ಪ್ರಜಾಪ್ರಭುತ್ವ

ಮುಳುಗುತಿಹ ನೇಸರನು ಮುದಿಸಿಂಹನಂತಾಗಿ
ಪಶ್ಚಿಮಾದ್ರಿಯ ಗವಿಯ ಸೇರುತಿಹನು;
ತನ್ನ ಸರ್ವಾಧಿಕಾರತ್ವ ಕೊನೆಗೊಳ್ಳುತಿರೆ
ಲೋಗರೆಡೆ ಕೆಕ್ಕರಿಸಿ ನೋಡುತಿಹನು!

ಸಂಜೆ ಕಕ್ಕರಮಬ್ಬು ಗಗನ ಸಿಂಹಾಸನದಿ
ಕಪ್ಪು ಬಾವುಟವತ್ತಿ ತೋರಿಸಿಹುದು-
ಪಕ್ಷಿಸಂಕುಲ ಕೆಲೆದು ಬಿಡುಗಡೆಯ ಹಿಗ್ಗಿನಲಿ
ಹಾಡಿ ಜಯಜಯಕಾರ ಗೈಯುತಿಹುದು.

ಹಗಲ ಉರಿವಿಸಿಲ ಸಾಮ್ರಾಜ್ಯಶಾಹಿಯು ಉರುಳಿ
ಪಡುವ ಕಡಲಿನ ಹಡಗವೇರುತಿರಲು
ಸಂಧ್ಯಾ ಸಮೀರನದೂ ಸ್ವಾತಂತ್ರ್ಯ ಸಂದೇಶ
ಹೊತ್ತು ನಾಲ್ದೆಸೆಗಳಲಿ ಹರಡುತಿಹನು.

ಬಿತ್ತರದ ಬಾನಿನಲಿ ಮತ್ತೆ ಜನತಾ ರಾಜ್ಯ
ಮೆರೆಯುತಿದೆ ಚಿಕ್ಕೆಯ ಪ್ರಜಾಪ್ರಭುತ್ವ-
ವ್ಯಕ್ತಿ-ಶಕ್ತಿಯ ಗುಣವಿಕಾಸ ಪ್ರಕಾಶದಲಿ
ಜಗವ ಬೆಳಗುವುದದರ ಮೂಲತತ್ತ್ವ.

ಆಕಾಶಗಂಗೆ ಶಾಸನ ಸಭೆಯನೇರ್ಪಡಿಸಿ
ಮಂತ್ರಿ ಮಂಡಲವನ್ನು ನಿರ್ಮಿಸಿಹುದು;
ಬುಧ ಬ್ರಹಸ್ಪತಿ ಶುಕ್ರ ಶನಿ ಮಂಗಳಾದ್ಯರನು
ವಿವಿಧ ಮಂತ್ರಿಗಳಾಗಿ ನೇಮಿಸಿಹುದು.

ಕೃತ್ತಿಕೆಯು ಮೃಗಶಿರವು ಸಪ್ತರ್ಷಿ ಮಂಡಲವು
ರಾಜಕೀಯದ ಪಕ್ಷಪಂಗಡವೆನೆ
ದಕ್ಷಿಣೋತ್ತರ ಧ್ರುವದ ರಾಯಭಾರಿತ್ವದಲಿ
ಮುಖ್ಯಮಂತ್ರಿಯು ಚಂದ್ರನಾಗಿರುವನೆ?

ಬಿಡುಗಡೆಯ ಸೌಭಾಗ್ಯ ಪಡೆದ ಬಾನಿನೊಳಿಂತು
ಶಾಂತಿ ಸಮದರ್ಶಿತ್ವ ತಂಪಿನಿರುಳು-
ಬಡವ ಬಲ್ಲಿದರೆನದೆ ಸಮತೆಯಲಿ ತಣಿಸಿಹುದು
ಸರ್ವರಿಗೂ ಸಮಪಾಲು ಬೆಳದಿಂಗಳು.
*****

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

This site uses Akismet to reduce spam. Learn how your comment data is processed.