ಅಖಂಡ ಕರ್ನಾಟಕ

ಅಖಂಡ ಕರ್ನಾಟಕವೆ! ವಿಶ್ವಾತ್ಮರೂಪಕವ!

ಎಚ್ಚರಿಸು ನಿದ್ರೆಯಿಂ ಮುದ್ರಿತರ, ಮತ್ತಿತರ
ಆಳಿಕೆಗೆ ಮೈಗೊಟ್ಟು ಸೋತವರ, ಬೀತವರ-

ಇಲ್ಲದಿರೆ ಎಂದೆಂದು ಈ ಪತನ ಈ ನೋವೆ.
ಹುಟ್ಟಳಿಸು ದೂಷಕರ, ನಾಶಕರ, ಸಟೆವೇಷ-

ಧಾರಕರ, ಮಾರಕರ, ಜಾತಿಮತ ಲುಬ್ಬಕರ.
ನೀನೊಮ್ಮೆ ಸಿಡಿಲಾಗಿ ಗರ್ಜಿಸಲು ಅಂತಹರ

ಪಾಡೇನು? ನಿನ್ನ ಮೊಗ ಮಗುದೊಮ್ಮೆ ಸಂತೋಷ
ಲಹರಿಯಲಿ ತೇಲುವುದ ಕಾಂಬೆವೇ? ನವವೇಷ

ಧಾರಿಣಿಯೆ, ನುಡಿ ಶಿಲ್ಪ ಸಂಸ್ಕೃತಿಯ ರೂಪಿಣಿಯೆ
ಕವಿವರ್ಯ ಧರ್ಮಾತ್ಮ ಧೀರಗುವರರ ತಾಯೆ

ಉಕ್ಕುತಿಹುದಿಂದಿದೋ ಒಕ್ಕೊರಲಿನುದ್ಘೋಷ;
ಎಂದು ಸಿರಿಗನ್ನಡದ ನಾಡಿನೇಕೀಕರಣ-
ಅಂದು ನವಭಾರತದ ಬಾಗಿಲಿಗೆ ತೋರಣ.
*****