ಲಾಲ ಬಹಾದ್ದೂರ ಶಾಸ್ತ್ರಿ

ನಮ್ಮ ಮಧ್ಯೆ ಇವನಿದ್ದನೆಂದರೆ ನಂಬುವೆಯ
ಇಷ್ಟು ಸಾದಾ ಸೀದಾ ಮನುಷ್ಯ? ಬಡತನದ
ಪಲ್ಲಕ್ಕಿ ಹೊತ್ತು ಮೆರೆಸಿದ ಪ್ರಾಮಾಣಿಕತೆಯ.

ಹೆಂಡತಿ ಮಕ್ಕಳಿಗೆ ಆಸ್ತಿ ಸಂಪಾದಿಸಿದ
ಮನೆಯಿರದ ಪ್ರಧಾನಿ: ಇವನೆಂಥ ಭಾರತೀಯ?!
ಬಂದದ್ದು ಹಂಜಿಯ ಮಾಡಿ ರಾಟ ತಿರುಗಿಸಿದ.

ಗದ್ದುಗೆಯನೇರಿದರು ಕಾಣಿಸಿಕೊಳದ ಕಿರಿಯ
ಬಾಜಾ ಬಜಂತ್ರಿಯ ನಿಲಿಸಿ ಸಹಜ ತಂತಿಯ ಮಿಡಿದ
ಎಲ್ಲರಿಗು ಕಿವಿಗೊಟ್ಟು ತನ್ನ ಒಳದನಿ ಮರೆಯ.

ಮಹಾಪೂರವ ಧೀರ ತೆಪ್ಪದಲಿ ದಾಟಿಸಿದ;
ಮಾಯಿಸಿದ ಮೈಮೇಲೆ ಬಂದು ಬಿದ್ದವರ ಗಾಯ.
ಯಾರಿಗೂ ಸಿಗದ ಬಿಳಿ ಪಾರಿವಾಳವ ಹಿಡಿದ.

ಮಧ್ಯರಾತ್ರಿಯಲಿಂತು ಕೊರೆದು ಮಿಂಚಿನ ಗೆರೆಯ
ಮರೆಯಾದ: ದಡಕ್ಕೆ ಮುಟ್ಟಿಸಿದ ಹೊತ್ತ ಹೊರೆಯ.
*****
೧೯೬೯