ಹೋರು ಬೀಳ್ವನ್ನೆಗಂ

ಅರರೆ! ನರಜೀವಿ ನರನನಿರಿಯುವದಿದೊಳ್ಳಿತೆ?

ಜಾತಿಮತ ಪಂಥಗಳ ಕೊಳಚೆಯಲಿ ಕಚ್ಚಾಡಿ
ಸೋದರತೆ ಮಾನವ ದಾನವತೆಯಂ ಕೂಡ

ಪಾಳ್ಗೈದುದೇನಿದುವೆ ಸುಸಂಸ್ಕೃತಿಯ ಘನತೆ?
ನಾಡು ನಿಂತಿಹುದಿಂದು ಬಿಡುಗಡೆಯ ಹೊಸತಿಲಲಿ

ಕಳಚಲಿದೆ ಕೈ ಬೇಡಿ, ಮಿಡಿಯಲಿದೆ ಹೊಸ ನಾಡಿ
ಧುಮುಕಲಿದೆ ಬಿಸಿರಕುತ ಜಯ ಜಯವೆನ್ನಿ ಪಾಡಿ.

ನಲುಮೆ ನಮ್ಮದಿ ತುಷ್ಟಿ ಕುಟ್ಟಿಮದ ಪೀಠದಲಿ
ಸ್ನೇಹ ಸೌಹಾರ್ದತೆ ವಿಶ್ವಬಂಧುತ್ವದಿಂದ

ಪೂಜಿಸಿರಿ ಮಾತೆಯನು, ನವಜಗವಿಧಾತೆಯನು
ಚಂಡಿ ಚಾಮುಂಡಿಯನು, ಭೈರವಿ ಭಾರತಿಯನು.

ಎದ್ದೇಳಿ ಯುವ ಜನವೆ ಗೂಡು ಬೀಡುಗಳಿಂದ

ಜನುಮ ಜನುಮದ ದಾಸ್ಯ ಹರಿತರಿಯುವನ್ನೆಗಂ
ಶಿರವರಿದು ಪೋದೊಡಂ ಹೋರು ಬೀಳ್ವನ್ನೆಗಂ.
*****