ಶಾಮಣ್ಣ – ೪

‘ಚುತುರ್ಥಾಶ್ವಾಸಂ’
ನಾನೂ ನನ್ನ ಹೆಂಡತಿ ಅನ್ನಪೂರ್ಣ ಸದರೀ ಗ್ರಾಮದಲ್ಲಿ ಗದಗಿನ ಪಂಚಾಕ್ಷರಿ ಕಂಪನಿಯವರು ಬೆಳ್ಳಂಬೆಳಗು ಆಡಿದ ಹೇಮರೆಡ್ಡಿ ಮಲ್ಲಮ್ಮ ನಾಟಕ ನೋಡಿ ಬಂದ ಮೇಲೇಯೇ ಶಾಮಣ್ಣನ ಕುರಿತ ಕಾದಂಬರಿಗೆ ಹೊಸ ಆಯಾಮ ದೊರಕಿದ್ದು ಅದನ್ನು ನಾನು ನೋಡಿದ್ದು ಮೂರನೆ ಇಯತ್ತೆ ಓದುತ್ತಿದ್ದಾಗ, ಅಪ್ಪನ ಹೆಗಲ ಮೇಲೆ ಹೋಗಿ ಹೆಗಲ ಮೇಲೆ ಬಂದಿದ್ದೆ. ಅದೇ ಕಂಪನಿ, ಅದೇ ನಟರು! ಅಂಬಳಿ ಶಿವಲಿಂಗಯ್ಯನವರು ಹೇಮರೆಡ್ಡಿ ಮಲ್ಲಮ್ಮನ ಪಾತ್ರ ವಹಿಸಿದ್ದರೆ ಎರೆಯಂಗಳ ಶಿವಣ್ಣನವರು ಸೂಳೆ ಪಾತ್ರ ವಹಿಸಿದ್ದರು. ಅದೇ ಕಲಾವಿದರನ್ನು ಇಷ್ಟು ವರ್ಷಗಳ ನಂತರ ನೋಡುತ್ತೇನೆಂದು ನಾನು ಕನಸು ಮನಸಲ್ಲೂ ಯೋಚಿಸಿರಲಿಲ್ಲ. ಪಂಡಿತ ಪುಟ್ಟರಾಜ ಗವಾಯಿಗಳ ಆಶೀರ್ವಾದ ಬಲದಿಂದ ಇನ್ನೂ ಜೀವ ಹಿಡಿದಿದ್ದ ಆ ಕಂಪನಿಯ ಕಲಾವಿದರು ದೈಹಿಕವಾಗಿ ಜರ್ಝರಿತರಾಗಿದ್ದರೂ ಅಭಿನಯದ ವಿಷಯದಲ್ಲಿ ಒಬ್ಬರಿಗಿಂತ ಒಬ್ಬರು ಮಿಗಿಲಾಗಿದ್ದರು. ಗಾಂಧಿ ತೊಪ್ಪಿಗೆಯನ್ನು ಅಡ್ಡಡ್ಡ ಧರಿಸಿ ಅಭಿನಯದ ಮೂಲಕ ನಗೆ ಮತ್ತು ವಿಷಾದವನ್ನು ಪ್ರೇಕ್ಷಕರಲ್ಲಿ ಬಿತ್ತುತ್ತಿದ್ದ ಭರಮರೆಡ್ಡಿ ಪಾತ್ರ ವಹಿಸುತ್ತಿದ್ದ ನಟ ಯಾರೆಂಬುದು ನೆನಪಾಗುತ್ತಿಲ್ಲ. ಕೇಳೋಣವೆಂದರೆ ಗ್ರಾಮದ ಒಬ್ಬರಲ್ಲಾ ಒಬ್ಬರ ಮನೆಯಲ್ಲಿ ನಟರು ವಾದ್ಯಗಾರರು ಪರದೆ ಎಳೆಯುವವರು ಆತಿಥ್ಯ ಸ್ವೀಕರಿಸುತ್ತ ಬ್ಯುಜಿಯಾಗಿರುತ್ತಿದ್ದರು.

ಇನ್ನೇನು ಕಂಪನಿ ದಿವಾಳಿ ಎದ್ದು ಕಲಾವಿದರೆಲ್ಲ ಹೊಟ್ಟೆ-ಹೊರೆಯಲೋಸುಗ ಅಂಡಾವರನ ಆಗುತ್ತಾರೆ ಎಂಬ ಸಂದರ್ಭದಲ್ಲಿ ಹೊಳಗುಂದಿ ಸಿದ್ದಮಲ್ಲನಗೌಡರ ಅಳಿಯಂದಿರೂ ಸ್ವತಃ ಕಲಾಭಿಮಾನಿಗಳೂ ಆದ ಶ್ರೀಯುತ ಚನ್ನಬಸವನಗೌಡರು ಕಂಪನಿಯನ್ನು ಸದರೀ ಗ್ರಾಮಕ್ಕೆ ಕರೆತಂದಿದ್ದರು. ಬಸವೇಶ್ವರ ಮಹಾತ್ಮೆ; ರಾಜಾ ಸತ್ಯಹರಿಶ್ಚಂದ್ರ ಮುಂತಾದ ಅಪ್ರಕಟಿತ ನಾಟಕಗಳನ್ನು ಬರೆದಿರುವ ಜೆ.ಸಿ.ಗೌಡರು ಒಂದೊಂದು ಮನೆಯವರು ಒಂದೊಂದು ದಿನ ಕಂಪನಿ ಕಲಾವಿದರಿಗೆ ಆತಿಥ್ಯ ಕೊಟ್ಟು ಕಂಪನಿಯ ಹಾಗೂ ಗ್ರಾಮದ ಗೌರವ ಕಾಪಾಡಬೇಕೆಂದು ಗ್ರಾಮಕ್ಕೆ ಕರೆ ನೀಡಿದ್ದರು. ಆದ್ದರಿಂದ ಇಡೀ ಗ್ರಾಮಕ್ಕೆ ಗ್ರಾಮವೇ ಆತಿಥ್ಯದ ವಿಷಯದಲ್ಲಿ ಪರಸ್ಪರ ಪೈಪೋಟಿಗಿಳಿದಿತ್ತು. ಒಬ್ಬರು ಒಂದು ಮಾಡಿಸಿದರೆ ಇನ್ನೊಬ್ಬರು ಇನ್ನೊಂದು ಮಾಡಿಸುತ್ತಿದ್ದರು. ನವಣಿ ಬಾನ ಉಂಡು ಹೇಗೋ ಬದುಕು ನೂಕುತ್ತಿದ್ದ ಕಲಾವಿದರು ಸದರಿ ಗ್ರಾಮದಲ್ಲಿ ಕ್ಯಾಂಪು ಹಾಕಿದಂದಿನಿಂದ ಬಗೆ ಬಗೆಯ ಖಾದ್ಯಗಳನ್ನೊಳಗೊಂಡ ಮೃಷ್ಟಾನ್ನಭೋಜನ ಉಂಡೂ ಉಂಡೂ ಮೈಬಿಟ್ಟಿದ್ದರು. ಯಾರಾದರೂ ಊಟಕ್ಕೆ ಭಿನ್ನವಿಸಿದರೆಂದರೆ ನವಣಕ್ಕಿ ಅನ್ನ ರೊಟ್ಟಿ ಪುಂಡಿ ಪಲ್ಯೆ ಮಾಡ್ರಿಯಪ್ಪಾ… ಸಿಹಿತಿನಿಸು ಉಂಡೂ ಉಂಡೂ ನಾಲಿಗೆ ಬರಗೆಟ್ಟು ಹೋಗದೆ ಎಂದು ಗೋಗರೆಯುತ್ತಿದ್ದರು. ಅದಕ್ಕೆ ಅವರು “ಅದೆಂಗ ಮಾಡಲಕ್ಕಾಗ್ತದ್ರೀ… ಪಕ್ಕದ್ಮನೆ ಸಂಬ್ಲಿಂಗ ನಿನ್ನ ಲಡ್ನೂಟ ಹಾಕ್ಸಿದ್ನಂತೆ. ಅವ್ನಿಗಿಂತ ನಾವೇನು ಕಡ್ಮೆ… ಮೈಸೂರು ಪಾಕ ಜಿಲೇಬಿ ಮಾಡಿಸ್ಟೀವಿ. ಇದು ನಮ್ ಮನ್ತನದ ಮರುವಾದಿ ಪ್ರಸ್ನೆ” ಎಂದು ಬಿಲ್ಕುಲ್ ಒಪ್ಪುತ್ತಿರಲಿಲ್ಲ. ಆದ್ದರಿಂದ ನಿರಾಶ್ರಾದ ಕಲಾವಿದರು ಜೆ.ಸಿ.ಗೌಡರಿಗೆ ಹೋಗಿ ದೂರು ನೀಡಿದ್ದುಂಟು. ಅದಕ್ಕೆ ಅವರು “ನೀವು ಬಗಸೋದೆ ಮಾಡಿದ್ರಿ ಅಂತ ಗ್ರಾಮದೋರ್‍ಗೆ ಹೇಗೆ ಹೇಳ್ಲಿಕ್ಕಾಗ್ತದೆ… ಅದು ಅವರವರ ಪ್ರಿತಿಗೆ ಸಂಬಂಧಿಸಿದ್ದು. ಕಲಾವಿದರೆ, ಎಲ್ಲಾ ಊರುಗಳಂತಲ್ಲ ಇದು. ಎಂಜಲುಗೈಲಿ ಕಾಗೆ ಹೊಡೆಯದ ಮಂದಿಯೇ ಇಲ್ಲಿ ಹೆಚ್ಚು ಇರೋದು”. ಅದೇನು ದೇವ್ರು ಅದೇನು ಬುದ್ಧಿ ಕೊಟ್ಟಿದ್ದಾನೋ ನಾವೇನು ಕಡ್ಮೆ ನಾವೇನು ಕಡ್ಮೆ ಅಂತ ಖರ್ಚು ಮಾಡ್ತಿದ್ದಾರೆ. ಮಾಡ್ಲಿ ಬಿಡಿ. ನಮ್ಮ ನಿಮ್ಮ ಗಂಟೇನೋಗ್ತದೆ…” ಎಂದು ಬುದ್ಧಿ ಹೇಳಿದ್ದುಂಟು. ಅದಕ್ಕೆ ಕಲಾವಿದರು “ಹಂಗಲ್ಲ ಧಣೆರ. ಸುಖವಾಗಿ ಉಂಡೂ ಉಂಡೂ ಏನಾರ ಹೆಚ್ಚು ಕಡ್ಮೆ ಆಗಿ ಬಿಟ್ರೆ” ಎಂದು ಹಿಂದೆಲೆ ಕೆರೆದದ್ದುಂಟು. ಅದಕ್ಕೆ ನಕ್ಕು ಗೌಡರು “ಏರ್‍ಕೆ ವಯಸ್ನಲ್ಲಿ ಇಳ್ಕೆ ವಯ್ಸ್ನಲ್ಲಿ ಸುಖವಾಗಿ ಉಣ್‌ಬೇಕ್ರಿ”… ಎಂದು ಹೇಳಿ ಕಳಿಸಿದ್ದುಂಟು. ಆದರೆ ಕಲಾವಿದರ ಪೈಕಿ ಹಲವರು ಎರಡು ದಿನಕ್ಕೊಮ್ಮೆ ಮೂರು ದಿನಕ್ಕೊಮ್ಮೆ ಪಕ್ಕದೂರುಗಳಾದ ಬಾಪುರ, ಮಾಸನೂರು, ಕಾರೆಕಲ್ಲು, ಕುರುವಳ್ಳಿ ಮೊದಲಾದ ಗ್ರಾಮಗಳಿಗೆ ಹೋಗಿ ಅಂಗಲಾಚಿ ರೊಟ್ಟಿ ಪಡೆದು ತಿಂದು ಬರುತ್ತಿದ್ದುದುಂಟು. ಸಿಕ್ಕಿ ಬಿದ್ದ ಕೆಲವರು “ಏನು ಆಡ್ಲಿಕ್ಕಾಗ್ತದ್ರಿ…ಸುಖಕ್ಕೇನೆ ಹೊಟ್ಟೆ ಹೊಂದ್ಕೊಂಡ್ತಂದ್ರೆ ನಾಳೆ ದಿನ ಕಷ್ಟಕ್ಕೆಂಗ ಬಗ್ಗೀತು… ಅದ್ಕ ರೊಟ್ಟಿ ಉಂಭೋ ಅಭ್ಯಾಸ ಮಾಡ್ಕೊಂಡು ಬರ್ತಿದೀವಿ” ಎಂದು ಹೇಳಿದ್ದುದುಂಟು.

ನಾಳೆ ನಾಟಕಕ್ಕೆ ಹೋಗ್ತಿದೀವಿ ಅನ್ನುವಾಗ ಇವತ್ತಿನಂಗೆ ನಾನು ಕಂಪನಿಯ ಮೇನೇಜರೂ ಮತ್ತು ಮುಖ್ಯ ನಟರೂ ಆದ ಎರಂಗಳ ಶಿವಣ್ಣನವರ ಬಳಿಗೆ ಹೋಗಿ ನಾಳೆ ಮಧ್ಯಾನ್ಹ ಊಟಕ್ಕೆ ಎಲ್ರೂ ನಮ್ಮನೆಗೆ ಬರಬೇಕೆಂದು ಭಿನ್ನವಿಸಿಕೊಂಡೆ. ಈ ಮೊದಲೇ ಪರಿಚಯವಿದ್ದುದ್ದರಿಂದ ಒಪ್ಪಿಕೊಳ್ಳುವುದು ಕಷ್ಟವಾಗಲಿಲ್ಲ. ಫಜೀತಿ ಎದುರಾಗಿದ್ದು ಮನೆಯಲ್ಲಿ ಬಣ್ಣಹಚ್ಚಿಕೊಳ್ಳೋರ್‍ಗೆಲ್ಲ ಕೂಳು ಬೇಯಿಸ್ಲಿಕ್ಕೇನ್ರಿ ನಾನಿರೋದು”ಎಂದು ನನ್ನ ಶ್ರೀಮತಿ ಅನ್ನಪೂರ್ಣಮ್ಮನವರು ತಕರಾರು ಎತ್ತಿದಾಗಲೇ. ಗೃಹಖಾತೆ ಮತ್ತು ಅರ್ಥ ಶಾಖೆಯನ್ನು ಸಮರ್ಥವಾಗಿ ನಿರ್ವಹಿಸುತ್ತ ಬದುಕು ಆರಕ್ಕೇರದಂತೆ ಮೂರಕ್ಕೆ ಇಳಿಯದಂತೆ ನೋಡುಕೊಳ್ಳುತ್ತಿದ್ದ ಶ್ರೀಮತಿಯವರನ್ನು ಮುಂಗಡವಾಗಿ ಒಂದು ಮಾತು ಕೇಳಿದ್ದರೆ ಈ ಪೀಕಲಾಟ ಇರುತ್ತಿರಲಿಲ್ಲವೆಂದುಕೊಂಡೆ. ಮಲೆನಾಡಿನ ಮೂಲೆಯಲ್ಲಿ ಹುಟ್ಟಿ ಬೆಳೆದಿದ್ದರೂ ಆಕೆ ಕಲೆ ಸಾಹಿತ್ಯ ಸಂಸ್ಕೃತಿ ಬಗ್ಗೆ ನನಗಿಂತ ಹೆಚ್ಚು ಒಲವು ಉಳ್ಳವರಾಗಿರುವಳು. ಜಾನಪದ ಗೀತೆಯನ್ನು ಸುಶ್ರಾವ್ಯವಾಗಿ ಹಾಡುವ ಆಕೆಯ ಅಣ್ಣ ರುದ್ರಪ್ಪ ಯಕ್ಷಗಾನ ಬಯಲಾಟ ಆಡುವುದರಲ್ಲಿ; ಶನಿಮಹಾತ್ಮನ ಕಥೆ ಹಾಡುವುದರಲ್ಲಿ ಯಮಸಂಧಿಯೊಂದೇ ಅಲ್ಲದೆ ಚೋಕನಳ್ಳಿ, ಮಾಸುವಳ್ಳಿ, ಬೆಣ್ಣೂರು, ಹಲ್ಮಡಿಯೇ ಮೊದಲಾದ ಗ್ರಾಮಗಳಲ್ಲಿಯೂ ಸಾಕಷ್ಟು ಹೆಸರುವಾಸಿಯಾಗಿದ್ದನು. ಆಕೆಯ ತಮ್ಮ ಒಂದು ಸಿನಿಮಾ ನೋಡಿದನೆಂದರೆ ಆ ಸಿನಿಮಾದ ಹಾಡುಗಳನ್ನೆಲ್ಲವನ್ನು ಬಾಯಿಪಾಠ ಮಾಡಿಟ್ಟುಕೊಂಡು ಬಿಡುತ್ತಿದ್ದನು. ಆಕೆಯ ತಂದೆಯವರಾದ ನಿರ್ವಾಣೆಪ್ಪನವರು ರಾಜಕುಮಾರರೊಂದಿಗೆ ಗುಬ್ಬಿಕಂಪೆನಿಯಲ್ಲಿದ್ದು ತಬಲ ನುಡಿಸುತ್ತಿದ್ದಂಥವರು. ಇಂಥ ಹಿನ್ನೆಲೆಯ ಆಕೆ ‘ನಮ್ಮ ಮಗನಿಗೆ ತಬಲ ಅಭ್ಯಾಸ ಮಾಡಿಸೋಣ ಕಣ್ರೀ’ ಎಂದು ಹಠ ಹಿಡಿಯುತ್ತಿದ್ದಳು. ‘ಹೆಣ್ಣು ಮಗು ಹುಟ್ಟಿದ್ರೆ ಭರತ ನಾಟ್ಯ ಕಲಿಸೋಣ ಕಣ್ರೀ’ ಎಂದು ಆಪ್ಯಾಯತೆಯಿಂದ ಕೇಳುತ್ತಿದ್ದಳು.

ಹೊಟ್ಟೆಗೆ ಹಿಟ್ಟು ಇಲ್ಲದ ಎಷ್ಟೋ ಸಂದರ್ಭಗಳಲ್ಲಿ ಜುಟ್ಟಿಗೆ ಮಲ್ಲಿಗೆ ಹೂವು ಹೊಂಚುವ ಬಗ್ಗೆ ಯೋಚಿಸುವ ಜಾಯಮಾನದವನಾದ ನಾನು ಆಕೆಯ ಆ ತೆರನ ಮಹತ್ವಾಕಾಂಕ್ಷೆಗಳಿಗೊಂದು ತಣ್ಣನೆ ಕೊರೆವ ಸಿಹಿನೀರನ್ನು ಎರಚಿದವನಲ್ಲ, ಅಂಥ ಆಕೆ ಗವಾಯಿಗಳ ಕಂಪೆನಿಯ ಕೇವಲ ಐವತ್ತೇಳು ಮಂದಿ ಕಲಾವಿದರಿಗೆ ಒಂದು ಹೊತ್ತು ಊಟ ಬೇಯಿಸಿ ಹಾಕಲು ತಕರಾರು ಎತ್ತುವುದೆಂದರೇನು?… ಅಂಥ ದುಬಾರಿ ಕಾಲದಲ್ಲಿ ಅಷ್ಟು ಮಂದಿಗೆ ಊಟ ಹಾಕಲು ನಮ್ಮ ಮಗನ ನಿಷೇಕವಿದೆಯೇ? ಅವರಿಗೆ ಊಟ ಹಾಕುವುದರಿಂದ ನಮ್ಮ ಹೆಸರನ್ನು ಗ್ರಾಮದ ಇತಿಹಾಸ ಪುಟಗಳಲ್ಲಿ ಸುವರ್ಣಾಕ್ಷರಗಳಿಂದ ಬರೆಯಲಾಗುತ್ತಯೇ? “ಆಫ್ಟರಾಲ್ ಮೇಷ್ಟ್ರು ಒಬ್ಬ ಜಮೀನ್ದಾರರಿಗೆ ಸರಿಸಮ್ಮನವಾಗಿ ಕಲಾವಿದರಿಗೆ ಊಟ ಹಾಕುವುದೆಂದರೇನು” ಎಂದು ಮುಂತಾಗಿ ಗ್ರಾಮದ ಅಷ್ಟೈಶ್ವರ್ಯವುಳ್ಳವರಾದ ಮಂದಿ ಹಲ್ಲು ಮಸೆಯದೆ ಇರುತ್ತಾರೆಯೇ? ಇದರಿಂದ ಕೌಟುಂಬಿಕ ಆರ್ಥಿಕ ಪರಿಸ್ಥಿತಿ ಮೂರು ತಿಂಗಳ ದಿನಮಾನ ಏರುಪೇರಾಗುವುದಿಲ್ಲವೇ? ಮೇಷ್ಟ್ರು ಕೆಲಸ ಮಾಡಲು ಬಂದಿರುವ ನಾವು ಕೇವಲ ಮೇಷ್ಟ್ರು ಕೆಲಸ ಮಾಡುತ್ತ ಇದ್ದು ಗ್ರಾಮಸ್ತರ ಪ್ರೀತಿಗೆ ಪಾತ್ರರಾಗುವುದನ್ನು ಬಿಟ್ಟು ಇಂಥ ತಲೆನೋವುಗಳನ್ನು ಎದುರು ಹಾಕಿಕೊಳ್ಳುವುದೆಂದರೇನು? ಇವೇ ಮುಂತಾದ ಸಮಸ್ಯೆಗಳನ್ನು ಬಿಡಿಸಿ ಇಟ್ಟ ಆಕೆ ತನ್ನ ಗಂಡನಾದ ನನ್ನ ವಾಗಿಲಿಯ ಕ್ರಿಯಾಕರ್ಮಗಳನ್ನು ಕೇಳಿಬಲ್ಲವಳಾಗಿದ್ದಳು. ಯಕಸ್ಚಿತ್ ಜವಾನನ ಕೆಲಸ ಮಾಡೊದು ತಕ್ಕ ಮಟ್ಟಿಗೆ ಸ್ಥಿರಾಸ್ತಿ ಚರಾಸ್ತಿ ಮಾಡ್ಕೊಂಡು ಆರಾಮಿದ್ದಾರೆ.

ಮೇಷ್ಟ್ರು ಕೆಲಸ ಮಾಡೋ ನಾವ್ಯಾಕೆ ತಿಂಗಳ ಕೊನೆಗೆ ಬಿಡಿಕಾಸಿಗೆ ಪರದಾಡ್ತಿದ್ದೇವೆ ಎಂದು ತರ್ಕಿಸೀ, ತರ್ಕಿಸೀ ಆರ್ಥಿಕ ಇಲಾಖೆಯನ್ನು ತಾನೇ ಖುದ್ಧ ನಿರ್ವಹಿಸ ತೊಡಗಿದ್ದಳು. ಅಂದಿನಿಂದ ನಾವೂನೂವೆ ಹುಳ್ಳಗೆ ಬೆಳ್ಳಗೆ ಆಗಿದ್ದೆವು. ಬೇಸತ್ತ ಗೃಹಿಣಿಯರ ಮನಸ್ಸಿಗೆ ಶಾಂತಿ ನೀಡುವಂಥ ಕಾದಂಬರಿಗಳನ್ನು ಬರೆದು ನಾಲ್ಕು ಕಾಸು ಸಂಪಾದಿಸಿ ಎಂದು ಆಕೆ ಮಾಡಿದ ಒತ್ತಾಯಕ್ಕೆ ಮಣಿದು ನಾನು ಒಂದೆರಡು ಮೂರನೆ ದರ್ಜೆಯ ಕಾದಂಬರಿಗಳನ್ನು ಬರೆದು ವಿಮರ್ಶಕರಿಂದಲೂ; ಓದುಗರಿಂದಲೂ ಉಗಿಸಿಕೊಂಡಿದ್ದೆನು. ಅಂಥ ನಾನು ಕಲಾವಿದರನ್ನು ಆಮಂತ್ರಿಸುವ ಮುನ್ನ ಗೃಹ ಖಾತೆಯೊಂದಿಗೆ ಒಂದು ಮಾತು ಚರ್ಚಿಸಬೇಕಿತ್ತು. ಪುರುಷ ಸಹಜ ಧಿಮಾಕಿನಿಂದ ಆಮಂತ್ರಿಸಿ ಫಜೀತಿಗೆ ಸಿಲುಕಿಕೊಂಡಿದ್ದೆನು.

ಯಾರ ಮರ್ಯಾದೆ ಹೋದರೂ ಒಂದೇ ಎಂಬ ಕಾರಣದಿಂದ ಆಕೆ ವಿದ್ಯಾರ್ಥಿನಿಯರ ಸಹಾಯದಿಂದ ಅಡುಗೆ ಮಾಡಿ ಬಡಿಸಲು ಒಪ್ಪಿಕೊಂಡಳು. ಪಾಪ! ರಾತ್ರಿ ಕೇವಲ ಎರಡುಗಂಟೆ ಮಾತ್ರ ನಿದೆ ಮಾಡಿ ಎದ್ದು ದಗದಕ್ಕೆ ತೊಡಗಿದಳು. ಮಧ್ಯಾಹ್ನ ಒಂದು ಗಂಟೆ ಹೊತ್ತಿಗೆ ಕರಿಗಡಬು, ಕೋಡುಬಳೆ ಕೋಸುಂಬರಿ, ಪಲ್ಯೆ; ಅನ್ನ ಸಾಂಬಾರು ಚಟ್ನಿ ವಗೈರೆ ಸಿದ್ಧ ಪಡಿಸಿದಳು. ನಾನು ಸ್ಟೈಲಾಗಿ ಕಲಾವಿದರ ಥರ ಜುಬ್ಬ ಪಂಚೆ ಧರಿಸಿ ಕಲಾವಿದರನ್ನು ಕರೆದುಕೊಂಡುಬಂದೆ. ಕಲಾವಿದರೆಲ್ಲ ಹ್ಹಾ…ಹ್ಹಾ…ಹ್ಹೋ…ಹ್ಹೋ… ಎಂದು ಉದ್ಗರಿಸುತ್ತ ಉಂಡು ಶಾಸ್ತ್ರೀಯ ರೀತಿಯಲ್ಲಿಯೇ ಡೇಗಿ ಎಲೆ ಅಡಿಕೆ ತಟ್ಟೆ ಬಳಿಗೆ ಬಂದರು. ಪರಾವಲಂಬಿ ಲೇಖಕನಾದ ನಾನು ಅವರೆಲ್ಲರಿಗೂ ನೀರು ನೀಡಿ; ಎಲೆ ಅಡಿಕೆ ಸುಣ್ಣ ಸರಬರಾಜು ಮಾಡುತ್ತ ಅವರ ಬದುಕಿನ ಒಳ ವಿವರಗಳನ್ನು ಬೆದಕಿ ತಿಳಿದುಕೊಂಡೆ. ಪಾತ್ರದ ನಿರೀಕ್ಷೆಯಲ್ಲಿರುವ ಬಣ್ಣ ಹಚ್ಚಿಕೊಂಡಿರುವ ಕಲಾವಿದನೊಬ್ಬ ವಿಂಗ್ ಸೈಡಿನಲ್ಲಿ ಕುಳಿತು ಮಾಡುವ ಆಲೋಚನೆ ಕುರಿತು ಕಾದಂಬರಿ ಬರೆಯಬೇಕೆಂದು ನಿರ್ಧರಿಸಿದ್ದು ಆ ಸಂದರ್ಭದಲ್ಲಿಯೇ. ಸ್ತ್ರೀ ಪಾತ್ರಧಾರಿ ಪುರುಷನೊಬ್ಬ ರಂಗಪರಿಕಲ್ಪನೆಗಳ ಮೂಲಕ ಪ್ರೇಕ್ಷಕರನ್ನು ಭ್ರಮೆಯ ಕೂಪದಲ್ಲಿ ತಳ್ಳುವ ಪ್ರತಿಭೆಯ ಬಗೆಗೂನೂವೆ.

ಈ ಬಗ್ಗೆ ತಿಂಗಳೊಪ್ಪತ್ತಿನಲ್ಲಿ ಕಾದಂಬರಿಯೊಂದನ್ನು ಬರೆದು ಅದರಿಂದ ಬರುವ ಗೌರವಧನದಲ್ಲಿ ಒಂದು ಭಾಗವನ್ನು ಹೆಂಡತಿ ಕೈಗೆ ಕೊಟ್ಟು ಇನ್ನೊಂದು ಭಾಗವನ್ನು ಪಾಡಾಖರ್ಚಿಗೆ ಇಟ್ಟುಕೊಳ್ಳುವುದೆಂದು ಕೂಡಾ ಯೋಚಿಸದೆ ಇರಲಿಲ್ಲ. ಹಡಬೆ ಮನುಷ್ಯನಾದ ನಾನು ಕಲಾವಿದರಲ್ಲ, ಹಾಡುಗಳನ್ನು ಗೊಣಗಿಕೊಳ್ಳುತ್ತ; ಮಾತುಗಳಿಗೆ ಮರು ಲೇಪನ ಮಾಡುತ್ತಲೇ ನಮಗೆಲ್ಲ ಶುಭ ಹಾರೈಸಿ ತಂತಮ್ಮ ಬಿಡದಿ ಮನೆಗಳ ಕಡೆಗೆ ಹೊರಟು ಹೋದರು.

ನಾವು ಕಲಾವಿದರಿಗೆ ನಿಜವಾಗಿಯೂ ಊಟ ಹಾಕಿದ ಸುದ್ದಿ ಕೆಲವೇ ಗಳಿಗೆಗಳಲ್ಲಿ ಊರುತುಂಬ ಹಬ್ಬಿತು. ಅದು ಮೊದಲೇ ಹೂಸು ಬಿಟ್ಟರೆ ಊರು ತುಂಬ ಹಬ್ಬುವಷ್ಟು ಕಿರಿಯದಾಗಿತ್ತು. ಜೊತೆಗೆ ಕಲಾವಿದರು ನಮ್ಮ ಕಲಾಭಿಮಾನದ ಬಗ್ಗೆ ಹೊಗಳುತ್ತ ಮೇಷ್ಟ್ರಾಗಿದ್ದುಕೊಂಡೇ ಇಂಥ ಊಟ ಹಾಕಿದ! ಇನ್ನು ತಾಶೀಲ್ದಾರನೋ ಕಲೆಕ್ಟರೋ ಆಗಿದ್ರೆ ಊಟ ಹಾಕುವುದರ ಜೊತೆಗೆ ತಲಾ ಒಂದೊಂದು ಚಿನ್ನದ ನಾಣ್ಯವನ್ನು ಕೈಲಿಡುತ್ತಿದ್ದನೇನೋ ಪುಣ್ಯಾತ್ಮ ಎಂದು ದಾರಿ ಉದ್ದಕ್ಕೂ ಟಾಂಟಾಂ ಹಾಕುತ್ತ ಹೋಗಿದ್ದರು. ಎಲ್ಲರಿಗಿಂತ ಮೊದಲು ಸಿಟ್ಟಗಿದ್ದವರೆಂದರೆ ನಮ್ಮ ಹೆಡ್‌ಮೇಷ್ಟ್ರಾಗಿದ್ದ ಶಿವರಾಮಶಾಸ್ತ್ರಿಗಳು. “ಅಲ್ರೀ… ಮೇಷ್ಟ್ರುಗಳಾದ ನಾವು ಊರಲ್ಲಿ ಹೆಂಗಿರ್ಬೇಕೋ ಹಂಗಿರಬೇಕ್ರಿ… ಅದು ಬಿಟ್ಟು ಜಮೀನ್ದಾರ್ರೀಗೆ ಸರಿಸಮಾನವಾಗಿ ಕಂಪನಿ ಮಂದಿಗೆ ಊಟಹಾಕುವುದೆಂದರೇನು? ಇದೇನೋ ನಮಗೆ ಸರಿಕಾಣಿಸ್ಲಿಲ್ಲ ಮೇಷ್ಟ್ರೇ… ಇದೊಂದು ರೀತಿ ಗೌಡರ ಪ್ರತಿಷ್ಟಿಗೆ ಹಾದ ಹಾನಿಯೇ ಸರಿ” ಎಂದು ಪ್ರತಿಕ್ರಿಯಿಸಿದರು. ಎರಡೆಕರೆ ಗದ್ದೆಗೆ ಒಡೆಯನೂ; ಕೃಷಿ ಕಾರ್ಮಿಕನೂ ಆದ ಸಂನಂಜನು “ಆ ತಿರುಬೋಕಿ ಮೇಷ್ಟ್ರೇ ಉಣ್ಣಾಕ್ಕಿಕ್ಕಿದಾನೆಂದ್ಮೇಲೆ.. ನಾವೇನ್ ಕಡ್ಮೆ” ಎಂದು ಕಂಪನಿಯವರಿಗೆಗ್ರಾಂಡಾಗಿ ಉಂಬಕ್ಕಿಡಲು ಸಿದ್ಧತೆ ನಡೆಸಿದನು. ಮೇಷ್ಟ್ರಂದ್ರೆ ಹೀಗಿರಬೇಕಪ್ಪಾ ಉಳ್ದೋರದಾರ್ನೋಡು ಭೂಮಿಗೆ ಭಾರಾಗಿ ಎಂದು ತೈಲರು ಸುಲೇಮಾನು ಮತ್ತವನ ಸಂಗಡಿಗರು ಮಾತಾಡಿಕೊಂಡರಂತೆ. ನನಗೆ ಸ್ಪಷ್ಟವಾಗಿ ಗೊತ್ತು ನಾನು ಮಾಡಿದ್ದು ಬಡಿವಾರ ಅಂತ. ಇಂಥ ಬಡಿವಾರಗಳು, ಧಿಮಾಕುಗಳು ನಮ್ಮ ವಂಶದಲ್ಲಿ ರಕ್ತಗತವಾಗಿ ಬಂದಿರುವುದು. ನಮ್ಮ ತಾತ ಕಡಿಮೆಯಾಗಿದ್ದರೆ ನಮ್ಮ ಅಪ್ಪ ಕಡಿಮೆಯಾದಾನು! ಹಿಂದೆ ಒಂದ್‌ಹತ್ತು ಮಂದಿಯನ್ನಿಟ್ಟುಕೊಂಡು ಭೂತಕಾಲವನ್ನು ವೈಭವೀಕರಿಸುತ್ತಲೇ ವರ್ತಮಾನವನ್ನು ಕಾಲಕಸವಾಗಿ ನೋಡಿದ ಆಜಾನುಬಾಹು ವ್ಯಕ್ತಿ, ಇದ್ದ ವರಾಸ್ತಿ ಸ್ಥಿರಾಸ್ತಿಯನ್ನೆಲ್ಲವನ್ನೂ ಐದು ಮಂದಿ ಪ್ರತಿಸ್ಪರ್ಧಿಗಳನ್ನು ಜೈಲಿಗೆ ಕಳಿಸಲಿಕ್ಕೆ ವ್ಯಯ ಮಾಡಿದ ಆ ಪುಣ್ಯಾತ್ಮನ ಮಗನಾಗಿ ನಾನು ಗೊತ್ತಿದ್ದೋ ಗೊತ್ತಿಲ್ಲದೆಯೋ ಬಡಿವಾರ ಮಾಡುತ್ತಿದ್ದೆ. ಕೈಮೈಯಿಂದಾಗದ ಎಷ್ಟೋ ಬಡಿವಾರದ ಸಂಗತಿಗಳನ್ನು ಬರಹದ ಮೂಲಕ ಪ್ರಕಟಿಸುತ್ತಿದ್ದೆ.
ಇಂಥಪ್ಪ ನಾನು ಭಲೆ ಠೀವಿಯಿಂದ ಸಿಂಪಲ್ಲಾಗಿ ಅಲಂಕಾರ ಮಾಡಿಕೊಂಡಿದ್ದ ಶ್ರೀಮತಿ ಅನ್ನಪೂರ್ಣಮ್ಮನವರೊಡನೆ ಅದು ನಾಟಕ ನೋಡಲಿಕ್ಕೆಂದು ಹೋದಾಗ ಸಿಕ್ಕ ಗೌರವ, ತಿರಸ್ಕಾರ ವರ್ಣಿಸಲಸದಳ. ಹಾರ್ಮೋನಿಯಮ್ ಶಹನಾಯಿ ನುಡಿಸುವವ ಹಿಂದೆ ಕುಳಿತುಕೊಂಡೆವು. ನಾವೂ ಕಲಾವಿದರೆಂದೂಹಿಸಿ ಆಡುವವರು ಶಕ್ತಿಮೀರಿ ಆಡಿದರು. ಮಹಾಪತಿವ್ರತೆಯಾದ ಮಲ್ಲಮ್ಮನ ಪಾತ್ರ ಬಂದಾಗ ನನ್ನ ಹೆಂಡತಿ ತೋರಿಸುತ್ತಿದ್ದ ಕುತೋಹಲ, ಆಸಕ್ತಿ, ಪ್ರತಿಕ್ರಿಯೆ, ಸೂಳೆ ಪಾತ್ರ ಬಂದಾಗ ಇರುತ್ತಿರಲಿಲ್ಲ. ನಾಟಕ ಮುಗಿದ ನಂತರ ಅನ್ನಪೂರ್ಣೆ ಮ್ಲಾನವದನಳಾಗಿ ಮನೆಕಡೆ ಹೆಜ್ಜೆ ಹಾಕಿದಳು. “ನಿಲ್ಲೇ ಮಾರಾಯ್ತಿ, ಯಾಕೆ ಓಡ್ತೀ” ಎಂದು ನಾನು ಕೇಳಿದ್ದುಂಟು. ನಮ್ಮ ವರ್ತನೆಯನ್ನು ನೋಡಿದ ಯಾರಾದರೂ ಇವರಿಬ್ರು ಜಗಳ ಆಡಿರ ಬೇಕು ಎಂದು ಊಹಿಸುವುದು ಸಾಧ್ಯವಿತ್ತು! ಹಾಸಿಗೆ ಸೇರಿದ ಮೇಲೂ ಶ್ರೀಮತಿಯವರ ಮುಖ ಅರಳಲಿಲ್ಲ. ಒಳ್ಳೆ ಫಜೀತಿಗಿಟ್ಟುಕೊಂಡಿತಲ್ಲಾ… ನಾಟಕ ಸಿನಿಮಾ ಮುಂತಾದ ಪ್ರದರ್ಶಕ ಕಲೆಗಳಿವುದೇ ಮಾನವನನ್ನು ಖುಷಿ ಪಡಿಸಲಿಕ್ಕೆ… ನವರಸಭರಿತವಾದ ಹೇಮರೆಡ್ಡಿಮಲ್ಲಮ್ಮ ಅರ್ಥತ್ ಶ್ರೀಶೈಲ ಮಲ್ಲಿಕಾರ್ಜುನ ಮಾಹಾತ್ಮೆ ನೋಡಿದ ನಂತರ ಶ್ರೀಮತಿಯವರು ಯಾಕ್‌ಹೀಗೆ ಸಪ್ಪಗಿದ್ದಾರೆ? ಅವರ ಮುನಿಸಿಗೆ ಕಾರಣವೇನು? ಇದರಿಂದ ಶ್ರೀಮತಿಯವರನ್ನು ಹೇಗಾದರೂ ಪಾರು ಮಾಡಬೇಕೆಂದು ನಿರ್ಧರಿಸಿ ಬಗೆಬಗೆಯ ವಿನೋದಾವಳಿಗೆ ತೊಡಗಿದೆ. ಅದರಿಂದಲೂ ಪ್ರಯೋಜನ ಲಭಿಸದಿರಲು ನಾನೂ ಮುನಿಸಿಕೊಂಡಂತೆ ನಟಿಸಿದೆ. ಅದರಿಂದಲು ಅವರ ಮುಖ ಅರಳದಿದ್ದಾಗ”ನೀನು ಸಪ್ಪಗಿರೋಕೆ ಕಾರಣ ಹೇಳೇ ಮಾರಾಯ್ತಿ” ಎಂದು ಸಿಡುಕಿನಿಂದಲೇ ಹೇಳಿದೆ. “ಸೂಳೆಪಾರ್ಟು ಮಾಡೊರ್ನೆಲ್ಲ ಮನೆಗ್ಯಾಕೆ ಊಟಕ್ಕೆ ಕರ್ಕೊಂಡ್ ಬಂದ್ರೀ” ಎಂದೊಂದೇ ಅಣಿಮುತ್ತನ್ನುದುರಿಸಿದರು. ಇದರಿಂದ ನನಗಾದ ಸಂತೊಷ ಅಷ್ಟಲ್ಲ! ನಕ್ಕೆ. “ಯಾಕೆ ನಗ್ತೀರ” ಅಂದರು. “ಅಲ್ಲಮ್ಮಾ… ಅದ್ರಲ್ಲಿ ತಪ್ಪೇನಿದೆ? ಅಂದೆ. ಅಲ್ರೀ ಅಷ್ಟೊಂದು ಅಶ್ಲೀಲವಾಗಿ ಆ ಮಾತಾಯಿ ಮಲ್ಲಮ್ಮನ್ನ ಗೋಳುಹುಯ್ಕೊಂಡಳಲ್ಲ ಆ ಸೂಳೆ… ಥೂ… ಅಶ್ಲೀಲ… ಒಂದು ಚ್ರಾದ್ರು ಮಾನಮರ್ಯಾದೆ ಬೇಡ್ವೇ… ಆ ಸೂಳೆ ಪಾರ್ಟು ಮಾಡಿದ ಆವಯ್ಯನಿಗೆ ಊಟಕ್ಕಿದೀ ಕೈಗೆ ಯಾವ ಶಿಕ್ಷೆ ಕೊಟ್ಕೋಬೇಕೋ ಅರ್ಥ ಆಗ್ತಾ ಇಲ್ಲ” ಎಂದು ಇತಿಹಾಸ ಪ್ರಸಿದ್ಧ ಚರ್ಚೆಗೆ ನಾಂದಿ ಹಾಡಿದಳು.

ಆಕೆಯ ಮುಖಾರವಿಂದ ಮೇಲೆ ಬೆರಳಾಡಿಸುತ್ತ “ನಾನು ಅದು ವಾಸ್ತವ ಕಣೇ ವಾಸ್ತವ, ಅದ್ರಲ್ಲಿ ತಪ್ಪೇನಿದೆ ಈಗ! ಆ ನಾಟಕದಲ್ಲಿ ಸೂಳೆ ಪಾತ್ರ ಇರದಿದ್ದಲ್ಲಿ ಮಲ್ಲಮ್ಮನ ಪಾತ್ರ ಬೆಳೀತಿತ್ತಾ! ಆ ನಾಟಕದ ನಿಜವಾದ ನಾಯಕಿ ಅಂದ್ರೆ ಸೂಳೇ ಪಾರಾನೆ…” ಎಂದು ನಾನು ಸೂಳ್ಲೆ ಪಾತ್ರವನ್ನು ಒತ್ತುಕೊಟ್ಟುಸಮರ್ಥಿಸಿದ್ದು ನಮ್ಮಿಬ್ಬರ ನಡುವೆ ಹೊಸದೊಂದು ಸಮಸ್ಯೆಯನ್ನು ಹುಟ್ಟು ಹಾಕಿತು. ಆಕೆ ಮಲ್ಲಮ್ಮನ ಕದೆ ವಕಾಲತ್ತು ವಹಿಸಿ ಮಾತಾಡಿದರೆ ನಾನು ಸೂಳೆ ಪಾತ್ರವನ್ನು ಸಮರ್ಥಿಸಿ ಮಾತಾಡತೊಡಗಿದೆ. ಎತ್ತು ನೀರಿಗೆಳೆದರೆ ಕೋಣ ನೀರಿಗೆಳೆಯಿತು ಎನ್ನೋ ಹಾಗೆ ನಮ್ಮಿಬ್ಬರ ಮಾತುಕತೆ ಮುಂಗೋಳಿ ಕೂಗೋವರೆಗೆ ನಿರಾತಂಕವಾಗಿ ನಡೆಯಿತು. ಮಾತುಕತೆ ನಡುವೆ ಅನೇಕ ಜೀವಂತ ಪಾತ್ರಗಳು ಅನೇಕ ಪೌರಾಣಿಕ

ಪ್ರಸಂಗಗಳು ತೇಲಿಹೋದವು. ವಿಜ್ಞಾನವನ್ನು ಕಾಲೇಜಿನಲ್ಲಿ ತಕ್ಕಮಟ್ಟಿಗೆ ಕಲಿತಿರುವ ಆಕೆ ತನ್ನ ಗಮ್ಡನಾದ ನನ್ನನ್ನು ಆಗಾಗ್ಗೆ ನನ್ನ ಗತಿಸಿದ ತಮ್ದೆಗೆ ಅಂದರೆ ತಮ್ಮ ಮಾವನವರಿಗೆ ಹೋಲಿಸುತ್ತಿದ್ದಳು. ಇದಕ್ಕೆಲ್ಲ ಕಾರನ ಅಯ್ಯನವರ ರುದ್ರಮ್ಮ ಎಂದೇ ಹೇಳಬಹುದು. ನನ್ನ ಗೈರು ಹಾಜರಿಯಲ್ಲಿ ಆಯಮ್ಮ ಈಯಮ್ಮನಿಗೆ “ಈಗ ನಿಮ್ಮಾವ ಇರ್ಬೇಕಾಗಿತ್ನೋಡು… ಆತ್ನೋಡೊಕೆ ಒಳ್ಳೆ ರಾಜ್ಕುಮಾರಿದ್ದ್‌ಹಂಗಿದ್ನೇ ಅನ್ನಪೂರ್‍ಣಿ… ಆತನೆಷ್ಟೆತ್ರ ಈ ಊರಾಗ್ಯಾರೂ ಇದ್ದಿಲ್ಲ ಬಿಡು… ಎಂಥ ವರ್ಚಸ್ಸು ಏನ್ಕಥೆ! ಗರಿಗರಿ ಧೋತ್ರ ಸಿಲುಕು ಜುಬ್ಬಾ ತೊಟ್ಕೊಂಡು, ಡಬ್ಬಲ್ ಕಿರಾಪು ಬಿಟ್ಕೊಂಡು ಹೊಂಟಾಂದ್ರೆ ಎಂಥೆಂತ್ಥಾ ಪತಿವ್ರತೇರುಬಿಟ್ಟ ಕಂಣು ಬಿಟ್ಕೊಂದು ಹಂಗೇ ನೋಡ್ತಿದ್ರು ನೋಡು… ಆತನ ನಗು ಮುಖಾನೆ ಹಂಗಿತ್ತು ಬಿಡು…” ಎಂದು ಮುಂತಾಗಿ ಹೇಳುತ್ತಿದ್ದಳು. ಅದರ ಜೊತೇಗೆ ನಮ್ಮಪ್ಪ ಯಾರ್‍ಯಾರನ್ನ‌ಎಲ್ಲೆಲ್ಲಿ ಇಟ್ಟುಕೊಂಡಿದ್ದ ಎಂಬುದನ್ನು ಸಹ. ಆಗೊಮ್ಮೆ ಈಗೊಮ್ಮೆ ಶ್ರೀಮತಿಯವರೂ ‘ಹೌದೇನ್ರೀ’ ಎಂದು ಕೇಳುತ್ತಿದ್ದರು ಪರೀಕ್ಷಾರ್ಥವಾಗಿ. ಆಕೆ ಸಾಮಾನ್ಯಳಲ್ಲವೆಂಬ ಸಂಗತಿ. ವಿವಿಧ ಮೂಲಗಳಿಂದ ನಮ್ಮ ತಂದೆ, ತಾತ, ಮುತ್ತಾತಂದಿರ ಕುರಿತಾದ ಸಮಸ್ತ ಸಂಗತಿಗಳೆಲ್ಲವನ್ನೂ ಸಂಗ್ರಹಿಸಿಟ್ತುಕೊಂಡಿರುವಳೆಂದು ಗೊತ್ತು! ಆ ಮಹಾನ್ ಮಾನವ ಸ್ವರೂಪಿ ಯ್‌ಆಂಟೆನಾದಂತೆ ಇರುವ ಆ ಮೂರುಮಕ್ಕಳ ತಾಯಿ ಕ್ರಾಸ್‌ಕ್ವೆಶ್ಚನ್ ಮಾಡಿಯಾಳೆಂಬ ಆತಂಕದಿಂದ ನಮ್ಮಪ್ಪನಿಗೆ ಮೂರು ಜನ ಸೂಳೆಯರಿದ್ದರೆಂದೂ ಅವರ ಪೈಕಿ ಚಿಮಣೆವ್ವ ಎಂಬಾಕೆ ಮಾತ್ರ ಕೊನೆವರೆಗೆ ನಿಷ್ಟೆಯಿಂದ ಉಳಿದಿದ್ದಲೆಂದೂ; ಆಕೆಯನ್ನು ನಾನು ತಾಯಿಗಿಂತ ಹೆಚ್ಚಾಗಿ ಕಾಣುತ್ತೊರುವೆನೆಂದೆಲ್ಲವನ್ನೂ ಹೇಳಿಬಿಟ್ಟೆ. ಆಕೆ ನಖ ಶಿಕಾಂತ ಧಗಧಗಾಂತ ಉರಿಯ ತೊಡಗಿದಳು. ಆಕೆ ಕಂಣುಗಳಿಂದ ಕಿಡಿಗಳನ್ನು ಉದುರಿಸತೊಡಗಿದಳು. “ಹಂಗಾದ್ರೆ ನೀವು ತಿಂಗಳಿಗೊಮ್ಮೆ ದುಡ್ಡು ಕಳಿಸ್ತಿರೋದು ಆಕೆಗೇ ಏನು?” ಎಂದಳು. ಹೌದು ಎಂದು ಯಜ್ಞಕ್ಕೆ ಹವಿಸ್ಸು ಸುರಿದೆ. ಸ್ವಲ್ಪ ಹೊತ್ತು ಬಿಟ್ಟು “ಸುಳ್ಳಾದ್ರು ಹೇಳ್ಲಿಕ್ಕೆ ಏನಾಗಿತ್ರೀ ನಿಮ್ಗೆ!” ಎಂದಳು. “ಅದ್ಯಾಕೆ ಸುಳ್ಳು ಹೇಳೋದು ಕಣೇ” ಅಂದೆ. “ಹಾಗಿದ್ರೆ ನಿಮ್ಗೆ ನನ್ ಮೆಲೆ ಪ್ರೀತಿ ಇಲ್ಲವೆಂದಾಯ್ತು” ಅಂದಳು. ನನಗೆ ನಗು ಬಂತು. ಹುಚ್ಚಿ ಅದ್ಕೂ ಇದ್ಕೂ ಯಾಕೆ ಸಂಬಂಧ ಕಲ್ಪಿಸ್ತೀಯ… ಸೂಳೆ ಮಗಳಾಗಿದ್ರೂ ಸುಮಂಗಳ ಒಡಹುಟ್ಟಿದ ತಂಗಿಗಿಂತ ಹೆಚ್ಚು ಪ್ರೀತಿಸ್ತಿಲ್ವೇನು! ನಾನೇನಾದ್ರು ನಿನ್ನ ಹಾಗೆ ಯೋಚಿಸಿದ್ರೆ ಆ ಹುಡುಗಿ ಗತಿ ಏನಾಗ್ತಿತ್ತು ಗೊತ್ತಾ?… ಒಂದು ಹೆಣ್ಣಾದ ನೀನು ಇನ್ನೊಂದು ಹೆಣ್ಣಿನ ಬಗ್ಗೆ ಗೌರವದಿಂದ ಯೋಚಿಸೋದ್ನ ರೂಢಿಸ್ಕೋ. ಆಗ ಗರತಿ ಮತ್ತು ಸೂಳೆ ಎಂಬೆರಡು ಪದಗಳ ನಡುವೆ ಎಳೆದಿರುವ ಗೆರೆ ಏನಂತ ಅರ್ಥವಾಗುತ್ತೆ ಎಂದು ಪರಿಪರಿಯಾಗಿ ಹೇಳಿದೆ. ನಾನು ಹೇಳಿದ್ದು ಅಷ್ಟು ಬೇಗನೆ ಆಕೆ ಕಿವಿಯಲ್ಲಿ ತೂರಲಿಲ್ಲ. ಇಂಥ ಹಿನ್ನೆಲೆಯವನು ನಾನು ಎಂದು ಮೊದಲೇ ಗೊತ್ತಾಗಿದ್ದಿದ್ರೆ ಆಕೆ ನನ್ನ ಮದುವೆ ಆಗ್ತಿದ್ದಳೋ ಇಲ್ಲವೋ… ಅದನ್ನೂ ಕೇಳಿ ಮುಖಕ್ಕೆ ತಿವಿಸಿಕೊಂಡೆ.
ಕಮಲವ್ವನ ಸಂಗತಿಯನ್ನು ಅದು ಹೇಗೆ ಬಂಡೆ ಅದಿ ಮುಚ್ಚಿಡುವುದು ಸಾಧ್ಯವಿತ್ತು ನನಗೆ! ಇಪ್ಪತ್ತೈದು ವರ್ಷಗಳ ದಿನಮಾನ ನಮ್ಮ ಕಷ್ಟ ಸುಖಗಳಲ್ಲಿ ಪಾಲು ಹಂಚಿಕೊಂಡಿದ್ದಂಥ ಅದ್ಭುತ ಹೆಣ್ಣಾದ ಆಕೆ ಬಗ್ಗೆ ಸುಳ್ಳು ಹೇಳುವ ಅಗತ್ಯ ನನಗೆ ಆ ಕ್ಷಣ ಕಂಡು ಬಂದಿರಲಿಲ್ಲ. ಹೆತ್ತ ತಾಯಿಯ ಪ್ರೀತಿಯಲ್ಲಿ ತಿಲದಷ್ಟು ಕೊರತೆ ಕಂಡಿರಬಹುದಾದರೂ ಆಕೆಯ ಪ್ರೀತಿಯಲ್ಲಿ ಅಂಥ ಯಾವುದೇ ಕೊರತೆ ನನಗೆ ಗೋಚರಿಸಿರಲಿಲ್ಲ. ಅಂಬೆಗಾಲಿಡುತ್ತಿದ್ದ ನನ್ನನ್ನು ಎತ್ತಿಕೊಂಡು ಕೆಳಗೆ ಇಳಿಸುತ್ತಿರಲಿಲ್ಲವಂತೆ ಆಕೆ. ನಾನು ಅತ್ತಾಗ ಆಕೆ ಮೊಲೆಯೂಡಿಸಿದ್ದೂ ಉಂಟಂತೆ. ಇಂಥ ಎಷ್ಟೋ ಸಂಗತಿಗಳ ನಡುವೆ ಹೂತು ಹೋಗಿರುವ ನಾನು ಆಕೆಯ ಬಗ್ಗೆ ತಿರಸ್ಕಾರ ದೃಷ್ಟಿ ತಾಳುವುದಾದರೂ ಹೇಗೆ? ನಮ್ಮ ತಂದೆಯವರಿಗೆ ದುಡ್ಡಿನ ಅಡಚನೆ ಅಗಾಧವಾಗಿ ಉಂಟಾದಾಗ ತನ್ನ ಹತ್ತೆಕರೆ ಎರೆಹೊಲ ಮಾರಿ ಹದಿನೈದು ಸಾವಿರ ಇಡಿಗಂಟನ್ನು ಕೊಟ್ಟು ನಮ್ಮ ತಂದೆಯವರ ಮರ್ಯಾದೆ ಕಾಪಾಡಿದ ಆಕೆ ಒಬ್ಬ ಸೂಳೆ ಎಂದು ಪರಿಭಾವಿಸಿ ನಾನು‌ಅದಾವ ನರಕಕ್ಕೆ ಹೋಗಲಿ! ನಮ್ಮ ತಂದೆ ಕೊನೆಯುಸಿರು ಬಿಡುವ ಸಮಯದಲ್ಲಿ ನನ್ನನ್ನು ಏಕಾಂತವಾಗಿ ಕುಳ್ಳರಿಕೊಂಡು ‘ನೋಡಪ್ಪಾ… ನೀನಿಷ್ಟು ದುಡೀತಿದ್ರೂ ನಾನು ಮಾತ್ರ ನಿನ್ನಿಂದ ಒಂದು ರೂಪಾ‌ಐ ಕೇಳಿ ಪಡೆದಿಲ್ಲ. ಯಾಕಂದ್ರೆ ನಾನು ಪೂರೈಸದ ಒಂದಿಷ್ಟು ಕೆಲಸಗಳನ್ನು ನೀನು ಪ್ರಾಮಾಣಿಕವಾಗಿ ಪೂರೈಸುತ್ತೀ ಎಂಬ ಒಂದೇ ಒಂದು ನಂಬಿಕೆಯಿಂದ… ಯ್ಯಕೆ ಅಂದ್ರೆ ನೀನು ವಿದ್ಯಾವಂತ… ಕಥೆ ಗಿಥೆ ಬರೆಯುತ್ತ ಸಮಾಜದ ಒಪ್ಪು ತಪ್ಪುಗಳ ಬಗ್ಗೆ ಯೋಚಿಸೋ ಶಕ್ತಿ ನಿನಗಿದೆ.

“ಚಿಮುಣ ಇಷ್ಟು ವರ್ಷ ದಿನಮಾನ ನನ್ನನ್ನು ತಾಳಿಕಟ್ಟಿದ ಗಂಡನಿಗಿಂತ ಹೆಚ್ಚಾಗಿ ನೋಡಿಕೊಂಡಿದ್ದಾಳೆ. ಆಕೆ ನನಗಾಗ್ಲಿ; ನಾನು ಆಕೆಗಾಗ್ಲಿ ಒಂಚೂರು ದ್ರೋಹ ಬಗೆದಿಲ್ಲ. ಇದ್ದ ಬದ್ದ ಚೂರುಪಾರು ಆಸ್ತಿಯನ್ನು ನನಗೇ ಬಿಟ್ಟುಕೊಟ್ಟ ಆಕೆಗಾಗ್ಲಿ ಆಕೆಯ ಮಗಳಿಗಾಗಲೀ ಒಂದು ನೆಲೆ ಕಲ್ಪಿಸದೆ ಸಾಯ್ತಿದೀನಿ.. ಕಾರಣ ನೀನವರನ್ನು ನೋಡಿಕೊಳ್ತೀ ಎಂಬ ವಿಶ್ವಾಸದಿಂದ. ಅವರ ಸಮಸ್ತ ಜವಾಬ್ದಾರಿ ನೀನೇ ಹೊರಬೇಕು. ಹೇಗಾದ್ರು ಮಾಡಿ ಆಕೆಗೆ ತಿಂಗಳಿಗೊಂದಿಷ್ಟು ಹಣ ಕಳಿಸ್ತಿರು. ಆಕೆಯ ಮಗಳಿಗೆ ಒಳ್ಳೆ ಸಂಬಂಧ ನೋಡಿ ಮದುವೆ ಮಾಡು… ಎಣ್ದಿಷ್ಟೆ ನಾನು ಕೇಳ್ತಿರೋದು ಎನಂತೀಯಾ?” ಎಂದು ನನ್ನ ಕೈ ಹಿಡಿದು ಕೇಳಿದ್ದರು. ಹಾಗೆಯೇ ಮಾಡುವುದಾಗಿ ಮಾತು ಕೊಟ್ಟೋಡನೆ ಅಪ್ಪ ನೆಮ್ಮದಿಯಿಂದ ಪ್ರಾಣ ಬಿಟ್ಟಿದ್ದರು. ಭಯಾನಕ ವೈಧವ್ಯ ಧರಿಸಿದ ಚಿಮುಣವ್ವನನ್ನು ಪರಿಪರಿಯಾಗಿ ಕೇಳಿಕೊಂದರೂ ಆಕೆ ನಮ್ಮೊಡನೆ ಬಂದಿರಲು ಒಪ್ಪಲಿಲ್ಲ. ತನ್ನ ತಾಯಿಯ ತವರೂರಾದ ವೆಂಕಟಾಪುರ ಸೇರಿಕೊಂಡಳು. ಗೆಳೆಯರ ಸಹಾಯದಿಮ್ದ ಬಸಾಪುರದಲ್ಲಿ ಗ್ರಾಮಸೇವಕನಾಗಿ ಕೆಲಸಮಾಡುತ್ತಿದ್ದ ನಾಗರಾಜು ಎಂಬ ವರನನ್ನು ಹುಡುಕಿ ಕೈಮೀರಿ ಖರ್ಚುಮಾಡಿ ಸುಮಂಗಳಳನ್ನು ಕೊಟ್ಟು ಮದುವೆ ಮಾಡಿ ಎಲ್ಲರ ನಿಷ್ಟುರ ಕಟ್ಟಿಕೊಂಡೆ. ಅವರೂ ನಮ್ಮ ಮನೆಗೆ ಬಂದು ಹೋಗುತ್ತಿದ್ದುದಿತ್ತು. ಇತ್ತೀಚಿನ ದಿನಗಳಲ್ಲಿ ಕೌಟುಂಬಿಕ ವಲಯದೊಳಗೆ ಹುಟ್ಟಿಕೊಂಡ ಅಸಹಕಾರ ಚಳುವಳಿಯಿಂದಾಗಿ ಅವರನ್ನು ಕರೆದುಕೊಂಡು ಬಂದು ಒಳ್ಳೆಯದು ಕೆಟ್ಟದ್ದು ನೋಡಲಾಗಲಿಲ್ಲ. ಇದರಲ್ಲಿ ಅಮಾನೀಯವಾದುದೇನಾದರು ಉಂಟೆ? ತನ್ನ ಗಂದನಾದ ನಾನು ತಮ್ಮ ಮಾವನವರ ಥರ ಎಲ್ಲಿ ಆಗಿಪ್ರೇಮಕ್ಕೆ ಚ್ಯುತಿ ತರುವೆನೋ ಎಂದು ಶ್ರೀಮತಿ ಯೋಚಿಸಿರಬಹುದೆಂದುಕೊಂಡೆ. ಅದಕ್ಕೆ ಪೂರಕವಾಗಿ ಆಕೆಯ ಉಸ್ತುವಾರಿಯೂ ಹಾಗಿತ್ತು. “ಅದ್ಯಾವಳೋ ಏಕವಚನದಲ್ಲಿ ಬರೆದಳೆಂದರೆ ನೀವೂ ಏಕವಚನದಲ್ಲಿ ಬರೆದು ಬಿಡೋದೇನು? ನೀವು ಸಲಿಗೆ ಕೊಟ್ರೆ ತಾನೆ ಯಾರಾದ್ರು ಏಕವಚನದಲ್ಲಿ ಬರೆಯೋದು” ಎಂದು ತರ್ಕಿಸಿದಳು.

ಗರತಿ ಮತ್ತು ಸೂಳೆ ಎಂಬೆರಡು ಪರಿಕಲ್ಪನೆಗಳ ಬಗೆಗಿನ ನಮ್ಮ ಚರ್ಚೆ ದಿನಕ್ಕೊಂದು ಹಾದಿ ಹಿಡಿಯಿತು. ನಾನು ಅಮೃತಮತಿ, ದ್ರೌಪದಿ, ಸೀತೆ, ತಾರಾ, ಅನಸೂಯ, ಅರುಂದತಿರೇ ಮೊದಲಾದ ಪೌರಾಣಿಕ ಮಹಿಳಾ ಪಾತ್ರಗಳ ಉದಾಹರಣೆ ಕೊಟ್ಟು ನೋಡಿದರೂ ಆಕೆಯ ಸಮಸ್ಯೆ ಪರಿಹಾರವಾಗಲಿಲ್ಲ. ಕೊನೆಗೆ ಒಮ್ಮೆ “ಅಲ್ರೀ ಪುರಾಣ ಹಾಳೂ ಮೂಳೂ ಹೇಳಿ ನನ್ನ ಬಾಯಿಗೆ ಬೀಗ ಹಾಕುವ ಪ್ರಯತ್ನ ಮಾಡಬೇಡಿ. ಇವತ್ತಿನ ಸಮಾಜದಲ್ಲಿ ಗರತಿಗಿಂತ ಗ್ರೇಟಾದ ಸೂಳೆ ಯಾರಿದ್ದಾಳೆ ಎಂಭೋದನ್ನು ತುಸು ಬಿಡಿಸಿ ಹೇಳಿದ್ರೆ ಒಪ್ಪಿಕೊಂಡೇನು?” ಎಂದಳು. “ಯಾಕಾಗ್ಬಾರ್ದು ಮಹಾರಾಯ್ಳೇ… ಸ್ಥಿರಾಸ್ತಿ ಅನ್ನೊ ಹೆಸರಿನಲ್ಲಿ ಉಳ್ಕೊಂಡಿರೋ ಮನೆಯ ಕಥೆಯನ್ನು ತಗೋ” ಅಂದೆ, “ಹ್ಹಾಂ ಆ ನಮ್ಮ ಮನೆಗೂ ಈ ನಮ್ಮ ಸಮಸ್ಯೆಗೂ ಏನ್ರೀ ಸಂಬಂಧ? ಎಂದು ಅಡ್ಡ ಪ್ರಶ್ನೆ ಹಾಕಿದಳು. “ಅದೇ ನಮ್ಮ ಶಾಮಣ್ಣ ಗರತಿ ಮತ್ತು ಸೂಳೆಯರ ನಡುವೆ ಕಾಲ್ಚಂಡಿನಂತೆ ವಿಲವಿಲನೆ ಒದ್ದಾಡಿ ಶತ್ರುವಿಗೂ ಬರಬಾರದ ರೋಗ ಬಂದು ಸತ್ನಲ್ಲ ಆ ಶಾಮಣ್ಣನ ಕಥೇನೇ ತಗೋ” ಎಂದೊಡನೆ ಆಕೆ ದೇಹದ ಸಮಸ್ತ ಸಿಟ್ಟನ್ನು ತನ್ನ ಸುಂದರ ಮೂಗಿಗೆ ಕ್ರೋಡೀಕರಿಸಿಕೊಂಡು ನನ್ನತ್ತ ದುರುಗುಟ್ಟಿದಳು. “ಥೂ! ಥೂ!… ಆ ನೀಚನ ಸುದ್ದಿ ಮಾತ್ರ ಎತ್ತಬೇಡಿ… ಕೇಳಿದ್ರೆ ನನ್ನ ಕಿವಿ ಮೈಲಿಗೆ ಆಗ್ತದೆ. ಆ ಮಹಾ ಪತಿವ್ರತೆಯಾದ ಹೆಂಡತಿಗೆ ದ್ರೋಹ ಬಗೆದೋನ ಹೆಸರನ್ನು ಈ ತಂಪು ಹೊತ್ತಿನಲ್ಲಿ ಹೇಳಬೇಡಿ, ಆತನ ಬುದ್ಧಿ ಎಲ್ಲಿ ಎಲ್ರೀಗೂ ಬಂದ್ರೆ ಸಂಸಾರಗಳು ನಾಶ ಆದಾವು…” ಎಂದಳು. ಆಕೆಯ ಮಾತಿಗೆ ನಗಬೇಕೋ ಅಳಬೇಕೋ ಒಂದೂ ಅರ್ಥವಾಗದೆ ಆಕೆಯ ಮುದ್ದು ಮುಖ ನೋಡಿದೆ. “ಆವೇಶದಿಂದ ಯೋಚಿಸಿದ್ರೆ ಯಾವ ಸಮಸ್ಯೆಯೂ ಪರಿಹಾರ ಆಗೋದಿಲ್ಲ ಅನೂ. ನಿಧಾನವಾಗಿ ಆಲೋಚನೆ ಮಾಡು… ಆಗ ನಿನ್ಗೆ ಅರ್ಥಾಗ್ತದೆ, ಪಾತಿವ್ರತ್ಯ ಪ್ರೀತಿವಾತ್ಸಲ್ಯಕ್ಕಿಂತ ದೊಡ್ಡದಲ್ಲ… ವರಲಕ್ಷ್ಮಿಯಲ್ಲಿದ್ದುದ್ದು ಕೇವಲ ಪಾತಿವ್ರತ್ಯವೇ ಹೊರತು ಪ್ರೀತಿ ಒಂಚೂರು ಇರಲಿಲ್ಲ…” ಎಂದು ಮುಂತಾಗಿ ಮಾತಾಡಿದರೆ ಆಕೆಗೆ ನನ್ನ ಮಾತಿನ ತಳಬುಡ ಅರ್ಥವಾಗಲಿಲ್ಲ. ದುರುಗುಟ್ಟಿ ನಿಡುಸುಯ್ದಳು.

ನಾನು ಅದುವರೆಗೆ ಬರೆದಿದ್ದ ಶಾಮಣ್ಣ ಕಾದಂಬರಿಯ ಹಸ್ತ ಪ್ರತಿಕೊಟ್ಟು ಬಿಡುವು ಸಿಕ್ಕಾಗಲೆಲ್ಲ ಓದಿ ನಿನ್ನ ಅಭಿಪ್ರಾಯ ತಿಳಿಸು ಎಂದು ಅಭ್ಯರ್ಥಿಸಿದೆ. ಅದನ್ನು ತಿಂಗಳು ಮಾನ ಓದಿ ಹಸ್ತಪ್ರತಿ ಹಿಂದ್ತಿರುಗಿಸಿದಳು. “ಏನ್ರೀ? ಹೀಗೆ ಬರೆದ್ರೆ ಜನ ದುಡ್ದು ಕೊಟ್ಟು ಓದುವುದಾದ್ರು ಹೇಗ್ರಿ! ಏನೋ ನನಗೊಂದೂ ಅರ್ಥ ಆಗ್ಲಿಲ್ಲ… ಶಾಮಣ್ಣ ನೆಗೆದು ಬಿದ್ದ ಮೇಲೆ ಅತ್ತೆ ಸೊಸೆ ಮನೆ ರೂಪದಲ್ಲಿದ್ದ ಸ್ಥಿರಾಸ್ತಿ ವಿಲೇವಾ‌ಅರಿ ವಿಷಯದಲ್ಲಿ ಕಚ್ಚಾಡಿದ್ದು ಓದಿ ನನ್ನ ಮನಸ್ಸಿಗೆ ಬೇಸರವಾಯಿತು. ಆದ್ರೆ ಆ ಸೂಳೆ ಅನಸೂಯ ಹೇಗೆ ವರಲಕ್ಷ್ಮಿಯವರಿಗಿಂತ ಗ್ರೇಟಾದಳು ಎಂಬ ಬಗ್ಗೆ ವಿವರಿಸುವ ಗೋಜಿಗೆ ಹೋಗಿಲ್ಲ” ಎಂದು ಅಭಿಪ್ರಾಯ ವ್ಯಕ್ತಪಡಿಸಿದಳು. ಅದು ನನಗೆ ಸರಿಕಂಡಿತು. ಕಥೆಗಾರನಾದ ನನ್ನ ಪುರಾಣ ಹೇಳಿಕೊಳ್ಳುವುದರ ಜೊತೆಗೆ ಶಾಮಂಣನ ಮರಣೋತ್ತರ ಬದುಕನ್ನು ಸೂಚ್ಯವಾಗಿ ವಿವರಿಸಿದ್ದೆ. “ಏನ್ರೀ ಬ್ರಾಹ್ಮಣರನ್ನು ಬ್ಲಾಕ್ ಅಂಡ್ ವೈಟ್ ಮಾಡಿ ಬರೀತಿದ್ದೀರಲ್ಲ” ಎಂದು ಲೇಖಕ ಮಿತ್ರ ಶಾಂತಾರಾಮ ಸೋಮಯಾಜಿ ಅಮೇರಿಚಾದಿಂದ ಪತ್ರಬರೆದ ಮೇಲೆ ಕಾದಮ್ಬರಿಯನ್ನು ಅರ್ಧಕ್ಕೆ ನಿಲ್ಲಿಸಿ ಬಿಟ್ಟಿದ್ದೆ. ಮೂರು ವರ್ಷ ಮೂಲೆಯಲ್ಲಿ ಕೊಳೆಯುತ್ತ ಬಿದ್ದಿದ್ದ ಹಸ್ತಪ್ರತಿಯನ್ನು ನಾನು ಹೊರಗಡೆ ತೆಗೆದಿದ್ದು ಹೇಮರೆಡ್ಡಿಮಲ್ಲಮ್ಮ ನಾಟಕ ಸಮಸ್ಯೆ ಹುಟ್ಟು ಹಾಕಿದ ಮೇಲೆಯೇ! ಇದೇನಾದರೂ ಮುಂದುವರಿದರೆ ಸಂಪೂರ್ಣ ಯಷಸ್ಸು ನನ್ನ ಶ್ರೀಮತಿಯವರಿಗೇ ಸಲ್ಲಬೇಕು. “ನಿಮ್ಮವಾದವನ್ನು ನೀವು ಸಮರ್ಥಿಸಿಕೊಳ್ಳಲಿಕ್ಕೆ ಸೂಳೆಪಾತ್ರವನ್ನು ಗ್ಲೋರಿಫೈ ಮಾಡಲಿಕ್ಕೆ ಹೋದಿರೆಂದರೆ ನನ್ನಾಣೆ… ಇದ್ದಂದು ಇದ್ದಂಗೆ ಬರೀರಿ… ಅದನ್ನು ಒಪ್ಪಿಕೊಳ್ಳೋದು ಬಿಡೋದು ಓದುಗರಾದ ನಮಗೆ ಸೇರಿದ್ದು ಎಂಬುದನ್ನು ಮರೆಯಬೇಡಿರಿ… ಹಾಗೆ ಬರೀತಾ ಬರೀತಾ ನೀವೂ ಆ ನಿಮ್ಮ ಮಿತ್ರ ಶಮಂಣನ ಚಾಳಿ ಕಲಿತುಕೊಂಡು ಬಿಡಬೇಡಿ… ಮಾಡ್ದೋರ ಪಾಪ ಆಡ್ದೋರ ಬಾಯಲ್ಲಿ ಅಂತ ಹಿರಿಯರೇ ಹೇಳಿದ್ದಾರೆ. ಆದ್ರೇನು ಮಾಡೋದು ನುಂಗಲಿಕ್ಕೂ ಆಗದೆ ಉಗುಳಲಿಕ್ಕೂ ಆಗದೆ, ಶಾಮಂಣನ ಕಥೇನ ಗಂಟಲಲ್ಲಿಟ್ಟುಕೊಂಡು ನೀವು ಒದ್ದಾಡುತ್ತಿರೋದನ್ನು ನಿಮ್ಮ ಹೆಂಡತಿಯಾದ ನನ್ನಿಂದ ನೋಡಲಿಕ್ಕಾಗ್ತಿಲ್ಲ. ಅದ್ಯಾವ ಪಾಪ ಬಂದ್ರೂ ನಾನನುಭವಿಸ್ತೀನಿ… ನೀವು ಮಾತ್ರ ತಿಂಗಳೊಪ್ಪತ್ತಿನಲ್ಲಿ ಬರೆದು ಮುಗಿಸಿಬಿಡಬೇಕಷ್ಟೆ.” ಎಂದು ನೀಟಿ ಸಂಹಿತೆಯನ್ನು ಪ್ರಕಟಿಸಿದಳು.

“ಇದ್ದದ್ದು ಇದ್ದಂಗೆ ಹೆಂಗ ಬರ್‍ಲಿಕ್ಕಾಗ್ತದೆ ಪುಣ್ಯಾತ್ಗಿತ್ತಿ, ಕಥೆಗಾರನಾದ ನನ್ಗೂ ಒಂಚೂರು ಸ್ವಾತಂತ್ರ್ಯ ಬೇಡ್ವೇನು? ರೂಪಕಾದಿರಲಂಕಾರಸ್ತನ್ಯಾನೈರ್ಬಹುದೋದಿತಃ ನಕಾಂತಮಪಿ ನಿರ್ಭೂಷಂ ವಿಭೂತಿ ವನಿತಾ ಮುಖಂ ಅಂತ ಭಾಮಪ ಮಹಾಶಯನೇ ಹೇಳಿದ್ದಾನೆ. ಹೆಣ್ಣಾದೋಳು ಎಷ್ಟೇ ಚಂದ ಇದ್ರೂ ಒಡವೆ ವಸ್ತ್ರ ಹಾಕಿ ಅಲಂಕರಿಸದಿದ್ದರೆ ಆಕೆ ಜನಗಳ ಕಂಣಿಗೆ ಚಮ್ದ ಕಾಣೋದಿಲ್ಲ. ಅದ್ಕೆ ಇದ್ದದ್ದು ಇಲ್ಲದ್ದು ಒಂಚೂರು ಸೇರಿಸಿ ಬರೀಲಿಕ್ಕೆ ಅನುಮತವಿತ್ತು ಕಾಪಾಡೆಲೈ ಗೀರ್ವಾಣಿ” ಎಂದು ಅಂಜಲೀಬದ್ಧನಾಗಿ ಕೇಳಿಕೊಂಡಿದ್ದಕ್ಕೆ ಆ ಕೋವಿದೆಯು ಒಡಂಬಟ್ಟು “ಯಾಕಾಗಬಾರದೆಲೈ ಕಥೆಗಾರನೇ… ಆದ್ರೆ ಒಂದು ಮಾತು ನೆನಪಿಟ್ಕೋ… ಓದುಗರೆಂದ್ರೆ ಎಲ್ರೂ ಒಂದೇ ನಮೂನಿಯವರಿರೋದಿಲ್ಲ, ಮಂಗಳಾರತಿ ಕೊಟ್ರೆ ಉಷ್ಣ ತೀರ್ಥ ಕೊಟ್ರೆ ನೆಗಡಿ ಎಂಬ ಜಾಯಮಾನದೋರು ಇರ್ಥಾರೆ. ಆರಕ್ಕೇರದಂಗೆ ಮುರಕ್ಕಿಳಿಯದಂತೆ ನಿರ್ಲಿಪ್ತ ಮನೋಭಾವದಿಂದ ಕಾದಂಬರಿಯನ್ನು ಮುಂದುವರಿಸುವಂಥವನಾಗೈ ಸಾರಥಿ ಅತಿಜಾಗ್ರತಿ…” ಎಂದು ಕಿವಿಹಿಂಡಿ ಆಶೀರ್ವದಿಸಿದಳು. ಆಗ ನಾನು ಆ ಸಕಲರಾಗ ಸಂಶೋಭಿತೆಯಾದ ಅನ್ನಪೂರ್ಣೆಶ್ವರಿಗೆ ಕೃತಜ್ಞತೆ ಸಲ್ಲಿಸಿ ಕಾದಂಬರಿ ಬೆಳೆಸಲು ಉದ್ಯುಕ್ತನಾದೆನು.
*
*
*
ಹೆತ್ತ ಮಗನಿಗಿಂತ ಹೆಚ್ಚಾಗಿ ಪ್ರೀತಿಸಿ ಬೆಳೆಸಿದ ಮಗನಾದ ಶ್ರೀಕೃಷ್ಣ ದೇವರಾಯನಿಂದ ಕಂಣು ಕೀಳಿಸಿಕೊಂಡು, ತನ್ನವರೆನ್ನಲಾದ ಎಲ್ಲರನ್ನೂ ಕಳೆದುಕೊಂಡು ತಿರುಪತಿ ಸೇರಿ ಲಡ್ಡು ಮಾರಿ ಹೊಟ್ಟೆ ಹೊರೆದೂ ಹೊರೆದೂ ಕೊನೆಯುಸಿರೆಳೆದ ಅಮ್ಮತ್ಯ ತಿಮ್ಮರಸರ ಬಗ್ಗೆ ಲೀಲಾಜಾಲವಾಗಿ ಕಾದಂಬರಿ ಬರೆದು ಮುಗಿಸಬಹುದು. ಆದರೆ ಕೀರ್ತಿಶೇಷ ಶಾಮಂಣನ ಬದುಕಿನ ಬಗ್ಗೆ ಅಥೆಂಟಿಕ್ಕಾಗಿ ವಿಶಯ ಸಂಗ್ರಹಿಸಿ ಬರೆಯುವುದು ಕಷ್ಟಸ್ದ ಕೆಲಸವೆಂದು ನನಗೆ ಅರ್ಥವಾದದ್ದು ಅನಂತಪುರಕ್ಕೆ ಹೋಗಿ ವರಲಕ್ಷ್ಮಮ್ಮನವರನ್ನು ಕಂಡ ಮೇಲೆಯೇ. ಅವರಿದ್ದ ಮನೆ ನನಗೆ ದೊರಕಿದ್ದು ಬೆಳಗಿಂದ ಮಧ್ಯಾಹ್ನದವರೆಗೆ ತಿರುಗಾಡಿದ ಮೇಲೆಯೇ. ಇಲ್ಲಿಂದ ಅಲ್ಲಿವರೆಗೆ ಇರುವ ಸರೋಜಿನಿ ನಾಯ್ಡು ಬಡಾವಣೆ ಎಂದರೆ ಒಂದು ರೀತಿ ಅಗ್ರಹಾರವೇ. ನೋಡಲಿಕ್ಕೆ ಅಪ್ಪಟ ಶೂದ್ರನಂತೆ ಕಾಣುತ್ತಿದ್ದ ನಾನು ಅಲ್ಲಿನ ಪ್ರತಿಯೊಂದು ಮನೆಯನ್ನು ಎಡಹಾಕಿ ಕಾರಟಗಿ ಶಾನುಭೋಗರಾದ ಲಕ್ಷ್ಮೀನರಸಿಂಹಯ್ಯನವರ ಮಗ ಶ್ರೀಯುತ ಶ್ರೀವಲ್ಲಭಾಚಾರ್ಯರ ಮನೆ ಇದೇ ಏನ್ರಿ? ಎಂದು ಪ್ರತಿಯೊಬ್ಬರನ್ನು ಕೇಳಿದ್ದೇ ಕೇಳಿದ್ದು.

ಆ ತಾಯಿಯ ಅನಂತಪುರದ ವಿಳಸ ತಂದಿದ್ದೇ ಬಹು ದೊಡ್ಡ ರಾಮಾಯಣ. ರಾಜಾಗೋಪಾಲಾಚಾರ್ಯರ ಸಮಾಧಿ ಮೇಲೆ ಪುಷ್ಪಗುಚ್ಚ ವಿರಿಸುತ್ತಿದ್ದ ಯುವಕನೋರ್ವ ದೊರಕದಿದ್ದಲ್ಲಿ ವಿಳಾಸ ದೊರಕುವುದು ಸಾಧ್ಯವೇ ಇರಲಿಲ್ಲ. ಆನೆಗೊಂದಿ ದರ್‍ಭಶಯನಾಚಾರ್ಯರು ಹಿಂದೂಪುರಂಗೆ ಹೋಗಿ ಆರು ಬೆರಳಿನ ಭಕ್ತವತ್ಸಲಂರಾಯರ ಆಶ್ರಯ ಪಡೆದಿದ್ದಾಳವ್ಳು. ನಮ್ಮಲ್ಲಿ ಆಶ್ರಯ ಪಡೆದಿದ್ದರೆ ನಾವೇ ಆಕೆಯ ಹಣವನ್ನು ತಿಂದು ನರಕಕ್ಕೆ ಹೋಗುತ್ತಿದ್ದವೇನು? ಎಂದು ಪ್ರತಿಕ್ರಿಯಿಸಿದರೆ, ಕಂಪ್ಲಿ ಹನುಮಣ್ಣಾಚಾರ್ಯರು ಆಕೆಗೆ ತಿಲೋಕದ ಬಿಟ್ಟು ಎಷ್ಟೋ ವರ್ಷಗಳಾದ್ವು ಎಂದು ಬಿದುವುದೇ?… ನರಸಾಪುರದ ತಮ್ಮಣ್ಣಾಚಾರ್ಯರಂತೂ ಆ ಕೇಶವಿಹೀನೆಯು ವೈಧವ್ಯಕ್ಕೆ ಬೇಸತ್ತು ಕೃಷ್ಣೆಯೊಳಗೆ ದೇಹತ್ಯಾಗ ಮಾದಿದ್ಳೂಂತ ಕೇಳಿದ್ವಿಯಪ್ಪಾ’ ಎಂದು ನಿಟ್ಟುಸಿರು ಬಿಟ್ಟಿದ್ದರು.

ಅಲ್ಲಿಂದ ಸೀದಾ ರಾಯಚೂರಿನ ಗುರುವಾರ ಪೇಟೆಗೆ ಬಂದೆ. ಅಲ್ಲಿ ಅವರ ದೂರದ ಸಂಬಂಧಿಯಾದ ಸುಶೀಲಮ್ಮನು ಗಂಡ ಸತ್ತಿದ್ದರೂ ಮುಂಡೆ-ಗಿಂಡೆ, ನಾರುಮಡಿ-ಗೀರುಮಡಿ ಉಟ್ಟುಕೊಳ್ಳದೆ ಸಾದಾಸೀದಾವಾಗಿಯೇ ಇರುವಳೆಂದೂ; ಆಕೆ ತನಗಿಂತಲೂ ಹತ್ತು ವರ್ಷ ಚಿಕ್ಕವನಾದ ವೆಟರ್‍ನರಿ ಡಾಕ್ಟರ್ ಕುರುಬರ ಗುರುಲಿಂಗಪ್ಪನನ್ನು ಇಟ್ಟುಕೊಂಡು ಮಕ್ಕಳುಮರಿಯನ್ನು ಕೃತು ನಿಶ್ಚಯದಿಂದ ಪಾಲನೆ ಪೋಷಣೆ ಮಾಡುತ್ತಿರುವಳೆಂಬುದಾಗಿಯೂ ಹೆಂಣುಭೇರುಂಡವನ್ನು ಹೋಲುವ ಆಕೆಯನ್ನು ಸಂಪರ್ಕಿಸಿದರೆ ವರಲಕ್ಷ್ಮಿಯ ವಾಸ್ತವ್ಯ ತಿಳಿಯಬಹುದೆಂದೂ ಕಮಲಾಪುರದ ರೆವಿನ್ಯೂ ಇನ್ಸ್‌ಪೆಕ್ಟರ್ ರಮಾನಂದಾಚಾರ್ಯರು ಸುಳಿವು ನೀಡಿದ್ದರಿಂದ ನಾನು ಗುರುವಾರ ಪೇಟೆ ಸೇರಿಕೊಂಡಿದ್ದು. ನೋಡಲಿಕ್ಕೆ ಮೈಕೈ ತಿಂಬಿಕೊಂಡು ತಕ್ಕಮಟ್ಟಿಗೆ ಸುಂದರಳಾಗಿಯೇ ಇದ್ದ ಆ ವನಿತೆಯೂ, ಆಕೆಗೆ ಆಸರೆ ನೀಡಿರುವ ಗುರುಲಿಂಗಪ್ಪನೂ ನನ್ನನ್ನು ಬರಮಾಡಿಕೊಂಡು ಕುಳ್ಳರಿಸಿ ಫಲಹಾರ ಕೊಟ್ಟು ಉಪಚರಿಸಿದರು. ನಾನು ಬಂದ ಕಾರಣ ಹೇಳಲ್ಲಗಿ ಸುಶೀಲಮ್ಮನವರು ಆಶ್ಚರ್ಯ ವ್ಯಕ್ತಪಡಿಸಿದರು. ಆಕೆ ಏನೂ ನಿಮಗೆ ಸಂಬಂಧಿ ಅಲ್ಲ ಸಾಟಿ ಅಲ್ಲ. ಎರಡರಷ್ಟು ವೈಧವ್ಯ ಎಳ್ಕೊಂಡು ಕ್ಷೀಣಿಸಿ ಹೋಗಿರೋ ಆ ರಂಡೆಯಿಂದ ತಿಳ್ಕೊಳ್ಳೋದೇನಿದೆಯಣ್ಣಾ… ಸತ್ತೋನು ಸತ್ತ, ಆದ್ದಕ್ಯಾಕೆ ನೀನು ಕೊರಗೋದು! ಈ ವಯಸ್ನಲ್ಲಿ ಕಾಮವನ್ನು ಕೊಂದ್ಕೊಂಡು ಬದ್ಕೋದು ದುರ್ಭರ… ಒಳ್ಳೆ ಹುಡುಗನ್ನ ಹುಡ್ಕೊಂಡು ದೂರ ಎಲ್ಲಾದ್ರು ಸುಖವಾಗಿರು… ಬೇಕಾದ್ರೆ ನಾನೇ ಹೊಂದಿಸಿಕೊಡ್ತೇನೆ… ಎಂದು ಗಿಣಿಗೇಳ್ದಂಗೆ ಹೇಳ್ದೆ ಕಣಣ್ಣ… ಕುಲಟೆ… ಸೂಳೆ… ಅಂಥೋಳು ಇಂಥೋಳು ಅಂಥ ನನ್ನೇ ಬಯ್ದು ಹೊರಗೆ ಅಟ್ಟಿ ಬಿಡೊದೇನು! ತನ್ನ ಗಂಡನ್ನ ಗೋಳೊಯ್ಕೊಂಡು ತಿಂದು ಒಂದು ರೀತೀಲಿ ತಾನೇ ಕೊಲೆ ಮಾಡಿದ ಆಕೆ ಅದ್ಯಾವ ಪತಿವ್ರತೆ ಕಣಣ್ಣಾ… ನಾನು ನನ್ನ ಗಂಡನ್ನ ಬದುಕಿರುವಾಗ್ಲೂ ಪ್ರೀತಿಸ್ತಿದ್ದೆ ಸತ್ತ ಮೇಲೂ ಪ್ರೀತಿಸ್ತಿದೀನಿ… ನೋಡಿ ಅಲ್ಲಿ ಗೋಡೆ ಮೇಲೆ ಫೋಟೋದಲ್ಲಿ ಹೆಂಗವ್ರೆ!… ಗುರುಲಿಂಗಪ್ಪ ನನ್ನ ಕೈಹಿಡೀದಿದ್ರೆ ಈ ಸಮಾಜ ನನ್ನಂಥೋರ್‍ನ ಸುಮ್ನೆ ಬಿಡ್ತಿತ್ತೇನ್ರಿ…! ಆಕೆ ಕಥೇಲಿ ಏನಿದೆ ಬರೆಯೋಕೆ… ಬೇಕಾದ್ರೆ ನನ್ನ ಕಥೆ ಬರೀರಿ… ಪರಪುರುಷರ ಗಾಳಿ ಸೊಂಕದಂಗೆ ಬದುಕುತ್ತಿರೋ ಅವ್ಳು ನಿಮ್ಮನ್ನ ಹತ್ತಿರ ಬಿಟ್ಕೊಂಡಾಳೆಯೇ! ತನ್ನ ಗಂಡನ ಡೈರಿ ಗಿಯ್ರಿ… ಕಾಗ್ದಗೀಗ್ದ ಕೊಡ್ತಾಳಂತ ಏನು ಗ್ಯಾರಂಟಿ? ಆಲಿಗೆ ಹೋಗಿ ಅವಮಾನ ಅನುಭವಿಸೋದ್ಕಿಂತ ಸುಮ್ನೆ ಹೋಗ್ಬಿಡಿ ನಿಮ್ ಪಾಡಿಗೆ ನೀವು” ಎಂದು ಬುದ್ಧಿ ಹೇಳಿದಳು. ಆಕೆಯ ಮಾತುಗಳನ್ನು ಕೇಳಿ ನಾನು ವಿಚಾರನಂದ ಪರವಶನಾದೆನು. ಗುರುಲಿಂಗಪ್ಪನೂ ನನಗೆ ಸಪೋರ್ತಾಗಿ ನಿಂತ ಅನಂತರವೇ ಆಕೆ ಅನಂತಪುರದ ವಿವರ ನೀಡಿದ್ದು.

ಅನಂತಪುರಕ್ಕೆ ಹೋಗಬೇಕೆನ್ನುವ ಆಸೆಗೆ ಏಳೆಂಟು ವರ್ಷ ವಯಸ್ಸಾಗಿದೆ. ಆಂಧ್ರದ ರಾಯಲಸೀಮೆಯ ಜಿಲ್ಲೆಗಳಲ್ಲಿ ಅದೂ ಒಂದು.
ವಿಜಯನಗರದ ಅರಸರು ಆ ಜಿಲ್ಲೆಯ ಶ್ರೇಯೋಭಿವೃದ್ಧಿಗೆ ಶ್ರಮಿಸಿದ್ದಾರೆ. ತಮ್ಮ ಮೂಲನೆಲೆಯಾದ ತಿರುಪತಿ ಸಮೀಪದ ಚಂದ್ರಗಿರಿಗೆ ಅನಂತಪುರದ ಮೂಲಕ ಹಾದು ಹೋಗಬೇಕಷ್ಟೆ. ಇಂಡಿಯಾ ಮಾರ್ಟಿಗೇಜ್ ಎಂಬ ಅಪರೂಪದ ಮತ್ತು ಸರಕಾರದ ಕಂಣು ಕೆಂಪುಮಾಡಿದಂಥ ಪುಸ್ತಕ ಬರೆದು ಹೋರಾಡುತ್ತಲೇ ಕೊನೆಯುಸಿರೆಳೆದ ತರಿಮೆಲನಾಗಿರೆಡ್ಡಿ; ಮೊದಮೊದಲು ನಕ್ಸಲೈಟ್ ಚಳುವಳಿಯಲ್ಲಿದ್ದು ನಂತರ ತೆಲುಗುದೇಶಂನ ಥಳುಕಿಗೆ ಮಾರುಹೋಗಿ ಎಮ್ಮೆಲ್ಲೆ ಯಾಗಿರುವ ಪರಿಟಾಲ ರವಿ; ಶೋಶಿತ ಸಮಾಜದ ಬಗ್ಗೆ ಅದ್ಭುತವಾದ ಕಥೆ ಬರೆಯುತ್ತಿರುವ ಚಿಲಕೂರಿ ದೇವ ಪುತ್ರ , ಸಿಂಗಮನೇನಿ ನಾರಾಯಣ; ಬಂಡಿನಾರಾಯಣ ಸ್ವಾಮಿ, ಪ್ರಸಿದ್ಧ ಕನ್ನಡ ವಿದ್ವಾಂಸರಾದ ಶೇಶಾಶಾಸ್ತ್ರಿ ಇವರೇ ಮೊದಲಾದ ಪ್ರತಿಭಾವಂತರಿರುವ ಅನಂತಪುರಕ್ಕೆ ರೆಕ್ಕೆ ಕಟ್ಟಿಕೊಂಡು ಹಾರಿ ಇಳಿದಿದ್ದೆ. ಬಾಯಲ್ಲಿ ತೀನ್ ಸೌ ಬೀಡಾ ಹಾಕಿಕೊಂಡು “ಯಾವ ಶಾಮಣ್ಣ; ಯಾವ ವರಲಕ್ಷಮ್ಮ ಏನ್ಕಥೆ? ಇವರ್ನೆಲ್ಲ ಖುದ್ದ ಬೆಟ್ಟಿಯಾಗಿ ಅದ್ಯಾವ ಕಾದಂಬ್ರಿ ಬರೆದು ಅದೇನು ಸಾಧಿಸ್ತೀಯೋ ಕಣೋ ಕುಂವೀ” ಎಂದು ಉದ್ಗರಿಸಿ ತಮ್ಮ ಅನಂತಪುರದಲ್ಲಿ ಯಾವ ಜಾತಿಯವರು ಯಾವ ಯಾವ ಮೂಲೆಯಲ್ಲಿದ್ದಾರೆಂಬುದರ ಬಗ್ಗೆ ಶೇಶಾಶಾಸ್ತ್ರಿಗಳು ಹೇಳದಿದ್ದಲ್ಲಿ ನಾನೀ ಸರೋಜಿನಿ ನಾಯ್ಡು ಓಣಿ ತಲುಪುತ್ತಿರಲಿಲ್ಲ. ನೋಡಿದೊಡನೆ ಇದು ಬ್ರಾಹ್ಮಣರು ವಾಸಿಸುತ್ತಿರುವ ಸ್ಥಳ ಎಂಬುದು ಅರ್ಥವಾಗಿ ಬಿಟ್ಟಿತ್ತು.

ಇದೇ ಅವರ ಮನೆ ಇರಬೇಕೆಂದೂ; ಅದೇ ಇವರ ಮನೆ ಇರಬೇಕೆಂದು ಕಂಡ ಕಂಡ ಮನೆಗಳನ್ನೆಲ್ಲ ಎಡತಾಕಿದ್ದೇ ಎಡತಾಕಿದ್ದು. “ಯಾವ ವರಲಕ್ಷಮ್ಮ? ಅದೇ ಗರ್ಲ್ಸ್
ಹೈಸ್ಕೂಲಲ್ಲಿ ಟೀಚರಾಗಿದ್ದಾರಲ್ಲ ಅವ್ರಾ?” ಎಂದೊಬ್ಬರು ಉದ್ಗರಿಸಿದರೆ ಇನ್ನೊಬ್ಬರು ಹರಿಕಥೆ ಹೇಳ್ತಾರಲ್ಲ ಅವ್ರಾ ಎನ್ನುತ್ತಿದ್ದರು. ಕಾರಟಗೀ ಶಾನಭೋಗರಾದ ಲಕ್ಷ್ಮೀ ನರಸಿಂಹಯ್ಯನವರ ಮಗ ಶ್ರೀವಲ್ಲಭಾಚಾರ್ಯರ ಮನೆ ಎಲ್ಲಿದೆ ಎಂದು ಕೇಳಿದಾಗ ಒಬ್ಬ ವೃದ್ಧ ಮಹಿಳೆ ನಿಟಾರನೆ ಬೆನ್ನೆತ್ತಿ ನೀನ್ಯಾವ ಜಾತಿಯವ? ಅವರಿಗೂ ನಿಮಗೂ ಏನು ಸಂಬಂಧ ಎಂಬಿವೇ ಮೊದಲಾದ ಪ್ರಶ್ನೆಗಳನ್ನು ಕೇಳಿ ಉತ್ತರ ಪಡೆದು “ಈ ಬಡಾವಣೆಯಲ್ಲಿ ಯಾವ ಮನೆ ಮುಂದೆ ರಾಮ ದೇವರ ಗುಡಿ, ಮಸೀದಿ ಎರಡೂ ಇವೆಯೋ ಅದೇ ಕಣಪ್ಪ ಶ್ರೀವಲ್ಲಭನ ಮನೆ” ಎಂದು ಹೇಳಿತು. ನಾನು ಹುಡುಕಿದ ಪ್ರಕಾರ ಆ ಬಡಾವಣೆಯಲ್ಲಿ ಮೂರು ರಾಮದೇವರ ದೇವಸ್ಥಾನಗಳೂ; ಎರಡು ಮಸೀದುಗಳೂ ಇದ್ದವು. ನಂತರ ಕುಳಾಯಪ್ಪನ ಬಡಾವಣೆಗಂಟಿಕೊಂಡಂತಿರುವ ಮನೆಯೊಂದರ ಮುಂದೆ ಮಸೀದಿ ಮತ್ತು ರಾಮದೇವರ ಗುಡಿ ಒಟ್ಟೊಟ್ಟಿಗೆ ಇದ್ದವು. ಅನಂತಪುರಕ್ಕೆ ಎರಡು ಹರದಾರಿ ದೂರದ ಅಂದರೆ ಬೊಮ್ಮಲಾಟಪಲ್ಲಿ ದಾಟಿದ ಮೇಲೆ ಬರುವ ಗೂಡೂದು ಗ್ರಾಮದಲ್ಲಿ ಕುಳಾಯಪ್ಪ ಎಂಬ ಮುಸ್ಲಿಂ ದೇವತೆ ವಾಸವಾಗಿರುವುದು ರಾಮದೇವರ ಗುಡಿಯೊಳಗೇನೆ. ಪ್ರತಿ ಮೊಹರಮ್ ಹಬ್ಬದಲ್ಲಿ ರಾಮದೇವರಿಗೆ ಘನ[ಪೂಜೆ ಸಲ್ಲಿಸಿದ ನಂತರವೇ ಕುಳಾಯಪ್ಪ ಎಂಬ ಪೀರಲು ದೇವರು ಮದಾಲ್ಸಿಗೆ ಹೊರಡುವುದು. ಈಗಲೂ ಈ ಪ್ರಾಂತದಲ್ಲಿ ವೈಶ್ಯರು ಕುಳಾಯಿ ಶೆಟ್ಟಿ ಎಂದು ಹೆಸರಿಟ್ಟುಕೊಳ್ಳುವುದುಂಟು. ಬ್ರಾಹ್ಮಣರಲ್ಲು ಕುಳಾಯಿ ಶರ್ಮ, ಕುಳಾಯಿ ಆಚಾರ್ಯ ಎಂದು ಹೆಸರಿಟ್ಟುಕೊಳ್ಳುವುದನ್ನು ಕಾಣಬಹುದು. ಅಶ್ಟೇ ಏಕೆ! ಈ ನಮ್ಮ ವರಲಕ್ಷ್ಮಮ್ಮನವರಿಗೆ ಆಶ್ರಯಕೊಟ್ಟಿರುವ ಶ್ರೀವಲ್ಲಭಾಚಾರ್ಯರು ಇದ್ದಾರೆ – ಅವರ ಮನೆಯ ಎಡ ಬಾಜೂಕೆ ಡಾ.ತಮ್ಮಿನೇನಿ ಕುಳಾಯಿರಾವ್, ಎಂ.ಬಿ.ಬಿ.ಎಸ್. ಎಂ.ಡಿ. ಎಂದು ನಾಮಫಲಕ ಹಾಕಿಕೊಂಡಿರುವ ಮಹಾಶಯರಿದ್ದಾರೆ. ಅಂದ ಮೇಲೆ ಗುಡಿ ಮತ್ತು ಮಸೀದಿ ಒಟ್ಟೊಟ್ಟಿಗಿರೋದರಲ್ಲಿ ಯಾವ ಆಶ್ಚರ್ಯವಿದೆ?

ನಾನು ಹೋಗಿ ಬಾಗಿಲು ತಟ್ಟಿ “ಅಮ್ಮಾ” ಅಂದೆ. ತಮ್ಮ ಯಜಮಾನರೇ ಕೂಗಿದಂತಾಯಿತು ಎಂಬ ಸಖೇದಾಶ್ಚರ್ಯದಿಂದ ಬಾಗಿಲು ತೆರೆದ ಮಹಿಳೆ ವರಲಕ್ಷಮ್ಮನವರೇ ಆಗಿದ್ದರು. “ಏನಪ್ಪಾ ಅವ್ರೇ ಬಂದ್ರು ಅಂದ್ಕೊಂಡೆ… ನೀನು ಹಾಲಣ್ಣವ್ರ ಮಗ ವೀರಭದ್ರಪ್ಪ ಅಲ್ವೇ” ಎಂದು ನಖಶಿಖಾಂತ ನೋಡಿದರು. ನಾನು ನಿರೀಕ್ಷಿಸಿದ್ದಂಕ್ಕಿಂತ ಕ್ಷೀಣಿಸಿ ಹೋಗಿದ್ದರು. ಹುಬ್ಬಿನ ಮೇಲೆ ಕೈ ಅಡ್ಡ ಹಿಡಿದ ಹೊರತು ಅವರಿಗೆ ಯಾಗ ವಸ್ತೂ ಸ್ಪಷ್ಟವಾಗಿ ಕಾಣಿಸುತ್ತಿರಲಿಲ್ಲ. ಕೇಶವಿಹೀನಿಯಾಗಿದ್ದ ಆಕೆ ಕೆಳದರ್ಜೆ ಸೀರೆ ಉಟ್ಟು ಕಂಪಿಸುತ್ತಿದ್ದರು. ಇದ್ದಕ್ಕಿದ್ದಂತೆ ಕಂಣಲ್ಲಿ ನೀರು ತಂದುಕೊಂಡು ಅವರ್ನ ನೆನಸಿಕೊಂಡ್ರೆ ಎದೆನೇ ಹೊಡ್ದೋಗ್ತದಪ್ಪಾ… “ನಮ್ಮನ್ನೆಲ್ಲ ಈ ಸ್ಥಿತಿಗೆ ತಂದಿಟ್ಟು ಬಿಟ್ರಲ್ಲ ಆ ನಿಮ್ಮ ಗೆಳೆಯರು”. ಎಂದು ಒಂದೇ ಸಮನೆ ಅಳತೊಡಗಿದರು. “ಆಗಿದ್ನೆಲ್ಲ ಮರ್‍ತು ಧೈರ್ಯದಿಂದ ಇರಬೆಕಮ್ಮಾ… ಹೋದೋನು ಮತ್ತೆ ಬರ್ತಾನೆಯೇ” ಎಂದು ಮುಂತಾಗಿ ಸಮಾಧಾನದ ಮಾತುಗಳನ್ನು ಹೇಳಿದೆ.

ಅಷ್ಟರಲ್ಲಿ ಒಳಗಡೆಯಿಂದ ಬಂದ ಮಹಿಳೆ ಶ್ರೀವಲ್ಲಭಾಚಾರ್ಯರ ಹೆಂಡತಿ ರುಕ್ಮಿಣಿಯಾಗಿದ್ದರು. ಬೆಂಗಳೂರಿನ ನಿವೃತ್ತ ತಹಶೀಲ್ದಾರ ಹಯವದನರಾಯರ ಮಗಳಾದ ಆಕೆಯನ್ನು ಗುರಿತಿಸುವುದು ಕಷ್ಟವಾಗಲಿಲ್ಲ. ಪಿಂಚಣಿ ಇತ್ಯಾದಿ ವಗೈರೆಗಳಿಗೆ ಅಂತ ಕಾರಟಿಯ ಶಾನುಭೋಗರು ಬೆಂಗಳೂರಿಗೆ ಹೋಗಿದ್ದಾಗ ಏಜಿ ಆಫೀಸಿನ ಅದೇ ಮಹಡಿಯಲ್ಲಿ ಹಯವದನರಾಯರು ಪರಿಚಯ ಮಾಡಿಕೊಂಡರಂತೆ. ಅದೇ ಪರಿಚಯವೇ ಅವರ ಮಗ ಶ್ರೀ ವಲ್ಲಭಗೆ ರುಕ್ಮಿಣಿಯನ್ನು ಧಾರೆ ಎರೆದುಕೊಡುವುದರಲ್ಲಿ ಪರ್ಯವಸಾನ ಗೊಂಡಿತ್ತು. ಆಕೆಯೂ ನನ್ನನ್ನು ಗುರುತಿಸಿದಳೆಂದು ಕಾಣುತ್ತದೆ… ಕೂತ್ಕೊಳ್ರಣ್ಣ… ಇನ್ನೇನು ಅವ್ರೂ ಬಂದೇ ಬಿಡ್ತಾರೆ… ಇವ್ರು ಎಷ್ಟು ಹೇಳಿದ್ರು ಕೇಳೋದಿಲ್ಲ… ಒಮ್ಮೊಮ್ಮೆ ಹೊತ್ತು ಗೊತ್ತಿಲ್ದೆ ಅಳ್ತಾನೇ ಇರ್ತಾರೆ… ಕೂತಿರಿ… ಒಳಗಡೆ ಹೋಗಿ ಕಾಫಿ ತಗೊಂಡು ಬರ್ತೀನಿ” ಎಂದು ರುಕ್ಮಿಣಿ ಒಳಗಡೆ ಹೋದರು.

ನಾನು ತುಂಬ ಅಂಜಿಕೆಯಿಂದ ವರಲಕ್ಷಮ್ಮನವರ ಕಡೆ ನೋಡುತ್ತಿದ್ದೆ.

ಏನಂತ ಮಾತುಗಳನ್ನು ಆರಂಭಿಸುವುದು! ಶಾಮಂಣನ ಬಗ್ಗೆ ಕಾದಂಬರಿಯನ್ನು ಬರೀತಾ ಇದ್ದೀನಿ. ಆತ ಬರೆದಿಟ್ಟಿರೋ ಡೈರಿ ಇದ್ದರೆ ಕೊಡಿ ಅಂತ ಯಾವ ಬಾಯಿಂದ ಕೇಳಲಿ! ಒಂದು ರೀತಿಯ ಸಂದಿಗ್ಧತೆ ಕಾಡತೊಡಗಿತು. ಆಕೆ ತಾನೇ ನನ್ನ ಬಗ್ಗೆ ಮದುವೆ, ಮಕ್ಕಳು ಇತ್ಯಾದಿ ವಿವರ ಕೇಳಿದರು. ಹೇಳಿದೆ. ಈ ದೌರ್ಭಾಗ್ಯೆ ಅತ್ತಿಗೆ ಇರೋ ವಿಷ್ಯ ಗೊತ್ತಿಲ್ವೇನಪ್ಪಾ.. ನಿನ್ಗೆ? ಕರೆದಿದ್ರೆ ನಾನೂ ಬಂದು ಅಕ್ಷತೆ ಹಾಕ್ತಿರ್‍ಲಿಲ್ವೇ.. ಒಂದು ರೀತಿ ಕರೆಯದೆ ಇದ್ದದ್ದೇ ಒಳ್ಳೆಯದಾಯ್ತು ಬಿಡು. ನನ್ನಿಂದ ತವರು ಮನೇನೂ ಸುಖವಾಗಿರ್ಲಿಲ್ಲ… ಗಂಡನ ಮನೇನೂ ಸುಖವಾಗಿರ್ಲಿಲ್ಲ… ನನ್ನ ಕಾಲ ಗುಣಾನೆ ಅಂಥಾದ್ದು… ಮುಂದೆಂದಾದ್ರು ಒಂದಿನ ನಿನ್ನ ಹೆಂಡತಿ ಮಕ್ಕಳನ್ನು ಕರ್ಕೊಂಡು ಬಾರಪ್ಪ…” ಎಂದು ಹೇಳಿ ಅಂತಃಕರಣ ಕಲಕಿದರು. “ಆಗ್ಲಮ್ಮ ಖಂಡಿತ ಕರ್ಕೊಂಡು ಬರ್ತೀನಿ…” ಎಂದು ಭರವಸೆಯ ಮಾತುಗಳನ್ನಾಡಿ “ಎಲ್ಲಮ್ಮ ಮಕ್ಳು ಕಾಣ್ತಿಲ್ವಲ್ಲ… ಸ್ಕೂಲಿಗೆ ಹೋಗಿದಾರಾ” ಎಂದು ಕೇಳಿದೆ… ಅಷ್ಟರಲ್ಲಿ ಬಂದ ಹುಡುಗರಿಬ್ಬರು ಥೇಟ್ ಶಾಮಂಣನ ಥರವೇ ಇದ್ದರು… “ನಿಮ್ಮ ತಂದೆಯವರ ಸ್ನೇಹಿತರು ಬಂದಿದ್ದಾರೆ ಕಣ್ರೋ…” ಎಂದು ವರಲಕ್ಷಮ್ಮ ಮಕ್ಕಳಿಗೆ ನನ್ನ ಪರಿಚಯ ಮಾಡಿಕೊಟ್ಟರು. “ಹಲೋ ಅಂಕಲ್, ಹಲೋ ಅಂಕಲ್” ಎಂದವರಿಬ್ಬರು ನನಗೆ ವಿಶ್ ಮಾಡಿದರು. “ಇವ್ನೇ ದೊಡ್ಡಮಗ ಶಿವರಾಮಶಾಸ್ತ್ರೀ ಅವ್ನೇ ಎರಡ್ನೇ ಮಗ ಅಶ್ವತ್ಥ ನಾರಾಯಣ ” ಎಂದು ಹೇಳಿದರು. ನಾನು ಅವರಿಬ್ಬರನ್ನು ಬಾಚಿ ತಬ್ಬಿಕೊಂಡೆ. ಇಂಗ್ಲೀಷ್ ಮೀಡಿಯಂನಲ್ಲಿ ಒಬ್ಬ ಟೆಂಥು ಇನ್ನೊಬ್ಬ ಯೆಯ್ತು ಓದುತ್ತಿರುವ ವಿಷಯ ತಿಳಿದು ಸಂತೋಷವಾಯಿತು. ಅವರು ಪರಮೇಶ್ವರ ಶಾಸ್ತ್ರಿಗಳ ಮರಿಮಕ್ಕಳು ಎಂದು ನಂಬುವುದೇ ಕಷ್ಟವಾಯಿತು. ಅವರು ಅಷ್ಟು ಆಧುನಿಕವಾಗಿದ್ದರು. ಅಷ್ಟರಲ್ಲಿ ರುಕ್ಮಿಣಿಯವರ ಹೆಣ್ಣು ಮಕ್ಕಳಾದ ಸೌಂದರ್ಯ, ನಿವೇದಿತಾ ಎಂಬ ಹೆಸರಿನ ಹುಡುಗಿಯರು ಬಂದರು. ಅವರು ಕ್ರಮವಾಗಿ ಇಂಗ್ಲೀಷ್ ಮಾಧ್ಯಮದ ಶಾಲೆಯೊಂದರಲ್ಲಿ ಐದು ಮತ್ತು ಮೂರನೆ ತರಗತಿಯಲ್ಲಿ ಓದುತ್ತಿದ್ದರು. ಹೆಂಣು ಮಕ್ಕಳಿಬ್ಬರು ಸುಂದರವಾಗಿಯೂ ಮುದ್ದಾಗಿಯೂ ಇದ್ದರು. ಸೌಂದರ್ಯ ಎಂಬ ಹುಡುಗಿಯನ್ನು ಶಿವರಾಮಶಾಸ್ತ್ರಿಗೂ, ನಿವೇದಿತಾ ಎಂಬ ಹುಡುಗಿಯನ್ನು ಅಶ್ವತ್ಥ್ ನಾರಾಯಣನಿಗೂ ತಂದುಕೊಳ್ಳುವುದೆಂದು ಗುಟ್ಟಾಗಿ ಒಪ್ಪಂದವೇರ್ಪಟ್ಟಿರುವುದಂತೆ. ನಾನು ತಂದಿದ್ದ ಸಿಹಿ ತಿಂಡಿಗಳ ಮತ್ತು ಹೂವಿನ ಪೊಟ್ಟನವನ್ನು ಆ ಮಕ್ಕಳು ಕೃತಜ್ಞತಾ ಪೂರ್ವಕ ಸ್ವೀಕರಿಸಿ ಒಳಗಡೆ ತೆಗೆದುಕೊಂಡು ಹೋದವು.

“ಈ ಮಕ್ಕಳಿಗಾಗಿ ಜೀವ ಹಿಡಿದುಕೊಂಡಿದ್ದೀನಪ್ಪಾ… ಹೆತ್ತ ತಪ್ಪಿಗೆ ಅವರಿಗೊಂದು ನೆಲೆ ಕಲ್ಪಿಸಬೇಕಲ್ಲ! ಮುಂದೆ ಅವ್ರು ಹೆತ್ತೋರ್ನ ಬಯ್ಕೋಬಾರ್ದು ನೋಡು” ಎಂದು ವರಲಕ್ಷಮ್ಮ ನಿಟ್ಟುಸಿರು ಬಿಟ್ಟರು.

ಅಷ್ಟರಲ್ಲಿ ಹೊರಗಡೆ ಸ್ಕೂಟರ್ ಬಂದು ನಿಂತ ಸದ್ದಾಯಿತು. ವರಲಕ್ಶ್ಮಿ “ತಮ್ಮಾ ಶ್ರೀವಲ್ಲಭ… ನಾನು ಹೇಳ್ತಿದ್ನೆಲ್ಲಾ… ಅವ್ರ ಸ್ನೇಹಿತರೊಬ್ಬರಿದ್ದಾರೆ… ಕಥೆ ಬರೀತಾರೆ ಅಂರ… ಅವ್ರೇ ಇವ್ರು ನೋಡು” ಎಂದು ತಮ್ಮ ಚಿಕ್ಕಪ್ಪನ ಮಗ ಶ್ರೀವಲ್ಲಭರಿಗೆ ನನ್ನ ಪರಿಚಯ ಮಾಡಿಕೊಟ್ಟರು. ನನ್ನ ಕೆಲ ಕಥೆಗಳನ್ನು ಓದಿದ್ದ ಅವರು ಬಹು ಪ್ರೀತಿಯಿಮ್ದ ನನ್ನ ಕೈಕುಲಿಕಿದರು. ಹಳೆ ಪರಿಚಯವಿರುವವರಂತೆ ಮಾತನಾಡಿಸಿದರು. ಶುಭ್ರ ಆಧುನಿಕ ವಾತಾವರಣ ಜೀಕುತ್ತಿದ್ದ ಮನೆಯೊಳಗೆ ಮೂಲೆಯಲ್ಲೆಲ್ಲೊ ಬಿಥೊವನ್ ವಯಲಿನ್ ನುಡಿಸುತ್ತಿದ್ದ, ಮಮ್ಮಿ ಡ್ಯಾಡಿ ಎಂಬ ಶಬ್ದಗಳು ಪಲ್ಲವಿಸುತ್ತಿದ್ದವು. ಶಾಮಂಣನ ಮಕ್ಕಳು ಪಾಶ್ಚಿಮಾತ್ಯ ಜೀವನ ಶೈಲಿ ರೂಡಿಸಿಕೊಳ್ಳುತ್ತಿರುವುದು ಕಂಡು ನಾನು ಆನಂದಪರವಶನಾದೆ. ಬಾತ್ರೂಮ್, ಡೈನಿಂಗ್ ಹಾಲು, ಕಿಚನ್ ಡ್ರಾಯಿಂಗ್ ರೂಂನಲ್ಲಿ ಹೆರಾಲ್ಡ್ ರಾಬಿನ್ಸ್, ಅಗಾಥ ಕ್ರಿಸ್ತಿ, ಬರ್ಬರಾ ಕಾರ್ಟ್‌ಲ್ಯಾಂಡು, ಜೇಮ್ಸ್ ಹ್ಯಾಡ್ಲಿಮುಂತಾದವರೇ ತುಂಬಿಕೊಂಡಿರುವ ಕಪಾಟು. ಮುಖ್ಯ ತಲೆಬಾಗಿಲ ಮೇಲೆ ಶ್ರೀಮದ್ವೆಂಕಟೇಶ್ವರರ ಫೋಟೋ ಬಿಟ್ಟರೆ ಮತ್ತೊಂದು ದೇವರ ಫೋಟೋ ಕಾಣಿಸುತ್ತಿರಲಿಲ್ಲ. ಊಟ ಮಾಡುವ ಮುನ್ನ “ಅಮ್ಮಾ ನಿಮ್ದು ಊಟ ಆಯ್ತೆ” ಎಂದು ಕೇಳಿದೆ. “ಇವತ್ತು ನಾನು ಒಪ್ಪತ್ತು ಕಣಪ್ಪಾ” ಎಂದು ವರಲಕ್ಶಮ್ಮ ಬತ್ತಿ ಹೊಸೆಯುವುದರಲ್ಲಿ ನಗ್ನರಾದರು. ಅದಕ್ಕೆ ಪ್ರತಿಯಾಗಿ ರುಕ್ಮಿಣಿಯವರು, ಅಣ್ಣಾನೀವು ಬನ್ನಿ… ಅವರು ಆದಿತ್ಯವಾರವೊಂದೆ ಎರಡು ಹೊತ್ತು ಊಟ ಮಾಡೋದು… ಉಳಿದ ದಿನಗಳಲ್ಲಿ ಒಂದೊಂದು ದೇವರ ಹೆಸರು ಹೇಳ್ಕೊಂಡು ಊಟ ಬಿಡ್ತಾನೆ ಇರ್ತಾರೆ… ತಾಯಿ ಆದೋರು ಮಕ್ಕಳಿಗಾದ್ರು ಸುಖವಾಗಿರೋದು ಬೇಡ್ವೆ?…” ಎಂದು ನನ್ನನ್ನು ಕರೆದರು. ಅಪ್ಪಟ್ ಬೆಂಗಳೂರು ಶೈಲಿಯಲ್ಲಿ ಊಟ ಬಡಿಸಿದರು. ಊಟ ತುಂಬ ರುಚಿಯಾಗಿದ್ದರೂ ನನಗ್ಯಾಕೋ ಸೇರಲಿಲ್ಲ. ಶಾಮಂಣನ ಶಾಶ್ವತ ಅಗಲಿಕೆಯ ನಂತರ ವರಲಕ್ಷಮ್ಮ ದೇಹವನ್ನು ದೇವರು ದಿಂಡರುಗಳ ಹೆಸರಿನಲ್ಲಿ ದಂಡಿಸಿಕೊಳ್ಳುತ್ತಿರುವುದಕ್ಕೆ ಏನಾದರು ಅರ್ಥವಿದೆಯೇ? ಆಕೆಯ ವಯಸ್ಸು ಮೂವತ್ತೈದರ ಆಜುಬಾಜಿರಬಹುದು ಅಷ್ಟೆ? ಈ ವಯಸ್ಸಿಗೆ ಐವತ್ತಾಗಿರುವಂತೆ ಕಾಣಿಸುತ್ತಿರುವುದು ಸಂಪ್ರದಾಯದ ಬಹು ದೊಡ್ಡ ವ್ಯಂಗವೇ ಆಗಿದೆ. ಶ್ರೀ ವಲ್ಲಭ ದಂಪತಿಗಳು ಅದನ್ನು ನೀಡಿಸಿಕೊಳ್ಳಿ, ಇದನ್ನು ನೀಡಿಸಿಕೊಳ್ಳಿ ಎಂದು ಬಲವಂತಿಸಿದರೂ ಊಟದ ಶಾಸ್ತ್ರ ಮುಗಿಸಿ ಕೈ ತೊಳೆದುಕೊಂಡಿದ್ದೆ. ಇದರಿಂದ ಮುಖ್ಯವಾಗಿ ರುಕ್ಮಿಣಿಯವರಿಗೆ ಬೇಸರವಾಯಿತು. ಅಂದಿನ ಮದುವೆ ಮುರಿದು ಬಿದ್ದು ಶಾಮಂಣ ರುಕ್ಮಿಣಿಯವರ ಕೈ ಹಿಡಿದಿದ್ದರೆ ತುಂಬು ಜೀವನ ನಡೆಸುತ್ತಿದ್ದನೇನೋ ಎಂದುಕೊಂಡೆ.

ಹೊರಗಡೆ ಹಾಲ್‌ನಲ್ಲಿ ಕುಳಿತಾಗ ತುಟಿ ಜಾರಿ “ಅಲುಮೇಲಮ್ಮನವ್ರು ಈಗೆಲ್ಲಿದ್ದಾರಮ್ಮಾ” ಎಂದು ಅಕಸ್ಮಾತ್ ಕೇಳಿ ಹಿರಿದಾದ ದುಃಖದ ಸನ್ನಿವೇಶವನ್ನು ಎದುರು ಹಾಕಿಕೊಂಡೆ. ವರಲಕ್ಶಮ್ಮನವರು ಒಮ್ಮೆಗೆ ಹೋ ಎಂದು ಅಳುತ್ತ; ತನ್ನ ಅಳುವಿನಿಂದ ತಮಗೆ ಆಶ್ರಯ ಕೊಟ್ಟಿರುವ ಮನೆಯ ಆಧುನಿಕ ವಾತಾವರಣಕ್ಕೆ ಎಲ್ಲಿ ಧಕ್ಕೆ ಬರುವುದೋ ಎಂಬ ಆತಂಕದಿಂದ ಬಾಯಿಗೆ ಅಡ್ಡ ಸೆರಗು ಇಟ್ಟುಕೊಂಡು ದುಃಖದ ಪ್ರವಾಹಕ್ಕೆ ಅಣೆಕಟ್ಟು ಕಟ್ಟಿದರು. ಶ್ರೀವಲ್ಲ್ಭ ದಂಪತಿಗಳ ಸ್ವಾಂತನದ ಮಾತುಗಳಿಂದ ಅವರು ಇನ್ನಷ್ಟು ಗೊಂದಲಕ್ಕೀಡಾಗಿ ಎದ್ದು ಒಳಗಡೆ ಇದ್ದ ದೇವರ ಕೋಣೆಗೆ ಹೋದರು. ಶ್ರೀವಲ್ಲಭ ನಿಟ್ಟುಸಿರು ಬಿಟ್ಟು ಎಲ್ಲಾ ಹೇಳಿದರು.
ಮನೆ ಮಾರಿ ಬಂದ ಹಣವನ್ನು ಇಟ್ಟುಕೊಂಡ ನಂತರ ಅಲುಮೇಲಮ್ಮಜ್ಜಿ ಪ್ರತಿಯೊಬ್ಬರನ್ನು ಸಂಶಯದಿಂದ ನೋಡಲಾರಂಭಿಸಿತು. ತನ್ನಲ್ಲಿರುವ ಇಡಿಗಂಟಿಗಾಗಿ ಎಲ್ಲರು ನನ್ನನ್ನು ಪ್ರೀತಿಸುತ್ತಿದ್ದಾರೆ; ತನ್ನಲ್ಲಿರುವ ಹಣ ಅಪಹರಿಸಿ ಬೀದಿಗೆ ತಳ್ಳುತ್ತಾರೆ ಎಂಬಂಥ ಸಂಶಯಗಳಿಗೆ ಈ ಪ್ರಪಂಚದಲ್ಲಿ ಮದ್ದು ಸಿಕ್ಕುವುದಾದರೂ ಎಲ್ಲಿ?… ಆರ್ಥಿಕ ಸಂಪನ್ಮೂಲಗಳಿಂದ ವಂಚಿತಗೊಂಡು ನಲುಗಿ ಹೋದ ಯಾರಿಗಾದರೂ ಇಡಿ ಮೊತ್ತ ದೊರಕಿದಾಗ ಈ ರೀತಿ ವರ್ತಿಸುವುದು ಸಹಜವೇ. ಆದರೆ ಹಣ ಅಲುಮೇಲಮ್ಮಜ್ಜಿಯನ್ನು ಸಂಪೂರ್ಣ ನಿಯಂತ್ರಿಸತೊಡಗಿತು. ಒಂದೊಂದು ರೂಪಾಯಿಗೆ ಜೀವ ಬಂದು ಅವರಿವರ ಮೇಲೆ ಚಾಡಿ ಹೇಳತೊಡಗಿತು. ಅದರಿಂದಾಗಿ ಆಕೆ ಠಿಕಾಣಿಯನ್ನು ಒಂದು ಕಡೆಯಿಂದ ಇನ್ನೊಂದು ಕಡೆ ನಿರಂತರವಾಗಿ ಬದಲಾಯಿಸತೊಡಗಿದರು. ಕೊನೆಗೆ ನನ್ನವರು ತನ್ನವರೆಂಬುವವರಿವ ನೆಲವೇ ಪಿಶಾಚಿ ರೂಪ ಧರಿಸಿ ತನ್ನನ್ನೂ, ತನ್ನಲ್ಲಿರುವ ಹಣವನ್ನೂ ನುಂಗಿ ನೀರು ಕುಡಿಯಲು ಹೊಂಚುಹಾಕಿದೆ ಎಂದು ಭಾವಿಸಲಾದ ಆಕೆ ಇದ್ದಕ್ಕಿಂದ್ದಂತೆ ನಾನು ನಾಳೆ ಬೆಳೆಗ್ಗೆ ಉತ್ತರ ಭಾರತದ ಯಾತ್ರೆಗೆ ಹೊರಟು, ಕೃಷ್ಣ, ಗೋದಾವರಿ, ನರ್ಮದ, ಗಂಗೆ, ಯಮುನ, ಸರಸ್ವತಿಯೇ ಮೊದಲಾದ ಪವಿತ್ರ ನದಿಗಳಲ್ಲಿ ಸ್ನಾನ ಮಾಡಿ ಮೂರು ತಿಂಗಳ ನಂತರ ವಾಪಸು ಬರುತ್ತೇನೆ ಎಂದು ಘೋಷಿಸಿಬಿಟ್ಟಳಂತೆ. ವಿಷ ಬೆರೆಸಿರಬಹುದೆಂಬ ಕಾರಣದಿಂದ ರುಕ್ಮಿಣಿ ಮಾಡಿಕೊಟ್ಟ ತಿಂಡಿಗಳನ್ನೂ ತೆಗೆದುಕೊಳ್ಳದೆ ಹೊರಟುಹೋದಳು. ಹಾಗೆಯೇ ಹೊರಟೇ ಹೋಗಿಬಿಟ್ಟಳು. ಇಷ್ಟು ವರ್ಷಗಳಾದರೂ ಆಕೆ ಮರಳಿ ಬಾರಲೇ ಇಲ್ಲ… ತಮ್ಮತ್ತೆಯವರು ಇಂದು ಬರಬಹುದು ನಾಳೆ ಬರಬಹುದೆಂದು ಪ್ರತಿನಿತ್ಯ ಬೀದಿಯ ಎರಡೂ ಬದಿಗೆ ನೋಡುತ್ತಲೆ ಇದ್ದಾರೆ… ಉತ್ತರ ಭಾರತದ ಯಾವುದಾದರೊಂದು ಪವಿತ್ರ ನದಿ ಆಕೆಯನ್ನು ಬಿಟ್ಟುಕೊಟ್ಟಿರಲಿಕ್ಕಿಲ್ಲವೆಂದು ಊಹಿಸುವುದೂ ಕ್ರೌರ್ಯವೇ! ಕಾಶಿಯ ಯಾವುದಾದರೊಂದು ಸ್ನಾನದ ಘಟ್ಟದ ಮೇಲೆ ತಮ್ಮತ್ತೆಯವರು ಜಪಮಣಿ ಏಣಿಸುತ್ತ ಜೀವಹಿಡಿದಿರಬಹುದೆಂಬ ವರಲಕ್ಷಮ್ಮನವರ ಕಲ್ಪನೆ ಕೇವಲ ಕಲ್ಪನೆಯಾಗಿ ಉಳಿದುಕೊಂಡಿದೆ.

ನಾನು ಶೀವಲ್ಲಭರನ್ನು ಏಕಾಂತದಲ್ಲಿ ಸಂಧಿಸಿ ನಾನು ಬಂದಿರುವ ಉದ್ದೇಶ ಹೇಳಿದೆ. ಅದೂ ಸಂಚೋಚ ಮತ್ತು ಹಿಂಜರಿಕೆಯಿಂದ. ವಿದ್ಯಾವಂತರೂ; ಆಧುನಿಕ ಮನೋಭಾವದವರಾದ ಅವರೂ ಅನ್ಯ್ಥಾ ಭಾವಿಸಲಿಲ್ಲ. ಯಙ್ಜಕ್ಕೆ ಸಮಿತ್ತು ಹವಿಸ್ಸುಗಳನ್ನು ಜೋಡಿಸುವುದರಿಂದ ಯಾವ ಪ್ರಕಾರವಾಗಿ ಪುಣ್ಯ ಲಭಿಸುವುದೋ ಹಾಗೆಯೇ ಕಾದಂಬರಿಯ ನಿರ್ಮಾಣಕ್ಕೆ ಪರಿಕರಗಳನ್ನು ಒದಗಿಸುವುದರಿಂದ ಅದಕ್ಕಿಂತ ಮಿಗಿಲಾದ ಸಾರ್ಥಕ ಭಾವ ಸಿದ್ಧಿಯಾಗುವುದೆಂಬುದಾಗಿ ಬಗೆದ ಆ ಪುಣ್ಯ ದಂಪತಿಗಳು- ಒಳಗಡೆ ಹೋಗಿ ಒಂದಿಷ್ಟು ಹಾಳೆಗಳಿದ್ದ ಗಂಟನ್ನು ತಂದು ಗುಟ್ಟಾಗಿ ಕೊಟ್ಟರು… ನಾನು ಜೋಪಾನವಾ‌ಇ ಅದನ್ನು ಬ್ರೀಫ್ ಕೇಸಿಗೆ ಸೇರಿಸಿದೆನು.

ಶೀವಲ್ಲಭರಿಂದ ಅನಸೂಯಮ್ಮನವರ ಬಗೆಗೂ ಒಂದಿಷ್ಟು ಮಾಹಿತಿ ದೊರಕಿತು. ಡೈರಿ ಮತ್ತಿತರ ವಿವರಗಳು ಆಕೆಯಲ್ಲಿ ದೊರಕಬಹುದೆಂದು ಪಿಸುಗುಟ್ಟಿದರು. ಆಕೆಯೂ ಹಿಂದೆ ಒಂದೆರಡು ಬಾರಿ ಶಾಮಂಣನ ಮಕ್ಕಳನ್ನು ನೋಡಲು ಮತ್ತು ವರಲಕ್ಷ್ಮಮ್ಮನವರ ಆರೋಗ್ಯ ವಿಚಾರಿಸಲು ಅನಂತಪುರಕ್ಕೆ ಬಂದಿದುದುಂಟಂತೆ. ದುಡ್ಡು ಬಟ್ಟೆಬರೆ ಮುಂತಾದ ವಸ್ತುಗಳನ್ನು ಮಕ್ಕಳಿಗೆ ಕೊಡಲು ಪ್ರಯತ್ನಿಸಿದುದುಂಟಂತೆ… ಒಮ್ಮೊಮ್ಮೆ ಬಂದಾಗಲೂ ವರಲಕ್ಸ್ಮಮ್ಮನವರು ‘ಎಲೈ ಕತ್ತೆ ಲವುಡೀ’ ಎಂಸು ಸುಂಟರಗಾಳಿ, ಬಿರುಗಾಳಿಗಳನ್ನು ಸೃಷ್ಟಿಸಿ ಆಕೆಯನ್ನು ಮತ್ತೊಮ್ಮೆ ಬಾರದ ಹಾಗೆ ಮಾಡುವುದರಲ್ಲಿ ಯಶಸ್ವಿಯಾದರಂತೆ. ಆದರೆ ಕರುಳನ್ನು ತಡೆಯುವ ಶಕ್ತಿ ಯಾವ ಬಿರುಗಾಳಿಗೆ ತಾನೆ ಉಂಟು! ಪ್ರತ್ಯೇಕವಾಗಿ ಶ್ರೀವಲ್ಲಭರನ್ನು ಕಂಡು, “ನೋಡ್ರಿ ಸ್ವಾಮಿ… ಹೊಟ್ಟೇಲಿ ಹುಟ್ದೋವೆ ಮಕ್ಳೇನು… ವರಲಚುಮವ್ವನ ಮಕ್ಳು ನನ್ ಮಕ್ಳೂ ಅಲ್ವೇನು?… ಆತನ್ ಮಕ್ಳು ಬೇಷಿ ಓದ್ಕೊಂಡು ಮುಂದೆ ದೊಡ್ಡಾಫೀಸರಗಳಾಗಬೇಕು… ಓದಿಗೆ ಪಾದಿಗೆ ರೊಕ್ಕ ಬೇಕಾದ್ರೆ ಬರೀತಿರ್ರಿ… ಕಳಿಸ್ತಿರ್‍ತೀನಿ! ಎಂದು ಹೇಳಿದಲಂತೆ. “ಅಂಥ ಸಂದರ್ಭಬಂದಾಗ ಬರೆಯುವೆವಮ್ಮಾ” ಎಂದು ಶ್ರೀವಲ್ಲಭ ಹೇಳಿದರಂತೆ. ಆಕೆ ಕಾನ್ವೆಂಟು ಸ್ಕೂಲಿಗೆ ಹೋಗಿ ಶಾಮಂಣನ ಮಕ್ಕಳಿಬ್ಬರನ್ನು ಎತ್ತಿ ಮುದ್ದಾಡಿ ಹೋಗಿರುವುದುಂಟಂತೆ. ಈಗ ದೊಡ್ಡವರಾಗಿದ್ದಾರೆ… ಒಳ್ಳೆಯದು ಕೆಟ್ಟದ್ದು ಅರ್ಥ ಮಾಡಿಕೊಳ್ಳೋ ವಯಸ್ಸಿಗೆ ಬಂದಿರುವ ಅವರ ಸನಿಹಕ್ಕೆ ಹೋಗುವುದು ಅನಸೂಯಮ್ಮನಂಥವರಿಗೆ ಸಾಧ್ಯವಾದೀತೆ? ಆಕೆಯೂ ಇತ್ತೀಚೆಗೆ ಬಂದುದಿಲ್ಲ. ಅಕೆಯ ಬಗೆಗೂ ಮಕ್ಕಳಿಗೆ ಗೌರವ ಹುಟ್ಟಿಸುವಂಥ ಮಾತುಗಳನ್ನಾಡಲು ಪ್ರಯತ್ನಿಸುತ್ತಿರುವ ಶ್ರೀವಲ್ಲಭ ಮನುಷ್ಯ ಸಂಬಂಧ ಎಷ್ಟು ವಿಚಿತ್ರ ಅಂತ ನಿಟ್ಟುಸಿರುಬಿಟ್ಟರು ಅವರೆಲ್ಲರಿಂದ ಬೀಳ್ಕೊಂಡುನಾನು ಶೇಷಾಶಾಸ್ತ್ರಿಗಳ ಮನೆ ತಲುಪಿದೆ.ಬೊಮ್ಮಲಾಟಪಲ್ಲಿ ಬಳಿ ದೊರಕಿರುವ ಶಿಲಾ ಶಾಸನದ ವಿಶ್ಲೇಷಣೆಗೆ ತೊಡಗಿದ್ದ ಶಾಸ್ತ್ರಿಗಳು ಬಾರಪ್ಪಾ… ಬಾ… ಕೃಷ್ಣದೇವರಾಯ ಬೊಮ್ಮಲಾಟಪಲ್ಲಿಯನ್ನೇ ನಾಗಯ್ಯನಿಗೆ ಉಂಬಳಿಯಾಗಿ ಬಿಟ್ಕೊಟ್ಟಿದ್ದಾನೆ ನೋಡೊ… ಒಂದು ವಿಚಿತ್ರ ಅಂದರೆ ಇದು ಹಳೆಗನ್ನಡದಲ್ಲಿದೆ. ಹೆಚ್ಚು ಕಡಿಮೆ ವಿರೂಪಾಕ್ಷ ಪಂಡಿತನ ಕಾವ್ಯ ಭಾಷೆಯನ್ನೇ ಹೊಲ್ತಿದೆ… ಆ ವಿರೂಪಾಕ್ಷನೇ ಈ ಶಾಸನದ ಕವಿ ಆಗಿರಬಾರದೇಕೆ… ಅಥವ ಅವನ ಶಿಷ್ಯರ ಪೈಕಿ ಯಾರಾದರೊಬ್ಬರು…” ಎಂದು ಮಾತಿಗೆಳೆದರು. ಬಾಯಿ ತುಂಬಿದ ತಾಂಬೂಲದ ರಸವನ್ನು ಪಿಚಕ್ಕನೆ ಉಗುಳಿ ಬಂದರು. ಜಾನಪದ ಕಲೆಗಳಿಗೆ ನನ್ಗೂ ಹೆಸ್ರು ಬರ್ತದೆ… ನಿಮ್ಮ ಹಂಪಿಲಿರೋ ಕನ್ನಡ ಯೂನಿವರ್ಸಿಟಿ ಹೊರನಾಡಿನಲ್ಲಿ ಹಂಚಿಹೋಗಿರುವ ಕನ್ನಡ ವಿವರಗಳನ್ನು ಯಾಕೆ ಸಂಗ್ರಹಿಸೋ, ಸ್ಟಡಿ ಮಾಡೋ ಕೆಲಸ ಮಾಡ್ತಿಲ್ವಲ್ಲಯ್ಯಾ?… ಎಂದು ಉತ್ಸಾಹದಿಂದ ಶುರು ಮಾಡಿದರು. ಕನ್ನಡ ವಿಶ್ವವಿದ್ಯಾಲಯದಲ್ಲಿ ನಿರರ್ಥಕವಾಗಿ ಆರು ತಿಂಗಳು ಇದ್ದು ಬಂದ ಕಷ್ಟ ಗೊತ್ತಿರೋ ನಾನು ನಿಟ್ಟಿಸಿರುಬಿಟ್ಟು ಗಂಟು ಬಿಚ್ಚಿ ಕಾಗದ ಪತ್ರಗಳನ್ನು ನೆಲದ ಮೇಲೆ ಹರಡಿದೆ, “ಕಾದಂಬರಿಗೆ ವಸ್ತು ಸಿಕ್ಕಂತಿದೆಯಲ್ಲ” ಎಂದು ಹತ್ತಿರ ಬಂದು ಶಾಸ್ತ್ರಿಗಳು “ನಾನು ಬೇಕೆಂದೇ ಮನೆ ಹುಡುಕಿಕೊಡ್ಲಿಕ್ಕೆ ಬರ್ಲಿಲ್ಲಪ್ಪ… ತಪ್ಪು ತಿಳ್ಕೋಬೇಡ… ನಮ್ಮ ಮಾಧ್ವರು, ಸ್ಮಾರ್ಥರು ವಾಸಿಸೋ ಬಡಾವಣೇಲಿ ಲೇಖಕನಾದ ನಿನಗೊಂದು ಎಕ್ಸ್‌ಪೀರಿಯನ್ಸು ಆಗ್ಲಿ ಅನ್ನೋ ಕಾರಣಕೆ ಬಲ್ಲಿಲ್ಲಪ್ಪಾ” ಎಂದು ನಕ್ಕರು. ನಿಷ್ಕಲ್ಮಷ ಮತ್ತು ಮೃದು ಹೃದಯಿಯಾದ ಅವರು ಒಂದೆರಡು ಕಾಗದ ಹಿಡಿದು, ಓದಿ “ಅರೇ! ಈ ಮನುಷ್ಯ ಒಳ್ಳೆ ಲೇಖಕ್ನಂಗೆ ಬರಿದಿದ್ದಾನಲ್ಲ ಮಾರಾಯ… ನಮ್ಮವ್ರಲ್ಲಿ ಇಷ್ಟೊಂದು ವೈನಾಗಿ ಕನ್ನಡ ಬರ್ಯೋರೆ ಕಡ್ಮೆ, ಪರಿಚಯ ಪರಿಚಯ ಮಾಡಿಕೊಡಬಾರದಾಗಿತ್ತೇ…ನೀನು” ಎಂದರು. ನಾನು ಶಾಮಂಣನ ಕಥೆಯನ್ನು ಕೇವಲ್ ಹತ್ತು ವಾಕ್ಯಗಳಲ್ಲಿ ವಿವರಿಸಿದೆ. ರಾಮಾಯಣವನ್ನು ಹಳ್ಳಿ ಮಂದಿ ಮೂರೇ ಮೂರು ಶಬ್ದಗಳಲ್ಲಿ ಹಿಡಿದಿಟ್ಟು ಹೇಳುವರಲ್ಲ ಹಾಗೆ! ಮುಖದಲ್ಲಿ ಕವಿದ ವಿಷಾದದಿಂದ ಮರುಚಣದಲ್ಲಿ ಚೇತರಿಸಿಕೊಂಡ ಶಾಸ್ತ್ರಿಗಳು ” ನಮ್ಮ ವ್ಯವಸ್ಥೇನೆ ಹಂಗಾಗಿ ಬಿಟ್ಟ್ದೆ. ಬದುಕಬೇಕೆನ್ನೋರು ಸಾಯ್ತಾರೆ, ಸಾಯ್ಬೇಕನ್ನೋರು ಬದುಕ್ತಾರೆ…” ಎಂದು ನಿಟ್ಟುಸಿರು ಬಿಟ್ಟು ತಮ್ಮ ಅನಂತಪುರದಲ್ಲಿ ಯಾರು ಯಾವ ಯಾವ ಕಾರಣಕ್ಕೆ ಮತ್ತು ವಿನಾ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡರು ಎಂಬುದರ ಬಗ್ಗೆ ಒಂದು ಪಟ್ಟಿಯನ್ನೇ ನೀಡಿದರು.

ಆದರೆ ಆ ಪಟ್ಟಿಯಲ್ಲಿರುವವರ ಯಾವ ಜಾಯಮಾನಕ್ಕೂ ನಮ್ಮ ಶಾಮಂಣ ಒಗ್ಗಲಿಲ್ಲ. ಅವನು ಅಗಾಧವಾದ ಜೀವನ ಶ್ರದ್ಧೆ ಪ್ರಕಟಿಸುತ್ತಿದ್ದ ಎಂಬುದಕ್ಕೆ ಬರೆದಿರುವ ಕಥೆಗಳೇ ಸಾಕ್ಷಿ. ಹಾಗೆಯೇ ಪರಮೇಶ್ವರ ಶಾಸ್ತ್ರಿಗಳು ಬರೆದಿಟ್ಟಿರುವ ಅಪೂರ್ಣ ವೀಲುನಾಮ ಅವನು ವೈವಿಧ್ಯಮಯವಾಗಿ ಬದುಕನ್ನು ಪ್ರಯತ್ನಿಸಿದ್ದ ಎಂಬುದರ ಮೇಲೆ ಬೆಳಕು ಚೆಲ್ಲುವಂತಿರುವುದು. ಮಾನವ ಸಹಾಯವಿರದಿದ್ದರೂ; ಎಲ್ಲರಿಗಿಂತ ಸೊಗಸಾಗಿ ಬದುಕಬಲ್ಲೆನೆಂಬ ಆತ್ಮವಿಶ್ವಾಸವನ್ನು ಅವನು ಬರೆದಿರುವ ಪ್ರತಿಯೊಂದು ಸಾಲು ಪ್ರಕಟಿಪಡಿಸುತ್ತಿರುವುದು. ಮನುಷ್ಯ ಜಗತ್ತಿನೊಂದಿಗೆ ಪ್ರಾಣಿ ಜಗತ್ತು ಮತ್ತು ಸಸ್ಯ ಜಗತ್ತನ್ನು ಲಗತ್ತಿಸಿ ನೋಡುವ ಅಪರೂಪದ ಮನುಷ್ಯನಾಗಿದ್ದ ಅವನು ಆತ್ಮಹತ್ಯೆ ಮಾಡಿಕೊಂಡನೆ? ಅಥವಾ ವ್ಯವಸ್ಥಿತವಾಗಿ ಕೊಲೆ ಮಾಡಲಾಯಿತೆ ಎಂಬುದೇ ಉಳಿದಿರುವ ಒಗಟು. ಈ ಒಗಟನ್ನು ಭೇದಿಸಲು ಕೊತ್ತಲಿಗಿಯ ಅನಸೂಯಳ ಸಹಾಯ ಬೇಕೇ ಬೇಕು? ಅದನ್ನು ಪಡೆಯುವ ಬಗೆ ಹೇಗೆ?

“ನಿನಗ್ಯಾವುದೂ ಅಸಾಧ್ಯವಲ್ಲ ಕುಂವೀ… ನೀನು ಅಂದ್ಕೊಂಡಿದ್ದನ್ನು ಸಾಧಿಸೋ ಮನುಷ್ಯ…ಎದೆಗುಂದಬೇಡ. ನುಗ್ಗು… ಮುಂದದ್ನ ಅನುಭೋಸು ಅಷ್ಟೆ” ಎಂದು ಶಾಸ್ತ್ರಿಗಳು ಧೈರ್ಯ ತುಂಬುವ ಮಾತುಗ್ಳನ್ನಾಡಿದರು. ಅಕ್ಷ ಮಂದಿ ಗೆಳೆಯರಿಗೆಲ್ಲ ಕಳಸ ಪ್ರಾಯರಾಗಿರುವ ಶೇಷಾಶಾಸ್ತ್ರಿಗಳು ನಗೆ ತೋರಿಸುವುದನ್ನು ತೋರಿಸಿ, ಉಣ್ಣುವುದನ್ನು ಉಣ್ಣಿಸಿ; ಕುಡಿಯುವುದನ್ನು ಉಣಿಸಿ; ಹಾಕುವುದನ್ನು ಹಾಕಿಸಿ ಬಸ್ ನಿಲ್ದಾಣದವರೆಗೆ ಬಂದು ಹತ್ತಬೇಕಾಗಿರುವುದನ್ನು ಹತ್ತಿಸಿ… ಟಾಟಾ ಮಾಡುತ್ತ ಬೀಳ್ಕೊಡಲು ಚಲಿಸುತ್ತಿರುವ ಬಸ್ಸೊಳಗೆ ನಾನು ಎಷ್ಟೊ ಗೆಲುವಿನಿಂದ ಪಯಣಿಸುತ್ತಿದೆನು.
*
*
*
ನನಗೇನು ಅಷ್ಟು ಪರಿಚಿತವಲ್ಲದ ಕೊತ್ತಲಗಿಯಲ್ಲಿ ಇಳಿದಾಗ ಇಳಿ ಹೊತ್ತು ಶುರುವಾಗಿತ್ತು. ಕೆಲವಿ ಹೆಜ್ಜೆ ನಡೆದು ಮೂರು ದಾರಿ ಶುರುವಾದ ವೃತ್ತದಲ್ಲಿ ನಿಂತೊಡನೆ ದುತ್ತನೆ ಕೊಟ್ಟೂರು ಎದೆಯೊಳಗೆ ಬೇತಾಳದಂತೆ ನಿಂತುಕೊಂಡಿತು. ದುಃಖ ಜೋಬದ್ರ ಹೃದಯ ಭಾಗವನ್ನು ಹಿಂಡಿ ಹಿಪ್ಪೆ ಮಾಡಿ ಮಣ್ಣು ಮುಕ್ಕಿದ ಹಾವಿನಂತೆ ಬೆಳೆದಿರುವ ಬಡಾವಣೆಗಳು, ಆ ಬಡಾವಣೆಗಳೊಳಗೆ ಸದಾ ಹಣಕ್ಕಾಗಿ ಹಪಹಪಿಸುತ್ತಿರುವ ರಕ್ತದೊತ್ತಡದ ಶೋಭಾಯಮಾನ ರೋಗಿಗಳು; ಧರ್ಮ ಪತ್ನಿಯ ಸೊಗಸಾದ ಕಂಣುಗಳಿಗೆ ಕಾಣದಂತೆ ತಿಂಡಿತೀರ್ಥ ಕುರುಕುತ್ತ ಮೆಡಿಕಲ್ ಶಾಪುಗಳಿಗೆ ಆಧಾರಸ್ಥಂಭವಾಗಿರುವ ಸಿಹಿಮೂತ್ರ ರೋಗಿಗಳು, ಪಾತಿವ್ರತದ ಮುಂಭಾರ, ಹಿಂಭಾರದಿಂದ ನಲುಗಿ ಹೋಗುತ್ತಲೇ ಕೈತೋಟಗಳ ಮುಂಗಟ್ಟೆಗಳ ಮೇಲೆ ಪರ್ಜನ್ಯ ಜಪ ಮಾಡುತ್ತಿರುವವರಂತೆ ಮಂಕಾಗಿ ಕೂತಿರುವ ತುಂಬು ಮುಖದ ಗೃಹಿಣಿಯರು, ಒಳ ಉಡುಪುಗಳ ಬಗ್ಗೆ ಮುತುವರ್ಜಿ ವಹಿಸುವುದರ ಜೊತೆಗೆ ಕಣ್ಣು ಹುಬ್ಬಿನ ಅನಗತ್ಯ ಕೂದಲನ್ನು ಬುಡಸಹಿತ ಕಿತ್ತೆಸೆಯುವಂತ ಅತ್ಯಾಧುನಿಕ ಚಿಮಟಿಗೆಗಳಿಗಾಗಿ ಫ್ಯಾನ್ಸಿ ಸ್ಟೋರುಗಳಿಗೆ ದಟ್ಟಂಡಿ ದಾರುಂಡಿ ಅಲೆಯುತ್ತಿರುವ ಯುವತಿಯರು, ಕಾಂಡೂಮ್ಸ; ಹೈರ್ಡೈಕವರ್‍ಸೂ; ಹೇರ್‌ರಿಮೂವರ್ ಪಾಕೆಟ್ಸೂ; ಬ್ಲೇಡ್ಸೂ ಇಂಥಪ್ಪ ತರಾವರಿ ನಿರುಪಯುಕ್ತ ವಸ್ತುಗಳಿಂದಲೇ ತುಂಬಿಹೋಗಿರುವ ಮುನಿಸಿಪಾಲಿಟಿ ಕಸದ ಡಬ್ಬಿಗಳು, ಚಳುವಳಿಗಾರರಿಂದ ತಡೆಯಲ್ಪಟ್ಟ ಕ್ಷಣದಿಂದ ನಿಂತು ತುಕ್ಕು ಹಿಡಿದು ಹೋಗಿರುವ ರೈಲುಗಾಡಿ… ಭಾರತ ಕಾನೂನು ಸಂಹಿತೆಯ ಕಲಮುಗಳನ್ನು ನಾಲಿಗೆ ಮೇಲೆ ಬರೆದುಕೊಂಡು ಸವರ್ಣೀಯರ ಮೇಲೆ ಹೂಂಕರಿಸುತ್ತಿರುವ ಅರೆ ವಿದ್ಯಾವಂತ ದಲಿತರು, ಕುರುಕಲು ತಿಂಡಿಗಳನ್ನು ಜನಪ್ರಿಯಗೊಳಿಸುತ್ತಿರುವ ತಳ್ಳೋ ಬಂಡಿಗಳು; ಶ್ವಾನ ಸಂತಾನದ ಬಗ್ಗೆ ಕಾಳಜಿ ವಹಿಸುತ್ತಿರುವ ಕೌನ್ಸಿಲರುಗಳು; ಹಿಂಸೆ ಮತ್ತು ಲೈಂಗಿಕ ಚಟುವಟಿಕೆಗಳಿಂದಾಗಿ ನಾಡಿನುದ್ದಾಕ್ಕೂ ಹೆಸರು ಮಾಡಿರುವ… ಖಡ್ಗದಂಥ ಪತ್ರಿಕೆಗಳು (ಸಮೀಪ ದೃಷ್ಟಿ ದೋಶದಿಂದಲೂ; ಕಲ್ಲರ್ ಅಲರ್ಜಿಯಿಂದಲೂ ಬಳಲುತ್ತಿರುವ ಡಾ.ಕಮಲಾಕರನು ಕಳೆದ ವಾರ ಕಂಟೆಸ್ಸಾ ಖರೀದಿಸಿರುವವನಂತೆ ಕಣ್ರೀ!) ವಿಧ್ಯಾರ್ಥಿಗಳಿಗೆ ಹೆದರುತ್ತಿರುವ ಅವಿದ್ಯಾವಂತ ಉಪನ್ಯಾಸಕರು ಕಲಿತಂಥ ಒಂದೊಂದು ಅಕ್ಷರವನ್ನು ಒಂದೊಂದು ಆಯುಧ ಮಾಡಿಕೊಂಡು ಚಿಗುರುಮೀಸೆ ತಿರುವುತ್ತಿರುವ ವಿಧ್ಯಾರ್ಥಿಗಳು, ಗೊನೋರಿಯಾ; ಸಿಫಿಲಿಸ್ಸಿವೇ ಮೊದಲಾದ ರೋಗ ರುಜಿನಗಳು ಮಡುಗಟ್ಟಿರುವ ಮೂತ್ರಾಲಯಗಳು ಲೈಂಗಿಕ ಸಾಹಿತ್ಯದ ತುಂಡುಗಳಿಗೆ ವ್ಯಾಸಪೀಠವಾಗಿರುವ ಸಾರ್ವಜನಿಕ ಕಕ್ಕಸ್ಸುಗಳ ಗೋಡೆಗಳು, ಬೆನ್ನೆಲಬು ನಿಟಾರನೆ ನೀಡಿ ಒಂದು ಘಳಿಗೆ ಬಿಸಿಲಿಗೆ ಬಂದು ಹೋಗುವ ರಾಜಕಾರಣಿಗಳು; ಹೇಷಾರವಗಳಿಗೆ ಪ್ರೇರಣೆ ನೀಡುತ್ತಿರುವ ಸರ್ಕಾರ ಕೃಪಾಪೋಶಿತ ಸಾರಾಯಿ ಅಂಗಡಿಗಳು; ಕ್ವಾಟ್ರು ಬಾಟಲಿಯೊಳಗೆ ಚಟಾಕು ಎಣ್ಣೆ ಸುರಿಯುತ್ತಿರುವ ಮೆತ್ರಿಕ್ ಮಾಪನಗಳು, ದುಕ್ಕ ದುಮ್ಮಾನ,ಕೇಕೆ, ಕ್ಯಾಕರಿಕೆ, ಹಸಿವೆ, ಕಮರು ಡೇಗು, ಹೈಹೀಲ್ಡ್ ನಡಿಗೆ ಇವೇ ಮೊದಲಾದ ಅವಘಡಗಳಿಂದ ತುಂಬಿಹೋಗಿರುವ ಕೊಟ್ಟೂರಿಗೆ ಹೋಗದೆ ಎಷ್ಟೊಂದು ದಿನಗಳಾದುವಲ್ಲ?

ನಾನು ಕನ್ನಡ ಮತ್ತು ಸಂಸ್ಕೃತಿ ಜೊತೆಗೆ ಕ್ರೀಡಾ ಇಲಾಖೆಗಳನ್ನು ಜೊತೆಗೆ ನಿಭಾಯಿಸುತ್ತಿದ್ದಾಗ ಒಮ್ಮೆಯಾದ್ರು ಕಾಣಬಾರದಾಗಿತ್ತೇ ನೀನು… ನೀನು ನನ್ನ ಕಾಣದಿದ್ದುದು, ನನ್ನಿಂದ ನೀನು ಅಕಾಡೆಮಿ ಮೆಂಬರಾಗಲಿಕ್ಕಾದ್ರು ನನ್ನ ಕೇಳಿಕೊಳ್ಳದಿದ್ದುದು ಇವೆಲ್ಲ ನೀನು ನನಗೆ ಮಾಡಿದ ದೊಡ್ಡ ಅವಮಾನ‌ಎಂದು ತಿಳಿಯುತ್ತೇನೆ ಎಂದು ರಾಜಾರೋಷವಾಗಿಚಚ್ಚಿದ ಜಲಜಾಕ್ಷಿ ಮುಂದಿನ ತಿಂಗಳಲ್ಲಿ ಸ್ಪೀಕರಾಗಲಿದ್ದಾಳಂತೆ… ಹೆಂಣು ಮತ್ತು ಹೆಂಡದ ನಡುವೆ ಇದ್ದ ಗೆರೆಯನ್ನೇ ಅಳಿಸಿ ಹಾಕಿರುವ ರಾಜಕಾರಣಿಗಳ ಬಳಿಗೆ ಹೋಗಿ ಗೋಗರೆಯುವುದೂ ಒಂದೇ, ಆತ್ಮಹತ್ಯೆ ಮಾಡಿಕೊಳ್ಳುವುದ್ ಒಂದೇ!

ಕೊಟ್ಟೂರಿಗಿಂತ ಯಾವ ರೋಗದಲ್ಲಿ ಕೊತ್ತಲಿಗಿ ಕಡಿಮೆ ಇದೆ… ಸ್ವಭಾವ ಮತ್ತು ಜಾಯಮಾನದ ವಿಷಯದಲ್ಲಿ ಇವೆರಡೂ ಒಂದು ರೀತಿ ಅವಳಿ ಜವಳಿಗಳೇ; ಯಾರನ್ನು ಹೇಗೆ ಮಾತಾಡಿಸಬೇಕೆಂಬ ಪೌರಪ್ರಜ್ಞೆ ಕಳೆದುಕೊಡವನಂತೆ ಅಲ್ಲಿ ಕೂತು ಇಲ್ಲಿ ಎದ್ದು ಇಲ್ಲಿ ಕೂತು ಅಲ್ಲಿ ಎದ್ದು ವಿಲವಿಲನೆ ಒದ್ದಾಡುತ್ತಿದ್ದ ನನ್ನನ್ನು ಅವರಿವರು ಗಮನಿಸಿರಲಿಕ್ಕೂ ಸಾಕು. ಅನೇಕ ದಂತಕಥೆಗಳ ಮೂಲ ಸ್ಥಾವರವಾಗಿದ್ದ ಕತ್ತಲಿಗಿಯ ಸೋಮವಾರಪೇಟೆಕಡೆ ಹೆಜ್ಜೆ ಹೇಗೆ ಹಾಕಬೇಕೆಂಬುದರ ಬಗ್ಗೆ ನಿಂತಲ್ಲೆ ತಾಲೀಮು ಮಾಡತೊಡಗಿದ್ದೆ. ನನ್ನ ಈ ಒದ್ದಾಟವನ್ನು ಬಹಳ ಹೊತ್ತಿನಿಂದ ದೂರದಿಂದಲೇ ಗಮನಿಸುತ್ತಿದ್ದ ಒಬ್ಬ ನೋಡಲಿಕ್ಕೆ ಒಳ್ಳೆ ಜಾನಿವಾಕರನಂತಿದ್ದನು. ಒಂದು ನೋಟಕ್ಕೆ ಜೇಬುಗಳ್ಳನಂತೆಯೂ; ಇನ್ನೊಂದು ನೋಟಕ್ಕೆ ಸವದತ್ತಿ ರಿಟರ್‍ನಂಡ್‌ನಂತೆಯೂ, ಮತ್ತೊಂದು ನೋಟಕ್ಕೆ ತಲೆಹಿಡುಕನಂತೆಯೂ; ಮಗದೊಂದು ನೋಟಕ್ಕೆ ಹವ್ಯಾಸಿ ಸಮಾಜ ಸೇವಾ ಕಾರ್ಯಕರ್ತನಂತೆಯೂ; ಮರುಹುಟ್ಟು ಪಡೆದ ತತ್ವಜ್ಞಾನಿಯಂತೆಯೂ ಹುಡುಕುವ ಕಾಲಿಗೆ ತೊಡರಲಿದೆಯೋ ಎಂಬಂತೆ ಗೋಚರಲಿದೆಯೋ ಎಂಬಂತೆ ಗೋಚರಿಸುತ್ತಿದ್ದ. ಇನ್ನೇನು ಮಾತನಾಡಿಸುತ್ತಾನೆ ಎಂಬಷ್ಟರಮಟ್ಟಿಗೆ ಹತ್ತಿರ ಬಂದು ಮತ್ತೆ ಮೂರು ಮಾರು ದೂರ ಸರಿದುಬಿಡುತ್ತಿದ್ದ. ನಾನೇ ಮಾತಾಡಿಸಬೇಕೆಂದುಕೊಂಡ ಕ್ಷಣದಲ್ಲಿಯೇ ಅವನೇ ಹಿಂದೆಲೆ ಕೆರೆಯುತ್ತ ಹತ್ತಿರ ಬಂದ. ಯಾವೂರು ಅಂತ ಮಾತಾಡಿಸಿದ. ಬೇಕೆಂದೇ ನಾನು ” ಮೇಮು ಆಂಧ್ರವಾಳ್ಳು… ಚಾಲ ದೂರಮುನುಂಡಿ ವಚ್ಚಿನಾಮು” ಎಂದು ತೆಲುಗಿನಲ್ಲಿ ಉತ್ತರಿಸಿದೆ. ಬೆಟ್ಟಮಂ ಗುಂಗುರು ಕಾಡಿತ್ತು ಎಂಬ ನಯಸೇನನ ಮಾತಿನಂತೆ ಒಂದೇ ಸಮನೆ ಅವನು ಕಲೆ ಬಿದ್ದ. “ನೇನು ಅಟ್ಲಂಡಿ ಇಟ್ಲಂಡಿ” ಅಂತ ಶುರು ಮಾಡಿದ. ತನಗೆ ಹಿಂದಿ, ಇಂಗ್ಲೀಷು, ತೆಲುಗು, ಕನ್ನಡ ಇವೇ ಮೊದಲಾದ ಷೋಡಷ ಭಾಷೆಗಳು ಗೊತ್ತುಂಟೆಂದು ಹೇಳಿದ. ತನ್ನ ಹೆಸರು ರಾಖೇಶನೆಂದೂ; ತನ್ನ ತಂದೆ ಮಾಜಿ ಸಣ್ಣ ನೀರಾವರಿ ಮಂತ್ರಿ ಗುಲಾಮನಬಿ ಎಂದೂ; ತನ್ನ ತಾಯಿ ಹೆಸರು ಬಸವ್ವನೆಂದೂ; ತನ್ನ ಚಿಕ್ಕಪ್ಪನ ಹೆಸರು ವರ್ಡ್ಸ್‌ವರ್ಥನೆಂದೂ; ತನ್ನ ತಂಗಿ ಹೆಸರು ಡಯಾನ ಎಂದೂ, ತಾನು ಎಸ್ಸೆಲ್ಸಿಯನ್ನು ನಾಲ್ಕನೆ ಬಾರಿ ಫೇಲಾದುದಾಗಿಯೂ; ಇಪ್ಪತ್ತೈದು ವರ್ಷ ತುಂಬುತ್ತಲೆ ಮೈಸೂರಿನ ಅಂಚೆ ತೆರಪಿನ ಶಿಕ್ಷಣ ಸಂಸ್ಥೆಯಿಂದ ಎಂ. ಎ. ಮಾಡಿಕೊಂಡಿದ್ದಾಗಿಯೂ, ತನಗೆ ತಾಲ್ಲೂಕಾಫೀಸಿನಲ್ಲಿ ಜವಾನನ ಕೆಲಸ ಸಿಕ್ಕಲಿಲ್ಲಾಂತ ತಾನು ನಿರಾಶನಾಗದೆ ಬಡೇಲಡುಕು ಮಂಡಲ ಪಂಚಾಯ್ತಿ ಎಲೆಕ್ಷನ್ನಿಗೆ ಸ್ಪರ್ಧಿಸಿ ಗೆದ್ದಿರುವುದಾಗಿಯೂ, ಹೊಟ್ಟೆ ತುಂಬಿಸಿಕೊಳ್ಳಲು ನಿಂಂಅಂಥವರನ್ನು ಪರಿಚಯ ಮಾಡಿಕೊಳ್ಳುತ್ತಿರುವುದಾಗಿಯೂ ನಿರರ್ಗಳವಾಗಿ ಹೇಳಿ ಅವನು ರೈಟರ್ಸ್ ಡಾರ್ಲಿಂಗಾದ. ನೋಡು ನೋಡುವಷ್ಟರಲ್ಲಿ ಅವನು ನನಗಿಂತ ಎತ್ತರವಾದ, ಸುಮಾರು ಐವತ್ತಾರು ಕನ್ನಡ ಸಿನಿಮಾಗಳಲ್ಲಿ ಹೆಣದ ಪಾರ್ಟ್ ಮಾಡಿರುವುದಾಗಿಯೂ, ಸಾಹಸಸಿಂಹ, ರೆಬೆಲ್‌ಸ್ಟಾರೂ; ಟೈಗರ್ರೂ; ಇವರೆಲ್ಲರು ತನಗೆ ತುಂಬ ಪರಿಚಯವೆಂದೂ ಹೇಳಿಕೊಂಡು ನನಗೆ ದಿಗಿಲು ಹುಟ್ಟಿಸಿದ. ಪೆಂಡ್ಲಾಮು ಪಿಲ್ಲಲೂ ಅಂತ ಕ್ರಾಸ್ ಕ್ವೆಶ್ಚನ್ನು ಮಾಡಿದ್ದಕ್ಕೆ ಅವನು ತಾನು ಹನ್ನೆರಡು ಸಿನಿಮಾಗಳಲ್ಲಿ ಮದುವೆ ಆಗಿರುವುದಾಗಿಯೂ; ಬಾಲಕೃಷ್ಣರಂಥವರಿಗೆ ಮಗನಾಗಿದ್ದುದಾಗಿಯೂ; ವಾಸುದೇವರಾವ್‌ರವರಿಗೆ ಮೊಮ್ಮಗನಾಗಿದ್ದಾಗಿಯೂ; ಅವನು ಹೇಳಿದ್ದನ್ನು ಕೇಳಿ ನಾನು ಪಾತಾಳಕ್ಕೆ ಇಳಿದುಹೋದೆ. ನನ್ನ ಮುಖದಲ್ಲಾದ ಬದಲಾವಣೆ ಗುರುತಿಸಿ ಜಂಬಲಕಡಿ ಪೊಂಬ ಸಿನಿಮಾದಲ್ಲಿ ಬ್ರಹ್ಮಾನಂದಂ ಜೊತೆ ತಾನು ಹುಚ್ಚನ ಪಾರ್ಟ್ ಮಾಡಿರುವುದಾಗಿ ಹೇಳಿ ಗ್ರಮದ ಸಮಸ್ತ ಸಿಂಗಾರವನ್ನು ಮುಖದ ಇಂಚಿಂಚಿನಲ್ಲು ಪ್ರಕಟಿಸ ತೊಡಗಿದ. ಈ ಮಹಾನ್ ಕಲ್ಲಕಾರನೆದುರು ಏನೂ ಅಲ್ಲವೆನಿಸಿ ತಪ್ಪಿಸಿಕೊಳ್ಳಲೆತ್ನಿಸಿದೆ. ಆದರೆ ಅವನು ಬಿಡಬೇಕಲ್ಲ! ಚೂಡಂಡಿ ದೊರ… ಇಕ್ಕಡಿ ವಚ್ಚಿನಾರಂಟೆ … ದಾನಿಕೇ ವಚ್ಚುಂತಾರು… ನಾಕು ತೆಲುಸು ಸಾರ್… ಮೀ ಆಂಧ್ರಲೋ ಪೆದ್ದ ಪೆದ್ದ ಮನುಷಲು ನಾಕ ಬಾಗ ತೆಲುಸು… ರಸಿಕುಲಂಟೆ ವಾಳ್ಳು… ದಬ್ಬುನು ನೀಳ್ಳಲಾಗ ಖರ್ಚು ಚೇಸ್ತಾರು… ಮಂಚಿ ಪಿಟ್ಸನು ಗೂಟೀಕಿ ಲಾಖ್ಖುಂಟಾರು… ” ಎಂದು ಮೇಸೆಗೆ ಉಘುಳು ಲೇಪಿಸಿ ಹುರಿ ಮಾಡಿದ… ಅದಕ್ಕಲ್ಲಯ್ಯಾ ನಾನು ಬಂದಿರೋದು ಎಂದರು ಅವನು ಬಿಡದೆ… “ಈ ವಯಸ್ಸುಲೋ ಸುಖ ಪಡಾಲಂಡೀ… ನಾಕಂತಾ ತೆಲ್ಸು… ಮೇರೇಮಿ ಸಿಗ್ಗು ಪಡವಲಸಿನ ಅವಸರಮು ಲೇದಂಡಿ… ಮುಖಂ ಚೂಸ್ತೇನೇ… ವೀಳ್ಳು ದೀನಿಕೇ ವಚ್ಚಿನಾರನಿ… ಚೆಪ್ತಾನಂಡಿ … ಭಯಂ ಉಂಟೆ ಪನಿ ಜರಗದಂಡಿ… ಚೆಪ್ಪಂಡಿ ಮೀಕೆಲಾಂಟ ಮಾಲು ಕಾವಾಲಿ… ವಯಸ್ಸು‌ಎಂತ ಉಂಡಾಲಿ… ಮೆಚುರ್‍ಡುಕಾವಾಲೋ; ನಾನ್‌ಮೆಚುರ್‍ಡು ಗರ್ಲ್ ಕಾವಾಲೋ… ಹೌಸು ವೈಫ್ಸು ಕಾವಾಲೋ… ಪ್ಯೂರ್ ಪ್ರೊಫೆಷನಲಿಷ್ಟು ಕಾವಾಲೋ… ಇಂತೇ ಕಾದನ ನಾ ಲಿಸ್ಟುಲೋ ಸ್ಕೂಲು ಗರ್‍ಲುಸು; ಕಾಲೇಜು ಗರ್‍ಲುಸು… ಅಸ್ಂದ್ರೂ ಉನ್ನಾರಂಡಿ… ಆಶ್ಚರ್ಯಮು ಪಡಕಂದಿ… ಕಡುಪು… ಕಡುಪೂ… ಕಡುಪೂ… ಈ ಕಡುಪೇ ಅನ್ನಿ ಪನ್ಲು ನೇರ್‍ಪಿಸ್ತುಂದಂಡೀ…” ಎಂದು ಆವೇಶದಿಂದ ಮಾತಾಡತೊಡಗಿದ… ” ಅದಲ್ಲ… ರಾಕೇಶೂ… ಅಂದರೂ ಬಿಡದೆ ಅವನು ನನ್ನ ಕೈಯಲ್ಲಿ ಬ್ಯಾಗು ಹಿಸಿದುಕೊಂಡು ಬಾಯಿಮುಚ್ಚಿಕೊಂಡು ತನ್ನನ್ನು ಫಾಲೋ ಮಾಡುವಂತೆ ಸಂಜ್ಞೆ ಮಾಡಿದ. ಉಳ್ಳೋಕಿ ಪೋದಾಂ ಪಾರುಲು ಚೂದ್ದಾಂ ಚಲೋ ಚಲೋ ಎಂಬ ದೇವದಾಸು ಚಿತ್ರದಲ್ಲಿ ಅಕ್ಕಿನೇನಿಗಾರು ಹಾಡುವ ಹಾಡನ್ನು ಸಿಳ್ಳೆ ಮೂಲಕ ಹಾಡುತ್ತ ಹೊರಟ ಅವನ ಹಿಂದೆ ನಾನು ಕಳ್ಳಹೆಜ್ಜೆ ಹಾಕತೊಡಗಿದೆ… ಅವರಿವರು ನೋಡಿಯಾರೆಂಬ ಭಯದಿಂದ ಕಾಲುಗಳು ಕಂಪಿಸುತ್ತಿದ್ದವು. ನನ್ನ ಆಗಮನ ಬಯಸಿ ಪರಿಚಯಸ್ಥರು ತಲೆ ಮರೆಸಿಕೊಳ್ಳುತ್ತಿರಬಹುದೆಂದುಕೊಂಡೆ. ಸಿಳ್ಳೆ ಹಾಕುತ್ತಿದ್ದ ಅವನು ಆಗಾಗ್ಗೆ ಇಂಗ್ಲೀಶು, ಹಿಂದಿ, ತಮಿಳು ಭಾಶೆಗಳಲ್ಲಿ ಮಾತಾಡುತ್ತ ತಾನು ಸರ್ವ ಭಾಷಾ ಪಾರಂಗತ ಎಂಬುದನ್ನು ಸಾದರಪಡಿಸುತ್ತಿದ್ದ. ಮೊಟ್ಟ ಮೊದಲು ಹೆತ್ತವರ ಪಹರೆಯೊಳಗೆ ಶಾಲೆಗೆ ಹೊರಟಿರುವಂತಿರುವ ನಾನೂ, ಎಳಕೊಂಡೊಯ್ದು ಒಳಗೆ ಹಾಕ್ತೀನಿ… ಅದ್ಯಾವ ಮೇಡಂನಿಂದ ಅದೇನು ಕಲಿಯುತ್ತೀಯೋ ಕಲಿ ಎಂಬ ಹಠಮುದ್ರೆಯನ್ನು ತನ್ನ ಚಪ್ಪಟೆ ಮುಖದಲ್ಲಿ ಧರಿಸಿ ವಿಚಿತ್ರ ಲಹರಿಯಲ್ಲಿ ಹೆಜ್ಜೆ ಹಾಕುತ್ತಿರುವ ಅವನೂ; ತನ್ನ ಕೈಯಲ್ಲಿ ನನ್ನ ಬ್ಯಾಗಿದ್ದುದರಿಂದ ತಪ್ಪಿಸಿಕೊಳ್ಳಲಾರನೆಂಬ ಆತ್ಮವಿಶ್ವಾಸವನ್ನು ಪ್ರತಿಹೆಜ್ಜೆ ಮೂಲಕ ಪ್ರಕಟಿಸುತ್ತಿದ್ದ.

ಫತೆಪುರ್ ಸಿಕ್ರಿಯಲ್ಲಿ ಸಿಗುವ ಬುಲಂದ ದರವಾಜ ಸಿಗುತ್ತದಲ್ಲ ಅಂಥದೊಂದು ದರವಾಜ ಎದುರಾಯಿತು. ಎರಡು ಕಲ್ಲುಕಂಬಗಳ ಆ ದರವಾಜದ ನೆತ್ತಿಮೇಲೆ ತೆಂಗಿನಕಾಯಿಯೊಂದನ್ನು ಇಡಿಯಾಗಿ ಮಂತ್ರಿಸಿ ಅದರೊಳಗೊಂದು ಗೂಟ ಬಡಿದು ಕಟ್ಟಿದ್ದರು. ಘನ ಸರಕಾರದವರು ಒಂದು ಕಡೆ ಕಟ್ಟಿದ್ದ ಸೂಚನಾ ಫಲಕದಲ್ಲಿ ಸೂಳೆಗಾರಿಕೆ ಮಾಡುವುದು ಅದನ್ನು ಪ್ರೊತ್ಸಾಹಿಸುವುದು, ಭಾಗಿಯಾಗುವುದು ಭಾರತೀಯ ದಂಡ ಸಂಹಿತೆಯ ಇಷ್ಟನೆ ಕಲಮು ಪ್ರಕಾರ ಅಪರಾಧವೆಂದೂ; ಇಂತಿಂಥ ಅಪರಾಧಕ್ಕೆ ಇಷ್ಟಿಷ್ಟು ಶಿಕ್ಷೆ ವಿಧಿಸಲಾಗುವುದೆಂದೂ ವಿವರವಾಗಿ ಬರೆಯಲಾಗಿತ್ತು. ಇನ್ನೊಂದು ಕಡೆ ಅನೈತಿಕ ಲೈಂಗಿಕ ಸಂಪರ್ಕಗಳಿಂದ ಬರಬಹುದಾದ ಗುಹ್ಯರೋಗಗಳ ಮತ್ತು ಮರಣಾಂತಿಕ ರೋಗವಾದ ಏಯ್ಡ್ಸ್ ಬಗ್ಗೆ ಸುಧೀರ್ಘ ವಿವರವಿದ್ದ ಫಲಕವನ್ನು ಪ್ರಾಥಮಿಕ ಆರೋಗ್ಯ ಕೇಂದ್ರದವರು ಸ್ಥಾಪಿಸಿದ್ದರು. ಮತ್ತೊಂದು ಕಡೆ ಕಾಂಡೂಂಮ್ಸ್ ತಯಾರಿಕಾ ಕಂಪೆನಿಯವರು ಸುರಕ್ಷಿತ ಲೈಂಗಿಕ ಚಟುವಟಿಕೆಗಳಿಗೆ ತಮ್ಮ ಕಂಪನಿ ತಯಾರಿಸುವ ಕೋಹಿನೂರ್ ನಿರೋಧಕ ಚೀಲಗಳನ್ನೇ ಉಪಯೋಗಿಸಿರಿ ಎಂದು ಬರೆದು ಕಟ್ಟಿದ್ದರು. ಆದರೆ ಸೋಮವಾರ ಪೇಟೆಯ ಅಭಿಮಾನಿಗಳು ಅವಕ್ಕೆಲ್ಲ ಸೆಗಣಿ ಎಸೆದು ವಿರೂಪಗೊಳಿಸಿದ್ದರು. ಅದನ್ನು ಓದಲು ಪ್ರಯತ್ನಿಸಿದ ನನ್ನನ್ನು ಆ ರಾಖೇಶಕುಮಾರನು “ಅವ್ನೆಲ್ಲಾ ಯಾಕೆ ಓದ್ತೀರಿ ಬರ್ರಿ ಸಾರ್…ಎಂದೋ ಒಂದಿನ ಎಲ್ರೂ ಸಾಯ್ಲೇಬೇಕಲ್ಲ… ಮನುಷ್ಯ ಜೀವನ ಎಂಬುದುನೀರ ಮೇಲನ ಗುಳ್ಳೆ ಇದ್ದಂತೆ ಸಾರ್… ಅದು ಟಪ್ಪೆಂದು ಒಡೆಯೋಕು ಮೊದಲೇ ಎಲ್ಲಾ ನಮೂನೆಯ ಸುಖ ಅನುಭವಿಸಬೇಕು…” ಎಂದು ಗುಂಟೂರು ಕಡೆಯ ತೆಲುಗಿನಲ್ಲಿ ಹೇಳಿದ. ಒಂದು ನಾಲ್ಕು ಹೆಜ್ಜೆ ಮುಂದೆ ಹೋಗಲು ಅಲ್ಲಿ ವಾರ್ತಾ ಇಲಖೆಯವರು ಆರೋಗ್ಯ ಇಲಾಖೆಯ ಸಹಯೋಗದೊಂದಿಗೆ ಲೈಂಗಿಕ ರೋಗಗಳ ಬಗ್ಗೆ ಒಂದು ಕಿರುಚಿತ್ರವನ್ನು ಪ್ರಸಾರ ಮಾಡಲು ಪ್ರೊಜೆಕ್ಟರು, ಸ್ಕ್ರೀನು ಎಲ್ಲವನ್ನು ಹೊಂದಿಸ ತೊಡಗಿದ್ದರು. ಇನ್ನೊಂದು ನಾಲ್ಕು ಹೆಜ್ಜೆ ಮುಂದೆ ಹೋಗಲು ಕೆಲವು ಗಂಡಸರೂ ಹೆಂಗಸರೂ ಸಾಮೂಹಿಕವಾಗಿ ಕೋಲಾಟದ ಪದ ಹಾಡುತ್ತ ಕುಣಿಯುತ್ತ ಲಯಬದ್ಧವಾಗಿ ಹೆಜ್ಜೆಹಾಕುತ್ತಿದ್ದರು.
ಇನ್ನು ಸ್ವಲ್ಪ ಮುಂದೆ ಹೋಗಲು ಹಂಚಿನ ಮನೆ ಮುಂದೆ ಕೆಲವು ಹೆಂಗಸರು ಕೂತು-
ಬಲ್ಲಿದವರ್‍ನೆಲ್ಲ್ ಹಿಡ್ದು ಬೆನ್ನಾಗ ಸೀಳಿ ಬಾಯ್ತುಂಬ ಕೀಲಾಽಽ ಜಡ್ಡೂ
ಸೊಲ್ಲು ಸೊಲ್ಲಿಗೊಮ್ಮೆ ಉಧೋ ಉಧೋ ಎಂದೂಽಽ
ಒಳ್ಳೇದಲ್ಲವ್ವಾ ನಿನ್ನ ಬಿರುದು ಎಲ್ಲಿ ಕಾಣಲ್ಲಿ ಕಾಣೆನೇ
ಎಲ್ಲಮ್ಮ್ನಂಥಾಕಿನೆಲ್ಲಿ ಕಾಣೆನೇ
ಎಂದು ಮುಂತಾಗಿ ಪಡಲಗಿ ಸುತ್ತ ಕೂತು ಇಂಪಾಗಿ ಹಾಡುತ್ತಿದ್ದರು. ಅವರೆಲ್ಲರ ಹಣೆಯಲ್ಲಿ ರೂಪಾಯಿಯಗಲದ ಕುಂಕುಮ ಬೊಟ್ಟು ಕೊರಳಲ್ಲಿ ಕಾಸಿನ ಸರ ಥಳಥಳ ಹೋಲೆಯುತ್ತಿದ್ದವು. ಭೂಮಿಯೇ ಗದಗುಟ್ಟಿ ನಡುಗುತ್ತಿರುವ ರೀತಿಯಲ್ಲಿ ಕುಡುಕನೊಬ್ಬ ತೂರಾಡುತ್ತ ಬಂದ. ಕೈಯಲ್ಲಿ ಮುತ್ತಿನ ಸರವನ್ನು ತೋರಿಸಿ ಥೈತಕ್ ಥೈತಕ್ | ತಂದಾನ ತಾನೇ ತನ್ನನ್ನ ಥೈಯೋ ತಂನೋ ತಂದಾನೆ ತಾನೇ ತನ್ನ ಎಂದು ಮುಂತಾಗಿ ರಾಗವಾಗಿ ಹಾಡುತ್ತ ಕುಣಿಯತೊಡಗಿದ. ಹಂಗೆ ಹೋದರೆ ಹಂಗೆ ಬಿಡವಲ್ಲ. ಹಿಂಗೆ ಹೋದರೆ ಹಿಂಗೆ ಬಿಡುವಲ್ಲ! ನಮಗಿದು ಫಜೀತಿಗಿಟ್ಟುಕೊಂಡಿತು. ಅದರಿಂದ ರಾಖೇಷ ಕುಮಾರಗೆ ರವುಷ ಹುಟ್ಟಿ “ದಿಸ್ ಈಜ್ ಏ ಗ್ರೇಟು ಪರ್ಸನ್ನೂ… ಯು ಡೋಂಟು ನೋ… ಹಿ ಈಜ್ ಕಮಿಂಗ್ ಪ್ರಮ್ಮು ಆಂಧ್ರಪ್ರದೇಶ್… ದಿ ಗ್ರೇಟು ಆಂಧ್ರಪ್ರದೇಶ್… ಡುಯು ಅಂಡರ್‌ಸ್ಟಾಂಡೂ… ಸಡಕ್ ಛೋಡೊ” ಎಂದು ದಬಾಯಿಸತೊಡಗಿದ. ಅದರಿಂದ ಕುಡುಕ ಮಹಾಶಯನಿಗೆ ಸಿಟ್ಟು ಬಂದು “ಎಲಾ ರಾಕ್ಯಾ… ಬಾಸ್ಟರ್ಡು ರಾಕ್ಯಾ ನನ್ಮಗ್ನೇ ಈ ಸಡಕೇನು ನಿನ್ನ ಗ್ರಾಂಡು ಪಾದರದೇನ್ಲೇ ಬಾಡ್ಕಾವ್… ನಾನು ಕಂಟರಾಕ್ಟು ಮಾಡಿ ಹಾಕಿಸಿದ್ದಲೇ ಇದು. ಹಗರಿ ಬ್ರಿಡ್ಜಿಂದು, ರೋಡಿಂದು ಬಿಲ್ಡಿಂಗಿದೆಲ್ಲ… ಸೋಮಾರಪೇಟೆಗೆ ಸುರಿದಿರೋ ಮನುಷ್ಯ ನಾನು… ನಂದು ನಾನು ತೊಗೊಂಡೋದ್ರೆ ಈ ಸೂಳೇರ್‍ಗೆ ನಿನ್ನಂಥ ತಲೆ ಹಿಡಿಕ್ರೀಗೆ ಬುದ್ಧಿ ಬರೋದು… ಆ ಲಚ್ಚುಮಿ ಐವತ್ತು ಕೊಟ್ರೆ ಒಳಾಗ ಬಿಟ್ಕೊಂತೀನಿ ಅಂದ್ಲಲ್ಲವೇ… ನನ್ನ ಪ್ರೆಸ್ಟೀಜು ಏನುಳೀತಲೇ.” ಎಂದು ನನ್ನ ಕಡಿಗೆ ತಿರುಗಿ, ಏನಯ್ಯಾನೀನು ಎಜುಕೇಟಡ್ನಂಗೆ ಕಾಣ್ತಿ…” ಎಂದು ಏನೇನೋ ಹೇಳಲಿದ್ದ. ಅಷ್ಟರಲ್ಲಿ ರಾಕ್ಯಾ ಅವನನ್ನು ಪಕ್ಕಾಕ್ಕೆ ತಳ್ಳಿ ನನ್ನ ಕೈಹಿಡಿದು ಎಳೆದುಕೊಂಡೊಯ್ದನು.

ಇಂಥ ಕಂಟಕಗಳನ್ನು ಲೀಲಾಜಾಲವಾಗಿ ದಾಟಿ ಪೇಟೆಯ ಹೃದಯಭಾಗ ತಲುಪಿದೆವು. ಬೇವಿನಕಟ್ಟೆ ಬಳಿ ನನ್ನನ್ನು ಬಿಟ್ಟುಯ್ ಒಂದೆರಡು ಮಂದಿ ಹೆಣ್ಣು ಮಕ್ಕಳನ್ನು ಕರೆದುಕೊಂಡು ಬಂದು ಪರಿಚಯಿಸಿದ. ಅವರಲ್ಲಿ ಒಬ್ಬಳು ವ್ಯೋನಣ್ಣಾ… ಐನೂರದಾವ? ಅಂತ ರೇಟು ಪ್ರಸ್ತಾಪಿಸಿದಳು. ಇನ್ನೊಬ್ಬಳು “ಅಯ್ ಒಮ್ಗೆ ನೂರಂದ್ರೆ ಯದಿ ಹೊಡ್ಕೊಂಡು ಸಾಯ್ತಾನೀ ಯಣ್ಣ… ಕೆಲಸ ನೋಡಿ ಸಂತೋಷ ಪಟ್ರೆ ಐನೂರ್ಯಾಕೆ ಸಾವ್ರ ಕೊಟ್ಟಾನು ಬಿಡು” ಎಂದು ನನ್ನ ಕೈ ಹಿಡಿದುಕೊಂಡಳು. ಬಾ ಮಯ್ಯಿಗೆರಕಂಡು ದಮ್ಮು ಆರಿಸ್ಗೆವಂತಣ್ಣ ಬಾ… ಎಂದು ಎಲೆದಳು… ನಾನು ಒಂಚಣ ಗಲಿಬಿಲಿಗೊಂಡು… ನಾನಿಲ್ಲಿಗೆ ಬಂದಿರೋದು ಅನಸೂಯಮ್ಮನ್ನ ಕಾಣೋಕೆ” ಎಂದೆ. ಅದನ್ನು ಕೇಳಿ ಅವರು ಕಿಲಕಿಲ ನಕ್ಕರು… ಓಸೇಯ್ ಲಚುಮಕ್ಕ… ಓ ಸೇಯ್ ಸುಚೇಲಿ… ಓ ಸೇಯ್ ರಂಗುಲಮ್ಮೀ ಎಂದು ಕೂಗಿದರು. ಕಾಗೆಯೊಂದಗುಳಕಂಡರೆ ಕರೆಯದೇ ತನ್ನ ಬಳಗವನು… ಅಷ್ಟರಲ್ಲಿ ಮೂಲೆಮೂರು ಕಟ್ಟುಗ್ಳಿಂದ ಹತ್ತಾರು ಮಂದಿ ಹೆಂಣು ಮಕ್ಕಳು ಓಡೋಡಿ ಬಂದು ನನ್ನನ್ನು ನಖಶಿಖಾಂತ ನೋಡತೊಡಗಿದರು.ಆಯ್ ಈ ಯಣ್ಗೆ ಅನಸೂವಿ ಬೇಕಂತ್ರಲೇ ಎಂದವಳನ್ನುತ್ತಲೇ ಉಳಿದವರು ಫಕಫಕ ನಗ್=ಆಡಿದರು… ನನಾರಿಂಚಿದ್ದೋನು ಒಂದಂಗುಲವಾಗಿ ಬಿಟ್ಟೆ… ಆ ಅನಸೂವಿತಾನೈತಂತ ಹೋಗ್ಯಾನೀವಣ್ಣಾಂತ… ಯಾರೋ ನಮ್ಮಜ್ಜಿ ಮಿಂದನೇ; ಹೋಗಿ ಹೋಗಿ ಇಂಥೆಣ್ಣನ್ನ ಕರಕೊಂಡು ಬಂದಿಯಲ್ಲೋ ನಿನ್ ಮೂಗೀಗೆ ಕವಡಿ ಕಟ್ಲೀ… ಈಟೆತ್ರ ಬೆಳಕೊಂಡಿದ್ರೂ ಕಸುಬು ಗೊತ್ತಿಲ್ವಲ್ಲಾ ಈ ಯಣ್ಗೆ…” ಎಂದಳು ಒಬ್ಬಳು ರಾಕೇಶನ ಸೋಟಿಗೆ ತಿವಿದು ದುಡುದುಡನೆ ಹೋದಳು… ಆದರ ಮಯ್ಯಾಗೇನೈತಂತ ಹೋತಾನೀಯಣ್ಣಾಂತ… ಸ್ವರ್ಗ ತುಂಬ್ಕಂಡಿರೋ ನಮ್ಮ್ ಗುಡುಸ್ಲು ಬಿಟ್ಟು ಹರ್ವಾಣದ ಚಿದಾನಂದಾವದೂತ್ರು ತುಂಕೊಂಡಿರೋ ಆ ಮನೇಲ\ಏನೈತಂತ ಹೋತಾನೀಯಣ್ಣಾಂತ… ಕರಕೊಂಡೊಗಿ ತರುಬು… ಅದೇನಿಡ್ಕಂತಾನೋ ಹಿಂಡ್ಕಳ್ಳಿ” ಎಂದು ಮತ್ತೊಬ್ಬಳು ರಾಕೇಷನ ಸೋಟಿಗೆ ತಿವಿದು ಹೋದಳು. ಇನ್ನೊಬ್ಬಳು ಕಸುಬು ಕಲಿಯೋಕೆ ಅಂಥೋರೆ ವಾಸಿ ಬಿಡಪ್ಪ… ಈ ಮುಂಡೇವ್ಕೇನು ತಿಲಿತೈತಿ… ಅಗಾ ರಾಕ್ಯಾ ಕರ್ಕೊಂಡೋಗು… ಆಟುಕೊಡು ಈಟುಕೊಡೂಂತ ಜೀವ ತಿಂಬಬೇಡ… ಅದುರ್ಕೊಂಡು ಬರದಂಗಾದಾನು…” ಎಂದು ಬುದ್ಧಿ ಹೇಳಿ ಹೋದಳು.

ಅವರಿಂದ ನಿರ್ಮನುಷಗೊಂಡ ನಾನು ಜೇಬಿನಿಂದ ಐವತ್ತು ರೂಪಾಯಿ ನೋಟು ತೆಗೆದು ರಾಕೇಶನ ಮುಂಜೇಬಿಗೆ ತುರುಕಿ ಬಂದಿರೋ ಉದ್ದೇಶವನ್ನು ಪಿಸುಗುಟ್ಟಿದೆ. ಅವನು ನೋಟು ಮರಳಿಸುತ್ತ “ನಮ್ಮ ಶಾಮಂಣನ ಕಡೆಯೋರೇನ್ರಿ ನೀವು… ಅಂಥ ದೊಡ್ ಮನುಶ್ಯೋರು ಈ ಪ್ರಪಂಚದಾಗೆಲ್ಲ ಹುಡುಕಿದ್ರೂ ಸಿಗಾಣಿಲ್ಲ ಬಿಡ್ರಿ… ಅವ್ರು ಸತ್ತಿಲ್ರೀ… ಬದ್ಕೇ ಅದಾರ… ಅವಾತುಮ ಇಲ್ಲೆಲ್ಲಾರ ಇರ್‍ತತಿ ನೋಡ್ರಿ… ತಗಳ್ರಿ… ಇದ್ನ ಇಸ್ಕೊಂಡು ನಾನ್ಯಾವ ಪಾಪಕ್ಕೆ ಹೋಗ್ಲಿ…” ಎಂದನು ನಾನು ಬಲವಂತದಿಂದ ಕೊಟ್ಟೆ… “ಆಗಿದ್ದು ಆಗಿ ಹೋಯ್ತಪ್ಪಾ… ಕತ್ತಲಾಗ್ತದೆ… ಕೂಡ್ಲೆ ಅನಸೂಯಮ್ಮನವರ್‍ನ ಬೆಟ್ಟಿ ಮಾಡಿಸಪ್ಪ” ಎಂದು ಅವನ ಮುಂಗೈ ಅದುಮಿದೆ. ಅವನು ನಿಟ್ಟುಸಿರು ಬಿಟ್ಟು “ಅನಸೂಯಕ್ಕ ಇತ್ತೀಚ್ಗೆ ಒಂದ್ನಮೂನಿ ಆಗ್ಯಾಳ್ರೀ… ಗುಬ್ಬಚ್ಚಿಯಂಗ ಮನ್ಯಾಗ ಮುದಡ್ಕಂಡು ಅದ್ಯಾತ್ಮದ ಬಗ್ಗೆ ಚಿಂತನೆ‌ಅ ಮಂತನ ಮಾಡತಿರ್‍ತಾಳ್ರೀ ಸಾಹೇಬ್ರ… ಹರಿವಾಣಕೋಗಿ ತಾತನ ಬೋದಾ ತಗಂತೀನಂತಾಳ ನೋಡ್ರಿ… ನೀವಾರ ಬುದ್ಧಿ ಹೇಳ್ರಿ… ಬದುಕೀಗಟ್ರೀ… ಪುಣ್ಯ ಬರ್‍ತತಿ… ಕಂಪಣಿ ನಾಟಕ ಬ್ಯಾಡ ಬಿಡ್ರಿ… ಹಳ್ಳಿ ಮ್ಯಾಲ ಕರದ್ರೆ ಬಯ್ಲಾಟಕಾದ್ರು ಹೋಗೋದು ಬ್ಯಾಡೇನ್ರಿ… ನೀವಾರ ಬುದ್ಧಿ ಹೇಳ್ರಿ” ಎಂದು ನನ್ನ ಕೈ ಹಿಚುಕಿ ಕಂಣ್ಲ್ಲಿ ನೀರು ತಂದುಕೊಂದ.

“ನಿಲ್ಲೋ ನಿಲ್ಲೊ ನೀ ಮಗ್ನೆ… ಹೋಗುವುದುಚಿತಲ್ಲೋ ಮಗನೆ” ಎಂದೊಬ್ಬಳು ಹಾರ್ಮೋನಿಯಂ ಲಯಕ್ಕನುಗುಣವಾಗಿ ಏರು ದನಿಯಲ್ಲಿ ಹಾಡುತ್ತಿದ್ದುದು ಇಂಪಾಗಿ ಕೇಳಿಸುತ್ತಿತ್ತು. ರಕ್ತ ರಾತ್ರಿ ನಾಟಕದಲ್ಲಿ ಭಾನುಮತಿ ಪಾತ್ರ ವಹಿಸುವ ಕುರುವಳ್ಳಿ ಕಮಲ, ದ್ರೌಪದಿ ವಸ್ತ್ರಾಪಹರಣ ಬಯಲಾಟದಲ್ಲಿ ಪಾಂಚಾಲಿ ಪಾತ್ರ ವಹಿಸುವ ಪದುಮ, ಕುರುಕ್ಷೇತ್ರ ನಾಟಕದಲ್ಲಿ ಉತ್ತರ ಪಾತ್ರ ವಹಿಸುವ ಊರಮ್ಮ, ಯಾವುದೇ ಸಾಮಾಜಿಕ ನಾಟಕಗಳಲ್ಲಿನ ಯಾವುದೇ ಸ್ತ್ರೀ ಪಾತ್ರವನ್ನು ಲೀಲಾಜಾಲವಾಗಿ ಅಭಿನಯಿಸುವ ಹುಣಸೇ ಮರದ ಮೀನಾಕ್ಷಿ… ಇಂಥ ನುರಾರು ಮಂದಿ ಕಲ್ಲವಿದರಿಂದಲೇ ತುಂಬಿ ಹೋಗಿರುವ ಕೊತ್ತಲಗಿಯ ಸೋಮವಾರಪೇಟೆಗೆ ಮಹಿಳಾ ಸಂಕ್ಷೇಮಾಭಿವೃದ್ಧಿ ನಿಗಮದ ಅಧ್ಯಕ್ಷೆಯಾಗಿ ನೇಮಕಗೊಂಡಿರುವ ಭುವನೇಶ್ವರಿ ಅಮ್ಮಣ್ಣಿಯವರು (ಈಗೆರಡು ವರ್ಷಗಳ ಹಿಂದೆ ಡೆಪ್ಯುಟಿ ಛೀಫ್ ಮಿನಿಷ್ಟರಾಗಿದ್ದ ಸಾಸಿವೆ ಶಿವನಂಜೇಗೌಡರು “ಅಮ್ಮಣ್ಣಿಯವರು” ಎಂಬ ವಿಶೇಷಣ ಸೇರಿಸಿ ಶಾಸನಸಭೆಯ ಗೌರವಕ್ಕೆ ಪಾತ್ರರಾಗಿದ್ದರು. ಅವರು ಸಿರೆಗೆರೆ ಸಂಸ್ಠಾನದ ಬಳಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ….) ಕೊತ್ತಲಿಗಿಯ ಸೋಮವಾರಪೇಟೆಗೆ ಆತ್ಮಗೌರವ ನೀಡಬಹುದಿತ್ತು. ಆದರೆ ಆಕೆ ಬೆಂಗಳೂರಿನ ಪ್ರತಿಷ್ಟಿತ ದಾಲರ್ಸ್ ಕಾಲನಿಯಲ್ಲಿ ಪ್ರಖ್ಯಾತ ಮಾಜಿ ಹತ್ತು ಹಾಲಿಗಳ ನಡುವೆ ಉಭಯ ಕುಶ್ಲೋಪರಿ ಜೀವನ ಆರಂಭಿಸಿ ಭೂತಕಾಲವನ್ನು ಕಪಾಟಿನಲ್ಲಿ ಭದ್ರಗೊಳಿಸಿರುವಳು…

ಅಭಿಷೇಕ್ ಗೋಡ್ಸೆಗೆ (ಸಾರಿಗೆ ಸಚಿವರಾದ ಗೋಪಾಲ ಭಂಡಾರಿಯವರ ಮೂರನೆ ಮಗಳು ಅಮೃತಮತಿಯ ಗಂಡ. ಮದುವೆಗೆ ಆಮಂತ್ರಣ ಪತ್ರಿಕೆ ಅಚ್ಚು ಹಾಕುವಾಗ ಗೋದ್ಲಿ ಎಂಬ ಶಬ್ದಕ್ಕೆ ಬದಲಾಗಿ ‘ಗೋಡ್ಸೆ’ ಎಂದು ಪರಪಾಟಿನಿಂದಾಗಿ ಅಚ್ಚಾಯಿತಂತೆ. ತನ್ನ ನಿಗಮದಿಂದ ಎಲ್ಲ ನೆರವು ನೀಡಿ‘ಕೊತ್ತಲಗಿಯ ಸೋಮವಾರಪೇಟೆ’ ಎಂಬ ವಿಷಯದ ಬಗ್ಗೆ ದಾಕ್ತರೇಟ್ ಮಾಡಿಸಿದ ಭುವನೆಶ್ವರಿ ಅಮ್ಮಣ್ಣಿಯವರ ಸಂಶೋದನ ಹಸ್ತಾಕ್ಷರ ಸಹಿತ ಅಚ್ಚು ಹಾಹಿಸಿರುವರು. ಅದರ ಬೆಲೆಯನ್ನು ಸಾವಿರದೊಂದು ನೂರಾ ಇಪ್ಪತ್ತೇಳು ರೂಪೈ ತೊಂಬತ್ತೈದು ಪೈಸೆ ಎಂದು ಬಾಟಾ ರೇಟು ಇಟ್ಟಿರುವುದರಿಂದ ಸಣ್ಣ ಸಂಬಳದ್ಸವನಾದ ನಾನು ಗೆಳೆಯೋರ್ವರಿಂದ ಪಡೆದು ಭದ್ರಪಡಿಸಿಟ್ಟುಕೊಂಡಿರುವೆನು. ವಿಸರ್ಜನಾ ಕಾರ್ಯಕ್ಕೂ ಪೂರ್ವದಲ್ಲಿ ಅದರ ಪುಟಗಳನ್ನು ತಿರುವಿ ವಿರೇಚಕ ಶಕ್ತಿ ಪಡೆದಿರುವ ನಾನು ಸದರೀ ಗ್ರಮದ ಸೋಮವಾರಪೇಟೆಗೆ ಬರುವ ಪ್ರಯತ್ನ ಮಾಡಿರುವುದುಂಟು. ಮಧ್ಯಮವರ್ಗದ ಸಂಕೋಚದಿಂದ ಬರಲಾಗಿಲ್ಲದಿರುವುದೂ ಉಂಟು. ಹೋದಂತೆ ಬಂದಂತೆ ಕಣಸು ಕಂಡಿರುವುದನ್ನು ಅಲ್ಲಗಳೆಯಲಾಗದು.

ಆ ಮಹಾಪ್ರಬಂಧದ ಉಕ್ತಿಗಳ ಪ್ರಕಾರ ವಿಜಯನಗರ ಶ್ರೀಕೃಷ್ಣ ದೇವರಾಯ ಮಹಾರಸಿಕನಾಗಿದ್ದ. ದೇವದಾಸಿ ಕುಟುಂಬದಲ್ಲಿ ಜನಿಸಿದ್ದ ಚಿನ್ನಾಸಾನಿಯನ್ನು ಉತ್ಕಟವಾಗಿ ಪ್ರಿತಿಸುತ್ತಿದ್ದ. ಮದುವೆಯಾಗಿ ಪಟ್ಟಮಹಿಷಿಯನ್ನಾಗಿ ಮಾಡಿಕೊಳ್ಳಬೇಕೆಂದು ಅವನು ಪ್ರಯ್ತ್ನಿಸಿದ. ಆದರೆ ಅಪ್ಪಾಜಿ ತಿಮ್ಮರಸು (ಕಂಣು ಕೀಳಿಸಿಕೊಂಡ ನಂತರ ತಿರುಪತಿ ಸೇರಿ ವೆಂಕಟೇಶ್ವರ ಸ್ವಾಮಿಯ ಪ್ರಸಾದವಾದ ಲಡ್ಡುಬ್ ಮಾರುತ್ತ ಹ್ಟ್ಟೆ ಹೊರೆದು ಬದುಕಿ ನಿರ್ಗತಿಕ ರೀತಿಯಲ್ಲಿ ಸತ್ತವನು. ಈ ಘೋರ ಶಿಕ್ಷೆ ವಿಧಿಸಿದ ಶ್ರೀಕೃಷ್ಣರಾಯನ ಅನಧಿಕೃತ ತಂದೆ ಎಂದು ನರಸನಾಯಕ ಕುಡುಕನಾಗಿದ್ದ ಎಂದು ವಾದಿಸುವ ಸಂಶೋಧಕರು ತಂತಮ್ಮ ಕ್ರುತಿಗಳಲ್ಲಿ ಅಭಿಪ್ರಾಯ ಪಟ್ಟಿದ್ದಾರೆ) ಮೈಸೂರು ಸೀಮೆ ಕಡೆಯ ಹೆಣ್ಣು ಹುಡುಕಿ ಮದುವೆ ಮಾಡಿದ. ಚಿನ್ನಾಸಾನಿ ದ್ವಿತೀಯಪತ್ನಿಯಾಗಿ ಸೇರ್ಪಡೆಯಾದಳು. ತನ್ನ ರಾಜಧಾನಿಯಲ್ಲಿ ಸೂಳೆಬಜಾರ ಎಂಬ ಬಡಾವಣೆ ನಿರ್ಮಿಸಿ ವೇಶ್ಯಾವಟಿಕೆಯನ್ನು ಪೋಷಿಸಿದ ನಂತರ ಬಂದ ಅಚ್ಯುತ ರಾಮರಾಯ ಕೂಡ ರಕ್ಕಸಗಿ ಮತ್ತು ತಂಗಡಗಿ ನಡುವಿನ ಹತ್ತು ಮೈಲಿ ವಿಸ್ತೀರ್ಣ ಪ್ರದೇಶದಲ್ಲಿ ಬಹುಮನಿಗಳ ಕೈಯಿಂದ ವಿಜಯನಗರ ಸಾಮ್ರಾಜ್ಯ ಪತನವಾಯಿತು. ಆ ಸುದ್ದಿ ಕೇಳಿ ವೈಷ್ಣವರು ಗುಡಿ ಗುಂಡಾರಗಲಿಂದ ದೇವರುಗಳನ್ನು ಕಿತ್ತುಕೊಂಡು ನಾಡಿನಾದ್ಯಂತ ಚದುರಿದ ರೀತಿಯಲ್ಲಿಯೇ ಸೂಳೆಬಜಾರದಿಂದ ವೇಶ್ಯೆಯರು ಗುಂಪು ಗುಂಪಾಗಿ ಹೊರಟು ಕೊತ್ತಲಗಿಯನ್ನು ಸೋಮವಾರ ಸೇರಿಕೊಂದು ನೆಲೆಯೂರಿದರಾದ್ದರಿಂದ ಅದಕ್ಕೆ ಸೋಮವಾರಪೇಟೆ ಎಂದು ಹೆಸರು ಪ್ರಾಪ್ತವಾಯಿತು. ಕಲೆ; ಸಂಸ್ಕೃತಿ; ರಸಿಕತೆ; ಹುಣಸೆಮರಗಳ ಲಾಲನೆ ಪೋಷಣೆ ಇತ್ಯಾದಿ ವಿವರಗಳನ್ನು ಡಾ. ಅಭಿಷೇಕ್ ಗೋಡ್ಲೆಯವರು ಐತಿಹಾಸಿಕವಾಗಿ ವಿವರಿಸುವ ಪ್ರಯತ್ನ ಮಾಡಿದ್ದಾರೆ. ಇಷ್ಟೆಲ್ಲ ಸಂಶೊದನೆ ಮಾಡಿ ಹೆಸರುವಾಸಿಯಾಗಿರುವ ಅವರು ರಾಜ್ಯಪಾಲರಿಂದ ಡಾಕ್ತರೇಟ್ ಪದವಿ ಸ್ವೀಕರಿಸುವಾಗ ಅವರು ಸಿಫಿಲಿಸ್‌ನಿಂದ ನರಳುತ್ತಿದ್ದರು. ಈಗಲೂ ನರಳುತ್ತಿರುವ ಅವರನ್ನು ಇಲಾಜಿಗೆಂದು ಅಮೇರಿಕಾ ಸಂಯುಕ್ತ ಸಂಸ್ಥಾನದ ರಾಜಧಾನಿಯಾದ ವಾಷಿಂಗ್‌ಟನ್‌ಗೆ ಸರಕಾರದ ವೆಚ್ಚದಲ್ಲಿ ಕಳಿಸುವ ಸಚಿವ ಭಂಡಾರಿಯವರ ಯೋಜನೆಗೆ ಮಖ್ಯಮಂತ್ರಿಗಳಿಂದ ಅಂಗೀಕಾರ ಮುದ್ರೆ ಬಿದ್ದಿದೆ. ವೇಶ್ಯಾವಾಟಿಕೆ ನಿರ್ಮೂಲನಾ ವಿಷಯದಲ್ಲಿ ಅಮೇರಿಕಾ ವಹಿಸುತ್ತಿರುವ ಪಾತ್ರ ಕುರಿತಂತೆ ಅಧ್ಯಯನ ಮಾಡಲು ಡಾ.ಗೋಡ್ಲೆ ಹೋಗುತ್ತಿರುವರೆಂದು ಪಟೇಗಾರ್ ನೇತೃತ್ವದ ಸರಕಾರ ವಿರೋಧಿ ಪಕ್ಷಗಳ ಮನವೊಲಿಸುವ ಪ್ರಯತ್ನ ಮಾಡುತ್ತಿದೆ. ವಾರೊಪ್ಪತ್ತಿನಲ್ಲಿ ವಿರೋಧಿ ಧುರೀಣರು ಡಾ. ಗೋಡ್ಲೆ ಜೊತೆಯಲ್ಲಿ ಭುವನೆಶರಿ ಅಮ್ಮನ್ನಿಯವರನ್ನೂ ಕಳಿಸುವುದಾದರೆ ತಮ್ಮದೇನೂ ಅಭ್ಯಂತರವಿಲ್ಲವೆಂದು ಠರಾವು ಪಾಸು ಮಾಡಬಹುದು. ಪ್ರಮುಖ ಭಿನ್ನಮತೀಯ ಸ್ಚಿವೆಯಾ‌ಅದ ಜಲಜಾಕ್ಷಿ ಮಸಾಲೆಯವರು ಹೀಗೆ ವಿರೋಧ ಪಕ್ಷದ ಮುಖಂದ ಅಡಿವೆಪ್ಪನವರ ಕಿವಿ ಚುಚ್ಚಿರಬಹುದೆಂದು ಆಳುವ ಪಕ್ಷದಲ್ಲಿ ಹರಡಿರುವ ಗುಸುಗುಸನ್ನು ನಾಡಿನ ಟಾಬ್ಲೇಡ್ಲು ಪತ್ರಿಕೆಗಳು ಬರೆಯುತ್ತಲೇ ಇವೆ.

ಬರುವಾಗ ಕಂಕುಳಲ್ಲಿ ಆ ಹೆಬ್ಬೊತ್ತಿಗೆಯನ್ನು ಇಟ್ಟುಕೊಂಡು ಬಂದಿದ್ದರೆ ಚೆನ್ನಾಗಿತ್ತು. ಅದರಲ್ಲಿರುವ ಎಷ್ಟೋ ವಿಷಯಗಳು ಹೆಜ್ಜೆಹೆಜ್ಜೆಗೆ ತಲೆಯಿಂದ ಕಳಚಿಕೊಳ್ಳುತ್ತಲೇ ಇವೆ. ಅದೆಲ್ಲ ಹಾಳಾಗಿ ಹೋಗಲಿ! ಶಾಮಂಣನ ಬಗ್ಗೆ ಅನಸೂಯಮ್ಮ ವಿವರ ಕೊಟ್ಟರೆ ಸಾಕು!

ಬೇವಿನ ಮರದ ಸಂದಿಯಲ್ಲಿ ಮುಳುಗಿ ಸಂಕುಲಮ್ಮನ ಮರದ ಸಂದಿಯಲ್ಲಿ ತೇಲಿದಾಗಲೇ ನನಗೆ ಆ ಪೇಟೆಯ ಗಾತ್ರ ಮತ್ತು ಆಳದ ಅರಿವು ಆಗಿದ್ದು. ಒಂದು ಹಿಡಿ ಬೆಳದಿಂಗಳ ಬೇಳಕಲ್ಲಿ ಹಾಯ್… ಹಾಯ್… ಬಾಯ್… ಬಾಯ್… ನಡೆದಿತ್ತು. ನಾಯಿಗಳು ಯಾವ ಅಪರಿಚಿತರನ್ನು ಕಂಡರೂ ಬೊಗಳುವ ಕೈಕಂಕರ್ಯ ಸೇವೆ ಮಾಡದೆ ಬಾಲ ಅಲ್ಲಾಡಿಸುತ್ತ ಸಹಕರಿಸುತ್ತಿದ್ದವು.
ರಾಕೇಷ್ಕುಮಾರನು ನನ್ನನ್ನು ಮನೆಯೊಂದರ ಅಂಗಳದಲ್ಲಿ ನಿಲ್ಲಿಸಿ ತಾನು ಪರದೆ ಸರಿಸಿ ಬಾಗಿಲು ಪ್ರವೇಶಿಸಿದ. ಮನೆಯೊಳಗಡೆ ಇಬ್ಬರಿಗಿಂತ ಹೆಚ್ಚು ಮಂದಿ ಇರುವರೆಂದು ಹೊರಗೆ ಇದ್ದೇ ಖಚಿತವಾಗಿ ಊಹಿಸಬಹುದಾಗಿತ್ತು.
ಗುರುವಿನ ಕೂಡಿದನೇ ಅರುವಿನ ಮನೆಯಲ್ಲಿ ನೂರೆಂಟು ನಾಯಿ ಬೊಗುಳಿದರೇನು.

ಗುರುವಿನ ಕೂಡಿದನೇಽಽಽ
ಎಣ್ಣೆ ತೀರಿದ ಚಿಮುಣಿ ಚೆಲ್ಲುವ ಬೆಳಕಿನಂತೆ ತತ್ವಪದದ ಪಲ್ಲವಿ ಕ್ಷೀಣವಾಗಿ ಕೇಳಿಸುತ್ತಿತ್ತು. ಕಿಟಕಿ ಬಾಗಿಲುಗಳಿಂದ ಊದುಬತ್ತಿ ಲೋಭಾನದ ಪರಿಮಳ ಹೌದೋ ಅಲ್ಲವೋ ಎಂಬಂತೆ ಹೊರಗಡೆ ಬಂದು ಮೂಗಿಗೆ ಕುಟುಕುತಿತ್ತು. ಒಂಚಣ ಕಾಡು ಬೆಕ್ಕು ತನ್ನನ್ನು ಗಮನಿಸುತ್ತಿದೆ ಎಂದು ಗಾಬರಿಯಿಂದ ತಿರುಗಿ ನೋಡಿದರಲ್ಲಿ ಸುಂಕಲಮ್ಮನ ಮರದ ಬೊಡ್ಡೆಯ ಗೂಡಿನಲ್ಲಿ ಹಣತೆ ಇದ್ದಕ್ಕಿದ್ದಂತೆ ಪ್ರಜ್ವಲಿಸಿ ಉರಿಯತೊಡಗಿರುವುದು ಕಂಡಿತು. ಹೋಗುವವರು, ಬರುವವರು ತನ್ನ ಕಡೆ ‘ಇದ್ಯಾವ ಪ್ರಾಣಿ… ಅಲ್ಲೂ ಸಲ್ಲದೆ ಇಲ್ಲೂ ಸಲ್ಲದೆ ಬಿಕೋ ಎಂಬಂತೆ ನಿಂತಿರುವುದಲ್ಲ್’ ಎಂಬಂತೆ ನನ್ನ ಕಡೆ ನೋಡುತ್ತಿದ್ದರು. ಅಂಥ ನೋತಗಳಿಂದ ಅಪರಾಧಿ ಭಾವದೀಂದ ಕಂಪಿಸ ತೊಡಗಿದೆ. ಇಂಥ ಅಸಭ್ಯವೂ ಅಶ್ಲೀಲವೂ ಆದ ವಾತಾವರಣವನ್ನು ಪ್ರವೇಶಮಾಡಿರುವುದು ಗೊತ್ತಾದರೆ ಹೆಂಡತಿ ಅನ್ನಪೂರ್ಣ ಏನೆಂದುಕೊಳ್ಳುವಳೇನೋ? ಪಾತಿವ್ರತ್ಯವೆಂಬ ಪರಿಕಲ್ಪನೆಯನ್ನು ಗಂಡನಾದ ನನಗೂ ಆರೋಪಿಸುವ ಮಹಿಳೆ ಆಕೆ. ಉದಿಯಲ್ಲಿರುವ ಕೆಂಡವನ್ನು ಮುಚ್ಚಿಡಲಿಕ್ಕೆ ಹೇಗೆ ಸಾಧ್ಯವಿಲ್ಲವೋ? ಹಾಗೆಯೇ ಅಭಿವ್ಯಕ್ತಿಯ ಉಡಿಯಲ್ಲಿರುವ ಸ್ವಾನುಭವಗಲನ್ನು ಲೇಖಕ ಮುಚ್ಚಿಡಲು ಸಾಧ್ಯವಿಲ್ಲ ಜಲಸ್ತಂಬನ ವಿದ್ಯೆ ಗೊತ್ತಿರದಿದ್ದರೂ ಸೋಮವಾರಪೇಟೆಯೆಂಬ ವೈಶಂಪಾಯನ ಸರೋವರಕ್ಕೆ ಜಿಗಿಯಲು ದಡದ ಮೇಲೆ ನಿಂತಿರುವೆ.

ಅಷ್ಟರಲ್ಲಿ ರಾಕೇಶ ಬಂದು ನನ್ನನ್ನು ಒಳಗಡೆ ಕರೆದೊಯ್ದ. ಆ ಮನೆ ಚಿಕ್ಕದೂ; ಚೊಕ್ಕದೂ ಆಗಿತ್ತು. ಮೂಲೆಯಲ್ಲಿ ಹರಿದ ತಬಲಗಳೂ; ಸರಿಗಮ ಕಳಚಿದ್ದ ಹಾರ್ಮೋನಿಯಂ ಪೆಟ್ಟಿಗೆಯೂ ಇದ್ದವು. ಡೆ ಮೇಲೆ ಒಂದೆರಡು ಹಲ್ಲಿಗಳು ನೊಣ, ಸೊಳ್ಲೆಗಳಣ್ಣು ಬೇಟೆಯಾಡುವುದರಲ್ಲಿ೯ ಮಗ್ನವಾಗಿದ್ದವು. ಬಾಗಿಲ ಪಕ್ಕ ಇದ್ದ ಎರಡು ಫೋಟೊಗಳ ಪೈಕಿ ಒಂದರಲ್ಲಿ ಸೀತೆಯನ್ನು ಅಪಹರಿಸುತ್ತಿರುವ ಮಾಯಾ ವಿರೂಪಿ ರಾವಣ ಮತ್ತು ಇನ್ನೊಂದರಲ್ಲಿ ಅಪಹರಣಕ್ಕೀಡಾಗುತ್ತಿರುವ ಸೀತೆ ಈ ಎರಡೂ ಪತ್ರಗಳನ್ನು ವಹಿಸಿರುವುದು ಒಬ್ಬ ಮಹಿಳೆ ಎಂದು ನೋಡುತ್ತಲೆ ಅರ್ಥ ಮಾಡಿಕೊಂಡೆ. ತಲೆ ಬಗಿಲ ಮೆಲೆ ಒಂದೆರಡು ಹಾರಗಳಿಂದಲೂ, ವಿಭೂತಿ ಕುಂಕುಮ ಲೇಪನಗಳಿಂದಲೂ ಮುಚ್ಚಿಹೋಗಿರುವ ಶಾಮಂಣನ ಫೋಟೋ ಇತ್ತು.ಅದನ್ನು ನೋಡಿದೊಡನೆ ಒಂದೆರೌ ಹನಿ ಕಂಣಲ್ಲಿ ತುಳುಕಿದವು.

“ನನ್ ಬಗ್ಗೆ ಬರೆಯೋಕೆ ಬಂದಿದ್ದೀಯಾ ನನ್ ಮಗ್ನೇ… ಇನ್ನೊಬ್ಬರ ಲೈಫ್ ಬಗ್ಗೆ ಬರೆಯೋ ಹಕ್ಕು ನಿನ್ಗೆ ಕೊಟ್ಟೋರು ಯಾರೋ… ಬರ್‍ಕೋ… ಅದೇನು ಬರ್‍ಕೋತೀಯೋ ಬರ್‍ಕೋ… ಮದುವೆ ಅಯ್ಯೂ ಆಯ್ತೂ ಒಂದಿನ ಆದ್ರೂ ಬಂದು ನನ್ನ ಮಾತಾಡಿಸಿದ್ದುಂತಾ ನೀನು ನಿಮ್ಮ ತಾತ ಬರೆದಿಟ್ಟಿರೋ ವೀಲು ನಾಮದ ಪ್ರಕಾರ ನಾನು ವೈದಿಕನಾಗಿದ್ದಿದ್ರೆ ಅವರಂತೆ ನಾನೂ ಸಾಯ್ತಿದ್ದೆ ಕಣಯ್ಯಾ… ನನ್ನ ಸಾವನ್ನೇ ಬದುಕಿನ ಬಂಡವಾಳವನ್ನಾಗಿ ಮಾಡಿಕೊಂಡು ಲೀಲಾಜಾಲವಾಗಿ ಬದುಕುತ್ತಿರುವ ನಿಮ್ಮಂಥವರ ಬದುಕಿಗೆ ಅರ್ಥವಿದೆ ಏನಯ್ಯಾ! ನಾನು ಸಾಯೋಕು ಮುಂಚೆ ಒಂದೊಂದು ರೂಪಾಯಿಗೂ ಒದ್ದಾಡುತ್ತಾ ಬಿದ್ದಿದ್ದಾಗ ಬಂದು ಸಹಾಯ ಮಾಡದ ನೀನು ಈ ನೆವದಿಂದಲಾದ್ರು ಇಂಥ ಕಡೆ ಬಂದು ಶತಾವಧಾನಿಯಂತೆ ಮುಖಮಾಡಿಕೊಂಡು ಕೂತಿದ್ದೀಯಲ್ಲ… ಕೂತ್ಕೋ… ಅವ್ಳು ಬಂದು ಅದೇನು ಹೇಳ್ತಾಳೋ! ಅದಕ್ಕೆಲ್ಲ ನೀನೆಂಗೆ ಅಕ್ಷರ ರೂಪ ಕೊಟ್ಕೋತೀಯೋ… ಬರೆಯೋ ಕರ್ಮಕ್ಕಿಂತ ಮಿಗಿಲಾದ ನರಕ ಎಲ್ಲೂ ಇಲ್ಲ ಎಂಬುದನ್ನು ಮರೆಯಬೇಡ” ಎಂದು ಮುಂತಾಗಿ ಸ್ಥಿರಚಿತ್ರವಾಗಿ ಶಾಮಂಣ ನುಡಿದಂತೆ ಭಾಸ ವಾಯಿತು. ಇಲ್ಲೇ ಇದ್ದರೆ ಎಲ್ಲಿ ಬಂದು ಕುತ್ತಿಗೆ ಹಿಡಿದು ಹೊರತಳ್ಳುವನೋ ಪುಣ್ಯಾತ್ಮ… ಕೂತಿರಲಾರದೆ ನಿಂತಿರಲಾರದೆ ಹೋಗಲಾರದೆ ಖೆಡ್ಡಾದಲ್ಲಿ ಆನೆಯೊಡನೆ ಬಿದ್ದ ಕಾಡು ಬೆಕ್ಕಿನಂತೆ ಒಂದೇ ಸಮನೆ ಚಾಪಡಿಸತೊಡಗಿದೆ. ನನ್ನ ಒದ್ದಾಟ ಗಮನಿಸಿ ರಾಖೇಶ ಕಪಾಟಿನಿಂದ ಫೋಟೊ ಆಲ್ಬಮ್ ತಂದು ಅಕ್ಕ ಪೂಜೆ ಮಾಡ್ಕೋತಿದ್ದಾಳೆ… ಇನ್ನೇನು ಬಂದು ಬಿಡ್ತಾಳೆ… ಅಲ್ಲಿವರ್‍ಗೆ ಆಲ್ಬಮ್ಮು ನೋಡ್ಕೋತಿರಿ ಎಂದು ಕೊಟ್ಟ. ಬೆಳ್ಳಿ ಚುಕ್ಕಿ, ರತ್ನಮಾಂಗಲ್ಯ; ಬಂಜೆ ತೊಟ್ಟಿಲು, ಕುರುಕ್ಷೇತ್ರ, ಗೌಡರ ಗದ್ವ, ನೀನೂ ಸಾಹುಕಾರನಾಗು ಇವೇ ಮೊದಲಾದ ನಾಟಕಗಳಲ್ಲಿ ಅಭಿನಯಿಸುತ್ತಿರುವ ಸ್ಥಿರ ಚಿತ್ರಗಳು ಅದರಲ್ಲಿದ್ದವು. ಸಂಘ ಸಂಸ್ಥೆಗಳಿಂದ ಪ್ರಶಸ್ತಿ ಬಹುಮಾನಗಳು ಸ್ವೀಕರಿಸುತ್ತಿರುವ ಸ್ಥಿರಚಿತ್ರಗಳೂ ಸಹ. ಆಲ್ಬಮ್ಮಿನೊಳಗೆ ಎಲ್ಲೋ ಒಂದು ಕಡೆ ಯಾವುದೋ ಒಂದು ಪಾತ್ರದ ಮರೆಯೊಳಗೆ ಶಾಮಂಣ ಇದ್ದಾನೆಂದುಕೊಂಡು ಹುಡುಕತೊಡಗಿದೆ. ಮದುವೆಯಾದ ಮೊದಲ ವರ್ಷದಲ್ಲಿಯೇ ಸಂಗೀತ ಮತ್ತು ನಾಟಕದ ಗೀಳು ಹಚ್ಚಿಕೊಂಡಿದ್ದ ಎಂದು ಕೇ‌ಇ ತಿಳಿದಿದ್ದೆ. ಸುಶ್ರಾವ್ಯವಾಗಿ ಹಾಡುತ್ತ ತನಗೆ ತಾನೆ ಮೈಮರೆಯುತ್ತಿದ್ದುದೂ ಕೇಳುಗರನ್ನು ಹಗುರಮಾಡಿ ಬ್ಯಲಲ್ಲಿ ಹಾರಾಡಿಸುತ್ತಿದ್ದುದು ನನಗೆ ಗೊತ್ತಿಲ್ಲದಿರಲಿಲ್ಲ.
ಹೊರಗಡೆ ಯಾರೋ ಕುಡಿದು ತೂರಾಡುತ್ತ “ಲೇ ಅನಸೂವಿ… ನಿನ್ ಮರ್‍ತು ಹೆಂಗ್ಲೇ ಬದುಕ್ಲೀ… ನನ್ ಮಹರಾಣಿ, ಹೃದಯವಲ್ಲಭೇ… ಬರ್‍ಲೇನೆ ಒಳಗೆ” ಎಂದು ಕೂಗುತ್ತಿರುವುದು ಕೇಳಿಸಿತು. ಆಗ ಕೂಡಲೆ ಹೊರಗಡೆ ಹೋಗಿ ರಾಖೇಶನು… ” ಇನ್ನೂ ನಮ್ಮಕ್ಕನ ಹುಚ್ಚು ಬಿಟ್ಟಿಲ್ಲೇನ್ರಿ ಸಾಹೇಬ್ರ… ನಿಮ್ಮಗ್ನೂ ಇಲ್ಲೆಲ್ಲೋ ಬಂದಂಗಿದಾನ… ಆತ್ನೇನಾರ ನೋಡಿದ್ರೆ ನಿಮ್ಮನ್ನ ಸುಮ್ನೆ ಬಿಟ್ಟಾನೇನ್ರಿ… ರಿತೈರಾದ ಮ್ಯಾಲ್ ರಾಮಾ ಕೃಷ್ಣ ಅಂತ ಕಾಲಕಳೆಯೋದು ಬಿಟ್ಟು ಒಳ್ಳೆ ಯುವಕರಂಗೆ ಈ ಪ್ಯಾಟಿಯೊಳಗೆ ಕುಡ್ದು ಬರೋದೇನ್ರಿ?… ನಮ್ಮಕ್ಕ ಈ ಲೈನು ಬಿಟ್ತು ಎಷ್ಟು ವರ್ಷಾದ್ವು ಏನ್ಕಥೆ? ಎಲ್ಲಾನೂ ನಿಮ್ಗೆ ಗೊತ್ತಿದ್ದಾದೆ‌ಏ ಐತಿ… ನಿಮ್ಮ ವರ್ತನಕ್ಕ ಮೂಗುದಾಣ ಹಾಕ್ಕೊಂಡು ಹೊರಡ್ರಿ ಲಗೂನ… ಇಲ್ಲಾಂದ್ರೆ ನಮ್ಮಕ್ಕಗೆ ರವುಷ ಬಂದು ಏನಾರ ಘಾತ ಮಾಡ್ಕೊಂಡಾಳು” ಎಂದು ಪರಿಪರಿಯಾಗಿ ಬುದ್ಧಿ ಹೇಳುತ್ತಿರುವುದು ಕೇಳಿಸಿತು. ಅದಕ್ಕಿದ್ದು ಆ ಸಾಹೇಬ “ಲೇ ರಾಕ್ಯಾ ನೀನು ಹೇಳೊದು ಬರೋಬ್ಬರಿ ಐತೆ ಮಾರಾಯಾ… ನಮ್ಮನುಸೂವಿನೇನ ಈ ದೇವ್ರು ಚೆನ್ನಾಗಿಟ್ಟಿರ್ಲಿ ಕಣಪ್ಪಾ… ಈ ಪ್ರಪಂಚದಾಗ ಅದ್ಯಾವ ಘಾತಗಳಿದ್ರೂ ನಾವು ಅನುಭೋಗಿಸೋಣ… ಅಂದಂಗ… ನನ್ ಮಗ ಬಂದಾನಂದೆಲ್ಲ… ಅದ್ಯಾರ ಮನ್ಯಾಗ ಹೊಕ್ಕೊಂಡಿದಾನೆ ಜರ್ರ ತೋರಿಸಲ್ಲ… ನನ್ನೆಂಜಲಿಗೆ ಅವ್ನೂ ಕೈಹಚ್ಚಿದ್ರೆ ಬದುಕೋದಾದ್ರು ಹೆಂಗಪ್ಪಾ? ಎಂದು ಪೀಡಿಸಿದ. ರಖೇಶ ಏನು ಹೇಳಿದನೋ? ಆ ಸಾಹೇಬ ಲೇ ಕಲ್ಯಾಣ… ಎಲ್ಲಿದ್ದೀಯೋ ನನ್ಮಗ್ನೇ… ಮೈ ಡಿಯರ್ ಸನ್ ಕಲ್ಯಾಣ್… ವೇರಾರ್ ಯು… ಮೈ ಬಾಯ್” ಎಂದು ಕಂಣನ್ನು ಗಂಟಲಿಗೆ ತಂದುಕೊಂಡು ಕೂಗುತ್ತ ಹೋಗಲು ರಾಖೇಶನು ಒಳಗೆ ಬಂದು ನಿಟ್ಟುಸಿರುಬಿಟ್ತ. ಅವ್ರು ರಿಟೈರ್ಡ್ ಏ‌ಈ‌ಓ ಸಾಹೇಬ್ರು ಕಣ್ರಿ… ಬೆಂಗ್ಳುರಾಚೆಕಡೇಕಿದ್ದು ರಿಟೈರಾಗಿ ಬಂದಾರ… ತಲೆ ಸಜ್ಜಿಲ್ಲ… ಕುಡ್ದಾಗೊಂದೆ ಹಿಂಗೆ ಒದರಾಡ್ತಾರೆ… ಅವ್ರಿಗೆ ಮಕ್ಳೂ ಮರಿ ಒಂದೂ ಇಲ್ರಿ… ಮಗ ಚಿಕ್ಕ ವಯಸ್ಸಿಗೆ ಸತ್ತೋದ… ಸಮುದ್ರದಾಗೀಜಾಲಿಕ್ಕೋಗಿ… ಬದುಕಿದ್ದಿದ್ರೆ ಅವ್ನೂ ತಮ್ಮಂಗೆ ಈ ಸೋಮಾರಪೇಟೆಗೆ ಬಂದು ಸೂಳ್ರ್ನ ಮಾಡ್ತಿದ್ದ ಅಂತ ಕಲ್ಪಿಸಿಕೊಂಡು ಕೂಗ್ತಿರ್‍ತಾರೆ… ಅಷ್ಟೆ… ಅವರ್ದೂ ಒಂದು ಬದುಕ್ರೀ…” ಎಂದು ಕ್ಷೀಣ ಸ್ವರದಲ್ಲಿ ಮಾತಾಡಿದ… ಅವನಾ‌ಇದ ಈ ಮಾತುಗಳನ್ನು ಹೇಗೆ ಪರಿಭಾವಿಸಬೇಕೋ ಅರ್ಥವಾಗದೆ ನಿಟ್ಟುಸಿರು ಬಿಟ್ಟೆ.

ಲೈಟು ಹೊಗೋದು, ಬರೋದು ಮಾಡುತ್ತಿದ್ದವು. ಅರ್ಥವಾಗದ ಸೆಕೆಯಿಂದ ಬೇಯತೊಡಗಿದ್ದ ನಾನು ಆಗಾಗ್ಗೆ ಎದೆಗೆ ಊದಿಕೊಳ್ಳುತ್ತಿದ್ದೆ. ನನ್ನೊಳಗೆ ಒಂದೊಂದು ಚಣಕ್ಕೆ ಒಂದೊಂದು ರೂಪ ಧಾರಣ ಮಾಡುತ್ತ ಪೀಕಲಾಟಗಳಿಗೆ ಬಲಿಕೊಡುತ್ತಿದ್ದ ಶಾಮಣ್ಣ… ಸ್ವೀಕರಿಸಲಿಕ್ಕೂ ಆಗದಂಥ ನಿರಾಕರಿಸಲಿಕ್ಕೂ ಆಗದಂಥ ವಾತಾವರಣವನ್ನು ನಿರ್ಮಿಸಿ ಅದರೊಳಗೆ ನನ್ನನ್ನು ಕೂಡಿ ಹಾಕಿದ್ದ ಮಾಯಾವಿ ಅವನು. ನಿನ್ನೊಳಗೆ ನಾನು ಅಷ್ಟು ಸುಲಭವಾಗಿ ಸಾಯೋ ಪೈಕಿ ಅಲ್ಲ ಕಣೋ ನಾನು, ಸಾವು ಎಂಬುದು ಕೇವಲ ದೇಹಕ್ಕಷ್ಟೆ ಸಂಬಂಧಿಸಿದ್ದೆಂದು ತಿಳ್ಕೋಬೇಡ… ‘ಶತಮಾನಂ ಭವತು’ ಎಂದು ತಾತ, ಮುತ್ತಾತರಿಂದ ಆಶೀರ್ವದಿಸಿಕೊಂಡಿರಿವ ವ್ಯಕ್ತಿ ನಾನು… ನಾನು ಸಾಯೋದು ಎಂದರೇನು? ಹೊಗೆ ತುಂಬಿದ ಬಚ್ಚಲಂಥ ಬದುಕಿನಲ್ಲಿ ಬದುಕುತ್ತಿರುವ ನಾನು… ಅಂಥ ನಾನು ಸಾಯೋದು ಎಂದರೇನು? ಕಾಲೇಜಿನ ಆಗತೇನ ಇಮಾಃ ಸರ್ವಾ ಪ್ರಜಾನಂದತಿ ಅಂಥ ಹಿರಿಯರು ಹೇಳಿರುವ ಮಾತು ಎಷ್ಟೊಂದು ಸತ್ಯ! ಅನಂದಾತೀತ ಅವಸ್ಠೆಯಲ್ಲಿ ನಿರಾಕಾರ, ನಿರಂಜನ, ನಿರ್ಮನ, ನಿಷ್ಯಾಮ ಇವುಗಳೆಲ್ಲವುಗಳನ್ನು ಸಾರ್ಥಕವಾದ ರೀತಿಯಲ್ಲಿ ಅನುಭವಿಸಿದ ನಾನು… ನೀನೇನು ಅಲ್ಲ ಅಂದುಕೊಂಡಿರುವಿಯೋ ಅದೆಲ್ಲ ಹೌದು… ಸಾಯೋದರೊಂದಿಗೆ ದೇಹದೊಂದಿಗೆ ತನ್ಮಾತ್ರ ನಿಕಟ ಸಂಪರ್ಕ ಇಟ್ಟುಕೊಂಡಿದ್ದ ನಾನು ಮುಂದೆ ಕಾಲದೊಂದಿಗೆ ಅವಿಚ್ಛಿನ್ನವಾದ, ಏಕದಳಧಾನ್ಯದಂಥ ಸಂಪರ್ಕ್ಸ್ವನ್ನು ಇಟ್ಟುಕೊಳ್ಳುವೆ. ನೀನು ನನ್ನನ್ನು ನಿರ್ವಿಕಲ್ಪ ಪ್ರಜ್ಞೆಯಿಂದ ನೋಡಲು ಸಾಧ್ಯವಾಗಲಿಲ್ಲ. ಸತ್ತ ನಂತರ ಸವಿಚಾರ ನಿರ್ವಿಕಲ್ಪ ಪ್ರಜ್ಞೆಯಿಂದ ನೋಡಿ ಅರ್ಥಮಾಡಿಕೊಳ್ಳಲು ಪ್ರಯತ್ನಿಸು” ಎದೆಯ ಮೂಲೆಯಲ್ಲಿ ಸಪ್ಪಳ್ವಾದಂತಾಯಿತು. ಹಿಂದೊಮ್ಮೆ ಬಸ್ ನಿಲ್ದಾಣದಲ್ಲಿ ವಿನಾಕಾರಣ ನಿಂತಿದ್ದ ಅವನು ಆ ಕ್ಷಣ ನನಗೆ ಶಂಕರರ ಗುರುವಿಗೆ ಗುರುವಾಗಿದ್ದ ಗೌಡಪಾದನಂತೆ ಗೋಚರಿಸಿದ್ದ. ಅವನ ಕಾರಿಕೆಯ ಅಲಾಡಶಾಂತಿ(ಬೆಂಕಿವರ್ತುಲದ ನಿರಸನ)ಯೇ ರೋಗಿಯ ರೂಪ ಧರಿಸಿರುವಂತೆ ಹೊಳೆದಿದ್ದ… ಬೇಲಿಸಾಲೊಳಗೆ ಮಿಣುಕು ಹುಳುಗಳು ಹಾರಾಡುವಂತೆ… ಇತಿ ನೋ ಗುರು ದರ್ಶನಮ್ ಎಂದುಕೊಳ್ಳುತ್ತಿರುವಷ್ಟರಲ್ಲಿ ಪಯಣಿಸಬೇಕಿದ್ದ ಬಸ್ಸು ಚಲಿಸಲಾರಂಭಿಸಿತ್ತು.

ಎಂಥ ವೀರನೂ ಕೊಲ್ಲಲಿಕ್ಕಾಗದಂಥ ತಾಪಸನಂತೆಯೋ; ಬ್ರಾಹ್ಮಣನಂತೆಯೋ; ಶಸ್ತ್ರ ತ್ಯಾಗಿಯಂತೆಯೋ; ಕಾತರಿಯಂತೆಯೋ, ಮರಣೋತ್ತರಿಯಂತೆಯೋ; ವ್ಯಸನಿಯಂತೆಯೋ; ನಪುಂಸಕನಂತೆಯೋ; ಶರಣಾಗತನಂತೆಯೋ, ರೋಗಿಯಂತೆಯೋ, ಬಾಯಲ್ಲಿ ಹುಲ್ಲು ಕಚ್ಚಿಕೊಂಡಿರುವನಂತೆಯೋ ಇಂಥ ಹಲವು ಮಾನಸಿಕ ಸ್ಥಿತ್ಯಂತರಗಳನ್ನು ಅನುಭವಿಸುತ್ತ ಎಲ್ಲಿಗೋ ಹೊರಟಿದ್ದ ನಾನು‌ಎಲ್ಲಿಗೂ ಹೋಗಲಾರದೆ ಮನೆಗೆ ಮರಳಿದ್ದೆನು… ಚ ಗೃಹಾಗತಮ್…

ನಿಟ್ಟುಸಿರು ಬಿಡುತ್ತಿದ್ದ ನನ್ನ ಕಡೆ ವಿಚಿತ್ರವಾಗಿ ರಾಖೇಶ ನೋಡುತ್ತ ತಾನೂ ನಿಟ್ಟುಸಿರು ಬಿಟ್ಟಾಗ ಮೊಳಗುತ್ತಿದ್ದ ಗಂಟೆ ಮೌನ ಧರಿಸಿದ ನಂತರ ಎದ್ದ ಅಲೆಗಳ ನೀರವತೆ ಕವಿದಿದ್ದಾಗ ಹದಿನೆಂಟು, ಹತ್ತೊಂಬತ್ತರ ಪ್ರಾಯ್ದ ತರುಣಿಯೋರ್ವಳು ಮಂಗಳಾರತಿ ತಟ್ಟೆ ಹಿಡಿದುಕೊಂಡು ಹೊರಬಂದಳು. ಕರ್ಪೂರದ ಬೆಳಕನ್ನು ಪ್ರತಿಫಲಿಸುತ್ತಿದ್ದ ಆಕೆಯ ಸುಂದರ ವದನ ನೋಡುತ್ತಿರುವಾಗ ರಾಖೇಶ “ಕಾಂಚನಾ ಅಂತಾರ್ರೀ ಈಕೀನ… ಒಂದೇ ತಾಲಿಮಿಗೆ ನಾಟಕಾನ ಬಾಯಿಪಾಠ ಮಾಡಿಬಿಡ್ತಾಳ ನೋಡ್ರಿ… ಅಷ್ಟು ಹುಷಾರೀರಿ ಈಕೆ… ಈಕೆಯಂಗ ಉತ್ತರೆ ಪಾರ್‍ಟು ಮಾಡೋರು ಈ ಪ್ರಾಂತದಾಗ ಯಾರೂ ಇಲ್ಲ ಬಿಡ್ರಿ… ಭರತನಾತ್ಯ, ಕೂಚಿಪುಡಿ, ಓಡಿಸ್ಸಿ; ದಿಸ್ಕೋ ಎಲ್ಲಾ ಅಭ್ಯಾಸ ಮಾಡ್ಯಾಳ್ರೀ…” ಎಂದು ಮುಂತಾಗಿ ಪ್ರವರ ಪ್ರಾರಂಭಿಸಿದ. ಇಷ್ಟೊಂದು ಚಿತ್ತಾಕರ್ಷಕವಾದ ಜೀವಂತ ಪುತ್ತಳಿಯನ್ನು ನಾನು ನೋಡಿದ್ದು ಇದೇ ಮೊದಲು. ಮಂಗಳಾರತಿ ತಗೊಂಡೆ. ಆಕೆ ಕೊಟ್ಟ ಕೊಬ್ಬರಿ ಚೂರಿನ ಪ್ರಾಸದವನ್ನು ಬಾಯಲ್ಲಿ ಹಾಕಿಕೊಂಡೆ. ಆಕೆ ಹೋದ ನಂತರ ತಗ್ಗಿದ ಧ್ವನಿಯಲ್ಲಿ ರಾಖೇಶನು ಶಾಕುಂತಲೆಗೂ ಈ ಹುಡುಗೀದು ಕಥೆ ಡಿಟ್ಟೋ ಅಂದ್ರ ಡಿಟ್ಟೋ ಐತಿ ನೋಡ್ರಿ… ಆ ಮಟ್ಟಿಗೆ ತಂದೆ ಆದೋನು ಒಂದು ಕಡೆಗೆ ಹೋದ. ಆ ಮಟ್ಟಿಗೆ ತಾಯಿ ಆದಾಕಿ ಒಂದು ಕಡಿಗೆ ಹೋದ್ಲು… ನಮ್ಮನಸೂವವ್ವ ಕಣ್ವ ಋಷಿಗಳಂಗೆ ತಂದಿಟ್ಟುಕೊಂಡು ನಯ ನಾಜೂಕು ಕಲಿಸಿದ್ಲು… ಆ ಲುಚ್ಚಾ ಗುಲಾಂನಬಿ ಈ ಹುಡುಗಿ ಮ್ಯಾಲ ಕಣ್ಣಿಟ್ಟಾನ ನೋಡ್ರಿ…” ಎಂದ. ಕ್ಯಾಬಿನೆಟ್ ದರ್ಜೆಯ ಮುಖ್ಯ ಲೈಂಗಿಕ ಪ್ರಕರಣಗಳ ಪ್ರಮುಖ ಸೂತ್ರಧಾರಿಯಾಗಿ ಮಾರ್ಪಟ್ಟಿದ್ದ ಗುಲಾಮ್ನಬಿ ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿ ವಲಯ ಪ್ರವೇಶಿಸಲು ಪ್ರಯತ್ನ ನಡೆಸಿರುವುದು ಆ ಕೂಡಲೆ ನೆನಪಾಯಿತು.
ಹುತ್ತದ ಕೋವೇಲಿ ಹುಟ್ಟಾಳೆ ನಮ್ಮವ್ವ
ಗುಡುಗನಾಡ್ಯಾಳೆ ದೊರೆದೇವಿ…
ಪಕ್ಕದ ಮನೆಯಲ್ಲೋ; ಎದುರು ಮನೆಯಲ್ಲೋ ಕೆಲವು ಮಹಿಳೆಯರು ಗುಂಪು ಗೂಡಿ ಹಾಡುತ್ತಿರುವರೆಂದುಕೊಂಡೆ.
ತನ್ನಾಗಮನದ ಪೂರ್ವ ಸೂಚನೆ ನೀಡುತ್ತಿರುವ ರೀತಿಯಲ್ಲಿ ಸಜ್ಜುಗೊಂಡ ಮನೆಯ ಒಳಕೋಣೆಯಿಂದ ಯಾರೋ ಈ ಕಡೆ ಹೊರಟಿರುವಂದೂಹಿಸಿ ಆ ಕಡೆ ತಿರುಗಿ ನೋಡಿದೆ. ರಾಖೇಶ ಮುಖಕ್ಕೆ ವಿಶೇಷ ಶಿಸ್ತು ಧರಿಸುತ್ತಿರುವಷ್ಟರಲ್ಲಿ ಒಳಗಿನಿಂದ ಮಹಿಳೆಯೋರ್ವಳು ಅವನತಮುಖಿಯಾಗಿಯೇ ಬಂದಳು. ಆದರೆ ನಾನು ಅನೇಕ ನಾಟಕಗಳಲ್ಲಿ ಪಾತ್ರ ವ್ಹಿಸಿದ್ದನ್ನು ಬಹುದೂರದಿಂದ ನೋಡಿದ್ದೆ.ಝಗಝಗಿಸುವ ಬೆಳಕಲ್ಲಿ ಬಣ್ಣಗಳಾಡಂಬರದಲ್ಲಿ ಮುಳುಗಿರುತ್ತಿದ್ದ ಈಕೆಯನ್ನು ಗುರುತಿಸಲಾಗಿರಲಿಲ್ಲ… ಆಯಾ ಪಾತ್ರಗಳೊಂದಿಗೆ ತದ್ಯಾತ್ಮ ಹೊಂದಿ ನಟನೆಯ ಮೂಲಕ ಪ್ರೇಕ್ಷಕ ವರ್ಗವನ್ನು ಮಂತ್ರಮುಗ್ದ ಮಾಡುತ್ತಿದ್ದ ಆ ಮನಮೋಹನ ನಟಿ ಈಕೆ ಎಂದೊಂದು ಕ್ಷಣ ದಿಟ್ಟಿಸಿದೆ.

ಇಡಿ ಮನೆಯನ್ನು ಅಸಹನೀಯ ಮೌನ ಕವಿಯಿತು. ಕ್ರಮೇಣ ಒಂದು ಹಿದಿ ಸೆರಗಿನ ಉಂಡೆಯನ್ನು ಬಾಯಿಗಡ್ದ ಇಟ್ಟುಕೊಂಡ ಆಕೆಯನ್ನು ಮಾತಾಡಿಸದೆ ಇರಲು ನನ್ನಿಂದ ಸಾಧ್ಯವಾಗಲಿಲ್ಲ.
“ಅನಸೂಯಮ್ಮನವ್ರೆ…” ಎಂದೆನೋ ಇಲ್ಲವೋ…

ದುಃಖದ ಕಟ್ಟೆಯೊಡೆದು ಆಕೆಯ ಕಪ್ಪು ಕವಿದಿದ್ದ ಕಣ್ಣುಗಳಿಂದ ನೀರು ದುಮ್ಮಿಕ್ಕತೊಡಗಿತು. ಮಹಾಶ್ವೇತೆಯಂಥ ಆಕೆಯನ್ನು ಹೇಗೆ ಸಂತೈಸಬೇಕೋ? ಅರ್ಥವಾಗಲಿಲ್ಲ. ರಾಜಶೇಖರ ವಿಳಸದ ತಿರುಕ್ಕುಳುವಿನಾಚಿ ಪ್ರಸಂಗ ನೆನಪಾಯಿತು.

“ಅಮ್ಮಾ… ಅಳಬೇಡಿ… ಸುಂಕಿರಿ… ಆದದ್ದು ಆಗಿಹೋಯ್ತು… ಅದ್ನೆಲ್ಲ ನೆನಪಿಸಿಕೊಂಡ್ರೇನು ಪ್ರಯೋಜನ?” ಎಂದೆ. ಮುಂದೇನು ಮಾತಾಡಬೇಕೆಂದು ತಿಳಿಯದೆ?
“ಅಯ್ಯಾಯ್ಯೋ… ಅದ್ಯಾಂಗ ಸುಮ್ಕಿರ್‍ಲಿ… ಯಪ್ಪೋ… ಆ ನಿಮ್ ಗೆಣೆಕಾರ್‍ನ ನೆನೆಸ್ಕೊಂಡ್ರೆ ಎದಿ ಹೊಡ್ದೋಗ್ದದ್ರೀ… ಅಂಥ ಮನುಷ್ಯ ಹಿಂದೂ ಹುಟ್ಟಿಲ್ಲಾ ಮುಂದೂ ಹುಟ್ಟಾಕಿಲ್ರೀ ಯಪ್ಪಾ… ಹೋಟ್ಟೇಲಿ ಮಗ್ನಿಗಿಂತ ಜ್ವಾಪಾನ ಮಾಡಿದ್ನೆಲ್ಲೆಪ್ಪಾ… ಉಂಡೆಂಜಲ ಬಳುದು ಎದ್ಯಾಗ ಅವರ ತಲಿ ಇಟ್ಕೊಂಡು ಕಾಪಾಡಿದ್ನಲ್ಲಪ್ಪೋ… ಇರೊ ಎಲ್ಡು ಮುತ್ತಿನಂಥ ಮಕ್ಳ ಮಾರಿನಾರ ನೋಡ್ಕೊಂಡು ವಯನಾಗಿರಬಾರದಿತ್ತೇ ಅವ್ನೂ… ಸತ್ತು ಎದಿ ಬಣವೇಗೆ ಕೊಳ್ಳಿ ಇಟ್ಟುಬಿಟ್ನಲ್ಲಾ… ಅಯ್ಯಯ್ಯೋ ಅವನ್ನ ಹೆಂಗ ಮರ್ತು ಬದುಕ್ಲೀ ನನ್ನಪ್ಪಾ…” ಎಂದು ಆಕೆ ಭೂತಕಾಲದ ತಿಪ್ಪೆ ಕೆದರಿ ಭ್ರೂಣಗಳನ್ನು ಹೆಕ್ಕಿ ಪೇರಿಸತೊಡಗಿದಳು. ಅವು ಒಂದೊಂದು ದಿಕ್ಕಿಗೆ ಒಂದೊಂದು ರೀತಿ ಸಿಡಿದು ಒಬ್ಬೊಬ್ಬರನ್ನು ರೀತಿ ದಂಗು ಬಡಿಸತೊಡಗಿದವು. ಅದೇ ತಾನೆ ತಾರುಣ್ಯದ ಹೊಸ್ತಿಲು ದಾಟಿದ್ದ ಕಾಂಚನ “ಅಳಬ್ಯಾಡನಯವ್ವಾ…” ಎಂದು ತಾನೂ ಅಳಲು ಶುರುಮಾಡಿದರೆ ರಾಖೇಶನಂತೂ “ಯಕ್ಕಾ… ಅದೆಷ್ಟು ಅಳ್ತಿಯೋ ಅಳು… ನಮ್ಗೂ ಹೇಳಿ ಕೇಳಿ ಸಾಕಾಗಿ ಹೋತು… ಕಂಣಾಗ ನೀರು ಖಾಲಿ ಆದ ಮ್ಯಾಲೆ ನೀನೆ ಸುಮ್ಮಕಾಗ್ತಿ…” ಎಂದು ಚುಟ್ಟ ಹಚ್ಚಿಕೊಂಡು ಬುಸುಬುಸು ಹೊಗೆ ಬಿಡತೊಡಗಿದನು. ಲೋಬಾನ ದರಬಾರಗರ ಬತ್ತಿ ಹೊಗೆಯೊಳಗೆ ತಂಬಾಕಿನ ಹೊಗೆ ಬೆರೆತು ಅದೊಂದು ನಮೂನೆ ವಾಸನೆ ಸೃಷ್ಟಿಯಾಯಿತು. ಆ ವಾಸನೆ ಎಂಬುದು ಅಂತರಿಕ್ಷ ಮಾರ್‍ಗದಲ್ಲಿ ರಚಿಸಿದ ಛಪ್ಪನ್ನಾರು ಹಾದಿಗಳಗುಂಟ ಅಕ್ಕಪಕ್ಕದ ಮನೆಯ ಹೆಣ್ಣಾಳು ಗಂಡಾಳುಗಳು ನಾ ಮುಂದು ತಾ ಮುಂದು ಅಂತ ಮನೆ ತೂರಿಕೊಂಡರು. ತೂರಿಕೊಂಡವರು ಸತ್ತ ಶಾಮಣ್ಣಗಿವನೇನಾಗಬೇಕೂಮ್ತ ನನ್ನ ಕಡೆಗೂ; ನಿನ್ನೆದಿಯೊಳಗೀಮೂಳ ಅದ್ಯಾವ ಆಟಂಬಾಂಬು ಇಟ್ತನೇ ತಾಯಿ ಅಂತ ಆಕೆಯ ಕಡೆಗೂ ಹುಳಿ ಹುಳಿ ನೋಡತೊಡಗಿದರು. ಅಳೊದು ಕರೆಯೋದು ತಮ್ಮ ಪೇಟೆಗೆ ತೀರ ಸಹಜವೆಂಬಂತೆ ಕೆಲವರು ರಾಖೇಶನೊಂದಿಗೆ ಗುಸುಗುಸು ಪಿಸಿಪಿಸಿ ಮಾತಾಡತೊಡಗಿದರೆ ಇನ್ನು ಕೆಲವರು ಅನಸೂಯಮ್ಮನ ಮೇಲೆ ಅಡರು ಬಿದ್ದು “ಅಯ್ಯಯ್ಯೋ… ನಿನ್ ಬದುಕು ಕಣ್ಣೀರೊಳಗೆ ಮಾರಿ ತೊಳಿಯೋ ಹಂಗಾಯ್ತಲ್ಲೇ… ಇಂಥದೊಂದು ಗಂಟು ಬೀಳೋಕೆ ನೀನೇನು ಕರುಮ ಮಾಡಿದ್ದೀಯೇಽಽ.. ಒಂದಿನಾನಾದ್ರು ಹೊಟ್ತೆ ತುಂಬ ಉಂಬ್ಲಿಲ್ಲ… ರೆಪ್ಪೆಗೆ ರೆಪ್ಪೆ ಹಚ್ಚಿ ನಿದ್ದೆ ಮಾಡಿಲ್ಲಲ್ಲೇ…ಯವ್ವೋ… ಯತ್ತೇ… ಅಕ್ಕೋ… ಮಗ್ನೇ… ತಂಗೇ…” ಎಂದು ಮುಂತಾಗಿ ಒಂದೊಂದು ರಾಗಕ್ಕು ಒಂದೊಂದು ವಿಶೇಷಣ ಮುಡಿಸಿ ಬೋರೆಂದು ಅಳತೊಡಗಿದರು. ಅವರೆಲ್ಲರ ಕಂಣೀರು ಸಿಂಬಳ ಧಾರೆ ಬಿದ್ದೂ, ಬಿದ್ದೂ ಮೈಗೆ ಒಂಥರಾ ತಂಪಾದಂಗಾಗಿ ಅನಸೂಯಮ್ಮ ಧಡಾರನೆ ಫ್ಯಾನಿನ ಮಟ ಎದ್ದು ನಿಂತು… ನಮ್ಮ ಶಾಮನ್ನ ಹೆಣಕೆ ಬೆಂಕಿ ಹಚ್ಚಿದೀ ಕಯ್ಗಳ್ಗೆ ಕರಿ ನಾಗ್ರಾವು ಕಡಿಯಾ… ನಂಗೆ ಬರಬಾರ್ದ ರೋಗ ಬಂದು ಸಾಯಾ… ಮರೀ ಬೇಕಂದ್ರ ಮರಿಗೊಡಸಲ್ವಲ್ಲ ಅವ್ನೂ… ನಾನೇನು ಕಡ್ಮೆ ಮಾಡ್ದೆ ಅಂತ ಸತ್ತೋ ನೀನು… ಆ ದೇವ್ರೆಂಭೋನು ನನ್ನಾಯುಷ್ಯಾನ ಅವ್ನಿಗೆ ಕೊಟ್ಟು ಇನ್ನೂ ನಾಕ್ಕಾಲ ಬದುಕಿಸಬಾರ್ದಿತ್ತೇ… ಶಾಮಾ… ಶಾಮಾ… ನನ್ನೂ ಕರ್ಕೊಂಡೋಗಬಾರ್ದೇನೋ ಸುಡ್ಗಾಡಿಗೆ… ನಿನ್ನೆಣ್ತಿ ಅಂದ ಒಂದೊಂದು ಮಾತು ನೆನೆಸ್ಕೊಂಡ್ರೆ ಈ ಭೂಮಿ ಮ್ಯಾಲ ಬದುಕಬಾರ್ದೋ ನಾನು… ನಿನ್ ಮಕ್ಳೂ ನನ್ ಮಕ್ಳೂ ಅಲ್ಲೇನೋ? ಕಣ್ ಪ್ರೀತಿ ನೋಡಂಗಿಲ್ಲಲ್ಲೋ ನಾನು… ‘ಲೇ ಅನಸೂಯಾ ಹಿಂದಿನ ಜನುಮದಾಗ ನೀನು ನನ್ತಾಯಿಯಾಗಿ ಹುಟ್ಟಿದ್ದೇನೆ ಅಂತಿದ್ದೇಯಲ್ಲೋ… ಶಾಮ…ಶಾಮಾ… ಶಾಽಽಮಾಽಽ…” ಎಂದು ಮೂರ್ಚೆ ಹೋಗಿ ನೆಲದಮೇಲೆ ಅಂಗಾತ ಬಿದ್ದುಬಿಟ್ತಳು. ಒಂಚಣ ಎಲ್ಲರೂ ಹೌಹಾರಿ ಮತ್ತೆ ಚೇತರಿಸಿಕೊಂಡರು. ನೀರು ತರಲಿಕ್ಕೆ ಹೋದವರು ನೀರು ತಂದರು, ಬೆಂಕಿ ತರಲಿಕ್ಕೆ ಹೋದವರು ಬೆಂಕಿ ತಂದರು. ಬೀಸಣಿಕೆ ತರಲಿಕ್ಕೆ ಹೋದವರು ಬೀಸಣಿಕೆ ತಂದರು. ಆ ಗುಂಪಿನಲ್ಲಿತರಾವರಿ ಮಂದಿ ಇದ್ದರು. ನನ್ ಗತಿ ಏನೇ ಯವ್ವಾ ಎಂದು ಎದೆ ಮೇಲೆ ತಲೆ ಇಟ್ಟ ಕಾಂಚನಾಳ ಭುಜ ಹಿಡಿದು ಆಚೆ ಸರಿಸಿ ಆರೆಂಪಿ ಅಮರಪ್ಪ ಒಂಡು ಸೂಜಿ ಮಾಡಿದ್ರೆ ಹೋದ ಜೀವ ಮತ್ತೆ ಬರ್‍ತದೆ ಎಂದು ಸಿರಂಜಿ ಪ್ರದರ್ಶಿಸಿದನು. ಹ್ರಾಂ ಹ್ರೀ ಹ್ರೂಂ ಈ ಮೂರು ಮಂತ್ರಗಳಿಗೆ ಹೆಸರಾದ ಅಂಬನ್ನ “ಲೋ ಅಮರಪ್ಪ… ಇದು ಬ್ರಮ್ಮ ಪಿಶಾಚಿ… ನಿನ್ನ ಇಂಗ್ಲೀಚು ಚೂಚಿಗೆ ಮೈಟು ಮಾಡೊದಲ್ಲ” ಎಂದು ಆರೆಂಪಿ ರಟ್ಟೆ ಹಿಡಿದು ಆಚೆ ತಳ್ಳಿ ಒಂದು ಕೈಲಿ ಹುಣುಸೆ ಬರಲನ್ನೂ; ಇನ್ನೊಂದು ಕೈಲಿ ನಿಗಿ ನಿಗಿ ಉರಿವ ಕೆಂಡವನ್ನೂ ಹಿಂದಕ್ಕೂ ಮುಂದಕ್ಕೂ ವಾಲಾಡುತ್ತ ಪ್ರದರ್ಶಿಸಿ… ಇನ್ನೇನು ಅವನು ಆಕೆಯ ಮೈಯನ್ನು ಚಟ್ನಿ ಮಾಡುವನೆಂದಾಗ ಚೀಪಾಪೀಸರು ಗೋವಿಂದಮ್ಮ “ಎಲವೋ ಅಂಬಣ್ಣ… ಒಳ್ಳೆ ಮಾತ್ನಿಂದ ದೂರಸರಕಮ್ತೀಯಾ… ಇಲ್ಲಾ ಬಾಯಾಗ ಉಚ್ಚಿ ಹೊಯ್ಲಾ…” ಎಂದು ಹೆಡೀತ್ತಿ ಬುಸಗುಟ್ಟಿದಳು. ಸೋಮಾರಪೇಟೆಯ ಕೊತ್ವಾಲ ರಾಮಚಂದ್ರಳೆಂದೇ ಹೆಸರಾಗಿರುವ ಚೀಪಾಪೀಸರ್ರು ಗೋವಿಂದಮ್ಮ ಈ ಪ್ರಕಾರವಾಗಿ ನಾನೆಂಭೋ ಮಾನವರನ್ನು ಆಚೇಕ್ಕ, ಈಚೆಕ್ಕ ಕಳಿಸಿ ಆ ಕಡೆಗೊಂದು ಈ ಕಡೆಗೊಂದು ಕಾಲು ಹಾಕಿ ಅನಸೂಯಮ್ಮನ ತಲೆಯನ್ನು ಬೊಗಸೆಯಿಂದೆತ್ತಿ “ಚಲೋ ಮಾತ್ನಿಂದ ಕಂಣ ತೆರೀತೀಯೊ… ಇಲ್ಲಾ… ನಾನೀ ಪ್ಯಾಟಿ ಬಿಟ್ಕೊಟ್ಟು ಹೊಂಟೋಗ್ಲೋ” ಎಂದು ಒಂದು ಮಾತು ಅಂದು ಮುಖಕ್ಕೆ ಒಂದು ಬೊಗಸೆ ನೀರು ಚುಮುಕಿಸಿದಳು… “ಹಾರವನ ಸಾವಾಸ ಮಾಡ್ದೀ ಸಾಕ್ದೀ ಸಲುವಿದಿ, ಬೆಂಕೀಲಿಟ್ಟಿ. ಅವ್ನ ನೆನಪಿಗೂ ಬೆಂಕಿ ಇಟ್ಟು ಆರಾಮಾಗಿರೋದು ಬಿಟ್ಟು ಹಿಂಗ್ಯಾಕ ಮೂರ್ಚೆ ಹೋಗಿದ್ದೀ. ಕಂಣು ತೆರಿಲಿಲ್ಲಾಂದ್ರೆ ಈಗಿಂದೀಗ್ಲೇ ನಾನೊಂಟು ಹೋಗ್ತೀನಿ ನೋಡು” ಎಂದು ಎರಡು ಮಾತು ಎರಡು ಬೊಗಸೆ ಸುರುವಿದಳು.ಅದಕ್ಕೂ ಕಂಣು ತೆರೆಯದಿದ್ದಾಗ “ಮಿಂಡನನ್ನೂ ಮಗನಂಗೆ ಸಾಕಿ ನಂಸ್ವಾಮಾರಪ್ಯಾಟಿ ಮ್ಯಾಲ ತಾಯ್ತನದ ಶಿಖಿರ ಇಟ್ಟೆಲ್ಲೇ; ಅನಸೂವಿ… ನಿನ್ನಂಥಾಕಿ ಪ್ರಗ್ನೆ ತಪ್ಪಿ ಬೀಳೋದೆಂದ್ರೇನು… ನೀನು ಕಂಣು ತೆರೀಲಿಲ್ಲಾಂದ್ರ ಈಗಿಂದೀಗ್ಲೆ ನಾನೊಂಟೋಗ್ತೀನಿ” ಎಂದು ಮೂರು ಮಾತು ಅಮ್ದು ಮೂರು ತಂಬಿಗೆ ನೀರು ಸುರುವಿದೊಡನೆ ಜಲಜಲ ಬೆವೆಯುತ್ತ ಅನಸಮ್ಮ ದಿಗ್ಗನೆದ್ದು ಕುಳಿತು “ಯವ್ವಾ… ಗೋವಿಂದವ್ವಾ… ಹೆಂಗ ಬದುಕಿರ್ಲೆ ಅಂಥವ್ನ ಕಳ್ಕೊಂಡು” ಎಂದು ಎದೆಗೆ ಕೈಹಚ್ಚಿ ಮೇಲೆಳೆದುಕೊಂಡಳು… ಅವನ ಸಂತೆ ಹೊತ್ತುಂಟ್ಲೆ ತನ್ ಸಂತೆ ತಾನು ಮುಗಿಸ್ಕೊಂಡ… ಹೋಂಟೋದ… ನಮ್ನಿನ್ನೂ ಸಂತೆ ಮುಗ್ದಿಲ್ಲೆ ಮಗ್ಳೇ… ಎದ್ದೇಳು… ಬಚ್ಚಲಕೋಗಿ ಮಕ ಮಾರಿ ತೊಳ್ಕೊಂಡು ಹಣೆಮ್ಯಾಲ ಅವ್ವನ ಅಂಗಾರ ಹಚ್ಕಾ… ಎಲ್ಲಾ ಸರಿ ಹೋತೈತಿ… ಚಿಂತೆ ಮಾಡಬ್ಯಾಡ…” ಎಂದು ಎಬ್ಬಿಸಿ ಕಾಂಚನಾಳ ಕೈಗೆ ಕೊಟ್ಟು ಬಚ್ಚಲಿಗೆ ಕಳಿಸಿದಳು.

“ಇದು ಶಾಮಂಣನ ದೆವ್ವಭೇ… ಗೋಯಿಂದೀ… ಬರೋ ಅಮ್ಮಸೆ ರಾತ್ರಿ ಬಿಡಿಸಿದ್ರೆ ಸರೆ… ಇಲ್ಲಾಂದ್ರೆ ಅದು ಈಕಿನ ತಗೊಂಡೊಯತದೆ ನೋಡ್ತಿರು ಎಂದು ಅಂಬಣ್ಣನ ಎದುರು ಕುಪ್ಪಳಿಸಿ ನಿಂದು “ಯೇನಂದ್ಯೋ ನನ್ನಾಟಗಳ್ಳ… ಈಕೆ ವ್ಯೋನು ಮಾಡ್ಯಾಳಾಂತ ಶಾಮ ಆಕೀನ ತಗೊಂಡೊಯ್ತಾನೋ… ಒಯ್ದ್ರೆ ನನ್ ತಗೊಂಡೊಗ್ಬೇಕು ನೋಡು… ನೀನೇನು ಕಡ್ಮೆ ಉರಿಸ್ಕೊಂಡು ತಿಂದ್ಯಾ ಆ ಶಾಮಂಣನ್ನ… ಬಾಯಿ ಸತ್ತೋರು ಈ ಪ್ಯಾಟಿಗೆ ಬರದಂಗೆ ಮಾಡಿ ಬಿಟ್ರೆಲ್ಲೋ ನಿಮ್ಮಂಥೋರೆಲ್ಲ ಸೇರ್‍ಕಂಡು… ನಿನ್ನಂಥ ಭಡ್ಕಾವ್ ಮಂದಿಗೆ ಮುಯ್ಯಿ ಒಪ್ಪಿಸಿದ್ವಿ ನೋಡು ನಮ್ಗೆ ನಾವು ಕಾಲ್ಮರೀಲಿ ಹೊಡ್ಕೋಬೇಕು…” ಎಂದು ಘರ್ಜಿಸಿ ಕ್ಯಾಕ್ ಅಂತ ಮುಖಕ್ಕೆ ಉಗುಳಿದಳು. ಅವನು ಮುಖ ಒರೆಸಿಕೊಂದು ಹೋದನು… ಅಲ್ಲಿದ್ದ ಅನೇಕರು ಅವನ ದಾರಿ ಹಿಡಿದರು.

ಗೋವಿಂದಮ್ಮ ನನ್ನ ಮುಖಕ್ಕೆ ಮುಖ ಅನಿಸಿ ನಿಂತುಕೊಂಡು “ಏನಪ್ಪಾ… ಓದ್ಕಂಡಂತನ್ನಂಗೆ ಕಾಣಿಸ್ತೀ… ಏನಪ್ಪಾ… ಶಾಮನ ಗೇಣೆಕಾರನಂಗೆ ಕಾಣಿಸ್ತಿದ್ದೀ… ನಿಂಗೆ ರವಷ್ಟಾದ್ರು ತಿಳಿಬಾರ್ದೇನು? ಸತ್ತೋನ ಸಂಗ್ತಿ ಎತ್ತಿ ನಮ್ಮ ಅನಸೂವಿ ಎದಿಗ್ಯಾಕ ಬೆಂಕಿ ಹಚ್ಚಿದ್ಯೋ… ಅನಸೂವಿ ನಮ್ ಪ್ಯಾಟಿಗೆಲ್ಲ ಮಗ್ಳಿದ್ದಂಗೆ… ನಾವೆಲ್ರು ನಮ್ ನಂ ಪ್ರಾಣಕ್ಕಿಂತ ಹೆಚ್ಚಾಗಿ ನೋಡ್ಕೊಂತಿದ್ದೀವಿ…ಈಕಿಗೆ ಏನಾರ ವಂಚೂರು ಹೆಚ್ಚೂ ಕಡ್ಮೆ ಆದ್ರೆ ನಾವೆಲ್ಲ ನಿನ್ನ ಸುಮ್ನೆ ಬಿಡಾಕಿಲ್ಲ ನೋದು… ಗೋಣು ಮುರ್ದು ಅವ್ವನ ಮರ್ಕೆ ನೇತಾಕ್ತೀವಿ… ಪೋಲೀಸ್ರೂ ನಮ್ದೇನು ಹರಕನ್ನಂಗಿಲ್ಲ… ಹ್ಹಾಂ… ಎಂದು ಕಟುಮ್ಮನೆ ಗೋಟಡಕೆ ಕಡಿದು ಸದ್ದು ಮಾಡಲು ನಾನು ಜಲಜಲನೆ ಬೆವತು ಹೋದೆನು.
ನನಗೆ ಸಪೋರ್ಟಾಗಿ ಹೆಂಗತ್ತೆ ಹಿಂಗತ್ತೆ ಅಂತ ಬಂದ ರಾಖೇಶನನ್ನು “ಏನಲೋ ಮೂಳಾ ಎಂದು ತಡವಿಕೊಂಡಳು. “ಲೋ ರಾಕೇ… ಚಾ… ನನ್ನಾಟಗಳ್ಳನೇ… ಯೇಸು ಮಂದಿಯ ಮನಿ ವಸೂದಿ ಮಾಡಿರುವಿಯಲ್ಲೋ… ನೀನೇ ಅಲ್ಲೇನೋ ಬ್ಯಾಂಕಿನಾಗಿದ್ದ ಶಾಮಂಣನ್ನ ಕರ್ಕೊಂಡು ಬಂದು ನಮ್ಮನುಸೂವಿಗೆ ಜತಿ ಮಾಡಿದ್ದು… ನನ್ ಮಗ್ಳು ಸಾವಿತ್ರೀನ ಅಡ್ಡ ಹಾಕ್ಲಿಕ್ಕೆ ನೋದ್ದೆಲ್ಲೋ ಬಾಡ್ಕಾವ್… ಆಕೀನ ಒಪ್ಲಿಲ್ಲ ಸರಿ… ಒಪ್ಪಿದ್ದಿದ್ರೆ ಈಕೆಯಂಗೆ ಆಕೀನು ಕಂಣೀರಲ್ಲಿ ಕಯ್ಯ ತೊಳೀಬೇಕಾಗಿತ್ತಾ… ಅವ್ನೀಗೆ ಬದ್ಲಿ ನಿನ್ನಾದ್ರು ಹೊತ್ಕೊಂಡೋದ್ರಾ… ಥೂ… ನಿನ್ನ ತಲಿಹಿಡುಕ ಜನುಮಕ್ಕೀಟು ಬೆಂಕಿ ಹಾಕಾಽಽ” ಎಂದು ತರಾಟೆಗೆ ತೆಗೆದುಕೊಂಡಳು.
ಆ ಕೂದಲೆ ತಲೆ ಹಿಡುಕರ ಸಂಘದ ಗೌರವ ಸದಸ್ಯರಾದ ಯಂಕೋಬಿ, ಮಲ್ಲ, ತಿಗಳ ಮುಂತಾದವರು ತಮ್ಮ ಅಧ್ಯಕ್ಷ ರಾಖೇಶನ ನೆರವಿಗೆ ಬಂದರು.
“ನೋದು ಗೋವಿಂದವ್ವೇ… ನಾವು ತಂದು ಅಡ್ಡ ಹಾಕದಿದ್ದಲ್ಲಿ ನೀವೆಲ್ಲ ಹುಣಸೇ ಬೊಟ್ಟು ಕುಟ್ಗೆಂತ ಇರ್ಬೇಕಾಗಿತ್ತು…” ಎಂದು ತಿಗಳ ತನ್ನ ಬೋಳು ನೆತ್ತಿ ಸವರಿಕೊಂಡ.
ಕೆಲವು ವೇಶ್ಯೆಯರು ಗೋವಿಂದಮ್ಮನ ಪರ ಕಚ್ಚೆ ಏರಿಸಿ ನಿಂತಿರು… ಅವರ ಮತ್ತು ತಲೆ ಹಿಡುಕ ಸಂಘದ ಸದಸ್ಯರ ನಡುವೆ ಜಟಾಪಟ ಶುರು ಆಯಿತು. ಒಬ್ಬರ ಜುಟ್ಟು ಒಬ್ಬರು ಹಿಡಿದುಕೊಂಡು ಎಳೆದಾಡತೊಡಗಿದರು. ಇಂಥದೊಂದು ಇತಿಹಾಸ ಪ್ರಸಿದ್ಧ ಜಗಳದಿಂದ ಹುರುಪುಗೊಂಡ ಆರೆಂಪಿ ಅಮರಪ್ಪ “ಜಗಳಾಡೊದಿದ್ರೆ ಬೀದಿ ಬಯಲಾಗ ಜಗಳಾಡ್ರಿ… ನಮ್ ಅನಸೂಯವ್ವಂಗೆ ಮತ್ತೆ ತಲಿ ನೋವು ಮಾಡಬ್ಯಾಡ್ರಿ…” ಎಂದು ಕೈಯಲಿದ್ದ ಸಿರಂಜಿಯನ್ನೇ ವಜ್ರಾಯುಧದಂತೆ ಝಳಪಿಸುತ್ತ ಅವರನ್ನು ಎಬುಡಾ ದಬುಡಾ ಹೊರಕ್ಕೆ ತಳ್ಳಿದನು. ರಾಖೇಶನು ನನ್ನ ರಟ್ಟೆ ಹಿಡಿದು ಹೊರಗೆ “ಅನಸೂಯಮ್ಮನ ತಲೆ ನೆಟ್ತಗಿಲ್ಲ… ಅನಂತಪುರಕ್ಕೆ ಹೋಗಿ ಶಾಮಂಣನ ಹೆಂಡ್ತಿಯಿಂದ ಸಿಕ್ಕಾಪಟ್ಟೆ ಬಯ್ಯಿಸಿಕೊಂಡು ಬಂದಂದಿನಿಂದ ಹಿಂಗಾಡ್ತಿದಾಳೆ… ಆಕೆಗೆ ತಲೆ ಕೆ‌ಆಗ ಅವರಿವ್ರೀಗೆ ಮದ್ದು ಇಟ್ಟು ಸರಿಪಡಿಸಿಕೊಳ್ತಾಳೆ. ಇದು ಜರಮಲಿ ಪಾಳ್ಳೆಗಾರ ವಂಶದೋರಲ್ಲಿ ಮೊದಲ್ನಿಂದ ನಡಕೊಂಡು ಬಂದಿರೋ ಆಚಾರ… ಉಪಾಯಾಂತರದಿಂದ ನಿಮ್ಮ ತಲೀಗೆ ಮದ್ದು ತಿಕ್ಕಿದ್ರೆ ಕಷ್ಟ. ನೀವು ಮೊದ್ಲೆ ಹೆಂಡ್ತಿ ಮಕ್ಕಳೊಂದಿಗ್ರು… ಶಾಮಂಣಗೆ ಆಕೆ ಹುಚ್ಚು ಹಿಡ್ದದ್ದು ಹೇಗಂತೀರಾ?” ಎನ್ನತೊಡಗಿದ. ಅವನು ಕ್ರಮೇಣ ನೀಚಸ್ಥಾನ ತಲುಪಿ ನನ್ನನ್ನು ಗಲಿಬಿಲಿಗೊಳಿಸಿದ. ಅವನು ಮುಂದೆ ಹೇಳಲಿದ್ದನ್ನು ನನಗೆ ಕೇ‌ಅಲು ಇಷ್ಟವಿರಲಿಲ್ಲ. ನನು ಲಗುಬಗೆಯಿಂದ ಹರುಕುಮುರುಕು ಕತ್ತಲಲ್ಲಿ ಹೆಜ್ಜೆ ಹಾಕಿದೆ. ಕಾಂಚನಾ ಕೂಗಿ ಕರೆಯಬೇಕೆಂದೋ! ಕರೆಯಬಾರದೆಂದೋ! ಒಟ್ಟಿನಲ್ಲಿ ನಾನು ಹಾಕುತ್ತಿದ್ದ ನಡಿಗೆಗೆ ಸಂಬಂಧಿಸಿದಂಥ ಖಚಿತತೆ ಇರಲಿಲ್ಲ. “ರ್ರೀ ಸ್ವಾಮಿ… ನಾನು ಹೇಳೋದ್ನ ಕೇಳಿಸ್ಕೋತೀರಾ ಸ್ವಲ್ಪ… ಹಿಂಗಾಗ್ತದಂದ್ರೆ ನಾನು ಶಾಮಂಣಗೆ ಅನಸೂಯಮ್ಮನ ಪರಿಚಯ ಮಾಡಿಸ್ತಾನೇ ಇರ್ಲಿಲ್ರೀ… ನೀವು ಕಥೆ ಕಾದಂಬರಿ ಬರ್‍ಯೋರಂಥ ಗೊತ್ತಿದ್ರೆ ಬಸ್‌ಸ್ಟಾಂಡ್ನಲ್ಲಿ ನಿಮ್ ತಂಟೆಗೇ ಬರ್ತಿರ್‍ಲಿಲ್ಲ. ಆಗಿದ್ದು ಆಗಿಹೋಯ್ತು… ಅಪೂರ್ವ ಚಿಂತಾಮಣಿಯಂಗ ಶೋಬಿಸ್ತಿರೋ ಯಶೋದಳ ಮನೇಲಿ ಈ ರಾತ್ರಿ ಉಳ್ಕೊಂಡಿದ್ದು ಬೆಳ್ಗೆದ್ದು ಹೋದರಾಗ್ತಿತ್ತಲ್ಲ. ..” ಇನ್ನು ಏನೇನೋ ಮಾತಾಡುತ್ತ ಅವನು ಹಿಂದೆ ಹಿಂದೆ ಬರುತ್ತಿದ್ದ… ಅವನ ಕೈಗೆ ಸಿಕ್ಕದಂತೆ ನಾನು ಬೀಸು ಹೆಜ್ಜೆ ಹಾಕತೊಡಗಿದೆ… ಇನ್ನೇನು ಸೋಮಾರಪೇಟೆ ದ್ದಟಿ ಬಿಟ್ತೆ ಎನ್ನುವಷ್ಟರಲ್ಲಿ ಅವನು ಓಡಿ ಬಂದು ನನ್ನ ಎದುರಿಗೆ ನಿಂತೇಬಿಟ್ಟ. ಏನೆಂದೆ? ಅವನು ಏದುಸಿರು ಬಿಡುತ್ತ ನನ್ಗೂ ಹೊಟ್ಟೆ ಇದೆ… ಹೆಂಡ್ತಿ ಮಕ್ಳೊಂದಿಗ ಬೇರೆ! ಎಂದು ಹೆಂದೆಲೆ ಕೆರೆದ. ಜೇಬಿನಿಂದ ಒಂದು ನೋಟು ತೆಗೆದು ಬೀದಿ ದ್ ಪದ ಬೆಳಕಿಗೆ ಹಿಡಿದೆ. ಅದರ ಒಂದು ಕಡೆ ಪಾರ್ಲಿಮೆಂಟೂ; ಇನ್ನೊಂದು ಕಡೆ ಅಶೋಕನ ಕಾಲದ ಮೂರು ಸಿಂಹಗಳು ಇದ್ದುದನ್ನು ಖಚಿತ ಪಡಿಸಿಕೊಂಡು ಅವನ ಬೊಗಸೆಗೆ ಹಾಕಿದೆ. ಅವನು ಅದನ್ನು ಕಂಣಿಗೆ ಒತ್ತಿಕೊಂಡು “ನನ್ ಸೇವೆ ಮುಂದೆಂದಾದ್ರು ಬೇಕಾದ್ರೆ ನಿಸ್ಸಂಕೋಚವಾಗಿ ಬರ್ರಿ ಭಾವ… ಸರ್ಕಿಲ್ ಆಫೀಸ್ ಹಿಂದುಗಡೆ ದಕ್ಷಿಣಕ್ಕೆ ಮುಖವಾಗಿರೋದೇ ನನ್ನ ಮನೆ ಹ್ಹಿ… ಹ್ಹಿ…” ಎಂದ. ಒಂದೊಂದು ನಿಮಿಷಕ್ಕೆ ಒಂದೊಂದು ರೀತಿಯ ಭಾಷೆ ಬಳಸುವುದರಲ್ಲಿ ನಿಷ್ಣಾತನಾದ ಅವನನ್ನು ಬದಿಗೆ ತಲ್ಲಿ ನಾನು ಬಸ್‌ಸ್ಟಾಂಡ್ ಕಡೆ ಹೆಜ್ಜೆ ಹಾಕಿದೆ
*
*
*

ಮನೆಸೇರಿ ಒಂದು ದಿನ ಕಳೆದರೂ ಹೆಂಡತಿ ಅನ್ನಪೂರ್ಣನೊಂದಿಗೆ ಮನಸ್ಸು ಬಿಚ್ಚಿ ಮಾತಾಡಲು ನನ್ನಿಂದ ಸಾಧ್ಯವಾಗಲಿಲ್ಲ. ತನ್ನ ಬಳಿ ಇರುವ ಹಸ್ತಪ್ರತಿ ಮೇಲೆ ಮತ್ತೊಮ್ಮೆ ಕಣ್ಣಾಡಿಸಿರಬಹುದಾದ ಆಕೆ ಕಾದಂಬರಿಯ ಮುಂದಿನ ಬೆಳವಣಿಗೆ ಬಗ್ಗೆ ಹೆಚ್ಚು ಕುತೋಹಲದಿಂದ ಇದ್ದಳು… ನಾನು ಆಕೆಯೊಂದಿಗೆ ಮಾತಾಡುವಾಗ ಹತ್ತಾರು ಹಗರಣಗಳಿಗೆ ಸಿಲುಕಿಕೊಂಡ ಮಾಜಿಯೂ; ವೃದ್ಧನೂ ಆದ ಪ್ರಧಾನಿಯಂತೆ ಕಂಪಿಸುತ್ತಿದ್ದೆ. ಶರದೃತುವಿನಲ್ಲಿ ಕುಲು ಕಣಿವೆಯ ತುಟ್ಟ ತುದಿಯಲ್ಲಿ ನಿಂತು ಕಂಪಿಸುವ ಮುಗ್ಧ ಪ್ರವಾಸಿಗನಂತೆ ಕಂಪಿಸುತ್ತಿದ್ದೆನು. ಐದನೇ ತುತ್ತಿಗೆ ಕೈ ತೊಳೆದುಕೊಳ್ಳುತ್ತಿದ್ದೆನು. ನೀರನ್ನು ನುಂಗಲು ಪ್ರಯಾಸ ಪಡುತ್ತಿದ್ದೆನು. ಬೆಳಗಿನ ಜಾವದವರೆಗೆ ಅತ್ತ‌ಇತ್ತ ಹೊರಳಾಡೀಽ ಹೊರಳಾಡೀ ಇನ್ನೇನು ಮುಂಗೋಳಿ ಕೂಗ್ಕಂತದೆ ಅನ್ನುವಾಗ ಜೋಂಪು ಹತ್ತಿ ಕಂಣು ಮುಚ್ಚುತ್ತಿದ್ದೆನು… ಮಂಪರಿನೊಳಗೆ ಏನನ್ನೋ ಕನವರಿಸುತ್ತಿದ್ದೆನಂತೆ… ಅದೇನನ್ನು ಕಂಬರಿಸುತ್ತಿದ್ದೆನೋ.. ಆ ನಮ್ಮ ಮಂದೇವರಾದ ಹಳೇಕೋಟೆ ವೀರಭದ್ರ ದೇವರಿಗೇ ಗೊತ್ತು. ಕೊತ್ತಲಿಗಿಯ ಸೂಕ್ಷ್ಮ ವಿಚಾರಗಳನ್ನು ಕೇಳಿ ಬಲ್ಲವಳಾದ ಅನ್ನಪೂರ್ಣೆಯು ಇದೇನಿದು/ ತನ್ನ ಗಂಡನು ಅನಂತಪುರ, ಕೊತ್ತಲಿಗಿಯೇ ಮೊದಲಾದ ತೆಂಕಣ ದೇಶಗ್ಫಳನ್ನು ಸುತ್ತಿ, ಖಾಸಗೀ ಕೋಶಗಳನ್ನು ಬಂದಾಗಿನಿಂದ ಮುಖಕ್ಕೆ ಮುಖ ಕೊಟ್ಟು ಮಾತಾಡುತ್ತಿಲ್ಲ… ಎಡ್ಲಾರ್ ಅಲನ್ ಪೋನ ಕಥೆಯೊಂದರ ನಾಯಕಮಣಿಯಂತೆ ವರ್ತಿಸುತ್ತಿರುವನಲ್ಲ… ಇದರಲ್ಲೇನೋ ಗೂಢವಡಗಿದೆ ಎಂದು ಬಗೆದವಳಾಗಿ ಪರಿಪರಿಯಾಗಿ ಪರಾಂಬರಿಸತೊಡಗಿದಳು. ತನ್ನ ದೇಹದ ಅಂತಃಶಕ್ತಿಯನ್ನು ‘ಛೂ’ ಬಿಟ್ಟು ತನ್ನ ಗೈರುಹಾಜರಿಯಲ್ಲಿ, ಸುಪ್ತಾವಸ್ಥೆಯಲ್ಲಿ ನನ್ನ ಚಲನವಲನ ಮೇಲೆ ನಿಗಾ ಮಡಗಿದಳು. ಆ ತದನಂತರ ಅರ್ಥವಾಯಿತು. ನನ್ನಂಥ ಹುಂಬು ಬೇರೊಬ್ಬನಿಲ್ಲಂತ. ಪಿಶಾಚಿಯೊಂದು ಬಡಕೊಂಡಿದೆ ಎಂಬರ್ಥ ಬರುವಂತೆ ನಾನು ಆಕೆಯ ಗೈರುಹಾಜರಿಯಲ್ಲಿ ಅಲ್ಲಲ್ಲಿ ಶೋದಿಸಿ ತಂದಿರ್ದ ‘ರಿಕಾಲ್ಡುಗಳನ್ನು ಹರಡಿಕೊಂಡು ಅವುಗಳಲ್ಲಿ ಶಾಮಂಣನು ನನ್ನ ಬಗ್ಗೆ ಏನಾದರೂ ಪ್ರಸ್ತಾಪಿಸಿರುವನೋ ಎಂದು ನನಗಿಂತ ಎಷ್ಟೊಂದು ಚೆನ್ನಾಗಿ ಕೈಫಿಯತುಗಳ ಸ್ಟೈಲಿನಲ್ಲಿ ಬರೆದಿರುವನಲ್ಲ ಎಂಬ ಹೊಟ್ಟೆಕಿಚ್ಚಿನಿಂದೋ ಕಂಣಲ್ಲಿ ಎಣ್ಣೆ ಬಿಟ್ಟುಕೊಂಡು ನೋಡುತ್ತ ಬಿಡಬಾರದಕಡೆ ನಿಟ್ಟುಸಿರು ಬಿಡುತ್ತ, ಜೊಲ್ಲಿನ ಹನಿಗಳನ್ನುದುರಿಸಿ, ಅಕ್ಷರಗಳ ಅಂದಚೆಂದವನ್ನು ಹದಗೆಡಿಸುತ್ತ ಮರುಕ್ಷಣದಲ್ಲಿ ಚೆಂಬಲ್ ಕಣಿವೆಯ ದರೋಡೆಕೋರನಂತೆ ಮೂಲೆಗೆ ಸರಿಸುತ್ತಿದ್ದೆನು. ಮಲಗಿಕೊಂಡಾಗಲೂ ಆ ಅರ್ಥವಾಗದ ಮಸಯೆಗೆ ಕಟ್ಟು ಬಿದ್ದು “ಶಾಮಂಣಾ… ಅನಸೂಯಾ… ಕಾಂಚನಾ… ರಾಖೇಶಾ…” ಎಂಬಿವೇ ಮೊದಲಾದ ನಾಮಪದಗಳನ್ನು ಅವುಗಳ ಕ್ರಿಯಾ ವಿಷೇಶಣಗಳ ಸಹಿತ ಕನವರಿಸುತ್ತಿದ್ದೆನು.

ಇಂಥಪ್ಪ ಹಲವು ಸುಷುಪ್ತಾವಸ್ಥೆಯ ಚಟುವಟಿಕ್ರ್ಗಳನ್ನು ಗಮನಿಸಿದವಳಾದ ಶ್ರೀಮತಿಯು “ರ್ರೀ… ರ್ರೀ ಎದ್ದೇಳ್ರೀ… ಅದ್ಯಾರ್ರೀ ಅವಳು ಬೋಸೂಡಿ ಕಾಂಚನಾ ಎಂಭೋಳು?… ಒಳ್ಳೆ ಮಾತ್ನಿಂದ ಹೇಳ್ತೀರೋ ಇಲ್ಲ ಅನ್ನ ನೀರು ಬಿಟ್ತು ಕೂಡ್ರಲೋ” ಎಂದು ಏಕ್‌ಧಂ ನಾರಾಯಣಾಸ್ತ್ರ ಪ್ರಯೋಗಿಸುವುದನ್ನು ಶುರುಮಾಡಿದಳು… ನಾನಲ್ಲಿಂದ ಬಂದೊಡನೆ ಅನಂತಪುರಕ್ಕೆ ಹೋಗಿದ್ದನೆಂದು ಹೇಳಿದ್ದೆನೇ ಹೊರತು ಕೊತ್ತಲಗಿ ಮನ್ವಂತರದ ಉಪಕಥೆಗಳನ್ನು ಅಪ್ಪಿ ತಪ್ಪಿ ಹೇಳಿರಲಿಲ್ಲ… ಅವೆಲ್ಲ ಸೇರಿಕೊಂಡು ನಾನು ಮಲಗಿದ್ದಾಗ ಪಂಚೇಂದ್ರಿಯಗಳ ದ್ವಾರ ಚಿತ್ರವಿಚಿತ್ರವಾಗಿ ಪ್ರಕಟಗೊಳ್ಳುತ್ತ ಹಿಂಸಿಸತೊಡಗಿದ್ದವು. ಅವುಗಳು ತಂಡೋಪ ತಂಡವಾಗಿ ನೆರೆದಿದ್ದ ಮನವೆಂಬ ಜಲಿ‌ಅನ್ ವಾಲಾಬಾಗಿನ ಇನ್ನೊಂದು ಬಾಗಿಲ ಬಳಿ ಜನರಲ್ ಡಯರನಂತೆ ಬದ್ಧಭ್ರುಕುಟಿಯಾಗಿ ನಿಂತಿರುವ ಅನ್ನಪೂರ್ಣಳಿಗೆ ಏನೆಂದು ಹೇಳುವುದು! ಏನೊಂದೂ ಹೇಳದೆ ಇರುವುದು! ಶಾಂಣ ಎಂಬ ನಾಯಕ ಪಾತ್ರವನ್ನು ಪುಷ್ಟೀಕರಿಸುವಂಥ ಅನಸೂಯಾ; ಕಾಂಚನಾ, ರಾಖೇಶರಂಥ ಪೋಶಕ ಪಾತ್ರಗಳು ಮೇಲುಗೈ ಸಾಧಿಸಿ ನೋಡುಗರಲ್ಲಿ ಕೇಳುಗರಲ್ಲಿ ಪ್ರಥಮ ಪೂಜೆ ಮಾಡಿಸಿಕೊಳ್ಳುವಂಥ ಅನ್ನಪೂರ್ಣೆಯಲ್ಲಿ ಹೊಚ್ಚ ಹೊಸ ಅನುಮಾನಗಳನ್ನು ಸೃಷ್ಟಿಸಿದ್ದವು… ನನ್ನ ದೃಷ್ಟಿಯಲ್ಲಿ ಅನ್ನಪೂರ್ಣೆ ಕೇವಲ ಹೆಂಡತಿ ಮಾತ್ರ ಆಗಿರಲಿಲ್ಲ… ದುರಿತ ದುರೀಹ ದುರಾಶಯ ದುರ್ಮದ ದಾನವ ದೂತ ಕೃತಾಂತ ಸ್ವರೂಪಿಣಿಯಾದ ಮಹಿಷಾಸುರ ಮರ್ದಿನಿ ಆಗಿರುವಂತೆಯೇ ರುದ್ರಗ್ರಂಥಿ ವಿಭೇದಿನಿಯೂ, ಸಹಸ್ರಾರಾಂಬುಜಾರೂಢೆಯೂ; ಸುಭಾಸಾರಾಭಿವರ್ಷಿಣಿಯೂ ಆದ ಸ್ರೀ ಲಲಿತೆಯೂ ಆಗಿದ್ದಳು. ನನ್ನೊಳಗಿನ ಅರಿಷಡ್ವರ್ಗಗಳಿಗೆ ಲಗಾಮು ಹಾಕಿ ನನ್ನನ್ನೂ ಒಬ್ಬ ಸದ್ವರ್ತನಾ ನರಮಾನವನನ್ನಾಗಿ ಮಾಡಿರುವ ಈ ಅನ್ನಪೂರ್ಣೇಶ್ವರಿ ನಿಜ ಹೇಳಬೇಕೆಂದರೆ ನನ್ನೊಳಗೆ ಒಂದು ಪೋಲೀಸ್ ಠಾಣೆಯನ್ನೇ ಸೃಷ್ಟಿಸಿದಳು. ಪತ್ತೆದಾರಿಕೆಗೆ ಸಂಬಂಧಿಸಿದಂಥ ಎಲ್ಲ ಗುಣಗಳನ್ನು ಲೀಲಾಜಾಲವಾಗಿ ರೂಢಿಸಿಕೊಂಡಿದ್ದಳು. ಆಕೆಯ ಕ್ರಾಸ್ ಕ್ವಶೆನ್ನಿನಿಂದ ಗಲಿಬಿಲಿಗೊಂಡು “ಯಾವ ಕಾಂಚನ?… ಎನ್ಕಥೆ?… ನನನ್ಗೊಂದೂ ಅರ್ಥವಾಗ್ತಿಲ್ಲ” ಎಂದೆ – ಮಹಾ ಮಳ್ಳಿಗನ ಸೋಗು ಧರಿಸಿ, ಕಾಂಚನ ನನ್ನೊಳಗಿನ ಎಲ್ಲಾ ಕೋಣೆಗಳನ್ನು ಆಕ್ರಮಿಸಿಕೊಂಡು ವಸ್ತಿ ಮಾಡಿರುವುದನ್ನು ಮರೆಮಾಚುತ್ತ ಕೆಲವು ಲೇಖಕರ ಜಾಯಿಮಾನ ಗಿರಿಜಮ್ಮ, ಸುಕನ್ಯರಂಥವರಿಂದ ಕೇಳಿಬಲ್ಲ ಆಕೆಗೆ ನನ್ನ ಉತ್ತರದಿಂದ ಸಮಾಧಾನವಾಗಲಿಲ್ಲ… “ಯಾವ ಕಾಂಚನ ಅಂತೀರಲ್ಲ… ಅದೇ ಕಾಂಚನ ಕಣ್ರೀ… ನೀವಿಷ್ಟು ದಿನ ಎಲ್ಲೆಲ್ಲಿಗೆ ಹೋಗಿದ್ರಿ? ಯಾರ್‍ಯಾರ್‍ನ ಕಂಡಿದ್ರಿ?… ಏನೇನು ಘನಕಾರ್ಯ ಸಾಧಿಸಿದ್ದೀರಿ ಎಂಬೋದೆಲ್ಲ ಗೊತ್ತು ಕಣ್ರಿ… ಬೆಕ್ಕು ಕಂಣು ಮುಚ್ಕೊಂಡು ಹಾಲು ಕುಡಿದ್ರೆ ಯಾರೂ ನೋಡೊದಿಲ್ಲಾಂತ ತಿಳ್ಕೊಳ್ತಂತೆ… ಹಂಗಾಯ್ತು ನಿಮ್ದೂನೂವೆ… ನೀವೆಂಥೋರಂಥ ಗೊತ್ತಿಲ್ವೇನ್ರಿ ನನಗೆ… ನನ್ ಕಂಣಿಗೆ ಮಂಣೆರಚ್ತೀರಾ… ಹ್ಹ… ಹ್ಹ…”ಎಂದು ಕಂಣಲ್ಲಿ ನೀರು ತಂದುಕೊಂಡು ಅದನ್ನೇ ಶಾಪ ಕೊಡುವ ಉದಕ ಮಾಡಿಕೊಂಡು ಝಳಪಿಸಿದಳು. ಮಾಳವ ದೇಶಕ್ಕೂ, ಬಂದೇಲ ಖಂಡಕ್ಕೂ ನಡುವೆ ಹರಡುಕೊಂದಿರುವ ಕೋಲಾಹಲ ಪರ್ವತ ಶ್ರೇಣಿಯಂತಾಗಿ ಬಿಡುವಳೋ ಎಂದು ಹೆದರಿದೆ. ಆಕೆಯ ಮುನಿಸೆಂಬ ಪಾಶುಪತಾಸ್ತ್ರವನ್ನು ಎದುರಿಸುವ ಶಕ್ತಿ ಕೈಹಿಡಿದ ಕ್ಷಣವೇ ಕಳೆದುಕೊಂಡಿರುವ ನಾನು ಕಂಚನ ಎಂಬುದು ನಾನು ಓದಿರುವ ಯವುದೋ ಕಾದಂಬರಿಯಲ್ಲಿನ ಪಾತ್ರವಿರಬಹುದೆಂದೂ; ಅದು ನಿದ್ದೆಯಲ್ಲಿ ಕನವರಿಕೆ ಮೂಲಕ ಪ್ರಕಟವಾಗಿರಬಹುದೆಂದೂ ಏನೇನೋ ಹೇಳಲು ಪ್ರಯತ್ನಿಸಿದೆ. ನನ್ನ ವಾಗ್‌ವೈಖರಿ ಸಮಯಪ್ರಜ್ಞೆ ತಂತ್ರೋಪಾಯಗಳನ್ನು ಕಳೆದ ಹದಿನೈದು ವರ್ಷಗಳಿಂದ ಗಮನಿಸುತ್ತ ಬಂದಿರುವ ಆ ಸೂಕ್ಷ್ಮಮತಿಯು “ರ್ರೀ ಎಲ್ಲಿವರ್‍ಗೂ ಇಂಥ ಸುಳ್ಳುಗಳ್ನ ಹೇಳ್ತಾ ಹೋಗ್ತೀರಿ… ಯಾವಳ್ನೋ ಅಂತರಂಗದಲ್ಲಿಟ್ಕೊಂಡು ಹೊರಗಡೆ ಮಾತಿಗೆ ಬೆಣ್ಣೆ ಹಚ್ತಿದೀರಲ್ಲ… ಇದೆಲ್ಲ ನನಗೆ ಗೊತ್ತಾಗೋಲ್ಲಾಂತ ತಿಳ್ಕೊಂಡೀರೇನು? ಇಂಥ ಮಾತುಗಳನ್ನ ಕೇಳೀ, ಕೇಳಿ ನನಗೆ ಸಾಕಾಗಿ ಹೋಗಿದೇರ್ರೀ… ನೀವು ಎಷ್ಟಿದ್ರು ಶಾಮನಂಥೋರ ಸ್ನೇಹಿತ್ರು… ಅವನಂಥೋರ ಚಾಳಿ ನಿಮ್ಗೂ ಬಡ್ಕೊಳ್ದಂಗಿರ್‍ತದೆಯೇ! ಹೋಗಿ, ಆ ಕಾಂಚನಾ ಎಂಬ ತಾಟಗಿತ್ತಿಬಳಿಗೆ ಹೋಗಿ ಇದ್ದುಬಿದಿ… ನಾನು ನಮ್ಮಕ್ಕಳನ್ನ ಕರ್ಕೊಂದು ನನ್ತವ್ರು ಮನೆಗೆ ಹೊಂಟೊಗ್ತೀನಿ…” ಎಂದು ಕೊಸರುತ್ತ ವಾಕ್ಯದೊಳಗಿಂದ ಅರ್ಥ ಹೋಗುವಂತೆ; ಕಾವ್ಯದೊಳಗಿಂದ ಅಲಂಕಾರ ಹೋಗುವಂತೆ ಸರಪರ ಎದ್ದು ಅಡುಗೆ ಸೇರಿ ಹಂಡೆ ಮೇಲೆ ಬಾಂಡಲೆಯನ್ನು ಬಡಿದು ದೊಡ್ಡ ಸದ್ದು ಮಾಡಿದಳು. ಪರಿಸ್ಥಿತಿ ಕೆಡುವ ಮೊದಲೆ ಸರಿಪಡಿಸಬೇಕೆಂದು ನಿರ್ಧರಿಸಿ ನಾನೂ ಎದ್ದು ಹೋಗಿ ಗುಗ್ಗುಳೋಪಾದಿಯಲ್ಲಿ ಧಗಧಗ ಉರಿಯುತ್ತಿದ್ದ ಆಕೆಯನ್ನು ಪರಿಪರಿಯಾಗಿ ಸಮಾಧಾನಿಸುವ ಕೃತ್ಯಕ್ಕಿಳಿದೆನು. ಕೇಳುವುದನ್ನು ಕೇಳಿ, ಕೇಳಿ ಆಕೆ ಎದೆಮೇಲೆ ತಲೆ ಇಟ್ಟು ಬಿಕ್ಕಿ ಬಿಕ್ಕಿ ಅಳತೊಡಗಿದಳು… ನಾನು ಒಂದು ಹಿಡಿ ಕಂಣೀರು ತಂದುಕೊಂಡು “ಹುಚ್ಚೀ‌ಇ ಯಾಕಳ್ತೀಯೇ?… ನಿನ್ಗೆ ದ್ರೋಹ ಬಗೆಯೋವಂಥ ಯಾವ ತಪ್ಪನ್ನೂ ನಾನು ಮಾಡಿಲ್ಲ… ಮುಂದೆ ಮಾಡೋದೂ ಇಲ್ಲ… ತಿಳೀತಾ ಸುಮ್ಕಿರು” ಎಂದು ಭರವಸೆ ನೀಡಿದೆ. ಅಪನಂಬಿಕೆಯಿಂದ ದಿತ್ತಿಸಿದಳು. … ಆಕೆ ಪ್ರಮಾಣ ಮಾಡಿಸಿದಳು. – ಮಾಡಿದೆ… “ಹಾಗಿದ್ರೆ ನೀವೆಲ್ಲೆಲ್ಲಿ ಹೋಗಿದ್ರಿ… ಯಾರ್‍ಯಾರ ಜೊತೆ ಮಾತಾಡಿದ್ರಿ ಎಂಬ ಬಗ್ಗೆ ಒಂಚೂರು ಬಿಡದ ಹಾಗೆ ಹೇಳಿಬಿಡ್ರಿ… ನೀವೇನು ತಪ್ಪು ಮಾಡಿದ್ರೂ ಹೊಟ್ಟೇಲಿ ಹಾಕ್ಕೊಳ್ತೀನಿ… ನಾವು ಹೆಣ್ಣಾಗಿ ಹುಟ್ಟಿರೋದೆ ಅದ್ಕೆ… ವಿಷಯ ಮರೆಮಾಚಿದ್ರೋ… ನನ್ನಾಣೆ…” ಎಂದು ಪಟ್ಟು ಹಿಡಿದಳು.

ರಾಮ್‌ಜೇಠ್ಮಲಾನಿಯಂಥ ಆಕೆ ಎದುರು ಮುಚ್ಚಿಡೋದಾದ್ರು ಏನಿದೆ? ರೋಗದ ವಿಷಯ ವೈದ್ಯರ ಎದುರೂ; ಖಟ್ಲೆ ವಿಷಯ ವಕೀಲರೆದುರೂ ಮಚ್ಚಿಡಬಾರದೂಂತ ಹಿರಿಯರು ಹೇಳಿರುವರು. ನಾನು ನನ್ನ ನಾಲಕೈದು ದಿನದ ಪ್ರವಾಸದ ಅನುಭವವನ್ನು ‘ಅ’ ಅಕ್ಷರದಿಂದು ಹಿಡಿದು ‘ಕ್ಷ’ ಎಂಬ ಅಕ್ಷರದವರೆಗೆ ಸಾಂಗೋಪಾಂಗವಾಗಿ ವಿವರಿಸಿತೊಡಗಿದೆನು. ಗುರಿ ಕಡೆ ನಿಗಾ ಇಟ್ಟಿರುವ ಬೇಟೆಗಾರನಂತೆ ಆಕೆ ಬಿಡುಗಣ್ಣಿಂದ ನನ್ನ ಮುಖವನ್ನೇ ನೋಫ್ಡುತ್ತಿದ್ದಳು. ಆಗ ನಾನು ಅನಸೂಯಮ್ಮನವರ ಮನೆಯಲ್ಲಿದ್ದ ಕಾಂಚನಾ ಎಂಬ ತರುಣಿಯ ಬಗೆಗೂ ಪ್ರಸ್ತಾಪಿಸದಿರಲಿಲ್ಲ… ಆಕೆ ನಿಟ್ಟುಸಿರು ಬಿಡುತ್ತ, “ಆಕೇನ ಮನಸ್ಸಿನಲ್ಲೇನಾದ್ರೂ ಪ್ರೀತ್ಸಿದ್ರೋ ಇಲ್ಲೋ ಅಷ್ಟು ಹೇಳಿ” ಎಂದು ‘ಢಾಂ’ ಅಂತ ಕೇಳಿದಳು. ನಾನು ಒಂಚೂರು ಅವಕ್ಕಾದೆ… ನಂಗೆ ಪಿ.ಯು.ಸಿ. ಓದುವಾಗ್ಲೆ ಮದ್ವೆ ಆಗಿದ್ರೆ ಆ ವಯಸ್ಸಿನ ಮಗಳಿರ್‍ತಿದ್ಲು ಕಣೇ ಅಂದೆ… “ಅಂದ ಮೇಲೆ ಆಕೀನ್ಯಾಕೆ ಕನವರಿಸ್ತಿದ್ರಿ!” ಎಂದು ಮರು ಪ್ರಶ್ನೆ ಹಾಕಿದಳು. “ಅದನ್ಯಾಕೆ ಈ ಅರ್ಥದಲ್ಲಿ ತಗೋತೀಯೇ ಪುಣ್ಯಾತ್ಗಿತ್ತಿ” ಅಂದೆ ತುಸು ಬೇಸರದಿಂದ. ಅಷ್ಟೆಲ್ಲ ಹೇಳೋದನ್ನು ಹೇಳಿ ಆದ ಮೇಲೆ ಕೇಳೋದನ್ನು ಕೇಳಿ ಆದ ಮೇಲೆ “ನೀವು ಬರೀತಿರೋ ಕಾ‌ಅದಂಬರೀನ ಬಚ್ಚಲ ಒಲೇಲಿ ಇಟ್ಟುಬಿಡಿ… ಸ್ನಾನಕ್ಕೆ ನೀರಾದ್ರು ಕಾಯ್ತವೆ” ಎಂದು ತೀರ್ಪು ಪ್ರಕಟಿಸಿದಳು… ತಲೆ ಮೇಲೆ ಕಂಚನಗಂಗ ಕಳಚಿ ಬಿದ್ದಂಥ ಅನುಭವವಾಯಿತು ನನಗೆ… ಬಲಗೈಯ ಮಧ್ಯಮ ಬೆರಳಿನ ಮುಂದೆಲುಬು ಸವೆಯುವಂತೆ ಬರೆಯಿಸಿಕೊಂಡಿರುವ ಕಾದಂಬರಿಯ ಹಸ್ತಪ್ರತಿಯನ್ನು ಅಗ್ನಿಗೆ ಅರ್ಪಣ ಮಾಡುವುದೆಂದರೇನು? ಮುಂಗೈಯ ತೆನ್ನಿಸ್ ಎಲ್ಬೋ ಸವೆದು ಕೊಡುತ್ತಿರುವ ಕಾಟ ಪರಿಶೀಲಿಸಿ ಡಾ.ಅರವಿಂದ ಪಾ‌ಅಟೀಲರು ‘ಒಂದೆರಡು ವರ್ಷ ಬರೆಯೋದು ಬಿಟ್ಟುಬಿಡಿ ಎಲ್ಲ ಸರಿಹೋಗ್ತದೆ’ ಎಂದು ಕೊಟ್ಟಿರುವ ಗಂಭೀರ ಸೂಚನೆಯನ್ನು ಲೆಕ್ಕಿಸದೆ ಬರೆದಿರುವ ಕಾದಂಬರಿಯನ್ನು ಬಚ್ಚಲ ಯಜ್ಞಕುಂಡಕ್ಕೆ ಬಲಿಕೊಡುವುದೆಂದರೇನು? ಶಾಮಂಣನ ನೆನಪುಗಳೊಂದಿಗೆ ತಳುಕುಹಾಕಿ ಕೊಂಡಿರುವ ನನ್ನ ಸ್ವಂತ ಬದುಕನ್ನೂ ಅನಾವರಣಗೊಳಿಸಿರುವ ಕಾದಂಬರಿಯನ್ನು ಒಲೆಯಲ್ಲಿಟ್ಟು ಸುಟ್ಟು ನೀರು ಕಾಯಿಸುವುದೆಂದರೇನು? ಹಾಗೇನಾದರು ಮಾಡಿದರೆ ಕಾದಂಬರಿಯೊಳಗಿನ ನೂರಾರು ಪಾತ್ರಗಳು ಸುಮ್ಮನಿದ್ದಾವೆಯೇ? ವಿವಿಧ ಕಾಲಮಾನದಲ್ಲಿ ಸತ್ತು ಬಟಾಬಯಲೊಳಗೆ ಅಂತ ಪಿಶಾಚಿಯಾಗಿ ಅಲೆಯುತ್ತಿರುವ ಅಪ್ಪ, ಅಜ್ಜಿ; ಶಾಮಂಣ, ಪರಮೇಶ್ವರಶಾಸ್ತ್ರಿ; ಶಿವಪೂಜೆ ಕೊಟ್ರಗೌಡ, ಅಲುಮೇಲಮ್ಮಜ್ಜಿ, ಇವೇ ಮೊದಲಾದ ನೂರೆಂಟು ಪಾತ್ರ ಸುಟ್ಟರೂ ಅದು ಹೇಗೆ ನಾಶ ಹೊಂದುತಾವೆ? ಮುಂದೆ ಒಂದಲ್ಲಾ ಒಂದು ರೀತಿಯಲ್ಲಿ ಕಥೆಗಾರನಾದ ನನ್ನ ಪಂಚೇದ್ರಿಯಗಳ ಮೂಲಕ ಪ್ರಕಟವಾಗುತ್ತ ಕಾಟ ಕೊಡದೆ ಇದ್ದಾವೆ? ಅದೂ ಅಲ್ಲದೆ ಲಕ್ಷಾಂತರ ವರ್ಷಗಳ ಅವಧಿಯಲ್ಲಿ ಕೋತ್ಯಾಂತರ ಮಂದಿಯ ಸಮೂಹ ಶ್ರಮದಿಂದ ರೂಪುಗೊಂಡಿರುವ ಭಾಷೆಗೆ ದ್ರೋಹ ಬಗೆದಂತಾಗುವುದಿಲ್ಲವೇ ತಮ್ಮೀ ಕೃತ್ಯದಿಂದ. “ನವಜಾತ ಶಿಶುವು ಬೇರೆಯಲ್ಲ; ಈ ಕಾದಂಬರಿಯ ಹಸ್ತಪ್ರತಿ ಬೇರೆಯಲ್ಲ್ ಕಣೇ… ವಾತ್ಸಲ್ಯವನ್ನು ಮೂಡುತ್ತಿರುವ ಕಾದಂಬರಿ ಬಗೆಗೂ ತೋರು…” ಎಂದು ಮೊದಲಾಗಿ ಕೇಳಿಕೊಳ್ಳಲು ಆಕೆ ಹೌದೋ? ಅಲ್ಲವೋ ಎಂಬಂತೆ ಒಪ್ಪಿಕೊಂದಳು. ಕಾದಂಬರಿ ಬರೀತಾ ಆ ಕದಂಬರಿಯ ಪಾತ್ರಗಳ ಗುನ ಸ್ವಭಾವಗಳನ್ನು ರೂಢಿಸಿಕೊಳ್ಳಕೂಡದೆಂದೂ; ಇಂಥ ಹಸು ಸ್ವಭಾವದವರು ಬರೆದಿರುವುದೇ! ಎಂದು ಓದುಗರು ಆಶ್ಚರ್ಯ ಪ್ರಕಟಿಸುವಂತಾಗಬೇಕೆಂದೂ; ಅನ್ನಪೂರ್ಣೆಶ್ವರಿಯವರು ಅಪ್ಪಣೆ ಕೊಡಿಸಿದರು… ನಾನು ತಲೆ ಅಲ್ಲಾಡಿಸಿ ಸಮ್ಮತಿಸಿದೆನು. ನಾನೂ; ನನ್ನ ಕಾಲ; ನನ್ನ ಸಮಾಜ; ನನ್ನ ದೇಶ ಇವೆಲ್ಲ ಕಾ‌ಅದಂಬರಿಯೊಳಗೆ ಲೀನವಾದಾಗಲೇ ಅದಕ್ಕೊಂದು ಮಹತ್ವ ಲಭಿಸುವುದೆಂದು ಹೇಳಿದರೆ ಆಕೆಗೆ ಅರ್ಥವಾಗುವುದಿಲ್ಲ.

ಈ ಘಟನೆ ಗತಿಸಿದ ನಂತರ ಹೆಚ್ಚು ಗೆಲುವಾದ ನಾನು ನನ್ನಲ್ಲಿ ಸೃಜನಶೀಲ ಪ್ರತಿಕ್ರಿಯೆಯನ್ನು ಹೆಂಡತಿ ತನ್ನ ಖಚರ ದೃಷ್ಟಿಯಿಂದ ಗಮನಿಸುತ್ತಿರುವಳೆಂಬ ಎಚ್ಚರಿಕೆಯಿಂದ ಟೇಬಲ್ ಲ್ಯಾಂಪಿನ ಒಂದು ಗೇಣಗಲ ಬೆಳಕಿನಲ್ಲಿ ಅಲ್ಲಲ್ಲಿ ಸಂಪಾದಿಸಿ ತಂದಿದ್ದ ಶಾಮಂಣನ ಗತ ಜೀವನಕ್ಕೆ ಸಂಬಂಧಿಸಿದ ದಾಖಲೆಗಳನ್ನು ಹರವಿಕೊಂಡು ಕೂತು ಪರಿಶೀಲಿಸಲು ಶುರುಮಾಡಿದೆ… ಒಂದೊಂದು ದಾಖಲೆಗೆ ಜೀವ ಮೂಡಿ ಮಿಸುಕುತ್ತಿರುವಂತೆ ಭಾಸವಾಗತೊಡಗಿತು. ಶಾಮಂಣ; ಶಾಸ್ತ್ರಿಗಳು; ಅಲುಮೇಲಮ್ಮಜ್ಜಿ; ಹಾಲಪ್ಪ; ನಿಂಗಮ್ಮಜ್ಜಿ; ಸಿದ್ದಮ್ಮಜ್ಜಿಯೇ ಮೊದಲಾದ ಗತಿಸಿದ ಪಾತ್ರಗಳು ನನ್ನ ವಾಮಪಕ್ಷದಲ್ಲೂ; ವರಲಕ್ಷ್ಮಿ; ಅನಸೂಯಮ್ಮ; ಕಾಂಚನ; ರಾಖೇಶರೇ ಮೊದಲಾದ ಗತಿಸಿರದ ಪಾತ್ರಗಳು ನನ್ನ ಬಲಪಾರ್ಶ್ವದಲ್ಲೂ ನೆರೆಯಲಾರಂಭಿಸಿ ತೇಬಲ್ಲೆಂಬ ಅಖಾಡವು ಕಿಕ್ಕಿರಿಯತೊಡಗಿತು… ‘ಎಲವೋ ದುರುಳ… ನಿನ್ನ ಪೆನ್ನು… ನಿನ್ನ ಹಾಳೆ ಅಂಥ ಓದುಗರನ್ನು ರಂಜಿಸಲೋಸುಗ ಬಾಯಿಗೆ ಬಂದದ್ದನ್ನು ಬರೆದು ನಮ್ಮ ಬದುಕಿಗೆ ಕಳಂಕ ಹಚ್ಚೀಯೆ… ಜೋಕೆ… ಎಂದು ಪ್ರತಿಯೊಂದು ಪಾತ್ರವೂ ಹೇಷಾರವ ಕೆನೆಯತೊಡಗಿತು.

“ಏನೇ ಚಿನಾಲಿ… ನಾನು ಅಪಘಾತದಲ್ಲಿ ವೈಕುಂಠವಾಸಿ ಆಗಿದ್ದೀನಂತ ತಿಳ್ಕೊಂಡು ಆ ನಿನ್ನ ಸಂಬಂಧಿ ವಲ್ಲಭನ ಮನೆಯೊಳ್ಗೆ ಮೊಸಳೆ ಕಣ್ಣೀರು ಹಾಕ್ತಾ ಕೂತಿದ್ದೀಯಾ… ಆ ಮ್ನೇಲಿ ಒಂದು ಪೂಜೆ ಉಂಟಾ ಪುನ್ಸ್ಕಾರ ಉಂಟಾ?… ನನ್ನ ಮೊಮ್ಮಕ್ಕಳಾದ ಶಿವರಾಮ್ಗೂನೂವೆ; ಅಶ್ವತ್‌ನಾರಾಯಣ್ಗೂವೆ ಸಂಸ್ಕೃತ ಅಭ್ಯಾಸ ಮಾಡಿಸಿ ವೈದಿಕಕ್ಕೆ ಹಚ್ಚಿ ಮನ್ತನದ ಗೌರವ ಕಾಪಾಡೋದು ಬಿಟ್ಟು ಕಿರಿಸ್ತಾನರ ಸ್ಕೂಲಿಗೆ ಹಾಕಿದ್ದೀಯಾ… ಈ ನಿನ್ನ ಕೃತ್ಯವನ್ನು ನಮ್ಮ ವಂಶದ ಹಿರಿಯರು ಕ್ಷಮಿಸಲಾರರು ಕಣೇ; ಕ್ಷಮಿಸಲಾರರು… ನಾನಿದ್ರೆ ನಿಮ್ಮೀ ಕೃತ್ಯಕ್ಕೆ ತೊಂದರೆ ಅಗ್ತದಂತ ತಾನೆ ಉಭಂ ಶುಭಂ ನುಡಿಯದೆ ತೀರ್ಥಯಾತ್ರೆಗೆ ಬೀಳ್ಕೊಟ್ತಿದ್ದು… ಇದ್ದ ಬದ್ದ ಹಣಾನೆಲ್ಲ ಕಳ್ಕೊಂಡು ಕಾಶೀ ಕ್ಷೇತ್ರದಲ್ಲಿ ಪವಿತ್ರ ಗಂಗಾನದಿ ದಡದ ಮೆಲೆ ನಾನು ಕೂತು ದಿನಗಳನ್ನು ಎಣಿಸ್ತಿರೋದು ನಿನ್ನ ಕರುಳಿಗೆ ಗೊತ್ತಾಗ್ತಿಲ್ಲಲ್ಲೇ… ನಿನಗೆ ಕರುಳಿದ್ರೆ ತಾನೆ ತಿಳಿಯೊದು… ನಾನು ನಿನ್ಗೆ ಎಷ್ಟೊಂದು ಪತ್ರ ಬರೆಸಿದೆ… ಏನ್ಕಥೆ ನೀನೊಂದಾದ್ರು ಪತ್ರ ಬರೆದ್ಯಾ ನಂಗೆ… (ವಿಳಾಸ ಗೊತ್ತಿದ್ರೆ ಹೀಗಾಗ್ತಿರಲಿಲ್ಲ) ಕಾಶೀ ವಿಶ್ವನಾಥ ಸ್ವಾಮಿ ದಿನಾಲು ಕನಸಿನಲ್ಲಿ ಕಾಣಿಸಿಕೊಂದು ಮುದುಕಿ ಎಷ್ಟು ದಿನಾಂತ ಬದುಕಿರ್‍ತಿ… ನನ್ ಪಾದ ಸೇರ್‍ಕೊಂಡುಬಿಡು… ನಿನ್ಗೆ ಸ್ವರ್ಗ ಲಭಿಸ್ತದೆ ಎಂದು ಹೇಳ್ತಾನೆ ಇದ್ದಾನೆ… ನಿನ್ನ ಗತಿಸಿದ ಗಂಡನ ಮುತ್ತಜ್ಜಮ್ದಿರಾದ ಘಂಟಾ ಶಾಮಾಶಾಸ್ತ್ರಿಗಳ ಆತ್ಮವೂ ಬಂದುಬಿಡಮ್ಮ ಎಷ್ಟು ದಿನಾಮ್ತ ವಿಲವಿಲನೆ ಒದ್ದಾಡ್ತಾ ಇರ್‍ತೀಯಾ… ಮನವ ಸಹಜ ಕ್ರಿಯೆಗಳನ್ನು ಮರೆತು ಸ್ವರ್ಗದಲ್ಲಿ ಆರಾಮ ಇರಬೌದಂತ ಕರೀತಾನೆ ಇದೆ… ನಾನರ್‍ಗೆಲ್ಲ ಹೇಳ್ತಿರೋದು ಒಂದೆ…

ನನ್ನ ಮೊಮ್ಮಕ್ಕಳಾದ ಶಿವರಾಮನ, ಅಶ್ವಥ್‌ನ ಮದುವೆ ಆಗದ ಹೊರತು ನಸ್ವರ ದೇಹ ತ್ಯಜಿಸುವುದಿಲ್ಲ… ಅಂತ… ಅಷ್ಟು ದೂರ ಇರೋಳು ಹ್ಯಾಂಗ ಬರ್‍ತಾಳಂತ ನೀನಂದ್ಕೊಳ್ಳಬೌದು… ಇಷ್ಟು ದೂರ ಬಂದಿರೋಳ್ಗೆ ಅಷ್ಟು ದೂರ ಹೋಗೋದು ಕಷ್ಟವಲ್ಲ ಎಂಬುದನ್ನು ಮರೀಬೇಡ… ನನ್ ಮಗನ ಚರಾಸ್ತಿಯಲ್ಲಿ ನನ್ನ ಪಾ‌ಇಗೆ ಬರೋದಿನ್ನೂ ಅದೆ… ಕಾಶಿಗೆ ಬಂದ ಮೆಲೆ ನಂಗೆ ಅದೆಲ್ಲ ನೆನಪಾಗಿದ್ದು… ಇದೇ ಕಾಶಿ ಮಹಿಮೆ ನೋಡು… ಗೋಸುಂಬೆ ಥರ ಇರೋ ನಿನ್ಗೆ ಇದೆಲ್ಲ ಏನರ್ಥ ಆಗ್ತದೆ… ಮುಂದೊಂದಿನ ಬಂದೇ ಬರ್‍ತೀನಿ… ಎಲ್ಲದಕ್ಕೂ ತಯಾರಾಗಿರು… ಹ್ಹಾಂ!” ಎಂದು ಅಲುಮೇಲಮ್ಮಜ್ಜಿ ಪಾತ್ರ್ವೌ ತನ್ನ ಸೊಸೆ ವರಲಕ್ಶ್ಮಿ ಎಂಬ ಪಾತ್ರವನು ತರಾಟೆಗೆ ತೆಗೆದುಕೊಂಡಿತು. ಕಾದಂಬರಿಕಾರನಂಥ ಅನ್ಯ ಪುರುಷನ ಎದುರಿಗೆ ತನ್ನನ್ನು ಹರಾಜು ಹಾಕುತ್ತಿರುವುದಲ್ಲ ಎಂಬ ದುಃಖಾವೇಶದಿಂದ ವರಲಕ್ಷ್ಮಿ ಎಂಬ ಪಾತ್ರವು “ಅಯ್ಯೋ ಆಯ್ಯೊ…” ಆಮ್ಟಾ ಏಡೇ‌ಏಡೇ ಬಡಿದುಕೊಂಡಿತು… “ನಾನದಾವ ಜನುಮದಲ್ಲಿ ಅದಾವ ಘನ ಘೋರ ಪಾಪ ಮಾಡಿದ್ದೆನೋ… ನಿನ್ನ ಸೊಸೆಯಾಗಿ ಅನುಭವಿಸ್ಲಿಕ್ಕೆ… ಅನುಭವಿಸಬಾರದದ್ದನ್ನೆಲ್ಲ ಅನುಭವಿಸಿದ ನಂತರವೂ ಬದುಕಿರುವ ನನ್ನ ಬಗ್ಗೆ ಹೊಟ್ಟೆಕಿಚ್ಚು ಪಡುತ್ತಿರುವೆಯಲ್ಲಾ… ಎರಡು ಮಕ್ಕಳು ನನ್ನುದರದಿಂದ ಜನಿಸದಿದ್ದಲ್ಲಿ ಎಂದೋ ಸಲ್ಲೇಖನಾವ್ರತರೂಢಳಾಗಿ ಇಹ ವ್ಯಾಪಾರ ಮುಗಿಸಿಬಿಡುತ್ತಿದ್ದೆ ಅತ್ತೆಮ್ಮಾ… ಈ ವಲ್ಲಭ ರುಕ್ಮಿಣಿ ಆಶ್ರಯ ಕೊಡದಿದ್ದಲ್ಲಿ ನಾನೂ ಮಕ್ಕಳನ್ನು ಕಟ್ಟಿಕೊಂದು ತುಂಗೆಗೆ ಅರ್ಪಿಸಿಕೊಂದುಬಿದುತ್ತಿದ್ದೆ… ನಿನ್ನ ಮಗನಿಗಾದ ಗತಿ ನಿನ್ ಮೊಮ್ಮಕಳಿಗೂ ಬರಬಾರ್ದು ನೋದು… ವೈದಿಕ ಮಾಡೊದು ಕಲ್ತು ಅರೆಹೊಟ್ಟಿಯಿಂದ ನಿನ್ ಮೊಮ್ಮಕ್ಕಳು ಬದಿಕಿರೋದು ನಿನಗಿಷ್ಟವೇನು? ಬದಲಾದ ಕಾಲಧರ್ಮಕ್ಕೆ ತಕ್ಕಂತೆ ನಾನೂ ನಿನ್ ಮೊಮ್ಮಕ್ಕಳಿಗೆ ಇಂಗ್ಲೀಷು ಕಲಿಸೋ ಸ್ಕೂಲಿಗೆ ಹಾಕಿದ್ದೀನಿ ಅತ್ತೆಮ್ಮಾ… ಅವರೂ ಡಾಕ್ಟ್ರೋ. ಇಂಜಿನಿಯರೋ ಆಗಿ ತಮ್ಮ ಕಾಲ ಮೇಲೆ ನಿಂತುಕೊಂಡು ನಾಲ್ಕು ಜನರ ಹಾಗೆ ಸುಖವಾಗಿ ಬದುಕುವಂತಾದರೆ ಅದಕ್ಕಿಂತ ಸಾರ್ಥಕಥೆ ಮತ್ತೊಂದೇನಿದೆ? ಇನ್ನು ನಿನ್ನ ನಾವು ಸೇರ್‍ಲಿಲ್ಲಾಂತ ಅಪಾದನೆ ಹೊರಿಸ್ತಿದ್ದೀಯಾ? ಇದು ಶುದ್ಧ ಸುಳ್ಳು! ಈ ಕಾದಂಬರಿಕಾರ ಇದನ್ನೇ ನಿಜ ಅಂದ್ಕೊಂಡಾನು! ಇವ್ನೂ ಅನಂತಪುರಕ್ಕೆ ಬಂದಿದ್ದ ನಿನ್ನ ಮೇಲೆ ನಮ್ಗೆಲ್ಲ ಎಷ್ಟೊಂದು ಪ್ರೀತಿ ಇದೆ ಅಂತ ಇವ್ನಿಗೂ ಗೊತ್ತು… ಜಲದೊಲಗೆ ಘೃತದ ಬಿಂದುವಿನಂತೆ ರಾಮಾ ಕೃಷ್ಣಾಂತ ನಾನು ದಿನ ನೂಕುತ್ತಿರೋದ್ನ ಈ ಮನುಷ್ಯನೂ ನೋಡ್ಕೊಂಡು ಬಂದಿದ್ದಾನೆ ಅತ್ತೆಮ್ಮ… (ಕಾದಂಬರಿಯಲ್ಲಿ ಇದನ್ನೆಲ್ಲ ಎದ್ದು ಕಾಣುವಂತೆ ಪ್ರಸ್ತಾಪಿಸು ಮಹರಾಯಾ) ಶ್ರೀ ವಲ್ಲ್ಭ ದಂಪತಿಗಳು ಲಕ್ಷಕ್ಕೊಬ್ಬರು… ಒಡಹುಟ್ಟಿದ ಅಕ್ಕನಿಗಿಂತ ನನ್ನನ್ನು ಹೆಚ್ಚಾಗಿ ನೋಡ್ಕೋತಿದ್ದಾರೆ. ಮನೆ ಖರ್ಚಿಗೆ ಅವರು ನನ್ನಿಂದ ಚಿಕ್ಕಾಸೂ ಪಡೆದಿಲ್ಲ… ಇದ್ದ ಹಣಾನೆಲ್ಲ ಮಕ್ಕಳ ಹೆಸರಿಗೆ ಮಾಡಿಸಿ ಬ್ಯಾಂಕಿನಲ್ಲಿಟ್ಟು ಬಿಟ್ಟಿದ್ದೀನಿ. ಅವರೇ ಇಲ್ಲಾಂದ ಮೇಲೆ ಆ ಹಣ ತಗೊಂಡು ನಾನ್ಯಾವ ಭೋಗ ಅನುಭೋಗ್ಸ್ಲಿ ಹೇಳು ಅತ್ತೆಮ್ಮಾ… ಶ್ರೀವಲ್ಲಭನಾಗ್ಲೀ ಅತನ ಹೆಂಡತಿ ರುಕ್ಮಿಣಿಯಾಗಲೀ ಸತ್ತೋರ ಅಥವ ಕಂಡೋರ ಗಂಟಿಗೆ ಆಸೆ ಪಡೊದಿಲ್ಲಾಂತ ಪ್ರಮಾಣ ಮಾಡಿ ಹೇಳ್ತೀನಿ… ಬೇಕಾದ್ರೆ ಈ ಕಾದಂಬರಿಕರನ್ನೇ ಕೇಳು… ನಿನ್ನ ಬಗ್ಗೆ ನಮಗಾಗ್ಲೀ; ಶ್ರಿ ವಲ್ಲಭಗಾಗಲೀ ಪ್ರೀತಿ ಇಲ್ಲಾಂತ ತಿಳಿಕೊಂಡಿದ್ರೆ ಅದು ನಿನ್ನ ತಪ್ಪು ಅತ್ತೆಮ್ಮ. ಇದ್ದಷ್ಟು ದಿನ ನಮ್ಮ ಮೆಲೆ ಅನುಮಾನ ಪಟ್ಕೊಂಡಿ. ಪರಮಾನ್ನದಲ್ಲಿ ವಿಷ ಹಾಕಿದ್ದಾರಂತ ದೊಡ್ಡ ರಂಪಾಟ ಮಾಡ್ದಿ… ಅದೂ ಸಾಲ್ದೂಂತ ಹೃಷಿಕೇಶ, ಹರಿದ್ವಾರ ಕಾಶಿ ಅಂತ ಹೊಂಟುಬಿಟ್ಟೆ. ಒಂದು ಮಾತು ಮೊದ್ಲೆ ತಿಳಿಸಿದ್ರೆ, ನಾವೇ ಒಳ್ಳೆಯದು ಕೆಟ್ಟದ್ದು, ವಿಚಾರಿಸಿ ಏರ್ಪಾಟು ಮಾಡ್ತಿದ್ವಿ, ಹಾಗೆ ತಿಳಿಸೋ ಸೌಜನ್ಯ ತೋರಿಸ್ಲಿಲ್ಲ ನೀನು. ಪ್ರಾಯನ ಸುಖಕರವಾಗ್ಲಿ ಅಂತ ನಾವು ಮನದಲ್ಲೆ ಹಾರೈಸಿದ್ವಿ… ಇದು ಮುಂಗೋಪಿಯಾದ ನಿನಗೆ ಅರ್ಥವಾಗಲಿಲ್ಲ. ನಮ್ಮ ವಿಳಾಸ ಮತ್ತಿತರ ವಿವರ ಒಯ್ಯದಿದ್ದುದು ನಮ್ಮ ತಪ್ಪು ಹೇಗಾಗುತ್ತದೆ? ನಿನಗೆ ತಿಳಿಯದ ಹಾಗೆ ಭಾರತದ ಎರಡು ಮೂರು ಭಾಶೆಗಳಲ್ಲಿ ನಮ್ಮ ವಿಳಾಸ ಬರೆದ ಚೀಟಿಗಳನ್ನು ನಿನ್ನ ಚೀಲದಲ್ಲಿ ಇಟ್ತಿವೆಂದುಕೋ; ಅಕ್ಷರಗಲನ್ನು ನೀನು ಸಿಡಿಮದ್ದು ಎಂದು ಭಾವಿಸಿ ಹರಿದೆಸೆಯದೇ ಇರುತ್ತಿರಲಿಲ್ಲ… ಅರವತ್ತು ಆದಮೇಲೆ ಅರಳುಮರುಲು ಎಮ್ಭೋ ಮಾತಿಗೆ ನೀನು ಪ್ರತ್ಯಕ್ಷ ನಿದರ್ಶನ ಅತ್ತೆಮ್ಮಾ… ನನ್ನಂಥ ಹತಭಾಗಿನಿಯರಿಗೆ ಹರಿದ್ವಾರ, ಕಾಶಿ ಪುಣ್ಯಕ್ಷೇತ್ರಗಳು ಗಾಳಿಗಂಟು ಮಾತ್ರ… ಆದ್ದರಿಂದ ಮಕ್ಕಳನ್ನೇ ತೀರ್ಥಕ್ಷೇತ್ರಗಳೆಂದು ಭಾವಿಸಿ ಸಂತೋಷಪಡುತ್ತಿರುವೆನು. ನಮ್ಮೆಲ್ಲರ ಪರವಾಗಿ ಕಾಶಿಯಂಥ ಪುಣ್ಯಧಾಮದಲ್ಲಿರುವ ನೀನು ಈಗಾಗಲೇ ಕಾಶೀರಮಣ ವಿಶ್ವನಾಥನನ್ನೂ; ಆತನ ಪತ್ನಿಯರಾದ ವಿಶಾಲಕ್ಷಮ್ಮ, ಅನ್ನಪೂರ್ಣಮ್ಮನವರನ್ನು ನೂರಾರು ಬಾರಿ ದರ್ಶಿಸಿ ನಮ್ಮೆಲ್ಲರಿಗೂ ಒಳ್ಳೆಯದಾಗಲಿ ಎಂದು ಬೇಡಿಕೊಂಡಿರಬಹುದು. ನೀವು ಕಾಶಿಯ ಯಾವ ಘಾಟಿನ ಎಷ್ಟನೆ ಮೆಟ್ಟಲ ಮೇಲೆ ಕೂತಿದ್ದು ಕಾಲಕ್ಷೇಪ ಮಾಡುತ್ತಿರುವಿರೋ ಏನೋ? ಖಂಡಿತ ನಿಮ್ಮ ಕೈಯಲ್ಲಿ ಜಪಮಾಲೆ ಇದ್ದೇ ಇರುತ್ತದೆ… ಅದು ಇರುವವರೆಗೆ ನಿಮಗೆ ಭಯವಿಲ್ಲ. ಅದು ಕಳೆಯುವ ಹೊತ್ತಿಗೆ ನಮ್ಮ ಮಕ್ಕಳೂ ದೊಡ್ಡವರಾಗಿರುತ್ತಾರಲ್ಲದೆ ನಿನ್ನನ್ನು ಹುಡುಕಲು ಸಮರ್ಥರಾಗಿರುತ್ತಾರೆ… ನೀನು ಇಚ್ಛೆಪಟ್ಟರೆ ನಿನ್ನನ್ನಿಲ್ಲಿಗೆ ಖಂಡಿತ ಕರೆತರುತ್ತಾರೆ… ಹೆದರಬೇಡಿ… ನಿನ್ನ ನೆನಪಿನಲ್ಲಿ ನಾನದೆಷ್ಟು ಕೃಶಳಾಗಿದ್ದೇನೆ ಗೊತ್ತೆ? ದೂರ ಇದ್ದು ಹಿಂದೂ ಮುಂದೂ ತಿಳಿಯದೆ ಶಪಿಸುತ್ತಿರಬೇಡಿ…

ಇದರಿಂದ ನಮಗೆ ಶ್ರೇಯಸ್ಸಲ್ಲ ಕಣತ್ತಯ್ಯಾ… ನಾನು ಹೀಗೆ ಹೇಳ್ತಿದ್ದೀನಂತ ತಪ್ಪು ತಿಳ್ಕೋಬೇಡಿ… ಕ್ರಮೇಣ ಆಧುನಿಕ ಮನಸ್ಸನ್ನು ರೂಢಿಸಿಕೊಂಡಿದ್ದ ನಿಮ್ಮ ಮಗಂದಿರನ್ನು ದೈಹಿಕವಾಗಿಯೂ ಮಾನಸಿಕವಾಗಿಯೂ ಸುಖವಾ‌ಅಗಿಡಲು ನಾನು ಪಟ್ಟ ಕಷ್ಟ ನಿಮ್ಗೂ ಗೊತ್ತು… ಆ ಭಗವಂತನಿಗೂ ಗೊತ್ತು! ನಿಮ್ಮ ಮಗನ ಕೈ ಹಿಡಿಯದೆ ನಾನು ಬೇರೆಯವರ ಕೈ ಹಿಡಿದಿದ್ದರೆ ನಿಮ್ಮ ಮಗಂದಿರೂ ಸುಖವಾಗಿರ್‍ತಿದ್ರು… ನಾನೂ ದೀರ್ಗ ಸುಮಂಗಲಿಯಾಗಿರ್‍ತಿದ್ದೆ. ರುಕ್ಮಿಣಿಯನ್ನು ಪತ್ನಿಯಾಗಿ ಅವರೂ; ಸೊಸೆಯಾಗಿ ಸ್ವೀಕರಿಸಿದ್ದರೆ ನೀವೂ ಸುಖವಾಗಿರ್‍ತಿದ್ರಿ ಅಂತ ಈಗ ಅನ್ನಿಸ್ತಾ ಇದೆ… ಆದರೆ ನು ಮಾಡುವುದು? ವಿಧಿ ನಿರ್ಣಯ ಹಾಗಿತ್ತು(ಅಲ್ವೇ? ಕದಂಬರಿಕಾರರೇ)… ಒಟ್ಟಿನಲ್ಲಿ ಹೇಗೋ ಬದುಕುತ್ತಿದ್ವಿ… ಆದ್ರೆ ಈ ಗಯ್ಯಾಳಿ ಮೂರುಕಾಸಿನ ಸೂಳೆ ಅನಸೂಯ… ನಮ್ಮನ್ನು ಸುಖವಾಗಿರಲು ಬಿಡ್ಲಿಲ್ವಲ್ಲ…” ಎಂದು ವರಲಕ್ಷ್ಮಿ ಎಂಬ ಪಾತ್ರ ನಿಟ್ಟುಸಿರು ಬಿಡುವ ಮೊದಲೆ ಅನಸೂಯ ಎಂಬ ಪಾತ್ರವು ನಖಶಿಖಾಂತಧಗಧಗ ಉರಿದುಹೋಯಿತು.ಅದು ನನ್ನ ಟೇಬಲ್ ಮೆಲಿದ್ದ ಟಿಪ್ಪಣಿಯೊಳಗಿಮ್ದ ಬೃಹದಾಕಾರವಾಗಿ ಬೆಳೆದು ನಿಂತಿತು… “ಅಯ್ಯೋ… ಅಯ್ಯೋ” ಅಂತ ಎದೆ ಎದೆ ಬಡಿದುಕೊಂಡಿತು. “ಆ‌ಆ ಘಾರಾಟೀ ಆ‌ಆದ್ಟೀರೊ ಂಆ‌ಆಟ್ಣಾ ಖೆಲೀಡೀ ಎನಪ್ಪಾ ಕಾದಂಬರಿಕಾರಾ… ನೀನೆ ಬಂದು ನೋಡ್ದೆಲ್ಲಾ ನನ್ನ ಪರಿಸ್ಥಿತೀನ… ಸೋಮಾರಪ್ಯಾಟೆ ಎಂಬೋ ಸೋಮಾರಪ್ಯಾಟೆ ನನ್ನನ್ನೋಡಿ ಮಮ್ಮಲನೆ ಮರುಗುತ್ತಿರೋದ್ನ… ನಾನು ಸೂಳೆ ಆಗಿರಬೌದು… ಆದ್ರೆ ಯಾವ ಗರತಿಗಿಂತ ಏನು ಕಡ್ಮೆ ಇದ್ದೀನಂತ… ತಲಬಾಕ್ಲ ಮೇಲೆ ನನ್ ಶಾಮೂನ ಫೋಟೋನ ಹಾಕಿ ಹೂವ್ನಾರ ಇಳಿಬಿಟ್ಟು ಲೊಬಾನ ಎತ್ತಿ ಊದ್ನ ಕಡ್ಡಿ ಹಚ್ಚಿತ್ತು ಸಣ ಮಾಡೀ ಮಾಡೀ ಮೊಣ್ಕಾಲೆಂಭೋವು ಟೆಂಗಿನ ಚಿಪ್ಪಾಗಿರೋದು ಯಾರ್‍ಗಾರ ಯಂಗೆ ಗೊತ್ತಾಗತೈತೆ. ಇಟ್ಕೊಂಡೋಳಿರೋ ತನಕ ಕಟ್ಕೊಂಡೋಳು ಕೊನೀತನ್ಕ ಎಂಬ ಗಾದಿ ಮಾತ್ನ ತಿರುಗಾ ಮುರುಗಾ ಮಾಡ್ದೋಳಪ್ಪಾ ನಾನು. ಇದೇನೀಕೆ ಮಾತ್ಮಾತ್ಗೆ ಸೂಳೇ ಸೂಳೇಂತ ಹಂಗಿಸ್ತಾಳೇಂತ… ಹೌದು… ನಾನು ಸೂಳೆ… ನಮ್ಮವ್ನೂ ಸೂಳೆ. ನಮ್ಮಮ್ನೂ ಸೂಳೆ ಯಾರಿಲ್ಲಾಂದ್ರೀಗಾಂತ… ಇದು ನಮ್ಮ ಕುಲ ಕಸುಬಪ್ಪಾ ಕುಲ ಕಸುಬು… ರಾಜಮಾರಾಜ್ರಿಂದ ಬಂದಿರೋ ಕುಲಕಸುಬಪ್ಪಾ… ದೇವ್ರು ಗುಡ್ಯಾಗ ನರ್ತನ ಮಾಡ್ತಿದ್ದೋರು ನಾಟಕಗೂಳಾಗ ಪಾತ್ರ ಮಾಡಲಕ ಹತ್ತಿ ಪಾತರದೋರನ್ನಿಸ್ಕಂಡ್ವಿ… ಅದ್ರೊಂದ್ರಿಂದ್ಲೆ ಹೊಟ್ಟೆ ತುಂಬಲ್ಲಾಂತಿಟ್ಕೋ… ಆದ್ರೆ ಹಿಂಗಲಾಗ ಮುಂಗಲಾಗ ಕಸುವಿರೋ ಗಂಡುಸು ಮಂದಿ ಬಿಡಬೇಕಲ್ಲ… ಮೂಗಿಗೆ ತುಪ್ಪ ಹಚ್ಚಿ ಮಲಕ್ಕಳ್ಳಿಕ್ಕೆ ಹತ್ತಿದ್ರು… ಡಬ್ಬಿ ಅಂಗಡ್ಯಾಂಗಿಂದೆಂಗ ಕೊಡ್ತಾರೋ ಅಂಗ ಕೊಟ್ವಿ ತೊಗಂಡ್ವಿ! ಇದರಾಗ ತಪ್ಪೇನೈತಂತ… ನಮ್ಗೂ ಒಂದು ನೀತಿ ನಿಯತ್ತೈತಪ್ಪಾ… ನಾವೇನು ಆಕಿ ಗಂಡನ್ನಕೈ ಹಿಡ್ದು ಎಳೆಕೊಂಡು ಬಂದ್ವೇನು? ತಾನೇ ರಾಕೇಚನ ಜತಿ ಮಾಡ್ಕೊಂಡು ಪ್ಯಾಟಿಯೊಳಕ್ಕೆ ಬಂದ. ಪರಮೇಸೂರ ಶಾಸ್ತ್ರಿಗಳ ಮೊಮ್ಮಗ್ನ ಸಾವಸ್ಯಾಕ ಬೇಕೂಂತ ನಾವ್ಯಾರೂ ಅವನ ತಂಟೆಗೋಗ್ಲಿಲ್ಲ… ರಾಕೇಚ ಹಿಂಗಿಂಗ ಅಂತ ಬಂದು ಹೇಳ್ಳಿದ್ರೆ ನಾವಂಗಲ್ಲ ರೊಕ್ಕ ಕೊಟ್ಟೋರ್‍ಗೆಲ್ಲ ಮಲಿಕ್ಕೊಂತ ಹೋಗೋರಲ್ಲಾಂತ ಹೇಳೂಂತ ಹೇಳಿ ಕಳುವಿದೆ. ರಿಣ ಇತ್ತು ಮುಂದೆಂಗೋ ನಾವಿಬ್ರೂ ಜತಿಯಾದ್ವಿ… ನನ್ ಪ್ರೀತಿ ಮೇಲಾಯ್ತೇ ಹೊರ್‍ತು ಈ ವರಲಕ್ಷ್ಮಿಯ ಪಾತಿವ್ರತ್ಯ ಮೇಲಾಗ್ಲಿಲ್ಲಪ್ಪಾ ಕಾದಂಬರಿಕಾರ… ಈ ಪತಿವ್ರತೆ ಎಷ್ಟೊ ಬಾರಿ ನಂ ಪ್ಯಾಟಿಗೆ ನುಗ್ಗಿ, ನಂ ಮನೆ ಮುಂದೆ ನಿಂತು ಸಿಕ್ಕಾಪಟ್ಟೆ ಒದರಾಡಿ ಗಂಡನ ಮಕಕೆ ಮಣ್ಣು ತೂರಿ ಹೋದ್ಲಲ್ಲ… ಆಗೆಲ್ಲಿ ಹೋಗಿತ್ತೂಂತ ಈಕೆಯ ಪಾತಿವ್ರತ್ಯಾಂತ… ನೀನು ನಿಯತ್ತಿನ ಮನುಷ್ಯನಾಗಿದ್ರೆ ನನ್ನಂಥ ಹೆಂಣಿನ ಕರುಳೊಕ್ಕು ಬರೀತಿ… ಇಲ್ಲಾಂದ್ರೆ ಇಲ್ಲ… ಯಾವ್ದೇ ಹೆಂಗಸನ್ನ ಪತಿವ್ರತೆ, ಸೂಳೆಂತ ಗೆರೆ ಕೊಯ್ದು ನೋಡಬ್ಯಾಡಪ್ಪಾ.. ಅಲಲಲಾ… ನನ್ ಕರುಳೆಂಥದೂಂತ ನನಗ್ಗೆ ಗೊತ್ತೇ ಹೊರ್‍ತು ಇನ್ನೊಬ್ಬರ್ರಿಗೆಂಗ ಗೊತ್ತಾಗ್ತದೆಯೇ (ಅಮ್ಮಾ… ತಾಯಿ… ನೀನು ಮಹಾ ಜಗಳಗಂಟಿ… ನಿನ್ಗಲ್ಲ ನಾನೇಳ್ತಿರೋದು… ಈ ಕಾದಂಬರಿಕಾಗೆ… ನೀನಾಗ್ಲಿ… ನಿಮ್ಮತ್ತೆಯಾಗ್ಲಿ ಹಂಗ್ಯಾಕ ದುರುಗುಟ್ಟಿ ನೋಡ್ತೀರಿ… ಸುಮ್ಕಿರ್ರಿ) ಅಲ್ಲಾಪ್ಪಾ… ಹೊಟ್ಟೇಲಿ ಹುಟ್ದೋವೆ ಮಕ್ಳೇನು… ನಮ್ ಶಾಮನ ಮಕ್ಳು ನನ್ನೋವ್ರು ಅಲ್ವೇನು? ಆ ಶಿವರಾಮೂನ, ಅಶ್ವತ್ಥಾನ ಕಣ್ತುಂಬ ನೋಡ್ಬೇಕೂಂತ ಅಷ್ಟು ದೂರದ ಅನಂತಪುರಕ್ಕೆ ಎದ್ಕಂತ ಬಿದ್ಕಂತ ಹೋದ್ರೆ ಈ ನನ್ ಸವತಿ ಬಾಯಿಗೆ ಬಂದಂಗ ಅಂದು ಮಂಗಳಾರತಿ ಮಾಡೋದೇನು? ಎತ್ತಿಕೊಂಡ್ರೆ ಆ ಹಸುಕಂದಮ್ಮಗಳ ಮೈ ಮಲಿನಾಗ್ತಿತ್ತೇನು? ಈಕೆ ಸಿರಿವಲ್ಲಭನ ಕೂಡೆ ಸೇರ್‍ಕೊಂಡು ನನ್ನ ಮಕ್ಳೂನ ಅಪಹರಿಸೋಕೆ ಬಂದಾಳಂತ ಕಂಪ್ಲೀಂಟು ಕೊಟ್ಟಿದ್ರಪ್ಪಾ ಕಂಪ್ಲೀಟು… ಆ ಇನುಸುಪೆತ್ರು ನಂಗೆ ಗೊತ್ತಿದ್ದಾತಾದ್ರಿಂದ ಬಚಾವಾಗಿ ಬಂದೆ… ಇಲ್ಲಾಂದ್ರೆ ನಾನು ಜೆಲಲ್ಲಿ ಕೊಳಿಬೆಕಾಗಿತ್ತ… ಇದು ಯಾವುದೇ ಹೆಂಗಸು ಇನ್ನೊಂದು ಹೆಂಗಸಿನ ಮ್ಯಾಲೆ ಮಾಡೋ ಕೃತ್ಯಾನಾ? ನೀನೇ ಹೇಳು! ನೀನು ನಿಜವಾಗ್ಲು ನಿಮ್ಮವ್ವನ ಮಗನಾಗಿದ್ರೆ ನಿಜ ಸೋಸಿ ಬರೀತಿ… ಇಲಾಂದ್ರೆ ಇಲ್ಲ… ನಾನು ಸುಳ್ಳು ಹೆಳ್ತೀನಿಂತ ನೀನು ತಿಳ್ಕೊಂಡಿದ್ರೆ ಬೇಕಾದ್ರೆ… ನಮ್ಮ ಕಾಂಚನಳನ್ನ ಕೇಳು… ಏನೇ ಕಾಂಚನಾ ಹಂಗ್ಯಾಕ ಆ ಕಾದಂಬರಿಕಾರನ್ನ ಹುಳಿ ಹುಳಿ ನೋದ್ಕ್ಕಂತ ನಿಂತಿದ್ದೀ… ಮಾತಾಡು…” ಎಂದು ಅನಸೂಯಮ್ಮ ಎಂಬ ಪಾತ್ರವು ಕಾಂಚನಾಳ ಸೋಟಿಗೆ ತಿವಿದು ಎಚ್ಚರಿಸಿತು. ಟೇಬಲ್ ಮೇಲಿನ ಎಲ್ಲ ಪಾತ್ರಗಳಿಗಿಂತ ಕಾಂಚನಾ ಎಂಬ ಕೋಮಲ ಪಾತ್ರದ ಪರಿಸ್ಥಿತಿ ಅಯೋಮಯವಾಗಿತ್ತು. ನಾನು ಆಕೆಯ ಕಡೆ ನೋಡಲು ಆಕೆಯು ನಾರಾಯಣನು ಕೆರೆದುಕೊಂಡ ತೊಡೆಯಿಂದ ಹುಟ್ಟಿದ ಲೋಕೋತ್ತರ ಸೌಂದರ್ಯವತಿಯಾದ ಊರ್ವಶಿಯೋ; ಅಮೃತವನ್ನು ಹಂಚುವ ಕಾಲದಲ್ಲಿ ರಾಕ್ಷಸರನ್ನು ವಂಚಿಸುವ ಎಷ್ಟು ವೇಶ ದರಿಸಿದ ಮೋಹಿನಿಯೋ; ರಾಜರ್ಷಿ ವಿಶ್ವಾಮಿತ್ರನ ತಪಸ್ಸನ್ನು ಭಂಗಗೊಳಿಸಿದ ಮೇನಕೆಯೋ; ಕಶ್ಯಪನಿಂದ ಪ್ರಾಥೇಯಳಲ್ಲಿ ಜನಿಸಿದ ಅಪ್ಸರೆಯಾದ ತಿಲೋತ್ತಮೆಯೋ; ಪ್ರವರನ ಪಂಚೇಂದ್ತಿಯಗಳಿಗೆ ಲಗ್ಗೆ ಹಾಕಿದ ವ್ರೂಥಿನಿಯೋ; ಬ್ರಹ್ಮನ ಜ್ಞಾನಶಕ್ತಿಯದ ಗಾಯ್ತ್ರಿಯೋ; ಪಾರ್ವತಿಯ ದೇಹಕೋಶದಿಂದ ಹೊರಬಂದ ಸೌಂದರ್ಯವತಿಯಾದ ಗೌರಿಯೋ; ಮಹಿಷಾಸುರರೇ ಮೊದಲಾದ ಅಸುರರನ್ನು ಸಂಹರಿಸುವ ಪೂರ್ವದ ಚಾಮುಂಡಿಯೋ ಎಂಬಂತೆ ಗೋಚರಿಸಿದಳು… ಅರುಣೋದಯ ಕಾಲದ ಸಮಸ್ತ ಸೊಬಗಿನಿಂದಲೇ ರೂಪುಗೊಂಡಂತಿದ್ದ ಕಾಂಚನಾ ಎಂಬ ಪಾತ್ರವು ಕಾದಂಬರಿಯ ಎಲ್ಲಾ ಮುಖ್ಯ ಪಾತ್ರಗಳ ಕಡೆ ಬೆದರುಗಂಣಿಂದ ನೋಡಿತು. ಅದು ಮೆಲ್ಲಗೆ ನನ್ನ ಪಕ್ಕ ಸರಿದು ಮೈ ಸೋಂಕಿ ನಿಂತುಕೊಳ್ಳಲು ನಾನು ರೋಮಾಂಚನದಿಂದ ಒಂದು ಕ್ಷಣ ತಲ್ಲಣಿಸಿಹೋದೆ. “ರ್ರೀ ಕಾದಂಬರಿಕಾರರೇ” ಎಂದು ಮಾತಾಡಿಸಲು ತಲೆ ಎತ್ತಿ ನೋಡಿದೆ. ಆಕೆಯ ಇಡೀ ಮುಖ ಒಂದು ನೋಟಕ್ಕೆ ಪುಲ್ಲಾರೆಡ್ಡಿಯ ಮಿಠಾಯಿ ಅಂಗಡಿಯಂತೆ (ಹೈದರಾಬಾದಿನಲ್ಲಿರುವ ಪುಲ್ಲಾರೆಡ್ಡಿ ಸ್ವೀಟ್ ಸ್ಟಾಲ್ ಅಂತರಾಷ್ಟ್ರೀಯ ಖ್ಯಾತಿ ಪಡೆದಿರುವುದು) ಇನ್ನೊಂದು ನೋಟಕ್ಕೆ ಬೆಂಗಳುರಿನ ಗಂಜಾಂನಾಗಪ್ಪನವರ ಚಿನ್ನದಾಭರಣದ ಅಂಗಡಿಯಂತೆ ಓಚರಿಸಿತು. ಆಕೆ ಬಿಟ್ಟ ಉಸಿರು ಮಂದಾನಿಲದಂತೆ ಸುಳಿಯಿತು. ಕ್ರಮೇಣ ಎಲ್ಲ ಪಾತ್ರಗಳನ್ನು ಬದಿಗೊತ್ತಿ ತಾನೊಂದೇ ವಿಜೃಂಭಿಸತೊಡಗಿತು. ಇದು ಹೀಗೆ ಮುಂದುವರಿದರೆಲ್ಲಿ ಬರೆಯುತ್ತಿರುವ ಕಾದಂಬರಿಯ ದಿಕ್ಕೇ ಬದಲಾಗಿಬಿಡುವುದೋ ಎಂದು ಹೆದರಿದೆ. ಮೆಲ್ಲಗೆ ಕುರ್ಚಿಯನ್ನು ಆಚೆ ಪಕ್ಕ ಎಳೆದುಕೊಂಡೆ. ಅದುವರೆಗೆ ಸ್ಥಿತಪ್ರಜ್ಞನಂತೆ ಎಲ್ಲ ಗಮನಿಸುತ್ತಿದ್ದ ಶಾಮಂಣ ಎಂಬ ಕೇಂದ್ರ ಪಾತ್ರವೂ ಮೆಲ್ಲಗೆ ಮದ್ಯವಾಸನಾಯುಕ್ತ ತನ್ನ ಬಾಯಿಯನ್ನು ನನ್ನ ಕಿವಿಗೆ ಹತ್ತಿರ ತಂದು ಲೋ… ಖಬರ್ದರ್. ಯಾವ ಕಾರಣಕ್ಕೂ ಆ ಹುಡುಗಿಯ ಮೇಲೆ ಕಣ್ಣು ಹಾಕೀಯಾ… ನಾನೂ ಬರೆಯಬೇಕೆಂದಿದ್ದ ಕಥೆಯ ವಸ್ತು ಆಕೆಯ ಬದುಕು. ಆಕೆಯ ಅಥವಾ ಆಕೆಯ ಬದುಕಿನ ಗೊಡವೆಗೆ ಹೋಗಬೇಡ… ಮಾಮೂಲು ಮನುಷ್ಯನಿಗಿಂತ ಲೇಖಕನಾದವನು ಹೆಣ್ಣಿಗೆ ಸಂಬಂಧಿಸಿದಂತೆ ಅಪಾಯಕಾರಿ. ಕಾಚನಾ ನನ್ನ ಮಗಳಿದ್ದಂತೆ. ನನ್ನ ಗೆಳೆಯನಾದ ನಿನ್ಗೂ ಸಹ. ಸಾಧ್ಯವಾದರೆ ಒಂದು ಒಳ್ಳೆ ಗಂಡು ನೋಡಿ ಮದುವೆ ಮಾಡಲು ಪ್ರಯತ್ನಿಸು. ಈ ವಿಶಯದಲ್ಲಿ ಅನಸೂಯಳಿಗೆ ಸಹಕರಿಸು. ಕಣ್ಣು ತಿಳಿಗೊಳಿಸು… ಆಯ್ತಾ…” ಎಂದು ಪಿಸುಗುಟ್ಟಿದ. ಪ್ರಾಣಾಯಾಮ ಮಾಡುತ್ತಿರುವವನಂತೆ ಮೂಗಿಗೆ ಅಡ್ಡ್ಡ ಇಟ್ಟುಕೊಂಡಿದ್ದ‌ಎರಡು ಬೆರಳುಗಳನ್ನು ತೆಗೆಯುತ್ತ ನಾನು “ನಾನು ಆ ಪೈಕಿಯಲ್ಲ ಮಹರಾಯ… ಹಾಗೇನಾದ್ರು ವರ್ತಿಸಿದ್ರೆ ನನ್ನ ಹೆಂಡತಿ ವರ್ಲ್ಡ್‌ವಾರ್ ಡಿಕ್ಲೇರ್ ಮಾಡಿಬಿಡ್ತಾಳ್:ಎ… ನಾನು ಮೊದಲೇ ನಾಗಸಾಕಿಯಂಥ ಮೆತ್ತನೆಯ ಮನುಷ್ಯ.. ನನ್ಗೂ ಸೌಂದರ್ಯವನ್ನು ಆರಾಧಿಸುವ ಮನೋಭಾ‌ಅವವಿದೆ… ಕುಲು ಕಣಿವೆಯನ್ನು ನೋಡಿದಂತೆಯೇ ಕಾಂಚನಾಳನ್ನು ನೋಡುವುದರಲ್ಲಿ ತಪ್ಪೇನಿದೆ? ನನ್ನನ್ನು ಅರ್ಥಮಾಡಿಕೊಂಡಿರೋದು ಇಷ್ಟೇ ಏನು?… ವ್ಯಾಖ್ಯಾನದೊಳಗೆ ಒಂದು ಆಯಕಟ್ಟಾದ ಜಾಗದಲ್ಲಿ ಕಾಂಚನಾಳ ಪೂರ್ವೋತ್ತರ ಬದುಕು ಅರಳದಿದ್ದರೆ ಕಾದಂಬರಿ ಗಗೆಟ್ಟಿಯಾಗುವುದಾದರೂ ಹೇಗೆ? ನಿನ್ನ ಪಾತ್ರಕ್ಕೆ ಅಪೂರ್ವ ಮೆರಗು ಬರುವುದಾದರೂ ಹೇಗೆ? ನಿರ್ವಿಕಲ್ಪಚಿತ್ತದಿಂದ ನಾನೀ ಕೆಲಸ ಮಾಡ್ತೀನಿ. ಹೆಂಗರುಳಿನ ನೀನು ಹೆದರ್‍ಕೋಬೇಡ… ಅಡ್ಡ ತಲೆ ಹಾಕದೆ ತೆಪ್ಪಗಿರ್‍ತೀಯ. ನಿನ್ನ ಸರದಿ ಬಂದಾಗ ನೀನು ಮಾತಡಿಸುವಿಯಂತೆ. ಅಥವಾ ನಿನ್ನ ಪರವಾಗಿ ನಾನೇ ಮಾತಾಡ್ತೀನಿ. ಎಲ್ಲ ಪಾತ್ರಗಳನ್ನು ಲೇಖಕನಾದ ನಾನು ನಿಯಂತ್ರಿಸಿ ಕಾದಂಬರಿಗೆ ತಕ್ಕ ಹಾಗೆ ಪೊಷಿಸದಿದ್ದರೆ ಹೇಗೆ? ಇದು ಲೇಖಕನಾದ ನನ್ನ ಹಕ್ಕು ಕರ್ತವ್ಯ ಮತ್ತು ಸ್ವಾತಂತ್ರ್ಯ ಕೂಡ… ತಿಳಿತಾ? ಎಂದು ನಾನು ನಿಷ್ಟುರವಾಗಿ ಹೇಳಲು ದೈಹಿಕವಾಗಿ ದುರ್ಬಲವಾಗಿದ್ದ ಶಾಮಂಣನ ಪಾತ್ರ ದೂರ ಸರಿದು ಟಿಪ್ಪಣಿಯೊಳಗಿನ ಒಂದು ವಾ‌ಅಕ್ಯದ ಮೇಲೆ ಕಾಲು ಚಾಚಿ ಮಲಗಿಕೊಂಡಿತು. ಈ ಲೇಖಕ ತೊಳೆದ ಮುತ್ತಿನಂತಿರುವ ಕಾಂಚನಾಳನ್ನು ಮಾತಾಡಿಸುತ್ತಾನಲ್ಲಾ! ಆಕೆ ಅಥವಾ ಅವನು ಪರಸ್ಪರ ನಯನಾಸ್ತ್ರ ಬೀರುತ್ತಿರುವರಲ್ಲ!… ಕಂಚನಾ ಕಾದಂಬರಿಕಾರಗೆ ಏನೇನು ಹೇಳುವಳೋ? ಎಂಬಂತ ಕುತೋಹಲದಿಂದ ಉಳಿದ ಪಾತ್ರಗಳು ನೋಡತೊಡಗಿದವು. “ಏನಮ್ಮಾ, ಕಾಂಚನಾ” ಎಂದು ನಾನು ಪಲುಕುವಷ್ಟರಲ್ಲಿ ಆ ಕೋಮಲ ಪಾತ್ರವು ಟಿಪ್ಪಣಿ ಅಕ್ಷರಗಳ ಕುರುಚಲು ಕಾಡಿಗೆ ವನವಿಹಾರಕ್ಕೆ ಹೋಗಿಬಿಟ್ಟಿತ್ತು… ಹಾಗೂ ಹೀಗೂ ಪ್ರತ್ನಿಸಿ ಬೆರಳ ಚಿಮುಟಿಗೆಯಿಂದ ಅದನ್ನು ಹಿಡಿದೆತ್ತಿ ನಿಲ್ಲಿಸಲು ಅದು ಒ‌ಅನೆ ಮೂಡಿ ಬೆಳ್ದಿಂಗಳು ಹರಡಿ ಉಗುರು ಕಡಿಯುತ್ತ =; ಕಾಲಬೆರಳಿಂದ ಅಕ್ಷರ ಮೀಟುತ್ತ ಅವನತ ಮುಖಿಯಾಗಿ ನಿಂತುಕೊಂಡುಬಿಟ್ಟಿತು. ನಾನಿದ್ದು “ಅಲ್ಲಮ್ಮಾ ಕಾಂಚನಾ… ನೀನು ಹೀಗೆ ಮೌನದಿಂದ ಇದ್ದು ಬಿಟ್ರೆ ಹೇಗಮ್ಮಾ? ಅನಸೂಯಮ್ಮನ ಸಂಗಡ ನೀನೂ ಅನಂತಪುರಕ್ಕೆ ಹೋಗಿದ್ದೆಯಾ/ ಹೋಗಿದ್ದ್ರೆ ಏನಾಯ್ತು ಅಂತ ಸ್ವಲ್ಪ ಹೇಳ್ತೀಯಾ… ಹೆದರಿಕೊಳ್ಳೊಕೆ ಇಲ್ಲಿ ಯಾ‌ಅರೂ ಕಡೇಲವರಿಲ್ಲ. ಎಲ್ಲ ನಿಮ್ಮವರೆ. ಹೆದರಬೇಡ ಧೈರ್ಯವಾಗಿ ಹೇಳು?” ಎಂದು ಕಳ್ಳತನದಿಂದ ಅದರ ಮೈದಡವಿದೆ. ಅದನ್ನು ಆಕೆ ಪ್ರತಿಭಟಿಸಲಿಲ್ಲ. ತಗ್ಗಿಸಿದ ತಲೆ ಮೇಲೆತ್ತದಂತೆ “ನಮ್ಮಮ್ಮ ಹೇಳೋದೆಲ್ಲ ಖರೇವ್ರಿ… ಖರೇವಲ್ದೆ ಆಕೆ ಬೇರೇನೂ ಹೇಳೋದಿಲ್ಲ…” ಎಂದು ಹೇಳುವಷ್ಟರಲ್ಲಿ ಜಲಜಲನೆ ಬೆವೆತುಬಿಟ್ಟಳು. ಕಪಟ ನಾಟಕ ಸೂತ್ರಧಾರಿಯಂತಿದ್ದ ನಾನು… “ಅಷ್ಟು ಹೇಳಿದ್ರೆ ಸಾಲ್ದಮ್ಮಾ ಕಾಂಚನಾ… ಸ್ವಲ್ಪ ವಿವರವಾಗಿ ನೀನು ಹೇಳಿಲ್ಲಾಂದ್ರೆ ವರಲಕ್ಷ್ಮಿ ಎಂಬ ಪಾತ್ರದೊಂದಿಗೆ ಅನಸೂಯ ಎಂಬ ಪಾತ್ರವು ತಳುಕುಬಿದ್ದು ನಿಜಾಂಶ ಮುಚ್ಚಿಹೋಗಿಬಿಡುತ್ತೆ” ಎಂದು ಧೈರ್ಯ ತುಂಬಿದೆ. ಕಾಂಚನಾ ಎಂಬ ಪಾತ್ರವೂ ನಿಜಕ್ಕೂ ವರಲಕ್ಷ್ಮಿ ಎಂಬ ಪಾತ್ರವನ್ನು ನೋಡಿ ಖಂಡಿತ ಹೆದರಿತ್ತು. ಹೇಳಲೋ ಬೇಡವೋ ಎಂಬಂತೆ ತಡೆ ತಡೆದು ಹೇಳತೊಡಗಿತು. “ನಮ್ಮವ್ವನ ಸಂಗಡ ನಾನೂ ಹೋಗಿದ್ದೇರಿ.. ತೋರಿಕೇಗಲ್ರಿ ನಮ್ಮಮ್ಮ ಅವ್ರ ಮನ್ಗೆ ಹೋಗಿದ್ದು… ಮನೆ ಬಾಕಲ ಈಚೆ ನಿಂತು ಅಕ್ಕಾ ಅಕ್ಕಾ ಎಂದು ಕೂಗುದ್ಲುರೀ… ನಮ್ಮನ್ನ ನೋಡುತ್ಲೆ ವರಲಕ್ಷ್ಮಿ ಚಿಕ್ಕಮ್ನೋರು ಕೆಂಡ ಮಂಡಲ ಆದ್ಲೂರಿ… ಯೇನೇ ಭೋಸೂಡಿ… ನನ್ ಮನೆಗೆ ಬಂದು ನನ್ನೇ ಅಕ್ಕಾ ಅಂತೀ ಏನೇ? ಇನ್ನೊಮ್ಮೆ ಅಕ್ಕ ಅಂದೀ ಅಂದ್ರ ನಿನ್ ನಾಲಗೇನ ಬುಡ ಸಹಿತ ಕಿತ್ತು ಪೋಮೆರಿನ್ ನಾಯ್ಗೆ ತಿನ್ನಿಸಿ ಬಿಡ್ತೀನಿ ಎಂದು ಗದರಿಸಿದ್ಲೂರಿ… ಅದಕ್ಕಿದು ನಮ್ಮಮ್ಮ ನಿಮ್ಗೆ ಅಕ್ಕಾ ಅನ್ದೆ ಬೇರೆ ಯಾರ್ಗೆ ಅನ್ಲಿ ಅಕ್ಕಾ… ಹಿಂದಿನೆಲ್ಲ ಮರ್‍ತು ಬಿಡ್ರಿ ಅಂತ ಕೈಮುಗಿದು ಕೇಳಿದ್ಲೂರಿ… ಅಲ್ಲೊಬ್ಬ ಗಂಡುಮಗ್ನೂ ಅವ್ರಿಗೆ ಸಪೋರ್ಟಾಗಿ ನಿಂತ್ಕೊಂಡಾರೀ… ಒಂದೇ ಒಂದು ಸಾರಿ ಮಕ್ಳೂನ ತೋರಿಸಿಬಿಡ್ರಿ ಅಕ್ಕಾ… ಹೊರಟೊಗ್ತೀವಿ ಎಂದು ಗೋಗರೆಯುತ್ತ ನಮ್ಮಮ್ಮ ಅವರ ಕಾಲಿಗೆ ಬಿದ್ದು ಬೇಡ್ಕೊಂಡ್ಲೂರಿ… ಅದಕ್ಕಿದ್ದು ವರಲಕ್ಷ್ಮಿ ಚಿಕ್ಕಮ್ನೋರು ಕಾಲಿಂದ ಜಾಡಿಸಿ ತಳ್ಳಿ ಬಿಟ್ರೂರಿ… ಅಂಗಾತ ಬಿದ್ದಿದ್ದ ನಮ್ಮಮ್ಮ ಅಳೋ ಮುಖಮಾಡ್ಕೊಂಡು ಅಳೋದ್ನ ನೋಡಲಾರದೆ ರುಕ್ಮಿಣಿ ಅಮ್ನೋರು ಸಮಾಧಾನದ ಮಾತ್ನ ಹೇಳಿದ್ರು ಚಿಕ್ಕಮ್ನೋರು ಕೇಳ್ಳಿಲ್ರಿ… ಅಮ್ಮನ ದುಕ್ಕ ನೋಡ್ಲಾರ್‍ದೆ ನನ್ಗೂ ಸಿಟ್ಟು ಬಂತ್ರೀ… ನಾನೂ ಒಂದ್ನಾಲ್ಕು ಮಾತು ಅಂದೇನ್ರೀ… ಇಲ್ಲಿ ಯಾರ ತಲೆ ಕೆಡಿಸ್ಬೇಕಂತ ಈ ಹುಡುಗೀನ ಕರ್ಕೊಂಡು ಬಂದೀಯೆ ಚಿನಾಲಿ ಎಂದು ಚಿಕ್ಕಮ್ನೋರು ಬಯ್ಯಲಿಕ್ಕ ಹಾತ್ತಿದ್ರೂರಿ… ಮಕ್ಕಳಿಗೇ ಅಂತ ತಂದಿದ್ದ ಪಾಕೆಟ್ನ ನಮ್ಮಮ್ಮ ಕೊಡಲಿಕ್ಕೆ ಹೋದ್ಲೂರಿ… ಚಿಕ್ಕಮ್ನೋರು ಅದ್ನ ಬೀದಿಗೆ ಎಸೆದ್ರೂರಿ ಅವ್ರೆಲ್ಲ ಸೇರ್ಕೊಂಡು ನಮಗ್ಬೆಯ್ಲಿಕ್ಕೆ ಹತ್ತಿದ್ರೂರಿ… ಇವ್ರೆಲ್ಲ ಸೇರ್ಕೊಂಡು‌ಎನಾದ್ರು ಅಪಾಯ ಮಾಡಿದ್ರೆಂತ ಹೆದರಿ ನಾವು ವಾಪಸು ಬಂದುಬಿಟ್ವಿ. ಹೆಂಗೋ ವಿಳಾಸ ಸಂಪಾದಿಸ್ಕೊಂಡು ಮಕ್ಳೋದೋ ಕಾರುಮೆಂಟಿಸ್ಕೂಲಿಗೆ ಹೋದ್ವಿರ್ರೀ… ಬಯಲೋಳಗೆ ಚೆಂಡಾಡ್ಕೊಂತಿದ್ದ ಮಕ್ಳು ಕರೆದ ಕೂಡ್ಲೆ ಹತ್ರ ಬಂದ್ವೂರಿ. ಪಿಳಿ ಪಿಳಿ ನೋಡಲಾಕ ಹತ್ತಿದ್ವೂರಿ. ನಮ್ಮಮ್ಮ ಅವ್ನ ಎತ್ಕೊಂಡು ಮುದ್ದು ಕೊಟ್ಟು ಅಳಲಿಕ್ಕೆ ಹತ್ತಿದ್ಲೂರಿ… ಮೇಡಂ ಬಂದು ಸಮಾಧಾನ ಮಾಡಿದ್ಲೂರಿ… ಮಕ್ಳೂನ ಒಳಗಡೆ ಕರ್‍ಕೊಂಡೋದ್ಲೂರಿ… ನಾನೋದಾಗ ನಡೆದಿದ್ದು ಇಷ್ಟೇರ್ರೀ… ಮತ್ತೊಮ್ಮೆ ಅಮ್ಮನ ಸಂಗಾತ ಹೋಗಿರ್‍ಲಿಲ್ರೀ… ನಾನು ಹೇಳಿದ್ದೆಲ್ಲ ಖರೇವ್ರಿ… ಖರೇವಲ್ದೆ ಬೇರೇನು ಹೆಳಲ್ರೀ” ಎಂದು ಚಿಕ್ಕ ಮಗುವಿನಂತೆ ವರದಿ ಒಪ್ಪಿಸಿದ ಕಾಂಚನಾ ಪಾತ್ರವುನಿಧಾನವಾಗಿ ಕುಗ್ಗುತ್ತಹೋಗಿ ಅಕ್ಷರಗಳೊಳಗೆ ಹೊಕ್ಕೊಂಡು ಅಂತರ್ಧಾನವಾಗಿಬಿಟ್ತಿತು. ಅದು ಮೊದಲೇ ನಾಚಿಕೆ ಸ್ವಭಾವದ ಕೋಮಲ ಪಾತ್ರ… ಅಂತರ್ಧಾನವಾಗದೇ ಇರಲು ಹೇಗೆ ಸಾಧ್ಯ?… ಅದನ್ನು ಹುಡುಕುವ ಕೆಲಸದಲ್ಲಿ ಮಗ್ನನಾದ ರಾಖೇಶ ಎಂಬ ಪಾತ್ರ ಕಂಡು ನನಗೆ ಸಿಟ್ಟು ಬಂತು. “ಲೇ ರಾಖೇಶಾ… ಇಂಥ ಹಡಬೆ ಪಾತ್ರಾ ಮಾಡದೆ ಸುಮ್ನೆ ನಿನ್ ಪಾಡಿಗೆ ನೀನು ನಿಂತ್ಕೋಳಯ್ಯಾ” ಎಂದು ಎಚ್ಚರಿಸಿದೆ.ಟಾಡಾ ಕಾಯಿದೆ ಅಡಿ ಬಂಧಿತರಾದವರಂತೆ ನಿಂತಿದ್ದ ಆ ಎಲ್ಲ ಪಾತ್ರಗಳನ್ನು ಒಮ್ಮೆ ನಖಶಿಖಾಂತ ಪರಿಶೀಲಿಸಿದೆ. ಇನ್ನು ಇವುಗಳನ್ನೆಲ್ಲ ಪ್ರಾಸಿಕ್ಯೂಷನ್ನಿಗೆ ಗುರಿಪಡಿಸೋದರಿಂದ ಯಾವ ಉಪಯೋಗವಿಲ್ಲ. ಇವು ಪರಸ್ಪರ ದೋಷಾರೋಪಣೆ ಮಾಡುತ್ತ ನಿಜಾಂಶದ ಮೇಲೆ ಕಲ್ಲು ಚಪ್ಪಡಿ ಎಳೆದು ಗೋಜಲೆಬ್ಬಿಸುತ್ತವೆ. ಇವುಗಳನ್ನು ಕಾದಂಬರಿಯ ಚೌಕಟ್ಟಿನೊಳಗೆ ಅಳವಡಿಸಿಕೊಳ್ಳುವುದು ಒಂದೇ; ಪಗಡಿಗಳಲ್ಲಿಟ್ಟು ಕಪ್ಪೆಗಳನ್ನು ತೂಗುವುದೂ ಒಂದೇ. ಆದರೆ ಇದು ಅನಿವಾರ್ಯ. ಒಂದೇ ಒಂದು ಸಾರಿ ಶಾಮಂಣ ಎಂಬ ಕೇಂದ್ರ ಪಾತ್ರವನ್ನು ಮಾತಾಡಿಸಿ ಪ್ರಾಸಿಕ್ಯೂಷನ್ ಮುಗಿಸಿ ಬಿಡುವುದು ಒಳ್ಳೆಯದೆಂದುಕೊಂಡೆ. ವಾಕ್ಯವೊಂದರ ಮೇಲೆ ನಿಟಾರನೆ ಮೈಚಾಚಿ ಮಲಗಿಕೊಂಡಿದ್ದ ಆ ಪಾತ್ರದ ಮುಖಕ್ಕೆ ಬ್ಲೇಡು ತಾಗದೆ ಎಷ್ಟು ದಿನಗಳಾಗಿರುವುದೋ ಏನೋ. ವರ್ತಮಾನದ ಗೆದ್ದಲಿಗೆ ಬಲಿಯಾಗಿದ್ದ ಆ ಪಾತ್ರವನ್ನು ನೋಡಿ ನನಗೇ ಒಂಥರಾ ಆಗಿ ಕಣ್ಣಲ್ಲಿ ನೀರುಬಂತು. ‘ಶಾಮಾ… ನನ್ನ ಶಾಮಾ… ನಿನ್ನೂ ಒಂಚೂರು ಮಾತಾಡಿಸೋದಿದೆ ಕಣಯ್ಯ… ಸ್ವಲ್ಪ ಎದ್ದು ಬರ್‍ತೀಯಾ ನನ್ನಪ್ಪಾ’ ಎಂದೆ. ಅದು ಮಲಗಿದಲ್ಲಿಂದಲೇ “ಹೋಗೋ ನಿಂದೇನು ಗೋಳು… ಸತ್ತಿರೋ ನನ್ನೂ ನೀನು ಬಿಡ್ತಿಲ್ವಲ್ಲೋ… ನನ್ನ ಬಗ್ಗೆ ಕಾದಂಬರಿ ಬರೆ ಅಂತ ಯಾವ ಬೋಳಿಮಗ ನಿನ್ಗೆ ಹೇಳಿದ್ನೋ ನನ್ನ ಪಾಲಿನ ಸಾಡೆಸಾತ್ ಶನಿಯೇ. ನಾನು ಸತ್ತಿರೋದೇ ಒಂದು ಛಾನ್ಸ್ ಅಂದ್ಕೊಂಡಿದ್ದೀಯಾ ಇದಕ್ಕಿಂತ ದೊಡ್ಡ ಕ್ರೌರ್ಯ ಯಾವ್ದಿದೆ?… ನೀನು ಕಾದಂಬರಿ ಬರೆಯೋದು ಬೇಡ… ನನ್ ಗೋಳು ಹುಯ್ದುಕೋಳ್ಳೋದೂ ಬೇಡ… ಬರೆಯೋದಿದ್ರೆ ಆ ಸಚಿವೆ ಜಲಜಾಕ್ಷಿ ಕಮಲಾಕರರ ಬಗ್ಗೆ ಬರೆ… ಬೆಂಗ್ಳೂರಲ್ಲಿ ಕಂಟಿಸ್ಸಾಕಾರಿನಲ್ಲಿ ಐಷಾರಾಮ ಜೀವನ ನಡೆಸ್ತಿರೋ ಅನಸೂಯ ರಘುರಾಮರ ಬಗ್ಗೆ ಬರೆ… ಪ್ರಸಿದ್ಧ ಇನ್ಸ್‌ಸ್ಟಾಂಟ್‌ಫುಡ್ ತಯಾರಿಕಾ ಕಂಪನಿಯ ಮಾಲೀಕರಾದ ಅವರು ಪ್ರಸಿದ್ಧ ಯೋಗಪಟು ಪಟುವರ್ಧನ್ ಮೂಲಕ ಮಾಜಿ ಪ್ರಧಾನ ಮಂತ್ರಿ ಶತಾವಧಾನಿ ಅಳಸಿಂಗ ರಾಯರಿಗೆ ಒಂದು ಕೋಟಿ ಇಪ್ಪತ್ತಾರುಲಕ್ಷ ಲಂಚ ಕೊಟ್ಟಿರೋ ಸಂಗತಿಯನ್ನು ವೃತ್ತಪತ್ರಿಕೆಗಳು ಪ್ರಕಟಿಸಿವೆಯಲ್ಲ… ಇದರ ಬಗ್ಗೆ ಬರೆಯೋ ಮಹರಾಯ. ಇಂಥ ವಿಷಯಗಳನ್ನು ತಲೆ ಹಚ್ಚಿಕೊಂಡಲ್ವೆ ನಾನು ಕುಡಿಯೋದನ್ನು ಕಲಿತದ್ದು. ಇಂಥ ಮೇಜರ್ ಪಾಯಿಂಟ್ಸ್ ಬಿಟ್ಕೊಟ್ಟು ನಮ್ಮಂಥ ಚಿಲ್ಲರೆ ಮಂದಿಯನ್ಯಾಕೆ ಪೀಡಿಸ್ತಿದ್ದೀಯಾ…” ಎಂದು ಗೊಣಗಿತು. ಶಾಮನೆಂಬ ಪಾತ್ರ ಸತ್ರನಂತರವೂ ಕಾದಂಬರಿಗೆ ಒಳ್ಳೆ ಕ್ಲೂಗಳನ್ನು ಕೊಡ್ತಿವೆಯಲ್ಲಾ ಎಂದು ಆಶ್ಚರ್ಯ ಚಕಿತನಾದೆ. ಸಂಸ್ಕೃತಿ ರಾಜ್ಯ ಇಲಾಖೆ ಸಚಿವೆ ಜಲಜಾಕ್ಷಿ ತನ್ನ ಗಂಡ ಮಸಾಲೆಯವರನ್ನು ಕಿವಿಸೋರುವ ಇಲಾಖೆಗೆ ಸರ್ಕಾರದ ಖರ್ಚಿನಲ್ಲಿ ಅಮೇರಿಕಾಕ್ಕೆ ಕಳಿಸಿರೋದು ಗೊತ್ತು; ಆ ದೂರದ ದೇಶದಲ್ಲಿ ಒಂದೇ ರೋಗದ ಜೊತೆಗೆ ನೂರು ರೋಗಗಳು ಪತ್ತೆಯಾಗಿ ಮಸಾಲೆಯವರು ತಿಂಗಳುಗಟ್ಟಲೇ ಉಳಿಯಬೇಕಾಗಿ ಬಂದಿರುವುದೂ ಗೊತ್ತು! ಲಂಡನ್ನಿನಲ್ಲಿ ಇನ್‌ಸ್ಟಾಂಟ್‌ಫುಡ್ ತಯಾರಿಕಾ ಕಂಪನಿ ಸ್ಥಾಪಿಸುವ ಸಲುವಾಗಿ ಕರ್ನಾಟಕದ ನಂಬರ್ ವನ್ ಮಿಲಿನಿಯರ್ ರಘುರಾಮ್ ಪತ್ರೊಡೆ (ಗ್ರೊವರ್, ಖನ್ನಾ, ಇಂಥ ಪೂರ್ವಪದದ ವಿಶೇಶಣಗಳಿಗೆ ಮಾರುಹೋಗಿ ರಘುರಾಮ ತನ್ನ ಆಪ್ತ ಕಾರ್ಯದರ್ಶಿ ಪಂಡಿತ್ ವಿನೂ ಸನ್ಯಾಲ್ ರವರ ಸಲಹೆಯಂತೆ ಪತ್ರೊಡೆ ಎಂಬ ವಿಶೇಷಣವನ್ನು ಕಾನೂನು ರೀತ್ಯ ಸೇರಿಸಿಕೊಂಡು ಭರತಖಂಡದಲ್ಲಿ ಜನಪ್ರಿಯನಾಗಿರುವನು. ಅಂತ್‌ರಾಷ್ಟ್ರೀಯ ಖ್ಯಾತಿಯ ವಾಮಾಚಾರಿಯೂ; ಯೋಗಪಟ್ಟುವೂ ಆದ ಸ್ವಾಮಿಪಟುವರ್ಧನ್‌ರವರ ಮೂಲಕ ಮಾಜಿ ಪ್ರಧಾನಿ ಶತಾವಧಾನಿಯವರಿಗೆ ಅಪಾರ ಹಣವನ್ನು ಕಾಣಿಕೆ ರೂಪದಲ್ಲಿ ಕೊಟ್ಟಿರಿವುದೂ ಗೊತ್ತು; ಶತಾವಧಾನಿಯವರು ಬ್ರಿಟನ್ ಪ್ರಧಾನಮಂತ್ರಿ ಜಾನ್ ಆಲಿವರ್ರವರೆದುರು ಈ ವಿಷಯ ಪ್ರಸ್ತಾಪಿಸಿ ವಿಫಲರಾಗಿರುವುದೂ ಗೊತ್ತು; ಉದ್ದಿಮಿ ಪತ್ರೊಡೆ ವಿರೋಧ ಪಕ್ಷದ ಮುಖಂಡರೂ; ಬಾಲ ಬ್ರಹ್ಮಚಾರಿಯೂ, ಸಮರಾಂಗಣ ಸೂತ್ರಧಾರ ಎಂಬ ಬಿರುದಾಂಕಿತರೂ, ಆದ ಡಾ||ಶಾಲಿಕನಾಥ ಮಿಶ್ರವರನ್ನು ಪಾರ್ಟಿಫಂಡ್ ಕೊಡುವುದರ ಮೂಲಕ ಖುದ್ದ ಕಂಡು ಈ ಲಂಚ ಪ್ರಕರಣ ವರದಿ ಮಾಡಿ ದಾಖಲೆಗಳ ನಕಲು ಪ್ರತಿಗಳನ್ನು ಕೊಟ್ಟಿರಿವುದೂ ಗೊತ್ತು. ಡಾ|| ಶಾ.ಮಿತ್ರರವರು ಪಾರ್ಲಿಮೇಂಟಿನ ಶೀತಕಾಲದ ಅಧಿವೇಶನದಲ್ಲಿ ಈ ವಿಷಯ ಪ್ರಸ್ತಾಪಿಸಿ ಬಿರುಗಾಳಿ ಎಬ್ಬಿಸಿರುವುದೂ ಗೊತ್ತು. ಹಾಲಿ ಪ್ರಧಾನಿ ಶಂಕರ್‌ಸಿಂಗ್ ಉಡೇರಾರವರು ವಿರೋಧ ಪಕ್ಷಗಳ ಒತ್ತಡಕ್ಕೆ ಮಣಿದು ಛೀಫ್ ಜಸ್ಟೀಸ್ ಯಶೋಧರ್ ಇಂದ್ರಪಾದ್ ಗ್ವಾಲಿಯರ್ರವರ ನೇತೃತ್ವದಲ್ಲಿ ತನಿಖಾ ಆಯೋಗ ರಚಿಸಿರುವುದೂ ಗೊತ್ತು; ಕನ್ನಡದ ಯಕಃಚಿತ್ ಲೇಖಕನಾದ ನಾನು ಇಂಥ ಅಂತಾರಾಷ್ಟ್ರೀಯಮಟ್ಟದ ವಿಷಯಗಳನ್ನು ಆಧರಿಸಿ ಕಾದಂಬರಿ ಬರೆಯುವುದು ಅಸಾಧ್ಯವೆಂಬ ಸಂಗತಿ ಶಾಮಂಣ ಎಂಬ ಪಾತ್ರಕ್ಕೆ ಅರ್ಥವಾಗುತ್ತಿಲ್ಲವಲ್ಲವೆಂಬ ಖೇದ ಆವರಿಸಿತು. ಅವರೆಲ್ಲರ ಬದುಕಿನಲ್ಲಿ ಇಲ್ಲದ ವೈಶಿಷ್ಟ್ಯ ನಿನ್ನ ಬದುಕಿನಲ್ಲಿದೆ ಶಾಮಂಣ… ವಸ್ತುವಿನ ಅಗಾಧವಾದ ಪ್ರತಿಬಿಂಬವನ್ನು ಒಂದು ಪುಟ್ಟ ಕನ್ನಡಿಯಲ್ಲಿ ಹಿಡಿದಿರುವ ರೀತಿಯಲ್ಲಿಯೇ ನಿನ್ನ ಮೂಲಕ ನಾಲ್ಕಾರು ಸಂಗತಿಗಳನ್ನು ಸ್ಪಷ್ಟವಾಗಿ ಹೇಳಬೇಕೆಂದಿರುವೆ. ಒಬ್ಬನ ಬದುಕು ಎಲ್ಲರ ಬದುಕೂ ಆಗಬೌದು. ಎಲ್ಲರ ಬದುಕು ಒಬ್ಬನ ಬದುಕೂ ಆಗಬೌದು. ಎಲ್ಲರ ಪಾಪ ಪುಣ್ಯಗಳಲ್ಲಿ ಎಲ್ಲರ ಪಾಲೂ ಇದೆ.. ಅದೂ ಅಲ್ಲದೆ ಸತ್ತ ನಂತರವೂ ರಾಜಕಾರನ ಭ್ರಷ್ಟಾಚಾರ ಮತ್ತಿದರ ಕ್ಷುಣ್ಣ ಆಗು ಹೋಗುಗಳ ಬಗ್ಗೆ ಸದಾ ಚಿಂತಿಸ್ತಿರ್‍ತೀಯಲ್ಲ… ಇದು ಬದುಕಿರೋ ನನ್ನಂಥವರಿಗೇನೆ ಸಾಧ್ಯವಿಲ್ಲಾಂತ… ಬದುಕುವ ಪ್ರತಿಕ್ರಿಯೆ ಮತ್ತು ಕಲೆಯನ್ನು ನಿನ್ನಿಂದ ಕಲಿಯಬೇಕಿದೆ ಕಣಯ್ಯಾ… ಇರಲಿ ನಿನ್ನ ಸಾಮಾಜಿಕ ಕಾಳಜಿಯನ್ನು ಸಾಧ್ಯವಾದರೆ ಪ್ರಸ್ತಾಪಿಸ್ತೀನಂತೆ. ಮೊದ್ಲಿ ನೀನೀಗ ಪ್ರಾಸಿಕ್ಯೂಷನ್‌ಗೆ ಗೌರವ ಕೊಡುವ ನಿಮಿತ್ತವಾದರೂ ಬಂದು ಒಂದ್ನಾಲ್ಕು ಮಾತು ಹೇಳು” ಎಂದು ಶಾಮಂಣ ಎಂಬ ವಿಚಾರಪೂರ್ಣಪಾತ್ರವನ್ನು ಮೇಲೆಬ್ಬಿಸಲು ಅದು ಮಲಗಿದ್ದ ವಾಕ್ಯದ ಅಕ್ಷರಗಳನ್ನು ಹಿಡಿದು ಅಲ್ಲಾಡಿಸಿದೆನು.

ಶರಶಯ್ಯೆಯಿಂದ ಪಿತಾಮಹ ಭೀಷ್ಮರು ತನ್ನ ಮೊಮ್ಮಕ್ಕಳು ಕರೆದರೆಂಬ ಭ್ರಮೆಯಿಂದ ಅಗಾಗ್ಗೆ ಮೇಲೆದ್ದು ಸುತ್ತಮುತ್ತ ನಿರುಕಿಸಿ ಮತ್ತೆ ಮಲಗುವರಲ್ಲ… ಹಾಗೆಯೇ ಎದ್ದ ಶಾಮಂಣ ಎಂಬ ಪಾತ್ರವನ್ನು ಹಿಡಿದೆತ್ತಿ ಟೇಬಲ್ ಮೇಲೆ ಜೋಪಾನವಾಗಿ ನಿಲ್ಲಿಸಿದೆ. ಇಷ್ಟು ದುರ್ಬಲವೂ; ವ್ಯಸನಿಯೂ ಆದ ಪಾತ್ರವು ನೌಕರಿಗೆ ಹೊಸತರಲ್ಲಿ ವ್ಯಾಯಾಮ ಮಾಡಿ ದಷ್ಟಪುಷ್ಟವಾಗಲು ಮುಂಬಯಿಯಿಂದ ಬುಲ್‌ವರ್ಕರ್ ತರಿಸಿಕೊಂಡಿತ್ತೆಂದರೆ ಹೇಗೆ ನಂಬುವುದು? ದೇಹ ದುರ್ಬಲವಾಗಿದ್ದರೂ ಅದರ ಕಣ್ಣು ಮತ್ತು ನಾಲಿಗೆಗಳಿಗೆ ತ್ರಿಕಾಲದ ಪೊದೆಯನ್ನು ಬೇರು ಸಹಿತ ಅಲ್ಲಾಡಿಸುವ ಶಕ್ತಿ ಉಂಟು. “ನಿನ್ನಂಥ ಕ್ರೂರಿ ಮತ್ತೊಬ್ನಿಲ್ಲ ನೋಡಿ ಈ ಪ್ರಪಂಚದೊಳ್ಗೆ! ಏನೋ ಲೌಕಿಕವಾಗಿ ಅನಸೂಯಾನಾಢಿಷ್ಟಿತೋ ಮೇಷೋಪಿ ಸಿಂಹಾಯತಿ (ಅನಸೂಯಳೆದುರು ಮೇಕೆಯಂಥ ನಾನು ಸಿಂಹದಂತೆ ವರ್ತಿಸಿದೆ) ಎಂಬ ಮಾತಿನಂತೆ ವರ್ತಿಸಿ ಸ್ವರ್ಗ ನರಕಗಲ ಕಾಲುಹಾದಿಯ ಯಾತ್ರಿಕನಾದೆ, ಸರಿ ಹೋಯ್ತು… ಲೌಕಿಕರ ಹಲವು ಹೇಳಿಕೆಗಳ ಪ್ರಕಾರ ಸ್ವರ್ಗ ಸೇರಿರುವ ತಾತಮುತ್ತಾಂದಿರಂತೆ ನಾನೂನೂವೆ ಹೋಗಿದ್ದ್ರೆ ನೇನೇನು ಮಾಡ್ಲಿಕ್ಕೆ ಸಧ್ಯ ಇರ್‍ಲಿಲ್ಲಪ್ಪ… ಲೋಕಾಪವಾದದ ಎಲ್ಲ ಹಿಂಸೆ ಸಹಿಸಭೌದು. ಆದ್ರೆ ಭಾಶೆಗೆ ಬಲಿಯಾಗೋ ಹಿಂಸೆ ಸಹಿಸೋದು ಕಷ್ಟ. ಇನ್ನೊಬ್ಬರನ್ನು ಕಾದಂಬರಿಗೆ ವಸ್ತು ಮಾಡ್ಕೊಂಡು … ನಿನ್ಗೆ ಗೊಟ್ಟು. ಆದ್ರೆ ನೀನೇ ಇನ್ನೊಬ್ಬರ ಕಾದಾಂಬರಿಗೆ ವಸ್ತುವಾಗಿ ಗೊಟ್ಟಿಲ್ಲ… ಪನಿ ಪುಲ್ಲಂ ನಕ್ಕೆ ತೃಷ್ಣೆ ಪೇಳ್ ಪೋಪುದೇ ಎಂಬ ಪಂಪನ ಮಾತಿನಂತೆ ಇನ್ನೊಬ್ಬರ ಬದುಕಿನ ಬಗ್ಗೆ ಬರೆದರೆ ನೀನು ಮಹಾಸಾಹಿತಿ ಆಗೋದಿಲ್ಲಪ್ಪ… ಮೊದಲು ನಿನ್ನ ಬಗ್ಗೆ ಬರ್‍ಕೋ… ಆಮೇಲೆ ನಮ್ಮ ಬದುಕಿಗೆ ಬಾರಯ್ಯ” ಎಂದು ಆ ಪಾತ್ರ ಕೊಕ್‌ಕೊಕ್ಕಂತ ಕೆಮ್ಮ ತೊಡಗಿತು. ಅದರ ಮಾತಿನಿಂದ ನಾನು ಒಂಚಣ ಜಲ ಬೆವೆತು ಹೋದೆನು. ನನ್ನಿಂದ ರೂಪಗೊಂಡ ವಾಕ್ಯಗಳೇ ನೇಣಾಗಿಕುತ್ತಿಗೆ ಅಮುಕುತ್ತಿರುವಂತೆಭಾಸವಾಯಿತು. ಪಂಪನನ್ನೂ ಓದಿಕೊಂಡುಸತ್ತಿರುವ ಈ ಪಾತ್ರದ ಮಾತಿಗೆ ಎದೆಗುಂದಬಾರದೆಂದು ಕೃತುನಿಶ್ಚಯವಂ ಮಾಡಿ “ನೀನು ಹೇಳ್ತಿರೋದನ್ನು ಅಲ್ಲಗಳೆಯೊಲ್ಲ ಶಾಮಂಣ. ಯಾವ ಪ್ರಕಾರವಾಗಿ ನೀರಿಗೆ ತನ್ನ ಮಟ್ಟವನ್ನು ತಾನು ಕಾಯ್ದುಕೊಳ್ಳುವ ಶಕ್ತಿ‌ಉಂತೋ ಹಾಗೇನ ನಿನ್ನ, ನನ್ನ; ಹಾಗೂ ನಮ್ಮೆಲ್ಲರ ಬದುಕಿಗೆ ಒಂದೇ ಅಂತರ ಕಾಯ್ದುಕೊಳ್ಳೋ ಶಕ್ತಿ ಇದೆ. ನಮ್ಮೆಲ್ಲರ ಬದುಕು ಒಂದೇ ಅರ್ಥದ ಹಲವು ರ್ಥದ ವಿನ್ಯಾಸಗಳು ಅಷ್ಟ್ರ್” ಎಂದು ನಾನು ಹೇಳಿದೊಡನೆ ಅದು ಪಕಪಕ ನಗಾಡಿತು. “ಹೀಗೆ ನೀನು ಎಲ್ಲಿವರ್‍ಗೆ ಅರ್ಥವಾಗದ ಮಾತಾಡುತ್ತ ಬದುಕಿರ್ತೀಯೋ ಆ ದೇವರಿಗೇ ಗೊತ್ತು. ಹೀಗೆಲ್ಲ ನಿನ್ನಂಥ ಉಪದ್ರವಿಯಿಂದ ಕೊರೆಸಿಲೊಳ್ಳೋಕಲ್ಲ ನಾನು ಅಕಾಲ ಮರಣಕ್ಕೀಡಾಗಿದ್ದು… ಈಗ ನನ್ನಿಂದ ನಿನಗೆನಾಗಬೇಕಿದೆ ಅಷ್ಟು ಹೇಳಪ್ಪಾ” ಎಂದು ಕಡ್ಡಿಮುರಿದಂತೆ ಮಾತಾಡಿತು. ಅದು ಇಷ್ಟೊಂದು ತಾರುಣ್ಯದಿಂದ ಮಾತಾಡಬಹುದೆಂದುಕೊಂಡಿರಲಿಲ್ಲ. “ಬರೆಯೋ ಕರ್ಮ ನಿನ್ಗೆ ಗೊತ್ತಿದ್ದಿದ್ದೇ ಇದೆ ಪರಮ ಸಾಯುಜ್ಯ ಹೊಂದಿರುವ ನಿನ್ಗೆ ಬಿಡಿಸಿ ಹೇಳಲು ಅಶಕ್ತ ನಾನು… ಬರೆಯೋಕೆ ಸಹಾಯಕವಾಗುವಂತೆ ಒಂದಿಷ್ಟು ಉಪದ್ವಾಪಿ ಹೇಳಿಬಿಡಯ್ಯ ನೀನು” ಎಂದು ಮುಖಮುಲಾಜು ನೋಡದೆ ಹೇಳಿಬಿಟ್ಟೆ – ಅದು ಹೇಳಿದರೆ ಹತ್ತು ಹೇಳಿದರೆ ಇಪ್ಪತ್ತು ಎಂಬ ಬಿಗುಮಾನದಿಂದ ಸತ್ತ ನಂತರವೂ ಮುಚ್ಚಿಟ್ಟುಕೊಳ್ಳೋದೇನಿದೆ? ಒಳ್ಳೆಯದು ಕೆಟ್ಟದ್ದಲ್ಲವನ್ನು ಹೇಳಿಬಿಡೊಕ್ಕೆ ಅದಕೇನು ಧಾಡಿ! ವರ್ತಮಾನದ ಪಾದಗಟ್ಟೆ ಮೇಲೆ ನಿಂತು ಭೂತ ಭವಿಷ್ಯತ್ತುಗಳನ್ನು ಇಂಚಿಂಚಾಗಿ ಅಳತೇ ಮಾಡೋ ಸ್ವಾತಂತ್ರ್ಯ ಯಾವುದೇ ಲೇಖಕನಿಗಿರುವಂತೆ ನನಗೂ ಇದೆ.ಇದನ್ನು ಸತ್ತಿರುವವರಾಗಲೀ, ಬದುಕಿರುವವರಾಗಲೀ ನನ್ನಿಂದ ಕಿತ್ತುಕೊಳ್ಳಲು ಸಾಧ್ಯವಿಲ್ಲ. ಸೃಜನಶೀಲ ವಲಯವನ್ನು ಪ್ರವೇಶಿಸಿದ ಅನತಿಕಾಲದಲ್ಲಿ ದುರ್ಮರಣಕ್ಕೀಡಾದ ಶಾಮಂಣಗೂ ಇದು ಗೊತ್ತು. ಅಕ್ಷರಗಳಲ್ಲಿದ್ದ ಶಾಮಂಣ ಪಾತ್ರವು ನನ್ನ ಕಡೆಗೆ ದುರುಗುಟ್ಟಿ ನೋಡಿತು. “ಎಲವೋ ದುಷ್ಟ, ನಾನು ನಿನಗೆ ದುಷ್ಟ ಎಂಬ ವಿಶೇಷಣ ಹಚ್ಚುತ್ತಿರುವುದಕ್ಕೆ ಬೇಸರಪಟ್ಟುಕೋ ಬೇಡ… ಪಾತ್ರಗಳ ಜೀವ ತಿನ್ನೊದ್ಕಿಂತ ಮಿಗಿಲಾದ ಕ್ರೌರ್ಯ ಇನ್ನೊಂದಿಲ್ಲ. ನೀನು ನಮ್ಮನ್ನು ಅಕ್ಷರಗಳಿಗೆ ಕಟ್ಟಿಹಾಕಿ ಚಿತ್ರಹಿಂಸೆ ಮಾಡತೊಡಗಿರುವಿ. ನನ್ನ ಬದುಕಿನಲ್ಲಿ ಅದಾವ ದೊಡ್ಡಸ್ತಿಕೆಯಾಗಲೀ, ಗೌಪ್ಯವಾಗಲೀ ಕಂಡು ಪುಟಗಟ್ಟಲೇ ಕೊರೆದು ಅಮಾಯಕ ಓದುಗರ ಜೀವ ತಿನ್ನಲು ಯೋಜನೆ ಹಾಕಿರುವಿ, ಹೇಳು? ಕಾದಂಬರಿ ಬರೆದಾದ ಮೇಲೆ ದೊಡ್ಡ ಹೆಸರೂ ಬರುತ್ತದೆ ಎಂಬುದೊಂದೇ ಕಾರಣದಿಂದಲ್ಲವೇ ನೀನೀ ಕೆಲಸಕ್ಕೆ ತೊಡಗಿರುವುದು! ಆದರೆ ನಮಗೇನು ಬರುವುದಯ್ಯಾ; ಮಹಾನುಭಾವ? ಹೀಗೆ ನಿನಗೆ ಸಹಾಯಕವಾಗಿ ಗಂಟಲ ನರ ಸವೆಸೋದ್ರಿಂದ ನಮಗೇನು ಲಾಭ ಹೇಳು?” ಎಂದು ಅದು ಚಿಟಿಕೆ ಹಾಕಿತು. ಇಷ್ಟೊಂದು ದುರಾಸೆ ಸತ್ತವರಿಗೂ ಇರಬಹುದೆಂದು ನಾನು ಸರ್ವಥಾ ಊಹಿಸಿರಲಿಲ್ಲ. “ಅಲ್ಲಪ್ಪಾ… ಒಳ್ಳೆ ಕಥೆ ಆಯ್ತಲ್ಲಪ್ಪಾ ನಿಂದೂಂತ… ಹಣವಾಗಲೀ ಹೆಸರಾಗಲೀ ನನಗೇನು ಪುಕ್ಕಟೆ ಬರ್‍ತದೇನು?… ಹಣ ಬರುವಂಥ ವಸ್ತು ಇರೋಕೆ ನೀನೇನು ಮೀನಾ ಕುಮಾರಿಯಲ್ಲ… ನಾಥೂರಾಮ ಗೋಡ್ಸೆನೂ ಅಲ್ಲ… ನೀನೂ ಯಕಃಚಿತ್ ಮಾನವ ಪ್ರಾಣಿಗಿಂತ ಅತ್ತಿತ್ತ ಬದುಕಿ ಸತ್ತವನು ಎಂಬುದನ್ನು ಮರೆಯಬೇಡ. ನಿನ್ನದು ಮೊದಲೇ ಯಾವ ರೋಚಕ ಘಟನೆಗಳೂ ಇಲ್ಲದ ಸಾಮಾನ್ಯ ಬದುಕು. ಹಣತೆ ಹಿಡಿದು ಹುಡುಕಿದರೂ ಒಂದೇ ಒಂದು ರೋಮಾಂಚಕಾರಿ ಘಟನೆ ನಿನ್ನ ಬದುಕಿನಲ್ಲಿ ಸಿಗೋದಿಲ್ಲ. ಇಂಥ ನಿನ್ನ ಬಗ್ಗೆ ಬರೆಯೋದೆ ಹಿಂಸೆಯ ವಿಷಯ ಕಣೋ ಶಾಮಾ!… ಇದೇ ಸಮ್ಯ ವಿನಿಯೋಗಿಸಿ ಟೈಂಪಾಸ್ ಕಾದಂಬರಿಗಳನ್ನು ಬರೆದ್ದಿದ್ದಲ್ಲಿ ನಾಲ್ಕು ಕಾಸು ಸಂಪಾದಿಸಬಹುದಿತ್ತು. ಏನೋ ಒಂದು ಬಗೆಯ ಕಕ್ಕುಲಾತಿ. ನಂದೂ ಇನ್ವಾಲ್‌ಮಂಟಿರೋದ್ರಿದಲ್ವೆ ನಾನು ಬರೆಯೋಕೆ ಶುರುಮಾಡಿದ್ದು. ಕೆಲವು ಕಟ್ಟುಪಾಡುಗಳನ್ನು ಉಲ್ಲಂಘಿಸುವವರೆಂದರೆ ಏನೋ ಒಂದು ರೀತಿಯ ಅಭಿಮಾನ… ಉಲ್ಲಂಘಕರಲ್ಲೂ ನಾಯಕಗಣಗಳಿರುತ್ತವೆ… ಅಂಥ ರ್ರ್ ಕ್ವಾಲಿಟೀಸೂ ನಿನ್ನಲ್ಲಿರುವುವೋ ಇಲ್ಲವೋ ತಿಳಿಯದು? ಅದೆಲ್ಲ ಬರೆದ ಮೇಲೆ ಗೊತ್ತಾಗುವುದು. ಪಾತ್ರಗಳಿಂದ ವೈಯಕ್ತಿಕ ಗುಣಗಳನ್ನು, ವ್ಯಕ್ತಿತ್ವವನ್ನು ಕಸಿದುಕೊಂಡು ನನ್ನ ಮೂಗಿನ ನೇರಕ್ಕೆ ನಾನು ಬರೆಯುತ್ತ ಹೋಗುವುದೇನು ದೊಡ್ಡ ಸಂಗತಿಯಲ್ಲ, ನಿನ್ನೊಂದಿಗೆ ಬದುಕಿನ ತಲ್ಲಣಗಳನ್ನೂ; ಕ್ಷಣಗಳನ್ನೂ ಅನುಭವಿಸಿರುವ, ಹಂಚಿಕೊಂಡಿರುವ ನಾನು ನಿನಗೆ ದ್ರೋಹ ಬಗೆಯುವ ಕೆಲಸ ಮಾಡಲಾರೆ ಶಾಮಾ… ಅದ್ಕೆ ಮುಖ್ಯ ಪಾತ್ರವಾದ ನೀನೇ ನನ್ನ ಪ್ರಾಸಿಕ್ಯೂಷನ್‌ಗೆ ಎಲ್ಲ ಹೇಳಿಕೊಂಡು ಬಿಡು. ಅಂತ ನಾನು ಹೇಳ್ತಿರೋದು. ನಾನು ಕೇವಲ ಲಿಪಿಕಾರ ಪಾತ್ರವಹಿಸಲಿಕ್ಕೆ ಮಾತ್ರ ಇಷ್ಟಪಡ್ತೀನಿ… ನೀನು ಈ ಅಭಿವ್ಯಕ್ತಿ ಕ್ರಮದಲ್ಲಿ ಭಾಗವಹಿಸುವುದರ ಮೂಲಕ ಬದುಕಿನ ವಝನ ಕಳೆಕೊಂಡು ಇನ್ನೂ ಎತ್ತರದಲ್ಲಿ ವಿಹರಿಸಬಹುದು! , ಅಲ್ಲವೆ? ನಿನ್ನ ಮಾತಿನ ದಾಟಿ ನೋಡಿದರೆ ಇದಕ್ಕೆ ಸಮ್ಮತಿಸಿರುವಿ ಎಂದು ಕಾಣುತ್ತದೆ. ಲಾಭ ಲುಕ್ಸಾನದ ಬಗ್ಗೆ ಪ್ರಸ್ತಾಪಿಸುತ್ತಿರುವಿ. ಕನ್ನಡ ಪ್ರಕಟಣ ಪ್ರಪಂಚದ ಹಣೆಬರಹ ಗೊತ್ತಿರುವ ನಿನಗೆ ಇದರ ಬಗ್ಗೆ ಹೆಚ್ಚಿಗೆ ಹೇಳೋ ಅಗತ್ಯವಿಲ್ಲ. ಸುಳ್ಳೋ ನಿಜವೋ? ಒಟ್ಟಿನಲ್ಲಿ ನೀನು ಅನುಭವಿಸಲಿಕ್ಕೆ ಸಾಧ್ಯ್ವಿದ್ದರೆ ಬಂದ ಹಣವನ್ನು ಅನಸೂಯಾಗೆ ಕೊಡ್ಲಾ! ಅಥವಾ ವರಲಕ್ಷ್ಮಿಗೆ ಕೊಡ್ಲಾ… ನೀನು ಹೇಗೆ ಹೇಳಿದರೆ ಹಾಗೆ!” ಎಂದು ಕರಾರುವಾಕ್ಕಾಗಿ… ಶಾಮಪಾರೆ‌ಅಕ್ಕೆ ನನ್ನ ಮಾತುಗಳಿಂದ ಖುಷಿಯಾದಂತೆ ಕಂಡು ಬಂದಿತು. ಆ ಖುಷಿ ನನ್ನ ಅಪ್ರಮಾಣಿಕತೆಯನ್ನು ಗುರುತಿಸಿದ್ದೂ ಆಗಿರಬಹುದು. ಅದು ಹೇಳಿತು. “ಅನುಸೂಯಾಳಿಗೆ ನೀನು ಕೊಡ್ಲಿಕ್ಕೆ ಹೋಗು, ಪೂಜೆ ಮಾಡಿ ಕಳಿಸ್ತಾಳಷ್ಟೆ… ಆ ಪುಣ್ಯಾತ್ಗಿತ್ತಿಗೆ ಕೈ ಎತ್ತಿ ಮುಗಿಯಬೇಕು ನೋಡು. ಅಂಥ ಹೆಣ್ಣು ಈ ಪ್ರಪಂಚದಲ್ಲೆಲ್ಲೂ ಇರಲಿಕ್ಕಿಲ್ಲ ಬಿಡು. ಮಸಣದೊಳಗೆ ನನ್ನ ಕಳೇಬರ ಸುಟ್ಟ ಜಾಗದ ಮೇಲೆ ಐವತ್ತು ಅರವತ್ತು ಸಾವಿರ ಖರ್ಚುಮಾಡಿ ಸ್ಮಾರಕ ಕಟ್ಟಿಸಬೇಕೂಂತ ಯೋಜನೆ ಹಾಕ್ಕೊಂಡಿದ್ದಾಳೆ. ಆಕೆ ಆ ಹಣವನ್ನು ಅದಕ್ಕೆ ಉಪ್ಯೋಗಿಸಿಕೊಂಡು ಬಿಡಬಹುದು. ನನಗಿದೆಲ್ಲ ಸುತರಾಂ ಇಷ್ಟವಿಲ್ಲಪ್ಪಾ… ಆ ಮಹಾ ಪತಿವ್ರತೆಯಾದ ನನ್ನ ಹೆಂಡತಿಗಂತೂ ಮೊದಲೇ ಕೊಡಬೇಡ. ಕಂದಾಚಾರ ಸಂಪ್ರದಾಯಗಳನ್ನು ಕತ್ತಾಳೆ ನಾರಿನಂತೀದೆಯಲ್ಲಿ ಕೊಳೆಯಲು ಬಿಟ್ಟು ಕೆಟ್ಟದಾಗಿ ವರ್ತಮಾನ ಬದುಕುತ್ತಿರೋ ಪುರಾತನ ಪಳೆಯುಳಿಕೆ ಅವಳು. ಕಾಮವನ್ನು ಕೊಂದುಕೊಂಡು ಬದುಕೋ ಅವಳಿಗಿಂತ ಕಾಮವನ್ನು ಪ್ರಮುಖ ದಾಳವನ್ನಾಗಿ ಉಪಯೋಗಿಸಿ ಬದುಕಿನ ಚದುರಂಗ ಆಡುತ್ತಿರುವ ಅನಸೂಯಾಳೇ ಸಾವಿರ ಪಾಲು ಮೇಲು. ತಮ್ಮಮ್ಮನ ಸೆರಗ ಪಂಜರದಲ್ಲಿ ಅರಗಿಳಿಗಳಂತೆ ಬೆಳೆಯುತ್ತಿರುವ ನನ್ನ ಮಕ್ಕಳ ಬಗೆಗೂ ನನಗಶ್ಟು ಮಮಕಾರವಿಲ್ಲ… ಆದ್ರಿಂದ…” ಎಂದು ಅದು ಮೀನ್ಹ ಮೇಷ ಎಣಿಸತೊಡಗಿತು. ಅದರ ಮಾತು ಕೇಳಿ ನಾನು ಒಂದು ಕ್ಷಣ ಅವಾಕಾದೆನು. ಹೀಗೆ ಖಚಿತವಾಗಿ ಯೋಚಿಸುವ ಕಾರಣದೀಮ್ದಾಗಿಯೇ ಅವನು ಮರಣವನ್ನು ಬಹು ಬೇಗ ಆವಹಿಸಿಕೊಂಡದ್ದೆಂದು ಅರ್ಥ ಮಾಡಿಕೊಂಡೆ. ಕೆಲವ್ವರಿಗೆ ಸತ್ತ ನಂತರವೂ ಬುದ್ಧಿ ಬರುವುದಿಲವೆಂದು ಹೇಳುತ್ತಾರಲ್ಲ… ಅಂಥವರ ಪೈಕಿ ಇವನೂ ಒಬ್ಬನು. ಅಥವಾ ತಾರ್ಕಿಕವಾಗಿ ಬದುಕಿರುವವರನ್ನು ಅಳತೆ ಮಾಡುವುದು. ಬದುಕಿರುವವರ ಕಷ್ಟ ಸತ್ತ ಇವನಿಗೆ ಅರ್ಥವಾಗಲಾರದು. ಉದ್ದುದ್ದ ಸನಾತನತೆಗೆ ಅಡ್ಡಡ್ಡ ಅಧುನಿಕತೆಯನ್ನು ನೆಯ್ದು ಬದುಕಿಗೆ ವಿಲಕ್ಷಣವಾದ ರೂಪ ಕೊಟಿದ್ದ ಮನುಷ್ಯನಿವನು. ಕನಿಷ್ಟ ಮಕ್ಕಳನ್ನು ಪ್ರೀತಿಸದಿದ್ದರೆ ಯಾಕಿವನು ಸಾಯಬೇಕಿತ್ತು! ( ನನಗೆ ತಿಳಿದಮಟ್ಟಿಗೆ ಆ ಮಕ್ಕಳಿರ್ವರಿಗೆ ನಮ್ಮ ತಂದೆ ಶಾಮಾಶಾಸ್ತ್ರಿ ಎಂಬುವನಿದ್ದ ಎಂಬ ನೆನಪೂ ಸಹ ಇದ್ದಂತಿಲ್ಲ ) ಗೌರವಧನವನ್ನು ಹೇಗೆ ವಿನಿಯೋಗಿಸಬೇಕೆಂದು ಹೇಳುವ ಎನೋ! ಅಷ್ಟರಲ್ಲಿ ಅದೇ ಬಾಯಿ ಬಿಟ್ಟಿತು.”ನನ್ನ ಕಳೆಬರವಿದ್ದ ಚಿತೆಗೆ ಬೆಂಕಿ ಹಚ್ಚಲು ಅನಸೂಯ ಇನ್ನೂರಾ‌ಐವತ್ತು ಗ್ರಾಂ ಉಂಡೆ ಕರ್ಪೂರವನ್ನು ಉಪಯೋಗಿಸಿದಳು. ತುಂತುರು ಮಳೆ ಮುಗಿಲಿಂದ ಜಿನುಗುತ್ತಿದ್ದರಿಂದ ನಿವೃತ್ತ ತಹಶೀಲ್ದಾರರಾದ ಆನಂದ ತೀರ್ಥರೂ ಅರ್ಧ ಕೇಜಿ ಕರ್ಪೂರ ತರಿಸಿದರು ಎಂದರೆ ಸುದುವ ಕಷ್ಟ ಎಷ್ಟು ಭೀಕರವಾಗಿತ್ತೆಂಬುದನ್ನು ನೀನೇ ಯೋಚಿಸು. ನನ್ನ ಕಳೇಬರವನ್ನು ನಾನೇ ಅಪಹರಿಸುವುದು ಸಾಧ್ಯವಿದ್ದಿದ್ದರೆ ಎಂದೋ ಊರಾಚೆ ಕುರುಚುಲು ಕಾಡ ನದುವೆ ಇರುವ ಹುಲಿಗಡ್ಡದ ಗವಿಯೊಳಗೆ ಬಿಸಾಡಿಕೊಂಡು ಬಿಡುತ್ತಿದ್ದೆ ನಿರಮ್ಮಳವಾಗಿ. ದೂರದೂರದಲ್ಲಿ ಏಕಾಂಗಿಯಾಗಿ ಸಾಯಲು ನಾನು ಅನೇಕ ಬಾರಿ ಪ್ರತ್ನಿಸಿದ್ದುಂಟು ಕಣಯ್ಯಾ. ಹಲವು ರೋಗಗಳ ಅಖಾಡವಾಗಿದ್ದ ನನ್ನ ದೇಹವನ್ನು ನಾನು ಒಂದಿಂಚು ಕದಲಿಸುವುದೂ ಸಾಧ್ಯವಿರಲಿಲ್ಲ…

ಕೊನೆ ಕೊನೆಗೆ ಒಂದೊಂದಾಗಿ ಪಂಚೇಂದ್ರಿಯಗಳು ನಿಷ್ಕ್ರಿಯವಾಗುತ್ತ ಬಂದವು. ನಾನು ಅನಸೂಯಾಳಿಗೆ ಏನು ಹೇಳಲು ಬಯಸಿದೆನೋ ಆ ಮಾತು ನನ್ನ ನಾಲಿಗೆಯಿಂದ ಹೊರಡಲಿಲ್ಲ. ಹೀಗಾಗಿ ನನ್ನ ಕಳೆಬರವನ್ನು ಅಗ್ನಿ ಒಲ್ಲದ ಮನಸ್ಸಿನಿಂದ ಜಮಡಿ ಬೂದಿ ಮಾಡಿತು. ಇಂಥ ಬೂದಿಯ ಸಿಂಹಪಾಲು ಅನಸೂಯಳ ಮನೆಯ ಅಟ್ಟದ ಮೇಲಿದ್ದ ಆ ಗಂಟನ್ನು ಎದೆಗವುಚಿಕೊಂಡು ಆಕೆ ದಿನಕ್ಕೆ ಒಂದು ಸಾರಿಯಾದರೂ ಗೋಳಾಡುತ್ತಿರುತ್ತಾಳೆ. ನಾನು ಆಕೆಗೆ ಕೊಟ್ಟ ಸುಖ ಅಷ್ಟರಲ್ಲ್ ಇದೆ. ಮಿಂದನಂತೆ ಆಕೆಯ ಬದುಕಿನಲ್ಲಿ ಪ್ರವೇಶಿಸಿದಾರು ಕ್ರಮೇಣ ಪ್ರೇಮಿಯಾಗಿಬಿಟ್ಟೆ. ಪ್ರೇಮಿಯಾಗಿದ್ದವನು ಕ್ರಮೇಣ ಹಸುಗೂಸಾಗಿ ಬಿಟ್ಟೆ. ಬದುಕಿನ ಹಲವು ಅವಸ್ಥೆಗಳಿಗೆ ಮಾತೃಕೆಯಾಗಿದ್ದ ಅವಳು ಹೀಗೆ ಅಳೋದೂ,ಕರೆಯೋದೂ ನನಗೆ ಬಿಲ್ಕುಲ್ ಇಷ್ಟವಿಲ್ಲ. ಆ ನನ್ನ ದೇಹದ ಬೂದಿ ಅಲ್ಲಿಂದ ಕದಲಿದರೆ ಮಾತ್ರ ಅವಳು ಯಾರೊಂದಿಗಾದರೂ ಸುಖವಾಗಿ ಬದುಕಲು ಸಾಧ್ಯವಾದೀತು!ಹೀಗೆ ಆಕೆ ಅಳುತ್ತ ಕೂತಿದ್ದರೆ ಆ ಮಗು ಕಾಂಚನಾಳ ಗತಿ ಏನು! ಅದಕ್ಕೆ ನೀನು ನನ್ನ ದೇಹದ ಬೂದಿಯನ್ನು ಬಹು ದೂರದ ಗಂಗೆಯಲ್ಲಿ ವಿಸರ್ಜಿಸಬ್ ಏಕೆಂದು ಯಾಕ್ ಕೇಳ್ತಿದ್ದೀನೆಂದರೆ… ನಾನು ಬದುಕಿದ್ದಾಗ ನನ್ನೋಳಗೆ ಸದಾ ಪ್ರವಹಿಸುತ್ತಿದ್ದ ನದಿ ಎಂದರೆ ಅದೊಂದೇ ನೋಡು. ಬದುಕುವುದಿದ್ದರೆ ಆ ನದಿಯಂತೆ ಬದುಕಬೇಕೆಂದು ಕೊಳ್ಳುತ್ತಿದ್ದೆ. ಯಾರನ್ನಾದರು ಪ್ರವೇಶಿಸುವುದಿದ್ರೆ ಆ ನದಿಯಂತೆ ಪ್ರವೇಶಿಸಬೇಕೆಂದುಕೊಂಡು ಆ ನಿಟ್ಟಿನಲ್ಲಿ ಪ್ರಯತ್ನಿಸಿ ಸಫಲನಾದವನು ನಾನು. ಯರಲ್ಲಿ ಅಷ್ಟೊಂದು ವೇಗವಾಗಿ ಪ್ರವೇಶಿಸ ಬೇಕಿತ್ತೋ ಅವರಲ್ಲೆ… ಸಾಧ್ಯವಾಗಲಿಲ್ಲ. ನನ್ನಂಥ ನದಿಯನ್ನು ಒಳ ಬಿಟ್ಟುಕೊಂಡು ಆಶ್ರಯ ಕೊಟ್ಟು ಸಮೃದ್ಧವಾಗಿ ಬೆಳೆಸಿದ್ದೇ ಅನಸೂಯ ಎಂಬ ಪ್ರಸ್ಥಭೂಮಿ… ಆಕೆ ಸಸ್ಯ ಶಾಮಲೆ… ಸಾವಿರಾರು ಪಕ್ಷಿಗಳ ತಂಗುದಾಣ. ಅಂಥ ಪ್ರದೇಶ ನನ್ನ ನೆನಪಿಂದಾಗಿ ಬರಡಾಗುವುದು ನನಗಿಷ್ಟವಿಲ್ಲ. ಆದ್ದರಿಂದ ಉಪಾಯಾಂತರದಿಂದ ಆ ಬೂದಿಯ ಗಂಟನ್ನು ಲಪಟಾಯಿಸಿ ತಗೊಂಡು ಸೀದ ಪಂಡಾನೊಬ್ಬನನ್ನು ಹಿಡಿದು ಅಪರ ಕರ್ಮ ಮಾಡಿಸಿ ಗಂಗೆಯ ನಟ್ಟನಡುವೆ ಬೂದಿ ವಿಸರ್ಗಿಸು.. ಇದು ನಾನು ನಿನ್ನಿಂದ ಬಯಸುತಿರುವ ರುಷುವತ್ತು ಕಣಪ್ಪಾ… ಬಂಡಾಯದ ಸ್ಟೈಲಿನಲ್ಲಿ ಚರ್ಚೆ ಆರಂಭಿಸದೆ ಒಪ್ಪುವಿಯೋ, ಇಲ್ಲವೋ ಅಷ್ಟು ಹೇಳು?” ಎಂದು ಕೇಳಿತು.

ಅದರ ಬೇಡಿಕೆಯನ್ನು ಹೇಗೆ ಒಪ್ಪಿಕೊಳ್ಳಬೇಕೆಂದು ಅರ್ಥವಾಗದೆ ಸೊಂದಿಗ್ಧಕ್ಕೆ ಸಿಲುಕಿಕೊಂಡೆನು. ಕಾಶಿ ಎಂಬುದರ ಬಗ್ಗೆ ಕೇಳಿದ್ದೆ, ಓದಿದ್ದೆ; ನಕ್ಷೆಗಳಲ್ಲಿ ನೋಡಿದ್ದೆ. ಅಲ್ಲಿಗೆ ಒಮ್ಮೆ ಹೋಗಿಬರಬೇಕೆಂಬಾಲೋಚನೆಯಿಂದ ಪ್ರವಾಸ ಅನುದಾನಕ್ಕಾಗಿ ಅಕಾಡೆಮಿಗೆ ಅರ್ಜಿಯನ್ನೂ ಸಲ್ಲಿಸಿರುವೆನು. ಪ್ರಾದೇಶಿಕ ಕಾರ್ಯದರ್ಶಿ ಅಗ್ರಹಾರ ಕೃಷ್ಣಮೂರ್ತಿಯವರೂ ಕೊಡಿಸುವ ಭರವಸೆ ವ್ಯಕ್ತಪಡಿಸಿರುವರು. ಆತ ಅಲ್ಲಿ ಎರಡು ಮೂರು ವರ್ಷ ಇದ್ದು ಬಂದಿರೋ ವ್ಯಕ್ತಿ. ಆತ ಮಾತಿನ ಮೂಲಕ ಕಾಶಿಯನ್ನು ನನ್ನ ಮನಸ್ಸಿನಲ್ಲಿ ಕೆತ್ತಿ ನಿಲ್ಲಿಸಿರುವರು. ಉದ್ದೋಕೆ ನಿಂತಿರೋ ಕಾಶಿ ಪಟ್ಟಣ ಕುಂತರೂ, ನಿಂತರೂ ಕೈ ಬೀಸಿ ಕರೆಯುತ್ತಿರುವುದು. ಬಿಸ್ಮಿಲ್ಲಾಖಾನ್, ರವಿಶಂಕರಂಥ ಸಂಗೀತಲೋಕದ ದಿಗ್ಗಜಗಳನ್ನೂ; ಕೇದಾರ್ನಾಥ್ ಪಾಂಡೆ, ಕಾಶೀನಾಥ್ ಸಿಂಗ್‌ರಂಥ ಕಥೆಗಾರರನ್ನು ಮಾತಾಡಿಸಿ ಬರಬೇಕೆಂದುಕೊಂಡಿದ್ದೆನೇ ಹೊರತು ಈ ರೀತಿ ಅಪರ ಕರ್ಮಕ್ಕೆ ತುತ್ತಾಗಿ ಪಂಡಾಗಳ ಕೈಗೊಂಬೆಯಾಗಬೇಕಾಗಿ ಬರಬಹುದೆಂದು ಖಂಡಿತ ಅಂದುಕೊಂದಿರಲಿಲ್ಲ… ಈ ಪ್ರಕಾರವಾಗಿ ನಾನು ಹಿಂದೇಟು ಹಾಕುತ್ತಿರುವಾಗ್ಗೆ ರಾಖೇಶ್ ಕುಮಾರನೆಂಬ ಪಾತ್ರವು ಕಿಯಿಯೊಳಗೆ ಬಾಯಿ ತೂರಿಸಿ “ಒಪ್ಕೊಂಡು ಬಿಡ್ರೀ… ಹುಲಿಹಳ್ಳ… ಕಟ್ರಮ್ಮಹಳ್ಳ… ಇವೆಲ್ಲ ಯಾವ ಗಂಗೆಗಿಂತ ಕಡ್ಮೆ ಅದಾವು… ಗಾಳಿ ಬೀಸೋ ದಿಕ್ಕಿಗೆ ಗುರಿ ಇಟ್ಟು ತೂರಿಕೋಳ್ಳೋದು ನಿಜವಾದ ಜಾಣ್ತನ” ಎಂದು ಪಿಸುಗುಟ್ಟಿ ಹಿಂದಕ್ಕೆ ಸರಿಯಿತು. ಅದು ಸರಿ ಅನ್ನಿಸಿ ನಾನು ” ಆಯ್ತಪ್ಪಾ ಶಾಮಂಣ… ನಿನ್ನ ಅಪರ ಕರ್ಮದ ಉಸ್ತುವಾರಿ ವಹಿಸ್ಕೋತೀನಿ… ಆಯ್ತಾ!” ಎಂದು ಒಪ್ಪಿಗೆ ಸೂಚಿಸಿದೆ. ನನ್ನ ಮಾತಿನಿಂದ ಶಾಮಂಣ ಪಾತ್ರಾವು ನೆಮ್ಮದಿಗೆ ಹೊಸ ವ್ಯಾಖ್ಯೆ ಬರೆಯತೊಡಗಿತು. ಅದು… ಇಷ್ಟೊಂದು ದೌರ್ಬಲ್ಯದ ನಡುವೆಯೂ ಮೇರುಪ್ರಾಯವಾದ ಲವಲವಿಕೆಯನ್ನು ಪ್ರಕಟಿಸಬಹುದೆಂದುಕೊಂಡಿರಲಿಲ್ಲ. ಅಕ್ಷರಗಳಿಂದ ನನ್ನ ಕಡೆ ಕೈಚಾಚಿತು. ಹಿಡಿದು ಅಮುಕಿ ನೇವರಿಸಿದೆ. ಕಂಣಲ್ಲಿ ನೀರುತಂದ್ಕೊಂಡೆ. ನನ್ನ ಶಾಮಾ… ನನ್ನ ಶಾಮಾ… ಎಂದು ಉದ್ಗರಿಸಿದೆ. “ಯಾಕೋ ಹೆಂಗಸಿನ ಹಾಗೆ ಭಾವುಕನಾಗ್ತಿಡ್ಡಿಯಾ… ಸದಾ ಒದ್ದಟದಲ್ಲಿ ಬದುಕಿ ಸತ್ತಿರೋ ನಾನೇ ಒಂದೇ ಒಮ್ಡು ಹನಿ ನೀರು ತಂದುಕೊಂಡಿಲ್ಲ… ನೀನ್ಯಾಕೆ ಮುಖವನ್ನು ಒಂಥರಾ ಮಾಡಿಕೊಳ್ಳುತ್ತಿರುವಿ. ಕವಿತೆ ಬರೆಯೋ ಮನಸ್ಥಿತಿಯನ್ನು ದೂರ ಇಟ್ಟು ಗದ್ಯ ಬರೆಯೋ ಮನಸ್ಥಿತಿಯನ್ನು ರೂಢಿಸಿಕೋ… ಆಗ ನಾನು, ನನ್ನಂಥವರು ಅರ್ಥ ಆಗ್ತಾರೆ, ಹತ್ತಿರ ಆಗ್ತಾರೆ… ಬಿಚ್ಚಿಕೊಳ್ಳುತ್ತಾರೆ. ಈಗ ನನಗೆ ತುಂಬ ಸಂತೋಷವಾಗಿದೆ ನ್ಡು… ಅನೇಕ ನದಿಗಳಿಂದ ಅಭಿಮಾನಿಸಿಕೊಳ್ಳುತ್ತಿರುವ ಪೂಜಿಸಿಕೊಳ್ಳುತ್ತಿರುವ ಒಳಗೊಳ್ಳುತ್ತಿರುವ ಗಂಗೆ ಪ್ರೀತಿಗೆ ಪರ್ಯಾಯ ಅಲ್ಲವೆ!… ನಮ್ಮೆಲ್ಲರ ನಿಜವಾದ ಪ್ರೀತಿಗೆ ಅರ್ಥವಿರುವುದೇ ಅಂಥಲ್ಲಿ ವಿಸ್ರ್ಜಿಸಿಕೊಳ್ಳುವುದರಲ್ಲಿ! ಅದಕ್ಕೇನೆ ನಾನು ಹೇಳಿದ್ದು ನನ್ನ ಚಿತಾಭಸ್ಮವನ್ನು ಅಲ್ಲಿ ವಿಸರ್ಜಿಸು ಅಂತ… ಅದಕ್ಕೆ ನೀನು ಒಪ್ಪಿಗೆ ಸೂಚಿಸಿದಿ. ಸಂತೋಷ ನನ್ನ ಮರಣ ಪೂರ್ವೊತ್ತರ ಬದುಕನ್ನು ನೀನು ನಿನ್ನ ಅಕ್ಷರಗಳಿಗೆ ಬಲಿಕೊಡು… ನನ್ನ ಅಭ್ಯಂತರವಿಲ್ಲ, ನಾನು ನನ್ನನ್ನು ನಿನ್ನ ಮೂಲಕ ಬರೆಸುವೆ. ಇದಕ್ಕೆ ಮೊದಲು ನಾನು ಬರೆದಿರುವ ಕಥೆಯೊಂದಿದೆಯಲ್ಲ… ಅದನ್ನು ಕಾದಂಬರಿಯೊಳಗೆ ಅಳವಡಿಸಿ ಬಿ‌ಉ. ಈ ಮೂಲಕವಾದರು ಪ್ರಕಟವಾಗಲು… ಅದನ್ನು ಬರೆದು ಲಕ್ಕೋಟೆಯೊಳಗಿರಿಸಿ ಅಂಚೆದಬ್ಬಿಗೆ ಹಾಕ್ಲು ಪ್ರಯತ್ನಿಸಿದ್ದು ನೂರಾರುಬಾರಿ. ಕೊನೆಗೂ ಹಕಲಿಲ್ಲ… ಅಲ್ಲದೆ ನಮ್ಮ ತತನವರು ಬರೆದಿರುವ ಮರಣ ಶಸನವನ್ನು ಹೇಗೋ ಸಂಪಾದಿಸಿಕೊಂದಿರುವಿ ಅದರಲ್ಲಿ ನನ್ನನ್ನು ಚಾಮಗೋಚರವಾಗಿ ಬಯ್ದಿರಬೌದು. ನಿಸ್ಸಂಕೋಚವಾಗಿ ಅದನ್ನೂ ಕಾದಂಬರಿಯೊಳಗೆ ಪುನರ್ಘಟಿಸು… ನಂತರ ನಾನು ನಿನ್ನ ಮೂಲಕ ಶುರು ಮಾಡುವೆ. ಆಯ್ತಾ… ಶುಭವಾಗಲಿ” ಎಂದು ಹೇಳಿ ಅದು ಅಂತರ್ಧಾನವಾಯಿತು.

ನಾನು ನೆಮ್ಮದಿಯಿಂದ ಉಸಿರುಬಿಟ್ಟೆ. ಅದನ್ನು ಕೇಳಿಸಿಕೊಂಡು ಹೆಂಡತಿ ಅನ್ನಪೂರ್ಣ ಹತ್ತಿರ ಬಂದಳು. “ಏನ್ರೀ… ನಿಮ್ಮಶ್ತಕ್ಕೆ ನೀವೇ ಏನೇನೋ ವಟಗುಟ್ತಿದ್ರಿ… ಒಳ್ಳೆ ಹೆರಿಗೆ ಸಮಯದಲ್ಲಿ ನೋವು ತಿನ್ತೊರೋ ಗರ್ಭಿಣಿ ಹೆಂಗಸರ ಥರ” ಎಂದು ಅಪಾರ ಕಕ್ಕ್ಲಾತಿಯಿಂದ ಹಣೆ, ಎದೆ ಎಲ್ಲ ಮುಟ್ಟಿಮುಟ್ಟಿ ನೋಡಿದಳು. “ಅಯ್ಯೋ ಜ್ವರ ಬಂದಂತಿದೆಯಲ್ಲ” ಎಂದು ಒಳಗಡೆ ಹೋಗಿ ಕಷಾಯ ಮಾಡಿಕೊಂಡು ಬಂದು ಕುಡಿಸಿದಳು. “ನೀನಂದ್ಕೊಂಡಿರೋ ಜ್ವರ ಅಲ್ಲಮ್ಮಾ… ಇದೊಂದು ನಮೂನಿ ಜ್ವರ, ವಸ್ತುವನ್ನು ಹೊರ ಕಿತ್ತು ಹಾಕುವುದೆಂದರೆ ಏಳೆಂಟು ಕೂಸುಗಳನ್ನು ಒಟಿಗೆ ಹೆತ್ತ ಹಾಗೆಯೆ” ಎನ್ನುತ್ತಿರುವಷ್ಟರಲ್ಲಿ ಹೂಗಳಿದ್ದ ಹಚ್ಚಡ ತಂದು ಮೈಗೆಲ್ಲ ಹೊದ್ದಿಸಿದಳು. ಧೂಳು ಕೊಡವಿ ಉಣ್ಣೆ ಕ್ಯಾಪನ್ನು ಅಷ್ಟೇನು ಸುಂದರವಲ್ಲದ ನನ್ನ ತಲೆಗೆ ಪೇರಿಸಿದಳು. ಕನ್ನಡಿ ತಂದು ನನ್ನ ಮುಖಕ್ಕಿಟ್ಟು, “ನೋಡ್ರಿ… ಹೆಂಗ ಕಾಣಿಸ್ತಿದ್ದೀರಂತ?” ಎಂದು ಕಿಲ ಕಿಲ ನಗಾಡಿದಳು.

ನನ್ನ ಪ್ರತಿಬಿಂಬ ನೋಡಿ ‘ಇದು ನನ್ನದು ಹೌದೋ ಅಲ್ಲವೋ’ ಎಂಬಂತೆ ಆಶ್ಚರ್ಯವಾಯಿತು. ನನ್ನ ನೈಜ ಪ್ರತಿಬಿಂಬವನ್ನು ಟಿಪ್ಪಣಿಗಳಲ್ಲಿರುವ ಪಾತ್ರಗಳು ಅಪಹರಿಸಿ ಬಿಟ್ಟಿರುವವು ಎಂದುಕೊಂಡೆ. ಪ್ರಾಣೋತ್ಕ್ರಮಣ ಮಾಡುವಾಗ ವಾಗಿಲಿಯ ಜಗನ್ನಥ ರೆಡ್ಡಿ ಮುಖ ಮಾಡಿಕೊಂಡಿದ್ದನಲ್ಲ ಅಂಥ ಪ್ರತಿಬಿಂಬ ಕನ್ನಡಿಯೊಳಗೆ ಪದಿಮೂಡಿತ್ತು. ಭಯವಾಗಿ ಕನ್ನಡಿಯಿಂದ ನನ್ನ ಮುಖವನ್ನು ನಿಷ್ಕ್ರಮಿಸಿದೆ. “ಕನ್ನಡಿ ಸುಮಾರಿದ್ದಂತೆ ಕಣೇ… ಬೆಂಗಳೂರಿನ ಸನ್ ರೈಜ್ ಗ್ಲಾಸ್ ಹೌಸಿನಿಂದ ತಂದಿದ್ದೆನ್ನಲ್ಲ ಆ ಕನ್ನಡಿ ತಗೊಂಡು ಬಾರೆ” ಅಂದೆ.
ವಯಸ್ಸಾದಂತೆಲ್ಲ ಕನ್ನಡಿ ಬಗ್ಗೆ ಹೆಚ್ಚು ಒತ್ತು ಕೊಟ್ಟು ಶ್ರೀಮಂತರು ಖರೀದಿಸುವ ಅಂಗಡಿಯಿಂದ ದುಬಾರಿ ಬೆಲೆ ತೆತ್ತು ತಂದಿದ್ದೆ. ನನಗಿಂತ ಕನ್ನಡಿ ಬೆಲೆಯೇ ಹೆಚ್ಚಿತ್ತು. ತಂದಾಗ “ಇಷ್ಟೊಂದು ದುಬಾರಿಯಾದ್ದು ಯಾಕೆ ತಂದಿರಿ” ಎಂದು ಹೆಂಡತಿ ತಕರಾರು ಎತ್ತಿದ್ದಳು. ಕನ್ನಡಿ ಎಂಬುದು ಪ್ರತಿಷ್ಠೆಯ ಸಂಕೇತ ಕಣೇ… ಎಂಥೆಂಥ ಕನ್ನಡಿ ಇಟ್ಟುಕೊಂಡಿದ್ದಾರೆ ಎಂಬುದರ ಮೇಲೆ ನಮ್ಮ ಗೌರವ ಇರುತ್ತದೆ” ಎಂದು ಗ್ರಾಹಕ ಬುದ್ಧಿ ಪ್ರದರ್ಶಿಸಿದ್ದೆ. ನಮ್ಮ ಮನೆಗೆ ಯಾರಾದರು ಅತಿಥಿಗಳು ಬಂದರೆ ನೀರು ನಿಡಿ ಕೊಟ್ಟಾದ ಮೇಲೆ ನೋಡಿಕೊಳ್ಳಲಿಕ್ಕೆ ಆ ಕನ್ನಡಿ ಕೊಡುತ್ತಿದ್ದೆವು. ಅದರಲ್ಲಿ ಪ್ರತಿಬಿಂಬ ನೋಡಿಕೊಂಡವರು “ಕನ್ನಡಿ ಅಂದರೆ ಇದು ನೋಡ್ರಿ ಕುಂವೀ… ಎಲ್ಲಿಂದ ತಂದ್ರಿ ಇದನ್ನು… ವಿಳಾಸ ಕೊಡ್ರಿ… ನಾವೂ ಅಲ್ಲಿಂದ ಖರೀದಿಸ್ತೀವಿ” ಎಂದು ಅದರ ಹೆಚ್ಚುಗಾರಿಕೆಯನ್ನು ಕೊಂಡಾಡುತ್ತಿದ್ದರು. ನಮ್ಮಲ್ಲಿ ಇರೋವಷ್ಟು ಕಾಲ ಅವರು ಆ ಕನ್ನಡಿಯಲ್ಲಿ ತಮ್ಮ ಪ್ರತಿಬಿಂಬ ನೋಡಿಕೊಳ್ಳುತ್ತ ಮೈಮರೆಯುತ್ತಿದ್ದರು. ನಮ್ಮ ಆತಿಥ್ಯದಲ್ಲಿನ ಲೋಪದೋಶಗಳು ಮುಚ್ಚಿಕೊಂಡು ಹ್ಗಿಬಿಡುತ್ತಿದ್ದವು. ಆದ್ದರಿಂದ ಅದನ್ನು ಕೋಹಿನೂರ್ ವಜ್ರಕ್ಕಿಂತ ಮಿಗಿಲಾಗಿ ಜೋಪಾನ ಮಾಡಿಕೊಂಡು ಬಂದಿದ್ದೆವು.
“ಅದೇ ಕನ್ನಡಿ ಕಣ್ರಿ… ಜಾತ್ರೇಲಿ ತಂದದ್ದು ಎಂದುಕೊಂಡಿರೇನು?” ಎಂದಳು.
ನಾನು ಅದನ್ನು ಕೂಲಂಕುಷ ಪರಿಶೀಲಿಸಿದೆ. ಅದೇ ಕನ್ನಡಿ ಇದೆಂದು ಖಾತ್ರಿಪಡಿಸಿಕೊಂಡು ಮತ್ತೆ ಇಣುಕಿ ನೋಡಿದೆ. ನನ್ನ ಪ್ರತಿಬಿಂಬ ನನ್ನನ್ನು ನೋಡಿ ಪಕಪಕ ನಗಾಡಿತು. “ಅಯ್ಯೋ ಮೂರ್ಖ ಕಾದಂಬರಿಕಾರನೇ… ಒಂದು ಕಾದಂಬರಿಗೆ ಎಷ್ಟೊಂದು ತ್ರಾಸು ತಗೊಂಡು ನಿರೂಪಗೊಂಡಿರುವೆಯಲ್ಲೋ ಬೇವಕೂಫಾ” ಎಂದು ಕನ್ನಡಿಯೊಳಗಿನ ಪ್ರತಿಬಿಂಬ ಗೊಣಗಿತು.
ಅದನ್ನು ಸಿಟ್ತಿನಿಂದ ದೂರ ತಳ್ಳಿದೆ. ವಿಶ್ವಾಮಿತ್ರ ಮೇನಕೆಯರಂಥ ಹೆತ್ತವರಿಂದ ತಿರಸ್ಕೃತಗೊಂಡ ಶಕುಂತಲೆ ಎಂಬ ಹೆಸರಿನ ಕೂಸಿನಂತೆ ಅದು ಚಿಟಾರನೆ ಚೀರಿತು. ಶ್ರೀಮತಿ ಅಯ್ಯೋ ಅಂತ ಓಡಿ ಹೋಗಿ ಅದನ್ನು ಎದೆಗವುಚಿಕೊಂಡಳು.
“ಅಯ್ಯೋ ಏನ್ರಿ ಇದು… ಯಾರ ಮೇಲಿನ ಸಿಟ್ಟನ್ನು ಇದರ ಮೇಲೇಕೆ ತೋರಿಸ್ತಿದ್ದೀರಿ. ಇದು ನಿಮಗೆ ಬಗೆದಿರೋ ದ್ರೋಹವಾದರೂ ಏನು?” ಎಂದು ಅದರ ಕ್ಷೇಮಲಾಭ ವಿಚಾರಿಸಿಕೊಂಡು “ನಿಮ್ಮ ಮನಸ್ಸು ಯಾಕೋ ಸಜ್ಜು ಇರುವಂತಿಲ್ಲ… ಊಟ ಮಾಡಿ ರೆಸ್ಟ್ ತಗೊಳ್ರಿ… ಎಲ್ಲ ಸರಿಹೋಗ್ತದೆ ಎಂದುನನ್ನನ್ನು ಎಬ್ಬಿಸಿಕೊಂಡು ವಯಾ ಬಚ್ಚಲ ಮನೆಯಿಂದ ಅಡುಗೆ ಮನೆಗೆ ಕರೆದೊಯ್ದು ಊಟಕ್ಕಿದಳು. ಬೆಕ್ಕು ಎಂಜಲು ಮಾಡಿರೋ ಹಾಲು ಮೊಸರನ್ನು ನೀಡಲು ಆಕೆ ಒಪ್ಪಲಿಲ್ಲ. ಅನ್ನ ಸಾಂಬಾರು ಊಟ ಮಾಡಿ ಕೈತೊಳೆದುಕೊಂಡೆ.
ಆಗಲೆ ತುಂಬ ಹೊತ್ತಾಗಿತ್ತು. ಹತ್ತು ದಾಟಿರಬಹುದು ಎಂದುಕೊಂಡೆ. ಆಕೆ ಎಷ್ಟು ಪ್ರಯತ್ನಿಸಿದರೂ ನನಗೆ ನಿದ್ದೆ ಅಡರಲಿಲ್ಲ. ಪರಮೇಶ್ವರ ಶಾಸ್ತ್ರಿಗಳ ಅವಸಾನ ಕುರಿತಂತೆ ಶಾಮಂಣ ಬರೆದಿಟ್ಟಿರುವ ಕಥಾಪಠಣ ಸ್ರವಣ ಮಾಡಿದರೆ ಮನಸ್ಸು ಹಗುರಾಗಿ ನಿದ್ದೆ ಬರಬುಹುದೆಂದುಕೊಂಡೆ. ಅದಕ್ಕೆ ಸ್ರಿಮತಿಯೂ ಒಪ್ಪಿದಳು.
ಟೇಬಲ್ ಲ್ಯಾಂಪಿನ ಪಕ್ಕ ಆಕೆಯನ್ನು ಕೂದ್ರಿಸಿಕೊಂಡು ಅವನ ಹಸ್ತಪ್ರತಿಯನ್ನು ಕೈಗೆತ್ತಿಕೊಂಡು ಓದತೊಡಗಿದೆ. ರಾಯಮುರಾರಿ ಸೋಮೇಶ್ವರನ್ ಆಸ್ಥಾನದಲ್ಲಿದ್ದ ಶಾನ ಕವಿ ಸಜ್ಜನ ತಿಲಕನ ಕುಕುನೂರಿನ ಶಾಸನ ಓದಿರುವ ನನಗೆ ಅವನ ಕೈ ಬರಹ ಓದುವುದು ಕಷ್ಟವೆನಿಸಲಿಲ್ಲ.
*
*
*
‘ದಿ. ಶಾಮಾಶಾಸ್ತ್ರಿಯ ಬರೆದ ಅಪ್ರಕಟಿತ ಕಥೆಯು’
ಮನಸ್ಸಿನಲ್ಲಿ ಅದ್ನನ್ನು ಬೇಡಿಕೊಂದಿದ್ದಳೊ? ಆಕೆ ಎಲ್ಲರಿಗಿಂತ ಮುಖ್ಯವಾಗಿ ಅರ್ಚಕರಿಗಿಂತ ಮೊದಲೇ ಎದ್ದು ಸೊಗಸಾಗಿ ನಿದ್ದೆ ಏರಿಸಿದ್ದ ನನ್ನನ್ನೂ ಎಬ್ಬಿಸಿದಳು. ವಾರದಿಂದ ಸುತ್ತಾಡೀ ಸುತ್ತಾಡೀ ನಾನೂ ದಣಿದಿದ್ದೆನು. ದಣಿವಿನಿಂದ ದೇಹವೆಂಬುದು ಹಣ್ಣಾಗಿತ್ತು. ಸದರೀ ಪುಣ್ಯಕ್ಷೇತ್ರ ತಲುಪುತ್ತಲೆ ಸೂರ್ಯೊದಯವಾದ ತುಂಬು ಹೊತ್ತಿಗೆ ಏಳಬೇಕೆಂದು ನಿಶ್ಚಯಿಸಿ ಮಲಗಿದ್ದವನು ನಾನು. ಈ ಪ್ರಕಾರವಾಗಿ ದಣಿದು ನಿದ್ದೆ ಹೋಗಿದ್ದ ನನ್ನನ್ನು ಎದ್ದು ಗೋಳು ಹೊಯ್ದುಕೊಳ್ಳುವಳೆಂದು ನಾನು ಕನಸುಮನಸಿನಲ್ಲೂ ಯೋಚಿಸಿರಲಿಲ್ಲ. ನನಗಿಂತ ದೈಹಿಕವಾಗಿ ಬಲವಾಗಿದ್ದ ಆಕೆ ಮೇಲಿಂದ ಮೇಲೆ ಉರುಳಾಡಿಸಲು ಬೇರೆ ದಾರಿಗಾಣದೆ ಎದ್ದು ಕೂತೆನು. ಕಣ್ಣುಗಳನ್ನು ಉಜ್ಜಿಕೊಳ್ಳುತ್ತ ‘ವರಲಕ್ಷ್ಮಿ’ ಎಂದು ಸಂಭೋದಿಸಲು ಪ್ರಯತ್ನಿಸಿದೆನಾದರೂ ಸಾಧ್ಯವಾಗಲಿಲ್ಲ. ತನ್ನನ್ನು ಹೆಸರು ಹಿಡಿದು ಕರೆಯಬಾರದೆಂದೂ, ಅದರಿಂದ ಪತಿಯ ಆಯುಷ್ಯ ಕ್ಷೀಣಿಸುವುದೆಂದೂ, ಏಯ್… ಹಾಯ್ ಎಂದು ಪಶು ಸಮಾನವಾಗಿ ಕರೆಯಬೇಕೆಂದೂ ಕಟ್ಟುನಿಟ್ಟಾಗಿ ಸಲಹೆ ನೀಡಿದ್ದಳು. ನಾನು ಎಚ್ಚರವಾಗುತ್ತಲೆ ನನ್ನ ಪಾದಗಳಿಗೆತನ್ನ ಮಸ್ತಿಷ್ಯವನ್ನು ಅಂ
ಟಿಸಿ ಅದೇನನ್ನೋ ಗೊಣಗಿದಳು. ಹಾಗೆಯೇ ಕೊರಳ ಮಾಂಗಲ್ಯಕ್ಕೂ ಅದೇ ಗೌರವ ಸಲ್ಲಿಸಿದಳು. ಕಡಿಮೆ ಪ್ರಮಾಣದಲ್ಲಿ ಬೆಳಕು ಚೆಲ್ಲುತ್ತಿದ್ದ ವಿದ್ಯುದ್ದೀಪದ ಬೆಳಕಿಗೆ ಅಳವಡಿಸಿ ನನ್ನ ಮುಖವನ್ನು ನೋ
ಡಿ ಸಮಾಧಾನದ ಉಸಿರು ಬಿಟ್ಟ ಮೇಲೆಯೇ ನನಗೆ ಮಾತಾಡಲು ಆಕೆ ಅವಕಾಶ ಕೊಟ್ತಿದ್ದು. “ಅಲ್ಲೇ ಸರಿಯಾಗಿ ಮೂರು ಗಂಟೆ ಸಹ ಆಗಿಲ್ಲ, ಇಷ್ಟೊತ್ತಿಗೆ ಎಬ್ಬಿಸಿದ್ಯಾ‌ಅಕೆ?” ಎಂದು ಬೇಸರ ವ್ಯಕ್ತಪಡಿಸಿದೆ. “ಅಲ್ರೀ… ಮನೆಗೆ ಹೋದ ಮೆಲೆ ಮಲಗೋದು ಇದ್ದೇ ಇದೆ… ನಿದ್ದೆಯಿಂದ ಬುದ್ಧಿ ನಾಶ ಅಂತ ಹಿರಿಯರು ಹೇಳಿದ್ದಾರೆ. ಪ್ರಾತಃಕಾಲ ಪ್ರಥಮ ಪೂಜೆ ಎಷ್ಟು ಕೊಟ್ರೂ ಸಿಕ್ಕೀತ್ರಿ… ಇನ್ನೊಂದು‌ಊವರೆ ಗಂಟೆ ಕಳೆದ್ರೆ ಬೆಳಗಾಗಿ ಬಿಡ್ತದೆ… ಹೇಗೋ ಎದ್ದು ಬಿಡ್ರಿ… ಹೇಗೂ ಚಂದ್ರನ ಬೇಳಕಿದೆ. ನದಿಗೆ ಹೋಗಿ ಸ್ನಾನ ಮಾಡೋಣ… ಅಷ್ಟೊತ್ತಿಗೆ ಅರ್ಚಕರೂ ಎದ್ದಿರ್ತಾರೆ” ಎಂದು ಲಗುಬಗೆಯಿಂದ ಹಾಸಿಗಿ ಮಡಚಿ ಪೆಟಾರಿಗೆ ಸೇರಿಸಿದಳು. ಅಷ್ಟು ದೂರದಲ್ಲಿ ಮಬ್ಬು ಬೆಳಕೊಳಗೆ ಹೆಣ್ಣು ಗಂಡು ಪರಸ್ಪರ ಒಬ್ಬರಮೇಲೊಬ್ಬರು ಕಾಲು ಹಾಕಿಕೊಂಡು ಮಲಗಿದ್ದರು. ಪ್ರಕೃತಿಯ ರಮ್ಯ ಮಡಿಲಲ್ಲಿ ಹೀಗೆಯೇ ಲೈಂಗಿಕ ಸುಖವನ್ನು ಅನುಭವಿಸಬೇಕೆಂಬ ಉದ್ದೇಶದಿಂದಲೇ ನಾನು ಸಾಲ ಸೂಲ ಮಾಡಿಕೊಂಡು ಮಧು ಚಂದ್ರಕ್ಕೆ ಹೊರಟುಬಂದದ್ದು. ಬಂದು ಏಳೆಂಟು ದಿನವಾದರೂ ಇಂಥದೊಂದು ಅನುಭವಕ್ಕೆ ಆಸ್ಪದ ಮಾಡಿಕೊಟ್ಟವಳಲ್ಲ ಇವಳು. ಕೇಳಿದಾಗ, “ಮುಧುಚಂದ್ರಕ್ಕೆ ಬೆಂಕಿ ಬಿತ್ತು. ನಾವು ಬಂದಿರೋದೆ ದೇವರ ದರ್ಶನಕ್ಕೆ ಪೂಜ್ಯರೆ, ಮುಂದೆಂದಾದ್ರು ಈ ಸುದ್ದಿ ಎಟ್ಟಿದ್ರೀ ಅಂದ್ರ ನನಗೆ ಕೆಟ್ಟ್ ಕೋಪ ಬಂದುಬಿಡ್ಟದೆ” ಎಂದು ಲಕ್ಷಣ ರೇಖೆಗಳಿಂದ ದಾಂಪತ್ಯದ ನಡುವೆ ರಂಗವಲ್ಲಿ ರಚಿಸಿದಳು. ಯಾವ ಸ್ಪಂದನವೂ‌ಇರದಿದ್ದ ಆಕೆಯನ್ನು ಉದ್ದೀಪಿಸುವ ಸಾಹಸಕ್ಕೂ ನಾನು ಇಳಿದಿರಲಿಲ್ಲ. ನಾನು ಕದ್ದು ಮುಚ್ಚಿ ಸುಂದರವಾದ ಹೆಣ್ಣುಗಳನ್ನು ನೋಡುತ್ತಳೋ.. ಅಂಗೋಪಾಂಗಗಳನ್ನು ಸ್ಪರ್ಶಿಸುತ್ತಲೋ ಸುಖಿಸುತ್ತಿದೆನು. ನವವಿವಾಹಿತನಾದ ನಾನು ಈ ನ್ಡುವೆ ಒಂದೆರಡು ಬಾರಿ ಮುಷ್ಟಿ ಮೈಥುನ ಮಾಡಿಕೊಂಡದ್ದೂ ಉಂಟು. ಈ ಗೋಪ್ಯ ಚಟುವಟಿಕೆಯನ್ನು ಹೇಗೋ ಪತ್ತೆ ಮಾಡಿ “ಏನ್ರೀ… ಮಾನಸಿಕ ವ್ಯಭಿಚಾರ ಅಲ್ವೇನ್ರಿ?… ಇದು… ಇನ್ನೊಮ್ಮೆ ಪರಸ್ತ್ರೀಯನ್ನು ಕಣ್ಣೆತ್ತಿ ನೋಡಿದ್ರೀ ಅಂದ್ರೆ ನದಿಯಲ್ಲಿ ಹಾರಿ ಪ್ರಾಣ ಕಳ್ಕೋತೀನಿ” ಎಂದು ಹೆದರಿಸಿದ್ದಳು. ಅದಕ್ಕೂ ಕಲ್ಲು ಬಿದ್ದು ನಾನು ತೆಪ್ಪಗೆ ಇದ್ದು ಬಿಡುವುದನ್ನು ಅಭ್ಯಾಸ ಮಾಡಿಕೊಂಡಿದ್ದೆ. “ಅಯ್ಯೋ ಇನ್ನೊಂದು ಸ್ವಲ್ಪ ಹೊ
ಟ್ಟು ಮಲಕ್ಕೋಳ್ಳೆ ನಾಲ್ಕೂ… ನಾಲ್ಕೂವರೆಗೆ ಎದ್ದು ಹೋದರಾಯ್ತು” ಎಂದೆ.

“ಅಯ್ಯೋ… ಬೇರೆ ಜನರೆಲ್ಲ ಎದ್ದು ಬಿಟ್ಟಿದ್ದಾರಲ್ರೀ… ಅವರ ಎದುರಿಗೆ ಸ್ನಾನ ಮಾಡೋದು ಹೇಗೆ… ಅದೆಲ್ಲ ಆಗೋ ಮಾತಲ್ಲ… ಈಗ ಸ್ನಾನ ಮಾಡಿಬಿತ್ರೆ ಎಷ್ಟೊಮ್ದು ದೇವರ ಮಾಡೋದಿದೆ ಎನ್ಕಥೆ? ನೂರೊಂದು ಸಾರಿ ಉರುಳು ಸೇವೆ ಮಾಡಬೇಕು… ಕುಂಕುಮಾರ್ಚನೆ ಸಹಸ್ರ ಬಿಲ್ವಾರ್ಚನೆ ಮಾಡಿಸ್ಬೇಕು… ಇದೆಲ್ಲ ಸೂರ್ಯೋದಯಕ್ಕೂ ಪೂರ್ವದಲ್ಲಿ ನಡೆಯಬೇಕಿದೆ ಕಣ್ರೀ…” ಎಂದು ಲಗುಬಗೆಯಿಂದ ಸ್ನಾನಕ್ಕೆ ಬೇಕಾದ ಸಾಮಾನುಗಳನ್ನು ಜೋಡಿಸಿಕೊಂಡಳು. ಬಲವಂತದಿಂದ ನನ್ನನ್ನು ಎಬ್ಬಿಸಿಕೊಂಡು ಹೊರಟಳು. ದಾರಿಯಲ್ಲಿ ಮೊಖ್ತೇಸ್ತರರ ಪೈಕಿ ಒಬ್ಬ ಎದ್ದು, “ಯಾರದು?” ಎಂದು ಗದರಿದ. ‘ನಾವು’ ಎಂದಾಗ “ಅಯ್ಯೋ… ನೀವಾ… ನನ್ಯಾರೋ ಕಳ್ರು ಎಂದುಕೊಂಡಿದ್ದೆ… ತುಸು ಹೊತ್ತಾದ ಮೇಲೆ ಹೋದರಾಗದೆ… ನದಿ ಎಲ್ಗೂ ಓಡಿಹೋಗೋದಿಲ್ಲ… ಇದ್ರ ಮೇಲೆ ನಿಮ್ಮಿಷ್ಟ,ನಿಮ್ಮಂಥ ಭಕ್ತರನ್ನು ಸಹಿಸಿಕೊಳ್ಳೋದು ನಮ್ಮ ಕರ್ಮ. ಅದ್ಯಾವ ಜನ್ಮದಲ್ಲಿ ಏನು ಪಾಪ ಮಾಡಿದ್ವೋ… ಸಹಿಸಿಕೊಂಡಿರೋಕೆ!” ಎಂದು ಮುಂತಾಗಿ ಗೊಣಗಿಗುತ್ತ ರಗ್ಗಿನೊಳಗೆ ಮೈಗೂಡಿಸಿಕೊಂಡು ಗಡಗಡ ನಡುಗತೊಡಗಿದ. “ನಾಸ್ತಿಕ್ರು, ಶುದ್ಧ ನಾಸ್ತಿಕ್ರು” ಎಂದು ಸಿಡುಕುತ್ತ ವರಲಕ್ಷ್ಮಿ ಹೆಜ್ಜೆ ಹಾಕತೊಡಗಿದಳು. ವೀರಬಲ್ಲಾಳ ಚಕ್ರವರ್ತಿ ಎಂಬುವನು ಕಟ್ಟಿಸಿದ್ದ ದೇವಾಲಯದ ಪ್ರಾಂಗಣ ದಾಟುವ ಹೊತ್ತಿಗೆ ನನ್ನ ಹಾಜರಿಯನ್ನು ನೂರು ಬಾರಿ ಖಚಿತಪಡಿಸಿಕೊಂಡಿರಬಹುದು. ಮೈಮುರಿದು ಎಚ್ಚರಗೊಳ್ಳಲಿರುವಂತೆ ಗೋಚರಿಸುತ್ತಿರುವ ಸಹ್ಯಾದ್ರಿಯ ಈ ಮಗ್ಗುಲು ಭದ್ರೆ ಜುಳುಜುಳು ಪ್ರವಹಿಸುತ್ತ ನಿರಂತರ ಜೀವಂತಿಕೆಗೆ ಪ್ರತ್ಯಕ್ಷ ನಿದರ್ಶನವಾಗಿದ್ದಳು. ಮೌನಕ್ಕೆ ಲಾಲಿ ಹಾಡುತ್ತಿರುವ ಜೀರುಂಡೆಗಳ ಸದ್ದು ಪ್ರಕೃತಿ ಕೋಟಿ ತಂಬೂರಿಗಳನ್ನು ಸರಿಪಡಿಸುತ್ತಿರುವಂತೆ ಕೇಳಿಸುತ್ತಿತ್ತು. ಹೊರಗಡೆ ಒಂದು ಮೂಲೆಯಲ್ಲಿ ಹತ್ತಾರು ಭಿಕ್ಷುಕರು ಒಂದೇ ದೇಹವೆಂಬಂತೆ ಮಲಗಿದ್ದರು. ಕೊರೆಯುವ ಚಳಿಗೆ ಸ್ವಾಂತನ ಹೇಳಲು ನನ್ನವಳ ತೋಳನ್ನು ಹಿಡಿದುಕೊಳ್ಳಲು ಹೋದೆ. ‘ಏನ್ರಿ ಇದು ನಿಮ್ಮ ಹುಚ್ಚಾಟ’ ಎಂದು ಕೊಸರಿ ದುರಸರಿದಳು. ಹೊಟ್ಟೇರಿದ್ದರೆ ಅವರ ಮೈಯನ್ನು ಇವರು ಉಜ್ಜುವ; ಇವರ ಮೈಯನ್ನು ಅವರು ಉಜ್ಜುವ ಪ್ರತಿಯೊಂದು ಕ್ರಿಯೆಗೆ ಸ್ಪಂದಿಸುವ, ಕಂಪಿಸುವ ಹೊಂಬಣ್ಣದ ಮಾಂಸಖಂಡಗಳನ್ನು ದರ್ಶಿಸಬಹುದಾಗಿತ್ತು. ಆದರೆ ಆ ಭಾಗ್ಯವನ್ನು ನನ್ನಿಂದ ಕಸಿದುಕೊಂಡಿರುವ ಶ್ರೀಮತಿ ಮ್ಡಿವಂತಿಕೆಯೇ ಮೂರ್ತಿವೆತ್ತಂತೆ ಅದಾವುದೋ ಮಂತ್ರವನ್ನು ಗೊಣಗುತ್ತ ತನ್ನ ಪಾಡಿಗೆ ತಾನು ನಡೆಯುತ್ತ ನದಿಯ ದಡ ತಲುಪಿದಳು. ನಾನೂ ಕೂಡ… ನನ್ನನ್ನು ಸಹ್ಯಾದ್ರಿ ಕಡೆ ನೋಡುವಂತೆ ನಿರ್ದೇಶಿಸಿ ತಾನು ಸೀರೆ ಉದುರಿಸಿ ಲಂಗವನ್ನು ಎದೆ ಮಟ್ಟ ಕಟ್ಟಿಕೊಂಡು ನೀರಿಗಿಳಿದಳು. ವಿಷ್ಟು ಸಹಸ್ರನಾಮ ಜಪಿಸುತ್ತ ಮುಳುಗತೊಡಗಿದಳು. ನಾನು ನಿಲುಕದ ಹೆಣ್ಣನ್ನು ಧ್ಯಾನಿಸುತ್ತ ದಾದಲ್ಲಿ ಇದ್ದುಬಿಟ್ಟೆ. ಆಕೆ”ಆ ಹೆಬ್ಬಂಡೆ ಮರೆಗೆ ಹೋಗಿ ನೀವು ಹಾಗೆ ಸ್ನಾನ ಮಾಡ್ರಿ… ಹಂಗ್ಯಾಕೆ ಹುಳಿಹುಳಿ ನೋಡ್ಕೊತಾ ನಿಂತಿದ್ದೀರಿ… ಏನು ಗಂಡಸರಪ್ಪಾ ನೀವು… ಶಾಸ್ತ್ರಿಗಳ ಮನೆತನದೋರೆಂದರೆ ಹೇಗಿರಬೇಕು ನೀವು” ಎಂದಾಕೆ ಹೇಳುತ್ತಿದ್ದಂತೆಯೇ ನಾನು ಹೆಬ್ಬಂಡೆ ಮರೆಗೆ ಹೋದೆ. ಅರ್ಥವಾಗದ ಹಿಂಸೆ ವರ್ಣನೆಗೆ ನಿಲುಕದ್ದು. ಇಷ್ಟೊಂದು ದೈವ ಭಕ್ತಿಯನ್ನು ಇಂಚಿಂಚಿಗೂ ಪ್ರಕಟಿಸಬಹುದೆಂದು ಮೊದಲೇ ಗೊತ್ತಾಗಿದ್ದರೆ ಖಂಡಿತ ನಾನೀ ಮಧುಚಂದ್ರ ಯೋಜನೆ ಹಾಕಿಕೊಳ್ಳುತ್ತಿರಲಿಲ್ಲ. ಒಂದೊಂದು ಮುಟ್ಟಿಗೂ ಒಂದೊಂದು ಕಾರಣ ದುರ ಸಿಡಿಯುವ ಈ ಸತೀಮಣಿಯೊಂದಿಗೆ ಹೇಗಪ್ಪಾ ಜೀವನುದ್ದಕ್ಕೂ ಪಯಣಿಸುವುದು ಎಣ್ಬ ಚಿಂತೆಯಿಂದ ನಾನು ಸ್ನಾನ ಮಾಡಿ ದಡಕ್ಕೆ ಬಂದಾಗ ಕಾಡೊಳಗಿಂದ ಕೋಳಿ ಕೂಗಿತು.

ಕ್ರೌಂಚಗಳು ಮುಗುಲಿಗೆ ಸಿಡಿದಾಗ ಆಕೆ ಮಡಿ ಬಟ್ಟೆ ಉಟ್ಟಳು. ಟಿತ್ತಿಭಗಳು ಕೂಗತೊಡಗಿದಾಗ ಆಕೆ ಉರುಳು ಸೇವೆಗೆ ಸಜ್ಜಾಗ್ತಿದ್ದೀನಿ. ಮಾತಾಡಿಸಿ ವ್ರತಭಂಗ ಮಾಡಿಬೇಡಿರೆಂದು ಎಚ್ಚರಿಸಿ ಮತ್ತೊಮ್ಮೆ ನೀರೊಳಗೆ ಮುಳುಗಿ ಮೇಲೆದ್ದಳು. ಆಕೆ ಸರಸರ… ದೇವಾಲಯದ ಕಡೆ ಸರಸರ ನಡೆಯತೊಡಗಿದಳು. ನಾನು ಹಸಿ ಬಟ್ಟೆಯನ್ನು ಛತ್ರದ ಮುಂದೆ ಒಣಗಲು ಹಾಕಿ ಗರ್ಭ ಗುಡಿ ಕಡೆ ಹೋದೆ. ಆಕೆ ಗರ್ಭ ಗುಡಿ ಸುತ್ತ ಉರುಳು ಸೇವೆ ಆರಂಭಿಸಿದ್ದಳು. ಒಂದೆರಡು ಸುತ್ತು ಅಕೆಯನ್ನು ಹಿಂಬಾಲಿಸಿದೆನಾದರೂ ಮುಂದುವರಿಯುವುದು ಸಾಧ್ಯವಾಗಲಿಲ್ಲ. ಗರ್ಭಗುಡಿ ಮುಂದುಗಡೆ ಅಂದರೆ ಪ್ರಾಚೀನ ಗಂಟೆಯ ಕೆಳಗೆ ಕೂತುಬಿಟ್ಟೆ. ಒಂದು ಸಿಗರೇಟನ್ನಾದರೂ ಸೇದಬೇಕೆಂಬಾಸೆ ಬಲವತ್ತರವಾಯಿತು. ಕಣ್ಣು ತಪ್ಪಿಸಿ ಕದಲುವಂತಿರಲಿಲ್ಲ. ನನ್ನ ಪತ್ನಿಯ ಸೇವಾ ಕೈಂಕರ್ಯ ಕಂಡು ಕೆಲ ಯಾತ್ರಾರ್ಥಿಗಳಂತೂ ಮೂಕ ವಿಸ್ಮಿತರಾಗಿದ್ದರು. ‘ಸನಾತನತೆಗೆ ಹಿಂದೂ ಧರ್ಮದ ಕೊಡುಗೆ’ ಎಂಬ ವಿಷಯದ ಬಗ್ಗೆ ಮಹಾಪ್ರಬಂಧ ಬರೆಯುತ್ತಿದ್ದ ಸಂಶೋಧಕನೋರ್ವ ನನ್ನ ಹೆಂಡತಿಯ ಪ್ರತಿ ಪ್ರದಕ್ಷಿಣೆ ಕುರಿತು ಏನನ್ನೋ ಟಿಪ್ಪೈ ಹಾಕಿಕೊಳ್ಳುತ್ತಿದ್ದ. ಹವ್ಯಾಸಿ ಛಾಯಾಗ್ರಾಹಕನೋರ್ವ ನನ್ನ ಹೆಂಡತಿಯ ವಿವಿಧ ಭಂಗಿಗಳನ್ನು ಸೆರೆಹಿಡಿಯತೊಡಗಿದ್ದ. ಮತ್ತೊಬ್ಬ ಡಾಕುಮೆಂಟರಿಗಾರನೋರ್ವ ವಿಡಿಯೋ ಕೆಮರಾವನ್ನು ಹೆಗಲ ಮೇಲಿಟ್ಟುಕೊಂಡು ಗೋಪುರದ ಮಿಥುನ ಶಿಲ್ಪಗಳಿಗೆ ಪೂರಕವಾಗಿ ನನ್ನ ಹೆಂಡತಿಯ ಅರೆನಗ್ನ ದೇಹವನ್ನು ಚಿತ್ರೀಕರಿಸಲಾರಂಭಿಸಿದ. ನನಗೊಂಥರಾ ಕಿರಿಕಿರಿಯಾದರೂ ಸಹಿಸಿಕೊಂಡೆ. ಮೊಖ್ತೇಸರರೇ ಅವರಿಗೆ ಆ ಎಲ್ಲ ಸೌಲಭ್ಯ ಒದಗಿಸಿರುವರೆಂದಮೇಲೆ ಹೇಳುವುದು, ಕೇಳುವುದು ಏನಿದೆ> ಒಟ್ಟಿನಲ್ಲಿ ಯಾತ್ರಾರ್ಥಿಗಳ ಪಾಲಿಗೆ ‘ಅಪರೂಪದ ದೈವಭಕ್ತೆ’ಯಾಗಿದ್ದಳು ನನ್ನ ಹೆಂಡತಿ. ವೃದ್ಧ ವಿಧವೆಯೋರ್ವಳು ನನ್ನ ಬಳಿಗೆ ಬಂದು “ಆ ಮಹಾತಾಯಿಯ ಗಂಡ ನೀನೇ ಏನಪ್ಪಾ…” ಎಂದು ಉದ್ಗಾರ ತೆರೆದಳು. “ನನ್ನ ಸೊಸೆಯಂದಿರೂ ಇದ್ದಾರೆ ತಗೊಂಡೆನು ಮಾಡುವುದು? ದಂಡ… ಸದಾ ತಮ್ಮ ಗಂಡಂದಿರ ಹೆಗಲಿಗೆ ಜೋತು ಬಿದ್ದಿರ್‍ತಾರೆ… ಒಂಚೂರು ಮಡಿಯುಡಿ ಇಲ್ಲ. ಅಂಥ ಹುಡುಗಿಯನ್ನು ಕೈಹಿಡಿದಿರೋ ನೀನೇ ಪುಣ್ಯವಂತನಪ್ಪಾ… ಹೆಂಡತಿಗೆ ಎಷ್ಟೆಲ್ಲ ಸಹಕಾರ ನೀಡ್ತಿರೋ ನಿನ್ನಂಥ ಗಂಡಂದಿರು ಲಕ್ಷಕ್ಕೊಬ್ಬರಪ್ಪಾ…” ಎಂದು ಪ್ರಶಂಸಿಸಿ ಹೋಯಿತು. ಮೂತಶಂಕೆ ನೆಪದಿಂದ ನಾನೂ ಎದ್ದು ಹೊರಗಡೆ ಹೋದೆ. ಗುಡಿಗೆಸ್ವಲ್ಪ ದೂರದಲ್ಲಿದ್ದ ಡಬ್ಬಿ ಅಂಗಡಿಯಿಂದ ಒಂದು ಸಿಗರೇಟು ಕೊಂಡು ಸೇದಿದೆ. ವಸನೆ ಬರದಿರಲೀ ಅಂತ ನಾಲ್ಕು ಸೋಪಿನ ಕಾಳುಗಳನ್ನೂ ಬಾಯಲ್ಲಿ ಹಾಕಿಕೊಂಡೆ. ಕಾಲು ಹಾದಿಯ ಪಕ್ಕ ವೃದ್ಧನೊಬ್ಬ ತಲೆ ಅಡಿ ಚ್ ಲವನ್ನು ಇಟ್ಟುಕೊಂಡು ನಿದ್ದೆ ಹೋಗಿದ್ದ. ನನಗೆ ಅನುಮಾನ ಬಂದು ತಿಬ್ಬಳಿಸಿ ನೋಡಿದೆ. ಅವನ ಅರೆತೆರೆದ ಬೊಚ್ಚು ಬಾಯಿಯೊಳಗಿಂದ ಗೊದ್ದಿಗವೊಂದು ಹೊರ ಬಂತು. ಕಣ್ಣು ರೆಪ್ಪೆಯೊಳಗೆ ನಾಲಕೈದು ಕಟ್ಟಿರುವೆಗಳು ಅಡ್ಡಾಡುತ್ತಿದ್ದುವು. ನನಗೆ ಅದನ್ನು ನೋಡಿ ಭಯವಾಯಿತು. ಈ ಮುದುಕ ಸತ್ತಿದ್ದಾನೆ ಎಂದು ನಾನು ಉದ್ಗರಿಸಿದಾಗ ಒಬ್ಬ ಈ ಕಾಯ ನಶ್ವರ ಎಂದ. ಇನ್ನೊಬ್ಬ ಈವತ್ತು ಈ ಮುದುಕ, ನಾಳೆ ನಾನು, ನಾಡಿದ್ದು ನೀನು ಎಂದ. ಮತ್ತೊಬ್ಬ ದಿನಾ ಸಾಯೊರ್‍ಗೆ ಅಳೋರ್‍ಯಾರು ಹೋಗಯ್ಯ ಹೋಗು ಅಂದ, ಮಗದೊಬ್ಬ ಆ ಮುದುಕ ಚೀಲದಲ್ಲಿ ಏನಿಟ್ಟಿರಬಹುದೆಂದು ಆ ಕಡೆ ಓಡಿದ. ಗೋಪುರದ ಮೇಲೆ ರಾಕ್ಷಸನನ್ನು ಎಡಗಾಲಿಂದ ಮೆಟ್ಟಿ ನಿಂತಿರುವ ದೇವಿಯ ಬಾಯಿಂದ ಕೋರೆ ಹಲ್ಲುಗಳು ದಿನದ ಮೊದಲ ಬೆಳಕಿಗೆ ಫಳಫಳ ಹೊಳೆಯುತ್ತಿದ್ದವು.

ಇದರಿಂದ ನನ್ನ ಮನಸ್ಸಿಗೆ ಅಪಾರ ನೋವುಂಟಾಯಿತು… ಯಾಕಿದ್ದೀತಂತ ಮುಂದೆ ಬಂದಾಗ ಕೆದರು ತಲೆಯ ವೃದ್ಧೆಯೋರ್ವಳು ತಾರಕ ಸ್ವರದಲ್ಲಿ ‘ಬ್ರೋಚೇವಾಡೆವುಡುರಾ’ ಎಂದು ಹಾಡುತ್ತಿದ್ದಳು. ಸುಶ್ರಾವ್ಯವಾದ ಆ ಶಾರೀರಕ್ಕೆ ಮನಸೋತು ನಿಂತಿದ್ದ ನನಗೆ ಆದಿತಾಳಕ್ಕೆ ಮಾತ್ರೆಗಳೆಷ್ಟು ಗೊತ್ತಾ ಹೇಲು ಮತ್ತೆ… ಮಹಾ ಸಂಗೀತಜ್ಞನ ಥರ ನಿಂತ್ಕೊಂಡು ಕೇಲ್ತಿದ್ದೀಯಲ್ಲ… ನೀನೇನು ಮುಮ್ಮುಡಿ ಕ್ರಿಷ್ಣ ಒಡೆಯನೋ… ಹೋಗಯ್ಯ ಹೋಗು” ಎಂದು ಗದರಿಸಿ ಬಿಟ್ಟಿತು. ಅವಮಾನವಾದಂತಾಗಿ ನಾನು ಗರ್ಭಗುಡಿ ಕಡೆ ಬಂದೆ… ಅದೇ ತಾನೆ ಸಾವಿರದ ಒಂದು ಉರುಳು ಸೇವೆ ಮುಗಿಸಿದ್ದ ವರಲಕ್ಷ್ಮಿಗೆ ಅರ್ಚಕರು ಗುಡಿಯೊಳಗೆ ಮುಕ್ತ ಪ್ರವೇಶ ಕಲ್ಪಿಸಿದ್ದರು. ಸೋತು ಸುಣ್ಣಾಗಿದ್ದ ಆಕೆ ದೇವಿ ಮೂರ್ತಿಯ ಮುಂದೆ ಸಾಷ್ಟಾಂಗ ಪ್ರಣಾಮ ಸಲ್ಲಿಸಲು ಉದ್ದೋಕೆ ಮಲಗಿದ್ದಳು. ನನ್ನ ಅಕ್ಕಪಕ್ಕದಲ್ಲಿದ್ದವರು ಆ ಮೂಗುತಿಯನ್ನು ಟಿಪ್ಪುಸುಲ್ತಾನ್ ಮಾಡಿಸಿಕೊಟ್ಟದ್ದೆಂದೂ; ಕೊರಳ ರತ್ನದಾಭರಣವನ್ನು ಕೃಷ್ಣ ದೇವರಾಯನ ದ್ವಿತೀಯ ಹೆಂಡತಿ ಚಿನ್ನಾಂಬಿಕೆ ಮಾಡಿಸಿಕೊಟ್ಟಿದೆಂದೂ ಹೇಳತೊಡಗಿದ್ದರು. “ಈ ತಾಯಿಗೆ ಸಂಬಂಧಿಸಿದವರ್‍ಯಾರಾದ್ರು ಅದೀರೇನ್ರಿ… ಎದ್ದೇಳ್ಲಿಕ್ಕಾಗದೆ ಮಲಗಿದ್ದಾರೆ… ಎಬ್ಬಿಸಿ ಅರ್ಚನೆಗೆ ಸಹಕರಿಸಿ” ಎಂದು ಅರ್ಚಕರೋರ್ವರು ಕೂಗುತ್ತಲೆ ನಾನು ಒಳಗಡೆ ಪ್ರವೇಶಿಸಿದೆ. ನಿಜವಾಗಲೂ ವರಲಕ್ಷ್ಮಿ ಸೋತು ಸುಣ್ಣವಾಗಿದ್ದಳು. ಎಬ್ಬಿಸಲು ಹೋದರೆ “ದೇವಿ ಸಿಟ್ ಮಾಡ್ಕೊಂಡಾಳು… ಮೈಮುಟ್ಟಬೇಡಿ…” ಎಂದು ಕೊಸರಿದಳು. ಆಕೆಯ ಉತ್ತರದಿಂದ, ಅರ್ಚಕರು ಸುಪ್ರೀತರಾಗುತ್ತಿರಲ್ಕೆ ಶ್ರೀಮತಿಯು ಬಹು ಪ್ರಯಾಸದಿಂದ ಮೇಲಕ್ಕೆದ್ದಳು. ಹಾಗೆ ವಾಲಾಡುತ್ತಲೆ ಕುಂಕುಮಾರ್ಚನೆ, ಬಿಲ್ವಾರ್ಚನೆ ಇವೆಲ್ಲವನ್ನು ಮಾಡಿಸಿದಳು. ಮಂಗಳಾರತಿ ಮಾಡುವಾಗ್ಗೆ ಮುಖ್ಯ ಅರ್ಚಕರು ವಂಶದ ಪೂರ್ವಾಪರ ವಿಚಾರಿಸಿದರು. ನಾನು ಹೇಳಲ್ಲಗಿ ಅವರು ಹಿರಿಹಿರಿ ಹಿಗ್ಗಿದರು. “ಸರ್ವದರ್ಶನ ತೀರ್ಥರೂ; ಜ್ಯೋತಿಷ್ಯ ಪಾರಂಗತರೂ; ಅಮಲ ವಿದ್ಯಾನಿಧಿಗಲೂ ಆದ ಪರಮೇಶ್ವರ ಶಾಸ್ತ್ರಿಗಳ ಮೊಮ್ಮಕ್ಕಳೇನ್ರಿ ನೀವು…” ಎಂದು ಉದ್ಗರಿಸುತ್ತಲೇ ವಿಶೇಷ ಮಂಗಳಾರ್ಚನೆ ಮಾಡಿದರು. ಐದು ನಿಮಿಷ ನಿರರ್ಗಳವಾಗಿ ಮಂತ್ರೋಚ್ಚರಣೆ ಮಾಡಿ ವಿಶೇಷ ಆಶೀರ್ವಾದ ಮಾಡಿದರು. ಪೂಜಾ ಕೈಂಕರ್ಯವನ್ನು ತಮ್ಮ ಕಿರಿಯರಿಗೆ ವಹಿಸಿಕೊಟ್ಟು ಅವರೂ ನಮ್ಮೊಂದಿಗೆ ಬಂದರು. ವರಲಕ್ಷ್ಮಿಯ ದೈವಭಕ್ತಿ ಕೊಂಡಾಡಿದರು. ನಮ್ಮ ತಾತನವರ ಬಳಿ ಒಂದು ತಿಂಗಳ ಕಾಲ ಶಿಷ್ಯ ವೃತ್ತಿಯಲ್ಲಿದ್ದರಂತೆ. ಸಂಹಿತಾ ಬ್ರಾಹ್ಮಣಗಳಲ್ಲಿ ಯಜ್ಞಕರ್ಮಗಳ ಹೃದ್ಗತ ಮಾಡಿಕೊಂಡಿರುವ ಕೆಲವೇ ಕೆಲವು ಶ್ರೋತ್ರಿಗಳ ಪೈಕಿ ನಮ್ಮ ತಾತನವರೂ ಒಬ್ಬರಂತೆ. ತಾತನವರು ಈ ಶಕ್ತಿ ಸ್ಥಳದಲ್ಲಿ ಚಂಡಿಕಾ ಯಜ್ಞ ಮಾಡಬೇಕೆಂದು ಪ್ರಯತ್ನಿಸಿದ್ದರಂತೆ… ರಾಜಕೀಯ ವಿದ್ಯಮಾನಗಳಿಂದ ಅದು ನೆರವೇರಲಿಲ್ಲವಂತೆ… ಹೀಗೆ ಅವರು ನನಗೆ ಗೊತ್ತಿಲ್ಲದ ಎಷ್ಟೋ ವಿಷಯಗಳನ್ನು ತಿಳಿಸಿದರು. “ಅಷ್ಟು ಸುಲಭವಾಗಿ ನಾನು ಅರ್ಥ ಆಗೋದಿಲ್ವೋ… ಅನ್ಯರಿಗೆ ನಾನು ಅರ್ಥ ಆದಷ್ಟು ನಾನು ಹೆತ್ತ ಮಗನಿಗೆ; ಮೊಮ್ಮಗನಿಗೆ ಅರ್ಥ ಆಗಲಿಲ್ವಲ್ಲ ಎಂಬ ನೋವು ನನಗಿದೆ. ವೇದಾಧ್ಯಯನ ಮಾಡಿದೋರಿಗೆ ಈ ದೇಶದ ತೀರ್ಥಕ್ಷೇತ್ರಗಳಲ್ಲಿ ವಿಶೇಷ ಮರ್ಯಾದೆ ಗೌರವ ಸಿಗ್ತದ್ ಅಪ್ಪಾ” ಎಂದು ತಾತನವರು ಹೇಳುತ್ತಿದ್ದ ಮಾತುಗಳು ನೆನಪಾದವು. ಅರ್ಚಕರು “ಹೇಗಿದ್ದಾರಪ್ಪಾ ಶಾಸ್ತ್ರಿಗಳು?” ಎಂದು ಕೇಳಿದರು. ಅವರು ಶಯ್ಯಾಶ್ರಿತರಾಗಿರುವ ಸಂಗತಿ ಹೇಳಲು ಮನಸ್ಸು ಬಾರದೆ ಆರೋಗ್ಯವಾಗಿದ್ದಾರೆ ಎಂದು ಹೇಳಿಬಿಟ್ಟೆ. ಅವರು ಸದಾ ಸುಖವಾಗಿರಲಪ್ಪಾ… ಮಹಾನುಭಾವರು ಅವರು… ಅವರ ಆಶೀರ್ವಾದದಿಂದಲೇ ನಾನು ಈ ಮಟ್ಟ ತಲುಪಿರುವುದು. ಯಜುರ್ವೇದಿ ರಾಮಾನುಜರು ಒಮ್ಮೆ ಬಂದು ದರ್ಶನ ತಗೋತಾರಂತ ತಿಳಿಸಪ್ಪಾ…” ಎಂದು ಹೇಳಿದರಲ್ಲದೆ ವಿಶೇಷ ಪ್ರಸಾದದ ಪೊಟ್ಟಣಗಳನ್ನು ಕೊಟ್ಟರು. ಹಾಗೆಯೇ ನಮ್ಮ ವಸತಿಗೆ ಹೇಮಾದ್ರಿ ಮೇಲಿದ್ದ ವಿಶ್ರಾಂತಿ ಗೃಹದಲ್ಲಿ ಅವಕಾಶ ಮಾಡಿಕೊಟ್ಟರು. ದೇವಿ ಸಾನಿಧ್ಯದಲ್ಲಿ ಐಷಾರಾಮವಾಗಿ ಇರೋದು ಬೇಡಾರೀ ಎಂದು ಮೊದಮೊದಲು ತಕರಾರೆತ್ತಿದರೂ ವರಲಕ್ಷ್ಮಿ ಹೇಮಾದ್ರಿ ಏರಲು ಒಪ್ಪಿದಳು.

ಮೂರು ಕೋನೆಗಳುಲ್ಲ ಒಂದೊಂದು ಸೂಟ್ ನಾವು ನಿರೀಕ್ಷಿಸಿದ್ದಂಕ್ಕಿಂತ ಹೆಚ್ಚು ಸುಸಜ್ಜಿತವಾಗಿತ್ತು. “ನಿಮ್ಮ ಲೈಂಗಿಕ ಶಕ್ತಿ ನೂರ್ಮಡಿಗೊಳಿಸಲು ಇದೇ ‘ಅರ’ ಬ್ರಾಂಡಿನ ಮಿಕ್ಸ್‌ಗಳನ್ನೇ ಉಪಯೋಗಿಸಿರಿ” ಎಂಬ ಪೋಸ್ಟರ್ಸ್‌ಗಳನ್ನು ಕಿತ್ತು ಹರಿದು ತುಂಗೆಯ ಕಡೆ ತೂರಿದೆ. ಕಿತಕಿಗಳಾಚೆ ಸಹ್ಯಾದ್ರಿ ಸಾಲು ಅತಿ ಮನೋಹರವಾಗಿ ಕಾಣಿಸುತ್ತಿತ್ತು. ಗಾಳಿ ಹಿತವಾಗಿ ಸಂಚರಿಸುತಿತ್ತು. ನಾನಾ ಪಕ್ಷಿಗಳು ತೀರ ಹತ್ತಿರದಲ್ಲಿ ಬಂದು ಕೂತು ಹಾಡುತ್ತಿದ್ದವು. ಮಂಚದಮೇಲಿದ್ದ ಹಾಸಿಗೆ ಹಂಸತೂಲಿಕಾತಲ್ಪಕ್ಕಿಂತ ಏನು ಕಡಿಮೆ ಇರಲಿಲ್ಲ. ಅಮೆರಿಕನ್ ಶೈಲಿಯ ಹಾಗೂ ಭಾರತೀಯ ಶೈಲಿಯ ಕಕ್ಕಸ್ಸು ಕೋಣೆಗಳಲ್ಲಿ ಉಪಯೋಗಿಸಲ್ಪಟ್ಟ ಕೆಲವು ನಿರೋಧ್‌ಗಳು ಒದ್ದೆ‌ಒದ್ದೆಯಾಗಿ ಬಿದ್ದಿದ್ದವು. ಅವುಗಳ ಅನುಭವಕ್ಕೆ ಅಕ್ಷರ ರೂಪ ಕೊಡುವ ರೀತಿಯಲ್ಲಿ ಜಾರುವ ಗೋಡೆ ಮೇಲೆ ಲೈಂಗಿಕ ಕ್ರಿಯೆ ಬಗ್ಗೆ ಕೆಟ್ಟದಾಗಿ ಅಶ್ಲೀಲವಾಗಿ ಬರೆಯಲಾಗಿತ್ತು. ಅವುಗಳಿಂದಲಾದರೂ ಸ್ಪೂರ್ತಿ ಪಡೆಯಲೀಕೆ ಎಂಬ ಕಾರಣದಿಂದ ನಾನವನ್ನು ಅಳಿಸುವ ಗೋಜಿಗೆ ಹೋಗಲಿಲ್ಲ. ಆದರೆ ಅವ್ಯಾವೂ ಆ ಪತಿವ್ರತೆಯ ಮೇಲೆ ಯಾವ ಪರಿಣಾಮ ಬೀರಲಿಲ್ಲ. ಇತ್ತೀಚಿನ ಅಪರೂಪದ ಸಂಶೋದನೆಗಲಲ್ಲಿ ನಿರೋಧ್ ಕೂಡ ಒಂದು ಎಂಬ ಪರಿಜ್ಞಾನ ಇದ್ದಂತಿಲ್ಲ ಈಕೆಗೆ. ನಮ್ಮ ತಾತನವರ ಮೆಲಿನ ಪೂಜ್ಯ ಭಾವನೆಯಿಂದಲ್ಲವೆ ನವ ವಿವಾಹಿತರಾದ ನಾವೀರ್ವರು ಸಮುದ್ರ ಮಟ್ಟಕ್ಕಿಂತ ಎತ್ತರದಲ್ಲಿ ನಿರ್ವಿಘ್ನವಾಗಿ ಕ್ರೀಡಿಸಲಿ ಎಂದಲ್ಲವೆ ಯಜುರ್ವೇದಿಯವರು ಇಂಥ ಸುಂದರವಾದ ಭವನ ಕಲ್ಪಿಸಿಕೊಟ್ತಿರುವುದು! ಆ ಕ್ರಿಯೆಗೆ ನಾನವಳನ್ನು ಎಳೆಯಲೆತ್ನಿಸಿ ಮುಖಭಂಗ ಮಾಡಿಸಿಕೊಂಡೆ. ಪ್ರಕೃತಿಯ ಯಾವ ಭಾಗಕ್ಕೂ ಆಕೆಯಲ್ಲಿ ಆಸೆ ಆಕಾಂಕ್ಷೆಗಳನ್ನು ಉದ್ದೀಪಿಸುವ ಶಕ್ತಿ ಇಲ್ಲವೆಂದುಕೊಂಡೆ. ನನಗೆ ನಮ್ಮ ತಾತನವರ ಮೆಲೆ ಹುಲಿಗುಡ್ಡದಷ್ಟು ಗಾತ್ರದ ಸಿಟ್ಟು ಬಂದಿತು. ಅಸಹಾಯಕತೆಯಿಂದ ಕುಗ್ಗಿ ಹೋದೆ. ಇಷ್ಟೂ ಸಾಲದೆಂಬಂತೆ ಊಟ, ತಿಂಡಿ, ನೀರು ನಿಡಿ ಇತ್ಯಾದಿ ವಿಷಯಗಳ ಬಗೆಗೂ ಸುಗ್ರೀವಾಜ್ಞೆ ಜಾರಿ ಮಾಡಿದ್ದಳು. ಆವತ್ತು ಸತಿಯಾದವಳು ಏಕಾಗ್ರತೆಯಿಂದ, ಮಡಿಯುಡಿಯಿಂದ ಒಪ್ಪತ್ತಿದ್ದು ಖಾಲಿ ಹೊಟ್ಟೆಯಲ್ಲಿರುವ ತನ್ನ ಪತಿಪರಮೇಶ್ವರನ ಪಾದಗಳಿಗೆ ಸಾವಿರದಾ ಒಂದು ಪುಜೆ ಸಲ್ಲಿಸಿದ್ದಲ್ಲಿ ಅಲೌಕಿಕವಾದ ಆನಂದ ಲಭಿಸುವುದೆಂದು ಹಿಂದಿನ ರಾತ್ರಿ ಅಷ್ಟು ದೂರ ಮಲಗಿಕೊಂಡೇ ಹೇಳಿದ್ದಳು. ಇಂಥ ಸದರಿ ಪೂಜೆಯಿಂದ ದಾಂಪತ್ಯ ಬಿಗಿಗೊಳ್ಳೂವುದೆಂದೂ; ಗಂಡನಾದವನು ಪರಸ್ರೀಯತ್ತ ಕಣ್ಣೆತ್ತಿ ನೋಡುವುದಿಲ್ಲವೆಂದೂ ಆಕೆ ಪರೋಕ್ಷವಾಗಿ ಗೊಣಗಿಕೊಂಡಿದ್ದಳು… ಜೀವನದಲ್ಲಿ ಮೊಟ್ಟಮೊದಲ ಬಾರಿಗೆ ಬೇಸರದಿಂದ ಒದ್ದಾಡಿದೆ. ಪೂಜ್ಯರಾದ ಶಾಸ್ತ್ರಿಗಳ್ನ್ನೂ; ಮಾತೋಶ್ರೀ ಅಲುಮೆಲಮ್ಮನವರನ್ನೂ ಮನಸಾರೆ ಶಪಿಸಿದೆ… ನನ್ನ ಬದುಕಿನಲ್ಲಿ ಲೈಂಗಿಕ ಅನುಭವವನ್ನು ಸ್ವಾದಿಷ್ಟವಾಗಿ, ಸಲೀಸಾಗಿ ಅನುಭವಿಸಲಾಗಲಿಲ್ಲವೆಂದ ಮೇಲೆ ಈ ಅನುಕೂಲಗಳಿಗೆ ಬೆಂಕಿ ಹಚ್ಚಲಿ ಎಂದು ಶಾಪ ಹಾಕುವುದು ಅನಿವಾರ್ಯವಲ್ಲವೆ? ನನ್ನ ಪಾಡಿಗೆ ನಾನಿರಲಿಕ್ಕೂ ಬಿಡುತ್ತಿಲ್ಲ ಈಕೆ… ಸೂತ್ರದ ಗೊಮ್ಬೆಯಂತೆ ತನ್ನ ಮೂಗಿನ ನೇರಕ್ಕೆ ಕುಣಿಸುತ್ತಲೆ ಇರುವಳು. ಇನ್ನೆನು ಅತ್ತೇ ಬಿಡುವನೆಂಬಂತೆ ಮುಖ ಮಾಡಲು “ಇದೆಲ್ಲ ನಿಮ್ಗೆ ಒಳ್ಳೇದಾಗ್ಲೀ ಅಂತ… ಹುಟ್ಟುವ ಮಕ್ಕಳು ಆಯುರಾರೋಗ್ಯದಿಮ್ದ ಬಾಳಲಿ, ಬದುಕಲೀ ಅಂತ ಕಣ್ರೀ ನಾನೀ ಪೂಜೆ ಪುನಸ್ಕಾರ ವ್ರತ ಇತ್ಯಾದಿ ನಿಯಮಗಳನ್ನು ಪಾಲಿಸ್ತಿರೋದು.” ಎಂದು ನನಗೆ ಸಮಾಧಾನ ಹೇಳುವ ಪ್ರಯತ್ನ ಮಾಡಿದಳು. ಯಜ್ಜೀವ್ಯತೇ ಕ್ಷಣಮಪಿ ಪ್ರಥಿತಂ ಮನುಷ್ಯೆಃ ವಿಜ್ಞಾನ ಶೌರ್ಯ ವಿಭವಾರ್ಯ ಗುಣೈಃ ಸಮೇತಂ ಎಂದು ತಾತನವರು ನನ್ನ ಬಗ್ಗೆ ಹೇಳುತ್ತ ಸದಾಚಾರಿಯೂ ಸುಸಂಪನ್ನನೂ ಆದ ನಮ್ಮ ಮೊಮ್ಮಗನಾದ ಶಾಮನು ಕಟ್ಟಾ ಸಂಪ್ರದಾಯವಾದಿಯೂ; ವ್ರತೋಪಾಸಕನೂ ಆಗಿ ಆಚಂದ್ರಾರ್ಕವಾಗಿ ಬೆಳಗುವನೆಂದು ಹೇಳುತ್ತಿದ್ದುದು ನೆನಪಿಸಿಕೊಂಡರೆ ನಗು ಬರುತ್ತದೆ. ಅದಕ್ಕೆಂದೇ ಅವರು ಸಂಪ್ರದಾಯ ಮಡಿವಂತಿಕೆಯನ್ನು ಕಟ್ಟುನಿಟ್ಟಾಗಿ ಪಾಲಿಸುವ ಕನ್ಯೆಯನ್ನು ಹುಡುಕಿ ನೂರೊಂದು ವಿಘ್ನಗಳ ನಡುವೆ ಮದುವೆ ಮಾಡಿರುವುದು. ನಿಷೇಕದ ರಾತ್ರಿಯೆಂದೆ ನನ್ನ ಬದುಕಿನ ಪತನ ಆರಂಭವಾಯಿತೆಂದು ಒಂದೆರಡು ದಶಕ ಕಳೆದ ನಂತರ ನಾನು ಹೇಳಬಹುದು ಎಂದುಕೊಂಡೆ. ಆಕೆ ಹೊಡೆದು ಶಿಕ್ಷಿಸುವುದಿರಲಿ, ಗದರಿಸಲೂ ನನ್ನಿಂದಾಗಲಿಲ್ಲ. ಎಲ್ಲ ಹಿಂಸೆಗಳನ್ನು ಮೌನವಾಗಿ ಸಹಿಸಿಕೊಂಡೆ. ನನಗೆ ಹಸಿವೆ ಬಾಯಾರಿಕೆ ಅರ್ಥವದದೇ ಆಕೆ ಪೂಜೆಯಲ್ಲಿ ತನ್ಮಯಳಾಗಿದ್ದಾಗ… ದೈವೀ ಭಕ್ತಿಯ ಪ್ರಕಮ್ಪನಗಳನ್ನು ಪ್ರಕಟಿಸುತ್ತಿದ್ದ ಆಕೆಯ ಬಗ್ಗೆ ಬೇಸರಪಟ್ಟುಕೊಳ್ಳಲೂ ನನ್ನಿಂದ ಆಗಲಿಲ್ಲ. ತುಟಿ ಕಚ್ಚಿ ಸಹಿಸಿಕೊಂಡೆ. ಪಾದ ಪೂಜೆ ಒಂದೂವರೆ ಗಂಟೆ ಮುಂದುವರೆದ ಹೊತ್ತಿನಲ್ಲಿ ಜವ್ವು ಗಟ್ಟಿ ನನ್ನ ಕಾಲೊಳಗಿಂದ ಅಸಹನೀಯವಾದ ನೋವು ಒಡಮೂಡಿತು. ಅದೆಲ್ಲ ಮುಗಿದ ನಂತರವೂ ಆಕೆ ನನ್ನನ್ನು ಪ್ರಸಾದ ನಿಲಯಕ್ಕೆ ಹೋಗಲು ಬಿಡಲಿಲ್ಲ. ದೂರದಲ್ಲಿದ್ದ ಅಡುಗೆ ವಿಭಾಗದಿಮ್ದ ಸಾಂಬಾರಿನ ವಾಸನೆ ಅಲೆ‌ಅಲೆಯಾಗಿ ಬಂದು ನನ್ನ ಮೂಗನ್ನು ಮೋಹಪಾಶದಿಂದ ಬಂಧಿಸಿತ್ತು. “ಇನ್ನೇನು ಎರಡನೇ ಪಂಕ್ತಿ ಶುರುವಾಗುವ ಹೊತ್ತು ಹೋಗೋಣ, ಹೊಟ್ಟೆ ಹಸಿದಿದೆ” ಎಂದು ಚಿಕ್ಕ ಮಗುವಿನಂತೆ ಗೋಗರೆದರೂ ಪ್ರಯೋಜನವಾಗಲಿಲ್ಲ. “ರ್ರೀ… ಇವತ್ತು ಶುಕ್ರವಾರ… ದೇವಿ ಸನ್ನಿಧಿಯಲ್ಲಿ ಉಪವಾಸ ವ್ರತ ಮಾಡಿದ್ರೆ ಪುಣ್ಯ ಲಭಿಸ್ತದೆ… ನೀವು ಊಟ ಮಾಡಿದ್ರೀ ಅಂದರೆ ನಿಮ್ಮ ಏಳಿಗಾಗಿ ಕೈಕೊಂಡ ವ್ರತ ನಿಷ್ಫಲವಾಗ್ತದೆ… ನಿಮಗೆ ಹಸಿವು ತಡೆದುಕೊಳ್ಳಲಗದಿದ್ರೆ ದೇವಿಪ್ರಸಾದ ಸ್ವೀಕರಿಸಿ ಅದೂ ಒಂದೇ ಒಂದು ಬಾಳೆಹಣ್ಣು ಮಾತ್ರ…” ಎಂದು ಕಡಿವಾಣ ಬಿಗಿಗೊಳಿಸಿದಳು. ಮೈ ಪರಚಿಕೊಳ್ಳುವಷ್ಟು ಸಿಟ್ಟು ಬಂದಿತಾದರೂ ಸಹಿಸಿಕೊಂಡೆ. ಒಂದು ಆಷ್ಚರ್ಯದ ಸಂಗತಿ ಎಮ್ದರೆ ಒಂದು ಹಿಡಿ ಅನ್ನ, ಒಂದು ಹನಿ ನೀರು ಮುಟ್ಟದಿದ್ದರೂ ವರಲಕ್ಷ್ಮಿ ಹೆಚ್ಚು ಲವಲವಿಕೆಯಿಂದ ಇದ್ದಳು. ಹೀಗೆ ದೇಹ ದಂಡಿಸಿಕೊಳ್ಳುತ್ತ ಹೋಗುವ ಈಕೆ ಮುಂಬರುವ ವರ್ಷಗಳಲ್ಲಿ ಹೆಚ್ಚು ಕುರೂಪಿಯಾಗುವುದರಲ್ಲಿ ಸಂಶಯವಿಲ್ಲವೆಂದುಕೊಂಡೆ.

ರಾತ್ರಿಯಾಗುತ್ತಿದ್ದಂತೆ ತಾತಂದಿರ ನೆನಪು ಬಿರುಗಾಳಿಯೋಪಾದಿಯಲ್ಲಿ ಬೀಸಿ ಹಿಂಸಿಸತೊಡಗಿತು. ಅವರನ್ನು ಆ ಸ್ಥಿತಿಯಲ್ಲಿ ಬಿಟ್ಟು ಬರಬಾರದೆಂದುಕೊಂಡೆನು. ಇತ್ತೀಚಿನ ದಿನಗಳಲ್ಲಿ ನಿಷ್ಕ್ರಿಯರಾಗುತ್ತಿರುವ ಅವರ ಮನಸ್ಸಿನಲ್ಲಿ ಏನಿರುವುದೋ ಬಲ್ಲವರಾರು? ಅವರು ಬರೆದಿಟ್ಟಿರುವಲೆನ್ನಲಾದ ವೀಲುನಾಮದೊಲಗೆ ನನ್ನ ಬದಲಾದ ನಡುವಳಿಕೆಗಳ ಕುರಿತು ಸುಧೀರ್ಘವಾಗಿ ಪ್ರಸ್ತಾಪಿಸಿರಬಹುದು. ಅದು ಭಾರತದ ಸಂವಿಧಾನಕ್ಕಿಂತ ಮತ್ತು ಭಾರತೀಯ ದಂಡ ಸಂಹಿತೆಗಿಂತ ಏನು ಕಡಿಮೆ ಇರಲಿಕ್ಕಿಲ್ಲ… ಗಂಡನನ್ನು ನಿರ್ಜೀವ ಪೂಜಾ ವಿಗ್ರಹದಂತೆ ಪರಿಭಾವಿಸಿರುವ ಹೆಂಡತಿ ವರಲಕ್ಷ್ಮಿಗೂ ಒಂದು‘ವೀಲುನಾಮ’ವನ್ನು ಊರು ತಲುಪಿದ ಮೇಲೆ ಬರೆದಿಡಬೇಕೆಂದುಕೊಂಡೆ… ಇನ್ನು ಮಧುಚಂದ್ರವೆಂಬ ನರಕಯಾತನೆಯನ್ನು ಸಾಕು ಮಾಡಿಕೊಂಡು ಸ್ವಾಸ್ಥಿಗ್ರಾಮವಾದ ಕೊಟ್ಟೂರು ಕಡೆ ಪ್ರಯಾಣ ಬೆಳೆಸಿಬಿಡಬೇಕು… ಕೊಲ್ಲೂರಿಗೆ ಹೋಗಿ ಮೂಕಾಂಬಿಕೆಯನ್ನೂ, ಹೊರನಾಡಿಗೆ ಹೋಗಿ ಅನ್ನಪೂರ್ಣೇಶ್ವರಿಯನ್ನೂ; ಮೈಸೂರಿಗೆ ಹೋಗಿ ಚಾಮುಂಡೇಶ್ವರಿಯನ್ನೂ ದರ್ಶಿಸಿ ವ್ರತೋಪಾಸನೆ ಮಾಡಿ ವೈವಾಹಿಕ ಬದುಕನ್ನು ಶಕ್ತಿಯುತಗೊಳಿಸಬೇಕೆಂದು ಯೊಜನೆ ಹಾಕಿಕೊಂಡಿರುವ ಶ್ರೀಮತಿ ವರಲಕ್ಷ್ಮಿ ಅಷ್ಟು ಸುಲಭವಾಗಿ ಊರಿಗೆ ಹೊರಡುವ ಪೈಕಿಯಲ್ಲ… ಇದಕ್ಕೇನಾದರೂ ಬಲವಾದ ಕಾರಣ ಬೇಕು… ಅದನ್ನು ಹುಡುಕುವುದು ಸುಲಭ ಸಾಧ್ಯ ಸಂಗತಿಯಲ್ಲ… ಆ ತುಮಕೂರಿನ ಅಡಿಕೆ ಮಂಡಿ ವರ್ತಕರೂ ಧರ್ಮ ರತ್ನಾಕರ ಬಿರುದಾಂಕಿತರೂ ಆದ ಕಲ್ಕೆರೆ ಚಿಕ್ಕಣ್ಣಯ್ಯನವರು ಕಟ್ತಿಸಿದ ಆ ಭವನವನ್ನೇ ಅಮ್ಮನವರ ದೇವಾಲಯವೆಂದು ಭಾವಿಸಿ ಕೈಯಲ್ಲಿ ಜಪಮಾಲೆ ಹಿಡಿದುಕೊಂಡು ಕೂತಿದ್ದ ವರಲಕ್ಷ್ಮಿ ನನ್ನ ಕೈಗೆ ತೊಡಿಸಲಟ್ಟಿರುವ ಕಂದಾಚಾರದ ಶೃಂಖಲೆ ಹರಿದೆಸೆಯಲು ತಪಸ್ಸು ಮಾಡುತ್ತಿರುವಂತೆ ಕಂಡುಬಂದಿತು. ಕಮಲಾಕರನಿಗೆ ಫೋನ್ ಮಾಡಿ ಕ್ಷೇಮ ಲಾಭ ವಿಚಾರಿಸುವುದರ ಜೊತೆಗೆ ತುಸು ಸ್ವಾಂತನ ಪಡೆಯಬೇಕೆಂದು ನಾನು ಅಲ್ಲಿಂದ ಎದ್ದೆ. “ಎಲ್ಲಿಗ್ರೀ ಹೊರಟ್ರೀ… ಶ್ರೀ ಲಲಿತ ಸಹಸ್ರನಾಮ ಪಠಿಸ ಬಾರ್‍ದೇನು? ಹ್ಹೂ! … ಹೋಗ್ರಿ ಲಗೂನ ಬರ್ರಿ… ಹೊರಗಡೆ ಬೀಗ ಹಾಕ್ಕೊಂಡು ಹೋಗ್ರಿ… ಕಾಲ ಸುಮಾರೈತೆ…” ಎಂದು ಮತ್ತೆ ತಪೋ ಮಗ್ನಳಾದಳು.ಋತುಮತಿಯಾಗಿ ಹತ್ತು ಹನ್ನೆರಡು ವರ್ಷಗಳಾದರೂ ಒಂಚೂರಾದರೂ ರಸಿಕತೆ ರೂಢಿಸಿಕೊಳ್ಳಲಿಲ್ಲವಲ್ಲ ಎನ್ನಿಸಿತು. ಇಂಥವರು ಸಮೂಹ ಮಾಧ್ಯಮಗಳ ಪಾಲಿಗೆ ಯಕ್ಷಪ್ರಶ್ನೆಗಳಾಗಿ ಉಳಿದು ಬಿಡುತ್ತಾರೆ. ಈಕೆಯೊಳಗೆ ತನ್ನ ವ್ಯಕ್ತಿತ್ವದ ಒಂದಂಶವನ್ನು ಗುರುತಿಸಿಯೇ ತಾತನವರು ನನ್ನಹೆಂಡತಿಯಾಗಿ ಮನೆ ತುಂಬಿಸಿಕೊಂಡಿರಬೇಕು. ಅಥವಾ ತಮ್ಮ ಮಗ ಅಂದರೆ ನನ್ನ ತಂದೆಯ ಅವಿಧೇಯತೆ ವಿರುದ್ಧ ನನ್ನ ಮೂಲಕ ಅವರು ಬಂಡೆದ್ದಿರಬೇಕು. ಮದುವೆಯಾಗಿ ತಿಂಗಳು ತುಂಬುವ ಮೊದಲೆ ಇಷ್ಟೊಂದು ಬೇಸರ ಹುಟ್ಟಿಸಿರುವ ಈ ಸಾದ್ವಿ ಮುಂಬರುವ ವರ್ಷಗಳಲ್ಲಿ ಯಾವ ಪ್ರಕಾರದ ತಲೆನೋವುಗಳನ್ನು ಘೋಷಿಸುವಳೋ! ಹಸಿದಿರುವುದರಿಂದ ಕಾಲ ಮೀನಖಂಡಗಳು ದುರ್ಬಲವಾಗಿರುವಂತೆ ತೋರಿತು. ಬಾಗಿಲು ಮುಚ್ಚಿ ಅದಕ್ಕೆ ಮೊಖ್ತೇಸರರು ಕೊಟ್ಟಿದ್ದ ಬೀಗ ಜಡಿದು ಹೊರ ಹೊರಟೆ. ಇಕ್ಕೆಲಗಳಲ್ಲಿದ್ದ ಗಿಡಗಂಟೆಗಳ ನಡುವೆ ಇದ್ದ ಮೆಟ್ಟಿಲುಗಳನ್ನು ಇಳಿದು ಹೇಮಾದ್ರಿ ದಾಟಿದೆ. ಯಾಕೋ ಏನೋ ಎದೆಯೊಳಗೆ ಸೆಳವು ಕಾಣಿಸಿಕೊಂಡಿತು. ಅದರೊಟ್ಟಿಗೆ ಜಲಜಾಕ್ಷಿ ಶಾಲೆಯ ಆಟದ ಮೈದಾನದಲ್ಲಿ ನನ್ನ ಮೇಲೆ ಬೋರಲು ಬಿದ್ದು ನನ್ನ ತಣ್ಣನೆಯ ಶಿಶ್ನದೊಳಗೆ ಏಳು ಸುತ್ತಿನ ಕೋಟೆ ನಿರ್ಮಿಸಿದ್ದು ನೆನಪಾಯಿತು… ಅದರೊಟ್ಟಿಗೆ ರುದ್ರನಾಯಕನ ಮಗಳು ಅನಸೂಯಳ ನಿಷ್ಕಲ್ಮಷ ಪ್ರೇಮ ನೆನಪಾಯಿತು. … ಅದರೊಟ್ಟಿಗೆ ಆಕೆಯನ್ನು ಬೆಟ್ಟಿಮಾಡಲಿಕ್ಕೆಂದು ಬೆಂಗಳೂರಿಗೆ ಹೋಗಿದ್ದಾಗ (ಎಲಾ… ಕುಂವೀ… ಎಹ್ಟು ಗುಟ್ಟಾಗಿ ಹೋಗಿ ಬಂದರೂ ಆ ನಿಘೂಡ ವ್ಯಕ್ಟಿ ನಾನೇ ಎಂದು ಗುಮಾನಿ ವ್ಯಕ್ತಪಡಿಸಿದೆಯಲ್ಲಾ… ನೀನೇ ಅವಳಿಗೆ ನನ್ನ ಸಫಾರಿ ಸೂಟ್ ಮೂಲಕ ಖಚಿತ ಮಾಹಿತಿ ರವಾನಿಸಿರಬಹುದಲ್ಲವೆ? ಆಗ ನಾನು ಎಷ್ಟೊಂದು ಬುದ್ಧಿವಂತಿಕೆಯಿಂದ ವರ್ತಿಸಿದೆನೆಂಬುದನ್ನು ನೆನಪಿಸಿಕೊಂಡರೆ ನನ್ನ ಬಗ್ಗೆ ನನಗೇ ಹೆಮ್ಮೆ ಮೂದುತ್ತದೆಯೋ ಬೇವಕೂಫ… ನೀನು ಪ್ರಾಣಸ್ನೇಹಿತನೆಂಬ ಸೋಗಿನಲ್ಲಿ ನನ್ನ ಪತನ ಕುರಿತು ಯೋಚಿಸುತ್ತಿದ್ದಿ ಎಂಬುದೂ ಗೊತ್ತು. ನನಗಿಂತ ಆ ಊಸುರುವಳ್ಳಿ ಕಥೆಯ ನಾಯಕನಾದ ಕಮಲಾಕರ ಎಶ್ಟೋ ಮೇಲು… ಇಂಥ ದ್ರೋಹಿಯಾದ ನೀನು ಯಶಸ್ವಿಯಾಗಿ ಒಂದು ವಾಕ್ಯವನ್ನು ಬರೆದರೆ ಜೋಪಾನ) ಒಳ್ಳೆ ಖಾಸಗಿ ಪತ್ತೆದಾರನಂತೆ (ಎನ್.ನರಸಿಂಹಯ್ಯನವರ ಪತ್ತೆದಾರಿ ಕಾದಂಬರಿಗಳನ್ನು ಓದಿರದಿದ್ದರೆ ಇದೆಲ್ಲ ನನ್ನಿಂದ ಸಾಧ್ಯವಾಗುತ್ತಿತ್ತೇನು?) ವರ್ತಿಸಿ ಇಡೀ ಕುಟುಂಬ ಮೂರುನಿದ್ದೆ ಮಾಡದಂತೆ ವರ್ತಿಸಿದ್ದು ಎಲ್ಲ ನೆನಪಾಗುತ್ತದೆ. ಆಮೇಲೆ ನನ್ನ ಮನಸ್ಸು ಹಿಡಿ ಹಿಡಿ ಶಾಪ ಹಾಕಿತು… ಅದು ಬೇರೆ ಪ್ರಶ್ನೆ… ಬಳ್ಳಾರಿಯಂಥ ಜಿಲ್ಲಾ ಮುಖ್ಯ ಸ್ಥಳ ನೋಡಿದ್ದ ನನಗೆ ಬೆಂಗಳೂರು ಪರಿಚಯವಾದದ್ದು ಬ್ಯಾಂಕ್ ಉದ್ಯೋಗಕ್ಕೆ ಸಂಬಣ್ಧಿಸಿದ ತರಭೇತಿ ತರಗತಿಗಳಿಗೆ ತಿಂಗಳು ದಿನಮಾನ ಹಾಜರಾದಾಗ… ಈ ವಿಶಯವನ್ನು ನಾನು ಬೇಕೆಂದೇ ಮುಚ್ಚಿತ್ತಿದ್ದೆ… ತದನಂತರ ನಾನು ನನ್ನ ಪತ್ತೆದಾರಿ ನೈಪುಣ್ಯವನ್ನು ಖಚಿತಪದಿಸಿಕೊಂಡಿದ್ದು.. ಆ ಖಳ ಕುಂವೀಯ ಮನೆಯನ್ನು ಉಪಾಯಾಂತರದಿಂದ ಪ್ರವೇಶಿಸಿ ಅನಸೂಯಳ ವಿಳಾಸ ಪತ್ತೆ ಮಾಡಿದಾಗ… ಆ ಸ್ಪೂರ್ತಿಯಿಂದಾಗಿಯೇ ನಾನು ಮಂತ್ರ್ಲಯಕ್ಕೆ ಹೋಗಿ ಗುರುಸಾರ್ವಭೌಮರ ದರ್ಶನ ಪಡೆದು ಬರುತ್ತೇನೆಂದು ಮನೆಯಲ್ಲಿ ಸುಳ್ಳು ಹೇಳಿ ಗುಟ್ಟಾಗಿ ಬೆಂಗಳೂರಿಗೆ ಪ್ರಾಯಾಣ ಬೆಳೆಸಿದ್ದು.

ಬಸ್ಸಿನಲ್ಲಿ ಮುಂದಿನ ಸೀಟಿನಲ್ಲಿ ಕೂತಿದ್ದ ಮಧ್ಯವಯಸ್ಕ ಮಹಿಳೆಯ ಅಂಡು ಸವ್ರಿದ್ದು ಆಕೆ ಕಾಲು ಹಿಗ್ಗಲಿಸುವ ಹೊತ್ತಿಗೆ ನಾನು ಸಂಪೂರ್ಣ ಸ್ಖಲಿಸಿ ಕೋ ದದರ್ಶ ಪ್ರಥಮಂ ಜಾಯಮಾನಮಸ್ಥನ್ವನ್ತಂ ಯದಾನಸ್ಥಾ ಬಿಭರ್ತಿ ಭೂಮ್ಯಾ ಅಸುರ ಸೃಗಾತ್ಮಾ ಕ್ವಸ್ಮಿತ್ ಕೋ ವಿದ್ವಾಂಸಾಮುಪಗಾಗಾತ್ ಪ್ರಸ್ಟುಮೇತತ್ (ಮೂಲ ಪುರುಷರು ಹುಟ್ಟಿದ್ದನ್ನು ಯಾರು ಕಂಡಿದ್ದಾರೆ? ಎಲುಬುಳ್ಳ ಇದಕ್ಕೆ ಎಲುಬಿಲ್ಲದ ಯಾವುದು ಆಸರೆ! ರಕ್ತ ಉಸಿರು ರೂಪ ಪಡೆದಿದ್ದೇ ಭೂಮಿಯಿಂದ, ಆದರೆ ಆತ್ಮ ಎಲ್ಲಿ? ಇದನ್ನು ತಿಳಿಯಲು ಆ ವಿದ್ವಾಂಸನ ಬಳಿಗೆ ಹೋದವರು ಯಾರು? ಎಂಬ ಋಗ್ವೇದದ ಅಲ್ಪಸ್ತವ ಶ್ಲೋಕವನ್ನು ಪಠಿಸುತ್ತ ಹಾಗೆ ನಿದ್ದೆ ಹೋದದ್ದು. ಚುಮುಚುಮು ನಸುಕಿನಲ್ಲಿ ಆ ಮಾಯಾವಿ ನಗರದಲ್ಲಿಳಿದಾಗ ಆಟೋದವನಿಗೆ ಸೀದ ನ್ನ್ಯೂ ತರಗುಪೇಟೆಯ ಮಹಾಲಕ್ಷ್ಮಿ ಲಾಡ್ಜಿಗೆ ಬಿಡು ಅಂತ ಹೇಳಿದಾಗ ಅವನು ನಖಶಿಖಾಂತ ನನ್ನ ನೋಡಿದ್ದ. ಅದೇ ಲಾಡ್ಜನ್ನು ನಾನು ಸೂಚಿಸಿದ್ದಕ್ಕೆ ಕಾರಣ ಇಲ್ಲದಿಲ್ಲ. ತರಬೇತಿಗೆಂದು ಬಂದಿದ್ದಾಗ ಸಹಪಾಠಿ ಚಂದ್ರಶೇಖರನು ತರಗುಪೇಟೆಯ ಮಹಿಳೆಯನ್ನು ಸುಖಿಸಿದ್ದಾಗಿಯೂ ಹೇಳಿದ್ದ. ‘ಥೂ ಛೀ’ ಎಂದು ನಾನು ಪ್ರತಿಕ್ರಿಯಿಸಿದ್ದರೂ ನಾನು ಆ ಲಾಡ್ಜಿನ ಬಗ್ಗೆ ಕನಸು ಕಾಣುತ್ತಿದ್ದೆ. ಹಗಲೆಲ್ಲ ನಿರ್ಮಾನುಷವಾಗಿರುವ ಆ ಲಾಡ್ಜು ಬಹು ದಿನಗಳ ಹಿಂದೆ ಮೈಸೂರು ಮಹಾರಾಜರ ಬಳಿ ದಿವಾನರಾಗಿದ್ದವರೊಬ್ಬರು ತಮ್ಮ ಬೆಂಗಳೂರು ಬಿಡದಿಗೆಂದೇ ಅದನ್ನು ಕಟ್ಟಿಸಿದರಂತೆ. ದಿವಾನ ಪದವಿ ಕಳೆದುಕೊಂಡ ಮೇಲೆ ಗುಹ್ಯರೋಗದಿಂದ ಬಳಲುತ್ತಿದ್ದ ಅವರು ಲೈಂಗಿಕ ಶಕ್ತಿ ಕಳೆದುಕೊಂದು ವಿಲವಿಲನೆ ಒದ್ದಾಡುತ್ತಿದ್ದರಂತೆ… ಈಗಿನ ಸಕ್ರಿಯ ರಾಜಕಾರಣಿಯಾಗಿರುವ ಮಾಜಿ ಸಿನಿಮಾ ನಟಿಯೋರ್ವಳ ಮುತ್ತಜ್ಜಿ ಅಂಡಾಳಮ್ಮ “ನಿಮ್ಮ ಲೈಂಗಿಕ ಶಕ್ತಿ ಉದ್ದೀಪಿಸಿದರೆ ಈ ಬದಪಾಯಿಗೇನು ಕೊಡುವಿರಿ” ಅಂತ ಕೇಳಿದಳಂತೆ. ಆಗ ಮಾಜಿ ದಿವಾನರು ಹಾಗೆ ಮಾಡಿದ್ದೇ ಆದರೆ ಈ ನಿನ್ನ ಬಿಡದಿ ಮನೆಯನ್ನೇ ನಿನ್ನ ಹೆಸರಿಗೆ ಮಾಡಿಸಿಕೊಡುವುದಾಗಿ ಮಾತುಕೊಟ್ಟನಂತೆ. ದೇವಿ ಹಗಲಿರುಳು ಪ್ರಯತ್ನಿಸೀ ಪ್ರಯತ್ನಿಸೀ ಮಧ್ಯರಾತ್ರಿ ಪ್ರವೇಶವಾಗುವಂತೆ ಮಾಡುವಲ್ಲಿ ಯಶಸ್ವಿಯಾಗಿ ಮರುದಿನ ಆ ಭವನವನ್ನು ತನ್ನ ಹೆಸರಿಗೆ ನೊಂದಣಿ ಮಾಡಿಸಿಕೊಂಡಳಂತೆ. ಆ ನಂತರ ಅಂಡಾಳಮ್ಮನವರಿಂದ ಆಕೆಯ ಮತ್ತೋರ್ವ ವಿಟನಾದ ಬೆಳಗಾವಿ ಕಡೆಯ ಪ್ರಸಿದ್ಧ ಕುಸ್ತಿ ಪಟು ವಾಗ್ಲೆ ಪಡೆದುಕೊಂಡನಂತೆ. ವಾಗ್ಲೆಯಿಂದ ರಂಗ ನಟಿ ಕುಬೇರಮ್ಮ ಪಡೆದುಕೊಂಡಳಂತೆ… ಕುಬೇರಮ್ಮನಿಂದ ಮಹಾಲಕ್ಷ್ಮಿ ಸಂಗೀತ ನಾಟಕ ಮಂಡಳಿಯ ಮಾಲೀಕರಾದ ‘ತಿರುಚೆಂದೂರ್ ತ್ರಿವಿಕ್ರಮ ರಾವ್ ಎಂಬುವರಿಗೆ ಹೋಯಿತಂತೆ. ಅವರು ಸಿನಿಮಾ ತೆಗೆಯಲು ಹೋಗಿ ಪಾಪರ್ ಎದ್ದು ಆ ಭವನಕ್ಕೆ ಮಹಾಲಕ್ಷ್ಮಿ ಲಾಡ್ಜ್ ಎಂದು ಹೆಸರಿಟ್ಟರಂತೆ. ನಂತರ ಅವರು ನೂರಾ ಒಂದನೆ ನಂಬರಿನ ಕೋಣೆಯಲ್ಲಿ ಆತ್ಮಹತ್ಯ ಮಾಡಿಕೊಳ್ಳಲು ಆ ಸ್ಥಿರಾಸ್ತಿ ವಿಶಯದಲ್ಲಿ ಅವರು ಮೂವರು ಹೆಂಡಂದಿರ ನಡುವೆ ದೊಡ್ಡ ಕದನವಾಯಿತಂತೆ. ಹಿಂದೂ ವಿವಾಹ ಕಾಯಿದೆ ವಿಧಿಗಳಡಿ ಖಟ್ಲೆ ಇತ್ಯರ್ಥವಾಗುವವರೆಗೆ ಸದ್ರಿ ಲಾಡ್ಜು ಮುವ್ವರ ಅಧೀನದಲ್ಲಿರಬೇಕೆಂದು ಉಚ್ಚ ನಾಯ್ಯಲಯವು ತೀರ್ಪು ಕೊತ್ತಿರುವುದಂತೆ. ಆ ಮುವ್ವರು ವಿಧವೆಯರಿಗೆ ಲಿಂಕ್ ಇರುವ ಬೊಜ್ಜಾ ಪದ್ಮನಾಭಯ್ಯ (ಆರೊಟ್ಟಯ್ಯ ಎಂದೂ ಕರೆಯುವುದುಂಟು) ಭಲೆ ದಿಲಾಸದಿಂದ ನೋಡಿಕೊಳ್ಳುತ್ತಿರುವನು. ಆ ಏರಿಯಾದ ಡಿಸಿಪಿಯವರದ ಹತ್ತಿರ ಸಂಭಂದಿಯಾದ ಅವನು ನಡೆಸುವ ಲಾಡ್ಜಿಗೆ ನಾಡಿನ ಮೂಲೆಮೂಲೆಯಿಂದ ಲಲನಾಮಣಿಗಳು ಬಂದು ‘ಜಯಹೇ ಕರ್ನಾಟಕ ಮಾತೆ’ ಎಂದು ಸಾಮ್ಹಿಕವಾಗಿ ಸುಶ್ರಾವ್ಯವಾಗಿ ಹಾಡುವುದುಂಟು.

ಆ ಲಾಡ್ಜಿನಲ್ಲಿ ನಾ‌ಅನು ವಸ್ತಿ ಮಾಡಿದ್ದು “ಕುಂ. ವೀರಭದ್ರಪ್ಪ ಕಾದಂಬರಿಕಾರ ಕೊಟ್ಟೂರು, ಬಳ್ಳಾರಿ ಜಿಲ್ಲೆ, ಕರ್ನಾಟಕ ರಾಜ್ಯ’ ಎಂದು ಧಾಕಲಿಸಿದ ನಂತರವೇ (ತಿಳಿ ನೀಲಿ ವರ್ಣದ ಲೆಡ್ಜರ್ ಪುಸ್ತಕದ ಎರಡುನೂರಾ ಇಪ್ಪತ್ತೆಂಟನೇ ಪುಟ ನೋಡಿ ಖಾತ್ರಿ ಪಡಿಸಿಕೊಳ್ಳುವುದು… ನಾನು ಮಾಡಲಿರುವ ಗಾಂಚಾಲಿಗೆ ಇವನು ಸಿಕ್ಕಿಬೀಳಲಿ ಎಂಬ ಉದ್ದೇಶದಿಂದ… ಎಲವೋ ಕುಂವೀ… ಹೇಗಿದೆ ನನ್ನ ಪ್ಲಾನು?) ಹಗಲೆಲ್ಲ ಒಂದು ರೌಂಡು ಜಯನಗರದಲ್ಲಿ ಸುತ್ತಿ ಅನಸೂಯಾಳ ತಾಯಿಯ ಕಣ್ಣಿಗೆ ಬಿದ್ದು ಅವತ್ತು ರಾತ್ರಿ ರೂಮು ಸೇರಿಕೊಂಡು ವಿಷ್ಣುಭಟ್ಟ ಉಪಾಧ್ಯಾಯರ ‘ಋಜು ವಿವರಣ’ಗ್ರಂಥವನ್ನು ತಿರುವಿ ಹಾಕುತ್ತಿರುವಾಗ ರೂಂಬಾಯ್ ಓರ್ವನು ಬಂದು, ಹಿಂದೆಲೆ ಕೆರೆಯುತ್ತ ನಿಂತನು. ಅವನು ಬಂದ ಉದ್ದೇಶ ಮನವರಿಕೆಯಾಗಲು ಹೃದಯ ವೇಗವಾಗಿ ಬಡಿದುಕೊಳ್ಳತೊಡಗಿತು. “ಹುಬ್ಬಳ್ಳಿ ಕಡೇದೊಂದು ಪ್ರೆಶ್ ಮಾಲು ಬಂದಿದೆ… ಇನ್ನು ಅನ್‌ಮ್ಯಾರೀಡು… ವ್ ಡಿ ಇಲ್ದೋರಿದ್ರೆ ನೋಡು ಅಂದ್ಲು… ಅದ್ಕೆ ನೀವೇ ಸರಿಯಾದ ಗಿರಾಕಿ ಅಂತ ಬಂದೆ ವೀರಭದ್ರಪ್ನೋರೆ… ರೇಟ್ ಫಿಕ್ಸ್ ಮಾಡಿ ಕಳಿಸಿಕೊದ್ಲೆ” ಎಂದ ಗಿಣಿಯಂತೆ. ಅವನ ಮಾತಿನಲ್ಲಿದ್ದ ನಾಮವಾಚಕ ಕೇಳಿ ನನಗೆ ಹೇಳತೀರದಷ್ಟು ಖುಷಿಯಾಯಿತು.

“ಅಲ್ಲಪ್ಪಾ… ನನ್ನಲ್ಲಿ ಹತಾರು ವೀಡಿಗಳಿವೆ… ನೋಡಿದ್ರೆ ಗೊತ್ತಾಗಲ್ವೆ?” ಎಂದೆ.

ನನ್ನ ಶತ್ರುವಿನ ಪರ್ಸನಾಲಿಟಿಯನ್ನು ಡ್ಯಾಮೇಜ್ ಮಾಡುವ ನಿಮಿತ್ತ! “ಅಯ್ಯೋ… ಅದ್ಯಾಕ್ ಸುಳ್ ಹೇಳ್ತೀರಿ ವೀರಭದ್ರಪ್ನೋರೆ… ನಿಮ್ಮನ್ನು ನೋಡಿದ್ರೆ ಪ್ರೆಷ್‌ನೆಸ್ಸು ಗೊಟ್ಟಾಗ್ತದೆ… ಎಷ್ಟು ಜನ ನಂ ಕೈಲಿ ಆಡ್ತಾರೆ ಎನ್ಕಥೆ… ಮಾಲು ಕಳುಸ್ತೀನಿ… ಆಕೆ ಲೆಕ್ಕಾನ ನ್ ವೇ ಚುಕ್ತಾ ಮಾಡ್ಕೊಳ್ಳಿ… ನನ್ನ ಕೈಗೆ ವನ್ ಹಂಡ್ರಡ್ದು ಹಾಕಿ ಬಿಡ್ರಿ” ಎಂದು ಹಲ್ಲು ಗಿಂಜಿದ. ಕೊಟ್ಟು ಕಳುಹಿಸಿದೆ. ಅವನು ಹೋಗುತ್ತಲೆ ನಾನು ಮೈಗೆಲ್ಲ ಪಾಂಡ್ಸ್ ಪೌಡರು ಲೇಪಿಸಿಕೊಂಡು ಕೂತ ಸ್ವಲ್ಪ ಹೊತ್ತಿನಲ್ಲಿ ತರುಣಿಯೊಬ್ಬಳು ‘ವೀರು’ ಅಂತ ಒಳಗಡೆ ಬಂದಳು. ಜಲಜಲ ಬೆವೆಯತೊಡಗಿದೆ. ಮೈ ತಣ್ಣಗಾಗುತ್ತಿರುವವಂಥ ಅನುಭವ… ಕರೆದು ಕುಳ್ಳರಿಸಿದೆ… ಹೆಸರು ಊರು ಕುಲಗೋತ್ರ ಕೇ‌ಇದೆ… “ಅದ್ಯಾಕಂಗ ಕೇಳಲ್ಯಾಕ ಹತ್ತೀರೀ… ವೀರೂ… ಯಸರಿನಾಗೈತೆ… ನಾವೆಲ್ಲಿರತೀವೋ ನಮ್ಮೂರ್ರೀಯಪ್ಪಾ… ಅದು ಇದು ಕೇಳಿ ಸುಮ್ಮಕ ತೈಮು ವೇಸ್ಟು ಮಾಡಬೇಡ್ರಿ… ಲಗೂನ ರೇಟು ಫಿಕ್ಸು ಮಾಡಿ ಮಾಡೋರು ಅವ್ದೋ ಅಲ್ಲವೋ ಆಟು ಹೇಳ್ರಿ” ಎಂದು ಕಡ್ಡಿ ಮುರಿದಂತೆ ಮಾತಾಡಿದಳು. ಬೇರೆ ದಾರಿ ಗಾಣದೆ ರೇಟು ನಾನೇ ಕೇಳಿದೆ. ಲೈಟಿದ್ರೆ ಐನೂರು… ಲೈಟಾಪೂ ಮಾಡಿದಿರಿ ಅಂದೆ ಮುನ್ನೂರಾ ಐವತ್ತು… ಒಂದೊತ್ತಿಗೆ ದೀಡುನೂರು… ಹೋಲ್‌ನೈಟಿಗೆ ಥವುಜಂಡ್ರೀ” ಎಂದು ಒಂದೇ ಉಸುರಿಗೆ ಆಕೆ ಹೇಳಲು ನಾನು ಕಕ್ಕವಿಕ್ಕಿಯಾದೆನು. ಬಾಯಿ ಒಣಗುತ್ತಿದ್ದರೂ “ನೀನು ಹೇಳಿದ್ದೊಂದೂ ಅರ್ಥವಾಗ್ತಾ ಇಲ್ಲ… ನಾನು ಕಾದಂಬರಿಕಾರ… ಪಕ್ಷಿಗಳು ಅಂತ ಕಾದಂಬ್ರೀನ ಓದೀಯೋ ಇಲ್ವೋ…” ಎಂದು ನಾನು ಹೇಲುತ್ತಿದ್ದಂತೆಯೇ ಆಕೆ “ನಿಮ್ ಕಾದಂಬ್ರೀಗಿಟು ಬೆಂಕಿ ಹಚ್ಚಲಿ ನೀವ್ಯಾರಾದ್ರ ನಂಗೇನ್ರಿ… ಇಲ್ಲದ ಉಸಾಬರಿ ಬಂದ್ ಮಾಡಿ ಮುಂಗಡ ಬಿಸಾಕಿ ಕೆಲಸ ಶುರು… ಮಾಡೋದು ಬಿಟ್ಟು ಏನ್ಯೋನೋ ಮಾತಾಡಲಾಕ ಹತ್ತೀರಲ್ಲ… ಚಲೋ ಕಥಿ ಐತ್ರೀ ನಿಮ್ದೂ…” ಎಂದು ಸಿಡುಕಿದಳು. (ಕುಂ.ವೀರಭದ್ರಪ್ಪನ ಕಾದೆ‌ಅಂಬರಿಗೆ ಮಾತಿನಿಂದ ಬೆಂಕಿ ಹಚ್ಚಿದಳಲ್ಲ… ಅಷ್ಟೇ ಸಾಕು) ನಾನು ಹಾಸಿಗೆ ಕೆಳಗೆ ಕೈ ಇಟ್ಟು ನೂರರ ನೋಟನ್ನು ಕೈಗಿಟ್ಟೆ. ಬಿಕನಾಸಿ ಎಂಬಂತೆ ನನ್ನ ಕಡೆಗೊಮ್ಮೆ ನೋಡಿ ಅದನ್ನು ಮಡಚಿ ಕಿವಿ ಸಂಧಿಯಲ್ಲಿರಿಸಿಕೊಂಡಳು. ಮಿಂಚಿನಂತೆ ಲೈಟಾಪು ಮಾಡಿ ಒಂದೇ ಒಂದು ಶಾಟಾ ಮಲಗಿಕೊಂಡಳು. ಆ ಕ್ಷಣ ನಾನು ಕಾದ ಕಾವಲಿ ಮೆಲಿನ ಕೋಳಿಮರಿಯಂತಾಗಿಬಿಟ್ಟೆ.

ಸಹಸ್ರ ಶೀರ್ಷಾ ಪುರುಷಃ ಸಹಸ್ರಾಕ್ಷಃ ಸಹಸ್ರಪಾತ್| ಸ ಭೂಮಿಂ ವಿಶ್ವತೋ ವೃತ್ತ್ವಾತ್ಯತಿಷ್ಠದ್ದಶಾಂಗುಲಮ್
(ಪುರುಷನು ಸಾವಿರ ತಲೆ ಸಾವಿರ ಕಣ್ಣು, ಸಾವಿರ ಕಾಲುಗಳು ಉಳ್ಳವನು. ಅವನು ಭ್ಮಿಯನ್ನು ಎಲ್ಲ ಕಡೆಯಿಂದಲೂ ಬಳಸಿ ಅದರ ಮೇಲೆ ಹತ್ತು ಅಂಗುಲಗಳು ಬೆಳೆದು ನಿಂತಿದ್ದಾನೆ).

ಆ ಸೂಕ್ತ ಪಠಿಸುವ ಸೊತ್ತಿಗೆ ಇದ್ದುಬದ್ದುನ್ನೆಲ್ಲ ಕಳೆದುಕೊಂಡು ತರಗೆಲೆಯಂತಾಗಿ ಬಿಟ್ಟೆನು. ನನ್ನ ಅವಸ್ಥೆ ನೋಡಿ ಆಕೆ ಎದ್ದು ಕೂತಳು. ಇನ್ನು ಗಾಡಿ ಓಡ್ದಂಗಿಲ್ಲ ಎಂದು ಗೊಣಗಿಕೊಂಡಳು. ಹಲ್ಲಿಯಂತೆ ಲೊಚಗುಟ್ಟಿದಳು. ಕೈಯಿಂದ ಮೋರೆ ಸವರಿದಳು. ಹಣೆ ಮೇಲೆ ಹೂವಿನಂಥ ಮುತ್ತು ಕೊಟ್ಟಳು… ನಂತರ ಆಕೆ ವಾಪಾಸು ಮಾಡಬಂದ ಹಣವನ್ನು ತೆಗೆದುಕೊಳ್ಳಲು ನಾನು ನಿರಾಕರಿಸಿದೆನು. ಕೆಲಸ ಮಾಡ್ಲಿಲ್ಲ ಬುಡ್ಲಿಲ್ಲ… ಸುಮ್ ಸುಮಕ ರೊಕ್ಕ ತಗೊಂಡು… ನಾನ್ಯಾವ ನರಕಕ್ಕೋಗ್ಲೀರ್ರೀ… ತಗೊರ್ರಿ… ನಿಮ್ದು ಬ್ಯಾಟರಿ ಮತ್ತೆ ಚಾರ್ಜು ಆಯಿತಂದ್ರೆ ಏಕ್‌ಸೌ ಬೀಸಕ್ಕ ಬರ್ರಿ” ಎಂದು ಹೇಳಿ ಅವಸರ ಬವಸರದಿಂದ ಹೊರಗಡೆ ಹೋದಳು.

ಆ ಮುತ್ತಿನೊಂದಿಗೆ ನಾನೊಂದಿಗೆ ಸದಾ ಜೀವ್ಂತವಿರುವ ಆಕೆಯನ್ನು ಮರೆಯುವುದಾದರು ಹೇಗೆ? ಮದುವೆ ಆದ ಮೆಲೆ, ಆಕೆ, ಆಕೆಯಂಥವರು ಮನಃಪಟಲದಿಂದ ದೂರವಾಗುತ್ತಾರೆ ಎಂದುಕೊಂಡಿದ್ದೆ. ನಿಜ ಹೇಳ್ಬೇಕೆಂದರೆ ಅವರೆಲ್ಲ ಘಾಡವಾಗಿ ನೆನಪಾಗುತ್ತಿರುವುದೇ ಈ ಸಂಧರ್ಭದಲ್ಲಿ, ಅನಸೂಯಾ… ಜಲಜಾಕ್ಷಿ, ಗಾಯತ್ರಿ (ನಂತರ ರೂಂ ಬ್ಬಯ್ ಆ ತರುಣಿಯ ಹೆಸರು ಹೇಳಿದ್ದ) ಈ ಮುವ್ವರು ಬೇರೆ ಅಲ್ಲ, ಆದಿಶಕ್ತಿ, ಸರಸ್ವತಿ, ಮಹಾಲಕ್ಷ್ಮಿ ಬೇರೆಯಲ್ಲ ಅಂದುಕೊಂಡೆ.

ಇಂಥ ಒಂದೊಂದು ನೆನಪಿನಿಂದ ತಲ್ಲಣಗೊಳ್ಳುತ್ತ ಪುಲಕಗೊಳ್ಳುತ್ತ ಒಂದು ಕ್ಷಣ ಸಾಯುತ್ತ, ಮರುಕ್ಷಣ ಹುಟ್ಟುತ್ತ; ಬಾಡುತ್ತ, ಚಿಗುರುತ್ತ ಹೀಗೆ ಒಂದೊಂದು ಆಯಾಮ ಪಡೆಯುತ್ತ ನಾನು ಊರೊಳಗೆ ಪ್ರವೇಶಿಸಿದೆನು. ಅದು ಊರೆಂದರೆ ಊರು… ಅಲ್ಲೊಂದು ಮನೆ ಇಲ್ಲೊಂದು ಮನೆ… ಸಪ್ತರ್ಷಿಮಂಡಲದಮ್ತಿರುವ ವಿದ್ಯುದ್ದೀಪಗಳ ಬೆಳಕಲ್ಲಿ ಗಾಢ ಹಸಿರ ನೆರಳೊಳಗೆ ಅಡಗಿ ಕೂತಿರುವ ನೂರಾರು ಮನೆಗಳ ಸಮೂಹವನ್ನು ಊರು ಎಂದು ಕರೆಯುವುದಾದರೂ ಹೇಗೆ? ಗುಡಿ ಮುಂದಿರುವ ಶಾಸನದಲ್ಲಿ ಉಲ್ಲೇಖವಾಗಿರ್ಯ್ವಂತೆ ಸದರೀಗ್ರಾಮ ಹನ್ನೆರಡನೇ ಶತಮಾನದಲ್ಲಿ ಐನೂರರ ನಾಡಾಗಿತ್ತಂತೆ… ಕಲಾವಿದ ನೆಲೆವೀಡಾಗಿತ್ತಂತೆ… ಎಲಾ ಅಂತೆ ಕಂತೆ.
ಚಿಲ್ಲರೆ ದುಕಾನು ಮುಚ್ಚಲಿದ್ದವನ ಬಳಿಗೆ ಓಡಿದೆ. ಒಂದು ಸಿಗರೇಟು ಪ್ಯಾಕು ಖರೀದಿಸಿ ಡ್ರಾಯರ ಜೇಬಿನಲ್ಲಿ ಅಡಗಿಸಿಟ್ಟೆ. ಹೊಟ್ಟೆ ಹಸಿದಿದೆ… ಏನಾದ್ರು ತಿನ್ನಲಿಕ್ಕೆಸಿಗುತ್ತದೆಯೇ ಎಂದು ವಿಚಾರಿಸಲಾಗಿ ಆತ ಕೈಚಾಚಿ ತೋರಿಸಿದ… ಅಲ್ಲಿಗೆ ಹೋದೆ. ಅದೊಂದು ಚಿತ್ರಮಂದಿರವಾಗಿತ್ತು. ‘ಅವಳ ರಾತ್ರಿಗಳು’ ಎಂಬ ಲೈಂಗಿಕ ಸಿನಿಮಾ ನಡೆಯುತ್ತಿತ್ತು. ಒಂದು ಭಿತ್ತಿ ಚಿತ್ರದಲ್ಲಿ ತರುಣಿಯೋರ್ವಳು ಧಡೂತಿ ತೊಡೆ ಮೊಲೆಗಳನ್ನು ಪ್ರದರ್ಶಿಸುತ್ತ ನಿಂತಿದ್ದರೆ ಇನ್ನೊಂದು ಭಿತ್ತಿ ಚಿತ್ರದಲ್ಲಿ ಏಳೆಂಟು ಮಂದಿ ತರುಣರು ಆ ಅರೆನಗ್ನ ತರುಣಿಯನ್ನು ಹಿಗ್ಗಾಮುಗ್ಗಾ ಎಳೆದಾಡುವ ಚಿತ್ರ ಇತ್ತು. ‘ಒಬ್ಬ ಬಾಲ್ಕನಿ ಇಪ್ಪತು’ ಎಂದು ಬಂದ… ಅವನ ಕಡೆ ಲಕ್ಷ ಕೊಡದೆ ಮೊಟ್ಟೆಗಳನ್ನು ಇಡ್ಲಿಗಳೆಂದೇ ಭಾವಿಸಿ ತಳ್ಳುವ ಬಂಡಿ ಬಳಿಗೆ ಹೋದೆ. ‘ಇಡ್ಲಿ ಅಲ್ಲ ಮಹಾರಾಯ್ರೆ… ಕೋಳಿ ಮೊಟ್ಟೆ… ಬೆಯಿಸಿದ್ದು ಕೊಡ್ಲೋ… ಆಮ್ಲೆಟ್ ಮಾಡಿ ಬ್ರೆಡ್ಡಿನ ಜೊತೆ ಕೊಡ್ಲೋ” ಅವನ ಮಾತು ಕೇಳಿ ಒಂದು ಕ್ಷಣ ಉಮ್ಮಳಿಸಿ ಬಂದಂತಾಯಿತು. ಮೊಟ್ಟೆ ಸೇವನೆ ಸಮರ್ಥಿಸಿ ಎಂ.ಕೆ.ಗಾಂಧಿ ಆಡಿರುವ ಮಾತುಗಳು ನೆನಪಾದವು. ಹನ್ನೆರಡು ವರ್ಷಗಳ ಕಾಲ ಭೀಕರ ಕ್ಷಾಮ ತಲೆದೋರಲು ಹಸಿವಿನಿಂದ ತತ್ತರಿಸಿ ಚಂಡಾಲ ಗೃಹಂ ಪೊಕ್ಕು ಅಲ್ಲಿದ್ದ ನಾಯಿ ಮಾಂಸವನ್ನು ಕದೆದು ತಿಂದು ಶ್ವಪಚ ಎಂದು ಬಿರುದು ಧರಿಸಿದ ವಿಶ್ವಾಮಿತ್ರ ನೆನಪಾದ. “ಯೋಚಿಸಿ ಏನು ಪ್ರಯೊಜನವಿಲ್ಲ ರಾಯ್ರೆ… ಈ ಸಮಯದಲ್ಲಿ ತಿನ್ಲಿಕ್ಕೆ ಸಿಗೋದು ಇದೊಂದೆ. ಎಂಥೆಂಥೋರೆ ತಿನ್ತಾರೆ… ನೀವೇನು ಮಹಾ… ಕೊಡ್ಲೋ… ಅಂಗಡಿ ಕ್ಲೋಜು ಮಾಡಿಕೊಂಡು ಹೊರಡ್ಲೋ” ಎಂದ ಒಂದೇ ಏಟಿಗೆ. ಒಂದು ಕ್ಷಣ ಮನಸ್ಸು ಹೊಯ್ದಾಡಿತು.

ಗಾಂಧೀಜಿದು ಒತ್ತಟ್ಟಿಗಿರಲಿ – ಅಂಥ ವಿಶ್ವಾಮಿತ್ರನೇ ನಾಯಿ ಮಾಂಸ ತಿಂದಿರುವ ನೆಲದ ಮೇಲೆ ನಾನು ಕೋಳಿಮೊಟ್ಟೆ ತಿಂದು ಹಸಿವೆಯನ್ನು ಯಾಕೆ ತಣಿಸಿಕೊಳ್ಳಬಾರದು ಎಂದು ನಿರ್ಧರಿಸಿ ಆರ್ಡರು ಮಾಡಿದೆ. ಅವನು ಮಾಡಿಕೊಟ್ಟ. ರುಚಿಯಾಗಿದ್ದರೂ ತೊಳಸಿ ಬಂದಂತಾಯಿತು. ಕ್ರಮೇಣ ಹೊಂದಿಕೊಂಡು ಹೊಟ್ಟೆ ತುಂಬಿಸಿಕೊಂಡೆನು. ವಾಸನೆ ಬಾರದಿರಲೆಂದು ಮತ್ತೆ ಸೋಪಿನ ಕಾಳುಗಳನ್ನು ಬಾಯಲ್ಲಿ ಉರುಳಾಡಿಸುತ್ತ ಟೆಲೆಫೋನ್ ಬೂತಿನ ಬಗ್ಗೆ ವಿಚಾರಿಸಲಾಗಿ ಅವನು ದೇವಸ್ಥಾನದ ಬಳಿ ಉಂಟು ಹೋಗ್ರಿ ಬೇಗ್ನೆ ಅಂಗವಿಕಲನು ಕದ ಹಾಕಿರಬೌದು ಎಂದನು. ಆಮ್ಲೇಟ್ ವಾಸನೆ ಅಲತೆ ದೂರದಲ್ಲಿ ದೇವಸ್ಥಾನದ ಎಡ ಮಗ್ಗುಲು ಇದ್ದ ತೆರೆದಿದ್ದ ಬೂತಿನೊಳಗೆ ಎರಡು ಚಿಕ್ಕ ಕಾಲುಗಳ ಭಾರಿ ದೇಹದ ಪಳನಿಚಾಮಿ ನನ್ನಿಂದ ನಂಬರು ಬರೆಯಿಸಿಕೊಂಡನು. ಒಂದಿಬ್ಬರು ಯಾತ್ರಾರ್ಥಿಗಳು ಮಾತಾಡಿದಮೆಲೆ ಅವನು ನಂಬರು ತಿರುಗಿಸುತ್ತಲೆ ರಿಂಗಾಗತೊಡಗಿತು. ರಿಸೀವರನ್ನು ಇಸಿದುಕೊಂಡೆನು. ಕಮಲಾಕರ ಇರುವನೋ ಇಲ್ಲವೋ. ಅತ್ಯುತ್ತಮ ಗ್ರಾಮಾಂತರ ಪತ್ರಕರ್ತ ಪ್ರಶಸ್ತಿ ಪಡೆದಂದಿನಿಂದ ಅವನ ಹಾರಾಟ ಜೋರಾಗಿರುವುದು ಬೇರೆ! ಏನಂಥ ಮಾತಾಡುವುದು! ಮೊದಲು ತಾತನವರ ಕ್ಷೇಮ ವಿಚಾರಿಸುವುದೋ! ಮಧುಚಂದ್ರವೆಂಬ ನರಕ ಪ್ರಸ್ತಾಪಿಸುವುದೋ! ಹಲೋ ಎಂಬ ಧ್ವನಿ… ಅರೇ! ಹೌದಲ್ಲ? ಕಮಲಾಕರನೇ!… ನಾನು ಕಣೋ ಶಾಮಾಶಾಸ್ರಿ ಇಂಥ ಊರಲ್ಲಿ ಗೋಲಾಡ್ತಿದ್ದೀನೆಂದು ಹೇಳಿದೆ… ಹಾಗೆ ಹೇಳುತ್ತಲೆ ಅವನು “ನಿನ್ನ ಸಂಪರ್ಕಿಸೋಕೆ ನೂರಾರು ಕಡೆ ಫೋನ್ ಮಾಡಿದ್ದೆ ಕಣಯ್ಯಾ… ಅಂತೂ ನೀನೆ ಸಿಕ್ಕಿದೆಯಲ್ಲ… ಧೈರ್ಯ ತಂದ್ಕೋ… ಎದೆಗುಂದಬೇಡ… ಇವತ್ತು ಸಾಯಂಕಾಲ… ಸಾಯಂಕಾಲ… ನಿಮ್ಮ ತಾತನವ್ರು… ನಮ್ಮನ್ನೆಲ್ಲ ಬಿಟ್ಟು ಹೊರಟುಹೋದ್ರು… ಕೂಡ್ಲೆ ಬಂದುಬಿಡ್ರಿ” ಎಂದು ಹೇಳಿದೊಡನೆ ನನಗೆ ತಿಂದಿದ್ದೆಲ್ಲ ಬಾ‌ಅಯಿಗೆ ಬಂದು ಬಿಟ್ಟು ಗೋಡಂಬಿ ಮರದ ಬುಡಕ್ಕೆ ವಯ್ಕ್ ವತ್ಕ್ ಅಂತ ವಾಂತಿ ಮಾಡಿಕೊಂಡೆ.

ಕೊಟ್ಟೂರಿನಲ್ಲಿ ಇಳಿದಾಗ ಮರದ ಶಿಖಿರದ ಮೇಲೆ ದೀಪ ಹೊತ್ತಿರಲಿಲ್ಲ. ಸಪ್ತರ್ಷಿಮಂದಲ ದಿಗಂತದ ಅಂಚಿಗೆ ಸರಿದಿತ್ತು… ಇಡೀ ಊರು ಮಿಸುಕಾದುತ್ತಿರುವಂತೆ ಭಾಸವಾಯಿತು. ನಾರಾಣಿ, ಕಮಲಾಕರ, ವೆಂಕಟೇಶ, ಸುರೇಶಗೌಡ ಮೊದಲಾದವರು ನಮ್ಮನ್ನು ಮುತ್ತಿಕೊಂಡರು. “ಅಹಾಸ್ತ್ರಿಗಳು ಹೋಗಿಬಿಟ್ರಪ್ಪಾ ಹೋಗಿಬಿಟ್ರು… ಹೆದರಿದ್ರೆ ಪ್ರಯೋಜನವಿಲ್ಲ್… ಮಾಡೋ ಕೆಲಸ ಬೆಟ್ಟದಷ್ಟಿದೆ…” ಎಂದು ಕಮಲಾಕರ ನನ್ನನ್ನು ಅಪ್ಪಿಕೊಂಡು ತಲೆ ನೇವರಿಸಿದ. ನನ್ನಲ್ಲಿದುಃಖದ ಮಹಾಪೂರವೇ ಬಂದುಬಿಟ್ಟಿತು. ಚಿಕ್ಕ ಮಗುವೂ ಅಳಲಿಕ್ಕಿಲ್ಲ… ಅಷ್ಟು ಅತ್ತೆ… ಆಗ ನಾನೂ ಸಮರ್ಥ ರೀತಿಯಲ್ಲಿ ದುಃಖಿಸಬಲ್ಲೆ ಎಂಬ ಹೆಮ್ಮೆ ಮೂಡಿತು. ಯಾರಾದ್ರು ಸಾಯೋದು ಅನುಚರರ ದುಃಖ ಪರೀಕ್ಷಿಸಲೆಂದೇ ಇರಬೇಕು… ನನ್ನ ದುಃಖ ಮತ್ತಿತರ ಅನುಷಂಗಿತ ಭಾವನೆಗಳನ್ನು ಜನ ನಿರಪೇಕ್ಷತೆಯಿಂದ ಗಮನಿಸುತ್ತಾರೆ ಎಂಬುದರ ಅರಿವು ಮೂಡಿತು. ಮನೆ ತಲುಪಿದ ಮೇಲೆ ಹತ್ತಾರು ತುಪ್ಪದ ದೀಪಗಳ ಬೆಳಕಿನಲ್ಲಿ ಉದ್ದೋಕೆ ಮಲಗಿದ್ದ ತಾತನವ್ಫರ ಪವಿತ್ರ ಕಳೇಬರವನ್ನು ನೋಡಿದೊಡನೆ ಬಾಲ್ಯದ ಸಾವಿರಾರು ನೆನಪುಗಳು ಚಂಡಮಾರುತದಂತೆ ನುಗ್ಗಿಬಂದವು… ಒಂದೊಂದು ನೆನಪಿಗೆ ಶಾಬ್ದಿಕ ರೂಪ ಕೊಡುತ್ತಾ; ಶಾಬ್ದಿಕ ಸಂಪತ್ತಿಗೆ ಧ್ವನಿಯ ರೂಪ ಕೊಡುತ್ತ ಹಾಗೇ ಅವರ ಎದೆಯ ಮೇಲೆ ಮುಖ ಇಟ್ಟು ರೋದಿಸುತ್ತಿರಲು ನೋಡುತ್ತಿದವರೆಲ್ಲ “ಅತ್ತರೆ ಹಿಂಗ ಅಳಬೇಕಪ್ಪಾ… ಬ್ಯಾಂಕಿನ ಕೆಲಸದಲ್ಲಿದ್ರೂ ಒಮ್ಚೂರು ಗರ್ವ ಇಲ್ದೆ ಹೆಂಗೆ ಅಳ್ತಾನೆ ನೋಡು… ಹಿಂಗ ಅಳೋರು ಸಾವ್ರಕ್ಕೊಬ್ರೋ ಲಕ್ಷಕ್ಕೊಬ್ರೋ” ಎಂದು ಗೊಣಗುತ್ತ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದರು. ಸುದ್ದಿ ತಿಳಿಯುತ್ತಲೆ ಉಟ್ಟಬಟ್ಟೇಲೆ ದೂರದಿಂದ ಹೊರಟು ಬಂದಿದ್ದ ಪಾಂಡುರಂಗ ಶಾಸ್ತ್ರಿ ಚಿಂಚಿಣಿಯವರು ನನ್ನ ಹತ್ತಿರ ಬಂದು ಮೈ ದಡವಿ “ಯಮೋ ನೋ ಗಾತುಂ ಪ್ರಥಮೋ ವಿವೇದ! ನೈಷಾ ಗವ್ಯೂತಿರಪಭರ್ತವಾ ಉ| ಯೆತ್ರಾ ನ ಪೂರ್ವೇ ಪಿತರಃ ಪರೇಯು| ರೇನಾಜಜ್ಞಾನಾಃ ಪಥ್ಯಾ ಅನುಸ್ಚಾಃ. (ಯಮನು ನಮಗಾಗಿ ಮೊದಲು ಮಾರ್ಗವನ್ನು ಕಂಡುಹಿಡಿದಿದ್ದಾನೆ. ಈ ಸ್ಥಾನವು ನಮಗೆ ತಪ್ಪಕೂಡದು. ಹಿಂದೆ ನಮ್ಮ ಪೂರ್ವಜರು ಎಲ್ಲಿಗೆ ಹೋದರೋ ಅಲ್ಲಿಗೆ ಈಚೆಗೆ ಹುಟ್ಟಿದವರೂ ತಮ್ಮ ತಮ್ಮ ದಾರಿಯಲ್ಲಿ ಹೋಗುತ್ತಾರೆ) ಎಂದು ಮುಂತಾಗಿ ಯಮ ವೈವಶ್ವತದಲ್ಲಿ ಹೇಳಲಿಲ್ವೇನಪ್ಪಾ?… ಒಬ್ಬರ ಹಿಂದೆ ಒಬ್ಬರು… ಹೀಗೆ ಎಲ್ಲರೂ ಹೋಗುವವರೇ! ಇಲ್ಲಿ ಶಾಶ್ವತವಾಗಿ ಇರೋರು ಯಾರು ಹೇಳು… ನಶ್ವರ ಶರೀರವನ್ನು ಪರಲೋಕಕ್ಕೆ ಸಾಗಿಸುವ ಅಗ್ನಿಯ ಏರ್ಪಾ‌ಉ ಮಾಡಬೇಕಿದೆ… ನೀನೇ ಎದೆಗುಂದಿದ್ರೆ ಇವ್ನೆಲ್ಲ ಮಾಡೋರು ಯಾರು ಇದ್ದಾರೆ” ಎಂದು ಸ್ವಾ‌ಅಂತನ ಹೇಳಿ ಕಳೇಬರದಿಂದ ನನ್ನನ್ನು ಈಚೆ ಎಳೆದುಕೊಂಡರು. ಋಕ್ಕುಗಳ ಸ್ಥಾನಮಾನದಿಂದ ವಂಚಿತರಾಗಿರುವ ಯಮನ ಪ್ರಾಮುಖ್ಯ ಅರ್ಥವಾಗುವುದು ತೀರ ಹತ್ತಿರದವರು ಸತ್ತ ನಂತರವೇ ಎಂಬುದನ್ನು ಅರ್ಥಮಾಡಿಕೊಂಡ ನಾನು ಅವರ ಜಠರಕ್ಕೆ ಜಠರ ಅಂಟಿಸಿ ದೂರ ಸರಿದೆ. ವಿವಸ್ವಂತ, ಸರಣ್ಯು ದಂಪತಿಗಳ ಮಗನಾದ ಯಮನನ್ನು ಕಲ್ಪಿಸಿಕೊಂಡರೇ ಭಯವಾ‌ಅಗುವುದೆನಗೆ.

ಹಿಂದೊಮ್ಮೆ ತಾತನವರು ವಿಭುದೇಂದ್ರ ಸರಸ್ವತಿಗಳು ವೈಕುಂಟವಾಸಿಗಳಾದಾಗ “ನೀನೂ ಬಾರೋ ಶಾಮಾ… ವ್ಯ್ಕ್ತಿತ್ವಕ್ಕೆ ಪರಿಪೂರ್ಣತೆ ಬರಬೇಕಾದ್ರೆ ಹುಟ್ಟು ಸಾವು ಎರಡನ್ನೂ ಅನುಭವಿಸೋ ಜನರಿಗೆ ತೀರಾ ಹತ್ತಿರದಲ್ಲಿರಬೇಕಪ್ಪಾ” ಎಂದು ಹೇಳಿದ್ದರು. ಚಿಕ್ಕಂದಿನಿಂದಲೂ ನನಗೆ ಕಳೇಬರಗಳ ಅಂತಿಮ ಯಾತ್ರೆ ನೋದುವುದೆಂದರೆಭಯ! ‘ಸಾವು ಎಂಬ ಶಬ್ದ ಕಿವಿಗೆ ಸೊಂಕಿದೊಡನೆ ಕಂಪಿಸಿ ಬಿಡುತ್ತಿದ್ದೆನು. ಸತ್ತವರು ನನ್ನ ಕಣ್ಣಿನಲ್ಲಿ ಬಂದು ಕಾಡುತ್ತಿದ್ದುದೂ ಉಂಟು. ಇಂಥ ಕನಸುಗಳಿಂದ ಮೈ ಬಿಸಿಯಾದಾಗ ತಾತನವರು ಮೃತ್ಯುಂಜಯ ಮಂತ್ರ ಲಿಖಿತ ಅಂತ್ರವನ್ನು ನನ್ನ ಸೊಂಟಕ್ಕೆ ಕಟ್ಟುತ್ತ ಯಮನ ಬಗೆಗೂ; ಅವನ ಹತ್ತಿರದ ಸಂಬಂಧಿಯಿಂದ ಅಗ್ನಿಯ ಬಗೆಗೂ ತಿಳಿ ಹೇಳುತ್ತಿದ್ದರು. ಯಜ್ಞದಲ್ಲೂ ಸ್ಥಾನಮಾನ ಪಡೆದಿರುವ ಯಮ ವಾಸಿಸುವ ಆಕಾಶ ಅಂತರಾಳವನ್ನು ಕಣ್ಣಿಗೆ ಕಟ್ಟುವಂತೆ ವರ್ಣಿಸಿದ್ದೆಲ್ಲ ನೆನಪಾಗುತ್ತದೆ… ವೇಣುಗಾನ ಮನೋಹರವಾದ ಆ ಲೋಕ ತಲುಪಲು ನಾನು ಮೊದಲಾಗಿ ಎಲ್ಲರೂ ಏಕೆ ಹೆದರುತ್ತಾರೆ ಎಂಬ ಪ್ರಶ್ನೆಗೆ ಉತ್ತರ ದೊರಕುವುದು ಇಂಥ ಸಂದರ್ಭಗಳಲ್ಲಿಯೇ. ಅವರು ಹೇಳುತ್ತಿದ್ದ ಮಾತುಗಳನ್ನು ಆಧರಿಸಿ ಹಿಂದೊಮ್ಮೆ ನಾನು ಬರೆದಿದ್ದ ಕವಿತೆ ನೆನಪಾಗುವುದು – ಸಂದರ್ಭದಲ್ಲಿಯೇ. ಗೂಬೆ ಸಾಯೋ ವ್ಯಕ್ತಿ ವಾಸಿಸುವ ಪ್ರದೇಶದ ಆಯಕಟ್ಟಾದ ಜಾಗದಲ್ಲಿ ಕೂತು ಸಾವಿನ ಆಗಮನದ ಮುನ್ಸೂಚನೆಯನ್ನು ಸಾರುತ್ತದೆ. ಅದನ್ನು ಕೇಳಿಸಿಕೊಂಡ ಮೃತ್ಯುಮುಖಿಯು ತನ್ನ ಎದೆಯೊಳಗೆ ನಿಧಾನವಾಗಿ ಪಾರಿವಾಳವನ್ನು ಕಲ್ಪಿಸಿಕೊಳ್ಳುತ್ತಾನೆ.

ತನ್ನೆದೆಯ ಬಿಗಿ ಪಂಜರದಲ್ಲಿ ಆ ಧವಳ ವರ್ಣದ ಪಾರಿವಾಳವನ್ನು ಬಂಧಿಸಿಡುವ ಪ್ರಯತ್ನ ಮಾಡುತ್ತಾನೆ. ಅವನು ಅಂಥ ಪ್ರಯತ್ನ ಮಾಡಿದಷ್ಟೂ ಪಾರಿವಾಳದ ರೆಕ್ಕೆಗಳು ಬಲಿಷ್ಟವಾಗುತ್ತ ಹೋಗುತ್ತವೆ. ಅವನ ಅಂತಃಶಕ್ತಿ ಮತ್ತು ಇಚ್ಚಾ ಶಕ್ತಿಯನ್ನು ಮೀರಿ ಬೆಳೆದ ಅವು ಮುಗಿಲಿಗೂ ಮಿಗಿಲಾದ ರೆಕ್ಕೆಗಳನ್ನು ಹೃದಯ ವಿದ್ರಾವಕವಾಗಿ ಬಡಿಯುತ್ತ ಹಾರುತ್ತ… ಹ್ಹಾ… ಹಾರುತ್ತ ಶೂನ್ಯ ಪ್ರವೇಶಿಸಿ ಅಂತರ್ಧಾನವಾಗುತ್ತವೆ. ಸತ್ತ ಮನುಷ್ಯನ ಆತ್ಮ ಅವಸ್ತಾ (ಪಿತೃಲೋಕದ ರಾಜ್ಯ) ದಲ್ಲಿ ಗತಿಸಿದ ಹಿರಿಯರೊಂದಿಗೆ ಶಾಶ್ವತವಾದ ಸಖ್ಯ ಬೆಳೆಸುತ್ತದೆ. ‘ಗೂಬೆ ಮತ್ತು ಪಾರಿವಾಳಗಳು’ ಎಂಬ ಸುಧೀರ್ಘ ಕವಿತೆ ಬರೆಯುವ ಮುನ್ನ ನಾನು ಸಾಯಲು ಪ್ರಯತ್ನಿಸಿದಂತೆ ನೆನಪು. ಹಾಗೆ ನಾನು ಪ್ರತ್ನಿಸಿದ್ದಲ್ಲಿ ನಾನು ಬದುಕುತ್ತಿರಲೇ ಇಲ್ಲ. ಸಮಾಜದ ಅಮ್ತಃಕರಣಗಳಿಮ್ದ ಹೊರಟ ಹೊಂಬನ್ನದ ಎಳೆಯೊಂದು ನನ್ನನ್ನು ಬಂಧಿಸಿ ಮೃತ್ಯುಮುಖದಿಂದ ನನ್ನನ್ನೀಚೆಗೆ ಎಳೆಯುತ್ತಿತ್ತು. ಸಮಾಜದ ಹೊರಗೆ ಮತ್ತು ಓಳಗೆ ಅತಂತ್ರ ಸ್ಥಿತಿಯಲ್ಲಿ ಬೆಳೆಸಿ ಜೋಪಾನ ಮಾಡಿದ ತಾತನವರಿಂದ ಕಳಚಿಕೊಳ್ಳಲು; ಬಿಡುಗಡೆಯಾಗಲು ಹಲವು ಸಾರಿ ನಾನು ಇಂಥ ಪ್ರಯತ್ನ ಮಾಡಿದ್ದುಂಟು. ನನ್ನ ಬದುಕಿಗೆ ಸರ್ಪಗಾವಲಿದ್ದ ತಾತ ಸತ್ತಿರಬಹುದೆಂದು ಅನ್ನಿಸಲಿಲ್ಲ. ಸತ್ತ ಸ್ಥಿತಿಯಲ್ಲಿ ಮಲಗಿ ವರ್ತಮಾನವನ್ನು; ವರ್ತಮಾನಕ್ಕೆ ಸಂಬಂಧಿಸಿದವರ ವಿದ್ಯಮಾನವನ್ನು ಗಮನಿಸುತ್ತಿರಬಹುದೆಂಬ ಅನುಮಾನ ಬಂತು. ಆಗಲೆ ಯಾರೋ ಸೂತಕ ಸೂಚಕವಾಗಿ ಹೆಗಲಿಗಿಳಿಬಿಟ್ಟಿದ್ದ ಉತ್ತರೀಯದಿಂದ ಇಡೀ ಮುಖ ಮುಡಿದುಕೊಂಡಿದ್ದ ಕಣ್ಣೀರನ್ನು ಒರೆಸಿಕೊಳ್ಳುತ್ತ ಕಂಣುಗಲನ್ನು ಕಿರಿದುಗೊಳಿಸಿ ಪ್ರಣೀತಾ ಹಾಸಿಗೆಯ ಮೇಲೆ ಮಲಗಿದ್ದ ಜೀರ್ಣಾತಿ ಜೀರ್ಣವಾದ ದೇಹದ ಕಡೆ ನೋಡಿದ. ಒಂದು ಕ್ಷಣದಲ್ಲಿ ಅನೇಕ ಪ್ರಾಣಿ ಪಕ್ಷಿಗಳಂತೆ ಕಂಡಿತು. ಇನ್ನೊಂದು ಕ್ಷಣದಲ್ಲಿ ಮಿಸುಕುತ್ತಿರುವ ಒಂದೊಂದು ಬಿಳೀರೋಮವೂ ಹಾವಿನ ರೂಪ ಪಡೆದಂತೆ ಭಾಸವಾಯಿತು. ಆ ಎಲ್ಲರ ಅವರ ಕಲ್ಪನೆಗಳ ನಡುವೆ ಕಳೇಬರದೊಳಗೆ ಶಾಸ್ತ್ರಿಗಳು ಕಂಣು ಪಿಳಿಕಿಸುತ್ತ ಎದ್ದು ತನ್ನ ಕಡೆ ಎರಡೂ ಕೈ ಚಾಚಿ ಬಂದು ಬಿಡೋ ಶಾಮ ಎಂದು ಕೂಗಿದಂತಾಗಲು ಕಿಟಾರನೆ ಕಿರಚಲಿಕ್ಕೆಂದು ಪರಾವರ್ತಿತವಾಗಿ ಪ್ರಯತ್ನಿಸಿದೆ. ಹೊರಟು ಕೀರಲು ಸ್ವರವನ್ನೇ ‘ಅಗ್ನಯ ಇದಂ ನ ಮಮ’ ಎಂಬಂತೆ ಅರ್ಥ ಮಾಡಿಕೋ ಚಿಂಚಿಣಿಯ ಶಾಸ್ತ್ರಿಗಳು ಬಾಚಿ ತಬ್ಬಿಕೊಂಡು ಬೆನ್ನಿಗಂಟಿದ್ದ ಉದರ ನೇವರಿಸಿದರು.‘ಕಾಲೇನಿ ಉದೇತಿ ಸೂರ್ಯಃ ಕಾಲೇನಿ ವಿಶತಿ ಪುನಃ (ಕಾಲದಿಂದ ಸೂರ್ಯ ಹುಟ್ಟುತ್ತಾನೆ ಕಾಲದಲ್ಲಿ ಅವನು ಅಸ್ತಮಿಸುವನು) ಕಣಪ್ಪಾ… ಕಾಲ ಭೈರವ ಸೂರ್ಯನನ್ನೇ ಬಿಡುವುದಿಲ್ಲ. ಇನ್ನು ನಶ್ವರರಾದ ನಾನ್ಯಾವ ಲೆಕ್ಕ… ಸಂತೈಸಿಕೋ…” ಎಮ್ದು ನನ್ನ ತಲೆಯನ್ನು ಎದೆಯ ವಕ್ಷಸ್ಥಳದಲ್ಲಿ ಬಚ್ಚಿಟ್ಟುಕೊಂಡರು. ಅವರೆದೆಯೊಳಗೆ ಯಾವುದೋ ಹುನ್ನಾರು ಅರ್ಥವಾದಂತಾಗಿ ಅಲ್ಲಿಂದ ಬೇರ್ಪಟ್ಟೆ.

ಕಳೇಬರ ಪಂಚಭೂತಗಳಲ್ಲಿ ಲೀನವಾಗಲು ಹಾತೊರೆಯುತ್ತಿದೆ ಎಂದು ಅರ್ಥ ಬರುವ ರೀತಿಯಲ್ಲಿ ಒಂದೆರಡು ನೊಣಗಳು ತೆರೆದಿದ್ದ ಬಾಯಿಯೊಳಗೆ ಪ್ರವೇಶಿಸಿ ಹೊರಬರುತ್ತಿದ್ದವು. ಸನಾತನಿಗಳ ಬೆವರೊಳಗೆ ಉಪ್ಪೆದ್ದು ಹೋಗುವೆನೆಂಬುದಾಗಿ ಭಾವಿಸಿದ ಕಮಲಾಕರ ನನ್ನನ್ನಲ್ಲಿಂದ ಕರೆದೊಯ್ದ. ಏನೋ ಒಂದು ತಿನ್ನಿಸಿದ. ಏನೋ ಒಂದು ಕುಡಿಸಿದ. ಆ ಕ್ಷಣ ಡೇಗಿನ ಮೂಲಕ ಹೊಟ್ಟೆ ವಾಸನೆ ಹೊರಬರಬಹುದೆಂದು ನಾನು ಅಂದುಕೊಂಡಿರಲಿಲ್ಲ. ಮಧುಚಂದ್ರದ ಯಾತನೆಯೊಂದಿಗೆ ವಾರ್ತಮಾನದ ಬೇಗೆಯನ್ನು ಬೆರೆಸಿ… ಆ ಮಿಶ್ರಣಕ್ಕೆ ಧ್ವನಿ ರೂಪ ಕೊಡಲು‌ಒದ್ದಾಡುತ್ತಿದ್ದ ನನಗೆ ಕಳೇಬರವನ್ನು ಆದಷ್ಟು ಬೇಗ ಕರ್ಮಾಚರಣೆಗೆ ಗುರಿ ಪಡಿಸುವ ಕುರಿತು ಒತ್ತಿ ಹೇಳಿದರು. ಯಾವ ಶವಸೊಂಸ್ಕಾರದಲ್ಲಾಗಲೀ, ಅವರ ಕರ್ಮ ನಿಭಾಯಿಸುವುದರ ಬಗೆಗಾಗಲೀ, ಅಸ್ಥಿ ನಿಮಜ್ಜನವೆಂಬಿವೇ ವಿಷಯಗಳ ಬಗೆಗಾಗಲೀ ಒಂಚೂರೂ ಜ್ಞಾನವಿರದ ನಾನು ಅದರಲ್ಲೆಲ್ಲ ವಿದ್ಯುಕ್ತವಾಗಿ ಭಾಗವಹಿಸಲೇಬೇಕಾಗಿತ್ತು. ಶ್ರೀಕರಾಚಾರ್ಯರ ನೇತೃತ್ವದ ಅಗ್ರಹಾರ ನಮ್ಮ ತಾತನವರ ಶವಸಂಸ್ಕಾರದ ವಿಷಯದಲ್ಲಿ ತಜ್ಜನ ಮಜ್ಜನ ನಡೆಸಿರುವುದರ ಬಗ್ಗೆ ಜಲಜಾಕ್ಷಿ ಹೇಳಿದಳು. ಹಳೆಯದೆಲ್ಲ ನೆನಪಾಗಿ ಆಕೆ ಹೇಳಿದ್ದು ಸರಿಯಾಗಿ ಕೇಳಿಸಿಕೊಳ್ಳಲಾಗಲಿಲ್ಲ. ನನಗೆ, ಆಕೆ ಎಂದರೆ ಏನೋ ಒಂದು ರೀತಿಯ ಅಳುಕು. ಆಕೆಯ ಮಾತುಗಳನ್ನು ಅಪಾರ್ಥ ಮಾಡಿಕೊಳ್ಳುವ ಮುದುಡಿಹೋಗುವ ಸ್ಥಳಾಂತರವೇ ಇನ್ನು ಮುಂದುವರಿಯುತ್ತಿದೆ. ಯಾಕೆ ಹೀಗೆ? ಈ ಓಳಗೆ ಗೌಳೇರ ಕ್ರಿಷ್ಟಿಪ್ಪನಿಗೂ ಕಟುಕರ ವಿಠೋಬನಿಗೂ ಒಳಗೊಳಗೆ ವೈಮನಸ್ಸಾಗಿರುವುದುಂಟು. ಶವ ಸಂಸ್ಕಾರದ ವಿಷಯದಲ್ಲಿ ನೀವು ಹೀಗೆ ವರ್ತಿಸಬೇಕೆಂದು ಮೂಗು ತೂರಿಸಿದರೆಲ್ಲಿ ಅಗ್ರಹಾರದ ನೂರಾರು ಓಟುಗಳು ನಮ್ಮ ಕೈ ತಪ್ಪಿ ಹೋಗುವುವೋ ಎಂಬ ಭಯ ಅವರನ್ನು ಕಾಡುತಿರಲು ಸಾಕು. ಅಗ್ರಹಾರದ ಸ್ಮಶಾನದಲ್ಲಿಯೇ ಸಂಸ್ಕಾರ ಮಾಡಿದರೆ ಆತ್ಮಕ್ಕೆ ಶಾಂತಿ ಸಿಗುವುದು ಇಲ್ಲದಿದ್ದರೆ ಇಲ್ಲವೆಂಬ ವಾದವನ್ನು ಒಪ್ಪಿಕೊಳ್ಳುವುದಾದರೂ ಹೇಗೆ?

“ಈವಿಷಯದಲ್ಲಿ ಯಾರನ್ನು ಯಾಕೆ ಕಾಲುಕಟ್ಟುವುದು? ಎಲ್ಲೋ ಒಂದು ಕಡೆ ಶವಸ್ಂಸ್ಕಾರ ಮಾಡಿದರಾಯ್ತು” ಎಂಬುದಕ್ಕೆ ಕಮಲಾಕರ ಮತ್ತು ಜಲಜಾಕ್ಷಿ ಸಮ್ಮತಿಸಿದರು. ಅವರಿಬ್ಬರೇ ಜೋಡಿಸಿಕೊಟ್ಟ ಐದು ಸಾವಿರ ರೂಪಾಯಿಗಳನ್ನು ಜೇಬಿನಲ್ಲಿಟ್ಟುಕೊಂಡು ಅಲ್ಲಿಂದ ಹೊರಬಿದ್ದು ಸೀದ ಸೂತಕ ಕವಿದಿದ್ದ ಮನೆಕಡೆ ಬಂದೆ. ನನ್ನ ಹೆಂಡತಿಯ ಕಡೆಯವರು ಯಾವಾಗಲೋ ಹೊಸಪೇಟೆಯಿಂದಿಳಿದಿದ್ದರು. ನನ್ನ ತಾತನವರನ್ನು ನಾನೇ ಕೊಲೆ ಮಾಡಿರುವುದು ಅನ್ನೊ ಥರ ನನ್ನ ಕಡೆ ಹುಳಿ ಹುಳಿ ನೋಡಿದರು. ಮಾತಾಡಿಸೋ ಶಾಸ್ತ್ರ ಮಾಡಿದರು. ವವರೊಂದೇ ಅಲ್ಲ. ಬಂದವರೆಲ್ಲರೂ ಸಹ… ಅಪರಾಧಿ ಸ್ಥಾನದಲ್ಲಿದ್ದು ಓಡಾಡುತ್ತಿರುವೆನೋ ಎಂಬಂತೆ ಅವರೆಲ್ಲ ನೋಡುತ್ತಿದ್ದುದು, ಮಾತಾಡುತ್ತಿದ್ದುದು ಸಾಕುಸಾಕಾಗಿ ಹೋಯಿತು. ನೋವಿನ ಸೂತಕದ ಘಳಿಗೆಗಳಲ್ಲೂ ನಾನು ಗೊಂದಲಕ್ಕೀಡಾಗಿದ್ದಾದಕ್ಕೆ ನನ್ನ ಮಧುಚಂದ್ರದ ಕಹಿ ನೆನೌಗಳಿದ್ದಿರಬಹುದೆಂದುಕೊಂಡೆ. ನನ್ನನ್ನು ಕಠಿಣ ರೀತಿಯಲ್ಲಿ ಗೋಳು ಹೊಯ್ದುಕೊಂಡ ಹೆಂಡತಿ ವರಲಕ್ಷ್ಮಿ ತಾಯಿಯ ಮುಂದೆ ಕೂತು ಇನ್ನು ತನಗಾರು ದಿಕ್ಕು ಎಂಬ ರೀತಿಯಲ್ಲಿ ಅಳುತ್ತಿದ್ದಳು.
ಯಾರದೋ ರಾಜಿ ಸೂತ್ರಕ್ಕೆ ಕಟ್ಟುಬಿದ್ದು ಅಗ್ರ್ಹಾರದ ಭಾಷ್ಯಂ ಶ್ರೀಕರಾಚಾರ್ಯರಿಗೂ ಚಿಂಚಿಣಿಯ ಪಾಂಡುರಂಗ ಶಾಸ್ತ್ರಿಗಳಿಗೂ ಅಂತ್ಯಾಕ್ಷರಿ ಸ್ಪರ್ಧೆ ನಡೆದಿತ್ತು. ಒಬ್ಬೊಬ್ಬರು ಒಂದೊಂದು ವೇದಾಗ್ರಹಣದ ವಠಾರದಿಂದ ಒಂದೊಂದು ಕಂತೆ ಒಗೆಯುತ್ತಿದ್ದರು. ಅವರ ನಡುವೆ ಅಲ್ಪ ಮಾನವರಾದ ನಾನ್ಯಾಕೆ ತಲೆ ತೂರಿಸುವುದೆಂದು ದೂರ ಇರುವಷ್ಟರಲ್ಲಿ ಶೂದ್ರಾತಿ ಶೂದ್ರ ಮಂದಿ ಕೆಲವರು ಸಲಿಕೆ ಗುದ್ದಲಿಗಳೊಂದಿಗೆ ಪ್ರತ್ಯಕ್ಷ ಆದರು. ಅವರ ಮುಖಂಡತ್ವ ವಹಿಸಿದ್ದ ದುರುಗಪ್ಪ ಎಂಬುವನು “ಯಜಮಾನ್ರು ಅಪ್ರೂಪ್ಕೆ ಹೊಟೋಗ್ಯಾರ್ರೀ… ಅವರ್ನ ದ್ಯಾವ್ರು ಕರ್ಕೊಂಡು ನಮ್ಗೆಲ್ಲ ದುಕ್ಕ ಮಾಡ್ಯಾನ್ರಿ… ಅದ್ಕೆಲ್ಲ ಯಾರೇನು ಮಾಡಾಕಾಗತೈತ್ರೀ?… ಇರೋರಾರ ಸತ್ತೋರ ಹೆಸ್ರು ಹೇಲ್ಕೊಂಡು ನಾಕ್ಕಾಲ ಸುಖವಾಗಿರೋದು ಬ್ಯಾಡೇನ್ರಿ?… ನಮ್ದಂತೂ ದಿನಾಲು ಸಾಯೋದಾಗೈತ್ತಿ ಬದುಕು… ಊರಾಗ ಯಾರ್ಯಾರ ಸಾಯ್ಬೆಕು ಒಲೆ ಹತ್ತಿಸ್ಬೇಕ್ರೀ…” ಎಂದು ಮುಂದೇನು ಹೇಳಲಾಗದೆ ತಲೆ ಕೆರೆದುಕೊ
ಡ. ನನಗೆ ಬೇಸರ ಬಂದು “ಸುತ್ತಿ ಬಳಸಿ ಯಾಕ ಮಾತಾಡ್ತೀಯೋ ದುರಗಪ್ಪ… ಹೆಳೊದೇನಿದ್ರು ಒಂದು ಮಾತಿನಲ್ಲಿ ಹೇಳಿ ಬಿಡಪ್ಪ ಎಂದೆ.ಅವರ ಗುಂಪಿನಲ್ಲಿದ್ದ ಚವುಡಪ್ಪ ಎಂಬುವನು, “ನೋದ್ರಿ ಶಾಮಂಣ್ಣೋರ… ಯಜಮಾನ್ರು ಮತ್ತೆ ಸಾಯಿ ಅಂದ್ರ ಸಾಯ್ತಾರೇನ್ರಿ? ಯಾವುದಕ್ಕೂ ಪಡ್ಕೊಂದು ಬಂದಿರ್ಬೇಕು ಒಂದೇ ಸಾರಿಗೆ ಸಾಯಲಕ” ಎಂದು ಏನೋ ಹೆಳಲಿದ್ದಾಗ ವೆಂಕಟದೀಕ್ಷಿತರು “ಏನ್ರೋ ಶೂದ್ರ ಮುಂಡೇವ… ಉಸಿರು ತಾಕೋ ಹಂಗ ನಿಂತ್ಕೊಂಡು ಮಾತಾಡ್ತೀರಲ್ರೋ… ದೂರ ನಿಂತ್ಕೊಂಡು ಮಾತಾಡ್ಬಾರ್ದೇನ್ರೋ” ಎಂದು ಗದರುತ್ತಲೆ ಅವರೆಲ್ಲ ಒಂದು ಮಾರು ಹಿಂದಕ್ಕೆ ಸರಿದು ತಂತಮ್ಮರ್ಧ ಮುಖಕ್ಕೆ ಅರಿವೆ ಇಟ್ಟುಕೊಂಡರು. ದೀಕ್ಷಿತರು ನನ್ನ ಕಡೆ ತಿರುಗಿ “ಶಾಮೂ ನಿನಗಾದ್ರು ಅರ್ಥ ಆಗಬಾರ್ದೇನೊ ಈ ಶೂದ್ರರ ಕಿತಾಪತಿ ಏನೆಂಬುದು… ಇವರೆಲ್ಲ ಸದರ ಕೊಟ್ರೆ ತಲೆಮ್ಲೆ ಬಂದು ಕೂಡ್ರುತಾರಪ್ಪ… ಮನು ಹೇಳಿದ್ನೇ ನಾನು ಹೇಳ್ತಿರೋದು… ನಮ್ಮೂರಲ್ಲಿ ಹೊಲೆಯ ಮಂದಿ ಏನು ಮಾಡಿದ್ರು ಗೊತ್ತೆ?” ಎಂದಾತ ಹೇಳುತ್ತಿದ್ದುದು ತುಂಬ ಕಿರಿಕಿರಿ ಉಂಟುಮಾಡಿತು… “ವೆಂಕಟೇಶಣ್ಣ ನೀವು ದಯವಿಟ್ಟು ಹೋಗ್ರಿ.” ಎಂದು ಅಸಹನೆಯಿಂದ ನುಡಿದೆ. ಗೊಣಗುತ್ತ ಹೋದ. ಚವುಡ ಸ್ವಲ್ಪ ಹತ್ತಿರ ಜರುಗಿ “ನಿಮ್ಮಂಥೋರು ಸಾವಿರಕ್ಕೊಬ್ರು ಶಾಮಣ್ಣೋರ… ಮಾಮೂಲ್ಗಿಂತ ಒನ್ನ್ದಿನ್ನೂರು ಒಗ್ದುಬುಡ್ರಿ ತಂದೆ… ಯಜಮಾನ್ರ ಹೆಸ್ರು ಹೇಳ್ಕೊಂಡು ಹೊಟ್ತುಂಬ ಉಂಬ್ತೀವಿ” ಎಂದು ಬೊಗಸೆಯೊಡ್ಡಿದ. ಅದನ್ನು ಕೇಳಿಸಿಕೊಂಡು ಶ್ರೀಧರ “ಓಹೋ… ಶಾಮೂ… ಅವರು ಕೇಳ್ದಂತೆ ಕೊಟ್ಟೀಯಾ ಜೋಕೆ…” ಅಸ್ಥಿಮಜ್ಜನ ಆಗೋ ವರ್‍ಗೂ ಖರ್ಚು ಮಾಡೊದದೆ” ಎಂದು ಕೂಗಿ ಹೇಳಿದ. ಅದನ್ನು ಕಿವಿ ಮೇಲೆ ಹಾಕಿಕೊಳ್ಳದೆ ನೂರರ ಐದು ನೋಟುಗಳನ್ನು ದುರಗಪ್ಪನ ಬೊಗಸೆಗೆ ಹಾಕಿದೆ.

ಅವರೆಲ್ಲ ಕಂಣಿಗೆ ಒತ್ತಿಕೊಂಡು ಹೋಗುವಷ್ಟರಲ್ಲಿ ತಿಂಬರ್ ಡಿಪೋದ ಅಲ್ಲಾ ಭಕ್ಷಿ ತನ್ನದು ಐವತ್ತು ಮಣದ್ದೂ ಅಂತ ಬಂದ. ಅವನನ್ನೂ ತೃಪ್ತಿಪಡಿಸಿ ಕಳಿಸುವಷ್ಟರಲ್ಲಿ ರಾಯಸಂ ರಾಘವಾಚಾರ್ಯರು ನನ್ನ ತಾಯಿಯೊಡನೆ ತಾಳೆಗರಿಯ ಎರಡು ತುಂಡುಗಳನ್ನು ಹಿಡಿದುಕೊಂಡು ಬಂದರು… ಅವರ ಹಿಮ್ದೆ ಪಾಂಡುರಂಗ ಶಾಸ್ತ್ರಿಗಳು; ಸ್ರೀಕರಾಚಾರ್ಯರೂ ಇತ್ಯಾದಿ ಹತ್ತಾರು ಮಂದಿ… ಇದೇ ಒದಗಿ ಬಂದಿರುವ ಸುವರ್ಣಾವಕಾಶವೆಂದು ಭಾವಿಸಿದ ರಾಯಸಂರವರು ಕಂಠ ಎತ್ತರಿಸಿ “ನಿಮ್ಮ ತಾಯಿ ಇದ್ನ ಕೊಡದೆ ಇದ್ದಿದ್ರೆ ಪರಮಘಾತಕ ಮಾಡಿದ ಪಾಪ ಬರ್‍ತಿತ್ತಲ್ಲಪ್ಪಾ… ಮರಣಪೂರ್ವದಲ್ಲಿ ಶಾಸ್ತ್ರಿಗಳು ಬರೆದಿಟ್ಟಿರುವ ಶಾಸನ ಸಿಗದಿದ್ರೆ ನಮಗ್ಗೆಲ್ಲ ರೌರವ ನರಕ ಪ್ರಾಪ್ತಿಯಾಗ್ತಿತ್ತೋ!…” ಎಂದರು. ಚಿಂಚಿಣಿ ಶಾಸ್ತ್ರಿಗಳು, “ರಾಘವಾ… ಅದೇನನ್ನು ಬರೆದಿಟ್ಟಿದ್ದಾರೆಂದು ಘಟ್ಟಿಯಾಗಿ ಹೇಳೋ ” ಎಂದು ಕುಮ್ಮಕ್ಕು ನೀದಿದರು. ಅದರಿಂದ ಉತ್ತೇಜಿತರಾದ ರಾಘವರು “ಮರಣಾನಂತರ ತಮ್ಮ ಶವಸಂಸ್ಕಾರವನ್ನು ಕಾಶೀ ಕ್ಷೇತ್ರದ ಮಣಿಕರ್ಣಿಕಾಘಾಟ್‌ನಲ್ಲಿ ನಡೆಸತಕ್ಕದ್ದೆಂದು ಬರೆದಿಟ್ಟಿದೆದರಲ್ಲಪ್ಪಾ… ಈಗೇನು ಮಾಡೋದು…” ಎಮ್ದು ಮೂಗಿಗೆ ನಶ್ಯೆ ಏರಿಸಿ ಎರಡು ಸಾರಿ ಸೀನಿದರು ತುಪಾಕಿ ಸ್ಪೋಟಿಸಿದಂತೆ. ನನ್ನ ಎದೆ ದಡಲ್ ಎಂದಿತು. “ಪುಣ್ಯವಂತರು ಮಾತ್ರ ಹಾಗೆ ಬರೀಲಿಕ್ಕೆ ಸಾಧ್ಯ?” ಎಂದು ಶ್ರೀಕಂಠಶಾಸ್ತ್ರಿಗಳೂ; “ಈ ಸಂಸ್ಕಾರ ಯಾತ್ರೆಯಲ್ಲಿ ನಾವೆಲ್ಲ ಭಾಗವಹಿಸಿ ಪುಣ್ಯ ಭಾಜನಕ್ಕೆ ಪ್ರಾಪ್ತರಾಗೋಣ”ವೆಂದು ನರಹರಿಗಳೂ ಸಮರ್ಥಿಸಲು ನನ್ನ ಜಂಘಾಬಲವೇ ಉಡುಗಿತು. ನನ್ನ ತಾಯಿ ಮುಂದೆ ಬಂದು “ರಾಘಣ್ಣ ಹೇಳಿದ್ದು ನಿಜ ಕಣೋ ಶಾಮಾ… ಮಾವನವರು ನನ್ನ ಬಳಿ ಕೂಡ ಈ ಆಸೆ ವ್ಯಕ್ತಪಡಿಸಿದ್ರು… ಅವರ ಚಿಕ್ಕ ಆಸೆ ಈಡೇರಿಸದಿದ್ರೆ ಅವರ ಆತ್ಮಕ್ಕೆ ಸದ್ಗತಿ ಪ್ರಾಪ್ತವಾಗ್ತದೇನೋ? ಹೂ ಅಂದು ಬಿಡಪ್ಪಾ… ಹಿರಿಯರ ಮಾತಿಗೆ ಎದುರಾಡುವ ಪ್ರಯತ್ನವನ್ನು ಮಾತ್ರ ಮಾಡಬೇಡ” ಎಂದು ಹೇಳುತ್ತಲೆ, ನನ್ನ ಪ್ರಾಣ ಅಂಗೈಯಳಿದಲ್ಲಿ ಪತರಗುಡತೊಡಗಿತು .
ಈ ರೌರವ ಸಮಸ್ಯೆಗೆ ಯಾವ ರೀತಿ ಪ್ರತಿಕ್ರಿಯಿಸಬೇಕೆಂದು ಹೊಳೆಯದೆ ವಹಿಸಿದ ಆ ಒಂದು ಕ್ಷಣದ ಮೌನವನ್ನೇ ಅಂಗೀಕಾರವೆಂದು ಅಪಾರ್ಥ ಮಾಡಿಕೊಂಡ ಗೌಳೀಯರ ಕ್ರಿಷ್ಟಪ್ಪ “ಇದ್ರಾಗ ಯೋಚ್ನೆ ಮಾಡೋದೇನೈತಪ್ಪಾ ಶಾಮಂಣಾ… ಇಂಥ ಆಸೇನೆ ಎಲ್ರೂ ಹೇಳ್ಯಾರೇನು? ನೀನೇನು ಯೋಚ್ನೆ ಮಾಡಬ್ಯಾಡ… ಕಾಶಿಯಾತ್ರೆಗೆ ಐವತ್ಸಾವ್ರ ಹೋಗ್ರಿ ನಾನು ಕೊಡ್ತೀನಿ… ಈಗಿಂದೀಗ್ಲೇ ಕಾರೋ, ವ್ಯಾನೋ ಗೊತ್ತುಮಾಡಿಬಿಟ್ರಾಯ್ತು… ಹೆಣನ ಭಾಳ ಹೊತ್ತು ಇಟ್ಕಳ್ಳಂಗಿಲ್ಲ… ಆಗ್ಲೆ ವಾಸ್ನೆ ಬರಲಿಕ್ಕತ್ತೈತಿ” ಎಂದು ಮುಖಕ್ಕೆ ಗಾಳಿ ಹಾಕಿಕೊಂಡ ಧೋತರದ ಚುಂಗಿನಿಂದ. ಅದೇ ಹೊತ್ತಿಗೆ ಪರದೆ ಮರೆಯಲ್ಲಿ ನಿಂತುಕೊಂಡಿದ್ದ ಹೆಂದತಿ ವರಲಕ್ಷ್ಮಿ,
“ಒಪ್ಪಿಕೊಂಡು ಬಿಡ್ರೀ… ಮದುವೆಯಾದ್ರೆ ವಿಶ್ವನಾಥನ ದರ್ಶನ ಮಾಡ್ತೀನಂತ ಹರಕೆ ಹೊತ್ಕೊಂದಿದ್ದೆ… ಹಿರಿಯರ ಆಸೇನೂ ಪೂರೈಸಿದಂತಾಯ್ತು. ನಾವೂ ಎರಡು ದಿನ ಇದ್ದು ಹರಕೆ ತೀರಿಸಿಕೊಂದಂತೆಯೂ ಆಗ್ತದೆ…” ಎಂದು ಸ್ಪಷ್ಟವಾಗಿ ಹೇಳಿದಳು. ಎಲ್ಲರೂ ಅದಕ್ಕೆ “ಹೋ ಹೋ ಹ್ಹಾ ಹ್ಹಾ” ಅಂದರು. ಇವರೆಲ್ಲರು ಜಮಾಯಿಸಿರುವುದು ತಾತನವರ ಶವಸಂಸ್ಕಾರ ಮಾಡಲಿಕ್ಕಲ್ಲ… ನನ್ನ ಸಂಸ್ಕಾರ ಮಾಡಿಕೊಂಡು ಹೋಗಲಿಕ್ಕೆ ಬಂದಿರುವರೆಂದುಕೊಂಡೆ. ದುರದಲ್ಲಿ ಕಮಲಾಕರನೂ, ಜಲಜಾಕ್ಷಿಯೂ ನನ್ನ ಫಜೀತಿಯನ್ನೇ ಆನಂದದ ಬಂಡವಾಳವನ್ನಾಗಿ ಮಾಡಿಕೊಂಡಿದ್ದರು. ಎಲ್ಲರಿಗೂ ಕೇಳಿಸುವಂತೆ “ಏನ್ರಿ ಇದು ನೀವೆಲ್ರು ಸೇರಿ ಆಡ್ತಿರೋ ಮಾತು? ವಿಲ್ ಬರೆದಿಟ್ಟಿರೋರ ಗಂಟೆನು ಹೋಗ್ತದ್ರೀ… ಹಾಳಾಗೋನು ನಾನು ತಾನೆ? ಕಾಶಿ ಅಮ್ದ್ರೇನು ಬೋರ್ನಳ್ಳಿ, ಕೋಡಿಹಳ್ಳಿ ನಡುವೆ ಅದೆ ಅಂತ ತಿಳ್ಕೊಂಡಿರೇನು? ತಾತನ ಆತ್ಮ ಸ್ವರ್ಗಕ್ಕೆ ಹೋಗದಿದ್ರೂ ಚಿಂತೆ ಇಲ್ಲ… ನಾನು ಮಾತ್ರ ಅವರ ಶವ ಸಂಸ್ಕಾರವನ್ನು ಇಲ್ಲೆ ಮಾಡೋದು… ಇಷ್ಟ ಇದ್ದೋರು ಇರಬೌದು. ಇಷ್ಟ ಇಲ್ದೋರು ಹೊರಟುಹೋಗಬೌದು. ಇದ್ಕೆ ನನ್ನ ಅಭ್ಯಂತರವೇನೂ ಇಲ್ಲ” ಎಂದು ಕಡ್ಡಿ ಮುರಿದಂತೆ ನುಡಿದುಬಿಟ್ಟೆ. ನಾನಾಡಿದ ಮಾತು ಅವರೆಲ್ಲರ ಮೇಲೆ ಸಾಕಷ್ಟು ಪರಿಣಾಮ ಬೀರಿತು. ಎಂಥೋರ ವಂಶದಲ್ಲಿ ಹುಟ್ತಿದ್ದಾನಲ್ಲಪ್ಪಾ… ಎಂದು ಚಿಂಚಿಣಿ ಶಾಸ್ತ್ರಿಗಳು ಉತ್ತರೀಯ ಕೊಡವಿದರೆ, ಶ್ರೀಕರಾಚಾರ್ಯರು ಶಾಮಂಣ… ಪರಮೇಶ್ವರ ಶಾಸ್ತ್ರಿಗಳು ಮಹಾ ಪವಾಡ ಪುರುಷರು. ಅವರ ಆತ್ಮ ಅತಂತ್ರ ಸ್ಥಿತಿಯಲ್ಲಿ ಉಳಿದರೆ ಲೋಕಕ್ಕೆ ಒಳ್ಳೆಯದಾಗೊಲ್ಲ… ನೀನೇ ಅನುಭವಿಸ್ತೀಯ ನೋಡ್ತಿರು ಎಂದು ಧೋತರದ ಕಚ್ಚೆ ಸರಿಪಡಿಸಿ ಬಿಗಿದರು. “ನು ಶಾಮಂಣ… ಐವತ್ಸಾವ್ರ ಕೊಡ್ತೀನಂದ್ರೂ ಕೇಳ್ತಿಲ್ಲಲ್ಲ ನೀನು… ಆಗ್ಲಿ ನಾನು ಮಾತ್ರ ಚಾವತ್ತು ಇಲ್ಲಿರೋಲ್ಲ…” ಎಂದು ಮೀಸೆ ತಿರುವುತ್ತ ಗೌಳೇರ ಧಣಿ ಅಲ್ಲಿಂದ ಕಾಲ್ತೆಗೆದನು. ನೋಡು ನೋಡುವಷ್ಟರಲ್ಲಿ ಬಂದಿದ್ದವರ ಪೈಕಿ ಅನೇಕರು ನನಗೆ ಹಿಡಿ ಹಿಡಿ ಶಾಪ ಹಾಕುತ್ತ ಅಲ್ಲಿಂದ ಹೊರಟು ಹೋದರು. ನನ್ನ ತಾಯಿ ಬಾಯಿಗೆ ಸೆರಗಿಟ್ಟು ಎಂಥ ನಾಸ್ತಿಕ ಮಗನನ್ನು ಹೆತ್ತೆನಲ್ಲಾ… ಶ್ರೀರಾಮ! ಮಾಮನವರ ಬದಲು ನನ್ನಾದರೂ ವೈಕುಂಟಕ್ಕೆ ಕೊಂಡೊಯ್ಯ ಬಾರದಿತ್ತೇ?” ಎಂದು ಪರಿಪರಿಯಾಗಿ ರೋದಿಸುತ್ತ ಒಳಗೆ ಹೋದಳು.

ನಿಧಾನವಾಗಿ ಹತ್ತಿರ ಬಂದ ಕಮಲಾಕರ, ಜಲಜಾಕ್ಷಿಯವರಿಗೆ ಹೇಳಿದೆ, ಈ ಸಂದರ್ಭದಲ್ಲಿ ನೀವೇ ನಮ್ಮ ಬಂಧುಬಳಗ ಎಲ್ಲ, ನಮ್ಮೂರೇ ನಮ್ಗೆ ಕಾಶಿ. ಊರ ಹೊರಗೆ ಹರಿಯುತ್ತೀರೋ ಹುಲುಲಿ ಹಳ್ಳವೇ ಗಂಗೆ, ಯಮುನೆ ಎಲ್ಲ. ಚಂಡ್ರಜ್ಜನ ತಗ್ಗೆ, ಮಣಿಕರ್ಣಿಕಾ ಘಾಟ್…” ಎಂದೆ. ಹೇಳಲಾಗದೆ ಗದ್ಗಿತನಾಗಿ ಬಾಯಿಗೆ ವಲ್ಲಿ ಅಡ್ಡ ಇಟ್ತುಕೊಂಡು ಬಿಕ್ಕಿದೆ. ಅವರು ಸಮಾಧಾನಪಡಿಸಿದರು.

ಸ್ವಲ್ಪ ಹೊತ್ತಿನಲ್ಲಿ ಶವ ಸಂಸ್ಕಾರದ ಕಳೆ ಇ‌ಇದುಹೋದಂತೆ ನನ್ನ ದುಃಖ ಮತ್ತಷ್ಟು ಹೆಚ್ಚಿತು. ವೈದಿಕದ ಮೇಲೆ ಬದುಕುತ್ತಿದ್ದ ನಮ್ಮ ತಾತನವರು ಈ ದೇಶದ ಮಹಾರಾಜರಿಗೆ, ಕೋಟ್ಯಧೀಶರಿಗೆ ಇರುವ ಆಸೆ ಇಟ್ಟುಕೊಡಿದ್ದರಲ್ಲ? ಇದನ್ನೇ ನೆಪ ಮಾಡಿಕೊಂಡು ನೆರೆದಿದ್ದ ಹಲವಾರು ವೈದಿಕರು ನನ್ನನ್ನು ಸಾಲಗಾರನನ್ನಾಗಿ ಮಾಡಲು ಯೋಚಿಸಿದ್ದರಲ್ಲಾ? ಹೆತ್ತ ಮಗನ ಸಂಕಟವನ್ನು ತಾಯಿಯಾದವಳು ಅರ್ಥಮಾಡಿಕೊಳ್ಳದೆ ಹೋದಳಲ್ಲ? ತಾಳಿ ಕಟ್ಟಿದ ಗಂಡನ ಆರ್ಥಿಕ ಪರಿಸ್ಥಿತಿಯನ್ನು ಹೆಂಡತಿ ಅರ್ಥಮಾಡಿಕೊಳ್ಳಲಿಲ್ಲವಲ್ಲಾ?…

“ಹೆದರ್‍ಕೋಬೇಡ ಶಾಮಣ್ಣಾ… ನಾವಿದ್ದೀವಿ” ಕಮಲಾಕರ ನನ್ನನ್ನು ಅಪ್ಪಿಕೊಂಡು ಸಂತೈಸಿದ. ಅವನ ಕಂಣಲ್ಲೂ ನೀರು ಬಾರದೆ ಇರಲಿಲ್ಲ.

ಕಟುಕರ ವಿಠೋಬ ಅದೇ ಹೊತ್ತಿಗೆ ಹತ್ತಾರು ಜನರೊಡನೆ ಬಂದ. “ಎಲಾ ಗೌಳೇರ ಕಿಷ್ಟಾ, ಸಾಲ ಕೊಟ್ಟಂತೆ ಮಾಡಿ ಶಾಸ್ತ್ರಿಗಳ ಇನ್ನೊಂದು ಮನೆಯನ್ನು ಲಪಟಾಯಿಸಲು ನೋಡ್ದೆಲ್ಲೋ… ನಿನ್ಗೆ ದೇವರು ಒಳ್ಳೇದು ಮಾಡಲ್ಲ ಕಣೋ ಮಾಡೋದ್ದಿಲ್ಲ… ಕಣೋ ಮಾಡೊದಿಲ್ಲ… ನೋಡ್ತಾ ಇರು… ಮುಂದೆ ನೀನೇನಾಗ್ತೀ ಅಂತ” ಎಂದು ಮುಂತಾಗಿ ಗೊಣಗಿದ.

ಆತ ಕರೆ ತಂದ ಗುಂಪಿನಲ್ಲಿದ್ದ ವರದಾಚಾರ್ಯರು, ನ್ಯಾಸತ್ರಯಗಳಾದ ಸೃಷ್ಟಿ ಸ್ಥಿತಿ ಸಂಹಾರ ಸ್ಥಿತಿಗಳ ಆಳ ಅಗಲಗಳನ್ನು ಅರ್ಥಮಾಡಿಕೊಂಡಂಥವರು, ಭೋಕ್ತೃತ್ವ ಸಾಧನವಾದ ಪುರೀಂದ್ರಿಯವನ್ನು ಹದ್ದು ಬಸ್ತಿನಲ್ಲಿಟ್ಟುಕೊಂಡು ಬಡತನದಲ್ಲಿ ಬೆಂದು ಅರಳಿದಂಥವರು. ಸದಾ ‘ಜ್ಞಾತು ಮಿಚ್ಛ ಜಿಜ್ಞಾಸಃ’ ಎಂಬಂತಿರುವರು. ಋಗ್ವೇದ, ಯಜುರ್ವೇದಗಳನ್ನು ಆಳವಾಗಿ ಅಭ್ಯಾಸ ಮಾಡಿದಂಥವರು. ಹಾಗೆಯೇ ಶವ ಸಂಸ್ಕಾರದ ವಿಷಯದಲ್ಲಿ ಪಾರಂಗತರೂ ಆಗಿರುವವರು. ಜ್ಯೋತಿಷ್ಯ ಮತ್ತು ವೈದಿಕದಲ್ಲಿ ನಮ್ಮ ತಾತನವರು ಮಿಗಿಲಾಗಿದ್ದರೆ ವರದಾಚಾರ್ಯರು ಅವರ ಉತ್ಸರ್ಜನ ಉಪಾಕರ್ಮಗಳಲ್ಲಿ ಎತ್ತಿದ ಕೈ ಎನಿಸಿಕೊಂಡವರು. ಉಪನಯನ ಮತ್ತು ಶವಸಂಸ್ಕಾರಗಳೆರಡೂ ಒಟ್ಟಿಗೆ ಎದುರಾಗಿದ್ದ ಅಚ್ಯುತಗೊಂಡಿಯವರ ಮನೆಯಲ್ಲಿ ಹಿಂದೊಮ್ಮೆ ಇವರು ಮತ್ತು ಕೀರ್ತಿಶೇಷರು ಒಟ್ಟಿಗೆ ಸೇರಿದ್ದರು. ಮನುಷ್ಯನಾದವನಿಗೆ ಹುಟ್ಟು ಮುಖ್ಯವೋ? ಸಾವು ಮುಖ್ಯವೋ? ಎಂಬ ಪ್ರಶ್ನೆ ಎತ್ತಿಕೊಟ್ಟಿದ್ದು ಶ್ರೀಯುತ ಗೊಂಡಿಯವರೆ. ಕೀರ್ತಿಶೇಷರು ‘ಹುಟ್ಟು’ ಎಂಬ ಶಾಖೆಪರವಾಗಿ ನಿಂತುಕೊಂಡರೆ ವರದಾಚಾರ್ಯರು ಸಾವಿನ ಪರವಾಗಿ ನಿಂತುಕೊಂಡರು. ಹುಟ್ಟುವವನು ಸಾಯುತ್ತಾನೆ ಎಂದೋ; ಸತ್ತವನು ಹುಟ್ಟುತ್ತಾನೆ ಎಂದೋ, ಸಾಯಲಿಕ್ಕಾಗಿ ಹುಟ್ಟುತ್ತಾನೆ ಎಂದೋ, ಹುಟ್ಟುವುದಕ್ಕಾಗಿ ಸಾಯುತ್ತಾನೆ ಎಂದೋ ಇತ್ಯಾದಿ ಇತ್ಯಾದಿ ವಾದ ಮಾಡುತ್ತಾ ಮಾಡುತ್ತಾ ಅರ್ಥವಾಗದ ತಾತ್ವಿಕವಾದ ಜೇಡರ ಬಲೆಯನ್ನೇ ಸೃಷ್ಟಿಸಿಬಿಟ್ಟರು.
ಅವರ ವಾದವನ್ನು ಅದುವರೆಗೆ ಕೇಳುತ್ತಿದ್ದ ಬೆಸ್ತರ ಬಸಪ್ಪನು ತಡೆಯಲಾರದೆ “ಹುಟ್ಟೋದು ಸಾಯೋದು ಇವೆಲ್ಡು ಬ್ಯಾಳೆ ಕಾಳಿದ್ದಂಗ್ರೀ ಅಪ್ಪೋರಾ… ಅವೆಲ್ಡು ಬ್ಯಾಳಿ ಒಂದಕ್ಕೊಂದು ಅಂಟಿಕಂಡಿದ್ರೆರೀಯಪ್ಪಾ ಮೊಳಕೆ ಒಡೆಯೋದು, ಬೆಳೆಯೋದು… ಹಂಗೇರಿ ಇದೂ…ಹುಟ್ಟು ಸಾವು ಎಲ್ಡು ಇದ್ರೇನೆ ಬದುಕು ಸಂಸಾರ, ಒಳ್ಳೇದು ಕೆಟ್ಟದ್ದು ಎಲ್ಲಾನೂ… ಏನೋ ತಿಳೀದ ಹಳ್ಳಿ ಮುಕ್ಕ… ತಡೀಲಾರ್‍ದೆ ಅಂದು ಬುಟ್ಟೆ… ಇದ್ರಾಗೇನಾ ತಪ್ಪಿದ್ರೆ ಎಕ್ಕಡ ತಗೊಂಡು ಹೊಡ್ದು ಬುದ್ದಿಹೇಳ್ರಿ ತಂದ್ಯೋರಾ” ಎಂದು ಹರಳು ಉರಿದಂತೆ ನುಡಿದು ಕೂತುಬಿಟ್ಟನು.
ಬೆಸ್ತರವನ ಮಾತು ಕೇಳಿ ಆ ಅದ್ವೈತಿಗಳೀರ್ವರೂ ಅವಕ್ಕಾದರು. ಬಸಪ್ಪನನ್ನು ಮುತ್ತಿನಂಥ ಮಾತುಗಳನ್ನು ಒಪ್ಪಿಕೊಳ್ಳುವುದೋ? ತಿರಸ್ಕರಿಸುವುದೋ? ಎಂಬ ಗೊಂದಲ ಅವರಿಬ್ಬರನ್ನು ಕಾಡಿತು. ಮೆಚ್ಚಿದರಂತೂ ಶೂದ್ರರಿಗೆ ಸಲಿಗೆ ಕೊಟ್ಟಂತೆಯೇ ಲೆಕ್ಕ ಎಂದುಕೊಂಡರೋ ಏನೋ? ಅವರಿಬ್ಬರ ಪರವಾಗಿ ಶ್ರೀಯುತಗೊಂಡಿಯವರು ಸಿಟ್ಟಿನಿಂದಲೂ ಒಳಗೊಳಗೆ (ಮರ್ಯಾದೆ ಉಳಿಸಿದೆ ಎಲೆ ಬೆಸ್ತಮುಂಡೇ ಮಗ್ನೇ) ಹೆಮ್ಮೆಯಿಂದಲೋ ಬಸಪ್ಪನ ಕಡೆ ನೋಡಿ “ಲೇ ಬಸ್ಯಾ… ಹೊಳಿ ಹಳ್ಳದಾಗ ನೀರಿಲ್ಲ ನಿಡಿ ಇಲ್ಲ ಇಷ್ಟು ಮಾತಾಡ್ತಿ… ಸಕಾಲಕ್ಕೆ ಮಳಿ ಬಿದ್ದಿದ್ರೆ ತತ್ವಾನೇ ಅರಗಿಸ್ಕೊಂಡು ಕುಡ್ದುಬಿಟ್ಟಿರ್‍ತಿದ್ಯೋ ಏನೋ? ಸುಮ್ಮನಿರಾಕ ಗಂಟೇನ್ತಗಂತೀ… ದೊಡ್ಡೋರ ಮಾತಿನಾಗ ಬಾಯಿ ಹಾಕ್ಬಾರ್ದಪ್ಪಾ… ಒಳ್ಳೇದಾಗಕಿಲ್ಲ… ತಿಳೀತಾ” ಎಂದು ಹೇಳಿದರು. ಅದಕ್ಕೆ ಹೌದೆಂಬಂತೆ ತಲೆ ಅಲ್ಲಾಡಿಸಿದನು.
ಅನಂತರ ವೈದಿಕರೀರ್ವರು ತಂತಮ್ಮ ವೃತ್ತಿಗಳನ್ನು ಚರ್ಚೆಯ ನಿಕಷಕ್ಕೆ ಒಳಪಡಿಸಿಬಿಟ್ಟರು. ಉಪಸಂಹಾರಕ್ಕೆ ಬಂದು ಕೀರ್ತಿಶೇಷರು ಆಚಾರಿ ನಿನ್ಗೆ ಶಾಸ್ತ್ರೋಕ್ತವಾಗಿ ಉಪನಯನ ಇತ್ಯಾದಿ ಕರ್ಮಕಾಂಡ ಆದಂತಿಲ್ವೋ? ಅಂದರು. ಅದರಿಂದ ಕೆರಳಿದ ವರದಾಚಾರ್ಯರು “ಶಾಸ್ತ್ರಿಗಳೇ ಮಾತಾಡೀ ಮಾತಾಡಿ ಏಕ ಏವ ಪರೋ ಹ್ಯಾತ್ಮಾ ಸರ್ವೇಷಾಯಪಿ ದೇಹಿನಾಮ್ (ಎಲ್ಲಾ ಪ್ರಾಣಿಗಳಿಗೂ ಒಂದೇ ಒಂದು ಶ್ರೇಷ್ಟವಾದ ಆತ್ಮ ಇರುವುದು) ಅಂತ ಭಾಗವತದಲ್ಲಿ ಹೇಳಿರೋದು ನಿಮ್ಗೂ ನೆನಪಿರಬೌದು. ಆ ಅತ್ಮಕ್ಕೆ ಸಂಸ್ಕಾರ ಕೊಡೋದ್ರಲ್ಲೇ ಪುರುಷಾರ್ಥ ಇರೋದು ಸ್ವಾಮೀ… ಆ ದೇವರ ಆಶೀರ್ವಾದವಿದ್ರ್ ನಾನೇ ನಿಮ್ಮ ಆತ್ಮಕ್ಕೆ ಸದ್ಗತಿ ಸಿಗೋ ಏರ್ಪಾಡು ಮಾಡ್ತೀನಿ… ನೋಡ್ತಿರಿ” ಎಂದರು ಅಸಹನೆಯಿಂದ.
“ಹೋಗೋ ಹೋಗು ವರದಽಽ… ನಿನ್ನ ಕೈಲಿ ಆತ್ಮ ಸಂಸ್ಕಾರ ಹೊಂದಲಿಕ್ಕೆ ನಾನೇನು ಪಾಪ ಮಾಡಿನ್ವೋ… ನನ್ನ ಶವ ಸಂಸ್ಕಾರವಾಗಲೀ; ಅಸ್ಥಿ ನಿಮಜ್ಜನವಾಗಲೀ ನಡೆಯೋದು ಕಾಶೀಕ್ಷೇತ್ರದ ಮಣಿಕರ್ಣಿಕಾ ಘಾಟ್‌ನಲ್ಲಿ ನೋಡ್ತಿರು” ಎಂದಂದೇ ಶಪಥ ಮಾಡಿದರು ನಮ್ಮ ತಾತನವರು. ಆ ಕ್ಷಣ ಮಾಡಿದ ನಿರ್ಧಾರವನ್ನು ದೈನಂದಿಕ ಗೋಜಿನ ನಡುವೆ ನೆನಪಿನಲ್ಲಿಟ್ಟುಕೊಂಡು ಬರೆದಿರುವುದೇ ದೊಡ್ಡ ಸಂಗತಿ.
“ಅಂತೂ ಪೂಜ್ಯ ಶಾಸ್ತ್ರಿಗಳ ಶವ ಸಂಸ್ಕಾರ ನಡೆಸಿಕೊಡಬೇಕಾಗಿ ಬಂತಲ್ಲ… ಇದೇ ನನ್ನ ಸೌಭಾಗ್ಯ… ನೀನೆನು ಯೋಚಿಸಬೇಡ ಶಾಮಣ್ಣ… ಎಲ್ಲ ಮುಗಿಸಿಕೊಟ್ಟೇ ನಾನು ಇಲ್ಲಿಂದ ಹೊರಡುವುದು… ಆಯ್ತಾ” ಎಂದು ಆಚಾರ್ಯರು ನನ್ನ ಮೈದಡವಿ ಧೈರ್ಯ ತುಂಬಿದರು…
ನಾನು ನೆಮ್ಮದಿಯಿಂದ ಉಸಿರುಬಿಟ್ಟೆ.
ಆಗಲೇ ವಿಷೇಶ ಸ್ನಾನ ಮಾಡಿಕೊಂಡು ಬಂದಿದ್ದ ವರದರು ಶವದ ಪಕ್ಕ ಕೂತುಕೊಂಡು ತಮ್ಮ ಧದ ಹದಿನೈದು ಸ್ಥಾನಗಳಿಗೆ ಭಸ್ಮೋದ್ದೂಲನ ಮಾಡಿಕೊಂಡು ವಿಷೇಶ ಶೋಭೆಯಿಂದ ಕಂಗೊಳಿಸುತ್ತ ಘಂಟಾನಾದದಿಂದಲೂ : ನೆರದಿದ್ದ ಜನರ “ಉಘೇ ಉಘೇ ಚಾಂಗು ಭಲರೇ” ಎಂದು ಕೂಗಿದ ಧ್ವನಿಯಿಂದಲೂ ಎಚ್ಚೆತ್ತ ನನ್ನ ತಾಯಿಯು ತನ್ನ ಸೊಸೆಯ ಸಹಾಯದಿಂದ ಹೊರಗಡೆ ಬಂದು “ಏನೋ ಆಚಾರಿ… ನನ್ನ ಮಾವನವರ ಸಂಸ್ಕಾರ ಮಾಡ್ಲಿಕ್ಕೆ ಬಂದಿದ್ದೀಯಲ್ಲ?… ನಿನಗೆಷ್ಟೋ ಧೈರ್ಯ… ಅವರು ಸಾಯೋ ಮುಂದುಗಡೆ ಬರೆದಿರೋ ಮರಣ ಶಾಸನದಲ್ಲಿ ಉಲ್ಲೇಖಗೊಂಡಿರೋ ಸಂಗತಿಯನ್ನು ನಿನ್ಗೂ ಹೇಳ್ಬೇಕೇನು? ನಿನ್ನಿಂದ ಸಂಸ್ಕಾರಗೊಂಡ್ರೆ ಆ ಅತ್ಮ ಯಾವ ಲೋಕಕ್ಕೂ ಹೋಗದೆ ಅತಂತ್ರವಾಗಿ ಉಳಿದುಬಿಡುತ್ತೆ… ಹೊರಡು… ಮೊದ್ಲು ಹೊರಡು ಇಲ್ಲಿಂದ… ” ಎಂದು ರಂಪಾಟ ಆರಂಭಿಸಿದಳು. ಇದರಿಂದ ವಾತಾವರಣದ ನೋವಿಗೆ ಮತ್ತೆರಡು ಕೋಡು ಬಂದವು.
ವರದಾಚಾರ್ಯರು ಮಾತ ಶತರುದ್ರೀಯ, ಸ್ವೇತಾಶ್ವತರ, ಅರ್ಥವಶಿರ ಅರ್ಥವಶಿಖಾ ಕೈವಲ್ಯಗಳನ್ನು ಜಪಿಸುತ್ತ ಧ್ಯಾನ ಮುದ್ರೆಯಿಂದ ಒಂಚೂರು ವಿಚಲಿತರಾಗಲಿಲ್ಲ.
ಟೆಂಗಿನ ಕಾಯಿನ ಮೇಲೆ ಹಚ್ಚಿದ್ದ ಉಂಡೆ ಕರ್ಪೂರ ಮಾತ್ರ ಜಾಜ್ವಲ್ಯಮಾನವಾಗಿ ಉರಿಯುತ್ತಿತ್ತು.
“ಅಯ್ಯೋ ಭಂಡ!… ಮಾನ ಇಲ್ಲದವನೇ… ಕೊಳದಲ್ಲಿ ಬಕ ಕೂತ್ಕೊಂಡಂತೆ ಕೂತಿರುವೆಯಲ್ಲೋ… ಎದ್ದು ಹೊರಡೋ ಮೊದ್ಲು” ಎಂದು ನನ್ನ ತಾಯಿ ಹುಚ್ಚಿಯಂತೆ ಅಬ್ಬರಿಸತೊಡಗಿದ್ದು ಸ್ರಿದ್ದ್ದ ಹಲವರಿಗೆ ಸರಿ ಕಾಣಲಿಲ್ಲ.
“ನಮ್ಮಾ ತಾಯಿ… ನೀವು ಮಾಡ್ತಿರೋದು? ಎಲ್ಲಾ ವೈಮನಸ್ಸು ಮರ್‍ತು ಅವರು ಬಂದು ವಿಧಿಗೆ ಕೂತಿರೋದೆ ದೊಡ್ಡ ವಿಷಯ… ನೆಮ್ಮದಿ ತಾಳೋದು ಬಿಟ್ಟು ಹೀಗೆ ತೊಂದರೆ ಕೊಡ್ತಿದ್ದೀಯಲ್ಲ ಇದು ನ್ಯಾಯವೇನಮ್ಮಾ” ವರದರ ಷಡ್ಡಕರಾದ ರಾಮಾಚಾರ್ಯರು ಬುದ್ಧಿವಾದ ಹೇಳಿದರು.
ಅದರಿಂದ ಕೆರಳಿದ ನಮ್ಮ ತಾಯಿ “ಏನೋ ರಾಮಾ ನಿಮ್ಮ ಕರಾಮತ್ತು ಹೆಂಣಾದ ನನಗೆ ಅರ್ಥ ಆಗಲ್ಲ ಅಂಥ ತಿಳ್ಕೊಂಡಿರೇನ್ರೋ” ಎಂದು ತಾನುವಿಧವೆ ಎಂಬ ಪರಿವೇ ಇಲ್ಲದೆ ಮುಂದಕ್ಕೆ ಧಾವಿಸಿದಳು.
ನನ್ನ ತಾಯಿಯೊಳಗೆ ಅರ್ಥವಾಗದ ಮತ್ತು ಕುಲಗೋತ್ರಗಳಿಲ್ಲದ ದೆವ್ವಗಳು ಹೊಕ್ಕಿಕೊಂದಿವೆ ಎಂದು ಭಾವಿಸಿದನಾನು ಚಂಗನೆ ಮುಂದಕ್ಕೆ ಜಿಗಿದೆ.
“ನಾನೇನು ಪಾಪ ಮಾಡಿದ್ದೀನಂತ ಹೀಗೆ ತೊಂದ್ರೆ ಕೊದ್ತಿದ್ದೀಯ ಅಮ್ಮಾ… ದಯವಿಟ್ಟು ಒಳಗಡೆ ಹೋಗಿ ನನ್ನ ಮತ್ತು ನನ್ನ ತಾತನವರ ಮರ್ಯಾದ ಕಾಪಾಡಮ್ಮ” ಎಂದು ಕೈಮುಗಿದು
ಪರಿಪರಿಯಾಗಿ ಬೇಡಿಕೊಳ್ಳತೊಡಗಿದೆನು.
ಮತ್ತೊಮ್ಮೆ ಜನರು “ಉಘೇ ಉಘೇ ಚಾಂಗು ಭಲರೇ” ಎಂದು ಕೂಗಿದರು.
“ಇಲ್ವೋ ವಂಶಘಾತಕನೇ… ನಿನ್ನ ತಾತನವರ ಒಂದು ಚಿಕ್ಕ ಆಸೆಯನ್ನು ಪೂರೈಸಲಾಗದ ನೀನು ಅವರ ಮೊಮ್ಮಗನೋ… ನೀನು ಪ್ರತಿ ತಿಂಗಳು ತಗೊಳ್ತಿರೋ ಸಾರ್ಕಾ‌ಅರಿ ಸಂಬಳ ನಿನ್ನಿಂದ ಮಾಡಬಾರದ್ದನ್ನೆಲ್ಲಾ ಮಾಡಿಸ್ತಿದೆ… ನನ್ನ ಮಾವನವರ ಕಳೇಬರ ಇಲ್ಲೇ ಕೊಳೆತು ಹೋದರೂ ಚಿಂತೆ ಇಲ್ಲ… ನಾನು ಮಾತ್ರ ಆ ಭಂಡ ವರದನನ್ನು ಸಂಸ್ಕಾರ ಮಾಡ್ಲಿಕ್ಕೆ ಬಿಡೋದಿಲ್ಲ” ಎಂದು ಚೀರಿಕೊಂಡಳು.
ತನಗೂ ಈ ರಂಪಾಟಕ್ಕೂ ಯಾವ ಸಂಬಂಧವಿಲ್ಲವೆಂಬಂತೆಯೂ: ನಿರ್ವಿಕಲ್ಪ ಚಿತ್ತದಿಂದಲೂ ನಿಂತು ನೋಡುತ್ತಿದ್ದ ಹೆಂಡತಿ ಕಡೆ ದುರುಗುಟ್ಟಿ ನೋಡಿದೆ.
ಮಾತೇ ರುದ್ರ ಶಿವಾತನೋ…
ಉಘೇ ಉಘೇ ಚಾಂಗು ಭಲರೇ
ನನಗೆ ಸಿಟ್ಟು ತಡೆಯಲಾಗಲಿಲ್ಲ. ಒಂದು ಕ್ಷಣ ಕವಿದ ಮಂಕಿನಲ್ಲಿ ತಾಯಿಯ ಕೆನ್ನೆಗೆ ಒಂದು ಏಟು ಕೊಟ್ಟೆ. ಹೆಂಡತಿಗೂ ಸಹ. “ಹೋ ಅಯ್ಯಯ್ಯೋ… ಕೊಂದು ಹಾಕಿಬಿಡೋ ನಮ್ಮಿಬ್ಬರನ್ನೂ…” ಎಂದು ಬಾಯಿಬಾಯಿ ಬಡಿದುಕೊಂಡ ಅವರೀರ್ವರನ್ನೂ ಅಡುಗೆಮನೆಗೆ ತಳ್ಳಿ ಬಂದೆ.

ಶತ್ರುತ್ವ ಕ್ರೋಧ ಯಾರಲ್ಲಿ ಹೇಗೆ ಅರಳುವವೋ? ಯಾವ ರೀತಿ ಸ್ಪೋಟಿಸುವುವವೋ? ಯಾರಿಗೂ ತಿಳಿಯದು. ಮುಖ್ಯವಾಗಿ ನೂರ್ಮಡಿಯಾಗಿ ನನಾಗೇ ನೋವಾಯಿತು.
“ವಿವಾದಲ್ಲಿ ಸಿಲುಕಿ ಈ ಹೆಣ ಶಾಶ್ವತವಾಗಿ ಓಣಿಯಾಲೇ ಉಳಿದುಬಿಟ್ಟರೆ ನಾವು ಮನೆ ಬಾಡಿಗೆ ಹಿಡಿದು ವಾಸಿಸುವುದಾದರೂ ಹೇಗೆ?” ಬಾಡಿಗೆಗೆಂದು ರುದ್ರನಾಯಕನ ಖಾಲಿ ಮನೆ ನೋಡಲೆಮ್ದು ಬಂದಿದ್ದ ಹೆಡ್‌ಕಾನ್‌ಸ್ಟೇಬಲ್ ನಾಗೇಂದ್ರಪ್ಪ ಬ್ರೋಕರ್ ಲಚುಮಯ್ಯನಿಗೆ ಹೇಳುತ್ತಿದ್ದ.
ಲಚುಮಯ್ಯಾ… ನನ್ ಹೆಂಡ್ತಿಗೆ ದೆವ್ವ ಪಿಶಾಚಿ ಅಂದ್ರೆ ಆಗದು… ಆಗ್ಲೆ ಒಂದೆರಡು ದೆವ್ವ ಆಕೆಯನ್ನು ಹಿಡ್ಕೊಂಡು ಬಿಟ್ಟಿರುವುದು
ಟು ಮಾರಾಯಾ… ಯಾಕಂತೀಯಾ ಆಕೆಯ ಕಂಣುಗಳಿಗೆ ಮಾತ್ರ್ ದೆವ್ವಗಳನ್ನು ಕಾಣೋ ಶಕ್ತಿ ಇರೋದು. ಆಕೆಯ ಮೈಯೊಳ್ಗೆ ಯಾವ್ದೇ ದೆವ್ವ ಸುಲಭವಾಗಿ ಹೊಕ್ಕೊಂಡು ಬಿಡ್ತದೆ ನೋಡು” ಎಂದೆಂದೇನೋ ಮಾತಾಡುತ್ತಿದ್ದ ನಾಗೇಂದ್ರಪ್ಪ…
“ಹಳೇ ಮಂದಿ… ಅವ್ರ ಪಾಡಿಗೆ ಅವರ್‍ನ ಬಿಟ್ಟು ಮುಂದಿನ ಕಾರ್ಯಕ್ಕೆ ಗಮನ ಕೊಡಪ್ಪಾ” ಕತುಗರ ವಿಠೋಬ ತಲೆಗೆ ವಲ್ಲಿ ಸುತ್ತುತ್ತ ಧೈರ್ಯ ತುಂಬಿದ.
ಉಘೇ ಉಘೇ ಚಾಂಗು ಭಲರೇಽಽ
ಹತ್ತಾರು ಜನರು ಹತ್ತಾರು ರೀತಿಯಲ್ಲಿ ಕೆಲಸಕ್ಕೆ ತೊಡಗಿದ್ದರು. ಅವರಲ್ಲಿ ನಾವಿದುವರೆಗೆ ತುಚ್ಛವಾಗಿ ನೋಡ್ಶಿದ ಶೂದ್ರರೇ ಹೆಚ್ಚು ಇದ್ದರು.
ದಾಮೋದರ, ಶ್ರೀಕಂಠ, ಸುಧೀಂದ್ರ, ಸೂರಿ, ವಾಸುಕೀ ಮೊದಲಾದ ಕಾಲೇಜು ಹಂತದ ವಿದ್ಯಾರ್ಥಿಗಳು ಅಗ್ರಹಾರದ ತಂತಮ್ಮ ತಂದೆ ತಾತಂದಿರ ಮಾತನ್ನು ಧಿಕ್ಕರಿಸಿ ಬಂದು ನಾನಾ ಕೆಲಸದಲ್ಲಿ ಭಾಗಿಯಾಗಿರುವುದು ನೋಡಿ ನಾನು ಕರಗಿ ಹೋದೆ. ಅವರಲ್ಲಿ ಪರಿಚಿತರೆಷ್ಟೋ ಅಪರಿತ್ಚಿತರೆಷ್ಟೋ…
ವೈದಿಕದ ಕೂಪದೊಳಗೆ ಮಂಡೂಕ ಪ್ರಾಯ ರೀತಿಯಲ್ಲಿ ಉಳಿದು ವಾರಿಗೆಯ ಪ್ರಪಂಚವನ್ನು ದೂರವಿಟ್ಟಿದ್ದ ನನ್ನ ಬಗ್ಗೆ ನನಗೇ ಅಪಾರ ಬೇಸರವಾಯಿತು. ಅದೇ ಹೊತ್ತಿಗೆ ಸರಿಯಾಗಿ ಚಿಂಚಿಣಿಯ ಪಾಂಡುರಂಗ ಶಾಸ್ರಿಗಳು “ಮಹಾಪರಾಧವಾಯ್ತಪ್ಪಾ ಶಾಸ್ತ್ರೀ ಮಹಾಪರಾಧವಾಯ್ತಪ್ಪಾ ನನ್ನಿಂದ” ಎಂದು ಕೆನ್ನೆಕೆನ್ನೆ ಬಡಿದುಕೊಳ್ಳುತ್ತ ಬಂದು ವಿಧಿಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡರು. ಓಂ ಸಹಸ್ರ ಶೀರ್ಷ್ಯಾಃ… ವೃಣೀಮಹೇ… ಮುಗಿಲಿಗೆ ಮುಟ್ಟಿತ್ತು ಮಂತ್ರೊಚ್ಚಾರ…
ಆಗಲೆ ತಾತನವರ ನಶ್ವರ ದೇಹಕ್ಕೆ ಸ್ನಾನ ಮಾಡಿಸಿ ಶುಭ್ರ ಬಿಳಿ ವಸ್ತ್ರಗಳನ್ನು ಉಡಿಸಿಜಲಮಿಶ್ರಿತ ಭಸ್ಮದಿಂದ ಆಯಾಯ ಸ್ಥಾನಗಳಲ್ಲಿ ತ್ರಿಪುಂಡ್ರ ಧಾರಣ ಮಾಡಿದ್ದರು,ಗಾಯತ್ರಿ ಮಂತ್ರೊಚ್ಚಾರಣದಿಂದ ಶುದ್ದೋದಕ ಸಿಂಪಡಿಸಿದ್ದ ಜಾಗದ ಮೇಲೆ ಮಂಚವನ್ನು ಇಟ್ಟು ಅದರ ಮೇಲೆ ಭಸ್ಮದ ಪುಡಿ ಹರಡಿ ಕಳ್ಬರವನ್ನು ಉದ್ದಕ್ಕೆ ಮಲಗಿಸಿದ್ದರು. ಅದರ ಮೇಲೆ ಗಂಧ ಹರಡಿದವರೊಬ್ಬರು, ಅಕ್ಷತೆ ಧೂಪ ದೀಪ ಪುಷ್ಪಗಳಿಂದ ಅಲಂಕರಿಸಿದ್ದು ಹಲವು ಮಂದಿ.
ಅಸ್ಯಾಂ ಗುಣವಿಶೇಶೇಣ ವಿಶಿಷ್ಟಾಯೂಂ… ಎಂದು ಮುಂತಾಗಿ ವರದರುಶುರು ಮಾಡಿದರೆ ಚಿಂಚಿಣಿ ಶಾಸ್ತ್ರಿಗಳು ಮಂತ್ರೈಸ್ಸಹಯುಷ್ಟೇ ಎಂದು ಮುಕ್ತಾಯಮಾಡಿದರು.
ಅಂಗಳದಲ್ಲಿ ನಿಂತಿದ್ದ ಕಟುಗರ ವಿಠೋಬನಂತೂ ಜಯಮಂಗಳ ಎಂದು ಹಾಡುತ್ತ ಭವಬಳ್ಳಿಯನ್ನು ಕಿತ್ತಾಡುತ್ತೆ ಎನ್ನುವಷ್ಟರಲ್ಲಿ ಗದ್ಗಿತನಾಗಿ ಶರಣಗಣ ಸಾಕ್ಷಿಯಾಗಿ ಎನ್ನುತ್ತಲೇ ಗೊಳೋ ಎಂದು ಬಿಕ್ಕಿ ಬಿಕ್ಕಿ ಅಳತೊಡಗಿದನು. “ಅಳಬ್ಯಾ‌ಅಣ್ಣಾ… ನೀನೇ ಮಕ್ಕಳಂಗೆ ಅತ್ರೆ ನಮ್ ಗತಿ ಹೆಂಗಣ್ಣ” ಎಂದು ಗರಡಿಮನೆ ಹುಡುಗರೆಲ್ಲ ಸಮಾಧಾನ ಹೇಳತೊಡಗಿದರು.
ಕಟುಗರ ವಿಠ್ಬನ ಕಣ್ಣಲ್ಲಿ ನೀರು ಬಂದದ್ದು ಒಂದು ಐತಿಹಾಸಿಕ ಘಟನೆ ಎಂಬುದಾಗಿ ಭಾವಿಸಿ ಕಮಲಾಕರ ಆ ದೃಹ್ಯವನ್ನು ಫೋಟೋದಲ್ಲಿ ಸೆರೆ ಹಿಡಿದನು.
ಕಂಣನ್ನು ನೀರಿನ ಕೊಳ ಮಾದಿಕೊಂಡಿದ್ದ ನನ್ನನ್ನು ಸುರೇಶ, ಮಾಧವ ಗಿಡಗಳ ನಡುವೆ ಕರೆದುಕೊಂಡು ಹೋಗಿ ಮೂರು ಬಿ
ದಿಗೆ ನೀರು ಸುರಿದರು. ಸೊಂತಕ್ಕೊಂದು ಹೆಗಲಿಗೊಂದು ಸೆಲ್ಲೆ ಹಾಕಿದರು. ವರದರು ನನ್ನ ಮೈಗೆ ಭಸ್ಮಧಾರಣೆ ಮಾಡಿಸಿ ಮಂತ್ರೋದಕ ಸಿಂಪಡಿಸಿದರೆ ಚಿಂಚಿಣಿಯವರು ಭಕ್ತಿಪೂರ್ವಕವಾಗಿ ಸಾಷ್ಟಾಂಗ ಪ್ರಣಾಮ ಸಲ್ಲಿಸುವಂತೆ ಸೂಚಿಸಿದರು. ಅದರಂತೆ ಮಾಡಿದೆ. ಅವರ ನಿರ್ದೇಶನದಂತೆ ಕೈಯಲ್ಲಿ ಕೆಂಡವಿದ್ದ ಅಗ್ಗಿಷ್ಟಿಕೆ ಹಿಡಿದುಕೊಂಡೆ. ಆಗಲೆ ಶಾಸ್ತ್ರ ರೀತ್ಯಾ ಸಿದ್ಧಪಡಿಸಿದ್ದ ವಿಮಾನದಲ್ಲಿ ತಾತನವರ ಕಳೇಬರವನ್ನು ಎತ್ತೊಯ್ದು ಮಲಗಿಸಿದೊಡನೆ ಒಳಗಿನಿಂದ ನನ್ನ ತಾಯಿ ಅಯ್ಯೋ ಮಾವನವರೆ… ನಮ್ಮನ್ನೆಲ್ಲ ಅನಾಥರನ್ನಾಗಿ ಮಾಡಿ ಹೋಗ್ತಿದ್ದೀರಾ… ನಿಮ್ಮ ಕೊನೆ ಆಸೆಯನ್ನಾದರೂ ಪೂರೈಸಲಿಲ್ಲಾಲ್ಲಾ ನಿಮ್ಮ ಮೊಮ್ಮಗನಿಗೆ… ಅವನು ಮಾಡ್ತಿರೋ ಅಪರಾಧವನ್ನು ಹೊಟ್ಟೇಲಿ ಹಾಕಿಕೊಂಡು ಆಶೀರ್ವಾದ ಮಾರಿ… ಎಂದು ಮುಂತಾಗಿ ಅಬ್ಬರಿಸುತ್ತ ಶವದ ತನ್ನನೆಯ ಕಾಲುಗಳನು ಗೈಯಾಗಿ ಹಿಡಿದುಕೊಂಡಳು. ಆಕೆಯಿಂದ ಅದನ್ನು ಬಿಡಿಸುವಷ್ಟರಲ್ಲಿ ಹುಡುಗರಿಗೆ ಸಾಕು ಸಾಕಾಯಿ ಹೋಯಿತು.
“ವರದಾಚಾರಿ… ಜೋಪಾನವಾಗಿ ಸಂಸ್ಕಾರ ಮಾಡಿ ಮುಗಿಸಪ್ಪಾ… ನಿನ್ನ ತಂದೆಯವರದೇ ಶವ ಅಂತ ತಿಳ್ಕೊಂಡು ಅಸ್ಖಲಿತವಾಗಿ ಮಾಡಪ್ಪಾ” ಎಂದು ಆಕೆ ಕೈ‌ಎತ್ತಿಮುಗಿಯಲು ಹುಟ್ಟಿದೊಡನೆ ತಂದೆಯನ್ನು ನುಂಗಿದವರಾದ ವರದರು ಕಂಣುಮುಚ್ಚಿ ತಮ್ಮ ತಂದೆಯವರನ್ನು ಒಂದು ಹಳೆಯ ಫೋಟೋದ ಮೂಲಕ ಕಲ್ಪಿಸಿಕೊಂಡು ತಾವೂ ಗದ್ಗದಿತರಾದರು.
“ಅಯ್ಯೋ ತಾಯಿ… ಎಂಥ ಮಾತಾಡ್ತಿದ್ದೀಯಮ್ಮಾ?… ಇಹಲೋಕ ತ್ಯಜಿಸೋ ಎಲ್ರೂ ನನ್ಗೆ ತಮಾನ ತಾಯಿ… ದ್ರೋಹ ಬಗೆದು ಣಾನ್ಯಾವ ನರಕಕ್ಕೆ ಹೋಗಲಮ್ಮಾ” ಎಂದು ಸಮಾಧಾನ ಮಾಡಿದರು. ವರಲಕ್ಷ್ಮಿ ತನ್ನ ಅತ್ತೆಯನ್ನು ಹಿಂದಕ್ಕೆ ಎಳೆದುಕೊಂಡಳು.
ದೇಹದೊಳಗಡಗಿದ್ದ ಜೀವಾತ್ಮನೇ ಪಂಚಭೂತದೊಳಗೊಯ್ಯುತ್ತಿರುವೆಯಾ…
ಗೋಪಿ ಚಿದಾನಂದ ತ
ಬೂರಿ ಮೀಟಲು…
“ದೇಹದೊಳಗನುದಿನವಿದ್ದು ಯಾರಿಗೂ ಹೆಳದೆ ಕೇಳದೆ ಹೋದೆಯಾ ಹಂಸಾಽಽಽ…
ಎಲ್ಲವ್ವನ ಭಕ್ತಾಗ್ರೇಸರನಾದ ಚವುಡನು ಚೌಡಿಕೆಯನ್ನು ಮೀಟಲು…
ಉಘೇ ಉಘೇ ಚಾಂಗು ಭಲರೇಽಽ
ಅಷ್ಟರಲ್ಲಿ ಕಮಲಾಕರ ಕೆಮರಾವನ್ನು ಕಂಣಿಗೆ ಅಡ್ಡ ಇಟ್ಟುಕೊಂಡು ಗಿರಿ ಇಟ್ಟನು.
“ಶಾಸ್ತ್ರಿಗಳ ಶವದೊಡನೆ ಒಂದು ಫೋಟೊ ತೆಗಿತ್ತಿದ್ದೀನಿ ಶಾಮಂಣಾಽಽ… ಈ ಅವಕಾಶ ಮತ್ತೊಮ್ಮೆ ಹುಡುಕಿದ್ರೂ ಸಿಕ್ತದಾ… ಪ್ಲೀಜ್” ಕಮಲಾಕರ ಎಂದೊಡನೆ ಹೊರಟಿದ್ದ ಎಲ್ಲರಲ್ಲಿ ವಿದ್ಯುತ್ಸಂಚಾರವಾಯಿತು. ವರಲಕ್ಷ್ಮಿ ತನ್ನತ್ತೆಯೊಡನೆ ಬಂದು ವಿಮಾನದ ಎರಡು ಪಕ್ಕ ನಿಂತರೆ, ಗೋಪಣ್ಣ ಮತ್ತು ಚಿ
ಚಿಣಿ ಶಾಸ್ತ್ರಿಗಳು ಹೆಗಲ ಮೇಲಿದ್ದ ಉತ್ತರೀಯವನ್ನು ಸರಿಪಡಿಸಿಕೊಂಡು ಮುಖ ಎತ್ತಿದರು. ಅಗ್ರಹಾರದ ಹುಡುಗರು ಮುಂದಿದ್ದವರು ಶವದ ಸಮೀಪಕ್ಕೆ ಬಂದರು. ಓಣಿಯ ಹುಡುಗರುಪ್ಪಡಿ ಸಿಕ್ಕ ಸಿಕ್ಕ ಎತ್ತರ ಸ್ಥಳವನ್ನೇರಿ ನಿಂತು ಹಲ್ಲು ಪ್ರದರ್ಶಿದರು. ಹೆಂಗಸರೂ ಹಿಂದೆ ಬೀಳಲಿಲ್ಲ.
ವಾತಾವರಣ ಇದ್ದಕ್ಕಿದ್ದಂತೆ ಬದಲಾದ್ದು ಕಂಡು ಕಮಲಾಕರನಿಗೆ ಬೇಸರವಾಯಿತು.
“ಇದೇನು ಹಿಂಗ್ ನಿಂತ್ಕೊಂಡ್ರಿ… ಮದುವೆ ದಿಬ್ಬಣದ ಫೋಟೋ ಅಲ್ರಿ ನಾನು ತೆಗೀತಿರೋದು ಶಾಸ್ತ್ರಿಗಳ ಶವ ಸಂಸ್ಕಾರದ ಫೋಟೊವನ್ನು… ಎಲ್ರು ಮುಖದಲ್ಲಿ ಸ್ವಲ್ಪಾದ್ರು ದುಃಖ ಪ್ರಕಟಿಸಿದ್ರೆ ಮಾತ್ರ ಫೋ ತೆಗೆದದ್ದ್ ಸಾರ್ಥಕ ಆಗ್ತದೆ” ಎಂದು ಸಲಹೆ ನೀಡಿದ.
ಅವನ ಸಲಹೆಯನ್ನು ಗೌರವಿಸಿ ಕೆಲವರು ಬಲವಂತದಿಂದ ಮುಖದಲ್ಲಿ ದುಃಖವನ್ನು ಪ್ರಕಟಿಸಲು ಪ್ರಯತ್ನಿಸಿದರು. ಕಟುಕರ ವಿಠೋಬಗೆ ಮಾತ್ರ ಎಷ್ಟು ಪ್ರಯ್ತ್ನಿಸಿದರೂ ದುಃಖವನ್ನು ಪ್ರಕಟಿಸಲು ಸಾಧ್ಯವಾಗಲೇ ಇಲ್ಲ. ಗತಿಸಿದ ಯಾವುದೋ ಒಂದು ದುಃಖ ಸನ್ನಿವೇಶವನ್ನು ನೆನಪಿಸಿಕೊಂಡನಾದರೂ ಅರ್ಥಪೂರ್ಣವಾಗಿ ಅದು ಮುಖದಲ್ಲಿ ಪ್ರಕಟವಾಗಲೇ ಇಲ್ಲ… ತಮ್ಮ ಉಸ್ತಾದನ ಕಷ್ಟ ಅರ್ಥ ಮಾ‌ಅಡಿಕೊಂಡ ಗರುಡಿಮನಿ ಹುಡುಗರ ಪೈಕಿ ಶರಭ ಎಂಬ ಉದಯೋನ್ಮುಖಿ ಪೈಲ್ವಾನನೊರ್ವನು ಅತುಲ ಬೇಸರದಿಂದ
“ಫೋಟೋ ತೆಗಿದ್ರೆ ತೆಗಿ, ಬುಟ್ರೆ ಬುಡು… ನಮ್ಮ ಗುರು ಹಿಂಗೇ ನಿಂದ್ರೋದು” ಎಂದು ಟಾಕುಟೀಕಾಗಿ ಹೇಳಿದನು.
ಉಘೇ ಉಘೇ ಚಾಂಗು ಭಲರೇ…
ನನಗಂತ್ ಕಮಲಾಕರನ ಸೃಜನಶೀಲ ವರ್ತನೆಯಿಂದ ತುಂಬ ಬೇಸರವಾಯಿತು. ಅದನ್ನು ಆ ಸ್ಥಿತಿಯಲ್ಲಿ ಪ್ರಕಟಿಸುವುದು ಸಾಧ್ಯವಾಗಲಿಲ್ಲ.
ನಾಳಿನ ರಾಜಕಾರಣದಲ್ಲಿ ಸಕ್ರಿಯವಾಗಿ ಭಾಗವಹಿಸಿದರಿ ನಾಯಕನಾಗಲಿರುವ ಗರುಡಿಮನೆಯ ಹುಡುಗರನ್ನು ಎದುರುಹಾಕಿಕೊಳ್ಳಲು ಇಚ್ಛಿಸದೆ ಕಮಲಾಕರನು ಎರಡು ಮೂರು ಫೋಟೋ ತೆಗೆದ ನಂತರ ಶವದ ಮೆರವಣಿಗೆ ಸ್ವಾಭಾವಿಕವಾಗಿ ಮುಂದುವರೆಯಿತು.
* * *

ಕಥೆಯ ಮುಂದುವರಿದ ಭಾಗವನ್ನು ಓದಲು ನನಗೆ ಸಾಕುಸಾಕಾಗಿ ಹೋಯಿತು. ಒಂದು ಚಿಕ್ಕ ವಸ್ತುವನ್ನು ಶಾಮಂಣ ಹಿಂಜಿಕೊಂಡು ಹೋಗಿರುವನೆಂದುಕೊಂಡೆ. ಅವನು ಬರೆದಿರುವ ಕಥೆ ನನ್ನೀ ಸದರಿ ಕಾದಂಬರಿಗೆ ಒಗ್ಗುವುದೋ ಇಲ್ಲವೋ ಎಂಬ ಆತಂಕದಿಂದ ಅರ್ಥಪೂರ್ಣ ಪಾಠವನ್ನು ಹಾಕಿಕೊಳ್ಳಲು ಹಿಂದೇಟು ಹಾಕಿದೆ. ಶಾಸ್ತ್ರಿಗಳ ಶವ ಬಜಾರದ ಮೂಲಕ ಹೊರತಾಗ ವಾಣಿಜ್ಯ ಮಂದಿಯು ಪ್ರತಿಕ್ರಿಯಿಸಿದ ರೀತಿಯನ್ನೇ ಐದು ಪು
ಟಗಳವರೆಗೆ ಬರೆದಿರುವನು. ಒಂದು ಶವ ಶಾಸ್ತ್ರಿಗಳದ್ದೇ ಆಗಿರಲಿ, ಸಾಮಾನ್ಯ ಪ್ರಜೆಯದ್ದೇ ಆಗಿರಲಿ… ಅದರ ಬಗ್ಗೆ ಜನರು ಹೀಗೆಯೇ ಪ್ರತಿಕ್ರಿಯಿಸಬೇಕೆಂದು ನಿರ್ದೇಶಿಸಲಿಕ್ಕೆ ಅವನು ಯಾರು ಹೆಗಲ ಮೇಲೆರಿಣದ ಬಿಂದಿಗೆಯನ್ನು ಕೈಯಲ್ಲಿ ಬೆಂಕಿಯ ಮಡಿಕೆಯನ್ನು ಹಿಡಿದು ಮೆರವಣಿಗೆಯ ಮುಖ್ಯಪಾತ್ರವಾಗಿರುವ ಅವನು ಇಕ್ಕೆಲದ ವಿದ್ಯಮಾನ ಗಮನಿಸುವುದು ಎಷ್ಟರಮಟ್ಟಿಗೆ ಸರಿ ಎಂಬ ಅನುಮಾನ ಎಂಥವರಿಗೂ ಬಾರದಿರದು.. ಇದು ಅಸ್ವಾಭಿಕವೂ ಕೂ‌ಅ. ಬೇರೊಂದು ಪಾತ್ರದ ಮೂಲಕ ಕಥೆಯನ್ನು ನಿರೂಪಿಸಬಹುದಿತ್ತು. ನಿಚ್ಚಳವಾಗಿ ತನ್ನ ಖಾಸಗಿ ಬದುಕನ್ನೇ ತುಂಬಿರುವುದರ ಜೊತೆಗೆ ಉಪದ್ರವಿಯಾದ ನನ್ನನ್ನೂ ಕಥೆಯೊಳಗೆ ನೇರವಾಗಿ ಎಳೆದುಬಿಟ್ಟಿದ್ದಾನೆ. ಆದ್ದರಿಂದಾಗಿಯೇ ಅವನು ಪ್ರಕಟಣೆಗಾಗಿ ಯಾವುದಾದರೂ ನಿಯತಕಾಲಿಕಕ್ಕೆ ಕಳಿಸುವ ಗೋಜಿಗೆ ಹೋಗಿಲ್ಲ. ಕಮಲಾಕರನ ಮೇಲಿನ ಸಿಟ್ಟನಿಂದಾಗಿ ಶಿವಪೂಜೆ ಸುರೇಶ್ ಗೌಡ ಹೇಣ ದಫನ್ ಮಾಡಲಿಕ್ಕೆ ಹುಲುಳಿ ಹಳ್ಳದ ಮಗ್ಗುಲಲ್ಲಿ ತನ್ನ ಹೊಲದಲ್ಲಿ ಅವಕಾಶ ಕೊಡದಿದ್ದುದು ಶಾಮಂಣನ ದುಹ್ತಿಯಲ್ಲಿ ಒಂದು ಅಪರಾಧವಾಗಿ ಕಂಡಿರುವುದು. ಕಥೆಯ ಅಂತಿಮ ಭಾಗವಂತೂ ಸಂಸ್ಕೃತ ಶ್ಲೋಕಗಲಿಂದ ತುಂಬಿ ಜೀಕಿ ಉಸಿರುಕಟ್ಟುವಂತಿರುವುದು.
ಓದಿದ ಮತ್ತು ಕೇಳಿದ ಅನ್ನಪೂರ್ಣೆಗಂತೂ ಬೆಟ್ಟದಷ್ಟು ಸಿಟ್ಟು ಬಂತು. “ಎಂಥ ನೀಚ ಕಣ್ರೀ ಆ ನಿಮ್ಮ ಸ್ನೇಹ್ತ… ನಿಮ್ಮ ಹೆಸರ್ನಲ್ಲಿ ರೂಂ ಕಾತಗೊಂಡಿದೂ ಅಲ್ದೆ ವ್ಯ್ಭಿಚಾರ ಮಾಡ್ಲಿಕ್ಕೆ ಪ್ರಯತ್ನ ಪಟ್ಟನಲ್ರೀ… ಥೂ! ಭೂಮಿ ಮೇಲೆ ಇಂಥೋರು ಇರ್ತಾರೆ… ಇದ್ರೂ ನಿಮ್ಮಂಥವರೂ ಇಂಥವರ ಗ್ರ್ಳ್ರ್ತನ ಮಾಡ್ತಾರೆಯೇ… ಅಂದಹಾಗೆ ನೀವು ಎಂದಾದ್ರು ಹೋಟ್ನಲ್ಲಿ ಇಂಥ ಕೆಲಸ ಮಾಡಿರೋದುಂಟಾ ಇಲ್ವಾ! ಅಷ್ಟು ಹೇಳಿ” ಎಂದು ಪಟ್ಟು ಹಿಡಿದಳು.
“ಏನೆ ನೀನೂ ಅವ್ನು ಬರೆದಿರೋದ್ನ ನಂಬ್ತೀಯಾ!”
“ಬೆಂಕಿ ಇಲ್ದೆ ಹೊಗೆ ಬರ್ತದೇನ್ರಿ!”
ಯಾವ ಬೆಂಕಿ? ಯಾವ ಹೊಗೆ? ಯಾವುದ್ಯಾವುದ್ಕೋ ಜೋಡಿಸ್ತಿದ್ದೀಯಲ್ಲೇ ಮಾರಾಯ್ತಿ… ನಿನ್ನಾಣೆಯಾಗೂ ನಾನಿಂಥ ಕೆಲಸ ಮಾಡೋನಲ್ಲ… ನಂಬು!
ಮತ್ತೆ ಇನ್ನಾದರೂ ಸಾಯ‌ಏಕು ಎಂಬ ಕಥೆಯಲ್ಲಿ ಸೂಳೆಗಾರಿಕೆ ಮಾ‌ಅಲಿಕ್ಕೆ ಹೋಟ್ನಲ್ಲಿ ರೂಂ ತಗೊಂಡಿದ್ದಾಗಿ ಕೊಚ್ಕೊಂಡಿದೀರಲ್ಲ! ಅದೂ ಸುಳ್ಳೇನು?”
ಅಯ್ಯೋ ಹುಚ್ಚಿ… ಅದೆಲ್ಲ ನಂತೀಯಲ್ಲ… ನಿನ್ನ ತಿಳುವಳಿಕೆಗೆ ಏನನ್ನೋದು! ನಾವು ಮೊದಲೇ ಲೇಖಕರು… ನಮ್ಮ ಸ್ವಭಾವ ವಿಚಿತ್ರವಾಗಿರ್‍ತದೆ… ಸಂಭೋಗದ ಬಗ್ಗೆ ಒಂಚೂರು ಅನುಭವ ಇಲ್ದೋನು ತಾನು ಮಹಾ ರತಿಕ್ರೀಡಾ ನಿಪುಣ ಎಂದು ಪೋಜು ಕೊಡ್ತಿರ್‍ತಾನೆ. ತಾನು ಮಹಾಪತಿವ್ರತೆ ಅಂತ ಪೋಜ್ ಕೊಡ್ತಿರೋಳು ಗುಟ್ಟಾಗಿ ಹಾದರಗಿತ್ತಿ ಆಗಿರ್‍ತಾಳೆ… ಸದಾ ಅಹಿಂಸೆ ಬಗ್ಗೆ ಮಾತಾಡೋನು ಒಳಗೊಳಗೆ ಹಿಂಸಾರಾಧಕನಾಗಿರುತ್ತಾನೆ… ಮನುಷ್ಯ ಸ್ವಭಾವವೇ ತುಂಬ ವಿಚಿತ್ರವಾದುದು. ಲೆಖಕನಾದ ನಾನೂ ಒಬ್ಬ ಮನುಷ್ಯ ಎಂಬುದನ್ನು ಮರೆಯಬೇಡ,,, ಸುಪ್ತ ಕಾಮನೆಗಳಿಗೆ ಅಕ್ಷರ ರೂಪ ಕೊಟ್ಟು ಚಪಲ ತೀರಿಸಿಕೊಳ್ತೀನಿ…”
“ಹೀಗೆ ಪೋಜ್ ಕೊಡೋದ್ರಲ್ಲಿ ನೀವು ಎಕ್‌ಸ್ಟ್ರಾರ್ಡಿನರಿ ಆಗಿ ಬಿಟ್ಟಿದ್ದೀರಿ…ಇದು ನಿಮ್ಮ ಗೌರವ ಪ್ರಶ್ನೆ… ಕಥೆಯೊಳಗಿರೋ ಆ ಭಾಗ್ಫಾನ ಎಡಿತ್ ಮಾಡಿ ಹಾಕ್ರಿ… ಈ ಸಮಾಜ ಮೊದ್ಲೆ ಗುಮಾನಿಯದು. ಈಚಲ ಮರದ ಕೆಳಗೆ ಕೂತ್ಕೊಂಡು ಮಜ್ಜಿಗೆ ಕುಡಿದ್ರೂ ಹೆಂಡ ಅಂತ ತಿಳ್ಕೋಂತದೆ… ಹುಷಾರಾಗಿರ್ರಿ… ಬರೆಯೋಕೆ ಬರ್‍ತದೆ ಅಂತ ಏನೋನೋ ಬರೆಯೋಕೆ ಹೋಗಬೇಡ್ರಿ”
“ಹಾಗೇ ಆಗ್ಲಿ ಮಾರಾಯ್ತಿ… ಎಡಿಟ್ ಮಾಡೇ ಹಾಕ್ತೀನಂತ ಇಟ್ಕೋ… ಬರೆಯೊರ್‍ಗಿಂತ ಹೆಚ್ಚು ಸೃಜನಶೀಲವಾದ ಓದುಗ, ಬೆರಳು ತೋರಿಸಿದ್ರೆ ಹಸ್ತ ನುಂಗೋ ಜಾಯಮಾನ್ದೋನು… ನಾವು ಬರೆಯದೇ ಇದ್ದ ಭಾಗಕ್ಕೆ ಬಣ್ಣ ಕೊಟ್ಟು ಊಹಿಸಿಕೊಳ್ಳೋದ್ರಲ್ಲಿ ಅವನು ನಿಸ್ಸೀಮ ಕಣಮ್ಮ… ಅದ್ಕೆ ಅವಕಾಶ ಕೊಡೋದದ್ರು ಯಾಕೆ? ಇದ್ದದ್ದು ಇಲ್ಲದ್ದು ಎಲ್ಲ ಬರ್ದು ಅವನ ಮುಂದಿಡೋದಷ್ಟೆ. ವಾಂತಿ ಮಾಡ್ಕೋತಾರಲ್ಲ ಹಾಗೆ! ಮಗೂ ಹೆರ್‍ತಾರಲ್ಲ ಹಾಗೆ ಅಷ್ಟೆ”
ಏನೋ… ನೀವು ಮಾತಾಡೋ ತಳಬುಡ ಒಂದೂ ಅರ್ಥ ಆಗ್ತಾ ಇಲ್ಲ. ನೀವು ಹೀಗೆಲ್ಲ ಎಕ್ಸ್‌ಪೋಜಾಗೋದಾದ್ರೆ ಬರೆಯದೆ ನಾಲ್ಕು ಜನರಂಗೆ ಹೆಂಡ್ತಿ ಮಕ್ಕಲೋಂದಿಗೆ ಆಡೊಕೊಂಡು ಕಾಲ ಕಳೆಯೋದೆ ವಾಸಿ ಅನ್ಸುತ್ತೆ… ಬರೆದ್ರೆ ನಿಮ್ಗೆ ಕಿರೀಟ ಬರೋದಷ್ಟರಲ್ಲೆ ಇದೆ… ಈ ಸಾಹಿತ್ಯ ಪಾಹಿತ್ಯನೆಲ್ಲ ತಲೆಗೆ ಹಚ್ಕೊಂಡು ಎಂಥೆಂಥೋರೆ ನಿರ್ನಾಮ ಆಗ್ಯಾರ… ಇನ್ನು ನೀವ್ಯಾವ ಲೆಕ್ಕ? ಸಮಯ ಸಂದರ್ಭ ಒಂದೇ ರೀತಿ ಇರೋದಿಲ್ಲ… ಒಂದು ಹೋಗಿ ಇನ್ನೊಂದಾಗಿ ಬಿಟ್ರೆ ಏನ್ಮಾಡೋದು?” ಎಂದು ಗೊಣಗುತ್ತ ಲಗುಬಗೆಯಿಂದ ಅಡುಗೆಮನೆ ಪ್ರವ್ಶಿಸಲುನಾನು ನೆಮ್ಮದಿಯ ಉಸಿರುಬಿಟ್ಟೆನು.
ಯೋಚಿಸುತ್ತ ಹೋದಂತೆ ಹೆಂಡತಿಯಾದ ಅನ್ನಪೂರ್ಣ ಒಬ್ಬ ಲೇಖಕನಿಗಿಂಥ ಸಮರ್ಥವಾಗಿ ಸಮಾಜವನ್ನು ಅರ್ಥಮಾಡಿಕೊಂಡಿದ್ದಾಳೆ ಎಂಬ ಸತ್ಯದ ಮಾತು ಅರಿವಾಯಿತು. ಬರೆಯುವ ಕ್ರಿಯೆ ನನಗೂ ಹಿಂಸದಾಯಕ ಕ್ರಿಯೆಯೆ. ಆದರೆ ಮುಂದಿಟ್ಟ ಹೆಜ್ಜೆ ಹಿಂದಿಡುವಂತಿಲ್ಲ. ಶಾಮನು ಬರೆದಿರುವ ಅಪ್ರಕಟಿತ ಕಥೆಯಲ್ಲಿ ತನ್ನನ್ನು ತಾನು ಪ್ರಮಾಣಿಕವಾಗಿ ಅನಾವರಣಗೊಳಿಸಿಕೊಂಡಿರುವನಲ್ಲದೆ ಕಮಲಾಕರನನ್ನೂ; ಸಂತಾಪಿ ಉಪದ್ಯಾಪಿ ಜನರನ್ನೂ ಬತ್ತಲೆಯಾಗಿ ನಿಲ್ಲಿಸಿದ್ದಾನೆ ಎಂದುಕೊಂಡೆ. ಕಥೆ ತೀರಾ ವೈಯಕ್ತಿಕವಾಗಿರುವುದರಿಂದ ಅವನದನ್ನು ಪತ್ರಿಕೆಗಳಿಗೆ ಕಳಿಸುವ ಗೋಜಿಗೆ ಹೋಗಿಲ್ಲ. ಎಷ್ಟು ವೈಯಕ್ತಿಕವೆಂದರೆ ಕಮಲಾಕರ ಜಲಜಾಕ್ಷಿಯರಿಂದ ಶವಸಂಸ್ಕಾರಕ್ಕೆ ಪಡೆದ ಸಾಲವನ್ನು ತೀರಿಸಲು ತಾನು ಕ್ರಮಿಸಿದ ವಾಮಮಾರ್ಗಗಳನ್ನೂ ನಿಸ್ಸಂಕೋಚವಾಗಿ ಪ್ರಸ್ತಾಪಿಸಿದ್ದಾನೆ. ಆತ್ಮಕಥನ ವೇಗದಲ್ಲಿ ಓಡಿದ ಕಥೆ ಹೀಗೇ ಮುಂದುವರಿದಿದ್ದಲ್ಲಿ ಬೃಹದಾಕಾರ ತಾಳುತ್ತಿತ್ತೋ ಏನೋ ಯಾರು ಬಲ್ಲರು!

ಅವನು ಅರ್ಥವಾಗದ ಮತ್ತು ಬಗೆಹರಿಸಲಾಗದ ಬಿಕ್ಕಟ್ಟಿನಲ್ಲಿ ಸಿಲುಕಿಕೊಂಡು ಒದ್ದಾಡಿದ ಕಾರಣದಿಂದಾಗಿಯೋ ಏನೋ ಲೇಖಕನಾಗಿ ಮುಂದುವರಿಯಲಾಗದೆ ಮತ್ತು ಸ್ಪಷ್ಟವಾಗಿ ಬದುಕಲಾಗದೇ ಹೋದ ಎ
ಬುದರ ಬಗ್ಗೆ ನಾನು ಓದಿದ ಕಥೆ ಬೆಳಕು ಚಲ್ಲುತ್ತದೆ. ತನ್ನ ತಾತನರ ಪರಮೇಚ್ಛೆಯಂತೆ ಅವರ ಶವ ಸಂಸ್ಕಾರವನ್ನು ಕಾಶೀಕ್ಷೇತ್ರದ ಪವಿತ್ರ ಮಣಿಕರ್ಣಿಕಾ ಘಾಟ್‌ನಲ್ಲಿ ನಡೆಸಲಾರದ ಅಸಹಾತಕತೆ, ಮತ್ತು ಅವರ ಅಸ್ಥಿ ನಿಮಜ್ಜನಾ ಕಾರ್ಯವನ್ನು ಅಲಹಾಬಾದಿನ ಪ್ರಯಾಗದ ತ್ರಿವೇಣಿ ಸಂಗಮದಲ್ಲಿ ಮಾಡಲಾಗದ ಅಸಹಾಯಕತೆ ಅವನನ್ನು ಬದುಕಿರುವ ಪರ್ಯಂತ ಕಾಡಿರಲಿಕ್ಕೂ ಸಾಕು. ಇಲ್ಲವಾದರೆ ಶಾಸ್ತ್ರಿಗಳ ಅಸ್ಥಿ ಮತ್ತು ಚಿತಾ ಭಸ್ಮವನ್ನುಹೊಳೆ ಹಳ್ಳ ಕೊಳ್ಳಗಳಲ್ಲಿ ವಿಸರ್ಜಿಸದೆ ಯಾಕೆ ಭದ್ರಪಡಿಸಿಕೊಂಡಿರುತ್ತಿದ್ದ? ಶಾಸ್ತ್ರಿಗಳು ತಾವು ಬರೆದೆನ್ನಲಾದ ಉಯಿಲಿನಲ್ಲಿ ತಮ್ಮ ಮೊಮ್ಮಗನಾದ ಅವನನ್ನು ತರಾಟೆಗೆ ತೆಗೆದುಕೊಂಡಿರುವುದೂ ಅವನ ಈ ಅಳುಕಿಗೆ ಕಾರಣವಾಗಿರಬೇಕು. ಪರಮಪೂಜ್ಯರಾದ ಪರಮೇಶ್ವರ ಶಾಸ್ತ್ರಿಗಳ ಉಯಿಲನ್ನು ಶಾಮನು ಬಿಡುವಿನ ಸಮಯದಲ್ಲಿ‌ಓದುತ್ತ ತನ್ನ ಸಂಕಟಕ್ಕೆ ಒಳ ಮತ್ತು ಹೊರ ಅಲಂಕರಣ ಮಾಡಿರಬೇಕು. ಮುಖ್ಯವಾಗಿ ಅವನಿಗೆ ಹಳತಾದ ವಸ್ತುಗಳ ಬಗ್ಗೆ ಖಯಾಲಿ ಹೆಚ್ಚು ಎಂಬುದನ್ನು ಬಲ್ಲೆ. ಯಾವುದೋ ಒಂದು ಕಪ್ಪು ಕಲ್ಲಿನ ತುಂಡನ್ನು ಜಕ್ಕಣಾಚಾರಿ ಕೆತ್ತಿರುವುದೆಂದು ತೋರಿಸುತ್ತಿದ್ದ. ತ್ರಿಕೋನಾಕೃತಿಯ ಬೆಣಚು ಕಲ್ಲಿನ ತುಂಡನ್ನು ತೋರಿಸುತ್ತ ಇದು ಹಳೇಶಿಲಾಯುಗ ಕಾಲದ್ದು ಎಂದಿದ್ದ. ಯವುದೋ ಇಟ್ಟಿಗೆ ತುಂಡನ್ನು ತೋರಿಸಿ “ಇದು ಮೆಹಂಜೋದಾರದ್ದು” ಎಂದಿದ್ದ. ನಖಶಿಖಾಂತ ಆಧುನಿಕ ಉಡುಪು ತೊಟ್ಟಿರುತ್ತಿದ್ದ ಅವನುಮುಂಗೈಗೆ ಗುಜರಿ ವಾಚು ಕತ್ತಿಕೊಂಡಿರುತ್ತಿದ್ದ. ಅಂಥ ಜಾ‌ಅಯಿಮಾನದ ಅವನು ತನ್ನ ತಾತನವರು ಬಳಸುತ್ತಿದ್ದ ವ್ಯಾಸ ಪೀಠ , ಉತ್ತರೀಯ, ಚಾಳೀಸು, ತಾಮ್ರದ ತಂಬಿಗೆ, ಕೋಲು ಇವೆಲ್ಲವುಗಳನ್ನು ಜೋಪಾನದಿಂದಕಾಯ್ದಿರಿಸಿದ್ದ. ಹಾಗೆಯೇ ಅವನು ಉಯಿಲಿನ ತಾಳೆಗರಿ ಕಟ್ಟನ್ನು ಜೋಪಾನವಾಗಿರಿಸಿಕೊಂಡು ಸಂಕಟದ ಹೊರಭಾಗಕ್ಕೆ ಆನಂದದ ಲೇಪ ಹಚ್ಚಿ ಇಟ್ಟುಕೊಂಡಿರಬೇಕು. ಆ ತಾಳೆಗರಿಯ ಕಟ್ಟು ನೋಡಿದ ಮೊದಲಿಗೆ ನಾನೂ ವಿಸ್ಮಯಾನಂದ ಪ್ರಕಟಿಸಿದ್ದುಂಟು. ಗುಬ್ಬಿ ವೀರಣ್ಣೊಡೆಯರ ಶೂನ್ಯ ಸಂಪಾದನೆ ಮತ್ತು ಚಿದಾನಂದಾವಧೂತರ ವೇದಾಂತ ಜ್ಞಾನ ಸಿಂಧುಗಳ ಕಟ್ಟುಗಳ ನಡುವೆ ಇಟ್ಟು ಹೆಮ್ಮೆಯಿಂದ ಬೀಗುತ್ತಿದ್ದೆ. ಸದರೀ ಕಾದಂಬರಿ ಮುಂದುವರಿಸುವ ಸಂದರ್ಭದಲ್ಲಿ ಶಾಸ್ತ್ರಿಗಳ ಉಯಿಲನ್ನು ಹಾಕಿಕೊಳ್ಳಬೇಕಾಗಿ ಬಂದಾಗಲೇ ನನ್ನ ದೌರ್ಬಲ್ಯದ ಅರಿವು ಕೆಲವು ಗೆಳೆಯರಿಗಾದದ್ದು. ಕೆಲವು ಬಂಡಾಯ ಸಾಹಿತ್ಯದ ಸಂಘಟನೆಯ ಗೆಳೆಯರು ನನ್ನ ಕಂಕುಳಲ್ಲಿ ಪ್ರದರ್ಶಿತ ಅದನ್ನು ನೋಡಿ ಪಕಪಕ ನಗಾಡಿದ್ದು. ಸಮಾನತೆಯ ಭೂತದ ಕೈಗೊಂಬೆಯಾಗಿರುವ ಈ ಕುಂವೀ ಎಂಬುವನು ವಿಶವಿದ್ಯಾಲಯದ ಪ್ರಾಚ್ಯ ವಸ್ತು ಸಂಗ್ರಹಾಲಯ ಸೇರಲಿಕ್ಕೆ ಅರ್ಹನಾಗಿರುವನೆಂದು ಲೇವಡಿ ಮಾಡಿದ್ದುಂಟು.

ಇನ್ನೇನು ನಾನು ನಿರ್ನಾಮವಾಗಿಬಿಟ್ಟೆನೆಂದು ಅವರು ಊಹಿಸಿಕೊಂಡಿರುವ ಹೊತ್ತಿನಲ್ಲಿ ಶಾಸ್ತ್ರಿಗಳ ಉಯಿಲು‌ಅನ್ನು ಹೊತ್ತುಕೊಂಡು ಹತ್ತಿರದ ಹಂಪಿಯಲ್ಲಿ ನೀರೊಳಗೆ ತೆಲಾಡುವ ಘೃತದ ಬಿಂದುವಿನಂತೆ ಇರುವ ಕನ್ನಡ ವಿಶ್ವವಿದ್ಯಾಲಯಕ್ಕೆ ಹೋದೆ. ಭೂತಕಾಲವನ್ನು ಮತ್ತು ವರ್ತಮಾನವನ್ನು ಏಕಕಾಲಕ್ಕೆ ಬದುಕುತ್ತ ಆಧುನಿಕತೆಯ ಪರಿವೇಷದೊಳಗೆ ಸನಾತನತೆಯನ್ನು ಬಚ್ಚಿಟ್ಟುಕೊಂಡು ಕನ್ನಡದೊಳಗೆ ಸಂಸ್ಕೃತವನ್ನು ಬಿತ್ತಿ ಬೆಳೆಯುತ್ತ ಕ್ಲಿಷ್ಟವಾಗಿರುವ ಮಲ್ಲೇಪುರಂ ವೆಂಕಟೇಶರೆಂಬ ಗೆಳೆಯನ ಬಳಿಗೆ ಹೋಗಿ ‘ನೋಡಿ ಸ್ವಾಮಿ ನಾನಿರೋದೆ ಹೀಗೆ!’ ಅಂತ ಹೇಳಿದೆ. ಆತ ಅದಕ್ಕಿದ್ದು “ತುಂಬಾ ಫೆಂಟಾಸ್ಟಿಕ್ಕಾಗಿದೆ ನಿಮ್ಮ ಐಡಿಯಾ… ಆಧುನಿಕತೆಯ ಎರಡು ಧೃವಗಳ ನಡುವೆ ಅರ್ಥಪೂರ್ಣವಾದ ಡಿಸ್‌ಕೋರ್ಸ್ ಏರ್ಪಡುವಂತಿದೆ. ಎಲ್ಲಿ ಆ ಓಲ್ಡ್ ಈಜ್ ಗೋಲ್ಡ್” ಎಂದವರೆ ನನ್ನ ಕಂಕುಳಿಗೆ ತಮ್ಮ ಅಮೃತ ಹಸ್ತ ಹಾಕಿ ತಾಳೆಗರಿ ಕಟ್ಟನ್ನು ಕಿತ್ತು ಮುಂದೆ ಹರಡಿಕೊಂಡೇ ಬಿಟ್ತರು… ಮಂತ್ರ ಪಟಿಸುತ್ತಿರುವಂತೆ ಓದಿದಂತೆ ಮಾಡಿ ಇದು ರಿಯಲಿ ಓಲ್ಡೆಸ್ಟ್ ಗೋಲ್ಡು ಕುಂವೀ… ಇದ್ರಲ್ಲಿರೋ ಲ್ಯಾಂವೇಜಿಗೆ ಏನಿಲ್ಲಾಂದ್ರೂ ಳೆಂಟು ನೂರು ವರ್ಹಗಳಾಷ್ಟಾದ್ರು ವಯಸ್ಸಾಗಿದೆ. ಭಾಷಾ ಬಳಕೆ, ವಸ್ತು ವಿನ್ಯಾಸ ಮಾರ್ವಲೆಸ್…” ಎಂದು ಅಂಗವಸ್ತ್ರದಿಂದ ಹಣೆಯ ಬೆವರೊರೆಸಿಕೊಂಡರು. “ರಾಘವಾಂಕ ವಾರ್ಧಕ ಷಟ್ಪದಿಯಲ್ಲಿ ಕ್ರಾಂತಿ ಮಾಡ್ತಿರುವಾಗ ಈ ಕೃತಿಕಾರ ಅಪೂರ್ವವಾದ ಗದ್ಯದಲ್ಲಿ ಕಸರತ್ತು ಮಾಡಿದ್ದಾನಲ್ಲ… ವಂಡರ್‌ಫುಲ್… ಶಿವಕೋಟ್ಯಾಚಾರ್ಯರ ನಂತರ ಇವನೇ ಗದ್ಯವನ್ನು ಅದ್ಭುತವಾಗಿ ಬಳಸಿರೋದೆಂದು ಕಾಣ್ತದೆ… ಇದ್ದ್ನ ನಮ್ಮೂನಿವರ್ಸಿಟಿಗೆ ಕೊಬಿಡಿ… ಇದು ವ್ಯಾಲ್ಯುಬಲ್ ಆಂಟಿಕ್ ಥಿಂಗ್” ಎಂದರು. ಸಖೇದಾಶ್ಚರ್ಯದಿಂದ. ಏನೀ ನನ್ನ ಗೆಳೆಯನ ನಾಲಿಗೆ ಮೇಲೆ ಸಂಸ್ಕೃತ ಗುಳೇ ಹೊಂಟು ಆ ಜಾಗದಲ್ಲಿ ಇಂಗ್ಲೀಷು ಬಂದು ತೆಂಟು ಹಾಕಿಬಿಟ್ತಿಡೆಯಲ್ಲಾ ಎಂದುಕೊಂಡೆ. ಅವರು ಆ ಕಟ್ಟನ್ನು ಮೂಸಿನೋಡಿ ಅದರ ಕಾಲವನ್ನು ನಿರ್ಧರಿಸುವ ಪ್ರಯತ್ನ ಮಾಡಿದರು. ನಾನು ಸುಮ್ಮನಿದ್ದರೆಲ್ಲಿ ಆ ತಾಳೆಕಟ್ಟು ಪ್ರಾಚ್ಯ ವಸ್ತುಗಳ ಸಂಗ್ರ ಸೇರಿಬಿಡುವುದೋ ಎಂದು ಹೆದರಿ “ಹಾಗಲ್ಲ ಪಂಡಿತರೇ… ಎಂದೆ. ಅವರಿಗೆ ‘ಪ್ರಿಯ ಅಂತ ನಾವು ಹಾಗೆ ಕರೆಯುತ್ತಿದ್ದೆವು ಸಿದ್ದಗಂಗ ಮಠದ ಕಾಲದಿಂದಲೂ. ಶೂದ್ರಾತಿ ಶೂದ್ರ ಕಮ್ಯುನಿಟಿಯಲ್ಲಿ ಹುಟ್ಟಿದ್ದರೂ ಆತ ಎಂಟೆಳೆಯ ಜನಿವಾರ ಹಾಕಿಕೊಂಡು ಸ್ಮಾರ್ತ ಬ್ರಾಹ್ಮಣರ ನಡುವೆ ಸನಾತನ ಬ್ರಾಹ್ಮಣನಂತೆಯೂ; ಪಂಡಿತೋತ್ತಮರ ನಡುವೆ ಅಪ್ರತಿಮ ಪಂಡಿತನಂತೆಯೂ ಹೊಳೆಯುತ್ತಿದ್ದುದನ್ನು ಮರೆಯುವಂತಿಲ್ಲ. ಮಾತು, ವೇಷಭೂಷಣ ಹಲ್ಲಿಗೊಂದರಂತೆ ಒಂದೊಂದು ಬಲಿಷ್ಟ ಕ್ಲಿಷ್ಟ ಶ್ಲೋಕಗಳನ್ನು ಅಲಂಕಾರಮಾಡಿಕೊಂಡು ಸನಾತನತೆಯೇ ಮೈವೆತ್ತಂತೆ ಗೋಚರಿಸುತ್ತಿದ್ದುದು ಕಣ್ಣಿಗೆ ಕಟ್ಟಿದಂತಿರುವುದು. ಭಾಸ, ಭವಭೂತಿ, ಕಾಳಿದಾಸದ್ಯರಣ್ಣೂ; ಪಂಪ. ಪೊನ್ನ, ರನ್ನ, ಕುಮಾರವ್ಯಾಸಾದಿಗಳನ್ನು ನಾಲಿಗೆ ತುದಿಯಲ್ಲಿ ಕಣ್ಣಂಚಿನಲ್ಲಿ ಇಟ್ಟುಕೊಂಡಿರುತ್ತಿದ್ದುದು ಕಿವಿಗೆ ಕಟ್ಟಿದಂತಿರುವುದು. ಅವರಿಗೆ ಪಂಚಾಂಗ, ಜ್ಯೋತಿಷ್ಯ ವಾಮಾಚಾರಗಳಲ್ಲಿ ಸಾಕಷ್ಟು ಪರಿಶ್ರಮವಿರುವುದೆಂದು ನನಗೆ ಅರ್ಥವಾದದ್ದು ಅವ್ಚರು ಹಿಂದೊಮ್ಮೆ ವಗಿಲಿ ಎಂಬ ಗೆ‌ಆಮಕ್ಕೆ ದಯಮಾಡಿಸಿದಾಗ. ರನ್ನನನ್ನು ಹೇಳುವುದರ ಮೂಲಕ ವಾಗಿಲಿಯ ಅಭಿನವ ಕುಮಾರ ವ್ಯಾಸನೆಂದು ಪ್ರಸಿದ್ಧರಾಗಿದ್ದ ಹುಚ್ಚರೆದ್ದಿಯನ್ನು ಚಿತ್ ಮಾಡಿದರೆ, ತಿಥಿ ವಾರ ನಕ್ಷತ್ರ ಕರಣಗಳಿತ್ಯಾದಿಗಳನ್ನು ಚಟಪಟ ಹೇಳಿ ವಾಗಿಲಿಯ ಜ್ಯೋತಿಷ್ಯ ಮಾರ್ತಾಂಡರೆಂದೇ ಹೆಸರಾಗಿದ್ದ ದ್ವಾದಶ ದೇವಣ್ಣನವರನ್ನು ಚಿತ್ ಮಾಡಿದರು. ನೋಡು ನೋಡುವಷ್ಟರಲ್ಲಿ ಗ್ರಾಮದ ಪಂಚವಿಂಶತಿ ರೆಡ್ಡೋರ ಮನೆಗಳಿಂದ ಬುಲಾವ್ ಬರತೊಡಗಿದವು. ಅಂತಹ ಕಡೇಲೆಲ್ಲ ಹೋಗಿ ಬಂದೊಡನೆ ಏನು ಕುಂವೀ?… ಎಷ್ಟೊಂದು ದಷ್ಟಪುಷ್ಟವಾಗಿ ಆರೋಗ್ಯ ಕಾಂತಿಯಿಂದ ಹೊಳೆಯುತ್ತಿರುವಿರೀ ಗ್ರಾಮದ ಮಹಿಳೆಯರು… ಇವರನ್ನು ನೋಡಿದರೆ ನಮಗೆ ಕಾಳಿದಾಸರ ಅಭಿಜ್ಞ ಶಾಕುಂತಲಂನಲ್ಲಿ ಬರುವ ಕಣ್ವ‌ಋಷಿಗಳ ಆಶ್ರಮವು ನೆನಪಾಗುವುದು. ಎಷ್ಟೊಂದು ಪುಣ್ಯ ಮಾಡಿರುವಿರಿ ಕುಂವೀ? ಇಂಥ ಸುಂದರರೂ ಸದೃಡರೂ ಆದ ಮಹಿಳೆಯರ ನಡುವೆ ವಾಸಿಸಲಿಕ್ಕೆ ಎಂದು ಪ್ರಶಂಸೆಯ ಮಾತುಗಳನ್ನಾಡಿದರು, ಆ ಸಂದರ್ಭದಲ್ಲಿ ಅವರಿಗೆ ಗಚ್ಚಿನ ಮನೆಯ ಜಗನ್ನಥ ರೆಡ್ಡಿಯವರಿಗೆ ಬುಲಾವ್ ಬಂದಿತು. ಹೋದೊಡನೆ ಪಟಪಟಾಂತ ಮನೆಯ ವಾಸ್ತು ಬಗ್ಗೆ ವಿವರಿಸುತ್ತ “ಏನಿದು ಗೌಡ್ರೇ?… ಮುಖ್ಯ ಬಾಗಿಲು ಪೂರ್ವಾಭಿಮುಖವಾಗಿದೆಯಲ್ಲ… ದಕ್ಷಿಣಾಭಿಮುಖವಾಗಿದ್ದರೆ ನಿಮ್ಮೀ ಮನೆಯಲ್ಲಿ ಚಿನ್ನದ ಹೋಳೆ ಹಾಯ್ತಿತ್ತು” ಎಂದು ತರಾಟ್ರ್ ತೆಗೆದುಕೊಂಡು ಬಿಟ್ಟರು. ಹತ್ತಾರು ಕೊಲೆ ಮಾಡಿ ದಕ್ಕಿಸಿಕೊಂಡಿದ್ದ ದಿ.ರೆಡ್ಡಿ ಅವರ ನುಡಿಮುತ್ತಿಗೆ ಹಡಲ್ಲಾಗಿ ಹೋದನಲ್ಲದೆ ಮುಂದಿನ ವಾರವೇ ದಕ್ಷಿಣದ ಗೋಡೆ ಹೋಡೆದು ಹಾಕಿ ಬಾಗಿಲನ್ನು ಇಡಿಸಿಬಿಟ್ಟನು. ಇದ್ದ ಮೂರು ದಿನಗಳಲ್ಲಿ ತಮ್ಮ ವಾಗ್ ವೈಖರಿಯಿಂದ ವಾಗಿಲಿ ಗ್ರಾಮದ ಸಮಸ್ತರ ಹೃದಯ ಸೂರೆಗೊಂಡಪಂಡಿತರು ಕನ್ನಡ ವಿಶ್ವವಿದ್ಯಾಲಯ ಸೇರಿದ ಮೇಲೆ ಒಳಗಿಂದು ಹೊರಗೆ, ಹೊರಗಿಂದು ಒಳಗೆ ಮಾಡಿಕೊಂಡಿರುವುದು ಕಂಡು ನನಗೆ ಅತ್ಯಾಶ್ಚರ್ಯವಾಯಿತು. ಕಾಳಿದಾಸನ ಜಾಗದಲ್ಲಿ ಎಲಿಯತ್ ಬಂದಿದ್ದರೆ ಭಾಸನ ಜಾಗದಲ್ಲಿ ಏಟ್ಸ್ ಬಂದುಬಿಟ್ಟಿದ್ದನು. ಭಾಸನ ಜಾಗದಲ್ಲಿ ಕೀಟ್ಸೋ, ಫಾರ್ಸಸ್ವರ್ರೋ, ಮತ್ತಾರೋ? ನಾನು ತಾಳೆಗರಿ ಕಟ್ಟು ತಂದು ತೋರಿಸಿದೊಡನೆಯೇ ಇದೇನು ಶೇಕ್ಸಪಿಯರಲ್ಲ ಅರಿಸ್ಟಾಟಲ್ ಪ್ಲೇಟೋ ಅಲ್ಲ… ಇನ್ನೂ ನನ್ನನ್ನು ಈ ಕುಂವೀ ಹಳೆ ಕಾಲದಂಥ ತಿಳ್ಕೋಂಡಿದಾನಲ್ಲ. ಎಂದು ಮುಖ ಮಾಡಿಕೊಂಡಿದ್ದನ್ನ ಗುರುತಿಸಿದ್ದೆ. ಅದಕ್ಕೆ ತೇಪೆ ಹಚ್ಚುವ ನಿಮಿತ್ತವೇ ಅವರು ಹಾಗೆ ಮಾತಾಡಿದ್ದು ಎಂದು ಅರ್ಥವಾಯಿತು. ಕೇಳೋದನ್ನೆಲ್ಲ ಕೇಳಿಯಾದ ಮೇಲೆ ನಾನು ತಡೆಯಲಾರದೆ ತಾಳೆಗರಿ ಕೈನ ಪುರಾಣ ವಿವರಿಸಿದೆ. ಜಾಯಮಾನಕ್ಕೆ ತಕ್ಕಂತೆ ನನ್ನ ಮಾತನ್ನು ಅವಮಾನವೆಂದು ಅವರು ಭಾವಿಸಲಿಲ್ಲ. ಪೆನ್ನು ಮತ್ತು ಪೇಪರ್ ಬಗ್ಗೆ ಅತ್ಯಾಧುನಿಕ ಸಂಶೋದನೆ ನಡೆದಿರುವ ಕಾಲದಲ್ಲಿದ್ದೂ ಕಂಠದಿಂದ ತಾಳೇಗರಿ ಮೇಲೆ ಅಕ್ಷರ ಕೆತ್ತಿರುವ ಸಹನಾ ಮೂರ್ತಿ ಶಾಸ್ತ್ರಿಗಳನ್ನು ತಮಗೆ ಪರಿಚಯಿಸಲಿಲ್ಲವಲ್ಲವೆಂಬ ಖೇದ ಮಾತ್ರ ವ್ಯಕ್ತಪಡಿಸಿದರು. ರಾಗಿ ಮುದ್ದೆ ಅವರೆಕಾಳು ಸಾರಿನ ಜೊತೆಗೆ ಒಂದು ಬೇಯಿಸಿದ ಮೊಟ್ಟೆಯನ್ನುತಿನ್ನಲು ಕೊಟ್ಟು “ಶಾಸ್ತ್ರಿಗಳಂಥೋರ್ನ ನಮ್ಮ ಕುಲಪತಿಗಾ‌ಅದ ಕಂಬಾರರವರಿಗೆ ಪರಿಚಯಿಸಿ ನಾಡೋಜ ಪ್ರಶಸ್ತಿ ಕೊಡಿಸಬಹುದಿತ್ತಲ್ಲ ವೈಕುಂಟ ವಾಸಿಗಳಾಗಿದೆದ್ದರೇನಾ‌ಅಯ್ತು ಮರಣೋತ್ತರವಾಗಿ ಪ್ರಶಸ್ತಿ ಕೊಡಿಸಬಹುದಲ್ವೆ?” ಎಂದು ಹೇಳಿದರು. ಅದಕ್ಕೆ ನಾನಿದ್ದು “ಈಗದೆಲ್ಲ ಆಗೊಳ್ಳ ಪಂಡಿತರೆ… ಈ ಉಯಿಲಿಗೆ ಸಂಬಂಧಪಟ್ಟ ಭಾಷೆ ಮತ್ತು ಲಿಪಿ ಸಮಸ್ಯೆ ಬಗೆ ಹರಿಸಿ ಪುಣ್ಯ ಕಟ್ಕೊಳ್ರಿ ಅಷ್ಟೆ” ಎಂದೆ ಹಂಚಿ ಕಡ್ಡಿ ಮುರಿದಂತೆ. “ಆಯ್ತು ಕುಂವೀ ಆಯ್ತು” ಅಂದರು. ಆ ಇಡೀ ರಾತ್ರಿ ಅವರು ಅದನ್ನು ನಕಲಿಳಿಸಿ ಕೊಟ್ಟರು. ಮರುದಿನ ಅವರಿಗೆ ‘ಧನ್ಯವಾದಗಳನ್ನರ್ಪಿಸಿ ಅವರ ಮನೆಯಾದ ಅಮೃತಂಗ ಮಯ’ ದಿಂದ ಹೊರಬಿದ್ದ್ನು.
ತಾಳೆಗರಿ ಕಟ್ಟಿನೊಂದಿಗೆ ಸರಳ ಕನ್ನಡ ಪಾಠವನ್ನು ಕಂಕುಳಲ್ಲಿಟ್ಟುಕೊಂಡು ನಾನು ಅಶ್ಟೊಂದು ಹಗುರಾಗಿ ಹಿಂದೆಂದೂ ಹೆಜ್ಜೆ ಹಾಕಿರಲಿಲ್ಲ. “ನಾನು ನಿಜವಾದ ಅರ್ಥದಲ್ಲಿ ಸಾಯ್ತಾ ಇರೊದೆ ನಿನ್ನ ಕಂಕುಳಲ್ಲಿ ಮಾರಾಯಾ” ಎಮ್ದು ತಾಳೆಗರಿ ಕಟ್ಟಿನೊಳಗೆ ಬದುಕಿದ್ದ ಶಾಸ್ತ್ರಿಗಳು ಚೀರುತ್ತಿರುವುದು ನನಗೆ ಕೇಳಿಸದೆ ಇರಲಿಲ್ಲ. ನಾನದಕ್ಕೆ ಏನು ಹೇಳುವುದು? ಸತ್ತವರನ್ನು ಬರಹದ ಮೂಲಕ ಬದುಕಿಸುವುದು, ಬದುಕಿದ್ದವರನ್ನು ಬರಹದ ಮೂಲಕ ಸಾಯಿಸುವುದು ಬರಹಗಾರನ ನಿತ್ಯಕರ್ಮ. ಅದರಲ್ಲೂ ನನ್ನಂಥವರು ಸದಾ ಪರಾವಲಂಬಿ ಜೀವಿ. ಬರಹಕ್ಕೆ ಬದುಕಿಗೆ ಜಿಗಣೆ ಥರ ಅಂಟಿಕೊಂಡು ಹಿಂಸಿಸುವುದನ್ನು ಸತ್ತವರು ಮತ್ತು ಬದುಕಿದವರು, ಸಾವು ಬದುಕಿನ ನಡುವೆ ಕಣ್ಣಕಪ್ಪಡಿ ಥರ ಕುರುಡು ನೋಟ ಬೀರುತ್ತ ಅಲೆದಾಡುತ್ತಿರುವವರೆಲ್ಲರೂ ಉದಾರವಾಗಿ ಕ್ಷಮಿಸಬೇಕಾದುದು ಅನಿವಾರ್ಯ. ಹಾಗೆ ವಿಶಿಷ್ಟ ರೀತಿಯಲ್ಲಿ ಬದುಕಿರದಿದ್ದಲ್ಲಿ ನಾನ್ಯಾಕೆ ಶಾಸ್ತ್ರಿಗಳ ಗೊಡವೆಗೆ ಹೋಗುತ್ತಿದ್ದೆನು ಶಾಮಂಣನ ಬದುಕನ್ನು ಸರಳರೇಖೆಯಂತೆ ಗ್ರಹಿಸಿ ಒತ್ತಕ್ಷರಗಳ ಉಪದ್ವಾಪಿಗೆ ಹೋಗದೆ ಓದುಗರಿಗೆ ಸುಲಭವಾಗಿ ಜೀರ್ಣವಾಗುವಂತೆ ಸರಳವಾಗಿ ಬರೆದು ಮುಗಿಸುತ್ತಿದ್ದೆನು? ಈರುಳ್ಳಿಯಂತೆ ಒಬ್ಬರ ಬದುಕಿನೊಳಗೆ ಇನ್ನೊಬ್ಬರು ಹೆಚ್ಚುಗಾ‌ಅರಿಕೆಯಿಂದ ಮೂಡುತ್ತಿರುವರಲ್ಲ! ಎಲ್ಲರು ಎಲ್ಲರೊಳಗೂ ಅವಿತುಕೊಂಡಿರುವರಲ್ಲ! ಪ್ರತಿಯೋರ್ವರ ಉತ್ಕರ್ಷ ಮತ್ತು ಪತನಗಳಲ್ಲಿ ಪ್ರತಿಯೋರ್ವರ ಪಾತ್ರ ಇರುವುದಲ್ಲ! ಇವೆಲ್ಲವನ್ನು ಹೇಗೆ ನಿರಾಕರಿಸಿ ಸರಳರೇಖೆಗೆ ಮೊರೆ ಹೋಗುವುದು! ಕನ್ನಡಿಯಿಂದಲೇ ನಿರ್ಮಿತವಾಗಿರುವ ‘ಜಿಂದಗೀ ಮಹಲಿ’ನೊಳಗೆ ಅವರಲ್ಲಿ ಇವರು ಕಾಣಿಸುತ್ತಾರೆ… ಇವರಲ್ಲಿ ಅವರು ಕಾಣಿಸುತ್ತಾರೆ… ಕಲಬೆರಕೆ ಪ್ರತಿಬಿಂಬಗಳಲ್ಲಿ ಛಿದ್ರಛಿದ್ರವಾಗಿರುವ ಪ್ರತಿಯೊಬ್ಬರು ಅಕ್ಷರದ ನೆಲೆ ಕಂಡುಕೊಳ್ಳಲು ಓದುಗರಿಗೆ ಮುಖಾಮುಖಿಯಾಗಿ ನಿಲ್ಲಲು ಹಾತೊರೆಯುತ್ತ ಒಂದು ಪುಟ್ಟ ಶಾಬ್ದಿಕ ವಸ್ತುವನ್ನು ಹಿಂಜಿಸುತ್ತಿರುವರು. ಶಾಬ್ದಿಕ ವಸ್ತುವಿನ ಒಂದು ಹಂತದವರೆಗೆ ಬಂದುಹೋಗಿರುವ ಪರಮಪೂಜ್ಯ ಶಾಸ್ತ್ರಿಗಳೆಂಬ ವರ್ಣರಂಜಿತ ಅಥವಾ ವರ್ಣಗಳನ್ನೆಲ್ಲ ಅರಗಿಸಿಕೊಂಡಿರುವ ಹಾರಿ ಧರೆಗಿಳಿದ ಗಾಳಿಪಟವನ್ನು ಮತ್ತೆ ನಭೋಮಂಡಲಕ್ಕೆ ಉಡ್ಡಯನ ಮಾಡಿಸುವಂಥ ಸನ್ನಿವೇಶ ಎದುರಾಗಬಹುದೆಂದು ನಾನು ಕನಸುಮನಸಿನಲ್ಲೂ ಯೋಚಿಸಿರಲಿಲ್ಲ. ಅವರು ದೈಹಿಕವಾಗಿ ನಗಣ್ಯಗೊಳ್ಳುತ್ತಿದ್ದ ಕ್ಷಣದಲ್ಲಿಯೇ ತಾಳೆಗರಿ ಕಟ್ಟಿನ ಗೋಚರ ಸ್ಥಿತಿ ಮೂಲಕ ಮತ್ತೆ ಬದುಕುಬಿಟ್ಟಿದ್ದರು. ಲೌಕಿಕದೊಳಗಡಗಿರುವ ಅತಾಕಿಕತೆಯನ್ನೂ; ಅಲೌಕಿಕತೆಯೊಳಡಗಿರುವ ಲೌಕಿಕತೆಯನ್ನು ಒರೆಗಚ್ಚಲೆಂದೇ ಬರೆದಿರುವ ರೀತಿಯಲ್ಲಿ ಅವರ ಉಯಿಲಿತ್ತು. ಪರಿಗ್ರಹಣಕ್ಕೆ ಸವಾಲು ಹಾಕುವ ರೀತಿಯಲ್ಲಿ ಅವರ ಶಬ್ದಖಂಡವಿತ್ತು. ಸಮಸ್ತ ಶಬ್ದ ಶಾಸ್ತ್ರಿ ಪಾರಿಗರ್ನಯಸೇನ ಪಂಡಿತರೆಂಬ ಶಾಸನ ಕವಿಯೇ ಶಾಸ್ತ್ರಿಗಳ ರೂಪದಲ್ಲಿ ಬರೆದಿರುವನೋ ಎಂಬಂತಿತ್ತು ಅದರ ಶಬ್ದಕೋಶವು… ಕಂದ, ಸೀಸ… ಖ್ಯಾತ ಕರ್ನಾಟಂಗಳೆಲ್ಲವನ್ನೂ ಭಟ್ಟಿ ಇಳಿಸಿದಂತಿತ್ತು‌ಅದರ ಒಕ್ಕಣೆಯು… ಅದನ್ನು ಯಥಾ ರೀತಿ ಕಾದಂಬರಿಯೊಳಗಳವಡಿಸಿದರೆಲ್ಲಿ ಓದುಗರ ಕೋಪಾರುಣ ನೇತ್ರಗೈಗೆ ತುತ್ತಾಗುವನೆಂದು ಹೆದರಿದ ಪಾಮರನಾದ ನಾನು ಅದನ್ನು ಕಲಿಯುಗ ಅಧರ್ವಣ ಪಂಡಿತರೆಂದೇ ಹೆಸರಾದ ಮಲ್ಲೇಪುರಂ ವೆಂಕಟೆಶ್ವರರ ಬಳಿಗೊಯ್ದು ಸಾಮಾ‌ಅನ್ಯರಿಗೂ ಅರ್ಥವಾಗುವ ರೀತಿಯಲ್ಲಿ ಕನ್ನಡಿಸುವ ಕೆಲಸವನ್ನು ಮಾಡಿಸ್ದೆನು. ಮೂಲ ಪಾಠದೊಂದಿಗೆ ನವೀನ ಪಾಠಾಂಶವನ್ನು ತುಲನೆ ಮಾ‌ಅಲು ಅಸಮರ್ಥನಾಗಿರುವ ನಾನು ಅದನ್ನು ಹಾಗೆಯ್ ಕಾದಂಬರಿಯೊಳಗೆ ಅಳವಡಿಸುವ ಕೆಲಸ ಮಾಡುತ್ತಿರುವೆನು. (…ತಾವು ಹಂಸಕ್ಷೀರ ನ್ಯಾಯದಂತೆ ಪರಿಗ್ರಹಿಸಬೇಕಾಗಿ ವಿನಂತಿ ಮಾಡಿಕೊಳ್ಳುತ್ತಿರುವೆನು)

*
*
*

‘ಪರಮ ಪೂಜ್ಯ ಪರಮೇಶ್ವರ ಶಾಸ್ತ್ರಿಗಳ ಉಯಿಲು’
ಕರ್ನಾಟಕ ರಾಜ್ಯದ ಬಳ್ಳಾರಿ ಜಿಲ್ಲೆಯ ಕೂಡಲಿಗಿ ತಾಲ್ಲೂಕಿನ ಕಸಬಾ ಹೋಬಳಿ ಕೊಟ್ಟೂರು ಗ್ರಾಮವಾಸಿಯಾದ, ಸದರಿ ಗ್ರಾಮದಲ್ಲಿ ಜ್ಯೊತಿಷ್ಯ, ವೈದಿಕ ಮಾಡಿಕೊಂಡವನಾಗಿದ್ದು, ಅಗ್ರಹಾರದವರ ಹಗೆತನದಿಂದಾಗಿಯೋ ಕಾಲಕರ್ಮಗಳ ಪಿರ್ಯಾದುಗಳಿಂದಲೋ; ಪುತ್ರ ಪೌತ್ರಾದಿಗಳ ಅಸಂತುಷ್ಟಿಯಿಂದಾಗಿಯೋ, ಬದಲಾದ ಸಾಮಾಜಿಕ ರಾಜಕೀಯ ಕಾಲಮಾನ ವಿದ್ಯಮಾನಗಲಿಂದಾಗಿಯೋ, ಇಹಲೋಕ ತ್ಯಜಿಸಲೋಸುಗ ಅನೇಕ ಸಿದ್ಧತೆಗಳನ್ನು ಗುಟ್ಟಾಗಿ ಮಾಡಿಕೊಂಡಿರುವಂಥವನೂ, ದತ್ತಕ ಮೀಮಾಂಸಾ, ಚಿತ್ರಸೂತ್ರ; ಚಿಕಿತ್ಸಾಸಾರ ಸಂಗ್ರಹಗೋಲದೀಪಿಕಾ, ಚಾತುವರ್ಗ ಚಿಂತಾಮಣಿ ಜ್ಯೋತಿಷ ವೇದಾಂಗಗಳನ್ನೆಲ್ಲ ಅರಗಿಸಿಕೊಂಡಂಥವರೂ ಜ್ಯೋತಿಷ್ಯ ಸಾರೋದ್ಧಾರ, ಸಂಗೀತೋಪನಿಷತ್ಸಾರೋದ್ಧಾರ ಸಾಂಖ್ಯಪ್ರವಚನೋದಯ, ಸಾರಸ್ವತ ವ್ಯಾಕರಣ ತೀರ್ಥ, ಸಂಸ್ಕೃತ ಭಾಷಾ ವಾರಿಧಿಯ್ ಮೊದಲಾದ ಬಿರುದಾವಳಿಗಳನ್ನುಪಡೆದ ವಂಶಜನೂ; ವೀರಮಿತ್ರೋದಯ ಬಿರುದಾಂಕಿತರಾದ ಘಂಟಾ ಶಾಮಾ ಶಾಸ್ತ್ರಿಗಳ ಏಕಮಾತ್ರ ಪುತ್ರನೂ ಆದಂಥಹ ಪರಮೇಶ್ವರ ಶಾಸ್ತ್ರೀ ಎಂಬ ಹೆಸರಿನನಾನುನನ್ನ ಪೂರ್ಣ ಇಷ್ಟಾನುಸಾರವಾಗಿ ಬರೆದು ಬರೆಯಿಸಿಕೊಂಡಿರುವ ಉಯಿಲು.
ಸದರೀ ಉಯಿಲನ್ನು ಉದ್ಧೇಶಿತವಾಗಿಯೂ, ನಿರುದ್ಧೇಶಿತವಾಗಿಯೂ ಬರೆಯಲು, ಬರೆಸಲು ಹಗಲು ಹುಟ್ಟಿದವರಾಗಲೀ; ರಾತ್ರಿಹುಟ್ಟಿದವರಾಗಲೀ; ಹೊರಗೆ ಹುಟ್ಟಿದವರಾಗಲೀ; ಒಳಗೆ ಹುಟ್ಟಿದವರಾಗಲೀ;ಮಂಚದ ಮೇಲೆ ಹುಟ್ಟಿದವರಾಗಲೀ; ನೆಲದ ಮೇಲೆ ಹುಟ್ಟಿದವರಾಗಲೀ ಪಟ್ಟಣ್ದಲ್ಲಿ ಹುಟ್ಟಿದವರಾಗಲೀ ಹಳ್ಳಿ ಹೋಬಳಿಗಳ್ಳಿ ಹುಟ್ಟಿದವರಾಗಲೀ; ಗಂಡಾಗಲೀ ಹೆಣ್ಣಾಗಲೀ ನಪುಂಸಕರಾಗಲೀ; ಹಿರಿಯರಾಗಲೀ, ಕಿರಿಯಲಾಗಲೀ; ವಿದ್ಯಾವಂತರಾಗಲೀ ಅವಿದ್ಯಾವಂತರಾಗಲೀ; ಮೇಲ್ಜಾತಿಯವರಾಗಲೀ ಕೀಳುಜಾತಿಯವರಾಗಲೀ ಹೀಗೆ ಯಾರೊಬ್ಬರ ಮಾನಸಿಕವಾದ ದೈಹಿಕವಾದ ಬಲವಂತವೆಂಬುದು ಸ್ಪೂರ್ತಿ ಎಂಬುದು ತಿಲ ಮಾತ್ರ ಇಲ್ಲವೆಂದೂ, ನಾನು ಬರೆದ ತ್ರಿಸಂಧ್ಯಾಸಮಯದಲ್ಲಿ ನನ್ನ ಮಸ್ತಿಷ್ಯದೊಳಗಿನ ಸಣ್ಣ ಮಿದುಳು ದೊಡ್ಡ ಮಿದುಳು ನರ ನಾಡಿಯೂ ಸೇರಿದಂತೆ ನನ್ನ ಇಡೀ ದೇಹವು, ಮನಸ್ಸೂ ಸಂಪೂರ್ಣವಾಗಿ ಆರೋಗ್ಯ ಸ್ಥಿತಿಯಲ್ಲೇ ಇದ್ದಿತೆಂದು‌ಊ; ನಾನು ಭೂತಕಾಲದಲ್ಲಾಗಲೀ, ವರ್ತಮಾನ ಕಾಲದಲ್ಲಾಗಲೀ ಜಾಗೃತ ಸ್ಥಿತಿಯಲ್ಲಾಗಲೀ, ಸುಪ್ತಾವಸ್ಥೆಯಲ್ಲಾಗಲೀ; ಮಲ, ಮೂತ್ರ, ಬೆವರು ಮೊದಲಾದ ವಿಸರ್ಜನಾ ಕಾರ್ಯ ಸ್ಥಿತಿ ಸಂದರ್ಭಗಲಾಗಲಿ‌ಈ; ಮಾತು, ಮನಸ್ಸು, ನೋಟ, ಸ್ಪರ್ಶಗಳೇ ಮೊದಲಾದ ಪಂಏಂದ್ರಿಯಗಳಲ್ಲಾಗಲೀ, ನಾನೆಂದೂ ಅಶಜ, ಅಸ್ವಾಭಾವಿಕವಾಗಿಯೂ ವರ್ತಿಸಿದುದಿಲ್ಲವೆಂದೂ, ಬುದ್ಧಿಮಾಂದ್ಯ; ಹುಚ್ಚು; ಅರೆಹುಚ್ಚು, ಮೂರ್ಛ್; ಚಿತ್ತೋದ್ರೇಕ ಇತ್ಯಾದಿ ಮಾನಸಿಕ ರೋಗಗಳಾಗಲೀ ದೈಹಿಕ ರೋಗಗಳಾಗಲೀ ಒಳಗಾಗಿರಲಿಲ್ಲವೆಂದೂ ಈ ಮೂಲಕ ಅರಿಕೆ ಮಾಡಿಕೊಳ್ಳುತ್ತಿರುವೆನು.

ನಾನೀ ಸದರಿ ಉಯಿಲನ್ನು ಇಂಥವರನ್ನು ಕುರಿತು ಇಂಥವರಿಗೇ ಬರೆಯಬೇಕೆಂದು ಆರಂಭದಲ್ಲಿ ಯೋಚಿಸಿಲ್ಲ. ನಾನು ನನ್ನ ಕುಟುಂಬ ವರ್ಗದ ಪರವಾಗಲೀ, ಬೇರೆಯವರ ಪರವಾಗಲೀ, ವಿರುದ್ಧವಾಗಲೀ ಬರೆಯಬೇಕೆಂದು ಯೋಚಿಸಿಲ್ಲ. ‘ನಾನು’ ಎಂಬ ಪದವನ್ನು ದೈತಾದ್ವೈತಗಳ ಮೂಲಕ ವಿವರಿಸುವ ಹಾಗೂ ಸಮರ್ಥಿಸುವ ಕೆಲಸವನ್ನು ಮಾಡುತ್ತಿಲ್ಲ. ಯಜ್ಞದಲ್ಲಿ ಭಗವದರ್‍ಪಣ ಮಾಡಿದ ನಂತರ ಉಳಿಯುವ ವಸ್ತುಗಳಂತೆಯೇ ‘ನಾನು’ ಎಂಬ ಪದ ಕೂಡ. ಈ ಪದದ ಮೂಲಕ ಅಪ್ರವೃತ್ತ ಪ್ರವರ್ತನೆಯನ್ನಾಗಲೀ, ಅಜ್ಞಾತ ಜ್ಞಾಪನವನ್ನಾಗಲೀ, ಮಾಡುವ ಕ್ರಿಯಾಕರ್ಮಕ್ಕೆ ಹೋಗುವುದಿಲ್ಲ. ವಂಶಪಾರಂಪರ್ಯವಾಗಿಬಂದ ವೈದಿಕ ಶಾಸ್ತ್ರಾಧ್ಯಯನ ಪುಣ್ಯಶ್ರವಣಗಳಿತ್ಯಾದಿ ನನ್ನ ತಲೆಮಾರಿಗೇ ನಿಂತುಬಿಡುವುದೆಂದು ಮೊದಲೇ ಗೊತ್ತಾಗಿದ್ದಲ್ಲಿ? ನನ್ನ ತೀರ್ಥರೂಪರು ನನ್ನ ಶೈಶವಾಸ್ಥೆಯಿಂದ ನನ್ನನ್ನು ಬಾಲ್ಯಾವಸ್ಥೆಗೆ ಮುಂಬಡ್ತಿ ನೀಡುತ್ತಿರಲಿಲ್ಲವೇನೋ? ನನ್ನ ಹುಟ್ಟು ಬೆಳವಣಿಗೆ ಪಾತ್ರ ಪೋಷಣೆ ನಿರ್ವಹಣೆ ಎಲ್ಲವೂ ಅಕಸ್ಮಿಕವೆಂದೇ ಹೇಳಬೇಕು. ನಾನು ನಿವೇದಿಸಿದ ಪಾತ್ರಗಳ ಕಡೆ ಅವಲೋಕನ ಮಾಡಿದರೆ ನನಗೇ ಆಶ್ಚರ್ಯವಾಗುತ್ತದೆ. ಯಾರಿಗೋ ಮಗನಾಗಿದ್ದೆ. ಯಾ‌ಇಗೋ ತಂದೆಯಾ‌ಅಗಿದ್ದೆ; ಯಾರಿಗೋ ಮಾವನಾಗಿದ್ದೆ; ಯಾರಿಗೋ ಗಂಡನಾಗಿದ್ದೆ; ಯಾರಿಗೋ ಅಜ್ಜನಾಗಿದ್ದೆ. ಆದರೆ ಮುತ್ತಜ್ಜನ ಪಾತ್ರ ನಿರ್ವಹಿಸುವ ಮೊದಲೇ ನಿರ್ಗಮಿಸಬೇಕೆಂದು ಕಳೆದ ಕೆಲವು ದಿನಗಳಿಂದ ಅನ್ನಿಸುತ್ತಿರುವುದು. ಇದಕ್ಕೆ ಪೂರಕವಾಗಿ ಕೆಲವು ಘಟನೆಗಳು ನಡೆದವು… ನಡೆಯುತ್ತಿರುವುವು… ಮುಂದೆ ಕೂಡ ನಡೆಯದೆ ಇರಲಿಕ್ಕಿಲ್ಲ… ಇವುಗಳನ್ನು ತಡೆಯುವ ಶಕ್ತಿ ನನ್ನಲ್ಲಿ ಯಾವತ್ತೂ ಇರಲಿಲ್ಲ… ಅಗೋಚರವಾಗಿ ಉಳಿದು ಕದ್ದು ಮುಚ್ಚಿ ಪ್ರಕಟವಾಗುತ್ತಿದ್ದ ದೌರ್ಬಲ್ಯ ಇತ್ತೀಚೆಗಂತೂ ರಾಜಾರೋಷವಾಗಿ ಪ್ರಕಟಗೊಂಡು ನನ್ನ ಇಚ್ಛಾಶಕ್ತಿಯನ್ನು ಅಲ್ಲಾಡಿಸುತ್ತಿದೆ. ಇದನ್ನು ನನ್ನ ಕುಟುಂಬವರ್ಗದವರೂ; ಸಾಮಾಜಿಕರೂ ಗುರುತಿಸುವ ಪ್ರಯತ್ನ ಮಾಡುತ್ತಿದ್ದಾರೆ. ನಾನು ದಿನೇ ದಿನೇ ಸವಕಲುಗೊಳ್ಳುತ್ತಿರುವೆ – ಎಂಬುದಕ್ಕೆ ಸಾಕ್ಷಿಯಾಗಿ ಪಂಚೇಂದ್ರಿಯಗಳು ನನ್ನ ವಿರುದ್ಧ ಪಿತೂರಿ ಮಾಡುತ್ತಿವೆ. ಯಾವುದನ್ನು ಹೇಗೆ ಕೇಳಿಸಿಕೊಳ್ಳಬೇಕೋ ಹಾಗೆ ಕೇಳಿಸಿಕೊಳ್ಳಲು ನನ್ನಿಂದ ಸಾಧ್ಯವಾಗುತ್ತಿಲ್ಲ… ಯಾವುದನ್ನು ಹೇಗೆ ಮಾತಾಡಬೇಕೋ ಹಾಗೆ ಮಾತಾಡಲು ನನ್ನಿಂದ ಸಾಧ್ಯವಾಗುತ್ತಿಲ್ಲ… ಎಷ್ಟೋ ಘಟನೆಗಳಿಗೆ ವಿದ್ಯಮಾನಗಳಿಗೆ ಅಪಾರ್ಥಮಾಡಿಕೊಂಡೋ ಏನೋ, ಅಸಮರ್ಪಕವಾಗಿ; ಅಸಹಜವಾಗಿ ಪ್ರತಿಕ್ರಿಯಿಸುತ್ತಿರುವೆ… ಹಾಗೆಯೇ ನನ್ನ ಪ್ರತಿಕ್ರಿಯೆಗಳನ್ನು ಎಷ್ಟೋ ಸಂದರ್ಭಗಳಲ್ಲಿ ಸಮರ್ಥಿಸುವ ಪ್ರಯತ್ನ ಮಾಡಿ ನಗೆಪಾಟಲಾಗಿರುವೆ. ಇಂಥ ಪ್ರಯತ್ನ ಪುನರಪಿ ಆಗಬಾರದೆಂದು ನಿರ್ಧರಿಸಿ ಮೌನದ ಬಾಂಡಲೆಯೊಳಗೆ ಉಳಿದು ಬೇಯುತ್ತ ಇದ್ದುಬಿಡುವುದನ್ನು ಅಭ್ಯಾಸ ಮಾಡಿಕೊಂಡೆನು. ನನ್ನ ಮೌನ ಸೀಳುವ, ಭಂಗಪಡಿಸುವ ಪ್ರಯತ್ನಗಳು ನಡೆದಿದ್ದುಂಟು. ಆ ಅಂಥ ಮೌನದ ಬೇಗೆಯೊಳಗೆ ಬೆಂದು ಮಾಗುವ ಅನುಭವದ ಸ್ವರೂಪ, ಭಗವಂತನ ಸ್ವರೂಪಕ್ಕಿಂತ ಭಿನ್ನವೇನಲ್ಲ ಎಂದು ನನಗೆ ಕ್ರಮೇಣ ಗೊತ್ತಾಯಿತು. ನಾನ್ನಷ್ಟೇ ತೂಕದ ಹಸುವಿನಂತೆಯೇ ಬದುಕಿನವನಾದ ನಾನು ನನ್ನ ಬದುಕಿನ ಆಂತರಿಕ ಹಾಗೂ ಬಾಹ್ಯ ಶ್ತೃಗಳ ಬಗ್ಗೆ ಹೇಳಿಕೊಳ್ಳುವ ಪ್ರಯತ್ನವನ್ನು ಅನೇಕ ಸಂದರ್ಭಗಳಲ್ಲಿ ಮಾಡಿದ್ದುಂಟು. ವಿಧವೆಯರಿಗೆ ಬಹುಮಾನ ನೀಡುವುದು ಒಂದೇ, ಅಪಾತ್ರರಿಗೆ, ಅವಿಧೇಯರಿಗೆ ವಿಷಯ ನಿವೇದಿಸಿಕೊಳ್ಳುವುದೂ ಒಂದೇ ಎಂದು ಹಲವಾರು ಸಾರಿ ಭಾವಿಸಿದೆನು. ದಿನಗಳೆದಂತೆ ನಾಲಿಗೆ ಮೇಲೆ ಜೇನುತುಪ್ಪವನ್ನಾಗಲೀ ವಿಷವನ್ನಾಗಲಿ ಇಟ್ಟರೆ ರುಚಿನೋಡದೆ ಇರುವುದು ಎಷ್ಟು ಅಶಕ್ಯವೋ , ಅಷ್ಟೇ ಅಶಕ್ಯ ಹೇಳದೆ ಇರುವುದು ಎಂದು ನನಗೆ ಕ್ರಮೇಣ ಅರ್ಥವಾಯಿತು. ಸಂಸಾರವೆಂಬ ಸಾಗರದಲ್ಲಿ ಮೀನೋಪಾದಿಯಲ್ಲಿ ಈಜುತ್ತ ಬಂದಿರುವ ನಾನು ಕುಡಿದಿರಬಹುದಾದ ನೀರಿನ ಪ್ರಮಾಣ ಎಷ್ಟು ಎಂಬ ಬಗ್ಗೆ ನಿಖಿರವಾಗಿ ಹೇಳಲು ಬೇರೆಯವರಿಗೆಷ್ಟು ಅಸಾಧ್ಯವೋ , ಅಷ್ಟೇ ಅಸಾಧ್ಯವು ನನಗೆ ಕೂಡ. ಮೃತ್ಯುವೆಂಬ ತಿಮಿಂಗಿಲ ನನ್ನನ್ನು ನುಂಗಿ ಹಾಕಲು ತೀರಾ ಹೊಂಚಿ ಹತ್ತಿರದಲ್ಲೆ ಇದೆ ಎಂಬ ದಿವ್ಯ ಅರಿವು ಮೂಡಿದ್ದೇ ನನ್ನ ಮೊಮ್ಮಗನಾದ ಶಾಮಾ ಶಾಸ್ತ್ರಿಯು ಬದುಕಿನ ಆಸರೆಯನ್ನು ಸರ್ಕಾರದ ಪಗಾರಕ್ಕೆ ಒಪ್ಪಿಸಿದಾಗಲೇ. ನಮ್ಮ ವಂಶದಸಮಸ್ತ ಪೀಡೆಯೇ ಮೊಮ್ಮಗನ ರೂಪದಲ್ಲಿ ಕಾಣಿಸಿಕೊಂಡಿದೆ ಎಂದು ನನಗೆ ಅರ್ಥವಾದ ಕ್ಷಣ ಬದುಕಿನ ಮುಖ್ಯ ಅಧಿಕರರಣದ ಕೊನೆಯ ಅಧ್ಯಾದಲ್ಲಿ ನಿಂತಿರುವೆ ಎಂದುಕೊಂಡೆ. ಧರ್ಮಸ್ಥೀಯ ಮತ್ತು ಕಂಟಕ ಶೋದನೆ ಮಾಡಿಕೊಳ್ಳಲಿಕ್ಕೆ ಇದು ಪಕ್ವ ಕಾಲ ಎಂದುಕೊಂಡೆ. ಅದೇ ಹೊತ್ತಿಗೆ ನ್ಯಾಸ ತ್ರಯಗಳ ಸಾಕಾರಮೂರ್ತಿಯೇ ತಾನೆಂದು ಬೀಗುವ ವರದಾಚಾರ್ಯನಿಗೂ ನನಗೂ ಸಂಸಾರಕ್ಕೆ ಸಂಬಂಧಿಸಿದಂತೆ ವಾದೋಪವಾದವಾಗಿ ನನ್ನ ಬದುಕಿನ ಮಗುಚಿದ ಪುಟಗಳ ಕಡೆ ತಿರುಗಿ ನೋಡುವ ಬಯಕೆ ಉಂಟಾಯಿತು.ವ್ಯಸನಧಿಕಾರಿ ಕರಣಗಳ ಪಟ್ಟಿಮಾಡಿ ವಿಗ್ರಹ, ಆಸನ, ಯಾನ, ಸಂಶ್ರಯ ಮತ್ತು ದ್ವೈಧೀ ಭಾವಗಳ ಮೇಲೆ ಹತೋಟಿ ಸಾಧಿಸಿ ಸಾವೆಂಬದೈವಿಕ ಆಕಸ್ಮಿಕಕ್ಕೆ ತುತ್ತಾಗಬೇಕೆಮ್ಭ ಬಯ್ಕೆ ಉಂಟಾಯಿತು. ನನ್ನೀ ಬಯಕೆಯ ಬೇಟೆಗಾರನ ಬಾಣಕ್ಕಿಂತಲೂ ಬಲಶಾಲಿ ಎಂಬುದು ಉಯಿಲು ಬರೆಯುವ ಸಂದರ್ಭದಲ್ಲಿ ನನಗೆ ಅರ್ಥವಾಯಿತು. ತಾಯಿಯೋರ್ವಲ ಗರ್ಭದಲ್ಲಿರುವ ಭ್ರೂಣವನ್ನು ಹೊಸಕಿ ಹಾಕುವಷ್ಟು ಶಕ್ತಿಶಾಲಿಯಾದುದುನನ್ನ ಬುದ್ಧಿಯು‌ಎಂಬುದು ನನಗೆ ಅರ್ಥವಾಗಿ ನನ್ನ ಬಗ್ಗೆ ನನಗೇ ಬಲವಾಯಿತು. ಯಾವ ಪ್ರಕಾರವಾಗಿ ಕಾಳ್ಗಿಚ್ಚಿಗೆ ಸ್ನೇಹಿತನಾಗಿರುವ ಗ್ಗ್ಳಿಯೇ ಮುಂದೊಂದು ದಿನ ನನ್ನ ಹೃದಯದಲ್ಲಿ ದಶಕಗಳ ದಿನಮಾನದಿಂದ ಬೆಳಗುತ್ತಿರುವ ಪರಂಜ್ಯೋತಿಯನ್ನು ನಂದಿಸುವ ಪ್ರಯತ್ನ ಮಾಡದೆ ಇರದು ಎಂದು ಅರ್ಥವಾಯಿತು. ಇಂಥ ಅನೇಕ ಪ್ರೇರಣೆಗಳಿಂದ ವಾಗ್ವಾದ ತೀರ್ಥ, ನವರಸ ನಿಷ್ಣಾತ ಇವೇ ಮ್,ಒದಲಾದ ಬಿರುದಾಂಕಿತರೂ, ಶ್ರೀಮನ್ ಮಹಾರಾಜರುಗಳಿಂದ ಕಿರು ಘಂಟಾಯುಕ್ತ ಮುಂಗೈ ಕಡಗ ಪಡೆದಿದ್ದಂಥವರೂ ಆದ ಘಂಟಾ ಶಾಮಶಾಸ್ತ್ರಿಗಳ ಗರ್ಭ ಸಂಜಾತನೂ ಆದ ಪರಮೇಶ್ವರ ಶಾಸ್ತ್ರಿ ಎಂಬ ಹೆಸರಿನವನಾದ ನಾನು ಒಳಗೊಂದು, ಹೊರಗೊಂದು ಎಂಬ ಭೇಧ ಮಾಡದೆ ಈ ಉಯಿಲನ್ನು ಅಂತರಂಗದ ಗಂಗೆಯ ಪ್ರವಾಹ ಶಮನಾರ್ಥವಾಗಿ ಬರೆಯಲು ನಿರ್ಧರಿಸಿದೆನು.

ತಂದೆಗೆ ತಕ್ಕ ಮಗನಾಗಿರದಿದ್ದ; ಹೆಂಡತಿಗೆ ತಕ್ಕ ಗಂಡನಾಗಿರದಿದ್ದ; ಪ್ರೇಯಸಿಗೆ ತಕ್ಕ ಪ್ರಿಯತಮನಾಗಿರದಿದ್ದ; ಮಗನಿಗೆ ತಕ್ಕ ತಂದೆಯಾಗಿರದಿದ್ದ; ಸೊಸೆಗೆ ತಕ್ಕ ಮಾವನಾಗಿರದಿದ್ದ ಮೊಮ್ಮಗನಿಗೆ ತಕ್ಕ ಅಜ್ಜನಾಗಿರದಿದ್ದ, ಬದಲಾಗುತ್ತಿರುವ ಸಮಾಜಕ್ಕೆ ತಕ್ಕ ಪ್ರಜೆಯಾಗಿರದಿದ್ದ ನಾನು ಬರೆಯುತ್ತ್ರುವ ಉಯಿಲಿನಿಂದ ಯಾರಿಗೂ ಲವಲೇಶ ಲಾಭಾಂಶವಾಗುವುದಿಲ್ಲವೆಂಬ ಅರಿವು ನನಗೆ ನಿಚ್ಚಳವಾಗಿ ಉಂಟು. ಬದುಕಿನ ಉತ್ತರಾರ್ಧ ಭಾಗದಲ್ಲಿ ಅನುಕೂಲರಾದವರಿಗಾಗಲೀ; ಪ್ರತಿಕೂಲವಿದ್ದವರಾಗಲೀ ನಾನು ಪ್ರಿಯನಾಗಿರಲಿಲ್ಲ ಎಂಬ ಅರಿವು ಉಂಟು. ಮಧ್ಯ ವಯಸ್ಸು ಸಮೀಪಿಸುತ್ತಿದ್ದಂತೆ ನನ್ನೊಳಗೆ ಬೇರು ಬಿಡತೊಡಗಿದ್ದ ಸಚ್ಛೂದ್ರ ಕಲ್ಪನೆಯನ್ನು ಆಮೂಲಾಗ್ರ ಅಳಿಸುವ ಸೃಡ ನಿಶ್ಚಯವನ್ನು ಪ್ರಾಮಾಣಿಕವಾಗಿ ಮಾಡಲಿಲ್ಲವೆಂಬ ಅರಿವು ಉಂಟು. ಯಾವ ಪ್ರಕಾರವಾಗಿ ಸ್ವಾಮಿಯ ಸಾನ್ನಿಢ್ಯ್ದಲ್ಲಿರುವ ಟಗರು ಸಿಂಹದಂತೆ ವರ್ತಿಸುವುದೋ ಹಾಗೆಯೇ ನಾನು ಕೂಡನನ್ನ ತಂದೆಯವರಾದ ಕೀ.ಶೇ.ಶಾಮಾ ಶಾಸ್ತ್ರಿಗಳ ಸಾನ್ನಿಧ್ಯದಲ್ಲಿ ಬದುಕಿನ ಮೂಲ ರಹಸ್ಯವನ್ನು ಭೇದಿಸುವ ಕೆಲಸಕ್ಕೆ ಮುಂದಾಗಲಿಲ್ಲ ಎಂಬ ಸತ್ಯವನ್ನು ಒಪ್ಪಿಕೊಳ್ಳುತ್ತಿರುವೆನು. ಅಂಧ ಕೂಪದಲ್ಲಿ ಬಿದ್ದಂಥ ಕೋತಿ, ಹಾವು, ಸಿಂಹ ಮತ್ತು ಅಕ್ಷಶಾಲಿಕರನ್ನು ಬದುಕಿಸಿದ ಕಾಂಕೇಯನೆಂಬ ಪಥಿಕನಿಗೂ, ಇದಕ್ಕೆ ವಿರುದ್ಧವಾಗಿ ಅಂತರಂಗದ ಅಂಧಕೂಪದಲ್ಲಿ ಪಂಚೇಂದ್ರಿಯಗಳನ್ನು‌ಊ; ಅರಿಷಡ್ವರ್ಗಗಳನ್ನೂ ಕೊಳೆಯಲು ಬಿಟ್ಟ ನನಗೂ ಯಾವುದೇ ವ್ಯತ್ಯಾಸವಿಲ್ಲವೆಂಬ ಅರಿವು ಉಂಟು. ಸಂಶಯಾಸ್ಪದ ರೀತಿಯಲ್ಲೇ ಬದುಕು ಮುಂದುವರಿಸು ಎಂದು ವಿಧಿನಿಯಮ ನನ್ನ ಹಣೆಯಲ್ಲಿ ಬರೆದಿರಲು ಏನು ಮಾಡಲು ಸಾಧ್ಯ? ಕಿರಾತನ, ಚರ್ಮಕಾರನ ಮನೆಯಲ್ಲಿ ಊಟದ ವೇಳೆ ಕಳೆದವರಿಗೆ ಪ್ರಾಯಶ್ಚಿತ್ತ ವಿಧಿಸಿರುವ ಹೇಮಚಂದ್ರ ಚಂಚಲ ಸ್ವಭಾವದ ಕುದುರೆಗಳ ಲಾಯವನ್ನು ಅಂತರಂಗದಲ್ಲಿ ಪೋಷಿಸಿಕೊಂಡು ಬಂದವನಾದ ನನ್ನಂಥವಿಗೇಕೆ ಪ್ರಾಯಶ್ಚಿತ್ತವನ್ನು ತನ್ನ ಸ್ಥಿತಿಯಲ್ಲಿ ಯಾಕೆ ಹೇಳಿಲ್ಲ? ನ್ಯಗ್ರೋಧದಂಥೆ ಬಿಳಲು ಬಿಡುತ್ತ ಬದುಕುವುದಾಯಿತಲ್ಲ…

ಹಲ್ಲೊಳಗಿನ ವಿಶದ ಪ್ರಾಮಾಣ್ಯ ಪರೀಕ್ಷಸಲೋಸುಗ ಅನೇಕ ತಕ್ಷಕರುಗಳಿಂದ ಕಚ್ಚಿಸಿಕೊಳ್ಳುವುದೇ ಆಯಿತಲ್ಲ ನನ್ನ ಬದುಕು. ಇದೆಲ್ಲ ವಿವರಾಡಂಬರ ಕೊಚ್ಚುತ್ತ‌ಓದುಗರ ತಲೆ ತಿನ್ನುವ ಗೋಜಿಗೆ ಹೋಗಬಾರದೆಂದೇ ನಾನು ವಿವಿಧಕಳಾಪಂಡಿತರಿಗಷ್ಟೇ ಅರ್ಥವಾಗಲೆಂದುಚಿತ್ತೋನ್ಮೀಲನಕಾರಿಯಾದ ವೈದಿಕ ಛಂದಸ್ಸು ಮತ್ತು ಚಂಪೂ ಮಿಶ್ರಿತ ಶೈಲಿಯಲ್ಲಿ ಬರೆಯಲೆತ್ನಿಸಿಹೆನು. ವೈಯಕ್ತಿಕ ಬದುಕಿನ ಮೂಲ ದ್ರವ್ಯವಾದ ಗಾಯತ್ರಿಯನ್ನೇ ಅನುಷ್ಟುಪ್ ಆಗಿ ಪರಿವರ್ತಿಸಿರುವೆನು. ಮಧ್ಯೆ, ಮಧ್ಯೆ ಮಧ್ಯಾಕ್ಷರಲುಪ್ತ ಪದಗಳಿದ್ದು ಎಂಥ ಪಂಡಿತರನ್ನೂ ಒಂದು ಕ್ಷಣ ದಿಙ್ಮೂಢಗೊಳಿಸದೆ ಇರಲಾರವು. ಸ್ವರ ಸಂಗೀತದ ಗಾಂಭೀರ್ಯದ ಮೂಲಕವೇ ಅಲೌಕಿಕವಾದ ಮಂಪರು ಕವಿಯುವಂತೆ ಮಾಡಿ ತನ್ಮೂಲಕ ನನ್ನನ್ನು ನಾನು ಮರೆಯುವ ಪ್ರಯತ್ನ ಮಾಡುತ್ತಿರುವೆನೆಂದು ಪ್ರಾಮಾಣಿಕವಾಗಿ ಹೇಳಬಯಸುತ್ತಿರುವೆನು. ಒಂದು ರೀತಿ ಸದರೀ ಉಯಿಲಿನ ಮೂಲಕ ಪುನರುಜ್ಜೀವಿಸುವ ಪ್ರಯತ್ನ ನನ್ನದಾಗಿರುತ್ತದೆ. ಉದಾತ್ತ ಅನುದಾತ್ತ ಮತ್ತು ಸ್ವರಿತಗಳೆಂಬ ಮೂರು ಪ್ರಕಾರದ ಸ್ವರಗಳನ್ನು ಕರತಲಾಮಲಕ ಮಾಡಿಕೊಂಡವರಿಗೆ ಮಾತ್ರ ನನ್ನೀ ಉಯಿಲು ಮಾತ್ರ ಅರ್ಥವಾಗಲು ಸಾಧ್ಯ. ಉದಾತ್ತಾದಿಯಾದ ಸ್ವರ ಸಂಗೀತ ಬದುಕಿನ ಛಂದಸ್ಸಿನ ಸೌಂದರ್ಯದ ಸಾಕ್ಷಾತ್ಕಾರ ಮಾಡಿದರೆ ನಾನು ಬರೆಯುತ್ತಿರುವ ಉಯಿಲು ಸಾರ್ಥಕವಾಗುತ್ತದೆ. ಬದುಕಿನ ಏಕತಾನತೆಯ ಪರಿಹಾರಕ್ಕೋ ಎನ್ನುವಂತೆ ದೀರ್ಘ-ಹ್ರಸ್ವಲಯದ ವಿನ್ಯಾಸಗಳು ಆಗಾಗ ತೋರಲಿರುವುದರಿಂದ ಪ್ರಾಜ್ಞ ಓದುಗರಾದವರು ಆಗಾಗ್ಗೆ ಪ್ರಾಚೀನ ಕನ್ನಡ ಸಂಸ್ಕೃತ ನಿಘಂಟುಗಳ ಮೊರೆಹೋಗುವುದು ತೀರ ಅಗತ್ಯ.

ಶ್ಲೇಶ್ಮವೇ ಮೊದಲಾದ ಬಗೆ-ಬಗೆಯ ಕೊಳೆಗಳಿಂದ ತುಂಬಿದ ಶರೀರದೊಳಗೆ ವಾಸಿಸುತ್ತಿರುವ ಮನಸ್ಸು ಅರಮನೆಗಳಲ್ಲಿ, ಧನಿಕರ ಸೌಧಗಳಲ್ಲಿ, ಪರ್ವತ ಶ್ರೇಣಿಗಳಲ್ಲಿ, ಜಿತೇಂದ್ರಿಯರಾದ ಮುನಿಶ್ರೇಷ್ಟರ ಪರ್ಣ ಕುಟಿಗಳಲ್ಲಿ ಏಕಕಾಲಕ್ಕೆ ಅಲೆದಾಡಿತೊಡಗಿದಾಗ ನಾನು ಅಲೆಗಳಂತೆ ಚಮ್ಚಲವಾದ ಬುದ್ಧಿ ಸ್ವಭಾವದವನಾಗಿದ್ದೆನು. ಹಗ್ಗವು ತುಂಡಾದಾಗ ಬಾವಿಯಲ್ಲಿ ಮೇಲಕ್ಕೆ ಸೆಳೆಯಲ್ಪಟ್ಟ ಬಿಂದಿಗೆಯಂತೆ ನಾನು ಇದ್ದೆನು. ವಿಷ್ಣುವಿನ ತಾವರೆಯಂತಹ ಪಾದಗಳನ್ನೇ ಗಾಳದ ರೀತಿಯಲ್ಲಿ ಬಳಸುತ್ತ ದ್ವೈತವೆಂಬ ಕತ್ತಲೆಯನ್ನು ಹಿಡಿದು ಸಂಸಾರವೆಂಬ ಬಂಧನದಲ್ಲಿ ಸಿಲುಕಿ ಆತ್ಮಾನಂದ ಮಾಡಿಕೊಳ್ಳುವ ಪ್ರಯತ್ನ ಮಾಡುತ್ತಿದ್ದೆನು. ಯಾವ ಪ್ರಕಾರವಾಗಿ ಪರ್ವತ ಶಿಖಿರದ
ತೆ ಆಕಾರವುಳ್ಳ, ವಿನೋದದಲ್ಲಿ ಹೆಮ್ಮರವನ್ನು ಬುಡಸಹಿತ ಕಿತ್ತುಹಾಕುವ ಮದ್ದಾನೆಯು ಹೆಣ್ಣಾನೆಯ ಸ್ಪರ್ಶಕ್ಕೆ ಮನಸೋತು ಕಂಭದಲ್ಲಿ ಬಂಧನಕ್ಕೊಳಗಾಗುವುದೋ ಹಾಗೆಯೇ ನಾನು ಅವಯವಗಳು ಸುಕ್ಕು ಗಟ್ಟುವ ಮೊದಲೆ, ತಲೆಗೂದಲು ಬೆಳ್ಳಗಾಗುವ ಮೊದಲೆ, ಮುಪ್ಪಿನಿಂದ ದೇಹವೆಂಬುದು ಜೀರ್ಣವಾಗುವ ಮೊದಲೆ ವಿಷಯ ಸುಖವೆಂಬ ಕಾಡಿನೊಳಗೆ ಮನಸ್ವೇಚ್ಛೆಯಾಗಿ ಅಲೆದಾಡಬೇಕೆಂದು ಬಗೆಬಗೆಯಾದ ತಂತ್ರೋಪಾಯಗಳನ್ನು ಪ್ರಯೋಗಿಸುತ್ತಿದ್ದೆನು. ಹಾಗೆ ನಾನು ಮಾಡುತ್ತಿದ್ದ ಪ್ರಯತ್ನ ಉಪಾಯಗಳೆಲ್ಲವು ಹುಲ್ಲು ಇಲ್ಲದ ಸ್ಥಳಗಳಲ್ಲಿ ನಂದಿ ಹ್ಗುವ ಬೆಂಕಿಯಂತೆಯೂ; ಮರಳು ಬೆಟ್ಟದ ಮೇಲೆ ಬಿದ್ದು ಇಂಗಿಹೋಗುವ ಉದಕದಂತೆಯೂ ನಿಷ್ಪಲವಾಗುತ್ತಿದ್ದುವು. ಇಂದ್ರಿಯಗಳ ಸೆಳವಿಗೆ ಸಿಲುಕಿ ಪಾಪಮಾಡಕೂಡದೆಂದೂ ಹಗಲಿರುಳು ಭಗವನ್ನಾಮ ಸ್ಮರಣ ಮಾಡಿ ಸಾರಥಿಯ ಕುದುರೆಗಳನ್ನು ಹತೋಟಿಯಲ್ಲಿಟ್ಟುಕೊಳ್ಳುವ ರೀತಿಯಲ್ಲೇ ಇಂದ್ರಿಯಗಳನ್ನು ಹದ್ದುಬಸ್ತಿನಲ್ಲಿಟ್ಟುಕೊಳ್ಳಬೇಕೆಂದೂ ತಂದೆಯವರಾದ ಶಾಮಾಶಾಸ್ತ್ರಿಗಳು ಹೇಳಿ ನನ್ನ ಮನುಷ್ಯ ಸಹಜ ಚಟುವಟಿಕೆಗಳಿಗೆ ಅಧಾತ್ಮದ ಕಡಿವಾಣ ಹಾಕುತ್ತಿದ್ದುದುಂಟು. ಆದರೆ, ನಾನಾದರೋ ಮಳೆಗಾಲದ ಮಿಂಚಿನಂತೆ ಅತಿ ಚಂಚಲವಾದ ಭೋಗಗಳನ್ನೂ; ಪ್ರಿಯೆಯರಿಂದ ಕೊಡಲ್ಪಟ್ಟ ಆಲಿಂಗನಾದಿಗಳನ್ನೂ; ಸೊಬಗು ಸೂಸುವ ಯೌವನವನ್ನೂ ಅನುಭವಿಸಲು‌ಒಳಗೊಳಗೇ ತುಂಬ ಉತ್ಸುಕನಾಗಿದ್ದೆನು. ಮಕ್ಕಳು ಅಂಗುಷ್ಟದಲ್ಲಿ ಜೊಲ್ಲನ್ನು ಹೀರುತ್ತ ಸ್ತನ್ಯಪಾನವೆಂದು ಭ್ರಮಿಸುವಮ್ತೆ ನಾನು ನನ್ನ ಯೌವನದ ಪ್ರತಿಯೊಂದು ಕ್ಷಣವನ್ನು ಬದುಕಿನ ಅಖಾಡದಲ್ಲಿ ವೈದಿಕ ಮುಖವಾಡ ಧರಿಸಿ ಅನಂದಾತಿರೇಕದಿಂದ ಆನಂದಿಸುವ ಪ್ರಯತ್ನ ಮಾಡುತ್ತಿದ್ದೆನು. ಏ ಎಲ್ಲ ಮಧುರ ಸ್ಮೃತಿಗಳು ಮತ್ತೆ ಜೀವ ಧರಿಸಿದ ಕ್ಷಣವನ್ನು ಮಾತ್ರ ನಾನು ಮರೆಯಲು ಸಾಧ್ಯವಿಲ್ಲ! ಆ ಕ್ಷಣ ಯಾವುದೆಂದರೆ ನನ್ನ ಲೌಕಿಕ ಬದುಕಿನ ಚಕ್ಷುವನ್ನು ಮತ್ತೆ ತೆರೆಯುವಂತೆ ಮಾಡಿದ ಮೊಮ್ಮಗನೆಂಬ ಮಹಾಶಯನಿಗೆ ನಾನು ಸದಾ ಕೃತಜ್ಞನಾಗಿರಬೇಕು. ಯೌವನವೆಂಬ ಗಾಂಧರ್ವ ಲೋಕವನ್ನು ಅಂಜುತ್ತ ಅಳುಕುತ್ತ ಪ್ರವೇಶಿಸಿದ್ದ ಅವನು ತನಗರಿವಿಲ್ಲದಂತೆ ಬಾಹ್ಯ ವಸ್ತುವನ್ನು ವಿವೇಚಿಸುವ ಪ್ರಯತ್ನ ಮಾಡುತ್ತಿದ್ದ. ಹಾವಿನಲ್ಲಿ, ಹಾರದಲ್ಲಿ, ಬಲಿಷ್ಟವಾದ ಶತ್ರುವಿನಲ್ಲಿ, ಆತ್ಮೀಯನಾದ ಗೆಳೆಯನಲ್ಲಿ. ಫಳಫಳ ಕೋರೈಸುವ ರತ್ನದಲ್ಲಿ, ಫಲವಂತಿಕೆಯ ಮಣ್ಣಿನಲ್ಲಿ; ಹೂವಿನಲ್ಲಿ, ಹಾಸಿಗೆಯಲ್ಲಿ; ಶಿಲ್ಪಿಗಾಗಿ ಕಾಯುವ ನೋಂಪಿನಲ್ಲಿರುವ ಯೋಗ್ಯ ಶಿಲೆಯಲ್ಲಿ, ಪುಟ್ಟನತ್ತಿನಂಥ ಹುಲ್ಲಿನಲ್ಲಿ; ಪಂಚೇಂದ್ರಿಯಗಳಿಗೆ ಸವಾಲೆಸೆಯುವ ಯೌವನಭರಿತ ಸ್ತ್ರೀಯರಲ್ಲಿ ಆಧ್ಯಾತ್ಮಿಕ ಉನ್ನತಿಯನ್ನು ಅರಸೀ ಅರಸೀ ಬಸವಳಿದು ವೃದ್ಧಾಪ್ಯದಲ್ಲಿದ್ದ ನಾನು ಸೌಂದರ್ಯದ ನಿರ್ವಿಕಲ್ಪ ಸಮಾಧಿಯಲ್ಲಿದ್ದುದು ಅವನಾದರೂ ಹೆಂಗಸರ ಸುಂದರ ಬಳೆಗಳ ಶಬ್ದ ತರಂಗಗಳನ್ನು ಕೇಳಲಿ ಮತ್ತು ಬದುಕುವ ಉತ್ಸಾಹವನ್ನು ಪ್ಡೆದುಕೊಳ್ಳಲಿ ಎಂದೇ ಕೆಲವು ಸೌಕರ್ಯಗಳನ್ನು ಅವನಿಗೆ ಮಾಡಿಕೊಟ್ತಿದ್ದೆನು. ಬದುಕಿನ ರಸಾಸ್ವಾದನದ ಪಟುವಾಗಿದ್ದಾಗ ಮಾತ್ರ ಮನುಷ್ಯ ಸುಸ್ಥಿರವಾದ ಉಸಿರಾಟದ ರಿ‌ಇತಗಳನ್ನು ರೂಢಿಸಿಕೊಳ್ಳಬಲ್ಲ ಎಂಬುದು ನನ್ನ ಅನಿಸಿಕೆ. ಆ ದೃಷ್ಯ ನೋಡಿದೊಡನೆ ತಂದೆಯವರು ಹೇಳುತ್ತಿದ್ದಂಥ ಮಾತಾದಂಥ ಕಳ್ಳರು ಕದಿಯಲಾಗದ; ರಾಜರು ವಶಪಡಿಸಿಕೊಳ್ಳಲಾಗದ, ದಾಯಾದಿಗಳು ಹಂಚಿಕೊಳ್ಳಲಾಗದ ಸುಸ್ಥಿರ ಐಶ್ವರ್ಯವೆಂಬುದು ನಗೆಪಾಟಲಾಯಿತು. ಯಾವ ರೀತಿಯಲ್ಲಿ ಚಿಕ್ಕದಾದ ಅಂಕುಶಕ್ಕೆ ದೊಡ್ಡದಾದ ಆನೆಯು ವಶವಾಗುವುದೋ ಹಾಗೆಯೇ ಸುಂದರಕಾಯಳೂ ಸುಶೀಲೆಯೂ ಆದಂಥ ರುದ್ರನಾಯಕನ ಪುತ್ರಿ ಅನಸೂಯಾಳಿಗೆ ಶಾಮನ ವಶವಾಗುವುದರಲ್ಲಿ ನನ್ನ ಪಾತ್ರವೂ ಇರುವುದು. ಕನ್ನೈದಿಲೆಗಳನ್ನು ಚಂದಿರನು ಅರಳಿಸುವ ರೀತಿಯಲ್ಲಿಯೇ ಆಕೆಯು ಅವನ ಮನಸ್ಸನ್ನು ಅರಳಿಸುವಲ್ಲಿ ನಾನು ಗೊತ್ತಿದ್ದೋ ಗೊತ್ತಿಲ್ಲದೆಯೋ ನೀಡಿದ ಸಹಕಾರ, ತೋರಿಸಿದ ಅನುಭೂತಿ ಇವ್ಯಾವುದನ್ನು ನಾನು ಅಲ್ಲಗಳೇಯಲಾರೆನು. ಅವನ ಹುಬ್ಬುಗಳಲ್ಲಿ ಕುಣಿಯುತ್ತಿದ್ದ ಚಂಚಲತೆಯನ್ನು ನಾನು ಗುಟ್ಟಾಗಿ ಆಸ್ವಾದಿಸುತ್ತಿದ್ದೆನು. ವಿಷಯ ಭೋಗದ ಬಯಕೆಯಿಂದ ಅವನು‌ಒದ್ದಾಡುತ್ತಿದ್ದುದನ್ನು ನೋಡಿ ನಾನು ಒಳಗೊಳಗೇ ಸಂತೋಷ ಪಡುತ್ತಿದ್ದೆನು. ಇಂದ್ರಿಯಗಳ ವೇಗವನ್ನು ನಿಯಂತ್ರಿಸುವ ಶಕ್ತಿ ನಿಶ್ಚಿತವಾದ ಯಾವ ಬ್ರಹ್ಮವಸ್ತುವಿಗೂ ಇಲ್ಲವೆಂಬುದನ್ನು ನಾನು ಅನುಭವ ವೇದ್ಯವಾಗಿ ಬಲ್ಲವನಾಗಿದ್ದೆನು. ಕಲ್ಪವೃಕ್ಷವಿರುವೆಡೆಯಲ್ಲಿ ಕೇವಲ ಪ್ರಾಣಾಯಾಮ ಮಾಡುತ್ತ ಕೂಡ್ರುವವರನ್ನು ಕಂಡರೆ, ಚಿನ್ನದ ಬಣ್ಣದ ಕಮಲ ಪರಾಗಗಳಿರುವೆದೆಯಲ್ಲಿ ಮಂತ್ರ ಹೇಳುತ್ತ ಮೌನವಾಗಿರುವವರನ್ನು ಕಂಡರೆ, ಅದ್ಭುತವಾದ ರೂಪವತಿಯರಿವೆಡೆಯಲ್ಲಿ ಜಿತೇಂದ್ರಿಯರಂತೆ ವರ್ತಿಸುವರನ್ನು ಕಂಡರೆ ನನಗೆ ಅಪರಿಮಿತವಾದ ಸಿಟ್ಟು ಬರುವುದೆಂಬ ಸಂಗತಿ ಪ್ರಾಯಶಃ ಈ ಪ್ರಪಂಚದಲ್ಲಿ ನನಗಲ್ಲದೆ ಇನ್ನೊಬ್ಬರಿಗೆ ತಿಳಿಯದು. ಎಷ್ಟಾದರೂ ನಾನುಶತ್ರುಗಳ ನೆಲೆಯಲ್ಲಿ ಕಾಲುಗಳನ್ನಿಟ್ಟು ಬದುಕಿದೆನೆಂಬ ಸಂಗತಿ ಕೂಡಾ ಅಷ್ಟೇ ನಿಜವು. ಒಂದು ರೀತಿ ಹೇಳಬೇಕೆಂದರೆ ಆ ಕ್ಷಣದವರೆಗೆ ನಾನು ಇಂಥವನೆಂದು ನನಗೇ ಗೊಟ್ಟಿರಲಿಲ್ಲವೆಂದು ಹೇಳಿದರೆ ವಿವಿಧ ಕಳಾ ಪಂಡಿತರಾದ ನಿಮಗೆ ಆಶ್ಚರ್ಯವಾಗಬಹುದು. ಧ್ಯಾನವೆಂಬ ಹಗ್ಗದಿಂದ ಮನಸ್ಸೆಂಬ ಆನೆಯನ್ನು ಎಷ್ಟು ದಿನ ಕಟ್ಟಿಹಾಕಿರಲು ಸಾಧ್ಯ ಎಂಬ ಸತ್ಯದ ಸಾಕ್ಷಾತ್ಕಾರವಾದದ್ದು ಆ ಕ್ಷಣವೆ. ಮಾಯಾ ಮೋಹಿತನಾದ ದುರ್ದೈವಿ ಮಾನವನೋರ್ವನು ನನ್ನೊಳಗೆ ಅಡಗಿಕೊಂಡಿರುವನೆಂದು ಅರ್ಥವಾದದ್ದು ಆ ಕ್ಷಣವೆ! ಆ ಸತ್ಯವನ್ನು ನಿಸ್ಸಂಕೋಚವಾಗಿ ಹೇಳಲಿಕ್ಕೆ ತಕ್ಕುದಾದ ವಯಸ್ಸು-ತಲುಪಿರುವ ನಾನು ಹಿಂಜರಿಯುವುದಾದರೂ ಯಾಕೆ? ಅಲ್ಲವೆ? ಎಷ್ಟಿದ್ದರೂ ನಾನು ಮೋಡಗಳ ಸಮೂಹದೊಳಗಡಗಿರುವ ನೀರಿನಂಥವನು. ರೋಗಗಳ ಭಯದಿಂದಾಗಿ ಸುಖವನ್ನು, ಕೆಟ್ಟಹೆಸರಿಂದಾಗಿ ಕುಲವನ್ನೂ; ಪ್ರತಿವಾದಿಗಳ ಭಯದಿಂದಾಗಿ ಶಾಸ್ತ್ರಗಳನ್ನೂ; ಶತ್ರುಗಳ ಭಯದಿಂದಾಗಿ ಪರಾಕ್ರಮವನ್ನೂ; ಯಮನ ಭಯದಿಂದಾಗಿ ದೇಹವನ್ನೂ; ದೈನ್ಯತೆಯ ಭಯದಿಂದಾಗಿ ಮಾನವನ್ನೂ; ದುಷ್ಟರ ಭಯದಿಂದಾಗಿ ಗುಣವನ್ನೂ; ಮುಪ್ಪಿನ ಭಯದಿಂದಾಗಿ ರೂಪವನ್ನೂ; ಸಮಸ್ತ ವಸ್ತುಗಳ ಭಯದಿಂದಾಗಿ ಭೂಮಿಯನ್ನೂ; ವೈರಾಗ್ಯದ ಭಯದಿಂದಾಗಿ ಬದುಕನ್ನೂ ದೂರವಿಟ್ಟು ಮುನಿಯ ಶಾಂತತೆಯ ಸೋಗು ಹಾಕಿ ಬದುಕುತ್ತಿದ್ದ ನಾನು ನನ್ನಿಂದ ಅನಾವರಣಗೊಂಡಿದ್ದು ಆ ಕ್ಷಣದಿಂದಾಗಿಯೇ. ಆ ಕ್ಷಣವಾದರೂ ಎಂಥಾದ್ದು? ನಿರ್ಮಲ ಮೋಹದೊಡಲಿನಿಂದ ಹುಟ್ಟಿದಂಥ ಪರಬ್ರಹ್ಮ ಸ್ವರೂಪವಾದ ಜ್ಞಾನವನ್ನು ಆ ಕ್ಷಣ ತೆರೆದು ತೋರಿಸಿಬಿಟ್ಟಿತು. ರಾವಣಾಂತಃಪುರದ ಸ್ತ್ರೀಯರನ್ನು ನೋಡಿದೊಡನೆ ವಾಯುಪುತ್ರನಾದ ಹನುಮಂತನ ದೇಹದೊಳಗಡಗಿದ್ದ ಕಪಿಬುದ್ಧಿಯು ಬಲಿಷ್ಟಗೊಂಡು ಲಂಕಾದಹನವೇ ಇತ್ಯಾದಿ ಉಪದ್ವ್ಯಾಪಗಳಿಗೆ ಕಾರಣವಾಯಿತೋ, ಹಗೆಯೇ ನಾನು ನನ್ನ ಬದುಕಿನಲ್ಲಿ ಆ ಕ್ಷಣ ಎದುರಗದಿದ್ದಲ್ಲಿ ಅಸ್ವಾಭಿಕವೂ, ಕ್ರುತ್ರಿಮವೂ ಆದ ಶುಷ್ಕ ಬದುಕನ್ನೇ ಮುಂದುವರಿಸಿಕೊಂಡು ಹೋಗಿ ಎಂದೋ ಸತ್ತು ಬಿಟ್ಟಿರುತ್ತಿದ್ದೆನು. ಅಲ್ಲೂ ಸಲ್ಲದೆ, ಇಲ್ಲೂ ಸಲ್ಲದೆ, ಯತಿಯ ಮನಸ್ಸನ್ನೂ ಅಪಹರಿಸಿಬಿಡಬಹುದಾದಂಥ ಕ್ಷಣ ಅದಾಗಿತ್ತು. ಸೊಗಸಾಗಿ ಬಾಗಿದ ಶರೀರ ಪ್ರಶ್ನಿಸಿದಂಥ ಕ್ಷಣವದು. ಕೋಲನ್ನಾಶ್ರಯಿಸಿದ ನಡಿಗೆಯನ್ನು ಪ್ರಶ್ನಿಸಿದಂಥ ಕ್ಷಣವದು. ಶಬ್ದಗಳನ್ನು ಕೇಳಲಸಹಾಯಕವಾದ ಕಿವಿಗಳನ್ನು ಪ್ರಶ್ನಿಸಿದಂಥ ಕ್ಷಣವದು. ನರೆಯತೊಡಗಿದ ತಲೆಯನ್ನು ಪ್ರಶ್ನಿಸಿದಂಥ ಕ್ಷಣವದು. ಪೊರೆ ಮುಚ್ಚಿದ ಕಣ್ಣುಗಳನ್ನು ಪ್ರಶ್ನಿಸಿದಂಥ ಕ್ಷಣವದು. ಶಬ್ದಕ್ಕೆವಶವಾದ ಜಿಂಕೆಯನ್ನೂ ಸ್ಪರ್ಶಕ್ಕೆ ವಶವಾದ ಆನೆಯನ್ನೂ ರೂಪಕ್ಕೆ ವಶವಾದ ಪತಂಗವನ್ನೂ, ರಸಕ್ಕೆ ವಶವಾದ ಮೀನನ್ನೂ; ಗಂಧಕ್ಕೆ ವಶವಾದ ದುಂಬಿಯನ್ನೂ; ಇವೆಲ್ಲಗಳನ್ನು ಜೀವಚ್ಛವದ ರೀತಿಯಲ್ಲಿ ಎದೆಯಲ್ಲಿ ಬಚ್ಚಿಟ್ಟುಕೊಂಡಿದ್ದ ನನ್ನನ್ನು ನನ್ನಂಥವರಿಗೆ ಯಕ್ಷ ಪ್ರಶ್ನೆ ಹಾಕಿದ ಕ್ಶಣ ಅದಾಗಿತ್ತು.
ಆಯುರಾರೋಗ್ಯ, ಸಮೃದ್ಧಿ, ಸಂತಾನ, ಸದ್ಗತಿಗಳನ್ನು ದಯಪಾಲಿಸಲಿಕ್ಕೆಂದೇ ನಿಯಮಿತರಾಗಿದ್ದಂಥ ಕಾಂತಿಯುಳ್ಳವರೂ, ಪ್ರಕಾಶಮಾನರೂ ಆದಂಥ ದೇವತೆಗಳನ್ನು ಕುರಿತಂಥ ಮಂತ್ರಗಳನ್ನು ಕಾಂತಿಯುಕ್ತ ಸಂಜೆಯ ಬೆಳಕಿನಲ್ಲಿ ಹೇಳಿ ಮುಗಿಸಿ ಸ್ನೇಹ, ದಯೆ, ದಾಕ್ಷಿಣ್ಯ, ಅನುಕಂಪ, ಪ್ರೀತಿ, ಔದಾರ್ಯಗಳಿಗೆ ಸದೃಶವಾದ ಹೆಜ್ಜೆ ಇಕ್ಕುತ್ತ ಹೊರಟಿದ್ದ ಆದಿನ ಇಂಥದೇ ಎಂದು ಹೇಳಲು ನಾನು ಈ ಕ್ಷಣ ಅಶಕ್ಯನಾಗಿರುವೆನು. ಪುಣ್ಯ ಕಾಲವೋ, ವಿಷವತ್ ಪುಣ್ಯ ಕಾಲವೋ ಅದು ಎಂದು ನಿರ್ದಿಷ್ಟವಾಗಿ ಹೇಳಲಾರೆನು. ವ್ಯತಿಪಾತ ಶ್ರಾದ್ಧಕ್ಕೂ ಒಂದು ದಿನ ಮೊದಲು ಎಂದು ಮಾತ್ರ ಹೇಳಬಲ್ಲೆನು. ಗ್ರಾಮದಲ್ಲಿ ತಿಲೋದಕಗಳಿಗೆ ಅಭಾವವೇರ್ಪಟ್ಟಿದ್ದ ಹಿಂದಿನ ದಿನವೆಂದು ಮಾತ್ರ ಖಚಿತವಾಗಿ ಹೇಳಬಲ್ಲೆನು. ಆ ದಿನದ ಬಗ್ಗೆ ಇನ್ನೂ ಖಚಿತವಾಗಿ ಹೇಳುವುದಾದರೆ ಹಲಕುಂದಿ ವೆಂಕೋಬರಾಯರ ಮನೆಯಲ್ಲಿ ಬ್ರಾಹ್ಮಣ ವಿಸರ್ಜನೆಯ ಅಪಥ್ಯದಿಂದಾಗಿ ಅವರು ಮಾಡಿದ್ದ ಊಟದ ಎಂಜಲೆಲೆಗಳು ಹಾಗೆ ಬಿಕೋ ಎನ್ನುತ್ತ ಬಿದ್ದಿದ್ದವು. ಎಂಜಲೆಗಳನ್ನು ಕಾದೂ, ಕಾದೂ ಮೊಣಕಾಲುಚಿಪ್ಪು ಹಿಡಿದುಕೊಂಡು ಬಿಟ್ಟಿರುವುದೆಂದೂ ವೈಶ್ವ ದೇವಾದಿ ನಿತ್ಯಕರ್ಮ ಪೂರೈಸಿ ಮನೆಯ ಚಟುವಟಿಕೆಗಳಿಗೆಸಹಜ ರೂಪಕೊಡಬೇಕೆಂದೂ, ರಾಯರು ಕುಂಟುತ್ತ, ಎಡವುತ್ತ ಬಂದು ಮಧ್ಯಾನ್ಹ ಹೇಳಿಹೋಗಿದ್ದರು. ಕಲೆಕ್ಟರಿಗೆ ಸರಿಸಮಾನ ಹುದ್ದೆ ಹೊಂದಿದವರಾದ ಅವರು ಉದಯದಿಂದ ಅಪರಾಹ್ನದವರೆಗೆ ಎಂಜಲೆಲೆ ಕಾಯುತ್ತ ಕೂತಿದ್ದಿದು ನನಗೆ ಸರಿ ಕಾರಾದಿರಲಾಗಿ ಆದಷ್ಟು ಲಗುಬಗೆಯಿಂದ ಹೋಗಿ ವೈಶ್ವ ದೇವಾದಿ ನಿತ್ಯಕರ್ಮಗಳನ್ನು ಶಾಸ್ತ್ರೋಕ್ತವಾಗಿ ಪೂರೈಸಿ ಅವರನ್ನು ಕರ್ಮದಿಂದ ಮುಕ್ತಗೊಳಿಸಬೇಕೆಂದು ನಿಸ್ಚಯಿಸಿಯೇ ವಿಶೇಷ ಸಂಧ್ಯಾವಂದನೆ ಪೂರೈಸಿದ್ದೆನು. ಬಲಿಯನ್ನು ಶ್ರಾದ್ಧದ ಕೊನೆಯಲ್ಲಿ ಕೊಡುವುದೋ ಅಥವಾ ವಿಕಿರಿದ ಅನಂತರ ಕೊಡುವುದೋ? ಇದರ ಬಗ್ಗೆ ಮನುವಾಗಲೀ ಮೇಧಾತಿಥಿಗಳಾಗಲೀ ಏನು ಹೇಳಿರುವರೆಂಬುದನ್ನು ಅವರ ಸ್ಮೃತಿಗಳ ಸಹಾಯದಿಂದ ಶೋದಿಸಿ ಕಾರ್ಯಪ್ರವೃತ್ತನಾಗಬೇಕೆಂದು ಯೋಚಿಸುತ್ತ ನಡೆಯುತ್ತಿದ್ದ ನಾನು ಖಚಿತವಾದ ಹೆಜ್ಜೆ ಇಕ್ಕುತ್ತಿರಲಿಲ್ಲವು. ಶ್ರಾದ್ಧಾಲೋಚನೆಯಿಂದ ಮುಕ್ತವಾಗುವ ನಿಮಿತ್ತ ಸೂರ್ಯಗತವಾದ ಬ್ರಹ್ಮಸ್ವರೂಪಿಣಿಯಾದ ಸಂಧ್ಯಾರೂಪಿಣಿಯನ್ನು ಪ್ರತಿ ಹೆಜ್ಜೆಗೊಮ್ಮೊಮ್ಮೆ ಸ್ಮರಣ ಮಾಡುತ್ತಿದ್ದೆನು. ತತ್ವಗಳೇ ಆಸನವಾಗಿ ಉಳ್ಳವಳಾದ ತತ್ವಾಸನೆಯು ಇನ್ನೇನು ನನ್ನ ಮನಸ್ಸಿಗೆ ಶಾಂತಿ ದಯಪಾಲಿಸಿದಳು., ಮೂವತ್ತಾರು ತತ್ವಗಳಿಗೆ ಅಧಿದೇವತೆಯಾದ ಪರಮೇಶ್ವರನ ಲಿಂಗಮೂರ್ತಿಯನ್ನು ದರ್ಶಿಸಿ ಕೃತಾರ್ಥನಾಗಬೇಕೆಂದು ನಿಸ್ಚಯಿಸಿ ಅನತಿ ದೂರದಲ್ಲಿಯೇ ಕಲಿ ದೇವನಾಥ ನೆಲೆಗೊಂಡಿರುವ ಶಿವ ದೇಗುಲವಿರುವುದು ಆ ಕೂಡಲೆ ಸ್ಮರಣೆಗೆ ಬಂತು. ಸಾಮಾನ್ಯ ಶಿವ ಲಿಂಗವಲ್ಲವದು; ಕದಂಬ, ಚಾಲುಕ್ಯ ಹೊಯ್ಸಳರೇ ಮೊದಲಾದ ಶಕ್ತಿ ಸಂಪನ್ನರಿಮ್ದ ಪೂಜಿಸಿ ಕೊಂಡ ಊರ್ಧ್ವಲಿಂಗ ಮೂರ್ತಿಯದು. ಹಿರಣ್ಯಗರ್ಭಾಃ ಸಮವರ್ತಾಗ್ರೇ ಭೂತ ಸ್ವಜಾತಃ ಪತಿರೇಕ ಆಸೀತ್ ಎಂದು ಧ್ಯಾನಿಸುತ್ತ ಹೋಗಿ ಸೃಷ್ಟಿಯನ್ನು ಉದ್ಭವಿಸಿದಂತವನೂ, ಸ್ಥಾಪಿಸಿದಂತವನೂ ಆದಂಥ ದೇವತಾಮೂರ್ತಿ ನೆಲೆಗೊಂಡಿರುವ ದೇವಳದ ಪ್ರಾಣ್ಗಣ ಪ್ರವೇಶಿಸಿದೆನು. ನನ್ನ ಮತ್ತು ಆ ದೇವಳದ ಸಂಬಂಧಸೂತ್ರ ಆ ಕ್ಷಣ ಮತ್ತಷ್ಟು ಹಿಗ್ಗಿದಂತೆ ಭಾಸವಾಯಿತು. ವಿಶ್ವ ದೇವೈಕ್ಯ ತತ್ವವೇ ಸಾಕಾರಗೊಂಡಿದ್ದ ಆ ದೇವಳದ ಗರ್ಭಗುಡಿ ಸಮೀಪಿಸಬೇಕೆನ್ನುವಷ್ಟರಲ್ಲಿ ಸರಸ, ಪರಿಮಳ, ಗಂಧ, ಕರ್ಪೂರ ಇಲ್ಲೆಲ್ಲೋ ಹರಡಿದೆ! ಅದರ ಮೂಲ ಯಾವುದು! ಎಂಬ ಪ್ರಶ್ನೆ ತೇಲಿ ಬಂದು ಸುತ್ತಲೂ ಒಮ್ಮೆ ನೋಡಿದೆ. ಚಿನ್ನವನ್ನು ಸಂಪಾದಿಸುವಲ್ಲಿ ನಿಪುಣನಾದ ಅಕ್ಕಸಾಲಿಗನು ಕಲ್ಲಿನ ನೆಲದಲ್ಲಿ ತನ್ನ ಅರಿವಿನಿಂದ ಹೇಗೆ ಚಿನ್ನವನ್ನು ಗುರಿತಿಸುವನೋಫ್ ಹಾಗೆಯೆ ನಾನೂ ಪರಿಮಳ ಸದೃಶವಾದ ಧ್ವನಿ ತರಂಗಗಳು ತೇಲಿ ಬರುತ್ತಿದ್ದ ದಿಕ್ಕಿನ ಕಡೆ ಕಿವಿ ಚಾಚಿದೆನು. ನನಗೆ ಆಗ ಹೇಗೆ ಅರಿವಗಬೇಕು! ಶುದ್ಧವಾದುದೂ; ಎಳೆಯ ಹುಲ್ಲನ್ನು ತಿನುವುದೂ; ಬಹಳ ದೂರ ಓಡಲು ಶಕ್ಯವಾದುದೂ ಆದ ಜಿಂಕೆಯು ಬೇಟೆಗಾರನ ಹಾಡಿನ ಹಾದಿ ಹಿಡಿದು ಹೇಗೆ ಬಲೆಗೆ ಬೀಳುವುದೋ ಹಾಗೆಯೇ ನಾನು ಇಂಪಾದ ಧ್ವನಿ ಬರುತ್ತಿದ್ದ ಆನಂದ ನಿಧಿಯಂತಿದ್ದ ದಿಕಿನ ಕಡೆ ಒಂದೊಂದೆ ಹೆಜ್ಜೆ ಇಕ್ಕುತ್ತ ವ್ಡೆದೆನು. ಚಾಲುಕ್ಯರ ಮತ್ತು ವಿಜಯನಗರದಸರ ಎರಡು ಶಿಲಾಶಾಸನಗಳ ನಡುವೆ ಇದ್ದ ಪುಟ್ಟ ಕಿಂಡಿಯ ಮೂಲಕ ಇಣುಕಿದೆನು. ಚಂದ್ರಮಂಡಲ ಸದೃಶವದನ ನಗೆಯ ಸೂಸುತ್ತಿದ್ದ ಒಂದು ದೇಹವು ಶಾಮನದಾಗಿರಲು, ಚಂದನದ್ರವದಿಂದ ಲಿಪ್ತವಾಗಿರುವ ಅಂಗವುಳ್ಳವಳಾಗಿದ್ದ ಇನ್ನೊಂದು ದೇಹವು ಅನಸೂಯಳದಾಗಿತ್ತು. ಸುಕುಮಾರ ಅಂಗವಿನ್ಯಾಸದವಳಾದ ಆಕೆಯು ಅವನಿಗೆ ಅಂದರೆ ನನ್ನ ಮೊಮ್ಮಗನಿಗೆ, ಅಂದರೆ ನನ್ನ ಮಗನ ಮಗನಿಗೆ ಮುದ್ದು ಕೊಡುತ್ತಿರುವುದನ್ನು ನೋಡಿದೊಡನೆ ನಾನು ಆ ಕ್ಷಣ ಅನಿವರ್ಚನೀಯವಾದ ಝಂಝಾವಾತಕ್ಕೆ ಸಿಲುಕಿದ ತರಗೆಲೆಯಂತಾಗಿಬಿಟ್ಟೆನು. ವಿಸ್ತಾರವೂ, ಬಲಿಷ್ಟವೂ ಆದ ಸಮುದ್ರವು ಆ ಕ್ಷಣ ಒಂದು ಪುಟ್ಟ ತೊರೆಯಂತೆ ಮಾರ್ಪಟ್ಟಂತೆ ಭಾಸವಾಯಿತು. ಒಣ ಮರಕ್ಕೆ ಹತ್ತಿದ ಬೆಂಕಿಯು ಇಡೀ ಕಾಡನ್ನೇ ಬಲಿತೆಗೆದುಕೊಳ್ಳುವಂತೆಯೇ ದುಷ್‌ಪುತ್ರನಾದ ಶಾಮನಿಂದ ಇಡೀ ನಮ್ಮ ಶ್ರೇಷ್ಠ ಕುಲವೇ ನಾಶವಾಗುತ್ತಿದೆಯಲ್ಲಾ… ಆಶೆ ಎಂಬ ನದಿಯಲ್ಲಿ ವಾಸಿಸುತ್ತಿರುವ ಕಾಮವೆಂಬ ಮೊಸಳೆಗೆ ಬಲಿಯಾಗುತ್ತಿರುವುದಲ್ಲಾ… ಶರೀರದೊಳಗೇ ಇದ್ದು ವಾಸಿಸುತ್ತಿರುವ ದೊಡ್ಡ ಶತ್ರುವಾದ ಕಾಮವನ್ನು ಅಧ್ಯಾತ್ಮದ ಅಸ್ತ್ರದಿಂದ ಶಾಮನು ಕೊಲ್ಲಲಾಗದೇ ಹೋದನಲ್ಲಾ… ಎಂದಿತ್ಯಾದಿ ಮಮ್ಮಲನೆ ಮರುಗುತ್ತ ನಾನು ಮನೆಗೆ ಮರಳಿ ಕೋಣೆ ಪ್ರವೇಶಿಸಿ ಕದ ಮುಚ್ಚಿ ಭದ್ರಪಡಿಸಿ ‘ಆತ್ಮನ್ನೇ ಮಾತ್ಮನೇ ತುಷ್ಟಾ ತುಷ್ಟಃ ಸ್ಥಿತ ಪ್ರಜ್ಞಸ್ತದೋಚ್ಯತೇ’ ಎಂಬ ಸ್ಥಿತಪ್ರಜ್ಞ ಸಮ್ಬಂಧೀ ಗೀತಾಶ್ಲೋಕವನ್ನು ಉಚ್ಚರಿಸುವ ಮತ್ತು ಅದರರ್ಥದಾಳಕ್ಕಿಳಿಯುವ ಪ್ರಯತ್ನಕ್ಕೆ ತೊಡಗಿದೆನು. ತನ್ನ ಹೊಳಪು ಮೊದಲಾದ ಗುಣಗಳಿಂದ ಯಕಃಶ್ಚಿತ್ ಚಂದ್ರನು ಈಶ್ವರನ ತಲೆಯನ್ನು ಹತ್ತಿ ಕೂತಂತಯೇ ನೋಡಿದ ಆದೃಷ್ಯವು ಪದೇಪದೇ ನೆನಪಾಗಿ ನನ್ನ ಏಕಾಗ್ರತೆಯ ಮೇಲೆ ಧಾಳಿ ಮಾಡಿತು. ಎಷ್ಟು ಪ್ರಯತ್ನಿಸಿದರೂ ಆ ದೃಶ್ಯ ನನ್ನಿಂದ ಮರೆಯಾಗಲೇ ಇಲ್ಲ. ಪಾರದರ್ಶಕ ಗಾಜಿನ ಕೊಳವೆಯೊಳಗೆ ವಸ್ತುವಿನ ರೂಪ ಅಸಂಖ್ಯಾತವಾಗುವಂತೆ ಆ ದೃಶ್ಯ ನನ್ನ ಮನದಲ್ಲಿ ಪುರುಷಸೂಕ್ತದಂತೆ ಸಾವಿರಪಟ್ಟು ಲಕ್ಷಪಟ್ಟು ಕೋಟಿಪಟ್ಟು ವೃದ್ಧಿಯಾಗತೊಡಗಿತು. ಆ ದೃಶ್ಯದ ಜ್ವಾಲೆಯಿಂದ ಅಂತರಂಗದ ಸಾತ್ವಿಕ ವೃಕ್ಷಗಳು ಒಂದೊಂದು ಹೊತ್ತಿ ಉರ್ಯತೊಡಗಿದವು. ನೀತಿ ಸಂಹಿತೆಯ ಎಳೆ ಲತೆಗಳು ಕರಕಿಟ್ಟು ಧರೆಗೆರತೊಡಗಿದವು. ಎಷ್ಟು ಪ್ರಯತ್ನಿಸಿದರೂ ಚಂಡಮಾರುತಕ್ಕೆ ಸಿಲುಕಿದ್ದ ನನ್ನ ಹ್ರುದಯದ ದೋಣಿಯನ್ನು ನಿಯಂತ್ರಿಸುವುದಾಗಲಿಲ್ಲ. ಹೊಟ್ಟಿನ ಸಹಾಯವಿಲ್ಲದಿದ್ದರೆ ಬರಿ ಅಕ್ಕಿ ಹೇಗೆ ಮೊಳೆಯುವುದಿಲ್ಲವೋ ಹಾಗೆಯೇ ಇನ್ನೊರ್ವರಿಗೆ ಹೇಳಿಕೊಳ್ಳದ ಹೊರತು ಝಂಜಾವಾತವನ್ನು ತಂಗಾಳಿಯಾಗಿ ಮಾರ್ಪಡಿಸುವುದು ಅಸಾಧ್ಯವೆಂಬ ಅರಿವು ಮೂಡುತ್ತಿರುವಾಗ ಹೊರಗಡೆ ಸೊಸೆಯಾದ ಅಲಮೇಲುವು ‘ಮಾವನವ್ರೆ… ಮಾವನವ್ರೇ ಬಾಗಿಲು ತೆರೀರಿ… ನನಗ್ಯಾಕೋ ಭಯವಾಗ್ತಿದೆ’ ಎಂದು ಕೂಗಿಕೊಳ್ಳುವುದು ಕೇಳಿಸಿತು. ಸಾಧು ಸಮಾಗಮವಾದೊಡನೆ ಅಲೌಕಿಕ ಫಲ ದಯಪಾಲಿಸುವ ತೀರ್ಥಕ್ಷೇತ್ರದಂಥ ಮಹಿಳೆ ಆಕೆ… ಕತ್ತರಿಸುವ ಕೊಡಲಿಯ ಬಾಯನ್ನು ಸುವಾಸನೆಯುಳ್ಳದ್ದನ್ನಾಗಿಸುವ ಶ್ರೀಗಂಧದ ವೃಕ್ಷದಂಥ ಮಹಿಳೆ ಆಕೆ. ಸಂಸಾರವೆಂಬ ಕಡಲಿನ ಉಪ್ಪು ನೀರನ್ನು ಕುಡಿದರೂ ಸಿಹಿಯಾದ ನೀರನ್ನು ಮುಗಿಲಿನಿಂದ ಸುರಿಸುವ ಮೋಡದಂಥ ಮಹಿಳೆ ಆಕೆ. ಆಕೆ ವೈಧವ್ಯದ ಪೂರ್ವದಲ್ಲಿ ಗಂಡನಿಂದ ಸುಖ ಅನುಭವಿಸಲಿಲ್ಲ. ವೈಧವ್ಯದ ಭಾರಿ ಮತ್ತು ಭಯಂಕರ ಸಂಕೇತಗಳನ್ನು ನಖಷಿಕಾಂತ ಆಭರಣೋಪಾದಿಯಲ್ಲಿ ಧರಿಸಿ ವಿಲವಿಲ ಒದ್ದಾಡುತ್ತಿರುವ ಆಕೆಗೆ ಬದುಕಿನ ಮರುಹುಟ್ಟು ನೀಡುವ ಪ್ರಯತ್ನವನ್ನು ನಾನು ಮಾಡಲೇ ಇಲ್ಲ. ಕಗ್ಗಾತ್ತಲ ಗವಿಯಲ್ಲಿ ಹಾವಾಗಿರುವುದು ಉತ್ತಮ. ಕಲ್ಲಿನ ನಡುವೆ ಹುಳುವಾಗಿರುವುದು ಉತ್ತಮ. ಮರಳುಗಾಡಿನಲ್ಲಿ ಕುಂಟು ಮೃಗವಾಗಿರುವುದೂ ಉತ್ತಮ. ಆದರೆ ನಮ್ಮಂಥ ಕರ್ಮಠರ ಮನೆಯಲ್ಲಿ ಹೆಣ್ಣಾಗಿಹುಟ್ಟುವುದಾಗಲಿ; ವಿಧವೆಯಾಗಿರುವುದಾಗಲೀ ಅತಿ ದುರಂತದ ಸಂಗತಿಯಾಗಿರುತ್ತದೆ. ಒಂದೇ ಮಾತಿನಲ್ಲಿ ಹೇಳಬೇಕೆಂದರೆ ಪರಮೇಶ್ವರ ಶಾಸ್ತ್ರಿಯಂಥ ನನ್ನಂಥವರನ್ನು ಬಕ ದಂಭಕ್ಕೆ ಹೋಲಿಸಬಹುದು. ಅಂದರೆ ವ್ರತನಿಯಮ ತೋರಿಸುವ ದಂಭ ಎಂದು ಅರ್ಥ. ಅಂದರೆ ಅದು ಬೇಡ ಇದು ಬೇಡ ಎಂದು ಹಿಂಜರಿಯುವ ಜಾಯಮಾನವನ್ನು ಪ್ರಚುರಪಡಿಸುತ್ತಲೇ ಇರುವುದು. ನಡೆಯುವುದಾದರೆ ಮೆಲ್ಲಗೆ ನಡೆಯಬೇಕು, ಕಣ್ಣನ್ನು ಅತ್ತಿತ್ತ ಚಲಿಸಲಿಕ್ಕೆ ಅವಕಾಶ ಕೊಡಬಾರದು… ಆದ್ದರಿಂದ ನನ್ನಂಥವರನ್ನು ಘೋರವಾದ ಮಾರ್ಜಾಲದಂಭವೆಂದು ಕರೆದರೂ ಸರಿಯೇ, ಕೌ ಮುಚ್ಚಿ ತೆರೆಯುವಷ್ಟರಲ್ಲಿ ಪದ್ಮನಾಭ ಸೋದರಿಯೇ ಅಲಮೇಲುವಿನ ಹೆಸರಿನಲ್ಲಿ ನನ್ನ ಮಗನಿಗೆ ಹೆಂಡತಿಯಾಗಿ ; ನನಗೆ ಸೊಸೆಯಾಗಿ ನನ್ನ ಮೊಮ್ಮಗನಿಗೆ ತಾಯಿಯಾಗಿ, ಬ್ರಾಹ್ಮಣ್ಯದ ಉಪಾಸಕಿಯಾಗಿದ್ದು ಬಾಗಿಲು ತಟ್ಟುತ್ತಿರುವಳೆಂದು ಭಾಸವಾಯಿತು. ಪಂಚದಶೀ ಮಂತ್ರದ ವಾಗ್ ಭವಕೂಟವೇ ವೈಧವ್ಯದ ರೂಪ ಧರಿಸಿ ಬಾಗಿಲು ತಟ್ಟುತ್ತಿರುವಂತೆ ಭಾಸವಾಯಿತು. ಉನ್ಮೇಷ, ನಿಮಿಷಗಳಲ್ಲದ ಸಾಕ್ಷಾತ್ ದೇವಿಯೇ ಎದೆಗವುಚಿಕ್ಂಡು ಸ್ವಾಂತನಪಡಿಸಲೋಸುಗ ಬಾಗಿಲು ತಟ್ಟುತ್ತಿರುವಳೆಂದು ಭಾಸವಾಯಿತು. ಋತಂಭರಾ ತತ್ರ ಪ್ರಜ್ಞಾಽಽಽ ಎಂದು ನನಗರಿವಿಲ್ಲದಂತೆ ಉದ್ಗರಿಸಿದೆ. ತುರೀಯಳೂ ಪಡೆಯುವುದಕ್ಕೆ ಅಸಾಧ್ಯಳೂ, ನಿಸ್ಸೀಮ ಮಹಿಮೆಯುಳ್ಳವಳಾದ ಭೋಗ ಸಂಭವೇ… ಬಂದೇ ತಡೆಯೇ ತಾಯಿ… ಶಬ್ದ ಮಾಡದೆ ವರ್ಷ‌ಋತುವಿನಲ್ಲಿ ಮೋಡಗಳಂತೆ ಮಳೆ ಸುರಿಸು… ನನ್ನ ಒಳ ಹೊರಗು ತಂಪು ನಿರ್ಮಿಸು… ವೈಧವ್ಯದ ಮಣ್ಣೊಳಗೆ ಅವಿತಿದ್ದರೂಶಾಂತಿ ಮತ್ತು ಬೆಲೆ ಕಡಿಮೆಯಾಗದ ರತ್ನ ಸಮಾನಳಾದ ನೀನು ಒಳಪ್ರವೇಶಿಸಲುಬಾಗಿಲು ತಟ್ಟುವುದು ಸಾಮಾನ್ಯ ಸಂಗತಿಯಲ್ಲಮ್ಮಾ… ಅಗೆದ್ ಅಗೆದೂ ಆಹಾರದ ರುಚಿಯನ್ನು ನಾಲಿಗೆಗೆ ವರ್ಗಾಯಿಸುವ ದಂತಪಂಕ್ತಿಯಂಥವಳು ನೀನು… ಮಾತು, ಮನಸ್ಸು, ಕ್ರಿಯೆಗಳಲ್ಲಿ ತಾದ್ಯಾತ್ಮ ಹೊಂದಿರುವ ನಿನ್ನ ಮತ್ತು ನನ್ನ ನಡುವೆ ಅಡ್ಡ ಇರುವುದು ನತದೃಷ್ಟ ಹೊಸ್ತಿಲು ಮಾತ್ರ. ಹೊಸ್ತಿಲ ಹಂಗಿನಿಂದ ಕೋಣೆಯನ್ನು ನಿನಗಾಗಿ ಮುಕ್ತಗೊಳಿಸುವೆನು. ತಡೆಯಮ್ಮಾಽಽಽ ನಾನು ಹಾಗೆ ಹಿಂದೆಂದೂ ವಿಲವಿಲನೆ ಒದ್ದಾಡಿರಲಿಲ್ಲ ಎಂಬುದು ವೇದ್ಯವು.! ಸಂಪತ್ತಿನಲ್ಲಿ, ವಿಪತ್ತಿನಲ್ಲಿ, ಬರದಲ್ಲಿ, ಅರಿಷಡ್ವರ್ಗಗಳನ್ನು ಗೆಲ್ಲುವ ಪ್ರಸಂಗದಲ್ಲಿ, ಪಶ್ಚಾತ್ತಾಪದಲ್ಲಿ ಜೊತೆಯಲ್ಲಿ ನಿಂತಿರುವ ಮಹಾಸಾದ್ವಿಯ ಒಳಗೆ ಅಂತರಂಗದ ಒಳಗೆ ಬರಮಾಡಿಕೊಳ್ಳಬೇಕೆಂದು ಎದ್ದು ಲಗುಬಗೆಯಿಂದ ಹೊರಟು ಬಾಗಿಲನ್ನು ತೆಗೆದೆ. ಆಶ್ರಯರಹಿತಳೋರ್ವಳು ಆಶ್ರಯ ಬಯಸುತ್ತಿರುವಂತೆ ಒಳಬಂದಳು. ದೇಹದ ಅಣುವಿನಲ್ಲಿ ಗಾಬರಿ, ಭಯ ಪ್ರಕಟಿಸುತ್ತ ವಿಭೂತಿ ತಿಲಕವೇ ಮೊದಲಾದ ಸ್ರಕ್ಚಂದನಾದಿ ಗಳು ಬೆವರುಗುಂಟ ಕರಗಿ ನೀರಾಗಿ ಹರಿಯುತ್ತಿದ್ದ ನೊಸಲು ಮುಟ್ಟಿ “ಅಯ್ಯೋ” ಎಂದು ಉದ್ಗರಿಸಿದಳು. ಜಗತ್ತಿನ ಸೃಷ್ಟಿ, ಸ್ಥಿತಿ, ಸಂಹಾರ, ತಿರೋಭಾವ ಅನುಗ್ರಹಗಲೆಂದೇ ಪಂಚಕೃತ್ಯಗಳಿಗಧಿದೇವತೆಯಾದ ಪಂಚಕೃತ್ಯ ನಾರಾಯಣಿಯೇ ನೊಸಲ ಸ್ಪರ್ಶಿಸಿ ನನ್ನ ದೇಹದ ವೇದಾಂಗ ಸೂತ್ರಗಳ ಅಂತರಧಿಕರಣವನ್ನೇ ನನ್ನ ದೇಹದೊಳಗಡೆ ಧಾರೆ ಎರೆಯುತ್ತಿರುವಳೆಂಬ ಭಾವನೆಯುಂಟಾಯಿತು. ಆಕೆಯ ಮುಖವನ್ನು ಭೊಗಸೆಯಲ್ಲಿ ಹಿಡಿದು ನೋಡಲು ಸೂರ್ಯಕೋಟಿ ಸಮಪ್ರಭೆಯಂತೆ ಕಣ್ಣು ಕುಕ್ಕಿದಳು. ಸಹಸ್ರ ಕಣ್ಣುಗಳುಳ್ಳ; ಸಹಸ್ರ ಪಾದಗಳುಳ್ಳ ಸಹಸ್ರ ಮುಖಗಳುಳ್ಳ, ಭಗವತಿಯ್ರ್ ನನ್ನ ಮೈ ನೇವರಿಸುತ್ತಿರುವಳೆಂದು ಆ ಕ್ಷಣ ಬಾಸವಾಯಿತು. . ಸಕಲವೇದ ಸಮೂಹವೆಂಬ ಮುತ್ತಿನ ಚಿಪ್ಪಿನಲ್ಲಿ ಅಂತರ್ಗತವಾದ ಮೌಕ್ತಿಕದ ದರುಶನ ಮಾಡಿಸಿದ ಕ್ಷಣವದು, ಆಪ್ಯಾಮಾನದಿಂದಲೂ; ಅಪಾರ ಕಕ್ಕುಲಾತಿಯಿಂದಲೂ ಆಕೆ ಎದೆ ಕಿಬ್ಬೊಟ್ಟೆ ಸವರುತ್ತಿರುವಾಗ ಲಕ್ಷ್ಮೀರ್ವಾಗಾದಿ ರೂಪೇಣ ನರ್ತಕೀವ ವಿಭಾತಿ ಯಾ… ಎಂದು ಸೂತ ಸಂಹಿತೆಯ ಶ್ಲೋಕವೊಂದು ನನ್ನ ಬಾಯಿಂದ ತಾನೇ ತಾನಾಗಿ ಹೊರಟಿತು. ರೇತಸ್ಸಿನ ಅಭಿಮಾನಿದೇವತೆಯೇ, ವೈಧವ್ಯದ ಸರ್ವವರ್ಣ ಶೋಭಿತಳಾಗಿ ಸ್ಪರ್ಶಿಸುತ್ತಿರುವಳೆಂದು ಭಾವಿಸಲು ನನ್ನೆದೆಯ ಒಳಗಿಂದ ವಿಮರ್ಶಾರೂಪದಲ್ಲಿರುವ ಸ್ವಾಭಾವಿಕ ಶಕ್ತಿಯೊಂದು ಜಾಗೃತಗೊಂಡು ತಪ್ಪಲಲ್ಲಿ ಹುದುಗಿದ್ದ ಮಾಣಿಕ್ಯ ಮುಕುಟಕ್ಕೆ ಕಿಡಿ ಹೊತ್ತಿಸಿತು. ದೇಹದ ಸಮಸ್ತ ಅಣು ಅಣುವು ಸಂಗೀತಾಲಾಪನೆ ಮಾಡಲಾರಂಭಿಸಿತು. ಅರವತ್ನಾಲ್ಕು ಅಕ್ಷರಗಳು ಇದ್ದಕ್ಕಿಂತಂತೆ ಜೊತೆಗೂಡಿ ದೇಹದ ಒಳತೋಟಿಯನ್ನಿ ಕಾವ್ಯ ಮಾಡಿದವು… ಅಸ್ಃಟರಲ್ಲಿ ತಂದೆಯೇಽಽಽ ಎಂದು ಉದ್ಗರಿಸಿದಳು. ಹಾಕಿನೀ ಮಂಡಲದ ಬಿಂದು ಸ್ಪೋಟಿಸಿ ಸಾವಿರಾರು ಕಾಮನ ಬಿಲ್ಲುಗಳನ್ನು ರಚಿಸಿರು. ಅದುವರೆಗೆ ಚೆಲ್ಲಾಟವಾಡುತ್ತಿದ್ದ ಸುವರ್ಣ ಮೃಗ ಇದ್ದಕ್ಕಿದ್ದಂತೆ ಚಿದಾಕಾಶಕ್ಕೆ ನೆಗೆದು ಮಾಯವಾಯಿತು. ಗಂಧರ್ವ ನಗರ ಪಾತಾಳಕ್ಕೆ ಕುಸಿದು ವಾಸ್ತವತೆಯ ನೆಲದಾಳದಿಂದ ತೇಲಿ ಬಂತು. ಆ ಕ್ಷಣ ಅಶರೀರಿಯಾದೆನು. ಮಗಳೇ ಎಂದು ಉದ್ಗರಿಸಿ ಆಕೆಯನ್ನು ಅಪ್ಪಿಕೊಂಡೆ. ಆಕೆಯ ಚಿದಗ್ನಿಕುಂಡಕ್ಕೆ ಸಾವಿರ ಸಾವಿರ ಅಶ್ರುಬಿಂದುಗಳನ್ನುದುರಿಸಿ ಜ್ಞಾನಾಗ್ನಿ ಒಡಲಿನಿಂದ ಮತ್ತೆ ಮೂಲ ಶರೀರ ಸಂಪಾದಿಸಿಕೊಂಡೆ.

ಆ ಕ್ಷಣ ನನ್ನೋಳಗೆ ಆಶ್ರಯ ಪಡೆದಿದ್ದು ಹೀಗೆ. ಆ ಕ್ಷಣ ನನ್ನ ಅಂತರಂಗದ ಗುಣರಾಶಿಯ ಮೇಲೆ ಕ್ರಮೇಣ ಹಿಡಿತ ಸಾಧಿದಿತು. ನನ್ನೆದೆಯ ಗಾಳಿಯನ್ನು ಕುಡಿದು ಕಾಳೋರಗಗಳು ವಿಜೃಂಭಿಸತೊಡಗಿದವು. ನನ್ನ ಅಂತರಂಗದ ಒಣಹುಲ್ಲನ್ನು ತಿಂದು ಕಾಡಾನೆಗಳು ಘೀಳಿಸತೊಡಗಿದವು. ಆ ಕ್ಷಣದಿಂದ ನನ್ನ ಮಗನಿಂದ ದೇಹ ಪಡೆದವನಾದ ಶಾಮನು ಕೇವಲ ನಾಮ ಮಾತ್ರ ಶಾಮನಾಗಿರದೆ ಜೀವಂತ ಪುರುಷಸೂಕ್ತವಾದನು. ತನ್ನ ದೇಹದ ಒಂದೊಂದು ಅಂಗದಿಂದ ಒಂದೊಂದು ಲೋಕ ಪ್ರಕಟಿಸ್ತೊಡಗಿದನು. ಪಿಂಡ ಶ್ರಾದ್ಧ ಮುಗಿಸಿಕೊಂಡ ನಂತರವೂ ನಿಸ್ತೇಜವಾಗಿ ನೆಲಕಚ್ಚಿದ ನೆನಪುಗಳು ಆ ಕ್ಷಣದಿಂದ ಸಾವಿರ ಕಣ್ಣಿನ ಬಣ್ಣ ಮುಡಿದು ಸಾವಿರ ಸಾವಿರ ನವಿಲುಗಳಾಗಿ ಕುಣಿಯತೊಡಗಿದವು. ಅಂದಿನಿಂದ ಶೋಕರಹಿತನಾದೆ… ಆ ಕ್ಷಣದಿಂದ ತನ್ನ ಅಮೃತಮಯ ಕಿರಣಗಳಿಂದ ಜಗತ್ತನ್ನು ಆನಂದಪಡಿಸುವ ಚಂದಿರ ಅರ್ಥವಾಗತೊಡಗಿದ. ಜಲಧಾರೆಗಳಿಮ್ದ ಭೂಮಿಗೆ ತಂಪೆರೆಯುವ ಮೇಘಗಳು ಅರ್ಥವಾಗತೊಡಗಿದವು. ಮೂರುಲೋಕಗಳಿಗೆ ಬೆಳಕು ತುಂಬಿದ ಹಗಲು ಉಣಬಡಿಸುವ ಸೂರ್ಯ ಅರ್ಥವಾಗತೊಡಗಿದ. ಯಾವ ಕಾರಣಗಳನ್ನೂ ಅಪೇಕ್ಷಿಸದ ಸಜ್ಜನರು ಅರ್ಥವಾಗತೊಡಗಿದರು. ಕಾಗೆ ಕಾಗೆಗಳನ್ನು ಕರೆಯುವಂತೆ ಆ ಕ್ಷಣವು ಭೂತಕಾಲದ ಸಾವಿರ ಸಾವಿರ ಕ್ಷಣಗಳನ್ನು ಕರೆತಂದಿತು. ಯಾವ ಪ್ರಕಾರವಾಗಿ ಅರ್ಥಬಾಹುಳ್ಯವೆಂಬುದು ಕಾವ್ಯಕ್ಕೆ ಬೇಕೋ; ಔದಾರ್ಯವೆಂಬುದು ಸಂಪತ್ತಿಗೆ ಬೇಕೋ; ಪರಾಕ್ರಮವೆಂಬು‌ಉ ಪ್ರಭುತ್ವಕ್ಕೆ ಬೇಕೋ ಹಾಗೆಯೇ ಭೂತ ಕಾಲವೆಂಬುದು ವರ್ತಮಾನಕ್ಕೆ ಅಗತ್ಯವೆಂಬ ತಿಳುವಳಿಕೆಯನ್ನು ನೀದಿದಂಥ ಕ್ಷಣವದು.ವೃದ್ಧಾಪ್ಯದಲ್ಲಿ ಬದುಕು ಹೊಸೆಯುತ್ತಿದ್ದವನಾದ ನನಗೆ ಎದುರಾಗಲು ಅವರ್ಚನೀಯ ಅನುಭವ ನೀಡಲು ಆ ಕ್ಷಣ ಮಾಡಿದ ಕರ್ರಮತ್ತು ಬಲು ದೊಡ್ಡದು ಎಂಬುದು ನನ್ನ ಭಾವನೆ ಅದ್ದರಿಂದ ಆ ಕ್ಷಣಕ್ಕೆ ಕೃತಕೃತ್ಯನಾಗಿರುವೆನು.

ಆ ಕ್ಷಣವೆಂಬ ಗಾಳವು ನನ್ನ ಬದುಕಿನ ಭೂತಕಾಲದೊಡಲಿನಿಂದ ತುಕ್ಕು ಹಿಡಿದ ನೆನಪುಗಳನ್ನು ಹೆಕ್ಕೀ ಹೆಕ್ಕೀ ತಿಕ್ಕಿ ತೊಳೆದು ರಮ್ಗು ಲೇಪಿಸಿ ಪೇರಿಸ ತೊಡಗಿತು.

ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಇಂದಿರಾ ಗಾಂಧಿಯವರ ಹಸ್ತ ಸಾಮುದ್ರಿಕ ನೋಡಿ ಕಾಲು ಊನಮಾಡಿಕೊಂಡಿರುವುದರ ಬಗೆಗೂ, ಬಗೆಬಗೆಯಾದ ಅವಮಾನಗಳಿಗೆ ತುತ್ತಾದ ನನ್ನ ಬಗ್ಗೆ ಅಗ್ರಹಾರದ ಕುಲಬಾಂಧವರು ನಾನಾ ರೀತಿಯಲ್ಲಿ ಮಾತಾಡಿಕೊಂಡುದು ಸರ್ವ ವೇದ್ಯವಾಗಿದೆ. ಆ ಘಟನೆಯನ್ನು ದುರ್ಘಟನೆ ಎಂಬಂತೆ ಸಮಸ್ತರು ಚಿತ್ರಿಸಿಕೊಂಡರು. ಆದರೆ ಅದರ ಬಗ್ಗೆ ನನಗೆ ತಿಲ ಮಾತ್ರ ಖೇದ ಇರುವಿದಿಲ್ಲ. ನನ್ನ ದೇಹದ ಉತ್ಸರ್ಜನ, ಉಪಾಕರ್ಮಗಳನ್ನು ಮಾಡಿದ ನಂತರವೂ ಉತ್ತರೋತ್ತರ ಸಮಾಜವು ಆ ಘಟನೆಯೊಂದಿಗೆ ನನ್ನನ್ನೂ; ನನ್ನೊಂದಿಗೆ ಆ ಘಟನೆಯನ್ನೂ ಈಡು ಜೋಡಾಗಿ ಬೆರೆಸಿ ಮಾತಾಡಬಹುದೆಂಬ ಕಾರಣಕ್ಕೆ ಸದರೀ ಉಯಿಲಿನಲ್ಲಿ ಅದನ್ನು ಸವಿಸ್ತಾರವಾಗಿ ಪ್ರಸ್ತಾಪಿಸುವುದು ನನಗೆ ಅನಿವಾರ್ಯವಾಗಿರುವುದು. ಕರ್ಮಠ ಗೆರೆಗಳನ್ನು ಉಲ್ಲಂಘಿಸುವ ಕೈಂಕರ್ಯಕ್ಕೆ ಸನ್ನದ್ದನಾಗಿರುವ ಮತ್ತು ನನ್ನ ಮರಣಾನಂತರವೂ ಸದಾ ಉಲ್ಲಂಘಿಸುತ್ತಲೇ ಹೋಗಿ ತನ್ನದೇ ಆದಂಥ ಲೌಕಿಕ ಪರಿಧಿಯನ್ನು ನಿರ್ಮಿಸಿಕೊಳ್ಳುವಲ್ಲಿ ಬಲು ಉತ್ಸುಕನಾಗಿರುವ ನನ್ನ ಮೊಮ್ಮಗನಾದ್ ಶಾಮನಿಗೆ ಈ ನಾನು ಬರೆಯುತ್ತಿರುವ ಉಯಿಲು ಕಳಂಕ ತರಲಾರದೆಂಬ ಭರವಸೆ ಇರುವುದು ನನಗೆ. ಇದನ್ನೆಲ್ಲ ಪ್ರಸ್ತುತಪಡಿಸಲಿಕ್ಕೆ ಮೂಲ ಪ್ರೇರಣೆ ನೀಡಿದಂಥ ಯುವಕನಾದ ಅವನೇ ವೃದ್ಧಾತಿವೃದ್ಧನಾದ ನನಗೆ ಗುರುವೂ; ತಂದೆಯೂ ಎಲ್ಲವೂ ಆಗಿರುವನು. ಅದೂ ಅಲ್ಲದೆ ಸಾಮಾನ್ಯನಾದ ಅವನು ಸದರೀ ಉಯಿಲನ್ನು ಅರ್ಥಮಾಡಿಕೊಳ್ಳುವ ಗೋಜಿಗೆ ಹೋಗಲಾರನು. ಹಾಗೆಯೇ ಉಳಿದ ಲೌಕಿಕರೂ ಸಹ… ಒಂದೇ ಮಾತಿನಲ್ಲಿ ಹೇಳುವುದಾದರೆ ನನ್ನೀ ಉಯಿಲು ಶಾಸನ ಕವಿಗಳಿಗೂ ಅರ್ಥವಾಗುವುದು ಸಾಧ್ಯವಿಲ್ಲ. ಕಾಳಿದಾಸ, ಭಾಸ, ಭಾರವಿ, ಜಗನ್ನಾಥರೇ ಮೊದಲಾದ ಪ್ರಾಚೀನ ಕವಿಗಳನ್ನು ಗುಟ್ಟಾಗಿ ಮನದಟ್ಟು ಮಾಡಿಕೊಂಡಿರುವ ನನಗೆ ಮಾತ್ರ ನಾನು ಬರೆಯುತ್ತಿರುವ ಉಯಿಲು ಅರ್ಥವಾಗುವುದು ಸಾಧ್ಯ. ಅಂದ ಮಾತ್ರಕ್ಕೆ ಇದು ಎಂದೆಂದಿಗೂ ನಿಗೂಢವಾಗಿ ಉಳಿಯಲಾರದು. ಇದನ್ನು ಓದಿ ಅರ್ಥಮಾಡಿಕೊಂಡು ಸಮಾಜಕ್ಕೆ ಉಣಬಡಿಸುವ ಸಾಮರ್ಥ್ಯ ಉಳ್ಳವರು ಇದ್ದೇ ಇದ್ದಾನೆ, ಅವತಾರ ಎತ್ತೇ ಎತ್ತುತ್ತಾನೆ. ಅರ್ಥ ವಿವರಣಕಾರನೆಂಬ ಪಂಡಿತನ ಜನ್ಮದಾತ ಸಂಸ್ಕಾರವನ್ನವಲಂಬಿಸಿರುತ್ತಾದೆ. ಆದ್ದರಿಮ್ದ ನಾನು ಮೋಕ್ಷಕಾರಣವಾದ ಸತ್ಯವನ್ನು ಯಾವ ಮುಚ್ಚುಮರೆಯಾಗಲೀ; ತೇಪೆಯಾಗಲೀ ಇಲ್ಲದೆ ಪ್ರಸ್ತಾಪಿಸುತ್ತಿರುವೆನು.

ಅಸಂತುಷ್ಟಾ ದ್ವಿಜಾ ನಷ್ಟಃ ಎಂಬ ಆರ್ಯೋಕ್ತಿಗೆ ನಾನೇ ಸಾಕ್ಷಿ ಎಂದೊಡನೆ ನೀನು ನಗಾಡಬಹುದು. ಅಸಂತುಷ್ಟತೆ ಎಂಬುದು ನಮ್ಮ ವಂಶಪಾರಂಪರ್ಯವಾಗಿ ಬಂದಿರುವ ಬಳುವ್ಳಿ ಎಂದು ಒಂದೇ ಮಾತಿನಲ್ಲಿ ಹೇಳಿಬಿಡುತ್ತೇನೆ. ಹಸಿಯಾದ ಮಡಿಕೆ ನೀರಿನಲ್ಲಿ ಕರಗುತ್ತಿದ್ದರೂ ಅದಕ್ಕೆ ಹೇಗೆ ಗೊತ್ತಾಗುವುದಿಲ್ಲವೋ ಹಾಗೆಯೇ ನಿಧಾನ ಶತ್ರುವಾದ ಅದು ನಮ್ಮ ವಂಶದ ಪ್ರತಿಯೊಂದು ತಲೆಮಾರಿನೊಂದಿಗೆ ಸಹಬಾಳುವೆ ನಡೆಸಿತು. ಪರಮೇಶ್ವರನನ್ನು ಆಶ್ರಯಿಸಿಯೂ ವಾಸುಕಿ ಗಾಳಿಯನ್ನೇ ಆಹಾರವನ್ನಾಗಿ ಹೊಂದಿದ್ದಂತೆಯೇ ನಾನು ಮೊದಲಾಗಿ ತಲೆಮಾರಿನವರೆಲ್ಲ ಪಾಂಡಿತ್ಯದ ಸಾನ್ನಿಧ್ಯದಲ್ಲಿದ್ದೂ ಅಸಂತುಷ್ಟತೆಗೆ ಶರಣಾಗಿದ್ದರು. ವಂಶ ಪರಂಪರೆಯಿಂದ ಬಂದದಾಗಲೀ, ಗೋಡೆ ಮೇಲೆ ಬರೆದಿಟ್ಟಿದ್ದಾಗಲೀ ಹೇಗೆ ಸಂಪತ್ತಾಗಿರಲಾರದೋ ಹಾಗೆಯೇ ಅಸಂತುಷ್ಟತೆಯಿಂದಾಗಿ ನಮ್ಮವರ್‍ಯಾರೂ ಸುಖ ನೆಮ್ಮದಿಯಿಂದ ಬದುಕಲಿಲ್ಲ, ಸಾಯಲಿಲ್ಲ. ಅವರೆಲ್ಲ ದರ್ಭೆಯಿಂದ ಮುಚ್ಚಿದ ಶರಾವ ಎಂದರೆ ಮಣ್ಣಿನ ಪಾತ್ರೆಯಂತೆ ತರ್ಪಣಕ್ಕೆ ಸಿಗದ ಉಳಿದುಬಿಟ್ಟರು. ಇಲ್ಲವಾಗಿದ್ದರೆ ಅವರು ಕಾಳಿದಾಸ, ಶ್ವೇತಕೇತು, ಆರ್ಯಭಟ, ಭಾಸ್ಕರರಂತೆಯೇ ಉತ್ತರೋತ್ತರವಾಗಿ ಖ್ಯಾತಿವಂತರಾಗಬಹುದಿತ್ತು. ಸಾವಿನಲ್ಲೂ ಜೊತೆಯಲ್ಲಿ ಬರುವ ಧರ್ಮವನ್ನು ಅವರು ಬದಿಗೊತ್ತಿ ಚಂಚಲತೆಯೇ ಮುಖ್ಯಸ್ಥಾಯಿ ಭಾವವಾದ ಲಕ್ಷ್ಮಿ ಮತ್ತು ಖ್ಯಾತಿಯ ಬೆಂಬತ್ತಿ ಯಾವ ಶ್ರಾದ್ಧಕ್ಕೂ ನಿಲುಕದಷ್ಟು ದೂರ ಉಳಿದರು.
ಗಿರಿ ಮತ್ತಾತಂದಿರಾದ ಶಿವರಾಮ ಮೋಹನ ಶರ್ಮರಿಗೆ ವಿದ್ಯಾವಚಸ್ಪತಿ ಎಂಬ ಬಿರುದು ಲಭ್ಯವಾಗಿತ್ತು. ಅವರು ಗುಡೇಕೋಟೆಯ ಚಾಮನಾಯಕನ ಆಸ್ಥಾನ ಜ್ಯೋತಿಷಿಗಳಾಗಿದ್ದರು. ಅವರು ಆಹ್ನಿಕ ಪರಮಕಾರ್ಯಗಳನ್ನು ಅಲಕ್ಷಿಸಿ ಸದಾ ನಾಯಕನನ್ನೇ ಓಲೈಸುತ್ತಿದ್ದರೆಂದು ಪ್ರತೀತಿ ಉಂಟು. ಇರುಳು ಗರುಡನಿಂದ ಬಳಲುತ್ತಿದ್ದ ನಾಯಕನ ಏಕಮಾತ್ರ ಪುತ್ರಿ ಉತ್ಸವಾಂಬೆಯ ಚಿಕಿತ್ಸೆಗೆ ನೇಮಕವಾಗಿದ್ದರು. ಚಿಕಿತ್ಸೆಯ ನೆಪದಲ್ಲಿ ಆಕೆಯೊಂದಿಗೆ ತಾಸುಗಟ್ಲೆ ಏಕಾಂತದಲ್ಲಿರುತ್ತಿದ್ದರಂತೆ. ಬೆಟ್ಟದ ಮೇಲೆ ಕೋಟೆ ದುರಸ್ತಿ ಕಾರ್ಯಕ್ಕೆ ನೇಮಕವಾಗಿದ್ದ ಅಪ್ಪೇನಹಳ್ಳಿಯ ವಡ್ಡಬೋವಿ ಇದ್ದಕ್ಕಿದ್ದಂತೆ ಅಪಸ್ಮಾರಕ್ಕೆ ತುತ್ತಾಗಿ ಗತಪ್ರಾಣನಾದೆ‌ಅನಂತೆ. ಸಂಜೀವಿನಿ ಪರ್ವತಪ್ರಾಯವಾಗಿ ಆಸ್ಥಾನದಲ್ಲಿ ತಾವಿರುವಾಗ ಅವನನ್ನು ಬದುಕಿಸುವುದೆಷ್ಟರ ಮಾತು ಎಂದು ನಾಯಕನಿಗೆ ಹೇಳಿ ಮಂತ್ರೋಚ್ಚಾರಣೆ ಮಾತ್ರದಿಂದ ಅವನಿಗೆ ಪ್ರಾಣ ದಯಪಾಲಿಸಿದರಂತೆ. ಅವರು ಹಸುವಿನ ಕಳೇಬರದಿಂದ ಹಾಲು ಕರೆದರೆಂಬ ವಿವರ ತೀರ್ಥರಾಮೇಶ್ವರ ಬೆಟ್ಟದಲ್ಲಿರುವ ಶಿಲಾಶಾಸನದಿಂದ ತಿಳಿದುಬರುತ್ತದೆ. ತಲಕಾಡಿನ ಶ್ರೀರಂಗರಾಜರು ಅವರಿಗೆ ಧನಕನಕ ವಸ್ತ್ರ ಆಮಿಷ ತೋರಿಸಿ ತಮ್ಮ ಕಡೆಗೆ ಸೆಳೆಯಲು ಪ್ರಯತ್ನಿಸಿದರಂತೆ. ಆದರೆ ರಾಜಕುವರಿ ಉತ್ಸವಾಂಬೆಯ ಮೋಹಪಾಶದಲ್ಲಿ ಸಿಲುಕಿದ್ದ ಅವರು ದೂರದ ತಲಕಾಡಿಗೆ ಹೇಗೆ ಹೋದಾರು? ಒಮ್ಮೆ ಅರಮನೆಯ ಶಯ್ಯಾಗೃಹದಲ್ಲಿ ರಾಜ್ಕುವರಿಯೊಂದಿಗೆ ಸಲ್ಲಾಪವಾಡುತ್ತಿದ್ದಾಗ ನಾಯಕನು ಇದ್ದಕ್ಕಿಂದಂತೆ ಒಳಬಂದನಂತೆ. ಆಗ ಅವರು ಅವನ ಕಣ್ಣಿಗೆ ಏಳು ಹೆಡೆಯ ಸರ್ಪವಾಗಿ ಕಂಡರಂತೆ. ಅವನ ಪಂಚೇಂದ್ರಿಯಗಳಿಗೇ ಕಚ್ಚಿ ಬಚಾವಾದರಂತೆ. ಮುಂದೊಂದು ದಿನ ರಾಜಕುವರಿ ಅಕಾಲ ಮರಣಕ್ಕೆ ತುತ್ತಾದಳಂತೆ. ಇಷ್ಟೆಲ್ಲ ಅಟಾಟೋಪಗಳಿಮ್ದ ನೂರೈದು ವರ್ಷ ಅವರು ಸುಧೀರ್ಘವಾಗಿ ಬದುಕಿ ಸಜೀವ ಸಮಾಧಿ ಹೊಂದಿದರೆಂಬುದನ್ನು ನಾನು ನಂಬಲಾರೆನು.
ಮುತ್ತಜ್ಜ ರಾಧಾರಮಣ ಶಾಸ್ತ್ರಿಗಳು ಇನ್ನೊಂದು ಬಗೆಯ ಅಸಂತುಷ್ಟತೆಗೆ ಗುರಿಯಾಗಿದ್ದರು. ಅವರಿಗೆ ಉಯ್ಯಾಲವಾಡದ ಪ್ರಭು ನರಸಿಂಹಾರೆದ್ದಿಯವರು ರಸರತ್ನಾಕರ ಎಂಬ ಬಿರುದು ನೀಡಿ ಗೌರವಿಸಿದ್ದರು. ಆದರೆ ಅವರ ದೃಷ್ಟಿ ಬಳ್ಳಾರಿಯ ಕಲೆಕ್ಟರಾಗಿದ್ದ ಥಾಮಸ್ ಮನ್ರೋ ಎಂಬುವರಿಗೆ ಸಂಸ್ಕೃತಾಭ್ಯಾಸ ಮಾಡಿಸಬೇಕೆಂಬ ಬಯಕೆ ಉತ್ಕಟವಾಗಿದ್ದಿತು. ಅದಕ್ಕಾಗಿ ಸುಬೇದಾರ್ ಮಣಿಕಂಠಯ್ಯರ್‌ರವರ ಸ್ನೇಹ ಸಂಪಾದಿಸಿ ಆ ಮೂಲಕ ಕಲೆಕ್ಟರ್ ಸಾಹೇಬರ ಬಂಗಲೆ ಪ್ರವೇಶಿಸಿದರು. ಇಂಗ್ಲೀಷ್ ಮೂಲಕ ಸಂಸ್ಕೃತಕ್ಕೆ ಮಾರು ಹೋಗಿದ್ದ ಕಲೆಕ್ಟರ್ ಥಾಮಸ್ ಮನ್ರೋ ಅವರನ್ನು ಆದರ ಗೌರವಗಳಿಂದ ಬರಮಾ‌ಅರಿಕೊಂಡು ಬಹಳ ದಿನಗಳ ಕಾಲ ಗುರುವಾಗಿ ಸ್ವೀಕರಿಸಿ ಇಟ್ತುಕೊಂಡಿದ್ದರು. ಅವರಿಂದ ವಿಜಯನಗರದ ಕಿಷ್ಕಿಂದೆಯ ಸಮೀಪ ಜಹಗೀರು ಪಡೆಯಬೇಕೆಂಬ ಆಸೆ ಕೊನೆಗೂ ಈಡೇರಿರಲಿಕ್ಕಿಲ್ಲ ಎಂದು ಊಹಿಸಲಾಗಿದೆ. ಸಾಕಷ್ಟು ವಯಸ್ಸಗಿರುವ ನಾನು ಅವರು ಶಂಕರಭಗವತ್ಪಾದರ ಆತ್ಮದೊಡನೆ ಸಂವಾದಿಸುತ್ತಿದ್ದರೆಂಬುದನ್ನಾಗಲೀ, ಪೆನುಗೊಂಡೆಯ ರಾಮರಾಜುಗೆ ಪುರುಷ ಶಕ್ತಿ ದಯಪಾಲಿಸಿದರೆಂಬುದನ್ನಾಗಲೀ; ಚಿನ್ನದ ಪಲ್ಲಕ್ಕಿಯಲಿ ಒಂದು ಕಡೆಯಿಂದ ಇನ್ನೊಂದು ಕಡೆಗೆ ಚಲಿಸುತ್ತಿದ್ದರೆಬುವುದನ್ನಾಗಲೀ ನೂರಾ ಮೂರು ವರ್ಷ ಬದುಕಿದ್ದರೆಂಬುದನ್ನಾಗಲೀ ನಂಬಲಾರೆನು.

ತಾತನವರಾದ ಸಕಲೇಶ್ವರ ಶಾಸ್ತ್ರಿಗಳಿಗೂ ಸರ್ವದರ್ಶನತೀರ್ಥ; ಸಾಹಿತಿ ಸಮಾರಾಂಗಣಗಳೇ ಮೊದಲಾದ ಬಿರುದುಗಳಿದ್ದುವಂತೆ. ಅಷ್ಟ ದಿಗ್ಗಜಗಳಿಗಿದ್ದ ಶಕ್ತಿ ಅವರೊಬ್ಬರಿಗೇ ಇದ್ದಿದಂತೆ. ಸಕಲ ಶಾಸ್ತ್ರಗಳನ್ನು ಅರಗಿಸಿಕೊಂಡಿದ್ದ ಅವರು ಬದುಕಿರುವಷ್ಟು ಕಾಲ ಧನದಾಸೆಗಾಗಿ ಕ್ಷುದ್ರ ದೇವತೆಗಳನ್ನು ಒಲಿಸಿಕೊಳ್ಳುವ ಪ್ರಯತ್ನ ಮಾಡುತ್ತ ಶಕ್ತಿ ಕ್ಷೇತ್ರವಾದ ಅಲಂಪೂರದಲ್ಲಿ ಕೆಲಕಾಲ ಇದ್ದರು. ಯಾವುದೋ ಒಂದು ಆಕಾರಹೀನ ಶಕ್ತಿಯನ್ನು ಹಿಂಬಾಲಿಸುತ್ತ ಕದಳೀವನ ಪ್ರವೇಶಿಸಿದರು ಮತ್ತೆ ವಪಸ್ಸ್ಸು ಬರಲೇ ಇಲ್ಲ. ರುದ್ರನಾಯಕನೇ ನಮ್ಮ ತಾತನವರ ಅಪರಾವತಾರ ಎಂದೊಂದು ಕ್ಷಣ ನೋಡಿದೊಡನೆ ಅನ್ನಿಸಿಬಿಟ್ತಿತು. ತಂದೆಯವರಾದ ಶಾಮಾ ಶಾಸ್ತ್ರಿಗಳು ಹೇಳುತ್ತಿದ್ದ ಗುಣಲಕ್ಷಣ ಸ್ವಭಾವದ ಮೂಲಕ ಅವನಲ್ಲಿ ಅವರನ್ನು ಗುರುತಿಸಿ ಕೆಲವು ದಿನ ಈಷ್ಯಾಸೂಯೆಗಳಿಮ್ದ ಕುದ್ದು ಹೋಗಿಬಿಟ್ಟೆನು. ಅವನು ಉತ್ತರಾಭಿಮುಖವಾಗಿ ಪಯಣಿಸುವಂತೆ ಮಾಡುವಲ್ಲಿ ಪರೋಕ್ಷವಾಗಿ ನಾನು ಯಶಸ್ವಿಯಾದೆನು. ಇನ್ನು ನನ್ನ ತಂದೆಯವರಾದ ವಾಗ್ಭೂಷಣ ಶಾಮಾ ಶಾಸ್ತ್ರಿಗಳ ಬದುಕಂತೂ ಅಂಗೈಯಷ್ಟು ಸುಸ್ಪಷ್ಟವಾಗಿರುವುದು. ಸುಮಾರು ಎಂಭತ್ತು ವರ್ಷಗಳ ಪರ್ಯಂತರ ಬದುಕಿದ್ದ ಅವರು ಯೌವನದ ಕಾಲದಲ್ಲಿ ಮೈಸೂರು ದಿವಾನರೋರ್ವರ ಬಳಿ ಮುಖ್ಯ ಸಲಹೆಗಾರರಾಗಿಯೂ, ಅರಮನೆಯ ಬಲಪಾರ್ಶದಲ್ಲಿರುವ ಶಾರದಾಂಬಾ ದೇವಾಲಯದ ಮುಖ್ಯ ಅರ್ಚಕರಾಗಿಯೂ ಸೇವೆ ಸಲ್ಲಿಸುತ್ತಿದ್ದರಂತೆ. ಅರಮನೆಯ ಪ್ರಮುಖ ನರ್ತಕಿಯೋರ್ವಳು ತಾನು ಕಾಲಾಂತರದಲ್ಲಿ ಹೆತ್ತಂಥ ಒಂದು ಗಂಡು ಮಗುವನ್ನು ನಮ್ಮ ತಂದೆಯವರಾದ ಶಾಮಾಶಾಸ್ತ್ರಿಗಳಿಗೂ; ಹೆಣ್ಣು ಮಗುವೊಂದನ್ನು ದಿವಾನರಿಗೂ ಕೊಟ್ಟು ಅವರಿಗೆ ಹೆತ್ತ ಮಕ್ಕಳಿಗಿಂತ ಹೆಚ್ಚಾಗಿ ನೋಡಿಕೊಳ್ಳಿರೆಂದು ಆಜ್ಞಾಪಿಸಿ ಪ್ರಾಣಬಿಟ್ಟಳಂತೆ. ಅಪಖ್ಯಾ‌ಅತಿಯಿಂದ ಪಾರಾಗಲು ತಂದೆಯವರು ಆ ಮಗುವಿನೊಡನೆ ಕುಂತಳವಾಡಿಗೆ ಬಂದರ್, ದಿವಾನರು ಅದೇ ತೆರನ ಅಪಖ್ಯಾತಿಗೆ ಹೆದರಿ ಎಣ್ಣು ಮಗುವನ್ನು ದಾದಿಯೋರ್ವಳಿಗೆ ಧನಕನಕ ಕೊಟ್ಟು ಮದ್ರಾಸ್ ಪ್ರಾಂತಕ್ಕೆ ಕಳಿಸಿಕೊಟ್ಟರಂತೆ. ಆ ನರ್ತಕಿಯ ಮಗನಾದ ನಾನು, ಏರ್ಪಟ್ಟ ಕರ್ಮಠ ವಾತಾವರಣದೊಳಗೆ ಬೆಳೆಯುತ್ತಿರಲು ಮದ್ರಾಸಿಗೆ ಹೋದ ದಾದಿ (ಪ್ರಾಯಶ್ಃ ಅವಳ ಹೆಸರು ಗೋದೂಬಾಯಿಯಾಗಿದ್ದಿರಬೇಕು… ಪಟ್ಟಣದ ವಾತಾವರಣಕಣುವಾಗಿ ಆಕೆ ತನ್ನ ಹೆಸರನ್ನು ನಿರ್ಮಲಾ ಎಂದು ಬದಲಾಯಿಸಿಕೊಂದಿರಬೇಕು) ಪ್ರಸಿದ್ಧ ಚಲನಚಿತ್ರ ನಿರ್ಮಾಪಕನೂ, ಪ್ರಸಿದ್ಧ ವಜ್ರದ ವ್ಯಾಪಾರಿಯೂ ಆದ ಡಬ್ಲ್ಯು. ಬಿ. ಚೆಟ್ಟಿಯಾರರನನ್ನು ಗಾಂಧರ್ವ ವಿವಾಹವಾದಳು. ಆಕೆಯ ಕಾಲುಗುಣವೆಂಬಂತೆ ಚೆಟ್ಟಿಯಾರ್ ನಿರ್ಮಿಸಿದ ಮುಂದಿನ ಚಿತ್ರಗಳು ಜನಪ್ರಿಯಗೊಂಡವು. ಮುಂದೆ ಅವರ ಬಳಿಯಿದ್ದ ಹೆಣ್ಣು ಮಗುವು ಪದ್ಮಾವತಿ ಎಂಬ ಹೆಸರಿನಲ್ಲಿ ಬೆಳೆದು ದೊಡ್ಡದಾಯಿತು. ಪದ್ಮಾವತಿ ಮುಂದೆ ಜನಪ್ರಿಯ ಚಲನಚಿತ್ರ ತಾರೆಯಾದಳು ಕೂಡ… ಆಕೆಯ ಹೆಣ್ಣುಮಗಳಾದ ಚಂಪಕಮಾಲಾಳು ಕೂಡ ದಕ್ಷಿಣ ಮತ್ತು ಉತ್ತರದ ಭಾಷೆಯ ಬಹುತೇಕ ಚಿತ್ರಗಳಲ್ಲಿ ನಟಿಸಿ ಮನೆಮಾತಾಗಿರುವ್ಳು. ಆಕೆ ವಿವಾಹಿತನೂ, ಮಕ್ಕಳೊಂದಿಗನೂ, ಅಗರ್ಭ ಶ್ರೀಮಂತನೂ ಆದ ಹಿರಾಲಾಲ್‌ನನ್ನು ಮದುವೆಯಾಗಿ ಅವನಿಂದ ಒಂದು ಹೆಣ್ಣು ಎರಡು ಹೆಣ್ಣು ಪಡೆದೌ. ಪಿಯೂಷಾ ಎಂಬ ಹೆಸರಿನ ಆ ಹೆಣ್ಣು ಜನಪ್ರಿಯ ಚಿತ್ರಗಳಲ್ಲಿ ನಟಿಸುತ್ತಿರುವುದು. ಕುಂದನ್‌ಲಾಲ್ ಎಂಬ ಮಗನು ಸಿಂಗಾಪುರದಲ್ಲಿ ನೆಲಸಿ ಕಳ್ಳಸಾಗಾಣಿಕೆ ಮಾಡುತ್ತಿದ್ದರೆ, ಇನ್ನೊಬ್ಬ ಮಗನಾದ ಲೋಕಪ್ರಕಶ್ ಪ್ರಸಿದ್ಧ ಭರತನಾಟ್ಯ ನರ್ತಕಿಯಾದ ವಿಂದ್ಯಾವಾಸಿನಿಯನ್ನು ಮದುವೆಯಾಗಿ ಅಮೇರಿಕಾದಲ್ಲಿ ನೆಲೆಸಿರುವನು.

ಆಸ್ಥಾನ ನರ್ತಕಿಯ ಮಗ ನಾನು ಎಂಬ ಸಂಗತಿ ಬಹಳ ವರ್ಷಗಳ ಹಿಂದೆಯೇ ನನಗೆ ಸೂಕ್ಷ್ಮವಾಗಿ ಗೊತ್ತಾಗಿದ್ದರೂ ಯಾರಿಗೂ ತಿಳಿಯದ ಹಾಗೆ ಗುಟ್ಟಾಗಿ ಇತ್ತುಕೊಂಡಿದ್ದೆನು. ಆ ಗುಟ್ಟು ರಟ್ಟು ಮಾಡಿದ ಮತ್ತು ನಾನು ಅಗ್ನಿಗಾಹುತಿ ನೀಡಿದ ಆ ಕಾಗದ ಪತ್ರಗಳು ಸುದರ್ಶನ ಎಂಬ ರುಗ್ಣಶಯ್ಯೆಯಲ್ಲಿದ್ದ ವ್ಯಕ್ತಿಯಿಂದ ಬಂದಂತವುಗಳಾಗಿದ್ದವು. ನನ್ನ ಹುಟ್ಟಿನ ಗುಟ್ಟನ್ನು ನಾನು ಬಚ್ಚಿಡಲು ಪ್ರಯತ್ನಿಸಿದರೂ ಅದು ಮುಖದ ಯಾವ ಮೂಲೆಯಿಂದಲಾದರೂ ತಿಲಮಾತ್ರ ಪ್ರಕಟವಾಗಿ ಬಿಡುತ್ತಿತ್ತು. ಕೆಲವರು ಆ ಎಳೆಮೂಲಕ ರಹಸ್ಯದ ಹಚ್ಚಡವನ್ನು ನುಂಗಲು ಪ್ರಯತ್ನ ಮಾಡಿದ್ದುಂಟಾದರೂ ಅದು ಯಶಸ್ವಿಯಾಗಲಿಲ್ಲ. ಅಸಹ್ಯಪಟ್ಟುಕೊಳ್ಳಬೇಕೆಂದರೆ ತಂದೆಯವರು ಇಹಲೋಕ ತ್ಯಜಿಸಿ ಹಲವು ವರ್ಷಗಳಾಗಿರುವುವು. ಅವರನ್ನು ಮರಣೋತ್ತರವಾಗಿ ಅಸಹ್ಯಪಟ್ಟುಕೊಳ್ಳುವುದಷ್ಟೆ ಸಾಧ್ಯವಾಗಿರುವುದು ನನಗೆ. ಆದರೆ ಇದಕ್ಕೆ ನಾನು ಅರ್ಹನೆ ಎಂಬ ಪ್ರಶ್ನೆ ಉದ್ಭವವಾಗುತ್ತದೆ. ಅದೂ ಅಲ್ಲದೆ ಅವರು ತಮ್ಮ ಬದುಕಿಗೆ ತಕ್ಕುದಾದ ಶವಸಂಸ್ಕಾರ ಪಡೆಯುವುದರಲ್ಲಿ ವಿಫಲರಾದರು. ಎಲ್ಲವೂ ಅವರ ಮುಂಗೈ ಅಲಂಕರಿಸಿದ್ದ ಕಿರುಗಂಟೆಯುಳ್ಳ ಚಿನ್ನದ ಕಡಗದ ಕಾರಣದಿಂದಾಗಿ ತಿರುಗುಮುರುಗಾಯಿತು, ತಲೆಕೆಳಕಾಯಿತು. ನಾನು ಅವರ ಮಗನಾಗಿರಲಿಕ್ಕಿಲ್ಲವೆಂಬುದಕ್ಕೆ ಅವರುಸಾಯುವ ಕ್ಷಣ ಆ ಚಿನ್ನದ ಕಡಗ ನನಗೆ ದಕ್ಕದ ಹಾಗೆ ಸಂಚು ಮಾಡಿದರು ಎಂಬುದು ಉಲ್ಲೇಖಾರ್ಹ ಸಂಗತಿಯಾಗಿದೆ. ಶ್ರೀಮಂತ ವರ್ತಕರಾದ ವೆಂಕಟರಮಣ ಶ್ರೇಷ್ಠಿಗಳು ಆ ಚಿನ್ನದ ಕಡಗವನ್ನು ತಮಗೆ ಮಾರಿಬಿಡೆಂದೂ, ದಿವಂಗತರ ಅಪೇಕ್ಷೆಯಂತೆ ಮಣಿಕರ್ಣಿಕಾಘಾಟ್‌ನಲ್ಲಿ ಶವ ಸಂಸ್ಕಾರ ಮಾಡಲು ನುಕೂಲವಾಗುವುದೆಂದೂ, ಬಗೆಬಗೆಯಾಗಿ ಬಡಿದುಕೊಂಡರು. ನನ್ನ ಜನ್ಮ ಮೂಲ, ಅಷ್ಟೊತ್ತಿಗೆ ಗೊತ್ತಾಗಿದ್ದಲ್ಲಿ ನಾನು ಅದನ್ನು ಶ್ರೇಷ್ಠಿಗಳಿಗೆ ಮಾರಿಬಿಡುತ್ತಿದ್ದೆನೊಂದೇ ಅಲ್ಲ, ಸದರಿ ಗ್ರಾಮದ ಹುಲುಲಿ ಹಳ್ಳವನ್ನೆ ಪವಿತ್ರ ಗಂಗಾನದಿಯೆಂದೂ, ಅದರ ತಟವನ್ನೇ ಮಣಿಕರ್ಣಿಕಾ ಘಾಟೆಂದು ಪರಿಭಾವಿಸಿಬಿಡುತ್ತಿದ್ದೆನು. ಕೀರ್ತಿಶೇಷರ ಪಾಪಕೃತ್ಯಗಳೇ ನೂರಾರು ಮೂಷಿಕಗಳಾಗಿ ಸಹಾಯ ಮಾಡಲೆತ್ನಿಸಿದ ಶ್ರೇಷ್ಠಿಗಳ ಅವಯವಗಳಿಗೆ ತೊಂದರೆ ಕೊಟ್ಟವೆಂದು ಭಾವಿಸುತ್ತಿದ್ದೆನು. ಒಂದು ಕೈಯಲ್ಲಿ ತಲೆಯನ್ನಿಟ್ಟು ಕೊಂಡು, ಆಸದಲ್ಲಿಟ್ಟುಕೊಂಡು ಊಟ ಮಾಡಿದ ಪಾಪ ಸತ್ತ ನಂತರ ಕಾಡುತ್ತದೆ ಎನ್ನುವುದಕ್ಕೆ‌ಆ ಘಟನೆಯೇ ಸಾಕ್ಷಿಯಾಗಿ ಯೂಪಸ್ತಂಭದಂತೆ ನಿಂತಿರುವುದು. ವೇದೋಪನಿಷತ್ತುಗಳನ್ನು ಅರಗಿಸಿಕೊಂಡ ಮಾತ್ರಕ್ಕೆ ತೆಗೆದುಕೊಂಡು ಏನು ಮಾಡುವುದು? ಉಚ್ಛೈಶ್ರವಸ್ರೆಂಬ ಅಶ್ವವನ್ನೂ, ರತ್ನಗಳನ್ನೂ ಲಕ್ಷ್ಮಿಯನ್ನೂ ಕೊಟ್ಟ ಮೇಲೂ ಸಹ ಕಡೆಯದವರಿಗೆ ಸಮುದ್ರ ವಿಷವನ್ನು ಕೊಟ್ಟು ಹಗೆ ತೀರಿಸಿಕೊಂಡಿತು ತಾನೆ?… ಹಾಗೆ ಬದುಕೆಂಬ ಸಮುದ್ರ ಕೂಡ.

ರುಗ್ಣ ಶಯ್ಯೆಯಲ್ಲಿಲ್ಲಿದ್ದ ಸುದರ್ಶನ ಬರೆದಿದ್ದ ಪತ್ರಗಳು ಮುಖ್ಯವಾಗಿ ಫರಂಗಿಯವರ ಅಮೇಧ್ಯ ಭಾಷೆಯಲ್ಲಿದ್ದ ಸಬೂಬು ನೋಡಿದರೆ ತೀರ್ಥರೂಪರವರು ಆ ಭಾಷೆಯಲ್ಲಿ ಅಗಾಧ ಪ್ರಾವೀಣ್ಯತೆ ಸಾಧಿಸಿದ್ದರೆಂದು ನಿಚ್ಚಳವಾಗಿ ಊಹಿಸಬಹುದು. ಅದನ್ನು ತುಂಬ ಗುಟ್ಟಾಗಿ ಇಟ್ಟಿದ್ದರೊಂದೇ ಅಲ್ಲ; ಆ ಭಾಷೆಯನ್ನು ನಾನು ಕಲಿಯದ ಹಾಗೆ ನೋಡಿಕೊಂಡರು. ಆ ಭಾಷೆಯಲ್ಲಿ ತಮ್ಮ ವಂಶದಲ್ಲಿ ಯಾರಾದರೂ ಕಲಿತರೆ ಭೂಮಿಯ ಪಾಪ ಸಂಚಯವೇ ಪಿಶಾಚ ರೂಪದಲ್ಲಿ ಅಂಥವರನ್ನು ಸರ್ವನಾಶನ ಮಾಡುವುದೆಂದು ನನಗೆ ತಾಕೀತು ಮಾಡಿದ್ದರು. ಆದ್ದ್ದರಿಂದಾಗಿಯೇ ನಾನು ನನ್ನ ಮಗನನ್ನೂ ಮೊಮ್ಮಗನನ್ನೂ ಆ ಭಾಷೆಯಿಂದ ದೂರವಿರಿಸಲು ಬಗೆ ಬಗೆಯಾದ ಪ್ರಯತ್ನ ಮಾಡಿದೆನು. ಅನುಭವಿಸಲಾರದಷ್ಟು ಅನುಭವಿಸುವಂಥ ಕಾಲ್ಘಟ್ಟದಲ್ಲಿ ದೊರಕಿದ ರುಗ್ಣಿಯೋರ್ವನು ಬರೆದ ಪತ್ರಗಳನ್ನು ಹೆಸರು ಕುಲ ಮರೆಮಾಚಿ ದೂರ ಪ್ರಾಮ್ತಕ್ಕೆ ಹೋಗಿ ದೇಶಭಕ್ತರನ್ನು ಫರಂಗಿಯವರಿಗೆ ಒಪ್ಪಿಸಿ ಬಗೆಬಗೆಯಾದ ಇನಾಮು ಪಡೆದು ಸುಖದಿಂದ ಜೀವಿಸುತ್ತಿದ್ದ ಮತ್ತು ಇಂಗ್ಲೀಷ್ ಕನ್ನಡ ನಿಘಂಟಿನ ಕರ್ತೃವಾದ ಶಂಕರಾನಂದತಿಬೋಟಿಯವರ ಬಳಿಗೊಯ್ದು ಓದಿಸಿ ಸತ್ಯದ ಸಾಕ್ಷಾತ್ಕಾರ ಮಾಡಿಕೊಂಡೆನು. ಆ ಕ್ಷಣ ನನ್ನ ಅಂತರಂಗದ ಸಾಗರವು ಝಂಝಾಪಾತಕ್ಕೆ ಸಿಲುಕಿ ಅಲ್ಲಾಡಿಹೋಯಿತು. ಒಂದೊಂದೇ ಅಥಿತಿಗೆ ಉಣಬಡಿಸಿದ ಅನ್ನ ನೆನಪಾದಂತೆ ಮಗ ಅಶ್ವಥ್‌ನಾರಾಯಣನೂ, ಬಂಡಾಯಕವಿಯಾಗಲು ಪ್ರಯತ್ನಿಸುತ್ತಿದ್ದ ಮೊಮ್ಮಗ ಶಾಮಂಣನೂ ಕಾಣದೆ ತುಳಿಯಲ್ಪಟ್ಟ ಕತ್ತಿಯಂತೆ ನೆನಪಾದರು. ಮಗ ಮೊಮ್ಮಗ ಎರಡು ಮಹಾನದಿಗಳು ನನ್ನ ಬದುಕಿನ ಸಾಗರದಲ್ಲಿ ಸರಿಯಾಗಿ ಬೆರೆಯಲೇ ಇಲ್ಲ. ಒಳಗೊಳಗೇ ದಾವಾನಲವನ್ನು ಅನುಭವಿಸುತ್ತಿದ್ದ ನಾನು ಮಾತ್ರ ಆಕ್ಷಣದಿಂದ ನನ್ನ ಜೀವನ ಶೈಲಿಯನ್ನು ಬದಲಿಸುವ ಪ್ರಯತ್ನ ಮಾಡತೊಡಗಿದೆನು. ನಿಂದಿತವಾದ ಕೆಲಸವನ್ನು ಮಾಡುವವನು ನರಕಕ್ಕೂ ಹೆದರಲಾರನೆಂಬ ಅರಿವನ್ನು ಭ್ರೂಮಧ್ಯೆ ಇಟ್ಟುಕೊಂಡೇ ಸಂಸಾರವೆಂಬ ದೋಣಿಯಲ್ಲಿ ಒಂಟಿಯಾಗಿ ಪಯಣಿಸುತ್ತಿದ್ದ ನನ್ನನ್ನು ಅಂದಿನ ಪ್ರಧಾನ ಪ್ರಧಾನ ಮಮ್ತ್ರಿಯಾದ ಇಂದಿರಾ ಗಾಂಧಿಯವರು ನನ್ನನ್ನು ಆಕರ್ಷಿಸಿದ್ದು.

ಶಾಮಣ್ಣ ತಾನು ಅಭ್ಯಾಸ ಮಾಡುತ್ತಿದ್ದ ಮನುಸ್ಮೃತಿಯೆಂಬ ಹೆಬ್ಬೊತ್ತಿಗೆಯೊಳಗೆ ಆಕೆಯ ವರ್ಣ ವೈವಿಧ್ಯದ ಭಾವಚಿತ್ರವನ್ನು ಗುಟ್ಟಗಿ ಇಟ್ಟುಕೊಂಡಿದ್ದ. ಕರ್ಮಠ ವಾತಾವರಣದೊಳಗೆ ಬ್ರಾಹ್ಮಣ ವಿಧವೆಯೋರ್ವಳು ಅನುಭವಿಸಬೇಕಾದ ಪಾತ್ರದ ಬಗ್ಗೆ ವಸ್ತುನಿಷ್ಟವಾಗಿ ತಿಳಿದುಕೊಳ್ಳುವ ನಿಮಿತ್ತ ನಾನು ಅವನ ಕಬ್ಬಿಣಪೆತ್ತಿಗೆಯಿಂದ ಅದನ್ನು ಹುಡುಕಿ ತೆಗೆದೆನು. ಸ್ಮೃತಿಯ ಹನ್ನೆರಡನೆತ ಅಧ್ಯಾಯದಲ್ಲಿ ದೊರಕಿದ ಆ ಮಹಿಳೆಯ ಭಾವಚಿತ್ರ ನೋಡಿದೊಡನೆಯೆ ಕತಕ ಬೀಜದ ಸಂಪರ್ಕದಿಂದ ಯಾವ ಪ್ರಕಾರವಾಗಿ ಬಗ್ಗಡ ನ್ ರು ತಿಳಿಯಾಗುವುದೋ ಹಾಗೆಯೇ ನನ್ನ ಮನಸ್ಸು ತಿಳಿಯಾಯಿತು. ನೋಡಿದೊಡನೆ ಉನ್ಮೇಷ ನಿಮಿಷೋತ್ಪನ್ನ ಭುವನಾವಲೀಽಽಽ ಎಂದು ಉದ್ಗರಿಸಿದೆನು. ವಿಂಧ್ಯಾಚಲವಾಸಿನಿಯಾದ ಶ್ರೀಲಲಿತೆಯೆ ಇವಳು ಎಂದು ಒಂದು ಕ್ಷಣ ಅನ್ನಿಸಿದರೆ ಮತ್ತೊಂದು ಕ್ಷಣ ವಾರುಣೀಮದದಿಂದ ವಿಹ್ವಲಗೊಂಡಂತಿರುವ ತ್ರಿಪುರಸುಂದರಿಯೇ ಈಕೆ ಅನ್ನಿಸಿತು. ಆ ಕೂಡಲೆ ಕರ್ಣಾಟ ಕವಿಚೂತವನ ಚೈತ್ರ ಬಿರುದಾಂಕಿತನೂ ಉಪಮಾಲಂಕಾರ ಚಕ್ರವರ್ತಿಯೂ ಆದ ಲಕ್ಷ್ಮೀಶನ ಜೈಮಿನಿ ಭಾರತದ ಹದಿನಾರನೇ ಸಂಧಿಯ ನಾಲ್ಕನೇ ಪದ್ಯವನ್ನು ಸ್ಮರಣೆಗೆ ತಂದುಕೊಂಡೆನು. ಅದನ್ನೇ ದಿಟ್ಟಿಸಿ ನೋಡುತ್ತ ನಾನು ಮೈಮರೆತಿರುವಾಗ ತುರ್ತು ಪರಿಸ್ಥಿತಿಯ ಸಾಧಕ ಭಾದಕಗಳಿಗೆ ಮನು ಮಹಾಶಯನು ಏನು ಹೇಳಿದ್ದಾನೆಂದು ತಿಳಿದುಕೊಳ್ಳುವ ನಿಮಿತ್ತ ಶಾಮಣ್ಣ ಬಂದ. ನನ್ನ ಕೈಲಿದ್ದ ಆಕೆಯ ಭಾವಚಿತ್ರ ನೋಡಿ ಗಾಬರಿಗೊಂಡ. “ಏನೋ ತ್ರಿಪುರ ಸುಮ್ದರೀದೇವಿಯವರ ಭಾವಚಿತ್ರ ನಿನ್ನಲ್ಲಿಗೆ ಹೇಗೆ ಬಂತು?” ಎಂದು ಪ್ರಶ್ನಿಸಿದೆನು. ನನ್ನ ಬಾಯಿಂದ ಇಂಥದೊಂದು ಸೊಬಗಿನ ನುಡಿಗಟ್ಟು ಬರಬಹುದೆಂದು ಅವನು ಕನಸು ಮನಸಿನಲ್ಲೂ ಯೊಚಿ‌ಅಸಿರಲಿಲ್ಲ. ಮರುಗಳಿಗೆ ಸಾವರಿಸಿಕೊಂಡು “ಅಲ್ಲ ತಾತ… ಇದು ನಮ್ಮ ಪ್ರಧಾನ ಮಂತ್ರಿಗಳಾ‌ಅದ ಇಂದಿರಾ ಗಾಂಧಿಯವರ ಭಾವಚಿತ್ರ” ಎಂದು, ಅವನು ಹೇಳಲು ನನಗೆ ಅಪರಿಮಿತ ಆಶ್ಚರ್ಯವಾಯಿತು. ಮತ್ತೆ ಚಾಳೇಸ ಏರಿಸಿ ಪರೀಕ್ಷಾರ್ಥವಾಗಿ ನೋಡಿದೆ. ಗುಂಗುರುಗೂದಲು, ನೀಳನಾಸಿಕ, ತೊಂಡೆಹಣ್ಣಿನಂಥ ತುಟಿಗಳು, ಫಳಫಳ ಹೊಳೆಯುವ ಕಣ್ಣುಗಳು, ಪಾರದರ್ಶಕ ಕಪೋಲಗಳು, ಚೂಪನೆಯ ಗದ್ದ… ಈಕೆ ನಿಸ್ಸಂದೇಹವಾಗಿ ಶಂಕರಾಭರಣರಾಗ ಪ್ರಿಯೆಯಾದ ತ್ರಿಪುರಸುಂದರಿಯೆ ಎಂದುಕೊಂಡೆ. ಈ ಸಂಬಂಧ ನನಗೂ ಅವನಿಗೂ ವಾದೋಪವಾದವಾಯೊತಿ. ಚಾಣಾಕ್ಷನೂ ಆಧುನಿಕನೂ ಆದ ಅವನು ಹಲವು ಚಿತ್ರಗಳನ್ನು ತೋರಿಸಿ ಇಂದಿರಾಗಂಧಿಯವರದೇ ಎಂದು ಬಲವಾಗಿ ಸಮರ್ಥಿಸುವಷ್ಟರಲ್ಲಿ ಒಳಗಿನಿಂದ ವ್ಯಾಸಪೀಠದೊಡನೆ ಸೊಸೆಯಾದ ಅಲುಮೆಲುವು ಬಂದು ಆ ಭಾವ ಚಿತ್ರ ನೋಡಿ ಕಾಶ್ಮೀರಿ ಬ್ರಾಹ್ಮಣ ಕುಟುಂಭದಲ್ಲಿ ಜನಿಸಿ ವಿಧವೆಯಾಗಿದ್ದರೂ ಕೇಶಮುಂಡನ ಮಾಡಿಸಿಕೊಂದಿಲ್ಲವಲ್ಲಾ ಎಂದು ಯೋಚಿಸುತ್ತ ಮುಖ ಸಪ್ಪಗೆ ಮಾಡಿಕೊಂಡಳು. ಸ್ವತಂತ್ರಗೊಂಡಿರುವ ಭರತ ಖಂಡದಲ್ಲಿ ವೃದ್ಧಾಪ್ಯ ಕಳೆಯುತ್ತಿದ್ದರೂ ಜನಪ್ರಿಯ ಪ್ರಧಾನ್ ಮಂತ್ರಿಯೋರ್ವರನ್ನು ನಮ್ಮ ತಾತನವರು ನೋಡಲಿಲ್ಲವಲ್ಲ ಎಂದು ಮೊಮ್ಮಗನಾದ ಶಾಮಣ್ಣನು ತನ್ನ ಮುಖವನ್ನು ಬೇರೊಂದು ರೀತಿ ಸಪ್ಪಗೆ ಮಾಡಿಕೊಂಡನು.
ಆ ದಿನವೆಂಬುದು ಕರಾಳ ಹರತಾಳ ಆಚರಿಸಿತು. ನನ್ನ ಪಾಲಿಗೆ ನನ್ನ ಹೃದಯವು ಅವತ್ತು ಧರ್ಮವನ್ನು ಆಚರಿಸದ ಹಳ್ಳಿಯಾಯಿತು. ಚಿಕಿತ್ಸೆಗೆ ಬಗ್ಗದ ರೋಗಗಳಿಂದ ನರಳುವ ಜಾಗವಾಯಿತು. ಒಂಟಿಯಾಗಿ ಪಯಣಿಸುತ್ತಿರುವಂಥ ದಾರಿಯಾಯಿತು. ಬಿಕೋಗುಟ್ಟುವ ಬೆಟ್ಟದ ಶಿಖರಾಗ್ರವಾಯಿತು. ಆ ದಿನ ನನಗೆ ಚೆನ್ನಾಗಿ ನೆನಪಿರುವಂತೆ ಅವತ್ತು ನಾನು ಮಾನಸಿಕವಾಗಿ ದೈಹಿಕವಾಗಿ ತುಂಬ ಅಸ್ತವ್ಯಸ್ತಗೊಂಡು ಪಡಬಾರದ ಸಂಕಟವನ್ನು ಅನುಭವಿಸಿದೆನು. ಶ್ರುತಿ, ಸ್ಮೃತಿಗೊಪ್ಪುವ ಶುಷ್ಕ ತರ್ಕ ಮಾಡುತ್ತ ಪರಮಾನ್ನದಂಥ ಯೌವನವನ್ನು ಸಿಹಿನೀರಿನ ನದಿಯೊಂದು ಮರುಭೂಮಿಯಲ್ಲಿ ಹರಿದಂತೆ ವ್ಯರ್ಥವಾಗಿ ಕಳೆದೆನಲ್ಲಾ ಎಂದು ತುಂಬ ಪಶ್ಚಾತ್ತಾಪ ಅನುಭವಿಸಿದೆನು. ಉದಕದಲ್ಲಾಗಲೀ, ಅನ್ನದಲ್ಲಾಗಲೀ, ಹಾಸಿಗೆಯಲ್ಲಾಗ‌ಈ, ಪುಣ್ಯ ಶ್ರವಣಗಳಲ್ಲಾಗಲೀ ರುಚಿ ಸುಖ ಮತ್ತು ನೆಮ್ಮದಿ ಇಲ್ಲದಾಯಿತು. ತುಲಸೀ ಗಿಡದ ಪಕ್ಕ ಆಕಾಶದ ನಕ್ಷತ್ರಗಳನ್ನು‌ಎಣಿಸುತ್ತ ಮಲಗಿದ್ದ ನನ್ನ ಎದೆಯಲ್ಲಿ ತ್ರಿಪುರಸುಂದರಿ ದೇವಿಯ ಮಂದಾನಿಲದಂತೆ ಸುಳಿಯತೊಡಗಿತು. ನಿರುಪಪ್ಲವೆಯಾದ ನನಗೆ ಸಾವಿಲ್ಲ… ನಾನು ಪ್ರಧಾನಿ ಇಂದಿರಾ ಗಾಂಧಿಯ ರೂಪದಲ್ಲಾದರೂ ಗೋಚರಿತಳಾಗಿ ನಿನ್ನ ವೃದ್ಧಾಪ್ಯವನ್ನು ದಹಿಸುತ್ತಿದ್ದೇ” ಎಂದು ನುಡಿದಂತೆ ಭಾಸವಾಯಿತು.

“ನಿನಗೆ ಏಶ್ಟು ಸಾರಿ ಹೇಳಬೇಕೋ ಶಾಸ್ತ್ರಿ ಖರಹರಪ್ರಿಯ ರಾಗ ಹಾಡಬೇಡಂತ. ನಿನ್ನ ಕಿವಿಗೆ ಶಂಕರಾಭರಣ ರಾಗ ಹೊರತಾಗಿ ಮತ್ತೊಂದು ರಾಗ ಬೀಳಕೂಡದು” ಎಂದು ನನ್ನ ತುಟಿ ಮೇಲೆ ಬೆರಳಾಡಿಸಿದ್ದು ನೆನಪಾಯಿತು. ಆದಿತಾಳದ ವೈಷಿಷ್ಟ್ಯವನ್ನು ಆ ರಜತಮುಖಿ ವಿವರಿಸಿದ್ದು ನೆನಪಾಯಿತು. ಜೀವನವೆಂಬುದು ವಜ್ರಕಠೀಣವಾದಾಗ, ದೈವವು ಪ್ರತಿಕೂಲವಾದಾಗ ಆಕೆಯನ್ನು ಸಾಕ್ಷಾತ್ ಶ್ರೀ ಲಲಿತೆ ಎಂದೇ ಭಾವಿಸಿ ನೆಮ್ಮದಿಯನ್ನು ಆವಹಿಸಿಕೊಳ್ಳುತ್ತಿದ್ದೆನು. ಶ್ರೀರಾಮನ ಸಂಚಾರಕ್ಕೆ ತಡೆಯೊಡ್ಡಿ ಪರಶುರಾಮನು ತನ್ನ ಸ್ವರ್ಗಗಮನಕ್ಕೆ ವಿಘ್ನ ತಂದುಕೊಂಡ ರೀತಿಯಲ್ಲಿಯೇ ನಾನು ಸುಮ್ದರವದನೆಯನ್ನು ಧ್ಯಾನ ಮಧ್ಯೆ ಜ್ಞಾಪಕಕ್ಕೆ ತಂದುಕೊಂಡು ಗೊಂದಲಕ್ಕೀಡಾಗುತ್ತಿದುಂಟು. ಕಾಲ ಕಳೆದಂತೆ ದಯಾರ್ದ್ರ ಹೃದಯವಾಗಿ ತಾಳೆಗರಿ ಕಟ್ಟು ಕಂಠಪತ್ರಗಳೇ ಸರ್ವಸ್ವ ಎಂದುಕೊಂಡು ಗುಣಪ್ರಾಹಿಯಾಗಿ ಇದ್ದು ಬಿಟ್ಟು ಕೆಲವು ದಶಕಗಳೇ ಕಳೆದುಹೋದವು.ಕ್ರೋಧ ಬರದಂತೆ ತಪಸ್ಸನ್ನು ಹೊಟ್ಟೆಕಿಚ್ಚು ಪಡೆದಮ್ತೆ ಧರ್ಮವನ್ನೂ, ಮಾನಾಪಮಾನಗಳಿಗೆ ಬಗ್ಗದಂತೆ ವಿದ್ಯೆಯನ್ನೂ, ತಪ್ಪು ದಾರಿ ತುಳಿಯದಂತೆ ಆತ್ಮವನ್ನೂ ಕಾಪಾಡಿಕೊಳ್ಳುತ್ತ ಸುಭಾಷಿತ ಸುಧಾನಿಧಿಯೇ ಮಾನವ ರೂಪ ಧರಿಸಿದೆ ಏನೋ ಎಂಬಂತೆ ಬದುಕಿದ್ದೆ. ಹೀಗೆಯೇ ಬದುಕಿ ಶಿವ ಸಾಯುಜ್ಯ ಪಡೆಯುವೆನೆಂದುಕೊಂಡಿದ್ದೆ. ಆದರೆ ಯಾವ ಕೆಟ್ಟ ಘಳಿಗೆ ನನ್ನೀ ತಪಸ್‌ಚರ್ಯೆ ಹೊಡೆದೋಡಿಸಲು ಕಾದಿತ್ತೋ? ಆ ಕೆಟ್ಟಗಳಿಗೆಯೇ ಬ್ರಾಹ್ಮಣ ವಿಧವೆಯರು ಪಾಲಿಸಬೇಕಾದ ವಿಧಿನಿಯಮಗಳನ್ನುನಿಖರವಾಗಿ ತಿಳಿದುಕೊಳ್ಳಬೇಕಾದಂಥ ಪ್ರೇರಣೆ ನೀಡಿತು. ಆ ಪ್ರೆರಣೆಯಿಂದಾಗಿಯೇ ಶಾಮನ ಪೆಟ್ಟಿಗೆ ತೆಗೆದು ಅದರೊಳಗೆ ಕೈ ಇರಿಸಿದ್ದು, ಕೈ ಇರಿಸಿ ಮನುಸ್ಮೃತಿ ಎತ್ತಿಕೊಂದ್ದು, ಎತ್ತಿತೆರೆದೊಡನೆ ನೀಳನಾಸಿಕದ ಚೆಂದುಟಿಯ ಪ್ರಧಾನಿ ಇಂದಿರಾ ಗಂಧಿ ಎಂಬ ಮಹಿಳೆಯೋರ್ವಳ ಭಾವಚಿತ್ರ ಕೋರೈಸಿದ್ದು. ಆ ಭಾವಚಿತ್ರ ಭೂತಕಾಲದ ಪುಟಗಳನ್ನು ಸೇರಿದಂಥ ತ್ರಿಪುರ ಸುಂದರಿದೇವಿಯ ಭವ್ಯ ಮೂರ್ತಿಯನ್ನು ನನ್ನ ದೇಹದ ಅಣು‌ಅಣುವಿನಲ್ಲಿ ಪ್ರತಿಷ್ಟಾಪಿಸಿದ್ದು. ಆಕೆ ಸಿಹಿ ನೀರು ತುಂಬಿದ ಬಾವಿ ಎಂದರೂ ಸರಿಯೆ. ಹಗ್ಗದ ಮೂಲಕ ನಿನ್ನಲ್ಲಿಗೆ ಧಾವಿಸುತ್ತಿರುವ ನನ್ನನ್ನು ನೀಚ ಎಂದು ಭಾವಿಸದೆ ನನ್ನ ಚಿರಂತನ ದಾಹ ತಣಿಸು ಎಂದು ಬೇಡಿಕೊಂಡೆ. ನನ್ನ ದಯಾರ್ದ್ರ ಬೇಡಿಕೆ ನಿನ್ನನ್ನು ತಲುಪಿತೋ ಇಲ್ಲವೋ? ಆದರು ಹಲವು ದಶಕಗಳ ನಂತರ ನಾನು ಅಮೃತೋಪಮ ಉದಕದಂತಿರುವ ನಿನ್ನಲ್ಲಿಗೆ ತಲುಪುತ್ತಿರುವೆನು! ಅನ್ಯ್ಥಾ ಭಾವಿಸದೆ ನನ್ನನ್ನು ಬರಮಾಡಿಕೋ!

ತಾಯಿಯ ಮುಖ ಕಂಡರಿಯದ ನಾನು ವಾತ್ಸಲ್ಯಕ್ಕಾಗಿ ಹಲವರ ಬಳಿ ಹಾತೊರೆಯುತ್ತಿದ್ದೆನು. ಆಗ ನನ್ನ ವಯಸ್ಸು ಇಪ್ಪತ್ತೈದರ ಆಜುಬಾಜು. ನರ್ತಕಿಯ ಉದರದಿಂದ ಜನಿಸಿದ್ದರಿಂದಾಗಿಯೋ ಏನೋ? ನನ್ನ ಕಾಲುಗಳು ನರ್ತಿಸಲು ಹಾತೊರೆಯುತ್ತಿದ್ದವು. ಬಾಯಿ ಹಾಡಾಲು ಹಾತೊರೆಯುತ್ತಿತ್ತು. ನಾನು ನಡೆದರೆ ನರ್ತಿಸಿದ್ದಂತಿರುತ್ತಿತ್ತು. ಮಾತಾಡಿದರೆ ಹಾಡಿದಂತೆ ಇರುತ್ತಿತ್ತು. ಅದಕ್ಕೂ ಮಿಗಿಲಾಗಿ ಸುಂದರನಾಗಿದ್ದೆ. ನಾನು ಯಾರ ಬಳಿ ಶಿಷ್ಯವೃತ್ತಿಯಲ್ಲಿದ್ದೆನೋ ಆ ಪಂಡಿತೊತ್ತಮರಾದ ಚಲುವ ನಾರಾಯಣ ಅಯ್ಯಂಗಾರರು ನನ್ನನ್ನು ತೊಡೆಯ ಮೇಲೆ ಕೂಡಿಸಿಕೊಂಡು ಮುದ್ದು ಕೊಡುತ್ತಿದ್ದರು. ನನಗಿಂತಲೂ ಹಿರಿಯರಾದ ಸಹಪಾಠಿಗಳ ಪೈಕಿಕೆಲವರು ಸಲಿಂಗ ರತಿಗಾಗಿ ನನ್ನನ್ನು ಉದ್ದೀಪಿಸುತ್ತಿದ್ದರು. ಅವರ ಸ್ಪರ್ಶ, ಆಡುತ್ತಿದ್ದ ರತಿವಿಲಾಸದ ಮಾತುಗಳು ನನ್ನ ದೇಹದಲ್ಲಿ ರೋಮಾಂಚನದ ಅನುಭೂತಿ ಹುಟ್ಟಿಸುತ್ತಿದ್ದವು. ನಾನು ಪುರುಷ ವೇಶದಲ್ಲಿರುವ ಹೆಣ್ಣಿರಬೇಕೆಂದು ನನ್ನನ್ನು ನಾ‌ಅನು ಅನುಮಾನಿಸಿಕೊಳ್ಳುತ್ತಿದ್ದುದುಂಟು. ದರ್ಪಣವೊಂದರಲ್ಲಿ ನನ್ನ ಪ್ರತಿಬಿಂಬವನ್ನು ನಾನು ನೋಡಿಕೊಂಡು ಮಂತ್ರಮುಗ್ಧನಾಗಿಬಿಟ್ಟೆ. ಗಡ್ಡಮೀಸೆಯನ್ನು ಧಾರಾಳವಾಗಿ ಬಿಟ್ಟು ಅದರಲ್ಲಿ ನಾನು ನನ್ನ ಮುಖವನ್ನು ಮರೆಮಾಚಿಕೊಳ್ಳಬೇಕೆಂದುಕೊಳ್ಳುತ್ತಿದ್ದೆ. ಆದರೆ ತೀರ್ಥರೂಪರು ಅದಕ್ಕೆ ಆಸ್ಪದ ಕೊಡುತ್ತಿರಲಿಲ್ಲ. ಅವಾ ಮಾತಿನಿಂದ ದಂಡಿಸುತ್ತಿದ್ದರು. ಪುಷ್ಕರಣಿಯೊಂದರಲ್ಲಿ ಸ್ನಾನ ಸಂಧ್ಯಾವಂದನೆ ಮಾಡುತ್ತಿರುವಾಗ ವಾಮನರಾವ್ ಬಾಪಟ್ ಎಂಬ ಹೆಸರಿನ ಸ್ವಾತಂತ್ರ ಹೋರಾಟಗಾರರೋರ್ವರ ಪರಿಚಯವಾಯಿತು. ಅವರು ಜಲಿಯನ್ ವಾಲಾಬಾಗಿನ ಹತ್ಯಾಕಾಂಡ ಪ್ರತಿಭಟಿಸಿಬುಡಮೇಲು ಕೃತ್ಯಗಳಲ್ಲಿ ತೊಡಗಿ ಫರಂಗಿಯವರ ತುರಂಗವಾಸದಿಂದ ತಪ್ಪಿಸಿಕೊಂಡಿಲ್ಲಿಗೆ ಬಂದು ತಲೆಮರೆಸಿಕೊಂಡಿರುವರೆಂದು ತಿಳಿಯಿತು. ಅದುವರೆಗೆ ಅಲ್ಲಿಯೇ ವಾಸಿಸುತ್ತಿದ್ದ ಅವರನ್ನು ನಾವು ಉತ್ತರಭಾರತದ ಸಧು ಇರಬೇಕೆಂದುಕೊಂಡಿದ್ದೆವು. ಬಾಪಟ್‌ರವರು ದಾಸ್ಯದಲ್ಲಿರುವ ಭಾರತದ ಬಗ್ಗೆ, ಫರಂಗಿಯವರನ್ನು ಸಮುದ್ರದಾಚೆ ಓಡಿಸುವ ಬಗ್ಗೆ ಸುಭಾಷ್‌ಚಂದ್ರ ಬೋಸರ ಬಗ್ಗೆ, ಅವರು ಸ್ಥಾಪಿಸಿರುವ ಸಶಸ್ತ್ರ ಸೈನಿಕ ದಳದ ಬಗ್ಗೆ, ಹೇಳುತ್ತಿದ್ದರು. ಅವರ ಮಾತಿಗೆ ಮೋಡಿಮಾಡುವ ಶಕ್ತಿ ಇತ್ತು. ಪಸ್ಚಿಮ ಬಂಗಾಲಕ್ಕೆ ಕರೆದೊಯ್ದು ಸೈನ್ಯ ಸೇರಿಸುವೆನೆಂದೂ, ದೇಶಕ್ಕಾಗಿ ಪಾದಾರ್ಪಣೆ ಮಾಡಿ ಜನನೀ ಜನ್ಮಭೂಮಿಸ್ಚ ಸ್ವರ್ಗಾದಪಿ ಗರೀಯಸೀ ಎಂಬ ಅರ್ಯೋಕ್ತಿಯನ್ನು ಬ್ರಾಹ್ಮಣಕುಮಾರನಾದ ನೀನು ಸಾರ್ಥಕಗೊಳಿಸಬೇಕೆಂದೂ, ಜಾತಸ್ಯ್ ಮರಣಂ ಧೃವಂ ಎಂದು ಹೇಳೀ, ಹೇಳೀ ನನ್ನನ್ನು ತಾಕೀಟು ಮಾಡುತ್ತಿದ್ದರು. ಇನ್ನೇನು ನಾಡಿದ್ದು ತ್ರಯೋದಶಿಯಂದು ಓಡಿಹೋಗುವುದೆಂದು ಸಂಸಿದ್ಧನಾಗಿದ್ದಾಗ, ನಾಳೆ ಅಂದರೆ ದ್ವಾದಶಿಯಂದು ಮಧ್ಯಾನ್ಹ ಕೆಲವು ಫರಂಗಿ ಸರಕಾರದ ಹಿಂದೂ ಸೈನಿಕರು ಅವರನ್ನು ಬಂಧಿಸಿ ಹಿಡಿದೊಯ್ದರು. ಅದಾದ ಎರಡನೆಯ ದಿನಕ್ಕೆ ಅಂದರೆ ಚತುರ್ದಶಿಯಂದು ನಮ್ಮ ತೀರ್ಥರೂಪರು ಬಂದು ನನ್ನನ್ನು ಸಾರೋಟಿನಲ್ಲಿ ಊರಿಗೆ ಕರೆದೊಯ್ದರು.
ಕರ್ನಾಟಕ ಸಂಗೀತದಲ್ಲಿ ಸಾಕಷ್ಟು ಪರಿಶ್ರಮವಿದ್ದ ಅವರು ನನ್ನಿಂದ ತ್ಯಾಗರಾಜರ ಅಣ್ಣಮಾಚಾರ್ಯರ, ಪುರಂದರದಾಸರ, ಮುತ್ತುಸ್ವಾಮಿ ದೀಕ್ಷಿತರ ಕೀರ್ತನೆಗಳನ್ನು ಹಾಡಿಸುತ್ತಿದ್ದರು. ವರ್ಣ, ಗಣ, ಮಾತ್ರೆ, ತಾಳ ಲಯ, ಆರೋಹಣ ಅವರೋಹಣ ಪರಿಚಯ ಮಾಡಿಕೊಡುತ್ತಿದ್ದರು. ಸುಪ್ತಾವಸ್ಥೆಯೊಳಗೆ ಬೇರೂರಿದಂಥ ಭಾವನೆಗಳನ್ನು ಕೆರಳಿಸುವಂಥ, ಅವುಗಳಿಗೆ ಪರಿಪೂರ್ಣ ವ್ಯಕ್ತಿತ್ವ ಕಲ್ಪಿಸುವಂಥ ಕೀರ್ತನೆಗಳನ್ನು ನನ್ನ ಬಾಯಿಂದ ಹಾಡಿಸುತ್ತ ಅವರು ನಿದ್ದೆ ಹೋಗಿ ರಮ್ಯ ಕನಸುಗಳನ್ನು ವಿವರಿಸುತ್ತಿದ್ದರು. (ಅವರು ಹಾಗೆ ವಿಹರಿಸುತ್ತಿದ್ದುದು ಮೈಸೂರು ಮಹಾರಾಜರ ಆಸ್ಥಾನದ ನರ್ತಕಿಯ ನೆನಪಿನೊಂದಿಗೆ ಅಂತ ಈಗ ಅರ್ಥವಾಗುತ್ತದೆ)
ಅಷ್ಟಾಂಗಮಾರ್ಗಕ್ಕೆ ಸಂಬಂಧಿಸಿದಂತೆ ಸದರಿ ಗ್ರಾಮದಲ್ಲಿ ಸಾಕಷ್ಟು ಹೆಸರು ಶಂಪಾದಿಸಿದ್ದ ತೀರ್ಥರೂಪರು ಸಾಮಾನ್ಯವಾಗಿ ಶ್ರೀಮಂತರ, ದೊಡ್ಡ ದೊಡ್ಡ ಅಧಿಕಾರಿಗಳ ಮನೆಗೆ ವೈದಿಕ ಕೆಲಸ ಕಾರ್ಯಗಳಿಗೆ ಹೋಗುತ್ತಿದ್ದುದೇ ಹೆಚ್ಚು. ಅವರೊಂದಿಗೆ ತಪ್ಪದೆ ನಾನಿರಬೇಕಾಗಿತ್ತು. ಹೋಗುವಾಗ ದಾರಿಯುದ್ದಕ್ಕೂ ಧರ್ಮದ ಅಷ್ಟಮಾರ್ಗಗಳಾದ ಯಾಗ, ಅಧ್ಯನ, ದಾನ, ತಪಸ್ಸು, ಸತ್ಯ, ಧೈರ್ಯ, ಕ್ಷಮಾಗುಣ ಮತ್ತು ಲೋಭವಿಲ್ಲದಿರುವಿಕೆ ಕುರಿತಂತೆ ಹೇಳುತಿದ್ದರು. ಕೆರೆಯೊಳಗೆ ಸಂಗ್ರಹಗೊಂಡ ನೀರು ಹೋಗಲು ಕೋದಿ‌ಎಂಬುದು ಹೇಗಿರುತ್ತದೆಯೋ ಹಾಗೆ ಸಂಪಾದಿಸಿದ ಹಣದ ಒಂದು ಭಾಗವನ್ನು ದಾನಧರ್ಮಗಳಿಗೆ ವಿನಿಯೋಗಿಸಬೇಕೆಂದು ಹೇಳುತ್ತಿದ್ದರೊಂದೇ ಅಲ್ಲದೆ ಅದರಂತೆ ಬದುಕುತ್ತಿದ್ದರು. ಆದ್ದರಿಂದ ಅವರೆಂದರೆ ಶ್ರೀಮಂತರಿಗೂ ಬಡವರಿಗೂ ಅಪಾರವಾದ ಗೌರವವಿತ್ತು.

ಆ ದಿನ ಪ್ರಸಿದ್ಧ ಇಂಜಿನೀಯರಾದ ಗೋರೆಬಾಳು ಸುಭಾಷ್‌ಚಂದ್ರ ಗುತ್ತಿಗೆದಾರ್ರವರ ಮನೆಗೆ ಸತ್ಯನಾರಾಯಣ ಪೂಜೆಗೆ ತೀರ್ಥರೂಪರೊಂದಿಗೆ ನಾನೂ ಹೋಗಬೆಕಾಗಿ ಬಂತು. ದೊಡ್ಡ ಇಂಜಿನೀಯರಾಗಿದ್ದೂ ಅಪರೂಪದ ಕಲೋಪಾಸಕರಾಗಿದ್ದ ಶ್ರಿಯುತ ಗುತ್ತೇದಾರರೂ ಸುಭಾಷ್‌ಚಂದ್ರ ಬೋಸರೂ ಒಂದೇ ವಾರಿಗೆಯವರೆಂದು ಹೇಳಬಹುದು. ಅವರ ಆ ಹೆಸರು ಇಟ್ಟುಕೊಂಡಿದ್ದೇ ಸುಭಾಷ್‌ಚಂದ್ರಬೋಸರು ಪ್ರವರ್ಧಮಾನಕ್ಕೆ ಬಂದು ಹೆಸರು ಗಳಿಸಿದನಂತರವಂತೆ. ಅವರ ಮೊದಲನೆಯ ಹೆಸರು ಹನುಮಂತ ದೇವರು ಎಂದು ಇತ್ತಂತೆ. ಅವರ ತಂದೆ ಜೋಡಿದಾರ್ ಎಂದು ಕರೆಸಿಕೊಂಡಿದ್ದರೆ ಅವರ ತಾತ ಜಾಗೀರ್ದಾರ್ ಎಂದು ಕರೆಸಿಕೊಳ್ಳುತ್ತಿದ್ದರಂತೆ. ಅವರ ಮುತ್ತಾತ ಜಮೀನ್ದಾರ್ ಎಂದು ಕರೆಸಿಕೊಳ್ಳುತ್ತಿದ್ದರಂತೆ. ಸುಭಾಷ್ ಚಂದ್ರರು ಫರಂಗಿಯವರ ಸರ್ಕಾರದಲ್ಲಿ ಅತ್ಯುನ್ನತ ಪದವಿಗೇರಿದ ಮೇಲೆ ತಮ್ಮ ಹೆಸರಿನ ಪಕ್ಕ ಗುತ್ತೇದಾರ್ ಎಂಬ ಉಪನಾಮ ಸೇರಿಸಿಕೊಂಡರಂತೆ. ಅದಕ್ಕೆ ತಕ್ಕಂತೆ ಸಿಂಧನೂರು ಪ್ರಾಂತದ ಗೋರೆಬಾಳಿನಲ್ಲಿ ನೂರಾರು ಎಕರೆ ಜಮೀನು ಇರುವುದಂತೆ. ತ್ರಿಪುರಸುಂದರೀದೇವಿಯಂಥ ಕಿರಿವಯಸ್ಸಿನ ಅತಿಲೋಕ ಸುಮ್ದರಿಯನ್ನು ಮದುವೆಯಾಗಿ ಐದುವರ್ಷಗಳಾದರೂ ಮಗುವಾಗಲಿಲ್ಲ ಕಾರಣಕ್ಕೆ ಆಗಾಗ್ಗೆ ಪುತ್ರಕಾಮೇಷ್ಟಿಯಾಗಕ್ಕೆ ಸಮಾನವಾದಂಥ ಸತ್ಯನಾರಾಯಣ ಪೂಜಾ ಶ್ರವಣವನ್ನು ತಮ್ಮ ಭಾರಿ ಮತ್ತು ಆಧುನಿಕವಾದ ಮನೆಯೊಳಗೆ ಏರ್ಪಡಿಸುತ್ತಿದ್ದರು.

ಆ ದಿನ ನಾನು ಅವರ ಸ್ರೀಮತಿಯವರ ಸೌಂದರ್ಯಕ್ಕೆ ಬೆರಗಾಗಿ ಹೋದೆ. ಪೂಜೆಯ ನಂತರ ತೀರ್ಥರೂಪರು ಸೂಚಿಸಿದ ಪ್ರಕಾರ ನಾನು ಸಾಂಧರ್ಭಿಕವಾಗಿ ಮುತ್ತುಸ್ವಾಮಿ ದೀಕ್ಷಿತರ ಪ್ರಸಿದ್ಧ ಕೃತಿಯಾದ ಸಾಮಗಾನಪ್ರಿಯೇ ಕಾಮಕೋಟಿನಿಲಯೇ | ಶಂಕರೀ ಸುಂದರಿ | ಸಾರತರ ಲಹರೀ | ಚಂಡಿಕೇ ನಿರ್ಮಜೇ | ಕಾಮಿನೀ ಮೋದಿನೀ | ಪಾಹಿ ಗುರುಗುಹ ಜನನೀ ಕಾಮಾಕ್ಷಿ ಎಂದು ಶಂಕರಾಭರಣ ರಾಗದಲ್ಲಿ ಸೊಗಸಾಗಿ ಹಾಡಿಬಿಟ್ಟೆ. ಹಾಡಿ ಆ ದಂಪತಿಗಳೀರ್ವರನ್ನು ಪರವಶಗೊಳಿಸಿಬಿಟ್ಟೆನು. ಆಕೆಯ ಸೌಂದರ್ಯರಾಶಿಯೇ ನನ್ನ ಅಂತರಂಗದಲ್ಲಿ ಲಗ್ಗೆ ಹಾಕಿ ಆ ಪ್ರಕಾರ ಹಾಡಿಸಿತು. ಎಲ್ಲ ವಿಷಯಗಳಿಗೆ ಸಂಬಂಧಪಟ್ಟಂಥ ಸಾರಿರಾರು ವಸ್ತುಗಳು ಒಟ್ಟಗಿ ಸೇರಿ ಹಾಡಿನ ಮೂಲಕ ಪ್ರಕಟಗೊಂಡುಬಿಟ್ಟವು. ದುಃಖವಾಗಲೀ, ಸಂತೋಷವಾಗಲಿ‌ಈ ಹೊಂದಬಾರದೆಂದು ನಾನು ನಿಧಾನವಾಗಿ ಆಲೋಚಿಸುತ್ತ ಸ್ಥಿತ ಪ್ರಜ್ಞನಂತೆ ಉಳಿದು ಬಿಟ್ಟೆನು. ಅವರೆಲ್ಲರು ಅಮೃತವನ್ನು ಹರಿಸತಕ್ಕ ಒಳ್ಳೆಯ ಮಾತುಗಳನ್ನಡಿದರು. ಜೇನು ಬೆರೆಸಿದಂತೆ ನನ್ನೆದೆಯ ಉದಕವ ಸಿಹಿಯಾಯಿತು.
ಕಾಮಸುಖವು ಬೇರೆ ಎಲ್ಲ ಶತ್ರುಗಳಿಗಿಂತಭಯಂಕರವಾದುದೆಂದು ತದ ನಂತರ ಅರಿವಿಗೆ ಬಂತು. ಸಕ್ಕರೆಯನ್ನು ರುಚಿ ನೋಡುವ ಸಂತೋಷದಲ್ಲಿ ಗಮನಿಸದೆ ಹೋದ ನೊಣವು ಹೊಟ್ಟೆ ಸೇರಿ ಯಾವ ಪ್ರಕಾರವಾಗಿ ನೋವು ಕೊಡುವುದೋ ಹಾಗೆಯೇ ಆಕೆಯ ರೂಪ ನನ್ನ ಮಸ್ತಿಸ್ಕವನ್ನು ಸೇರಿ ಹೆಚ್ಚಿನ ತೊಂದರೆ ಕೊಡಲಾರಂಭಿಸಿತು. ಒಂದೇ ಒಂದು ಒಣಗಿದ ಮರವಿದ್ದರೂ ಕಾಡುಗಿಚ್ಚಿನಿಂದ ತಾನುರಿದು ಹೂವುಗಳಿಂದ ತುಂಬಿದ ಮರಗಳ ವನವನ್ನೇ ದಹಿಸುವ ರೀತಿಯಲ್ಲಿ ಆಕೆಯ ಒಂದೇ ಒಂದು ನೆನಪು ನನ್ನೆದೆಯಲ್ಲಿ ದಹಿಸುತ್ತ ಶಾಸ್ತ್ರಾಭ್ಯಾಸದಿಂದ ಪಡೆದ ಸಮಸ್ತ ಜ್ಞಾನವನ್ನು ಆಪೋಶನ ತೆಗೆದುಕೊಳ್ಳಲಾರಂಭಿಸಿತು.
ಆ ರಾತ್ರಿ ನಾನು ಕಂಡ ಕನಸೇ ಇದಕ್ಕೆ ಸಾಕ್ಷಿ: ಭೋರ್ಗರೆಯುವ ನದಿ ದಡದ ಮರಳ ಮೇಲೆ ನಿರ್ವಸ್ತ್ರನಾಗಿ ಅಂಗಾತ ಮಲಗಿದ್ದಂಥ ಕನಸು ಅದಾಗಿತ್ತು. ಆಕಾಶದಲ್ಲಿ ಸಾವಿರ ಯೋಜನಗಳ ಮೆಲೆ ನಕ್ಷತ್ರದಷ್ಟು ಚಿಕ್ಕದಾದ ಪಕ್ಷಿಯೊಂದು ಕಾಣಿಸಿಕೊಂಡಿತು. ಅದು ಬ್ರಹ್ಮದ ಯಾವ ತತ್ವ ಆಗಿರಬಹುದೆಂದು ನಾನು ಯೋಚಿಸುತ್ತಿದ್ದೆನು. ನೋಡು ನೋಡುತ್ತಿದ್ದಂತೆ ಆ ಪಕ್ಷಿ ದೊಡ್ಡದಾಗುತ್ತ ಹೋಯಿತು. ನೀರಿನಲ್ಲಿ ಬಿದ್ದ ಶಾಯಿಯ ಬಿಂದುವಿನಂತೆ, ಕ್ರಮೇಣ ಅದು ನಭೋ ಮಂಡಲದ ತುಂಬ ರೆಕ್ಕೆಳಿಂದ ವ್ಯಾಪಿಸಿತು. ಅದರ ಎರಡು ಕಣ್ಣುಗಳು ಸೂರ್ಯ ಗೋಳದ ಎರಡು ನಮೂನೆಗಳಂತೆ ಹೊಳೆಯ ತೊಡಗಿದವು. ಅದು ಅಂಥ ಕಣ್ಣುಗಳಿಂದ ನನ್ನನ್ನು ದುರುಗುಟ್ಟಿ ನೋಡ ತೊಡಗಿತು. ಅದ ತೀಕ್ಷ್ಣ ನೋಟವು ಎಷ್ಟೊಂದು ಆಪ್ಯಾಯಮಾನವೂ ಪವಾಡ ಸದೃಶ್ಯವೂ ಆಗಿತ್ತೆಂದರೆ ನನ್ನ ಶಿಶ್ನವು ನಿಮಿರಿ ಚಿಗಿತು ಹೂವು ಹಣ್ಣು ಬಿಟ್ಟು ಘಮಾಡಿಸಲಾರಂಬಿಸಿತು. ಇದ್ದಕ್ಕಿದ್ದಂತೆ ಆ ಹಕ್ಕಿಯು ಬಿಟ್ಟ ಬಾಣದ ಹಾಗೆ ಸುರುಗಿ ನನ್ನ ಶಿಶ್ನವನ್ನು ಕೊಕ್ಕಿನಿಂದ ಕಚ್ಚಿಕೊಂಡು ಮುಗಿಲಿಗೆ ಜಿಗಿದು ಮರುಕ್ಷಣದಲ್ಲಿ ಅಂತರ್ಧಾನವಾಯಿತು.
ನಾನು ಹ್ಹಾಂ ಎಂದು ಚೀರಿಕೊಂಡೆ. ನಿದ್ರೆಯಲ್ಲಿ ಬ್ರಹ್ಮತ್ವವನ್ನು ಸೇರಿದ್ದ ತೀರ್ಥರೂಪರು ತುಪ್ಪದ ದೀವಿಗೆ ಹಿಡಿದುಕೊಂಡು ಗಾಬರಿಯಿಂದ ಬಂದು “ಏನಾಯಿತು ಮಗು?… ಕೆಟ್ಟ ಕನಸು ಕಂಡೆ ಏನು? ಎಂದು ವಿಚಾರಿಸಿದರು. ಧರ್ಮಾರ್ಥಗಳನ್ನು ಸಾಧಿಸತಕ್ಕವರಿಗೆ ಹೇಗೆ ಮದ್ಯಪಾನವು ಯೋಗ್ಯವಲ್ಲವೋ ಹಾಗೆ ಸತ್ಕಥಾ ಶ್ರವಣ ಸಂಪನ್ನರಾದ ತೀರ್ಥರೂಪರಿಗೆ ಕಂಡ ಕನಸನ್ನು ಕಂಡಂತೆ ಹೇಳುವುದು ಯೋಗ್ಯವಲ್ಲವೆಂದು ಭಾವಿಸಿದ ನಾನು ಬೆಟ್ಟದ ಮೇಲಿಂದ ಬಿದ್ದುದಾಗಿ ಕನಸು ಕಂಡೆನೆಂದು ಸುಳ್ಳು ಹೇಳಿದೆ. ಅದಕ್ಕವರು ಸ್ವಪ್ನ ದೋಷನಿವಾರನಾ ಮಂತ್ರ ಹೇಳಿ ಮಲಗಿಸಿದರು.
ಮುಂದಿನ ದಿನಗಳಲ್ಲಿ ಗುತ್ತೇದಾರರು ದಿನಕ್ಕೊಮ್ಮೆಯಾದರೂ ನನ್ನನ್ನು ಬರಮಾಡಿಕೊಂಡು ಒಂದಲ್ಲಾ ಒಂದು ಕೀರ್ತನೆ ಹಾಡಿಸುವುದು, ತಾವೂ ಹಾಡುವುದು, ಪರಸ್ಪರ ಅಭಿಪ್ರಶಂಸಿಸಿಕೊಳ್ಳುವುದು ಮೊದಲಾಯಿತು. ಗುತ್ತೇದಾರರು ಪರ ಊರಿಗೆ ಹೋಗಿದ್ದಾಗ ಅವರ ಎಳೆ ವಯಸ್ಸಿನ ಪತ್ನಿಯಾದ ತ್ರಿಪುರ ಸುಂದರೀ ದೇವಿಯವರು ನನ್ನನ್ನು ತಮ್ಮ ಮನೆಗೆ ಕರೆ ಕಳಿಸಿಕೊಂಡು ಶಾಮೂ ಶಂಕರಾಭರಣರಾಗದ ದೀಕ್ಷಿತರ ಕೃತಿ ಹಾಡೆಂದು ಪೀಡಿಸತೊಡಗಿದರು. ಯಾವ ಯಾವ ತಾಳದಲ್ಲಿ ಶಂಕರಾಭರಣ ಯಾವ ಯಾವ ರೂಪ ಪಡೆಯುತ್ತದೆ ಎಂದು ನನ್ನ ಶಾರೀರವನ್ನು ಪ್ರಯೋಗಕ್ಕೆ ಒಡ್ಡುತ್ತಿದ್ದರು. ಆನಂದಾತಿರೇಕದಿಂದ ನನ್ನನ್ನು ಸ್ಪರ್ಶಿಸುತ್ತಿದ್ದರು. ತಟ್ಟುತ್ತಿದ್ದರು. ಅಪ್ಪಿಕೊಳ್ಳುತ್ತಿದ್ದರು. ಉಣಬಡಿಸುತ್ತಿದ್ದರು. ಉಣ್ಣುತ್ತಿದ್ದರು. ಚಿರಂತರ ಹಸಿವೆ ತೃಷೆಗಳನ್ನು ತಮ್ಮ ಕೈಯಾರ ತಣಿಸುವ ಪ್ರಯತ್ನ ಮಾಡುತ್ತಿದ್ದರು. ಹಂಸತೂಲಿಕಾತಲ್ಪದ ಮೇಲೆ ನನ್ನನ್ನು ವಿವಿಧ ಭಂಗಿಗಳಲ್ಲಿ ಮಲಗಿಸಿ ನನ್ನ ದೇಹದ ಕೋಟಿ ಕೋಟಿ ಶ್ವೇದರಂದ್ರಗಳಲ್ಲಿ ತಮ್ಮ ಬೆಚ್ಚನೆಯ ಉಸಿರು ಬಿತ್ತುತ್ತಿದ್ದರು. ನನ್ನ ಫಲವತ್ತಾದ ದೇಹವು ಅವರಿಗಿಷ್ಟವಾದ ಬೆಳೆಯನ್ನು ಕುಯ್ಲಿಗೆ ತಂದು ಸುಗ್ಗಿ ಮಾಡುತ್ತಿತ್ತು. ಆ ದೇಹದ ಹಸಿವಿನ ಬೆಂಕಿಯನ್ನಾರಿಸಲು ನನ್ನ ದೇಹ ಬೆಳೆಯುತ್ತಿದ್ದ ಕಾಳುಗಳಿಗೆ ಸಾಧ್ಯವಾಯದಾಯ್ತು. ಆಕೆಯ ದೇಹದ ನಗ್ನತೆ ಮರೆ ಮಾಚಲು ನನ್ನ ದೇಹವೆಂಬ ಕೌಪೀನಕ್ಕೆ ಸಾಧ್ಯವಾಗದಾಯ್ತು. ಆಕೆಯ ದೇಹದ ಅಗತ್ಯಗಳನ್ನು ತೀರಿಸಲು ನನ್ನ ದೇಹವು ಅತ್ಯುತ್ಕಟವಾಗಿ ಹಾತೊರೆಯುತ್ತಿತ್ತು.
ಮುಂದೊಂದು ದಿನ ತೀರ್ಥರೂಪರು ನನ್ನ ಕಪೋಲಗಳಿಗೆ ಛಟೀರನೆ ಏಟುಕೊಟ್ಟು ಮುಂದೆಂದೂ ಸಂಗಿತದ ಗೊಡವೆಗೆ ಹೋಗಬೇಡವೆಂದೂ ಅದರಲ್ಲೂ ಮುಖ್ಯವಾಗಿ ಶಂಕರಾಭರಣ ಹಾಡಕೂಡದೆಂದೂ, ಹಾಡಿದಿ ಎಂದರೆ ರೌರವ ನರಕ ಪ್ರಾಪ್ತವಾಗುವುದೆಂದೂ ಎಚ್ಚರಿಕೆ ನೀಡಿದರು.
ಶೃಂಗೇರಿಗೆ ಕರೆದೊಯ್ದು ಸಂಧ್ಯಾ ವಂದನೆ ಮಾಡಿಸಿ ಎಳ್ಳು ಬೀಜಗಳನ್ನು ತುಂಗೆಗೆ ಬಿಡಿಸಿದರು. ಪರಮ ಪೂಜ್ಯ ಸ್ವಾಮಿಗಳಿಂದ ಪ್ರಾಯಸ್ಚಿತ್ತ ಮಾಡಿಸಿ ಹೊಸ ಯಜ್ಞೋಪವೀತ ಧಾರಣ ಮಾಡಿಸಿದರು. ನನಗೆ ಅದರ ಉದ್ದೇಶ ಅರ್ಥವಾಗಲಿಲ್ಲ. ಮಲಯಗಿರಿಯಲ್ಲಿ ವಾಸಿಸುವ ಬೇಡಿತಿಯ ಕೈಯ ಶ್ರೀಗಂಧದ ಕೊರಡಿನಂತಾಯಿತು ನನ್ನ ಪರಿಸ್ಥಿತಿ. ತ್ರಿಪುರ ಸುಂದರೀದೇವಿಯ ಕುರಿತು ಯೊಚಿಸುತ್ತಿದ್ದ ನನ್ನನ್ನು ಎದುರಿಗೆ ಕೂಡ್ರಿಸಿಕೊಂಡು ಶೃಂಗೇರಿಪೀಠದ ಶ್ರೀಗಳವರು “ಓಂ ಭದ್ರ ಕರ್ಣೇಭಿಃ ಶ್ವಣುಯಾಮಿ ದೇವಾಃ| ಭದ್ರಂ ಪಶ್ಯೇಮಾಕ್ಷಭಿರ್ಯ ಜತ್ತಾಃ| ಸ್ಥಿರೈರಂಗೈಸ್ತುಷ್ಟುವಾಂ ಸಪ್ತಯಾಭಿಃ | ವ್ಯಶೇಮ ದೇವ ಹಿತಂ ಯದಾಯುಃ |” ಎಂದು ಶ್ಲೋಕವನ್ನು ತಾವೂ ಹೇಳಿದರು, ನನ್ನಿಂದಲೂ ಹೇಳಿಸಿದರು. ನಂತರ ಅದನ್ನು ವಿವರಿಸಿ ಅಡಿಯಿಂದ ಮುಡಿಯವರೆಗೆ ಸ್ಪರ್ಶಿಸಿ ವಿದ್ಯುತ್ ಸಂಚಾರ ಮಾಡಿಸಿದರು.

ನಾವು ಶೃಂಗೇರಿಯಿಂದ ಗ್ರಾಮಕ್ಕೆ ಮರಳಿದ ಕೆಲದಿನಗಳಿಗೆ ಗುತ್ತೇದಾರ್ ದಂಪತಿಗಳು ಬೇರೊಂದು ಊರಿಗೆ ವರ್ಗವಾಗಿ ಹೋದರು. ಅದು ಇಂಥದೇ ಊರೆಂದು ಗೊತ್ತಿದ್ದರೂ ನಾನು ಆ ಕಡೆ ಸುಳಿಯುವ ಧೈರ್ಯ ಮಾಡಲಿಲ್ಲ. ಹೋಗುವುದು ಏಕೆ? ಕ್ರೂರವಾದ ಶೋಕ ಪ್ರಸಂಗಗಳನ್ನು ಎದುರಿದುವುದು ಏಕೆ? ಯೌವನ ಕಳೆದುಹೋದ ಪೃಥ್ವಿಯಂತೆ ಇದೇ ಹುತ್ತದಲ್ಲಿ ಉಳಿದುಬಿಡುವುದೇ ವಾಸಿ ಎಂದು ಬಗೆದೆನು. ಬಹು ಇನಗಲವರೆಗೆ ಆಕೆಯ ನೆನಪಿನಿಂದಾಗಿ ನಿರ್ಮಲ ನೀರಿನಿಂದ ತೊಳೆದರೂ ಅವಯವಗಳ ಕೊಳೆ ಕಳೆಯದಾದೆನು. ಯಾವ ಸತ್ಯದಿಂದಲೂ ಮನಸ್ಸನ್ನು ಶುದ್ಧಿಮಾಡಿಕೊಳ್ಳದಾದೆನು. ಯಾವ ವಿದ್ಯೆಗೂ, ಯಾವ ತಪಸ್ಸಿಗೂ ಜೀವಾತ್ಮನನ್ನಾಗಲೀ ಜ್ಞಾನ ಬುದ್ಧಿಗಳನ್ನಾಗಲೀ ಸ್ವಚ್ಛಗೊಳಿಸದೇ ಹೋದೆನು. ಇದನ್ನು ಮನಗಂಡೇ ತೀರ್ಥರೂಪರು ನನಗೆ ಎಲ್ಲಿಂದಲೋ ಒಂದು ಹೆಣ್ಣು ತಂದು ಮದುವೆ ಮಾಡಿದರು. ಆಕೆ ಮಂತ್ರವಾಗದ ಅಕ್ಷರಗಳಂತಿದ್ದಳು. ಆಕೆ ಔಷದಿಯಾಗದ ಗಿಡಮೂಲಿಕೆಯಂತಿದ್ದಳು ಇದ್ದಳೋ ಏನೋ? ಆದರೆ‌ಅ ಅದನ್ನು ಗುರುತಿಸುವ ಶಕ್ತಿ ಸಾಮರ್ಥ್ಯ ನನ್ನಲ್ಲಿರಲಿಲ್ಲವೋ?… ಪೂಜ್ಯತ್ವ ನಶಿಸಿದ್ದರಿಂದಾಗಿಯೋ ಏನೋ ಅಶ್ವಥ್ ನಾರಾಯಣ ಎಂಬ ಮಗ ಹುಟ್ಟಿದ. ಎಲ್ಲ ತಂದೆಗಳೂ ಕಾಣುವಂತೆ ಅವನನ್ನೂ ಜಗದ್ವಿಖ್ಯಾತ ಶ್ರೋತ್ರಿಯನ್ನಾಗಿ ಮಾಡ ಬಯಸಿ ವಿಫಲನಾದೆ. ಅವನ ಮಗನಾದ ಶಾಮನೂ ಮಂದಾನಿಲದೆದುರಿಗಿಟ್ಟ ದೀಪದಂತೆ ಚಂಚಲ ಸ್ವಭಾವದವನಾಗಿದ್ದಾನೆ. ಈ ಎಲ್ಲ ಯಶಸ್ಸು, ಅಪಯಶಸ್ಸುಗಳ ನಡುವೆ, ಪ್ರಳಯ ಕಾಲದ ಅಗ್ನಿಗಳ ನಡುವೆ, ವೃದ್ಧಾಪ್ಯ ಆವರಿಸಿಕೊಂಡು ಕೃಶ ಶರೀರಿಯಾಗಿ ಹತ್ತಿರವಾಗಿರುವ ವೈಕುಂಠದ ಬಗ್ಗೆ ಯೋಚಿಸುತ್ತಿರುವಾಗಲೇ ಶ್ರೀಮತಿ ಇಂದಿರಾಗಾಂಧಿಯವರ ಭಾವಚಿತ್ರ ಕಣ್ಣಿಗೆಟುಕಿ ಉದ್ಬುದ್ಧ ಭಾವನೆಗಳಿಗೆ ಕಾರಣೀಭೂತವಾಗಿದ್ದು, ಅದೇ ಮೂಗು, ಅದೇ ಕಣ್ಣು, ಅದೇ ನೊಸಲು, ಅದೇ ಕಪೋಲ, ಅದೇ ಗದ್ದ ಥೇಟ್ ತ್ರಿಪುರ ಸುಂದರೀ ದೇವಿಯಂತೆಯೇ ಇರುವಳಲ್ಲ ಎಂದು ನಾನು ಅವಾಕ್ಕಾದುದರಲ್ಲಿ ತಪ್ಪೇನುಂಟು? ತ್ರಿಪುರ ಸುಂದರೀ ದೇವಿಯಂತೆಯೇ
ವೈಧವ್ಯ ನಂತರ ರಾಷ್ಟ್ರರಾಜಕಾರಣದ ಚುಕ್ಕಾಣಿ ಹಿಡಿದಿರಬಹುದೇ ಎಂಬ ಸಂದೇಹವು ಒಮ್ಮೆ ಬಂದರೆ, ಇನ್ನೊಮ್ಮೆ ಆಕೆಯ ಸಹ‌ಉದರಿ ಯಾರಾದರೂ ಇಂದಿರಾಗಾಂಧಿ ನಾಮಾಂಕಿತರಾಗಿ ಖ್ಯಾತಿಪಡೆದಿರಬಹುದೇ? ಎಂದು ಯೋಚಿಸಿದುದುಂಟು. ಇದು ಕೇವಲ ನನ್ನ ಭ್ರಾಂತಿ ಎಂದು ತದನಂತರ ಅರ್ಥವಾಯಿತು. ಹಸ್ತ ಸಾಮುದ್ರಿಕ ನೋಡುವ ನೆಪದಲ್ಲಿ ಆಕೆಯ ಮೃದುವಾದ ಹಸ್ತ ಸ್ಪರ್ಶಿಸಿ ವೃದ್ಧಾಪ್ಯದ ಸಾರ್ಥಕ್ಯ ಅನುಭವಿಸುವ ಸಲುವಾಗಿ ನಾನು ಪಡಬಾರದ ಕಷ್ಟಗಳನ್ನು ಅನುಭವಿಸಿದೆ. ಇದು ಸರ್ವರಿಗೂ ವೇದ್ಯವಾಗಿರುವ ಸಂಗತಿಯಾಗಿದೆ.
ಇದಕ್ಕೆಲ್ಲ ಪ್ರೇರಣೆ ನೀಡಿದ್ದೆ ಕಲಿದೇವನಾಥನ ಬಳಿಯ ಎರಡು ಶಿಲಾ ಶಾಸನಗಳ ನಡುವಿನಿಂದ ನಾನು ನೋಡಿದ ದೃಶ್ಯ… ಅದು ನನ್ನ ಬದುಕಿನ ಸಂಕ್ರಮಣ ಕಾಲ, ಆ ದೃಶ್ಯವೇ ಶುಕ್ರಾಚಾರ್ಯನಂತೆ ಶಾಪ ಕೊಟ್ಟು ವೃದ್ಧಾಪ್ಯವನ್ನು ನೆನಪಿಸುವಂತೆ ಮಾಡಿತು. ಕೆಲವು ಕಾಲದ ಮಟ್ಟಿಗಾದರೂ ನನ್ನ ವೃದ್ಧಾಪ್ಯವನ್ನು ತೆಗೆದುಕೊಂಡು ನಿನ್ನ ಯೌವನವನ್ನು ನನಗೆ ಕೊಡಲಾರೆಯಾ ಎಂದು ನನ್ನ ಮೊಮ್ಮಗನನ್ನು ಕಣ್ಣ ನೋಟದಿಂದ ಪ್ರಾರ್ಥಿಸುವಂತೆ ಮಾಡಿತು. ಆ ದೃಶ್ಯವೇ ವರದಾಚಾರ್ಯನೊಂದಿಗೆ ವಾದಕ್ಕಿಳಿಯುವಂತೆ ಮಾಡಿತು. ಆ ದೃಶ್ಯವೇ ಸ್ಕಂದ ಪುರಾನದಲ್ಲಿ ಕಾಶೀಕ್ಷೇತ್ರದ ಮಣಿಕರ್ಣಿಕಾ ಚಕ್ರ ಪುಷ್ಕರಿಣಿಯ ಸಾಯುಜ್ಯ ವರ್ಣನೆಯನ್ನು ನೆನಪಿಸಿಕೊಟ್ಟಿತು. ಆ ದೃಶ್ಯವೇ ನನ್ನನ್ನೀ ಉಯಿಲು ಬರೆಯುವಂತೆ ಪ್ರೇರೇಪಿಸಿತು. ಇದಕ್ಕೆಲ್ಲ ಧರ್ಮ ಕರ್ಮ ಸಂಯೋಗವೆಂಬಂತೆ ನಾನು ನನ್ನ ಮೊಮ್ಮಗನಾದ ಶಾಮನನ್ನು ಹೊಣೆಗಾರನನ್ನಾಗಿ ಮಾಡುತ್ತಿರುವೆನು. ಹೀಗೆ ಮಾಡದೆ ನನಗೆ ಬೇರೆ ದಾರಿಯೇ ಉಳಿದಿಲ್ಲ.
ನನ್ನ ಪ್ರೀತಿಯ ಮೊಮ್ಮಗನಾದ ಶಾಮಾಶಾಸ್ತ್ರಿಯೇ ನನ್ನ ಮರಣಾನಂತರ ನನ್ನೀ ಉಯಿಲನ್ನು ನಿನಗೆ ಓದಲು ಸಾಧ್ಯವಾಗಬಹುದು. ಸಾಶ್ಯವಾಗದೇ ಹೋಗಬಹುದು. ಈಗಾಗಲೇ ನೀನು ನನ್ನ ಬಗ್ಗೆ ಸರಿಯಾದ ಭಾವನೆಗಳನ್ನು ಹೊಂದಿಲ್ಲ. ಇದನ್ನು ನೀನು ಒದಿದೀ ಅಂದರೆ ನನ್ನ ಬಗ್ಗೆ ನಿನಗಿರುವ ಭಾವನೆಗಳಲ್ಲಿ ಮತ್ತಷ್ಟು ಏರುಪೇರುಗಳಾಗದೆ ಇರವು. ಹೀಗೆ ಇಷ್ಟು ವ್ಯಾಪಕವಾಗಿ ಬರೆಯಬೇಕಾಗಿ ಬಂದದ್ದು ಮತ್ತು ನಿನ್ನನ್ನು ಇಕ್ಕಟ್ಟಿಗೆ ಸಿಕ್ಕಿಸಬೇಕಾಗಿ ಬಂದದ್ದು ಎಲ್ಲ ನಿನ್ನಿಂದಲೇ ಎಂದು ನಿನಗಿಂತ ಮೂರು ಪಟ್ಟು ವಯಸ್ಸಗಿರುವ ನಾನು ನಮ್ರತೆಯಿಂದ ಹೇಳಬಯಸುತ್ತೇನೆ. ನನ್ನ ಮಾತು ಧಿಕ್ಕರಿಸಿ ನೀನು ಈಗಾಗಲೇ ವಂಶದ ಗೌರವ ಬದಿಗಿಟ್ಟು ಸಾರಕಾರಿ ನೌಕರಿ ಸೇರಿಕೊಂಡಿರುವಿ. ಅಮೇಧ್ಯ ವಾತಾವರಣ ರಾರಾಜಿಸುತ್ತಿರುವ ಕೊತ್ತಲಗಿಯಲ್ಲಿ ನೀನು ನೌಕರಿ ಆರಂಭಿಸಿರುವುದೇನು ನನಗೆ ಸಂತಸದಾಯಕ ವಿಷಯವಾಗಿಲ್ಲ. ಅನೇಕ ದೋಲಾಯಮಾನ ವ್ಯಕ್ತಿತ್ವಗಳನ್ನು ತುಂಬಿಕೊಂಡಿರುವ ನೀನು ಅದು ಹೇಗೆ ಮಹಾಸಾಧ್ವಿಯಾದ ನಿನ್ನ ತಾಯಿ ಅಂದರೆ ನನ್ನ ಅಚ್ಚುಮೆಚ್ಚಿನ ಸೊಸೆಯನ್ನು ನೋಡಿಕೊಳ್ಳುವೆಯೋ ದೇವರಿಗೇ ಗೊತ್ತು? ನಿನ್ನ ಮನಸ್ಸೆಂಬ ಅಶ್ವವನ್ನು ಪಳಗಿಸಲೆಂದೇ ವರಲಕ್ಷ್ಮಿ ಎಂಬ ಕನ್ಯಾಮಣಿಯನ್ನು ತಂದು ನಿನ್ನ ಹೆಂಡತಿಯನ್ನಾಗಿ ಮಾಡಿರುವೆನು. ಆಕೆ ಮುಂದೆ ಅದು ಹೇಗೆ ನಿನ್ನನ್ನು ಪಳಗಿಸುವಳೆಂಬ ಸಂಗತಿ ನನಗೆ ಚೆನ್ನಾಗಿ ಗೊತ್ತು! ನಿನಗೆ ಗೊತ್ತಿದ್ದೋ ಗೊತ್ತಿಲ್ಲದೆಯೋ ಮಾಡಿರುವ ಮತ್ತು ಮಾಡಿರಬಹುದಾದ ಪಾಪಕೃತ್ಯಗಳನ್ನು ಕಳೆದುಕೊಳ್ಳಬೇಕಾದರೆ‌ಒಂದೇ ಒಂದು ಮಾರ್ಗ ಉಂಟು. ಈ ಉಯಿಲಿನ ಸೃಷ್ಟಿಕರ್ತನಾದ ನಾನು ನರ್ತಕಿಯಮಗನೆಂದು ಅಲಕ್ಷೆ ಮಾಡಿದಿ ಎಂದಿಟ್ಟುಕೋ! ಆದರೆ ನೀನು ಯಾರು ಎಂದು ಮೊದಲು ಯೋಚಿಸು, ಆಗ ಅರ್ಥವಾಗುತ್ತದೆ. – ಈ ಉಯಿಲಿನ ಅನಿವಾರ್ಯತೆ. ಪಾಪ ಸಂಚಯಸ್ಥವಾಗಿರುವ ನಾನಾಗಲೀ, ನೀನಾಗಲೀ ಕಾಶೀ ಕ್ಷೇತ್ರಕ್ಕೆ ಹೋಗಿ ಪರಮಸಾಯುಜ್ಯ ಪಡೆಯುವುದೇ ಲೇಸು. ಈ ಮಾತನ್ನು ನಿನ್ನ ತಾಯಿಗು ಹೇಳಿ ಮನದೌ ಮಾಡಿರುವೆನು. ಈಗಾಗಲೇ ನಿನ್ನ ಮೇಲೆ ಮಾತೃತ್ವದ ಹತೋಟಿ ತಪ್ಪಿ ಚಡಪಡಿಸುತ್ತಿರುವ ಆ ನಿನ್ನ ತಾಯಿ ಮಹಾ ಕರ್ಮಟ ಬ್ರಾಹ್ಮಣ ಮಹಿಳೆ ಎಂಬುದನ್ನು ಮರೆಯಬೇಡ. ಆ ಶ್ರೇಷ್ಟ ವಿಧವೆಯ ನಾಲಿಗೆಗೆ ತ್ರಿಮೂರ್ತಿಗಳಿಗಿರುವ ಶಕ್ತಿ ಇರುವುದೆಂದು ದೃಢ ನಿಶ್ಚಯಂಬುಗಳಿಂದ ಹೇಳುತ್ತಿರುವೆನು. ನೀನು ತಾಕೀತು ಮಾಡದಿದ್ದರೂ ನಿನ್ನ ತಾಯಿಯಾದ ಅಲುಮೇಲಮ್ಮನೂ, ಹೆಂಡತಿಯಾದ ವರಲಕ್ಷ್ಮೀ ನಿನ್ನ ಸದಾ ಹಿಂಬಾಲಿಸುವ ಏಳು ಸುತ್ತುಗಳ ಕೋಟೆಯಂಥ ನೆರಳುಗಳೆಂಬುದನ್ನು ಮರೆಯಬೇಡ. ರಥ ಸಪ್ತಮಿ, ವೈಕುಂಟ ಏಕಾದಶಿಯೇ ಮೊದಲಾದ ಪುಣ್ಯಕಾಲಗಳೆಂದು ವ್ರತ ನಿಯಮಗಳನ್ನು ಅಚ್ಚುಕಟ್ಟಾಗಿ ಪಾಲಿಸು, ಪುರಾಣ ಪುಣ್ಯ ಶ್ರವಣಗಳನ್ನು ಮಾಡಿಸು. ಏಕೆಂದರೆ ನಾನು ನಿನ್ನ ಮೂಲಕ ಬದುಕುತ್ತಿರುವೆನು. ಎಂಥೋರ ಮೊಮ್ಮಗ ಎಂದು ಸಮಾಜವು ಹೇಳುವುದಲ್ಲದೆ, ಎಂಥವರ ಮಗನೆಂದು ಎಂದೆಂದಿಗೂ ಹೇಳಲಾರದು! ಪ್ರಾಯಶಃ ಸಮಾಜದಲ್ಲಿ ನಿನ್ನ ತಂದೆಯ ಅಂದರೆ ನನ್ನ ಮಗನ ಹೆಸರಿನ ಕುರುಹು ಇಲ್ಲ. ಇದನ್ನು ಆಮೂಲಾಗ್ರವಾಗಿ ಅಳಿಸಿ ಹಾಕಿಬಿಟ್ಟಿರುವೆನು. ಆದ್ದರಿಂದ ನೀನು ಪಾಪ ಕೃತ್ಯ ಮಾಡಿದರೂ, ಪುಣ್ಯ ಕೃತ್ಯ ಮಾಡಿದರೂ ನನಗೇ ತಗಲುತ್ತದೆ. ಇಷ್ಟೆಲ್ಲ ಲಕ್ಷಣಗೆರೆಗಳನ್ನು ನಿನ್ನ ಬದುಕಿನ ಅಂಗಳದಲ್ಲಿ ಕೊರೆಯುತ್ತಿರುವ ನಾನು ಯಾವ ಸ್ಥಿರಾಸ್ತಿಯನ್ನಾಗಲೀ, ಚರಾಸ್ತಿಯನ್ನಾಗಲೀ ಮಾಡಿಟ್ಟಿಲ್ಲ ಮಗೂ, ಚರಾಸ್ತಿಯಾಗಿರುವ ನೀನೇ ಸ್ಥಿತಾಸ್ತಿ ಶಾಮೂ, ನನ್ನ ಹುಟ್ಟಿನ ಬಗ್ಗೆ ಮತ್ತು ತ್ರಿಪುರಸುಂದರೀದೇವಿಯರೊಂದಿನ ಅನೈತಿಕವೂ, ಪವಿತ್ರವೂ ಆದ ಸಮ್ಬಂಧದ ಬಗ್ಗೆ ಅಸಹ್ಯಪಟ್ಟುಕೊಳ್ಳಬೇಡ. ಅನಸೂಯಾಳಿಗೆ ಸಂಬಂಧಿಸಿದಂತೆನಿನ್ನ ಜಾಗದಲ್ಲಿ ನಾನಿದ್ದರೆ ಖಂಡಿತಾ ಯಾವುದೇ ಹಿರಿಯರ ಮಾತು ಧಿಕ್ಕರಿಸಿ ಆಕೆಯನ್ನು ಮದುವೆಯಾಗಿ ಬಿಡುತ್ತಿದ್ದೆನು. ನಾನು ಎಷ್ಟೇ ಕುಮ್ಮಕ್ಕು, ಸಹಕಾರ ಕೊಟ್ಟರೂ ನೀನು ಪ್ರಪಂಚ ಪ್ರಳಯವಾದರೂ ನಾನು ಅನಸೂಯಳನ್ನೇ ಮದುವೆಯಾಗುವೆನೆಂದು ಖಡಾಖಂಡಿತವಾಗಿ ಹೇಳಲಿಲ್ಲ. ಹಾಗೆ ಮದುವೆಮಾಡಿಕೊಂಡು ಮನೆ ತ್ಯಜಿಸಿ ಬಹುದೂರಹೋಗಿ ಸ್ವತಂತ್ರವಾಗಿ ಬಾಳುವೆ ನಡೆಸುತ್ತೀಯೆಂದು ನಾನು ಊಹಿಸಿದ್ದು ವ್ಯರ್ಥವಾಯಿತು ಮಗೂ, ತೇಲಲೀಯದ ಗುಂಡನ್ನೂ ಮುಳಗಲೀಯದ ಬೆಂಡನ್ನೂ ಕಟ್ಟಿಕೊಂಡು ಅತಂತ್ರವಾಗಿ ಬದುಕುವ ನಿನ್ನನ್ನು ಅದಾವ ಮುಖ ಹೊತ್ತು ಪ್ರೀತಿಸುವ, ವಿವಾಹವಾಗುವ ಧೈರ್ಯ ತೋರಿದಳೋ ಆ ಬಾಲೆ. ಆದರೆ ನೀನು ಕರ್ಮಠ ವಿಧಿ ನಿಯಮಗಳನ್ನು ಉಲ್ಲಂಘಿಸುವ ಧೈರ್ಯ ತೋರಲೇ ಇಲ್ಲ. ಪ್ರತ್ಯಕ್ಷವಾಗಿಯೋ ಅಪ್ರತ್ಯಕ್ಷವಾಗಿಯೋ ನೀನು ನನ್ನ ವೃದ್ಧಾಪ್ಯವನ್ನು ನಿಯಂತ್ರಿಸುತ್ತಲೇ ಹೋದಿ, ನಾನು ನಿನ್ನ ಯೌವನವನ್ನು ನಿಯಂತ್ರಿಸುತ್ತಲೇ ಹೋದೆನು. ಈ ಉಯಿಲು ಬರೆಯುವುದರ ಮೂಲಕ ನನ್ನೆಲ್ಲ ಒಳತೋಟಿಯನ್ನು ಅನಾವರಣಗೊಳಿಸುವುದರ ಮೂಲಕ ಉತ್ಸಾಹ ಸಂಪನ್ನನಾದ ಸೋಲನ್ನು ನಾನು ಒಪ್ಪಿಕೊಂಡಿರುವೆ. ಅರ್ಥವಾಗದ ರೀತಿಯಲ್ಲಿ ಯಾರೂ ಅರಿಯದ ಶೈಲಿಯಲ್ಲಿ ಬರೆದು ಕಾಲಕೋಶದಲ್ಲಿ ಬಚ್ಚಿಡುವ ಪ್ರಯತ್ನ ಮಾಡುತ್ತಿರುವೆ. ರಾಗರತಿಗಳ, ತಪ್ಪು ಒಪ್ಪುಗಳ ನಿರ್ಧಾರನಾ ಕಾರ್ಯವನ್ನು ಕಾಲವೇ ನಿರ್ಣಯಿಸಲಿ ಎಂದು ಭಾವಿಸುತ್ತಿರುವೆನು. ಆದ್ದರಿಂದ ನೀನು ನನ್ನ ಬಗ್ಗೆ ಯಾವ ರೀತಿ ಪರಿಭಾವಿಸಲು ಸಾಧ್ಯವಾಗುವುದಿಲ್ಲ. ಇದು ಏಕಪ್ರಕಾರವಾಗಿಯೂ ವಸ್ತುನಿಷ್ಟವಾಗಿಯೂ ಇರುವುದರಿಂದ ನೀನು ಮುಂದೆಯೂ ನಮ್ಮ ವಂಶ ಹೀಗೆ ಇತ್ತೆಂದು‌ಊ, ಅಂಥ ವಂಶೋದ್ಭವ ನೀನೆಂದೂ ಸರ್ವಜನಿಕವಾಗಿ ರುಜುವಾತು ಪಡಿಸಲಾರೆ. ಆ ಅಂಥ ಅರ್ಹತೆಯನ್ನು ನಾನು ನಿನಗೆ ಎಂದೋ ಕೊಡಬೇಕಿತ್ತು, ಕಲಿಸಬೇಕಿತ್ತು. ಹೀಗೆ ಮಾಡಿದ್ದರೆ ಕಾಲಘಟದಲ್ಲಿ ಸಂಭವಿಸಬಹುದಾದ ಅಪಾಯದ ಅನರ್ಥದ ಅರಿವು ನನಗೆ ಸ್ಪಷ್ಟವಾಗಿ ಇತ್ತು. ಇದು ಹೇಗೆಂದರೆ ಮಾರ್ಜಾಲವು ತನ್ನ ಪ್ರಮುಖ ಶಿಷ್ಯನಾದ ವ್ಯಾಘ್ರಕ್ಕೆ ಹೇಗೆ ಬೇಟೆ ಕಲೆಯನ್ನೆಲ್ಲ ಕಲಿಸಿತಾದರೂ ಮರವೇರುವ ಕಲೆಯನ್ನು ಮಾತ್ರ ಕಲಿಸಲಿಲ್ಲವೋ ಹಾಗೆ, ಈ ಉಯಿಲಿನ ಮೂಲಕ ಮರವನ್ನೇರಿ ಕುಳಿತಿರುವ ಕೌಂಡಿನ್ಯಸ ಗೋತ್ರದ ಯಜಿಸ್ ಶಾಖೆಯ ನನ್ನನ್ನು ಮರವೇರಲರಿಯದ ನೀನು ಸ್ಪರ್ಶಿಸಿ ಗೆಲುವು ಸಾಧಿಸಲಾರೆ.
ನನ್ನ ವಮ್ಷೋದ್ಧಾರಕನಾದ ಶಾಮಾಶಾಸ್ತ್ರಿಯೇ………

ಕಾಶೀ ಕ್ಷೇತ್ರದ ಪುರಾಣ ಪ್ರಸಿದ್ಧವಾದ ಮಣಿಕರ್ಣಿಕಾ ಚಕ್ರ ಪುಷ್ಕರಿಣಿಯಲ್ಲಿ ದೇಹತ್ಯಾಗ ಮಾಡಬೇಕೆಂಬ ಬಯಕೆ ಎಂಬುದು ವಂಶಪಾರಂಪರ್ಯವಾಗಿ ಬಂದದ್ದು. ಇದು ನಿನಗೆ ಗೊತ್ತು. ಆದರೆ ಇದು ನಮ್ಮ ಹಿರಿಯರಾದ ಯಾರಿಗೂ ಸಾಧ್ಯವಾಗಲಿಲ್ಲ. ಮರಣ ಪೂರ್ವದಲ್ಲಿ ಇಂಥದೊಂದು ಬಯಕೆ ವ್ಯಕ್ತಪಡಿಸಿದ್ದು ಕೂಡ ಪುಣ್ಯದ ಕಾರ್ಯವೇ ಆಗಿದೆ. ಇಂಥ ಬಯಕೆಗೆ ಕುರುಡು ಕವಡೆಯ ಬೆಲೆ ಇಲ್ಲವೆಂದು ಅಮೇಧ್ಯಭಾಷೆ ಕಲಿತವನೂ, ಬಂಡಾಯಕವಿ ಎಂದು ಕರೆಸಿಕೊಳ್ಳಲು ಬೀಗುತ್ತಿರುವವನೂ ಆದ ನೀನು ಭಾವಿಸಿ ನಗಾಡಬಹುದು. ಆದರೆ ನೀನು ನಿನ್ನ ಮರಣ ಪೂರ್ವದಲ್ಲಿ ಇಂಥದೊಂದು ಬಯಕೆ ವ್ಯಕ್ತಪಡಿಸಿ ನಿನ್ನ ನಂತರದ ತಲೆಮಾರಿನವರ ಮೇಲೆ ಜವಾಬ್ದಾರಿ ಹೊರಿಸಲು ಹಿಂಜರಿಯಲಾರೆ ಎಂಬುದು ನನಗೆ ನಿಚ್ಚಳವಾಗಿ ಗೊತ್ತು. ಮಧ್ಯ ವಯಸ್ಸು ದಾಟಿದ ಪುತ್ರಯೋರ್ವನು ಬಾಯಾರಿ ಕೇವಲ ಮೂರು ನಾಲ್ಕು ಹನಿ ನೀರಿಗಾಗಿ ಮೇಘಗಳನ್ನು ಯಾಚಿಸುವ ಜಾತಕಪಕ್ಷಿಯಂತೆಯೇ ಸರಿ. ದಾರುಣ ರೀತಿಯಲ್ಲಿ ವೃದ್ಧಾಪ್ಯವನ್ನು ಹೆಜ್ಜೆ-ಹೆಜ್ಜೆಗೂ ಅಣು ಅಣುವಿನಲ್ಲೂ ಪ್ರಕಟಿಸುತ್ತ ವಂಶದ ಕುಡಿಯನ್ನು ಇಕ್ಕಟ್ಟಿಗೆ, ಪ್ರಾಣ ಸಂಕಟಕ್ಕೆ ಧರ್ಮ ಸಂಕಟಕ್ಕೆ ಗುರಿಮಾಡುವುದೇ ಆಗಿದೆ. ಇದಕ್ಕೆ ಮೊಳಕೆಯೊಡೆಯದ ಯೌವನದ ಬೀಜವನ್ನು ಎದೆಯ ಚಿಪ್ಪಿನೊಳಗೆ ಇಟ್ಟುಕೊಂಡು ವೃದ್ಧನಾಗಿರುವ ನಾನು ಹೊರತಾಗಿಲ್ಲ, ಹಾಲು ಬತ್ತಿದ ತಾಯಿಯನ್ನು ಕರುವು ಹೇಗೆ ದೂರ ಮಾಡುವುದೋ, ಹಾಗೆ ನೀನು ನನ್ನ ಬಯಕೆಯನ್ನು ದೂರ ಮಾಡುವ ಸ್ವಭಾವದವನಲ್ಲ ಎಂಬ ಭರವಸೆ ನನಗುಂಟು. ಸಸ್ಯವನ್ನು ತಿನ್ನದ ಮೋಡಗಳಂತೆಯೇ ನೀನು, ನಾನು, ಎಲ್ಲರೂ, ಕಲಿಕಾಲದಲ್ಲಿ ವಯಸ್ಸಾದಮೇಲೆ ಯಾವುದರಿಂದ ಸುಖವಾಗಿರಲು ಸಾಧ್ಯವೋ ಅಂಥ ಕೆಲಸ ಕಾರ್ಯಗಳನ್ನು ಪೂರ್ವ ವಯಸ್ಸಿನಲ್ಲಿ ಮಾಡಬೇಕು. ಅಂಥ ಕೆಲಸವಮ್ಮು ಮಾಡದ ಕಾರಣಕ್ಕೆ ನಾನು ದೈನ್ಯತೆಯ ಮೊಟ್ಟೆಯಾಗಿರುವೆನು. ಇದನ್ನು ಅರ್ಥಮಾಡಿಕೊಂಡು ನೀನು ನನ್ನ ಶವ ದಹನ ಕಾರ್ಯವನ್ನು ಮಣಿಕರ್ಣಿಕಾ ಚಕ್ರಪುಷ್ಕರಿಣಿಯಲ್ಲಿ ಮಾಡುವ ದಿಸೆಯಲ್ಲಿ ಒಂದು ಚಿಕ್ಕ ಪ್ರತ್ನವನ್ನಾದರೂ ಮಾಡು, ಅಷ್ಟೇ. ಉಳಿದುದೆಲ್ಲ ದೈವಾನುಕೂಲಕ್ಕೆ ಸಂಬಂಧಿಸಿದ್ದು. ನನ್ನೀ ಬಯಕೆಗೆ ವರದಾಚಾರ್ಯ ಕೇವಲ ನೆಪ ಮಾತ್ರ…. ದಯವಿಟ್ಟು ಅವನನ್ನು ದೂಷಿಸದಿರು. ಮುಂಜಾನೆ ಎದ್ದು ಒಳ್ಳೆಯದನ್ನು ಆಲೋಚಿಸುವ ಶಕ್ತಿಯನ್ನು ಆ ದೇವರು ನಿನಗೆ ಕೊಡಲಿ. ಹಾಗೆಯೇ ಕಾಲಾನುಕೂಲದಲ್ಲಿ ಧರ್ಮ, ಅರ್ಥ, ಕಾಮಗಳನ್ನು ಯಥಾಶಕ್ತಿ ಅನುಭವಿಸುವ ಸಾಮರ್ಥಯ್ವನ್ನು ಸಹ. ಆನಂದವೇ ಸ್ವರ್ಗ, ದುಃಖವೇ ನರಕ ಎಂಬುದನ್ನು ಮರೆಯಬೇಡ. ನಿನ್ನ ತಾಯಿಗಾಗಲೀ ನಿನ್ನ ಹೆಂಡತಿಗಾಗಲೀ ಹೇಳಲು ನನ್ನಲ್ಲಿ ಏನೂ ಉಳಿದಿಲ್ಲ. ನಿನಗಾಗಲೀ, ಅವರಿಗಾಗಲೀ ನಾನು ಯಾವ ಸ್ಥಿರ ಚರಾಸ್ತಿ ಮಾಡಿಲ್ಲವೆಂದು ಬೇಸರಿಸಬೇಡ. ಹಾಗೆ ಮಾಡಿದ್ದರೆ ಆಸ್ತಿ ವಿಲೇವಾರಿಗೆ ಸಂಬಂಧಿಸಿದಂತೆ ಸರಳ ಕನ್ನಡದಲ್ಲಿ ಉಯಿಲು ರಚಿಸಿ ಸರ್ವರಿಗೂ ಪ್ರೀತಿಪಾತ್ರನಾಗುತ್ತಿದ್ದೆನು. ನನ್ನ ದೇಹವನ್ನೇ ಚರಾಸ್ತಿ ಎಂದೂ; ಮನಸ್ಸು ಜ್ಞಾನವನ್ನು ಸ್ಥಿರಾಸ್ತಿ ಎಂದು ಭಾವಿಸಿದ ನಾನು ಕಠಿಣತಮವಾದ ಭಾಷೆಯಲ್ಲಿ ಉಯಿಲು ರಚಿಸಿರುವೆನು. ಇನ್ನು ಇದರಿಂದ ಬೀಳ್ಕೊಳ್ಳುವೆನು. ನಿಮಗೆಲ್ಲರಿಗೂ ಮಂಗಳ ಹಾರೈಸುವೆನು.
ಇದು ನನ್ನ ಸ್ವಬುದ್ಧಿಯಿಂದ ಬರೆದು ಬರೆಯಿಸಿದ ಉಯಿಲು.
ಪಂಡಿತ ಪರಮೇಶ್ವರ ಶಾಸ್ತ್ರಿಗಳ ರುಜು.
ಬಿಕ್ಕಲಂ ಪರಮೇಶ್ವರ ಶಾಸ್ತ್ರಿಗಳ ಸ್ವಬರಹ.

*
*
*
*

ಕೀ. ಶೇ. ಪಂಡಿತ ಪರಮೇಶ್ವರ ಶಾಸ್ತ್ರಿಗಳ ಉಯಿಲನ್ನು ಯಥಾವತ್ತಾಗಿ ನಕಲಿಗಿಳಿಸುವ ಹೊತ್ತಿಗೆ ಒಳಗಿಂದು ಹೊರಗೆ ಬಂದು, ಹೊರಗಿಂದು ಒಳಗೆ ಹೋಗಿ ಜಲಜಲ ಬೆವೆತುಬಿಟ್ಟೆ. “ರೊಟ್ಟಿ ಮಾಡಿಟ್ಟೋವು ತಣ್ಣಗಾದ್ವು, ಬದ್ನೇಕಾಯಿ ಪಲ್ಯದೊಳಗೆ ಹಾಳಾದ ಮಣ್ಣು ಸುರೀತೋ ಏನೋ. ಬೆಳಗ್ನಿಂದ ಹಲ್ಲು ಪಲ್ಲು ಉಜ್ಜದೆ ಗರ ಬಡ್ದೋರಂಗೆ ಒಂದೇ ಸಮ್ನೆ ಕೂತ್ಕೊಂಡು ಬಿಟ್ಟಿದೀರಿ. ಎದ್ದು ಮರ್ಯಾದೆಯಿಂದ ಮುಖ ತೊಳ್ಕೊಂಡು ಊಟಕ್ಕೆ ಬರ್ತೀರೋ ಇಲ್ಲೋ… ಕೈಯಲ್ಲಿ ಪೆನ್ನು ಪೇಪರ್ರೂ ಇದ್ದು ಬಿಟ್ರು ಅಂದ್ರೆ ನಿಮಗೆ ಪ್ರಪಂಚದ ಕಡೆ ಧ್ಯಾಸಾನೆ ಇರೋಲ್ಲ ಬಿಡ್ರಿ… ” ಎಂದು ಅಡುಗೆ ಮನೆಯಿಂದ ಕೈಯ ತೇವವನ್ನು ತಾನು ಉಟ್ಟಿದ್ದ ಗಾರ್ಡೆನ್ ಸಿಲ್ಕ್ ಸೀರೆಗೆ ಒರೆಸಿಕೊಳ್ಳುತ್ತ ಬಂದ ಅನ್ನಪೂರ್ಣ ಬರೆದಿಟ್ಟ ಹಾಳೆಗಳಲ್ಲಿಣುಕಿ ನಿಟ್ತುಸಿರುಬಿಟ್ಟಳು. “ಇನ್ನೂ ನಿಮ್ಮನ್ನು ಈ ಶಾಮಣ್ಣನ ಪ್ರೇತ ಬಿಟ್ಟಂಗಾಗ್ಲಿಲ್ಲ ಬಿಡ್ರಿ… ಒಂದಿತ್ತೋ ಒದಿಲ್ಲನ್ನಂಗೆ ಬರ್ದು ಮುಗಿಸಿ ಬಿಡ್ರಿ… ಬರೆಯೋದು ಬರದ್ರೆ ಚಂದಕಣ್ರಪ್ಪ… ಬಡವ್ರು ಬಗ್ರೂ, ಹೊಲೇರು ಗಿಲೇರು ಅಂತ ಬರೀತಿದ್ದ ನೀವು ಈ ಬ್ರಾಂಬ್ರು ಕಥೀನ್ಯಾಕ್ ಹಚ್ಕೊಂಡ್ರಿ ಅಂತ… ಈ ಪ್ರಪಂಚದಾಗೆ ರವ್ವಷ್ಟು ಮಂದಿ ಇದ್ರು ಒಳ್ಳೆದು ಕೆಟ್ಟದ್ನೆಲ್ಲ ನಿರ್ಧರಿಸೋರು ಅವ್ರೆ… ಮುಂದೆ ಒಂದು ಹೋಗಿ ಇನ್ನೊಂದಾಥೀತು. ಅದೂ ಅಲ್ದೆ ಕಾಲ ಸುಮಾರೈತ್… ಮೂಲೆ ಮೂರುಕಟ್ಟಿನಲ್ಲಿದ್ದು ಬದುಕ್ತಿರೋ ನಮ್ಗೆ ಹಿಂದಿಲ್ಲ ಮುಂದಿಲ್ಲ ಎಂಬೋದ್ನ ಮರೀ ಬ್ಯಾಡಿ… ಏನು ಬರೆದ್ರೂ, ನಿಮಗೆ ಕಿರೀಟ ಬರೋದು ಅಷ್ಟರಲ್ಲೇ ಇದೆ… ಎದ್ದು ಬಚ್ಚಲಿಗೆ ಹೊಂದ್ರಿ ಮೊದ್ಲು” ಎಂದು ಗೊಣಗೊಣಗುಟ್ಟುತ್ತ ಬರೆದಿದ್ದ ಹಾಳೆಗಳನ್ನೆಲ್ಲ ಒಟ್ಟುಮಾಡಿ ಅದರ ಮೇಲೆ ನಾನು ಹಂಪಿ ಕಡೆಯಿಂದ ತಂದಿದ್ದ ಕೃಷ್ಣದೇವರಾಯನ ಕಾಲದ್ದು ಎನ್ನಲಾದ ಇಟ್ಟಿಗೆ ತುಂಡನ್ನು ಅದರ ಮೇಲೆ ಅಳ್ಳಾಡದ ಹಾಗೆ ಪೇರಿಸಿ ಕೈಹಿಡಿದು ಜಗ್ಗಿದಳು. ಕೂತೂ, ಕೂತೂ ರಕ್ತ ಸಂಚಾರದ ವ್ಯತ್ಯದಿಂದಾಗಿ ಕಾಲು ಜವ್ವು ಹಿಡಿದಿದ್ದರಿಂದ ಕೂಡಲೇ ಮೇಲೇಳಾಗಲಿಲ್ಲ ನನಗೆ. “ಬಿಡೇ ಪುಣ್ಯಾತ್ಗಿತ್ತಿ ಬರೋಣಂದ್ರ ಕಾಲು ಮರಗಟ್ಟಿಹೋಗಿವೆ” ಎಂದು ಕಾಲನ್ನು ಹಿಚುಗಿಕೊಳ್ಳುತ್ತ. ತಾಸುಗಟ್ಟಲೇ ಕೂತರೆ ಇನ್ನೇನಾಗ್ತದ್ರೀ?” ಎಂದು ಆಕೆ ನನ್ನ ಪಾದದ ಬೆರಳುಗಳನ್ನು ಹಿಡಿದು ಜಗ್ಗಲು ರಕ್ತ ಸಂಚಾರ ಮತ್ತೆ ಪುನರಾರಂಭಗೊಂಡು ಮೇಲೇಳಲಿಕ್ಕೆ ಸಾಧ್ಯವಾಯಿತು. ಹಾಗೆ ಮೇಲೇಳುತ್ತ “ಒಮ್ಮೆ ಈಗ ಬರೆದಿರೋ ಉಯಿಲ ನೀನೊಮ್ಮೆ ಓದಬೇಕಲ್ಲ ಮಾರಾಯ್ತಿ” ಅಂದೆ. “ಯಾರು ಯಾರ್ಗೋ ಬರೆದಿರೋ ಉಯಿಲ್ನ ನಾನ್ಯಾಕೆ ಓದಿ ಪಾಪ ಕಟ್ಕೊಳ್ಲಿ ಕಣ್ರೀ… ಅದರಲ್ಲಾವ ಅಶ್ಲೀಲ ಬರೆದಾರೋ ಏನೋ” ಎಂದು ನಿರಾಕರಿಸಿದಳು. “ಇದು ಶ್ಲೀಲ ಅಶ್ಲೀಲದ ಪ್ರಶ್ನೆ ಅಲ್ಲ ಅನ್ನಪೂರ್ಣ… ಒಬ್ಬರ ಬದುಕಿನ ಪ್ರಶ್ನೆ ಇದು…” ಅಂದೆ ಉಯಿಲು ಎಂಬ ಶಬ್ದ ಆಕೆಗೆ ಕೂಡಲೆ ಅರ್ಥವಾಗಲಿಲ್ಲ. ಅದನ್ನು ಆಕೆ ಬಹಳ ಹೊತ್ತಿನವರೆಗೆ ಉರುಳು ಎಂದೇ ಭಾವಿಸಿದ್ದಳು. ಉಯಿಲು ಅಂದರೆ ಹೀಗೆ ಹೀಗೆ ಎಂದು ವಿವರಿಸಿದೆ. ಇಷ್ಟೆಲ್ಲ ರಾಮಾಯನಕ್ಕೆ ಕಾರಣವಾದಂಥ ಕೊಟ್ಟೂರಿನ ಸ್ವಯಾರ್ಜಿತವಾದ ತಮ್ಮ ಮನೆಯನ್ನೂ, ಬಡೇಲಡಕು ಶಾನುಭೋಗರಾದ ಕರಣಂ ಶ್ರೀನಿವಾಸಾಚಾರ್ಯರ ಉತ್ತರಾಧಿಕಾರಿಗಳಿಂದ ಕೊಂಡಿದ್ದ ಇಪ್ಪತ್ತೆಕರೆ ಕಟ್ಟೆಯನ್ನೂ. ಮತ್ತಿವುಗಳ ನಿರ್ವಹಣೆಗೆ ಪಡೆದಿರುವ ಸಾಲ ಸೋಲದ ಬಗ್ಗೆ ವಿವರಣೆಯನ್ನೂ ವಿದ್ಯಾವಂತ ಮಗನಾದವನು ತಂದೆಯಾದ ತನ್ನ ರಮ್ಯ ಜೀವನವನ್ನು ಅರ್ಥಮಾಡಿಕೊಳ್ಳಲಿಲ್ಲವೆಂಬ ಆರೋಪವನ್ನೂ, ಪರಮೇಶ್ವರಶಾಸ್ತ್ರಿಗಳಿಂದ ಮತ್ತು ಅವರ ಸೊಸೆಯಿಂದ ಶಾಪಗ್ರಸ್ತನಾದ ಮನೆಯಲ್ಲಿ ವಾಸಮಾಡಿದರೊದಗುವ ಅಪಾಯವನ್ನೂ ವಿವರಿಸುತ್ತ ದಿವಂಗತ ತಂದೆ ಕುಂಬಾರ ಹಾಲಪ್ಪನವರು ಬರೆದಿಟ್ಟಿದ್ದ ಪತ್ರವೇ ಉಯಿಲು ಎಂದು ಬಿಡಿಸಿ ಹೇಳಿದಾಗ ಆಕೆಗೆ ಅರ್ಥವಾಯಿತು. “ಈ ಸಾಯೋರ್‍ಗೆ ಬದುಕಿರೋರ್‍ಮೇಲೆ ಹೊಟ್ಟೆಕಿಚ್ಚಿರತೆಂಬುವುದಕ್ಕೆ ಆ ಕಾಗದ ಪತ್ರಾನೆ ಸಾಕ್ಷಿ ನೋಡ್ರಿ. ಹಂಗ್ಯಾಕೆ ಬರೆದಿಟ್ಟು ಸಾಯ್ತಾವೇನೋ ಹಾಳಾದೋವು. ಅವರ ಆಸ್ತಿಪಾಸ್ತಿಯಿಂದ ಬದುಕಿರೋರು ಸುರುಕೊಳ್ಳೋದು ಅಷ್ಟರಲ್ಲೇ ಇದೆ. ನಮ್ಮ ಕಥೆ ಒಟ್ಟಟ್ಟಿಗಿಲ್ಲ… ಆದ್ರೆ ಈ ಉಯಿಲೇನಾದ್ರು ನಿಮ್ ಫ್ರೆಂಡು ಶಾಮಣ್ಣ ಬದುಕಿದ್ದಾಗ ಓದಿದ್ರೆ ಒಂದು ಹತ್ತು ವರ್ಷ ಮೊದಲೇ ಸಾಯ್ತಿದ್ನೋ ಏನೋ? ಯಾರ್ಯಾರ ಹಣೇಲಿ ಆ ಬ್ರಹ್ಮ ಏನೇನು ಅನುಭೋಸಿ ಸಾಯ್ರಿ ಅಂಥ ಬರೆದಿದಾನೋ ಏನೋ? ಬದುಕಿ ಸತ್ತೋರ ಕರ್ಮ ನಿಮ್ಮ ಸುತ್ತ ಮುತ್ಕೊಂಡು ಬರೀಬಾರದ್ದು ಬರಸತೈತಿ… ಇದರಾ ಉಸಾಬರಿ ನನಗ್ಯಾಕೆ… ಬರೆಯೋರ ಕರ್ಮ ಓದೋರ್ಗೆ ಸುತ್ತುಕೋಬಾರ್ದು ನೋಡಿ… ಇದೇನು ಓದಿ ಆನಂದ ಪಡೆಯೋಕೆ ದೇವಾನು ದೇವತೆಗಳ ಕಥಿ ಅಲ್ಲ… ಪಂಚಮಹಾಪತಿವ್ರತೆಯರ ಕಥೀನು ಅಲ್ಲ… ಓದಿ ಹಾ…ಹಾ ಎಂದು ಉದ್ಗರಿಸೋಕೆ… ಬದ್ನೇಕಾಯಿ ತಿಂದ ಬಾಯ್ಲೇ ವೇದ ಹೇಳೋರ ಕಥಾ, ಕಾದಂಬರಿ ಬರ್ದು ಭೂಮಿಗೆ ಭಾರ ಆಗಲಕ ಹೊಂಟಿರೋ ನಿಮಗೆ ಬುದ್ಧಿ ಶಕ್ತಿ ನನ್ಗಿಲ್ಲ. ನಾನೆಷ್ಟಿದ್ರು ಹೊತ್ತು, ಹೊತ್ತಿಗೆ ಕೂಳು ಹಾಕ್ಲಿಕ್ಕೆ ಶಾಸ್ತ್ರರೀತ್ಯ ನೇಮಕಗೊಂಡಿರೋಳು… ಮದ್ವೆಯಾಗಿ ಬರೋಬ್ಬರಿ ಹದಿನೈದು ವರ್ಷ ತುಂಬಿದ್ವು ಒಂದೇ ಒಂದು ಸಾರಿ ಸಿನಿಮಾಕ್ಕೆ ಹೋಗ್ಲಿಲ್ಲ… ನಾಟಕಕ್ಕೆ ಹೋಗ್ಲಿಲ್ಲ… ನಡೀಲಿ… ನಡೀಲಿ ನಿಮ್ಮ ಬರವಣಿಗೆ, ಉರುವಣಿಗೆ ಅದೆಷ್ಟು ದಿನ ನಡಿತೈತೋ ನಡೀಲಿ… ಮುಂದೊಂದು ದಿನ ಇದೇ ನಿಮ್ಮ ಬರವಣಿಗೆ ನಿಮ್ಮ ವಿರುದ್ಧ ಎದುರು ತಿರುಗಿ ನೆಲಮುಗಿಲಿಗೇಕಾಗಿ ನಿಂತು “ಬುದ್ಧಿಗೇಡಿ… ಇನ್ನು ನಾನಿನ್ನ ಕೈಗೆ ಸಿಗೊದಿಲ್ಲ” ಅಂತ ಹೇಳದೆ ಇದ್ರೆ ಕೇಳ್ರಿ… ಆಗ ನಿಮಗೆ ಹೆಂಡ್ರು ಮಕ್ಳು ನೆನಪಾಗ್ತಾರೆ…” ಎಂಬಿವೇ ಮೊದಲಾದ ಅಣಿಮುತ್ತುಗಳನ್ನುದಿರಿಸುವ ಹೆಂಡತಿ ಕೋಪ ದೈನಂದಿನ ಋತುಮಾನಗಳಲ್ಲೊಂದು. ಆಕೆಗೆ ಬೇಸರ ಬರೋದು ತಡ ಇಲ್ಲ. ಹೋಗೋದು ತಡ ಇಲ್ಲ… ಆಕೆಯಹೊಗಳಿಕೆಯನ್ನು ಗೌರವಿಸುವ ನಾನು ಆಕೆಯನ್ನೂ ಔರವಿಸುತ್ತೇನೆ. ನನ್ನ ಕೃತಿಗಳ ಪ್ರಥಮ ಓದುಗಾರ್ತಿಯಾಗಿರುವ ಆಕೆ ನೀಡುವ ಸಲಹೆಗಳನ್ನು ಜಾರಿಗೆ ತರಲು ಪ್ರಾಮಾಣಿಕವಾಗಿ ಪ್ರಯತ್ನಿಸುವೆನು. ಇದರಲ್ಲಿ ಎರಡು ಮಾತಿಲ್ಲ.

ನಾನು ಅಡಸಲ, ಬಡಸಲ ಹಲ್ಲುಜ್ಜಿ ಮುಖ ತೊಳೆದುಕೊಂಡು ಊಟದಮಣೆ ಹಾಕಿಕೊಂದು ಕೂತೆ. ಪತ್ನಿ ಬಡಿಸಿದಳು. ಒಂದೊಂದು ತುತ್ತಿನ ನಡುವೆ ಶಾಮಣ್ಣ ಆಡುತ್ತಿದ್ದ ತರಾವರಿ ಮಾತುಗಳನ್ನು ನೆನಪಿಗೆ ತಂದುಕೊಂಡೆ. ಅವನು ತನ್ನ ಬಗೆಗಾಗಲೀ, ತಾನು ಬದುಕಿದ್ದ ಬದುಕಿನ ಬಗೆಗಾಗಲೀ ಯಾವ ಆಸಕ್ತಿಯನ್ನೂ ಉಳಿಸಿಕೊಂಡಿರಲಿಲ್ಲ. ಭ್ರಮೆಯ ಮುಖವಾಡ ಕಳಚಿಕೊಂಡಿದ್ದ. ವರ್ತಮಾನವನ್ನು ವೈಯಕ್ತಿಕ ನಿಷ್ಟೆಯಿಮ್ದ ಅನುಭವಿಸಿದ. ತಾನು ಸಂಪಾದಿಸಿದ್ದ ಜ್ಞಾನಸಂಪತ್ತನ್ನು ನಗಣ್ಯಗೊಳಿಸಿಕೊಂಡ. ತನ್ನ ಬಗ್ಗೆ ತಾನು ಯಃಕಶ್ಚಿತ್ ಭಾವನೆ ತಳೆದು ಬದುಕಿರುವಷ್ಟು ಕಾಲ ಬದುಕೇ ಇದ್ದ. ಆತನನ್ನು ಮರಣೋತ್ತರವಾಗಿ ಶ್ರೀಮತಿ ಅನಸೂಯಾ ಆಗಲೀ, ಜಲಜಾಕ್ಷಿಯಾಗಲೀ, ಕಮಲಾಕರನಾಗಲೀ ಹೇಗೆ ಪ್ರತಿಕ್ರಿಯಿಸುವರು ಎಂಬ ಕುತೋಹಲ ಅವನ ಬದುಕಿನ ನಿರೂಪಕನಾದ ನನ್ನಲ್ಲಿ ಬರೀ ಕುತೋಹಲವಾಗಿ ಉಳಿದುಕೊಂಡಿದೆ. ಅವರ ಬಳಿಗೆ ಹೋಗಿ ಕಂದು ಮಾತಾಡುವಷ್ಟು ವ್ಯವಧಾನ ಸದರೀ ಕೃತಿಯ ಪ್ರಕಾಶಕ ಮಿತ್ರರಾದ ಶ್ರೀಯುತ ಸಿ. ಚನ್ನಬಸವಣ್ಣನವರ ಒತ್ತಡದಿಂದಾಗಿ ಇಲ್ಲವಾಗಿದೆ. “ಅದ್ಕೆಲ್ಲ ಅವರೆಲ್ಲರ ಬಳಿಗೆ ಯಾಕ ಹೋಗ್ತೀಯೋ ಮಹರಾಯ… ಅವರೇನು ನಿನ್ಗೆ ಗೊತ್ತಿಲ್ದೋರೇನು? ಶಾಮಣ್ಣನ ಬಗ್ಗೆ ನೀನು ಹೇಗೆ ಯೋಚಿಸಬಲ್ಲೆಯೋ ಅವರೂ ಹಾಗೆ ಯೋಚಿಸುತ್ತಿರಬಹುದು. ಲೇಖಕನಾದೋನ ಕೆಲಸ ಪರಕಾಯ ಪ್ರವೇಶ ಮಾಡಿ ಬರೆಯೋದು, ಬದುಕೋದು ತಾನೆ?” ಎಂದು ಬಿಲ್ಕುಲ್ ನುಡಿದಿದ್ದರು. ಕೃತಿ ಡಾ.ರಾಮಮನೋಹರ ಲೋಹಿಯಾರ ಎಪ್ಪತ್ತೆಂಟನೇ ಹುಟ್ಟು ಹಬ್ಬವಾದ್ ಇದೇ ಸಾಲಿನ ಮಾರ್ಚ್ ಇಪ್ಪತ್ಮೂರರಂದು ಬಿಡುಗಡೆಯಾಗಬೇಕಿರುವುದರಿಂದ ಟೈಟಾಗಿ ಕೂತು ಬರೆದು ಮುಗಿಸುವ ಜರೂರು ಇರುವುದು. ಮೊನ್ನೆ ಗುಲಬರ್ಗಾದ ಸಮೀಪದ ಜಾವಳಿಗೆ ದಿ.ಶಿವಶರಣ ಜಾವಳಿಯವರ ದ್ವಿತೀಯ ಪುಣ್ಯ ತಿಥಿಗೆ ಹೋಗಿದ್ದು, ಸ್ವತಂತ್ರ್ಯ ಬಂದು ಐವತ್ತು ವರ್ಷಗಳಾದರೂ ಜಾವಳಿಯಂಥ ಸುಂದರ ಹಾಗೂ ಪುಟ್ಟಗ್ರಾಮಕ್ಕೆ ಶಾಸಕರಾದ ನೀವು ಒಂದು ಒಳ್ಳೆಯ ರಸ್ತೆ ಮಾಡಿಸಿಲ್ವಲ್ಲ ಎಂದು ಅಧ್ಯಕ್ಷತೆ ವಹಿಸಿದ್ದ ಅಳಂದದ ಶಾಸಕ ಸುಭಾಷ್ ಗುತ್ತೇದಾರ ಅವರನ್ನು ತರಾಟೆ ತೆಗೆದುಕೊಂಡದ್ದು, ಅವರು ಈ ವರ್ಷ ಮಾಡಿಸುವುದಾಗಿ ಒಪ್ಪಿಕೊಂಡದ್ದು ಅಲ್ಲಿಂದ ಕೆಟ್ಟ ರಸ್ತೆಯಲ್ಲಿ ಪ್ರಯಾಣಿಸಿ ಸದರೀಗ್ರಾಮ ಸೇರಿಕೊಂದದ್ದು ಎಲ್ಲ ನೆನಪಾಗುತ್ತದೆ. ಶಾಮಣ್ಣನನ್ನು ಹೋಲುವವರ್, ಅವನಿಗೆ ಸಂಬಂಧಿಸಿದವರು ಎಲ್ಲ ಕಡೆ ಇರುವರೆಂದು ಭಾಸವಾಗುತ್ತದೆ… ಇಂಥ ಬಾಸ, ಅಭಾಸಗಳ ನಡುವೆ ನಾನು ಬರೆಯಲು ಕೂತುಕೊಂದಿರುವ ಸಂದರ್ಭ ಬಲು ವಿಚಿತ್ರವಾಗಿ ಸುತ್ತುವರೆದಿರುವುದು. ನಾನೀ ಕಾದಂಬರಿ ಬರೆಯುತ್ತಿರುವ ಸಂದರ್ಭದ ಹದಿನೆಂಟು ತಿಂಗಳುಗಳಲ್ಲಿ ಈ ದೇಶದ ಮೂವ್ವರು ಪ್ರಧಾನ ಮಂತ್ರಿಗಳ ಆಡಳಿತ ರುಚಿ ನೋಡಿದೆ. ಅದೇ ಇಂದಿರಾಗಾಂಧಿಯವರ ಪ್ರೇತಾತ್ಮ ಹೊಲ್ಲೊಂದಿರುವ ಶತಮಾನದಹ್ಟು ವಯಸ್ಸಾದ ಕಾಂಗ್ರೆಸ್ ಸೀತಾರಂ ಕೇಸರಿಯವರ ಮೂಲಕ ವೃದ್ಧಾಪ್ಯ ವನ್ನು ಗರ್ಜಿಸುತ್ತಿದೆ. ಮತ್ತೆ ಚುನಾವಣೆ ವಕ್ಕರಿಸಿದೆ. ತೆಲಗುದೇಶಂನ, ಕಾಂಗ್ರೆಸ್ಸಿನ ಜೀಪು ಕಾರ್ಗಳು, ಮನೆಯ ಅಂಗಳದಲ್ಲಿ ಅಡ್ಡಾಡುತ್ತಿವೆ. ಅವುಗಳೆಬ್ಬಿಸುವ ಧೂಳಿನ ನಡುವೆ ಕೂತುಕೊಂಡು ಶಾಮಣ್ಣನ ಬದುಕನ್ನು ಊಹಿಸಬೇಕಾಗಿದೆ. ನಿರೂಪಿಸಬೇಕಾಗಿದೆ… ಈ ಶತಮಾನದ ಅತ್ಯಂತ ನಿರುಪದ್ರವ ವ್ಯಕ್ತಿ ಎಂದು ಹೆಸರಾದ ಶಾಮಣ್ಣ ಬದುಕಿದ್ದಲ್ಲಿ ವಾಣಿಜ್ಯೀಕೃತಗೊಂಡಿರುವ ಮತ್ತು ಅಂತಿಮ ಕ್ಷಣಗಳನ್ನು ಅಧಿಕಾರಕ್ಕೆ ಸಂಬಂಧಿಸಿದಂತೆ ಎಣಿಸುತ್ತಿರುವ ಜಲಜಾಕ್ಷಿಯಂತವರನ್ನು ಕಂಡು ನಗದ ಇರುತ್ತಿರಲಿಲ್ಲ. ಅಧಿಕಾರ ಲಾಲಸೆಗಾಗಿ ಅನಾವರಣಗೊಂಡಿರುವ ಪ್ರಶಸ್ತಿ ವಿಜೇತ ಲೇಖಕರ ಬಗ್ಗೆ ಖಾರವಾಗಿ ಪ್ರತಿಕ್ರಿಯಸದೆ ಇರುತ್ತಿರಲಿಲ್ಲ. ಅಂಥ ಅಪರೂಪದ ವ್ಯಕ್ತಿಯ ಬದುಕಿನ ನಿರೂಪಕನ ಪಾತ್ರವಹಿಸುವುದು ನನ್ನ ಬಹು ದೊಡ್ಡ ಕರ್ಮ.ಹಾಳೆಗಳ ನೌವೆ ಜೀವಂತವಿರುವ ಅವನು ತನ್ನ ತಾತನವರಾದ ಶಾಸ್ತ್ರಿಗಳ ಉಯಿಲು ಓದಿ ಸಿಟ್ಟಿಗೇಳಬಹುದು ಅಥವಾ ನೆಮ್ಮದಿಯ ಉಸಿರುಬಿಟ್ಟು ಸ್ಥಿತಪ್ರಜ್ಞನಂತೆ ಉಳಿದುಬಿಡಬಹುದು. ಇದನ್ನೆಲ್ಲ ಬರೆಯಲಿಕ್ಕೆ ನಿನಗೆ ಯಾರು ಅಧಿಕಾರ ಕೊಟ್ಟರೆಮ್ದು ಖಾರವಾಗಿ ಪ್ರಶ್ನಿಸಬಹುದು. ಅದಕ್ಕೆ ನಾನು “ಅಭಿವ್ಯಕ್ತಿ ಸ್ವಾತಂತ್ರ ಕಣಯ್ಯ ಅಭಿವ್ಯಕ್ತಿ ಸ್ವಾತಂತ್ರ” ಎಂದು ಉಡಾಫೆಯಿಮ್ದ ಪ್ರತಿಕ್ರಿಯಿಸಬಹುದು. ಆದರೆ ಇದೆಲ್ಲ ಎಷ್ಟು ಸರಿ.! ಎಂದು ನನ್ನನ್ನು ನಾನು ಕೇಳಿಕೊಳ್ಳುವ ಸಮ್ಧರ್ಭದಲ್ಲಿ ಇದೇ ತಾನೇ ಭಾರತರತ್ನ ಪ್ರಶಸ್ತಿ ಪಡೆದಿರುವ ಸಂಗಿತ ಲೋಕದ ಮಹಾನ್ ತಾಯಿಯಾದ ಮಧ್ರೈ ಷಣ್ಮುಗವಡಿಪು ಸುಬ್ಬುಲಕ್ಷ್ಮಿಯವರು ತಮ್ಮ ಎಪ್ಪತ್ತೆರಡನೇ ವಯಸ್ಸಿನಲ್ಲಿ ಮುತ್ತುಸ್ವಾಮಿ ದೀಕ್ಷಿತರ ಶಂಕರಾಭರಣ ಕೃತಿಯಾದ ಸಾಮಗಾನ ಪ್ರಿಯೇ! ಕಾಮಕೋಟಿನಿಲಯೇ ಎಂಬಕೃತಿಯನ್ನು ಸೊಗಸಾಗಿ ಹಾಡುತ್ತಿರುವುದು ರೇಡಿಯೋ ಮೂಲಕ ಕೇಳಿಬರುತ್ತಿರುವುದ. ಇದೇ ಕೃತಿ ತಾನೇ ಕೀ.ಶೇ. ಪಂಡಿತ ಪರಮೇಶ್ವರ ಶಾಸ್ತ್ರಿಗಳ ಬದುಕಿನ ಉಯಿಲಿನ ಸ್ಥಾಯಿ ಭಾವವಾಗಿರುವುದು. ಇದೇ ಕೃತಿಯೇ ಪೂಜ್ಯಶಾಸ್ತ್ರಿಗಳ ಮತ್ತು ಅವರ ಮೊಮ್ಮಗನೂ; ಸದರೀ ಕೃತಿಯ ಕಥಾ ನಾಯಕನೂ ಆದ ಶಾಮಾಶಾಸ್ತ್ರಿಯ ಬದುಕಿನ ಸಂಚಾರಿ ಭಾವವಾಗಿ ಪ್ರಧಾನ ಪಾತ್ರವಹಿಸುತ್ತಿರುವುದು. ಇದೇ ಕೃತಿಯೇ ತಾನೇ ಪರಮೇಶ್ವರ ಶಾಸ್ತ್ರಿಗಳ ಬದುಕನ್ನು ತ್ರಿಪುರಸುಂದರೀ ದೇವಿಯು ಪ್ರವೇಶಿಸುವಂತೆ ಮಾಡಿದ್ದು; ಅವರು ತಮ್ಮ ವೃದ್ಧಾಪ್ಯದಲ್ಲಿ ಇಂದಿನ ಪ್ರಧಾನ ಮಂತ್ರಿ ಶ್ರೀಮತಿ ಇಂದಿರಾಗಾಂಧಿಯವರನ್ನು ಮೋಹಿಸುವಂತೆ ಮಾದಿದ್ದಲ್ಲದೆ ಅಂಗವನ್ನು ಊನಗೊಳಿಸಿದ್ದು; ಇದೇ ಕೃತಿಯೇ ತಾನೆ ದಿ. ಶಾಮಾಶಾಸ್ತ್ರಿಯ ಬದುಕಿನಲ್ಲಿ ಕೊತ್ತಲಿಗೆಯ ದೇವದಾಸಿಯೂ; ಪ್ರಸಿದ್ಧ ರಂಗಕಲಾವಿದೆಯೂ ಆದ ಅನಸೂಯ ಪ್ರವೇಶಿಸುವಂತೆ ಮಾಡಿದ್ದು. ಈ ಕೃತಿಯನ್ನು ಶ್ರೀಮತಿ ವರಲಕ್ಷ್ಮಿ ಇಷ್ಟಪಟ್ಟಿದ್ದಲ್ಲಿ ಶಾಮಣ್ಣ ವಿವಾಹೇತರ ಸಂಬಂಧ ಇಟ್ಟುಕೊಲ್ಲುತ್ತಿರಲಿಲ್ಲವೆಂದು ಅವನ ಬದುಕಿನ ಪ್ರಮುಖ ನಿರೂಪಕನಾದ ನನಗೆ ಅನ್ನಿಸುತ್ತಿರುವುದು. ಅಂತೆಕಂತೆಗಳ ಸಹಾಯದಿಂದ ಇದೆಲ್ಲವನ್ನು ಊಹಿಸುವುದರಲ್ಲಿ ಯಾವ ಅರ್ಥವಿದೆ? ಮುಂದಿನ ಕಥಾ ಭಾಗವನ್ನು ಸಂಗ್ರಹಿಸಲ್ಪಟ್ಟಿರುವ ಸಂಗತಿಗಳ ಅಧಾರದಿಂದ ಏನಕೇನ ಪ್ರಕಾರೇಣ ನಾನೇ ಬರೆಯುವುದೋ! ಅಥವಾ ಅವನಿಗೆ ಹೇಳುವಂತೆ ದುಂಬಾಲು ಬೀಳುವುದೋ! ಎಂಬ ಸಮಸ್ಯೆ ಎದುರಾಯಿತು.
ಅಷ್ಟರೊಳಗೆ ಶಾಸ್ತ್ರಿಗಳ ಉಯಿಲನ್ನು ಓದಿ ಮುಗಿಸಿದ್ದ ಶ್ರೀಮತಿ ಅನ್ನಪೂರ್ಣ ನಿಟ್ಟುಸಿರು ಬಿಡುತ್ತ ಮುಖ ಸಪ್ಪಗೆ ಮಾಡಿಕೊಂಡು ತಟ್ಟೆ ತೆಗೆಯಲು ಬಂದಳು. ಆಕೆಯ ಪ್ರತಿಕ್ರಿಯೆಗಾಗಿ ಆರ್ತನಾಗಿ ನೋಡಿದೆ. “ಹೇಗಿದೆಯೇ ಉಯಿಲು”? ಎಂದು ಕೇಳಿದೆ ಮಗುವಿನಂತೆ. “ಹಾಂ ಕಮ್ಮಗೈತೆ… ಅಲ್ರೀ ಜಗತ್ತಿನಲ್ಲಿ ಇಂಥೋರೂ ಇರ್‍ತಾರೇನ್ರಿ?… ಅವಾ ವಂಶಾನೆ ಹಂಗಿದ್ದಂಗೈತಿ ಬಿಡ್ರಿ… ಹೋಗಿ ಹೋಗಿ ಕಮ್ಮನ್ನೋರ ಕಥಿ ಬರಿತ್ತಿದ್ದಿರಲ್ಲ… ಇದ್ಕೆ ನಿಮಗೆ ಏನು ಹೇಳಬೇಕೋ ಒಂದೂ ತಿಳಿಯದು.” ಎಂದು ತಟ್ಟೆ ತೆಗೆದು ನೆಲ ಸಾರಿಸಿದಳು.
ಆಕೆಗೆ ಯಾವ ರೀತಿಯ ಸಮಾಧಾನ ಹೇಳಬೇಕೋ ಒಂದೂ ತಿಳಿಯಲಿಲ್ಲ. ಅದೇ ಹೊತ್ತಿಗೆ ಮಂಜು ಎಂಬ ಹೆಸರಿನ (ಪಿಂಜಾರು ಅಲ್ಲಭಕ್ಷಿಯ ಎರಡನೆ ಮಗ ಎಂದುದಿಲ್ಲಿ ವಿಶೇಷ) ಬಾಲಕ ಏದುಸಿರು ಬಿಡುತ್ತ ಓಡಿಬಂದು “ಸಾರೂ ಸಾರೂ… ನಾಟಕ್ದೋರು ನಿಮ್ಮನಿ ಕಡೀ ಬರ್ಲಿಕ್ಕತ್ಯಾರ” ಎಂದು ಹೇಳಿ ಅಂಗಿಯ ತುದಿಯಿಂದ ಮೂಗಿನ ಸಿಂಬಳ ಗೊಣ್ಣಿ ಒರೆಸಿಕೊಂಡ. ಅವನ ಬಲ್ಲಮರಿ ಆಜುಬಾಜಕ್ಕೆ ಅಲುಗಾಡಿ “ಹೌದು ಹೌದು, ಅಂತಲೋ ಹಲ್ಲೋ ಹಲ್ಲೋ ಅಂತಲೋ” ಎಂತಲೋ ಅಂದಿತು. ಅದೇ ಹೊತ್ತಿಗೆ ಎರ್ರಂಗ್ಳಿ ಶಿವಣ್ಣನವರ ನೇತೃತ್ವದಲ್ಲಿ ಕಲಾವಿದರ ತಂಡವು ಜಯನಮಃಪಾರ್ವತಿಪರಮೇಶ್ವರ ಎಂತಲೂ ಗದಗಿನ ಗವಾಯಿ ಪಂಚಾಕ್ಷರಿ ಮಾರಾಜ್ಕೂ ಜೈ ಎಂತಲೂ, ಪುಟ್ಟರಾಜ ಮಾರಾಜ್ಕೂ ಜೈ ಎಂತಲೂ ಅಂಗಳದಲ್ಲಿ ಜಯ ಘೋಷಣೆ ಮಾಡುತ್ತಿರುವುದು ಕೇಳಿಸಿತು.
ಅವರ್ನ್ನು ಸ್ವಾಗತಿಸಲೆಂದು ಎದ್ದ ನನ್ನ ಕೈ ಹಿಡಿದು ಜಗ್ಗುತ್ತ ಹೆಂಡತಿಯ ಕಿವಿಯಲ್ಲಿ ಬಾಯಿ ಇಟ್ಟು ಸೂಳೆ ಪಾರ್ಟ್ ಮಾಡ್ದೋನು ಹಿಂದೆ ಗುಂಪು ಕಟ್ಕೊಂಡು ಪಟ್ಟಿ ಕೇಳಲಿಕ್ಕೆ ಬರ್ತಿದ್ದಾನ್ರೀ ಹುಷಾರಿ” ಎಂದಳು. “ಬರಲಿ ಬಿಡೆ ಅಷ್ಟೊಂದು ಕಲಾವಿದರು ನಮ್ಮ ಮನೆಗೆ ಒಟ್ಟಿಗೆ ಬರ್ತಿರೋದು ಸಂತೊಷದ ಸಂಗತಿ ತಾನೆ” ಅಂದೆ. “ಮುಖಂಡತ್ವ ವಹಿಸೋಕೆ ಸೂಳೆಪಾರ್ತ್ ಮಾಡ್ದೋನ್ ಆಗಬೇಕಿತ್ತೇನ್ರೀ… ಮಲ್ಲಮ್ಮನ ಪಾರ್ತ್ ಮಾಡ್ದೋನು ನೇತೃತ್ವ ವಹಿಸಿದ್ರೆ ನಾನೇನು ತಪ್ಪ್ ತಿಳೀತಿರ್ಲಿಲ್ಲ. ಚಹ ಮಾಡೂಂತ ಮಾತ್ರನಂಗೆ ಹೇಳಬೇಡ ನೋಡ್ರಿ” ಎಂದು ಸಿಡುಕಿದಳು. ಆಕೆಯ ತರ್ಕ ತುಂಬ ವಿಚಿತ್ರವಾಗಿತ್ತು. ಇಷ್ಟು ಎಲ್ಲವೂ ನಿಸೂರಾಗಿದ್ದರೂ ಸೂಳೆ ಮತ್ತು ಗರತಿಯರ ನಡುವೆ ದೊಡ್ಡದೊಂದು ಕಂದರ ಸೃಷ್ಟಿಸುತ್ತಿರುವ ಈಕೆಯೇ ಹೀಗಿರಬೇಕಾದರೆ ಶಾಮಣ್ಣನ ಹೆಂಡತಿ ವರಲಕ್ಷ್ಮಿಯು ಎಷ್ಟೊಂದು ಸಂಕಟ ಅನುಭವಿಸಿರಬಹುದೆಂದು ಊಹಿಸಿದೆನು. “ಸೂಳೆ ಪಾತ್ರ ಮಾಡೋ ನಟ ಮುಂದೊಂದು ದಿನ ಮಹಾ ಪತಿವ್ರತೆಯ ಪಾತ್ರವನ್ನೂ ಮಾಡಬಹುದು ಅನ್ನೂ.

ಇದ್ರಲ್ಲಿ ತಪ್ಪೇನೀಗ? ಅದೂ ಅಲ್ದೆ ಎರಂಗಿಶಿವಣ್ಣೋರು ಕಂಪನಿಯ ಹುಟ್ಟಿದ ಕಾಲದಿಂದಲೂ ಇದ್ದವರು… ಕಂಪನಿಯ ಮೇನೇಜರು ಮಹಾಂತಯ್ಯನವರ್ಗೆ ವಯಸ್ಸಗಿರೋ ಕಾರಣದಿಂದ ಶಿವಣ್ಣನವರನ್ನು ಮುಂದಿಟ್ತು ಕಳಿಸಿರಬೌದು” ಎಂದು ನಾನು ಸಮಾಧಾನ ಹೇಳುತ್ತಿರುವಷ್ಟರಲ್ಲಿ ಸಮಸ್ತ ಕಲಾವಿದರು “ಶಿವಶಿವಾ” ಎಂದು ಗೃಹ ಪ್ರವೇಶಿಸಿದರಲ್ಲದೆ ಪುಟ್ಟರಾಜ ಮಹಾರಾಜ್ಕೂ ಜೈ ಎಂದು ಪಡಸಾಲೆ ಮೇಲೆ ಕೂತುಕೊಂಡರು.
ನಾನು ಹೋಗಿ ನಮಸ್ಕರಿಸಿ ಉಭಯ ಕುಶಲೋಪರಿ ವಿಚಾರಿಸಿದೆನು. ಅವರೆಲ್ಲರ ಮುಖವಾಣಿಯಂತಿದ್ದ ಶಿವಣ್ಣನವರು ತಿಂಗಳುಗಟ್ಟಲ್ರ್ ತಮ್ಮ ಕಂಪನಿಯನ್ನು ಹೊಟ್ಟೆಯಲ್ಲಿ ಹುಟ್ಟಿದ ಮಗನಂತೆ ಕಾಪಾಡಿದ ಸದರಿ ಗ್ರಾಮದ ಸಮಸ್ತರನ್ನು ಕೃತಜ್ಞತಾಪೂರ್ವಕವಾಗಿ ನೆನೆದರು. ಗ್ರಾಮದವರ ನಿಷ್ಕಳಂಕ ಆತಿಥ್ಯದಿಂದಾಗಿ ಕಂಪನಿಯ ಪ್ರತಿಯೋರ್ವ ಕಲಾವಿದನ ದೇಹದ ತೂಕವು ಮೂರರಿಂದ ಆರು ಕಿಲೋಗ್ರಾಂವರೆಗೆ ಹೆಚ್ಚಾಗಿರುವುದೆಂದೂ, ಪ್ರತಿಯೊಬ್ಬರ ದೇಹದ ಎಲುಬುಗಳು ಮಾಂಸದೊಳಗೆ ಅಡಗಿಕೊಂಡು ಆಯಾ ಪಾತ್ರ ನಿರ್ವಹಿಸಲು ಅನುಕೂಲವಾಗಿರುವುದೆಂದೂ ನಗುನಗುತ್ತ ಹೇಳಿದರು.
ಶಿವಣ್ಣ ಅಡುಗೆಮನೆ ಕಡೆ ಬಗ್ಗಿ ನೋಡುತ್ತ “ಅಮ್ಮೋರು ಕಾಣಿಸ್ತಿಲ್ಲ ಮೇಸ್ಟ್ರೇ… ಮನ್ಯಾಗೆ ಅದಾರೋ ಇಲ್ಲೋ? ಅವ್ರ ಕೈ ಅಡುಗೇನ ಮರೆಯಂಗಿಲ್ಲ ಬಿಡ್ರಿ” ಎಂದರು. ಅದಕ್ಕೆ ನಾನಿದ್ದು “ಆಕೆಗೆ ಸೂಳೆ ಪಾರ್ಟ್ ಮಾಡೋ ನಿಮ್ಮ ಮ್ಯಾಲ ಸಿಟ್ಟು ಮಾಡ್ಕೊಂಡಾಳೆ… ಆಕೆ ಮಲ್ಲಮ್ಮನ ಪಾರ್ತ್ ರೇವಣ ಸಿದ್ದಯ್ನೋರ ಕಡೆ” ಎಂದುದಕ್ಕೆ ಎಲ್ಲರೂ ಗೊಳ್ಳನೆ ನಕ್ಕರು.

ನಾನು ಕೂಗಿ ಕರೆಯಲು ಅನ್ನಪೂರ್ಣ ಮುಖ ದಿಮ್ಮನೆ ಮಾಡಿಕೊಂಡು ಬಂದು ಸೌಜನ್ಯಕ್ಕಾಗಿ ಎಲ್ಲರಿಗೂ ನಮಸ್ಕರಿಸಿದಳು.

ನಮಸ್ಕಾರ ಸ್ವೀಕರಿಸಿ ಶಿವಣ್ಣನವರು “ಇದ್ರಲ್ಲಿ ತಪ್ಪೇನಿದೆ ತಾಯಿ?… ಸೂಳೆ ಪಾತ್ರವಿರದಿದ್ದಲ್ಲಿ ಮಲ್ಲಮ್ಮ ಮಹಾಪತಿವ್ರತೆ ಎಂದು ಜಗದ್ವಿಖ್ಯಾತಳಾಗುತ್ತಿದ್ದಳೇ? ವಿಶಯ ಲಂಪಟನೆನಿಸಿದ್ದ ಹೇಮರೆಡ್ಡಿ ಮುಂದೆ ಮಹಾಯೋಗಿ ವೇಮನನಾಗಿ ಸರ್ವಜ್ಞನಂತೆ ನೀತಿ ಪದ್ಯಗಳನ್ನು ರಚಿಸುತ್ತಿದ್ದನೇ…? ಕಪ್ಪು ಬಿಳುಪು, ಕತ್ತಲು ರಾತ್ರಿ ಹೆಂಗಿರ್‍ತವೋ ಹಂಗೆ ಸಮಾಜದೊಳಗೆ ಒಳ್ಳೆಯವರಿದ್ದಂಗೆ ಕೆಟ್ಟವರಿರ್‍ತಾರೆ… ಕೆಟ್ಟವರಿಂದ ಒಳ್ಳೆಯವೈದ್ದಾರಂತ ಸಮಾಜಕ್ಕೆ ಗೊತ್ತಗತೈತಿ. ಇದ್ರಿಂದ ಆ ಸಮಾಜಕ್ಕೆ ಬೆಲೆ ಬರ್‍ತದೆ ಕಣ್ರಮ್ಮಾ… ಇದ್ಕೆಲ್ಲ ಸಿಟ್ತಾದ್ರೆಂಗ ತಾಯಿ? ನಾವು ಕಂಪನೀನ ನಿಮ್ಮೆಜಮಾನ್ರ ಊರಾದ ಕೊಟ್ಟೂರಿಗೆ ಹಾಕ್ತಿದೀವಂತ… ಈಗ ನಿಮ್ಮ ಮಾವನವರಾದ ಹಾಲಪ್ಪಣ್ಣೋರು ಇರಬೇಕಿತ್ತು ತಾಯಿ… ಸ್ವಂತ ಕಲಾವಿದರಾದ ಅವ್ರೀಗೆ ಗವಾಯಿ ಕಂಪನಿ ಅಂದ್ರೆ ಪಂಚಪ್ರಾಣವಿತ್ತು ತಾಯಿ. ಅದ್ರಲ್ಲೂ ಸೂಳೆ ಪಾರ್ತ್ ಮಾಡ್ತಿದ್ದ ನನ್ನ ಒಂದು ಗಳಿಗೆ ಬಿಟ್ಟಿರ್‍ತಿರ್‍ಲಿಲ್ಲಮ್ಮಾ… ಅಂಥೋರ್‍ನ ಆ ದೇವರು ತನ್ನಲ್ಲಿಗೆ ಬೆಗ್ನೆ ಕರ್‍ಕೊಂಡು ಬಿಡ್ತಾನೆ ನೋಡಿ” ಎಂದು ನಿರರ್ಗಳವಾಗಿ ಮಾತಾಡಿದರು.

ಶಿವಣ್ಣ ಹೇಳಿದ್ದರಲ್ಲಿ ನಿಜವಿಲ್ಲದಿರಲಿಲ್ಲ. ನಮ್ಮ ತಂದೆ ಹೆಚ್ಚು ಕಡಿಮೆ ಶಿವಣ್ಣವರಂತೆಯೇ ತೆಳ್ಳಗೆ ಬೆಳ್ಳಗೆ ಎತ್ತರಕ್ಕಿದ್ದ. ಸ್ತ್ರೀ ಪಾತ್ರಕ್ಕೆ ಹೇಳಿ ಮಾಡಿಸಿದಂತಿದ್ದ ಆತ ಯಾವುದೇ ಸ್ತ್ರೀಯ ಹೃನ್ಮನಗಳನ್ನು ತನ್ನ ಕಣ್ಣೋಟ ಮಾತ್ರದಿಂದ ಸೆಳೆಯಬಲ್ಲವನಾಗಿದ್ದ. ಯಾವುದೇ ಪತಿವ್ರತೆ ಆತನ ಕಡೆ ಒಂದು ಕಿರುನಗೆ ಬೀರದೆ ಮುಂದೆ ಹೋಗುತ್ತಿರಲಿಲ್ಲ. ಆದರೆ ಸ್ತ್ರೀವ್ಯಾಮೋಹಿಯಾಗಲೀ, ವಿಷಯ ಲಂಪಟನಾಗಲೀ ಆಗಿರಲಿಲ್ಲವಾದರೂ, ಖಾಯಮ್ಮಾಗಿ ಒಂದಿಬ್ಬರು ಸೂಳೆಯರನ್ನು ಮಾತ್ರ ಅವರವರ ಊರಲ್ಲಿ ಇಟ್ಟುಕೊಂಡು ಅವರವರಿಗೆ ಉಪಪತ್ನಿಯರ ಸ್ಥಾನಮಾನ ಕೊಟ್ಟಿದ್ದ ಪಟ್ಟಮಹಿಷಿ ಕೊಟ್ರಮ್ಮನೌದರ ಸಂಜಾತರಾದ ನಾವು ಅವರಮ್ಮು “ಚಿಕ್ಕಮ್ಮಾ” “ಸಣ್ಣಮ್ಮಾ” ಎಂದು ಸಂಬೋದಿಸುತ್ತಿದ್ದೆವು. ಈ ದೇಶಕ್ಕೆ ಸ್ವಾತಂತ್ರ್ಯ ಬಂದ ವರ್ಷದಲ್ಲಿ ಆತ ಹಗರಿ ಸಾಲಿನ ಕಡೆಯ ತಮ್ಮೂರಲ್ಲಿ ಆಡಿದ್ದಂಥ ‘ವೀರಾಭಿಮನ್ಯು’ ಎಂಬ ನಾಟಕದಲ್ಲಿ ಉತ್ತರೆ ಪಾತ್ರ ಹಾಕಿದ್ದನಂತೆ. ನಾಟಕದ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಸರ್ಕಿಲ್ ಆಲ್ಫ್ರೆಡ್ ಎಂಬಾತ ಉತ್ತರೆಯನ್ನು ಮೋಹಿಸಿದನಂತೆ. ಅಂದು ರಾತ್ರಿ ರೇಪ್ ಮಾಡುವ ಪ್ರಯತ್ನ ನಡೆಸಿದಾಗ ಇದು ಹೆಣ್ಣು ವೇಶದ ಗಂಡು ಎಂದು ವಸ್ತ್ರಾಪಹರಣದ ಮೂಲಕ ಬಯಲಾಯಿತಂತೆ. ಸಲಿಗೆ ಹೆಚ್ಚಿ ಆಲ್ಫ್ರೆಡ್ಡಿನ ಮಗಳು ಹೆಲನ್‌ಗೂ ನಮ್ಮ ತಂದೆಗೂ ಪ್ರಣಯದಾಟ ಶುರುವಾಯಿತಂತೆ. ಇದು ಗೊಟ್ಟಾಗಿ ಆಲ್ಫ್ರೆಡ್ ಕಾಡುತೂಸು ತುಂಬಿದ ಕೋವಿ ಹಿಡಿದುಕೊಂಡು ಅಲ್ಲಿ ಬರುತ್ತಿರುವನೆಮ್ದಾಗ ಇಲ್ಲಿ ನಮ್ಮ ತಾತ ತನ್ನ ಮಗನಾದ ನಮ್ಮಪ್ಪನನ್ನು ಒದ್ದು ಹಿತ್ತಲ ಬಾಗಿಲಿಂದ ಬಳ್ಳಾರಿ ಸೀಮೆಯಿಂದ ದಾವಣಗೆರೆಗೆ ಸೀಮೆ ಕಡೆ ಓಡಿಸಿದನಂತೆ.

ಃಇಗೆ ಸಾಗುತ್ತದೆ ನಮ್ಮಪ್ಪನ ಪ್ರಣಯ ಮತ್ತು ಪರಾಕ್ರಮದ ಯಶೋಗಾಥೆ! ನಮ್ಮ ತಂದೆಗೂ ಈ ಕಾದಂಬರಿಗೂ ಏನು ಸಂಬಂಧ! ಎತ್ತಣ ನೆಲ್ಲಿಕಾಯಿ! ಎತ್ತಣ ಸಮುದ್ರದ ಲವಣಾಂಶ ಬೆಟ್ಟ ಮೇಲಣ ನೆಲ್ಲಿ ಕಾಯಿಗೆ ಹೇಗೆ ಬಂತೆಂದು ನೀವು ಕೇಳಬಹುದು! ಸಾಹಸ ಪ್ರಕಟಿಸುವವರೂ; ರಾಜಾರೋಷವಾಗಿ ಸೂಳೆಯರನ್ನು ಇಟ್ಟುಕೊಳ್ಳುವರೆಂದರೆ ನಮ್ಮಪ್ಪನಿಗೆ ಎಲ್ಲಿಲ್ಲದ ಪ್ರೀತಿ! ನೀನು ಎಷ್ಟು ಮಂದಿ ಸೂಳೆಯರನ್ನು ಇಟ್ಟುಕೊಂ ಎಂಬುದರ ಮೇಲೆ ಸಮಾಜ ನಿನ್ನ ಗೌರವ ಪ್ರತಿಷ್ಟೆಯನ್ನು ನಿರ್ಧರಿಸುತ್ತದೆ ಎಂದು ಹೇಳುತ್ತಿದ್ದ! ಆದ್ದರಿಂದ ಸಹಜವಾಗಿ ಬ್ಯಾಂಕೊಂದರಲ್ಲಿ ಕ್ಯಾಷಿಯರ್ ಆಗಿದ್ದ ಶಾಮಾಶಾಸ್ತ್ರಿ ಕುಂತಳನಾಡಲ್ಲೆ ಅತಿಸುಂದರಿಯೂ, ರಸಿಕಳು ಎಂದು ಹೆಸರಾಗಿದ್ದ ಅನಸೂಯಳನ್ನು ಹೆಂಡತಿಗಿಂತ ಹೆಚ್ಚಾಗಿ ಇಟ್ಟುಕೊಂಡ ಸುದ್ದಿ ತಿಳಿದು ‘ಶಹಬ್ಬಾಸ್’ ಎಂದು ಬೆನ್ನು ತಟ್ಟಿದ. ಮುಂದೆ ಕೆಲವೊಂದು ಗೃಹಕಲಹಗಳು ಸಂಭವಿಸಿದಾಗ ನಮ್ಮಪ್ಪ ಶಾಮಾಶಾಸ್ತ್ರಿಪರ ವಕಾಲತ್ತು ವಹಿಸಿ ಮುತ್ತೈದೆಯರನ್ನು ದಿಗ್ಭ್ರಮೆಗೊಳಿಸಿದ. ಕಲ್ಲು ಗುಂಡು ಎತ್ತುವವರ, ಕುಸ್ತಿ ಆಡುವವರ, ಕಾಲು ಕೆದರಿ ಜಗಳವಾಡುವ ಪ್ರಸಿದ್ಧ ಬಂಟರ ಪಡೆಯ ಅನಭಿಷಿಕ್ತ ಮುಖಂಡನಾಗಿದ್ದ ನಮ್ಮ ‘ಡ್ಯಾಡಿ’ಯನ್ನು ತಡವುವುದು ಅಷ್ಟು ಸುಲಭಕಾರ್ಯವಾಗಿರಲಿಲ್ಲ.

ನಾಟಕ ಶಿರೋಮಣಿ ಎರ್ರಂಗಿ ಶಿವಣ್ಣನವರು ಆತನನ್ನು ಸ್ಮರಣೆ ತಂದುಕೊಂಡೊಡನೆ ಇಷ್ಟೆಲ್ಲ ನೆನಪಾಯಿತು. “ತಾಯಿ… ಹೋಗೋದು ಹೋಗ್ತೀವಿ… ನಿಮ್ಮ ಕೈಯಿಂದ ತಲಾಕ್ಕೊಂದೊಂದು ಚಾ ಮಾಡಿಕೊಟ್ರೀ ಅಂದ್ರ ಜಂಗಮರಾದ ನಾವು ಅಷ್ಟಪುತ್ರಸೌಭಾಗ್ಯವತೀರಸ್ತು ಅಂತ ಆಶೀರ್ವಾದ ಮಾಡಿ ಹೋಗ್ತೀವಿ” ಎಂದರು.
ಅದನ್ನು ಕೇಳಿ ನನಗೆ ನಗು ಬಂದು ಹೇಳಿದೆ: ನಿಮ್ಮ ಆಶೀರ್ವಾದ ಚಲಾವಣೆ ಆಗೋದಿಲ್ಲ”
“ಯಾಕೆ ಮೇಷ್ರೇ/” ಎಂದು ಕೇಳಿದರು ಕುತೋಹಲದಿಂದ.
“ಅದ್ಹೇಗೆ ಸಾಧ್ಯರೀ… ಆಪರೇಷನ್ ಮಾಡಿಸ್ಕೊಂಡೊರ್‍ಗೆ ಆಶೀರ್ವಾದದ ಬಲದಿಂದ ಮಕ್ಕಲ್ಳಾಗೋದುಂಟಾ?” ಎಂದು ನಾನು ಹೇಳಿದೊಡನೆ ಕಲಾವಿದರೆಲ್ಲರು ಗೊಳ್ಳೆಂದು ನಕ್ಕರು.
ನನ್ನ ಹೆಂಡತಿ ಹಸನ್ಮುಖಿಯಾಗಿ ಚಹ ಮಾಡಲೆಂದು ಒಳಗಡೆ ಹೋಗಿ ಸ್ಟೌವ್ ಹತ್ತಿಸಿದಳು. ಅದರ ವಾಸನೆ ಹರಡಿದ್ದ ವಾತಾವರಣದಲ್ಲಿ ನಾನು ಬರೆಯುತ್ತಿರುವ ಕಾದಂಬರಿ ಬಗೆಗೋ, ಅದರಲ್ಲಿ ಬರುವ ಪುರುಷ ಸ್ತ್ರೀಪಾತ್ರಗಳು ಗೃಹಕಲಹಕ್ಕೆ ನಾಂದು ಹಾಡಿರುವುದನ್ನು ಮೆತ್ತಗಿನ ದ್ವನಿಯಲ್ಲಿ ವಿವರಿಸಿದೆನು.

ಅದಕ್ಕೆ ಬಿದ್ದು ಬಿದ್ದು ನಗಲು ಪ್ರಯತ್ನಿಸಿದರಾದರೂ ನಗೆ ನಡುವೆ ಮತ್ತೆ ಗಮ್ಭೀರವದನರಾದರು. “ಹೇಮರೆಡ್ಡಿ ಮಲ್ಲಮ್ಮನಿಗಿಂತ ಅತ್ಯುತ್ತಮ ನಾಟಕಾಗ್ತಲ್ಲಿದು. ಮೇಸ್ಟ್ರೇ… ಅಂಗೈಯಲ್ಲಿ ಬೆಣೆ ಇಟ್ಕೊಂಡು ತುಪ್ಪಕ್ಕಾಗಿ ಪರದಾಡ್ತಿದ್ದೀವಲ್ಲ… ದಯವಿಟ್ಟು ಇದನ್ನೇ ಮೂರು ತಾಸಿನ ನಾಟಕ ಬರ್‍ಕೊಟ್ಟು ಪುಣ್ಯ ಕಟ್ಕೊಳ್ಳ್ರಿ… ಸೂಳೆ ಅನಸೂಯಳ ಪಾತ್ರವನ್ನು ನಾನೇ ಮಾಡ್ತೀನಿ… ಮಲ್ಲಮ್ಮನ ಪಾರ್ಟು ಮಾಡಿ ಮಾಡಿ ಸುಸ್ತಾಗಿರೋ ರೇವಣ್ಣ ಹೆಂಡತಿ ವರಲಕ್ಷ್ಮಿ ಪಾರ್ತ್ ಮಾಡ್ತಾರೆ. ಎಲಿವಾಳು ಸಿದ್ದಣ್ಣೋರು ಬದುಕಿದ್ದಿದ್ರೆ ಅವರ ಕೈಲಿಶಾಮಾಶಾಸ್ತ್ರಿ ಪಾತ್ರ ಮಾಡಿಸಬೌದಿತ್ತು.” ಎಂದು ವಿವರಿಸುತ್ತ ಶಿವಣ್ಣನವರು ಮ್ಲಾನವದನರಾದರು.
ಅದೇ ಹೊಟ್ಟಿಗೆ ಏನೋ ಯೋಚಿಸುತ್ತಿದ್ದ ಹೇಮರೆಡ್ಡಿ ಪಾತ್ರ ಮಾಡುವ ತಿರುಕಯ್ಯನವರು “ಶಾಮಾಶಾಸ್ತ್ರಿ ಪಾತ್ರವನ್ನು ಮೇಷ್ಟ್ರೇ ಮಾಡಿದರೆ ಹೇಗೆ?” ಎಂದು ನಡುವೆ ಬಾಯಿ ಹಾಕಿದರು.
“ಪುಟ್ಟಜ್ಜೊರು ಆಶೀರ್ವಾದ ಮಾಡಿದ್ರೂ ಅಂದ್ರೆ ವೀರಭದ್ರಪ್ಪ ಮೇಷ್ಟ್ರು ಶಾಮಾಶಾಸ್ತ್ರಿ ಆಗಬೌದು, ಶಾಮಾಶಾಸ್ತ್ರಿ ವೀರಭದ್ರಪ್ಪ ಮೇಷ್ಟ್ರು ಆಗಿಬಿಡಬೌದು… ಇದೆಲ್ಲ ದೊಡ್ಡ ವಿಷಯವೇನಲ್ಲ! ನೀವೊಂದೇ ಹ್ಹೂ ಅಂದುಬಿಡಿ. ಕಂದಗಲ್ಲು ಹನುಮಂತರಾಯ್ರು ನಲ್ವಡಿ ಶ್ರೀಕಂಠಶಾಸ್ತ್ರಿಗಳು, ದುತ್ತರಿಗಿ ಇವ್ರೆಲ್ಲ ತಾವು ಬರೆದ ನಾಟಕಗಳಲ್ಲಿ ತಾವೇ ಮುಖ್ಯ ಪಾತ್ರ ವಹಿಸ್ತಿದ್ರು ಮೇಷ್ಟ್ರೇ” ಎಂದು ಹುಚ್ಚ ಭರಮರೆಡ್ಡಿ ಪಾತ್ರ ಮಾಡುವ ಬುದ್ಧಿವಂತ ಮಠ್‌ರವರು ಉತ್ಸಾಹದಿಂದ ವಿವರಿಸಿದರು.
ಅವರಾಡಿದ ಮಾತುಗಳೆಲ್ಲ ಸಾಂಕೇತಿಕವಾಗಿಯೂ; ಅರ್ಥಗರ್ಭಿತವಾಗಿಯೂ; ವಿಚಿತ್ರವಾಗಿಯೂ ಕಂಡು ನಾನು ಒಂದು ಕ್ಷಣ ಮೌನವಹಿಸಿ ಅವರೆಲ್ಲರ ಕಡೆ ಕುರಿಯೊಂದು ತೋಳದ ಕಡೆ ನೋಡುವಂತೆ ನೋಡಿದೆ.
“ಇದೆಲ್ಲ ಆಗೋ ಮಾತಲ್ಲ ಬಿಡೋ ಮಾತಲ್ಲ… ನನಗೇನೋ ಶಾಮಣ್ಣನ ಪಾತ್ರ ವಹಿಸೋಕೆ ಇಷ್ಟ ಇದೆ… ಆದ್ರೆ ಮನೆಯಾಕೆ ಒಪ್ಪಬೇಕಲ್ಲ… ಕಾದಂಬರಿ ಬರೆಯೋತಿರೋದ್ಕೇನೇ ಇಷ್ಟು ರಂಪಾಟ ಮಾಡಿದ್ದಾಳೆ. ಇನ್ನು ನಾನೇನಾದ್ರು ಶಾಮಣ್ಣನ ಪಾತ್ರವಹಿಸಿದನೆಂದರೆ ಇಡೀ ಮನೆಯೇ ರಣರಂಗವಾಗಿಬಿಡ್ತದೆ ಅಷ್ಟೆ” ಎಂದು ನಾನು ಹೇಳುವಷ್ಟರಲ್ಲಿ ಶ್ರೀಮತಿ ಅನ್ನಪೂರ್ಣಮ್ಮನವರುಚಹ ತಂದು ಎಲ್ಲರಿಗೂ ಹಂಚಿದರು.
ನಾವಾಡಿದ ಮಾತುಗಳನ್ನು ಅವರು ಕೇಳಿಸಿಕೊಂಡಿದ್ದರೇನೋ? ಅವರ ಮುಖ ಮತ್ತೆ ಸೂರ್ಯಗೋಳವಾಗಿತ್ತು.
ಚಹ ಕುಡಿಯುತ್ತ ಗುಟುಕು ಗುಟುಕಿಗೊಮ್ಮ್ರ್ ಆಕೆಯ ಮುಖ ನೋಡಿ ಮಾತು ಹೊರಡದೆ ಕಲಾವಿದರೆಲ್ಲರು ತಲೆ ತಗ್ಗಿಸುತ್ತಿದ್ದರು.
ಶಿವಣ್ಣನವರು ಚಹವನ್ನು ಹೊಗಳಿದಾದ ಮೇಲೆ ಕೆಮ್ಮಿ ಗಂಟಲು ಸರಿಪಡಿಸಿಕೊಂಡು ಕೇಲಿಯೇ ಬಿಟ್ಟರು. “ತಾಯೀ ನಾನ್ಹಿಂಗೆ ಮಾತಾಡ್ತಿದೀನಂತ ದಯವಿಟ್ಟು ಬೇಸರ ಮಾಡ್ಕೋಬೇಡಿ. ಏನಿಲ್ಲಾ… ಬರೋ ಹೆಣ್ಣು ಪಾತ್ರಗಳನ್ನು ವಹಿಸೋರೆಲ್ಲ ಗಂಡಸರಾದ ನಾವೇನೇ… ಶಾಮಂಣ ಪಾತ್ರದ್ದೇ ಒಂದು ಸಮಸ್ಯೆ ಆಗಿದೆ… ನೀವು ಮನಸ್ಪೂರ್ತಿ ಒಪ್ಪಿಗೆ ಕೊಟ್ರೆ ನಿಮ್ಮೆಜಮಾನ್ರು ಕೈಲಿ ಆ ಪಾತ್ರ ಮಾಡಿಸ್ಬೇಕೂಂತ ಮಾಡಿದ್ದೀವಿ… ಇದ್ಕೆ ತಾವು!… ಎಮ್ದು ಮಾತು ನಿಲ್ಲಿಸಿ ಉಗುಳು ನುಂಗಿದರು.
ಅದನ್ನು ಕೇಳುತ್ತಲೆ ಅನ್ನಪೂರ್ಣ ಆದಿಶಕ್ತಿಯ ಅಪರಾವತಾರವಾಗಿ ದೃಷ್ಟಿಯ ಮೂಲಕ ಅವರೆಲ್ಲರನ್ನೂ ಆಪೋಶನ ತೆಗೆದುಕೊಳ್ಳತೊಡಗಿದಳು.
“ಏನ್ರೀಽಽ… ನಮ್ಮನ್ನೇನು ನೀವು ಸಂಸಾರಸ್ತರೂಂತ ತಿಳ್ಕೊಂಡೀರೋ… ಇಂಥ ಸುಡುಗಾಡು ನಾಟಕಗಳ್ನ ಆಡೀ, ಆಡೀ ನೀವು ಕೆಟ್ಟಿರೋದಲ್ದೆ ನಂ ಯಜಮಾನರನ್ನೂ ಕೆಡಿಸ್ಲಿಕ್ಕೆ ಬಂದಿದೀರೇನು! ಒಳ್ಳೆ ಮಾತಿನಿಂದ ನೀವು ಬಂದಿರೋಕೆಲಸವನ್ನು ಮುಗಿಸಿಕೊಂಡು ಇಲ್ಲಿಂದ ಹೊರಟುಹೋದರೆ ಸೈ, ಇಲ್ಲಾಂದ್ರೆ ನಾನೇನು ಮಾಡ್ತೀನೋ ನನ್ಗೆ ಗೊತ್ತಿಲ್ಲ!… ಎಂದು ಕಿಡಿಕಾರಿದಳು.
ಅದನ್ನು ಕೇಳಿ ಪರಮೇಶ್ವರನ ಪಾತ್ರ ಮಾಡುವ ಕೆಂಡಗಣ್ಣಿನ ಮಠ್ ರವರು ಹಡಲ್ಲಗಿಬಿಟ್ಟರು. ಹಾಗೇ ಚೇತರಿಸಿಕೊಂಡು “ನಾಟಕ ಬರ್ದೋರು ಆಚಂದ್ರಾರ್ಕವಾಗಿ…” ಎಂದೇನೋ ಹೇಳುವ ಪ್ರಯತ್ನ ಮಾಡುತ್ತಿರಲು…
ನನ್ನ ಶ್ರೀಮತಿಯವರು ಅವರ ಮಾತನ್ನು ಅರ್ಧಕ್ಕೇ ತುಂಡರಿಸಿ..
“ಸಾಕು ನಿಲ್ಲಿಸ್ರಿ ನಿಮ್ ಮಾತ್ನ… ನನ್ನನ್ನೇನು ಏನು ಗೊತ್ತಿಲ್ಲದ ಮೂರ್ಖಳು ಅಂದ್ಕೊಂಡಿದ್ದೀರೋ ಹೇಗೆ? ನಲ್ವಡಿ ಶ್ರೀಕಂಠ ಶಾಸ್ತ್ರಿಗಳು ಕಂದಗಲ್ಲು ಹನುಮಂತರಾಯರು ಇವ್ರೆಲ್ಲ ಕೂಳು ನೀರಿಲ್ದೆ ಒದ್ದಾಡಿ ಸತ್ತದ್ದು ನನ್ಗೇನು ಗೊತ್ತಿಲ್ಲ ಅಂತ ಅಂದ್ಕೊಂಡೀರೇನು?” ಎಂದು ಹೇಳೋದು ಹೇಳಿ ಆದ ಮೇಲೆ ಅಪರಾಧಿಯಂತೆ ಕೂಕಂಡಿದ್ದ ನನ್ನ ಕಡೆ ತಿರುಗಿ… ರ್ರೀ ತಲೆತಗ್ಗಿಸ್ಕೊಂಡು ಏನೂ ಅರಿಯದ ಕಂದಮ್ಮನಂತೆ ಕೂತಿದ್ದೀರಲ್ಲ… ತಲೆ ಎತ್ರಿ ಮೇಲೆ… ನೀವು ಹಂಪಿ ಯೂನಿವರ್ಸಿಟೀಲಿದ್ದಾಗ ಆ ದುತ್ತರಿಗಿ ಎಂಬ ನಾಟಕ್ಕಾರ್ರು ಬಂದಿದ್ರಂತ ಹೇಳ್ತಿದ್ರಿ ಅಲ್ಲ… ಅಷ್ಟೊಂದು ನಾಟಕಗಳ್ನ ಬರೆದಿದ್ರೂ ಎಂಥೆಂಥ ಅವಸ್ಥೆ ಪಡ್ತಿದ್ದಾರೆಂಬುದನ್ನ ವಿವರಿಸಿ ಹೇಳ್ರಿ ಅವರಿಗೆ ಎಂದು ಆಜ್ಞಾಪಿಸಿದಳು.
ಆಕೆ ಗುಡುಗುಡಿಸಿದ ಮಾತಿನಲ್ಲಿ ಸತ್ಯ ಇಲ್ಲದಿರಲಿಲ್ಲ.
ಹತ್ತಾರು ಯಶಸ್ವಿ ನಾಟಕಗಳನ್ನು ಬರೆದಿರುವ ಶ್ರೀಯುತ ಪಿ.ಬಿ. ದುತ್ತಲಗಿ ಕರ್ನಾಟಕದಲ್ಲಿ ಮನೆಮಾತಾಗಿರೋರು. ಅವರ ಕೆಲವು ನಾಟಕಗಳು ಚಲನಚಿತ್ರಗಳಾಗಿಯೂ ವಶಸ್ವಿಯಾಗಿವೆ. ಸಂಪತ್ತಿಗೆ ಸವಾಲ್, ಸೊಸೆ ತಂದ ಸೌಭಾಗ್ಯ, ಹೀಗೆ. ಅಂಥ ಮಹಾನ್ ವ್ಯಕ್ತಿ ಕನ್ನಡ ವಿಶ್ವವಿದ್ಯಾಲಯಕ್ಕೆ ಬಂದು ಕುಲಪತಿಗಳನ್ನು ಕಾಣುವ ವಿಫಲ ಪ್ರಯತ್ನ ಮಾಡಿದರು. ಉತ್ತರ ಕರ್ನಾಟಕದವರೂ, ಜಾನಪದ ವಿದ್ವಾಂಸರೂ, ನಾಟಕಕಾರ ಕವಿ, ಕಾದಂಬರಿಕಾರ ಹೀಗೆ ಪ್ರಸಿದ್ಧರಾದ ಕುಲಪತಿಗಳು ಅವರಿಗೆ ಬೆಟ್ಟಿಯಾಗುವ ಅವಕಾಶವನ್ನೇ ಕೊಡಲಿಲ್ಲ. ಜೇಬಿನಲ್ಲಿದ್ದಬದ್ದ ಹಣ ಖರ್ಚು ಮಾಡಿಕೊಂಡು ದುತ್ತರಿಗಿಯವರು ಒದ್ದಾಡುವುದನ್ನು ಕಣ್ಣಾರೆ ಕಂಡು ಬಹಳ ದಿನಗಳಾಗಿಲ್ಲ.
ಆಕೆಯ ಆಜ್ಞೆಗೆ ತಲೆಬಾಗಿದೆನಾದರೂ ಮಾತಾಡುವ ಧೈರ್ಯ ಬರಲೇ‌ಇಲ್ಲ.
ತಾವು ಬಂದಿರುವ ಗಳಿಗೆಯೇ ಎಡವಟ್ಟಾದುದು ಎಂದು ಭಾವಿಸಿದವರಾದ ಕಲಾವಿದರು ಅಯ್ಯೋ ಪಾಪವೆಂಬಂತೆ ನನ್ನ ಕದೆ ನೋಡಿ ಮೆಲ್ಲನೆ ಒಬ್ಬೊಬ್ಬರಾಗಿ ಎದ್ದು ಹೊರಗೆ ಹೋದರು. ಹೋಗುವ ಮೊದಲು ಶಿವಣ್ಣನವರು ನನ್ನನ್ನು ಹೊರಗೆ ಕರೆದೊಯ್ದು..
ನೋಡಿ ಮೇಷ್ಟ್ರೇ… ಆ ತಾಯಿ ಹೇಳಿದ್ರಲ್ಲಿ ಸತ್ಯಾಂಶ ಇದೆ. ಆ ಸತ್ಯದ ಇನ್ನೊಂದು ಅರ್ಥ ಏನೆಂದರೆ ನಿಮ್ಮಂಥ ಸುಶಿಕ್ಷಿತರು ಗಟ್ಟಿಯಾದ ನಾಟಕ ಬರೆಯಬೇಕು… ಅದರಲ್ಲಿನ ಮುಖ್ಯ ಪಾತ್ರವನ್ನು ನಿಮ್ಮಂಥೋರೇ ಮಾಡಬೇಕೆಂಭೋದು… ಒಂದು ಒಳ್ಳೆಯ ಮಹೂರ್ತ ನೋಡಿ ನೌಕರಿಗೆ ರಾಜೀನಾಮೆ ಕೊಟ್ತು ರಂಗಭೂಮಿಗೆ ಶರಣಾಗಿ ಬಿಡೀ… ಎಲ್ಲವನ್ನು ಸರಸ್ವತಿ ನೋಡಿಕೊಳ್ಳುತ್ತಾಳೆ. ಯೋಚ್ನೆ ಮಾಡಿ ನಿರ್ಧಾರ ತಿಳಿಸಿ.‘ಶಾಮಣ್ಣ ಅರ್ಥಾತ್ ಸೂಳೆ ಹೆಚ್ಚೋ ಗರತಿ ಹೆಚ್ಚೋ’ ಎಂಬ ನಾಟಕಾನ ಕೊಟ್ಟೂರು ಜಾತ್ರೆಯಲ್ಲಿ ಪ್ರಪ್ರಥಮವಾಗಿ ಆಡಿಬಿಡೋಣ. ನಾಳೇನೆ ಹೋಗಿ ಇಂಥ ಸಾಮಾಜಿಕ ನಾಟಕಗಳ್ನ ಬದಲಾದ ಕಾಲ ಸಂಧರ್ಭದಲ್ಲಿ ಆಡಬೇಕಾಗಿರುವ ಅಗತ್ಯ ಕುರಿತು ಪುಟ್ಟಜ್ಜೋರ ಹತ್ರ ಮಾತಾಡ್ತೀನಿ… ಅವರು ಒಫ್ಫಿ ಆಶೀರ್ವಾದ ಮಾಡೇ ಮಾಡ್ತಾರೆ… ಪತ್ರ ಹಾಕ್ತೀನಿ… ಸ್ಕ್ರಿಪ್ಟ್ ಜೊತೆಗೆ ಬಂದು ಬಿಡಿ… ಕಾಯ್ತಿರ್ತೀವಿ” ಎಂದು ಹೇಳಿ ಭುಜ ತಟ್ಟಿ ಏಣು ಘಟಿಸಿಯೇ ಇಲ್ಲವೆಂಬಂತೆ ಹೊರಟು ಹೋದರು.
ಕಾದಂಬರಿಯನ್ನು ನಾಟಕವಾಗಿ ರೂಪಾಂತರಿಸುವುದು, ಆ ನಾಟಕದಲ್ಲಿ ಲೇಖಕನಾದ ನಾನು ಶಾಮಣ್ಣನ ಪಾತ್ರ ವಹಿಸುವುದು… ಈ ಎಲ್ಲ ಕಲ್ಪನೆಗಳೊಂದಿಗೆ ಹೆಜ್ಜೆಹೆಜ್ಜೆಗೆ ಪುಳಕಗೊಳ್ಳುತ್ತ ಪಾತ್ರಧಾರಿಯೋರ್ವ ರಂಗ ಪ್ರವೇಶಿಸುವ ರೀತಿಯಲ್ಲಿಯೇ ನಾನು ಹೊಸ್ತಿಲು ದಾಟಿ ಪಡಸಾಲೆ ಸಮೀಪಿಸಿದೆ.
ಅಡುಗೆ ಮನೆಯಲ್ಲಿ ಪಾತ್ರೆ ಪಡಗಗಳು ನನ್ನ ಹೆಂಡತಿಯ ಕೋಪಕ್ಕೆ ತುತ್ತಾಗಿ ದಡಬಡ ಸದ್ದು ಮಾಡುತ್ತಿರುವುದು ಕೇಳಿಸಿತು. ಅದನ್ನು ನಾನು ಆರಕ್ಕೇರಲಿಲ್ಲ ಮೂರಕ್ಕಿಳಿಯಲಿಲ್ಲ. ನನ್ನ ಹೆಂಡತಿಯ ಕೋಪದ ಪ್ರಮಾಣ ನನಗೆ ಗೊತ್ತು. ಆಕೆಯ ಕೋಪವನ್ನು ಶಮನ ಮಾಡುವ ಶಕ್ತಿ ಈ ತ್ರಿಲೋಕಗಳಲ್ಲಿ ಎಲ್ಲಿಯಾದರೂ ಇದ್ದರೆ… ಅದು ನನ್ನ ಕೇವಲ ಮೌನಕ್ಕೆ ಮಾತ್ರ.
ಅವತ್ತು ಮಧ್ಯಾಹ್ನ ಅನ್ನಪೂರ್ಣೆಶ್ವರಿ ನಾಮಾಂಕಿತಳಾದ ಆಕೆಯು ಕಡು ಮುನಿದು ಅಡುಗೆ ಮಾಡಲೂ ಇಲ್ಲ… ಮುಗುಳು ನಗೆಯಮ್ ಬೀರಲೂ ಇಲ್ಲ… ನಾನೂ ಕೂಡ ಆ ನಗೆಯು ಎಲ್ಲಿದೆ ಎಂದು ಹುಡುಕುವ ಪ್ರಯತ್ನ ಮಾಡಲೂ ಇಲ್ಲ.
ನೀವೇ ಆ ಶಾಮಣ್ಣ ಪಾತ್ರ ವಹಿಸಲಿಕ್ಕೆ ಲಾಯಕ್ಕೂ ಎಂದು ಶಿವಣ್ಣನವರು ಹೇಳಿದ್ದು ನನ್ನ ಹೃದಯ ತುಂಬಿ ಹೊಟ್ಟೆ ಕ
ಡೆ ಧಾವಿಸ ತೊಡಗಿತ್ತು. ಅದು ಅಲ್ಲದೆ ಕಲೆ ಅಭಿನಯ ಮತ್ತು ಧಿಮಾಕು ಎಂಬುದು ನಮ್ಮ ವಂಶದ ತ್ರಿವಳಿ ಆಸ್ತಿ. ನಮ್ಮಂಥೋರು ಉಬ್ಭೋದಾಗಲೀ ಪಂಚೇರಾಗೋದಾಗಲೀ ತಡವಾಗೋದಿಲ್ಲ. ಶಿವಣ್ಣನವರು ಒಂದೇ ಒಂದು ಡೈಲಾಗ್ ಹೊಡೆದು ಉಬ್ಬಿಸಿಬಿಟ್ಟರು. ಉಬ್ಬಿನ ಪಂಚರಮ್ಗಿನ ಬಲೂನಾಗಿ ಅಂತರಂಗದ ಚಿದಾಕಾಶದಲ್ಲಿ ಮೇಲೆ ಮೇಲಕ್ಕೇರಿ ತೇಲಾಡತೊಡಗಿದೆನು. ಹೆಂಡತಿಯ ದುಃಖ ಶಮನ ಮಾಡಬೇಕೆಂಬ ಯೋಚನೆಯೇ ಬರಲಿಲ್ಲ. ಒಳಗಡೆ ಸಂಗೀತಗಾರನಾಗಿ, ನಾಟಕಕಾರನಾಗಿ, ನಟನಾಗಿ, ಕೊಡುಗೈ ದೊರೆಯಾಗಿ, ಪತಿಯಾಗಿ, ಮಗನಾಗಿ, ಅಧಿಕಾರಿಯಾಗಿ, ಕುಡುಕನಾಗಿ, ಜೂಜುಕೋರನಾಗಿ, ವಿಟಪುರುಷನಾಗಿ, ಖೈದಿಯಾಗಿ, ರೋಗಿಯಾಗಿ, ಕಳೇಬರವಾಗಿ, ಪ್ರೇತಾತ್ಮವಾಗಿ ಒಂದೊಂದು ಗಳಿಗೆ ರೂಪ ಪಡೆಯುತ್ತಿದ್ದ ಒಂದೊಂದು ಗಳಿಗೆಗೆ ಒಂದೊಂದು ಪಾತ್ರ ಘಟ್ಟದಿಂದ ಇನ್ನೊಂದು ಒಂದೊಂದು ಪಾತ್ರ ಘಟ್ಟಕ್ಕೆ ಲೀಲಾಜಾಲವಾಗಿ ಜಿಗಿಯುತ್ತಿದ್ದ ದಶಸ್ಕಂದ ಶಾಮಣ್ಣ ತುಂಬಿಕೊಂಡಿದ್ದರಿಂದ ವಾಸ್ತವ ಜಗತ್ತಿನ ಯಾವ ಪ್ರಿಯರಾಗಲೀ, ವರ್ತಮಾನದ ಯಾವುದೇ ವಿದ್ಯಮಾನವಾಗ್ಲೀ ನನ್ನ ಗಮನ ಸೆಳೆಯಲಿಲ್ಲ.
ನನ್ನ ಕಾದಂಬರಿಯ ಶಾಮಣ್ಣನ ಪಾತ್ರವನ್ನು ಶರಸ್ಚಂದ್ರರ ಕಾದಂಬರಿಯ ದೇವದಾಸನ ಪಾತ್ರಕ್ಕೆ ತಳಕು ಹಾಕಿ ನೋಡುವುದು, ದೇವದಾಸು ಚಿತ್ರದ ಮೂಲಕ ನಟ ಸಾಮ್ರಾಟ ಅಕ್ಕಿನೇನಿ ನಾಗೇಶ್ವರರಾವ್ರವರು ಅತ್ಯುತ್ತಮ ನಟರೆಮ್ದು ಪ್ರಸಿದ್ಧರಾದಮ್ತೆನಾನೂ ಸಹ ಶಾಮಂನ ನಾಟಕದ ಮೂಲಕ ಜಗದ್ವಿಖ್ಯಾತ ನಾಟಕಕಾರನೂ, ನಟನೂ ಆಗಬೇಕೆಂದು ಕನಸು ಕಾಣತೊಡಗಿದೆ. ಅವನೇ ನಾನೇನೋ, ನಾನೇ ಅವನೇನೋ, ನಮ್ಮಿಬ್ಬರ ನಡುವೆ (ದೇಹಾತ್ಮ, ಜೀವಾತ್ಮ) ಭಿನ್ನತೆ ಎಂಬುದು ಇಲ್ಲವೇನೋ? ಎನ್ನಿಸತೊಡಗಿತು.
ಅವನ ಪಾತ್ರದ ಒಂದೊಂದು ಆಯಾಮಕ್ಕೂ ಒಂದೊಂದು ಹಂತಕ್ಕೂ ಒಂದೊಂದು ತಿಂಗಳ ಪರ್ಯಂತರ ವಿಶೇಷ ತಾಲೀಮು ನಡೆಸಬೇಕು. ಆ ಪಾತ್ರ ಪೂರ್ಣ ಪ್ರಮಾಣದಲ್ಲಿ ಶಕ್ತಿಶಾಲಿಯಾಗಿ ಪ್ರಕಟವಾಗಬೇಕಾದರೆ ಕನಿಷ್ಠ ಒಂದು ವರ್ಷವಾದರೂ ತಲ್ ಮು ನಡೆಯಬೇಕು. ಆದರೆ ಯಾವ ತಾಲೀಮುಗಳ ಸಹಾಯವಿಲ್ಲದೆ ಆ ಸಂಸಾರ ನೌಕೆಯೆಂಬ ದುರಮ್ತ ರಂಗ ಪ್ರಯೋಗ, ವಿಭಿನ್ನ ಪಾತ್ರಗಳನ್ನು ಸಮರ್ಥವಾಗಿ ನಿರ್ವಹಿಸಿದ ಶಾಮಣ್ಣ ನಿಜಕ್ಕೂ ಅಭಿಜಾತ ಕಲಾವಿದನೇ ಸರಿ. ಕರ್ಮಠಸಂಸಾರದ ಮೆಲ್ಪದರುಗಳನ್ನು ಸಮರ್ಥರೀತಿಯಲ್ಲಿ ಕಳಚುತ್ತ ಹೋಗಿ ಎಲ್ಲ ವೃತ್ತಿರಂಗಭೂಮಿ ಕಲಾವಿದರಂತೆ ತಾನು ದುರ್ಂತಕ್ಕೀಡಾಗಿ ಈಗ ಸಧ್ಯಕ್ಕೆ ಪ್ರೇತಾತ್ಮವೆಂಬ ಪಾತ್ರ ನಿರ್ವಹಿಸುತ್ತಿರುವನು. ತಮ್ಮ ವಂಶದ ಹಿರಿಯರಂತೆ ತನ್ನ ಕಳೇಬರದ ಅಸ್ಠಿಮಜ್ಜನ ಕಾರ್ಯವನ್ನು ಪವಿತ್ರ ಗಂಗಾನದಿಯಲ್ಲಿ ವಿಸರ್ಜಿಸಬೇಕೆಂದು ಕರಾರು ವಿಧಿಸಿರುವನು.
ಮಣಿಕರ್ಣಿಕಾ ಚಕ್ರ ಪುಷ್ಕರಿಣಿ ಎಮ್ಬುದು ಅದಾವ ಮೋಡಿ ಮಾಡಿರುವುದೋ ಏನೋ ಅದೊಂದು ಪ್ರೇತಾತ್ಮಗಳ ಸಂತೆ, ವಿಷಾದ ಮುಖಗಳ ಜಾತ್ರೆ – ಇಂದ್ರಿಯ ವಿಕಾರಗಳ ನಿಗೂಢ ಸಮೂಹ, ಮರುಳುಗಳಿಗೆ ಒಡೆಯನಾದವನೂ; ತ್ರಿಲೋಕ ಮೋಹಿನಿಯ ಪತಿ ಪರಮೇಶ್ವರನೂ ಆದ ಪರಶಿವನು ದೇವತೆಗಳೊಮ್ದಿಗೆ ಹವಿರ್ಭಾಗವನ್ನು ಹೊಂದಲು ಯೋಗ್ಯನಲ್ಲವೆಂದು ಸ್ವಾಯಂಭುವ ಮನ್ವಂತರದಲ್ಲಿ ಬ್ರಹ್ಮನ ಬಲಗೈ ಹೆಬ್ಬೆಟ್ಟಿನಿಂದ ಹುಟ್ಟಿದವನಾದ ದಕ್ಷನು ಹೀಯಾಳಿಸಿ ದೈವಕೋಪಕ್ಕೆ ತುತ್ತಾದ ಜಾಗವದು.ಅಧಿಕೃತ ಆಮಂತ್ರಣವಿರದಿದ್ದರೂ ತನ್ನ ತಂದೆಯಾದ ದಕ್ಷನು ಮಾಡುತ್ತಿರುವ ನಿರೀಶ್ವರ ಯಾಗಕ್ಕೆ ಹೋಗಿ ಪತಿನಿಂದೆ, ಅಪಮಾನ, ತಿರಸ್ಕಾರಗಳಿಗೆ ಗುರಿಯಾಗಿ ಯೋಗಾಗ್ನಿಯಲ್ಲಿ ದಾಕ್ಷಾಯಿಣಿಯು ದೇಹತ್ಯಾಗ ಮಾಡಿದ ಜಾಗವದು. ರುದ್ರಾಂಶ ಸಂಭೂತನಾದ ವೀರಭದ್ರನು ನಿರೀಶ್ವರವಾದಿಗಳ ರುಂಡಗಳನ್ನು ಚಂಡಾಡಿ ಯಜ್ಞಕುಂಡಕ್ಕರ್ಪಿಸಿದ ಜಾಗವದು.
ಮನಸ್ಸಮ್ಕಲ್ಪ ಮಾತ್ರದಿಂದಲೇ ಚತುರ್ಮುಖನಾದ ಬ್ರಹ್ಮನು ದೇವತೆಗಳನ್ನೂ, ಭೂತಗಳನ್ನೂ, ಋಷಿಗಳನ್ನೂ, ಗಂಧರ್ವರನ್ನೂ, ಅಸುರರನ್ನೂ; ಸರ್ಪಗಳನ್ನೂ ನಿರ್ಮಿಸಿದ ಜಾಗವದು. ದಕ್ಷನು ಹರ್ಯಶ್ವರೆಂಬ ಐದುಸಾವಿರಮಂದಿ ಪುತ್ರರನ್ನು ಸೃಷ್ಟಿಸಿ, ಮೈಥುನ ಧರ್ಮವನ್ನು ಭೋದಿಸಲು ಅವರು ಮಿಥುನ ಸಮಾಗಮ ಕಾರ್ಯದಲ್ಲಿ ಪಾಲ್ಗೊಂಡಿರಲು, ಆಗ ನಾರದನು ಅವರಿರುವಲ್ಲಿ ಪ್ರತ್ಯಕ್ಷವಾಗಿ “ಎಲಾ ಹುಚ್ಚರಿರಾ! ಇನ್ನೇನು ಸೃಷ್ಟಿಯೇ ಪರಮ ಪುರುಷಾರ್ಥವೆಂದು ಭಾವಿಸಿರುವಿರಾ! ಈ ಭೂಮಂಡಲವು ಎಲ್ಲಿಂದ ಹೇಗೆ ಬಂತು? ಇದರ ಒಳಗಡೆ ಇರುವುದಾದರೂ ಏನು? ಮೇಲೆ ಇರುವುದಾದರೂ ಏನು?… ಜನ್ಮರಾಹಿತ್ಯವನ್ನು ಪಡೆಯುವುದಕ್ಕೆ ಪ್ರಯತ್ನ ಮಾಡಿ”ರೆಂದು ಬೋಧಿಸಲು, ಅವರೆಲ್ಲರು ದಿಕ್ಕಾಪಾಲಾಗಿ ಹೋಗಲು, ಇದನ್ನು ಕಂಡು ಖಿನ್ನನಾದ ದಕ್ಷನು ಮರಳಿ ಶಬಲಾಶ್ವರೆಂಬ ಸಾವಿರಮಂದಿ ಪುತ್ರರನ್ನು ಸೃಷ್ಟಿಸಿ ಮತ್ತದೇ ಮೈಥುನ ಧರ್ಮವನ್ನು ಬೋಧಿಸಲು, ಅವರೂ ಸಹ ಮಿಥ್ನ ಸಮಾಗಮದಲ್ಲಿ ಮಗ್ನರಾಗಿರಲು, ಮತ್ತೆ ನಾರದನು ಅವರಿರುವಲ್ಲಿಗೆ ಬಂದು ಜನ್ಮರಾಹಿತ್ಯ ಭೋದಿಸಲು ಅದರಿಂದ ಅವರೂ ತಮ್ಮ ಅಣ್ಣಂದಿರಂತೆ ದಿಕ್ಕಾಪಾಲಾಗಲು, ಇದರಿಂದ ಖಿನನಾದ ದಕ್ಷನು ಸೃಷ್ಟಿಕಾರ್ಯ ವಿರೋಧಿಯಾದ ನಾರದನಿಗೆ ಶಾಪ ಕೊಟ್ಟು ಮರಳಿ ಅರವತ್ತು ಮಂದಿ ಪುತ್ರಿಯರನ್ನು ಪಡೆದ ಜಾಗವದು.!
ಸಂಕಲ್ಪಾದ್ದರ್ಶನಾತ್ ಸ್ಪರ್ಶಾತ್ ಪೂರ್ವೇಷಾಂ ಸೃಷ್ಟಿರುಚ್ಯತೆ|
ದಕ್ಷಾತ್ಪ್ರಾಚೇತ ಸಾದೂರ್ಧ್ವಂ ಸೃಷ್ಟಿರೇನ ಸಂಭವಾ… ಎಂಬ ಶ್ಲೋಕವು ನಲಿನಲಿದಾಡುತ್ತಿರುವ ಜಾಗವದು!
ಸೃಷ್ಟಿ, ಪ್ರತಿಸೃಷ್ಟಿ, ಈಶ್ವರ, ನಷ್ವರ, ಜನನ, ಮರಣ, ಜೀವಾತ್ಮ ಪ್ರೇತಾತ್ಮ, ಸುಖ-ದುಃಖ, ಅನುರಾಗ ವಿಶಾದಗಳ ನಿಘಂಟಾಗಿರುವ ಈ ಸ್ಥಳವಲ್ಲದೆ ಅರಿಷ್ಡವರ್ಗಗಳಿಗೆ ಅತೀತನೂ, ಒಡೆಯನೂ; ಕಾಮಾರಿಯೂ ಆದ ಪರಮೇಶ್ವರನು ಯಜ್ಞಕುಂಡದಲ್ಲಿ ಬೆಂದ, ಅರೆಬೆಂದ ಕಳೇಬರವನ್ನು ತೆಕ್ಕೆಯಲ್ಲಿ ಅವಚಿಕೊಂಡು ಪ್ರೇಮಾಲಾಪ ಮಾಡುತ್ತ ಹೆಜ್ಜೆ-ಹೆಜ್ಜೆಗೂ ವಿರದುರಿಯನ್ನು ಚೆಲ್ಲಾಡುತ್ತ ಅಶ್ರುಧಾರೆಯನ್ನು ಸಿಂಪಡಿಸುತ್ತ ದಿಕ್ಕುಗೆಟ್ಟವನಾಗಿ ದಿಕ್ಕುಗಳಿಗಾಗಿ ತಡಕಾಡುತ್ತ ಹುಚ್ಚನಂತೆ ಅಲೆದಾಡಿದಂಥ ಸೃಷ್ಟಿಸ್ಥಿತಿಲಯಗಳಿಗೆ ಕಾರಕವೂ ಪ್ರೇರಕವೂ ಆದಂಥ ಜಾಗವೇ ಅದು!
ಬೆಂದ ಅರೆಬೆಂದ ಹೆಣಗಳಿಂದಲೂ, ಒಂದೊಂದು ವಿಧದ ಅವಯವಗಳಿಂದಲೂ, ಲಕ್ಷೋಪಲಖ್ಷ ಅಸ್ಥಿಗಲಿಂದಲೂ; ಕೋಟಿ ಕೋಟಿ ಮಣದಷ್ಟು ತೂಕದ ಚಿತಾಭಸ್ಮದಿಮ್ದಲೂ, ಮೀನು, ಮೊಸಳೆ, ಆಮೆ, ಕಲ್ಲಾಮೆಗಳಂಥ ಜಲಚರಗಳಿಂದಲೂ, ಹಿಮಾಚಲ, ಕಾಷ್ಮೀರ, ಬಿಹಾರ, ಒರಿಸ್ಸಾ, ಬಂಗಾಲಗಳಿಂದ ಬಂದಂಥ ನಿರಾಶ್ರಿತರು ನಡೆಸುತ್ತಿರುವ ದೋಣಿಗಳಿಂದಲೂ, ಲಕ್ಷಂತರ ಮೋಕ್ಷಾಪೇಕ್ಷಿಗಳ ಧ್ಯಾನಸ್ಥ ರೌರವ ಕೂಗುಗಳಿಂದಲೂ, ತೇಲಾಡುವ ಮೂಟೆ ಮೂಟೆ ಕಫಗಳಿಂದಲೂ, ವ್ಯಾಸ, ಮಣಿಕರ್ಣಿಕಾ, ದಶಾಶ್ವಮೇಧ, ಹನುಮಂತ, ಹರಿಶ್ಚಂದ್ರವೇ ಮೊದಲಾದ ಮುನ್ನೂರ ಅರವತ್ತೈದು ಸುತ್ತುವರಿದ ಘಾಟ್ಗಲಿಂದಲೂ; ವಿಘ್ನೇಶ್ವರ, ಕಾಲಭೈರವ, ಬಿಂದುಮಾಧವ, ಅನ್ನಪೂರ್ಣಾ, ಸರ್ವಮಂಗಳ, ವಿಶಾಲಕ್ಷಿ, ವಿಶ್ವನಾಥರೇ ಮೊದಲಾದ ದೇವಾನುದೇವತೆಗಳು ನೆಲೆಗೊಂಡಿರುವ ದೇಗುಲಗಲಿಂದ ತುಂಬಿದ ತಟಗಳಿಂದಲೂ, ಗಿಜಿಗಿಜಿಗುಡುಗುತ್ತಿರುವ ಗಂಗಾನದಿಯು ಈ ನಮ್ಮ ಶಾಮನನ್ನು ಅದಾವ ಮೋಡಿ ಮಾಡಿರುವುದೋ?
ಮೋಕ್ಷದಾಯಕಗಳೆಂದು ಪುರಾಣಪ್ರಸಿದ್ಧಿ ಪ‌ಎದ ಸಪ್ತಪಟ್ಟಣಗಳಲ್ಲಿ ಒಂದಾದ, ಸದರೀ ಕ್ಷೇತ್ರದಲ್ಲಿ ಸತ್ತವರೆಲ್ಲರೂ ಮುಕ್ತಿಯನ್ನು ಹೊಂದುವರೆಂಬ ಪ್ರತೀತೆಗೆ ಆಗರವಾದ ಕಾಶೀಕ್ಷೇತ್ರದ ಬಗ್ಗೆ ತಿಳಿದುಕೊಳ್ಳಲು ಶಾಮನಿಗೆ ತನ್ನ ಗಿಜಿಗಿಜಿ ಬದುಕಿನ ನಡುವೆ ಯಾವಾಗ ಸಾಧ್ಯವಾಯಿತು? ಎಂಬುದೇ ಬಗೆಹರಿಯಲಾರದ ಪ್ರಶ್ನೆಯಾಗಿರುವುದು. ಮಣಿಕರ್ಣಿಕಾ ಚಕ್ರ ಪುಷ್ಕರಿಣಿಯನ್ನೂ; ಗಂಗಾನದಿಯನ್ನೂ; ಕಾಶೀಕ್ಷೇತ್ರವನ್ನೂ ದೇಹ ಮತ್ತು ಮನಸ್ಸಿನಲ್ಲಿ ಸೃಷ್ಟಿಸಿಕೊಳ್ಳುತ್ತ ಹೋಗಿ (ಅಥವಾ ಅವೇ ಅವನ ದೇಹ ಮತ್ತು ಮನಸ್ಸಿನಲ್ಲಿ ಆಶ್ರಯ ಪ
ಡೆದವೇನೋ?) ಕೊನೆಗೆ ತಾನೇ ಸಂಸ್ಕಾರ ಯೋಗ್ಯವಾದ ರುದ್ರಭೂಮಿಯಾಗಿ ಮಾರ್ಪಟ್ಟಂತಿದ್ದ ಅವನ್ಯಾಕೆ ತನ್ನ ಕಳೇಬರದ ಅಸ್ಥಿಮಜ್ಜನವನ್ನು ಗಂಗಾನದಿಯಲ್ಲಿ ಮಾಡಬೇಕೆಂದು ಬಯಸಿದ ಎಂಬುದೇ ಅರ್ಥವಾಗದ ಸಂಗತಿ.
ಕಾಶೀ ಪಟ್ಟ್ಸಣಕ್ಕಿಂತ ಮುಖ್ಯವಾಗಿ ಕಾಶೀರಾಜನನ್ನೇ ತುಂಬ ಹಚ್ಚಿಕೊಂಡಿದ್ದನೆಂದು ಕೊತ್ತಲಿಗಿಯ ಅನಸೂಯ ಹೇಳುತ್ತಿದ್ದುದು ನೆನಪಾಗುವುದು.

ಪ್ರಥಮ ಗಣ ಪರಿವಾರದಲ್ಲಿ ಒಬ್ಬನಾದ ಶಿವನು ತನ್ನ ಹೆಂಡತಿಯಾದ ಪಾರ್ವತಿಯೊಡನೆ ಅತ್ತೆಯಾದ ಮೇನಾದೇವಿಯ ಮನೆಯಲ್ಲಿ ತಿಂಗಳುಗಟ್ಟಲೆ ಠಿಕಾಣಿ ಹೂಡಿದ್ದ. ಎಂಥ ಅಳಿಯನಾದರೂ ತಿಂಗಳುಗಟ್ಟಲೆ ಹೆಂಡತಿಯೊಡನೆ ಇದ್ದರೆ ಅತ್ತೆ ಮಾವನಿಗಾದರೂ ಹೇಗೆ ಸೇರಿಯಾರು? ಅತ್ತೆ ತನ್ನ ಅಳಿಯನನ್ನು ಹುಟ್ಟು ದರಿದ್ರನೆಂದೂ; ಒಂದಾದರೂ ಮನೆಗೆ ಗತಿ ಇಲ್ಲದವನೆಂದೂ ಮಾತು ಮಾತಿಗೆ ನಿಂದಿಸತೊಡಗಿದ್ದು ಕೇಳಿ ಮಹಾಪತಿವ್ರತೆಯಾದ ಪಾರ್ವತಿಯು ಗಂಡನನ್ನು ತರುಬಿ ಬೇರೊಂದು ಮನೆ ಮಾಡಬೇಕೆಂದು ಕಾಟ ಕೊಟ್ಟಳು. ಈ ಪರಿಣಾಮವಾಗಿ ಶಿವ ತನ್ನ ಪರಿವಾರದ ಕುಂಭನಿಗೆ ಕಾಶೀರಾಜನಾದ ದಿವೋದಾಸನನ್ನು ಉಪಾಯಮಾಡಿ ಓಡಿಸಬೇಕೆಂದು ಆಜ್ಞಾಪಿಸಿದ. ಆಗ ಕುಂಭ ಕಾಶೀ ಪಟ್ಟಣಕ್ಕೆ ಬಂದು ನಿಕುಂಭನೆಂಬ ಬ್ರಾಹ್ಮಣನ ಕನಸಿನಲ್ಲಿ ಕಾಣಿಸಿಕೊಂಡು ಅತಂತ್ರ ಸ್ತಿಥಿಯಲ್ಲಿ ಬದುಕುತ್ತಿರುವ ಮತ್ತು ಇರುವೆ ಎಂಬತ್ನಾಲ್ಕು ಕೋಟಿ ಜೀವರಾಶಿಗಳಿಗೆ ಸಂರಕ್ಷಕನೂ, ಒಡೆಯನೂ ಆದ ವಿಶ್ವನಾಥನಿಗೊಂದು ಗುಡಿ ಕಟ್ಟಿಸಿಪೂಜಿಸು ಎಂದು ಹೇಳಲಾಗಿ ಅವನು ಹಾಗೆಯೇ ಮಾಡಲಾರಂಭಿಸಿದ. ಅನೇಕ ಮಂದಿ ಭಕ್ತರ ಇಷ್ಟಾರ್ಥ ಈಡೇರಿಸುತ್ತಿದ್ದ ವಿಶ್ವನಾಥ ದಿವೋದಾಸನ ಒಂದೇ ಒಂದು ಕೋರಿಕೆಯನ್ನು ಈಡೇರಿಸಲಿಲ್ಲ. ಆದ್ದರಿಂದ ಅವನು ದೇವಳವನ್ನು ಕೆಡವಿಸಿದ. ಅದರಿಂದ ಸಿಟ್ಟಿಗೆದ್ದ ವಿಶ್ವನಾಥ ಶಾಪ ಕೊಟ್ಟು ಕಾಶೀ ಪಟ್ಟಣವನ್ನು ಹಾಳು ಮಾಡಿದ. ಹಾಳು ಪಟ್ಟಣದಲ್ಲಿರಲಾಗದೆ ದಿವೋದಾಸ ಸಕುಟುಂಬ ಪರಿವಾರ ಸಮೇತನಾಗಿ ಊರು ಬಿಟ್ಟ. ನಂತರ ಶಿವನು ಪರಿವಾರದೊಂದಿಗೆ ನೆಲೆಗೊಂಡ ನಂತರವೇ ಕಾಶೀಕ್ಷೇತ್ರ ಅವಿಮುಕ್ತ ಕ್ಷೇತ್ರವಾಯಿತು.
ಶಾಮಾಶಾಸ್ತ್ರಿ ಹೇ‌ಇದ್ದೆಂದು ಅನಸೂಯ ಹೇಲಿದ ಈ ಕಥೆಯಲ್ಲಿ ಸುಳ್ಳೂ ಇರಲಿಕ್ಕಿಲ್ಲ ನಿಜವೂ ಇರಲಿಕ್ಕಿಲ್ಲ… ಇಡೀ ಕಶೀಪಟ್ಟಣವೇ ಪಾವಿತ್ರ್ಯ; ಅಪಾವಿತ್ರ್ಯಗಳ ಸಂಕೇತವಾಗಿ ಶಾಮನ ಬದುಕಿನಲ್ಲಿ ನಿಂತುಬಿಟ್ತಿತೇನೋ! ಆತ ಹಿಂದೆಂದೋ ಮಣಿಕರ್ಣಿಕಾ
ಋತುಪರ್ಣಿಕಾ ಎಂದೊಂದು ಸುಂದರ ಭಾವಗೀತಾತ್ಮಕ ಪದ್ಯ ಬರೆದಂತೆ ನೆನಪು. ಆ ಪದ್ಯದಲ್ಲಿ ಹೆಮ್ಡತಿ ಪಾರ್ವತಿಯ ಕರ್ಣದ ಮಣಿಖಚಿತ ಓಲೆಯನ್ನು ಗಂಗಾ ನದಿಯ ದಡದುದ್ದಕ್ಕೂ ಹುಡುಕಾಡುವ ಪರಮ ಶಿವನ ಹೃದಯದ ತುಮುಲವನ್ನು ಭಾವಪೂರ್ಣವಾಗಿ ಚಿತ್ರಿಸಿದಂತೆ ನೆನಪು. ಅಭಿನಂದನಾಗ್ರಂಥದಂಥೀ ಕಾದಂಬರೀ ಪುಣ್ಯಕಥನ ಶ್ರವಣ ವಿನೋದಗಳಿಗೆ ಆ ಶಿವನ ಮೂರು ಮತ್ತು ನಾಲ್ಕು ಮಾತ್ರೆಯ ನಾಲ್ಕು ಗಣಗಳುಳ್ಳ ಚತುಷ್ಪದಿಯ ಆ ಕವಿತೆಯನ್ನು ಸೇರಿಸಿ ಇದರ ಸೊಬಗನ್ನು ಹೆಚ್ಚಿಸಬೇಕೆಂದರೆ ಅದು ಸದ್ಯಕ್ಕೆ ಸಿಗುವ ಲಕ್ಷಣವಿಲ್ಲ. ಅವೆಲ್ಲಕ್ಕೂ ಮಿಗಿಲಾಗಿ ಅವನ ಬದುಕೊಂದು ಅದ್ಭುತ ಖಂಡಕಾವ್ಯವಾಗಿರುವಾಗ ಅವನ್ನೆಲ್ಲ ಯಾಕೆ ಸೇರಿಸುವುದ?
ಕುಂತರೂ, ನಿಂತರೂ, ಮಲಗಿದರೂ ಏಕಪ್ರಕಾರವಾಗಿ ಕಾಡುತ್ತಿರುವ ಶಾಮಣ್ಣನೇ ನನ್ನನ್ನು ನಿನ್ನ ಬಂಧನದಿಂದ ಏಮ್ದು ಬಿಡುಗಡೆಗೊಳಿಸುವೆಯೋ ಮಾರಾಯಾ? ನಾನೇ ನಿನ್ನ ಪಾತ್ರಕ್ಕೆ ಹೊಂದುವುದಾಗಿ ಎರಂಗಿ ಶಿವಣ್ಣನ್ವರು ಹೇಳಿದ ಕ್ಶಣದಿಮ್ದ ಥೇಟ್ ನಿನ್ನಂತೆ ವರ್ತಿಸುವ ಬಯಕೆ ಹುಟ್ಟುತ್ತಿರುವುದಲ್ಲಾ! ಈ ಕೂಡಲೆ ಕೊತ್ತಲಿಗಿಗೆಗೆ ಹೋಗಿ ರಾಖ್
ಏಶ ಕುಮಾರನನ್ನು ಕಂಡು ಅನಸೂಯಳಮ್ಮನ ಮನೆಯಲ್ಲಿ ಸಾಕ್ಷಾತ್ಕರಿಸಿದ ಕಾಂಚನಾ ಎಂಬ ದಿವ್ಯಮೂರ್ತಿಯ ವಾರಸುದಾರನಾಗಿ ಬಿಡುವ ಉತ್ಕಟೇಚ್ಛೆ ಮುನ್ನುಗ್ಗಿ ಬರುತ್ತಿರುವುದಲ್ಲಾ! ಭೌತಿಕ, ಆದಿಭೌತಿಕ ಜಗತ್ತನ್ನು ವಿಶ್ಲೇಷಿಸುತ್ತಲೇ ನಿನ್ನಂತೆ ನಾನು ನನ್ನದೇ ಆದ ನಿರ್ಮಾಣವಾದ, ಯಾವ ಸ್ಮೃತಿ ಸಂಹಿತೆ ಲೆಕ್ಕಾಚಾರಗಳಿಗೂ ನಿಲುಕದ ಜಗತ್ತನ್ನು ಸೃಷಿಸಿಕೊಂಡು ಅದರಲ್ಲಿ ನಾನೇ ನಾನಾಗಿ ವಾಸಿಸುವ ಬಯಕೆ ಹುಟ್ಟುತ್ತಿರುವುದಲ್ಲಾ! ಶಾಮಣ್ಣ ನಿನ್ನನ್ನು ನಾನು ದೂರ ಇಡುವುದಕ್ಕಾಗಲೀ ಹತ್ತಿರವಿಟ್ಟುಕೊಳ್ಳುವುದಕ್ಕಾಗಲೀ; ಒಳಗೆ ಈಟ್ಟುಕೊಳ್ಳುವುದಕ್ಕಾಗಳೀ, ಹೊರಗೆ ಇಟ್ಟುಕೊಳ್ಳುವದಕ್ಕಾಗಲೀ ಆಗ್ತಾ ಇಲ್ಲ… ಏನು ಮಾ‌ಆಡಲಿ ಗೆಳೆಯಾ! ನನಗೆ ನಿನ್ನಂತೆ ಪಾತ್ರ ವಹಿಸಿ ಯಶಸ್ವಿಯಾಗುದು ಸಾಧ್ಯವೇ?
ಹೆಂಡತಿ ಅನ್ನಪೂರ್ಣ ಮೆಲ್ಲಗೆ ಟೇಬಲ್ ಕಡೆ ನೋಡುತ್ತಿರುವಂತೆ, ಶಾಮಣ್ಣ ಕಾದಂಬರಿಯ ಹಸ್ತಪ್ರತಿಯ ಕಟ್ಟನ್ನು ಕೈಯಲ್ಲಿ ಹಿಡಿದುಕೊಂಡಂತೆ; ಮೆಲ್ಲಗೆ ಹಿತ್ತಿಲು ಪ್ರವೇಶಿಸಿದಂತೆ, ಅದರ ಮೇಲೆ ಎಣ್ಣೆಸುರಿಯಲು ಚಿಮಣಿ ಬುದ್ದಿಯನ್ನು ಕೈಲಿ ಹಿಡಿದುಕೊಂದಮ್ತ್ರ್…
ಅಯ್ಯೋ ಕನಸಲ್ಲ! ಇದು ಘೋರ ವಾಸ್ತವ! ಕೋಣೆಯ ಮೂಲೆಯಲ್ಲಿ ಅರೆಮಂಪರಿನಲ್ಲಿದ್ದು ಮಗ್ಗುಲು ಬದಲಾಯಿಸುತ್ತ ಮಲಗಿದ್ದವನು ಪರಾವರ್ತಿತ ಪ್ರತಿಕ್ರಿಯೆಗೆ ಒಳಪಟ್ಟು ಎದ್ದು ಒಂದೇ ಏಟಿಗೆ ಓಡಿ ಹಿತ್ತಿಲು ತಲುಪಿ ಆಕೆಯ ಕೈಲಿದ್ದ ಚಿಮಣಿ ಬುಡ್ಡಿಯನ್ನು ಕಸಿದು ಕಣಗಿಲೆ ಗಿಡದ ಬುಡಕ್ಕೆ ಎಸೆದು (ಈಹಿಂದೆ ಬಾಡಿಗೆ ಇದ್ದ ಮಂದಲಾಫೀಸಿನ ಪ್ರ.ದು.ಗು. ಕುರಕುಂದಿ ಕರಿಯಪ್ಪನ… ಮಠಸ್ತರ ಮನೆಯಲ್ಲಿ ನೀಚ ಜಾತಿಯವರು ವಾಸಿಸಬಾರದು. ಅದರಿಂದ ಒಳ್ಳೆಯದಾಗುವುದಿಲ್ಲ… ಆಗಬಾರದ್ದು ಆಗುತ್ತದೆ‌ಅನುಭವಿಸು – ಹೆಂಡತಿ ಪ್ರಮಿಳೆಯು ಹೆತ್ತಿದ್ದಂಥ ಎರಡು ದಿನದ ವಯಸ್ಸಿನ ಕಂದಮ್ಮನು ಅಪಸ್ಮಾರ ರೋಗಕ್ಕೆ ತುತ್ತಾಗಲು … ಅದನ್ನು ಆ ಮಧ್ಯೆ ರಾತ್ರಿಯಲ್ಲಿ ಸುಡುಗಾಡಿಗೆ ಒಯ್ದು ಮಣ್ಣುಮಾಡುವುದಾಗಲೀ… ಬೆಳಗಾಗುವವರೆಗೆ ಆ ಪುಟ್ಟ ಕ‌ಏಬರವನ್ನು ಮುಂದಿಟ್ಟುಕೊಂಡು ಕಾಯುತ್ತ ಕೂಡ್ರುವುದಾಗಲೀ ಯ್ಯಕೆ ಅಂತ ಹಿತ್ತಲ ಆ ಕಡೆ ಅದನ್ನು ನೆಲದಲ್ಲಿ ಹೂತು ಅದರ ಮೇಲೆ ಕಣಗಿಲೆ ಅಂಟನ್ನು ಹಚ್ಚಿಬಿಟ್ಟಿದ್ದರು.ಅದು ದಿನಕ್ಕೊಂದು ಕವಲು ಕಿತ್ತು ಇದೀ ಹಿತ್ತಲಿಗೆ ಕೊಡೆ ಬಿಚ್ಚಿದಂತೆ ಸೊಗಸಾಗಿ ಬೆಳೆದು ಹರಡಿತ್ತು. ಇಂಥದೊಂದು ಅನುಮಾನ ಎಂಥವರಿಗೂ ಕಾಡುತ್ತಿದ್ದುದರಿಂದ ಆ ಗಿಡದಿಂದ ಕಣಗಿಲೆ ಹೂವನ್ನು ಯಾರೂ ಕೀಳುತ್ತಿರಲಿಲ್ಲ. ಹೀಗಾಗಿ ಬಿದ್ದ ಹೂವುಗಳೇ ಆ ಗಿಡಕ್ಕೆ ಅಪರೂಪದ ಗೊಬ್ಬರವಾಗಿದ್ದವು) ಬಿಸಿಲಿಗೆಸೆದ ಹಸು ಮಗುವು ಯಾವ ಪ್ರಕಾರವಾಗಿ ಅರಣ್ಯ ರೋದನ ಮಾಡುವುದೋ ಹಾಗೆ ಪಟಪಟ ಸದ್ದು ಮಾಡುತ್ತ ಹಿಂಗೈ ಮುಂಗೈ ಬಯಲಿಗೆ ಚಾಚುತ್ತಿದ್ದ ಹಸ್ತಪ್ರತಿಯ ಹಾಳೆಗಳ ಮೇಲೆರಗಿಗಕ್ಕನೆ ಎದೆಗವುಚಿಕೊಂಡೆನು.
ಅನ್ನಪೂರ್ಣ ಅದನ್ನು ನನ್ನಿಂದ ಕಸಿದುಕೊಳ್ಳುವ ಬೆಂಕಿಗಾಹುತಿಮಾಡುವ ಪ್ರಯತ್ನ ಮಾಡಿದಳು. ಸಂಸಾರ ಸಾಗರದಲ್ಲಿ ಅಪರುಪಕ್ಕೆ ನದಿಮುಖಜ ಭೂಮಿ ಸೀಳಿನ ಪ್ರವಾಹದ್ ವಿರುದ್ಧ ಈಜುವ ಪ್ರಯತ್ನ ಮಾಡಿ “ಹೀ‌ಎ ಮಾಡಿದೀ ಅಂದ್ರೆ ತೊಟ್ಟಿಲಲ್ಲಿ ಮುಗುಳ್ನಗುತ್ತಿರುವ ಮೂರನೇ ಮಗನ ಮೇಲಾ‌ಎ” ಎಂದೇ ಅಥವಾ ಹಂಗನ್ನಿಸಿತು ನಿಘೂಡ ಶಕ್ತಿ ನನ್ನಿಂದ.
ಅದನ್ನು ಕೇಳಿ ದಡಬಡನೆ ಪಡಸಾಲೆ ಕಡೆಗೋಡಿ ತೊಟ್ಟಿಲಲ್ಲಿ ಕಮ್ಮಗೆ ಪ್ರೇಮಲೋಕದಲ್ಲಿ ವಿಹರಿಸುತ್ತಿದ್ದ ಮಗ್ವನ್ನು ಎತ್ತಿಕೊಳ್ಳಲು ಆತ ಕಿಟಾರನೆ ಕಿರುಚಿ ತಾಯಿಯ ಇಂಟರ್ಫಿಯರೆನ್ಸನ್ನು ಪ್ರತಿಭಟಿಸಿದನು. ಆತ ಎಷ್ಟಿದ್ದರೂ ಅವರ ಮನೆ ದೇವರಾದ ನಿರ್ವಾಣಗಿರಿಯಲ್ಲಿ ಪರಮ ನಿರ್ವಾಣ ಹೊಂದಿದಂಥ ಗುರುಸಾರ್ವಭೌಮ ನಿರ್ವಾಣೆಶ್ವರರ ಆಶೀರ್ವಾದದ ಬಲದಿಂದ ಹುಟ್ಟಿರುವಂಥವನು. ಹೆಸರಿಡುವ ಪೈಕಿ ಆಕೆಗೂ ನನಗೂ ತಿಂಗಳ ಪರ್ಯಂತ ಜಗಳ ನಡೆದು ಆತನನ್ನು ನಾನು ಪ್ರವರ ಎಂತಲೂ. ಆಕೆ ನಿರ್ವಾಣಸ್ವಾಮಿ ಎಂತಲೂ ಕರೆಯುವ ಕುರಿತು ಚರಿತ್ರಾತ್ಮಕ ಒಪ್ಪಂದವಾಗಿರುವುದು.
“ನಮ್ಮ ನಿರ್ವಾಣಸ್ವಾಮಿ ಮೇಲೆ ಆಣೆ ಇಟ್ಟ್ರ ಸರಿಹೋಯ್ತು… ಇಲ್ಲಾಂದ್ರೆ ಶಾಮಣ್ಣನ ಕಥೀನ ಎಂದೋ ಸುಟ್ಟು ಬೂದಿ ಮಾಡಿಬಿಡ್ತಿದ್ದೆ” ಎಂದು ಸಮಾಧಾನಕರವಾದ ಹಂತಕ್ಕೆ ಬಂದಳು.
“ಇಡ್ದೆ ಏನು ಮಾಡ್ಲಿ ಕಣೇ… ಹೊಟ್ಟೇಲಿ ಹುಟ್ಟಿದ ಮಗನ ಮೇಲೆ ಆಣೆ ಮಾಡೋದು ನನಗೆ ಅನಿವಾರ್ಯವಾಯ್ತು. ನಿನ್ಗೆ ನಿನ್ ಮಗ ಹೇಗೋ ಹಾಗೇನೇ ಇದು ನನಗು ಹೆರೋದ್ಕೆ ನೀನು ಕೇವಲ ಇನ್ನೂರಾ‌ಎಂಬತ್ತೈದಿನ ತಗೊಂಡಿರಬೌದು. ಆದ್ರೆ ಈ ಕಾದಂಬರಿಯ ಭ್ರೂಣ ನನ್ನ ತಳೆಲಿ ಬೆಳೆಯಲಿಕ್ಕೆ ಹತ್ತಿ ಐದು ವರ್ಷದ ಮೇಲಾಯ್ತು…” ಎಂದು ಸಮಾಧಾನ ಚಿತ್ತದಿಂದ ಹೇಳಿದೆ.
“ಅಲ್ರಿ ಬರ್‍ಕೊಳ್ಳಿ… ನಿಮ್ಮ್ ಕೈ ನಿಮ್ ಮಾತು… ನನ್ ಗಂಟೇನು ಹೋಗೋದೈತಿ ಇದ್ರಲ್ಲಿ/\… ಅಲ್ಲಾ… ಸತ್ತಮೇಲೆ ಇಷ್ಟೊಂದು ನಿಮ್ ತಲೆಕೆಡೆಸಿರೋ ಶಾಮಣ್ಣ … ಬದುಕಿದ್ದಾಗ ನಿಮಗಾವ ಮೋಡಿ ಮಾಡಿರಬೌದಂತೀನಿ!”
“ಯಾಕ ಹಂಗಂತೀ?”
“ಮತ್ತಿನ್ನೇನು? ನಿಮ್ಗೆ ಬಣ್ಣ ಹಚ್ಚಿಸ್ಲಿಕ್ಕೆ ಹೋಟಾನಲ್ಲ… ನಾಟಕ ಮಾಡೋದಿದ್ರೆ ಮಾಡ್ರಿ ಅದ್ಕ್
ಏನು ಬರ ಬಂದೈತಿ ನಿಮ್ ಕಣ್ಣ್ಡದಾಗ… ಲಂಕೇಶರ್ದು ಸಂಕ್ರಾಂತಿ ಮಾಡ್ರಿ, ಜೊಷಿಯವರ್ದು ಸತ್ತೋರ ನೆರಳು ಮಾಡ್ರಿ… ಇದ್ಕೆ ನಾನೇನು ಬೆಡಂತೀನೇನು! ಆದ್ರೆ ಹೋಗೀ, ಹೋಗಿ ಶಾಮಣ್ಣನ ಬಗ್ಗೆ ನಾಟಕ ಬರೆಯೊದಲ್ದೆ ಶಾಮಣ್ಣನ ಪಾರ್ಟು ಮಾಡಬೇಕಂತಿದೀರಲ್ಲ… ಆ ಬಣ್ಣದ ಮಂದಿಗೆ ಬಣ್ಣ ಒಂದು ಬಿಟ್ರೆ ಬೇರೆ ಪ್ರಪಂಚ ಗೊತ್ತಿದ್ದಂಗಿಲ್ಲ ಬಿಡ್ರಿ…
“ಯಾಕ ಹಂಗಂತೀ?”
“ಮತ್ತಿನ್ನೇನು? ಆ ಬಣ್ಣ ನಂಬ್ಕೊಂಡು ಬದುಕೋ ಶಿವಣ್ಣ ನಿಮ್ಗೆ ನಾಟಕ ಬರೀರಿ ಅಂತ ಹೇಳಿದ್ದೂ ಅಲ್ದೆ… ಆ ಕುಡುಕ, ಲಂಪಟ, ವ್ಯಭಿಚಾರಿ, ಜೂಜುಕೋರ ಶಾಮಣ್ಣನ ಪಾರ್ಟು ನಿಮ್ ಕೈಲಿ ಮಾಡೊಸ್ಲಿಕ್ಕೆ ಪುಸಲಾಯಿಸಿದ್ನಲ್ಲ. ಇದನ್ ಕೇಳಿ ನನ್ ಒಡಲು ಕುಯ್ದು ಹೋತು ನೋಡ್ರಿ… ಇಂಥೋರ್ನ ಮನೆಗೆ ಕರ್ಕೊಂಡು ಬಂದು ಬ್ ಗರಿಗೆ ಮಾಡಿದಂಗೆ ಸತ್ಕಾರ ಮಾಡ್ತೀರಲ್ಲ… ನಿಮ್ಗೆ ಬುದ್ಧಿ ಇಲ್ಲ ಅಷ್ಟೆ.”
“ಆಯ್ತು ಮಾರಾಯ್ತಿ ಆಯ್ತು.”
“ಈಕಾದಂಬರೀನ ನೀವು ಬರೆಯ್ಯೋಕೆ ಶುರು ಮಾಡಿದ್ಮೇಲೆ ಹುಲಿಯಂತಿದ್ದ ನೀವು ಇಲಿಯಂಗಾಗಿ ಬಿಟ್ಟಿದ್ದೀರಿ… ಇನ್ನೊಂದು ಸಾರಿ ಇಂಥೋರ್ ಬಗ್ಗೆ ಬರ್‍ದು ಹೆಸ್ರು ಕೆಡಿಸ್ಕೋಬೇಡಿ. ಈಗ ಅನುಭೋಗಿಸ್ತಿರೋದೇ ಸಾಕು. ಗಡಗಡ ಬರ್‍ದು ಮುಗಿಸಿ ಎಣ್ಣೆ ಸ್ನಾನ ಮಾಡಿಬಿಡ್ರಿ ಅಷ್ಟೆ” ಎಂದು ಕ್ರಮೇಣ ತಣ್ಣಗಾಗಿ ತಣ್ಣನೆ ನದಿಯಂತೆ ಹರಿಯತೊಡಗಿದಳು.
“ಯಾಕಾಗಬಾರದು ಕಾಂತೆ” ಎಂದು ನಾಟಕೀಯವಾಗಿ ನುಡಿಯಲು ಆಕೆಯ ಸಂತೋಶದ ಕಟ್ಟೊಡೆದು ಗೊಳ್ಳನೆ ನಗುತ್ತ “ಇಂಥಾದ್ರಲ್ಲಿ ಏನೂ ಕಡಿಮೆ ಇಲ್ಲ ನೀವು” ಎಂದು ನನ್ನ ಮೂಗು ಹಿಡಿದು ಜಗ್ಗಿದಳು…
ಅಂತೂ ದೊಡ್ಡದೊಂದು ಪ್ರಮಾದ ದೂರವಾಯಿತೆಂದು ನೆಮ್ಮಡಿಯ ಉಸಿರುಬಿಟ್ಟೆ

*
*
*
ಕಾದಂಬರಿಯ ಹಸ್ತ ಪ್ರತಿಯನ್ನು ಎದುರಿಗೆ ಬಿಚ್ಚಿಕೊಂದು ಕೂತೆ. ಮುಂಚೂಣಿಗೆ ಬಂದಿದ್ದವು. ಮುಂಚೂನಿಯಲ್ಲಿದ್ದ ಪಾತ್ರಗಳು ನೇಪಥ್ಯಕ್ಕೆ ಸರಿಯುವಪ್ರಯತ್ನ ಮಾ‌ಅತೊಡಗಿದವು. ಶಾಸ್ತ್ರಿಗಳ ವೇದ ಜ್ಞಾನ ವ್ಯಾಮೋಹದಿಂದಾಗಿ ರಾಖೇಶ ಎಂಬ ಪಾತ್ರವು ಪರಮಪೂಜ್ಯ ಪರಮೇಶ್ವರ ಶಾಸ್ತ್ರಿಗಳ ಸ್ಥಾನವನ್ನು ಆಕ್ರಮಿಸುವ ಹುನ್ನಾರು ನಡೆಸಿದ್ದರೆ ಅನಂತಪುರದಲ್ಲಿ ಇಂಗ್ಲೀಷು ವಿದ್ಯೆ ವ್ಯಾಸಂಗ ಮಾಡುತ್ತಿರುವ ಅಶ್ವಥ್ ನಾರಾಯಣ, ಶಿವರಾಮಶಾಸ್ತ್ರಿ ಎಂಬ ಮಕ್ಕಳ ಮೇಲಿನ ವ್ಯಾಮೋಹದಿಂದಾಗಿ ಕೊತ್ತಲಗಿಯ ಅನಸೂಯಮ್ಮ ಎಂಬ ಪಾತ್ರವು ವರಲಕ್ಷ್ಮಿ ಎಂಬ ಪಾತ್ರವನ್ನು ಆಕ್ರಮಿಸುವ ಸಂಚು ನಡೆಸಿತ್ತು. ಅಮೇಧ್ಯ ಸೇವಿಸಿ ಗಟ್ಟಿಮುಟ್ಟಾಗಿರುವ ಇವರ ಮುಂದೆ ಸಾತ್ವಿಕ ಆಹಾರಭ್ಯಾಸಿಗಳಾದ ಅವರು ತಮಗೇಕೀ ಹೋರಾಟದ ಉಸಾಬರಿ ಎಂದು ದಾರಿಬಿಡತೊಡಗಿದ್ದವು. ಗುಲಾಂ ನಬಿ ಎಂಬುದು ಮುಖ್ಯಮಂತ್ರಿ ಜಾಗದ ಕಡೆ ನಡೆಯತೊಡಗಿದ್ದರೆ, ಆರ್ ಎ ಬ್ರಾಂಡ್ ತಯಾರಿಕಾ ಕಂಪನಿಯ ಮ್ಯಾನೇಜಿಂಗ್ ಡೈರೆಕ್ಟರ್ ಆದ ಶ್ರೀಮತಿ ಅನಸೂಯಾ ರಘುರಾಂ ಎಂಬ ಪಾತ್ರವು ಯುನೈಟೆಡ್ ಕಿಂಗ್‌ಡಂನ ಪ್ರಸಿದ್ಧ ಇನ್‌ಸ್ತಾಂಟ್‌ಫುಡ್ ಕಂಪನಿಯ ಜೊಟೆ (ಅದರ ಮಾಲೀಕರಾದ ಲಕ್ಕೂಭಾಯಿ ಪಾಠಕ್‌ರವರು ಕಳೆದ ವರ್ಷವಷ್ಟೇ ನಿಧನಹೊಂದಿದರು) ಪೈಪೋಟಿ ಆರಂಭಿಸಿತ್ತು.
ರಘುರಾಂ ಎಂಬ ಪಾತ್ರವು ‘ಇನ್‌ಸ್ತಾಂಟ್‌ಫುಡ್’ನಿರ್ಮಾಣದಲ್ಲಿ ಏಶ್ಯಾ ಖಂಡದ ಗಿಡ ಮೂಲಿಕೆಗಳ ಪಾತ್ರ ಎಂಬ ವಿಷಯದ ಬಗ್ಗೆ ಭಾಷಣ ಮಾಡಲು ಕಳೆದ ವಾವಷ್ಟೆ ಇಂಗ್ಲೆಂಡಿನ “ರಾಯಲ್ ಸೊಸೈಟಿ ಆಫ್ ಇನ್‌ಸ್ಟಾಂಟ್ ಫುಡ್ಸ್” ಎಂಬ ಸಂಸ್ಥೆಗೆ ಹೋಗಿದ್ದು ಅಲ್ಲಿ ಶಾಮಣ್ಣನ ಪ್ರೇತಾತ್ಮವನ್ನು ಹುಡುಕುವಸನ್ನಹ ನಡೆಸಿತ್ತು. ಅದಲ್ಲದೆ ನೂರಾರು ವರ್ಷಗಳಷ್ಟು ಹಿಂದೆಯೇ ಈಸ್ಟ್ ಇಂಡಿಯಾ ಕಂಪೆನಿಯು ವಶಪಡಿಸಿಕೊಂಡಿರುವುದೆನ್ನಲಾದ ಚರಾಸ್ತಿಯನ್ನು ವಶಪಡಿಸಿಕೊಳ್ಳಲು ರಾಯಲ್ ಕೋರ್ಟ್‌ನಲ್ಲಿ ದಾವೆ ಹೂಡಿ ವರ್ಷ ಆರು ತಿಂಗಳುಗಳನ್ನು ಜಲ ಪ್ರಯಾಣದಲ್ಲೇ ಕಳೆದು ಹಲವು ವರ್ಷಗಳ ನಂತರ ತನ್ನ ವಿರುದ್ಧ ತೀರ್ಪು ಬರಲಾಗಿ ಎದೆಯೊಡೆದು ಸತ್ತ ಕೊಡಗಿನ ಪದಚ್ಯುತ ಮಹಾರಾಜನಾದ ಚಿಕ್ಕವೀರರಾಜೇಂದ್ರನು ತಮ್ಮ ತಯಾರಿಕಾ ಸಂಸ್ಥೆಯ ಆಹಾರ ಸೇವಿಸಿದ್ದರೆ ದೀರ್ಘಕಾಲ ಬದುಕುತ್ತಿದ್ದ ಎಂಬ ವಿಷಯವನ್ನು ರಘುರಾಂ ತನ್ನ ಭಾಷಣದಲ್ಲಿ ಸೇರಿಸಿಕೊಂಡಿದ್ದುದು ತಿಳಿದದ್ದು ಇತ್ತೀಚೆಗೆ. ಅವನು ಶಾಮಣ್ಣನಿಗೂ, ಚಿಕ್ಕವೀರರಾಜೇಂದ್ರನಿಗೂ ಪರಸ್ಪರ ಸಂಬಂಧ ಕಲ್ಪಿಸಿದ್ದಲ್ಲಿ ವ್ಯಾಪಕವಾಗಿ ಚರ್ಚಿಸಬಹುದಿತ್ತು. (ನಿಘೂಡ ವ್ಯಕ್ತಿಯಾಗಿ ಬಂದು ಕೌಟುಂಬಿಕ ತಳಮಳಕ್ಕೆ ಕಾರಣನಾದ ಶಾಮಾಶಾಸ್ತ್ರಿಯನ್ನು ರಘುರಾಮ ಎಂಬ ಸ್ವಾತಂತ್ಯೋತ್ತರೋತ್ತರ ಬಂಡವಾಳ ಶಾಹಿಯು ಚಿಕ್ಕವೀರರಾಜೇಂದ್ರನಿಗೆ ಹೋಲಿಸುವ ಕೆಲಸ ಮಾಡಲಾರ). ಅದರ ಜೊತೆಗೆ ತನ್ನ ಪತ್ನಿಯಾದ ಅನಸೂಯಾರವರನ್ನು ರಾಜ್ಯಸಭೆಗೆ ನಾಮಕರಣ ಸದಸ್ಯೆಯನ್ನಾಗಿ ಮಾಡಿಸುವ ಉದ್ದೇಶವೂ ಅವನ ಇಂಗ್ಲೆಂಡಿನ ಪ್ರಿನ್ಸ್ ಚಾರ್ಲಸ್ ಕಡೆಯಿಂದ ಭಾರತದ ಪ್ರಧಾನಿಗಳಿಗೆ ಫೋನ್ ಮಾಡಿಸುವ ಉದ್ದೇಶವೂ ವನ ಇಂಗ್ಲೆಂಡು ಪ್ರವಾಸದ ವಿವಿಧೋದ್ದೇಶಗಳಲ್ಲಿ ಒಂದು ಮತ್ತು ಪ್ರಮುಖವಾದುದು. ತಂತಮ್ಮ ಪಾರ್ಟಿಗಳಿಗೆ ಅವನಿಂದ ಸಾಕಷ್ಟು ಹಣ ಪಡೆದಿರುವ ರಾಜ್ಯದ ಮತ್ತು ರಾಷ್ಟ್ರದ ಪ್ರಮುಖ ರಾಜಕಾರಣಿಗಳೂ; ಕನ್ನಡ ಮತ್ತು ಸಂಸ್ಕೃತಿ ಶಾಖೆಯೊಂದಿಗೆ ಮಹಿಳಾ ಮಕ್ಕಳ ಶಾಖೆಯನ್ನುಸ್ವತಮ್ತ್ರವಾಗಿ ನಿರ್ವಹಿಸುತ್ತಿರುವ ಶ್ರೀಮತಿ ಜಲಜಾಕ್ಷಿ ಮಸಾಲೆಯವರೂ (ಕಳೆದ ವರ್ಷವಷ್ಟೇ ರಾಷ್ಟ್ರೀಯ ಕಬಡ್ಡಿ ಅಸೋಸಿಯೇಷನ್‌ರವರು ಇವರನ್ನು ಮಧ್ಯಪ್ರದೇಶದ ಛೋಟಾ ನಾಗಪುರಕ್ಕೆ ಬರಮಾಡಿಕೊಂಡು ಲೇಡಿ ತೈಗರ್ ಎಂಬ ಬಿರುದು ಕೊಟ್ಟಿರುವರು. ಅಲ್ಲದೆ ಮುಖ್ಯಮಂತ್ರಿಯವರೂ ಸಚಿವ ಸಮ್ಪುಟ ಸಭೆಯಲ್ಲಿ ಇವರನ್ನು ಕರ್ನಾಟಕದ ಜೋನ್ ಆಫ್ ಆರ್ಕ್ ಎಂದು ಕರೆದುದೂ ಉಂಟು. ಇದರಿಂದಾಗಿ ಇಂಗ್ಲಿಷ್ ಮತ್ತು ಪ್ರಾಂತೀಯ ಭಾಷೆಗಳ ನಿಯತಕಾಲಿಕೆಗಳು ಆಕೆ ಕುರಿತು ಯಥೇಚ್ಛವಾಗಿ ಬಳಸುತ್ತಿರುವುವು) ಪದ್ಮಶ್ರೀ ಪ್ರಶಸ್ತಿ ವಿಜೇತರೂ, ಪತ್ರಿಕಾ ಅಕಾಡೆಮಿಯ ವಿಶೇಷ ಗೌರವ ಸದಸ್ಯರೂ ಆದಂಥ ಡಾ. ಕಮಲಾಕರ್‌ರವರೂ ಶ್ರೀಮತಿ ಅನಸೂಯಾ ರಘುರಾಮ್ ರವರನ್ನು ರಾಜ್ಯಸಭೆಗೆ ಕಳಿಸಲು ಹೆಗಲಿಗೆ ಹೆಗಲು ಕೊಟ್ಟು ದುಡಿಯುತ್ತಿರುವರು.
ಈ ಸುದ್ದಿ ಏನಾದರೂ ಸತಿರೋ ಶಾಮಣ್ಣನಿಗೆ ಗೊತ್ತಾದಲ್ಲಿ ಅವನು ಮತ್ತಷ್ಟು ಸಾಯುವನೆಂಬುದರಲ್ಲಿ ಸಂಶಯವಿಲ್ಲ ಎಂದೆನಿಸಿತು. ಸ್ವರ ಬಗ್ಗೆ ಬರೆಯೋದಾದರೆ ಖಂಡಿತ ನನ್ನ ಬಗ್ಗೆ ಬರೆಯಲೇಬೇಡವೆಂದು ಅವನು ಕಡ್ಡಿ ಮುರಿದಂತೆ ಹೇಳಿಬಿಡುವಷ್ಟು ನಿಷ್ಠುರವಾದಿಯು. ಆಗಲೇ ಒಂದು ವ್ಯವಸ್ಥೆಯಲ್ಲಿದ್ದು ಪಳಗಿದ್ದ ಅವನು ಇನ್ನೊಂದು ವ್ಯವಸ್ಠೆಯನ್ನು ಪ್ರವೇಶಿಸುವುದು ಆಗ ಕಷ್ಟದ ಕೆಲಸವಾಗಿರಲಿಲ್ಲ‌ಎಂಬುದು ಅಷ್ಟೇ ಸತ್ಯ.ತುಟಿ ಮೀರಿ ಕೈಮೀರಿ ಬರೆದುಕೊಟ್ಟಲ್ಲಿ ಅವನು ಹೇಳದೆ ಕೇಳದೆ ಕಾದಂಬರಿಯಿಮ್ದ ಯಾವ ಕ್ಷಣದಲ್ಲಾದರೂ ನಿರ್ಗಮಿಸಿಬಿಡಬಹುದು. ಅವನು ಆಗಮಿಸುವುದಾಗಲೀ, ನಿರ್ಗಮಿಸುವುದಾಗಲೀ, ಅವನಿಗೆ ಚಿಟಿಕೆ ಹೊಡೆವಷ್ಟು ಸುಲಭ. ಭೋರ್ಗರೆಯುತ್ತ ಹರಿವ ನದಿಯೊಂದು ಮಾರ್ಗಮಧ್ಯದಲ್ಲಿ ಇದ್ದಕ್ಕಿದ್ದಂತೆ ನಾಪತ್ತೆಯಾದರೆ ತನ್ನ ಪಾಡೊಗೆ ತಾನು ನಡೆದಿರುವ ಭಗೀರಥನಂಥ ಪಥಿಕನ ಮನಸ್ಸಿಗೆ ಹೇಗಾಗಬೇಡ! ಅದೇ ಪರಿಸ್ಥಿತಿ ನನಗೂ ನನ್ನ ಕಾದಂಬರಿಗೂ ಒದಗದೆ ಇರದು. ಪ್ರೇತಲೋಕದ ಸಂಚಾರೀ ಭಾವವಾಗಿದ್ದ ಅವನು ಕಾದಮ್ಬರಿಯ ಹಸ್ತಪ್ರತಿಯನ್ನೇ ವಿದುರಾಶ್ವತ್ಥವೆಂದು ಭಾವಿಸಿ ಹಲವು ದಿನಗಳಿಂದ ಠಿಕಾಣಿ ಹೂಡಿರುವನು. ಲೇಖಕನ ಬಗೆಗಿನ ನಂಬಿಕೆ ಅಪನಂಬಿಕೆಗಳ ನಡುವೆ ಹೊಯ್ದಾಡುತ್ತಿರುವನು. ತಾನೊಂದು ಕೇಂದ್ರ ಪಾತ್ರವಾಗಿ ಕಾದಂಬಯೊಳಗೆ ಬೆಳೆಯುತ್ತಿರುವ ಪರಿ ಕುರಿತು ಕುತೋಹಲ ತಾಳಿರುವನು. ತನ್ನ ತಾತನವರಾದ ಪರಮೇಶ್ವರ ಶಾಸ್ತ್ರಿಗಳ ಉಯಿಲಿನ ವಾಸನೆ ಎನಾದರೂ ಅವನ ಮೂಗಿಗೆಟಕಿದರೆ ಅದನ್ನು ಅವನು ಹೇಗೆ ಪರಿಭಾವಿಸುವನೆಂಬುದೇ ನಿಗೂಢ! ಕುಂದಿದ ಜೀರ್ಣಶಕ್ತಿಯನ್ನು ಉತ್ತಮಪಡಿಸಿಕೊಳ್ಳಲಿಕ್ಕಾಗಿ, ಅಶ್ವಿನಿ ದೇವತೆಗಳ ಸಲಹೆಯಂತೆ ಅಗ್ನಿದೇವನು ಇಂದ್ರನ ಪ್ರಸಿದ್ಧ ಉದ್ಯಾನಗಳಲ್ಲಿ ಒಂದಾದದ್ದೂ; ಸರಸ್ವತೀ ಮತ್ತು ವೃಷದ್ವತೀ ನದಿಗಳಿಗೆ ಪೂರ್ವದಲ್ಲಿರುವಂಥಾದ್ದು ಉತ್ತಮ ಗಿಡಮೂಲಿಕೆಗಳಿಗೆ ಹೆಸರಾದಂಥದ್ದೂ ಆದಂಥ ಖಾಣ್ಡವ ವನವನ್ನು ದಹಿಸಿದೋಪಾದಿಯಲ್ಲಿ ಶಾಮನೂ ಒಂದು ದಿನ ಕುಡಿದ ಅಮಲಿನಲ್ಲಿ ತನ್ನ ತಾತನವರು ಸಂಗ್ರಹಿಸಿಟ್ಟಿದ್ದ ಅಮೂಲ್ಯ ತಾಲೆಗರಿ ಕಟ್ಟುಗಳನ್ನು ಒಂದೊಂದಾಗಿ ಬೆ
ಕಿಗೆ ಎಸೆಯತೊಡಗಿದ್ದು ಕಂಡು ಇಡೀ ಊರಿಗೆ ಊರೇ ಹ್ಹೋ ಹ್ಹೋ ಹ್ಹಾ ಹ್ಹಾ ಎಂದು ಉದ್ಗರಿಸಿತು. ಅಲುಮೇಲಮ್ಮೆಂಬಜ್ಜಿಯೂ; ವರಲಕ್ಷ್ಮಿ ಎಂಬ ಸಾಧ್ವಿಯೂ ತಡೆಯಲು ಹೋಗಿ ಆಚೆ ಕಡಿಕೊಬ್ಬರೂ, ಈಚೆಕಡಿಕೊಬ್ಬರೂ ಬಿದ್ದರು. ಸೀಳಿಬಿಸುಟರೂ ಮತ್ತೆದ್ದು ಬಂದ ಜರಾಸಂಧನ ದೇಹದ ಹೋಳುಗಳಂತೆ ಮತ್ತೆ ತಡೆಯುವ ಪ್ರಯತ್ನ ಮಾಡಿದರು; “ನಾನು ಪರಮನಾಸ್ತಿಕ ಕಣ್ರೀ… ಆ ಮುದುಕನ ಚಿತೇಲಿ ಇವ್ನೆಲ್ಲ ಹಾಕಿಬಿಟ್ಟಿದ್ರೆ ಚೆನ್ನಾಗಿರ್‍ತಿತ್ತು… ಇವ್ನ ಮುಂದಿಟ್ಕೊಂಡು ನನ್ನ ಆಟ ಆಡಿಸ್ಲಿಕ್ಕೆ ನೋಡ್ತಿದ್ದೀರಾ… ಆ ಮುದುಕನ ಪ್ರೇತಾನೂ ನಿಮ್ ಜೊತೆ ಶಾಮೀಲಾಗಿದೆ… ನೋಡ್ರಿ… ಕಣ್ತುಂಬ ನೋಡ್ರಿ…” ಎಂದು ಕೂಗಿ ಹೇಳಿದಾಗ ಇಡೀ ಓಣಿಗೆ ಒಣಿಯ್ರ್ ಹ್ಹೋ…ಹ್ಹೋ… ಹ್ಹಾ…ಹ್ಹಾ… ಎಂದಿತು.
“ಅವನ ಹೊಟ್ಟೇಲಿರೋದು ಹಾಗಾಡಿಸ್ತಿದೆ ಕಣ್ರತ್ತೇ… ಆ ಭೋಸೂಡಿ ಕುಡಿಸಿ… ಅಮೇಧ್ಯ ತಿನ್ನಿಸಿ ಬ್ರಾಹ್ಮಣ್ಯಾನ ಸುಟ್ಟು ಬೂದಿ ಮಾಡಿ ಬಾ ಅಂತ ಕಳಿಸಿರ್‍ತಾಳೆ” ಎಂದು ಖುದ್ದ ಸೊಸೆ ಕೈಹಿಡಿದು ಜಗ್ಗಿದರೂ ಕೊಸರಿಕೊಂಡು ಅಲುಮೇಲಮ್ಮನವರು ಧಗಧಗ ಉರಿಯುತ್ತಿದ್ದ ಬೆಂಕಿಯಲ್ಲಿ ಕೈ ಹಾಕಿದರು. ಬುದ್ಧಿ ಹೇಳಲು ಬಂದ ಅಗಸರ ಯಮುನಪ್ಪನೊಂದಿಗೆ ವಾಗ್ವಾದಕ್ಕಿಳಿದಿದ್ದ ಶಾಮ ತಾಯಿ ಕಡೆ ಗಮನ ಹರಿಸಿರಲಿಲ್ಲ. ತನ್ನ ನಾಲಿಗೆ ಮೇಲೆ ಸರ್ಪದ ಹೆಡೆಯಾಕಾರದ ಕಪ್ಪು ಮಚ್ಚೆ ಇರುವುದೆಂಬ ಕಾರಣಕ್ಕೆ ಎಲ್ಲರೂ ಹೆದರುತ್ತಿದ್ದಂತೆ ಯಮುನಪ್ಪನೂ ಹೆದರಿ ಹಿಮ್ಮೆಟ್ಟತೊಡಗಿದ್ದು. ಆ ಸದುವು ನೋಡಿಕೊಂಡೇ ಅಲುಕ್ಮೇಲಮ್ಮಜ್ಜಿ ಬೆಂಕಿಯೊಳಗೆ ಸುಡಲೆಂದು ಬೆಚ್ಚಗಾಗುತ್ತಿದ್ದ ತಾಳೆಗರಿ ಕಟ್ಟನ್ನು ತೆಗೆದು ಪುದುಪುದು ಒಳಗಡೆ ಹೋಗಿ ಒಂದು ಮೂಲೆಯಲ್ಲಿ ಭದ್ರಪಡಿಸಿಬಿಟ್ಟಿತು.
ಆ ತಾಳೇಗರಿ ಕಟ್ಟೆ ಎಲ್ಲೆಲ್ಲೊ ತಿರುಗಾಡಿ ಕೊನೆಗೆ ನನ್ನಲ್ಲಿ ಆಶ್ರಯ ಪಡೆದು “ಗಂಡಸರಾದರೆ ನನ್ನ ಸರಳೀಕರಿಸಿ ಪ್ರಯೋಗಿಸುವಿ ಏನು?” ಎಂದು ಪ್ರಶ್ನೆ ಹಾಕಿತು. ನನ್ನಾಪ್ಪನಾಣೆಯಾಗಿಯೂ ನನಗೆ ಅದರಲ್ಲಿದ್ದ ಒಂದೇ ಒಂದು ಸಾಲನ್ನು ಅರಗಿಸಿಕೊಳ್ಳಲಾಗದೆ ಬೇಧಿಗಿಟ್ಟುಕೊಂಡೆನು. ಯಾವುದೇ ಚರಾಸ್ತಿಯನಾಗಲೀ ಸ್ಥಿರಾಸ್ತಿಯನ್ನಾಗಲೀ ಮಾಡಿರದಿದ್ದ ಶಾಸ್ತ್ರಿಗಳು ಯಾಕೆ ಉಯಿಲು ಬರೆದಿಟ್ಟಿರ್‍ತಾರೆ… ಕಾಶೀಲಿ ಶವಸಂಸ್ಕಾರ ಮಾಡಿಸ್ಕೊಳ್ಳಬೇಕೆಂಬ ಬಯಕೇನ ವ್ಯಕ್ತಪಡಿಸಲಿಕ್ಕಾಗಿಯೇ ಉಯಿಲು ಬರೆದಿಟ್ಟಿದ್ದಾರ್ಂದು ಅವರಿಗೆ ಆಗದವರ್‍ಯಾರೋ ಹೇಳಿದ್ದಾರೆ ಅಷ್ಟೆ… ಮರಣನಂತರದ ಅಂಥ ವ್ಯಾಮೋಹ ಅವರಿಗಿರ್‍ಲಿಲ್ಲ” ಎಂದು ವಿದ್ಯಾವರಿಧಿ ವಿಘ್ನೇಶ್ವರ ತೀರ್ಥರು ವಾದಿಸಿದ್ದರು. ಅದರಲ್ಲಿ ಏನಿದೆ ಎಂದಾದರೂ ತಿಳಿದುಕೊಳ್ಳಬೇಕಲ್ಲ? ಅದಕ್ಕೆಂದೇ ಗುಟ್ಟಾಗಿ ಕನ್ನಡವ್ನ್ನೂ; ರಾಜಾರೋಶವಾಗಿ ಸಂಸ್ಕೃತವನ್ನು ಕಲಿತುಕೊಂಡಿದ್ದ ಗೆಳೆಯ ಮಲ್ಲೇಪುರಂ ಬಳಿಗೆ ಧಾವಿಸಿದ್ದು. ಬರೆದಾದ ಮೇಲೆ ನರ್ತಕಿಗೂ ಶಾಸ್ತ್ರಿಗಳಿಗೂ ದೈಹಿಕ ಸಂಬಂಧವಿತ್ತೆಂಬ ಸಂಗತಿಯನ್ನು ಬೇಕೆಂದೇ ಮಲ್ಲೇಪುರಂ ಸೇರಿಸಿರಬಹುದೆಂಬ ಅನುಮಾನ ನನಗೆ ಕಾಡದೆ ಇರಲಿಲ್ಲ… ಅಂಥ ಕಲ್ಪನೆಯಲ್ಲೂ ಮಜವಿರುತ್ತದೆಂದು ನಾನೂ ಅದನ್ನು ತೆಗೆಯುವ ಗೋಜಿಗೆ ಹೋಗಿರಲಿಲ್ಲ… ಇಂಥದೊಂದು ಪಾಪಿಷ್ಠ ಒಪ್ಪಂದವೇನಾದರೂ ಶಾಮನ ಆತ್ಮಕ್ಕೆ ಗೊತ್ತಾದರೆ ಅವನು ಪ್ರತಿಭಟಿಸಿ ಕಾದಂಬರಿಯಿಂದ ನಿರ್ಗಮಿಸದೆ ಇರಲಾರ ಎಮ್ದುಕೊಂಡೆನು.
ಕಾವ್ಯಕಳಾ ಶಿಕ್ಷಕರೊಬ್ಬರು ಪರೀಕ್ಷಿಸೆ ಕೃತಿಯಂ ಕೃತಾರ್ಥರಲ್ಲರೆ ಕವಿಗಳ್ ಎಂಬ ನೇಮಿಚಂದ್ರನ ಮಾತು ನೆನಪಾಯಿತು.
ಶಿಶಿರವು ತನ್ನ ಉಡಿಯೊಳಗೆ ವಾಯುದೇವನನ್ನು ಬಂಧಿಸಿಟ್ಟರೂ ತನ್ನ ಉಚ್ಛಾಸ ನಿಶ್ವಾಸಗಳೇ ಚಂಡಮಾರುತಗಳಾಗಿ ಹಸ್ತಪ್ರತಿಯ ಹಾಳೆಗಳನ್ನು ಚದುರಿಸತೊಡಗಿದವು. ಪುಟದ ಸಂಖ್ಯೆಗಳು ಅರ್ಥ ವಿವರಣೆಗೆ ನಿಲುಕದ ಗೃಹ್ಯಸೂತ್ರಗಳಂತೆ ಹಿಂದುಮುಂದಾಗತೊಡಗಿದವು. ಅವುಗಳನ್ನು ಅನುಕ್ರಮವಾಗಿ ಜೋಡಿಸುವಷ್ಟರಲ್ಲಿ ಕರುಳು ಬಾಯಿಗೆ ಬಂದಿತು. ಕೌಟುಂಬಿಕ ಶಾಸ್ತ್ರದ ಬಾಂಧವ್ಯವನ್ನು ಹೊಂದಿದ ಕೆಲವಂಶಗಳು ಭಿನ್ನರಾಶಿಗಳ ಶಕುನಗಳನ್ನು ವಿವರಿಸುತ್ತಿರುವಂತೆ ಭಾಸವಾಗತೊಡಗಿತು.
ಹಸ್ತಪ್ರತಿಯೊಳಗೆ ಪ್ರಮುಖ ಪಾತ್ರವಾಗಲು ಹಾತೊರೆಯುತ್ತಿದ್ದ ಕೊತ್ತಲಿಗಿಯ ಅನಸೂಯಮ್ಮ ಪಾತ್ರವು ಪಕಪಕ ನಗಾಡುತ್ತಿರುವಂತಿದೆ ಎಂದುಕೊಂಡೆನು. ನಾನೇ ಇರದಿದ್ದಲ್ಲಿ, ಇದ್ದರೂ ಅವನ ಜೀವನದಲ್ಲಿ ನಾನು ಪ್ರವೇಶಿಸದಿದ್ದಲ್ಲಿ ನೀನೆಲ್ಲಿ ಈ ಕಥಾನಕ ಬರೆಯುತ್ತಿದೆಯೋ ಎಂದು ಪ್ರಶ್ನಿಸಿತು.
“ನೋಡಮ್ಮಾ ತಾಯಿ… ಯಾರ ಜೀವನದಲ್ಲಿ ಯಾರು ಪ್ರವೇಶ ಮಾಡ್ತಾರೋ ಬಿಡ್ತಾರೋ ಎಂಬುದಿಲ್ಲಿ ಮುಖ್ಯವಲ್ಲ” ಪ್ರವೇಶ ಮತ್ತು ನಿರ್ಗಮನ ಪ್ರತಿಯೊಂದು ಪಾತ್ರದ ಅನಿವಾರ್ಯ ಕ್ರಿಯೆಗಳು ಎಂಬುದನ್ನು ಮರೆಯಬೇಡ. ಕೆಲವೊಂದು ವಿಶಿಷ್ಟ ಸನ್ನಿವೇಶಗಳು ಪ್ರವೇಶ ಎಮ್ಬ ಎ ಸಹಕರಿಸುತ್ತವೆ. ಹಾಗೆಯೇ ನಿರ್ಗಮನವೆಂಬ ಪ್ರಾದುರ್ಭಾವಕ್ಕೂ ಕೂಡ. ಪ್ರವೇಶ ಮತ್ತು ನಿರ್ಗಮನದ ನಡುವೆ ಗಟ್ಟಿಗೊಳ್ಳುವ, ವಿಘಟಿತವಾಗುವ ಅಂಶಗಳನ್ನಷ್ಟೆ ವಿವೇಚಿಸುವುದ ಲೇಖಕನಾದ ನನ್ನ ಅನಿವಾರ್ಯ ಕರ್ಮ… ಇಲ್ಲಿ ಯಾರಿಗೂ ಯಾರೂ ಹ್ರಮಿಸುತ್ತಿರ ಬೇಕಾದುದು ಲೋಕ ನಿಯಮ. ಎಲ್ಲಾ ಪಾತ್ರಗಳು ಪರಿಭ್ರಮಿಸುವ ಕೇಂದ್ರ ಪಾತ್ರಕ್ಕೆ ಧಕ್ಕೆಯಾಗಬಾರದು. ಅಮ್ದರೆ ಎಷ್ಟೇ ಪ್ರಯತ್ನಿಸಿದರೂ ಉಪಪಾತ್ರಗಳಾದುವುಗಳು ಕೇಂದ್ರ ಪಾತ್ರದ ಮಟ್ಟಕ್ಕೆ ಏರಲಾರವು… ಅವುಗಳಿಗೆ ಹಾಗೆ ಸ್ಪರ್ಧಿಸುವ ಅರ್ಹತೆಯೇ ಇರುವುದಿಲ್ಲ. ಅರ್ಹತೆ ಪ್ರಶ್ನಿಸಿದರೆ ಸ್ಥಾನಭ್ರಂಶವಾಗದೆ ಇರದು.” ಎಂದು ಅದಕ್ಕೆ ತಿಳಿಹೇಳುವ ಪ್ರಯತ್ನ ಮಾಡಿದೆ.
ಇದರಿಂದ ಅದು ಖತಿಗೊಂಡು ನುಡಿಯಿತು-
“ನೀನೆಂಥ ಲೇಖಕ್ನಿದಿಯೋ ಮಾರಾಯಾ… ಹೇಳಿ ಕೇಳಿ ಮೈಮಾರಿಕೊಂಡು ಬದುಕಿದ ಮೂರು ಕಾಸಿನ ಸೂಳೆ… ಎದೆ ಸೀಳಿದ್ರೆ ಎರಡಕ್ಷರವಿಲ್ಲ… ಆದರೂ… ನಾನು ನೂರಾರು ನಾಟಕಗಳ ಹೆಣ್ ಪಾತ್ರಗಳ ಮಾತ್ನೆಲ್ಲ ಪಟಪಟಾಂತ ಒಪ್ಪಿಸಿಬಿಡಬಲ್ಲೆ. ಎಂಥದೋ ನಾಟಕ ಬರ್ದೋರ್‍ನ ಅರಗಿಸಿಕೊಂಡಿರೋ ನನ್ಗೆ ಯಾಕೋ ನಿನ್ ಮಾತೊಂದೂ ಅರ್ಥಾಗ್ತಿಲ್ಲ ಮಾರಾಯಾ… ಕಾದಂಬ್ರಿ ಅಂದ್ರೇನಂಬೋದೇ ನಂಗೊತ್ತಿಲ್ಲ… ಆದ್ರೆ ಅದೊಂದು ನಮೂನಿ ಪುರಾಣ ಅಂತ ತಿಳ್ಕೊಂಡಿದ್ದೀನಿ… ಆತನ ಹೆಂಡ್ತಿಗೆ ಒಂದು ಲೆವೆಲ್ಲಿನ ಜಾಗ ಕೊಟ್ಟಿರೋ ನೀನು ನನ್ನನ್ಯಾಕೆ ಕೆಳಗಿನ ಲೆವೆಲ್ಲಿನಾಗಿಟ್ಟೆ?… ಇದ್ನ ಕೇಳೊದ್ರಲ್ಲಿ ತಪ್ಪೇನೈತೆ… ಲೇಖಕನಾದ ನೀನು ಹೇಳೋದೊಂದು ಬರಿಯೊದೊಂದು ಮಾಡಿದ್ರೆ ನಾನೆಂಗ ಬಾಯಿ ಮುಚ್ಕೊಂಡು ಸುಮ್ಕಿರ್‍ಲಿ… ವರಲಕ್ಷ್ಮಿಗೆ ಯಾವ ಜಾಗ ಕೊಟ್ಟಿಯೋ ಆ ಜಾಗಾನೂ ನಂಗೆ ಕೊಡು. ಆಕೀಗಿಂತ ನಾನು ಯಾವುದರಾಗ ಕಡ್ಮೆ ಆದೀನಿ… ಹಂಗ ನೋಡಿದ್ರೆ ನಾನೇ ಆಕಿಗಿಂತ ಒಂದು ಕೈ ಮ್ಯಾಲಿದೇನಿ… ಆಕಿ ತನ್ ಗಂಡನ್ನ ಒಂದು ನಿರ್ಜೀವ ಪೆಟರಿ ಥರ, ಕೇವಲ ಒಂದು ಮೆಷಿನ್ನಿನಂಥ ಗಂಡನ ಥರ ರಭೌದು. ಆಕಿ ಆತನ್ನ ಸರ್ಯಾಗಿ ನೋಡ್ಕೊಂಡಿದ್ದರ್‍ಯಾಕೆ ಆತ ನನ್ ಹಾಸಿಗೀಗೆ ಬಂದ್ ಬೀಳ್ತಿದ್ದ… ಮೊದಮೊದ್ಲು ಆತ ಯಕಃಶ್ತ್ ಒಬ್ಬ ಮಿಂಡನಾಗಿ ಚಟ ತೀರಿಸ್ಕೋಳ್ಳಾಕೆ ಬಂದಿದ್ದಿರಭೌದು. ಆದರೆ ಬರ್‍ತಾ ಬರ್‍ತಾ ಆತ ನಂಗೆ ಮಗ ಆದ. ತಂದಿ ಆದ, ಗಂಡ ಆದ, ಮಿಂಡ ಆದ, ಮಾವ ಆದ, ಅಳಿಯಾದ, ಮೈ‌ಆದ, ಮನಸ್ಸಾದ… ಕೊನೀಕೆ ದೇವರ ಜಗುಲಿ ಆದ… ಅದರಂಗ ನಾನೂ ಹಂಗೇನೆ ಆದೆ… ನನ್ನ ಆತನ ಸಂಬಂಧ ನಿಂಗೆ ಹೆಂಗ ಗೊತ್ತಾಗತೈತಿ? ಇದ್ನೆಲ್ಲ ಅರ್ಥ ಮಾಡ್ಕೊಂಡು ಬರದ್ರೆ ಸೈ ಅಂತೀನಪ್ಪಾ… ಶಾಮನ ಎಡಭಾಗಕ್ಕೆ ವರಲಕ್ಷ್ಮೀನ್ನಿಡು ಬಲಭಾಗಕ್ಕೆ ನನ್ನನ್ನಿಡು. ಒಂದು ಕಣ್ಣಿಗೆ ಬೆಣ್ಣೆ ಇನ್ನೊಂದು ಕಣ್ಣಿಗೆ ಸುಣ್ಣ ಇಡೋ ಭೇದಾವ ತೋರಿಸಬ್ಯಾಡ… ಹಿಂಗ ಮಾಡ್ಲೀ ಅಂದ್ರ ನಿನ್ನೆಂಡ್ರೂ ಮಕ್ಳಿಗೆ ಸುಖಾ ಆಗೋದಿಲ್ಲ…” ನಾನು ಕೊತ್ತಲಿಗಿಗೆ ಹೋಗಿ ನೋಡಿದ ಅನಸುಯಮ್ಮಗೂ ಕಾದಮ್ಬರಿಯೊಳಗೆ ರೂಪ ಪಡೆದಿರೋ ಪಡೆಯುತ್ತಿರೋ ಅನಸೂಯಮ್ಮಗೂ ನಡುವೆ ಅಜಗಜಾಂತರ ವ್ಯತ್ಯಸವಿರುವುದರ ಅರ್ಥವಾಯಿತು.
ಕೊತ್ತಲಿಗಿ ಸೋಮವಾರ ಪೇಟೆಯ ಸಹಜ ಗುಣವಾದ ತಾಮಸ ಬಲದಿಂದ ಮುನ್ನುಗ್ಗುವುದು ಸರಿಯಲ್ಲ.
“ನೀನು ವರಲಕ್ಷ್ಮಿಗಿಂತ ಕಡ್ಮೆ ಅಂತ ಯಾಕ ಭಾವಿಸ್ಕೋತಿ ಅನಸೂಯಮ್ಮಕ್ಕಾ… ನಿನ್ ಪಾತ್ರದ ಕಾಲಾಗ ನಾನೂ ನನ್ ಹೆಂಡ್ತೀನೌ ಅದೇಸು ಸಾರಿ ಜಗಳ ಅಡಿದ್ದೀವಿ ಎಂಬುದು ನಿಂಗೇನಾರ ಗೊತ್ತೇನು?”
“ಗರತೋರೆಲ್ಲ ಗರತೇರ ಕಡೇಕಿರ್‍ತಾರ… ನಂಂಅಂಥ ಮೂರ್‍ಕಾಸಿನ ಸೂಳೇರ್‍ಕಡೀಕ ಯಾಕಿರ್‍ತಾರ! ” ಎಂದು ಬೇಸರ ಮತ್ತು ದುಃಖದಿಂದ ನಿಟ್ತುಸಿರು ಇಟಿತು.
ಅದರ ಆ ಸ್ಥಿತಿ ನೋಡಿ ನನ್ನ ಕರುಳು ಚುರಕ್ಕೆಂದಿತು.
“ನಾನಿದ್ದೀನಲ್ಲ ಅನಸೂಯಮ್ಮ… ”
“ನೀನಿದ್ರೆ ತಗೊಂಡೆನ್ಮಾಡ್ಲಿ ಸಾರೂ… ವರಲಕ್ಷ್ಮಿಯಂಥೋರು , ನಿನ್ನೆಂಡ್ತಿಯಂಥೋರು ನನ್ ಪರ ನಿಂತ್ಕೊಂಡು ಮಾತಾಡುವಂತಾದಾಗ್ಲೇ ನನ್ಗೆ ಸಮಾಧಾನ ಆಗೋದು.!”
ಅದೆಂಗ ಸಾಧ್ಯ? ನಿಮ್ದು ನೋಡಿದ್ರೆ ಉತ್ತರ ಧ್ರುವ ಅವರ್‍ದು ನೋಡಿದ್ರೆ ದಕ್ಷಿಣ ಧ್ರುವ… ನಿಮ್ ಅವ್ರ ಬದುಕಿನ ನಡುವೀನು ದೊಡ್ಡದೊಂದು ಕಂದಕ ಹುಟ್ಕೊಂಡೈತೆ”.
“ಅದ್ನ ತುಂಬಿ ನಮ್ಮೆಲ್ಡು ಧ್ರುವಾನು ಹತ್ರ ಮಾಡೋ ಕೆಲಸಾನ ನಿಮ್ಮಂಥೋರು ಮಾಡಬೇಕು ಸಾರು… ನಿಷ್ಠೆ ವಿಶಯದಾಗ ನಾವವ್ರಿಗಿಂತ ಒಂದು ಕೈ ಬಲ…”
“ಕಂದಕ ತುಂಬಿ ಸರಿಮಾಡೋದು ನನ್ ಕೆಲಸವಲ್ಲ ತಾಯೀ… ಸಮಾಜ ಆ ಕೆಲಸಾನ ಮಾ‌ಅಬೇಕಿತ್ತು. ಆದ್ರೆ ಅದೇ ನಿಂತ್ಕೊಂಡು ಬೆಳೆಸತೈತಂದ್ಮೇಲೆ ಏನು ಮಾಡೊದೈತೆ… ಲೇಖಕನಾದ ನಂದೇನಿದ್ರು ತೇಪೆ ಹಚ್ಚೋ ಕೆಲಸ ನೋಡಮ್ಮಾ… ಶಾಮಣ್ಣ ಯಾರೊಬ್ಬರ ಸೊತ್ತಲ್ಲ… ಅವ್ನೇನು ನನ್ ಚಿಗದೊಡ್ಡಪ್ನ ಮಗ್ನಲ್ಲ – ಹಂಗ ನೋಡಿದ್ರೆ … ಏನೋ ಒಬ್ಬೊಬ್ನೀಗೆ ಒಂದೊಂದ್ನಮೂನಿ ಆಗಿದ್ದ… ಹೆಂಡತಿಗೆ ಗಂಡನಾಗಿದ್ದ, ತಾಯಿಗೆ ಮಗನಾಗಿದ್ದ, ಸರಕಾರಕ್ಕೆ ನೌಕರನಾಗಿದ್ದ, ಹಾರ್ಮೋನಿಯಂಗೆ ಮಾಸ್ತರನಾಗಿದ್ದ; ಹಾಡಿಗೆ ಹಾಡುಗಾರನಾಗಿದ್ದ; ಮಕ್ಕಳಿಗೆ ತಂದೆಯಾಗಿದ್ದ; ಕ್ರೋಧಕ್ಕೆ ಮೋಹವಾಗಿದ್ದ; ಮೋಹಕ್ಕೆ ಮತ್ಸರವಾಗಿದ್ದ, ಅರಿಷಡ್ವರ್ಗಗಳನ್ನು ಮುಕುಳೀ ಅಡೀಲಿ ಹಾಕ್ಕೊಂಡು ಅದರ ಮ್ಯಾಲ ವಿರಾಜಮಾನವಾಗಿ ಬದುಕಿದ್ದ… ಆದರೆ ಯಾವುದೋ ಮಹಾತ್ಮರಿಗಿರದಿದ್ದ ಅಪರೂಪದ ಬದ್ಕೋ ಗುಣ ಅವನಲ್ಲಿತ್ತು ಕಣಮ್ಮಾ… ಅದ್ನ ಲೋಕಕ್ಕೆ ತೋರಿಸೋ ಕೆಲಸಾನ ನಾವೆಲ್ರು ಮಾಡ್ಬೇಕು… ಕೈಮುಗ್ದು ಕೇಳ್ಕಂತಿದೀನಿ… ಕರುಳ್ನ ನಾಲಗೆ ಮ್ಯಾಲ ತಂದ್ಕೊಂಡು ಅಂಗಲಾಚ್ತಿದೀನಿ… ನೀವೆಲ್ರು ಹೆಚ್ಚು ಕಡ್ಮೆ ಎಂದು ಭಾವಿಸ್ದೆ ನಿಮ್ ನಿಮ್ಮ ಭಾಗದಾಗ ಸ್ಥಾನಮಾನದಾಗ ನಿಂತ್ಕೊಂದು ಸಹಕರಿಸ್ರೀ ತಾಯಿ… ಯಾರ್ದೋ ಡಯಲಾಗ್ನ ಯಾರೋ ಹೇಳಿಬಿಟ್ರೆ ನಾಟಕ ನಡೆಯೋದಾದ್ರು ಯಂಗೆ… ಸುಣ್ಣ ಅಡಿಕೆ ಎಲೆ ಒಂದು ನಿರ್ದಿಷ್ಟ ಪ್ರಮಾಣದಲ್ಲಿ ಒಂದಾದಾಗ ಮಾತ್ರ ಅದು ತಾಂಬೂಲ ಅನ್ನಿಸಿಕೊಳ್ತದಮ್ಮಾ”
“ನಾನೇನು ನಿನ್ನ ಹೆಚ್ಚಿಗೆ ಕೇಳ್ತಿಲ್ಲ ಸಾರೂ… ಕಾದಂಬರಿಯೊಳಗ ಒಂದೊಳ್ಳಿ ಜಾಗದಾಗ ನಮ್ಮನ್ನು ಕುಂಡ್ರಿಸು… ಅಷ್ಟೆ. ಸಮಾಜದಾಗಂತೂ ಕಿಮ್ಮತ್ತು ಕಳ್ಕೊಂಡಿರೋ ಕವಡೆ ಅಗೀವಿ… ಕಥಾನಕದೊಳಗಾದ್ರು ಚಲಾವಣೆ ಆಗೋಣ ಎಂದು ಆಕೆ ಹೇಳುತ್ತಲೆ ಸೋಮವಾರಪೇಟೆಯ ರಾಖೇಶ, ದುರುಗಪ್ಪ, ಸುಂಕಲವ್ವ ಚವುಡವ್ವ ಇವೇ ಮೊದಲಾದ ಪಾತ್ರಗಳು ಪಕಪಕ ನಗಾಡಿ ಅನಸೂಯಮ್ಮನ ಪಾತ್ರಕ್ಕೆ ಬೆಂಬಲ ಸೂಚಿದಿದವು.
ಅವುಗಳ ಪಟ್ಟು ನನ್ನ ಮಾತಿನ ಪೆಟ್ಟಿನಿಂದ ಸಡಿಲಗೊಳ್ಳುವ ಲಕ್ಷಣ ಕಾಣಿಸದಿರುವುದು ಕಂಡು ನನಗೆ ನಿರಾಸೆಯಾಯಿತು. ಅವುಗಳ ವಾದದಲ್ಲಿ ನಿಜ ಇಲ್ಲದಿರಲಿಲ್ಲ. ಸಾಂಪ್ರದಾಯಿಕ ಸಮಾಜದ ನೆಲಗಟ್ಟಿನ ಮೇಲೆ ನಿಂತು ಕಾದಂಬರಿ ರಚಿಸುತ್ತಿರುವ ನಾನು ಸರ್ವೊತೋಮುಖ ಒತ್ತಡಕ್ಕೆ ಸಿಲುಕಿದ ತೆಳು ಸಿಲವಾರ ದಬ್ಬಿಯಂತಾದೆನು. ಪ್ರಾಸಿಕ್ಯುಷನ್ ಮಾಡುವುದಷ್ಟೆ ನನ್ನ ಕೆಲಸ. ಅವು ತಮ್ಮನ್ನು ತಾವು ಹೇಗೆ ಸಮರ್ಥಿಸಿಕೊಳ್ಳುವವೋ ಸಮರ್ಥಿಸಿಕೊಳ್ಳಲಿ! ತೀರ್ಪು ಕೊಡೋದು ನ್ಯಾಯಾದೀಶರಾದ ಓದುಗ ಮಹಾಶಯರಿಗೆ ಬಿಟ್ಟುಕೊಟ್ಟು ನೆಮ್ಮದಿಯಿಂದ ಇದ್ದರಾಯಿತು ಎಂದುಕೊಂಡೆ.
ಹಸ್ತಪ್ರತಿಯೊಳಗಿಂದ ಶಾಮಣ್ಣ ಪಾತ್ರವು ಆಕಳಿಸುತ್ತಿರುವಂತೆ, ಸೆಕೆಗೆ ಸಿಕ್ಕು ಮುಲುಕಾಡುತ್ತಿರುವಂತೆ ಸದ್ದು ಮಾ‌ಇತು. ಒಂದು ಪುಟ್ಟ ಕೋಣೆಯಲ್ಲಿ ಆ ಕಡೆ ಬಿಗರನ್ನೂ, ಈ ಕಡೆ ಬೀಗರನ್ನೂ ಒಟ್ಟಿಗೆ ಸೇರಿಸಿದಾಗ, ಅವರ ನಡುವೆ ತುಂಬು ಗರ್ಭಿಣಿ ಹೆಂಗಸೋರ್ವಳ ಪರಿಸ್ಥಿತಿ ಹೇಗಿರುತ್ತದೋ ಹಾಗಾಗಿತ್ತು ಶಾಮಣ್ಣನ ಪರಿಸ್ಥಿತಿ ಕಾದಮ್ಬರಿಯ ಹೆಜ್ಜೇನಿನೆ ಹುಟ್ಟಿನೊಳಗೆ.
ಅದು ಮೆಲ್ಲನೆ ಆ ಗಜಿಬಿಜಿಯಿಂದ ಬಿಡಿಸಿಕೊಂಡು ಮೆಲ್ಲನೆ ಹೊರಕ್ಕೆ ಬಂದು-
“ಲೋ ಕುಂವೀ ಎಂಬ ಧೂರ್ತನೇ… ನಮ್ಮನ್ನೆಲ್ಲ ಈ ನಿರ್ವಾತ ಪ್ರದೇಶದಲ್ಲಿ ಕೂಡಿ ಹಾಕಿಟ್ಟು ಅದಾವ ಪುರುಷಾರ್ಥ ಸಾಧಿಸಬೇಕೆಂದುರುವಿಯೋ ಪಾಪಾತ್ಮನೇ… ಮುಖ್ಯ ನನ್ನನ್ನಿಲ್ಲಿಂದ ಬಿಡುಗಡೆ ಮಾಡಿ ಪುಣ್ಯ ಕಟ್ಕೋ ಮಾರಾಯಾ… ಹೇಳದೆ ಕೇಳದೆ ಇಲ್ಲಿಂದ ಅಂತರ್ಧಾನವಾಗಿ ಕೈಗ್ ಸಿಕ್ಕದಂತೆ, ಹತ್ತು ನನ್ನ ಹಿಂಬಾಲ ಎಮ್ದು ಹೇಳಿ, ಹೋಗಬೌದು… ಆದರೆ ಅದು ನಾಕು ಮಂದಿ ಮೆಚ್ಚೋ ಕೆಲಸವಲ್ಲ… ಬದುಕಿದ ಪ್ರಾಯಶ್ಚಿತ್ತಕ್ಕಾಗಿ ನಿನ್ನ ಕಾದಂಬರಿಯೊಳಗೆ ಮರುಸೃಷ್ಟಿ ಪಡೆಯಬೇಕೆಂಬ ಬಯಕೆಯಿಂದಲೇ ನಾನು ತೂಗು ಬಾವಲಿಯಂತೆ‌ಅಕ್ಷರಗಳಿಗೆ ಜೋತುಬಿದ್ದಿರುವುದು. ಇದನ್ನೇ ನನ್ನ ದೌರ್ಬಲ್ಯವೆಂದು ಭಾವಿಸಬೇಡ” ಎಂದು ಒಂದೇ ಸಮನೆ ಸಿಡಿಮಿಡಿಗುಟ್ಟತೊಡಾಗಿತು.
“ನೀವ್ಯಾಕೆ ಇಷ್ಟೊಂದು ಅವಸರ ಮಾಡ್ತಿದ್ದೀಯಾ… ಅರ್ಥವಾಗ್ತಿಲ್ಲ ಶಾಮೂ… ತೆಲೆ ಏರೋಕೂ ಮೊದ್ಲೆ ಪಾತ್ರಗಳು ಅಭಿನಯಿಸೋಕೆ ಅವಸರ ಮಾಡಿದ್ರೆ ಹೇಗಯ್ಯಾ… ನೋಡಿದವರಾದ್ರು ಏನಂದಾರು?” ಎಂದು ಸಮಾಧಾನ ಪಡಿಸಲೆತ್ನಿಸಿದೆ.
“ನೀನು ಸತ್ತೋ ಬದುಕಿಯೋ ಅಕ್ಷರದಲ್ಲಿ ಸಿಕ್ಕಾಕ್ಕೋ… ಆಗ ಗೊತ್ತಾಗ್ತದೆ ನನ್ನ ಸಂಕಟ. ಅದಿರ್‍ಲಯ್ಯಾ ಹೋಮ್ ಸಿಕ್ಕೇ… ನನ್ನ ಪ್ರಾಣಪದಕವಾದ ಅನಸೂಯಳ ಜೊತೆ ಜಟಪಟಿ ಇಳ್ದಿದ್ದೆಯಲ್ಲಾ ಏನ್ಸಮಾಚಾರ?’
ಅದೇ ಕಣಪ್ಪಾ… ನಿನ್ನ ಧರ್ಮಪತ್ನಿಯ ಸ್ಥಾನಮಾನ ನನ್ಗೂ ಕೊಡು… ನಾನು ಆಕೆಗಿಂತ ಹೆಚ್ಚೂಂತ ವಾದಿಸಿದಳಪ್ಪಾ! ನಾನೇಷ್ಟು ಹೇಳಿದರೂ ಕೇಳ್ತಾ ಇಲ್ಲ ಆಯಮ್ಮ. ನೀನಾದ್ರು ಒಂದು ಮಾತು ಹೇಳಿ ಕಾದಂಬರಿ ಸುಗಮವಾಗಿ ಓಡ್ಲಿಕ್ಕೆ ಅನುಕೂಲ ಮಾಡಿಕೊಡಿಸಬಾರ್‍ದೇನು?” ಎಮ್ದು ಅಂಗಲಾಚಿದೆನು.
ನಿನ್ನ ಧರ್ಮವನ್ನೊಯ್ದು ಸುಡುಗಾಡಿಗಿಡು… ತಾಳಿ ಕಟ್ಟಿಸ್ಕೊಂಡ ಮಾತ್ರಕ್ಕೆ ಒಂದು ಹೆಣ್ಣು ಹೆಂಡತಿ ಆಗ್ಲಿಕ್ಕೆ ಸಾಧ್ಯವೇನೋ ಬೆಪ್ಪೆ. ಇಂಥ ಯಾವುದೇ ವಿವಾವೇತರ ಸಮ್ಬಂಧದಲ್ಲಿ ಸಿಲುಕಿ ಅನುಭವವಿರದ ನಿನ್ನಂಥೋರು ಗೆರೆ ಕೊರೀಲಿಕ್ಕಷ್ಟೆ ಲಾಯಕ್ಕು… ಮಾನವ ಸೂಕ್ಷ್ಮ ಸಮ್ಬಂದಹಗಳು ನಿನ್ನಂಥೋರಿಗೆ ಅರ್ಥ ಆಗೋದು ಸಾಧ್ಯವಿಲ್ಲ… ಎಲವೋ ಅಕ್ಷರಾವಲಂಬಿಯೇ! … ನಿನಗೆನಾದ್ರು ಒಂಚೂರು ಮಾನ ಮರ್ಯಾದೆ‌ಇದ್ದದ್ದೇ ಆದ್ರೆ… ನನ್ನ ಅನಸೂಯಳಿಗೆ ಧರ್ಮಪತ್ನಿಗಿಂತ ಮಿಗಿಲಾದ ಸ್ಥಾನಮಾನ ಕೊಡು ಅಷ್ಟೆ!” ಎಂದು ಖಡಾಖಂಡಿತವಾಗಿ ನುಡಿಯಿತು.
“ಹೌದಪ್ಪ… ನಿನಗಿರೋವಷ್ಟು ಪ್ರಪಂಚ ಜ್ಞಾನ ನನಗಿಲ್ಲದಿರಬಹುದು. ಆದರೆ ಮನುಷ್ಯ ಸಂಬಂಧಗಳ ಅಜ್ಞಾನವಿರುವಂಥ ವ್ಯಕ್ತಿ ಮಾತ್ರ ಖಂಡಿತ ನಾನಲ್ಲ. ಹಾಗೆ ಮಾಡಿದ್ರೆ ಸಮಾಜ ಏನೆಂದ್ಕೊಳ್ತದೆ! ನಿಮ್ಮ ತಾತನವರ ಆತ್ಮವಾದ್ರು ಏನಂದ್ಕೊಂಡೀತು!”
“ಈ ನಿನ್ನ ಸಮಾಜವನ್ನೊಯ್ದು ಮೊಹರಂ ಅಗ್ನಿಕುಂಡಕ್ಕೆ ಹಾಕು. ಅದು ಆರು ಕೊಟ್ರೆ ಅತ್ತೆ ಕಡೆ ಮೂರು ಕೊಟ್ರೆ ಸೊಸೆ ಕಡೆ… ಬೆಕ್ಕುಬೆಣ್ಣೆ ತೂಗೋದೂ ಒಂದೆ… ಅದು ನ್ಯಾಯ ಹೇಳೋದೂ ಒಮ್ದೆ… ಅದರ ಬಗ್ಗೆ ಪುರಾಣ ಬಿಚ್ಚಬೇಡ… ನಾನು ಸತ್ತದ್ದೇ ಹೆಂಡತಿಯ ಪರಮಪಾತಿವ್ರತ್ಯದಿಂದ. ನಾನು ಸತ್ತು ಬದುಕಿರುವುದೇ ಅನಸೂಯಳ ನಿರ್‍ವ್ಯಾಜ ಅಂತಃಕರಣದಿಂದ, ಪ್ರೇಮದಿಂದ ಎಂಬುದನ್ನು ಮರೆಯಬೇಡ…. ಕಾದಂಬರಿಯೊಳಗಿನ ಪಾತ್ರಸ್ಥಾನದಲ್ಲಿದ್ದುಕೊಂಡು ನಾನು ನಿನಗೆ ಆಜ್ಞೆ ಮಾಡ್ತಿದೀನಿ… ಮರ್ಯಾದೆಯಿಂದ ಅವಳಿಗೆ ಹೆಂಡತಿಗಿಂತ ಹೆಚ್ಚದ ಸ್ಥಾನಮಾನ ಕೊಡು” ಎಂದು ಗುಡುಗುಡನೆ ಗುಡುಗಿತು.
ಬದುಕಿರುವ ಪರ್ಯಂತರ ದುರ್ಬಲತೆಯಿಂದಲೂ ಕೀಳರಿಮೆಯಿಂದಲೂ ಒಂದೇ ಸಮನೆ ನೆರಳುತ್ತಿದ್ದ ಶಾಮಣ್ಣ ಸತ್ತ ಮೇಲೆ ಎಷ್ಟೊಂದು ಶಕ್ತಿಶಾಲಿಯಾಗಿರುವನಲ್ಲ ಎಂದುಕೊಂಡೆ. ಕೇಂದ್ರ ಪಾತ್ರ ಮಾಡಿದ್ದರಿಂದ ಅವನಿಗೆ ತೀರ ಸೊಕ್ಕು ಬಂದುಬಿಟ್ಟಿದೆ…. ಇದು ಮೊದಲೇ ಗೊತ್ತಗಿದ್ದಲ್ಲಿ ಸೂಳೆಯನ್ನೋ, ಹೆಂಡತಿಯನ್ನೋ, ತಾಯಿಯನ್ನೋ ಅಥವಾ ಶಿವರಾಮ ಶಾಸ್ತ್ರಿಗಳಂತ ಹಸುಮಕ್ಕಳ ಪ್ರಜ್ಞಾ ಪ್ರವಾಹದ ಮೂಲಕ ಕಥೆ ಹೇಳುವ ಕೆಲಸ ಮಾಡಬಹುದಿತ್ತು. ನನ್ನ ಗೆಳೆಯ ಎಂಬ ಕಾರಣದಿಂದಾಗಿ ಶಾಮನನ್ನೇ ಕೇಂದ್ರಪಾತ್ರವಾಗಿರಿಸಿಕೊಂಡು ಅವನ ಸುತ್ತ ಉಪಪಾತ್ರಗಳನ್ನು ಬೆಳೆಸುವ ಕಠಿಣತಮ ಕಾರ್ಯಕ್ಕೆ ತೊಡಗಿದ್ದು, ಈಗಲಾದರೂ ಇಷ್ಟು ಅಷ್ಟು ಸೇರಿಕೊಂಡು ಹಲೋ ಹಲೋ ಎನ್ನುತ್ತಿದ್ದಾನೆ, ಬದುಕಿದ್ದಾಗ ಮುಖ್ಯವಾಗಿ ಮದುವೆ ಆದ ನಂತರ ಎದುರಿಗೆ ಬಂದರೂ ಹಲೋ ಎಂದವನಲ್ಲ. ಮೊದಲನೆ ಮಗು ಹುಟ್ಟಿದಾಗಿರಲಿ, ಎರಡನೆ ಮಗ ಹುಟ್ಟಿದಾಗಲೂ ನಾಮಕರಣಕ್ಕೆ ಕರೆದವನಲ್ಲ… ಮಿತ್ರದ್ರೋಹಿ ಎಂದು ಲೇಬಲ್ ಅಂಟಿಸಿ ಆಗಲೇ ದೂರ ಇಟ್ಟಿದ್ದ ಮಹಾನುಭಾವ, ಅಂಥವನನ್ನು ಬಲು ಕಕ್ಕುಲಾತಿಯಿಂದ ಆಧುನಿಕವಾಗಿ ಪೌರಾಣಿಕವಾಗಿ ಪದವಿಗೇರಿಸಿದ್ದು ನನ್ನ ಮೂರ್ಖತನ.
“ನೀನು ಹೇಳೋದು ಸರಿ ಅಲ್ಲ ಅಂತ ಹೇಳಲಾರೆ ಮಿತ್ರಮಾ… ಬದುಕಿದಾಗ ನೀವು ಯಾವ ಯಾವ ಆಯಕಟ್ಟಾದ ಜಾಗದಲ್ಲಿದ್ದು ಏನೇನು ಕೆಲಸ ಮಾಡಿದ್ದೀರೋ ನನಗೇನು ಗೊತ್ತು? ಕಲ್ಪಿಸಿಕೊಂ
ಡು ಬರೆದ್ರೂ ಕಷ್ಟ ಬರೆಯದಂತಿದ್ರೂ ಕಷ್ಟ. ಓದುಗರಿಂದ ನಿಷ್ಠುರ ಕಟ್ಟಿಕೊಳ್ಳೋದಾದ್ರು ಯಾಕಪ್ಪಾ?… ನಿಮ್ಮ ಕಥೆನ ನೀವೇ ಹೇಳ್ಕೊಂಡು ಬಿಡ್ರಿ… ಲಿಪಿಕಾರನಾಗಿ ನಾನು ಬರೆದುಕೊಂಡೋಗ್ತೀನಿ… ಏನಂತೀಯಾ” ಎಂದು ಕೈ ತೊಳೆದುಕೊಳ್ಳುವ ಬಯಕೆ ವ್ಯಕ್ತಪಡಿಸಿದೆ.
ಎಲಾ ಚಾಣಾಕ್ಷ! ನಮ್ಮ ಕಥೇನ ನಮ್ಮ ತಲೀಗೆ ಸುತ್ ನೋಡ್ತಿದ್ದೀಯಲ್ಲಾ! ನಮ್ದು ನಾವೇ ಹೇಳ್ಕೊಂಡ್ರೆ ನೀನೇನು ಬರೆದಂತಾಗ್ತದೊ ಂಆನ್ನೂ. ಈಗಾಗ್ಲೆ ಸತ್ತು ಸುಡುಗಾಡು ಸೇರಿರೋ ನಮ್ಮ ಬಗ್ಗೆ ನೀನೇನು ಬರ್‍ಕೊಂಡ್ರು ನಾವು ಮಾಡೋದೇನು? ಅದೂ ಅಲ್ಲದೆ ಬದುಕಿನೊಳಗೆ ನವೆಯುತ್ತಿರುವ ಅನುಸೂಯಾಳಿಗೆ ಏನಾದ್ರು ತೊಂದರೆ ಆಗ್ತದೆನ್ನೋ ಭಯ ಕಾಡ್ತಿದೆ. ಈ ಕಾದಂಬರಿ ಏನಾದ್ರು ಬದುಕಿರೋ ಅವಳಿಗಾಗಲೀ,ಸತ್ತಿರೋ ನಮಗಾಗ್ಲೀ ಏನಾದ್ರು ಸಹಾಯ ಮಾಡೀತಾ… ಹ್ಹೂ…ಹ್ಹೂ …! ಬಿಲ್ಕುಲ್ ಇಲ್ಲ… ವರಲಕ್ಷ್ಮಿ ಹಡೆದಿರೊ ಎರಡನೆ ಮಗ ಅಶ್ವಥ್‌ನ್ನಾದ್ರು ಅವಳಿಗೆ ಕೊಡಿಸೋ ಪ್ರಯತ್ನ ಮಾಡಿ ವಿಫಲನಾದೆ… ಅದಕ್ಕಿಂತ ಆ ಮುಂಡೆ (ನಾನು ಬದುಕಿದ್ದಾಗ್ಲೆ ವಿಧವೆ ಆದ್ಲು ಅಂತ ಇಟ್ಕೋ) ಒಪ್ಲಿಲ್ಲ… ಬ್ರಾಹ್ಮಾಣ್ಯದ ಹುತ್ತದೊಳಗೆ ಆ ಮಕ್ಕಳನ್ನು ಕಟ್ಟಿಕೊಂಡು ಅದೇನು ಸಾಧಿಸಿದ್ದಾಳೋ ಎನೋ? ಯಾರು ಬಲ್ಲರು… ನೀನು ಮೊದಲೇ ಅಂದರಿಕಿ ಮಂಚಿವಾಡು… ಅವರಲ್ಲಿ ಅವರಂತೆಯೇ ತಲೆಹಾಕ್ತಿ… ಇವರಲ್ಲಿ ಇವರಂತೆಯೇ ತಲೆಹಾಕ್ತಿ… ಯಾರೊಂದಿಗೂ ನಿಷ್ಠುರ ಕಟ್ಕೊಳ್ಳೋ ಜಾಯಮಾನದವನಲ್ಲ ನೀನು… ನಾನು ಸತ್ತೊಡನೆ ನಮ್ಮ ಮನೆಯನ್ನು ಕೊಂಡವನ ಮಗನಾದ ನೀನು… ನಮ್ಮ ಕತೆಯ ಉರುಳಿಗೆ ನಮ್ಮನ್ನೇ ಬಲಿಕೊಡ್ಲಿಕ್ಕೆ ನೋಡ್ತಿದೀಯಾ? ಎಷ್ಟು ಧೈರ್ಯ ಕಣೋ ನಿನಗೆ…” ಶಾಮಣ್ಣ ಪಾತ್ರವು ಅಸಹಕಾರ ಚಳುವಳಿಯನ್ನು ಆರಂಭಿಸಿತು.
ಕಟಕಟೆಯಲ್ಲಿ ನಿಂತಿರುವ ವ್ಯಕ್ತಿಯೇ ಪ್ರಾಸಿಕ್ಯುಟರ್‍ನನ್ನು ಪ್ರಾಸಿಕ್ಯೂಷನ್ನಿಗೆ ಓಳಪಡಿಸಿದ ಉದಾಹರಣೆ ಪ್ರಪಂಚದಲ್ಲಿ ಎಲ್ಲಿಯಾದರೂ ನಡೆದಿದ್ದರೆ ಇದೊಂದೆ ಎಂದು ಹೇಳಬಹುದು.
ತಲೆ ಮೊಸರು ಗಡಿಗೆ ಆಗುತ್ತಿರುವಂಥ ಅನುಭವವಾಯಿತು. ಇಡೀ ಹಸ್ತಪ್ರತಿಯನ್ನು ಅಗ್ನಿಗಾಹುತಿ ಮಾಡಲು ಶ್ರೀಮತಿಗೆ ಕೊಡುವುದೇ ಮೇಲೆಂದೆನ್ನಿಸಿತು. ಹಿಂದೆ ಕೂಡ ಇಂಥ ಬೇಸರ ಆಗದೆ ಇರಲಿಲ್ಲ… ಕೈ ಚೆಲ್ಲಿದಾಗ ಚನ್ನಬಸವಣ್ಣ “ನೀನೇ ಹೀಗೆ ಹೆದರಿ ದ್ರ ಸರ್‍ಕೊಂಡ್ರೆ ಹೇಗೆ ಕುಂವೀ? ಭಟ್ಟಿ ವಿಕ್ರಮಾರ್ಕ ಬೇಸರ ಮಾಡ್ಕೊಂಡಿದ್ರೆ ಅವ್ನೀಗೆ ಬೇತಾಳ ವಶಪಡಿಸಿಕೊಳ್ಳಿಕ್ಕೆ ಸಾಧ್ಯ ಆಗ್ತಿತ್ತೇನು? ಕಾದಮ್ಬರಿಯ ಪಾತ್ರಗಳನ್ನು ದಬಾಯಿಸಲರಿಯದ ನೀನು ಸಮಾಜದ ಜೀವಂತ ಪಾತ್ರಗಳನ್ನು ಹೇಗೆ ದಬಾಯಿಸ್ತೀಯಾ…? ಲೇಖಕ ನಿಷ್ಠುರವಾದಿಯಾಗಿರಬೇಕಪ್ಪಾ… ಲೋಹಿಯಾ ಏನು ಹೇಳಿದ್ದಾರೆ ಗೊತ್ತೆ!” ಎನ್ನುತ್ತಿದ್ದಂತೆ ನಾನು ಹೆದರಿದೆ… ಅನಾವಶ್ಯಕವಾಗಿ ಲೋಹಿಯಾರನ್ನು ಎಳೆದುಕೊಂಡು ಬಂದು ಹಿಂಸೆ ಕೊಡುವುದು ನನಗೆ ಸರಿ ಕಾಣಲಿಲ್ಲ…
“ನೋಡು ಶಾಮಾ ಸಾವು ಎಂಬ ಬಡ್ತಿ ದೊರಕಿದ ಧೈರ್ಯದಿಂದ ಬಾಯಿಗೆ ಬಂದಂಗ ಮಾತಾಡಬೇಡ… ನನ್ನ ಮೂಗಿನ ನೇರಕ್ಕೆ ನಾನು ಬರ್‍ಕೊಂದು ಹೋಗೋನಾಗಿದ್ರೆ ಎಂದೋ ಒಂದೇ ಏಟಿಗೆ ಬರ್‍ದು ಮುಗಿಸ್ತಿದ್ದೆ… ನನ್ನ ಪ್ರಾಣಮಿತ್ರನಾಗಿದ್ದ (ಎಷ್ಟು ಪ್ರೀತಿಸ್ತಿದ್ದೆನಂತ ನಿನಗೂ ಗೊತ್ತಿಲ್ಲದಿಲ್ಲ) ನೀನು ಕೇಂದ್ರವಾಗುಳ್ಳ ಕಾದಂಬರೀನ ಕಪ್ಪು ಬೀಲುಪು ಮಾಡೋ ಆಸೆ ನನಗಿಲ್ಲ… ನಿನ್ನ ಬಗ್ಗೆ ನೀನು ಸುಳ್ಳಾದ್ರು ಹೇಳ್ಕೋ ನಿಜನಾದ್ರು ಹೆಳ್ಕೋ… ತೀರ್ಪು ಕೊಡೋರು… ಪಾತ್ರಗಳನ್ನು ಅವುಗಳ ಜಾಯಮಾನಕ್ಕನುಗುಣವಾಗಿ ಜಾಗಕ್ಕೆ ಕೂಡ್ರಿಸೋರು ಓದುಗರು , ಅದರ ಬಗ್ಗೆ ಈಗ್ಯಾಕೆ ತಲೆಕೆಡಿಸಿಕೊಳ್ಳೋದು… ಹೇಳೋದ್ನ ಪ್ರಾಮಾಣಿಕವಾಗಿ ಹೇಳಿದ್ದೀನಿ… ನೀನು ಹೇಳಿದ್ರೆ ಹೇಳು… ಬಿಟ್ರೆ ಬಿಡು … ಅಷ್ಟೆ… ನಿನ್ನ ದಾರಿ ನಿನ್ಗೆ, ನನ್ನ ದಾರಿ ನನಗೆ… ಏನಂತೀಯಾ?” ಎಂದು ಕಡ್ಡಿ ಮುರಿದಂತೆ ಬೇಸರಗೊಂಡು ಹೇಳಿದೆ. ಎಲ್ಲಿವರೆಗೂ ನೀನೇ ಇಂದ್ರ, ಚಂದ್ರ ಅಂತ ಮಸ್ಕ ಹೊಡೆಯುತ್ತ ಕಾಲಕ್ಷೇಪ ಮಾಡುವುದು?
ನನಗು ನಿಷ್ಟುರವಾಗಿ ಮಾತಾಡಲು ಬರುತ್ತದೆ ಎಂದು ಗೊತ್ತಾದ್ದರಿಂದಲೋ ಅಥವಾ ನಿಷ್ಟುರ ಕಟ್ಟಿಕೊಂಡರೆ ಲೇಖಕನೊಬ್ಬ ವಾಚಾಮಗೋಚರವಾಗಿ ಬರೆಯಬಹುದೆಂದೋ ಏನೋ ಅದು ನಲವತ್ತೈದು ಸೆಂಟಿಗ್ರೇಡಿನಿಂದ ಹತ್ತು ಡಿಗ್ರಿ ಸೆಂಟಿಗ್ರೇಡಿಗಿಳಿದು ಮುಖವನ್ನು ಒಂದು ನಮೂನಿ ಮಾಡಿತು.
“ಪರವಾ ಇಲ್ಲಯ್ಯಾ… ನಿಮ್ಗೂ ಮುಖ ಮುಲಾಜು ನೋಡ್ದೆ ಮಾತಾಲಿಕ್ಕೆ ಬರ್‍ತದೆ… ಇದೇ ಜಾಯಮಾನ ನಾನು ನಿನ್ನಿಂದ ಬಯಸಿದ್ದು… ನಾನು ಸತ್ತ ಮೇಲಾದ್ರು ಇದ್ನ ಗಳಿಸಿಕೊಂಡಿದ್ದೀಯಲ್ಲ ಅದೇ ಸಂತೋಷ’ ಎಂದು ಮೆತ್ತಗೆ ನುಡಿಯುತ್ತ ಸ್ವಲ್ಪ ಹತ್ತಿರಕ್ಕೆ ಬಂದು, ವಿಷಾದಪೂರ್ಣ ಧ್ವನಿಯಲ್ಲಿ “ನನ್ನ ಬದುಕಿನಲ್ಲಿ ಏನು ವಿಶೇಷ ಕಂಡು ಕಾದಂಬರಿಗೆ ಬಲಿ ಕೊಡಲು ನಿರ್ಧರಿಸಿರುವಿಯೋ ಏನೋ? ನಾನು ಬದುಕಿದ್ದಷ್ಟು ಕಾಲ ಸಮಾಜಕ್ಕೆ ಭಾರವಾಗಿದ್ದೆ… ಗಂಡಂದಿರಲ್ಲೇ ಅತಿ ಕೆ
ಟ್ಟ ಗಂಡ ಅನ್ನಿಸ್ಕೊಂಡೆ; ತಂದೆಯಮ್ದಿರಲ್ಲೇ ಅತಿ ಕೆಟ್ಟ ತಂಡೆ ಅನ್ನಿಸ್ಕೊಂಡೆ, ಕುಡುಕರಲ್ಲೇ ಅತಿ ಕೆಟ್ಟ ಕುಡುಕ ಅನ್ನಿಸ್ಕೊಂಡೆ… ಜೂಜುಕೋರರಲ್ಲೇ ಅತಿ ಕೆಟ್ಟ ಜೂಜುಕೋರ ಅಂತ ಅನ್ನಿಸ್ಕೊಂಡೆ, ಮಿಂಡರಲ್ಲಿ ಅತಿ ಕೆಟ್ಟ ಮಿಂಡ ಅಂತ ಅನ್ನಿಸ್ಕೊಂಡೆ… ನೌಕರರಲ್ಲೇ ಅತಿ ಕೆಟ್ಟ ನೌಕರ ಅಂತ ಅನ್ನಿಸ್ಕೊಂಡೆ; ನಾಗರೀಕರಲ್ಲೇ ಅನಾಗರೀಕ ಅಂತ ಅನ್ನಿಸ್ಕೊಂಡು ಪಾದಚಾರಿಗಳಲ್ಲೇ ಅತಿ ಕೆಟ್ಟ ಪಾದಚಾರಿ ಅಂತ ಅನ್ನಿಸ್ಕೊಂಡೆ, ರೋಗಿಗಳಲ್ಲೇ ಅತಿ ಕೆಟ್ಟ ರೋಗಿ ಮತ್ತು ಅವಿಧೇಯ ರೋಗಿ ಅಂತ ಅನ್ನಿಸ್ಕೊಂಡೆ… ಖೈದಿಗಳಲ್ಲೇ ಅತಿ ಕೆಟ್ಟ ಖೈದಿ ಅಂತ ಅನ್ನಿಸ್ಕೊಂಡೆ… ಸಾವಿನಲ್ಲೂ ಅಷ್ಟೆ… ಇಷ್ಟೊಂದು ಕೆಟ್ಟದಾಗಿ ಯಾವ ಶತ್ರುವೂ ಸಾಯಬಾರ್ದಪ್ಪಾ ಅಂತ ಅನ್ನಿಸ್ಕೊಂಡೆ… ಪ್ರೇತಗಳಲ್ಲಿ ಅತಿ ಕೆಟ್ಟ ಪ್ರೇತ ಅಂತ ಅನ್ನಿಸ್ಕೊಂಡೆ… ಅರ್ಥಾಯ್ತೇ ನಾನೆಂಥೊನಂಥ. ಅಂದ್ರೆ ಯಾವ ಸಂದರ್ಭದಲ್ಲೂ ನಾನು ಯಾವ್ದೇ ನಿಯಮವನ್ನು ಪಾಲಿಸಿಕೊಂಡು ಬಂದೋನಲ್ಲ ಮಾರಾಯ… ನನ್ನ ಬದುಕು ಉಲ್ಲಂಘಿಸುವುದರಲ್ಲಿಯೇ ಕಳೆದುಹೋಯ್ತು… ಉಲ್ಲಂಘಿಸುವುದರಲ್ಲೂ ಅಷ್ಟೆ … ನನ್ನದು ಕೆಟ್ಟ ಉಲ್ಲಂಘನೆ… ಉಲ್ಲಂಘಿಸುವಾಗಲೂ ಕೆಲವೊಂದು ನೀತಿ ಸಂಹಿತೆಗಳಿವೆ… ಮಾನಸಿಕವಾದ, ದೈಹಿಕವಾದ ಕೆಲವು ಅರ್ಹತೆಗಳು ಉಲ್ಲಂಘಿಸಬಯಸುವವರಿಗೆ ಇರಬೇಕು… ಉಲ್ಲಂಘಿಸುವ ಕ್ರಿಯೆಯಲ್ಲಿ ದೇಹದ ಅಂಗಾಂಗಗಳು ಯಾವ ರೀರಿ ವರ್ತಿಸಬೇಕೋ ಆ ರೀತಿ ವರ್ತಿಸಬೇಕು… ಆದ್ರೆ ನಾನು ಇದಕ್ಕೆ ತದ್ವಿರುದ್ಧ ನೋಡು…
ಯಾವುದೇ ಛಂದಸ್ಸು, ಅಲಂಕಾರ, ಕರ್ತೃ, ಕರ್ಮ, ಕ್ರಿಯೆ, ವ್ಯಾಕರಣ ಇನ್ಯಾವೂ ಇಲ್ಲದೆ ಬದುಕಿದ್ದು ಒಂದು ಬದುಕೇನು ಕುಂವೀ… ಇದು ನಾನು ಬೇಕೆಂದೇ ಆವಹಿಸಿಕೊಂಡ ಪ್ರಾರಬ್ದ ಕಣೋ… ಹಗಲನ್ನು ರಾತ್ರಿ ಮಾಡಿಕೊಂಡು, ರಾತ್ರಿಯನ್ನು ಹಗಲು ಮಾಡಿಕೊಂಡು ಬದುಕಿದವನು ಕಣೋ ನಾನು… ನನ್ನ ಬದುಕು ಯಾರಿಗೂ ಪ್ರಿಯವಾಗಿರಲಿಲ್ಲ… ಕಟ್ಟಿಕೊಂಡ ಹೆಂಡತಿಗೂ; ಹೆತ್ತ ತಾಯಿಗೂ ಯಾರಿಗೂ ಪ್ರಿಯವಾಗಿರಲಿಲ್ಲ… ನನ್ನ ಬದುಕಿನಲ್ಲಿ ರಾಷ್ಟ್ರೀಯ ಹೆದ್ದರಿ ರಾಜ್ಯದ ಹೆದ್ದಾರಿ ಮಟ್ಟಕ್ಕಿಳಿಯಿತು, ರಾಜ್ಯದ ಹೆದ್ದರಿ ಜಿಲ್ಲ ಮಟ್ಟದ ರಸ್ತೆಯಾಯಿತು. ಜಿಲ್ಲಾ ಮಟ್ಟದ ರಸ್ತೆ ಗ್ರಾಮಾಂತರ ಮಟ್ಟದ ರಸ್ತೆಯಾಯಿತು. ಕ್ರಮೇಣ ಅಂತಿಮವಾಗಿ ಗಟಾರ ಆಶ್ರಯಿಸಿದ ರಸ್ತೆಯಲ್ಲಿಯೇ ಅಡ್ಡಾಡತೊಡಗಿದ ನನಗೆ ಅದೆಷ್ಟು ಸೊಕ್ಕು ಇತ್ತೆಂದು ಹೇಳಿದರೆ ನಿನಗೆ ಆಶ್ಚರ್ಯವಾಗಬಹುದು. ಗಟಾರದಲ್ಲಿದ್ದುಕೊಂಡೆ ನಾನು ಸಾರ್ವಜನಿಕರ ಗಮನ ಸೆಳೆಯಿತ್ತಿದ್ದೆ. ಆಗ ಅವರು “ಅಯ್ಯೋ ಇದೇನಿದು ಪಂಡಿತ ಪರಮೇಶ್ವರ ಶಾಸ್ರ್ತಿಗಳ ಮೊಮ್ಮಗ ಶಾಮಾ ಶಾಸ್ತ್ರಿ ಅಲ್ವೆ!” ಎಂದೋ “ಏನಿದೇನಿದು ಬ್ಯಾಂಕ್ ಕ್ಯಾಷಿಯರ್ ಶಾಸ್ತ್ರಿ ಗಟಾರದಲ್ಲಿದ್ದಾನಲ್ಲ ಎಂದೋ” ಪರಮಾಶ್ಚರ್ಯದಿಮ್ದ ಮಾತಾಡಿಕೊಳ್ತಿದ್ರೋ ಮಹರಾಯ… ಅದನ್ನೆಲ್ಲ ಕೇಳಿಸಿಕೊಳ್ತಿದ್ದ ನನಗೆ ಅದೆಷ್ಟು ಸಂತೋಷವಾಗ್ತಿತ್ತು ಗೊತ್ತೆ? ಅಸದಳವಾದದ್ದು! ಅಸದಳವಾದದ್ದು! ದಾರಿ ಇಲ್ಲದ ಕಡೆ ದಾರಿ ನಿರ್ಮಿಸಿಕೊಳ್ಳುತ್ತ ಅಡ್ಡಾಡುತ್ತ ನನಗೆ ದಾರಿ ತೋರಿಸಿದವರಾರು ಕಣಪ್ಪಾ… ಹೆಂಡತಿಯಿಂದ, ತಾಯಿಯಿಂದ, ಗೆಳೆಯರಿಂದ, ಗೆಳತಿಯರಿಂದ, ಸ್ವಜಾತಿಯವರಿಂದ, ಅನ್ಯ ಜಾತಿಯವರಿಂದ, ಸರಕಾರಿ ನೌಕರರಿಂದ ತಿರಸ್ಕರಿಲ್ಪಟ್ಟ ನನ್ನನ್ನೇನಾದರೂ ಅನಸೂಯ ನೋಡದೇ, ಕಾಪಾಡದೇ ಇದ್ದಿದ್ರೆ ನಾನು ಸಹಜವಾಗಿ ಬದುಕ್ತಾನಾಗಲೀ, ಸಹಜವಾಗಿ ಸಾಯ್ತಾನಾಗಲೀ ಇರ್‍ಲಿಲ್ಲ ಕುಂವೀ…ನೀನು ನನ್ಗೆ ಪ್ರಾಣ ಮಿತ್ರ ಅಂತ ಬೊಗಳೆ ಬಿಡಬೇಡ… ಅಂಥ ಶಬ್ದಗಳನ್ನು ಕೇಳಿದ್ರೆ ನನಗೆ ವಾಕರಿಕೆ ಬರುತ್ತೆ. ಆ ಪ್ರಾರಬ್ಧ ಸಮಯದಲ್ಲಾದರೂ ನೀನು ನನ್ನ ನೋಡಿದ್ರೆ ಮೂಗು ಬಾಯಿ ಮುಚ್ಕೊಂಡು ಏನೂ ಅರಿಯದ ಮಳ್ಳಿಗನಂತೆ ಹೋಗಿಬಿಡ್ತಿದ್ದೆಯೋ… ಖರೆ ಹೇಳಬೇಕೆಂದರೆ ಮೇಲೆ ಹೇಳಿದ್ಕಿಂತ ಹೆಚ್ಚು ಕೆಟ್ಟದಾಗಿತ್ತು ನೋಡು ನನ್ನ ಬದುಕು. ಅಸಹ್ಯದ ಮೂಟೆಯಾಗಿ ಅಸಹ್ಯಕ್ಕೇನೆ ಜ್ವಲಂತ ವ್ಯಾಖ್ಯಾನವನ್ನು ಬರೆದು ಎಲ್ಲರಿಂದ ಛಿ ಥೂ, ಅಂತ ಉಗುಳಿಸಿಕೊಂದು ಕೊನೆಗೂ ಸತ್ತು ಎಲ್ಲರೂ ನೆಮ್ಮದಿಯಿಂದ ಉಸಿರು ಬಿಡುವಂತೆ ಮಾಡಿದ ನನ್ನಲ್ಲಾಗಲೀ, ನನ್ನ ಬದುಕಿನಲ್ಲಾಗಲೀ ಅದಾವ ವಿಶೇಷವನ್ನು ಗುರುತಿಸಿ ಕಾದಂಬರಿ ಬರೆದು ಅಮಾಯಕರೂ ನಿರುಪದ್ರವಿಗಳು ಆದ ಕರ್ಣಾಟಕದ ಓದುಗ ಕುಲಕೋಟಿಯ ಜೀವ ತಿನ್ನಬೇಕೆಂದಿರುವಿಯೋ ಮೂಢನೆ?
ಬರೆಯುವುದಕ್ಕೆ ನನ್ನ ಬಿಟ್ರೆ ನಿನ್ಗೆ ಬೇರೆ ಯಾರೂ ಸಿಗಲಿಲ್ವೇನಯ್ಯಾ? ಬರ್ಮಿಂಗ್ ಹ್ಯಾಂನ ಕೋಟೆಕೊಟ್ಟಲ, ಸುಖ ಸಂಪತ್ತಿ, ಹಂಸತೂಲಿಕಾ ತಲ್ಪಗಳನ್ನೂ; ಪ್ರಿನ್ಸ್ ಚಾರ್ಲ್ಸ್‌ನಂಥ ನಿಸ್ತೇಜ ರಾಜಕುಮಾರನನ್ನು‌ಊ ಗಾಳಿಗೆ ತೂರಿ ಸ್ವಚ್ಛಂದ ಕ್ರೌಂಚದಮ್ತೆ ನೀಲನಭದಲ್ಲಿ ಹಾರಾಡಿ, ಚುಕ್ಕಿಗಳನ್ನು ನೆಲದಂಗಳಕ್ಕೆ ಉದುರಿಸಿ, ಕೋಟಿಕೋಟಿ ಜೀವ ಜಗತ್ತಿನ ಉದ್ಧಾರಕ್ಕೆ ಕಾರಣಳಾಗಿ ಅಚಾನಕ್ಕಾಗಿ ರಸ್ತೆ ಅಪಘಾತದಲ್ಲಿ ದುರ್ಮರಣವನ್ನಪ್ಪಿದ ಆರು ಮೊಳದುದ್ದ ಅಪರೂಪ ಚಲುವೆ ಡಯನಾಳ ಬಗ್ಗೆ ಬರೆಯಬೇಕಿತ್ತು? ದೂರವಿರುವ ಮತ್ತು ಕನ್ನಡ ಲೇಖಕನ ಲೆಕ್ಕಾಚಾರಕ್ಕೆ ಡಯಾನ ಸಿಕ್ಕುವುದಿಲ್ಲವೆಂದಿಟ್ಟುಕೋ? ನೆನ್ನೆ ತಾನೆ ರಾಜಕೀಯ ಪ್ರವೇಶಿಸಿ ಐವತ್ತೊಂದು ವರ್ಷದ ಇಟ್ಯಾಲಿನ್ ಮಹಿಳೆ ಸೋನಿಯಾ ಗಾಂಧಿಯವರ ಕಳೆದ ನಾಲ್ಕು ವರ್ಷದ ವೈಧವ್ಯದ ಯಾತನಾಮಯ ಬದುಕು ಏಕೆ ನಿನ್ನ ಬರವಣಿಗೆಯನ್ನು ಆಕರ್ಷಿಸಲಿಲ್ಲ ಮಹಾರಾಯ! ಕಾಮ ಕೆರಳದಿರಲೀ ಅಂತ ಎಷ್ಟೋ ಮಂದಿ ಗಂಡಂದಿರು ತಮ್ಮ ಹೆಂಡಂದಿರನ್ನು ಬ್ರಹ್ಮಕುಮಾರಿ ಈಶ್ವರಿ ವಿದ್ಯಾಲಯಕ್ಕೋ, ಶಾಂತಿ ಧ್ಯಾನ ಧಾಮಗಳಿಗೆ ಕಳಿಸ್ತಿರೋದರ ಕಡೆ ನಿನ್ನ ಬರವಣಿಗೆಯ ಗಮನ ಹರಿಸು ಮಾರಾಯಾ! ಆ ಒಂದೊಂದು ಹೆಣ್ಣಿನ ಮನಸ್ಸಿನಲ್ಲಿ ನೂರು ನೂರು ಕಾದಂಬರಿಗಳಿಗಾಗುವಹ್ಟು ಸರಕಿದೆ. ಇಷ್ತೇ ಅಲ್ಲ, ನೀನು ಯಾವುದೇ ವ್ಯಕ್ತಿಯ ಮನಸ್ಸನ್ನು ನೀನು ಏಕಾಗ್ರತೆಯಿಂದ ಹತ್ತು ನಿಮಿಷ ಗಮನಿಸಿದರೆ ಒಂದೊಂದು ಕಾದಂಬರಿ ಬರೆಯಬಹುದಪ್ಪಾ. ಇಂಥ ಎಷ್ಟೋ ಸೃಜನಶೀಲ ಸಂಗತಿಗಳನ್ನು ಬದಿಗಿಟ್ಟು ನನ್ನ ಒಣ ಬದುಕನ್ನು ಯಾಕೆ ಆಯ್ದುಕೊಂಡಿರುವೆಯೋ ಏನೋ… ಅದ್ಕೆ ಬೇಸರ ಬಂದು ನಾನು ಹಾಗೆ ನುಡಿದದ್ದು… ನನ್ನದು ನಾನು ಹೇಳಲಿಕ್ಕೆ ನನ್ನ ಗಂಟೇನೂ ಹೋಗೋದಿಲ್ಲಪ್ಪಾ. ಆದ್ರೆ ಒದೋರ್‍ಗೆ ತುಂಬ ಹಿಂಸೆ ಆಗದೆ ಇರೋದಿಲ್ಲ… ನೀನೇ ಒಂದಿಷ್ಟು ಉಪ್ಪುಕಾರ ಸೇರಿಸಿ ಬರೆದು ಬಿಟ್ಟರಾಯಿತು. ಆನಂದವರ್ಧನ, ಕುತಂತಕ ಗಿಂತಕರಂಥ ಲಾಕ್ಷಣಕಿರು ಬರೆದಿರೋ ವಕ್ರೋಕ್ತಿ ಗಿಕ್ರೋಕ್ತಿಗಲನ್ನೆಲ್ಲ ಚೆನ್ನಾಗಿ ಒಡ್ಕೊಂಡಿದ್ದ್ ಯಾ… ಬರೆದು ಬಿಡು ಯಾಕೆ ಹಿಂಜರಿಯುವೆ… ಅಂಥ ಬಿಕ್ಕಟ್ಟು ಬಂದಾಗ ಹೇಗೋ ನಾನು ಬಂದು ಸಹಕರಿಸ್ತೀನಿ… ನಿನ್ನಿಂದ ನನಗಾದ ಒಂದೇ ಒಂದು ಬೇಸರವೆಂದರೆ ನೀನು ನಿನ್ನ ಹಸ್ತಪ್ರತಿಯಲ್ಲಿ ನನ್ನನ್ನು ಬಂಧಿಸಿಟ್ಟಿದ್ದು. ನಾನು ಪ್ರಿಯಾಂಕಳನ್ನು ನೋಡುವ ಆಸೆಯಿಂದ ಶ್ರೀ ಪೆರಂಬದೂರಿಗೆ ಹೋಗಬೇಕೆಂದುಕೊಂಡಿದ್ದೆ. ಶ್ರೀ ಪೆರಂಬದೂರು ರಾಮಾನುಜಾಚಾರ್ಯರು…” ನಿರರ್ಗಳವಾಗಿ ಒಂದೇ ಉಸುರಿಗೆ ಶಾಮಣ್ಣ ನುಡಿದ ಮಾತುಗಳನ್ನು ನಾನು ಅರಗಿಸಿಕೊಳ್ಳಲಾರದೆ ಹೋದೆನು.
ಕಾಗೆ ಸವಿವಂತು ಸವಿಗುಮೆ ರಾಗಿಸಿಮಿಂದುಳೆಯ ನೀರಿನಂಚೆ!
ಗುರುರೋಪಿ ಗುರುಃ ಎಂಬಂತೆ ಬದುಕಿದ ಶಾಮಣ್ನನನ್ನು ಅರ್ಥ ಮಾಡಿಕೊಳ್ಳದ ನನ್ನ ಮರ್ಕಟ ಬುದ್ಧಿಯನ್ನು ನಾನೇ ಹೀಗಳೆದುಕೊಂಡೆನು. ಹೃದಯ ಆರ್ದ್ರವಾಯಿತು. ವೈಶಾಖದ ಬಿರುಬಿಸಿನಾಳದ ಗಾಳಿ ಎದೆಯೊಳಗೆ ಮಾರ್ಮಲೆಯತೊಡಗಿತು. ಬಿದಿಯ ಬೀಸಿದ ಮಾಯೆಯಲ್ಲಿ ಸಿಲುಕಿ ಜರ್ಝರಿತಗೊಂಡ ನೀನೇ ಧನ್ಯ!
ಕಂಠ ಗದ್ಗದವಾಯಿತು.
ಕೊತ್ತಲಿಗಿಯ ಬಸ್ ನಿಲ್ದಾಣದಲ್ಲಿ ಹೆಂಡತಿ ಪಕ್ಕದೊಳಿದ್ದರೆ ನಾನೂ ಒಬ್ಬ ಸಿಪ್ಪಾಯಿಯಂತೆ ಹೆಂಡತಿಯೊಂದಿಗೆ ನಿಂತುಕೊಂಡು ಜಗಲೂರು ಕಡೆ ಬರಲಿದ್ದ ಬಳ್ಳಾರಿ ಬಸ್ಸಿಗೆ ನಾನು ಕಾಯುತ್ತ ನಿಂತಿದ್ದ ದಿನ ನೆನಪಾಯಿತು. ಡಿಪೋ ಕಂಟ್ರೋಲರ್ ಗುರುಪಾದಪಯ್ಯ ಅನಾಥ ಹೆಣದ ಸಂಸ್ಕಾರಕ್ಕೆಂದು ಪ್ರಯಾಣಿಕರಿಂದ ಹಣ ಸಂಗ್ರಹಣಾ ಕಾರ್ಯ ನಡೆಸಿದ್ದ. ಆತ ಚಾಚಿದ ಡಬ್ಬಿಯೊಳಗೆ ಐದು ರೂಪಾಯಿ ಹಾಕುವ ಮೊದಲು ಬಿದ್ದಿರುವ ಹೆಣ ಶಾಮನದೆ ಯಾಕಾಗಿರಬಾರದೆಂದು ಹೋಗಿ ಇಣುಕಿ ನೋಡಿದೆ. ಕಂಡ ಕಂಡ ಹೆಣಗಳ್ನ ಯಾಕೆ ನೋಡ್ಲಿಕ್ಕೆ ಹೋಗ್ತೀರಾ… ನಾವು ಪ್ರಯಾಣ ಮಾಡ್ತಿರೋದು ಬೇರೆ ಕೆಟ್ಟ ಗಳಿಗೆಯಲ್ಲಿ… ನೀವು ಬರೀ ಹೆಣವನ್ನು ನೋಡಿ ವಾಪಸಾಗೋದಾದ್ರೆ ಈ ಮಾತು ಹೇಳ್ತಿರ್‍ಲಿಲ್ಲ… ನೋಡಿ ಬಮ್ದ ಮೇಲೆ ಆ ಹೆಣ ನಿಮ್ ಕಣ್ಣಿಂದ ಇಳಿಯೋಕೆ ಎರಡು ಮೂರು ದಿನಗಳಾದ್ರು ಬೇಕು… ಅದೆಲ್ಲ ಯಾಕೆ ಫಜೀತಿ” ಎಂದು ಹೆಂಡತಿ ತಡೆಯಲೆತ್ನಿಸಿದರೂ ಹೋಗಿ ಇಣುಕಿದೆ. ಶಾಸ್ತ್ರಿಗಳ ಮೊಮ್ಮಗ ಶಾಮನದೇ ಆಗಿತ್ತೆಂದು ನನಗೆ ಅನುಮಾನ, ಕುಡಿದೂ, ಕುಡಿದೂ ಅವನ ಕರು‌ಅಲುಗಳು ತೂತುಬಿದ್ದಿರುವವಲ್ಲದೆ ಕ್ಷಯರೋಗ ಢಾಳಗಿ ಬಡಿದುಕೊಂಡಿದೆ ಎಂದು ಊರಲ್ಲಿ ಅಗಸರ ನಾರಾಣಿ ಅದರ ಹಿಂದಿನ ದಿನ ಹೇಳಿದ್ದ. ಆ ಕ್ಷಣದಲ್ಲಿ ಆಸುಪಾಸಿನಲ್ಲಿ ಯಾವುದೇ ಹೇನ ಬಿದ್ದಿದ್ದರೂ ಅದು ಶಾಮನದೇ ಇರ್‍ತದೆ ಎಂಬ ಅನುಮಾನ ಕಾಡತೊಡಗಿತ್ತು. ‘ದೇವರೇ ನಾವು ಊರು ಮುಟ್ಟುವವರೆಗೆ ಯಾವುದೇ ಹೆಣದ ದರುಶನವನ್ನು ಮಾಡಿಸಬೇಡ’ ಎಂದು ಬೇಡಿಕೊಂಡು ಎಚ್ಚರಿಕೆಯಿಂದಿದ್ದರೂ ಒಕ್ಕಣ್ಣು ಗುರುಪಾದಪ್ಪನ ಸುಪರ್ದಿನಲ್ಲಿ ಅನಾಥ ಹೆಣ ಸಂಸ್ಕಾರ ನಡೆಸುವ ಘಟನೆ ಅಯಾಚಿತವಾಗಿ ಕಂಣ ಮುಂದೆಯೇ ನಡೆಯುತ್ತಿರುವುದು.
ಕಳೇಬರ ಶಾಮನದೇ ಆಗಿದ್ದರೆ ಏನು ಮಾಡುವುದು? ಆಗಿರದಿದ್ದರೆ ಏನು ಮಾಡುವುದು? ಎಂಬ ದ್ವಂದ್ವಗಳ ನಡುವೆ ನಾನು ಮಿಶ್ರ ಭಿನ್ನರಾಶಿಯಂತೆ ನಿಂತಿದ್ದ ಜನರ ನಡುವೆ ತೂರಿ ಇಣುಕಿದೆ. ಪ್ರ್ವ ಪಶ್ಚಿಮಾಭಿಮುಖವಾಗಿ ಮಲಗಿಸಿದ್ದ ಆ ಕಳೇಬರವು ದಕ್ಷಿಣಕ್ಕೆ ವಾಲಿತ್ತು. ಎತ್ತರ ಮತ್ತು ಗಾತ್ರವೇನೋ ಹೆಚ್ಚು ಕಡಿಮೆ ಅವನ್ದೆ! ಕೆದರಿದ ತಲೆಯಲ್ಲಿ ಜುಟ್ಟು ಇರಬಹುದು,ಅಥವಾ ಅವನು ಕತ್ತರಿಸಿ ಎಸೆದಿರಬಹುದು, ಮೀಸೆ ಕುರುಚಲು ಗಡ್ಡ… ತಲೆ ಮುಖ ನರೆಯುವಷ್ಟು ವಯಸ್ಸಗಿಲ್ಲ… ಕಣ್ಣು ಬಾಯಿ ಮತ್ತು ಶಿಶ್ನಗಳಿದ್ದ ಭಾಗಗಳ ತುಂಬ ಸಾವಿರಾರು ನೊಣಗಳು (ಜನಪ್ರಿಯ ನಟ ಸತ್ತಾಗ ಜನ ಹೇಗೆ ಸಂತೋಷ, ಕುತೋಹಲ ಮತ್ತು ದುಃಖ್ದಿಂದ ಮುತ್ತಿ ಕಳೇಬರದ ಯಾವುದಾರೂ ಅಂಗವನ್ನು ಸ್ಪರ್ಶಿಸಿ ಪುಳಕಗೊಳ್ಳುತ್ತಾರಲ್ಲ ಹಾಗೆ) ಮತ್ತಷ್ಟು ಬಾಗಿ ಗುರುತಿಸೋಣವೆಂದರೆ ಜನರ ನೆರಳು ನೇರವಾಗಿ ಅದರ ಮೇಲೆ ಬೀಳುತ್ತಿರುವುದು. ‘ಅವನಾಗ್ಲೆ ಸತ್ತಿದಾನೆ… ಈಗ ಬದುಕಿರೋದು ಅವನ್ ದೇಹ ಮಾತ್ರ ಎಂದು ಓಸಿ ಯಂಕಣ್ಣ ಹೇಳಿದ್ದ ಮಾತಿನ ಆಧಾರದ ಮೇಲೆ ಅವನು ಸಾಯುವುದು ಅಥವಾ ಬದುಕಿರುವುದು (ಇವೆರಡು ನಿರಾಸೆಯ ಎರಡುಮು ನಮೂನೆಗಳು ಮಾತ್ರ) ನನಗೆ ಅನಿವಾರ್ಯವಾಗಿತ್ತು. ಬಗ್ಗಿ ಬಗ್ಗಿ ನೋಡೀ ನೋಡೀ ಆ ಲಳೇಬರ ಶಾಮಣ್ಣನದಲ್ಲವೆಂದು ನಾನು ಖಚಿತಪಡಿಸಿಕೊಂಡು ಇನ್ನೇನು ಮುಖ್ ಸಪ್ಪಗೆ ಮಾಡಿಕೊಂದು ಹಿಂತಿರುಗುತ್ತಿದ್ದಾಗ ಎದುರಾದ ವ್ಯಕ್ತಿ ಥೇಟ್ ಶಾಮಣ್ಣನಂತಿದ್ದ ಅಥವ ಅವನೇ ಆಗಿದ್ದ. ಮಾತಾಡಿಸುವ ಅವನೂ ಮಾತಾಡಲಿಲ್ಲ… ನಾನೂ ಮಾತಾಡಲಿಲ್ಲ… ಖಂಡಿತ ಶಾಮಣ್ಣ ಸಾಯಲಾರದೆ ಬದುಕಿದ್ದಾನೆಂದೂ,ಅವನು ನನ್ನನ್ನು ಮಾತಾಡಿಸದಿದ್ದುದೇ ಸೌಭಾಗ್ಯವೆಂದು ಭಾವಿಸಿ ನಾನು ಹೆಂಡತಿ ಇರುವಲ್ಲಿಗೆ ಮರಳಿ ಬಂದೆ. “ಅಂತೂ ಹೆಣವನ್ನು ನೋಡೇ ಬಿಟ್ರಿ ತಾನೆ! ನನ್ನ ಮಾತಂದ್ರೆ ಯಾವ ಲೆಕ್ಕವೆಂದು” ಹೆಂಡತಿ ಸಿಡುಕಿದಳು.
ಈ ಘಾನೆ ನಾನು ಪ್ರಕಟಿಸಿದ ಬಹು ದೊಡ್ಡ ಕ್ರೌರ್ಯದ ಬಹು ದೊಡ್ಡ ಉದಾಹರಣೆ. ಇಷ್ಟೆಲ್ಲ ಅಸಹ್ಯ ತುಂಬಿಕೊಂಡಿದ್ದರು ಮಹಾಮಾನವತಾವಾದಿಯಂತೆ, ಮಹಾನ್ ಲೇಖಕನಂತೆ, ಮಹಾನ್ ಗೆಳೆಯನಂತೆ ಸೋಗು ಹಾಕಿ ಕಾದಂಬರಿ ಬರೆಯುತ್ತಿರುವುದು ನಾಚಿಕೆಗೇಡಿನ ಸಂಗತಿ.
ಯೋಚಿಸುತ್ತಾ ಯೋಚಿಸುತ್ತ ಆರಡಿ ಇದ್ದವನು ಆರು ಅಂಗುಲದಷ್ಟಾಗಿಬಿಟ್ಟೆ.. ಹಾಳೆ ತಿರುಗುವ ಗಾಳಿಗೆ ಕಂಪಿಸತೊಡಗಿದೆ.
“ನಯ್ಯಾ ಕುಂವೀ… ಎಷ್ಟೊಂದು ಕುಗ್ಗಿ ಹೋಗಿಬಿಟ್ಟೆಯಲ್ಲ… ಮೈಯಲ್ಲಿ ಹುಷಾರಿಲ್ಲವೇನು? ಎಂದು ಮಾತೃ ಹೃದಯದ ಶಾಮನ ಆತ್ಮ ಪ್ರಶ್ನಿಸಿತು.
“ಅಂಥಾದ್ದ್ನೂ ಇಲ್ಲ ಶಾಮಾ… ಎಷ್ಟೊಂದು ವಿಚಿತ್ರ ನೋಡು… ಬದುಕುವ ಅರ್ಹತೆ ಇರೋ ನಿನ್ನಂಥೋರು ಸಾಯ್ತಾನೆ ಇರ್ತಾರೆ… ಸಾಯೋ ಅರ್ಹತೆ ಇರೋ ನನ್ನಂಥೋರು ಸದಾ ಬದುಕ್ರ್ ಇರ್‍ತಾರೆ” ಎಂದು ನಿಟ್ಟುಸಿರುಬಿಟ್ಟೆ.
“ಬ್ರಹ್ಮಕುಮಾರಿ ವಿಶ್ವವಿದ್ಯಾಲಯದ ವಿಜಿಟಿಂಗ್ ಪ್ರೊಫೆಸರ್ ಥರ ಮಾತಾಡ್ತಿದ್ದೀಯಲ್ಲೋ ಹುಚ್ಚಪ್ಪ… ಸಾವು ಬದುಕಿನ ನಡುವೆ ಅಂಥ ಅಂತರವೇ ಇಲ್ಲ ಮಾರಾಯ… ಸಾಯಲಾರದೆ ಬದುಕೋದಾಗ್ಲಿ; ಬದುಕಲಾರ್ದೆ ಸಾಯೋದಾಗ್ಲಿ ಇವೆರಡು ನೆಪಗಳು ಮಾತ್ರ… ಬದುಕಿರೋವಷ್ಟು ಕಾಲ ಧೈರ್ಯದಿಂದ ಬದುಕಪ್ಪಾ… ಸತ್ತೋರ ಬಗ್ಗೆ ಯಾಕೆ ತಲೆಕೆಡಿಸಿಕೊಳ್ತಿದ್ದೀಯಾ?” ಎಂದು ಶಾಮನ ಆತ್ಮ ಹಿಮಾಲಯದ ನಿರೀಶ್ವವಾದಿ ಯೋಗಿಯಂತೆ ಧೈರ್ಯ ತುಂಬುವ ಮಾತಾಡಿತು.
“ನಾನೊಂದು ಬಹು ದೊಡ್ಡ ತಪ್ಪು ಮಾಡಿದ್ದೀನಿ. ಕ್ಷಮಿಸ್ತೀಯಾ ಶಾಮಾ…” ಎಂದೆ ಪಾಪ ನಿವೇದಕನಂತೆ.
“ಥೂ! ಹಾಗೆಲ್ಲ ಮಾತಾ‌ಅಬೇಡ್ವೋ ಮುಂಡೇದೆ… ನಾನೊಂದು ಲೆಕ್ಕ ಹೇಳ್ತೀನಿ… ಅದ್ನ ಬಿಡಿಸಿದ ನಂತರವೇ ನನ್ನ ಬಗ್ಗೆ ಬರೆಯೋದ್ನ ಆರಂಭಿಸು… ಇಲ್ಲಾಂದ್ರೆ ನಿನ್ನ ತಲೆ ಸಾವಿರ ಚೂರಾಗಿ ಹೋಗ್ತದೆ! ಏನಂತೀಯಾ?
“ಹ್ಹೂಂ…”
“ಹೇಳುವೆನು ಶ್ರದ್ಧೆಯಿಂದ ಕೇಳು…
ರತಿಕ್ರೀಡೆಯ ಕಾಲದಲ್ಲಿ ಪ್ರಿಯತಮನಾದ ನಾನು ನನ್ನ ಪ್ರಿಯತಮೆಯಾದ ಅನಸೂಯಳ ಕೊರಳಲ್ಲಿದ್ದ ಮುತ್ತಿನ ಹಾರವನ್ನು ಹಿಡಿದು ಜಗ್ಗಲು ಹಾರ ಹರಿದು ಹೋಯಿತು. ಆಗ ಆರನೆ ಒಂದು ಭಾಗದಷ್ಟು ಮುತ್ತಿಗಳು ನೆಲದ ಮೇಲೆ, ಐದನೇ ಒಂದು ಭಾಗದಷ್ಟು ಮುತ್ತುಗಳು ಕೌದಿಯ ಮೇಲೆ, ಆರನೇ ಒಂದು ಭಾಗದಷ್ಟು ಮುತ್ತುಗಳು ಆಕೆಯ ವಕ್ಷ ಮತ್ತು ನಾಭಿ ಪ್ರದೇಶದ ಮೇಲೆ ಬಿದ್ದವು. ಅವುಗಳ ಪೈಕಿ ಹತ್ತನೇ ಒಂದು ಭಾಗದಷ್ಟು ಮುತ್ತುಗಳನ್ನು ನಾನು ಆಯ್ದುಕೊಂಡೆನು. ದಾರದಲ್ಲಿ ಇನ್ನೂ ಆರು ಮುತುಗಳು ಉಳಿದಿದ್ದವು… ಹಾಗಾದರೆ ಆ ಹಾರದಲ್ಲಿದ್ದ ಒಟ್ಟು ಮುತ್ತುಗಳು ಎಷ್ಟು?… ನೀನು ಗಣಿತದಲ್ಲಿ ಡಲ್ ಎಂದು ಗೊತ್ತಿದ್ದರೂ ಈ ಪ್ರಶ್ನೆಯನ್ನು ನಿನಗೆ ಹಾಕಿದ್ದೀನಿ. ಡಯೋಷೆಂಟ್ ಗೆಲೈಸ್‌ಟೇಟ್‌ನದಕ್ಕಿಂತಲೂ ಭಾರತೀಯ ಬೀಜಗಣಿತ ಮೇಲ್ಮಟ್ಟದ್ದು ಎಂಬುದಕ್ಕೆ ಈ ಸಮೀಕರಣವೇ ಸಾಕ್ಷಿ ನೋಡು…. ಸಾಧ್ಯವಾದಷ್ಟು ಈ ಲೆಕ್ಕ ಬಿಡುಸುವ ಪ್ರಯತ್ನ ಮಾಡು…
ಈ ಕಾದಂಬರಿ ಬರೆಯುವಾಗ ಈ ಸಮೀಕರಣ ಕುರಿತು ಯೋಚಿಸುತ್ತಾ ಹೋಗು… ನಿನ್ನ ಕಥೇನ ಎಲ್ಲಿಂದ ಪುನರಾರಂಭ ಮಾಡಬೇಕೆಂತಿದ್ದೀಯಾ?… ನಾನೇ ಇದರ ಕ್ಲೂ ಕೊಡ್ತೀನಿ ನೋಡು… ನಾನು ನೌಕರಿಗೆ ಸೇರಿದ್ದೀನಿ… ಇಲ್ಲಿಂದ ಬೇಡ… ನಾನು ಆಕೆ ಹನೀಮೂನಿಗೆ ಹೋಗಿದ್ದೀವಿ… ಇಲ್ಲಿಂದಲೂ ಬೇಡ… ಶಾಸ್ತ್ರಿಗಳು ಸತ್ತು ಹೋದ್ರು ಇಲ್ಲಿಂದಲೂ ಬೇಡ… ನಿಜವಾದ ಕಥೆ ಸುರುವಾಗೋದೆಲ್ಲಿಂದಪ್ಪ ಅಂದ್ರೆ ಮನೆಯಲ್ಲಿ ನನ್ನ ಮೇಲೆ ಅಧಿಕಾರ ಸಾಧಿಸುವ, ಅಥವಾ ಅಪಭ್ರಂಶ ಹೊಂದಿರುವ ಕಾರಣಕ್ಕಾಗಿ ನನ್ನ ತಾಯಿಯಾದ ಅಲುಮೇಲಮ್ಮಗೂ ಹೆಂದತಿಯಾದ ವರಲಕ್ಷ್ಮಿಗೂ ದಿನಂಪ್ರತಿ ಒಂದಲ್ಲಾ ಒಂದು ಘರ್ಷಣೆಯು ನಡೆಯುತ್ತಲೇ ಹೋಗುತ್ತದೆ. ಅವರಿಬ್ಬರೂ ಅಭಿಮಾನಧನರೇ ಎಂಬುದರಲ್ಲಿ ಅನುಮಾನವಿಲ್ಲ… ಸುಸ್ತೋ ಸುಸ್ತು ಅಂತ ನಾನು ದ್ಯೂಟಿ ಮುಗಿಸಿಕೊಂಡು ಕೊತ್ತಲಿಗಿಯಿಂದ ಮನೆಗೆ ಮರಳಿದ ಕ್ಷಣದಿಂದ ಸಮಾನ ಬಲರಾದ ಅವರು ಅತಿರಥ ಮಹಾರಥರಂತೆ ಜಗಳ ಆ‌ಅಲು ಶುರು ಮಾಡುತ್ತಾರೆ. ನೋಡೋ ಅಂತ ತಾಯಿ ಎಡಕ್ಕೆ; ನೋಡ್ರಿ ಅಂತ ಪತಿಪಾರಾಯಣೆಯಾದ ಹೆಂಡತಿ ವರಲಕ್ಷ್ಮಿಯು ಬಲಗಡೆ ನಿಂತುಕೊಂಡು ಟಗ್ ಆಫ್ ವಾರ್ ಅಂತಾರಲ್ಲ ಹಾಗೆ ಎಳೆದಾಡತೊಡಗುತ್ತಾರೆ. ಒಂದು ದಿನದ್ದಲ್ಲ… ಎರಡು ದಿನದ್ದಾಲ್ಲ… ಇದು ದೈನಂದಿನ ಗೋಳು. ಅನಕ್ಷರಸ್ಥ ರೈತಾಪಿ ಶೂದ್ರನಾಗಿದ್ದರೆ ನಾನು ಅವರಿಬ್ಬರಿಗೂ ತಲಾ ಎರಡೆರಡು ಏಟು ಕೊಟ್ಟು ಮ್ಲೆಯಲ್ಲಿ ಕುಕ್ಕುರು ಬಡಿಯಬಹುದಾಗಿಟ್ಟು. ಗದರಿಸಲೆಂದರೆ ಬಯ್ಯಲೆಂದರೆ, ಹೊಡೆಯಲೆಂದರೆ ಅಕ್ಷರಸ್ಥ ನಾಗರೀಕ ಭಾವ, ಪವಿತ್ರ ವಂಶೋದ್ಭವನೆಂಬ ಹೆಗ್ಗಳಿಕೆ, ಸಕಲ ಶಾಸ್ತ್ರಪಾರಂಗತನೆಂಬ ಹುಸಿ, ಠೇಂಕಾರ ಅಡ್ಡ ಬರುತ್ತದೆ… ಹೊಟ್ಟೆಯ ಸಿಟ್ಟು ರಟ್ಟೆಗೆ ಬರುವುದಿಲ್ಲ… ಕಪೋಲದ ರಕ್ತ ಕಣ್ಣುಗಳಿಗೆ ಏರುವುದಿಲ್ಲ… ಮೆದುಳಿನ ಮಾತು ನಾಲಿಗೆಗೆ ಬರುವುದಿಲ್ಲ… ನಾಲಿಗೆ ಮೇಲಿನ ಮಾತು ಮಾತಾಗಿ ರೂಪಗೊಳ್ಳುವುದಿಲ್ಲ… ನನ್ನೊಳಗೆ ನಾನು ವಿಲವಿಲನೆ ಒದ್ದಾಡಿ ಹೋಗುತ್ತೇನೆ. ಅವರನ್ನು ಅವರ ಪಾಡಿಗೆ ಬಿಟ್ಟು ಬಜಾರದ ಕಡೆ ನಡೆಯುತ್ತೇನೆ… ಆತ್ಮೀಯ ಅಂತ ತಿಳ್ಕೊಂಡು ಪತ್ರಿಕಾ ಸಂಪಾದಕ ಮಿತ್ರ ಕಮಲಾಕರನಿಗೆ ಹೇಳುತ್ತೇನೆ… ಅದಕ್ಕವನು ಪಕಪಕ ನಗುತ್ತ ‘ವೆರ್ರಿಇಂಟರೆಸ್ಟಿಂಗ್’ ಎಂದು ಉದ್ಗರಿಸುತ್ತಾನೆ… ಬ್ಶ್\ಏಸರದಿಂದ ನಾನು ಇದರಲ್ಲಿ ನಗೋದೇನೈತಿ ಕಮಲಾಕರ…” ಎನ್ನುತ್ತೇನೆ. “ನಗೋದು ಯಾಕಿಲ್ಲ ಶಾಮಾ? ಕ್ರಿಯೇಟಿವ್ ಲೇಖಕನಾದ ನೀನು ಅತ್ತೆ ಸೊಸೆಯರ ಜಗಳವನ್ನೇ ವಸ್ತು ಮಾಡ್ಕೊಂಡು ಅತ್ಯುತ್ತಮವಾದ ವಿವಿಧ ವಿನೋದಾವಳಿಗಳಂಥ ಕಥೆಗಳ್ನ ಬರೆಯಬಹುದಯ್ಯಾ… ಇದೆಲ್ಲ ಲೇಖಕನ ಅಡ್ವಾಂಟೇಜಸ್ಸೆ… ಎಂದು ಹೇಳುತ್ತಾನೆ. ಮುಂದೊಂದಿನ ನಾನಿವನ ಸಹವಾಸ ಸಾಕು ಅಂತ ಊರ ಹೊರಗಡೆ ಯೋಗಾಶ್ರಮ ಕಟ್ಕೊಂಡಿರೋ ಚಿದಾನಂದಾವಧೂತರ ಬಳಿಗೆ ಹೋಗುವೆನು…. ಇಂಥಾ ತಾಯಿ ಹೆಂಡತಿಯರ ನಡುವೆ ರಾಜಿ ಕುದುರಿಸುವ ಬಗ್ಗೆ ಕುರಿತು ಮಾತು ತೆಗೆಯುತ್ತೇನೆ… ಅದಕ್ಕೆ ಅವರೂ ಪಕಪಕ ನಗಾಡುವರು… ಕಾರಣ ಕೇಳುತ್ತೇನೆ. “ಎಂಥ ಅದೃಷ್ಟವಂತರು ನೀವು ಶಾಮಾ ಶಾಸ್ತ್ರಿಗಳೇ… ಇಂಥಾ ಜಗಳ ಸದಾ ಕೇಳುತ್ತಿದ್ದರೆ ಖಂಡಿತ ಅಲೌಕಿಕ ಆನಂದದ ಸಾಕ್ಷಾತ್ಕಾರವಾಗುತ್ತದೆ… ಬಾಲ ಶಂಕರನು ಪೂರ್ಣ ನದಿಯಲ್ಲಿ ಸ್ನಾನ ಮಾಡುತ್ತಿದ್ದಾಗ ಅವನ ಕಾಲನ್ನು ಕಚ್ಚಿದ ಮೊಸಳೆಯ ಎರಡು ಮಾನವ ರೂಪಗಳೇ ನಿಮ್ಮ ತಾಯಿ ಮತ್ತು ಹೆಂಡತಿ. ಅವರನ್ನು ಅವರ ಪಾಡಿಗೆ ಜಗಳವಾಡಲು ಬಿಡಿ. ಆ ಜಗಳ ಕೇಳುತ್ತಾ ಕೇಳುತ್ತಾ ಶಂಕರಾಚಾರ್ಯರ ಮಹಾನುಶಾಸನವನ್ನು ಕಂಠಪಾಠ ಮಾಡುತ್ತಾ ಹೋಗಿ… ಜಗಳ ಮತ್ತುಧ್ಯಾನ, ಧ್ಯಾನ ಮತ್ತು ಜಗಳ ಇವೆರಡರ ಸಂಘರ್ಷದಿಂದ ನಿಮ್ಮಲ್ಲಿ ಅಲೌಕಿಕವಾದ ಜ್ಞಾನ ಹುಟ್ಟುವುದು… ಆ ಜ್ಞಾನ ಬಲವೃದ್ಧಿ ಆಗೀ ಆಗೀ ನಿಮ್ಮ ಮಸ್ತಿಷ್ಯಕ್ಕೆ ಏರುವುದು… ಅದರಿಮ್ದ ಕುಂಡಲೀ ಶಕ್ತಿ ಜಾಗೃತವಾಗುವುದು… ಆಗ ನೀವು “ಆನಂದೋ ಬ್ರಹ್ಮ” ಎಂದು ಉದ್ಗರಿಸುವಿರಿ. ಕ್ರಮೇಣ ಆಚಾರ್ಯತ್ರಯರ ಪದವಿಗೇರುವಿರಿ… ಆಗ ಪೂಜಾರ್ಹರಾಗುವಿರಿ’ ಎಂದು ಮೊದಲಾಗಿ ಹೇಳಿ ತಲೆ ತಿನ್ನುವರು.
ಮುಂದೊಂದು ದಿನ ಚಿದಾನಂದಾವಧೂತರನ್ನು ಶಪಿಸಿ ಮನಶ್ಯಾಸ್ತ್ರ ಪ್ರಾಧ್ಯಾಪಕರಾದ ಪ್ರೊ. ವೇದವ್ಯಾಸ ಜೋಷಿಯವರ ಬಳಿಗೆ ಹೋಗುವೆನು… ಅವರೂ ಪಕಪಕ ನಗಾಡಿ ಇಂಟೆರೆಸ್ಟಿಂಗ್ ಎಮ್ದು ಉದ್ಗರಿಸುವರು… ನಾವೀಗ ಮಾಡ್ತಿರೋ “ಸ್ಪ್ಲಿಟ್ ಪರ್ಸನಾಲಿಟೀಸ್ ಇನ್ ಅವರ್ ಇಂಡಿಯನ್ ರೂರಲ್ ಸೊಸೈಟಿ” ಎಂಬ ಸಂಶೋಧನೆಗೆ ನೀವು ಹೇಲ್ತಿರೋ ಘಟನೆ ತುಂಬ ಹೆಲ್ಪ್ ಆಗ್ತದಲ್ರೀ ಮಿ. ಶಾಸ್ತ್ರೀಜಿ. ಅವರಿಬ್ಬರು ಜಗಳಾಡೊದನ್ನ ಗುಟ್ಟಾಗಿ ಟೇಪ್‌ರಿಕಾರ್ಡ್ ಮಾಡ್ಕೊಂಡು ತಂದ್ಕೊಡ್ತೀರಾ ಪ್ಲೀಜ್… ಬೇಕಾದ್ರೆ ಜಪಾನ್ದು ರೆಕಾರ್ಡರ್ ಕೊಡ್ತೀನಿ… ಬೈದಬೈ ಆ ಅಪರೂಪದ ಅತ್ತೆ ಸೊಸೆಯರ ಜೊತೆ ಡಿಸ್ಕಸ್ ಮಾದ್ಲಿಕ್ಕೂ ಅವಕಾಶ ಮಾಡ್ಕೊಡಿ…” ಎಂದು ಹೇಳಿ ತಲೆ ತಿನ್ನುವನು…
ಒಬ್ಬೊಬ್ಬರು ಒಂದೊಂದು ರೀತಿ ಪ್ರತಿಕ್ರಿಯಿಸುವುದಕ್ಕೆ ಬೇಸತ್ತು ನಾನು ಯಾರ ಬಳಿಗೂ ಹೋಗುವುದಿಲ್ಲ… ಒಂಟಿಯಾಗಿ ಅಲೆದಾಡುವ ಅಭ್ಯಾಸ ಮಾಡಿಕೊಳ್ಳುತ್ತೇನೆ. ಯಾರೊಂದಿಗೂ ಮಾತಾಡುವ ಮತ್ತು ಮಾತಾಡದೇ ಇರುವ ಭಯ ಕಾಡಲಾರಂಭಿಸುವುದು… ಎಷ್ಟು ದೂರದಲ್ಲಿದ್ದರೂ ತಾಯಿ ಮತ್ತು ಹೆಂಡತಿಯರೀರ್ವರು ತಲೆಯಿಂದ ಮರೆಯಾಗುವುದಿಲ್ಲ… ಜಗಳ ಕೇಳೀ ಕೇಳೀ ಅವರ ಮಾತುಗಳನ್ನು ನನಗರಿವಿಲ್ಲದಂತೆ ನಾನು ಅನುಕರಿಸುವೆನು… ನಗೆಪಾಟಲಾಗುವೆನು… ವಯಸ್ಸಾದ ಬ್ರಾಹ್ಮಣ ವಿಧವೆಯರು ತಾಯಿ ಅಲುಮೇಲಮ್ಮನಂತೆಯೂ ತರುಣಿಯರು ಯುವತಿಯರು ಹೆಂಡತಿ ವರಲಕ್ಷ್ಮಿಯಂತೆಯೂ ಗೋಚರಿಸಲು ಶುರುವಾಗುವುದು.
ಮುಂದೊಂದು ದಿನ ಏನಾಗುವುದೆಂದರೆ ಅತ್ತೆ ಮತ್ತು ಸೊಸೆಯರ ನಡುವಿನ ಜಗಳದ ಉಷ್ಣತಾಮಾನ ಅರವತ್ತು ಡಿಗ್ರಿ ಸೆಲ್ಸಿಯಸ್ಸಿಗೆ ತಲುಪಿರುವುದು. ಕೈ ಕೈ ಮಿಲಾಯಿಸಿರುವರು. ಆಕೆಯ ಮೈಮೇಲಿನ ಬಟ್ಟೆಯನ್ನು ಈಕೆಯೂ; ಈಕೆಯ ಮೈಮೇಲಿನ ಬಟ್ಟೆಯನ್ನು ಆಕೆಯೂ; ಹರಿದು ಚಿಂದಿ ಚಿಂದಿ ಮಾಡುವರು. ಆ ಮೂಲೆಗೊಬ್ಬರು, ಈ ಮೂಲೆಗೊಬ್ಬರು, ಕೂಡ್ರುವರು. ಒಲೆ‌ಉ‌ಅಲ್ಲಿ ಬೆಕ್ಕು ಮಲಗಿ ಗುರ್ ಎಮ್ದು ಸದ್ದು ಮಾಡುತಿರುವುದು.
ಓಣಿಯ ಹಿರಿಯರು ಅವರ ನಡುವೆ ರಾಜಿ ಕುದುರಿಸುವ ಪ್ರಯತ್ನ ಮಾಡುತ್ತಿರುವರು…

ಅದೇಹೊತ್ತಿಗೆ ನಾನಲ್ಲಿಗೆ ಅಪರಾಧಿಯಂತೆ ಹೊಗುವೆನು… ಮತ್ತೆ ಜಗಳ… ಪಂಚಾಯ್ತಿ… ಇತ್ಯಾದಿ… ಆಗ ಓಣಿಯ ಹಿರಿಯರು “ನಿನ್ನ ಹೆಂಡತಿಯನ್ನು ನೀನು ಕರ್ಕೊಂಡು ಕೊತ್ತಲಿಗಿಗೆ ಹೋಗಿಬಿಡಪ್ಪ… ಅತ್ತೆ ಸೊಸೆ ಹೊಂದ್ಕೊಳ್ತಿಲ್ಲ… ಸೊಸೆ ಅತ್ತೆ ಹೊಂದ್ಕೊಳ್ತಿಲ್ಲ… ಅವರಿಬ್ಬರೂ ಹಾವು ಮುಂಗುಸಿಯಂತೆ ಕಾದಾಡುತ್ತಿರುವುದನ್ನು ನೋಡೀ ನೋಡೀ ನಮಗೆ ಸಾಕಾಗಿ ಹೋಗಿದೆ…” ಎಂದು ಹೇಳುತ್ತಾರೆ.

“ಆಗ್ಲಿ ಯಜಮಾನ್ರೆ… ಕೊತ್ತಲಿಗೀಲಿ ಒಂದು ಮನೆ ಮಾಡಿ ನಾನಿವಳನ್ನು ಕರ್ಕೊಂಡು ಹೋಗ್ತೀನಿ” ಎಂದು ಭರವಸೆ ನೀಡುತ್ತೇನೆ.

“ಹಾಗೆ ತಾಯಿ ಕಡೆಗೂ ಒಂದು ಕಣ್ಣು ಇಟ್ಟಿರಪ್ಪಾ… ಮಾತೃ ದೇವೋಭವ ಅಂತ ವೇದಗಳು ಹೇಳಿದ್ದಾವೆ” ಎಂದು ತಿಪಟೂರು ಕಡೆಯ ವೃದ್ಧೆಯೋರ್ವರು ಎಚ್ಚರಿಸುತ್ತಾರೆ…

ಆಗ ನಾನು “ಎಲ್ಲಾದ್ರು ಉಂಟೆ ತಾಯಿ” ಎಂದು ಶಿರಸಾವಹಿಸುತ್ತೇನೆ.

ನಾನು ಮರುದಿನ ಕೊತ್ತಲಿಗಿಗೆ ಹೋದೆನು. ಬ್ಯಾಂಕ್ ಸೇರಿಕೊಂಡೆನು… ಸಹೋದ್ಯೋಗಿಗಳಾದ ವಿಶ್ವೇಶ್ವರ, ಇಸ್ಮಾಯಿಲ್, ಚಂಬಸಯ್ಯ, ಶಾಂತಿ, ಹೆಬ್ರಿ, ಗೋವಿಂದಾಚಾರ್ಯ, ಓಬನ್ನ ಮೊದಲಾದವರು ನನ್ನ ಜೊತೆಗೆ ಕಾರಣ ವಿಚಾರಿಸುತ್ತಾರೆ… ಈ ಭಾಗದಿಂದ ಕಥೆ ಶುರು ಮಾದು ಕುಂವೀ… ಈ ವಿಷಯದಲ್ಲಿ ನಾನು ನಿನಗೆ ಸರ್ವ ಹಕ್ಕುಗಳನ್ನು ಕೊಡುತ್ತಿರುವೆ. ಯೋಚಿಸಬೇಡ… ಬರೆದುಬಿಡು… ನಾನಿನ್ನು ಹಸ್ತಪ್ರತಿಯೋಳಗೆ ನಿರ್ಗಮಿಸಲು ನನಗೆ ಆಜ್ಞೆ ಮಾಡು ಗೆಳೆಯಾ” ಎಂದು ಶಾಮ ಶೂದ್ರ ಸಹಜ ಬುದ್ಧಿಯಿಂದಾಗಿ ನನ್ನನ್ನೂ ನನ್ನ ಬದುಕನ್ನೂಲೇವಡಿ ಮಾಡಲು ಮರೆಯಬೇಡ. ಎಂದು ಪಾತ್ರವು ಹೇಳಿಕೊಂದಿತು.
“ಹೋಗು ಶಾಮ… ಎಲ್ಲಿಗಾದ್ರು ಹೋಗಿ ಬೇಸರ ಕಳೆದುಕೊಂಡು ಬರ್ತಿ‌ಎ‌ಉ…” ಎಂದು ನಾನು ಆ ಪಾತ್ರಕ್ಕೆ ನಿರೀಕ್ಷಣಾ ಜಾಮೀನು ನೀದಿದೆನು.
ಅದು ಹೋಯಿತು.
ನಾನು ನೆಮ್ಮದಿಯಿಂದ ಉಸಿರುಬಿಟ್ಟೆ.
ಗಾಳಿ ತಣ್ಣಗೆ ಬೀಸಿತೆಂಬಲ್ಲಿಗೆ ಕುಂವೀ ಎಂಬ ನರಮಾನವ ವಿರಚಿತ ಶಾಮಣ್ಣ ಎಂಬ ಕಥಾನಕದ ಚತುರ್ಥಾಶ್ವಾಸಂ ಪರಿಸಮಾಪ್ತಿಯಾದುದು.
ಜಯಮಂಗಳಂ ನಿತ್ಯ ಶುಭ ಮಂಗಳಂ
*****
ಮುಂದುವರೆಯುವುದು

ಕೀಲಿಕರಣ: ಎಂ ಎನ್ ಎಸ್ ರಾವ್

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

This site uses Akismet to reduce spam. Learn how your comment data is processed.