ಭಾರತಕುಲಾವತಂಸ


ಕಾಲಪುರುಷರು ಧೈರ್‍ಯ ಸಾಲದಾಯಿತು ಇಂದು
ನಿನ್ನ ಕೊಂಡೊಯ್ಯುವೊಡೆ ಕೈ ನಡುಗಿತು;
ಉಕ್ಕಿನೆದೆ ಬಂಟನಿಗು ಕಂಟಕವನೊಡ್ಡುವರೆ
ಕವಡುಗಂಟಕ ವಿಧಿಯ ಎದೆಯುಡುಗಿತು!


ಭಾರತವಿಯತ್ತಳದಿ ವೈರಿಬಲದೆದುರಿನಲಿ
ಗುಡುಗು ಹಾಕಿದ ಗಂಡುಗಲಿಯು ನೀನು
‘ವೀರ ವಲ್ಲಭಭಾಯಿ ನಾಡಗುಡಿಯನು ಕಾಯಿ’
ಎಂದು ಮೊರೆದವು ಎಲ್ಲ ಗಿರಿಯ ಸಾನು!


ಇಂದಾರ ಕೇಳುವದು ಎಂದು ವಿಹ್ವಲಗೊಂಡು
ನೈರಾಶ್ಯದಲಿ ನಿಂದು ಭರತಮಾತೆ
ಅಷ್ಟ ದಿಗ್ಗಜಗಳಿಗೆ ಹಂಬಲಿಸಿ ಕೈಚಾಚಿ
ಅರಸುತಿಹಳಾ ತಾಯಿ ಶೋಕಭರಿತೆ.


ಭರತಭೂಮಿಯ ದಂಡೆಗಪ್ಪಳಿಸುತಿಹವಿಂದು
ಶೋಕಸಾಗರದೆದೆಯ ಬಲ್ದೆರೆಗಳು-
ಒಂದಾದರಿನ್ನೊಂದು ಬರುವ ವಜ್ರಾಘಾತ-
ಕೀಡಾಗಿ ನರಳುತಿದೆ ಜನದ ಬಾಳು.


ಧೀರ ಜವಹರ ಕೂಡ ಮಗುವಾಗಿ ಮರುಗಿಹನು
ನಮ್ಮ ಪಾಡನು ಬೇರೆ ತೋಡಬೇಕೆ?
ನೋಡನೋಡುತ ಬಂಡೆಗಲ್ಲಿಗಪ್ಪಳಿಸುತಿರೆ
ಉರುಳಿ ಹೊರಳಾಡದೆಯ ರಾಷ್ಟ್ರನೌಕೆ?


ನ್ಯಾಯನಿಷ್ಠುರ ಧರ್‍ಮದಸ್ತಿವಾರದಿ ರಾಜ್ಯ
ರಂಗವನು ನಿರ್‍ಮಿಸಿದ ಚತುರ ನೀನು,
ರಾಜಕೀಯಕು ಸಾಜಮಾದ ತೇಜವ ತಂದ
ವೀರವಿಲಸತ್ಪ್ರಭೆಯ ದಿವ್ಯ ಭಾನು!


ರಾಜ್ಯ ಸಾಮ್ರಾಜ್ಯಗಳ ಗಳಿಸಿ ಉರುಳಿಸಬಹುದು
ನಾಡಕಟ್ಟುವ ಚಮತ್ಕೃತಿಯೆ ಬೇರೆ,
ಪರಪೀಡೆಗೆಡೆಗೊಡದೆ ಸ್ವಾರಾಜ್ಯಕಣಿಗೊಂಡ
ಸೇನಾಧಿಪತ್ಯವದು ದೊಡ್ಡ ಹೋರೆ,


ಈವರೆಗು ಬಾಗದೆಯೆ ನಾಡ ಕಾಪಾಡಿದೊಲು
ಎದೆಗೊಟ್ಟು ನಿಲ್ಲುವೊಲು ನಮ್ಮ ಹೆಮ್ಮೆ
ಸಾಹಸಕೆ ಅನುಗೊಳಿಸು ಬೀಸು ದೋರ್‍ದಂಡವನು
ಮತ್ತೆ ಮಾರ್‍ಮೊಳಗಲಿದೆ ನಾಡ ಹಿರಿಮೆ.


ಆ ಮಹಾತ್ಮನ ಸತ್ಯ ರತ್ನದೀವಿಗೆ ಹಿಡಿದು
ನಾಡನೆಮ್ಮದಿಗೊಳಿಸಿದಮರ ವ್ಯಕ್ತಿ-
ದಿಟ್ಟತನದೀ ಅಟ್ಟಹಾಸದಲಿ ಮೆರೆದ ಛಲ
ಎಂದಿಗೂ ಕಾಪಿಡಲಿ ಭೀಮಶಕ್ತಿ!

೧೦
ವೀರಭಾರತ ಕುಲಾವತಂಸನವ, ಬಲ್ಲಿದರ
ಬಲ್ಲಹಂ, ನಾಳ್ಗಾಹಿ ಶ್ರೇಯಾಂಶಿತ-
ಅವನ ಮೇಲ್ಮೆಯನರಿತು ನಾಡನುನ್ನತಿಗೊಳಿಪ
ಕೈದೀಪವಾಗು ಓ ಅಧಿದೈವತ!
*****