ಅರ್ಥವಾಗದವರು

…..ಕುಮಾರಿ ವಸಂತ,
“ಕಳೆದ ವರ್ಷದ ಕಾಲೇಜ್ ಮ್ಯಾಗ್‌ಝಿನ್‌ನಲ್ಲಿ ನಿಮ್ಮ ಕಥೆ ‘ಅರ್ಥವಾಗದವರು’ ಓದಿದೆ. ನಿಜಕ್ಕೂ ಆ ಕಥೆ ಬಹಳ ಸೊಗಸಾಗಿದೆ, ಅರ್ಥಪೂರ್ಣವಾಗಿದೆ. ಸಾಮಾನ್ಯವಾಗಿ ಕಾಲೇಜಿನ ಮೆಟ್ಟಿಲನ್ನು ತುಳಿದಾಕ್ಷಣದಿಂದ ನಿಮ್ಮಗಳ ಲೋಕ ವಿಸ್ತಾರವಾಗಿ ಬಣ್ಣದ ಪ್ರಪಂಚಕ್ಕೆ ಬಹುಬೇಗ ಮಾರುಹೋಗಿ, ಆ ಲೋಕದಲ್ಲಿಯೇ ತೇಲುತ್ತಿರುತ್ತೀರ. ಅಂತಹುದರಲ್ಲಿ ನೀವು ಕಲ್ಪನೆಗೆ ಶರಣಾಗದೆ ತೀರಾ ವಾಸ್ತವವಾದ ಕಥೆಯೊಂದನ್ನು ಬರೆದಿರುವುದು ನೋಡಿ ನನಗೆ ಆಶ್ಚರ್ಯದ ಜೊತೆಗೆ ಸಂತೋಷವೂ ಆಯಿತು.

ನಿಮ್ಮ ಕಥಾನಾಯಕನಂತೆಯೇ ನಾನೂ ಪ್ರೀತಿ, ಪ್ರೇಮಗಳಲ್ಲಿ ನಂಬಿಕೆ ಇಟ್ಟಿಲ್ಲ.I hಚಿಣe iಣ. ಈ ರೀತಿಯ ಪ್ರೀತಿ, ಪ್ರೇಮಗಳು ನಮ್ಮ ಸ್ವಾತಂತ್ರ್ಯವನ್ನು ಕಸಿಯುವುದಕ್ಕಾಗಿಯೇ ಇವೆ ಎಂದು ನನ್ನ ಭಾವನೆ. ನನ್ನ-ನಿಮ್ಮ ಭಾವನೆಗಳು ಒಂದೇ ರೀತಿಯಿರುವುದರಿಂದ ನೀವು ನನಗೆ ಉತ್ತಮ ಗೆಳತಿಯಾಗುವುದರಲ್ಲಿ ಸಂದೇಹವಿಲ್ಲ.

ಬಾಂಬೆಯಲ್ಲಿನ ಯಾಂತ್ರಿಕ ಜೀವನದಿಂದ ಬೇಸತ್ತು ಹತ್ತುದಿನಗಳ ರಜೆ ಹಾಕಿ ಹಳ್ಳಿಗೆ ಹೋದಾಗ ನಿಮ್ಮ ಕಥೆ ನನಗೆ ತಂಗಿಯ ಮೂಲಕ ದೊರೆಯಿತು. ಈಗ ನೀವು ಕಾಲೇಜಿನಲ್ಲಿನ ಶಿಕ್ಷಣವನ್ನು ಮುಗಿಸಿ ಸರ್ಕಾರಿ ನೌಕರಿಯಲ್ಲಿದ್ದೀರ ಎಂದು ತಿಳಿಯಿತು.

ನನಗಂತೂ ನಿಮ್ಮ ಸ್ನೇಹದ ಅವಶ್ಯಕತೆ ಇದೆ. ನಿಮಗೆ ನನ್ನ ಮನೋಭಾವ ಹಿಡಿಸುವುದಾದರೆ ನೀವು ನನಗೆ ಪತ್ರ ಬರೆದು, ನಿಮ್ಮ ಅಭಿರುಚಿ, ಅಭ್ಯಾಸ-ಹವ್ಯಾಸಗಳನ್ನು ತಿಳಿಸಿ….”

ಪತ್ರವನ್ನೊಮ್ಮೆ ಆಶ್ಚರ್ಯದಿಂದಲೇ ಓದಿ, ಪತ್ರದ ಕೆಳಭಾಗದಲ್ಲಿ ನೋಡಿದೆ. ಮನೋಹರ ಎಂದು ಸಹಿ ಮಾಡಲಾಗಿತ್ತು. ಜೊತೆಯಲ್ಲಿಯೇ ಬಾಂಬೆಯಲ್ಲಿನ ತನ್ನ ಆಫೀಸಿನ ವಿಳಾಸವನ್ನು ಬರೆದಿದ್ದ.

ಓದಿದ ಪತ್ರವನ್ನೇ ಮೂರುಬಾರಿ ಓದಿದ ನಂತರ ಸಂದರ್ಭ ತಿಳಿದು ನನಗೆ ಸ್ವಲ್ಪ ಸ್ವಲ್ಪವಾಗಿ ಸಂತೋಷವಾಗತೊಡಗಿತು. ಇದುವರೆಗೂ ನನ್ನ ಕಥೆಗಳನ್ನು ಓದಿದ್ದವರೆಲ್ಲರೂ ಕೇವಲ ಪ್ರೋತ್ಸಾಹಿಸುವುದಕ್ಕಾಗಿ ‘ಪರವಾಗಿಲ್ಲ, ಕಥೆ ಸುಮಾರಾಗಿದೆ, ಬರೆಯುತ್ತಲೇ ಇರು, ಬೆಳೆಯುತ್ತೀಯ’ ಎನ್ನುತ್ತಿದ್ದರು. ಆದರೆ ನಾನು ಕಥೆ ಬರೆಯುತ್ತಿದ್ದೆ ಎಂಬ ಅಂಶವೇ ಮರೆತುಹೋಗಿರುವಾಗ ಪ್ರಥಮ ಬಾರಿಗೆ ಅಪರಿಚಿತರೊಬ್ಬರು ಮೂರು ವರ್ಷಗಳ ಹಿಮ್ದೆ ಬರೆದ ಕಥೆಯೊಂದನ್ನು ಓದು ಮೆಚ್ಚಿ ಪತ್ರ ಬರೆದು ಸ್ನೇಹ ಬಯಸಿದಾಗ ನನ್ನ ಬಗ್ಗೆಯೇ ಹೆಮ್ಮೆ ಎನಿಸಿತು. ಎಲ್ಲಕ್ಕಿಂತ ಹೆಚ್ಚಾಗಿ ನನ್ನನ್ನು ಸಂತೋಷಪಡಿಸಿದ ವಿಷಯ ಮನೋಹರ ಐ.I.ಅ.ಯಲ್ಲಿ ಂಜmiಟಿisಣಡಿಚಿಣive ಔಜಿಜಿಛಿeಡಿ ಆಗಿ ನನಗಿಂತಾ ಸಾವಿರ ರೂ.ಗಳನ್ನು ಹೆಚ್ಚಾಗಿ ಪಡೆಯುತ್ತಿರುವುದು.

ಮನೋಹರನಿಗೆ ಪತ್ರ ಬರೆಯಬೇಕೇ ಬೇಡವೇ ಎಂಬ ತೊಳಲಾಟ ಶುರುವಾಯಿತು. ಬಾಂಬೆಯ ತುಂಬಾ ಮೋಸಗಾರರೇ ಇರುತ್ತಾರೆಂದು ನನ್ನ ನಂಬಿಕೆ. ಏನೂ ತೀರ್ಮಾನಿಸಲಾಗದೆ ಸುಚಿತ್ರಳ ಬಳಿ ಹೋದೆ. ಸುಚಿತ್ರಾ ಪತ್ರವನ್ನು ಓದಿದವಳೇ ಅಪರಾಧಿಯಂತೆ ತಲೆ ತಗ್ಗಿಸಿ ನಿಂತಿದ್ದ ನನಗೆ-

ನಿನಗೆ ಮನೋಹರ ಗೊತ್ತಾ? ಅವನಿಗೆ ನೀನು ಗೊತ್ತಾ? ಮನೋಹರನಿಗೆ ನಿನ್ನ ಆಫೀಸಿನ ವಿಳಾಸವನ್ನು ಕೊಟ್ಟವರು ಯಾರು? ‘ಅರ್ಥವಾಗದವರು’ ಕಥೆ ನೀನೇ ಬರೆದೆ ಅಂತ ಅವನಿಗೆ ಹೇಗೆ ಗೊತ್ತಾಯ್ತು? ಎಂದು ಒಂದೇ ಬಾರಿಗೆ ಹಲವಾರು ಪ್ರಶ್ನೆಗಳನ್ನು ಹಾಕಿದಳು. ಅವಳ ಎಲ್ಲಾ ಪ್ರಶ್ನೆಗಳಿಗೂ ‘ಗೊತ್ತಿಲ್ಲಾ’ ಎಂಬುದೇ ನನ್ನ ಉತ್ತರವಾಗಿತ್ತು.

ಸುಚಿತ್ರ “ಸರಿ, ಯಾವನೋ ಗೊತ್ತು ಗುರಿ ಇಲ್ಲದವನು ಪತ್ರ ಬರೆದ ಅಂತ ನೀನ್ಯಾಕೆ ಇದಕ್ಕಿಷ್ಟೊಂದು ತಲೆ ಕೆಡಿಸಿಕೊಂಡಿದ್ದೀಯಾ? ಪತ್ರವನ್ನು ಕಸದಬುಟ್ಟಿಗೆ ಎಸೆದು ಬಾಽಽ” ಎಂದು ಗದರಿದಾಗ ಪೆಚ್ಚಾಗಿ ಅವಳ ಹಿಂದೆ ಹೊರಟೆ.

ಮಧ್ಯಾಹ್ನ ಊಟ ಮಾಡುವಾಗಲೂ ಮನೋಹರನ ವಿಷಯವೇ ತಲೆಯಲ್ಲಿ ಇತ್ತು. ನಾನು ಪೆಚ್ಚಾಗಿರುವುದನ್ನು ಕಂಡಾಗ ಸುಚಿತ್ರಳಿಗೆ ಅಯ್ಯೋ ಅನ್ನಿಸಿರಬೇಕು. ಆದರೆ ಗುರುತು ಪರಿಚಯವಿಲ್ಲದ ವ್ಯಕ್ತಿಗೆ ಪತ್ರ ಬರೆಯಬೇಕೆಂದು ಅವಳಿಗೆ ಅನ್ನಿಸಲಿಲ್ಲ. ಜೊತೆಗೆ ಮನೋಹರ ಸ್ನೇಹ ಬೆಳೆಸಲು ಕೊಟ್ಟ ಕಾರಣವೂ ಸಮರ್ಪಕವೆನಿಸಲಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ಅವನ ಉದ್ಯೋಗದ ಬಗ್ಗೆಯೇ ಅವಳಿಗೆ ಅಪನಂಬಿಕೆಯಾಗಿತ್ತು. ಆದರೆ ನಾನು ಈ ವಿಷಯವನ್ನು ತಲೆಗೆ ಅಂಟಿಸಿಕೊಂಡು ಪೆಚ್ಚಾಗಿ ಕುಳಿತದ್ದನ್ನು ಕಂಡು, ‘ವಸಂತ ನಿನಗೆ ಇಷ್ಟವಿದ್ದರೆ ಪತ್ರ ಬರೆದುಬಿಡು’ ಎಂದಳು. ನನಗೂ ಸುಚಿತ್ರ ಅಷ್ಟು ಹೇಳಿದ್ದೇ ಸಾಕಾಗಿತ್ತು. ಕೂಡಲೇ “ಸುಚಿ, ನನಗಂತೂ ಪತ್ರ ಬರೆದರೂ ಏನೆಂದು ಬರೆಯಬೇಕೆಂದು ತಿಳಿಯುವುದಿಲ್ಲ. ಆದ್ದರಿಂದ ದಯವಿಟ್ಟು ನೀನೇ ಪತ್ರ ಬರೆದುಕೊಡು” ಎಂದು ಅಂಗಲಾಚಿದೆ.

ಸುಚಿತ್ರ “ಅದನ್ನೂ ನಾನೇ ಹೇಳಿಕೊಡಬೇಕಾ? ಮನೋಹರ ಪತ್ರ ಬರೆದಿರುವುದು ನಿನಗೊ? ನನಗೊ?” ಎಂದು ಹಾಸ್ಯಮಾಡಿ “ತಮಾಷೆಯಾಗಿ” ಪತ್ರ ಬರೆಯುತ್ತೇನೆ, ನೋಡು:

“ಪ್ರಿಯ ಮನೋಹರ್

ಈ ಕೆಳಗಿನ ಪ್ರಶ್ನೆಗಳಿಗೆ ಸರಿಯಾದ ಉತ್ತರ ನೀಡಿ.

೧) ನಿಮ್ಮ ನಿಜವಾದ ನಾಮಧೇಯವೇನು?
೨) ನಿಮ್ಮ ಉದ್ಯೋಗದ ಮೂಲಕ ನೀವು ನಾಲ್ಕಂಕಿ ಪಗಾರವನ್ನು ನಿಜಕ್ಕೂ ತರುವವರೆ?
೩) ನಿಮ್ಮ ವಯಸ್ಸೇಷ್ಟು?
೪) ನಿಮಗೆ ಮದುವೆಯಾಗಿದೆಯೇ?
೫) ನಿಮಗೆ ನನ್ನ ವಿಷಯ, ಆಫೀಸಿನ ವಿಳಾಸ ತಿಳಿದ ಬಗೆ ಹೇಗೆ? ನಿಮ್ಮ ತಂಗಿ ಯಾರು? ಹೆಸರೇನು?

ಈ ಮೇಲಿನ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಬೇಕು. ಉತ್ತರ ಸಮರ್ಪಕವಾಗಿಯಷ್ಟೇ ಅಲ್ಲ, ಸತ್ಯವೂ ಆಗಿರಬೇಕು. ಬುದ್ಧಿವಂತಿಕೆಯ ಹಾಗೂ ಬಳಸು ಉತ್ತರಗಳಿಗೆ ಅಂಕಗಳನ್ನು ನೀಡಲಾಗುವುದಿಲ್ಲ. ನೀವು ಮೇಲಿನ ಐದೂ ಪ್ರಶ್ನೆಗಳನ್ನು ಸರಿಯಾಗಿ ಉತ್ತರಿಸಿ. ಪ್ರತಿಯೊಂದು ಪ್ರಶ್ನೆಗೂ ಇಪ್ಪತ್ತು ಅಂಕದಂತೆ ಐದು ಪ್ರಶ್ನೆಗಳಿಗೆ ನೂರು ಅಂಕಗಳನ್ನು ಇಡಲಾಗಿದೆ. ತಪ್ಪು, ಜಾರಿಕೆಯ ಉತ್ತರಗಳಿಗೆ ಅಂಕಗಳನ್ನು ಕಳೆಯಲಾಗುವುದು” ಎಂದು ಬರೆದಳು.

ಈ ರೀತಿಯ ಪತ್ರ ಬರೆಯುವುದಾಗಲೀ, ಓದಿಯಾಗಲೀ ನನಗೆ ಗೊತ್ತಿಲ್ಲ. ಈ ಪತ್ರ ಹೊಸ ರೀತಿಯಲ್ಲಿ ಚೆನ್ನಾಗಿದೆ ಎನ್ನಿಸಿತು. ಸುಚಿತ್ರಾ ಹೇಳಿದ್ದೆಲ್ಲಾ ಸರಿಯಾಗಿಯೇ ಇರುತ್ತದೆ ಎಂದೇ ನನ್ನ ನಂಬಿಕೆ. ಆದ್ದರಿಂದ ಅದೇ ರೀತಿ ಬರೆಯಲು ಕುಳಿತಾಗ ಸುಚಿತ್ರ ಜೋರಾಗಿ ನಕ್ಕುಬಿಟ್ಟಳು. ಆತ್ಮೀಯವಾಗಿ ತನ್ನ ಕೈಯನ್ನು ನನ್ನ ಬೆನ್ನ ಮೇಲಿಟ್ಟು,

“ವಸಂತಾ, ನೀನು ತುಂಬಾ ಪೆದ್ದಿ, ನಿನಗೇ ಪತ್ರ ಬರೆಯಲು ಬಿಟ್ಟರೆ ಅಸಂಬದ್ಧವಾಗಿ ಬರೆಯುತ್ತೀಯ ಎಂಬಹೆದರಿಕೆ ನನಗಿದೆ. ಆದ್ದರಿಂದ ನಾನೇ ಪತ್ರ ಬರೆದು ಕೊಡುತ್ತೇನೆ” ಎಂದು ಹೇಳಿ ಅವಳ ಟೇಬಲ್ಲಿನ ಹತ್ತಿರ ಕುಳಿತು ಏನನ್ನೋ ಬರೆದು ಸ್ವಲ್ಪ ಹೊತ್ತಿನಲ್ಲಿಯೇ ನನ್ನ ಬಳಿಗೆ ಬಂದಳು. ನಾನು ಆ ಪತ್ರವನ್ನೆತ್ತಿಕೊಂಡು ಕೃತಜ್ಞತಾಭಾವದಿಂದ ಓದತೊಡಗಿದೆ.

“ಶ್ರೀ ಮನೋಹರ್,
ಬಹುಶಃ ನೀವು ನನ್ನ ಕಥೆಯನ್ನು ಓದು ಮೋಸಹೋಗಿರುವಂತಿದೆ. ನಾನು ಕಾಲೇಜಿನಲ್ಲಿ ಓದುತ್ತಿದ್ದಾಗ, ಸಾಮಾನ್ಯವಾಗಿ ಎಲ್ಲಾ ಕಾಲೇಜಿನ ತರುಣಿಯರು ಬರೆಯುವಂತೆ ಪ್ರೇಮಕಥೆಗಳನ್ನು ಬರೆಯಬಾರದು; ಎಲ್ಲರಿಗಿಂತಾ ಆ ಕಥೆ ವಿಭಿನ್ನವಾಗಿರಬೇಕೆಂದು, ಪ್ರೀತಿ-ಪ್ರೇಮವೆಂದರೆ ಯಾವ ಕಾರಣವೂ ಇಲ್ಲದೆ ದ್ವೇಷಿಸುವ, ತಿರಸ್ಕರಿಸುವ ಯುವಕನೊಬ್ಬನ ಕಥೆ ಬರೆದಿದ್ದೆ. ಆ ಕತೆಯನ್ನು ನೀವೀಗ ಇಷ್ಟಪಟ್ಟಿದ್ದೀರಿ. ನಿಜ ಹೇಳಬೇಕೆಂದರೆ ನಾನು ಬರೆದುದು ಬರೇ ಕಥೆ. ಈ ಕಥೆಯಲ್ಲಿನ ಯುವಕನ ಅಥವಾ ನಿಮ್ಮಂತಹ ವ್ಯಕ್ತಿಗಳ ಪ್ರೇಮದ ಬಗೆಗಿನ ಪೊಳ್ಳು ತಿರಸ್ಕಾರವನ್ನೇ ನಾನು ತಿರಸ್ಕರಿಸುತ್ತೇನೆ. ಎಲ್ಲ ವ್ಯಕ್ತಿಗಳೂ ಒಂದಲ್ಲಾ ಒಂದು ರೀತಿಯಯಲ್ಲಿ ಪ್ರೀತಿಯ ಬಂಧನದಲ್ಲಿ ಒಳಗಾಗಿರುತ್ತಾರೆಂದೇ ನನ್ನ ಭಾವನೆ.

ನೀವು ನನ್ನ ಸ್ನೇಹವನ್ನು ಬಯಸಿದ್ದೀರ. ಆದರೆ ನಾನು ಸಾಮಾನ್ಯರಲ್ಲಿ ಸಾಮಾನ್ಯ ಹೆಣ್ಣು. ಎಲ್ಲರಂತೆ ಜೀವನದಲ್ಲಿ ನನಗೂ ಆಸೆ, ಆಕಾಂಕ್ಷೆಗಳಿವೆ. ಸುಖವಾದ ಜೀವನವನ್ನು ನಡೆಸಬೇಕೆಂಬ ಹಂಬಲವಿದೆ. ನನ್ನ ಅಭಿರುಚಿ, ಅಭ್ಯಾಸ, ಹವ್ಯಾಸಗಳನ್ನು ಕೇಳಿದ್ದೀರಿ. ನನ್ನ ಅಭಿರುಚಿ ಇರುವುದು ಡಿಶೂಂ ಡಿಶೂಂ ಸಿನಿಮಾಗಳ ಬಗ್ಗೆ, ಅಭ್ಯಾಸ ಅತಿಯಾಗಿ ತಿನ್ನುವುದು: ಹವ್ಯಾಸ ಪೆದ್ದುಪೆದ್ದಾಗಿ ಮಾತನಾಡುವುದು.

ನೀವು ನನ್ನಕಥೆ ಓದಿ ನಾನು ಬುದ್ಧಿವಂತಳಿರಬಹುದು; ಕಥೆ ಬರೆಯುವುದರಿಂದ ಪ್ರತಿಭಾವಂತಳಾಗಿರಬಹುದು ಎಂದೆಲ್ಲಾ ಕಲ್ಪಿಸಿರುತ್ತೀರಿ. ಆದರೆ ನಾನು ಪಿ.ಯು.ಸಿ. ಮತ್ತು ಬಿ.ಎ. ಎರಡರಲ್ಲಿಯೂ ಒಂದೊಂದು ವರ್ಷ ಫೇಲಾಗಿದ್ದೇನೆ. ಇನ್ನು ಕಥೆಯನ್ನು ಓದಿ ಪ್ರತಿಭಾವಂತಳೆಂದುಕೊಂಡಿರುವುದು ನಿಮ್ಮ ತಪ್ಪು. ನಾನೆಷ್ಟು ಕಷ್ಟಪಟ್ಟು ಆ ಕಥೆ ಬರೆದೆ ಗೊತ್ತಾ? ಆ ಕಥೆಯೊಂದಕ್ಕೇ ನನ್ನಲ್ಲಿದ್ದ ವಿಷಯಗಳು, ಪದಗಳೆಲ್ಲಾ ಮುಗಿದುಹೋದವು. ಹೊಸದಾಗಿ ಏನನ್ನಾದರೂ ಬರೆಯಬೇಕೆಂದುಕೊಂಡರೆ ತಲೆಯೆಲ್ಲಾ ಖಾಲಿ! ನನ್ನ ಕಥೆ ಮೊದಲು ಅಷ್ಟೊಂದು ಚೆನ್ನಾಗಿರಲಿಲ್ಲ. ಆದರೆ ನಮ್ಮ ಕಾಲೇಜಿನ ವಿದ್ಯಾರ್ಥಿ-ಸಂಪಾದಕಿ ಕಥೆಯನ್ನು ತಿದ್ದಿ ಓದಿದವರು ‘ಕಥೆ ಚೆನ್ನಾಗಿದೆ’ ಎಂದು ಹೇಳುವಷ್ಟರ ಮಟ್ಟಿಗೆ ರೂಪಿಸಿದಳು.

ಇನ್ನು ನನ್ನ ಬಗ್ಗೆ ಹೇಳಬೇಕೆಂದುಕೊಂದರೆ ನನ್ನ ತಾಯಿ ಮತ್ತು ತಮ್ಮ ಮೈಸೂರಿನಲ್ಲಿದ್ದಾರೆ. ನಾನು ಓದಿದ್ದೇಲ್ಲಾ ಮೈಸೂರಿನಲ್ಲೇ. ನಾನು ಆದಾಯ ತೆರಿಗೆ ಇಲಾಖೆಯಲ್ಲಿ ಟೈಪಿಸ್ಟ್ ಕೆಲಸದಲ್ಲಿರುವುದು ನಿಮಗೆ ಗೊತ್ತೇ ಇದೆ. ಇದಿಷ್ಟೇ ನನ್ನ ವಿಷಯ. ನಾನು ಇದುವರೆಗೂ ಯಾರಿಗೂ ಪತ್ರಗಳನ್ನು ಬರೆದಿಲ್ಲ. ಯಾವುದನ್ನು ಬರೆಯಬೇಕು, ಯಾವುದನ್ನು ಬರೆಯಬಾರದೆಂಬುದರ ಅರಿವಿಲ್ಲದೆಯೇ ಬರೆದಿದ್ದೇನೆ. ಆದರೆ ಹೇಳಬೇಕೆನಿಸಿದ್ದೆಲ್ಲವನ್ನೂ ಹೇಳಿದ್ದೇನೆಂಬ ಸಮಾಧಾನ ನನಗಿದೆ.

ಅಂತೂ ನಿಮ್ಮ ನಿರೀಕ್ಷೆಗೆ ವಿರುದ್ಧವಾಗಿದ್ದೇನೆ. ಆದ್ದರಿಂದ ನಿಮ್ಮ ಮುಂದಿನ ಪತ್ರವನ್ನು ನಿರೀಕ್ಷಿಸುವುದು ಸರಿಯಲ್ಲವೇನೋ ಅಲ್ಲವೆ? ಪತ್ರ ಮುಗಿಸಲೆ….?”

ಪತ್ರ ಓದಿ ಮುಗಿಸಿದ ನನಗೆ ಸುಚಿತ್ರಳ ಮೆಲೆ ಕೆಟ್ಟಕೋಪ ಬಂದು, “ಪಾಪಿ, ಈ ರೀತಿ ಪತ್ರ ಬರೆದರೆ ಮನೋಹರ ಮತ್ತೊಮ್ಮೆ ಉತ್ತರಿಸುವನೆ? ಈ ರೀತಿ ಕೆಟ್ಟ ಪತ್ರ ಬರೆಯುವುದಾದರೆ ಅವನಿಗೆ ಉತ್ತರ ಬರೆಯುವುದೇ ಬೇಡ” ಎಂದೆ.

ಸುಚಿತ್ರ “ಅಂತೂ ಸಾಹಸಪಟ್ಟು ನೋಡಿದ ಸಿನಿಮಾ, ಓದಿದ ಕಥೆಗಳನ್ನೆಲ್ಲಾ ಜ್ಞಾಪಿಸಿಕೊಂಡು ಬರೆದ ಪತ್ರವನ್ನು ನೀನು ಚೆನ್ನಾಗಿಲ್ಲ ಅನ್ನುತ್ತಿದ್ದೀ. ಸರಿ ವಸಂತಾ, ನಾನು ಬರೆದದ್ದೆನೂ ಚೆನ್ನಾಗಿಲ್ಲ. ನಿನಗೆ ನಿಜವಾಗಿಯೂ ಯೋಗ್ಯತೆ ಇದ್ದರೆ ಇದಕ್ಕಿಂತ ಉತ್ತಮವಾದ ಪತ್ರವನ್ನು ಬರೀ ನೋಡೋಣ” ಎಂದು ಸವಾಲು ಹಾಕಿದಳು. ಈ ಪತ್ರಕ್ಕಿಂತ ಉತ್ತಮವಾದುದಿರಲಿ, ಕಳಪೆಯಾಗಿ ಬರಿ ಎಂದರೂ ನನಗೆ ಬರೆಯಲು ಸಾಧ್ಯವಾಗುತ್ತಿರಲಿಲ್ಲ. ನನ್ನ ಬರವಣಿಗೆ ಎಂದೋ ಎಲ್ಲೋ ಮಾಯವಾಗಿತ್ತು. ಆದ್ದರಿಂದ ಸುಚಿತ್ರ ಬರೆದುಕೊಟ್ಟ ಪತ್ರವನ್ನು ನನ್ನ ಕೈ ಬರಹದಲ್ಲಿ ಬರೆದು ಕೊನೆಯದಾಗಿ ‘ನಿಮ್ಮ ಬಗ್ಗೆ ತಿಳಿಯಲು ನನಗೆ ಕುತೂಹಲವಿದೆ. ನಿಮ್ಮ ವಿಷಯವಾಗಿ ಏನನ್ನಾದರೂ ಬರೆಯಿರಿ’ ಎಂದು ಸುಚಿತ್ರಳಿಗೆ ತಿಳಿಯದಂತೆ ಸೇರಿಸಿ ಆ ಪತ್ರವನ್ನೇ ವಿಧಿಯಿಲ್ಲದೆ ಪೋಸ್ಟ್ ಮಾಡಿದೆ.

ಪೋಸ್ಟ್ ಮಾಡಿದ ಒಂದು ವಾರ ಆತಂಕದಿಂದ, ಮನೋಹರ ಏನು ಉತ್ತರ ಕೊಡುವನೋ ಎಂಬ ನಿರೀಕ್ಷೆಯಿಂದ ಕಾದಿದ್ದೆ. ಆದರೆ ಒಂದು ವಾರವಿರಲಿ, ಒಂದು ತಿಂಗಳಾದರೂ ಮನೋಹರನಿಂದ ಉತ್ತರ ಬಾರದಿದ್ದಾಗ ನನಗೆ ಬಹಳ ನಿರಾಶೆಯಾಯಿತು. ಸುಚಿತ್ರ ಹೇಳಿದ ರೀತಿ ಬರೆದಿದ್ದರಿಂದಲೇ ಅವನು ಪತ್ರ ಬರೆಯಲಿಲ್ಲ. ಇನ್ನೆಂದೂ ಜೀವನದಲ್ಲಿ ಸುಚಿತ್ರಳ ಮಾತಿನ ರೀತಿ ನಡೆಯುವುದಿಲ್ಲ ಎಂದು ಶಪಥ ಮಾಡಿದೆ. ನನ್ನ ಸಿಟ್ಟು ಕಂಡು ಸುಚಿತ್ರಾ, “ ಗುರುತು ಪರಿಚಯವಿಲ್ಲದ ಒಬ್ಬ ವ್ಯಕ್ತಿ ಪತ್ರ ಬರೆದ ಕಾರಣಕ್ಕಾಗಿ ಸ್ವಲ್ಪ ಆತ್ಮೀಯತೆಯಿಂದ ಸ್ನೇಹ ಬಯಸಿದ್ದಕ್ಕೇ ನೀನು ಅಷ್ಟೇ ಸಾಕೆಂದು ಮನೋಹರ ಜನ್ಮಜನ್ಮಗಳ ಗೆಳೆಯನೇನೋ ಎಂಬಂತೆ ವರ್ತಿಸುತ್ತಿರುವುದನ್ನು ಕಂಡು ನನಗೆ ಕನಿಕರವಾಗುತ್ತಿದೆ. ಇಷ್ಟಕ್ಕೂ ನೀನು ಕಳೆದುಕೊಂಡಿರುವುದಾದರೂ ಏನು?” ಎಂದು ನಕ್ಕಳು.
*
*
*
ವಸಂತಳ ಈ ಪತ್ರವನ್ನು ನಾನು ಓದಿ ಮುಗಿಸಿದ್ದು ಬಹುಶಃ ಇದು ನೂರನೇ‌ಎಯ ಬಾರಿ ಇರಬಹುದು. ನನ್ನ ಇಷ್ಟು ವರ್ಷದ ಬದುಕಿನಲ್ಲಿ ಯಾರನ್ನೂ ಸ್ನೇಹಿತರನ್ನಾಗಿ ಮಾಡಿಕೊಳ್ಳಲು ಹೋಗಲಿಲ್ಲ. ಸ್ನೇಹ ಬಯಸಿ ಬಂದವರನ್ನೆಲ್ಲಾ ನನ್ನ ಒಂಟಿತನವನ್ನೂ, ಎಷ್ಟು ಬೇಕೋ ಅಷ್ಟು ಮಾತ್ರ ಮಾತನಾಡುವುದನ್ನೂ ಕಂಡು ರೋಸಿ ಹೊರಟು ಹೋಗಿದ್ದರು. ಹಾಗೆ ನನ್ನ ಜೊತೆಗೆ ಉದ್ದಕ್ಕೂ ಬಂದವರು ತಂಗಿ ರತ್ನ ಮತ್ತು ತಮ್ಮ ರಂಗನಾಥ ಇಬ್ಬರೇ.

ಸುಮಾರು ದಿನಗಳಿಂದಲೂ ನನಗೆ ಒಬ್ಬ ಗೆಳೆಯ ಅಥವಾ ಗೆಳತಿಯ ಅವಶ್ಯಕತೆಯಿದೆ ಎಂದುಕೊಳ್ಳುತ್ತಿರುವಾಗಲೇ ಯಾರದೋ ಮನೆಯಿಂದ ರತ್ನ ಓದಲು ನನಗೆಂದು ತಂದಿದ್ದ ಪುಸ್ತಕಗಳ ಜೊತೆಗೆ ವಸಂತಳ ಕಾಲೇಜ್‌ಮ್ಯಾಗಝಿನ್ ಸೇರಿತ್ತು. ನಾನೂ ಓದಿದ್ದು ಮೈಸೂರಿನಲ್ಲಿಯೇ ಅಲ್ಲವೆ ಎಂದುಕೊಂಡು ಆ ಪುಸ್ತಕ ತೆರೆದಾಗ ವಸಂತಳ ಕಥೆ ಕಣ್ಣಿಗೆ ಬಿತ್ತು. ಓದಿದ ನಂತರ ಹುಡುಗಿ ಸ್ವಲ್ಪ ವೈಚಾರಿಕತೆಯಿಂದ ಬರೆದಿದ್ದಾಳೆನಿಸಿ ಅವಳೇ ಏಕೆ ನನ್ನ ಗೆಳತಿಯಾಗಬಾರದು? ಪ್ರಯತ್ನಿಸಿ ನೋಡೋಣ. ಹೇಗಿದ್ದರೂ ಅವಳು ನನ್ನ ರೀತಿಯ ಮನೋಭಾವದವಳೇ ತಾನೇ ಎಂದುಕೊಂಡು ಮೈಸೂರಿಗೆ ಬಂದಾಗ ನನ್ನ ಪರಿಚಯದ ಲೆಕ್ಚರರ್ ಮೂಲಕ ವಸಂತಳ ವಿಳಾಸ ಗಿಟ್ಟಿಸಿಕೊಂಡು ಪತ್ರ ಬರೆದಿದ್ದೆ. ವಸಂತಳೂ ಸಾಕಷ್ಟು ಉದ್ದದ ಪತ್ರ ಬರೆದಿದ್ದಳು. ಪತ್ರ ಬರೆದಿರುವ ರೀತಿ ನೋಡಿದರೆ ಹುಡುಗಿ ಬಹಳ ಮುಗ್ಧೆ ಇರಬಹುದು ಗಂಭೀರೆಯೂ ಆಗಿರಬಹುದು ಎನಿಸಿತು. ಸ್ನೇಹಕ್ಕಾಗಿ ನಾನು ಬಯಸಿ ಬರೆದರೆ, ವಸಂತ ಸ್ನೇಹದ ವಿಷಯವನ್ನು ಬಿಟ್ಟು ಮಿಕ್ಕೆಲ್ಲಾ ಪುರಾಣ ಬರೆದಿದ್ದಾಳೆ. ಬಹುಶಃ ಅವಳಿಗೆ ನಾನು ಇಷ್ಟವಾಗದೇ ಹೋಗಿರಬಹುದು ಎಂದುಕೊಂಡು ಪತ್ರದ ಜೊತೆಗೆ ಮೊದಲನೆಯ ಪತ್ರ ಪುಸ್ತಕಗಳ ಮಧ್ಯೆ ಸಿಕ್ಕಿದಾಗ ವಸಂತಳಿಗೆ ಏನಾದರೂ ಬರೆಯಲೇಬೇಕೆನಿಸಿತು. ಆದರೆ ಈಗಾಗಲೇ ಅವಳಿಗಾಗಿ ಬರೆದಿಟ್ಟಿದ್ದ ಐದೂ ಪತ್ರಗಳನ್ನು ಪೋಸ್ಟ್ ಮಾಡದೇ ನನ್ನಲ್ಲಿಯೇ ಇಟ್ಟುಕೊಂಡಿದ್ದೆ. ಆದದ್ದಾಗಲಿ ಎಂದುಕೊಂಡು ಪತ್ರ ಬರೆಯಲು ಪ್ರಾರಂಭಿಸಿದೆ.

“ವಸಂತ,

ನಿಮ್ಮ ಕಾಗದಕ್ಕೆ ಧನ್ಯವಾದಗಳು.

ಆದರೆ ಅದರಿಂದ ನನಗೆ ಭಯಂಕರ ನಿರಾಶೆ‌ಉಂಟಾಯಿತು. ನನ್ನ ಇಪ್ಪತ್ತೆಂಟು ವರ್ಷದ ಬದುಕಿನಲ್ಲಿ ಯಾರ ಮುಂದೆಯೂ ಸ್ನೇಹಕ್ಕಾಗಿ ಅಂಗಲಾಚಿ ಛಿommiಣ ಆಗಿರಲಿಲ್ಲ. ಪ್ರಪ್ರಥಮ ಬಾರಿಗೆ ನಿಮ್ಮ ಮುಂದೆ ಛಿommiಣ ಆಗಿ ಸೋತೆ! ನನ್ನ ಜೊತೆ ಸ್ನೇಹ ಬಯಸುತ್ತೇನೆ ಎಂದವರಿಗೆಲ್ಲಾ ನನ್ನ ನಕಾರಾತ್ಮಕ ಉತ್ತರ ನಿರಾಶೆ ತಂದಿತು. ಈಗ ಅದರ ತಿರುಗುಬಾಣ!

ಮತ್ತೆ ನೀವು ಮೈಸೂರಿನವರೆಂದು ತಿಳಿದು ಮತ್ತಷ್ಟು ಖುಷಿಯಾಯಿತು. ಕಾರಣ, ನಾನು ಓದಿದ್ದು ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಇದ್ದದ್ದು ಮಹಾರಾಜ ಕಾಲೇಜ್ ಹಾಸ್ಟೆಲ್‌ನಲ್ಲಿ. ಮೈಸೂರಿನ ಸಾಲುಮರಗಳ ರಸ್ತೆಗಳು ನನಗೆ ಬಹಳ ಪರಿಚಯ. ನನ್ನ ವ್ಯಕ್ತಿತ್ವ ರೂಪುಗೊಂಡಿದ್ದೇ ಮೈಸೂರಿನಲ್ಲಿ. ನಾನು ಬಿ.ಎ. ಮಾಡಿದಾಗ ಆ ವರುಷ ನಮ್ಮ ಕಾಲೇಜಿಗೆ ಐದು ರ್‍ಯಾಂಕುಗಳು ಬಂದವು. ಅದರಲ್ಲಿ ಪ್ರಥಮ ರ್‍ಯಾಂಕು ನನ್ನದು. ನನಗೆ ಮೂರು ಚಿನ್ನದ ಪದಕಗಳು. ಸಾಕು. ನನಗೆ ಬೇಸರವಾಗುತ್ತಿದೆ. ಬಹುಶಃ ಹೇಳಿಕೊಳ್ಳುತ್ತಿರುವುದು ನಿಮ್ಮ ಮುಂದೆಯೇ. ಅದೂ ನಿಮ್ಮ ಗೆಳತಿ ಸುಚಿತ್ರಾ ನನ್ನ ಬಗ್ಗೆ ಅನುಮಾನ ವ್ಯಕ್ತಪಡಿಸುತ್ತಿದ್ದಾಳೆಂದು ನೀವೀಗ ಬರೆದಿದ್ದುದರಿಂದ ಹೇಳಿದ್ದಷ್ಟೆ!

ಬಿ.ಎ. ಮುಗಿದ ಮೇಲೆ ರಾಜ್ಯಶಾಸ್ತ್ರ ಮುಗಿಸಿಕೊಂಡು ಎಂ.ಎ. ಗೆ ಸೇರಿದೆ. ಮೊದಲನೆಯ ವರ್ಷ ಮುಗಿಸಿದೆ. ನಾನು ಆರ್ಥಿಕವಾಗಿ ಮುಕ್ತನಾಗಬೇಕೆಂಬ ಅನಿಸಿಕೆ ಬಹಳವಾದ್ದರಿಂದ ಮತ್ತು ನನ್ನ ಕುಟುಂಬ ಅಷ್ಟೇನೂ ಒಳ್ಳೆಯ ಆರ್ಥಿಕ ಮಟ್ಟದಲ್ಲಿ ಇಲ್ಲದ್ದರಿಂದ ನಾನು ಅನಿವಾರ್ಯವಾಗಿ ಅಂಚೆ ಕಛೇರಿಯಲ್ಲಿ ಗುಮಾಸ್ತನಾದೆ. ಒಂದು ವರ್ಷದ ನಂತರ ಮೈಸೂರು ಬ್ಯಾಂಕಿನಲ್ಲಿ ಕ್ಯಾಷಿಯರ್ ಆದೆ. ಆರು ತಿಂಗಳ ನಂತರ ಡಿವಿ‌ಓ ಆದೆ. ಸ್ಟೇಟ್ ಗೌರ್‍ನಮೆಂಟ್‌ನಲ್ಲಿನ buಡಿeಚಿuಛಿಡಿಚಿಛಿಥಿ ಮತ್ತು ಣಚಿಠಿism ನನಗೆ ಅಸಹ್ಯವಾದ್ದರಿಂದ ಈಗ ಇನ್‌ಶೂರೆನ್ಸ್‌ನಲ್ಲಿ ಇದ್ದೆನೆ. ಇಲ್ಲೂ ಅದೇ ಖಾಯಿಲೆ. ಬದುಕಲಿಕ್ಕೆ ಎಲ್ಲವನ್ನೂ ಅರಗಿಸಿಕೊಳ್ಳಬೇಕಲ್ಲ.

ಸಾಹಿತ್ಯದ ಬಗ್ಗೆ ನನಗೆ ಬಹಳ ಹುಚ್ಚು. ಆದರೆ ನೈಜ ಬದುಕಿಗೆ ಕಾಲಿರಿಸಿದ ಮೇಲೆ ನನಗೆ ಸಾಹಿತ್ಯಕ್ಕೂ, ಸಾಹಿತಿಗಳಿಗೂ ಬದುಕಿಗೂ ಬಹಳ ಅಂತರವಿದೆ ಎನಿಸಿತು. ನಾನೂ ಬರೆಯುತ್ತಿದ್ದೆ. ನನ್ನ ಬರಹ ನನಗೇ ತೃಪ್ತಿ ಕೊಡಲಿಲ್ಲವಾದ್ದರಿಂದ I sಣoಠಿಠಿeಜ. ನನ್ನ ಮೇಲೆ ಪ್ರಭಾವ ಬೀರಿದ ಸಾಹಿತಿಗಳು ಕುವೆಂಪು, ಕಾರಂತ್, ಲಂಕೇಶ, ಭೈರಪ್ಪ, ಅನಂತಮೂರ್ತಿ, ಕಾಮು, ಎಲಿಯಟ್. ಓಹ್! ಕ್ಷಮಿಸಿ ಏನೇನೋ ಬರೆದುಬಿಟ್ಟೆ. ಬಹುಶಃ ಇವರುಗಳ ಹೆಸರುಗಳನ್ನೆಲ್ಲಾ ನೀವಿನ್ನೂ ಕೇಳಿಲ್ಲ ಎಂದೇ ನನ್ನ ಭಾವನೆ!

ಮರೆತೆ. ನನ್ನ ಜಾತಿಯ ಬಗ್ಗೆ ನಿಮಗೆ ಕುತೂಹಲವಿರಬೇಕಲ್ಲಾ? ನಿಮಗಲ್ಲದಿದ್ದರೂ ನಿಮ್ಮ ಗೆಳತಿಗಾಗಿ ಹೇಳುತ್ತಿದ್ದೇನೆ. ನನ್ನದು ಹೆಸರೇ ಇಲ್ಲದ ಜಾತಿ! ನೂರೆಂಟು ಕಡೆ ನೂರೆಂಟು ಹೆಸರು ಈ ಜಾತಿಗೆ. ಜೋಷಿ, ಸಿದ್ಧರು, ಬಲಜಿಗರು, ಭೈರಾಗಿ ಹೀಗೆ ಮುಂತಾದುವು. ಸಾಮಾಜಿಕ ಸ್ತರದಲ್ಲಿ ಇದಕ್ಕಿರುವ ಸ್ಥಾನ miಜಜಟ oಡಿಜeಡಿ…. ಆ ಬಗ್ಗೆ ಬರೆಯಲು ನನಗೆ ಮುಜಗರ, ಅಸಹ್ಯ, ನಿಮ್ಮ ಹಾಗೆ, ಅಂದರೆ ಕಥೆಯಲ್ಲಿನ ಯುವಕನ ಹಾಗೆ ನಾನು ಹುಚ್ಚು ಆದರ್ಶನಗಳ ಹೊಳೆಯಲ್ಲಿ ತೇಲಿ, ಮುಳುಗಲು ಯತ್ನಿಸಿದವನು. ಆಮೇಲೆ ಆದರ್ಶಗಳು ಜೀವನದರ್ಶನವನ್ನು ನೈಜಗೊಳಿಸಲಾರವು ಎಂದು ತಿಳಿದೆ. ‘ಬದುಕು’-ಎಂಬುದರ ಬಗ್ಗೆ ತಲೆ ಕೆಡಿಸಿಕೊಂಡು ಉತ್ತರ ಹುಡುಕಿದೆ. ಉತ್ತರ ಬಲ್ಲ ವ್ಯಕ್ತಿಗಳನ್ನು ಹುಡುಕಿದೆ. ಸಿಗಲೇ ಇಲ್ಲ. ಹಾಗಾಗಿ ಖಿhe ಒಥಿಣh oಜಿ Sಥಿsiಠಿhus ಹಾಗೆಯೇ ಉಳಿದುಬಿಟ್ಟಿದೆ… ಸ್ಪೆಷಲ್ಲಾಗಿ ಮನಃಶಾಸ್ತ್ರ ಓದಿದೆ. ಅಲ್ಲೂ ಸಿಕ್ಕಿದ್ದು ಇxisಣiಟಿg ಊumಚಿಟಿ ಃehಚಿviouಡಿ ಅಷ್ಟೆ! ಆ ಮಿತಿಗೆ ನಾನು ಒಳಗಾದೆ. ಕೊನೆಗೆ ಅನ್ನಿಸಿದ್ದು ಜeಚಿಣh is ಣhe oಟಿಟಥಿ ಡಿeಚಿಟiಣಥಿ ಎಂದು. ಆ ಬಗ್ಗೆ ಹೆಚ್ಚಿಗೆ ಹೇಳಲಾರೆ….

ನನ್ನ ಮದುವೆಯ ಬಗ್ಗೆ ನಿಮ್ಮ ಗೆಳತಿಗೇಕಂತೆ ಕೆಟ್ಟ ಕುತೂಹಲ? ನನ್ನ ಮದುವೆಯ ಬಗೆಗಿನ ಈ ಪ್ರಶ್ನೆ ನಿಮ್ಮದೊ? ಸುಚಿತ್ರಾ ಅವರದ್ದೊ? ಮದುವೆಯ ವಯಸ್ಸು ನನಗೆ ಮೀರುತ್ತಿದೆಯಾದರೂ ನಾನು ಆ ಬಗ್ಗೆ ಸೀರಿಯಸ್ ಆಗಿಲ್ಲ. ನನ್ನ ಹುಚ್ಚು ಮನಸ್ಸಿಗೂ ಆ ಮದುವೆ-ಹೆಂಡತಿ ಮಕ್ಕಳ ಮಿತಿಗೂ ಬಹಳ ಅಂತರ ಎನಿಸುತ್ತದೆ. ಮದುವೆ ನನ್ನ ಸ್ವಾತಂತ್ರ್ಯವನ್ನು ನುಂಗಿಹಾಕುತ್ತದೆ ಎನ್ನುವ ಭಯ ನನಗೆ. ಸಾಯಬೇಕು ಎನ್ನುವ ಸ್ವತಂತ್ರ ಮನಸ್ಸು ನನ್ನಲ್ಲಿರಬೇಕು. ಮದುವೆ ಆದವ ಈ ರೀತಿ ಯೋಚಿಸಲೂ ಅನರ್ಹ ಊe is ಛಿhಚಿiಟಿeಜ ಅಲ್ವಾ?

ಇನ್ನು ಕಥೆಯ ಬಗ್ಗೆ ಹೇಳುವುದಾದರೆ ನೀವು ನಿಮ್ಮ ಆದರ್ಶಕ್ಕೆ ರೆಕ್ಕೆ ಪುಕ್ಕ ಹಚ್ಚಿ ಕಥೆ ಮಾಡಿ ನನಗೆ ಬಡಿಸಿದ್ದು ಬಹಳ ತಪ್ಪು. ನಿಮ್ಮ ಆದರ್ಶಗಳು ಈಗಷ್ಟೇ ಹುಟ್ಟಿಕೊಂಡು ‘shಚಿಠಿe’ಗಾಗಿ ಹುಡುಕುತ್ತಿದೆ. ನೀವು ಬದುಕಿನಲ್ಲಿ ‘ಪಕ್ವ’ಗೊಂಡ ಹಾಗೆ ನೀವೂ ಒಬ್ಬ ಸಾಮಾನ್ಯ ಸಂಪ್ರದಾಯಬದ್ಧ, ಚಿನ್ನ-ವಸ್ತ್ರಗಳ ಗೊಡ್ಡು ಗೃಹಿಣಿಯಾಗಿಯೇ, ಮಕ್ಕಳ ಲಾಲನೆ-ಪಾಲನೆಯೇ ದೊಡ್ಡದಾಗಿ ನೀವು ಬದುಕಿನ ಬಯಲಲ್ಲಿ ಕಳೆದುಹೋಗುವ ಭಯವೇ ಜಾಸ್ತಿ ನನಗೆ. ಏಕೆಂದರೆ ಹೀಗಾಗುವುದೇ ಹೆಚ್ಚು. ನಾನು ಎಲ್ಲೆಡೆ ಇದನ್ನೇ ನೋಡಿದ್ದೇನೆ. ಈ ನೇರ ಮಾತುಗಳಿಂದ ನಿಮಗೆ ಬೇಸರವಾಯಿತೆ? ನಾವು ಅಂದುಕೊಂಡಂತೆ ಬದುಕಿನ ಕೌಟುಂಬಿಕ, ಸಾಮಾಜಿಕ, ಮಾನಸಿಕ ಅಡೆತಡೆಗಳನ್ನು ಮೀರಿ ಹಾರುವ ಎದೆಗಾರಿಕೆ ಇರಬೇಕು.

ನೀವು ನನಗೆ ಒಳ್ಳೆಯ ಸ್ನೇಹಿತೆಯಾಗಬಹುದೆಂಬ ಭಾವನೆ ನನಗಿದೆ. ಒಂದು ಗಂಡು-ಹೆಣ್ಣು ಸ್ನೇಹಿತರಾಗುವುದಕ್ಕೆ ಸಾಧ್ಯವಿದೆ. ಅವರ ಸ್ನೇಹ, ಪ್ರೇಮ-ಕಾಮಗಳಲ್ಲಿ ತೊಡಗಿ ಪರ್ಯಾವಸಾನವಾಗಬೇಕೆಂಬುದೇನಿಲ್ಲ. I hಚಿಣe ಣhಚಿಣ. ಸ್ನೇಹ ಪ್ರೇಮವಾಗಿ, ಕಾಮವಾಗಿ ಸಾಯುವುದು ನನಗೆ ಬೇಕಿಲ್ಲ. ಅದಕ್ಕೆ ನನ್ನದು ನೇರ ಬದುಕು ನೇರವಾಗಿ ಹೇಳಬಲ್ಲೆ, ಕೇಳಬಲ್ಲೆ, ನಟಿಸಲಾರೆ….

ಇದು, ನನ್ನ ಜೀವನದ ಒಂದು ಕಣದ ಪರಿಚಯ. ನಿಮ್ಮ ಪರಿಚಯ?”

ಬರೆದ ಪತ್ರ ಬಹಳ ಉದ್ದವಾಯಿತೆನಿಸಿತು. ಆದರೂ ವಸಂತಳ ರೀತಿ ಹೇಳಬೇಕೆನಿಸಿದ್ದೆಲ್ಲವನ್ನೂ ಹೇಳಿದ ನಂತರ ಬಹಳ ದಿನಗಳಿಂದ ಕಳೆದು ಹೋಗಿದ್ದ ನೆಮ್ಮದಿ ದೊರಕಿತ್ತು.

ವಸಂತ ಪತ್ರ ಬರೆದಿರುವ ರೀತಿ ನೋಡಿದರೆ ಅವಳದು ಏನನ್ನೂ ಬಚ್ಚಿಡುವ ಸ್ವಭಾವವಲ್ಲ. ತನಗೇನು ಹೇಳಬೇಕು ಅನ್ನಿಸಿದೆಯೋ ಅದನ್ನೆಲ್ಲಾ ಹೇಳಿಬಿಟ್ಟಿದ್ದಾಳೆ. ನನಗೆ ಬೇಕಾದ್ದು ಈ ರೀತಿಯ ಬಿಚ್ಚು ಮನಸ್ಸಿನ ಸ್ನೇಹ ಮಾತ್ರ.

ಇತ್ತೀಚೆಗೆ ನನಗೆ ನನ್ನ ಮೇಲೆಯೇ ಬಹಳ ಆಶ್ಚರ್ಯವುಂಟಾಗುತ್ತಿದೆ. ಇಷ್ಟು ದಿನಗಳಿಂದಲೂ ನಾನು ಒಂಟಿಯಾಗಿಯೇ ಇದ್ದೆ. ಇನ್ನು ಮುಂದೆಯೂ ಹಾಗೇ ಇರುತ್ತೇನೆಂದುಕೊಂಡಿದ್ದೆ. ಆದರೆ, ವಸಂತಳನ್ನು ನೆನೆಸಿಕೊಂಡಾಕ್ಷಣ ಅವಳು ಶುದ್ಧ ಸ್ನೇಹ ನೀಡಬಹುದು ಎಂದು ಆಸೆಯಾಗುತ್ತದೆ. ವಸಂತಳ ಬಗ್ಗೆ ಸಾಕಷ್ಟು ಯೋಚಿಸಿ, ತಲೆ ಕೆಡಿಸಿಕೊಂಡಾಗ ಅನಾವಶ್ಯಕವಾಗಿ ನಾನಾಗಿಯೇ ಏನನ್ನೋ ಎದುರುಹಾಕಿಕೊಂಡಿರಬಹುದೆ? ಎನಿಸಿದರೂ, ನನ್ನ ಹತ್ತಿರ ಇದುವರೆಗೂ ಯಾವೊಬ್ಬ ಸ್ನೇಹಿತನೂ ಒಂದು ವರ್ಷಕ್ಕಿಂತ ಹೆಚ್ಚು ದಿನ ಉಳಿದಿಲ್ಲ. ಈ ವಸಂತ ಎಷ್ಟಿದ್ದರೂ ಸಾಮಾನ್ಯ ಕನಸಿನ ಹುಡುಗಿಯಾಗಿಯೇ ಇದ್ದು, ನನ್ನಿಂದ ಏನೆಲ್ಲಾ ಅಪೇಕ್ಷಿಸಿ ಕೊನೆಗೆ ನನ್ನ ಖಾಲಿತನವನ್ನು ಕಂಡು ಅವಳಾಗಿಯೇ ನಿರ್ಗಮಿಸಬಹುದು….ಪೋಸ್ಟ್ ಮಾಡುವುದೋ ಬೇಡವೋ ಎಂದು ಯೋಚಿಸಿ, ಕೊನೆಗೂ ಆದದ್ದಾಗಲಿ ಎಂದು ಪತ್ರವನ್ನು ಪೋಸ್ಟ್ ಮಾಡಿದೆ.

ಪತ್ರವನ್ನು ಪೋಸ್ಟ್ ಮಾಡಿದ ಮೇಲೆ ಯಾಕೋ ಬೇಸರವೆನಿಸಿತು. ನಾನ್ಯಾಕೆ ವಸಂತಳ ಸ್ನೇಹವನ್ನು ಇಷ್ಟೊಂದು ಅಪೇಕ್ಷೆ ಪಡುತ್ತಿದ್ದೇನೋ ಅರ್ಥವಾಗಲಿಲ್ಲ. ಆದರೆ ಪತ್ರ ಬರೆಯದೇ ಇದ್ದು, ಅವಳನ್ನು ಕಳೆದುಕೊಂಡುಬಿಟ್ಟರೆ? ಎಂಬ ಯೋಚನೆ ಬಂದಾಗ ಏನೋ ದೊಡ್ಡದನ್ನ ಸಾಧಿಸಿದಂತೆ ಹೆಮ್ಮೆಯಾಯಿತು. ಮರುಕ್ಷಣವೇ ಏನನ್ನೋ ಕಳೆದುಕೊಂಡು ಖಾಲಿಯಾದ ಹಾಗೆನಿಸಿ ಪೆಚ್ಚಾಯಿತು. ಅಮ್ಮನನ್ನು ಕಳೆದುಕೊಂಡಂತೆ ಅನುಭವವಾಯಿತು.

ಅಮ್ಮ ಎಂದೊಡನೆ ಹಳ್ಳಿ, ಅಮ್ಮ,ರತ್ನ, ರಂಗನಾಥ ಎಲ್ಲಾ ಜ್ಞಾಪಕಕ್ಕೆ ಬಂದರು ಈ ಕ್ಷಣವೇ ಓಡಿಹೋಗಿ ಅಮ್ಮನ ಭಾರವಾದ ಹಸ್ತದ ಹಿತವಾದ ಸ್ಪರ್ಶ ಹಣೆಯ ಮೇಲೆ ಪಡೆಯಬೇಕು ಎನಿಸಿತು. ಆದರೆ ಹಳ್ಳಿಗೆ ಹೋಗಲು ರಜೆ ಇಲ್ಲ ಎಂಬುದು ಜ್ಞಾಪಕಕ್ಕೆ ಬಂದೊಡನೆ ಹಠದಿಂದೆಂಬಂತೆ ಅವರೆಲ್ಲ ನನ್ನ ಮನಸ್ಸಿನ ಮೇಲೆ ಹೆಚ್ಚು ಬಲವಾಗಿ ಮೂಡತೊಡಗಿದರು. ಏನೂ ಮಾಡಲಾರದೆ ಮೈಯೆಲ್ಲಾ ಪರಚಿಕೊಳ್ಳಬೇಕೆನಿಸಿತು.

ನನಗೆ ಯಾವಾಗಲೂ ಹಾಗೆ! ಆ ಕ್ಷಣಕ್ಕೆ ಯಾವ ಕೆಲಸ ಆಗುವುದಿಲ್ಲವೋ ಅದು ಬಲವಾಗಿ ದಾಳಿಮಾಡಿ ನನ್ನನ್ನು ಹಿಂಸಿಸುತ್ತದೆ. ಆ ಹಿಂಸೆ ತಡೆಯಲಾರದೆ ನಾನು ರೂಮಿನಲ್ಲಿದ್ದಾಗ ನನ್ನಷ್ಟಕ್ಕೆ ನಾನೇ ಎದುರಿಗೆ ನನಗೆ ಬೇಕೆನಿಸಿದವರೊಡನೆ, ಅವರು ಎದುರಿಗೆ ಇದ್ದಾರೇನೋ ಎಂಬಂತೆ ಜೋರಾಗಿ ಮಾತನಾಡುತ್ತಿದ್ದೆ. ಅಮ್ಮನ ಜೊತೆ, ರತ್ನಳ ಜೊತೆ ಅಥವಾ ರಂಗನಾಥನ ಜೊತೆ ಈ ರೀತಿ ನಾನೊಬ್ಬನೇ ನನ್ನ ಕಷ್ಟ-ಸುಖ ಹೇಳಿಕೊಂಡಾಗ ನನಗೆ ಸಿಗುವ ನೆಮ್ಮದಿ ಆಪಾರ.

ನನ್ನ ಬದುಕಿನ ರೀತಿ ಬೆಳೆದು ಬಂದಿದ್ದು ಎಲ್ಲವನ್ನೂ ಈಗಲೇ ಸ್ಪಷ್ಟವಾಗಿ ಮನಸ್ಸಿನ ಮೆಲೆ ಮೂಡಿಸಿಕೊಳ್ಳುತ್ತಿದ್ದೆ. ಏಕೆಂದರೆ ಮುಂದಿನ ಪತ್ರದಲ್ಲಿ ವಸಂತಾ ಖಂಡಿತಾವಾಗಿಯೂ ನನ್ನಿಂದ ಹೆಚ್ಚಿನ ವಿವರಗಳನ್ನು ಬಯಸುತ್ತಾಳೆ. ಅವಳಿಗೆ ನನ್ನೆಲ್ಲಾ ವಿಷಯ ಹೇಳಬೇಕಾದ್ದು ಹೇಳಬಾರದ್ದು ಎಲ್ಲಾ ಹೇಳಿಕೊಂಡುಬಿಡಬೇಕು ಎಂದುಕೊಳ್ಳುವಾಗ ಮನಸ್ಸಿಗೆ ಒಂಥರಾ ಖುಷಿಯಾಗಿ, ಇದುವರೆಗೂ ಕಾಣದಿದ್ದ ವಸಂತಳ ಜೊತೆ ಮಾನಸಿಕವಾಗಿ ಸಂಭಾಷಿಸತೊಡಗಿದೆ…..

ವಸಂತಾ, ನನ್ನೂರು ಮೈಸೂರು ಅಲ್ಲ, ಹುಟ್ಟಿದ್ದು ಕೆಂಗಲ್ ಹನುಮಂತಯ್ಯ ಅವರು ಕಟ್ಟಿಸಿದ ಹನುಮಂತರಾಯನ ದೇವಸ್ಥಾನದ ಹಿಂದೆ ಇರುವ ಒಂದೇ ಬೀದಿಯ ಸಣ್ಣ ಹಳ್ಳಿಯಲ್ಲಿ. ನಾನು ನಾಲ್ಕು ವರ್ಷದವನಿದ್ದಾಗ ನಾವೆಲ್ಲರೂ ಹಾಸನ ಜಿಲ್ಲೆಯ ಹತ್ತಿರವಿರುವ ಹಳ್ಳಿಗೆ ಬಂದು ನೆಲೆಸಿದೆವು. ನಾನು ಮಣ್ಣಿನೊಂದಿಗೆ, ಮಳೆಯೊಂದಿಗೆ, ಕಲ್ಲುಗಳೊಂದಿಗೆ, ಗಿಡಗಳೊಂದಿಗೆ, ಪ್ರಾಣಿಗಳೊಂದಿಗೆ, ಜನರೊಂದಿಗೆ ಚಿರಪರಿಚಿತನಾಗಿ ಬೆಳೆದಿದ್ದು ಈ ನಮ್ಮ ಹಳ್ಳಿಯಲ್ಲಿಯೇ. ಪಿ.ಯು.ಸಿ.ವರೆಗೆ ಹಾಸನದಲ್ಲಿ ಓದಿ ಡಿಗ್ರಿ ಮೈಸೂರಿನಲ್ಲಿ ಮುಗಿಸಿದೆ. ಈ ಮೈ ನಮ್ಮ ಹಳ್ಳಿಯದು, ಈ ಮನಸ್ಸು ಮೈಸೂರಿನದು. ಈಗ ಈ ಮೈ ಮನಸ್ಸುಗಳು ಬಾಂಬೆಯಲ್ಲಿ ಮುರುಟಿಗೋಗುತ್ತಿವೆ. ಇಲ್ಲಿನ ಯಾಂತ್ರಿಕತೆಯಲ್ಲಿ ನಾನು ನಾಶವಾಗುವ ಮುನ್ನ ಇಲ್ಲಿಂದ ಓಡಿಬಿಡಬೇಕು….ಓಡುತ್ತಲೇ ಇರಬೇಕು. ಆದರೆ ಅನಿವಾರ್ಯವಾಗಿ ಬದುಕಲೇಬೇಕಾದ್ದರಿಂದ ಹಾಗೂ ಹೀಗೂ ದಿನ ತಳ್ಳುತ್ತಿದ್ದೇನೆ.

ವಸಂತಾ…. ನಿನ್ನ ಸ್ನೆಹ ನನಗೆ ಸಿಕ್ಕಿರುವುದು ನನಗೆ ಹೆಮ್ಮೆ. ಇದು ಸತ್ಯ! ಲೈಂಗಿಕವಾಗಿ ದೇಹವನ್ನಷ್ಟೇ ದುಡಿಸುವ ಸ್ನೇಹಕ್ಕಿಂತ ಮನಸ್ಸನ್ನೇ ಉತ್ತುಬಿತ್ತು, ಒಮ್ಮೊಮ್ಮೆ ಹಸಿರು ಬೆಳೆದು, ಬೇಸಿಗೆಯಲ್ಲಿ ಬರಡಾಗಿಸುವ ಸ್ನೇಹವೇ ಹೆಚ್ಚು ಇಷ್ಟ ನನಗೆ. ಗೊತ್ತು ಬರಡಾದರೂ ಸಹಾ ಬೇಸಿಗೆ ಹೋಗಿ ಮಳೆಗಾಲ ಬಂದೇ ಬರುತ್ತದೆಂಬ ಅನಿವಾರ್ಯ ಸತ್ಯ. ಅದಕ್ಕೆ ನನಗೆ ಮಳೆಯೂ ಬೇಕು, ಬೇಸಿಗೆಯೂ ಬೇಕು. ಹಸಿರೂ ಬೇಕು, ಬರಡೂ ಬೇಕು! ಇವೆರಡರ ಫಲವೇ ನಾನು….ಮನೋಹರ!

ನನ್ನ ಮನೆಯವರನ್ನು ನಿನಗೆ ಪರಿಚಯಿಸೋಣ ಎನ್ನಿಸಿದೆ. ಶುರುಮಾಡಲೇ? ಅಮ್ಮ ಸುಮಾರು ೬೫ ವರ್ಷದ ಸಣಕಲಿ. ಅಮ್ಮನಿಗೆ ಏನೂ ಗೊತ್ತಿಲ್ಲ. ಸರಿಯಾಗಿ ಸುಸಂಬದ್ಧವಾಗಿ ಮಾತನಾಡಲಿಕ್ಕೂ ಬಾರದು. ಆದರೆ ತನ್ನ ಮಟ್ಟದವರಿಗಿಂತಾ ಕಿಲಾಡಿ. ನನ್ನ ಬಗ್ಗೆ ತುಂಬಾ ಪ್ರೀತಿ. ನಾನು ಒಂದು ತಿಂಗಳು ಮನೆಗೆ ಹೋಗದಿದ್ದರೆ ಅಳಲಿಕ್ಕೆ ಶುರು ಮಾಡ್ತಾರೆ. ತುಂಬಾ ಗಡಿಬಿಡಿಯ ಅವಸರದ ಹೆಂಗಸು ನಮ್ಮಮ್ಮ. ನನಗೂ ಅದೇ ಬುದ್ಧಿ. ಎಲೆ, ಅಡಿಕೆ ಚಟ. ಸಿನಿಮಾ ಚಟ, ನೋಡಿದ ಸಿನಿಮಾವನ್ನೇ ಗೊತ್ತಿಲ್ಲದೇ ಮತ್ತೆ ಮತ್ತೆ ನೋಡ್ತಾರೆ. ಅದೇ ರೀತಿ ಅನಾಗರಿಕ ಹಳ್ಳಿ ಹೆಂಗಸು. ನಾನು ಹೇಳಿದ ಹಾಗೆ ಕೇಳುತ್ತಾರೆ.

ಅಮ್ಮನಿಗೆ ತಿಂಡಿ ಮಾಡಲಿಕ್ಕೆ ಬರೊಲ್ಲ. ಭಯಂಕರ ದೋಸೆ ಮಾಡ್ತಾರೆ. ನಮ್ಮಮ್ಮ ರಂಗೋಲೆ ಕಲಿಯುವುದಕ್ಕೆ ಶುರುಮಾಡಿದ್ದು ಮೊನ್ನೆಮೊನ್ನೆ. ಅದೂ ನಾಲ್ಕು ಸೊಟ್ಟ ಗೆರೆಗಳು. ಕೆಲವೊಮ್ಮೆ ಆ ರಂಗೋಲಿ ನೋಡಿ ನಾನು ನಗೊಲ್ಲ. ಒಂಥರಾ ಬೇಜಾರಾಗಿ ಕಣ್ಣುತುಂಬಿಕೊಳ್ಳುತ್ತದೆ. ಏಕೆಂದರೆ, ಅಮ್ಮ ಹುಟ್ಟಿದ್ದು ಯಾವುದೋ ಒಂದು ಮರದ ಕೆಳಗೆ. ನಾನು ಹುಟ್ಟಿದ್ದ ೪ ವರ್ಷದವರೆಗೂ ನಾವು ಅಲೆಮಾರಿಗಳಾಗಿದ್ದೆವು. ನಮ್ಮ ಜನಾಂಗವೇ ಅಷ್ಟು. ಈಗಲೂ ಮನೆ, ಮಠ ಇಲ್ಲದೆ ಊರಿಂದ ಊರಿಗೆ ಅಲೆಯುತ್ತಾ ಹೋಗುತ್ತಾರೆ.

ಅಮ್ಮ ಬಹಳ ಕಷ್ಟಪಟ್ಟ ಹೆಂಗಸು. ಮದುವೆಯಾದಾಗ ಏಳು ವರ್ಷವಂತೆ. ಅಪ್ಪನಿಂದ, ಅಜ್ಜಿಯಿಂದ ನಮ್ಮಮ್ಮ ಬಹಳ ಕಷ್ಟಪಟ್ಟಿದ್ದಾರೆ. ನಾವು ಒಟ್ಟು ಹನ್ನೊಂದು ಜನ ಮಕ್ಕಳು. ಎಲ್ಲಾ ಹೋಗಿ ಆರು ಜನ ಇದ್ದೇವೆ. ಅನಾಗರಿಕ ಸಂಸ್ಕೃತಿಯಿಂದ ಬಂದವರು ಇದ್ದಕ್ಕಿದ್ದಂತೆ ಹೊಸ ಪ್ರತಿಷ್ಠಿತ ವಾತಾವರಣಕ್ಕೆ ಹೊಂದಿಕೊಳ್ಳಲಾರರು. ಈ ಕಾರಣಕ್ಕಾಗಿಯೇ ಕೆಲವೊಮ್ಮೆ ಸಿಟ್ಟಿನಿಂದ ಜಗಳವಾಡುತ್ತೇನೆ, ಬಯ್ಯುತ್ತೇನೆ. ಮತ್ತೊಮ್ಮೆ ಮಗುವಿನಂತೆ ಡ್ಯಾನ್ಸ್ ಮಾಡುತ್ತ ನಗಿಸುತ್ತೇನೆ. ನಮ್ಮಮ್ಮ ಬಹಳ ಜಿಪುಣಿ. ಎಲ್ಲಾ ಹಣ ಉಳಿಸಿ ನನಗೆ ಕೊಡುತ್ತಾರೆ. ಲೆಕ್ಕ ಹಾಕಲಿಕ್ಕೂ ಬಾರದ ಮುಗ್ಧೆ.

ಅಪ್ಪ ಅತ್ಯಂತ ಅನಾಗರಿಕ, ಕೊಳಕರು. ಎಂಬತ್ತೆರಡು ವರ್ಷದ ಅರಳು-ಮರಳಿನ ವಿಚಿತ್ರ ಮನುಷ್ಯ. ನಾನು ಹುಟ್ಟುವ ವೇಳೆಗೆ ಅವರು ಅರಳು-ಮರಳಿನ ಮುದಿತನಕ್ಕೆ ಕಾಲಿಟ್ಟಿದ್ದರು. ಬದುಕಿನಿಡೀ ಅವರನ್ನು ದ್ವೇಷಿಸುತ್ತಾ ಬೆಳೆದೆ ನಾನು. ಅಪ್ಪನಿಗೆ ಹೆಂಡ-ಹೆಣ್ಣು-ಹೊನ್ನು ಎಂದರೆ ಅಸಹ್ಯ ಚಟ. ಸದ್ಯ ಈಗ ಇಲ್ಲ! ಅವರೊಡನೆ ಈಗಲೂ ಯುದ್ಧ ಮಾಡುತ್ತೇನೆ. ಅವರಿಗೆ ಎಂಬತ್ತೆರಡು ವರ್ಷವಾಗಿದೆ ಎಂಬುದನ್ನು ಮರೆತು ನಾನು ಸಿಲ್ಲಿಯಾಗಿ ವರ್ತಿಸಿಬಿಡುತ್ತೇನೆ. ಏಕೆಂದರೆ ಅವರು ಸ್ವಚ್ಛಬಟ್ಟೆ ಹಾಕೊಲ್ಲ. ನಮ್ಮಮ್ಮ ಬಹಳ ಶುದ್ಧ. ಅಪ್ಪ ತದ್ವಿರುದ್ಧ. ಆದರೆ ಅವರು ನನ್ನ ಬಗ್ಗೆ ಪ್ರೀತಿ-ಅಭಿಮಾನ ಇಟ್ಟಿದ್ದಾರೆ. ಅಪ್ಪ ಅಮ್ಮ ಓದಿಲ್ಲ. ಆದರೆ ಜ್ಯೋತಿಷ್ಯ-ಯಂತ್ರ ಎಲ್ಲಾ ಮಾಡ್ತಾರೆ! ಹಣವನ್ನೂ ಮಾಡ್ತಾರೆ! ಎಲ್ಲಾ ಕಟ್ಟುಕತೆ ಬೂಟಾಟಿಕೆಯದು. ಬೇಡ ಎಂದರೆ ಬಿಡೋಲ್ಲ. ಈ ವಯಸ್ಸಿನಲ್ಲಿಯೂ ಅವರಿಗೆ ಮನೆ, ಜಮೀನು, ಗೊಬ್ಬರ, ತಿಪ್ಪೆ, ಸೌದೆ ಎಂದರೆ ಹುಚ್ಚು, ಭಯಂಕರ ಉತ್ಸಾಹ.

ಮೂವರು ಅಣ್ಣಂದಿರಿದ್ದಾರೆ, ಕುಡುಕರು, ಖದೀಮರು, ಕೆಟ್ಟಜನ. ನಾನು ಮನೆಯಲ್ಲಿರುವಾಗ ಯಾರೂ ಹತ್ತಿರ ಬರೊಲ್ಲ. ಅವರ ಕೆಟ್ಟ ಚಾಳಿಗಳನ್ನು ನೋಡಿ ದೂರವಿಟ್ಟಿದ್ದೇನೆ. ಪ್ರತಿವರ್ಷ ನಾಲ್ಕು ಎಕರೆ ಜಮೀನಿಗಾಗಿ ಅಪ್ಪನ ಜೊತೆ ಜಗಳ, ಹೊಡೆದಾಟ ಎಲ್ಲಾ ಮಾಡ್ತಾರೆ. ನಾನಂತೂ ಇದಕ್ಕೆಲ್ಲ ನಕ್ಕು ಸುಮ್ಮನಾಗಿಬಿಡುತ್ತೇನೆ.

ಮುಂದಿನ ವಿಷಯ, ಹೇಳಲು ಖುಷಿಯಾಗುವಂತಹದು. ಅದು ನನ್ನ ಒಬ್ಬನೇ ತಮ್ಮ ರಂಗನಾಥ್, ಒಬ್ಬಳೇ ತಂಗಿ ರತ್ನಳ ವಿಷಯ. ನನ್ನ ಬದುಕಿನ ಉತ್ಸಾಹದ ಚಿಲುಮೆಗಳೆಂದರೆ ಇವರಿಬ್ಬರೇ. ರಂಗನಾಥ ನನ್ನನ್ನು ಸಾಧ್ಯವಾದಷ್ಟು ಮಟ್ಟಿಗೆ ಅರ್ಥಮಾಡಿಕೊಂಡಿದ್ದಾನೆ. ಈಗ ಓದು ಮುಗಿಸಿರುವ ತರುಣ. ನನ್ನ ತಂಗಿ ರತ್ನ ಸಾಮಾನ್ಯ ಹಳ್ಳಿ ಹುಡುಗಿ. ಓದು ಬರಹ ಗೊತ್ತಿಲ್ಲದ ಸುಂದರ ಮುಗ್ಧ ಇಪ್ಪತ್ತು ವರ್ಷದ ತರುಣಿ. ಅಲ್ಲ ಮಗು!

ವಸಂತಾ ಈ ಎಲ್ಲಾ ಕಥೆ ಕೇಳಿ ಭಯವಾಯಿತೆ? ನಿನಗೆ ಭಯವಾಗಲಿ ಎಂದೇ ಹೇಳುತ್ತಿದ್ದೇನೆ. ನನ್ನಲ್ಲಿ ಇದಕ್ಕಿಂತ ಹೆಚ್ಚಿನ ಕ್ರೂರ ನೆನಪುಗಳಿವೆ, ಘಟನೆಗಳಿವೆ, ಅಪ್ಪ-ಅಣ್ಣಂದಿರು, ಈ ಪರಿಸರ, ನೆನಪುಗಳನ್ನು ನನ್ನಿಂದ ಉಚ್ಛಾಟಿಸಿ, ಕರಗಿಸಿ ಪ್ರೀತಿಸುವಂತಹ ಸಂಗಾತಿ ನನಗೆ ಬೇಕು. ಜೊತೆಗೆ ಈ ಎಲ್ಲಾ ಕೆಟ್ಟ ನೆನಪುಗಳು, ಸತ್ತ ಬದುಕಿನಲ್ಲಿ ಕಳೆದುಹೋದ ಆರು ಜನ ಅಕ್ಕಂದಿರ ಬವಣೆ, ನೋವು ಕಣ್ಣಾರೆ ಕಂಡ ಇವುಗಳು ನನ್ನಿಂದ ‘ಮದುವೆ’ ಎಂಬ ಶಬ್ದವನ್ನು ಕಿತ್ತುಕೊಂಡಿದೆ.

ಓಹ್! ನೀನು ಕಥೆಗಾರ್ತಿಯಲ್ಲವೆ? ವಸಂತಾ, ನಿನ್ನನ್ನು ನನಗೆ ಗೊತ್ತಿರುವ ನನ್ನ ಅನುಭವ ಲೋಕದಲ್ಲಿ ಕೈಹಿಡಿದು ಸುತ್ತಾಡಿಸಿಕೊಂಡು ಬರಬೇಕೆನ್ನಿಸಿದೆ. ಇದರಿಂದ ನೀನು ಇನ್ನೂ ಬೆಳೆಯುತ್ತೀಯ. ಜೀವನದ ವಿಚಿತ್ರ ಆಶ್ಚರ್ಯಗಳೆಲ್ಲಕ್ಕೂ ಅಕ್ಷರಗಳ ಮೂಲಕ ಮುಖಕೊಟ್ಟು ನನಗಿಲ್ಲದ ಆ ‘ಮಿತಿ’ಯನ್ನು ಮೀರಿ ಎತ್ತರವಾಗುತ್ತಿ. ಅದಕ್ಕೆಲ್ಲಾ ನಾನು ಹಾರೈಸುತ್ತಾ ನಿಂತುಬಿಡಬೇಕೆನ್ನಿಸುತ್ತಿದೆ. ನೀನಂದುಕೊಂಡಿರುವುದಕ್ಕಿಂತ ಅಸಹ್ಯವಾಗಿರುವ, ನೀಚವಾಗಿರುವ, ವಿಕಾರವಾಗಿರುವ ಜೀವಿಗಳ ಜೀವನದ ಎಲ್ಲಾ ಸ್ತರಗಳಲ್ಲಿಯೂ ಓಡಾಡು. ಆದರೆ ಒಂದು ಎಚ್ಚರಿಕೆ: ವಿಚಾರದ ಹೊಸ್ತಿಲನ್ನು ದಾಟುತ್ತಿರುವ ನೀನುಬದುಕಿನ ನಿಗೂಢತೆಯ ಬಗ್ಗೆ ಅರ್ಥ ಕಳೆದುಕೊಂಡ, ವಿಸ್ತಾರವಾದ ಸಹರಾ ಮರಳುಗಾಡಿನಲ್ಲಿ ನಿಂತುಬಿಟ್ಟ ತಹತಹಿಸುವ ದಿನಗಳು ಬಹಳ ದೂರವಿಲ್ಲವೆನಿಸುತ್ತದೆ…..ಈ ಬರಿದಾದ ಪ್ರಜ್ಞೆಯಲ್ಲಿ ಈ ವಿಶ್ವದ ಎಲ್ಲಾ ಪ್ರಜ್ಞೆಯನ್ನು ಕಳೆದುಕೊಂಡು ಶೂನ್ಯವನ್ನೆದುರಿಸುವ ಶಕ್ತಿ ನಿನಗಿದೆಯೆ? ಬೇಡ….ಹಾಗಾಗಬೇಡ, ನನ್ನ ಹಾಗೆ ಎಡಬಿಡಂಗಿಯಾಗಿ, ಜೀವನದಲ್ಲಿ ತೊಡಗಲಾರದೆ, ಸಾವಿನಲ್ಲಿ ಅದೃಶ್ಯವಾಗಲಾರದೆ, ಕತ್ತಲು-ಬೆಳಕುಗಳನ್ನು ನೋಡಲಾರದೆ, ಘರ್ಷಣೆಗಳಿಗೆ ಗೋರಿ ಕಟ್ಟಲಾಗದೆ ಅತಂತ್ರಜೀವಿಯಾಗಿಬಿಡುತ್ತಿ, ಬೇಡ ಮರಿ, ನೀನು ಹೀಗೆಲ್ಲಾ ಆಗಬೇಡ, ಮಗುವಿನ ರೀತಿಯೇ ಇರು.

ಇರಲಿ, ನೀನು ನಮ್ಮೂರಿಗೆ ಬಾ. ನಮ್ಮೆಲ್ಲರ ಸಮಾಜವನ್ನು ನೋಡು. ಆಗ ನಿನ್ನ ಲೇಖನಿಗೆ ಮತ್ತಷ್ಟು ಶಕ್ತಿ, ಬಂಡವಾಳ, ಗಟ್ಟಿತನ ಸಿಗುತ್ತದೆ. ವಸಂತಾ, ಬರೆಯಬೇಕು ನಿನ್ನನ್ನು ಬರೆ ನನ್ನನ್ನು ಬರೆ, ಎಲ್ಲವನ್ನೂ ಬರೆ, ಬರೆಯುತ್ತಲೇ ಇರು….
*
*
*
“ಅರೆ ಸುಚಿ, ನಾನು ನೆನೆಸಿದಂತೆಯೇ ಆಗಿದೆ. ನೋಡು. ಮನೋಹರನಿಗೆ ಮದುವೆಯೇ ಆಗಿಲ್ಲ. ಔh, ಒಥಿ ಉoಜ! ಎಂಥಾ ಸಿಹಿಯಾದ ಸುದ್ದಿ! ಅಯ್ಯೋ ಕಾಗೆ-ಪುಕ್ಕ ಅಂತೆಲ್ಲಾ ಬರೆದುಬಿಟ್ಟಿದ್ದಾನೆ. ಅರ್ಥಾನೇ ಆಗ್ತಾ ಇಲ್ಲ. ಸುಚಿ ಇರು ನಾನೊಂದು ಸರಿ ಸರಿಯಾಗಿ ಓದಿ, ನಿನಗೆ ಕೊಡ್ತೀನಿ. ದಯವಿಟ್ಟು ಓದಿ ಅರ್ಥ ಮಾಡಿಸಮ್ಮ” ಎಂದೆ. ಮನೋಹರ್ ಬರೆದ ಪತ್ರ ಅರ್ಥವಾಯಿತಾದರೂ ಒಟ್ಟಾರೆ ನನ್ನ ಬಗ್ಗೆ ಯಾವ ನಿಲುವು ತಳೆದಿದ್ದಾನೆ ಎಂಬುದೇ ತಿಳಿಯಲಿಲ್ಲ.

ಸುಚಿತ್ರ ಪತ್ರ ತೆಗೆದುಕೊಂಡು ಓದುತ್ತಾ ಹೋದಂತೆ ತೀರಾ ಗಂಭೀರಳಾದಳು. ಅಂತಹ ಸೀರಿಯಸ್ ಆದ ವಿಷಯವಾದರೂ ಇಲ್ಲೇನಿದೆ ಅಂತಲೇ ನನಗೆ ತಿಳಿಯಲಿಲ್ಲ. ಸುಚಿ ‘ಊಹುಂ’ ಎಂಬಂತೆ ತಲೆಯಲ್ಲಾಡಿಸಿ ಪತ್ರವನ್ನು ನನ್ನ ಕೈಗೆ ಕೊಟ್ಟು ಹೊರಟುಹೋದಳು. ಮದ್ಯಾಹ್ನ ಊಟ ಮಾಡುವ ಹೊತ್ತಿಗೆ ಮನೋಹರ ಬರೆದ ಪತ್ರದಲ್ಲಿನ ಪ್ರತಿಯೊಂದು ಸಾಲನ್ನೂ ತಪ್ಪದೆ ಹೇಳುವಂತಾಗಿದ್ದೆ.

ಸುಚಿತ್ರ “ವಸಂತಾ, ನನಗ್ಯಾಕೋ ಅನುಮಾನ, ಈ ಮನೋಹರನಿಗೆ ಕೇವಲ ಇಪ್ಪತ್ತೆಂಟು ವರ್ಷಗಳಷ್ಟೇನಾ ಅಂತ. ಯಾಕಂದ್ರೆ ನನಗೂ ಅಷ್ಟೇ ವಯಸ್ಸು. ಆದ್ರೆ ಅವನು ಸಾಕ್ರೆಟಿಸ್ ರೀತಿ ಬರೆದಿರುವುದನ್ನು ನೋಡಿದರೆ ಏನಿಲ್ಲಾಂದ್ರೂ ನಲ್ವತ್ತು-ಐವತ್ತು ವರ್ಷಗಳಿಗಿಂತಾ ಕಡಿಮೆ ಇರಲಾರದು. ನೋಡು, ಈ ಪತ್ರದಲ್ಲಿ ತನಗೆ ಮದುವೆಯಾಗಿಲ್ಲ, ಇಪ್ಪತ್ತೆಂಟು ವರ್ಷಗಳು ಮಾತ್ರ ತನಗೆ, ಜಾತಿಯಲ್ಲಿ ಕೆಳಮಟ್ಟದವನಾಗಿದ್ದರೂ ರ್‍ಯಾಂಕ್ ಬಂದಿದ್ದೇನೆ, ಅಂದರೆ ಬುದ್ಧಿವಂತ, ಜೊತೆಗೆ ತತ್ವಜ್ಞಾನಿ ಅಂತೆಲ್ಲಾ ತೋರಿಸೋಕೆ ಹೊರಟಿದ್ದಾನೆ. ತಾನು ದೊಡ್ಡವನು ಅಂತ ಬೇರೆ ತೋರಿಸಿದ್ದಾನೆ. ನಂಗ್ಯಾಕೋ ಈ ಪತ್ರ, ಮನೋಹರ್ ಇವೆಲ್ಲಾ ಇಷ್ಟಾನೇ ಆಗ್ತಿಲ್ಲ” ಎಂದಳು.

ಅವಳ ಮಾತಿಗೆ ನನಗೆ ಏನು ಉತ್ತರ ಕೊಡಬೇಕೆಂದೇ ತಿಳಿಯಲಿಲ್ಲ. ಆದರೆ ಸುಚಿತ್ರ ಹೇಳಿದಂತೆ ಆತ ಕೆಳಜಾತಿಯವನಲ್ಲ ಅನ್ನಿಸಿತು. ಅದಕ್ಕೆ ನಾನು “ಸುಚಿ, ಆತ ಜೋಶಿ ಅಂತ ಬರೆದಿದ್ದಾನಲ್ಲ. ಹಾಗಾದರೆ ಬ್ರಾಹ್ಮಣರು ಇರಬೇಕಲ್ವಾ?” ಅಂದೆ. ತಕ್ಷಣವೇ ಸುಚಿತ್ರ “ಇಲ್ಲ, ಸದ್ಯ ಹಾಗೆಂದುಕೊಂಡು ಬಲೆಗೆ ಬಿದ್ದುಬಿಡಬೇಡ. ಅವನು ಅಲೆಮಾರಿ ಜನಾಂಗದ ಹುಡುಗ. ಅಂದರೆ ಈ ‘ರಾಮಶಾಸ್ತ್ರವ ಹೇಳುವೆ ಕೇಳು’ ಅಂತ ಬೀದಿ ಬೀದಿ ಅಲೀತಾರಲ್ಲ ಅಂತಹವರ ಗುಂಪಿಗೆ ಸೇರಿದವನು. ಅಂತಹವನು ಮೊದಲನೆಯ ರ್‍ಯಾಂಕು ಬರುವುದಕ್ಕೆ ಸಾಧ್ಯವೆ? ಎಲ್ಲಾ ಸುಳ್ಳು” ಎಂದಳು.

ಸುಚಿತ್ರ ಅಷ್ಟು ಬಲವಾಗಿ ಹೇಳಿದರೂ, ಅವಳು ಹೇಳಿದ್ದನ್ನೆಲ್ಲಾ ಒಪ್ಪಿಕೊಳ್ಳಲು ನನಗೆ ಮನಸ್ಸಾಗಲಿಲ್ಲ. ಮತ್ತೆ ಈ ಪತ್ರಕ್ಕೆ ಉತ್ತರ ಬರೆದುಕೊಡು ಎಂದು ಕೇಳಲು ನನಗೆ ಸಂಕೋಚವಾಯಿತು. ಪ್ರಯತ್ನಪಟ್ಟರೆ ನಾನೇ ಮನೋಹರನಿಗೆ ಪತ್ರ ಬರೆಯಬಹುದು. ಅಷ್ಟಲ್ಲದೆ ನನಗೆ ಕಥೆ ಬರೆಯೋಕೆ ಬರ್‍ತಿತ್ತಾ? ಮನೋಹರ ಅದೆಷ್ಟು ಸೊಗಸಾಗಿದೆ ಎಂದು ಹೇಳಿಲ್ಲವೆ? ಮೂರು ವರ್ಷಗಳಿಂದ ಕಥೆಯಿರಲಿ, ಯಾರಿಗೂ ಪತ್ರ ಸಹ ಬರೆದಿಲ್ಲ. ಮನೋಹರನಿಗಾದರೂ ಈ ರೀತಿ ಪತ್ರಗಳನ್ನು ಬರೆಯುವುದರಿಂದ ಬರವಣಿಗೆಯನ್ನು ಮೈಗೂಡಿಸಿಕೊಳ್ಳಬೇಕು. ನಾನೇನು ಪೆದ್ದಿ ಅಲ್ಲ, ಆದರೆ ಬುದ್ಧಿವಂತಳಾಗುವುದಕ್ಕೆ ಪ್ರಯತ್ನ ಪಟ್ಟಿಲ್ಲ. ಹೌದು, ಮನೋಹರನಿಗೆ ಬರೆಯುವ ಪತ್ರವನ್ನು ಹೇಗೆ ಶುರುಮಾಡಬೇಕು? ಅವನು ಓದು, ಸಾಹಿತ್ಯ, ಮದುವೆ, ಜಾತಿ, ಬಡತನ ಎಲ್ಲದರ ಬಗೆಗೂ ಬರೆದಿದ್ದಾನೆ. ‘ನಿಮ್ಮ ಪರಿಚಯ ಮಾಡಿಕೊಡಿ’ ಎಂದು ಕೇಳಿದ್ದಾನೆ. ‘ನಿಮ್ಮ ಬಿಚ್ಚು ಮನಸ್ಸಿನ ಸ್ನೇಹ ನನಗೆ ಬೇಕು’ ಎಂದೆಲ್ಲಾ ಬರೆದಿದ್ದಾನೆ. ಹಾಗಂತ ನಾನು ಚಿಕ್ಕವಳಿದ್ದಾಗ ನಮ್ಮ ಮನೆಯಲ್ಲಿ ಊಟಕ್ಕೆ ಗತಿಯಿರಲಿಲ್ಲ ಎಂದು ಬರೆಯಬೇಕೆ? ಆಗ ಅವನಿಗೆ ನಾವು ತುಂಬಾ ಬಡವರು ಅಂತೆಲ್ಲಾ ಅನ್ನಿಸಿದರೆ! ಅಪ್ಪ ಸತ್ತ ಮೇಲೆ, ಬಂದ ಇನ್‌ಶೂರೆನ್ಸ್ ಹಣದಿಂದ ಒಂದು ಪುಟ್ಟಮನೆ ಕೊಂಡಿದ್ದೇವೆ. ನನ್ನ ಒಬ್ಬನೇ ತಮ್ಮ ಈಗ ಇಂಗ್ಲಿಷ್ ಎಂ.ಎ. ಓದುತ್ತಿದ್ದಾನೆ….ಇಂತಹ ವಿಷಯಗಳನ್ನೇ ಹೇಳಿಬಿಟ್ತರೆ ಯಾಕೋ ಅಪೂರ್ಣ ಎನಿಸುತ್ತದೆ. ಹೇಗಿದ್ದರೂ ಅವನಿಗೆ ಬಿಚ್ಚುಮನಸ್ಸಿನ ವ್ಯಕ್ತಿಗಳನ್ನು ಕಂಡರೆ ಇಷ್ಟ. ನನ್ನನ್ನು ಬಹಳ ಬಿಚ್ಚುಮನಸ್ಸಿನ ಹುಡುಗಿ ಎಂದೇ ತಿಳಿದಿದ್ದಾನೆ. ನಾನು ಯಾಕೆ ಹಾಗಿರಬಾರದು? ಹೌದು, ನಾವು ಬಡವರು, ನಮ್ಮ ಜೀವನ ನಡೆಯುವುದಕ್ಕೆ ಎಷ್ಟು ಹಣ ಅಗತ್ಯವೋ ಅಷ್ಟು ಮಾತ್ರ ನಮ್ಮಲ್ಲಿದೆ ಎಂದು ನಾನು ಯಾರಲ್ಲಿಯೂ ಹೇಳಿಲ್ಲ. ಹೇಳಿಕೊಳ್ಳಬೇಕೆಂದರೆ ಯಾಕೋ ನಾಚಿಕೆ, ಅವಮಾನ ಆಗುತ್ತಿತ್ತು. ಆದರೆ ಈಗ ಮನೋಹರನಿಗೆ ಈ ವಿಷಯ ಹೇಳಿದರೆ ಸತ್ಯ ಹೇಳಿದಂತಾಗುತ್ತದೆ. ಮತ್ತೆ ಅವನು ಸಿಕ್ಕಿದಾಗಲೆಲ್ಲ ನಾವು ಶ್ರೀಮಂತರೆಂದು ತೋರಿಸಿಕೊಳ್ಳುವ ನಾಟಕ ಆಡಬೇಕಾದ ಕಷ್ತ ತಪ್ಪುತ್ತದೆ. ಇದ್ದ ವಿಷಯವನ್ನು ಇದ್ದ ಹಾಗೆ ಹೇಳುವುದಕ್ಕೆ ಅದೆಷ್ಟು ಚೆನ್ನ! ಮನಸ್ಸಿಗೂ ಆರಾಮ.

ಆದರೆ ಹೇಳುವುದಕ್ಕೆ ನನ್ನಲ್ಲಿರುವ ವಿಷಯಗಳಾದರೂ ಏನು! ಹತ್ತನೇ ತರಗತಿಯಲ್ಲಿ ನಾನಿದ್ದಾಗ ಅಪ್ಪ ಸತ್ತುಹೋದರು. ಅಪ್ಪನ ಹಣದಿಂದ ಒಂದು ಪುಟ್ಟ ಮನೆ ಕಟ್ಟಿಸಿಕೊಂಡು, ಬಹಳ ಕಷ್ಟದಿಂದ ನಾನು, ಸುರೇಶ ಪ್ರತಿಯೊಂದು ಪುಸ್ತಕಕ್ಕೂ ಗತಿಯಿಲ್ಲದೆ ಓದಿದ್ದು, ನಾನು ಪಿಯುಸಿಯಲ್ಲಿ ಒಂದು ವರ್ಷ ಫೇಲಾಗಿದ್ದು, ಆದರೆ ಟೈಪ್‌ರೈಟಿಂಗ್ ಷಾರ್ಟ್‌ಹ್ಯಾಂಡ್ ಬರುತ್ತಿದ್ದುದರಿಂದ ಕೆಲಸ ಸಿಕ್ಕಿದ್ದು, ಸಾಯಂಕಾಲದ ಕಾಲೇಜಿನಲ್ಲಿ ಬಿ.ಎ. ಓದಿ, ಅಲ್ಲೂ ಒಂದು ವರ್ಷ ಫೇಲಾಗಿ ನಂತರ ಪಾಸಾಗಿ ಈಗಿರುವ ಕೆಲಸಕ್ಕೆ ಬಂದಿದ್ದು, ಸುರೇಶ್ ಮಾತ್ರ ಬುದ್ಧಿವಂತನಾಗಿ ಈಗ ಇಂಗ್ಲಿಷ್ ಎಂ.ಎ. ಓದುತ್ತಿರುವುದು ಇಷ್ಟೇ ನನ್ನ ವಿಷಯ. ಇದನ್ನೆಲ್ಲ ಹೇಗೆ ಬರೆಯಬೇಕು? ಮನೋಹರ ಈಗಲೂ ಕಥೆ ಬರೆಯುತ್ತಿರಬಹುದು. ಅದಕ್ಕೇ ಅಷ್ಟೊಂದು ಸ್ವಾರಸ್ಯಪೂರ್ಣವಾಗಿ ಪತ್ರಗಳನ್ನು ಬರೆಯುತ್ತಾನೆ. ಅರೆ, ನನಗೆ ಇನ್ನೂ ಮದುವೆ ಆಗಿಲ್ಲ ಎಂದು ಹೇಳಿಬಿಡಬೇಕು. ಆದರೆ ಅವನಾಗಿ ಕೇಳದೆ ಹೇಗೆ ಹೇಳುವುದು?

ಮನೋಹರನೂ ತುಂಬಾ ಬಡವನಾಗಿದ್ದ ಎನ್ನಿಸುತ್ತದೆ. ಆದರೆ ಈಗಂತೂ ಅವನಿಗೆ ಒಳ್ಳೆಯ ಕೆಲಸ ಇದೆ. ನನಗಿಂತ ಸಾವಿರ ರೂಪಾಯಿ ಹೆಚ್ಚಾಗಿ ಸಂಪಾದಿಸುತ್ತಿದ್ದಾನೆ.

ಮನೋಹರ! ಹೆಸರೇ ಸೊಗಸಾಗಿದೆ. ಇನ್ನು ಅವನೆಷ್ಟು ಸುಂದರನಾಗಿರಬಹುದು? ಬೆಳ್ಳಗೆ, ಎತ್ತರಕ್ಕೆ ದಪ್ಪಗಿದ್ದು ಕನ್ನಡಕ ಹಾಕಿಕೊಂಡಿರಬಹುದು. ಮುಖ ಗಂಭೀರವಾಗಿದ್ದು ನೋಡಲು ಹೆದರಿಕೆ ಹುಟ್ಟಿಸುವಂತಿರಬಹುದು. ಅವನು ನಿಜಕ್ಕೂ ಬುದ್ಧಿವಂತ. ಅವನ ಮುಂದೆ ನಾನೆಷ್ಟು ಪೆದ್ದಿ! ಪತ್ರ ಓದಿದರೆ, ಅವನಿಗೆ ತುಂಬಾ ಆತ್ಮೀಯತೆಯಿದೆ. ಸ್ನೇಹದಿಂದ ಬುದ್ಧಿವಂತಿಕೆಯಿಂದ ಉತ್ತರ ಕೊಡುವ ಗೆಳತಿಯ ಅವಶ್ಯಕತೆಯಿದೆ ಎನಿಸುತ್ತದೆ. ಆದರೆ ನಾನು ಆತ್ಮೀಯತೆ, ಸ್ನೇಹವನ್ನು ನೀಡಬಹುದು. ಆದರೆ ಬುದ್ಧಿಯನ್ನು ಹೇಗೆ ಹೆಚ್ಚಿಸಿಕೊಳ್ಳಲಿ! ಬಿಚ್ಚು ಮನಸ್ಸಿನ ಉತ್ತರ ಅವನಿಗೆ ಹೇಗಿದ್ದರೂ ಇಷ್ಟ. ಆದ್ದರಿಂದ ನನ್ನೆಲ್ಲಾ ದೌರ್ಬಲ್ಯಗಳನ್ನು ಹೇಳಿಬಿಟ್ತರೆ ಅವನು ನನ್ನಿಂದ ಹೆಚ್ಚಿನ ಮಟ್ಟ ನಿರೀಕ್ಷಿಸುವಂತಿಲ್ಲ.

ಇಡೀರಾತ್ರಿ ನಿದ್ದೆಗೆಟ್ಟು ಮನೋಹರನಿಗೆ ಯಾವ ರೀತಿ ಪತ್ರ ಬರೆಯಬೇಕೆಂದು ಯೋಚಿಸಿದೆ. ಯಾವ ರೀತಿಯ ಪತ್ರವೂ ಸರಿ ಎನಿಸಲಿಲ್ಲ. ಬೆಳಿಗ್ಗೆ ಆಫೀಸಿನಲ್ಲಿ ಸುಚಿತ್ರ-

“ಯಾಕೆ ಹೀಗೆ ಮಂಕಾಗಿದ್ದೀಯ. ನಿನ್ನ ತೊಂದರೆಗಳು ಏನಿದ್ದರೂ ನನ್ನಲ್ಲಿ ಹೇಳಿಕೋ” ಎಂದಾಗ ‘ಪತ್ರ ಬರೆಯಲು ಬರುತ್ತಿಲ್ಲ’ ಎಂದು ಹೇಳಿಬಿಡಲೇ ಅನ್ನಿಸಿದರೂ, ಆಮೇಲೆ ಅವಳು ಬರೆದುಕೊಡುವ ಕೆಟ್ಟ ಪತ್ರವನ್ನೇ ಪೋಸ್ಟ್ ಮಾಡಬೇಕಾಗುವಾಗ ಆಗುವ ಸಂಕಟವನ್ನು ನೆನೆಸಿಕೊಂಡು “ಎನೂ ಇಲ್ಲ, ತಲೆನೋವು ಅಷ್ಟೆ” ಎಂದಾಗ ಸುಚಿತ್ರ ತೆಳುವಾಗಿ ನಕ್ಕಳು.

ಮದ್ಯಾಹ್ನ ಊಟ ಮಾಡುವಾಗ ನಮ್ಮ ಆಫೀಸಿನ ವಾಸು, “ರೀ, ವಸಂತಾ, ಯಾರ್ರೀ ಅವನು ತರಲೆ? ಎನೇನೋ ಪತ್ರ ಬರೆದು ನಿಮಗೆ ತಲೆನೋವು ತಂದಿದ್ದಾನಂತೆ? ಸುಚಿತ್ರ ಹೇಳಿದರು. ಸುಮ್ಮನೆ ಮಾಡೋಕೆ ಕೆಲಸವಿಲ್ಲದವರು ಯಾರ್‍ಯಾರಿಗೋ ಪತ್ರ ಬರೆಯುತ್ತಾರೆ. ಹಾಗೆ ನಿಮಗೂ ಯಾವನೋ ಒಬ್ಬ ಬರೆದಿದ್ದಾನೆ. ಅದಕ್ಯಾಕೆ ಇಷ್ಟೊಂದು ತಲೆಕೆಡಿಸಿಕೊಂಡು ಇರಬೇಕು? ಪತ್ರವನ್ನೂ, ಅವನ ವಿಷಯವನ್ನೂ ತಿಪ್ಪೆಗೆ ಎಸೆದು ಆರಾಮವಾಗಿ ಊಟಮಾಡಿ” ಎಂದ.

ನಾನು ಊಟಮಾಡುವುದನ್ನು ನಿಲ್ಲಿಸಿ ಕೋಪದಿಂದ ಸುಚಿತ್ರಳ ಕಡೆ ನೋಡಿದೆ. ಅವಳು “ಕೋಪ ಮಾಡ್ಕೋಬೇಡ. ನಿನಗೆ ಸರಿಯಾಗಿ ಬುದ್ಧಿ ಹೇಳುವವರು ವಾಸು ಒಬ್ಬರೇ. ಅದಕ್ಕೇ ಅವರ ಹತ್ತಿರ ಹೇಳಿಬಿಟ್ಟೆ” ಎಂದಳು. ನಿಜ ನಾನು ಪ್ರತಿಯೊಂದು ವಿಷಯಕ್ಕೂ ವಾಸುವನ್ನು ಆಶ್ರಯಿಸುತ್ತಿದ್ದೆ. ನಂತರ ಸುಚಿತ್ರಳನ್ನ. ವಾಸು ನನಗೆ ಬಹಳ ಆತ್ಮೀಯನಾದ ವ್ಯಕ್ತಿ. ಅವನ ವೈಯಕ್ತಿಕ ವಿಷಯಗಳನ್ನೆಲ್ಲಾ ನನ್ನ ಹತ್ತಿರ ಹೇಳುತ್ತಿದ್ದ. ಅವನು ಯಾವುದೋ ಹುಡುಗಿಯನ್ನು ಪ್ರೀತಿಸಿ, ಮದುವೆಯಾಗಲು ಪ್ರಯತ್ನಿಸಿದಾಗ, ಮನೆಯವರೆಲ್ಲಾ ಅಡ್ಡಿ ಬಂದಾಗ, ಬೇಸರದಿಂದ ನನ್ನ ಹತ್ತಿರ ಬಂದು ಮುಂದೇನು ಮಾಡಲಿ ಎಂದು ಕೇಳಿದ್ದ. ನಾನು ‘ಆ ಹುಡುಗಿಯನ್ನು ಮದುವೆಯಾಗಿ ಧೈರ್ಯದಿಂದ ಎಲ್ಲವನ್ನೂ ಎದುರಿಸು’ ಎಂದಾಗ, ಸಂತೋಷದಿಂದ ಕೈಹಿಡಿದು ಕಣ್ಣೀರಿಡುತ್ತಾ ‘ನೀವೊಬ್ಬರೇ ನನಗೆ ಬೆಂಬಲ ಕೊಡುವವರು’ ಎಂದು ಹೇಳಿದ್ದ. ನಾನು ಹೇಳಿದ ಎಲ್ಲಾ ಮಾತುಗಳನ್ನೂ ಅವನು ಕೇಳುತ್ತಿದ್ದ. ಅವನು ಹೇಳಿದ ಮಾತುಗಳಿಗೆ ನಾನೂ ಬೆಲೆ ಕೊಡುತ್ತಿದ್ದೆ. ಇದನ್ನು ತಿಳಿದೆ ಸುಚಿತ್ರಾ ವಾಸುವಿಗೆ, ಮನೋಹರನ ವಿಷಯ ಹೇಳಿದ್ದಳು. ಮನೋಹರನ ವಿಷಯದ ಬಗ್ಗೆ ಮಾತ್ರ ನನಗೆ ವಾಸುವಿನ ಮಾತು ಕೇಳಲು ಇಷ್ಟವಾಗಲಿಲ್ಲ. ಯಾಕೋ ಮನೋಹರ ಬಹಳ ಒಳ್ಳೆಯವನು, ತುಂಬಾ ನೊಂದಿರುವ ವ್ಯಕ್ತಿ ಎಂದೆನಿಸುತ್ತಿತ್ತು. ಹಾಂ, ಮನೋಹರನಿಗೆ ಪತ್ರ ಬರೆಯಬೇಕು . ಅದನ್ನು ಬಿಟ್ಟು ಏನೇನೋ ಯೋಚಿಸುತ್ತಿರುವೆ. ರಾತ್ರಿ ಕುಳಿತು ಮನಸ್ಸಿಗೆ ಏನು ತೋಚುತ್ತದೋ ಅದನ್ನಷ್ಟು ಬರೆದರೆ ಆಯ್ತಲ್ಲಾ ಎಂದುಕೊಂಡಾಗ ಮನಸ್ಸಿನ ಭಾರ ಸ್ವಲ್ಪ ಕಡಿಮೆಯಾಯಿತು.
*
*
*
ವಸಂತಳ ಪತ್ರನೋಡಿ ಅವಳ ಬಗ್ಗೆ ಕನಿಕರವಾಯಿತು. ಎಷ್ಟೊಂದುಪುಟ್ಟದಾಗಿ ತನ್ನ ವಿವರ ತಿಳಿಸಿದ್ದಾಳೆ. ‘ನಾವು ಬಹಳ ಬಡವರು’ ಎಂದು ನಿಮ್ಮಲ್ಲಿ ಹೇಳುತ್ತಿರುವುದಕ್ಕೆ ನನಗೆ ಅವಮಾನವಾಗುತ್ತಿಲ್ಲ. ಬೇರೆಯವರ ಮುಂದೆ ಹೀಗೆ ಹೇಳಿದ್ದರೆ ನನಗೆ ಖಂಡಿತಾ ನಾಚಿಕೆಯಾಗುತ್ತಿತ್ತು ಎಂದು ಬರೆದಿದ್ದಾಳೆ. ವಸಂತಾ, ನಿನಗೆ ಗೊತ್ತಿಲ್ಲ, ಬಡತನ ಎಲ್ಲರ ನಿಜರೂಪು ತೋರಿಸುತ್ತದೆ. ಬದುಕುವುದಕ್ಕೆ ಸರಿಯಾದ ಪಾಠ, ಅನುಭವಗಳನ್ನು ಹೇಳಿಕೊಡುತ್ತದೆ. ಎಂತಹ ಸಮಯದಲ್ಲಿಯೂ ಗಟ್ಟಿಯಾಗಿ ನಿಲ್ಲುವಂತೆ ಪ್ರೇರೇಪಿಸುತ್ತದೆ. ಮನುಷ್ಯನಿಗೆ ಮನುಷ್ಯನ ಪರಿಚಯ ಮಾಡಿಸುತ್ತದೆ. ಇಂತಹ ಎಲ್ಲಾ ಪಾಠಗಳನ್ನೂ ಕಲಿಸುವ ‘ಬಡತನ’ ವನ್ನು ಹೇಳಿಕೊಂಡರೆ ನಿನಗೆ ನಾಚಿಕೆಯಾಗುತ್ತದೆಯೇ?

‘ನಿಮ್ಮ ಅಪ್ಪ-ಅಮ್ಮನಿಗೆ ನನ್ನ ನಮಸ್ಕಾರಗಳನ್ನು ತಿಳಿಸಿ’ ಎಂದು ಹೇಳಿದ್ದೀಯಾ. ‘ನಿಮ್ಮಷ್ಟು ಚೆನ್ನಾಗಿ ಪತ್ರ ಬರೆಯಲು ನನಗೆ ಬರುವುದಿಲ್ಲ. ನೀವು ತುಂಬಾ ಬುದ್ದಿವಂತರು. ನಿಮಗೆ ಸರಿಸಮಾನವಾಗಿ ಪತ್ರ ಬರೆಯಲಾಗದುದಕ್ಕೆ ನನಗೆ ತುಂಬಾ ಸಂಕೋಚವಾಗುತ್ತಿದೆ’ ಎಂದೆಲ್ಲಾ ಹೇಳಿ ‘ನಿಮ್ಮ ಹೆಸರು ಬಹಳ ಸೊಗಸಾಗಿದೆ’ ಎಂದೂ ಸೇರಿಸಿದ್ದೀಯಾ.

ವಸಂತ, ಈ ಹೆಸರನ್ನು ನಮ್ಮ ಅಪ್ಪ-ಅಮ್ಮ ಇಟ್ಟಿದ್ದಲ್ಲ. ಶಾಲೆಗೆ ಸೇರಿಕೊಳ್ಳುವಾಗ ಮಾಸ್ತರು ಬರೆದುಕೊಂಡದ್ದೇ ನನ್ನ ಹೆಸರಾಯಿತು. ನನ್ನ ಹೆಸರಾಗಲೀ, ಹುಟ್ಟಿದ ದಿನವಾಗಲೀ ಇಂತಹುದು ಎಂದು ನಮ್ಮ ಮನೆಯಲ್ಲಿ ಯಾರಿಗೂ ಗೊತ್ತಿಲ್ಲ. ಬಾಯಿಗೆ ಬಂದ ಹೆಸರಲ್ಲಿ ನನ್ನಕೂಗುತ್ತಿದ್ದರು. ಶಾಲೆಗೆ ಸೇರಿಕೊಂಡ ಮೇಲೆ ‘ಮನೋಹರ’ ಎಂದಾಯಿತು. ನನಗೆ ಇಷ್ಟೊಂದು ಒಳ್ಳೆಯ ಹೆಸರು (ನಿಮ್ಮ ಪ್ರಕಾರ) ಇಡಬೇಕೆಂದಿರಲಿ, ಇದು ಒಳ್ಳೆಯ ಹೆಸರು ಎನ್ನುವುದೂ ನನ್ನ ಮನೆಯವರಿಗೆ ಗೊತ್ತಿಲ್ಲ. ಅಂದರೆ ನನ್ನ ತಂದೆ-ತಾಯಿ ಸಂಪೂರ್ಣ ಅವಿದ್ಯಾವಂತರು. ಅಕ್ಕಂದಿರು ಮತ್ತು‌ಅಣ್ಣಂದಿರೂ ಅಷ್ಟೇ.ನಾನು ಓದಿದ್ದೇ ಆಕಸ್ಮಿಕ. ಈಗ ಹೀಗೆ ಬಾಂಬೆಯಲ್ಲಿರುವುದು ಇನ್ನೂ ಆಕಸ್ಮಿಕ. ನನ್ನದು ಮುಗಿಯದ ಕಥೆ ವಸಂತ. ನನ್ನ ಕೌಟುಂಬಿಕ, ಸಾಮಾಜಿಕ ಸಂಸ್ಕಾರಗಳ ಬಗ್ಗೆ ತಿಳಿದಾಗ ನಿನಗೆ ಅಚ್ಚರಿ ಆಗಬಹುದು, ಅಸಹ್ಯವಾಗಬಹುದು, ನಿರೀಕ್ಷೆಗಳೆಲ್ಲಾ ಸುಳ್ಳಾಗಬಹುದು. ಮುಚ್ಚಿಟ್ಟುಕೊಳ್ಳಲು, ನಾನೆಂದೂ ಯಾರಮುಂದೆಯೂ ಪ್ರಯತ್ನಿಸೊಲ್ಲ. ಆ ಬಗ್ಗೆ ನನಗೆ ನಾಚಿಕೆ ಇಲ್ಲ, ಹೆಮ್ಮೆ ಇದೆ. ಅನುಕಂಪ ಇದೆ. ಹೆಸರೇ ಇಲ್ಲದ ಜಾತಿ ನನ್ನದು. ಒಂದೊಂದು ಕಡೆ ಒಂದೊಂದು ರೀತಿ ಇರುವುದರಿಂದ ಹಾವನೂರು ಆಯೋಗದ ಶಿಫಾರಸ್ಸಿನ ಮೇಲೆ ಸುಲಭವಾಗಿ ಲಾಭಗಳನ್ನು ಗಿಟ್ಟಿಸಿಕೊಳ್ಳಬಹುದು. ಇಂತಹ ಒಂದು ಜಾತಿಯಲ್ಲಿ ಹುಟ್ಟಿ ಬೆಳೆದಿದ್ದರಿಂದ ನಾನು ಸುಲಭವಾಗಿ ಎಲ್ಲ ಜಾತಿಗಳನ್ನೂ ತಿಳಿದುಕೊಳ್ಳಲು, ಎಲ್ಲರಲ್ಲೂ ಬೆರೆತುಕೊಳ್ಳಲು ಅನುಕೂಲವಾಯಿತು.

ನಿನಗೆ ಸ್ವಾರಸ್ಯಪೂರ್ಣವಾಗಿ ಪತ್ರ ಬರೆಯಲು ನನ್ನಲ್ಲಿ ಈ ಜನ್ಮಕ್ಕೆ ಸಾಕಾಗುವಷ್ಟು ವಿಷಯಗಳಿವೆ. ನೊಂದ ಘಟನೆಗಳಿವೆ. ಆದರೆ ಇದರಿಂದಷ್ಟೇ ನೀನು ಹೇಳಿದಂತೆ ನಾನು ಕಥೆಗಾರನಾಗಲಾರೆ. ಇದಕ್ಕಾಗಿ ಈ ವಿಸ್ತಾರವಾದ ಬದುಕಿಗೆ ನಮ್ಮನ್ನೇ ತೆರೆದ ಪುಸ್ತಕವನ್ನಾಗಿಸಿಕೊಳ್ಳಬೇಕು. ವಸಂತ, ಬದುಕಿನ ಗಲ್ಲಿಗಳಲ್ಲಿ, ರಸ್ತೆಗಳಲ್ಲಿ, ರಾಜಮಾರ್ಗಗಳಲ್ಲಿ ನಡೆದಷ್ಟೂ ಆಶ್ಚರ್ಯವಾಗುತ್ತದೆ. ಯಾರದೋ ಒಂದು ಪುಸ್ತಕವನ್ನು ಓದಿ ಅದರಲ್ಲಿನ ಪಾತ್ರಗಳು, ಬದುಕುಗಳ ಬಗ್ಗೆ ನಮ್ಮಲ್ಲಿ ತಲೆಕೆಡಿಸಿಕೊಳ್ಳುವವರು ಬಹಳ ಮಂದಿ, ಅದರ ಬದಲುನಿಜವಾದ ಪಾತ್ರಗಳಲ್ಲಿ ಬೆರೆತು ನೋಡಿ ಬದುಕಿನತ್ತ ಬಿಚ್ಚಿಕೊಂಡರೆ ನೂರಾರು ಕಾದಂಬರಿಗಳು ನಮ್ಮ ಬದುಕಿನಲ್ಲಿ ಹುಟ್ಟಿಕೊಳ್ಳುತ್ತವೆ. ಅದನ್ನಷ್ಟೆ ಅರ್ಥಮಾಡಿಕೊಳ್ಳಲು ಪ್ರಯತ್ನಪಡಬೇಕು. ಆ ಕಾರಣಕ್ಕಾಗಿಯೇ ನಾನು ಬರೆಯೊಲ್ಲ, ಅನುಭವಿಸುತ್ತೇನೆ.

ವಸಂತಾ, ನಿನ್ನ ಅತ್ಯಂತ ಒಳಗನ್ನು ತೆರೆದಿಟ್ಟ ಕಾಗದ ಓದಿ, ನೀನು ಹಿಂದಿನ ವಸಂತಳಿಗಿಂತ ಈಗ ತೀರಾ ಭಿನ್ನವಾಗಿ ಕಾಣುತ್ತಿದ್ದೀಯಾ ಎನಿಸುತ್ತಿದೆ. ನಿನ್ನಮೊದಲನೆಯ ಪತ್ರದಲ್ಲಿ ಕಾಣುವ ಪೆದ್ದುತನಕ್ಕಿಂತ, ಈಗಿನ ಪತ್ರದಲ್ಲಿನ ಸರಳತೆಗೆ ನಾನು ಮಾರುಹೋಗಿದ್ದೇನೆ. ನನಗೆ ಇದೇ ಇಷ್ಟ, ನಿನಗೆ ಕಾಗದ ಬರೆಯಬೇಕೆಂದು ಕುಳಿತುಕೊಳ್ಳುತ್ತೇನೆ. ಆದರೆ, ಇಲ್ಲಿಯ ವೇಗವಾಗಿ ಚಲಿಸುವ ವಿಧ್ಯ್ತ್ ರೈಲುಗಳು ಕೇವಲ ೧೫-೨೦ ಸೆಕೆಂಡುಗಳು ನಿಲ್ದಾಣದಲ್ಲಿ ನಿಂತಾಗ, ಹೊರನುಗ್ಗುವ ಜನ ಪ್ರವಾಹದಂತೆ, ನಾನು ಬರೆಯಬೇಕೆಂಬ ವಿಷಯವೆಲ್ಲ ಪ್ರವಾಹದಲ್ಲಿ ಗಜಿಬಿಜಿಯಾಗಿ, ಓರಣಗೆಟ್ಟು ಹೊಗುತ್ತದೆ. ನನ್ನದೆಲ್ಲವನ್ನೂ ಹೇಳಬೇಕು. ಸರಿ, ಆದರೆ ಎಲ್ಲಿಂದ ಶುರುಮಾಡಲಿ? ನನಗನ್ನಿಸುತ್ತದೆ, ನಿನಗೆ ಆಗಾಗ ಪತ್ರ ಬರೆಯುವುದಕ್ಕಿ‌ಇಂತ ಮನಸ್ಸಿದ್ದಾಗ ಏನನ್ನಿಸುತ್ತದೋ ಎಲ್ಲವನ್ನೂ ಹಾಳೆಗಳ್:ಅ ಮೇಲೆ ಗೀಚಿ ಒಮ್ಮೆಲೇ ನಿನಗೆ ಪೋಸ್ಟ್ ಮಾಡಬೇಕೆಂದು. ಆದರೆ ಹಾಗೆ ಬರೆದಾಗ ನಿನ್ನ ಮೇಲೆ ನನ್ನ ಬರಹ ಯಾವ ರೀತಿಯ ಪರಿಣಾಮ ಬೀರಬಹುದೆಂದು ಯೋಚಿಸಿ ಸುಮ್ಮನಾಗುತ್ತೇನೆ.

ನಾನು ವಿಚಾರವಾದಿ, ಬುದ್ದಿವಂತ ಹೀಗೆಲ್ಲಾ ಹೇಳಿಕೊಂಡು ನೀನು ನನ್ನನ್ನು ಬಹಳ ಹೊಗಳಿ ಪೂಜಿಸುತ್ತಿರುವಂತೆ ಕಾಣುತ್ತಿದೆ. ಆದರೆ ವಸಂತ, ನಾನೊಬ್ಬ ಸಾಮಾನ್ಯ. ಎಲ್ಲರಂತೆ ನನ್ನಲ್ಲೂ ವಿಚಿತ್ರವಾದ, ಕೊಳಕಾದ ವಿಕಾರವಾದ ಭಾವನೆಗಳಿವೆ. ಈ ವೈಪರೀತ್ಯಗಳನ್ನು ಖುಷಿಯಿಂದ, ಫ್ರೀಯಾಗಿ ಹೇಳಿಕೊಳ್ಳುವ ಬರೆದುಕೊಳ್ಳುವ ಸಾಮರ್ಥ್ಯ ಕಂಡು ನನ್ನ ಬಗ್ಗೆ ಏನೆಲ್ಲಾ ಕಲ್ಪಿಸಿಕೊಳ್ಳಬೇಡ. ನಾನೂ ಹೀಗೆ ಹಿಂದೊಮ್ಮೆ ಪುಸ್ತಕದಲ್ಲಿ ಓದಿ ಬಾಹುಬಲಿ ೫೭ ಅಡಿ ಅಂದರೆ ನಾಲ್ಕಾರು ತೆಂಗಿನ ಮರಗಳೆತ್ತರದ ಅಗಾಧ ಮೂರ್ತಿ ಎಂದೆಲ್ಲಾ ಅಂದುಕೊಂಡಿದ್ದೆ. ಅಲ್ಲಿಗೆ ಹೋದ ಮೇಲೆ ಖಂಡಿತಾ ನನಗೆ ನಿರಾಶೆಯಾಯ್ತು. ನನ್ನ ಕಲ್ಪನೆಯ ಅಗಾಧ ಮೂರ್ತಿಗಿಂತ ಕುಳ್ಳನಾಗಿ ಕಂಡ ಗೊಮ್ಮಟ. ಹಾಗೇ ನನ್ನ ಬಗ್ಗೆ ಆಗಬಾರದಲ್ಲ! ಮತ್ತೆ, ಮತ್ತೊಂದು ಅಪಾಯವೆಂದರೆ ‘ವಿಚಾರವಂತ’ ಎಂಬ ಭ್ರಮೆ ಬಂದ ಕೂಡಲೇ ನಮ್ಮ ಪ್ರತಿಯೊಂದು ವರ್ತನೆಗಳಲ್ಲೂ ‘ಶ್ರೇಷ್ಠತೆ’ ಯನ್ನೇ ನಿರೀಕ್ಷಿಸುವುದರಿಂದ, ನಾವೆಷ್ಟೇ ಸಹಜವಾಗಿ ವರ್ತಿಸಿದರೂ ಕೆಲವೊಮ್ಮೆ ಅದು ಬೂಟಾಟಿಕೆಯಾಗಿ ಕಾಣುತ್ತದೆ. ಇದನ್ನು ನಾನು ಕಂಡಿದ್ದೇನೆ. ಒಮ್ಮೊಮ್ಮೆ ನಾನು ಸಿಲ್ಲಿಸಿಲ್ಲಿಯಾಗಿ ಮನಸ್ಸಿಗೆ ಬಂದಂತೆ ಕುಣಿಯುತ್ತಾ ಪಕ್ಕದವರನ್ನು ಛೇಡಿಸಿ, ಹೊಡೆದುಬಿಡುತ್ತೇನೆ. ನನಗೆ ಮೂಡಿಲ್ಲ ಎಂದು ಎಲ್ಲರ ಮೂಡನ್ನು ಹಾಳುಮಾಡಿಬಿಡುತ್ತೇನೆ. ನನ್ನ ಈ ವಿಕಾರ ವರ್ತನಗೆಳನ್ನು ಮನಃಶಾಸ್ತ್ರದ ಮೂಲಕ ನೋಡಿ, ನಾನು ಚಿbಟಿoಡಿmಚಿಟ ಠಿsಥಿಛಿhoಠಿಚಿಣh ಇರಬಹುದೆಂದು ಸಂಶಯಪಟ್ಟಿದ್ದೇನೆ. ನನ್ನ ಎಷ್ಟೋ ಸ್ನೇಹಿತರೆನಿಸಿಕೊಂಡವರಿಗೆ ನಾನೊಬ್ಬ oಜಜ mಚಿಟಿ.

“ಇಷ್ಟೊಂದು ಹಿಂದುಳಿದ ವರ್ಗದ ಹುಡುಗ ರ್‍ಯಾಂಕ್ ಬರಲು ಸಾಧ್ಯವೇ?” ಎಂದು ನಿನ್ನ ಗೆಳತಿ ಸುಚಿತ್ರಾ ಹೇಳಿದ್ದಾಳೆಂದು ಬರೆದಿದ್ದೀಯಾ. ನಮ್ಮ ಹೆತ್ತವರು ಆಕಸ್ಮಿಕವಾಗಿ ಜಾತಿಯನ್ನು ಯಾವಯಾವುದೋ ಕಾರಣದಿಂದ ಕಳೆದುಕೊಳ್ಳುವುದರಿಂದ ಅಥವಾ miಞ-uಠಿ ಆಗುವುದರಿಂದ, ನಮ್ಮ ಮನಿಸ್ಸಿಗೆ ಅತೀವ ಸ್ವಾತಂತ್ರ್ಯದ ಲಾಭದೊಂದಿಗೆ ಮುಕ್ತ ನಿರ್ಭೀತ ವೈಚಾರಿಕ ಶಕ್ತಿಯೂ ಲಭಿಸಿಬಿಡುತ್ತದೆ. ದುರಂತವೆಂದರೆ ನಿರ್ದಿಷ್ಟ ಜಾತಿಯ ವೃತ್ತವಿಲ್ಲದೆ ಪರಿತಪಿಸುತ್ತಾ ತಹತಹಿಸುತ್ತಾ ನಾವೊಂದು ಜಾತಿಯೊಳಗೆ ನುಸುಳುವ ಉ‌ಅತ್ನ ಮಾಡುವುದು. ಈ ಜಾತಿಯನ್ನು ತೊಲಗಿಸಿ ನಾವು ಜಾತಿಯಿಲ್ಲದವರಾಗಲು ಸಾಧ್ಯವಿಲ್ಲವೆ? ನನ್ನ ಅನುಭವಗಳು ಹೇಳುತ್ತವೆ. ನಮ್ಮ ಸುತ್ತಲಿನ ಮನುಷ್ಯ ಎಷ್ಟೇ ಹಣವಿದ್ದರೂ ಸುರಕ್ಷಿತ ಎಂದುಕೊಳ್ಳಲಾರ. ಅವನೊಬ್ಬ ಕಡುಬಡವನಾಗಿದ್ದರೂ ಒಂದು ನಿರ್ದಿಷ್ಟ ಜಾತಿ ಇದ್ದುಬಿಟ್ಟರೆ ತನ್ನ ಸುತ್ತ ರಕ್ಷಿಸುವ ಬಲವಾದ ಕೋಟೆ ಇದೆ ಎಂಬ ವಿಶ್ವಾಸವಿರುವುದನ್ನು ಕಂಡು ನಾನು ಚಕಿತನಾಗಿಬಿಡುತ್ತೇನೆ. ಈ ಜಾತಿಗೆ ಕಾರಣ ಹಿರಿಯರು. ನಮ್ಮನ್ನು ಬೆಳೆಸುವಾಗಲೇ ಒಂದು ನಿರ್ದಿಷ್ಟ ಸಂಪ್ರದಾಯಗಳ, ಶಿಸ್ತಿನ ನಿಯಮಗಳು, ಆಹಾರ ಪಾನೀಯಗಳ ನಡುವೆ ಭಯದಿಂದ ಬೆಳೆಸುತ್ತಾರೆ. ಮುಂದೆ ನಾವು ದೊಡ್ಡವರಾದಾಗಲೂ ಅವೆಲ್ಲವನ್ನೂ ಮುರಿಯುವ ಕೆಚ್ಚನ್ನು ಕಲಿಯುವುದಿಲ್ಲ. ಸರಿ, ಮನುಷ್ಯ ತಾನು ಕಲಿತದ್ದನ್ನೇ ಪಾಲಿಸುವ ಇತರರೊಡನೆ ಸೇರಲು ಯತ್ನಿಸುವುದರಿಂದ ಸ್ವಾಭಾವಿಕವಾಗಿ ತನ್ನ ಜಾತಿಯವರೇ ಹತ್ತಿರವಾಗುತ್ತಾರೆ. ಹೀಗೆ ಜಾತಿ ಬೆಳೆಯುತ್ತಲೇ ಹೋಗುತ್ತಿದೆ. ಹೋಗುತ್ತಿರುತ್ತದೆ.

ವಸಂತಾ, ನಿನ್ನ ಜೊತೆ ಮಾನಸಿಕವಾಗಿ ಅದೆಷ್ಟು ಹೊತ್ತಿನಿಂದ ಸಂಭಾಷಣೆ ನಡೆಸುತ್ತಿದ್ದೇನೆ! ನನಗೆ ನಾವಿಬ್ಬರೂ ಬಹಳ ಹಳೆಯ ಸ್ನೇಹಿತರು ಎಂದೆನಿಸುತ್ತಿದೆ. ನನ್ನ ತಮ್ಮ-ತಂಗಿ ಬಿಟ್ಟರೆ ನನ್ನ ಮನಸ್ಸಿನ ಭಾವನೆಗಳನ್ನು ನಾನು ಯಾರಲ್ಲಿಯೂ ಹೇಳಿಕೊಳ್ಳುವಹಾಗಿಲ್ಲ. ಏಕೆಂದರೆ ಯಾರೂ ಅರ್ಥ ಮಾಡಿಕೊಳ್ಳುವುದೇ ಇಲ್ಲ. ನಿನ್ನಲ್ಲಿ‌ಎಲ್ಲಾ ಹೇಳಬೇಕೆನಿಸುತ್ತದೆ. ಜೊತೆಗೆ ಇವೆಲ್ಲಾ ನಿನ್ನ ಮೇಲೆ ಯಾವ ರೀತಿಯ ಪರಿಣಾಮ ಬೀರುವುದೋ ಎಂಬ ಕುತೂಹಲವೂ ನನ್ನಲ್ಲಿದೆ!

ಹಾಂ, ಮತ್ತೊಂದು ವಿಷಯ, ಒಮ್ಮೆ ನನಗೆ ಯಾವುದಾದರೂ ಅನಾಥಾಶ್ರಮದ ಅಥವಾ ಅಂಗವಿಕಲ ಹುಡುಗಿಯನ್ನು ಮದುವೆಯಾಗುವ ಬಯಕೆ ಬಂದಿತ್ತು, ಗೊತ್ತಾ? ಇದರಿಂದ ನಮ್ಮ ಮನೆಯಲ್ಲಿ ಎಲ್ಲರಿಗೂ ಆಶ್ಚರ್ಯ! ಬರೀ ಬೆಂಗಾಡಿನ ಮರುಭೂಮಿಯಲ್ಲಿ ಆಗಾಗ್ಗೆ ಅಲೆದು ನಿರ್ವಿಣ್ಣನಾಗುವ ನನಗೆ, ನನ್ನ ಇಡೀ ಹದೃಯದೊಂದಿಗೆ ಮನಸ್ಸು-ದೇಹಗಳನ್ನು ಶಾಂತವಾಗಿ, ತಂಪಾಗಿ ತೋಯಿಸುವ ‘ವಿಶಾಲ ಹೃದಯ’ದ ಅವಶ್ಯಕತೆಯಿತ್ತು. ನೋಡು, ನನಗೂ ನನ್ನನ್ನೇ ಅತಿಯಾಗಿ ಪ್ರೀತಿಸುವ ಹೃದಯವಿರಬೇಕೆಂಬ ಸ್ವಾರ್ಥ. ಸಾಮಾನ್ಯವಾಗಿ ಇಂಥಹವರಲ್ಲಿ ಅಗಾಧವಾದ ಪ್ರೀತಿ ತೋರುವ ವಿಶಾಲ ಹೃದಯವಿರುತ್ತದೆಂಬ ತಪ್ಪು ಕಲ್ಪನೆ ನನ್ನಲ್ಲಿಯೂ ಇತ್ತು. ಈ ಪ್ರೀತಿ-ಪ್ರೇಮಗಳನ್ನು ನಾನು ಕಾಯಿಸಿ ಭಟ್ಟಿಯಿಳಿಸಿ ಉಳಿದದ್ದನ್ನು ಕಂಡಾಗ ಮತ್ತೆ ಭಗ್ನನಾಗುತ್ತೇನೆ. ನಾನು ಮನಃಶಾಸ್ತ್ರ ಓದಿದ್ದೇ ತಪ್ಪೆನಿಸುತ್ತಿದೆ. ಸುಂದರವಾದ ಹೂವಿನ ದಳಗಳು ದುಂಬಿಯನ್ನು ಆಕರ್ಷಿಸಿ ಸ್ಪರ್ಶಕ್ಕೋಸ್ಕರ ಅರಳಿ ಮಧು ಹೊತ್ತುನಿಂತ ಸ್ವಾರ್ಥಿ ದಳಗಳಾಗಿ, ಮಗುವಿನ ಮುಗ್ಧ ಮನಸ್ಸಿನಲ್ಲೂ ಫ್ರಾಯ್ಡ್‌ನ ಬೇರುಗಳನ್ನು ಹುಡುಕಿ ಅಶಾಂತಿಗೊಳ್ಳುತ್ತೇನೆ. ಈ ವಿಚಿತ್ರ ಮನಸ್ಸಿನವನಿಗೆ ಮದುವೆ-ಹೆಂಡತಿಯೆಂಬ ಬೊಂಬೆಗಳೆಲ್ಲಾ ಏಕೆ ಎಂದು ನಗುವೂ ಬರುತ್ತದೆ. ಅಶಾಂತತೆಯಲ್ಲಿಯೇ ಬದುಕನ್ನು ಅರಸಿ ನೋಡುವ ಸಾಹಸವೂ ಒಮ್ಮೊಮ್ಮೆ ನಿನ್ನಂತಹ ಸ್ನೇಹಿತರನ್ನು ಕಂಡಾಗ ಮೂಡುತ್ತದೆ.

ವಸಂತ, ನಮಗೆ ತಿಳಿದಿರುವ ಭಾಷೆಗೆ ಮಿತಿ ಇದೆ. ಬರಬಣಿಗೆಗೆ ಮತ್ತೂ ಮಿತಿ ಇದೆ. ಹಾಗಾಗಿ ಇದ್ದ ಹಾಗೆ ಇರುವಂತೆ ಮನದಟ್ಟು ಮಾಡಲು ಸಾಧ್ಯವೇ ಆಗೋಲ್ಲ. ನಿನ್ನಲ್ಲಿ ಏನೇನು ಹೇಳಬೇಕೆಂದುಕೊಂಡು ಈಗ ಲೆಕ್ಕ ಹಾಕಿರುವೆನೋ ಅದೆಲ್ಲಾ ಹೇಳಲಿಕ್ಕಾಗುತ್ತದೆಯೋ ಇಲ್ಲವೋ ನೋಡಬೇಕು.
*
*
*
ಐದು ಪುಟಗಳ ಸುದೀರ್ಘ ಪತ್ರವನ್ನೇ ಬರೆದಿದ್ದಾನೆ ಮನೋಹರ. ಅದನ್ನು ಓದಿ ಅರ್ಥ ಮಾಡಿಕೊಳ್ಳುವುದಕ್ಕೆ ಕನಿಷ್ಟ ಒಂದು ವಾರವಾದರೂ ಹಿಡಿದಿದೆಯಲ್ಲವೇ?
ಆಫೀಸಿನಲ್ಲಿ ವಾಸು, ಸುಚಿತ್ರ ಇಬ್ಬರೂ ಪತ್ರ ಓದಿ ಜೋರಾಗಿ ನಕ್ಕುಬಿಟ್ಟಿದ್ದರು. “ನಿನ್ನನ್ನು ಇಂಪ್ರೆಸ್ ಮಾಡುವುದಕ್ಕಾಗಿಯೇ ಈ ರೀತಿ ಬರೆದಿದ್ದಾನೆ. ನೀನೂ ಅದಕ್ಕೆ ಸರಿಯಾಗಿದ್ದಿ, ಇವನು ಬರೆದಿದ್ದೆಲ್ಲಾ ನಿಜ ಎಂದು ಹ್ಯಾಗೆ ಹೇಳುವುದು? ಹೇಗಿದ್ದರೂ ಅವನಿಗೆ ಅಂಗವಿಕಲೆಯನ್ನು ಮದುವೆಯಾಗಲು ಇಷ್ಟವಂತೆ. ಬಾ ಈಗ ನಿನ್ನ ಕಾಲನ್ನು ಮುರಿದುಹಾಕಿ ಕುಂಟಿ ಮಾಡ್ತೀನಿ” ಎಂದಳು ಸುಚಿತ್ರ.

ವಾಸು “ಅವನೂ ಏನೋ ವೈಯುಕ್ತಿಕವಾಗಿ ಎಲ್ಲಾ ಹೇಳಿಕೊಡ್ತಾನೆ ಅಂತ ನೀವು ಹೇಳಿಕೊಳ್ಳಲು ಮುಂದಾಗಬೇಡಿ. ಯಾವ ಜನ ಹೇಗೆ ಇರ್‍ತಾರೆ ಅಂತ ಹೇಳುವುದಕ್ಕೆ ಆಗೋಲ್ಲ. ಆಮೇಲೆ ಸುಮ್ಮನೆ ಬ್ಲಾಕ್ ಮೇಲ್ ಮಾಡ್ತಾರೆ ಅಷ್ಟೆ! ಅಷ್ಟಕ್ಕೂ ಅವನೇನು ನಿಮ್ಮ ಪರಿಚಯದವನಾ? ಹಳೆಯ ಸಂಬಂಧವಾ? ಏನೂ ಇಲ್ಲ. ನೀನೇ ಪತ್ರ ಬರೆಯುವುದನ್ನು ನಿಲ್ಲಿಸಿಬಿಡಿ. ಸುಮ್ಮನೆ ಇಲ್ಲಸಲ್ಲದ್ದೆಲ್ಲಾ ನಿಮ್ಮ ತಲೆಯಲ್ಲಿ ತುಂಬ್ತಾನೆ. ಇವರಿಗೆಲ್ಲಾ ಮಾಡೋಕ್ಕೆ ಕೆಲಸವೇ ಇರೋಲ್ಲ ಅನ್ನಿಸುತ್ತೆ” ಎಂದ.

ಛೇ! ನಾನ್ಯಾಕೆ ಇವರಿಗೆಲ್ಲಾ ಪತ್ರ ತೋರಿಸುವ ಅಧಿಕಪ್ರಸಂಗತನ ಮಾಡಿದೆ? ಮನೋಹರ ನನಗೆ ಇಷ್ಟವಾಗಿರುವಷ್ಟು, ಅರ್ಥವಾಗಿರುವಷ್ಟು ಅವರಿಗೆ ಆಗಿಲ್ಲ. ಇದು ಅವರ ತಪ್ಪಲ್ಲ. ನಾನೇ ಇನ್ನು ಮುಂದೆ ಇವರಿಬ್ಬರ ಜೊತೆ ಮನೋಹರನ ಬಗ್ಗೆ ಮಾತನಾಡಬಾರದು. ನಿಜಕ್ಕೂ ಮನೋಹರ ಎಷ್ಟೊಂದು ಬುದ್ಧಿವಂತ, ವಿಚಾರವಂತ, ಅವರೂ ನನ್ನ ಸ್ನೇಹಕ್ಕಾಗಿ ಎಷ್ಟೊಂದು ಒದ್ದಾಡುತ್ತಾನೆ.

ಅಬ್ಬಾ! ಮನೋಹರನಲ್ಲಿ ಎಂಥೆಂಥ ಯೋಚನೆಗಳಿವೆ. ಬದುಕಿನಲ್ಲಿ ಎಷ್ಟೊಂದು ಕಷ್ಟಪಟ್ಟಿದ್ದಾನೆ. ಅದಕ್ಕೆ ತುಂಬಾ ಬುದ್ಧಿವಂತನಾಗಿ ರ್‍ಯಾಂಕ್ ಬಂದಿರಬಹುದು. ಬಡತನದಲ್ಲಿದ್ದರೂ ನನ್ನ ಜೀವನ ಹೇಗೋ ಹೆಚ್ಚು ತೊಂದರೆಯಿಲ್ಲದೆ ನಡೆದುಕೊಂಡು ಬಂದಿದೆಯಲ್ಲಾ, ಕೈಗೆ ಕೆಲಸ ಸಿಕ್ಕಿದ ಮೇಲಂತೂ ನಾವು ಚಿಕ್ಕವರಾಗಿದ್ದಾಗ ಎಷ್ಟು ಕಷ್ಟಪಟ್ಟಿದ್ದೆವು ಎಂಬುದೆಲ್ಲಾ ಮರೆತೇ ಹೋಗುತ್ತಿದೆ.

ಪಾಪ ಮನೋಹರ ತನ್ನನ್ನು ಯಾರಾದರೂ ಅರ್ಥಮಾಡಿಕೊಳ್ಳಲಿ ಎಂದು ಅವನಿಗೆಷ್ಟು ಆಸೆ! ಅವನ ಪತ್ರಗಳಲ್ಲಿ ಯಾವುದೇ ಕಪಟತನ ಇರುವುದಿಲ್ಲ ಅದೆಷ್ಟು ಸಲೀಸಾಗಿ ತನಗನಿಸಿದ್ದನ್ನೆಲ್ಲಾ ಹೇಳಿಬಿಡುತ್ತಾನೆ. ನನಗಾದರೂ ಆ ರೀತಿ ಅನಿಸಿದ್ದೆಲ್ಲಾ ಹೇಳುವ ಸ್ನೇಹಿತರ್‍ಯಾರೂ ಇಲ್ಲವಲ್ಲ. ನನಗೆ ಇಷ್ಟು ಒಳ್ಳೆಯ ಸ್ನೇಹಿತ ಸಿಕ್ಕಿರುವುದಕ್ಕೆ ಇವರಿಬ್ಬರಿಗೂ ಹೊಟ್ಟೆಕಿಚ್ಚಿರಬೇಕು. ಅದಕ್ಕೆ ಹಾಗೆಲ್ಲಾ ಅನ್ನುತ್ತಾರೆ.
ಇನ್ನು ಮೇಲೆ ಹೆಚ್ಚಾಗಿ ಕಾದಂಬರಿಗಳನ್ನು ಓದಬೇಕು. ಮನಃಶಾಸ್ತ್ರ ಓದಿ, ವ್ಯಕ್ತಿಗಳನ್ನು ನೋಡಿದಕೂಡಲೇ ‘ ಈ ವ್ಯಕ್ತಿ ಹೀಗೆ ’ ಎಂದು ಹೇಳಿಬಿಡಬೇಕು! ಮನೋಹರನ ರೀತಿಯಲ್ಲಿಯೇ ನಾನೂ ಬದುಕಿನ ಬಗ್ಗೆ ಯೋಚಿಸಬೇಕು. ಮನೋಹರನಷ್ಟಲ್ಲದಿದ್ದರೂ, ಅವನೆದುರಿಗೆ ಕುಳಿತು ಅವನು ಹೇಳುವ ವಿಷಯಗಳ ಬಗ್ಗೆ ನಾನೂ ಯೋಚಿಸುವಂತಿದ್ದರೆ ಎಷ್ಟು ಚೆನ್ನ.
ನಿನ್ನೆಯ ಕನಸು ಎಷ್ಟು ಸುಂದರವಾಗಿತ್ತು. ಕುಂಟೆಬಿಲ್ಲೆ ಆಟವನ್ನು ನಾನು, ವಾಸು, ಸುಚಿತ್ರ ಆಡುತ್ತಿರುವಾಗ ನಾನೇ ಗೆದ್ದುಬಿಡುತ್ತೇನೆಂಬ ಹೊಟ್ಟೆ‌ಉರಿಯಿಂದ ಅವರಿಬ್ಬರೂ ನನ್ನ ಒಂದೊಂದು ಕಾಲಿಗೆ ಬಲವಾದ ಪೆಟ್ಟುಕೊಟ್ಟು ಬೀಳಿಸಿಬಿಡುತ್ತಾರೆ. ಎಲ್ಲಿಂದಲೋ ತಟಕ್ಕನೆ ಬಂದ ಮನೋಹರ ನನ್ನನ್ನು ಹಿಡಿದು ಎಬ್ಬಿಸಿ ನಡೆಸಲು ಪ್ರಯತ್ನಿಸುತ್ತಾನೆ. ಆದರೆ ನನ್ನ ಕಾಲು ಕುಂಟಾಗಿಬಿಟ್ಟಿರುವುದರಿಂದ ಮಗುವನ್ನು ಎತ್ತಿಕೊಂಡಷ್ಟು ಹಗುರವಾಗಿ ಎತ್ತಿ ಹೆಗಲಮೇಲೆ ಹಾಕಿಕೊಳ್ಳುತ್ತಾನೆ.
ಯಾಕೋ ಆ ಕನಸನ್ನು ಜ್ಞಾಪಿಸಿಕೊಂಡರೆ ಮೈಯಲ್ಲೆಲ್ಲಾ ಏನೋ ಒಂದು ರೀತಿಯ ಹೊಸದಾದ ಅನುಭವ ಆಗುತ್ತದೆ. ನಿಜಕ್ಕೂ ಮನೋಹರನನ್ನು ನಾನು ಸರಿಯಾಗಿ ಅರ್ಥಮಾಡಿಕೊಂಡು ಅವನಿಗೊಂದು ಹೊಸಬಾಳನ್ನು ಕೊಡುವಂತಾದರೆ? ಮನೋಹರ ತುಂಬಾ ಒಳ್ಳೆಯವನು, ವಿಚಾರವಾದಿ. ವರದಕ್ಷಿಣೆ ಇಲ್ಲದೆ ನನ್ನನ್ನು ಮದುವೆಯಾಗುತ್ತಾನೇನೋ ಅವನನ್ನೇ ನಾನು ಮದುವೆಯಾಗುವಂತಿದ್ದರೆ ಅದೆಷ್ಟು ಚೆನ್ನ. ಯಾಕೋ ಈ ರೀತಿಯ ಯೋಚನೆಗಳು ಮನಸ್ಸಿಗೆ ಎಂದೂ ಆಗದಷ್ಟು ಸಂತೋಷ ಕೊಡುತ್ತಿವೆಯಲ್ಲಾ!

ಇನ್ನು ಮುಂದೆ ಮನೋಹರ ಪತ್ರ ಬರೆದರೆ ಅದನ್ನೆಲ್ಲಾ ವಾಸು, ಸುಚಿತ್ರರಿಗೆ ತೋರಿಸುವುದೇ ಬೇಡ. ಸುರೇಶನಲ್ಲಿ ಹೇಳಿಕೊಳ್ಳಬೇಕು; ಇವರೆಲ್ಲರಿಗಿಂತ ಚೆನ್ನಾಗಿ ಅವನೇ ಅರ್ಥಮಾಡಿಕೊಳ್ಳಬಹುದು. ನನ್ನ, ಮನೋಹರನ ವಿಷಯ ತಿಳಿದರೆ ಅವನೇ ಮುಂದಾಗಿ ನಿಂತು ಮದುವೆ ಮಾಡಬಹುದೇನೋ. ಮನೋಹರನ ನನ್ನ ಸಂಬಳ ಎರಡೂ ಸೇರಿದರೆ ಎರಡು ಸಾವಿರದಷ್ಟಾಗುತ್ತದೆ. ಅಮ್ಮನನ್ನು ಸುರೇಶ ನೋಡಿಕೊಳ್ಳತ್ತಾನೆ. ಐನೂರು ರೂಗಳನ್ನು ಮನೋಹರನ ಅಪ್ಪ- ಅಮ್ಮನಿಗೆ ಕಳುಹಿಸಿ ಇನ್ನು ಮಿಕ್ಕ ಹಣದಲ್ಲಿ ನಾವಿಬ್ಬರೂ ಅದೆಷ್ಟು ಸುಖವಾಗಿ ಸಂಸಾರ ನಡೆಸಬಹುದು! ಇದರ ಬಗ್ಗೆಯೆಲ್ಲಾ ಸುಚಿತ್ರ, ವಾಸು ಹೇಗೆ ಯೋಚಿಸುತ್ತಾರೆ? ಅವರ ಮನಸ್ಸಿಗೆ ಏನು ಅನ್ನಿಸುತ್ತದೋ ಅದನ್ನೇ ಸರಿ ಅಂತ ಸಾಧಿಸುತ್ತಾರೆ. ಇನ್ನು ಮುಂದೆ ಮನೋಹರನ ಪತ್ರ ಬಂದಾಗ ಇವರೇನಾದರೂ ಕೆಟ್ಟದಾಗಿ ಮಾತನಾಡಿಕೊಂಡರೆ, ಸುಚಿತ್ರ ಹಿಂದೆ ಕೊಟ್ಟಿದ್ದ ಇನ್ನೂರು ರೂಪಾಯಿ ಸಾಲ ಹಿಂತಿರುಗಿಸಿ ಅವಳ ಜೊತೆ ಮಾತನ್ನಾಡುವುದನ್ನೇ ನಿಲ್ಲಿಸಿಬಿಡಬೇಕು. ಸುರೇಶ ಏನಾದರೂ ಅಡ್ಡಗಾಲು ಹಾಕಿದರೆ ಮೈಸೂರಿಗೆ ಹೋಗಿ ಅವನನ್ನು- ಅಮ್ಮನನ್ನು ನೋಡುವುದೇ ಬೇಡ “ಖಿhಚಿಟಿಞs ಜಿoಡಿ ಥಿouಡಿ ಟeಣಣeಡಿ ಏಕೆಂದರೆ ಇಲ್ಲಿ ಹೊತ್ತು ಹೋಗದ ಕ್ಷಣಗಳಲ್ಲಿ ನಿಮ್ಮ ಕಾಗದ ಸಾಕಷ್ಟು ರಿಲೀಫ್ ಕೊಡುತ್ತದೆ. ನಿಮ್ಮ ಕಾಗದಗಳ ಬಗ್ಗೆ ನನಗೆ ಅತ್ಯಂತ ಕುತೂಹಲವಿರುತ್ತದೆ. ನಿಮ್ಮ ವ್ಯಕ್ತಿತ್ವ ಮತ್ತು ಸುತ್ತಲಿನವರ ಪರಿಚಯವಾಗುತ್ತದೆ. ಬರೆಯುತ್ತಲೇ ಇರಿ…..”ಎಂದು ಮನೋಹರ ಬರೆದಿದ್ದಾನೆ. ಮನೋಹರನಿಗೆ ದಿನವೂ ಒಂದೊಂದು ಪತ್ರ ಬರೆದು ಅವನ ಬೇಸರವನ್ನೆಲ್ಲ ಸಾಧ್ಯವಾದಷ್ಟು ಮಟ್ಟಿಗೆ ನಾನೇ ಹೋಗಲಾಡಿಸಬೇಕು. ಅವನಿಗೆ ಪ್ರಪಂಚದಲ್ಲಿ ಆತ್ಮೀಯರೂ, ಸ್ನೇಹಿತರೂ ಯಾರೂ ಇಲ್ಲ. ನಾನು ಅವನಿಗೆ ತುಂಬಾ ಇಷ್ಟವಾದರೆ ನನ್ನನ್ನು ಆಗ ತುಂಬಾ ಪ್ರೀತಿಸುತ್ತಾನೆ. ಬಹುಶಃ ಒಬ್ಬ ಗಂಡ ತನ್ನ ಹೆಂಡತಿಗೆ ಕೊಡುವುದಕ್ಕಿಂತಲೂ ಹೆಚ್ಚಿನ ಪ್ರೀತಿಯನ್ನೇ ಕೊಡಬಹುದು. ನಿಜಕ್ಕೂ ಹಾಗೆ ಆಗುವುದಾದರೆ ನಾನೆಷ್ಟು ಸುಖಿ….
ವಾಸು, ಸುಚಿತ್ರ ಮಾತನಾಡಿಕೊಂಡು ಎದುರಿಗೆ ಬರುವಾಗ ನಾನು ಮನೋಹರನ ಬಗ್ಗೆ ಯೋಚಿಸುವುದನ್ನು ನಿಲ್ಲಿಸಿ ಏನೋ ಕೆಲಸ ಮಾಡುವವಳಂತೆ ನಟಿಸಿದ್ದೆ. ವಾಸು ” ಏನು ನಿಮ್ಮ ಪ್ರೇಮಕಥೆಯ ಬಗ್ಗೆ ಯೋಚಿಸುತ್ತಿದ್ದೀರಾ? ಕಳ್ಳನ ದಾರಿ ಕಳ್ಳನಿಗೇ ಬೇಗ ಗೊತ್ತಾಗುವುದು. ನನ್ನದೂ ಪ್ರೇಮವಿವಾಹ ನೋಡಿ …..” ಎಂದು ಕಣ್ಣು ಮಿಟುಕಿಸಿದ. ಸುಚಿತ್ರ, ” ಪ್ರೇಮವೂ ಇಲ್ಲ, ಕಥೆಯೂ ಇಲ್ಲ. ಕೆಲಸಕ್ಕೆ ಬಾರದ ವಿಷಯಗಳನ್ನೆಲ್ಲ ಅವನು ಬರೀತಾನೆ. ಅದಕ್ಕೆಲ್ಲಾ ಗಂಟೆಗಟ್ಟಲೆ ತಲೆಕೆಡಿಸಿಕೊಂಡು, ಯೋಚಿಸಿ ಇವಳು ಉತ್ತರ ಬರೆಯುತ್ತಾಳೆ. ಅವನು ನಾಲ್ಕು ಸಾಲು ಬರೆದರೆ ಇವಳದಕ್ಕೆ ಇಪ್ಪತ್ತು ಪುಸ್ತಕ ಓದಿ ಎಂಟು ಸಾಲು ಉತ್ತರ ಕೊಡುತ್ತಾಳೆ. ಇದು ಎಲ್ಲಿಯವರೆಗೆ ಹೋಗುತ್ತೋ, ಏನಾಗುತ್ತೋ ಕಾದುನೋಡಬೇಕು. ಅವನೇನಾದರೂ ಇಲ್ಲಿಗೆ ಬಂದರೆ ಸರಿಯಾಗಿ ಮಾತಾಡಿ ಅವನ ಬಂಡವಾಳವನ್ನೆಲ್ಲಾ ಆಚೆಗೆ ತೆಗೆದು ಹಾಕಿಬಿಡ್ತೀನಿ.” ಅವಳ ಭಾಷಣ ಇನ್ನೂ ಮುಂದುವರಿಯುತ್ತಿರಬೇಕಾದರೆ ನಾನಲ್ಲಿಂದ ಜಾಗ ಖಾಲಿ ಮಾಡಿದೆ.
*
*
*
ಮನೋಹರನ ಪರಿಚಯವಾಗಿ ಆರು ತಿಂಗಳಾದ ನಂತರದಲ್ಲಿ ವಾಸು, ಸುಚಿತ್ರ ಅವನ ಬಗ್ಗೆ ಮಾತನಾಡುವುದಾಗಲೀ, ಯೋಚಿಸುವುದಾಗಲೀ ನಿಲ್ಲಿಸಿರುವುದು ನನಗೆ ಬಹಳ ನೆಮ್ಮದಿ ತಂದ ವಿಷಯ. ಮನೋಹರನ ಪತ್ರ ಬಂದಾಗಲೆಲ್ಲ ಅವನನ್ನು ನೋಡಲೇಬೇಕೆಂಬ ಬಯಕೆ ಆಗುತ್ತಿತ್ತು. ಇದುವರೆಗೂ ಅವನ ಪತ್ರಗಳು, ಅದರಲ್ಲಿನ ಮಾತುಗಳು-ಇದಿಷ್ಟೇ ಅವನ ಬಗ್ಗೆ ಯೋಚಿಸಲು ನನಗಿರುವ ಸಾಮಾಗ್ರಿಗಳು. ಇವಿಷ್ಟು ಸಾಲದು, ಇನ್ನೂ ಹೆಚ್ಚು ವಿಷಯಗಳು ನನಗೆ ಬೇಕೆನಿಸುತ್ತಿತ್ತು.

ಸುಂದರ ಯುವಕನೊಬ್ಬ ನಮ್ಮತ್ತ ನಿಂತು ನೋಡುವಾಗಲೇ ಸುಚಿತ್ರ “ನೋಡು, ನಿನ್ನ ಮನೋಹರ್ ಬಂದಿದ್ದಾನೆ. ಬೇಗ ಹೋಗು” ಎಂದಳು. ಸಾಮಾನ್ಯವಾಗಿ ತೀರಾ ವಿಕಾರವಾಗಿರುವವನನ್ನು ಅಥವಾ ಸುಂದರವಾಗಿರುವವರನ್ನು ಕಂಡಾಗ ಹೀಗೆಲ್ಲಾ ರೇಗಿಸುತ್ತಿರುತ್ತಾಳೆ. ಆದ್ದರಿಂದ ಅವಳ ಮಾತು ಕೇಳದವಳ ಹಾಗೆ ಕ್ಯಾಂಟೀನಿನಲ್ಲಿ ಕುಳಿತು ಡಬ್ಬಿಯ ಮುಚ್ಚಳ ತೆರೆದೆ.

“ನಾನು ಮಿಸ್ ವಸಂತ ಅವರನ್ನು ಕಾಣಬೇಕಿತ್ತು.” ಸುಚಿತ್ರಳ ಹತ್ತಿರ ಆ ವ್ಯಕ್ತಿ ಹೇಳುವುದನ್ನು ಕೇಳಿ ತಟ್ಟಕ್ಕನೆ ತಲೆ ಎತ್ತಿದೆ. ಅವನು ನನ್ನ ಮುಖ ನೋಡಿ “I ಚಿm ಒಚಿಟಿohಚಿಡಿ, ನೀವು ವಸಂತಾನೇ ಆಗಿರಬೇಕು” ಎಂದಾಗ ಆಶ್ಚರ್ಯ, ದಿಗ್ಭ್ರಮೆಗಳಿಂದ ಏನೊಂದೂ ತೋರದೆ ಪೆಚ್ಚಾಗಿ ನಿಂತುಬಿಟ್ಟೆ.

ಅವನು ಮನೋಹರ ಎಂದು ಸುಮಾರು ಹೊತ್ತು ನನಗೆ ನಂಬಲಾಗಲೇ ಇಲ್ಲ. ಕಣ್ಣುಬಾಯಿ ಅರಳಿಸಿ ಆಶ್ಚರ್ಯದಿಂದ ನೋಡುತ್ತಿರುವುದನ್ನು ಕಂಡು ಮನೋಹರ್ ಮಂದಹಾಸ ಬೀರುತ್ತಾ ಹತ್ತಿರ ಬಂದು “ನನ್ನ ಹತ್ತಿರ Iಜeಟಿಣiಜಿiಛಿಚಿಣioಟಿ ಅಚಿಡಿಜ ಇಲ್ಲ. ಅದಿದ್ದರೆ ನಾನೇ ಮನೋಹರ್ ಅಂತ ಪ್ರೂವ್ ಮಾಡಬಹುದಿತ್ತು” ಎಂದ. ಅವನ ಮಾತು ಕೇಳಿ ನನಗೆ ಒಂಥರಾ ನಾಚಿಕೆಯಾಯಿತು. ನನ್ನನ್ನು ನೋಡಲೆಂದೇ ಮನೋಹರ ಬಾಂಬೆಯಿಂದ ಬಂದಾಗ ಹೀಗೆ ಪೆದ್ದುಪೆದ್ದಾಗಿ ಆಡುತ್ತಿರುವುದನ್ನು ಕಂಡು ಅವನಿಗೆ ನನ್ನ ಬಗ್ಗೆ ಕನಿಕರ ಮೂಡಿರಬಹುದು. ನಿಜಕ್ಕೂ ನನಗೆ ಮನೋಹರ ಇಷ್ಟೊಂದು ಸುಂದರನಾಗಿರುವ ವ್ಯಕ್ತಿ ಎಂಬ ಸತ್ಯವನ್ನು ಒಪ್ಪಿಕೊಳ್ಳಲಾಗಲಿಲ್ಲ. ಇಷ್ಟೊಂದು ಸ್ಫುರದ್ರೂಪಿ ತರುಣ ಸಾಮಾನ್ಯ ರೂಪಿನ ನನ್ನನ್ನು ಮೆಚ್ಚಿಕೊಳ್ಳುವನೆ?

“ಏನು ಹೀಗೆ ಕುಳಿತುಬಿಟ್ಟಿರಲ್ಲಾ? ನನ್ನನ್ನು ಮಾತನಾಡಿಸುವುದಿಲ್ಲವೆ? ಇನ್ನೂ ನಾನು ಹಳ್ಳಿಗೆ ಹೋಗಬೇಕು. ನನ್ನ ತಂದೆ-ತಾಯಿ ಇವರ್‍ಯಾರನ್ನೂ ನೋಡಿಲ್ಲ. ಬಾಂಬೆಯಿಂದ ನೇರವಾಗಿ ನಿಮ್ಮನ್ನು ನೋಡಲು ಬರ್‍ತಾ ಇದ್ದೀನಿ” ಅಂದ. ಕಷ್ಟಪಟ್ಟು ನನ್ನ ನಾಲಿಗೆಗೆ ಶಕ್ತಿ ತಂದುಕೊಂಡೆ. ಆದರೆ ಏನೆಂದು ಮಾತನಾಡಲಿ? ಏನೂ ತೋಚುತ್ತಿಲ್ಲವಲ್ಲ….ಸುಚಿತ್ರ ಏನಾದರೂ ಮಾತನಾಡು ಎಂಬಂತೆ ಕೈಯಿಂದ ತಿವಿದಳು. ಕೂಡಲೇ ನಾನು “ಇವಳು ಸುಚಿತ್ರ ನನ್ನ ಗೆಳತಿ, ಊಟ ಮಾಡ್ತೀರಾ?” ಎಂದು ಕೇಳಿದೆ. ಮನೋಹರ ನಿಸ್ಸಂಕೋಚವಾಗಿ ನನ್ನ ಡಬ್ಬಿಯಿಂದ ಒಂದು ಚಪಾತಿ ತೆಗೆದುಕೊಂಡು “ಹೊಟ್ಟೆ ತುಂಬಾ ಹಸಿಯುತ್ತಿದೆ” ಎಂದು ತಿನ್ನಲು ಶುರು ಮಾಡಿದ.

ಕ್ಯಾಂಟೀನಿನಲ್ಲಿ ಏನೋ ಉಸಿರುಗಟ್ಟಿಸುವ ವಾತಾವರಣ ಎನ್ನಿಸಿತು. ಜೊತೆಗೆ ಸುಚಿತ್ರಳ ಎದುರಿಗೆ ಕುಳಿತು ಮಾತನಾಡುವುದು ನನಗೆ ಬೇಕಿರಲಿಲ್ಲ. ಆದ್ದರಿಂದ “ಬನ್ನಿ ಹೊರಗೆ ಹೋಗೋಣ” ಎಂದು ಕರೆದೊಯ್ದೆ.

“ಅಂತೂ ನಿಮ್ಮನ್ನು ನೋಡಿದೆ. ನಿಮ್ಮ ಬಗ್ಗೆ ನನಗೆ ಅದೆಷ್ಟು ಕುತೂಹಲವಿತ್ತು ಗೊತ್ತಾ?” ಎಂದು ಮನೋಹರ ಹೇಳಿದಾಗ, “ನೋಡಿ ನಿರಾಸೇನೂ ಆಗಿರಬೇಕಲ್ವಾ?” ಎಂದೆ.

“ಏನನ್ನಾದರೂ ನಿರೀಕ್ಷಿಸಿದರೆ ತಾನೇ ನಿರಾಸೆಯಾಗೋಕ್ಕೆ. ನೀವು ಹೇಗಿರಬಹುದು ಎಂದು ನಾನು ಕಲ್ಪಿಸಿಕೊಂಡಿರಲಿಲ್ಲ. ನೀವು ಅಷ್ಟೊಂದು ಪೆದ್ದುಪೆದ್ದಾಗಿ, ಆದರೆ ಸರಳವಾಗಿ ಪತ್ರ ಬರೆಯುವುದರಿಂದ ನಿಮ್ಮ ಮುಖದಲ್ಲಿ ತುಂಬಾ ಪೆದ್ದುಕಳೆ ಇರಬಹುದೇನೋ ಅಂತ ಒಂದೆರಡು ಬಾರಿ ಅಂದುಕೊಂಡಿದ್ದೆ ಅಷ್ಟೆ. ಆದರೆ ನಿಮ್ಮನ್ನು ನೋಡಿದರೆ ಯಾರೂ ಪೆದ್ದು ಅಂತ ಹೇಳೊಲ್ಲ. ತುಂಬಾ ಬುದ್ಧಿವಂತರ ಹಾಗೆ ಕಾಣಿಸುತ್ತೀರ” ಮನೋಹರ ಹೇಳಿದಾಗ ನಾಚಿಕೆಯಿಂದ ತಲೆತಗ್ಗಿಸಿದೆ.

“ಇವತ್ತು ಲೀವ್ ಹಾಕಲೆ?” ಮೆಲ್ಲಗೆ ಕೇಳಿದೆ.

“ಸುಮ್ಮನೆ ರಜೆ ಯಾಕೆ ಹಾಳುಮಾಡುತ್ತೀರ. ಅಷ್ಟಕ್ಕೂ ನನ್ನ ಹತ್ತಿರ ಮಾತನಾಡುವುದಕ್ಕಾದರೂ ಏನಿದೆ? ಎಲ್ಲಾ ಪತ್ರಗಳಲ್ಲಿಯೇ ಮುಗಿಯುತ್ತಲ್ಲ” ಎಂದುಬಿಟ್ಟ ಮನೋಹರ.

ನನಗೆ ನಿರಾ‌ಎಯಾಯಿತು. ಮನೋಹರ ಬಂದಕೂಡಲೇ ಅವನ ಕೈಹಿಡಿದು ಮಕ್ಕಳಂತೆ ಕುಣಿದು ಕುಪ್ಪಳಿಸುತ್ತಾ ಇಡೀ ಪಾರ್ಕಿನ ತುಂಬಾ ಓಡಾಡುವ ದೃಶ್ಯವನ್ನು, ಅಂಗಡಿಗೆ ಕರೆದುಕೊಂಡು ಹೋಗಿ, ಮನೋಹರನೇ ಬಲವಂತದಿಂದ ತುಂಬಾ ಸೀರೆಗಳನ್ನು ಸೆಲೆಕ್ಟ್ ಮಾಡಿ, ಅವುಗಳನ್ನೆಲ್ಲಾ ಇಬ್ಬರೂ ಕೈ ತುಂಬಾ ಹೊತ್ತು ಹೊರಲಾರದೇ ಏದುಸಿರು ಬಿಟ್ಟು ಬರುವಾಗ, ಸುತ್ತಲಿರುವ ಜನ ಆಶ್ಚರ್ಯದಿಂದ ನಮ್ಮತ್ತ ಒಮ್ಮೆ ತಿರುಗಿ ನೋಡುವಾಗ ನನಗದರ ಅರಿವೇ ಇಲ್ಲದೆ ಉದಾಸೀನಳಾಗಿ ‘ಆಗಾಗ್ಗೆ ನಾನು ಹೀಗೆ ರಾಶಿ ರಾಶಿ ಸೀರೆಗಳನ್ನು ನೋಡಿಕೊಳ್ಳುತ್ತಲೇ ಇರುತ್ತೇನೆ’ ಎಂಬಂತೆ ಮುಖ ಮಾಡುವುದನ್ನು ನೆನೆಸಿಕೊಂಡು ಖುಷಿಪಡುತ್ತಿದ್ದೆ. ಅಷ್ಟು ದೊಡ್ಡ ಕನಸು ಈಗಲೇ ನನಸಾಗುವುದು ಬೇಡ, ಕಡೆಯಪಕ್ಷ ಇಬ್ಬರೂ ಒಟ್ಟಿಗೆ ರಸ್ತೆಯಲ್ಲಿ ನಡೆದುಕೊಂಡು ಹೋಗುವ ಅವಕಾಶವಾದರೂ ಬರಬಾರದಿತ್ತೆ? ಛೇ! ಮನೋಹರ ತುಂಬಾ ಒರಟು ಮನುಷ್ಯ್ಯ.

“ಆಯ್ತಲ್ಲಾ ನಿಮ್ಮನ್ನು ನೋಡಿ, ಇನ್ನು ಊರಿಗೆ ಹೋಗ್ಲಾ? ನನ್ನ ಅಮ್ಮ ಅಪ್ಪ ಕಾಯ್ತಾ ಇರ್‍ತಾರೆ. ಯಾವ ತಿಂಗಳಲ್ಲಿ ಬರ್‍ತೀನೋ ಅಂತ” ಎಂದು ಹೇಳಿ ಹೊರಟು ಬಿಟ್ಟ. ನನಗೆ ಅವನು ಹೋಗುತ್ತಿರುವುದರಿಂದ ಏನೂ ಬೇಸರವಿಲ್ಲ ಎಂಬಂತೆ ಮುಖಮಾಡಿ, ‘ಮತ್ತೆ ಯಾವಾಗ ಭೇಟಿಯಾಗೋಣ’ ಎಂಬ ಪ್ರಶ್ನೆಯನ್ನು ಬಲವಂತದಿಂದ ನುಂಗಿಕೊಂಡೆ. ನನಗೆ ಮನೋಹರನ ಮೇಲೆ ಕೆಟ್ಟ ಕೋಪ ಬಂದಿತ್ತು!

ಹತ್ತು ದಿನಗಳ ನಂತರ ಮತ್ತೆ ಮನೋಹರ ಬಂದು “ನೀವು ನಾಳೆಯಿಂದ ಮೂರು ದಿನ ರಜೆ ಹಾಕಲೇಬೇಕು” ಎಂದ. ಅವನ ಮೇಲಿದ್ದ ಕೋಪ ಯಾವತ್ತೋ ಹೇಲಹೆಸರಿಲ್ಲದಂತಾಗಿತ್ತು. ಯಾಕೆ? ಏನು? ಎಂದು ಕೇಳುವಷ್ಟರಲ್ಲಿ-“ನನ್ನ ತಂಗಿಯ ಮದುವೆ. ನೀವೀಗ ರಜೆ ಹಾಕ್ತಾ ಇದ್ದೀರಾ, ಬರ್‍ತಾ ಇದ್ದೀರಾ” ಎಂದು ಅಧಿಕಾರಯುತವಾಗಿ ಹೇಳಿದಾಗ ನನಗೆ ಇಲ್ಲವೆನ್ನಲು ಸಾಧ್ಯವಾಗಲಿಲ್ಲ. ಅವನ ಮನೆ, ಹಳ್ಳಿಯ ಪರಿಸರ, ಜನ ಎಲ್ಲವನ್ನೂ ಹೇಗಪ್ಪಾ ಎದುರಿಸುವುದು? ಎಂಬ ದೊಡ್ಡ ಸಮಸ್ಯೆ ದಿಢೀರನೆ ನನ್ನ ಮುಂದೆ ನಿಂತಿತು. ಅದನ್ನರಿತವನಂತೆ ಮನೋಹರ್ ಹೇಳಿದ.

“ನನ್ನ ಅಪ್ಪ-ಅಮ್ಮ, ತಮ್ಮ-ತಂಗಿ ಎಲ್ಲರಿಗೂ ನಿಮ್ಮ ವಿಷಯ ಹೇಳಿದ್ದೇನೆ. ನಿಮಗೆ ಯಾವ ರೀತಿಯಲ್ಲೂ ತೊಂದರೆಯಾಗದ ಹಾಗೆ ನೋಡಿಕೊಳ್ತಾರೆ. ನಮ್ಮ ಹಳ್ಳಿಯ ಜನ, ಬೇರೆ ಸಾಮಾನ್ಯ ಜನಗಳಿಗಿಂತ ಯಾವುದೇ ರೀತಿಯಲ್ಲಿಯೂ ಭಿನ್ನರಲ್ಲ. ಆದರೆ ಯಾವುದೇ ವಿಷಯಕ್ಕೂ ನೀವು ಅವರನ್ನು ಛಿಚಿಡಿe ಮಾಡಬೇಡಿ. ನಾನಂತೂ ಛಿಚಿಡಿe ಮಾಡದೇ ಇರುವುದರಿಂದ ಇಷ್ಟರಮಟ್ಟಿಗೆ ಇದ್ದೇನೆ.”

ಬೆಂಗಳೂರಿನಿಂದ ಅವನ ಹಳ್ಳಿಗೆ ಸುಮಾರು ನಾಲ್ಕೂವರೆ-ಐದು ಗಂಟೆಗಳ ಕಾಲ ಬಸ್ಸಿನಲ್ಲಿ ಪ್ರಯಾಣ ಮಾಡಬೇಕು. ಅದೂ ಮನೋಹರನ ಪಕ್ಕದಲ್ಲಿ ಕುಳಿತು ಎಂಬುದನ್ನು ನೆನೆದೇ ನನ್ನ ಮೈಮನ ಪುಳಕಿತಗೊಂಡಿತು. ನೋಡಬೇಕು, ಮನೋಹರ ನನ್ನ ಪಕ್ಕ ಒತ್ತರಿಸಿಕೊಂಡು ಮೈಗೆ ಮೈ ತಾಗಿಸಿಕೊಂಡು ಕುಳಿತುಕೊಳ್ಳುವನೋ ಅಥವಾ ಬೇರೆ ಅಪರಿಚಿತ ಗಂಡಸಿನಂತೆ ದೂರಸರಿದು ಕುಳಿತುಕೊಳ್ಳುತ್ತಾನೋ…..

“ತುಂಬಾ ಆಡಂಬರದ ಒಡವೆ, ಸೀರೆಗಳನ್ನು ತರುವುದಾದರೆ ಖಂಡಿತಾ ನನ್ನ ಜೊತೆ ಬರಲೇಬೇಡಿ. ಬಹುಶಃ ನೀವೀಗ ಅದೇ ವಿಷಯವನ್ನು ತುಂಬಾ ಸೀರಿಯಸ್ಸಾಗಿ ಯೋಚಿಸ್ತಾ ಇದ್ದೀರ ಅನ್ನಿಸುತ್ತೆ. ಹಾಗೇ ಪ್ರೆಸೆಂಟೇಶನ್ ಸಹಾ ತರಬಾರದು” ಎಂದ.

ಹೌದಲ್ಲಾ. ನಾನವುಗಳ ಬಗ್ಗೆ ಯೋಚಿಸಿಯೇ ಇರಲಿಲ್ಲ. ಭರ್ಜರಿ ಒಡವೆ, ಸೀರೆಹಳು ಹ್ಯಾಗೂ ನನ್ನ ಹತ್ತಿರ ಇರಲಿಲ್ಲ. ಅದನ್ನು ಮನೋಹರನಿಗೆ, ಅವನ ತಂಗಿಗೆ ಹೇಗೆ ಹೇಳುವುದು? ‘ಎಲ್ಲಾ ಮೈಸೂರಿನಲ್ಲಿಟ್ಟಿದ್ದೇನೆ ತರಲಿಲ್ಲ’ ಎಂದರಾಯಿತು ಅಷ್ಟೆ!

ಮನೋಹರನ ಜೊತೆ ಅವನ ತಂಗಿಯ ಮದುವೆಗೆಂದು ಹಳ್ಳಿಗೆ ಹೋಗುತ್ತೇನೆ ಎಂಬ ವಿಷಯ ಸುಚಿತ್ರ, ವಾಸುವುಗೆ ತಿಳಿಸಿದಾಗ, ಅದು ತಮಗೆ ಇಷ್ಟವಾಗಲಿಲ್ಲವೆಂಬಂತೆ ಮುಖ ಸಿಂಡರಿಸಿಕೊಂಡರು. ನನಗೆ ಅದು ತಿಳಿಯಲಿಲ್ಲವೆಂಬಂತೆ ನಟಿಸಿ, ನಗುತ್ತಾ ಕೈ ಬೀಸಿ ಹೊರಬಂದೆ.

ಬಸ್ಸಿನಲ್ಲಿ ಕುಳಿತಾಗ ಮನೋಹರನ ಜೊತೆ ಏನೇನು ವಿಷಯ ಮಾತಾಡಬೇಕು? ಅವನ ತಮ್ಮ , ತಂಗಿ, ಅಪ್ಪ, ಅಮ್ಮ ಇವರೆಲ್ಲರ ಜೊತೆ ಹೇಗೆ ನಡೆದುಕೊಳ್ಳಬೇಕು? ಮನೋಹರನ ಮನೆ ಚಿಕ್ಕದು, ನನ್ನನ್ನು ಎಲ್ಲಿ ಮಲಗಿಸಬಹುದು? ಹಳ್ಳಿಯಾದ್ದರಿಂದ ಶೌಚಗೃಹದ ವ್ಯವಸ್ಥೆ ಇದೆಯೋ ಇಲ್ಲವೋ ಎಂಬೆಲ್ಲಾ ಯೋಚನೆಗಳಿಂದ ಇಡೀ ರಾತ್ರಿ ನಿದ್ರೆಯೇ ಬರಲಿಲ್ಲ.
*
*
*
ಬಸ್ಸಿನಲ್ಲಿ ಹೋಗುವಾಗ ಮನೋಹರ ಬಹಳ ಸಲಿಗೆಯಿಂದ, ಆತ್ಮೀಯತೆಯಿಂದ ನಡೆದುಕೊಂಡ. ನಾನು ಪತ್ರದಲ್ಲಿ ಕಂಡ ಮನೋಹರ್‌ಗಿಂತಲೂ ಒಳ್ಳೆಯವನಾಗಿ ಕಂಡ. ಬಸ್ಸಿನಲ್ಲಿ ನನಗೆ ಬೇಸರವಾಗದಿರಲಿ ಎಂದು ಅನೇಕ ತಮಾಷೆಯ ಪ್ರಸಂಗಗಳನ್ನು ಹೇಳಿ ತನ್ನನ್ನು ತಾನೇ ಗೇಲಿಮಾಡಿಕೊಂಡು ನಗಿಸುತ್ತಿದ್ದ. ಹಳ್ಳಿ ತಲಪುವವರೆಗೆ ಮನೋಹರನ ಮಾತುಗಳು ಮುಗಿಯಲಿಲ್ಲ. ಮನೆಯಲ್ಲಿ ತಾನು ಮಾಡಿದ ಚೇಷ್ಟೆಗಳು, ಆಫೀಸಿನಲ್ಲಿ ಮಾಡ್ತಿದ್ದ ಕೀಟಲೆಗಳು, ತಾನು ಅಧಿಕಾರಿ ಎಂಬುದನ್ನು ಮರೆತು ಒಂದು ದಿನ ರಾಕ್ ಅಂಡ್ ರೋಲ್ ಮಾಡಿದ್ದು ಎಲ್ಲಾ ಹೇಳಿ ಸಾಕಷ್ಟು ನಗಿಸಿದ. ಬಸ್ಸು ತುಂಬಾ ಬೇಗನೆ ಹಳ್ಳಿ ತಲುಪಿದೆ ಎನ್ನಿಸಿತು.

ಹಳ್ಳಿ ತಲುಪಿದ ನಂತರ ಸ್ಟಾಪಿನಿಂದ ಮನೆಗೆ ಒಂದು ಕಿಲೋಮೀಟರ್ ದೂರ ನಡೆಯಬೇಕು. ನಾನು ಮನೋಹರನ ಜೊತೆ ಹರಟುತ್ತಾ ನಡೆಯುತ್ತಾ ಹೋಗುವಾಗ ದಾರಿಯಲ್ಲಿ ಸಿಗುತ್ತಿದ್ದ ಮನೆಗಳಲ್ಲಿ ಒಂದು ತಲೆ ಅಕಸ್ಮಾತ್ ಹೊರಗೆ ಬಂದು ನಮ್ಮನ್ನು ನೋಡಿದರೆ, ಕೇವಲ ಎರಡು ಮೂರು ಕ್ಷಣಗಳಲ್ಲಿ ಆ ಮನೆಯ ಬಾಗಿಲು, ಕಿಟಕಿಗಳ ತುಂಬಾ ತಲೆಗಳು ಕಾಣಿಸುತ್ತಿದ್ದವು. ಮನೆ ತಲುಪುವ ತನಕ ಎಲ್ಲ ಮನೆಗಳಲ್ಲಿಯೂ ಹೀಗೇ ಆಗಿ ನನ್ನ ಮೈ ಬೆವರಿತು: ಒಟ್ಟಿನಲ್ಲಿ ನನ್ನ ಆಗಮನ ಆ ಹಳ್ಳಿಯವರಿಗೆ ಒಂದು ಕುತೂಹಲದ ವಿಷಯವಾಗಿತ್ತು. ಮದುವೆಯಾಗದ ಹುಡುಗನ ಜೊತೆ ಅದೇ ವಯಸ್ಸಿನ ಹುಡುಗಿಯೊಬ್ಬಳು ಹೋದರೆ ಹಳ್ಳಿಯವರು ಯಾವ ರೀತಿ ಪ್ರತಿಕ್ರಿಯೆ ತೋರುತ್ತಾರೋ ಅದೆಲ್ಲವೂ ಅಲ್ಲಿ ಕಾಣುತ್ತಿತ್ತು. ಬೆಂಗಳೂರಿನಲ್ಲಿ ಯಾವುದಾದರೂ ಜೋಡಿ ಒಟ್ಟಿಗೆ ಹೊರಟರೆ ನಾನೂ ಹೀಗೆ ದೃಷ್ಟಿಸಿ ನೋಡುತ್ತೇನಲ್ಲವೆ ಎಂದುಕೊಂಡೆ.

ಮನೋಹರನ ಮನೆಯಲ್ಲಿ ನನಗೆ ಆಶ್ಚರ್ಯಕರವಾದ ರೀತಿಯಲ್ಲಿ ಸಡಗರದ ಸ್ವಾಗತ ಸಿಕ್ಕಿತು. ದಡ್ಡ ಹಳ್ಳಿಯ ಹುಡುಗಿ ಎಂದು ಹೇಳುವುದಕ್ಕೆ ಸಾಧ್ಯವಾಗದಷ್ಟು ನಜುಕಿನ ಹುಡುಗಿಯಾಗಿದ್ದಳು. ಮನೆ ಪುಟ್ಟದಾದರೂ ಬಹಳ ಸ್ವಚ್ಛವಾಗಿತ್ತು. ಅಡುಗೆ ಮನೆಯಲ್ಲಿ ನಾಲ್ಕು ದೇವರ ಫೋಟೋಗಳನ್ನು ಬಿಟ್ಟರೆ ಇನ್ನೆಲ್ಲೂ ಪಟಗಳ ಸುಳಿವಿಲ್ಲದಿರುವುದನ್ನು ಕಂಡು ನನಗೆ ಆಶ್ಚರ್ಯವಾಯಿತು. ಮನೋಹರನಿಗೆ ಕೇಳಿದ್ದಕ್ಕೆ- “ದೇವರನ್ನು ನಂಬದಿರುವುದು ವಿಚಾರವಾದಿಗಳು, ಬುದ್ಧಿಜೀವಿಗಳ ಮೊದಲ ಹಂತ” ಎಂದು ನಕ್ಕ. ” ಇಡೀ ಮನೆಯ ತುಂಬಾ ಫೋಟೋಗಳಿದ್ದವು. ಅದರ ಹಿಂದೆ ರಾಶಿ ಹಲ್ಲಿ, ಜಿರಲೆಗಳು ಇದ್ದುದರಿಂದ ಎಲ್ಲವನ್ನು ತೆಗೆಸಿ ಹಾಕಿದ್ದೇನೆ ಅಷ್ಟೆ!” ಎಂದ. ನಾನು ನಿರೀಕ್ಷಿಸಿದ್ದಂತೆ ಮನೋಹರನ ಕೆಟ್ಟ ಕುತೂಹಲದಿಂದ ಪ್ರಶ್ನೆಗಳನ್ನು ಕೇಳಿ ತಲೆ ತಿನ್ನಲಿಲ್ಲ. ನಾನು ಆ ಮನೆಗೆ ಬಹಳ ವರ್ಷಗಳಿಂದ ಪರಿಚಿತಳೇನೋ ಎಂಬಂತೆ ನಡೆದುಕೊಂಡರು.

ನನ್ನನ್ನು ನೋಡಿದ ಕ್ಷಣದಿಂದಲೇ ರತ್ನ ಬಹಳ ಆತ್ಮೀಯತೆಯಿಂದ ನಡೆದುಕೊಂಡಳು. ತನ್ನದೇ ವಯಸ್ಸಿನ ಹುಡುಗಿಯೊಬ್ಬಳು ಮನೆಗೆ ಬಂದಿದ್ದು ಅವಳಿಗೆ ಸಂತೋಷ ತಂದಿತ್ತು. ಅಲ್ಲದೇ ಮನೋಹರ ನನ್ನ ವಿಷಯ, ನನ್ನ ಪತ್ರಗಳು ಎಲ್ಲದರ ಬಗೆಗೆ ಅವಳಿಗೆ ವಿಸ್ತಾರವಾಗಿ ತಿಳಿಸಿದ್ದ. ರತ್ನ ಉಡುಗೆ, ತೊಡುಗೆಯಲ್ಲಿ ನಾಜೂಕಾಗಿದ್ದರೂ ಬೆಡಗು ಕಪಟ ಏನೊಂದೂ ಅರಿಯದ ಶುದ್ಧ ಹಳ್ಳಿಯ ಹುಡುಗಿಯಾಗಿ ನನಗೆ ಕಂಡಳು.

ಮನೋಹರನ ಸ್ನೇಹಿತನನ್ನೇ ರತ್ನ ಮದುವೆಯಾಗುವವಳಿದ್ದಳು. ಮದುವೆ ಗೊತ್ತಾದ ನಂತರ, ಮನೋಹರನ ಗೆಳೆಯ ರತ್ನಳನ್ನು ನೋಡುವುದಕ್ಕೆಂದು ಆಗಾಗ್ಗೆ ಬರುವುದು ಹಳ್ಳಿಯವರಿಗೆ ದೊಡ್ಡ ವಿಷಯವಾಗಿತ್ತು. ಕಾಲ ಕೆಟ್ಟು ಹೋಗಿದೆ ಎಂದು ಬೈಯುತ್ತಿದ್ದರು. ನನ್ನ ಹಳ್ಳಿಯ ಕಥೆ, ಮನೆಯ ಕಥೆ, ಗಂಡನಾಗುವವನ ಕಥೆ ಇವೆಲ್ಲವನ್ನೂ ಎಷ್ಟು ಚೆನ್ನಾಗಿ ಹೇಳುತ್ತಾರೆಂದರೆ ಪರೀಕ್ಷೆಗಳಲ್ಲಿ ಬರಿ ಜೀವನಾಂಶ ತೆಗೆದುಕೊಂಡು ದಾಟಿದ್ದ ನನಗೆ ಅವಳ ಜ್ಞಾಪಕಶಕ್ತಿಯ ಬಗ್ಗೆ ಅಚ್ಚರಿ…. ಒಮ್ಮೆ ಯಾರದ್ದಾದರೂ ಕಥೆ ಶುರುಮಾಡಿದಳೆಂದರೆ ಸಂಬಂಧಪಟ್ಟ, ಸಂಬಂಧಪಡದವರನ್ನೆಲ್ಲಾ ಆಶ್ಚರ್ಯಕರವಾದ ರೀತಿಯಲ್ಲಿ ಕೊಂಡಿ ಹಾಕುತ್ತಾ ಹೇಳುತ್ತಾ ಹೋಗುತ್ತಿದ್ದಳು.

ರಾತ್ರಿ ಪುಟ್ಟ ಕೊಠಡಿಯಲ್ಲಿ ನಾನು, ರತ್ನ ಮಲಗುತ್ತಿದ್ದೆವು. ಅಟ್ಟದ ಮೇಲೆ ಅಪ್ಪ ಅಮ್ಮ ಮಲಗುತ್ತಿದ್ದರು. ಮನೋಹರ, ರಂಗನಾಥ ಇಬ್ಬರೂ ಮಲಗುವುದಕ್ಕೆಂದು ಗೆಳೆಯನ ರೂಮಿಗೆ ಹೊರಟುಬಿಡುತ್ತಿದ್ದುದರಿಂದ ನನಗೆ ನಿರಾಸೆಯಾಗುತ್ತಿತ್ತು. ರಾತ್ರಿಯೆಲ್ಲಾ ಕುಳಿತು ಅವನ ಜೊತೆ ಏನೆಲ್ಲಾ ಮಾತನಾಡಬೇಕೆಂಬ ನನ್ನ ಆಸೆಗೆ ತಣ್ಣೀರೆರಚಿದಂತಾಗುತ್ತಿತ್ತು. ಇದನ್ನು ಸೂಕ್ಷ್ಮವಾಗಿ ಕಂಡುಕೊಂಡ ರತ್ನ “ಅಣ್ಣನಿಗೆ ಇದುವರೆವಿಗೂ ಯಾವೊಬ್ಬ ಗೆಳೆಯನಾಗಲೀ, ಗೆಳತಿಯಾಗಲೀ ಇಲ್ಲ. ಅದೇನೋ ಆಶ್ಚರ್ಯ, ನಿಮ್ಮನ್ನು ತುಂಬಾ ಹಚ್ಚಿಕೊಂಡಿದ್ದಾನೆ. ಮನೆಯಲ್ಲಿ ಯಾವಾಗ ನೋಡಿದರೂ ನಿಮ್ಮದೇ ವಿಷಯ ಹೇಳ್ತಾ ಇರ್‍ತಾನೆ. ನಿಮ್ಮನ್ನು ಬಿಟ್ಟರೆ ಬೇರೆ ಯಾರ ಗೆಳೆಯರ ಬಗ್ಗೆಯೂ ಅವನು ಯೋಚಿಸುವುದೇ ಇಲ್ಲ” ಎಂದಳು.
ಇವೆಲ್ಲಾ ಕೇಳುವುದಕ್ಕೆ ಬಹಳ ಚೆನ್ನಾಗಿರುತ್ತದೆ ಅನ್ನಿಸಿತು. ನನ್ನ ವಿಷಯವಾಗಿ ಇನ್ನೇನು ಹೇಳಿರಬಹುದು ಎಂಬ ಕುತೂಹಲದಿಂದ ರತ್ನಳನ್ನು ಕೇಳುತ್ತಿದ್ದಂತೆ ಮುಖಕ್ಕೆ ರಕ್ತವೆಲ್ಲಾ ನುಗ್ಗಿ ಮೈ ಜುಂ ಎಂದ ಅನುಭವ. ರತ್ನ ” ವಸಂತಾ ತುಂಬಾ ಒಳ್ಳೆಯ ಗೆಳತಿ. ತುಂಬಾ ಮಗು ಮನಸ್ಸು, ಸರಳವಾಗಿದ್ದಾರೆ. ಅಂತಹವರೇ ನನಗೆ ಬೇಕಾದ್ದು. ಅದೇನೇ ಆದರೂ ನಾನು ಮಾತ್ರ ಅವರನ್ನು ಕಳೆದುಕೊಳ್ಳುವುದಿಲ್ಲ” ಅಂತ ಅಣ್ಣ ಹೇಳ್ತಾ ಇದ್ದ. ನಿಮಗೊಂದು ಮಾತು ಕೇಳ್ಲಾ? ಏನೂ ಅಂದ್ಕೋಬಾರದು, ಅಣ್ಣಂಗೆ ಹೇಳಬಾರದು ಆಂ?” ರತ್ನ ಮೆಲ್ಲಗೆ ಪಿಸುಗುಟ್ಟುತ್ತಾ ” ನೀವು ಅಣ್ಣ ಮದುವೆಯಾಗ್ತೀರಾ?” ಎಂದು ಕೇಳಿದಳು. ನಾನು ಕುತೂಹಲದಿಂದ, “ಯಾಕೆ ನಿಮ್ಮಣ್ಣ ಯಾರ ಹತ್ತಿರವಾದ್ರೂ ಏನಾದ್ರೂ ಹೇಳಿದ್ರಾ?” ಎಂದೆ.

“ಇಲ್ಲ. ಅಮ್ಮ ‘ಏನೋ ಮನೇಗೆಲ್ಲಾ ಕರೆದುಕೊಂಡು ಬಂದಿದ್ದೀಯ. ನೀನೇನು ಅವಳನ್ನು ಮದ್ವೆ ಆಗ್ತೀಯಾ?’ ಅಂತ ಕೇಳಿದ್ದಕ್ಕೆ ಚೆನ್ನಾಗಿ ಬಯ್ದು ಬಾಯಿ ಮುಚ್ಚಿಸಿ ‘ಒಂದು ಹುಡುಗಿಯ ಜೊತೆ ಮಾತನಾಡಿದರೆ ಮದುವೆ ಆಗ್ತಾರೆ ಅಂತ ಕಲ್ಪಿಸ್ತೀರಾ. ದರಿದ್ರ ಜನಗಳು’ ಅಂತೆಲ್ಲಾ ಕಿರುಚಾಡಿದ. ಅಮ್ಮ ಅಪ್ಪ ಇಬ್ಬರೂ ಅಣ್ಣ ನಿಮ್ಮನ್ನೇ ಮದುವೆಯಾಗೋದು ಅಂದ್ಕೊಂಡಿದ್ದಾರೆ. ಹಳ್ಳಿಯವರೆಲ್ಲಾ ಎನಾದ್ರೂ ನೆಪ ತೆಗೆದುಕೊಂಡು ಬಂದು ಮಾತನಾಡಿಸಿ, ‘ನಿಮ್ಮ ಮಗ ಆ ಹುಡುಗೀನ ಮದ್ವೆ ಆಗ್ತಾನಾ?’ ಅಂತೆಲ್ಲಾ ಕೇಳ್ತಾರೆ’ ಎಂದು ಹೇಳಿದಳು.

ಮನೋಹರ ಯಾಕೆ ಹೀಗೆ ಹೇಳಿದ? ಅವನಿಗೆ ನನ್ನ ಬಗ್ಗೆ ನಿಜಕ್ಕೂ ಪ್ರೀತಿಯಿದೆ. ಸಮಯ ಬಂದಾಗ ಅವನೇ ಹೇಳುತ್ತಾನೆ. ನಾನಾಗಿ ಕೇಳಿದರೆ ಹುಡುಗಿಗೆ ಎಷ್ಟೊಂದು ಆತುರ ಎಂದುಕೊಳ್ತಾನೆ. ಅದೆಲ್ಲಾ ಚೆನ್ನಾಗಿರೋಲ್ಲ….

ರತ್ನ ನನ್ನ ಕೈ ಹಿಡಿದುಕೊಂಡು “ಅಣ್ಣ ಮದ್ವೇನೇ ಆಗೋಲ್ಲ ಅಂತಾನೆ. ಆವನು ಒಂಟಿಯಾಗಿ ಇರುವುದನ್ನು ನೋಡಿ, ಯಾರ ಜೊತೆಯೂ ಮಾತನಾಡದೆ ಇರುವುದನ್ನು ನೋಡಿ ಎಲ್ಲರೂ ಹುಚ್ಚ ಇರಬಹುದು ಅಂದ್ಕೊಂಡಿದ್ದಾರೆ. ನನಗೆ ತುಂಬಾ ಆಶ್ಚರ್ಯ, ಅವನು ನಿಮ್ಮನ್ನು ಇಷ್ಟೊಂದು ಹಹ್ಚಿಕೊಂಡಿರುವುದಕ್ಕೆ, ಅವನಿಗಿಂತಾ ಮೊದಲೇ ನೀವೇ ಹೇಳಿಬಿಡಿ. ನೀವು ಮದುವೆ ಆಗ್ತೀನಿ ಅಂದ್ರೆ ಅವನು ಖಂಡಿತಾ ಬೇಡ ಅನ್ನೋಲ್ಲ. ‘ನಿಮ್ಮನ್ನು ತುಂಬಾ ಚೆನ್ನಾಗಿ ಅರ್ಥಮಾಡಿಕೊಂಡಿದ್ದೀನಿ’ ಅಂತ ಹೇಳಿ. ಅವನನ್ನು ಮಗು ತರಹ ನೋಡಿಕೊಂಡರೆ ತುಂಬಾ ಖುಷಿಯಾಗಿರ್‍ತಾನೆ. ನಿಜವಾಗ್ಲೂ ಅಣ್ಣ ನಿಮ್ಮ ಹತ್ತಿರ ಮದುವೆ ಆಗ್ತೀನಿ ಅಂತ ಹೇಳಿಲ್ವಾ? ನನ್ನೊಬ್ಬಳಿಗೆ ಹೇಳಿ ಪರ್ವಾಗಿಲ್ಲ” ಎಂದು ಕೇಳಿದಳು.

“ರತ್ನ ಅವರು ಮದುವೆಯ ಬಗ್ಗೆ ನನ್ನನ್ನು ಏನೂ ಕೇಳಿಲ್ಲ. ಕೇಳಿದ ಕೂಡಲೇ ನಿನಗೆ ಹೇಳುತ್ತೇನೆ” ಎಂದೆ.

ಮನೋಹರ ನನ್ನನ್ನು ಮದುವೆಯಾಗುವಂತೆ ಕೇಳುವ, ಮದುವೆಯಾಗಿ ನಾವು ಈ ಹಳ್ಳಿಗೆ ಜೊತೆಯಾಗಿ ಬರುವ ದೃಶ್ಯ ಕಲ್ಪಿಸಿಕೊಂಡು, ಕನಸು ಕಾಣುತ್ತಾ ಮಲಗಿದೆ.

ಬೆಳಿಗ್ಗೆ ನಾನು ಎದ್ದಕೂಡಲೇ ರತ್ನ ಮನೋಹರನ ಹಲವಾರು ಪದ್ಯಗಳನ್ನು ಲೇಖನಗಳನ್ನು ಕೊಟ್ಟಳು. ಓದಿದೆ. ಕಾಗದಗಳ ಮೇಲೆಲ್ಲಾ ಬರೀ ‘ಒಂಟಿತನ’ ‘ಬರಡು’ ‘ಮರಳುಗಾಡು’ ವೈಚಾರಿಕತೆ’ ‘ಜೀವನ’ ಇಂತಹ ಪದಗಳಿಂದಲೇ ತುಂಬಿಸಿದ್ದ. ಅವುಗಳನ್ನು ಪೂರ್ತಿಯಾಗಿ ಅರ್ಥಮಾಡಿಕೊಳ್ಳಲಾಗದಿದ್ದರೂ ಸ್ವಲ್ಪಮಟ್ಟಿಗೆ ಅರ್ಥವಾಗಿತ್ತು. ಎಲ್ಲದಕ್ಕಿಂತ ಮನೋಹರ ಏನನ್ನೋ ಅಪೇಕ್ಷಿಸುತ್ತಿದ್ದಾನೆಂದು ತಿಳಿಯಿತು.

ಸಾಯಂಕಾಲ ನಾನು, ಮನೋಹರ ಹೊರಗೆ ಹೊರಟೆವು. ಅವನ ಲೇಖನಗಳನ್ನು ಓದಿದ್ದೇ ಇನ್ನು ತಲೆಯಲ್ಲಿ ತುಂಬಿತ್ತು. ಅವನಿಗೆ ಏನೇನು ಹೇಳಬೇಕೆಂದು ಮಾತುಗಳನ್ನು ಮನಸ್ಸಿಗೆ ತಂದುಕೊಂಡು, “ಮನೋಹರ್, ನೀವು ನಿಮ್ಮೆಲ್ಲಾ ಪತ್ರಗಳಲ್ಲಿ, ಹಾಳೆಗಳಲ್ಲಿ ನಿಮ್ಮ ಒಂಟಿತನದ ಅನುಭವಗಳ ಬಗ್ಗೆಯೇ ಬರೆಯುತ್ತೀರಿ. ನಾನಿದುವರೆಗೂ ಕಂಡಂತೆ ನೀವು ಭಯಂಕರ ವಿಚಾರವಾದಿಯಪ್ಪ. ಇಂಥ ವ್ಯಕ್ತಿಯನ್ನು ನಾನು ನೋಡುತ್ತಿರುವುದು ಇದೇ ಮೊದಲು. ಒಟ್ಟಿನಲ್ಲಿ ನೀವು ತುಂಬಾ ಒಂಟಿಯಾಗಿರಲು ತುಂಬಾ ಇಷ್ಟಪಡುತ್ತೀರ. ಮತ್ತೆ ಅದೇ ಒಂಟಿತನ ಭರಿಸಲಾರದೆ ಅಸಹಾಯಕರಾಗಿ ಮರಳುಗಾಡಿನಲ್ಲಿದ್ದಂತೆ ಚಡಪಡಿಸುತ್ತೀರ. ಅಂದರೆ ನೀವು ಜೀವನದಿಂದ ಮತ್ತೇನನ್ನೋ ಹೊಸದಾಗಿ, ಏನೋ ಬೇಕೆಂದು, ಹೊಸ ರೀತಿಯ…” ಮುಮ್ದೆ ಹೇಳಬೇಕಾಗಿರುವ ಪದಗಳಿಗಾಗಿ ತಡಕಾಡಿದೆ. ಇಷ್ಟುಹೊತ್ತು ಆಶ್ಚರ್ಯದಿಂದ ಕೇಳುತ್ತಿದ್ದ ಮನೋಹರ್ ತಟಕ್ಕನೆ “ಯಾವುದೋ ಮತ್ತೊಂದು ಆಯಾಮವನ್ನು ಅರಸುತ್ತಿದ್ದೇನೆ. ಸರಿ ತಾನೆ?” ಎಂದ. ನಾನು ಪೆದ್ದುಪೆದಾಗಿ ನಕ್ಕೆ.

ನಂತರ ಮನೋಹರ ನಕ್ಕು “ವಸಂತ, ನನಗೆ ಬದುಕಿನಲ್ಲಿ ಎಲ್ಲಾ ಇದೆ ಅಂತಲೇ ನಾನು ಒಂಟಿಯಾಗಿದ್ದೀನಿ. ಯಾಕೆ ಹೀಗೆ ಏನನ್ನೋ ಅರಸುತ್ತಾ ಹೋಗುತ್ತಿದ್ದೇನೋ ನನಗಂತೂ ಗೊತ್ತಿಲ್ಲ. ಒಮ್ಮೆ ಇವೆಲ್ಲ ಅರ್ಥಹೀನವಾಗಿ ಕಂಡರೂ ಇದರಲ್ಲಿಯೇ ನನಗೆ ಏನೋ ಸಮಾಧಾನ ಇದೆ. ಅದೆಲ್ಲಾ ಹೇಗೆ ಏನು ಎಂದು ಹೇಳಲಾರೆ” ಎಂದ.

ನಾನು ಮನೋಹರನಷ್ಟು ಬುದ್ಧಿವಂತಳಲ್ಲ. ಒಂಟಿತನ, ಶೂನ್ಯ, ನೆಮ್ಮದಿ ಇವುಗಳನ್ನು ಅರಸಿಕೊಂಡು ಹೊರಟವಳೂ ಅಲ್ಲ. ಮನೋಹರನ ರೀತಿ-ನೀತಿ, ಮಾತು ಕತೆ ಪ್ರತಿಯೊಂದೂ ನನಗೆ ಆಶ್ಚರ್ಯ ತರುತ್ತಿತ್ತು. ನನ್ನೆದುರಿಗಿರುವಷ್ಟು ಹೊತ್ತು ನಗುನಗುತ್ತಾ ಏನೇನೋ ಮಾತನಾಡುತ್ತಾ, ನನ್ನನ್ನು ರೇಗಿಸುತ್ತಾ, ರೇಗಿಸಿಕೊಳ್ಳುತ್ತಾ, ಚಿಕ್ಕ ಹುಡುಗನಂತೆ ಆಡುತ್ತಿದ್ದ ಮನೋಹರ ಇವನಲ್ಲವೇ ಅಲ್ಲ ಎಂಬಷ್ಟು ಅನುಮಾನ ಹುಟ್ಟಿಬಿಡುತ್ತಿತ್ತು. ಮದುವೆಯಾದ ಮೇಲೆ ಸಂಗಾತಿ ಸಿಕ್ಕಮೇಲೆ ಇವನು ಸರಿಹೋಗಬಹುದು ಎನಿಸಿತು….

“ನೀವು ಮದುವೆಯಾದರೆ ನಿಮ್ಮ ಒಂಟಿತನ ಕಳೆದುಹೋಗುತ್ತೆ…ನಿಮ್ಮನ್ನು ಚೆನ್ನಾಗಿ ನೋಡಿಕೊಳ್ಳುವಂತಹ ಸಂಗಾತಿಯನ್ನೇ ಹುಡುಕಿಕೊಂಡು ಬೇಗ ಮದುವೆಯಾಗಿಬಿಡಿ” ಎಂದು ಉತ್ತರಕ್ಕಾಗಿ ಕಾತುರದಿಂದ ಕಾದೆ.

“ನಾನು ಎಷ್ಟೋ ಜನರ ಮಧ್ಯೆ ಇದ್ದರೂ ಅದೇನೋ ನಾನು ತುಂಬಾ ಒಂಟಿ ಅಂತ ಅನ್ನಿಸಿಬಿಟ್ಟಿದೆ. ಅದನ್ನು ತಡೆಯುವುದಕ್ಕಾಗಿಯೇ ನಾನು ನಿಮ್ಮ ಸ್ನೇಹ ಬಯಸಿದ್ದು” ಎಂದ. ಈ ಮನೋಹರ ಬರೀ ಇಂತಹ ವಿಷಯಗಳನ್ನ ಹೇಳುತ್ತಿದ್ದಾನೆಯೇ ಹೊರತು ಮದುವೆಯ ಬಗ್ಗೆ ಯಾಕೆ ಮಾತಾಡುತ್ತಿಲ್ಲ?

ರತ್ನಳ ಮದುವೆ ಸರಳವಾಗಿ ಸುಂದರವಾಗಿ, ಮನೋಹರನ ಇಷ್ಟದಂತೆ ನಡೆಯಿತು. ನಾನು ಅವರ ಮನೆಯ ಹುಡುಗಿಯೆಂಬಂತೆ ಚಟುವಟಿಕೆಯ್ಯಿಂದ ಓಡಾಡುತ್ತಿದ್ದುದ್ದನ್ನು ಮನೋಹರ ಮೆಚ್ಚಿಗೆಯಿಂದ ನೋಡುತ್ತಿದ್ದ. ಅವನ ಕಣ್ಣಮುಂದೆ ಓಡಾಡುವುದೇ ನನಗೆ ಅತ್ಯಂತ ಸಂಭ್ರಮವೆನಿಸಿತು. ಮದುವೆಗೆ ಬಂದ ಹಳ್ಳಿಗರು‘ಪಟ್ನದ ಹುಡ್ಗಿ ಅತ್ರ ಸೀರೇನೇ ಇಲ್ಲ’ ಅಂದಾಗ ಪೆಚ್ಚಾಗಿದ್ದು ಬಿಟ್ಟರೆ ಮಿಕ್ಕೆಲ್ಲಾ ಸಂದರ್ಭಗಳಲ್ಲಿಯೂ ನಾನು ಅತ್ಯಂತ ಖುಷಿಯಿಂದಿದ್ದೆ.

ಮದುವೆಯಾದ ಸಾಯಂಕಾಲವೇ ರತ್ನಳನ್ನು ಗಂಡನ ಮನೆಗೆ ಯಾವುದೋ ಶಾಸ್ತ್ರಕ್ಕಾಗಿ ಕಳುಹಿಸಿಕೊಟ್ಟರು. ಮಾರನೆಯ ದಿನ ಬೆಳಿಗ್ಗೆ ಅವಳು ಮನೆಗೆ ಬರುತ್ತಾಳೆಂದು ಗೊತ್ತಿದ್ದರೂ, ಮನೋಹರ ಅದೇಕೋ ನನ್ನ ಕೈಹಿಡಿದು ಜೋರಾಗಿ ಅತ್ತುಬಿಟ್ಟ.

ಬಹಳ ಪೆಚ್ಚಾಗಿ ಕೂತಿದ್ದ ಮನೋಹರನನ್ನು ಸಾಯಂಕಾಲ ನಾನು ವಾಕಿಂಗ್ ಕರೆದುಕೊಂಡು ಹೋದೆ. ಹೇಮಾವತಿ ನದಿಗೆ ನಾಲೆಗಳನ್ನು ಕಟ್ಟುವ ಕೆಲಸ ನಡೆಯುತ್ತಿತ್ತು. ಪಕ್ಕದಲ್ಲಿ ಹಾಕಿದ ಮರಳುಗುಡ್ಡೆಯ ಮೇಲೆ ನಾನು, ಮನೋಹರ ಕುಳಿತೆವು. ಸ್ವಲ್ಪ ಹೊತ್ತಿನಲ್ಲಿಯೇ ಮನೋಹರ ಗೆಲುವಾದ. ತನ್ನ ಮದುವೆಯ ವಿಷಯ ವೊಂದನ್ನು ಬಿಟ್ಟು ಮಿಕ್ಕೆಲ್ಲಾ ಹರಟಿದ. ಮನೋಹರನ ಮಾತುಗಳಲ್ಲಿ ಯಾವುದೇ ಉತ್ಪ್ರೇಕ್ಷೆಯಾಗಲಿ, ಕಪಟತನವಾಗಲಿ ಇರುತ್ತಿರಲಿಲ್ಲ. ತಾನು ಕಂಡಿದ್ದು, ಅನುಭವಿಸಿದ್ದು ಇವುಗಳನ್ನೇ ಹೇಳುತ್ತಿದ್ದುದರಿಂದ ಕೇಳಲು ಮಜವಾಗಿರುತ್ತಿತ್ತು. ಜೊತೆಗೆ ಮನಃಶ್ಯಾಸ್ತ್ರ, ಫ್ರಾಯ್ಡ್‌ನ ವಿಚಾರಗಳು, ಅವನ ಅಭಿಪ್ರಾಯಗಳು, ಇಂಗ್ಲೀಷಿನಲ್ಲಿ ಮತ್ತು ಕನ್ನಡದಲ್ಲಿರುವ ಒಳ್ಳೆಯ ಪುಸ್ತಕಗಳು, ವಿಮರ್ಶೆ ಇವುಗಳನ್ನೆಲ್ಲಾ ನನ್ನ ತಲೆಗೆ ತುಂಬಿಸಿದ ನಂತರ, “ಪುಸ್ತಕಗಳ ಪಟ್ಟಿ ಕೊಡುತ್ತೇನೆ. ಓದಿ ಅರ್ಥಮಾಡಿಕೊಳ್ಳಿ. ನೀವೂ ಅದೇ ರೀತಿ ಬರೆಯಲು ಪ್ರಯತ್ನಿಸಿ. ಈ ವಿಷಯದಲ್ಲಿ ನಿಮಗೆ ಯಾವಾಗಲೂ ನಾನು ಸಹಾಯ ಮಾಡಲು ಸಿದ್ಧ” ಎಂದ.

“ಹಾಗಾದರೆ ಬೇರೆ ಎಲ್ಲಾ ವಿಷಯಗಳಿಗೂ ಸಹಾಯ ಮಾಡೊಲ್ಲ ಅಂತಾಯ್ತು! ” ಎಂದೆ. “ಬೇರೆ ವಿಷಯ? ಉಹೂಂ. ನನ್ನದೇ ಆದ ಹಲವಾರು ಸಮಸ್ಯೆಗಳ ಜೊತೆಗೆ ನಿಮ್ಮೆಲ್ಲ ಸಮಸ್ಯೆಗಳನ್ನು ಖಂಡಿತಾ ಹೊತ್ತುಕೊಳ್ಳಲಾರೆ. ನಿಮಗೆ ಯಾವ ವಿಷಯಕ್ಕೆ ಸಹಾಯ ಮಾಡಬೇಕಾಗಬಹುದು? ಹಣ? ನನ್ನಿಂದ ನಿಮಗೆ ಆ ಸಹಾಯ ಸಿಗೊಲ್ಲ. ಏಕೆಂದರೆ ನಮ್ಮ ಮನೆಯನ್ನು ಈಗೀಗ ಬೆಳೆಸೋಕ್ಕೆ ಶುರುಮಾಡಿದ್ದೇನೆ. ಪಕ್ಕಾ ಹಳ್ಳಿಯವರಾದ ನಮ್ಮ ತಾಯಿತಂದೆಯ ಕೊನೆಯ ಆಸೆ ಒಂದು ಪುಟ್ಟ ಮನೆ ಕಟ್ಟಿಸಿ, ಎರಡು ಎಮ್ಮೆ ಅಥವಾ ಹಸು ಕೊಳ್ಳುವುದು ನನ್ನಿಂದ ಅದೊಂದು ಆಸೆಯಾದರೂ ನೆರವೇರಲಿ. ಇನ್ನೇನಿದೆ? ನೀವು ಓದಿದ್ದೀರಿ. ಕೆಲಸದಲ್ಲಿದ್ದೀರಿ. ಮಿಕ್ಕಿದ್ದು ನಿಮ್ಮ ಮದುವೆ. ಇದು ನಿಮ್ಮ ವಯಕ್ತಿಕ ವಿಷಯ. ಆ ಬಗ್ಗೆ ನಾನು ಏನನ್ನೂ ಹೇಳಲಾರೆ”.

“ನೀವು ನನ್ನ ಮದುವೆಯ ಬಗ್ಗೆ ಯೋಚಿಸದಿದ್ದರೂ ನಾನಂತೂ ನಿಮ್ಮ ಬಗ್ಗೆ, ನಿಮ್ಮ ಮದುವೆಯ ಬಗ್ಗೆ ಸದಾ ಚಿಂತಿಸುತ್ತಿರುತ್ತೇನೆ. ನಿಮ್ಮ ತಂಗಿಯ ಮದುವೆಯಾಯ್ತಲ್ಲ, ಇನ್ನು ನೀವು ಬೇಗ ಮದುವೆಯಾಗಿ ಬಿಡಿ” ಎಂದೆ. ಅವನೇನು ಉತ್ತರ ಕೊಡುವನೋ ಎಂಬ ಕಾತುರ….

ಮನೋಹರ ದೀರ್ಘ ನಿಟ್ಟುಸಿರನ್ನು ಬಿಟ್ಟು ನಿಧಾನವಾಗಿ “ ವಸಂತಾ, ನಾನೊಂಥರಾ ಹುಚ್ಚ. ಮದುವೆಯ ಬಗ್ಗೆ ನನ್ನ ಅಭಿಪ್ರಾಯ ಯಾವ ಸಮಯದಲ್ಲಿ ಹೇಗಿರುತ್ತೆ ಅಂತ ಹೇಳೋಕ್ಕೆ ಆಗೋಲ್ಲ. ಆಫೀಸಿನಲ್ಲಿ ಎಲ್ಲರೂ ಕೇಳ್ತಾರೆ ‘ನೀವು ಯಾರನ್ನೂ ಲವ್ ಮಾಡಲಿಲ್ಲವ?’ ಎಂದು. ‘ಇಲ್ಲ’ ಎಂದರೆ ಯಾರೂ ನಂಬೊಲ್ಲ. ನನಗೆ ಈ ಲವ್‌ಗಿವ್ ಎಂದರೆ ನಗು ಬರುತ್ತದೆ. ಕೆಲವು ಸಲ ಮೂರ್ಖತನ ಎನಿಸುತ್ತದೆ. ಆ ಲವರ್‍ಸ್‌ಗೆ ಇರಬಹುದಾದ ವಿಚಿತ್ರ ಗುಣಗಳು ನನ್ನಲ್ಲಿಲ್ಲವೇನೋ, ಏಕೆಂದರೆ, ಮಾತನಾಡಿಸಬೇಕೆನಿಸಿದರೆ ಹೋಗಿ ಧೈರ್ಯವಾಗಿ ಮಾತನಾಡಿಸಿಬಿಡುತ್ತೇನೆ, ಸ್ನೇಹಿತನಾಗುತ್ತೇನೆ. ಆದರೆ ಎಂದೂ ‘ಪ್ರೇಮಿ’ ಆಗುವುದೇ ಇಲ್ಲ! ಹೀಗೆ ಹಲವಾರು ಬಾರಿ ಆಗಿದೆ…

“ವಸಂತಾ, ಮದುವೆ, ಮನೆ, ಗಂಡ, ಮಕ್ಕಳು ಇದಿಷ್ಟೇ ಬದುಕಿನ ಧ್ಯೇಯವೆಂದುಕೊಂಡಿದ್ದೇರ? ಆದರೂ, ನಮ್ಮ ಬದುಕು ಮತ್ತು ಅದರ ಸ್ವಾತಂತ್ರ್ಯವನ್ನು ಸಂಸಾರದ ಗೂಟಕ್ಕೆ ಕಟ್ಟಿಹಾಕಿ ಅದರ ಸುತ್ತಲೂ ಸುತ್ತುವ ಹಾಗೆ ಆಗಬಾರದೆಂದೇ ನನ್ನ ಅನಿಸಿಕೆ. ಅಂದರೆ ಮದುವೆ ನಮ್ಮ ಬದುಕನ್ನು ಸಂಕುಚಿತಗೊಳಿಸದಿದ್ದರೂ ಸ್ವಾತಂತ್ರ್ಯವನ್ನಂತೂ ಖಂಡಿತಾ ಕಸಿಯುತ್ತದೆ” ಎಂದ. ಈ ವಿಚಿತ್ರ ವ್ಯಕ್ತಿಯನ್ನು ಯಾರು ತಾನೇ ಮದುವೆಯಾಗುತ್ತಾರೆ ಎಂಬ ಬೇಸರದ ಜೊತೆಗೆ ಆತಂಕವೂ ಆಯಿತು.

ನಾನು ಹಣ, ಒಡವೆ ಇವುಗಳನ್ನು ಹೆಚ್ಚಾಗಿ ಇಷ್ಟಪಡದಿದ್ದರೂ ನನ್ನದೇ ಆದ ಮನೆ ಗಂಡ ಮಕ್ಕಳು ಇವೆಲ್ಲ ಬೇಕೆಂದು ಹಂಬಲಿಸುತ್ತೆದ್ದೆ. ಸುಭದ್ರವಾದ ಕೋಟೆಯ ರಕ್ಷಣೆ ಬೇಕು. ಮನೆಗಿಂತಾ ದೊಡ್ಡ ಸಂತೋಷ ತರಬಲ್ಲ ಯಾವುದೂ ನನ್ನ ಮಂದಿರಲಿಲ್ಲ. ಹಾಗೆ ಇದೆ ಎನ್ನುವುದೂ ನನಗೆ ಗೊತ್ತಿಲ್ಲ. ಇದಕ್ಕಿಂತ ಹೆಚ್ಚಾಗಿ ಮನೋಹರನಿಗೆ ಬೇಕಾಗಿರುವುದಾದರೂ ಏನು ಎಂದೇ ನನಗೆ ಅರ್ಥವಾಗುತ್ತಿರಲಿಲ್ಲ.

“ಯಾಕೆ ಸುಮ್ಮನೆ ಕುಳಿತುಬಿಟ್ಟಿರಿ ವಸಂತಾ? ಬೇಸರವಾಯ್ತಾ?” ಎಂದ.
“ಇಲ್ಲ” ಎಂದೆ.
“ನನ್ನ ಮದುವೆಯ ಬಗ್ಗೆ ಯೋಚಿಸ್ತಿದ್ದೀರಾ?” ಎಂದ.
“ಹೂಂ” ಎಂದು ತಲೆ ಅಲ್ಲಾಡಿಸಿದೆ.

ಮನೋಹರ ದೊಡ್ಡದಾಗಿ ನಕ್ಕು ” ಎಲ್ಲರೂ ಇದುವರೆಗೂ ನನ್ನ ಮದುವೆಯ ಬಗ್ಗೆ ಯೋಚಿಸಿ ಈಗ ನಿಲ್ಲಿಸಿದ್ದಾರೆ. ನೀವು ಮತ್ತೆ ಈಗ ಶುರುಮಾಡುತ್ತಿದ್ದೀರ. ವಸಂತಾ, ನಿಮಗೆ ಹೇಗೆ ಹೇಳಲಿ? ನೋಡಿ ವೈಚಾರಿಕರು ಬದುಕಿನಲ್ಲಿ ಚಿuಣheಟಿಣiಛಿ ಆಗಿ iಟಿvoಟve ಆಗುವುದಕ್ಕಿಂತ ಹೊರಗಿನ ಪ್ರೇಕ್ಷಕರಾಗಿಬಿಟ್ಟು ಘರ್ಷಣೆಗಳ ಅಲಗುಗಳಲ್ಲಿ ಆಗಾಗ್ಗೆ ಕತ್ತರಿಸಿಕೊಳ್ಳುತ್ತಾ ಹೋಗುತ್ತಾರೆ. ಬದುಕನ್ನು ಅದು ಬಂದಂತೆ ಸ್ವೀಕರಿಸುವ ಬದಲಾಗಿ ಬಣ್ಣಬಣ್ಣಗಳ ಅಥವಾ ರಾಗರಹಿತ ದೃಷ್ಟಿಗಳಲ್ಲಿ ನೋಡಿ ಕೊಂದುಬಿಡುತ್ತಾರೆ. ನಾನು ಹಾಗೇನೆ” ಎಂದ. ಅವನೇನು ಹೇಳಿದನೆಂದು ನನಗೆ ಅರ್ಥವಾಗಲಿಲ್ಲ. ಆದರೂ “ಕಾವಿ ಬಟ್ಟೆ ಹಾಕ್ಕೊಂಡು ಇರೋಕ್ಕೆ ಲಾಯಕ್ಕು ನೀವು” ಎಂದೆ.

“ನಾಳಿ ಬೆಳಿಗ್ಗೆ ಊರಿಗೆ ಹೊರಡ್ತ ಇದ್ದೀರಾ ಅಲ್ವಾ”? ಎಂದ.

“ಹೂಂ ತುಂಬಾ ಬೇಸರವಾಗುತ್ತೆ. ನಿಮ್ಮ ಊರು, ನಿಮ್ಮ ಮನೆ, ನಿಮ್ಮ ಅಪ್ಪ-ಅಮ್ಮ ತಮ್ಮ-ತಂಗಿ ಎಲ್ಲರೂ ನನಗೆ ತುಂಬಾ ಇಷ್ಟವಾದರೂ. ಬಹುಶಃ ಇನ್ನು ಮುಂದೆ ಇಂತಹಾ ಒಳ್ಳೆಯ ಜನ ಸಿಕ್ಕುತ್ತಾರೋ ಇಲ್ಲವೋ” ಎಂದೆ.

“ಹಾಗಿದ್ದರೆ ನಾನಿಲ್ಲದಿದ್ದಾಗಲೂ ನೀವು ಈ ಮನೆಗೆ ಬಂದು ಹೋಗಿ ವಸಂತಾ” ಎಂದ. ನಂತರ, “ವಸಂತಾ, ನೀವು ದೊಡ್ಡ ಕಥೆಗಾರ್ತಿ ಆಗಬೇಕು. ನಾನ್ಯಾಕೆ ನಿಮ್ಮನ್ನು ನಮ್ಮ ಹಳ್ಳಿಗೆ ಕರೆದುಕೊಂಡು ಬಂದೆ ಗೊತ್ತಾ? ನಮ್ಮ ಡರ್ಟಿ ಊರು, ನಮ್ಮ ಕೊಳಕು ಮನೆ, ಇವನ್ನೆಲ್ಲ ನೋಡಿ ನಿಮಗೆ ಕಥೆ ಬರೆಯಲ್ಲು ಎನಾದರೂ ಸಿಗಬಹುದೆಂದು. ನಾಲ್ಕು ಗೋಡೆಗಳ ನಡುವೆ ಇದ್ದು, ನಾಲ್ಕು ಜನರ ಪರಿಚಯವಾಗಿದ್ದರಲ್ಲೇ ನೀವು ಕಥೆ ಬರೆಯಲು ಬಂಡವಾಳ ಪಡೆದುಕೊಂಡದ್ದು ಅಶ್ಚರ್ಯ. ಬನ್ನಿ, ನಮ್ಮೂರಿನ ವಿಚಿತ್ರ ಜನರನ್ನು ತೋರಿಸುತ್ತೇನೆ… ನೂರಾರು ಕಥೆಗಳು… ಕೊನೆಗೆ ಬಂಡವಾಳ ವಿಪರೀತವಾಗಿ ಬರೆಯುವುದೇ ನಿಲ್ಲುತ್ತದೆ ಏನಂತಿರಾ?” ಎಂದ. ಹೀಗೆಲ್ಲಾ ಮಾತನಾಡುವಾಗ ಮನೋಹರ ಬಹಳ ಸೀರಿಯಸ್ಸಾಗಿರುತ್ತಾನೆ. ಅವನ ಅನುಭವಗಳು ಒಂದಕ್ಕಿಂತ ಒಂದು ಸ್ವಾರಸ್ಯಪೂರ್ಣವಾಗಿರುವುದರಿಂದ ಅವನು ಹೇಳುತ್ತಲೇ ಇರಲಿ, ನಾನು ಕೇಳುತ್ತಲೇ ಇರಬೇಕೆಂಬ ಆಸೆ…

“ವಸಂತಾ, ನೀವು ಕಥೆ ಬರಿತೀರಿ ಅಂದಾಕ್ಷಣ ಒಂದು ಘಟಣೆ ಜ್ಞಾಪಕಕ್ಕೆ ಬಂತು ನೋಡಿ. ಬಾಂಬೆಯಲ್ಲಿ ನನ್ನ ರೂಂಮೇಟು ಸೀರಿಯಸ್ ಮನುಷ್ಯ. ಬಾಂಬೆ ಎಂದರೆ ವಿಪರೀತ ಹುಚ್ಚು. ದಿನ ಬೆಳಗೂ ನನಗೆ ಅವನು ತನ್ನ ಲವ್ ಬಗ್ಗೆ ಕೊರೀತಾನೆ. ನನಗಂತೂ ಕೇಳಿ ಕೇಳಿ ಸಾಕಾಗಿದೆ. ಆ ಹುಡುಗಿ ಇವನನ್ನು ನೋಡೇ ಇಲ್ಲ. ಇವನು ಮಾತ್ರ ದಿನಾ ಬಾಂಬೆಯಲ್ಲಿ ರೈಲು ಹತ್ತುವಾಗ ನೋಡಿ ನೋಡಿ ಲವ್ ಶುರು ಮಾಡಿಕೊಂಡ. ಆ ಹುಡುಗಿಗೆ ಇದನ್ನು ತಿಳಿಸುವ ಧೈರ್ಯ ಅವನಿಗಿಲ್ಲ. ತಾನು ಆ ಹುಡುಗಿಯಷ್ಟು soಠಿhesಣiಛಿಚಿಣeಜ ಅಲ್ಲ ಎಂಬ iಟಿಜಿeಡಿioಡಿiಣಥಿ. ಇಲ್ಲಿಂದ ಪ್ರತಿ ವಾರ ಗ್ರೀಟಿಂಗ್ ಕಳಿಸ್ತಾನೆ. ಅದರಲ್ಲಿ ಇವನ ವಿಳಾಸ ಹೆಸರು ಇಲ್ಲ – ನಾಲ್ಕಾರು ಪ್ರೇಮ ಪುಸ್ತಕಗಳನ್ನು ಓದಿ ಎಂಟು ಸಾಲುಗಳನ್ನು ನನ್ನಿಂದ ಬರೆಸಿ ಕಳುಹಿಸುತ್ತಾನೆ. ಮೊನ್ನೆ ಇದ್ದಕ್ಕಿದ್ದಂತೆ ಅವನಿಗೆ ನನ್ನ ಮೇಲೆ ಸಂಶಯ! ‘ನೋಡು ಆ ಹುಡುಗಿಯ ಅಡ್ರೆಸ್ ನಿನಗೆ ಗೊತ್ತಿದೆ. ನೀನೇನಾದರೂ ಬರೆದು ಬಿಟ್ಟಿದ್ದೀಯಾ ಎಂಬ ಅನುಮಾನ ನಂಗೆ’ ಎಂದ. ನಾನು ಅವನಿಗೆ ಇನ್ನಷ್ಟು ಸಂಶಯ ಬರುವಂತೆ ಕೇಳಿದೆ: ಹೌದು, ನಾನು ಆ ಹುಡುಗಿಯನ್ನು ಪ್ರೀತಿಸಿ ಮದುವೆಯಾಗಿ ಕಾಶ್ಮೀರದಲ್ಲಿ ಹನಿಮೂನಲ್ಲಿರುವಾಗ ನೀನು ಟೂರ್ ಬರ್‍ತಿ. ಆಗ ಅಲ್ಲಿ ನಮ್ಮನ್ನು ನೋಡಿ, ಸನ್ಯಾಸಿಯಾಗಿ ಹಿಮಾಲಯಕ್ಕೆ ಹೊರಟು ಹೋಗುತ್ತಿ.’ ಹೀಗೆಲ್ಲ ರೇಗಿಸಿ ‘ನಮ್ಮ ವಸಂತಾ ಇದನೆಲ್ಲಾ ಕಥೆಯಾಗಿ ಬರೆಯುತ್ತಾಳೆ. ನನ್ನ, ಆ ಹುಡುಗಿಯ ಪ್ರೇಮ ಪ್ರಸಂಗ ಪೇಪರಿನಲ್ಲಿ ಫೋಟೋ ಸಮೇತ ಬರುತ್ತದೆ. ನಿನಗೆ ತಂದು ತೋರಿಸುತ್ತೇನೆ’ ಎಂದು ಅವನಿಗೆ ಭೀತಿ ಹುಟ್ಟಿಸುತ್ತೇನೆ” ಎಂದ ಸ್ವಲ್ಪ ಹೊತ್ತು ಬಿಟ್ಟು.

“ಹೇಗಿದೆ ವಸಂತಾ ನನ್ನ ಗೆಳೆಯನ ಕಥೆ? ಅವನಿಗೆ ಪ್ರೀತಿ ಎಂದರೆ ಏನೂ ಅಂತ ಗೊತ್ತಿಲ್ಲ. ಪ್ರೀತ್ಸ್ತಾನಂತೆ, ಅದಕ್ಕೇ ನಾನು ಇವನ್ನೆಲ್ಲಾ ದ್ವೇಷಿಸ್ತೀನಿ ಅಂತ ಹೇಳಿದ್ದು. ನಾನು ನನ್ನ ಅಭಿಪ್ರಾಯಗಳನ್ನು ಯಾರಲ್ಲಿಯಾದರೂ ಹೇಳಿಕೊಂಡರೆ ಖಂಡಿತಾ ನನ್ನನ್ನು ‘ಹುಚ್ಚ’ ಎನ್ನುತ್ತಾರೆ. ನನಗೆ ಇದುವರೆಗೂ ಪ್ರೀತಿಸಬೇಕು, ಮದುವೆಯಾಗಬೇಕು ಅಂತೆಲ್ಲಾ ಅನ್ನಿಸಿಯೇ ಇಲ್ಲ. ಅನ್ನಿಸಿದರೂ, ಕ್ರಮೇಣ ಬೇಡಾನ್ನಿಸುತ್ತೆ. ಆದರೆ ಅಕಸ್ಮಾತ್ ನಾನೇ ಒಂದು ದಿನ ನಿಮ್ಮೆದುರಿಗೆ ಪ್ರತ್ಯಕ್ಷವಾಗಿ ‘ವಸಂತಾ, ಈ ದಿನ ನಿಮ್ಮನ್ನು ನಾನು ಮದುವೆಯಾಗುತ್ತಿದ್ದೇನೆ’ ಎಂದರೆ ಆಶ್ಚರ್ಯಪಡಬೇಡಿ” ಎಂದ. ಏನೋ ಹೇಳುತ್ತಿದ್ದಾನೆಂದು ಕೇಳುತ್ತಿದ್ದ ನಾನು ಇದನ್ನು ಕೇಳಿ ಕಕ್ಕಾಬಿಕ್ಕಿಯಾಗಿ ತಲೆಯೆತ್ತಿ ನೋಡುವಷ್ಟರಲ್ಲಿ ಮನೋಹರ ನನ್ನ ತಲೆ ಸವರಿ ಹೇಳಿದ:

“ಬೇಡಮ್ಮ, ನನ್ನಂಥ ಹುಚ್ಚನನ್ನು ಮದುವೆಯಾಗಿ ನಿಮ್ಮ ಜೀವನ ಗೋಳಾಗುವುದು ಬೇಡ. ನಿಮಗೆ ಸರಳ ಸುಂದರನಾದ ಗಂಡ, ಮಾತುಗಾರ ಗಂಡ ಇರಬೇಕು. ಊರಲ್ಲೆಲ್ಲಾ ನಿಮ್ಮ ಕೈ ಹಿಡಿದು ತಿರುಗಿಸುವ, ಸಾಯಂಕಾಲ ಸಿನಿಮಾ, ಪಾರ್ಕು, ಷಾಪಿಂಗ್‌ಗೆ ಕರೆದುಕೊಂಡು ಹೋಗುವ ಗಂಡ ಬೇಕು. ಆ ಯೋಗ್ಯತೆ ಖಂಡಿತಾ ನನ್ನಲ್ಲಿಲ್ಲ. ಅವೆಲ್ಲ ನನ್ನಲ್ಲಿ ಎಂದು ಬರುತ್ತದೋ ಅದೂ ಗೊತ್ತಿಲ್ಲ. ಅಕಸ್ಮಾತ್, ನಾನು ಮದುವೆಯಾದರೆ ನನಗೆ ಯಾವ ರೀತಿ ಹೆಂಡತಿ ಬೇಕು ಗೊತ್ತಾ? ಆಕೆಗೆ ನನ್ನ ಬಗ್ಗೆ ಏನೂ ತಿಳಿದಿರಬಾರದು. ಬಹಳ ಮುಗ್ಧೆಯಾಗಿರಬೇಕು, ಓದಿರಬಾರದು, ವ್ಯವಹಾರ ಜ್ಞಾನವಿರಬಾರದು. ಅಂತಹ ಪೆದ್ದಿಯನ್ನು ಮದುವೆಯಾಗಲು ಇಷ್ಟಪಡುತ್ತೇನೆ. ಎಲ್ಲಿಯಾದರೂ ಇದ್ದರೆ ನೋಡಿಕೊಡಿ” ಎಂದವನೇ “ಬನ್ನಿ ಕತ್ತಲಾಯಿತು ಮನೆಗೆ ಹೋಗೋಣ. ಇನ್ನೂ ಸ್ವಲ್ಪ ಹೊತ್ತು ನಾವಿಲ್ಲಿ ಕುಳಿತಿದ್ದರೆ ಊರವರು ಆಡಬಾರದ ಮಾತನ್ನೆಲ್ಲಾ ಆಡಿ ಮುಗಿಸುತ್ತಾರೆ. ನಿಮ್ಮ ಬಗ್ಗೆ ಯಾರೂ ಕೆಟ್ಟದಾಗಿ ಮಾತನಾಡುವುದನ್ನು ನಾನು ಸಹಿಸಲಾರೆ” ಎಂದು ಕೈಹಿಡಿದು ಎಬ್ಬಿಸಿ, ಸೀರೆಯ ನೆರಿಗೆ ಕೊಡವಿ ಮರಳನ್ನೆಲ್ಲ ತೆಗೆದ.

ಮನೆಯ ಹತ್ತಿರ ಬರುವಾಗ ಸುಮಾರು ಮೂವತ್ತೆಂಟು-ನಲವತ್ತರಷ್ಟು ವಯಸ್ಸಾಗಿರುವ ಹೆಂಗಸೊಬ್ಬಳು ಇದ್ದಕ್ಕಿದ್ದಂತೆ ನಮ್ಮೆದುರಿಗೆ ಪ್ರತ್ಯಕ್ಷವಾಗಿ ನನ್ನ ಮುಖವನ್ನು ಸಲೀಸಾಗಿ ತನ್ನ ಕೈಯಲ್ಲಿ ತೆಗೆದುಕೊಂಡು ನಟಿಕೆ ಮುರಿದು “ನನ್ನವ್ವ, ಲಕ್ಷಣವಾಗಿದ್ದೀಯಾ. ನಿಮ್ಮಿಬ್ಬರದೂ ಜೋಡಿ ಭಲೇ ವೈನಾಗೈತೆ. ಯಾವಾಗಪ್ಪ ಲಾಡು ಊಟ?” ಎಂದವಳೇ ಮನೋಹರನ ಕಡೆ ತಿರುಗಿ “ಊರಲ್ಲೆಲ್ಲಾ ನಿಮ್ಮದೇ ಮಾತಾಯ್ತಲ್ಲಪ್ಪ-ಈಯಮ್ಮನ್ನ ನೀನು ಮದ್ವೆ ಆಗ್ತೀಯಂತೆ ಹೌದ? ನಮ್ಮ ಹುಡುಗ ಒಳ್ಳೆ ಮನುಷ್ಯ ಕಣವ್ವ. ನನ್ನ ಕಂಡ್ರೆ ಭಾಳ ಪ್ರೀತಿ ಅವ್ನಿಗೆ, ಅವ್ನಿಗಂಥ ಒಳ್ಳೆ ಮನಸ್ಸು ಇದ್ದಿದ್ರಿಂದ್ಲೇ ನೀನೂ ಸಿಕ್ಕಿಬಿಟ್ಟೆ ಕಣವ್ವ. ಯಾರೂ ಪಾಪ ಈಯಪ್ಪನ್ನ ಅರ್ಥಾನೇ ಮಾಡ್ಕಳ್ತಿಲ್ಲ. ಎಲ್ರೂ ಹುಚ್ಚ ಅಂದ್ಬಿಡ್ತಾರೆ. ಏನೋ ಆಸೆಪಟ್ಟಿದ್ದೀರಾ. ಬೇಗ ಮದುವ್ಯಾಗಿಬಿಡಿ. ಸಂದಾಗಿರಬೇಕು” ಎನ್ನುತ್ತಾ ಹೊರಟುಹೋದಳು.

ಅವಳು ಬಂದಿದ್ದು, ದಡಬಡ ಮಾತನಾಡಿ ಹೊರಟುಹೋಗಿದ್ದು ಎಲ್ಲವೂ ಕ್ಷಣಮಾತ್ರದಲ್ಲಿ. ನನಗಂತೂ ಕಕ್ಕಬಿಕ್ಕಿಯಾಯಿತು. ಈಕೆ ಯಾರು ಅಂತಲೇ ತಿಳಿಯಲಿಲ್ಲ. ಆದರೆ ನನ್ನ ಮನೋಹರನ ಇತಿಹಾಸವನ್ನೆಲ್ಲ ಹೇಳುತ್ತಿದ್ದಾಳೆ! ನನ್ನ ಯೋಚನೆಗಳನ್ನು ಅರ್ಥಮಾಡಿಕೊಂಡವನಂತೆ ಮನೋಹರ, “ವಸಂತಾ, ಇಲ್ಲಿರುವ ಪ್ರತಿಯೊಬ್ಬರಿಗೂ ನಿಮ್ಮ ಬಗ್ಗೆ ಕುತೂಹಲವಿದೆ. ಆದ್ದರಿಂದ ಎಲ್ಲರೂ ನಮ್ಮ ಮಧ್ಯೆ ತಲೆಹಾಕಿ, ವಿಷಯ ಸಂಗ್ರಹಿಸಿ ಏನಾದರೊಂದು ಮಾತನಾಡಿಕೊಳ್ಳುತ್ತಾರೆ. ಇದೆಲ್ಲಾ ನನಗೂ ಇಷ್ಟವಾಗೊಲ್ಲ. ನಾನಂತೂ ಯಾರ ವಿಷಯಕ್ಕೂ ಅನಾವಶ್ಯಕವಾಗಿ ತಲೆಹಾಕುವುದಿಲ್ಲ; ಇವರ್‍ಯಾಕೆ ನಮ್ಮ ವಿಷಯಕ್ಕೆ ತಲೆಹಾಕಬೇಕು? ಅಂತೆಲ್ಲ ಅನ್ನುಸುತ್ತೆ ಅಲ್ವಾ? ಆದರೆ ಇದು ಹಳ್ಳಿ ನೋಡು. ಅವರೆಲ್ಲಾ ತಮ್ಮದೇ ಆದ ರೀತಿಯಲ್ಲಿ ನಮ್ಮನ್ನು ರೂಪಿಸಿಕೊಳ್ತಾರೆ. ಪಟ್ಟಣದವರೇನೂ ಇದಕ್ಕೆ ಹೊರತಲ್ಲ. ಈ ಬಗ್ಗೆ ನಾವು ಯೋಚಿಸಿ ಏನೂ ಪ್ರಯೋಜನವಿಲ್ಲ. ನಮ್ಮ ತಲೆ ಬಿಸಿ ಹೆಚ್ಚಾಗುತ್ತೆ ಅಷ್ಟೆ! ಇಂಥ ಸಣ್ಣ ಪುಟ್ಟ ವಿಷಯಕ್ಕೆಲ್ಲಾ ಬೇಜಾರು ಮಾಡಿಕೊಳ್ಳಬೇಡಿ” ಅಂದ.

ಬೆಳಿಗ್ಗೆ ಸ್ನಾನಮಾಡಿ, ತಿಂಡಿ ತಿನ್ನುವಾಗ ಗಂಗಮ್ಮ ಬಾಗಿಲಿನಲ್ಲಿ ಪ್ರತ್ಯಕ್ಷಳಾದ. ಕೈಯಲ್ಲಿ ಗಮಗಮಿಸುವ ಹೂವು. ನನಗೆ ಮಲ್ಲಿಗೆ ಹೂವೆಂದರೆ ಬಹಳ ಇಷ್ಟ. ಒಂದೇ ನೆಗೆತಕ್ಕೆ ಹಾರಿ ಹೂವು ತೆಗೆದುಕೊಂಡು, ರೂಮಿಗೆ ಹೋಗಿ ಹಣ ತರುವಷ್ಟರಲ್ಲಿ ಗಂಗಮ್ಮ ಮಾಯವಾಗಿಬಿಟ್ಟಿದ್ದ

“ಮತ್ತೆ ಆ ಹೆಂಗಸು ಸಿಕ್ಕಿದ್ದರ ಬಗ್ಗೆ ಮನೇಲಿ ಹೇಳಬೇಡಿ. ಕೆಟ್ಟದಾಗಿ ಮಾತನಾಡ್ತಾರೆ. ಅವಳು ಗಂಗಮ್ಮ ಅಂತ. ಅವನಿಗೆ ಮೂವರು ಗಂಡಂದಿರಿದ್ದಾರ್, ಹಾಗೆ, ಹೀಗೆ ಅಂತೆಲ್ಲಾ ಹೇಳ್ತಾರೆ. ಅದೇನೇ ಇದ್ದರೂ ಅದೆಲ್ಲ ನಮಗ್ಯಾಕೆ? ಆದರೆ ಮನೆಯಲ್ಲಿ ಅವಳ ಬಗ್ಗೆ ‘ಸೂಳೆ’ ಅಂತೆಲ್ಲಾ ಮಾತನಾಡುವುದನ್ನು ನಾನು ಕೇಳಲಾರೆ. ಆದ್ದರಿಂದಲೇ ನಿಮಗೂ ಹೇಳಿದೆ” ಎಂದ.

ಬೆಳೆಗ್ಗೆ ಸ್ನಾನಮಾಡಿ, ತಿಂಡಿ ತಿನ್ನುವಾಗ ಗಂಗಮ್ಮ ಬಾಗಿಲಿನಲ್ಲಿ ಪ್ರತ್ಯಕ್ಷಳಾದಳು. ಕೈಯಲ್ಲಿ ಗಮಗಮಿಸುವ ಹೂವು. ನನಗೆ ಮಲ್ಲಿಗೆ ಹೂವೆಂದರೆ ಬಹಳ ಇಷ್ಟ. ಒಂದೇ ನೆಗೆತಕ್ಕೆ ಹಾರಿ ಹೂವು ತೆಗೆದುಕೊಂಡು, ರೂಮಿಗೆ ಹೋಗಿ ಹಣ ತರುವಷ್ಟರಲ್ಲಿ ಗಂಗಮ್ಮ ಮಾಯವಾಗಿದ್ದಳು.

ಗಂಗಮ್ಮ ಬಂದು ಹೋದಕೂಡಲೇ ಅಮ್ಮ “ಬೆಳಗಾಗೆದ್ದು ಅವಳ ಮುಖದರ್ಶನವಯ್ತಲ್ಲ. ಯಾರಿಗೆ ಬೇಕಾಗಿತ್ತು ಹೂವು? ಕಂಡಹಾಗೆ ಮೂವರು, ಕಾಣದ ಹಾಗೆ ಇನ್ನೆಷ್ಟು ಜನವೊ?” ಎಂದು ಗೊಣಗುಟ್ಟುತ್ತಿದ್ದರು.

ಮದುವೆಯಲ್ಲಿ ಮಾಡಿದ್ದ ತಿಂಡಿಗಳನ್ನೆಲ್ಲಾ ಮನೋಹರ ಗಂಟುಕಟ್ಟಿಕೊಟ್ಟ. “ಇಷ್ಟೊಂದು ಯಾಕೆ ನನಗೊಬ್ಬಳಿಗೇ” ಎಂದರೂ ಕೇಳಲಿಲ್ಲ. ಹತ್ತುಗಂಟೆಯ ಹೊತ್ತಿಗೆ ಹೊರಡಲು ತಯಾರಾದೆ. ನನಗೆ ಅಷ್ಟುಬೇಗ ಮನೋಹರನ ಮನೆ ಬಿಡುವುದು ಬೇಡವಾಗಿತ್ತು. ಅವರೆಲ್ಲರ ನಿಷ್ಕಲ್ಮಶ ಪ್ರೀತಿಗೆ ಪ್ರತಿಯಾಗಿ ಏನೂ ಹೇಳಲು ತೋಚಲಿಲ್ಲ. ಹೊರಡುವಾಗ ಎಲ್ಲರ ಕಣ್ಣಲ್ಲೂ ನೀರು. ಅಮ್ಮ“ನಾನು ಹೇಳಿದ್ದು ಮರೀಬೇಡ ಎಂದರು. “ಹೂಂ” ಅಂದೆ.

ಬಸ್ಸು ಹತ್ತಿ ಕುಳಿತೆ. ಗಂಗಮ್ಮನಿಗೆ ಹೂವಿನ ಹಣ ಕೊಡಬೇಕಾಗಿತ್ತು. ಅದನ್ನು ಮನೋಹರನಿಗೆ ಜ್ಞಾಪಿಸಿದ್ದಕ್ಕೆ-“ಅವಳು ಹಾಗೆಲ್ಲಾ ಹಣ ತೆಗೆದುಕೊಳ್ಳೊಲ್ಲ. ಅದೇನೋ ನಿಮ್ಮನ್ನು ಕಂಡರೆ ಇಷ್ಟವಾಗಿದೆ. ಅದಕ್ಕೆ ಹೂ ತಂದು ಕೊಟ್ಟಿದ್ದಾಳೆ. ಅವಳು ಹೂ ತಂದುಕೊಟ್ಟಿದ್ದಕ್ಕೆ ಅಮ್ಮ ಬೈಯ್ತಾ ಇದ್ದರು ಅಲ್ವಾ? ನೋಡಿ, ಈ ಸೆಕ್ಸ್, ನೈತಿವಾಗಿ, ಧೈರ್ಯವಾಗಿ ಹೇಳುವುದಕ್ಕಾಗುವುದಿಲ್ಲ. ಅವರಿಗೆ ನಾವೇ ತಲೆಬಾಗಿಬಿಡಬೇಕಾಗುತ್ತದೆ. ನಿಜಕ್ಕೂ ಈ ವಿಷಯದಲ್ಲಿ ಗಂಗಮ್ಮನ ಧೈರ್ಯ ಮೆಚ್ಚುವಂತಹುದೆ. ಮೊದಲನೆಯ ಗಂಡ ಬಿಟ್ಟು ಹೋದ. ಎರಡನೆಯವ ಹಣ, ಒಡವೆ ತೆಗೆದುಕೊಂಡು ಪರಾರಿ. ಮೂರನೆಯವನಿದ್ದಾ, ಅವನೇನು ಮಾಡ್ತಾನೋ ನೋಡಬೇಕು. ಅಕಸ್ಮಾತ್ ಅವನು ಹೊರಟುಹೋದ್ರೂ ಗಂಗಮ್ಮ ಧೈರ್ಯವಾಗಿರ್‍ತಾಳೆ. ಅವತ್ತೊಂದು ದಿನ ‘ನನಗೆ ಐಶ್ವರ್ಯ ಬೇಡ. ಜಾತಿ ಬೇಡ, ಕೊನೆಗೆ ಶೀಲಾನೂ ಬೇಡ ಕಣಪ್ಪಾ, ಬದುಕೋಕ್ಕೆ ಧೈರ್ಯ ಬಂದಿದ್ರೆ ಸಾಕು’ ಅಂತ ಹೇಳಿದಳು.”

“ಮಕ್ಕಳಿದ್ದಾರಾ? ಗಂಗಮ್ಮನಿಗೆ?”

“ಹೂಂ. ೧೩ ವರ್ಷದ ಮಗಳಿದ್ದಾಳೆ. ನೋಡ್ತೀನಿ, ಸಾಧ್ಯ ಆದ್ರೆ ನಾನೇ ಅವಳನ್ನು ಮದುವೆಯಾಗ್ತೀನಿ, ಏನಂತೀರಾ?” ಎಂದ.

“ಧಾರಾಳವಾಗಿ, ಅದಕ್ಕೆ ನನ್ನ ಒಪ್ಪಿಗೆ ಯಾಕೆ ಬೇಕು’?” ಎಂದೆ ನಗುತ್ತಾ. ಅಷ್ಟರಲ್ಲಿ ಬಸ್ಸು ಹೊರಡುವ ಸಮಯವಾಯಿತು. ಮನೋಹರ ನನ್ನ ಕೈ ಹಿಡಿದು “ವಸಂತಾ, ಇಲ್ಲಿ ನಿಮಗೆ ಯಾವುದಾದರೂ ವಿಷಯಕ್ಕೆ ಬೇಸರವಾಗಿದ್ದರೆ, ನಮ್ಮಿಂದ ತಪ್ಪಾಗಿದ್ದರೆ ಕ್ಷಮೆ ಕೇಳುತ್ತಿದ್ದೇನೆ. ನೀವು ಬಂದಿದ್ದು ನನಗೆಷ್ಟೋ ಸಂತೋಷ ಆಗ್ತಿದೆ ಅಂದ್ರೆ ಹೇಳೊಕ್ಕಾಗ್ತಿಲ್ಲ. ಪತ್ರ ಬರೀತಾ ಇರಿ. ನಿಮ್ಮ ಪತ್ರ, ನಿಮ್ಮ ನೆನಪು ಇದ್ದಷ್ಟೇ ಬದುಕಿನಲ್ಲಿ ನನಗೆ ಖುಶಿ ಕೊಡುವ ವಿಷಯಗಳು” ಎಂದ. ಅವನ ಕಣ್ಣಲ್ಲಿ ನೀರುತುಂಬಿದ್ದು, ನನಗೆ ತಿಳಿಯದಂತೆ ಅದನ್ನು ಒರೆಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದ. ನನಗೆ ಯಾವ ರೀತಿಯ ಸಮಾಧಾನ ಹೇಳಬೇಕೆಂದು ತಿಳಿಯಲಿಲ್ಲ.

“ನನ್ನ ಬಗ್ಗೆ ಅನ್ನಿಸಿದ್ದನ್ನು ಪತ್ರದಲ್ಲಿ ಬರೀರಿ. ಹೇಳಬೇಕಾದ್ದು, ಹೇಳಬಾರದ್ದು ಎಲ್ಲಾ ಬರೀಬೇಕು, ಆಂ?” ಮನೋಹರ ಹೇಳಿದಾಗ “ಹೂಂ” ಎಂದು ತಲೆಯಾಡಿಸಿ ಕೈಬೀಸಿದೆ.

ಊರು ತಲುಪುವವರೆಗೂ ಮನೋಹರ, ಅವನ ಪರಿಸರ, ಹಳ್ಳಿಯೆಲ್ಲಾ ಕಣ್ಣು ಮುಂದೆ ಸುಳಿಯಿತು. ಆ ಜನಗಳ ಮಧ್ಯೆ ಇದ್ದೂ ಅಂಟದಂತಿದ್ದ ಮನೋಹರ, ಗಂಗಮ್ಮ, ಅಂತೂ ಒಂದು ಪುಟ್ಟ ವಿಚಿತ್ರ ವಿಶ್ವವನ್ನೇ ಕಂಡಂತಾಗಿತ್ತು.

ಮನೋಹರ ಬರೆದಿದ್ದ ಲೇಖನಗಳನ್ನೆಲ್ಲಾ ತಿರುವಿ ಹಾಕಿದೆ. ಒಂದು ಕಡೆ ದೊಡ್ಡದಾಗಿ ‘ಕಾಮಕ್ರಿಯೆ’ ಎಂದು ಬರೆದಿದ್ದ. ಅದೂ ಗೊತ್ತಾ ಈ ಮನುಷ್ಯನಿಗೆ? ಎಂದುಕೊಂಡು ಕುತೂಹಲದಿಂದ ಓದಿದೆ. ಇಬ್ಬರ ಒಪ್ಪಿಗೆಯಿಂದಾದರೆ ಮತ್ತು ಅನಂತರ guiಟಣ ಪ್ರಜ್ಞೆಯಿಂದ ವಿಮುಕ್ತರಾಗುವ ಗತ್ತಿದ್ದರೆ ಮಾತ್ರ ತೊಡಗಬೇಕು. ಇದರಲ್ಲಿ ಮೋಸಯಿಲ್ಲ. ಆದರೆ, ಮುಗ್ಧರನ್ನು ಸೆಳೆದು, ಆಸೆತೋರಿಸಿ, ಅನುಭವಿಸಿ ಅವರನ್ನು ಮಾನಸಿಕ ರೋಗಿಗಳನ್ನಾಗಿಸುವುದನ್ನು ನಾನು ವಿರೋಧಿಸುತ್ತೇನೆ. ತನ್ನ ಗಂಡ ನಪುಂಸಕನಾಗಿದ್ದು, ಬೇರೆಯವರಲ್ಲಿ ತೃಪ್ತಿ ಕಂಡುಕೊಳ್ಳುವ ಹೆಣ್ಣನ್ನು ನಾನು ದ್ವೇಷಿಸುವುದಿಲ್ಲ. ಆದರೆ ತನ್ನನ್ನು ತಾನು ನಿಯಂತ್ರಿಸಿಕೊಂಡು ನಪುಂಸಕ ಗಂಡನನ್ನು ಪ್ರೀತಿಸುವವರನ್ನು ತ್ಯಾಗಿ ಎಂದು ಹೇಳುವುದೂ ಇಲ್ಲ. ಆಶ್ಚರ್ಯದಿಂದ, ಭೇಷ್! ಎನ್ನಬಲ್ಲೆ ಅಷ್ಟೆ!

ಇದು ಕಾಮದ ಬಗೆಗಿನ ನನ್ನ ಅಭಿಪ್ರಾಯ…

ಇದನ್ನು ಓದುತ್ತಿದ್ದಂತೆ ಮನೋಹರನ ವಿಚಾರಗಳು ಅದೆಷ್ಟು ತರ್ಕಬದ್ಧವಾಗಿ ಕೂಡಿರುತ್ತವೆ ಅನ್ನಿಸಿತು. ಈ ಕಾರಣದಿಂದಲೇ ಅವನಿಗೆ ಗಂಗಮ್ಮನ ಬಗ್ಗೆ ಯಾವ ಕೆಟ್ಟ ಭಾವನೆಗಳೂ ಇಲ್ಲ. ನನಗೂ ಮನೋಹರನ ಯೋಚನೆಗಳು ಅರ್ಥವಾಗುತ್ತಿದ್ದಂತೆ ಗಂಗಮ್ಮನದು ತಪ್ಪಿಲ್ಲ ಎನ್ನಿಸಿತು. ಅಂತೂ ಪ್ರಥಮಬಾರಿಗೆ ಗಂಗಮ್ಮನಂತಹವರ ಬಗ್ಗೆ ಒಳ್ಳೆಯದಾಗಿ ಯೋಚಿಸಿದೆ. ಎಲ್ಲಾ ಮನೋಹರನ ಪ್ರಭಾವ.
*
*
*
ರತ್ನಳ ಮದುವೆ ಮುಗಿದನಂತರ, ಆ ಗಲಾಟೆ ಕಡಿಮೆಯಾಗುತ್ತಿದ್ದಂತೆ ಮನಸ್ಸಿನಲ್ಲಿ ಮತ್ತೆ ವಸಂತ ಆವರಿಸುತ್ತಿದ್ದಾಳೆ. ವಸಂತಾ, ನಿನ್ನನ್ನು ಕಂಡಾಗ ನಂಬಲಾರದಷ್ಟು ಚಟುವಟಿಕೆಯಿಂದ ಕುಣಿವ ಪುಟ್ಟಹುಡುಗಿ ಎನಿಸಿತು. ನನ್ನಂತೆಯೇ ನೀನು ಹೊರಗೆ ಚೆಲ್ಲುಚೆಲ್ಲು, ಕಾಗದಗಳಲ್ಲಿ ಭಯಂಕರ ಸೀರಿಯಸ್, ಯಾಕೆ?

ನನ್ನ ದಿಟ್ಟತನ, ನೇರಮಾತುಗಳು ನಿನಗೆ ಇಷ್ಟವಾಯಿತೆ? ನನಗೆ ನಿನ್ನ ಸಾಮಾನ್ಯರೂಪು, ಸರಳಮಾತು, ನಿನ್ನ ಸಾದಾ ಕಪ್ಪುಬಣ್ಣ, ಇವೇ ತುಂಬಾ ಪ್ರಿಯವಾಯಿತು. ಪತ್ರಗಳಲ್ಲಿ ಸ್ವಲ್ಪವಾದರೂ ಬುದ್ಧಿವಂತಿಕೆಯಿಂದ ಬರೆಯುವ ನೀನು ಭೇಟಿಯಾದಾಗ ಬಹಳ ಪೆದ್ದಾಗಿ ಕಂಡು, ನಾನು ತಿಳಿದುಕೊಂಡಷ್ಟು ವಿಚಾರವಂತಳಲ್ಲ ಎನ್ನಿಸಿತು.

ವಸಂತಾ, ನಿನ್ನನ್ನು ನೋಡಿದಾಗಿನಿಂದ ನನ್ನ ಮನಸ್ಸಿಗೆ ಬಂದ ಭಾವನೆಗಳನ್ನು ಬರೆಯಲೆಂದೇ ಕುಳಿತೆ. ಆದರೆ ಏನು ಮಾಡಲಿ? ಬರೆದರೆ ನಿಜಕ್ಕೂ ಅರ್ಥವಾಗುತ್ತದೆಯೆ?

ರತ್ನಳ ಮದುವೆ ಆಯ್ತು. ನನ್ನಿಂದ ಅವಳು ತುಂಬಾ ದೂರ ಹೊರಟುಹೋದಳು. ಅವಳ ಗಂಡ, ಮನೆ, ಮಕ್ಕಳಿಂದ ಹೊರಬಂದು ನನ್ನನ್ನು ಮೊದಲಿನಂತೆ ವಿಚಾರಿಸಿಕೊಳ್ಳಲು ಸಾಧ್ಯವೇ? ರಂಗನಾಥ ಓದಿದ್ದು ಮುಗಿಯಿತು. ಕೆಲಸ ಸಿಕ್ಕಿದ ನಂತರ ಅವನ ದಾರಿ ಅವನೇ ನೋಡಿಕೊಳ್ಳುತ್ತಾನೆ. ‘ನಾವ್ಯಾರೂ ನಿನಗೆ ಹೆಣ್ಣು ಹುಡುಕಿಕೊಡುವುದಿಲ್ಲ. ನೀನೇ ನಿನಗಿಷ್ಟವಾದವಳನ್ನು ಮದುವೆಯಾಗು, ಎಂದು ಹೇಳಿದ್ದಾನೆ.

ನಾನು ಯಾರಿಗಾಗಿ ಯಾತಕ್ಕಾಗಿ ಬದುಕುತ್ತಿದ್ದೇನೋ ಗೊತ್ತಿಲ್ಲ. ಯಾವುದರಲ್ಲಿಯೂ ಅರ್ಥವಿಲ್ಲ. ಮದುವೆ, ಮನೆ, ಮಕ್ಕಳು? ಮನೆತುಂಬಾ ರಂಗೋಲಿ ಬಿಟ್ತುಕೊಂಡು ಹಸಿರು ತೋರಣಗಳ ಬಾಗಿಲಲ್ಲಿ ಅರಿಸಿನ, ಕುಂಕುಮಗಳ, ಒಡವೆ, ವಸ್ತ್ರಗಳ ಹೆಂಡತಿಯನ್ನು ನೆನೆದರೆ ಅಸಹ್ಯ ಆಗುತ್ತೆ. ಅದನ್ನೆಲ್ಲಾ ಮರೆಸುವ ನಿನ್ನಂಥ ಸರಳ ಮನಸ್ಸಿನ, ಬಿಚ್ಚು ಹೃದಯದ ಸ್ನೇಹ ನನಗೆ ಬೇಕು. ಇದರಲ್ಲೇ ನಾನೆಷ್ಟು ಸುಖಿ ಗೊತ್ತಾ?

ವಸಂತಾ, ನಾನು ಒಳ್ಳೆಯ ಹುಡುಗಿಯನ್ನು ಮದುವೆಯಾಗಬೇಕು? ನನ್ನ ಸ್ವಭಾವ, ವಿಚಿತ್ರ-ವಿಕಾರ-ವರ್ತನೆ….ಈ ವರ್ತನೆಯ ವಿಕಾರಸ್ವಭಾವಗಳಿಂದ ನಾನು ಎಲ್ಲರನ್ನೂ ಗಾಯಗೊಳಿಸುತ್ತೇನೆ. ನಿನ್ನನ್ನು ನೋಯಿಸುವ ಅವಕಾಶ ನನಗಿನ್ನೂ ಬಂದಿಲ್ಲ ನಿನಗೆ ಗೊತ್ತಿಲ್ಲನಾನೊಬ್ಬ ‘ಟಿeuಡಿoಣiಛಿ’ ಎಂದು. ಹೊರಗಿನವರೆಲ್ಲಾ ಇದನ್ನು ಒಪ್ಪಿಕೊಳ್ತಾರೆ. ಆದರೆ ಇದನ್ನು ನೀವ್ಯಾರೂ ಒಪ್ಪಿಕೊಳ್ಳಲು ಸಿದ್ಧರಿಲ್ಲ. ಆದ್ದರಿಂದ ನಿಮಗೆ ಅಪಾಯ ಅನಿವಾರ್ಯ.

ನನ್ನ ಅತ್ಯಂತ ಒಳಗಿನ ಅಹಂ ಯಾರಮೇಲೋ ಯುದ್ಧಕ್ಕೆ ಹೊರಟಿದೆ. ಯಾರಿಗಾಗಿಯೂ ಅನುಕಂಪ ಕೊಡಲಾರದ ನನ್ನ ಈ ಒಳಗಿನದನ್ನು ಯಾರೂ ಬದಲಾಯಿಸಲಾರರು.

ನಾನು ಸಂಪೂರ್ಣ ಸ್ವತಂತ್ರನಾಗಿರಬೇಕು. ನನ್ನ ಈ ಸ್ವಾತಂತ್ರ್ಯದ ತೀವ್ರತೆ ಎಂತಹದೆಂದರೆ ಸಾವಿನ ಬಗ್ಗೆ ಯೋಚಿಸುವಷ್ಟು ಸ್ವಾತಂತ್ರ್ಯ ಇರಬೇಕು. ಈ ಸ್ವಾತಂತ್ರ್ಯವನ್ನು ಕಸಿಯುವ ಹೆಂಡತಿ, ಮಕ್ಕಳು ನನಗೆ ಬೇಡ.

ನಿನಗೆ ಕೇವಲ ಒಂದು ಬಾರಿ ಭೇಟಿಯಾದ ಮನೋಹರ ಇಷ್ಟವಾಗಿದ್ದಾನೆ ಅಲ್ಲವೆ? ಈ ಮನೋಹರ ಇಡೀ ಜಗತ್ತನ್ನೇ, ಇಡೀ ಬದುಕನ್ನೇ ಜಿಗುಪ್ಸೆಯಿಂದ ಅರ್ಥಹೀನವಾಗಿ ದಿಟ್ಟಿಸುತ್ತಾ ದೂರದ ದಿಗಂತದಂಚನ್ನು ಸುಮ್ಮನೆ ದಿಟ್ಟಿಸುತ್ತ ಗಂಟೆಗಟ್ಟಲೆ ಕುಳಿತಿರುತ್ತಾನೆ. ಎಲ್ಲದರಲ್ಲೂ ನಿರುತ್ಸಾಹ, ಸರಿಯಾಗಿ ಬಟ್ಟೆಯೂ ತೊಡದೆ, ಜೋಲುಮೋರೆಯಲ್ಲಿ ಎಲ್ಲೆಂದರಲ್ಲಿ ಹೊರಟುಬಿಡುತ್ತಾನೆ. ಊಟ ಸಹಾ ಮಾಡೋಲ್ಲ. ನಿದ್ರೆಯಿಲ್ಲದೆ ಹೊರಳಾಡುತ್ತಾನೆ. ನೂರಕ್ಕೆ ಒಂದು ಬಾರಿ ಮಾತನಾಡಿದರೆ ಹೆಚ್ಚು.

ಕೆಲವೊಮ್ಮೆ ಸಿನಿಮಾ ನಟನಂತೆ ಉಡುಪು ಧರಿಸಿಕೊಂಡು ಕುಣಿಯುತ್ತಾ ನಗುತ್ತಾ ಎಲ್ಲರನ್ನೂ ನಗಿಸುತ್ತಾ, ಎಲ್ಲರಿಗೂ ಐಸ್‌ಕ್ರೀಂ ಕೊಡಿಸುತ್ತಾನೆ. ಆ ಸ್ಥಿತಿಯಲ್ಲಿ ನೋಡಿದಾಗ ಇವನು ಎಂಥ ಮುಗ್ಧ, ಮಗುವಿನ ಮನಸ್ಸಿನವನು ಅನ್ನಿಸುತ್ತದೆ. ಈ ಅವಸ್ಥೆಯಲ್ಲಿ ಅವನನ್ನು ನೋಡಿ ನೀನು ಸೋತು ‘ಮನೋಹರ ಒಳ್ಳೆಯವನು’ ಎಂದುಕೊಂಡಿರುವಿರಿ.

ನನ್ನ ಕುಟುಂಬ ಈಗೇನೋ ಒಳ್ಳೆಯ ಸ್ಥಿತಿಯಲ್ಲಿದೆ. ಅದನ್ನು ಈ ಸ್ಥಿತಿಗೆ ತರಲು ನಾನು ಪಟ್ಟ ಪಾಡೆಷ್ಟು ಗೊತ್ತಾ? ಆದರೆ ಹಿಂದಿನ ಘಟನೆಗಳು-ನಿನಗೆ ಹೇಳಲಾರದವು. ಅತ್ಯಂತ ಕ್ರೂರ ನೆನಪುಗಳು ಮಡುಗಟ್ಟಿಕೊಂಡು ಹಿಂಸಿಸುತ್ತವೆ. ಭಯಂಕರ ಬೆಂಕಿಯಂಥ ನೆನಪುಗಳು ಪ್ರತಿಕ್ಷಣವೂ ಕುಟುಕುತ್ತವೆ. ಬಹುಶಃ ಈ ನೆನಪುಗಳ ಕ್ರೂರ ಇರಿತದಿಂದ ನನಗೆ ಅಂತ್ಯದವರೆಗೆ ಬಿಡುಗಡೆ ಇಲ್ಲವೇನೋ. ನನ್ನ ಈಗಿನ ಬದುಕು ಮತ್ತು ಆಗಿನ ನೆನಪುಗಳು ತದ್ವಿರುದ್ಧ. ಆ ನೆನಪುಗಳು ಹೆಂಗಸಿನ ಬಗೆಗಿರುವ ಮೋಹವನ್ನು ಕಿತ್ತುಕೊಂಡಿವೆ. ಇವುಗಳನ್ನೆಲ್ಲಾ ಮರೆತು ನಾನು ಹೆಂಡತಿ, ಮಕ್ಕಳೊಡನೆ ಒಡನಾಡಲಾರೆ.

ನೀನು ನನ್ನ ಊರಿನಲ್ಲಿ ಖುಷಿಪಟ್ತದ್ದು ನನಗೆ ಸದ್ಯಕ್ಕೆ ಸಂತೋಷ ತಂದಿದೆ. ಎಲ್ಲಕ್ಕಿಂತ ಮುಖ್ಯವಾಗಿ ನಿನ್ನ ಸ್ವಭಾವದ ಸಂಪೂರ್ಣ ಪರಿಚಯವಾಯಿತು. ನಿನ್ನ ಮನಸ್ಸು ಭಯಂಕರ ಸೂಕ್ಷ್ಮ…. ಅಷ್ಟೊಂದು ಸೂಕ್ಷ್ಮವಾದರೆ ಬಹಳ ಕಷ್ಟ ಅಲ್ಲವೆ? ನಿನ್ನ ಮನಸ್ಸು ಲೋಳಿ. ಅದು ಗಟ್ಟಿಯಾಗಬೇಕು, ಒರಟಾಗಬಾರದು. ಆಗ ಮಾತ್ರ ಬದುಕಿನ ಏರಿಳಿತಗಳ ಒರಟು ಅನುಭವ ನಿನ್ನದಾಗುತ್ತದೆ.

ಹಾಂ, ನಾನೆಷ್ಟು ಒರಟು ಎನ್ನುವುದಕ್ಕೆ ಒಂದು ಘಟನೆ ಹೇಳುತ್ತೇನೆ. ಮದುವೆ ಮುಗಿಸಿಕೊಂಡು ಕೆಲಸಕ್ಕೆ ಹಾಜರಾದೆ ಅಲ್ವ? ಇಲ್ಲಿ ನಾನು ಬಂದ ನಂತರ ನಮ್ಮ ಸಹೋದ್ಯೋಗಿಯೊಬ್ಬರ ತಂದೆ ಸತ್ತರು. ಎಲ್ಲ ದುಃಖತಪ್ತರಂತೆ ಕಂಡರು. ಅಥವಾ ನಟಿಸಿದರು. ಎಲ್ಲರೂ ಓಡಿದರು ಹೆಣಕ್ಕಾಗಿ! ನನಗೆ ಆಶ್ಚರ್ಯ, ನೀವು ಹೋಗೋಲ್ಲವೆ? ಎಂದರು. ‘ನಾನ್ಯಾಕೆ ಹೋಗಬೇಕು? ನನ್ನದೇನು ಅವಶ್ಯಕತೆಯಿದೆ ಅಲ್ಲಿ?’ ಎಂದಾಗ ಅವರೆಲ್ಲಾ ಯಾವುದೋ ಒಣಮರವನ್ನು ನೋಡುವಂತೆ ನನ್ನನ್ನು ನೋಡಿದರು. ‘ಭಾವನೆಗಲೇ ಇಲ್ಲದ ಬರಡು ಕೊರಡು ’ಎಂದರು. ನನಗೆ ಬೇಸರ ಆಗಲಿಲ್ಲ. ಆದರೆ ಆ ವ್ಯಕ್ತಿ ನನ್ನ ಸಂಬಂಧಿಕನಾಗದುದಕ್ಕೆ ನಾನು ಬರಡಾಗಿರಬಹುದೆಂದುಕೊಂಡೆ. ನನ್ನ ತಂದೆಯ ಸಾವನ್ನು ಬೇಕೆಂದೇ ಕಲ್ಪಿಸಿಕೊಂಡೆ. ಭಾವನೆಗಳು ಸೊನ್ನೆ! ಬಹುಶಃ ಆ ಸಾವು ನನ್ನದಲ್ಲವಲ್ಲ, ಅದಕ್ಕಾಗಿ!

ವಸಂತಾ, ನಾನುಭಾಷೆಯನ್ನು-ಮಾತನಾಡುವ, ಬರೆಯುವ ಭಾಷೆಯನ್ನು ಧ್ವೇಷಿಸುತ್ತೇನೆ. ನನ್ನ ಭಾಷೆ ಗೊತ್ತಿಲ್ಲದ, ನನಗವರ ಭಾಷೆ ಗೊತ್ತಿಲ್ಲದ ಸ್ಥಳಕ್ಕೆ ಹೋಗಿಬಿಡಬೇಕಿನ್ನಿಸುತ್ತಿದೆ. ಈ ಭಾಷೆ ಮನುಷ್ಯ-ಮನುಷ್ಯರಲ್ಲಿ ಸ್ವಾರ್ಥ-ದ್ವೇಷ ತುಂಬುವ ಸಾಧನ. ನಾನು ಮೂಗನಾಗಬೇಕಿತ್ತು. ಆಗ ಮಾತನಾಡಲಾಗದ ನನ್ನನ್ನು ‘ಮೂಗ ಎಂದಷ್ಟೆ ಕರೆದು ಸುಮ್ಮನಾಗುತ್ತಿದ್ದರು. ಈಗ ಮಾತನಾಡುವ ನನ್ನನ್ನು, ನನ್ನ ಬಗೆಬಗೆಯ ಮಾತುಗಳಿಂದಾಗಿ ಪ್ರೀತಿಸುತ್ತರೆ, ದ್ವೇಷಿಸುತ್ತಾರೆ, ಕೋಪಿಸಿಕೊಳ್ಳುತ್ತಾರೆ, ಜಿಗುಪ್ಸೆಗೊಳ್ಳುತ್ತಾರೆ. ಮನುಷ್ಯ ಒಂದು ಪ್ರಾಣಿಯಂತಿದ್ದರೆ, ಗಿಡಮರಗಳಂತಿದ್ದರೆ ಅದೆಷ್ಟು ಚನ್ನ!

ನಿಮ್ಮ ಸ್ನೇಹ ನನಗೆ ಅದೆಷ್ಟು ಪ್ರಿಯವಾಯಿತೆಂದರೆ, ಟ್ರಾನ್ಸ್‌ಫರ್ ಮಾಡಿಸಿಕೊಂಡು ಬೆಂಗಳೂರಿಗೆ ಬಂದುಬಿಡಲೆ? ಎನ್ನಿಸುತ್ತದೆ. ನಿಮ್ಮ ಇರುವಿಕೆಯಿಂದ ಉ‌ಆವುದೋ ಕಳೆದುಹೋದ ವಸ್ತುವೊಂದನ್ನು ಪಡೆದಂತಾಗುತ್ತಿದೆ. ವಸಂತಾ, ನನ್ನ ಬದುಕಿನ ಇಷ್ಟು ವರ್ಷಗಳಲ್ಲಿ ನನಗೆ ಯಾರೂ ಸ್ನೇಹಿತರೇ ಇರಲಿಲ್ಲ ಎಂದರೆ ನಂಬುತ್ತೀಯಾ? ನೀವೇ ಮೊದಲು, ಬಹುಶಃ ನೀವೇ ಕೊನೆ.

ನೀವು ಒಬ್ಬ ಸಮಾನ್ಯ ಕನಸುಗಣ್ಣಿನ ಹೆಣ್ಣಲ್ಲ. ನಾನು ಆಫೀಸಿನಲ್ಲಿ, ಊರಿನಲ್ಲಿ ರತ್ನಳ ಗೆಳತಿಯರ ಬಳಿ ಮಾತನಾಡಿದಾಗ, ಅವರು ನನ್ನ ಬಗ್ಗೆ ಕನಸುಕಟ್ಟಿ ಮದುವೆಯಾಗುವ ದೃಶ್ಯವನ್ನು ಕಾಣುತ್ತಿರುತ್ತಾರೆ ಇದು ನಿಜ! ನೀವು ಆ ಸಾಲಿಗೆ ಸೇರಲಿಲ್ಲವಲ್ಲ ಎಂದು ನನಗೆಷ್ಟು ಹೆಮ್ಮೆಯಾಗಿದೆ, ಗೊತ್ತಾ? ನೀವು ನನಗೆ ಬಾಳಿನುದ್ದಕ್ಕೂ ಇದೇ ರೀತಿ ಸ್ನೇಹ ಕೊಡಬೇಕು. ಇದಕ್ಕಾಗಿ ನನ್ನ ಬಗ್ಗೆಯೇ ನಾನೆಷ್ಟು ಹಾರೈಸಿಕೊಳ್ಳುತ್ತೇನೆ ಗೊತ್ತಾ? ನಿಮ್ಮ ಮದುವೆ ಇದಕ್ಕೆಲ್ಲಾ ಅಡ್ಡಿ ಆಗದಂತಿದ್ದರೆ ಆಗ ನಾನು ನಿಜಕ್ಕೂ ಅದೃಷ್ಟವಂತ ಎಂದು ಹೇಳಬಹುದು. ವಸಂತಾ, ನಿಮಗೆ ಈಗ ನಾನು ಯೋಚಿಸುತ್ತಿರುವುದನ್ನೆಲ್ಲಾ ಪತ್ರದಲ್ಲಿ ಇಳಿಸಿ, ಆ ಪತ್ರ ನಿಮಗೆ ಯಾವಾಗ ತಲುಪುತ್ತದೋ ಎಂಬ ಕಾತುರ ಉಂಟಾಗುತ್ತಿದೆ. ನೀವು ಹೇಳಿದ ಹಾಗೇ ಈ ದಿನಾಂಕದಂದು ನಾವಿಬ್ಬರೂ ಪತ್ರ ಬರೆಯಬೇಕೆಂದುಕೊಂಡೆವಲ್ಲವೇ ? ಇದೋ ನಾನಂತೂ ಈಗ ಶುರು ಮಾಡಿದ್ದೇನೆ. ನೀವೂ ಈಗಾಗಲೇ ಪತ್ರ ಬರೆದು ಪೋಸ್ಟ್ ಮಾಡಿರಬೇಕಲ್ಲವೇ? ಇನ್ನು ಪತ್ರ ಶುರುಮಾಡಲೇ?

ಪ್ರಿಯ ವಸಂತ,

ನನ್ನ ದಿಟ್ಟತನ, ನೇರ ಮಾತುಗಳು ನಿಮಗೆ ಇಷ್ಟವಾದವೆ? ನನಗೆ ನಿಮ್ಮ ಸಾಮಾನ್ಯ ರೂಪು, ಸರಳ ಮಾತು…
*
*
*
ಮನೋಹರನ ಹಳ್ಳಿಯಲ್ಲಿ ನಡೆದ ವಿಷಯಗಳನ್ನೆಲ್ಲಾ ಕೇಳಲು ವಾಸು, ಸುಚಿತ್ರಾ ಅತ್ಯಂತ ಕಾತುರರಾಗಿದ್ದರು. ಅವರಿಗೆ ಏನೇನು ನಡೆಯಿತೋ ಅದನ್ನೆಲ್ಲಾ ಹೇಳಿ, ನನಗೆ ಬೇಕಾದ ಕಡೆಗಳಲ್ಲಿ ಉತ್ಪ್ರೇಕ್ಷೆ ಮಾಡಿ ಹೇಳಿದೆ. ಒಟ್ಟಿನಲ್ಲಿ ಹಳ್ಳಿಗೆ ಹೋಗಿ ಬಂದು ನಾನು ಸಂತೋಷವಾಗಿರುವುದಕ್ಕೆ ಅವರಿಗೂ ಸಂತೋಷವಾಗಿತ್ತು.

ವಾಸು “ಅವರ ಅಪ್ಪ-ಅಮ್ಮ ನಿಮಗೆ ಇನ್ನೇನು ಹೇಲಿದರು? ನೀವಂತೂ ಅವರಿಗೆ ಇಷ್ಟವಾಗಿದ್ದೀರ. ಅವರೂ ನಿಮಗೆ ಇಷ್ಟವಾಗಿದ್ದಾರೆ ಅಲ್ವಾ?” ಎಂದ.

“ನಾನು ಹಳ್ಳಿ ಬಿಟ್ಟು ಬರುವ ದಿನ ಬೆಳಿಗ್ಗೆ ಮನೋಹರನ ಅಮ್ಮ ನನ್ನನ್ನು ಪ್ರತ್ಯೇಕವಾಗಿ ಕರೆದು ಮದುವೆಯ ಬಗ್ಗೆ ಕೇಳಿದರು. ಈ ಬಗ್ಗೆ ಮನೋಹರ ಏನೂ ಹೇಳಿಲ್ಲ ಅಂದೆ. ಅದಕ್ಕೆ ಅವರು “ಅವನನ್ನು ನೆಚ್ಚಿ ಕುಳಿತರೆ ಅವನಾಗಿ ಕೇಳುವುದೇ ಇಲ್ಲ. ನೀನೇ ಕೇಳಿಬಿಟ್ಟು ಅವನೇನು ಉತ್ತರ ಕೊಡುತ್ತಾನೋ ಅದಕ್ಕೆ ಉತ್ತರ ಬರಿ ಎಂದರು” ಅಂದೆ.

ವಾಸು ಸಂತೋಷದಿಂದ “ವಾರೆವ್ಹಾ! ಹಳ್ಳಿಯವರಾದ ಅವರೇ ಇಂಥ ಒಳ್ಳೇ ಪ್ಲಾನ್ ಹೇಳಿಕೊಟ್ರಾ? ಸರಿ. ಇಷ್ಟೆಲ್ಲಾ ಆದಮೇಲೆ ಇನ್ನೇನು? ನೀವೇ ಅವರನ್ನು ಮದುವೆಯಾಗಲು ಇಷ್ಟಪಟ್ಟು ಒಪ್ಪಿರುವುದಾಗಿ ಬರೆಯಿರಿ. ಈ ಆಫೀಸಿನಲ್ಲಿ ನನ್ನದೊಂದು ಪ್ರೇಮ ವಿವಾಹವಾಯಿತು. ಎರಡನೆಯದಾಗಿ ನೀವು ಆಗ್ತಾ ಇದ್ದೀರ. ಬೇಗ ಇಬ್ಬರೂ ಸೇರಿ ತೀರ್ಮಾನಿಸಿಬಿಡಿ. ನಾನೂ ಚೆನ್ನಾಗಿ ಓಡಾಡಿ ಕೆಲಸ ಮಾಡಿಕೊಡ್ತೀನಿ”ಎಂದ. ಸುಚಿತ್ರಳೂ ಇದಕ್ಕೆ ಧ್ವನಿಗೂಡಿಸಿದಳು. ಇದು ನನಗೂ ಸರಿಯೆನ್ನಿಸಿದರೂ, ಮನೋಹರನ ಅಪ್ಪ-ಅಮ್ಮ ಒಪ್ಪಿದ್ದಕ್ಕೆ ಇವರೆಲ್ಲ ಸಹಾಯ ಮಾಡುತ್ತಿದ್ದಾರೆ; ಇಲ್ಲದಿದ್ದರೆ ಮಾಡುತ್ತಿರಲಿಲ್ಲವೇನೋ ಎನ್ನಿಸಿತು.

ನನ್ನಜೊತೆ ಮನೋಹರ ಸಲಿಗೆಯಿಂದಿದ್ದ ರೀತಿ, ಹಳ್ಳಿಯವರ ಮಾತುಕತೆ ನನ್ನನ್ನು ಮನೋಹರನ ಮನೆಯವರು ‘ಸೊಸೆ’ ಎಂಬಂತೆ ನಡೆಸಿಕೊಂಡ ರೀತಿ ಆಫೀಸಿನಲ್ಲಿ ವಾಸು, ಸುಚಿತ್ರಳ ಸಹಕಾರ ಇವೆಲ್ಲಾ ನನಗೆ ಪೂರಕವಾಗಿದ್ದು, ಮನೋಹರ ‘ನಿಮಗನಿಸಿದ್ದನ್ನೆಲ್ಲಾ ಬರೆಯಬೇಕಾದ್ದು, ಬೇಡದ್ದು ಎಲ್ಲ ಬರೆಯಿರಿ’ ಎಂದು ಹೇಳಿರುವಾಗ, ನನಗಂತೂ ಮನೋಹರನ ಬಗ್ಗೆ ಮೊದಲೇ ಇಷ್ಟವಿರುವಾಗ ಯಾಕೆ ನಾನೇ ಮದುವೆಯ ಬಗ್ಗೆ ಬರೆಯಬಾರದು? ಎನ್ನಿಸಿತು. ಆದರೆ ಈಗ ಆಫೀಸಿನಲ್ಲಿ ಬೇಡ ಎಂದು ಸುಮ್ಮನಾದೆ.

ರಾತ್ರಿ ಕುಳಿತು ಪತ್ರದ ಪ್ರಾರಂಭ ಯಾವ ರೀತಿ ಮಾಡಬೇಕೆಂದು ತಿಳಿಯದೆ ಒದ್ದಾಡಿದೆ. ಈ ಬಗ್ಗೆ ಸುಚಿತ್ರ, ವಾಸು ಇವರಿಬ್ಬರನ್ನು ಕೇಳಲು ಏನೋ ಸಂಕೋಚ! ಈ ಪತ್ರವನ್ನು ಮಾಮೂಲಿ ಪತ್ರಗಳಿಗಿಂತಾ ಬೇರೆಯಾಗಿ ಬರೆಯಬೇಕೆನ್ನಿಸಿತು. ಅದಕ್ಕಾಗಿ ಬಿಳಿ ಕಾಗದದ ಮೇಲೆ ನನ್ನದೊಂದು ಭಾವಚಿತ್ರವನ್ನು ಅಂಟಿಸಿ, ನನಗೆ ಗೊತ್ತಿದ್ದ ಹಿಂದಿ, ಇಂಗ್ಲಿಷ್, ಕನ್ನಡ ಮೂರೂ ಭಾಷಗಳಲ್ಲಿ “ನಾನು ನಿಮ್ಮನ್ನು ಮದುವೆಯಾಗಲು ಇಷ್ಟಪಟ್ಟಿದ್ದೇನೆ ಒಪ್ಪುತ್ತೀರಾ?” ಎಂದು ದೊಡ್ಡದಾಗಿ ಬರೆದೆ ಮತ್ತು “ಕೊನೆಯ ಕ್ಷಣದವರೆಗೂ ನನ್ನ ಬಾಳಿಗೆ ಸಂಗಾತಿಯಾಗಿ ಬರುವುದರ ಅಮ್ತಿಮ ತೀರ್ಮಾನದ ಸಂಪೂರ್ಣ ಸ್ವಾತಂತ್ರ್ಯ ನಿಮ್ಮದೇ” ಎಂದೂ ಸೇರಿಸಿದೆ.

ನಂತರ ಒಳಗಿನ ಎಂಟು ಪುಟಗಳಲ್ಲಿ ಮನೋಹರನ ಚಿತ್ರ ಬಂದಾಗಿನಿಂದ, ಅವನನ್ನು ನೋಡಿದ ನಂತರದ ಭಾವನೆಗಳನ್ನೆಲ್ಲವನ್ನೂ ಬರೆದೆ. “ಮದುವೆಯ ಬಗ್ಗೆ ತೀರ್ಮಾನಿಸಿ ಬರೆದಿರುವ ನಾನು ನಿಜಕ್ಕೂ ಎಂಥದೋ ಆವೇಶದಿಂದ, ಸಂತೋಷದಿಂದ, ನೋವಿನಿಂದ ಏನನ್ನೋ ಗಳಿಸಿಕೊಂಡ ಖುಷಿಯಿಂದ, ಮತ್ತೇನನ್ನೋ ಕಳೆದುಕೊಂಡ ದುಃಖದಿಂದ ನಡುಗುತ್ತ ಬರೆಯುತ್ತಿದ್ದೇನೆ. ‘ಮದುವೆ’ ಎಂಬುದರ ನಿಜವಾದ ರೋಮಾಂಚನದ ಅನುಭವ ಆಗ್ತಿದೆ.”

ಇದೆಲ್ಲಾ ಬರೆಯುವಾಗ ನಾನೇ ಸ್ವತಃ ಮನೋಹರನ ಎದುರಿಗೆ ನಿಂತು ಹೇಳುತ್ತಿರುವಂತೆ ಭಾಸವಾಯಿತು ನಾನು ಮನೋಹರನ ಪ್ರಭಾವಕ್ಕೆ ಬಹಳವಾಗಿ ಒಳಗಾಗುತ್ತಿದ್ದುದು ನನ್ನ ಅರಿವಿಗೆ ಬಂತು. ಸ್ನೇಹಿತಳೆಂದುಕೊಂಡೇ ಅವನ ಪ್ರೇಮಿಯಾಗಿದ್ದೆ. ನನ್ನ ಈ ಅಪೂರ್ವ ಆನಂದದ ಕ್ಷಣಗಳನ್ನು ಹೇಗೆ ಎದುರಿಸಬೇಕೆಂದೇ ತಿಳಿಯಲಿಲ್ಲ.

ನನ್ನ ನಿರ್ಧಾರವನ್ನು ಮನೆಗೆ ಹೋಗಿ ಹೇಳಬೇಕೆಂದುಕೊಂಡೆ. ಮನೆಯಲ್ಲಿ ಅಂತರ್‌ಜಾತೀಯ ವಿವಾಹ ಒಪ್ಪುತ್ತಾರೋ ಇಲ್ಲವೋ ಗೊತ್ತಿಲ್ಲ. ಅಕಸ್ಮಾತ್ ಒಪ್ಪದಿದ್ದರೆ? ಈಗಿನಿಂದಲೇ ಕಲಹ ಏಕೆಂದು ಸುಮ್ಮನಾದೆ.

“ಮನೋಹರ್, ನಿಮ್ಮೆಲ್ಲ ಅರ್ಥವಿಲ್ಲದ ಬರಡು ಭಾವನೆಗಳನ್ನು ಕಿತ್ತುಹಾಕಿ ಎಲ್ಲರಂತೆ ಬದುಕಲು ಪ್ರಯತ್ನಿಸಿ, ನಿಮ್ಮನ್ನು ನಾನು ಸಾಧ್ಯವಾದಷ್ಟು ಮಟ್ಟಿಗೆ ಅರ್ಥಮಾಡಿಕೊಳ್ಲಲು ಪ್ರಯತ್ನಿಸುತ್ತೇನೆ. ನಿಮ್ಮದೇ ರೀತುಯಾದ ಪುಟ್ಟ ಮಕ್ಕಳು ಮುದ್ದುಮುದ್ದಾಗಿ ಮನೆಯಲಿ‌ಇ ಆಡುತ್ತಿದ್ದರೆ ನೀವೇ ನಿಮ್ಮ ಆಗಿನ ಆಲೋಚನೆಗಳಿಗೆ ಅರ್ಥವಿಲ್ಲ ಎಂಬ ನಿರ್ಧಾರಕ್ಕೆ ಬರುತ್ತೀರ. ಹಳೆಯ ಬದುಕನ್ನು ಮರೆತು ಹೊಸದನ್ನು ಸ್ವೀಕರಿಸಿ ನಿಮಗಾಗಿ ಎಂದು ಕಡೆಯವರೆವಿಗೂ ನಾನಿರುತ್ತೇನೆ. ಇದು ಖಂಡಿತ.”

ಯಾರೆಷ್ಟೇ ವಿರುದ್ಧವಾಗಿದ್ದರೂ ನಾನು ಮನೋಹರನನ್ನೇ ಮದುವೆಯಾಗಬೇಕೆಂದು ನಿಶ್ಚಯಿಸಿದೆ. ಮನೋಹರ ಬಹಳ ಬಿದ್ಧಿವಂತ. ಅವನನ್ನು ಮದುವೆಯಾಗುವ ನಾನು ಅದೃಷ್ಟವಂತೆ. ಅವನು ಹೇಗೇ ಇದ್ದರೂ ಅವನಿಗೆ ಹೋದಿಕೊಂಡು ಹೋದರಾಯಿತು. ಮನೋಹರನಂತೆಯೇ ನಮ್ಮ ಮಕ್ಕಳೂ ಮುದ್ದಾಗಿದ್ದರೆ….

“ಮನೋಹರ್, ಪದೇಪದೇ ನಿಂತಲ್ಲಿ, ಕುಳಿತಲ್ಲಿ ನೀವೇ ಕಾಣುತ್ತಿದ್ದೀರ. ದಾಳಿ ಮಾಡುತ್ತಿದ್ದೀರ. ಮನೋಹರ್ ನಾನು ನಿಮ್ಮನ್ನು ತುಂಬಾ ಪ್ರೀತಿಸುತ್ತೇನೆ. ಪ್ರೀತಿಸುತ್ತಲೇ ಇರುತ್ತೇನೆ. ನಿಮ್ಮ ಸ್ನೇಹಕ್ಕಿಂತ ನನಗೆ ಪ್ರೀತಿ ಹೆಚ್ಚಿನದು ಎಂದೆಲ್ಲಾ ಅನ್ನಿಸುತ್ತಿದೆ.”

ನನಗಿದೆಲ್ಲಾ ಹೊಸದು. ಕೇವಲ ಪ್ರೇಮಪತ್ರ ಬರೆಯುವುದರಿಂದಲೇ ನನಗೆ ಇಷ್ಟೊಂದು ಸಂತೋಷ ಸಿಗುತ್ತಿರುವಾಗ, ಮನೋಹರ ಓದುತ್ತಿರುವಾಗ ಇನ್ನೆಷ್ಟು ಸಂತೋಷಪಡುತ್ತಾನೋ!

“ಮನೋಹರ್ ನಿಮ್ಮನ್ನು ಬಿಟ್ಟಿರಲಾರೆ.”

ರಾತ್ರಿ ಪತ್ರ ಪೂರ್ಣಗೊಳಿಸಲಾರದ್ದಕ್ಕೆ ಬೆಳಿಗ್ಗೆ ಆಫೀಸಿನಲ್ಲಿ ಕುಳಿತು ಮನೋಹರನ ಬಗೆಗಿನ ನನ್ನ ಪ್ರೀತಿಯನ್ನೆಲ್ಲಾ ಬಣ್ಣಕಟ್ಟಿ ವರ್ಣಿಸಿದೆ. ಮುಂದೆ ನಮ್ಮಿಬ್ಬರ ಮನೆ, ಮಕ್ಕಳು ಹೇಗಿರಬೇಕೆಂದು ಕನಸು ಕಾಣುತ್ತ ಆ ಬಗ್ಗೆ ಇನ್ನೆರಡು ಪುಟ ಬರೆದೆ.

“ಮನೋಹರ್, ನನಗೆ ನಿಮ್ಮಲ್ಲಿ ನಂಬಿಕೆಯಿದೆ. ನೀವು ನನ್ನನ್ನು ಖಂಡಿತಾ ಬೇಡ ಎಂದು ಹೇಳುವುದಿಲ್ಲ ನಿಮ್ಮ ಮನೆಯವರೆಲ್ಲರ ಆಸೆಯೂ ಇದೇ ಆಗಿದೆ. ನನ್ನದೂ ಸಹಾ!

ನನ್ನ ದೊಡ್ಡ ಆಸೆಯೆಂದರೆ ನಿಮ್ಮ ಒಂಟಿತನವನ್ನು ಹೋಗಲಾಡಿಸುವುದು. ಇದಕ್ಕಾಗಿ ಸದಾ ನಿಮ್ಮಲ್ಲಿಯೇ ಇರುತ್ತೇನೆ. ನನ್ನ ಎದುರಿಗೆ ನೀವು ಇದ್ದಷ್ಟೂ ಹೊತ್ತು ಒಂಟಿತನದ ಯಾವ ಭಾವನೆಗಳೂ ನಿಮ್ಮನ್ನು ಕಾಡಲಾರವು.

ಮನುಷ್ಯ ಮನಸ್ಸು ಮಾಡಿದರೆ ಯಾವುದೂ ಅಸಾಧ್ಯವಲ್ಲ.

ಬೇಗ ಉತ್ತರ ಬರೆಯುತ್ತೀರಲ್ಲವೆ?”
*
*
*
ಮನೋಹರನಿಗೆ ಮತ್ತೊಂದು ಪತ್ರ ಬರೆಯಬೇಕೆಂದುಕೊಂಡೆ-ಆದರೆ ನನ್ನಲ್ಲಿದ್ದ ವಿಷಯಗಳೆಲ್ಲವೂ ಮುಗಿದುಹೋಗಿದ್ದವು. ಏನೇ ಆದರೂ ನನ್ನ ಭಾವನೆಗಳನ್ನೆಲ್ಲಾ ವ್ಯಕ್ತಪಡಿಸಿದುದಕ್ಕಾಗ್ಗಿ ನನಗೆ ಒಂದು ರೀತಿಯ ನಿರಾಳವೆನಿಸಿತ್ತು.

ಈ ಅಲ್ಪ ಕಾಲದಲ್ಲಿಯೇ ನಾನು ಮನೋಹರನನ್ನು ತುಂಬಾ ಪ್ರೀತಿಸತೊಡಗಿ, ಮನೋಹರನ ಜೊತೆ ಕಲ್ಪನಾ ಲೋಕದಲ್ಲಿ ದೂರ-ಬಹುದೂರಕ್ಕೆ ಮತ್ತೆ ತಿರುಗಿ ಬರಲಾರದಷ್ಟು ದೂರಕ್ಕೆ ಹೊರಟುಹೋಗಿದ್ದೆ.

ಸುಚಿತ್ರ, ವಾಸುವಿಗೆ ನಾನು ಮದುವೆಯ ವಿಷಯವಾಗಿ ಮನೋಹರನಿಗೆ ಪತ್ರ ಬರೆದ ವಿಷಯ ತಿಳಿದಿತ್ತು. ಆದ್ದರಿಂದ ನನ್ನಂತೆ ಅವರೂ ಮನೋಹರನ ಪತ್ರಕ್ಕಾಗಿ ಜಾತಕಪಕ್ಷಿಯಂತೆ ಕಾಯುತ್ತಿದ್ದರು.ಸುಚಿತ್ರಳಂತೂ ಈಗಾಗಲೇ ಆಫೀಸಿನವರಿಗೆಲ್ಲಾ ಅಲ್ಪಸ್ವಲ್ಪ ತಿಳಿಸಿಬಿಟ್ಟಿದ್ದಳು. ಎಲ್ಲರೂ ನಿರೀಕ್ಷೆಯಿಂದ, ಕಾತುರದಿಂದ ಕಾಯುತ್ತಿದ್ದ ಮನೋಹರನ ಪತ್ರ ಬೇಗನೆ ಬಂದುಬಿಟ್ತಿತು. ಆತುರಾತುರವಾಗಿ ಬಿಡಿಸಿದೆ. ಸುಚಿತ್ರ ಎದುರಿಗೆ ಬಂದು ನಿಂತಳು. ಪತ್ರದಲ್ಲಿನ ಒಂದಕ್ಷರವೂ ಅವಳಿಗೆ ಕಾಣದಂತೆ ಪತ್ರವನ್ನು ಮಡಿಲಿನಲ್ಲಿಟ್ಟುಕೊಂಡು ಓದತೊಡಗಿದೆ.

“ಕುಮಾರಿ ವಸಂತಾ,

ಎಲ್ಲಕ್ಕಿಂತ, ಎಲ್ಲರಿಗಿಂತಾ, ಜೀವನವನ್ನೇ ತಲ್ಲಣಗೊಳಿಸುವ ಕಾಮಕ್ಕಿಂತ ನಾನು ನನ್ನ ಸ್ವಾತಂತ್ರ್ಯವನ್ನು ಅತಿಯಾಗಿ ಪ್ರೀತಿಸುತ್ತೇನೆ. ನನ್ನ ಈ ಸ್ವಾತಂತ್ರ್ಯವನ್ನು ಮದುವೆ, ಮಕ್ಕಳು ಮನೆಗಳಿಂದ ಕಟ್ಟಿಹಾಕಿ ಸಾಯಿಸಲಾರೆ. ನಿಮ್ಮ ಈ ದಿನದ ಪತ್ರದಿಂದ ನಾನು ಭಯಗೊಂಡಿದ್ದೇನೆ, ನಿರಾಶೆಗೊಂಡಿದ್ದೇನೆ. ನಿಮಗೆ ನಿಮ್ಮೊಬ್ಬಳನ್ನೇ ಪ್ರೀತಿಸುವ ಗಂಡ ಬೇಕು. ಮುದ್ದಾದ ಮಕ್ಕಳುಬೇಕು. ಆ ಗಂಡನಾಗುವ ಅರ್ಹತೆ ನನ್ನಲ್ಲಿ ಖಂಡಿತಾ ಇಲ್ಲ.

ನಿಮಗೆ ನೋವಾಗಬಹುದು, ಆದರೆ ಹೇಳುವುದನ್ನು ಹೇಳಲೇಬೇಕಲ್ಲ. ದಯಮಾಡಿ ಇಂತಹ ಪ್ರೇಮಪತ್ರಗಳನ್ನು ಬರೆಯಬೇಡಿ. ಕನಸುಗಳನ್ನು ಕಟ್ಟಬೇಡಿ. ನೀವು ತುಂಬಾ ಪಕ್ವಮನಸ್ಸಿನ, ಗಟ್ಟಿ ಹೃದಯದ ಹುಡುಗಿ ಎಂದುಕೊಂಡಿದ್ದೆ. ನೀವೂ ಸಾಮಾನ್ಯ ಕನಸುಗಣ್ಣಿನ ಪ್ರೇಮಿಯಾಗುತ್ತಿರುವುದು ಎಷ್ಟೊಂದು ಅಸಹ್ಯ! ಸುಖ, ಗಂಡ, ಮಗು, ಏನಿದೆಲ್ಲಾ?

ನಿಜ ಹೇಳಲಾ? ಹಿಂದೆ ಸ್ನೇಹಿತೆಯಾಗಿದ್ದಾಗ ನಿಮ್ಮ ಬಗ್ಗೆ ತುಂಬಾ ಪ್ರೀತಿ-ಮಮತೆ ಉಕ್ಕುತ್ತಿತ್ತು. ನಿಮ್ಮನ್ನು ಮದುವೆಯಾಗ್ತೇನೆ ಎಂದಾಕ್ಷಣ ನನಗೆ ಪ್ರೀತೀನೇ ಬರ್‍ತಾ ಇಲ್ಲ. ಈಗ ಹೆಂಡತಿಯಾಗುವಿರಿ ಎಂದಕೂಡಲೇ ಬರೀ ಕಾಫಿ ತಂದುಕೊಡುವ, ಅಡಿಗೆ ಮಾಡುವ, ಹಾಸಿಗೆ ಹಾಸುವ ಹೆಂಗಸಿನಂತೆ ಕಾಣುತ್ತಿರುವಿರಿ. ನೀವು ಪ್ರೀತಿಸುವ ಭರದಲ್ಲಿ ಏನೇನೋ ಬರೆಯಬೇಡಿ. ಅದೆಲ್ಲ ನನ್ನ ಮಟ್ಟಿಗೆ ಅರ್ಥಹೀನ ಅನ್ನಿಸುತ್ತೆ.

ನಾನು ಬರಡಾಗಿ ಗಟ್ಟಿಯಾಗಿರಬೇಕು. ನಾನೊಬ್ಬನೇ ಆಕಾಶ, ಕತ್ತಲಿನ ಆಕಾಶದಲ್ಲಿ ಯಾರ ಹಂಗೂ ಇಲ್ಲದೆ ಮಿನುಗುವ ನಕ್ಷತ್ರಗಳನ್ನು ನೋಡುತ್ತಾ ಇರಬೇಕು. ಧಗಧಗಿಸುವ ಬಿಸಿಲಿನಲ್ಲಿ ಒಬ್ಬನೇ ನಡೆಯಬೇಕು. ಗಾಳಿಗೆ ಏಳುವ ಧೂಳಿನ ಕಣಗಳಲ್ಲಿ ನಾನೂ ಕಾಣದಾಗಬೇಕು. ನನ್ನ ಏಕಾಂತಕ್ಕೆ ಯಾರೂ ತೊಂದರೆ ಮಾಡಬಾರದು. ನಾನು ಹೀಗೇ ಒಂಟಿಯಾಗಿಯೇ ಇರುತ್ತೇನೆ, ಕೊನೆಯವರೆಗೂ….

ನನಗೆ ನಿಮ್ಮ ಮುಗ್ಧ ಮನಸ್ಸಿನ ನಿಷ್ಕಲ್ಮಶ ಸ್ನೇಹವೇ ಸಾಕಾಗಿತ್ತು. ಪ್ರೇಮದ ದಡ್ಡತನ ನಮಗೆ ಬೇಡ. ನಾವು ರಿಯಲಿಸ್ಟಿಕ್ ಆಗಿರೋಣ. ನನ್ನನ್ನು ಉದ್ಧರ ಮಾಡುವ ಸಾಹಸಕ್ಕೆ ಕೈ ಹಾಕಬೇಡಿ.

ದಯವಿಟ್ಟು ಕ್ಷ…ಮಿ…ಸಿ…

ವಸಂತಾ, ನೀವು ನನ್ನನ್ನು ಕೊನೆಗೂ ಅರ್ಥಮಾಡಿಕೊಳ್ಳಲಿಲ್ಲ.”

ಪತ್ರ ಓದಿ ನನಗೆ ತಲೆ ತಿರುಗಲಾರಂಬಿಸಿತು. ಟೇಬಲ್ಲಿಗೆ ಹಾಗೆಯೇ ತಲೆಕೊಟ್ಟೆ. ಎಚ್ಚರವಾದಾಗ ತಲೆಗೆ, ಮುಖಕ್ಕೆ ನೀರು ಸುರಿದಿದ್ದರು. ಸುಚಿತ್ರ, “ನಡೀ, ನಿನ್ನನ್ನು ಬಿಟ್ಟುಬರ್‍ತೀನಿ”ಎಂದಳು. ಕಾಲುಗಳಲ್ಲು ಶಕ್ತಿಯೇ ಇಲ್ಲದಂತಾಗಿತ್ತು. ಸುಸ್ತಾಗಿ ಆಟೋದಲ್ಲಿ ಕುಳಿತು ಕಣ್ನು ಮುಚ್ಚಿದೆ.

ಹೇಳಿಕೇಳಿ ಮನೋಹರನದು ಬರಡುಜೀವನ. ಅವನ ಜೀವನವನ್ನು ನಾನು ನಂದನವನ್ನಾಗಿ ಮಾಡಬೇಕು. ಎಂದು ಆಸೆಪಟ್ಟಿದ್ದೆ. ಇದಕ್ಕಾಗಿ ನಾನು ತೀರ ಸಾಮಾನ್ಯ ಎಂದು ಗೊತ್ತಿದ್ದರೂ ಅವನನ್ನು ಪ್ರೀತಿಸಿದೆ. ಮನೋಹರ ನಿನ್ನಿಂದ ನನಗಾಗುತ್ತಿರುವ ನೋವು-ಸಂಕಟ ಅಪಾರ. ಎಲ್ಲವನ್ನು ಹೇಗೆ ಎದುರಿಸಲಿ?

ಮನೋಹರ, ನೀನು ಹೀಗೆ ಮಾಡಬಾರದಾಗಿತ್ತು
*
*
*
ನಾನು ವಸಂತಳ ಬಗ್ಗೆ ಕಟ್ಟಿದ್ದ ಆಶಾಗೋಪುರ ಕುಸಿದುಬಿತ್ತು, ವಸಂತಾ, ಯಾಕೆ ಹೀಗೆ ಮಾಡಿದೆ? ನಾನು ನಿನಗೆ ತುಂಬಾ ಕಟುವಾಗಿ ಪತ್ರ ಬರೆದೆ ಅಲ್ವಾ? ಆದರೆ ಅದು ಖಂಡಿತಾ ತಪ್ಪಲ್ಲ. ನಿನ್ನ ಪತ್ರ ಬಂದಾಗಿನಿಂದ ನನಗೆ ಆಫೀಸಿಗೆ ಹೋಗಲಾಗಲಿಲ್ಲ. ನೀನು ನನ್ನನ್ನು ಅದೆಷ್ಟು ಆವರಿಸಿಕೊಂಡಿರುವೆ ಗೊತ್ತಾ? ಪ್ರೀತಿಯಿಂದಲ್ಲ, ಶುದ್ಧ ಸ್ನೇಹದಿಂದ!

ವಸಂತಾ, ನೀನು ಮಾಡಿರುವ ಕೆಲಸ ನಿನ್ನ ನಿರಿಕ್ಷೆಗೂ ಮೀರಿದ್ದು. ಅವರಿವರು ಹೇಳಿದರು ಅಂತ ನೀನು ಆತುರ ಮಾಡಿ ಪತ್ರ ಬರೆದುಬಿಟ್ಟೆ.

ಆಫೀಸಿಗೆ ಹೋಗಬಾರದೆಂದುಕೊಂಡೆ. ಆದರೆ, ಆದರೆ ವಸಂತಳ ಪತ್ರ ಬಂದರೆ? ಎಂಬ ಆಸೆಯಿಂದ ಆಫೀಸಿಗೆ ಹೋದೆ. ವಸಂತಾ, ನೋವಿನಲ್ಲೂ ನಲಿವಿನಲ್ಲೂ ನಾನು ನೆನೆಸುವ ನೀನು ನನಗೆ ತುಂಬಾ ದೊಡ್ಡ ಗಾಯ ಮಾಡಿಬಿಟ್ಟೆ. ನಿನಗೆಷ್ಟು ಬಾರಿ ಹೇಳಿದ್ದೆ-ಈ ಪ್ರೀತಿ-ಪ್ರೇಮಗಳಲ್ಲಿ ನಾನು ಅರ್ಥ ಕಳೆದುಕೊಂಡಿದ್ದೇನೆ ಎಂದು.

ನಾನು ಪತ್ರ ಬರೆದು ಒಂದು ವಾರವಾಯಿತಲ್ಲವೆ? ವಸಂತ ಇದಕ್ಕೆ ಏನು ಬರೆಯುತ್ತಾಳೋ ನೋಡಬೇಕು. ಅಸಾಧ್ಯ ತಲೆಸಿಡಿತ. ವಸಂತಳ ಪತ್ರವೇ ಇದಕ್ಕೆ ಔಷಧ. ವಸಂತ, ನಿನ್ನ ಹಾಗೆ ನಾನೂ ಕುಳಿತಲ್ಲಿ, ನಿಂತಲ್ಲಿ, ನಿನ್ನನ್ನು ಯೋಚಿಸುತ್ತೇನೆ. ನನ್ನ ಟೇಬಲ್, ಕುರ್ಚಿಗಳ ಮೇಲೆಲ್ಲಾ ನಿನ್ನದೇ ಹೆಸರಿದೆ. ‘ನೀನು ನನ್ನ ಸ್ನೇಹಿತೆ’ ಎಂಬ ಕಾರಣಕ್ಕಾಗಿಯೇ ಇದೆಲ್ಲಾ ಮಾಡಿದ್ದೆ. ಖಂಡಿತಾ ಪ್ರೀತಿಯಿಂದಲ್ಲ.

‘ಪೋಸ್ಟ್’-ಧ್ವನಿ ಕೇಳಿ ತಲೆಯೆತ್ತಿದೆ. ಖಂಡಿತಾ ವಸಂತಳ ಪತ್ರವೇ ಇರಬೇಕು. ಅವನು ಕೊಡುವ ಮೊದಲೇ ಹಾರಿ ಪತ್ರ ಕಿತ್ತುಕೊಂಡು ಕವರನ್ನು ಸಿಕ್ಕಂತೆ ಹರಿದು ಒಳಗಿನ ಪತ್ರ ತೆಗೆದೆ.

ಮಿ|| ಮನೋಹರ,

ನಿಮಗೊಂದು ಕಹಿಸುದ್ದಿ. ನಿಮ್ಮ ಪತ್ರ ಓದಿದ ವಸಂತ ಬಹಳ ಅಪ್‌ಸೆಟ್ ಆಗಿಬಿಟ್ಟಿದ್ದಳು. ಆಫೀಸಿನಿಂದ ಪರ್ಮಿಷನ್ ತೆಗೆದುಕೊಂಡು ನಾನೇ ಅವಳನ್ನು ಮನೆಗೆ ಬಿಟ್ಟುಬಂದೆ. ಸಾಯಂಕಾಲ ಹೋದಾಗ ಮನೆಯಲ್ಲಿ ಅವಳಿರಲಿಲ್ಲ. ಎಲ್ಲಿಗೆ ಹೋಗಿದ್ದಾಳೋ ಗೊತ್ತಿಲ್ಲ. ಒಟ್ಟಿನಲ್ಲಿ ರಾತ್ರಿ ನಿದ್ರೆ ಮಾತ್ರೆಗಳನ್ನು ನುಂಗಿ, ಪತ್ರ ಬರೆದಿಟ್ಟಿದ್ದಳು. ವಾಸು, ವಾಸುವಿನ ಹೆಂಡತಿ ಅಕಸ್ಮಾತ್ ವಿಚಾರಿಸಲು ಅಲ್ಲಿಗೆ ಹೋದಾಗ ವಿಷಯ ತಿಳಿದು, ಅವಳನ್ನು ಉಳಿಸಬೇಕಾದರೆ ಸಾಕುಸಾಕಾಯ್ತು.

ಆದರೆ, ಈಗ ಹುಷಾರಾಗಿದ್ದಾಳೆ. ನಿಮ್ಮ ಪತ್ರದ ಕಾರಣದಿಂದಲೇ ಅವಳು ಹೋಗೆ ಮಾಡಿಕೊಂಡಿರಬಹುದೆಂದು ನನ್ನ ಬಲವಾದ ಅನಿಸಿಕೆ. ಈ ಬಗ್ಗೆ ಅವಳು ಏನೂ ಹೇಳಲು ತಯಾರಿಲ್ಲ. ನನ್ನ ಗುರುತಿನವರ ನರ್ಸಿಂಗ್ ಹೋಂನಲ್ಲಿದ್ದಾಳೆ. ಹಣ ಅದು, ಇದೂ ನೋಡಿಕೊಂಡಿದ್ದರಿಂದ ಸದ್ಯಕ್ಕೆ ಪೋಲೀಸ್ ಕೇಸ್ ಆಗಲಿಲ್ಲ.

ನಿಮ್ಮನ್ನು ಸದಾ ನೆನೆಸುತ್ತಿರುತ್ತಾಳೆ. ನೋಡಲೇಬೇಕಂತೆ. ಸಾಧ್ಯವಾದರೆ ಬನ್ನಿ.
ಇತಿ,
ಸುಚಿತ್ರ.

ಅಯ್ಯೋ ವಸಂತಾ, ಇದೇನು ಮಾಡಿದೆ? ಛೇ, ನೀನು ಸೂಕ್ಷ್ಮ ಎಂದೇನೋ ಗೊತ್ತಿತ್ತು. ಆದರೆ ಇಷ್ಟೊಂದು ಎಂದು ಗೊತ್ತಿರಲಿಲ್ಲ. ಏನೂ ಮಾಡಲೂ ತೋರದೆ ಸ್ವಲ್ಪ ಹೊತ್ತು ತಲೆಯ ಮೇಲೆ ಕೈ ಹೊತ್ತು ಕುಳಿತೆ.

ರಜೆ ಬರೆದು ಹಾಕಿದೆ. ವಿಮಾನದಲ್ಲಿ ಕೂಡಲೇ ಹೊರಡುವುದೆಂದು ನಿರ್ಧರಿಸಿದೆ. ಮೇಲಿನ ಆಫೀಸರ್‌ನ ದಯೆಯಿಂದ ವಿಮಾನ ಹತ್ತುವತನಕ ಎಲ್ಲಾ ಸುಗಮವಾಗಿ ಆಯಿತು. ಆದರೆ ನನ್ನ ಮನಸ್ಸು?

ತೀರಾ ಆತಂಕವಾದಾಗ ತೆಗೆದುಕೊಳ್ಳುವಂತೆ ಡಾಕ್ಟರ್ ಈ ಹಿಂದೆ ಹೇಳಿದ್ದ ಮಾತ್ರೆ ತೆಗೆದುಕೊಂಡು ಅರ್ಧಗಂಟೆ ನಿದ್ರಿಸಿದೆ. ಮನಸ್ಸು ಸ್ವಲ್ಪ ಸ್ಥಿಮಿತಕ್ಕೆ ಬಂದು ಯೋಚಿಸುವಷ್ಟರಮಟ್ಟಿಗಾದೆ.

ಸದ್ಯ, ಇವತ್ತೆ ಬೆಂಗಳೂರು ತಲುಪಿಬಿಡುತ್ತೇನೆ. ಈ ವಿಷಯ ಸುಚಿತ್ರ ನನಗೆ ಎಷ್ಟೊಂದು ನಿಧಾನವಾಗಿ ತಿಳಿಸಿದ್ದಾಳೆ. ಕೂಡಲೇ ಟೆಲಿಗ್ರಾಂ ಕಳುಹಿಸಬಹುದಿತ್ತಲ್ಲ. ವಸಂತಾ, ನಿನ್ನ ಬಗ್ಗೆ ಯೋಚಿಸಲೂ ಸಹಾ ನನಗೆ ಆಗುತ್ತಿಲ್ಲ. ನಿನ್ನ ಕೈಗಳಲ್ಲಿ ಮುಖ ಮುಚ್ಚಿಕೊಂಡು ಜೋರಾಗಿ ಅತ್ತುಬಿಟ್ಟು ಹಗುರ ಮಾಡಿಕೊಳ್ಳಲೂ ನೀನೆಷ್ಟು ದೂರ?

ನನಗೆ ಪರಿಚಯದವರು ಬಹಳಷ್ಟು. ಆದರೆ ಸ್ನೇಹಿತರು ಕಡಿಮೆ. ಅದರಲ್ಲೂ ಆತ್ಮೀಯರು ಇನ್ನೂ ಕಡಿಮೆ. ನನ್ನ ಆತ್ಮೀಯತೆಯರಲ್ಲಿ ರತ್ನ ಒಬ್ಬಳು. ಈಗ ಮದುವೆಯಾಗಿ ಅವಳು ದೂರವಾಗಿದ್ದಾಳೆ. ನೀನು ಹೆಂಡತಿಯಾಗುವ ಆಸೆಯಿಟ್ಟುಕೊಂಡಿದ್ದೀ ಎಂದ ಕೂಡಲೇ ನನಗೆ ನಿನ್ನಲ್ಲಿ ಆತ್ಮೀಯತೆ ಕ್ಷಣದಲ್ಲಿ ಮಾಯವಾಗಿಬಿಡುತ್ತದೆ.

ವಸಂತಾ, ನೀನು ಇದುವರೆಗೆ ನನ್ನೊಡನೆ ಸ್ನೇಹ ಬೆಳೆಸಿದ್ದು ಕೇವಲ ಮದುವೆಯಾಗುವುದಕ್ಕೆ ಮಾತ್ರವೇನು? ನೀನೊಬ್ಬ ವಿಶಾಲ ಮನಸ್ಸಿನವಳೆಂದು ನಾನು ಆಕರ್ಷಿತನಾದೆ ಗೊತ್ತಾ?

ನೀನು ನನ್ನನ್ನು ಅರ್ಥಮಾಡಿಕೊಳ್ಳಲೂ ಯತ್ನಿಸದೆ, ನಿನ್ನವುಗಳನ್ನೇ ಹಿಂಜಿಕೊಳ್ಳುತ್ತಿರುವೆ. ನಿನ್ನ ಸ್ನೇಹ ಇಷ್ಟೇನಾ?

ನಿನ್ನ ಭೀಕರ ಮರಳುರಾಶಿಯ ಮರುಭೂಮಿಯಲ್ಲಿ ಹರಿಯುತ್ತಾ ಹರಡಿಕೊಳ್ಳುವ ಮೊದಲೇ ನಿನ್ನ ಇರುವಿಕೆಯ ಆ ತಿಳಿನೀರಿನ ನದಿ ಬತ್ತಿಹೋಯಿತಷ್ಟೆ!

ದುಃಖವಿಲ್ಲ, ಸಂತೋಷವಿಲ್ಲ.

ಆದರೆ ಈ ‘ಬರಿದಾದ’ ಸ್ಥಿತಿಯ ಅನುಭವವನ್ನು ನಾನು ಸಹಿಸಬಲ್ಲೆನೆ?

ಸರಿ ವಸಂತಾ, ನೀನೇನೋ ಆರಾಮವಾಗಿ ದೂರಸರಿದು ಹೋಗುತ್ತಿದ್ದೆ. ಉಳಿದವರ ಪಾಡು ಏನಾಗುತ್ತಿತ್ತು ಎಂಬುದನ್ನು ಸ್ವಲ್ಪವಾದರೂ ಯೋಚಿಸಿದೆಯಾ? ನಿನಗೆ ಎಲ್ಲರಿಗಿಂತ ಆತ್ಮೀಯನಾದ ಈ ಮನೋಹರ ಒಬ್ಬ ಮುಗ್ಧ ಹುಡುಗಿಯನ್ನು ಕೊಂಡ ಅಪರಾಧದ ದಾಳಿಗೆ ತುತ್ತಾಗಿ ತಡೆಯಲಾರದೆ ತಾನೂ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದ. ಎಲ್ಲರಿಗೂ ನಮ್ಮ ನಡುವೆ ಎಂತಹ ಸಂಬಂಧವಿತ್ತೋ ಎಂಬ ಸಂಶಯ ಶುರುವಾಗುತ್ತಿತ್ತು. ನಮ್ಮ ಮನೆ ಸಂಪಾದಿಸುವ ವ್ಯಕ್ತಿ ಇಲ್ಲದೆ ಅನಾಥವಾಗಿತ್ತಿತ್ತು. ಇದಕ್ಕೆಲ್ಲಾ ಅವಕಾಶ ಮಾಡಿಕೊಡಲು ನಿನಗೆ ಹೇಗಾದರೂ ಮನಸ್ಸು ಬಂತೋ….ಪ್ರೀತಿ, ಪ್ರೇಮ ಎಲ್ಲಾ ಕ್ಷಣಿಕ ಅನುಭವಗಳು, ವಸಂತಾ. ನಮ್ಮ ಮುಂದೆ ಅನಾಥವಾಗಿ ಹಬ್ಬಿರುವ ಕಾಲ ಅವುಗಳನ್ನು ನಾಶ ಮಾಡಬಲ್ಲದು. ಪ್ರೀತಿ-ಪ್ರೇಮಗಳಿಂದ ಉಂಟಾದ ನೋವು-ನಲಿವುಗಳನ್ನು ಕಾಲವು ಕ್ರಮೇಣ ಮರೆಸುತ್ತದೆ.

ವಸಂತಾ, ನಿನ್ನ ಪಾಲಿಗೆ ಬದುಕು ಬಹಳವಾಗಿ ಹರಡಿಕೊಂಡಿದೆ. ಉತ್ಸಾಹವಿದೆ. ಬದುಕಿಗೆ ಒಲವಿದೆ. ನನ್ನ ಕೋರಿಕೆ ಏನೆಂದರೆ, ಬೇಗ ಯಾರನ್ನಾದರೂ, ನಿನ್ನ ಮನಸ್ಸಿಗೆ ಅತ್ಯಂತ ಆತ್ಮೀಯರೆನಿಸಿಕೊಂಡವರನ್ನು ಬಾಳಸಂಗಾತಿಯನ್ನಾಗಿ ಮಾಡಿಕೋ. ನನ್ನ ಬಗ್ಗೆ ನೀನುತೋರಿದ ಆತ್ಮೀಯತೆಗೆ ತುಂಬಾ ಧನ್ಯವಾದಗಳು. ನಾನು ನಿನ್ನ ಬಾಳ ಸಂಗಾತಿಯಾಗುವ ಆಸೆ ಬೇಡ. ನಿನಗೆ ನಾನು ಅರ್ಹನಲ್ಲ. ಬದುಕನ್ನು ಅಶಾವಾದದ ದೃಷ್ಟಿಯಿಂದ ಕಾಣುವ ವ್ಯಕ್ತಿಯನ್ನು ಮದುವೆಯಾಗು. ನನ್ನಂಥ ಇರಾಶಾವಾದಿ ಖಂಡಿತಾ ಬೇಡ. ಇದೆಲ್ಲಾ ನಿನ್ನ ಒಳ್ಳೆಯದಕ್ಕೆ!

ವಸಂತಾ, ನನ್ನನ್ನು ಮದುವೆಯಾಗ್ತೀಯಾ? ನಿನಗಿನ್ನೂ ಗೊತ್ತಿಲ್ಲ, ನನ್ನ ಪರಿಸರ ಎಷ್ಟೊಂದು ಸಂಕುಚಿತವಾಗಿದೆ, ಅನಾಗರಿಕವಾಗಿದೆ ಎಂದು. ಬರೀ ಮೇಲೆ ಮೂರು ದಿನ ನೋಡಿದ್ದೀಯ ಅಷ್ಟೆ! ಆ ಪರಿಸರವನ್ನೆಲ್ಲಾ ತೋರಿಸಿದರೆ ಓಡಿಹೋಗ್ತೀಯಾ. ನೀನು ನನ್ನ ಬಗ್ಗೆ ಹೆಚ್ಚು ಆತ್ಮೀಯತೆಯ ಕಡ್ಡಿಗಳಿಂದ ಗೂಡುಕಟ್ಟಿಕೊಳ್ಳಬೇಡ. ಆ ಗೂಡು ಕೊನೆಗೆ ಖಾಲಿಯಾಗಿಯೇ ಉಳಿದುಹೋದರೆ ಆ ಖಾಲಿತನವನ್ನು ನೀನು ಸಹಿಸಲಾರೆ, ಇದು ನಿಜ.

ಬಂದ ವಸಂತಳನ್ನು ಬಳಸುವ ರೀತಿ ಗೊತ್ತಿಲ್ಲದ, ಎಲ್ಲವನ್ನೂ ಖರ್ಚುಮಾಡುವ ನಿರ್ಥಕ ಪ್ರಾಣಿ ನಾನು. ಮೊನ್ನೆ ಊರಿಂದ ಬರುವಾಗ ಅಮ್ಮನಿಂತ ಹಣ ತೆಗೆದುಕೊಂಡು ಬಂದೆ. ಮತ್ತೆ ಹುಚ್ಚು ನೆತ್ತಿಗೇರಿದಾಗ ರಾಜೀನಾಮೆ ಕೊಟ್ತು ಸೊನ್ನೆ ಸಂಬಳದ ನಿರುದ್ಯೋಗಿ ಆಗಿಬಿಡುವ ಭಯದಲ್ಲಿ ಸದಾ ಇದ್ದೇನೆ. ನನ್ನನ್ನು ಮದುವೆಯಾಗುವ ಹುಡುಗಿ ನನ್ನ ಅನಿಶ್ಚಿತತೆಯಲ್ಲಿಯೇ ಇರುತ್ತಾಳೆ.

ನಿನಗೆ ನನ್ನಿಂದ ನೋವಾಗಿದ್ದರೆ ಖಂಡಿತಾ ಕ್ಷಮಿಸಬೇಕು. ವಸಂತಾ, ನಿನ್ನ ಬದುಕಿಗೆ ಸರಿಪಡಿಸಲಾರದ ಹಾನಿಯೇನೂ ನಾನು ಮಾಡಿಲ್ಲವೆಂದುಕೊಂಡಿದ್ದೇನೆ. ಹಾಗೇನಾದರೂ ಹಾನಿಯಾಗಿದ್ದರೆ ನನ್ನ ಬದುಕನ್ನು ಬಲಿ ಕೊಟ್ತು ನಿನ್ನನ್ನು ಉಳಿಸಿಕೊಳ್ತೇನೆ.

ನಿನ್ನ ಆಸೆಗಳ ಚಿಗುರನ್ನು ಗಿಡ ಮರವಾಗಿಸಬಲ್ಲೆನೇ ಎಂಬ ಅಧೈರ್ಯ, ಆತಂಕ ನನಗಿದೆ. ನನಗೆ ಮದುವೆ ಆಗುವ ಆಸೆ ಇಲ್ಲ ಎಂದು ಹೇಳಿದೆ ಅಷ್ಟೆ! ನಿನ್ನ ತಣ್ಣಗಿನ ಸ್ನೇಹವನ್ನು ಬೇಡ ಎಂದು ನಿರಾಕರಿಸಲಿಲ್ಲ.

ಈ ಹುಚ್ಚನ ಸಹವಾಸ ಇಷ್ಟಕ್ಕೇ ಸಾಕಾಗಿ ಹೋಯ್ತೆ? ನನ್ನ ನೆನಪಿನಿಂದ ನಿನ್ನನ್ನು ದೂರ ಮಾಡಿದರೆ, ಅಲ್ಲಿ ಉಳಿಯುವುದು ಏನನ್ನೂ ಬೇಳೆಯಗೊಡಲಾರದ ಮರಳುಗಾಡು ಮಾತ್ರ….

ಇನ್ನೊಮ್ಮೆ ಯಾವುದೇ ವಿಷಯಕ್ಕೂ ನೀನು ಆತ್ಮಹತ್ಯೆಯ ಬಗ್ಗೆ ಯೋಚಿಸಿದರೆ ನನ್ನ ಸಾವು ಖಂಡಿತ. ನಾನು ಭಯಂಕರ ಬರಡುತನದ ಹುಚ್ಚು ಮನುಷ್ಯನಾದರೂ ನಾನು ಯಾರ ಸಾವನ್ನೂ ಬಯಸುವುದಿಲ್ಲ. ಮುಖ್ಯವಾಗಿ ಯಾರ ಸಾವಿಗೂ ಕಾರಣವಾಗಲಾರೆ. ಈ ಈಟಿಯ ಇರಿತದಿಂದ ನಾನು ಬದುಕಲು ಸಾಧ್ಯವಿಲ್ಲ.

ನನಗೆ ತುಂಬಾ ನೋವೆನಿಸಿದೆ ವಸಂತಾ,ನೀನು ಯಾಕೆ ಹೀಗೆ ಮಾಡಿದೆ? ನಿನ್ನ ಮನಸ್ಸು‌ಅಷ್ಟೊಂದು ಸೂಕ್ಷ್ಮ, ದುರ್ಬಲ ಎಂದು ಗೊತ್ತಿದ್ದರೆ ನಿನ್ನ ಸ್ನೇಹವನ್ನು ಮಾಡುತ್ತಿರಲಿಲ್ಲ. ನಿನ್ನ ಹತ್ತಿರವೂ ಸುಳಿಯುತ್ತಿರಲಿಲ್ಲ. ನಿನ್ನ ಪತ್ರಗಳಿಂದ ನೀನೊಬ್ಬ ಗಟ್ಟಿಮನಸ್ಸಿನ, ವಿಚಾರವಂತಳೆಂದು ತಿಳಿದು ನಿನ್ನ ಬಳಿ ಮೈಚಳಿ ಬಿಟ್ಟು ನಿಸ್ಸಂಕೋಚದಿಂದ ಸ್ನೇಹ ಮಾಡಿದೆ. ಆ ಸ್ನೇಹ ಹೀಗೆಲ್ಲಾ ಒಬ್ಬರಿಗೆ ಹಿಂಸೆಕೊಟ್ಟು ಸಾವಿನ ಅಂಚಿಗೆ ದೂಡುತ್ತದೆ ಎಂದು ನಾನು ಕಲ್ಪಿಸಿಯೂ ಇರಲಿಲ್ಲ.

ಸಾಕು, ಇನ್ನು ನನ್ನ ಬದುಕಿನಲ್ಲಿ ಯಾವ ಹುಡುಗಿಯನ್ನೂ ಹೆಚ್ಚಿಗೆ ಮಾತನಾಡಿಸೊಲ್ಲ. ಸ್ನೇಹ ಮಾಡಿಲ್ಲ. ಸದ್ಯಕ್ಕೆ ನೀನೊಬ್ಬಳು ನನ್ನ ಪಾಲಿಗಿದ್ದು ಅರ್ಥಮಾಡಿಕೊಂಡರೆ ಸಾಕು.

ನನ್ನಲ್ಲಿ ನೀನು ಕಂಡ ವಿಶೇಷವೇನು ವಸಂತಾ? ಹೃದಯವಿಲ್ಲದ ಕ್ರೂರಿ ಎಂದೇ?

ನನ್ನ ಬಣ್ಣ, ರೂಪು, ಸಂಬಳ ಇದಕ್ಕಾಗಿ ಇಷ್ಟಪಟ್ಟೆಯಾ? ಇವೆಲ್ಲಾ ಅಶಾಶ್ವತ ಎಂದು ಗಿತ್ತಿಲ್ಲವೇ? ಇಲ್ಲ, ಈ ಕ್ಷುಲ್ಲಕ ಕಾರಣಗಳಿಗಾಗಿ ನೀನು ನನ್ನನ್ನು ಪ್ರೀತಿಸೋಲ್ಲ ಅಲ್ವಾ?…

ಆಸ್ಪತ್ರೆ ತಲುಪಿದಾಗ ಸುಚಿತ್ರ, ವಾಸು ಇಬ್ಬರೂ ಅಲ್ಲಿಯೇ ಇದ್ದರೂ ನಾನು ಬಂದಿದ್ದು ಗೊತ್ತಾದರೂ ಗೊತ್ತಾಗದ ಹಾಗೆ ವರ್ತಿಸಿದರು. ನನಗೇನೂ ಬೇಸರವಾಗಲಿಲ್ಲ.

ವಸಂತ, ಮಾನಸಿಕವಾಗಿ ದೈಹಿಕವಾಗಿ ದುರ್ಬಲಳಾಗಿರುವುದರಿಂದ ಇಷ್ಟು ದಿನಗಳೂ ಆಸ್ಪತ್ರೆಯಲ್ಲಿಯೇ ಉಳಿಸಿಕೊಂಡಿದ್ದರು.

ನಾನು ವಾರ್ಡಿನ ಒಳಗೆ ಹೋದಾಗ ಸೋತಮುಖದ ವಸಂತ ಮಗುವಿನಂತೆ ನಿದ್ದೆ ಮಾಡುತ್ತಿರುವುದು ಕಂಡಿತು.ಅದೆಷ್ಟು ಪ್ರಯತ್ನಪಟ್ಟರೂ ನನ್ನಿಂದ ಅಳುವನ್ನು ತಡೆಯಲಾಗಲಿಲ್ಲ. ನನ್ನ ಬಿಕ್ಕುವಿಕೆ ಕೇಳಿ ವಸಂತ ಕಣ್ಣುಬಿಟ್ಟು, ತಟಕ್ಕನೆ ಎದ್ದು ಕುಳಿತಳು. ಆ ಕ್ಷಣಕ್ಕೆ ಅವಳನ್ನು ಬಲವಾಗಿ ಅಪ್ಪಿ ಹಣೆಗೆ ಮುತ್ತುಕೊಟ್ಟೆ. ವಸಂತಳ ಕಣ್ಣಲ್ಲೂ ನೀರು!

“ಅಳಬೇಡ ಮರಿ. ಮಲಕ್ಕೊಂಡೇ ಮಾತಾಡು” ಎಂದು ತಲೆಸವರಿದೆ. ಕೆನ್ನೆಯ ಮೇಲಿದ್ದ ಕೈಯನ್ನು ವಸಂತ ಅಲ್ಲೇ ಬಿಗಿಯಾಗಿ ಹಿಡಿದುಕೊಂಡಳು. ಸ್ವಲ್ಪ ಹೊತ್ತು ನಮಗೆ ಏನು ಮಾತನಾಡಲೂ ತೋರಲಿಲ್ಲ. ಹಾಗೇ ಸುಮ್ಮನೆ ಕುಳಿತಿರುವುದೇ ಅತ್ಯಂತ ಪ್ರಿಯವಾಯಿತು.

“ವಸಂತಾ, ನೀನು ಹೀಗೆ ಮಾಡಬಾರದಿತ್ತು” ಎಂದೆ.

ವಸಂತ ಎರಡು ಕ್ಷಣ ಕಣ್ಣು ಮುಚ್ಚಿದಳು. ನಂತರ “ಅದು ತಪ್ಪು ಅಂತ ನನಗೆ ಗೊತ್ತಾಗಿದೆ. ನನ್ನ ಆಫೀಸಿನ ಜನ, ನಿಮ್ಮ ಹಳ್ಳಿಯ ಜನ ಇವರಿಗೆಲ್ಲಾ ಏನು ಉತ್ತರ ಕೊಡಬೇಕೆಂಬುದೇ ನನ್ನ ಸಮಸ್ಯೆಯಾಗಿತ್ತು. ಜೊತೆಗೆ ನೀವು ನನ್ನನ್ನು ನಿರಾಕರಿಸಿದಿರಿ ಎಂಬುದೂ ದೊಡ್ಡ ಅಪಮಾನ ಎನಿಸಿ ತಡೆದುಕೊಳ್ಳಲಾಗಲಿಲ್ಲ. ಆದರೆ ಈಗ, ಒಮ್ಮೆ ಸಾಯಲು ಪ್ರಯತ್ನಪಟ್ಟು ಬದುಕಿದ ಮೇಲೆ ಏನನ್ನಿಸ್ತಾ ಇದೆ ಗೊತ್ತಾ? ಈ ಪ್ರೀತಿ ಪ್ರೇಮಗಳಿಗೆ ಒದ್ದಾಡಿ ಸಾಯುವುದಕ್ಕಿಂದ ಕೊನೆತನಕ ಬರುವ ಸ್ನೇಹವೇ ಇಷ್ಟವಾಗುತ್ತದೆ” ವಸಮ್ತ ಹೇಳಿದಾಗ ನಾನು ನಿಜಕ್ಕೂ ಆಶ್ಚರ್ಯದಿಂದ ಮೂಕನಾದೆ. ವಸಂತ ಇದೇನು ಹೇಳುತ್ತಿದ್ದಾಳೆ? ಈ ಮಾರ್ಪಾಟು ಹೇಗೆ ಆಯಿತು? ಈ ವಿಸ್ಮಯದಿಂದ ಚೇತರಿಸಿಕೊಳ್ಳಲು ನನಗೆ ಬಹಳ ಹೊತ್ತು ಹಿಡಿಯಿತು.

ವಸಮ್ತ, “ಯಾಕೋ ನಿಮ್ಮ ಪತ್ರಗಳನ್ನು ಮತ್ತೆ ಮತ್ತೆ ಓದಿದೆ. ನಾನಾಗ ನಿಮ್ಮ ಪತ್ರಗಳನ್ನು ಓದಿದಾಗ ಏನೇನು ಅಂದುಕೊಳ್ಳುತ್ತಿದ್ದೆನೋ ಅದೆಲ್ಲಕ್ಕಿಂತ ಬೇರೆಯದಾಗಿ, ಹೊಸದಾಗಿ ಕಂಡಿತು. ನಾನು ನಿಮ್ಮನ್ನು ಅರ್ಥಮಾಡಿಕೊಳ್ಳಲಿಲ್ಲ, ಅಂತ ಅನಿಸಿದಾಗ ನನ್ನ ಮೇಲೇ ನನಗೆ ಎಷ್ಟು ಕೆಟ್ಟ ಕೋಪ ಬಂದಿತ್ತು ಗೊತ್ತಾ? ಜೋರಾಗಿ ತಲೆ ಚೆಚ್ಚಿಕೊಂಡೆ. ನಾನೇ ಮುರ್ಖತನದಿಂದ, ಅವಸರದಿಂದ ಹಾಗೆಲ್ಲಾ ಬರೆದುಬಿಟ್ಟೆ. ದಯವಿಟ್ಟು ಕ್ಷಮಿಸಿ. ಕ್ಷಮಿಸುತ್ತೀರಾ ಅಲ್ವಾ” ಮಗುವಿನಂತೆ ಕೇಳಿದಾಗ ಆಸ್ಪತ್ರೆಯೆಂಬುದನ್ನು ಮರೆತು ಸಂತೋಷದಿಂದ ಎರಡುಬಾರಿ ಜಂಪ್ ಮಾಡಿ ವಸಂತಳ ಕೈಗಳನ್ನು ತೆಗೆದುಕೊಂಡು ಸಂತೋಷ ತಾಳಲಾರದೆ ಅವಳ ಕೈಗಳಲ್ಲಿ ಮುಖವನ್ನು ಹುದುಗಿಸಿದಾಗ ಅಮ್ಮನಲ್ಲಿ ಸೇರಿಕೊಂಡ ಮಗುವಿನಂತೆ ಹಾಯೆನಿಸಿತು.

ಬಾಂಬೆಯಿಂದ ಬರುವಾಗ ನನಗೆ ಬಂದ ಯೋಚನೆಗಳನ್ನು, ಭಾವನೆಗಳನ್ನೆಲ್ಲ ತಿಳಿಸಿದಾಗ ವಸಂತ ನಕ್ಕು, “ಇನ್ನು ಮೇಲೆ ಅವೆಲ್ಲಾ ಹೇಳದೆಯೇ ಅರ್ಥ ಆಗುತ್ತದೆ” ಎಂದಳು. ನಾನು ನಿರೀಕ್ಷಿಸಿದ್ದ ವಸಂತಳ ಈ ಮಾರ್ಪಾಡು ನನಗಿನ್ನೂ ಅಚ್ಚರಿ ತರುತ್ತಲೇ ಇದೆ. ಮನುಷ್ಯನ ಮನಸ್ಸು ಬಹಳ ವಿಚಿತ್ರ. ಯಾವ ಕ್ಷಣದಲ್ಲಿ ಏನೇನು ಅನ್ನಿಸುತ್ತೋ ಅದರ ಗತಿಯನ್ನು ಅನುಸರಿಸುವುದು ತುಂಬಾ ಕಷ್ಟ!

“ನನ್ನ ಸ್ನೇಹ ಬಿಟ್ಟುಬಿಡಿ ವಸಂತಾ, ನಾನು‌ಎಷ್ಟೊಂದುತೊಂದರೆ ಕೊಟ್ಟೆ ಅಲ್ವಾ?” ನಾನು ತುಂಟತನದಿಂದ ಕೇಳಿದಾಗ, ವಸಂತಾ ದೊಡ್ಡದಾಗಿ ನಕ್ಕುಬಿಟ್ಟು “ಹಾಗೆಲ್ಲಾ ಹೇಳಿದರೆ ನಾನು ನಿಮ್ಮ ಜೊತೆ ಮಾತನಾಡುವುದನ್ನೇ ನಿಲ್ಲಿಸಿಬಿಡುತ್ತೇನೆ ಅಷ್ಟೆ. ಈಗ ನಾನು ಹೊಸ ವಸಂತ ಗೊತ್ತಾ? ಇದು ನನ್ನ ಮರುಹುಟ್ಟು. ಸಾಮಾನ್ಯ ವಸಂತ ನಿಮ್ಮ ಪಾಲಿಗೆ ಇನ್ನಿಲ್ಲ” ಎಂದವಳೇ ಹತ್ತಿರ ಸರಿದು, “ಇನ್ನು ಮೇಲೆ ಅವಳು ಬದುಕಿನಬಗ್ಗೆ ನಿಮ್ಮ ಹಾಗೆಯೇ ತಲೆ ಕಿಡಿಸಿಕೊಂಡು ಮರಳುಗಾಡಿನಲ್ಲಿ‌ಅಲೆಯುತ್ತಾ ಜೀವನ ನಡೆಸಬಹುದು” ಎಂದಾಗ ಅವಳ ಬಾಯಿಗೆ ಕೈ ಅಡ್ಡ ಇಟ್ಟೆ. ನನಗೆ ತುಂಬಾ ಬೇಸರವಾಗಿತ್ತು.

“ವಸಂತ, ನಾನು ಹೀಗಾಗುವುದಕ್ಕೆ ನನ್ನ ಪರಿಸರ, ಕುಟುಂಬ ಇದೆಲ್ಲಾ ಕಾರಣ. ಕೇವಲ ಒಂದೆರಡು ದಿನಗಳಲ್ಲಿ ನನಗೆ ಬದುಕಿನ ಬಗ್ಗೆ ಬೇಸರ ಬಂದಿದ್ದಲ್ಲ. ಈ ರೀತಿಯ ಬೇಸರ ಬರುವುದಕ್ಕೆ ಸುಮಾರು ಇಪ್ಪತ್ತು ವರ್ಷಗಳೇ ಹಿಡಿದಿದೆ. ನನ್ನ ಮುದ್ದು ವಸಂತ ಹಾಗೆ ಆಗುವುದಕ್ಕೆ ನಾನು ಬಿಡೋಲ್ಲ. ಬೇಗ ನಿಮಗಿಷ್ಟವಾದವರನ್ನು ಮದುವೆಯಾಗಿಬಿಡಿ, ಸರಿಹೋಗುತ್ತೆ. ಹಾಗಂತ, “ನೀವೇ ಇಷ್ಟ, ಮದುವೆಯಾಗಿ’ ಅಂತ ಹೇಳಿಬಿಡಿ” ಎಂದುಚೇಷ್ಟೆ ಮಾಡಿದೆ.

“ಹಾಗೆಲ್ಲಾ ಜ್ಞಾಪಿಸಿ ಚುಚ್ಚು ಮಾತನಾಡಬಾರದಪ್ಪ. ನಾನು ನಿಮ್ಮನ್ನು ಮದುವೆಯಾಗಲು ಕೇಳಿದ್ದನ್ನು ಮರೆತುಬಿಡಬೇಕು” ಎಂದು ವಸಂತ ಚಿಕ್ಕ ಹುಡುಗಿಯಂತೆ ಮುಖ ಊದಿಸಿದಾಗ ಅವಳ ಮೇಲೆ ಮುದ್ದು ಉಕ್ಕಿ ಬಂದು, ಅವಳ ತಲೆಯನ್ನು ಎದೆಗೆ ಒತ್ತಿಕೊಂಡು, “ವಸಂತಾ, ನಿನ್ನಲ್ಲಿ ಬದುಕಿದೆ. ಭಾವನೆಗಳಿವೆ. ನಾನೇ ನಿಂತು ನಿನಗೆ ಮದುವೆ ಮಾಡುತ್ತೇನೆ, ಸರಿನಾ?” ಅಂದೆ.

“ಹೂಂ. ಆದರೆ ಬರೀ ಮದುವೆಯ ಬಗ್ಗೇನೇ ಹೇಳ್ತಾ ಇದ್ದೀರಲ್ಲಾ, ಬೇರೆ ಏನಾದ್ರೂ ಮಾತಾಡಿ” ಎಂದಳು.

“ಹಾಗಿದ್ದರೆ ನೀವು ನನ್ನ ಪಾಲಿಗೆ ನಾನು ಯೋಚಿಸಿದ್ದಂತಹ ಮೊದಲಿನ ವಸಂತಾನೇ ಆಗ್ತೀರಾ ಅಲ್ವಾ? ನಾನು ನಿಮ್ಮಿಂದ ಏನನ್ನೂ ನಿರೀಕ್ಷಿಸೊಲ್ಲ. ಒಂದು ನಿಷ್ಕಲ್ಮಶ ಸ್ನೇಹಕ್ಕಾಗಿ ಸದಾ ಒದ್ದಾಡುವ ನನಗೆ ನೀವು ನಿಮ್ಮ ಸರಳವಾದ ತುಂಬು ಸ್ನೇಹ ನೀಡಿದರೆ ಸಾಕು. ಅಷ್ಟಕ್ಕೇ ನಾನು ತೃಪ್ತ. ಜೀವನದಲ್ಲಿ ಇದಕ್ಕಿಂತ ಹೆಚ್ಚಿನದೇನೂ ನನಗೆ ಬೇಡ. ನನಗೆ ನನ್ನ ನೋವು-ನಲಿವುಗಳನ್ನು ಅರ್ಥಮಾಡಿಕೊಳ್ಳುವ ಸ್ನೇಹಿತ ಅಥವಾ ಸ್ನೇಹಿತೆ ಬೇಕೇ ಹೊರತು, ಹೆಂಡತಿ ಅಲ್ಲ. ನೀವು ನನ್ನ ಸ್ನೇಹಿತೆ, ನನ್ನ ಮನಸ್ಸಿನಲ್ಲಿ ನಾನು ರೂಪಿಸಿಕೊಂಡಂತಹ ವಸಂತಳೇ ಆಗಿ, ಸ್ನೇಹಿತಳ ಸ್ಥಾನವನ್ನು ತುಂಬಿ ಕೊನೆಯವರೆಗೂ ನನ್ನನ್ನು ಉಳಿಸಿಕೊಳ್ಳುತ್ತೀರಿ ತಾನೇ?”

ವಸಂತ ಪುಟ್ಟ ನಗೆ ನಕ್ಕು, ನಿಧಾನವಾಗಿ ತಲೆಯಾಡಿಸಿ“ಹೂಂ” ಎಂದಳು. ನಾನು ನಿರೀಕ್ಷಿಸಿದ್ದ ಉತ್ತರವೇ ಆಗಿದ್ದರೂ, ತಲೆಯಲ್ಲಿ ಬಂಡೆಯಂತೆ ಇದ್ದ ಯೋಚನೆಗಳೆಲ್ಲಾ ಕ್ಷಣಮಾತ್ರದಲ್ಲಿ ಕರಗಿಹೋಯಿತು. ಸಂತೋಷವನ್ನು ಭರಿಸಲಾರದೆ, ವಸಂತಳ ಕೈಹಿಡಿದು ಸುತ್ತಲೂ ಯಾರಿದ್ದಾರೆ ಎನ್ನುವ ಪರಿವೆಯೂ ಇಲ್ಲದೆ ಅತ್ತುಬಿಟ್ಟೆ.

ವಸಂತ ನನ್ನನ್ನು ಸಮಾಧಾನ ಪಡಿಸುವವಳಂತೆ ತಲೆ ಸವರುತ್ತಿದ್ದಳು. ಕಳೆದುಹೋಗಿದ್ದ ನನ್ನ ಅಪೂರ್ವ ವಸ್ತು ಮತ್ತೆ ನನಗೆ ದೊರಕಿತ್ತು!
*****

ಕೀಲಿಕರಣ: ಸೀತಾಶೇಖರ್ ಮತ್ತು ಅನ್ನಪೂರ್ಣ ಸುಬ್ಬರಾವ್

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

This site uses Akismet to reduce spam. Learn how your comment data is processed.