ಭವ – ೨

ಯಾವ ಕಾರಣವಿಲ್ಲದೆ ಇಂಥ ದ್ವೇಷ ಉರಿಯುತ್ತದಲ್ಲ ಎಂದುಕೊಂಡು ಶಾಸ್ತಿಗಳು ಆಮೇಲೆ ವಿ ಹ್ವಲರಾಗುತ್ತಾರೆ. ತನ್ನ ಮಗಳೂ ಮನೆ ಬಿಟ್ಟು ಹೋಗುವ ಮುಂಚೆ ಹೀಗೇ ತನ್ನನ್ನು ನೋಡಿದ್ದಳು. ಮಗಳು ಕಾಲೇಜಲ್ಲಿ ಯಾರನ್ನೋ ಪ್ರೀತಿಸುತ್ತಿದ್ದಾಳೆಂದು ತಿಳಿದು ಈಗ ತನ್ನನ್ನು ಕಂಗಾಲುಗೊಳಿಸುತ್ತಿರುವ ಆ ಹಿಂದಿನ ರೋಷ ಮರುಕಳಿಸಿತ್ತು. ಮಗಳಿಗೆ ಆಡಬಾರದ್ದನ್ನು ಆಡಿದ್ದರು; ಅವಳು ತಂದೆಗೆ ಆಡಬಾರದ್ದನ್ನು ಆಡಿದ್ದಳು. ಪುರಾಣ ಪ್ರವಚನದಲ್ಲಿ ತೊಡಗಿದ್ದಾಗ ಪ್ರಹ್ಲಾದನ ಬಗ್ಗೆಯೋ, ಧ್ರುವನ ಬಗ್ಗೆಯೋ ಸಭಿಕರು ಅಷ್ಟೊಂದು ಆರ್ದ್ರಗೊಳ್ಳುವಂತೆ ಮಾತಾಡಬಲ್ಲವನು ಯಾರು, ಅದೂ ನಾನಿರಬಹುದೆ ಎಂದು ಶಾಸ್ತಿಗಳು ಬೆಚ್ಚುತ್ತಾರೆ. ತಾನು ಸದಾ ತನ್ನಿಂದ ಓಡಿಹೋಗುತ್ತಿದ್ದೇನೆ ಎನ್ನಿಸಿದ್ದಿದೆ. ಹೀಗೆ ಓಡುವುದನ್ನು ದಿನಕರನ ಕೊರಳಿನ ತಾಯಿತ ನಿಲ್ಲಿಸೀತೆ? ಅವ್ಯಕ್ತವಾದ ದಿಗಿಲಿಗೆ ತನ್ನನ್ನು ಅದು ಎದುರು ಮಾಡಿತ್ತು. ಆ ಎರಡು ಜೊತೆ ಕೆಕ್ಕರಿಸುವ ಕಣ್ಣುಗಳೂ ತನ್ನವೇ ಎಂದು ಅಸ್ಪಷ್ಟವಾಗಿ ಹೊಳೆದಂತಾಗಿ, ಗಾಬರಿಯಾಗಿ, ಇನ್ನೇನೋ ಯೋಚಿಸಲು ಪ್ರಯತ್ನಿಸುತ್ತ, “ಸೀತಮ್ಮ ಎರಡು ದಿನ ದಿನಕರನನ್ನು ಇಲ್ಲೇ ಇಟ್ಟುಕೊಳ್ಳಿ. ನಾನು ಬಂದು ಅವರನ್ನು ನಮ್ಮ ಕಗ್ಗಾಡಿಗೆ ಕರೆದುಕೊಂಡು ಹೋಗುವೆ. ನಮ್ಮಲ್ಲಿ ಒಂದೆರಡು ದಿನವಿದ್ದು ಅವರು ಕೇರಳಕ್ಕೆ ಹೋಗುತ್ತಾರಂತೆ. ಬೇಡ, ನಾನಿವತ್ತು ಏನೂ ತಿನ್ನುವವನಲ್ಲ. ಇವತ್ತು ಏಕಾದಶಿಯಲ್ಲವ?” ಎಂದು ಎಷ್ಟು ಒತ್ತಾಯಿಸಿದರೂ ಕೇಳದೆ ಶಾಸ್ತಿಗಳು ಹೊರಟೇಬಿಟ್ಟರು. ಟ್ಯಾಕ್ಸಿ ಸ್ಟಾಂಡಿನಲ್ಲಿ ಒಂದು ಟ್ಯಾಕ್ಸಿಯನ್ನು ಪಡೆದು ನೇರವಾದ ದಾರಿಬಿಟ್ಟು ತನ್ನ ಗುಪ್ತಭಕ್ತಿಯ ದೇವತೆಯೊಬ್ಬಳ ಜೀರ್ಣಗೊಂಡ ಗುಡಿಯಿರುವ ಕಾಡನ್ನು ಹೊಕ್ಕರು. ಎತ್ತಿನ ಬಂಡಿಗಳು ಓಡಾಡುವ ದಾರಿಯಲ್ಲಿ ಕಾರು ಹೋಗಬೇಕಿತ್ತು. ‘ನಿನಗೆ ಎರಡರಷ್ಟು ಬಾಡಿಗೆ ಕೊಡುವೆ’ ಎಂದು ಸ್ಥಳೀಯ ಗತ್ತಿನಲ್ಲಿ ಶಾಸ್ತಿಗಳು ಹೇಳಿದ್ದರಿಂದ ಚಾಲಕ ಮಾತಾಡದೆ ಕಾರನ್ನು ಇಕ್ಕಟ್ಟಿನಲ್ಲಿ ಓಡಿಸಲು ಒಪ್ಪಿದ್ದ. ದಟ್ಟವಾದ ಕಾಡಿನ ಮಧ್ಯೆ ಕಾರನ್ನು ನಿಲ್ಲಿಸಿ, ‘ಅರ್ಧಗಂಟೆ ಕಾದಿರು’ ಎಂದು ಶಾಸ್ತಿಗಳು ಸವೆದ ಹಾದಿಯಿಲ್ಲದ ಪೊದೆಗಳ ನಡುವೆ ತನ್ನದೇ ದಾರಿ ಮಾಡಿಕೊಳ್ಳುತ್ತ ನಡೆದರು. ಹಾಳುಬಿದ್ದ ಭಗವತಿಯ ಗುಡಿಯೆದುರು ಬಂದು ನಿಂತರು. ಭಗವತಿಗೆ ನಿತ್ಯ ದೀಪ ಉರಿಸಲೆಂದು ಹತ್ತಿರದ ಹಳ್ಳಿಯ ಬಡ ಬ್ರಾಹ್ಮಣನೊಬ್ಬನಿಗೆ ಶಾಸ್ತಿಗಳು ತಿಂಗಳಿಗೆ ೨೫೦ ರೂಪಾಯಿ ಕೊಡುತ್ತಿದ್ದರು. ಗುಡಿಯನ್ನು ಹೊಸದಾಗಿ ಕಟ್ಟಿಸಬೇಕೆಂದು ಒಮ್ಮೆ ಮನಸ್ಸಾಗಿತ್ತು. ಆದರೆ ಆ ದೇವಿಯ ಕಾರ್ಣಿಕ ಅವಳ ಗುಡಿ ಬದಲಾದರೆ ಉಳಿಯಲಿಕ್ಕಿಲ್ಲವೆಂದು ತನ್ನ ಎಲ್ಲ ಶಾಸ್ತಜ್ಞಾನವನ್ನೂ ಬದಿಗೊತ್ತಿ ನಂಬಿದ್ದರು ಶಾಸ್ತಿಗಳು. ತನ್ನ ಮಿದುಳಿನಲ್ಲಿ ಉರಿಯುವ ಕಣ್ಣು ಕಠೋರ ದೇವಿ ಭಗವತಿ ಎಂದು ಅವರು ನಂಬಿದ್ದರು. ಒಂದು ವರ್ಷದ ಹಿಂದೆ ತನ್ನ ಜಗಳಗಂಟಿ ಹೆಂಡತಿಯ ಪ್ರತಿನಿತ್ಯದ ರಾದ್ಧಾಂತ ತಡೆಯಲಾರದೆ, ಭಗವತಿಗೆ ಹರಕೆ ಹೇಳಿಕೊಂಡು, ತನ್ನ ಹೆಂಡತಿಯನ್ನು ಇಲ್ಲಿಗೆ ಕರೆತಂದಿದ್ದರು. ಮಹಾದೇವಿ ಭಗವತಿಯ ಎದುರು ನಿಂತು ದುರುಗುಟ್ಟ ತೊಡಗಿದಳು. ಇಡೀ ಕಾಡಿನ ಮೌನ ಸೀಳುವಂತೆ ಕಿಟಾರನೆ ಕಿರುಚಿಕೊಂಡಳು. ಕಣ್ಣನ್ನು ಕೆಕ್ಕರಿಸಿ ಶಾಸ್ತಿಗಳ ಎದುರು ನಿಂತು ಏನೇನೋ ಬಡಬಡಿಸತೊಡಗಿದಳು. ಅವಳ ಆಪಾದನೆಗಳಿಂದ ಶಾಸ್ತಿಗಳು ದಿಗಿಲು ಬಿದ್ದಿದ್ದರು. ಮೊದಲ ಹೆಂಡತಿಯನ್ನು ಮಣೆಯನ್ನು ತಲೆಗೆ ಜಪ್ಪಿ ತಾನು ಕೊಂದಿದ್ದೇನೆಂಬುದು ಇವಳಿಗೆ ಹೇಗೆ ತಿಳಿಯಿತು? ಅವಳು ಜಕಣಿಯಾಗೆ ತನ್ನನ್ನು ಕಾಡುತ್ತಿದ್ದಾಳೆಂದು ಮಹಾದೇವಿ ಅಬ್ಬರಿಸಿದ್ದಳು. ಇದ್ದಕ್ಕಿದ್ದಂತೆ ಆ ಮಹಾದೇವಿ ತನ್ನ ಮೊದಲ ಹೆಂಡತಿಯಾಗಿಯೇ ಬಿಟ್ಟಿದ್ದಳು. “ನನ್ನನ್ನು ಜಪ್ಪಿ ಜಪ್ಪಿ ಕೊಂದಂತೆ, ತನ್ನ ಸವತಿಯ ಮಗಳನ್ನು ಜಪ್ಪಿ ಕೊಲ್ಲಲು ಹೋಗಿದ್ದೆಯಲ್ಲೋ. ಏ ಕಟುಕ ಬ್ರಾಹ್ಮಣ’ ಎಂದು ಕಿರುಚತೊಡಗಿದ್ದಳು. ಶಾಸ್ತಿಗಳು ದೇವಿಯ ಎದುರು ನಿಂತು ಕಣ್ಣು ಮುಚ್ಚಿ ಕೇಳಿದರು: ‘ಭಗವತಿ ಯಾಕೆ ನನ್ನ ಹೆಂಡತಿಯ ಬಾಯಿಂದಲೂ ಸುಳ್ಳು ಹೇಳಿಸಿದೆ? ನನ್ನನ್ನೂ ಯಾಕೆ ಕೊಲೆಗಡುಕನಿರಬಹುದೆಂಬ ಭೀತಿಯಲ್ಲಿ ಈ ತನಕ ನಡೆಸಿಕೊಂಡೆ? ದಿನಕರ ನನ್ನ ಮಗನೋ, ಆ ಮಲೆಯಾಳಿ ಪಂಡಿತನ ಮಗನೋ ನಿಜ ಹೇಳು? ನಿಜ ತಿಳಿಯುವಂತೆ ನನಗೊಂದು ಸಂಜ್ಞೆ ಕೊಡು. ನನ್ನನ್ನು ಪ್ರೇತದಂತೆ ಅಲೆಸುತ್ತಿರಬೇಡ’ ಯಾವ ಸಂಜ್ಞೆಯೂ ಸಿಗಲಿಲ್ಲ. ತನ್ನ ಮಿದುಳಿನಲ್ಲಿ ಕೆಂಗಣ್ಣುಗಳು ಕೆಕ್ಕರಿಸುವುದು ನಿಲ್ಲಲಿಲ್ಲ. ಭಗವತಿಯ ಕಾನಿನಲ್ಲಿ ದಾರಿ ಹುಡುಕುತ್ತಾ ಟ್ಯಾಕ್ಸಿಯನ್ನು ನಿಲ್ಲಿಸಿದಲ್ಲಿಗೆ ಮರಳಿದರು. ಉಡುಪಿಯಿಂದ ಹತ್ತು ಮೈಲಿ ದೂರದ ಇನ್ನೊಂದು ಹಳ್ಳಿಗೆ ಕಾರು ನಡೆಸುವಂತೆ ಹೇಳಿದರು. ಆ ಹಳ್ಳಿಗೆ ಅದೊಂದೇ ದೊಡ್ಡ ಮನೆ. ಅದನ್ನು ಕಟ್ಟಿಸಿದವರು ಶಾಸ್ತಿಗಳೇ. ಆ ಮನೆಯಲ್ಲಿ ಮಾತ್ರ ಅವರ ಮಿದುಳಿನಲ್ಲಿ ಉರಿಯುವ ಕಣ್ಣುಗಳು ಶಾಂತವಾಗುತ್ತವೆ. ಅದು ಅವರ ಸೂಳೆಯ ಮನೆ. ರಾಧಾ ಎಂದು ಅವಳ ಹೆಸರು. ಆ ಹೆಸರೂ ಅವರು ಇಟ್ಟದ್ದೇ. ಬೊಂಬಾಯಿಯಲ್ಲಿ ಅವರ ಕಣ್ಣಿಗೆ ಬಿದ್ದ ಅನಾಥ ಹುಡುಗಿ ಅವಳು. ಸುಮಾರು ಐವತ್ತು ವರ್ಷಗಳ ಹಿಂದೆ ಅವರು ಇಪ್ಪತ್ತು ವರ್ಷ ಪ್ರಾಯದವರಾಗಿದ್ದಾಗ ಅಣ್ಣನ ಜೊತೆ ಜಗಳವಾಡಿ ತನ್ನ ಆಸ್ತಿಯಲ್ಲಿ ಅರ್ಧಪಾಲು ಪಡೆದು ಬೊಂಬಾಗಿಯಿಗೆ ಹೋಗಿದ್ದರು. ಅಲ್ಲೊಂದು ‘ಭಗವತಿ ಕೃಪಾ’ ಎಂಬ ಹೆಸರಿನ ಹೋಟೆಲು ತೆರೆದಿದ್ದರು. ಆಗ ಅವರನ್ನು ಕಂಡಿದ್ದವರು ಇವರೇ ಈಗಿನ ಶಾಸ್ತಿಗಳು ಎನ್ನುತ್ತಿರಲಿಲ್ಲ. ಪೈಜಾಮ, ಅಂಗಿ, ತಲೆಗೊಂದು ಟೋಪಿ ಹಾಕಿಕೊಂಡು ಸಿಂಧಿಯೋ, ಮಾರ್ವಾಡಿಯೋ ಎನ್ನುವಂತೆ ಅವರು ರೂಪಾಂತರ ಹೊಂದಿದ್ದರು. ಜುಟ್ಟು ಕತ್ತರಿಸಿ, ಕ್ರಾಪು ಬಿಡುವಷ್ಟು ಧೈರ್ಯ ಸಾಲದೆ ಆ ಟೋಪಿ.

ಅಣ್ಣನೆಂದರೆ ತಮ್ಮನಿಗೆ ದ್ವೇಷ. ತಮ್ಮನೆಂದರೆ ಅಣ್ಣನಿಗೆ ದ್ವೇಷ. ಅಣ್ಣನಿಗೆ ಸಂತಾನವಿಲ್ಲ. ಹೆಂಡತಿ ಸತ್ತಿದ್ದಳು. ಅವನಿಗೆ ಗೂರಲು ಬೇರೆ. ಅಣ್ಣ ಮತ್ತೆ ಮದುವೆಯಾಗಿರಲಿಲ್ಲ. ವಂಶವನ್ನು ಉಳಿಸಲು ನೀನಾದರೂ ಮದುವೆಯಾಗು ಎಂದರೆ, ಶಾಸ್ತಿಗಳು ಒಪ್ಪಿರಲಿಲ್ಲ. ಕಗ್ಗಾಡಲ್ಲಿ ತೋಟ ಮಾಡಿಕೊಂಡು, ಮಳೆಗಾಲವೆಲ್ಲ ಹಲಸಿನ ಪಲ್ಯವನ್ನೋ ಬಣ್ಣದ ಸೌತೆಕಾಯಿ ಹುಳಿಯನ್ನೋ ತಿಂದುಕೊಂಡು, ಕಾಸು ಬಿಚ್ಚದ ಅಣ್ಣನ ಗೂರಲಿನ ಏದುಸಿರು ಕೇಳಿಸಿಕೊಳ್ಳುತ್ತ ಬದುಕಿರುವುದು ಸಹಿಸಲಾರದೆ, ತನ್ನ ಪಾಲು ಪಡೆದು, ಬೊಂಬಾಯಿಯಲ್ಲಿ ಅದನ್ನು ಪೋಲು ಮಾಡಲು ತೊಡಗಿದ್ದರು. ಹೋಟೆಲಿಟ್ಟರೂ ಗಲ್ಲದ ಮೇಲೆ ಕೂರುವುದು ಇನ್ನು ಯಾರೋ! ತನ್ನ ಆದಾಯವೆಷ್ಟು, ಖರ್ಚೆಷ್ಟು ಎನ್ನುವ ಎಗ್ಗಿಲ್ಲ. ಬೊಂಬಾಯಿಯಲ್ಲಿ ಶಾಸ್ತಿಗಳಿಗೆ ಹೆಣ್ಣಿನ ಚಟ ಹತ್ತಿತ್ತು. ತಲೆಹಿಡುಕರು ಸ್ನೇಹಿತರಾದರು. ಇಡೀ ದಿನ ಇಸ್ಪೀಟಾಡುವುದು ಶುರುವಾಯಿತು. ಸಾಕಷ್ಟು ನಿದ್ದೆಯಿಲ್ಲದೆ ಕಣ್ಣು ಸದಾ ಕೆಂಪಾಗಿರುತ್ತಿತ್ತು. ಸಿಗರೇಟು ಸೇದಿ ಸೇದಿ, ಕೆಮ್ಮು ಶುರುವಾಗಿತ್ತು. ಅಣ್ಣನಂತೆ ತನಗೂ ಗೂರಲು ಹತ್ತುವುದೆಂದು ದಿಗಿಲಾಗಲು ತೊಡಗಿತ್ತು. ಹೀಗಿರಲು ಒಂದು ದಿನ ಶ್ರೀಮಂತಳಾದ ಸೂಳೆಮನೆಯೊಂದರಲ್ಲಿ ಕನ್ನಡವನ್ನೂ ತುಳುವನ್ನೂ ಮಾತನಾಡುವ ರಾಧೆ ಕಣ್ಣಿಗೆ ಬಿದ್ದಳು. ಶಾಸ್ತಿಗಳಿಗೆ ಇಪ್ಪತ್ತೈದು ವರ್ಷವಾದರೆ ಅವಳಿಗಿನ್ನೂ ಹದಿನೇಳೋ ಹದಿನೆಂಟೋ ಇರಬಹುದು. ‘ನಿಮ್ಮ ಕಡೆಯದೇ ಒಂದು ಹೈಸ್ಕೂಲು ಓದುವ ಹುಡುಗಿ’ ಎಂದು ಸದ್ಗೃಹಸ್ಥನಂತೆ ಸಿಲ್ಕಿನ ಪಂಚೆಯುಟ್ಟು ಸಿಲ್ಕಿನ ಧೋತ್ರ ಹೊದೆದ ತಲೆಹಿಡುಕನೊಬ್ಬ ಶಿಫಾರಸು ಮಾಡಿ ಕರೆದುಕೊಂಡು ಹೋಗಿದ್ದ. ಈ ರಾಧೆ ಹಾರಿಸಿಕೊಂಡು ಬಂದ ಶಿವಮೊಗ್ಗೆಯ ಹತ್ತಿರದ ಹಳ್ಳಿಯ ಬಡವರ ಮನೆಯ ಹುಡುಗಿ ಎಂದು ತಿಳಿಯಿತು. ಅಷ್ಟೊಂದು ಲಂಪಟನೂ, ಹೆಣ್ಣಿನ ಬಗ್ಗೆ ಕ್ರೂರವಾದ ಆಸೆಗಳನ್ನು ಪಡೆದವನೂ ಆದ ತನಗೆ ರಾಧೆ ಬಗ್ಗೆ ಹುಟ್ಟಿದ ಅಕ್ಕರೆ ತನಗೇ ವಿಚಿತ್ರವಾಗಿ ಕಂಡಿತ್ತು. ಅವಳನ್ನು ಕೊಂಡ ಯಜಮಾನಿ ಚತುರೋಪಾಯಗಳಲ್ಲಿ ಮೂರಾದ ಸಾಮ, ಭೇದ, ದಂಡಗಳಿಗೂ ಜಗ್ಗದಿದ್ದಾಗ ಇನ್ನೊಂದನ್ನು ಅವಳ ನಿರೀಕ್ಷೆಗೆ ಮೀರುವಷ್ಟು ಬಳಸಿ, ಅವಳಿಗೆ ರಾಧೆಯನ್ನು ಪಡೆಯಲು ಖರ್ಚಾದ್ದರ ನಾಲ್ಕರಷ್ಟು ಹಣ ಕೊಟ್ಟು, ಹುಡುಗಿಯನ್ನು ಕೊಂಡು ಕೃತಜ್ಞಳಾದ ಹುಡುಗಿಯನ್ನು ತನ್ನ ಹೋಟೆಲಿಗೆ ತಂದರು. ತನ್ನ ಹೆಣ್ಣೆಂದು ಒಂದು ರೂಮಲ್ಲಿ ಇಟ್ಟುಕೊಂಡರು. ಇಸ್ಪೀಟು ಜೂಜು ಎಂದು ಅಲೆಯುತ್ತಿದ್ದವರು ಅವಳ ಮೇಲೆ ಕಣ್ಣಿಟ್ಟು ಕಾಪಾಡಲು ತೊಡಗಿದರು. ಅಣ್ಣನಿಗೆ ಆರೋಗ್ಯ ಸರಿಯಿಲ್ಲವೆಂದು ಇದ್ದಕ್ಕಿದ್ದಂತೆ ತಾರು ಬಂದಾಗ ಅವಳನ್ನೂ ಕರೆದುಕೊಂಡು ಹೊರಟರು. ಅವಳನ್ನು ಜೋಪಾನವಾಗಿ ಕಾಪಾಡಿ ಎಂದು ತನಗೆ ಗೊತ್ತಿದ್ದ ಮಂಗಳೂರಿನ ಹೋಟೆಲೊಂದರಲ್ಲಿ ಇರಿಸಿ, ಹಳ್ಳಿಗೆ ಬಂದರು. ಅಣ್ಣನ ಸಂಸ್ಕಾರಕ್ಕೆಂದು ಹತ್ತಿರದ ಬಂಧುಗಳು ತನಗಾಗಿ ಕಾದಿದ್ದರು. ಉಸಿರಾಡಲೆಂದು ಸದಾ ತೆರೆದುಕೊಂಡಿರುತ್ತಿದ್ದ ಅಣ್ಣನ ಬಾಯಿ ಮುಚ್ಚಿತ್ತು. ಮೂಗಿನ ಸುತ್ತ ನೊಣಗಳು ಕೂತಿದ್ದವು. ಎಷ್ಟೊಂದು ಸಾರಿ ಅಣ್ಣನ ಈ ಚೂಪಾದ ಮೂಗನ್ನು ಚಚ್ಚಬೇಕೆನ್ನುವಷ್ಟು ರೋಷ ಉಕ್ಕಿದೆ ತನ್ನಲ್ಲಿ ಎಂದು ನೆನೆದರು. ಹೀಗೆನ್ನಿಸಿ, ಅಣ್ಣನ ಶವ ಕಂಡಾಗಲೂ ತನ್ನ ಕಣ್ಣಿನಲ್ಲಿ ನೀರು ಬಂದಿರಲಿಲ್ಲ. ಅಷ್ಟು ಕ್ರೂರವಾದ ಮಾತುಗಳನ್ನು ಒಬ್ಬರಿಗೊಬ್ಬರು ಆಡಿಕೊಂಡಿದ್ದರು. ಅಣ್ಣ ನಿರ್ಬೀಜ, ಜುಗ್ಗ, ಸದಾ ಕರೆಕರೆಯಲ್ಲಿರುವ ರೋಗಗ್ರಸ್ತ. ಈಗ ಯೋಚಿಸಿದರೆ ತಮ್ಮದು ಒಂದು ಶಾಪಗ್ರಸ್ತ ಕುಟುಂಬವೆಂದು ಶಾಸ್ತಿಗಳಿಗೆ ಅನ್ನಿಸುತ್ತದೆ. ಅವರು ತನ್ನ ತಾಯಿಯ ಪ್ರೀತಿ ಕಂಡಿರಲಿಲ್ಲ . ಚಿಕ್ಕ ವಯಸ್ಸಲ್ಲೆ ಶಾಸ್ತಿಗಳಿಗೆ ಜನ್ಮವಿತ್ತು ತಾಯಿ ಸತ್ತದ್ದರಿಂದ ಅವರ ತಂದೆ ಮತ್ತೊಂದು ಮದುವೆಯಾಗಿದ್ದರು. ಅದೂ ಇಳಿ ವಯಸ್ಸಿನಲ್ಲಿ. ಅವರ ಚಿಕ್ಕತಾಯಿ ತಾನೊಬ್ಬ ಶಾಪಗ್ರಸ್ತೆಯೆಂದೇ ತಿಳಿದು ಎಲ್ಲರನ್ನೂ ಹಿಂಸಿಸುತ್ತ ಬದುಕಿ ತೋಟದಲ್ಲಿ ನಾಗರ ಹಾವು ಕಚ್ಚಿ ಸತ್ತಿದ್ದರು. ಅವರ ಅಪ್ಪ ಹುಚ್ಚು ನಾಯಿಯಿಂದ ಕಚ್ಚಿಸಿಕೊಂಡು ಸತ್ತಿದ್ದರು. ಅಣ್ಣನ ಹೆಂಡತಿ ನ್ಯುಮೋನಿಯಾ ಆಗಿ ಸತ್ತಿದ್ದಳು. ಈಗ ಅಣ್ಣ ಏಕಾಂಗಿಯಾಗಿ, ಜುಗ್ಗನಾಗಿ ಬದುಕಿ, ಹಳೆಮನೆಯ ಮೂಲೆ ಮೂಲೆಯಲ್ಲೂ ಪೂರ್ವಿಕರು ಹುಗಿದಿದ್ದಿರಬಹುದಾದ ಬಂಗಾರಕ್ಕಾಗಿ ಅಗೆದು, ಹುಡುಕಿ, ಸತ್ತಿದ್ದ. ಆದರೆ ಮನೆಯಲ್ಲಿ ಹಿರಿಯರು ಮಾಡಿಟ್ಟ ಆಸ್ತಿ ದಂಡಿಯಾಗಿತ್ತು. ಒಂದು ಟ್ರಂಕಿನ ತುಂಬ ಬಂಗಾರವಿತ್ತು. ಯಾರೋ ಪೂರ್ವಿಕರು ವಿಜಯನಗರ ಸಾಮ್ರಾಜ್ಯದ ಅವನತಿ ಕಾಲದಲ್ಲಿ ಕೊಳ್ಳೆ ಹೊಡೆದದ್ದು ಅದು ಎಂದು ಪ್ರತೀತಿ. ಮನೆಯನ್ನೆಲ್ಲ ಅಗೆದು ನೋಡಿಯಾದ ಮೇಲೆ ಮನೆಯ ಹಿಂದಿನ ತೋಟದಲ್ಲಿ ಎಲ್ಲೋ ಇನ್ನಷ್ಟು ಹುಗಿದ ಬಂಗಾರವಿದೆ ಎಂದು ನಂಬಿ ಅವರ ಅಣ್ಣ ಎಲ್ಲೆಲ್ಲೋ ಅಗೆಸಿ ಹುಡುಕುತ್ತಲೇ ತನ್ನ ಆಯುಷ್ಯ ಸವೆಸಿ ಸತ್ತಿದ್ದ. ಈಗ ಇಡೀ ಆಸ್ತಿಗೆ ಶಾಸ್ತಿ ಹಕ್ಕುದಾರರಾದರು. ಅಣ್ಣನ ಸಂಸ್ಕಾರ ಮುಗಿಸಿ, ಟ್ರಂಕಿನಲ್ಲಿದ್ದ ಬಂಗಾರವನ್ನು ತಿಜೋರಿ ತೆಗೆದು ನೋಡಿ, ‘ಅಣ್ಣ ಪೋಲು ಮಾಡಲಿಲ್ಲವಲ್ಲ’ ಎಂದು ಸಂತೋಷಪಟ್ಟಿದ್ದರು. ತನ್ನ ಅರಗಿಣಿ ರಾಧೆಯನ್ನು ಹೋಟೆಲಿಂದ ಕರೆದು ತಂದು ತನ್ನ ಆಸ್ತಿಗೆ ಐದು ಮೈಲಿ ದೂರದಲ್ಲಿ ನದಿಯ ದಂಡೆಯೊಂದರ ಮೇಲಿದ್ದ ತೋಟದಲ್ಲಿ ಒಂದು ಗುಡಿಸಲು ಕಟ್ಟಿಸಿ ಇಳಿಸಿದ್ದರು. ಅವಳನ್ನು ಕಾಯುವುದಕ್ಕೆ ನಂಬಿಕಸ್ತರಾದವರನ್ನು ಹುಡುಕುತ್ತಿದ್ದಾಗ ರಾಧೆ ತನ್ನ ಚಿಕ್ಕಮ್ಮನೊಬ್ಬಳು ಶಿವಮೊಗ್ಗದಲ್ಲಿ ಇರುವುದಾಗಿ ಹೇಳಿದಳು. ಅವಳಿಗೊಬ್ಬ ಗಂಡನೂ ಇದ್ದ. ಅವನು ಟೈಲರಾಗಿದ್ದ. ಚನ್ನಗಿರಿಯಲ್ಲಿ ಇಟ್ಟುಕೊಂಡ ಸಾಹುಕಾರನಿಗೆ ಮುದುಕಿಯಾಗಿ ಬೇಡವಾಗಿಬಿಟ್ಟಿದ್ದ ಅವಳ ತಾಯಿಯನ್ನೂ ಮತ್ತು ಅವಳ ಶಿವಮೊಗ್ಗದ ಮರ್‍ಯಾದಸ್ಥ ಬಳಗವನ್ನೂ ಹುಡುಕಿ ಶಾಸ್ತಿಗಳು ಕರೆದುಕೊಂಡು ತೋಟದ ಬಳಿಯಲ್ಲೊಂದು ಹೆಂಚಿನ ಮನೆ ಕಟ್ಟಿಸಿದ್ದರು. ಚಿಕ್ಕಮ್ಮನ ಗಂಡ ಟೈಲರಿಗೆ ಹತ್ತಿರದ ಪೇಟೆಯಲ್ಲಿ ಒಂದು ಬಟ್ಟೆಯಂಗಡಿ ತೆಗೆಸಿಕೊಟ್ಟಿದ್ದರು. ಕಗ್ಗಾಡಿನಲ್ಲಿದ್ದ ಶಾಸ್ತಿಗಳ ತೋಟದ ಮನೆಗೆ ಸ್ವಜಾತಿಯ ನೆರೆಹೊರೆಯಿಲ್ಲ. ದೂರದಲ್ಲಿದ್ದ ಬಂಧು ಬಳಗ ಯಾವತ್ತೂ ದೂರವಿದ್ದವರೇ. ಮನೆಯಲ್ಲಿ ಶ್ರಾದ್ಧವಾದಾಗ ನಿರ್ವಾಹವಿಲ್ಲದೆ ಬರುವವರು ಬಿಟ್ಟರೆ, ಜಾತಿಯ ಒಂದೇ ಒಂದು ನರಪಿಳ್ಳೆ ಮನೆಯ ಹತ್ತಿರ ಸುಳಿಯದು. ಆದ್ದರಿಂದ ಶಾಸ್ತಿಗಳು ನಿರ್ಭೀತರಾಗಿ ರಾಧೆಯ ಜೊತೆ ಸಂಬಂಧವಿಟ್ಟುಕೊಂಡರು. ಒಂದು ಹಳೆಯ ಅರಿವೆ ಟಾಪಿನ ಫೋರ್ಡ್ ಕಾರನ್ನು ಕೊಂಡು, ಪೈಜಾಮದ ಬದಲು ಕಚ್ಚೆ ಪಂಚೆಯುಟ್ಟು ಮೇಲೊಂದು ಶರ್ಟನ್ನು ಹಾಕಿಕೊಂಡು, ಪಂಪ್ ಶೂ ಧರಿಸಿ, ಎತ್ತಿನ ಬಂಡಿಯ ದಾರಿಯಲ್ಲಿ ಅದನ್ನು ನಡೆಸಾಡುತ್ತಾ ಬಂಧು ಬಳಗದಿಂದ ಇನ್ನಷ್ಟು ದೂರವಾಗಿದ್ದರು. ಹೀಗೆ ಎರಡು ವರ್ಷ ಕಳೆದಿತ್ತು. ರಾಧೆ ಪೀಡಿಸತೊಡಗಿದ್ದಳು: “ನಾನು ಎಷ್ಟೆಂದರೂ ನೀವು ಇಟ್ಟುಕೊಂಡವಳು. ನೀವು ಮದುವೆಯಾಗಲೇಬೇಕು” ಎಂದು. ರಾಧೆಯಲ್ಲಿ ಅವಳಿಗೆ ಮಕ್ಕಳಾಗಿರಲಿಲ್ಲ. ಶಾಸ್ತಿಗಳಿಗೆ ಅದೊಂದು ಚಿಂತೆಯಾಗಿತ್ತು: ‘ಈ ಶಾಪಗ್ರಸ್ತ ಕುಟುಂಬದ ತಾನೂ ನಿರ್ಬೀಜನೆ?’ ಎಂದು. ‘ಅದು ನನ್ನ ಹಣೆ ಬರಹ, ನೀವು ಮದುವೆಯಾಗಿ ನೋಡಿ’ ಎಂದು ರಾಧೆ ಗಂಟುಬಿದ್ದಿದ್ದಳು. ಶಾಸ್ತಿಗಳು ಅವರ ಅನುಭವದಲ್ಲಿ ರಾಧೆಯಂತಹ ಇನ್ನೊಂದು ಜೀವವನ್ನು ಕಂಡಿರಲಿಲ್ಲ. ಅವಳಿಗೆ ಆಸೆ ಇಲ್ಲವೆಂದಲ್ಲ. ಆದರೆ ಅವಳ ಆಸೆ ಸಂಸಾರದ ಮಿತಿಯಲ್ಲಿತ್ತು. ಗಂಜಿಗೆ ತೆಂಗಿನ ಹಾಲೂ, ಮಾವಿನ ಮಿಡಿಯ ಉಪ್ಪಿನ ಕಾಯಿಯೂ ಸಿಕ್ಕಂತಾಯಿತಲ್ಲ ಎಂದೇ ಅವಳಿಗೆ ಸಂತೋಷ. ಸದಾ ಉರಿದಾಡಿಕೊಂಡು ರೋಷದಲ್ಲೇ ಓಡಾಡುವ ಶಾಸ್ತಿಗಳು, ಬಾಯಿಯನ್ನು ಮುದ್ದಾಗಿ ತೆರೆದು ಮುದ್ದಾಗಿಮಾತಾಡುವ ರಾಧೆಯಿಂದ ಮೋಹಿತರಾಗಿ ಅವಳ ಬಳಿ ಮಾತ್ರ ಮೃದುವಾಗುವರು. ಅವಳ ಒತ್ತಾಯಕ್ಕೆ ಇಲ್ಲವೆನ್ನಲಾರದೆ, ತನಗೆ ಮಗುವಾಗಬಹುದೋ ಎಂಬ ಕುತೂಹಲದಿಂದಲೂ ಹೆಣ್ಣು ಹುಡುಕಲು ಶುರು ಮಾಡಿದರು. ಹತ್ತಿರದ ಯಾರೂ ಈ ಶ್ರೀಮಂತ ಶಾಪಗ್ರಸ್ತ ಮನೆಗೆ ಹೆಣ್ಣು ಕೊಡಲು ಮುಂದಾಗಲಿಲ್ಲ. ಏನೋ ಜಾತಕದ ನೆವ ಹೇಳಿ ಆಗುವುದಿಲ್ಲ ಎಂದು ಬಿಡುವರು. ಅಲ್ಲದೆ, ಮದುವೆ ಮಾಡಿಸುವ ಯಾವ ಹಿರಿಯರೂ ಶಾಸ್ತಿಗಳಿಗೆ ಆಪ್ತರಾಗಿ ಉಳಿದಿರಲಿಲ್ಲ. ತಾನೇ ಸ್ವತಃ ಹೋಗಿ ಹೆಣ್ಣು ಕೇಳುವವರನ್ನು ಯಾರು ಗೌರವಿಸುತ್ತಾರೆ? ಕೊನೆಗೆ ಚಿಕ್ಕಮಗಳೂರಿನ ಹಳ್ಳಿಯೊಂದರಲ್ಲಿ ಬಡ ಕುಟುಂಬದ ಹೆಣ್ಣೊಂದು ಇದೆಯೆಂದು ಗೊತ್ತಾಯಿತು. ಮೈಮೇಲೆ ಜರಿಯ ಶಲ್ಯ ಹೊದ್ದು, ಕಚ್ಚೆ ಹಾಕಿದ ಪಂಚೆಯುಟ್ಟು, ತಲೆಗೆ ಮೈಸೂರಿನವರ ಥರ ಪೇಟ ಕಟ್ಟಿಕೊಂಡು ವಿಭೂತಿ, ಕುಂಕುಮ ಧರಿಸಿ ಆಚಾರವಂತರಂತೆ ಕಾಣುತ್ತ ಶಾಸ್ತಿಗಳು ಹೆಣ್ಣು ಕೇಳಲು ಹೋದರು. ಎಂಟು ಹೆಣ್ಣುಗಳನ್ನು ಹೆತ್ತು ಮೊದಲನೆಯವಳು ಮದುವೆಯಾದರೆ ಸಾಕೆಂದು ಹಾತೊರೆಯುತ್ತಿದ್ದ ಹುಡುಗಿಯ ತಾಯಿ ತಂದೆಯರು ಭಾವೀ ಅಳಿಯನ ಶ್ರೀಮಂತಿಕೆ, ಅವನ ಕುಲ, ಅವನ ಗೋತ್ರ, ಅವನ ಜಾತಕ ನೋಡಿ, ಮತ್ತೇನು ಬೇರೆ ಏನಾದರೂ ತಿಳಿಯಬೇಕೆಂದೂ ಕುತೂಹಲ ಕೂಡ ಪಡದೆ ಸರೋಜಳನ್ನು ಮದುವೆ ಮಾಡಿಕೊಡಲು ಸಮ್ಮತಿಸಿದ್ದರು. ಸರೋಜ ಸ್ಫುರದ್ರೂಪಿಯಾದ ಹುಡುಗಿ. ದಿವ್ಯ ನಿರ್ಲಕ್ಷ್ಯದ ಅಗಲವಾದ ಕಣ್ಣುಗಳುಳ್ಳ ಸರೋಜ ತನಗೇನು ಬೇಕು ಬೇಡ ಹೇಳದೆ ಮದುವೆಯಾಗಿದ್ದಳು. ಅವಳಿಗೆ ಪುಸ್ತಕಗಳನ್ನು ಓದುವುದರಲ್ಲಿ ಆಸಕ್ತಿಯಿದೆ; ಸೊಗಸಾಗಿ ಭಾರತ ವಾಚನ ಮಾಡುತ್ತಾಳೆಂಬುದು ಶಾಸ್ತಿಗಳಿಗೆ ಮೊದಲಿಗೆ ಹೆಮ್ಮೆಯ ವಿಷಯವಾಗಿತ್ತು. ಹುಡುಗಿಯ ವಿದ್ಯಾಸಂಪನ್ನತೆ ಕೇಳಿ ರಾಧೆಯೂ ಸಂತೋಷಪಟ್ಟಿದ್ದಳು. ಪ್ರೀತಿ ಇಲ್ಲದ ಗಂಡಿನ ಕಡೆಯ ದಿಬ್ಬಣದಲ್ಲಿ ಅವಳೊಬ್ಬಳೇ ಪ್ರೀತಿಯುಳ್ಳವಳಾಗಿ ಸಾಕ್ಷಾತ್ ಗೌರಿಯಂತೆ ಸಿಂಗರಿಸಿಕೊಂಡು ಬಳಗದವಳಾಗಿ ಮದುವೆಗೂ ಬಂದಿದ್ದಳು. ಶ್ರೀಮಂತರಾದ ಶಾಸ್ತಿಗಳ ಈ ಸಂಬಂಧ ಸರೋಜಳ ತಾಯಿ ತಂದೆಯ ಕಿವಿಗೂ ಬಿದ್ದಿರಲಿಲ್ಲವೆಂದಲ್ಲ. ಆದರೆ ಅದನ್ನು ನಂಬದಂತೆ ಅವರು ನಟಿಸಿದ್ದರು. ರಾಧೆಗೆ ಮದುವೆ ಮನೆಯಲ್ಲಿ ಎಲ್ಲಿ ಊಟಕ್ಕೆ ಹಾಕಬೇಕೆಂಬುದು ಮಾತ್ರ ಅವರಿಗೆ ಸಮಸ್ಯೆಯಾಗಿತ್ತು. ಶಾಸ್ತಿಗಳು ಮಾಡಿಕೊಟ್ಟ ತೋಟದ ಫಸಲಿನಿಂದ ಬಂದ ಇಡೀ ವರ್ಷದ ಉಳಿತಾಯವನ್ನು ಬಳಸಿ ಅವಳು ವಧುವಿಗೆ ಸೀರೆಯನ್ನೂ, ಮಂಗಳೂರಿನ ಹೆಸರಾಂತ ಅಕ್ಕಸಾಲಿಗರು ಮಾಡಿಕೊಟ್ಟ ಹವಳ ಜೋಡಿಸಿದ ಬಂಗಾರದ ಬಳೆಗಳನ್ನೂ ಖರೀದಿಸಿದ್ದಳು. ಶಾಸ್ತಿಗಳ ಪರವಾಗಿ ಅವಳಲ್ಲದೆ, ಬೇರೆ ಯಾರೂ ಈ ಮದುವೆಯಲ್ಲಿ ಸಂಭ್ರಮಿಸಿರಲಿಲ್ಲ; ಉಡುಗೊರೆಯನ್ನೂ ಕೊಡಲಿಲ್ಲ. ಎಂಟು ಹೆಣ್ಣು ಹೆತ್ತು ಸೊರಗಿದ ಸರೋಜಳ ತಾಯಿ ತಂದೆಯರು ರಾಧೆಯ ಅಕ್ಕರೆಯಿಂದಲೂ, ಅದ್ದೂರಿಯ ಉಡುಗೊರೆಯಿಂದಲೂ, ತಮ್ಮ ಮಗಳಿಗೆ ಚಿಂತೆಯಿಲ್ಲವೆಂದು ಸಮಾಧಾನ ಪಟ್ಟಿದ್ದರು. ಹತ್ತಿರದ ಬಂಧುಗಳಿಗೆಲ್ಲ ಅವರು ಹೇಳುತ್ತಿದ್ದುದು ಹೀಗೆ – “ನನ್ನ ಅಳಿಯ ಕಾರಿಟ್ಟಿದ್ದಾನೆ, ಬೊಂಬಾಯಿಯಲ್ಲಿ ಹೋಟಲಿದೆಯಂತೆ. ಯಾರೋ ಅದನ್ನು ನೋಡಿಕೊಂಡು ಪ್ರತಿ ತಿಂಗಳೂ ಕ್ಯಾಶನ್ನು ಕಳಿಸುತ್ತಾರಂತೆ. ನೂರಾರು ಎಕರೆ ತೋಟದ ಮಾಲೀಕರು ನನ್ನ ಅಳಿಯ. ಮುಖ್ಯವೆಂದರೆ ನನ್ನ ಮಗಳಿಗೆ ಅತ್ತೆಯೂ ಇಲ್ಲ, ಮಾವನೂ ಇಲ್ಲ. ಎಲ್ಲ ಅವಳದೇ ವಹಿವಾಟು”. ಮನೆ ತುಂಬಿಸಿಕೊಂಡದ್ದಾಯಿತು. ಬೀಗರು ಹೋದದ್ದಾಯಿತು. ಶಾಸ್ತಿಗಳು ಈಗಲೂ ನೆನೆಯುತ್ತಾರೆ: ಅಷ್ಟೊಂದು ಲಕ್ಷಣವತಿಯಾದ ಹೆಂಡತಿ ತನ್ನನ್ನು ಮುಖವೆತ್ತಿ ನೋಡಿರಲಿಲ್ಲ. ಅದಕ್ಕೆ ಕಾರಣ ನಾಚಿಕೆಯಲ್ಲ. ತಾನೆಂದರೆ ಸಸಾರ ಎನ್ನುವುದು ಹೊಳೆಯಿತು. ಸರಸದಲ್ಲಿ ಕೈಹಿಡಿದರೆ ಕಲ್ಲಿನ ಗೊಂಬೆಯಂತೆ ನಿಲ್ಲುವಳು. ಅವಳ ಕಣ್ಣುಗಳ ದೃಷ್ಟಿ ತನ್ನ ದೃಷ್ಟಿಯನ್ನು ಕೂಡಿದ್ದೇ ನೆನಪಿಲ್ಲ. ಏನನ್ನೂ ನೋಡದಂತೆ, ಅವಳ ನಿರ್ಲಿಪ್ತ ಕಣ್ಣುಗಳು ಓಡಾಡುವವು. ಶಾಸ್ತಿಗಳು ಬೈದರು, ಹೊಡೆದರು. ಆದರೆ ಸರೋಜಳ ನಿರ್ಲಕ್ಷ್ಯ ಬದಲಾಗಲಿಲ್ಲ. ಪಕ್ಕದಲ್ಲಿ ಮಲಗುವಳು – ತನ್ನ ಕರ್ತವ್ಯವೆಂಬಂತೆ ಗಂಡನ ಜೊತೆ ಕೂಡುವಳು. ಆದರೆ ಅದರಿಂದ ಯಾವ ಫಲವೂ ದೊರೆಯಲಿಲ್ಲ. ಐದು ವರ್ಷಗಳಾದರೂ ಅವಳು ಗರ್ಭವತಿಯಾಗಿರಲಿಲ್ಲ. ರಾಧೆ ಏನೇನೋ ಮದ್ದು ಮಾಡಿಕೊಟ್ಟಳು. ಹೆಂಡತಿಯನ್ನು ಶಯ್ಯೆಯಲ್ಲಿ ಒಲಿಸಿಕೊಳ್ಳುವುದು ಹೇಗೆಂದು ಕಲಿಸಿಕೊಟ್ಟಳು. ಆದರೆ ಶಾಸ್ತಿಗಳು ಕಲಿತು ಉಪಯೋಗಿಸುತ್ತಿದ್ದ ಯಾವ ಕಾಮಕಲೆಯೂ ಸರೋಜಳನ್ನು ಸಡಿಲಿಸಲಿಲ್ಲ. ಬದಲಾಗಿ ಹೇಸುವಳು. ಕಾಮಕೇಳಿಮುಗಿದದ್ದೇ ಬಚ್ಚಲಿಗೆ ಹೋಗಿ ತಲೆಗೂ ಸ್ನಾನ ಮಾಡಿ ಬಂದು, ಒದ್ದೆ ತಲೆಯಲ್ಲೇ ಮಲಗಿ ಬಿಡುವಳು. ಶಾಸ್ತಿಗಳು ತಮ್ಮ ರೋಷವನ್ನು ಕಳೆದುಕೊಳ್ಳಲು ರಾಧೆಯ ಮನೆಗೆ ಕಾರು ಬಿಟ್ಟುಕೊಂಡು ನಡುರಾತ್ರೆಯಲ್ಲೇ ಹೋಗಿಬಿಡುವರು. ಆಶ್ಚರ್ಯವೆಂದರೆ ರಾಧೆಯ ಜೊತೆ ಮಾತ್ರ ಸರೋಜ ಎಷ್ಟು ಬೇಕೋ ಅಷ್ಟು ವಿಶ್ವಾಸದಲ್ಲಿ, ಆದರೆ ಸಲಿಗೆಯಿಲ್ಲದಂತೆ ಇರುವಳು. ರಾಧೆಗೆ ಓದುವುದರಲ್ಲಿ ಖುಷಿಯಿದ್ದುದರಿಂದ ತಾನು ತರಿಸಿಕೊಂಡ ಕಥೆ ಕಾದಂಬರಿಗಳನ್ನು ಸರೋಜಳಿಗೆ ಕಳಿಸುವುವಳು. ಸರೋಜ ತಾನು ತಾಯಿ ಮನೆಯಿಂದ ತಂದ ಪುಸ್ತಕಗಳನ್ನು ರಾಧೆಗೆ ಕಳಿಸುವಳು. ರಾಧೆ ತಾನು ಬೆಳೆದ ಮಲ್ಲಿಗೆಯನ್ನು ಬಾಳೆಯ ನಾರಿನಲ್ಲಿ ಸುಂದರವಾಗಿ ಹೆಣೆದು ಮುಡಿಯಲು ಸರೋಜಳಿಗೆ ಕಳಿಸುವಳು. ಸರೋಜ ಮೊದಲು ಅದನ್ನು ತಾನು ಪೂಜಿಸುವ ಶಾರದೆಗೆ ಮುಡಿಸಿ ತನ್ನ ಹೆರಳಿಗೆ ಸಿಕ್ಕಿಸಿಕೊಳ್ಳುವಳು. ರಾಧೆ ಮನೆಗೆ ಬರುವುದುಂಟು – ಬಾಳೆಲೆ ಬೇಕೆಂದೋ, ಹಗ್ಗ ಬೇಕೆಂದೋ ಅಥವಾ ರಂಗೋಲೆ ಪುಡಿ ಬೇಕೆಂದೋ ನೆವ ಮಾಡಿಕೊಂಡು. ಬರುವಾಗ ತಾನೇ ಕುಟ್ಟಿ ತಯಾರಿಸಿದ ಅವಲಕ್ಕಿಯನ್ನೊ, ಹಿತ್ತಲಿನಲ್ಲಿ ಬೆಳೆದ ತೊಂಡೆಯನ್ನೊ ತರುವಳು. ಅವಳನ್ನು ಬಹುವಚನದಲ್ಲಿ ‘ಒಳಗೆ ಬನ್ನಿ’ ಎಂದು ಸರೋಜ ಸತ್ಕರಿಸಿ ಕಾಫಿ ಮಾಡಿಕೊಡುವಳು. ಆದರೆ ಎಷ್ಟು ಬೇಕೋ ಅಷ್ಟು ಮಾತು. ಸಲಿಗೆ ಬೆಳೆಯಲೇ ಇಲ್ಲ. ಒಬ್ಬರನ್ನೊಬ್ಬರು ಹೆಸರು ಹಿಡಿದು ಕರೆದದ್ದೇ ಇಲ್ಲ. ರಾಧೆ ಬಂದಾಗ ಶಾಸ್ತಿಗಳು ಮನೆಯಲ್ಲಿ ಇದ್ದರೆ ಸೀದಾ ತನ್ನ ಕಾರು ನಿಲ್ಲಿಸಿದಲ್ಲಿಗೆ ಹೋಗಿ ಜವಾನನನ್ನು ಕರೆದು ಅದನ್ನು ತೊಳೆಸಲು ತೊಡಗುವರು. ರಾಧೆ ಹೆಚ್ಚು ಕಾಲವಿದ್ದು ಬಿಟ್ಟರೆ ಹಳ್ಳಿಯ ದಾರಿಯಲ್ಲಿ ಓಡಾಡುವ ಕಾರು ಒಂದು ದೂಳಿನ ಕಣವೂ ಇಲ್ಲದ ದೇವತಾ ವಿಗ್ರಹದಂತೆ ಮಿಂದು ಮಡಿಯಾಗಿ ಬಿಡಿವುದು.

ಅಧ್ಯಾಯ ೬

ಈ ನಡುವೆ ಶಾಸ್ತಿಗಳ ಇಡೀ ಬದುಕನ್ನೇ ಬುಡಮೇಲು ಮಾಡುವಂತಹ ಒಂದು ಘಟನೆ ನಡೆಯಿತು. ಕನ್ನಡ ಮಾತಾಡಬಲ್ಲ ಮಲಯಾಳಿಯೊಬ್ಬ ಉಡುಪಿಯಲ್ಲಿ ಒಂದು ಆಯುರ್ವೇದದ ಶಾಪು ತೆರೆದ. ಕರುಣಾಕರ ಪಂಡಿತ ಎಂದು ಅವನ ಹೆಸರು. ಶಾಸ್ತಿಗಳಷ್ಟೇ ವಯಸ್ಸಿನ ಅವನು ಅವನ ಮುಖದ ಕಳೆಯನ್ನು ಹೆಚ್ಚುಮಾಡುವಂತಹ ಗಡ್ಡ ಮೀಸೆಗಳನ್ನು ಬಿಟ್ಟಿದ್ದ. ತಲೆಗೂದಲನ್ನು ಕತ್ತರಿಸದೆ ಅದನ್ನು ಗಂಟು ಹಾಕಿ ಕಟ್ಟುತ್ತಿದ್ದ. ಹಣೆಯ ಮೇಲೆ ಗಂಧದಬೊಟ್ಟು ಇಟ್ಟಿರುತ್ತಿದ್ದ. ಸೌಮ್ಯವಾದ ಲಕ್ಷಣವಾದ ಮುಖ ಅವನದು. ಅವನ ಹತ್ತಿರ ತನ್ನದಕ್ಕಿಂತ ಚೆನ್ನಾದ ಕಾರು ಇತ್ತು. ಅವನ ಉಡುಪು,ಅವನ ಹಾವ ಭಾವ ನೋಡಿದರೆ ತುಂಬ ಅನುಕೂಲವಂತನಂತೆಯೂ ಕಾಣುತ್ತಿದ್ದ. ಶಾಸ್ತಿಗಳು ಕಲಿತದ್ದಕ್ಕಿಂತ ಒಳ್ಳೆಯ ಹಿಂದಿ ಅವನಿಗೆ ಬರುತ್ತಿತ್ತು. ಇಂಗ್ಲಿಷ್ ಕೂಡ ಬರುತ್ತಿತ್ತು- ಆಧುನಿಕ ಅಲೋಪತಿಯ ವೈದ್ಯಕ್ರಮವೂ ಆತನಿಗೆ ಗೊತ್ತು. ಸಂಸ್ಕ್ರುತವೊ – ಅವನಿಗೆ ನೀರು ಕುಡಿದಂತೆ. ’ನೀವಿಟ್ಟ ಕಾರು ಯಾವ ಮಾಡೆಲು’ ಎಂದು ಕೇಳಲು ಹೋಗಿ, ವೀರ್ಯವರ್ಧಕ ಲೇಹ್ಯಗಳನ್ನು ಗುಪ್ತ ಮಲಾಲೋಚನೆಯಲ್ಲಿ ಪಡೆಯುವುದರಲ್ಲಿ ಈ ಪರಿಚಯ ಬೆಳೆದು, ಇಬ್ಬರೂ ಸ್ನೇಹಿತರಾದರು. ಒಮ್ಮೆ ಅವನನ್ನು ಮನೆಗೆ ಊಟಕ್ಕೆಂದು ಕರೆದುಕೊಂಡು ಹೋದರು. ಮನೆಯನ್ನು ಹೊಕ್ಕವನೇ ಅವನು ಸುತ್ತು ಮುತ್ತಲೂ ನೋಡಿ ಚಿಂತಿಸುತ್ತ ನಿಂತ. ಅವನ ಕಣ್ಣುಗಳು ಗಂಭೀರವಾಗಿ ಧ್ಯಾನಸ್ಥವಾದುದನ್ನು ಕಂಡು, ಚಿಂತೆಯಾಗಿ ಸಿಗರೇಟು ಹಚ್ಚಿದ ಶಾಸ್ತಿಗಳು ವಿನಯದಲ್ಲಿ ಅವನೆದುರು ನಿಂತರು. ಸೋಫಾ ತೋರಿಸಿ ಕೂರಿ ಎಂದರು. ಶಾಸ್ತಿಗಳು ಯಜಮಾನರಾದ ಕೂಡಲೇ ಮಂಗಳೂರಿನಿಂದ ತಂದ ಮೆತ್ತನೆಯ ಸೋಫಾದ ಮೇಲೆ ಕರುಣಾಕರ ಪಂಡಿತ ಕೂತ. ಇನ್ನೂ ತುಸು ಹೊತ್ತು ಕಣ್ಣುಮುಚ್ಚಿದ್ದವನು ಹೆಬ್ಬೆರಳಿನಿಂದ ಉಳಿದ ಬೆರಳುಗಳನ್ನು ಅವುಗಳ ಸಂದಿಗಳಲ್ಲಿ ಮುಟ್ಟಿ ನೋಡುತ್ತ ಏನೋ ಜವಿಸತೊಡಗಿದ. ಕಣ್ಣುಬಿಟ್ಟು ಶಾಸ್ತಿಗಳಿಗೆ, “ಬೇಸರಮಾಗದಿದ್ದರೆ ನಾನು ಏನೋ ಹೇಳುವುದಿದೆ. ನನಗೆ ಜ್ಯೋತಿಷ್ಯವೂ ಒಂದಿಷ್ಟು ಗೊತ್ತು. ನಮ್ಮ ಮನೆತನದ ಸಂಪ್ರದಾಯದಿಂದ ಕಲಿತದ್ದು” ಎಂದ. ಶಾಸ್ತಿಗಳಿಗೆ ಅವನ ಬಗ್ಗೆ ಗೌರವ ಇಮ್ಮಡಿಯಾಯಿತು. ಭಕ್ತಿಯಿಂದ “ದಯಮಾಡಬೇಕು” ಎಂದರು. “ಈ ಮನೆಯಲ್ಲಿ ಅನಿಷ್ಟವಿದೆ. ತಪ್ಪು ತಿಳಿಯಬೇಡಿ. ಪೂರ್ವಕಾಲದಲ್ಲಿ ಇಲ್ಲೊಂದು ಸ್ತೀಹತ್ಯೆ ನಡೆದಿದೆ. ಆದ್ದರಿಂದ ಇಲ್ಲಿ ಸಂತಾನವಿಲ್ಲ. ಇಲ್ಲಿ ಬದುಕುವವರಿಗೆ ಶಾಂತಿಯಿಲ್ಲ. ಕ್ಷುದ್ರ ಭೂತಗಳು ಇಲ್ಲಿ ಇರುವವರನ್ನು ಕವಿದುಬಿಡುತ್ತವೆ. ಇಲ್ಲಿ ಬಂದದ್ದೇ ನನ್ನ ಮಿದುಳಲ್ಲಿ ಕಿಡಿಕಾರುವ ಕಣ್ಣುಗಳೆರಡು ತೆರೆದಂತಾದವು. ಅವುಗಳನ್ನು ದಿಟ್ಟಿಸಲು ಇನ್ನೆರಡು ಕಣ್ಣುಗಳು ತೆರೆಯುತ್ತಿದ್ದಂತೆ ನಾನು ಜಪಮಾಡತೊಡಗಿದೆ….” ಎಂದು ಕರುಣಾಕರ ಪಂಡಿತ ಹೇಳಿದ್ದನ್ನು ಕೇಳಿ ಶಾಸ್ತಿಗಳು ಬೆಚ್ಚಿದರು. “ಇಲ್ಲೊಂದು ತಾಂತ್ರಿಕ ಪೂಜೆ ನಡೆಯಬೇಕು. ಅದಕ್ಕೆ ದಂಪತಿಗಳಿಬ್ಬರೂ ಸಹಕರಿಸಬೇಕು. ಅಂದರೆ ನಿಮ್ಮನೆಯಾಕೆ ಬೆತ್ತಲೆಯಾಗಿ ಒಬ್ಬರೆ ಕೂತು ಪೂಜೆ ಮಾಡಬೇಕು – ಕೊನೆಯಲ್ಲಿ” ಎಂದು ಕರುಣಾಕರ ಪಂಡಿತ ರೋಗಿಗೆ ಔಷಧದ ಸೇವನಾಕ್ರಮ ಹೇಳುವಂತೆ ಹೇಳಿದ್ದ. ಶಾಸ್ತಿಗಳು ನಿಟ್ಟುಸಿರು ಬಿಟ್ಟು, “ನೀವು ಮಾಡಿಸುತ್ತೀರ?” ಎಂದಿದ್ದರು. ಕರುಣಾಕರ ಪಂಡಿತ ‘ಆಗಬಹುದು’ ಎಂದು ಪಂಚಾಂಗ ನೋಡಿ ಶುಭ ದಿನ ಗೊತ್ತುಮಾಡಿದ್ದ. “ಈ ಪೂಜೆ ಗುಪ್ತವಾಗಿ ನಡೆಯತಕ್ಕದ್ದು” ಎಂದಿದ್ದ.

ಅಧ್ಯಾಯ ೭

ಪೂಜೆ ಶುರುವಾಗುವುದಕ್ಕೆ ಮುಂಚೆ ಎಲ್ಲ ಸಿದ್ಧತೆಯೂ ನಡೆಯಿತು. ನಿರ್ಲಕ್ಷ್ಯದಲ್ಲಿ ಅಲೆಯುವ ಸರೋಜಳ ಕಣ್ಣುಗಳು ಕರುಣಾಕರ ಪಂಡಿತ ಪಟ್ಟೆಮುಡಿಯುಟ್ಟು ರಂಗೋಲೆಯನ್ನು ಕುಂಕುಮ ಅರಿಸಿನವನ್ನು ಬಳಸಿ ಮಂಡಳ ನಿರ್ಮಿಸುವುದನ್ನು ನೋಡುವುದರಲ್ಲಿ ತಲ್ಲೀನಗೊಂಡವು. ಅವನಿಗೆ ಶ್ರದ್ಧೆಯಿಂದ ಬತ್ತಿ ಹೊಸೆದುಕೊಟ್ಟಳು, ತೆಂಗಿನ ಸಿಪ್ಪೆ ಬಿಡಿಸಿಕೊಟ್ಟಳು. ಬೆಳಗಿದ ಚೊಂಬಿನಲ್ಲಿ ಶುಭ್ರವಾದ ಎಳ್ಳೆಣ್ಣೆ ತಂದುಕೊಟ್ಟಳು. ಇವನ್ನೆಲ್ಲ ಶಾಸ್ತಿಗಳು ಶುಭ ಚಿಹ್ನೆ ಎಂದು ಕಂಡು ಹರ್ಷಿತರಾದರು. ಎಂದಿಲ್ಲದ ಗೆಲುವು ಸರೋಜಳಲ್ಲಿ ಮೂಡತೊಡಗಿತ್ತು. ಅವಳು ಅಡ್ಡಾದಿಡ್ಡಿಯಾಗಿ ತೆರೆಯುತ್ತಿದ್ದ ಬೈತಲೆ ನೇರವಾಯಿತು. ಮದುವೆಯಲ್ಲಿ ಕೊಟ್ಟ ಆಭರಣಗಳನ್ನೆಲ್ಲ ಧರಿಸತೊಡಗಿದಳು. ಪೂಜೆ ಮುಗಿದ ಮೇಲೆ ಅವಳು ಕೊಡುವ ಕಾಫಿ ಹದವಾದ ಬಿಸಿಯಲ್ಲಿ ತನ್ನ ವಾಸನೆಯನ್ನು ಕಳೆದುಕೊಳ್ಳದಂತೆ ರುಚಿಯಾಗಿರುತ್ತಿತ್ತು. ಯಾವತ್ತೂ ಹಳೆಯ ಡಿಕಾಕ್ಷನ್ ಬಿಸಿ ಮಾಡಿ ಅವಳು ಕಾಫಿ ಕೊಟ್ಟದ್ದಿಲ್ಲ. ಕರುಣಾಕರ ಪಂಡಿತನನ್ನು ಕ್ರಮೇಣ ಅವಳು ವಿಶ್ವಾಸದಲ್ಲಿ ಹಚ್ಚಿಕೊಂಡಂತೆ ಕಂಡಿತು. ಒಂದು ತಿಂಗಳಿನ ಪೂಜೆಯಲ್ಲಿ ಹದಿನೈದು ದಿನಗಳು ಕಳೆದವು. ಅವಳ ಐನೀರಿನ ನಂತರ ಪೂಜೆ ಶುರುವಾದದ್ದು. ಪೂಜೆಯ ಮಧ್ಯೆ ಅವಳು ಮುಟ್ಟಾದಾಗ ತಾನೊಬ್ಬನೇ ಪೂಜೆ ಮಾಡಬೇಕು. ಇನ್ನೊಂದು ಐನೀರಿನ ನಂತರ ಕೊನೆಯ ಮೂರುದಿನ ಅವಳೊಬ್ಬಳೇ ಬೆತ್ತಲೆ ಕೂತು ಪೂಜಿಸಬೇಕು. ಇದು ಕರುಣಾಕರ ಪಂಡಿತನ ಪದ್ಧತಿಯಾಗಿತ್ತು. ಒಬ್ಬೊಬ್ಬರು ಒಂದು ಕ್ರಮದಲ್ಲಿದನ್ನು ನಡೆಸುತ್ತಾರೆ ಎಂದವನು ಹೇಳಿದ್ದ. ಕರುಣಾಕರ ಪಂಡಿತನಲ್ಲಿ ಅವಳಿಗೆ ಭಕ್ತಿ ಬೆಳೆಯುತ್ತಿರುವುದರಿಂದ ಸರೋಜ ಕೊನೆಯ ಹಂತದ ಪೂಜೆಗೆ ಸಮ್ಮತಿಸುತ್ತಾಳೆಂಬ ಶ್ರದ್ಧೆ ಶಾಸ್ತಿಗಳಲ್ಲಿ ಬೆಳೆದಿತ್ತು. ಈ ಪೂಜೆಯ ನಡುವೆ ಶಾಸ್ತಿಗಳು ಹೆಣ್ಣನ್ನು ಸೇರುವಂತಿರಲಿಲ್ಲ. ರಾಧೆಯ ಮನೆಗೂ ಶಾಸ್ತಿಗಳು ಹೋಗದಂತೆ ವ್ರತಶಾಲಿಗಳಾಗಿ ಕರುಣಾಕರ ಪಂಡಿತ ಹೇಳಿದಂತೆ ನಡೆದುಕೊಂಡರು. ಸರೋಜ ಮುಟ್ಟಾಗಿ ಐನೀರು ಸ್ನಾನ ಮಾಡಿ ಬೆತ್ತಲೆಯಾಗಿ ಕೂತು ಪೂಜೆ ಮಾಡಿದ್ದೂ ಮುಗಿಯಿತು. ದುಡ್ಡು ಕೊಡಹೋದರೆ ಕರುಣಾಕರ ಪಂಡಿತ ಒಪ್ಪಲಿಲ್ಲ. ಒತ್ತಾಯಕ್ಕೆ ಮಣಿದು ರೇಷ್ಮೆಯ ವಸ್ತಗಳನ್ನು ಕತ್ತಿಗೊಂದು ಬಂಗಾರದಲ್ಲಿ ಕಟ್ಟಿಸಿದ ರುದ್ರಾಕ್ಷಿಸರವನ್ನೂ ದಂಪತಿಗಳಿಂದ ಪಡೆದು, ನಮಸ್ಕಾರ ಮಾಡಿಸಿಕೊಂಡು ಅವರನ್ನು ಆಶೀರ್ವದಿಸಿದ್ದ. ಹತ್ತು ಮಕ್ಕಳ ತಾಯಿಯಾಗು ಎಂದು ಸರೋಜಳ ತಲೆಮುಟ್ಟಿ ಹೇಳಿದ್ದ. ಗೆಲುವಾಗಿ ಬಿಟ್ಟಿದ್ದ ಶಾಸ್ತಿಗಳು ‘ನೀವು ಬಂದು ಹೋಗುತ್ತಿರಬೇಕು’ ಎಂದು ಉಪಚರಿಸಿದರು. ಕರುಣಾಕರ ಪಂಡಿತ ಬಂದು ಹೋಗಲು ಶುರು ಮಾಡಿದ. ಒಂದು ಸಂಜೆ ಶಾಸ್ತಿಗಳು ರಾಧೆಯ ಮನೆಗೆ ಹೊಗಿದ್ದಾಗ ಬಂದು ಕಾದಿದ್ದು ಹೋದ ಶಾಸ್ತಿಗಳು ಸರೋಜಳಿಗೆ ಹೇಳಿದರು, ಸಂಜೆ ನಾನಿರುವುದಿಲ್ಲ, ಬೆಳಿಗ್ಗೆ ಬರಬೇಕಂತೆ ಎಂದು ಹೇಳು. “ಮತ್ತೆರಡು ದಿನಗಳಾದ ಮೆಲೆ ಅನುಮಾನವಾಗಿ “ಪಂಡಿತರು ಬಂದಿದ್ದರ?” ಎಂದು ಕೇಳಿದರು.

ಸರೋಜ ನಿರ್ಲಕ್ಷ್ಯದಿಂದ ಹೇಳಿದಳು: “ಬಂದಿದ್ದರು”.
ಶಾಸ್ತಿಗಳು ಉಕ್ಕಿ ಬಂದ ಕೋಪ ತಡೆದುಕೊಂಡು, ಅಣಕು ಸೌಜನ್ಯದಲ್ಲಿ ಕೇಳಿದರು: “ಕಾಫಿ ಮಾಡಿಕೊಟ್ಟಿತಾನೆ?”
“ಕೊಟ್ಟೆ”
“ನಾನು ಸಂಜೆಯಿರುವುದಿಲ್ಲ. ಬೆಳಿಗ್ಗೆ ಬನ್ನಿ ಎಂದು ಹೇಳಲಿಲ್ಲವೆ?” ಸರೋಜ ಉತ್ತರ ಕೊಡದೆ ಒಳಗೆ ಹೋಗಿಬಿಟ್ಟಿದ್ದಳು ಎಂಬುದನ್ನು ಮತ್ತೆ ಮತ್ತೆ ನೆನೆಯುತ್ತಾರೆ. ಅವಳು ಸೆರಗನ್ನು ಎಳೆದು ಹೊದ್ದುಕೊಂಡು ನಿರ್ಲಕ್ಷ್ಯದಲ್ಲಿ ನಡುಮನೆಯ ದೊಡ್ಡ ಹೊಸಲನ್ನು ಕಾಲೆತ್ತಿ ಇಟ್ಟು ದಾಟಿದ ಕ್ರಮ, ಆಗ ತನ್ನ ಕಣ್ಣಿಗೆ ಬಿದ್ದ ಅವಳ ಸೆಟೆದ ಬೆನ್ನು, ನೀಳವಾದ ಕತ್ತಿನ ದಾಷ್ಟ್ಯ ಅವರ ಎದೆಯಲ್ಲಿ ಬೆಂಕಿಯೇಳಿಸುತ್ತದೆ. ಶಾಸ್ತಿಗಳು ಸೀದ ಕಾರು ಹತ್ತಿ ಉಡುಪಿಗೆ ಹೋಗಿದ್ದರು. ಅವರ ಉರಿಯುವ ಮೋರೆಯನ್ನು ಕರುಣಾಕರ ಪಂಡಿತ ನಗುತ್ತ ಸ್ವಾಗತಿಸಿದ್ಡ. “ಏನು ಶಾಸ್ತಿಗಳೇ, ಬನ್ನಿ ಎಂದು ನಿಮ್ಮ ಒತ್ತಾಯ. ಬಂದರೆ ನೀವಿರುವುದೇ ಇಲ್ಲವಲ್ಲ. ಪ್ರತಿನಿತ್ಯ ನೀವು ನಾಪತ್ತೆಯಲ್ಲ! ನಿಮ್ಮ ಹೆಂಡತಿ ಉಪಚಾರ ಮಾಡಿ ಕಳಿಸುತ್ತಾರೆ ಎನ್ನಿ” ಎಂದು ಒಂದು ಚಿಟಿಕೆ ನಸ್ಯವೇರಿಸಿ ಆಪ್ತವಗಿ ಕೇಳಿದ್ದ. “ನೀವು ಮಲಗುವ ಕೋಣೆಯನ್ನು ಬದಲಾಯಿಸಿದ್ದೀರ ಎಂದು ಕೇಳಿದರೆ ನಿಮ್ಮ ಹೆಂಡತಿ ಯಾಕೋ ಉತ್ತರಿಸಲೇ ಇಲ್ಲ. ನೀವಿಲ್ಲದಾಗ ನಾನು ಆ ಪ್ರಶ್ನೆಯನ್ನು ಕೇಳಬಾರದಿತ್ತೋ ಏನೊ. ಮನೆ ಹೆಚ್ಚು ಶಾಂತವಾಗಿದೆ ಎನ್ನಿಸುತ್ತದೆಯ ನಿಮಗೆ?” ಶಾಸ್ತಿಗಳಿಗೆ ಅವನ ಮಾತಿನ ಮೋಡಿಯಿಂದ ಮನಸ್ಸು ತಂಪಾಗಿತ್ತು. “ಯಾಕೆ ಕೇಳಿದೆ ಅಂದರೆ, ನಾನು ಬಂದಾಗಲೆಲ್ಲ ಮನೆಯ ಒಂದು ಕತ್ತಲಿನ ಮೂಲೆಯಲ್ಲಿ ಇನ್ನೂ ಅವಿತುಕೊಂಡಿರುವ ಒಂದು ರೋಷದ ದೆವ್ವ ನನಗೆ ಕಾಣಿಸಿದಂತಾಗುತ್ತದೆ. ಅದು ನಿಮ್ಮನ್ನು ಕವಿದುಕೊಳ್ಳಲು ಹೊಂಚಿ ಕಾಯುತ್ತಿದೆ. ಸಾಮಾನ್ಯದ ದೆವ್ವವಲ್ಲ; ರಕ್ತದಾಹದ ದೆವ್ವ ಅದು. ನಾನು ಹೇಳಿಕೊಟ್ಟ ಮಂತ್ರವನ್ನು ಮನಸ್ಸಿನಲ್ಲೇ ಸದಾ ಜಪಿಸುತ್ತಿರಿ. ನಿಮ್ಮನ್ನು ಸಂಜೆ ಬರಬೇಡಿ, ಬೆಳ್ಳಿಗ್ಗೆ ಬಂದು ಹೋಗಿ ಎಂದು ಹೇಳಲು ಬಂದೆ. ಸಂಜೆ ನಾನು ಮನೆಯಲ್ಲಿ ಇರುವುದು ಕಡಿಮೆ. ನನ್ನ ಇನ್ನೊಂದು ತೋಟವಿದೆ. ಅದರ ಉಸ್ತುವಾರಿ ನಾನೇ ನೋಡಿಕೋಬೇಕು. ಅಲ್ಲಿರುವ ತೆಂಗಿಗೆ ಏನೋ ರೋಗ ಹತ್ತಿದಂತಿದೆ” ಎಂದು ಶಾಸ್ತಿಗಳು ಸ್ನೇಹದಲ್ಲಿ ಹೇಳಲು ಪ್ರಯತ್ನಿಸಿದ್ದರು. ತಾನು ರಾಧೆಯ ಜೊತೆ ಇಟ್ಟುಕೊಂಡಿದ್ದ ಸಂಬಂಧ ಪಂಡಿತನಿಗೆ ಗೊತ್ತಿಲ್ಲವೆಂದು ಭಾವಿಸಿದ್ದರು. ಆದರೆ ಪಂಡಿತ ಅವಿತುಕೊಂಡ ದೆವ್ವದ ಮಾತಾಡುವುದು ಕೇಳಿ ದಿಗಿಲಾಗಿತ್ತು. ಈ ಪಂಡಿತನಿಗೆ ಎಲ್ಲ ಗೊತ್ತಾಗಿ ಬಿಡುತ್ತದೆ ಎನ್ನಿಸಿತ್ತು. “ನಿಮಗೆ ಮಿದುಳಲ್ಲಿ ಕೆಂಪಾಗೆ ಏನೋ ಉರಿದಂತೆ ಕಾಣುತ್ತದಲ್ಲವೆ? ಎಲ್ಲ ಸರಿಹೋದರೆ ದೈವಕೃಪೆಯಿಂದ ನಿಮ್ಮ ಹೃದಯದ ಒಳಗೆ ತಂಪಾದ ಕಣ್ಣುಗಳು ತೆರೆದಂತಾಗಬೇಕು. ಅಲ್ಲಿಯ ತನಕ ರಕ್ತದಾಹಿಗಳಾದ ದೆವ್ವಗಳ ಕಾಟ ತಪ್ಪಿದ್ದಲ್ಲ. ನಾನು ನಾನು ನಾನು ಎಂಬ ಹೂಂಕಾರ ಹೋಗೋ ತನಕ ಶಾಂತಿಯಿಲ್ಲ ನೋಡಿ. ನೀಲವಾದ ಆಕಾಶವನ್ನು ನೆನೆಯುತ್ತ, ತೇಲುತ್ತಿರುವಂತೆ ಭಾವಿಸುತ್ತ ಜಪ ಮಾಡಿ. ನಿಮಗಾಗಲೀ ನಿಮ್ಮ ಹೆಂಡತಿಗಾಗಲೀ ಆಪತ್ತಾದಾಗ ನನ್ನನ್ನು ಎಚ್ಚರಿಸುವಂತೆ, ನನ್ನ ಇಷ್ಟದೇವತೆಗೆ ಅರಿಕೆ ಮಾಡಿಕೊಂಡಿದ್ದೇನೆ. ಬೆಳಿಗ್ಗೆ ಬನ್ನಿ ಎಂದಿರಿ. ಅದು ನನಗೆ ಸಾಧ್ಯವಿಲ್ಲ. ನನಗೂ ಹಿಡಿದ ವ್ರತವಿರುತ್ತದಲ್ಲ? ರೋಗಿಗಳು ಬೇರೆ ಕಾಣಲು ಬರುತ್ತಾರೆ” ಎಂದು ನಸ್ಯವೇರಿಸಿ, “ನೋಡಿ ನನಗೂ ಈ ಒಂದು ಚಟ ಹತ್ತಿಕೊಂಡಿದೆ. ಈ ದೇಹದಲ್ಲಿರುವ ತನಕ ನಾವೆಲ್ಲರೂ ಮನುಷ್ಯರೇ. ಕ್ರೋಧ, ಕಾಮ, ಮೋಹ ಯಾರನ್ನೂ ಬಿಟ್ಟದ್ದಿಲ್ಲ” ಎಂದು ಪಂಡಿತ ನಗುತ್ತ, ಬಿಚ್ಚಿದ್ದ ತನ್ನ ತಲೆಗೂದಲನ್ನು ಕಟ್ಟಿಕೊಂಡಿದ್ದ. ಅವನು ಕೂದಲನ್ನು ಕಟ್ಟಿಕೊಳ್ಳುವಾಗ ಎಷ್ಟು ಮೋಹಕವಾಗಿ ಕಂಡು ತನ್ನನ್ನು ಉರಿಸಿದ್ದ ನೆನಪಾಗುತ್ತದೆ. ಶಾಸ್ತಿಗಳಿಗೆ ತಾನೊಂದು ಮೋಡಿಗೆ ಒಳಪಟ್ಟಿದ್ದೇನೆ ಎಂದು ಭಯವಾಗಿತ್ತು. ‘ನಾನಿಲ್ಲದಾಗ ಮನೆಗೆ ನೀನು ಬರಕೂಡದು’ ಎಂದು ರೋಷದಲ್ಲಿ ಹೇಳಬೇಕೆನ್ನಿಸಿತ್ತು. ಹಾಗೆ ಹೇಳಿ ಬಿಟ್ಟರೆ ಈ ಪಂಡಿತನ ಮೋಡಿಯಿಂದ ತಾನು ಪಾರಾದೇನು. ಆದರೆ ಆ ಮಾತು ಬಾಯಿಂದ ಬರಲಾರದೆ ಹೋಗಿತ್ತು. ‘ಎಲಾ ನನ್ನ ಮೇಲೇ ಈ ಪಂಡಿತ ಇಂಥ ಮೋಡಿ ಹಾಕಿಬಿಟ್ಟಿದ್ದರೆ ಸರೋಜಳ ಪಾಡೇನು’ ಎಂದು ಯೋಚಿಸುತ್ತ ಕಾರನ್ನು ತನ್ನ ಹಳ್ಳಿಗೆ ನಡೆಸಿದ್ದರು. ಪಂಡಿತ ಮಹಾ ರಸಿಕನಂತೆ ಕಾಣುತ್ತಾನೆ. ಏನೋ ತಿನ್ನುತ್ತಾನೆಂದು ಕಾಣುತ್ತದೆ. ಅವನ ಉಸಿರಾಟದ ಸುವಾಸನೆ ಮತ್ತು ಬರಿಸುತ್ತದೆ. ಮತ್ತೆ ಅದು ಯಾವ ಗಂಧವನ್ನು ಮೈಗೆಲ್ಲ ಬಳಿದುಕೊಳ್ಳುತ್ತಾನೊ. ಮನೆಗೆ ಬಂದವರೇ ಚಡಪಡಿಸತೊಡಗಿದ್ದರು. ಸರೋಜ ತನಗೆ ಅಡಿಗೆ ಮಾಡಿ ಊಟವನ್ನೇನೋ ಬಡಿಸುವಳು. ಕಾಫಿಯನ್ನೂ ಬೇಕಾದಾಗ ಕೊಡುವಳು. ಆದರೆ ಮಾತು ಆಡಳು. ತನ್ನತ್ತ ನೋಡಳು. ನೋಡಿದರೂ ಅವಳ ದಿವ್ಯ ನಿರ್ಲಕ್ಷ್ಯದ ಕಣ್ಣಿನಲ್ಲಿ ಎತ್ತಲೋ ದೂರ ನೋಡಿದಂತೆ ಇರುತ್ತದೆ. ಪುಸ್ತಕ ಹಿಡಿದು ಕೂತಾಗ ಮಾತ್ರ ಅವಳ ನೋಟ ಓದುವುದರಲ್ಲಿ ಏಕಾಗ್ರವಾಗಿ ನೆಟ್ಟಿರುತ್ತದೆ. ಆಸಕ್ತವಗಿ ಅವಳು ತನಗೆ ತಾನೇ ಮಾತಾಡಿಕೊಳ್ಳುತ್ತಿರುವಂತೆ ತೋರುತ್ತದೆ. ಹೂವು ಪೋಣಿಸುವಾಗಲೂ ಅವಳ ಹಲ್ಲು ಕೆಳತುಟಿಯನ್ನು ಕಡಿಯುತ್ತ, ಮುಗುಳ್ನಗುತ್ತ ಹೂವಿನ ತೊಟ್ಟಿನ ಜೊತೆ ಸಲ್ಲಾಪದಲ್ಲಿ ಮಗ್ನವಾಗಿರುವಂತೆ ಕಾಣುತ್ತದೆ. ಸೊಂಟದ ಮೇಲೆ ಕೈಯಿಟ್ಟುಕೊಂಡು ಪಾರಿಜಾತದ ಮರ ನೋಡುತ್ತ ತನಗೆ ತಾನೇ ಅವಳು ಗುನುಗಿಕೊಳ್ಳುವುದೂ ಉಂಟು. ಇವೆಲ್ಲ ತಾನು ನೋಡುತ್ತಿಲ್ಲವೆಂದು ಅವಳು ತಿಳಿದಿದ್ದಾಗ ಮಾತ್ರ. ಉಳಿದಂತೆ ಅವಳೂ ಈ ಮನೆಯಲ್ಲಿ ಇನ್ನೊಂದು ದೆವ್ವವೇ. ರಾತ್ರೆ ಅವಳ ಜೊತೆ ಮಲಗಬೇಕೆಂದು ಸಂಕಲ್ಪಿಸಿಕೊಂಡ ದಿನ ಯಾತನೆಯಾಗತೊಡಗುತ್ತದೆ. ಪಕ್ಕ ಒಂದು ಕ್ಷಣ ಮಲಗಿ, ಮಲಗಿರಲಾರದೆ ಎದ್ದು ಸೀದ ರಾಧೆಯ ಬಳಿ ಹೋಗಿಬಿಡುತ್ತಾರೆ. ಇವತ್ತು ಪಂಡಿತ ಬರದೆ ಇರಬಹುದು ಎಂದುಕೊಂಡು ಮನೆಯಲ್ಲಿ ನಿಲ್ಲದೆ ರಾಧೆಯ ಹತ್ತಿರವೇ ನೇರ ಹೋದರು. ರಾಧೆಯೋ ಯಾವಾಗಲೂ ರಾತ್ರೆ ಹೀಗೆ ತನ್ನ ಮನೆಗೆ ಬರಕೂಡದು, ಹೆಂಡತಿ ಜೊತೆ ಮಲಬಬೇಕು ಎಂದು ಬಾದಾಮಿ ಹಾಲು ಕುಡಿಸುತ್ತ ಬೇಡಿಕೊಂಡಳು. ಹೆಂಡತಿಯ ಜಘನ ಪ್ರದೇಶದಲ್ಲೂ, ಯೋನಿ ಪ್ರದೇಶದಲ್ಲೂ ಎಲ್ಲೆಲ್ಲಿ ಏನೇನು ಕಾಮಗಾರಿಯನ್ನು ಪೂರ್ವಭಾವಿಯಾಗಿ ಕೈಗೊಂಡು ಅವಳನ್ನು ಒಸಿಲಿಕೊಳ್ಳಬೇಕು ಎಂದು ತನ್ನ ಅನುಭವದ ವಶೀಕರಣ ವಿದ್ಯೆಯನ್ನು ಬೋಧಿಸಿದಳು. ರುಚಿಕರವಾದ ಈ ಪಾಠಗಳಿಂದಾಗಿ ತನ್ನ ಸಂಬಂಧಕ್ಕಿಂತ ಮುಂಚೆಯೇ ಯಾರೋ ಪರರು ಹೀಗೆಲ್ಲ ಅವಳಿಗೆ ಮಾಡಿರಬೇಕೆಂದು ಶಾಸ್ತಿಗಳು ಅಸೂಯೆಯಲ್ಲಿ ಅವಳನ್ನು ಪೀಡಿಸಲು ಶುರುಮಾಡಿದರು. “ನೀವೇನು ಈ ವಿದ್ಯೆಯಲ್ಲಿ ಕಡಿಮೆಯೆ? ಬೇರೆ ಯಾರಿಂದಾದರೂ ಇದನ್ನು ಏಕೆ ಕಲಿಯಬೇಕು?” ಎಂದು ಅವಳು ಶಾಸ್ತಿಗಳಿಗೆ ಸಮಾಧಾನ ಮಾಡುತ್ತಾ, “ಮರೆತುಬಿಟ್ಟಿರ? ಈ ಮನೆಗೆ ನನ್ನನ್ನು ತಂದ ಶುರುವಿನಲ್ಲಿ ನೀವು ಏನೇನು ಮಾಡಿಲ್ಲ. ನನ್ನಿಂದ ಏನೇನು ಮಾಡಿಸಿಕೊಂಡಿಲ್ಲ. ಈಗ ಮಾತ್ರ ನಿಮ್ಮನ್ನು ಒಂದು ದೆವ್ವ ಹೊಕ್ಕಿದೆ. ನಿಮಗೆ ಮಂಕು ಹಿಡಿಸಿಬಿಟ್ಟಿದೆ” ಎಂದು ನಗೆಯಾಡಿದಳು. ಪಂಡಿತ ಹೇಳಿದ್ದನ್ನೇ ರಾಧೆ ಹೇಳಿದ್ದು ಕೇಳಿ ಶಾಸ್ತಿಗಳಿಗೆ ಕಸಿವಿಸಿಯಾಗಿತ್ತು.

ಮಾರನೆ ದಿನ ಪರೀಕ್ಷೆ ಮಾಡಿಯೇ ಬಿಡುವುದೆಂದು ಸಂಜೆ ಹೊತ್ತಿಗೆ ರಾಧೆಯ ಮನೆಗೆ ಹೋಗಿ, ರಾತ್ರೆ ಹನ್ನೊಂದರ ತನಕ ಕಾದಿದ್ದು ತಮ್ಮ ಮನೆಗೆ ಬಂದರು. ಮನೆಯ ಎದುರು ಪಂಡಿತನ ಕಾರಿತ್ತು. ಎದೆ ಹೊಡೆದುಕೊಳ್ಳತೊಡಗಿತು. ಇವತ್ತು ನನ್ನಿಂದ ಎರಡು ಕೊಲೆಯಾಗಿ ಬಿಡುತ್ತದೆಂದು ಭಯವಾಗಿತ್ತು.
ನಡುಗುತ್ತ ಮನೆಯ ಬಾಗಿಲು ತಳ್ಳಿದರು – ಅದರ ಅಗಳಿ ಹಾಕಿರಲಿಲ್ಲ. ನಡುಗುವ ರೋಷದಲ್ಲೂ ಏನವರ ಸೊಕ್ಕು! ಆಶ್ಚರ್ಯವಾಗಿತ್ತು. ರಕ್ತ ನುಗ್ಗಿ ಅವರ ಕಿವಿಗಳು ಗವ್ವೆನ್ನುತ್ತಿದ್ದವು. ಹೀಗೆ ಗವ್ವೆನ್ನುವುದರ ಶಬ್ದದ ಒಳಗೇ ಸಂಗೀತದ ಆಲಾಪ ಕೇಳಿಸಿದಂತಾಯಿತು. ಮುಂಡೇ ಮಕ್ಕಳು ರೇಡಿಯೋ ಹಾಕಿಕೊಂಡು ತಮ್ಮ ಕೆಲಸ ನಡೆಸಿದ್ದಾರೆ ಎನ್ನಿಸಿ ಕಾಲುಗಳು ದುರ್ಬಲವಾದವು. ಸಂಗೀತ ಬರುತ್ತಿದ್ದುದು ಪಂಡಿತ ತನ್ನ ತಿಂಗಳಿನ ಪೂಜೆ ನಡೆಸಿದ ಕೋಣೆಯಿಂದ. ಅಲ್ಲಿಯೇ ಅವನು ಅವಳನ್ನು ಪವಿತ್ರಗೊಳಿಸುತ್ತೇನೆಂದು ಬೆತ್ತಲೆ ಮಾಡಿಯಾಗಿದೆ. ಈಗ ಸೂಳೇಮಗ ಗರ್ಭಾದಾನ ಮಾಡುತ್ತಿರಬೇಕು ಎಂದುಕೊಳ್ಳುತ್ತ, ಕತ್ತಲಿನಲ್ಲಿ ತಡಕಾಡುತ್ತ, ದೇವರ ಕೋಣೆಗೆ ಹೋದರು. ಅದರ ಬಾಗಿಲು ಹಾಕಿತ್ತು. ತಳ್ಳಿದರು.

ಅಲ್ಲಿ ದೊಡ್ಡ ಎರಡು ನೀಲಾಂಜನಗಳಲ್ಲಿ ಹತ್ತು ಬೆಳಕಿನ ಕುಡಿಗಳು ಉರಿಯುತ್ತಿವೆ. ಅವುಗಳ ನಡುವೆ ಸರೋಜ ಹೆರಳನ್ನು ಹೆಗಲಮೇಲೆ ಇಳಿಬಿಟ್ಟುಕೊಂಡು ಒಂದು ಕಾಲು ಮಡಚಿ ಕೂತು ತಂಬೂರಿ ಮೀಟುತ್ತ ಹಾಡುತ್ತಿದ್ದಾಳೆ. ಬಾಗಿಲನ್ನು ದಡಾರನೆ ತಾನು ತೆಗೆದರೂ ಅವಳ ಕಣ್ಣುಗಳು ಮುಚ್ಚಿಯೇ ಇವೆ. ತನ್ನ ಅಗಮನ ಅಪ್ರಸ್ತುತವೆನ್ನುವಂತೆ ತಾಯಿ ಮನೆಯಿಂದ ತಂದ ತಂಬೂರಿ ಮೀಟುತ್ತ ಹಾಡುತ್ತಿದ್ದಾಳೆ. ಹೀಗೆ ಅವಳು ಹಾಡಿದ್ದನ್ನು ಅವರು ಕೇಳಿರಲಿಲ್ಲ. ಸಂಗೀತ ಕಲಿತಿದ್ದಾಳೆಂದು ಮಾತ್ರ ಗೊತ್ತಿತ್ತು. ಅವಳ ಎದುರು ಪದ್ಮಾಸನ ಹಾಕಿ ಪಂಡಿತನೂ ಕೂತಿದ್ದ. ತನ್ನ ಕಡೆ ನೋಡದೆ, ತಾನು ಬಂದದ್ದು ಗಮನಿಸಿ, ತನ್ನನ್ನೂ ಜೊತೆಗೆ ಕೂರುವಂತೆ ಸನ್ನೆ ಮಾಡಿದ್ದ. ಅವಳ ಜೊತೆ ಆಲಾಪದಲ್ಲಿ ಮಿಳಿಯ ತೊಡಗಿದ. ಈಗ ಕೂಡುವುದು, ಅವಳು ಬಿಟ್ಟಲ್ಲಿಂದ ಇವನು ಮುಂದುವರಿಯುವುದು, ಮತ್ತೆ ಅವಳು ನಿರೀಕ್ಷಿಸುತ್ತ ಕೂಡಿಕೊಳ್ಳುವುದು – ಹೀಗೆ. ಅರೆ, ತನ್ನ ಮನೆಯಲ್ಲೇ ಅವನು ತನ್ನನ್ನು ಉಪಚರಿಸುತ್ತಿದ್ದಾನೆಂದು ಆಶ್ಚರ್ಯವಾಗಿತ್ತು. ಏನು ಮಾಡುವುದು ತಿಳಿಯದೆ ಸುಮ್ಮನೇ ಕೂತರು. ಸರೋಜ ತನ್ನ ಸಂಗೀತ ಮುಗಿಸಿ ತಂಬೂರಿಯನ್ನು ಕಣ್ಣಿಗೊತ್ತಿಕೊಂಡು ಕೆಳಗಿಟ್ಟಳು. ಮಂದವಾದ ನೀಲಾಂಜನದ ತಂಪಾದ ಬೆಳಕಿನಲ್ಲಿ ಏನೂ ಸ್ಪಷ್ಟವಾಗಿ ಕಾಣುತ್ತಿರಲಿಲ್ಲ. ತನ್ನ ಮಿದುಳಲ್ಲಿ ಕೆಂಗಣ್ಣುಗಳು ತೆರೆಯಲು ತವಕಿಸುತ್ತಿವೆ ಎಂದು ಭಾಸವಾಗಿ ಶಾಸ್ತಿಗಳು ಉಸಿರನ್ನು ಬಿಗಿ ಹಿಡಿದರು. ಪಂಡಿತನನ್ನಾಗಲೀ, ಸರೋಜಳನ್ನಾಗಲೀ ಹೊಡೆದು ಸಾಯಿಸಲಾರೆ ಎನ್ನಿಸಿ, ತಾನು ನಿರ್ವೀರ್ಯನಾಗಿ ಬಿಟ್ಟೆ ಎನ್ನಿಸಿ ಕುಸಿದರು.

ಪಂಡಿತ ಸಂಗೀತ ಮುಗಿದ ನಂತರ ನಾಳೆ ಮತ್ತೆ ಬರುವೆನೆಂದು ಅವಳಿಗೆ ಮಾತ್ರ ಉಸುರಿ ಹೊರನಡೆದು ಚಪ್ಪಲಿ ಹಾಕಿಕೊಂಡ. ಅವನು ಚಪ್ಪಲಿಯನ್ನು ಹಾಕಿಕೊಳ್ಳುವ ಶಬ್ದ ಕೇಳಿಸಿತ್ತು. ಮತ್ತೆ ಅವನು ತನ್ನ ಕಾರನ್ನು ಸ್ಟಾರ್‍ಟ್ ಮಾಡುವ ಶಬ್ದ. ಸ್ಟಾರ್‍ಟ್ ಮಾಡಿ ಅದು ಗೇರಿನಲ್ಲಿ ಚಲಿಸುವ ಶಬ್ದ. ಮತ್ತೆ ಎಲ್ಲ ಶಬ್ದಗಳೂ ಕರಗಿದ್ದರ ಮೌನ. ಮತ್ತೆ ಕೊಟ್ಟಿಗೆಯಲ್ಲಿ ಮೆಲುಕು ಹಾಕುವ ದನಗಳ ಕೊರಳ ಗಂಟೆಯ ಶಬ್ದ- ಆಗ, ಈಗ. ಮತ್ತೆ ಯಾವ ಸದ್ದೂ ಇಲ್ಲ. ದೆವ್ವಗಳು ಮಾತ್ರ ತಿರುಗುಮುರುಗು ಪಾದಗಳಲ್ಲಿ ಸದ್ದಿಲ್ಲದಂತೆ ಚಲಿಸುತ್ತಿರಬೇಕು.
ಏನೂ ಆಗಿಯೇ ಇಲ್ಲವೆನ್ನುವಂತೆ ಸರೋಜ ಎದ್ದು ಮಲಗುವ ಕೋಣೆಗೆ ಹೋದಳು. ತಾನು ಸತ್ತು ಪ್ರೇತವಾಗಿಬಿಟ್ಟೆ ಎಂದು ಶಾಸ್ತಿಗಳು ಕುಸಿದೇ ಕೂತಿದ್ದರು.

ಮತ್ತೆ ಅವರಿಗೆ ಏನಾಗಿಬಿಟ್ಟಿತೋ, ದಟ್ಟವಾದ ಕಾಡಿನಲ್ಲಿ ಪೊದೆಗಳ ನಡುವೆ ಗುಪ್ತವಾಗಿ ಸಂಚರಿಸುವ ಕ್ರೂರವಾದ ಪಶುವಿನಂತೆ ಮುಚ್ಚಿದ ಬಾಯಲ್ಲೇ ಭಯಾನಕವಾದ ಶಬ್ದ ಹೊರಡಿಸಲು ತೊಡಗಿದರು. ಆ ಶಬ್ದ ದೀರ್ಘವಾಗಿತ್ತು. ಏರುತ್ತೇರುತ್ತ ಹೋಗಿ ಹಾಗೆಯೇ ಇಳಿಯುತ್ತಿಳಿಯುತ್ತ ಮೌನವಾಗಿ, ಮೌನವಾಗಿಯೂ ಭಯ ಹುಟ್ಟಿಸುತ್ತ, ಮತ್ತೆ ಏರುತ್ತಿತ್ತು. ಅದು ನರಳುವ ಶಬ್ದದಂತೆಯೂ ಹಸಿದ ಪ್ರಾಣಿ ಘೀಳಿಟ್ಟಂತೆಯೂ ಇತ್ತು. ಮನುಷ್ಯ ಪ್ರಾಣಿ ಹೊರಡಿಸುವ ಶಬ್ದದಂತಿರಲಿಲ್ಲ. ಯಾವ ಕ್ರೂರವಾದ ಮಾತಿಗೂ ಸಹ ನಿಲುಕಲಾರದ್ದನ್ನು, ಮಾತಿನ ಪ್ರೇತದಂತಿದ್ದುದನ್ನು ತನ್ನ ದೇಹ ಉಂಟು ಮಾಡುತ್ತಿದೆ ಎಂದೂ, ಒಳಗೆ ತಾನು ಸೊಕ್ಕಿ ಅಗಾಧವಾಗುತ್ತಿದ್ದೇನೆಂದೂ, ಶಾಸ್ತಿಗಳಿಗೆ ಭಾಸವಾಯಿತು. ಸರೋಜಳ ದಿವ್ಯವಾದ ಕಂಠ ಸ್ವಲ್ಪ ಹೊತ್ತಿನ ಮುಂಚೆ ಉಂಟು ಮಾಡಿದ್ದ ಆಲಾಪದ ಅಲೆಗಳನ್ನೆಲ್ಲ ಧ್ವಂಸಗೊಳಿಸುವ, ಭಾಷೆಯನ್ನು ತಿನ್ನುವ, ಎಲ್ಲ ಸೌಂದರ್ಯವನ್ನೂ ಅಣಕಿಸಿ ನಾಶಮಾಡುವ ಅಟ್ಟಹಾಸ ಅದಾಗಿತ್ತು. ಮರಗಿಡಗಳ ಬೇರುಗಳಿಗೆ ಪೋಷಕವಾಗುವ, ಹಕ್ಕಿಗಳಿಂದ ತಮ್ಮ ಮರಿಗಳನ್ನು ಸಾಕಲು ಗೂಡುಕಟ್ಟಿಸುವ, ಕ್ರಿಮಿಕೀಟಗಳಿಗೂ ಚಲನಶಕ್ತಿ ಕೊಡುವ, ಈ ಪೃಥಿವಿಯ ಒಳಿತಿನ ಒತ್ತಾಸೆಯನ್ನೇ ಕೊಲ್ಲುವಂತ್ತಿದ್ದ ಅಟ್ಟಹಾಸದಲ್ಲಿ ಈಳಿಡುತ್ತ ಮಲಗುವ ಕೋಣೆಗೆ ದಾಪು ಹೆಜ್ಜೆ ಹಾಕುತ್ತ ಶಾಸ್ತಿಗಳು ಹೋದರು. ಅರೆನಿದ್ದೆಯಲ್ಲಿ ಮುಗುಳ್ನಗುತ್ತಿದ್ದ ಸರೋಜಳನ್ನು ದೀಪ ಹಾಕಿ ನೋಡಿದರು.

ದೆವ್ವಗಳು ಸಹ ಅಂಥ ಮೈಥುನದಲ್ಲಿ ತೊಡಗಿರಲಿಕ್ಕಿಲ್ಲ. ಸರೋಜಳ ಬಟ್ಟೆಗಳನ್ನು ಕಿತ್ತು ಬಿಸಾಕಿ ಅವಳ ಮೈಮೇಲೆ ಈಳಿಡುತ್ತಲೇ ಎರಗಿದ್ದರು. ಅವಳ ಒಳಗೆ ಶೀತಲವಾಗಿ ಮಡುಗಟ್ಟಿಕೊಂಡ ಸಂಕಲ್ಪವನ್ನು, ತನ್ನನ್ನು ನಿರಾಕರಿಸಿರುವ ಅವಳ ದಿವ್ಯನಿರ್ಲಕ್ಷ್ಯವನ್ನು ಹಿಚುಕಿ ಸಾಯಿಸುವಂತೆ ಅವಳನ್ನು ಸಂಭೋಗಿಸತೊಡಗಿದ್ದರು. ಅವಳೂ ತನ್ನಂತೆ ನರಳುತ್ತಿಲ್ಲವೆನ್ನುವುದು, ತನ್ನನ್ನು ಕೊಲ್ಲುವಂತೆ, ಅವಳ ಕಣ್ಣುಗಳು ಕಿಡಿಕಾರಲಿಲ್ಲವೆನ್ನುವುದು, ಅವಳ ಮೇಲಿನ ತನ್ನ ಎಗರಾಟ ಅಪ್ರಸ್ತುತವೆನ್ನಿಸುವಂತೆ ಅವಳು ಸಹಿಸಿಕೊಡಿದ್ದಾಳೆಂಬುದು ಇನ್ನಷ್ಟು ಅವರ ಅಟ್ಟಹಾಸಕ್ಕೆ ಕಾರಣವಾಗಿತ್ತು.

ಅವಳೂ ಕೊನೆಯಲ್ಲಿ ಸಡಿಲಾಗಿ ಬಿಟ್ಟಿರಬಹುದೇ ಆಮೇಲೆ ಅವರು ಚಿಂತಿಸಿದ್ದಿದೆ.
ರಾಧೆಯ ಮನೆಯ ಬಳಿ ಕಾರು ನಿಲ್ಲಿಸಿ ಈಗ ಇಳಿಯುವಾಗ ಅವರಿಗೆ ದಿಗ್ಗನೆ ನೆನಪಿಗೆ ಬಂದದ್ದು ಅದು.


ಮುಂದುವರೆಯುವುದು

“ಬರಹ”ಕ್ಕೆ ಇಳಿಸಿದವರು: ಸೀತಾಶೇಖರ್

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

This site uses Akismet to reduce spam. Learn how your comment data is processed.