ರಾಗ — ಕೇದಾರಗೌಳ ತಾಳ — ಝಂಪೆ
ತೊರೆದು ಜೀವಿಸಬಹುದೆ ಹರಿ ನಿನ್ನ ಚರಣಗಳ |
ಮರೆಯ ಮಾತೇಕಿನ್ನು ಅರಿತು ಪೇಳುವೆನು ||ಪ||
ತಾಯಿ – ತಂದೆಯ ಬಿಟ್ಟು ತಪವ ಮಾಡಲುಬಹುದು |
ದಾಯಾದಿ ಬಂಧುಗಳ ಬಿಡಲುಬಹುದು ||
ರಾಯ ತಾ ಮುನಿದರೆ ರಾಜ್ಯವನು ಬಿಡಬಹುದು |
ಕಾಯಜನ ಪಿತ ನಿನ್ನ ಅಡಿಯ ಬಿಡಲಾಗದು ||೧||
ಒಡಲು ಹಸಿಯಲು ಅನ್ನವಿಲ್ಲದಲೆ ಇರಬಹುದು |
ಪಡೆದ ಕ್ಷೇತ್ರವ ಬಿಟ್ಟು ಪೋಗಬಹುದು ||
ಮಡದಿ – ಮಕ್ಕಳ ಕಡೆಗೆ ತೊಲಗಿಸಿಯೆ ಬಿಡಬಹುದು |
ಕಡಲೊಡೆಯ ನಿನ್ನಡಿಯ ಗಳಿಗೆ ಬಿಡಲಾಗದು ||೨||
ಪ್ರಾಣವನು ಪರರು ಬೇಡಿದರೆತ್ತಿ ಕೊಡಬಹುದು |
ಮಾನದಲಿ ಮನವ ತಗ್ಗಿಸಲುಬಹುದು ||
ಪ್ರಾಣನಾಯಕನಾದ ಆದಿಕೇಶವರಾಯ |
ಶ್ರೀಕೃಷ್ಣ ನಿನ್ನಡಿಯ ಬಿಡಲಾಗದೊ ||೩||
*****