ಮುದ್ದಣ ಮನೋರಮೆಯರಿನಿವಾತನಾಲಿಸಲು
ಕನ್ನಡದ ಬೆಳ್ನುಡಿಯ ಹೊಂಬೆಳಗಿನುನ್ನತಿಯ
ಕಾಣಲೆಂದಾಸೆಯಿರೆ ಜೇನುಂಡ ಆರಡಿಯ
ಝೇಂಕೃತಿಗೆ ಕಿವಿದೆರೆದು ಕೇಳು ಎದೆತಣಿಯುವೊಲು.
ತನಿವಣ್ಣ ತಿನಲಿತ್ತು ಕೆನೆವಾಲನೀಯುವರು.
ಏನು ಜೊತೆ! ಎಂಥ ಕಥೆ! ನಾಲ್ಮೊಗನ ಅಗ್ಗಿಟ್ಟಿ-
ಯೊಗೆದ ಮುತ್ತಿನ ಚೆಂಡು! ಮಾತೊಂದು ರಸಘಟ್ಟಿ!
ನಸುನಗೆಯ ನಸೆಗಾರ್ತಿ, ಕಬ್ಬಿಗನ ಕಲ್ಪತರು!
ಮುದ್ದಣನ ಮುದ್ದುನುಡಿ ಮನೋರಮೆಗೆನಿತೆನಿತೊ
ಅನಿತನಿತೆ ‘ರಾಮಾಶ್ವಮೇಧ’ ರುಚಿ ಕನ್ನಡಕೆ.
ಕಂಡುಗವ ಬಳ್ಳದಿಂದಳೆದ ನಲ್ಗತ ಸೊಗಕೆ
ಚೆಂಬವಳನಿಕ್ಕುವಂ; ತಿರುಳ ಕಾಣಿಕೆ ಪೊಸತೊ.
ಬಣ್ಣಗಬ್ಬಿಗನೊರೆದ ಬಟ್ಟೆದೋರಿಪ ಕೃತಿಯು
ಅಂತಪ್ಪೊಡಿಂತಿದುವೆ ಮೆಚ್ಚಿದದೆಯುಡುಗೊರೆಯು.
*****
