ಶಿವಮೊಗ್ಗದ ಆಗಿನ ಇಂಟರ್ಮೀಡಿಯೆಟ್ ಕಾಲೇಜಿನಲ್ಲಿ ಸುಬ್ಬಣ್ಣ ಮತ್ತು ನಾನು ಒಟ್ಟಿಗೆ ಓದಿದೆವು. ಆಗ ಸುಬ್ಬಣ್ಣ ನನಗೆ ದೂರದ ಗೆಳೆಯ. ನಾನು ‘ಸ್ಟೂಡೆಂಟ್ ಸೋಶಿಯಲಿಸ್ಟ್ ಕ್ಲಬ್’ ಎಂಬ ಸಂಸ್ಥೆಯ ರಾಜಕೀಯ -ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ನಿರತನಾಗಿದ್ದೆ. ಸುಬ್ಬಣ್ಣ ಸಾಹಿತ್ಯ ಪ್ರೇಮಿಯೆಂದು ಆ ದಿನಗಳಲ್ಲಿ ನನಗೆ ಗೌರವ. ಮುಂದೆ ಐವತ್ತರ ದಶಕದ ಪ್ರಾರಂಭದಲ್ಲಿ ಇಂಗ್ಲಿಷ್ ಆನರ್ಸ್ ಓದಲು ನಾನು ಮೈಸೂರಿಗೆ ಬಂದಾಗ, ಸುಬ್ಬಣ್ಣ ಕನ್ನಡ ಆನರ್ಸಿನ ವಿದ್ಯಾರ್ಥಿ. ನಾನು ಮೊದಲು ಸೊನೆಗಾರರ ಬೀದಿಯಲ್ಲಿ, ಆನಂತರ ಸುಣ್ಣದ ಕೇರಿಯಲ್ಲಿ , ಕೊನೆಗೆ ಸಾರ್ವಜನಿಕ ವಿದ್ಯಾರ್ಥಿ ನಿಲಯದಲ್ಲಿ ಸ್ವತಃ ಅಡುಗೆ ಮಾಡಿಕೊಂಡೋ ಅಥವಾ ಉಚಿತ ವಿದ್ಯಾರ್ಥಿ ನಿಲಯದಲ್ಲೋ ಕಾಲ ಹಾಕುತ್ತಿದ್ದ ದಿನಗಳಲ್ಲಿ ನನಗೆ ಸುಬ್ಬಣ್ಣ ಹೆಚ್ಚು ಹೆಚ್ಚು ಆತ್ಮೀಯನಾಗುತ್ತ ಹೋದ. ಆ ದಿನಗಳಲ್ಲಿ ಸುಬ್ಬಣ್ಣ, ದುಡ್ಡು ಕಾಸಿನ ವಿಷಯದಲ್ಲಿ ನನಗಿಂತ ಹೆಚ್ಚು ಭಾಗ್ಯಶಾಲಿಯಾಗಿದ್ದ. ಪ್ರತಿ ಭಾನುವಾರ ಹಾಸ್ಟೆಲಿನಲ್ಲಿ ಸ್ಪೆಶಲ್ ಊಟ ಇರುತ್ತಿತ್ತು ನನಗೆ, ಸುಬ್ಬಣ್ಣನ ಅತಿಥಿಯಾಗಿ. ಮಧ್ಯಾಹ್ನ ತಿಂಡಿ ಕೂಡ ಅವನೊಂದಿಗೆ. ಅಲ್ಲದೆ ಕ್ಲಾಸಿದ್ದಾಗ ಚಕ್ಕರ್ ಹೊಡೆದೋ, ಇಲ್ಲದಿದ್ದಾಗ ಅವನ ರೂಮಿನಲ್ಲಿ ಕೂತೋ ಗಂಟೆಗಟ್ಟಲೆ ಕಾಲ ಸಾಹಿತ್ಯದ ಕುರಿತು ನಾವು ಮಾತನಾಡುತ್ತಿದ್ದೆವು. ಸಮಾಜವಾದಿ ರಾಜಕೀಯ ಚಿಂತನೆಯಿಂದ ಸಾಹಿತ್ಯ ಚಿಂತನೆಗೆ ತೊಡಗುವುದು ನನಗೆ ಒಂದೇ ವಿಷಯದ ಎರಡು ಹಂತಗಳಾಗಿ ಬಿಟ್ಟಿದ್ದವು. ಸುಬ್ಬಣ್ಣನಿಗೆ ನಾನು ಗಾರ್ಕಿಯ ಕಥೆಗಳ ಹುಚ್ಚು ಹಿಡಿಸಿದೆ. ಶೆಲ್ಲಿಯನ್ನು ಓದಿಸಿದೆ. ಸುಬ್ಬಣ್ಣ ನನಗೆ ಸತತವಾಗಿ ಪಂಪನನ್ನು, ಕುಮಾರವ್ಯಾಸನನ್ನು , ರತ್ನಾಕರವರ್ಣಿಯನ್ನು ಓದಿ ಹೇಳುತ್ತಿದ್ದ. ನಾವಿಬ್ಬರೂ ಹೀಗೆ ಒಂದು ಬಗೆಯ ಗುಂಗಿನಲ್ಲಿ ಇರುತ್ತಿದ್ದುದರಿಂದ ನನಗೆ ಆಗ ವಿದ್ಯಾರ್ಥಿ ಜೀವನ ಸಾಗಿಸುವ ಕಷ್ಟದ ಪರಿವೆಯೇ ಇರಲಿಲ್ಲ. ಫೀಸು ಕೊಡಲು ಹಣವಿಲ್ಲದಿದ್ದರೆ ಶಾಂತವೇರಿ ಗೋಪಾಲಗೌಡರಿಂದ ಪಡೆಯುತ್ತಿದ್ದೆ ಅಥವಾ ಶಿವಮೊಗ್ಗದ ಅಣ್ಣಯ್ಯನಿಂದ ಅಥವಾ ಸುಬ್ಬಣ್ಣನಿಂದ ಅಥವಾ ಆ ದಿನಗಳ ನನ್ನ ಇನ್ನೊಬ್ಬ ಗೆಳೆಯ ಶಂಕರನಾರಾಯಣ ಭಟ್ಟನಿಂದ. ಸಮಾಜವಾದದಲ್ಲಿ ಆ ದಿನಗಳಲ್ಲಿ ನನಗಿದ ದ ಭರವಸೆ ಎಷ್ಟೆಂದರೆ ಸದ್ಯದ ಕಷ್ಟಗಳೆಲ್ಲವೂ ತೃಣ ಸಮಾನವೆನ್ನಿಸುವಷ್ಟು ! ನನ್ನ ಎಲ್ಲ ಸ್ನೇಹ ಸಂಬಂಧವೂ ಒಂದು ಸಮಾಜವಾದಿ ಕುಟುಂಬವನ್ನು ಸದ್ಯದ ಸ್ಥಿತಿಯಲ್ಲೇ ನನಗೆ ಸೃಷ್ಟಿಸಿ ಕೊಟ್ಟಿತ್ತು. ಈಗಲೂ ಒಂದು ಘಟನೆ ನೆನಪಿದೆ; ಒಮ್ಮೆ ನನಗೆ ಅತ್ಯಗತ್ಯವಾಗಿ ಬೇಕಾಗಿದ್ದ ಹತ್ತು ರೂಪಾಯಿಗಳಿಗಾಗಿ ಮೈಸೂರಿನಲ್ಲಿದ್ದ ನಮ್ಮೂರಿನ ಒಬ್ಬ ಹಿರಿಯರ ಬಳಿ ಹೋಗಿದ್ದೆ. ಅವರು ಸಣ್ಣ ಮಾತಾಡಿ ಆ ಹಣ ಕೊಟ್ಟರು. ಅದನ್ನು ಮುಷ್ಟಿಯಲ್ಲಿ ಹಿಡಿದು ಸುಣ್ಣದ ಕೇರಿಗೆ ನಾನು ಬರುವಷ್ಟರಲ್ಲಿ ಆ ಹಣ ನನ್ನ ಅರಿವಿಗೆ ಬಾರದಂತೆ ಸಿಟ್ಟಿನ ಮುಷ್ಟಿಯಲ್ಲಿ ಚೂರು ಚೂರಾಗಿತ್ತು. ಅಂದರೆ ಗೆಳೆಯ ಸುಬ್ಬಣ್ಣನ ಬಳಿ ಹಣವಿಲ್ಲದ ದಿನ ಅದಾಗಿರಬೇಕು. ಸುಬ್ಬಣ್ಣನಿಗೆ ನಾಟಕದ ಹುಚ್ಚು ಎಷ್ಟೆಂದರೆ ಯಾವ ಕಂಪೆನಿ ಮೈಸೂರಿಗೆ ಬಂದರೂ ಗೆಳೆಯರನ್ನೆಲ್ಲ ಕಟ್ಟಿಕೊಂಡು ನಾಟಕ ನೋಡಲು ಅವನು ಹಾಜರು. ಇಂತಹ ಶೋಕಿಗಳಿಗಾಗಿ ಹಣ ಕಡಿಮೆಯಾದಾಗ ಅವನೂ ನಾನೂ ಇನ್ನೊಬ್ಬ ಆತ್ಮೀಯ ಗಂಗಾಧರನೂ ನೂರಡಿ ರಸ್ತೆಯ ಗಿರಿಯಪ್ಪನ ಅಂಗಡಿಯಲ್ಲಿ ನಮ್ಮ ರಿಸ್ಟ್ ವಾಚುಗಳನ್ನು ಗಿರವಿಯಿಟ್ಟು ಹಣ ಪಡೆಯುತ್ತಿದ್ದೆವು. ನಮ್ಮ ಹಲವು ಜೋಕುಗಳು ಇದರ ಸುತ್ತಲೇ. ಅವನಿಗೆ ಹಣ ಹಿಂದಿರುಗಿಸಿ ನಮ್ಮ ವಾಚು ಪಡೆಯುವುದು ತಡವಾದರೆ ನೂರಡಿ ರಸ್ತೆಯ ಸಂಚಾರದ ಸ್ವಾತಂತ್ರ್ಯವನ್ನೇ ನಾವು ಕಳೆದುಕೊಳ್ಳುತ್ತಿದ್ದೆವು. ಒಮ್ಮೆ ಎಲ್ಲೋ ನಡೆದು ಹೋಗುವಾಗ ಸುಬ್ಬಣ್ಣನನ್ನು ಹೆದರಿಸಲು ‘ಏ ಗಿರಿಯಪ್ಪ ಬರುತ್ತಿದ್ದಾನೆ, ನೋಡು’ ಎಂದೆ. ಕೂಡಲೇ ಸುಬ್ಬಣ್ಣ ನಡೆಯುವ ಭಂಗಿ ಬದಲಾಯಿಸಿ ಒಂದು ಕಾಲಿನಲ್ಲಿ ಕುಂಟನಾಗಿ ನನ್ನ ಜೊತೆಗೆ ನಡೆಯತೊಡಗಿದ ಬಹಳ ಗಂಭೀರವಾಗಿ. ಇವತ್ತಿಗೂ ಆ ಘಟನೆ ನೆನೆದರೆ ನನಗೆ ನಗು ಬರುತ್ತದೆ. ಬಾಲ್ಯದ ಆತ್ಮೀಯ ಗೆಳೆತನದಲ್ಲಿ ಹುಟ್ಟುವ ಈ ಕ್ಷುಲ್ಲಕ ಸಂತೋಷಗಳು ಅತ್ಯಮೂಲ್ಯವಾದುವು. ನನ್ನ ಜೀವನದುದ್ದಕ್ಕೂ ಸುಬ್ಬಣ್ಣನ ಜೊತೆಗಿನ ಸಹವಾಸದ ಇಂಥ ನೆನಪುಗಳು ಹಲವಾರು ಇವೆ.
ನನ್ನ ನೆನಪಿನಲ್ಲಿ ಆ ದಿನಗಳಲ್ಲಿ ಸುಬ್ಬಣ್ಣ ಪರಮ ರಸಿಕನಾಗಿದ್ದ. ಏನನ್ನೇ ಓದಲಿ, ಏನನ್ನೇ ನೋಡಲಿ, ಅದನ್ನು ಅತ್ಯಂತ ಉತ್ಕಟವಾಗಿ ಅನುಭವಿಸುತ್ತಿದ್ದ. ನಾನು ಆ ದಿನಗಳಲ್ಲಿ ಓದಿದ ಕಾರಂತರ ಎಲ್ಲ ಕಾದಂಬರಿಗಳನ್ನೂ ಅವನ ಉತ್ಕಟ ದೃಷ್ಟಿಯಿಂದಲೇ ಕಂಡದ್ದು, ಅನುಭವಿಸಿದ್ದು. ನಿಜವೆಂದರೆ ಆ ದಿನಗಳಲ್ಲಿ ಸುಬ್ಬಣ್ಣ ಸಾಹಿತ್ಯದ ಬಗ್ಗೆ ನನಗಿಂತಲೂ ಹೆಚ್ಚು ಖಚಿತವಾದ ತಿಳಿವಳಿಕೆಯನ್ನು ಪಡೆದಿದ್ದನೆಂದೇ ನನ್ನ ನೆನಪು. ನಾನು ಅವನನ್ನು ಒಬ್ಬ ಮಾರ್ಗದರ್ಶಿಯೆಂದೇ ತಿಳಿದು ಅನುಸರಿಸಿದ್ದೆ. ಆನರ್ಸ್ ಓದುತ್ತಿದ್ದ ಆ ದಿನಗಳಲ್ಲೂ ಕೂಡ ಸುಬ್ಬಣ್ಣನಿಗೆ ನಾಲ್ಕು ಜನರನ್ನು ಕೂಡಿಸಿಕೊಂಡು ಕೆಲಸ ಮಾಡುವ ಕೌಶಲ ಸಾಧಿಸಿತ್ತು. ಮಹಾರಾಜ ಕಾಲೇಜಿನ ‘ಮಿತ್ರಮೇಳ’ ಎಂಬ ನಾಟಕ ಬಳಗದ ಸಕ್ರಿಯ ಸದಸ್ಯ ಅವನಾಗಿದ್ದ. ನಾನಾದರೂ ಅದರ ಅಂಚಿನಲ್ಲಿ ಇದ್ದವನು. ಪ್ರೊ.ರಂಗಣ್ಣನವರಿಗಾಗಿ ‘ಬಾಗಿನ’ ಎಂಬ ಅಭಿನಂದನ ಗ್ರಂಥವನ್ನು ಅವನು ಹಾ.ಮಾ. ನಾಯಕರೊಂದಿಗೆ ಸೇರಿ ಹೊರತಂದಿದ್ದ. ಈಗಲೂ ನನಗೆ ತುಂಬ ಸುಂದರ ಎನ್ನಿಸುವ ಸಭೆಯಲ್ಲಿ ಈ ಗ್ರಂಥ ಬಿಡುಗಡೆಯಾಗಿತ್ತು. ಸಾಹಿತ್ಯ ಮಾತ್ರವಲ್ಲದೆ ಅಡಿಕೆ ಬೆಳೆಗಾರರ ಪರವಾಗಿಯೂ ಸುಬ್ಬಣ್ಣ ಹಲವು ಲೇಖನಗಳನ್ನು ಬರೆದಿದ್ದ. ನಾನು ಅವನನ್ನು ತಮಾಷೆ ಮಾಡುತ್ತಿದ್ದೆ; “ಏನೋ, ಒಂದೇ ಲೇಖನವನ್ನು ‘ನೀವು ತಿನ್ನುವ ಅಡಿಕೆ’, ‘ತಾವು ತಿನ್ನುವ ಅಡಿಕೆ’, ‘ನಾವು ತಿನ್ನುವ ಅಡಿಕೆ’ಯೆಂದು ನೀನು ಪ್ರಕಟಿಸುತ್ತಿದ್ದೀಯಾ.” ನಾವು ಪರಸ್ಪರ ಗೌರವ, ಪ್ರೀತಿ ವ್ಯಕ್ತ ಪಡಿಸುತ್ತಿದ್ದುದು ಈ ರೀತಿಯ ಲೇವಡಿಯಿಂದಲೇ. ಆನರ್ಸ್ ಮುಗಿಸಿ ನಾನು ಅಧ್ಯಾಪಕ ವೃತ್ತಿಗೆ ಇಳಿದು ಹಲವು ಸಂಕೋಚಗಳ ನಡುವೆಯೇ ನನ್ನ ಮಾನಸಿಕ ಸಾಹಸಗಳನ್ನು ಕೈಗೊಂಡರೆ ಸುಬ್ಬಣ್ಣ ಸಂಬಳದ ಹಂಗಿಲ್ಲದ ಜೀವನಕ್ಕೇ ಇಳಿದುಬಿಟ್ಟ . ಅವನ ಆಗಿನ ರಸೈಕ ದೃಷ್ಟಿ ಎಂದು ನನ್ನ ಅರ್ಧ ಕುಶಾಲಿನ, ಅರ್ಧ ಗಂಭೀರದ ಟೀಕೆಗೆ ಒಳಗಾಗಿದ್ದ ಅವನ ಜೀವನಕ್ರಮ ಈ ಆಯ್ಕೆಯಿಂದಾಗಿಯೇ ಹಲವು ಸವಾಲುಗಳನ್ನು ಎದುರಿಸಿ ಪಕ್ವವಾಗುತ್ತ ಹೋಯಿತು. ಆಗಿನ ಅವನ ಕವನ ಸಂಕಲನ ಹೂ ಚೆಲ್ಲಿದ ಹಾದಿಯಲ್ಲಿ ಎಂಬುದು ಸೌಂದರ್ಯದ ಉದ್ದೇಶಪೂರ್ವಕ ಹುಡುಕಾಟವೆಂದು ನನಗೆ ಅತೃಪ್ತಿ ತಂದಿತ್ತು. ಆದರೆ ಆ ದಿನಗಳಲ್ಲೇ ‘ದಶರೂಪಕ’ವನ್ನು ಅವನು ಕನ್ನಡಕ್ಕೆ ತಂದದ್ದು ಅವನ ವಯಸ್ಸಿಗೆ ಮೀರಿದ ಒಂದು ಪ್ರೌಢ ಕೆಲಸವೂ ಆಗಿತ್ತು. ಸುಬ್ಬಣ್ಣನ ಚೇತನ ಎಷ್ಟು ವೇಗವಾಗಿ ತನ್ನ ನೆಲೆಯನ್ನು ಕಂಡುಕೊಂಡು ಬೆಳೆಯಿತೆಂಬುದು ಆಶ್ಚರ್ಯದ ಸಂಗತಿ. ಊರಿಗೆ ಮರಳಿದವನೇ ಒಂದು ಸೊಗಸಾದ ಮನೆ ಕಟ್ಟಿದ. ಅದು ತಾನಿರಲು ಮಾತ್ರವೇ ಕಟ್ಟಿದ ಮನೆಯಲ್ಲ. ತನ್ನ ಅಪಾರ ಗೆಳೆಯರನ್ನು ಮನೆಗೆ ಕರೆದು ಸಂತೋಷಪಡಿಸಲು ತಕ್ಕ ವೈಶಾಲ್ಯದಲ್ಲಿ ಅದನ್ನು ಅವನು ಕಟ್ಟಿದ್ದು. ನಮಗೆಲ್ಲರಿಗೂ ತೀರ್ಥಹಳ್ಳಿ ಯಲ್ಲಿ ಪೂಜ್ಯ ಗುರುಗಳಾಗಿದ್ದ ಸ್ವತಃ ಕವಿಗಳೂ ಆಗಿದ್ದ ಪಂಡಿತ ನರಸಿಂಹ ಶಾಸ್ತ್ರಿಗಳ ಮಗಳಾದ ಶೈಲಜಾಳನ್ನು ಅವನು ಮದುವೆಯಾದದ್ದು ಅವನು ಆಯ್ದ ಬದುಕಿನ ಕ್ರಮಕ್ಕೆ ಹೆಚ್ಚಿನ ಅರ್ಥವನ್ನೂ ಸಹಜತೆಯನ್ನೂ ತಂದು, ಸುಬ್ಬಣ್ಣನ ಕಲಾಸಾಹಸಗಳು ಗೃಹಸ್ಥ ಧರ್ಮದ ಒಂದು ಅಂಶವೆನ್ನುವಂತೆ ಮಾಡಿತು. ಹೆಂಡತಿ ಸಂಗೀತಗಾರಳಾದರೆ ತಾಯಿ ಪ್ರಕಟನೆ ಬಯಸದ ಧ್ಯಾನಶೀಲೆ ಸಾಹಿತಿ. ಈಗ ಅವನ ಮಗ ಅಕ್ಷರನೂ ಒಬ್ಬ ಪ್ರತಿಭಾಶಾಲಿ ಬರಹಗಾರ. ತನ್ನೂರಿಗೆ ಮರಳಿದ ಮೇಲೆ ಸುಬ್ಬಣ್ಣ ಮೊದಲು ತನ್ನ ಅಡಿಕೆ ತೋಟವನ್ನು ಚೆನ್ನಾಗಿ ಬೆಳೆಸಿ ನಿಜವಾದ ಅರ್ಥದಲ್ಲಿ ಈಚೆಗೆ ಅಪರೂಪವೆನ್ನಿಸುವ ಶ್ರೀಮಂತನಾದ. ತನಗೆ ಇಷ್ಟವಾ ದುದರಲ್ಲಿ ನಿರತನಾಗುವ ಸ್ವಾತಂತ್ರ್ಯವನ್ನು ಹೀಗೆ ಪಡೆದು ತನ್ನ ಸುತ್ತಮುತ್ತಲಿನ ರಸಿಕರನ್ನು ಕೂಡಿಕೊಂಡು ನಾಟಕ ಆಡುವುದರಲ್ಲಿ , ಆಡಿಸುವುದರಲ್ಲಿ ತೊಡಗಿದ. ಹೀಗೆ ‘ ನೀಲಕಂಠ ನಾಟ್ಯಸೇವಾ ಸಂಘ’ ಬೆಳೆಯತೊಡಗಿತು – ಏಶ್ಯಾದಲ್ಲೇ ಒಂದು ಮಾದರಿ ಸಂಸ್ಥೆಯಂತೆ.
ನಮ್ಮ ಗೆಳೆತನವೂ ಗಾಢವಾಗುತ್ತ ಹೋಯಿತು. ಉಂಡು, ತಿಂದು ಸುಖವಾದ ನಿದ್ರೆ ಮಾಡಿ ಕಾಡಿನ ದಾರಿಗಳನ್ನು ಅಲೆದು, ಯಕ್ಷಗಾನ ನೋಡಲು ಮತ್ತು ಹಳ್ಳಿಯ ಹಾಡುಗಳನ್ನು ಕೇಳಿಸಿಕೊಳ್ಳಲು ಆಸೆಯಾದಾಗಲೆಲ್ಲ ನಾನು ಹೋಗುತ್ತಿದ್ದುದು ಸುಬ್ಬಣ್ಣನ ಸದಾ ತೆರೆದ ಬಾಗಿಲಿನ ಮನೆಗೆ. ಅಲ್ಲಿ ಸುಬ್ಬಣ್ಣ , ಅವನ ಹೆಂಡತಿ ಶೈಲಜಾ, ಅವನ ತಾಯಿ ಮತ್ತು ಮಗ ಅಕ್ಷರ ಬೆಳೆಯುತ್ತಾ ಹೋದುದನ್ನು ಕಂಡು ನಾನು ಸಂತೋಷ ಪಟ್ಟಿದ್ದೇನೆ. ನನಗೆ ಮಾತ್ರ ವಲ್ಲ, ನನ್ನ ಸಂಸಾರಕ್ಕೂ ಸಾಹಿತ್ಯದ ಗೆಳೆಯರಿಗೂ ರಾಜಕೀಯ ಮಿತ್ರರಿಗೂ ಸುಬ್ಬಣ್ಣನದು ಸ್ವಂತ ಮನೆಯಾಗಿ ಬಿಟ್ಟಿತು. ಮುಂದಿನದು ಕನ್ನಡದ ಸಾಂಸ್ಕೃತಿಕ ಇತಿಹಾಸಕ್ಕೆ ಸೇರಿದ ಸಂಗತಿಯಾಗಿದೆ. ನನ್ನ ಮಟ್ಟಿಗೆ ಹೇಳುವುದಾದರೆ ರಾಜಕೀಯ ಕ್ಷೇತ್ರದಲ್ಲಿ ವಿಫಲವಾಯಿತು ಎನ್ನಿಸುವ ಆದರ್ಶಗಳೆಲ್ಲವೂ ಸುಬ್ಬಣ್ಣನ ಊರಿನಲ್ಲಿ ಒಂದು ದೀಪದಂತೆ ಸಜೀವವಾಗಿ ಉಳಿದು ಬೆಳೆದಿವೆ. ಸುಬ್ಬಣ್ಣ ಕೇವಲ ಒಬ್ಬ ಉತ್ಕಟನಾದ ರಸಿಕ ಮಾತ್ರವಲ್ಲ , ಅವನ ರಸಿಕತೆ ತನ್ನ ಜೀರ್ಣಶಕಿ ತಯನ್ನು ಅಪಾರವಾಗಿ ಬೆಳೆಸಿಕೊಂಡು ಒಂದು ಹಳ್ಳಿಯ ಪರಿಸರದಲ್ಲಿ ಪ್ರಪಂಚದಲ್ಲಿ ಅತ್ಯುತ್ತಮವಾದುದನ್ನು ಮೈದಾಳುವಂತೆ ಮಾಡುವ ಶಕ್ತಿಯನ್ನು ಪಡೆದುಕೊಂಡಿದೆ. ಇಲ್ಲಿಯೇ ಹೇಳಬೇಕಾದ ಸಂಗತಿ ಒಂದಿದೆ: ಕೆಲವರು ಅತ್ಯುತ್ತಮ ಸಂಸ್ಥೆ ಕಟ್ಟಬಲ್ಲರು. ಆದರೆ ತಾವೇ ಉತ್ತಮ ಸೃಜನಶೀಲ ಲೇಖಕರಾಗಿರಬೇಕಿಲ್ಲ. ಸೃಜನಶೀಲ ಲೇಖಕರಂತೂ ಯಾವ ಸಂಸ್ಥೆಯನ್ನಾದರೂ ಹಾಳು ಮಾಡಬಲ್ಲ ಉದ್ರೇಕದ ವಿಶಿಷ್ಟತೆ ಪಡೆದವರಾಗಿ ರುವುದೇ ಹೆಚ್ಚು. ಆದರೆ ಸುಬ್ಬಣ್ಣ ಸ್ವತಃ ಎಷ್ಟು ಒಳ್ಳೆಯ ಬರಹಗಾರನೆಂದರೆ ಸಾಹಿತ್ಯ ಮತ್ತು ಸಿನಿಮಾ ಕುರಿತ ಅವನ ವಿಮರ್ಶೆಗಳಲ್ಲಿ ಕೆಲವು ನಮ್ಮ ಕಾಲದ ಉತ್ತಮ ಬರಹಗ ಳಾಗಿವೆ. ‘ರೋಶಮಾನ್’ ಬಗ್ಗೆ ಸುಬ್ಬಣ್ಣ ಬರೆದಿದ್ದು ಮತ್ತು ‘ಲೋಕ ಶಾಕುಂತಲಾ’ದ ಬಗೆಗಿನ ಅವನ ಲೇಖನ ಯಾವ ಭಾಷೆಯಲ್ಲೇ ಆಗಲಿ ಉತ್ತಮ ಕೃತಿಗಳೆಂದು ನನಗನ್ನಿಸಿದೆ.
(ಕೆ. ವಿ. ಸುಬ್ಬಣ್ಣ ಅಭಿನಂದನ ಗ್ರಂಥ ‘ರಂಗಧಾಮ’ದಲ್ಲಿ ಈಗಾಗಲೇ ಪ್ರಕಟವಾಗಿರುವ ಲೇಖನದ ಆಯ್ದ ಭಾಗ ಇದು.)