ಚಿರಂತನ ದಾಹ


ದಿನದಿನವು ಮೂಡಣದ ಬಾನ ಕರೆಯಂಚಿನಲಿ
ಚೆಂಬೆಳಕು ಉಬ್ಬರಂಬರಿಯುತಿಹುದು;
ನೂರು ಕಾರಂಜಿಗಳು ತೆಕ್ಕನೆಯೆ ಪುಟಿದಂತೆ
ಲೋಕಲೋಕಂಗಳನು ತೊಳೆಯುತಿಹುದು.


ಬೊಗಸಗಂಗಳ ತೆರೆದು ಮೊಗೆಮೊಗೆದು ಕುಡಿದರೂ
ಈ ಪುರಾತನ ದಾಹ ತೀರದಲ್ಲಾ!
ಏನೊ ಅಸಮಾಧಾನ ಹೃದಯಾಂತರಾಳದಲಿ
ಬಾಯ್ದೆರೆದು ಹೀರುತಿರೆ ತೃಪ್ತಿಯಿಲ್ಲ.


ಬಣ್ಣ ಬಣ್ಣದ ಬೆಳಕ ಕಡಲಿನೊಡಲೊಳಗಲ್ಲಿ
ಕಲ್ಲುಸಕ್ಕರೆಯಂತೆ ಕರಗಿ ಬಿಡಲೆ?
ಇಲ್ಲದಿರೆ ಎಲ್ಲವನು ಒಂದ ಬೊಗಸೆಯೊಳಾಂತು
ಆ ಅಗಸ್ತ್ಯನ ತೆರದಿ ಕುಡಿದು ಬಿಡಲೆ?


ಹೊಗೆನಟ್ಟು ಹೋಗಿರುವ ಮನದ ಮನೆ ಗೋಡೆಗಳು
ಸುಣ್ಣ ಬಣ್ಣವನೆಂದು ಕಾಣಬಹುದು?-
ಇಲ್ಲಣವು ಜೋತಿರುವ ಜೇಡಬಲೆ ನೂತಿರುವ
ಬೆಳಕಿಂಡಿಯಲಿ ಬೆಳಕದೆಂತು ಬಹುದು?


ಪಂಚ ಭೂತಗಳೆಲ್ಲ ಮಾನವನ ದೇಹದಲಿ
ಹೊಂಚು ಹಾಕುತ ದಾರಿ ಕಾಯುತಿಹವು;
ಕಿಂಚಿತಾದರು ಕರುಣೆ ಕೊನರೊಡೆದು ಬಾರದಿರೆ
ಈ ಪ್ರಪಂಚವೆ ಚಿತೆಯನೇರಲಿಹುದು!


ಕಿಟಕಿಗಳನರೆತೆರೆದು ಕಟಕಿಯಾಡುವ ಗಾಳಿ
ಮಾಡು ನಿನ್ನಯ ದಾಳಿ ಇಂದು ಇಂದೇ!
ಜಗದೆಲ್ಲ ಪುಷ್ಪಗಳ ಪೈರುಗಳ ಪರಿಮಳದ
ಪನ್ನೀರುಗಳನೆರೆದು ಮೀಯಿಸಿಂದೇ!


ಜಗವ ತುಂಬಿದ ಬೆಳಕು ನಮಗೇಕೊ ಸಾಲದಿದೆ
ಎನಿತು ಮಾನವನೆದೆಯ ಆಳ ಅಗಲ!
ಬಂದಷ್ಟು ಇಂಗುತಿದ ಮತ್ತೆ ಬರಿದಾಗುತಿದೆ
ಎಷ್ಟು ಸೆಲೆಯೊಡೆದರೂ ವಿಫಲ ವಿಫಲ!
*****

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

This site uses Akismet to reduce spam. Learn how your comment data is processed.