ಬಡ ದಶರಥನ ಸಾಂತ್ವನ


ಹೇಳಿ ಕೇಳಿ ಕುಚೇಲನಲ್ಲವೆ ನಾನು?
ಅವಳಿಗಿವೆ ಎರಡು ಜಡೆ
ತೊಡುತಾಳವಳು ಮಸ್ಲಿನ್
ತೊಟ್ಟಿದ್ದಾಳೆ ಎತ್ತರದಟ್ಟೆ ದಿಮಾಕು ಚಪ್ಪಲಿ
ಅವರು ಹಾಗೆ
ಇವರು ಹೀಗೆ
ಸರಿಯೆ, ನಮಗೇಕೆ, ಅದು?
ತಿಂಗಳ ಮೊದಲದಿನವೇ ಏಕೆ ಹಗರಣ?
ತಗೊ, ದುಡ್ಡೆಲ್ಲ ನೀನೆ.
ಹಾಲಿನವನಿಗೆ,
ಮೊಸರಿನವನಿಗೆ,
ಅಗಸನಿಗೆ-
ಇನ್ನೂ ಬರುವವರಿಗೆ ನೀನೆ ಉತ್ತರಿಸು.
ಸಂಬಳವೇನು ಅಲ್ಲಾವುದ್ದೀನನದ್ಭುತ ದೀಪವೇ?
ಉಂಗುರವನೇಕೆ ಮಿಕಿಮಿಕಿ ನೋಡುತ್ತಿ,
ಬೆಪ್ಪೇ,
ನಿಮ್ಮಪ್ಪ ಕೊಟ್ಟುದಿದು,
ಮಂತ್ರದುಂಗುರವಲ್ಲ.
ನಾಳೆಯಿಂದಲೆ ನಕ್ಷತ್ರಕರ ಪರಿವಾರ ವಕ್ಕರಿಸಲಿದೆ,
ಇಗೋ ಕೈಮುಗಿದೆ, ನಿನಗೆ;
ನೀನೇ ಆಗು ಮನೆಗೆ ಯಜಮಾನಿ.

ಸುಂಟರಗಾಳಿಯೇಕೆ ಎಬ್ಬಿಸುವೆ
ಮನೆಯೊಳಗೆ ಹೊರಗೆ?
ಹುಬ್ಬ ಕತ್ತಿವರಸೆ ಬೇಡ
ಕಣ್ಣ ಚಾವಟಿಯೇಟು ನಿಲ್ಲಿಸು.
ಸತ್ತ ವಾತಾವರಣ ಇದು ಬೇಡ
ನಾನೇನು ಶತ್ರುವೇ?
ಮನೆಯಾಗುವುದು ಬೇಡ ಕುರುಕ್ಷೇತ್ರ.

ಬೇಸರಿಯ ಮುತ್ತು ಬೆಂಡೋಲೆ ಉಂಗುರಕೆಲ್ಲ
ಮಾತು ಕಲಿಸಿದ್ದೀಯೆ.
ನನ್ನೊಡನಿವರ ರಾಯಭಾರವೆ?
ಬೇಡ, ನೀನೆ ಮಾತಾಡು.
ಕೈ ಹಿಡಿದವಳೆ, ಮನಮುರಿಯದಿರು, ಮಾತಾಡು.
ಕೂದಲು ಕೆದರಿದೆ
ಹಣೆ ಬಿಕೋ ಎನ್ನುತಿದೆ
(ನಾ ಬದುಕಿಲ್ಲವೇನು?)
ಹೂವ ಹೊಸಕಿರುವೆ
( ನಾ ಕೈಗೆ ಸಿಕ್ಕಿದ್ದರೆ?)
ಅಡಿಕೆ ಚೆಲ್ಲಿದೆ ಯಾಕೆ?
ಗಾರೆ ನೆಲದಲ್ಲಡಿಕೆ ಮೊಳೆಯುವುದಿಲ್ಲ.
ವೀಳ್ಯದೆಲೆ ಇವ ಕೋಣೆಯೊಳಗೆಲ್ಲ
ಏಕೆ ಹಾಸಿದ್ದೀಯೆ?
ಅಡುಗೆಮನೆ ತಟ್ಟೆ
ನಡುಮನೆಯಲ್ಲಿ ವಿಷ್ಣುಚಕ್ರವಾಗಿದೆ.
ಇನ್ನು ಆ ಲೋಟ ಚಮಚಗಳ ಪಾಡು ದೇವರಿಗೆ ಪ್ರೀತಿ.
ಸಭ್ಯತೆಯ ವೇಷ ಈ ಮೌನ.
ಆಡು, ಮಾತಾಡು
ಬೇಡ ಈ ಮೌನದ ಯುದ್ಧ.
ಒಲವೆಲ್ಲವನು ಹೂತು ಗೋರಿ ಕಟ್ಟಿರುವೆ ನಗೆಗೆ
ಒಲವ ಹೆಣ ಮಾಡದಿರು.
ಈ ಕೋಣೆ-ಮನೆಯಲ್ಲಿ ಕೋಪಗೃಹ ಸಾಧ್ಯವೆ?
ಆಡು, ಮಾತಾಡು
ನಾನು ದಶರಥನಲ್ಲ,
ಬೇದವೇ ಕೈಮುಗಿವೆ ರಾಮಾಯಣ.
ಅವಳಿಗಾದರೂ ಇತ್ತು ಮಗನ, ರಾಜ್ಯದ ಲೋಭ.
ಸಣ್ಣ ಬಯಕೆಗೆ ನೀನು ಕೈಕೆಯಾಗುವುದೆ?
(ಇದ್ದುದರಲ್ಲಿ ಸರಿ, ಬದುಕೋಣ)
ಬೇಡವೇ, ಕೈಮುಗಿವೆ,
ರಾಮಾಯಣ.
*****
(ಚಿತ್ರ-ವಿಚಿತ್ರ ೧೯೬೯)

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ