಐದು ಸಾರಿ ಮಗ್ಗಲು ಬದಲಾಯಿತ್ತಿದ್ದಾನೆ. ಪರಿಸ್ಥಿತಿ ಬಿಗಡಾಯಿಸಲು ಅವನು ಇಷ್ಟಪಡೊ ವ್ಯಕ್ತಿಯಲ್ಲ. ಯೋಚಿಸುವುದಷ್ಟೇ ಗೊತ್ತವಗೆ, ನಿರ್ಣಯ ತಗೋಳಿಕ್ಕರಿಯನು. ಅವತ್ತು ಏನೋ ಹೆಳಲಿದ್ದ. ಮೊದಲಿಗೆ ರಾಜಕಾರಣಿ ವೇಷ ಧರಿಸಿದ್ದ ಜಲಜಾಕ್ಷಿ ಕಂಡು ಧೃತಿಯನ್ನು ಮುಕ್ಕಾಲು ಭಾಗ ಕೆಡೆಸಿದರೆ ಚೇಳು ಕುಟುಕುವುದರ ಮೂಲಕ ಧೃತಿಯ ಕಾಲು ಭಾಗವನ್ನೂ ಕೆಡೆಸಿಬಿಟ್ಟಿತು. ತಾಯಿಯ ಬಳಿಯಂತೂ ಅವನು ಯಾಕಾದ್ರೂ ಚೇಳು ಕಡಿಸಿಕೊಂಡು ಬಿಟ್ಟೆನೋ ಎಂದುಕೊಂದುಬಿಟ್ಟ. ಇಷ್ಟದರೂ ಅವನು ಎಚ್ಚರಗೊಂಡಿದ್ದಾನೆ. ದೂರ ಸಂವೇದಿ ಉಪಗ್ರಹದಂಥ ತನ್ನ ಮನಸ್ಸು ಈ ಕಡೆ ಉಡಾಯಿಸಿದ್ದಾನೆ. ಅಲ್ಲದೆ ಆಪ್ತ ಮಂತ್ರಾಲೋಚನಾ ಗೃಹದ ಕಡೆಗೆ ಪಂಚೇದ್ರಿಯಗಳನ್ನು ಅಟ್ಟಿರುವ ಶಾಮು ತುಂಬ ಒಳ್ಳೆಯವನು ಕಣಪ್ಪಾ ಮಾರ್ಜಾಲವೇ?” ಎಂದು ಸಂದೇಹಗಳು ಪಟಪಟ ನುಡಿಯೋದನ್ನು ನುಡಿದು ತಮ್ಮ ಕೆಲಸಕ್ಕೆ ತಾವು ಹೊರಟು ಹೋದವು.

ಅದೆಲ್ಲವನ್ನು ಕೇಳಿಸಿಕೊಂಡು ಮಾರ್ಜಾಲ ಚಿಂತೆಗೀಡಾಯಿತು. ಮುಂಗಾಲುಗಳಿಂದ ಮುಖ ಕೆರೆದುಕೊಂಡಿತು. ನಾಲಿಗೆಯಿಂದ ಮುಂಗಾಲುಗಲನ್ನು ನೇವರಿಸಿಕೊಂದಿತು. ನಂತರ ತನ್ನ ಮೂತಿಯನ್ನು ಅನಸೂಯಳ ಬಿಸಿಬಿಸಿ ಮುಖಕ್ಕೆ ಹತ್ತಿರ ಒಯ್ದು ಮೂಸಿತು. ಆಕೆಯ ಫಳಫಳ ಹೊಳೆವ ಕಣ್ಣುಗಳನ್ನು ನೋಡಿತು.

“ಮಲಿಕ್ಕಳ್ಳೇ ನಮ್ಮವ್ವ… ಹಿಂಗ್ಯಾಕೆ ಚಿಂತೆ ಮಾಡಲಾಕತ್ತಿ… ಬಂಗಾರದ ಗೊಂಬೆಯಂತಿರೋ ನೀನೆಲ್ಲಿ; ಅರಗಿನ ಗೊಂಬೆಯಂಗಿರೋ ಅವನೆಲ್ಲಿ… ಸಂಸ್ಕೃತಕಲ್ತುಕೊಂಡಿರೋರು ರೌಡಿಗಳಷ್ಟು ಅಪಾಯಕಾರಿಯಲ್ಲ… ಸುಮ್ನೆ ನಿದ್ದೆ ಮಾಡು, ಆಗ್ಲೆ ಶಾನೆ ಹೊಟ್ಟಾಗೈತೆ” ಎಂದು ಅರ್ಥ ಬರುವಂತೆ ಮಾರ್ಜಾಲ ಮ್ಯಾಂಗುಟ್ಟಿತು. ಅದರ ಅಂತರಂಗವನ್ನು ಅರ್ಥಮಾಡಿಕೊಂಡವಳಂತೆ ಅನಸೂಯ ಅದನ್ನು ಸ್ತನಗಳಿಗೆ ಅಪ್ಪಿಗೊಂಡಳು. ಮಾರ್ಜಾಲಕ್ಕೆ ’ಭೋ’ ಖುಷಿಯಾಯಿತು. ಅದು ಅದರ ಪ್ರಾಚೀನ ಆಸೆಯಾಗಿತ್ತು ಕೂಡ.
ಆಕೆಯ ಹೃದಯ ಭಾಗಕ್ಕಂಟಿಸಿದ್ದ ತನ್ನ ಮೈಯಿಂದ ಅದೇನನ್ನು ಹೀರಿಕೊಂಡಿತೋ ಏನೋ ಅದನ್ನು ತಾನು ಹೇಗೆ ಅರ್ಥಮಾಡಿಕೊಂಡಿತೋ ಏನೋ…

“ನೀನೇನೂ ಚಿಂತೆ ಮಾಡಬೇಡ… ಇಷ್ಟೊತ್ತಿನಾಗ ಆ ಶಾಸ್ತ್ರಿಗಳ ಮನ್ಯಾಗ ಏನು ಗುಸುಗುಸು ನಡೆಯಲಾಕತ್ತೈತಿ, ನೋಡ್ಕೊಂಡು ಬತೀನಿ” ಎಂದು ಮುಂತಾಗಿ ಮ್ಯಾವ್ ಗುಟ್ಟಿ ‘ಬಿಡೇ ಬಿಡೇ’ ಎಂದು ಬಿಡಿಸಿಕೊಂಡು ‘ಡಣ್’ ಅಂತ ಸೀದ ಕಿಟಿಕಿಗೆ ‘ಹೈಜಂಪ್’ ಮಾಡಿಬಿಟ್ಟಿತು. ಅಲ್ಲಿಂದ ಶಾಸ್ತ್ರಿಗಳ ಬೃಂದಾವನದ ಕಡೆ ಒಂದು ವಿಹಂಗಮ ನೋಟ ಬೀರಿತು. ಚರಾಚರಕ್ಕೆ ಕೇಳಿಸುವಂತೆ ಅದು ಮ್ಯಾವ್‌ಗುಟ್ಟಿದ್ದಕ್ಕೆ ಕಾರಣ ಇಲ್ಲದಿಲ್ಲ. ಅದು ಹೇಳಿ ಕೇಳಿ ಗಂಡು. ಸಸ್ಯಾಹಾರಿ ಎಂಬ ಶೀತವಲಯವನ್ನೂ; ಮಾಂಸಾಹಾರಿ ಎಂಬ ಉಷ್ಣವಲಯವನ್ನೂ ಒಟ್ಟಿಗೆ ನಿಭಾಯಿಸುತ್ತಲೇ ಸಮಶೀತೋಷ್ಣ ಜಾಯಮಾನವನ್ನು ಮೈಗುಡಿಸಿಕೊಂಡಿರುವ ಅದು ಆ ಕೇರಿಗೆ ಮೈಗೂಡಿಸಿಕೊಂಡಿರುವ ಜೋಕುಮಾರ ಸ್ವಾಮಿ. ಅದರ ಸ್ಟೈಲಿಗೆ ಮರುಳಾಗಿ ಕೋಮಟಿಗರ ಮನೆಗಳಿಂದ ಬರುವವೆಷ್ಟೋ ಬಡಾವಣೆ ಏರಿಯಾಗಳಿಂದ ಬರುವವೆಷ್ಟೋ. ಆಫೀಸರ್ಸ್ ಚಾಯ್ಸ್‌ಗಳು ಬರುವವೆಷ್ಟೋ.

ಒಂದೊಂದಾಗಿ ಬಂದವುಗಳನ್ನು ಹೇಗೋ ಸರಿ ಮಾಡಿ ಕಳಿಸುತ್ತಿದ್ದುಂಟು. ಆದರೆ ಎಲ್ಲಾ ಕಡೆಯವು ಒಟ್ಟಿಗೆ ಸೇರಿಬಿಟ್ಟರೇನು ಸಾಧ್ಯ?… ಅವೆಲ್ಲಿ ಕೇವಲ ಹೆಣ್ಣುಗಳಲ್ಲ… ಇತಿಹಾಸ ಪುಟ ಸೇರಿರುವ ವೀರ ವನಿತೆಯರೆಲ್ಲ ಬೆಕ್ಕಿನ ರೂಪ ತಳೆದಿರುವಂತೆ ಭಾಸವಾಗುವುವು. ಸಾಮೂಹಿಕವಾಗಿ ರೇಪ್ ಮಾಡಲರಿಯದಂಥ ಹೇಳಿಕೇಳಿ ಚತುಷ್ಪಾದಿಗಳವು. ಪುರುಷ ರತ್ನವಶ ಪಡೆಸಿಕೊಳ್ಳಲು ಪರಸ್ಪರ ಕಚ್ಚಾಡದೆ ವಿಧಿ ಇಲ್ಲ. ಮ್ಯಾವ್ ಎನ್ನುವುದು ಮ್ರಾಂಬ್ವುಽಽ ಎಂದು ಆಗುತ್ತಿತ್ತು. ಅದರ ಮೇಲಿದು; ಇದರ ಮೇಲದು; ಇವುಗಳ ಮೇಲೆ ಅವು; ಅವುಗಳ ಮೇಲಿವು; ಗಬಕ್ಕನೆ ಬಿದ್ದು; ಸಮಸ್ತ ಯುದ್ಧಗಳ; ಪ್ರಾಣಿಗಳ ಶಬ್ದಗಳ ಗೊಂಡಾರಣ್ಯವನ್ನು ಸೃಷ್ಟಿಸಿ ಇಡೀ ಓಣಿಗೆ ಕೇಳರಿಯದ ತಲೆನೋವನ್ನುಂಟು ಮಾಡಿ ಬಿಡುತ್ತಿದ್ದವು. ಕೇರಿಯ ಅಥಿರಥ ಮಹಾರಥರನ್ನೂ ಅವು ಕೇರು ಮಾಡುತ್ತಿರಲಿಲ್ಲ.

ಇದ್ರಂಗೆ ಮನುಷ್ಯೋರೂ ಲವ್ ಮಾಡಿಬಿಟ್ಟಿದ್ರೆ ಈ ಪ್ರಪಂಚೇನಾಗ್ತಿತ್ತು ಅಂತಲೋ!
ಲವ್ ಮಾಡೋದ್ನ ಬೆಕ್ಕುಗಳಿಂದ ನೋಡಿ ಕಲ್ತುಕೋಬೇಕು ಅಂತಲೋ
ಜನ ಮಾತಾಡುತ್ತಿದ್ದುದನ್ನು ಛಾವಣಿ ಮೇಲೆ ಕೂತು ಕೇಳಿಸಿಕೊಳ್ಳುತ್ತಿದ್ದ ಮಾರ್ಜಾಲ ಮಾತ್ರ ಯಾವ ತ್ರಿಲೋಕ ಸುಂದರಿಗೂ ಮರುಳಾಗುತ್ತಿರಲಿಲ್ಲ. ಅದು ಆಗಲೇ ಗುಟ್ಟಾಗಿ ಶಾಸ್ತ್ರಿಗಳ ಮನೆಯಲ್ಲಿ ಯಾವತ್ತೂ ಇರುವ ಕಾಮೋಷಿಯನ್ನು ಪ್ರೀತಿಸಿರುವುದು. ಅವೆರಡನ್ನೂ ಯಾರೊಬ್ಬರೂ ತಂದು ಸಾಕಿಕೊಂಡಿರಲಿಲ್ಲ. ಮಾರ್ಜಾಲದ ವೃತ್ತಾಂತವೇ ಹೃದಯ ವಿದ್ರಾವಕವಾದುದಾಗಿದೆ. ಅದರ ಅಜ್ಜಿ ಮಾಜಿ ಸಾರಿಗೆ ಸಚಿವ ರೇಣುಕಯ್ಯನವರ ಮನೆಯಾಕೆ. ಅಂದರೆ ಅವರು ಹಾಲಿ ಇದ್ದಾಗ ರಾಜ್ಯಪಾಲ ಗೋವಿಂದರಾಜರೇ ಬಹು ಪ್ರೀತಿಯಿಂದ ತಮ್ಮಿಬ್ಬಿರ ವಿಸ್ವಾಸದ ನೆನಪಿಗಾಗಿ ಒಂದು ಕೇಸರಿ ವರ್ಣದ ಹೆಣ್ಣು ಮರಿ ಕೊಟ್ಟಿದ್ದರು. ರಾಜ್ಯಪಾಲರು ಕೊಟ್ಟಿರುವುದೆಂದಮೇಲೆ ಸಚಿವ ರೇಣುಕಯ್ಯನವರು ಹೇಗೆ ಬಿಟ್ಟಾರು? ಅವರಿವರ ಮನೆಗೆ ಹೋಗುವುದೊಂದೇ ಅಲ್ಲದೆ ಕ್ಯಾಬಿನೆಟ್ ದರ್ಜೆಯ ಆಪ್ತಾಲೋಚನೆಗೂ ವಿಧಾನಸೌಧಕ್ಕೂ ಅದನ್ನು ಜೊತೆಯಲ್ಲಿ ಕರೆದೊಯ್ಯುತ್ತಿದ್ದರು. ಸಹಾಯಕ ಸಚಿವೆ ಮಾಲತಿಯವರಂತೂ “ಎಷ್ಟೊಂದು ಮುದ್ದಾಗಿದೆ ಕಣ್ರಿ” ಎಂದು ಅದಕ್ಕೆ ಮುದ್ದು ಕೊಟ್ಟಿದ್ದೇ ಕೊಟ್ಟಿದ್ದು. ಆಗ ಸಚಿವ ರೇಣುಕಯ್ಯ ಆಕೆಯ ಮೊಲೆಯನ್ನು ಮಿಂಚಿನ ವೇಗದಲ್ಲಿ ಸವರಿ ಕೃತಾರ್ಥರಾಗಿಬಿಡುತ್ತಿದ್ದರು. ಮಹಿಳೆ ಮತ್ತು ಮಕ್ಕಳ ಸಂಕ್ಷೇಮಾಭಿವೃದ್ಧಿಯ ರಾಜ್ಯ ಸಚಿವೆ ಬಲ್ಲಾಳ್‌ರವರಂತೂ ಅಧಿವೇಶನ ಮುಗಿಯುವವರೆಗೆ ರೇಣುಕಯ್ಯನವರ ಪಕ್ಕದಲ್ಲೇ ಕೂತಿದ್ದು “ರ್ರೀ… ಇದ್ನ ನಮ್ಗೆ ಕೊಟ್ ಬಿಡ್ರಿ” ಎಂದು ಕೇಳಿಯೇಬಿಟ್ಟಿದ್ದರು.

“ಅಲ್ರೀ ಕಾವೇರಿ, ಹೆಂಗ್ರಿ ಕೊಡ್ಲಿ… ಸಾಕ್ಷಾತ್ ರಾಜ್ಯಪಾಲ್ರೇ ತಮ್ಮ ಕೈಯಿಂದ ಕೊಟ್ಟಿರೋದು ಕಣ್ರಿ… ಅಪರೂಪದ ಪ್ರೆಸೆಂಟೇಷನ್ನಿದು, ಅದೂ ಅಲ್ದೆ ನಮ್ದು ಮೈನಾರಿಟಿ ಗೌರ್ಮೆಂಟು ಕ್ಲಿಷ್ಟ ಸಮಯದಲ್ಲಿ ನಮ್ಮನ್ನ ಕಾಪಾಡೋ ಶಕ್ತಿ ಇದಕ್ಕೆ ಮಾತ್ರ ಇರೋದು” ಎಂದು ಕೂಲಿಂಗ್ ಚಾಳೀಸೊಳಗಿಂದ ಕಣ್ಣು ಮಿಟುಕಿಸಿದ್ದ ಬೋಳು ಮುಖದ ರೇಣುಕಯ್ಯ.

ಸಾರಿಗೆ ಕುರಿತ ಚರ್ಚೆ ಸಮಯದಲ್ಲಂತೂ ಆ ಮುದ್ದು ಮುಖದ ಬೆಕ್ಕಿನ ಮರಿ ಒಳ್ಳೆ ಪಾರ್ಲಿಮೆಂಟೇರಿಯನ್ ಥರ ಪ್ರಮುಖ ಪಾತ್ರ ವಹಿಸಿತು. ‘ಸ್ವರ್ಗಾದಪಿ ಗರೀಯಸಿ’ ಎಂಬ ವಿರೋಧಿ ಪಕ್ಷದ ನಾಯಕ ‘ಹಿಂದೂ ಸುರತ್ರಾಣ’ ಸಾರಿಗೆ ಇಲಾಖೇಲಿ ಕೋಟ್ಯಾಂತರ್ರುಪಾ‌ಐ ಅವ್ಯವಹಾರ ಆಗಿದೆ. ಅದರ ದೊಡ್ಡ ರಖಮುನ್ನು ಸಾರಿಗೆ ಸಚಿವರು ಜೇಬಿಗಿಳಿಸಿದ್ದಾರೆ ಎಂದು

ಪ್ರಮುಖ ವಾರಪತ್ರಿಕೆ ಅಂಕಿ ಅಂಶಗಳ ಸಹಿತ ಪ್ರಕಟಿಸಿದೆ. ಕೂಡಲೆ ಸಚಿವರು ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಆ ಅವ್ಯವಹಾರದ ಬಗ್ಗೆ ತನಿಖೆ ಮಾಡಲು ಒಂದು ಆಯೋಗ ರಚಿಸಬೇಕು, ಅದಕ್ಕೆ ನನ್ನನ್ನೇ ಅಧ್ಯಕ್ಷನನ್ನಾಗಿ ಮಾಡಬೇಕು’ ಎಂದು ಗರ್ಜಿಸಿದಾಗ ಬೆಕ್ಕು ಮೈಕ್ರೋಫೋನ್ ಫಿಯರಿಲ್ಲದೆ ಮ್ಯಾಂವ್… ಮ್ಯಾಂವ್ ಎಂದು ಇಡೀ ಅಧಿವೇಶನವನ್ನು ನಗೆಗಡಲಿಗೆ ನೂಕಿತ್ತು.

ಬಡವರ ಬೆನ್ನೆಲುಬು ಪಕ್ಷದ ಏಕಮೇವ ಸದಸ್ಯ ಬೊಚ್ಚಣ್ಣನವರು ಮುಖ್ಯಮಂತ್ರಿಗಳ ಎಂಟನೇ ಮಗಳು ಸುಂದರಿಯರ ಮದುವೆಗೆ ಸಾರಿಗೆ ಸಂಸ್ಥೆಯ ನೂರು ಬಸ್ಸು ಓಡಿಸಿರುವ ಬಗ್ಗೆ ಸಂಬಂದಪಟ್ಟ ಸಚಿವರು ಕೂಡಲೆ ಹೇಳಿಕೆ ನೀಡಬೇಕೆಂದು ಹೇಳಿದಾಗಳೂ ಬೆಕ್ಕು ನಿರ್ಭಿಡೆಯಿಂದ ಮ್ಯಾಂವ್‌ಗುಟ್ಟಿತು. ಹೀಗೆ ಅದು ಪ್ರತಿಯೊಂದು ಪ್ರಶ್ನೆಗೂ ಮ್ಯಾಂವ್ ಉತ್ತರ ನೀಡಿ ಎಲ್ಲರ ಪ್ರಶಂಸೆಗೆ ಪಾತ್ರವಾಯಿತು.

ಸಮಾಜವಾದಿ (ಮ್ಯಾಕ್‌ಡೌಲ್) ಪಕ್ಷದ ಪಟೇಲರು “ಎಂಥ ವಿಚಿತ್ರವಾಗಿದೆಯಲ್ಲ, ಸಾರಿಗೆ ಸಚಿವರು ಮ್ಯಾವ್ ಮ್ಯಾವ್ ಎನ್ನುತ್ತಲೆ ದಾಖಲೆ ನಿರ್ಮಿಸಿದ್ದಾರೆ. ಅವರಿಗೆ ಅಭಿನಂದನಾ ಗೊತ್ತುವಳಿ ಮಂಡಿಸಬೇಕೆ”ಂದಾಗ ಎಲ್ಲ ಸದಸ್ಯರು ಪಕ್ಷಭೇದ ಮರೆತು ನಗಾಡಿದರು.

ಇದು ಹೇಗೋ ರಾಜ್ಯಪಾಲರಿಗೆ ಸುದ್ದಿ ಮುಟ್ಟಿತು. ಅವರು ಸಚಿವ ರೇಣುಕಯ್ಯನವರನ್ನು ಖಾಸಗಿಯಾಗಿ ಚಹಕ್ಕೆ ಬರಮಾಡಿಕೊಂಡರು. ‘ವಿಧಾನಸಭೆಗೆ ಬರೀ ಬೆಕ್ಕುಗಳನ್ನೇ ಚುನಾಯಿಸಿಬಿಟ್ಟರೆ ಹೇಗೆ ಎಂದು ಚರ್ಚಿಸಿದರು. ತಗೊಂಡಿಷ್ಟು ದಿನಗಳಾದ್ವು… ಇನ್ನು ಇದ್ಕೆ ನಾಮಕರಣ ಮಾಡಿಲ್ಲಾಂದ್ರೆ ಹೇಗ್ರಿ?” ಎಂದು ಶ್ರೀಮತಿ ಗೋವಿಂದರಾಜರು ಪ್ರಶ್ನಿಸಿದರು. ಇದೊಂದು ಅತ್ಯುತ್ತಮ ಸಲಹೆ ಎಂದೂ ಒಂದು ಒಳ್ಳೆ ಮೂಹೂರ್ತ ನೋಡಿ ‘ನಾಮಕರಣ ಮಹೋತ್ಸವ’ ನಡೆಸುವುದಾಗಿ ಅರಿಕೆ ಮಾಡಿಕೊಂಡು ರೇಣುಕಯ್ಯ ವಾಪಸಾದರು.

ನಾಮಕರಣ ಮಹೋತ್ಸವದ ಆಮಂತ್ರಣ ಪತ್ರಿಕೆಗಳು ದೇಶದ ಪ್ರಮುಖ ಜನನಾಯಕರಿಗೆಲ್ಲ ಹೋದವು. ಇಂದಿರಾಗಾಂಧಿಯವರು ತಮ್ಮ ಆಪ್ತರಲ್ಲೊಬ್ಬರಾದ ಕಾಂತಿಲಾಲ್ ಬೊರ್ಕಾರವರನ್ನು ಕಳಿಸಿಕೊಟ್ಟರೆಂದಮೇಲೆ ಕೇಳುವುದೇನಿದೆ? ನಾಮಕರಣ ಮಹೋತ್ಸವದ ನೆಪದಲ್ಲಿ ರಾಜಕೀಯ ವಿದ್ಯಮಾನ ಚರ್ಚಿಸುವ ಸಲುವಾಗಿ ಆಡಳಿತ ಪಕ್ಷದ ಬಹುತೇಕ ಹಿರಿ ಕಿರಿಯ ಮುಖಂಡರು ಲಿಂಗಬೇಧ ಮರೆತು ಹಾಜರಾದರು. ಎಲ್ಲಾ ವಿರೋಧಪಕ್ಷಗಳು ಅದನ್ನು ಬಹಿಷ್ಕರಿಸಿ ಕರತಾಳ ಆಚರಿಸಿದವು.

ಬೆಳ್ಳಿಯ ತೊಟ್ಟಿಲಲ್ಲಿ ಕಟ್ಟಿ ಮಲಗಿಸಿದ್ದ ಬೆಕ್ಕು ಹುಲುನರರ ನಡುವಳಿಕೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತ ತೆಪ್ಪಗಿತ್ತು. ಅತಿಥಿ ಅಭಾಗತರು ತಾವು ತಂದಿದ್ದ ಪ್ರೆಸೆಂಟೇಷನ್ನುಗಳನ್ನು ತೊಟ್ಟಿಲಲ್ಲಿ ಪೇರಿಸತೊಡಗಿದರು. ಆ ದುಬಾರಿ ಸಾಮಾನುಗಳಡಿ ಸಿಲುಕಿ ತಾನು ಅಪ್ಪಚ್ಚಿಯಾಗಿ ಬಿಡುವನೆಂದೂಹಿಸಿ ಬೆಕ್ಕು ಕಿಟರನೆ ಕಿರುಚಿಕೊಳ್ಳತೊಡಗಿತು. ಖ್ಯಾತ ಸಿನಿಮಾ ನಟ ಅನುನಾಸಿಕ್‌ರವರ ಸಂಗೀತ ರಸಮಯ ಕಾರ್ಯಕ್ರಮ ಇದ್ದುದರಿಂದ ಅದರ ಅರಣ್ಯ ರೋಧನ ಯಾರಿಗೂ ಕೇಳಿಸಲಿಲ್ಲ. ನಂತರ ಅದು ಕಾಣಿಕೆಗಳೆಂಬ ಚಕ್ರವ್ಯೂಹವನ್ನು ಬೇಧಿಸಿಕೊಂಡು ಚಂಗನೆ ಈಚೆ ನೆಗೆದು ಮೀಸೆ ತಿರುವಿ ಎಲ್ಲರ ಗಮನ ಸೆಳೆಯಿತು. ಈ ಪ್ರಕಾರವಾಗಿ ಇಡೀ ರಾಷ್ಟ್ರನಾಯಕರ ಗಮನ ಸೆಳೆದ ಆ ಬೆಕ್ಕಿಗೆ ಸಂಬಂದಪಟ್ಟ ಸಮಸ್ಯೆ ಎದುರಾದದ್ದು ಯಾವಾಗಪ್ಪ ಎಂದರೆ ನಾಮಕರಣ ಮಾಡುವಾಗ, ಅದಕ್ಕೆ ನಾಮಕರಣ ಮಾಡಲು ನಿಯುಕ್ತರಾಗಿದ ರಾಜೇಂದ್ರಾಚಾರ್‌ರವರು ಸಾಮಾನ್ಯರೇನು? ಅವರ ವಂಶದವರು ಏಕಕಾಲಕ್ಕೆ ತಾಂಜಾವೂರು

ಮತ್ತು ಪೆನುಗೊಂಡೆಯ ರಾಜರುಗಳ ಆಸ್ಥಾನ ಪುರೋಹಿತರಾಗಿದ್ದಂಥವರು. ವರದರಾಘವೇಂದ್ರಚಾರ್ಯರು ನಗರದಲ್ಲಿ ಖೋಡೆಯವರ ಕಾಯಂ ಪುರೋಹಿತ್ಯ ಮಾಡುತ್ತಿರುವರು. ಬೆಕ್ಕಿಗೆ ಹೆಸರು ಸೂಚಿಸಲು ಸಚಿವ ರೇಣುಕಯ್ಯನವರಿಗೆ ವಿನಂತಿಸಿಕೊಂಡರು. ಕಾಂತಿಲಾಲ್ ಬೋರ್ಕರವರು ಪ್ರಣಬ್ ಕುಮಾರ್ ಅಂದರೆ, ಒರಿಸ್ಸಾದ ಸತ್ಪತಿಯವರು ಜಗನ್ನಾಥ್ ಎಂದರು. ಬಿಹಾರದವರು ಮಿಶ್ರಾ ಎಂದರೆ ಮಹಾರಾಷ್ರದವರು ಚವ್ಹಾಣ ಎಂದರು. ಕರ್ನಾಟಕದವರು ಇಮ್ಮಡಿ ಪುಲಕೇಶಿ ಎಂದರೆ ತಮಿಳ್ನಾಡಿನ ಚೆಂಗಪ್ಪನ್ ಕಲೈಕುಡಚ್ಚಿ ಮಗ್ಗಳ್ ತಿಲಕಂ ಅಂತ ಏನೇನೋ ಹೇಳಿದರು. ಅವೆಲ್ಲ ಕೇಳುತ್ತ ಪುರೋಹಿತರು ಚಿನ್ನದ ಹಗ್ಗಕ್ಕೆ ಕಟ್ಟಿದ್ದ ಬೆಕ್ಕಿನ ಲಿಂಗ ಪರಿಶೀಲಿಸಲೋಸುಗ ಅದರ ಬಾಲವನ್ನು ಎತ್ತುವ ಪ್ರಯತ್ನ ಮಾಡಿದರು. ಅದು ಅಷ್ಟು ಸುಲಭವಾಗಿ ತನ್ನ ಲಿಂಗವನ್ನು ತೋರಿಸುವುದೆಂದರೇನು? ಮುಖ ಸಿಂಡರಿಸಿಕೊಂಡು ಪುರೋಹಿತರ ಕೈಯನ್ನು ಪರಚಿ ಗಾಯಗೊಳಿಸಿತು. ಅವರು ‘ಶ್ರೀರಾಮಾ’ ಎಂದು ನರಳಿದರು. ಅದರ ಲಿಂಗ ಪತ್ತೆ ಹಚ್ಚಲು ಫೀಲ್ಡ್ ಮಾರ್ಷಲ್ ಸನ್ಯಾಲ್‌ರವರನ್ನು ಕೇಳಿಕೊಂಡರು. ಅವರು ಎಷ್ಟಿದ್ದರೂ ದ್ವಿತೀಯ ಜಾಗತಿಕ ಭಾಗವಹಿಸಿದ್ದಂಥವರು. ಅವರು ತಮ್ಮ ಸಾಹಸ ಮನೋಗುಣವನ್ನು ಕ್ರೋಡೀಕರಿಸಿ ಅದರ ಬಾಲವನ್ನೆತ್ತಿ ನೋಡಿ “ಫೀಮೇಲ್” ಎಂದು ಉದ್ಗರಿಸಿದರು. ಆ ನಂತರ ಎಲ್ಲರೂ ತಲಾ ಒಂದೊಂದು ಹೇಳಿದ್ದು ಸಿನಿಮಾ ನಟಿಯರ ಹೆಸರುಗಳನ್ನು, ದೆಹಲಿ ಕಡೆಯ ಸಂಪರ್ಕ ಇಟ್ಟಿಕೋಳ್ಳುವ ಇರಾದೆಯಿಂದ ‘ಝಾನ್ಸಿ ಕಿ ರಾಣಿ’ ಎಂಬ ಹೆಸರನ್ನು ರೇಣುಕಯ್ಯ ಸೂಚಿಸಲು ಎಲ್ಲರೂ ‘ಓಕೇ’ ಮಾಡಿದರು.

‘ಝಾನ್ಸಿ ಕಿ ರಾಣಿ’ಯ ಕಥೆ ದುರಂತಮಯವಾಗಿದ್ದು ರಾಜ್ಯಪಾಲ ಗೋವಿಂದೇರಾಜರು ಮೇಘಾಲಯದ ರಾಜ್ಯಪಾಲರಾಗಿ ವರ್ಗವಾದಮೇಲೆಯೇ! ರಾಣಿಯ ಬದುಕು ಮತ್ತಷ್ಟು ಯಾತನಾಮಯವಾದದ್ದು ರೇಣುಕಯ್ಯ ಸಚಿವ ಸ್ಥಾನ ಕಳೆದುಕೊಂಡ ನಂತರ, ನಂತರ ಅದು ಬೀದಿ ಪಾಲಾದದ್ದು ಮಾಜೀ ಸಚಿವರ ಫ್ಯಾಮಿಲಿ ಅಫೈಸ್‌ಗಳು ಹೆಚ್ಚಾದ ನಂತರ. ಅದು ಎಲ್ಲೋ ಹೋಯಿತು. ಯಾರೋ ಸಾಕಿದರು. ಯಾರೋ ಹೊರ ತಳ್ಳಿದರು. ಹೀಗೆ ಮುಂದೊಂದಿನ ವಾಸಿಯಾಗದ ಚರ್ಮ ರೋಗಕ್ಕೆ ತುತ್ತಾದ ಝಾನ್ಸಿ ಕಿ ರಾಣಿಯನ್ನು ಅದರ ಐದಾರುಮಂದಿ ಮಕ್ಕಳೇ ಸೇರಲಿಲ್ಲ. ಮುನಿಸಿಪಾಲಿಟಿಯವರ ಕೊಚ್ಚೆ ಗುಂಡಿಯಲ್ಲಿ ಸತ್ತ ಝಾನ್ಸಿ ಕಿ ರಾಣಿಯ ಅಸಂಖ್ಯಾತ ಮೊಮ್ಮಕ್ಕಳ ಪೈಕಿ ಈ ಮಾರ್ಜಾಲವೂ ಒಂದು.

ಇದರ ಕಥೆ ಹೀಗಿದ್ದರೆ ಶಾಸ್ತ್ರಿಗಳ ಮನೆಯ ಕಾಮೋಷಿಯ ಜೀವನ ವೃತ್ತಂತ ವಂಶಾವಳಿ ಇನ್ನೊಂದು ರೀತಿಯದ್ದು. ಇದರ ವಂಶಜರು ಅಂಥ ಹೇಳಿಕೊಳ್ಳುವಂಥ ಹಿನ್ನೆಲೆಯಿಂದ ಬಂದವರಲ್ಲ. ಆಂಧ್ರ ಪ್ರದೇಶದ ತೆಲಂಗಾಣ ಬೊಮ್ಮಿರೆಡ್ಡಿಪಲ್ಲೆಯ ರೈತಕೂಲಿ ಸಂಘದ ಅಧ್ಯಕ್ಷ ತಿರುಪಾಲಯ್ಯ ಸಾಕಿಕೊಂಡಿದ್ದ ‘ಮುಕ್ತಿ’ ಬಗ್ಗೆ ಕೆಲವು ವಿವರಗಳು ಸಿಕ್ಕುತ್ತವೆ. ಅದೂ ತಿರುಪಾಲಯ್ಯ ಬರೆದಿರುವ ‘ಗುಡಿಸೆಲು ಕಾಗಡಾಲು’ ಎಂಬ ಮಹಾಕಾವ್ಯದಲ್ಲಿ ಹೋರಾಟಗಾರ ಕವಿ ತಿರುಪಾಲಯ್ಯ ‘ಪೋರಾಟಾಲು ವರ್ಧಿಲ್ಲಾಲಿ’ ಎಂಬ ನಿನಾದದೊಂದಿಗೆ ಎನ್‌ಕೌಂಟರ್‌ನಲ್ಲಿ ಅಸು ನೀಗಿದಾಗ ಮುಕ್ತಿಯನ್ನು ಶ್ರೀ ಕಾಕುಳಂ ಎಸ್ಪಿ ಜಗಪತಿಬಾಬು ಸಾಕಿಕೊಂಡ. ಜಗಪತಿಬಾಬು ಬೆಳಗ್ಗೆ ಜಾಗಿಂಗ್ ನಕ್ಸಲೈಟ್ಸು ಗುಂಡಿಟ್ಟು ಕೊಂದರು. ನಂತರ ಅದನ್ನು ಚಪ್ರಾಸಿ ಚಂಚಯ್ಯ ಸಾಕಿದ… ಹೀಗೆ ಅದರ ಕಥೆ ಕೂಡ ದುರಂತವಾಗಿ ಬೆಳೆಯುತ್ತದೆ. ಕಾಮೋಷಿಯ ತಾಯಿ ಆಂಧ್ರದಿಂದ ಕರ್ನಾಟಕಕ್ಕೆ ಬಂದು ಪ್ರಸವಿಸಿದಳೋ?

ಸಂಶೋಧನೆ ಮಾಡದ ಹೊರತು ತಿಳಿಯದು. ಹೆತ್ತಾಕೆಯ ಮುಖವನ್ನು ಸಯಾಗಿ ನೋಡಿರದ ಕಾಮೋಷಿಯಲ್ಲಿ ಮಾರ್ಜಾಲ ಯಾವ ಆರ್ಷಣೆ ಕಂಡುಕೊಂಡಿತೋ ದಯಾಮಯನಾದ ಭಗವಂತನಿಗೇ ಗೊತ್ತು? ಅಂತೂ ದೇವರು ಜೊತೆಗೂಡಿಸಿದ. ಅವೆರಡೂ ಒಂದಾದವು. ಅನ್ಯೋನ್ಯದಿಂದಿರುವುವು. ಗಂಡಾದ ತಾನು ನಾನ್‌ವೆಜೆಟೇರಿಯನ್ನು; ಹೆಂಗಸಾದ ನೀನು ವೆಜೆಟೇರಿಯನ್ನೂ ಅಂಥ ಮಾರ್ಜಾಲವೇ ತೀರ್ಮಾನಿಸಿ ಏಕಪಕ್ಷೀಯವಾಗಿ ಇಲಾಖೆ ಹಂಚಿಕೆ ಮಾಡಿದ್ದು ವಿಚಾರಿಸಬೇಕಾದ ಸಂಗತಿ. ಇಬ್ಬರೂ ತಂತಮ್ಮ ಇಲಾಖೆ ನೋಡಿಕೊಂಡು ಸುಖವಾಗಿದ್ದಾರೆ. ದಿನಕ್ಕೆರಡು ಮೂರು ಬಾರಿಯಾದರೂ ಸಂಧಿಸಿ ಕಷ್ಟಸುಖ ಹಂಚಿಕೊಳ್ಳುವರೆಂಬುದೇ ಸಮಾಧಾನಕರ ಸಂಗತಿ.

ಮನೆಯ ಆತಂಕದ ಪರಿಸ್ಥಿತಿಯಿಂದಾಗಿ ಮಾರ್ಜಾಲ ಬೆಳಗಿನಿಂದ ಮನೆಬಿಟ್ಟು ಹೊರಗಡೆ ಬಂದೇ ಇಲ್ಲ. ಮನೆಯ ಯಜಮಾನರಾದವರು ಸಂತೋಷದಿಂದ ಇದ್ದರೆ ತಾನೆ ಚಿನ್ನಾಟ ರೊಮಾನ್ಸು ಎಲ್ಲ. ಕಾಮೋಷಿದೂ ಶಾಸ್ತ್ರಿಗಳ ಮನೆಯಲ್ಲಿ ಅದೇ ಕಥೆ.

ಕಿಟಕಿಯಲ್ಲಿಂದ ಹೊರನುಸುಳಿ ಮಾರ್ಜಾಲ ಮ್ಯಾವ್ (ಹಲೋ ಡಾರ್ಲಿಂಗ್) ಗುಟ್ಟಿತು. ಪತ್ತೆ ಇಲ್ಲ ಪ್ರಿಯತಮೆ? ಇಲ್ಲಿ ಹಾಳಾಗಿ ಹೋದಳಿವಳು? ಲಾಂಗ್ ಜಂಪಿಗೆ; ಹೈಜಂಪಿಗೆ ಹೆಸರಾದ ಅದು ಬೃಂದಾವನ ಕಟ್ಟೆ ಮೇಲೆ ನಿಂತು ಮತ್ತೊಮ್ಮೆ ಮ್ಯಾವ್ ಅಂತು. ಕೋಡುಬಳೆ ಪ್ರೀತಿಗಾಗಿ ಪುತ್ತಿ ಬಳಿ ಇಲಿಗಾಗಿ ಹೊಂಚಿ ಕೂತಿದ್ದ ಕಾಮೋಷಿ ತನ್ನ ಪ್ರಿಯತಮನ ಕರೆ ಕೇಳಿಸಿ ರೋಮಾಂಚನಗೊಂಡಿತು. ಹೊರ ಬಂದು ತನ್ನ ಬಾಲವನ್ನು ಅದರ ‘ಕ್ಳಿಮ್ಮು’ಗೆ ಬಡಿಸಿತು.
ಸಲ್ಪ ಹೊತ್ತು ಅವೆರಡು ಸ್ಪರ್ಶಿಸಿ ಮುದ್ದಿಸಿ ಉಭಯ ಕುಶಲೋಪರಿ ನಡೆಸಿದವು. ನಂತರವೇ ಶಾಮು ಮತ್ತು ಅನಸೂಯರ ಟಾಪಿಕ್ ಬಂದದ್ದು. ಮನುಷ್ಯರು ಹೀಗ್ಯಾಕಾಗ್ತಾರೆ ಎಂಬುದಕ್ಕೆ ಉತ್ತರವಿಲ್ಲ.

“ಶಾಸ್ತ್ರಿಗಳು ಇ‌ಅಮ್ಮ ಸೊಸೆ ಅಲುಮೇಲಮ್ಮನಿಗೆ ಏನೋ ಗುಟ್ಟಾಗಿ ಹೇಳ್ತಿರುವಂತಿದೆಯಲ್ಲ” ಎಂದು ಮಾರ್ಜಾಲ ಪ್ರಿಯತಮೆಯನ್ನು ಕೇಳಿತು.
ಅದು ಅವರ ಪರ್ಸನಲ್ಲು ಅಂತ ಕಾಮೋಷಿ, ಮತ್ತೆ ಒತ್ತಾಯಿಸಿದಾಗ ಅದು ನೀನೇ ನೋಡ್ಕೋ ಹೋಗು ಅಂತು.
ಮಾರ್ಜಾಲ ಕಾಮೋಷಿಯೊಂದಿಗೆ ಒಳಗಡೆ ಹೋಯಿತು. ಕಿಟಕಿಯ ಸಂದಿಯಲ್ಲಿ ನೋಡಿತು.

ಶಾಸ್ತ್ರಿಗಳ ಸೊಸೆ ಎದುರಿಗೆ ಜಾತಕ ಕುಂಡಲಿಗಳನ್ನು ಹರಡಿಕೊಂಡು ಕೂತಿದ್ದರು. ಗುಣಿಸಿ; ಭಾಗಿಸಿ ರಾಹುಕೇತು, ಮಂಗಳ, ಪುನರ್ವಸು ಅಂತ ಏನೇನೋ ಹೇಳುತ್ತಿದ್ದರು. ಕಣ್ಣಲ್ಲಿ ನಿದ್ದೆ ತುಂಬಿಕೊಂದಿದ್ದ ಅಲುಮೇಲಮ್ಮ ಹೂಗುಟ್ಟುತ್ತಿದ್ದಳು.
ನಂತರ ಪ್ರಸನ್ನ ವದನರಾಗಿ ಶಾಸ್ತ್ರಿಗಳು ದಢೀರನೆ ಎದ್ದು ನಿಂತರು.
ಕೈಮುಗಿದು –
ಕಣ್ಣು ಮುಚ್ಚಿ –
– ಆ ಬ್ರಹ್ಮಲೋಕಾದಾಶೇಷಾತ್ ಆಲೋಕಾಲೋಕ ಪರ್ವತಾತ್| ಯೇ ವಸಂತಿ ದ್ವಿಜಾ ದೇವಾಃ ತೇಭ್ಯೋ ನಿತ್ಯ ನಮೋ ನಮಃ| ಓಂ ಶಾಂತಿ ಶಾಂತಿ ಶಾಂತಿ| ಸರ್ವಾರಿಷ್ಠ ಶಾಂತಿರಸ್ತುಹೂಃ
ಎಂದು ಹೇಳಿ ಕಣ್ಣು ತೆರದು ಇಡಿಯಾಗಿ ಸೊಸೆಯನ್ನು ನೋಡಿದರು.
“ತಾಯಿ ಅಲುಮೇಲಮ್ಮಾ… ಬರೋ ಸೋಮವಾರ ಇಡೀ ದಿನ ಗುರು ವೃಶ್ಚಿಕ

ರಾಶಿಯಲ್ಲಿರುತ್ತಾನಮ್ಮಾ, ನಮ್ಮ ಮಗೂನ ಕುಂಡಲಿಗೆ ಯೊಗ್ಯವಾದ ಸ್ವಾತಿ ನಕ್ಷತ್ರ ಅಂದು ಸಾಯಂಕಾಲದವರೆಗೂ ಇತದೆ. ಅಂದು ಬ್ರಾಹ್ಮೀ ಮುಹೂರ್ತದಲ್ಲಿ ಹೊಸಪೇಟೆಗೆ ಪ್ರಾಯಾಣ ಬೆಳೆಸಿ ಹುಡುಗಿ ನೋಡ್ಕೊಂಡು ಬಂದರಾಯ್ತು. ಶಾಮುಗೆ ಹೇಳು. “ಓಂ ಗಾಯತ್ರೀ” ಎಂದು ಪಂಚಾಂಗದ ಗಂಟುಕಟ್ಟಿ ನಗಂದಿ ಮೇಲೆ ಸರಿಸಿದರು.
ಮಾರ್ಜಾಲ ‘ಶುಭಸ್ಯ ಶೀಘ್ರಂ’ ಎಂದು ಹೇಳಿ ನಿಟ್ಟುಸಿರುಬಿಟ್ಟಿತು.

ಇಡೀ ಆ ಪುಟ್ಟ ನಗರವನ್ನು ಅವತ್ತು ಯಾಕೋ ಒಂದು ನಮೂನೆಯ ಅಲೌಕಿಕ ರೀತಿಯ ವಾತಾವರಣ ಆವರಿಸಿಬಿಟ್ಟಿತ್ತು. ಸ್ವಾಸ್ತಿಕ್ ರಿಕ್ರಿಯೇಷನ್ ಕ್ಲಬ್ಬಿನಲ್ಲಿ ಎಲ್ಲಾ ರಾಜಕೀಯ ಪಕ್ಷಗಳ ಮುಖಂಡರು ಪಕ್ಷಭೇದ ಮರೆತು ಪ್ರತಿ ಎರಡು ನಿಮಿಷಕ್ಕೊಮ್ಮೆ ಒಂದೊಂದು ಗುಟುಕು ಆಸಿ ಸೇವಿಸುತ್ತ ಇಸ್ಪೀಟು ಆಡುತ್ತಿದ್ದೆಂದರೆ ಲೆಕ್ಕ ಹಾಕುವುದು; ಮನೆಯೊಳಗೆ ತೆರೆದಿದ್ದ ತಂಬಿಟ್ಟಿನ ಡಬ್ಬಿ ಕಡೆ ಇಣುಕಿ ಹಾಕದೆ ಮೂಷಕ ದಂಪತಿಗಳು ಪರಸ್ಪರ ರೊಮಾನ್ಸಿಗಿಳಿದಿರುವುದನ್ನು ನೋಡುತ್ತ ಮಾರ್ಜಾಲ ಮಲಗಿತ್ತೆಂದರೆ ಲೆಕ್ಕ ಹಾಕುವುದು; ವ್ಯಾಪರಸ್ಥರು ಉದ್ರಿ ಪಡೆದವರ ಕಡೆ ಮಂದಸ್ಮಿತ ನೋಟ ಬೀರುತ್ತಿದ್ದರೆಂದರೆ ಲೆಕ್ಕ ಹಾಕುವುದು; ಹೀಗೆ ಎಲ್ಲಿ ನೊಡಿದರೂ ಅರಿಷಡ್ವರ್ಗಗಳನ್ನು ಮೀರಿ ನಿಂತು ಪಲ್ಲವಿಸುತ್ತಿರುವವರೇ ಎಲ್ಲ ಕಡೆ. ಅದೂ ಅಲ್ಲದೆ ವಾತಾವರನವು ಎಲ್ಲ ಕಡೆ ಉಲ್ಲಸಿತವಾಗಿತ್ತು. ಪಾಯ್ಖಾನೆ ಕಡೆಯಿಂದ ಬೀಸುತ್ತಿದ್ದ ಗಾಳಿಯಲ್ಲೂ ಸೇವಿಸಲು ಯೋಗ್ಯವಾದ ಪರಿಮಳ ಇರುವುದು ಆಗಸದಲ್ಲಿ ಸೂರ್ಯನ ಕಡೆ ಯಾರು ಎಷ್ಟೊತ್ತು ಬೇಕಾದರೂ ಬಿಡುಗಣ್ಣಿನಿಂದ ದಿಟ್ಟಿಸಬಹುದಾಗಿತ್ತು. ಹೀಗಾಗಿ ಬೇಸಿಗೆ ಕಾಲದ ಹಗಲು ಬೆಳದಿಂಗಳೆಂಬ ಭ್ರಮೆ ಹುಟ್ಟಿಸುವಂತಿತ್ತು.

ಇದೆಲ್ಲ ನೋಡಿ ಸೂಕ್ಷ್ಮ ಮನಸ್ತತ್ವದ ಕದನ ಕುತೋಹಲಿಗಳಿಗೆ ಪರಮಾಶ್ಚರ್ಯವೋ ಪರಮಾಶ್ಚರ್ಯ. ಅವರಲ್ಲಿ ಕೆಲವರು ಪರಿಶೋಧಿಸಿ ಕಾರಣ ಕಂಡುಕೊಳ್ಳದಿರುತ್ತಾರೆಯೇ? ಬ್ರಾಹ್ಮೀ ಮಹೂರ್ತದಲ್ಲಿ ಚುಮು ಚುಮು ನಸುಕಿನಲ್ಲಿ ವೇದಾಗಮ ಪುರಾಣಗಳನ್ನು ಹೊಟ್ಟೆಯಲ್ಲಿಟ್ಟುಕೊಂಡಿರುವಂಥ ಪರಮೇಶ್ವರ ಶಾಸ್ತ್ರಿಗಳು ತಮ್ಮ ಮೊಮ್ಮಗ ಶಾಮಾಶಾಸ್ತ್ರಿಯೊಂದಿಗೆ ಬಸ್ ನಿಲ್ದಾಣದಲ್ಲಿ ತಂಗಾಳಿಗೆ ಮೈಯೊಡ್ಡಿ ನಿಂತಿದ್ದನ್ನು ಕೆಲವರು ನೋಡಿದ್ದುಂಟು. ಆದರೆ ಅವರು ಮಹಾದೇವಿ ಹತ್ತಿ ಮೂಡಣದ ಕಡೆ ಪ್ರಯಾಣ ಬೆಳೆಸಿದರೆಂಬುದು ತಿಳಿಯದು; ತಿಪ್ಪೇರುದ್ರನನ್ನು ಹತ್ತಿ ಪಡವಣದ ಕಡೆ ಪ್ರಯಾಣ ಬೆಳೆಸಿದರೆಂಬುದು ತಿಳಿಯದು! ಅವರು ಊರು ಬಿಟ್ಟಿರುವುದರಿಂದಾಗಿ ಇರುವೆ ಎಂಬತ್ನಾಲ್ಕು ಜೀವಿಗಳೆಲ್ಲ ನಿರ್ಭಯದಿಂದ ಕಾಲಕ್ಷೇಪ ಮಾಡತ್ತಿರಬಹುದೆ ಎಂಬ ಸಂದೇಹ ಮೂಡುವುದು ಸಹಜ. ಯಾಕಂದರೆ ಅವರ ಹಾಜರಿಯಲ್ಲಿ ಗ್ರಾಮ ಒಂಥರಾ ಇದ್ದರೆ; ಅವರ ಗೈರುಹಾಜರಿಯಲ್ಲಿ ಗ್ರಾಮ ಇನ್ನೊಂಥರಾ ಇರುವುದು. ‘ಅವರಿಲ್ಲದ್ಕೆ ಮನೆ ಒಂಥರಾ ಇದೆ’ ಎಂದು ಅಲುಮೇಲಮ್ಮ ಅಂದುಕೊಂಡರೆ ಅದೊಂದು ರೀತಿ; ಅವ್ರಿಲ್ಲದ್ಕೆ ಓಣೀಗೆ ಕಳೆ ಇಲ್ಲ ಅಂತ ಓಣಿಯವರೂ ಅಂದ್ರೆ ಓಕೆ ಮಾಡಬಹುದು. ಆದರೆ ಇಡಿ ಗ್ರಾಮಕ್ಕೆ ಗ್ರಾಮವೇ ಅಂದುಕೊಂಡರೇನು ಮಾಡುವುದು? ದುಃಖದ ಜಾಗದಾಗ ಸಂತೋಷ ಇರೋದು! ಸಂತೋಷದ ಜಾಗದಾಗ ದುಃಖದ ಇರೋದು ಇಂಥ ವೈಪರೀತ್ಯಗಳಿಗೆಲ್ಲ ಏನನ್ನುವುದು? ಹೀಗಾಗಿ ಶಾಸ್ತ್ರಿಗಳ ಗೈರುಹಾಜರಿಯಲ್ಲಿ ಸದರೀ ಗ್ರಾಮವನ್ನು ಹೇಗೆ ಅರ್ಥಮಾಡಿಕೊಳ್ಳುವುದೋ! ಒಟ್ಟಿನಲ್ಲಿ ಸದರಿ ಗ್ರಾಮದ ಜೀವಜಗತ್ತು, ಸಸ್ಯ ಜಗತ್ತು ಮತ್ತು

ಮನುಷ್ಯ ಜಗತ್ತುಗಳ ಮನೋಭೂಮಿಕೆಯಲ್ಲಾಗಿರುವ ಸೂಕ್ಷ್ಮಾತಿ ಸೂಕ್ಷ್ಮ ಬದಲಾವಣೆಗಳು ಮಾತ್ರ ಅಂಗೈ ಅಷ್ಟೇ ಸತ್ಯ.
ಇಡೀ ಗ್ರಾಮದ ಚರಿತ್ರೆಯಲ್ಲಿ ಕಂಡರಿಯದ ಕೇಳರಿಯದ ಘಟನೆಯೊಂದು ಜರುಗಲಿರುವುದರ ಮುನ್ಸೂಚನೆಯಾಗಿ ರೈಲೊಂದು ವಾಯುವೇಗದಲ್ಲಿ ಬಂದು ಸದರೀ ನಿಲ್ದಾಣದಲ್ಲಿ ನಿಂತುಕೊಂಡಿತು. ಅದು ಬಂದದ್ದಾಗಲಿ ಹತ್ತೋರು ಹತ್ತಿದ್ದಾಗಲೀ; ಇಳಿಯೋರು ಇಳಿದಿದ್ದಾಗಲೀ ಅದೇನು ಹೊಸ ಸಂಗತಿಯಲ್ಲ. ಹೊಚ್ಚ ಹೊಸ ಸಂಗತಿ ಯಾವುದಪ್ಪಾ ಅಂದರೆ ಆ೨೫೨ ನೇ ರಿಸರ್ವ್‌ಡ್ ಕಂಪಾರ್ಟ್‌ಮೆಂಟಿನಿಂದ ಐದೂ ಮುಕ್ಕಾಲಡಿ ಎತ್ತರ ಫೇರ್ ಕಲ್ಲರಿನ ಗುಂಗುರುಗೂದಲಿನ, ಕಣ್ಣಿಂಗೆ ಕೂಲಿಂಗ್ ಗಿಲಾಸ್ ಧರಿಸಿದ ವ್ಯಕ್ತಿಯೊಬ್ಬ ಇಳಿದಿದ್ದು; ಅವನು ಭಲೆ ಸ್ಟೈಲಿನಿಂದ ಯಾವತ್ತೂ ಲಗೇಜನ್ನು ಕೂಲಿಯೊಬ್ಬನ ಮೇಲಿರಿಸಿಕೊಂಡು ನಿಲ್ದಾಣದಿಂದ ಹೊರಬಂದದ್ದು; ಪೋರ್ಟಿಕೋದಲ್ಲಿ ಇಡೀ ಗ್ರಾಮವನ್ನು ಆಪೋಶನ್ ತೆಗೆದುಕೊಳ್ಳುವವನಂತೆ ಸಿಂಹಾವಲೋಕನ ಮಾಡಿದ್ದು; ಎಡಗೈ ತೋರುಬೆರಳಿನಿಂದ ಕೂಲಿಂಗ್ ಗಿಲಾಸನ್ನು ಹಿಂದಕ್ಕೆ ಸರಿಸಿ ಸರಿಪಡಿಸಿಕೊಂಡದ್ದು; ಜನರು ತನ್ನನ್ನು ಗಮನಿಸುತ್ತಿರುವರೆಂದು ಭಾವಿಸಿದ್ದು ಮತ್ತು ಗ್ರಾಮದ ಸಮಸ್ತ ಲವಲವಿಕೆಯನ್ನು ತನ್ನಲ್ಲಿ ಮೇಳಯಿಸಿಕೊಂಡು ನಡೆಯತೊಡಗಿದ್ದು.

ಆತ ಇಟ್ಟ ಹತ್ತು ಹೆಜ್ಜೆಗೆ ಜನರು ಮಂಕಾದರು. ಇನ್ನೊಂದಿಪ್ಪತ್ತು ಹೆಜ್ಜೆಗೆ ಕಟ್ಟಡಗಳು ಮಂಕಾದವು. ಇನ್ನೊಂದೈವತ್ತು ಹೆಜ್ಜೆಗೆ ತರುಲತೆಗಳು ಮಂಕಾದವು. ಇನ್ನೊಂದು ನೂರು ಹೆಜ್ಜೆಗೆ ಆಗಸದ ಸೂರ್ಯ ನಿಗಿನಿಗಿ ಉರಿಯತೊಡಗಿದ. ಇನ್ನೊಂದಿನ್ನೂರು ಹೆಜ್ಜೆಗೆ ಸ್ವಸ್ತಿಕ್ ರಿಕ್ರಿಯೇಷನ್ ಕ್ಲಬ್ಬಿನಲ್ಲಿ ಯಾರೋ ಅತಿರಿಕ್ತವಾಗಿ ರಾಜನನ್ನು ಸೇರಿಸಿದರೆಂಬ ಕಾರಣಕ್ಕೆ ವಿರೋದ ಪಕ್ಷದವರು ವಿರೋದ ಪಕ್ಷದವರಾದರು- ಆಡಳಿತ ಪಕ್ಷದವರು ಆಡಳಿತ ಪಕ್ಷದವರಾಗಿ ಮೀಸೆ ಮೇಲೆ ಕೈ‌ಇಟ್ಟುಕೊಂಡರು…

ಅಲಲಲಾ ಅನ್ನುವಷ್ಟರಲ್ಲಿ ಹರಕು ಜೀನ್ಸು ಚಡ್ಡಿ; ಮುರುಕು ಟೀ ಶರಟು ಧರಿಸಿದ್ದ ಸಿಂಬಳ ಗೊಣ್ಣಿಯ ಎರಡೂ ಮುಕ್ಕಾಲಡಿಯ ಕೆದರು ಕಿರಾಪಿನ ಹುಡುಗನೊಬ್ಬ ಕಿರ್ಧಬಲ ಓಡಲಾರಂಭಿಸಿದವನು ನಿರ್ದಿಷ್ಟ ಮನೆ ಮುಟ್ಟುವುದರೊಳಗಾಗಿ ಮೂರಡಿಯಷ್ಟೆತ್ತರದವನಾಗಿ ಟಪ್ ಟಪ್ ಎನೆ ಮುಚ್ಚಿದ್ದ ಬಾಗಿಲು ತಟ್ಟಿದ, ತಟ್ಟಿದ ಶಬ್ದಕ್ಕಿಂತ ಅವನು ಆಡುತ್ತಿದ್ದ ಉಸಿರು ಅಡಿಗೆಮನೆಯೊಳಗೆ ಕೇಳಿಸಿ ಕೆದರುಗೂದಲನ್ನು ತುರುಬಾಕಾದರದಲ್ಲಿ ಕಟ್ಟಿಕೊಳ್ಳುತ್ತ ‘ವೆನ್ನೆಲ್ಲೋ ಅಡಪಿಲ್ಲ’ ಲಗುಬಗೆಯಿಂದ ಬಂದು ಬಾಗಿಲು ತೆರೆದು ಆ ಹುಡುಗನನ್ನು ನೋಡಿ ವಿಸ್ಮಿತಳಾಗಿ ‘ಏನು’ ಎಂದು ಕೇಳಿದಳು. ಆಕೆಗೆ ಸಹಾಯಕವಾಗಿ ಮಾರ್ಜಾಲ ವಾಟೀಜ್ ಮ್ಯಾಟರ್ ಅಂತ ಮ್ಯಾಂವ್‌ಗುಟ್ಟುತ್ತ ಬಂತು. ತಾಯಿ ಯಾರೇ ಅದು ಅಂತ ಬಂದು ಇನ್ನೊಂದು ಮಗ್ಗುಲು ನಿಂತಳು ಬಾಲ ಮುಕುಂದ ನಾಲಿಗೆಯಿಂದ ಸಿಂಬಳ ಆಪೋಶನ ತೆಗೆದುಕೊಂಡು ಬಾಯಿ ಮುಚ್ಚುವ ಮೊದಲೇ ಇಷ್ಟಿದ್ದ ಅವರು ಅಷ್ಟೊಂದು ಯೋಚಿಸಿದರು.
“ಏನೋ?” ಎಂದು ಕೇಳಿದಳು. ಆಡಪಿಲ್ಲ.
“ಒಕ ಮುದ್ದಿಸ್ತೆ ಚೆಪ್ತಾನು” ಅಂದ ಬಾಲ ಮುಕುಂದ.
“ಥೂ ನಿನ್ನ!” ಎಂದು ನಿರಾಕರಿಸಿದಳು.
“ತರುವಾತ ಮುದ್ದಿಪ್ಪಿಚ್ಚುಕುಂಟಾನು…” ಬಾಲ ಮುಕುಂದ ಜಾರಿದ್ದ ಚಡ್ಡಿ ಮೇಲೆಳದು ಬಲ್ಲಮರಿ ಗೌರವ ಕಾಪಾಡಿಕೊಂಡ ಹೇಳಿದ “ಮೀ ಇಂಟಿಕೆವರೋ ಒಕರು ವಸ್ತೂ

ಉನ್ನಾರು… ಬಾಗ ಚೂಸುಕೋವಲೆನು ಪೋಗೊಟ್ಟುಕೊಂಟೆ ಮಳ್ಳಿ ದೊರಕರು ಜಾಗ್ರತ” ಎಂದು ಚಿರಂಜೀವಿಯಂತೆ ಡೈಲಾಗು ಹೊಡೆದು ತಾನೇ ಒಂದು ‘ಸೂಪರ್ ಡಿಲಕ್ಸು’ ಬಸ್ಸು ಎಂಬಂತೆ ಬುರ್ರ್… ಬುರ್ರ್… ಪೊಂಯ್ ಪೊಂಯ್ ಸದ್ದು ಮಾಡುತ್ತ ಅಂತರ್ಧಾನವಾದನು…
ಯಾರೂ ಏನ್ಕಥೆ? ಕೇಳಬೇಕೆಂದರೆ ಅವನು ‘ಲಾ ಪತಾ’
ತಾಯಿ ಮಗಳು ಪರಸ್ಪರ ಮುಖ ನೋಡಿಕೊಂಡರು. ನನ್ ಮುಖಾನೂ ಸ್ವಲ್ಪ ನೋಡ್ರೆ ಭೇ… ಮಾರ್ಜಾಲ ಅರಚಿತು.
ಯಾರು ಬರುತ್ತಿರಬಹುದು. ತೀರ್ಥರೂನೇನಾದರೂ ಬರುತ್ತಿರಬಹುದೇ? ಆತ ಬರೊದೇನಿದ್ದರೂ ಮಧ್ಯರಾತ್ರಿಯಲ್ಲಿಯೇ! ಕಾಣೆಯಾಗುವುದೂ ಮಧ್ಯರಾತ್ರಿಯಲ್ಲಿಯೇ… ಮಾಟ ಮಂತ್ರಕ್ಕೆಲ್ಲ ತಿಲಾಂಜಲಿಯನ್ನಿತ್ತು ಮಟ ಮಟ ಮಧ್ಯಾನ್ನ ಬರುತ್ತಿರುವನೇನೋ ಪ್ರಾಣ ಬೇಕಾದರೂ ಬಿಟ್ಟಾನು! ವಾಮಾಚಾರವನ್ನು ಮಾತ್ರ ಬಿಡುವ ಪೈಕಿಯಲ್ಲ.
ಮತ್ತಾರಿರಬಹುದು? ಮತ್ತೆ ಪರಸ್ಪರ ಮುಖ ನೋಡಿಕೊಂಡರು. ಮಾರ್ಜಾಲ ಮ್ಯಾವ್ ಗುಟ್ಟಿ ಕಾಳಜಿ ವ್ಯಕ್ತಪಡಿಸಿತು. ಕಾಗೆ ಕಾಕಾ ಅಂತೌ. ಹಲ್ಲಿ ಲೊಚಗುಟ್ತಿತು. ಇಲಿಗಳು ಪರಸ್ಪರ ಅಡ್ಡಾಡಿ ಸದ್ದು ಮಾಡಿದವು. ಹಿತ್ತಲಲ್ಲಿದ್ದ ಮಲ್ಲಿಗೆ ಬಳ್ಳಿ ಪುತುಪುತು ಹೂವುಗಳನ್ನುದುರಿಸಿತು.
ಶಕುನಗಳಿಗನುಕೂಲಕರವಾಗಿ ವ್ಯಕ್ತಿಯೊಬ್ಬ ಕಾಣಿಸಿಕೊಂಡ. ಅವನೊಂದಿಗೆ ಲಗೇಜಿನೊಂದಿಗೆ ಕೂಲಿ ಬಂದ. ತಾಯಿ ಅವನ ಕಡೆ ಪ್ರಶ್ನಾರ್ಥಕವಾಗಿ ನೋಡಿದಳು. ಅವನು ಆಕೆ ಕಡೆಗೊಮ್ಮೆ ಆಕೆಯ ಮಗಳ ಕಡೆಗೊಮ್ಮೆ ಆಪ್ಯಾಯಮಾನದಿಂದ ನೋಡಿದ.
“ಅಕ್ಕಾ… ನಾನು ರಘು… ನಿನ್ನ ತಮ್ಮ! ಅವನು ಅಷ್ಟು ಹೇಳಿ ಲೈನು ಕ್ಲಿಯರ್ ಮಾಡದಿದ್ದರೆ ಹೇಗೆ?
ಅರ್ಧ ನೋಟದಿಂದ ಅವನನ್ನು ಕಣ್ಣಿನಲ್ಲಿ ತುಂಬಿಕೊಂಡು ಅನಸೂಯಾ ಹಿತ್ತಲ ಕಡೆ ಓಡಿ ಮಲ್ಲಿಗೆ ಬಳ್ಳಿ ಅರಳಿಸಿದ್ದ ಹೂಗಳನ್ನು ನೋಡುತ್ತ ನಿಂತಳು. ಎಷ್ಟೇ ಓದಿಕೊಂಡಿದ್ದರೂ; ಎಷ್ಟೇ ಫೆಮಿನಿಸ್ಟು ಐಡಿಯಾಲಜಿ ತುಂಬಿಕೊಂಡಿದ್ದರೂ ಪ್ರಕಟವಾಗುವ ನಾಚಿಕೆಯನ್ನು ಮಾತ್ರ ಯಾವುದೇ ಹೆಣ್ಣಿಗೆ ತಡೆಯಲಾಗುವುದಿಲ್ಲ!

ಎಷ್ಟು ದಿನಗಳ ನಂತರ ತಾನು ತನ್ನ ತಮ್ಮನನ್ನು ನೋಡುತ್ತಿರುವುದು? ಆವಾಗ ಇಷ್ತಿದ್ದ? ಬಾಯಲ್ಲಿ ಬೆರಳಿಟ್ಟರೆ ಕಡಿಯಲಿಕ್ಕೆ ಬರುತ್ತಿರಲಿಲ್ಲ. ಈಗೆಂಗಾಗಿ ಬಿಟ್ಟಿರುವನಲ್ಲ ತನ್ನ ಮುದ್ದು ತಮ್ಮ! ಆಕೆಯ ಮುಖದ ತುಂಬ ವಾತ್ಸಲ್ಯದ ತೊರೆ ಜುಳುಜುಳು ಹರಿಯತೊಡಗಿತು.
“ರಘೂ! ರಘುರಾಮ!! ಉದ್ಗರಿಸಿದಳು.
ಕಾಲಿಗೆ ನೀರು ಕೊಟ್ಟಳು. ಅವನು ಕಾಲು ತೊಳೆದುಕೊಂಡು ಒಳಗಡೆ ಬಂದ. ಅಕ್ಕ ತೋರಿಸಿದ ಕುರ್ಚಿ ಮೇಲೆ ತಮ್ಮ ಕುಳಿತುಕೊಂಡ. ಒಂದು ನೋಟದಿಂದ ಮನೆ ವಾತಾವರಣ ಅರ್ಥ ಮಾಡಿಕೊಂಡ. ಅನಸೂಯ ಒಳಗಡೆ ಕಾಫಿ ಮಾಡಿದಳು.
“ಅನಸೂಯಾ… ಕಾಫಿ ತಗೊಂಡ್ಬಾರೆ… ಯಾಕೆ ನಾಚ್ಕೋತಿ… ಬಂದಿರೋದು ಬೇರೆ ಯಾರೂ ಅಲ್ಲ. ನಿನ್ನ ಸೋದರ ಮಾವ…” ಸಾಂದರ್ಭಿಕವಾಗಿ ರುಕ್ಕಮ್ಮ ಸಂಕ್ಷಿಪ್ತ ರೀತಿಯಲ್ಲಿ ಪರಿಚಯ ಭಾಷಣ ಮಾಡಿದಳು.

ಅನಸೂಯ ಕೈಯಲ್ಲಿ ಕಾಫಿ ಗ್ಲಾಸುಗಳಿದ್ದ ಟ್ರೇ ಹಿಡಿದುಕೊಂಡು ಹೊರಬಂದಳು. ದುಷ್ಯಂತನನ್ನು ಗಾಂಧರ್ವ ವಿವಾಹವಾಗುವಾಗ ಶಾಕುಂತಳ ತಲೆತಗ್ಗಿಸಿದ್ದಳಲ್ಲ ಹಾಗೆ.

ಬೆಳದಿಂಗಳಂತಿದ್ದ ಅಕ್ಕನ ಮಗಳ ಮುಖ ನೋಡುತ್ತ ರಘು ಕಾಫಿ ಕಪ್ಪು ತೆಗೆದುಕೊಂಡ .
“ನಮ್ ಅನಸೂಯಾ ಏನಕ್ಕಾ? ಎಷ್ಟೊಂದು ಬೆಳೆದು ದೊಡ್ಡವಳಾಗಿದ್ದಾಳಲ್ಲಕ್ಕಾ ನಾನು ಯಾರೋ ಅಂದ್ಕೊಂಡಿದ್ದೆ ಗುತೇ ಸಿಗ್ಲಿಲ್ಲ!” ನಗರದ ನುಡಿಗಟ್ಟಿನಲ್ಲಿ ಮಾತಾಡಿದ.
ಆಕೆಯ ಮುಖದ ಬಿಗುವು ಸಡಲಿತು.
ಕಾಫಿ ಕುಡಿದಿದ್ದಾಯಿತು. ಸ್ನಾನ, ಊಟದ ಏರ್ಪಾಡು ಮಾಡಲು ಅನಸೂಯ ಒಳಗಡೆ ಹೋದಳು. ಅಕ್ಕ ತಮ್ಮನ ನಡುವೆ ಮೌನ ಆವರಿಸಿತು. ತಮ್ಮೀರ್ವರಲ್ಲಿ ಮೊದಲು ಯಾರು ಮಾತು ಪ್ರಾರಂಭಿಸುವುದು?
ತವರು ಮನೆಯ ಅಭದ್ರ ಬದುಕು, ಮೊಮ್ಮಕ್ಕಳನ್ನು ಕಾಣುವ ಮೊದಲೆ ತೀರಿಕೊಂಡ ತಂದೆತಾಯಿ; ಇನ್ನೊಬ್ಬ ತಮ್ಮನನ್ನು ತಾನು ತಂದಿಟ್ಟುಕೊಂಡಿದ್ದು; ಅವನು ಶಾಲೆಗೆ ಹೋಗದೆ ಕದ್ದು ತಿರುಗುತ್ತಿದ್ದುದು. ಗಂಡ ಏನು ಸಿಕ್ಕರೆ ಅದರಿಂದಲೆ ಹೊಡೆಯುತ್ತಿದ್ದುದು, ಅವನು ಹೇಳದೆ ಕೇಳದೆ ಓಡಿಹೋದದ್ದು. ಎಲ್ಲವು ಒಂದೆ ಏಟಿಗೆ ನೆನಪಾಗುವುದು.

ರಘು ಮೀಸೆ ಮೂಡುವ ಮೊದಲೊಮ್ಮೆ ಬಂದಿದ್ದ. ಮೀಸೆ ಮೂಡಿದ ಮೇಲೊಮ್ಮೆ ಬಂದಿದ್ದ. ಹೀಗೆ ಬಂದು ಹಾಗೆ ಹೊರಟುಹೋಗಿದ್ದ. ಹೀಗಾಗಿ ಅವನ ನೆನಪು ಸರಿಯಾಗಿ ಯಾರಿಗೂ ಇಲ್ಲ. ‘ಅಕ್ಕಾ ನಾನು ನಿನ್ನ ತಮ್ಮ’ ಎಂದು ಹೇಳದಿದ್ದಲ್ಲಿ ಖುದ್ದ ರುಕ್ಕಮ್ಮನೇ ತಾನುಂಡಬಿಟ್ಟ ಮೊಲೆಯನ್ನುಂಡವನನ್ನು ಗುರುತಿಸುತ್ತಿರಲೇ ಇರಲಿಲ್ಲ.
ಅಕ್ಕ ತಮ್ಮ ಇಬ್ಬರು ಒಬ್ಬರ ಮುಖ ಒಬ್ಬರು ನೋಡಿಕೊಂಡರು. ಅವರಿಬ್ಬರಿಗೂ ಪರಸ್ಪರ ತೋಡಿಕೊಳ್ಳುವುದೇನೋ ಸಾಕಷ್ಟಿತ್ತು. ಒಡ್ಡಿನ ಒಂದು ಕಲ್ಲು ಕಿತ್ತರೆ ಯಾವ ಪ್ರಕಾರವಾಗಿ ಕೆರೆ ಕಿತ್ತುಕೊಂಡು ನುಗ್ಗುವುದೋ ಹಾಗೆಯೇ ಮನದ ದುಗುಡ ಎಂಬುದು ಕೂಡ. ಯಾರಾದರೊಬ್ಬರು ಸೋ ಎಂದರೆ ತಾನೆ ಉಳಿದುದೆಲ್ಲ. ಉದ್ವಿಗ್ನತೆಯಿಂದಾಗಿ ಸಾವಿರದೆಂಟು ಮಾತುಗಳ ಪೈಕಿ ಯಾವ ಮಾತನ್ನು ಹೇಗೆ ಪ್ರಾರಂಭಿಸಬೇಕೆಂದು ಆ ಕ್ಷಣ ಅವರಿಗೆ ಹೊಳೆಯಲಿಲ್ಲ.
“ಭಾವ ಎಲ್ಲಿ ಕಾಣಿಲ್ಲಲ್ಲ!” ಎಂದು ರಘು ಕೇಳಬೇಕೆನ್ನುವಷ್ಟರಲ್ಲಿ ಅಕ್ಕನೇ ಮುಂದೆ ಬಿದ್ದು ‘ಪತ್ರ ಮುಟ್ತಾ’ ಎಂದು ಕೇಳಿಬಿಡಬೇಕೆ!
“ಯಾವ ಪತ್ರ?” ಆಶ್ಚರ್ಯ ವ್ಯಕ್ತಪಡಿಸಿದ. ಒಂದು ಕ್ಷಣದಲ್ಲಿ ಪರಿಸ್ತಿತಿ ಅರ್ಥೈಸಿಕೊಂಡು “ಓಹೋ! ಅದು ಬಂತೂ ಬಂತೂ” ಅಂದ.
ವ್ಯವಹಾರದ ನಿಮಿತ್ತ ಆತ ಕಾರ್ಗಲ್ಲಿಗೆ ಕಳೆದ ಎರಡು ತಿಂಗಳ ಹಿಂದೆಯೇ ಬಂದಿದ್ದ. ಅಲ್ಲಿನ ಹೆಜ್ಜತ್ತಾಡಿ ಶ್ರೀಕೃಷ್ಣಭಟ್ಟರ ಭೂಮಿಯನ್ನು ಅವರಿಗೇ ಕೊಡಸುವ ನಿಮಿತ್ತ ಸೆಂಟರಲ್ ಕಮಿಟಿ ಕನ್ವೀನಿಯರ್ ಅಕ್ಬರ್ ರಘುವನ್ನು ನೇಮಿಸಿದ್ದ. ಮುಂದಿನ ವರ್ಷದ ಜನರಲ್ ಬಾಡಿ ಮೀಟಿಂಗಿನಲ್ಲಿ ರಘುವನ್ನೇ ಕಮಿಟಿ ಕನ್ವೀನಿಯರನ್ನಾಗಿ ನೇಮಿಸಿದರೆ ಆಶ್ಚರ್ಯ ಪಡಬೇಕಿಲ್ಲ. ಅವನು ಯಾವುದೇ ಸಮಸ್ಯೆಯನ್ನು ಬಿಗಡಾಯಿಸದ ಹಾಗೆ ನೋಡಿಕೊಳ್ಳುತ್ತಾನೆ. ಯಾರನ್ನೂ ದ್ವೇಷಿಸಲಾರ. ಯಾರಿಂದಲೂ ದ್ವೇಷಿಸಿಕೊಳ್ಳರಿಯ. ಏನೇ ಪರಪಾಟು, ಲೋಪ ದೋಷಗಳು ವ್ಯವಸ್ಥೆಯಲ್ಲಿ ಮಾತ್ರ ಇರಲು ಸಾಧ್ಯ.
ಖಿhe iಜeಚಿs oಜಿ ಣhe soಛಿieಣಥಿ ಚಿಡಿe ಣhe iಜeಚಿs oಜಿ ಣhe ಡಿuಟiಟಿg ಠಿಚಿಡಿಣಥಿ ಎಂದು ಮಾರ್ಕ್ಸ್ ಹೇಳಿರುವುದರ ಬಗೆಗೂ ಯೋಚಿಸುತ್ತಿರುವ ರಘು ಎಂದೂ ಉಗರಿನಿಂದ ಆಗುವ ಕೆಲಸಕ್ಕೆ ಕೊಡಲಿಯನ್ನು ಉಪಯೊಗಿಸುವುದಿಲ್ಲ. ಅಥವಾ ಕೊಡಲಿಯಿಂದಾಗುವ ಕೆಲಸಕ್ಕೂ ಅವನು ಉಗುರನ್ನೇ ಉಪಯೋಗಿಸುತ್ತಾನೆ. ಅದೇ ಅವನ ಜಾಣ್ತನ. ಇದರಿಂದಾಗಿ ಪಾರ್ಟಿಯ ಬಹುತೇಕ
ಸದಸ್ಯರಿಗೆ ರಘುನ ಮೇಲೆ ಪ್ರೀತಿ.

ಕಾರ್ಗಲ್ಲಿನಿಂದ ಸೀದ ಬೆಂಗಳೂರಿಗೆ ಬರಬೇಡವೆಂದು ಅಕ್ಬರ್ ಹೇಳಿದ್ದ. ಅದು ಅಲ್ಲದೆ ಒಡಹುಟ್ಟಿದ ಅಕ್ಕನನ್ನು ನೋಡಬೇಕೆನಿಸಿತು. ಅನಸೂಯಳ ನೆನಪು ಇತ್ತೀಚೆಗೆ ಆವರಿಸಿತ್ತು. ಅವಳ ಅಭಿಪ್ರಾಯ ತಿಳಿದುಕೊಂಡ ನಂತರವೇ ತನ್ನ ಮದುವೆ ಬಗ್ಗೆ ಯೋಚಿಸಬೇಕೆಂದು ನಿರ್ಧರಿಸಿದ್ದ. ಇವಕ್ಕೆಲ್ಲ ಕಳಸವಿಟ್ಟಂತೆ ಬೆಂಗಳೂರಿನ ರೈಲ್ವೆ ನಿಲ್ದಾಣದಲ್ಲಿ ಎಲ್ಲೋ ಭಾವ ರುದ್ರನಾಯಕನನ್ನು ನೋಡಿದಂತೆ ನೆನಪು. ಆತ ತುಂಬ ದೂರ ಹೋಗುವ ರೈಲಲ್ಲಿ ಕೂತಿದ್ದ ಮತ್ತೊಮ್ಮೆ ನೋಡಬೇಕೆನ್ನುವಷ್ಟರಲ್ಲಿ ಜಿ.ಟಿ ಬಂದು ಅಡ್ಡನಿಂತು ಬಿಟ್ಟಿತ್ತು. ಈ ಕಡೆಯಿಂದ ಹೋಗಿ ಆ ಕಡೆಗೆ ಬರಬೇನ್ನುವಷ್ಟರಲ್ಲಿ ಆ ಟ್ರೇನ್ ಹೋಗಿಬಿಟ್ಟಿತ್ತು. ತಾನು ನೋಡಿದ್ದು ರುದ್ರನಾಯಕ ಹೌದೋ ಅಲ್ಲವೋ ಅದು ಬೇರೆ ಪ್ರಶ್ನೆ. ನೀಳಗಡ್ಡಬಿಟ್ಟು ಕಾವಿ ನಿಲುವಂಗಿ ಧರಿಸಿದ್ದ ಆತ ತನ್ನ ಭಾವ ಆಗಿರಲಿಕ್ಕಿಲ್ಲಬಹುದು ಎಂದು ಮರು ಕ್ಷಣ ಸಮಾಧಾನ ತಂದುಕೊಂಡ ನೋಡಿರದಿದ್ದರೂ ಅಕ್ಬರ್‌ಗೆ ಪರಿಚಯ ಇಲ್ಲದಿರಲಿಲ್ಲ. ಸಾಂಧರ್ಭಿಕವಾಗಿ ತನ್ನ ಪರಮಪೂಜ್ಯ ಮಾವನವರಬಗ್ಗೆ ಅಷ್ಟಾದಶ ವರ್ಣನೆ ಮಾಡಿ ಹೇಳಿದ್ದ. ಚಿಕನ್ ಕಬಾಬ್‌ಗೆ ಬಳಸುವ ಎಲ್ಲಾ ಮಸಾಲೆ ಬೆರೆಸಿ ಕಮಿಟಿ ಸದಸ್ಯರ ಹೃದಯಗಳಲ್ಲಿ ರುದ್ರ ನಾಯಕನ ಭವ್ಯ ರೂಪವನ್ನು ಕಡೆದು ನಿಲ್ಲಿಸಿಬಿಟ್ಟಿದ್ದ. ಎಡಪಂಥೀಯ ವಿಚಾರಧಾರೆ ಅನುಷ್ಟನಕ್ಕೆ ಇಂಥವರ ಅಗತ್ಯ ತುಂಬ ಇರುವುದೆಂದೂ; ವಾಮಾಚಾರ ಎಂಬ ಪದದ ಪೂರ್ವಾಧವೇ ಎಡಪಂಥಕ್ಕೆ ಪುಷ್ಟಿಕೊಡುವುದೆಂದು ಇಡೀ ಕಮಿಟಿ ಅಭಿಪ್ರಾಯ ಪಟ್ಟಿತ್ತು. ರುದ್ರನಾಯಕನಂಥವರೊಬ್ಬರು ಇದ್ದುಬಿಟ್ಟರೆ ಮಾವೋ, ಲೆನಿನ್‌ರವರು ಕನಸಿಸಿದ ಸರ್ವೇ ಜನೋ ಸುಖಿನೋ ಭವಂತು ಸಮಾಜವನ್ನು ಪ್ರತಿಷ್ಟಾಪಿಸಿಬಿಡಬಹುದೆಂದು ಕಾಮ್ರೇಡ್ ಅಕ್ಬರ್ ಹೇಳಿದ್ದ.

ಕಾರ್ಗಲ್ಲಿನಲ್ಲಿ ಹೋಗಿ ಕೋಗಿಲೆ ಮನೆಯ ಗಣಪತಿಯಿಂದ ಶ್ರೀಕೃಷ್ಣ ಭಟ್ಟರಿಗಾಗಿರುವ ತೊಂದರೆ ನಿವಾರಿಸಿ ಬರುವಾಗ್ಗೆ ಹೇಗಾದರೂ ಮಾಡಿ ರುದ್ರನಾಯಕನನ್ನು ಪುಸಲಾಯಿಸಿ ಕರೆತಂದು ಕಮಿಟಿ ಎದುರು ಹಾಜರುಪಡಿಸಬೆಕೆಂದು ಅಕ್ಬರು ರಘುವನ್ನು ಬೀಳ್ಕೊಟ್ಟಿದ್ದ.
ಸ್ವಲ್ಪ ಡೌಲಿಗೆ ಹೃದಯ ಕರಗಿ ಬಿಡುವ ರುದ್ರನಾಯಕ ಮನೆಯಲ್ಲಿ ಕಂಡುಬರದಿದ್ದುದರಿಂದ ರಘು ತನಗಾದ ಬೇಸರವನ್ನು ತೋರಗೊಡಲಿಲ್ಲ. ಅಲ್ಲದೆ ಅಕ್ಕ ಬರೆದಿರಬಹುದಾದ ಪತ್ರವೂ ತನಗೆ ತಲುಪಿಲ್ಲ. ತನ್ನ ವಿಳಾಸಗಳೋ ದಿನಕ್ಕೊಂದರಂತೆ ಬದಲಾಗುತ್ತಿರುತ್ತವೆ. ಆಕೆ ಬರೆದ ಪತ್ರ ಯಾರ ವಿಳಸಕ್ಕೆ ಹೋಗಿರುವುದೇನೋ? ತಾನು ವಿಳಾಸ ರಹಿತನೆಂದು ತಿಳಿದರೆ ಅಕ್ಕ ಬೇಸರ ಮಾಡಿಕೊಳ್ಳುತ್ತಾಳೆ!
“ಹ್ಹಾ ಹ್ಹಾ! ಬಂತು; ಬಂತಕ್ಕ” ಎಂದ. ವ್ಯವಸ್ಥೆ ಬದಲಾಯಿಸುವವರು ಸಾಂದರ್ಭಿಕವಾಗಿ ಸುಳ್ಳುಹೇಳದಿದ್ದರಾಗುವುದೇ?
ಸುಳ್ಳುಹೇಳುತ್ತಿರುವನೋ? ಹೇಗೆ? ರುಕ್ಕಮ್ಮ ತಮ್ಮನ ಕಡೆ ಪ್ರಶ್ನಾರ್ಥಕವಾಗಿ ನೋಡಿದಳು. ರಘುಗೆ ಅಕ್ಕನ ಮುಖ ನೇರವಾಗಿ ನೋಡುವ ಧೈರ್ಯವಿರಲಿಲ್ಲ. ತಪೋಭಂಗಿಯಲ್ಲಿ ಕೂತಿರುವ ಭಾವನ ಫೋಟೋ ಕಡೆ ನೋಡಿದ.

“ಆಮೇಲೆ ನಿಧಾನವಾಗಿ ಎಲ್ಲ ಮಾತಾಡಿದ್ರಾಯ್ತು. ಮೊದ್ಲು ಸ್ನಾನ ಮಾಡಿ ಊಟ ಮಾಡು ನಡೆ” ರುಕ್ಕಮ್ಮ್ ನಿಟ್ಟುಸಿರು ಬಿಟ್ಟಳು.
ರಘುರಾಮ ಎದ್ದು ಸ್ನಾನ ಮುಗಿಸಿದ. ಎಷ್ಟೊ ದಿನಗಳ ನಂತರ ಒಳ್ಳೆಯ ಸ್ನಾನ ಮಾಡಿದ
ಅನುಭವವಾಯಿತು. ತಾಯಿಯ ಕಟ್ಟಾಜ್ಞೆಯಂತೆ ಅನಸುಯ ಊಟ ಬಡಿಸಿದಳು. ಎಷ್ಟೊ ದಿನಗಳ ಬಳಿಕ ಒಳ್ಳೆಯ ಊಟ ಮಾಡಿದ ಅನುಭವವಾಯಿತು.
ಬಡಿಸುತ್ತಿದ್ದ ಅನಸೂಯಳನ್ನು ಮಾತಾಡಿಸಿದರೆ ಚೆನ್ನಾಗಿತ್ತೂಂತ ಕೈತೊಳೆದುಕೊಳ್ಳುತಿರುವಾಗ ಅಂದುಕೊಂಡ. ಆಕೆ ತನ್ನ ಮುಖದಿಂದ, ಮಾತಾಡಲಿಕ್ಕೆ ಅನುಕೂಲವಾದ ವಾತಾವರಣ ನಿರ್ಮಿಸುತ್ತಿಲ್ಲ. ಎಷ್ಟೇ‌ಇದ್ದರೂ ಆಕೆ ಪದವೀಧರೆ ನಡುವಳಿಕೆಗಳ ಸೂಕ್ತ ಬಲ್ಲವಳು.
ತಾಯಿ ಬಣ್ಣದ ತಗಡಿನ ತುತ್ತೂರಿ ಕಂಠಪಾಟ ಮಾಡುತ್ತಿರುವಾಗ ಹುಟ್ಟುತ್ತಲೇ ಕಿಟಾರನೆ ಕಿರುಚಿಕೊಂಡಂಥವಳು.
ಅಡುಗೆ ಮನೆಯ ಬಾಗಿಲು ದಾಟುವಾಗ ಡರ್ರನೆ ಡೇಗಿದ. “ಸಯಾಗಿ ನೀಡಿದೇ ಇಲ್ವೇ ಮಾತಾಡ್ತಾ ನೀಡಬೇಕಾಗಿತ್ತು. ನನ್ತಮ್ಮ ಏನಂಕೊಂಡನೋ ಏನೋ” ಎಂದು ಗೊಣಗಿಡುತ್ತ ಅಕ್ಕ ಪಾತ್ರೆ ಪಡಗ ಮಾಡುತ್ತಿರುವ ಸದ್ದು ಕೇಳಿಸಿತು.

ಏನನ್ನೋ ಧೇನಿಸುತ್ತ ಹಾಗೆ ಒಂದು ಜೊಂಪು ನಿದ್ದೆ ಮಾಡಿದ. ಅವನು ಎಚ್ಚರಾಗುವ ಮೊದಲೆ ಅಕ್ಕ ಮಗಳು ಊಟ ಮುಗಿಸಿದ್ದರು. ಬಾಗಿಲಲ್ಲಿ ಇಣುಕಿ ಓಡುತ್ತಿರುವ ಮಕ್ಕಳು, ತಂತಮ್ಮ ಮನೆಗಳಿಂದಲೇ ಇಣುಕುತ್ತಿರುವ ದೊಡ್ಡವರು, ಚಿಕ್ಕವರು, ಅಕ್ಕ ಗದರಿಕೊಳ್ಳುತ್ತಿರುವುದು ಕೇಳಿಸಿಕೊಳ್ಳುತ್ತ ಹಾಗೆ ಅರೆ ಎಚ್ಚರದಲ್ಲಿ ಮಲಗಿಕೊಂಡಿದ್ದ.

ಏನೋ ಹಾಳಾದೋವೇನು? ಎಂದಾದ್ರೂ ಮಂದೀನ ನೋಡಿದ್ದಾರೋ ಇಲ್ಲೋ? ಗೂಬೆಗಳಂಗೆ ಯಾಕಾಡ್ತಿದ್ದಾವಂತೀನಿ ನಮ್ಮನ್ಯಾಗೇನು ಗೊಂಬೆ ಕುಣಿಯಾಕತ್ಯಾವೇನು? ರುಕ್ಕಮ್ಮ ಈ ಪ್ರಕಾರವಾಗಿ ಗೊಣಗಿಕೊಳ್ಳುತ್ತಿರುವಾಗಲೇ ಬಸವನ ಬಾವಿ ಮನೆಯ ಭವಾನಿ ಗಂಗವ್ವ ಕೈಲಿದ್ದ ಚುಟ್ಟಾ ಸೇದುತ್ತ ಹೊಗೆ ಎದೆಗೂಡಿಗಡರಿ ಕೊಕ್ ಕೊಕ್ ಕೆಮ್ಮುತ್ತ ಗತಕಾಲದಲ್ಲಿ ಗಂಡ ಊನ ಮಾಡಿದ್ದ ಬಲಗಾಲನ್ನು ಎಳೆದು ಹಾಕುತ್ತ, ಬಡಗೇರ ಮಾನಪ್ಪಾಚಾರಿ ಕೊಡಿಸಿದ್ದ ಬೆಂಡೊಲೆಗಳನ್ನು ಬಿಸಿಲಿಗೆ ಥಳಥಳಿಪುಸುತ್ತ “ಏನ್ಮಾಡೀಯಭೇ ರುಕ್ಕಮ್ಮ” ಎಂದು ಗುಬ್ಬಿ ಬೆದರಿ ಹಾರಿ ಹೋಗುವಂತೆ ಕೂಗುತ್ತ ಒಳಪ್ರವೇಶಿದಳು. ಗಂಡ ಬದುಕಿದ್ದಾಗೆಂದೂ ಆಕೆ ದ್ವನಿ ಎತ್ತರಿಸಿ ಮಾತಾಡಿದಾಕೆಯಲ್ಲ, ಮುಖ ಎತ್ತಿ ಇನ್ನೊಬ್ಬರನ್ನು ನೋಡಿದಾಕೆಯಲ್ಲ. ಸೂಳೇರ ಸಹವಾಸ ಮಾಡೀ ಮಾಡೀ ಗುಣವಾಗದ ಖಾಯಿಲೆಗಳನ್ನು ತೊಂಕದ ಕೆಳಗೆಲ್ಲ ಹೊತ್ತಿಸಿಕೊಂಡು ತಿಂಗಳ ದಿನಮಾನ ನರಳೀ ನರಳೀ ಕೊನೆ ಉಸುರು ಬಿಡುವಾಗ ಗಂಗೀ ನನ್ ಕೈಹಿಡ್ದ ನಿಂಗೆ ಸುಖಕೊಡ್ಲಿಲ್ಲ ಸಾಲ ಸೂಲ ಮಾಡಿ ನಿಂಗೇನು ಉಳುಸ್ದೆ ಸಾಯ್ತಿದ್ದೀನಿ… ಮುಂದೆ ನೀನೆಂಗ ಬದುಕ್ತೀಯೋ… ಅದು ನಿಂಗೆ ಬಿಟ್ಟಿದ್ದು… ಮತ್ತೆ ಮ…

” ಎಂದು ಏನೋ ಹೇಳಲು ಪ್ರಯತ್ನಿಸಿ ಮನೆಯಲ್ಲಿ ತನ್ನ ಶವ ಸಂಸ್ಕಾರಕ್ಕೂ ದಮ್ಮಡಿ ಬಿಡದೆ ಖಾಲಿ ಮಾಡಿ ಪ್ರಾಣ ಬಿಟ್ಟಿದ್ದ. ಬಡಗೇರ ಮಾನಪ್ಪ ಆ ಮೂರು ವರ್ಷಗಳ ಕಾಲ ಆಶ್ರಯ ಕೊಡದಿದ್ದಲ್ಲಿ ಈ ಭವಾನಿ ಗಂಗವ್ವ ಎಂದೋ ಕೊಲ್ಲಾಪುರ ಮಹಾಲಕ್ಷ್ಮಿ ಪಾದ ಸೇರಿಬಿಟ್ಟಿರುತ್ತಿದ್ದಳು. ಚುಟ್ಟ ಸೇದುವುದರ ಮುಲಕ ಪುರುಷ ಪ್ರಧಾನ ಸಮಾಜದಲ್ಲಿ ಒಂದು ಭದ್ರ ಬುನಾದಿ ಹಾಕಿಕೊಂದಿದ್ದ ಗಂಗವ್ವ ಓಣಿ ಜನ ಸದಾ ಸಂತೋಷವಾಗಿರಬೇಂದು ಬಯಸುವಾಕಿ. ಇಂಥ ಆಕಿ ಯಾರ ಮನೆಗೆ ಬೇಕಾದರೂ ಧೈರ್ಯವಾಗಿ ಹೋಗುತ್ತಿದ್ದಳು. ಕಷ್ಟಸುಖ ವಿಚಾರಿಸಿ ಬರುತ್ತಿದ್ದಳು. ದಿವಂಗತ ಮಾನಪ್ಪಾಚಾರಿಯ ಮಮ್ಮಗಳ ಮದುವೆಯ ಉಸ್ತುವಾರಿಗೆಂದು ಕಳೆದೆರಡು ತಿಂಗಳಿಂದ ಊರು ಬಿಟ್ಟಿದ್ದ ಆಕೆ ಕಳೆದ ವಾರವಷ್ಟೆ ಮರಳಿದ್ದಳು.
“ಗಂಗವ್ವತ್ತೆ… ಬಾ… ಕುಂತ್ಗ… ಊಟ ಆಯ್ತೇನು! ನನ್ನ್ತಮ್ಮ ಬಂದಾನತ್ತೆ…” ರುಕ್ಕಮ್ಮ

ಕೂಡ್ರಲು ಚಾಪೆ ಹಾಕಿದಳು. ನಮಲಲು ಎಲೆ ಅಡಿಕೆ ಚೀಲ ಸರಿಸಿದಳು.
“ಆಹ್… ನನ್ನ ಹಾಟಗಳ್ಳ… ಬಂದಾನೇನು? ಯಾವಾಗ ಬಂದ? ಏನ್ಕಥೆ? ನಾನು ಮಡಿಯುಡಿಯಿಂದ ನೀರು ತರುವಾಗ ಎಷ್ಟೊಂದು ಗೋಳೊಯ್ಕೊಳ್ತಿದ್ದನೆ? ಎಲ್ಲಿದ್ದಾನೆ ತೋಸು ಮತ್ತೆ” ಎಂದು ಕೂತು ರುಮಿರುಮಿ ಸುತ್ತ ನೋಡುತ್ತ ಗೋಟಡಿಕೆಯನ್ನು ಕಟುಮ್ಮನೆ ಕಡಿದಳು.
ವಿಶ್ವಕರ್ಮಿಣಿಯಾದ ಗಂಗವ್ವ ಮಾನಪ್ಪಾಚಾರಿ ತೀರೋವರೆಗೂ ಮಹಾ ಕಠೋರ ಸಂಪ್ರದಾಯಸ್ಥೆಯಾಗಿದ್ದಳು. ಪೂಜೆ ಪುನಸ್ಕಾರ ಮುಗಿಸಿ ಉಂಡು ಬರೋವರೆಗೂ ಆಕೆ ಹತ್ತಿರ ಯಾರೂ ಸುಳಿದಾಡುವಂತಿರಲಿಲ್ಲ. ಆಗಿನ್ನೂ ರಘುರಾಮ ‘ನಾನು ಪಂಜರದ ಹಕ್ಕಿ ನನಗಾರು ಗತಿ’ ಎಂದು ಓದಿಕೊಳ್ಳುತ್ತಿದ್ದ ವಯಸ್ಸಿನವನು. ಯಾರಾದರೂ ಮಡಿ ಆಚಾರ ಅಂತ ನಿಗರಾಡುತ್ತಿದ್ದರೆಂದರೆ ಹೋಗಿ ಅವರ ಆಚಾರ ಕುಲಗೆಡಸಿದ ನಂತರವೇ ತಟ್ಟೆಗೆ ಕೈಹಚ್ಚುತ್ತಿದ್ದನು. ಅವನ ಟೈಮುಪಾಸಿಗೆ ಗಂಗವ್ವ ತಕ್ಕ ಗಿರಾಕಿಯಾಗಿದ್ದಳು. ಆಕೆ ಮಡಿಯಿಂದ ನೀರು ತರುವಾಗ ಮಿಂಚಿನಿಂದ ಪ್ರತ್ಯಕ್ಷವಾಗಿ ಆಕೆಯ ತುಂಬಿದ ಕೊಡವನ್ನು ಮುಟ್ಟಿ ಓಡಿಬಿಡುತ್ತಿದ್ದನು. ಆಗ ಗಂಗವ್ವ ಎಲೋ ನನ್ ಹಾಟುಗಳ್ಳನೇ ಎನ್ನದೆ ಬಾಯಿ ಮುಚ್ಚುತ್ತಿರಲಿಲ್ಲ.

“ಅದೇನು, ಅನ್ಕೊಂಡೀಯೋ? ಅದನ್ನು ಮಾಡ್ವಂತೀ ಮೊದ್ಲು ಎಲೆ ಅಡಕೆ ಹಾಕ್ಕೊಂಡು ಆರಾಮು ತಗೋ” ಎಂದು ವಿಶೇಷ ಕಳೆಯಿಂದ ನುದಿದಳು!
ಅವರಿಬ್ಬರು ಪರಸ್ಪರ ಅದೂ ಇದೂ ಮಾತಾಡಿಕೊಳ್ಳತೊಡಗಿದರು. ತನ್ನ ಗಂಡನ ಸಮಾಚಾರದ ಬಗ್ಗೆ ಮುದುಕಿ ಅದೆಲ್ಲಿ ಪ್ರಸ್ತಾಪಿಸಿ ಬಿಡುವುದೋ ಎಂಬ ಆತಂಕದ ಬಗ್ಗೆ ರುಕ್ಕಮ್ಮ ಪ್ರತಿ ಮಾತನ್ನು ಜಾಗ್ರತೆಯಿಂದ ಮಾತಾಡುತ್ತಿದ್ದಳು. ಆದರೆ ಗಂಗವ್ವ ಯಥಾ ರೀತಿಯದು.

“ಅಲ್ಲೇ ನನ್ ಸೊಸೀಯೇ! ನಿನ ಗಂಡ ಹೆಂಡ್ತಿ ಮಗಳ್ನ ಬಿಟ್ಟು ಹೇಳ್ದೆ ಕೇಳ್ದೆ ಹೋಗಿ ಭಾಳ ದಿನ ಆಯ್ತಂತಲ್ಲೇ? ಅವ ಹೊಟ್ಟೆಗೇನು ತಿಂತಿದ್ದ ಅಂತೀನಿ… ಇಂಥ ಸುಮಾರು ದೂರಾಗ ಹರೇವಿರೋ ನಿನ್ನೂ; ಕೈಗೆ ಬಂದಿರೋ ಅನಸೂಯಾನ್ನೂ ಬಿಟ್ಟು ತಿಂಗಳಗಟ್ಟಳೆ ಹೋಗೋದೆಂದ್ರೇನು? ಅವನೊದೆ ಬರ್ಲಿ… ಕಿರಾಪು ಹಿಡ್ದು ಕೇಳ್ಳಿಲ್ಲಾ… ನಾನು ನೀಲ್ಗುಂದದ ನಾಗಪ್ಪಾಚಾರಿ ಮಗಳೇ ಅಲ್ಲ” ಬಾಯಲ್ಲಿ ಕವಳ ಒತ್ತರಿಸಿ ತುಂಬಿಕೊಳ್ಳದಿದ್ದಲ್ಲಿ ಆಕೆ ಇನ್ನೂ ನಾಲ್ಕು ಮಾತು ಹೆಚ್ಚಿಗೆ ಮಾತಾಡುವಾಕಿ. ಕವಳ ಉಗುಳಿ ಬಂದು ಮತ್ತೆ ಮಾತಾಡಲೆಂದು ಆಕೆ ತೆರೆದ ಬಾಯಿಯ ಮೇಲೆ ಕೂಡಲೆ ರುಕ್ಕಮ್ಮ ಕೈ ಇಟ್ಟಳು. ಸಮುದ್ರ ಮಂಥನ ಕಾಲದಲ್ಲಿ ಹುಟ್ಟಿದ ವಿಷವನ್ನು ಗಂಡನ ಕೊರಳ ಮೇಲೆ ಪಾರ್ವತಿ ಕೈ ಇಟ್ಟು ತಡೆದಳಲ್ಲ ಹಾಗೆ.
“ಮೆಲ್ಲಗೆ ಮಾತಾಡತ್ತೆ… ನಿನ್ ಮೊಮ್ಮಗ ಮಲಕ್ಕಂಡಿದಾನೆ ಅವ್ನು ಕೇಳಿಸ್ಕೊಂಡ್ರೆ ಏನಂದ್ಕೊಂಡಾನು?” ಎಂದು ರುಕ್ಕಮ್ಮ ಪಿಸುಗುಟ್ಟಿದಳು.
“ಆಹ್; ಹೌದು, ಹಂಗಾದ್ರೆ ಅಲ್ಲಿ ಮಲಕ್ಕೊಂಡಿರೋನು ರಘುನೇನು?… ನನ್ ನಾಲ್ಗೆ ಬಿದ್ದು ಹೋಗ್ಲಿ… ಎಂಥಾ ಮಾತಾಡಿಬಿಟ್ನೆಲ್ಲ…” ತನ್ನ ಪಾಡಿಗೆ ತಾನು ಗೊಣಗಿಕೊಂಡು ಮುಂದುವರಿದು ಹೇಳಿದಳು.

“ಅವನೇ ರಘುರಾಮನೇನು? ಎಷ್ಟುದ್ದ ಎಷ್ಟಗಲ ಬೆಳೆದಿದ್ದಾನಲ್ಲ… ಈಗಿನ ಕಾಲದ ಹುಡುಗ್ರು ಇವತ್ತಿದ್ದಂಗ ನಾಳಿರೋಲ್ಲ, ನಾಳಿದ್ದಂಗ ನಾಡಿದ್ದಿರಲ್ಲ… ಆ ದೇವ್ರೆ ಇಲ್ಲಿಗೆ ಕಳಿಸಿ ಕೊಟ್ಟಾನೆ… ಅನಸೂಯಾಗೀವ್ನು ಹೇಳಿ ಮಾಡಿಸಿದ ಜೋಡಿ ನೋಡು… ಮದ್ವಿ ವಿಷ್ಯ ಮಾತಾಡಿಬಿಡು… ಕೈಗೆ ಬಂದಿರೋ ಮಕ್ಕಳ್ನ ಭಾಳ ದಿನ ಮನೇಲಿಟ್ಕೋಬಾರ್ದು…” ಎಂದು ಒಂದು ಮಾತನ್ನು ಹೆಚ್ಚಿಗೆ ಪ್ರಯೋಗಿಸಿತು.
ಅಡುಗೆ ಮನೆಯಲ್ಲಿ ಮೊಣಕಾಲ ಚಿಪ್ಪಿನೊಳಗೆ ಮುಖ ಹುದುಗಿಸಿಕೊಂಡುಕೂತಿದ್ದ ಅನಸೂಯ ಅ ಅದನ್ನು ಕೇಳಿಸಿಕೊಂಡು ನಿಟ್ಟುಸಿರುಬಿಟ್ಟಳು.
ಅದಕ್ಕೆ ಪೂರಕವಾಗಿ ರುಕ್ಕಮ್ಮ ಕೂಡ ನಿಡುಸುಯ್ದಳು.
“ಆಕೀಗೆ ಗಂಡನ್ನ ದೇವ್ರು ಎಲ್ಲಿಟ್ಟಿದ್ದಾನೋ? ಹೇಗೆ ಹೇಳೋದತ್ತೆ.. ಅದ್ರ ಬ್ಯಾರೆ.. ”
“ಎಂಥ ಮಾತಾಡ್ತೀಯೆ ನಮ್ಮವ್ವ… ಅಂಗೈಲಿ ತುಪ್ಪ ಇಟ್ಕೊಂಡು ಬೆಣ್ಣೆಗೆ ತಿರುಗಾಡ್ತಾರೇನೇ? ಒಡಹುಟ್ಟಿದ ತಮ್ಮ ಕಡೇಲಲ್ಲ..”
“ಅದೂ ಅಲ್ದೆ ಅವ್ರೂ..”
“ಯಾರು?”
“ನಿನ್ ಮಗ!” ಮುಂದಿನ ಮಾತು ಗಂಟಲಲ್ಲಿ ಇರುಕಿಕೊಂದಿತು. ಬಹಳ ತ್ರಾಸಿನಿಂದ ಮಾತಾಡಿದಳು. “ಮನೆ ಯಜಮಾನ್ರು ಮನೇಲಿಲ್ಲಾಂದ್ರೆ ಹೆಂಗತ್ತೆ ಮಗ್ಳು ಮದ್ವೆ ಮಾತಾಡೊದು? ನಾಕು ಮಂದಿಯಾದ್ರೂ ಏನಂದ್ಕೊಂಡಾರು? ಯವತ್ತೊ ಕನ್ನೀರವ್ವನ ಭಾವಿ ನೋಡ್ಕೊಂತಿದ್ದೆ. ಮಗಳಿರೋದ್ರಿಂದ ಸುಮ್ಕಿದ್ದೀನಿ… ” ಗಂಟಲ ಕಟ್ಟೆಯೊಡೆಯಿತು. ಗಂಗವ್ವನ ಹೆಗಲ ಮೇಲೆ ಮುಖ ಇಟ್ಟು ಗದ್ಗದಿಸಿ ಅಳತೊಡಗಿದಳು.

“ಛೀ ಹುಚ್ಚಿ ಸುಮ್ಕಿರು… ಮನಿ ಮನೆ ಯಜಮಾನಿಯಾಗಿ ಹಿಂಗ ಅಳ್ತಾರೇನು? ಆ ಹುಡ್ಗಿಯಾದ್ರು ಏನಂದ್ಕೊಂಡಾತು.. ” ಎಂದು ಸಮಾಧಾನಪಡಿಸಿದಳು. ತನ್ನ ಸೆರಗಿನಿಂದ ಆಕೆಯ ಮೂಗು ಕನ್ನು ಒರೆಸಿ “ರುದ್ರ ನಾಯ್ಕಂದು ಎಲ್ಲಾ ಗೊತ್ತಿರೋದೇ. ಅಂಥೊರಿಗ್ರ್ ಬದುಕ್ರೋ ಮಂದಿಗಿಂತ ಸತ್ತು ದೆವ್ವ ಆಗಿರೋರೆ ಮುಖ್ಯ. ಯಾವ್ಯಾವ ದೆವ್ವ ಹುಡುಕ್ಕೊಂಡು ಯಾವ್ಯಾವ ಸುಡುಗಾಡೀಲಿ ಅಲೀತಿದ್ದಾನೇನೋ.. ಅವತ್ತು ಯಾವತ್ತು ಬರ್ತಾನೇನೋ? ಅವನು ಬರೋಕೆ ವರ್ಷಗಳೇ ಆಗಬೌದು? ಅವನಿಗಾಗಿ ಕಾಯ್ತ ಮಗ್ಳ ಬದುಕು ಹಾಳು ಮಾಡಬೇಡ.. ಮಾಡೋದ್ನೆಲ್ಲ ಮಾಡಿ ಮುಗಿಸಿಬಿಡು… ಆಮೇಲೆ ಬೇಕಾದ್ರೆ ಅವ್ನು ಬಂದು ನಿನ್ಗೊಂದು ನಾಲ್ಕೇಟು ಹೊಡೀಲಿ. ಕುತ್ಗಿ ಹಿಚುಕಿ ಹಾಳು ಭಾವೀಗಾಕ್ಲಿ… ಯಾರು ತಡೆಯೋರು? ಗಂಡನ್ನ ಕಳೆಕೊಂಡಿರೋ ನನ್ನ ಬಾಳ್ವೇನೇ ತಗೋ… ಊರುಗೆದ್ರಿದ್ರೆ ನಾನು ಬದುಕೋಕಾಗ್ತಿತ್ತೇನು? ಮಂದಿ ಬೇಷಿದ್ರೂ ಸೇರೊಲ್ಲ, ಕೆಟ್ರೂ ಸೇರೊಲ್ಲ… ನಾವು ಧೈರ್ಯದಿಂದ ಬದುಕಬೇಕಷ್ಟೆ? ಪಟಪಟ ಮಾತಾಡಿಬಿಟ್ಟಿತು. ಯಾರು ಕೇಳಿಸಿಕೊಂಡರೆ ತನಗೇನೆಂಬಂತೆ ಮಲಗಿರುವಂತ ನಾಟಕವಾಡುತ್ತಿರುವ ರಘು ಎಂಬ ಮಹಾಶಯ ಕೂಡ ಕೇಳಿಸಿಕೊಂಡು ತನ್ನಕ್ಕನ ಬಾಳುವೆಗೆ ಆಸರೆಯಾಗಲಿ ಎಂಬ ಉದ್ದೇಶದಿಂದ ‘ವಾಲ್ಯೂಂ’ ಹೆಚ್ಚು ಮಾಡಿತ್ತು.
ಬಲೇನೆ ರುಕ್ಮಿಣಿ… ಎದ್ಕೂಡ್ಲೆ ನಿನ್ತಮ್ಮನ್ನ ಒಂದು ಮಾತು ಕೇಳಿಬಿಡು… ಬಂಗಾರಂಥ ಹುಡುಗಿ. ಕೈ ಹಿಡಿಯೋಕೆ ಪುಣ್ಯ ಮಾಡಿರ್ಬೇಕು. ಕೇಳೋ ಧೈರ್ಯ ನಿನಗಿರದಿದ್ರೆ ನನ್ ಕರೀ… ಬಂದು ಚಣ್ಣ ಹಿಡ್ದು ಬುದ್ದಿ ಹೇಳ್ತೀನಿ… ಮದ್ವೆ ಹೆಂಗ ಮಾಡೋದಂತ ಹೆದರ್ಬೇಡ. ನಾನಿನ್ನು ಬದುಕಿದ್ದೀನಿ… ನನ್ಗೇನು ಮಕ್ಳಿಲ್ಲ ಮರಿಯಿಲ್ಲ… ತಿಳೀತಾ?…? ಎಂದು ಗಂಗವ್ವ ಸರ್ರಂತ ಒಂದು ದಮ್ಮು ಎಳೆಯುತ್ತ ಎದ್ದಳು. ಮೂಗು ಬಾಯಿಯಿಂದ ಹೊಗೆ ಬಿಡುತ್ತ ನ್ಯಾರೋಗೇಜಿನ ಹಾದಿಗುಂಟ ಉಗಿಗುಂಟ ಹೋಗುತ್ತಿರುವುದೇನೋ ಎಂಬಂತೆ ತಮ್ಮ ಮನೆ ಕಡೆ ಹಂಗೊಂದು ಹೆಜ್ಜೆ ಹಿಂಗೊಂದು ಹೆಜ್ಜೆ ಹಾಕುತ್ತ ಹತ್ತು ಹೆಜ್ಜೆಗೊಮ್ಮೆ ಕೆಮ್ಮುವುದರ ಮೂಲಕ ಸಮಸ್ತ ಓಣಿಗೆ ತನ್ನ ಅಸ್ತಿತ್ವವನ್ನು ಜಗಜ್ಜಾಹೀರುಪಡಿಸುತ್ತ… ಊರು ಹೋಗೆನ್ನುವ ಸುಡುಗಾಡು ಬಾ ಎನ್ನುವಷ್ಟು
ವಯಸ್ಸಿನ ಆಣೆಬಡ್ಡಿ ಭವಾನಿ ಗಂಗವ್ವ ಹೋದಳು.

ಆಕೆ ಬಂದು ಹೋದದ್ದರಿಂದ ರುಕ್ಕಮ್ಮನ ಹೃದಯದ ಭಾರ ಅರ್ಧಕ್ಕರ್ಧ ಕದಿಮೆಯಾಯಿತು. ತಮ್ಮ ನಿದ್ರಾಭಿನಯದ ನಡುವೆಯೂ ತಮ್ಮ ಮಾತುಗಳನ್ನು ಕೇಳಿಸಿಕೊಂಡಿರುವನೆಂದು ಆಕೆಗೆ ಗೊತ್ತು. ಒಂದೇ ಮಾತಿಗೆ ಅವನು ಅನಸೂಯಳ ಕೈಹಿಡಿದು ಕರೆದೊಯ್ದು ಸುಖವಾಗಿಟ್ಟುಕೊಂಡರೆ ತನಗದೇ ಸಾಕು! ಪ್ರಶ್ನಾತ್ಮಕವಾಗಿ ಒಳಗೆ ಕೂತಿದ್ದ ಮಗಳ ಕಡೆಗೊಮ್ಮೆ… ಬೆನ್ನು ಮಾಡಿ ಮಲಗಿದ್ದ ತಮ್ಮನ ಕಡೆಗೊಮ್ಮೆ ನೋಡಿದಳು.
ಅನಸೂಯ ಹತ್ತಿರ ಬರುವಂತೆ ಸಂಜ್ಞೆ ಮಾಡಿದಳು. ರುಕ್ಕಮ್ಮ ಮೆಲ್ಲಗೆ ಹೆಜ್ಜೆ ಇಡುತ್ತ ಹೋಗಿ ‘ಏನೇ’ ಎಂದಳು.
“ಅವ್ವಾ… ನಾನಷ್ಟೊಂದು ಭಾರವಾಗಿದ್ದೀನಾ… ನಿನ್ಗೆ?” ಅನಸೂಯ ತಾಯಿ ಹೆಗಲ ಮೇಲೆ ಮುಖ ಇಟ್ಟು ಬಿಕ್ಕಿದಳು.
“ಅದೆಂಥ ಮಾತಾಡ್ತೀಯಾ ತಾಯಿ… ಇದೇ ಪ್ರಶ್ನೇನ ನಾನ್ಯಾರ್ರಿಗೆ ಕೇಳ್ಲಿ ಹೇಳು ಮತ್ತೆ” ರುಕ್ಕಮ್ಮ ಸಂತೈಸಿದಳು. ರಘು ಒಪ್ಪಿದರೆ ತನ್ನ ಅಭ್ಯಂತರವಿಲ್ಲವೆಂದು ಈ ಮೊದಲೇ ಹೇಳಿದ್ದಿರಿಂದ ಮತ್ತೆ ಆ ಬಗ್ಗೆ ಪ್ರಸ್ತಾಪಿಸುವ ಅಗತ್ಯವಿರಲಿಲ್ಲ.

ಪೂರ್ಣ ಎಚ್ಚರ ಇದ್ದರೂ ಮಲಗಿದ್ದ ರಘು ಎಲ್ಲ ಮಾತುಗಳನ್ನು ಸ್ಪಷ್ಟವಾಗಿ ಕೇಳಿಸಿಕೊಂಡಿದ್ದ. ತನ್ನ ಅಕ್ಕ ಇಷ್ಟೊಂದು ಸಂಕಟವನ್ನು ಒಡಲಲ್ಲಿಟ್ಟುಕೊಂಡು ಜೀವನ ಸಾಗಿಸುತ್ತಿರುವುದು ತಿಳಿದು ಖೇದಗೊಂಡ. ಮತ್ತೆ ಮನೆ ಬಿಟ್ಟು ಹೋಗಿರುವ ಭಾವನ ಬಗ್ಗೆ ಸಿಟ್ಟು ಬಂತು. ರೈಲಿನಲ್ಲಿ ಕೂತಿದ್ದ ವ್ಯಕ್ತಿ ಭಾವನೇ ಎಂದುಕೊಂಡ. ಅದು ಉತ್ತರ ಭಾರತದ ಕಡೆ ಹೊರಟಿದ್ದ ರೈಲು. ಆತ ಕಾಶಿ ಕಡೆ ಹೋಗಿರಬಹುದೋ? ಹಿಮಾಲಯದ ಕಡೆ ಹೋಗಿರಬಹುದೋ? ಆತನ ಸಾವು ನೋವು ಸಂಭವಿಸಿರಲಿಕ್ಕಿಲ್ಲ. ಆತ ಪ್ರಚಂಡ ಆತ್ಮವಿಶ್ವಾಸದ ವ್ಯಕ್ತಿ. ಮುಂದೆಂದಾರರೊಂದು ದಿನ ಮರಳಿಬರದಿರಲಾರ. ಎಂದು ಬರುವನೋ! ಆತ ಬಂದರೆ ತನ್ನ ಮಗಳನ್ನು ತನಗೆ ಮದುವೆ ಮಾಡಿಕೊಡಲಿಕ್ಕಿಲ್ಲ. ತನ್ನ ಅಕ್ಕನ ಮಗಳನ್ನು ಮದುವೆಯಾಗುವುದು ತನ್ನ ಜನ್ಮಸಿದ್ಧ ಹಕ್ಕು. ಅಕ್ಕಗೆ ಸಂತೋಷವಾಗುವುದಾದರೆ ತಾನೇನೋ ಮದುವೆಯಾಗಲು ಸಿದ್ಧ… ಆದರೆ ಅನಸೂಯಾ ಒಪ್ಪಬೇಕಲ್ಲ! ಎಷ್ಟಿದ್ದರೂ ಅವಳು ವಿದ್ಯಾವಂತೆ. ತನ್ನಂಥ ಅರೆಬರೆ ವಿದ್ಯಾವಂತನನ್ನು ಇಷ್ಟಪಡುವಳೋ? ಇಲ್ಲವೋ? ತಾನು ಪದವೀಧರನಾಗಿರದಿರಬಹುದು. ತನಗಿರುವಷ್ಟು ಪ್ರಪಂಚ ಜ್ಞಾನ ಅವಳಿಗಿರಲಿಕ್ಕಿಲ್ಲ. ತಾನು ಐದಾರು ಭಾಷೆಗಳಲ್ಲಿ ನಿರರ್ಗಳವಾಗಿ ಮಾತಾಡಬಲ್ಲೆ… ಎರಡು ಮೂರು ಭಾಷೆಗಳಲ್ಲಿ ಸಮರ್ಥವಾಗಿ ಬರೆಯಲೂ ಬಲ್ಲೆ… ಗಂಟೆಗಟ್ಲೆ ನಿರರ್ಗಳವಾಗಿ ಭಾಷಣ ಮಾಡಬಲ್ಲೆ… ಮೂರು ಆರು ಮಾಡುವ ಆರು ಮೂರು ಮಾಡುವ ಚಾಕಚಕ್ಯತೆ ತನಗಿದೆ! ತಾನೆಂದೋ ಮದುವೆಯಾಗಿಬಿಡಬಹುದಾಗಿತ್ತು. ಆರ್ಗನೈಜಿಂಗ್ ಸೆಕ್ರೆಟರಿ ಅಂಜಲಿನಂಬೂದರಿ, ನಗರದ ಪ್ರಾಪರಟೀ ಡೀಲರ್ ಅಗರ್‌ವಾಲನ ಮಗಳು ನಿಧಿ, ವರಲಕ್ಷ್ಮಿವೆಂಕಟಂ ಸೀತಾರಾವ್ ಹೀಗೆ ಕೆಲವು ಪ್ರತಿಷ್ಟಿತ ತರುಣಿಯರು ತನಗಾಗಿ ಕಾಯುತ್ತಿದ್ದಾರೆ. ಅಕ್ಕನ ಮಗಳು ‘ನೋ’ ಎಂದಾಗ ಮಾತ್ರ ನಿಮ್ಮೊಬ್ಬರನ್ನು ಮದುವೆಯಾಗುವುದಾಗಿ ತಾನು ಹೇಳಿರುವುದುಂಟು.

ಗಾಡ ನಿದ್ದೆಯಿಂದ ಎಚ್ಚರಗೊಳ್ಳುತ್ತಿರುವವನಂತೆ ರಘು ಮೆಲ್ಲಗೆ ಎದ್ದು ಕೂತ. ಗಟ್ಟಿಯಾಗಿ ಒಮ್ಮೆ ಆಕಳಿಸಿ ತಾನು ಎಚ್ಚರ ಗೊಂಡಿದ್ದನ್ನು ಪ್ರಕಟಿಸಿದ. ಅಕ್ಕ ಸೂಚಿಸಿದಂತೆ ಮುಖ

ತೊಳೆದು ಕೊಂಡು ಚಹ ಕುಡಿದ. ಅಯ್ಯೋ ಮರೆತಿದ್ದೆ ಅಂತ ಸೂಟ್‌ಕೇಸ್ ತೆರೆದ ಅನಸೂಯಳಿಗೆ ಎರಡೆರಡು ಸೀರೆ ತಂದಿದ್ದ ಹಾಗೆಯೇ ತನ್ನ ಭಾವನಿಗೆ ಪಾಲಿಸ್ಟರ್ ಪಂಚೆ, ಶರ್ಟಿಗೆ ರೇಷ್ಮೆ ಬಟ್ಟೆ ತಂದಿದ್ದ. ಇವೆಲ್ಲ ಯಾಕೆ ತಂದೆ ಅಂತ ಅಕ್ಕ ರಾಗ ತೆಗೆಯುತ್ತ ಸ್ವೀಕರಿಸಿದಳು. ಅನಸುಯಾ ಯಾವ ಪ್ರತಿಕ್ರಿಯೆಯನ್ನೂ ತೋರಿಸಲಿಲ್ಲ. ಸ್ವಲ್ಪ ಹೊತ್ತಿನ ನಂತರ ತನಗೊಂಚೂರು ಕೆಲಸ ಇದೆ ಅಂತ ರುಕ್ಕಮ್ಮ ಮನೆಯಿಂದ ಹೊರಗೆ ಹೋದಳು. ಮಗಳು ತಮ್ಮ ಪರಸ್ಪರ ಒಂದಿಷ್ಟು ಮಾತಾಡಿಕೊಳ್ಳಲಿ ಎಂಬ ಉದ್ದೇಶದಿಂದ.

ಈಗ ಇಡೀ ಮನೆಯಲ್ಲಿ ಉಳಿದಿರುವುದು ತಾವಿಬ್ಬರೇ! ತನ್ನ ತಾಯಿ ತನ್ನನ್ನು ಎಂಥ ಸಂದಿಗ್ಧತೆಗೆ ಸಿಲುಕಿಸದಳಲ್ಲ. ಅನಸೂಯಾ ನಾಚಿಕೆ ಮತ್ತು ಭಯದಿಂದ ಕಂಪಿಸುತ್ತಾ ಒಂದು ಮೂಲೆಯಲ್ಲಿ ನಿಂತುಕೊಂಡಳು. ಆಕೆಯ ಹೃದಯಬಡಿತ ಅಲ್ಲೆಲ್ಲ ವ್ಯಾಪಿಸಿತ್ತು. ಆಕೆಯ ಕಣ್ಣುಗಳು ಭೂವಿಜ್ಞಾನಿಯಂತೆ ನೆಲ ನೋಡುತ್ತಿದ್ದವು. ತನ್ನೊಂದಿಗೆ ಯಾವುದೇ ರೀತಿಯ ಭಾವನಾತ್ಮಕ ಸಂಭಂದವಿರದ ವ್ಯಕ್ತಿ ಜೊತೆ ಹೇಗೆ ಮಾತಾಡುವುದು? ರಘು ತಾಯಿಯ ತಮ್ಮನಾಗಿರಬಹುದು! ತನ್ನ ಒಬ್ಬೇ ಒಬ್ಬ ಸೋದರ ಮಾವನಾಗಿರಬಹುದು! ಆದರೆ ಶಾಮನ ಬಳಿ ಮಾತಾಡಿದಷ್ಟು ಸಲೀಸಾಗಿ ಮಾತಾಡಲಾದೀತೇನು?

ಆಕೆಯ ಮೌನ ಸಮ್ಮತಿಯ ಲಕ್ಷಣವಲ್ಲ. ಸೋದರ ಮಾವನಾದ ತನ್ನನ್ನು ಆಕೆಯ ಮೊದಲುಯಾಕೆ ಮಾತಾಡಿಸಬಾರದು? ಸ್ವಲ್ಪ ಹೊತ್ತು ಕಾದು ಬಟ್ಟೆ ಬದಲಿಸಿದ. ಅವನಿನ್ನೇನು ಹೊರಗಡೆ ಹೊರಟೇಹೋಗುವನೆಂದು ಭಾವಿಸಿ ಮಾರ್ಜಾಲ ನಗಂದಿಯಿಂದ ಸೀದ ಕೆಳಗೆ ಧುಮಕಿತು. ಆ ದರಿದ್ರ ಶಾಮುನ ಬಗ್ಗೆ ಯೋಚಿಸೋದು ಬಿಟ್ಟು ರಘುನ ಮಾತಾಡಿಸೇ… ಏನಾದ್ರು ತಿಳ್ಕೊಂದು ಅವನು ಹೊರಟು ಹೋದಾನು. ಧೈರ್ಯದಿಂದ ಮಾತಾಡ್ಸು… ವಿದ್ಯಾವಂತರೂ ಹೆದರುವುದೇನು ” ಎಂಬರ್ಥ ಬರುವಂತೆ ಅದು ಮ್ಯಾವ್ ಅನ್ನುತ್ತಾ ಮಾಲಿಕಿನ್ ಕಾಲಿಗೆ ಮೈ ಹೊಸೆಯತೊಡಗಿತು.

“ನಾಚಿಕೆಯ ಪಾರಮಾರ್ಥಿಕತೆ ಹೆಣ್ಣಾಗಿದ್ರೆ ಗೊತ್ತಾಗ್ತಿತ್ತು. ಶಾಮುನ ಮತು ಬಿಡು ಅಂತ ಎಷ್ಟು ಸುಲಭವಾಗಿ ಹೇಳ್ತಿದ್ದೀಯಲ್ಲಾ… ಪ್ರೇಮದ ಬಗ್ಗೆ ವ್ಯಾಖ್ಯಾನ ಮಾಡುವುದು ಸಮಯ ಸಾಧಕ ಮಾರ್ಜಾಲಕ್ಕೆ ಹೇಗೆ ಸಾಧ್ಯ? ಅದು ಎಷ್ಟಿದ್ದರೂ ಹಚ್ಚಗಿದ್ದಲ್ಲು ಉಂಡು ಬೆಚ್ಚಗಿದ್ದಲ್ಲಿ ಮಲಗೋ ಜಾಯಮಾನದ್ದು. ಇನ್ನೂ ಅವನು ಬಂದು ಒಂದು ದಿನ ಕೂಡ ಕಳೆದಿಲ್ಲ. ಸಮೀಪದಿಂದ ಮಾತ್ರ ಸಾಮರಸ್ಯ ಸಾಮರಸ್ಯದಿಂದ ಮಾತ್ರ ಪರಸ್ಪರ ಹೃದಯ ಬಿಚ್ಚಿಕೊಳ್ಳೋದು ಸಾಧ್ಯ… ಅಲ್ವೇ ಡಾರ್ಲಿಂಗ್” ಹೆಣ್ಣು ಇಲಿ ತನ್ನ ಜೀವನ ಸಂಗಾತಿಗೆ ಹೇಳಿತು. ಮೂಷಕ ಹೌದೌದಂತ ತಲೆ ಅಲ್ಲಾಡಿತು.
ಇಲಿಗಳು ಮಾತಾಡಿಕೊಂಡಿದ್ದನ್ನು ಅರ್ಥಮಾಡಿಕೊಂಡವನಂತೆ ರಘು ಕುರ್ಚಿ ಮೇಲೆ ಕೂತು ಕಾಲಿಗೆ ಶೂಸ್ ಧರಿಸಿದ.
ಇವಳೆಂಥ ಹುಡುಗಿಯಪ್ಪಾ! ಇನ್ನೂ ತಲೆ ತಗ್ಗಿಸೇ ಇದ್ದಾಳೆ… ಬಿ.ಎ. ಓದಿಕೊಂಡಿರೋರು ಮನಸ್ಸಿನಲ್ಲಿ ಮಂಡಿಗೆ ತಿನ್ನುತ್ತಿದ್ದರೆ ಹೇಗೆ?
“ಅನಸೂಯಾ… ನಾನು ಹೊರಗಡೆ ಹೋಗಿ ಬಲಾ” ಬಾಗಿಲ ಬಳಿ ಹೋಗಿ ತಿರುಗಿ ನೋಡಿದ. ಅಕಸ್ಮಾತ್ ತನ್ನ ಕಡೆನೋಡಿ ಮತ್ತೆ ತಲೆ ತಗ್ಗಿಸಿದಳು.
“ರಘೂ… ಬಾ ಕೂತ್ಕೋ… ಅವ್ವ ಬಂದ ಮೇಲೆ ಹೋಗ್ವಂತಿ” ಕೊನೆಗೂ ಧೈರ್ಯ
ತಂದುಕೊಂಡು ಮಾತಾಡಿಸಿಯೇ ಬಿಟ್ಟಳು.

ರಘುಗೆ ಹುರುಪು ಬಂದಿತು. ಮತ್ತೆ ಷೂ ಕಳಚಿ ಆಕೆ ಹತ್ತಿರವಿದ್ದ ಸೋಫಾದ ಮೇಲೆ ಕುಳಿತುಕೊಂಡ. ನೆಲ ಬಗೆಯುತ್ತಿರುವ ಕಣ್ಣುಗಳ ಮುಖ ನೋಡಿದ. ಅವಳ ಒದ್ದಾಟ ಅರ್ಥವಾಯಿತು. ನಗು ಬಂತು. ಇದ್ದಕ್ಕಿದ್ದಂತೆ ನಗತೊಡಗಿದ…
“ಯಾಕೆ ನಗ್ತಿ?” ಆಕೆ ಗಾಬರಿಯಾದಳು.
“ನಗದೆ ಏನು ಮಾಡ್ಲಿ” ನಗೆಯನ್ನು ಮೀಸೆ ಕೆಳಗೆ ಬಚ್ಚಿಡುತ್ತ ಹೇಳಿದ, “ಅಲ್ಲ, ಎಂಥ ಹುಡುಗಿ ನೀನು ನಾವಿಬ್ರೂ ಮಾತಾಡಿಕೊಳ್ಲಿ ಅಂಥಾನೆ ಅಕ್ಕ ಹೊರಗಡೆ ಹೋಗಿದ್ದು. ಇದು ನಿನ್ಗೂ ಗೊತ್ತು. ಆದ್ರೂ ಏನೂ ಮಾತಾಡ್ದೆ ಸುಮ್ನೆ ನಿಂತಿದ್ದೀಯಲ್ಲ… ಇದ್ಕೆ ಏನು ಹೇಳೋದು?” ಆಕೆಯನ್ನು ನಿಟ್ಟಿಸಿದ. ಕಣ್ಣುಗಳು ಕವಿಗಳಾದವು. ಅವನ ಮನಸ್ಸಿನ ಪುಟಗಳಲ್ಲಿ ಮಹಾಕಾವ್ಯಕ್ಕೆ ಶ್ರೀಕಾರ ಹಾಕಿದವು.

“ಏನಂತ ಮಾತಾಡೋದು! ಮಾತಾಡ್ಲಿಕ್ಕೆ ಇರೊದಾದ್ರೂ ಏನು?” ಆಕೆ ಸೂಚ್ಯವಾಗಿ ನುಡಿದಳು. ಹಾಗೆಯೇ ನಲವತ್ತೈದು ಡಿಗ್ರಿ ಕೋನದಿಂದ ನುಡಿದಳು. ನಿಕಾನ್ ಕೆಮೆರಾ ಕ್ಲಿಕ್ ಎಂದಂತೆ. ರೂಪದಲ್ಲಿ ಮಾತುಗಾರಿಕೆಯಲ್ಲಿ ರಘುನೇ ಶಾಮುನಿಗಿಂತ ಎಷ್ಟೋ ವಾಸಿ. ಎಷ್ಟಿದ್ದರೂ ಪಟ್ಟಣದಲ್ಲಿ ವಾಸಿಸುತ್ತಿರುವವನು, ಅಲ್ಲಿ ಏನು ಮಾಡ್ಕೊಂಡಿದಾನೋ?
“ಅನಸೂಯಾ…” ಅಂದ.
“ಹ್ಹಾಂ!” ಅಂದಳು
“ಮುದುಕಿ ಜೊತೆ ಮಾತಾಡಿದ್ದೆಲ್ಲ ಕೇಳಿಸಿಕೊಂಡೆ!” ಎಂದ.
“ಹ್ಹಾಂ!” ಆಕೆ ದಿಗ್ಭ್ರಮೆ ವ್ಯಕ್ತಪಡಿಸಿದಳು. ದುಃಖದ ಕಟ್ಟೆ ಒಡೆಯಿತು. ಕಣ್ಣುಗಳಿಂದ ನೀರು ಹರಿಯತೊಡಗಿತು. “ರಘೂ” ಎಂದುದ್ಗರಿಸಿ.
“ಹಾಗಾದ್ರೆ ನೀನು ನನ್ನ ಮದ್ವೆ ಆಗ್ತೀಯಾ?
“ಆಗ್ತೀನಿ.”
“ನಿಮ್ಮಕ್ಕನ ಮೇಲಿರೋಪ್ರೀತಿಗಾಗಿಮದ್ವೆ ಆಗ್ತೀಯಾ… ಅಥವಾ… ”
“ಏನು ಮಾತಾಡ್ತೀಯ… ನಿನ್ನೇ ಮದ್ವೆ ಆಗಬೇಕೂಂತ ಯಾವತ್ತೋ ನಿರ್ಧರಿಸಿದ್ದೆ…”
“ಆದ್ರೆ… ನಿನ್ನತ್ರ ಒಂದು ವಿಷಯ ಮುಚ್ಚಿಡೋಕೆ ನಾನು ಸಿದ್ಧಳಿಲ್ಲ. ”
“ಮುಚ್ಚಿಡೊ ಅಂಥ ವಿಷಯ ಇರೊದಾದ್ರೂ ಏನು?.
“…….. ” ಉಗುಳು ನುಂಗಿ ಗಂಟಲು ಸರಿಪಡಿಸಿಕೊಂಡಳು.
“ಎಂಥ ಹುಚ್ಚಿ ಇದ್ದಾಳಿವ್ಳು… ಯಾವ್ದು ಹೇಳಬೇಕು. ಯಾವ್ದು ಹೇಳಬಾರ್ದು ಎಂಬ ಪರಿ ಜ್ಞಾನ ಇರೋದಾದ್ರೂ ಬೇಡ್ವೆ… ನಾನ್ಸೆನ್ಸ್… ಓದ್ಕೊಂಡಿದ್ದಾಳಂತೆ ಓದ್ಕೊಂಡಿದ್ದಾಳೆ. ಕಲ್ತಿರೋದೆಲ್ಲ ಹೊಳೆಯಲ್ಲಿ ಹುಣಸೆಹಣ್ಣು ತೊಳೆದಂತಾಯ್ತು ನೋಡು” ಜಂತಿ ಸಂದಿಯಲ್ಲಿ ಗಂಡಿಲಿ ಖೇದ ವ್ಯಕ್ತ ಪಡಿಸಿತು.

ಅದ್ಯಾಕೆ ನಿಂಗೆ ಹೊಟ್ಟೆ ಕಿಚ್ಚು ಅಂತೀನಿ” ಹೆಣ್ಣಿಲಿ ಬೇಸರದಿಂದ ನುಡಿಯಿತು. “ಪ್ರಪಂಚವೆಲ್ಲ ನಿನ್ನ ಹಾಗೆ ಇತದಂತ ತಿಳ್ಕೊಂಡಿ ಏನು! ಈಗಿವ್ಳು ಬಾಯಿ ಮುಚ್ಕೊಂಡಿದ್ರೆ ಜನ ಬಾಯಿ ಮುಚ್ಕೊಂಡಿತಾರೇನು?”
“ಯಾಕೆ ಚಿನ್ನಾ! ನನ್ನೂ ಪ್ರಪಂಚದ ಗಂಡಸರೊಂದಿಗೆ ಹೋಲಿಸ್ತೀಯಾ! ಪ್ರಪಂಚ ಕಟ್ಕೊಂಡು

ಏಗೋದ್ಯಾಕೆ? ಇದ್ರು ಆಡ್ಕೊಳ್ತಾರೆ, ಇಲ್ದಿದ್ರೂ ಆಡ್ಕೊಳ್ತಾರೆ! ಜನರನ್ನು ಮೆಚ್ಚಿಸೋಕಾಗಿ ಬದುಕಲಿಕ್ಕಾಗ್ತದೇನು?”
ಇದು ಮೊದ್ಲೇ ಮೇಲ್ ಡಾಮಿನೇಷನ್ ಸೊಸೈಟಿ ಕಣಪ್ಪಾ… ಇಡೀ ಸಾಮಾಜ ತನ್ನೆಲ್ಲ ಕಣ್ಣುಗಳ್ನ ಸದಾ ಹೆಣ್ಣೀನ ಕಡೀಗೆ ಗುರಿ ಇಟ್ಕೊಂಡು ಕೂತಿತದೆ… ಒಂಚೂರು ಅನುಮಾನ ಬಂದ್ರೂನೂವೆ ಸಾವಿರಾರು ಬಾಯಿಗಳು ಪಟಪಟಾಂತ ಮಾತಾಡೋಕೆ ಶುರುಮಾಡಿಬಿಡ್ತವೆ.

“ನಿನ್ನ ಮಾತೂ ಸರೆ ಬಿಡು… ನಿನ್ನಷ್ಟು ನಾನು ಜಾಣ ಇರಲಿಕ್ಕಿಲ್ಲ. ಇದನ್ನೆಲ್ಲ ಕೇಳಿ ರಘುರಾಮನೆಂಭೋನು ಈ ನಮ್ಮ ಹುಡುಗೀನ ಮದ್ವೆ ಆಗದಿದ್ರೆ ಎಂಬ ಭಯ ನನ್ನದು.”
“ಆದ್ರೆ ಆದಿತ್ಯವಾರ ಆಗದಿದ್ರೆ ಸೋಮವಾರ. ಆಗದಿದ್ರೆ ಆಗಲಿಲ್ಲ. ನಮ್ಮ ಅನಸೂಯ ಏನು ಅವಿದ್ಯಾವಂತೆಯಲ್ಲ . ಸಾಕಷ್ಟು ಓದ್ಕೊಂಡಿದ್ದಾಳೆ. ಕಾಲೇಜಿಗೇನೆ ಫಸ್ಟ್‌ಕ್ಲಾಸ್ ಮಾರ್ಕ್ಸ್ ತಗೊಂಡು ಪಾಸಾಗಿದ್ದಾಳೆ… ಯಾವುದಾದ್ರು ನೌಕರಿ ಸಿಕ್ಕೇ ಸಿಗ್ತದೆ… ಗಂಡಸಿನಂತೆ ಜೀವನ ನಡೆಸ್ತಾಳೆ…”
“ಆದ್ರೆ ಅವಿವಾಹಿತೆಯಾಗಿ…”
“ಹೌದು, ಅದ್ರಲ್ಲೇನು ತಪ್ಪಿದೆ? ಮದುವೆ ಮಾದ್ಕೊಳ್ಳದೇನೆ ಎಷ್ಟು ಜನ ಮಹಿಳೆಯರು ಧೈರ್ಯದಿಂದ ಜೀವನ ಮಾಡ್ತಿಲ್ಲ? ಅವರೆಲ್ಲರಂತೆಯೇ ಅನಸೂಯ”
“ನೀನು ಏನೇ ಹೇಳು ಬಂಗಾರ… ಒಂಟಿಯಾಗಿ ಹೆಣ್ಣು ಈ ಸಮಾಜದಲ್ಲಿ ಜೀವಿಸೋದು ಕಷ್ಟ. ಹೆಣ್ಣಿಗೊಂದು ಗಂಡು ಬೇಕೇ ಬೇಕು.”
“ಅದೆಲ್ಲ ನಿನ್ನಂಥ ಗಂಡಸರು ಸಹಸ್ರ ಸಹಸ್ರ ವರ್ಷಗಳಿಂದ ಹುಟ್ಟು ಹಾಕಿ ಬೆಳೆಸಿಕೊಂಡು ಬಂದಿರೋ ಬೆದರುಗೊಂಬೆ” ಗಂಡನ ತರ್ಕಕ್ಕೆ ಹೆಣ್ಣಿಲಿ ರೋಸಿತು. “ಅನಸೂಯಾಳ ಬದುಕಿನಲ್ಲಿ ಅಂಥ ಸಂದರ್ಭ ಬಲಿಕ್ಕಿಲ್ಲ ಎಂಬುದೇ ನನ್ನ ಭಾವನೆ. ”
“ಹಾಗಾದ್ರೆ ಸೋದರ ಮಾವನೇ ಅನಸೂಯಾಳನ್ನು ಮದುವೆಯಾಗ್ತಾನಂತೀಯಾ?”
“ಹೌದು ಖಂಡಿತ ಆಗ್ತಾನೆ.”
“ಎಲ್ಲಾ ತಿಳಿದ ನಂತರವೂ… ”
“ಹೌದು ಎಲ್ಲಾ ತಿಳಿದ ನಂತರವೂ!”
“ನೀನು ಏನೇ ಹೇಳು… ಮುಂದೆ ಪರಸ್ಪರ ದೈಹಿಕ ಆಕರ್ಷಣೆ ಕಡಿಮೆಯಾದ ಮೇಲೆ ಪರಸ್ಪರ ಅನುಮಾನಗಳು ತಲೆದೋರದೆ ಇರಲಿಕ್ಕಿಲ್ಲ.”
“ಎಲ್ಲ ಅನುಮಾನಗಳು ಎಲ್ರಿಗೂ ಬರೋದಿಲ್ಲ… ರಘೂನ ಮನಸ್ಸು ದೊಡ್ಡದು ಅಂಥ ಅನುಮಾನಕ್ಕೆ ಆಸ್ಪದ ಕೊಡದೆ ಅನಸೂಯಾಳನ್ನು ಸಯಾಗೆ ನೋಡ್ಕೊಳ್ತಾನೆ.”
“ಶಾಮಾಶಾಸ್ತ್ರೀಗೂ, ರಘೂಗೂ ಫರಕಿದೆ.”
“ಹೌದು! ಇಲ್ಲವೆಂದೋಯಾರು? ಎರಡು ದಿಕ್ಕುಗಳ ನಡುವೆ ಇರೋ ಅಷ್ಟು ವ್ಯತ್ಯಾಸವಿದೆ!”
“ಶಾಮೂನ ಮನಸ್ನಲ್ಲಿಟ್ಕೊಂಡು ರಘೂನ ಹೆಂಡತಿಯಾಗಿ ಬದುಕಬೇಕಲ್ಲ ನಮ್ಮ ಅನಸೂಯಾ.”
“ಸೂರ್ಯೋದಯಕ್ಕೆ ಪಾರ್ವಭಾವಿಯಾಗಿ ಕತ್ತಲೆ ಹೇಗೆ ಹಂತಹಂತವಾಗಿ ಕಡಿಮೆಯಾಗುವುದೋ ಹಾಗೇನೆ ರಘುನ ಸಾಮೀಪ್ಯದಿಂದ ಅನಸೂಯಾ ತ್ರಿಕರಣ ಪುರ್ವಕವಾಗಿ ದಾಂಪತ್ಯ ಜೀವನ ಸಾಗಿಸುತಾಳೆ… ನೋಡ್ತಿರು.”
“ಆಕೆಯ ಗಂಡನ ಮನೆಗೆ ನಾವಿಬ್ರೂ ಹೇಗಾದ್ರು ಮಾಡಿ ಹೊರಟುಹೋಗೋಣ.”
“ಹೌದೌದು. ಒಳ್ಳೆಯ ಐಡಿಯಾ.”
“ಹೇಗೆ ಅಷ್ಟು ದೂರ ಪ್ರಾಯಾಣ ಮಾಡೋದು.?”
“ಹೊಸದಾಗಿ ಮದುವೆಯಾದವರೆಂದಮೇಲೆ ತಿಂಡಿ ಡಬ್ಬಿಗಳು; ಹಾಸಿಗೆ ಸುರುಳಿ ಹೀಗೆ ಏನಾದರೊಂದು ಸಾಮಾನು ಇದ್ದೇ ಇತವೆ. ಅವುಗಳಲ್ಲಿ ಹೇಗೋ ಜಾಗ ದೊರಕಿಸಿಕೊಂಡು ನಾವಿಬ್ರು ಹೋದರಾಯಿತು.”
“ಹೌದು! ನೀನು ಹೇಳೋದೇನೋ ಸರಿ; ಅಲ್ಲೂ ಇಲ್ಲಿದ್ದಂತೆ ಯಾವುದಾದ್ರು ಬೆಕ್ಕು ಸಾಕ್ಕೊಂಡಿದ್ರೆ ಏನಪ್ಪ ಮಾಡೋದು?”
’ನಗರದ ಮಂದಿ ನಾಯಿ ಮೇಲೆ ತೋರಿಸಿದಷ್ಟು ಪ್ರೀತಿಯನ್ನು ಬೆಕ್ಕುಗಳ ಮೇಲೆ ತೋರಿಸೋದಿಲ್ಲ. ಬೆಕ್ಕು ಅವರಿಗೆ ಪೆಟ್ ಅನಿಮಲ್ಲಲ್ಲ. ಜೊತೆಗೆ ನಾನಿತೀನಲ್ಲ! ನೀನ್ಯಾಕೆ ಹೆದತಿ.”
“ಅದು ಸರಿ… ನೀನೋ ಮಹಾ ರಸಿಕ. ಮಾಸ್ಟರ್ ಇನ್ ಎರಾಟಿಕ್ ಆರ್ಟ್ಸ್; ನೀನೇನಾದ್ರು ಪಟ್ಟಣದ ಹುಡ್ಗೀಗೆ ಲೈನ್ ಹೊಡೆಯೋಕೆ ಶುರುಮಾಡಿದ್ರೆ ನಾನೇನು ಮಾಡ್ಲಿ?”
“ಈ ಹೆಂಗಸರಂದ್ರೆ ಇಷ್ಟೆ ನೋಡು. ಏನಾದರೊಂದು ಕ್ಯಾತೆ ತೆಗೀತಾನೆ ಇರ್ತಾರೆ, ನಾವಿಬ್ರೂ ಗಾಂಧರ್ವ ವಿವಾಹವಾಗಿ ಇಷ್ಟು ದಿನಗಳಾದ್ವು. ಯಾವತ್ತಾದ್ರು ಕಚ್ಚೆ ಹರಕ ಬುದ್ಧಿ ತೋಸಿದಿನೇನು?” ಹೆಂಡತಿ ಕಡೆ ಬೆನ್ನು ಮಾಡಿ ಮುಖ ಸಿಂಡರಿಸಿಕೊಂಡಿತು ಗಂಡಿಲಿ.
“ಲೋಕಾರೂಢಿ ಮಾತಾಡಿಯಾಕೆ ಸಿಟ್ಟು ಮಾಡ್ಕೊಂತಿ. ಕುಂಬಳಕಾಯಿ ಕಳ್ಳ ಅಂದ್ರೆ ಹೆಗಲು ಮುಟ್ಟಿ ನೋಡಿಕೊಂಡವರಂತೆ… ಎಲ್ಲಿ… ನನ್ ಜಾಣ… ಮುಖ ತಿರಿಗಿಸು… ಕಿಸ್ ಕೊಡ್ತೀನಿ ಮತ್ತೆ” ಹೆಣ್ಣಿಲಿ ಗಂಡಿಲಿಯನ್ನು ಪರಿಪರಿಯಾಗಿ ರಮಿಸತೊಡಗಿತು.

ಅನಸೂಯಳ ಕೈಹಿಡಿಯುವ ರಘುರಾಮ ಎಂಬ ತರುಣ ಬೆಂಗಳೂರಿನಿಂದ ಬಂದಿರುವನೆಂಬ ಸತ್ಯಸಂಗತಿ ಓಣಿ ತುಂಬಿ; ಊರು ತುಂಬಿ ಅಕ್ಕಪಕ್ಕದೂರುಗಳ ಕಡೆಗೂ ಜಿನಗತೊಡಗಿತು. ಯಾಕೆಂದರೆ ಅನಸೂಯಾ ಗುರುತಿಸಲ್ಪಡುತ್ತಿದ್ದುದೇ ವಾಮಾಚಾರ ರುದ್ರನಾಯಕನ ಮಗಳು ಎಂದೊಂದು ಬಗೆಯದ್ದಾಗಿದ್ದರೆ; ಗ್ರಾಮದ ಮತ್ತೊಂದು ಮಹಾನ್ ವೈದಿಕ ಕುಳವಾದ ಪರಮೇಶ್ವರ ಶಾಸ್ತಿಗಳ ಮೊಮ್ಮಗ ಶಾಮಾಶಾಸ್ತ್ರಿ ತಲೆಗೆ ಏನೇನೋ ತಿಕ್ಕಿ ಮೊನ್ನೆ ಮೊನ್ನೆವರೆಗೆ ತನ್ನ ವ್ಯಾನಿಟಿ ಬ್ಯಾಗಿನೊಳಗಿಟ್ಟುಕೊಂಡಿದ್ದಳು ಎಂಬುದಿನ್ನೊಂದು ರೀತಿಯದ್ದು. ಅನಸೂಯ ಇರದಿದ್ದರೆಲ್ಲಿ ಶಾಮು ಕಾಲೇಜು ಮುಗಿಸುತ್ತಿದ್ದ. ಅನಸೂಯ ಇರದಿದ್ದಲ್ಲಿ ಗೊಬ್ಬರದಂಗಡಿ ಜಲಜಾಕ್ಷಿ ಕೈಲಿ ಆ ಪುಳಿಯೋಗರೆ ಅಪ್ಪಚ್ಚಿಯಾಗಿ ಅಶ್ವತ್ಥ್ ಕಟ್ಟೆಯ ಮೇಲೆ ಪದ್ಮಾಸನ ಹಾಕಿಕೊಂಡಿರುತ್ತಿತ್ತು. ಅದೂ ಅಲ್ಲದೆ ಅದಕ್ಕೆ ಸಂಸ್ಕೃತ ಬಿಟ್ಟರೆ ಬೇರೆ ಇನ್ನೇನು ಬರುತ್ತಿತ್ತು? ಅನಸೂಯಾಳೇ ಅವನನ್ನು ಸಾರ್ವಜನಿಕವಾದ ಮನುಷ್ಯನನ್ನಾಗಿ ಮಾಡಿದಾಕಿ. ಆಕೆ ಶಾಮು ಇಬ್ಬರೂ ಸತಿಪತಿಗಳಾಗಿ ಬಿಟ್ಟಿದ್ದಲ್ಲಿ ಅದರ ಮಜವೇ ಬೇರಿರುತ್ತಿತ್ತು. ಅವಮಾನ ತಾಳಲಾರದೆ ಶಾಸ್ತ್ರಿಗಳು ತಾವೂ; ತಮ್ಮ ಸೊಸೆಯೂ ಏಕಕಾಲಕ್ಕೆ ದತ್ತೂರಿ ಕಷಾಯ ಕುಡಿದು ಅತ್ತ ಕೈಲಾಸಕ್ಕೆ ಹೋಗದೆ ಇತ್ತ ವೈಕುಂಟಕ್ಕೂ ಹೋಗದೆ ಅತಂತ್ರಸ್ಥಿತಿಯಲ್ಲಿ ಪ್ರೇತ ಜೀವನ ನಡೆಸುತ್ತ ಇದ್ದುಬಿಡುತ್ತಿದ್ದರು. ಇದನ್ನೇ ಗ್ರಾಮದ ಬಹುಪಾಲು ವಖ್ತಾರರು ಯೋಚಿಸಿದ್ದುದು. ಅವರೆಲ್ಲ ಆ ಎರಡು ಧ್ರುವಗಳ ನಡುವಿನ ಒಡನಾಟಕ್ಕೆ ತಕ್ಕದಾದ ರಂಗಸಜ್ಜಿಕೆ ನಿರ್ಮಿಸಿ ತಾವು ಪ್ರೇಕ್ಷಕರಾಗಿ ನೈಪಥ್ಯದಲ್ಲಿ ಉಳಿದುಬಿಟ್ಟಿದ್ದರು.

(ಕೆಂಪು)
ಕೆಲವರು ಹಲವಾರು ರೀತಿಯಲ್ಲಿ ಇದರ ಬಗ್ಗೆ ತಮ್ಮದೇ ಆದ ರೀತಿಯಲ್ಲಿ ವ್ಯಾಖ್ಯಾನಿಸುವುದುಂಟು. ಸದಾ ತನ್ನ ಸೆರಗಿಗೆ ಜೋತು ಬಿಳುವಮಗ ಅದೆಲ್ಲಿ ತಪ್ಫೋಗುವನೋ ಎಂದು ಅಲುಮೇಲಮ್ಮನೇ ಏನೋ ಒಂದು ಕರಾಮತ್ತು ಮಾಡಿ ಜೋಡಿ ಅಗಲಿಸಿದ್ದಾಳೆ ಎಂಬುದು ಒಂದು ತಂಡದ ತರ್ಕವಾದರೆ ಇನ್ನೊಂದು ತಂಡ ಯೋಚಿಸಿದ್ದೇ ಬೇರೆ, ಅನಸೂಯಳಂಥ ಅಪ್ಸರೆ ದ್ರಾಬೆಯಂಥ ಶಾಮಾಶಾಸ್ತ್ರಿಯನ್ನು ಪ್ರೀತಿಸುವುದುಂಟೇನು! ಒಂದೇ ಓಣಿಯವರು, ಒಂದೇ ಕಾಲೇಜಿನಲ್ಲಿ ಓದಿಕೊಂಡೋರು… ಈಗಿನ ಕಾಲದಲ್ಲಿ ಹುಡುಗರು ಹುಡುಗಿಯರು ಲಿಂಗಭೇದವಿಲ್ಲದೆ ಜೊತೆಜೊತೆಯಾಗಿ ಅಡ್ಡಾಡಿದಾಕ್ಷಣ ಅವರಿಬ್ಬರಲ್ಲಿ ಲೈಂಗಿಕ ಸಂಭಂದ ಕಲ್ಪಿಸಿಕೊಳ್ಳೋದು, ಅವರಿಬ್ಬರು ಪರಸ್ಪರ ಮದುವೆ ಆಗ್ತಾರೆ ಎಂದು ಊಹಿಸಿಕೊಳ್ಳೋದೇ ಮೂರ್ಖತನವೆಂಬುದು ಹಲವರ ತರ್ಕ. ಇನ್ನು ಕೆಲವರು ಜಾರ್ಜ್ ಫರ್ನಾಂಡಿಸ್ ಬಂದ ಸಂಜೆ
ಶಾಮಾಶಾಸ್ತ್ರಿ ಆಕೆ ಮೇಲೆ ರೇಪ್ ಮಾಡಲು ಹೋದನೆಂದೂ; ಆಕೆ ತನ್ನ ಮೊಣಕಾಲಿಂದ ಅವನ ಮರ್ಮಾಂಗದ ಮೇಲೆ ಪ್ರಹಾರ ಮಾಡಿದಳೆಂದೂ; ವಂಶಾಭಿವೃದ್ದಿ ಆಗುವುದೋ ಇಲ್ಲವೋ ಎಂದು ಅಲುಮೇಲಮ್ಮ ಕಂಗಾಲಾಳೆಂದೂ; ವೈದ್ಯ ಮಾರ್ತಾಂಡ ಕುರುಬರ ಸೋಮಣ್ಣ ರಾತ್ರೋರಾತ್ರಿ ಲೇಹ್ಯ ಲೇಪಿಸಿ ಇಲಾಜು ಮಾಡಿದನೆಂದೂ ಆಡಿಕೊಂಡರು. ಇಂಥ ವಾದವನ್ನು ಪುಷ್ಟೀಕರಿಸುವ ಅಥವಾ ಅಲ್ಲಗಳೆಯುವ ರೀತಿಯಲ್ಲಿ ಶಾಸ್ತ್ರಿಗಳು ತಮ್ಮ ಮೊಮ್ಮಗನನ್ನು ಹೊಸಪೇಟೆಗೆ ಕನ್ಯಾನ್ವೇಷಣೆಗೆ ಕರೆದುಕೊಂಡು ಹೋಗದಿದ್ದರ ಬಗ್ಗೆ ಮಾತಾಡಿಕೊಂಡರು. ಇವರೆಲ್ಲರಿಗಿಂತ ಬಾಯಿ ಜೋರು ಮಾಡಿ ಶಾಸ್ತ್ರಿಗಳೇ ತಮ್ಮ ಮೊಮ್ಮಗ ಶಾಮನಿಗೆ ಹೊಸಪೇಟೆಯ ವೇದಾಂತ ರಾಜಗೋಪಾಲಾಚಾರ್ಯರ ಮೊಮ್ಮಗಳು ವರಲಕ್ಷ್ಮಿಯನ್ನು ಗೊತ್ತು ಮಾಡಿರುವುದಾಗಿ ಸುದ್ದಿ ಮಾಡಿದರು. ಈಶ್ವರ ದೇವರ ಎದುರು ಬಸವಣ್ಣನಂತೆ, ಚಾದಂಗಡಿ ಎದುರು ಬೀಡಿ ಅಂಗಡಿಯಂತೆ ಅವರು ಸದಾ ಬೆನ್ನ ಹಿಂದೆ ಕಟ್ಟಿಕೊಂಡು ಗ್ರಾಮದ ಪ್ರತಿಷ್ಟಿತರ ಮನೆಗಳಿಗೆ ಒಂದಲ್ಲಾ ಒಂದು ನೆವ ಹೂಡುಕಿಕೊಂಡು ಅಲೆದಿದ್ದೇ ಅಲೆದದ್ದು. ತಮ್ಮ ಮೊಮ್ಮಗನ ಮದುವೆ ಮಾಡುವುದರ ಮೂಲಕ ಗ್ರಾಮಸ್ಥರಲ್ಲಿ ತಮ್ಮ ಬಗ್ಗೆ ಇರುವ ಒಂದು ನಂಬುಗೆಯನ್ನು ಮೂಲೋತ್ಪಾಟನೆ ಮಾಡಲಿರುವುದನ್ನು ಸೂಚ್ಯವಾಗಿ ವಿಶದಪಡಿಸುವುದೇ ಅವರ ಓಡಾಟದ ಪ್ರಮುಖ ಕಾರಣವಾಗಿತ್ತು. ರುದ್ರನಾಯಕನ ಮಗಳಿಗೂ ತಮ್ಮ ಮೊಮ್ಮಗನಿಗೂ ಯಾವುದೇ
ಸಂಬಂದವಿಲ್ಲವೆಂಬುದನ್ನು ಅವರ ಪ್ರತಿಯೊಂದು ಮಾತೂ ಸಮರ್ಥಿಸುವಂತಿತ್ತು. ಕಲಿಯುಗದಿಂದಾಗುತ್ತಿರುವ ಉಪಟಳವನ್ನು ಶಾಮು ಸ್ವಜಾತಿ ಸ್ವಗೋತ್ರದಲ್ಲಿ
ಮದುವೆಯಾಗುವುದರ ಮೂಲಕ ತಡೆಯಲಿರುವುದನೆಂಬುದು. ತಾವು ನೋಡಿರುವ ಹುಡುಗಿ ಸಾಮಾನ್ಯಳೇನು? ಅವಳುದಿಸಿರುವ ವಂಶ ಸಾಮಾನ್ಯವೇನು? ವೇದಾಂತಿ
ರಾಜಗೋಪಾಲಾಚಾರ್ಯರು ಹೊಸಪೇಟೆ ಅಗ್ರಹಾರದಲ್ಲಿ ಈಗಷ್ಟೊಂದು ಸ್ತಿತಿವಂತರಲ್ಲದಿರಬಹುದು! ಒಂದು ಕಾಲಕ್ಕೆ ಅವರ ವಂಶದವರು ವಿಜಯನಗರದರಸರ ಬಳಿ ಜ್ಯೋತಿಷ್ಯ ಸಲಹೆದಾರರಾಗಿದ್ದರು. ಆನೆಗೊಂದಿ ಬಳಿ ಇರುವ ಎರಡು ಹಳ್ಳಿಗಳನ್ನು ಅವರಿಗೆ ಉಂಬಳಿಯಾಗಿ ನೀಡಿದ್ದರೆಂದು ವಿವರಿಸುವ ದತ್ತಿ ಶಾಸನ ತುಂಗಭದ್ರೆಯೊಳಗೆ ಹೂತುಹೋಗಿರುವುದಂತೆ. ಕಲಿಕಾಲದ ಮಹಿಮೆ. ಆ ಎರಡು ಹಳ್ಳಿಗಳು ಎಲ್ಲಿ ಹೋದವೋ ಏನೋ? ಟಿಪ್ಪು
ಸುಲ್ತಾನನ ಕಾಲದವರೆಗಿದ್ದ ಅವರು ಸಾವಿರಾರು ಎಕರೆ ಜಮೀನನ್ನು ರೆಟ್ಟೆಯಲ್ಲಿ ಬಲವಿದ್ದ ಶೂದ್ರರು ತಮ್ಮ ಸುಪರ್ದಿಗೆ ತೆಗೆದುಕೊಂಡರಂತೆ, ಜ್ಯೋತಿಷ್ಯ
ಪಂಚಾಂಗಗಳನ್ನವಲಂಬಿಸಿಯೇ ಬದುಕಿದ ಹಿರಿಯರು ಕಿಲುಬು ಕಾಸಿಗೆ ಎಂದೂ ಕೈಚಾಚಿದವರಲ್ಲವಂತೆ. ಮನೆಯಲ್ಲಿ ಲಕ್ಷ್ಮಿಯ ವಾಸನೆ ನೆಲಸಿರದಿದ್ದರೂ, ವಾಙ್ ಮೇ ಮನಸಿ ಪ್ರತಿಷ್ಠಿತಾ ಮನೋ ಮೇ ವಾಚೇ ಪ್ರತಿಷ್ಠಿತಾ ಎಂಬ ಐತರೇಯ ಶ್ರುತಿಯಂತೆ ಮಾತನ್ನು ಮನಸ್ಸಿನಲ್ಲಿ ಇಟ್ಟುಕೊಂಡಿದ್ದವರಂತೆ, ಮನಸ್ಸನ್ನು ಮಾತಿನೊಳಗಿಟ್ಟುಕೊಂಡು, ಶಿವಾಯ ವಿಷ್ಣು ರೂಪಾಯ ಶಿವ ರೂಪಾಯ ವಿಷ್ಣುವೇ ಅಂತ ಹೇಗೋ ಒಂದು ರೀತಿ ಕಾಲ ಹಾಕುತ್ತಿದ್ದರಂತೆ. ಶಿವ ಮತ್ತು ವಿಷ್ಣು ಅವರ ಅಶನ ವಸನಕ್ಕೆ ಯಾವುದೇ ರೀತಿಯಲ್ಲಿ ಕಡಿಮೆಯಾಗದಂತೆ ನೋಡಿಕೊಂಡು ಬಂದಿರುವರಂತೆ, ಅಂಥ ವಂಶಸ್ಥರಾದ ವೇದಾಂತಿ
ರಾಜಗೋಪಾಲಾಚಾರ್ಯರು ಸಾಮಾಜಿಕವಾಗಿ ರಾಜಕೀಯವಾಗಿ ಒಳ್ಳೆಯ ಪ್ರಭಾವಶಾಲಿಗಳಾಂತೆ. ಅನೇಕ ರಾಜಕಾರಣಿಗಳು ಈಗಲೂ ಅವರನ್ನು ಕೇಳದೆ ಏನೂ ಕೆಲಸ ಮಾಡುವುದಿಲ್ಲವಂತೆ, ಅವರ ಧರ್ಮ ಪತ್ನಿಯೂ ಐದಾರು ಗಂಡುಮಕ್ಕಳನ್ನು ಹೆತ್ತು ಹೊತ್ತು ಅಮೃತ ಘಳಿಗೆಯಲ್ಲಿ ಕಣ್ಣು ಮುಚ್ಚಿದಳಂತೆ… ತಮ್ಮ ಪುತ್ರ ಸಂತಾನವನ್ನು ಅದ್ವಿತೀಯ ಪಂಡಿತರನ್ನಾಗಿ ಮಾಡುವ ಆಸೆಯೇನೋ ಇತ್ತಂತೆ.

ಆದರೆ ಅವು ಕಾಲ ಬದಲಾಗಿದೇಂತ ಇಂಗ್ಲೀಷು ಓದಿಕೊಂಡು ಐದಾರು ನಮೂನೆಯ ಲಾಭದಾಯಕ ಇಲಾಖೇಲಿ ಕೆಲಸ ಮಾದುತ್ತಿದ್ದವಂತೆ. ಲಾಂಚಮುಟ್ಟುತ್ತಿರಲ್ಲಿಲ್ಲವಂತೆ. ಕೆಟ್ಟಚಾಳಿಗಳೊಂದೂ ಇರಲಿಲ್ಲವಂತೆ. (ರಾಣಿಪೇಟೆಯ ಅನೇಕರು ಅಂದುಕೊಳ್ಳುತ್ತಿರುವಂತೆ ಅವರೆಲ್ಲ ಎರಡೂ ಕೈಗಳಿಂದ ಲಂಚ ಬಾಚಿಕೊಳ್ಳುತ್ತಿದ್ದರು) ಬೆಳ್ಳೊಳ್ಳಿ ಇರುವ ಸಸ್ಯಾಹಾರಿ ಖಾದ್ಯಗಳನ್ನೂ ಮುಟ್ಟುತ್ತಿರಲಿಲ್ಲವಂತೆ (ಪಟೇಲ್ ನಗರದ ಅನೇಕರು ಅಂದುಕೊಳ್ಳುತ್ತಿರುವಂತೆ
ಅವರಿಗೆ ನಗರದ ಅವರೆಲ್ಲ ಎರಡೂ ಕೈಗಳಿಂದ ಲಂಚ ಬಾಚಿಕೊಳ್ಳುತ್ತಿದ್ದರು) ಬೆಳ್ಳೊಳ್ಳಿ ಇರುವ ಸಸ್ಯಾಹಾರಿ ಖಾದ್ಯಗಳನ್ನೂ ಮುಟ್ಟುತ್ತಿರಲಿಲ್ಲವಂತೆ (ಪಟೇಲ್ನಗರದ ಹಲವರು ಅಂದುಕೊಳ್ಳುವಂತೆ ಅವರಿಗೆ ನಗರದ ಎಲ್ಲಾ ಮಿಲಿಟರಿ ಹೋಟೆಲುಗಳು ಸಲದು ಬೀಳುತ್ತಿದ್ದವು) ಅವರು ಮನೆಯಿಂದ ಒಯ್ಯುತ್ತಿದ್ದ ನೀರನ್ನು ಮಾತ್ರ ಕುಡಿಯುತ್ತಿದ್ದರಂತೆ (ನೆಹರೂ ಕಲೋನಿಯ ನಿವಾಸಿಗಳು ಅಂದುಕೊಳ್ಳುತ್ತಿರುವಂತೆ ಅವರೆಲ್ಲ ನಗರದ ಎಲ್ಲಾ ಬಾಗಳಲ್ಲಿ ಫೈಟಿಂಗ್
ಮಾಡುತ್ತಿದ್ದರಂತೆ) ಅವರು ಪರನಾರಿ ಸಹೋದರರಾಗಿದ್ದರಂತೆ. (ಗಾಂಧೀ ನಗರದ ವಾಸಿಗಳ ಅಭಿಪ್ರಾಯದಂತೆ ಅವರೆಲ್ಲ ಇಡೀ ರಾತ್ರಿ ವೇಶ್ಯಾವಾಟಿಕೆಯಲ್ಲಿ ಕಳೆಯುತ್ತಿದ್ದರಂತೆ) ಅವರ ಪೈಕಿ ಒಬ್ಬರು ಅಪಘಾತದಲ್ಲಿ ಸತ್ತರೆ; ಇನ್ನೊಬ್ಬರು ಅರ್ಥವಾಗದ ಕಾಹಿಲೆಯಿಂದ ಸತ್ತರು. ಮತ್ತೊಬ್ಬ ದೇಶಾಂತರ ಹೋದ.

ಮಗದೊಬ್ಬ ಚಿತ್ತಭ್ರಮಣೆಯಾಗಿ ಕೋದಂಡರಾಮ ದೇವಸ್ಥಾನದ ಬಳಿ ದೇಹಿ ಎಂದು ಬಂದವರಿಗೆಲ್ಲ ವರನೀಡುತ್ತ ಯೋಗಿಯಾಗಿರುವನು. (ಅವರಿಗೆಲ್ಲ ಯುಕ್ತ ವಯಸ್ಸಿನಲ್ಲಿ ಮದುವೆ ಮಾಡಿಬಿಡಬಹುದಿತ್ತು. ಆದರೆ ಕೊಡೋಯಾರು? ಮಾಡಿಕೊಳ್ಳೋಯಾರು?) ಉಳಿದವನೊಬ್ಬನಿಂದಲೂ ಅಂತಿಮ ಯಾತ್ರೆ ಮಾಡಿಸಿಕೊಳ್ಳುವ ಪುಣ್ಯ ಆಚಾರ್ಯರ ಹಣೆಯಲ್ಲಿ ಬರೆದಿರಲಿಲ್ಲ. ಅವನೂ ಎರಡು ವರ್ಶಗಲ ಹಿಂದೆ ವಾತಪಿತ್ತ ಕಫವೇ ಮೊದಲಾದ ರೋಗಗಳ ಜೊತೆಗೆ ದೇಹದ
ಬಲಪಾರ್ಶ್ವ ಏನಕೇನ ಬಿದ್ದು ಹೋಗಲು ಅವನು ನರ ರೋಗ ಆಸ್ಪತ್ರೆಯಲ್ಲಿ ಕೊನೆ ಉಸಿರೆಳೆದು ಬಿಡಬೇಕೆ? ಒಟ್ಟಿನಲ್ಲಿ ತಮ್ಮ ಪ್ರಾರಬ್ದ! ಸೊಸೆಯನ್ನೂ ಮೊಮ್ಮಗಳನ್ನೂ ಜ್ಯೋತಿಷ್ಯದ ಸಹಾಯದಿಂದ ಸಾಕಿ ಸಲಹಬೇಕಾಗಿ ಬಂದಿರೋದು! ಮೊಮ್ಮಗಳು ವರಲಕ್ಶ್ಮಿ ಪರಪುರುಶರ ಕಡೆ ಎಂದೂ ಮುಖ ಎತ್ತಿ ನೋಡಿದಾಕಿಯಲ್ಲ! ಸದಾ ಅವನತ ಮುಖಿ, ಆಚಾರ ವಿಚಾರದಲ್ಲಿ ತುಂಬ ಕಟ್ಟಿನಿಟ್ಟು, ಪ್ರಾಣ ಬೇಕಾದರೂ ಬಿಟ್ಟಾಳು, ಆದರೆ ಸಂಪ್ರದಾಯವನ್ನು ಮಾತ್ರ
ಬಿಡಲಾರಳು, ಸ್ವಲ್ಪ ಸ್ಥೂಲದೇಹಿ ಇರಬಹುದು, ಆದರೆ ಆಕೆಯ ಮುಖದಲ್ಲಿ ಎಂಥ ತೇಜಸ್ಸೂ ಏನು ಕಥೆ? ಮೂಗು ಸ್ವಲ್ಪ ಮೊಂಡಿರಬಹುದು. ಆದರೆ ಕಣ್ಣುಗಳಲ್ಲಿ ಎಂಥ ಬೇಳಕು ಏನು ಕಥೆ? ಮೇಲ್ದವಡೆಯ ಮುಂದಿನೆರಡು ಹಲ್ಲುಗಳು ಕೆಳದುಟಿಗಳ ಮೇಲೆ ಕೂಡ್ರುತ್ತಿರಬಹುದು. ಆದರೆ ಜಡೆ ಎಷ್ಟುದ್ದಾ

ಏನು ಕಥೆ? ಜನಿಸಿರೋದೂ ಸ್ವಾತಿ ನಕ್ಷತ್ರದಲ್ಲಿ, ರಜಸ್ವಲೆಯಾಗಿರುವುದೂ ಸ್ವಾತಿ ನಕ್ಷತ್ರದಲ್ಲೇ. ಪಂಚಮಹಾ ಪತಿವ್ರತೆಯರಂತೆ ಈಕೆಯೂ
ಪತಿವ್ರತೆಯಾಗುತ್ತಾಳೆಂಬುದರ ಬಗ್ಗೆ ಶಾಸ್ತ್ರಿಗಳು ಹೇಳಿಕೊಂಡಿದ್ದೇ ಹೇಳಿಕೊಂಡಿದ್ದು. ಎಲ್ಲಕ್ಕಿಂತ ಮುಖ್ಯವಾಗಿ ತಮಗೂ ರಾಜಗೋಪಾಲಾಚಾರ್ಯರಿಗು ನಡುವೆ ಅಂಥ ವ್ಯತ್ಯಾಸವಿರದಿದ್ದುದು, ತಮ್ಮದು ಪ್ರಸಿದ್ಧ ವಂಶ, ಅವರದ್ದೂ ಪ್ರಸಿದ್ಧ ವಂಶ, ತಮ್ಮ ಮಗನೂ ದುರ್ಮರಣವನ್ನಪ್ಪಿದ, ಅವರ ಮಕ್ಕಳೂ ಅಕಾಲ ದುರ್ಮರಣಕ್ಕೆ ತುತ್ತಾಗಿರುವರು. ತಮಗೂ ಒಬ್ಬ ವಿಧವೆ ಸೊಸೆ ಇರುವಳು, ತಮಗೂ ಒಬ್ಬ ಸಚ್ಚಾರಿತ್ರ್ಯದ ಮೊಮ್ಮಗ ಇರುವನು, ಅವರಿಗೂ ಸುಶೀಲೆಯಾದ ಮೊಮ್ಮಗಳಿರುವಳು. (ಆಕೆ ತಮ್ಮ ಶಾಮನಿಗಿಂತ ಒಂದೆರಡು ವರ್ಷ ಹಿರಿಯಳಿರಬಹುದು, ಗಂಡನನ್ನು ಸುಪರ್ದಿನಲ್ಲಿಡುವುದಕ್ಕೆ ವಯೋಮಿತಿ
ಹೆಚ್ಚಿದ್ದರಾಗುವುದೇನು!) ಜ್ಯೋತಿಷ್ಯ, ಕರಣ. ಯೋಗ, ತಿಥಿ, ವಾರ, ನಕ್ಷತ್ರಗಳೇ ಮೊದಲಾದ ಪಂಚಾಗಗಳಲ್ಲಿ ತಾವಿಬ್ಬರೂ ಒಬ್ಬರಿಗಿಂತ ಒಬ್ಬರು ಮಿಗಿಲಾಗಿರುವವರು, ತಮ್ಮದು ಶಾಸ್ತ್ರಿಗಳ ವಂಶ, ಅವರದು ಆಚಾರ್ಯರ ವಂಶ, ಎಲ್ಲಕ್ಕಿಂತ ಮುಖ್ಯವಾದ ಸಂಗತಿ ಎಂದರೆ ಆಚಾರ್ಯರು ರಾಜಕಾರಣಿಗಳ ಮೇಲೆ ತಮ್ಮ ಪ್ರಾಭಾವ ಬೀರಿ ಶಾಮನಿಗೆ ಸರಕಾರಿ ನೌಕರಿ ಸಿಗದಂತೆ ಮಾಡಲೊಪ್ಪಿರುವುದು.

ವಿವಾಹ ಪೂರ್ವ ಅಥವಾ ವಿವಾಹೋತ್ತರವಾಗಿ ಮೊಮ್ಮಗ ಶಾಮ ಪ್ರಸಿದ್ಧ ವೈದಿಕನಾಗಿ ಛಪ್ಪನ್ನಾರು ಹಳ್ಳಿಗಳಲ್ಲಿ ಹೆಸರುವಾಸಿಯಾದೊಡನೆ ತಾವು ಪರಮಾತ್ಮನ ಪರಮ ಸಾಯುಜ್ಯವನ್ನು ನಿಶ್ಚಿಂತೆಯಿಂದ ಪಡೆದುಬಿಡುವುದು. ಇದಕ್ಕೆಲ್ಲ ಶುಭಸೂಚಕವಾಗಿ ಮನೆ ಮುಂದಿನ ಕಟ್ಟೆಯೊಳಗಿನ
ತುಳಸಿಗಿಡ ಮೈತುಂಬ ಚಿಗುರು ಮುಡಿದುಕೊಂಡಿರುವುದು, ಕೋಗಿಲೆಯೊಂದು ಶಾಸ್ತ್ರಿಗಳು ಗಾಯತ್ರಿ ಜಪಿಸುವಾಗ ಮನೆ ಮುಂದಿನ ಕಣಗಿಲೆ ಗಿಡದೊಳಗೆ ಕೂತು ಕುಹೂ ಕುಹೂ ಎಂದು ಕೂಗುತ್ತಿರುವುದು, ಇದೆಲ್ಲಕ್ಕಿಂತ ಮುಖ್ಯವಾಗಿ ಕಾಮೋಷಿ ಎಂಬ ದರಿದ್ರ ಅಪಶಕುನದ ಬೆಕ್ಕು ಮನೆಯಿಂದ ಮೊನ್ನೆಯಿಂದಲೇ ತೊಲಗಿರುವುದು. ಮದುವೆಯ ಕಲ್ಪನೆಯಲ್ಲಿ ಗೃಹಕೃತ್ಯಗಳನ್ನು ಹಚ್ಚಿಸಿಕೊಂಡು ಅಲುಮೇಲಮ್ಮ ಸದಾ ನಿಮಗ್ನಳಾಗಿದ್ದರೆ, ಆಕೆಯ ಸುಪುತ್ರ ರಣಧೀರ ಕಂಠೀರವ
ನೌಕರಿಗಳಿಗೆ ಅರ್ಜಿ ಹಾಕುವ ನೆಪದಲ್ಲಿ ಅನಸೂಯಳ ಕಣ್ಣಿಗೆ ಬೀಳಕೂಡದೆಂದು ನಿರ್ಧರಿಸಿ ಕೋಣೆಯೊಳಗೆ ಹಗಲೆಲ್ಲ ಅವಿತುಕೊಂಡಿರುವನು. ಇನ್ನೂ ಶಾಸ್ತ್ರಿಗಳು ಮನೆಯಲ್ಲಿ ತುಳಸೀ ರಾಮಾಯಣ, ತೊರವೆ ರಾಮಾಯಣ ಅಂತ ಮನೇಲಿ ಕೂತುಕೊಂಡರಾಗುತ್ತದೆಯೇ?

ಗ್ರಾಮದ ಬಹುಪಾಲು ಮಂದಿ ಈ ‘ಜನ್ಮ ಜನ್ಮಲ ಅನುಬಂಧಂ’ದ ಬಗ್ಗೆ ಚರ್ಚಿಸಿಕೊಂಡರಾದರೂ ಇದನ್ನೇ ತಮ್ಮ ಚರ್ಚೆಯ ಮುಖ್ಯ ಭಾಗವನ್ನಗಿ ಸ್ವೀಕರಿಸಲಿಲ್ಲ ಎಂಬುದು ಉಲ್ಲೇಖಾರ್ಹ ಸಂಗತಿ. ತಾವು ಗುರಿ ಇಟ್ಟವರ ಬದುಕಿನಲ್ಲಿ ಸಂಭವಿಸಬಹುದಾದ ಅವಘಡಗಳ ಬಗ್ಗೆ ಸದಾ ತಲೆಕೆಡೀಸಿಕೊಳ್ಳುವ ಜನ ಶಾಸ್ತ್ರೋಕ್ತವಾಗಿ ಶಾಮ ಮದುವೆಯಾಗುವುದರ ಬಗ್ಗೆ ತಾವ್ಯಾಕೆ ತಲೆ ಕೆಡಸಿಕೊಂಡಾರು? ಅವನು ಪ್ರೇಮವೆಂಬ ಖೆಡ್ಡಾದಲ್ಲಿ ಬಿದ್ದು ಲಿಬಿಲಿಬಿ ಒದ್ದಾಡುವುದು, ಅನಸೂಯಳ ಸವಿನೆನಪಿನಲ್ಲಿ ಮೊಳ‌ಉದ್ದ ಗಡ್ಡ ಬಿಟ್ಟು, ಮಲಿನ ವಸನಂ ತೊಟ್ಟು, ಕೃಶಾಂಗನಾಗಿ, ನಿಡುಸುಯ್ಲಿಡುತ್ತ,
ಗೃಹಕೃತ್ಯಗಲಂ ಪರಿತ್ಯಾಜ್ಯಂ ಮಾಡಿ ಅನುಭಾವಿಯಂತೆ ಹಗಲಿರುಳುಗಳ ನಡುವೆ ಅರ್ಥ ಕಳೆದುಕೊಂಡು ಅಡ್ಡಾಡುತ್ತಿದ್ದಾಗ ಮಾತ್ರ ಅವನು ಮಾತಿನ ಆಟಿಕೆಯಾಗುವುದು ಸಾಧ್ಯ. ಕವಿ ಹೃದಯಿಯಾಗಿರುವ ಅವನ ಹೆಂಡತಿಯಾಗಲಿರುವ ಕಾವ್ಯ ಕನ್ನಿಕೆ ಹೇಗಿರಬಹುದೆಂಬ ಕುತೂಹಲ ಕೆಲವರಿಗೆ ಮಾತ್ರ ಹುಟ್ಟಿದ್ದು

ಅದೃಶ್ಯ ರೀತಿಯಲ್ಲಿ ಹೆಂಡತಿಯನ್ನು ಪಕ್ಕದಲ್ಲಿಟ್ಟುಕೊಂಡು ಹೋಗುತ್ತಿದ್ದ ಬರುತ್ತಿದ್ದ ಶಾಮ ಹಲವರಿಗೆ ಸಿಪಾಯಿಯಂತೆ ಗೋಚರಿಸಿದ್ದುಂಟು. ಇನ್ನೂ ಪರಿಶೀಲಾತ್ಮಕತೆಯಿಂದ ನೋಡಿದವರಿಗೆ ಅವನು ಹಲವು ರೂಪಗಳಲ್ಲಿ ಗೋಚರಿಸಬಹುದಾಗಿದ್ದ. ಜನ ಕೂಡ ಅದಕ್ಕೂ ರೆಡಿ ಇದ್ದರು, ಆದರೆ
ಅವರೆಲ್ಲರ ಗಮನವನ್ನು ಹರಣಮಾಡುತ್ತಿರುವ ರೀತಿಯಲ್ಲಿ ಘಟನೆಯೊಂದು ನಡೆಯಿತು.

ಹೆಚ್ಚು ತುಲನಾತ್ಮಕವಾಗಿ ನೋಡಿದವರಿಗೆ ಶಾಮಾಶಾಸ್ತ್ರಿಗಿಂತ ನೂರುಪಟ್ಟು ಮಿಗಿಲೆಂಬಂತೆ ಗೋಚರಿಸುವ ರಘುರಾಮ ಬಂದಿರೋದು, ಅನಸುಯಾಳನ್ನು ಅವನು
ಮದುವೆಯಾಗಲಿರುವುದು ಇದೆಲ್ಲ ಈ ಎರಡು ಮೂರು ದಿನಗಳಲ್ಲಿ ಹಳೆಯ ವಿಷಯವಾಗಿ ಬಿಟ್ಟಿತ್ತು. ಅವರಿಬ್ಬರ ಬಗ್ಗೆ ಜನ ಮಾತಾಡೋದನ್ನೇ ಮಾತಾಡಿ ಮುಗಿಸಿಬಿಟ್ಟಿದ್ದರಷ್ಟೆ, ಆದರೆ ರಘುರಾಮನೆಂಬುವನು ತನ್ನದೇ ಆದ ರೀತಿಯಲ್ಲಿ, ತನಗೆ ತಿಳಿದೋ; ತಿಳಿಯದೆಯೋ ಜನಸಮೂಹದ ಗಮನವನ್ನು ತನ್ನ ಕಡೆ ಸೆಲೆದುಕೊಂಡಿದ್ದ. ಅವನು ಬೆಂಗಳೂರಿನಲ್ಲಿ ಏನೆಂಬುದರ ಬಗ್ಗೆ ಜನ ಸಾಕಷ್ಟು ಮಾತಾಡಿಕೊಂಡರು. ಕೆಲವರು ಸಮಯ ಕಲ್ಪಿಸಿಕೊಂಡು
ಅವನನ್ನು ಸಂಧಿಸಿ, ವಿಧಾನಸೌಧ ನೋಡಿದ್ದೀರಾ ಎಂದೋ, ಲಾಲ್‌ಬಾಗೆಂಬುದು ಈ ಊರಷ್ಟು ಅಗಲ ಐತಂತೆ ಹೌದಾ ಎಂದೋ; ಅಲ್ಲೆಲ್ಲ ಕಾರ್ ಜೀಪುಗಳು ಇರುವೆ ಅಡ್ಡಾಡಿದಂತೆ ಅಡ್ಡಾಡ್ತವಂತೆ ನಿಜವೇ? ಎಂದೋ ಬಹುವಚನ ಗುಣವಿಷೇಶಣಗಳನ್ನು ಸೇರಿಸಿ ಕುತೋಹಲ ವ್ಯಕ್ತಪಡಿಸುತ್ತಿದ್ದರೆ ಮತ್ತೆ ಕೆಲವರು ಇನ್ನೊಂದು ಹೆಜ್ಜೆ ಮುಂದೆ ಹೋಗಿ ಅಲ್ಲಿ ಹುಡುಗಿಯರು ಜೀನ್ಸು ಪ್ಯಾಂಟು ತೊಡುತ್ತಿರುವುದರ ಬಗ್ಗೆ; ಮುದುಕಿಯರು ಪಂಜಾಬಿ ಡ್ರೆಸ್ ತೊಡುತ್ತಿರುವುದರ
ಬಗ್ಗೆ; ಗಂಡು ಹೆಣ್ಣು ಸಾರ್ವಜನಿಕ ಪರ್ಸ್ಪರ ಮುದ್ದು ಕೊಡುಕೊಳ್ಳುತ್ತಿರುವುದರ ಬಗ್ಗೆ; ಅಲ್ಲಿ ಐದು ನಿಮಿಷಕ್ಕೊಂದು ಕೊಲೆ ಆತ್ಮಹತ್ಯೆ ಪ್ರಕರಣಗಳು ಪ್ರೇಮಪ್ರಕರಣಗಳಷ್ಟೇ ಸಲೀಸಾಗಿ ನಡೆಯುತ್ತಿವೆ ಎಂಬುದರ ಬಗ್ಗೆ; ಸಿನಿಮಾ ಯಾಕ್ಟರುಗಳ ಬಗ್ಗೆ, ಅದರಲ್ಲೂ ಮುಖ್ಯವಾಗಿ ರಾಜಕುಮಾರ್ ಬಗ್ಗೆ ಪ್ರಶ್ನೆಗಳ ಮಳೆಯನ್ನೇ ಸುರಿಸಿಬಿಡುತ್ತಿದ್ದರು. ರಘುರಾಮ ಮಾತ್ರ ಯಾವ ಪ್ರಶ್ನೆಗೂ ಬೇಸರಪಟ್ಟುಕೊಳ್ಳದೆ ಮಸಾಲೆ ಬೆರೆಸಿ ಉತ್ತರ ನೀಡಿ‌ಅವರನ್ನು
ಸಂತೃಪ್ತಿಗೊಳಿಸಿ ಗ್ರಾಮದಲ್ಲಿ ಪ್ರತಿಷ್ಟೆ ಹೆಚ್ಚಿಸಿಕೊಂಡಿದ್ದ. ಇವೆಲ್ಲಕ್ಕೂ ಕಳಸಪ್ರಾಯವಾಗಿ ಒಂದು ಘಟನೆ ನಡೆಯಿತು. ನೇರವಾಗಿ ನೋಡುವವರಿಗೆ ಇದೇನು ಗಮನಾರ್ಹ ಘಟನೆ ಎನಿಸದಿರಬಹುದು.

ಸದರೀ ಗ್ರಮದ ಉಡುಪಿ ಶ್ರೀಕೃಷ್ಣ ಭವನವೆಂಬುದು ಇಪ್ಪತ್ತೆರಡು ನಮೂನೆಯ ದೋಸೆಗಳಿಗೆ ಫೇಮಸೆಂದು ಬಂದ ಮಾರನೆ ದಿನವೇ ಗೊತ್ತಾಯಿತು. ಅವನು ಮೊದಲೇ ದೋಸೆ ಎಂದರೆ ಮೂಗು ಕೊಯ್ಯಿಸಿಕೊಳ್ಳುತ್ತಿದ್ದಂಥವನು. ಚಿಕ್ಕಂದಿನಿಂದಲೇ ಉಂಡಾಡಿ ಅಮರಪ್ಪ ತೋರಿಸಿದ ಮಸಾಲ ದೋಸೆಗೆ ಆಸೆಪಟ್ಟು ಸೂಲಗಿತ್ತಿ ಲಚ್ಚಮ್ಮನ ಮಗಳು ರೇಣುಕಾಗೂ ಓಬಳಾಪುರದ ಜಗಳಗಂಟಿ ತಿಂದಪ್ಪನ ಮಗ ಬಸವರಾಜುಗೂ ನಡುವೆ ಗೊಪ್ಯಾತಿಗೋಪ್ಯವಾಗಿ ನಡೆಯುತ್ತಿದ್ದ ಪ್ರಣಯದಾಟವನ್ನು ಪತ್ತೆ ಹಚ್ಚಿ ಏಕಕಾಲಕ್ಕೆ ದೋಸೆ ಮತ್ತು ಮಾವನ ಕೈಲಿ ಅಭೂತಪೂರ್ವ ಒದೆ ತಿಂದು ಹೆಸರುವಾಸಿಯಾಗಿದ್ದಂಥವನು. ಸಮಾಜ ಬದಲಾವಣೆಯ ಕ್ರಾಂತಿಕಾರಕ
ಕೆಲಸದ ನಡುವೆಯೂ ಯಾವ್ಯಾವ ಹೋತೆಲಲ್ಲಿ ಯವ್ಯಾವ ನಮೂನೆಯ ದೋಸೆ ಮಾಡುವರು ಎಂದು ಪತ್ತೆ ಹಚ್ಚುವಲ್ಲಿ ನಿಸ್ಸೀಮನಾಗಿರುವನು. ‘ಏನಯ್ಯಾ ನಿನಗೆ ಕ್ರಾಂತಿಗಿಂತ ದೋಸೇನೆ ಹೆಚ್ಚಾಯ್ತಲ್ಲ’ ಎಂದು ವ್ಯಂಗ ಆಡಿಸಿಕೊಂಡಿರುವನು, ಯಾವನೋ ಅಸಮಾನತೆಯನ್ನು

ಹೋಗಲಾಡಿಸುವ ಮೊದಲು ಗರಿಗರಿ ಎನ್ನುವ ಮಸಾಲೆ ದೋಸೆಯನ್ನು ತಿನ್ನಲೇಬೇಕು. ಮಸಾಲೆ ತಿನ್ನದ ಹೊರತು ಅವನಿಗೆ ಮಾರ್ಕ್ಸ್, ಏಂಗೆಲ್ಸ್, ಕ್ಯಾಸ್ಟ್ರೋ; ಚಿಗುವೇಲಾ ಯಾರೂ ಅರ್ಥವಾಗುವುದೇ ಇಲ್ಲ. ಹೋಗಲಿ ಪೊಂಗಲ್ ತಿಂದ ಮೇಲಾದರು ಗಾಂಧೀಜಿ ಅರ್ಥವಾಗುವುದು ಬೇಡವೆ? ದೋಸೆ ಮಾಡದ ಹೋಟೆಲ್‌ಗಳು ಅವನ ದೃಷ್ಟಿಯಲ್ಲಿ ಬಲಪಂಥಕ್ಕೆ ಸೇರಿದವುಗಳು. ಯಾವುದೇ ಹೊಟೆಲ್ಲಿಗೆ ಹೋದರೂ ಅವನ ಕಣ್ಣು ಕೆಂಪಗೆ ಮಾಡಿಕೊಂಡು ನೋಡುವುದು ತಿಂಡಿ ಹೆಸರುಗಳ ರೇಟಿನ ಬೋರ್ಡನ್ನು.
ದೋಸೆಗೆ ಬೋರ್ಡಿನಲ್ಲಿ ನೀಚಸ್ಥಾನ ದೊರಕಿದ್ದರಂತೂ ಅವನನ್ನು ಸಂತೈಸಲು ಕಾರ್ಮಿಕ ಖಾತೆಯ ಸಚಿವಾಲಯವೇ ಬರಬೇಕಿತ್ತು. ತಾನು ಕಾರ್ಲ್‌ಮಾರ್ಕ್ಸ್ ದಯದಿಂದ ಏನಾದರೂ ಮುಖ್ಯಮಂತ್ರಿ ಆದರೆ ಮಾಡುವ ಮೊಟ್ಟಮೊದಲನೆಯ ಕಾರ್ಯವೆಂದರೆ ಶಾಲಾ ಮಕ್ಕಳ ಮಧ್ಯಾಹ್ನದ ಉಪಹಾರಕ್ಕೆ ಮಸಾಲೆ ದೋಸೆಯನ್ನು ಒದಗಿಸುವುದಾಗಿ ತಮಾಷೆಗೆ ಹೇಳಿಕೊಳ್ಳುವುದುಂಟು. ಅವರು ಸದರೀ ಗ್ರಾಮಕ್ಕೆ ಬಂದಾಕ್ಷಣ ತನ್ನಕ್ಕ ದೋಸೆ ಮಾಡುವಳೆಂದು ಬಗೆದಿದ್ದ. ಈ ದೇಶದ ಶೂದ್ರರಿಗೆ ದೋಸೆ ಬಗ್ಗೆ ಕೊಂಚವಾದರೂ ಪರಿಜ್ಞಾನ ಇರುವುದು ಬೇಡವೇ? ಎಂದು ಮನಸ್ಸಿನಲ್ಲಿ ನಿರಾಸೆಯಿಂದ ಗೊಣಗಿಕೊಂಡಿದ್ದ. ಅನಸೂಯಾಲನ್ನು ತಾನು ಮದುವೆಯಾಗಲಿರುವುದು ಖಚಿತವಾದ ತಕ್ಷಣ ಅವನು ಆಕೆಗೆ ಹಾಕಿದ ಮೊದಲನೆ ಪ್ರಶ್ನೆ ಎಂದರೆ ದೋಸೆ ಮಾಡಲು ಬರುವುದೇನು? ಎಂದು. ಮಾಡಲು ಬಂದರೆ ಎಷ್ಟೆಷ್ಟು ಪ್ರಮಾಣದಾಲ್ಲಿ ಅಕ್ಕಿ; ಉದ್ದಿನಬೇಳೆ ಹಾಕುತ್ತಾರೆ, ರುಬ್ಬಿದ ಹಿಟ್ಟು ಬೆಳಗಿನ ಹೊತ್ತಿಗೆ ಊದಿಕೊಳ್ಳಲು ಕಾರನವೇನು? ಎಷ್ಟು ನಮೂನೆಯ ದೋದೆಗಳನ್ನು ಮಾಡಲು ಬರುತ್ತದೆ? ಇತ್ಯಾದಿ ಇಂಥ ಜುಜುಬಿ ಪ್ರಶ್ನೆಗಳಿಂದ ರೋಸಿ ಹೋಗಿ ಅನಸೂಯ”ಕ್ರಾಂತಿಕಾರಕ ಬದಲಾವಣೆ ಬರಬೇಕಿರೋದು ದೋಸೆಯಲ್ಲೋ! ಸಮಾಜದಲ್ಲೋ” ಎಂದು ಸಿಡಿಮಿಡಿಗೊಂಡಿದ್ದಳು. ದೋಸೆಯ ಮಹತ್ವ ಅರ್ಥವಾಗುವುದು ಮದುವೆಯಾದ ಮೇಲೆ ಎಂದು ತನಗೆ ತಾನು ಸಮಾಧಾನಪಡಿಸಿಕೊಂಡಿದ್ದ. ಇಂಥ ರಘು ಸದರೀ ಗ್ರಾಮದ ಹೊಟೆಲುಗಳ ತಿಂಡಿ ಜಾಯಮಾನದ ಬಗ್ಗೆ ಯೋಚಿಸತೊಡಗಿದ್ದು ತುಂಬ ತಡವಾಗಿಯೇ ಎನ್ನಬೇಕು. ಸದರೀ ಗ್ರಾಮದ ಬಹುತೇಕ ಹೊಟಲುಗಳಲ್ಲೆಲ್ಲ ಬರೀ ಮೊಂಡಾಳು ವಗ್ಗರಣೆ ಮೆನಸಿನಕಾಯಿ ಪುಗ್ಗಿ ಎಂದರೆ ಹಣೆಹಣೆ ಚಚ್ಚಿಕೊಳ್ಳುವುದೇನು! ಗ್ರಾಮದ ಸರ್ವತೋಮುಖ ಅಭಿವೃದ್ಧಿ ಕುಂಠಿತವಾಗಿರುವುದು ಸಾರ್ವಜನಿಕವಾಗಿ ದೋಸೆ ಅಪಮೌಲ್ಯಗೊಂಡಿರುವುದು ಎಂದು ಸಾಂದರ್ಭಿಕವಾಗಿ ಪ್ರಸ್ತಾಪಿಸಿದ್ದು ಮಾಜಿ ಪುರಸಭಾ ಅಧ್ಯಕ್ಷರಾದ ಶಿವಪೂಜೆ ಕೊಟ್ರಗೌಡರ ಎದುರಿಗೆ, ಗೌಡರು ಎಂದರೆ ಸಾಮಾನ್ಯರಗಿರಲಿಲ್ಲ. ಬೆಂಗಳುರನ್ನು ಸರಕಾರಿ ಖರ್ಚು ವೆಚ್ಚದಲ್ಲಿ ನೋಡಬೇಕೆಂದೇ ಅವರು ಸ್ಥಳೀಯ ರಾಜಕಾರಣದಲ್ಲಿ ಆಸಕ್ತಿ ವಹಿಸಿದ್ದು. ಸಾವಿರಾರು ರುಪಾಯಿ ಖರ್ಚು ಮಾಡಿ ಎರಡುಸಾರಿ ಪುರಸಭಾ ಅಧ್ಯಕ್ಷರಾಗಿ ಆಯ್ಕೆಗೊಂಡರೂ ಆ ಸುವರ್ಣಾವಕಾಶ ಕೂಡಿ ಬಂದಿರಲಿಲ್ಲ. ಒಮ್ಮೆ ಅಂಥ ಅವಕಾಶವೇನೊ ಬಂಥು, ಆದರೆ ತಮ್ಮ ಕಟ್ಟಾ ಎದುರಾಳಿ ಉಪಾಧ್ಯಕ್ಷ ಸೂರಿಗಾಡು ಇಲ್ಲಸಲ್ಲದ ಮಾತುಗಳಿಂದ ಎಗರಾಡಿ ಬೆಂಗಳೂರಿಗೆ ಹೋಗಿ ಬಂದು ಬಿಡುವುದೇನು? ಊರಮುಂದಿನ ಹತ್ತೆಕರೆ ಮಸಾರೆ ಹೋದರೂ ಚಿಂತೆ ಇಲ್ಲ ಈ ಸಾರಿ ಎರಡನೇ ವಾರ್ಡಿಗೆ ನಿಂತುಕೊಂಡು ಬಿಡ್ರಿ ಎಂದು ಅದೇ ಸೂರಿಗಾಡು ಪುಸಲಾಯಿಸಿದ್ದುಂಟು. ಈ ಸಾರಿ ರಾಜ್ಯದ ಪುರಸಭಾ ಅಧ್ಯಕ್ಷರುಗಳು ರಾಜಧಾನಿ ಬೆಂಗಳೂರಿಗೆ ಹೋಗಿ ಬರುವ ಖರ್ಚು ಭರಿಸಲು ಸರಕಾರ ಸಿದ್ಧವಿದೆ ಎಂದು ಸತ್ಯಣ್ಣ ಶೆಟ್ಟಿ ಪಂಪು ಹೊಡೆದಿದ್ದುಂಟು. ಆದರೆ ಪ್ಯಾರಲಿಸಿಸ್ ಸ್ಟ್ರೋಕ್

ಹೊಡೆಸಿಕೊಂಡಿರುವ ಗೌಡರು ಎಲೆಕ್ಷನ್‌ಗೆ ನಿಲ್ಲಬೇಕೆಂದಿದ್ದರು. ಹತ್ತೆಕರೆ ಹೊಲ ಮಾಡುವ ಉಪದ್ವಾನ ನಡೆಸಿದ್ದರು. ಆದರೆ ಮನೆ ಮಂದಿ ಸುಮ್ಮರಿರಬೇಕಲ್ಲ! ಖಡಾಖಂಡಿತವಾಗಿ ತಡೆದು ಮಂಚದಮೇಲೆ ಕುಕ್ಕರು ಬಡಿದಿದ್ದರು. ಮಂಚದ ಮೇಲೆ ‘ಉಮಹೇ’ ಮಾಡಿಕೊಳ್ಳುತ್ತಿದ್ದ ಗೌಡರಿಗೆ ಸದಾ ಬೆಂಗಳೂರಿನದೇ ಕನಸು. “ಇಲಾಜಿಗಾದರೂ ಬೆಂಗಳೂರಿಗೆ ಕರೆದುಕೊಂಡು ಹೋಗ್ರೋ” ಎಂದು ತನ್ನ ಸಂತಾನವಾದ ಪಂಚಪಾಂಡವರನ್ನು ಪೀಡಿಸುತ್ತಿದ್ದುದುಂಟು, ಮುಂದೊಂದು ದಿನ ಸಾಯಲಿರುವ ವ್ಯಕ್ತಿಗೆ ಬೆಂಗಳೂರು ಕರೆದೊಯ್ದು ಇಲಾಜು ಮಾಡಿಸಲೇನು ಅವರು ದಡ್ಡರೇ?

ರಘುರಾಮ ಎಂಬುವನು ಬೆಂಗಳೂರಿಂದ ಬಂದಿರುವನೆಂದೂ; ಅವನು ತಮ್ಮ ಖಾಸಾದೋಸ್ತು ರುದ್ರನಾಯಕನ (ರುದ್ರನಾಯಕನಿದ್ದಿದ್ದರೆ ತಾನೀ ಸ್ಥಿತಿಯಲ್ಲಿ ಬಿದ್ದಿರಬೇಕಿತ್ತೇ?)‘ಸಾಲ’ನೆಂದು ತನ್ನ ರಾಜಕೀಯ ಗುರು ಕುರಕುಂದಿ ಈರಣ್ಣನಿಂದ ತಿಳಿದುಕೊಂಡು ಮನೆಗೆ ಕರೆ ಕರೆಸಿಕೊಂಡು ಬೆಂಗಳೂರಿನ ವೈವಿಧ್ಯಮಯ ಬದುಕಿನ ಬಗ್ಗೆ (ಮೌಖಿಕವಾಗಿ+ಲಿಖಿತವಾಗಿ) ವಿಚಾರಿಸಿ ತಮ್ಮ ತಿಳುವಳಿಕೆ ಹೆಚ್ಚಿಸಿಕೊಂಡಿದ್ದರು. ಪ್ರಾಧಾನ ಮಂತ್ರಿಗಳ ಬಳಿ
ದುಭಾಷಿಗಳಿರುವಂತೆ ಸಹಾಯಕವಾಗಿ ಈರಣ್ಣ ಬೇರೆ ಇದ್ದನಲ್ಲ. ಗೌಡರೂ ಎಳೆ ಬಾಲಕರಂತೆ ರಾಜಕುಮಾನ ನೋಡಿದ್ದೀಯಾ? ಮುಟ್ಟಿದ್ದಿಯಾ? ಮಾತಾಡಿಸಿದ್ದೀಯಾ? ಎಂದು ಕೇಳಿದರು; ಅದಕ್ಕೆಲ್ಲ ‘ಹ್ಹೂಂ’ ಅಂದು ರಘು ಸದರಿ ಗ್ರಾಮದ ಜನರ ತಿಂಡಿ ಅಭಿರುಚಿ ಬಗ್ಗೆ ಚರ್ಚೆ ಆರಂಭಿಸಿದ್ದ. ಈ ಹಂತದಲ್ಲಿಯೇ ಗೌಡರು ದೇಶ ವಿದೇಶಗಳಲ್ಲಿ ದೋಸೆಗೆ ಹೆಸರಾಗಿರುವ ಉಡುಪಿ ಶ್ರೀಕೃಷ್ಣಭವನದ ಸುಳುವು ನೀದಿದ್ದರು. ಉದುಪಿಯ ಶ್ರೀಕೃಷ್ಣನ
ದರ್ಶನಾಕಾಂಕ್ಷಿಯಾಗಿ ಮಠದ ಬೆನ್ನು ಗೋಡೆಯಲ್ಲಿ ಕನಕದಾಸರು ಕನ್ನ ಕೊರೆದಂತೆ ಗ್ರಾಮದ ಅನೇಕರು ದೋಸೆ ತಿನ್ನುವ ಹೆಬ್ಬಯಕೆಯಿಂದ ಹೋಟೆಲನ್ನು ಅದರ ನವರಂದ್ರಗಳ ಮೂಲಕ ಪ್ರವೇಶಿಸುತ್ತಿರುವರೆಂದೂ ವಿವರಿಸಿದರು. ಆಗಲೇ ನಮ್ಮ ‘ಯ್ಯಾಂಟಿ ಹೀರೋ’ ರಘುರಾಮ ಉಡುಪಿ ಶ್ರೀ ಕೃಷ್ಣಭವನದ ದೋಸೆಗಳನ್ನು ಒಂದು ಕೈನೋಡಿಕೊಳ್ಳಬೇಕೆಂದು ಶಪಥ ಮಾಡಿದ್ದು.

ದೋಸೆ ಸೇವನೆಗೆ ಮಾಮೂಲು ರೀತಿಯಲ್ಲಿ ಹೋಗುವುದುಂಟೇನು? ರಘು ಸಫಾರಿ ಡ್ರೆಸ್ ತೊಟ್ಟುಕೊಂದು, ಬಗಲಲ್ಲಿ ಕಾರ್ಲ್‌ಮಾರ್ಕ್ಸ್‌ನ ದಾಸ್ ಕೆಪಿಟಲ್ ಇಟ್ಟುಕೊಂಡು ಕಾಲಿಗೆ ಪಾಯಿಂಟ್ ಷೂಸ್ ಹಾಕ್ಕೊಂಡು ಅಶ್ವಮೇಧ ಯಾಗಕ್ಕೆ ಬಿಟ್ಟ ಕುದುರೆಯಂತೆ ಮನೆ ಬಿಟ್ಟ. ಟಾಪ್ನಿಂದ ಬಾಟಮ್ಮೊರೆಗೆ ರೆಡ್ಡಂದ್ರೆ ರೆಡ್ಡು. ಭಾಷಣ ಮಾಡೊಕೆ ಹೊರಟಿದ್ದೀಯಾ? ಎಂದು ಕೇಳಿದಳು ಅನಸೂಯಾ. (ಎಷ್ಟಿದ್ದರೂ ಸೋದರಮಾವನಲ್ಲವೆ! ಅದಕ್ಕೆ ಸಲಿಗೆ) “ಕೇಳೊಕೆ ನೀನೂ ಬತೀಯೇನು?” ಎಂದು ಅವನು ತಮಾಷೆ ಮಾಡಿದ. ರಘುರಾಮ ದೋಸೆ ಲಗಾಸಲು ಹೊರಟಿರುವುದು ನೋಡಿದ ಎಂಥಾವರಿಗೂ ಗೊತ್ತಗಿ ಬಿಡುವಂತಿತ್ತು.

ಅಂಗಳದಲ್ಲಿ ಬಂದ ಕೂಡಲೆ ಓಣಿ ಹೆಂಗಸರೆಲ್ಲ ತಂತಮ್ಮ ಮನೆಯ ಕಿಟಕಿ ಮತ್ತಿತರ ಕಿಂಡಿಗಳಲ್ಲಿ ನಿಂತು ಪಿಳಿಪಿಳಿ ನೋಡತೊಡಗಿದರು – ಅವರೆಲ್ಲ ಬೆಂಗಳೂರಿನ ವೈಭವವೇ ಮನುಷ್ಯ ರೂಪ ಧರಿಸಿ ಹೊರಟಿದೆ ಎನ್ನುವಂತೆ, ಪುರದ ಪುಣ್ಯಂ ಪುರುಷ ರೂಪಿಂದೆ ಪೋಗುತಿದೆ ಅಂತ ರಾಘವಾಂಕ ಹೇಳಿದ್ದಾನಲ್ಲ ಹಾಗೆ. ಆಚೆಮನೆ ಸಾವಿತ್ರಿ ರಘುವನ್ನು ತೋರಿಸುವ ನಿಮಿತ್ತ ಅಲಮೇಲಮ್ಮನಿಗೆ ಐದಡಿ ಏಳಂಗುಲ ದೂರದಲ್ಲಿ ಕಿಟಕಿಯ ಜಾಲರಿಯಲ್ಲಿ ನಿಂತಿದ್ದಳು. ಹಲವಾರು ಹಸುಳೆಗಳ ಎಳೆ ನಗೆಯೇ ಆ ಯುಕನ ರೂಪ ಪಡೆದಿದೆ ಎಂಬುದಾಗಿ (ಆಗಲೆ ಮುಂದೆರಡು ಹಲ್ಲು ಕಳೆದುಕೊಂದಿದ್ದ)ಭಾವಿಸಿದ ಅಲುಮೇಲಮ್ಮಗೆ ಸಾವಿತ್ರಿ “ಆಯಪ್ಗೆ ದೋಸೆ ಎಂದ್ರೆ ಪಂಚಪಿರಾಣದಂತೆ” ಎಂದು ಪಿಸುಗುಟ್ಟಿದಳು.

ಬೆಂಗಳೂರಿನ ಯುವಕ ತಮ್ಮ ಹೋಟಲ್ಲಿಗೆ ದೋಸೆ ತಿನ್ನಲು ಬರಲಿರುವನೆಂದು ಅದ್‌ಹೇಗೋ ಅಶರೀರವಾಣಿ ಮೂಲಕ ತಿಳಿದುಕೊಂಡು ಮಾಲೀಕರಾದ ತಿಮ್ಮಣ್ಣ ಭಟ್ಟರು ಛಾಯಾ ಸ್ಟುಡಿಯೋದ ವೆಂಕಟೇಶಿಯನ್ನು ಕೆಮರಾದೊಂದಿಗೆ ರೆಡಿಮಾಡಿ ಇಟ್ಟಿದ್ದರು. ಕೂಲಿಂಗ್ ಗಿಲಾಸ್ ಧರಿಸಿದ್ದ ರಘು ಹೋಗುತ್ತಲೆ ಬರ್ರಿ ಬರ್ರಿ ಎಂದು ಸ್ವಾಗತಿಸುತ್ತ ದೋಸೆ ತಿನ್ನುವಾಗ ಹೊಡಿಯೋ ಎಂದು ಕೆಮೆರಾಮನ್ನಿಗೆ ಪಿಸಿಗುಟ್ಟಿದರು. ಮೂರು ಕಾಲು ಕುರ್ಚಿಮೇಲೆ ಫ಼್ಯಾನ್ ಸ್ವಿಚ್ ಹಾಕಿದರು. ಅದು ವಾತಾಪಿ ಗಣಪ ಜಿಂದಹೇ ಎಂದು ಹಂಸದ್ವನಿ ರಾಗದಲ್ಲಿ ಕುಯ್ಯೋ ಮರ್ರೋ ಎಂದು ತಿರುಗತೊಡಗಿತು. ಅವರು ಹಿಡಿ ಹಿಡಿ ಶಾಪ ಹಾಕುತ್ತಿದ್ದುದುತಮ್ಮ ದೋಸೆಗೋ ಸದರಿ ಗ್ರಾಮದ ಕೆ‌ಇಬೀಗೋ ಅರ್ಥವಾಗುತ್ತಿರಲಿಲ್ಲ.

ಮಾಣಿ ಇಷ್ಟುದ್ದ ಅಗಲದ ಭೂಪಟದಂತಿದ್ದ ದೋಸೆಯನ್ನು ತಂದಿಟ್ಟ. ಅದು ಗಮ್ಮನೆ ಪರಿಮಳ ಬೀರಿತು. . ಕೌಶಿಕಮುನಿ ತನ್ನ ಮೇಲೆ ಇಸಿ ಮಾಡಿದ ಬಲಾಕ ಪಕ್ಷಿ ಕಡೆ ದುರುಗುಟ್ಟಿ ನೋಡಿದಂತೆ ರಘು ಅದರ ಕಡೆ ನೋಡಿದ. ಕೆಮರಾ ಕ್ಲಿಕ್ ಅಂತು. ಅದಕ್ಕೆ ಕೈ ಹಚ್ಚಿದ. ಕೆಮರಾ ಕ್ಲಿಕ್ ಅಂತು. ಅದನ್ನು ಬಾಯಲ್ಲಿಟ್ಟುಕೊಂಡ. ಕೆಮರಾ ಕ್ಲಿಕ್ ಅಂತು. ಮಾತಾಡಿದಂತೆ ಮೂರು ಫೋತೋದ ಅಡ್ವಾನ್ಸ್ ಇಸುಕೊಂಡು ವೆಂಕಟೇಶಿ ಸಿಳ್ಳೆ ಹಾಕುತ್ತ ತ್ರೀ ಹಂಡ್ರಡ್ ಹಾಕಲು ಪ್ರಸಾದನ ಪಾನ್ ಶಾಪಿನ ಬಳಿಗೆ ಹೋಗುತ್ತಲೆ ಭಟ್ಟರು ದೋಸೆಯ ರುಚಿ ಹಾಗೂ ಹೋಟೆಲ್ ರುಚಿ ಹಾಗೂ ಶುಚಿ ಬಗ್ಗೆ ವಿಚಾರಿಸಿದರು. “ನೀವು ಏನೇ ಹೇಳಿ ಮಾರಾಯ್ರೆ ಆ ಶಾಮಾಶಾಸ್ತ್ರಿಗೆ ದೋಸೆ ಬಗ್ಗೆ ಆಸಕ್ತಿನೇ ಇಲ್ಲ ನೋಡಿ. ದಿನಕ್ಕೆರ್ಡು ಹೊತ್ತು ಮಂಡಾಳು ವಗ್ಗರನೆ ಪುಗ್ಗಿ ಇದ್ದುಬಿಟ್ಟರೆ ಮುಗಿಯಿತು ನೋಡಿ” ಎಂದು ಅವನನ್ನು ಪ್ಲೀಜು ಮಾಡಲು ಶತಪ್ರಯತ್ನ ಮಾಡಿದರು.

ಇಂಥ ದೋಸೆ ತಿಂದು ಬೆಂಗಳೂರಿನವರು ಐವತ್ತು ಪೈಸೆ ಹೆಚ್ಚಿಗೆ ಬಿಲ್ಲು ತೆತ್ತದಿದ್ದರೆ ಹೇಗೆ? ಮಾಣಿಗೆ ಕಣ್ಣು ಮಿಟುಕಿಸಿದರು. ಅವನು ಅದರಂತೆ ಆ ಪುಟ್ಟ ಕಾಗದದ ಮೇಲೆ ಮಹಾಕಾವ್ಯ ಬರೆಯುತ್ತಿರುವನೇನೋ ಎಂಬಂತೆ ಸಿಳ್ಳುಹಾಕುತ್ತ ಬಿಲ್ ಬರೆದು ರಘುನ ಕೈಗೆ ಕೊಡುತ್ತ ಮನಸ್ಸಿನಲ್ಲಿ (ಇಂದು ಸಂಜೆಯಿಂದ ಆರಂಭವಾಗುವ ಭೇದಿ ಮೂರು ದಿನವಾದರೂ ಕಡಿಮೆಯಾಗುವುದಿಲ್ಲ. ನೋಡ್ತಿರು) ಶುಭ ಕೋರಿದ.

ರಘು ಅದರ ಕಡೆ ನೋದಿದರೆ ತಾನೆ? ನೂರು ರೂಪಾಯಿ ನೋತನ್ನು ಬಿಲ್ಲಿನೊಂದಿಗೆ ಟೇಬಲ್ ಮೇಲೆ ಸರಿಸಿದ. ಭಟ್ಟರು ನೋಟನ್ನು ಬೆಳಕಿನಲ್ಲಿ ಹಿಂದು ಮುಂದು ನೋಡಿ ಖೋಟ ಅಲ್ಲವೆಂದು ಖಚಿತಪಡಿಸಿಕೊಂಡು ಚಿಲ್ಲರೆ ಕೊಡುವಾಗ ಅಕಸ್ಮಾತ್ ರಘು ಎಡಗೈಗೆ ಕಟ್ಟಿಕೊಂಡಿದ್ದ ವಾಚಿನ ಕಡೆ ನೋಡಿ ದಾಂತೋತಲೆ ಉಂಗ್ಲಿದಭಾನ ಮಾಡಿದರು.

“ಇದೇನು ಮಾರಾಯ್ರೆ… ಈ ವಾಚು ಹಿಂಗದೇ… ನಂಬರುಗಳು ಅಟಕ್ ಪಿಟಕ್ ಅಂತ ತಮ್ಮಷ್ಟಕ್ಕೆ ತಾವೆ ಬದಲಾಗ್ತಿದಾವಲ್ಲ… ಎಂಥ ಸೋಜಿಗ ಕಣ್ರಿ ಇದು….” ಎಂದು ಜೋರಾಗಿ ಉದ್ಗರಿಸಿದೊಡನೆ ಅಷ್ಟೊತ್ತಿಗಾಗಲೇ ಆ ಹೋಟಲಿನ ನವರಂದ್ರಗಳ ತುಂಬ ಜೀರಾಡುತ್ತಿದ್ದ ಸದರೀ ಗ್ರಾಮದ ಉಂಡಾಡಿ ಗುಂಡರು ‘ಹುರ್ರೇ’ ಎಂದು ಪ್ರತ್ಯಕ್ಷವಾಗಿ ತಮ್ತಮ್ಮ ಕಣ್ಣುಗಳನ್ನು

ಚಕಚಕ ಅಂತ ಕಿತ್ತು ಆ ವಾಚಿನ ಮೇಲಿಟ್ಟರು . ಎಂಥ ವಾಚದು? ನಭೂತೊ ನಭವಿಷ್ಯತಿ. ಅವರೆಲ್ಲರ ಮೇಲೆ ಮೀರಿದ ಕುತೋಹಲ ಒಂದು ಕ್ಷನ ರಘುಗೆ
ಅರ್ಥವಾಗಲಿಲ್ಲ. ತಾನು ಕಟ್ಟಿರುವ ಎಲೆಕ್ಟ್ರಾನಿಕ್ ವಾಚು ಅವರೆಲ್ಲರನ್ನೂ ಇಷ್ಟೋಂದು ಮಂತ್ರಮುಗ್ಧರನ್ನಾಗಿ ಮಾಡಬಹುದೆಂದು ಅವನು ಆ ಹಿಂದಿನ ಕ್ಷಣದವರೆಗೆ ಯೋಚಿಸಿರಲಿಲ್ಲ. ಅವನು ಹಾಗೆಯೇ ಇನ್ನೊಂದು ಕ್ಷಣ ಮೈಮರೆತುಬಿಟ್ಟಿದ್ದರಲ್ಲಿ ಅವರೆಲ್ಲರು ಆ ವಾಚಿನೊಂದಿಗೆ ಅವನ ಎಡಗೈಯನ್ನೂ ಅಪಹರಿಸದೆ ಇರುತ್ತಿರಲಿಲ್ಲ. ಅಂತೂ ನಸಿಬ ನೆಟ್ಟಗಿತ್ತು ಅದರಿಂದ ಹೇಗೋ ತಪ್ಪಿಸಿಕೊಂಡು ಮನೆ ಸೇರಿದ…

ತಮ್ಮನ ಅವಸ್ಥೆ ನೋಡಿ ರುಕ್ಕಮ್ಮ ಗಾಬರಿಯಾದಳು. ಬಾಗಿಲಿಗೆ ಕರ್ಟನ್ ಹಾಕುತ್ತಿದ್ದ ಅನಸುಯ ತನ್ನ ವುಡ್‌ಬೀಗೆ ಏನಾಯ್ತೂಂತ ಧಾವಿಸಿ ಬಂದಳು. ತಮ್ಮನ ಗತಕಾಲದ ಬಾಲಲೀಲೆಗಳೆಲ್ಲ ಎಲ್ಲಿ ಪುನರಾವರ್ತನೆಗೊಂಡವೋ ಎಂದು ರುಕ್ಕಮ್ಮ ಭಾವಿಸಿದ್ದು ಸಹಜ. ಕ್ರಾಂತಿಕಾರಿ ಭಾಷಣ ಮಾಡುವಾಗೆಲ್ಲಿ ತನ್ನ ವುಡ್‌ಬೀಯನ್ನು ಜನ ಅಟ್ಯಾಕ್ ಮಾಡಿಬಿಟ್ಟರೋ ಎಂದು ಅನಸೂಯಾ ಭಾವಿಸಿದ್ದು ಸಹಜ. ಕಾರ್ಲ್‌ಮಾರ್ಕ್ಸ್‌ನ ಕೆಂಪು ಪಟ್ಟೆಯ ಪುಸ್ತಕವನ್ನು
ಬಗಲಲ್ಲಿಟ್ಟುಕೊಂಡು ಮನೆಬಿಟ್ಟಾಗಲೇ ತಮ್ಮಿಬ್ಬರಿಗೆ ಅನುಮಾನ ಬಂದಿತ್ತು. ಏನಾದರೊಂದು ಅಹಿತಕರ ಘಟನೆ ಸಂಭವಿಸಬಹುದೆಂದು ಅವರು ಮೊದಲೇ ಊಹಿಸಿದ್ದರು. ಕಾಲ ಮೊದಲಿಗಿಂತ ತುಂಬ ಸುಮಾರಾಗಿರುವುದು. ಒಬ್ಬ ವ್ಯಕ್ತಿ ಇನ್ನೊಬ್ಬ ವ್ಯಕ್ತಿ ಕಡೆ ನೋಡುವುದೇ ಗುಮಾನಿಯಿಂದ.
ತನ್ನ ವಿರುದ್ಧ ಏನಾದರೊಂದು ಸಂಚು ನಡೆಸುತ್ತಿರಬಹುದೆ ಎಂಬ ಆತಮ್ಕ ಸಾರ್ವರ್ತ್ರಿಕ ವಾಗಿತ್ತು.

ಯಾರಾದರೂ ಹೊಸಬರು ಬಂದರೆಂದರೆ ಅವರು ಬುಡಮೇಲು ಕೃತ್ಯ ನಡೆಸಲಿಕ್ಕೆಂದೇ ಬಂದಿರಬಹುದೆಂದು ಸುಲಭವಾಗಿ ಊಹಿಸಿಬಿಡುತ್ತಿದ್ದರು. ಗ್ರಾಮದ ವಾತಾವರಣ ಹೀಗಿರುವಾಗಲೇ ರಘುರಾಮ ಬಂದಿರುವುದು. ಮೊದಮೊದಲು ಎಲ್ಲರು ಅವನನ್ನು ಅನುಮಾನದಿಂದಲೇ ನೋಡಿದರು. ಒಲ್ಲದ ಮನಸ್ಸಿನಿಂದ ಸ್ವಾಗತಿಸಿದರು. ರುದ್ರ ನಾಯಕನ ಭಾವ ಮೈದುನನೆಂದು ಗೊತ್ತಾದ ನಂತರವೇ ಎಲ್ಲರೂ ಸಮಾಧಾನದ ಉಸಿರುಬಿಟ್ಟಿದ್ದು. ಮೊದಲೇ ತಮ್ಮದು ಗಂಡಸರಿಲ್ಲದ ಮನೆ! ಯಾವ ಕ್ಷಣದಲ್ಲಿ ಎಂಬ ಆತಂಕ ಬೇರೆ; ರಘುರಾಮ ಮನೆ ಬಿಟ್ಟ ಕ್ಷಣದಿಂದ ಆರಂಭವಾಗುವ ಆತಂಕ ಕಡಿಮೆಯಾಗುತ್ತಿದ್ದುದು ಅವನು ಮನೆಗೆ ಮರಳಿದ ನಂತರವೇ. ತಾಯಿ ಮಗಳಿಬ್ಬರೂ ಸೇರಿ ಎಡಪಂಥೀಯ ವಿಚಾರಧಾರೆಯ ಗರಂ ಗರಂ ವಾಸನೆ ಬೀರುತ್ತಿದ್ದ ಪುಸ್ತಕಗಳನ್ನೆಲ್ಲ ಒಯ್ದು ಭತ್ತದ ಹೊಟ್ಟಿನ ಅಡಕಲ ಗಡಿಗೆಯೊಳಗೆ ಬಚ್ಚಿಟ್ಟರು.

ರಘುರಾಮ ಎದೆಗೆ ಸಾಕಷ್ಟು ಗಾಳ ಬೀಸಿಕೊಂಡು; ಎರಡು ತಂಬಿಗೆ ಬಸವನ ಬಾವಿ ನೀರು ಕುಡಿದು; ತಾನು ಗುಟ್ಟಗಿ ಪ್ರೀತಿಸುತ್ತಿದ್ದ ಪಾರ್ವತಿ, ಗೌರಿಯರನ್ನು (ಇವರಿಬ್ಬರು ಕಳೆದು ಐದು ವರ್ಷಗಳ ಹಿಂದೆ ಕೈಯಲ್ಲಿ ಬಂದೂಕು ಹಿಡಿಯದ ಹೊರತು ಸಮಾಜವನ್ನು ಬದಲಿಸುವುದು ಸಾಧ್ಯವಿಲ್ಲವೆಂದು ನಂಬಿ ಫೇಮೋಸ್ ನಕ್ಸಲೈಟು ಚಿರುಕಲ ನರಸಿಂಹುಲು ಸಂಗಡ ಆಂಧ್ರಮಹಾವಿಷ್ಣುವಿನ ನೆಲವೀಡಾದ ಶ್ರೀಕಾಕುಳಂ ದುರ್ಗಮ ಬೆಟ್ಟಗಳ ಕಡೆ ಹೋಗಿರುವರು) ನೆನೆಯುತ್ತ ಧೈರ್ಯ ತಂದುಕೊಂಡನು. ತಮ್ಮನ್ನು ಅನುಕ್ರಮವಾಗಿ ಸಂಭೋಗಿಸದಿದ್ದಲ್ಲಿ ನೀನು ಕ್ರಾಂತಿಕಾರಿ ಚಳುವಳಿಗೆ ನಾಲಾಯಕ್ಕು ಅಂತ ಅವರು ಹೇಳಿದ್ದ
ಮಾತ್ನ್ನು ನೆನಪು ಮಾಡಿಕೊಳ್ಳದಿದ್ದುದು ಅವನ ಪುಣ್ಯ ಹೇಗೇನಾದರೂ ನೆನಪಾಗಿ ಬಿಟ್ಟಿದ್ದಲ್ಲಿ ಅವನಿಂದ ಬೆವರನ್ನು ನಿಯಂತ್ರಿಸುವುದಾಗುತ್ತಿರಲಿಲ್ಲ.

ಈ ಪ್ರಕಾರವಾಗಿ ರಘುರಾಮ ಸಮಾಧಾನದ ಒಂದು ಹಂತ ತಲುಪಿದ ಮೇಲೆ ತನ್ನ ಬಾಳು ಬೆಳಗುವ ಹುಡುಗಿ ಮಾಡಿಕೊಟ್ಟ ಚಹ ಕುಡಿದು ತಾನು ಭಟ್ಟರ ಹೋಟಲಿಗೆ ಹೋಗಿದ್ದು ದೋಸೆ ತಿನ್ನುವಾಗ ಭಟ್ಟರು ಫೋಟೊ ತೆಗೆಸಿದ್ದು ಹೇಳುತ್ತಿದ್ದಂತೆಯೇ ಅನಸೂಯ ಫೋಟೊ ತೆಗೆಯಲು ಆಸ್ಪದ ಕೊಡಬಾರದಿತ್ತೆಂಬ ತಕರಾರೆತ್ತಿದಳು. ದೋಸೆ ತಿನ್ನುವುದೇನೋ ಐತಿಹಾಸಿಕ ಘಟನೆ ಏನು ಅಲ್ಲ. ಹಾಗೆಯೇ ದೋಸೆ ತಿನ್ನುವುದೇನೋ ಬುಡಮೇಲು ಕೃತ್ಯವೆನಿಸಿಕೊಳ್ಳಲಾರದು. ಆದರೆ ಫೋಟೊವನ್ನು ತೆಗೆದ ಮತ್ತು ತೆಗೆಯಲು ಪ್ರೇರಣೆ ನೀಡಿದ ವ್ಯಕ್ತಿ ಪೋಲಿಸ್ ಇನ್‌ಫಾರ್ಮರ್ರಾಗಿದ್ರೆ ಒದಗಲಿರುವ ಸಂಕಟವನ್ನು ತಡೆಯುವ ಬಗೆ ಹೇಗೆ? ಇದು ಸೂಕ್ಮೂಜ್ಞೆಯಾದ ಅನಸೂಯಳ ಆತಂಕದ ಒಂದು ನಮೂನೆ. ಎಷ್ಟದರೂ ಅವನು ತನಗೆ ಗೃಹಸ್ಥಾಶ್ರಮ ನೀಡಲಿರುವವನಲ್ಲವೆ?

ರಘು ಅವರ ಅತಂಕಗಳ ಕಾರಣಗಳನ್ನು ಅರ್ಥಮಾಡಿಕೊಂಡು ನಕ್ಕ. ತಾನು ಕಟ್ಟಿಕೊಂಡಿರು ಎಲೆಕ್ಟ್ರಾನಿಕ್ ವಾಚು ಸೃಷ್ಟಿಸಿದ ಅವಾಂತರದ ಬಗ್ಗೆ ಹೇಳುತ್ತ ನಗಾಡಿದ. ಅವನು ಬಂದು ಇಷ್ಟು ದಿನವಾದರೂ ತಾವವನ ವಾಚು ನೋಡದಿರುವುದರ ಬಗ್ಗೆ ತಾಯಿ ಮಗಳಿಬ್ಬರು ತಮಗೆ ತಾವೆ ಆಶ್ಚರ್ಯಪಟ್ಟುಕೊಂಡರು. ರುಕ್ಕಮ್ಮನಿಗಂತೂ ಎಲೆಕ್ಟ್ರಾನಿಕ್ ಎಂಬ ಪದ ಉಚ್ಚರಿಸಲು ಕಷ್ಟವಾಗಿ ಅಟಕ್ ಪಿಟಕ್ ಎಂದಳು. ಪದವೀಧರೆಯಾದ ಅನಸೂಯ ಆ ಕ್ಲಿಷ್ಟ ಪದದ ಅರ್ಥ ವಿವರಿಸಿದಳು. ಅವರಿಬ್ಬರು ಅವನ್ ಮುಂಗೈ ಅಲಂಕರಿಸಿದ್ದ ಅದನ್ನು ಶಾನೆ ಹೊತ್ತು ನೋಡಿದರು. ಅದು ಗಂಡಸಾದ ಅವನ ಮುಂಗೈಯ ಮೇಲಿರುವುದೇ ಕ್ಷೇಮವೆಂದೇ
ಬಗೆದರು.

ಪಂಕ್ಚುಯಾಲಿಟಿಯ ಪರಿಪಾಲಕನಾದ ಅವನು ಆತ್ಮಲಿಂಗೋಪಾದಿಯಲ್ಲಿ ಅದನ್ನು ಧರಿಸಿಯೇ ಸ್ನಾನ ಊಟ ಇತ್ಯಾದಿ ಮುಗಿಸಿ ಮಲಗಿಕೊಂಡ. ಅವನಿಗೆ ಡಿಸ್ಟರ್ಬ್ ಆಗುವುದೆಂದು ರುಕ್ಕಮ್ಮ ಮಗಳೊಂದಿಗೆ ಅಡುಗೆ ಮನೆಯಲ್ಲಿ ನಡೆಯಲಿರುವ ಮದುವೆಬಗ್ಗೆ; ಬಾರದಿರುವ ಮಾಲಿಕನ ಬಗ್ಗೆ; ಆರ್ಥಿಕ ಪರಿಸ್ಥಿತಿಯ ಬಗ್ಗೆ; ಚರಾಸ್ತಿ ಸ್ಥಿರಾಸ್ತಿ ಬಗ್ಗೆ; ಶಾಮನಿಗೆ ಗೊತ್ತು ಮಾಡಿರುವ ಹೊಸಪೇತೆಯ ಕನ್ಯಾಮಣಿಯ ಬಗ್ಗೆ; ಹೀಗೆ ಹಲವಾರು ವಿಷಯಗಳ ಬಗ್ಗೆ ಚರ್ಚಿಸಲು ಅಧಿವೇಶನ ನಡೆಸಿದ್ದರು.

ಇತ್ತ ಪಡಸಾಲೆಯಲ್ಲಿ ಹಿರಿಯೂರು ಕಡೆಯ ಚಿತ್ತರದ ಚಾಪೆ ಮೇಲೆ ಸರ್ಪ ಶಯನದ ಮೇಲೆ ಮಹಾವಿಷ್ಣು ಮಲಗಿರುವ ಶೈಲಿನಲ್ಲಿ ಅರೆ ಎಚ್ಚರ ಅರೆ ನಿದ್ರೆಯಲ್ಲಿ ಮಲಗಿಕೊಂಡಿದ್ದ ರಘುರಾಮ ವರ್ತಮಾನದ ದುರಂತ ಪರಿಹರಿಸಲು ತಾನು ಬುಡಮೇಲು ಕೃತ್ಯಕ್ಕೆ ತೊಡಗುವುದೋ ಎಂದು ಯೋಚಿಸುತ್ತಲೇ ಹಾಗೆ ನಿದ್ರೆ ಹೋಗಿದ್ದ. ಹಾಲೀ ಪ್ರಧಾನಿ ಸರ್ವಾಧಿಕಾರಿಣಿ ಥರ ಮಾಡಿಕೊಂಡಿರುವುದು, ಪ್ರಜಾಪ್ರಭುತ್ವ ವಿರೋಧಿ ಕಾನೂನುಗಳ ಮೂಲಕ ಕಡ್ಡಿ ಮುರಿದಂತೆ
ದೇಶವನ್ನು ಆಳುತ್ತಿರುವುದು, ಆಕೆಯ ಮುದ್ದು ಮಗ ಸಂಜಯಗಾಂಧಿ ಬಗ್ಗೆ ಒಂದು ನವರಸಭರಿತ ಕಾದಂಬರಿ ಬರೆಯಬೇಕು. ಅದು ಮೂರು ಮೊಳ ಗಡ್ಡಾ; ಒಂದು ಮಳ ಮೀಸೆಯೊಡನೆ ಹುಟ್ಟಬೇಕು. ಹುಟ್ಟುತ್ತಲೆ ಭಾರತವನ್ನು ಆಮೂಲಾಗ್ರ ಬದಲಾವಣೆ ಮಾಡಬೇಕೆಂದುಕೊಂಡು ಎರಡೂ ಕೈಯೊಳಗೆ ಎರಡೂ ನಮೂನೆಯ ಬಂದೂಕುಗಳನ್ನು ಹಿಡಿದುಕೊಂಡು; ಬಾಯಿಯಿಂದ ಇಂಡಿಯನ್ ಪೀನಲ್ ಕೋಡಿನ ಎಲ್ಲಾ ನಮೂನೆಯ ಕಲಮುಗಳನ್ನು ಪಟಪಟಾಂತ ಉಚ್ಚರಿಸುತ್ತ ಗಾಳಿಯಲ್ಲಿ
ಗಾಳಿಗಿಂತ ವೇಗವಾಗಿ ಅಡ್ಡಡಿ ಇಡೀ ಜಂಬೂದ್ವೀಪವನ್ನು ಗಡಗಡ ಅಂತ ನಡುಗಿಸಿಬಿಡಬೇಕು… ಅದರ ವಿರುದ್ಧ ಹೋರಾಡುವ

ಹೀರೋ ನಾನಾಗಬೇಕು… ಇದನ್ನು ಕುರಿತು ಕಾದಂಬರಿ ಬರೆಯಬೇಕೋ? ನಾಟಕ ಬರೆಯಬೇಕೋ? ಕ್ರಾಂತಿಯನ್ನೇ ಉಸಿರು ಮಾಡಿಕೊಂಡಿರುವ ನನಾಗೆ ಒಂದು
ವಾಕ್ಯ ಬರೆಯಲು ಬರುತ್ತಿಲ್ಲವಲ್ಲ… ಏನು ಮಾಡುವುದು.

ಯೋಚಿಸುದ್ದಿಂತೆ ಭಯಾನಕ ಕೂಸೊಂದು ತಾಯಿಯ ಕಿಬ್ಬೊಟ್ಟೆ ಸೀಳಿಕೊಂಡು ಹೊರಬರುವುದು… ಅದರ ಉಗುರುಗಳು ಮಾರಕಾಯುಧಗಳು. “ಎಲೆ ನನ್ ಮಗ್ನೆ ನನ್ ವಿರುದ್ಧಾನೇ ಕಿರಾಂತಿ ಮಾಡ್ತೀಯಾ ಈಗ ನಿನ್ನ ಹುಟ್ಲಿಲ್ಲ ಅನ್ನಿಸಿಬಿಡ್ತೀನಿ” ಎನ್ನುತ್ತ ಅದು ತನ್ನ ಕಡೆಗೇ ಅಂಬೆಗಾಲಿಟ್ಟು ಬರುತ್ತಿರುವುದು. ಇನ್ನೊಂದು ಕ್ಷಣದಲ್ಲಿ ಆ ಕೂಸು ತನ್ನ ಕಥೆಯನ್ನೇ ಮುಗಿಸಿ ಬಿಡಲಿದೆ. ಚಿಟಾರನೆ ಚೀರಬೇಕು.. ಅಕ್ಕ ಮತ್ತು ಅಕ್ಕನ ಮಗಳನ್ನು ಸಹಾಯಕ್ಕೆ ಕರೆಯಬೇಕು..
ಅಷ್ಟರಲ್ಲಿ ಬಾಗಿಲು ತಟ್ಟುತ್ತಿರುವ ಸದ್ದು. ಟಕ್… ಟಕ್… ಅಂತ. ಬಾಗಿಲಾಚೆ ಎಂಥದೋ ಪಿಸಿಪಿಸಿ ಮಾತುಗಳು; ಕೂಸು ತನ್ನೊಂದಿಗೆ ಯಾರನ್ನೋ ಕರೆದುಕೊಂಡು
ಬಂದಿರುವಂತಿದೆಯಲ್ಲ! ಅಕಸ್ಮಾತ್ ತನ್ನಕ್ಕ ಬಾಗಿಲು ತೆಗೆದುಬಿಟ್ಟರೆ!?…

ಅಷ್ಟರಲ್ಲಿ ರುಕ್ಕಮ್ಮ ನಡೆದಂತೆ… ಸರಕ್ ಪರಕ್ ಅಂತ ಬಾಗಿಲು ತೆರೆದಂತೆ…ಬಾಗಿಲಾಚೆ ಇರುವವರನ್ನು ನೋಡಿ ಅಕ್ಕ ಕಂಗಾಲಾದಂತೆ ಆಕೆಯ ದ್ವನಿ ಗಡಗಡ ನಡುಗುತ್ತಿರುವಂತೆ..

“ಏನ್ರಿ ಯಾರು ಬೇಕಿತ್ರೀ?”
ನಿಮ್ಮನೆಗೆ ಬೆಂಗ್ಳೂರಿಂದ ಯಾರೋ ಬಂದಿದಾರಂತಲ್ಲ?”
“ನನ್ ಸದ್ಯ ತಮ್ಮನೆ! ರಘುರಾಮ ಅಂತ.. ಬೆಂಗ್ಳೂರಲ್ಲಿ ದೊಡ್ ಕೆಲಸದಲ್ಲಿದ್ದಾನೆ!”
“ಹ್ಹಾಂ! ಹ್ಹಾಂ! ಅವ್ನೆ ಅವ್ನೆ ಬೇಕು… ಎಲ್ಲಿ ಅವನು?” ಎಂದು ಕೇಳುತ್ತ ಯಾರೋ ಧಡ್ ಭಡ್ ಅಂತ ಒಳಗೆ ಬಂದಂತೆ.. ರಘುರಾಮ ಗೋಡೆಗೆ ಮುಖ ಮಾಡಿ ಮೈತುಂಬ ದುಪ್ಪಟ ಹೊದ್ದು; ಮೊಣಕಾಲುಗಳನ್ನು ಗದ್ದಕ್ಕೆ ಬಡಿಸಿಕೊಂಡು ತಾನು ಗಾಡ ನಿದ್ರೆಯಲ್ಲಿರುವಂತೆ ನಟಿಸತೊಡಗಿದ. “ಇಲ್ಲೆ.. ಮಲೊಕ್ಕೊಂಡಿದ್ದಾನೆ.. ಪಾಪ.. ಆಯಾಸ!” ಅವರನ್ನು ಅಲ್ಲಿಂದ ತೊಲಗಿಸಲು ಪ್ರಯತ್ನಿಸುತ್ತಿರುವ ಅಕ್ಕ.

“ಕೂಡ್ಲೆ ಎಬ್ಬಿಸ್ರಿ… ಹೊತ್ತಲ್ಲದ ಹೊತ್ನಲ್ಲಿ ಮಲಗಿದರೆ ದೇಶ ಉದ್ಧಾರಾಗೊದಾದ್ರು ಹೇಗೆ?” ಅಬ್ಬಾ! ಇವರಿಗೆ ಎಷ್ಟೊಂದಿದೆಯಲ್ಲ! ದೇಶದ ಬಗ್ಗೆ ಕಾಳಜಿ! ಅಕ್ಕ ಬಂದಳು. ಕೈಯಿಂದ ಮಿಸುಕಾಡಿಸಿದಳು.

“ತಮ್ಮಾ ರಘು ಎದ್ದೇಳೋ.. ನಿನ್ನ ಹುಡುಕ್ಕೊಂಡು.. ” ರಘು ಪ್ರತ್ಯುತ್ತರವಾಗಿ ಗೊರಕೆ ಬಾರಿಸ ತೊಡಗಿದ. ಕ್ರಾಂತಿಕಾರಿಗಳಾದವರಿಗೆ
ಗೊರಕೆಯ ಹಲವು ಸ್ವರೂಪಗಳು ಗೊತ್ತಿರಬೇಕು..

“ಏನೋ ಸ್ವಾಮಿ.. ಎಷ್ಟು ಎಬ್ಬಿಸಿದ್ರೂ ಏಳ್ತಿಲ್ಲ.. ತುಂಬ ನಿದ್ದೆ ಬಂದಂತಿದೆ” ತನ್ನ ಪ್ರಯತ್ನ ವಿಫಲವಾದುದರ ಬಗ್ಗೆ ಅಕ್ಕ. ಬಂದಿದ್ದವರು, ಓಹ್ ಹಾಗೋ!” ಎಂದರು ‘ಯಾಕೆ ಎದ್ದೇಳಲ್ಲ ನೋಡೇ ಬಿಡ್ತೀವಿ’ ಎಂದರು. ಒಬ್ಬ ಕೈಲಿದ್ದ ಕೋಲಿನಿಂದ ತಿವಿದ ಇನ್ನೊಬ್ಬ ರಜಸ್ವಲೆಯಾಗಿ ಬಿಸಿಲಿಗೆ ತಲೆ ಒಣಗಿಸಿಕೊಳ್ಳುತ್ತ ಕೂತಿದ್ದ ಪಾಂಚಾಲಿಯ ಭವತ್ ಕೇಶಪಾಶ ಪ್ರಪಂಚಕ್ಕೆ ದುಶ್ಶಾಸನ ಕೈಹಚ್ಚಿದಂತೆ ಮೇಡಿನ್ ಸೋಲಾಪೂರ್ ಬೆಡ್‌ಶೀಟಿಗೆ ಕೈಹಚ್ಚಿ ಎಳೆದು ಮೂಲೆಗೆಸೆದು ಮಲಗಿದ್ದ ವ್ಯಕ್ತಿಯನ್ನು ಅನಾವರಣಗೊಳಿಸಿಬಿಟ್ಟ.

ಅನಂತರವೂ ಮಲಗಿದ್ದ ರಘು ಇನ್ನೊಮ್ಮೆ ಝಾಡಿಸಿ ತಿವಿದ ಮೇಲೆಯೇ ಹ್ಹಾಂ… ಹ್ಹೂಂ… ಅಂತ ಮಗ್ಗುಲು ಬದಲಾಯಿಸಿ; ಕಣ್ಣುಗಲನ್ನು ಉಜ್ಜಿಕೊಂದು ಒಮ್ಮೆ ಗಟ್ಟಿಯಾಗಿ ಆಕಳಿಸಿ ತೆರೆದು ನೋಡುತ್ತಾನೆ ಎದುರಿಗೆ ಇಬ್ಬರು ಪೋಲಿಸರು ಆಕಾಶಕ್ಕೂ ಭೂಮಿಗೂ ಏಕಾಗಿ ನಿಂತಿರುವಂತೆ ಗೋಚರಿಸಿದರು.

ಅಂದುಕೊಂಡಿದ್ದಂತೆ ಬಂದೇ ಬಿಟ್ಟಿದ್ದಾರವರು. ಸರಕಾರಿ ವಿರೋಧಿ ಚಟುವಟಿಕೆಗಳಿಗಾಗಿ ಬಂಧಿಸಲು ಸಂಸಿದ್ಧರಾಗಿ.. ತಮ್ಮ ಗುಂಪಿನ ಭೂಗತ
ಚಟುವಟಿಕೆಗಳನ್ನು ಹೇಗೋ ಪತ್ತೆ ಹಚ್ಚಿದ್ದಾರೆ. ಅಕ್ಬರ್‌ಗೆ ಈಗಾಗಲೆ ಹೈದರಾಬಾದ್ ಗೋಲಿ ರುಚಿ ತೋರಿಸಿರಬಹುದು. ತನ್ನನ್ನು ಏರೋಪ್ಲೇನ್ ಹತ್ತಿಸಿ ಬಹುದಿನದ ವಿಮಾನ ಪ್ರಯಾಣದ ಕನಸನ್ನು ಈಡೇರಿಸಲಿಕ್ಕಾಗಿ ಬಂದಿದ್ದಾರೆ. ಎಲಾ ಭಟ್ಟ ಅಂತೂ ಸುಳಿವು ನೀಡಿ ಬಿಟ್ಟಿರುವೆಯಾ.. ಕಟ ಕಟ ಹಲ್ಲು ಕಡಿದ.

ಧೈರ್ಯಗುಂದಿದರೆ ಕ್ರಾಂತಿಕಾರಿಗಳ ಬೇಳೆ ಬೇಯೋದಿಲ್ಲ. ಯಾವ ಕಾರಣಕ್ಕೂ ಒಳಗಿನ ಅಳುಕನ್ನು ತೋರಗೊಡಬಾರದು.

“ಓಹ್.. ಹಲೋ ಕಾನ್‌ಸ್ಟೇಬಲ್ಸ್.. ವಾಟ್ ಡು ಯು ವಾಂಟ್?” ಎಂದು ಭಲೇ ಗತ್ತಿನಿಂದ ಮಾತಾಡುತ್ತ ಎದ್ದು ಕುಳಿತ. ತಮ್ಮನ ಠಾಕುಠೀಕು ಉತ್ತರದಿಂದ ರುಕ್ಕಮ್ಮ ಹೆಮ್ಮೆಪಟ್ಟರು. ಆದರೆ ಆ ಫೀಸಿಗಳಿಗೆ ಇಂಗ್ಲೀಷ್ ಅರ್ಥವಾದರೆ ತಾನೆ? “ನಡೆಯಯ್ಯಾ ಸ್ಟೇಷನ್ಗೆ!” ಎಂದೊಮ್ಮೆಗೆ ರೋಫ್ ಹಾಕಿಬಿಡುವುದೇ?

ರಘು ನಿಜಕ್ಕೂ ದಿಗ್ಭ್ರಾಂತನಾದನು. ತಾನು ಕನಸಿನಲ್ಲಿ ಮತ್ತು ಮನಸಿನಲ್ಲಿ ಸರಕಾರದ ವಿರುದ್ಧ ಯೋಚಿಸಿದ್ದು ಈ ಅರಕ್ಷಕ ಮಹಾಶಯರಿಗೆ ಹೇಗೋ
ಗೊತ್ತಾಗಿರುವುದೆಂದುಕೊಂಡ. ಸರ್ವಾಧಿಕಾರಿಣಿಯ ಬೇಹುಗಾರಿಕೆ ಬಗ್ಗೆ ಅಚ್ಚರಿಪಟ್ಟ. “ಯಾಕ್ರೀ? ವೈ? ಎಂದು ವಿಹ್ವಲಗೊಂಡು ಕರ್ಟನ್ ಮರೆಯಲ್ಲಿದ್ದ ತನ್ನ ವುಡ್‌ಬೀ ಕಡೆ ನೋಡಿದ.

“ವೈಯೂ ಇಲ್ಲ ಪೈಯೂ ಇಲ್ಲ. ಸ್ಟೇಷನ್‌ಗೆ ಬನ್ನಿ. ಎಲ್ಲಾ ತಿಳೀತದೆ!” ಎಂದು ಪೀಸಿ ಹಿಂದಿನ ದಿನ ಹೊಡೆದುಕೊಂಡಿದ್ದ ಮೀಸೆ ತೀಡಿದ.

“ಯಾಕೆ ಬರ್ಬೇಕ್ರೀ? ಆಮೇಲೆ ಬರ್ತೀನಿ ಹೋಗಿ ನಾನು ನಿದ್ದೆ ಮಾಡಬೇಕಾಗಿದೆ!” ಇವರೇನು ಸಿ‌ಓಡಿ ಕಡೆಯವರಾ? ಸಿಬಿ‌ಐ ಕಡೆಯವರಾ? ಎಂದು
ಅನುಮಾನದಿಂದ ಅವರಕಡೆ ನೋಡುತ್ತಾ ನಿರಾಕರಿಸಿದ.

“ಬರ್ಬೇಕಂದ್ರೆ ಬರ್ಬೇಕಷ್ಟೆ” ಎಂದು ಇನ್ನೊಬ್ಬ ಪೀಸಿ ಕಳೆದ ವಾರ ಕಟ್ಟಿಸಿಕೊಂಡಿದ್ದ ಪಲ್ಗಳ ಸೆಟ್ಟಮ್ ಅನ್ನು ಜಿಹ್ವಾ ಸಂಚಲನದಿಂದ ಸರಿಪಡಿಸಿಕೊಂಡ.
ರುಕ್ಕಮ್ಮ ಕಣ್ಣಲ್ಲಿ ಬಿಸಿಲೇರಿ ವಾಟರನ್ನೇ ತಂದುಕೊಂಡಳು. “ಅಯ್ಯೋ ದೇವರೆ ಕೈಗೆ ಬಂದ ತುತ್ತನ್ನು ಬಾಯಿಗೆ ಬರುವ ಮೊದಲೇ ಕಿತ್ತುಕೊಳ್ಳುತ್ತಿರುವಿಯಲ್ಲ? ಇದು ನ್ಯಾಯವೇ?”

ಕರ್ಟನ್ನಿನ ಪಾರದರ್ಶಕ ಮರೆಯಲ್ಲಿ ಅನಸೂಯಾ ಸೆರಗನ್ನು ಬಾಯಿತುಂಬ ಇಟ್ಟುಕೊಂಡು ಬಿಕ್ಕಿ ಬಿಕ್ಕಿ ಉದ್ವಿಗ್ನಗೊಂಡಳು. ಅದು ಹೇಗೋ ರಘುಗೆ ತಿಳಿಯಿತು. ಕಣ್ಣರಿಯದಿರ್ದೊಡೆ ಕರುಳರಿಯದೇನು! ಬರೋದಿಲ್ಲಂದ್ರೇನು ಮಾಡ್ತೀರಯ್ಯಾ?” ಎಂದು ನುಡಿಯನ್ನು ಝಾಸಿಬಿಟ್ಟ. ಅರೆ! ಈ ಹುಲುನರ ಹೀಗೆ ನುಡಿಯುತ್ತಿರುವನಲ್ಲ! ತಾವು ಡ್ರೆಸ್ ಮೇಲಿದ್ದರೂ ಅವರು ಪರಸ್ಪರ ನೋಡಿಕೊಂಡರು.

“ಏನಪ್ಪಾ? ನಿದ್ದೆ ಮಬ್ಬಿನಲ್ಲಿ ಬಾಯಿಗ್ ಬಂದಂಗ ಮಾತಾಡ್ತೀಯಲ್ಲಾ ನಾವ್ಯಾರು ಅಂದ್ಕೊಡೀಯಾ?” ಎಂದು ಮೀಸೆ ಪಲುಕಿದ.
“ನೀವು ಪೋಲಿಸರಂತ ಗೊತ್ತಪ್ಪಾ ಹೆದರೋಕೆ ನಾನೇನು ಹಳ್ಳಿ ಗುಗ್ಗು ಅಲ್ಲ” ಉಗುಳಬಾರದು ನುಂಗಬಾರದು ಸಂಕಟದ ಪರಿಯಾ! ಗತ್ತು ಹಾಕಿದ. ಇದು
ಹೆಂಡತಿಯಾಗುವವಳ ಎದುರುಗಡೆ ತನ್ನ ಪ್ರೆಸ್ಟೀಜಿನ ಪ್ರಶ್ನೆ
“ನೀನು ಹಳ್ಳಿ ಗುಗ್ಗು ಅಲ್ಲ ಅಂತ ನಮ್ಗೂ ಗೊತ್ತು. ಒಳ್ಳೆ ಮಾತಿಂದ ಹೊರಡು” ಎಂದ ಕ್ಲೋಸ್‌ಅಪ್‌ನವ.
“ಬರೋದಿಲ್ಲ ಹೋಗ್ರಿ!”
“ಬರೋದಿಲ್ಲ ಅಂದ್ರೆ ಹೊತ್ಕೊಂಡು ಹೋಗ್ತೀವಿ.. ಏನಂದ್ಕಂಡೀಯಾ?” ಡೈಯವನೂ ಮೀಸೆ ತಿರುವಿದ.

ಒಂದು ಕ್ಷಣ ರಘು ಹೌಹಾರಿಬಿಟ್ಟ. ಪಿಪೀಲಿಕದಾಲಿಗಿರದೇ ಗೋಷ್ಪದದ ಕೀಲಾಲ ವಿಲಯಾಂಬುವಿನವೊಲು ಎಂದು ತೊರವೆ
ರಾಮಾಯನದಲ್ಲಿ ಹೇಳಿರುವಂತೆ ಇರುವೆಯಂಥ ಅವನಿಗೆ ಎಮ್ಮೆಗಂಜಳವೇ ಜಲಪ್ರಳಯವೆಂಬಂತೆ ಕಂಡಿತು. ರುಕ್ಕಮ್ಮಗಂತೂ ಕರುಳು ಕಿತ್ತು ಬಾಯಿಗೆ ಬಂದುಬಿಟ್ಟಿತು. ಮಣ್ಣಿನ ಗೋಡೆ ತೊಳೆಯೋಕ್ಯಾಕೆ ಪ್ರಯತ್ನಿಸುತ್ತಿರುವ ನೀ ತಮ್ಮನು. “ರಘು ನಾಕು ಹೆಜ್ಜೆ ಹೋಗಿ ಬಂದುಬಿಡು ತಂದೆಯೇ. ಕನ್ನಡಿಗಾಗಿ
ಮೂಗುಕಳಕೊಳ್ಳೋದ್ಯಾಕಪ್ಪ” ಎಂದು ಗಗ್ಗರಿಸಿ ಕನಿಷ್ಟ ಬಿಲ್ಲೆಗಳ ಕಡೆ ತಿರುಗಿ “ನನ್ತಮ್ಮ ಬಂಗಾರದಂಥವ್ನಪ್ಪಾ.. ಯಾರ ಗೊಡವೆಗೆ ಹೋಗೋನಲ್ಲ.. ನಾಕು ಮಾತಾಡಿ ಕಳಿಸಿಕೊಡ್ರಿ” ಎಂದು ಕೈ ಮುಗಿದು ಕೇಳಿಕೊಂಡಳು.

ಅವರು ಉತ್ತರ ಕೊಡುವ ಮೊದಲೆ ರಘು “ಇವರೇನು ಹುಲಿಯಲ್ಲ ಸಿಂಹ ಅಲ್ಲ.. ನೀನ್ಯಾಕೆ ಹೆದತಿ.. ಸುಮ್ನಿರಕ್ಕ.. ಸೊಳ್ಳೆಗೆ ಹೆದರಿ ಯಾರಾದ್ರು ಇರೋ ಮನಿ
ಬಿಡ್ತಾರೇನು?” ಎಂದು ಸಡನ್ನ ಎದ್ದು ದೋಸೆ ತಿನ್ನಲಿಕ್ಕೆ ಹೋಗುವಾಗ ಯಾವ ರೀತಿ ಡ್ರೆಸ್ ಮಾಡಿಕೊಂಡಿದ್ದನೋ ಹಾಗೆ ಡ್ರೆಸ್ ಮಾಡಿಕೊಂಡನು.

ತಮ್ಮನ್ನು ಸೊಳ್ಳೆಗೆ ಹೋಲಿಸಿದ ಇವನು ನಿಜವಾಗಿಯೂ ಕ್ರಾಂತಿಕಾರಿಯೇ ಇರಬೇಕೆಂದು ಕನಿಷ್ಟ ಬಿಲ್ಲೆಗಳು ಸಂದೇಹಿಸಿ-ಪರಸ್ಪರ ಮುಖ ನೋಡಿಕೊಂಡು ಬದ್ಧ ಭ್ರುಕುಟಿಯಾದರು. ರಾಯರ ಕುದುರೆಯಿಂದ ಕಾಲು ತುಳಿಸಿಕೊಂಡಂಥ ಅನುಭವಕ್ಕೆ ಅವರು ಪಕ್ಕಾಗುತ್ತಿರಲು.. …ಇತ್ತ ಗುದ್ದಿದವನೂ ಅಲ್ಲ ಅತ್ತ ಗುದ್ದಿಸಿಕೊಡದವನೂ ಅಲ್ಲದ ರಘುರಾಮ ನೀರಡಿಸಿ

ಪಾಕಶಾಲೆಯಂ ಪೊಕ್ಕು ಅರ್ಥನಾಗಿ ಪಂಕಜನೇತ್ರೆಯಂ ನೋಡಲು ಆಕೆಯು ಬರಸೆಳೆದು ಬಿಗಿದಪ್ಪಿ ತನ್ನ ದೇಹದ ಸಮಸ್ತ ಶಕ್ತಿಯನ್ನು ಅವನ ದೇಹದೊಳಗೆ ತುಂಬಿ, ಕಿವಿಯೊಳಗೆ ಬಾಯಿ ಇಟ್ಟು ‘ಧೈರ್ಯಂ ಸರ್ವತ್ರ ಸಾಧನಂ’ ಎಂದು ಹೇಳಿ ಬೀಳ್ಕೊಡಲು.. ಅವನು ಹೊಚ್ಚ ಹೊಸ ಹುರುಪಿನಿಂದ ಪೋಲಿಸರ ಹಿಂದೆ ನಡೆಯುತ್ತ ಬಾಗಿಲು.. ಅಟುವಾಗ ಅಕ್ಕ ರುಕ್ಕಮ್ಮ, ‘ಜೋಪಾನ ತಮ್ಮಾ, ಸಿಟ್ಟಿನ ಕೈಗೆ ಬುದ್ಧಿ ಕೊಡಬ್ಯಾಡ..
” ನೀನು ಬರೊವರೆಗೆ ದೇವರ ಮುಂದೆ ತುಪ್ಪದ ದೀಪ ಹಚ್ಚಿ ಕೂಡ್ರುವೆನು’ ಎಂದು ಹೇಳಿದ್ದು ಕೇಳಿಸಿಕೊಂಡನು.

ಎರಡು ನಮೂನೆಯ ಆಭರಣಗಳಂಥ ಪೋಲಿಸರ ನಡುವೆ ಸೀಗೆಯೊಳಗಿನ ಬಾಳೆಯಂತೆ ಅವನು ನಡೆಯುತ್ತಿದ್ದುದನ್ನು. ಓಣಿಯ ಅಬಾಲ ವೃದ್ಧರೆಲ್ಲರು ‘ಅಯ್ಯೋ ದೇವರೆ ಎಂಥವರಿಗೆ ಎಂಥ ಕಾಲ ತಂದೆಯಲ್ಲಾ’ ಎಂದು ನೋಡುತ್ತ ಮಮ್ಮಲನೆ ಮರುಗಿದರು.

ಕಿಟಕಿಯ ಜಾಲರಿಯಲ್ಲಿ ನೋಡುತ್ತಿದ್ದ ಅಲುಮೆಲಮ್ಮನೂ ‘ಅಯ್ಯೋ ಪಾಪ ಇದೇನಿದು! ಎಂದು ದುಃಖಿತಳಾಗಿ ಅವನ ಕ್ಷೇಮ ಕೋರಲು ಕ್ಷೋಣಿಯಸ್ಯ ರಥೋಥಾಂಗಯುಗಳು ಚಂದ್ರಾರ್ಕ ಬಿಂಬದ್ವಯಂ ಎಂದು ಪರಮಾತ್ಮನನ್ನು ಪ್ರಾರ್ಥಿಸಿದಳು.

ರಾಗಕ್ಕೆ ಮೂಡಲು, ರೋಗಕ್ಕೆ ಪದುವಲು, ಭೋಗಕ್ಕೆ ತೆಂಕಲು, ಯೋಗಕ್ಕೆ ಬಡಗಲು ಎಂಬಂತೆ ಸರ್ವ ಪಾಪಗಳಿಗೆ ಮುಕ್ತಿ ಧಾಮದಂತೆ ಗ್ರಾಮದ ಹೃದಯ ಭಾಗದಲ್ಲಿ ಎಂದರೆ ತಮ್ಮ ಮನೆಗೆ ಈಶಾನ್ಯ ಭಾಗದಲ್ಲಿ; ಎಂದರೆ ರಕ್ತಪಿಪಾಸಿಣಿಯಾದ ದುರುಗಮ್ಮನ ಗುಡಿ ಪಕ್ಕ ಎಂದರೆ ನಕ್ಷತ್ರಾಕಾರದ ವೇದಿಕೆಯ ಮೇಲೆ ಕಳೆದ ನಲವತ್ತು ವರ್ಷಗಳಿಂದ ಶೋಭಾಯಮಾನವಾಗಿ ಕಂಗೊಳಿಸುತ್ತಿರುವ ಪೋಲೀಸು ಸ್ಟೇಷನ್ನು ಎಂಬ ನಾಮಾಂಕಿತ
ಕಟ್ಟಡವನ್ನು ತಾನು ನೋಡಿದ್ದು ಚಿಕ್ಕಂದಿನಲ್ಲಿ.

ರಘುರಾಮನ ಬಾಲ್ಯವನ್ನು ಮುದಗೊಳಿಸಿದ್ದಂಥ ಪರಮ ಪವಿತ್ರ ಕಟ್ಟಡ ಅದು. ಇಂದ್ರನ ವಜ್ರಾಯುಧಕ್ಕೂ ಅದನ್ನು ಜುಮ್ಮೆನಿಸುವುದು ಸಾಧ್ಯವಿರಲಿಲ್ಲ. ತನ್ನ ಕಾನೂನು ಬಾಹಿರ ಪ್ರಣಯದಾಟಗಳನ್ನು ಅದೆಲ್ಲಿ ಜಗಜ್ಜಾಹಿರು ಮಾಡಿಬಿಡುವನೋ ಎಂದು ಸ್ತ್ರೀವ್ಯಾಮೋಹಿಯೂ; ಸಕಲ ಗುಪ್ತ ರೋಗಗಳ ಆಶ್ರಯದಾತನೂ ಆಗಿದ್ದ ಅಂದಿನ ಎಸೈ ಬಿಳಿಗಿರಿರಂಗಯ್ಯಸ್ವಾಮಿ ಬಾಲಕನಿದ್ದ ತನ್ನ ಬೆನ್ನು ದಡವಿ ಬಾಯೊಳಗೆ ಸೊಂಟಿ ಪೆಪ್ಪರುಮೆಂಟಿಟ್ಟು ನೀನು ಮುಂದೆ ದೊಡ್ಡ ಮನುಷ್ಯನಾಗುವಿ ಎಂದು ಆಶೀರ್ವಾದ ಮಾಡಿದ್ದ.

ಆ ಒಂದಾನೊಂದು ನೆನಪುಗಳನ್ನು ಮೆದುರಂತರಾಳದಿಂದ ಕಿತ್ತು ಮೆಲುಕು ಹಾಕುತ್ತ ತನ್ನ ಕುರಿತು ರಸ್ತೆಯಲ್ಲಿ ಇಕ್ಕೆಲದಲ್ಲಿ ಸತ್‌ಪ್ರಜೆಗಳು ತಲಾ ಒಂದೊಂದು ಮಾತಾಡುತ್ತಿರುವುದನ್ನು ಲೆಕ್ಕಿಸದೆ ವೀರಪಾಂಡ್ಯ ಕಟ್ಟಬೊಮ್ಮನನಂತೆ ಧೀರೋದಾತ್ತವಾಗಿ ನಡೆಯುತ್ತ ಠಾಣೆಗೆ ಹತ್ತಿರ ಬಂದೇ ಬಿಟ್ಟ.

ಕಂದ, ಕೊಂದ, ತಂದ ಎಂಬೀ ಮೂರು ಲಿಂಗಾಕಾರದ ಶಬ್ದಗಳೊಳಗೆ ಅಡಕವಾಗಿರುವ ರಾಮಾಯಣದಂತೆ ವೇದಿಕೆ ಮೇಲೆ ಘನೀಭೂತಗೊಂಡು ಉಲ್ಲಾಸಮಯತೆಯಿಂದ ನಿಂತಿದ್ದ ಠಾಣೆ ಕಡೆ ನೋಡಿ ನಿಟ್ಟುಸಿರುಬಿಟ್ಟ.

ಒಂದೊಂದು ಮೆಟ್ಟಲಿಗೂ ಒಂದೊಂದು ಕಥೆ ಇರುವ ಭೋಜರಾಜನ ಸ್ವರ್ಣ ಸಿಂಹಾಸನದಂಥ ಠಾಣೆಯ ಕಡೆ ಏರೀ ಏರೀ ತಲುಪಿ ಒಳಗೆ ಪ್ರವೇಶಿಸುವ ಮುನ್ನ ಹಿಂತಿರುಗಿ ನೋಡಿದ ಅವನ ಕಣ್ಣಿಗೆ ದುರುಗಮ್ಮನ ಬೇವಿನ ಮರದ ಕೊಂಬೆ ರೆಂಬೆಗಳ ಮೇಲೆಲ್ಲ ಕದನ ಕುತೋಹಲಿಗಳು ಗೋಚರಿಸಿದರು.

ತಾನು ಬೇತಾಳ ಪಂಚವಿಂಶತಿ ಕಥೆಗಳ ಹಿರಣ್ಯಾಕ್ಷನಂಥ ಎಸೈ ಇರಬಹುದೆಂದು ಊಹಿಸಿದ್ದಕ್ಕೆ ವಿರುದ್ಧವಾಗಿ ನರಪೇತಲನೂ; ಪ್ರಾಚೀನ ಆಸ್ತಮಾ ರೋಗಿಯೂ ನೀಳಕಾಯನೂ ಆದಂಥ ವ್ಯಕ್ತಿಯೊಬ್ಬ ಕೊಕ್…. ಒಕ್ ಕೆಮ್ಮು ಬಂದು ಕಫವನ್ನು ಅಗ್ನಿಶಾಮಕ ಬಕೆಟ್ಟಿಗೆ ಉಗುಳುತ್ತ ಎಸೈ ಕುರ್ಚಿಮೆಲೆ ವಿರಾಜಮಾನನಾಗಿದ್ದ.

“ಹಲೋ ಸಾರ್” ಎಂದು ಕೇಳಿ ಬಂದ ದ್ವನಿ ಕಡೆ ತಲೆಯನ್ನು ಕೂಡಲೆ ಎತ್ತಿದ ತಪ್ಪಿಗೆ ಕೆಮ್ಮು ಒತ್ತರಿಸಿ ಬಂದುಬಿಟ್ಟು ಕೊಕ್ ಕೊಕ್ ಕೆಮ್ಮಿದ. ಅವನನ್ನು ನೋಡುತ್ತಲೆ ರಘುಗೆ ತೆಲುಗು ಸಿನೆಮಾ ನಟ ರಮಣಾರೆಡ್ಡಿ ನೆನಪಾದ. ಗ್ರಾಮಸ್ತರು ಪ್ರೀತಿಯಿಂದ ಟೈಗರ್, ಜೂಡೋ ಮಾಸ್ಟರ್, ಕರಾಟೆ ಕಲಿ ಎಂದು ಬಿರುದುಗಳನ್ನು
ಕೊಟ್ಟಿದ್ದರು. ಟೈಗರ್ ಬಂದ ಮೇಲೆ ಕಳ್ಳತನಗಳಾಗಿಲ್ಲ. ಜೂಡೋಮಾಸ್ಟರ್ ಬಂದ ಮೇಲೆ ಗ್ರಾಮಸ್ಥರು ಪರನಾರಿ ಸೋದರರಾಗಿರುವರು.
ಕರಾಟೆ ಕಲಿತು ಬಂದ ಮೇಲೆ ಸಾಲ ಕೊಡುವವರು ತಗೊಳ್ಳುವವರು ಸತ್ಯಹರಿಶ್ಚಂದ್ರನ ನೆಂಟರಿಷ್ಟರಾಗಿರುವರು. ರಘು ಆಶ್ಚರ್ಯದಿಂದ ನೋಡಿದ್ದ. ಎಸೈ ಎಂಬ ಸ್ಕೆಲಿಟನ್ನನ್ನು. ಸ್ಕೆಲಿಟನ್ನು ಪ್ರಶ್ನಾತ್ಮಕವಾಗಿ ನೋಡುತ್ತಿರುವಾಗಲೇ ಎದುರುಗಿದ್ದ ಲಟಗೂ ಪಟಗೂ ಕುರ್ಚಿಮೇಲೆ
ಕೂತುಕೊಂಡ. ಇನ್‌ವೆಸ್ಟಿಗೇಷನ್ನೋ; ಇಂಟರಾಗೇಷನ್ನೋ ಇನ್ನು ಶುರುಮಾಡುತ್ತಾನೆ. ತಾನು ಹುತಾತ್ಮನಾಗಿ ಇತಿಹಾಸದ ಪುಟ ಸೇರುತ್ತೇನೆ ಎಂದು ಕಲ್ಪಿಸಿಕೊಂಡ ತನ್ನ ಕಲ್ಪನೆಗೆ ತಾನೆ ನಕ್ಕ.

“ವಾಟ್ ಡು ಯು ವಾಂಟ್ ಫ್ರಂ ಮೀ” ರಘು ಬಬಲ್‌ಗಮ್ ಬಾಯಲ್ಲಿ ನಮಲುತ್ತ ಹೇಳಿದ.

“ಇಂಗ್ಲಿಷಿನಲ್ಲಿ ಮಾತನಾಡಿದ್ದನ್ನು ಕೇಳಿಸಿಕೊಳ್ಳುತ್ತಲೆ ಟೈಗರ್” ಎಲವೋ ತ್ರೀನಾಟ್

ಟೂ ಹಡದೊಲೋರ ಹೋಟಲಿಗ್ಹೋಗಿ, ಓನ್ಲಿ ಒನ್ ಕಾಫಿ ತಗೊಂಡು ಬಾರೋ” ಎಂದು ಘರ್ಜಿಸಿದ.
ಓಹೋ ತಾನೊಬ್ನೇ ಕಾಫಿ ಕುಡ್ದು ಸ್ಟ್ರಾಂಗ್ ಇಂಟರಾಗೇಷನ್ನು ಸ್ಟಾರ್ಟ್ ಮಾಡ್ತಾನೆ ಎಂದುಕೊಳ್ಳುತ್ತ ರಘು ಬಬ್ಬಲ್‌ಗಮ್ಮನ್ನು ಮರಡೋನ ಫುಟ್ ಬಾಲನ್ನು ಆ ಮೂಲೆಯಿಂದ ಈ ಮೂಲೆಗೆ ತಿರುವಾಡಿದಂತೆ, ಆ ದವಡೆಯಿಂದ ಈ ದವಡೆಗೆ ಓಡಾಡಿಸಿದ.
“ಯಾಕೆ ಸಾರ್ ಹುಷಾರಿಲ್ವೆ” ಮಾತಿಗೆಳೆಯದಿದ್ದರಾಗುತ್ತದೆಯೆ?
“ಒನ್‌ಟ್ವೆಂಟಿ ಕಿಲೋ ಲಿಫ್ಟ್ ಮಾಡ್ತಿದ್ದೆ ಕಣಪ್ಪಾ.. ಎಂದು ಮುಖವನ್ನು ಒಂದು ಕ್ಷಣ ಮಾಡಿಕೊಂಡು ಹೇಳಿದರು. “ಅದಿರ್‍ಲಿ.. ನಾನು ಒಂದು ಕೇಳ್ತೀದೀನಿ…ನೀನು ಮಾತ್ರ ನಾನು ನಿನ್ನ ತಮ್ಮ ಅಂತ ತಿಳ್ಕೊಂಡು ನಿಜ ಹೇಳ್ಬೇಕು. ನೋಡು.”
ಆತ ನನಗೆ ತಮ್ಮ! ಆತನ ವಯಸ್ಸೇನು? ನನ್ನ ವಯಸ್ಸೇನು? ಏನು ಮಾತಾಡುತ್ತಿರುವನಲ್ಲ!
“ನನಗಿನ್ನೂ ಮದುವೇನೇ ಅಗಿಲ್ಲ ಸಾರ್ ಸ್ಟಿಲ್ ಐಯಾಮ್ ಬ್ಯಾಚುಲರ್. ನನಗಿನ್ನೂ ಬಿಲೋ ಟ್ವೆಂಟಿಫೈವ್.”
“ಹ್ಹಾ! ನೀನಿನ್ನೂ ಬ್ಯಾಚುಲರ್.. ನಿನಗಿನ್ನೂ ಟ್ವೆಂಟಿಫೈವ್. ನನಗಿಂತ ನೀನು ಯಂಗರ್ರೇನು?” ಎಂದು ಆಶ್ಚರ್ಯ ವ್ಯಕ್ತಪಡಿಸುತ್ತ ಕರಾಟೆ ಕಲಿ ” ಐ ಮ್ಯಾರೀಡ್ ವೆನ್ ಐ ವಾಜ್ ಟ್ವೆಲ್ವ್ ಇಯರ್ಸ್ ಓಲ್ಡ್.. ”
“ಇರಬೌದು… ನನ್ಯಾಕೆ ಕರೆಸಿದ್ರಿ ಹೇಳಿ?” ಹೋದ ಕೂಡಲೆ ಕನ್ನಡಿಯಲ್ಲಿ ನೋಡಿಕೊಳ್ಳಲು ನಿರ್ಧರಿಸುತ್ತ ಹೇಳಿದ.
ಅಷ್ಟರಲ್ಲಿ ಕಾಫಿ ಬಂತು. ಟೈಗರ್ ಬಸಿಯಲ್ಲೊಂದಿಷ್ಟು ಹಾಕಿಕೊಟ್ಟು, ತಾನು ಹ್ಹಾ… ಹ್ಹೂ… ಅನ್ನುತ್ತ ಕುಡಿಯತೊಡಗಿದ.
ಪೀಸಿಗಳೆಲ್ಲ ಮುಖ ಸಿಂಡರಿಸಿಕೊಂಡು ಟೈಗರನ್ನು ಶಪಿಸುತ್ತ ಅಲ್ಲಲ್ಲಿ ನಿಂತುಕೊಂಡಿದ್ದರು.
ರಘು ಇನ್ನೇನು ಕುಡಿಯಬೇಕೆನ್ನುವಷ್ಟರಲ್ಲಿ ಟೈಗರ್ನ ಮೀಸೆ ಮೇಲೆ ಅದುವರೆಗೆ ವಿರಾಜಮಾನವಾಗಿದ್ದ ನೊಣ ಪುರ್ರನೆ ಹಾರಿ ಬಂದು ಬಸಿಯೊಳಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡು ಕ್ರಾಂತಿಕಾರಿಯ ಸ್ವಾಭಿಮಾನವನ್ನು ಕಾಪಾಡಿತು.
ಟೈಗರ್ ನೊಣವನ್ನು ನೋಡಿ ತನ್ನ ಜಗಳಗಂಟಿ ಹೆಂಡತಿಯನ್ನು ನೆನಪಿಸಿಕೊಂಡು ಹಿಡಿಹಿಡಿ ಶಾಪ ಹಾಕಿದ. ನಾಲಿಗೆಯಿಂದ ಮೀಸೆಗಂಟಿದ್ದ ಕಾಫಿ ನೆಕ್ಕಿಕೊಂಡ.
ಇದನ್ನೆಲ್ಲ ನೋಡುತ್ತಿದ್ದ ರಘೂಗೆ ಮೈಪರಚಿಕೊಳ್ಳಬೇಕೆನ್ನಿಸಿತು.
“ನನ್ನ್ಯಾಕೆ ಕರೆಸಿದೆ, ಹೇಳಿ ಸ್ವಾಮಿ?” ರಘು ಕಡ್ಡಿ ಮುರಿದಂತೆ ಮಾತಾಡಿದ್ದು ಕಂಡು ಪೀಸಿಗಳಿಗೆ ಆಶ್ಚರ್ಯ. ಇಂದಿರಾಗಾಂಧಿಯವರ ಸಾಮ್ರಾಜ್ಯದಲ್ಲಿ ಇವನು ಪೋಲೀಸ್ರಿಗೆ ಹೆದರುತ್ತಿಲ್ಲವೆಂದು.
“ಎಷ್ಟು ವರ್ಷದಿಂದ.. ಅಂದರೆ ಹೌಮೆನಿಯರ್ಸಿಂದ ಬೆಂಗ್ಳೂರು ಸೇರ್‍ಕೊಂಡಿರುವಿ?”
ಟೈಗರ್ ಕೊಕ್ ಕೊಕ್ ಕೆಮ್ಮಿತು.
“ಅದನ್ನು ಕಟ್ಕೊಂಡೇನಾಗೋದೈತಿ?” ರಘು ಎಷ್ಟಿದ್ದರೂ ಕ್ರಾಂತಿಕಾರಿ, ಏಕ್‌ಮಾರ್ ದೋ ತುಕುಡಾ.
“ನಿನ್ತಮ್ಮನಾಗಿ ನಾನು.. ”
“ಅಲ್ಲ! ಗ್ರಾಂಡ್ ಫಾದರಾಗಿ.. ” ಮಾತನ್ನು ತಿದ್ದಿದ.
“ಏನೋ ಒಂದು… ಆ ವಯಲೆಂಟು ಸಿಟೀಲಿ ಏನು ಕೆಲ್ಸ ಮಾಡ್ತಿದ್ದೀ?”
“ಏನೋ ಒಂದು ಮಾಡ್ತಿದೀನಿ.”
“ಹಂಗಂದ್ರ ಸರಕಾರದ ವಿರುದ್ಧ ಮಸಲತ್ತೂ ಗಿಸಲತ್ತೂ.”
“ಮಸಲತ್ತು ಇಲ್ಲ ಗಿಸಲತ್ತೂ ಇಲ್ಲ. ಇಂದಿರಾಗಾಂಧಿಯವರೇನು ನಮ್ಮ ಸೋದರತ್ತೆ ಏನ್ರಿ
ಅದೆಲ್ಲ ಮಾಡೋಕೆ?”
“ಸೋದರತ್ತೆ ಅಂತೀಯಲ್ಲ.. ನವರಾಷ್ಟ್ರದ ನಿರ್ಮಾಪಕಿ ಅಂತ ಅನಬೇಕಪ್ಪಾ.”
“ಹ್ಹೂ ಆಗ್ಲಿ. ಆಕೆ ನವರಾಷ್ತ್ರದ ನಿರ್ಮಾಪಕಿಯೇ ಆಗಿರ್ಲಿ.. ಆದ್ರೆ ನಾನು
ದುಡೀಬೇಕು ತಿನ್ನಬೇಕು ಅಲ್ವೆ?”
“ಅದು ಸರಿ.”
ಟೈಗರು ಸೊಂಟದ ಮೇಲೊಂದು ಕೈ ಗಲ್ಲದ ಮೇಲೊಂದು ಕೈ ಇಟ್ಟುಕೊಂಡು ಸ್ವಲ್ಪ ಹೊತ್ತು
ಯೋಚಿಸಿದ.
“ಹಾಗಾದ್ರೆ ನೀನು ಬುಡಮೇಲು ಕೃತ್ಯದಲ್ಲಿ ತೊಡಗಿಲ್ಲ. ಅಂತಾಯ್ತು” ಟೈಗರ್ ಲೊಚಗುಟ್ಟಿತು.
“ನಾನ್ಯಾಕೆ ತೊಡಗ್ಲಿ ಸ್ವಾಮಿ.. ನಮ್ದೇ ನಮ್ಗೆ ಸಾಕಾಗಿದೆ!”
“ಆದ್ರೆ ನಮ್ಗೆ ಹಂಗನ್ನಿಸ್ತಾ ಇದೆಯಲ್ಲಾ!
“ಏನಾದ್ರೂ ಎವಿಡೆನ್ಸು.”
“ನೀನು ತೊಟ್ಕೊಂಡಿರೋ ಕೆಂಪು ಬಟ್ಟೆನೇ ಸಾಕು.. ನೀನು ಸಂಚುಗಾರ ಅಂತ ಸಾಬೀತು
ಮಾಡೋಕೆ!”
“ಹಂಗಂದ್ರೆ ಈ ದೇಶದ ಓಣಿಓಣಿಗಳಲ್ಲಿರೋ ಸಾಧು ಸಂತ್ರು, ಗುರು ಜಗದ್ಗುರುಗಳೆಲ್ಲರೂ ತೊಟ್ಟುಕೊಂಡಿರೋದು ಕೆಂಪು ಬಟ್ಟೆಯನ್ನೆ.. ಅವರನ್ನೆಲ್ಲ ಸಂಚುಗಾರರೂಂತ ಆರೋಪದ ಮೇಲೆ ಅರೆಷ್ಟು ಯಾಕೆ ಮಾಡಬಾರ್ದು ಮೊದ್ಲು!”
“ಭಲೆ ಚಾಲಾಕಿದ್ದಿ ಕಣಪ್ಪಾ.”
“ಈ ದೇಶದಲ್ಲಿರೋ ಅರವತ್ತೆಪ್ಪತ್ತು ಕೋಟಿ ಮಂದಿ ಮೈಯಲ್ಲಿ ಹರಿತಿರೋ ರಕ್ತದ ಬಣ್ಣಾನು ಕೆಂಪು ಎಂಬೋದನ್ನು ಮರೀಬೇಡಿ.”
“ಶಹಭಾಷ್” ಟೈಗರ್ ಒಂದು ಕ್ಷಣ ದಿಗ್ಭ್ರಮೆಗೊಂಡು ಮುಂದುವರಿದು ಕೇಳಿದ,
“ಇದನ್ನೆಲ್ಲ ನಾವು ಸರಿಮಾಡಿಬಿಡ್ತೀವಿ. ನಮ್ಗೇನು ಇದು ದೊಡ್ ವಿಷಯ ಅಲ್ಲ..
ಎಂಥೆಂಥ ಕೇಸ್ನ ಮುಚ್ಚಿ ಹಾಕಿದ್ದೀವಿ.. ನಿನ್ನ ಕೇಸ್ನೂ ಮುಚ್ಚಿಹಾಕ್ತೀವಿ.. ಆದ್ರೆ..”
“ಆದ್ರೆ?”
“ಸ್ವಲ್ಪ ಕೈ ಬೆಚ್ಚಗೆ ಮಾಡಬೇಕಪ್ಪಾ” ಟೈಗರ್ ಪಿಸುಗುಟ್ಟಿದ.
“ನನ್ನ ಹತ್ರ ಅದೇನು ಇಲ್ಲ”
“ಇದೆ… ಮುಂಗೈಗೆ ಕಟ್ಕೊಂಡಿರೋ ಅಟಕ್ ಪಿಟಕ್ ವಾಚು!”
“ಅಟಕ್ ಅಲ್ಲ ಪಿಟಕ್ಕೂ ಅಲ್ಲ… ಎಲೆಕ್ಟ್ರಾನಿಕ್”
“ಅದ್ನ ಕೊಟ್ ಬಿಟ್ರೆ?”
ಅಷ್ಟರಲ್ಲಿ “ಯಾರ್ರಿ ಅವ್ರು ಎಸೈ.. ಅವರಿಗೆ ಹೇಳೋರು ಕೇಳೋರು ಇಲ್ಲವೇನು?
ಇವ್ರಿಂದಾಗಿ ಊರಿಗೆ ಯಾರೂ ಬರಂಗಿಲ್ಲ… ಹೋಗೋಹಂಗಿಲ್ಲ” ಎಂದು ಸ್ಟೆನ್‌ಗನ್ ಸ್ಪೋಟಿಸುತ್ತ ಗೊಬ್ಬರದ ಅಂಗಡಿ ಜಲಜಾಕ್ಷಿ ಒಳಗೆ ಬಂದುಬಿಟ್ಟಳು.
ಆಕೆಯನ್ನು ನೋಡುತ್ತಲೆ ಟೈಗರ್ ಲದ್ದಿ ಹಾಕಿದ. ಗಬಕ್ಕನೆ ಎದ್ದು, ‘ಬನ್ನಿ ಮೇಡಂ ಬನ್ನಿ ಮೇಡಮ್’ ಅಂತ ಎದ್ದು ಸ್ವಾಗತ ಕೋರಿದ.
ರಘು ಕೂಲಿಂಗ್ ಗ್ಲಾಸ್ ಧರಿಸಿದ್ದ ಆ ಶ್ವೇತಾಂಬರಿಯತ್ತ ಆಶ್ಚರ್ಯದಿಂದ ನೋಡಿದ.
“ನಮ್ಮಿಂದ ಏನಾಗಬೇಕು ಮೇಡಂ” ಟೈಗರ್ ಹಲ್ಲು ಗಿಂಜಿದ.
“ನಮ್ಮ ಪೈಕಿ ಒಬ್ಬರನ್ನು ಸ್ಟೇಷನ್ಗೆ ಕರೆಸಿಕೊಂಡಿದ್ದೀರಂತಲ್ಲ?”
“ಇವ್ರೇ! ಅವರು”
“ಓಹ್ ಇವರೇನಾ.. ” ಜಲಜಾಕ್ಷಿ ರಘು ಕೈ ಕುಲುಕಿ “ನೈಸ್ ಟು ಮೀಟ್ ಯು… ನಾನು
ಅನಸೂಯಾ ಕ್ಲಾಸ್ಮೇಟ್ಸ್” ಎಂದಳು.
ನಂಟರ ಟೈಗರ್ ಹ್ಯಾಪು ಮೋರೆ ಹಾಕ್ಕೊಂಡು ಮಾತು ಮಾತಿಗೆ ಸಾರಿಪಾರಿ ಹೇಳಿ
ಅವರಿಬ್ಬರನ್ನು ಬೀಳುಕೊಟ್ಟನು.
ತನ್ನನ್ನು ಸಂಕಟದಿಂದ ಪಾರು ಮಾಡಿದ ಈ ವೀರವನಿತೆ ಯಾರೂಂತ ಆಕೆಯ ಹಿಂದೆಯೇ ಬೆರಗಿನಿಂದಲೇ ನಡೆದ.
ಯಮನ ಕಾಟೇಜು ಪೊಕ್ಕುಳಿದು ಬಂದಾಯ್ತವನ ಪರಿಸ್ಥಿತಿ.
ನೆಮ್ಮದಿಯಿಂದ ಉಸಿರುಬಿಟ್ಟ.
“ಥ್ಯಾಂಕ್ಸ್ ಮೇಡಂ. ನಾನಿನ್ನು ಬರ್‍ತೀನಿ.
“ಬನ್ನಿ ಡ್ರಾಪ್ ಕೊಡ್ತೀನಿ” ಜಲಜಾಕ್ಷಿ ಕಾರಿನ ಬಾಗಿಲು ತೆಗೆದಳು.
“ಮತ್ತೆ ಯಾಕೆ! ನಡಕೊಂಡೇ ಹೋಗ್ತೀನಿ” ಫಾರ್ಮಾಲಿಟೀಸ್ ವಿಷಯದಲ್ಲಿ ರಘು ಯಾವತ್ತೂ ಒಂದು ಹೆಜ್ಜೆ ಮುಂದು.
“ಅಯ್ಯೋ ಬಾರಪ್ಪಾ… ನಿನ್ ಬಿಡೋ ನೆಪದಲ್ಲಿ ನಾನೂ ಅನೂನ ಮಾತಾಡಿಸಿದಂತಾಗ್ತದೆ”
ಎಂದು ಒತ್ತಾಯಿಸಿದ ಮೇಲೆ ನಿರಾಕರಿಸುವುದಾವುದೇನು?
ಆಕೆಯ ಒತ್ತಾಯದಿಂದ ಆಕೆಯ ಮಗ್ಗುಲು ಅಂದರೆ ಮುಂದುಗಡೆ ಸೀಟಿನಲ್ಲಿ ವಿರಾಜಮಾನನಾದ.
ದುರುಗಮ್ಮನ ಬೇವಿನ ಮರದ ಮೇಲೆಲ್ಲ ಕೂತಿದ್ದ ಕದನ ಕುತೋಹಲಿಗಳು ‘ಉಘೇ’ ಎನ್ನಲು ಜಲಜಾಕ್ಷಿ ಎಂಬ ರಾವಣನು ರಘುರಾಮ ಎಂಬ ಸೀತೆಯನ್ನು ಕಾರು ಎಂಬ ಪುಷ್ಪಕ ವಿಮಾನದಲ್ಲಿ ಅಪಹರಿಸುತ್ತಿರುವ ರೀತಿಯಲ್ಲಿ ಬುರ್ ಎಂದು ಸದ್ದು ಮಾಡುತ್ತ; ನೆಲ ಮುಗಿಲು ನಡುವೆ ಶೋಭಾಯಮಾನದವಾದ ಧೂಳು ಎಬ್ಬಿಸುತ್ತ, ತಗ್ಗು ದಿನ್ನಿಯೊಳಗೆ ಒಳ್ಳೆಯ ಸ್ಪ್ರಿಂಟರ್ ಥರಕುಪ್ಪಳಿಸುತ್ತ; ಹೆಜ್ಜೆಗೊಮ್ಮೊಮ್ಮೆ ಪುಂಯ್ ಪುಂಯ್ ಪುರ್ರ್ ಪುರ್ರ್ ಎಂದು ಕೇದಾರ ಗೌಳ ಹಾಡುತ್ತ; ಆನೆ ಹೋದ ಕಡೇಲೆಲ್ಲ ಹಾದಿ ಎಂಬಂತೆ ಹಾದಿ ಇಲ್ಲದ ಕಡೆ ಹಾದಿ ಮಾಡಿಕೊಂಡು ಓಡತೊಡಗಿತು.
ಓಡೀ ಓಡೀ ದಣಿದು ಶಾಸ್ತ್ರಿಗಳ ಮನೆ ಮುಂದೆ ಡರ್ರಡಸಕ್ಕೆಂದು ಸಿಂಹನಾದಗೈಯುತ್ತ ಅದು ನಿಂತು ಬಿಟ್ಟೊಡನೆ ಅಲುಮೇಲಮ್ಮ; ಶಾಸ್ತ್ರಿಗಳು ; ಶಾಮು, ಕಾಮೋಷಿ ಮೊದಲಾದ ಸಸ್ತನಿಗಳು ಹೊಸಪೇಟೆಯಿಂದ ಬೀಗರೇ ಬಂದುಬಿಟ್ಟಿರುವರೆಂದು ಅನ್ಯಥಾ ಭಾವಿಸಿ ಅಂಗಳಕ್ಕೆ ಓಡಿಬಂದರು.

ಧೂಳಿನೊಳಗೆ ಅನಾವರಣಗೊಂಡು ಕ್ರಮೇಣ ಗೋಚರಿಸಿದ ಜಲಜಾಕ್ಷಿ ಎಂಬ ರಾಹುವನ್ನೂ, ರಘುರಾಮ ಎಂಬ ಕೇತುವನ್ನೂ ನೋಡಿ ಇದ್ದಕ್ಕಿದ್ದಂತೆ ತಳ ಸಡಲಿದಂತಾಗಿ ಶಾಮು ಎಂಬ ಚಂದ್ರನು ಕಕ್ಕಸು ಎಂಬ ವಿಂಧ್ಯಾಪರ್ವತದ ಗವಿಯೊಳಗೆ ಪಲಾಯನ ಮಾಡುತ್ತಿದ್ದುದನ್ನು ಕಂಡು..
“ಎಲೈ ಪುಳಿಯೋಗರೆ.. ಮರ್ಯಾದೆಯಿಂದ ಬರ್ತೀಯೋ ಇಲ್ಲವೋ?” ಎಂದು ಗೊಬ್ಬರದಂಗಡಿಗೆ ಗೊಬ್ಬರದಂಗಡಿಯೇ ‘ಧಡ್ ಧಡಿಲ್’ ಎಂದು ಗುಡುಗಲು..
ಶಾಮನು ಶೋಕ ಸಂತಪ್ತ ಕವಿತೆಯಂತೆ ಸಹಗಮನ ಮಾಡಲಿರುವ ಸತಿಯಂತೆ ಭಾರವಾದ ಒಂದೊಂದೆ ಹೆಜ್ಜೆಗಳನ್ನು ಇಡುತ್ತ ಕಾರಿನ ಕಡೆ ನಡೆಯುತ್ತಿರಲು….
“ಸ್ತ್ರೀ ಸ್ವಾತಂತ್ರ್ಯಂ ನ ಅರ್ಹತಿ” ಎಂದು ಶಾಸ್ತ್ರಿಗಳು ಅವನನ್ನು ತಡೆಯಲು
ಯತ್ನಿಸುತ್ತಿರಲು..
“ಅಯ್ಯೋ ದೇವರೇ ನನ್ನ ಮಗನನ್ನು ಕಾಪಾಡು” ಎಂದು ಅಲುಮೇಲಮ್ಮ ದೇವರಿಗೆ ತುಪ್ಪದ ದೀಪ ಹಚ್ಚಲು ಒಳಗೆ ಓಡಲು
“ಏನೋ, ಸೀನ್‌ಕಾನರಿ.. ಎಷ್ಟು ದಿನಾಂತ ತುಳಸೀ ಕಟ್ಟೆಯೊಳಗೆ ಬಚ್ಚಿಟ್ಟುಕೊಂಡಿರ್ತೀಯಾ.. ಬಾ.. ಕಾರು ತಳ್ಳು” ಎಂದು ಜಲಜಾಕ್ಷಿ ಸುಗ್ರೀವಾಜ್ಞೆ ಮಾಡಿದಳು.
“ಯಾಕಿವರ್‍ನ ಗೋಳಾಡಿಸುತ್ತಿರುವಿರಿ?” ಎಂದು ರಘು ಒಂದು ಕ್ಷಣ ಜಾಣ್ತನದ ಪ್ರಶ್ನೆ ಹಾಕಿದ.
“ಇವ್ರೂ ನನ್ ಕ್ಲಾಸ್‌ಮೇಟ್ ಕಣ್ರಿ.. ನಾನಿವನನ್ನು ರೇಪ್ ಮಾಡೋಕೆ ಎರಡು ಸಾರಿ ಪ್ರಯತ್ನಿಸಿದ್ದೀನಿ” ಎಂಸು ಬಲಿಪಶು ಕಡೆ ತಿರುಗಿ “ಹೌದೋ ಅಲ್ಲವೋ” ಎಂದು ಕಣ್ಣು ಮಿಟುಕಿಸಿದಳು.
ಅದಕ್ಕೆ ಅವನು ವಿಧೇಯ ವಿದ್ಯಾರ್ಥಿಯಂತೆ ತಲೆ ಅಲ್ಲಾಡಿಸಿದನು.
“ಅಭ್ಯಾಸಾನುಸಾರಿಣೀ ವಿದ್ಯಾಬುದ್ಧಿ; ಕರ್ಮಾನುಸಾರಿಣೀ” ಎಂದು ಶಾಸ್ತಿಗಳು ಬಿಟ್ಟು ಬಿಡಮ್ಮಾ ಆದಿಶಕ್ತಿ ಅವನು ಮದುವೆಯಾಗೋ ಹುಡುಗ”
“ಅದನ್ನು ಪರೀಕ್ಷೆ ಮಾಡಬೇಕೂಂತಲೇ ನಾನು ಪ್ರಯತ್ನಿಸಿದ್ದು ಶಾಸ್ತಿಗಳೇ” ಎಂದು ಆಕೆ ತುಂಬ ಬೊಲ್ಡಾಗಿ ಉತ್ತರ ಕೊಟ್ಟಳು.
ವಿಧಿ ಲಿಖಿತಂ ಬುದ್ಧಿರನುಸರತಿ ಅಂತ ಹಣೆಹಣೆ ಚಚ್ಚಿಕೊಳ್ಳುತ್ತ ಒಳಗಡೆ ಹೋದರು.
ಶಾಮನ ಸುಪ್ತಾವಸ್ಥೆಯ ಮನಸ್ಸಿನ ನೂರೆಪ್ಪತ್ತರಡನೆಯ ಪುಟದ ಕೊನೇ ಪ್ಯಾರಾದಲ್ಲಿ ಜಲಜಾಕ್ಷಿಯ ರೂಪದ ಹಾಗೂ ಕಬಂಧ ಬಾಹುವಿನ, ಧೃತರಾಷ್ಟ್ರಾಲಿಂಗನದ ವರ್ಣನೆ ಇತ್ತು. ಆದ್ದರಿಂದ ಅವನು ಒಲ್ಲದ ಮನಸ್ಸಿನಿಂದ ಸಲ್ಲದ ಕಾರ್ಯವನ್ನು ಮಾಡಲು ಸಂಸಿದ್ಧನಾದನು.
ರಘು ಜಲಜಾಕ್ಷಿ ಕೂತಿದ್ದ ಕಾರಿನ ಹಿಂಭಾಗವನ್ನು ಎರಡೂ ಕೈಗಳಿಂದ ಸ್ಪರ್ಶಿಸಿದಾಗ ಅಸದಳ ಆನಂದವಾಯಿತು. ಜಲಜಾಕ್ಷಿಯ ಭಾರೀ ಜಘನಗಳನ್ನು ತಳ್ಳುತ್ತಿರುವೆನೆಂದು ಅವನು ಭಾವಿಸಿದ. ತಿಣುಕುತ್ತ ತಳ್ಳುತ್ತಲೆ ಅವನ ತಳ ಕ್ಲಾರಿನೇಟ್ ವಾದನ ಮಾಡಿತು. ಅಷ್ಟು ದೂರ ತಳ್ಳಿದ. ಕಾರು ಸ್ಟಾರ್ಟ್ ಆಗುತ್ತಲೆ ‘ಪಾಹಿಮಾಮ್ ಜಗನ್ಮಾತಾ’ ಎಂದು ಉದ್ಗರಿಸುತ್ತ ಮನೆಯೊಳಗೆ ಓಡಿ ತಲೆ ಮರೆಸಿಕೊಂಡನು.
ಪ್ರಾಯೋ ಗಚ್ಚತಿ ಯತ್ರ ದೈವಹತಕಃತತ್ರೈವ ಯಾಂತ್ಯಾಪದಃ ಎಂದು ಭರ್ತೃಹರಿ ಹೇಳಿರುವುದು ಸುಳ್ಳಾಗದು.
“ಅಡಸಿದಾಪತ್ತಿನಲಿ ಧೈರ್ಯವ ಹಿಡಿವುದೇ ಸುಪ್ರೌಢೀ ಅಂತ ಕೋಳಿವಾಡದ
ನಾರಣಪ್ಪನೋರು ಹೇಳಿರುವುದು ಸುಳ್ಳಲ್ಲವೋ” ಎಂದು ಶಾಸ್ತ್ರಿಗಳು ಮೊಮ್ಮಗನನ್ನು ಎದುರಿಗೆ ಕೂಡ್ರಿಸಿಕೊಂಡು ಪ್ರಾಪಂಚಿಕ ಜ್ಞಾನದ ಬಗ್ಗೆ ವಿವರಿಸುತ್ತಿರುವಾಗ..
ಅತ್ತ..
“ಈ ರಘು ನಿಜಕ್ಕೂ ಹುಲಿ ಕಣೇ ಅನಸೂಯಾ…ಪೋಲೀಸರನ್ನು ಯಾರು ಹೆದರಿಸುವರೋ ಅಂಥವರು ಹೆಂಡತಿಗೆ ಖಂಡಿತ ಹೆದರಿ ಬಾಳುವು ಮಾಡ್ಕೊಂಡು ಹೋಗ್ತಾರೆ ನೋಡು” ಎಂದು ಜಲಜಾಕ್ಷಿ ಅಣಿಮುತ್ತುಗಳನ್ನುದುರಿಸಿದಳು. “ಇಂಥವರು ತಮ್ಮ ಪ್ರತಿಭೆಯನ್ನು ಇಂದಿನ ರಾಜಕಾರಣಕ್ಕೆ ಧಾರೆ ಎರೆಯಬೇಕಿದೆ” ಎಂದು ರಾಜಕಾರಿಣಿಯ ಗತ್ತಿನಲ್ಲಿ ನುಡಿದಳು.

ಬ್ರಹ್ಮನ ಮುಖದಿಂದ ಜನಿಸಿದ ಕಾಮಧೇನುವೇ ಅಟಕ್ ಪಿಟಿಕ್ ವಾಚಿನ ರೂಪದಲ್ಲಿ ಅಲಂಕರಿಸಿರುವುದೋ ಎಂಬಂತಿದ್ದುದರ ಕಡೆ ಕುಡಿ ನೋಟ ಬೀರಿದಳು. ಇತಿಹಾಸದ ನಾಳಿನ ಪುಟದಲ್ಲಿ ಭಾರತದ ಭವಿಷ್ಯ ಬರೆಯಲಿರುವ ತಾನು ಯಕಃಚಿತ್ ವಾಚಿಗೆ ಪರವಶಳಾಗುವುದೆಂದರೇನು?…ದಿಕ್ಕುಗಳನ್ನು ಹಡುಕಿಕೊಂಡಲೆಯುವ ತನ್ನ ಎಮ್ಮೆಲ್ಲೆ ಡಾರ್ಲಿಂಗಿಗೆ ಹೇಳಿದರಾಯಿತು. ಕಂಕುಳದವರೆಗೆ ಕಟ್ಟಿಕೊಳ್ಳುವಷ್ಟು ತಂದುಕೊಡುವನು!

ಆಕೆ ತನ್ನ ಘನವಾದ ವಾಚಿನ ಕಡೆ ನೋಡುತ್ತಿರುವಾಗ ಅನಸೂಯಾ ಕಾಫಿಯೊಂದಿಗೆ ಚುರುಮುರಿ ತಂದುಕೊಟ್ಟಳು. ತನ್ನ ಕಿಲಾಸು ಮೇಟಿಗೆ ಕುರುಕುಲು ತಿಂಡಿ ಎಂದರೆ ತುಂಬ ಇಷ್ಟವೆಂದು ಆಕೆಗೆ ಗೊತ್ತಿಲ್ಲದಿಲ್ಲ. ಇಲ್ಲವಾದರೆ ಈ ಪಾಟಿ ದೇಹ ಬೆಳೆಸಿಕೊಳ್ಳುವುದು ಹೇಗೆ ಸಾಧ್ಯ? ಆಕೆ ಕಣ್ಣು ಮಿಟಿಕಿಸುವುದರೊಳಗಾಗಿ ತಿಂದು ಮುಗಿಸಿದಳು. ಕಾಫಿ ಕುಡಿಯುತ್ತ ಮದುವೆಯ ದಿನದ ಬಗ್ಗೆ ವಿಚಾರಿಸಿದಳು. ಕರವಸ್ತ್ರದಿಂದ ಬಾಯಿ ಒರೆಸಿಕೊಳ್ಳುತ್ತ ಒಳ್ಳೆ ಕ್ರಾಂತಿಕಾರಿಯನ್ನೇ ಮಾಡ್ಕೊಳ್ತಿದೀಯಾ ಎಂದು ಮೆಚ್ಚುಗೆ ವ್ಯಕ್ತಪಡಿಸಿದಳು. ತನ್ನ ಗೆಳೆತಿಯ ಕಿವಿಯೊಳಗೆ ಬಾಯಿಇಟ್ಟು ಡರ್ರನೆ ಡೇಗಿ ‘ಏನಾದ್ರು ಒಂಚೂರು ಶಾಂಪಲ್ ನೋಡಿದೇನು? ಎಂದೂ, ಆ ಶಾಸ್ತ್ರಿಯನ್ನು ಪ್ರೀತಿಸಿ ಮೋಸ ಹೋಗಿದ್ದಿ ಎಂದೂ, ಮದುವೆಗೆ ಮುಂಚೆ ಟೇಸ್ಟ್ ನೋಡೊದನ್ನು ಮರೆಯಬೇಡವೆಂದೂ; ಅದರಲ್ಲಿ ತಾನು ಎಕ್ಸ್‌ಪರ್ಟ್ ಎಂದೂ; ಇಲ್ಲದಿದ್ದಲ್ಲಿ ತನ್ನಿಂದ ವ್ಹೇಟ್‌ಲಿಫ್ಟ್ ಮಾಡಲಿಕ್ಕಾಗುತ್ತಿರಲಿಲ್ಲವೆಂದೂ ಪಿಸುಗುಟ್ಟಿದಳು.

ಇನ್ನೂ ಹೇಳುತ್ತಿದ್ದಳೇನೋ! ಆದರೆ ಓಣಿಯ ಹುಡುಗರೆಲ್ಲ ಕಾರಿನ ಪಾರದರ್ಶಕದ ಮೈಯೊಳಕೆ ಇಣುಕಿ ತಂತಮ್ಮ ಮುಖವನ್ನು ನೋಡಿಕೊಳ್ಳತೊಡಗಿದ್ದರು. ಕೆಲವರು ಪುಂಯ್ ಪುಂಯ್ ಅಂತ ಹಾರ್ನ್ ಮಾಡುತ್ತಿದ್ದರೆ ಮತ್ತೆ ಕೆಲವರು ಅದರ ಮೇಲೆ ಸ್ವಯಾರ್ಜಿತ ಜ್ಞಾನವನ್ನು ಧಾರೆಎರೆಯತೊಡಗಿದ್ದರು. ಈ ಕಾರಣದಿಂದಾಗಿ ಜಲಜಾಕ್ಷಿ ” ಅನೂ ಬರ್ತೀನಿ…ಮುಂದೆ ಹೇಗೋ ಎಮ್ಮೆಲ್ಲೆಯಾಗಿ ಬೆಂಗ್ಳೂರಲ್ಲಿರ್‍ತೀನಲ್ಲ… ಆಗ ವಿಚಾರಿಸಿಕೊಳ್ತೀನಿ” ಎಂದು ಬೀಳ್ಕೊಂಡು ಹೊರಟಳು.

ಆಕೆ ಮರೆಯಾಗುವವರೆಗೆ ರಘು ನೋಡಿದ. ಇಂಥಾಕಿ ತಮ್ಮ ಕ್ರಾಂತಿಕಾರಿಚಟುವಟಿಕೆಗಳಲ್ಲಿ ಇದ್ದುಬಿಟ್ಟಿದ್ದರೆ ಚಿಟಿಕೆ ಹೊಡೆವಷ್ಟರಲ್ಲಿ ಸಮಾನತೆಯನ್ನು ಸಾಧಿಸಿಬಿಡಬಹುದೆಂದುಕೊಂಡ. ಇಂಥಾಕಿಯ ತ್ರಿವರ್ಣದ ಭಾವಚಿತ್ರ ಇಟ್ಟುಕೊಂಡೇ ಅಮೀರರ ಮತ್ತು ಗರೀಬರ ನಡುವಿನ ಕಂದರ ಅಳಿಸಿಬಿಡಬಹುದೆಂದುಕೊಂಡ ರಘು ಒಂದು ನಿಡಿದಾದ ಉಸಿರುಬಿಟ್ಟನು.

ಅನಸೂಯ ಏನೋ ಹೇಳಬೇಕೆಂದು ಬಾಯಿ ತೆರೆದಳು. ಬೆಳಗಿನ ತಿಂಡಿಗೆ ಜೊತೆಯಾಗಿ ಶಾಸ್ತ್ರಿಗಳ ಮನೆಗೆ ಬರಬೇಕೆಂದು ಆರು ಬೊಟ್ಟಿನ ಪದ್ದಕ್ಕ ತುಸು ಹೊತ್ತಿನ ಹಿಂದೆ ಬಂದು ಹೇಳಿ ಹೋಗಿದ್ದಳು. ಜೊತೆಯಾಗಿ ಅಲ್ಲದಿದ್ದರೂ ರಘು ನನ್ನೊಬ್ಬನ್ನೇ ಕಳಿಸಬಹುದು! ತಿಂಡಿಯಲ್ಲಿ ಏನಾದರೂ ಹಾಕಿಬಿಟ್ಟರೆ ಎಂದು ಅನುಮಾನ ಕಾಡಿತು. ತಿಂಡಿ ತಿಂದಾದ ಮೇಲೆ ತಟ್ಟೆ ಕಪ್ಪು ತೊಳೆ ಎಂದು ಹೇಳಿಬಿಟ್ಟರೆ ಎಂಬ ಇನ್ನೊಂದು ಅನುಮಾನವೂ ಕಾಡಿತು. ಹೃದಯದೊಳಗೊಂದೂ ಬಚ್ಚಿಟ್ಟುಕೊಳ್ಳದೆ ಬಾಯಿಯಿಂದ ರಘು ಒಂದೇ ಸಮನೆ ಪುತುಪುತು ಮಾತಾಡಿಬಿಟ್ಟರೆ ಎಂಬ ಮತ್ತೊಂದು ಅನುಮಾನವೂ ಕಾಡಿತು. ಶಾಸ್ತ್ರಿಗಳಾಗಲೀ; ಅಲುಮೇಲಮ್ಮನಾಗಲೀ ರಘೂಗೆ ಇಲ್ಲಸಲ್ಲದ್ದನ್ನು ಹೇಳಿ ಸಂಬಂಧ ಮುರಿದುಬಿಟ್ಟರೆ ಎಂಬ ಮಗದೊಂದು ಅನುಮಾನವೂ ಕಾಡಿತು. ಹೀಗೆ ಯೋಚಿಸುತ್ತಾ ಯೋಚಿಸುತ್ತಾ ತನ್ನ ಅನುಮಾನಗಳಿಗೆ ತನಗೇ ನಗು ಬಂದು ಅನುಸೂಯ
ಕಿಲಕಿಲ ನಕ್ಕಳು.

ಅಕ್ಕ ತಮ್ಮ ಇಬ್ಬರೂ ಆಕೆಯತ್ತ ಪ್ರಶ್ನಾರ್ಥಕವಾಗಿ ನೋಡಿದರು.
*
*
*
ಮರುದಿನ ಬೆಳೆಗ್ಗೆ ಸೂರ್ಯನ ಕಿರಣಗಳು ಸಚರಾಚರಗಳಿಗೆ ಹಲೋ ಹಲೊ ಅನ್ನುತ್ತಿರುವಾಗ ಆರು ಬೊಟ್ಟಿನ ಪದ್ದಕ್ಕ ಬರಬೇಕಂತೇ ಅಂತ ಮತ್ತೆ ಬಂದಳು. ಒಂದು ಪಟ್ಟದ ಹಿಂದೆಯೇ ಕುಡುಕ ಗಂಡನನ್ನು ತ್ಯಜಿಸಿರುವ ಪದ್ದಕ್ಕಗೆ ಮೂಲತಃ ಮಾಂಸಾಹಾರಿಯಾದರೂ ಅಪ್ಪಟ ಸಸ್ಯಾಹಾರಿಗಳ ಮನೆಯಲ್ಲಿ ಕಸಮುಸುರಿ ಮಾಡುವುದೆಂದರೆ ತುಂಬ ಮೋಜು. ಗಂಡಸರನ್ನು ತ್ಯಜಿಸಿದ ಪಾಪ ಪರಿಹಾರರ್ಥವಾಗಿ ಶಾಸ್ತ್ರಿಗಳ ಮನೆಯಲ್ಲಿ ಸೇವೆಗೆ ಸೇರಿಕೊಂಡಿದ್ದಳು. ಒಂದೆರಡು ತಿಂಗಳ ಹಿಂದೆ ಕೈಗೆ ಬಂದಿರುವ ಮಗನನ್ನು ಎಲ್ಲರಿಗೆ ತೋರಿಸಿಕೊಂಡು ಅಡ್ಡಾಡಿದ್ದಳು. ಕಸಮುಸುರಿಯಿಂದ ಕೂಡಿಟ್ಟಿದ್ದ ಗಂಟನ್ನು ಮಗನ ಕೈಗೆ ಕೋಡುತ್ತ ‘ನಿಮ್ಮಪ್ಪನ್ನ ಬೇಷಿ ನೋಡ್ಕಳಪಾ’ ಎಂದು ಕಣ್ತುಂಬಿ ಹೇಳಿ ಬೀಳ್ಕೊಟ್ಟಿದಳು.

“ಅನಸೂಯಮ್ಮನವರೇ.. ನಿಮ್ಮವರನ್ನು ಕರಕೊಂಡು ಬರಬೇಕಂತೆ.. ಅಲುಮೇಲಮ್ಮನವರು ಬಿಟ್ಟು ಬರಬೇಡ ಎಂದು ಹೇಳಿದ್ದಾರೆ!” ಪದ್ದಕ್ಕಗೆ ವ್ಯಾಕರಣ ಶುದ್ಧ ಮಾತಾಡುವುದೆಂದರೆ ಇತ್ತೀಚಿಗೆ ತುಂಬಾ ಖಯಾಲಿ.

ತಮ್ಮ ಮಗಳಾಗಲೀ; ತಮ್ಮನಾಗಲೀ ಅಲ್ಲಿಗೆ ಹೋಗುವುದು ರುಕ್ಕಮ್ಮಗೆ ಎಳ್ಳಷ್ಟೂ ಇಷ್ಟವಿರಲಿಲ್ಲ.

ಆದರೆ ದೋಸೆ ವಾಸನೆ ಎಂಬ ಬಲೆಯಲ್ಲಿ ಬಂಧಿತನಾಗಿ ವಿಲಿವಿಲಿ ಒದ್ದಾಡುತ್ತಿದ್ದ ರಘುವನ್ನು ತಡೆಯುವುದು ಒಂದೆ, ಉಕ್ಕಿ ಹರಿಯುವ ನದಿಯನ್ನು ತಡೆಯುವುದು ಒಂದೆ.
“ಪದ್ದಕ್ಕ.. ನಾನಿಲ್ಲಿ ಮಾಡಿಟ್ಟಿರೋ ತಿಂಡಿ ಯಾರು ತಿನ್ನಬೇಕಮ್ಮಾ?.. ಅವಲಕ್ಕಿ ವಗ್ಗರಣೆ ಮಾಡಿ ಕಾಯ್ತಿದೀನಿ” ರುಕ್ಕಮ್ಮ ಬಚ್ಚಲಮನೆಯಿಂದಲೇ ಕೂಗಿದಳು.

ಸುತ್ತೆಲ್ಲ ಗುಡ್‌ಮಾರ್ನಿಂಗ್ ಹೇಳುತ್ತಿರುವ ಮಸಾಲೆ ದೋಸೆ ಪರಿಮಳ ಬೇರೆ, ಮಂತ್ರಮುಗ್ದನಾದ. ಪರವಶನಾದ. ಬ್ರಾಹ್ಮಣ ವಿಧವೆಯರು ರುಚಿಕರವಾದ ದೋಸೆ ತಯಾರಿಸುತ್ತಾರೆಂಬುದು ಅವನು ಕಂಡುಹಿಡಿದ ಸಿದ್ಧಾಂತಗಳಲ್ಲಿ ಒಂದು. ಉದ್ದಿನಬೇಳೆ ಪ್ರಮಾಣ ಕಡಿಮೆ ಇದ್ದರೂ ರುಬ್ಬಿದ ಹಿಟ್ಟು ಉಬ್ಬುವುದು ಅವರ ಮೇಲಿನ ಅಂತಃಕರಣದಿಂದಾಗಿಯೇ ಎಂಬುದು ಅವನು ಕಂಡುಕೊಂಡ ಹಲವು ಸತ್ಯಗಳಲ್ಲಿ ಒಂದು.

ಬರೀ ವಗ್ಗರಣೆ ಮಾಡುವುದರಲ್ಲಿಯೇ ಜೀವ ಸವೆಸಿದ ಅಕ್ಕನ ಕಡೆ ನೋಡಿದ. ಅಕ್ಕನಿಗೆ ದೋಸೆ ಮಾಡುವುದು ಗೊತ್ತಿದ್ದಲ್ಲಿ ಭಾವ ಮಾನವಾತೀತ ಶಕ್ತಿಯನ್ನು ಹಿಂಬಾಲಿಸಿ ಹೋಗುತ್ತಿರಲಿಲ್ಲವೇನೋ?

ಒಳಗಡೆ ಅಕ್ಕ ಕಾದ ಕಡಾಯಿಯಲ್ಲಿ ಎನೇನೋ ಹಾಕಿ ಚುಂಯ್ ಚುಂಯ್ ಅನ್ನಿಸುತ್ತಲೆ ಇರುವಳು. ಸೀರೆಗೆ ಕೈಯೊರಸಿಕೊಳ್ಳುತ್ತ ಆಕೆ ಅಕಸ್ಮಾತ್ ಪಡಸಾಲೆಗೆ ಬಂದಳು.

ಬೆಂಗಳೂರಿನಲ್ಲಿ ವಾಸಿಸುತ್ತಿರುವವನು ಎಂಬ ಅಕ್ಕರೆಯಿಂದ ಪದ್ದಕ್ಕ ರಘೂನ ಕಡೆಗೆ ಕಡೆಗೆ ನೋಡುತ್ತ ನೋಡುತ್ತ ಮುಖವನ್ನು ಸಾಕಷ್ಟು ಕೆಂಪಗೆ ಮಾಡಿಕೊಂಡಿದ್ದಳು. ಸಾಮಾನ್ಯ ಮನುಷ್ಯನನ್ನು ಮಾತಾಡಿಸಿದಂತೆ ಬೆಂಗಳೂರಿನವರನ್ನು ಮಾತಾಡಿಸಲು ಸಾಧ್ಯವಿಲ್ಲ. ಅದಕ್ಕೆಂದೇ ಆಕೆ ಒರಳಲ್ಲಿ ಅವಲಕ್ಕಿ ಕುಟ್ಟುವ ಹಾಗೆ ಭಾಷೆಯನ್ನು ಅಲಂಕಾರವೆಂಬ ಒರಳಲ್ಲಿ ನಿಶ್ಶಬ್ದವಾಗಿ ಕುಟ್ಟುವ ತಾಲೀಮು ನಡೆಸಿದ್ದಳು.

ಪದ್ದಕ್ಕ ಮನಸ್ಸಿನಲ್ಲಿ ಮಂಡಿಗೆ ತಿನ್ನುತ್ತಿದ್ದುದ್ದನ್ನು ನೋಡಿ ರುಕ್ಕಮ್ಮ ಊಹಿಸಿದ್ದೇ ಬೇರೆ! ಗಂಡಿನ ಆಸರೆಯಿಂದ ವಂಚಿತಗೊಂಡಿರುವ ಹೆಣ್ಣುಗಳೆಂದರೆ ಆಕೆಗೆ ಎಲ್ಲಿಲ್ಲದ ಗುಮಾನಿ. ಒಮ್ಮೊಮ್ಮೆ ತನ್ನನ್ನು ತಾನೇ ಅನುಮಾನಿಸುತ್ತಿದ್ದ ಜಾಯಮಾನದಾಕಿಯೂ ಹೌದು.
“ಏನ್ ಪದ್ದಕ್ಕ? ಇನ್ನೂ ಇಲ್ಲೇ ನಿಂತಿದ್ದೀಯಲ್ಲೆ… ನಾನು ಹೇಳಿದ್ದು ಕಿವಿಗೆ ಬೀಳ್ಲಿಲ್ಲೇನು?” ಎಂದು ರುಕ್ಕಮ್ಮ ಕೈಯಲ್ಲಿದ್ದ ಸವುಟು ಝಳಪಿಸಿಬಿಡುವುದೇನು!
ಸೆಂಟಿನ ಗಾಳದಲ್ಲಿ ಸಿಕ್ಕಿಕೊಂಡಿದ್ದ ಪದ್ದಕ್ಕ ಬೆಚ್ಚಿ ಬಿದ್ದಳು.
“ಕಳಿಸ್ರಿ ರುಕ್ಕಮ್ಮನವರೇ.. ಇಲ್ಲಾಂದ್ರೆ ಅಮ್ಮನವರಿಗೆ ಬೇಸರವಾಗುತ್ತೆ” ವಯ್ಯಾರದಿಂದ ಹೇಳಿದಳು.
“ನೀವೆಂಗ ಮಾತಾಡ್ತಿದ್ದೀಯಲ್ಲ ಪದ್ದಕ್ಕ…” ರುಕ್ಕಮ್ಮ ತಮ್ಮನ ಕಡೆ ಕಣ್ಣಿಂದ ಸಂಜ್ಞೆಮಾಡುತ್ತ ” ಅವನೇನು ಚಿಕ್ಕ ಮಗೂನಾ ಎಲ್ಲಿಗೋಗ್ಬಾರ್ದು ಎಲ್ಲಿಗೋಗಬೇಕು ಅಂತ ಹೇಳಿಸಿಕೊಳ್ಳೋಕೆ” ಎಂದು ಒದ್ದೆ ಕೈಯನ್ನು ಸೀರೆಗೆ ಒರೆಸಿಕೊಂಡಳು.
ರಘೂ ಬಿಸಿತುಪ್ಪವನ್ನು ನುಂಗಲಾರ ಉಗುಳಲಾರ.
ಕೊನೆಗೂ ಧೈರ್ಯದಿಂದ –
“ಅಷ್ಟೊಂದು ಕರೀತಿದ್ದಾರಂದ್ರೆ ಹೋಗದಿದ್ರೆ ಹೇಗೆ?” ಎಂದ.

ಅವನೇ ಹೋಗಿಬರುವುದಾಗಿ ಹೇಳಿದ ಮೇಲೆ ತಮಗಿನ್ನೇನು ಕೆಲಸ? ಯಾರ ಮುಖವನ್ನು ನೋಡುವ ಧೈರ್ಯ ಮಾಡದೆ ಭಾವನ ಕಂದು ವರ್ಣದ ಪಂಚೆಯನ್ನು ಮಡೆಚಿ ಲುಂಗಿ ರೀತಿಯಲ್ಲಿ ಉಟ್ಟುಕೊಂಡು ಮೇಲೆ ಬಿಳಿ ಬಣ್ಣದ ತುಂಬು ತೋಳಿನ ಅಂಗಿ ತೊಟ್ಟುಕೊಂಡು ಕನ್ನಡಿಯಲ್ಲಿ ಇಣುಕಿ ತನ್ನ ರೂಪಕ್ಕೆ ತಾನೆ ಬೆರಗಾದ. ಅವನು ಸಾಮಾನ್ಯವಾಗಿ ದೋಸೆ ಸೇವಿಸಬೇಕಾದ ಸಂದರ್ಭದಲ್ಲಿ ಧರಿಸುತ್ತಿದ್ದುದು ಕೆಂಪು ಬಣ್ಣದ ಅಂಗಿಯನ್ನು, ಆದರೆ ತಾನಿಂದು ದೋಸೆ ಲಗಾಯಿಸುತ್ತಿರುವುದು ಸಿದ್ಧಾಂತಿಗಳ ಮನೆಯಲ್ಲಿ. ಆದ್ದರಿಂದ ಸಾತ್ವಿಕವಾಗಿ ಕಾಣುವುದು ಮುಖ್ಯ. ಅದೂ ಅಲ್ಲದೆ ನಖಶಿಖಾಂತ ಸಜ್ಜನಿಕೆ ಪ್ರಕಟಿಸುವುದು ಅನಿವಾರ್ಯವಾಗಿತ್ತು. ಎಲಿಜಬೆತ್ ಟೇಲರ್ ಹಿಂದೆ ರಿಚರ್ಡ್ ಬರ್ಟನ್ ನಡೆದ ರೀತಿಯಲ್ಲಿ ಹತ್ತು ಹೆಜ್ಜೆ ನಡೆಯುವುವಷ್ಟರಲ್ಲಿ ‘ಮಾಮಾ’ ಎಂಬ ಕೋಮಲ ದ್ವನಿ ಕೇಳಿ ಬಂತು. ಗಕ್ಕನೆ ನಿಂತ. ಅನಸೂಯಾ ಬಂದಳು. ವೀರ ಯೋಧನಿಗೆ ಸ್ತ್ರೀರತ್ನ ಶುಭ ಹಾರೈಸದಿದ್ದರಾದೀತೇ? ಅವನ ಹಣೆಗೆ ಶ್ರೀಗಂಧದ ಬೊಟ್ಟಿಟ್ತು, ಮುಂಗೈಗೆ ಅಟಕ್ ಪಿಟಕ್ ವಾಚು ಕಟ್ಟಿದಳು. “ಮಾಮಾಽಽ… ಅವಲಕ್ಕಿ ವಗ್ಗರಣೆಗೆ ಹೊಟ್ಟೇಲಿ ಒಂಚೂರು ಜಾಗ ಖಾಲಿ ಇರ್ಲಿ ಮಹರಾಯ… ” ಎಂದು ಪಿಸುಗುಟ್ಟಿದಳು. ರುಕ್ಕಮ್ಮ ಸಿಡುಕಿ ಪಾಕಶಾಲೆಯಂ ಪೊಕ್ಕಳು. ಆಯ್ತು.. ಆಯ್ತು ಅನ್ನುತ್ತ ರಘು ತಲೆಹೊಸ್ತಿಲು ದಾಟಿದ.

ಕಿರ್ದಬಲ ಓಡಿ ಪದ್ದಕ್ಕ ಮುನ್ಸೂಚನೆ ನೀದಿದ್ದರಿಂದ ಸ್ವಾಗತಿಸಲು ಅಲುಮೇಲಮ್ಮ ಖುದ್ದ ತನ್ನ ಪುತ್ರರತ್ನವನ್ನು ಕಳಿಸಿದಳು. ದೋಸೆಯೂ, ಕ್ರಾಂತಿಕಾರಿಯೂ ಎಂಬ ಕವನವನ್ನು ತಲೆ ತುಂಬಿಟ್ಟುಕೊಂದಿದ್ದ ಶಾಮಾ ಶಾಸ್ತ್ರೀ ತುಳಸಿ ಗಿಡದ ಬಳಿ ಕಾಯುತ್ತ ನಿಂತಿದ್ದ. ತಾನು ಒಳಗೊಳಗೇ ಹೊಟ್ಟೆಕಿಚ್ಚು ಪಡುತ್ತಿರುವ ವ್ಯಕ್ತಿ ಇನ್ನೊಂದು ಕ್ಷಣದಲ್ಲಿ ಬಂದುಬಿಡುವನು! ಹಸ್ತಲಾಘವದ ಮೂಲಕ ತನ್ನ ವ್ಯಕ್ತಿತ್ವವನ್ನು ಅಳತೆ ಮಾಡಿದರೇನು ಮಾಡುವುದು?.. ಹೀಗೆ ಯೋಚಿಸುವಷ್ಟರಲ್ಲಿ ರಘು ಮೂಗರಳಿಸಿಕೊಂಡು ಬಂದೇ ಬಿಡುವುದೇ! ‘ಹಲೋ ಶಾಮಾ ಶಾಸ್ತ್ರಿ’ ಎಂದು ತಾನೇ ಮುಂದುಬಿದ್ದು ಕೈಹಿಡಿದುಬಿಡುವುದೆ! ಕೀಲು ಸಡಿಲುವಂತೆ ಕುಲುಕಿಬಿಡುವುದೆ! “ನಿಮ್ಮ ಪರಿಚಯ ಆಗುತ್ತಿರುವುದರಿಂದ, ತುಂಬ ಸಂತೋಷವಾಗ್ತಿದೆ!” ಎಂದು ಅಸ್ಖಲಿತವಾಗಿ ನುಡಿದುಬಿಡುವುದೆ?

ಎಲ್ಲಿ ತಮ್ಮ ವಂಶೋದ್ಧಾರಕನ ಕೈ ದೇಹದಿಂದ ಬೇರ್ಪಟ್ಟಿತೋ ಎಂದು ಲಗುಬಗೆಯಿಂದ ಧ್ಯಾನಾಸಕ್ತರಾಗಿದ್ದ ಶಾಸ್ತ್ರಿಗಳು ಕೋಣೆಯಿಂದ ಓಡಿಬಂದರು.
‘ಬಾರಪ್ಪಾ ಬಾ’ ಎಂದು ಮೂರು ಮೊಳ ದೂರ ನಿಂತು ಬರಮಾಡಿಕೊಂಡರು. “ನಮಸ್ಕಾರ” ಅಂದ.
ಸಾಮಾಜಿಕ ಬದಲಾವಣೆಯನ್ನು ಬಿಲ್‌ಕುಲ್ ನಿರಾಕರಿಸುವಂಥ ಸನಾತನತೆಯಿಂದಲೇ ಮಾಡಲ್ಪಟ್ಟಂತಿರುವ ದಿವ್ಯ ಮೂರ್ತಿಯನ್ನು ನಖಶಿಖಾಂತ ದಿಟ್ಟಿಸಿದ.
ಶಾಸ್ತ್ರಿಗಳು ದಿಟ್ಟಿಸಿದರು.
ಭ್ರೂ ಮದ್ಯೆ ಸ್ರಕ್ಚಂದನ ತಿಲಕ!
ಮುಖದ ತುಂಬ ದೇದೀಪ್ಯ ಮಂದಹಾಸ!
ಸಾಕ್ಷಾತ್ ಶ್ರೀ ಮನ್ಮಹಾ ವಿಷ್ಣುವೇ ಶೂದ್ರ ರೂಪ ಧರಿಸಿ ತಮ್ಮ ಮುಂದೆ ನಿಂತಿರುವಂತೆ ಒಂದು ಕ್ಷಣ ಭಾಸವಾಯಿತು.
ತಮ್ಮ ಕಲ್ಪನೆಗೆ ತಾವೇ ಪಷ್ಚಾತ್ತಾಪಪಟ್ಟುಕೊಂಡರು.
ತಿಂಡಿಗೆ ಆಮಂತ್ರಿಸಿರುವ ಸೊಸೆಯನ್ನು ಮನದಲ್ಲಿ ಟೀಕಿಸಿದರು.
ಈ ಬಗ್ಗೆ ಸೊಸೆಗೂ ತಮಗೂ ಬ್ರಾಹ್ಮೀ ಮಹೂರ್ತದಲ್ಲಿ ನಡೆದ ಜಟಾಪಟ ಮರುಕಳಿಸಿತು. ದೈಹಿಕವಾಗಿ ದುರ್ಬಲಗೊಂಡಂತಹ ತಮ್ಮಂಥವರು ಕೇವಲ ದೃಷ್ಟಿಯುದ್ಧ ಮಾಡಲಿಕ್ಕೆ ಮತ್ತು ನಿಟ್ತುಸಿರು ಬಿಡಲಿಕ್ಕೆ ಮಾತ್ರ ಅರ್ಹರು.
ಪೌರೋಹಿತ್ಯದ ಸಾತ್ವಿಕ ಪರಿಮಳದೊಂದಿಗೆ ದೋಸೆಯ ಮಾದಕ ಪರಿಮಳವೂ ಬೆರೆತು ವಿಚಿತ್ರವಾದ ವಾಸನೆ ಸೃಷ್ಟಿಸಿದ್ದ ಹಾದಿಯಲ್ಲಿ ಹಿತಮಿತವಾದ ಹೆಜ್ಜೆ ಹಾಕುತ್ತ ನಡೆದು ಅವರು ಸೂಚಿಸಿದ ಜಾಗದಲ್ಲಿ ಕೂಡ್ರಲು ಒಪ್ಪಲಿಲ್ಲ. “ಛೇ, ಛೇ, ಹಿರಿಯರೂ ಪೂಜ್ಯರೂ ಆದ ತಮಗೆ ಸರಿಸಮಾನವಾಗಿ ಕೂತುಕೊಳ್ಳುವುದೇ” ಎಂದು ನೀಚ ಸ್ಥಾನದಲ್ಲಿ ಕೂತುಕೊಂಡ. ಬೆಂಗಳೂರಿನವನಾಗಿದ್ದರೂ ಎಷ್ಟೊಂದು ನಯ ವಿನಯ ಎಂದು ಶಾಸ್ತ್ರಿಗಳು ಮೈ ಸಡಿಲ ಬಿಟ್ಟರು.
‘ಏನು ಮಾಡ್ತಿ, ಏನು ಕಥೆ’ ಎಂದೆಲ್ಲ ಕೇಳಿದರು.
‘ಇಂಥದ್ದು ಮಾಡ್ತೀನಿ, ಇಂಥಾದ್ದು ಕಥೆ’ ಎಂದು ಸವಿವರವಾಗಿ ಹೇಳಿದ.
ಮರು ಕ್ಷಣ ಶಾಸ್ತ್ರಿಗಳ ಕಣ್ಣಲ್ಲಿ ಬೆಂಗಳೂರು ಕಣ್ಣಲ್ಲಿ ಮೈದಾಳಿ ಹಲೋ ಹಲೊ ಎಂದಿತು. ಬೆಂಗಳೂರು ಬಗ್ಗೆ ಏನಾದರೂ ಹೇಳಿಕೊಳ್ಳಬೇಕೆಂಬ ಆಸೆ ಶಾಸ್ತ್ರಿಗಳಿಗೆ ಬಹಳ ದಿನಗಳಿಂದ ಇತ್ತು. ವಿನಮ್ರತೆಯಿಂದ ಕೇಳೋರು ಕಲಿಕಾಲದಲ್ಲಿ ಸಿಗಬೇಕಲ್ಲ.

ಗುರುಹಿರಿಯರಿಯರಿಗೆ ಸಾಕಷ್ಟು ಗೌರವ ಕೊಡುವ ರಘು ತಾವು ಅರಸುತ್ತಿದ್ದ ಅನರ್ಘ್ಯ ರತ್ನವೆಂಬ ಭಾವನೆ ಬಂತು.

ಸನಾತನ ಧರ್ಮದ ಮೇಲೆ ಗುರುಹಿರಿಯರ ಮೇಲೆ ಸಾಕಷ್ಟು ಭಯಭಕ್ತಿ ಇದ್ದುದರಿಂದಲೇ ಮಾಗಡಿ ಕೆಂಪೇಗೌಡರಿಗೆ ಬೆಂಗಳುರು ಪಟ್ಟಣ ಸ್ಥಾಪನೆ ಮಾಡಲು ಸಾಧ್ಯವಾಯಿತೆಂದೋ, ಪೌರೋಹಿತ್ಯದ ಪುಣ್ಯದಿಂದಲೇ ಅದು ಬಿದಿಗೆ ಚಂದ್ರಮನಂತೆ ದಿನಕ್ಕೊಂದು ಚಂದದಲ್ಲಿ ಬೆಳೆದು ಜಂಬೂದ್ವೀಪದಾದ್ಯಂತ ಕೋಟ್ಯಾದೀಶ್ವರರನ್ನು ಸೂಜಿಗಲ್ಲಿನಂತೆ ನಿರಂತರ ಅಕರ್ಷಿಸುತ್ತಿರುವುದೆಂದೂ ಪ್ರವರ ಆರಂಭಿಸಿದರು. ಕೆಲವು ಸುಂದರ ಸ್ಥಳಗಳಿಗೆ ‘ಮ್ಲೇಚ್ಚ’ ಹೆಸರಿಟ್ಟಿರುವುದನ್ನು ಖಂಡಿಸಿದರು. ಲಾಲ್‌ಬಾಗ್ ಎಂಬುದಕ್ಕೆ ಬೃಹದಾರಣ್ಯಕವೆಂಬ ಹೆಸರನ್ನೂ; ಕಬ್ಬನ್ ಪಾರ್ಕ್ ಎಂಬುದಕ್ಕೆ ಬೃಂದಾವನವೆಂಬ ಹೆಸರನ್ನು ಇಡಬೇಕೆಂದು ಆಗ್ರಹಿಸಿದರು. ಆದರೆ ಆ ನಗರ ನಿವಾಸಿಗಳಾದ ಸುಶಿಕ್ಷಿತರು ಕೋಟು ಪ್ಯಾಂಟುಗಳೊಳಗೆ ಅವಿತುಕೊಂಡಿರುವ ಸನಾತನಿಗಳೆಂದು ನುಡಿದರು. ಬೀದಿಗೇಳೇಳು ದೇವಾಲಯಗಳನ್ನು ಕಟ್ಟಿಸಿ ಅವಕ್ಕೆ ಪವಿತ್ರ ಬ್ರಾಹ್ಮಣರನ್ನು ಅರ್ಚಕರನ್ನಾಗಿ ನೇಮಿಸಿ ಧರ್ಮ ರಕ್ಷಿಸಿಕೊಂಡು ಬರುತ್ತಿರುವ ಅಲ್ಲಿನ ಪ್ರತಿಯೊಬ್ಬ ವಿದ್ಯಾವಂತನಿಗೂ ‘ಹಿಂದೂ ಧರ್ಮ ಸುರತ್ರಾಣ’ ಎಂಬ ಬಿರುದು ಕೊಡುವಂತೆ ಎಲ್ಲರೂ ಸರಕಾರದ ಮೇಲೆ ಒತ್ತಡ ತರಬೇಕೆಂದು ಹೇಳಿದರು.

“ಶಾಸ್ತ್ರಿಗಳೇ ನಿಮ್ಮವರೇ ಆದ ಮುಖ್ಯಮಂತ್ರಿಗಳಾಗಿರೋದು! ನಿಮ್ಮಂಥವರು ಒಂದು ಮಾತು ಹೇಳಿದರೆ ಅವರು ಕಾರ್ಯಗತ ಮಾಡೇತೀರುವವರು” ಪೂಸಿ ಹೊಡೆಯುವುದರಲ್ಲಿ ರಘು ನಿಷ್ಣಾತ. ಎಷ್ಟಿದ್ದರೂ ಅವನು ಬೆಂಗಳುರಿನ ನಿವಾಸಿಯಲ್ಲವೆ…
“ಹೌದಲ್ಲವಾ.. ಗುಂಡುರಾಯರು ನಮ್ಮವರೇ ಅಲ್ಲವೆ? ಅಬ್ಬಾ.. ಎಂಥ ವ್ಯಕ್ತಿತ್ವ ಅವರದ್ದು! ಎಂಥ ತೇಜಸ್ವಿ ಮುಖ ಅವರದು.. ಅಂಥವರು ಸುಖಾಸೀನರಾಗಿರೋದ್ರಿಂದ್ಲೆ ನಾಡು ಸುಭಿಕ್ಷವಾಗಿರೋದು” ಶಾಸ್ತ್ರಿಗಳು ಒಂದು ಕ್ಷಣ ಗುಂಡೂರಾಯರ ಭರ್ಜರಿ ವ್ಯಕ್ತಿತ್ವದ ಕಲ್ಪನೆಯಿಂದ ಅರ್ಧ ನಿಮಾಲಿತ ನೇತ್ರವದನರಾಗಿ ಸ್ವಲ್ಪ ಮುಂಜರುಗಿ ಪಿಸುಗುಟ್ಟುವ ರೀತಿಯಲ್ಲಿ ಹೇಳಿದರು. “ಅಂದ ಹಾಗೆ ನಮ್ಮಂಥ ಬಡ ಬ್ರಾಹ್ಮಣರಿಗೆ ಏನಾದರೂ ವ್ಯವಸ್ಥೆ ಮಾಡಿದ್ದಾರೋ ಅವರು”
“ಬ್ರಾಹ್ಮಣ ಸಮ್ಮವೇಶ, ಸಮ್ಮೇಳನಗಳಿರುವ ಕಡೇಲೆಲ್ಲ ಹೋಗಿ ‘ಬ್ರಾಹ್ಮಣರೇ ಒಗ್ಗಟ್ಟಿನಲ್ಲಿ ಬಲವಿದೆ’ ಎಂದು ಭಾಶಣ ಮಾಡ್ತಿದಾರೆ ಸ್ವಾಮಿ!”
“ಆ ಬ್ರಾಹ್ಮಣ ವಿರೋಧಿ ದೇವರಾಜ ಅರಸ ಹೇಗೆ?”
“ಅವರಂತೂ ಅಪ್ಪಟ ಶೂದ್ರರ ಪರ ಬಿಡಿ. ಉಳುವವನೇ ಭೂಮಿಗೆ ಒಡೆಯ ಎಂಬಂಥ ಕಾನೂನು ತಂದಿರೋದು ಅವರೇ ಸ್ವಾಮಿ”
“ಹೌದಲ್ಲ.. ಎಂಥ ಕಲಿಕಾಲ ಬಂಥಪ್ಪ ಅಂತೀನಿ.. ನಮ್ಮ ಬ್ರಾಹ್ಮಣರ ಇನಾಮು ಭೂಮಿಗಳೆಲ್ಲ ಶೂದ್ರರ ಪಾಲು ಮಾಡ್ತಿದ್ದಾರಲ್ಲ ಈ ಶೂದ್ರರು.. ನೀನು ಏನೇ ಹೇಳು ರಘುರಾಮ. ನೀನು ಪುರುಷೋತ್ತಮನಾದ ಶ್ರೀರಾಮನ ಹೆಸರು ಇಟ್ಟುಕೊಂಡಿದ್ದೀಯಂತ ಒಂದು ಮಾತು ಹೇಳಬೇಕೆಂದಿದ್ದೇನೆ.. ಈ ದೇಶದಲ್ಲಿ ಬ್ರಾಹ್ಮಣರಿಗೆ ಅನ್ಯಾಯ ಮಾಡೋ ಶೂದ್ರರಿಗೆ ಖಂಡಿತ ಒಳ್ಳೇದಾಗೋದಿಲ್ಲ ನೋಡ್ತಿರು.. ಬ್ರಾಹ್ಮಣರ ವಿರೋಧ ಕಟ್ಟಿಕೊಂಡ ಎಂಥೆಂಥ ಸಾಮ್ರಾಜ್ಯಗಳು ಮಣ್ಣು ಮುಕ್ಕಿದವು.. ”

ಶಾಸ್ತ್ರಿಗಳು ತಮ್ಮ ದೈಹಿಕ ಸ್ಥಿತಿ ಅಲಕ್ಷಿಸಿ ಇನ್ನೂ ಎನೇನೋ ಹೇಳಲಿದ್ದರು. ಮದುವೆ ಆಗಲಿರುವ ಹುಡುಗನ ತಲೇನೆಲ್ಲ ಎಲ್ಲಿ ತಿಂದು ಬಿಡುವರೋ ಎಂಬ ಆತಂಕದಿಂದ ಅಲುಮೇಲಮ್ಮ ಕಳಿಸಿದ್ದರಿಂದ ಕರೆಯಲೆಂದು ಶಾಮಾಶಾಸ್ತ್ರಿ ಬಂದ.

ವಯೊವೃದ್ಧರೂ, ಜ್ಞಾನವೃದ್ಧರೂ ಆಡಿದ ಮಾತುಗಳನ್ನು ಕೇಳೀ ಕೇಳೀ ರಘು ಎಂಬ ಹುಲು ನರನಿಗೆ ದೋಸೆ ಬಗೆಗಿದ್ದ ಆಸಕ್ತಿ ಕುತೋಹಲ ಎಲ್ಲ ಕರಗಿ ಹೋಗಿತ್ತು. ಸಾಮಾಜಿಕ ಬದಲಾವಣೆಗಿರುವ ಅಡ್ಡಿ ಆತಂಕಗಳ ಒಂದು ಮುಖ ಅರ್ಥವಾಯಿತು.
“ಶಾಸ್ತ್ರಿಗಳೇ, ದೋಸೆ ಬಗ್ಗೆ ತಮ್ಮ ಅಭಿಪ್ರಾಯವೇನು>” ಎಂದು ರಘು ಅಚಾನಕ್ ಕೇಳಿಬಿಟ್ಟ. ಯಾವ ಮುನ್ಸೂಚನೆಯೂ ನೀಡದೆ ಅವನ ನಾಲಿಗೆ ಮಾತಾಡಿಬಿಟ್ಟಿತು. ಶಾಸ್ತ್ರಿಗಳಿಗಿಂತ ಮೊದಲು ಅವನೇ ಕಂಗಾಲಾದನು.
“ದೋಸೆ ಹಿಂದೂ ಧರ್ಮೀಯರ ಸೇವನೆಗೆ ಯೋಗ್ಯವಾದುದಲ್ಲ.. ಎಲ್ಲ ಅನಿಷ್ಟಗಳಿಗೂ ಮಸಾಲ ದೋಸೆಯೇ ಕಾರಣ.. ಎಲ್ಲಾ ನಮೂನೆಯ ದೋಸೆಗಳನ್ನು ಹಿಂದೂ ದೇಶದಿಂದ ಉಚ್ಛಾಟಿಸಬೇಕು” ಶಾಸ್ತ್ರಿಗಳ ಮೊಗ ಜಮದಗ್ನಿಯ ಮುಖದಂತೆ ಕಂಡಿತು ಒಂದು ಕ್ಷಣ.
ಅದನ್ನು ಕೇಳುತ್ತಲೆ ರಘೂನ ವೃಷಣಗಳು ಚಿಕ್ಕದಾಗಿಬಿಟ್ಟವು.
ಕೇಳಿ ಎಂಥ ಕೆಲಸ ಮಾಡಿಬಿಟ್ಟೆ ಎಂದುಕೊಂಡ.
“ಹಾಗಿದ್ರೆ ತಾವು ದೋಸೆಯನ್ನು.. ”
“ಖಂಡಿತ ಇಲ್ಲ.. ಖಂಡಿತ ಇಲ್ಲ.. ದೋಸೆಯ ವಾಸನೆಯೇ ಹಿಂದೂ ಧರ್ಮದ ಬೆಳವಣಿಗೆಗೆ ಅಪಾಯಕಾರಿ. ಅದಕ್ಕೂ ನಮಗೂ ಎಣ್ಣೆ ಶೀಗೆಕಾಯಿ ಸಂಬಂಧ” ರಘೂನ ಮಾತನ್ನು ಮಾರ್ಗಮಧ್ಯದಲ್ಲಿ ತುಂಡರಿಸುತ್ತ ನುಡಿದರು.
“ತಾಬು ಅಪ್ಪಣೆ ಕೊಡಿಸಿದ್ದು ನೂರಕ್ಕೆ ನೂರರಷ್ಟು ಸತ್ಯ ನೋಡಿ. ಉದ್ದಿನ ಬೇಳೆ ಎಂಬ ದ್ವಿದಳ ಧಾನ್ಯದ ಸಹವಾಸ ಮಾಡಿ ಅಕ್ಕಿ ಕುಲಗೆಟ್ಟು ಹೋಯ್ತು ನೋಡಿ.. ಕೋಟ್ಯಂತರ ಹುಳಗಳನ್ನು ಹಿಟ್ಟಿನ ರೂಪದಲ್ಲಿ ಕಾವಲಿ ಮೇಲೆ ಬೇಯಿಸೋದೆಂದ್ರೇನು! ಅದೂ ತಮ್ಮಂಥ ಬಹುಶ್ರುತರ ಮನೆಯಲ್ಲಿ…ಶಾಂತಂ ಪಾಪಂ” ವಿವೇಕ ಚೂಡಾಮಣಿಯಂಥ ರಘು ತನ್ನ ಕೈಗಳಿಂದ ತನ್ನ ಕೆನ್ನೆಯನ್ನು ತಪತಪ ಬಡಿದುಕೊಂಡ.
ಹಾವಿನ ಸುಂದರ ಹೆಡೆಯನ್ನು ಸ್ಪರ್ಶಿಸಿದ ಅನುಭವವಾಯಿತು ಶಾಸ್ತ್ರಿಗಳಿಗೆ.
ಕೂಡಲೆ ಮೊಮ್ಮಗನ ಮುಖದೊಳಗೆ ಮುಖವಿಟ್ಟರು.
“ಕೇಳಿದೆ ಏನೋ.. ರಘು ವಾಲ್ಮೀಕಿ ಮಹರ್ಶಿಯಂತೆ ಮಾತಾಡ್ತಿರೋದನ್ನು.. ದೋಸೆ ಮಾಡಬಾರ್ದೂಂತ ಬಡಕೊಂಡೆವು. ನಮ್ಮ ಮಾತನ್ನು ಕೇಳಿದಿರಾ ನೀವೀರ್ವರು; ನಮ್ಮ ಆಚಾರ ವಿಚಾರ ಪರಂಪರೆಗಳನ್ನೆಲ್ಲ ಗಾಳಿಗೆ ತೂರಿ ದೋಸೆ ಮಾಡಲು ನಿರ್ಧರಿಸಿಬಿಟ್ಟಿರಿ. ದೋಸೆ ತಿನ್ನೋರು ನೀವು, ಮುಂದೆ ಅನುಭವಿಸುವವರು ನೀವು.. ಇಂದೋ ನಾಳೆಯೊ ವೈಕುಂಠ ವಾಸಿಗಳಾಗಲಿರುವ ನಮ್ಮ ಮಾತೆಂದರೆ ಅಷ್ಟು ಅಲಕ್ಷೆ..” ಇಡೀ ಜೀವಮಾನದಲ್ಲಿ ಶಾಸ್ತ್ರಿಗಳು ಅಪರೂಪಕ್ಕೆ ಕೋಪಾರುಣನೇತ್ರರಾಗಿದ್ದರು.
ಅವರ ದ್ವನಿ ಎಷ್ಟು ಪರಿಣಾಮಕಾರಿಯಾಗಿತ್ತೆಂದರೆ.. ದೋಸೆ ಹಿಟ್ಟನ್ನು ಕಾವಲಿ ಮೇಲೆ ಹಾಕುವುದನ್ನು ಬಿಟ್ಟು ಅಲುಮೇಲಮ್ಮ ಬೆಂಕಿ ಮೇಲೆ ಸುರಿದುಬಿಟ್ಟಳು. ಒಂದೇ ಕ್ಷಣದಲ್ಲಿ ಅದರ ಕರುಕು ವಾಸನೆ ಗೃಹವನ್ನವರಿಸಿ ಬಿಟ್ಟಿತು.
ವಯಸ್ಸದಂತೆಲ್ಲ ಮಾವನವರು ವಿಚಿತ್ರವಾಗಿ ಆಲೋಚಿಸುತ್ತಿರುವರಲ್ಲ.. ಎಂದು ನೊಂದಳು.
“ಹೋಗಪ್ಪಾ.. ಹೋಗು” ಎಂದು ಶಾಸ್ತ್ರಿಗಳು ಮುಂದೇನನ್ನೋ (ಬಹುಶಃ ತಿಂದು ಹಾಳಾಗಿ ಹೋಗು ಎಂದು ಹೇಳುತ್ತಿದ್ದರೇನೋ) ಹೇಳಲಿದ್ದರು.
ಅಷ್ಟರಲ್ಲಿ ಒಂದು ದೊಡ್ಡದು ಎನ್ನಬ್ನಹುದಾದಂತ ಗುಂಪೊಂದು ಕೇಕೆ ಶಿಳ್ಳಿ ಮೊದಲಾದ ನಾದ ನಿನಾದ ಮಾಡುತ್ತ ಬಂದು ಬೃಂದಾವನ ಕಟ್ಟೆಯ ಆಚೆ ಜಮಾಯಿಸಿಬಿಟ್ಟಿತು. ತಾರುಣ್ಯದ ಹೊಸ್ತಿಲ ಆಚೆ ಈಚೆ ಇದ್ದ ಹಲವರು ಶಾಸ್ತ್ರಿಗಳೇ ಶಾಸ್ತ್ರಿಗಳೇ ಎಂದು ಕೂಗುತ್ತಿದ್ದರು. ಒಂದು ಕ್ಷಣ ಏನೋ ಎಂತೋ ಎಂಬೊಂದು ಗಾಬರಿ ಆವರಿಸಿಬಿಟ್ಟಿತು.
ಶಾಮ ತನ್ನ ತಾತನವರ ಹಿಂದೆ ಅವಿತುಕೊಳ್ಳಲೆತ್ನಿಸುತ್ತಿರುವುದನ್ನೂ; ಶಾಸ್ತ್ರಿಗಳು ತಮ್ಮ ಕರುಳಿನ ಕುಡಿ ಹಿಂದೆ ಅವಿತುಕೊಳ್ಳಲೆತ್ನಿಸುತ್ತಿರುವುದನ್ನೂ ನೋಡಿದ ರಘು ಗುಂಪನ್ನು ವಿಚಾರಿಸುವ ಹೋಣೆ ಹೊತ್ತುಕೊಂಡು “ಏನ್ರಪ್ಪಾ? ಯಾಕ್ರಪ್ಪಾ?” ಎಂದು ಗುಂಪನ್ನು ವಿಚಾರಿಸಿದ. ಮೊನ್ನೆ ಮೊನ್ನೆಯವರೆಗೆ ಸರಕಾರಿ ಆಸುಪತ್ರೆಯ ರೋಗತುಲಿಕಾ ತಲ್ಪದ ಮೇಲೆ ವಾರ ದಿನಮಾನ ಮಲಗಿದ್ದು ಬಂದಿದ್ದ ಸಾಂಬ ಆ ಗುಂಪಿನ ಮುಖಂಡತ್ವ ವಹಿಸಿದ್ದ. ಆ ಸದರಿ ಗುಂಪು ಮಾಡಿದ್ದ ಘನಕಾರ್ಯ ಏನಪ್ಪಾ ಅಂದರೆ?
ಅದನ್ನು ಸವಿವರವಾಗಿ ಹೇಳಬೇಕೆಂದರೆ ದೊಡ್ಡ ಕಥಿಯೇ ಆಗುತ್ತದೆ.
ಶಾಸ್ತ್ರಿಗಲ ಮನೆಯಲ್ಲಿ ಮನೆ ಮಗಳಂತೆ ಕೋಷಿ ಎಂಬ ಬೆಕ್ಕೂ; ಅನಸೂಯಾಳ ಮನೆಯಲ್ಲಿ ಅರ್ಜುನ ಎಂಬ ಮಾರ್ಜಾಲವೂ ಇತ್ತಷ್ಟೆ. ಅವೆರಡೂ ಸಲೀಮ, ಅನಾರ್ಕಲಿಯಂತೆ ಅನ್ಯೋನ್ಯವಾಗಿದ್ದವಷ್ಟೆ. ಅವೆರಡು ಮಾರ್ಜಾಲ ಕುಲಕ್ಕೆ ಸೇರಿದವುಗಳಾಗಿದ್ದರೂ ಮಾನವಕುಲ ಹಿತಚಿಂತನೆಯನ್ನು ಸದಾ ಬಯಸುತ್ತಿದ್ದವಷ್ಟೆ! ಅದರಲ್ಲೂ ಶಾಮ ಮತ್ತು ಅನಸೂಯರ ಸಂಭಂದ ಬೆಸೆಯಲು ಅವೆರಡೂ ನಾನಾ ನಮೂನೆಯ ಹಿಕಮತ್ತುಗಳನ್ನು ಒಂದಾದ ಮೇಲೊಂದರಂತೆ ಪ್ರಯೋಗಿಸುತ್ತಿದ್ದವಷ್ಟೆ! ತಮ್ಮ ಗುರಿ ಮಣ್ಣುಗೂಡಿದ ಮೇಲೆ ಪರಸ್ಪರ ಸಂಧಿಸಿ ಮನುಷ್ಯರು ಕೃತಘ್ನರು ಎಂದು ತೀರ್ಮಾನಿಸಿದ್ದವಷ್ಟೆ! ಇಂಥದೊಂದು ಟೆನ್ಷನ್ನಿಂದಾಗಿ ಅದ್ಭುತ ಪ್ರೇಮಿಗಳಾಗಿದ್ದ ಅವಕ್ಕೆ ಕೆಲವು ದಿನಗಳಿಂದ ರತಿ ಕ್ರೀಡೆಯಲ್ಲಿ ಭಾಗವಹಿಸಲಾಗಿರಲಿಲ್ಲವಷ್ಟೆ!

ಈ ಕಾರಣಗಳಿಂದಾಗಿಯೋ ಅಥವಾ ಬೇರಾವ ಕಾರಣದಿಂದಾಗಿಯೋ ಅವೆರಡೂ ಸದಾ ಮಂಕಾಗಿರುತ್ತಿದ್ದವು. ತನ್ನ ಪ್ರಿಯತಮೆಯ ಬಳಿ ಏನೆಲ್ಲ ಹೇಳಿಕೊಳ್ಳುತ್ತಿದ್ದ ಅರ್ಜುನ ಕನಿಷ್ಟ ಅಟಕ್ ಪಿಟಕ್ ವಾಚಿನ ಬಗೆಗೂ ಹೇಳಿಕೊಂಡಿರಲಿಲ್ಲ. ವಾಚನ್ನು ನೋಡಲು ಹೋಗಿ ಅನಸೂಯಳಿಂದ ಒದೆ ತಿಂದಿತ್ತು. ಯಾಕೆ ತನ್ನ ಪ್ರಿಯತಮ ಮಂಕಾಗಿರುವನೆಂದು ಯೋಚಿಸೀ ಯೋಚಿಸೀ ಕೋಷಿ ತಾನೂ ಮಂಕಾಗಿತ್ತು.

ಹೀಗೆ ಮಂಕಾಗಿರುವ ಯಾವ ಪ್ರಾಣಿಗೂ ಅಪಾಯದ ಅರಿವು ಇರುವುದಿಲ್ಲವೆಂಬುದು ಅಂಗೈಯ ಹುಣ್ಣಿನಷ್ಟೆ ಸತ್ಯವೆಂಬುದನ್ನು ಸಾಧಿಸಿ ತೋರಿಸಲಿಕ್ಕಾಗಿಯೋ ಎಂಬಂತೆ ಹರಪನಹಳ್ಳಿ ಕಡೆಯ ಕೊರಚರಟ್ಟಿಯ ಅಲೆಮಾರಿ ತಂಡವೊಂದು ತಂಡೊಪತಂಡವಾಗಿ ಬಂದು ಸದರೀ ಗ್ರಾಮದ ಹೊರವಲಯದಲ್ಲಿ ಚಿಕ್ಕ ಚಿಕ್ಕ ಜೋಪಡಿಗಳನ್ನು ಕಟ್ಟಿಕೊಂಡು ಬೀಡು ಬಿಟ್ಟಿತ್ತು. ವಯಸ್ಕ ಗಂಡಸರು ರಾತ್ರಿ ಹೊತ್ತು ಚಿಕ್ಕಪುಟ್ಟ ಕಳ್ಳತನಕ್ಕೆ ಹೋದರೆ ಹೆಂಗಸರು ಅವರಿವರ ಬಳಿ ಮಲಗಿಕೊಂಡು ನಾಲ್ಕು ಕಾಸು ಸಂಪಾದಿಸುವರು. ಮಾಂಸಪ್ರಿಯರಾದ ಅವರು ಕೋಳಿ ಕುರಿಗಿಂತ ಆಸೆಪಡುತ್ತಿದ್ದುದು ಬೆಕ್ಕು ಮತ್ತು ಇಲಿ ಮಾಂಸಕ್ಕೆ. ಇಂಥ ಆಹಾರ ಮೂಲಗಳನ್ನು ಹುಡುಕಲು ಅವರ ಪೈಕಿ ಅನೇಕರು ಕಂಕುಳಲ್ಲಿ ಚಿಕ್ಕಪುಟ್ಟ ಬಲೆ, ಪಂಜರಗಳನ್ನು ಹುದುಗಿಸಿಕೊಂಡು ಓಣಿ ಓಣಿ ಅಲೆಯುವರು. ಇಲಿಗಳಂತೆ ಸದ್ದು ಮಾಡಿ ಇಲಿಗಳನ್ನು ಆಕರ್ಷಿವುದು, ಅವು ಬಂದೊಡನೆ ಅರೆ ಜೀವ ಮಾಡಿ ಜೋಳಿಗೆಗೆ ಹಾಕಿಕೊಳ್ಳುವುದು, ಬೆಕ್ಕುಗಳಂತೆ ಸದ್ದು ಮಾಡಿ ಬೆಕ್ಕುಗಳನ್ನು ಆಕರ್ಷಿವುದು, ಅವು ಬಂದೊಡನೆ ಗೋಣು ತಿರುವಿ ಸಾಯಿಸಿ ಜೋಳಿಗೆಗೆ ಹಾಕಿಕೊಳ್ಳುವುದು. ತಮ್ಮ ಕ್ಯಾಂಪಿನ ಬಳಿಗೆ ಹೋಗಿ ಅವುಗಳನ್ನು ಬೆಂಕಿಯಲ್ಲಿ ಬೇಯಿಸುವುದು, ಹೆಂಗಸರು ಮೈಮಾರಿ ಗಳಿಸಿದ್ದಂಥ ಹಣದಲ್ಲಿ ಸಾರಾಯಿಯನ್ನೋ; ಹೆಂಡವನ್ನೋ ತರಿಸುವುದು, ಕುಡಿದು ತಿಂದು ಪರಸ್ಪರ ತೆಕ್ಕೆ ಮುರಿಬಿದ್ದು ದಿಕ್ಕುಗಳು ನಡುಗುವಂತೆ ಗಲಾಟೆ ಮಾಡುತ್ತ ಒಬ್ಬರ ಮೇಲೊಬ್ಬರು ಬಿದ್ದು ಉರುಳಾಡುವುದು, ಹಾಗೆ ಉರುಳುರುಳಾಡುತ್ತಲೇ ನಿದ್ದೆ ಹೋಗಿ ಗೊರಕೆ ಹೊಡೆಯಲಾರಂಭಿಸಿಬಿಡುವುದು. ಇದು ಇವರ ದಿನಚರಿ. ಆದರೂ ಇವರ ದಿನಚರಿ ಮಧ್ಯಮ ವರ್ಗದ ಮಂದಿ ಊಹಿಸಿಕೊಳ್ಳುವಷ್ಟು ಸುಲಭವಾಗಿರುವುದಿಲ್ಲ. ಇವರ ಪ್ರತಿಯೊಂದು ಚಟುವಟಿಕೆಯನ್ನು ನಿಯಂತ್ರಿಸುವಂಥ ಒಂದು ಪ್ರತಿಭಟನಾತ್ಮಕ ತಂಡ ಗ್ರಾಮದಲ್ಲಿ ಹುಟ್ತಿಕೊಂಡು ಬಿಟ್ತಿರುತ್ತದೆ. ಆ ನಾಗರೀಕರ ತಂಡದ ಸದಸ್ಯರು ಉಂಡಾಡಿ ಗುಂಡರೆಂದು ಹೆಸರು ಪಡೆದಿದ್ದರೂ ಸೀನ್ ಕಾನರಿ; ರೋಗರ್‌ಮೋರ್, ಟಿಮೋಟಿ ಡಲ್ಟನ್‌ರಂಥ ಜೇಮ್ಸ್ ಬಾಂಡರಿಗಿಂತ ಕಡಿಮೆ ಇರುವುದಿಲ್ಲ. ಈ ಜೇಮ್ಸ್‌ಬಾಂಡರು ಸದಾ ತಮ್ಮ ಕಣ್ಣುಗಳನ್ನು ಮೂಷಕ ಮಾರ್ಜಾಲ ಹಂತಕರ ಮೇಲೆ ಕಣ್ಣು ಇಟ್ತಿರುತ್ತದೆ. ಈ ಜೇಮ್ಸ್ ಬಾಂಡರೊಂದೇ ಅಲ್ಲದೇ, ಕಂದಾಯ ಅರಕ್ಷಕರೇ ಮೊದಲಾದ ಮಂದಿಯನ್ನು ಚಾಣಾಕ್ಷತನದಿಂದ ನಿಭಾಯಿಸುತ್ತಲೇ ಅಲೆಮಾರಿ ಮಂದಿ ತಮ್ಮ ಕಾರ್ಯ ಸಾಧಿಸಬೇಕು ಮತ್ತು ಬದುಕಬೇಕು. ಪರಿಸ್ಥಿತಿ ಹೀಗಿರುವಾಗ ಅಲೆಮಾರಿಯ ಒಂದಿಬ್ಬರು ಶಾಸ್ತ್ರಿಗಳಿದ್ದ ಓಣಿಯ ಆಚೆಬದಿ ಚೀವ್ ಚೀವ್ ಎನ್ನುತ್ತಲೋ; ಮ್ಯಾಂವ್ ಮ್ಯಾಂವ್ ಅನ್ನುತ್ತಲೋ ಕಾರ್ಯ ನಿರತರಾದರು. ಐದಾರು ಇಲಿ ಬುಡಕಗಳನ್ನು ಸುಲಭವಾಗಿ ಹಿಡಿದಿದ್ದೂ ಆಯಿತು. ಕಳೆದೆರಡು ದಿನಗಳಿಂದ ಆ ಓಣಿಗೆ ಎರಡು ಕಣ್ಣುಗಳಂತಿದ್ದ ಎರಡು ಬೆಕ್ಕು ಗಳ ನಡುವಳಿಕೆಗಳನ್ನು ಸೂಕ್ಷ್ಮವಾಗಿ ಗ್ರಹಿಸಿದರು. ‘ಇವತ್ತು ಹಿಡದೇ ತರಬೇಕಲೆ’ ಎಂದು ನಿರ್ಧರಿಸಿದರು. ಆಯಾ ಮನೆಗಳ ಆಜುಬಾಜುಗಳಲ್ಲಿ ಕೋಶಿಯಂತೆ ಸದ್ದು ಮಾಡಿ ಮಾರ್ಜಾಲ ಹಿಡಿದು ಸಾಯಿಸಿದರು. ಮಾರ್ಜಾಲದ ಥರ ಸದ್ದು ಮಾಡಿ ಕೋಷಿಯನ್ನು ಹಿಡಿದು ಸಾಯಿಸಿದರು. ಆದರೆ ಅವು ಅವರ ಕೈಗೆ ಬೀಳುವ ಮೊದಲು ಸಾಕಷ್ಟು ಪ್ರತಿರೋದ ಒಡ್ಡಿದವು. ಆದರೆ ಅವುಗಲ ಆಟ ನಡೆಯದಿದ್ದರೂ, ಅವು ಮರಣಾಂತಿಕವಾಗಿ ಮಾಡಿದ ಘನ ಘೋರ ಸದ್ದಿಗೆ ಜೇಮ್ಸ್ ಬಾಂಡುಗಳು ಎಚ್ಚತ್ತು ಬಂದು ‘ಬೆಕ್ಕು ತಿಂಭೋ ಸೂಳ್ಯಾ ಮಾಕ್ಳಾ’ ಎಂದು ಮುಗಿಬಿದ್ದು ಸಾಕ್ಷಿ ಸಮೇತ ಅವರನ್ನು ಹಿಡಿದುಬಿಟ್ಟರು. ತಾವು ಹಿಡಿದಂಥ ಎರಡು ಮುದ್ದಾದ ಬೆಕ್ಕುಗಳ ಕಳೇಬರಗಳೊಂದಿಗೆ, ಅಲೆಮಾರಿಗಳಿಬ್ಬರನ್ನು ಕೇಕಕಣ ಎಂದು ಮೆರವಣಿಗೆ ಮಾಡುತ್ತ ಶಾಸ್ತ್ರಿಗಳಮನೆ ಕಡೆ ಬಿಜಯಂಗೈದು ಬಂದಿದ್ದರು. ಅವರೆಲ್ಲರ ಉದ್ದೇಶ ಇದ್ದದ್ದು ಶಾಸ್ತ್ರಿಗಳ ಕೈಯಿಂದ ಪೂಜೆ ಮಾಡಿಸುವುದಲ್ಲದೆ ಹಿಡಿ ಹಿಡಿ ಶಾಪ ಹಾಕಿಸಬೇಕು ಮತ್ತು ಸದರೀ ಕಳೆಬರಗಳಿಗೆ ಇದೇ ಪವಿತ್ರ ವಾತಾವರಣದಲ್ಲಿ ಶಾಸ್ತ್ರೋಕ್ತ ಸಂಸ್ಕಾರ ನಡೆಯಬೇಕು ಎಂಬುದು. ಸತ್ತಿರುವ ಈ ಎರಡು ಬೆಕ್ಕುಗಳ ಜಾಯಮಾನ ಗ್ರಾಮಕ್ಕೇ ಗೊತ್ತಿರುವಂಥಾದ್ದು. ಇವೆರಡು ಅಪ್ಪಿತಪ್ಪಿ ಬೆಕ್ಕಿನ ಜನುಮ ಪಡೆದಿರುವವಷ್ಟೆ. ಇವೆರಡರೊಳಗಿದ್ದದ್ದು ಮಾನವ ಹೃದಯಗಳು; ಲೈಲಾ ಮಜ್ನೂ ಹೃದಯಗಳೆಂದರೂ ಸರಿಯೆ, ಈ ಮನೆಯಿಂದ ಆ ಮನೆಗೆ ಟಣಕ್ಕೆಂದು ಜಿಗಿದು ಮ್ಯಾಂವ್ ಗುಟ್ಟುವುದು. ಮ್ಯಾಂವ್ ಎಂಬ ಶಬ್ದ ಸಾಮಾನ್ಯದ್ದೇನು? ಬಿಲಾವರಿ ಅಸಾವರಿ ರಾಗಳಿಗಿಂತ ಕಡಿಮೆಯಿದ್ದಿರಲಿಲ್ಲ. ಅವೆರಡೂ ಮನೆಯ ಛಾವಣಿ ಏರಿ ಮ್ಯಾಂವ್ ಗುಟ್ಟಲಾರಂಭಿಸಿದರೆ ಸಿಂಗ್ ಬ್ರದರ್ಸ್‌ರವರ ಜುಗಲ್‌ಬಂದಿಗಿಂತ ಮಿಗಿಲಾಗಿರುತ್ತಿತ್ತು. ಇಂಥ ಅಪರೂಪದ ಬೆಕ್ಕುಗಳನ್ನು ಕೊರಚರಟ್ಟಿಯ ನರಮಾಂಸ ಭಕ್ಷಕರು ಕೊಲೆಮಾಡಿ ಬಿಟ್ಟಿರುವುರಲ್ಲಾ?.. ಇವತ್ತು ಈ ಬೆಕ್ಕುಗಳನ್ನು ತಿಂದವರು ನಾಳೆ ಹುಡುಗರುಪ್ಪಡಿಯನ್ನು ಬಿಡುವರೇನು? ನಾಳೆ ಹುಡುಗರುಪ್ಪಡಿಯನ್ನು ತಿನ್ನುವವರು ನಾಡಿದ್ದು ವಯಸ್ಕರನ್ನು ಬಿಡುವರೇನು?..
ನರಪೇತಲ ಸಾಂಬ ಆ ಒಂದು ಕ್ಷಣ ಕುಂತಕನೊಡನೆ ಮಮ್ಮಟ ಮೇಳವಿಸಿದಂತೆ ಅಭೂತಪೂರ್ವವಾಗಿ ಹೊಳೆಯತೊಡಗಿದ.
“ಶಾಸ್ತ್ರಿಗಳೆ.. ಈ ಘೋರ ಅನ್ಯಾಯವನ್ನು ಹೇಗೆ ಸರಿಪಡಿಸುವಿರಿ ಶಾಸ್ತ್ರಿಗಳೇ?” ಅಸು ನೀಗಿರುವ ಈ ಎರಡು ದುರಂತ ಕಾವ್ಯಗಳಿಗೆ ನಿಮ್ಮ ಮಂತ್ರಶಕ್ತಿಯಿಂದ ಮರುಜನ್ಮ ನೀಡಲಾರಿರೇನು?” ಹೃದಯ ತುಂಬ ವೀಕಾಗಿ ಬಿಟ್ಟಿರುವುದೆಂದೂ ತಿಂಗಳ ದಿನಮಾನ ಗಟ್ಟಿಯಾಗಿ ಆವೇಶದಿಂದ ಮಾತಾಡಬೇಡವೆಂದು ಸರಕಾರಿ ವೈದ್ಯ ರಾಮಪ್ಪ ಎಚ್ಚರಿಕೆ ನೀಡಿದ್ದರೂ ಲೆಕ್ಕಿಸದೆ ಸಾಂಬ ವೀರಾವೇಶದಿಂದಲೂ; ವ್ಯಾಕರಣ ಶುದ್ಧವಾಗಿಯೂ ಏಕ್‌ಧಂ ಮಾತಾಡಿ ಕೊಕ್ ಕೊಕ್.. ಕೆಂ ಕೆಂ ಕೆಮ್ಮುತ್ತ ಎಲ್ಲರ ಕಡೆಗೊಮ್ಮೆ ಸಿಂಹಾವಲೋಕನ ಮಾಡಿದನು. ಗುಂಪಿನಲ್ಲಿದ್ದ ಆಪದ್ಭಾಂದವನೋರ್ವ ಜೋರಾಗಿ ಸೀಟಿ ಹಾಕಿ ಮೆಚ್ಚುಗೆ ಸೂಚಿಸಿದನು.
ರಘೂನ ಹಿಂದೆ ನಿಂತಿದ್ದ ಶಾಮನಿಗೆ ಸಾಂಬ ಕಾವ್ಯ ಗುರುವಿನಂತೆ ಗೋಚರಿಸಲು..
ವ್ಯಾಸಪೀಥವನ್ನು ಎಡಗಾಲಿಂದಿದೊದ್ದು ‘ಶಾಂತಂ ಪಾಪಂ’ ಅಂತ ಬಂದ ಶಾಸ್ತ್ರಿಗಳಿಗೆ ಶಂಕರಾಚಾರ್ಯ ಭಗವತ್ಪಾದರಿಗೆ ಎದುರಾದ ಶ್ವಪಚ ಚಂಡಾಲನಂತೆ ಗೋಚರಿಸಲು..
ಕಾವಲಿ ಮೆಲೆ ದೋಸೆ ಸೀದು ಹೋಗುತ್ತಿರುವುದನ್ನು ಲೆಕ್ಕಿಸದೆ ಎಡಗೈಲಿ ಸವುಟು, ಬಲಗೈಲಿ ಚುಚ್ಚಗ ಧರಿಸಿಕೊಂಡೇ ಬಂದ ಅಲುಮೇಲಮ್ಮನಿಗೆ ಶ್ರೀಕೃಷ್ಣಾವತಾರ ಸಮಾಪ್ತಿಯಾದೊಡನೆ ಉದಿಸಿ ಭೂದೇವಿಯನ್ನು ಶೋಕ ತಪ್ತೆಯನ್ನಾಗಿ ಮಾಡಿದ ಕಲಿಯಂತೆ ಗೋಚರಿಸಲು..
ಕಲಿಯುಗದ ಅಂತ್ಯದಲ್ಲಿ ಸಂಬಲವೆಂಬ ಗ್ರಾಮದ ವಿಷ್ಣುಯಶ ಬ್ರಾಹ್ಮಣ ದಂಪತಿಗಳಿಗೆ ಹುಟ್ಟಿ ಪರುಶುರಾಮನಿಂದ ವಿದ್ಯಾಭ್ಯಾಸ ಪಡೆದ ಕಲ್ಕಿ ಮಹಾಶಯನಂತೆ ಮುಂಚೂಣಿಯಲ್ಲಿದ್ದ ರಘುರಾಮನೆಂಬ ಕಾಮ್ರೇಡಿಗೆ ಸಾಂಬನು ಕ್ರಾಂತಿಯ ಬೆಳೆ ತೆಗೆಯಲು ಯೋಗ್ಯವಾದ ಫಲವತ್ತಾದ ಹೊಲವೇ ಮೈವೆತ್ತು ನಿಂತಿರುವಂತೆ ಗೋಚರಿಸಲು
“ಅಯ್ಯಯ್ಯೋ ನಿಮ್ಮನೆ ಹಾಳಾಗ ನಿಮ್ ಹೆಂಡ್ರು ರಂಡ್ಯಾಗ.. ಸತ್ತಿರೋ ಬೆಕ್ಕುಗಳ್ನ ಶಾಶ್ತ್ರಿಗಳ ಮನೆ ಬಾಗಿಲಿಗೆ ತಂದಿದ್ದೀರಲ್ಲೋ ನಿಮ್ ಕೈಗೆ ಕರಿನಗ್ರಾವ್ ಕಡಿಯಾ.. ತೊಲಗ್ರೋ ಆಚೆ.. ನಮ್ಮಪ್ನೋರ ಮನಸ್ಸಿಗೆ ನೋವಾದ್ರೆ ಊರಿಗೆ ಒಳ್ಳೇದಾಗೋದಿಲ್ಲ..” ಎಲ್ಲಿದ್ದಳೇನೋ ಪದ್ದಕ್ಕ ಒನಕೆ ಓಬವ್ವನಂತೆ ಸೀರೆ ಎತ್ತಿ ಕಚ್ಚೆ ಬಿಗಿದು ತೋರುತೊಡೆಗಳನ್ನು ಪುಟಿಸುತ್ತಾ ಸಾಂಬನ ಉಸಿರಳತೆಯಲ್ಲಿ ನಿಂತು ಹೇಷಾರವ ಮಾಡಲು ಎಲ್ಲರೂ ಒಂದು ಕ್ಷಣ ಮೂಗಿನ ಮೇಲೆ ಬೆರಳಿಟ್ಟು ಕೊಂಡರು.
“ಓಹೋ ಪದ್ಮಾವತಿಽಽ ಕಮಲನಯನೇ.. ಶಾಸ್ತ್ರಿಗಳ ಮನೆಯ ಹುಳಿಯ ಪ್ರಭಾವದಿಂದ ಅದ್ಭುತವಾಗಿ ಮಾತಾಡುತ್ತಿರುವೆಯಲ್ಲ.. ನೀನಾಡಿದ ಮಾತುಗಳಿಗೆ ಧಿಕ್ಕಾರವಿರಲಿ. ತೊಲಗಾಚೆ” ಹೀಗೆಂದು ಮಾತಾಡಿದ ಸಾಂಬ ಕೆಲ ವರ್ಷಗಳ ಹಿಂದೆ ಇದೇ ಪದ್ದಕ್ಕನನ್ನು ತೋಪಿನಲ್ಲಿ ಕೆಳಗೆ ಕೆಡವಿಕೊಂಡು ದೊಡ್ಡ ಸುದ್ದಿ ಮಾಡಿದ್ದನು. ತೊಡೆ ಮತ್ತು ಮೊಲೆಗಳ ಮೇಲೆ ನಖಕ್ಷತ ಮಾಡಿ ಆಕೆಯ ಗಂಡನಿಂದಲೂ; ಆಕೆಯ ಕಳ್ಳ ಪ್ರೇಮಿಗಳಿಂದಲೂ ಮೈ ಮೆತ್ತಗಾಗುವಂತೆ ಒದೆಸಿಕೊಂಡಿದ್ದನು. ಗತಕಾಲದ ತಾನು ಮಾಡಿದ ಗುರುತು ಆಕೆಯ ತೊಡೆಯ ಮೇಲೆ ಇರುವುದನ್ನು ಗಮನಿಸಿ ಭಗವಾನ್ ಬಾಹುಬಲಿ ವಿಗ್ರಹದಂತೆ ಮಂದಸ್ಮಿತನಾದನು. ಅವನ ಮೇಲೆ ಘಟ್ಟ ಸೋಪಾನಗಳ ಕೆಳಪಟ್ಟಿಯಲ್ಲಿ ದೇವದಾರು ಆ ಒಂದು ಕ್ಷಣ ಹಲೋ ಹಲೋ ಎಂದು ಮಿಸುಕಾಡಿತು.
“ನಂ ಅನಸೂಯಾಳ ಬೆಕ್ಕು ಕೊಂದೋನು ಯಾವನು ನನ್ನಾಟಗಳ್ಳ.. ಅವನ ಬೇರು ಬಗೆದು ಕೊಡ್ತೀನಿ ತೋರಿಸ್ರಿ ಅವನ್ನ..” ರುಕ್ಕಮ್ಮನ ಏಕಮೇವ ಪ್ರಥಿನಿಧಿಯಾದ ಭವಾನಿ ಗಂಗವ್ವ ಬುಸುಬುಸು ಬೀಡಿ ಎಳೆಯುತ್ತ ಇನ್ನೇನು ಅಲ್ಲಿ ಬರ್‍ತಿದಾಳೆನ್ನುವಷ್ಟರಲ್ಲಿ ಪದ್ದಕ್ಕನಿಗೂ ಸಾಂಬನಿಗೂ ನಡುವೆ ಮಾತಿಗೆ ಮಾತು ಬೆಳೆದು ಪರಸ್ಪರ ಕೈ ಮಿಲಾಯಿಸಿ ತೆಕ್ಕೆಮುರಿ ಬಿದ್ದು ಕೆಳಗೆ ಉರುಳಾಡಲಾರಂಭಿಸಿಬಿಟ್ಟಿದ್ದರು. ಅವರೀರ್ವರ ಜುಗಲ್ ಬಂದಿಯನ್ನು ಪ್ರೋತ್ಸಾಹಿಲೋಸುಗ ತಟ್ಟುತ್ತಿದ್ದ ಚಪ್ಪಾಳೆಗಲೆಷ್ಟೋ, ಹೊಡೆಯುತ್ತಿದ್ದ ಶಿಳ್ಳೆ ಸೀಟಿಗಳೆಷ್ಟೋ?

ಪರಿಶೆ ಪೈಕಿ ಪೈಲ್ವಾನಳಂತಿದ್ದ ಪದ್ದೆಕ್ಕಗೆ ದರ್ಭೆ ಕಡ್ಡಿಯಂತಿದ್ದ ಸಾಂಬ ಯಾವ ಲೆಕ್ಕ? ಸಾಂಬನೂ ಮಾಜಿ ಪೈಲ್ವಾನನೇ. ಕಂಡ ಕಂಡ ಹೆಂಗಸರೆದುರಿಗೆಲ್ಲ ತನ್ನ ದೇಹದ ಮುನ್ನೂರಾರವತ್ತೈದು ಮಾಂಸ ಖಂಡಗಳನ್ನು ಕುಣಿಸೀ.. ಕುಣಿಸೀ ಸೊರಗಿ ಕಡ್ಡಿಯಂತಾಗಿಬಿಟ್ತಿದ್ದಂಥವನು. ಕರಿಣಿಯಂಥ ಪದ್ದಕ್ಕ ಕ್ಷಣಾರ್ಧದಲ್ಲಿ ಚಿತ್ ಮಾಡಿದಳಲ್ಲದೆ; ಮಣ್ಣಿಗೆ ಬೆನ್ನು ಮಾಡಿದ ಅವನೆದೆಯ ಮೇಲೇರಿ ಕೂತು ಮುಖ್ಯವಾಗಿ ತನ್ನ ಮಾಲ್ಕಿನ್ ಅಲಮೇಲಮ್ಮನ ಕಡೆ ನೋಡಿದಳು. ತನಗೆ ಒಂದು ತುತ್ತು ಅನ್ನ ನೀದುವಾಕೆಯನ್ನೂ ಪರೋಕ್ಷವಾಗಿ ಬೆದರಿಸಲು ಈ ಸುವರ್ಣಾವಕಾಶವನ್ನು ಬಳಸಿಕೊಂದಿದ್ದಳು.
ಆಕೆಯ ಗಂಡುಬೀರಿತನಕ್ಕೆ ಪ್ರೇಕ್ಷಕರೆಲ್ಲ ಬೆರಗಾದರು.
“ಒನ್.. ಟೂ.. ತ್ರೀ.. ಫೋರ್..” ಬಾಕ್ಸಿಂಗ್ ರೆಫ್ರೀ ಥರ ಒಬ್ಬ ಲೆಕ್ಕಹಾಕತೊಡಗಿದ.
“ಥೂ ನಿನ್ನ ಮುಖಕ್ಕೆ ಮಂಗಳಾರತಿ ಎತ್ತ.. ಸೀರೆ ಉತ್ಕೊಂಡು ಬಳೆ ಹಾಕ್ಕೊಂಡು ಎಲ್ಲವ್ವನ ಗುಡಿಗೆ ಹೋಗೋ” ಎಂದೊಬ್ಬ ಛೀಮಾರಿ ಹಾಕಿದರೆ,
“ನಿನ್ನ ಬಾಸ್ ಅಂಥ ತಿಳ್ಕೊಂಡಿದ್ದಕ್ಕೆ ನಮ್ಮನ್ನ ನಾವು ಎಕ್ಕಡ್ದೀಲೆ ಹೊಡ್ಕೊಂತೀವಿ” ಎಂದು ಇನ್ನೊಬ್ಬ ಥೂ ಮಾಡಿದನು.
ಈ ಮುಂಡೆ ತನ್ನನ್ನು ಅಪಮೌಲ್ಯಗೊಳಿಸಿಬಿಟ್ಟಳಲ್ಲಾ!.. ಎಂದು ಚಿಂತಿಸುತ್ತ ಸಾಂಬ ಗತಪ್ರಾಣನಾಗುವವನಂತೆ ತುಂಬ ತಿಣುಕಾಡತೊಡಗಿದನು.
ಹಾಗೆ ಅವನು ತನ್ನ ಕಾಲ ಇಕ್ಕಳದಲ್ಲಿ ಸಿಲುಕಿ ವಿಲವಿಲನೆ ಒದ್ದಾಡುತ್ತಿರುವಾಗ ಮೇಲೆ ಅಮರಿದ್ದ ಪದ್ದಕ್ಕ ಗತಕಾಲದ ದಿನಗಳನ್ನು ಮೆಲುಕು ಹಾಕಿದಳು. ಈ ರಾಸ್ಕಲ್ ತಾನು ತೋಪಿನಲ್ಲಿ ಹೋಗುತ್ತಿರುವಾಗ ಸರಕ್ಕನೆ ಬರಸೆಳೆದದ್ದು.. ಒಂದೇ ಏಟಿಗೆ ಕೆಳಗೆ ಕೆಡವಿಕೊಂಡು ಬಿಟ್ಟಿದ್ದು; ನಿಮಿಷಾರ್ಧದಲ್ಲಿ ವಸ್ತ್ರಗಳನ್ನು ತೊಲಗಿಸಿದ್ದು; ಖಾರಪುಡಿ ಕುಟ್ಟುವ ಮೆಷನ್ನಿನಂತೆ ದಢಡಧನೆ…ಇದನ್ನೆಲ್ಲ ತಾನು ಆಗಾಗ್ಗೆ ನೆನಪಿಸಿಕೊಂಡು ಬಿಸಿ ಏರಿದ್ದುಂಟು. ಅತೀವ ಸಂತೋಷ ರೋಮಾಂಚನ ಅನುಭವಿದ್ದುಂಟು. ಇಂಥ ಪುಣ್ಯಾತ್ಮ ಕಾಲಾನುಸಾರ ಬಡಕಲಾಗಿರಬಹುದು. ಇವನು ನೀಡಿದ ಅನುಭವಗಳನ್ನು ಮರೆತು ಕೆಳಗೆ ಕೆಳಗೆ ಕೆಡವಿಕೊಂಡು ಬಿಟ್ಟು ಅವಮಾನ ಮಾಡಿಬಿಟ್ಟಿರುವೆನಲ್ಲಾ! ಸಮಸ್ತ ಜನರೆದುರು ನಗೆಪಾಟಲು ಮಾಡಿರುವೆನಲ್ಲಾ!…ತಾವಿಬ್ಬರು ಒಮ್ಮೆ ಕೂಡಿದ್ದೆವೆಂದರೆ ಮುಗಿಯಿತು, ಸುಖ ದುಃಖಗಳೆರಡರಲ್ಲೂ ಕೂಡಿದಂತೆಯೇ ಲೆಕ್ಕ!..
ಹೀಗೆ ಯೋಚಿಸುತ್ತ ವೀರವನಿತೆಯಾದ ಪದ್ದಕ್ಕ ತಾನು ಕೆಳಗೆ ಅಂಗಾತವಾಗಿ ಮೇಲೆ ಸಾಂಬನನ್ನು ಎಳೆದುಕೊಂಡುಬಿಟ್ಟಳು. ಈ ಅಚಾನಕ್ ಘಟನೆಯಿಂದ ದಿಗ್ಭ್ರಾಂತನಾದ ಅವನು ಆಕೆಯ ಕಿವಿಯಲ್ಲಿ ಧನ್ಯವಾದಗಳು ಅಂತ ಹೇಳಿದವನು ಆಮೇಲೆ ಮುಖ ಎತ್ತಿ ” ಈ ಸಾಂಬ ಶಿವನನ್ನು ಏನೆಂದು ತಿಳಿದುಕೊಂಡಿರುವಿರಿ ಎಲೈ ಕಾಂತೆ ಸುಗುಣವಂತೆ” ಎಂದು ಕೇಕೆ ಹಾಕಿದನು.
ಅವನ ಅಭಿಮಾನಿಗಳು ಶೀಟಿ ಹಾಕಿ ಉಘೇ ಅಂದರು.
ಇಂಥದೊಂದು ಚೋದ್ಯಕ್ಕೆ ಅದುವರೆಗೆ ಬೆರಗಾಗಿದ್ದ ಭವಾನಿ ಗಂಗವ್ವ ಸೀರೆಯನ್ನು ತುಸು ಮೇಲೇರಿಸಿದಳು. ಚುಟ್ಟವನ್ನು ತುಟಿಯ ಕೊನೆ ಮಗ್ಗುಲು ಸಿಕಿಸಿಕೊಂದು ಮೂಗು ಬಾಯಿಯಿಂದ ದಾವಾನಲ ಸಮಾನವಾದ ಹೊಗೆ ಬಿಟ್ಟಳು.
“ನಿಮ್ ಬಾಯಿಗೆ ನನ್ನಾಟುಯ್ಯಾ… ನಾಚ್ಕೆ ಹೇಸ್ಗೆ ಐತೊ ಇಲ್ರೋ ನಿಮ್ಗೆ.. ಇದೇನು ಓಣಿ ಅಂದ್ಕೊಂಡೀರೋ ಬಯ್ಲಾಟದ ಠೇಜು ಅಂದ್ಕೊಂಡೀರೋ.. ” ಎನ್ನುತ್ತ ಮುಂದೆ ಮೂರು ಮಾರು ಕುಪ್ಪಳಿಸಿದಳು.
ಸಾಂಬನೆಂಬ ಜಿರಳೆಯನ್ನು ತನ್ನೆರಡೂ ಕೈಗಳಿಂದ ಮುಗಿಲೆತ್ತಿ ಅಲ್ಲೇ ಇದ್ದ ಕಿರುಗಟ್ಟೆಯ ಮೇಲೆ ಕುಕ್ಕರಿಸಲು ಆ ಮಹಾಶಯನು ವ್ಯಾಸಪೀಠವನ್ನಲಂಕರಿಸಿದ ಬಾಸನ ಊರುಭಂಗ ನಾಟಕದ ತಾಳೆಗರಿ ಕಟ್ಟಿನಂತೆ ಹೊಳೆದನು.
“ಎಲೇ ಚಿನಾಲಿ.. ನಿನೇನು ಹೆಣ್ಣೋ.. ಇಲ್ಲಾ ದೆವ್ವವೋ.. ” ಕೆಳಗೆ ಅಂಗಾತ ಬಿದ್ದು ಕಾಳೋರಗದಂತೆ ಬುಸುಗುಟ್ಟಿತಿರ್ಪ ಪದ್ದಕ್ಕನ ಕೊರಳಿಗೆ ಕೈಹಚ್ಚಿ ಹಿಡಿದೆತ್ತಿದಳು. ಆಕೆಯ ಬಿಚ್ಚಿಕೊಂದಿದ್ದ ಕುಪ್ಪಸದ ಗುಂಡಿಗಳನ್ನು ಹಾಕಿದಳು. ತ್ರಿವರ್ಣ ದ್ವಜದಂತೆ ಹಾರಾಡುತ್ತಿದ್ದ ಸೆರಗನ್ನು ಎದೆ ತುಂಬ ಹೊದ್ದಿಸಿದಳು.
“ಅತ್ತೆಮ್ಮಾ.. ಬಿಡು ನನ್ನ.. ಆ ಸಾಂಬನಿಗೆಗೊಂದು ಗತಿ ಕಾಣಿಸುವೆನು” ಎಂದು ಕುಕಿಲ್ದ ಆಕೆಯ ಕೆನ್ನೆಗೆ ಪಟಾರನೆ ಒಂದು ಏಟು ಕೊಟ್ಟಳು.
ಬರಸಿಡಿಲಿನಂತೆರಗಿದ ಏಟಿಗೆ ತತ್ತರಿಸಿದ ಪದ್ದಕ್ಕ ತನ್ನ ವ್ಯಾಕರಣ ಶುದ್ಧವಾದ ಭಾಷೆಯನ್ನು ಆ ಕ್ಷಣವೇ ಕಳೆದುಕೊಂಡು “ಅಯ್ಯಯ್ಯೋ ಯಾರಾದ್ರು ಬಂದು ಬುಡುಸಿಕೊಳ್ರೆಪ್ಪೋ.. ಈ ಮುದಿ ದೆವ್ವ ನನ್ನ ಸಾಯಿಸಲಾಕ ಹತ್ಯಾತ್ರೆಪೋ” ಎಂದು ಲಭೋ ಲಭೋ ಬಾಯಿಬಡಿದುಕೊಳ್ಳತೊಡಗಿದಳು.
“ನನ್ನ ಮುದಿ ದೆವ್ವ ಅಂತೀ ಭೋಸೂಡಿ” ಅಂತ ಗಂಗವ್ವ ಮತ್ತೊಂದು ಕೆನ್ನೆಗೆ ಛಳೀರನೆ ಏಟು ಬಿಟ್ಟಳು.
“ಅಯ್ಯಯ್ಯೋ” ಅರಣ್ಯ ರೋಧನ ಮಾಡಲಾರಂಭಿಸಿದ ಪದ್ದಕ್ಕನನ್ನು ಆಲಂಗಿಸಿಕೊಂದು ಹುಚ್ಚಿ ಅಳಬ್ಯಾಡ ಸುಮ್ಕಿರು.. ಸಣ್ ಹುಡುಗರಂತೆ ಅಳತೀಯಲ್ಲೇ.. ಎಲ್ರ ಎದುರಿಗೆ ಆ ಸಾಂಬನನ್ನು ಮ್ಯಾಲೆಳೆಕೊಂಡೆಯಲ್ಲ ಇದು ಸರಿ ಏನು?” ಎಂದು ಪರಿಪರಿಯಾಗಿ ರಮಿಸುತ್ತ.. ಚೆಂಡಿಹಿಡಿದ ಮಗುವನ್ನು ತಾಯಿ ಸಮಧಾನಪಡಿಸುತ್ತಿರುವ ಹಾಗೆ.. ಕರೆದುಕೊಂಡು ತನ್ನ ಮನೆಯ ಕಡೆಗೆ ಹೋದಳು.
ಹೀರೋಯಿನ್ನೇ ಹೋದ ಮೇಲೆ ಸಿನಿಮಾ ನಡೆಯುವ ಬಗೆಯಾದರೂ ಹೇಗೆ?
ಸರಕಾರೀ ಪುರಾನ ಕಡತದಿಂದ ನುಜ್ಜುಗುಜ್ಜಾದ ಎವಿಡೆನ್ಸು ಹೊರಬರುವಂತೆ ಸಾಂಬನು ಕಿರುಗಟ್ಟೆ ಮೇಲಿಂದೆದ್ದೊಡನೆ ಬಿರುಗಾಳಿಗೆ ಸಿಕ್ಕ ವಯಸ್ಸಾದ ಅಡಿಕೆ ಮರದಂತೆ ವಾಲಾಡತೊಡಗಿದನು. ಎಲ್ಲಿ ತಮ್ಮ ಬಾಸು ಬೋರ್ಗೊಯ್ದು ಬಿಸುಟ ಎಳೆ ಬಳ್ಳಿಯಂತೆ ಭೂದೇವಿ ಮೇಲೊರಗಿ ಬಿಡುವನೋ ಎಂದು ಹೆದರಿದ ಸಿಬಿಐ ಕ್ಯಡರಿನ ಜೇಮ್ಸ್ ಬಾಂಡುಗಳು ತಮ್ಮ ಕೈಲಿದ್ದ ಬೆಕ್ಕುಗಳ ಕಳೆಬರಗಳನ್ನೆಸೆದು ಪೊಡರ್ವ ಸಿಡಿಲಿನ ರವಕೆ ಕೂಡೆಗಳೇಂ ತಡೆಪುವೆ ಎಂಬಂಥ ಒಸರುವ ಮಾತುಗಳನ್ನಾಡುತ್ತ ಓಡೋಡಿ ತಮ್ಮ ಬಾಸ್‌ನನ್ನು ಹಿಡಿದುಕೊಂಡರು. ಅವನು ಅವನಿಗೊರಗಿದರೆಲ್ಲಿ ಭೂಮಿ ಸುಟ್ಟು ರಾಗಿರೊಟ್ಟಿಯಾಗಿ ಬಿಡುವುದೋ ಎಂಬಂತೆ.
ಸಾಂಬ ಎಂಬ ಕರುವಿನ ಮೇಲೆ ಹತ್ತಾರು ಬೊಕ್ಕೆಗಳೆದ್ದಂತೆ ಅಭಿಮಾನಿಗಳು ಅವನನ್ನು ಹಾಗೆ ಅಮರಿಕೊಂಡು ಹಿಂದೆ ಬಂದರೆ ಒದೆಯಬೇಡಿ ಮುಂದೆ ಬಂದರೆ ಹಾಯಬೇಡಿ ಕಂದನಿವ ನಿಮ್ಮವನೆಂದು ಕಾಣಿರಿ ಎಂದು ಬೆಂದ ಹುಣ್ಣುಗಳಂಥ ಜನರ ನಡುವೆ ದಾರಿ ಮಾಡಿಕೊಂಡು ಹಾಗೇ ನಡೆಸಿಕೊಂಡು ನ.. ಡೆ.. ಸಿ.. ಕೊಂ.. ಡು ಮಣ್ಣಿನ ಮನೆಯನ್ನು ದಾಟಿ, ಓಣಿಗಳನ್ನು ದಾಟಿ ಸರಕಾರಿ ಆಸುಪತ್ರೆಯ ಕಡೆ ಹೋಗಲು..
ಮಾರ್ಜಾಲಕ್ಕೆ ತುಸು ಜೀವ ಬಂದು ಮಿಸುಕಾಡಿದಂತಾಯ್ತು..
ಆರೇನು ಮಾಡುವರು ಆರಿಂದೇನಹುದು! ಪೂರ್ವ ಜನ್ಮದ ಕರ್ಮವಿಧಿ ಬೆನ್ನು ಬಿಡದು! ಎಂಬರ್ಥ ಬರುವಂತೆ ಮ್ಯಾಂವ್ ಗುಟ್ಟಿ ತನ್ನ ಬಲಗಾಲನ್ನು ಪ್ರಿಯತಮೆ ಕಾಮೋಷಿಯ ಕಳೆಬರದ ಮೇಲೇರಿ ಒಂದು ಧೀರ್ಘ ಉಸಿರೆಳೆದು ಅದು ಬಿಟ್ಟ ಪ್ರಾಣವು ಕ್ಷಣಕ್ಕೊಂದು ಛಂದದಲ್ಲಿ ಊರ್ಧ್ವಮುಖವಾಗಿ ಚಲಿಸುತ್ತಾ ಚ.. ಲಿ.. ಸು.. ತ್ತಾ ಪರಮಾತ್ಮನ ಪೂರ್ನ ಕುಂಭದ ಜೀವ ಕಳಸದಲ್ಲಿ ಲೀನವಾಗಳು..
ನೆರೆದಿದ್ದ ಜನವು ಅವಧೂತರೋಪಾದಿಯಲ್ಲಿ ನಿಟ್ಟುಸಿರುಬಿಟ್ಟು ಹಗುರಾಗಲು..
ಪರಮೇಶ್ವರ ಶಾಸ್ತ್ರಿಗಳು ಆಪತ್ಕಾಲೇ ನಾಸ್ತಿ ಮರ್ಯಾದಾ ಎಂದು ಗೊಣಗುತ್ತಲಿರುವಾಗಲೇ ಅವರ ಸುಸಂಸ್ಕೃತ ಹೃದಯದ ಬಲ ಹೃತ್ಕವಾಟದ ಮಗ್ಗುಲ ಗುಗ್ಗುಳ ಕಾಂತಿ ಹೀನವಾಗತೊಡಗಿತು. ತಮ್ಮ ಬಾಳ ಸೊಡರದೆಲ್ಲಿ ಸದರಿ ಗ್ರಾಮದ ಪ್ರಜೆಗಳ ಬಿಸಿಯುಸಿರಿಗೆ ನಂದಿ ಬಿಡುವುದೋ ಎಂದು ಹೆದರಿ ಸಾಧ್ವಿ ಅಲುಮೇಲಮ್ಮ ತಮ್ಮ ಸುಪುತ್ರ ಶಾಮನ ಸಹಾಯ ಪಡೆದು ತಮ್ಮ ಮಾವನವರನ್ನು ಹಾಗೇ ಒಳಗಡೆ ನಡೆಸಿಕೊಂಡು ಹೋಗಿ ಹಂಸತೂಲಿಕಾ ತಲ್ಪದ ಮೇಲೆ ಮಲಗಿಸುತ್ತಿರಲು..
ಜನರು ಒಬ್ಬರ ಮುಖ ಒಬ್ಬರು ನೋಡಿಕೊಂಡರು.
ಬೆಣ್ಣೆಯ ಋಣ ತೀರಿಸಿದ ಎಣ್ಣೆಯಂತೆ
ವಸ್ತ್ರದ ಋಣ ತೀರಿಸಿದ ಅನ್ನದಂತೆ
ಹೆಣ್ಣಿನ ಋಣ ತೀರಿಸಿದ ಹೊನ್ನಿನಂತೆ
ಮಣ್ಣಿನ ಋಣ ತೀರಿಸಿದ ಕ್ಷಣದಂತೆ
ಅವರೆಲ್ಲ ಒಬ್ಬೊಬ್ಬರಾಗಿ ಅಲಿಂದ ಕರಗಿ ಹೋಗುತ್ತಿರಲು..
ಅದುವರೆಗೆ ಅದನ್ನೆಲ್ಲ ನೋಡುತ್ತ ನಿಂತಿದ್ದ ರಘೂಗೆ ನಶ್ವರ ಬದುಕು ನೀರಮೇಲಣ ಗುಳ್ಳೆ ಅನ್ನಿಸಿಬಿಟ್ಟಿತು. ಪ್ರಾಧಾನಮಂತ್ರಿ ಶ್ರೀಮತಿ ಇಂದಿರಾಗಾಂಧಿ ಮತ್ತವರ ಸಂಗಡಿಗರ ಸರ್ವಾಧಿಕಾರಿ ಮನೋಭಾವದ ಜೊತೆಗೆ ವಿರೋಧ ಪಕ್ಷದವರ ಗದ ಮುರುಗಿ ಆಟ ಅಕ್ಬರ್‌ನಂಥವರ ನೇತೃತ್ವದ ಭೂಗತ ಚಟುವಟಿಕೆ ಎಲ್ಲ ಕಣ್ಣಿಗೆ ಕಟ್ಟಿದಂತೆ ನೆನಪಾದವು. ಸಾಮಾಜಿಕ ಬದುಕೇ ಸೀಳಿಹೋಗಿ ದ್ವಿದಳಧಾನ್ಯದೋಪಾದಿಯಲ್ಲಿ ಗತಪ್ರಾಣವಾಗಿ ಬಿದ್ದಿರುವ ರೀತಿಯಲ್ಲಿ; ಮಾನವ ಮನಸ್ಸಿನ ಎರಡು ದೇಹಗಳೇ ಉರುಳಿರುವ ರೀತಿಯಲ್ಲಿ ಬಿದ್ದಿರುವ ಆ ಎರಡು ಕಳೇಬರಗಳನ್ನು ತಿಂದಾದರೂ ತಂತಮ್ಮ ದೇಹದ ಪಂಚಭೂತಗಳನ್ನು ತಣಿಸಿಕೊಳ್ಳಲು ಆಸ್ಪದ ಮಾಡಿಕೊಡಬೇಕೆಂದರೆ ಕೊರಚರಿಬ್ಬರು ಆಗಲೆ ಅಲ್ಲಿಂದ ಪರಾರಿಯಾಗಿಬಿಟ್ಟಿರುವರು.
ಪದವೀಧರನೂ, ಉದಯೋನ್ಮುಖ ಬರಹಗಾರನೂ ಆದ ಶಾಮಾಶಾಸ್ತ್ರಿಯ ಸಹಾಯ ಪಡೆಯುವುದು ಅನಿವಾರ್ಯವಾಯಿತು. ಪದ್ದಕ್ಕಳ ರೌದ್ರಾವತಾರವನ್ನೆ ಕನ್ನಲ್ಲಿ ತುಂಬಿಕೊಂಡು ದಿಗ್ಭ್ರಮಿತಳಾಗಿ ತಾಯಿ ತಾತನವರ ಎಡಪಾರ್ಶ್ವದಲ್ಲಿ ಕೂತಿದ್ದರಿಂದ ಕಾವಲಿಗೆ ಸೀದು ಅಂಟಿಕೊಂಡಿದ್ದ ದೋಸೆಯನ್ನು ಬಿಡಿಸುವುದರಲ್ಲಿ ಮಗ್ನನಾಗಿದ್ದ ಶಾಮಾಶಾಸ್ತ್ರಿ ರಘುರಾಮನ ಒಂದೇ ಕೂಗಿಗೆ ಹೊರಬಂದನು.
ಹೊಸದಾಗಿ ಮದುವೆಯಾದ ಷೋಡಷಿ ಗಂಡನ ಲಘು ಸಂಜ್ಞೆಗೆ ಡವಗುಟ್ಟುವ ಎದೆಯೊಡನೆ ಹೊರಬರುತ್ತಾಳಲ್ಲ ಹಾಗೆ.. “ನೀವು ಬೆಳಗಿನ ಉಪಹಾರಕ್ಕಾಗಿ ಬಂದಿರುವಾಗಲೇ ಈ ಅಹಿತಕರ ಘಟನೆ ನಡೆದುಬಿಡಬೇಕೆ!: ಎಂದು ಹೇಳಲಾಗದೆ ಕಂಪಿಸುವ ತುಟಿಗಳೊಡನೆ ಅವನು ಇವನನ್ನು ನೋಡಿದರೆ..
“ಮನುಷ್ಯನ ಜೀವನ ಒಂದು ಚುಂಬನ ಇದ್ದ ಹಾಗೆ.. ಹಂಚಿಕೊಡದಿದ್ದರೆ ಅದರಿಂದ ಏನೂ ಉಪಯೋಗವಿಲ್ಲ.. ನನ್ನಂಥ ಅತಿಥಿ, ನಿನ್ನಂಥ ಮೀನು ಎರಡು ಮೂರು ದಿನಗಳೊಪ್ಪತ್ತಿನಲ್ಲಿ ಕೊಳೆತು ನಾರದೆ ಇರುವುದಿಲ್ಲ” ಎಂದು ಏನೇನೋ ಅರ್ಥಗರ್ಭಿತವಾಗಿ ಹೇಳಲು ಪ್ರಯತ್ನಿಸುತ್ತ ಇವನು ಅವನ ಮುಖವನ್ನು ನೋಡಿದನು.
“ಥೂ! ನಿನ್ನ ಜನ್ಮಕ್ಕಿಷ್ಟು ಬೆಂಕಿ ಹಾಕ…ಸತ್ತಿರೋದು ನಾವಲ್ಲ್ರೋ ನೀವು.. ಹಿಟ್ಟಿನ ಗೂಳಿಯಲ್ಲಿ ಮಾಡಿದ ಬೊಂಬೆಗಳಾದ ನೀವು ನಮ್ಮ ಹಾಗೆ ವಿಲವಿಲನೆ ಒದ್ದಾಡಿ ಸಾಯುವ ದಿನ ದೂರವಿಲ್ಲ” ಎಂದು ಅರ್ಥ ಬರುವಂತೆ ಆ ಎರಡು ಕಳೇಬರಗಳು ಅವರಿಬ್ಬರನ್ನು ಅಣಕಿಸಿದವು.
ಕಳೆದ ವಾರ ಓತಿಕ್ಯಾತ ಸತ್ತಿದ್ದಕ್ಕೂ ದೊಡ್ಡ ರಂಪಾಟ ಮಾಡಿದ್ದ ಅವಿವಾಹಿತೆ ಸಾವಿತ್ರಿ ಹೋಗಬೇಡೆ.. ಸತ್ತಿರೋವ್ನ ಕಂಡ್ರೆ ನಿನ್ನ ಬುದ್ಧಿ ನೆಟ್ಟಗಿರೋಲ್ಲ” ಎಂದು ಹೆತ್ತವರು ಹಾಕಿದ ಲಕ್ಶ್ಮಣ ಗೆರೆಯನ್ನು ಲೆಕ್ಕಿಸದೆ ಓಡಿ ಬಂದವಳೆ “ಅಯ್ಯಯ್ಯೋ ಏನು ಕರ್ಮ ಮಾಡಿದ್ರೋ, ಹೀಗೆ ಸಾಯೋಕೆ…ಬದಿಕಿರೋ ಮಟ ಒಬ್ಬರನ್ನೊಬ್ಬ್ರು ಹರಕೊಂಡು ತಿಂದ್ರಿ.. ಒಂದಿನ ನೆಟ್ಟಗೆ ಕುಂತು ಮಾತಾಡ್ಲಿಲ್ಲ ’ ಎಂದೇನೋ ಅಬ್ಬರಿಸತೊಡಗಿದಳು…ಆಕೆ ಅವುಚಿಕೊಂಡ ಕಾಮೋಷಿಯನ್ನು ಆಕೆಯನ್ನು ಬಿಡಿಸಿಕೊಳ್ಳುವಷ್ಟರಲ್ಲಿ ಸಾಕುಸಾಕಾಗಿಹೋಯಿತು ಅವರೀರ್ವರಿಗೆ..

ಆಕೆ ಲಭೋ ಲಭೋ ಬಾಯಿ ಬಡಿದುಕೊಳ್ಳುತ್ತಿದ್ದುದನ್ನು ಲೆಕ್ಕಿಸದೆ ಶಾಮ ಕಾಮೊಷಿಯನ್ನು ಕೈಗೆ ತೆಗೆದುಕೊಂಡವನೆ ಅರ್ಥವಾಗದ ನೆನಪುಗಳಿಂದ ಜಜ್ಜಿ ಹೋಗಿ ಕಣ್ಣು ತುಂಬಿಕೊಂಡು ಬಿಟ್ಟನು. ತನ್ನ ಹೃದಯವೇ ಅಂಗೈ ತುಂಬಿಕೊಂಡು ಬಿಟ್ಟಿರುವಂತೆ ಭಾಸವಾಯಿತು. ಮಸಾಲೆದೋಸೆ ಕಾವಲಿಗೆ ಸೀದು ಹೋದಂತೆ ಅವನ ಕಾಲುಗಳು ನೆಲಕ್ಕೆ ಕಿತ್ತಿಡಲಾರದಷ್ಟು ಅಂಟಿಕೊಂಡು ಬಿಟ್ಟವು. ನೆನಪುಗಳಿಗೆ ಅಕ್ಷರ ಮತ್ತು ಶಬ್ದ ರೂಪ ಕೊಟ್ಟರೆಲ್ಲಿ ರಘುವೇ ಮೊದಲಾದ ನರಮಾನವರು ತನ್ನನ್ನು ಅದೆಲ್ಲಿ ರಮಿಸಿ ತಮಗೆ ತಾವೇ ದೊಡ್ಡವರಾಗಿ ಬಿಡುವರೋ ಎಂದು ಅವುಡುಗಚ್ಚಿಕೊಂಡನು. ಅವುಡುಗಚ್ಚಿಕೊಂಡೇ ತನಗೆ ಸ್ವಾಂತನ ಶಿಕ್ಷಣ ನೀಡದೆ ಹೋದ ತಾತನನ್ನು; ತಾಯಿಯನ್ನು ಶಪಿಸಿದನು. ಇನ್ನೊಬ್ಬರಿಗೆ ಸಮಾಧಾನ ಹೇಳುವ ಪಾಠ ಕಲಿಯದ ತಾನು ಯಾವ ಪುರುಷಾರ್ಥಕ್ಕೆ ಬದುಕಿರುವುದೆಂದುಕೊಂಡನು.

ಕೈಯಲ್ಲಿ ಮಾರ್ಜಾಲದ ಕಳೇಬರ ಹಿಡಿದುಕೊಂಡಿದ್ದ ರಘು ಅವನ ಹೆಗಲ ಮೇಲೆ ಕೈ ಇರಿಸಿ ಧೈರ್ಯದಿಂದ ಮುಂದೆ ಹೆಜ್ಜೆ ಇರಿಸುವಂತೆ ಸನ್ನೆ ಮಾಡಿದನು.
ಆ ಸ್ಪರ್ಶದಿಂದಾಗಿ ಶಕ್ತಿ ಸಂಚಲನದಿಂದ ಒಂದೊಂದಾಗಿ ಹೆಜ್ಜೆ ಇಕ್ಕ ತೊಡಗಿದ ಅವನು ಮುಂದೆ ಮುಂದೆ.. ಮಹಾತ್ಮಾಗಾಂಧೀಜಿಯವರ ಶವ ಹೊತ್ತು ಕೊಂಡಿರುವವನಂತೆ.. ರಘುಪತಿ ರಾಘವ ರಾಜಾರಾಂ ಪದ ನೆನಪು ಮಾಡಿಕೊಳ್ಳುತ್ತಿರುವವನಂತೆ.. ಅದರೊಂದಿಗೆ ಸೋಹ್ನಿ ಮಹಿಪಾಲ್; ಹೀರಾ ರಾಂಜಾ; ಲೈಲಾ ಮಜ್ನೂ; ರೋಮಿಯೋ ಜೂಲಿಯಟ್ ಮುಂತಾದ ಅಮರ ಪ್ರೇಮಿಗಳ ಅಮರ ಪ್ರೇಮ ಕಥಾನಕಗಳನ್ನು ನೆನಪು ಮಾಡಿಕೊಳ್ಳುತ್ತಿರುವವನಂತೆ ಹಿಂದೆ ಹಿಂದೆ ಹೆಜ್ಜೆ ಇಕ್ಕಲಾರಂಭಿಸಿದ ರಘುರಾಮ..
ಅವರಿಬ್ಬರು ಮಾಳಿಗೆ ಮೇಲೆ ಬೀದಿ ಬದಿ; ಕಿಟಕಿ ಬಾಗಿಲೇ ಮುಂತಾದ ಕಡೆ ಬಾಯಿಗೆ ಬಟ್ಟೆ ಇಟ್ಟುಕೊಂಡು ನಿಂತಿದ್ದ ಮಂದಿಗೆ ಹೇಗೆ ಕಾಣುತ್ತಿದ್ದರಪ್ಪಾ ಅಂದರೆ ಸಂಪೂರ್ಣ ರಾಮಾಯಣವನ್ನು ಹಾಡಿನ ಮೂಟೆಯಲ್ಲಿ ಎದೆಯೊಳಗಿಟ್ಟುಕೊಂಡು ಒಂದು ಕೈಲಿ ಅಜೇಯವಾದ ಧನಸ್ಸು! ಇನ್ನೊಂದು ಕೈಲಿ ತಂಬೂರಿಯನ್ನಿಟ್ಟುಕೊಂಡು ಅಶ್ವಮೇಧದ ಅಂಕಣದ ಕಡೆ ನಡೆಯುತ್ತಿದ್ದ ಪುರಾಣ ಪ್ರಸಿದ್ಧ ಅವಳಿ ಜವಳಿಗಳಾದ ಲವಕುಶರು ನಡೆಯುತ್ತಿದ್ದಾರೇನೋ ಎಂಬಂತೆ.
ಜನ ಬಿಕ್ಕಿಬಿಕ್ಕಿ ನೋಡುತ್ತಿರುವಾಗ ಅವರು ನಡೆಯುತ್ತ ಬಸವನ ಬಾವಿ ತಗ್ಗಿನ ಕಡೆ ನಡೆದಿಳಿದು ಕಣ್ಮರೆಯಾದರು.
*
*
*
ಅರ್ಥ ಬರುವಂತೆ ಇವನು ಅವನನ್ನು ನೋಡಿದನು.
‘ಪೊನ್ನಂ ರನ್ನಂ ಕೂಡಿದೊಡೆನ್ನೀ ವಾಗ್ವಧುಗೆ ಭೂಷಣಂ ಪೆರತುಂಟೇ’
ಈ ಪ್ರಕಾರವಾಗಿ ತಂತಮ್ಮ ಕೈಗಳಲ್ಲಿ ಮೂಷಕ ವೈರಿಗಳ ಕಳೇಬರವನ್ನು ಕೈದು ಮಾಡಿಕೊಂಡು ಅವರು ಧೀರೋದಾತ್ತವಾದ ಹೆಜ್ಜೆ ಇಕ್ಕುವ ಪರಿಯನ್ನು ಓಣಿಯ ಮಂದಿ ಕಣ್ತುಂಬ ನೋಡಿದರು. ಅವಾವುದಕ್ಕೂ ಬೇಸರಿಸದೆ ಅವರು ದ್ವಿದಳ ಧಾನ್ಯ ಎರಡು ಹೋಳಾದ ಪರಿಯಂತೆ, ಒಂದು ಕಾವ್ಯದ ಅಲಂಕಾರ ಛಂದಸ್ಸುಗಳಂತೆ; ಒಂದು ಆತ್ಮದ ಎರಡು ದೇಹಗಳಂತೆ, ತಮ್ಮ ನಾಲ್ಕೂ ಪಾದಗಳಿಂದ ಭೂಮಿಯನ್ನು ಅಳೆಯುತ್ತಿರುವವರಂತೆ ತಮ್ಮ ಪಾಡಿಗೆ ತಾವು ನಡೆಯುತ್ತಿದ್ದರು.
ಆ ಓಣಿ ದಾಟಿ ಈ ಓಣಿಗೆ ಬಂದರು.
ತಂತಮ್ಮ ಕೈಗಳಲ್ಲಿರ್ದ ಕಳೇಬರಗಳಿಗೆ ತಾವೇ ಮುಖ ಸೊಟ್ಟ ಮಾಡಿಕೊಳ್ಳತೊಡಗಿದರು.
ತಂತಮ್ಮ ದೇಹಗಳನ್ನೇ ಕೈಲಿ ಹಿಡಿದುಕೊಂಡವರಂತೆ ಪ್ರತಿ ಹೆಜ್ಜೆಗೂ ಕಂಪಿಸತೊಡಗಿದರು.
ತಾವರಸುವ ತಿಪ್ಪೆ ದೂರ ಸರಿಯುವಂತೆ ಭಾಸವಾಯಿತವರಿಗೆ.
ಉರಿಯ ಸರಿಗೇರಿದ ಪತಂಗಗಳಂತೆ ಹೆಜ್ಜೆ ತಪ್ಪತೊಡಗಿದರು.
ಕುರುಡರು ಹಿಡಿದುಕೊಂಡ ಕನ್ನಡಿಯಂತೆ
ಮೂರ್ಖರ ಕೈಯಲ್ಲಿನ ದಂಡಿಯ ಕಾವ್ಯಾದರ್ಶ ಗ್ರಂಥದಂತೆ
ಹೋರಾಡಲರಿಯದವನು ತೊಟ್ಟ ಕವಚದಂತೆ..
ಹೆಬ್ಬುಲಿಯ ಕೂಸನು ಬೇಡುವ ಕೊಬ್ಬಿದ ನರಿಗಳಂತೆ..
ಅವನು ಹಿಂದೆ ಇವನು ಮರೆ ಮಾಚುತ್ತ, ಇವನ ಹಿಂದೆ ಅವನು ಮರೆಮಾಚುತ್ತ ಅಸ್ಪಷ್ಟ ಹೆಜ್ಜೆಯನ್ನಿಕ್ಕುತ್ತ ನಡೆಯುತ್ತೊರ್ದ ಅವರನ್ನು ಊರೇ ಹೊರಗೆ ನೂಕಿತೆಂಬಂತೆ ಸಾಕಷ್ಟು ಹೊರಗಡೆ ಬಂದಿರ್ದರು.
ಇವನ ಕಾಲಲ್ಲಿ ಸೊಂಟ ಊನ ಮಾಡಿಕೊಂಡಿದ್ದ ನಾರಾಣಿ ಮಸೀದಿ ಮೇಲೆ ವಿಶ್ರಾಂತಿ ಸ್ಥಿತಿಯಲ್ಲಿದ್ದಾಗ ಘ್ರಾಣೇಂದ್ರಿಯ ಚುರುಕುಗೊಂಡು ಆಲೆ ಕುಣಿಯೊಳಗೆ ದುತ್ತನೆ ನೆಗೆದು ಒಂದೇ ಓಟ ಪೂರೈಸಿ ಎದುರಿಗೆ ನಿಂತು ಗುರ್ ಗುಟ್ಟಲಾರಂಭಿಸಿತು.
‘ನಾರಾಯಣೊ ಹರಿಃ’ ಅಂತ ಒಂದು ಹೆಜ್ಜೆ ಹಿಂದಿಟ್ಟು ಉರುಳಿ ಬೀಳುವುದರಲ್ಲಿದ್ದ ಶಾಮನನ್ನು ರಘು ಗಟ್ಟಿಯಾಗಿ ಹಿಡಿದುಕೊಂಡ. ಅವನ ಕೈಲಿ ಸೈಂಧವನ ತಲೆಯಂತೆ ಅನಿಶ್ಚಿತ ಸ್ಥಿತಿಯಲ್ಲಿದ್ದ ಕಳೇಬರ ಗಾಳಿಗೊಡ್ಡಿದ್ದ ಸೊಡರಂತೆ ಹೊಯ್ದಾಡಿತು. ಅದು ಕೆಳಗೆ ಬಿದ್ದರೆಲ್ಲಿ ಭೂಮಿ ನಾಶವಾಗುವುದೋ ಎಂಬ ಆತಂಕದಿಂದ ನಾರಾಣಿ ಮತ್ತೊಮ್ಮೆ ಗುರುಗುಟ್ಟಿತು. ಜಿಗಿಯಲು ಮುಂದೆರಡು ಪಾದಗಳನ್ನು ನೆಲಕ್ಕೂರಿ ತನ್ನೆರಡು ಕಂಗಳಿಂದ ಕಾಳ್ಗಿಚ್ಚನ್ನು ಉಗುಳ ತೊಡಗಿತು. ಅರೆ! ಅದು ಇನ್ನೇನು ಬೊಗಳೇಬಿಟ್ಟಿತು! ಅರೆ! ಅದಿನ್ನೇನು ನೆಗೆದೇ ಬಿಟ್ಟಿತು! ಅರೆ! ಅದಿನ್ನೇನು ಕಳೇಬರಗಳ ಸಹಿತ ತಮ್ಮನ್ನೂ ಕಬಳಿಸಿಯೇ ಬಿಟ್ಟಿತು ಎಂದು ಆ ಕೂಡಲೆ ಭಾವಿಸಿದ ಆ ಸತ್ಕುಲ ಪ್ರಸುತರು ತಂತಮ್ಮ ಪ್ರಾಣಗಳನ್ನು ಅಂಗೈಲಿಟ್ಟುಕೊಂಡು ಜಲಧಿಯೊಳುಬ್ಬೆದ್ದ ತೆರಯಲಿ ಮಂದರ ಮುಳುಗುವಂದದಿ ನತದೃಷ್ಟ ಕಳೇಬರಗಳನ್ನು ನೆಲಕ್ಕೀಡಾಡಿ ಝಳದ ಜಾಡಿಗೆ ಹೆದರಿದ ರಾಹುಕೇತುಗಳಂತೆ ಓಡತೊಡಗಿದರೆಂಬಲ್ಲಿಗೆ ಕುಂವೀ ಎಂಬ ಹುಲು ನರ ವಿರಚಿತ ‘ಶಾಮಣ್ಣ’ ಎಂಬ ಮಹಾ ಕಥಾನಕದ ಪ್ರಥಮಾಶ್ವಾಸಂ ಸಮಾಪ್ತಿಯಾದುದು.
‘ಜಯ ಮಂಗಳಂ ನಿತ್ಯ ಶುಭ ಮಂಗಳಂ’
*****
ಮುಂದುವರೆಯುವುದು

ಕೀಲಿಕರಣ: ಎಂ ಎನ್ ಎಸ್ ರಾವ್

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

This site uses Akismet to reduce spam. Learn how your comment data is processed.