ರಾಮನ್ ಸತ್ತ ಸುದ್ದಿ

– ೧ –

ರಾಮನ್ ಸತ್ತ ಸುದ್ದಿ ಓದಿದ ಬೆಳಿಗ್ಗೆ ಶಿವಮೊಗ್ಗೆಗೆ
ದರಿದ್ರ ಥಂಡಿ; ಅಸ್ತಿತ್ವದ ಅಸ್ಪಷ್ಟ ಜಿಜ್ಞಾಸೆ, ಗುರುತಿಸಲಾಗದ
ಕಸಿವಿಸಿ, ಮುಜುಗರ ತಾಳದೆ ವಾಕಿಂಗ್ ಹೊರಟೆ; ಬೀದಿ
ಗದೇ ಮಾಮೂಲು ಭಂಗಿ; ಯಾರೂ ದುಃಖಿಸುತ್ತಿಲ್ಲವೆನ್ನಿಸಿ
ದುಃಖವಾಯಿತು. ಮೈಲಿಗೆ
ಪರಿಚಿತ ಸಿಕ್ಕಿದ್ದು ನವುಲೆ ಗ್ರಾಮದ ಹನುಮ:
ಯಾರದೋ ಗದ್ದೆಯಲ್ಲಿ ಗೇಯುವ, ಮೋಟು ಬೀಡಿಯ
ಕಿವಿಗೆ ಸಿಕ್ಕಿಸಿಕೊಳ್ಳುವ, ತೊಡೆಯ ಪರಪರ ಕೆರೆದುಕೊಳ್ಳುವ,
ಹಳ್ಳಿಯೇ ಹನುಮಿಸಿದಂತೆ ನನಗೆ ಭಾಸವಾಗುವ ವಿಚಿತ್ರ-
ಅಭ್ಯಾಸರೂಪಿತ ನಿರ್ದಿಷ್ಟ ಅಳತೆಯ ನಿರ್ವಿವಿಧ ಕೂಗಿಂದ
ಹಕ್ಕಿಗಳ ಅಟ್ಟುತಿದ್ದ; ಪಾತಿ ಸರಿಗೊಳಿಸುತ್ತಿದ್ದ; ಅಪ್ರಚಲಿತ
ಹಳ್ಳಿ ಪದದ ಅಶಾಸ್ತ್ರೀಯ ಮಟ್ಟನ್ನು ಕುರುಕುತ್ತಿದ್ದ.

ಕಂಡೊಡನೆ, ‘ಹ್ಯಾಂಗಿದೀರಿ’ ಅಂದ;
ಈಚೀಚೆಗೆ ಅಪರೂಪವಲ್ಲ ಅಂದ, ಯಾಕೋ ಬಡವಾಗಿದ್ದೀರಿ
ಅಂದ, ಮಳೆ ಬೇಕಾಗಿಲ್ಲ ಅಂದ, ಫಸಲನ್ನು ಅಂದಾಜಿಸಿದ;
‘ನೆರೆಯವನೊಡನೆ ದಿನವಹಿ ಕಾದಾಟ ಸಾಕಾಗಿದೆ ಮಾರಾಯರೇ’
ಅಂದ – ಕೊರೆಯುತ್ತಲೇ ಇದ್ದ – ಹೂಂಗುಟ್ಟಿದೆ –
ಅವನ ಮಾತಿಗೆ ಮಂಜಿನೊಳಗಿನ ಸೂರ್ಯ, ನನ್ನ ಪ್ರಜ್ಞೆ,
‘ರಾಮನ್ ಸತ್ತರೋ ಹನುಮ’ ಅನ್ನಬೇಕು, ಆಗ ತಡೆದು
ಸುಮ್ಮನಾದೆ. ರಾಮನ್ ಅರ್ಥೈಸಿಕೊಳ್ಳಬಹುದೆ ಇವನ
ಅಶಿಕ್ಷಿತ ಅರಿವಿಗೆ?

– ೨ –

ಆ ಕಡೆ ರಾಮನ್, ಈ ಕಡೆ ಹನುಮ;
ದಿನವಿಡಿ ಮೈ ಕೆಸರಿಸಿಕೊಂಡು, ನನ್ನಂಥವ ನೆನೆಯಲೂ
ನಿರಾಕರಿಸುವ ತಂಗಳುಂಡು, ರಾತ್ರಿ ಕಳ್ಳಭಟ್ಟಿಯ ಹೊಡೆದು-
ನಾಡಿದ್ದು ನಾಳೆಯ, ನಾಳೆ ಇವೊತ್ತಿನ, ಇಂದು ನೆನ್ನೆಯ
ಪುನರಾವರ್ತನೆಯ ಏಕತಾನತೆಯಲ್ಲಿ – ಲೋಕ ಮರೆಯುವ
ಹನುಮನಿಗೆ ರಾಮನ್ ಹೋದರೆಷ್ಟೊ, ರಸೆಲ್ ಹೋದರೂ ಅಷ್ಟೆ.
ಪತ್ರಿಕೆಯೋದುವುದಿಲ್ಲ; ನಾನು ಕವಿಯೆಂಬುದು ಗೊತ್ತಿಲ್ಲ;
ಹೊಟ್ಟೆಬಟ್ಟೆಯ ಅಗತ್ಯ ಮೀರಿದ ನನ್ನ ಹಸಿವು, ಅಸ್ವಸ್ಥತೆ
ಅರಿತಿಲ್ಲ; ಲೋಕದ ಪ್ರತಿನಿತ್ಯದ ಆಗು – ಹೋಗುಗಳಿಗೆ ಪ್ರತಿಕ್ರಿಯಿಸುವ
ಸೂಕ್ಷ್ಮತೆ ಕಂಡಿಲ್ಲ; ಅನೇಕ ಮಟ್ಟದಲ್ಲಿ ಬಾಳುವ ಪ್ರಶ್ನೆಯೇ
ಉದ್ಭವಿಸಿಲ್ಲ – ಆದರೂ ತೃಪ್ತ…..
ಗದ್ದೆ, ಧಣಿ, ಹ್ಯಾಪ ಮೊಲೆಯ ಹೆಂಡಿರು, ಸಿಂಬಳಸುರುಕ ಮಕ್ಕಳು,
ದೇವರ ಗ್ರಾಮ್ಯಕಲ್ಪನೆ, ಊರಿನ ಪುಢಾರಿ – ಇಷ್ಟೇ ಜಗತ್ತು –
ಆದರೂ ತೃಪ್ತ…..

ನನ್ನಂತೆ ಕನ್ನಡ, ಗಡಿ, ನದಿ, ಪದ್ಯ, ಪ್ರತಿಷ್ಠೆ ಕಾಡುವುದಿಲ್ಲ-
ಹೆಂಡತಿಗೆ ಚೋಲಿ, ಹಿರಿ ಮಗನ ಶಾಲೆ
ಬೆಲ್ಲದ ಕಾಫಿಯ ಹಾಲೇಶಿಯ ಸಾಲ
ಹೊತ್ತು ಹೊತ್ತಿಗೆ ರುಚಿಗೌಣ ಅರಸಿಕ ಕೂಳು – ಚಿಂತೆಯಿಲ್ಲ
ವೆಂದಲ್ಲ-
ಆದರೂ ತೃಪ್ತ…..

– ೩ –

ಇದ ಮೆಚ್ಚಿ, ಕರುಬಿ, ಪೇಚಾಡಿ ನಡೆದಾಗ
ದೂರದಿಂದ, ಪ್ರಕೃತಿಯ ಆಗಾಧದಲ್ಲಿ ಹಿಮಾಚ್ಛಾದಿತ ಹನುಮ,
ಅವನ ಕೂದಲೆಳೆಯ ಕೂಗು-
ಅರ್ಥ ತೋರದ ಚುಕ್ಕೆ.

ಇಲ್ಲಿಂದ ನನಗೆ ವರ್ಗವಾಗುತ್ತೆ, ಒಂದು ದಿನ
ಹನುಮ ಸಾಯುತ್ತಾನೆ – ತಿಳಿಯುವುದಿಲ್ಲ.
ಇಲ್ಲಿನ ಹಳಬ ಅಲ್ಲಿ ಹೊಸಬನಾಗುತ್ತೇನೆ,
ಎಲ್ಲೋ ಹೇಗೋ ಸಾಯುತ್ತೇನೆ – ತಿಳಿಯುವುದಿಲ್ಲ.
ನನ್ನ ಹೆಸರು, ಹುದ್ದೆ, ಪದ್ಯ, ತಳಮಳ, ಬದುಕು – ತಿಳಿಯುವುದಿಲ್ಲ.
ಈ ಪರಿಚಿತ ಆಕಾಶ, ತೆಂಗಿನ ಮರ, ಕಾಲುವೆ, ಗುಡ್ಡ, ಗುಡಿಸಲು-
ಇವು ಕೊಟ್ಟ ಧಾರಾಳ, ಅರ್ಥವಂತಿಕೆ. ಭಾವ ಸಂಚಾರ-
ತಿಳಿಯುವುದಿಲ್ಲ.

ಕೊರಲು ಬಿಗಿದು ಒಬ್ಬಂಟಿ ನಿಧಾನ ನಡೆದಂತೆ
ರಾಮನ್ ಸತ್ತ ತೀವ್ರತೆ, ಕಳವಳ ತಣ್ಣಗಾಯಿತು…..
ಹಕ್ಕು
ನನ್ನ ಕಾಂಪೌಂಡಿನಲ್ಲಿ ನಾನೆ ಬೆಳೆಸಿದ ತೆಂಗು
ನೋಡುನೋಡುತ್ತಿದ್ದಂತೆ ಎತ್ತರ ಬೆಳೆದದ್ದು ಗೊತ್ತಿದ್ದರೂ
ಬಿರುಬಿಸಿಲಿನಲ್ಲೊಮ್ಮೆ ಮನೆಗೆ ಬರುವಾಗ್ಗೆ
ರಸ್ತೆಗೂ ಅದರ ನೆರಳ ಚೆಲ್ಲಿದ ಅರಿವಾದದ್ದು
ಆ ನೆರಳಲ್ಲಿ ನಿಂತ ಯಾರದೋ ಕಾರು ಕಂಡಾಗಲೇ.

ಅರೆ, ಎಂದು ಒಂದು ಕ್ಷಣ ಆಶ್ಚರ್ಯಪಟ್ಟೆ,
ಆಲೋಚಿಸಿದೆ;
ನೆರಳು ನನ್ನ ಮರದ್ದು, ನಿಲ್ಲಿಸಬೇಡಯ್ಯ ಕಾರು
ಅಂದರೆ ತಪ್ಪೆ?
ಅದರ ನೆರಳಲ್ಲಿ ನಿಂತಿದ್ದರಿಂದ ಆ ಕಾರು
ನನ್ನದೆಂದರೆ ತಪ್ಪೆ?

ದಬಾಯಿಸಿದರೆ ಅವ ಹೀಗೆ: ಬೆಪ್ಪೆ,
ತೆಂಗು ನಿನ್ನದಿರಬಹುದು, ಅದರ ನೆರಳು ನಿನ್ನದ?
ದಿನ ಬೆಳಗಾದರೆ ಗರಿಗಳಲ್ಲಿ ಅರಳುವ ಹಕ್ಕಿ ನಿನ್ನದ?
ಅದರ ಕಿಚಪಿಚ, ಅಲೆಯುವ ಹವೆ, ಹೊಳೆಯುವ ಕಿರಣ,
ತೂಗುವ ಚಂದ್ರ – ನಿನ್ನದ?

ಇದು ಸಾರ್ವಜನಿಕ ರಸ್ತೆ – ನಿಲ್ಲಿಸಲು,
ಅಲ್ಲಿ ಚೆಲ್ಲಿದ ನೆರಳೂ ನನ್ನದೆನ್ನಲು ಹಕ್ಕುಂಟು.
ಆಲದೆ, ನೆರಳ ನೆಪದಿಂದ ವಾಹನ ನಿಲ್ಲುತ್ತೆ,
ಹಾಗಾಗಿ ಸಂಚಾರಕ್ಕೆ ಅಡಚಣೆ, ಕತ್ತರಿಸು
ಮರವನೆಂದರೆ ಎಲ್ಲಿದೆ ನನ್ನಲಿ ಜವಾಬು?

ಕ್ಷಣ, ದಿಗಿಲಾಗಿ
ಕಾರಲ್ಲಿ ಯಾರೂ ಇಲ್ಲದ್ದು ಖುಷಿಯಾಗಿ
ನೆರಳ ನೋಡದೆ
ಬರೀ ಕಾರಿನಂದವ ಮೆಚ್ಚುತ್ತ ಸರಸರ ಒಳಗೆ ನಡೆದೆ.
*****
ಕೀಲಿಕರಣ: ಶ್ರೀನಿವಾಸ

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

This site uses Akismet to reduce spam. Learn how your comment data is processed.