ನನ್ನ ಹಿಮಾಲಯ – ೯

ಮತ್ತೆ ಬರವಣಿಗೆಯ ಎರಡನೆಯ ದಿನ

ಮೊದಲ ಸಾರಿ ಹಿಮಾಲಯಕ್ಕೆ ಹೊರಟಾಗ ಎಂಥ ಎಷ್ಟು ಉತ್ಸಾಹ ಇತ್ತು. ಮೂರು ತಿಂಗಳ ಮೊದಲೆ ಬೇಕಾದದ್ದನ್ನೆಲ್ಲ ಸವರಿಸಿಕೊಳ್ಳತೊಡಗಿದ್ದೆವು. ಜೀನ್ಸ್ ಪ್ಯಾಂಟು, ಬಣ್ಣ ಬಣ್ಣದ ತುಂಬು ತೋಳಿನ ಹತ್ತಿಯ ತೆಳ್ಳನೆ ಶರಟುಗಳು. ಹಿಮ ಇದ್ದೀತೆಂಬ ಹೆದರಿಕೆಯಿಂದ ತಂಪು ಕನ್ನಡಕ, ಕಾಲಿಗೆ ಹಂಟರ್ ಶೂಗಳು, ನೀರಿನ ಬಾಟಲು, ಊಟಕ್ಕೆ ಪ್ಲಾಸ್ಟಿಕ್ಕು ತಟ್ಟೆಗಳು, ಬೆನ್ನಿಗೆ ದೊಡ್ಡ ಆನೆ ಚೀಲಗಳು – ನನ್ನ ಬದುಕಿನಲ್ಲಿ ಅದೇ ಮೊದಲ ಬಾರಿ ಅಂಥ ಉಡುಪು ತೊಡುತ್ತಿದ್ದೆ. ಏನೋ ನಾನೇ ಬದಲಾಗಿಬಿಟ್ಟಂತೆ. ಕಾಣದ ಹಿಮಾಲಯದಲ್ಲಿ ನಾನು ಹೀಗೆ ಹೀಗೆ ಕಾಣಿಸಿಕೊಳ್ಳಬೇಕೆಂಬ ಉತ್ಸಾಹ ಹುಮ್ಮಸ್ಸುಗಳು ಮಾತಿನಲ್ಲಿ, ನಡಿಗೆಯಲ್ಲಿ, ಸುಮ್ಮನೆ ಇದ್ದಾಗ ಮತ್ತು ನಿದ್ದೆಯಲ್ಲಿ ಕೂಡ ವ್ಯಕ್ತವಾಗೇ ತುಳುಕುತ್ತಿದ್ದವು. ಚಂದ್ರಾ, ಧಾರಿಣಿಯರೂ ಅಷ್ಟೇ. ಅದೇ ಮೊದಲ ಬಾರಿಗೆ ಚೂಡಿದಾರ್‌ಗಳನ್ನು ಜೀನ್ಸ್ ಪ್ಯಾಂಟು ಶರಟುಗಳನ್ನು, ಉಣ್ಣೆ ಟೋಪಿಗಳನ್ನು ತೊಟ್ಟು ಅಭ್ಯಾಸ ಮಾಡಿಕೊಳ್ಳುತ್ತಿದ್ದರು. ಟಿಕೆಟ್ಟು ರಿಸರ್ವ್ ಮಾಡಿಸುವ, ಮ್ಯಾಪು ತೆಗೆದುಕೊಂಡು ದಾರು ಹೀಗೆ ಹೀಗೆ ಹೋಗುತ್ತದೆ ಎಂದು ಊಹಿಸುವ ಸಂಭ್ರಮದಲ್ಲಿ ತಿಂಗಳು ಉರುಳಿದ್ದೇ ನಮಗೆ ಯಾರಿಗೂ ತಿಳಿಯಲಿಲ್ಲ. ಬೆಂಗಳೂರಿಗೆ, ಭದ್ರಾವತಿಗೆ, ದೆಹಲಿಗೆ, ಹರಿಹರಕ್ಕೆ ಕಾಗದಗಳು ಎಷ್ಟೊಂದು ಓಡಾಡಿದವು. ನಡೆಯಲು, ಹಿಮಾಲಯದಲ್ಲಿ ಗುಡ್ಡ ಹತ್ತಲು ಅಭ್ಯಾಸ ಇರಲಿ ಅಂತ ದಿನಾ ಸಂಜೆ ನಾಲ್ಕು ನಾಲ್ಕು ಕಿಲೋಮೀಟರ್ ನಡೆದೆವು. ಅದು ನಿಜವಾಗಿ ಏನೂ ಉಪಯೋಗಕ್ಕೆ ಬರಲಿಲ್ಲ ಅನ್ನುವುದು ಬೇರೆ ಮಾತು.
ಆದರೂ ಮನಸ್ಸಿನಲ್ಲಿ ಅಮ್ಮ ಎಲ್ಲೋ ಸಣ್ಣಗೆ ಒತ್ತುತ್ತಿದ್ದರು. ಮುಳ್ಳಿನ ಹಾಗೆ. ನಾನು ಅಲ್ಲೆಲ್ಲೋ ಹೋದಾಗ ಅವರು ಸತ್ತು ಹೋದರೆ? ಅಥವ ಎಂದಿನ ಹಾಗೆ ‘ಅಯ್ಯೊ. ನನ್ನ ಮಗ ಕಷ್ಟ ಪಡುತ್ತಾನಲ್ಲ’ ಅಂತ ಸುಮ್ಮನೆ ತಾವು ಕಷ್ಟ, ಸಂಕಟ ಪಟ್ಟರೆ? ಅದಕ್ಕೇ ತೀರ್ಮಾನ ಮಾಡಿದೆ. ನಾವು ನಡೆದು ಹೋಗುತ್ತೇವೆ ಅಂತ ಅಮ್ಮನಿಗೆ ಹೇಳುವುದೇ ಬೇಡ. ಟೂರ್ ಹೋಗುತ್ತೇವೆ ಅಂದೆ. ಅಯ್ಯೊ, ಸುಳ್ಳು ಹೇಳುತ್ತೇನಲ್ಲ ಅಂತ ಕೊರಗು. ಇರಲಿ. ಪ್ರತಿ ವಾರ, ಅಥವ ಮೂರು ದಿನಕ್ಕೆ ಒಂದು ಕಾಗದ ಬರೆಯುವುದು. ಹಿಮಾಲಯದ ಜೊತೆ ಇದ್ದಾಗ, ಗೆಳೆಯರ ಜೊತೆ ಇದ್ದಾಗ ಅಮ್ಮನ ನೆನಪು ಬರಬಾರದು. ನಾನು ಮಗ ಆಗಿ ಅಲ್ಲ, ಗಂಡ ಆಗಿ ಅಲ್ಲ, ಗೆಳೆಯ ಆಗಿ ಅಲ್ಲ, ನಾನೇ ಅಂತ ಅಲ್ಲಿ ಇರಬೇಕು. ಆದರೆ ಅಮ್ಮನನ್ನು ಅಷ್ಟು ಸುಲಭವಾಗಿ ಒರೆಸಿ ಹಾಕಲು ಸಾಧ್ಯವೆ ಮನಸ್ಸಿನಿಂದ. ಶಿವಮೊಗ್ಗದಲ್ಲಿ ಕೂತೇ ಹೊರಡುವ ಹದಿನೈದು ದಿನ ಮೊದಲೇ ಒಂದಷ್ಟು ಕಾರ್ಡುಗಳಿಗೆ ಅಡ್ರೆಸ್ಸಿನ ಸಮೇತ ಬರೆದಿಟ್ಟುಕೊಂಡೆ: “ಅಮ್ಮನಿಗೆ ನಮಸ್ಕಾರಗಳು. ನಾವು ಕ್ಷೇಮ. ಅರೋಗ್ಯವಾಗಿದ್ದೇನೆ. ತುಂಬ ಚೆನ್ನಾಗಿದ್ದೇನೆ. ಇಂಥಾ ತಾರೀಖು ವಾಪಸ್ಸು ಬರುತ್ತೇವೆ. ಚಂದ್ರಾ ಚನ್ನಾಗಿದ್ದಾಳೆ.” ಅಂತ ಒಕ್ಕಣಿಸಿ ಜೋಡಿಸಿಟ್ಟುಕೊಂಡೆ. ಡಬ್ಬ ಕಂಡ ಕಡೆಯಲ್ಲೆಲ್ಲ ತಾರೀಖು ಬರೆದು ಹಾಕುತ್ತಿದ್ದೆ. ಎಂಥದೋ ಕರ್ತವ್ಯ ನೆರವೇರಿಸಿದ ಸಮಾಧಾನ ಸಿಕ್ಕಿತು – ಅಂದುಕೊಂಡೆ. ಬೆಂಗಳೂರಲ್ಲಿ ರೈಲು ಹತ್ತಿ ಇನ್ನೇನು ಹೊರಡಬೇಕು ಅನ್ನುವ ಹತ್ತು ನಿಮಿಷ ಮುಂಚೆ ಅಮ್ಮ ನಮ್ಮ ಮಾವನನ್ನು ಜೊತೆ ಮಾಡಿಕೊಂಡು ಆಟೋ ಹತ್ತಿ ಓಡಿ ಬಂದಿದ್ದರು. ನಾನು ಬಿಟ್ಟು ಬಂದಿದ್ದ ಗಡಿಯಾರ ಕೊಡಲು. ಹಿಮಾಲಯದಲ್ಲಿ ಗಡಿಯಾರ ಇರಬಾರದು ಅಂತಲೇ ಬಿಟ್ಟಿದ್ದೆ. ಅಮ್ಮನಿಗೆ ಗಡಿಯಾರ ಕೊಡುವುದಕ್ಕಿಂತ ನನ್ನ ಜೊತೆ ಇನ್ನಷ್ಟು ಹೊತ್ತು ಇರುವ ಆಸೆ ಇದ್ದಿರಬಹುದು. ಮಗನಿಗೆ ಅವನು ಮರೆತು ಬಂದಿರುವುದನ್ನು ಕೊಟ್ಟು ಉಪಕಾರ ಮಾಡುವ ಅಪೇಕ್ಷೆ ಇರಬಹುದು. ನನಗೆ ಮುಜುಗರ ಆಯಿತು.

ಆದು ಮೊದಲ ಬಾರಿ: ಎರಡನೆ ಬಾರಿ ನಾನು ಹಿಮಾಲಯಕ್ಕೆ ಹೋಗಿ ಆ ಊರಿನವನೇ ಆದಾಗ ನನಗೆ ಯಾರೂ ನೆನಪು ಬರಲಿಲ್ಲ, ಇರಲಿಲ್ಲ. ಹಾಗೂ ಒಂದು ಸಲ ಸಂಜೆ ನೆದರ್ ಲ್ಯಾಂಡಿನ ಹ್ಯಾನ್ಸ್ ಜೊತೆ ಟೀ ಕುಡಿದು, ಸಂಜೆ ಕತ್ತಲಲ್ಲಿ ಗಂಗೆಯ ಜುಳು ಜುಳು ಕೇಳುತ್ತ, ತಲೆಕೆಳಗಾಗಿ ಕಾಣುವ ಹೃಷಿಕೇಶದ ದೀಪಗಳನ್ನು ನೋಡುತ್ತ ಅವನು ತನ್ನ ಮನೆಯ ಬಗ್ಗೆ ನಾನು ನನ್ನ ಬಗ್ಗೆ ಆಪ್ತವಾಗಿ ಮಾತಾಡಿಕೊಂಡೆವು. ಅವನು ಒಂದು ತಿಂಗಳ ಮಟ್ಟಿಗೆ ಇನ್ನಿಲ್ಲದಂಥ ಆಪ್ತನಾಗಿದ್ದ. ಒಂದು ಕ್ಷಣ ನಾವು ಒಬ್ಬರನ್ನೊಬ್ಬರು ನೋಡದಿದ್ದರೆ ಏನೋ ಕಳಕೊಂಡಂತೆ ನಮಗೆ ಅನಿಸುತ್ತಿತ್ತು. ನಾನು ಮೀಸೆ ತೆಗೆದಿದ್ದೆ. ಆಶ್ರಮಕ್ಕೆ ಮೀಸೆ ಹೊಂದುವುದಿಲ್ಲ ಅಂತ. ಮೀಸೆಯ ಜೊತೆಗೆ ನನ್ನ ಹಳೆಯ ನಾನು ಕೂಡ ಹೊರಟು ಹೋಗಿತ್ತು. ಆಶ್ರಮದವರು ನನಗೆ ಬಿಳೀ ಪಂಚೆ ಕೊಟ್ಟಿದ್ದರು. ನನ್ನ ಖಾದಿ ಜುಬ್ಬ ಇದ್ದವು. ಅಲ್ಲ, ಉಡುಪು ಹೇಗೆ ಎಂತೆಂಥ ಆಸೆ ಹುಟ್ಟಿಸುತ್ತೆ. ಈಗ ನನಗೆ ಹಂಬಲ ಇದ್ದದ್ದು ಅಲ್ಲಿನ ಬಟ್ಟೆಗಳ ವ್ಯವಸ್ಥೆಯಲ್ಲಿ ತೀರ ಮೇಲಕ್ಕೇರಬೇಕು ಅಂತ. ನಮ್ಮಂಥವರು ಬಿಳಿ ಉಡುಗೆಯವರು. ಬ್ರಹ್ಮಚಾರಿಗಳದ್ದು ಹಳದಿ ಬಟ್ಟೆ. ಸನ್ಯಾಸಿಗಳದು ಕಾವಿ. ಕಾವಿಗೆ ಬೇಕಾದ ಸಿದ್ಧತೆಯನ್ನು ಅಥವಾ ಯೋಗ್ಯತೆಯನ್ನು ಪಡೆವ ಅವಕಾಶ ನನಗೆ ಸಿಗುವುದು ಸಾಧ್ಯವೇ ಇರಲಿಲ್ಲ. ಕಾವಿ ಧರಿಸುವ ಅವಕಾಶವಲ್ಲ, ಅಧಿಕಾರ ಇದ್ದಿದ್ದರೆ ನನಗೆ ಚೆನ್ನಾಗಿರುತ್ತಿತ್ತು ಅನ್ನುವ ಆಸೆ ಇತ್ತು. ಸುಮ್ಮನೆ ಅಲ್ಲ ನಿಜವಾಗಲೂ ಆ ಅಧಿಕಾರ ನಾನು ಪಡೆವಂತಿದ್ದರೆ! ಅರಿಶಿನದ ಬಟ್ಟೆಗಳಿಗೆ ಬೇಕಾದ ಯೋಗ್ಯತೆಯನ್ನೂ ಕಳಕೊಂಡಿದ್ದೆ. ಆಶ್ರಮದ ಶ್ರೇಣಿಯಲ್ಲಿ ತೀರ ಕೆಳಹಂತದ ಬಿಳಿ ಉಡುಪಿನವನಾಗಿಯಷ್ಟೆ ಇರಬೇಕು. ಆದರೂ ಒಂದು ಥರ ಹೆಮ್ಮೆ. ನನ್ನ ಬಿಳಿ ಬಟ್ಟೆಯ ಅಧಿಕಾರ ಹ್ಯಾನ್ಸ್‌ನ ಕಿರುಗಡ್ಡ, ಮೀಸೆ, ನಗುಮುಖ, ಪ್ಯಾಂಟು ಶರಟುಗಳಿಗಿಂತ ಮೇಲಿನದು ಅಂತ. ಅವನು ಎಷ್ಟೆಂದರೂ ಕೆಲವು ದಿನಗಳ ಅತಿಥಿ. ನಾನು ಅಲ್ಲಿಯವನು. ಆಶ್ರಮ ವಾಸಿ. ಅವನು ಹಕ್ಕಿ, ನಾನು ಬೇರು ಭದ್ರ ಮಾಡಿಕೊಳ್ಳುತ್ತಿರುವ ಸಸಿ. ಇಂಥ ಹೆಮ್ಮೆ ಅಹಂಕಾರವಾಗಿದ್ದು ಇಂಗ್ಲೆಂಡಿನ ಡಾಕ್ಟರು ಥಾಮಸ್‌ನ ಜೊತೆ ಪಾಥೆಗಾವ್‌ನ ಗುಡ್ಡ ಹತ್ತಿ ಇಳಿಯುತ್ತಿದ್ದಾಗ. ಅವನ ಕೋಟು, ಶೂ, ತುಂಬು ತೋಳಿನ ಬಿಳೀ ಶರ್ಟ್, ಇವುಗಳ ಜೊತೆ ನನ್ನ ಸರಳ ಉಡುಪನ್ನು ಹೋಲಿಸಿ ಮಾತಾಡಿದ್ದೆ. ನಿಜವಾಗಲೂ ಹಾಗನ್ನಿಸಿದ್ದೂ ಹೌದು. ಎರಡು ಬಿಳೀ ಪಂಚೆ, ಎರಡು ಖಾದಿ ಜುಬ್ಬ ಸಾಕಲ್ಲವೇ. ಯಾಕೆ ನಾವು ಉಡುಪಿನ ಬಗ್ಗೆ ಇಷ್ಟು ಆಸೆ ಇಟ್ಟುಕೊಳ್ಳುತ್ತೇವೆ? ಆದರೂ ಆಶ್ರಮ ಬಿಟ್ಟು ಮೂರು ಮೈಲು ಆಚೆ ಹೋಗುವಾಗ, ಪೇಟೆಗೆ ಪ್ಯಾಂಟು ಚೆನ್ನ ಅಂತ ಕೆಲವು ಸಾರಿ ಅನ್ನಿಸುತ್ತಿತ್ತು. ಕ್ರಮೇಣ ಅದೂ ಹೋಯಿತು. ಆದರೆ ಡೆಹರಾಡೂನಿಗೆ ಹೋಗುವುದಾದರೆ ಪ್ಯಾಂಟನ್ನೇ ತೊಡುತ್ತಿದ್ದೆ. ಶಿವಮೊಗ್ಗದಲ್ಲಿ ಕಾಲೇಜಿನ ಉಡುಪು – ಆದರೆ ಚಂದ್ರ ಸಿಡುಕುತ್ತಿದ್ದಳು: ನೀಟಾಗಿರುವುದಿಲ್ಲ, ಇಸ್ತ್ರಿ ಮಾಡುವುದಿಲ್ಲ ಅಂತೆಲ್ಲ, ಬಟ್ಟೆ ಆಗ ಬಹಳ ಇತ್ತು, ಸರಿಯಾಗಿರಲಿಲ್ಲ. ಈಗ ಹಿಮಾಲಯದಿಂದ ಬಂದಮೇಲೆ ಬಟ್ಟೆ ಬದಲಾಗಿದೆ. ಇಸ್ತ್ರಿ ಬಂದಿದೆ, ವೈವಿಧ್ಯ ಬಂದಿದೆ. ಈಗಲೂ ಆಶ್ರಮ ನನಗೆಕೊಟ್ಟ ಎರಡು ಬಿಳೀ ಅಂಗಿ, ಎರಡು ಪಂಚೆ ಇವೆ. ಅವನ್ನು ತೊಟ್ಟಾಗ, ತೊಟ್ಟಷ್ಟು ಹೊತ್ತು ಬೇರೆಯೇ ಅನ್ನಿಸುತ್ತದೆ.

ಹ್ಯಾನ್ಸ್ ಮತ್ತು ನಾನು ನದಿಯ ಪಕ್ಕದಲ್ಲಿ ಕೂತು ಮಾತಾಡುತ್ತಿದ್ದೆವು. ಹ್ಯಾನ್ಸ್‌ಗೆ ಹೆಂಡತಿ ಇದ್ದಾಳೆ. ಇವನ ಆಧ್ಯಾತ್ಮಿಕ ಅಪೇಕ್ಷೆ ಅವಳಿಗೆ ಹಿಡಿಸುವುದಿಲ್ಲ. ಇವನು ಓದಿದ ಕೆಮಿಸ್ಟ್ರಿ ಮತ್ತು ಸೈಕಾಲಜಿ ಇವನಿಗೆ ಸಮಾಧಾನ ಕೊಟ್ಟಿಲ್ಲ. ತುಂಬ ನಿಶಿತ ಬುದ್ಧಿಯ ಹ್ಯಾನ್ಸ್ ಬ್ರಹ್ಮಾನಂದರನ್ನೂ ಕೃಷ್ಣಾನಂದರನ್ನೂ ಕೇಳುವ ಪ್ರಶ್ನೆಗಳು ಕೆಲವುಬಾರಿ ನನ್ನವೂ ಹೌದು. ಅವನು ಹೆಂಡತಿ ಜೊತೆ ಜಗಳಾಡಿದ. ಕಾರಣ ಬೇರೆಯೂ ಇರಬಹುದು ಅನ್ನುವ ಸೂಚನೆಯಷ್ಟೆ ನನಗೆ ಹೊಳೆಯಿತು. ಇಲ್ಲಿಗೆ ಬಂದ ತತ್ತ್ವಶಾಸ್ತ್ರ ಅವನಿಗೆ ಒಡ್ಡುವ ಸಮಸ್ಯೆ, ಪ್ರಶ್ನೆ ಬೇರೆ ರೀತಿಯದು, ನನಗೆ ಬೇರೆ ರೀತಿಯದು. ಆದರೆ ನನಗೆ ಅರ್ಥ ಆದಂತೆ ಅನ್ನಿಸಿದ್ದು ಹೊಳೆದದ್ದು ಅವನಿಗೆ ಹೊಳೆಯುತ್ತಿರಲಿಲ್ಲ. ಆದರೆ ಇಬ್ಬರೂ ಅವು ಜೀವನ್ಮರಣದ ಪ್ರಶ್ನೆಗಳು ಅನ್ನುವ ಹಾಗೆ ಚರ್ಚೆ ಮಾಡುತ್ತಿದ್ದೆವು. ತತ್ತ್ವ ಕಲಿಯುವ ಅನಿವಾರ್ಯವಾಗಿರಲಿಲ್ಲ ನಮ್ಮ ಅನಿವಾರ್ಯ, ಹಿಂಗಿದ, ಹಸಿವು ಆಗಿತ್ತು. ನಿಜವಾಗಿ ತತ್ತ್ವದ ಬಗ್ಗೆ ಅಲ್ಲ ನಮ್ಮ ಬಗ್ಗೆ ತಿಳಿಯುತ್ತಿದ್ದೆವು.

ಟೀ ಕುಡಿದು ಮತ್ತೆ ಬಂದು ಕೂತೆವು. ಹೇಳಿದೆ. ಅಪರಿಚಿತರೊಂದಿಗೆ ಹೇಳಿಕೊಳ್ಳುವಾಗ ನಮ್ಮ ಬಗ್ಗೆಯೇ ಆದರೂ ನಾವೇ ನಮ್ಮನ್ನು ಅಪರಿಚಿತರೆಂಬಂತೆ ಕತೆಮಾಡಿ ಹೇಳಿಕೊಳ್ಳುತ್ತೀವೋ ಏನೋ. ಕತೆಯಲ್ಲಿ ಪಾತ್ರದ ಬಗ್ಗೆ ಬೇಕಾದ ಕೆಲವೇ ಮಾತು ಹೇಳುವ ಹಾಗೆ ನಮ್ಮ ಬಗ್ಗೆ ನಾವೇ ಒಂದೆರಡು ಮಾತುಗಳಲ್ಲಿ ನಮ್ಮ ಸತ್ವ ನಿರೂಪಿಸುವುದಕ್ಕೆ ತೊದಗುತ್ತೇವೇನೋ. ಹಾಗ್ ಹ್ಯಾನ್ಸ್ ನನಗೆ ಅಪರಿಚಿತನೂ ಅಲ್ಲ. ಅವನ ಅಗಲ ದಪ್ಪ ಕೈ, ಸ್ವಲ್ಪ ಚೌಕ ಮುಖ, ಪುಟ್ಟ ಬಾಯಿ, ಹಸುವಿನಂಥ ಕಣ್ಣು, ನುಣುಪಾದ ಹದವಾಗಿ ಕತ್ತರಿಸಿದ ಕೆದರು ಕೂದಲು, ಹುಡುಗುತನ ಮತ್ತು ಪ್ರಬುದ್ಧತೆ ಎರಡೂ ಇದ್ದ ದೃಢವಾದ ಕತ್ತು, ಕೊರಳು, ಭುಜದ ಹ್ಯಾನ್ಸ್ ನನ್ಗೆ, ಸ್ವಲ್ಪ, ಗೆಳೆಯ ರಾಮುನ ನಮ್ಮ ವೇಣುವಿನ ನೆನಪನ್ನೂ ಅವರ ಮನೆಯಲ್ಲಿದ್ದ ಹಸುವಿನ ನೆನಪನ್ನೂ ತರುತ್ತಿದ್ದ.

ಹೇಳಿದೆ – “ಬಹಳ ಸಾರಿ ನನಗೆ ಯೋಚನೆ ಮಾಡುವುದಕ್ಕೆ ಭಯವಾಗುತ್ತದೆ. ಯಾಕೆಂದರೆ ಯೋಚನೆ ಮಾಡಿದ್ದು ಇಚ್ಛೆಯಾಗಿ, ಇಚ್ಛೆ ಪ್ರಬಲವಾಗಿ, ಪ್ರಬಲವಾದ ಇಚ್ಛೆ ನಿಜವಾಗಿಯೇ ಬಿಡುತ್ತದೆ. ನನಗೆ ಚಿಕ್ಕಂದಿನಲ್ಲಿ ಅಪ್ಪ ಅಮ್ಮ ಯಾರೂ ನನಗೆ ಇರಬಾರದು ಅನ್ನಿಸಿತ್ತು. ಒಬ್ಬನೇ ಯಾರಿಗೂ ಹೇಳದೇ ಕೇಳದೇ ಅಲೆಮಾರಿಯಾಗಿ ಹೊರಟು ಹೋಗಬೇಕು ಅನ್ನಿಸಿತ್ತು. ನನ್ನ ಅಪ್ಪ ಅಮ್ಮ ಹೆಂಡತಿ ಎಲ್ಲರೂ ನನ್ನ ಬಗ್ಗೆ ತುಂಬ ಪ್ರೀತಿ ಇದ್ದವರೆ, ಇಟ್ಟುಕೊಂಡವರೇ. ನನಗೆ ಕೆಲವು ಸಾರಿ ಅದು ಮನಸ್ಸಿಗೆ ಬಂದಾಗ ಅಯ್ಯೊ ಅನ್ನಿಸುತ್ತೆ. ಅಯೋಗ್ಯ ಅನ್ನಿಸುತ್ತೆ, ಬೇರೆ ಥರ ಇರಬೇಕು ಅನ್ನಿಸುತ್ತೆ. ನನ್ನ ಹೆಂಡತಿ ಜೊತೆ ಇರಲು ನಾನು ಅಯೋಗ್ಯ ಅನ್ನಿಸಿದಾಗ ಥಟ್ಟಂತ ಹೊರಟುಬಿಟ್ಟೆ. ಈಗ ಮತ್ತೆ ವಾಪಸ್ಸು ಹೋಗುತ್ತೇನೋ ಇಲ್ಲವೋ ಗೊತ್ತಿಲ್ಲ. ಇಲ್ಲೆ ಯಾಕಿದ್ದೇನೋ ಗೊತ್ತಿಲ್ಲ. ನನಗೆ ಬೇಕಾದ್ದಿ ಸಿಕ್ಕಿದೆಯೋ ಗೊತ್ತಿಲ್ಲ. ಹಾಗೆಯೇ ಮನೆಯ ನೆನಪು ಕೂಡ ಯಾವಾಗಲೂ ಬರಲ್ಲ. ವಾಪಸ್ಸು ಹೋಗಬೇಕು ಆನ್ನಿಸಲ್ಲ.”
ಹ್ಯಾನ್ಸ್ ಕೇಳಿದ – “ನಿನ್ನ ಹೆಂಡತಿಗೆ, ನಿನ್ನ ಅಮ್ಮನಿಗೆ ನೋವು ಆಗುವುದಿಲ್ಲವಾ? ನೀನು ಇಲ್ಲಿರುವುದು ಅವರಿಗೆ ಗೊತ್ತಾ?”

“ಇಲ್ಲ ಗೊತ್ತಿಲ್ಲ. ನೋವಾಗುತ್ತೆ. ನಾನು ಅಲ್ಲೇ ಇದ್ದಿದ್ದರೆ ನನಗೆ ನೋವಾಗುತ್ತಿತ್ತು. ಈಗ ನೋವು ಇಲ್ಲ. ಹೋಗಬಾರದು ಅಂತಲೂ ಇಲ್ಲ. ನಾನು ಬದಲಾಗಿದ್ದೇನೆ ಅನ್ನುವುದು ನಿಜ.”

ನಾವಿಬ್ಬರೂ ನಮ್ಮದಲ್ಲದ ಇಂಗ್ಲಿಷಿನಲ್ಲಿ ಮಾತಾಡುತ್ತಿದ್ದೆವು. ಎಷ್ಟು ಹೇಳಿದೆವೊ ಎಷ್ಟು ತಿಳಿಯಿತೊ. ಆದರೂ ಹಿಮಾಲಯದ ಬೆಟ್ಟಗಳು, ಗಂಗೆ, ಆಶ್ರಮದ ಬದುಕು, ಒಂದು ತಿಂಗಳ ನಮ್ಮ ಒಡನಾಟ ಎಲ್ಲ ಸೇರಿ ನಾನು ಬದಲಾಗಿರುವುದು ನನಗೆ, ಅವನು ಬದಲಾಗಿರುವುದು ಅವನಿಗೆ ತಿಳಿವಂತೆ ಮಾಡಿದ್ದವು.

ನಿಜ ಒಂದು ಸಾಯಂಕಾಲ. ಫೆಬ್ರುವರಿ ತಿಂಗಳ ಚಳಿ ಬಿಸಿಲಲ್ಲಿ ಥಾಮಸ್‌ನ ಜೊತೆ ಪಾಥೆಗಾವ್‌ದ ಸಾಸುವೆ ಹೊಲದ ಹೂ ತುಂಬಿದ ಗಿಡಗಳನ್ನು ನೋಡಿ ಇಳಿಯುತ್ತ ಹೇಳಿದೆ. ಅವನಿಗೆ ಆಶ್ರಮದ ಜನರ ಬಗ್ಗೆ ಕುತೂಹಲ ಇತ್ತು. ಹೇಳಿದೆ – “ಇಲ್ಲಿ ಇರುವ ಎಲ್ಲರಿಗೂ ಭೂತಕಾಲ ಮಾತ್ರ ಇದೆ. ಭವಿಷ್ಯ ಇಲ್ಲ. ಹಾಗೆ ಇದ್ದೇವೆ.” ಉದ್ದ ಗಡ್ಡದ ದಪ್ಪ ಮೈಯ ಮುದುಕ ಕಾವಲುಗಾರ. ಕ್ರಿಸ್ತನ ಹಾಗೆ ತಲೆಗೂದಲು ಗಡ್ಡ ಇರುವ ಕೇರಳದ ತರುಣ ಮೈಕೆಲ್, ಊಟ ಬಡಿಸುವ ಸಂಸ್ಕೃತ ವಿದ್ವಾಂಸ, ಮನೆಯವರೆಲ್ಲರ ಕಗ್ಗೊಲೆ ನೋಡಿ ಶ್ರೀಲಂಕೆಯಿಂದ ತಾನೊಬ್ಬನೆ ಉಳಿದು ಬಂದು ಇಲ್ಲಿರುವ ಯುವಕ ಕಾವಿಧಾರಿ, ಲೆಕ್ಕ ಪತ್ರ ನೋಡಿಕೊಳ್ಳುವ ಅಲಾವುದೀನ್ ಕತೆಯ ಭೂತದಂತಿರುವ ಮಲೆಯೇಷಿಯಾದ ಕಪ್ಪು ಮನುಷ್ಯ, ಕರಾಟೆಯಲ್ಲಿ ಒಬ್ಬನನ್ನು ಪ್ರಾಣಾಂತಿಕವಾಗಿ ಗಾಯಗೊಳಿಸಿ ವೈರಾಗ್ಯ ಹುಟ್ಟಿ ಇಲ್ಲಿ ಪ್ರೆಸ್ಸಿನ ಜವಾಬ್ದಾರಿ ನೋಡಿಕೊಳ್ಳುತ್ತಿರುವ ಯುವಕ ಭಾವಗ್ರಾಹಿ – ನನ್ನ ಪರಿಚಯಕ್ಕೆ ಹಲವು ತಿಂಗಳಲ್ಲಿ ಒದಗಿಬಂದ ಹಲವು ನೂರು ಜನಕ್ಕೆ ಅವರದೇ ಆದ ಭೂತಗಳಿವೆ. ಭವಿಷ್ಯ ಗೊತ್ತಿಲ್ಲದೆ ಇದ್ದಾರೆ. ಭವಿಷ್ಯ ಇಲ್ಲವೇ ಇಲ್ಲ ಅನ್ನುವ ಹಾಗೆ ಇದ್ದಾರೆ. ನಾನೂ.

ಅಲ್ಲೆ ಆಶ್ರಮದ ಹತ್ತಿರವೆ ಪೋಲೀಸ್ ಇನ್ಸ್‌ಪೆಕ್ಟರರ ಮನೆ. ಸೈಕಲ್ಲು. ಒಣಹಾಕಿರುವ ಬಟ್ಟೆಗಳು. ಮಕ್ಕಳು. ಟ್ರಾನ್ಸಿಸ್ಟರ್ ಕೇಳುತ್ತ ಕೂರುವ ಹುಡುಗಿಯರು. ಸಂಜೆ ಟಿವಿ ನೋಡಲು ಅಲ್ಲಲ್ಲಿ ಗುಂಪು ಸೇರುವ ಜನ. ಭವಿಷ್ಯದ ಗುರಿ ಕನಸು ಇರುವವರು. ನನಗೆ ಒಮ್ಮೆ ಪರಿಚಿತವಾಗಿದ್ದ ನನ್ನದೂ ಆಗಿದ್ದ ಬದುಕು ಕೈಯಳತೆಯಲ್ಲೆ ಇದೆ. ಆಶ್ರಮದಲ್ಲಿ ಎರಡೂ ಹೊತ್ತು ಉಳಿದು ಹೋದ ಊಟವನ್ನು ಬೇಡಲು ಬರುವ ಭಿಕ್ಷುಕರ ಗುಂಪು ಇದೆ. ಅವರಿಗೂ ಭವಿಷ್ಯ ಇಲ್ಲ. ಬೇರೆ ಥರದಲ್ಲಿ ಭವಿಷ್ಯ ಇಲ್ಲ.

ಇರುವುದು ಈ ಕ್ಷಣ ಮಾತ್ರ ಅಂತ ಆಗಲೂ ಅನ್ನಿಸಿತ್ತು – ಮೈ ಕೊರೆವ ಸೊನ್ನೆಗೆ ಹತ್ತಿರದ ಚಳಿಯಲ್ಲಿ ರಾತ್ರಿ ದಿನವೆಲ್ಲ ನಡೆದು ಸುಸ್ತಾಗಿ, ಗುರುದ್ವಾರದ ಜನ ಕರುಣಿಸಿದ ಕಂಬಳಿ ಹೊದ್ದು, ರಾಜು ಮತ್ತು ಶ್ರೀನಾಥ ತಂದ ಕೇಜಿಗಟ್ಟಲೆ ಜಿಲೇಬಿಗಳನ್ನು ಬಿಸಿ ಬಿಸಿಯಾಗಿ ನಾವು ಕಬಳಿಸುತ್ತ ಕೂತಿದ್ದಾಗ ಹಾಗನ್ನಿಸಿತ್ತು.
ಮತ್ತೆ ಆಗಲೂ ಹಾಗೇ ಅನ್ನಿಸಿತ್ತು – ಹಿಮದ ಮೇಲೆ ಕೋಲೂರಿ ನಡೆದು ತೀರ ಬೆಳಗಿನ ಜಾವದಲ್ಲಿ ಹೂಗಳ ಕಣಿವೆಗ ಹೋಗಿ ನಿಂತಾಗ. ಕೈಗೆ ತಗಲುವಷ್ಟು ಸಮೀಪ ಇರುವಂತೆನ್ನಿಸುವ ಆದರೆ ನೂರಾರು ಅಡಿ ದೂರವಿರುವ, ಬೃಹತ್ ಅತೀ ಬೃಹತ್ ಗಾತ್ರದಿಂದ ಮೈಮೇಲೆ ಬೀಳುವಂತೆಯೇ ಇರುವ, ಮೊನಚು ಕಲ್ಲುಗಳ ಬೆಟ್ಟಸಾಲುಗಳು ಎತ್ತರ ಅತೀ ಎತ್ತರವಾಗಿ ಎಡಬಲಗಳಲ್ಲಿ ಕಣ್ಣು ಹರಿವಷ್ಟು ದೂರವೂ ನಿಂತು, ಮೇಲೆ ಕವುಚಿ ಬೀಳುವಂತಿರುವ ಮಳೆ ಮೋಡವೂ ಬೆಟ್ಟದ ಮಧ್ಯಂತರದಲ್ಲಿ ನಮ್ಮ ತಲೆ ಸವರಲೆಂದು ಇಳಿದು ಬರುತ್ತಿರುವ ನೇರಳೆ – ಬಿಳಿ ಮೋಡವೂ ಇದ್ದು, ತೇವ ತುಂಬಿದ ಗಾಳಿ ಬೀಸುತ್ತ, ಅಷ್ಟಿಷ್ಟೆ ಎಳೆ ಬಿಸಿಲು ಬೀಳುತ್ತ, ಹೂಗಳ ಬಣ್ಣ ಕಣ್ಣು ತುಂಬುತ್ತ – ಕಲ್ಲುಗಳ ಬಣ್ಣ, ಅಷ್ಟಿಷ್ಟು ಆಗೀಗ ತೋರಿಸುವ ಆಕಾಶದ ಬಣ್ಣ, ಮೋಡದ ಬಣ್ಣ, ಬಿಸಿಲು ಬಿದ್ದ ಮೋಡದ ಬಣ್ಣ, ಮಳೆ ಮೋಡದ ಬಣ್ಣ, ಹೆಪ್ಪುಗಟ್ಟಿದ ಹಿಮನದಿಯ ಬಣ್ಣ, ಹುಲ್ಲು ಹಾಸಿನ ಮೇಲೆ ಬೆಳಗಿನ ಬೆಳಕಿನ ಬೇರೆ ಬೇರೆ ವಿನ್ಯಾಸ, ಅಪ್ಪಟ ಚಳಿಯ ಗಾಳಿಗೆ ನನಗೆ ಚಳಿಚಳಿಯಾಗುತ್ತಿರುವಾಗಲೇ ನನ್ನೊಳಗೆ ಸ್ವಲ್ಪ ಬೆಚ್ಚಗೆ ಹರಿಯುತ್ತಿರುವ ರಕ್ತದ ಬಿಸುಪು, ಉಸಿರಾಡಿದಂತೆಲ್ಲ ಬರುವ ಹಬೆ, ನಾನಿರುವಷ್ಟು ಜಾಗ, ನನ್ನ ಕಣ್ಣಿಗೆ ಬೀಳುವಷ್ಟು ಲೋಕ ಬಿಟ್ಟರೆ ಇನ್ನೇನೂ ಇಲ್ಲವೇ ಇಲ್ಲ ಅಂತ ಅನ್ನಿಸಿದಾಗ – ಇರುವುದು ಈ ಕ್ಷಣ ಮಾತ್ರ. ಆ ದೊಡ್ಡ ಕಣಿವೆಯಲ್ಲಿ ಇದ್ದ ನಾವು ಹತ್ತು ಜನ ಚದುರಿ ಒಬ್ಬೊಬ್ಬರೆ ಇಬ್ಬಿಬ್ಬರೆ ಆದಾಗ ಏಕಾಂತದ ಭಯ ಸ್ವಲ್ಪ ಆಯಿತಲ್ಲ ಆ ಭಯ ಬಿಟ್ಟರೆ ಬೇರೆ ಏನೂ ಇಲ್ಲ ಅನ್ನಿಸಿದ್ದೂ ಇದೆ.

ಆದರೆ ಹಾಗೆ ಬಹಳ ಹೊತ್ತು ಇರಲಿಲ್ಲ. ರಾತ್ರಿ ಬಿದ್ದ ಮಳೆಯ ಹನಿಗಳನ್ನು ಈಗಲೂ ಉದುರಿಸುತ್ತಿರುವ ಎತ್ತರ ಮರಗಳ ಹಿಂದೆ ಇನ್ನೂ ಕತ್ತಲು ಇದೆ. ನಡೆದಷ್ಟೂ ಇರುವ ಕಣಿವೆ, ತಿರುವುಗಳಲ್ಲಿ ಧುತ್ತನೆ ಎದುರಾಗುವ ಬೃಹತ್ ಮತ್ತು ಮೊನಚು ಕೋಡುಗಲ್ಲುಗಳು. ದೇವರು ಇದ್ದರೆ ಇಲ್ಲೆ ಎಲ್ಲೊ ಮುಂದಿನ ತಿರುವಿನಲ್ಲಿ, ಅಲ್ಲಿ ತೇಲುತ್ತಿರುವ ಮೋಡದ ಕೆಳಗೆ, ಇಷ್ಟೆ ಬಿದ್ದಿರುವ ಬೆಳಗಿನ ಬಿಸಿಲಿನಲ್ಲಿ, ಹಿಮದ ಮೇಲೆ ಏನೋ ಮಾಡುತ್ತ ಕೂತಿರಬಹುದು ಅನ್ನಿಸುವ ಹಾಗೆ. ಅಕಸ್ಮಾತ್ತಾಗಿ ಬೀಳುವ ಕನಸೂ ಕೂಡ ಹೂಗಳ ಕಣಿವೆಯಷ್ಟು ಸುಂದರ, ಏಕಾಕಿ, ಭಯಂಕರ, ಮುಗ್ಧವಾಗಿರಲಾರದು. ಆದರೆ ಬಹಳ ಹೊತ್ತು ಹಾಗೇ ಅಲ್ಲಿ ಇರಲಾಗದು. ಮತ್ತೆ ನಡೆದು ಹಿಂದಿರುಗಿ ಗುರುದ್ವಾರಕ್ಕೆ ಹೋಗಿ, ಅಲ್ಲಿಂದ ನಡೆದು ರಸ್ತೆ ತಲುಪಿ, ಅಲ್ಲಿಂದ ಬಸ್ಸು ಹಿಡಿದು ಬದರಿಗೆ ಹೋಗಿ, ಅಲ್ಲಿಂದ ದೆಹಲಿಗೆ ಹೋಗಿ, ಅಲ್ಲಿಂದ ಬೆಂಗಳೂರಿಗೆ ಹೋಗಿ, ಅಲ್ಲಿಂದ ಶಿವಮೊಗ್ಗಕ್ಕೆ ಹೋಗಿ ಕಾಲೇಜಿಗೆ ತಲುಪಿ ಪಾಠ ಮಾಡಬೇಕು ಅನ್ನುವ ಭವಿಷ್ಯ ಇಲ್ಲೇ ಇದೇ ನಿಜ ಅನ್ನುವ ಕ್ಷಣಗಳನ್ನು ಆಳುತ್ತಿತ್ತು.

ಹೃಷೀಕೇಶ ಹಾಗಲ್ಲ. ಭೂತ ಮಾತ್ರ ಇತ್ತು. ಭೂತದ ಅಳುಕು, ಅಪರಾಧ, ಪಶ್ಚಾತ್ತಾಪಗಳು ನಿಧಾನವಾಗಿ – ಅವತ್ತು ಪೀನಿಯಲ್ಲಿ ಮಳೆ ಬಂದಾಗ ಬಿದ್ದ ಆಲಿಕಲ್ಲಿನಂತೆ – ಕರಗುತ್ತಿದ್ದವು. ಹಿಂದಿರುಗುವ ಆಸೆ ಇಲ್ಲದೆ, ಭವಿಷ್ಯದಲ್ಲಿ ಏನಿದೆ ಅನ್ನುವ ಚಿಂತೆ ಇಲ್ಲದೆ, ನಾಳೆಯ ಒತ್ತಾಯ ಇಲ್ಲದೆ ದಿನ ದಿನಾ ಸುಮ್ಮನೆ ಇದ್ದೆ. ಇರುತ್ತಿದ್ದೆ, ಭೂತಗಳನ್ನು ಹೊತ್ತ ಜನ, ಭೂತದಿಂದ ತಪ್ಪಿಸಿಕೊಳ್ಳಲು ಬರುವ ಜನ, ಆಶ್ರಮದ ಮೇಲೆ ಕರುಣೆ ತೋರುವ ಜನ, ಅತಿಥಿಗಳಾಗಿ ಬರುವ ಜನ, ಎಲ್ಲರೂ ಬಂದು ಹೋಗುವುದನ್ನು ನೋಡುತ್ತ ಸುಮ್ಮನೆ ಬೆಟ್ಟದಹಾಗೆ ನದಿಯಹಾಗೆ ಇದ್ದೆ. ಎಷ್ಟು ದಿನ ಹೀಗೆ ಇರುತ್ತೇನೋ ಗೊತ್ತಿಲ್ಲದ ಹಾಗೆ ಇದ್ದೆ.
ನಿದ್ದೆ ಬರಲಿಲ್ಲ. ಹೀಗಾಗುವುದು ಅಪರೂಪ. ಮತ್ತೆ ಎದ್ದು ಬರೆಯುತ್ತಿದ್ದೇನೆ. ಹಿಮಾಲಯ ದಿನಗಳ ತುಣುಕುಗಳು ಹಾಸಿಗೆಯಲ್ಲಿ ಹೊರಳಾಡಿಸಿದವು. ನನ್ನ ಇಚ್ಛೆಯದಲ್ಲದ ಆದರೆ ನಾನು ಮಾಡಬೇಕಾದ ಕೆಲಸಗಳು ಬೆಳಗಾಗಲೆಂದೆ ಕಾದಿವೆ. ಆದರೆ –
ಕೈ ಮುಗಿದಾಗ ಹಿಂದೆಂದೂ ಹಾಗೆ ಅನ್ನಿಸಿರಲಿಲ್ಲ. ಹಾಗೆ ಹೃತ್ಪೂರ್ವಕ ಕೈ ಮುಗಿದೂ ಇರಲಿಲ್ಲ. ನನ್ನವೇ ಕೈ ಬೆರಳುಗಳು ಒಂದಕ್ಕೊಂದು ವಿರುದ್ಧವಾಗಿ ಒತ್ತಿಕೊಂಡು, ಅಂಗೈಗೆ ಅಂಗೈ ಒತ್ತಿ, ಒಂದು ಬೆರಳಲ್ಲಿ ಹರಿವ ರಕ್ತದ ಚಲನೆ ಇನ್ನೊಂದು ಬೆರಳಿಗೆ ಗೊತ್ತಾಗಿ, ಇಡೀ ನಾನು ಮುಗಿದ ಕೈಯಾಗಿ, ಕಣ್ಣುಮುಚ್ಚಿ, ಗಂಟೆ ಸದ್ದು ಕಿವಿ ತುಂಬ ತುಂಬಿಕೊಂಡು, ಅಹಂಕಾರ ಮುಕ್ಕು ಮಾಡಿಕೊಳ್ಳುತ್ತ, ನೋಯುತ್ತಲೂ ಸಂತೋಷ ಪಡುತ್ತಲೂ ಸ್ವಲ್ಪಹೊತ್ತು ಇದ್ದೆ. ಮತ್ತೆ, ಆಮೇಲೆ, ನಮಸ್ಕಾರ ಪೂರ್ತಿಮಾಡಿದೆ. ನನ್ನ ಇಡೀ ಮೈಯನ್ನು ನೆಲ ಎತ್ತಿ ಹಿಡಿದಿತ್ತು. ಹಣೆಗೆ ತಗಲುವ ತಣ್ಣಗೆ ಕೊರೆಯುವ ನೆಲ, ತೊಡೆಗೆ ಒತ್ತುವ ನೆಲ, ಕಾಲ ಬೆರಳಿಗೆ ತಂಪ್ಪೆನ್ನಿಸುವ ನೆಲ, ಮನಸ್ಸು ಪೂರ್ತಿ ಇಟ್ಟು ಮಾಡುವ ನಮಸ್ಕಾರ ನೆಲದ ಜೊತೆಗೆ ನನ್ನನ್ನು ಸೇರಿಸಿಕೊಂಡಿತ್ತು. ಆಗಲೂ ಹಿಂದೆ ಒಮ್ಮೆ ಜೊತೆಯಲ್ಲಿದ್ದವರನ್ನೆಲ್ಲ ಮರೆತು, ಸುಸ್ತಾಗಿ, ಬ್ರಿಂಗ್ಟಾ ಟಾಪನ್ನು ಹತ್ತಿ ನೆಲಕ್ಕೆ ಬೆನ್ನು ಕೊಟ್ಟು ಮಲಗಿದಾಗ – ಅದು ಮಲಗಿದ್ದು. ನೆಲ ನನಗೆ ಶಕ್ತಿ ಕೊಟ್ಟಿತ್ತು. ಆ ಶಕ್ತಿಯಲ್ಲಿ ಕೆಲವು ಕ್ಷಣ ಇದ್ದವರನ್ನು ಮರೆತು, ಇರಬೇಕೆಂದು ಬಯಸಿದ – ನನಗೆ ಬೇಕೇ ಬೇಕೆಂದು ನಾನು ಹಂಬಲಿಸಿದ ಮುಖಗಳನ್ನು ಮನಸ್ಸಿಗೆ ತಂದುಕೊಂಡಿದ್ದೆ. ಪಾರ್ವತಿ ನದಿ, ದೂರದಲ್ಲಿ ಕೆಳಗೆ, ಆಳದಲ್ಲಿ, ಸಾವಿರ ಸಾವಿರ ಅಡಿ ಏರಿ ಹತ್ತಿದ ಅಹಂಕಾರ. ಕಾಮನೆಯ ನೆನಪುಗಳು, ಚಿತ್ರಗಳು. ಈಗ ಆಯಾಸವಿಲ್ಲದೆ, ಹತ್ತಿದ ಅಹಂಕಾರವಿಲ್ಲದೆ, ಕಾಡಿದ ಕಾಮನೆಗಳು ನಿಜವಾಗಿ ಉಬ್ಬಿದ ಅಹಂಕಾರಕ್ಕೆ ಕೊಟ್ಟ ನೋವು ಇಲ್ಲದೆ, ಮನುಷ್ಯ ಎಷ್ಟೋ ಕಾಲದಿಂದ ಕಲ್ಪಿಸಿಕೊಂಡ ಇನ್ನೊಂದರ ಎದುರು ಸುಮ್ಮನೆ ನಮಸ್ಕಾರ ಮಾಡಿದಾಗ ತಿಳಿಯಿತು ನಮಸ್ಕಾತ ಎಂಥ ಬಿಡುಗಡೆ ತರುತ್ತದೆ ಎಂದು. ಹುಡುಗನಾಗಿದ್ದಾಗ ಅಪ್ಪ ಅಮ್ಮ ಹೇಳಿಕೊಟ್ಟಹಾಗೆ, ಹೆದರಿಕೊಂಡು, ನಮಸ್ಕಾರ ಮಾಡದಿದ್ದರೆ ಏನಾದೀತೋ ಎಂದು ಕೈ ಮುಗಿದದ್ದು ಬರೀ ಸುಳ್ಳು. ಅವತ್ತು, ಆ ಬೆಳಗ್ಗೆ, ನಿಜವಾಗಿ, ನನಗೇ ನಿಜ ಅನ್ನಿಸುವ ಹಾಗೆ, ನಮಸ್ಕಾರ ಮಾಡಿದ್ದು ಒಂದೇ ಸಲ. ಕೆಲವು ಬಾರಿ ಹೀಗೂ ನಾನು ಕೈ ಮುಗಿದೇನು ಅಂತ ಎಂದೂ ಕಲ್ಪಿಸಿಕೊಂಡೂ ಇರಲಿಲ್ಲ. ಒಮ್ಮೆಯಾದರೂ ಆಯಿತಲ್ಲ. ಸಾಕು.

ಅಂದು ಒಂದು ದಿನ ಹೀಗೇ ರಾತ್ರಿ ನಿದ್ದೆ ಬಾರದೆ ನನ್ನ ಕೋಣೆಯ ಆಚೆ ಕಾಸಾಲೆಯಲ್ಲಿ ಬಂದು ಸುಮ್ಮನೆ ಕೂತಿದ್ದೆ. ಆಗಲೂ ಈಗ ಇರುವ ಹಾಗೇ ಮುಕ್ಕಾಲು ಚಂದ್ರನ ಬೆಳಕಿತ್ತು. ನನಗೆ ನಿದ್ರೆ ಬಾರದಿರುವುದು ಅಪರೂಪ. ನಿದ್ರೆ ಬರಲಿಲ್ಲ. ಅಷ್ಟೆ. ಯಾಕೋ. ಈಗಾದರೂ ಹಿಮಾಲಯದ ಚಿತ್ರ ಮನಸ್ಸಿಗೆ ಬರುತ್ತಿವೆ. ಆಗ ಕಾಡುವ ಚಿತ್ರಗಳೂ ಇರಲಿಲ್ಲ. ವಿಶಾಲ ಅಂಗಳದಲ್ಲಿ ಮರ ಸುಮ್ಮನೆ ನಿಂತಿತ್ತು. ಅಂಗಳದ ತುಂಬ ಚೌಕ ಚೌಕ ಜೋಡಿಸಿದ ಚಪ್ಪಡಿ ಕಲ್ಲುಗಳ ಮೇಲೆದೀಪದ ಬೆಳಕು, ಚಂದ್ರನ ಬೆಳಕು ಇತ್ತು. ಮರದ ಹಿಂದೆ ಅಡುಗೆ ಮನೆಯ ಬಿಸಿಲು ಮಚ್ಚು. ಎರಡು ಮೂಟೆಗಳು ಕೆಲವು ಸೌದೆ ತುಂಡುಗಳು ಸುಮ್ಮನೆ ಇದ್ದವು. ಮರದ ಪಕ್ಕದಲ್ಲಿ ಸ್ಟೀಲಿನ ಗೇಟು ಹಳೆಯ ಹೊಳಪನ್ನು ಬೀರುತ್ತಿತ್ತು. ಅಡುಗೆ ಕೋಣೆಯ ಆಚೆ ಬದಿಗೆ ಗುಡ್ಡ. ಗುಡ್ಡದ ತುಂಬ ಕಾಡು. ಅದರಾಚೆ ಮುಖ್ಯ ರಸ್ತೆ. ಅದರಾಚೆ ಅಲೆಗಳ ಹಾಗೆ ಆರಂಭವಾಗುವ ಹಿಮಾಲಯದ ಬೆಟ್ಟಗಳ ಶ್ರೇಣಿ. ಅಲ್ಲೆ ಹತ್ತಿರದಲ್ಲಿ ಪಾಥೆಗಾವ್ ಹಳ್ಳಿ. ಅಲ್ಲಿ ಎಷ್ಟೊಂದು ಸಾಸುವೆ ಹೂಗಳು ನೆಲದ ತುಂಬ ಹರಡಿದ್ದವು. ಗಂಗಾನದಿಯ ಶಬ್ದ ತೆಳುವಾಗಿ ಕೇಳುತ್ತಿತ್ತು. ಇನ್ನೂ ಹಿಮ ಕರಗಿಲ್ಲ. ನದಿಯ ನೀರು ಹೆಚ್ಚಿಲ್ಲ. ಕೈಸಾಲೆಯಲ್ಲಿ ಖಾಲಿ ಮಂಚ. ಉದ್ದಕ್ಕೂ ಮುಚ್ಚಿದ ಬಾಗಿಲುಗಳು. ಕೆಳಗೆ ಎರಡು ಅಂತಸ್ತು. ನಿದ್ದೆ ಮಾಡುತ್ತಿರುವ ಜನ. ಸನ್ಯಾಸಿಗಳು, ಬ್ರಹ್ಮಾಚಾರಿಗಳು, ನನ್ನಂಥವರು, ಅತಿಥಿಗಳು, ಕೆಲಸದವರು. ಸುಮ್ಮನೆ ಕೂತೇ ಇದ್ದೆ. ಹೀಗೂ ಸುಮ್ಮನೆ ಕೂತೇ ಇರಬಹುದು ಒಂದೊಂದು ಸಲ. ತಟ್ಟನೆ ಎಲ್ಲ ಖಾಲಿಯಾಗಿದೆ. ಈಗ ರಾತ್ರಿ ಎರಡು ಗಂಟೆ. ಸಾಕು.
*****
ಮುಂದುವರೆಯುವುದು

ಕೀಲಿಕರಣ: ಸೀತಾಶೇಖರ್

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

This site uses Akismet to reduce spam. Learn how your comment data is processed.