ಅಮೇರಿಕ ಪ್ರವಾಸ

ಗೆಳೆಯರಾದ ಶ್ರೀ ಬಾಬು ಮೆಟ್‌ಗುಡ್‌ರವರು ಅಮೇರಿಕಕ್ಕೆ ಬರಲು ಆಹ್ವಾನಿಸಿದ್ದಾಗಲೆಲ್ಲ, ನಾನು ಇದೊಂದು ಸೌಜನ್ಯದ ಕರೆಯೆಂದು, ಉಪೇಕ್ಷಿಸಿದ್ದೆ. ಅವರು ಆತ್ಮೀಯವಾಗಿ ಕರೆದಾಗಲೆಲ್ಲ ಲೋಕಾಭಿರಾಮವಾಗಿ ಒಪ್ಪಿಕೊಂಡಂತೆ ನಟಿಸುತ್ತಿದ್ದೆ. ಆದರೆ ಈ ನಟನೆ ಬಹಳ ದಿನ ಉಳಿಯಲಿಲ್ಲ. ೧೯೯೭ರ ಜುಲೈ ೪ ಹಾಗೂ ೫ ರಂದು ವೀರಶೈವ ಸಮಾಜ ಉತ್ತರ ಅಮೇರಿಕಾದವರ ಅಧಿವೇಶನದಲ್ಲಿ ಮುಖ್ಯ ಅತಿಥಿಗಳಾಗಿ ಬರಲು ಆಹ್ವಾನವನ್ನು ಕೊಟ್ಟರು. ಕಾಲೇಜಿನ ದಿನಗಳ ಗೆಳೆಯ ಶ್ರೀ ಶಂಕರಶೆಟ್ಟಿಯವರು ಶ್ರೀ ಬಾಬು ಮೆಟ್‌ಗುಡ್‌ರವರ ಮೂಲಕ ಬರಲು ಒತ್ತಾಯಿಸಿದ್ದರು.

ಆಹ್ವಾನವೇನೋ ಬಂದಾಗಿತ್ತು. ಆದರೆ ಜೂನ್ ತಿಂಗಳಲ್ಲಿ ನಮ್ಮ ಉಪಮುಖ್ಯಮಂತ್ರಿಗ ಶ್ರೀ ಸಿದ್ಧರಾಮಯ್ಯನವರು, ಮುಖ್ಯಮಂತ್ರಿಗಳಾದ ಶ್ರೀ ಜೆ.ಹೆಚ್. ಪಟೇಲ್‌ರವರು, ಅಮೇರಿಕಾ ದೇಶಕ್ಕೆ ಅಧಿಕೃತ ಭೇಟಿ ಕೊಟ್ಟಿದ್ದರು. ಪತ್ರಿಕೆಗಳಲ್ಲಿ ವಿದೇಶಿ ಪ್ರವಾಸದ ಬಗ್ಗೆ ಟೀಕೆ ಟಿಪ್ಪಣಿಗಳು ಬಂದಿದ್ದವು. ಇದರೊಂದಿಗೆ, ನಮ್ಮ ಜನತಾದಳದ ಮುಗಿಯದ ಒಳಜಗಳ, ಒಂದು ರಾಜಕೀಯ ಪಕ್ಷ ತನ್ನ ಮರ್ಯಾದೆಯನ್ನು, ಎಷ್ಟು ಹಾಳು ಮಾಡಿಕೊಳ್ಳಬಹುದೋ ಅಷ್ಟನ್ನೂ ಶ್ರೀ ಶರದ್ ಯಾದವ್ ಮಾಡುತ್ತಿದ್ದರು. ಯಾದವೀ ಕಲಹದಿಂದ, ಎಲ್ಲರ ನೆಮ್ಮದಿ ಹಾಳಾಗಿತ್ತು. ಪಕ್ಷ ಹರಿದು ಹಂಚಿ ಹೋಗುವ ಸ್ಥಿತಿ ತಲುಪಿತ್ತು. ಕಾರ್ಯಕರ್ತರ ಭವಿಷ್ಯದೊಂದಿಗೆ ಚೆಲ್ಲಾಟವಾಡುತ್ತಿದ್ದ ಈ ಸಮಯದಲ್ಲಿ ಸುಮಾರು ಮೂರು ವಾರಗಳ ಕಾಲ ದೇಶಬಿಟ್ಟು ಹೋಗುವುದು ಎಷ್ಟು ಸಮಂಜಸವೆಂದು ಆತಂಕಕ್ಕೆ ಒಳಗಾಗಿದ್ದೆ. ಮಕ್ಕಳ ಹಾಗೂ ಅಳಿಯಂದಿರ ಒತ್ತಡ ಹಾಗೂ ದಿನ ಬಿಟ್ಟು ದಿನ ಪ್ರೀತಿಯಿಂದ ಕರೆಯುತ್ತಿದ್ದ ಶ್ರೀ ಬಾಬು ರವರ ಆಹ್ವಾನ, ಹೊರಡುವುದಕ್ಕಿಂತ ಮುಂಚೆ-ಕೇವಲ ಕೆಲವೇ ದಿನಗಳಿಗಿಂತ ಮುಂಚೆ-ಹೊರಡಲು ನಿರ್ಧರಿಸಲು ಪ್ರೇರಕವಾಯಿತು.

ಇಷ್ಟೆಲ್ಲಾ ಪುರಾಣ ಒಂದು ಪೀಠಿಕೆ ಮಾತ್ರ. ನನ್ನ ಈ ಭೇಟಿ ಎಷ್ಟು ಖಾಸಗಿಯಾಗಿಡಬೇಕೆಂದು ಬಯಸಿದರೂ ಸಾಧ್ಯವಾಗಲಿಲ್ಲ. ನೂರಾರು ಅಭಿಮಾನಿಗಳು ಸದಾಶಯದ ಸುಖ ಪ್ರಯಾಣ ಕೋರಿದರು. ಮಾನ್ಯ ಮುಖ್ಯಮಂತ್ರಿಗಳು, ಹೋಗಿಬರಲು ಒಪ್ಪಿಗೆ ಕೊಡುತ್ತಾ ಪ್ರಯಾಣದ ವಿವರ ಹಾಗೂ ಏರ್ಪಾಡಿನ ಬಗ್ಗೆ ಕೇಳಿದರು. ಒಟ್ಟಿನಲ್ಲಿ ಎಲ್ಲರ ಶುಭಾಶಯ ಹೊತ್ತು ೩೦ ಜೂನ್/೧ಜುಲೈ ರಾತ್ರಿ ೨.೩೦ಘಂಟೆಗೆ ಏರ್ ಇಂಡಿಯಾದ ವಿಮಾನವನ್ನು ನಾನು, ನನ್ನ ಹೆಂಡತಿ ಏರಿಯೇಬಿಟ್ಟೆವು. ಮುಂಬೈನಲ್ಲಿ ವಿಮಾನ ಬದಲಿಸಬೇಕು. ಏರ್ ಇಂಡಿಯಾದ ಅಧಿಕಾರಿಗಳು ಎಕ್ಸಿಕ್ಯುಟಿವ್ ಕ್ಲಾಸಿನಲ್ಲಿ ನನ್ನನ್ನು ಮಾತ್ರ ಒಂದನೇ ತರಗತಿ ಪ್ರಯಾಣಕ್ಕೆ ಅವಕಾಶ ಕಲ್ಪಿಸಿಕೊಟ್ಟಿದ್ದರು. ಹೆಂಡತಿ ಜೊತೆಗೆ ಹೊರಟಿರುವುದು ಗೊತ್ತಿದ್ದು, ಒಬ್ಬರಿಗೆ ಮಾತ್ರ ಸೌಜನ್ಯದ ಅನುಕೂಲವನ್ನು ನಾನು ನಿರಾಕರಿಸಿದೆ. ಆಶ್ಚರ್ಯದ ಸಂಗತಿಯೆಂದರೆ ನಮ್ಮ ವಿಮಾನಯಾನದ ಸಂಸ್ಥೆಯವರು ನಮ್ಮಿಬ್ಬರಿಗೆ ಲಂಡನ್‌ನಿಂದ, ನ್ಯೂಯಾರ್ಕ್‌ಗೆ ಪ್ರಯಾಣಿಸುವಾಗ ಮೇಲ್ದರ್ಜೆಗೆ ಏರಿಸಿ, ಹೆಚ್ಚಿನ ಸೌಕರ್ಯವನ್ನು ಕಲ್ಪಿಸಿಕೊಟ್ಟರು.

ಸುಮಾರು ೨೪ ತಾಸುಗಳಷ್ಟರ ಪ್ರಯಾಣ ನಮ್ಮನ್ನೇನು ಸುಸ್ತು ಮಾಡಲಿಲ್ಲ. ಸುಮಾರು ೮೦೦೦ ಕಿ.ಮೀಟರಿನಷ್ಟು ಅಂತರವನ್ನು ಸಕಲ ಸೌಲಭ್ಯಗಳೊಂದಿಗೆ ಸುಮಾರು ೩೦ ಸಾವಿರ ಅಡಿಗಳಿಗಿಂತ ಹೆಚ್ಚಿನೆತ್ತರದಲ್ಲಿ ಹಾರಾಡುತ್ತಾ ತಲಪುವ ವ್ಯವಸ್ಥೆ ಅದ್ಭುತ. ಮನುಷ್ಯನ ಅನ್ವೇಷಣಾ ಸಾಮರ್ಥ್ಯದ ದ್ಯೋತಕ. ನಮ್ಮೂರ ಬಸ್ ನಿಲ್ದಾಣದಂತೆ ಜನಜಂಗುಳಿಯಿಂದ ಕಿಕ್ಕಿರಿದು ತುಂಬಿರುವ ವಿಮಾನ ನಿಲ್ದಾಣಗಳು, ನಾಗರೀಕ ಪ್ರಪಂಚದ ನಾಗಾಲೋಟದ ಪ್ರತಿಬಿಂಬ. ನಮ್ಮ ಪ್ರಯಾಣದ ಸಂಗಾತಿಗಳು ಬಹಳಷ್ಟು ಮಂದಿ ಭಾರತೀಯ ಸಂಜಾತರೆ. ಕೆಲವರು ಲಂಡನ್ನಿನಲ್ಲಿ ಇಳಿದರೆ ಉಳಿದವರು, ನ್ಯೂಯಾರ್ಕಿನಲ್ಲಿ ಇಳಿದರು. ಸುಮಾರು ೪೦೦ಕ್ಕಿಂತ ಹೆಚ್ಚು ಜನ ಪ್ರಯಾಣಿಕರು, ಹುಡುಗರು, ಮುದುಕರು, ಯೌವ್ವನಿಗರು. ತರಾವರಿ ಜನ ವಿಭಿನ್ನ ವೇಷಭೂಷಣ. ಆದರೆ ಯಾರೂ ಪುಕ್ಕಟ್ಟೆಯಾಗಿ ಸಿಗುತ್ತದೆಂದು ಕುಡಿದು ಕುಪ್ಪಳಿಸಲಿಲ್ಲ. ಧೂಮಪಾನವನ್ನೂ ಸಹ ಮಾಡುತ್ತಿರಲಿಲ್ಲ. ಹಿಂದೆ ಬಹಳ ವರ್ಷಗಳ ಹಿಂದೆ, ಮಹಾರಾಷ್ಟ್ರದ ಮಂತ್ರಿ ಶ್ರೀ ರಾಮ್‌ರಾವ್ ಅಧಿಕರವರು ಹೆಚ್ಚು ಕುಡಿದು, ಗಗನಸಖಿಯರೊಂದಿಗೆ ಅಸಭ್ಯವಾಗಿ ವರ್ತಿಸಿದರು ಎಂದು ಓದಿದ ನೆನಪು ಸುಳಿಯಿತು. ಎಲ್ಲಾ ಸೌಕರ್ಯಗಳು ಸಿಕ್ಕಾಗ ಮನುಷ್ಯ ಅದರ ದುರ್ಬಳಕೆಯನ್ನು ಮಾಡಲಾರ. ಆದರೆ ಪ್ರಯಾಣಿಕರಾರು ಮತ್ತೊಬ್ಬರೊಂದಿಗೆ ಮಾತನಾಡುವ ಕುತೂಹಲ ತೋರಿಸಲೇ ಇಲ್ಲ. ಎಲ್ಲಾ ಗಂಭೀರವಾದ ಪ್ರಯಾಣ.

೧ನೇ ತಾರೀಖು ಮದ್ಯಾಹ್ನ (ಅಮೇರಿಕಾದ ಸ್ಥಳೀಯ ವೇಳೆ) ೪ ಘಂಟೆಗೆ ಊಹಾತೀತವಾದ, ವಿಶಾಲವಾದ ನ್ಯೂಯಾರ್ಕ್ ನಗರದ ಜಾನ್ ಎಫ್.ಕೆನಡಿ ವಿಮಾನ ನಿಲ್ದಾಣಕ್ಕೆ ಬಂದಿಳಿದೆವು. ಶ್ರೀ ಬಾಬು ನಮಗಾಗಿ ಕಾದಿದ್ದ. ಆತ ತನ್ನ ಸುಂದರವಾದ ಟೊಯೋಡೋ ಕಾರಿನಲ್ಲಿ ಅವರಿರುವ ಹತ್ತಿರತ್ತಿರ ೧೨೦ ಮೈಲುಗಳ ದೂರದ “ಮಾರಿಸ್‌ಟೌನ್”ಗೆ ಪಯಣಿಸಿದೆವು. ವಿಶಾಲವಾದ, ನಿಯಂತ್ರಿತವಾದ, ಇಕ್ಕೆಲಗಳಲ್ಲಿ ೬ ಸಾಲುಗಳಿರುವ ರಸ್ತೆಗಳು ಇಡೀ ಪ್ರಯಾಣ ಒಂದೂವರೆ ತಾಸಿನೊಳಗೆ ಮುಗಿಸಿದೆವು. ಒಬ್ಬನೇ ಒಬ್ಬ ವ್ಯಕ್ತಿ ನಡೆದುಕೊಂಡು ಹೋದದ್ದನ್ನಾಗಲೀ ಇಡೀ ಪ್ರಯಾಣದುದ್ದಕ್ಕು ದನಕರುಗಳನ್ನಾಗಲೀ ನೋಡಲಿಲ್ಲ. ರಸ್ತೆಗಳ ಇಕ್ಕೆಲಗಳಲ್ಲಿ ಕೊಳಕನ್ನು ಕಾಣಲಿಲ್ಲ. ತಿಂಘಳಿಗೆ ಕನಿಷ್ಟ ಎರಡು ಬಾರಿ ನಾನು ನಮ್ಮ ರಾಷ್ಟ್ರೀಯ ಹೆದ್ದಾರಿ ೪ರ ಮೇಲೆ ನಮ್ಮೂರಿಗೆ ಪಯಣಿಸುತ್ತೇನೆ. ನಮ್ಮ ಇಡೀ ಪ್ರಪಂಚವೇ ರಸ್ತೆಯ ಮೇಲಿರುತ್ತದೆ. ೫,೬ ತಾಸಿನ ಪ್ರಯಾಣದಲ್ಲಿ ಕನಿಷ್ಠ ೪,೫ ಅಪಘಾತದಿಂದ ನುಗ್ಗಾದ ವಾಹನಗಳು ಕಣ್ಣಿಗೆ ಕಂಡೇ ಕಾಣುತ್ತದೆ. ಇಲ್ಲಿ ಅಂತಹ ದೃಶ್ಯ ಅಪರೂಪ: ಇಲ್ಲವೇ ಇಲ್ಲವೆಂದರೂ ತಪ್ಪಲ್ಲ.

ಶ್ರೀ ಬಾಬುರವರ ಮನೆ ಸುಮಾರು ೧೨ ಎಕರೆ ಜಾಗದ ನಡುವೆಯಿದೆ. ದೊಡ್ಡ, ಸಕಲ ಸೌಲಭ್ಯಗಳ ಸುಂದರವಾದ ಮನೆ. ತುಂಬಾ ಶ್ರೀಮಂತ ಬಡಾವಣೆಯಲ್ಲಿ ರಸ್ತೆಯಿಂದ ಅನತಿ ದೂರದಲ್ಲಿರುವ ಮನೆಯ ಸುತ್ತ ನೀರವತೆ, ಮನೆಯ ಮುಂದೆ ಸುಂದರ ಮಾನವ ನಿರ್ಮಿತ ಕೊಳ, ಬಾತುಕೋಳಿಗಳ ವಾಸಸ್ಥಳ. ಮನೆ ಸುತ್ತಿನಲ್ಲಿ ಅಂದವಾದ ಸಿಂಗರಿಸಿದ, ಹುಲ್ಲುಗಾವಲು ಎತ್ತರದ ಮೇಪಿಲ್ ಮರಗಳ ತೋಪುಗಳು. ಸುತ್ತ ನೀರವತೆಯನ್ನು ಆಗಾಗ್ಗೆ ಅಣಕಿಸುವ, ನವಿಲುಗಳ ಕೇಕೆ, ಶ್ರೀ ಬಾಬುರವರ ಮನೆ ಅಂಗಳದಲ್ಲಿ ೧೪ಕ್ಕಿಂತ ಹೆಚ್ಚಾದ ಗಂಡು ಹೆಣ್ಣು, ನವಿಲು ಹಾಗೂ ಅವುಗಳ ಮರಿಗಳು. ನಾವೆಲ್ಲಾ ಬದುಕಬೇಕೆಂಬ, ಬಯಕೆಯ ತಾಣ, ಶುಭದಾ ಅವರ ಹೆಂಡತಿಯ ಪ್ರೀತಿಯ ಆಹ್ವಾನ, ಮುದ್ದಾದ ಎರಡು ಹೆಣ್ಣುಮಕ್ಕಳು ಪಲ್ಲವಿ, ಶಾಂಭವಿ. ಮನೆ ಒಳಗಡೆಯೆ ಈಜುಕೊಳದ ಆಚೆಗೆ, ಅತಿಥಿಗಳ ಎರಡು ಕೋಣೆಗಳು. ಅದರಲ್ಲಿ ಒಂದು ನಮ್ಮದು. ಕಾಫಿ ಬಿಸ್ಕತ್ತುಗಳ ನಂತರ ಪ್ರಯಾಣದ ಸುಸ್ತನ್ನು ಪರಿಹರಿಸಿಕೊಳ್ಳಲು ವಿದಾಯ. ಎಲ್ಲವನ್ನೂ ಮೌನವಾಗಿ ಅನುಭವಿಸುತ್ತಿದ್ದೆ. ಕುತೂಹಲದಿಂದ ನೋಡುತ್ತಿದ್ದೆ. ಒಬ್ಬರೇ ಒಬ್ಬ ಸಹಾಯಕರಿಲ್ಲದೆ, ಪರಿಚಾರಕರಿಲ್ಲದೆ ಮನೆಯನ್ನು ಒಪ್ಪ ಓರಣವಾಗಿಟ್ಟುಕೊಂಡ, ಮಹಿಳೆ ಶುಭದಳ ಬಗ್ಗೆ ಮೆಚ್ಚಿಗೆ, ನಿಜಕ್ಕೂ ರೂಪವಂತರಾದ ಗಂಡಹೆಂಡತಿ. ಸ್ವರ್ಗಕ್ಕೆ ಕಿಚ್ಚು ಹೆಚ್ಚುವ ಸರ್ವಜ್ಞನ ವಚನ ಜ್ಞಾಪಕಕ್ಕೆ ಬಂತು. ಚಪಾತಿ ಎರಡು ದಿನಿಸಿನ ಪಲ್ಯ, ಅನ್ನ, ಸಾರು, ಮೊಸರಿನ ಊಟ ಸ್ವಾದಿಷ್ಟ. ಹೊಟ್ಟೆ ತುಂಬ ಉಂಡು, ತಲೆದಿಂಬಿಗೆ ತಲೆಕೊಟ್ಟರೆ, ಎಚ್ಚರವಾದದ್ದು ಬೆಳಿಗ್ಗೆ ೫.೩೦ ಘಂಟೆಗೆ. ಬೇಸಿಗೆ ಕಾಲದಲ್ಲಿ ಇಲ್ಲಿ ಹಗಲುಗಳು ಬಹಳ ಉದ್ದ;ರಾತ್ರಿ ೭.೩೦ರವರೆಗೂ ಬೆಳಕಿತ್ತು.

ನಮ್ಮೂರಿನಲ್ಲಿ ಸೋಮಾರಿಯಾದ ನಾನು, ಇಲ್ಲಿ ಮಾತ್ರ ಎದ್ದವನೆ, ನನ್ನ ಲುಂಗಿಯ ಮೇಲೆ ನೆರೆಹೊರೆ ತಿಳಿಯಲು, ಊರನ್ನು ಕಾಣಲು ವಾಯುವಿಹಾರಕ್ಕೆ ಹೊರಟೆ. ಸುಮಾರು ೨ ಕಿ.ಮೀ. ನಷ್ಟು ಹೋದರೂ ಒಂದು ನರಪಿಳ್ಳೆಯಿಲ್ಲ. ವಿಶಾಲವಾದ ಹುಲ್ಲುಗಾವಲು, ಮರಗಿಡಗಳ ಹಿಂದೆ ಸುಂದರವಾದ ಮನೆಗಳು. ಯಾವ ಮನೆಗಳಿಗೂ ಅಂತಹ ಭದ್ರವಾದ ಆವರಣ ಗೋಡೆಗಳಿಲ್ಲ., ಹಾಗೆ ನೋಡಿದರೆ ಆವರಣಗೋಡೆಗಳಿಲ್ಲದ ಒಬ್ಬರಿಗಿಂತ ಮಿಗಿಲಾಗಿ ಒಬ್ಬರ ಸುಸಜ್ಜಿತ, ಒಪ್ಪ ಓರಣದ ವಿಶಾಲ ಹುಲ್ಲುಗಾವಲುಗಳು, ಸಾಲುಮರಗಳು, ಡಾಂಬರು ಒಳರಸ್ತೆಗಳು, ಡಾಂಬರು ರಸ್ತೆಯ ಹೊರಗಡೆ ಪ್ಲಾಸ್ಟಿಕ್ ಚೀಲದಲ್ಲಿ ಹೊಗೆದ ಪತ್ರಿಕೆಗಳು. ಜನಗಳು ಹೊರಗಿಟ್ಟಿದ್ದ ಡಸ್ಟ್‌ಬಿನ್‌ಗಳನ್ನು, ಒಬ್ಬ ಪಿಕಪ್ ವ್ಯಾನನ್ನು ತಂದು ತೆಗೆದುಕೊಂಡು ಹೋದ. ಮತ್ತೊಬ್ಬ ತನ್ನ ಮನೆ ಮುಂದಿನ ಹುಲ್ಲು ಹಾಸನ್ನು ಚಿಕ್ಕ ಟ್ರಾಕ್ಟರ್‌ನಂತ ಯಂತ್ರದಿಂದ ಕತ್ತರಿಸುತ್ತಿದ್ದ. ಇಡೀ ಒಂದು ತಾಸಿನ, ನನ್ನ ವಿಹಾರದಲ್ಲಿ ಕಂಡವರಿಬ್ಬರೆ. ಲುಂಗಿ ಉಟ್ಟುಕೊಂಡ ನನ್ನನ್ನು ಕುತೂಹಲದಿಂದಲೂ ಸಹ ಅವರು ನೋಡಲಿಲ್ಲ. ಬದಲು, ದೂರದಿಂದಲೆ ನಕ್ಕು ಕೈಯಾಡಿಸಿದರು.

ಗಡದ್ದಾದ ಒಳ್ಳೆಯ ಉಪಾಹಾರ ಮಾಡಿ, ನ್ಯೂಯಾರ್ಕ್ ನಗರ ನೋಡಲು ಹೊರಟೆವು. ಈಗ ಬೇರೊಂದು ರಸ್ತೆಯ ಮೂಲಕ ಪುರ ಪ್ರವೇಶ ಹಡ್ಸನ್ ನದಿಯ ಕೆಳಗೆ ಕೊರೆದ ಸುರಂಗದ ಮೂಲಕ ನ್ಯೂಯಾರ್ಕ್ ನಗರದ “ಮ್ಯಾನ್‌ಹಾಟನ್” ದ್ವೀಪಕ್ಕೆ ಹೋದೆವು. ಜನವೋ ಜನ. ರಸ್ತೆಯ ಇಕ್ಕೆಲಗಳಲ್ಲಿ ಗಗನಚುಂಬಿಗಳು. ತಾಂತ್ರಿಕ ಕೌಶಲ್ಯದ ಪ್ರತೀಕಗಳು. ತಿರುಗಾಡುತ್ತಿದ್ದ ಬಹಳ ಜನರಲ್ಲಿ ನೀಗ್ರೋಗಳು ತುಂಬಾ ಇದ್ದರು. ಇತರ ದೇಶ ಸಂಜಾತರನ್ನು ನನ್ನ ಹೆಂಡತಿ ಬಿಟ್ಟರೆ ಸೀರೆವುಟ್ಟ ಮೂರು ನಾಲ್ಕು ಮಹಿಳೆಯರನ್ನು ಕಂಡೆ. ಎಲ್ಲರೂ ನಡುಹರೆಯದವರು!

ಜನಗಳ ಮುಖ, ಹಾವಭಾವ, ಉಡುಪು ತೊದಪುಗಳನ್ನು ನೋಡಲು ಅದರ ಮೂಲಕ ಅವರ ಜನಜೀವನ ಅರಿಯಲು ನನಗೆ ಎಲ್ಲಿಲ್ಲದ ಆಶೆ/ಕುತೂಹಲ. ತುಂಬಿದ ಕೆನ್ನೆಯ, ದಷ್ಟಪುಷ್ಠ, ಜೀವಂತಿಕೆಯ ಜನ, ತರಹಾವಾರಿ ವೇಷಭೂಷಣ, ಮಧ್ಯವಯಸ್ಸಿನ ಬಹಳಷ್ಟು ಮಹಿಳೆಯರು ಸಿಗರೇಟು ಸೇದುತ್ತಿದ್ದರು. ಆದರೆ ಚಿಕ್ಕವರ ಬಾಯಿಯಲ್ಲಿ ಹೊಗೆ ಬರುವುದನ್ನು ನಾನು ನೋಡಲಿಲ್ಲ. ಇದು ಒಳ್ಳೆಯದಲ್ಲವೆ?

ನಮ್ಮಹರೆಯದ ದಿನಗಳ ತಾಂತ್ರಿಕ ಕೌಶಲ್ಯದ “ಎಂಪಯರ್ ಸ್ಟೇಟ್ ಕಟ್ಟಡ” (ಇmಠಿiಡಿe Sಣಚಿಣe ಃuiಟಜiಟಿg)ದ ಮುಂದೆ, ಎದುರು ಬದಿಯ ಪಾದಾಚಾರಿಗಳ ದಾರಿಯಲ್ಲಿ ನಿಂತು ಕತ್ತೆತ್ತಿ ನೋಡಿದೆ, ಕೊನೆ ಕಾಣಲೇ ಇಲ್ಲ. ವಿಶಾಲವಾದ ರಸ್ತೆಗಳ ಇಕ್ಕೆಲಗಳಲ್ಲಿ ನಿಂತ ಗಗನಚುಂಬಿಗಳು ದೇಶದ ಶ್ರೀಮಂತಿಕೆಯ, ತಾಂತ್ರಿಕ ಕೌಶಲ್ಯದ ಪ್ರತೀಕಗಳು. ಸುಮಾರು ೧೦ ನಿಮಿಷಗಳ ಕಾಲ ಅಂಗಡಿ ಸಾಲುಗಳನ್ನು ನೋಡುತ್ತಾ, ಒಳಗಡೆ ಹೋಗಲು ಭಯಪಟ್ಟು ತಿರುಗಾಡಿ ನಂತರ ಪ್ರಪಂಚದ ಅತಿ ಎತ್ತರದ ಕಟ್ಟಡವಾದ “Woಡಿಟಜ ಖಿಡಿಚಿಜe ಃuiಟಜiಟಿg”ಗೆ ಹೋದೆವು ಎತ್ತರದ ಎರಡು ಅವಳಿ ಜವಳಿ ಗಗನಚುಂಬಿಗಳು. ನಮ್ಮ ಹಂಪೆಯ ಅಕ್ಕತಂಗಿಯರ ಗುಡ್ಡಗಳಂತೆ ಜೊತೆಹೊತೆಗೆ ನಿಂತ ಅವಳಿ ಕಟ್ಟಡಗಳು. ಅಷ್ಟೊಂದು ಜನ ಈ ಕಟ್ಟಡಗಳಲ್ಲಿ ಬರೆ ಕೆಲಸ ಮಾಡುವವರಿದ್ದಾರೆಂದರೆ, ಆ ಕಟ್ಟಡಗಳ ಅಘಾದತೆಯನ್ನು ಕಲ್ಪಿಸಿಕೊಳ್ಳಬಹುದು. ೧೯ ರಲ್ಲಿ ಕೆಲವು ಮುಸ್ಲಿಮ್ ಸಂಪ್ರದಾಯವಾದಿ ಭಯೋತ್ಪಾದಕರು (ಮುಂಬೈನಲ್ಲಿ ಬಾಂಬು ಸ್ಪೋಟ ಮಾಡಿದಂತೆ) ಈ ಕಟ್ಟಡಗಳಲ್ಲಿ ಬಾಂಬನ್ನು ಸ್ಪೋಟಿಸಿದರಂತೆ, ಅಪಾರ ಕಷ್ಟನಷ್ಟಗಳನ್ನು ಜನ ಅನುಭವಿಸಿದ್ದರಿಂದ ಬಿಗಿ ಭದ್ರತೆ ಜಾಸ್ತಿಯಿದೆ. ಸಹಜವೂ ಕೂಡ. ಭಯೋತ್ಪಾದನೆಯ ಪಿಡುಗು ಎಲ್ಲಾ ದೇಶಗಳಲ್ಲೂ ಹರಡಿದೆ. ತಪ್ಪು ಕಲ್ಪನೆಗಳ, ವಿಕೃತ ಮನಸ್ಸಿನ ಕೆಲವು ಸಂಘಟನೆಗಳು, ಇಂತಹ ಅಪಾರ ಜೀವಹಾನಿಗೆ ಪ್ರಯತ್ನಿಸುತ್ತಿವೆ. ಇವುಗಳಿಗೆ ಕೆಲವು ರಾಷ್ಟ್ರ ಪ್ರೊತ್ಸಾಹ ಕೊಡುತ್ತಿರುವುದು ಖೇದದ ಹಾಗೂ ಖಂಡನೀಯ ಸಂಗತಿ. ಅಂತಸ್ತಿನ ಭಾಗದಲ್ಲಿ ನಿಂತರೆ, ಇಡೀ ಮ್ಯಾನ್‌ಟನ್ ದ್ವೀಪವನ್ನು ಅದರಾಚೆಯ ದ್ವೀಪಸಮೂಹಗಳನ್ನು ವೀಕ್ಷಿಸಬಹುದು. ಒಂದು ಅದ್ಭುತ, ಅಸಾಮಾನ್ಯ ದೃಶ್ಯ ನಿಮ್ಮ ಕಣ್ಣಿಗೆ ಗೋಚರಿಸುತ್ತದೆ. ೧೩ ರಾಜ್ಯಗಳು ಪ್ರತಿನಿದತ್ವವಿಲ್ಲದೆ ತೆರಿಗೆಯಿಲ್ಲವೆಂದು, ಸ್ವತಂತ್ರ ಘೋಷಿಸಿಕೊಂಡದರ ಪ್ರತೀಕವಾಗಿ “ಸ್ವತಂತ್ರ ದೇವತೆಯ” (Sಣಚಿಣue oಜಿ ಐibeಡಿಣಥಿ) ಬಹಳ ಸುಂದರವಾಗಿ ಅದರ ದ್ವೀಪ ಹಾಗೂ ಸುತ್ತಣ ದ್ವೀಪ ಸಮೂಹಗಳ ನಡುವೆ ಕಾಣಸಿಗುತ್ತದೆ. ಹೆಲಿಕಾಫ್ಟರ್‌ನ ಮೂಲಕ ಇಣುಕಿ ನೋಡಿದರೆ ಕಾಣುವಂತಹ ಅನುಭವ. ಇಲ್ಲಿ ಸೋವೇನೀರ್‌ಗಳನ್ನು ಮಾರುವ ಅಂಗಡಿಗಳಿವೆ. ಕಾಫಿ, ಟೀ, ತಿಂಡಿ ತಿನಿಸುಗಳನ್ನು ಮಾರುವ ಅಂಗಡಿಯಿದೆ. ನಮಗೆ ಬೇಕಾದ ತಿನಿಸನ್ನು ಆರಿಸಿಕೊಳ್ಳಬಹುದು. ಸಾಲಿನಲ್ಲಿ ನಿಂತು, ಅವುಗಳನ್ನು ಕೊಳ್ಳಲು ಹೋದಾಗ, ಒಬ್ಬ ಪಂಜಾಬಿ ಯುವಕ ಸಸ್ಯಾಹರಿ ದಿನಸುಗಳನ್ನು ಆಯ್ಕೆ ಮಾಡಲು ಸಹಾಯಮಾಡಿದ. ಹಿಂದಿಯಲ್ಲಿ ಮಾತನಾಡಿಸಿ ಅಭಿಮಾನದಿಂದ ಸಹಾಯ ಮಾಡಿದ. ಪಂಜಾಬಿ, ಸಿಂದಿ ಜನ ಸಾಹಸಿಗರು. ಕಡಲಾಚೆಯ ದೇಶಗಳು ಅವರ ಸಪ್ತನದಿಗಳ ನಾಡಿನಂತೆ. ಮಲೆಯಾಳಿ ಹಾಗೂ ತಮಿಳರನ್ನು ನಾನು ನೋಡಲಿಲ್ಲ. ಎಲ್ಲಾ ಕಡೆ ಪಂಜಾಬಿಗಳ ಕಾರುಬಾರು. ದಷ್ಟಪುಷ್ಟರ ಈ ಸುಂದರ ಜನ ದುಡಿಯಲು ನಿಸ್ಸೀಮರು. ಖಾಲಿಸ್ಥಾನದಂತಹ ದೇಶದ್ರೋಹಿ ಕಲ್ಪನೆಗಳ ಹುಚ್ಚಿನ ಕೆಲವು ಸಿಖ್ ಜನ ಅಮೆರಿಕಾ ಹಾಗೂ ಕೆನಡದಲ್ಲಿ ಬಹಳಯಿದ್ದಾರೆಂದು ಕೇಳಿ ಖೇದವಾಯಿತು. ನಮ್ಮಂತೆ, ನೋಡಲು ನಾಲ್ಕಾರು ಭರತೀಯ ಕುಟುಂಬಗಳು ಬಂದಿದ್ದವು. ಅವರು ಸ್ಥಳಿಯರಾಗಿರಬಹುದು. ಯಾರೂ ಮಾತನಾಡಿಸುವ ಗೋಜಿಗೆ ಹೋಗಲಿಲ್ಲ. ಅಲ್ಲಿ ಹೊತ್ತು ಹೋದದ್ದೇ ಗೊತ್ತಾಗಲಿಲ್ಲ. ಮತ್ತೆ ಕೆಳ ಅಂತಸ್ತಿಗೆ ಬಂದು, ಸಾಲುಸಾಲು ವಿವಿಧ ನಮೂನೆಯ ಸರಕುಗಳನ್ನು ಮಾರುವ ಅಂಗಡಿಗಳನ್ನು ಮಾರುವ ಅಂಗಡಿಗಳನ್ನು ನೋಡಿ ಮುದಗೊಂಡೆವು. ತಮಾಷೆಯೆಂದರೆ ಕೆಳ ಅಂತಸ್ತಿನ ಅಂಗಡಿ ಸಾಲುಗಳ ನಡುವೆ ‘ಸಾರ್ವಜನಿಕ ಮೂತ್ರಿ’ಗಳನ್ನು ಹುಡುಕುವುದೆ ಒಂದು ಸಾಹಸವಾಯಿತು. ಅವುಗಳನ್ನು ಜನ ಇಲ್ಲಿ “ವಿಶ್ರಾಂತಿ ಕೊಠಡಿ” (ಖesಣ ಖoomಯೆಂದು ಕರೆಯುತ್ತಾರೆ. ತುಂಬಾ ಶ್ರುಭ್ರವಾದ ತಾಣಗಳು. ನಮ್ಮ ಕೊಳಕುತವನ್ನು ಕಂಡು ಅಣಕಿಸುವಂತಹ ಇಂತಹ ಶೌಚಾಲಯಗಳು, ನಮ್ಮ ‘ನಿರ್ಮಲ ಕರ್ನಾಟಕ’ದ ಯೊಜನೆ ಇನ್ನು ಎಷ್ಟು ದೂರ ಸಾಗಬೇಕಿದೆಯೆನ್ನುವುದನ್ನು ಸಾರಿ ಹೇಳುತ್ತಿದ್ದವು ಒಂದೇ ಒಂದು ಹರಿದ ಕಾಗದ, ಬಿಸಾಕಿದ ಪ್ಲಾಸ್ಟಿಕ್ ಕಪ್ಪು ಅಲ್ಲಲ್ಲಿ ಬಿದ್ದದ್ದನ್ನು ನೋಡಲಿಲ್ಲ. ಉಗುಳುವ, ಸಿಂಬಳ ಸೀನುವ ಜನಗಳು ಇಲ್ಲವೇ ಇಲ್ಲ. ಅಂತಹ ಸಾರ್ವಜನಿಕ ಶಿಸ್ತು, ಸಂಯಮ, ತಮ್ಮ ಪರಿಸರ ನಿರ್ಮಲವಾಗಿರಬೇಕೆಂಬ ಬಯಕೆ ನಿಜಕ್ಕೂ ಅನುಕರಣೀಯ. ಪ್ರವೇಶಕ್ಕಾಗಿ ಒಬ್ಬೊಬ್ಬರಿಗೆ ೧೦ ಡಾಲರ್ ಕೊಟ್ಟಿದ್ದು ಸಾರ್ಥಕವೆಂದು ಸಂತೋಷಪಟ್ಟೆ. ಮತ್ತೆ ನಮ್ಮ ಮೆಟ್‌ಗುಡ್ಡರವರ ಮನೆಯ ಕಡೆ ಪಯಣಿಸಿದೆವು. ದಾರಿಯಲ್ಲಿ ಅವರು ಕಟ್ಟಿದ್ದು ಎರಡು ಸುಂದರ, ಸದೃಷ್ಟ ಕಬ್ಬಿಣದ ಸೆತುವೆಗಳನ್ನು ನೋಡಿದೆ. ನಮ್ಮ ಕನ್ನಡನಾಡಿನ ಇಂಜ್ಜಿನಿಯರ್‌ರವರ ಯಶಸ್ಸಿನ ಕಥೆಯ ಪ್ರತೀಕ. ಆ ಬಗ್ಗೆ ನಾನು ನಂತರ ಬರೆಯುವೆ.

ಸೆಂಟ್ ಜೋಸೆಫ್ ಕಾಲೇಜಿನ ಆ ದಿನಗಳ ಚರ್ಚಾಕೂಟದ ಗೆಳೆಯ ಶ್ರೀ ಜಯರಾಮರವರ ಮನೆಗೆ ರಾತ್ರಿ ಊಟಕ್ಕೆ ಹೋದೆವು. ಸಡಗರದ ಸ್ವಾಗತ ಸುಮಾರು ೩೫ ವರ್ಷಗಳ ನಂತರ ಭೇಟಿ ಆದೂ ಪರನಾಡಿನಲ್ಲಿ. ಒಬ್ಬರಿಗೊಬ್ಬರು ನೋಡದೇ ಹೋದರೂ, ಗೆಳೆಯರ ಮೂಲಕ ಪರಸ್ಪರರ ಕುಶಲ ತಿಳಿದುಕೊಂಡಿದ್ದೆವು. ನಾನು ಅವರು ಬಹುಮಾನ ಸ್ವೀಕರಿಸುತ್ತಿದ್ದ ಹಳೆಯ ಫೋಟೋಗಳ ಆಲ್ಬಂ ತೋರಿಸಿದ. ನನ್ನ ಗತಕಾಲದ ಚಿತ್ರ ಪರದೇಶದಲ್ಲಿ ನೋಡಿ ಯಾರಿಗೆ ಸಂತೋಷವಾಗಲಿಕ್ಕಿಲ್ಲ! ಅದಕ್ಕಿಂತ ಹೆಚ್ಚಾಗಿ ಇವುಗಳನ್ನೆಲ್ಲ ಜೋಪಾನವಾಗಿ ಕಾದಿರಿಸಿಕೊಂಡ ಜಯರಾಮರ ಒಪ್ಪು ಓರಣ ನನಗೆ ಪ್ರಿಯವಾಯಿತು. ಇದೇ ಅವರ ಯಶಸ್ಸಿನ ಗುಟ್ಟು ಆಗಿದೆ. ದೂರದ ನಾಡಿನಲ್ಲಿ ಯಶಸ್ವಿ ಕಂಪ್ಯೂಟರ್ ಕಂಪನಿಗಳನ್ನು ನಡೆಸುತ್ತಿದ್ದಾರೆ. ಮದ್ರಾಸಿನಲ್ಲಿ ಸಹ ಒಂದು ಶಾಖೆಯಿದೆ. ಈ ವರ್ಷದ ಸೆಪ್ಟಂಬರ್ ತಿಂಗಳಲ್ಲಿ ಬೆಂಗಳೂರಿನಲ್ಲಿ ಒಂದು ಶಾಖೆ ತೆಗೆಯುವವನಿದ್ದಾನೆ. ಆತನ ಮಡದಿ ಮಕ್ಕಳು ಹಾಗೂ ಭಾವಮೈದುನರನ್ನು ಕಂಡು ಖುಷಿಗೊಂಡೆ. ಒಟ್ಟಿನಲ್ಲಿ ಬೆಚ್ಚನೆಯ ಪ್ರೇಮದ, ವಿಶ್ವಾಸದ, ನಾಡಿನ ಆಗುಹೋಗುಗಳ ಬಗ್ಗೆ ಮಾತನಾಡುತ್ತಾ ಊಟ ಮಾಡಿ ಅವರಿಗೆ ವಿದಾಯ ಹೇಳಿ ಮತ್ತೆ ನಮ್ಮ ಬೇಸ್ ಕ್ಯಾಂಪಿಗೆ ಮರಳಿದೆವು.

ಮೊದಲೆ ನಿರ್ಧರಿಸಿದಂತೆ, ನ್ಯೂಯಾರ್ಕ ನಗರದ ಮೇರಿಯಟ್ ಹೋಟೆಲ್‌ನಲ್ಲಿ ನಡೆಯುತ್ತಿದ್ದ ಉತ್ತರ ಅಮೇರಿಕಾ ಬಂಟರ ಸಮ್ಮೇಳನದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದೆ. ನನ್ನ ಬೊಂಬಾಯಿ ವ್ಯಾಸಂಗದ ದಿನಗಳ ಗೆಳೆಯ ಶ್ರೀ ಶಂಕರಶೆಟ್ಟಿ ಒಬ್ಬ ಯಶಸ್ವೀ ಭಾರತೀಯ ಸಂಜಾತ. ಓದು ಮುಗಿಸಿಕೊಂಡು ಎರಡು ದಶಕಗಳ ನಂತರ ಇಂಗ್ಲೆಂಡ್‌ನ “ಮಾಂಚೆಸ್ಟರ್”ನಲ್ಲಿ ನಡೆದ ವಿಶ್ವ ಕನ್ನಡ ಮೇಳದಲ್ಲಿ ಅವರು ಮಾತನಾಡಲು ಸಿಕ್ಕಿದ್ದರು. ಆಗ ಅವರು ಇಂಗ್ಲೆಂಡಿನಲ್ಲಿದ್ದರು. ಸರಳ ಹಾಗೂ ಆತ್ಮೀಯ ಜೀವಿ. ನಾನು ಅವರು ಮುಂಬೈ ವಿಶ್ವವಿದ್ಯಾಲಯದ ಕಾರ್ಯದರ್ಶಿ ಸ್ಥಾನಕ್ಕೆ ಎದುರಾಲಿಗಳಾಗಿ ಸ್ಪರ್ಧಿಸಿದ್ದೆವು. ನಾನು ಗೆದ್ದಿದ್ದೆ. ಈ ವಿಷಯ ನಾನು ಮರೆತಿದ್ದರೂ ಅವರು ಸಹಜವಾಗಿ ನನ್ನನ್ನು ಪರಿಚಯಿಸಿದಾಗ ವಿಷಯ ಪ್ರಸ್ತಾಪಿಸಿ, ನಮ್ಮ ಕಳೆದುಹೋದ ದಿನಗಳನ್ನು ಮೆಲುಕು ಹಾಕುವಂತೆ ಮಾಡಿದರು. ಬಂಟರು ನಿಜವಾಗಿ ನಮ್ಮ ನಾಡಿನ ನಾಡವರು. ತುಂಬಾ ಸುಂದರರಾದ, ಮಣ್ಣಿನ ಮಕ್ಕಳಾದ ದಕ್ಶಿಣ ಕನ್ನಡ ಹಾಗೂ ಕಾಸರಗೋಡು ಭಾಗದ ಈ ಜನ, ಇಂದು ಪ್ರಪಂಚದಾದ್ಯಂತ ಇದ್ದಾರೆ. ಸಿನಿಮಾ, ವಿಶ್ವಸುಂದರಿಯರ ಸ್ಪರ್ಧೆ, ರಾಜಕಾರಣ, ಕ್ರೀಡೆ, ಬ್ಯಾಂಕ್, ಹೋಟೆಲ್ ಉದ್ಯಮ ಹೀಗೆ ಹಲವು ಹತ್ತಾರು ಉದ್ಯಮಗಳಲ್ಲಿ ಸ್ಪರ್ಧಿಸುತ್ತಾ, ಯಶಸ್ವಿಯಾದ ಜನ. ಅಲ್ಲಿ ಸೆರಿದ ಪುರುಷರು ಹಾಗೂ ಅವರ ಕುಟುಂಬದವರನ್ನು ಕಂಡಾಗ, ಅಮೆರಿಕವನ್ನು, ಅವರು ಮಂಗಳೂರಿನಂತೆ ಕಾಣುತ್ತಾರೆಂದು ಗೊತ್ತಾಯಿತು. ಅವರಿಗೆ ಶುಭ ಹಾರೈಸಿ ಬಂಟರ ಸಂಘದ ಅಧ್ಯಕ್ಷ ಶ್ರೀ ರೈಯವರಿಗೆ ವಂದಿಸಿ, ಅವಸರವಸರದಲ್ಲಿ “ಡೆಟ್ರಾಯಿಟ್”ನಗರ ತಲುಪಲು ವಿಮಾನ ನಿಲ್ದಾಣಕ್ಕೆ ಹೋದೆ.

೫ನೇ ತಾರೀಖು ‘ಉತ್ತರ ಅಮೇರಿಕಾದ ವೀರಶೈವ ಸಮಾಜ’ದ ಸಭೆಯಲ್ಲಿ ನಾನು ಮುಖ್ಯ ಅತಿಥಿಯಾಗಿ ಭಾಗವಹಿಸಬೇಕಾಗಿತ್ತು. ತರಳಬಾಳು ಡಾಕ್ಟರ್ ಜಗದ್ಗುರುರವರು ಹಾಗೂ ತುಮಕೂರಿನ ದಾ|| ಶಿವಾನಂದ ಸ್ವಾಮಿಗಳು ಸಾನಿಧ್ಯವಹಿಸಿದ್ದರಿ. ಈ ಸಮ್ಮೇಳನದ ಅಧ್ಯಕ್ಷರು ಡಾ||ಶಿವಪ್ಪ ಹುಲ್ಲುಬಾನಿಯವರು, ನಮ್ಮ ಡಂಬಳದ ಯಶಸ್ವಿ ಡಾಕ್ಟರ್. ಗಂಡ ಹೆಂಡತಿ ಇಬ್ಬರೂ ವೈದ್ಯರು. ಸುಂದರವಾದ ಮನೆ ಕಟ್ಟಿದ್ದಾರೆ. ತಾವು ಹುಟ್ಟಿ ಬೆಳೆದ ಊರಿನ ಬಗ್ಗೆ ನಮ್ಮ ಹಡಗಲು ಹಿರೆಹಡಗಲಿ ಹಾಗೂ ಮುಂಡರಗಿ ಬಗ್ಗೆ ಬಹಳ ಅಭಿಮಾನವಿಟ್ಟುಕೊಂಡ ಪ್ರೀತಿಯ ಜೀವಿಗಳು.

ಧರ್ಮ ಹಾಗೂ ಅದರ ಆಚರಣೆ, ಜನರನ್ನು ಬೆಸೆಯುವ ಪ್ರಭಾವಿ ಅಂಟು, ತಾಯಿನಾಡಿನಿಂದ ದೂರದ ದೇಶಕ್ಕೆ ಉದ್ಯೋಗ ಅರಸಿಕೊಂಡು ಹೋದ ಈ ಜನ, ಅಂತರಾಳದಲ್ಲಿ ತಮ್ಮ ಬೇರುಗಳನ್ನು ಹಸಿಯಾಗಿಟ್ಟುಕೊಳ್ಳಲು ಸದಾ ಪ್ರಯತ್ನಿಸುತ್ತಾರೆ.ತುಂಬಾ ಯಶಸ್ವಿಯಾಗಿ, ಆ ನಾಡು ಕೊಡುವ ಸಕಲ ಸಿರಿಸಂಪತ್ತುಗಳ ನಡುವೆ, ನಮ್ಮ ಆಧ್ಯಾತ್ಮಿಕ ಹಾಗೂ ಸಾಂಸ್ಕೃತಿಕ ಪರಂಪರೆಯನ್ನು ಉಳಿಸಿಕೊಂಡು, ಬೆಳೆಸಿಕೊಳ್ಳಲು ತಮ್ಮನ್ನು ತಾವು ಗಟ್ಟಿಯಾಗಿ ಗುರುತಿಸಿಕೊಳ್ಳಲು “ವೀರಶೈವ ಸಮಾಜ ಉತ್ತರ ಅಮೇರಿಕ” ಎರಡು ದಿನಗಳ ಸಮಾವೇಶವನ್ನು ಏರ್ಪಡಿಸಿತ್ತು. ಇಡೀ ಸಮಾವೇಶದಲ್ಲಿ ಚರ್ಚಿಸಬೇಲ್ಕಾಗಿದ್ದ ವಿಷಯ “ದಾಸೋಹ” ಇದರ ಪರಿಕಲ್ಪನೆಗಳ ವಿವಿಧ ಮಗ್ಗುಲುಗಳನ್ನು ಬೇರೆ ಬೇರೆ ಗೋಷ್ಠಿ ಗುಂಪುಗಳನ್ನಾಗಿ ಮಾಡಿ ಚರ್ಚಿಸಲಾಗಿತ್ತು. ದೂರದೂರದ ಮಡದಿ ಮಕ್ಕಳೊಂದಿಗೆ ಬಂದಿದ್ದ, ಸುಮಾರು ಸಾವಿರ ಜನರ ಈ ಸಮಾವೇಶ, ಪುಟ್ಟ ಕರ್ನಾಟಕವನ್ನು ಆಟೋ ನಗರಿ ಡೆಟ್ರಾಯ್‌ನಲ್ಲಿ ಸೃಷ್ಟಿಸಿತ್ತು. ಬಹಳ ಜನ ನನ್ನ ಪರಿಚಿತರೆ, ಮಹಾರಾಷ್ಟ್ರ ಹಾಗೂ ಆಂಧ್ರದ ವೀರಶೈವರು ಬಂದಿದ್ದರು. ಪೋರ್ಡ್ ಕಾರು ಕಂಪನಿಗೆ ಬಣ್ಣ (Pಚಿiಟಿಣ) ತಯಾರಿಸಿ ಮಾರುವ ಧೀಖಣೆಯೆನ್ನುವ ಮಹಾರಾಷ್ಟ್ರದ ವೀರಶೈವ, ಈ ಸಂಘಟನೆಯ ಮುಂಚೂಣಿಯಲ್ಲಿದ್ದ “ಮರಕ್ಕೆ ಬಾಯಿ ಬೇರೆಂದು ನೀರೆರೆದರೆ ಮೇಲೆ ಫಲ್ಲವಿಸಿತ್ತು ನೋಡ” ಎಂದು ೮೦೦ ವರ್ಷಗಳ ಹಿಂದೆ ಶರಣರು, ನುಡಿದ ನುಡಿ ಎಷ್ಟು ಸಮಂಜಸ. ಬೇರಿಗೆ ನೀರೆರೆಯುವ ಕೆಲಸ ಅಲ್ಲಿ ನಡೆದಿತ್ತು. ಸ್ವಲ್ಪ ದಿನಗಳ ಹಿಂದೆ, “ಫಿಲಿಡೆಲ್ಫಿಯಾ ಡೆಯಿಲಿ”ಯೆನ್ನುವ ಪತ್ರಿಕೆಯಲ್ಲಿ ಒಂದು ಕುತೂಹಲದ ವರದಿಯನ್ನು ಓದಿದ್ದೆ. ಲಾರಮರ್ಫಿ “ಐಚಿuಡಿಚಿmuಡಿಠಿhಥಿ” ಎನ್ನುವ ಕರಿಯ ಮಹಿಳೆ, ತಾನು ಸೆನೆಟರ್ ಲಿವಿಂಗ್ ಸ್ಟೋನ್ (Seಟಿeಣoಡಿ ಐiviಟಿg Sಣoಟಿ) ನ ದಾಯಾದಿ (ಅousiಟಿ)ಯೆಂದು ಹೇಳಿಕೊಂಡಿದ್ದಳು. ಒಂದೆ ಮೂಲದ ಎರದು ಟೊಂಗೆಗಳೆಂದು ಆಕೆ ತನ್ನ ಕೌಟುಂಬಿಕ ಇತಿಹಾಸವನ್ನು ಅಧ್ಯಯನ ಮಾದಿ ಪ್ರತಿಪಾದಿಸಿದ್ದಳು. ಅಮೇರಿಕಾ ಸ್ವಾತಂತ್ರ್ಯವನ್ನು ಘೋಷಿಸಿದ ಮೂಲ ದಾಖಲೆಯಲ್ಲಿ ಸಹಿ ಮಾಡಿದ ಯಶಸ್ವಿ ನಾಯಕ ಲಿವಿಂಗ್ ಸ್ಟೋನ್ ಈ ಸೆನೆಟರ್ ಮೂಲಪುರುಷ. ವಾಷಿಂಗ್‌ಟನ್, ಥಾಮಸ್ ಜರ್ಫಸನ್ ಇವರೊಂದಿಗೆ ಸಹಭಾಗಿಯಾಗಿ ೧೩ ರಾಜ್ಯಗಳ ಸಂಯುಕ್ತ ರಾಷ್ಟ್ರವನ್ನು (ಅoಟಿಜಿeಜeಡಿಚಿಣioಟಿ oಜಿ Sಣಚಿಣes) ಕಟ್ಟಿದ ಹಿರಿಯ, ಅವರು ರಚಿಸಿದ ಸ್ವಾತಂತ್ರ್ಯ ಘೋಷಣೆಯಲ್ಲಿ “ಎಲ್ಲರೂ ಹುಟ್ಟಿನಿಂದ ಸುಮಾರು “(ಂಟಟ meಟಿ ಚಿಡಿe ಛಿಡಿeಚಿಣeಜ eqeಚಿಟ) ಯೆಂದು ಘೋಷಿಸಿದ್ದರು. ಆದರೆ ಜಫರ್‌ಸನ್ ಹಾಗೂ ಲಿವಿಂಗ್ ಸ್ಟೋನ್ ಇವರುಗಳಿಗೆ ಗುಲಾಮ ನೀಗ್ರೋಗಳ ಗುಂಪೆಯಿದ್ದಿತು. ಪ್ರಾಯಶಃ ಎಲ್ಲರೂ ಹುಟ್ಟಿನಿಂದ ಸಮಾನರು, ಸ್ವಲ್ಪ ಜನ ಹೆಚ್ಚು ಸಮಾನರೆಂದು ಭಾವಿಸಬೇಕು! (ಂಟಟ meಟಿ ಚಿಡಿe eqeಚಿಟ buಣ some ಚಿಡಿe moಡಿe) ಈ ಕರಿಯ ಮಹಿಳೆಯ ಪೂರ್ವಜರು ಲಿವಿಂಗ್ ಸ್ಟೋನ್ ಅನೈತಿಕ ಸಂಬಂಧದ ಕೊಡಿಗೆಗಳೆಂದು ಈಕೆ ದಾಖಲಾತಿಗಳ ಪ್ರಕಾರ ಪ್ರತಿಪಾದಿಸಿದ್ದಳು. ಸೆನೆಟರ್ ಲಿವಿಂಗ್ ಸ್ಟೋನ್ “ಇರಬಹುದೆಂದು” ಚಿಕ್ಕದಾಗಿ ಪ್ರತಿಕ್ರಿಯಿಸಿ ವಿವಾದಕ್ಕೆ ತೆರೆ ಎಳೆದಿದ್ದಳು. ಈ ಘಟನೆ, ಮನುಷ್ಯನ ಕುತೂಹಲದ ಬೇರುಗಳನ್ನು ಮತ್ತೆ ಮತ್ತೆ ಮುಟ್ಟಬೇಕು. ಹುಸಿಯಾಗಿಟ್ಟುಕೊಳ್ಳಬೇಕೆನ್ನುವ ಹಸಿವಿನ ಬಯಕೆಯ ಪ್ರತೀಕ, ಬಹಳ ವರ್ಷಗಳ ಹಿಂದೆ ನೀಗ್ರೋಗಳ ಕಥೆಯಾದ “ಖooಣs” ಕಾದಂಬರಿಯ ನೆನಪು ಸುಳಿದು ಹೋಯಿತು.

ಅಮೇರಿಕಾದಲ್ಲಿ ಏಷ್ಯಾ ಖಂಡದ ಭಾರತೀಯರೆಂದು, ಪಾಕಿಸ್ತಾನಿಗಳು, ಬಾಂಗ್ಲಾದೇಶದವರನ್ನು ಒಂದು ಮಾಡಿಕೊಂಡು, ಅಲ್ಲಿಯ ರಾಜಕೀಯ ಪಕ್ಷಗಳಿಗೆ ದೇಣಿಗೆಯನ್ನು ಕೊಡುತ್ತಾ, ಯಶಸ್ವಿಯಾದ ಜನರು, ತಮ್ಮ ಉಪಸಂಸ್ಕೃತಿಗಳ ಅನೇಕತ್ವವನ್ನು (ಛಿuಟಣuಡಿಚಿಟ Pಟuಡಿಚಿಟiಣe) ಸಹಜವಾಗಿ ಪ್ರಕಟಿಸುತ್ತಿದ್ದವು. ತಾವುಗಳೆಲ್ಲ ಒಂದು ವಿಶಾಲ ಅರ್ಥದಲ್ಲಿ ಒಂದೇ ಕುಲ ಬಳ್ಳಿಗೆ ಸೇರಿದವರು (ಇಡಿhಟಿiಛಿ ಊomogeಟಿiಣಥಿ) ಯೆಂದು ಭಾವಿಸಿಕೊಳ್ಳುತ್ತಾ, ಒಟ್ಟಾಗುವ ತಮ್ಮ ವಿಭಿನ್ನತೆ ಹಾಗೂ ವೈಶಿಷ್ಟತೆ (homogiಟಿiಣಥಿ ಚಿಟಿಜ ಆisಣiಟಿಛಿಣiveಟಿes)ಯನ್ನು ಪೋಷಿಸಿಕೊಂಡು ಬರಲು ವೀರಶೈವ ಸಮ್ಮೇಳನ, ಬಂಟರ ಸಮ್ಮೇಳನ, ಕನ್ನಡಿಗರ ಕೂಟ, ಮೊದಲಾದುವು ಶ್ರಮಿಸುತ್ತಿರುವುದು. ಒಟ್ಟಿನಲ್ಲಿ ನಮ್ಮ ಈ ಸಾಹಸಿ ಜನರ ಹೋರಾಟ ಹಾಗೂ ಯಶಸ್ಸು, ಅನುಕರಣೀಯ, ಅವರ ತಾಯ್ನಾಡಿನ ಹಂಬಲ ಅಸದಳ ಹಾಗೂ ಪ್ರಶಂಸನೀಯ.

ಮಾರನೇ ದಿನ ಡೆಟ್ರಾಯನಲ್ಲಿರುವ ಫೋರ್ಡ್ ವಸ್ತು ಸಂಗ್ರಹಾಲಯ (ಜಿoಡಿಜ ಒuseum) ನೋಡಲು ಹೋದೆವು. ಬಹಳ ವರ್ಷಗಳ ಹಿಂದೆ ಆರ್ಥರ್ ಹೆಲಿ (ಂಡಿuಣhಚಿಡಿ hಚಿiಟಥಿ) ಯವರ “ವೀಲ್” (Wheeಟ) ಕಾದಂಬರಿ ಓದಿ, ಕಾರು ತಯಾರಿಕೆಯ ಆ ನಗರದ ಬಗ್ಗೆ ಆಕರ್ಷಿತನಾಗಿದ್ದೆ. ಆಶ್ಚರ್ಯದ ಸಂಗತಿಯೆಂದರೆ ಪೋರ್ಡ್ ಸ್ವಂತಹ್ ಸಂಶೋಧಕನಾಗಿರಲಿಲ್ಲ. ಸಂಶೋಧನೆಯ ಬಗ್ಗೆ ಆಸಕ್ತಿಯಿಮ್ದ ಓದಿ, ತಿಳಿದುಕೊಂಡು, ತನ್ನ ಕೌಶಲ್ಯದಿಮ್ದ ಯಂತ್ರಗಳನ್ನು ನಿರ್ಮಿಸುತ್ತಿದ್ದ. ಸಂಶೋಧಕರ ಕನಸಿನ ರಕ್ತ ಮಾಂಸ ತುಂಬುತ್ತಿದ್ದ. ಆತನ ಒಳ್ಳೆಯ ಗೆಳೆಯ ಥಾಮಸ್ ಎಡಿಸನ್ ಆಗಿದ್ದ. ಬಡಕುಟುಂಬದಿಂದ ಬಂದ ಥಾಮಸ್ ಆಲ್ವ ಎಡಿಸನ್ ಕಿವುಡನಾಗಿದ್ದ. ಅನೇಕನೇಕ ಸಂಶೋಧನೆಗಳಿಂದ, ನವನಾಗರೀಕ ಪ್ರಪಂಚವನ್ನು ಸೃಷ್ಟಿಸಿದ್ದ. ಆತ ಕಂಡು ಹಿಡಿದ ವಿದ್ಯುತ್ ಬಲ್ಬು (ಇಟeಛಿಣಡಿiಛಿಚಿಟ ಐighಣ) ಗ್ರಾಮಾಫೋನ್ (Phoಟಿegಡಿಚಿಠಿh) ಮೊದಲಾದುವು ಮನುಕುಲದ ಪ್ರಗತಿಗೆ ನಾಂದಿ ಹಾಡಿದವು. ಆತನ ಒಬ್ಬ ಪ್ರತಿಭಾವಂತ ಸಹಾಯಕ ವಿಲಿಯಂ ಡಿಕಸನ್ (ಗಿiಟಟiಚಿm ಆiಛಿಞsoಟಿ) ಆತನ ಹತ್ತಿರದ ಗೆಳೆಯ “ಫೋರ್ಡ್” (ಈoಡಿಜ) ಕೂಡಿಕೊಂಡು ಮೋಟಾರ್ ವಾಹನದ ಬಗ್ಗೆ ವಿವಿದೆಡೆಗಳಲ್ಲಿ ಸಂಶೋಧನೆಗಳನ್ನು ನಡೆಸುತ್ತಿದ್ದರು. ಅವುಗಳ ಸೂಕ್ಷ್ಮ ಚಲನೆಯನ್ನು ಅಭ್ಯಸಿಸಿ, ಫೋರ್ಡ್ ತನ್ನ ಕಾರ್ಯಾಗಾರದಲ್ಲಿ ಬಿಡಿಭಾಗಗಳನ್ನು ತಯಾರಿಸಿ, ಪ್ರಥಮ ೪ ಗಾಲಿಗಳ ಚಲಿಸುವ ಮೋಟಾರ್‌ವಾಹನವನ್ನು ತಯಾರಿಸಿದ ಅದನ್ನಾತ ಟ್ರೈಸಿಕಲ್ (ಣಡಿiಛಿಥಿಛಿಟe) ಯೆಂದು ಹೆಸರಿಸಿದ. ನೂರಾರು ಕಾರ್ಮಿಕರು, ಒಂದೊಂದೆ ಬಿಡಿ ಭಾಗಗಳನ್ನು ತಯಾರಿಸಿ ಅವುಗಳನ್ನು ಒಟ್ಟುಗೂಡಿಸುತ್ತಾ (ಂssembiಟiಟಿg) ಮೋಟಾರು ವಾಹನಗಳ ಸಾಲು ಸಾಲೆ, ಒಂದು ದಿನದಲ್ಲಿ ಕಾರ್ಖಾನೆಯಿಂದ ಹೊರಬರುವಂತೆ ಮಾಡಿದ. ಯಂತ್ರ ಮಾನವರಿಂದ ಅನೇಕ ಕೆಲಸಗಳನ್ನು ಮಾಡುವ ಕೆಲಸವು, ಅಲ್ಲಿ ಪ್ರಾರಂಭವಾಯಿತು. ಇಂತಹ ಸಂಶೋಧನೆಗಳಿಂದ ನಾಗರೀಕ ಪ್ರಪಂಚ ನಾಗಾಲೋಟದಿಂದ ಓಡುತ್ತಾ, ಚಂದ್ರಗ್ರಹವನ್ನು ತಲುಪಿ ಇಂದು ಮಂಗಳ (ಒಚಿಡಿs) ಗ್ರಹಕ್ಕೆ ಉಪಕರಣಗಳನ್ನು ಕಳಿಸಿದೆ. ಗಾಲಿ, ಒತ್ತುಗೋಲಿನಿಂದ ಹಿಡಿದು, ಸೈಕಲ್ಲು, ಮೋಟಾರ್ ವಾಹನ, ಉಗಿಬಂಡಿ, ಟ್ರಾಕ್ಟರ್, ಖಟಾವು ಮಾಡುವ ಯಂತ್ರಗಳು, ರೈಟರ್ ಬ್ರದರ್‍ಸ್‌ನ ಮೊದಲನೆ ವಿಮಾನದಿಂದ ಹಿಡಿದು ಅದರ ವಿವಿಧ ರೂಪಾಂತರಗಳು, ಬೋಯಿಂಗ್ ಹಾಗೂ ಜೆಟ್‌ಗಳವರೆಗಿನ, ವಿಮಾನಗಳು, ಗೃಹೋಪಯೋಗಿ ವಸ್ತುಗಳ ಸಂಶೋಧನೆ, ಹೊಲಿಗೆ ಯಂತ್ರ, ಅಡಿಗೆ ಮಾಡುವ ಯಂತ್ರಗಳು, ತಂತಿ ದೂರವಾಣಿ, ವಿದ್ಯುತ್ ಉತ್ಪಾದನಾ ಯಂತ್ರಗಳು, ಒಂದೆ ಎರಡೆ ಹೀಗೆ ಹಲವು ನೂರಾರು, ಸಂಶೋಧನೆಗಳನ್ನು ಜನಸಾಮಾನ್ಯನಿಗೆ ತೋರಿಸಲು, ಮಾಡಿರುವ ಪ್ರಯತ್ನ ಅಸಾಮಾನ್ಯ. ಹತ್ತಾರು ಪುಸ್ತಕಗಳಿಂದ ಕಲಿಯಬಹುದಾದ ತಿಳಿವಳಿಕೆಯನ್ನು ಈ ವಸ್ತುಸಂಗ್ರಹಾಲಯ, ಮನುಕುಲ ನಡೆದು ಬಂದ ಹಾದಿಯನ್ನು ಸವಿವರವಾಗಿ, ಬಿಚ್ಚಿ ತೋರಿಸುತ್ತದೆ/ಮನದಟ್ಟಾಗುವಂತೆ ಮಾಡುತ್ತದೆ. ಸುಮಾರು ನಾಲ್ಕು ತಾಸು ನೋಡಿದರೂ ಒಂದು ಭಾಗವನ್ನು ನೋಡಲು ಮಾತ್ರ ಸಾಧ್ಯವಾಯಿತು. ಅದೇ ಸಂಗ್ರಹಾಲಯದಿಂದ ಮತ್ತೊಂದು ಬದಿಗೆ ನಿರ್ಮಿಸಿದ, ಮಧ್ಯಕಾಲೀನ ಮನೆಗಳು, ಗ್ರಾಮಗಳು ಹಾಗೂ ಈಗ ಕಟ್ಟುತ್ತಿರುವ ಮನೆಗಳವರೆಗೆ ನಿರ್ಮಿಸಿದ ‘ಪೋರ್ಡ್ ಗ್ರಾಮ’ (ಈoಡಿಜ ಗಿiಟಟಚಿge)ಗೆ ಹೋಗಲು ಸಾಧ್ಯವಾಗಲ್ಲಿಲ್ಲ. ಅಲ್ಲದೆ ಮಳೆ ಬರಲು ಪ್ರಾರಂಭಿಸಿದ್ದರಿಂದ ಮತ್ತು ನಮ್ಮ ಡಂಬಳದ ಡಾ||ಶಿವಪ್ಪ ಹುಲುಬನಿಯವರ ಮನೆಗೆ ಊಟಕ್ಕೆ ಹೋಗಬೇಕಾಗಿದ್ದರಿಂದ ನಿರಾಸೆಯಿಂದ ಹೋಟೆಲ್‌ಗೆ ಮರಳಿದೆವು.

ರಾತ್ರಿ ಡಾ||ಶಿವಪ್ಪನವರ ಮನೆಗೆ ಹೋದಾಗ ಆಗಲೆ ಅತಿಥಿಗಳು ಬಂದಿದ್ದರು. ಸಮ್ಮೇಳನಕ್ಕೆ ಬಂದಿದ್ದ ಡಾ||ನಾಗಾಲೋಟಿ ಮಠ ಹಾಗೂ ಶ್ರೀ ಬಳಿಗಾರ ಮತ್ತವರ ಕುಟುಂಬದವರಿದ್ದರು. ಆ ಊರಿನ ಕೆಲವು ಗೆಳೆಯರು, ಕುಟುಂಬದವರು ರಾತ್ರಿ ಕೂಟಕ್ಕೆ ಕಳೆ ತಂದಿದ್ದರು. ಕುಡಿಯಲು ವೈನ್ ಕೊಟ್ಟರು. ಆಶ್ಚರ್ಯದ ಸಂಗತಿಯೆಂದರೆ, ಡಾಕ್ಟರಾಗಿದ್ದ ಅವರ ಕುಟುಂಬ, ಒಬ್ಬರೆ ನಮ್ಮ ಉತ್ತರ ಬ್ಕರ್ನಾಟಕದ ಎಲ್ಲಾ ನಮೂನೆಯ, ರುಚಿಕರವಾದ ರೊಟ್ಟಿ, ಕಾಳು ಪಲ್ಯ, ಬದನೆಯ ಪಲ್ಯ, ಸೊಂಡಿಗೆ, ಶ್ಯಾವಿಗೆ ಪಾಯಸ, ಬೇಸನ್ ಉಂಡಿ, ಹೀಗೆ ಹಲವು ಹತ್ತಾರು ದಿನಿಸಿನ ಸ್ವಾದಿಷ್ಟ ಊಟವನ್ನು ಯಾರ ಸಹಾಯವಿಲ್ಲದೆ ತಯಾರಿಸಿದ್ದರು. ನಮ್ಮ ನೆರೆಮನೆಯ ಮಹಿಳೆಯಂತೆ ಒಬ್ಬ ಗೃಹಿಣ್ಣಿಯಾಗಿ, ಎಲ್ಲರ ಆದರಾತಿಥ್ಯಗಳನ್ನು ನೋಡಿಕೊಂಡರು. ಸಾವಿರಾರು ಡಾಲರ್‌ಗಳನ್ನೂ ಗಳಿಸುತ್ತಿದ್ದರು. ಡಾಕ್ಟರ್ ಆಗಿದ್ದ ಈ ಮಹಿಳೆಯ ಲವಲವಿಕೆ, ವಿನಯ ಹಾಗೂ ಆತಿಥ್ಯ ನಮ್ಮೆಲ್ಲರನ್ನು ಬೆರಗು ಮಾಡಿತ್ತು. “ತುಂಬಿದ ಕೊಡ ತುಳುಕುವುದಿಲ್ಲ”ವೆನ್ನುವ ಗಾದೆ ಮಾತು ಇವರನ್ನು ನೋಡಿಯೇ ರಚಿಸಿದಂತಿತ್ತು. ಡಾ||ಶಿವಪ್ಪವನರು ನಮ್ಮ ಸೀಮೆಯ ಗಂಡಿನಂತೆಯೇ ಉಳಿದುಬಿಟ್ಟಿದ್ದರು. ಅಷ್ಟು ವರ್ಷ ಅವರ ಅಮೇರಿಕಾ ವಾಸ ಅವರಲ್ಲಿ ಬದಲಾವಣೆಯನ್ನೇನೂ ತಂದಂತಿರಲಿಲ್ಲ. ಭಾರತೀಯ ಗಂಡಿನಂತೆ ಮನೆಯ ಯಜಮಾನ. ಎಲ್ಲಾ ದುಡಿಮೆಯಲ್ಲಿ (ಗೃಹಕೆಲಸಗಳಲ್ಲೂ ಸಹ) ಸಹ ಭಾಗಿಯಾಗಬೇಕೆಂದು ಬಯಸುವ, ಅಮೇರಿಕ ಬಿಳಿಮಹಿಳೆಯರ, ಒತ್ತಡ ಹಾಗೂ ಬಯಕೆಗಳಿಂದಾಗಿ, ಇತ್ತೀಚೆಗೆ ಅಮೆರಿಕಾ ಗಂಡುಗಳು, ಅವರ ವೈಯಕ್ತಿಕ ಸೌಕರ್ಯ ಹಾಗೂ ಸ್ವಾಸ್ಥ್ಯದ ಕಡೆಗೆ ಗಮನ ಕೊಟ್ಟು ಸೇವೆ ಮಾಡುವ, ಪ್ರಶ್ನೆ ಮಾಡದ ಭಾರತೀಯ ಹಾಗೂ ಪೌರಾತ್ಯ ಮಹಿಳೆಯರನ್ನು ಹೆಚ್ಚು ಬಯಸುತ್ತಿದ್ದಾರೆಂದು ತಿಳಿದುಬಂತು. ಒಂದು ಅಪ್ಪಟ ಕನ್ನಡ ಕುಟುಂಬದ ಆದರ ಆತಿಥ್ಯವನ್ನು ಸ್ವೀಕರಿಸಿ, ರಾತ್ರಿ ನಮ್ಮ ಹೋಟೆಲ್‌ಗೆ ಹಿಂತಿರುಗಿದೆವು.

ನಮ್ಮ ಬೇಸ್ ಕ್ಯಾಂಪ್ ನ್ಯೂಜರ್ಸಿಯಿಂದ ಫಿಲ್‌ಡೆಲ್ಫಿಯಾ ಅಮೇರಿಕಾದ ದೂರದ ಲೆಕ್ಕದಲ್ಲಿ ಹತ್ತಿರವೆ. ಕಾರಿನಲ್ಲಿ ಹೋಗುವಾಗ ಅಮೇರಿಕಾದ ರಾಷ್ಟ್ರಪಿತ ಜಾರ್ಜ್ ವಾಷಿಂಗ್‌ಟನ್ ಹಾಗೂ ಆತನ ಸಂಗಾತಿಗಳ ಬಗ್ಗೆ ಯೋಚಿಸಲು ಪ್ರಾರಂಭಿಸಿದೆ. ಕಾಲೇಜು ದಿನಗಳಲ್ಲಿ ಓದಿದ ಅಮೇರಿಕಾ ಸಂಯುಕ್ತ ಸಂಸ್ಥಾನದ ಇತಿಹಾಸ ಸ್ಮೃತಿ ಪಠಲದ ಮೇಲೆ ಹಾದುಹೋಯಿತು. “ಟಿo ಣಚಿxಚಿಣioಟಿ, ತಿiಣhouಣ ಡಿeಠಿಡಿeseಟಿಣಚಿಣioಟಿ” “ಪ್ರಾತಿನಿದ್ಯವಿಲ್ಲದೆ ತೆರಿಗೆ ಕೊಡುವುದಿಲ್ಲ” ವೆಂಬ ಸೀಮಿತ ಉದ್ದೇಶದಿಂದ ಕಲೆತ, ಹಿರಿಯರ ಗುಂಪು, ತನ್ನ ತಾಯ್ನಾಡಿನ ಅರಸನನ್ನೆ ಯುದ್ಧಕ್ಕೆ ಆಹ್ವಾನಿಸಿ, ಮನುಕುಲ ಮೆಚ್ಚುವಂತಹ “ಸ್ವತಂತ್ರ ಸಂಗ್ರಾಮದ ಘೋಷಣೆಯನ್ನು ಮಾಡಿತು. ಹೊಸನಾಡಿನಲ್ಲಿ ವಿವಿಧ ಸ್ವರ ಹಾಗೂ ಹಿನ್ನೆಲೆಯಿಂದ ಬಂದ, ಧೀಮಂತರು ಈ ಊರಿನಲ್ಲಿ ಕಲೆತು, ಚರ್ಚಿಸಿ, ದೃಢ ನಿರ್ಧಾರ ತೆಗೆದುಕೊಮ್ಡು ಸ್ವರಂತ್ರ ಘೋಷಿಸಿದರು. ಹುಟ್ಟಿನಿಂದ ಎಲ್ಲರೂ ಸಮಾನರೆಂದು ಸಾರಿದ ಘೋಷಣೆಗೆ, ಎಲ್ಲರೂ ಒಪ್ಪಿರಲಿಲ್ಲ. ೧೮೦೮ ನಂತರ ‘ಗುಲಾಮ’ರನ್ನು ಆಮದು ಮಾಡಿಕೊಳ್ಳಬಾರದೆಂಬುದಾಗಿ ಒಪ್ಪಂದವಾಯಿತೆ ವಿನಹಹ, ಗುಲಾಮಗಿರಿಯನ್ನು ರದ್ದುಮಾಡಲಿಲ್ಲ. ಆದ್ದರಿಂದ ಗುಲಾಮರಾಗಿ ಸರಪಳಿಗಳನ್ನು ಬಿಗಿಸಿಕೊಂಡು, ಕಬ್ಬು, ಹತ್ತಿಯ ಹೊಲಗಳಲ್ಲಿ ಜೀವಮಾನವೆಲ್ಲ ದುಡಿದಿದ್ದ, ಕರಿಯರ ಮಕ್ಕಳು, ಇಂದು ಅಮೇರಿಕಾದ ರಾಷ್ಟ್ರಜೀವನದಲ್ಲಿ ಪ್ರಾಮುಖ್ಯತೆಯನ್ನು ಪಡೆದಿದ್ದಾರೆ. ಹಿರಿಯ ಹುದ್ದೆಗಳನ್ನು ಎಲ್ಲಾ ರಂಗಗಳಲ್ಲಿ ಅಲಂಕರಿಸಿದ್ದಾರೆ. ಅದರಲ್ಲೂ ಕ್ರೀಡೆ ಸಂಗೀತದಲ್ಲಿ ಅವರನ್ನು ಹಿಂದೆ ತಳ್ಳುವುದು ಆಗದ ಮಾತಾಗಿದೆ. ೩೦೦ ವರ್ಷಗಳ ಇತಿಹಾಸದ ಆ ದೇಶ, ಕೇವಲ ೨೦೦ ವರ್ಷಗಳಲ್ಲಿ ವರ್ಣಬೇಧವನ್ನು ಬಹುಮಟ್ಟಿಗೆ ನೀಗಿಸಿಕೊಳ್ಳಲು ಸಾಧ್ಯವಾಗಿದೆ. ಆದರೆ ಐದು ಸಾವಿರ ವರ್ಷಗಳ ಇತಿಹಾಸವಿರುವ, ಬುದ್ಧ, ಬಸವ, ಗಾಂಧೀ, ಅಂಬೇಡ್ಕರ್, ನಾನಕ, ಕಬೀರ, ಪರಮಹಂಸರನ್ನು ಪಡೆದಿದ್ದ, ಈ ನಾಡಿನ ಜಾತಿಬೇಧವನ್ನೂ ತೊಡೆದು ಹಾಕಲು ಸಾಧ್ಯವಾಗಿಲ್ಲ. ಆಳದಲ್ಲಿ ನಾವು ನಂಬಿದಂತೆ, ನುಡಿದಂತೆ ನಡೆಯುವವರಲ್ಲ ಅದಕ್ಕಾಗಿಯೇ ಈ ದ್ವಂದ್ವ. ಫಿಲಿಡೆಲ್ಫಿಯಾ ಸ್ಥಾಪನಾ ಹಿರಿಯರು ಕುಳಿತು ಚರ್ಚಿಸಿದ ಸಭಾಂಗಣವನ್ನು ಹಾಗೆಯೇ ಕಾದಿರಿಸಿದ್ದಾರೆ. ಮೇಜು, ಕುರ್ಚಿಗಳು, ಅಂದಿದ್ದಂತೆ, ಈಗಲೂ ಹಾಗೆ, ಇಡಲಾಗಿದೆ. ಲಾವ್ ಆಡಮ್ಸ್ ಸ್ಯಾಮುಯಿಲ್ ಆಡಮ್ಸ್, ಅಲೆಷಾಂದ್ರ, ಹ್ಯಾಮಿಲ್‌ಟನ್, ಜಾರ್ಜಮ್ಯಾಸನ್, ಜಾರ್ಜವಾಷಿಂಗ್‌ಟನ್, ಬೆಂಜಮಿನ್ ಫ್ರಾಂಕ್‌ಲಿನ್ ಮೊದಲಾದ ಹಿರಿಯರ ಭಿತ್ತಿಚಿತ್ರಗಳನ್ನು, ಅವರು ಕುಂತ ನಿಂತ ವಿವಿಧ ಭಂಗಿಗಳ ಚಿತ್ರಪಟ ನೋಡಿ ತುಂಬಾ ಸಂತೋಷಪಟ್ಟೆ. ಅಮೇರಿಕನ್ನರ ಇತಿಹಾಸ ತೀರ ಇತ್ತೀಚಿನದು. ಇರುವ ಇತಿಹಾಸವನ್ನೇ ಒಪ್ಪ ಓರಣವಾಗಿಟ್ಟುಕೊಂಡಿದ್ದಾರೆ.

ಆ ಕಾಲದಲ್ಲಿ ಚರ್ಚಿನಲ್ಲಿ ಬಾರಿಸುವ “ಘಂಟೆ” ಯನ್ನು, ಒಂದು ಚಿಕ್ಕ ಮೊಗಸಾಲೆಯಲ್ಲಿಟ್ಟಿದ್ದಾರೆ. ಬರೇ ಇದರ ಧ್ವನಿಯನ್ನು ಕೇಳಿ, ಇದರ ಸಂಗಾತಿಗಳಾಗಿದ್ದವರು ಸಹಸ್ರ, ಸಹಸ್ರ. ಇಡೀ ಪ್ರಪಂಚದ ಪೋಲೀಸನಂತೆ ಕೆಲಸ ಮಾಡುವ ಸಂಪದ್ಭರಿತ ರಾಷ್ಟ್ರವಾದ ಅಮೇರಿಕಾ, ಸ್ಥಾಪನಾ ಹಿರಿಯರ ಕನಸಿನ ಕೂಸಾಗಿತ್ತು. ಅವರ ಹೋರಾಟ ಹಾಗೂ ದೂರದೃಷ್ಟಿ ಅಸದಳ. ರಾಷ್ಟ್ರಸ್ಥಾಪನೆಯ ಹಿರಿಯ ಪಂಕ್ತಿಯಲ್ಲಿ ವಾಷಿಂಗ್‌ಟನ್, ಆಡಮ್ಸ್, ಜಫರಸನ್, ಮೆಡಿಸನ್, ಫ್ರಾಂಕಲಿನ್ ಮತ್ತು ಹ್ಯಾಮಿಲ್‌ಟನ್‌ರವರು ಅಗ್ರಗಣ್ಯರು. ಆದರೂ ಅವರೆಲ್ಲ ದೈವಸಂಭೂತರಾಗೇನೂ ಇರಲಿಲ್ಲ. ಅವರಿಗೆ ಅವರದೇ ಆದ ದೌರ್ಬಲ್ಯಗಳಿದ್ದವು. ವಾಷಿಂಗ್‌ಟನ್‌ರವರಿಗೆ ಭೂಮಿಯ ವ್ಯಾಮೋಹವಿತ್ತು. ಹಾನ್‌ಕಾಕ್‌ರವರು ಜಂಬದ ಕೋಳಿಯಾಗಿದ್ದರು. ಹ್ಯಾಮಿಲ್‌ಟನ್ ಅತಿ ಮಹತ್ವಾಕಾಂಕ್ಷಿ. ಆಡಮ್ಸ್ ಜಗಳಗಂಟಿ, ಜಫರ್‌ಸನ್ ಹಗೆ ಸಾಧಿಸುವವ, ಹೆನ್ರಿ ಕ್ರೂರಿ, ಹೀಗೆ ಇವರೆಲ್ಲರೂ ಒಂದಲ್ಲ ಒಂದು ದೌರ್ಬಲ್ಯಗಳನ್ನು ಹೊಂದಿದವರಾಗಿದ್ದರು.

ಸಂಯುಕ್ತ ರಾಷ್ಟ್ರ ಸ್ಥಾಪಿಸುವಾಗ ಅನೇಕ ರಾಜಿಗಳನ್ನು ಅವರು ಮಾಡಿಕೊಳ್ಳಬೇಕಾಗಿತ್ತು. ಹುಟ್ಟಿನಿಂದ ಎಲ್ಲರೂ ಸಮಾನರೆಂದು ಸಾರಿದರೂ ಜಾರ್ಜಿಯಾ ಹಾಗೂ ಕರೂಲಿನಿಸ್ ಪ್ರಾಂತದ ಪ್ರತಿನಿಧಿಗಳು, ಗುಲಾಮಗಿರಿ ಒಂದು ಸಹಜ ಹಕ್ಕೆಂದು ಪ್ರತಿಪಾದಿಸುತ್ತಿದ್ದರು. ಕೊನೆಗೆ ರಾಜಿ ಮಾಡಿಕೊಂಡು ೧೮೦೮ರ ನಂತರ ಯಾವ ಗುಲಾಮನನ್ನು ಆಮದು ಮಾಡಿಕೊಳ್ಳಬಾರದೆಂದು ನಿರ್ಧರಿಸಲಾಯಿತು. ಹಾಗೆಯೆ ಕಾನೂನಿನಲ್ಲಿ ಅಳವಡಿಸಲಾಯಿತು. ಹೀಗೆ ಒಂದು ರಾಷ್ಟ್ರದ ಹುಟ್ಟು ಹೋರಾಟ ಹಾಗೂ ಮಹತ್ತು ರೋಚಕ, ಹಾಗೂ ಉತ್ಪೋದಕ. ಈ ಎಲ್ಲಾ ವಿವರಗಳನ್ನು ತನ್ನ ಒಡಲಲ್ಲಿರಿಸಿಕೊಂಡು ಫಿಲಿಡೆಲ್ಫಿಯ ನಗರ, ವಿಶ್ವವಿದ್ಯಾನಿಲಯಗಳ ನಗರವೂ ಕೂಡ. ಅನ್ಯರಾಷ್ಟ್ರಗಳಿಂದ ಬರುವ ಪ್ರವಾಸಿಗರಂತೆ ಅಮೇರಿಕಾದ ವಿವಿಧ ಪ್ರಾಂತಗಳ ಜನರು ಈ ಐತಿಹಾಸಿಕ ಪಟ್ಟಣವನ್ನು ನೋಡಲು ಇಲ್ಲಿಗೆ ಬಂದಿದ್ದರು. ಇದನ್ನೆಲ್ಲ ಅಭಿಮಾನದಿಂದ, ವಿವರಿಸಿ ಹೇಳುತ್ತಾ ತೋರಿಸಿದ ಗೆಳೆಯ ಮೆಟ್‌ಗುಡ್‌ರವರನ್ನು ನಾನು ನೆನೆಯಲೇ ಬೇಕು.

ಪ್ರಥಮ ಅಧ್ಯಕ್ಷನ ಹೆಸರನ್ನು ಹೊತ್ತಿರುವ ವಾಷಿಂಗ್‌ಟನ್‌ಗೆ, ಶ್ರೀ ಮೆಟ್‌ಗುಡ್‌ರವರ ಕುಟುಂಬದೊಮ್ದಿಗೆ ಹೋದೆವು. ವಾಟರ್ ಗೇಟ್ ಹೋಟೆಲ್‌ನಲ್ಲಿ ತಂಗಿದಾಗ, ವಾಟರ್‍ಗೇಟ್ ಪ್ರಕರಣ, ಅಂತಿಮವಾಗಿ ಅಧ್ಯಕ್ಷ ನಿಕ್ಸನ್ ರಾಜಿನಾಮೆ ಕೊಡಬೇಕಾದ ಪ್ರಸಂಗ, ಎಲ್ಲವನ್ನೂ ಮೆಲುಕು ಹಾಕುತ್ತಾ ನಿದ್ದೆ ಹೋದೆ. ತುಂಬಾ ಸುಂದರವಾದ ನಗರ, ಕರಿಯರೆ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಮುಸ್ಸಂಜೆಯ ಸಮಯದಲ್ಲಿ ಒಬ್ಬೊಬ್ಬರೆ ಕಾಲುಹಾದಿಯಲ್ಲಿ ತಿ‌ಉಗಾಡುವುದು ಸುರಕ್ಷಿತವಲ್ಲವೆಂದು, ಎಲ್ಲರೂ ಪದೇ ಪದೇ ಹೇಳುತ್ತಿದ್ದರು. ಎಲ್ಲಾ ದೊಡ್ಡ ನಗರಗಳ ಹಣೆಬರಹಕ್ಕಿಂತ, ಇದು ಹೆಚ್ಚು ಕೆಟ್ಟಿದೆ. ಚೂರಿ ತೋರಿಸುವ, ಸಾಮಾನುಗಳನ್ನು ಕಸಿದುಕೊಂಡು ಹೋಗುವ ಅಡ್ಡಗತ್ಟಿ ಹಣ ವಸೂಲು ಮಾಡುವ ಪ್ರಕರಣಗಳು ವಿಪರೀತ. ರಾಷ್ಟ್ರದ ರಾಜಧಾನಿ ಇಂತಹ ಕಪ್ಪು ಹಣೆಪಟ್ಟಿಯನ್ನು ಹಚ್ಚಿಕೊಂಡಿತ್ತು.
*****

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

This site uses Akismet to reduce spam. Learn how your comment data is processed.