ನೀಲಾಂಬಿಕೆ

ಸದುವಿನಯದ ತುಂಬಿದ ಕೊಡ
ತಂದಳು ನೀಲಾಂಬಿಕೆ,
ಕಲ್ಯಾಣದ ಅಂಗಳದಲಿ
ತಳಿ ಹೊಡೆದಳು ಛಂದಕೆ.
ಸಮಚಿತ್ತದ ರಂಗೋಲಿಯು
ಒಳಹೊರಗೂ ಧೂಪವು,
ಹಾರಾಡುವ ಹೊಸತಿಲಲ್ಲಿ
ಹೊಯ್ದಾಡದ ದೀಪವು.

ಮಹಾಮನೆಯ ಮಹಾತಾಯಿ
ಮಾಸದ ಮಡಿ ಹಾಸಲು,
ದಾಸೋಹಕೆ ಮೀಸಲಾದ
ತೃಪ್ತಿಯ ನಗೆ ಸೂಸಲು,
ಎಲ್ಲೆಲ್ಲಿಯ ಗಣ ತಿಂಥಿಣಿ
ತಣಿದು ಹಾಡಿ ಹರಸಲು
ಭಕ್ತಿಯ ಭಂಡಾರ ತುಂಬಿ
ಹರಡಿರು ಬೆಳುದಿಂಗಳು.

ಅಯ್ಯನ ಕೈ ನೋವುದೆನಲು
ಆಭರಣವ ಕೊಟ್ಟಳು-
ಅನುಭಾವದ ಅಲಂಕಾರ
ಆಚರಣೆಯ ತೊಟ್ಟಳು.
ನೆರಳಾದಳು ಬಸವಣ್ಣನ
ಹರಳಾದಳು ಬೆರಳಿಗೆ,
ಅರಳಾದಳು ಲಿಂಗದಲ್ಲಿ
ಪರಿಮಳಿಸುತ ಪೂಜೆಗೆ.

ಏನು ನೋವೊ ಹೇಳಲಿಲ್ಲ
ಕೇಳಲಿಲ್ಲ ಮಡದಿಗೆ
ಹಾಗೆ ಹೊರಟು ಹೋದರಣ್ಣ
ಕಲ್ಯಾಣದ ಹುಡದಿಗೆ.
ಕೂಡಲದಲಿ ನೀರು ಹರಿದು
ತಿಳಿಗೊಂಡಿತು ಬನ್ನಿರಿ-
ನೀಲಾಂಬಿಕೆ ನೆನಪಾದಳು
ಬೇಗನೆ ಕರೆತನ್ನಿರಿ.

ಕರಸ್ಥಲದಿ ಬಸವರೂಪು
ಪರಿಣಾಮವ ಮೀರಿಸಿ,
ಬಸವಯ್ಯನು ಮಾಡಿದಾಟ
ಲಿಂಗದೆಡೆಗೆ ತೋರಿಸಿ,
ಅಲ್ಲಿ ಇಲ್ಲಿ ಉಭಯವಳಿದು
ಅಂಗೈಯಲಿ ಸಂಗಮ
ಅಲ್ಲಿದ್ದರು, ಇಲ್ಲಿಲ್ಲವೆ?
ಜಗದ ಜೀವ ಜಂಗಮ.

ನೀಲಾಂಬೆಯ ನಿಲವಿನಲ್ಲಿ
ಮಹಾಲಿಂಗ ಹೊಳೆಯಲು
ಬಸವಣ್ಣನ ಭಕ್ತಿ ಕಲಶ
ಸಂಗಮನಡಿ ತೊಳೆಯಲು-
ಗಾಳಿಯಲ್ಲಿ ಗಾಳಿಯಾಗಿ
ಮಹಾಬೆಳಗು ಸಂದಿತು:
ಪ್ರಾಣಲಿಂಗದಲ್ಲಿ ಕರಗಿ
ನೀಲಾಂಬರ ಮಿಂಚಿತು.
*****
೧೯೬೯